ಮನುಷ್ಯನ ತಣಿಯದ ಕುತೂಹಲ ಅದೆಷ್ಟೋ ಆವಿಷ್ಕಾರಗಳಿಗೆ ಕಾರಣ ವಾಗಿದೆ, ಮಾನವನ ಪ್ರತಿ ಹೊಸ ಹುಡುಕಾಟದ ಅಂತ್ಯದಲ್ಲಿ ನಿಸರ್ಗ ಮತ್ತೊಂದು ಒಗಟನ್ನು ಬಿಸಾಕಿ ನಗುತ್ತ ನಿಲ್ಲುತ್ತದೆ. ಮಾನವ ಮತ್ತೆ ಹುಡುಕುತ್ತಾನೆ ಹುಡುಕುತ್ತಲೇ ಇರುತ್ತಾನೆ. ನಿಸರ್ಗದ ಚಲುವು ಮತ್ತು ಮಾನವನ ಕೌಶಲ್ಯ ಎರಡೂ ಜೊತೆಗೆ ನಿಂತು ಮಾತನಾಡುವುದು ಅಪರೂಪಕ್ಕೆ ಕಾಣಸಿಗುವ ದೃಶ್ಯ. ಅಂಥದ್ದೊಂದ್ದು ನಿಸರ್ಗದ ವಿಸ್ಮಯ ಮತ್ತು ಮಾನವನು ಅತಿ ಜತನದಿಂದ ಅದರ ಮೂಲರೂಪಕ್ಕೆ ಧಕ್ಕೆ ಬಾರದಂತೆ ಕಾದುಕೊಂಡಿರುವ ಅಪರೂಪದ ಸ್ಥಳವೇ ನಾರ್ದರ್ನ್ ಐರ್ಲ್ಯಾಂಡಿನಲ್ಲಿರುವ 'ಮಾರ್ಬಲ್ ಆರ್ಚ್ ಕೇವ್ಸ್'.
ಭೂಮಿಯ ಮೇಲ್ಪದರಿನಲ್ಲಿ ರೂಪುಕೊಳ್ಳುವ ಅನೇಕ ರೀತಿಯ ಗುಹೆಗಳನ್ನು ತಜ್ಞರು ಗುರುತಿಸುತ್ತಾರೆ ಮತ್ತು ಅವುಗಳು ರೂಪುಗೊಂಡಿರುವ ರೀತಿ, ವಿನ್ಯಾಸ, ಲಕ್ಷಣಗಳನ್ನ ಗಮನಿಸಿ ಈ ಗುಹೆಗಳನ್ನು ಈ ೫ ಪ್ರಕಾರವಾಗಿ ವಿಂಗಡಿಸುತ್ತಾರೆ ಅವುಗಳಲ್ಲಿ ಕೆಲವು ಇಲ್ಲಿವೆ .
೧. ಸೊಲ್ಯುಶನ್ ಕೇವ್ಸ್(Solution caves)
ಸುಣ್ಣದ ಕಲ್ಲು ಮತ್ತು ನೀರಿನ ನಿರಂತರ ಸಹಚರ್ಯ ರೂಪಿಸುವ ಗುಹೆಗಳು.
೨.ವೋಲ್ಕಾ ಕೇವ್ಸ್( volcanic caves)
ಭೂಮಿಯೊಳಗಿಂದ ಉಕ್ಕುವ ಲಾವಾ , ಜ್ವಾಲಾಮುಖಿಗಳು ತಣಿದು ಹೋದಮೇಲೆ ಉಂಟಾದ ಗುಹೆಗಳು. ಹವಾಯಿಯನ್ ದ್ವೀಪದಲ್ಲಿ ಇರುವ Kazumara caves ಸುಮಾರು ೪೬ಮೈಲು ಗಳಷ್ಟು ಉದ್ದದ ಗುಹೆ ಆಗಿದ್ದು ಜಗತ್ತಿನಲ್ಲಿ ಅತ್ಯಂತ ದೊಡ್ಡ ಜ್ವಾಲಾಮುಖಿ ಗುಹೆ ಎಂದು ಹೆಸರಾಗಿದೆ.
೩.ತಲಸ್ ಕೇವ್ಸ್ (Talus caves)
ಎತ್ತರ ಪರ್ವತ ಪ್ರದೇಶದಿಂದ ನೈಸರ್ಗಿಕ ವೈಪರಿತ್ಯ ಗಳಿಂದ ಕಲ್ಲುಗಳು ಉರುಳಿ ಪರ್ವತದ ಕೆಳಭಾಗದಲ್ಲಿ ಉಂಟುಮಾಡುವ ಗುಹೆಗಳು.
೪.ಸೀ ಕೇವ್ಸ್ (Sea caves)
ಸಮುದ್ರದ ನೀರು ಮತ್ತು ದಡ ದಲ್ಲಿರುವ ಕಲ್ಲುಬಂಡೆಗಳ ಘರ್ಷಣೆ ಮತ್ತು ಮರಳು ತೆರೆಯೊಂದಿಗೆ ಸ್ಥಳಾಂತರ ಗೊಳ್ಳುವಾಗ ಉಂಟಾಗುವ ಗುಹೆಗಳು. ಇಂಥಹ ಹಲವು ಗುಹೆಗಳನ್ನು ನಾವು ಯುಕೆ, ಫ್ರಾನ್ಸ, ಅಮೇರಿಕ ಮತ್ತು ಹವಾಯಿಯನ್ ದ್ವೀಪಗಳಲ್ಲಿ ನೋಡಬಹುದು.
೫ ಗ್ಲೇಸಿಯರ್ ಕೇವ್ಸ್ (Glacier caves)
ಗ್ಲೇಸಿಯರ್ ಹಿಮಬಂಡೆ ಗಳಿಂದ ಉಂಟಾಗುವ ಗುಹೆ , ಕಾಣಲು ಮಂಜಿನ ಮಹಲಿನಂತೆ ಕಂಡರೂ ವಾಸ್ತವದಲ್ಲಿ ಇದು ಸಶಕ್ತ ಗುಹೆಯಾಗಿರುತ್ತದೆ . ಇಂಥ ಗ್ಲೇಸಿಯರ್ ಹಿಮದ ನಡುವೆಯೇ ೪೦೦ ವರ್ಷಗಳ ಕಾಲ ನಮ್ಮ ಕೇದಾರನಾಥ್ ದೇವಸ್ತಾನ ಧ್ಯಾನ ಮಾಡುತಿತ್ತು ಎಂಬುದು ತಜ್ಞರ ಅಂಬೋಣ. ಗ್ಲೇಸಿಯರ್ ಗುಹೆಗಳಿಂದಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಇನ್ನೊಂದು ದೇಶ Iceland
ಮಾರ್ಬಲ್ ಆರ್ಚ್ ಕೇವ್ಸ್
ಉತ್ತರ ಐರ್ಲೆಂಡಿನ ಫರ್ಮಾನಾ ಕೌಂಟಿ ವ್ಯಾಪ್ತಿಯಲ್ಲಿ ಬರುವ ಮಾರ್ಬಲ್ ಆರ್ಚ್ ಕೇವ ಸಂಶೋಧಿಸಿದ್ದು ಫ್ರಾನ್ಸ್ ನ ಸ್ಪೆಲಿಯೋಲೋಜಿಸ್ಟ್ (speleology-study of caves and other karts) ಎಡ್ವರ್ಡ್ ಅಲ್ಫ್ರೆಡ್ ಮಾರ್ಟೆಲ್, ೧೮೯೫ರಲ್ಲಿ ಈತ ಮತ್ತು ಡಬ್ಲಿನ್ ವಾಸಿ ನಿಸರ್ಗ ತಜ್ಞ ಜೆಮೀ ಒಂದು ಕ್ಯಾನ್ವಾಸ್ ಬೋಟಿನಲ್ಲಿ ಆರಂಭ ದ್ವಾರದಿಂದ ಸುಮಾರು ೩೦೦ ಮೀಟರ್ ದೂರದ ಗುಹೆಯ ಮಾರ್ಗ ಕ್ರಮಿಸಿ ನಕ್ಷೆ ಮಾಡಿ ಇಟ್ಟರು. ನಂತರ ಕ್ರಮವಾಗಿ ಹಲವು ಆಸಕ್ತರು ಸೇರಿ ಸುಮಾರು ೪. ೫ ಕಿಲೋಮೀಟರ್ ಗಳಷ್ಟು ಉದ್ದದ ಈ ಗುಹೆಯನ್ನು ಎಲ್ಲರ ಗಮನಕ್ಕೆ ತಂದರು.
ಮಾರ್ಬಲ್ ಆರ್ಚ್ ಕೇವ ಸುಣ್ಣದ ಕಲ್ಲುಗಳಿಂದ ಉಂಟಾದ ಗುಹೆ . ಈ ಗುಹೆಯ ಒಳಗೆ ಕ್ಲಾಡಾ ಮತ್ತು ಒವೆನಬ್ರೀನ್ ಹೆಸರಿನ ನದಿಗಳ ಸಂಗಮವಾಗುತ್ತದೆ, ಮತ್ತು ಇಲ್ಲಿ ಉಂಟಾಗಿರುವ ಭೌಗೊಲಿಕ ಬದಲಾವಣೆಗಳು ,ಕಲ್ಲು ಗಳ ಮೇಲಿನ ವಿನ್ಯಾಸಗಳು ಮಿಲಿಯನ ವರ್ಷಗಳ ಕಾಲ ನದಿಗಳ ಏರಿಳಿತ ಮತ್ತು ಹರಿಯುವಿಕೆಯ ಪರಿಣಾಮಗಳೇ ಆಗಿವೆ.
೨೦೦೮ರಲ್ಲಿ ಯುನೆಸ್ಕೋ ಈ ಪ್ರದೇಶವನ್ನು 'ಗ್ಲೋಬಲ್ ಜಿಯೋ ಪಾರ್ಕ್' ಎಂದು ಘೋಷಿಸಿತು. ೧೯ನೇ ಶತಮಾನದಿಂದಲೇ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು ಆಗಿದ್ದ ಈ ಸ್ಥಳ ೨೦೦೮ ರ ನಂತರ ಯೂರೋಪಿನ ಮುಖ್ಯ ಪ್ರವಾಸಿ ಸ್ಥಳಗಳ ಪಟ್ಟಿಯಲ್ಲಿ ಬಂದಿತು.
ಐರ್ಲ್ಯಾಂಡ್ ಗೆ ಭೇಟಿ ಕೊಟ್ಟವರು ಇದನ್ನು ನೋಡದೆ ಮರಳಿದರೆ ಅವರ ಪ್ರವಾಸ ಅಪೂರ್ಣ ಎಂದೇ ಅರ್ಥ.
ಸಾಂಪ್ರದಾಯಿಕ ದ್ವಾರ ಹೊಕ್ಕಿದ ನಂತರ ೧೫೦ ಮೆಟ್ಟಿಲು ಮತ್ತು ಒಂದೂವರೆ ತಾಸಿನ ನಿರಂತರ ನಡಿಗೆ , ಗುಹೆಯೊಳಗೆ ಹರಿಯುವ ನದಿಯಲ್ಲಿ ೫ ನಿಮಿಷದ ದೋಣಿಯಾನ, ದೋಣಿಯಲ್ಲಿ ಕುಳಿತಾಗ ಕಲ್ಲಿನ ಕಮಾನುಗಳಿಂದ ಒಸರುವ ನೀರ ಒರತೆ , ಕಡಿದಾದ ಭಾಗದಲ್ಲಿ ನಡೆಯುತ್ತಿರುವಾಗ ಪಟ್ಟನೆ ಎದುರಾಗುವ ಬಂಡೆಗಳು. ಅದೇನೇನೋ ವಿನ್ಯಾಸಗಳು ಅಲ್ಲೇಲ್ಲೊ ಹಿಮ ತುಂಬಿ ಕೊಂಡಂತೆ , ಮತ್ತೊಂದೆಡೆ ಹೂಕೋಸು ಅರಳಿದಂತೆ, ಒಮ್ಮೆ ಆಕಳ ಕೆಚ್ಚಲು, ಮತ್ತೊಮ್ಮೆ ಪುಟ್ಟ ಕುಟೀರ, ಅದೋ ಆ ಕಲ್ಲು ಆಕಳ ಕಿವಿಯಂತಿದೆ ಅಂದು ಕೊಂಡು ಈಚೆ ತಿರುಗಿದರೆ ಭಯಂಕರ ರಾಕ್ಷಸ ಬಾಯಿ ತೆರೆದು ನಿಂತಂತೆ! ಅದು ಭೂಮಿಯ ಒಳ ಪದರ ಅಮ್ಮನ ಮಡಿಲಿನಂತೆ ತಂಪು ತಂಪು. ನೆಲ ಕಾಣುವ ನೀರು ಹಿತ ನೀಡಿದರೆ ಕೆಲವೊಂದೆಡೆ ಕಪ್ಪಗಿನ ಕಂದಕ ಭಯ ಹುಟ್ಟಿಸುತ್ತವೆ ಸಧ್ಯಕ್ಕೆ ಈ ಗುಹೆಯ ೧ ಭಾಗ ಮಾತ್ರ ಪ್ರವಾಸಿಗರು ನೋಡಬಹುದು ಉಳಿದ ೩ ಭಾಗದಲ್ಲಿ ನೀರು ತುಂಬಿಕೊಂಡಿದೆ. ಚಳಿಗಾಲದಲ್ಲಿ ಈ ಸ್ಥಳ ಪೂರ್ತಿಯಾಗಿ ಮುಚ್ಚಿರುತ್ತದೆ, ಜೊತೆಗೆ ತಾಪಮಾನ ಮತ್ತು ಏರಿಳಿತದ ದಾರಿಯ ಕಾರಣದಿಂದ ಉಸಿರಾಟದ ತೊಂದರೆ ಇರುವವರಿಗೆ ಈ ಗುಹೆಯಾ ಓಡಾಟ ಅಷ್ಟು ಸೂಕ್ತವಲ್ಲ ಎನ್ನುವುದು ಟಿಕೆಟ್ ಕೌಂಟರಿನಲ್ಲಿ ಕೊಟ್ಟ ಸೂಚನೆಯಾಗಿತ್ತು. ಪುಟ್ಟ ಮಕ್ಕಳನ್ನು ಎತ್ತಿಕೊಂಡಾಗಲಿ, ಪ್ರಾಮ್ ಮೇಲೆ ಆಗಲಿ ಈ ಗುಹೆಯಲ್ಲಿ ಓಡಾಡುವುದು ಕಷ್ಟ.
ಮೊದಲ ಸಲ ನಾವು ಸ್ನೇಹಿತರೊಂದಿಗೆ ಇಲ್ಲಿಗೆ ಹೋದಾಗ, ನಗುವೆಂದರೇನು ಎಂಬುದರ ಪರಿಚಯವೇ ಇಲ್ಲದ ನಮ್ಮ ಗೈಡ್ ನಮ್ಮ ಟ್ರಿಪ್ಪಿನ ಮತ್ತೊಂದು ಆಕರ್ಷಣೆ ಆಗಿದ್ದ. ಭತ್ತ ಹಾಕಿದರೆ ಅರಳಾಗಿ ಬರುವಷ್ಟು ಸಿಡುಕನಾಗಿದ್ದ. ಪ್ರಯಾಣದಲ್ಲಿ ಮೆಟ್ಟಿಲುಗಳನ್ನು ಕಂಡ ಕೂಡಲೇ ನನಗೆ ಆಗುತ್ತಿದ್ದ ತಳಮಳ !! ಒಂದೂವರೆ ತಾಸಿನ ಈ ಪಯಣದ ನಂತರ ಹಸಿವಿನಿಂದ ಹೈರಾಣಾಗಿ ಬಂದಾಗ ಮನೆಯಿಂದಲೇ ಮಾಡಿ ತಂದ ಬಿಸಿಬೇಳೆ ಭಾತ್ ಮತ್ತು ಸ್ಯಾಂಡ್ವಿಚ್ ನಮ್ಮ ಪಾಲಿಗೆ ಎಂದಿಗಿಂತ ರುಚಿಯಾಗಿದ್ದವು. ಟಿಕೆಟ್ ಕೌಂಟರ್ ಮತ್ತು ಸ್ವಾಗತ ಕಚೇರಿಯ ಜೊತೆಗೆ ಇಲ್ಲೊಂದು ಕೆಫೆಯೂ ಇದೆ. ಅವರು ಮಾಡಿಕೊಡುವ
ವೆನಿಲ್ಲಾ ಐಸ್ಕ್ರೀಂ ಮತ್ತು ಬಿಸಿ ಬಿಸಿ ಬ್ರೌನಿ ಸವಿಯದಿದ್ದರೆ ನಮ್ಮ ಪ್ರವಾಸದಲ್ಲಿ ಏನೋ ತಪ್ಪಿ ಹೋದಂತೆ ಅನಿಸುತ್ತದೆ. ಇವನ್ನು ಹೇಳಲೇಬೇಕು ಎನಿಸಿತು ಏಕೆಂದರೆ ಇದೆಲ್ಲ ಆಗಿದ್ದು ನಮ್ಮ ಈ ಗುಹೆಗಳಿಗೆ ಮೊದಲಬಾರಿ ಭೇಟಿ ಕೊಟ್ಟಾಗ. ಆ ನಂತರ ಅದೆಷ್ಟು ಸಲ ಹೋಗಿ ಬಂದಿದ್ದರೂ ಮತ್ತೆ ಮತ್ತೆ ಹೋಗಿ ಬರಬೇಕು ಎನ್ನುವಂತಹ ಜಾಗ ಇದು.
ಮಾರ್ಬಲ್ ಆರ್ಚ್ ಕೇವ್ಸ್ ಬೆಲ್ಫಾಸ್ಟ್ ನಗರದಿಂದ ೯೧ಮೈಲಿ ದೂರದಲ್ಲಿದೆ. ಹತ್ತಿರದ Enniskillen, Florence court, ಮತ್ತು ಹಲವು ದ್ವೀಪಗಳನ್ನೂ, ಫರ್ಮಾನಾ ಊರಿನ ಹತ್ತಿರ ಇರುವ ಚಂದದ ಜಲಪಾತಗಳನ್ನೂ ನೋಡಬಹುದು. ಇಲ್ಲಿ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಒಳ್ಳೆಯ cottage ವಸತಿ ಸೌಲಭ್ಯ ಲಭ್ಯವಿದೆ. ನೀವು ಮೊದಲೇ ಈ ಗುಹೆಯ ಸ್ವಾಗತ ಕಚೇರಿಗೆ ಕರೆ ಮಾಡಿ opening hours ಬಗ್ಗೆ ಪಕ್ಕ ಮಾಹಿತಿ ಪಡೆದು ಹೋಗುವುದು ಒಳ್ಳೆಯದು. ಜೋರಾಗಿ ಮಳೆ ಗಾಳಿ ಇದ್ದ ಹೊತ್ತಲ್ಲಿ ಇದನ್ನು ಯಾವುದೇ ಮೂನ್ಸೂಚನೆ ಇಲ್ಲದೆಯೂ ಮುಚ್ಚಲಾಗುತ್ತದೆ. ಈ ನಿರಾಸೆ ನಮಗೂ ಒಮ್ಮೆ ಆಗಿದ್ದಕ್ಕೆ ಮೊದಲೇ ಪೂರ್ಣ ಮಾಹಿತಿ ತೆಗೆದುಕೊಂಡು ಹೋಗುವುದು ಒಳಿತು.
ಅಲ್ಲಿ ನಾನು ಫೋಟೋ ಕ್ಲಿಕ್ಕಿಸಲು ಪರದಾಡಿದ್ದು ಮತ್ತೊಂದು ಕತೆ , ನನ್ನ ಕಣ್ಣಿಗೆ ಕಂಡಷ್ಟು ನನ್ನ ಕ್ಯಾಮರಾ ಕಣ್ಣಿಗೆ ಕಾಣಲಿಲ್ಲ. ಅದಕ್ಕೆ ಅಂತರ್ಜಾಲದಲ್ಲಿ ಸಿಕ್ಕ ಚಿತ್ರಗಳನ್ನೇ ಇಲ್ಲಿ ಹಾಕುತ್ತಿದ್ದೇನೆ.
ನೀವು ಬೆಲ್ಫಾಸ್ಟ್ ಅಥವಾ ಐರ್ಲೆಂಡ್ ಗೆ ಭೇಟಿ ಕೊಟ್ಟರೆ ಮಾರ್ಬಲ್ ಆರ್ಚ್ ಕೇವ್ಸ್ ಗೆ ಮರೆಯದೆ ಭೇಟಿ ಕೊಡಿ.
ಅನಿವಾಸಿ ಗುಂಪಿನಲ್ಲಿ ಕಥೆಗಾರರು, ಕವಿಗಳು, ಹರಟೆಮಲ್ಲರು, ಇತಿಹಾಸ ಪ್ರಿಯರು ಪ್ರಬಂಧಕಾರರು ಹೀಗೆ ಹಲವು ಬಗೆಯ ವಿಶೇಷತೆಯ ಸದಸ್ಯರಿದ್ದಾರೆ. ಅವರೆಲ್ಲರ ನಡುವೆ, ಲಘು ಹಾಸ್ಯ ಭರಿತ ಲೇಖನ, ಕವನಗಳನ್ನು ಬರೆದು, ಎಲೆಯ ಮರೆಯ ಕಾಯಿಯಂತಿರುವವರು ವತ್ಸಲಾ. ಕಣ್ಣಲ್ಲೇ ನಸುನಗುವನ್ನು ಸೂಸುವ ಶೈಲಿ ಅವರದ್ದು. ಘನ ವಿಷಯವನ್ನು ಲಘುವಾಗಿ ಮನಮುಟ್ಟುವಂತೆ ಬರೆಯಬಲ್ಲರು ವತ್ಸಲಾ. ಈ ವಾರದ ಸಂಚಿಕೆಯಲ್ಲಿ ಅವರು ಬರಹವನ್ನು ನೀವು ಓದಿ, ಮುಗುಳ್ನಗುವಿರೆಂಬ ಭರವಸೆ ನನಗಿದೆ. ಇದು ಮುದ್ದಣ-ಮನೋರಮೆಯ ಸರಸ ಸಲ್ಲಾಪವೇ? ಅವರು ಕೇಳುವ ಪ್ರಶ್ನೆಗೆ ನಿಮ್ಮಲ್ಲಿ ಉತ್ತರವಿದೆಯೇ?
ಏನುಂದ್ರೆ ನಾನು ಹೇಳಿದ್ದು ಕೇಳಿಸಿತೆ ? ಹೂಂ ಕಣೆ ಕೇಳಿಸಿತು. ನಾನು ಹೇಳಿದ್ದು ಏನುೊಂತ ಗೊತ್ತಾಯಿತೆ? ನೀನು ಹೇಳಿದರೆ ತಾನೆ ಗೊತ್ತಾಗುವುದು. ಏನುಂದ್ರೆ ನಾನು ಹೇಳೋದೇನಂದರೆ, ಅಯ್ಯೋ! ರಾಮ! ಹೇಳೆ ಏನುಂತ ಮಹಾತಾಯಿ! ಅದೇ ಕಣ್ರಿ ಗೊತ್ತಾಯಿತಾ? ಗಂಡನಿಗೆ ತಲೆ ಬಿಸಿಯಾಗಿ ತಣ್ಣಗೆ ನೀರು ಕುಡಿದ. ಅಲ್ಲಾಂದ್ರೆ ನಾನು ನೆನಪಿಸುತ್ತಿರುವುದು “ಏನೂಂದ್ರೆ ಹೇಳಿ ನೋಡೋಣ” ಅಮ್ಮ ಮಹಾಕಾಳಿ, ನಿನ್ನ ಮನಸ್ಸಿನಲ್ಲಿ ಏನಿದೆಯೆಂದು ಒದರುವಂತವಳಾಗು! ಅದೇರಿ ಅವತ್ತು ಸಾಯಂಕಾಲ ಬೆಂಗಳೂರಿನ ಕೆಟ್ಟಗಾಳಿ ಕುಡಿಯಲು ಹೋಗಿದ್ದೆವೆಲ್ಲಾ ನೆನೆಪಿದೆಯೇನ್ರಿ? ಇಲ್ಲ ಕಣೆ, ಏನುಂತ ನೀನೇ ಹೇಳಬಾರದೆ ಅದೇ ಕಣ್ರಿ ಅಲಸೂರು ಕೆರೆ ಹತ್ತಿರ ಹೇಳಿದೆನಲ್ಲಾ ನೆನಪು ಬಂತೇನ್ರಿ? ಅದೇರಿ, ನಾವಿಬ್ಬರು ಬೆಂಚಿನ ಮೇಲೆ ಕುಳಿತು ಹುರಿದ ಕಡಲೆಬೀಜ ತಿಂತಾಯಿರಲ್ಲಿಲ್ಲವೇ? ಏನುಂದ್ರೇ ತುಕಡ್ಸಿತ್ತಿದ್ದೀರಾ? ನಾನು ಹೇಳಿದ್ದು ಗೊತ್ತಾಯಿತಾ? ಹೂಂ ಕಣೆ ಸುತ್ತಿ ಬಳಸಿ ಮಾತನಾಡಬೇಡ , ಏನು ಹೇಳು: ಗಂಡ ಗದರಿದ. ಏನುಂದ್ರೇ ! ಏನೂಯಿಲ್ಲ ಬೆಲ್ಲ ಇಲ್ಲ. ಅದೇನು ಹೇಳೇ ಬೇಗ: ಗಂಡ ಗುಡುಗಿದ. ಅದೇರಿ ಕಳ್ಳೆಕಾಯಿ ತಿನ್ನುತ್ತಾ ಇರಬೇಕಾದರೆ ಒಂದು ಹೊಸ ದಂಪತಿಗಳು ಬಂದ್ರಲ್ಲಾ? ಗಂಡ ಚುರುಕಾದ. ಹೌದು ಕಣೆ, ಆ ಹುಡುಗಿ ಎಷ್ಟು ಸುಂದರವಾಗಿದ್ದಳು ಅಲ್ಲವೇನೆ? ಬೆಳ್ಳಗೆ, ತೆಳ್ಳಗೆ, ಹಸಿರು ಸೀರೆ ಉಟ್ಟು ಗಲಗಲಾಂತ ನಗುತ್ತಾ ಗಂಡನ ಕೈ ಹಿಡಿದುಕೋಂಡು ಹೋಗುತ್ತಿದ್ದಳು ಅವಳ ಜಡೆ ನಾಗರ ಹಾವಿನಂತೆ ಉದ್ದಕ್ಕಿತ್ತು ಅಲ್ಲೇನೆ? ಅವಳು ಬಳಕುತ್ತಾ ನಡೀತಾ ಇದ್ರೆ! ಹೆಂಡತಿ ಕೆಂಡಕಾರಲು ಸಿದ್ದವಾಗಿದ್ದಳು. ಆದರೆ ಹಾಗೆ ಮಾಡಲಿಲ್ಲ, ಯಾಕೆ ಗೊತ್ತಾ? ಮುಂದಿನ ಮಾತು ಕೇಳಿ. ಅರೇ! ನಿಮಗೆ ಬೇಕು ಅಂದ್ರೆ ನೆನಪು ಎಷ್ಟು ಚೆನ್ನಾಗಿ ಎಳೆ ಎಳೆಯಾಗಿ ಬರುತ್ತೆ ಅಲ್ಲೇನ್ರಿ? ಹೂಂ ಕಣೆ ಹುಡುಗಿ ತುಂಬಾ ಚೆನ್ನಾಗಿ ಕಳಕಳಂತ ಇದ್ದಳು ಅಲ್ಲೇನೆ? ಹೂಂರೀ ! ಅವಳ ಕತ್ತಿನಲ್ಲಿ ಯಾವ ನೆಕ್ಲೇಸ್ ಇತ್ತು ಗೊತ್ತಾ? ಅದೇ ಕಣೆ! ಹಂಸದಂತ ಕತ್ತಿನಲ್ಲಿ ಕೆಂಪು ಮುತ್ತಿನ ನೆಕ್ಲೇಸ್, ವಜ್ರದ ಓಲೆ, ಬಳೆ ಏಲ್ಲಾ ಹಾಕಿಕೊಂಡು ಮಂಗಳ ಗೌರಿಯಂತೆ ಇದ್ದಳು ಅಲ್ಲೇನೇ? ಹೆಂಡತಿಗೆ ಕೋಪ ನೆತ್ತಿಗೇರಿತು. ಆದರೂ, ಹೌದೂರೀ ಆವಾಗ ನಾನು ಏನು ಕೇಳಿದೆ ಹೇಳಿ? ಅಯ್ಯೊ! ಬಿಡೆ ನೀನು ಏನೇನೋ ಕೇಳ್ತಾ ಇರುತ್ತಿ ನಂಗೆ ನೆನಪು ಇಲ್ಲ ಹೋಗೆ ಸರಿ ಬಿಡಿ , ನಾನೇಕೆ ನೆನಪಿಸ ಬೇಕು? ಇಲ್ಲ ಕಣೆ ಹೇಳೆ ರಾಣಿ! ಹೆಂಡತಿ ವೈಯ್ಯಾರದಿಂದ “ಆ ಹುಡುಗಿ ಹಾಕಿಕೊಂಡಂತ ನೆಕ್ಲೇಸ್ ಇಲ್ಲೇ ಪಕ್ಕದ ಅಂಗಡಿಯಲ್ಲಿದೆಯಂತೆ, ಆ ಹುಡುಗಿ ಹೇಳಿದಳು. ಸುಮ್ಮನೆ ನೋಡಿಕೊಂಡು ಬರೋಣ ಅಂತ ಹೋಗಿ ನೋಡಲ್ಲಿಲ್ಲವೇ?, ಬೆಪ್ಪ ಗಂಡ, ಹೌದು ಹೋಗಿ ನೋಡಿದೆವು. ನಂತರ ಮನೆಗೆ ಬಂದು ಊಟಮಾಡಿ ಮಲಗಿಕೊಂಡೆವು ಅಷ್ಟೇ. ಹೂಂ ಕಣ್ರಿ ! ನಾನು ನೆನ್ನೆ ಆ ಅಂಗಡಿಗೆ ಹೋಗಿ Necklace order ಮಾಡಿದೆ. ನಿಮಗೂ ತುಂಬಾ ಇಷ್ಟ ಆಯ್ತು ಅಲ್ಲವೇನ್ರಿ? ಏನೊಂದ್ರೆ ನಾನು ಹೇಳಿದ್ದು ಕೇಳಿಸಿಕೊಂಡ್ರ? ಆಫೀಸಿನಿಂದ ಬರಬೇಕಾದರೆ ದುಡ್ಡು ಮರೀಬೇಡಿ ಗೊತ್ತಾಯಿತಾ? ಗಂಡ ಪಾಪ! ಬಡ ಕಾರಕೂನ. ಬೆಪ್ಪನಾದ! ಹೆಂಡತಿ “ಏನುಂದ್ರೆ ಹೇಳಿದ್ದು ಕೇಳಿಸಿತಾ” ಗಂಡ ಏನು ಹೇಳಿದ ನಂಗೆ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ಹೇಳಿ.
ಈ ವಾರದ ಪ್ರಕಟಣೆ ವಿಳಂಬವಾಗಿರುವುದಕ್ಕೆ ಕ್ಷಮೆ ಕೋರುತ್ತೇನೆ. ಈ ವಾರದ ಪ್ರಕಟನೆ ನಾನು ೨೦ ವರ್ಷಗಳ ಹಿಂದೆ ಬರೆದ ಕತೆ, `ತರಂಗ`ದಲ್ಲಿ `ತಿಂಗಳ ಬಹುಮಾನಿತ ಕಥೆ`ಯಾಗಿ ಪ್ರಕಟವಾಗಿತ್ತು. ಎರಡು ದಶಕಗಳ ನಂತರದ ಈ ಆಧುನಿಕ ಕಾಲದಲ್ಲಿ ಈ ಕಥೆ ಅಪ್ರಸ್ತುತ ಎನಿಸಬಹುದು. ಈ ಹಿಂದೆ ಪ್ರಕಟವಾದ ಕಥೆಯನ್ನೇ ಇಲ್ಲಿ ನಿಮ್ಮ ಮುಂದಿಡುತ್ತಿರುವುದಕ್ಕೂ ಕ್ಷಮೆ ಕೋರುತ್ತೇನೆ. – ಕೇಶವ
ಇದೆನ್ನೆಲ್ಲ ನಿಮ್ಮ ಮುಂದೆ ಕಕ್ಕಿಬಿಡಬೇಕು ಎಂದು ನಾನು ನಿಮ್ಮ ಎದುರಿಗೆ ಇದೀಗ ಕುಳಿತಿದ್ದೇನೆ. ಏಕೆಂದರೆ ಕಕ್ಕುವುದು ನನಗೀಗ ಅನಿವಾರ್ಯವಾಗಿದೆ. ಅದರ ಸಲುವಾಗಿಯೇ ಈಗ ಎಲ್ಲವನ್ನೂ ಒಂದೂ ಬಿಡದೇ ಸಾವಕಾಶವಾಗಿ ಹೇಳುತ್ತೇನೆ. ಇಷ್ಟಾದರೂ ಈಗ ಎಲ್ಲಿಂದ ಶುರು ಮಾಡಲಿ ಎಂದು ತಿಳಿಯಲಾರದೇ ಒದ್ದಾಡುತ್ತಿದ್ದೇನೆ. ಎಲ್ಲಿಂದ ಶುರುಮಾಡಿದರೆ ನಿಮ್ಮಗೆ ಪೂರ ಅರ್ಥವಾದೀತು ಎಂದು ನನಗೆ ಅರ್ಥವಾಗುತ್ತಿಲ್ಲ.
ಅವತ್ತೂ ಹೀಗೆಯೇ ಆಯಿತು. ರೂಪಾ ಕುಲಕರ್ಣಿಯ ಬರ್ತ್ಡೇ ಪಾರ್ಟಿ ಮುಗಿಸಿಕೊಂಡು ರಾತ್ರಿ ಹನ್ನೊಂದ್ದಕ್ಕೆ ಖೋಲಿಗೆ ಬಂದಾಗ ಹೀಗೆಯೇ, ಎಲ್ಲವನ್ನೂ ಕಕ್ಕಿ ಬಿಡಬೇಕು ಅನಿಸಿತು. ಖೋಲಿಯಲ್ಲಿ ಉಳಿದವರಿಬ್ಬರೂ ಸಿನಿಮಾಕ್ಕೆ ಹೋಗಿದ್ದರು. ಕೈಗೆ ಸಿಕ್ಕ ವಹಿ ತೆಗೆದುಕೊಂಡು ಹೀಗೆಯೇ ಶುರು ಮಾಡಿ, ಬರ್ತ್ಡೇ ಪಾರ್ಟಿಯಲ್ಲಿ ನಡೆದುದನ್ನು, ಅದು ನನ್ನ ಮೇಲೆ ಮಾಡಿದ ಪರಿಣಾಮವನ್ನು, ನಾನು ಬೆಳೆದ ವಾತಾವರಣವು ಅಲ್ಲಿ ತಂದ ಸಂದಿಗ್ಢತೆಯನ್ನು ಬರೆಯುತ್ತ ಹೋದೆ. ಬರ್ತ್ಡೇ ಪಾರ್ಟಿ ತೆಲೆಯನ್ನು ಪೂರ ಕೆಡೆಸಿತ್ತು. ಸುಮಾರು ಇಪ್ಪತ್ತು ಪಾನು ಗೀಚಿದೆ. ಏಕೆಂದರೆ ಆಗಲೂ ಹಾಗೆಯೇ, ಕಕ್ಕುವುದು ಅನಿವಾರ್ಯವಾಗಿತ್ತು. ಇಲ್ಲದಿದ್ದರೆ ನಾನು ನನ್ನ ಮನಸ್ಸಿನ ತಳಮಳದಿಂದ ಹೊರಬರಲು ಸಾಧ್ಯಗಲಾರದೇ ಒದ್ದಾಡುತ್ತಿದ್ದೆ.
ಹೀಗೆಲ್ಲ ಹೇಳಿದರೆ ನಿಮ್ಮಗೆ ತಿಳಿಯುವದಿಲ್ಲವೆಂದು ಗೊತ್ತು. ಹಾಗೆಂದು ಆವತ್ತು ಬರೆದ ಇಪ್ಪತ್ತು ಪಾನುಗಳನ್ನು ಇಲ್ಲಿ ಹೇಳುವುದಿಲ್ಲ; ಅವುಗಳನ್ನು ಹೇಳುವ ಮನಸ್ಸೂ ಇಲ್ಲ. ನನಗೆ ಆದಕ್ಕಿಂತ ಮುಂದಿನದನ್ನು ಹೇಳಬೇಕಾಗಿದೆ. ಆದರೆ ಹಿಂದಿನದು ಗೊತ್ತಿರದೇ ಮುಂದಿನದು ತಿಳಿಯಲಿಕ್ಕಿಲ್ಲವೆಂದು ಹಿಂದಿನದನ್ನು ಹೇಳಿ ಮುಂದೆ ಸಾಗುತ್ತೇನೆ.
ನಾನೊಬ್ಬ ವಿಚಿತ್ರ ವ್ಯಕ್ತಿತ್ವದ ಮನುಷ್ಯ. ನನ್ನ ಸ್ವಭಾವ ಪರಿಚಯ ಮಾಡಿ ಕೊಡಲು ಇದೆಲ್ಲ ಹೇಳಿದರೆ ಸಾಕು ಅನಿಸುತ್ತದೆ. ಈಗಿನ ಕಾಲ: ೧೯೯೨. ಹೆಸರು (ಏನಾದರೂ ನಡೆದೀತು), ವಯಸ್ಸು: ಇಪ್ಪತ್ತು, ಓದುತ್ತಿರುವುದು: ಬಿ. ಇ (ಮೆಕ್ಯಾನಿಕಲ್) ಜಾತಿ: ಬ್ರಾಹ್ಮಣ; ಹವ್ಯಾಸ: ಕಥೆ-ಕವನ ಓದುವುದು, ಬರೆಯುವುದು. ನಮ್ಮ ಮನೆಯಲ್ಲಿ ಒಟ್ಟೂ ನಾಕೇ ಮಂದಿ – ಸಣ್ಣ ಪಗಾರದ ಧಾರ್ಮಿಕ ನಡೆವಳಿಕೆಯ ಬಾಳುತ್ತಿರುವ ಅಪ್ಪ, ಅಪ್ಪನ ಮಾತು ಕೇಳಿಕೊಂಡು ಬದುಕುತ್ತಿರುವ ಕ್ಯಾನ್ಸರಿನಿಂದ ನವೆಯುತ್ತಿರುವ ಅಮ್ಮ, ಮೂರೂವರೆ ವರ್ಷದಿಂದ ಮೂಲೆಯಲ್ಲಿ ಪಾರ್ಸಿ ಹೊಡೆದು ಮಲಗಿದ ಅಜ್ಜಿ ಮತ್ತು ನಾನು. ಮನೆಯಲ್ಲಿ ಪೂರ ಧಾರ್ಮಿಕ ವಾತಾವರಣ. ನಮ್ಮಜ್ಜ ನಮ್ಮಪ್ಪ ಮಗುವಾಗಿರುವಾಗಲೇ ಸತ್ತನಂತೆ; ಅಂದಿನಿಂದ ನಮ್ಮಜ್ಜಿ ಮಾಡಿಯಾಗಿದ್ದಾಳೆ ( ಈ ಕಥೆ ಮುಗಿಯುವುದರೊಳಗಾಗಿ ಸಾಯುತ್ತಾಳೆ). ದಿನಾಲು ಮಡಿ ಊಟವೇ ಆಗಬೇಕು. ತನೆಗೇ ಏಡಿರೋಗ ಬಡಿದಿದ್ದರೂ ಅವ್ವ ದೇವರು-ದಿಂಡಿರೆಂದು ಕಷ್ಟಪಟ್ಟು ಮಡಿ ಅಡಿಗೆ ಮಾಡುತ್ತಾಳೆ. ದಿನಾಲೂ ದೇವರ ಪೂಜೆ, ವೈಶ್ವದೇವ, ರಾಯರ ಹಸ್ತೋದಕ ಆಗಲೇಬೇಕು. ಪ್ರತಿ ಗುರುವಾರ ತಾರತಮ್ಯ ಭಜನೆ, ಕಡ್ಡಾಯವಾಗಿ ಎರಡು ಹೊತ್ತು ಸಂಧ್ಯಾವಂದನೆ ಇವನ್ನೆಲ್ಲ ಅಪ್ಪ ಶ್ರದ್ದೆಯಿಂದ ಮಾಡುತ್ತಾನೆ. ಔಷಧಿಗಾಗಿ ಪೈಸೆ ಪೈಸೆ ಕೊಡಿಸಿ ಅಮ್ಮ, ಅಜ್ಜಿಯರನ್ನು ಡಾಕ್ಟರಿಗೆ ತೋರಿಸುತ್ತಾನೆ. ಅಂತಹುದರಲ್ಲಿ ಮುಂಚಿನಿಂದಲ್ಲು ಚಲೋ ಓದಿದ್ದರಿಂದಲೋ ಏನೋ, ಚಲೋ ಮಾರ್ಕ್ಸ್ ಬಂದು ನಾನು ಹದಿನೆಂಟನೆಯ ವಯಸ್ಸಿಗೆ ಬಾಗಲಕೋಟೆಯಿಂದ ಹುಬ್ಬಳ್ಳಿಗೆ (ಬಿವಿಬಿ ಕಾಲೇಜು) ಬರಬೇಕಾಗಿ ಬಂತು. ಅಪ್ಪ ಹಾಗೂ ಹೀಗೊ ತಿಂಗಳಿಗೆ ನಾನೂರೋ ಐನೂರೋ ಕಳಿಸುತ್ತಾನೆ.
ಇಲ್ಲಿ ಹುಬ್ಬಳ್ಳಿಗೆ ಬಂದ ಮೇಲೆ ನನ್ನಲ್ಲಿ ಒಂದೊಂದೇ ಬದಲಾವಣೆಗಳು ಕಾಣಿಸಿಕೊಳ್ಳಲು ಶುರುವಾದವು. ನಾನು ಹೈಸ್ಕೂಲಿನಲ್ಲಿದ್ದಾಗ ಮಾಡುತ್ತಿದ್ದ ಗಾಂಧಿ-ಟಾಲ್ಸ್ಟಾಯ್ ಭಜನೆಗಳು ಸಾವಕಾಶವಾಗಿ ಕಡಿಮೆಯಾಗಲು ಹತ್ತಿದವು. ಹಾಸ್ಟೆಲಿನಲ್ಲಿ ಬೇರೆ ಬೇರೆ ತರಹದ ಗೆಳೆಯರು ಸುತ್ತುವರಿದಿದ್ದಾರೆ. ಹುಡುಗಿಯರ ಬಗೆಗೆ ಹೇಸಿಗೆಯಿಲ್ಲದೇ ಹೊಲಸು ಮಾತಾಡುತ್ತಾರೆ. ಮುಂಚಿ ಇಂತಹುದನ್ನೆಲ್ಲ ಎಂದೂ ಕೇಳಿದವನಲ್ಲ. ಮನಸ್ಸಿನಲ್ಲೇ ಖುಷಿಯಾದರೂ ಮಾತನಾಡಲು, ನಗಲು ನನ್ನ ಸಂಸ್ಕಾರದ ಅಡ್ಡಿ.
ದಾರಿಯಲ್ಲಿ ಹೊರಟ ಹುಡುಗಿಯರನ್ನು ನೋಡಲು ಕಡಿವಾಣ ಹಾಕಿಕೊಂಡಿದ್ದರೂ ಒಬ್ಬನೇ ಇದ್ದಾಗ ದಾರಿಯಲ್ಲಿನ ಹುಡುಗಿಯರನ್ನು ಕಣ್ತುಂಬ ತುಂಬಿಕೊಳ್ಳಲು ಶುರು ಮಾಡಿದೆ; ಮನಸ್ಸಿನಲ್ಲೇ ಮಂಡಿಗೆ ತಿನ್ನಹತ್ತಿದೆ. ಇಂಥ ಹೊತ್ತಿನಲ್ಲೇ ಹುಬ್ಬಳ್ಳಿಯ ಸಿನಿಮಾ ಚಾಳಿ ಬೇರೆ ಅಂಟಿಕೊಳ್ಳಹತ್ತಿತ್ತು. ಆಗಲೇ ಸಾಹಿತ್ಯದ ಕೆಲವು ಪ್ರಮುಖ ಕೃತಿಗಳನ್ನು ಓದುವ ಅವಕಾಶ ಪಡೆದುಕೊಂಡೆ. ಎಲ್ಲದಕ್ಕೂ ಭಗವಂತೆನೇ ಕಾರಣ, ಬದುಕಿನಲ್ಲಿ ಆದರ್ಶ- ಗುರಿಗಳೇ ಮುಖ್ಯ, ಅವುಗಳಿಗಾಗಿ ಮಾಡುವ ಸತತ ಪ್ರಯತ್ನ ಇವುಗಳನ್ನು ನಂಬಿದ್ದ ನಾನು ಇವುಗಳನ್ನೇ ಸಂಶೆಯದಿಂದ ನೋಡಲಿಕ್ಕೆ ಹತ್ತಿದೆ. ಆದರೆ ಹಿಂದಿನದನ್ನು ಬಿಡಲಾಗದೇ ಹೊಸಹಾದಿ ತಿಳಿಯದೇ ಒದ್ದಾಡಿ ಕಥೆ-ಕವನ ಗೀಚಲು ಶುರುಮಾಡಿದೆ. ಸಾಹಿತ್ಯಿಕ ಸ್ಪರ್ಧಗಳಲ್ಲಿ ಬಹುಮಾನ ಬಂದದ್ದರಿಂದ, ಹುಡುಗಿಯರ ಬಗೆಗೆ ಜೋಕು ಮಾಡದ್ದರಿಂದ, ಮೊದಲನೆಯ ವರ್ಷ ಚಲೋ ಮಾರ್ಕ್ಸ್ ಬಂದದ್ದಿರಿಂದ , `ಗಾಂಧಿ`;`ಕವಿ`, `ಪುಸ್ತಕದಾಗಿನ ಹುಳ` ಆದೆ. ಇಷ್ಟರೊಳಗಾಗಿ ಒಳಗಿನ ನಾನು, ಹೊರಗಿನ ನಾನು ಬೇರೆ ಬೇರೆಯಾಗಿದ್ದು ನನ್ನ ಗಮನಕ್ಕೆ ಬಂತು.
ಇಷ್ಟಲ್ಲದೇ ಅಪ್ಪ ಈಗೀಗ ರೊಕ್ಕ ವೇಳೆಗೆ ಸರಿಯಾಗಿ ಕಳಿಸುತ್ತಿಲ್ಲ (ಅಜ್ಜಿಯ ರೋಗ ಜಾಸ್ತಿಯಾಗಿದೆಯಂತೆ). ನನಗೆ ಇದಲ್ಲದರಿಂದ ಬೇಡುಗಡೆ ಬೇಕಾಗಿತ್ತು. ಆದರೆ ಆಧ್ಯಾತ್ಮದ ಜೀವಾತ್ಮ – ಪರಮಾತ್ಮ, ಸಾಹಿತ್ಯದ ಕಾಮ-ಸಾವು-ಅಹಂಗಳು ಒಂದಕ್ಕೊಂದು ಹೊಂದಲಾರದೇ ನಾನು ಅಂತರ್ಮುಖಿಯಾಗಹತ್ತಿದೆ. ಅಷ್ಟಲ್ಲದೇ ಅಮೆರಿಕದ ವಿದ್ಯಾರ್ಥಿಗಳಂತೆ ನಾನೇಕೆ ದುಡಿಯುತ್ತ ಕಲಿಯಬಾರದು? ಅಪ್ಪನಿಗೇಕೆ ಕಷ್ಟ ಕೊಡಬೇಕು ಎನಿಸಲು ಹತ್ತಿತು. ಹೀಗೆ ಇನ್ನೆಷ್ಟನ್ನೋ ತಲೆಯಲ್ಲಿ ತುಂಬಿಕೊಂಡು ನಾನು ನನ್ನನ್ನೇ ನೋಡಲು ಶುರುಮಾಡಿದಾಗ ರೂಪಾಕುಲಕರ್ಣಿ ಬರ್ತ್ಡೇ ಪಾರ್ಟಿಗೆ ಬಾ ಎಂದು ಆಹ್ಹಾನಿಸಿದ್ದಳು.
ಅದು ಆಗಸ್ಟ್ ತಿಂಗಳ ಕೊನೆ. ನನ್ನ ಕಿಸೆ ಪೂರ ಜಾಲಾಡಿಸಿದರೂ ಆರೇಳು ರೂಪಾಯಿ ಸಿಗಬಹುದಿತ್ತು. ರಾತ್ರಿ ಬಹಳ ಹೊತ್ತು ಓದುತ್ತ ಕುಳಿತಿದ್ದರಿಂದ ಮುಂಜಾನೆ ಎದ್ದಕೂಡಲೇ ತಲೆ ಚಿಟಿಚಿಟಿ ಎನಿಸಿ ಒಂದು ರೂಪಾಯಿ ಖರ್ಚು ಮಾಡಿ ಚಹಾ ಕುಡಿದೆ. ಕಾಲೇಜಿನಲ್ಲಿದ್ದಾಗ ರೂಪಕುಲಕರ್ಣಿ ಬರ್ತ್ಡೇ ಪಾರ್ಟಿಗೆ ಬರಲು ಆಹ್ವಾನವಿತ್ತಳು. ನಾನು ಸಬೂಬು ಹೇಳಿ ತಪ್ಪಿಸಿಕೊಳ್ಳಹೋದೆ. ಆದರೆ ಬಾಜು ನಿಂತ ಅರುಣ ನನ್ನ ಸತ್ತ್ವವನ್ನೇ ಕೆಣಕಿ ಜೋಕು ಹೊಡೆದು ಒಪ್ಪಿಸಿಬಿಟ್ಟ. ರೂಪಕುಲಕರ್ಣಿಗೆ ಪ್ರೆಸೆಂಟೇಶನ್ ತರಲು ಪ್ರತಿಯೊಬ್ಬ ಇಪ್ಪತ್ತು ರೂಪಾಯಿ ಹಾಕಬೇಕೆಂದು ಹೇಳಿದ. ನಾನು ಇಲ್ಲಿಯ ತನಕ ಯಾವುದೇ ಪಾರ್ಟಿಗೊ ಹೋದವನಲ್ಲ. ಅಲ್ಲದೆ ಇಪ್ಪತ್ತು ರೂಪಾಯಿ ಬೇರೆ ಕೊಡಬೇಕು. ತಲೆಕೆಟ್ಟು, ಖೋಲಿಗೆ ಬಂದೆ. ಮನಸ್ಸು ವಿಚಿತ್ರ ರೀತಿಯಲ್ಲಿ ತಳಮಳಿಸುತ್ತಿತ್ತು. ಆ ಭಾವಗಳನ್ನು ಶಬ್ದಮಾಡುವ ವ್ಯರ್ಥಪ್ರತಿಮೆಗಳನ್ನು ಹುಡುಕುತ್ತ ಕಾಗದದ ಮೇಲೆ ಗೀಚಿತ್ತ ಕೂತಿದ್ದೆ. ಆವಾಗಲೇ ಬಾಗಲಕೋಟೆಯಿಂದ ಮಗ್ಗಲ ಮನೆ ಬಿಂದಪ್ಪ ಬಂದ. ಅಪ್ಪ-ಅಮ್ಮ-ಅಜ್ಜಿ ಅರಾಮವೆಂದು ಕೇಳಿ ಅಪ್ಪನ ಚೀಟಿ ಕೊಟ್ಟಿದ್ದ. ಅಪ್ಪ ಆಶೀರ್ವಾದ ತಿಳಿಸಿ ಬರೆದಿದ್ದ, `ಮುಂದಿನ ತಿಂಗಳು ದುಡ್ಡು ಕಳಿಸಲು ಆಗುವುದಿಲ್ಲ. ಬಾಳು ಮಾಮಾಗೆ ಪತ್ರ ಹಾಕಿ ತರಿಸಿಕೊ,` ಅಂತ. ಬಿಂದಪ್ಪ ಉಂಡಿ-ಅವಲಕ್ಕಿ ಚೀಲ ಕೊಟ್ಟುಹೋದ. ನಾನು ಪೂರ ಕುಸಿದೆ. ನನಗೆ ಖೋಲಿಯಲ್ಲಿ ಕುಳಿತುಕೊಳ್ಳುವುದು ಸಾಧ್ಯವಾಗಲಿಲ್ಲ. ಅಂಗಿ-ಪ್ಯಾಂಟು ಹಾಕಿಕೊಂಡು ಬರ್ತ್ಡೇಗೆ ಹೋಗಲು ತಯಾರಿ ನಡೆಸಿದೆ.
ಪಾರ್ಟಿಯಲ್ಲಿ ಏನೇನು ನಡೆಯಿತು ಎಂದು ವಿವರವಾಗಿ ಹೇಳುವುದಿಲ್ಲ, ಏಕೆಂದರೆ ಅದನ್ನೆಲ್ಲ ಪಾರ್ಟಿಯಿಂದ ಬಂದಕೊಡಲೇ ಬರ್ತ್ಡೇ ಸಲುವಾಗಿ ಮನೆಯನ್ನು ಅಲಂಕರಿಸಿದ ರೀತಿ, ವಿದ್ಯುತ್ ಪ್ರಕಾಶ ಕುರಿತು ಬರೆದೆ. ಕೇಕೊಂದಕ್ಕೇ ಎರಡು ನೂರ ಐವತ್ತು ಎಂದು ರೂಪಾಕುಲಕರ್ಣಿ ಜಂಭ ಕೊಚ್ಚಿ ಕೊಂಡಿದ್ದನ್ನೊ ಬರೆದೆ. ಗೆಳೆಯರು ಗೆಳತಿಯರಿಗೆ ಇಂಪ್ರೆಶನ್ ಹೊಡೆಯಲು, ಗೆಳತಿಯರು ಗೆಳೆಯರು ಎದುರು ಡೌಲು ಬಡೆಯಲು ವ್ಯವಹರಿಸುತ್ತಿದ್ದ ಕ್ಷುದ್ರರೀತಿಯನ್ನು ಬರೆದೆ. ಪಾರ್ಟಿಗೆ
ಬರದವರ ಬಗ್ಗೆ ಹೇಗೆ ಅಶ್ಲೀಲವಾಗಿ ಮಾತನಾಡಿ ಗೇಲಿ ಮಾಡುತ್ತಿದ್ದರು; ನಗು ಬರದಿದ್ದರೂ ಮನಃಪೂರ್ವಕವಾಗಿ ನಕ್ಕಂತೆ ಹೇಗೆ ಗೊಳ್ ಎಂದು ನಗುವಿನ ಸೋಗು ಹಾಕುತ್ತಿದ್ದರು; ಪೋಲಿ ಜೋಕುಗಳನ್ನು ಎಗ್ಗಿಲ್ಲದೇ ಹೇಳಿ ಹೇಗೆ ಸ್ಯಾಡಿಸ್ಟ್ ಖುಷಿ ತೆಗೆದುಕೊಂಡರು – ಎಂಬುದನ್ನೆಲ್ಲ ಗೀಚಿದೆ. ನಾನು ಬೆಳೆದ ರೀತಿ, ನನ್ನ ಮನೆಯ ಪರಿಸರ, ನನ್ನ ಮನಸ್ಸಿನ ರೀತಿ, ನನ್ನ ಹಣದ ಕೊರತೆ ಎಲ್ಲವನ್ನೂ ಬರೆದು, ಅಂಥ ಮನಃಸ್ಥಿತಿಯಲ್ಲಿದ್ದ ನನ್ನ ಮೇಲೆ ಪಾರ್ಟಿ ಮಾಡಿದ ಪರಿಣಾಮವನ್ನು ಬರೆದೆ. ಪಾರ್ಟಿ ಮಾಮೂಲಾಗೇ ಸಾಗಿದ್ದರೂ ಎಲ್ಲ ನನಗೆ ವಿಚಿತ್ರವಾಗಿ ಕಾಣಿಸುತ್ತಿರುವುದನ್ನು, ಹಾಗೆ ಕಾಣಿಸಲು ಕಾರಣವಾದ ನನ್ನ ಸಂಸ್ಕೃತಿಯನ್ನು, ಮನೆಯ ಧಾರ್ಮಿಕ ವಾಟವನದಲ್ಲಿ ಜಿಡ್ಡುಹಿಡಿದ ರೋಗದ ನಂಟನ್ನು, ಮಗನಿಗೆ ಕಳಿಸಲು ರೊಕ್ಕವಿರದಿದ್ದರೂ ಸಾಲ ಮಾಡಿಯಾದರೂ ಬ್ರಾಹ್ಮಣರನ್ನು ಕರೆದು ಊಟಹಾಕಿಸಿ ದಕ್ಷಿಣೆಕೊಡುವ ಅಪ್ಪನನ್ನು, ಕೈಯಿಂದ ಕುಂಡೆ ತೊಳೆದುಕೊಳ್ಳಲು ಬರದಿದ್ದರೂ, ಅಮ್ಮನ ಮೇಲೆ ದರ್ಪ ತೋರುವ ಅಜ್ಜಿಯನ್ನು, ಇದೆಲ್ಲವನ್ನು ಸಹಿಸಿಕೊಂಡು ತನ್ನ ರೋಗವನ್ನು ತುಟಿಕಚ್ಚಿ ಮುಚ್ಚಿಕೊಂಡು ಮಡಿಯೆಂದು ಬಡಿದುಕೊಳ್ಳುವ ಅವ್ವನನ್ನು ಕುರಿತು ಬರೆದೆ. ಹಾಗೆಯೇ ಪಾರ್ಟಿಯಲ್ಲಿ ರೂಪಾಳ ಅಪ್ಪ ದರ್ಪದಿಂದ ಹಲ್ಲು ಕಿರಿಯುತ್ತ ಓಡಾಡಿದ ರೀತಿಯನ್ನು ಬರೆದೆ. ಹಾಗೆಯೇ ನನ್ನನ್ನು ಪೂರ ಹುಚ್ಚ ನನ್ನಾಗಿಸುವ ಸನ್ನಾಹದಲ್ಲಿದ್ದ ‘ಪಿಕ್ ಆ್ಯಂಡ ಆ್ಯಕ್ಟಿ’ ನ ಎಲ್ಲ ಘಟನೆಗಳನ್ನು ಸವಿವರವಾಗಿ ಬರೆದೆ.
[ಒಂದೆರಡು ಸ್ಯಾಂಪಲ್ ಕೊಡುತ್ತೇನೆ;
೧. ಮಿಲಿಂದ ಚೀಟಿ ಎತ್ತುತ್ತಿದ್ದಾಗ ಒಂದರೆ ನಿಮಿಷದ ಮೌನ. ಚೀಟಿ ಒಡೆದವನೇ `ಹುರ್ರಾ,`; ಎಂದು ಕೆಟ್ಟದಾಗಿ ಅರಚಿ ಕುಣಿದಾಡಿದ. ಗಟ್ಟಿಯಾಗಿ ಓದಿದ: `Take Sulochana on double ride on your imaginary bicycle,.` ಎಂದು. ಸುಲೋಚನಾಳತ್ತ ತಿರುಗಿ ಇಂಗ್ಲಿಷಿನಲ್ಲೇ ಕೂಗಿಡಾ, `ಗಾಡ್ಸ್ ಮಸ್ಟ್ ಬಿ ಕ್ರೇಜಿ ಪಾರ್ಟ್ ಟು`ನಲ್ಲಿ ಇರುವಂತೆ ನಿನ್ನನ್ನು ಕೂಡಿಸಿ ಕೊಂಡು ರೈಡ್ ಮಾಡುತ್ತೇನೆ` ಎಂದು. ಸುಲೋಚನಾ ಸಿಟ್ಟಿನಿಂದ, ನಾಚಿಕೆಯಿಂದ ಕೆಂಪಾಗಿ, `ನೊ! ನೆವರ್!!`; ಎಂದು ಅರಚಿದಳು. ಎಲ್ಲರೂ ಆಕೆಯನ್ನು ಸುತ್ತುಗಟ್ಟಿ ಅರಚತೊಡಗಿದಾಗ ಆಕೆ ಮಣಿದು ಮಿಲಿಂದನ ಮುಂದೆ ಕುಳಿತಂತೆ ನಟನೆ ಮಾಡಿದಳು. ಆತ ಪೆಡಲ್ ತಿರಿಗಿಸುತ್ತಿರುವಂತೆ ಕಾಲು ತಿರುಗಿಸುತ್ತ ಆಕೆಯ ಹಿಂಭಾಗವನ್ನು ಕಾಲಿನಿಂದ ಒತ್ತುತ್ತಿದ್ದ, ಪ್ರತಿಸಾರಿ ಹಾಗೆ ಮಾಡಿದಾಗಲೂ ಎಲ್ಲರೂ ಹೋ ಎಂದು ಕೂಗಿ ಚಪ್ಪಾಳೆ ತಟ್ಟುತ್ತಿದ್ದರು. ಎಲ್ಲರನ್ನೂ ಝಾಡಿಸಿ ಒದೆಯಲೇ ಎನಿಸಿ ನಾನು ಥರಥರ ನಡುಗಿದೆ ಒಳಗೊಳಗೆ.
೨. “Select your partner and ask him/her for marriage”.ಗಂಡುಬೀರಿ ಮಾಲತಿ ಸರದಿಯದು ಟೀಶರ್ಟ್ ಮತ್ತು ಗಿಡ್ಡ ಸ್ಕರ್ಟ್ ಹಾಕಿಕೊಂಡಿದ್ದಳು. ಕೆದರಿದ ಕೂದಲನ್ನು ಆಲುಗಾಡಿಸುತ್ತ ನನ್ನ ಹೆಸರನ್ನೇ ಕೂಗಬೇಕೇ? ಸೋಫಾದಲ್ಲಿ ನೋಯುತ್ತಿದ್ದ ತಲೆ ಹಿಡಿದು ಕೊಂಡು ಕೂತ ನಾನು ತಣ್ಣಗಾದೆ ತುಟಿ ಮೇಲೆ ನಗೆ ಆಡಿಸಿಕೊಂಡು, `ಹೆ, ಹೆ! ಹೇ!!`, ಎಂದು ವಿಚಿತ್ರವಾಗಿ ಹಲ್ಲು ಬೀರಿದೆ. ಆಕೆ ಸ್ಟೈಲಾಗಿ ಬಳುಕುತ್ತ ಬಂದು ನಾಟಕೀಯವಾಗಿ, `ಪ್ರಿಯಾ, ನಾವಿಬ್ಬರೂ ಜನ್ಮ ಜನ್ಮಾಂತರದ ಪ್ರೇಮಿಗಳಲ್ಲವೆ?` ಎಂದು ವೈಯಾರ ಮಾಡಿ ನನ್ನ ಮುಂದೆ ಬಗ್ಗಿದಳು. ನಾನೊಮ್ಮೆ ಉಗುಳುನುಂಗಲು ಪ್ರಯತ್ನಿಸುತ್ತಿದ್ದಂತೆ ಆಕೆಯ ಮುಂದೆ ಜಾರಿದ ಟೀಶಾರ್ಟಿನೊಳಗಿಂದ ಎದೆಯ ಸೀಳು ಕಾಣಿಸಿ ಬೆವರಿಹೋದೆ. ಕಾಲು ನೆಲದಲ್ಲೇ ಸಿಕ್ಕಿಹೋದಂತೆ ಅನಿಸಿತು. ಆಕೆ, `ಪ್ರಾಣಕಾಂತಾ, ಈ ಜನ್ಮದಲ್ಲಿ ನಮ್ಮಮದುವೆ ಯಾವಾಗ?` ಎಂದು ಕಿಲಿಕಿಲಿ ನಕ್ಕಳು. ಎಲ್ಲರೂ ಚಪ್ಪಾಳೆ ತಟ್ಟಿ ಜೋರಾಗಿ ನಕ್ಕರು. ನಾನೂ ಹೇಗೊ ಸಾವರಿಸಿಕೊಂಡು ಜೋರಾಗಿ ಚಪ್ಪಾಳೆ ತಟ್ಟಿದೆ.]
ಹಾಗೆಯೇ ಪಾರ್ಟಿ ಮುಗಿಸಿಕೊಂಡು ಕೊಪ್ಪಿಕರ್ ರಸ್ತೆಯಲ್ಲಿ ರಾತ್ರಿ ಒಂಬತ್ತಕ್ಕೆ ಹೇಗೆ ಕಾಲಳೆಯುತ್ತ ದಿಕ್ಕು ತಪ್ಪಿದವನಂತೆ ಅಲೆದೆ ಎಂಬುದನ್ನು, ಅಂಗಡಿಯೊಂದನ್ನು ಹೊಕ್ಕು ಕೆಲಸ ಖಾಲಿ ಇದೆಯೇ ಎಂದು ಕೇಳಿ ಛೀಮಾರಿ ಹಾಕಿಸಿಕೊಂಡಿದ್ದನ್ನು ಬರೆದೆ. ಪಾರ್ಟಿಯ ವೈಭವ, ನನ್ನ ಖಾಲಿ ಕಿಸೆ (ಇನ್ನೂ ಆರು ರೂ. ಇತ್ತು) ಎಲ್ಲ ಒಟ್ಟಿಗೆ ಒಕ್ಕರಿಸಿ ಕೆಲಸ ಕೇಳುವಂತೆ ಮಾಡಿದ್ದವು. ಆಮೇಲೆ ಮುಂದೆ ಮೋಹನ ಟಾಕೀಜಿಗೆ ಬಂದಾಗ, ಕಿಸೆಯಲ್ಲಿ ಆರು ರೂಪಾಯಿ ನೆನಪಾಗಿ ಟಾಕೀಜಿನೊಳಗಡೆ ಹೋದುದನ್ನು ಯಾವುದೋ ಹೊಲಸು ಇಂಗ್ಲೀಶ್ ಚಿತ್ರ ಶುರುವಾಗಿ ಚುಂಬನಗಳು, ಅರೆಬೆತ್ತಲೆ, ಬೆತ್ತಲೆ ದೇಹಗಳು, ನರಳಾಟಗಳು ನನ್ನ ತಲೆ ಕೆಡಿಸಿದ್ದನ್ನು ಬರೆದೆ. ಅರ್ಧಸಿನಿಮಾಕ್ಕೇ ಎದ್ದು ತಲೆಕೆಟ್ಟಂತಾಗಿ ಹುಚ್ಚು ಹಿಡಿದವಂತೆ ಓದುತ್ತ ಹೋಸ್ಟೆಲಿಗೆ ಬಂದುದನ್ನು ಬರೆಯಲು ಕುಳಿತುದನ್ನು ಬರೆದು ಪೆನ್ನು ಮುಚ್ಚಿದೆ.
ಬರೆದು ಮುಗಿಸಿದಾಗ ರಾತ್ರಿ ಹನ್ನೆರಡೂವರೆ, ಅಷ್ಟರಲ್ಲಿ ರೂಮ್ಮೇಟುಗಳಿಬ್ಬರೂ ಸಿನಿಮಾ ಮುಗಿಸಿಕೊಂಡು ಬಂದರು. ಸಟ್ಟನೆ ಬರೆದದ್ದನ್ನೆಲ್ಲ ಮುಚ್ಚಿಟ್ಟು ಮಲಗಿದಂತೆ ನಟನೆ ಮಾಡಿದೆ. ಮುಂಜಾನೆ ಎದ್ದ ಮೇಲೆ ಅವರಿಗೆ ಓದಲು ಕೊಡಬೇಕು ಎಂದುಕೊಂಡಿದ್ದವನಿಗೆ ಹಾಗೆ ಮಾಡಲು ಧ್ಯರ್ಯ ಸಾಲಲಿಲ್ಲ. ಸುಮಾರು ವಾರಗಳು ಕಳೆದರೂ ಅದನ್ನು ಯಾರಿಗೂ ತೋರಿಸಲಾಗದೇ ಒದ್ದಾಡುತ್ತಿದ್ದಾಗ ಪತ್ರಿಕೆಯೊಂದಕ್ಕೆ ಕಳಿಸಿದರೆ ಹೇಗೆ ಎನಿಸಿತು. ಹೆಸರುಗಳನ್ನು ಬದಲಾಯಿಸಿ ಬರೆದುದನ್ನೆಲ್ಲ ಕಾಪಿ ಮಾಡಿ ಕಳಿಸಿದೆ. ಡಿಸೆಂಬರಿನಲ್ಲಿ ಪ್ರಕಟವೂ ಆಯಿತು.
ಅಂದು ಸಂಜೆ ಪತ್ರಿಕೆಯನ್ನು ಹಿಡಿದಿಕೊಂಡು, ಖುಷಿಯಲ್ಲಿ ಓದುತ್ತಲೇ ಖೋಲಿಗೆ ಬಂದೆ. ನನಗೆ ವಿಪರೀತ ಸಂತೋಷವಾಗಿತ್ತು. ಮೊತ್ತ ಮೊದಲ ಕಥೆ ಮೊದಲ ಬಾರಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಖೋಲಿಗೆ ಬಂದೊಡನೇ `ಕೇಹುಹೊss,; ಎಂದು ಕೂಗಿ, ರೂಮ್ಮೇಟ್ ಮಾಧವ ಏನಾಯಿತೆಂದು ಆಶ್ಚರ್ಯದಿಂದ ನೋಡುತ್ತಿರುವಂತೆಯೇ, ನನ್ನ ಕಥೆ ಛಾಪಿಸಿದ ವಿಷಯ ತಿಳಿಸಿ, ಪತ್ರಿಕೆ ಅವನ ಕೈಗೆ ಕೊಟ್ಟೆ. ಆತ ಅಭಿನಂದನೆ ಸಲ್ಲಿಸಿ, `ಪಾರ್ಟಿ ಯಾವಾಗ?` ಎಂದ. `ಕೊಡೊನಲ್ಲ, ಅದಕ್ಕೇನು?`; ಎಂದೆ. ಅಷ್ಟರಲ್ಲಿ ನನ್ನ ಆವಾಜ ಕೇಳಿ ಬಾಜು ಖೋಲಿ ಶಿವರಾಮ (ಆತ ಸಾಹಿತ್ಯದ ಬಗ್ಗೆ ಮುರನಾಲ್ಕು ತಾಸು ಕೊರೆಯುತ್ತಾನೆ) ಬಂದು ನನ್ನನ್ನು ಬಿಗಿದಪ್ಪಿಕೊಂಡ. ಆತ ಖುಷಿಯಲ್ಲಿದ್ದುದನ್ನು ಆತನ ಕಣ್ಣುಗಳೇ ಹೇಳುತ್ತಿದ್ದವು. ಆತ ನನ್ನ ಕೈಹಿಡಿದು ಕುಳಿತುಕೊಂಡ. ಆತ ಆ ಕಥೆಯಿಂದ ನನಗೇ ಗೊತ್ತಿರದ ಎಷ್ಟೆಷ್ಟೋ ವಿಷಯಗಳನ್ನು ಹೆಕ್ಕಿ ವಿವರಿಸತೊಡಗಿದ. ಆಧುನಿಕತೆಯ ಅಟ್ಟಹಾಸದಲ್ಲಿ ಸಂಪ್ರದಾಯಸ್ಥ ಧಾಮಿ೯ಕ ನಂಬಿಕೆಗಳು ಅರ್ಥಕಳೆದುಕೊಳ್ಳುತ್ತಿರಿವುದನ್ನು. ವ್ಯಕ್ತಿ ಅಂಥ ತ್ರಿಶಂಕು ಸ್ಥಿತಿಯಲ್ಲಿದ್ದಾಗಿನ ಭಾವನೆಗಳನ್ನು ರಿಯಲಿಸ್ಟಿಕ್ ಅಗಿ ಬರೆದು ಕಥೆಗೆ ಧಾಮಿ೯ಕ ತಳಹದಿ ಬಂದಿದೆ ಎಂದ. ರೂಪಾ ಕುಲಕಣಿ೯ಯ ಅಪ್ಪ ರೋಟರಿಕ್ಲಬ್ಬಿನ ಮುಖ್ಯ ಸದಸ್ಯನಾಗಿರುವುದರಿಂದ ಮತ್ತು ಕಾಂಗ್ರೆಸ್ಸಿನಲ್ಲಿ ಬಹಳ ಓಡಾಡುವುದರಿಂದ ಅತ ಪಾರ್ಟಿಯಲ್ಲಿ ಆಡಿದ ಮಾತುಗಳು ಕಥೆಗೆ ರಾಜಕೀಯ ಬಣ್ಡ ತಂದಿದೆ ಎಂದ. ಆರ್ಥಿಕಸ್ಥಿತಿ ಮನುಷ್ಯನ ಭಾವನೆಗಳಲ್ಲಿ ಹೇಗೆ ಬದಲಾವಣೆ ತರುತ್ತದೆ; ಭಾರತ ಪಾಶ್ಚಾತ್ಯೀಕರಣದತ್ತ ವಾಲಿರುವಾಗ ಹೇಗೆ ತುಮುಲವೆಳುತ್ತದೆ; ಹದಿನೆಂಟು ವರ್ಷಗಳಿಂದ ಬ್ರಾಹ್ಮಣ್ಯದಲ್ಲಿ ಬಂಧಿತನಾದ ವ್ಯಕ್ತಿ ಬಿಡುಗಡೆ ಹೊಂದಿದಾಗ ಹೇಗೆ ಕಾಮಜಾಗೃತಿ ಉಂಟಾಗುತ್ತದೆ ಎಂಬುದು ಕಥೆಯಲ್ಲಿ ಬಂದಿರುವುದನ್ನು ವಿವರಿಸಿದ. ಮುಂದಿನ ಬರವಣಿಗೆಯನ್ನು ಹೇಗೆ ತಿದ್ದಿಕೊಳ್ಳಬೇಕು, ಪ್ರತಿಮೆಗಳನ್ನು
ಸಹಜವೆನ್ನುವಂತೆ ಪ್ರಯತ್ನಪೂವ೯ಕವಾಗಿ ತುರುಕಿ ಕಥೆಯ ಹರಹನ್ನು ಹೇಗೆ ಹಿಗ್ಗಿಸಬೇಕು (ಉದಾ: ರೂಪಾ ಕುಲಕರ್ಣಿಯ ಬರ್ತ್ಡೇ ದಿನವೇ ಕಥಾನಾಯಕನ ಬತ್೯ಡೇ ಇರುವುದು) ಎಂಬುದನ್ನು ಹೇಳಿದ. ನನ್ನಲ್ಲಿ ನಾನು ಉಬ್ಬಿಹೋದೆ. ಕಂಡವರಿಗೆಲ್ಲ ಸುದ್ದಿಹೇಳುತ್ತ ಸಾಗಿದೆ. ರಾತ್ರಿ ಚಾದರ ಹೊದ್ದು ಮಲಗಿಕೊರಿಡೇ ಕಥೆ ಓದಿದೆ. ಅವೇ ಪಾತ್ರಗಳು. ಹೆಸರುಗಳು ಮಾತ್ರ ಬೇರೆ . ಅವೇ ಘಟನೆಗಳು. ಸಮಾಧಾನವೆನಿಸಿ ಚಾದರ ಎಳೆದು ಮುಸುಕು ಹಾಕಿಕೊಂಡು ಕನಸು ಕಾಣತೊಡಗಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಹೆಸರು. ಚಿತ್ತಾರದ ನಂತರ ಕನ್ನಡದಲ್ಲಿ ಕಾಣಿಸಿಕೊಂಡ ಹೊಸ ಪ್ರತಿಭೆ ಎಂದೆಲ್ಲ.
ಕದ ತಟ್ಟಿದ ಆವಾಜಿನಿಂದ ಎಚ್ಚರವಾದಾಗ ಇನ್ನೂ ಮಧ್ಯರಾತ್ರಿ. ಕತ್ತಲಲ್ಲಿ ಬಾಗಿಲು ತೆರೆಯುತ್ತಲೇ ಓರ್ವ ವೈಕ್ತಿ. ನನ್ನನ್ನು ತಳ್ಳಿಕೊಂಡೇ ಒಳಗೆ ಬಂದು ಕದ ಹಾಕಿದ್ಧೇ ಫಟೀರ್ ಎ೦ದು ಕಪಾಳಕ್ಕೆ ಹೊಡೆಯಿತು. ನಾನು ಏನಾಗುತ್ತಿದೆ ಎಂದುಕೊಳ್ಳುವಷ್ಪರಲ್ಲಿ ಪಕಡಿಗೆ ಇನ್ನೊಂದು ಹೊಡೆತ ಬಿತ್ತು. ‘ಅವ್ವಾSS’ ಎ೦ದು ಚೀರಿ ಕೆಳಕ್ಕೆ ಬಿದ್ಧೆ. ರೂಮ್ ಮೇಟುಗಳಿಗೆ ಎಚ್ಚರವಾಗಿ ಲೈಟು ಹಚ್ಚಿದರು. ಎದುರಿಗೆ ಮಿಲಿಂದ ನಿಂತಿದ್ದ. ಕಾಲರ್ ಹಿಡಿದು ಎತ್ತಿದವನೇ, `ಬಡ್ದಿಮಗನೇ. ನನ್ನ ಬಗ್ಗೆ ಕಥೇನಲ್ಲಿ ಬರೀತೀಯಾ? ನಾನು ಬಾರ್ಗೆ ಹೋಗ್ತೇನೆ. ಸಿಗರೇಟು ಸೇದ್ತೇನೆ ಎಂದು ಬರೀತೀಯಾ? ಬಿಎಫ್ ನೋಡ್ತೇನೆ ಅಂತೀಯಾ?`. ಪ್ರತಿ ಪ್ರಶ್ನೆಗೂ ಒ೦ದೊ೦ದು ಹೊಡೆತ. ಒದೆತ ಕೊಡುತ್ತಿದ್ದ. ರೂಮ್ ಮೇಟುಗಳಿಬ್ಬರೂ ಕಷ್ಟದಿಂದ ಬಿಡಿಸಿ ನಡೆದದ್ಧಾದರೂ ಏನೆಂದು ಕೇಳಿದರು.& `ನನ್ನನ್ನೇನು ಕೇಳ್ತೀಯಾ ಗುರು? ಕೇಳು ಈ ಸೂಳೆಮಗನ್ನ,` ಎಂದ. ಮಿಲಿಂದ ಕಾವ್ಯಾಳನ್ನು ಲವ್ ಮಾಡುತ್ತಿರಿವುದನ್ನು ಬರೆದಿದ್ದೆ. ಅವಳನ್ನು ಮೆಚ್ಚಿಸಲು ಪಾರ್ಟಿಯಲ್ಲಿನ ಅವನ ಧರ್ತಿ ಬಗ್ಗೆ ಬರೆದಿದ್ದೆ. ಅವಳನ್ನು ಅತ ಸಂಜೆ ಮಾತನಾಡಿಸಲು ಹೋದಾಗ (ಇಬ್ಬರೂ ಒ೦ದೇ ಊರಿನವರು) ನಾನು ಬರೆದ ಕಥೆ ವಿಷಯ ಹೇಳಿ ಛೀಮಾರಿ ಹಾಕಿ ಕಳಿಸಿದಳೆಂದು ಮಿಲಿಂದ ಕಿರುಚಾಡಿದ. ನಾನು `ಸಾರಿ`, ಎಂದು ಹಲುಬಿ ಆತನನ್ನು ಸಮಾಧಾನ ಮಾಡುವಷ್ಟರಲ್ಲಿ ಸಾಕಾಯಿತು.
ಮುಂಜಾನೆ ಎದ್ದಾಗ ಇನ್ನೂ ಹೊಟ್ಟೆ ನೋಯುತ್ತಿತ್ತು ತಲೆ ತುಂಬ ಕಥೆಯ ಪಾತ್ರಗಳು ಒದೆಯುತ್ತಿದ್ದವು. ಕಾಲೇಜಿನಲ್ಲಿ ಕೆಲವರು ಕಂಗ್ರಾಟ್ಸ್ ಹೇಳಿದರು. ಕೆಲವರು ನನ್ನನ್ನು ಹೊಸ ವಿಚಿತ್ರವಾಗಿ ದಿಟ್ಟಿಸಿದರು. ನನ್ನ ಕಥೆ ಛಾಪಿಸಲ್ಪಟ್ವ ಸುದ್ದಿ ಬಹಳ ವೇಗವಾಗಿ ಹಬ್ಬಿತ್ತು. ನನಗೆ ಪಿರಿಯಡ್ನಲ್ಲಿ ಕೂಡಲಾಗದೇ ಗಂಗಾಮಾ೦ಶಿ ಮನೆಗಾದರೂ ಹೋಗೋಣವೆಂದು ಬಸ್ ಸ್ಟಾಪಿಗೆ ಬಂದೆ. ಎದುರಿನಲ್ಲಿ ಮಾಲತಿ ನಾಕಾರು ಗೆಳತಿಯ ರೊ೦ದಿಗೆ ನನ್ನ ಕಡೆಗೇ
ಬಂದಳು. ನನ್ನ ಬನಿಯನ್ನೆಲ್ಲ ಹಸಿಯಾಯಿತು. ಬಂದವಳೇ ಇರಿಗ್ಲಿಷಿನಲ್ಲಿ ನನ್ನನ್ನು ತರಾಟೆಗೆ ತೆಗೆದುಕೊರಿಡಳು. ಅವಳ ಟೀಶಟ್೯ ಒಳಗೆ ಇಣುಕಿರುವುದನ್ನು ಬರೆದಿರುವುದನ್ನು ಹೀನಾಯವಾಗಿ ಬಯ್ದು (ಇಣುಕಿದರೆ ತಪ್ಪಿಲ್ಲವಂತೆ, ಬರೆಯಬಾರದಂತೆ), ನನ್ನನ್ನು ಕಾಗದದ ಕಾಮುಕ ಎಂದರಚಿ, ಸ್ಯಾಡಿಸ್; ಎಂದು ಬಿರುದು ಕೊಟ್ಟಳು. ನಾನು ಹತ್ತು ಸರ್ತಿಯಾದರೂ ಸಾರಿ ಎಂದಿರಬಹುದು. ಅಂತಹುದರಲ್ಲಿ ಅರುಣ, ವೆಂಕಟೇಶ ರಾಜು, ಧಾರವಾಡಕರ್. ಶೆಟ್ವ. ಪ್ರಕಾಶ್ ತ್ರಿವೇದಿ ಬಂದು ಸೇರಿಕೊಂಡರು. ಒಬ್ಬೊಬ್ಬರು ಒ೦ದೊ೦ದು ರೀತಿಯಲ್ಲಿ ಬಯ್ಡರು,`ಕಾಮಣಿ ಅದವರಿಗೆ ಜಗತ್ತೆಲ್ಲಾ ಹಳದಿ`, `ಥತ್ ತೇರಿಕೇ, ನೀ ಯಾವ್ ಗಾ೦ಧಿ ಲೇ, ರಾತ್ರಿ ಚೂಡಿದ ಇಂಗ್ಲಿಷ್ ಸಿನಿಮಾ ಹೇಗಿತ್ತೋ”, “ಕಿಸೆನ್ಯಾಗ ನಾಕ ಪೈಸಾ ಇರಲಿಕ್ರೂ ಗೋಮಾಜಿಕಾಪ್ಸೆನ ಗತೆ ಹೆ೦ಗ ನಿಂತಾನ ನೋಡ್ರ್ಯೋs” ಎಲ್ಲ ಚುಚ್ಚುತ್ತಿದ್ಡವು. ನಾನು ಪೂರ ತತ್ತರಿಸಿ ಹೋದೆ. ಎಲ್ಲರೂ ತಾವು ಎಷ್ಟು ಒಳ್ಳೆಯವರು ಎಂದು ಉದಾಹರಣೆ ಸಮೇತ ಸಿದ್ಬಮಾಡಿದರು. ನಾನೊಬ್ಬನೇ ಈ ಸಮಾಜದಲ್ಲಿ ಕೊಳೆತು ನಾರುತ್ತಿರುವವ ಎಂದು ಹಂಗಿಸಿದರು. ರೂಪಾ ಕುಲಕರ್ಣಿ ಶ್ರೀಮಂತಳಾದರೂ ಆಕೆಗೆ ಸೊಕ್ಕಿಲ್ಲದಿದ್ದೂರಿಂದಲೇ
ನನ್ನಂಥವನನ್ನೂ ಪಾರ್ಟಿಗೆ ಕರೆದಳು ಎಂದರು. ಆಕೆಗೆ ನನ್ನ ಕಥೆಯ ವಿಷಯ ತಿಳಿದು ಮನಸ್ಸಿಗೆ ಬೇಸರವಾಗಿಯೇ ಕಾಲೇಜಿಗೆ ಬಂದಿಲ್ಲವೆಂದು ಹೇಳಿ. ಪಾಪ. ಆಕೆ ಎಷ್ಟು ನೊಂದುಕೊಂಡಿರುವಳೋ ಎಂದು ಕನಿಕರ ವ್ಯಕ್ತಪಡಿಸಿದರು. ಅಷ್ಟರಲ್ಲಿ ರೂಮ್-ಮೇಟ್ ಮಾಧವ. ದೀಪಕ. ಬಾಜು ಖೋಲಿ ಶಿವರಾಮ ಬಂದಾಗಲೇ ನನಗೆ ಇವರಿಂದ ಬಿಡುಗಡೆ ಸಿಕ್ಕಿತು. ನನ್ನನ್ನು ಗಾಢ ಮೌನ ಆವರಿಸಿತ್ತು. ಮೂವರೂ ಖುಷಿಯಲ್ಲಿ ಜೋಕು ಹೂಡಯುತ್ತ ಪಾರ್ಟಿಗೆ ದು೦ಬಾಲು ಬಿದ್ದರು. ಬಸ್ಸು ಬಂದಾಗ ಹತ್ತಿ ‘ಐಸ್ಲ್ಯಾಂಡಿ’ಗೆ ಹೋಗಿ ಎರಡು ತಾಸು ಕೂತು ತಿಂದು. `ಹಿ೦ಗs ಮ್ಯಾಲಿಂದ ಮ್ಯಾಲೆ ಕತೀ ಬರಿ. ಪಾರ್ಟಿ ಮೇಲೆ ಪಾರ್ಟಿ’ ಎಂದು ಹೇಳಿ. ಕಂಗ್ರಾಟ್ಸ್; ಹೇಳಿದರು. ನೂರಾಹದಿನೈದು ರೂಪಾಯಿ ಬಿಲ್ಲು ತೆತ್ತು ಖಾಲಿ ಕಿಸೆ ಹೊತ್ತು ಖೋಲಿಗೆ ಬಂದಾಗ. ಜೀವನದಲ್ಲಿ ಎಲ್ಲ ಖಾಲಿ ಖಾಲಿ ಎನಿಸಿ ಹಾಸಿಗೆ ಮೇಲೆ ಬಿದ್ಧುಬಿಟ್ಟೆ.
ಎದ್ದಾಗ ಚಲೋ ಬಿಸಿಲು ಏರಿ ಕಿಟಕಿಯಿಂದ ಸೀದಾ ನನ್ನ ಮಾರಿಗೇ ಬಡಿಯುತ್ತಿತ್ತು. ಸ೦ಡಾಸಕ್ಕೆ ಹೋಗಿ ಬರುವುದರೊಳಗಾಗಿ ಮತ್ತೊoದು ಆಕಸ್ಮಿಕ ನನ್ನನ್ನು ಕಾದಿತ್ತು. `Grandmother Serious; start immediately` ಟೆಲಿಗ್ರಾಂ. ನಾನಾಗಲೇ ಯೋಚನೆ ಮಾಡುವ ಸ್ಥಿತಿಯನ್ನು ಮೀರಿ ಬಿಟ್ಟಿದ್ದೆ, ಶೂನ್ಯ ಮನಸ್ಸಿನಿಂದ ಬಾಗಲಕೋಟೆ ಬಸ್ಸುಹಿಡಿದೆ.
ಮನೆಯೊಳಗೆ ಹೆಜ್ಜೆ ಇಡುತ್ತಿದ್ದಂತೆ ಕಿಟ್ಟಕ್ಕತ್ಯಾ ನನ್ನನ್ನು ನೋಡಿ ಅಳಲು ಆರಂಭಿಸಿದಳು. ಅಪ್ಪನ ಜೊತೆ ಹೊಲದ ವಿಷಯದಲ್ಲಿ. ಅಜ್ಜಿಯಿಂದ ಆಭರಣ ಕಿತ್ತುಕೊಂಡ ವಿಷಯದಲ್ಲಿ ಜಗಳಾಡಿದ ವೆಂಕುಕಾಕಾ ಎಂದೂ ಹಣಿಕಿ ಹಾಕದಿದ್ದವ ಮೂಲೆಹಿಡಿದು ಬಾಯಿಗೆ ಅಡ್ಡ ಪಂಜೆ ಹಿಡಿದುಕೊಂಡು. ಕಣ್ಣುತುಂಬಿಕೊಂಡು ಕೂತಿದ್ದ. ಅಪ್ಪ ಸ್ಥಿತಪ್ರಜ್ಞನಂತೆ ಮೌನದರಿಸಿದ್ದ. ಅವ್ವ ಗರಬಡಿದವಳಂತೆ ಅಧೀರಳಾಗಿ ನಿಂತಿದ್ದಳು. ಅಜ್ಜಿಗೆ ಬಿಪಿ ಸಿಕ್ಕಾಪಟ್ಟೆ ಜಾಸ್ತಿಯಾಗಿ ಮತ್ತೆ ಲಕ್ವಾ ಹೊಡೆಯಿತಂತೆ. ಅನಂತರ ಎರಡು ದಿನಗಳಲ್ಲಿ ಮಿದುಳಿನಲ್ಲಿ ರಕ್ತಸ್ರಾವವಾಯಿತಂತೆ. ಸಾಯುವುದಕ್ಕೆ ಮುಂಚೆ ಅಜ್ಜಿ ನನ್ನನ್ನು ಸನ್ನೆಮಾಡಿ ಕೇಳಿದಳಂತೆ. ಕಿಟ್ಟಕ್ಕತ್ಯಾ ಎಲ್ಲವನ್ನು ಅಳುತ್ತಲೇ ಹೇಳಿದಳು. ಅವ್ವನನ್ನು ಹಿಡಿದುಕೊಂಡಾಗ ಆಕೆ ನನ್ನ ತಲೆಬಳಸಿ ಆಳತೊಡಗಿದಳು. ಅಪ್ಪ ಒ೦ದು ಹನಿ ಕಣ್ಣೀರು ಹಾಕದೇ
ಚಟ್ವದ ಸಿದ್ದತೆಯಲ್ಲಿ ತೊಡಗಿದ್ದ. ನಾನು ಕಥೆಯಲ್ಲಿ ನನ್ನ ಅಜ್ಜಿ ತೋರಿದ ದಪ೯ವಮ್ನ. ತನಗೆ ಲಕ್ವಾ ಹೊಡೆದಿದ್ದರೂ ಕ್ಯಾನ್ಸರಿನಿಂದ ಬಳಲುತ್ತಿರುವ ಅವ್ವನನ್ನು ಮಡಿಯ ಸಲುವಾಗಿ ದುಡಿಸಿಕೊಳ್ಳುತ್ತಿರುವ ಹೊಲಸು ಧಮಾ೯ಚರಣೆಯನ್ನು ಬರೆದದ್ದು ಈಗ ಅದು ಆಥ೯ ಕಳೆದುಕೊಂಡು ನನ್ನ ಮು೦ದೆ ನೇತಾಡತೊಡಗಿದಂತೆ ಈಗ ಅನ್ನಿಸುತ್ತಿದೆ. ಅಜ್ಜಿ ನಾನು ಬರೆದ ಕಥೆಯನ್ನು ಓದಿದ್ದರೆ ಸಾಯುವಾಗ ನನ್ನನ್ನು ನೋಡಲು ಹಾತೊರೆಯುತ್ತಿದ್ದಳೇ ಎಂಬ ಪ್ರಶ್ನೆ ಈಗ ನಿಲ್ಲುತ್ತಿದೆ. ಎದ್ದಾಗಿನಿಂದ ಹಾಸಿಗಗೆ, ಹೋಗುವವರೆಗೆ (ಒಮ್ಮೊಮ್ಮೆ ಮಲಗಿದ ಅನಂತರವೂ) ಕಾಟ ಕೊಟ್ಟ ಅತ್ತೆ ಸತ್ತಿದ್ದಕ್ಕಾಗಿ ಅಮ್ಮ ಬಿಕ್ಕಿ ಬಿಕ್ಮಿ ರೋದಿಸುತ್ತಿದ್ದಳು. ಅತ್ತೆ-ಸೊಸೆ ಸಂಬಂಧ ನಾನು ಊಹಿಸಿ ಬರೆದುದಕ್ಕಿಂತ ಭಿನ್ನವಾಗಿತ್ತೇ ಎಂದೀಗ ಭೀತನಾಗಿದ್ದೇನೆ.
ಎರಡು ದಿನ ಕಳೆಯುವಷ್ಟರಲ್ಲಿ ಎಲ್ಲರ ದುಃಖ ಎಷ್ಟೋ ಕಡಿಮೆಯಾಗಿತ್ತು. ವೆಂಕುಕಾಕಾ ಚುಟ್ಟಾ ಸೇದುತ್ತ ಪತ್ರಿಕೆ ಓದುತ್ತ ಕುಳಿತಿದ್ದ. ನನ್ನ ಕಥೆ ಅದರಲ್ಲೇ ಪ್ರಕಟವಾಗಿತ್ತು. ನನ್ನೆದೆ ಧಸಕ್ಕೆಂದಿತು. ಅದೇ ವೇಳೆಗೆ ವೆಂಕುಕಾಕಾ ಮಾರಿ ಇಷ್ಟಗಲ ಮಾಡಿ ನನ್ನನ್ನು ಕೂಗಿಯೇ ಬಿಟ್ಟ. “ಏನೋ ? ಈ ಕತೀ ನೀನ ಬರೆದದ್ದು ಹೌದಲ್ಲೋ ?”; ಎಂದು. ಹೌದೆಂದೆ. ಕಾಕು, ಕಿತ್ತಕ್ಕತ್ಯಾ, ಅಪ್ಪ, ಅವ್ವ, ಸುತ್ತಲಿದ್ದ ಎಲ್ಲರನ್ನೂ ವೆಂಕುಕಾಕಾ ಕೂಗಿ ಸುದ್ದಿ ಹೇಳಿದ. ದುಃಖದ ವಾತಾವರಣದಲ್ಲಿ ಸ್ವಲ್ಪ ಸಂತೋಷದ ಗಾಳಿ ಸೇರಿಕೊಂಡಂತೆ ಆಯಿತು. ಅವ್ವ, `ಏನೂಂತ ಬರೆದೀಯೋ?” ಎಂದಳು. `ನನ್ನೇನ ಕೇಳ್ತಿ? ಕತಿ ಓದಲಾ`, ಎಂದೆ. ನಾನು ಏನೆಂದು ಬರೆದಿದ್ದೇನೆ ಎನ್ನಬೇಕಿತ್ತು ಎಂದು ತೋಚದೇ ಹಾಗೆ ಹೇಳಿದೆ. ವೆಂಕುಕಾಕಾ ಜೋರಾಗಿಯೇ ಎಲ್ಲರೂ ಆತನನ್ನು ಸುತ್ತುವರಿದು ಕೂತಾಗ ಓದತೊಡಗಿದ, `ಕತಿ ಹೆಸರು: ರೂಪಾಕುಲಕರ್ಣಿ ಬರ್ತ್ಡೇ ಪಾರ್ಟಿ`. ಎಲ್ಲರೂ ಲಕ್ಷ್ಯಕೊಟ್ಟು ಕೇಳುತ್ತಿದ್ದರು. ನನಗೆ ಅಲ್ಲಿ ನಿಂತುಕೊಳ್ಳಲಾಗಲಿಲ್ಲ. ಎದ್ದು ಅಟ್ಟದ ಮೇಲೆ ಹೋದೆ. ನನ್ನೆದೆ ಡವಡವ ಹೊಡೆದುಕೊಳ್ಳುತ್ತಿತ್ತು. ದಿನಪೂರ್ತಿ ಮಡಿಯೆಂದು ಸಾಯುತ್ತ ಪಾರ್ಸಿ ಹೊಡೆದು ನಾರುತ್ತಿರುವ ಅಜ್ಜಿ, ಧರ್ಮವೆಂದು ಹಲುಬಿ ಕಣ್ಣೀರಿನಲ್ಲಿ ಅವ್ವನನ್ನು ನೆನೆಸುವ ಅಪ್ಪ, ತನೆಗೆ ಕ್ಯಾನಸರಾಗಿದ್ದರು ನಾಯಿಯಂತೆ ದುಡಿಯುವ ಅವ್ವ. ಮನೆಯ ಇಷ್ಟೆಲ್ಲ ತೊಂದರೆ ಗೊತ್ತಿದ್ದೂ ರೊಕ್ಕದ ಸಲುವಾಗಿ ಕೌರವರಂತೆ ಜಗಳಾಡಿ ದೂರವಾದ ಕಾಕಾ-ಎಲ್ಲವನ್ನೂ ಕಾಕಾ ಓದುತ್ತಿದ್ದ. ನಾನು ಮಾಲತಿಯ ಟೀಶರ್ಟ್ ಒಳಗೆ ಇಣುಕಿರುವುದನ್ನು ಎರಡೆರಡು ಸಲ ಓದಿದ. ಅವ್ವ ಅಳುತ್ತಿರುವುದು ಕೇಳಿಸಿತು. ಅಪ್ಪ ಅರಚತೊಡಗಿದ. `ಅಂವ ಬಂದರ ಬರ್ಲಿ. ಓದ್ಲಿಕ್ಕೆ ಅಂತ ಹುಬ್ಬಳ್ಳಿಗೆ ಕಳಿಸಿದ್ರ ನಮ್ಮ ಪಿಂಡಾ ಕಟ್ತಾನ ನಿನ್ನ ಮಗ`. ನಾನು ಅಟ್ಟದಲ್ಲಿ ಮಲಗಿಕೊಂಡಂತೆ ನಟಿಸುತ್ತಿದ್ದೆ. ಅಷ್ಟರಲ್ಲಿ ಪುಟ್ಟಿ (ವೆಂಕುಕಾಕಾನ ಆರು ವರ್ಷದ ಮಗಳು) ಅಟ್ಟದ ಮೇಲೆ ಬಂದು, ನನ್ನನ್ನು ನೋಡಿದವಳೇ, `ಇಂವ ಇಲ್ಲೇ ಮಲಗ್ಯಾನ, ನೋಡ ಬಾ`; ಎಂದಳು. ನನ್ನ ಸಿಟ್ಟು ನೆತ್ತಿಗೇರಿ ಎರಡು ಕೊಟ್ಟೆ, ಅವಳು ಜೋರು ದನಿ ತೆಗೆದು ಅಳತೊಡಗಿದಳು. ನಾನು ಅವಳನ್ನು ಎತ್ತಿಕೊಂಡವನೇ ಕೆಳಗಿಳಿದು ಬಂದುಬಿಟ್ಟೆ.
ಅವ್ವ ಮೂಗಿಗೆ ಸೆರಗು ಮುಚ್ಚಿಕೊಂಡು ಅಳುತ್ತಿದ್ದಳು. ವೆಂಕುಕಾಕಾ ದುರುಗುಟ್ಟಿಕೊಂಡು ನನ್ನನ್ನೇ ನೋಡಿತ್ತಿದ್ದ. ಪುಟ್ಟಿ ಒಮ್ಮೆಲೇ ಅಳು ನಿಲ್ಲಿಸಿದಾಗ ಎಲ್ಲ ನಿಶಬ್ದವಾಯಿತು. ನಾನು ಗಪ್ಪು ನಿಂತಿದ್ದೆ. ಅಪ್ಪ ಪತ್ರಿಕೆಯನ್ನು ಮಾರಿಯ ಮೇಲೆ ಬೀಸಿ ಒಗೆದು, `ಬರೀಪಾ, ಇನ್ನೂ ಏನೇನ ಬರೆದು ಎಲ್ಲರ ಮಾನ ಹರಾಜು ಹಾಕಬೇಕಂತೀ ಹಾಕಿಬಿಡು,` ಎಂದ. ನಾನು ಬಗ್ಗಿ ಪತ್ರಿಕೆಯನ್ನೆತ್ತಿಕೊಂಡು ಗಟ್ಟಿಯಾಗಿ ಹಿಡಿದು ಕೊಂಡೆ. `ನಿಂಗ ರೊಕ್ಕ ಕಡಿಮೇಬಿದ್ರ ಕಾಗದ ಬರ್ದು ತಿಳ್ಸೊ. ಕತಿ ಒಳಗ ಬರ್ದು ಯಾಕ ನಮ್ಮನಿ ರಂದಿ ಎಲ್ಲಾ ಹೊರಗ ಚೆಲ್ತಿ?` ಎಂದು ಅವ್ವ ಗಳಗಳನೇ ಅಳಲು ಶುರು ಮಾಡಿದಳು. ಅಪ್ಪ ಅವ್ವನತ್ತ ಸಿಟ್ಟಿನಿಂದ ತಿರುಗಿ, `ಅಂವಗೆಲ್ಲಿ ರೊಕ್ಕ ಕಡಿಮಿ ಬೀಳ್ತಾವ? ತಿಂಗಳ ಕಡೀ ಆಖ್ಯರಿದ್ರೂ ಇಂಗ್ಲೀಷ್ ಸಿನಿಮಾ ನೋಡ್ತಾನ, ಅದೂ ಹೊಲಸ,` ಎಂದು ಬಯ್ದು, `ಎಂಥಾ ಮಗನ್ನ ಹಾಡದ್ಯ? ನಮ್ಮನಿ ಗೋಪುರಕ್ಕ ಕಳಸಾ ಇಡ್ತಾನ,` ಎಂದು, ನನ್ನತ್ತತಿರುಗಿ, `ಏ ರಂಡೆಗಂಡ, ಹೆತ್ತ ಹೊಟ್ಟಿಗಿ ಬೆಂಕಿ ಹಾಕ್ಲಿಕ್ಕ ಯಾಕ ಹುಟ್ಟಿದ್ಯೋ? ಹೋಗ, ಯಾವಕಿದರ ಅಂಗಿ ಒಳಗ ಹಣಿಕಿ ಹಾಕಹೋಗ, ಯಾವ್ದಾರ ಇಂಗ್ಲೀಷ್ ಸಿನಿಮಾ ನೋಡ ಹೋಗ,` ಎಂದು ರಭಸದಿಂದ ನನ್ನತ್ತ ಬಂದು, ಹಲ್ಲನ್ನು ಕಟಕಟನೇ ಕಡಿದು, `ಸಾಯ್, ಹಾಳಾಗು, ಎಲ್ಲೆರೆ ಸಾಯ್ ಹೋಗು,` ಎಂದು ನನ್ನನ್ನು ಕಂಡಕಂಡಲ್ಲಿ ಒದೆಯತೊಡಗಿದ. ಪುಟ್ಟಿ ದೊಡ್ಡ ದನಿ ತೆಗೆದು ಆಳಹತ್ತಿದಳು. ಅಪ್ಪನ ಆವೇಶವೆಲ್ಲ
ಮುಗಿದ ಮೇಲೆ ನಿಂತಲ್ಲಿಯೇ ಕುಸಿದ, `ನಾ ಪಾಲಸೋ ಧರ್ಮಕ್ಕ ಅರ್ಥ ಇಲ್ಲಂತ, ನಾ ಗಂಟೇ ಬಾರ್ಸೊದು ಮಗ್ಗಲ ಮೇನಿಯವ್ರು ಕೇಳಲಿ ಅಂತ, ಏನ, ನೀ ಅತ್ತೀ ಸೇವಾ ಮಾಡಿದ್ದು ನನ್ನ ಹೆದರಿಕಿಗಂತ, ನಾ ನಿನ್ನ ಬೆಳೀಲಕ್ಕೆ ಬಿಡಲಿಲ್ಲಂತ,` ಅಪ್ಪ ಹಲುಬತೊಡಗಿದ.
ನಾನು `ಅಪ್ಪಾ` ಎನ್ನಲು ಬಾಯಿ ತೆಗೆದೆ. ಆದರೆ ಗಂಟಲಿನಿಂದ ಯಾವುದೇ ಶಬ್ದ ಹೊರಬರದೇ ಮತ್ತೆ ನಿಶ್ಚಲನಾದೆ. ಅವ್ವ ಅಳುತ್ತಲೇ, `ಛಲೋ ಬಿರುದು ಕೊಟ್ಯಲ್ಲೋ, ಪೈಸಾ ಪೈಸಾ ಗಳಿಸಲಿಕ್ಕ ಅವ್ರು ಎಷ್ಟು ಬೆವರ ಹರಸ್ತಾರಂತ ನಿಂಗೇನ ಗೊತ್ತೂ? ನಿನ್ನ ದೇವ್ರು ಎಂದೂ ಕ್ಷಮಿಸೂದಿಲ್ಲ,`ಎಂದಳು. `ಶ್ಯಾಣ್ಯಾ, ಶ್ಯಾಣ್ಯಾ ಅಂತ ಎಲ್ಲರೂ ಅಂತಿದ್ರು. ರಾಯರ ಕುದರಿ ಕತ್ತಿ ಆತು,` ಎಂದಳು ಕಾಕು. ನನಗೀಗ ಸುಮ್ಮನಿರಲಾಗಲಿಲ್ಲ. `ನೀವು ಸುಮ್ಮ ಕೂಡ್ರೀ, ಕಾಕು, ನಮ್ಮೆಪ್ಪ ಅವ್ವಾ ನಂಗ ಬೇಕಾದ್ದ ಬಯ್ತಾರ, ನೀವಡ್ಡ ಬಾಯಿ ಹಾಕಬ್ಯಾಡ್ರಿ,` ಎಂದರಚಿದೆ. ಅಪ್ಪ ಸಿಟ್ಟಿನಿಂದ,`ಯಾಕ, ದೊಡ್ಡವರಿಗೆ
ತಿರತಿರಗಿ ಮಾತಾಡ್ಲೀಕತ್ತಿ ? ಮರ್ತಬಿಟ್ಟೀನ ನಾ ಹೇಳಿದ್ದು?` ಎಂದು, ಒಂದರೆ ಕ್ಷಣ ಬಿಟ್ಟು, `ನೀ ಭಾಳ ಓದಿದವಲ್ಲಾ, ನಿನ್ನ ಮುಂದ ನಾ ಬುದ್ದಿ ಹೇಳ್ತೀನಲ್ಲಾ, ನಾ ಎಂಥಾ ಹುಚ್ಚ. ನೀ ಭಾಳ ದೊಡ್ಡವ ಆಗಿ ನೋಡು, ದೊಡ್ಡ ದೊಡ್ಡ ಪುಸ್ತಕ ಓದಿ , ಕತೀ ಬರೀತಿ. ನಿನ್ನ ಮುಂದೆ ನಾವೆಷ್ಟರವರಪ್ಪಾ, ದೊಡ್ಡಮನಷ್ಯಾ,` ಎಂದು ಹಂಗಿಸಿದ. ನನ್ನ ಕಟ್ಟಿದ ಗಂಟಲು ಕಣ್ಣೀರಾಗಿ ಹರಿಯಿತು. ನಾನು ಅಳಲಿಕ್ಕೆ ಶುರುಮಾಡಿದೆ. ಅಪ್ಪ, ಅವ್ವ, ಕಾಕಾ, ಕಾಕು ಎಲ್ಲ ಕೂಡಿ ಬಯ್ಯತೊಡಗಿದರು. ಅಜ್ಜಿ ಅವ್ವನನ್ನು ಮಗಳಂತೆ ನೋಡಿ ಕೊಳ್ಳುತ್ತಿದ್ದುದನ್ನು, ಅಪ್ಪನಿಗೆ ನನ್ನ ಮೇಲಿರುವ ಆಗಾಧ ಪ್ರೀತಿಯನ್ನು, ನನ್ನನ್ನು ಉಳಿದವರ ಮುಂದೆ ಹೊಗಳುವುದನ್ನು, ನನ್ನ ಪತ್ರ ಬಂದಾಗ ಓದೊಂದು ಅಕ್ಷರವನ್ನು ಓದಿ ಓದಿ ಆನಂದಿಸುವುದನ್ನು ಅವ್ವ ಬಿಕ್ಕಿ ಬಿಕ್ಕಿ ಆಳುತ್ತ ಹೇಳಹತ್ತಿದಳು. ಅಪ್ಪನಿಗೆ ಆವೇಶ ತಡೆಯಲಾಗಲಿಲ್ಲ. ನನ್ನನ್ನು ದರದರ ಎಳೆದವನೆ, `ಎಲ್ಲೆರೆ ಹಾಳಾಗಿ ಹೋಗು,` ಎಂದು
ದಬ್ಬಿ, ಬಾಗಿಲನ್ನು ಹಾಕಿಕೊಂಡ, ಮನೆಯ ಅಜುಬಾಜು ಮಂದಿ ಸುತ್ತಲೂ ಮುಕುರಿದ್ದರು. ನಾನು ತೆಲೆತಗ್ಗಿಸಿ ಕೈಯಲ್ಲಿದ್ದ ಪತ್ರಿಕೆಯನ್ನು ನೋಡುತ್ತ ನಡೆಯಹತ್ತಿದೆ. ಕಿಲ್ಲಾದ ಸಂದಿಯನ್ನು ದಾಟಿ ಹೊರಟೆ. ದುಃಖಿಸಿ ಅಳುತ್ತ ಕತ್ತೆಹೊಳೆಗೆ (ಘಟಪ್ರಭಾ ನದಿ) ಬಂದು ಕೂತು ಎಲ್ಲ ದುಗುಡವನ್ನೂ ಹರಿಸಿಬಿಟ್ಟೆ.
ಈಗಲೂ ಅಲ್ಲೇ ನದಿ ದಂಡೆ ಮೇಲೆ ಕೂತಿದ್ದೇನೆ. ಎಷ್ಟು ಅತ್ತರೂ ಸಮಾಧಾನವಾಗಲಿಲ್ಲ. ಎಲ್ಲವನ್ನೂ ಒಮ್ಮೆಲೆ ಕಕ್ಕಿಬಿಡಬೇಕು ಎನಿಸಿತು. ಅರ್ಧತಾಸು ಸುಮ್ಮನೆ ಕೂತು, ಮನಸ್ಸನ್ನು ತಹಬದಿಗೆ ತಂದುಕೊಂಡು, ಒಂದೊಂದೆ ಘಟನೆಗಳನ್ನು ಜೋಡಿಸಿಕೊಂಡು ಸಿದ್ದನಾದೆ. ನನ್ನ ಮುಂದೆ ನೀವು ಕೂತಿದ್ದೀರೆಂದು ಕಲ್ಪಿಸಿಕೊಂಡು ಎಲ್ಲವನ್ನೂ ಒಂದೂ ಬಿಡದೇ ಅದೇ ಪತ್ರಿಕೆಯ ಖಾಲಿ ಜಾಗದಲ್ಲೆಲ್ಲ ಬರೆದಿದ್ದೇನೆ. ಕಕ್ಕಬೇಕೆನಿಸಿದ್ದನ್ನೆಲ್ಲವನ್ನೂ ಕಕ್ಕಿದ್ದರೂ ಇನ್ನೂ ಸಮಾಧಾನವಾಗೆಲ್ಲ. ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ಅನುಭವದ ಜಾಡು ಹಿಡಿದು ಪ್ರಾಮಾಣಿಕವಾಗಿ ಬರೆಯಬೇಕೆನ್ನುವ ಹಟ ತೊಟ್ಟು ಕಥೆ ಬರೆದು ನಾನು ಸಾಧಿಸಿದ್ದಾದರೂ ಏನು ಎಂದು ಅನಿಸುತ್ತಿದೆ. ನನ್ನ ಕಥೆ ಮೆಚ್ಚಿ ಒಂದೆರಡು ಕಾಗದಗಳು ಬರಬಹುದು. ಸತ್ತ ಅಜ್ಜಿಯ ನಂಬಿಕೆಗಳು ನನ್ನನ್ನು ದಿನವೂ ಪೀಡಿಸುತ್ತವೆ. ಅಪ್ಪ, ಅವ್ವನ ನಂಬಿಕೆಗಳು, ಪರಿಕಲ್ಪನೆಗಳು ನನ್ನನ್ನು ಭೂತದಂತೆ ಬೆನ್ನು ಹತ್ತುತ್ತವೆ. ಇನ್ನು ಮುಂದೆ ಅಪ್ಪ, ಅವ್ವ ನನ್ನನ್ನು ಮಗನ ಹಾಗೆ ಪ್ರೀತಿಸುವುದೇ ಇಲ್ಲ, ಅಪರಿಚಿತನಂತೆ ನಿರುಕಿಸುತ್ತಾರೆ. ಮತ್ತೆ ನಾನು ಕಾಲೇಜಿಗೆ ಹೋದ ಕೂಡಲೇ ರೂಪಾ ಕುಲಕರ್ಣಿ ತರಾಟೆಗೆ ತೆಗೆದುಕೊಳ್ಳುತ್ತಾಳೆ, ಎಲ್ಲ ಗೆಳೆಯರಿಗೂ ನಾನು ಅಪರಿಚಿತನಾಗುತ್ತೇನೆ. ನನಗೆ ಒಂದು ಥರ ಹುಚ್ಚು ಹಿಡಿದರೂ ಹಿಡಿಯಬಹುದು. ಏಕಾಂಗಿಯಾಗಿ ಖೋಲಿಯಲ್ಲಿ ಗೋಡೆಯನ್ನು ನೋಡುತ್ತಾ ಗಪ್ಪು ಕೂಡುವ ಕೆಲಸ ನನ್ನ ದಿನಚರಿಯಾಗಬಹುದು. ಇದನ್ನೆಲ್ಲ ನಾನು ಕಥೆ ಬರೆದು ಪ್ರಕಟಿಸುವುದಕ್ಕೆ ಮುಂಚೆ ಯೋಚಿಸಬೇಕಾಗಿತ್ತು, ಅಲ್ಲವೇ ?
ಅಯ್ಯೋ, ಆಗಲೇ ಸೂರ್ಯ ಮುಳುಗಿಯೇ ಹೋದ. ಮನೆಯಿಂದ ಬಿಟ್ಟಾಗ ಮಧ್ಯಾಹ್ನದ ಹೊತ್ತು. ಇನ್ನೂ ಯಾರ ಊಟವೂ ಆಗಿಲ್ಲ. ಅವ್ವ ಅಳುತ್ತ , ನನ್ನ ದಾರಿ ಕಾಯುತ್ತಾ ಏನೇನೋ ಕೆಟ್ಟ ಯೋಚನೆ ಮಾಡುತ್ತ ( ನಾನು ಜೀವಕ್ಕೇ ಅಪಾಯ ತಂದುಕೊಂದನೆಂದು ಅಥವಾ ಮನೆಬಿಟ್ಟು ಓಡಿ ಹೋದೆನೆಂದು) ಕೂತಿರಬಹುದು. ಅಪ್ಪ ಕಾಲು ಸುಟ್ಟ ಬೆಕ್ಕಿನಂತೆ ಪರದಾಡುತ್ತ, ತನ್ನನ್ನು ಶಪಿಸಿ ಕೊಳ್ಳುತ್ತ ಊಟ ಮಾಡದೇ ಪರಿತಪಿಸುತ್ತಿರಬಹುದು. ಎಲ್ಲರೂ ಹುಚ್ಚು ಹಿಡಿದವರ ಹಾಗೆ ನಾನು ಹೋದ ದಾರಿ ಕಾಯುತ್ತ ಕೂತಿರುತ್ತಾರೆ, ಇನ್ನು ತಡಮಾಡುವುದಿಲ್ಲ ಹೋಗಿಬರುತ್ತೇನೆ.
ಕೋವಿಡ್ ಪಿಡುಗು ನಮ್ಮನ್ನೆಲ್ಲ ಬಾಧಿಸಿ ಹೋದ ನಂತರ ಹಳೆಯ ಅಡಕಪದಗಳಿಗೆ (Acronyms) ಹೊಸದೊಂದು ಅರ್ಥ ಬಂದಿದೆ. BC(Before Christ) ಈಗ Before Covid ಎಂತಲೂ, AD (Anno Domini) ಈಗ After Disease, ಅಥವಾ After Done (with Corona) ಎಂತಲೂ ಕೆಲವರು ಕರೆಯುತ್ತಾರೆ. ಇತ್ತೀಚೆಗೆ ಕೋರೋನಾ ನಂತ ಮೊದಲ ಬಾರಿ ಬೆಂಗಳೂರಿಗೆ ಹೋದ ಬೇಸಿಂಗ್ ಸ್ಟೋಕ್ ರಾಮಮೂರ್ತಿಯವರ ತಮ್ಮ ಆರು ವಾರಗಳ ಕಾಲದ ವಾಸ್ತವ್ಯದಲ್ಲಿ ಅನುಭವಿಸಿದ ಸಿಹಿ, ಆಶ್ಚರ್ಯಕರ ಮತ್ತು ಇತರೇ ಅನುಭವಗಳವನ್ನು ಈ ಸ್ವಾರಸ್ಯಕರವಾದ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರ ಟ್ರೇಡ್ ಮಾರ್ಕ್ ಆದ ಅಲ್ಲಿ ಸ್ವಲ್ಪ ಇತಿಹಾಸ, ಇಲ್ಲಿ ಸ್ವಲ್ಪ ಹಾರ್ಟಿಕಲ್ಚರ್, ಬಾಟನಿ ಹೀಗೆ ಸ್ವಲ್ಪ spice sprinkling ಸಹ ಉದುರಿಸಿ ಉಣಬಡಿಸಿದ್ದಾರೆ. Enjoy! (ತತ್ಕಾಲ್ ಸಂಪಾದಕ)
ಕೋವಿಡ್ ನಿಂದ ಕಳೆದ ಮೂರು ವರ್ಷ ಬೆಂಗಳೂರಿಗೆ ಹೋಗಿರಲಿಲ್ಲ. ಈ ವರ್ಷ ಜನವರಿ ತಿಂಗಳಲ್ಲಿ ಹೋಗಿ ಆರು ವಾರ ಇದ್ದು, ಅಲ್ಲಿ ಈ ಮೂರು ವರ್ಷಗಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಈ ಲೇಖನ. ಬೆಂಗಳೂರು Airport ಬಹಳ ಚೆನ್ನಾಗಿದೆ ಇದು ನಮ್ಮೆಲ್ಲರ ಹೆಮ್ಮೆಯ ವಿಷಯ. Immigration ಸಹ ತುಂಬಾ ಸರಾಗ ಮತ್ತು ವಿನಯದಿಂದ ನಡೆಯಿತು. ಕೋವಿಡ್ ಔಪಚಾರಿಕತೆಗಳು ಏನೂ ಇರಲಿಲ್ಲ. ಕೆಲವು ವರ್ಷದ ಹಿಂದೆ Auto ಅಥವಾ Taxi ಸಮಸ್ಯೆ ಇತ್ತು, ಆದರೆ ಈಗ Uber ಮತ್ತು Ola ಇರುವುದರಿಂದ ಯಾವ ತೊಂದರೆಯೂ ಇಲ್ಲ. ಸುಮಾರು ಐದು ನಿಮಿಷದ ಒಳಗೆ ನಿಮ್ಮ ವಾಹನ ಬರುವ ಸಾಧ್ಯತೆ ಇದೆ. ದರದ ಚೌಕಾಸಿ ಅಥವಾ ಜಗಳ ಬರಿ ನೆನಪುಗಳು ಅಷ್ಟೇ !
ಇನ್ನೊಂದು ವಿಷಯ ಗಮನಕ್ಕೆ ಬರುವುದು ದೇಶದಲ್ಲಿ ಆಗಿರುವ Digital Revolution. ರಸ್ತೆ ಯಲ್ಲಿ ತರಕಾರಿ ಮಾರುವರು , ಚಾಟ್ ಅಂಗಡಿಯವರು ಸಹ ಇದರಲ್ಲಿ ಭಾಗವಹಿಸಿದ್ದಾರೆ. ಫೋನಿನಿಂದ QR Code scan ಮಾಡಬಹುದು. ಅನೇಕ ಉಪಹಾರ ಮಂದಿರಗಳಲ್ಲಿ QR code ನಿಂದ ಅವತ್ತಿನ ತಿಂಡಿಗಳ ವಿವರ ತಿಳಿಯಬಹುದು. ಅಂಗಡಿ ಸಾಮಾನುಗಳನ್ನು on line ನಲ್ಲಿ ತರಿಸಬಹುದು. ನೋಡಿದರೆ ಬೆಂಗಳೂರಿನಲ್ಲಿ ಎಲ್ಲರ ಮನೆಯಲ್ಲೂ ಒಂದು ನಾಲಕ್ಕು ಚಕ್ರದ ವಾಹನ ಇರಬಹುದೇನೋ ಅನ್ನಿಸುತ್ತೆದೆ, ರಸ್ತೆಯಲ್ಲಿ ಅಷ್ಟೊಂದು traffic! Highway ಗಳು ಈಗ ಚೆನ್ನಾಗಿವೆ, ಆದರೆ ಬಹು ಮಂದಿ ವಾಹನ ನಡೆಸುವ ನಿಯಮಗಳನ್ನು ಪಾಲಿಸಿವುದಿಲ್ಲ ಅನ್ನುವುದು ಬಹಳ ಶೋಚಿನಿಯವಾದ ವಿಷಯ.
ಇನ್ನು ಮೆಟ್ರೋ (ನಮ್ಮ ಮೆಟ್ರೋ ) ಬಹಳ ಅನುಕೂಲವಾಗಿದೆ. ನಾನು ಬಹಳ ಹಿಂದೆ ಒಂದು ಸಲಿ ಇಲ್ಲಿ ಪ್ರಯಾಣ ಮಾಡಿದ್ದೆ.
ಆದರೆ ಏನು ಬದಲಾವಣೆ ಆಗಿದೆ ಅನ್ನುವ ವಿಚಾರ ಗೊತ್ತಿರಲಿಲ್ಲ. ಸರಿ, ಇದರಲ್ಲಿ ಪ್ರಯಾಣ ಮಾಡಿ ನೋಡೋಣ ಅಂತ ನ್ಯಾಷನಲ್ ಕಾಲೇಜು ನಿಲ್ದಾಣಕ್ಕೆ ಬಂದೆ. ಟಿಕೆಟ್ counter ನಲ್ಲಿ ಮಂತ್ರಿ ಮಾಲ್ ಗೆ ಎಷ್ಟು ಅಂತ ಕೇಳಿದಾಗ ಆಕೆ ೧೮ ರೂಪಾಯಿ ಅಂದಳು, ನಾನು ಆಶ್ಚರ್ಯದಿಂದ ”೧೮ ಆ?” ಅಂದೆ. ಆಕೆ ಹೌದು ಸರ್, ಸೀನಿಯರ್ concession ಇಲ್ಲ ಅಂದಳು! ನನಗೆ ಆಶ್ಚರ್ಯ ಆಗಿದ್ದು ಕೇವಲ ೧೮ ರೂಪಾಯಿ ಮಾತ್ರ ಅಂತ , ಆದರೆ ಆಕೆ ನಾನು ಇದು ದುಬಾರಿ ಅಂತ ಹೇಳುತ್ತಿದ್ದೇನೆ ಅಂತ ತಿಳಿದಿರಬೇಕು!! (London Tube ನಲ್ಲಿ ಕನಿಷ್ಠ £೭!) ದುಡ್ಡು ಕೊಟ್ಟೆ, ಚಿಲ್ಲರೆ ಬಂತು, ಟಿಕೆಟ್ ಕೊಡಿ ಅಂದೆ. ಆಕೆ ಕೊಟ್ಟಿದ್ದೀನಿ ನೋಡಿ ಸರ್ ಅಂದಳು. (ಈ ಮನುಷ್ಯ ಎಲ್ಲಿಂದ ಬಂದಿದ್ದಾನೆ ಅಂತ ಯೋಚಿಸರಬಹುದು!!). ನೋಡಿದರೆ ಟಿಕೆಟ್ ಒಂದು ಬಿಲ್ಲೆ ಆದರೆ Digital ಬಿಲ್ಲೆ ! ಅಂತೂ ಪ್ರಯಾಣ ಕೇವಲ ೧೦ ನಿಮಿಷ ಮಾತ್ರ. ಅದೇ Auto ನಲ್ಲಿ ಮಲ್ಲೇಶ್ವರಕ್ಕೆ ಹೋಗಿದ್ದರೆ ೧೦೦ ರೂಪಾಯಿ ಮತ್ತು ಅರ್ಧ ಅಥವಾ ಮುಕ್ಕಾಲು ಗಂಟೆ ಸಮಯ ಹಿಡಿಯುತ್ತಿತ್ತು.
ಬೆಳಗ್ಗೆ ಅಥವಾ ಸಾಯಂಕಾಲ ತಿಂಡಿ/ಊಟಕ್ಕೆ ಜನಗಳು ಉಪಹಾರ ಮಂದಿರಗಳ ಮುಂದೆ ನಿಂತಿರುವುದನ್ನ ನೋಡಿದರೆ ಮನೆಯಲ್ಲಿ ಅಡಿಗೆ ಮಾಡುವ ಅಭ್ಯಾಸ ಇಲ್ಲವೇನೋ ಅನ್ನುವ ಸಂಶಯ ಹುಟ್ಟುತ್ತದೆ. ಗಾಂಧಿ ಬಜಾರ್ನಲ್ಲಿರುವ ಹೆಸರಾದ ವಿದ್ಯಾರ್ಥಿ ಭವನದ ಮುಂದೆ queue ನಿಂತಿರುತ್ತಾರೆ. ಎಲ್ಲಾ ಉಪಹಾರ ಮಂದಿರಗಳಲ್ಲೂ ಇದೇ ಸಮಸ್ಯೆ.
ಸಂಕ್ರಾಂತಿ ಸಮಯದಲ್ಲಿ, ಎಳ್ಳು, ಬೆಲ್ಲ, ಸಕ್ಕರೆ ಅಚ್ಚು ಮುಂತಾದವು ಈಗ ಅನೇಕ ಅಂಗಡಿಗಳಲ್ಲಿ Prepack ಸಿಗುತ್ತೆ. ಮನೆಯಲ್ಲಿ ಕಷ್ಟ ಪಡಬೇಕಾದ ಅವಶ್ಯಕತೆ ಇಲ್ಲ. ಯುಗಾದಿ ಹಬ್ಬಕ್ಕೆ ಹೋಳಿಗೆ ಮಾಡುವ ಅಂಗಡಿಗಳು ಅನೇಕ.
ನಾವು ಇದ್ದ ಆರು ವಾರದಲ್ಲಿ, ಅಡಿಗೆ ಮಾಡಿಕೊಳ್ಳುವ ಸೌಲಭ್ಯ ಇದ್ದಿದ್ದರೂ ಮಾಡುವ ಅವಶ್ಯಕತೆ ಇರಲಿಲ್ಲ. ಹತ್ತಿರದಲ್ಲೇ ಇದ್ದ ವಿದ್ಯಾರ್ಥಿ ಭವನ, ಭಟ್ಟರ ಹೋಟೆಲ್ ಅಥವಾ ಉಡುಪಿ ಕೃಷ್ಣ ಭವನದಲ್ಲಿ ಬೆಳಗ್ಗೆ ಬಿಸಿ ಬಿಸಿ ಇಡ್ಲಿ ದೋಸೆ (Take Away) ಸಿಗಬೇಕಾದರೆ ಮನೆಯಲ್ಲಿ ಕಷ್ಟ ಪಡಬೇಕಾಗಿಲ್ಲ ಅಲ್ಲವೇ? ಊಟ ಸಹ On Line ನಲ್ಲಿ ತರಿಸಬಹುದು! When in Rome Do as Romans Do ಅಂದ ಹಾಗೆ.
ನಮ್ಮ ಮನೆಯ ಕಿರಿಯ ಇಬ್ಬರು ಸಂಬಂಧಿಕರು ಬ್ರೂವರಿ (Brewery )ಗೆ ಹೋಗೋಣ ಅಂದರು. (ಬೆಂಗಳೂರಿನಲ್ಲಿ ಸುಮಾರು ೩೦-೪೦ ಇವೆಯಂತೆ). ಸಾಯಂಕಾಲ ೭ ೩೦ ಕ್ಕೆ booking ಇದ್ದಿದ್ದು, ಸುಮಾರು ೧೫೦೦ ಜನ ಇದ್ದಿರಬಹುದು ಆ ಸಮಯದಲ್ಲಿ! QR code scan ಮಾಡಿದರೆ ಅನೇಕ ರೀತಿಯ beer ಮಾಹಿತಿ ಸಿಗುತ್ತೆ. (ಈ Beer ಇಲ್ಲಿ ಸಿಗುವ Lager)
ಸುಮಾರು ೨೫-೩೦ ವರ್ಷದ ಹಿಂದೆ, ಬಸವನಗುಡಿ ಅಥವಾ ಮಲ್ಲೇಶ್ವರದ ರಸ್ತೆಗಳಲ್ಲಿ ಒಂಟಿ ಮನೆಗಳು ಇದ್ದವು, ಈಗ ಎಲ್ಲೆಲ್ಲಿ ನೋಡಿದರೂ ಹಳೇ ಮನೆಗಳನ್ನು ಕೆಡವಿ ೩ ಅಥವಾ ೪ ಅಂತಸ್ತಿನ apartment ಗಳು ಬಂದಿವೆ. ರಸ್ತೆಗಳ ತುಂಬಾ ಮರಳು, ಸಿಮೆಂಟ್ ಇತ್ಯಾದಿ. ಇದು ಸಾಲದು ಅಂತ ಚರಂಡಿ ರಿಪೇರಿ, ಅದರ ಕಲ್ಲಿನ ಚಪ್ಪಡಿಗಳೂ ಸಹ ರಸ್ತೆ ಮಧ್ಯೆ. ಹೀಗಾಗಿ ರಸ್ತೆಯಲ್ಲಿ ನಡೆಯುವುದೇ ಒಂದು ಸಮಸ್ಯೆ, ಗಾಂಧಿ ಬಜಾರ್ ನಂತೂ ಪೂರ್ತಿ ಅಗದು ಬಿಟ್ಟಿದ್ದಾರೆ. ಇದು ಹೇಗೆ ಅನ್ನುವ ಪ್ರಶ್ನೆ ನೀವು ಕೇಳಬಹುದು. ಕಾರಣ, ಇಂಗ್ಲಿಷ್ನನಲ್ಲಿ ಹೇಳಬೇಕಾದರೆ, Lack of Accountability. ಸರಿಯಾದ ಉಸ್ತುವಾರಿ ಸಹ ಕಡಿಮೆ. ಆದರೆ ಸ್ಥಳೀಯ ಜನ ಇದನ್ನ ಸಹಿಸಿಕೊಂಡು ಇದು ತಮ್ಮ ಹಣೆ ಬರಹ ಎಂದು ಸುಮ್ಮನಿರುತ್ತಾರೆ. ನಿಮ್ಮ ಪ್ರತಿನಿಧಿ (ಕಾರ್ಪೊರೇಟರ್ )ಗೆ ದೂರು ಕೊಡಬಹುದಲ್ಲ ಎಂದು ಕೇಳಿದಾಗ ಬಂದ ಉತ್ತರ ಇದು " ಇವರು ಇರುವುದು ನಮಗೆ ಸಹಾಯ ಮಾಡುವುದಕ್ಕೆ ಅಲ್ಲ ತಮ್ಮ ಜೇಬು ತುಂಬಿಸಿಕೊಳ್ಳುವುದಕ್ಕೆ!"
ಆದರೆ ನೀವು ಮೈಸೂರಿಗೆ ಹೋಗಿ, ಅಲ್ಲಿನ ವಾತಾವರಣ, ಸೌಂದರ್ಯ ಕಂಡು ಹೆಮ್ಮೆ ಬರುತ್ತೆ. ಸಧ್ಯ ಇಲ್ಲಿ Apartment ಹುಚ್ಚುತನ ಇನ್ನೊ ಬಂದಿಲ್ಲ. ಹಳೆ ಕಟ್ಟಡಗಳನ್ನು ಒಡೆದಿಲ್ಲ, ರಸ್ತೆಯಲ್ಲಿ ಅಷ್ಟೇನೂ ಗಲಾಟೆ ಇಲ್ಲ. ಮುಂದೆ IT ಕಂಪನಿಗಳು ಇಲ್ಲಿ ಬಂದರೆ ಮೈಸೂರಿನ ಗತಿ ಬೆಂಗಳೂರಿನ ಹಾಗೆ ಅನ್ನುವ ನನ್ನ ಅಭಿಪ್ರಾಯ! (ದಯವಿಟ್ಟು Software ನವರು ನನ್ನ ಹತ್ತಿರ ಜಗಳ ಮಾಡಬೇಡಿ, ಇರೋ ವಿಚಾರ ಹೇಳುತ್ತಿದ್ದೇನೆ.)
ಅಪ್ಪಿ ತಪ್ಪಿ ನೀವು ರಾಜಕೀಯದ ವಿಚಾರ ಎತ್ತಿ ಬೇಡಿ, ನಾನು ಒಮ್ಮೆ ದೇಶದಲ್ಲಿ ಅಸಹಿಸ್ಣುತೆ ( intolerance ) ಹೆಚ್ಚಾಗಿದೆ ಅನ್ನುವ comment ಮಾಡಿದೆ. ನಮ್ಮ ಕೆಲವು ಸಂಬಂಧಿಕರು ನನ್ನ ಮೇಲೆ serious ಆಗಿ ಜಗಳಕ್ಕೆ ಬಂದರು, ಬಿಬಿಸಿನ ಬೈದರು, ನಿಮ್ಮ ಪತ್ರಿಕೆಗಳು "anti India" ಇನ್ನೂ colonial mind set ಹೋಗಿಲ್ಲ ಇತ್ಯಾದಿ, ಇತ್ಯಾದಿ. ಆದರೆ ಈಗ UK ಇಂತಹ ವಿಚಾರದಲ್ಲಿ ಎಷ್ಟು ಮುಂದುವರೆದಿದೆ ಅನ್ನುವ ಮಾಹಿತಿಯನ್ನು ಅವರಿಗೆ ಕೇಳುವ ಕುತೂಹಲ ಅಥವಾ ಉತ್ಸಾಹ ಇರಲಿಲ್ಲ.
ಇದ್ದ ಆರು ವಾರದಲ್ಲಿ, ಹೊರಗೆ , ಅಂದರೆ ಬೆಂಗಳೂರು ಬಿಟ್ಟು ಜಾಸ್ತಿ ಅನೇಕ ಕಾರಣಗಳಿಂದ ಹೋಗಲಿಲ್ಲ. ಆದರೆ ಹೆಸರಘಟ್ಟ ದಲ್ಲಿರುವ Horticulture Research Institute ಗೆ ಭೇಟಿ ಕೊಟ್ಟಿದ್ದು ಅದ್ಭುತವಾಗಿತ್ತು. ನಮ್ಮ ಮನೆಯಲ್ಲಿ ನಮ್ಮಿಬ್ಬರಿಗೂ ತೋಟಗಾರಿಕೆ ಮೇಲೆ ಆಸಕ್ತಿ ಇದೆ, ಇದರ ಬಗ್ಗೆ ಅನಿವಾಸಿಯಲ್ಲಿ ಹಿಂದೆ ಬರೆದಿದ್ದೇನೆ. ಈ ಸಂಸ್ಥೆ ೧೯೩೮ ರಲ್ಲಿ ಅಂದಿನ ಮೈಸೂರು ಸರ್ಕಾರ ಹಣ್ಣು ಮತ್ತು ತರಕಾರಿ ಸಂಶೋಧನೆಗೆ ಈ ಸಂಸ್ಥೆಯನ್ನು ಹೆಸರಘಟ್ಟದಲ್ಲಿ ಸ್ಥಾಪನೆ ಮಾಡಿದರು. ನಾಲ್ಮಡಿ ಕೃಷ್ಣರಾಜ ಓಡೆಯರ್ ಮಹಾರಾಜರು ರಾಜ್ಯಕ್ಕೆ ಮಾಡಿದ ಅನೇಕ ಸೇವೆಗಳಲ್ಲಿ ಇದೊಂದು. ಸುಮಾರು ೫೦೦ ಎಕರೆ ವಿಸ್ತರಣೆಯಲ್ಲಿ ಇರುವ ಸಂಸ್ಥೆ ಈಗ ಕೇಂದ್ರ ಸರ್ಕಾರದ Institute of Agricultural Research (IAR) ಗೆ ಸೇರಿದ್ದು. ಕೆಲವು ಹಣ್ಣುಗಳ ಮತ್ತು ತರಕಾರಿಯ ಬಗ್ಗೆ ಇಲ್ಲಿನ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಗಿಡಗಳಿಗೆ ಬರುವ ರೋಗ ಮತ್ತು ಅದರ ನಿವಾರಣೆಯ ರೀತಿ ರೈತರಿಗೆ ಮಾಹಿತಿ ಕೊಡುವ ಕೆಲವನ್ನು ಇಲ್ಲಿ ನಡೆಯುತ್ತದೆ. ಇವರ ಸಂಶೋಧನೆ ಅಂತರ ರಾಷ್ಟ್ರೀಯ ಪ್ರಶಂಸೆ ಪಡದಿದೆ ಅನ್ನುವುದು ಹೆಮ್ಮೆಯ ವಿಚಾರ. ಇಲ್ಲೇ ಬೆಳದ ಗಿಡ ಮತ್ತು ಬೀಜಗಳನ್ನ ಖರೀದಿ ಮಾಡಬಹುದು. ಅರ್ಕ (Arka ) ಈ ಸಂಸ್ಥೆಯ ವ್ಯಾಪಾರ ಗುರುತು (Trade Mark ). ಈ ಹೆಸರಿನಲ್ಲಿ ಗಿಡಗಳನ್ನು ಮಾರುವುದರಿಂದ ಜನಗಳಿಗೆ (ರೈತರಿಗೆ) ಇದು ಈ ಸಂಸ್ಥೆಯಿಂದ ಬಂದಿದ್ದು ಅಂಬ ಭರವಸೆ ಬರುತ್ತೆ. ಗುಣಮಟ್ಟದ ಬಗ್ಗೆ( Quality ) ಗೊಂದಲ ಇರುವುದಿಲ್ಲ. IAR ಸೇರಿದ ಸಂಸ್ಥೆಗಳು ಸರ್ಕಾರಕ್ಕೆ ೧೩೦೦೦ ಕೋಟಿ ಆದಾಯ ತರುತ್ತದೆ ಎಂದು ಅಂದಾಜು ಮಾಡಲಾಗಿದೆ. ಇಲ್ಲೇ ಬೆಳೆದ ಗಿಡಗಳ ಬೀಜಗಳನ್ನುಖರೀದಿ ಮಾಡ ಬಹುದು. ೧೫ ರೀತಿಯ Bougainvillea ಮತ್ತು ಗುಲಾಬಿ ಹೂವುಗಳ ತೋಟ ನೋಡುವುದಕ್ಕೆ ಸುಂದರ ವಾಗಿತ್ತು. ಅಲ್ಲಿ ಕೆಲಸ ಮಾಡುವ ಸ್ಥಳೀಯ ಮಹಿಳೆಯಯರು ಹೈಬ್ರಿಡ್ ಮಾವಿನ ಸಸಿಗಳನ್ನು ಮಾಡುವ ಕೌಶಲ್ಯ (Skill ) ವನ್ನು ಮೆಚ್ಚಬೇಕು. IAR ಸೇರಿದ ಸಂಸ್ಥೆಗಳಿಂದ ಸರ್ಕಾರಕ್ಕೆ ೧೩೦೦೦ ಕೋಟಿ ರೂಪಾಯಿ ಆದಾಯ ಎಂದು ಅಂದಾಜು ಮಾಡಲಾಗಿದೆ.
ಮಾರ್ಚ್ ತಿಂಗಳಲ್ಲಿ ಬಿಸಿಲು ಹೆಚ್ಚು, ಹೊರಗೆ ಹೋಗುವುದು ಕಷ್ಟ , ಅಲ್ಲದೇ ಇಲ್ಲಿ ನಮ್ಮ ಮನೆ ಯೋಚನೆ ಬರುವುದು ಸಹಜ, ಆದ್ದರಿಂದ ಆರು ವಾರಕ್ಕೆ ಮೀರಿ ಅಲ್ಲಿರುವುದು ನಮಗೆ ಕಷ್ಟವೇ . ಪುನಃ ಈ ವರ್ಷ ಬೆಂಗಳೂರಿಗೆ ಹೋಗುವ ನಿರೀಕ್ಷೆ ಇದೆ.
ರಾಮಮೂರ್ತಿ
ಬೇಸಿಂಗ್ ಸ್ಟೋಕ್
ನನಗನ್ನಿಸುವಂತೆ ಅನಿವಾಸಿಯ ಬಳಗದ ಸದಸ್ಯರೆಲ್ಲರ (ಹೆಚ್ಚು-ಕಮ್ಮಿ ಎಲ್ಲರ ಅನ್ನೋಣವೇ?) ಜೀವನ ಕಾಲದಲ್ಲಿ ಇದು ಮೊದಲನೆಯ ಸಿಂಹಾಸನಾರೋಹಣ, ಈ ಶನಿವಾರ ಅಂದರೆ ನಾಳೆ 2023 ರ ಮೇ 6 ರಂದು ಜರುಗಲಿದೆ. ಕಳೆದ 70 ವರ್ಷಗಳಿಂದ ರಾಜಕುಮಾರನಾಗಿಯೇ ಉಳಿದಿದ್ದ ಚಾರ್ಲ್ಸ್, 7 ತಿಂಗಳ ಹಿಂದೆ ರಾಣಿ ಎಲಿಜಬೆತ್ ರ ಮರಣಾನಂತರ ರಾಜನಾದರೂ, ಈ ವಾರದ ಕೊನೆಯಲ್ಲಿ ಅಧಿಕೃತ ಸಮಾರಂಭದಲ್ಲಿ ಪತ್ನಿ ಕಮಿಲಾರೊಂದಿಗೆ ಸಿಂಹಾಸನವನ್ನು ಏರಲಿದ್ದಾರೆ. 53 ಕ್ಕೂ ಹೆಚ್ಚು ಅವಧಿಯ ತಮ್ಮ ಅಪ್ರೆಂಟಿಸ್ ಅನುಭವವನ್ನು ವೃತ್ತಿಯಲ್ಲಿ ಯಶಸ್ವಿಯಾಗಿ ಬಳಸುವ ಅವಕಾಶ ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಅನಿವಾಸಿ ಬಳಗದ “ಡೇವಿಡ್ ಬೇಯ್ಲಿ” ಹವ್ಯಾಸಿ ಛಾಯಾಗ್ರಾಹಕರೊಬ್ಬರು, ಸುಮಾರು ಅರ್ಧ ಶತಮಾನದ ಹಿಂದೆ ತಾವು ಕಿಂಗ್ ಚಾರ್ಲ್ಸ್ ಅವರ ಜೀವನದ ಒಂದು ಭಾಗದಲ್ಲಿ ಹೇಗೆ ಹಾಯ್ದು ಬಂದರೆಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಓದುಗರಲ್ಲೂ ಹಲವರು ಈರೀತಿಯ ಅನುಭವಗಳ ಪಟ್ಟಿಮಾಡುವವರಿರಬಹುದು – ದಯವಿಟ್ಟು ಪ್ರತಿಕ್ರಿಯೆ ಬರೆದು ನಮ್ಮೊಂದಿಗೆ ಹಂಚಿಕೊಳ್ಳಿ.
ಮೊದಲಿಗೆ ರಾಜ ಚಾರ್ಲ್ಸ್ ರ ಜೀವನಕಾಲದ ಒಂದು ಝಲಕನ್ನು ನೋಡೋಣ. ಹಲವಾರು ಅಂತರ್ಜಾಲ ತಾಣಗಳು ಈ ಚಿಕ್ಕ ಬರಹದ ಸಾಮಗ್ರಿ ಒದಗಿಸಿದ ಮೂಲಗಳು – royal.uk, britroyals.com, theguardian.com, smithsonianassociates.org ಇತ್ಯಾದಿ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ)
ಮೂರನೆಯ ಚಾರ್ಲ್ಸ್ - ಕಿಂಗ್ ಚಾರ್ಲ್ಸ್ ದ ಥರ್ಡ್
ಜನಪ್ರಿಯ ರಾಣಿ ಎರಡನೆಯ ಎಲಿಜಬೆತ್ ಹಾಗೂ ರಾಜಕುಮಾರ ಫಿಲಿಪ್ (ಡ್ಯೂಕ್ ಆಫ಼ ಎಡಿನ್ಬರಾ) ಇವರ ಮೊದಲ ಮಗ.
ಸ್ಕಾಟ್ಲಂಡಿನಲ್ಲಿ ಮತ್ತು ಕೇಂಬ್ರಿಜ್ ನ ಟ್ರಿನಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸ.
ಜುಲೈ 1, 1969 ರಂದು ಪ್ರಿನ್ಸ್ ಆಫ್ ವೇಲ್ಸ್ ಪದವಿ. ಅಲ್ಲಿಂದ ಕೇಂಬ್ರಿಜ್ ಹಾಗೂ ರಾಯಲ್ ವಿಮಾನ ದಳದಲ್ಲಿ ಕಲಿಕೆ. 1971 ರಲ್ಲಿ ಅವರ ತಂದೆ ಹಾಗೂ ತಾತನ ಹೆಜ್ಜೆಗಳನ್ನನುಸರಿಸಿ, ನೌಕಾದಳಕ್ಕೆ ಸೇರಿಕೆ.
1981 ರ ಜುಲೈ 29ರಂದು ಡಯಾನಾ ಅವರೊಂದಿಗೆ ಮದುವೆ. ಅವರ ವೈವಾಹಿಕ ಜೀವನ ಹಲವು ಏರುಪೇರುಗಳಿಂದ ಕೂಡಿದ್ದು, 1993ರಲ್ಲಿ ಅವರಿಬ್ಬರ ಬೇರ್ಪಡುವಿಕೆಯಲ್ಲಿ ಕೊನೆಗೊಂಡಿತು. 2005 ರಲ್ಲಿ ಚಾರ್ಲ್ಸ್ ಮತ್ತೆ ಕಮಿಲಾ ಅವರನ್ನು ಮದುವೆಯಾದರು.
ರಾಜನಾಗುವ ಮೊದಲಿನಿಂದಲೂ ಚಾರ್ಲ್ಸ್ ಸೈನ್ಯದ, ಸೈನಿಕರ ಜೊತೆಯ ತಮ್ಮ ಬಾಂಧವ್ಯವನ್ನು ಗಟ್ಟಿಯಾಗಿ ಇಟ್ಟುಕೊಂಡಿದ್ದಾರೆ. ಹಲವಾರು ಚಾರಿಟಬಲ್ ಸಂಸ್ಥೆಗಳ ಪೋಷಕನಾಗಿ, ಅವುಗಳ ಕೆಲಸವನ್ನು ಪ್ರೋತ್ಸಾಹಿಸಿಕೊಂಡು ಬಂದಿದ್ದಾರೆ. ವೇಲ್ಸ್ ಹಾಗೂ ಸ್ಕಾಟ್ಲಂಡ್ ಗಳ ಮೇಲಿನ ಅವರ ಪ್ರೀತಿ ಸುಲಭವಾಗಿ ಕಂಡುಬರುವಂಥದ್ದು. ಇವೆಲ್ಲದರೊಂದಿಗೆ ಚಾರ್ಲ್ಸ್ ರ ನಿಸರ್ಗ ಪ್ರೇಮ, ಅವರನ್ನು ಹಲವಾರು ಜಾಗತಿಕ ಹಾಗೂ ಸ್ಥಳೀಯ ಸವಾಲುಗಳೊಂದಿಗೆ ಸೆಣಸುವ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿಸಿದೆ. ಸುಸ್ಥಿರ ಭವಿಷ್ಯ (sustainable future), ಅಭಿವೃದ್ಧಿಗಾಗಿ ಅವರ ಹೋರಾಟ ಮುಂದುವರೆದಿದೆ.
ಮೂರನೆಯ ಚಾರ್ಲ್ಸ್, ಯುನೈಟೆಡ್ ಕಿಂಗ್ಡಮ್ ನ 22ನೆಯ ಸಿಂಹಾಸನಾಧೀಶ / ರಾಜ. ಮುತ್ತಾತ ಐದನೆಯ ಜಾರ್ಜ್ ರಿಂದ ಸ್ಥಾಪಿತವಾದ ವಿಂಡ್ಸರ್ ಮನೆತನದ 6ನೇ ರಾಜ. ಆಸ್ಟ್ರೇಲಿಯಾ, ನ್ಯೂಜಿಲಂಡ್, ಕೆನಡಾ ಸೇರಿದಂತೆ 16 ದೇಶಗಳ ರಾಜಪಟ್ಟ (ನೇರ ಆಡಳಿತವಿಲ್ಲದ ಸ್ವತಂತ್ರ ದೇಶಗಳು). 54 ಸ್ವತಂತ್ರ ದೇಶಗಳ ಸದಸ್ಯತ್ವದ ಕಾಮನ್ ವೆಲ್ತ್ ಕೂಟದ ಮುಖ್ಯಸ್ಥ.
ಅತ್ಯಂತ ಜನಪ್ರಿಯ ರಾಣಿಯಾಗಿ 70 ವರ್ಷಕ್ಕೂ ಹೆಚ್ಚು ಕಾಲ ಇಲ್ಲ-ಸಲ್ಲದ ಕಾಂಟ್ರೋವರ್ಸಿಗಳಿಲ್ಲದೇ ’ರಾಜ್ಯಭಾರ’ ಮಾಡಿದ ಎರಡನೆಯ ಎಲಿಜಬೆತ್ ರಾಣಿಯ ಉತ್ತರಾಧಿಕಾರಿಯಾಗಿ ಸಿಂಹಾಸನವನ್ನೇರುವುದು ಸುಲಭದ ಮಾತಲ್ಲ. ಹಾಗೆಯೇ ಸುರಳೀತವಾಗಿ ಹೊಸ ರಾಜನ ರಾಜ್ಯಾಡಳಿತವೂ ನಡೆಯಲೆಂದು ಹಾರೈಸೋಣ.
-ಲಕ್ಷ್ಮೀನಾರಾಯಣ ಗುಡೂರ.
ನಾನು ರಾಯಲ್ ಫೋಟೋಗ್ರಾಫರ್ (ಅನಧಿಕೃತ) ಆದ ದಿನ! - ಡಾ. ಶ್ರೀವತ್ಸ ದೇಸಾಯಿ
ಇದೇ ವಾರ ಲಂಡನ್ನಿನಲ್ಲಿ ಮೂರನೆಯ ಕಿಂಗ್ ಚಾರ್ಲ್ಸ್ ನ ಪಟ್ಟಾಭಿಷೇಕ ನಡೆಯಲಿದೆ. ರಾಣಿ ಎಲಿಝಬೆತ್ ಪಟ್ಟಕ್ಕೇರಿದ ವರ್ಷ
1952. ಆಗ ನಾಲ್ಕು ವರ್ಷದವನಾಗಿದ್ದ ಆತ ಈ ದಿನಕ್ಕಾಗಿ ಎಪ್ಪತ್ತು ವರ್ಷಗಳೇ ಕಾಯ್ದಿರ ಬಹುದು. ಆತನ ’ಹೆಡ್ ಅಂಡ್
ಶೋಲ್ಡರ್’ ಫೋಟೋ ತೆಗೆದು ನನ್ನನ್ನೊಬ್ಬ ಅನಧಿಕೃತ ಫೋಟೋಗ್ರಾಫರ್ ಅಂತ ನಾನೇ ಅಂದುಕೊಳ್ಳುತ್ತ ನಾನು 45
ವರ್ಷಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದೇನೆ ಅಂದರೆ ಬರೀ ಉಡಾಫೆ ಅಂದುಕೊಳ್ಳದೆ ಆ ಕಥೆಯನ್ನು ಕೇಳಿ ಆಮೇಲೆ ಹೇಳಿರಿ!
ರೆಡ್ ಲೆಟ್ಟರ್ ಡೇ, ಜೂಲೈ, 1978.
ಹದಿನೈದನೆಯ ಶತಮಾನದಿಂದಲೂ ಹಬ್ಬದ ದಿನಗಳ ಪ್ರಥಮಾಕ್ಷರವನ್ನು ಕೆಲೆಂಡರಿನಲ್ಲಿ ಕೆಂಪು ಅಕ್ಷರಗಳಿಂದ ಮುದ್ರಿಸುವ ಈ ರೀತಿಯ ಪರಿಪಾಠ ಪ್ರಿಂಟರ್ ವಿಲಿಯಮ್ ಕ್ಯಾಕ್ಸ್ಟನ್ ಶುರುಮಾಡಿದ ಕಾಲದಿಂದ ಬಂದಿದೆ ಅಂತ ಪ್ರತೀತಿ.
ನನ್ನ ಪಾಲಿಗೆ ಆ ದಿನ ಅಂಥದೊಂದು ದಿನ. ಒಂದು ಕೆಂಪು ಹೆಲಿಕಾಪ್ಟರನ್ನು ತಾನೇ ಪೈಲಟ್ ಆಗಿ ನಡೆಸಿಕೊಂಡು ಯು ಕೆ ನ ವೇಲ್ಸ್ ಪ್ರಾಂತದ ಮರ್ಥರ್ ತಿಡ್ಫಿಲ್ ಎನ್ನುವ ಊರಿನ ’ಪ್ರಿನ್ಸ್ ಚಾರ್ಲ್ಸ್ ಆಸ್ಪತ್ರೆ’ಯ ಖಾಲಿ ಕಾರ್ ಪಾರ್ಕಿನಲ್ಲಿ ಬಂದಿಳಿದಾಗ ರೆಡ್ ಲೆಟ್ಟರ್ ಡೇ ಆಯಿತು. ಅಷ್ಟೇ ಏಕೆ, ಆತನ ಹೆಸರಿನಲ್ಲಿ ನಾಮಕರಣವಾಗಿ ಅದನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿಸಿದ ಆಸ್ಪತ್ರೆಯ ಸಿಬ್ಬಂದಿ ಮತ್ತು ಅಲ್ಲಿ ನೆರೆದ ನೂರಾರು ಜನರಿಗೂ ಅದು ಮರೆಯಲಾರದ ದಿನ. ಆಗ ಮೋಬೈಲ್ ಕ್ಯಾಮರಾಗಳು ಹುಟ್ಟಿರಲಿಲ್ಲ. ಅದೇ ಆಸ್ಪತ್ರೆಯಲ್ಲಿ ಎರಡು ವರ್ಷಗಳಿಂದ ಜೂನಿಯರ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನಾನು ಒಂದು ಹಳೆಯ ಮಾದರಿಯ ಅಶಾಯಿ ಪೆಂಟಾಕ್ಸ್ Asahi Pentax ಕ್ಯಾಮರಾ ಹಿಡಿದು ಆತನ ಒಂದು ಚಿತ್ರವನ್ನಾದರೂ ಸೆರೆ ಹಿಡಿಯಲು ಕಾತುರನಾಗಿದ್ದೆ. ರಾಜ ಕುಮಾರ ಅಂದ ಮೇಲೆ ಸಾಕಷ್ಟು ಸೆಕ್ಯೂರಿಟಿ ಇತ್ತಾದರೂ ಈಗಿನಷ್ಟು ಇರಲಿಲ್ಲ. ಆದರೂ ನಿಯಮಾವಳಿಗಳ (protocol) ಪ್ರಕಾರ ಫ್ಲಾಷ್ ಫೋಟೋಗೆ ಕಡ್ಡಾಯವಾಗಿ ನಿಷೇಧ. ಅದು ನನಗೆ ಸ್ವಲ್ಪ ನಿರಾಶೆಯನ್ನುಂಟು ಮಾಡಿದರೂ ನನ್ನ ಅದೃಷ್ಟವನ್ನು ಪರೀಕ್ಷಿಸಲು
ಸಿದ್ಧನಾದೆ.
ನನಗೂ ಫೋಟೋಗ್ರಾಫಿಗೂ ಅಂಟಿದ ನಂಟು ...
ಎಲಿಝಬೆತ್ ರಾಣಿ ಪಟ್ಟಕ್ಕೆ ಬಂದಾಗ ನಾವು ಊಟಿಯಲ್ಲಿ ವಾಸಿಸುತ್ತಿದ್ದೆವು. ಆಗ ನನಗೆ ಆರುವರ್ಷ, ನನ್ನ ಅಣ್ಣನಿಗೆ ಎಂಟು
ವರ್ಷ ವಯಸ್ಸಿರಬಹುದು. ನಮಗೆ ಮೊದಲಿನಿಂದಲೂ ಫೋಟೋ ತೆಗೆಯ ಬೇಕೆಂದು ತವಕ. ನನ್ನಣ್ಣ ಮತ್ತು ನಾನು ತಂದೆಯವರಿಗೆ
ಕಾಡಿ, ಬೇಡಿ ಒಂದು ಫುಲ್ ವ್ಯೂ ಕ್ಯಾಮರವನ್ನು ಅದೇ ಸಮಯಕ್ಕೆ ಗಿಟ್ಟಿಸಿದ್ದೆವು. ಆಗ ಬ್ಲಾಕ್ ಅಂಡ ವೈಟ್ ಫೋಟೊ ತೆಗೆದು,
ಊರಲ್ಲಿದ್ದ ಒಂದೇ ಸ್ಟೂಡಿಯೋಗೆ ಕೊಟ್ಟು, ’ತೊಳೆಸಿ’ ಪ್ರಿಂಟ್ ಮಾಡಿಸಿದ ನೆನಪು ಇನ್ನೂ ಹಸಿರಾಗಿದೆ. ಆಮೇಲೆ ಕಾಲೇಜಿಗೆ
ಬಂದಾಗ ನನ್ನ ಮಿತ್ರನೊಡನೆ ಸೇರಿ ನಾವೇ ಪ್ರಿಂಟ್ ಮಾಡಿದ್ದೂ ಇದೆ. ನಂತರ ಈಗ ಡಿಜಿಟಲ್ ಯುಗ ಬಂದಾಗಿನಿಂದ ಎಲ್ಲರಂತೆ
ನಾನೂ ಒಬ್ಬ ಡೇವಿಡ್ ಬೇಯ್ಲಿ, ಅಥವಾ ಕ್ರಿಸ್ ಜಾಕ್ಸನ್ ಅನ್ನುವ ಭ್ರಮೆಯಲ್ಲಿದ್ದೇನೆ!
ಲೈಬ್ರರಿಯಲ್ಲಿ ರಾಜನ ಭೇಟಿ
ಇಂಗ್ಲಿಷ್ ನಿಘಂಟು ಬರೆದು ಪ್ರಸಿದ್ಧರಾದ ಡಾ ಸಾಮ್ಯುಎಲ್ ಜಾನ್ಸನ್ ಅವರನ್ನು ಮೂರನೆಯ ಜಾರ್ಜ್ ಅವರು ತಮ್ಮ
ಇಚ್ಛೆಯಂತೆ ರಾಣಿಯ ಲೈಬ್ರರಿಯಲ್ಲಿ 1767 ರಲ್ಲಿ ಭೆಟ್ಟಿಯಾಗಿದ್ದರು ಅಂತ ಓದಿದ ನೆನಪು. ಅದನ್ನೇ ನೆನಪಿಸುವ ಅಂದಿನ
ಘಟನೆ. ಆಗ ನಾನು ಅದೇ ಆಸ್ಪತ್ರೆಯಲ್ಲಿ ಕನ್ಸಲ್ಟಂಟ್ ಆಗಿ ಕೆಲಸ ಮಾಡುತ್ತಿದ್ದ ಡಾ ಲಾಲಾ ಎನ್ನುವ ಕಣ್ಣಿನ ತಜ್ಞರ ಕೆಳಗೆ ಕೆಲಸ
ಮಾಡುತ್ತಿದ್ದೆ. ಅವರು ಆ ದಿನ ಆಗ ಪ್ರಿನ್ಸ್ ಎಂದೇ ಕರೆಯಲಾಗುತ್ತಿದ್ದ ಚಾರ್ಲ್ಸ್ ಅವರನ್ನು ಭೇಟಿ ಮಾಡಲು ಇಚ್ಛಿಸಿದ್ದರು.
ಅದಕ್ಕೆ ಆಸ್ಪತ್ರೆಯ ಅಧಿಕಾರಿಗಳೂ ಒಪ್ಪಿದ್ದರು. ಅವರ ಜೊತೆಗೆ ನಾನೂ ಸೇರಿಕೊಳ್ಳಲೇ ಎಂದು ಹೊಂಚು ಹಾಕಿದ್ದು ಫಲಿಸಲಿಲ್ಲ.
ಪ್ರೋಟೋಕಾಲ್ ಅಂತ ಅಧಿಕಾರಿಗಳು ಅದೇ ಕೋಣೆಯಲ್ಲಿರಲು ಸಮ್ಮತಿಸಲಿಲ್ಲ.
ಅಂತೂ ಸಿಕ್ಕಿತು ಅವಕಾಶ
ನಂತರ ಹಿಸ್ ರಾಯಲ್ ಹೈನೆಸ್ ಪ್ರಿನ್ಸ್ ಚಾರ್ಲ್ಸ್ ’ತಮ್ಮ’ ಹೆಸರಿನ ಆಸ್ಪತ್ರೆಯ ವಿವಿಧ ಭಾಗಗಳಿಗೆ ಭೇಟಿಕೊಡಲು ಸುತ್ತಿತ್ತುರುವಾಗ ಅವರ ಹಿಂದೆ ’ಆಂಟೂರಾಜ್’ ಜೊತೆಗೆ ಸೇರಿಕೊಂಡು ಒಂದು ಕೋಣೆಯಲ್ಲಿ ಕೆಲವು ಡಾಕ್ಟರರು ಮತ್ತು ನರ್ಸ್ಗಳು ಸಾಲಾಗಿ ನಿಂತಿದ್ದನ್ನು ನೋಡಿ, ಅವರ ಹಿಂದಿನ ಸಾಲಿನಲ್ಲಿ ಆಯಕಟ್ಟಿನ ಸ್ಥಳದಲ್ಲಿ ನಿಂತುಕೊಂಡೆ. ನಮ್ಮ ಎದುರಿಗೆ ಮೂರೇ ಅಡಿ ದೂರದಲ್ಲಿ ಒಬ್ಬೊಬ್ಬರನ್ನಾಗಿ ವಿಚಾರಿಸುತ್ತ ಮಾತಾಡಿಸುತ್ತ ಬಂದ ಚಾರ್ಲ್ಸ್ ಅವರನ್ನು ಫೋಕಸ್ ಮಾಡಿ ತಲೆ ಮತ್ತು ಭುಜಗಳು (head and shoulder) ಇಷ್ಟೇ ಕಾಣಿಸುವಂಥ ನಾಲ್ಕೈದು ’ಪೋರ್ಟ್ರೇಟ್’ ಫೋಟೋಗಳನ್ನು ಕ್ಲಿಕ್ಕಿಸಿದೆ. ಆಗ ಡಿಜಿಟಲ್ ಕ್ಯಾಮರಾಗಳ ಆವಿಷ್ಕಾರ ಆಗಿದ್ದಿಲ್ಲ. ನೆಗೆಟಿವ್ ಗಾಗಿ ಫಿಲ್ಮ್ ಗಳನ್ನು ಕಂಪನಿಗೆ ಕಳಿಸಿ ಪೋಸ್ಟಿನಲ್ಲಿ ಪ್ರಿಂಟ್ ಬರುವ ವರೆಗೆ ಪ್ರಸೂತಿ ವೇದನೆ! ಎರಡು ವಾರಗಳ ನಂತರ ಪೋಸ್ಟ್ಮನ್ ಬಂದಾಗ ’ಹೆಣ್ಣೋ ಗಂಡೋ’ ಅಂತ ಕುತೂಹಲದಿಂದ ಮತ್ತು ಅವಸರದಿಂದ ಕವರನ್ನು ಬಿಚ್ಚಿ ನೋಡಿದೆ. ಫ್ಲಾಷ್ ಇಲ್ಲ ಅಂತ 1/15 ಸೆಕೆಂಡುಗಳ ಎಕ್ಸ್ ಪೋಶರ್ ಕೊಟ್ಟಿದ್ದೆ. ಒಂದೇ ಒಂದು ಫೋಟೋ ಮಾತ್ರ ಅವರದೇ ಅನ್ನುವಷ್ಟಾದರೂ ಸ್ಪಷ್ಟವಾಗಿ ಕಾಣಿಸುವಂತಿತ್ತು. ನನಗೆ ಸ್ವರ್ಗ ಮೂರೇ ಗೇಣು! ಒಂದು ಕಾಲದಲ್ಲಿ ಆತ ಕಿಂಗ್ ಆಗುವ ದಿನವನ್ನೇ ಕಾಯುತ್ತಿದ್ದೇನೆ ಇಂದಿನ ವರೆಗೆ! ಇನ್ನುಳಿದ snaps ಕುದುರೆ ರೇಸಿನಲ್ಲಿ ಹೇಳುವಂತೆ 'also ran' ಅನ್ನುವ ಲೆಕ್ಕಕ್ಕಿಲ್ಲದವು! ಹೋಗಲಿ ಬಿಡಿ. ಆ ‘ಐತಿಹಾಸಿಕ' ಫೋಟೋ ಬಲಗಡೆ ಕೊಟ್ಟಿದೆ, ನಿಮಗಾಗಿ!(Credit: Monochrome editing by Nigel Burkinshaw)
ರೈಟ್ ರಾಯಲ್ ಖುಶಿ!
ಆ ಫೋಟೋವನ್ನು ಎನ್ಲಾರ್ಜ್ ಮಾಡಿಸಿ, ಪೋಸ್ಟರ್ ಮಾಡಿಸಿ ನನ್ನ ಡಿಪಾರ್ಟ್ಮೆಂಟಿನಲ್ಲಿ ಇಟ್ಟಿದ್ದೆ. 1978 ರಲ್ಲಿ ಆ ಊರು ಬಿಟ್ಟು ಬಂದೆ. ಈಗ ಆ ದೊಡ್ಡ ಫೋಟೋದ ಗತಿ ಏನಾಯಿತು ಗೊತ್ತಿಲ್ಲ. ಆ ನೆಗಟಿವ್ ಮಾತ್ರ ಇನ್ನೂ ನನ್ನ ಹತ್ತಿರ ಇದೆ. ರಾಯಲ್ ಗ್ರಾಂಟ್ ಅಂತ ಒಂದು ’ಪದವಿ’ ಸಿಗುವದು ಅಷ್ಟು ಸುಲಭವಲ್ಲ. ಆ ಫೋಟೋದ ಒಂದು ಪ್ರತಿಯನ್ನು ’ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್’ ಲಂಡನ್ ಅಂತ ಹೆಮ್ಮೆಯಿಂದ ಕಳಿಸಿದ್ದು ಏನಾಯಿತೋ ಗೊತ್ತಿಲ್ಲ. ಆದರೆ ಈ ವರ್ಷದ ವರೆಗೆ ಕಾಯ್ದಿದ್ದ ನನಗೆ ಆ ಫೋಟೋ ಕ್ಲಿಕ್ಕಿಸಿದ ದಿನವನ್ನು ನೆನೆದು ಮೈ ಪುಳಕಿತವಾಗುತ್ತಿದೆ! ನನ್ನ ಅತ್ಯಂತ ಅದೃಷ್ಟದ ಫೋಟೋ ಅದು ಅಂತ ನೀವೂ ಒಪ್ಪ ಬಹುದೆಂದು ಊಹಿಸುತ್ತೇನೆ! ಅದಕ್ಕೆ ನನ್ನ ಕಾಪಿರೈಟಿದೆ, ಎಚ್ಚರಿಕೆ!
ಶ್ರೀವತ್ಸ ದೇಸಾಯಿ
ಡೋಂಕಾಸ್ಟರ್, ಯಾರ್ಕ್ ಶೈರ್, ಯು ಕೆ.
(ಫೋಟೋಗಳೆಲ್ಲ ಲೇಖಕರು ಕ್ಲಿಕ್ಕಿಸಿದ್ದು. Copyright reserved.)
(ಇದೇ ವಾರದ ಕನ್ನಡ ಪ್ರಭ ಎನ್ ಆರ್ ಐ ಆವೃತ್ತಿಯಲ್ಲಿ ಪ್ರಕಟವಾದ ನನ್ನ ಲೇಖನದ ಪರಿಷ್ಕೃತ ರೂಪ)
ಪ್ರಿಯ ಓದುಗರೆ ಅನಿವಾಸಿಯ ಕಟ್ಟೆಯಲ್ಲಿ ಮತ್ತೊಮ್ಮೆ ಹರಟೆಯನ್ನು ಹೊಡೆಯುವ ಪ್ರಯತ್ನವನ್ನು ಮಾಡಿರುವೆ . ಕಟ್ಟೆ ಹಳೆಯದಾದರೇನು ಹರಟೆಯ ವಿಷಯ ಮಾತ್ರ ಹೊಸದು . ರುಚಿಯಾದ ಊಟ , ಮಲಗಲು ಒಂದು ಹಾಸಿಗೆ , ಸವಿಯಾದ ನಿದ್ದೆ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ - ಎಂದು ಸರ್ವಜ್ಞನು ಹೇಳಿರಬಹುದಾಗಿತ್ತೇನೋ ? ಇವು ಮೂರು ಯಾರಿಗೆ ಇಷ್ಟವಿಲ್ಲ? ಅದರಲ್ಲೂ ಸವಿಯಾದ ನಿದ್ದೆಯಲ್ಲಿ ಸವಿಗನಸು ಕಾಣುವ ಮಜಾನೆ ಬೇರೆ . ನಿದ್ದೆಯ ಕುರಿತು ನನ್ನ ಪ್ರಾಥಮಿಕ ಶಾಲೆಯಿಂದ ಇಲ್ಲಿಯವರೆಗಿನ ಅನುಭವಗಳು ವಿಶಿಷ್ಟವಾಗಿದ್ದು , ಆ ಘಟನೆಗಳ ನೆನಪುಗಳನ್ನು ಆಗಾಗ್ಗೆ ಮೆಲಕಿಸಿಕೊಂಡು , ನನ್ನಷ್ಟಕ್ಕೆ ನಾನೇ ಎಷ್ಟೋ ಸಲ ನಕ್ಕಿದ್ದುಂಟು . ಆ ಮೆಲಕುಗಳನ್ನು ಹರಟೆಯ ರೂಪದಲ್ಲಿ ನಿಮ್ಮ ಮುಂದೆ ಇಡಲು ಪ್ರಯತ್ನಿಸಿರುವೆ .ಬನ್ನಿ ಸಾಧ್ಯವಾದರೆ ಓದಿ , ಹಾಗೆಯೇ ನಿಮ್ಮ ಅನಿಸಿಕೆಯನ್ನು ಗೀಚಲು ಮರೆಯದಿರಿ . ---- ಇಂತಿ ನಿಮ್ಮ ಸಂಪಾದಕ
“ಹೊಟ್ಟೆ ತುಂಬ ಊಟ ಮಾಡು , ಕಣ್ಣು ತುಂಬಾ ನಿದ್ದೆ ಮಾಡು ಆಯುಷ್ಯ ಘಟ್ಟಿಯಾಗುತ್ತೆ “ಎಂದು ವೈದ್ಯರು ಮತ್ತು ಹಿರಿಯರು ಉಪದೇಶ ಮಾಡುವದು ಹೊಸದೇನು ಅಲ್ಲ . ಸರಿಯಾದ ಊಟ ಮತ್ತು ನಿದ್ದೆ ಉತ್ತಮ ಆರೋಗ್ಯಕ್ಕೆ ಮೂಲ ಮಂತ್ರ .ಆದರೆ ಅವರವರ ಭಾವಕ್ಕೆ — ಅವರವರ ಮನಸಿಗೆ ತಕ್ಕಂತೆ , ಇದಕ್ಕೆ ತಮ್ಮದೇ ಆದ ಅರ್ಥವನ್ನು ಹುಡಿಕಿಕೊಂಡವರಿಗೆ ಏನೂ ಕೊರತೆಯಿಲ್ಲ . ಕೆಲವರು ಬದುಕುವದಕ್ಕಾಗಿ ತಿನ್ನುವವರಿದ್ದರೆ ಇನ್ನು ಕೆಲವರು ತಿನ್ನುವದಕ್ಕಾಗಿಯೇ ಬದುಕುವದುಂಟು . ಪರ್ಯಾಯವಾಗಿ ಕೆಲವರು ಬದಕುವದಕ್ಕಾಗಿ ನಿದ್ದೆ ಮಾಡಿದರೆ ಇನ್ನೂ ಕೆಲವರು ನಿದ್ದೆ ಮಾಡುವದಕ್ಕೆಂದೇ ಬದುಕುವದುಂಟು . ಊಟ ಮಾಡುವ ಪರಿಯಲ್ಲಿ ಎಷ್ಟೊಂದು ವೈವಿಧ್ಯತೆ ಇದೆಯೋ ಹಾಗೆಯೇ ನಿದ್ದೆ ಮಾಡುವ ರೀತಿಯಲ್ಲೂ ವಿಭಿನ್ನ ವಿವಿಧತೆ ಉಂಟು . ಮಲಗಿ ನಿದ್ದೆ ಮಾಡುವದು ಸಹಜವಾದರೂ , ಕೆಲವರು ಕುಳಿತಲ್ಲಿಯೇ ನಿದ್ದೆ ಮಾಡಿ ಖುಷಿ ಪಡುವದುಂಟು . ಇಷ್ಟೇ ಸಾಲದೆಂದು ಇನ್ನು ಕೆಲವರು ನಿಂತು ನಿದ್ದೆ ಮಾಡಿದರೆ , ಕೆಲವರಂತೂ ಅಡ್ಡಾಡಿಕೊಂಡೇ ನಿದ್ದೆ ಮಾಡಿ ತಾವು ಎಲ್ಲರಿಗಿಂತಲೂ ವಿಭಿನ್ನವೆಂದು ತೋರಿಸುವದುಂಟು . ಒಟ್ಟಿನಲ್ಲಿ ನಾದಮಯಾ — ಅಲ್ಲಲ್ಲ ಕ್ಷಮಿಸಿ , ನಿದ್ದೆಮಯಾ —– ಈ ಲೋಕವೆಲ್ಲಾ . ಅಚ್ಚು ಕಟ್ಟಾದ ಹಾಸಿಗೆಯ ಮೇಲೆ ತಮಗೆ ಅನುಕೂಲವಾದ ಭಂಗಿಯಲ್ಲಿ ಎಂದರೆ – ಅಡ್ಡಬಿದ್ದು , ಡಬ್ಬು ಬಿದ್ದು , ಚಿತ್ತ ಬಿದ್ದು ಮಲಗುವವರು ಸಹಜವಾಗಿ ಸಿಗುತ್ತಾರೆ . ‘ಅಚ್ಚು ಕಟ್ಟಾದ ಹಾಸಿಗೆ’ ಯ ಪದವನ್ನು ಅವರವರ ಭಾವನೆಯಂತೆ ಅರ್ಥೈಯ್ಯಿಸಬಹುದು . ಬಡವರಿಗೆ ನೆಲದ ಮೇಲಿನ ಚಾಪೆಯೇ ಅಚ್ಚು ಕಟ್ಟಾದರೆ , ಬಲ್ಲಿದರಿಗೆ ಅಲಂಕೃತ ಮಂಚ ಅಚ್ಚು ಕಟ್ಟಾಗಬಹುದು . ದುರದೃಷ್ಟವಶಾತ್ ಕೆಲವು ಬಲ್ಲಿದರಿಗೆ ಮಂಚ ಇದ್ದರೂ ಬೊಜ್ಜಿನ ಬಾಧೆಯಿಂದಲೋ , ಸೊಂಟದ ನೋವಿನಿಂದಲೋ ಚಾಪೆಯೇ ಗತಿಯಾಗುವದು ಬೇರೆ ವಿಷಯ ಬಿಡಿ . “ಹಲ್ಲಿದ್ದರೆ ಕಡಲೆ ಇಲ್ಲ , ಕಡಲೆಯಿದ್ದರೆ ಹಲ್ಲಿಲ್ಲ” ಎಂಬುವದು ನಿಜ ತಾನೇ ? ಕೆಲವರು ನಿಶ್ಚಿಂತೆಯಿಂದ ಶಾಂತವಾಗಿ ಮಲಗಿದರೆ ಇನ್ನೂ ಕೆಲವರು ಘೋರವಾದ ಗೊರಕೆಯನ್ನು ಹೊಡೆದು ಅಕ್ಕ ಪಕ್ಕದವರ , ಅಷ್ಟೇ ಏಕೆ ಮನೆ ಮಂದಿಯ ನಿದ್ದೆಯನ್ನೆಲ್ಲಾ ಹಾಳು ಮಾಡಿ ಸುಖ ಪಡುವದೂ ಉಂಟು . ಪತಿರಾಯನ ಗೊರಕೆಯ ಕಾಟವನ್ನು ತಾಳದೆ , ಗೊರಕೆಯನ್ನು ತಡೆಯುವ ಎಲ್ಲ ಉಪಾಯಗಳು ವಿಫಲವಾದಾಗ , ‘ ಸಾಕಪ್ಪಾ ಈ ಮಹಾರಾಯಣ ಸಹವಾಸವೆಂದು ‘ವಿವಾಹ ವಿಚ್ಛೇದನೆಗೆ ಮೊರೆ ಹೋದ ಹೆಂಗಳೆಯರಿಗೇನೂ ಕಡಿಮೆಯಿಲ್ಲ .
ಮಲಗಿ ನಿದ್ದೆ ಮಾಡುವವರದು ಈ ಕಥೆಯಾದರೆ ಇನ್ನು ಕುಳಿತು ನಿದ್ದೆ ಮಾಡುವವರ ವಿಷಯವೇ ಬೇರೆ ಬಿಡಿ . ನಾನು ನಮ್ಮ ಹಳ್ಳಿಯ ಪ್ರಾಥಮಿಕ ಶಾಲೆಯ ಮೂರನೆಯ ಕ್ಲಾಸಿನಲ್ಲಿ ಓದುವಾಗ ‘ಮೂಲಿಮನಿ ‘ ಮಾಸ್ತರರು ಅಂತ ಇದ್ದರು (ಈಗಲೂ ಇದ್ದಾರೆ ). ಅಂಕಿ ಮಗ್ಗಿಯನ್ನೇನೋ ಚನ್ನಾಗಿ ಹೇಳಿಕೊಡುತ್ತಿದ್ದರು ಎನ್ನಿ ! ಆದರೆ , ಅಷ್ಟೇ ಚನ್ನಾಗಿ ತರಗತಿಯಲ್ಲಿ ನಿದ್ದೆಯನ್ನೂ ಹೊಡೆಯುತ್ತಿದ್ದರು ಎಂಬುವದು ವಿಶೇಷ ವಿಷಯ . ಅರ್ಧ ಘಂಟೆಯವರೆಗೂಒಂದರಿಂದ ಇಪ್ಪತ್ತರವರೆಗಿನ ಮಗ್ಗಿಗಳನ್ನು ನಮ್ಮೆಲ್ಲರ ಬಾಯಿಯಿಂದ ಸರತಿಯ ಮೇಲೆ ಒದರಿಸಿ , ಕೊನೆಯ ಹುಡುಗ ಇಪ್ಪತ್ತಇಪ್ಪತ್ತಲೇ ನಾಕನೂರೋ —- ಅಂತ ಮುಗಿಸುವದರೊಳಗೆನೇ ನಿದ್ದೆ ಹೋಗಿ ಬಿಡುತ್ತಿದ್ದರು . ಹಳ್ಳಿಯ ಶಾಲೆಗಳಲ್ಲಿ ಮಕ್ಕಳು ಮಗ್ಗಿಯನ್ನು ಹೇಳುವ ಪರಿ ರಾಗ ಹಚ್ಚಿ ಹಾಡು ಹೇಳಿದಂತೆ ಇರುತಿತ್ತು ( ಈಗ ಹೇಗಿದೆ ಎಂದು ಗೊತ್ತಿಲ್ಲ) . ಅದರ ಇಂಪಿಗೆನೇ ಇವರಿಗೆ ನಿದ್ದೆ ಬರುತಿತ್ತೇನೋ ? ಎಂಬುದು ನನ್ನ ಈಗಿನ ಒಂದು ಅನುಮಾನಿತ ಶಂಕೆ . ಮೂಲಿಮನಿ ಮಾಸ್ತರರು ಕುರ್ಚಿಯ ಮೇಲೆ ಕಾಲು ಮುದುರಿಸಿಕೊಂಡು ಕುಳಿತು ನಿದ್ದೆ ಹೊಡೆಯಲು ಪ್ರಾರಂಭಿಸಿದರೆ ಲಂಗು ಲಗಾಮು ಇಲ್ಲದ ನಮಗೆಲ್ಲಾ ಖುಷಿಯೋ ಖುಷಿ . ನಮ್ಮೆಲ್ಲರ ಗುದ್ದಾಟ , ಕಿರುಚಾಟ , ಪರಚಾಟ , ಜಗಳಾಟ ಮತ್ತು ಅಳಲಾಟ ಕುರುಕ್ಷೇತ್ರದ ಯುದ್ಧಕ್ಕಿಂತಲೂ ಭಯಂಕರವಾಗಿರುತಿತ್ತು . ಆದರೂ ಇದರ ಕಿಂಚಿತ್ತೂ ಪರಿವೆ ಇಲ್ಲದೆ ಮಾಸ್ತರರ ನಿದ್ದೆ ಮುಂದುವರೆಯುತ್ತಿತ್ತು .ಕುಂಭಕರ್ಣನನ್ನು ಎಬ್ಬಿಸಲು ಅವನ ಪ್ರಜೆಗಳೆಷ್ಟು ಹರಸಾಹಸ ಮಾಡುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯವೇ , ಆದರೆ ನಾವೆಲ್ಲಾ ಅವರೆಲ್ಲರಿಗಿಂತ ಬಹಳೇ ಮೇಲು ಇದ್ದಿದ್ದೀವಿ ಎನ್ನಿ . ನಮ್ಮ ನಿರಂತರ ಗಲಾಟೆಯಿಂದ ಒಂದರ್ಧ ಘಂಟೆಯಲ್ಲಿ ಮಾಸ್ತರರನ್ನು ಎಬ್ಬಿಸುವಲ್ಲಿ ಸಫಲವಾಗುತಿದ್ದೆವು ಎಂಬುದು ಹೆಮ್ಮೆಯ ವಿಷಯ . ನಿದ್ದೆಯಿಂದ ಎದ್ದ ಮಾಸ್ತರರು ಟೇಬಲ್ ಮೇಲೆ ಇರುತ್ತಿದ್ದ ಬಡಿಗೆಯನ್ನೊಮ್ಮೆ ಕುಟ್ಟಿ ಮತ್ತೆ ಮಗ್ಗಿಯ ಸರದಿಗೆ ಹೋಗುತ್ತಿದ್ದರು. ಕಳೆದ ಸಲ ನಮ್ಮೂರಿಗೆ ಹೋದಾಗ ಮಾಸ್ತರರನ್ನು ಮಾತಾಡಿಸಿಕೊಂಡು ಬರೋಣವೆಂದು ಅವರ ಮನೆಗೆ ಹೋಗಿದ್ದೆ . ಕುಶಲೋಪಹಾರಿ ಮಾತುಗಳೆಲ್ಲ ಮುಗಿದ ಮೇಲೆ ಅವರೆಂದರು. ” ಯಾಕೋ ಶಂಕ್ರಪ್ಪ , ನಿದ್ದೀನ ಬರವಲ್ಲದು ಯಾವುದಾದ್ರೂ ಗುಳಿಗಿಯಿದ್ದರ ಬರದಕೊಡ್ ” ಎಂದು . ಅದಕ್ಕೆ ತಕ್ಷಣವೇ ನಾನಂದೆ ” ಗುರುಗೋಳ್ ಸಾಲ್ಯಾಗ ಇದ್ದಾಗ್ನ ನಿಮ್ಮ ಜನ್ಮ ಪೂರ್ತಿಯ ನಿದ್ದಿ ಮಾಡಿ ಮುಗಿಸಿ ಬಿಟ್ಟಿರಿ ಈಗ ಹ್ಯಾಂಗ್ ನಿದ್ದಿ ಬರಬೇಕು ?” ಎಂದು . ‘ ನಿನ್ನ ಕುಚೇಷ್ಟೆಯನ್ನು ಇನ್ನೂ ಬಿಟ್ಟಿಲ್ಲವೆಂದು’ ಬೈದುಕೊಂಡು ಹೋಗಿಬಿಟ್ಟರು .
ಇನ್ನು ಪ್ರಾಥಮಿಕ ಸಾಲಿ ಮುಗಿಸಿ ಮಾಧ್ಯಮಿಕ ಸಾಲಿಗೆ ಅಂತ ಬೈಲಹೊಂಗಲಕ್ಕೆ ಬಂದಾಗ ‘ಉಳ್ಳಾಗಡ್ಡಿ ‘ಅಂತ ಇಂಗ್ಲಿಷ್ ಮಾಸ್ತರರು ಸಿಕ್ಕಿದ್ದರು . ಅವರು ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿರಲಿಲ್ಲ ಬದಲು ಸ್ಟಾಫ್ ರೂಮಿನಲ್ಲಿ ಕುಳಿತು ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದರು . ಸುಮಾರು ಸಲ ಅವರಿಗೆ ಕ್ಲಾಸ್ ಇದ್ದದ್ದೇ ಗೊತ್ತಿರುತ್ತಿರಲಿಲ್ಲ . ನಾವೇ ಹೋಗಿ ಸೂಕ್ಷ್ಮ ಪ್ರಯತ್ನ ಮಾಡಿ ಎಬ್ಬಿಸಿಕೊಂಡು ಬರುತ್ತಿದ್ದೆವು . ಕಣ್ಣು ತಿಕ್ಕುತ್ತಾ ಬಂದರೂ , ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡಿ ಮಸ್ತ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು . ಪಾಠ ಮುಗಿದ ಮೇಲೆ ನಮ್ಮನ್ನು ಕುರಿತು “ನಿಮಗೆಲ್ಲಾ ವಿದ್ಯೆಯೇ ಜೀವನದ ಹೆಗ್ಗುರಿಯಾಗಬೇಕು ” ಎಂದು ಜೋರಾಗಿ ಹೇಳುತ್ತಿದ್ದರೆ , ಕಡೆಯ ಬೆಂಚಿನಲ್ಲಿ ಕುಳಿತ ಕಿಡಗೇಡಿಗಳು. ” ಸಾರ್ , ನಿದ್ದೆಯೇ ಜೀವನದ ಹೆಗ್ಗುರಿಯಾಗಬೇಕೆಂದು ” ಇನ್ನಷ್ಟು ಜೋರಾಗಿ ಕೂಗುತ್ತಿದ್ದರು . ಇದೇನು ಬರೀ ಗುರುಗಳ ಬಗ್ಗೆ ಇಷ್ಟೊಂದು ಬರೆಯುತ್ತಿದ್ದೀನಿ ಅಂತ ಬೇಜಾರು ಮಾಡಿಕೊಳ್ಳಬೇಡಿ . ಶಿಷ್ಯರೂ ಯಾವುದರಲ್ಲು ಕಡಿಮೆ ಇಲ್ಲ . ‘ ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ‘ ಅಂತ ದಾಸರು ಹೇಳಿಲ್ಲವೆ ? , ‘ಶಿಷ್ಯನು ಗುರುವನ್ನು ಮೀರಿಸಬೇಕೆಂದು’ ಎಷ್ಟೋ ಕಥೆಗಳಲ್ಲಿ ಸಾರಿಲ್ಲವೆ ? ಇದನ್ನು ಕಾಯಾ , ವಾಚಾ , ಮನಸಾ ಅಂತ ಪೂರೈಸುವ ಶಿಷ್ಯರ ಗುಂಪೂ ಬಹಳ ದೊಡ್ಡದುಂಟು .ಎಲ್ಲ ಕಾಲೇಜುಗಳ ಕೊಠಡಿಯ ಕೊನೆಯ ಬೆಂಚಿನಲ್ಲಿ ಈ ಗುಂಪು ಸಹಜವಾಗಿ ಸಿಗುವದುಂಟು . ನಾನೂ ಒಬ್ಬ ಆ ಗುಂಪಿನ ಸದಸ್ಯನೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ( ನಿಜವಾಗಿಯೂ ?). ಕರ್ನಾಟಕ ಕಾಲೇಜಿನಲ್ಲಿ ಪಿ ಯು ಸಿ ಓದುತ್ತಿರುವಾಗಿನ ಸಂದರ್ಭ . ಲಿಬರಲ್ ಹಾಸ್ಟೆಲಿನಲ್ಲಿದ್ದ ನಾವು ಎಂಟು ಜನ ಹುಡುಗರು ಬೆಳಿಗ್ಗೆ ಒಂಭತ್ತೂವರೆಗೆ , ಮೆಸ್ಸಿನಲ್ಲಿ ಹೊಟ್ಟೆತುಂಬ ತಿಂದು ಹತ್ತು ಘಂಟೆಗೆ ಕಾಲೇಜಿಗೆ ಹೋಗುತ್ತಿದ್ದೆವು . ಮೊದಲನೆಯದು ಇಂಗ್ಲಿಷ್ ಕ್ಲಾಸು . ಪ್ರೊಫೆಸರ್ ಮುಳಗುಂದ ಅವರು ‘ಚಾರ್ಲ್ಸ್ ಡಿಕ್ಷನ್ನ ‘ನ ‘ Great expectations’ ಕಾದಂಬರಿಯನ್ನು ಭಾವಪೂರ್ವಕವಾಗಿ ಚಿತ್ರಿಸುತ್ತಿದ್ದರೆ ,ಕೊನೆಯ ಬೆಂಚಿನಲ್ಲಿ ಕುಳಿತ ನಾವು ನಿದ್ರಾಲೋಕದಲ್ಲಿ ಮುಳುಗಿ ನಮ್ಮದೇ ಆದ ಹಗಲು ಕನಸು ಕಾಣುತ್ತಿದ್ದೆವು . ಕೊನೆಗೊಂದು ದಿನ ಪ್ರೊಫೆಸ್ಸರ್ ನಮ್ಮನ್ನೆಲ್ಲ ತಮ್ಮ ಕಚೇರಿಗೆ ಕರೆದು ” ನೀವು ನಿದ್ದೆ ಮಾಡದೆ ನನ್ನ ಪಾಠವನ್ನು ಕೇಳುತ್ತೀರಿ ಎಂಬುದೇ ನನ್ನ great expectations ಎಂದು ಛಿ ಮಾರಿ ಹಾಕಿ ಕಳುಹಿಸಿದ್ದರು . ‘ ತಿಂದ ತಕ್ಷಣವೇ ನಿದ್ದೆ ‘ ಎಂದಾಗ ನನ್ನ ಸ್ನಾತಕೋತರ ಪದವಿಯ ಗೆಳೆಯನೊಬ್ಬನದು ನೆನಪಾಯಿತು ನೋಡಿ . ನಾವು ತರಬೇತಿಯಲ್ಲಿ ಇದ್ದಾಗ ಮಧ್ಯಾಹ್ನದಲ್ಲಿ ಊಟಕ್ಕೆಂದು ಅಬ್ಬಬ್ಬಾ ಎಂದರೆ ಅರ್ಧ ಘಂಟೆ ಸಮಯವಿರುತ್ತಿತ್ತು , ಸುಮಾರು ಐದು ನಿಮಿಷಿನಲ್ಲಿ ಗಬಗಬನೆ ತಿಂದು , ಮಿಕ್ಕಿದ ಇಪ್ಪತ್ತು ನಿಮಿಷ ಅವನು ಎಲ್ಲೋ ಮಾಯವಾಗಿ ಬಿಡುತ್ತಿದ್ದ . ಕುತೂಹಲಕ್ಕೆಂದು ಅವನನ್ನು ಹಿಂಬಾಲಿಸಿದಾಗ ಗೊತ್ತಾಗಿತ್ತು – ಅವನು ಪಕ್ಕದ ಕೋಣೆಯೊಂದರಲ್ಲಿ ಕುಳಿತು ಸಣ್ಣ ನಿದ್ದೆ ಮಾಡಿ ಬರುತ್ತಿದ್ದ . ಇವರೇನೂ ಅಪರೂಪವಲ್ಲ ಬಿಡಿ , ಎಲ್ಲೆಲ್ಲೋ ಕಾಣಿಸುವವರೆ . ಇದನ್ನೇ ಇಂಗ್ಲೀಷಿನಲ್ಲಿ ಸ್ಟೈಲಿಶ್ ಆಗಿ ‘ ನ್ಯಾಪ್ ‘ ಅಂತ ಕರೆಯುವದುಂಟು ತಾನೆ ? ಪಾಪ ! ಹೊಟ್ಟೆಯ ತಪ್ಪೋ ಅಥವಾ ನಿದ್ಧೆಯ ತಪ್ಪೋ ಒಂದೂ ಗೊತ್ತಿಲ್ಲ .
ಇನ್ನು , ನಿಂತು ನಿದ್ದೆ ಮಾಡುವವರನ್ನು ನೀವು ಕಂಡಿರದೆ ಇರಬಹುದು . ಇಂಥವರು ಭರ್ಜರಿಯಾಗಿ ತುಂಬಿದ ಬಸ್ಸುಗಳಲ್ಲಿ ಸಹಜವಾಗಿ ಸಿಗುವದುಂಟು . ನಮ್ಮೂರಿನಿಂದ ಪಟ್ಟಣಕ್ಕೆ ಸಂತೆಯ ದಿನದಂದು ಹೋಗುವ ಬಸ್ಸು ಯಾವಾಗಲೂ ಕಿಕ್ಕಿರಿದು ತುಂಬಿರುತ್ತಿತ್ತು . ನಮ್ಮ ಕಟುಕರ ಕಮಾಲಸಾಬನು ಖಾಯಮ್ ಪ್ರಯಾಣಿಕನಾಗಿದ್ದರೂ , ಧಡೂತಿ ಶರೀರವಿರುವದರಿಂದ ಬೇಗನೆ ಬಸ್ಸಿನಲ್ಲಿ ನುಗ್ಗಲಾರದೆ ಯಾವಾಗಲೂ ಕುಳಿತುಕೊಳ್ಳಲು ಸೀಟು ಸಿಗಲಾರದೆ ಒದ್ದಾಡುತ್ತಿದ್ದನು . ಪಾಪ !! ರಾತ್ರಿಯಲ್ಲ ಏನು ಮಾಡಿರುತ್ತಿದ್ದನೋ ಕಾಣೆ , ಆದರೆ ಬಸ್ಸಿನಲ್ಲಿ ಏರಿದ ಮೇಲೆ ಮಾತ್ರ ನಿಂತುಕೊಂಡೆ ನಿದ್ದೆ ಹೊಡೆಯಲು ಪ್ರಾರಂಭಿಸುತ್ತಿದ್ದನು. ತೂಗಾಡಿಕೆಯಲ್ಲಿ ಅವನ ಶರೀರದ ಮುಕ್ಕಾಲು ಭಾರ ಸೀಟಿನಲ್ಲಿ ಕುಳಿತವರ ಮೇಲೆ ಬೀಳುತ್ತಿತ್ತು . ಇವನ ಕಾಟವನ್ನು ತಾಳಲಾರದೆ , ಬೈಯ್ಯಲೂ ಮನಸಿರಲಾರದೆ , ಕುಳಿತವರೆ ಎದ್ದು ಇವನಿಗೆ ತಮ್ಮ ಸೀಟು ಕೊಟ್ಟು ಕೃತಾರ್ಥರಾಗುತ್ತಿದ್ದರು . ಅಂತು ಇಂತು ಕೊನೆಗೂ ಸೀಟು ಗಿಟ್ಟಿಸುತ್ತಿದ್ದ ಎನ್ನಿ .
ಇವರದೆಲ್ಲಾ ಒಂದು ಪಂಗಡವಾದರೆ ಇನ್ನೊಂದನ್ನು ವಿಭಿನ್ನ ಪಂಗಡವೆಂದೇ ಪರಿಗಣಿಸಬಹುದು , ಅದುವೇ ನಡೆದಾಡಿಕೊಂಡು ನಿದ್ದೆ ಮಾಡುವವರ ಅಥವಾ ನಿದ್ದೆಯಲ್ಲಿ ನಡೆದಾಡುವವರ ಪಂಗಡ . ಈ ಪಂಗಡದ ಸದಸ್ಯರನ್ನು ಸ್ವತಃ ನೋಡಿರುವವರಕ್ಕಿಂತಲೂ ಅವರ ಬಗ್ಗೆ ಓದಿದವರೆ ಹೆಚ್ಚು ಇರಬಹುದು ಎಂಬುವದು ನನ್ನ ಅನಿಸಿಕೆ . ನಾನು ಕೆಎಂಸಿ ಯಲ್ಲಿ ಕಲಿಯುತ್ತಿದ್ದಾಗ , ನನ್ನ ಖಾಸಾ ದೋಸ್ತ ‘ಮಂಜು’ ಹುಬ್ಬಳ್ಳಿಯ ಬಿ ವ್ಹಿ ಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ . ಅವನು ನಿದ್ದೆಯಲ್ಲಿ ಅಡ್ಡಾಡುತ್ತಿದ್ದಾನೆ ಎಂದು ಹೆದರಿಕೊಂಡು ಅವನ ರೂಮ್ಮೇಟ್ ಕೊಠಡಿಯನ್ನು ಬದಲಿಸಿದ್ದು ತಿಳಿದು ನನಗೆ ಬೇಜಾರವು ಹಾಗೆಯೇ ಕುತೂಹಲವೂ ಆಗಿತ್ತು . ಅದೊಂದು ದಿನ ನೋಡಿಯೇ ಬಿಡೋಣವೆಂದು ನಿರ್ಧರಿಸಿ , ಧೈರ್ಯತುಂಬಿಕೊಂಡು ಅವನ ಕೊಠಡಿಯಲ್ಲಿ ಮಲಗಲು ಹೋಗಿದ್ದೆ . ವಿಷಯ ನನ್ನ ಬೇರೆ ದೋಸ್ತಗಳಿಗೆ ಗೊತ್ತಾಗಿ ” ಲೇ ಸುಮ್ಮ್ನ ವಾಪಸ್ ಹೋಗಿ ಬಿಡು , ಇಲ್ಲಂದ್ರ ನಡು ರಾತ್ರ್ಯಾಗ ಓಡಿ ಹೋಗತಿ ನೋಡ್ ಮಗನ ” ಅಂತ ಬೆದರಿಕೆಯ ಮಾತುಗಳನ್ನು ಆಡಿದ್ದರು . ಆದರೂ ಅವರ ಮಾತುಗಳಿಗೆ ಬೆಲೆ ಕೊಡದೆ ಅವನ ಕೊಠಡಿಯಲ್ಲಿ ಮಲಗುವ ಸಾಹಸವನ್ನು ಮಾಡಿ ಬಿಟ್ಟಿದ್ದೆ . ಗಾಢ ನಿದ್ದೆಯಲ್ಲಿದ್ದ ಮಂಜು , ನಡು ರಾತ್ರಿಯಲ್ಲಿ ಕೋಣೆಯ ಬಾಗಿಲು ತೆಗೆದು ಹೊರಗೆ ಹೊರಟೇ ಬಿಟ್ಟಿದ್ದ . ಭಯವಾದರೂ ಕುತೂಹಲದಿಂದ ಅವನನ್ನೆ ಹಿಂಬಾಲಿಸಿದ್ದೆ . ನಿದ್ದೆಯಲ್ಲಿ ನಡೆಯುತ್ತ ನಡೆಯುತ್ತಾ ಅವನು ಎದುರುಗಡೆಯಿದ್ದ ಸ್ಮಶಾನದ ಜಾಗವನ್ನು ಪ್ರವೇಶಿಸಿದಾಗ ನನಗೆ ಧೈರ್ಯಸಾಲದೆ ವಾಪಸು ಓಡಿ ಬಂದಿದ್ದೆ . ಮನುಷ್ಯನ ಮೆದಳು ನಿದ್ದೆಯಲ್ಲಿಯೂ ಇಷ್ಟೊಂದು ಅಚ್ಚು ಕಟ್ಟಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದು ನನಗೆ ಇನ್ನೂ ಒಗಟಾಗಿರುವ ವಿಷಯ . ಮಂಜುನಾಥನ ಆಶೀರ್ವಾದದಿಂದ ಮಂಜು ಈಗ ನಿದ್ದೆಯಲ್ಲಿ ನಡೆಯುವದನ್ನು ಬಿಟ್ಟಿದ್ದಾನೆಂದು ಅವನ ಶ್ರೀಮತಿಯವರಿಂದ ತಿಳಿದು ಸಂತೋಸವಾಯಿತು ಎನ್ನಿ .
ಈ ನಿದ್ದೆಯ ಪುರಾಣ ಇಷ್ಟಕ್ಕೆ ಮುಗಿಯುವದಿಲ್ಲ ಬಿಡಿ . ‘ ಅತಿ ‘ ಎಂಬುವದಕ್ಕೆ ‘ ಮಿತಿ ‘ ಅಂತ ವಿರುದ್ಧ ಪದವಿರುವದು ನಿಜ . ಹಾಗೆಯೆ ಅತಿಯಾಗಿ ನಿದ್ದೆಮಾಡುವವರು ಒಂದೆಡೆ ಇದ್ದರೆ , ಇನ್ನು ನಿದ್ದೆ ಬರದೆ ಒದ್ದಾಡುವವರು ಇನ್ನೊಂದೆಡೆ ಇರಲೇಬೇಕಲ್ಲವೆ ? ನಿದ್ದೆ ಬಾರದೆ ಪರಿತಪಿಸುವ ಬಹು ಜನರು ಮನಬಂದಂತೆ ಪರಿಶೋಧನೆ ನಡೆಸಿ , ತಮಗೆ ತಕ್ಕ ಹವ್ಯಾಸಗಳನ್ನು ಬೆಳೆಸಿಕೊಳ್ಳುವದು ಸಹಜ . ಹವ್ಯಾಸ ಒಳ್ಳೆಯದೊ ಕೆಟ್ಟದ್ದೊ ಬೇರೆ ವಿಷಯ ಬಿಡಿ . ಅಂತೂ ‘ ಮನಸಿದ್ದರೆ ಮಾರ್ಗ ‘ಎಂದು ಅಂಬುವದರಲ್ಲಿ ಅವರಿಗೆ ನಂಬಿಕೆ ಇರುವದು ಶ್ಲಾಘನೀಯ . ನಿದ್ದೆ ಬರಲೆಂದು ಸೋಮಾರಿಗಳು ಕೂಡ ತಾಸು ಗಂಟಲೇ ‘ ವಾಕಿಂಗ್ ‘ ಮಾಡುವದಕ್ಕೆ ಮತ್ತು ಪುಸ್ತಕಗಳ ಮುಖವನ್ನೇ ನೋಡದವರು ಮೂಟೆಗಂಟಲೇ ಪುಸ್ತಕಗಳನ್ನು ಖರೀದಿಸಿ ಓದಲು ಪ್ರಾರಂಭಿಸುವದಕ್ಕೆ ಈ ನಿದ್ದೆರಾಯನೇ ಕಾರಣ ಎಂಬುದೊಂದು ನೆಮ್ಮದಿಯ ಸಂಗತಿ . ಅದಕ್ಕಾದರೂ ಅವನಿಗೊಂದು ಧನ್ಯವಾದವನ್ನು ಹೇಳಲೇ ಬೇಕಲ್ಲವೆ ? ಒಟ್ಟಿನಲ್ಲಿ ನನ್ನ ಮಾಧ್ಯಮಿಕ ಶಾಲೆಯ ಕಿಡಿಗೇಡಿ ಗೆಳೆಯರು ಹೇಳಿದಂತೆ , ಒಂದಿಲ್ಲ ಒಂದು ರೀತಿಯಲ್ಲಿ ಬಹು ಜನರಿಗೆ ‘ನಿದ್ದೆಯೇ ಜೀವನದ ಹೆಗ್ಗುರಿ ‘ ಯಾಗಿರುವದು ಮಾತ್ರ ನಿಜ ಸಂಗತಿ . ನೀವೇನು ಅನ್ನುತ್ತೀರಿ ? ಹರಟೆಯ ನೆಪದಲ್ಲಿ ನನ್ನಿಂದ ಇಷ್ಟೊಂದು ಕೊರೆಯಿಸಿಕೊಂಡ ಮೇಲೆ , ತಾಳ್ಮೆಯಿಂದ ಓದಿದವರಿಗೆಲ್ಲ ಕಣ್ಣು ತುಂಬಾ ನಿದ್ದೆ ಬರುತ್ತದೆ ಎಂದು ಬಲವಾಗಿ ನಂಬಿರುವೆ.
ಬ್ರಿಸ್ಟಲ್ ಏರ್ ಬಸ್ ಸಂಸ್ಥೆಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞರಾದ ಯೋಗಿಂದ್ರ ಮರವಂತೆ ಅನಿವಾಸಿ ಕನ್ನಡಿಗರಿಗೆ ಚಿರಪರಿಚಿತರು. ಹಲವಾರು ವರ್ಷಗಳಿಂದ ದಿನಪತ್ರಿಕೆಗಳಿಗೆ ಮತ್ತು ಅಂತರ್ಜಾಲ ತಾಣಗಳಿಗೆ ಅಂಕಣ ಬರೆಯುತ್ತ, ಆಗೊಮ್ಮೆ ಈಗೊಮ್ಮೆ ಅನಿವಾಸಿ ತಾಣದಲ್ಲೂ ಕೆಲವು ಪ್ರಬಂಧಗಳನ್ನು ಬರೆಯುತ್ತ ನಮಗೆಲ್ಲ ಚಿರಪರಿಚಿತರಾಗಿದ್ದಾರೆ. ಅವರ ಲೇಖನಗಳು ನಮ್ಮ ಸಮಕಾಲೀನ ಬದುಕಿನ ಹಲವಾರು ವಿಷಯಗಳಿಗೆ ಸಂಬಂಧಿಸಿದ್ದು ಅವರ ಸೃಜನಾತ್ಮಕ ಬರಹಗಳು ಅನೇಕ ಚಿಂತನೆಗಳಿಗೆ ಅನುವು ಮಾಡಿಕೊಟ್ಟಿದೆ. ಲಂಡನ್ ಡೈರಿ ಅವರ ಮೊದಲನೇ ಕೃತಿ. ಇದಲ್ಲದೆ ಅವರು 'ಮುರಿದು ಬಿದ್ದ ಸೈಕಲ್ ಮತ್ತು ಹೂಲ ಹೂಪ್ಸ್ ಹುಡುಗಿ’,'ನನ್ನ ಕಿಟಕಿ' ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಒಂದೆರಡು ಸಾಕ್ಷ್ಯಚಿತ್ರವನ್ನೂ ನಿರ್ಮಿಸಿದ್ದಾರೆ. ಯೋಗಿಂದ್ರ ಮರವಂತೆ ಮತ್ತು ಇನ್ನೂ ಅನೇಕ ಅನಿವಾಸಿ ಕನ್ನಡಿಗರು ವಿದೇಶದಲ್ಲಿ ಕುಳಿತು ಉತ್ತಮವಾದ ಪುಸ್ತಕಗಳನ್ನು ಬರೆದಿದ್ದಾರೆ. ಅವರ ಕೃತಿಗಳನ್ನು ಅನಿವಾಸಿ ಕನ್ನಡಿಗರು ಓದಬೇಕು ಮತ್ತು ಓದಿ ಅವರ ಅಭಿಪ್ರಾಯಗಳನ್ನು ದಾಖಲಿಸಿದರೆ ಲೇಖಕರಿಗೆ ಮುಂದಕ್ಕೆ ಬರೆಯಲು ಉತ್ತೇಜನ ದೊರೆಯುತ್ತದೆ ಎಂಬುದು ನನ್ನ ಅಭಿಪ್ರಾಯ. ಈ ಒಂದು ಹಿನ್ನೆಲೆಯಲ್ಲಿ ನಾನು ಯೋಗಿಂದ್ರ ಅವರ ಲಂಡನ್ ಡೈರಿ ಪುಸ್ತಕ ಪರಿಚಯದ ಪ್ರಯತ್ನ ಮಾಡಿದ್ದೇನೆ. ನನ್ನ ಒಂದು ಕಾದಂಬರಿ ಕೃತಿಯನ್ನು ಅನಿವಾಸಿ ಮಿತ್ರರು ಹಿಂದೆ ಓದಿ ಅದರ ವಿಮರ್ಶೆ ಒದಗಿಸಿದ್ದು ನನಗೆ ಓದುಗರ ದೃಷ್ಟಿಕೋನ ದೊರಕಿದಂತಾಯಿತು. ನನ್ನ ಸಾಮರ್ಥ್ಯಗಳ ಬಗ್ಗೆ ಒಂದು ಒಳನೋಟವೂ ದೊರಕಿತು. ಕನ್ನಡ ನೆಲದಿಂದ ದೂರವಿರುವ ನಮ್ಮಂಥ ಅನಿವಾಸಿ ಲೇಖಕರುಗಳು ಒಬ್ಬರು ಇನ್ನೊಬ್ಬರ ಕೃತಿಗಳನ್ನು ಓದಿ ವಿಚಾರ ವಿನಿಮಯ ಮಾಡಿಕೊಳ್ಳುವ ಅವಶ್ಯಕತೆ ನನಗೆ ಕಂಡಿದೆ. ಈ ಪ್ರಯತ್ನವನ್ನು ಮುಂದಕ್ಕೆ ನಡೆಸಿಕೊಡಲು ನಾನು ಪ್ರಯತ್ನಿಸುತ್ತೇನೆ.
ನಾವುಗಳು ಬರೆದ ಕನ್ನಡ ಪುಸ್ತಕಗಳು ಕರ್ನಾಟಕದಲ್ಲಿ ಪ್ರಕಟಗೊಂಡು ಅದನ್ನು ಇಂಗ್ಲೆಂಡಿನ ಕನ್ನಡ ಓದುಗರಿಗೆ ಒದಗಿಸುವುದು ಸ್ವಲ್ಪ ಕಷ್ಟದ ಕೆಲಸವೇ. ಪುಸ್ತಕದ ಬೆಲೆಗೆ ಸಾಗರದಾಚೆಗೆ ರವಾನಿಸುವ ಮತ್ತು ಅಂಚೆಯಲ್ಲಿ ವಿತರಿಸುವ ಬೆಲೆಯನ್ನು ಸೇರಿಸುವುದು ಅನಿವಾರ್ಯವಾಗುತ್ತದೆ. ಮುಂದಕ್ಕೆ ಯುಕೆ ಕನ್ನಡ ಬಳಗ ಮತ್ತು ಇತರ ಕನ್ನಡ ಸಂಘ ಸಮಾರಂಭದಲ್ಲಿ ಅನಿವಾಸಿ ಲೇಖಕರ ಪ್ರಕಟಿತ ಪುಸ್ತಕಗಳ ಬಗ್ಗೆ ಅರಿವು ಮೂಡಿಸಿ ಅದನ್ನು ಒಂದು ಕಡೆ ಮಾರಾಟ ಮಾಡುವ ಅವಕಾಶವನ್ನು ಈ ಸಂಘಗಳು ಕಲ್ಪಿಸಿ ಕೊಡಬೇಕಾಗಿದೆ. ಇದನ್ನು ಬರಿ ವಾಣಿಜ್ಯ ವಹಿವಾಟಾಗಿ ನೋಡದೆ ಕನ್ನಡ ಬೆಳೆಸುವ ಯತ್ನವೆಂದು ಪರಿಗಣಿಸಬೇಕು. ಅನಿವಾಸಿ ಲೇಖಕರು ತಾವು ಬರೆದ ಕೃತಿಗೆ ಅನಿವಾಸಿ ಓದುಗರ ಬೆಂಬಲವನ್ನು ನಿರೀಕ್ಷಿಸುವುದು ಸಹಜವೇ.
-ಸಂಪಾದಕ
ಯೋಗಿಂದ್ರ ಮರವಂತೆ ಅವರು ಅಂಕಣಕಾರರಾಗಿ ಉದಯವಾಣಿ, ಪ್ರಜಾವಾಣಿ, ಕೆಂಡ ಸಂಪಿಗೆ ಮುಂತಾದ ತಾಣಗಳಲ್ಲಿ ಬರೆದ ಪ್ರಬಂಧಗಳನ್ನು ಒಟ್ಟುಗೂಡಿಸಿ ‘ಲಂಡನ್ ಡೈರಿ’ (ಅನಿವಾಸಿಯ ಪುಟಗಳು) ಎಂಬ ಸಂಕಲನವನ್ನು ೨೦೧೯ರಲ್ಲಿ ಹೊರತಂದಿದ್ದು ಅದನ್ನು ಕರ್ನಾಟಕದ ಯಾಜಿ ಪ್ರಕಾಶನ ಪ್ರಕಟಿಸಿದೆ. ಈ ಪುಸ್ತಕವನ್ನು ಹಿಂದೆ ನಾನು ಕೊಂಡಿದ್ದು ಅದು ನನ್ನ ಇಂಡಿಯಾ ಪ್ರವಾಸದಲ್ಲಿ ಕಳೆದುಹೋಗಿ, ಇತ್ತೀಚಿಗೆ ಬೆಂಗಳೂರಿನ ನವಕರ್ನಾಟಕ ಪುಸ್ತಕ ಮಳಿಗೆಗೆ ಭೇಟಿ ನೀಡಿದಾಗ ಮತ್ತೆ ನನಗೆ ದಕ್ಕಿದೆ. ಇದೀಗ ಈ ಪುಸ್ತಕವನ್ನು ಓದಿ ಮುಗಿಸಿದ್ದೇನೆ. ಹಳೆಯ ಪುಸ್ತಕಕ್ಕೊಂದು ಹೊಸ ದೃಷ್ಟಿಕೋನವನ್ನು ಒದಗಿಸುವ ಪ್ರಯತ್ನ ನನ್ನದಾಗಿದೆ. "ಹಾಡು ಹಳೆಯದಾದರೇನು ಭಾವ ನವನವೀನ" ಎನ್ನುವ ಹಾಗೆ ಎಂದು ತಿಳಿಯಿರಿ. ಈ ಪುಸ್ತಕವನ್ನು ಎರಡೇ ಸಾಲುಗಳಲ್ಲಿ ಸಂಕ್ಷಿಪ್ತವಾಗಿ ಪರಿಚಯ ಮಾಡುವುದಾದರೆ ಪುಸ್ತಕದ ಮೊದಲನೇ ಪುಟದಲ್ಲೇ ಲೇಖಕರೇ ತಿಳಿಸಿರುವಂತೆ; "ಮುಖಾಮುಖಿಗಳು ಹುಟ್ಟಿಸುವ ಬೆರಗು, ಕುತೂಹಲ, ತಳಮಳ, ವೈರುಧ್ಯಗಳ ನಡುವೆ ಅಲೆಯುತ್ತ ನೆನೆಯುತ್ತ ಕಾಲ ಘಟನೆಗಳಿಗೆ ಹೊಂದಿಸಿ ಮನಸ್ಸಿನಲ್ಲಿ ಅಕ್ಷರ ಪೋಣಿಸಿದರೆ, ಹಾಳೆಯ ಮೇಲೆ ಮೂಡಿಸಿದರೆ, ಮತ್ತು ಆ ಹಾಳೆಗಳನ್ನು ಪುಟಗಳಾಗಿ ಜೋಡಿಸಿದರೆ ಅದು ಲಂಡನ್ ಡೈರಿ". ಇದರಲ್ಲಿ ಒಂದು ಮುಖ ಇಂಗ್ಲೆಂಡ್, ಇನ್ನೊಂದು ಮುಖ ಭಾರತ. ಈ ಹೊತ್ತಿಗೆಗೆ ಬೆನ್ನುಡಿ ಬರೆದ ಖ್ಯಾತ ಲೇಖಕಿ ಪುಸ್ತಕದಲ್ಲಿನ ವೈವಿಧ್ಯತೆ ಮತ್ತು ಸೂಕ್ಷ್ಮ ವಿವರಗಳನ್ನು ಗಮನಿಸಿ ಯೋಗಿಂದ್ರ ಅವರಿಗೆ "ಕಾಣುವ ಕಣ್ಣುಗಳು" ಇವೆಯೆಂದು ಪ್ರಶಂಸಿಸಿದ್ದಾರೆ. ಇಂಗ್ಲೆಂಡಿನಲ್ಲಿ ವಾಸ ಮಾಡುತ್ತಿರುವ ಅನಿವಾಸಿಗಳಿಗೆ ಸಾಧಾರಣ ಎನಿಸುವ ದಿನ ನಿತ್ಯ ಬದುಕಿನ ಕ್ಷಣಗಳನ್ನು ಯೋಗಿಂದ್ರ ಅವರು ಗ್ರಹಿಸಿ ಆಳವಾಗಿ ಚಿಂತಿಸಿರುವುದರ ಬಗ್ಗೆ ಖ್ಯಾತ ಲೇಖಕ ಅಬ್ದುಲ್ ರಶೀದ್ ಅವರು ಬೆನ್ನುಡಿಯಲ್ಲಿ ಬರೆಯುತ್ತ “ಯೋಗಿಂದ್ರ ಅವರಿಗೆ ಪತ್ರಕರ್ತನ ಗುಣವಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಪುಸ್ತಕದ ಶೀರ್ಷಿಕೆ ‘ಲಂಡನ್ ಡೈರಿ’ ಎಂತಿದ್ದರೂ ಇದು ಲಂಡನ್ ನಗರವನ್ನೂ ದಾಟಿ ಇಂಗ್ಲೆಂಡಿನ ಬದುಕಿನ ಚಿತ್ರವಾಗಿದೆ. ಕರ್ನಾಟಕದ ಕನ್ನಡಿಗರು ಲಂಡನ್ ಮತ್ತು ಇಂಗ್ಲೆಂಡ್ ಎಂಬ ಹೆಸರಿನಲ್ಲಿ ನಿರ್ದಿಷ್ಟವಾದ ವ್ಯತಾಸವನ್ನು ಕಾಣದೆ ನಗರ ಮತ್ತು ದೇಶವನ್ನು ಒಂದೇ ಹೆಸರಿನಲ್ಲಿ ಸಂಬೋಧಿಸುವುದರಿಂದ ಈ ಶೀರ್ಷಿಕೆ ಇಂಗ್ಲೆಂಡನ್ನು ಕನ್ನಡಿಗರಿಗೆ ಪರಿಚಯಿಸುವ ದೃಷ್ಟಿಯಿಂದ ಸೂಕ್ತವಾಗಿದೆ. ಅಂದ ಹಾಗೆ ಈ ಹೊತ್ತಿಗೆಯ ಮುಖಪುಟವನ್ನು ಗಮನಿಸಿದರೆ ಇಲ್ಲಿ ಇರುವ ಲಂಡನ್ ಬಿಗ್ ಬೆನ್, ಜಿನುಗುತ್ತಿರುವ ಮಳೆ, ಮಬ್ಬು ಕವಿದ ಮೋಡಗಳು ಇಂಗ್ಲೆಂಡಿನ ಒಂದು ಪರಿಪೂರ್ಣ ಚಿತ್ರಾತ್ಮಕ ಸಂಕೇತದಂತೆ ತೋರುತ್ತದೆ. ಈ ಮುಖಪುಟವೇ ಈ ಹೊತ್ತಿಗೆಯ ಒಂದು ಕಿರುಪರಿಚಯ!
ಈ ಪ್ರಬಂಧ ಸಂಕಲನದ ಮೂಲ ಉದ್ದೇಶ ಬ್ರಿಟನ್ನಿನ್ನ ನಿವಾಸಿ ಮತ್ತು ಅನಿವಾಸಿಗಳ ಬದುಕನ್ನು ಕನ್ನಡಿಗರಿಗೆ ಪರಿಚಯಿಸುವುದು ಎಂದು ಶುರಿವಿನಲ್ಲೇ ಪ್ರಸ್ತಾಪಿಸಿಸುವುದು ಉಚಿತ. ಓದುತ್ತ ಹೋದಂತೆ ಲೇಖಕರ ಮೂಲ ಆಶಯ ಮತ್ತು ಹಂಬಲ ತೆರೆದುಕೊಳ್ಳುತ್ತದೆ. ನಾಲ್ಕೈದು ದಶಕಗಳ ಹಿಂದೆ ವಿದೇಶದಲ್ಲಿ ನೆಲೆಸಿದ್ದ ವೈದ್ಯರು ಮತ್ತು ಇಂಜಿನೀಯರ್ಗಳು ಕನ್ನಡದಲ್ಲಿ ಒಂದು ಲೇಖನವಿರಲಿ ಒಂದೆರಡು ಸಾಲುಗಳನ್ನು ಬರೆಯಲು ಹಿಂಜರಿಯುತ್ತಿದ್ದ ಕಾಲದಲ್ಲಿ ಶಿವರಾಮ ಕಾರಂತ, ಮೂರ್ತಿರಾಯರು, ಗೋರೂರ್, ಗೋಕಾಕ ಮತ್ತು ಜಿ.ಎಸ್.ಎಸ್ ಮುಂತಾದ ಸಾಹಿತಿಗಳು ವಿದೇಶ ಪರ್ಯಟನೆ ಮಾಡಿ ಮರಳಿದಾಗ ಅವರ ಪ್ರವಾಸದ ಅಲ್ಪ ಸಮಯದಲ್ಲಿ ಕಂಡದ್ದನ್ನು ಕೇಳಿದ್ದನ್ನು ಅನುಭವಿಸಿದ್ದನು ಪ್ರವಾಸ ಕಥನವಾಗಿ ದಾಖಲಿಸಿ ಇಂಗ್ಲೆಂಡ್ ಮತ್ತು ಅಮೆರಿಕಗಳನ್ನು ಕನ್ನಡಿಗರಿಗೆ ಪರಿಚಯಿಸುತ್ತಿದ್ದರು. ಕವಿ- ಸಾಹಿತಿಗಳಾದ ಅವರು ಮಾಹಿತಿಗಳೊಡನೆ ತಮ್ಮ ವಿಶೇಷ ಒಳನೋಟವನ್ನು ಒದಗಿಸುತ್ತಿದ್ದರು. ಆದರೆ ಆ ಬರಹಗಳಲ್ಲಿ ಆಯಾ ದೇಶಗಳ ಜನ ಜೀವನದ ಪೂರ್ಣ ಪರಿಚಯ ಸಿಗುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗಿನ ಕಾಲದಲ್ಲಿ ಯೋಗಿಂದ್ರ ರೀತಿಯ ಅನೇಕ ಅನಿವಾಸಿ ಎಂಜಿನೀಯರ್ಗಳು, ವೈದ್ಯರು, ವೃತ್ತಿಪರರೂ, ಗೃಹಿಣಿಯರು ವಿದೇಶಗಳಲ್ಲಿ ದಶಕಗಳ ಕಾಲ ಬದುಕಿ ಇಲ್ಲಿಯ ಜನ ಜೀವನ, ಸಾಂಸ್ಕೃತಿಕ ವೈಶಿಷ್ಟ್ಯತೆ, ವಿಲಕ್ಷಣ, ದಿನ ನಿತ್ಯ ಆಗು-ಹೋಗುಗಳನ್ನು ಸವಿವರವಾಗಿ ಕೂಲಂಕುಷವಾಗಿ ಗಮನಿಸಿ ಪ್ರಬಂಧಗಳನ್ನು ಬರೆಯುತ್ತಿದ್ದಾರೆ. ಇನ್ನು ಅಮೇರಿಕಾದ ಅನಿವಾಸಿ ಕನ್ನಡಿಗ ಗುರುಪ್ರಸಾದ್ ಕಾಗಿನೆಲೆ ತಮ್ಮ ಕಥೆ ಕಾದಂಬರಿಗಳಲ್ಲಿ ವಿದೇಶದ ಬದುಕನ್ನೇ ಕಥೆಯ ಹಂದರದಲ್ಲಿ ಅಳವಡಿಸಿದ್ದಾರೆ. ಪ್ರವಾಸ ಕಥನ ಒದಗಿಸಲಾರದ ವಿಷಯ ವಿವರಗಳನ್ನು ಯೋಗಿಂದ್ರ ತಮ್ಮ ಪ್ರಬಂಧಗಳಲ್ಲಿ ವಿಶೇಷ ಒಳನೋಟಗಳ ಜೊತೆ ದಾಖಲಿಸಿದ್ದಾರೆ. ಕರ್ನಾಟಕದ ಅನೇಕ ಕನ್ನಡಿಗರಿಗೆ, ಟಿವಿ ಇನ್ನಿತರ ಮಾಧ್ಯಮಗಳ ಮೂಲಕ, ವಿದೇಶದಲ್ಲಿ ನೆಲೆಸಿರುವ ಬಂಧುಗಳ ಮೂಲಕ, ಬ್ರಿಟನ್ನಿನ್ನ ಬಗ್ಗೆ ಸಾಕಷ್ಟು ತಿಳುವಳಿಕೆ ಇರುತ್ತದೆ. ಆದರೂ ಅನಿವಾಸಿ ಕನ್ನಡಿಗರು ಹೇಗೆ ಬಾಳಿ ಬದುಕುತ್ತಿದ್ದಾರೆ ಎಂಬ ಕುತೂಹಲ ಅವರಿಗಿರುವುದು ಸಹಜವೇ. ಆ ಕೂತುಹಲವನ್ನು ತಣಿಸಲು ಲಂಡನ್ ಡೈರಿ ಒಂದು ಉತ್ತಮ ಪರಿಚಯ ಪ್ರವೇಶ ಎನ್ನಬಹುದು. ಅಷ್ಟೇ ಏಕೆ ಬ್ರಿಟನ್ನಿನ್ನ ಸ್ವಾರಸ್ಯಕರವಾದ ವಿಚಾರಗಳು ಇಲ್ಲಿರುವುದರಿಂದ ಇಂಗ್ಲೆಂಡಿನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೂ ಈ ಪುಸ್ತಕ ಪ್ರಸ್ತುತವಾಗಿದೆ.
ಈ ಪ್ರಬಂಧವನ್ನು ಒಟ್ಟಾರೆ ನೋಡಿದಾಗ ಇಲ್ಲಿ ಎದ್ದು ಕಾಣುವ ವಿಷಯಗಳೆಂದರೆ; ಆಂಗ್ಲರ ದೃಷ್ಟಿಯಲ್ಲಿ ಭಾರತೀಯರು ಮತ್ತು ಭಾರತ, ಅನಿವಾಸಿ ದೃಷ್ಟಿಯಲ್ಲಿ ಆಂಗ್ಲರು ಮತ್ತು ಅವರ ಸಂಸ್ಕೃತಿ, ಕೊನೆಯದಾಗಿ ಈ ಎರಡೂ ದೃಷ್ಟಿಯಲ್ಲಿ ಇರುವ ಸಮಾನಾಂತರಗಳ, ವೈರುಧ್ಯಗಳ ಬಗ್ಗೆ ಇರುವ ತೌಲನಿಕ ಚಿಂತನೆಗಳು. ಇಲ್ಲಿ 'ಆಂಗ್ಲರ ಕನ್ನಡಕದಲ್ಲಿ ಭಾರತ' ಎಂಬ ಮೊದಲನೇ ಪ್ರಬಂಧದಲ್ಲಿ ಆಂಗ್ಲರು ನಮ್ಮನ್ನು ನೋಡುವಾಗ ವಸ್ತುನಿಷ್ಠವಾಗಿ ನಮನ್ನು ನೋಡುತ್ತಾರೆ, ಇಲ್ಲಿ ಹೊಗಳಿಕೆ ತೆಗಳಿಕೆ ಎರಡು ಅವರ ತಕ್ಕಡಿಯಲ್ಲಿ ಸಮಾನವಾಗಿ ತೂಗುತ್ತದೆ. ನಾವು ನಮ್ಮ ದೇಶ ಎಷ್ಟು ಶ್ರೇಷ್ಠ, ಎಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವಾಗ ಆಂಗ್ಲರು ಬಿಬಿಸಿ ಕಾರ್ಯಕ್ರಮದಲ್ಲಿ, ಬರಹಗಳಲ್ಲಿ ನಮ್ಮ ಹುಳುಕುಗಳನ್ನು ಎತ್ತಿ ತೋರಿಸಿ ಮುಖಕ್ಕೆ ಕನ್ನಡಿ ಹಿಡಿಯುತ್ತಾರೆ ಎಂದು ಹೇಳುವಲ್ಲಿ ಯೋಗಿಂದ್ರ ಹಿಂಜರಿಯುವುದಿಲ್ಲ, ಈ ಪ್ರಬಂಧಗಳಲ್ಲಿ ಪ್ರಾಮಾಣಿಕತೆ ಮತ್ತು ಆತ್ಮಶೋಧನೆಗಳಿವೆ. ಆಂಗ್ಲರು ನಮ್ಮ ಸಂಸ್ಕೃತಿಯನ್ನು ಮೆಚ್ಚಿಕೊಂಡಿರುವ ಉಲ್ಲೇಖಗಳೂ ಸಾಕಷ್ಟಿವೆ. ಇನ್ನು ಬ್ರಿಟನ್ ಬದುಕಿನ ವಿಶೇಷ ಮೌಲ್ಯಗಳು ಮತ್ತು ವಿಚಿತ್ರ ಎನ್ನಿಸುವ ವಿಚಾರಗಳು, ಇಲ್ಲಿಯ ರಾಜ ಮನೆತನ, ರಾಜಕೀಯ ವ್ಯವಸ್ಥೆ, ನಗರ ಮತ್ತು ಗ್ರಾಮೀಣ ಬದುಕು, ಅನಿಶ್ಚಿತವಾದ ಹವಮಾನ ಮತ್ತು ಸದಾ ಜಿನುಗುವ ಮಳೆ, ಇಂಗ್ಲಿಷ್ ಸಾಹಿತ್ಯ; ಹೀಗೆ ಅನೇಕ ವಿಚಾರಗಳ ಬಗ್ಗೆ ಪ್ರಬಂಧಗಳಿವೆ.
ನನಗೆ ಈ ಕೃತಿಯಲ್ಲಿ ವಿಶೇಷವಾಗಿ ಕಂಡ ಒಂದೆರಡು ಲೇಖನದ ಬಗ್ಗೆ ಪ್ರತ್ಯೇಕವಾಗಿ ಹೇಳಬಯಸುತ್ತೇನೆ. ‘ಮಲೆನಾಡ ಮಳೆದಿನದ ಮಾತುಗಳು ಮೌನಗಳು’ ಎಂಬ ಪ್ರಬಂಧದಲ್ಲಿ ಯೋಗಿಂದ್ರ ಅವರು ಇಂಗ್ಲೆಂಡ್ ವಿಷಯವನ್ನು ಪಕ್ಕಕ್ಕಿಟ್ಟು ತಮ್ಮ ಹುಟ್ಟೂರಾದ ಮರವಂತೆಯಿಂದ ಹೊರಟು ಕೊಲ್ಲೂರು ಘಾಟಿಯನ್ನು ದಾಟಿ ಒಳ ಮಲೆನಾಡಿನ ಹಿಂಸೋಡಿಗೆ ಹೋಗಿಬರುವ ಪ್ರಸಂಗ ವಿಶೇಷವಾಗಿದೆ. ಇಲ್ಲಿ ಮಲೆನಾಡಿನ ಮುಂಗಾರು ಮಳೆಯ ವರ್ಣನೆ, ದಟ್ಟವಾದ ಹಸಿರು ಕಾಡುಗಳು, ಮಳೆಯ ಹೊದಿಕೆಯಲ್ಲಿ ಮುಸುಕು ಹಾಕಿಕೊಂಡು ಮಾತನಾಡುವ ಮರಗಳು, ಕತ್ತಲಿಗೂ ಧ್ವನಿ ಭಾಷೆ ನೀಡುವ ಕಪ್ಪೆ ಜೀರುಂಡೆಗಳು, ಶರಾವತಿಯ ಹಿನ್ನೀರಿನ ದಡದಲ್ಲಿ ಚುರುಮುರಿ ಅಂಗಡಿ ಇಟ್ಟುಕೊಂಡಿರುವಾಕೆಯ ಅನಾನುಕೂಲಗಳು, ಸಮಸ್ಯೆಗಳು, ಅವಳ ದುಃಖದ ಮಾತುಗಳಿಗೆ ಹೊಂ ಹೌದು ಎಂದು ಧ್ವನಿಗೂಡಿಸುವ ಸೌತೆಕಾಯಿ, ಮೆಣಸು ಮತ್ತು ಮಂಡಕ್ಕಿಗಳು; ಹೀಗೆ ಅಲ್ಲಿ ಅನೇಕ ಸುಂದರ ಚಿತ್ರಗಳು ರೂಪಕಗಳು ತೆರೆದು ನಿಲ್ಲುತ್ತವೆ. ಇನ್ನೊಂದು ಮರವಂತೆ ಮಳೆಗೆ ಸಂಬಂಧಿಸಿದ ಪ್ರಬಂಧದಲ್ಲಿ ಕರಾವಳಿಯಲ್ಲಿ ಸುರಿಯುವ ಮಳೆಯ ವರ್ಣನೆ ಅದ್ಭುತವಾಗಿದೆ, ಹಾಗೆ ಲೇಖಕರಿಗೆ ಬೀಳುವ ಕನಸೊಂದರಲ್ಲಿ ಮಳೆ ಒಂದು ಕನ್ಯೆಯಾಗಿ ಬಂದು ಅವಳ ಮತ್ತು ಲೇಖಕನ ಪ್ರೇಮ ಪ್ರಸಂಗ ತೆರೆದುಕೊಂಡು ಅಲ್ಲಿ ಸಂವಾದ ಆತ್ಮೀಯವಾಗಿ ಶೃಂಗಾರ ಕಾವ್ಯವೇ ಸೃಷ್ಟಿಯಾಗಿದೆ. ಯೋಗಿಂದ್ರ ಅವರು ಬ್ರಿಟನ್ನಿನ ಬಗ್ಗೆ ಬರೆಯುವ ವಿಚಾರಕ್ಕಿಂತ ಅವರ ಊರಾದ ಮರವಂತೆಯ ಬಗ್ಗೆ ಬರೆಯುವಾಗ ಅವರ ಬರಹ ಇನ್ನು ಉಜ್ವಲವಾಗುತ್ತದೆ. ಹಾಗೆಯೇ ಯೋಗಿಂದ್ರ ಅವರು ತಮ್ಮ ವೈಯುಕ್ತಿಕ ಬದುಕಿನ ಅನುಭವಗಳನ್ನು ಸೇರಿಸಿ ಬರೆದಾಗ ಅದು ಓದುಗರಿಗೆ ಆತ್ಮೀಯವಾಗುತ್ತದೆ.
'ಭಾನುವಾರದ ಇಟಾಲಿಯನ್ ಕಟಿಂಗ್' ಬಹಳ ಶ್ರೇಷ್ಠವಾದ ಪ್ರಬಂಧ. ಈ ಪ್ರಬಂಧಕ್ಕೆ ಸುಧಾ ಪತ್ರಿಕೆಯ ಯುಗಾದಿ ವಿಶೇಷಾಂಕದಿಂದ ಬಹುಮಾನ ದಕ್ಕಿದೆ. ಇಲ್ಲಿ ಹೇರ್ ಕಟಿಂಗ್ ಎಂಬ ಸಾಧಾರಣ ವಿಷಯದಲ್ಲಿ ಯೋಗಿಂದ್ರ ಅವರು ಅನೇಕ ಚಿಂತನೆಗಳನ್ನು, ಪ್ರತಿಮೆಗಳನ್ನು, ರೂಪಕಗಳನ್ನು ತಂದು ನಿಲ್ಲಿಸಿದ್ದಾರೆ. ತಗ್ಗಿಸಿದ ತಲೆ, ತಗ್ಗಿಸದೆ ಉಳಿದು ಕೊನೆಗೂ ತಗ್ಗಿಸಬೇಕಾದ ತಲೆ, ಅಹಂಕಾರ, ಅಜ್ಞಾನ, ಅರಿವಿನ ವಿಸ್ತಾರ, ಸಾಂಸ್ಕೃತಿಕ ವೈವಿಧ್ಯತೆ, ಸಂಘರ್ಷಗಳು, ಇವುಗಳನ್ನು ಒಳಗೊಂಡು ಕೊನೆಗೆ ಹೇರ್ ಕಟ್ ಮಾಡಿದಾಗ ಉರುಳಿದ ಎಲ್ಲ ಬಣ್ಣಗಳ, ಊರುಗಳ, ದೇಶಗಳ, ಜಾತಿಗಳ ಕೂದಲನ್ನು ನುಂಗಿಬಿಡುವ ಕಸದ ಬುಟ್ಟಿ ಇಲ್ಲಿ ಬಾಹ್ಯಾಕಾಶದ ಬ್ಲಾಕ್ ಹೋಲಿನ (Cosmic Black Hole) ಪ್ರತಿಮೆಯಾಗಿ ನಿಲ್ಲುತ್ತದೆ. ಇಲ್ಲಿ ಕಾಲನ ಮಹಿಮೆಯಿದೆ. ಒಂದು ಸಣ್ಣ ಪ್ರಸಂಗದಲ್ಲಿ ಇಡೀ ಬದುಕಿನ ಅನುಭವವನ್ನು ಸಾರಾಂಶವನ್ನು ಯೋಗಿಂದ್ರ ಈ ಶ್ರೇಷ್ಠ ಪ್ರಬಂಧದಲ್ಲಿ ಹಿಡಿದಿಟ್ಟಿದ್ದಾರೆ.
ಈ ಬರಹಗಳಲ್ಲಿ ಯೋಗಿಂದ್ರ ಅವರ ಸೌಂದರ್ಯ ಪ್ರಜ್ಞೆ, ಕಾವ್ಯ ಪ್ರಜ್ಞೆ, ಎದ್ದು ನಿಲ್ಲುತ್ತವೆ. ಕೆಲವು ಕಡೆ ಅವರು ಬಳಸುವ ಪದಗಳು, ಆದಿಪ್ರಾಸಗಳು, ರೂಪಕಗಳು, ಮತ್ತು ಉಂಟಾಗಿರುವ ಛಂದಸ್ಸು ಒಂದು ಗದ್ಯವನ್ನು ಪದ್ಯವಾಗಿ ನಿರೂಪಿಸುತ್ತದೆ, ಯೋಗಿಂದ್ರ ಇಲ್ಲಿ ಒಬ್ಬ ಕವಿಯೂ ಆಗಿದ್ದಾರೆ. ಕೆಲವೆಡೆ ಅವರು ಪದಗಳನ್ನು ಬಳಸಿ ಒಂದು ಸನ್ನಿವೇಶವನ್ನು ಕಟ್ಟುವಾಗ ಅಲ್ಲಿ ಒಂದು ಚಲನ ಶೀಲತೆ ಉಂಟಾಗುತ್ತದೆ. ಸ್ಥಾವರವು ಜಂಗಮವಾಗುತ್ತದೆ. ಬರಹದಲ್ಲಿಯ ನೋಟ, ಶಬ್ದ, ವಾಸನೆ, ಕ್ರಿಯೆ ಇವುಗಳಿಂದ ಒಂದು ಚಪ್ಪಟ್ಟೆಯಾಗಿರುವ ಸಾಲುಗಳು ಹಲವಾರು ಆಯಾಮಗಳನ್ನು ಪಡೆದುಕೊಂಡು ಒಂದು ಒಂದು ವರ್ಚುಯಲ್ (4D) ಅನುಭವ ಉಂಟಾಗುತ್ತದೆ. ಈ ರೀತಿಯ ವಿಶೇಷ ಅನುಭವವನ್ನು ಅರುಂಧತಿ ರಾಯ್ ಅವರ 'ಗಾಡ್ ಆಫ್ ಸ್ಮಾಲ್ ಥಿಂಗ್ಸ್ 'ಎಂಬ ಎಂಬ ಕೃತಿಯಲ್ಲೂ ಕಂಡಿದ್ದನ್ನು ಇಲ್ಲಿ ನೆನೆಯ ಬಯಸುತ್ತೇನೆ.
ಒಂದು ಬರಹ ಯಾವಾಗ ಪ್ರಬಂಧ ಸಂಕಲನವಾಗುತ್ತದೆ? ಮತ್ತು ಯಾವಾಗ ಬಿಡಿ ಬರಹವಾಗುತ್ತದೆ? ಎಂಬ ಆಲೋಚನೆ ಒಬ್ಬ ಓದುಗನಾಗಿಯೂ ಮತ್ತು ಲೇಖಕನಾಗಿಯೂ ನನ್ನನು ಕಾಡಿರುವ ವಿಚಾರ. ಸಾಮಾನ್ಯವಾಗಿ ಪ್ರಬಂಧ ಸಂಕಲನ ಒಂದು ವಿಷಯ ಮಾದರಿಯನ್ನು ಕುರಿತಾದ ಧೀರ್ಘವಾದ ಮತ್ತು ಆಳವಾದ ಅಧ್ಯಯನ. ಅಲ್ಲಿ ವೈವಿಧ್ಯತೆ ಇದ್ದರೂ ಅದು ಒಂದು ನಿರ್ದಿಷ್ಟ ವಿಷಯದ ಚೌಕಟ್ಟಿನೊಳಗೇ ಇರುತ್ತದೆ. ಬಿಡಿ ಬರಹಕ್ಕೆ ಆ ಬದ್ಧತೆ ಇರುವುದಿಲ್ಲ. ಅಲ್ಲಿ ವ್ಯಕ್ತಿ ಚಿತ್ರಣ, ಒಂದು ಸಂಸ್ಕೃತಿಯ ಪರಿಚಯ, ಸಾಹಿತ್ಯ, ಕಲೆ, ವಿಜ್ಞಾನ, ವಿಮರ್ಶೆ, ಹೇಗೆ ಅನೇಕ ವಿಚಾರಗಳ ಕಲಸು ಮೇಲೋಗರವಾಗಿರುತ್ತದೆ. ವೈಯುಕ್ತಿಕ ಅನುಭವಗಳನ್ನು, ಸನ್ನಿವೇಶಗಳನ್ನು ಒಳಗೊಂಡು ಲೇಖಕನ ವೈಯುಕ್ತಿಕ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಬಿಡಿ ಬರಹದಲ್ಲಿ ಹೆಚ್ಚು ಅವಕಾಶವಿರಬಹುದು. ಅಂದಹಾಗೆ ಒಂದು ಕಥೆ ಕಾದಂಬರಿಯನ್ನು ಬರೆಯುವುದಕ್ಕಿಂತ ಪ್ರಬಂಧ ಮತ್ತು ಬಿಡಿ ಬರಹವನ್ನು ಬರೆಯುವುದು ಸುಲಭ ಎನ್ನುವುದು ನನ್ನ ಅನಿಸಿಕೆ. ಒಂದು ಉತ್ತಮ ಪ್ರಬಂಧವನ್ನು ಬರೆಯಬೇಕಿದ್ದಲ್ಲಿ ಯೋಗಿಂದ್ರ ಅವರ "ಕಾಣುವ ಕಣ್ಣು" ಅಗತ್ಯ. ಹಾಗೆಯೇ ಅಲ್ಲಿ ಹಿನ್ನೆಲೆ ವಿಚಾರಗಳನ್ನು ಸಂಶೋಧನೆ ಮಾಡಿ ಮಾಹಿತಿಗಳನ್ನು ರಸವತ್ತಾಗಿ ಸ್ವಾರಸ್ಯಕರವಾಗಿ ಕಾವ್ಯಮಯವಾಗಿ ವ್ಯಕ್ತಪಡಿಸಿ ಹಲವಾರು ದೃಷ್ಠಿಕೋನಗಳನ್ನು ತರಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅದು ಮಾಹಿತಿಗಳನ್ನು ವೈಕಿಪೀಡಿಯಾದಿಂದ ಓದಿದ ಶೈಕ್ಷಣಿಕ ಒಣ ಅನುಭವವಾಗುತ್ತದೆ. ಯೋಗಿಂದ್ರ ಅವರ ಇತರ ಕೃತಿಗಳನ್ನು ಹೊತ್ತು ತಂದಿದ್ದೇನೆ. ಅವುಗಳನ್ನು ಓದಲು ಕಾತರನಾಗಿದ್ದೇನೆ. ಒಟ್ಟಾರೆ ಹೇಳುವುದಾದರೆ 'ಲಂಡನ್ ಡೈರಿ' ಎಂಬ ಪ್ರಬಂಧ ಸಂಕಲನ ನನ್ನ ಅರಿವಿನ ವಿಸ್ತಾರವನ್ನು ಹೆಚ್ಚಿಸಿದೆ. ಎಲ್ಲರೂ ಓದಬೇಕಾದ ಪುಸ್ತಕ.
***
ಒಂದು ರೀತಿಯಿಂದ ಇದು ಇಂಗ್ಲೆಂಡಿನ ದೊರೆ ಮೂರನೆಯ ರಿಚರ್ಡ್ ನ ಇತಿಹಾಸದ ಬಗ್ಗೆ ನಾನು ಬರೆದ ಲೇಖನದ (https://wp.me/p4jn5J-3Sw) ಹಿಂದೆ ಸರಿದ ಭಾಗ! ಅದರಲ್ಲಿ ಆತನ ಮರಣದ ನಂತರದ ಘಟನೆಗಳ ವಿಶ್ಲೇಷಣೆಯಿದ್ದರೆ ಇದರಲ್ಲಿ ಆತ ಸಾವನ್ನಪ್ಪಿದ ಜಾಗದ ಸ್ಥಳಪುರಾಣ ಇದೆ. ಅಲ್ಲಿ ನೋಡುವದೇನು ಇದೆ? ಇದೇ ಪ್ರಶ್ನೆಯನ್ನು ಸ್ಟೇನ್ಸ್ಟಪಕ್ಕದ ರನ್ನಿಮೀಡ್ ಬಗ್ಗೆಯೂ ಕೇಳಬಹುದು. ಅಲ್ಲಿ ಮ್ಯಾಗ್ನಾ ಕಾರ್ಟಾದ ಮೇಲೆ ಸಹಿ ಆಗಿತ್ತು. ಅಲ್ಲಿ ಇತಿಹಾಸವಿದೆ. ಇಂಥ ಐತಿಹಾಸಿಕ ಸ್ಥಳಗಳಲ್ಲೆಲ್ಲ ಅದರ ಹಿಂದಿನ ಐತಿಹಾಸಿಕ ಸಂಗತಿಗಳೇ ರೋಚಕ. ಇತಿಹಾಸ ಎದ್ದು ಬರುತ್ತದೆ; ವ್ಯಕ್ತಿಗಳು, ರಾಜರು ಜೀವ ತಳೆದು ಮಾತಾಡುತ್ತಾರೆ! ಒಂದು ವಿಷಯ: ನಾವು ಲ್ಯಾಂಕಾಸ್ಟರಿನ ಕೆಂಪು ಮತ್ತು ಯಾರ್ಕ್ ಶೈರಿನ ಬಿಳಿ ಗುಲಾಬಿ ಲಾಂಛನಗಳ ಬಗ್ಗೆ ಓದುತ್ತೇವೆ. ಆದರೆ ಅವುಗಳು ಆಗ ಲಾಂಛನವಾಗಿರಲಿಲ್ಲ. ಸೈನಿಕರು ಹೊತ್ತ ಬಿಳಿ ಬ್ಯಾಜಿನ ದಾಖಲೆ ಮಾತ್ರ ಇದೆ. ಶೇಕ್ಸ್ಪಿಯರನ ನಾಟಕದಲ್ಲಿ ಮತ್ತು ನಂತರದ ಹತ್ತೊಂಬತ್ತನೆಯ ಶತಮಾನದ ಬರವಣಿಗೆಗಳಲ್ಲಿ ಈ ಸಂಜ್ಞೆಗಳಿಗೆ ಪ್ರಚಾರ ಬಂದಿತು. -(ತತ್ಕಾಲ ಸಂ!)
ಮೂರನೆಯ ರಿಚರ್ಡ್ ಮೊದಲು ಸ್ವಲ್ಪ ಇತಿಹಾಸ
ಮೇಲಿನ ಮಾತುಗಳ ಅರ್ಥವಾಗಲು ಕೆಲವು ಐತಿಹಾಸಿಕ ವಿಷಯಗಳನ್ನು ಅರಿತುಕೊಳ್ಳಬೇಕಾಗುತ್ತದೆ. ಬಹಳಷ್ಟು ಜನರಿಗೆ ಇಂಗ್ಲೆಂಡಿನ ಎರಡು ಎರಡು ಪ್ರಮುಖ ರಾಜವಂಶ ಪಂಗಡಗಳಾದ ಲ್ಯಾಂಕಾಸ್ಟರ್ ಮನೆತನ (ಲಾಂಛನ ಕೆಂಪು ಗುಲಾಬಿ) ಮತ್ತು ಯಾರ್ಕ್ ಮನೆತನಗಳ (ಬಿಳಿ ಗುಲಾಬಿ) ಮಧ್ಯೆ 30 ವರ್ಷಗಳ ಕಾಲ ನಡೆದ 15 ಯುದ್ಧಗಳ ಬಗ್ಗೆ (”ದ ಬ್ಯಾಟಲ್ ಆಫ್ ದಿ ರೋಸಸ್”) ಗೊತ್ತಿದ್ದರೂ ಅದು ಮುಕ್ತಾಯವಾದ ಬಾಸ್ವರ್ತ್ಎನ್ನುವ ಊರಿನ ಹತ್ತಿರದ ಈ ತಗ್ಗು, ದಿನ್ನೆ ಮತ್ತು ಚೌಗು ಪ್ರದೇಶದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲಿಕ್ಕಿಲ್ಲ. ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಕಾದ ದಾಯಾದಿಗಳಾದ ಕೌರವ ಪಾಂಡವರಂತೆಯೇ ಇಂಗ್ಲೆಂಡಿನ ಕಿರೀಟಕ್ಕಾಗಿ ಹೋರಾಡಿದ ಈ ಎರಡೂ ಮನೆತನಗಳೂ 14 ನೆಯ ಶತಮಾನದಲ್ಲಿ ಆಳಿದ ಮೂರನೆಯ ಎಡ್ವರ್ಡ್ ಪ್ಲಾಂಟಾಂಜನೆಟ್ ದೊರೆಯ ಸಂತತಿಗಳೇ! ಅ ಕರಾಳ ದಿನ ಬೆಳಗಿನ ಸಮಯ (22ನೆಯ ಆಗಸ್ಟ್, 1485) ಬಾಸ್ವರ್ತ್ ಯುದ್ಧದಲ್ಲಿ ಮೂರನೆಯ ರಿಚರ್ಡ್ ಇಂಗ್ಲೆಂಡಿನ ಪಟ್ಟಕ್ಕಾಗಿ ಎದುರಾಳಿಯಾದ (ಮುಂದೆಏಳನೆಯ ಹೆನ್ರಿ ಎಂದು ಕರೆಯಲ್ಪಡಲಿರುವ) ಹೆನ್ರಿ ಟ್ಯೂಡರ್ ನ ದಂಡಿನ ಮೇಲೆ ರಾಜ ಸ್ವತಃ ಏರಿ ಹೋದಾಗ ತಲೆಗೆ ವೈರಿಯ ಹ್ಯಾಲ್ಬರ್ಡ್ (halberd) ಎನ್ನುವ ಭೀಕರ ಶಸ್ತ್ರದ ಪ್ರಹಾರದಿಂದ ಮರಣಹೊಂದಿದ. ಆತನ ಕುದುರೆಯ ಕಾಲುಗಳು ಕೆಸರಿನಲ್ಲಿ ಸಿಕ್ಕಿಕೊಂಡಿದ್ದರಿಂದ ಕೆಳಗಿಳಿಯಬೇಕಾಗಿ ಅಲ್ಲಿಂದಲೆ ಧೈರ್ಯದಿಂದ ಮುನ್ನುಗ್ಗಿದ್ದ ರಿಚರ್ಡ್ ಯುದ್ಧರಂಗದಲ್ಲಿ ಮೃತನಾದ ಇಂಗ್ಲೆಂಡಿನ ಕೊನೆಯ ಅರಸನೂ ಆಗಿದ್ದಾನೆ. ಆತ ಆಳಿದ್ದು ಬರೀ ಹದಿನಾಲ್ಕು ವರ್ಷ ಮಾತ್ರ.
ಬಾಸ್ವರ್ತ್ ಯುದ್ಧರಂಗ
ನೆರಳು ಗಡಿಯಾರ (Sun dial with the crown of Richard III)
ಧರ್ಮಕ್ಷೇತ್ರೇ ಕುರುಕ್ಷೇತ್ರೇ!
ಆಗ ಪ್ರಾಟೆಸ್ಟೆಂಟ್ ಮತ ಹುಟ್ಟಿರಲಿಲ್ಲ. ರಿಚರ್ಡನ ಪೂರ್ವಜರಿಗೆ ಫ್ರಾನ್ಸ್ ದೇಶದ ಸಂಬಂಧವಿತ್ತು ಅಂತ ಆತನೂ ಕ್ಯಾಥಲಿಕ್ ಆಗಿದ್ದ. ಆತ ಮೃತನಾದ ಮೇಲೆ ಆತನ ದೇಹವನ್ನು ಹತ್ತಿರದ ಲೆಸ್ಟರಿನ ಫ್ರಾನ್ಸಿಸ್ಕನ್ ಫ್ರಯರಿ ಚರ್ಚಿನಲ್ಲಿ ಗಡಿಬಿಡಿಯಿಂದ ಮಣ್ಣು ಮಾಡಲಾಗಿತ್ತು. ಅದರ ಗುರುತುಗಳೆಲ್ಲ ಮಾಯವಾಗಿದ್ದವು. ಮುಂದೆ ಆ ಸ್ಥೂಲಕಾಯದ, ಷಟ್ಪತ್ನಿವ್ರತ (!) ಎಂಟನೆಯ ಹೆನ್ರಿ ಪೋಪನನ್ನು ಮಾನ್ಯ ಮಾಡದೆ ಪ್ರಾಟೆಸ್ಟೆಂಟ್ ಆದ. ಆತ ಫ್ರಯರಿಗಳನ್ನು (Friary) ರದ್ದುಗೊಳಿಸಿದ. ಸೋರ್ ನದಿಯಲ್ಲಿ ರಿಚರ್ಡನ ಅಸ್ಥಿಯನ್ನು ಚೆಲ್ಲಲಾಯಿತೆಂದೆಲ್ಲ ವದಂತಿ ಹಬ್ಬಿತ್ತು. ಅದಕ್ಕೆ ಅದನ್ನು ಪತ್ತೆ ಹಚ್ಚಲು ಐದು ಶತಮಾನಗಳೇ ಬೇಕಾಯಿತು. ಆತನ ನಿಷ್ಟ ಅಭಿಮಾನಿಗಳ ಪ್ರಯತ್ನದಿಂದ ಸಂಶೋಧನೆ ಪ್ರಾರಂಭವಾಗಿ ಆ ಚರ್ಚಿನ ಗುರುತು ಹಿಡಿದು ಕಾರ್ ರ್ಪಾರ್ಕಿನಡಿ ಉತ್ಖನನ ಮಾಡಿ ರಿಚರ್ಡನನ್ನು ವಿಜೃಂಭ್ಹಣೆಯಿಂದ ಲೆಸ್ಟರ್ ಕೆಥಿಡ್ರಲ್ನಲ್ಲಿ ಸಮಾಧಿ ಮಾಡಿದ್ದು ಕ್ಯಾಥಲಿಕ್ ಮತದ ಕ್ರಿಶ್ಚಿಯನ್ನರಿಗೆ ಅಸಮಾಧಾನವಾಗಿತ್ತು!
ಕೊನೆಯುಸಿರೆಳೆದವರೆಷ್ಟು ಜನ?
ಹಾಗೆ ನೋಡಿದರೆ ಒಂದು ಸಾವಿರ ಜನ ಮೃತರಾದರೂ, ಎರಡೂ ಕಡೆ ಸೇರಿ ಪಾಲುಗೊಂಡ 22,000 ಯೋಧರ ಸಂಖ್ಯೆ ಕುರುಕ್ಷೇತ್ರದ ಹದಿನೆಂಟು ಅಕ್ಷೌಹಿಣಿ ಸೈನ್ಯಕ್ಕೆ ಹೋಲಿಸಲಾಗದು. ಅದರಲ್ಲಿ ಎರಡುಸಾವಿರ ಯೋಧರು ಫ್ರಾನ್ಸಿನಿಂದ ಬಂದ ಕೂಲಿ ಸೈನಿಕರು (mercenaries). ಈ ದೇಶದ ಅತ್ಯಂತ ಭೀಕರವಾದ ಯಾದವೀ ಕಾಳಗವೆಂದು ಪ್ರಸಿದ್ಧವಾದ ಐವತ್ತು ಸಾವಿರ ಜನ ಭಾಗವಹಿಸಿದ್ದ ಟೌಟನ್ ಯುದ್ಧಕ್ಕೆ ಸಮ ಇದು ಆಗಿರಲಿಲ್ಲ. ಆದರೂ ಇದು ಈ ದೇಶದ ಇತಿಹಾಸಕ್ಕೆ ಅತ್ಯಂತ ಮಹತ್ವದ ತಿರುವು ಕೊಟ್ಟಿತ್ತು. ರಿಚರ್ಡನ ಪತನದಿಂದ ಇಂಗ್ಲೆಂಡಿನ ದೊರೆಯಾದ ಏಳನೆಯ ಹೆನ್ರಿ ಯಾರ್ಕ್ ಮಹಿಳೆಯನ್ನು ಮದುವೆಯಾಗಿ ಎರಡೂ ಪಂಗಡಗಳನ್ನು ಒಂದುಗೂಡಿಸಿದ. ಆತನ ಲಾಂಛನವೇ ಮುಂದೆ ಬಿಳಿ-ಕೆಂಪು ಎರಡೂ ಬಣ್ಣದ ಹೂಗಳೊಂದಿಗೆ ಟ್ಯೂಡರ್ ರೋಸ್ ಆಯಿತು.
ರಿಚರ್ಡನ ಕೊನೆಯ ಮಾತುಗಳು
ಬಾಸ್ವರ್ತ್ ರಣರಂಗದ ಸುತ್ತಲೂ ನಡೆದಾಡಲು ಅನುಕೂಲವಾಗುವ ಪಥ ಅದೆ. ಅಲ್ಲಲ್ಲಿ ಉತ್ತಮ ಮಾಹಿತಿ ಫಲಕಗಳನ್ನು ನಿರ್ಮಿಸಿದ್ದರಿಂದ 500 ವರ್ಷಗಳ ಹಿಂದಿನ ಇತಿಹಾಸ ಜೀವ ತಳೆದು ಸಮರ ಇದುರಿಗೇ ನಡೆಯುತ್ತಿದೆಯೇನೋ ಅಂತ ರೋಮಾಂಚನವಾಗುತ್ತದೆ. ಕುದುರೆಗಳ ಖುರಪುಟ, ಕತ್ತಿ ಗುರಾಣಿಗಳ ಘರ್ಷಣೆಯ ಖಟ್ – ಖಡಲ್, ಮರಣವನ್ನಪ್ಪುತ್ತಿರುವ, ಗಾಯಗೊಂಡ ಸೈನಿಕರ ಆರ್ತ ನಾದ, ಕಿವಿಯನ್ನು ಗಡಚಿಕ್ಕುತ್ತವೆ. ಇಂಥ ಕಾಳಗಗಳಲ್ಲಿ ಕುದುರೆ ಸವಾರರದೇ ಮೇಲುಗೈಯೆಂದ ಮೇಲೆ ಕುದುರೆಯನ್ನು ಕಳೆದುಕೊಂಡು ಕುದುರೆಯಿಂದ ಕೆಳಕ್ಕುರುಳಿದ ರಿಚರ್ಡ್ ದೊರೆ ’ಒಂದು ಕುದುರೆಗಾಗಿ ಏನನ್ನು (ನನ್ನ ರಾಜ್ಯವನ್ನೂ) ಕೊಡಲಾರೆ” ಅಂದನಂತೆ. ಆತನ ಕಿರೀಟ ಹಾರಿತ್ತು ಎದುರಾಳಿಗಳ ಭರ್ಚಿ-ಕೊಡಲಿ ಕೂಡಿದ ಹ್ಯಾಲ್ಬರ್ಡ್ ಶಸ್ತ್ರದಿಂದ ಭೀಕರ ಹತ್ಯೆಯಾಯಿತು..ಶೇಕ್ಸ್ಪಿಯರನ ನಾಟಕದ ಪ್ರಸಿದ್ಧ ಸಾಲುಗಳ ಪ್ರಕಾರ “A horse, a horse, My kingdom for a horse” ಅಂತ ಕನವರಿಸುತ್ತ ಮಡಿದನಂತೆ
ರಾಜನ ಕೊನೆಯ ನೀರಿನ ಗುಟುಕು?
ಬಾಸ್ವರ್ತ್ ರಣಭೂಮಿಯ ಸುತ್ತಿನ ದಾರಿಯ ಹದಿನೇಳನೆಯ ಮತ್ತು ಕೊನೆಯ ವೀಕ್ಷಣಾ ಸ್ಥಾನದಲ್ಲಿ ಹತ್ತೊಂಬತ್ತನೆ ಶತಮಾನದಲ್ಲಿ ಊರ್ಜಿತವಾದ ಒಂದು ಕಲ್ಲುಗುಡ್ಡೆ (Cairn) ಇದೆ. ಅದು ಅಲ್ಲಿ ಹರಿವ ನೀರಿನ ಸೆಲೆಯ ಮೇಲೆ ಕಟ್ಟಲಾಗಿದೆ ಅನ್ನುತ್ತದೆ ಒಂದು ಫಲಕ. ಅದರ ಪಕ್ಕದಲ್ಲೇ ರಿಚರ್ಡನ ಸೈನ್ಯಯುದ್ಧ ಪೂರ್ವ ’ಡೇರೆ’ ಹಾಕಿತ್ತು. ಅಲ್ಲಿಯೇ ಆತ ಕೊನೆಯ ಬಾರಿ ನೀರು ಕುಡಿದನೆಂದು ಪ್ರತೀತಿ. ಆ ಸ್ಥಳವನ್ನು ಇಂದಿಗೂ ನೋಡಿ ನಿಮ್ಮ ಇತಿಹಾಸ ಪಿಪಾಸೆಯನ್ನು ತಣಿಸಿಕೊಳ್ಳಬಹುದು.
ಕೊನೆಗೂ ವಿಜ್ಞಾನದ ತೀರ್ಪು
ಯುದ್ಧದ ನಾಮೋ ನಿಶಾನೆ ಎಲ್ಲ ಅಳಿಸಿ ಹೋಗಿರುವಾಗ ಈ ಜಾಗದಲ್ಲೇ ಆ ರಣರಂಗವಿತ್ತು ಅಂತ ಹೇಗೆ ಸಾಬೀತು ಮಾಡಲಾಯಿತು? ಅದಕ್ಕೆ ಸಹಾಯ ಬಂದುದು ಆಧುನಿಕ ಕಾರ್ಬನ್ ಡೇಟಿಂಗ್ ವಿಜ್ಞಾನ. ಈ ದೇಶದಲ್ಲಿ ಅತ್ಯಂತ ಹಳೆಯ ಚರ್ಚುಗಳಲ್ಲೂ ಉಳಿದಿರುವ ದಾಖಲೆಗಳು ಇತಿಹಾಸವನ್ನು ಜೋಡಿಸಲು ಬಹಳ ಸಹಾಯ ಮಾಡುತ್ತವೆ. ಹುಟ್ಟು, ಬಾಪ್ಟಿಸಮ್ (ನಾಮಕರಣ), ಮದುವೆ, ಶವಸಂಸ್ಕಾರದ ದಾಖಲೆಗಳನ್ನು ಮುತವರ್ಜಿಯಿಂದ ಕಾದಿಡಲಾಗುತ್ತದೆ. ಪಕ್ಕದ ಡಾಡ್ಲಿಂಗ್ಟನ್ ಚರ್ಚಿನ ಶವಸಂಸ್ಕಾರ ದಾಖಲೆಗಳಿಂದ ಇತಿಹಾಸದ ತುಣುಕುಗಳನ್ನು ಜೋಡಿಸಿದ ಮೇಲೆಯೂ ಉಳಿದಿರಬಹುದಾದ ಸಂಶಯಗಳನ್ನು ನಿವಾರಿಸಲು ಆಧುನಿಕ ವಿಜ್ಞಾನ ಸಹಾಯಕ್ಕೆ ಬಂದಿದೆ. ಶತಮಾನಗಳ ಹಿಂದೆ ಲೆಸ್ಟರಿನ ಮಧ್ಯೆ ನೆಲಸಮವಾಗಿ ಹೂತುಹೋದ ಫ್ರಯರಿ ಚರ್ಚಿನಲ್ಲಿ ಸಿಕ್ಕ ಎಲುಬುಗಳು ರಿಚರ್ಡ್ ದೊರೆಯದೇ ಅಂತ ಹಲ್ಲಿನ ಡಿ ಎನ್ ಏ ಸಾಬೀತು ಮಾಡಿದಂತೆ ಬಾಸ್ವರ್ತ್ ಹತ್ತಿರದ ಆಳದ ಮಣ್ಣಿನ ಪೀಟ್ (peat) ಸ್ಯಾಂಪಲ್ಲುಗಳನ್ನು ಕಾರ್ಬನ್ ಡೇಟಿಂಗ್ ಮಾಡಿ ಪರೀಕ್ಷಿಸಿದ ಅಮೇರಿಕೆಯ ಲ್ಯಾಬೋರಟರಿ ಐದು ನೂರು ವರ್ಷಗಳ ಹಿಂದೆ ಇಲ್ಲಿರುವುದೇ ಜವುಳು ಪ್ರದೇಶ (marshland) ಅಂತ ಖಚಿತಪಡಿಸಿತು. ಅದರಿಂದ ರಣರಂಗದ ಸರಿಯಾದ ಜಾಗ ಇದು ಅಂತ ನಿಶ್ಚಿತವಾಯಿತು.ಇವೆಲ್ಲ ಮಾಹಿತಿ ಪಕ್ಕದಲ್ಲಿರುವ ವಿಸಿಟರ್ ಸೆಂಟರ್ ನಲ್ಲಿರುವ ಉತ್ತಮ ಮ್ಯೂಸಿಯಮ್ ದಲ್ಲಿ ದೊರಕುತ್ತವೆ.
ಕೊನೆಯ ಮಾತು
ಇತಿಹಾಸದಿಂದ ಏನು ಉಪಯೋಗ ಎಂದು ಅನೇಕರ ಅಭಿಪ್ರಾಯವಾದರೂ ಜಾರ್ಜ್ ಸಾಂಟಾಯನ ಹೇಳಿದಂತೆ ಇತಿಹಾಸವನ್ನರಿಯದವರು ಮತ್ತೆ ಮತ್ತೆ ಅವೇ ತಪ್ಪುಗಳನ್ನು ಮಾಡುವ ಶಾಪಗ್ರಸ್ತರಾಗುತ್ತಾರೆ! ಇತಿಹಾಸವನ್ನು ತುಳಿದರೆ ಅದು ನಿನ್ನನ್ನು ನೆಲಸಮಮಾಡುತ್ತದೆ! ಆದರೆ ಮಾನವ ಇತಿಹಾಸದ ತುಂಬೆಲ್ಲ ಈರ್ಷೆ, ದ್ವೇಷಗಳಿಂದ ಯುದ್ಧಗಳಾಗುತ್ತಿರುವಾಗ ಅತ್ಯಂತ ಪುರಾತನ ಉಪನಿಷತ್ತಿನ ವಾಕ್ಯ ’ಮಾ ವಿದ್ವಿಷಾವಹೈ’ (ವೈಮನಸ್ಸು, ದ್ವೇಷ ಬೇಡ) ಯನ್ನು ಯಾರೂ ಕೇಳಿಸಿಕೊಂಡಿಲ್ಲವೇ? ಎಂದೆನಿಸುತ್ತದೆ
ಶ್ರೀವತ್ಸ ದೇಸಾಯಿ.
(ಈ ವಾರದ ಕನ್ನಡಪ್ರಭದಲ್ಲಿಯ ನನ್ನ ಲೇಖನದ ವಿಸ್ತೃತ ಆವೃತ್ತಿ)
ಅನಿವಾಸಿ ಬಳಗಕ್ಕೆ ನಮಸ್ಕಾರ. ಯುಗಾದಿ, ರಾಮನವಮಿ, ಹನುಮಜಯಂತಿ, ಕೋಸಂಬರಿ-ಪಾನಕ, ಮಾವು ಎಂದೆಲ್ಲ ಚೈತ್ರದ ಸಂಭ್ರಮದಲ್ಲಿ ಮಿಂದೆದ್ದಿದ್ದಾಯಿತು. ಇದೀಗ ಈಸ್ಟರ್ ನ ರಜೆಯ ದಿನಗಳು. ಬೆಳಗ್ಗೆ ಮಕ್ಕಳ ಶಾಲೆಯ ಅವಸರವಿರದ, ತಡ ರಾತ್ರಿಯ ಟಿ.ವಿ. ವೀಕ್ಷಣೆಗೆ ಸೂಕ್ತ ದಿನಗಳು. ಅದಕ್ಕೆಂದೇ ನಮ್ಮ ಅನಿವಾಸಿಯ ಹೊಸ ಬರಹಗಾರರಾದ ಪ್ರಮೋದ್ ಸಾಲಿಗ್ರಾಮ ಅವರು ನೋಡಿ ವಿಶ್ಲೇಷಿಸಿದ ಸಿನೆಮಾವೊಂದರ ಲೇಖನ ಇಂದಿನ ಸಂಚಿಕೆಯಲ್ಲಿದೆ. ನಮ್ಮಲ್ಲಿರುವ ಬಹು ಮಂದಿ ಸಿನೆಮಾಪ್ರಿಯರಿಗೆ ಇದು ಮೆಚ್ಚುಗೆಯಾದೀತೆಂಬ ಭರವಸೆಯಿದೆ. ಜೊತೆಗೆ ನನ್ನದೊಂದು ಲಘು ಹರಟೆಯೂ ಉಂಟು. ಓದಿ ಲಗೂನೆ ಒಂದೆರಡು ಕಮೆಂಟೂ ಮಾಡ್ರಿ. ಹಂಗೇ ಪ್ರಮೋದ್ ಅವರು ಹೇಳಿದ ಸಿನೆಮಾನೂ ನೋಡ್ರಿ..ಅವರ ಅನಿಸಿಕೆಗಳ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನೂ ಹಂಚಗೊಳ್ರಿ. – ಸಂಪಾದಕಿ
ನಾ ಕಂಡ ವಿಡುದಲೈ – ೧
ಬರಹಗಾರ ಜೆಯಮೋಹನ್ ರವರ ಸಣ್ಣಕಥೆ ಆಧಾರಿತ ಸಿನಿಮಾ. ಮೈನಿಂಗ್ ಹೆಸರಲ್ಲಿ ಸರ್ಕಾರವೊಂದು ಜನರಿಗೆ ಮಣ್ಣೆರಚುತ್ತಾ : ಕ್ರಾಂತಿಕಾರಿಯೋರ್ವನನ್ನು ದೇಶದ್ರೋಹಿಯಾಗಿಸಿ ; ಪೊಲೀಸ್ ಪಡೆಯೊಂದು ಅವನ ಬೆನ್ನಟ್ಟಿರುವ ಹಿನ್ನಲೆಯಲ್ಲಿ ಈ ಚಿತ್ರ .
ಪೊಲೀಸ್ ದೌರ್ಜನ್ಯದ ಮುನ್ನಲೆಯಲ್ಲಿ ಡ್ರಾಮಾ ರಚಿಸಿ , ಕಥಾಪಾತ್ರಗಳೆಲ್ಲ ಬಂದು ಕಥೆಗೆ ನಟಿಸಿ ಹೋಗುತ್ತಾರೆ ಅಷ್ಟೇ. ಕಥೆಯೇ ಸಿನಿಮಾದ ಜೀವಾಳ . ಇದು ನಿರ್ದೇಶಕ ವೆಟ್ರಿಮಾರನ್ ಗೆ ಹೊಸದಲ್ಲ- ಅವರ ಹಿಂದಿನ ಸಿನಿಮಾ : ವಿಸಾರಣೈ ಒಂದೊಮ್ಮೆ ನೋಡಿ ಬನ್ನಿ . ಇವರು ಪಾತ್ರಗಳ ನಿಟ್ಟಿನಲ್ಲಿ ಕಥೆ ಹೇಳುವ ಕಲೆಯನ್ನ ,ಹೇಗೆ ಕರಗತ ಮಾಡಿಕೊಂಡ್ದಿದಾರೆ ಅನ್ನೋ ಆಶ್ಚರ್ಯ ನಿಮ್ಮನ್ನ ಪಕ್ಕಾ ಕಾಡುತ್ತದೆ . ಗುಡ್ಡುಗಾಡಿನ ಗ್ರಾಮಸ್ಥರು , ಪೋಲಿಸಿನವರು , ರಾಜಕಾರಣಿ , ಮಾಧ್ಯಮದವರು, ನಾಯಕ -ನಾಯಕಿ ಎಲ್ಲರ ಮಧ್ಯದಲ್ಲೊಂದು balancing act ನಿರ್ದೇಶಕನ ಕೈಚಳಕ . ಮೊದಲ ಹತ್ತು ನಿಮಿಷದ ರೈಲು ಆಕ್ಸಿಡೆಂಟ್ ದೃಶ್ಯದಲ್ಲೇ ದೊಡ್ಡ Long -Shot ಮುಖಾಂತರ ಕ್ಯಾಮೆರಾ ಕಣ್ಣಲ್ಲಿ ಟ್ರೈನ್ ಕಿಟಕಿಯೊ ಳಗೆ ಹೊಕ್ಕು ಗಾಯಗಳು , ಸಾವು ನೋವು , ವೇದನೆ , ಅನುಕಂಪ , ಮನುಷ್ಯತ್ವ ಎಲ್ಲವನ್ನುತೋರಿಸುತ್ತ ಕಥೆಯಲ್ಲಿ ಮುಳಿಗಿಸಿಬಿಡುತ್ತಾರೆ . ನಂತರ ಬರುವುದೆಲ್ಲಾ Bonus.
ದಮನಿತರ ರಕ್ಷಣೆಗೆ ನಿಂತಂತೆ ಇರುವ ಕ್ರಾಂತಿಕಾರಿ ಪೆರುಮಾಳ್ ವಾದಿಯಾರ್ (ವಿಜಯ್ ಸೇತುಪತಿ)ಗೆ ಭಾಗ ಒಂದರಲ್ಲಿ ಕಡಿಮೆ ಪಾತ್ರ ಆದರೂ ಮನಸ್ಸಿಗೆ ಹತ್ತಿರವಾಗುತ್ತಾರೆ . Climax ನಲ್ಲಿ ಬರುವ ಅವರ ಭಾಗ -೨ರ ತುಣುಕುಗಳಲ್ಲಿ powerful Dialogue ನಿಂದ ಮುಂದೇನಾಗಬಹುದು ಅನ್ನೋ ಕುತೂಹಲ.
ಪೊಲೀಸ್ ಇಲಾಖೆಯ ಸಾಮಾನ್ಯ ಪೇದೆ ಕುಮರೇಸನ್(ಸೂರಿ) ಈ ಕಥೆಯ ಮುಖ್ಯ ಪಾತ್ರಧಾರಿ .ಈ ಮುನ್ನ ಬರೀ comedian ಆಗೇ ನಟಿಸಿದಂತ ಸೂರಿ ಅವರನ್ನ ಸಿನಿಮಾದ ಹೀರೋವನ್ನಾಗಿಸಿರುವ ನಿರ್ದೇಶಕರ ಗಟ್ಟಿ ನಿರ್ಧಾರ ಮೆಚ್ಚಬೇಕಾದಂತದ್ದು . ಕಾರಣ ಪಾತ್ರಕ್ಕೆ ಬೇಕಾದ ಮುಗ್ಧತೆ , ಅಸಹಾಯಕತೆ , ಹತಾಶೆ ಇವೆಲ್ಲದರ ಮಧ್ಯೆ ನೈತಿಕತೆಯ ಮೂರ್ತರೂಪ ಸೂರಿ . ತಾನು ತಪ್ಪು ಮಾಡದೆ ಇದ್ದಾಗ ಕ್ಷಮೆ ಕೇಳಲಿಚ್ಛಿಸದ ಛಲವಾದಿ - ಮನಸ್ಸಿಗೆ ಹತ್ತಿರವಾಗುತ್ತಾರೆ . ನಮ್ಮ - ನಿಮ್ಮಂತೆ ವ್ಯವಸ್ಥೆಯ ಮೇಲೆ ಭರವಸೆ ಇಟ್ಟಿರುವ ಕುಮರೇಸ ವಿನಾಕಾರಣ ಪನಿಶ್ಮೆಂಟ್ ತಿನ್ನುವಾಗ ಕರುಳು ಚುರುಕ್ ಅನ್ನತ್ತೆ. ಕುಮರೇಸ- ನಾವೇ ಏನೋ ಅನ್ನಿಸೋ ಅಷ್ಟು ಆಕ್ರಮಿಸುತ್ತಾರೆ , ಪ್ರಭಾವ ಬೀರುತ್ತಾರೆ.
ನಾಯಕಿ ತಮಿಳರಸಿಯಾಗಿ (ಭವಾನಿ ಶ್ರೀ) ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತಾರೆ. ಪರದೆಯ ಮೇಲಿನ ಲವ್ ಟ್ರ್ಯಾಕ್ ನಮ್ಮನ್ನು ಎಲ್ಲೂ ಬೋರ್ ಹೊಡಿಸದಂತೆ ಸಮಗ್ರವಾಗಿ ಮತ್ತು ಅದ್ಭುತವಾಗಿ ಬರೆಯಲಾಗಿದೆ.ಅದಕ್ಕೆ ಕಾರಣ ನಾಯಕಿಯ ಭಾವನಾತ್ಮಕ ಆಘಾತಗಳು , ಜನಾಂಗದ ಹಿನ್ನೆಲೆ, ಫ್ಲ್ಯಾಷ್ಬ್ಯಾಕ್ ಎಲ್ಲವೂ ಕಥೆಗೆ ಪೂರಕವಾಗಿರೊದು. ತುಂಬಾ ಹಿಡಿಸುವ scene ಒಂದು ನೆನಪಿಗೆ ಬರುತ್ತಿದೆ : ಸರಿಯಾಗಿ ಸ್ಪಂದಿಸದ ಕಾರಣ ನಾಯಕಿಯ ಎದುರು ಕುಮರೇಸ ಬಂದು ಬೇಷರತ್ ಕ್ಷಮೆಯಾಚಿಸಿ , ತಪ್ಪನ್ನು ಸಮರ್ಥಿಸಿಕೊಳ್ಳದೆ , ಏನನ್ನೂ ವೈಭವೀಕರಿಸದಿರುವ scene - ತುಂಬಾ Beautiful ಹಾಗೂ Rare ಕೂಡ .
ಕುಮರೇಸನಿಗೆ ನರಕ ತೋರಿಸುವ ವ್ಯವಸ್ಥೆಯ ರೂವಾರಿಯಾಗಿ ಪೊಲೀಸ್ ಅಧಿಕಾರಿ ಓ.ಸಿ (ಚೇತನ್). ಈತ ಚಿತ್ರದ ದೊಡ್ಡ ಅಚ್ಚರಿ. ಪೋಲೀಸರ ದೌರ್ಜನ್ಯದ ಮುಖವಾಗಿ ಮತ್ತು ಕ್ರೂರಿಯಾಗಿ ಪಾತ್ರವನ್ನು ನೆನಪಿನಲ್ಲಿರುವಂತೆ ನಟಿಸಿದ್ದಾರೆ. DSP ಯಾಗಿ ಗೌತಮ್ ವಾಸುದೇವ್ ಮೆನನ್ , Chief Secretary ಆಗಿ ರಾಜೀವ್ ಮೆನನ್ Perfect . ಸಣ್ಣ ಪೋಷಕ ಪಾತ್ರಗಳು ಕೂಡ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಹೊರಗಿನವನು ಹೇಗೆ ಒಳಗಿನವನಾಗುತ್ತಾನೆ ? ನಿರಪರಾಧಿ ಹೇಗೆ ನಿಜಾಯಿತಿ ಅರಿಯುತ್ತಾನೆ ? ಸತ್ಯದಿಂದ ದೂರವಾದ ಮಾಧ್ಯಮಗಳ ಪ್ರಚಾರ , ವ್ಯವಸ್ಥಿತ ರಾಜಕೀಯ, ಮೇಲ್ದರ್ಜೆಯವರ ದರ್ಪ - ಪೊಲೀಸರನ್ನು ಹೊಕ್ಕಿದಾಗ ಜನರಿಗಾಗುವ ಸಂಕಷ್ಟಗಳು ,ಒಳ್ಳೆಯದಾವುದು - ಕೆಟ್ಟದಾವುದು ಎಂಬ ಸಂಘರ್ಷ. ಯಾರ ಪರವಾಗಿ ಹೋರಾಡುವುದು ? ಹೀಗೆ ನಾನಾ ವಿಷಯಗಳನ್ನು ಅವರವರ ದೃಷ್ಟಿಕೋನದಲ್ಲಿ ಹೇಳಿರುವ ಕಥೆ ತೆರೆಯ ಮೇಲೆ ಸ್ಪಷ್ಠವಾಗಿ ಕಾಣಸಿಗುತ್ತದೆ . ಹಾಗಾಗಿ ನಾವು ಕೂಡ ಬರೀ ಪ್ರೇಕ್ಷಕರೆನ್ನುವುದು ಮರೆತು ಹೋಗಿ ಪಾತ್ರಗಳಾಗಿರುತ್ತೇವೆ .
ಪೊಲೀಸ್ ದೌರ್ಜನ್ಯ, Raw ಅಂಡ್ Rustic ಆಗಿ ಮೂಡಿಬರಬೇಕು ಅಂತ ಚಿತ್ರದಲ್ಲಿ ಸಾಕಷ್ಟು Aggression, Nudity, Vulgarity ಎಲ್ಲವೂ ಇದ್ದು disturb ಆಗಿಬಿಡಬಹುದು . ಹಾಗೂ ಚಿತ್ರದಲ್ಲಿ ಅಲ್ಲಲ್ಲಿ ಡಬ್ಬಿಂಗ್ lip Sync issues ಅನ್ನಿಸ್ತು.
ಕ್ಯಾಮೆರಾ ವರ್ಕ್ ವೇಲರಾಜ್ , ಕಲಾ ನಿರ್ದೇಶನ Jackie, ಎಡಿಟರ್ ರಾಮರ್ ನಿಮಗೆ ದೊಡ್ಡ ಸಲಾಂ .ಇಳಯರಾಜರ ಇಂಪಾದ ಸಂಗೀತವಿದೆ. ಹಾಡೊಂದಕ್ಕೆ ಕನ್ನಡತಿ ಅನನ್ಯ ಭಟ್ ದನಿಯಿದೆ. ಸಿನಿಮಾದ geography - locations ಎಲ್ಲವೂ ಕಥೆಗೆ ಪೂರಕ . ಸಿನಿಮಾನೇ ಜೀವನ ಅಂತ ಇಷ್ಟಪಡುವ ಹಲವು ಜನರ ಕೈಂಕರ್ಯದ ಫಲ ವಿಡುದಲೈ . ಪೊಲೀಸ್ ದೌರ್ಜನ್ಯದ ದೃಶ್ಯಗಳು ಬಲು ಹಿಂಸಾತ್ಮಕ - ಸ್ವತಃ ಪೊಲೀಸ್ ಒಬ್ಬಾತನಿಗೂ ತನ್ನ ಕೆಲಸದ ಮೇಲೆ ವಿಷಾದ ಮೂಡಬಹುದು . ಆದರೂ ಸಹ ಸಮುದಾಯದ ತಳವರ್ಗ / ಬುಡಕಟ್ಟು ಜನರ ಕಷ್ಟ-ಕಾರ್ಪಣ್ಯ ಗಳಿಗೆ ಕನ್ನಡಿ . ಮನಸ್ಸು ಕರಗಿ , ನಮ್ಮನು ನಾವೇ ಅರ್ಥೈಸಿಕೊಳ್ಳಬಹುದಾದ ಪ್ರಶ್ನೆಗಳು ಮೂಡುತ್ತವೆ. ಅದಕ್ಕೆ ಏನೋ ಈ ಸಿನೆಮಾಗೆ ವಿಡುದಲೈ ಅಂದರೆ ಬಿಡುಗಡೆ/ಸ್ವಾತಂತ್ರ್ಯ ಅನ್ನೋ ಹೆಸರು.
Rating: ೮೫/೧೦೦
-ಪ್ರಮೋದ್ ಸಾಲಿಗ್ರಾಮ ರಾಮಕೃಷ್ಣ
ಪಂಜಾದ ಮ್ಯಾಲೊಂದು ಪ್ರಬಂಧ
ಸ್ನೇಹಿತರೇ ನಮಸ್ಕಾರ.’ಪಂಜಾನs' ಅಂತ ಒಮ್ಮಿಗಲೇ ಆವಾಕ್ಕಾಗಬ್ಯಾಡ್ರಿ.ಈ ಪಂಜಾ ಹುಲಿ-ಸಿಂಹದ ಪಂಜಾ ಅಲ್ರಿ . ಮತ್ತ ನಮ್ಮ ಬೆಂಗಳೂರು -ಮೈಸೂರಿನ
ಪಂಚೆನೂ ಅಲ್ರಿ.ಯಾಕಂದ್ರ ಆ ಪಂಚೆಯ ಠೀವಿ ಬ್ಯಾರೆನೇ ಇರತದ.ಕೆಂಪು-ಹಸಿರು ಬಣ್ಣದ ಎರಡು ಬಟ್ಟಿನ ಜರದ ಅಂಚೇನು? ಬೆಳ್ಳಗ ಶುಭ್ರ ಕೊಕ್ಕರೆಯಂಥ ಅದರ ಮಿನುಗೇನು?......ಅದಲ್ಲ ತಗೀರಿ,ಇದು ನಮ್ಮ ಉತ್ತರ ಕನಾ೯ಟಕದ ಪಂಜಾsರೀ..
ಜೀವನದಾಗ ಒಂದು ಗುರಿ ಇರಬೇಕು ;ಕೆಲವೊಂದು ರೂಲ್ಸ್ ,ಕಂಡೀಷನ್ಸ ಇರಬೇಕು ಅನ್ನೋದು ಬಲ್ಲವರ ಮಾತು.ನಮ್ಮ ಡಿ.ವಿ.ಜಿ.ಯವರಂತೂ”ಜೀವಗತಿಗೊಂದು ರೇಖಾಲೇಖವಿರಬೇಕು ನಾವಿಕನಿಗೆ ಇರುವಂತೆ ದಿಕ್ಕು ದಿನವೆಣಿಸೆ’ ಅಂತ ಖಡಾಖಂಡಿತವಾಗೇ ಹೇಳಿಬಿಟ್ಟಾರ.ಆದ್ರ ನಮ್ಮ ಈ ಕೈಮಗ್ಗದ , ಖಾದಿಭಂಡಾರದ ಪಂಜಾಕ್ಕ ಇವು ಯಾವ ಮಾತೂ ಅಪ್ಲೈ
ಆಗಂಗಿಲ್ಲ.ಅದಕ್ಯಾವ ಘನಂದಾರಿ ಗೊತ್ತು ಗುರಿ ಏನೂ ಇಲ್ಲ.ಅದರಲೆ ತಲಿ ಅರೆ ಒರಸಕೋರಿ, ಮಾರಿ ಅರೆ ಒರಸಕೋರಿ ,ಮುಸುರಿಗೈ ಅರೆ ಒರಸಕೋರಿ, ಅಳ್ಳಕ ಆಗಿದ್ದ ಹೂರಣ ಅರೆ ಸೋಸರಿ,ಅನ್ನದ ಗಂಜಿ ಬಸೀರಿ,ಶ್ರೀಖಂಡಕ್ಕ ಮಸರರೆ ಕಟ್ರಿ, ಮೊಳಕಿ ಬರಸಲಿಕ್ಕೆ ಕಾಳ ಅರೆ ಕಟ್ಟಿಡ್ರಿ, ದೇವರ ಒರಸೂ ವಸ್ತ್ರ ಮಾಡ್ರಿ,ಮಡೀಲೆ ಒಣಗಹಾಕಿ ದೇವರ ಪೂಜಾ ಅರೇ ಮಾಡ್ರಿ ..ಇಲ್ಲಾ ಶ್ರಾದ್ಧ-ಪಕ್ಷ -ತಿಥಿ ಮಾಡ್ರಿ.. ಎಲ್ಲಾ ನಡೀತದ.ಫಲಾಫಲದ ಚಿಂತೆಯಿಲ್ಲದ ಕಮ೯ಯೋಗಿಯಂತೆ ಯಾವ ಕೆಲಸವನ್ನಾದರೂ ನಿಷ್ಠೆಯಿಂದ ಮಾಡುವ ಹಿರಿಮೆ ಇದರದು.ನಾ ಮೊದಲೇ ಹೇಳಿದ್ಹಂಗ ಇದು ಯಾವ ನಿಯಮಗಳ ಮುಲಾಜಿಲ್ಲದ ಸವ೯ತಂತ್ರ ಸ್ವತಂತ್ರ ವಾದದ್ದು.ಅದಕ್ಕ ಯಾವದೇ ಪಂಜಾದ ಮ್ಯಾಲೂ ‘ವಾಶಿಂಗ್ ಇನ್ ಸ್ಟ್ರಕ್ಶನ್ಸ’ ಇರಂಗಿಲ್ಲ ನೋಡ್ರಿ.”only hand wash,only dry clean ,keep away from the fire,only machine wash in 40 degree ,do not iron ..ಇಂಥ ಯಾವ ರಗಳೇನೂ ಇಲ್ಲ.ಕೈಲೇರೆ ಒಗೀರಿ,ಮಶೀನ್ ನಾಗರೆ ಹಾಕ್ರಿ,ಅಗಸರವನಿಗೇ ಕೊಡ್ರಿ...ಎಲ್ಲಾನೂ ನಡೀತದ.ಇದ್ರ ಒಂಚೂರು ನಿರಮಾನೋ,ನೀಲಿಪಾಲಿನೋ ಹಾಕಿದರೂ ನಡದೀತು! ಇಲ್ಲಂದ್ರ ಬರೀ ನೀರಲ್ಲಿ ಕೈಯಿಂದ ಕುಕ್ಕಿ ಹಾಕಿದರೂ ಆಯಿತು.ಬಿಚ್ಚಿ ಹರವಿದ್ರ ಐದು ನಿಮಿಷದಾಗ ಒಣಗೇ ಬಿಡತದ. ಇಸ್ತ್ರಿ ಪಸ್ತ್ರಿ ಮಾಡೂ ತಂಟೆನೂ ಇಲ್ಲ.
ಇನ್ನು ಇವುಗಳ ಸೈಜೋ? ದಶಾವತಾರದ ವಾಮನನಿಂದ ಹಿಡಿದು ತ್ರಿವಿಕ್ರಮನವರೆಗೆ..ಅಂಗೈ ಅಗಲದಿಂದ ಹಿಡಿದು ನವ್ವಾರಿ ಸೀರಿಯಷ್ಟು ದೊಡ್ಡದೂ ಸಿಗತಾವ.ಕನಾ೯ಟಕ ಬಿಟ್ಟು ಸುಮಾರು ೨೫ ವಷ೯ಗಳಿಂದ ದೆಹಲಿ – ಲಂಡನ್ ಅಂತ ಎಲ್ಲೇ ಅಡ್ಡಾಡಿದರೂ ನಮ್ಮ ಮನೆಯ ಕಪಾಟಿನಾಗ ಪಂಜಾಕ್ಕೊಂದು ಜಾಗ ರಿಸವ್೯ ಇರೂದಂತೂ ಗ್ಯಾರಂಟಿ .ನಾನು ಪ್ರತಿಸಲ ಸೂಟಿಗೆ ಅಂತ ನನ್ನ ತವರು ಮನಿಗೆ ಹೋದ್ರ ಏನು ಬಿಟ್ಟರೂ ,ಬ್ಯಾರೆ ಬ್ಯಾರೆ ಸೈಜಿನ ನಾಲ್ಕು ಪಂಜಾ ತರೂದಂತೂ ತಪ್ಪಸಂಗಿಲ್ರಿ.ಎರಕೊಂಡ ಮ್ಯಾಲೆ ಪಂಜಾದಲೆ ತಲಿ ಒರಸಿಕೊಳ್ಳುದರ ಮಜಾನೇ ಬ್ಯಾರೆ.soft ಆದ cotton ಬಟ್ಟಿ...ಸಂಪೂಣ೯ವಾಗಿ ನೀರು ಹೀರಿಕೊಳ್ಳುವ ಅದರ ವೈಶಿಷ್ಟ್ಯ.. ಈ ಟರ್ಕಿ - ಪರ್ಕಿ ಒಳಗ ಆ ಮಜಾ ಇಲ್ಲ ಬಿಡ್ರಿ.
ನಾವು ಸಣ್ಣವರಿದ್ದಾಗ ನಮ್ಮ ಸೋದರಮಾವ ಚ್ಯಾಷ್ಟಿ ಮಾಡತಿದ್ರು...”ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕ: “ ಅಂತ ಶ್ರೀಕೃಷ್ಣಗ ಭಗವದ್ಗೀತಾ ಒಳಗ ಆತ್ಮದ ಲಕ್ಷಣ ಹೇಳೂ ಐಡಿಯಾ ನಮ್ಮ ಸುಬ್ಬಣ್ಣಾಚಾರ್ಯರ ಪಂಜಾ ನೋಡಿನೇ ಬಂದಿರಬೇಕು ಅಂತ.ಹಂಗs ಅವಾಗಿನ ಅಂದ್ರ 60- 70 ರ ದಶಕದ ಸುಬ್ಬಣಾಚಾಯ೯ರಿಂದ ಈಗ 2022-23 ರ ನಮ್ಮ ಪವಮಾನಚಾರ್ಯರತನಕ ಇದರ ಜಾಗ ಏನೂ ಬದಲಾಗಿಲ್ಲ. ನಮ್ಮ ಪವಮಾನಾಚಾರ್ಯರು face-book,WhatsApp ಎಲ್ಲಾದರಾಗೂ ಇದ್ದಾರ.ಕಂಪ್ಯೂಟರ್ ನಾಗ ಕುಂಡಲಿ ತಗೀತಾರ.ವಿಮಾನದಾಗ ಓಡಾಡತಾರ.ಆದ್ರ ಪಂಜಾದ ಜಾಗಾದಾಗ ಮಾತ್ರ ಇನ್ನೊಂದು ಸಾಮಾನು ಬಂದಿಲ್ಲ ನೋಡ್ರಿ.ಇವುಗಳದು ತಲೆ-ತಲಾಂತರದಿಂದ ಒಂಥರಾ ‘ಏಕಮೇವ ಚಕ್ರಾಧಿಪತ್ಯ’. ‘ಸೂಯ೯ನ ಕಾಂತಿಗೆ ಸೂಯ೯ನೇ ಸಾಟಿ .ಹೋಲಿಸಲಾರಿಲ್ಲ.’ ಅಂದ್ಹಂಗ ಪಂಜಾದ ಹಿರಿಮೆಗೆ ಪಂಜಾನೇ ಸಾಟಿ .ಹೋಲಿಸಲಾರಿಲ್ಲ.’ಮಡಿವಾಳರ ಶತ್ರು ,ಮಠದಯ್ಯಗಳ ಮಿತ್ರ....ಲಂಗೋಟಿ ಬಲು ಒಳ್ಳೇದಣ್ಣ - ಒಬ್ರ ಹಂಗಿಲ್ಲದೇ ಮಡಿಗೆ ಒದಗುವುದಣ್ಣ ‘ ಅಂತ ಪುರಂದರದಾಸರು ಹಾಡಿದರಲ್ಲ.....ನಾವು ಬೇಕಾದರ ಲಂಗೋಟಿಗೆ ಪಯಾ೯ಯವಾಗಿ ಪಂಜಾ ಬಳಸಿಕೊಂಡ್ರ ಏನೂ ತಪ್ಪಿಲ್ಲವೇನೋ?! ಈ ಪಂಜಾಗಳಿಗೆ ರೇಶ್ಮೆಯಂಥಾ ರೇಶ್ಮೆಯಿಂದನೂ ಕಾಂಪಿಟೇಶನ್ ಇಲ್ಲ ಬಿಡ್ರಿ.
ಬ್ರಾಹ್ಮಣರ ಮನ್ಯಾಗ ಏನು ಇಲ್ಲಂದ್ರೂ ನಡೀತದ.ಆದ್ರ ಈ ಪಂಜಾ ಇಲ್ಲಂದ್ರ ನಡ್ಯಂಗಿಲ್ಲ ನೋಡ್ರಿ.ದೇವರ ಪೂಜಾದ ಸಮಯಕ್ಕ ಉಪಯೋಗಿಸಿದಂಥ ಪಂಜಾನ್ನ ಆಮ್ಯಾಲೆ ಬಿಚ್ಚಿ ನೋಡಬೇಕ್ರಿ..ಅದರ ಮ್ಯಾಲೆ ಒಂದು ಸುಂದರ ವಣ೯ಚಿತ್ರ , ಒಂದು modern art ಆಗಿಬಿಟ್ಟಿರತದ.ಅಕ್ಷಂತಿ,ಗಂಧ,ಅರಿಶಿನ,ಕುಂಕುಮ ಎಲ್ಲದರ ಸುಂದರ ಚಿತ್ತಾರ...ಇನ್ನ ದೊಡ್ಡ ದೊಡ್ಡ ಸಮಾರಾಧನಿ ಅಡಿಗಿಗೆ ಪಂಜಾ ಬೇಕೇ ಬೇಕ್ರಿ.ದೊಡ್ಡ ದೊಡ್ಡ ಪಾತೇಲಿ ಒಲಿ ಮ್ಯಾಲಿಂದ ಇಳಸಲಿಕ್ಕೆ ಒದ್ದಿ ಪಂಜಾನೇ ಬೇಕ್ರಿ.ಹಾಂ,ಮಸಾಲಿಪುಡಿ,ಖಾರಪುಡಿ ,ಅರಿಶಿನ ಪುಡಿ ಎಲ್ಲಾ ಮೆತ್ತಿದ ಅದರ ಸೌಂದರ್ಯನೇ ಬ್ಯಾರೆ. ಇಷ್ಟ ಯಾಕ್ರಿ ಸ್ವಾಮಿಗೋಳು ಮುದ್ರಾ ಹಾಕಬೇಕಂದ್ರೂ ಈ ಪಂಜಾ ಜೋಡಿಗೆ ಬರಬೇಕ್ರಿ.ಒದ್ದಿ ಪಂಜಾದ ಮ್ಯಾಲೆ ಮುದ್ರಿ ಒತ್ತಿದ ಮ್ಯಾಲೆನೇ ಅದು ನಮ್ಮ ಮೈ ಮ್ಯಾಲೆ ಮೂಡೂದರಿ.
ನಮ್ಮ ಗದಗಿನ ಕುಮಾರ ವ್ಯಾಸನ ಭಾರತಕ್ಕೂ ಇದು ತನ್ನ ಕೊಡುಗೆ ಸಲ್ಲಿಸಿದ್ದ ಗೊತ್ತಿರಬೇಕ ನಿಮಗ. ಬಾವಿ ನೀರಿನ ಸ್ನಾನಮಾಡಿ ಉಟಗೊಂಡಿದ್ದ ಒದ್ದಿ ಪಂಜಾ ಆರೂತನಾ ಕುಮಾರವ್ಯಾಸಗ ಕಾವ್ಯ ಸ್ಫೂರ್ತಿ ಇರತಿತ್ತು ಅಂತಲೂ, ಕಂಬಕ್ಕೆ ಆರಲೆಂದು ಕಟ್ಟಿದ ಪಂಜಾದ ಮ್ಯಾಲ ನಾರಾಣಪ್ಪಗ ಮಹಾಭಾರತ ಸಚಿತ್ರವಾಗಿ ಕಾಣಿಸುತ್ತಿತ್ತು ಅಂತಲೂ ದಂತಕಥೆಗಳು ಪ್ರಚಲಿತದಾಗ ಅವ.
ಹಂಗಂತ ಇದರ ಜಾಗಾ ಬರೇ ಬಡ ಬ್ರಾಹ್ಮಣರ ಮನ್ಯಾಗ ಮತ್ತ ಮಠದಾಗಷ್ಟೇ ಅಂತ ತಿಳಕೋಬ್ಯಾಡ್ರಪಾ.ಇದು ರಗಡ ಸಲ ಬಾಲಿವುಡ್ ಸವಾರಿನೂ ಮಾಡಿ ಬಂದದ.ನಮ್ಮ ರಾಜಕಪೂರ್ ಫ್ಯಾಮಿಲಿಯವರಿಗಂತೂ ಇದು ಫೇವರಿಟ್. ‘ ತುಝೆ ಬುಲಾಯೆ ಯೆ ಮೇರಿ ಬಾಹೇಂ...ಗಂಗಾ ಯೆ ತೇರಿ ಹೈ ಫಿರ್ ಕೈಸಿ ದೇರಿ ಹೈ’ಅಂತಲೂ, ‘ಸತ್ಯಂ ಶಿವಂ ಸುಂದರಂ ‘ ಅಂತಲೂ ಹಾಡಿ ತಾನೂ ಕುಣಿಯೂದಲ್ಲದ ಎಲ್ಲಾರ ಮೈ-ಮನಸ್ಸನ್ನೂ ಕುಣಿಸಿ -ತಣಿಸೇದ ಅನ್ನೂದನ್ನ ಮರೀಬ್ಯಾಡ್ರಿ.
ಇಷ್ಟೆಲ್ಲಾ ಆದ್ರೂ ಸೊಕ್ಕಿಲ್ಲ ನೋಡ್ರಿ ಅದಕ್ಕ.”ತುಂಬಿದ ಕೊಡ ತುಳಕಂಗಿಲ್ಲ “ಅನ್ನೂಹಂಗ ಸದ್ದಿರದೇ ತನ್ನ ಕತ೯ವ್ಯದಲ್ಲಿ ನಿರತವಾಗಿರತದ.ಫಲಾಫಲಾಪೇಕ್ಷೆಯಿಲ್ಲದೇ ,ಮೇಲು -ಕೀಳು ಎನ್ನದೇ ಕಮ೯ಯೋಗಿಯಂತೆ ತಾನಾಯಿತು ತನ್ನ ಕಾಯಕವಾಯಿತು ಎಂಬಂತಿರತದ.
ಮತ್ತ ಇಂಥ ಪಂಜಾಕ್ಕ ಒಂದು ಮೆಚ್ಚುಗಿ ಮಾತ ಬರಲೆಲಾ ನಿಮ್ಮ ಕಡೆಯಿಂದ.
- ಗೌರಿ ಪ್ರಸನ್ನ
“ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ. ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ..,” ಎಂದರು ಸಂತ ಪುರಂದರದಾಸರು . ಆದರೆ, ನನ್ನನಂಥಹ ಮರುಳನ ಮನಸ್ಸು, ರಾಮನವಮಿ ಎಂದಾಗೆಲ್ಲ, ಶ್ರೀರಾಮ್, ಜೈರಾಮ್ ಅಂತ ಭಜಿಸುವ ಬದಲು “ರಾಮನವಮಿಯ ಪಾನಕಕ್ಕೆ ” ಎಂದು ಗುಣುಗುಣಿಸಲು ಶುರು ಹಚ್ಚಿಬಿಡುತ್ತದೆ. ಇದಕ್ಕೆ ನನ್ನ ಬಾಲ್ಯದ ನೆನಪು ಕಾರಣವೆನ್ನಬಹುದು.
ಉಗಾದಿ ಹಬ್ಬದ ಹಿಂದೆಯೇ ಬಂದುಬಿಡುವುದು ರಾಮ ನವಮಿ. ವಿಷ್ಣುವಿನ ಏಳನೇ ಅವತಾರ ರಾಮ ಎನ್ನುತ್ತಾರೆ . ರಾಮನ ಜನ್ಮದಿನವನ್ನು ರಾಮನವಮಿಯೆಂದು ಭಾರತದ ಎಲ್ಲೆಡೆಯಲ್ಲೂ ಆಚರಿಸಲಾಗುತ್ತದೆ. ವಸಂತ ಮಾಸದ ಆಗಮನದ ಜೊತೆ, ಜೊತೆಯಲ್ಲಿ ಆರಂಭ ಈ ಹಬ್ಬ. ಈ ಹಬ್ಬ ಹಿಂದೂ ಧರ್ಮದ ಪರಂಪರೆಯಾದರೂ, ನನ್ನ ಬಾಲ್ಯದ ದಿನಗಳಲ್ಲಿ, ನನ್ನ ಮುಸಲ್ಮಾನ, ಕಿರಿಸ್ತಾನ ಸ್ನೇಹಿತರೂ ಆನಂದದಿಂದ ಇದರಲ್ಲಿ ಭಾಗವಹಿಸುತ್ತಿದ್ದರು. ರಾಮನ ಜನ್ಮದಿನದ ಆಚರಣೆ ಸಮುದಾಯದ ಹಬ್ಬವಾಗಿದ್ದು, ಅವರ ಪೋಷಕರಿಗಾಗಲಿ, ನಮ್ಮ ಪೋಷಕರಿಗಾಗಲಿ ಈ ಧರ್ಮ ದ್ವಂದದ ಬಗ್ಗೆ ಯಾವ ಕಾಳಜಿಯೂ ಇರದಿಲ್ಲದ ಕಾಲವದು. ಸಮುದಾಯ ಹಬ್ಬಗಳು ಜಾತ್ಯತೀತ ಭಾರತದ ಉತ್ತಮ ಉದಾಹರಣೆಯೆನ್ನಬಹುದು.
ಈ ಹಬ್ಬವನ್ನು ನಮ್ಮ ಮನೆಯಲ್ಲಿ ವೈಭವದಿಂದ ಆಚರಿಸದಿದ್ದರೂ, ಅಕ್ಕ ಪಕ್ಕದ ಮನೆಗಳಿಗೆ ನಾವು ತಪ್ಪದೇ ಆಗಾಗ ಭೇಟಿ ಕೊಡುತ್ತಿದುದ್ದರಿಂದ ಹಬ್ಬದ ಸಂಭ್ರಮಕ್ಕೇನು ಕೊರತೆಯಿರಲಿಲ್ಲ. ನಮ್ಮ ನೆರಮನೆಯ ಶೆಟ್ಟರ (ವೈಶ್ಯರ) ಮನೆಯಲ್ಲಿ ಏಗ್ಗಿಲ್ಲದೆ ಕೊಟ್ಟಿದ್ದೆಲ್ಲ ತಿನ್ನುವುದು ನಿಯಮಿತ ಕಾರ್ಯವಾಗಿದ್ದುದರಿಂದ, ಹಬ್ಬದ ದಿನ, ಊಟ ಉಪಚಾರ ಮಾಡಿಸಿಕೊಳ್ಳಲು ನಮಗೆ ನಾಚಿಕೆಯ ಪ್ರಶ್ನೆಯೇ ಇರಲಿಲ್ಲ. ನೆರೆಹೊರೆಯ ಸ್ನೇಹ, ಸಹಾಯ ಬಯಸದೇ ಇದ್ದರೂ ದೊರಕುತ್ತಿದ್ದ ಸಮಾಜ ನಮ್ಮದಾಗಿದ್ಧ ಕಾಲವದು ಅಥವಾ ಟೆಲಿವಿಷನ್ / ಇಂಟರ್ನೆಟ್ ಇರದಿದ್ದ ದಶಕಗಳವು.
ರಾಮನವಮಿಯ ದಿನ ಎಲ್ಲಕ್ಕಿಂತ ಮುಖ್ಯವಾದ ನೆನಪೆಂದರೆ ಪಾನಕ ಮತ್ತುಕೋಸುಂಬರಿಯದು. ಬೆಲ್ಲದ ಪಾನಕ ಬಹಳ ಸಾಮಾನ್ಯ. ಅದರಲ್ಲೂ ಕೆಲವರು ಕರಬೂಜ ಹಣ್ಣಿನ ಮತ್ತು ಬೆಲ್ಲದ ಹಣ್ಣಿನ ಪಾನಕ ಮಾಡಿ ಹಂಚುತ್ತಿದ್ದರು. ಕರಬೂಜದ ಹಣ್ಣನ್ನ ಸಣ್ಣಗೆ ಹೆಚ್ಚಿ ಬೆಲ್ಲದ ನೀರಿನ ಜೊತೆ ಬೆರೆಸಿ ಅಥವಾ ಬೇಲದ ಹಣ್ಣಿನ ತಿರುಳನ್ನ ಕೆರೆದು, ತಿರುಳನ್ನು ಸೂಸಿ ತೆಗೆದು ಪಾನಕಕ್ಕೆ ಬೆರೆಸುತ್ತಿದ್ದರು. ಬರಿಯ ಬೆಲ್ಲದ ಪಾನಕಕ್ಕಿಂತ ಈ ಹಣ್ಣಿನ ಪಾನಕಕ್ಕೆ ಹೆಚ್ಚಿನ ರುಚಿ. ಪಾನಕ ಕುಡಿಯಲು ಹೇಳಿ ಮಾಡಿಸಿದಂತ ಸುಡು ಬಿಸಿಲಿನ ದಿನಗಳವು. ಆಗಿನ್ನೇನು ಫ್ರಿಡ್ಜ್ ಅಥವಾ ಐಸ್ ಕ್ಯೂಬ್ಸ್ ಅದೆಲ್ಲ ಏನಿರಲಿಲ್ಲ. ಕಪ್ಪು / ಕೆಂಪು ಮಡಿಕೆಯ ತಂಪಿನ ಸೊಗಡೂ (ವಾಸನೆ) ಸೇರಿ ಪಾನಕಕ್ಕೆ ರುಚಿಯೋ ರುಚಿ. ಈಗ ಬಿಸಿಲಿನ ದಿನಗಳಲ್ಲಿ ಅತಿ ಬೆಲೆ ತೆತ್ತು ಚೆಂದದ ಪ್ಯಾಕ್ ನಲ್ಲಿರುವ ಐಸ್ಕ್ರೀಂ ತಿಂದರೂ, ಆ ತೃಪ್ತಿ ಸಿಗುವುದಿಲ್ಲ. ಸಿಹಿ ಎಂದರೆ ಮೂಗುಮುರಿಯುವ ನನಗೂ ಸಹ ಹಣ್ಣು ಹಾಕಿದ, ತಣ್ಣನೆ ಬೆಲ್ಲದ ಪಾನಕ ರುಚಿಸುತ್ತಿತ್ತು. ಬಾಲ್ಯದ, ಸ್ನೇಹದ , ಉತ್ಸಾಹದ, ನೆನಪಿನ ಪದಾರ್ಥಗಳು ಪಾನಕದಲ್ಲಿ ಬೆರೆತು, ಸವಿರುಚಿ ಎನಿಸಿರಬಹುದು. ಈಗ ಅದೇ ಪಾನಕ ಯಾರಾದರೂ ಕೊಟ್ಟರೆ “ಸ್ವಲ್ಪವೂ ಚೆನ್ನಾಗಿಲ್ಲ” ಎಂದು ನಾನೇ ಮುಖ ತಿರಿಗಿಸುವ ಸಾಧ್ಯತೆ ಇದೆ. ವಯಸ್ಸಾದಂತೆಲ್ಲ ನನ್ನ ಆಯ್ಕೆಗಳ ನಿರ್ಬಂಧವೂ ಹೆಚ್ಚಾದಂತೆ ಕಾಣುತ್ತದೆ.
ನೆರ ಮನೆಯ ಪಾನಕದ ಸೇವೆಯಾದ ನಂತರ, ಸ್ನೇಹಿತರ ಜೋಡಿ ಹತ್ತಿರದ ದೇವಸ್ಥಾನಕ್ಕೆ ಭೇಟಿ. ನಮ್ಮ ಮನೆಯ ಬಳಿಯಿದ್ದ ಆ ರಾಮನ ದೇವಸ್ಥಾನಕ್ಕೆ ದೊಡ್ಡ ಪ್ರಾಂಗಣವಿದ್ದು , ಅದರಲ್ಲಿ ದೊಡ್ಡ ಆಲದ ಮರವಿತ್ತು. ಸಾಯಂಕಾಲ ಆಯಿತೆಂದರೆ, ಮರದ ತುಂಬಾ ಕೋತಿಗಳು. ಬೆಳೆಗ್ಗೆ ಎದ್ದು ಆಹಾರ ಹುಡುಕಲು ಹೋದ ಕೋತಿಗಳೆಲ್ಲ ಕತ್ತಲಾಗುವ ಮುನ್ನ ಮರ ಸೇರಿಬಿಡುತ್ತಿದ್ದವು. ಶಾಲೆಗೆ ರಜೆ ಬಂತೆಂದರೆ ಆ ದೇವಸ್ಥಾನದಲ್ಲಿ ಬೆಳಗಿನಿಂದ ಸಂಜೆಯವರೆಗೂ, ನಾನು, ನನ್ನ ತಮ್ಮ ಆಟವಾಡಲು ಅ ಹೋಗುತ್ತಿದ್ದೆವು. ದೇವಾಲಯ ಮೂಲೆ, ಮೂಲೆಯೂ ನಮಗೆ ಪರಿಚಿತವಾದ ಜಾಗ. ಪಾನಕ, ಚೆರುಪು ಹಂಚುತ್ತಿದ್ದವರಿಗೆ ನಾವೊಂದು ಉಪದ್ರವ ಎನಿಸರಬಹುದು, ಆದರೆ ಆ ಜಾಗ ಮಕ್ಕಳಿಗೆ ಶಾಲೆಯ ಕೋಣೆಯಷ್ಟೇ ಪರಿಚಿತ. ಅದು ದೇವರ ನೆಲೆ, ಪವಿತ್ರ ಸ್ಥಳ ಎನ್ನುವ ಭಾವ ಬಂದ ನೆನಪು ನನಗಿಲ್ಲ. ಆ ರಾಮನ ದೇವಸ್ಥಾನ ನನ್ನ ಬಾಲ್ಯದ ನೆನಪುಗಳಲ್ಲಿ ಪ್ರತಿಷ್ಟಾಪಿಸಿ ಬಿಟ್ಟಿದೆ.
ಪಾನಕದ ಜೊತೆಗೇ ನೆನಪಾಗುವುದು, ರಾಮನವಮಿ ಸಂಜೆಯ ಕಾರ್ಯಕ್ರಮವಾದ ಸಂಗೀತ ಕಚೇರಿಗಳು. ವಾರಗಟ್ಟಲೆ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಕೆಲವೊಮ್ಮೆ ಹಿಂದೂಸ್ತಾನಿ ಸಂಗೀತದ ಕಚೇರಿಗಳು ನಡೆಯುತ್ತಿದ್ದವು. ಸಂಗೀತದಲ್ಲಿ ಆಸಕ್ತಿಯಿದ್ದವರಿಗೆ ಇದು ರಸದೌತಣ. ಮಕ್ಕಳಿಗೆ ಓದು ತಪ್ಪಿಸಿಕೊಳ್ಳಲು ಮತ್ತೊಂದು ನೆವ. ಕೆಲವು ಹಾಡುಗಳ ಮೊದಲಿನ ಸಾಲುಗಳು ಮತ್ತು ಕೆಲ ಹಾಡುಗಾರರ ಪರಿಚಿತ ಮುಖಗಳು ಇಷ್ಟೇ ಆಗ ನಮ್ಮ ಸಂಗೀತ ಪ್ರಪಂಚ. ಎಂಟು ಘಂಟೆಗೆ ಮನೆ ಸೇರಲೇ ಬೇಕು ಇಲ್ಲದಿದ್ದರೆ ಮುಂಗೋಪಿ ತಂದೆಯನ್ನ ಎದುರಿಸಬೇಕು ಎನ್ನುವ ಭಯದಿಂದ ಓಡಿ ಬಂದು ಮನೆಸೇರಿ ನೆಪಕ್ಕೆ ಪಠ್ಯ ಪುಸ್ತಕ ಹಿಡಿಯುವುದರೊಂದಿಗೆ ನಮ್ಮ ರಾಮನವಮಿಯ ಆಚರಣೆ ಮುಗಿಯುತ್ತಿತ್ತು.
ಕರ್ನಾಟಕದ ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಬೇರೆ, ಬೇರೆ ರೀತಿಯಲ್ಲಿ ಆಚರಿಸುತ್ತಿರಬಹುದು. ಆಂಧ್ರ ಪ್ರದೇಶದ ಗಡಿಯಲ್ಲಿ ವಾಸಿಸುತ್ತಿದ್ದಾಗಿನ ನನ್ನ ಬಾಲ್ಯದ ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಬಾಲ್ಯದ ಕೆಲ ನೆನಪುಗಳನ್ನು ಈ ಲೇಖನ ಕೆದಕಿರಬಹುದಲ್ಲವೆ?
ಆತ್ಮೀಯ ಓದುಗರೆಲ್ಲರಿಗೂ ನಮಸ್ಕಾರ,
ಈ ವಾರದ ಅನಿವಾಸಿ ಸಂಚಿಕೆ ಬಲು ವಿಶೇಷ, ಯುಗಾದಿ ಹಬ್ಬ ಯಾವತ್ತಿಗೂ ತನ್ನೊಂದಿಗೆ ಹೊಸತನ್ನು ಹೊತ್ತು ತರುತ್ತದೆ, ಹಸಿರು,ಚಿಗುರು,ಹೂವು,ಹಣ್ಣು ನಿಸರ್ಗವೇ ಸಂಭ್ರಮ ಹೊದ್ದು ನಿಂತಂತೆ ಭಾಸವಾಗುತ್ತದೆ.
ಹಬ್ಬ ತಪ್ಪಿದರೂ ಹೋಳಿಗೆ ತಪ್ಪದು ಎಂಬ ಗಾದೆ ಮಾತಿನಂತೆ ಅನಿವಾಸಿ ಈ ಸಂಚಿಕೆಯು ಹಬ್ಬದ ಎರಡು ದಿನಗಳ ನಂತರ ಪ್ರಕಟವಾಗುತ್ತಿದೆ, ಆದರೆ ಈ ಲೇಖನಗಳನ್ನ ಓದಿದರೆ ಮತ್ತೆ ನೀವು ಯುಗಾದಿಯ ಸಂಭ್ರಮವನ್ನ ಅನುಭವಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಸಂಚಿಕೆಯಲ್ಲಿ ಮೂರು ಹೊಸ ಲೇಖಕರು ಅನಿವಾಸಿಯಲ್ಲಿ ತಮ್ಮ ಯುಗಾದಿಯ ನೆನಪುಗಳನ್ನ, ಸಂಭ್ರಮ, ಹಬ್ಬದ ಜವಾಬ್ದಾರಿಗಳನ್ನ ಕುರಿತು ಬರೆದಿದ್ದಾರೆ. ಮೂವರು ಲೇಖಕರಿಗೂ ಅನಿವಾಸಿ ಬಳಗಕ್ಕೆ ಸ್ವಾಗತ ಕೋರುತ್ತೇನೆ.ಎಂದಿನಂತೆ ತಾವೆಲ್ಲರೂ ಓದಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.
ತಮಗೆಲ್ಲರಿಗೂ ಈ ಶೋಭಕೃತ್ ಸಂವತ್ಸರ ಶುಭಪ್ರದವಾಗಲಿ ಎಂಬ ಆಶಯದೊಂದಿಗೆ.
-ಅಮಿತಾ ರವಿಕಿರಣ್ (ಸಂ)
ಹಬ್ಬದ ಜವಾಬ್ದಾರಿ - ಚೇತನ್ ಅತ್ನಿ
ಗಾಂಧಿವಾದಿ ಗೊರೂರರು ಗೊರೂರು ಮತ್ತು ಹೇಮಾವತಿಯ ದಂಡೆಯಲ್ಲಿರುವ ಇತರ ಹಳ್ಳಿಗಳನ್ನು ಸೀರೆಯ ಸೆರಗಿಗೆ ಹೋಲಿಸುತ್ತಾರೆ ಏಕೆಂದರೆ ಸೀರೆಯ ಸೌಂದರ್ಯವನ್ನು ಹೆಚ್ಚಿಸುವುದೇ ಸೆರಗಂತೆ ಹಾಗೆಯೆ ಗೊರೂರು ಮತ್ತು ಹೇಮಾವತಿಯ ದಂಡೆಯಲ್ಲಿರುವ ಇತರ ಹಳ್ಳಿಗಳು ಕೂಡ,ಅಲ್ಲೆಲ್ಲೋ ಮೂಡಗೆರೆಯಲ್ಲಿ ಹುಟ್ಟಿ ಪಶ್ಚಿಮ ಘಟ್ಟಗಳನ್ನು ಸುತ್ತಿ ಬರುವ ಹೇಮಾವತಿಯನ್ನು ಗೊರೂರಿನಲ್ಲಿ ತಡೆದು ನಮ್ಮ ಜನ ಹೊಳೆನರಸೀಪುರದ ಮೂಲಕ ಕಾವೇರಿಗೆ ಸೇರಿಸಿದ್ದಾರೆ ಅದಕ್ಕೆ ಏನೋ ಗೊರೂರರು ಈ ಹಳ್ಳಿಗಳನ್ನು ಸೀರೆಯ ಸೆರಗಿಗೆ ಹೋಲಿಸಿದ್ದು.
ಇಂತಿಪ್ಪ ಗೊರೂರಿನಿಂದ ಒಂದೆರಡು ಮೈಲಿಗಳಲ್ಲಿ ಇರುವ ನನ್ನ ಹಳ್ಳಿಯಲ್ಲಿ ಯುಗಾದಿಯ ನನ್ನ ನೆನಪುಗಳನ್ನು ಹಂಚಿಕೊಳ್ಳುವ ಪ್ರಯತ್ನವಷ್ಟೇ ಇದು, ಅದು ನೀವು ಸಹಿಸಿಕೊಂಡಷ್ಟು ಸಮಯ , ನನ್ನ ಹಳ್ಳಿಯು ಕೂಡ ಗೊರೂರರು ಹೋಲಿಸುವಂತೆ ಅಷ್ಟೇ ಸುಂದರವಾಗಿದೆ ಅದರಲ್ಲಿಯೂ ಹಬ್ಬಗಳ ಸಮಯದಲ್ಲಿ ಅದರ ಸೊಬಗು ಹೆಚ್ಚುವುದು ಸಹಜವೇ, ತರಹೇವಾರಿ ಸಿದ್ಧತೆ ಆಚರಣೆಗಳಿಗೆ ತರಹೇವಾರಿ ಜವಾಬ್ದಾರಿಗಳು,ಹಬ್ಬದ ಹಿಂದಿನ ದಿನ ರಾಸುಗಳ ಅಲಂಕಾರಕ್ಕಾಗಿ ನಮ್ಮ ಹಳ್ಳಿಯ ದಿಣ್ಣೆಯ ಮೇಲೆ ಸಿಗುವ ಕಣಿಗಲೆ ಹೂವುಗಳನ್ನು,ಹೊಳೆಯ ದಂಡೆಯಲ್ಲಿ ಸಿಗುವ ಮಾವಿನ ಸೊಪ್ಪು ಮತ್ತು ಊರ ಮುಂದಿನ ಅರಳಿಮರದ ಪಕ್ಕದಲ್ಲಿರುವ ಬೇವಿನ ಮರದಿಂದ ಸೊಪ್ಪು ಕಿತ್ತುತರಲು ಅಪ್ಪನ ಜೊತೆ ಹೋಗುವುದು ಮಕ್ಕಳಾದ ನಮ್ಮ ಜವಾಬ್ದಾರಿ ಅಂತೆಯೇ ಹಬ್ಬದ ಸಂಜೆ ಹಸುಗಳಿಗೆ ಮಜ್ಜನ,ಕೊಂಬುಗಳಿಗೆ ಕೆಮಣ್ಣಿನ ಚಿತ್ತಾರ,ಕೊರಳಿಗೆ ಕಣಿಗಲೆಯ ಹಾರ ಇವೆಲ್ಲ ತಯಾರಿ ಮಾಡುವ ಅಪ್ಪನ ಜೊತೆ ನಿಂತು ನೋಡುವ ಜವಾಬ್ದಾರಿಯು ಕೂಡ ಇದೆ ಮಕ್ಕಳದು..!!, ಇತ್ತಕಡೆ ಅಮ್ಮನನ್ನು ಬಿಟ್ಟಾರು ಈ ಮಕ್ಕಳು ಅಂದುಕೊಂಡಿರಾ? ಹಬ್ಬಕ್ಕೆ ಒಂದು ವಾರ ಮುಂಚೆಯೇ ಇವರಿಗೆ ಇನ್ನು ಸಾಕಷ್ಟು ಜವಾಬ್ದಾರಿಗಳಿರುತ್ತವೆ..!! ಮನೆಗೆ ಸುಣ್ಣ ಬಣ್ಣಗಳಾದ ನಂತರ ಮನೆಯ ಮುಂಬಾಗದ ಗೋಡೆಗಳ ಮೇಲೆ ಚಂದ್ರ ಮತ್ತು ಹಾಲಿನಿಂದ ತಯಾರಿಸಿದ ಮಿಶ್ರಣದಿಂದ ಹಂಚಿಕಡ್ಡಿಯಲ್ಲಿ ಹತ್ತು ಹಲವು ಚಿತ್ತಾರಗಳನ್ನು (ಕಾರ್ಣಿ) ಮೂಡಿಸುತಿದ್ದ ಅಮ್ಮನೊಂದಿಗೆ ನಿಂತು ಉಸ್ತುವಾರಿ ನೋಡಿಕೊಳ್ಳುವುದು ಕೂಡ ಮಕ್ಕಳ ಜವಾಬ್ದಾರಿ..!!
ಇಷ್ಟೆಲ್ಲಾ ತಯಾರಿಗಳ ನಡುವೆ ಬಾಯಿ ರುಚಿಗೆ ಒಳ್ಳೆಯ ಊಟ ಉಪಹಾರಗಳಿಲ್ಲದಿದ್ದರೆ ಸರಿಹೋಗುವುದೇ,ಅದು ನಮಗೆ ಹೆಚ್ಚು ಆಸಕ್ತಿ ಇರುವ ವಿಷಯವೇ ಅದು ಹಬ್ಬದ ಹಿಂದಿನ ದಿನ ಅಮ್ಮ ಮತ್ತು ಅಜ್ಜಿ ನಂತರದ ವರ್ಷಗಳಲ್ಲಿ ಅಮ್ಮ ಮತ್ತು ಅಪ್ಪ ಕುಳಿತು ತಯಾರಿಸುತ್ತಿದ್ದ ಒಬ್ಬಟ್ಟು, ಹಬ್ಬದ ದಿನದ ಉಪಹಾರಕ್ಕಾಗಿ ಸಿದ್ಧವಾಗುತ್ತಿದ್ದ ಇಡ್ಲಿ ಹಿಟ್ಟು ಇವೆಲ್ಲದರ ಸಿದ್ದತೆಯನ್ನು ಕುಳಿತು ನೋಡುವುದರ ಜೊತೆಗೆ ಒಂದಷ್ಟು ಹೂರಣವನ್ನು ಮೆಲ್ಲುವುದು ಕೂಡ ನಮ್ಮದೇ ಜವಾಬ್ದಾರಿ, ಇಷ್ಟೆಲ್ಲಾ ಜವಾಬ್ದಾರಿಗಳನ್ನು ಹೊತ್ತು ಹಬ್ಬದ ಸಿದ್ಧತೆಗಳನ್ನು ನಡಸಿದ ನಂತರವೂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸದ್ದಿದ್ದರೆ ಆದೀತೇ ..?
ಹಬ್ಬದ ದಿನಚರಿ ಆರಂಭಗೊಳ್ಳುವುದು ಆಟದಿಂದಲೇ, ಹಬ್ಬವಾದರೇನಂತೆ ನಮ್ಮ ಮೂಲಭೂತ ಜವಾಬ್ದಾರಿ ಮತ್ತು ಕರ್ತವ್ಯವಾದ ಆಟವನ್ನು ಬಿಡಲಾದೀತೇ ..!! ಎಂದಿನ ಶ್ರದ್ಧೆಯಂತೆ ಅಂದು ಕೂಡ ಆಟಕ್ಕೆ ಮೊದಲ ಪ್ರಾಶಸ್ತ್ಯ ಹಾಗೆಯೆ ನಮ್ಮನ್ನು ಹುಡುಕಿ ಮನೆಗೆಳೆದೊಯ್ಯುವುದು ನಮ್ಮಜ್ಜನ ಜವಾಬ್ದಾರಿ, ಮನೆ ತಲುಪಿದ ತಕ್ಷಣವೇ ಎಣ್ಣೆ ಸ್ನಾನ, ನನಗೆ ಇಂದು ಆಶ್ಚರ್ಯವಾಗುವುದು ಆ ೨೦,೩೦ ನಿಮಿಷಗಳ ಎಣ್ಣೆ ಸ್ನಾನಕ್ಕೆ ಯಾಕಷ್ಟು ಬಡಿದುಕೊಳ್ಳುತಿದ್ದೆವು ಎಂದು ಹಾಗಿರುತಿತ್ತು ನನ್ನಜ್ಜಿ ತಲೆ ತಿಕ್ಕುತಿದ್ದ ಪರಿ ಮತ್ತು ಕಾದ ನೀರಿನ ಚುರುಕು, ಈ ರಣ ರೋಚಕ ಸ್ನಾನದ ನಂತರ ಒಂದು ಸಣ್ಣ ಪೂಜೆ (ನಮಗೇನು ಅಂತಹ ಆಸಕ್ತಿ ಇರಲಿಲ್ಲ ಬಿಡಿ) ,ಈ ಪೂಜೆಯ ನಂತರವೇ ನಮ್ಮ ಮುಖ್ಯ ಜವಾಬ್ದಾರಿಗಳ ಸರಣಿ ಶುರುವಾಗುವುದು ಅದುವೇ ತ್ರೇತಾಯುಗದಲ್ಲಿ ರಾಮನಿಗಾಗಿ ಕಾದು ಕುಳಿತಂತೆ ಕಾದ ನಮ್ಮ ಹೊಟ್ಟೆಯ ಪೂಜೆ.
ನಾನು ಮತ್ತು ನನ್ನ ಅಣ್ಣ ಒಂದೂವರೆ ಡಜನ್ಗಿಂತ ಕಡಿಮೆ ಇಡ್ಲಿ ತಿಂದ ದಾಖಲೆಗಳೇ ಇಲ್ಲ ಅದು ಕಾಯಿ ಚಟ್ನಿ, ನಮ್ಮ್ ಮನೆ ಗೌರಿಯ ಹಾಲಿನಿಂದ ಮಾಡಿದ ಗಟ್ಟಿ ಮೊಸರು ಮತ್ತು ತುಪ್ಪದ ಜೊತೆ ಆದರೂ ನನ್ನ ಅಣ್ಣನ ದಾಖಲೆ ಮುರಿಯಲಾಗಲಿಲ್ಲವಲ್ಲ ಎನ್ನುವುದೊಂದೇ ನನ್ನ ಇಂದಿನ ಕೊರಗು, ಚಟ್ನಿ ಖಾಲಿಯಾಯಿತು ಎಂದು ಇಡ್ಲಿಯನ್ನು,ಇಡ್ಲಿ ಖಾಲಿಯಾಯಿತು ಎಂದು ಚಟ್ನಿಯನ್ನು ಒಂದರಮೇಲೆ ಒಂದನ್ನು ಹಾಕಿಸಿಕೊಂಡು ತಿನ್ನುವುದೇ ಅವನ ಸ್ಪೆಶಿಯಾಲಿಟಿ..!! ಅಷ್ಟರ ಹೊತ್ತಿಗೆ ನಮ್ಮೊರಿನ ಗ್ರಾಮದೇವತೆ ಅತ್ನಿಯಮ್ಮನಿಗೆ ಪೂಜೆ ಮಾಡಿಸಲು ಬರುವ ನಮ್ಮೂರ ಮತ್ತು ಅವರ ಪೂರ್ವಜರ ಕಾಲದಲ್ಲಿ ನಮ್ಮೊರಿನಲ್ಲಿದ್ದ ಜನಗಳಿಗೆ ಪೂಜೆ ಮಾಡಿಕೊಡುತ್ತಿದ್ದ ನಾಲ್ಕಾರು ತಾತ್ಕಾಲಿಕ ಪೂಜಾರಿಗಳಲ್ಲಿ ಒಬ್ಬರಾದ ನಮಪ್ಪ ಮನೆಗೆ ಬಂದಿರುತ್ತಿದ್ದರು ಅವರು ಹೊತ್ತು ತಂದ ತೆಂಗಿನಕಾಯಿ ಹೋಳುಗಳು , ಬಾಳೆಹಣ್ಣು ,ಚಿಲ್ಲರೆಗಳನ್ನು ಬೇರ್ಪಡಿಸುವುದು ನಮ್ಮ ಜವಾಬ್ದಾರಿ ,ಹಾಗೆಯೆ ಒಂದೆರಡು ನಾಕಣಿಯೋ, ಎಂಟಾಣಿಯನ್ನೋ ಚಡ್ಡಿಯ ಜೋಬಿಗೆ ಇಳಿಸುವುದು ಕೂಡ ಈ ಎಲ್ಲ ಕಾಯ ವಾಚ ತಪ್ಪದೆ ಮಾಡುತ್ತಿದ್ದೆವು ( ನಮ್ಮೂರ ಹೆಸರು ಅತ್ನಿ ,ಯಾವದೋ ಕಾಲದಲ್ಲಿ ಅತ್ರಿ ಮಹಾ ಋಷಿಗಳು ನಮ್ಮೂರ ಹೊಳೆಯ ದಂಡೆಯ ಮೇಲೆ ಕುಳಿತು ತಪಸ್ಸು ಮಾಡಿದ್ದರಂತೆ ಆ ಕಾರಣಕ್ಕಾಗಿ ಅತ್ನಿ ಈ ಕಥೆ ಹೇಳಲು ಯಾವುದೇ ಶಾಸನಗಳಿಲ್ಲ) .
ಈ ನಮ್ಮ ಇಡ್ಲಿಯ ತೀರಿಸುವ ಜವಾಬ್ದಾರಿ ಮುಗಿದ ನಂತರ ನಾವು ನೇರ ಹೋಗುತ್ತಿದದ್ದೇ ತೆಂಗಿನಕಾಯಿಗೆ ಕಲ್ಲು ಹೊಡೆಯುವ ಆಟ ನೋಡಲು ಅಲ್ಲಿ ಎಲ್ಲ ಭುಜಬಲ ಪರಾಕ್ರಮಿಗಳಿಗೆ ಕಲ್ಲುಗಳನ್ನು ಪೂರೈಸುವ ಜವಾಬ್ದಾರಿ ನಮ್ಮದು , ಅಂಗಡಿಯವರು ಒಂದು ತೆಂಗಿನಕಾಯನ್ನು ಒಂದು ಮೂವತ್ತೋ ನಲವತ್ತೋ ಮೀಟರ್ಗಳ ದೂರದಲ್ಲಿ ಇಡುತ್ತಿದ್ದರು , ಇಂತಿಪ್ಪ ತೆಂಗಿನಕಾಯಿಗೆ ಅಲ್ಲಿ ನೆರದಿದ್ದ ಭುಜಬಲ ಪರಾಕ್ರಮಿಗಳು ಹೊಡಯುವ ಪ್ರಯತ್ನ ಮಾಡುತಿದ್ದರು ಒಂದು ಕಲ್ಲಿಗೆ ನಾಕಾಣೆಯೋ ಎಂಟಾಣೆಯೋ ಇದ್ದಿರಬೇಕು ನನಗೆ ಶ್ರೀಲಂಕಾದ ಮಾಲಿಂಗನನ್ನು ನೋಡಿದಾಗ ತಕ್ಷಣ ಜ್ಞಾಪಕ್ಕೆ ಬರುವುದು ನಮ್ಮೂರಿನ ಈ ಭುಜಬಲ ಪರಾಕ್ರಮಿಗಳೇ , ಈ ಕಲ್ಲು ಹೊರುವ ಜವಾಬ್ದಾರಿ ಮುಗಿದ ನಂತರ ಮನೆಯಲ್ಲಿ ಹೋಳಿಗೆಯ ಊಟ , ಒಂದಷ್ಟು ಪಾಯಸ ಕೋಸಂಬಮರಿ ಮತ್ತು ಕೊನೆಯಲ್ಲಿ ಮಜ್ಜಿಗೆ.
ನಮ್ಮ ಊಟ ತೀರಿಸುವ ಹೊತ್ತಿಗೆ ನಮ್ಮೂರಿನ ರಾಸುಗಳು ಸರ್ವಾಲಂಕೃತ ಭೂಷಿತರಾಗಿ ಹೊನ್ನಾರಿನ ಮಹೂರ್ತಕ್ಕಾಗಿ ಕಾಯುತ್ತ ನಿಂತಿರುತಿದ್ದವು, ಈ ಮಹೂರ್ತ ಇಡುವ, ಪಂಚಾಂಗ ಶ್ರವಣ ಮಾಡುವ/ಕೇಳುವ ಜವಾಬ್ದಾರಿಗಳು ನಮ್ಮ ವ್ಯಾಪ್ತಿಯಿಂದ ಆಚೆ ಇದ್ದುದ್ದರಿಂದ ನಾವೇನು ಅಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ನಮ್ಮ ಜವಾಬ್ದಾರಿ ಇದದ್ದು ಈ ರಾಸುಗಳನ್ನು ಪ್ರೋತ್ಸಾಹಿಸುವುದಷ್ಟೇ..!! ಮತ್ತು ಹೊನ್ನರನ್ನು ನೋಡಿ ಖುಷಿ ಪಡುವುದು.
ಇಷ್ಟೆಲ್ಲಾ ಮುಗಿಯುವ ಹೊತ್ತಿಗೆ ರಾತ್ರಿ ಆಗಿರುತ್ತಿತ್ತು ಹಾಗೆಯೆ ನಮ್ಮ ಹೆಗಲಮೇಲಿದ್ದ ಜವಾಬ್ದಾರಿಗಳು ಅಷ್ಟೇ ಕಡಿಮೆ ಆಗಿರುತ್ತಿದ್ದವು, ಕಡಿಮೆ ಅನ್ನುವುದಕ್ಕಿಂತ್ತಾ ಮುಗಿದಿರುತ್ತಿದ್ದವು ಅನ್ನೋಣ , ಇಂತಿಪ್ಪ ಹಬ್ಬದ ಹಲವು ಜವಾಬ್ದಾರಿಗಳನ್ನು ಮುಗಿಸಿದ ಹೆಮ್ಮೆಯಿಂದ ನಮ್ಮಗಳ ಕಣ್ಣು ಎಳಯದಿದ್ದೀತೆ, ಹಾಗೆಯೆ ನಿದ್ದೆಗೆ ಜಾರಲಾಗದಿದ್ದೀತೆ ..?
ಚೇತನ್ ಅತ್ನಿ
(ಚೇತನ್ ಅತ್ನಿ ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನವರು, ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಿಂದ ಬಿ.ಇ ಪದವಿ ಮುಗಿಸಿ ಬೆಂಗಳೂರಿನಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದು ಸದ್ಯಕ್ಕೆ ಕಂಪನಿ ಕಡೆಯಿಂದ ಅವರನ್ನು ಲಂಡನ್ಗೆ ವರ್ಗಾಯಿಸಲಾಗಿದೆ. ಒಂದರಿಂದ ಹತ್ತನೇ ತರಗತಿಯವರೆಗೂ ಅವರು ಕನ್ನಡ ಮಾದ್ಯಮದಲ್ಲಿ ಒಂದಿದುದರಿಂದ ಕನ್ನಡ ಪುಸ್ತಕಗಳ ಓದಿನಲ್ಲಿ ಆಸಕ್ತಿ,ಅವರಿಗೆ ಈಗ ಬರಹದ ಪ್ರಯತ್ನಕ್ಕೆ ಹಚ್ಚಿದೆ.)
ಹೊಂಗೆಯ ಹೊಂಗನಸು -ಪ್ರಮೋದ್ ಸಾಲಿಗ್ರಾಮ ರಾಮಕೃಷ್ಣ
ಶಾಲಾ ದಿನದಿಂದಲೂ ನನಗೆ ಹಬ್ಬ ಅಂದ್ರೆ, ರಜಾದಿನ - ಮಜಾ ಮಾಡೋದು ಅಷ್ಟೇ. ಅದರಲ್ಲೂ ಯುಗಾದಿ ಅಂದರೆ ಎಣ್ಣೆ ನೀರಿನ ಸ್ನಾನ, ಹೊಸ ಬಟ್ಟೆ, ಒಬ್ಬಟ್ಟು-ಆಂಬೋಡೆ ಅಷ್ಟೇ . ಬೆಂಗ್ಳೂರಲ್ಲೇ ಹುಟ್ಟಿ ಬೆಳೆದ ನನಗೆ ಈ ಹರಳೆಣ್ಣೆ ಸ್ನಾನ ಅಂದ್ರೆ ಅಷ್ಟಕ್ಕಷ್ಟೇ . ಬರೀ ಬನಿಯನ್ ಚಡ್ಡಿ ಹಾಕಿ ಕೂರಿಸಿ ಮೈಯೆಲ್ಲ ಹರಳೆಣ್ಣೆ ಹಚ್ಚಿದ್ದೆ ಹಚ್ಚಿದು . ಸ್ವಲ್ಪ ರಾಮಾಚಾರಿ ಸಿನಿಮಾದ ಬುರುಡೆ ಬುರುಡೆ ಹಾಡು ಜ್ಞಾಪಿಸಿಕೊಳ್ಳಿ. ದೇಹಕ್ಕೆ ಹರಳೆಣ್ಣೆ ಇಳೀಬೇಕು ಅಂತ ಬಿಸಿಲಲ್ಲಿ ನಿಲ್ಲೋಕೆ ಹೇಳ್ತಿದ್ರು . ಮುಜುಗರ ಆಗತ್ತೆ ಅಂತ ಆಕ್ಷೇಪಿಸಿದರೆ, ಗಂಡು ಹುಡುಗ ನಿನಗೆಂಥದ್ದೋ ಅಂತ ಹೇಳಿ ಕಾಫಿ ಕೊಟ್ಟು ಸಮಾಧಾನಿಸ್ತಿದ್ರು . ಘಂಟೆಗಳ ನಂತರ ಕಣ್ ಉರಿನಮ್ಮ ಅಂತ ಎಷ್ಟೇ ಗೋಗರೆದರು ಬಿಡದೇ ನಮ್ಮಮ್ಮ ರಪ ರಪಾ ಅಂತ ಸೀಗೆಕಾಯಿ ಹಚ್ಚುತ್ತಿದ್ದರು. ಸೀಗೆಕಾಯಿ ಉಷ್ಣ ಆಗುತ್ತೆ ಅಂತ ಚಿಗರೆ ಪುಡಿ ಬೇರೆ ಮಿಕ್ಸ್ ಮಾಡೋರು - ಈ ಮಿಶ್ರಣ ಘಾಟನ್ನು ಇನ್ನು ಹೆಚ್ಚಾಗಿಸ್ತಿತ್ತು.
ಅಪ್ಪ ಪಂಚಾಂಗ ಶ್ರವಣ ಅಂತ ಮಾಡ್ತಿದ್ರೆ : ನನ್ನ ಗಮನ ಎಲ್ಲ ಮಿಥುನ ರಾಶಿಗೆ ಏನು ಫಲ ಅನ್ನೋದರ ಕಡೆಗೆ ಅಷ್ಟೇ. ಆಯ - ವ್ಯಯ ಅಂದರೆ ಗೊತ್ತಿರದ ದಿನಗಳವು. ಬೇವು ಬೆಲ್ಲ ಹಂಚೋವಾಗ - ಬೇವು ಬೇಡವೆಂದು ರಂಪಾಟ ಮಾಡ್ತಿದ್ದೆ. ಹೊಸ ಬಟ್ಟೆ ಹಾಕೊಂಡು ಬೀದಿಗಿಳಿದರೆ ಮನೆಯಲ್ಲಿ ಅಡುಗೆ ಆಗೋವರ್ಗು ಕಾಲ್ ಇಡ್ತಿರ್ಲಿಲ್ಲ .ಷಡ್ರಸಗಳಿಂದ ತುಂಬಿರೋ ಮಾವಿನಕಾಯಿ ಚಿತ್ರಾನ್ನ, ಶಾವಿಗೆ ಪಾಯಸ,ಹೆಸರುಬೇಳೆ ಸೌತೆಕಾಯಿ ಕೋಸಂಬರಿ, ಕಡಲೆ ಹುಸಲಿ, ಹೋಳಿಗೆ, ಆಂಬೋಡೆ ಮುಂತಾದವಗುಳನ್ನೆಲ್ಲಾ ಚೆನ್ನಾಗಿ ಬ್ಯಾಟಿಂಗ್ ಮಾಡಿದ ನಂತರ Cousins ಮನೆಗೆ ಕರ್ಕೊಂಡ್ ಹೋಗು, ಆಟ ಆಡಬೇಕು ಅಂತ ತಾಕೀತು ಮಾಡ್ತಿದ್ದೆ . ಸಂಜೆವರ್ಗು ಆಟ. ಸಂಜೆ ಮೇಲೆ Udaya TV ಲಿ ಒಂದು ಹೊಸ ಸಿನಿಮಾ ಇವಿಷ್ಟೇ .
ಬಹಳ ವಸಂತಗಳ ನಂತರ, ಪ್ರಾಯಶಃ ಗೃಹಸ್ಥನಾದಮೇಲೆ ಯುಗಾದಿ ಈಗ ಬದಲಾಗಿವೆ. ಪ್ರತಿ ವಿಷಯಗಳ ಮಹತ್ವ ಅರಿವಾದಂತೆ, ಸಂಪ್ರದಾಯಗಳು ಅರ್ಥಪೂರ್ಣ ಎಂದೆನಿಸಿದೆ. ಚೈತ್ರಮಾಸದಿಂದ ವಸಂತ ಋತು ಶುರುವಾಗುತ್ತದೆ. ಛಳಿ - ಮಳೆಗಾಲದಿಂದ ಬಳಲಿ ತತ್ತರಿಸಿದ ಪ್ರಕೃತಿ ಮತ್ತೆ ಚಿಗುರಿ ಹೂ ಬಿಟ್ಟು ಹಸಿರಾಗಿ ನಳನಳಿಸುತ್ತದೆ. ಹೊಸ ವರ್ಷ, ಹೊಸ ಪ್ರಯತ್ನ , ಹೊಸ ಮನುಷ್ಯನಾಗು ಎಂಬ ಸೂಚನೆಯಂತೆ.
ಚೈತ್ರ ಪಾಡ್ಯದ ಹಬ್ಬಕ್ಕೋಸ್ಕರ ಇವತ್ತು ನಾನು ಮನೆಯನ್ನ Deep ಕ್ಲೀನ್ ಮಾಡಿ, ಮಾವಿನ ಸೊಪ್ಪು ಸಂಗ್ರಹಿಸಿ, ಕಡ್ಡಿ ಚುಚ್ಚಿ ತೋರಣ ಕಟ್ಟುತ್ತೇನೆ. ಸ್ನಾನ -ಸಂಧ್ಯಾವಂದನೆ ಮುಗಿಸಿ , ಒಂಟಿಕೊಪ್ಪಲ್ ಪಂಚಾಂಗ ತಂದು ಸವಿವರವಾಗಿ ವಾರ್ಷಿಕ ಮುನ್ನೋಟ ತಿಳಿಯುವುದು. ಬದುಕಿನ ದ್ಯೋತಕವಾಗಿರುವ ಬೇವು - ಬೆಲ್ಲದ ಸಮ್ಮಿಶ್ರಣ ಮನಸಾರೆ ಸ್ವೀಕರಿಸುವುದು. ಅಡುಗೆ ಮನೆಯ ಕೆಲಸಗಳಲ್ಲಿ ಶ್ರೀಮತಿಗೆ ನೆರವಿಗೆ ಬರೋದಾದ್ರೆ ತೆಂಗಿನಕಾಯಿ ಕೊರೆಯುವುದು, ಮಾವಿನಕಾಯಿ ತುರಿಯುವುದು, ಹೂರ್ಣದ ಉಂಡೆ ಕಟ್ಟುವುದು ಮುಂತಾದವು. ತದನಂತರದಲ್ಲಿ ಬಿದಿಗೆ ದಿನ ಚಂದ್ರ ದರ್ಶನ ಮಾಡಿ, ಹಾಯಾದ ಹೊಂಗೆಯ ಹೊಂಗನಸೊಂದನ್ನು ಕಂಡರೆ ಅಲ್ಲಿಗೆ ಯುಗಾದಿ ಸಂಪನ್ನ.
ಚಿಕ್ಕವನಿದ್ದಾಗ ಎಲ್ಲೊ ಕೇಳಿದ್ದ ಈ ಹಾಡು, ಈಗ ಬಾಳ ಗೆಳತಿ ಭಾವನಾಳೊಂದಿಗೆ ಗುನುಗೋವಾಗ ಆಪ್ಯಾಯಮಾನ ಎನಿಸುತ್ತದೆ.
``ಚಿಂತೆ ನೋವು ಹಗುರಾಯಿತು, ಸುಗ್ಗಿ ಸಿರಿಯ ಮಳೆಯಾಯ್ತು
ಮನದ ತುಂಬ ಹರುಷದ ಹೂರಣ ಆಹಾ ಮೂಡಿತು...
ಎಲ್ಲೆಲ್ಲೂ ಜೀವಕಳೆ, ಜೀವಕಿದು ಹೂವಕಳೆ
ಎಲ್ಲೆಲ್ಲೂ ಜೀವಕಳೆ, ಜೀವಕಿದು ಹೂವಕಳೆ
ಹಳೆಯ ಕೊಳೆಯ ತೊಳೆಯ ಬಂತು ರಂಗಿನ ಯುಗಾದಿ``
ಅನಿವಾಸಿ ಬಳಗದ ಸರ್ವರಿಗೂ ಯುಗಾದಿಯ ಶುಭಾಶಯಗಳು.
---ಪ್ರಮೋದ್ ಸಾಲಿಗ್ರಾಮ ರಾಮಕೃಷ್ಣ
(ಪ್ರಮೋದ್ ಹುಟ್ಟಿ ಬೆಳೆದದ್ದು ಓದಿದ್ದು ಜೀವನ ರೂಪಿಸಿಕೊಂಡಿದ್ದು ಬೆಂಗಳೂರಿನಲ್ಲಿ . ಪ್ರಸ್ತುತ ಕೆಲಸದ ನಿಮಿತ್ತ ಉತ್ತರ ಐರ್ಲೆಂಡ್ನ ಬೆಲ್ಫಾಸ್ಟ್ ನಗರದಲ್ಲಿ
ನೆಲೆಸಿದ್ದಾರೆ. ಸಿಟಿ ಬ್ಯಾಂಕ್ ನಲ್ಲಿ ಬಿಸಿನೆಸ್ ಅನಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಮೋದ್ ಅವರಿಗೆ ಚಾರಣ ಸಿನಿಮಾಗಳು ಅಂದರೆ ಪಂಚಪ್ರಾಣ .ಜೊತೆಗೆ ಫಿಲ್ಟರ್ ಕಾಫಿ, ಬಾಳೆಎಲೆ ಭೋಜನ ಪ್ರಿಯ.
ಓದು, ಹಾಡುವುದು, ಬರವಣಿಗೆ ಮೆಚ್ಚಿನ ಹವ್ಯಾಸಗಳು.)
ನನ್ನ ಬಾಲ್ಯದ ಯುಗಾದಿ- ಪ್ರತಿಭಾ ರಾಮಚಂದ್ರ
ನಮ್ಮ ಬಾಲ್ಯದ ದಿನಗಳ ಯುಗಾದಿ ಹಬ್ಬದಲ್ಲಿ ಇರುತ್ತಿದ್ದ ಸಡಗರ-ಸಂಭ್ರಮ ಈಗಿನ ದಿನಗಳಲ್ಲಿ ಇಲ್ಲಾ ಅನ್ನೋದನ್ನ ಎಷ್ಟು ಜನರು ಒಪ್ಪುತ್ತೀರಾ? ಅದರಲ್ಲೂ ನನ್ನ ಹಾಗೆ ಮದುವೆ ಆದ ಮೇಲೆ ಹೊರ ದೇಶದಲ್ಲಿ ನೆಲೆಸಿರುವರಿಗಂತೂ ಆ ಅನುಭವ ಸಿಗೋದು ಬಹಳ ವಿರಳ!
ಈ ವರ್ಷದ ಯುಗಾದಿಯಂದು ವಾಟ್ಸಾಪ್ ಗ್ರೂಪೊಂದರಲ್ಲಿ ಶುಭಾಶಯದ ಜೊತೆ ಒಂದು ಸುಂದರವಾದ ಚಿತ್ರ ಬಂದಿತ್ತು. ಆ ಚಿತ್ರ ನೋಡಿ ನನ್ನ ಬಾಲ್ಯದ ಯುಗಾದಿ ಕಣ್ಮುಂದೆ ಬಂದ ಹಾಗೆ ಆಯಿತು ಮತ್ತು ಅದರ ಬಗ್ಗೆ ಬರಿಯೋಣ ಅಂತ ಅನ್ನಿಸಿತು.
ನಾನು ಸುಮಾರು ೮-೯ ವಯಸ್ಸಿನವಳಿದ್ದಾಗಿನ ಯುಗಾದಿ ಹಬ್ಬದ ಅನುಭವ ಇದು. ನಾನು ಚಿಕ್ಕಂದಿನಿಂದ ಬೆಳದಿದ್ದು, ಶಾಲಾ-ಕಾಲೇಜಿಗೆ ಹೋಗಿದ್ದೆಲ್ಲಾ ಬೆಂಗಳೂರಿನಲ್ಲಿ. ನಮ್ಮ ಮನೇಲಿ ಯುಗಾದಿ ಹಬ್ಬ ಬಹಳ ಮುಖ್ಯವಾಗಿ ಆಚರಿಸೋ ಹಬ್ಬಗಳಲ್ಲಿ ಒಂದು. ಆಗ ಮಾತ್ರ ಅಪ್ಪ ತಪ್ಪದೇ ಎಲ್ಲರಿಗೂ ಹೊಸ ಬಟ್ಟೆ ಕೊಡಿಸುತ್ತಿದ್ದರು. ಹೊಸ ಬಟ್ಟೆ ಹಾಕೊಂಡು ಮಿಂಚೋಕೆ ಬಲು ಕಾತುರದಿಂದ ಕಾಯ್ತಾ ಇರ್ತಿದ್ದೆ ನಾನು!
ಹಬ್ಬದ ದಿನ, ನನ್ನ ಬೆಳಿಗ್ಗೆ ಶುರು ಆಗ್ತಾ ಇದ್ದಿದ್ದು ರೇಡಿಯೊ ಅಥವಾ ಟಿ.ವಿ ಲೀ ಈ ಜನಪ್ರಿಯ ಹಾಡನ್ನು ಕೇಳ್ತಾ - "ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ, ಹೊಸ ವರುಷ ಕೆ ಹೊಸ ಹರುಷವ ಹೊಸತು ಹೊಸತು ತರುತಿದೆ, ಹೊಸತು ಹೊಸತು ತರುತಿದೆ". ಅಷ್ಟು ಹೊತ್ತಿಗಾಗಲೆ ಅಮ್ಮ- ಅಪ್ಪ ಎದ್ದು ಹಬ್ಬದ ಕೆಲಸಗಳನ್ನು ಶುರು ಮಾಡಿಕೊಂಡಿರುತ್ತಿದ್ದರು. ಅಮ್ಮ ಮನೆ ಮುಂದೆ ಚೆಂದವಾದ ಯುಗಾದಿ ರಂಗೋಲಿ ಹಾಕಿರುತ್ತಿದ್ರು . ತಡ ಮಾಡದೆ ನಾನು ಕೂಡ ಬೇಗನೆ ಸ್ನಾನ ಮುಗಿಸಿ, ಹೊಸ ಬಟ್ಟೆ ಹಾಕೊಂಡು ರೆಡಿಯಾಗ್ತಿದ್ದೆ. ಮತ್ತು ಅವತ್ತು ಹೂವು ಮುಡಿಯೋಕೆ ಸಿಗ್ತಿತ್ತು ಅನ್ನೋದು ನನಗೆ ಬಹಳ ಖುಷಿ!
ಇನ್ನು ಅಪ್ಪನ ಕೆಲಸ, ಬಾಗಿಲಿಗೆ ಮಾವು-ಬೇವು-ಹೂವಿನ ತೋರಣ ಹಾಕೋದು. ಆ ಕೆಲಸದಲ್ಲಿ ಅಪ್ಪನಿಗೆ ತುಂಬಾ ಉತ್ಸಾಹದಿಂದ ಸಹಾಯ ಮಾಡ್ತಿದ್ದವಳು ನಾನೇ. ಎಲ್ಲಾ ಮಾವಿನ ಎಲೆಗಳು ಆದಷ್ಟು ಸಮವಾಗಿ ಇರಬೇಕು ಅಂತ, ಅಳತೆ ಪ್ರಕಾರ ಸಮವಾಗಿ ಇರೋ ಎಲೆಗಳನ್ನು ಆರಿಸಿ ಕೊಡುತ್ತಿದ್ದೆ . ಆ ಸಮಯದಲ್ಲಿ ಅಮ್ಮ ಪೂಜೆ ಹಾಗು ಬೆಳಿಗ್ಗೆ ತಿಂಡಿ ತಯಾರಿಯಲ್ಲಿ ತೊಡಗಿರುತ್ತಿದ್ದರು. ತೋರಣಗಳನ್ನು ಹಾಕುವ ಕೆಲಸ ಮುಗಿದ ಮೇಲೆ ಪೂಜೆಗಾಗಿ ಅಮ್ಮ ಕರೆಯೋ ತನಕ ಕೆಲವು ಇತರೆ ಸಣ್ಣ-ಪುಟ್ಟ ಕೆಲಸಗಳನ್ನು ಅಪ್ಪ ಮುಗಿಸೋರು. ಇನ್ನು ಪೂಜೆಗೆ ಬನ್ನಿ ಅಂತ ಅಮ್ಮನ ಕರೆ ಬರುತ್ತಿತ್ತು. ಪೂಜೆ ಮುಗಿದ ಮೇಲೆ ಬೇವು-ಬೆಲ್ಲ ತಿನ್ನುವ ಸಮಯ - ಯಾರು ಹೆಚ್ಚು ಬೇವನ್ನು ತಿಂತಾರೋ ಅವರಿಗೆ ವರ್ಷವಿಡೀ ಹೆಚ್ಚು ಖುಷಿ ಸಿಗುತ್ತೆ ಅಂತ ಅಮ್ಮ ಹೇಳೋರು, ಹಾಗಾದ್ರೂ ಬೇವು ತಿನ್ನಲೀ ಅನ್ನೊ ಪ್ಲಾನ್ ಅವರದು. ಯಾರು ಏನು ಹೇಳಿದ್ರು ನಾನು ಮಾತ್ರ ಎಲ್ಲರಿಗಿಂತ ಕಡಿಮೆ ಬೇವು ತಿಂತಿದ್ದೆ! 😉
ಪೂಜೆ ನಂತರ ಏನಾದ್ರು ಸಿಂಪಲ್ ತಿಂಡಿ ಅವತ್ತು. ಮಧ್ಯಾಹ್ನಕ್ಕೆ ಭರ್ಜರಿ ಊಟ ಇರೋದಲ್ವಾ, ಅದಕ್ಕೆ!!
ನಂತರ , ಅಮ್ಮ-ಅಪ್ಪ ಮಧ್ಯಾಹ್ನದ ಅಡುಗೆ ತಯಾರಿ ಕಡೆ ಹೋಗೋರು. ಮತ್ತೆ ಆಗಿನ್ನೂ ನಮ್ಮ ವಾರ್ಷಿಕ ಪರೀಕ್ಷೆಗಳು ಮುಗಿದಿರುತ್ತಿರಲಿಲ್ಲ, ಹಾಗಾಗಿ ಅಣ್ಣನೂ-ನಾನು ಸ್ವಲ್ಪ ಹೊತ್ತು ಪಠ್ಯಾಭ್ಯಾಸ ಮಾಡುತ್ತಿದ್ದವು. ಹೋಳಿಗೆ ಸುವಾಸನೆ ಬಂದಾಗ, ಊಟ ಇನ್ನೇನು ರೆಡಿ ಅಂತ ಸೂಚನೆ, ಹೊಟ್ಟೆ ತಾಳ ಹಾಕಕ್ಕೆ ಶುರು ಮಾಡ್ತಾಯಿತ್ತು! ಯುಗಾದಿ ಹಬ್ಬದ ಊಟ ಮಾತ್ರ ಯಾವಾಗಲೂ ಬಾಳೆ ಎಲೆ ಮೇಲೆ ಮಾಡ್ತಿದ್ವಿ. ಮೆನು ಹೀಗೆ ಇರ್ತಿತ್ತು - ಕೋಸಂಬರಿ, ಹುರುಳಿಕಾಯಿ ಪಲ್ಯ, ಹೀರೇಕಾಯಿ ಬಜ್ಜಿ, ಮಾವಿನಕಾಯಿ ಚಿತ್ರಾನ್ನ, ಅನ್ನ- ಹೋಳಿಗೆ ಸಾರು, ಯುಗಾದಿಯ ಮುಖ್ಯ ಭಕ್ಷ್ಯವಾದ ತೊಗರಿ ಬೇಳೆ ಹೋಳಿಗೆ ಮತ್ತು ಅದರ ಜೊತೆ ನೆಂಚಿಕೊಂಡು ತಿನ್ನಲು ಅಮ್ಮ ಒಂದು ಸ್ಪೆಷಲ್ ಗೊಜ್ಜು ಮಾಡ್ತಿದ್ರು (ಕಡಲೆ ಕಾಳು, ಬಟಾಣಿ, ಬದನೆಕಾಯಿ, ಆಲೂಗಡ್ಡೆ ಹಾಕಿ). ತುಪ್ಪ ಹಾಗೂ ಹಾಲು ಕೂಡ ಇರ್ತಿತ್ತು, ಆದರೆ ನನಗೆ ಮತ್ತು ಅಣ್ಣನಿಗೆ ಮಾತ್ರ ಹೋಳಿಗೆ ಜೊತೆ ಬೆಸ್ಟ್ ಕಾಂಬಿನೇಷನ್ ಕಾಳು ಗೊಜ್ಜು. ನನಿಗಂತೂ ಬರೀ ಹೋಳಿಗೇನೇ ಅರ್ಧ ಹೊಟ್ಟೆ ತುಂಬ್ತಾಯಿತ್ತು, ಬೇರೆಲ್ಲಾ ಸ್ವಲ್ಪೇ ಸ್ವಲ್ಪ ತಿಂತಿದ್ದೆ ಅಷ್ಟೇ. ಇಂತಹ ಸ್ವಾದಿಷ್ಟ ಭೋಜನದ ಬಗ್ಗೆ ಕೇವಲ ಬರಿಯವಾಗಲೇ ನನ್ನ ಬಾಯಲ್ಲಿ ನೀರು ಬರುತ್ತದೆ !! ಇಷ್ಟು ಗಡತ್ತಾದ ಊಟದ ನಂತರ ಎಲ್ಲ ಒಂದು ಒಳ್ಳೆ ನಿದ್ರೆ ಮಾಡ್ತಿದ್ವಿ. ಈ ಎಲ್ಲಾ ಅಡುಗೆ ಸುಮಾರು ಉಳಿದಿರುತ್ತಿತ್ತು, ಹಾಗಾಗಿ ಅಮ್ಮನಿಗೆ ರಾತ್ರಿ ಮತ್ತೆ ಅಡುಗೆ ಮಾಡೋ ಗೋಜು ಇರ್ತ ಇರ್ಲಿಲ್ಲ . ಹೋಳಿಗೆ ಸಾರಂತೂ ಮುಂದಿನ ೨ ದಿನಗಳಿಗೂ ಆಗ್ತಿತ್ತು. ಅದನ್ನು ಜಾಸ್ತಿನೇ ಮಾಡ್ತಿದ್ರು ಏಕಂದರೆ ಆ ಸಾರಿನ ವಿಷೇಷನೇ ಅದು, ಹಳೆಯದಾದಷ್ಟೂ ರುಚಿ ಹೆಚ್ಚು, ಮತ್ತೆ ಯಾರೂ ಹಳೇ ಸಾರು ಬೋರ್ ಆಯ್ತು ಅಂತ ಕಂಪ್ಲೇನ್ ಮಾಡ್ತಿರ್ಲಿಲ್ಲಾ!
ಈ ಯುಗಾದಿ ಹಬ್ಬದ ಸಡಗರ ನೆನಪಿನ ಜಾತ್ರೆಯನ್ನೇ ನನ್ನ ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ.
ಪ್ರತಿಭಾ ರಾಮಚಂದ್ರ
(ಪ್ರತಿಭಾ ರಾಮಚಂದ್ರ ಮೂಲತಃ ಬೆಂಗಳೂರಿನವರು, ಸುಮಾರು ೧೨ ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸವಾಗಿದ್ದಾರೆ. ಪ್ರತಿಭಾ ಒಬ್ಬ ಐಟಿ ಗ್ರ್ಯಾಜುಯೇಟ್ ಹಾಗು ಕನ್ನಡ ಶಿಕ್ಷಕಿ. ಒಬ್ಬ ಮುದ್ದು ಮಗನ ತಾಯಿ ಕೂಡ.ಜೊತೆಗೆ ರೇಡಿಯೋ ಕಾರ್ಯಕ್ರಮಗಳನ್ನೂ ಕೊಡುತ್ತಾರೆ.)
ರಿಚರ್ಡ್ ಅಟೆನ್ಬರೋ ಅವರ ಸಾಕ್ಷ್ಯಚಿತ್ರಗಳನ್ನು ನೋಡಿರುತ್ತೀರ. ಆಫ್ರಿಕಾದ ಹುಲ್ಲುಗಾವಲಿನ ದೃಶ್ಯ. ಸೋಮಾರಿ ಗಂಡು ಸಿಂಹ ಮರದ ನೆರಳಲ್ಲಿ ತೂಕಡಿಸುತ್ತಲೋ, ಉರುಳಾಡುತ್ತಲೋ ಬಿದ್ದಿರುತ್ತದೆ. ಅನತಿ ದೂರದಲ್ಲಿ ಸಿಂಹಿಣಿಗಳು ಅವಿತು ಬೇಟೆಗೆ ಹೊಂಚು ಹಾಕುತ್ತಿರುತ್ತವೆ. ಮೈಮರೆತು, ಸಿಂಹಿಣಿಗಳ ದಿಕ್ಕಿನಲ್ಲಿ ಬಂದಿರುವ ಎಮ್ಮೆಯ ಕರುವಿನೆಡೆ ಅವು ದಾಳಿ ಮಾಡಿದಾಗ ನಿಮ್ಮ ಮೈ ಝುಮ್ ಎಂದಿರದೇ? ಇದನ್ನು ಗ್ರಹಿಸಿ ವೇಗವಾಗಿ ಧಾವಿಸಿ ಬಂದ ಎಮ್ಮೆ ತನ್ನಿರುವನ್ನು ಲೆಕ್ಕಿಸದೆ ಹೋರಾಡಿ, ಮರಿಯನ್ನು ರಕ್ಷಿಸಿಕೊಂಡಾಗ ನೀವು, ನಿಮ್ಮೊಡನೆ ಕುಳಿತ ನಿಮ್ಮ ಮಗು ಚಪ್ಪಾಳೆ ತಟ್ಟಿರುವುದಿಲ್ಲವೇ? ಆಗ ಅದೇ ಮಗುವನ್ನೇ “ಅಯ್ಯೋ, ನನ್ನ ಕಂದ” ಎಂದು ಭಾವೋದ್ವೇಗದಿಂದ ಅಪ್ಪಿ ಮುದ್ದಾಡಿದ್ದರೆ, ನೀವು ಅಮ್ಮ. ಆ ಕ್ಷಣದಲ್ಲಿ, ಎಮ್ಮೆಯ ಕರು ಸಿಂಹಿಣಿಯ ಬಾಯಿಂದ ಬಚಾವಾದ ಸಂತೋಷದೊಡನೆ, ನನ್ನ ಮನೆಯಲ್ಲಿ, ನನ್ನ ಮಗು ಸುರಕ್ಷಿತವಾಗಿದೆ ಎಂಬ ಸಮಾಧಾನದ ನಿಟ್ಟುಸಿರು ಬಿಡುವ ಸ್ವಭಾವ ಜೀವ ತಂತುಗಳಲ್ಲಿ ಹಾಸುಹೊಕ್ಕಾಗಿರುವುದು ಅಮ್ಮ ಎಂಬ ಜೀವದಲ್ಲಿ ಮಾತ್ರ.
ಆಕೆ ಹುಟ್ಟಿದ್ದು ಬೆಟ್ಟಗಳಲ್ಲಿ. ಮದುವೆಯಾಗಿ ಬಂದಿದ್ದು ಕಡಲಿನ ತಟಕ್ಕೆ. ಬೆಳೆದ ವಾತಾವರಣವೇ ಬೇರೆ, ಗಂಡನ ಮನೆಯ ಆಚಾರ-ವಿಚಾರಗಳೇ ಬೇರೆ; ಮಾತನಾಡುವ ಭಾಷೆಯೂ ಬೇರೆ. ಹೊರಟಿದ್ದು ದೊಡ್ಡ ಕುಟುಂಬದಿಂದ, ಹೊಕ್ಕಿದ್ದು ದೊಡ್ಡ ಕುಟುಂಬ; ಇದೊಂದೇ ಸಾಮ್ಯ. ಕಷ್ಟಪಟ್ಟು, ಬಾಳ ಸಂಗಾತಿಯ, ಆತನ ಮನೆಯವರ ಮನ ಗೆದ್ದಳು, ಭಾಷೆ ಕಲಿತು ಹಾಲಲ್ಲಿ ನೀರಾದಳು. ಆಕೆ ವಿದ್ಯಾವಂತೆ, ಪ್ರತಿಭಾವಂತೆ, ಉದ್ಯೋಗವತಿ. ಮನೆ ಒಳಗೆ, ಹೊರಗೆ ಕೆಲಸ ತೂಗಿಸಿಕೊಂಡು ಹೋಗುವ ಗಟ್ಟಿಗತಿ. ಆಕೆಗೆ ಇಬ್ಬರು ಮಕ್ಕಳು. ತನ್ನಂತೆ ಅವರು ಕಷ್ಟ ಪಡಬಾರದೆನ್ನುವುದು ಆಕೆಯ ಹಠ. ಅದರ ಹಾದಿಯ ನಕ್ಷೆಯನ್ನು ಆಕೆ ಮನದಲ್ಲೇ ಬಿಡಿಸಿಟ್ಟಳು. ಆ ದಿಸೆಯಲ್ಲಿ ಆಕೆಯದು ಅವಿರತ ಶ್ರಮ. ಅಡಿಗೆ ಮಾಡುತ್ತ, ಮಕ್ಕಳ ಕಿವಿ ಹಿಂಡಿ ಪಾಠ, ಬುದ್ಧಿ ಹೇಳುವುದು ಆಕೆಗೆ ಎಡಗೈ ಕೆಲಸ. ಬೆಳಿಗ್ಗೆ ಬೇಗನೆ ಎಬ್ಬಿಸಿ, ಸ್ನಾನ ಮಾಡಿಸಿ, ಚಹಾನೋ, ಕಾಫಿಯೋ ಕುಡಿಸಿ, ತೂಕಡಿಸುವಾಗ ತಲೆಗೆ ತಟ್ಟಿ ಎಬ್ಬಿಸಿ ಓದಿಸುವುದು ಆಕೆಯ ದಿನಚರಿ; ಕಠಿಣ ವಜ್ರದ ಹೊರಮೈ ಒಳಗಿರುವುದು ಬೆಣ್ಣೆಯಂತೆ ಮೃದುವಾದ ತಿರುಳು. ರಾತ್ರಿ ಮಲಗುವಾಗ ಹೇಳುವ ಕಥೆಗಳಲ್ಲಿ ಬರುವ ಅದ್ಭುತ ವ್ಯಕ್ತಿತ್ವಗಳನ್ನು ಮಾದರಿಯಾಗಿಸಿದಳು. ಮಕ್ಕಳ ಬಹುಮುಖ ಬೆಳವಣಿಗೆಗೆ ಆಸರೆಯಾದಳು. ನೀರಮೇಲಿನ ತಾವರೆಯ ಎಲೆಯಾದ ಗಂಡನನ್ನೂ ತನ್ನ ಕಾಯಕಕ್ಕೆ ಹುರಿದುಂಬಿಸಿದಳು. ಮಕ್ಕಳ ಸುರಕ್ಷತೆಗೆ ಧಕ್ಕೆ ಬಂದರೆ ಕರುಣಾಮಯಿ, ದುರ್ಗಿಯಾದಾಳು. ಕಣ್ಣಲ್ಲಿ ಕಣ್ಣಿಟ್ಟು, ದಾರಿ ತಪ್ಪದಂತೆ, ಮಕ್ಕಳು ಗಮ್ಯ ತಲುಪುವವರೆಗೂ ಕಾದಳು. ಅದಾದ ಮೇಲೂ ಮಕ್ಕಳು ಕರೆದಾಗ, ಕರ್ತವ್ಯವೆಂದು ಅವರಿದ್ದಲ್ಲಿ ಹೋಗಿ, ಕೈಲಾದಷ್ಟು ಸಹಾಯ ಮಾಡಿದಳು. ಮಕ್ಕಳ ಕರೆಗೆ, ಅಪ್ಪುಗೆಗೆ ಕರಗಿ ನೀರಾದಳು. ಈ ಕಥೆ ನನ್ನಮ್ಮಂದೋ ನಿಮ್ಮ ಅಮ್ಮಂದೋ? ಎಲ್ಲರ ಅಮ್ಮಂದೂ ಅಲ್ಲವೇ.
(ಚಿತ್ರ ಕೃಪೆ: ಗೂಗಲ್)
“ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ” : ಶಂಕರಾಚಾರ್ಯರ ಮಾತು ಸಾರ್ವಕಾಲಿಕ ಸತ್ಯ; ಎಲ್ಲ ಪ್ರಾಣಿ ವರ್ಗಗಳಿಗೂ ಅನ್ವಯವಾಗುವಂತಹ ಮಾತು. ಇಂತಹ ಅದ್ಭುತ ಜೀವಕ್ಕೆ ಧನ್ಯವಾದ ಎಂದು ಹೇಳಲು ಸಾಧ್ಯವೇ! ಆದರೂ ಅದು ಆಗಾಗ ಬೇಕಾಗುವಂತಹ ಟಾನಿಕ್. ಅದಕ್ಕಾಗೇ ಬಂದಿದೆ ಈ ರವಿವಾರ ‘ಮದರ್ಸ್ ಡೇ’. ಬ್ರಿಟನ್ನಿನಲ್ಲಿ ಇದು ಈ ರವಿವಾರವಾದರೆ, ಅಮೆರಿಕ – ಭಾರತಗಳಲ್ಲಿ ಇನ್ನೆರಡು ತಿಂಗಳುಗಳಲ್ಲಿ. ನಮ್ಮಂಥ ಎಡಬಿಡಂಗಿಗಳಿಗೆ ಎರಡೂ ಆದೀತು. ಅಮ್ಮನಿಗೆ ಎರಡುಸಲವೇನು ಕ್ಷಣಕ್ಷಣವೂ ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ.
ಮದರ್ಸ್ ಡೇ ಬಂದಂತೇ, ವ್ಯಾಪಾರಿಗಳು ಅದರ ಲಾಭ ಪಡೆಯಲು ವಿಶೇಷ ಗಾಳಗಳೊಂದಿಗೆ ಕಾಯುತ್ತಲೇ ಇರುತ್ತಾರೆ ಧನ್ಯವಾದಕ್ಕೊಂದು ಕಾಣಿಕೆ ಸಿಕ್ಕಿಸಲು. ಭಟ್ಟರು ಬರೆದಂತೆ ನಾವು ಅಮ್ಮನ ಗಾಳಕ್ಕೆ ಸಿಕ್ಕಿದ್ದರೂ ವ್ಯಾಪಾರಿಯ ಗಾಳಕ್ಕೆ ಇನ್ನೊಮ್ಮೆ ಬೀಳುವುದು ಲೌಕಿಕದ ಸತ್ಯ. ಹಾಗೇ ಹಲವು ಹನ್ನೆರಡು ಗಾಳಗಳಿಗೆ ಸಿಕ್ಕಿದ್ದರೂ, ಅಮ್ಮನ ಗಾಳದ ಶಕ್ತಿಯೇ ಬೇರೆ. ಹಾಗಿರುವಾಗ ಅಮ್ಮ ಮಗುವಿನಿಂದ ಅಪೇಕ್ಷಿಸುವುದು ಏನು? ನನಗನಿಸಿದಂತೆ ಆಕೆಗೆ ಬೇಕಿರುವುದು ನನ್ನ ಮಗು ತಾನು ಹುಟ್ಟಿ ಬೆಳೆದ ನೆಲದ ಮಣ್ಣಲ್ಲಿ ಭದ್ರವಾಗಿ ಹೆಜ್ಜೆ ಊರಿ ನಿಲ್ಲುವುದು. ಅದು ಸಾಧ್ಯವಿಲ್ಲದಿದ್ದರೆ, ಎಲ್ಲೇ ಇದ್ದರೂ ಸ್ವಾವಲಂಬಿಯಾಗಿ, ಉತ್ತಮ ನಾಗರೀಕರಾಗಿರುವುದು. ನಮ್ಮ ಮಕ್ಕಳ ಅಮ್ಮನಿಗೆ ಆಸರೆಯಾಗಿ, ಆಕೆಯನ್ನು ಗೌರವಯುತವಾಗಿ ನಡೆಸಿಕೊಳ್ಳುವುದನ್ನು ಆಕೆ ಬಯಸುತ್ತಾಳೆ. ನಮ್ಮ ಸುತ್ತಲಿನ ಅಮ್ಮಂದಿರೊಡನೆ ಗೌರವಯುತವಾಗಿ ನಡೆಯುವುದನ್ನು ಅಪೇಕ್ಷಿಸುತ್ತಾಳೆ. ನಮ್ಮ ಮನೆಯಲ್ಲೇ ಇರುವ ಬಾಲೆ ಆತ್ಮ ವಿಶ್ವಾಸದಿಂದ ಮುಂದಿನ ಸುಧೃಡ ಪೀಳಿಗೆಯ ಅಡಿಪಾಯವಾಗಿ ಬೆಳೆಯುವುದನ್ನು ನಿರೀಕ್ಷಿಸುತ್ತಾಳೆ. ಮಮತೆಯ ಗಾಳದ ಕೊಂಡಿಯಿಂದ ಸೂಸಿದ ‘ಅಮ್ಮ’ ಎಂಬ ಜೀವತಂತು ಭವಿಷ್ಯದ ಮಕ್ಕಳಲ್ಲಿ ಹಾಸುಹೊಕ್ಕಾಗುವುದರಲ್ಲಿ ಸಾರ್ಥಕ್ಯವನ್ನು ಕಾಣುತ್ತಾಳೆ. ದೂರದಲ್ಲಿರುವ ನನಗೆ, ದೂರವಾಣಿಯಲ್ಲಿ ಅಮ್ಮನಿಗೆ ಮದರ್ಸ್ ಡೇಯಂದು ಹಾರೈಸಿ, ಆಶೀರ್ವಾದ ಪಡೆಯುವುದರ ಜೊತೆಗೆ, ಆಕೆಯ ಅಪೇಕ್ಷೆಗಳನ್ನು ಕೈಲಾದಷ್ಟು ನಿರ್ವಹಿಸುವುದೇ ನಾನು ಕೊಡುವ ಕಾಣಿಕೆ.
ಈ ದೇಶದಲ್ಲಿ (ಯುನೈಟೆಡ್ ಕಿಂಗ್ಡಮ್) ನೀವು ಎಲ್ಲೇ ಇರಿ, ನಿಮಗೆ ಹತ್ತಿರದಲ್ಲೇ ಒಂದು ಐತಿಹಾಸಿಕ ಸ್ಥಳ ಇರುವ ಸಾಧ್ಯತೆ ಇರುತ್ತದೆ. ಅದು ನೂರಾರು ವರ್ಷಗಳ ಹಿಂದೆ ಕಟ್ಟಿದ ಮನೆ ಇರಬಹುದು, ಹೆಸರಾಂತ ಪುರುಷ ಅಥವಾ ಮಹಿಳೆ ಬದುಕಿದ್ದ ಊರು ಇರಬಹುದು ಅಥವಾ ಯುದ್ಧ ನಡೆದ ಸ್ಥಳ ಇರಬಹುದು. ಇವು ಯಾವುವೂ ಇಲ್ಲದಿದ್ದರೆ ನೂರಾರು ವರ್ಷಗಳ ಹಳೆಯ ಆದರೆ ಇನ್ನೂ ಬದುಕಿಕೊಂಡು ಬಂದಿರುವ ಒಂದು ಪಬ್ ಅಂತೂ ಇದ್ದೇ ಇರುತ್ತದೆ!
ಇಲ್ಲಿನ ಅನೇಕ ಸಂಸ್ಥೆಗಳು (ಉದಾ: English Heritage, National Trust) ಇಂಥ ಜಾಗಗಳ ಸಂರಕ್ಷಣೆಯ ಹೊರೆಯನ್ನು ತೆಗೆದುಕೊಂಡಿರುತ್ತಾರೆ. ಅದಲ್ಲದೇ, ನೂರಾರು ವರ್ಷಗಳ ಹಿಂದಿನ ಮೂಲದಾಖಲೆಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಅನೇಕ ಸಂಸ್ಥೆಗಳಿವೆ (ಉದಾ: National Archives, Public Records Office, British Library). ಅಷ್ಟೇ ಅಲ್ಲದೇ ಬಹುಷಃ ಎಲ್ಲ ಚರ್ಚುಗಳೂ ಸಹ ಸ್ಥಳೀಯ ದಾಖಲೆಗಳನ್ನು ಕಾಪಾಡಿಕೊಂಡು ಬಂದಿರುತ್ತವೆ.
ನಾವಿರುವ ಹತ್ತಿರದ ಊರಿನಲ್ಲಿ, ಕೇವಲ ಎರಡು ಮೈಲಿ ದೂರದಲ್ಲಿ ೧೬ನೇ ಶತಮಾನದ ಬೇಸಿಂಗ್ ಮನೆ (Basing House) ಮತ್ತು ಹತ್ತು ಮೈಲಿ ದೂರದಲ್ಲಿ ಚಾವ್ಟನ್ ವಿಲೇಜ್ (Chawton village)ನಲ್ಲಿ ೧೯ನೇ ಶತಮಾನದಲ್ಲಿದ್ದ ಪ್ರಸಿದ್ಧ ಸಾಹಿತಿ ಜೇನ್ ಆಸ್ಟೆನ್ (Jane Austen) ವಾಸವಾಗಿದ್ದ ಮನೆ ಇದೆ. ಅಂದ ಹಾಗೆ ಸಮೀಪದಲ್ಲಿ ಡಮ್ಮರ್ ಅನ್ನುವ ಹಳ್ಳಿಯಲ್ಲಿ ೪೦೦ ವರ್ಷಗಳಷ್ಟು ಹಳೆಯ Queen Inn PUB ಇದೆ!
ಬೇಸಿಂಗ್ ಮನೆ
ಈ ಲೇಖನ `ಬೇಸಿಂಗ್ ಹೌಸ್` ಬಗ್ಗೆ. ಸ್ಥಳೀಯ ಚರಿತ್ರೆಯಲ್ಲಿ ಇಲ್ಲಿ ಕ್ರಿ.ಶ. ೧೧೦೦ ನಲ್ಲಿ `ಡಿ ಪೋರ್ಟ್` ಮನೆತನದವರು ೧೫ ಎಕರೆ ಜಾಗದಲ್ಲಿ ಒಂದು ವಿಶಾಲವಾದ ಕೋಟೆಯನ್ನು ಕಟ್ಟಿದ ವಿವರಗಳಿವೆ. ಇವರು ೧೦೬೬ರಲ್ಲಿ ಬಂದ ವಿಲಿಯಂ (William, the Conqueror)ನ ಕಡೆಯವರು. ಕೋಟೆಯ ಸುತ್ತಲೂ ರಕ್ಷಣೆಗಾಗಿ ಅನೇಕ ಗುಂಡಿ ಮತ್ತು ಕಾಲುವೆಗಳನ್ನು ಕಟ್ಟಿದರು. ನಂತರ ಬಂದವನು ವಿಲಿಯಂ ಪ್ಯಾಲೆಟ್. ಈತ ಹೆನ್ರಿ-೮ನ ಆಸ್ಥಾನದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದವನು. ಕಾರ್ಡಿನಲ್ ವುಲ್ಸಿ (Cardinal Woolsey) ಜೊತೆಯಲ್ಲಿ ಕೆಲಸ ಮಾಡಿದ ನಂತರ ಹಣಕಾಸಿನ ಸಚಿವನಾದವನು (ಈಗಿನ Chancellor of the Exchequer ತರಹ). ಕ್ರಿ.ಶ. ೧೫೩೫ರಲ್ಲಿ ಹಳೆಯ ಕೋಟೆಯ ಪಕ್ಕದಲ್ಲಿ ೩೬೫ ಕೊಠಡಿಗಳ ಅರಮನೆಯನ್ನು ಕಟ್ಟಿಸಿದ. ಈ ಮನೆ ಆಗ ರಾಜ್ಯದಲ್ಲೇ ಅತ್ಯಂತ ದೊಡ್ಡ ಮನೆ ಆಗಿತ್ತು. ಅನೇಕ ರಾಜ್ಯವಂಶದ ಮನೆಯವರು ಇಲ್ಲಿಗೆ ಬರುತ್ತಿದ್ದರು. ಹೆನ್ರಿ-೮ ಸಹ ಭೇಟಿ ಕೊಟ್ಟಿದ್ದ. ರಾಣಿ ಎಲಿಝಬೆತ್-೧, ೧೫೬೦, ೧೫೬೯ ಮತ್ತು ೧೬೦೧ ನಲ್ಲಿ ಇಲ್ಲಿ ಬಂದು ಅನೇಕ ದಿನಗಳನ್ನು ಕಳೆದಿದ್ದಳು. ೧೫೫೧ರಲ್ಲಿ ಎಡ್ವರ್ಡ್-೬ ಈತನಿಗೆ Marquess of Winchester ಅನ್ನುವ ಬಿರುದನ್ನು ಕೊಟ್ಟು ಗೌರವಿಸಿದ.
ಈ ವಂಶದ ಜಾನ್ ಪೌಲೆಟ್, ಐದನೇಯ Marquess of Winchester, ಕಾಲದಲ್ಲಿ ಈ ಮನೆ ನಾಶವಾಯಿತು. ಇದರ ಕಾರಣ, English Civil War (೧೬೪೨-೧೬೫೧); ಇದರ ಬಗ್ಗೆ ಇಲ್ಲಿ ಸಂಕ್ಷಿಪ್ತ ವಿವರಣೆ ಸೂಕ್ತ.
ಕ್ಯಾಥೋಲಿಕ್ ಮತ್ತು ಪ್ರಾಟೆಸ್ಟೆಂಟ್ ಪಂಗಡದವರ ಮನಸ್ತಾಪ, ಚಾರ್ಲ್ಸ್-೧ನ ಅತೃಪ್ತಿಕರ ರಾಜ್ಯಭಾರ ಮತ್ತು ಆಡಳಿತ ತನ್ನ ಹಕ್ಕು ಮಾತ್ರ ಎಂಬ ಅಹಂಕಾರ, ಪಾರ್ಲಿಮೆಂಟಿಗೆ ರಾಜನ ಆಡಳಿತದ ಅಧಿಕಾರ ಕಡಿಮೆ ಮಾಡುವ ಪ್ರಯತ್ನ, ಪ್ರಜಾಪ್ರಭುತ್ವ ಪಂಗಡದ ಮುಖ್ಯಸ್ಥನಾದ ಆಲಿವರ್ ಕ್ರಾಂವೆಲ್-ಗೆ ಇಂಗ್ಲೆಂಡ್ ದೇಶದಲ್ಲಿ ಪ್ರಾಟೆಸ್ಟಂಟ್ ಜಾತಿ ಮಾತ್ರ ಉಳಿಯಬೇಕೆಂಬ ಉದ್ದೇಶ – ಇವು ಕೆಲವು ಮುಖ್ಯ ಕಾರಣಗಳು.
ವಿಲಿಯಂ ಪೌಲೆಟ್
ಚಾರ್ಲ್ಸ್-೧ ಕ್ಯಾಥೋಲಿಕ್ ಪಂಗಡದವರ ಹಿತೈಷಿ ಮತ್ತು ಈ ಜಾತಿಗೆ ಸೇರಿದ್ದ ಹೆನ್ನಿರೀತ ಮರಿಯ ಮದುವೆ ಆಗಿದ್ದು ಅನೇಕರಿಗೆ ಅಸಮಾಧಾನ ಉಂಟಾಯಿತು. ಕ್ಯಾಥೋಲಿಕ್ ಪಂಗಡದವರ ಮಾದರಿಯ ಚರ್ಚುಗಳಿಗೆ ಹೆಚ್ಚು ಸ್ವಾತಂತ್ರ ಕೊಡುವ, ಪಾರ್ಲಿಮೆಂಟಿನ ಅನುಮತಿ ಇಲ್ಲದೇ ಹಣವನ್ನು ತನ್ನ ಯುದ್ಧಗಳಿಗೆ ಬಳಸುವ ಮತ್ತು ಅನೇಕ ಸಲ ಪಾರ್ಲಿಮೆಂಟನ್ನೇ ರದ್ದುಮಾಡಿ ಸರ್ವಾಧಿಕಾರಿಯಾಗಿ ರಾಜ್ಯವನ್ನು ಆಳುವ ಪ್ರಯತ್ನಗಳನ್ನು ಮಾಡಿದ.
ಪ್ರಾಟೆಸ್ಟಂಟ್ ಪಂಗಡದ ನಾಯಕ ಆಲಿವರ್ ಕ್ರಾಂವೆಲ್ ಪ್ರಜಾಪ್ರಭುತ್ವದ ಮುಂದಾಳಾಗಿ ಚಾರ್ಲ್ಸ್ ಮೇಲೆ ಹೋರಾಟ ಆರಂಭಿಸಿದ. ಆದರೆ ಕ್ಯಾಥೋಲಿಕ್ ಪಂಗಡವರು ರಾಜನ ನೆರವಿಗೆ ಮುಂದೆ ಬಂದರು. ಹೀಗಾಗಿ ೧೬೪೨ ರಿಂದ ೧೬೫೧ ಈ ದೇಶದಲ್ಲಿ ಅನೇಕ ಕಡೆ ಯುದ್ಧಗಳಾದವು. ಇದಲ್ಲದೆ ಹಲವಾರು ಪ್ರಬಲ ಕ್ಯಾಥೋಲಿಕ್ ಮನೆತನದವರ ಮೇಲೂ ಧಾಳಿ ನಡೆಯಿತು. ಅದರಲ್ಲಿಈ ಬೇಸಿಂಗ್ ಹೌಸ್ ಕೂಡ ಒಂದು. ಇದರ ಮಾಲಿಕ, ಜಾನ್ ಪೌಲೆಟ್, ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವರು ಮತ್ತು ಚಾರ್ಲ್ಸ್-೧ನ ಹಿತೈಷಿ.
ಚಾರ್ಲ್ಸ್-೧
ಈ ಮನೆಯ ಮೇಲೆ ಮೊದಲ ಬಾರಿಗೆ ೧೬೪೨ರಲ್ಲಿ, ಕರ್ನಲ್ ನಾರ್ಟನ್-ನ ನೇತೃತ್ವದಲ್ಲಿ ಪ್ರಜಾಪ್ರಭುತ್ವದ ಸೇನೆ ಧಾಳಿ ನಡೆಸಿತು. ಆದರೆ ಚಾರ್ಲ್ಸ್ ತನ್ನ ಸೈನ್ಯದ ಒಂದು ತುಂಡನ್ನು ಜಾನ್ ಪೌಲೆಟ್ ಸಹಾಯಕ್ಕೆ ಕಳಿಸಿದ್ದರಿಂದ ಧಾಳಿ ಯಶಸ್ವಿ ಆಗಲಿಲ್ಲ.
೧೬೪೩ ರಲ್ಲಿ ಸರ್ ವಿಲಿಯಂ ವಾಲ್ಲರ್ ೫೦೦ ಸೈನಿಕರು ಮತ್ತು ೫೦೦ ಕುದುರೆಗಳ ಪಡೆಯನ್ನು ತಂದು ಮೂರು ದಿನ ಈ ಮನೆ ಮುತ್ತಿಗೆ ಹಾಕಿ, ಮನೆಯ ಪಕ್ಕದಲ್ಲಿದ್ದ ದೊಡ್ಡ ಕೊಟ್ಟಿಗೆಯನ್ನು ಆಕ್ರಮಿಸಿಕೊಂಡ. ಜಾನ್ ಪೌಲೆಟ್ ಶರಣಾಗತನಾದರೆ ರಕ್ತಪಾತ ತಪ್ಪಿಸಬಹುದು ಎಂದು ಸಂದೇಶವನ್ನು ಕಳಿಸಿದ. ಆದರೆ ಇದನ್ನು ನಿರಾಕರಿಸಿ ರಾಜ್ಯವಂಶದ ಬೆಂಬಲಿಗರಿಂದ ಹೋರಾಟ ಮುಂದುವರೆಸಿ ಮನೆಯ ಮೇಲಿನಿಂದ ಫಿರಂಗಿಗಳನ್ನು ನಿಲ್ಲಿಸಿ ಎದುರಾಳಿಗಳ ಮೇಲೆ ಹಲ್ಲೆ ಮಾಡಿದರು. ಈ ಕದನದಲ್ಲಿ ಪ್ರಜಾಪ್ರಭುತ್ವದ ಕ್ಯಾಪ್ಟನ್ದ ಕ್ಲಿನ್ಸನ್ ಮರಣ ಹೊಂದಿದ. ಇದನ್ನು ತಡೆಯಲಾರದೆ ಮರುಗುಂಪು ಮಾಡುವುದಕ್ಕೆ ಈ ಸೈನ್ಯ ಹತ್ತಿರದ ಬೇಸಿಂಗ್ ಸ್ಟೋಕ್-ನಲ್ಲಿ ಸೇರಿದರು. ಪದೇ ಪದೇ ಧಾಳಿ ನಡೆಸಿದರೂ ಬೇಸಿಂಗ್ ಮನೆಯನ್ನು ವಶಪಡೆಯುವುದಕ್ಕೆ ಸಾಧ್ಯವಾಗಲಿಲ್ಲ.
ಕೊನೆಗೆ, ಮೂರು ವರ್ಷದ ನಂತರ, ಆಲಿವರ್ ಕ್ರಾಂವೆಲ್ ಸ್ವತಃ ತನ್ನ ಸೈನ್ಯದೊಂದಿಗೆ ಬಂದು (೧೪/೧೦/೧೬೪೫ ) ಮನೆಯ ಮುಂದಿನ ಹೆಬ್ಬಾಲಿಗೆ ಫಿರಂಗಿನಿಂದ ಹೊಡೆದು ಓಳಗೆ ನುಗ್ಗಿ ಮನೆಯನ್ನು ಲೂಟಿ ಮಾಡಿದ ನಂತರ ಕರ್ನಲ್ ಡಾಲ್ಬಿರ್ ಈ ಮನೆಗೆ ಬೆಂಕಿ ಹಚ್ಚಿ ನಾಶ ಮಾಡಿದ. ಸ್ಥಳೀಯ ಜನರು ಬಂದು ಈ ಮನೆಯನ್ನು ಲೂಟಿ ಮಾಡಿದರೆ ಅಪರಾಧ ಇಲ್ಲ ಅನ್ನುವ ಸಂದೇಶವನ್ನು ಆಲಿವರ್ ಕ್ರಾಂವೆಲ್ ಕೊಟ್ಟ.
ಆಲಿವರ್ ಕ್ರಾಂವೆಲ್
ಜಾನ್ ಪೌಲೆಟ್ ಶರಣಾಗತನಾದ ಮೇಲೆ ಲಂಡನ್ ಟವರಿನಲ್ಲಿ (London Tower) ಅನೇಕ ವರ್ಷ ಸೆರೆಯಲ್ಲಿದ್ದ. ೧೬೫೮ರಲ್ಲಿ ಆಲಿವರ್ ಕ್ರಾಂವೆಲ್ ಮರಣವಾದ ನಂತರ ಒಳಜಗಳಗಳು ಶುರುವಾಗಿ ರಾಜ್ಯವಂಶದವರನ್ನು ಬಿಟ್ಟು ಪ್ರಜಾಪ್ರಭುತ್ವ ಮಾತ್ರದಿಂದ ರಾಜ್ಯವನ್ನು ಆಳುವುದು ಸಾಧ್ಯವಾಗಲಿಲ್ಲ. ಈ ಕಾರಣದಿಂದ, ಚಾರ್ಲ್-೧ನ ಮಗ ಸ್ಕಾಟ್ಲೆಂಡಿನಲ್ಲಿ ರಾಜನಾಗಿದ್ದ. ಚಾರ್ಲ್ಸ್-೨ನನ್ನು ೧೬೬೦ರಲ್ಲಿ ಪಟ್ಟಕ್ಕೆ ತಂದರು. ರಾಜಪ್ರಭುತ್ವ ಪುನಃ ಮರಳಿ ಬಂತು ಮತ್ತು ಪ್ರಜಾಪ್ರಭುತ್ವದ ಪ್ರಭಾವವೂ ಹೆಚ್ಚಾಯಿತು.
ಈ ಯುದ್ದದ ನಂತರ, ಚಾರ್ಲ್ಸ್ ಮೇಲೆ ದೇಶದ್ರೋಹಿ ಎಂಬ ಅಪರಾಧಕ್ಕೆ ಮರಣ ದಂಡನೆ ಶಿಕ್ಷೆ ವಿಧಿಸಿ, ಜನವರಿ ೩೦, ೧೬೪೯ರಲ್ಲಿ ಬಹಿರಂಗವಾಗಿ ಈಗಿನ White Hall ನಲ್ಲಿ ಶಿರಚ್ಛೇದನ ಮಾಡಲಾಯಿತು.
ಚರ್ಲ್ಸ್-೨ನು ಜಾನ್ ಪೌಲೆಟ್ ಮೇಲಿನ ಅಪರಾಧಗಳನ್ನು ರದ್ದು ಮಾಡಿ ಸೆರೆಯಿಂದ ಬಿಡುಗಡೆ ಮಾಡಿದ. ಬೇಸಿಂಗ್ ಮನೆಯನ್ನು ವಶ ಮಾಡಿಕೊಂಡ, ಆದರೆ ಈ ನೆಲಸಮವಾದ ಮನೆಯನ್ನು ಪುನಃ ಕಟ್ಟುವ ಆರ್ಥಿಕ ಶಕ್ತಿ ಇರಲಿಲ್ಲ. ಇವನ ಮಗ ಚಾರ್ಲ್ಸ್ ಹತ್ತಿರದಲ್ಲಿ ಬೇರೆ ಮನೆ ಕಟ್ಟಿದ. ಈಗ ಉಳಿದಿರುವುದು ಅಡಿಪಾಯ ಮತ್ತು ಒಂದು ದೊಡ್ಡ ಕೊಟ್ಟಿಗೆ. ಈ ಮನೆಗೆ ಸಂಬಂಧಪಟ್ಟ ವಸ್ತುಸಂಗ್ರಾಲಯ. ಇದರ ಆಡಳಿತ Hampshire Cultural Trust ನೋಡಿಕೊಳ್ಳುತ್ತದೆ.
ನಾನು ಈ ಸಲ ಬೆಂಗಳೂರಿಗೆ ಹೋದಾಗ ನಮ್ಮ ಫ್ರೆಂಡ್ ಮನೆಗೆ ಹೋಗಿದ್ದೆ. ಇದು ಅವರು ಹೇಳಿದ ಕಥೆ. ಆ ಮಾವಿನ ಕಾಯಿಗೆ ಒಂದಿಷ್ಟು ಉಪ್ಪು ಖಾರ ಹಚ್ಚಿ ಇಟ್ಟಿದ್ದೇನೆ. ಮೆಲ್ಲಿ, ಎಂಜಾಯ್ ಮಾಡಿ, ಚೆನ್ನಾಗಿತ್ತ ಹೇಳಿ.
ಚಳಿಗಾಲದ ದಿನ, ಹೊರಗಡೆ ಬೆಳಿಗ್ಗೆಯಷ್ಟೇ ಬಿದ್ದ ತೆಳ್ಳನೆಯ, ನವಿರಾದ ಹಿಮದ ಪದರದಲ್ಲಾವರಿಸಿದ ಹೊರಾಂಗಣ, ಒಣಗಿ ನಿಂತ ಮರಗಳು ಕಪ್ಪು-ಬಿಳುಪಿನ ಸುಂದರ ಚಿತ್ರದಂತಿತ್ತು. ಹಲವು ಕಾಲ ಮೋಡದ ಹಚ್ಚಡವನ್ನು ಹೊದ್ದು ಬಿದ್ದಿದ್ದ ಸೂರಜ್ ಕುಮಾರ್ ಈ ಮನೋಹರ ದೃಶ್ಯವನ್ನು ವೀಕ್ಷಿಸಲೆಂದೇ ಹಣಕಿ ಹಾಕಿದ್ದ. ಆತ ತಂದ ಹೊಂಬಿಸಿಲನ್ನು ಆಸ್ವಾದಿಸುತ್ತ ನಾನು ಕಿಟಕಿಯ ಪಕ್ಕದ ಆರಾಮಾಸನದಲ್ಲಿ ಒರಗಿ ತೂಕಡಿಸುತ್ತಿದ್ದೆ. ಬಾಗಿಲ ಬಳಿ ಟಪ್ ಎಂದು ಟಪಾಲು ಬಿದ್ದ ಸದ್ದಾಯಿತು. ಕುತೂಹಲ ತಾಳಲಾರದೇ ಹೋಗಿ ನೋಡಿದರೆ, ಇಂಡಿಯಾದಿಂದ ಬಂದ ಪತ್ರ! ಅದರಲ್ಲೂ ನನ್ನ ಪ್ರಿಯ ತಂಗಿಯ ಕೈಬರಹದಲ್ಲಿರುವ ಅಡ್ರೆಸ್!! ತೆಗೆದರೆ, ೬ ಪೇಜುಗಳ ಕಾಗದ. ಏನಪ್ಪಾ! ಅಂಥ ಮಹತ್ವದ್ದು, ಇಷ್ಟೂದ್ದದ್ದು ಎಂದು ಓದ ತೊಡಗಿದೆ.
ಮಾತೃಶ್ರೀ ಸಮನಾಳದ ಅಕ್ಕನಿಗೆ ನಿನ್ನ ತಂಗಿಯಾದ ಗುಂಡಮ್ಮ ಮಾಡುವ ನಮಸ್ಕಾರಗಳು. ಉllಕುllಶಲೋಪರಿ ಸಾಂಪ್ರತ (ಪರವಾಗಿಲ್ವೇ, ಗೌರವಯುತವಾಗಿ ಬರೆದಿದ್ದಾಳೆ). ನಾವೆಲ್ಲ ಇಲ್ಲಿ ತಿಂದು, ಉಂಡು, ಹರಟೆ ಹೊಡೆದು, ಸಿನಿಮಾ ನೋಡಿಕೊಂಡು ಚೆನ್ನಾಗಿದ್ದೇವೆ (ನನಗೆ ಹೊಟ್ಟೆ ಉರಿ, ಈ ಚಳಿ ದೇಶದಲ್ಲಿ ಯಾವ ಕನ್ನಡ ಸಿನಿಮಾ ಬರುತ್ತೆಂತ).
ಮುಖ್ಯ ವಿಷಯವೆಂದರೆ, ನಾನು, ನನ್ನೆಜಮಾನರು ವಿದೇಶ ಪ್ರವಾಸ ಮಾಡೋದಂತ ನಿಶ್ಚಯಿಸಿದ್ದೇವೆ. ನಿನಗೆ ಗೊತ್ತಿರುವ ಹಾಗೆ ನನ್ನ ಗಂಡನಿಗೆ ಪಿಂಚಣಿ ದೊರಕಿದೆ. ನೀನೇ ಎಷ್ಟೋ ಸಲ “ಬಾರೆ, ನಮ್ಮೂರಿಗೆ, ಬೇಕಾದರೆ ಟಿಕೆಟ್ ಕಳಿಸ್ತೇನೆ” ಅಂತ ಕರೀತ್ಲೇ ಇರ್ತೀಯ. ನಾನೇ, “ಬೇಡ ಕಣೇ, ನಾವಿಬ್ಬರೂ ಬಹಳ ಮಡಿ, ಆಚಾರವಂತರು, ಸರಿ ಹೋಗಲ್ಲ” ಅಂತ ದೂಡಿದ್ದೇನೆ. ನೀನು, “ಪರವಾಗಿಲ್ಲ, ನಾನು ನೋಡ್ಕೋತೀನಿ” ಅಂತ ಧೈರ್ಯ ಕೊಟ್ಟಿದೀಯ. ನಮ್ಮ ಮಠದವರು ಮುದ್ರೆ ಒತ್ತಿ, ಪಂಚಗವ್ಯ ಕುಡಿಸಿ, “ದೇವರು ಕ್ಷಮಿಸುತ್ತಾನೆ, ಪರಂಗಿ ದೇಶ ಪ್ರವಾಸ ಮಾಡಿದ್ದಕ್ಕೆ” ಅಂತ ಅಭಯ ನೀಡಿದ್ದಾರೆ. ಈಗ ಹೊರಟಿದ್ದೇವೆ. ಟಿಕೆಟ್ಟಿಗೆ ೨ ಲಕ್ಷ ಆಗುತ್ತೆ. ನೀನೇ ಮಾಡಿಸಿ ಕಳಿಸಿಬಿಡು, ರಾಹು ಕಾಲದಲ್ಲಿ ಮಾತ್ರ ಟಿಕೆಟ್ ತೊಗೋಬೇಡ (ಗ್ರಹಚಾರ, ನನಗೇನು ಗೊತ್ತು, ರಾಹು ಕಾಲ ಯಾವಾಗ ಅಂತ). ನಾನು ಇಳಕಲ್ ಸೀರೆ ಕಚ್ಚೆ ಉಟ್ಟು, ಗುಂಡಗೆ ಕುಂಕುಮ ಹಚ್ಚಿ, ಎಣ್ಣೆ ತೀಡಿ ತಲೆ ಬಾಚಿ, ಹೂವ ಮುಡಿದಿರುತ್ತೇನೆ. ಪ್ರತಿದಿನ ನನಗೆ ಮಲ್ಲಿಗೆ ಹೂವ ಬೇಕು, ತೆಗೆದಿಟ್ಟಿರು. ಬಾವನವರಿಗೆ ಗಂಧ ತೇಯ್ದು ಮುದ್ರೆ ಹಾಕಿಕೊಳ್ಳಲು ರೆಡಿ ಮಾಡಿಟ್ಟಿರು. ನಿಮ್ಮೂರಲ್ಲಿ ವಿಪರೀತ ಚಳಿ, ನಮ್ಮ ರೂಮು ಬಿಸಿಯಾಗಿರಬೇಕು. ನಮಗೆಂತ ೬ ಜೊತೆ ಕಾಲು ಚೀಲ, ಟೋಪಿ ಮತ್ತು ಮಫ್ಲರ್ ಇಟ್ಟಿರು.
ನಮ್ಮ ದಿನಚರಿ ಹೀಗಿರುತ್ತೆ: ಬೆಳಗ್ಗೆ ೫ ಗಂಟೆಗೆ ಸುಪ್ರಭಾತ. ಸ್ನಾನಕ್ಕೆ ಬಿಸಿ ಬಿಸಿ ನೀರು ರೆಡಿ ಇರಲಿ. ಆಮೇಲೆ ಜೋರಾಗಿ ವಿಷ್ಣು ಸಹಸ್ರನಾಮ ಪಠನ (ದೇವರೇ ಗತಿ, ಪಕ್ಕದ ಮನೆ ಪೀಟರ್ ಏನೆಂದಾನು). ೬:೩೦ಕ್ಕೆ ಬೆಳಗಿನ ತಿಂಡಿ. ಉಪ್ಪಿಟ್ಟು, ದೋಸೆ, ಗೊಜ್ಜವಲಕ್ಕಿ, ಅಕ್ಕಿ ರೊಟ್ಟಿ-ಮಾವಿನಕಾಯಿ ಚಟ್ನಿ ಏನಾದರೂ ಮಡಿಯಲ್ಲಿ ಮಾಡಿಟ್ಟಿರು. ಫಿಲ್ಟರ್ ಕಾಫಿ ಮರೀಬೇಡ. ೧೦:೩೦ಕ್ಕೆ ಒಂದು ರವೇ ಉಂಡೆ, ಒಂದು ಗ್ಲಾಸ್ ಬಾದಾಮಿ ಹಾಲು ಸಾಕು. ೧:೩೦ಕ್ಕೆ ಊಟ. ಈರುಳ್ಳಿ-ಗೀರುಳ್ಳಿ, ಕ್ಯಾರೆಟ್, ಬೀಟ್ ರೂಟ್ ಮಡಿಗೆ ಆಗಲ್ಲ. ಹುಳಿಗೆ ಪಡವಲ ಕಾಯಿ, ಗೋರಿಕಾಯಿ, ಸುವರ್ಣ ಗಡ್ಡೆ ಆದೀತು. ಖಾರವಾಗೇ ಇರಲಿ. ಜೊತೆಗೆ ಸಂಡಿಗೆ ಕರಿದು ಬಿಡು. ಚಟ್ನಿಪುಡಿ, ಮಾವಿನಕಾಯಿ ಮಿಡಿ ಉಪ್ಪಿನಕಾಯಿ, ಗೊಜ್ಜು ಎಲ್ಲ ಇಟ್ಟಿರು. ಬೆಣ್ಣೆ ಕಾಸಿದ ತುಪ್ಪ ಅವಶ್ಯ. ಊಟವಾದ ಮೇಲೆ ಮಲಗಲು ಚಾಪೆ, ದಿಂಬು ಸಾಕು. ಎದ್ದ ಮೇಲೆ, ಬಿಸಿ ಕಾಫಿ, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಕೊಬ್ರಿ ಮಿಠಾಯಿ ಬಯೋ ಆಡ್ಸೋಕಿದ್ರೆ ಒಳ್ಳೇದು. ರಾತ್ರಿ ಊಟ ಸಿಂಪಲ್ಲಾಗೇ ಇರಬೇಕು. ಅನ್ನ-ಸಾರು, ತೊವ್ವೆ, ಚಪಾತಿ, ಮೊಸರು. ಮಲಗೋಕ್ಮುಂಚೆ ಒಂದ್ಲೋಟ ಹಾಲು. ಇನ್ನೇನೂ ಬೇಡ ಕಣೆ, ನಿನಗೆ ತೊಂದ್ರೆ ಆಗ್ಬಿಡತ್ತೆ. ಆಮೇಲೆ ಊರು ತೋರಿಸ್ಬೇಕು. ರಾಣಿ ಅರಮನೇ, ಒಡವೆ ಎಲ್ಲಾನೂ ಬೆಚ್ಚಗಿನ ಕಾರಲ್ಲಿ ಕರಕೊಂಡು ಹೋಗೇ ಅಕ್ಕಮ್ಮ.
ಇನ್ನ ೩ ಪೇಜ್ ಇದೇರಿ. ಬರೀ ಊಟ ತಿಂಡಿಗೇ ಈ ಪಾಟಿ ಗಲಾಟೆ ಮಾಡಿದ್ದಾಳಲ್ಲ! ನಮ್ದೋ ಸೆಮಿ ಡಿಟ್ಯಾಚ್ಡ್ ಮನೆ; ದೇವರ ಮನೆಯಿಲ್ಲ, ತುಳಸಿ ಗಿಡವಿಲ್ಲ. ಏನಂತಾಳೋ, ಯಾರಿಗ್ಗೊತ್ತು? ಅದಕ್ಕೆ ಒಂದು ಪಿಲಾನು ಮಾಡಿದೆ. ತಕ್ಷಣವೇ, ಉತ್ತರ ಬರೆಯಲು ಕುಳಿತೆ.
ಪ್ರೀತಿಯ ತಂಗಚ್ಚಿಯಾದ ಗುಂಡು ಬಾಯಿಗೆ, ನಿನ್ನ ಅಕ್ಕ ಮಾಡುವ ಅನಂತ ಆಶೀರ್ವಾದಗಳು. ನೀನು ಬರುತ್ತಿ ಅಂತ ತಿಳಿದು, ವಿಪರೀತ ಸಂತೋಷವಾಗಿ ಕುಣಿದುಬಿಟ್ಟೆ. ನಮ್ಮ ಮನೆಗೆ ಖಂಡಿತ ಬಾರೆ. ಭಾವನವರನ್ನು ಕರೆದು ತಾರೆ. ನಮ್ಮ ಕುಟೀರ ನಿಮಗೆ ಇಷ್ಟವಾಗಬಹುದೆಂದು ಆಶಿಸುವೆ. ನಾವಿರುವುದು ಸೆಮಿ ಡಿಟ್ಯಾಚ್ಡ್ ಮನೆ, ಅಂದರೆ ಒಂದಕ್ಕೆ ಒಂದು ಅಂಟಿಕೊಂಡಿರುವ ಎರಡು ಮನೆಗಳಲ್ಲಿ ಒಂದು. ಪಕ್ಕದ ಮನೆಯಲ್ಲಿರುವವರು ಇಂಗ್ಲೀಷ್ ಜನ. ಅವರಿಗೆ ಕನ್ನಡ ಬರಲ್ಲ. ನೀನು ಬೆಳ್ಳಂಬೆಳಗ್ಗೆ ವಿಷ್ಣು ಸಹಸ್ರನಾಮ ಪಠಿಸಿದರೆ, ಪೋಲೀಸಿಗೆ ಕಂಪ್ಲೇಂಟ್ ಕೊಟ್ಟಾರು. ಒಳ್ಳೇ ಚಳಿಗಾಲದಲ್ಲಿ ಬರಬೇಕು ಅಂತೀಯ. ಇಲ್ಲಿ ಈಗ ಕಿಟಕಿ ಮೇಲೆಲ್ಲಾ ಮಂಜು ಮುಸುಕಿದೆ. ಗಡಗಡ ನಡುಗಿಸುವ ಅಸಾಧ್ಯ ಚಳಿ ಕಣೆ. ಹಲ್ಲು ಕಟಕಟಗುಟ್ಟುತ್ತೆ. ನಿನ್ನ ಕಚ್ಚೆ ಸೀರೆ ನಡಿಯಲ್ಲ. Trousers, leggings, sweaters ಅತ್ಯವಶ್ಯ. ಕಾಲಿಗೆ ದೊಡ್ಡ ಬೂಟು ಹಾಕಬೇಕು. ಮನೆ ಹೊರಗೆ ಕಾಲಿಟ್ಟಾಗ, ಮಂಜಿನ ಮೇಲೆ ಕಾಲು ಜಾರಿ ಬಿದ್ದು, ನಿನ್ನ, ಭಾವನವರ ಸೊಂಟ, ಮಂಡಿ ಮೂಳೆ ಮುರಿದ್ರೇನು ಮಾಡೋದು? ಆಸ್ಪತ್ರೇಲಿ ಮ್ಲೇಚ್ಛರ ಮಧ್ಯ ಬಿದ್ಕೊಂಡು ಸೂಪು, ಬ್ರೆಡ್ಡು ತಿನ್ಬೇಕಷ್ಟೇ; ಮೇಲಿಂದ ಚೀಸ್ ಉದುರಿಸಿ ಕೊಟ್ಟೇನು. ಮನೆಯಲ್ಲಿ ಟಿ.ವಿ ಬಿಟ್ಟರೆ ಇನ್ನೇನಿಲ್ಲ. ಅದರಲ್ಲೂ ಕನ್ನಡ ಬರಲ್ಲ; ಹತ್ರದಲ್ಲೆಲ್ಲೂ ಕನ್ನಡ ಸಿನಿಮಾ ಬರಲ್ಲ ಕಣೇ. ಪಕ್ಕದ ಮಾನೆಯವರ್ಯಾರೂ ಹರಟೆ ಕೊಚ್ಕೋಕೆ ಬರಲ್ಲ ಕಣೇ, ಅವಕ್ಕೆ ಕನ್ನಡ ಬಂದ್ರೆ ತಾನೇ? ಆದ್ರೂನೆ, ನೀನು ಅಪರೂಪಕ್ಕೆ ಬರೋದು ಅಪಾರ ಸಂತೋಷ ಕಣೆ. ಖಂಡಿತ ಬಾರೆ. ಎಲ್ಲ ರೆಡಿ ಮಾಡಿಟ್ಟಿರ್ತೇನೆ. ಇತಿ ನಿನ್ನ ಪ್ರೀತಿಯ ಅಕ್ಕ, ವೆಂಕೂಬಾಯಿ
ಈ ಪತ್ರಕ್ಕಿನ್ನೂ ಗುಂಡಮ್ಮನ ಉತ್ತರ ಬಂದಿಲ್ಲ. ಹ್ಹ, ಹ್ಹ, ಹ್ಹ ! ಹೇಗಿದೆ ನನ್ನ ಪಿಲ್ಯಾನು?
ಸಂಕಟ ಬಂದಾಗ ವೆಂಕಟರಮಣ ಎಂಬುದು ಕನ್ನಡದಲ್ಲಿ ಬಹಳೇ ಪ್ರಚಲಿತ ಇರುವ ಗಾದೆ . ನಮ್ಮ ಪೂರ್ವಜರು ಬಹಳ ಅನುಭವದಿಂದ ಹೇಳಿರುವ ಮಾತು . ನನಗೂ ಸಹ ಯಾಕೋ ಇದರ ಮೇಲೆ ಸ್ವಲ್ಪ ಹರಟೆ ಹೊಡೆಯಬೇಕು ಎಂದು ಅನಿಸಿತು . ಹರಟೆ ಎಂದ ತಕ್ಷಣ ನಮ್ಮೂರಿನ ಆಲದ ಮರದ ಹರಟೆಯ ಕಟ್ಟೆಯ ನೆನಪು ಬರುತ್ತದೆ . ಸಂಜೆಯಾದರೆ ಊರ ಜನರು ಸೇರಿ ಹರಟೆ ಹೊಡೆಯುತ್ತಿದ್ದ ಆ ಕಟ್ಟೆ ಇನ್ನೂ ಇದೆ , ಆದರೆ ಈಗ ಹರಟೆ ಹೊಡೆಯುವರಿಲ್ಲ ಬದಲು ಫೋನು ಹಿಡಿದುಕೊಂಡು ವಿಡಿಯೋ ನೋಡುವ ಪಡ್ಡೆ ಹುಡುಗರು ಇದ್ದಾರೆ . ನಾನೂ ಇಲ್ಲಿ ಕುಳಿತು ಒಂದು ಕಟ್ಟೆ ನೋಡುತ್ತಿದ್ದೆ , ಹರಟೆ ಹೊಡೆಯಲು . ಅನಿವಾಸಿ ಕಟ್ಟೆ ಸಿಕ್ಕಿತು . ಒಬ್ಬನೇ ಕುಳಿತು ಹರಟೆ ಹೊಡೆದಿದ್ದೇನೆ. ಸಮಯ ಸಿಕ್ಕರೆ ಓದಿ , ಹಾಗೆಯೆ ಒಂದೆರಡು ಸಾಲು ಅನಿಸಿಕೆಗಳನ್ನು ದಯವಿಟ್ಟು ಗೀಚಿ .
ಸಂಕಟ ಬಂದಾಗ ಸಹಾಯಕ್ಕೆ ಮೊರೆಹೋಗುವುದು ಎಲ್ಲ ಜೀವಿಗಳ ಸಹಜವಾದ ಸ್ವಭಾವ . ಭೂಮಂಡಲದಲ್ಲಿ ತಾನೇ ಶ್ರೇಷ್ಠನೆಂದು ಬೀಗುವ ಮನುಜ ಇದಕ್ಕೇನು ಹೊರತಾಗಿಲ್ಲ . ಸಂಕಟ ಬಂದಾಗ ಅಥವಾ ಬರಿಸಿಕೊಂಡಾಗ ಹತ್ತು ಹಲವಾರು ಮಾರ್ಗಗಳ ಅನ್ವೇಷಣೆಯಲ್ಲಿ ತೊಡಗುತ್ತಾನೆ . ಅಡ್ಡದಾರಿ ಹುಡುಕುವದು , ಮೋಸ ಮಾಡುವದು , ಇನ್ನೊಬ್ಬರಿಗೆ ಅನ್ಯಾಯವೆಸಗುವದು , ಲಂಚ ಕೊಡುವದು ಇವೆಲ್ಲವೂ ಫಲ ನೀಡದಿದ್ದಾಗ ಕೊನೆಯ ಪ್ರಯತ್ನವಾಗಿ ದೇವರಿಗೆ ಮೊರೆ ಹೋಗುವದು ಸಾಮಾನ್ಯ . ಎಷ್ಟೋ ಜನರಿಗೆ ನಿತ್ಯ ಜೀವನದಲ್ಲಿ ಲಂಚವನ್ನು ಕೊಟ್ಟು, ಪಡೆದು ಅಸಾಧ್ಯವಾದ ಕೆಲಸಗಳನ್ನು ಸರಾಗವಾಗಿ ಗಿಟ್ಟಿಸಿಕೊಂಡು , ಬಂದ ಸಂಕಟವನ್ನು ಹಾಗೆಯೆ ಪರಿಹರಿಸಿಕೊಂಡ ಅಭ್ಯಾಸ .
ಸಂಕಟದ ಪರಿಸ್ಥಿತಿ ಬಂದಾಗ , ತಮ್ಮ ಮನಸಿನಂತೆ ದೇವರ ಮನಸೂ ಇರಬಹುದೆಂದು ಊಹಿಸಿ , ದೇವರಿಗೂ ಸಹ ಲಂಚಕೊಡಲು ಮುಂದಾದ ಮಹಾಶಯರಿಗೆ ಏನೂ ಕೊರತೆಯಿಲ್ಲ . ಲಂಚ ಕೊಡುವ ರೀತಿ ಮಾತ್ರ ವಿಭಿನ್ನವಾಗಿರಬಹುದು . ಇತ್ತೀಚಿಗೆ ನಮ್ಮ ಹಳ್ಳಿಯಲ್ಲಿ ನಡೆದ ಪಂಚಾಯತ ಸದಸ್ಯರ ಚುನಾವಣೆಗೆ ಬಸಪ್ಪ ಶೆಟ್ಟಿ ಸ್ಪರ್ಧಿಸಿದ್ದ . ಅಂಗಡಿಯ ವ್ಯವಹಾರ ಚನ್ನಾಗಿದ್ದಿದ್ದರಿಂದ ಒಳ್ಳೆಯ ಹಣವನ್ನು ಸಂಪಾದಿಸಿದ್ದ . ಅದೆಷ್ಟೇ ಹಣ ಖರ್ಚಾದರೂ ಚುನಾವಣೆಯನ್ನು ಗೆಲ್ಲಲೇ ಬೇಕೆಂದು ಶಪಥಪಟ್ಟಿದ್ದ . ಮೊದಲಿನಿಂದಲೂ ದಾಯಾದಿಯಾಗಿದ್ದ ಎದುರು ಮನೆಯ ನಂಜಪ್ಪನಿಗೆ ವಿಷಯ ಗೊತ್ತಾಗಿ ಹೊಟ್ಟೆಯಲ್ಲಿ ಕಸಿವಿಸಿ ಉಂಟಾಗಿ ನಿದ್ರೆಬಾರದಾಗಿತ್ತು. ಹೇಗಾದರೂ ಮಾಡಿ ಶೆಟ್ಟಿಯನ್ನು ಸೋಲಿಸಲೇ ಬೇಕೆಂದು ತಂತ್ರವನ್ನು ಹೂಡತೊಡಗಿದ್ದ .ಆದರೆ ಶೆಟ್ಟಿಯಲ್ಲಿದ್ದಷ್ಟು ಹಣವೂ ಇರಲಿಲ್ಲ ಜನಬಲವೂ ಇರಲಿಲ್ಲ . ಹಗಲೂ ರಾತ್ರಿ ಕೊರಗುತ್ತಿದ್ದ ಅವನಿಗೆ ಕೊನೆಗೊಂದು ದಿನ ಸರಳ ಉಪಾಯ ಹೊಳೆಯಿತು . ತಿರುಪತಿ ತಿಮ್ಮಪ್ಪನಿಗೆ ಮೊರೆ ಹೋದ . ಶೆಟ್ಟಿಯನ್ನು ಚುನಾವಣೆಯಲ್ಲಿ ಸೋಲಿಸಿದರೆ ತಿಮ್ಮಪ್ಪನ ಹುಂಡಿಗೆ ೫೦೦೧ ರೂಪಾಯಿ ಹಾಕುವದಾಗಿ ಹರಕೆ ಹೊತ್ತ . ವಿಷಯ ಶೆಟ್ಟಿಗೆ ಗೊತ್ತಾಗಿ ಅವನಿಗೂ ಕಸಿವಿಸಿಯಾಗತೊಡಗಿತು . ಊರ ಜನರಿಗೆ ತಾನು ಎಷ್ಟೊಂದು ಹಣವನ್ನು ಖರ್ಚು ಮಾಡಿದರೂ ತಿಮ್ಮಪ್ಪನ ಕರುಣೆ ನಂಜಪ್ಪನಿಗೆ ಗಿಟ್ಟಿಬಿಟ್ಟರೆ ಏನು ಗತಿ ? ಎಂದು ದಿನವಿಡೀ ತವಕಾಡತೊಡಗಿದ . ಯಾವುದಕ್ಕೂ ಸ್ವಲ್ಪನೂ ಅಪಾಯವನ್ನು ತೆಗೆದುಕೊಳ್ಳಬಾರದು ಎಂದು ಅವನ ಸ್ನೇಹಿತರೆಲ್ಲ ಹೇಳತೊಡಗಿದ್ದರು . ನಿದ್ರೆಬಾರದ ರಾತ್ರಿಯಲ್ಲಿ ಒಂದು ನಿರ್ಧಾರ ತೆಗೆದೇಕೊಂಡ . ನಂಜಪ್ಪನಿಗಿಂತ ಎರಡು ಪಟ್ಟು ಹಣವನ್ನು ಹುಂಡಿಗೆ ಹಾಕುವದಾಗಿ ತಾನೂ ಸಹ ತಿಮ್ಮಪ್ಪನಿಗೊಂದು ಹರಕೆ ಹೊತ್ತೇಬಿಟ್ಟ . ಈಗ ನೀವೇ ಹೇಳಿ ತಿಮ್ಮಪ್ಪ ಏನು ಮಾಡಬೇಕೆಂದು ? ತಾವೇ ಬರಿಸಿಕೊಂಡ ಇವರ ಸಂಕಟವನ್ನು ಅವನು ಹೇಗೆ ಬಗೆಹರಿಸಬೇಕೆಂದು ? . ಇವರಿಬ್ಬರು ತಮ್ಮ ವಯಕ್ತಿಕ ಕಿತ್ತಾಟದಲ್ಲಿ ತಿಮ್ಮಪ್ಪನನ್ನು ಇಕ್ಕಟ್ಟಿಗೆ ಸಿಕ್ಕಿಸಿಹಾಕಿದ್ದು ಮಾತ್ರ ನಿಜ .ಎಲ್ಲ ಕಡೆಯಲ್ಲೂ ಇಂಥ ಮಹಾಶಯರಿಗೇನು ಕೊರತೆಯಿಲ್ಲ ಹಾಗೆಯೆ ದೇವರನಿಗೂ ಸಂಕಟ ತಪ್ಪಿದ್ದಲ್ಲ . ಹಣವಿದ್ದವರು ದೇವರಿಗೆ ಈ ರೀತಿಯ ಹಣದಾಸೆ ತೋರಿಸಿದರೆ ಇನ್ನು ಹಣವಿಲ್ಲದವರು ಏನು ಮಾಡಬೇಕು ? ಹಾಗೇನೆಂದುಕೊಳ್ಳಬೇಡಿ ! ಏನೂ ಇಲ್ಲದಿದ್ದರೂ ಏನೋ ಒಂದು ವಿಚಾರಿಸಿ ಕೊನೆಗೊಂದು ಮಾರ್ಗವನ್ನು ಕಂಡುಕೊಳ್ಳುವವರಿಗೇನು ಕೊರತೆಯಿಲ್ಲ.
ನಮ್ಮ ‘ಕೆ ಎಂ ಸಿ’ ಯ ಕಾಲೇಜಿನ ಅವರಣದಲ್ಲೊಂದು ಹನುಮಪ್ಪನ ಮಂದಿರವಿತ್ತು . ಪ್ರತಿ ಶನಿವಾರ ಸಾಯಂಕಾಲ ತಪ್ಪದೆ ಕೆಲವು ಹುಡುಗರು ಮತ್ತು ಹುಡುಗಿಯರು ಹನುಮಪ್ಪನನ್ನು ಭಕ್ತಿಯಿಂದ ಪ್ರದಕ್ಷಿಣೆ ಹಾಕುತ್ತಿದ್ದರು . ಅವರು ನಿಜವಾದ ಭಕ್ತರು ಎಂಬುದರಲ್ಲಿ ಸಂಶಯವಿಲ್ಲ . ಆದರೆ ವಾರ್ಷಿಕ ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ಹನುಮಪ್ಪನ ಭಕ್ತರ (?) ಸಂಖ್ಯೆ ತ್ರಿಗುಣಗೊಳ್ಳುತ್ತಿತ್ತು . ಇನ್ನು ಕೆಲವರು ತಾಸುಗಂಟಲೇ ಸಂಚರಿಸಿ ದೂರದಲ್ಲಿದ್ದ ರಾಯರ ಮಂಟಪಕ್ಕೆ ದರ್ಶನಕೊಡುತ್ತಿದ್ದರು . ನಿಜವಾದ ಭಕ್ತರಿಗೆ ಯಾವಾಗಲು ಭಕ್ತಿಯ ಭಾವ ಇದ್ದಿದ್ದು ಬೇರೆ ಸಂಗತಿ ಆದರೆ , ವರ್ಷವಿಡೀ ಮಜಾ ಮಾಡಿ , ಸರಿಯಾಗಿ ಓದದೆ , ಕೊನೆಯಲ್ಲಿ ಪರೀಕ್ಷೆಯ ಬಿಸಿ ತಟ್ಟಿದ್ದಾಗ ದೇವರನ್ನು ಪ್ರದಕ್ಷಣೆ ಹಾಕುತ್ತಿದ್ದ ಇವರಿಗೆ ಏನೆನ್ನಬೇಕು ? ( ಅವರಲ್ಲಿ ನಾನೂ ಒಬ್ಬ ಎಂಬುದು ಬೇರೆ ವಿಷಯ!). ಇನ್ನು ಪಾಪ , ಹನುಮಪ್ಪ ಏನು ಮಾಡಬೇಕು ಹೇಳಿ ? . ಖಂಡಿತ ಅವನೂ ಸಹ ಗೊಂದಲದಲ್ಲಿ ಬಿದ್ದಿರಬಹುದು . ಈ ಅವಕಾಶವಾದಿ ‘ ಮೊಸಳೆ ಕಣ್ಣೀರಿನ ‘ ಪ್ರದಕ್ಷಣೆಗಾರರಿಗೆ ಸಹಾಯಮಾಡಬೇಕೆ ? ಅಥವಾ ವರ್ಷವಿಡೀ ಓದಿದ ಶ್ರಮಜೀವಿಗಳಿಗೆ ಅಸ್ತು ಅನ್ನಬೇಕೆ ?. ಇವರೆಲ್ಲಾ ತಮ್ಮ ನಡುವಳಿಕೆಯಿಂದ , ಸಂಕಟವನ್ನು ತಾವೇ ಬರಿಸಿಕೊಂಡು , ಕೊನೆಯ ಗಳಿಗೆಯಲ್ಲಿ ಹನುಮಪ್ಪನ ಮೊರೆ ಹೋಗಿ , ಅವನಿಗೂ ಸಂಕಟ ತಂದೊದಗಿದ್ದು ಸುಳ್ಳೇನಲ್ಲ . ತಾಸುಗಂಟಲೆಯ ಸಮಯವನ್ನು ಪ್ರದಕ್ಷಣೆಗಾಗಿ ಕಳೆಯುವದಕ್ಕಿಂತ , ಅವನನ್ನು ಮನದಲ್ಲೇ ನೆನೆದು , ಅದೇ ಸಮಯವನ್ನು ಓದಿಗಾಗಿ ಉಪಯೋಗಿಸಿದ್ದಿದ್ದರೆ ಹನುಮಪ್ಪ ಪ್ರಸನ್ನವಾಗಿರುತ್ತಿದ್ದಿದ್ದು ಮಾತ್ರ ಸತ್ಯ .
ಇಂಥವರದೊಂದು ಕಥೆಯಾದರೆ ಬೇರೆಯವರದು ಇನ್ನೊಂದು ಕಥೆ . ನಮ್ಮ ಪಕ್ಕದ ಮನೆಯ ಗೌರಕ್ಕನಿಗೆ ಒಳ್ಳೆಯ ಗಂಡ ಸಿಕ್ಕು ಅದ್ದೂರಿಯಿಂದ ಮದುವೆ ಆಗಿ ಹೋಯಿತು . ಗೌರಕ್ಕ ನಮ್ಮ ಅಕ್ಕನಿಗಿಂತ ಒಂದು ವರ್ಷ ದೊಡ್ಡವಳು .ಪೂಜೆ ಪುರಸ್ಕಾರ ಮತ್ತು ಉಪವಾಸಗಳಲ್ಲಿ ತುಂಬಾ ಆಸಕ್ತಿ . ಅವಳ ಭಕ್ತಿಗೆ ಮೆಚ್ಚಿ ದೇವರು ಒಳ್ಳೆಯ ಗಂಡನನ್ನು ದಯಪಾಲಿಸಿದನೆಂಬುವದು ಊರ ಜನರ ನಂಬಿಕೆ. ಇದನ್ನು ಕಂಡು ನಮ್ಮಕ್ಕನಿಗೆ ಏನಾಯಿತೋ ಕಾಣೆ ( ಬಹುಶಃ, ಮನದಲ್ಲಿ ಸಂಕಟ ಆರಂಭವಾಗಿರಬಹುದು ) .
ಅವಳ ಹಾಗೆ ತನಗೂ ಸಹ ಒಳ್ಳೆಯ ಗಂಡನು ಸಿಗಲೆಂದು ಒಮ್ಮಿಂದೊಮ್ಮಲೆ ಸೋಮಪ್ಪನ ಭಕ್ತೆಯಾಗಿ ಬಿಟ್ಟಳು .ಪ್ರತಿ ಸೋಮವಾರ ಬೆಳಿಗ್ಗೆ ಮನೆಯಲ್ಲಿ ತಾಸುಗಂಟಲೇ ಪೂಜೆ ಪುರಸ್ಕಾರ ನಡೆಯತೊಡಗಿತು . ಬರಿ ಪೂಜೆ ಮಾಡಿದರೆ ಸಾಕಾಗಿತ್ತೇನೋ ಅದರ ಜೊತೆಗೆ ”ಉಪವಾಸವನ್ನು” ಕೂಡ ಸುರು ಹಚ್ಚಿಕೊಂಡಿದ್ದಳು . ಉಪವಾಸ ಎಂದ ಕ್ಷಣ ಸ್ವಲ್ಪ ಹೆಚ್ಚಿಗೇನೇ ಹೇಳಬೇಕೆನಿಸುತ್ತಿದೆ . ಉಪವಾಸ ಮಾಡುವವರಲ್ಲಿ ಬೇರೆ ಬೇರೆ ವರ್ಗಗಳಿವೆ . ಉಪವಾಸವೆಂದರೆ ಕೆಲವರು ಆಹಾರ ಬಿಡಿ ! ನೀರನ್ನೂ ಸಹ ಮುಟ್ಟುವದಿಲ್ಲ . ಕೆಲವರಿಗೆ ಉಪವಾಸವೆಂದರೆ ಲಘು ಆಹಾರ ಸೇವನೆ . ಇನ್ನು ಕೆಲವರು ಊಟಕ್ಕಿಂತಲೂ ಹೆಚ್ಚು ಉಪಹಾರ ತಿಂದು , ಉಪವಾಸವಿದ್ದೆ ಎಂದು ಸಂತೋಷಪಡುವದುಂಟು . ನಮ್ಮ ಅಕ್ಕಳು ಸಹ ಈ ಕೊನೆಯ ಗುಂಪಿಗೆ ಸೇರಿದವಳು .ಅವಳ ಉಪವಾಸ ಬೆಳಿಗ್ಗೆ ಎಂಟು ಘಂಟೆಗೆ ಪಾವ್ ಕಿಲೋ ನೆನೆಸಿದ ಅವಲಕ್ಕಿಯನ್ನು ತಿಂದು ಪ್ರಾರಂಭವಾಗುತ್ತಿತ್ತು . ಮಧ್ಯಾಹ್ನ ಕೇವಲ ? ನಾಲ್ಕೈದು ಬಾಳೆ ಹಣ್ಣು , ಒಂದು ಹಿಡಿ ಖರ್ಜುರು ಮತ್ತು ಒಂದು ದೊಡ್ಡ ಗ್ಲಾಸು ಹಾಲು , ಮತ್ತೆ ಸುಮಾರು ಇಳಿಹೊತ್ತಿಗೆ ಇನ್ನೆರಡು ಬೇರೆ ತರಹದ ಹಣ್ಣುಗಳು . ಪಾಪ !! ಹೆಸರಿಗೆ ಊಟ ಮಾತ್ರ ಇರಲಿಲ್ಲ . ಅವಳಿಗೆ ಸಿಗುತ್ತಿದ್ದ ಈ ವಿಶೇಷ ಸೇವನೆಗಳನ್ನು ನೋಡಿ ನನಗೂ ಆ ಸಣ್ಣ ವಯಸಿನಲ್ಲಿ ಉಪವಾಸ ಮಾಡಬೇಕೆಂದಿನಿಸಿತ್ತು . ಅವಳ ಉಪವಾಸದ ಫಲವಾಗಿ ಮೈತೂಕ ಹೆಚ್ಚಾಗಿತ್ತೆ ವಿನಃ ಕಡಿಮೆಯಾಗಿರಲಿಲ್ಲ . ಪಾಪ !! ಇಂಥ ಭಕ್ತರಿಗೆ ದೇವರು ಹೇಗೆ ಸಹಾಯಮಾಡಬೇಕು ? . ಮೈತೂಕ ಇಳಿಸಲು ಕೋರಿ ಇವಳು ಇನ್ನೊಂದು ಪೂಜೆಯ ಮೊರೆ ಹೋದರೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಿರಬಹುದು ಸೋಮಪ್ಪ . ಹಾಗು ಹೀಗೂ ನಮ್ಮಕ್ಕನಿಗೆ ಒಳ್ಳೆಯ ಗಂಡ ಸಿಕ್ಕಿದ್ದ ನಿಜ ಆದರೆ ಅವಳ ಉಪವಾಸದಿಂದ ಅಲ್ಲ ಎಂಬುವುದು ನನ್ನ ನಂಬಿಕೆ .
ಕಳೆದ ವರುಷ ನಮ್ಮ ಹಳ್ಳಿಗೆ ಹೋಗಿದ್ದೆ. ವಿಪರೀತ ಮಳೆ . ನಾನು ಬಂದಿರುವ ವಿಷಯ ತಿಳಿದು ನನ್ನ ‘ ಚಡ್ಡಿ ದೋಸ್ತ ‘ ಕಲ್ಲೇಶಿ ನನ್ನನ್ನು ಭೇಟಿಯಾಗಲು ಬಂದಿದ್ದ . ಹಳೆಯ ಗೆಳೆತನ ತಾನೆ ? ಸಲುಗೆಯಿಂದ ಮಾತು ಪ್ರಾರಂಭಿಸಿದ್ದೆ . “ಏನ್ ಕಲ್ಲ್ಯಾ ಹ್ಯಾಂಗ್ ಆದಿ ” ಅಂತ ಅಂದಿದ್ದೆ ಸಾಕು , ತನ್ನ ಗೋಳನ್ನು ಸುರು ಮಾಡಿಕೊಂಡುಬಿಡುವುದೆ ?. ” ಏನ್ ಹೇಳುದು ಬಿಡಪ್ಪಾ ಎರಡ ವರ್ಷದಿಂದ ಬರೇ ಮಳಿ ಹತ್ತಿ , ಬೆಳಿಯೆಲ್ಲ ಹಾಳಾಗಿ ಹೋಗಿ , ಸಾಲಾ ಜಾಸ್ತಿ ಆಗಿ ಬಿಟ್ಟೈತಿ ಅದಕ್ಕ ಈ ಸಾರಿ ಒಂದ್ ಉಪಾಯ ಮಾಡೀನಿ ” . ನಾನು ಅಂದುಕೊಂಡೆ, ಏನಾದರು ನನ್ನ ಹತ್ತಿರ ಹಣದ ಸಹಾಯ ಕೇಳಲು ಬಂದಿರಬಹುದೆಂದು . “ಅದೇನು ಉಪಾಯಪ್ಪ ” ಎಂದೆ , ” ಊರ ದೇವಿ ದ್ಯಾಮವ್ವ ಬಾಳ ಸಿಟ್ಟ ಮಾಡಿಕೊಂಡಂಗೈತಿ ಅದಕ್ಕ ಇಷ್ಟೊಂದ್ ಸಂಕಟ , ಅದಕ್ಕ ಇನ್ನಷ್ಟ್ ಸಾಲ ಅದರೂ ಸರಿ ಈ ಸರಿ ಜಾತ್ರಿಗೆ ಒಂದು ಕುರಿ ಕೊಯ್ಯಬೇಕಂತ ವಿಚಾರ ಮಾಡೀನಿ ” ಎಂದ . “ಅಲ್ಲೋ ಇನ್ನಷ್ಟ ಸಾಲಾ ಮಾಡಿ , ಅವಳ ಹೆಸರಲ್ಲಿ ಕುರಿ ಕೊಯ್ದು, ನೀನು ಮತ್ತು ನಿಮ್ಮ ಸಂಸಾರಾ ಕುರಿ ತಿಂದರ ದ್ಯಾಮವ್ವ ಮಳಿ ಹ್ಯಾಂಗ್ ನಿಲ್ಲಸತಾಳು ? ” ಎಂದೆ . ” ನಿಮ್ಮಂತ ಓದಿದವರಿಗೆ ಇದೆಲ್ಲ ಗೊತ್ತಾಗುದಿಲ್ಲ ಬಿಡಪ್ಪಾ ” ಎಂದು ಮಾತು ಮುಂದುವರಿಸದೆ ಹಾಗೆಯೆ ಹೋಗಿಯೇ ಬಿಟ್ಟ . ನನಗಂತೂ ಗೊತ್ತಾಗಲಿಲ್ಲ ಅದು ‘ ದ್ಯಾಮವ್ವನ ತಪ್ಪೋ , ಕಲ್ಲೇಶಿಯ ತಪ್ಪೋ ಅಥವಾ ನನ್ನ ತಪ್ಪೋ ‘ಎಂದು . ಹೋಗಲಿ ಬಿಡಿ ಹಾಗೆಯೆ ಹರಟುತ್ತ ಹೋದರೆ ಇದು ಮುಗಿಯುವ ವಿಷಯವಲ್ಲ . ಇದಂತು ನಿಜ , ಇಂಥ ಜನರು , ಇಂಥ ನಂಬಿಕೆ ನಮ್ನ ದೇಶಕ್ಕೆ ಅಥವಾ ಧರ್ಮಕ್ಕೆ ಮಾತ್ರ ಸೀಮಿತವಲ್ಲ . ಎಲ್ಲ ದೇಶಗಳಲ್ಲೂ , ಪಂಗಡಗಳಲ್ಲೂ ಇದು ಇರುವುದು ಕಟು ಸತ್ಯ . ಆದರೆ ಪದ್ಧತಿ ಬೇರೆ ಇರಬಹುದು . ” ಸಂಕಟ ಬಂದಾಗ ವೆಂಕಟರಮಣ ” ಅಂತ ಅನ್ನುವದಕ್ಕಿಂತಲೂ – ” ಸಂಕಟ ಬಂದಾಗ ಧೈರ್ಯವೇ ಭೂಷಣ ” ಅಂತ ತಿಳಿದರೆ ಎಷ್ಟೊಂದು ಚನ್ನಾಗಿರುತ್ತಲ್ಲವೆ ? ಇನ್ನು, ರಾತ್ರಿಯೆಲ್ಲಾ ಪುರಾಣವನ್ನು ಹೇಳಿ ಬೆಳಿಗ್ಗೆ ಬದನೇಕಾಯಿ ತಿನ್ನದೇ ಇರಲಿಕ್ಕೆ ಸಾಧ್ಯವೇ ? ಇದಕ್ಕೆ ನಾನೇನು ಹೊರತಾಗಿಲ್ಲ . ನಾನೂ ಹತ್ತು ಹಲುವಾರು ಹರಕೆಗಳನ್ನು ಹೊತ್ತಿರುವೆ, ಆದರೆ ಇನ್ನೂ ತೀರಿಸಲು ಆಗಿಲ್ಲ . ನೀವೂ ಏನಾದರು ಹರಕೆಗಳನ್ನು ಹೊತ್ತಿದ್ದರೆ , ನಿಮ್ನ ಅಭ್ಯಂತರವಿಲ್ಲದಿದ್ದರೆ ನನಗೂ ಸ್ವಲ್ಪ ತಿಳಿಸಿಬಿಡಿ . ನಿಮ್ಮ ಹರಕೆಗಳನ್ನು ನನ್ನಂತೆ ಇನ್ನೂ ಪೂರೈಸದಿರಲು ಸಾಧ್ಯವಾಗಿಲ್ಲದಿದ್ದರೂ ಪರವಾಗಿಲ್ಲ , ನೀವೇನು ಚಿಂತಿಸದಿರಿ . ಏಕೆಂದರೆ – ಹರಕೆ ತೀರಿಸಲು ಹತ್ತು ವರುಷ ಇರುತ್ತದೆ ಅಂತ, ನಮ್ಮ ಅಜ್ಜಿ ಹೇಳುತ್ತಿದ್ದಳು .
ನಾನು ಹೇಳುತ್ತಿರುವದು ಕಳೆದ ತಿಂಗಳಿನಲ್ಲಿ 81 ವರ್ಷ ಪೂರೈಸಿದ Desert island Discs ಎನ್ನುವ ಅತ್ಯಂತ ಜನಪ್ರಿಯ ಬಿಬಿಸಿ ರೇಡಿಯೋ ಕಾರ್ಯಕ್ರಮದ ಬಗ್ಗೆ. ಕಳೆದ ತಿಂಗಳಲ್ಲಿ ಎರಡು ಮಹತ್ವದ ರೇಡಿಯೋ ಕಾರ್ಯಕ್ರಮಗಳನ್ನು ನೆನೆಸಿಕೊಂಡಿದ್ದೇವೆ. ಒಂದನೆಯದು ಇದೇ ಫೆ. 13ನೆಯ ತಾರೀಕು ಜಾಗತಿಕ ರೇಡಿಯೋ ದಿವಸ (World Radio Day) ಇತ್ತು. ಎರಡನೆಯದು ಎಂಬತ್ತೊಂದು ವರ್ಷಗಳ ಹಿಂದೆ ಜನೇವರಿ 29 ರಂದು ಬ್ರಿಟಿಶ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಷನ್ (ಬಿಬಿಸಿ)ಯ ’ಡೆಸರ್ಟ್ ಐಲಂಡ್ ಡಿಸ್ಕ್’ ಕಾರ್ಯಕ್ರಮವನ್ನು ಮೊದಲ ಬಾರಿ ಬಿತ್ತರಿಸಿದ ದಿನ. ಅದು ಇಲ್ಲಿಯವರೆಗೆ ತಪ್ಪದೆ ಪ್ರತಿ ವಾರ ಪ್ರಸರವಾಗುತ್ತಲೇ ಬಂದ ಜಗತ್ತಿನ ಎರಡನೆಯ ದೀರ್ಘಾಯುಷಿ ಪ್ರಸಾವಾಗಿದೆ. ಚಿಕ್ಕಂದಿನಲ್ಲಿ ಟಿ ವಿ, ಮೋಬೈಲ್ ಇಲ್ಲದೆ ರೇಡಿಯೋ ಜೊತೆಗೆನೇ ಬೆಳೆದೆ ಅಂತ ರೇಡಿಯೋಗೂ ನನಗೂ ದೀರ್ಘ ಕಾಲದ ನಂಟು ಉಂಟು! ಈಗಲೂ ಪ್ರತಿದಿನ BBC Radio-4 ್ದ ಯಾವುದಾದರೂ ಒಂದು ಕಾರ್ಯಕ್ರಮ ಕೇಳದೇ ಇರುವುದಿಲ್ಲ. ಅದರಲ್ಲಿ ಹಲವಾರು ನನ್ನ ಮೆಚ್ಚಿನವು. ಅಂಥದರಲ್ಲಿ ಒಂದರ ಬಗ್ಗೆ ಕೆಳಗೆ ಬರೆಯಲಿಚ್ಛಿಸುತ್ತೇನೆ. ಅದರ ಪರಿಚಯವಿರದಿದ್ದಲ್ಲಿ ಈಗ ಶುರು ಮಾಡ ಬಹುದು. ನಿಮ್ಮಲ್ಲಿ ಯಾರಾದರೂ ಈಗಾಗಲೇ ಅದನ್ನು ಕೇಳಿ ಅದರ ಭಕ್ತರಾಗಿದ್ದರೆ ಇನ್ನೂ ಖುಶಿ!
ನೀವು ನನ್ನ ಹಾಗೆ ನಲವತ್ತು ವರ್ಷಗಳಿಂದ ಕೇಳುತ್ತ ಬಂದ ಈ ಕಾರ್ಯಕ್ರಮ ’ಫ್ಯಾನ್’ದ (ಅಭಿಮಾನಿ) ಆಗಿರದಿದ್ದರೂ ಅದರ ಬಗ್ಗೆಯಾದರೂ ಕೇಳಿರಬಹುದು. 1941 ರಲ್ಲಿ ಒಂದು ನವೆಂಬರ್ ತಿಂಗಳದ ರಾತ್ರಿ ತಾನು ವಾಸಿಸುತ್ತಿದ್ದ ಗುಡಿಸಲಿನಲ್ಲಿ ಹಠಾತ್ತನೆ ಪವರ್ ಕಟ್ಟಾಗಿ ಚಳಿಯಲ್ಲಿ ಪಾಯಜಾಮ ಹಾಕಿಕೊಂಡು ಇನ್ನೇನು ಮಲಗುತ್ತೇನೆ ಅಂತ ಹೊರಟ ರಾಯ್ ಪ್ಲಮ್ಲಿಯ (Roy Plomley) (ಚಿತ್ರ: ಎಡಗಡೆ) ತಲೆಯಲ್ಲಿ ಒಂದು ರೇಡಿಯೋ ಕಾರ್ಯಕ್ರಮದ ಐಡಿಯಾ ಫ್ಲಾಶ್ ಆಯಿತಂತೆ. ಈಗಾಗಲೇ ಆತನಿಗೆ ರೇಡಿಯೋ ರಂಗದಲ್ಲಿ ಸಾಕಷ್ಟು ಅನುಭವವಿತ್ತು. ಆ ರಾತ್ರಿ ತಕ್ಷಣ ಎದ್ದು ಕುಳಿತು ಅದರ ರೂಪರೇಷೆಗಳನ್ನು ಬರೆದು ಕಳಿಸಿದಾಗ ಬಿ ಬಿ ಸಿ ಗೆ ಅದು ಇಷ್ಟವಾಗಿ ನಂತರದ ಎರಡೇ ತಿಂಗಳಲ್ಲಿ ಅದರ ಮೊದಲ ರೆಕಾರ್ಡಿಂಗ್ ಮತ್ತು ಪ್ರಸಾರ ಶುರುವಾಯಿತು. ಆ ಸರಣಿಯಲ್ಲಿ ಇಲ್ಲಿಯ ವರೆಗೆ ತಪ್ಪದೇ ಪ್ರತಿವಾರವಾರಕ್ಕೆರಡು ಸಾರಿ ಅದರ ಕಾರ್ಯಕ್ರಮ ರೇಡಿಯೋ ತರಂಗಗಳಲ್ಲಿ ಬಿತ್ತರಣೆಯಾಗುತ್ತ ಬಂದಿದೆ. ಇಂದು ಬೆಳಿಗ್ಗೆ ಒಂಬತ್ತು ಗಂಟೆಗೆ ಈ ವಾರದ ವ್ಯಕ್ತಿಯ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ಅವರು ನಿರ್ಜನ ದ್ವೀಪಕ್ಕೆ ಒಯ್ಯುವ ಎಂಟು ಹಾಡುಗಳು ಯಾವವು ಅಂತ ಅಂತ ತಿಳಿಯಲು ಅದರ ಎರಡೂವರೆ ಲಕ್ಷ ರೆಗುಲರ್ ಕೇಳುಗರಂತೆ ರೇಡಿಯೋ ಮುಂದೆ ನಾನೂ ಹಾಜರಾಗುವವನಿದ್ದೇನೆ! ಆ ಕಾರ್ಯಕ್ರಮ A great British Institution ಅನ್ನುವ ಖ್ಯಾತಿ ಗಳಿಸಿದೆಯಲ್ಲವೆ?
ಇದರ ಸ್ವರೂಪ (format) ಏನು?
ವಾರದ ವ್ಯಕ್ತಿಯನ್ನು ಎಲ್ಲೋ ದೂರದ ತಿರುಗಿ ಬರಲಾಗದ ಕಾಲ್ಪನಿಕ ನಿರ್ಜನ ನಡುಗಡ್ಡೆಗೆ ಶಾಶ್ವತವಾಗಿ ಗಡಿಪಾರು ಮಾಡಲಾಗುತ್ತಿದೆ. ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಯಾವುದೇ ಸಾಧನೆಗಳಿಲ್ಲ. ಬದುಕಲು ತನ್ನೆಲ್ಲ ಸರ್ವೈವಲ್ ನೈಪುಣ್ಯವನ್ನುಪಯೋಗಿಸಿ ಸ್ವಾವಲಂಬನದ ದಾರಿ ಹುಡುಕಿ ಬದುಕಿಕೊಳ್ಳಬೇಕು. ಆತನಿಗೆ ಅಥವಾ ಅವಳಿಗೆ ಒಯ್ಯಲು ಕೊಡುವುದು ತನ್ನ ಅಯ್ಕೆಯ ಎಂಟು ಹಾಡು ಅಥವಾ ಧ್ವನಿ ಮುದ್ರಿಕೆಗಳು, ಒಂದು ಬೈಬಲ್ ಮತ್ತು ಶೇಕ್ಸ್ಪಿಯರ್ ಬರೆದ ಸಮಗ್ರ ಸಾಹಿತ್ಯದ ಕಾಪಿ. ಸಾಮಾನ್ಯವಾಗಿ ಆ ವ್ಯಕ್ತಿ ಸೆಲೆಬ್ರಿಟಿಯಾಗಿರುತ್ತಾನೆ,ಅಥವಾ ಪ್ರಸಿದ್ಧ ವ್ಯಕ್ತಿ, ನಟ, ಆಟಗಾರ, ಸಂಗೀತ ಪಟು,ಉದ್ಯಮಿ, ರಾಜಕಾರಣಿ, ಪ್ರಧಾನ ಮಂತ್ರಿ (ಈಗಾಗಲೇ ಒಂಬತ್ತು ಪ್ರಧಾನಿಗಳು ಇದಕ್ಕೆ ’ಬಲಿ’ಯಾಗಿದ್ದಾರೆ! ) ಹೀಗೆ ಸಮಾಜದ ಯಾವದೇ ಸ್ತರದಿಂದಲೂ ಬಂದಿರಬಹುದು.ಅದಕ್ಕೇ ಈ ಕಾರ್ಯಕ್ರಮ ಒಂದು ನಾಡಿನ ಅಥವಾ ಆ ಪ್ರಕಾರದ Who’s Who ಇದ್ದಂತೆ. ಮೀನು ಹಿಡಿದೋ, ಸಿಕ್ಕಿದ್ದನ್ನು ಬೆಳೆದೋ ಹಣ್ಣು ಹಂಪಲಿನ ಗಿಡಗಳು ಕಂಡರೆ ಕಿತ್ತಿ ತಿನ್ನುತ್ತ, ತಮ್ಮ ಇಷ್ಟದ ಅವೇ ಎಂಟು ಹಾಡುಗಳನ್ನು ಕೇಳುತ್ತ (ಆ ಯಂತ್ರ ಎಲ್ಲಿಂದ ಬಂತು ಅದಕ್ಕೆ ಯಾವ ಪವರ್ ಅದೆಲ್ಲ ಕೇಳ ಬೇಡಿರಿ) ರಾಬಿನ್ಸನ್ ಕ್ರೂಸೋನಂತೆ ಬಾಳ್ವೆ ಮಾಡ ಬೇಕು! ಈ ನಿಯಮಗಳನ್ನು ಕೇಳಿದ ಒಂದಿಬ್ಬರು ಆತ್ಮಹತ್ಯೆಗೆ ಸಯಾನಾಯ್ಡ್ ಪಿಲ್ಸ್ ಬೇಡಿದ್ದೂ ಉಂಟು!
ಆಹ್ವಾನಿತ ಅತಿಥಿಗಳು ಮತ್ತು ಸಂದರ್ಶಕರು
ವಾರದ ಅತಿಥಿ ಯಾವ ದೇಶದವರೂ ಆಗಿರಬಹುದು, ಆದರೆ ಇಲ್ಲಿಯವರೆಗೆ ಅದರಲ್ಲಿ ಭಾಗವಹಿಸಲು ಆಮಂತ್ರಿಸಿದವರೆಲ್ಲ (ಅಥವಾ ಅದಕ್ಕೆ ಕಾಯುತ್ತಿರುವವರು!) ಜನಸಾಮಾನ್ಯರಿಗೆ ಚಿರಪರಿಚಿತರಾಗಿರಬೇಕು ಎನ್ನುವದು ಅಲಿಖಿತ ನಿಯಮ. ಅವರು ಯಾರೂ ಇರಬಹುದು, ಗಂಡಸು, ಹೆಂಗಸು, ಹಿರಿಯರು, ಚಿಕ್ಕವರು, ಹೀಗೆ. ಒಬ್ಬರೇ ಅಥವಾ ಒಮ್ಮೊಮ್ಮೆ ಇಬ್ಬರು ಇರಬಹುದು. (ಉದಾ: ಮೋರ್ಕೋಮ್ಬ್ ಮತ್ತು ವೈಸ್, ಆಂಟನ್ ಮತ್ತು ಡೆಕ್). ಅವರೆಲ್ಲ ಬಿಬಿಸಿ ಸ್ಟುಡಿಯೋದ ಸಂದರ್ಶನದ ಕೋಣೆಯಲ್ಲಿ ಸಂದರ್ಶಕರೊಡನೆ ತಮ್ಮ ಸಾರ್ಥಕ ಜೀವನದ ಏರಿಳಿತ, ವೃತ್ತಿ ಸಾಫಲ್ಯ, ಸುಖ-ದುಃಖಗಳನ್ನು ಬಿಚ್ಚಿಟ್ಟು ಸಂವಾದದಲ್ಲಿ ಪಾಲುಗೊಳ್ಳಲು ತಯಾರಾಗಿರುತ್ತಾರೆ. ಕೇಳುಗರನ್ನು ಮನರಂಜಿಸುತ್ತಾರೆ, ನಗಿಸುತ್ತಾರೆ ಒಮ್ಮೊಮ್ಮೆ ತಾವೂ ಭಾವುಕರಾಗಿ ಅಳುತ್ತಾರೆ. ಅದಕ್ಕೆ ಹಾಲಿವುಡ್ ಸಿನಿಮಾ ನಟ ಟಾಮ್ ಹ್ಯಾಂಕ್ಸ್ ಒಂದು ಉದಾಹರಣೆ ! 1942 ರಲ್ಲಿ ಪ್ರಾರಂಭವಾದಾಗಿಂದಲೂ 1985 ರಲ್ಲಿ ತಾವು ಮರಣ ಹೊಂದುವ ತನಕ ರಾಯ್ ಪ್ಲಮ್ಲಿಯವರೇ ಆ ಸಂದರ್ಶನಗಳನ್ನು ನಡೆಸಿಕೊಟ್ಟರು. ಅವರ ನಂತರ ಮೈಕೆಲ್ ಪಾರ್ಕಿನ್ಸನ್, ಸೂ ಲಾಲಿ(18 ವರ್ಷ) ಕರ್ಸ್ಟಿ ಯಂಗ್ (12 ವರ್ಷಗಳ ವರೆಗೆ) ಇವರ ನಂತರ ಈಗ ನಾಲ್ಕನೆಯವಳಾಗಿ ಲಾರೆನ್ ಲೆವರ್ನ್ ಸಂದರ್ಶಕರಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದ ಕೆಲವು ಸಂದರ್ಶಕರು ರಾಜಕಾರಣಿಗಳ ನೀರಿಳಿಸುತ್ತ ಭೀಮ ಭಯಂಕರ ಎದುರಾಳಿಯಂತೆ ವರ್ತಿಸಿವುದು ಅಪರೂಪ. ಆದರೆ ರಾಯ್ ಪ್ಲಮ್ಲಿ ಮಹಾಶಯ ಅತ್ಯಂತ ಸೌಜನ್ಯದಿಂದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈಗಿನ ಕಾಲದ ಶೈಲಿಯಲ್ಲಿ ಸ್ವಲ್ಪವೇ ಬದಲಾವಣೆಯಾಗಿದೆಯಾದರೂ ಸಂದರ್ಶಕರೆಲ್ಲ ತಮ್ಮದೆ ಛಾಪು ಒತ್ತಲು ಪ್ರಯತ್ನಿಸುತ್ತಿರುವದು ಇಂದಿನ ಯುಗದಲ್ಲಿ ಅಚ್ಚರಿಯ ವಿಷಯವಲ್ಲ. ಕಾರ್ಯಕ್ರಮದ ಪ್ರಾರಂಭದಲ್ಲಿ ರೇಡಿಯೋ ಅಲೆಗಳಲ್ಲಿ ತೇಲಿ ಬರುವ ಸಿಗ್ನೇಚರ್ ಟ್ಯೂನ್ ನಿರ್ಜನ ದ್ವೀಪದ ಬೀಚನ್ನು ನೆನಪಿಸುತ್ತದೆ. ಅದು 1942 ರಿಂದಲೂ ಹಾಗೆಯೇ ಇದೆ – ಇತ್ತೀಚಿನ ವರ್ಷಗಳಲ್ಲಿ ಕಡಲು ಹಕ್ಕಿಯ ಕೂಗನ್ನೂ ಅದರಲ್ಲಿ ಬೆರಸಿ ಕಡಲು, ಅಲೆಗಳು ಇವನ್ನು ಕೂಡಿಸಿ ಒಂದು ರೋಮ್ಯಾಂಟಿಕ್ ಕಲ್ಪನಾವಿಲಾಸವನ್ನು ಸೃಷ್ಟಿಸಲಾಗುತ್ತದೆ.1951ರಲ್ಲಿ ಎರಡು ಮಾರ್ಪಾಡುಗಳಾದವು. ನಿಯಮಗಳನ್ನು ಸಡಿಲಿಸಿ ಇನ್ನೆರಡು ವಸ್ತುಗಳನ್ನು ಕೊಂಡೊಯ್ಯಲು ಅನುಮತಿ ಕೊಟ್ಟರು. ಒಂದನೆಯದಾಗಿ ನಡುಗಡ್ಡೆಯಲ್ಲಿ ಏಕಾಕಿಯಾಗಿ ಉಳಿಯುವವರ ಸಂಗಾತಿಯಾಗಿ ಅವರ ಐಚ್ಛಿಕ ಪುಸ್ತಕ. ಇನ್ನೊಂದು ಅವರ ನೆಚ್ಚಿನ ವಿಲಾಸದ ವಸ್ತು (Luxury item). ’ನಿಮ್ಮ ಐಚ್ಛಿಕ ಲಗ್ಶರಿ ಏನು’ ಎನ್ನುವ ಪ್ರಶ್ನೆಗೆ 1982ರಲ್ಲಿ ’ಸೆಕ್ಸ್ ಕಿಟನ್’ ಅಂತ ಬಿರುದು ಗಳಿಸಿದ್ದ ಬ್ರಿಜಿಟ್ ಬಾರ್ಡೋ ಅಂದು ಒಂದು ಅವಾಚ್ಯ ಶಬ್ದವನ್ನು ಉಚ್ಚರಿಸಿದಾಗ ಜಂಟಲ್ಮನ್ ಪ್ಲಮ್ಲಿ ಬೆಚ್ಚಿ ಬಿದ್ದಿದ್ದರು! ಪಲಾಯನವಾದಿಗಳು ಇಬ್ಬರು ವಿಮುಕ್ತಿಗೆ ಸಾಯನಾಡ್ ಬೇಡಿದ್ದರು!
ಅತಿಥಿಗಳ ಆಯ್ಕೆ
ಸಾಮಾನ್ಯವಾಗಿ ಒಮ್ಮೆಯಷ್ಟೇ ಬರುತ್ತಾರಾದರೂ ಕೆಲವರು ಎರಡು ಬಾರಿ, ಮೂರು ಬಾರಿ ಸಹ ಬಂದಿದ್ದಾರೆ ಡೇವಿಡ್ ಅಟನ್ಬರೋ ಒಬ್ಬರನ್ನೇ ಆ ಸಿಗ್ನೇಚರ್ ಟ್ಯೂನ್ ನುಡಿಸುತ್ತಿದ್ದಂತೆ ನಾಲ್ಕು ಬಾರಿ ಬರಮಾಡಿಕೊಂಡಿದ್ದಿದೆ. ಆತನ ಲಗ್ಜರಿ ಒಂದು ಪಿಯಾನೋ. ಅನೇಕರದು ಸಹ ಅದೇ ಆಗಿದೆ. ಕೆಲವರು ತಮ್ಮ ತಲೆದಿಂಬನ್ನು ಕೇಳಿದರೆ ಇನ್ನು ಕೆಲವರು ತಮ್ಮದೇ ಹಾಸಿಗೆಯನ್ನು. ಒಂದಿಬ್ಬರು ಆತ್ಮಹತ್ತೆಗೆ ವಿಷ (ಸಾಯನೈಡ್) ಬೇಕೆಂದಿದ್ದಾರೆ. ತಾವು ಒಯ್ಯುವ ಎಂಟು ಗಾನ ಮುದ್ರಿಕೆಗಳಲ್ಲಿ ಹೆಚ್ಚು ಜನಪ್ರಿಯವಾದವು ಹೆಚ್ಚಾಗಿ ಪಾಶಿಮಾತ್ಯ ಶಾಸ್ತ್ರೀಯ ಸಂಗೀತದ ರೆಕಾರ್ಡುಗಳೇ. ಪ್ರಿಯವಾದ ಸಂಗೀತ ಅವರವರ ವ್ಯಕ್ತಿತ್ವದ ಪ್ರತೀಕವಲ್ಲವೆ? ಮತ್ತು ಅತಿಥಿಗಳಾಗಿ ಬರುವವರು ಸಮಾಜದ ಯಾವ ವರ್ಗದವರು ಎನ್ನುವದರ ಮೇಲೆ ಅದು ಅನ್ವಯಿಸುತ್ತದೆ ಅಂದ ಮೇಲೆ ಇಲ್ಲಿಯವರೆಗೆ ಪ್ರಸಾರವಾದ ಮೂರು ಸಾವಿರಕ್ಕೂ ಹೆಚ್ಚಿನ ಸಂಚಿಕೆಗಳಲ್ಲಿ ಯೂರೋಪಿಯನ್ ಶಾಸ್ತ್ರೀಯ ಸಂಗೀತಗಾರರಾದ ಹ್ಯಾಂಡಲ್ ಬೇಥೋವನ್, ಮೋಝಾರ್ಟ್, ಬಾಖ್, ಸ್ಟ್ರಾಸ್, ಶೂಬರ್ಟ್ ಮುಂತಾದವರ ಕೃತಿಗಳ ಬೇಡಿಕೆಯೇ ಹೆಚ್ಚು. ಅತಿಥಿಗಳು ಪಾಪ್ (Pop songs) ಇಷ್ಟ ಪಟ್ಟಿದ್ದಲ್ಲಿ ಬೀಟಲ್ಸ್ ನಂತರ ಡೆವಿಡ್ ಬಾವಿ ಮತ್ತು ಫ್ರಾಂಕ್ ಸಿನಾಟ್ರಾ ಅವರ ಹೆಸರುಗಳು ಹೆಚ್ಚಾಗಿ ಕೇಳಿಬಂದುದರಲ್ಲಿ ಆಶ್ಚರ್ಯವಿಲ್ಲ. ಅತಿಥಿಗಳಲ್ಲಿ ಹೆಚ್ಚಿನವರು ಯು ಕೆ ದವರೆ ಆದರೂ ಅಮೆರಿಕನ್ನರು ಮತ್ತಿತರ ಇಂಗ್ಲಿಷ್ ಮಾತಾಡುವ ದೇಶದವರೆ ಹೆಚ್ಚಾಗಿ ಕಾಣಿಸಿಕೊಂಡಿದ್ದಲ್ಲೂ ಆಶ್ಚರ್ಯವಿಲ್ಲ.
ಆಲೆನ್ ಟ್ಯೂರಿಂಗ್ ಸಂಸ್ಥೆ ಮತ್ತು ಹಾಡುಗಳ ಆಯ್ಕೆ
Desert Island Discs ಎಷ್ಟು ಜನಪ್ರಿಯ ಕಾರ್ಯಕ್ರಮ ಅಂದರೆ ಅದು ಬಿಬಿಸಿಯ ಟಚ್ ಸ್ಟೊನ್ (ಮಾನದಂಡ) ಅಂತ ಮನ್ನಿಸುತ್ತಾರೆ. ಅದು ಪ್ರತಿಯೊಂದು ಮೈಲಿಗಲ್ಲನ್ನು (50, 60, 70) ದಾಟಿದಂತೆ ಅದರ ಬಗ್ಗೆ ಬರೆದ ಲೇಖನಗಳಿಗೆ ಲೆಕ್ಕವಿಲ್ಲ. ರೇಡಿಯೋದ ಅತ್ಯಂತ ಉತ್ಕೃಷ್ಠ ಕಾರ್ಯಕ್ರಮ ಅಂತ ಮತ್ತೆ ಮತ್ತೆ ಜನಪ್ರಿಯತೆಯ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಳಿಸುತ್ತಿದೆ. ಈ ಮೊದಲು ಹಳೆಯ ಕಾರ್ಯಕ್ರಮಗಳು ಮತ್ತೆ ಕೇಳಲು ಸಿಗುತ್ತಿರಲಿಲ್ಲ.ಇತ್ತೀಚೆಗೆಯಷ್ಟೇ ಬಿಬಿಸಿ ಅದರ ಹಕ್ಕುದಾರರೊಂದಿಗೆ ಒಪ್ಪಂದ ಮಾಡಿಕೊಂಡಾಗಿನಿಂದಷ್ಟೇ ಎಪ್ಪತ್ತು ವರ್ಷಗಳ ಎಲ್ಲ ರೆಕಾರ್ಡಿಂಗ್ ಗಳೂ ಬಿಬಿಸಿ ಸೌಂಡ್ಸ್ ನಲ್ಲಿ ಕೇಳಲು ಲಭ್ಯವಾಗಿ ಅದರ die hard fans ಗೆ ವರದಾನವಾಗಿದೆ. ಬರೀ ಹಾಡುಗಳ ಹೆಸರಷ್ಟೇ ಅಲ್ಲ ಪೂರ್ತಿ ಹಾಡುಗಳನ್ನೂ, ಅಥವಾ ಕೆಲವರದು ಅಪರೂಪದ ಧ್ವನಿಮುದ್ರಿಕೆಗಳಷ್ಟೇ ಇರಬಹುದು, ಅವೆಲ್ಲ ಲಭ್ಯವಾಗಿವೆ. ಎಪ್ಪತ್ತು ವರ್ಷಗಳ ಯಾದಿ ಇಂಟರ್ನೆಟ್ಟಿನಲ್ಲಿ ಸುಲಭವಾಗಿ ನೋಡಬಹುದು.
ಈ ಮಾಹಿತಿ ಸಿಕ್ಕ ಮೇಲೆ ಬ್ರಿಟಿಷ್ ಲೈಬ್ರರಿಯ Alan Turing Institution ವತಿಯಿಂದ ಅತಿಥಿಗಳ ಹಾಡುಗಳ ಆಯ್ಕೆ ಏನನ್ನು ಸೂಚಿಸುತ್ತದೆ ಎನ್ನುವದರ ಬಗ್ಗೆ ಕಂಪ್ಯೂಟರ್ ಸಹಾಯದಿಂದ ದೊಡ್ಡ ಪ್ರಮಾಣದ ಸಂಶೋಧನೆ ಹೊರಬರುತ್ತಿದೆ. ಯಾವ ಹಾಡುಗಳು ಅಂತ ಅತಿಯಾಗಿ ಯೋಚನೆ ಮಾಡಿ ಅದರಲ್ಲೇ ಮುಳುಗಿದ ಟಾಂ ಹ್ಯಾಂಕ್ಸ್ ನಂತೆಯೇ ಅನೇಕರೂ ಭಾವುಕರಾಗುತ್ತಾರೆ. ಸಂದರ್ಶಕಿಯ ಪ್ರಶ್ನೆಗಳಿಗೆ ಉತ್ತರ ಕೊಡುವದಕ್ಕಿಂತ ಹಾಡುಗಳ ಬಗ್ಗೆ ಲಕ್ಷ್ಯ ಕೇಂದ್ರೀಕರಿಸಿಬಿಡುತ್ತಾರೆ. ಕಂಠ ಬಿಗಿಯುತ್ತದೆ. ಅವರು ಸಾಮಾನ್ಯವಾಗಿ ಆರಿಸುವ ಹಾಡುಗಳು ತಮ್ಮ ಜೀವನದ ಮುಖ್ಯ ಘಟ್ಟದಲ್ಲಿ ಆದ ಅನುಭವಗಳಾದಾಗ, ’ಆತ್ಮ ಸಾಕ್ಷಾತ್ಕಾ’ವಾದಾಗ, ಅಥವಾ ಆಗ ಕೊಂಡ, ಅಥವಾ ಆಲಿಸಿದ ಹಾಡುಗಳು.
ಭಾರತೀಯರು?
ನನಗೆ ಗೊತ್ತಿದ್ದಂತೆ ಮೂವರೇ ಭಾರತೀಯ ಮೂಲದವರು ಈ ಪ್ರೋಗ್ರಾಂದಲ್ಲಿ ಕಾಣಿಸಿಕೊಂಡಿದ್ದಾರೆ: ಲೇಖಕ ಸಾಲ್ಮನ್ ರಶ್ದಿ (1988), ಕೋಬ್ರಾ ಬಿಯರ್ ಉದ್ದಿಮೆಯನ್ನು ಹುಟ್ಟುಹಾಕಿದ ಬ್ಯಾರನ್ ಕರಣ್ ಬಿಲಿಮೋರಿಯಾ (2004), ಮತ್ತು ಪ್ರಪ್ರಥಮ ಭಾರತೀಯಳು ಜೈಪೂರದ ರಾಜಮಾತಾ ಗಾಯತ್ರಿ ದೇವಿ (1982). ಪಾಕಿಸ್ತಾನದ ಕ್ರಿಕೆಟ್ ಪಟು ಮತ್ತು ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸಹ ಅದರಲ್ಲಿ ಒಂದು ಬಾರಿಕಾಣಿಸಿಕೊಂಡಿದ್ದಾರೆ.
ಈ ರೇಡಿಯೋ ಕಾರ್ಯಕ್ರಮವನ್ನು ಪ್ರತಿವಾರ ನೀವೂ ಕೇಳಿ ಆನಂದಿಸುವಿರೆಂಬ ಭರವಸೆಯಿದೆ ನನಗೆ!
ಐನೂರು ಆವೃತ್ತಿ ದಾಟಿದ ಅನಿವಾಸಿಯ ಬ್ಲಾಗಿಗೆ ಮತ್ತೊಮ್ಮೆ ನಿಮಗೆಲ್ಲ ಸ್ವಾಗತ, ನಮಸ್ಕಾರಗಳೊಂದಿಗೆ. ಇವತ್ತಿನ ಅಂಚೆಯಲ್ಲಿ ಶ್ರೀಮತಿ ಗೌರಿ ಪ್ರಸನ್ನ ಬರೆದ “ಶ್ರೀಮತಿ ಮೈದಾಸ” ಅನ್ನುವ ಕವನವಿದೆ. ಅವರೇ ಹೇಳಿರುವಂತೆ, ಇದು ಇಂಗ್ಲೀಷಿನ “Carol Ann Duffy ಯವರ Mrs Maidas ನಿಂದ ಪ್ರೇರಿತ. ಅದರ ಭಾಷಾಂತರವೋ, ಭಾವಾನುವಾದವೋ ಖಂಡಿತ ಅಲ್ಲ. A level ನಲ್ಲಿ English literature ಕಲಿಯುತ್ತಿರುವ ಮಗಳು ಅಕ್ಷತಾ ಕೆಲ ದಿನಗಳ ಹಿಂದೆ ತನ್ನ syllabus ನಲ್ಲಿರುವ ಈ ಹಾಡಿನ ಬಗ್ಗೆ ಮಾತಾಡಿದ್ದೇ ತಡ. Mrs.Maidas ಮನದಲ್ಲಿ ಗಟ್ಟಿಯಾಗಿ ನಿಂದು ತಲೆ ತಿನ್ನಲಾರಂಭಿಸಿದ್ದೇ ಈ ಪ್ರಯತ್ನದ ನಾಂದಿ.” ವ್ಯಾಲೆಂಟೈನ್ ದಿವಸ ಹತ್ತಿರ ಬಂದಂತೆ, ಸ್ವಲ್ಪ ಪ್ರೇಮಿಗಳ / ಪ್ರೇಮಕಾವ್ಯಗಳ ಹಾವಳಿ ಸಹಜವಾಗಿಯೇ ಹೆಚ್ಚಾಗುತ್ತದೆ. ಆದರೆ ಇಲ್ಲಿ, ಮುಟ್ಟಿದ್ದೆಲ್ಲ ಬಂಗಾರ ಮಾಡುವ ಇನಿಯನ ಪ್ರಿಯೆಯ ಕಷ್ಟಗಳ ಅಳಲಿದೆ, ಹತ್ತಿರವಿದ್ದೂ ಕೈಹಿಡಿಯಲಾಗದ ಪರಿಸ್ಥಿತಿಯ ಸಂಕಟವಿದೆ. ಬನ್ನಿ, ಓದೋಣ, ಓದಿ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳೋಣ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ).
ಜೂನ್ ತಿಂಗಳ ಮೊದಲ ಮುಂಗಾರು ಮಳೆ.. ಬಿದ್ದ ತಟಪಟ ಹನಿಗೆ ತೊಯ್ದು ತುಟಿದೆರೆದ ಇಳೆ.. ಬೆಳ್ಳನೆ ತಟ್ಟೆ ಇಡ್ಲಿಯ ನಸು ಬೆಚ್ಚನೆಯ ಹಬೆ, ಚಟ್ನಿಗೆಂದು ಕಾಸಿದ ಇಂಗು-ಕರಿಬೇವಿನೊಗ್ಗರಣೆಯ ಘಮ,ಕುದಿಯುತ್ತಿರುವ ಚಹಾದ ತುಸು ಕಹಿ ಒಗರು..ತಾಟು, ಬಟ್ಟಲು, ಚಮಚೆ,ಲೋಟ,ಕಪ್ ಗಳ, ಹೆಚ್ಚಿಟ್ಟ ಅರ್ಧ ನಿಂಬೆ, ಕರಿಬೇವ ಕಡ್ಡಿಗಳ.. ಸಂತೆಯ ಮಾಳ ನನ್ನ ಅಡುಗೆ ಕಟ್ಟೆ.. ತುಂಬು ಸಜೀವತೆಯ ಪ್ರತೀಕ.. ಪ್ರೀತಿ - ರೀತಿಗಳ ನಿತ್ಯಸತ್ಯ ಲೋಕ
ಅಡರಿದ್ದ ಮಿಶ್ರ ಘಮಟು ಹೊರಹೋಗಲನುವಾಗಲೆಂದು ತುಸುದೆರೆದ ಕಿಟಕಿಯ ಇನ್ನಷ್ಟು ತೆರೆದೆ.. ನಮ್ಮನೆ ಪುಟ್ಟ ಕೈ ತೋಟದಲಿ .. ಅದೋ .ನನ್ನ ಮೈದಾಸ,ಜೀವದ ಜೀವ.. ನನ್ನೊಲವು.. ನಾವೇ ನೆಟ್ಟ ಮಲ್ಲಿಗೆಯ ಬಳ್ಳಿಗೀಗ ಮೈತುಂಬ ಹೂವು.. ಟೊಂಗೆ ಟೊಂಗೆಯಲಿ ತೂಗುತಿದೆ ಗಿಣಿ ಕಡಿದ ಗಿಣಿಮೂತಿ ಮಾವು ಗಿಡಗಂಟೆಗಳ ಕೊರಳಲ್ಲಿ ಗುಬ್ಬಚ್ಚಿ ಮರಿಯ ಚೀಂವ್ ಚೀಂವು.. ಅರೇ! ಇದೇನಿದು!!..
ಮಾವು ಕೀಳಲೆಂದು ಅವ ಬಗ್ಗಿಸಿದ ಟೊಂಗೆಯ ಎಲೆಯ ಹಸಿರೊಮ್ಮೆಗೇ ಪೀತ ವರ್ಣ.ಕಿತ್ತ ಬಿಳಿಯ ಮಲ್ಲಿಗೆಗೆ ಬಂಗಾರ ಬಣ್ಣ ‘ಸುವರ್ಣ ಪುಷ್ಪ ದಕ್ಷಿಣಾಂ ಸಮರ್ಪಯಾಮಿ’ ಮಂತ್ರದನುರಣ
ಅರೇ,ಇದೇನಿದು ಅಂಗೈಲ್ಹಿಡಿದ ಮಾವಿಗೂ ನೂರು ಕ್ಯಾಂಡಲ್ ಬಲ್ಬ್ ಪ್ರಭೆ.. ಅನತಿ ದೂರದಿಂದಲೂ ಕಂಡ ಅವನ ವಿಜಯದ ನಗೆಗೆ ನಾನು ಅಪ್ರತಿಭ ಪುಟ್ಟ ತೋಟದ ಕಟ್ಟಿಗೆಯ ಗೇಟು ದೂಡಿದನಷ್ಟೇ..ಅದೂ ಚಿನ್ನದಂತೆ ಥಳಥಳ..
ದಣಿದ ದೇಹ ಚೆಲ್ಲಿ ಅವ ಕೂತ ಹಾಲ್ ನ ಹಳೆಯ ಕಂದು ಈಸಿ ಚೇರ್ ಬಟ್ಟೆ .. ಕ್ಷಣ ಮಾತ್ರದಲಿ ಹೊಂಬಣ್ಣದ ಪಟ್ಟೆ.
ಮೆತ್ತಗಿನ ಮೃದು ಇಡ್ಲಿಗೆ ಅವನ ಕೈ ಸೋಕಿತಷ್ಟೇ..ಅದುವೂ ಇದೀಗ ಹಳದಿ ಲೋಹದ ಮುದ್ದೆ.
‘ಓಹ್! ದೇವರೇ’ ನಿಡುಸುಯ್ದ ಅವನ ಮೊಗದ ತುಂಬ ಕಳವಳ ‘ಇದೇನಾಗುತಿದೆ?’ ನನ್ನೆದೆಯ ಗೂಡಲ್ಲೂ ಭಯ, ಆತಂಕ,ತಳಮಳ ಅಳುಕುತ್ತಲೇ ಮುಟ್ಟಿದ ಚೀನೀಮಣ್ಣಿನ ಕಪ್ ನ ಚಹಾ ತಾನಾಯಿತು ಕ್ಷಣಾರ್ಧದಲೇ ಕನಕ ಭೂಷಿತ ಹಿಡಿಯ ಕಪ್ಪಿನ ಹಳದಿದ್ರವ
‘ನಿಲ್ಲು, ಹಿಂದೆ ಸರಿ. ಮುಟ್ಟದಿರು ನನ್ನ’- ಚೀರಿದ. ನನ್ನ ಕೈಕಾಲೆಲ್ಲ ನಡುಕ, ಕಣ್ಣು ಕತ್ತಲೆ.. ಕುಸಿದೆ ‘ಮ್ಯಾಂವ್ ಎಂದು ಒಡೆಯನ ತೊಡೆಯೇರ ಬಂದ ಟಾಮಿಯ ಕಂಡೆ..ಧಡಕ್ಕನೆದ್ದೆ – ಕೊಠಡಿಯಲಿ ಕೂಡಿ ಕೊಂಡಿ ಜಡಿದೆ.
‘ಅತ್ಯಾಸೆ ಗತಿಗೇಡೆಂದು ದೃಷ್ಟಾಂತ ಕೊಡುತ್ತದೆ ಜಗತ್ತು ಇರಲಿಲ್ಲವೇನು ಹಲಕೆಲವು ಅನಿವಾರ್ಯತೆ – ಜರೂರತ್ತು ಬಣ್ಣ ಬೇಡುವ ಗೋಡೆ, ಬಳಕೆಗೊಂದು ಗಾಡಿ, ದುರಸ್ತಿಗೆ ಬಂದ ಛತ್ತು ‘ನನ್ನದೇನೂ ತಪ್ಪಿಲ್ಲ’ – ಅನ್ನಲಾರೆ ಖಂಡಿತ.ಮದುವೆ ಛತ್ರದಲ್ಲೋ, ಹಬ್ಬ ಸಮಾರಂಭದಲೋ ಕಂಡು ಓರಗೆಯವರ ಸೀರೆ,ಒಡವೆ, ದೌಲತ್ತು.. ನಾನೂ ರಗಳೆ ಮಾಡಿ ಮಾಡಿ ಅವನ ಕಂಗೆಡಿಸಿದ್ದಿದೆ ಕಿಂಚಿತ್ತು
ಅವನಿಗೀಗ ಚಿನ್ನದ್ಹಾಸಿಗೆಯಲಿ ನಿದ್ದೆಯಿಲ್ಲದ ಹೊರಳಾಟ ಇನಿಯನಪ್ಪುಗೆಯಿಲ್ಲದ ಸುಪ್ಪತ್ತಿಗೆಯಲ್ಲಿ ನನ್ನ ಗೋಳಾಟ ನಲ್ಲನಪ್ಪುಗೆಗೆ ಕಾಡುವ ದೇಹ-ಮನ-ಆತ್ಮಗಳ ಸಂಭಾಳಿಸಲಾಗದೇ ಒದ್ದಾಡುತ್ತಿದ್ದೇನೆ. ಶಾಪ, ಅಭಿಶಾಪಗಳಂತಿರಲಿ.. ವರವೂ ಹೀಗೆ ಶಾಪವಾಗುವ ಪರಿಗೆ ಕಂಗಾಲಾಗಿದ್ದೇನೆ.
ಬಲುಬಾರಿ ಅನ್ನಿಸುವುದುಂಟು.. ಏನಾದರಾಗಲಿ, ಒಮ್ಮೆ ಅವನ ಬಿಗಿದಪ್ಪಿ ಪುತ್ಥಳಿಯಾಗಿ ಕುಳಿತುಬಿಡಲೇ ಪಕ್ಕದಲೆ ಎಲ್ಲ ತೊಳಲಾಟ, ನರಳಾಟ, ನೋವು, ಹಿಂಸೆಗಳಿಗೆ ಮಂಗಳ ಹಾಡಿಬಿಡಲೇ?
ಛೇ!ಛೇ!! ಈ ಆಪತ್ತಿನ ಸಮಯದಲಿ ಇಂಥ ಸ್ವಾರ್ಥಿಯಾಗಲಾರೆ. ನಮ್ಮೊಲವ ಸಾಂಗತ್ಯ, ಸಿಹಿಕಹಿ ದಾಂಪತ್ಯ ತೊರೆಯಲಾರೆ ಕಣ್ಣಿನಲೇ ಅವನ ಮುಟ್ಟಿ, ಮೈದಡವಿ ಸಂತೈಸದಿರಲಾರೆ ಧರ್ಮೇಚ-ಅರ್ಥೇಚ-ಕಾಮೇಚ.. ಕೊಟ್ಟ ವಚನ ನಿಭಾಯಿಸದಿರಲಾರೆ.
ಕೆಲ ಸಾಹಿತ್ಯಾಸಕ್ತ ಯು.ಕೆ ಕನ್ನಡಿಗರು ಆರಂಭಿಸಿದ ಈ ಜಗುಲಿಯ ( ಆನ್ ಲೈನ್ ) ಈ ವಾರಪ್ರತ್ರಿಕೆ ೫೦೦ ಕ್ಕೂ ಹೆಚ್ಚಿನ ಸಂಚಿಕೆಗಳನ್ನು ಹೊರತಂದಿರುವುದು ಒಂದು, ಉತ್ಸಾಹದ, ಯಶಸ್ಸಿನ, ಕನ್ನಡದ, ಹೊರನಾಡಿನ ಕನ್ನಡಿಗರ, ಪರಿಶ್ರಮದ ಪ್ರೇಮಕತೆ.
ತಮ್ಮ ದಿನನಿತ್ಯದ ಕೆಲಸ ಕಾರ್ಯಗಳ, ಮಕ್ಕಳ, ಕುಟುಂಬದ, ಜವಾಬ್ದಾರಿಯ ಭಾರವನ್ನು ನಿರ್ವಹಿಸುವ ಹೊಣೆ ಹೊತ್ತಿದ್ದರೂ, ಕನ್ನಡ ಪ್ರೇಮಿ, ಕ್ರಿಯಾಶೀಲ ಅನಿವಾಸಿ ಸ್ನೇಹಿತರ ಅನನ್ಯ ಕೊಡುಗೆಯ ಫಲ ಈ ಸಂಚಿಕೆ. ಇದರಲ್ಲಿ ಪುಟ್ಟ ಲೇಖನ, ಪದ್ಯಗಳನ್ನು ಬರೆಯುವಂತ ನನ್ನಂತಹ ಹವ್ಯಾಸಿ ಲೇಖಕರಿಂದ ಹಿಡಿದು, ಪ್ರಶಸ್ತಿ, ಪುರಸ್ಕಾರಗಳಿಗೆ ಅರ್ಹವಾದ ಪುಸ್ತಕಗಳನ್ನು ಬರೆದು ಪ್ರಕಟಿಸಿದ ಅತ್ಯುತ್ತಮ ಲೇಖಕರು ಸಹ ಇದ್ದಾರೆ. ಎಲ್ಲಾ ರೀತಿಯ ಕ್ರಿಯಾಶೀಲ ಯುಕೆ ಕನ್ನಡಿಗರಿಗೆ ಅನಿವಾಸಿ, ಮನೆಯಾಗಿ, ನೆಲೆಯಾಗಿ ನಿಂತಿದೆ . ಅನಿವಾಸಿಯೊಂದಿನ ನನ್ನ ಅನುಭವವಿದು ,,,
“ಅನಿವಾಸಿ” ನಿನಗೆ ಅಭಿನಂದನೆ, ಛಲ ಬಿಡದೆ ನಿಂತ ನಿನ್ನ ತಾಳ್ಮೆಗೆ ವಂದನೆ.
ಹಿಗ್ಗಿ, ನುಗ್ಗಿ ಬಂದೆವು ನಾವು ನಿನ್ನಬಳಿ ಕೆಲವೊಮ್ಮೆ ಹಿಂತಿರುಗಿಯೂ ನೋಡದೆ ಹೋದೆವು ಒಮ್ಮೊಮ್ಮೆ. ಮರೆತೇ ಬಿಟ್ಟೆವು ನಿನ್ನ, ಮುಚ್ಚಿ ನಮ್ಮ ಕಣ್ಣನ್ನು ಬಿಡಲಿಲ್ಲ ನೀನು ಮಿಲನದ ಆಶಾವಾದವನ್ನು.
ಅನಿವಾಸಿಯ ಬದುಕು ಸುಲಭದ ಮಾತಲ್ಲ ಹೊಸ ಚಂಚಲತೆಯ ಮಾಯೆ ನಮ್ಮ ಸುತ್ತೆಲ್ಲ. ಕಟ್ಟುವರು ಜನ ದಿನಕ್ಕೊಂದು ಹೊಸ ತಾಣ ಮಾಡುವರು ಈ ಜಗಲಿಯಿಂದ ಆ ಜಗುಲಿಗೆ ಪ್ರಯಾಣ.
ಜನ್ಮ ನಿನ್ನಿಂದ, ಕತೆ, ಕವನ, ಪ್ರವಾಸ ಕಥನ, ನಮ್ಮ, ನಿಮ್ಮ ಊರಿನ ಭವ್ಯ ದರ್ಶನ. ಚಲನಚಿತ್ರ, ಪುಸ್ತಕಗಳ ವಿಮರ್ಶನ, ಛಾಯಾಗ್ರಹಣ ಭಾವಚಿತ್ರಗಳ ಪ್ರದರ್ಶನ
ನಿನ್ನಿಂದ ಪಡೆದೆ ನಾ ಹೊಸ ಸ್ನೇಹ ಸಂಬಂಧ ವಿಸ್ತರಿಸಿ ನನ್ನ ಕನ್ನಡದ ಜಗತ್ತಿನ ಬಂಧ. ಕರುನಾಡಿನಿಂದ ಬಂದರು ಕನ್ನಡದ ಕಲಿಗಳು ಅನಿವಾಸಿ ಅಂಗಳದ ನಲ್ಮೆಯಲಿ ನಲಿಯಲು.
ಭರವಸೆ, ವಿಶ್ವಾಸ, ನಂಬಿಕೆ, ನೆಚ್ಚಿಕೆಯ ಆಶಾವಾದದಲಿ ಬಯಸುವ ಕನ್ನಡದ ಸಿರಿಯ ಅನಿವಾಸಿ ಅಂಗಳದಲಿ.
ಅನಿವಾಸಿಗಳಾದ ನಮಗೆ ನಮ್ಮ ಜನ್ಮಭೂಮಿ ಭೇಟಿ ಮಾಡುವ ಅವಕಾಶ ಒದಗಿ, ಒಂದಷ್ಟು ದಿನ ತಾಯಿನೆಲದ ಗಾಳಿ ಬೆಳಕಿನಲ್ಲಿ ನಾವು ತೋಯ್ದು ಬರುವ ಗಳಿಗೆಗಳು ಒದಗಿ ಬಂದಾಗ ವ್ಯಕ್ತಪಡಿಸಲಾಗದ ಒಂದು ಖುಷಿ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಅದಕ್ಕೆ ನಾನು ಕೂಡ ಹೊರತಲ್ಲ. ನಾನು ಈ ಬಾರಿ ಭಾರತಕ್ಕೆ ಭೇಟಿ ಕೊಟ್ಟಿದ್ದು ನಾಲ್ಕು ವರ್ಷ ಒಂಬತ್ತು ತಿಂಗಳುಗಳ ಧೀರ್ಘ ಅಂತರದ ನಂತರ. ಯುಕೆ ಗೆ ಬಂದ ನಂತರ ನಾನು ಭಾರತಕ್ಕೆ ಹೋಗಿದ್ದು ಮೂರೇ ಬಾರಿ ಹೋದಾಗಲೆಲ್ಲ ಕೆಲವು ಜವಾಬ್ದಾರಿಗಳನ್ನು ಹೊತ್ತುಕೊಂಡೇ ಹೋಗಿದ್ದೆ, ತಂಗಿ ಮದುವೆ, ಮಗನ ಉಪನಯನ, ಪುಟ್ಟ ಮಗಳನ್ನು ಎತ್ತಿಕೊಂಡು ಹೀಗೆ ಏನಾದರೊಂದು ಕಾರಣಗಳಿಂದ ನನಗೆ ಬೇಕಾದೆಡೆ ಬೇಕಾದಂತೆ ನನ್ನ ರಜಾ ಕಾಲವನ್ನು ಕಳೆಯುವುದು ಸಾಧ್ಯವಾಗಿರಲಿಲ್ಲ. ಜೊತೆಗೆ ಅದು ಅಗತ್ಯ ಅಂತ ಕೂಡ ಅನಿಸಿರಲಿಲ್ಲ. ಹೋದಾಗಲೆಲ್ಲ ಅಮ್ಮನ ಕಯ್ಯಡಿಗೆ ತಿಂದು. ಅತ್ತೆಮನೆಗೆ ಹೋದಾಗ ಏಕಮೇವ ಸೊಸೆಯಾದ ಕಾರಣ ಅವರ ಇಚ್ಛೆ, ಬಯಕೆಗಳಂತೆ ಸುತ್ತಮುತ್ತಲಿನ ದೇವಸ್ಥಾನ ಸುತ್ತಿ ,ಸಂಬಂಧಿಕರ ಮನೆಗೆ ಹೋಗಿ ಅವಕಾಶ ಆದರೆ ಯಾವುದೋ ಒಂದೆರಡು ಪೂಜೆಯಲ್ಲಿ ಆರತಿ ಹಾಡು ಹೇಳಿದರೆ ನನ್ನ ಭಾರತ ಪ್ರಯಾಣ ಮುಗಿದಿರುತ್ತಿತ್ತು. ಇದಕ್ಕಿಂತ ಭಿನ್ನವಾಗಿ ನಾನು ಕೂಡ ಎಂದೂ ಯೋಚಿಸಿಯೂ ಇರಲಿಲ್ಲ.
ಆದರೆ ಈ ಬಾರಿ ಭಾರತ ಭೇಟಿ ನನ್ನ ಪಾಲಿಗೆ ಅತೀ ವಿಶೇಷ, ಕೋವಿಡ್,lockdown ಅಂತೆಲ್ಲ ಎರಡುಬಾರಿ ನನ್ನ ವಿಮಾನ ರದ್ದಾಗಿತ್ತು,ಮಕ್ಕಳ ಶಾಲೆ ,ಪತಿಯ ಉದ್ಯೋಗ ,ಇದೆಲ್ಲ ನನ್ನ ಮನಸಿಗೆ ಬಂದಾಗ ಟ್ರಿಪ್ ಪ್ಲಾನ್ ಮಾಡಲು ಸಹಕಾರಿಯಾಗಿರಲಿಲ್ಲ. ಹೀಗಾಗಿ ನಾಲ್ಕು ವರ್ಷ ಒಂಬತ್ತು ತಿಂಗಳ ನಂತರ ನಾನು ತಾಯ್ನೆಲವನ್ನು ನೋಡಲಿದ್ದೆ , ತನ್ನ ಪರಿವಾರ ಕುಟುಂಬವನ್ನು ಭೇಟಿಯಾಗಲಿದ್ದೆ. ಗೋವಿನ ಹಾಡು ಪೂರ್ಣ ಪಾಠವನ್ನ ರೆಕಾರ್ಡ್ ಮಾಡಬೇಕೆನ್ನುವ ಪೂರ್ವ ನಿಯೋಜನೆ ಬಿಟ್ಟರೆ ನಾನು ಬೇರೆ ಯಾವುದೇ ಪ್ಲಾನ್ಗಳನ್ನು ಮಾಡದೆ ಸುಮ್ಮನೆ ಹೋಗಿದ್ದೆ. ಸಮಷ್ಟಿ ತನ್ನಷ್ಟಕ್ಕೆ ತಾನೇ ನನ್ನ ೫೦ ದಿನಗಳನ್ನು ಅತ್ಯಂತ ಸುಂದರವಾಗಿ ಯೋಜಿಸಿ ಕೊಟ್ಟಿತ್ತು . ನಾನು ಖುಷಿಯನ್ನ ಆಸ್ವಾಧಿಸಲೋ ಸಮಷ್ಟಿಗೆ ಧನ್ಯವಾದ ಹೇಳಲೋ ತಿಳಿಯದಾಗಿತ್ತು . ಸಿಕ್ಕ ಗಳಿಗೆಗಳನ್ನು ನನ್ನ ಪುಟ್ಟ ಕ್ಯಾಮರಾದಲ್ಲಿ ಫ್ರೀಜ್ ಮಾಡಿ ಇಡುವುದೊಂದೇ ನನಗಿದ್ದ ಆಯ್ಕೆ ಎಷ್ಟೋ ಬಾರಿ ಅದು ಕೂಡ ಆಗಲಿಲ್ಲ. ಅನಿವಾಸಿ ಗುಂಪು ನನ್ನ ಮಟ್ಟಿಗೆ ನನ್ನ ಯುಕೆಯ ತವರುಮನಿ ಇದ್ದಂತೆ, ನನ್ನ ಪುಟ್ಟ ಪುಟ್ಟ ಪ್ರಯತ್ನಗಳನ್ನು ಶ್ಲಾಘಿಸಿ ಮತ್ತಷ್ಟು ಸಾಧನೆಗೆ, ಓದಿಗೆ ಹಚ್ಚುವ ನನ್ನ ಅತ್ಯಾಪ್ತ ಬಳಗ, ನಿಮ್ಮೆಲ್ಲರೊಂದಿಗೆ ನನ್ನ ಭಾರತ ಭೇಟಿಯ ಅತ್ಯಂತ ಖುಷಿಯ ಕೆಲ ತಾಸುಗಳ ಅನುಭವ ಹಂಚಿಕೊಳ್ಳುವ ಇಚ್ಛೆ ನನ್ನದು.
ಊರಿಗೆ ಹೋದರೆ ಧಾರವಾಡಕ್ಕೆ ಹೋಗದಿದ್ದರೆ ನನ್ನ ಪ್ರವಾಸವೇ ಅಪೂರ್ಣ,ನನ್ನ ಊರಿಂದ ಧಾರವಾಡ ೭೦ಕಿಲೋಮೀಟರ ದೂರ, ಹೀಗೆ ಮನಸು ಬಂದಾಗಲೆಲ್ಲ ಹೋಗಿ ಬರಬಹುದು.ಮತ್ತು ಧಾರವಾಡ್ ಹೋಗಲು ಯಾವುದೇ ಕಾರಣ ನೆವಗಳು,ಬೇಡ ಇದೊಂದು ರೀತಿ ಮನಸು ಬಂದಾಗ ಗುಡಿಗೆ ಹೋಗುತ್ತೀವಲ್ಲ ಹಾಗೆ. ಆದರೆ ಈ ಸಲದ ಮೊದಲ ಧಾರವಾಡದ ಭೇಟಿ ಸಾಧ್ಯ ಆಗಿದ್ದು ಪ್ರಜಾವಾಣಿಯ ೭೫ನೇ ವರ್ಷದ ಸಂಭ್ರಮಾಚರಣೆಯ ನಿಮಿತ್ತ ಏರ್ಪಡಿಸಿದ್ದ ಒಂದು ಚಂದದ ಕವಿಗೋಷ್ಠಿ, ಮತ್ತು ಸಂಗೀತ ವಿದ್ಯಾಲಯದ ಮಕ್ಕಳಿಂದ ವಿಶೇಷ ಗಾಯನ ಕಾರ್ಯಕ್ರಮ ಜೊತೆಗೆ ನನ್ನ ಗಾಯನ ಕಾರ್ಯಕ್ರಮವನ್ನೂ ಆಯೋಜಿಸಿದ್ದರಿಂದ.
ಆನಂದಕಂದರು ಬರೆದ 'ನಲ್ವಾಡಗಳು' ಕವನ ಸಂಕಲನವನ್ನು ಕೆಲವರ್ಷಗಳಿಂದ ಹುಡುಕುತ್ತಿದ್ದೆ, ಎಲ್ಲಿ ಪ್ರಯತ್ನಿಸಿದರೂ ಸಿಗಲಿಲ್ಲ. ಫೇಸಬುಕ್ ನಿಂದ ಪರಿಚಿತರಾದ ರಾಜ್ ಕುಮಾರ್ ಮಡಿವಾಳರ್ ಅವರಿಗೆ ಬೆಲ್ಫಾಸ್ಟ್ ನಲ್ಲಿ ಇರುವಾಗಲೇ ಒಂದು ಮೆಸೇಜ್ ಮಾಡಿ ಕೇಳಿದ್ದೆ ನಿಮ್ಮಲ್ಲಿ ಅಪ್ಪಿತಪ್ಪಿ ನಲ್ವಾಡುಗಳು ಸಂಕಲನ ಇದ್ದರೇ ಅದರದೊಂದು copy ಸಿಗಬಹುದೇ ? ಎಂದು. ಬಂದಾಗ ಬರ್ರಿ ಐತಿ ಕೊಡ್ತೀನಿ ಅಂದ್ರು.
ಸಪ್ತಾಪುರದಲ್ಲಿ ಇರುವ ಅವರ ಅಂಗಡಿಗೆ ಹೋಗಿ ಪುಸ್ತಕ collect ಮಾಡಲು ಹೋದವಳು ಅವರು ಹೇಳುವ ಸಾಹಿತ್ಯ ಲೋಕದ ಚಂದದ ಕಥೆಗಳನ್ನ ಕೇಳುತ್ತ,ಹಾಡುಗಳ ಬಗ್ಗೆ ಮಾತಾಡುತ್ತ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಅವರಿಗೆ ಎಂದು ತಂದುಕೊಂಡಿದ್ದ ಬುತ್ತಿಯಲ್ಲಿ ನನಗೊಂದು ಪಾಲು ಕೊಟ್ಟು ಅವರ ಶ್ರೀಮತಿ ಸುಮಾ ಮತ್ತು ರಾಜ್ಕುಮಾರ್ ಅವರು ನನ್ನ ಜೀವ ಬಂಧುಗಳೇ ಆಗಿದ್ದರು.
ಇನ್ನೇನು ಹೊರಡಬೇಕು ಅನ್ನುವಾಗ 'ಇಲ್ಲೇ ಹಳ್ಳಿಯೊಳಗ ಒಂದು ಕನ್ನಡ ಸಾಲಿ ಐತ್ರಿ ನಿಮಗ ಆಗತದ ಅಂದ್ರ ಒಂದೈದು ನಿಮಿಷ ಹೋಗಿ ಬರೋಣ,?' ಅಂದ್ರು ನನಗೆ ಇಲ್ಲ ಅನ್ನುವ ಮನಸು ಇಚ್ಛೆ ಎರಡು ಇರಲಿಲ್ಲ. ಅವರ ಕಾಕಾನ ಕಾರಿನಲ್ಲಿ ನಾನು ಹೊರಟಿದ್ದು ಧಾರವಾಡ ಹತ್ತಿರದ ಹಳ್ಳಿ ಮುಗಧ ಕ್ಕೆ. ಹೆಸರಿನಷ್ಟೇ ಚಂದ ಊರು ಅದು. 'ಬೇಂದ್ರೆಯವರು ಮೇಘದೂತ ಬರೆಯಲು ಶುರು ಮಾಡಿದ್ದು ಇದೆ ಊರಿನ ದೇವಿ ಗುಡಿಯ ಕಟ್ಟಿ ಮ್ಯಾಲೆ' ಅನ್ನುವ ಮಾತು ಕೇಳುತ್ತಲೇ ನನಗೆ ಮಾತೆ ಹೊರಡಲಿಲ್ಲ .ಒಂದುರೀತಿಯ ಖುಷಿಯ ಗುಂಗು.
ಮುಗದದ ಶಾಲೆಯ ಅತೀ ಉತ್ಸಾಹಿ ,ಸಾಹಿತ್ಯಪ್ರೇಮಿ ಶಿಕ್ಷಕರು ನನ್ನನು ೧೦ ನೇ ತರಗತಿಯ ಮಕ್ಕಳೊಂದಿಗೆ ಮಾತಾಡಲು ತರಗತಿಗೆ ಕರೆದುಕೊಂಡು ಹೋದರು, ಮಕ್ಕಳು ಬೇಂದ್ರೆಯವರ ಎರಡು ಗೀತೆಗಳನ್ನು ಚಂದದ ರಾಗದಲ್ಲಿ ಹಾಡಿದರು. ಹಕ್ಕ್ಕಿಹಾರುತಿದೆ ನೋಡಿದಿರಾ? ಎಂಬ ಗೀತೆ ಕೇಳಿದ್ದ ನನಗೆ, ಮಕ್ಕಳು ಆ ಗೀತೆಯ ಹಿಂದೆಯೇ ಬೆಕ್ಕು ಹಾರುತಿದೆ ನೋಡಿದಿರಾ ಅಂತೇ ಅದೇ ರಾಗದಲ್ಲಿ ಹಾಡಿದಾಗ ಮತ್ತು ಈ ಗೀತೆಯು ಬೇಂದ್ರೆಯವರೇ ಬರೆದದ್ದು ಎಂದು ತಿಳಿದಾಗ ಅತೀವ ಆಶ್ಚರ್ಯವಾಯಿತು. ಮಕ್ಕಳಿಗೆ ನಾನೂ ಒಂದೆರಡು ಹಾಡು ಹೇಳಿಕೊಟ್ಟೆ. ಮಕ್ಕಳ ಮುಗ್ಧ ಪ್ರಶ್ನೆಗಳಿಗೆ ಉತ್ತರಿಸುವಾಗ , ಕೆಲವೇ ವರ್ಷಗಳ ಹಿಂದೆ ನಾನುಕೂಡ ಈ ಮಕ್ಕಳಂತೆ ಇಂಥದೇ ಶಾಲೆಯಲ್ಲಿ ಹೀಗೆ ಖುಷಿ ಖುಷಿಯಾಗಿ ಹಾಡು ಹೇಳುತ್ತಾ ಕುಳಿತಿದ್ದಿದು ನೆನಪಾಯಿತು. ಆ ಶಾಲೆಯಿಂದ ವಾಪಸ್ ಧಾರವಾದ ತಲುಪುವ ಹೊತ್ತಿಗೆ ಮನಸೆಲ್ಲ ಬೇಂದ್ರೆ , ಮೇಘದೂತ , ರಾಜಕುಮಾರ್ ಅಣ್ಣ ಹೇಳಿದ ಬೇಂದ್ರೆ ಅಜ್ಜನ ಕಥೆಗಳು. ಇಷ್ಟು ಹತ್ತಿರ ಬಂದು ಬೇಂದ್ರೆಅಜ್ಜನ ಮನೆಯ ಆವರಣಕ್ಕೆ ಒಮ್ಮೆ ಹೋಗಿ ಬರದಿದ್ದರೆ ಅಂತ ಅನ್ನಿಸಿದ್ದರೂ ಆದಿನ ಸಮಯ ಮೀರಿ ಹೋಗಿತ್ತಾದ್ದರಿಂದ ಸುಮ್ಮನೆ ಮನೆಗೆ ಮರಳಿದೆ.
ಇನ್ನೇನು ಸೂಟಿ ಮುಗೀತು ಮತ್ತ ಗಂಟುಮೂಟಿ ಕಟಗೊಂಡು ವಾಪಸ್ ಕರ್ಮಭೂಮಿಗೆ ಹೊರಡ್ಲಿಕ್ಕೆ ಬರೀ ಐದ ದಿನ ಉಳದಾವು ಅನ್ನೋ ಹೊತ್ತಿನಲ್ಲಿ ಮತ್ತೊಮ್ಮೆ ಧಾರವಾಡ ಹೋಗುವ ಗಳಿಗೆ ಕೂಡಿ ಬಂತು., ದೂರದಿಂದ ಬಂದ ಸ್ನೇಹಿತರೊಬ್ಬರಿಗೆ ಬೇಂದ್ರೆಯವರ ಮನೆ ನೋಡಬೇಕಿತ್ತು, ಬೇಂದ್ರೆ ಭವನದಲ್ಲಿ ಇದ್ದ ಸಿಬ್ಬಂದಿಯನ್ನು ಮನೆಯ ಗೇಟಿನೊಳಕ್ಕೆ ಹೋಗಲು ಅನುಮತಿ ಕೇಳಿದೆವು, ಆರಂ ಆಗಿ ಹೋಗಿ ಬರ್ರಿ , ನೀವು ಒಳಗೂ ಹೋಗಬಹುದು. ಅಲ್ಲೇ ಬೇಂದ್ರೆಯವರು ಬಳಸಿದ ವಸ್ತುಗಳು ಅದಾವು ಅದನ್ನೂ ನೋಡಿ ಬರ್ರಿ, ಆಮೇಲೆ ಅವರ ಭಾವಚಿತ್ರಗಳ ಸಂಗ್ರಹ ನೋಡ್ಲಿಕ್ಕೆ ಇಲ್ಲಿ ಬರ್ರಿ ಎಂದರು.
ನಾವು ಗೇಟಿನೊಳಗೆ ಕಾಲು ಇಟ್ಟಾಗ ಚಂದದ ಬೆಳಗು ಹಳದಿ ಗೋಡೆಯ ಮನೆಯನ್ನು ಇನ್ನೂ ಚಂದ ಮಾಡಿತ್ತು, ಅವರ ಮೊಮ್ಮೊಗಳು ಮತ್ತವರ ಪತಿ ತುಂಬಾ ಆತ್ಮೀಯವಾಗಿ ಮಾತನಾಡಿದರು, ನಾನು ಮೆತ್ತಗೆ 'ನಾನು ಹುಟ್ಟಿದ್ದು ಬೇಂದ್ರೆಯವರ ಜನ್ಮದಿನದಂದು' ಅಂದೆ. ಹಂಗಾದ್ರ ನೀವೂ ಬರೀತೀರಿ? ಅಂದ್ರು, ನಾನು `ಇಲ್ಲ ರೀ ಹಾಡ್ತೀನಿ` ಅಂದೇ, ಅದು ಹೆಂಗ ಸಾಧ್ಯ ? ಅವರ ಹುಟ್ಟಿದ ದಿನ ಹುಟ್ಟಿ ಬರೆಯಲ್ಲ ಅಂದ್ರ ? ಅಂದು ನಕ್ಕರು. ಫೋಟೋ ವಿಡಿಯೋಗ್ರಫಿ ಹುಚ್ಚು ಇರುವ, ಅದಕ್ಕಿಂತ ಹೆಚ್ಚು ಬೇಂದ್ರೆ ಅವರನ್ನು ಪ್ರೀತಿಸುವ ನನ್ನ ಸ್ನೇಹಿತರು `ನಾವು ಕೆಲ ಹಾಡುಗಳನ್ನ ರೆಕಾರ್ಡ್ ಮಾಡ್ಕೊಬಹುದಾ? ಎಂದು ಕೇಳಿದಾಗ ಬೇಂದ್ರೆ ಅಜ್ಜನ ಮೊಮ್ಮಗಳು ಅರ್ರೆ ,ಅದ್ಯಾಕ್ ಕೇಳ್ತೀರಿ ಮಾಡ್ಕೋರಿ ಅಂತ ಖುಷಿಯಿಂದ ಒಪ್ಪಿಕೊಂಡರು.
ಹಾಡುವ ಯಾವುದೇ ತಯಾರಿ ಮಾಡಿಕೊಳ್ಳದ ನಾನು ಅವರು ಹಾಡು ಅಂದ ತಕ್ಷಣ ನೆನಪಿಗೆ ಬಂದಿದ್ದು - ಇನ್ನು ಯಾಕ ಬರಲಿಲ್ಲವ್ವ ... ಕವಿತೆಯ ಸಾಲುಗಳು.
ವಾಹನಗಳ ಸದ್ದಿನ ನಡುವೆ ನಾನು ಹಾಡಿದ್ದು ಅದೆಷ್ಟು ಸರಿಯಾಗಿದೆಯೋ ಗೊತ್ತಿಲ್ಲ ,ಆದರೆ ಕನ್ನಡದ ಇಬ್ಬರು ಮೇರು ಕವಿಗಳು ವಾಸಿಸಿದ, ಓಡಾಡಿದ ಸ್ಥಳದಲ್ಲಿ ನನಗೆ ಅವರ ಹಾಡುಗಳನ್ನು ಹಾಡುವ ಅವಕಾಶ, ಅದೃಷ್ಟ ಭಗವಂತ ಒದಗಿಸಿಕೊಟ್ಟಿದ್ದಕ್ಕೆ ನಾ ಅವನಿಗೆ ಋಣಿ. (ಇಲ್ಲಿಗೆ ಬರುವ ಮೊದಲು ಮೈಸೂರಲ್ಲಿ ಕುವೆಂಪು ಅವರ ಮನೆಯ ಆವರಣದಲ್ಲಿ ಕೂತು ಸಹ ಅವರ ಒಂದು ಕವನವನ್ನು ಹಾಡಿದ್ದೆ.)
೧೬ನೇ ಶತಮಾನದಲ್ಲಿ ಪ್ರಖ್ಯಾತ ಚಿಂತಕ, ವಿಜ್ಞಾನಿ, ಕಲೆಗಾರ ಲಿಯೋನಾರ್ಡೊ ಡಾವಿಂಚಿ ರಚಿಸಿದ ಅದ್ಭುತ ಅದ್ವಿತೀಯ ವರ್ಣಚಿತ್ರ"ಮೋನಲೀಸ" ಈ ವರ್ಣಚಿತ್ರವನ್ನು ಡಾವಿಂಚಿ ಉತ್ತರ ಇಟಲಿಯಲ್ಲಿ ಸೃಷ್ಟಿಸಿದ್ದು ನಂತರ ಅದನ್ನು ಫ್ರಾನ್ಸ್ ದೇಶ ಪಡೆದುಕೊಂಡು ನೂರಾರು ವರುಷಗಳಿಂದ ಅದು ಪ್ಯಾರಿಸ್ಸಿನ ಲುವ್ರ ಅರಮನೆ ಎಂಬ ಮ್ಯೂಸಿಯಂನಲ್ಲಿ ಶಾಶ್ವತವಾಗಿ ನೆಲೆಯೂರಿದೆ. ಇದು ಕಲಾ ಪ್ರಪಂಚದಲ್ಲಿ ಅತ್ಯಂತ ಬೆಲೆಯುಳ್ಳ ಕಲಾಕೃತಿಯಾಗಿದೆ. ಈ ಚಿತ್ರದಲ್ಲಿ ಮೋನಾಲೀಸಳಾ ಒಂದು ಕಿರು ನಗೆ (Half smile) ವಿಶೇಷವಾದದ್ದು ಮತ್ತು ಯಾವ ದಿಕ್ಕಿನಿಂದ ನೋಡಿದರೂ ಮೋನಲೀಸಾ ನೋಡುಗರ ಕಡೆ ಕಣ್ಣು ಹಾಯಿಸುವಂತೆ ಭಾಸವಾಗುತ್ತದೆ. ಅವಳ ಈ ನಿಗೂಢ ಚಹರೆಯನ್ನು ಹಲವಾರು ತಜ್ಞರು ವಿಶ್ಲೇಷಿಸಿ ಪಾಂಡಿತ್ಯಪೂರ್ಣ ಅಭಿಪ್ರಾಯವನ್ನು ಒದಗಿಸಿದ್ದಾರೆ. ನಾನು ಹಲವಾರು ಬಾರಿ ಪ್ಯಾರಿಸ್ಸಿನ ಲುವ್ರ್ ಮ್ಯೂಸಿಯಂಗೆ ತೆರಳಿ ಮೋನಲೀಸಾ ಕಲಾಕೃತಿಯನ್ನು ವೀಕ್ಷಿಸಿದ್ದೇನೆ. ನಾನು ಭಾವನಾತ್ಮಕ ನೆಲೆಯಲ್ಲಿ ಈ ಚಿತ್ರವನ್ನು ವಿಶ್ಲೇಷಿಸಿ ನನ್ನ ಕೆಲವು ಅನಿಸಿಕೆಗಳನ್ನು ಒಂದು ಸ್ವಗತ ಕಾವ್ಯ ರೂಪದಲ್ಲಿ ವ್ಯಕ್ತಪಡಿಸಿದ್ದೇನೆ.ಮೋನಲೀಸಾ ನಮ್ಮ- ನಿಮ್ಮ ನಡುವಿನ ಸ್ತ್ರೀಯಾಗಿ, ರೂಪಕವಾಗಿ ನನ್ನ ಆಲೋಚನೆಗಳನ್ನು ಕೆದಕಿದ್ದಾಳೆ. ದಯವಿಟ್ಟು ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.
ಮೋನಲೀಸಾ (ಕಲಾಭಿಮಾನಿಯ ಸ್ವಗತ)
ಡಾ. ಜಿ. ಎಸ್. ಶಿವಪ್ರಸಾದ್
ಖುಷಿಯಾಗಿ ಮನಬಿಚ್ಚಿ ನಗಲೇಕೆ?
ಈ ಹುಸಿ ನಗೆಯೇಕೆ? ನಗಲೂ ಚೌಕಾಶಿಯೇ,
ಭಾವನೆಗಳಿಗೂ ಕಡಿವಾಣವೇ?
ಮೊಗ್ಗು ಹೂವಾಗಿ ಅರಳಿದಾಗ
ಚೆಲುವಲ್ಲವೇ
? ಹೇಳು ಮೋನಲೀಸಾ
ನಿನ್ನ ಈ ಮಾರ್ಮಿಕ ಚಹರೆ
ಅದೆಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ
ಕಲಾವಿದರು, ಪಂಡಿತರು, ಸಾಮಾನ್ಯರು
ನಿನ್ನ ನಿಲುವನ್ನು ವಿಮರ್ಶಿಸಿದ್ದಾರೆ
ಉತ್ತರ ನಿನಗಷ್ಟೇ ಗೊತ್ತು
ನೂರಾರು ವರ್ಷಗಳು ಪ್ಯಾರಿಸ್ಸಿನ
ಅರಮನೆಯಂಬ ಸೆರೆಮನೆಯಲ್ಲಿ
ಕೂತು, ಎಲ್ಲರ ಕಣ್ಣಲ್ಲಿ ಕಣ್ಣಿಟ್ಟು
ಒಂದೇ ಸಮನೆ ನಕ್ಕು ಸಾಕಾಯಿತೇ
ಮೋನಲೀಸಾ ?
ಶತಮಾನಗಳ ಹಳೆ ನೆನಪುಗಳೆ?
ಒಂಟಿತನದ ಬೇಸರವೇ, ವಿರಹದ ನೋವೇ?
ತವರಿನ ತುಡಿತವೇ? ನಿನ್ನನ್ನು ಹೀಗೆ
ಚಿತ್ರಿಸಿದ ಡಾವಿಂಚಿಯ ಮೇಲೆ ಕೋಪವೇ?
ಫ್ರೆಂಚ್ ಕ್ರಾಂತಿಯಲ್ಲಿ ಮುಗ್ಧರ ಬಲಿದಾನ,
ಕರೋನ ಮಹಾಮಾರಿ, ಭಯೋತ್ಪಾದನೆ
ಇವಲ್ಲೆವನ್ನು ಕಂಡೂ ನಿಸ್ಸಹಾಯಕಳಾಗಿ
ಕುಳಿತ್ತಿದ್ದೇನೆ ಎಂಬ ಅಪರಾಧ ಪ್ರಜ್ಞೆಯೇ?
ನಿನ್ನನ್ನು ಖುಷಿಯಾಗಿಸಲು
ನಾನೇನು ಮಾಡಬೇಕು ಹೇಳು?
ಚಾರ್ಲಿ ಚಾಪ್ಲಿನ್ ಸಿನಿಮಾ ತೋರಿಸಲೇ
ನನ್ನ ಒಂದೆರಡು ಹನಿಗವನಗಳನ್ನು ಓದಲೇ?
ಇಲ್ಲ ...
ಐಫಿಲ್ ಟವರ್ ತೋರಿಸಲೇ?
ಶ್ಯಾಂಪೇನ್ ಕುಡಿಸಲೇ?
ಏನಾದರೂ ಹೇಳು ಮೋನಲೀಸಾ
ಬೇಡ ಈ ವಿಲಕ್ಷಣ ಮೌನ
ಓಹ್, ಚಿತ್ರದ ಚೌಕಟ್ಟಿನಿಂದ
ಹೊರಬರುವ ತವಕವೇ ಮೋನಲೀಸಾ
ಬೇಡ ಬೇಡ, ನೀನು ಅಲ್ಲೇ ಸುರಕ್ಷಿತವಾಗಿರು
ಶ್ರೀಮಂತರು ನಿನ್ನನ್ನು ಹರಾಜು ಹಾಕಿಬಿಡುತ್ತಾರೆ
ಕಳ್ಳರು ನಿನ್ನನು ಮಾರಿಕೊಳ್ಳುತ್ತಾರೆ
ಪ್ಯಾರಿಸ್ಸಿನ ಫ್ಯಾಷನ್ ಡಿಸೈನರ್ಗಳು
ನಿನ್ನನ್ನು ಉಪವಾಸ ಕೆಡವಿ,
ಮೈಭಾರವಿಳಿಸಿ, ಅರೆ ನಗ್ನ ಗೊಳಿಸಿ
ಕ್ಯಾಟ್ ವಾಕ್ ವೇದಿಕೆಯ ಮೇಲೆ
ಮೆರವಣಿಗೆ ಮಾಡುತ್ತಾರೆ!
ಪ್ರಪಂಚ ಬದಲಾಗಿದೆ ಮೋನಲೀಸಾ
ಹೊರಗೆ ಕಾಲಿಟ್ಟ ಕೂಡಲೇ
ನಿನ್ನ ಬಣ್ಣ, ಅಂದ, ಚೆಂದ, ಮೈಕಟ್ಟು
ಸಂಪತ್ತು, ಜಾತಿ, ಧರ್ಮ ಇವುಗಳನ್ನು
ಮುಂದಿಟ್ಟು ಅಳೆಯುತ್ತಾರೆ
ಸಮಾಜ ಹಾಕಿರುವ ಫ್ರೆಮಿನೊಳಗೆ
ಎಲ್ಲ ಸ್ತ್ರೀಯರು ಇರುವಂತೆ, ನೀನೂ
ಫ್ರೆಮಿನೊಳಗೇ ಇರಬೇಕೆಂಬುದು ಎಲ್ಲರ ನಿರೀಕ್ಷೆ
ಸ್ತ್ರೀವಾದ, ಸ್ತ್ರೀ ಸ್ವಾತಂತ್ರ್ಯ ಉಳಿದಿರುವುದು
ವಿಚಾರವಂತರ ಭಾಷಣಗಳಲ್ಲಷ್ಟೇ
ಹರುಷವಿರಲಿ ದುಃಖವಿರಲಿ ಹಾಕಿಕೋ
ನಿನ್ನ ನಸು ನಗೆಯ ಮುಖವಾಡ
ನಾವು ಹಣ ತೆತ್ತು ಬರುವುದು
ನಿನ್ನ ಕಿರುನಗೆಯನ್ನು ನೋಡಲಷ್ಟೇ
ನಿನ್ನ ಕಷ್ಟ ಇಷ್ಟಗಳು ಇರಲಿ ನಿನ್ನೊಳಗೇ
ಸೆಲ್ಫಿಗಳ ಸುರಿಮಳೆಯು ನಿಂತಮೇಲೆ
ಕಲಾಭಿಮಾನಿಗಳು ನಿರ್ಗಮಿಸಿದ ಮೇಲೆ
ಮ್ಯೂಸಿಯಂ ಬಾಗಿಲುಗಳು ಮುಚ್ಚಿದ ಮೇಲೆ
ಒಬ್ಬಳೇ ಏಕಾಂತದಲ್ಲಿ ಅಳುವುದು
ಇದ್ದೇ ಇದೆ ಮೋನಲೀಸಾ
***
ನಮಸ್ಕಾರ ಅನಿವಾಸಿ ಬಂಧುಗಳೇ. ಬೆಳಗಾದರೆ ಭೋಗಿ-ಸಂಕ್ರಾಂತಿಗಳು. ಸುಗ್ಗಿಯ ಹಬ್ಬ ತಮ್ಮೆಲ್ಲರಿಗೂ ಹಿಗ್ಗನ್ನು ತರಲಿ. ಹುಗ್ಗಿಯ ಘಮದಂತೆ ಬದುಕು ಹಿತವಾಗಲಿ
ಎಳ್ಳು-ಬೆಲ್ಲದ ಸಿಹಿ ಬಾಳ ತುಂಬಿರಲಿ. ಸಿಹಿಗಬ್ಬು, ಬಾಳೆ- ಬಾರೆ, ಸೀತನಿ-ಸುಲಗಾಯಿ..ಆಹಾ! 'ಈ ಜನುಮವೇ ಆಹಾ ದೊರಕಿದೆ ರುಚಿ ಸವಿಯಲು.. ಈ ಜಗವಿದೆ ನವರಸಗಳ ಉಣಬಡಿಸಲು' ಅಲ್ಲವೇ?
ಬನ್ನಿ.. ಇವತ್ತು ಮರವಂತೆಯವರ ಮನೆಯಲ್ಲಿ ಶ್ಯಾವಿಗೆಯಂತೆ. ಎಂಥಾ ಸೊಗಸಾದ ಊಟ ಉಣಬಡಿಸಿದ್ದಾರೆ ಸವಿಯಬನ್ನಿ.
ಉಂಡಾದ ಮೇಲೆ ಹಾಯಾಗಿ ಅಡ್ಡಾಗಿ ಅಮರಪ್ರೇಮ ಕಥಾಯಾನ ಮಾಡಿ ಸಂಕ್ರಾಂತಿ ಸಂಭ್ರಮ ಹೆಚ್ಚಿಸಿಕೊಳ್ಳಿ.
~ ಗೌರಿ ಪ್ರಸನ್ನ, ಸಂಪಾದಕರು
ಶ್ಯಾವಿಗೆ ಹಬ್ಬ – ಯೋಗೀಂದ್ರ ಮರವಂತೆ
ಇವತ್ತು ಶ್ಯಾವಿಗೆ. ಇಂತಹ ಇವತ್ತು ವಾರಾಂತ್ಯದ ದಿನಗಳಾದ ಶನಿವಾರ ಆದಿತ್ಯವಾರ ಅಲ್ಲದಿದ್ದರೆ ಯಾವುದೊ ಹಬ್ಬದ ರಜೆಯ ದಿವಸ ಬರುತ್ತದೆ. ಇಲ್ಲದಿದ್ದರೆ ಶ್ಯಾವಿಗೆಯಂತಹ ಪ್ರಯಾಸಕರ ಸಾಹಸವನ್ನು ದೈನಿಕದ ಕೆಲಸ ಇರುವ ವಾರದ ನಡುವೆ ಯಾರಾದರೂ ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಕಡಿಮೆ. ಶ್ಯಾವಿಗೆಯನ್ನು ತಲೆಮಾರುಗಳಿಂದ ತಯಾರಿಸಿ ಪ್ರೀತಿಸಿ ಆಸ್ವಾದಿಸಿ ಬಡಿಸಿ ಉಣಿಸಿ ತಣಿಸಿದ ಪರಂಪರೆಯಲ್ಲಿ ಹುಟ್ಟಿದ್ದು ನನ್ನ ಭಾಗ್ಯ ಇರಬೇಕು. ಸಂಗೀತ ನೃತ್ಯ ಪ್ರಕಾರಗಳಲ್ಲಿ ಇಂತಹ ಶೈಲಿ ಘರಾನಾ ತಿಟ್ಟು ಮಟ್ಟು ಎಂದೆಲ್ಲ ಇದೆಯಲ್ಲ. ಪರಂಪರೆಯೊಂದು ಗುರುವಿನಿಂದ ಶುರುವಾಗಿ ಶಿಷ್ಯರ ತಲಾಂತರಗಳಿಗೆ ವಿಶಿಷ್ಟ ಗುರುತಾಗಿ ಹರಿದು ಹೋಗುವಂತಹದು. ಹೀಗೆ ಹೆಸರಾಂತ ಪರಂಪರೆಯಿಂದ ಬಂದವರನ್ನು ನೋಡಿದ ಕೇಳಿದ ತಕ್ಷಣ ಇನ್ಯಾರೋ ,"ಓ ಇವರು ಇಂತಹಲ್ಲಿಗೆ ಸೇರಿದವರು "ಎಂದು ಸುಲಭವಾಗಿ ಗುರುತಿಸುವುದಿದೆ. ಅಂತಹ ಯಾವುದೇ ಗಾಯಕ ವೈಣಿಕ ನರ್ತಕ ಕಲಾವಿದರ ಸಾಲಿಗೆ ಪರಂಪರೆಗೆ ಸೇರದ ನಾನು , ಆದರೆ, ಒಂದು ವೇಳೆ ಮನುಷ್ಯರೇ ಆರೋಪಿಸಿಕೊಂಡ ಸಾಮೂಹಿಕ ಗುರುತಿಗೆ ಸೇರಲೇಬೇಕಾದ ಸಂದರ್ಭದಲ್ಲಿ " ಶ್ಯಾವಿಗೆ ಘರಾನಾ"ಕ್ಕೆ ಮಾತ್ರ ಸೇರಬೇಕಾದವನು ಎಂದು ಅನಿಸಿದ್ದಿದೆ. ಶ್ಯಾವಿಗೆಯನ್ನು ತಿಂಡಿ ಎಂತಲೋ ಕಜ್ಜಾಯ ಊಟ ಉಪಹಾರ ಎಂತಲೋ ವರ್ಗೀಕರಿಸಿದವರಿದ್ದಾರೆ. ಮತ್ತೆ ಕೆಲವರು ಅದರ ತಯಾರಿಯ ಹಿಂದಿನ ಸಿದ್ಧತೆ ಬದ್ಧತೆ ಶ್ರಮ ಸಾಹಸಗಳನ್ನು ಕಂಡು ಅಡಿಗೆಯ ಪ್ರಕಾರದಿಂದಲೇ ಹೊರಗಿಟ್ಟು ದೂರ ಉಳಿದಿದ್ದಾರೆ. ನನ್ನ ಮಟ್ಟಿಗೆ ಶ್ಯಾವಿಗೆ ಇಂತಹ ಮಾನವ ಮಿತಿಯ ವಿವರ ವರ್ಣನೆಗಳನ್ನು ಮೀರಿದ ಒಂದು ಮಹಾ ಕುಸುರಿ ಕೆತ್ತನೆ ಕಾವ್ಯ.
ಈ ಕಾಲದಲ್ಲಿ ಉಪ್ಪಿಟ್ಟನ್ನು ಪಾಯಸ ಫಲೂದಂತಹ ಸಿಹಿಖಾದ್ಯಗಳನ್ನೂ ಶ್ಯಾವಿಗೆ ಬಳಸಿ ತಯಾರಿಸುವುದು ಜನಪ್ರಿಯವಾಗಿರುವವಾದರೂ "ಒತ್ತು ಶ್ಯಾವಿಗೆ"ಯನ್ನೇ ಶ್ಯಾವಿಗೆ ಎಂದು ಸಂಬೋಧಿಸುವುದು ಕೆಲವು ಊರು ಮನೆಗಳಲ್ಲಿ ಇಂದಿಗೂ ಕ್ರಮ. ಹಲವು ಮಾದರಿ ಬಗೆಗಗಳ ಶ್ಯಾವಿಗೆಳು ಅಸ್ತಿತ್ವದಲ್ಲಿ ಇದ್ದರೂ ಅದರ ಉಗಮ ಮೂಲ ನಾಲ್ಕು ಸಾವಿರ ವರ್ಷಗಳ ಹಿಂದೆ ಚೈನಾದಲ್ಲಿ ಆಯಿತು ಎಂದು ಕೆಲವು ಆಹಾರ ಇತಿಹಾಸಕಾರರು ಬರೆದಿಟ್ಟಿದ್ದಾರೆ. ಇನ್ನು ಕೆಲವರು ಅನಾದಿ ಕಾಲದಲ್ಲಿ ನೂಡಲ್ಸ್ ನಂತಹ ತಿನಿಸು ಇಟೆಲಿಯಲ್ಲಿ ಇತ್ತು ಎಂದೂ ಹೇಳಿದ್ದಾರೆ. ಮತ್ತೊಬ್ಬರು ಕ್ರಿಸ್ತ ಪೂರ್ವ ೨೦೦೦ದ ಹೊತ್ತಿಗೆ ಭಾರತದಲ್ಲಿಯೂ ಶ್ಯಾವಿಗೆ ಮಾದರಿಯ ಊಟ ತಿಂಡಿ ಇದ್ದುದರ ಕುರುಹು ಇದೆ ಎನ್ನುತ್ತಾರೆ. ಹಲವು ನೂರು, ಕೆಲವು ಸಾವಿರ ವರ್ಷಗಳ ಹಿಂದೆ ಶ್ಯಾವಿಗೆಯ ಹುಟ್ಟು ಎಲ್ಲೇ ಆಗಿದ್ದರೂ ,ಅಂದಿನಿಂದ ಇಂದಿನ ತನಕದ ಸುದೀರ್ಘ ಯಾನದಲ್ಲಿ ಜಗತ್ತಿನ ಬೇರೆ ಬೇರೆ ಮೂಲೆಗಳಿಗೆ ಹರಡಿ ಹಲವು ಮಾರ್ಪಾಟುಗಳನ್ನು ಕಂಡು ಇಂದು ಇಲ್ಲಿ ಹೀಗೆ ಹಸನಾಗಿ ಬದುಕಿ ಬಾಳಿಕೊಂಡಿದೆ.
ಶ್ಯಾವಿಗೆ ಮಾಡುವವರು ತಯಾರಿಯನ್ನು ಹಿಂದಿನ ದಿನ ಅರೆಯುವ ಕೆಲಸದಿಂದ ಆರಂಭಿಸಿರುತ್ತಾರೆ. ಇನ್ನು ನನ್ನಂತೆ ತಿನ್ನುವುದರಲ್ಲಿ ತೀವ್ರ ಆಸಕ್ತಿ ಇರುವವರು ಅದಕ್ಕಿಂತಲೂ ಮೊದಲೇ ಒಂದು ಮಾನಸಿಕ ಸಿದ್ಧತೆ ಪ್ರತೀಕ್ಷೆಯಲ್ಲಿ ಇರುತ್ತಾರೆ. ಬಿಡಿ,ಅರೆಯುವುದು ಶ್ಯಾವಿಗೆ ಯಾನದ ಮೊದಲ ಹಂತವಾದರೂ ಅದಕ್ಕೂ ಪೂರ್ವದಲ್ಲಿ ಶ್ಯಾವಿಗೆ ಸ್ನೇಹಿ ಅಕ್ಕಿ ಕೈವಶವಾಗಿರಬೇಕು. ಶ್ಯಾವಿಗೆಗೆ ಸಮರ್ಪಕ ಅಕ್ಕಿ ಯಾವುದು ಎಂದು ಅರಸುವುದು ಮತ್ತೆ ಕಂಡುಹಿಡಿಯುವುದು ಪರಂಪರೆ ಪ್ರಯೋಗಗಳು ಕಲಿಸಿಕೊಡುವ ಗುಟ್ಟುಗಳಲ್ಲಿ ಒಂದು. ಬಿಳಿಯಾಗಿ ಹೊಳೆಯುವ ಯಾವುದೋ ಅಕ್ಕಿ, ದುಬಾರಿಯಾದ ಕಾರಣಕ್ಕೆ ಒಳ್ಳೆಯದು ಎನ್ನುವ ಹೆಸರು ಪಡೆದ ಅಕ್ಕಿ ಇಂತಹವನ್ನು ತಂದು ಅರೆದು ಶ್ಯಾವಿಗೆ ಮಾಡಲು ಕೈಹಾಕಿದರೆ ಉದ್ದುದ್ದ ಎಳೆಯಾಗಿ ನಿಂತು ನಲಿದು ಬಾಳಬೇಕಾದ ಶ್ಯಾವಿಗೆ ನೂಲುಗಳು ಕ್ಷಣಮಾತ್ರದಲ್ಲಿ ತುಂಡು ತುಂಡಾಗಿ ಹರಿದು ಛಿದ್ರವಾಗಿ ನಾಲಿಗೆಯಲ್ಲಿ ನಿಲ್ಲದೆ ಕರಗಿ ನಿರಾಸೆ ಜಿಗುಪ್ಸೆ ಹುಟ್ಟಿಸುವ ಸಾಧ್ಯತೆಯೇ ಹೆಚ್ಚು. ಕೇರಳದ ಕಡೆಯ ಶ್ಯಾವಿಗೆ ಬಿಳಿ ಅಲ್ಲದೇ ಕೆಂಪು ಅಕ್ಕಿಯಿಂದಲೂ ತಯಾರಾಗುತ್ತದೆ."ಇಡಿಯಪ್ಪಂ" ಎನ್ನುವ ಹೆಸರಿನ ಕೇರಳದ ಶಾವಿಗೆ ಪ್ರಕಾರಕ್ಕೆ ನೂಲುಪೊಟ್ಟು ,ನೂಲಪ್ಪಮ್ ಎಂಬ ಹೆಸರುಗಳೂ ದಕ್ಷಿಣ ಭಾರತದಲ್ಲಿ ಪ್ರಚಲಿತದಲ್ಲಿ ಇವೆ. ಇನ್ನು ಆಂಗ್ಲ ಭಾಷೆಯಲ್ಲಿಯೇ ಹೆಸರು ಬೇಕೆಂದು ಬಯಸುವವರು ರೈಸ್ ನೂಡಲ್ಸ್ ಅಥವಾ ಸ್ಟ್ರಿಂಗ್ ಹೋಪರ್ ಎಂದೂ ಕರೆದು ಕೃತಾರ್ತರಾಗಬಹುದು. ರುಚಿ ಗಂಧಗಳಲ್ಲಿ ಕೇರಳದ ಅಥವಾ ಇನ್ಯಾವುದೋ ರಾಜ್ಯದ ಶ್ಯಾವಿಗೆ ಕನ್ನಡದ ಶ್ಯಾವಿಗೆಗಿಂತ ಭಿನ್ನ. ಮೇಲುನೋಟಕ್ಕೆ ಎಲ್ಲ ಬಗೆಯ ಶ್ಯಾವಿಗೆಗಳೂ ಸುರುಳಿಸುತ್ತಿದ ನೂಲಿನ ಮುದ್ದೆಯಾದರೂ ಅವುಗಳೊಳಗೆ ವೈವಿಧ್ಯ ಇದೆ. ವೈವಿಧ್ಯಮಯ ಶ್ಯಾವಿಗೆಯನ್ನು ಪ್ರೀತಿಸಿ ಸ್ವಯಂ ತಯಾರಿಸುವವರು ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ದರೂ ಅಲ್ಲಿನ ಸ್ಥಳೀಯ ಅಂಗಡಿಗಳಲ್ಲಿ ಸಿಗುವ ಅಕ್ಕಿಗಳಲ್ಲಿ ಶ್ಯಾವಿಗೆಗೆ ಹೊಂದುವ ಅಕ್ಕಿ ಯಾವುದು ಎಂದು ತಮ್ಮ ಅಡುಗೆಯ ವಿಜ್ಞಾನ ಗಣಿತ ಪ್ರಯೋಗಗಳನ್ನು ಜೊತೆಮಾಡಿಸಿ ಕಂಡುಕೊಂಡಿರುತ್ತಾರೆ. ಅದಕ್ಕಿಂತ ಮುಖ್ಯವಾಗಿ ತಾವಿರುವ ಊರಿಗೆ ಶ್ಯಾವಿಗೆ ಒತ್ತುವ ಒರಳನ್ನೂ ಕೊಂಡೊಯ್ದಿರುತ್ತಾರೆ. ಹಿತ್ತಾಳೆಯ ಹೊಳೆಯುವ ಒರಳುಗಳು ಸಣ್ಣ ದೊಡ್ಡ ಗಾತ್ರದಲ್ಲಿ ಕನ್ನಡ ನಾಡಿನ ಅಂಗಡಿಗಳಲ್ಲಿ ದೊರೆಯುತ್ತವೆ. ವಿದೇಶ ಪ್ರವಾಸದ ಬ್ಯಾಗಿನ ಅಚ್ಚುಕಟ್ಟಿನ ಜಾಗದಲ್ಲಿ ಸಾಗಿಸಲು ಅನುಕೂಲಕರ ಆಗಲಿ ಎಂದು ಒರಳಿನ ಭಾಗಗಳನ್ನು ಹೊರಡುವಾಗ ಬಿಡಿಸಿ ಮತ್ತೆ ತಲುಪಿದ ಮೇಲೆ ಜೋಡಿಸಲಾಗುವ ನಮೂನೆಗಳೂ ದೊರೆಯುತ್ತವೆ. ಅಂತೂ ಒರಳೂ ಇದ್ದು, ಸೂಕ್ತವಾದ ಅಕ್ಕಿಯೂ ದಕ್ಕಿದ ಮೇಲೆ , ಮರುದಿನ ಬೆಳಿಗ್ಗೆಯ ಶ್ಯಾವಿಗೆ ತಯಾರಿಗೆ ಹಿಂದಿನ ಸಂಜೆ ಅರೆದಿಡಬಹುದು , ಜೊತೆಗೆ ತೆಂಗಿಕಾಯಿ ತುರಿದು ಸೇರಿಸುವ ಪದ್ಧತಿಯೂ ಇದೆ. ಕೆಲವು ಊರು ಮನೆಗಳಲ್ಲಿ ತೆಂಗಿನ ಕಾಯಿ ಹಾಕದೆಯೂ ಶ್ಯಾವಿಗೆ ಮಾಡುತ್ತಾರೆ.
ನಾನಂತೂ ಶ್ಯಾವಿಗೆ ಪರಂಪರೆಯಲ್ಲಿ "ತೆಂಗಿನಕಾಯಿ ಸಹಿತ" ಸಂತತಿಗೆ ಸೇರಿದವನು. ಶ್ಯಾವಿಗೆಯನ್ನು ಆಘ್ರಾಣಿಸಿಯೇ ಅದಕ್ಕೆ ತೆಂಗಿನ ಕಾಯಿ ಹಾಕಿದ್ದಾರೋ ಇಲ್ಲವೋ ಎಂದು ಹೇಳಬಲ್ಲ ಹುಟ್ಟಾ ಕಟ್ಟಾ ಶ್ಯಾವಿಗೆ ಪ್ರೇಮಿಗಳೂ ಇದ್ದಾರೆ. ಎಷ್ಟು ಅಕ್ಕಿಗೆ ಎಷ್ಟು ತೆಂಗಿನಕಾಯಿ ಸೇರಿಸಿ ಅರೆಯಬೇಕು ಎನ್ನುವುದು ಶ್ಯಾವಿಗೆಯ ಸೂಕ್ಶ್ಮಾತಿಸೂಕ್ಷ್ಮಗಳಲ್ಲಿ ಇನ್ನೊಂದು. ಈ ಹಂತದಲ್ಲಿ ಕಾಯಿ ಹೆಚ್ಚು ಸೇರಿಸಿದರೆ ಶ್ಯಾವಿಗೆ ತಯಾರಾಗುವ ಕೊನೆಯ ಹಂತದಲ್ಲಿ ಎಳೆಗಳು ತೀರಾ ದುರ್ಬಲವಾಗಿ ಪುಡಿ ಪುಡಿ ಆಗುತ್ತವೆ.ಕಡಿಮೆ ಆದರೆ ಎಳೆಗಳು ಗಟ್ಟಿಯಾಗಿ ತಿನ್ನುವ ಅನುಭವ ಕೆಡುತ್ತದೆ. ಚದುರಂಗದ ಆಟದಲ್ಲಿ ಹಲವು ಹೆಜ್ಜೆಗಳ ಮುಂದಿನ ಪರಿಣಾಮವನ್ನು ಅಳೆದು ಮೊದಲೇ ಯೋಜನೆ ಮಾಡಿ ಜಾಗರೂಕವಾಗಿ ಮುನ್ನಡೆಯುವಂತೆ ಈ ಮಹಾಖಾದ್ಯದ ತಯಾರಿಯೂ. ಒಂದಾನೊಂದು ಕಾಲದಲ್ಲಿ ನನ್ನ ತಂದೆ ತಾಯಿಯರ ಕಡೆಯ ಅಮ್ಮಮ್ಮಂದಿರು (ಅಜ್ಜಿಯರು) ಶಿಲೆಯ ಅರೆಯುವ ಕಲ್ಲುಗಳ ಎದುರು ನೇರ ಕುಳಿತು ಒಂದು ಕೈಯಿಂದ ಕಲ್ಲನ್ನು ತಿರುವುತ್ತಾ ಮತ್ತೊಂದರಲ್ಲಿ ಅಷ್ಟಷ್ಟೇ ಅಕ್ಕಿ ತುರಿದ ಕಾಯಿಯನ್ನು ಕಲ್ಲಿನ ಕುಳಿಗೆ ಜಾರಿಸುತ್ತಾ ನಡುನಡುವೆ ಹಣೆಯ ಬೆವರನ್ನೂ ಸೆರಗಿಂದ ಒರಸುತ್ತ ಸಣ್ಣ ಸದ್ದಿನಲ್ಲಿ ಅರೆಯುತ್ತಿದ್ದ ಪ್ರಕ್ರಿಯೆ ಇದೀಗ ತಲೆಮಾರುಗಳನ್ನು ದಾಟಿ ಬಟನ್ ಒತ್ತಿದೊಡನೆ ಕರ್ಕಶವಾಗಿ ಗಿರಗಿಟ್ಟುವ ಮಿಕ್ಸರ್ ಗ್ರೈಂಡರ್ ಗಳ ಶಬ್ದದ ನಡುವೆ ನುಣ್ಣಗೆ ತೆಳ್ಳಗಾಗುವುದಕ್ಕೆ ಒಗ್ಗಿಕೊಂಡಿವೆ. ಹೀಗೆ ಸಿದ್ಧವಾದ ನೀರುನೀರಾದ ಶ್ಯಾವಿಗೆ ಹಿಟ್ಟು ಒಂದು ರಾತ್ರಿಯನ್ನು ಏನೂ ಮಾಡದೇ ಪಾತ್ರೆಯೊಂದರಲ್ಲಿ ಬೆಳಗಿನ ನಿರೀಕ್ಷೆಯಲ್ಲಿ ಕಳೆಯುತ್ತದೆ . ,ಮರುದಿನ ಬೆಳಗಿಗೆ ತುಸು ಹುಳಿಯಾಗಿ ಮುಂದಿನ ಹಂತಕ್ಕೆ ಅಣಿಗೊಳ್ಳುತ್ತದೆ. ಇನ್ನು ಶ್ಯಾವಿಗೆ ಸಂಭ್ರಮದ ದಿನದ ಬೆಳಿಗ್ಗೆ ಒಲೆಯ ಮೇಲಿರುವ ಬಾಣಾಲೆಯನ್ನು ಏರಿದ ತೆಳ್ಳಗಿನ ಹಿಟ್ಟು ,ಮನೆಯ ನಿಷ್ಣಾತ ಬಾಣಸಿಗರ ಸುಪರ್ದಿಯಲ್ಲಿ ನಿಧಾನವಾಗಿ ಕುದಿಯುತ್ತಾ ಮಗುಚಿಸಿಕೊಳ್ಳುತ್ತ ಮುದ್ದೆಯಾಗುತ್ತದೆ , ಮತ್ತೆ ಆ ಗಟ್ಟಿ ಮುದ್ದೆ ಕೈಮುಷ್ಟಿಯ ಬಿಗಿಯಲ್ಲಿ ಉಂಡೆಯ ರೂಪವನ್ನು ಪಡೆದು ಇಡ್ಲಿ ಅಟ್ಟ ಅಥವಾ ಕುಕರ್ ಒಳಗೆ ನಂತರ ಬೇಯುತ್ತದೆ ತೋಯುತ್ತದೆ . ತೆಳ್ಳಗಿನ ಹಿಟ್ಟು ಯಾವ ಬೆಂಕಿಯಲ್ಲಿ ಎಷ್ಟೊತ್ತು ಕುದಿಯಬೇಕು ಎಷ್ಟು ಗಟ್ಟಿಯಾಗಬೇಕು ಮತ್ತೆ ಎಷ್ಟು ಬೇಯಬೇಕು ಎನ್ನುವುದು ಕೂಡ ಶ್ಯಾವಿಗೆಯ ಯಶಸ್ಸಿನ ಹಿಂದೆ ದುಡಿಯುವ ನಯ ನಾಜೂಕಿನ ವಿಚಾರಗಳು.
ಈಗ ಮೃದುವಾಗಿ ಹದವಾಗಿ ಕುದಿದು ಬೆಂದ ಉಂಡೆಗಳು ಒತ್ತಿಸಿಕೊಳ್ಳಲಿಕ್ಕೆ ತಯಾರು. ಎಂದೋ ಯಾರೋ ಮಹಾ ಇಂಜಿನೀಯರ್ ಒಬ್ಬರು ಸಂಶೋಧನೆಯ ಕಾರಣಕ್ಕೆ ಈಗಲೂ ಅವರಿಗೆ ಪುಣ್ಯ ಸಂಚಯ ಮಾಡಿಸುತ್ತಿರುವ "ಶ್ಯಾವಿಗೆ ಒರಳು" ಇಷ್ಟೊತ್ತಿಗೆ ಮೈಮುರಿದು ಅಡುಗೆ ಮನೆಯಲ್ಲಿ ಪ್ರತ್ಯಕ್ಷ ಆಗಿರುತ್ತದೆ. ಸಾಮಾನ್ಯವಾಗಿ ಮನೆಯ ಅಟ್ಟದಲ್ಲೋ ಅಡುಗೆ ಮನೆಯ ನೇಪತ್ಯದಲ್ಲೋ ನಿಷ್ಕ್ರಿಯವಾಗಿರುವ ಒರಳು, ಶ್ಯಾವಿಗೆ ಒತ್ತಬೇಕಾದ ಅಪರೂಪದ ವಿಶೇಷ ದಿನಗಳಲ್ಲಿ ಮಾತ್ರ ಹೊರಬಂದು ಕತ್ತು ಗಿರಗಿರ ತಿರುಗಿಸುವ ಮೂರು ಕಾಲಿನ ವಿಚಿತ್ರ ಜಂತುವಾಗಿ ಜೀವ ತಳೆಯುತ್ತದೆ . ಒರಳಿನ ತಿರುಗಿಸುವ ಹಿಡಿಯ ಕೆಳಗಿನ ಭಾಗಕ್ಕೆ ತೆಂಗಿನ ಎಣ್ಣೆ ಸವರುವುದು ಪ್ರತಿ ಒತ್ತಿಗೂ ಮೇಲೆ ಕೆಳಗೆ ಹೋಗುವಾಗ ಆಗುವ ಘರ್ಷಣೆಯನ್ನು ತಗ್ಗಿಸುತ್ತದೆ, ಅಮೂಲ್ಯವಾದ ಒರಳಿನ ಆಯಸ್ಸನ್ನು ವರ್ಧಿಸುತ್ತದೆ ಎನ್ನುವುದನ್ನು ಅಡುಗೆಮನೆ ನಿರ್ವಹಿಸುವ ಅನುಭವದ ಯಾರೂ ಹೇಳಬಲ್ಲರು. ಹೀಗೆ ಒರಳುಯಂತ್ರದ ಪ್ರವೇಶ ಅಲಂಕಾರ ಆಗುತ್ತಿರುವಾಗ ಒಲೆಯ ಮೇಲೆ ಬೆಂದ ಹಿಟ್ಟಿನ ಉಂಡೆಗಳ ಬಿಸಿ ಆರದಂತೆ ಸಣ್ಣ ಬೆಂಕಿ ಮುಂದುವರಿಯುತ್ತಿರುತ್ತದೆ. ಇನ್ನು ಅಕ್ಕಿ ಕಾಯಿಯಗಳು ಅರೆದು ಬೆಂದ ಉಂಡೆಗಳು ಶ್ಯಾವಿಗೆಯ ಎಳೆಗಳಾಗಿ ಮಾರ್ಪಡುವ ದಿವ್ಯ ಘಳಿಗೆ ಸನ್ನಹಿತವಾದಾಗ ಆಯಾ ಮನೆಯ ಬಲಿಷ್ಠ ಒತ್ತುಗಾರರಿಗೆ ಒಂದು ಕೂಗು ಕರೆ ಹೋಗುತ್ತದೆ. ಒಬ್ಬರು ಶ್ಯಾವಿಗೆ ಒರಳಿನ ಒತ್ತು ಪಾತ್ರೆ ಹಿಡಿಯುವಷ್ಟು ಬೆಂದ ಹಿಟ್ಟಿನ ಉಂಡೆಯನ್ನು ಕುಳಿತು ತುಂಬಿಸಿದರೆ ಇನ್ನೊಬ್ಬರು ನಿಂತು, ಒರಳಿನ ಎರಡು ಕಾಲುಗಳನ್ನು ತಮ್ಮ ಪಾದಗಳಿಂದ ಅದುಮಿ ಹಿಡಿದು ಎರಡು ಕೈಯಲ್ಲಿ ಹ್ಯಾಂಡಲ್ ಬಾರ್ ತಿರುಗಿಸುತ್ತಾ ಶ್ಯಾವಿಗೆ ಒತ್ತುತ್ತಾರೆ. ಪ್ರತಿ ಸುತ್ತಿಗೂ ಅಷ್ಟಷ್ಟು ಶ್ಯಾವಿಗೆ ಎಳೆಯಾಗಿ ನೂಲಾಗಿ ಒರಳಿನ ಕೆಳಗಿರುವ ಅಚ್ಚಿನಿಂದ ಹೊರ ಬರುತ್ತದೆ, ಕುಳಿತವರು ಪ್ಲೇಟ್ ಅನ್ನು ಎಳೆಗಳು ಹೊರ ಬರುವ ಲಯಕ್ಕೆ ಹೊಂದಿಕೊಂಡು ತಿರುಗಿಸುತ್ತಾ ಸುರುಳಿಯಾಗಿ ಸುತ್ತಿಸಿ ಮುದ್ದೆಯನ್ನು ಹಿಡಿಯುತ್ತಾರೆ . ಶ್ಯಾವಿಗೆ ಮಾಡುವುದರಲ್ಲಿ ಪಳಗಿರುವ ಅಜ್ಜಿ ಅಮ್ಮ ಹೆಂಡತಿ ದೊಡ್ಡಮ್ಮ ಚಿಕ್ಕಮ್ಮ ಅತ್ತಿಗೆ ಹೆಂಡತಿಯಂತಹ ಮಹಾನ್ ಬಾಣಸಿಗರು ಬಿಸಿ ಹಿಟ್ಟಿನ ಮುದ್ದೆಯನ್ನು ಒರಳಿಗೆ ತುಂಬುವ ಮತ್ತೆ ಒತ್ತಿದಾಗ ಕೆಳಗೆ ಧಾರೆಯಾಗಿ ಇಳಿಯುವ ಶ್ಯಾವಿಗೆಯನ್ನು ಪ್ಲೇಟು ಹಿಡಿದು ಸುತ್ತಿಸಿ ಹದ್ದುಬಸ್ತಿನಲ್ಲಿಡುವ ಕೆಲಸ ಮಾಡಿದರೆ, ರಟ್ಟೆಯ ಬಲ ಹೆಚ್ಚಿರುವ ಗಂಡ ಮಗ ಅಳಿಯ ಮೊಮ್ಮಗರಂತವರು ಒರಳು ತಿರುಗಿಸುವ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾರೆ.ಕೆಲವು ಪ್ರದರ್ಶನಗಲ್ಲಿ ಈ ಪಾತ್ರಗಳು ಬದಲಾಗುವುದು ಒಬ್ಬರೇ ಎರಡು ಮೂರು ಪಾತ್ರ ಮಾಡಬೇಕಾದ ಅನಿವಾರ್ಯತೆ ಬರುವುದೂ ಇರುತ್ತದೆ. ಕಾರ್ಖಾನೆಯೊಂದರ ನಿರ್ಧರಿತ ನಿಯಮಿತ ಚಲನೆಗಳಂತೆ ಕುಕ್ಕರಿನಲ್ಲಿ ಹದ ಬಿಸಿಯಲ್ಲಿರುವ ಒಂದೊಂದೇ ಹಿಟ್ಟಿನ ಉಂಡೆಗಳು ಒರಳಿನ ತೂತು ಅಚ್ಚುಗಳ ಮೂಲಕ ಹಾದು ನೀಳ ನೂಲಿನ ಗುಚ್ಛದ ಸ್ವರೂಪವನ್ನು ಪಡೆದು ಪ್ಲೇಟಿನಲ್ಲಿ ಇಳಿದು ದೊಡ್ಡ ಪಾತ್ರಕ್ಕೆ ವರ್ಗಾವಣೆ ಆಗುತ್ತಿರುತ್ತವೆ. ಇಡೀ ಕುಟುಂಬ ಮನೆಯನ್ನು, ತಾನು ರೂಪ ಆಕಾರ ಪಡೆಯುವ ಪ್ರಸನ್ನ ಘಳಿಗೆಯಲ್ಲಿ ಅಡಿಗೆಮನೆಯ ಸೂರಿನ ಕೆಳಗೆ ಒಂದು ಮಾಡಿಸುವ ಸಾಮರ್ಥ್ಯ ಶ್ಯಾವಿಗೆ ಎನ್ನುವ ಅದ್ಭುತ ಪ್ರಕ್ರಿಯೆಗೆ ಇದೆ.
ಹೀಗೆ ತಯಾರಾದ ಶ್ಯಾವಿಗೆಯನ್ನು ಹೇಗೆ ತಿನ್ನಬೇಕು ಬಾರದು ಎನ್ನುವುದರ ಬಗ್ಗೆ ಅದರ ಪ್ರೇಮಿಗಳಲ್ಲಿ ಜಿಜ್ಞಾಸೆ ಇದೆ ಅವರೊಳಗೆ ಪಂಥ ಗುಂಪುಗಳೂ ಇವೆ .ಈ ಗುಂಪುಗಾರಿಕೆ ಒಡಕುಗಳು ಶ್ಯಾವಿಗೆ ಹುಟ್ಟಿತು ಎನ್ನಲಾದ ಕೆಲ ಸಾವಿರ ವರ್ಷಗಳ ಹಿಂದೆಯೂ ಇದ್ದವೋ ಇತ್ತೀಚಿಗೆ ಹುಟ್ಟಿಕೊಂಡದ್ದೋ ಆ ಶ್ಯಾವಿಗೆಯ ಎಳೆಗಳೇ ಹೇಳಬೇಕು. ಕೆಲವರು ಶ್ಯಾವಿಗೆ ಮುದ್ದೆಗೆ ತೆಂಗಿನೆ ಎಣ್ಣೆ ಕಲಸಿಕೊಂಡು ಉಪ್ಪಿನ ಕಾಯಿಯ ಜೊತೆ ತಿನ್ನುವ, ಅಲ್ಲವೇ ಕಾಯಿರಸ, ಸಾಂಬಾರ್ ಇನ್ನೇನೋ ಖಾರ ಪದಾರ್ಥದ ಜೊತೆ ಸೇವಿಸುವ ಖಡಕ್ ಮನುಷ್ಯರು. ಇನ್ನು ಕೆಲವರು ತುರಿದ ತೆಂಗಿನ ಕಾಯಿಯನ್ನು ಮಿಕ್ಸರ್ ಅಲ್ಲಿ ಅರೆದು ಹಿಂಡಿದ ಹಾಲಿಗೆ ಬೆಲ್ಲ ಸೇರಿಸಿ ತಯಾರಾದ ಕಾಯಿಹಾಲಿನ ಜೊತೆ ಮಾತ್ರ ಶ್ಯಾವಿಗೆಯನ್ನು ಸವಿಯ ಬಲ್ಲ ಸಂಕುಲದವರು. ತಿನ್ನುವ ಹೊತ್ತಿನಲ್ಲಿ ನಮ್ಮೊಳಗೇ ಭಿನ್ನಾಭಿಪ್ರಾಯ ಎಷ್ಟೇ ಇದ್ದರೂ ಶ್ಯಾವಿಗೆಯ ಕುರಿತಾದ ಅಭಿಮಾನ ಒತ್ತಾಯ ಪ್ರೀತಿಯ ವಿಷಯದಲ್ಲಿ ಎಲ್ಲರೂ ಸಂಘಟಿತರು.
ಮರವಂತೆಯ ನನ್ನ ಬಾಲ್ಯದ ಬೇಸಿಗೆ ರಜೆಯಯಲ್ಲಿ ಮಂಗಳೂರು ಚಿಕ್ಕಮ್ಮನ ಮನೆಗೆ ಹೋಗಿದ್ದಾಗ, ಅಲ್ಲಿ ವಾಸಿಸುತ್ತಿದ್ದ ಅಮ್ಮಮ್ಮನಿಗೂ ನನಗೂ ಒಂದು ಪಂಥ ಬಿದ್ದ್ದಿತ್ತು. ಒಂದೋ ಆಕೆ ನಿತ್ಯವೂ ಶ್ಯಾವಿಗೆ ಮಾಡಿ ದಣಿದು ನಿಲ್ಲಿಸಬೇಕು, ಇಲ್ಲದಿದ್ದರೆ ನಾನು ದಿನಾ ತಿಂದು ತಿಂದು ಸಾಕೆನ್ನಬೇಕು. ಈ ಪಂಥದ ಪ್ರಕಾರ ಪ್ರತಿ ದಿನ ಬೆಳಿಗ್ಗೆ ಅಮ್ಮಮ್ಮನಿಂದ ಹೊಚ್ಚ ಹೊಸ ಶ್ಯಾವಿಗೆ ತಯಾರಿ ಮತ್ತೆ ನಿತ್ಯವೂ ನಾನು ತಿನ್ನುವುದು ನಡೆಯಿತು. ಒಂದು ವಾರದ ಪರಿಯಂತ ನಿತ್ಯ ನಡೆದ ಈ ಹಿತಸ್ಪರ್ಧೆಯಲ್ಲಿ ಸೋಲು ಗೆಲುವುಗಳ ನಿರ್ಧಾರ ಆಗದೇ , ಲೋಕಹಿತಕ್ಕಾಗಿ ನಾವಿಬ್ಬರೂ ಹೊಂದಾಣಿಕೆ ಒಪ್ಪಂದ ಮಾಡಿಕೊಂಡು ಪಂಥವನ್ನು ಕೈಬಿಟ್ಟಿದ್ದೆವು. ಶ್ಯಾವಿಗೆಯ ಸುದೀರ್ಘ ಇತಿಹಾಸದಲ್ಲಿ ದಾಖಲಾದ ಅವಿಸ್ಮರಣೀಯ ಜಿದ್ದು ಇದಾಗಿದ್ದಿರಬಹುದು. ಇಂದಿಗೂ ಶ್ಯಾವಿಗೆ -ಕಾಯಿ ಹಾಲುಗಳ ಜೋಡಿಯನ್ನು ಮೀರಿದ ಸುಖ ರಸಸೃಷ್ಟಿ ಇನ್ನೊಂದಿಲ್ಲ ಎಂದು ನಂಬುವ ಕೆಲವರಲ್ಲಿಯಾದರೂ ನಾನೊಬ್ಬ. ಶ್ಯಾವಿಗೆಯನ್ನು ಇನ್ನೊಂದು ಆಹಾರ ಎಂತಲೋ ವಿಶೇಷ ತಿಂಡಿ ಎಂದೋ ಹಲವರು ಕರೆಯಬಹುದಾದರೂ ನನ್ನ ಮಟ್ಟಿಗೆ ಶ್ಯಾವಿಗೆ ಯಾವಾಗಲೂ ಹಬ್ಬ; ಮತ್ತೆ ಇವತ್ತು ಮನೆಯಲ್ಲಿ ಶ್ಯಾವಿಗೆ.
ಅಮರಪ್ರೇಮ (ಕತೆ): ಕೇಶವ ಕುಲಕರ್ಣಿ (ಕೊನೆಯ ಕಂತು)
ಮೊದಲ ಕಂತನ್ನು ಇನ್ನೂ ಓದಿಲ್ಲದಿದ್ದರೆ, ಓದಲು ಇಲ್ಲಿ ಒತ್ತಿ
ಎರಡನೆಯ ಕಂತನ್ನು ಇನ್ನೂ ಓದಿಲ್ಲದಿದ್ದರೆ, ಓದಲು ಇಲ್ಲಿ ಒತ್ತಿ
ಅಮರನಿಗೆ ಪ್ರೇಮಾಳನ್ನು ನೋಡುವ ಅದಮ್ಯ ಹಂಬಲ ಪರಾಕಾಷ್ಠೆಗೆ ತಲುಪಿದ್ದು, ೨೦ನೇ ವರ್ಷದ ಪುನರ್ಮಿಲನದ ಕಾರ್ಯಕ್ರಮದ ಸಲುವಾಗಿ, ಪುಣೆಯಿಂದ ಬೆಂಗಳೂರಿಗೆ ರೈಲಿನಲ್ಲಿ, ಬೆಂಗಳೂರಿನಿಂದ ಮೈಸೂರಿಗೆ ಬಸ್ಸಿನಲ್ಲಿ ಪಯಣಿಸಿ, ಬಸ್ ನಿಲ್ದಾಣದಿಂದ ಹೊಟೇಲಿಗೆ ಆಟೋದಲ್ಲಿ ಬಂದಿಳಿದ ಆ ಒಂದು ದಿನದ ಸುದೀರ್ಘ ಪಯಣದಲ್ಲಿ.
ಪ್ರೇಮಾ ಬರುತ್ತಾಳೆ, ಬರುವುದಿಲ್ಲ ಎನ್ನುವ ಚಡಪಡಿಕೆ; ಜೊತೆಗೆ ಅವಳ ಗಂಡನೂ ಬರಬಹುದು, ಬರಲಿಕ್ಕಿಲ್ಲ ಎನ್ನುವ ಗೊಂದಲ. ಗಂಡ ಬರದಿದ್ದರೆ ಒಳ್ಳೆಯದು, ಅವಳ ಜೊತೆ ಕೂತು ನಾಕು ಮಾತಾದರೂ ಆಡಲು ಸಮಯ ಸಿಕ್ಕಬಹುದು ಎಂಬ ಹಂಬಲ. ಆದರೆ ಅಮೇರಿಕದಲ್ಲಿ ಈಗ ರಜೆಯ ಸಮಯವಲ್ಲವೇ, ಅವಳು ಕುಟುಂಬ ಸಮೇತ ಬಂದೇ ಬರುತ್ತಾಳೆ ಎನ್ನುವ ತರ್ಕ. ಅವಳಿಗೆ ಬಹುಷಃ ಇಬ್ಬರು ಮಕ್ಕಳಿರಬಹುದು. ತನ್ನ ಮಗಳಿಗಿಂತ ದೊಡ್ಡ ಮಕ್ಕಳಿರುತ್ತಾರೆ, ಏಕೆಂದರೆ ಅವಳಿಗೆ ತನಗಿಂತ ಮೊದಲು ಮದುವೆ ಆಯಿತಲ್ಲವೇ? ಸ್ವಲ್ಪ ದಪ್ಪಗಾಗಿರಬಹುದು, ಇಲ್ಲ, ಅಮೇರಿಕದಲ್ಲಿರುವವರಿಗೆ ದೇಹದ ಬಗ್ಗೆ ತುಂಬ ಕಾಳಜಿಯಂತೆ, ಮೊದಲಿಗಿಂತ ಸಪೂರವಾಗಿರಬಹುದು ಎಂದೆಲ್ಲ ಪ್ರಯಾಣದ ತುಂಬ ಯೋಚಿಸಿದ.
ಪ್ರೇಮಾ ಎದುರಾದಾಗ ಯಾವ ಮಾತಿನಿಂದ ಶುರು ಮಾಡುವುದು, ಯಾವ ಯಾವ ಹಳೆಯ ವಿಷಯಗಳ ಬಗ್ಗೆ ಮಾತಾಡುವುದು ಎಂದು ಮನದಲ್ಲೇ ಪಟ್ಟಿ ಮಾಡಿಕೊಂಡ. ಕಾಲೇಜಿನಲ್ಲಿರುವಾಗ ಇದ್ದ ತನ್ನ ದಟ್ಟ ಕಪ್ಪು ಕೂದಲು ಬಹಳಷ್ಟು ಮಾಯವಾಗಿ ಉಳಿದ ಅರೆಬಕ್ಕ ತಲೆಯ ಬಗ್ಗೆ ಕಸಿವಿಸಿಯಾಯಿತು. ನಿಯಮಿತವಾಗಿ ವ್ಯಾಯಾಮ ಮಾಡಿದ್ದರೆ ಇಷ್ಟು ಹೊಟ್ಟೆ ಬರುತ್ತಿರಲಿಲ್ಲ ಎಂದು ಮೊಟ್ಟಮೊದಲ ಬಾರಿಗೆ ತನ್ನ ಹೊಟ್ಟೆಯ ಬಗ್ಗೆ ಬೇಸರ ಮೂಡಿತು.
ಅವಳಿಗೆ ತನ್ನ ಹೆಂಡತಿಯನ್ನು ಹೇಗೆ ಪರಿಚಯಿಸುವುದು, ಅದಕ್ಕಿಂತ ಹೆಚ್ಚಾಗಿ ತನ್ನ ಮಗಳ ಹೆಸರು ಕೂಡ `ಪ್ರೇಮಾ` ಎಂದು ಹೇಗೆ ಹೇಳುವುದು ಎನ್ನುವ ಪ್ರಶ್ನೆಗಳಿಗೆ ಇಡೀ ಪ್ರಯಾಣದಲ್ಲಿ ಉತ್ತರಗಳೇ ಸಿಗಲಿಲ್ಲ. ಹಲವಾರು ಸನ್ನಿವೇಷಗಳನ್ನು ತಾನೇ ಸೃಷ್ಟಿಸಿಕೊಂಡು ಅದನ್ನು ಹೇಗೆ ನಿಭಾಯಿಸುವುಸುದು ಎಂದು ಪ್ರಯಾಣದ ಪೂರ್ತಿ ನಾನಾ ರೀತಿಯ ಲೆಖ್ಖಾಚಾರ ಹಾಕುತ್ತಲೇ ಇದ್ದ. ಹೆಂಡತಿ ಮತ್ತು ತಾಯಿಯ ಮಾತನ್ನು ಕೇಳಿ ಮಗಳಿಗೆ `ಪ್ರೇಮಾ` ಎನ್ನುವ ಹೆಸರನ್ನು ಯಾವ ಕಾರಣಕ್ಕೂ ಇಡಲು ಬಿಡಬಾರದಿತ್ತು ಎಂದು ತನ್ನನ್ನೇ ಬಯ್ದುಕೊಂಡ. ಏನಾದರೂ ಕಾರಣ ಹೇಳಿ ಹೆಂಡತಿ ಮಗಳನ್ನು ಕರೆತರಬಾರದಿತ್ತು ಎಂದುಕೊಂಡ. ಹೊಟೇಲು ತಲುಪಿದರೂ ತನ್ನ ಸಮಸ್ಯೆಗೆ ಯಾವ ಸಮಂಜಸ ಉತ್ತರವೂ ದೊರಕದೇ, ಹೇಗೆ ಆಗುತ್ತೋ ಹಾಗೆ ಆಗಲಿ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡ.
ಮೊದಲೇ ಬುಕ್ ಮಾಡಿರುವ ಹೋಟೀಲು ತಲುಪಿದಾಗ ಆಗಲೇ ಸಂಜೆ ಆಗಿತ್ತು. ಎಲ್ಲ ಕ್ಲಾಸ್ಮೇಟುಗಳೂ ಆಗಲೇ ಮುಖ್ಯ ಸಭಾಂಗಣಕ್ಕೆ ಹೋಗಿಯಾಗಿತ್ತು. ಹಾಗಾಗಿ ಅಮರನಿಗೆ ಯಾವ ಗೆಳೆಯರೂ ಸಿಗಲಿಲ್ಲ.
ರೂಮಿಗೆ ಬಂದವರೇ ಸ್ನಾನ ಮಾಡಿ, `ಪುನರ್ಮಿಲನ`ಕ್ಕಾಗಿಯೇ ಖರೀದಿಸಿದ ಹೊಸ ಬಟ್ಟೆಗಳನ್ನು ಮೂವರೂ ಹಾಕಿಕೊಂಡರು. ಉಷಾ ಮದುವೆಯ ಮನೆಗೆ ಹೋಗುವವಳಂತೆ ಶೃಂಗಾರ ಮಾಡಿಕೊಂಡು ನಳನಳಿಸುತ್ತಿದ್ದಳು. ಎಂದೂ ಅಷ್ಟಾಗಿ ಹೊಗಳದ ಅಮರ `ಚೆನ್ನಾಗಿ ಕಾಣುತ್ತಿದ್ದೀಯಾ,` ಎಂದು ಹೆಂಡತಿಯನ್ನು ಹೊಗಳಿದ. ಮಗಳೂ ಚೆನ್ನಾಗಿ ಡ್ರೆಸ್ ಮಾಡಿದ್ದಳು, `ಸೋ ಕ್ಯೂಟ್,` ಎಂದು ಮಗಳ ಕೆನ್ನೆಗೆ ಮುತ್ತನಿಟ್ಟ. `ಏನು ಯಜಮಾನರು, ಇವತ್ತು ಭಾರೀ ಮೂಡಿನಲ್ಲಿ ಇರುವಂತಿದೆ!` ಎಂದು ಉಷಾ ತಮಾಷೆ ಮಾಡಿದಳು. ಮಗಳ ಮುಂದೆಯೇ ಹೆಂಡತಿಯ ಕೆನ್ನೆಗೂ ಒಂದು ಮುತ್ತನಿತ್ತ. ಮಗಳು ಖುಷಿಯಲ್ಲಿ ನಕ್ಕಳು. ಲಿಫ್ಟಿನಿಂದ ಇಳಿದು `ಪುನರ್ಮಿಲನ` ನಡೆಯುತ್ತಿರುವ ಹೊಟೀಲಿನ ಸಭಾಂಗಣದತ್ತ ಹೊರಡಲು ಹೊಟೇಲಿನ ಲಾಬಿಗೆ ಬಂದರು.
ಹೆಂಡತಿ ಮಗಳನ್ನು ಹೊಟೇಲ್ ಲಾಬಿಯಲ್ಲಿ ಕೂರಲು ಹೇಳಿ, ಸಭಾಂಗಣ ಎಲ್ಲಿದೆ ಎಂದು ರೆಸೆಪ್ಷೆನ್ನಿನಲ್ಲಿ ಕೇಳಿಕೊಂಡು ಬರುತ್ತೇನೆ ಎಂದು ಅಮರ ರಿಸೆಪ್ಷನ್ನಿಗೆ ಬಂದು, ಅಲ್ಲಿರುವ ಹುಡುಗನಿಗೆ ಕೇಳಿದ.
ಅಷ್ಟರಲ್ಲಿ ಹಿಂದಿನಿಂದ ಯಾರೋ ಬಂದು ಅವನ ಕಣ್ಣು ಮುಚ್ಚಿದರು. ಯಾರು ಎಂದು ಅಮರನಿಗೆ ಗೊತ್ತಾಗದಿದ್ದರೂ ಬಳೆಗಳ ಸದ್ದು ಮತ್ತು ಪರ್ಫ್ಯೂಮಿನ ವಾಸನೆಯಿಂದ ಹೆಣ್ಣು ಎನ್ನುವುದಂತೂ ಗೊತ್ತಾಯಿತು. ಬಂದಿದ್ದು ರಿ-ಯುನಿಯನ್ನಿಗೆ ತಾನೆ, ತನಗೆ ಪ್ರೇಮಾಳನ್ನು ಬಿಟ್ಟರೆ ಇನ್ಯಾರೂ ಸನಿಹದ ಗೆಳತಿಯರಿರಲಿಲ್ಲ. ಕಾಲೇಜಿನಲ್ಲಿ ಇರುವಾಗ ಒಂದೇ ಒಂದು ದಿನವೂ ಸಲಿಗೆಯಿಂದ ಭುಜವನ್ನೂ ತಟ್ಟಿರದ ಹುಡುಗಿ, ಈಗ ಹಿಂದಿನಿಂದ ಬಂದು ಕಣ್ಣು ಮುಚ್ಚುವುದೆಂದರೆ! ಅವಳು ಪ್ರೇಮಾ ಅಲ್ಲದಿದ್ದರೆ ಅಥವಾ ತನ್ನನ್ನು ಇನ್ನಾರೋ ಎಂದು ಅಂದುಕೊಂಡು ಬೇರೆ ಯಾರೋ ಕ್ಲಾಸ್ಮೇಟ್ ಹುಡುಗಿ ತನ್ನ ಕಣ್ಣು ಮುಚ್ಚಿದ್ದರೆ ಎಂದು ಅಂದುಕೊಂಡು, `ಯಾರು? ಹು ಈಸ್ ಇಟ್?` ಎಂದ.
ಅತ್ತ ಕಡೆಯಿಂದ ಯಾವ ಉತ್ತರವೂ ಬರಲಿಲ್ಲ. ಅಮರನ ಕಣ್ಣಿನ ಮೇಲಿನ ಬಿಗಿತ ಹೆಚ್ಚಾಯಿತು. ಅಮರನಿಗೆ ಬೇರೆ ದಾರಿಯೇ ಇರಲಿಲ್ಲ, `ಪ್ರೇಮಾ!` ಎಂದ. ಕಣ್ಣು ಕಟ್ಟಿದ್ದ ಕೈ ಸಡಿಲಿತು. ತಿರುಗಿ ನೋಡಿದರೆ, ಸಾಕ್ಷಾತ್ ಪ್ರೇಮಾ ಸಕಲ ಶೃಂಗಾರದೊಂದಿಗೆ ಸೀರೆಯುಟ್ಟು ಮುಖದಲ್ಲಿ ಮಿಲಿಯನ್ ವ್ಯಾಟ್ ಬೆಳಕು ಸೂಸಿ ನಗುತ್ತಿದ್ದಳು.
`ನನ್ನನ್ನು ಮರೆತೇ ಬಿಟ್ಟಿದ್ದೀಯೇನೋ ಅಂದುಕೊಂಡಿದ್ದೆ, ಪರವಾಗಿಲ್ಲ, ಇನ್ನೂ ನನ್ನ ನೆನಪಿದೆಯಲ್ಲ,` ಎಂದು ಪಾಶ್ಯಾತ್ಯ ದೇಶದಲ್ಲಿ ಭೇಟಿಯಾದಾಗ ಮಾಡುವಂತೆ ಅಮರನನ್ನು ತಬ್ಬಿಕೊಂಡು ಕೆನ್ನೆಯ ಹತ್ತಿರ ಕೆನ್ನೆ ತಂದು ಹಿಂದೆ ಸರಿದಳು. ಅವಳ ತಾಕಿಯೂ ತಾಕದ ದೇಹ, ಕೆನ್ನೆ ಮತ್ತು ಕೇಶರಾಶಿಗೆ ಒಂದು ಕ್ಷಣ ಅಮರ ಮೈಮರೆತ; ಅವಳ ಮೈಗಂಧ ಮೂಗಿನಿಂದ ಹೊರಬಿಡುವ ಮನಸ್ಸಿಲ್ಲದೇ ಉಸಿರು ಹಿಡಿದೇ ನಿಂತ. ಕಾಲೇಜಿನಲ್ಲಿ ಒಟ್ಟಿಗಿದ್ದ ಐದೂವರೆ ವರ್ಷದಲ್ಲಿ ಒಂದೇ ಒಂದು ಸಲವೂ ಇಷ್ಟು ಸನಿಹ ಅವಳ ಹತ್ತಿರ ಬಂದಿರಲಿಲ್ಲ.
ಲಾಬಿಯಲ್ಲಿ ಮಗಳ ಜೊತೆ ಏನೋ ಮಾತಾಡುತ್ತ ಕುಳಿತ ಉಷಾ ಇದನ್ನು ಗಮನಿಸದೇ ಇರಲಿಲ್ಲ.
`ಹೇಗಿದ್ದೀಯಾ? ಯಾವಾಗ ಬಂದೆ? ನೀನು ಬರುತ್ತೀಯೋ ಇಲ್ಲವೋ ಅಂದುಕೊಂಡಿದ್ದೆ,` ಎಂದ.
`ನಾನು ಅಷ್ಟೇ. ನೀನಂತೂ ಯಾರ ಜೊತೆನಲ್ಲೂ ಸಂಪರ್ಕದಲ್ಲಿಲ್ಲ, ನೀನು ಬರುವುದಿಲ್ಲ ಎಂದೇ ತುಂಬ ಜನ ಹೇಳಿದ್ದರು. ಇನ್ ಫ್ಯಾಕ್ಟ್, ನಿನ್ನನ್ನು ನೋಡಿ ನನಗೆ ಆಶ್ಯರ್ಯವೇ ಆಯಿತು. ಏನೋ ಎಷ್ಟು ವರ್ಷವಾಯಿತೋ? ಎಷ್ಟೊಂದು ಮಾತಾಡಲು ಇದೆಯೋ?` ಎಂದಳು.
`ನೀನೊಬ್ಬಳೇ ಬಂದಿರುವೆಯೋ, ಇಲ್ಲಾ ಎಲ್ಲರೂ ಬಂದ್ದಿದ್ದೀರೋ?` ಎಂದು ಕೇಳಿದ.
`ಎಲ್ಲಾ ಬಂದ್ದಿದ್ದೇವೆ, ನೀನು?` ಎಂದಳು.
ಅದೇ ಸಮಯಕ್ಕೆ ಅವರತ್ತಲೇ ನಡೆದುಕೊಂಡು ಬರುತ್ತಿದ್ದ ಗಂಡಸು ಮತ್ತು ಹುಡುಗನನ್ನು.
`ಇವನು ನನ್ನ ಗಂಡ ರಾಜ್ ಮತ್ತು ಒಬ್ಬನೇ ಮಗ` ಎಂದು ಪರಿಚಯಿಸಿ, ಗಂಡನಿಗೆ, `ಇವನು ನನ್ನ ಕ್ಲಾಸ್ಮೇಟ್` ಎಂದು ಪರಸ್ಪರ ಪರಿಚಯ ಮಾಡಿದಳು.
ಅಮರ ಕೈಕುಲುಕಿ, `ಹಾಯ್, ನಾನು ಅಮರ ಚರಂತಿಮಠ, ನೈಸ್ ಮೀಟಿಂಗ್ ಯು, ರಾಜಶೇಖರ ಕೃಷ್ಣೇಗೌಡ,` ಎಂದ. ಅಮರನಿಗೆ ತನ್ನ ಗಂಡನ ಪೂರ್ತಿ ಹೆಸರು ನನಪಿರುವುದನ್ನು ಕೇಳಿ ಪ್ರೇಮಾ ಹುಬ್ಬೇರಿಸಿ ಅಮರನತ್ತ ನೋಡಿದಳು.
ರಾಜಶೇಖರ ಅವಕ್ಕಾಗಿ ಒಂದು ಕ್ಷಣ ಗಲಿಬಿಲಿಗೊಂಡಂತೆ ಕಂಡ, ತಕ್ಷಣವೇ ಸಾವರಿಸಿಕೊಂಡು, `ಹಾಯ್, ನೈಸ್ ಮೀಟಿಂಗ್ ಯು, ಅಮರ್` ಎಂದ. ಅಮರ ಅದನ್ನು ಗಮನಿಸದೇ ಇರಲಿಲ್ಲ.
ಲಾಬಿಯಲ್ಲಿ ಕೂತ ಉಷಾ ಈಗ ಮೈಯೆಲ್ಲ ಕಣ್ಣಾಗಿ ರಿಸೆಪ್ಷನ್ನಿನಲ್ಲಿ ನಡೆಯುತ್ತಿರುವುದನ್ನೆಲ್ಲ ನೋಡುತ್ತಿದ್ದಳು; ತನಗಿಂತ ವಯಸ್ಸಾದ ಹೆಂಗಸೊಂದು ಸಕಲ ಅಲಂಕಾರ ಭೂಷಿತೆಯಾಗಿ ಚಿಕ್ಕ ಹುಡುಗಿಯಂತೆ ಹಿಂದಿನಿಂದ ತನ್ನ ಗಂಡನ ಕಣ್ಣು ಮುಚ್ಚುವುದು, ಇಬ್ಬರೂ ತಬ್ಬಿಕೊಳ್ಳುವುದು, ಕಿಲಕಿಲ ನಗುವುದನ್ನು ನೋಡುತ್ತಲೇ ಇದ್ದಳು. ಅಮರ ಉಷಾಳನ್ನು ಕರೆದ. ಉಷಾ ಗಂಟು ಮುಖ ಹಾಕಿಕೊಂಡು ಮಗಳನ್ನು ಕರೆದುಕೊಂಡು ರಿಸೆಪ್ಷೆನ್ನಿಗೆ ಬಂದಳು.
ಪ್ರೇಮಾಳಿಗೆ ತನ್ನ ಹೆಂಡತಿಯ ಪರಿಚಯ ಮಾಡಿಸಿದ, `ಇವಳು ನನ್ನ ಹೆಂಡತಿ, ಉಷಾ, ಮತ್ತು ಮಗಳು ಪ್ರೇಮಾ,` ಎಂದ. ಪ್ರೇಮಾಳ ಮುಖದಲ್ಲಿ ಒಂದು ತೆಳುವಾದ ನಗು ಮೂಡಿ, ಅಮರನತ್ತ ಓರೆನೋಟ ಬೀರಿ, ಉಷಾಳ ಕೈ ಕುಲುಕಿದಳು. ಉಷಾ ಕೂಡ ಕೈಕುಲುಕಿ (ಕೃತಕವಾಗಿ) ಮುಗುಳ್ನಕ್ಕಳು. ಅವಳ ಆತ್ಮವಿಶ್ವಾಸ, ಚೆಲುವು, ನಿಲುವು, ಶೃಂಗಾರಗಳನ್ನು ನೋಡಿ ಈರ್ಷೆಯಾದರೂ ತೋರಿಸಿಕೊಳ್ಳಲಿಲ್ಲ.
ಅಮರ ಹೆಂಡತಿಯತ್ತ ತಿರುಗಿ, `ಇವರು ರಾಜಶೇಖರ ಕೃಷ್ಣೇಗೌಡ, ಅಮೇರಿಕದಲ್ಲಿ ಡಾಕ್ಟರು, ಇವಳು ಅವರ ಹೆಂಡತಿ, ನನ್ನ ಕ್ಲಾಸ್-ಮೇಟ್,` ಎಂದ.
ಪ್ರೇಮಾ ಕೈ ಚಾಚಿ ಉಷಾಳ ಕೈ ಕುಲುಕಿ ಹತ್ತಿರ ಬಂದು ತಬ್ಬಿಕೊಂಡು, ‘ನಾನು ಪ್ರೇಮಾ,’ ಎಂದಳು.
ಇಬ್ಬರು `ಪ್ರೇಮಾ`ರ ನಡುವೆ ನಿಂತ ಉಷಾಳ ಮುಖದ ಬಣ್ಣವೇ ಬದಲಾಯಿತು. ಒಂದು ಕ್ಷಣ ತನ್ನ ಮಗಳು ‘ಪ್ರೇಮಾ’ನ್ನೂ ಇನ್ನೊಂದು ಕ್ಷಣ ಅಮರನ ಕ್ಲಾಸ್ಮೇಟ್ ‘ಪ್ರೇಮಾ’ಳನ್ನೂ ನೋಡಿದಳು.
ನಂತರ ಏನು ಮಾಡುವುದೆಂದು ತೋಚದೇ, ತನಗಾದ ಆಘಾತವನ್ನು ಮುಚ್ಚಿಕೊಳ್ಳಲು ಕಣ್ಣು ತಿರುಗಿಸಿದಾಗ, ಅವಳ ದೃಷ್ಟಿ ಅಪ್ಪನ ಕೈಹಿಡಿದು ನಿಂತಿದ್ದ ಪ್ರೇಮಾಳ ಮಗನ ಮೇಲೆ ಬಿತ್ತು. ತನ್ನನ್ನು ಸ್ಥಿಮಿತಕ್ಕೆ ತಂದುಕೊಳ್ಳಲು, ಒಣಗಿಹೋದ ತುಟಿಯಲ್ಲೇ ಹುಡುಗನ ಕೆನ್ನೆ ಸವರಿ `ಎಷ್ಟು ಕ್ಯೂಟಾಗಿದ್ದಾನೆ ನಿಮ್ಮ ಮಗ‘, ಎಂದು, ‘ಏನು ಮರಿ ನಿನ್ನ ಹೆಸರು?` ಎಂದು ಕೇಳಿದಳು.
ಅನಿವಾಸಿ ಸತತವಾಗಿ ಇಂದು ತನ್ನ ಐನೂರನೇ ಸಂಚಿಕೆಯನ್ನು ಪ್ರಕಟಿಸುತ್ತಿದೆ. ನಮ್ಮೆಲ್ಲರಿಗೂ ಇದು ಹೆಮ್ಮೆಯ, ಸಂತೋಷದ ವಿಷಯ. ಈ ಸಾಧನೆಯ ಹಿಂದೆ ಅನಿವಾಸಿ ಸದಸ್ಯರ ಅವಿರತ ಶ್ರಮವಿದೆ, ಕಣ್ಣೀರಿದೆ, ಕಕ್ಕುಲತೆಯಿದೆ, ಕನ್ನಡ ನಾಡಿನ – ಭಾಷೆಯ ಮೇಲಿನ ಅಪಾರ ಪ್ರೇಮವಿದೆ.
ತಾಯ್ನಾಡಿನ ಕೊಂಡಿಯನ್ನು ಪ್ರತಿನಿಧಿಸುತ್ತಿರುವವರು ಅತಿಥಿ ಕವಿ ಡಾ. ವಿ.ಕೆ. ಭಗವತಿ. ವಿಕೆಬಿ, ವೃತ್ತಿಯಲ್ಲಿ ವೈದ್ಯರು. ಈಗಿನ ಗದಗ ಜಿಲ್ಲೆಯಲ್ಲಿರುವ ರೋಣ ತಾಲೂಕಿನ ಲಕ್ಕಲಕಟ್ಟಿಯಲ್ಲಿ ಹುಟ್ಟಿ, ಹುಬ್ಬಳ್ಳಿಯ ಕೆ ಎಂ ಸಿ ಯಲ್ಲಿ ಸ್ನಾತಕ, ಸ್ನಾತಕೋತ್ತರ ಪದವಿ ಪಡೆದು, ಹಾವೇರಿಯಲ್ಲಿ ವೃತ್ತಿ ನಿರತರಾಗಿದ್ದರು. ಮೊದಲಿನಿಂದಲೂ ಸಾಹಿತ್ಯ, ನಾಟಕ, ಸಂಗೀತ ಹಾಗು ಸುತ್ತುವ ಹವ್ಯಾಸವಿರುವ ವಿಕೆಬಿ, ಕನ್ನಡ ಹಾಗೂ ಉರ್ದುಗಳಲ್ಲಿ ಕವನ, ಗಝಲ್ ಗಳನ್ನ ರಚಿಸಿದ್ದಾರೆ. ವೃತ್ತಿಯಿಂದ ನಿವೃತ್ತರಾದಮೇಲೆ, ದೇಶ ವಿದೇಶಗಳ ಪ್ರವಾಸ ಮುಗಿಸಿ, ಶಿರಸಿಯ ಹತ್ತಿರದ ಹಳ್ಳಿಯೊಂದರಲ್ಲಿ ಕೃಷಿಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ಜೀವನದ ಎರಡನೇ ಇನ್ನಿಂಗ್ಸ್ ಆಡುತ್ತಿದ್ದಾರೆ. ರೈತ ಮನೆತನದಲ್ಲಿ ಹುಟ್ಟಿದ ವಿಕೆಬಿ ಅವರ ಕವನಗಳಲ್ಲಿ ಮಣ್ಣಿನ ಸಾಮೀಪ್ಯತೆಯ ಅರಿವಾಗುತ್ತದೆ. ಅವರ ವಿಭಿನ್ನ ರೀತಿಯ ಪದಗಳ ಬಳಕೆ; ಗಝಲ್ ಶೈಲಿ ನಿಮ್ಮ ಗಮನಕ್ಕೆ ಬರಬಹುದು ಈ ಮೂರು ಕವನಗಳಲ್ಲಿ.
ಐನೂರನೇ ಸಂಚಿಕೆಯ ಇಂಗ್ಲೆಂಡಿನ ಪ್ರತಿನಿಧಿಯಾಗಿ ಎರಡನೇ ಭಾಗದಲ್ಲಿ ಓದುಗರು ಕಾತುರದಿಂದ ಕಾದಿರುವ ಕೇಶವ್ ಬರೆದಿರುವ ‘ಅಮರ ಪ್ರೇಮ’ ಕಥೆಯ ಮುಂದಿನ ಕಂತಿದೆ. ಅಮರನ ‘ಪ್ರೇಮ’ ಸಿಕ್ಕಳೇ? ಆತನ ಪ್ರೇಮ ಗಗನ ಕುಸುಮವಾಗಿಯೇ ಉಳಿಯಿತೇ? ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಕ್ಕೀತೇ ಯಾ ಕೇಶವ್ ಇನ್ನೂ ನಿಮ್ಮನ್ನು ಕೌತುಕದ ಸುಳಿಯಲ್ಲಿ ಸಿಕ್ಕಿಸಿ ಒದ್ದಾಡಿಸುವರೇ? – ರಾಂ
ವಿ ಕೆ ಭಗವತಿಯವರ ಮೂರು ಕವನಗಳು
ಜೀವನ
ಬಿತ್ತಲು ಬೇಕಾದ ಮಣ್ಣು ಕತ್ತಲು
ನನ್ನಲಿ ಕೈತುಂಬಾ ಕಾಳು ಬಿತ್ತಲು
ಆಸೆ ಅಂಜಿಕೆ ಬಿಟ್ಟರೆ ನೀ ಬೆತ್ತಲು
ವಿಜಯಕೇ ಬೇಕಾದ ಮೆಟ್ಟಲು ಹತ್ತಲು
ದಾಟದೇ ಹಾಯಾದ ಗೆರೆಗಳ ಸುತ್ತಲು
ಬುಗ್ಗೆಯೇ ಬೇಕೇನು ಬದುಕಿನ ಬಟ್ಟಲು
ಅಂಕೆ ಸಂಖೆಯ ಆಟದೆ ನಿನ ಎತ್ತಲು
ಸಂಜೆಯಾಯಿತು ಕಣ್ಣ ಮುಚ್ಚಲು ಕತ್ತಲು
ಮದುವೆ
ನಿನ್ನ ಬಳುಕು ಮೈ ಮೋಹನವಾದರೆ
ಮುರಳಿಯಾಗದಿರುವುದೇ ನನ್ನ ಮನ
ಕೊಳವಿದೆ ಅಲ್ಲಿ ನನ್ನ ಅಂಗಳದಲ್ಲಿ
ಅದರೊಳಗೆ ಮುಳುಗಿ ಮಿಂದು ಬಾ
ಬಿಗುಮಾನಗಳ ಕಳೆದು, ತೊಳೆದು
ಗಂಟು ಗುಣಿಕೆಗಳ ಸಡಿಲಿಸಿ ಬಾ
ದಿಂಡೆ ಬಾಳೆಯಂತಾದರೆ ನಿನ್ನ ಕಾಲಿಗೆ
ನೂರಡಿಯಾಗದೇನು ನನ್ನ ಜೊಲ್ಲು ನಾಲಿಗೆ
ಕೈಗೆ ಕೈಯಿಟ್ಟು, ಬಾಯಿಗೆ ಮುತ್ತಿಟ್ಟರೆ ನೀನು
ನಾಳೆ ನಾಳೆಗಳಿಗೆ ತೊತ್ತಿಡುವೆ ನಾನು
ಮೋಹನವಲ್ಲದ ಮೈ, ದಿಂಡಲ್ಲದ ಕಾಲ್ಗಳಿದ್ದರೆ
ಹಸಿರಾಗು ನೀ ಹೆಮ್ಮರವಾಗಿ
ಮುರಳಿಯಾಗದ ನನ್ನ ಮನ
ಟೊಂಗೆ ಟೊಂಗೆ ಜಿಗಿಯುವುದು ಮರ್ಕಟವಾಗಿ
ಪಯಣ
ಪಯಣದ ರೀತಿ ನೀತಿ ಸರಳ ಶುದ್ಧ ದಾರಿಯಾಗಿದೆ
ಇನ್ನೂ ಸ್ವಲ್ಪ ಕ್ರಮಿಸಿ ನೋಡೋಣ
ಅಲ್ಪ ವಿರಮಿಸಿ, ಶ್ರಮಿಸಿ ನೋಡೋಣ
ಸಂಬಂಧಗಳಡಿ ಬಂಧಿಯಾಗಲಾತುರವೇಕೆ
ಸಡಿಲ ದಾರಗಳ ಮೇಲೆ ಕಟ್ಟಿದ ಸೇತುವೆ ಬೀಳಿಸಲು ಒಂದೇ ಪ್ರಶ್ನೆ ಯಾಕೆ
ಬಂಧಗಳ ಸಾರ ಕರಗಿದಾಗ ದಾರ ಹರಿಯದೆ?
ಆ ದಿನ ಬಂದಾಗ, ಬಗ್ಗದ ಈ ಬಿದಿರು ಮುರಿಯದೆ?
ದಾರದ ಸತ್ವ ಕರಗುವ ಮುನ್ನ ಸ್ವಲ್ಪ ತಗ್ಗಿಸಿ ನೋಡೋಣ
ಬೆದರದ ಬಿದಿರು ಮುರಿಯುವ ಮುನ್ನ ಸ್ವಲ್ಪ ಬಗ್ಗಿಸಿ ನೋಡೋಣ
ಹೇಳಲು ಒಂದು ಮನೆಯಿದೆ, ಬೇರೆಯಲ್ದು ಒಂದು ಭ್ರಮೆಯಿದೆ
ಬೇರೆಯಾದ ಭ್ರಮೆಯಾಚೆ, ಅಗಣಿತ ಅಪರಿಮಿತ ನಲುಮೆಯಿದೆ
ನೀ ನಡೆಯಲೊಪ್ಪದ ದಾರಿಯ ಕೊನೆಯಲ್ಲಿ ಮಸಣವಿದೆ
ನೀ ಓಡುವ ಗೆಲುವಿನ ದಾರಿ ಅದೇ ಅಲ್ಲವೇ
ಸಂಕುಚಿತ ಸೀಮೆಗಳಿಂದಾಚೆ ಅವಕಾಶಗಳ ಎನಿಸಿ ನೋಡೋಣ
ಅಲ್ಲಿಗೆ ಹತ್ತಿರದ ದಾರಿ ಬಿಟ್ಟು ಸುತ್ತದ ದಾರಿ ಬಳಸಿ ನೋಡೋಣ
ಪಯಣದ ರೀತಿ ನೀತಿ ಸರಳ ಶುದ್ಧ ದಾರಿಯಾಗಿದೆ
ಇನ್ನೂ ಸ್ವಲ್ಪ ಕ್ರಮಿಸಿ ನೋಡೋಣ
ಅಲ್ಪ ವಿರಮಿಸಿ, ಶ್ರಮಿಸಿ ನೋಡೋಣ
ಅಮರಪ್ರೇಮ (ಕತೆ): ಕೇಶವ ಕುಲಕರ್ಣಿ (ಎರಡನೇ ಕಂತು)
ಮೊದಲ ಕಂತನ್ನು ಇನ್ನೂ ಓದಿಲ್ಲದಿದ್ದರೆ, ಓದಲು ಇಲ್ಲಿ ಒತ್ತಿ
ಭಾಗ 2: ಇಸ್ವಿ 1989
ಅಮರನಿಗೆ ಪ್ರೇಮಾಳನ್ನು ನೋಡುವ ಅದಮ್ಯ ಹಂಬಲ ಮತ್ತೆ ಹುಟ್ಟಿದ್ದು, ತನ್ನ ಮಗುವಿನ ನಾಮಕರಣದ ಸಮಯದಲ್ಲಿ.
ಅಮರ ಮತ್ತು ಉಷಾ ತಮ್ಮ ಹೆಣ್ಣುಮಗುವಿಗೆ ಹೆಸರು ಹುಡುಕುತ್ತಿದ್ದರು. ಹುಟ್ಟುವ ಮೊದಲು ಮಗು ಗಂಡೋ ಹೆಣ್ಣೋ ಗೊತ್ತಿರಲಿಲ್ಲ. ಗರ್ಭದಲ್ಲಿನ ಮಗು ಗಂಡೋ ಹೆಣ್ಣೋ ಎಂದು ಪತ್ತೆ ಮಾಡುವುದು ತನ್ನ ಆದರ್ಶದ ವಿರುದ್ಧವೆಂದು ಅಮರ ಬಗೆದಿದ್ದ (ಆಗಿನ್ನೂ ಕಾನೂನು ಅಷ್ಟು ಗಡುಸಾಗಿರಲಿಲ್ಲ) . ಮಗುವಿನ ಹೆಸರನ್ನು ಮಗು ಹುಟ್ಟುವ ಮೊದಲು ನಿರ್ಧಾರ ಮಾಡಿದರೆ ಅಪಶಕುನವೆಂದು ಉಷಾ ನಂಬಿದ್ದಳು.
ಹೆಣ್ಣು ಮಗು ಹುಟ್ಟಿ ಮೂರು ವಾರದ ಬಳಿಕ ಗಂಡ ಹೆಂಡತಿ ಇಬ್ಬರೇ ಮಗುವಿಗೆ ಏನು ಹೆಸರು ಇಡುವುದೆಂದು ಒಂದು ಚಂದದ ಜಗಳವಾಡುತ್ತಿದ್ದರು. ಅಮರ ಮಗುವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಿದ್ದ. ಉಷಾ ಒಂದು ಹೆಸರು ಹೇಳುವುದು, ಅದಕ್ಕೆ ಅಮರ ಏನಾದರೂ ತಗಾದೆ ತೆಗೆಯುವುದು, ಅಮರ ಒಂದು ಹೆಸರು ಹೇಳುವುದು, ಅದಕ್ಕೆ ಉಷಾ ಮೂಗು ಮುರಿಯುವುದು, ಅವಳು ಹೇಳಿದ ಹೆಸರನ್ನು ಚಿಕ್ಕದಾಗಿ ಕರೆದರೆ ಚೆನ್ನಾಗಿರುವುದಿಲ್ಲ ಎಂದು ಇವನು ಹೇಳುವುದು, ಇವನು ಹೇಳಿದ ಹೆಸರಿನ ಮೊದಲ ಅಕ್ಷರದ್ದೋ ಕೊನೆಯ ಅಕ್ಷರದ್ದೋ ಉಚ್ಚಾರ ಸರಿ ಇಲ್ಲ ಎಂದು ಇವಳು ಹೇಳುವುದು ನಡೆಯುತ್ತಿತ್ತು.
ಹೀಗೆ ವಾದ ನಡೆಯುತ್ತಿರಬೇಕಾದರೆ, ಉಷಾ, `ಪ್ರೇಮಾ ಎನ್ನುವ ಹೆಸರು ಹೇಗೆ?` ಎಂದಳು. ಉಷಾ `ಓಂ` ಮತ್ತು `ನಮ್ಮೂರ ಮಂದಾರ ಹೂವೇ` ಸಿನೆಮಾಗಳಲ್ಲಿ ನಟಿಸಿದ ಪ್ರೇಮಾಳ ಫ್ಯಾನ್ ಆಗಿದ್ದಳು. ಅಮರನ ಕಣ್ಣುಗಳಲ್ಲಿ ಒಂದು ಸಾವಿರ ವ್ಯಾಟಿನ ಮಿಂಚು ಮಿನುಗಿತು, ಮುಖದಲ್ಲಿ ಒಂದು ಕ್ಷಣ ಚಹರೆಯೇ ಬದಲಾಯಿತು; ಆದರೆ ತಕ್ಷಣವೇ ಸಾವರಿಕೊಂಡು `ಉಹುಂ, ಚೆನ್ನಾಗಿಲ್ಲ, ತುಂಬಾ ಹಳೆಯ ಹೆಸರು,` ಎಂದ. ಆದರೆ ಉಷಾ ಅವನ ಕಣ್ಣುಗಳಲ್ಲಿ ಮೂಡಿದ ಮಿಂಚನ್ನು, ಮುಖದ ಚಹರೆ ಬದಲಾದದ್ದನ್ನು ಗಮನಿಸಿದ್ದಳು, ಅವನಿಗೆ ‘ಪ್ರೇಮಾ` ಎನ್ನುವ ಹೆಸರು ಇಷ್ಟವಾಗಿದೆ, ಸುಮ್ಮನೇ ತನ್ನನ್ನು ಸತಾಯಿಸಲು ಇಷ್ಟವಿಲ್ಲ ಎಂದು ಸುಳ್ಳು ಹೇಳುತ್ತಿದ್ದಾನೆ ಎಂದುಕೊಂಡಳು. `ಪ್ರೇಮಾ ಎನ್ನುವ ಹೆಸರು ತುಂಬ ಚೆನ್ನಾಗಿದೆ, ಇವಳು ನಮ್ಮಿಬ್ಬರ ಪ್ರೇಮದ ಫಲವಲ್ಲವೇ?` ಎಂದು, `ಪ್ರೇಮಾ` ಎನ್ನುವ ಹೆಸರಿನ ಮೇಲೆ ಪಟ್ಟು ಹಿಡಿದಳು. ಅಮರ ಏನೇನೋ ಸಾಬೂಬು ಹೇಳಲು ಹೋದ, ಆದರೆ ಉಷಾ ಪಟ್ಟು ಬಿಡಲಿಲ್ಲ. ಆ ಹೆಸರು ಅವನ ಅಮ್ಮನಿಗೂ ತುಂಬ ಇಷ್ಟವಾಯಿತು. ವಿಧಿಯಿಲ್ಲದೇ ಒಪ್ಪಿಕೊಂಡ.
ಅದೇ ಸಮಯಕ್ಕೆ ಪುಟ್ಟ ಮಗು ಉಚ್ಚೆ ಮಾಡಿ ಅವನ ಪ್ಯಾಂಟನ್ನೆಲ್ಲ ಒದ್ದೆ ಮಾಡಿತು. ತಕ್ಷಣವೇ ಮಕ್ಕಳ ವಿಭಾಗ ಪೋಸ್ಟಿಂಗಿನಲ್ಲಿ ತಾನು ಮಗುವೊಂದನ್ನು ಪರೀಕ್ಷೆ ಮಾಡಲು ಎತ್ತಿಕೊಂಡಾಗ, ಆ ಮಗು ತನ್ನ ಪ್ಯಾಂಟಿನ ಮೇಲೆ ಉಚ್ಚೆ ಮಾಡಿದಾಗ ಮೂಗಿಗೆ ಬಡಿದ ವಾಸನೆ, ಆಗ ಪಕ್ಕದಲ್ಲೇ ಇದ್ದ ಪ್ರೇಮಾ ನಗು ತಡೆಯಲಾಗದೇ ಐದು ನಿಮಿಷ ನಕ್ಕಿದ್ದು ನೆನಪಾಯಿತು.
ಅವತ್ತಿನಿಂದ ಮಗಳಿಗೆ `ಪ್ರೇಮಾ` ಎಂದು ನಾಮಕರಣ ಮಾಡುವ ದಿನದವರೆಗೂ ಪ್ರತಿದಿನ ಅಮರನಿಗೆ ಪ್ರೇಮಾಳನ್ನು ನೋಡುವ ಹಂಬಲ ಹೆಚ್ಚಾಗುತ್ತಲೇ ಹೋಯಿತು. ತನ್ನ ಬಳಿಯಿದ್ದ ಪ್ರೇಮಾಳ ಬೆಂಗಳೂರಿನ ನಂಬರಿಗೆ ಫೋನು ಮಾಡಿದ. ಯಾರೂ ಎತ್ತಲಿಲ್ಲ (ಪ್ರೇಮಾಳ ತಾಯಿ ತಂದೆ ಅಮೇರಿಕಕ್ಕೆ ಮಗಳ ಹತ್ತಿರ ಹೋಗಿದ್ದರು).
ಭಾಗ 3: ಇಸ್ವಿ 1996
ಅಮರನಿಗೆ ಪ್ರೇಮಾಳನ್ನು ನೋಡುವ ಅದಮ್ಯ ಹಂಬಲ ಮತ್ತೆ ಹುಟ್ಟಿದ್ದು, ಅವನ ಎಂ.ಬಿ.ಬಿ.ಎಸ್ ರೂಮ್-ಮೇಟ್ ಮಲ್ಲಿಕಾರ್ಜುನನಿಗೆ ಫೋನು ಮಾಡಿ ಇಟ್ಟ ಮೇಲೆ.
ಅಮರ ಮೈಸೂರಿನಲ್ಲಿ ಎಂ.ಬಿ.ಬಿ.ಎಸ್ ಮುಗಿಸಿ, ಪುಣೆಯಲ್ಲಿ ಪಿ.ಜಿ ಮಾಡಲು ಹೋದಾಗಲೇ ಮೈಸೂರಿನ ಅವನ ಬಹುತೇಕ ಕ್ಲಾಸ್ಮೇಟುಗಳೆಲ್ಲ ಅಮೇರಿಕ ಮತ್ತು ಇಂಗ್ಲಂಡಿಗೆ ಹಾರಲು ತಯಾರಿ ಮಾಡಿದ್ದರು. ಅಮರನ ಬಹುತೇಕ ಕ್ಲಾಸ್ಮೇಟುಗಳೆಲ್ಲ ಬೆಂಗಳೂರು ಮೈಸೂರು ಮಂಗಳೂರಿನ ಕಡೆಯವರು ಬೇರೆ. ಉತ್ತರ ಕರ್ನಾಟಕದವರು ಬೆರಳಣಿಕೆಯಷ್ಟು ಮಾತ್ರ ಇದ್ದರು. ಹೀಗಾಗಿ ಇಂಟರ್ನೆಟ್ಟು ಮೊಬೈಲುಗಳಿಲ್ಲದ ಆ ಕಾಲದಲ್ಲಿ ಜಮಖಂಡಿಯ ಅಮರ ಮೈಸೂರು ಬಿಟ್ಟು ಪಿ.ಜಿ ಮಾಡಲು ಪುಣೆ ಸೇರಿದ ಮೇಲೆ ಅವನ ಸಂಪರ್ಕದಲ್ಲಿ ಇದ್ದುದು ಗೋಕಾಕಿನಿಂದ ಬಂದಿದ್ದ ಅವನ ರೂಮ್ಮೇಟ್ ಆಗಿದ್ದ ಮಲ್ಲಿಕಾರ್ಜುನನ ಜೊತೆ ಮಾತ್ರ. ಮಲ್ಲಿಕಾರ್ಜುನ ಎಂ.ಬಿ.ಬಿ.ಎಸ್ ಮುಗಿಸಿ ಪಿ.ಜಿ ಮಾಡದೇ ಗೋಕಾಕಿಗೇ ಹೋಗಿ ತಂದೆಯಿಂದ ಇನ್ನೂರು ಎಕರೆ ಜಮೀನಿನ ಉಸ್ತುವಾರಿ ತೆಗೆದುಕೊಂಡು ಪ್ರಾಕ್ಟೀಸನ್ನೂ ಆರಂಭಿಸಿದ್ದ. ಅಮರ ಆರು ತಿಂಗಳು ವರ್ಷಕ್ಕೊಮ್ಮೆ ಜಮಖಂಡಿಗೆ ಬಂದಾಗ ಮಲ್ಲಿಕಾರ್ಜುನನ್ನು ತಪ್ಪದೇ ಭೇಟಿಯಾಗುತ್ತಿದ್ದ. ಮಲ್ಲಿಕಾರ್ಜುನ ಜಮಖಂಡಿಗೆ ಬರುತ್ತಿದ್ದ, ಇಲ್ಲವೇ ಅಮರ ಗೋಕಾಕಿಗೆ ಹೋಗುತ್ತಿದ್ದ. ಹೀಗೆ ಮಲ್ಲಿಕಾರ್ಜುನ ಮೈಸೂರು ಮೆಡಿಕಲ್ ಕಾಲೇಜಿನ ಏಕೈಕ ಕೊಂಡಿಯಾಗಿದ್ದ. ಅಮರ ಪಿ.ಜಿ ಮುಗಿದ ಮೇಲೆ ಪುಣೆಯಲ್ಲೇ ಪ್ರಾಕ್ಟೀಸು ಮಾಡುತ್ತಿದ್ದ. ಉಷಾಳನ್ನು ಮದುವೆಯಾದ, ಮಗಳಾದಳು, ಪುಣೆಯಲ್ಲೇ ಮನೆ ಕಟ್ಟಿದ.
ಇಷ್ಟೆಲ್ಲ ಕಾಲ ಕಳೆದಿದ್ದರೂ ಇನ್ನೂ ಮೊಬೈಲು ಅದೇ ತಾನೆ ಕಾಲಿಡುತ್ತಿದ್ದ, ಮನೆಯಲ್ಲಿ ಫೋನು ಇದ್ದರೆ ಶ್ರೀಮಂತರು ಎಂದು ಅಂದುಕೊಳ್ಳುವ ಕಾಲವದು. ಆದರೆ ಲ್ಯಾಂಡ್ಲೈನಿನಿಂದ ಎಸ್.ಟಿ.ಡಿ ಸುಲಭವಾಗಿತ್ತು ಅನ್ನುವಷ್ಟರ ಮಟ್ಟಿಗೆ ಸಂವಹನ ತಂತ್ರಜ್ಞಾನ ಮುಂದುವರೆದಿತ್ತು. ಆಸ್ಪತ್ರೆಯ ಕೆಲಸ ಮುಗಿಸಿ ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದಂತೆಯೇ, ಹೆಂಡತಿ ಉಷಾ ಮಲ್ಲಿಕಾರ್ಜುನ ಫೋನ್ ಮಾಡಿರುವುದಾಗಿಯೂ ಯಾವ ವಿಷಯನ್ನು ಹೇಳದೇ ಸುಮ್ಮನೆ ಮಾಡಿದ್ದೇನೆಂದು ಹೇಳಿ ಫೋನು ಇಟ್ಟನೆಂದೂ ಹೇಳಿದಳು. ಮಲ್ಲಿಕಾರ್ಜುನ ಹಾಗೆಲ್ಲ ಸುಮ್ಮಸುಮ್ಮನೇ ಫೋನು ಮಾಡುವವನಲ್ಲವೇ ಅಲ್ಲ. ಕೂಡಲೇ ಮಲ್ಲಿಕಾರ್ಜುನನಿಗೆ ಫೋನಿಸಿದ.
`ಜುಲೈ ೧೫ ನೇ ತಾರೀಖು ಮೈಸೂರಿನಲ್ಲಿ ನಮ್ಮ ಎಂಬಿಬಿಎಸ್ ಬ್ಯಾಚಿನ ಇಪ್ಪತ್ತನೇ ವರ್ಷದ ಪುನರ್ಮಿಲನವಿದೆ, ನಾನು ಹೋಗುತ್ತಿದ್ದೇನೆ ಸುಕುಟುಂಬ ಸಮೇತ, ನೀನೂ ಅಷ್ಟೇ, ತಪ್ಪಿಸಬೇಡ, ಫ್ಯಾಮಿಲಿ ಜೊತೆ ಬಾ`, ಎಂದು ಮಲ್ಲಿಕಾರ್ಜುನ. ಫೋನು ಇಡುತ್ತಿದ್ದಂತೆಯೇ ಅಮರನಿಗೆ ಪ್ರೇಮಾಳನ್ನು ನೋಡುವ ಆಸೆ ಮತ್ತೊಮ್ಮೆ ಮೂಡಿತು. ಅಮೇರಿಕದಲ್ಲಿರುವ ಪ್ರೇಮಾಳಿಗೆ ಈ ವಿಷಯ ಗೊತ್ತಿದೆಯೋ ಇಲ್ಲವೋ, ಗೊತ್ತಾದರೂ ಅವಳು ಬರುತ್ತಾಳೋ ಇಲ್ಲವೋ ಎಂದು ಪ್ರಶ್ನೆಗಳೆದ್ದವು. ಕೂಡಲೇ ಮತ್ತೆ ಮಲ್ಲಿಕಾರ್ಜುನನಿಗೆ ಫೋನು ಮಾಡಿ, ಯಾರು ಆರ್ಗನೈಸ್ ಮಾಡುತ್ತಿದ್ದಾರೆ, ಯಾವ ಹೊಟೇಲಿನಲಿ ಇಳಿದುಕೊಳ್ಳುವ ವ್ಯವಸ್ಥೆಯಾಗಿದೆ, ಎಷ್ಟು ದುಡ್ಡು, ಎಷ್ಟು ದಿನ, ಯಾರು ಯಾರು ಬರುತ್ತಿದ್ದಾರೆ ಎಂದೆಲ್ಲ ಕೇಳಿ ಒಂದಿಷ್ಟು ವಿಷಯ ತಿಳಿದುಕೊಂಡ. ಅಮೇರಿಕಕ್ಕೆ ವಲಸೆ ಹೋದ ಕೆಲವು ಗೆಳೆಯರು ಬರುತ್ತಾರೋ ಇಲ್ಲವೋ ತಿಳಿದುಕೊಂಡ. ಅಮೇರಿಕ ಮತ್ತು ಇಂಗ್ಲಂಡಿನಲ್ಲಿ ಇರುವವರಿಗೆ ರಜೆ ಇರುವ ಸಮಯ ನೋಡಿಯೇ ಜುಲೈನಲ್ಲಿ ಇಟ್ಟುಕೊಂಡಿರುವುದಾಗಿ ಮಲ್ಲಿಕಾರ್ಜುನ ಹೇಳಿದ. ನೇರವಾಗಿ ಪ್ರೇಮಾಳಿಗೆ ಈ ವಿಷಯ ಗೊತ್ತೋ ಇಲ್ಲವೋ ಕೇಳಲು ಹೋಗಲಿಲ್ಲ, ಏಕೆಂದರೆ ಮಲ್ಲಿಕಾರ್ಜುನನಿಗೂ ಕೂಡ ತನಗೆ ಆ ಕಾಲದಲ್ಲಿ ಪ್ರೇಮಾಳನ್ನು ಕಂಡರೆ ಇಷ್ಟ ಎಂಬ ಸಣ್ಣ ಸುಳಿವನ್ನೂ ಕೊಟ್ಟಿರಲಿಲ್ಲವಲ್ಲ.
ಉಷಾ, `ಏನು ಸಮಾಚಾರ? ನಿನ್ನ ಫ್ರೆಂಡಿಗೆ ಫೋನು ಮಾಡಿ ತುಂಬ ಖುಷಿಯಲ್ಲಿ ಇದ್ದೀಯಾ?` ಎಂದು ಅಮರನನ್ನು ಕೇಳಿದಳು.
ಅಮರ ಖುಷಿಖುಷಿಯಲ್ಲಿ ಮೈಸೂರಿನಲ್ಲಿ ನಡೆಯುವ `ಪುನರ್ಮಿಲನ`ದ ಬಗ್ಗೆ ಹೇಳಿದ. ಎಂದೂ ಜಾಸ್ತಿ ಮಾತಾಡದ ಅಮರ, ಊಟ ಮಾಡುತ್ತ, ಊಟವಾದ ಮೇಲೆ ತನ್ನ ಎಂ.ಬಿ.ಬಿ.ಎಸ್ ದಿನಗಳ ಬಗ್ಗೆ, ಗುರುಗಳ ಬಗ್ಗೆ, ಕಾಲೇಜಿನ ಬಗ್ಗೆ, ಮೈಸೂರಿನ ರಸ್ತೆ-ಗಲ್ಲಿಗಳ ಬಗ್ಗೆ, ಹೊಟೇಲುಗಳ ಬಗ್ಗೆ ಕಥೆಗಳನ್ನು ಹೇಳುತ್ತ ಹೋದ. ಮಲ್ಲಿಕಾರ್ಜುನ ಕುಟುಂಬ ಸಮೇತ ಬರುತ್ತಿರುವುದಾಗಿ ಹೇಳಿದ. ಉಷಾ ಇದನ್ನೆಲ್ಲ ಆಗಲೇ ನೂರಾರು ಸಲ ಕೇಳಿದ್ದಳು. ಆದರೂ ಈಗ ಹುಟ್ಟಿರುವ ಉತ್ಸಾಹಕ್ಕೆ ಏಕೆ ತಣ್ಣೀರೆರೆಯುವುದೆಂದು ಕೇಳಿಸಿಕೊಂಡಂತೆ ನಟಿಸಿದಳು.
ಉಷಾ, `ನಾನೂ ಕೂಡ ಮೈಸೂರು ನೋಡಿ ಯಾವ ಕಾಲವಾಯಿತು? ಮಗಳು ಕೂಡ ಮೈಸೂರು ನೋಡಿಲ್ಲ,` ಎಂದಳು.
ಅಮರ ಮಾರನೆಯ ದಿನವೇ ಪುಣೆಯಿಂದ ಬೆಂಗಳೂರಿಗೆ ಮೂವರಿಗೂ ರೈಲು ರಿಸರ್ವೇಶನ್ ಮಾಡಿದ.
ಅಂದಿನಿಂದ ಅಮರನಿಗೆ ಪ್ರೇಮಳನ್ನು ನೋಡುವ ಆಸೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಇದುವರೆಗೂ ಒಂದೇ ಒಂದು ಸಲವೂ ಪ್ರೇಮದ ಸುಳಿವು ಬಿಟ್ಟುಕೊಡದ, ತುಟಿ ಸೋಕದ, ಮೈಮುಟ್ಟದ ಪ್ರೇಮಾಳನ್ನು ನೋಡುವ ಕಾತರ ಇಷ್ಟು ವರ್ಷವಾದ ಮೇಲೂ ಮತ್ತೆ ಚಿಗುರಿ ಪೆಡಂಭೂತದಂತೆ ಬೆಳೆಯುತ್ತಿರುವುದನ್ನು ನೋಡಿ ಅಮರನಿಗೆ ದಿಗಿಲಾಯಿತು, ಅದೇ ಸಮಯಕ್ಕೆ ತನ್ನ ವಯಸ್ಸು ಇಪ್ಪತ್ತು ವರ್ಷ ಹಿಂದೆ ಚಲಿಸುತ್ತಿರುವಂತೆ ಅನಿಸಿ ರೋಮಾಂಚನವೂ ಆಯಿತು.
ಅಮರನಿಗೆ ಪ್ರೇಮಾಳನ್ನು ನೋಡಬೇಕು ಎನ್ನುವ ಅದಮ್ಯ ಹಂಬಲ ಹುಟ್ಟಿದ್ದು ಇದೇ ಮೊದಲ ಸಲವೂ ಅಲ್ಲ, ಕೊನೆಯ ಸಲವೂ ಅಲ್ಲ.
ಅಂಥ ಒಂದು ಬಯಕೆ ಅಮರನಲ್ಲಿ ಹುಟ್ಟಿದ್ದು, ತನ್ನ ಮತ್ತು ಉಷಾಳ ಮದುವೆಯ ಆಮಂತ್ರಣ ಪತ್ರಿಕೆ ಕೈಗೆ ಸಿಕ್ಕಾಗ. ಅಪ್ಪ-ಅಮ್ಮ ಗೊತ್ತು ಮಾಡಿದ ಹುಡುಗಿಯಾಗಿದರೂ, ಅಮರನಿಗೆ ಉಷಾ ಮೊದಲ ನೋಟಕ್ಕೇ ಇಷ್ಟವಾಗಿದ್ದಳು, ಮೊದಲ ಮಾತಿನಲ್ಲೇ ಆತ್ಮೀಯಳಂತೆ ಕಂಡಿದ್ದಳು. ನಿಶ್ಚಿತಾರ್ಥವಾದ ಮೇಲೆ ಪುಣೆಯಿಂದ ಹುಬ್ಬಳ್ಳಿಗೆ ಬಂದಾಗಲೆಲ್ಲ ಉಣಕಲ್ ಕೆರೆ, ನೃಪತುಂಗ ಬೆಟ್ಟ, ಕರ್ನಾಟಕ ವಿಶ್ವವಿದ್ಯಾಲಯ, ಅಪ್ಸರಾ ಸುಜಾತಾ ಥೇಟರುಗಳ ತುಂಬೆಲ್ಲ ಓಡಾಡಿದ್ದರು, ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಅನ್ನುವಂತೆ.
ತನ್ನ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ತರಲು ಅಮರ ಪ್ರಿಂಟಿಂಗ್ ಪ್ರೆಸ್ಸಿಗೆ ಹೋಗಿದ್ದ. ಕೈಯಲ್ಲಿ ಐನೂರು ಆಮಂತ್ರಣ ಪತ್ರಗಳನ್ನು ಹಿಡಿದು, ಅದರಲ್ಲಿಯ ಒಂದು ಕಾರ್ಡನ್ನು ತೆಗೆದು, ಆ ಕಾರ್ಡಿನಲ್ಲಿ ತನ್ನ ಭಾವಿ ಮಡದಿ, ‘ಉಷಾ‘ ಎಂಬ ಹೆಸರನ್ನು ನೋಡಿ ಪುಲಕಿತಗೊಂಡು, ಆ ಹೆಸರಿನ ಮೇಲೆ ಕೈಯಾಡಿಸಿ, ಕಣ್ಣು ಮುಚ್ಚಿ ಆ ಹೆಸರಿನ ಮೇಲೊಂದು ಮುತ್ತು ಕೊಡಬೇಕು ಎಂದು ಕಾರ್ಡನ್ನು ತುಟಿಯ ಬಳಿ ತಂದದ್ದೇ, ಆ ಹೊಸ ಮದುವೆ ಕಾರ್ಡಿನ ವಾಸನೆ ಮೂಗಿಗೆ ಬಡಿದು, ಇದ್ದಕ್ಕಿದ್ದಂತೆ ಪ್ರೇಮಾಳನ್ನು ನೋಡಬೇಕು ಅನಿಸಿಬಿಟ್ಟಿತು. ಇಂಥ ರೋಮ್ಯಾಂಟಿಕ್ ಮೂಡಿನಲ್ಲಿ ಇರಬೇಕಾದರೆ ಪ್ರೇಮಾಳ ನೆನಪು ಏಕೆ ಆಯಿತು, ಅವಳನ್ನು ನೋಡುವ ಆಸೆ ಯಾಕೆ ಹುಟ್ಟಿತು ಎಂದು ತನ್ನ ಮೇಲೆ ತನಗೆ ಕೋಪ ಬಂದಿತು.
***
1976ನಲ್ಲಿ ಎಂ.ಬಿ.ಬಿ.ಎಸ್ ಓದಲು ‘ಮೈಸೂರು ಮೆಡಿಕಲ್ ಕಾಲೇಜು’ ಸೇರಿದಾಗಿನಿಂದಲೂ ಅಮರನ ಕಣ್ಣಿದ್ದುದು ತನ್ನ ಜೊತೆಗೇ ಓದುತ್ತಿದ್ದ, ಒಂದೇ ಬ್ಯಾಚಿನಲ್ಲಿದ್ದ, ದಿನವೂ ಸಿಗುತ್ತಿದ್ದ ಪ್ರೇಮಾಳ ಮೇಲೆ. ಅಮರ ಚರಂತಿಮಠ ಜಮಖಂಡಿಯವನು, ಪ್ರೇಮಾ ಗೌಡ ಬೆಂಗಳೂರಿನವಳು. ಅಮರ ಲಿಂಗಾಯತ, ಪ್ರೇಮಾ ಒಕ್ಕಲಿಗಳು. ಅಮರ ಶಾಲಾಮಾಸ್ತರನ ಮಗ, ಪ್ರೇಮಾ ಇಂಜಿನಿಯರನ ಮಗಳು. ಅಮರನ ಮನೆಯಲ್ಲಿ ಒಬ್ಬಳು ಅಕ್ಕ, ಇಬ್ಬರು ತಂಗಿಯರು ( ತಂಗಿಯರ ಮದುವೆಯ ಜವಾಬ್ದಾರಿ ಅಮರನದು ಎನ್ನುವುದು ಅಲಿಖಿತ ನಿಯಮ), ಪ್ರೇಮಾಳೇ ಅವಳ ಮನೆಯಲ್ಲಿ ಹಿರಿಯಳು, ಅವಳಿಗೆ ಒಬ್ಬ ತಮ್ಮ. ಅಮರ ಕನ್ನಡ ಮಾಧ್ಯಮ, ಪ್ರೇಮಾ ಇಂಗ್ಲೀಷ್ ಮೀಡಿಯಂ. ಅಮರ ಸಂಕೋಚದ ಮುದ್ದೆ, ಪ್ರೇಮಾ ಉತ್ಸಾಹದ ಬುಗ್ಗೆ. ಅಮರನಿಗೆ ಹಿಂದಿ ಹಾಡುಗಳೆಂದರೆ ಪ್ರಾಣ, ಪ್ರೇಮಾಳಿಗೆ ಇಂಗ್ಲೀಷ್ ಹಾಡುಗಳ ಹುಚ್ಚು. ಒಟ್ಟಿನಲ್ಲಿ ಅವರಿಬ್ಬರೂ ‘ಮೈಸೂರು ಮೆಡಿಕಲ್ ಕಾಲೇಜಿ’ನಲ್ಲಿ ಒಂದೇ ಕ್ಲಾಸಿನಲ್ಲಿ ಅದರಲ್ಲೂ ಒಂದೇ ಬ್ಯಾಚಿನಲ್ಲಿ ಇರುತ್ತಾರೆ ಎನ್ನುವುದರ ಹೊರತಾಗಿ, ಇಬ್ಬರಲ್ಲೂ ಹೊಂದುವ ಒಂದೇ ಒಂದು ಗುಣವೂ ಇರಲಿಲ್ಲವಾದರೂ, ಅಮರನಿಗೆ ಪ್ರೇಮಾ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದ್ದಳು.
ಮೊದಲ ವರ್ಷದ ಅಂಗರಚನಾಶಾಸ್ತ್ರದಿಂದ ಹಿಡಿದು ಕೊನೆಯ ವರ್ಷದ ಕೊನೆಯ ಕ್ಲಿನಿಕ್ವರೆಗೆ ಇಬ್ಬರೂ ಒಂದೇ ಬ್ಯಾಚಿನಲ್ಲಿದ್ದರು. ಏಕವಚನದಲ್ಲಿ ಮಾತಾಡುತ್ತಾರೆ ಎನ್ನುವುದನ್ನು ಬಿಟ್ಟರೆ ಅವರಿಬ್ಬರ ನಡುವೆ ಅಂಥ ಸಲಿಗೆ ಏನೂ ಇರಲಿಲ್ಲ. ಗುಂಪಿನಲ್ಲಿ ಎಲ್ಲರೂ ಮಾತಾಡುವಂತೆ ಮಾತಾಡುತ್ತಿದ್ದರು. ಆದರೆ ಅಮರ ಅವಳು ಬೆಳಿಗ್ಗೆ ಸಿಗುವುದನ್ನೇ ಕಾಯುತ್ತ ಪ್ರತಿ ರಾತ್ರಿ ನಿದ್ದೆ ಹೋಗುತ್ತಿದ್ದ. ಅಮರನಿಗೆ ಕನಸುಗಳನ್ನು ಹೆಣೆಯಲು, ಅವಳ ಒಂದು ‘ಗುಡ್ ಮಾರ್ನಿಂಗ್’, ಒಂದು ಮುಗುಳ್ನಗು, ಒಂದು ಹಿಡಿಯಷ್ಟು ಮಾತು ಸಾಕಾಗುತ್ತಿತ್ತು. ತನಗೆ ಅವಳನ್ನು ಕಂಡರೆ ಇಷ್ಟ ಎನ್ನುವ ಸುಳಿವನ್ನು ಅವಳಿಗೇನು, ತನ್ನ ಹಾಸ್ಟೇಲಿನ ರೂಮ್ಮೇಟ್ ಮಲ್ಲಿಕಾರ್ಜುನನಿಗೂ ಬಿಟ್ಟುಕೊಟ್ಟಿರಲಿಲ್ಲ. ಎಲ್ಲಿ ಅವಳ ಆ ಒಂದು ನಗು ಮತ್ತು ಒಂದಿಷ್ಟು ಮಾತು ಕೂಡ ಕಳೆದು ಹೋಗಿ ಬಿಡುವುದೋ ಎನ್ನುವ ಭಯ. ಗುಂಪಿನಲ್ಲಿ ಗೋವಿಂದನಾಗಿ ಕ್ಯಾಂಟೀನಿಗೆ ಹೋಗುತ್ತಿದ್ದ, ಆಗಾಗ ಡಿನ್ನರಿಗೆ ಗೆಳೆಯರೆಲ್ಲ ಸೇರಿ ಆರ್-ಆರ್-ಆರ್-ಗೆ (ಮೈಸೂರಿನ ಪ್ರಸಿದ್ಧ ಆಂಧ್ರದ ಚಿಕನ್ ಬಿರಿಯಾನಿ ಸಿಗುವ ಹೊಟೇಲು) ಹೋಗುತ್ತಿದ್ದರು (ಪ್ರೇಮಾ ಚಿಕನ್ ಬಿರಿಯಾನಿ ತಿನ್ನುವಾಗ, ತಾನು ಸೊಪ್ಪಿನ ಸಾರು ಹಾಕಿಕೊಂಡು ಅನ್ನ ತಿನ್ನುತ್ತಿದ್ದ). ಬೈಕಿನಲ್ಲಿ ಚಾಮುಂಡಿ ಬೆಟ್ಟಕ್ಕೋ, ಕನ್ನಂಬಾಡಿಗೋ (ಕೆ ಆರ್ ಎಸ್ ಆಣೆಕಟ್ಟು) ಹೋಗುತ್ತಿದ್ದರು; ಅಂಥ ದಿನಗಳಲ್ಲಿ ಅವಳು ಒಬ್ಬಳೇ ಒಂದೈದು ನಿಮಿಷ ಮಾತಿಗೆ ಸಿಕ್ಕರೂ ಆಕಾಶದಲ್ಲಿ ಹಾರಾಡುತ್ತಿದ್ದ. ಇಷ್ಟೆಲ್ಲ ಆದರೂ ಅಮರ ನಾಕೂವರೆ ವರ್ಷದಲ್ಲಿ ಪ್ರೇಮಾಳ ಜೊತೆ ಒಂದೇ ಒಂದು ಗೆರೆ ಮುಂದೆ ದಾಟಲಿಲ್ಲ, ಒಂದೇ ಒಂದು ಮಾತು ಹೆಚ್ಚು ಆಡಲಿಲ್ಲ.
ಎಂ.ಬಿ.ಬಿ.ಎಸ್ ಮುಗಿದು ಜ್ಯೂನಿಯರ್ ಡಾಕ್ಟರ್ (ಇಂಟರ್ನ್ಶಿಪ್) ಆಗಿ ಕೆಲಸ ಬರುತ್ತಿದ್ದಂತೆ ಅಮರ ಸ್ವಲ್ಪ ಚಿಗುರಿಕೊಂಡ, ಏಕೆಂದರೆ ಮೊಟ್ಟಮೊದಲ ಬಾರಿಗೆ ಸ್ಟೈಪೆಂಡ್ ಎಂಬ ಹೆಸರಿನಲ್ಲಿ ಕೈಯಲ್ಲಿ ಒಂಡಿಷ್ಟು ದುಡ್ಡು ತಿಂಗಳೂ ತಿಂಗಳೂ ಕೈಬರುವ ದಿನಗಳವು. ಮೊಟ್ಟಮೊದಲ ಬಾರಿಗೆ ಅವಳ ಜೊತೆ ಕಾಲೇಜ್ ಕ್ಯಾಂಟೀನಿನಲ್ಲಿ ಒಬ್ಬನೇ ಕೂತು ಕಾಫಿ ಕುಡಿಯುತ್ತಿದ್ದ. ಕಲ್ಬಿಲ್ಡಿಂಗನ್ನೂ ದಾಟಿ, ಧನ್ವಂತ್ರಿ ರೋಡಿನ ‘ಗಾಯತ್ರಿ ಭವನ’ದಲ್ಲಿ ಅವಳೊಟ್ಟಿಗೆ ದೋಸೆ ತಿನ್ನುತ್ತಿದ್ದ. ಪ್ರೇಮಾ ಕೂಡ ಅವನು ಕರೆದಾಗಲೆಲ್ಲ ಖುಷಿ ಖುಷಿಯಲ್ಲಿ ಬರುತ್ತಿದ್ದಳು. ಆರು ತಿಂಗಳು ಮುಗಿಯುತ್ತಿದ್ದಂತೆ ಅವರ ರೂರಲ್ ಪೋಸ್ಟಿಂಗುಗಳು ಶುರುವಾದವು. ಆಗ ಅಮರನು ಎಲ್ಲೊ, ಪ್ರೇಮಳು ಏಲ್ಲೋ. ಆಗಿನ್ನೂ ಮೊಬೈಲು ಇಂಟರ್ನೆಟ್ಟು ಯಾವುದೂ ಇರಲಿಲ್ಲ. ಹೀಗಾಗಿ ಅವರಿಬ್ಬರ ಸಂಪರ್ಕ ಮತ್ತು ಭೇಟಿ ಹೆಚ್ಚು ಕಡಿಮೆ ನಿಂತೇ ಹೋಯಿತು. ಇತ್ತ ಪಿ.ಜಿ ಎಂಟ್ರನ್ಸ್ ಪರೀಕ್ಷೆ ಕೂಡ ಹತ್ತಿರ ಬರುತ್ತಿತ್ತು. ಎಲ್ಲರೂ ಪರೀಕ್ಷೆಯ ತಯಾರಿಯಲ್ಲಿ ತೊಡಗಿದರು. ಅಮರನೂ ಓದಲು ಕೂತ, ಒಳ್ಳೆಯ ಕಡೆ ಪಿ.ಜಿ ಸೀಟು ಸಿಕ್ಕಿದರೆ ಪ್ರೇಮಾಳಿಗೆ ತನ್ನ ಮನಸ್ಸಿನ ಹಂಬಲ ಹೇಳಿ ಬಿಡುವ ಆಸೆಯಿಂದ ಎಲ್ಲರಿಗಿಂತ ತುಸು ಚೆನ್ನಾಗಿಯೇ ಓದಿದ. ಎಂಟ್ರನ್ಸ್ ಬರೆಯುವಾಗ ಪ್ರೇಮಾ ಸಿಕ್ಕಿದಳು, ಪರೀಕ್ಷೆ ಮುಗಿದ ಮೇಲೆ ಗೆಳೆಯರ ಗುಂಪಿನಲ್ಲಿ `ಮೈಲಾರಿ`ಗೆ ಹೋಗಿ ದೋಸೆ ತಿಂದು, ಅಲ್ಲಿಂದ ಚಾಮುಂಡಿ ಬೆಟ್ಟಕ್ಕೆ ಹೋಗಿ ತಮಗೆ ಓಳ್ಳೆಯ ರ್ಯಾಂಕ್ ಬರಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದರು. ಆಗ ಪ್ರೇಮಾ ಅವನ ತಲೆಗೆ ತಿಲಕವನ್ನು ಇಟ್ಟು `ಬೆಸ್ಟ್ ಆಫ್ ಲಕ್` ಹೇಳಿದಳು. ಚಾಮುಂಡೇಶ್ವರಿಗೆ ಮನದಲ್ಲೇ ಕೃತಜ್ಞತೆ ಸಲ್ಲಿಸಿದ ಅಮರನಿಗೆ ಆಕಾಶಕ್ಕೆ ಮೂರೇ ಗೇಣು.
ಜ್ಯೂನಿಯರ್ ಡಾಕ್ಟರ್ ಮುಗಿಯುವ ಸಮಯದಲ್ಲಿ ಪಿ.ಜಿ ಎಂಟ್ರನ್ಸಿನ ಫಲಿತಾಂಶ ಬಂತು. ಅಮರನಿಗೆ ಒಳ್ಳೆಯ ರ್ಯಾಂಕ್ ಬಂದ್ದಿತ್ತು, ಅವನ ರ್ಯಾಂಕಿಗೆ ಅವನಿಗೆ ಒಳ್ಳೆಯ ಕಡೆ ಸೀಟು ಸಿಗುವುದು ಖಾತ್ರಿ ಇತ್ತು. ರಿಸಲ್ಟು ಗೊತ್ತಾದ ತಕ್ಷಣ ಮೊಟ್ಟಮೊದಲು ಅವನಿಗೆ ಹೇಳಬೇಕು ಅನಿಸಿದ್ದು ಪ್ರೇಮಾಳಿಗೆ. ಗೈನೆಕಾಲಾಜಿ ಪೋಸ್ಟಿಂಗಿನಲ್ಲಿದ್ದ ಪ್ರೇಮಾಳಿಗೆ ವಿಚಾರ ತಿಳಿಸಲು ಲಗುಬಗೆಯಿಂದ ನಡೆದ. ಪ್ರೇಮಾಳಿಗೆ ಕೂಡ ಒಳ್ಳೆಯ ರ್ಯಾಂಕ್ ಬಂದಿತ್ತು. ಚಲುವಾಂಬಾ ಆಸ್ಪತ್ರೆಯ ಹತ್ತಿರ ಹೋಗುತ್ತಿರಬೇಕಾದರೆ, ಪ್ರೇಮಾ ಕೂಡ ಅಷ್ಟೇ ಲಗುಬಗೆಯಿಂದ ಹೊರಬರುತ್ತಿದ್ದಳು. ಅಮರನನ್ನು ನೋಡುತ್ತಿದ್ದಂತೆ ಅವಳ ಕಣ್ಣುಗಳೂ ಅರಳಿದವು, ದೂರದಿಂದಲೇ ಕೈಯಾಡಿಸಿದಳು. ಇಬ್ಬರೂ ಹತ್ತಿರ ಬರುತ್ತಿದ್ದಂತೆ, ಇಬ್ಬರೂ ಒಟ್ಟಿಗೇ `ಕಾಂಗ್ರ್ಯಾಟ್ಸ್` ಹೇಳಿದರು, ನಂತರ ಇಬ್ಬರೂ ಒಟ್ಟಿಗೇ ನಕ್ಕರು, ನಂತರ ಮತ್ತೆ ಒಟ್ಟಿಗೇ `ಕಾಂಗ್ರಾಟ್ಸ್` ಹೇಳಿದರು, ಮತ್ತೆ ನಕ್ಕರು. ಅಮರನಿಗೆ ಪಿಜಿ ಸೀಟು ಸಿಕ್ಕಿದ್ದು ಸಾರ್ಥಕವೆನಿಸಿಬಿಟ್ಟಿತು. ಇಬ್ಬರೂ ಹೊಸ ಊರಿನಲ್ಲಿ (ಮುಂಬೈ ಅಥವಾ ದಿಲ್ಲಿ) ಒಂದೇ ಕಾಲೇಜಿನಲ್ಲಿ ಪಿ.ಜಿ ಮಾಡಬಹುದು, ತನ್ನ ಪ್ರೇಮ ಚಿಗುರೊಡೆಯಬಹುದು ಎಂದೆಲ್ಲ ಅವನ ಮುಂದಿನ ಮೂರು ವರ್ಷದ ಕನಸುಗಳು ಮೂರು ಸೆಕೆಂಡಿನಲ್ಲಿ ಅವನ ಮನಸ್ಸಿನ ಪರದೆಯ ಮೇಲೆ ಚಲಿಸಿದವು. ಆಗ ಪ್ರೇಮಾ ತನ್ನ ಬ್ಯಾಗಿನಿಂದ ಒಂದು ಲಕೋಟೆಯನ್ನು ಕೊಟ್ಟಳು. ಅದೊಂದು ಗ್ರೀಟಿಂಗ್ ಕಾರ್ಡು ತರಹ ಇತ್ತು, ಅದು `ಕಾಂಗ್ರ್ಯಾಚುಲೇನ್` ಕಾರ್ಡಿರಬಹುದು, ಅದರೊಳಗೆ ಪ್ರೇಮಾ ತನ್ನ ಪ್ರೇಮಪತ್ರವನ್ನು ಇಟ್ಟಿರಬಹುದು ಎಂದುಕೊಂಡ. ಲಕೋಟೆಯನ್ನು ಕೈಗೆ ತಗೆದುಕೊಂಡಾಗ ಅವನ ಹೃದಯ ಬಡಿತ ನಗಾರಿಯಾಗಿ ಎಲ್ಲಿ ಪ್ರೇಮಳಿಗೆ ಕೇಳಿಸಿಬಿಡುತ್ತೋ ಎಂದು ನಾಚಿಕೊಂಡ.
`ಇಲ್ಲೇ ತೆಗೆಯಬಹುದಾ?` ಎಂದ.
`ಪ್ಲೀಸ್,` ಎಂದಳು ಪ್ರೇಮಾ. ಅವಳ ಕಣ್ಣುಗಳು ಮಿಂಚುತ್ತಿದ್ದವು.
ಲಕೋಟೆ ಹರಿದರೆ, ಒಳಗೆ ಕಾರ್ಡು. ಕಾರ್ಡು ಹೊರ ತೆರೆದರೆ ಲಗ್ನಪತ್ರಿಕೆ! ಅದೂ ಪ್ರೇಮಾಳ ಲಗ್ನಪತ್ರಿಕೆ!!
ಹುಡುಗನೂ ಡಾಕ್ಟರಂತೆ, ಅಮೇರಿಕದಲ್ಲಿ ಪಿ.ಜಿ ಮಾಡುತ್ತಿದ್ದಾನಂತೆ, ತನಗಿಂತ ಬರೀ ಮೂರು ವರ್ಷ ದೊಡ್ಡವನಂತೆ, ಬೆಂಗಳೂರಿನವನಂತೆ, ಬೆಂಗಳೂರಿನಲ್ಲೇ ಎಂ.ಬಿ.ಬಿ.ಎಸ್ ಮಾಡಿದ್ದಂತೆ, ಫ್ಯಾಮಿಲಿ ಫ್ರೆಂಡ್ಸ್ ಅಂತೆ, ಮದುವೆ ಮುಂದಿನ ತಿಂಗಳು ಬೆಂಗಳೂರಿನಲ್ಲಂತೆ, ಖಂಡಿತ ಬರಬೇಕಂತೆ, ಪಿ.ಜಿ.ಯನ್ನು ಅಮೇರಿಕದಲ್ಲೇ ಮಾಡುತ್ತಾಳಂತೆ, ಇನ್ನೂ ತುಂಬಾ ಜನರಿಗೆ ಕಾರ್ಡು ಕೊಡಬೇಕಂತೆ…ಎಂದೆಲ್ಲ ಹೇಳಿ ಪ್ರೇಮಾ ಹೊರಟು ಹೋದಳು.
ಅಮರ ಕಾರ್ಡನ್ನು ಹಿಡಿದು ಏನೂ ತೋಚದೇ ನಿಂತುಬಿಟ್ಟ. ಕಾರ್ಡಿನ ಮೇಲಿನ ಪ್ರೇಮಾಳ ಹೆಸರಿನ ಪಕ್ಕದಲ್ಲಿ ಇರುವ `ಡಾ. ರಾಜಶೇಖರ ಕೃಷ್ಣೇಗೌಡ` ಎನ್ನುವ ಹುಡುಗನ ಹೆಸರನ್ನು ಬೆರಳಿನಿಂದ ಮುಚ್ಚಿ, ಲಗ್ನಪತ್ರಿಕೆಯನ್ನು ಮುಖದ ಹತ್ತಿರ ತಂದು, `ಪ್ರೇಮಾ` ಎನ್ನುವ ಹೆಸರಿನ ಮೇಲೆ ಒಂದು ಸಲ ತುಟಿ ಆಡಿಸಿದ, ಮೂಗಿಗೆ ಘಮ್ಮೆಂದು ಲಗ್ನಪತ್ರಿಕೆಯ ವಾಸನೆ!
***
ಅದೇ ವಾಸನೆ! ತನ್ನ ಲಗ್ನಪತ್ರಿಕೆಗೂ ಅದೇ ವಾಸನೆ! ಅದಕ್ಕೇ ಪ್ರೇಮಾಳ ನೆನಪಾದದ್ದು. ಅದಕ್ಕೇ ಪ್ರೇಮಾಳನ್ನು ನೋಡುವ ಆಸೆ ಮೂಡಿದ್ದು ಎಂದು ಅಮರ ತನಗೆ ತಾನೇ ಸಮಾಧಾನ ಮಾಡಿಕೊಂಡು, ತನ್ನ ಮತ್ತು ಉಷಾಳ ಲಗ್ನಪತ್ರಿಕೆಗಳನ್ನು ಹಿಡಿದುಕೊಂಡು ಪ್ರಿಂಟಿಂಗ್ ಪ್ರೆಸ್ಸಿನಿಂದ ಹೊರಬಂದ.
ಆದರೆ ದಿನ ಕಳೆದಂತೆ ಅಮರನಿಗೆ ಪ್ರೇಮಾಳನ್ನು ನೋಡಬೇಕು ಎನ್ನುವ ಆಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು. ತನ್ನ ನಿಶ್ಚಿತಾರ್ಥ ಆಗಿದೆ, ತನ್ನ ಭಾವಿ ಪತ್ನಿ ಉಷಾ, ತಾನು ಅವಳ ಪ್ರೀತಿಯಲ್ಲಿ ಮುಳುಗಿ ಹೋಗಿದ್ದೇನೆ. ಅತ್ತ ಪ್ರೇಮಾ ಮದುವೆಯಾಗಿ ದೂರದ ಅಮೇರಿಕಕ್ಕೆ ಹೋಗಿದ್ದಾಳೆ. ಅಂಥದರಲ್ಲಿ ಪ್ರೇಮಾಳನ್ನು ನೋಡಬೇಕು ಎನ್ನುವ ಆಸೆ ಪದೇ ಪದೇ ಮೂಡಿದ್ದಕ್ಕೆ ತನ್ನ ಬಗ್ಗೆ ತನಗೇ ಕಳವಳವಾಯಿತು. ಅವಳ ಮದುವೆಗೆ ಹೋಗಿದ್ದರೆ ಬಹುಷಃ ಇಂಥ ಹುಚ್ಚು ಆಸೆ ಮೂಡುತ್ತಿರಲಿಲ್ಲ ಎನಿಸಿತು. ಅವಳ ಹತ್ತಿರ ಮಾತಾಡಿ ಅವಳಿಗೆ ಈಗ ಆಗುತ್ತಿರುವ ತನ್ನ ಮದುವೆಯ ಬಗ್ಗೆ ಹೇಳಿದರೆ ಈ ಭ್ರಾಂತಿ ಕಳೆಯಬಹುದು ಎನಿಸಿತು.
ಎಂ.ಬಿ.ಬಿ.ಎಸ್ ಬೀಳ್ಕೊಡುಗೆ ಸಮಾರಂಭದಲ್ಲಿ ಎಲ್ಲರ ಹೆಸರು, ಜನ್ಮದಿನಾಂಕ ಮತ್ತು ಮನೆಯ ಫೋನ್ ನಂಬರ್ ಇರುವ ಒಂದು ಚಿಕ್ಕ ಹೊತ್ತಿಗೆಯನ್ನು ಎಲ್ಲರಿಗೆ ಕೊಟ್ಟಿದ್ದರು. ಆಗಿನ್ನೂ ಮೊಬೈಲು, ಇ-ಮೇಲು ಇರಲಿಲ್ಲವಲ್ಲ. ಅದರಲ್ಲಿ ಹುಡುಕಿ ಪ್ರೇಮಾಳ ಬೆಂಗಳೂರಿನ ಮನೆಗೆ ಎಸ್.ಟಿ.ಡಿ ಬೂತಿನಿಂದ ಫೋನ್ ಮಾಡಿದ. ಪ್ರೇಮಾಳ ಅಮ್ಮ ಫೋನ್ ಎತ್ತಿಕೊಂಡರು.
`ಓ ಅಮರನಾ? ಪ್ರೇಮಾ ನಿನ್ನ ಬಗ್ಗೆ ಯಾವಾಗಲೂ ಹೇಳುತ್ತಿರುತ್ತಾಳಪ್ಪಾ. ಏನು? ನಿನ್ನ ಮದುವೆನೇನಪ್ಪಾ? ತುಂಬ ಸಂತೋಷ ಆಯ್ತಪ್ಪಾ! ಅವಳು ಅಮೇರಿಕದಿಂದ ಫೋನ್ ಮಾಡಿದಾಗ ಪ್ರೇಮಾಗೂ ಹೇಳ್ತೀನಪ್ಪಾ. ಅವಳಿಗೂ ತುಂಬ ಸಂತೋಷ ಆಗುತ್ತಪ್ಪಾ` ಎಂದು ಬಿಡದೇ ಮಾತಾಡಿದರು.
ಪ್ರೇಮಾಳ ಅಮೇರಿಕದ ನಂಬರು ಕೇಳಬೇಕು ಎಂದುಕೊಂಡವನು ಕೇಳದೇ ಹಾಗೆಯೇ ಫೋನು ಇಟ್ಟುಬಿಟ್ಟ.
ಈ ವಾರವೂ ಎರಡು ಪ್ರಸ್ತುತಿಗಳು ಇವೆ. ಮೊದಲು ವತ್ಸಲಾ ರಾಮಮೂರ್ತಿಯವರು ಬರೆದ ಲೇಖನ ಅಪರೂಪದ ಪ್ರತಿಭೆ, ಅಪ್ರತಿಮ ಸಾಧಕಿಯೋರ್ವಳನ್ನು ಕುರಿತಾದ ನಾಟಕದ ವಿಮರ್ಶೆ ಮತ್ತು ಎರಡನೆಯದಾಗಿ ಶಿವ ಮೇಟಿಯವರ ಕತೂಹಲಕಾರಿ ಧಾರಾವಾಹಿ ಕಥೆಯ ಮುಕ್ತಾಯದ ಭಾಗವನ್ನು ಸಹ ಓದಿ ಅವಶ್ಯ ಪ್ರತಿಕ್ರಿಯೆಸಿರಿ. ನಾಗಾಭರಣ ಅವರು ಆಕೆಯ ಕಥೆಯನ್ನು ಹೇಳುವ ವಿಡಿಯೋ ಸಹ ಕೆಳಗೆ ಇದೆ. (ಸಂ)
ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.Wishing you all Merry Christmas and a Happy New Year 2023
1) ವಿದ್ಯಾಸುಂದರಿ ‘ಬೆಂಗಳೂರು ನಾಗರತ್ನಮ್ಮ‘ - ವತ್ಸಲ ರಾಮಮೂರ್ತಿಯವರು ಬರೆದ ಲೇಖನ
ಪೀಠಿಕೆ ನಾನು ಈ ಸಲದ ‘ಅನಿವಾಸಿ‘ಯ ದೀಪಾವಳಿ ಸಮಾರಂಭದ ಕಾರ್ಯಕ್ರಮಕ್ಕೆಅನಾನುಕೂಲತೆಗಳಿಂದ ನನ್ನಿಂದ ಬರಲಾಗಲಿಲ್ಲ.ಅದರಲ್ಲಿ ನಾಗಾಭರಣರ ನಾಟಕ ವಿದ್ಯಾಸುಂದರಿ ‘ಬೆಂಗಳೂರು ನಾಗರತ್ನಮ್ಮ‘ ಬಗ್ಗೆ ವಿಮರ್ಶೆ ಮಾಡಲು ಒಪ್ಪಿಕೊಂಡಿದ್ದೆ. ಅವರ ಜೀವನಚರಿತ್ರೆಯನ್ನು ನಾನಾ ಮೂಲಗಳಿಂದ ಸಂಗ್ರಹಿಸಿದ್ದೆ. ಅದರ ಸಾರಾಂಶ ಕೆಳಗಿದೆ.
ಪ್ರಸಿದ್ಧ ರಂಗಕರ್ಮಿ ಮತ್ತು ಸಿನಿಮಾ ಡೈರೆಕ್ಟರ್ ನಾಗಾಭರಣ ಅವರಿಗೆ ಬೆಂಗಳೂರು ನಾಗರತ್ನಮ್ಮನವರ ಬಗ್ಗೆ ಸಿನಿಮಾ (biopic) ಮಾಡಲು ಕರೆ ಬಂದಿತ್ತು. ಸಿನಿಮಾ ತಯಾರಿಸಲು ಆಕೆಯ ಬಗ್ಗೆ ಸಂಶೋಧನೆ ನಡೆಸಿದ ಅವರು ಶ್ರೀರಾಮರವರ ಇಂಗ್ಲಿಷ್ ಪುಸ್ತಕ Devadasi and Saint -The Life and Times of Nagaratnamma ಮತ್ತು ಮೈಸೂರು ಗುರುಸ್ವಾಮಿಯವರ ಅದೇ ಹೆಸರಿನ ಕಾದಂಬರಿ ಓದಿ ಅವರ ವ್ಯಕ್ತಿತ್ವ ಮತ್ತು ಸಾಧನೆಗಳಿಗೆಮಾರು ಹೋದರು. ಬೈಯೋಪಿಕ್ ತಯಾರಿಸಲು ಕಷ್ಟವೆಂದು ತಿಳಿದು ಕರ್ನಾಟಕ ಸಂಗೀತದ(ಗಮಕ) ಮೂಲಕ ಕನ್ನಡದಲ್ಲಿ ಮ್ಯೂಸಿಕಲ್ ಮಾಡಿದರು. ಅವರು ಎಲ್ಲರೂ ನಾಗರತ್ನಮ್ಮ ಅವರ ಬಗ್ಗೆ ತಿಳಿಯಬೇಕೆಂದಿದ್ದಾರೆ.
ಬೆಂಗಳೂರು ನಾಗರತ್ನಮ್ಮ ಅವರ ಕಿರು ಪರಿಚಯ.
ಅವರು ಹುಟ್ಟಿದ್ದು 1878ರಲ್ಲಿ. ಅವರ ತಾಯಿ ಪುಟ್ಟಲಕ್ಷಮ್ಮ ದೇವದಾಸಿ ಪರಂಪರೆಯವರು. ಅವರತಂದೆ ವಕೀಲ ಸುಬ್ಬರಾಯರು ಅವರನ್ನು ತೊರೆದು ಹೋದ ನಂತರ ಪುಟ್ಟಲಕ್ಷಮ್ಮ ಮೈಸೂರುಆಸ್ಥಾನದಲ್ಲಿ ವಿದ್ವಾಂಸರಾಗಿದ್ಧ ಶಾಸ್ತ್ರಿಯವರ ಆಸರೆ ಪಡೆದರು ಶಾಸ್ತ್ರಿಯವರು ನಾಗರತ್ನಮ್ಮನಿಗೆ ಸಂಸ್ಕೃತ, ನೃತ್ಯ, ಕರ್ನಾಟಕ ಸಂಗೀತ, ಇಂಗ್ಲಿಷ್, ತೆಲಗು ಭಾಷೆಗಳನ್ನೂ ಕಲಿಸಿದರು. ಅವರು ಸಹ ಪುಟ್ಟಲಕ್ಷ್ಮಮ್ಮನವರನ್ನು ಬಿಟ್ಟು ಹೋದರು. ಆಮೇಲೆ ಪುಟ್ಟಲಕ್ಷಮ್ಮ ಅವರು ಮೈಸೂರನ್ನು ಬಿಟ್ಟು ತಮ್ಮ ಸಂಬಂಧಿ ವಯೊಲಿನ್ ವಿದ್ವಾನ್ ವೆಂಕಟೇಶ್ವರಪ್ಪನವರ ಆಶ್ರಯ ಪಡೆದರು. ಅವರ ಆಶ್ರಯದಲ್ಲಿ ಗುರು-ಶಿಷ್ಯೆ ಪರಂಪರೆಯಲ್ಲಿ ಸಂಗೀತ ಮತ್ತು ನೃತ್ಯದಲ್ಲಿ ಪಾರಂಗತರಾದರು. ತಮ್ಮಹದಿನೈದನೆಯ ವಯಸ್ಸಿನಲ್ಲಿ ಸಂಗೀತ ವಿದುಷಿಯಾಗಿ ರಂಗಾರ್ಪಣೆ ಮಾಡಿದರು.
ಅವರು ಸಂಸ್ಕೃತ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಹಾಡುತ್ತಿದ್ದರು. ಅವರ ವಿಶೇಷವಾದ ಕಲೆ ‘ಹರಿಕತೆ’. ಅವರು ಹರಿಕತೆಯನ್ನು ಜನ ಸಾಮಾನ್ಯರಿಗೆ ದೊರಕುವಂತೆಮಾಡಿದರು. ನಂತರ ಬೆಂಗಳೂರಿಗೆ ಬಂದು ಹೈ ಕೋರ್ಟ್ ಜಜ್ ನರಹರಿ ರಾಯರ ಆಶ್ರಯದಲ್ಲಿಅವರ ಪ್ರತಿಭೆಯ ಬಗ್ಗೆ ತಿಳುವಳಿಕೆ ಪಸರಿಸಿತು. ಎಲ್ಲ ಜನರಿಗೂ ಅವರ ಬಗ್ಗೆ ಗೊತ್ತಾಯಿತು. ನರಹರಿರಾಯರು ಅವರ ಪ್ರತಿಭೆ ಮುಂದುವರಿಯಲು ಅವರನ್ನು ಮದರಾಸ್ನಲ್ಲಿ ಮೊದಲಿಯಾರ್ ಅವರ ಆಶ್ರಯಕ್ಕೆ ಕಳಿಸಿದಾಗಿನಿಂದ ಅವರ ಪ್ರತಿಭೆ ಮತ್ತು ಖ್ಯಾತಿ ಮುಗಿಲೆತ್ತರಕ್ಕೆ ಬೆಳೆಯಿತು. ಅನೇಕ ಪ್ರಶಸ್ತಿ, ಬಿರುದು ಬಾವಲಿಗಳು ಅವರನ್ನರಸಿ ಬಂದವು. ಅವರು ಹೇಳಿದ್ದೇನೆಂದರೆ ತ್ಯಾಗರಾಜರು ಅವರ ಕನಸಿನಲ್ಲಿ ಬಂದು ಅವರ ಸ್ಮಾರಕ ಮತ್ತು ಕರ್ನಾಟಕ ಸಂಗೀತ ಪರಂಪರೆಯನ್ನು ಮುಂದುವರಿಸ-ಲು ಹೇಳಿದರಂತೆ. ನಾಗರತಮ್ಮ ಅವರು ತಮ್ಮ ಜೀವನವನ್ನುಕರ್ನಾಟಕ ಸಂಗೀತ ಮತ್ತು ತ್ಯಾಗರಾಜರಕೀರ್ತಗಳನ್ನು ಹೆಸರಿವಾಸಿಯಾಗಿ ಮಾಡಲು ಮುಡುಪಾಗಿಟ್ಟರು. ಪಾಳು ಬಿದ್ದಿದ್ದ ತ್ಯಾಗರಾಜರ ಸಮಾಧಿಯನ್ನು ಪುನರತ್ಥಾನಗೊಳಿಸಿದರು. ಶ್ರೀರಾಮ ಮಂದಿರವನ್ನು ಕಟ್ಟಿಸಿದರು. ಅದಕ್ಕಾಗಿ ತಮ್ಮ ಒಡವೆ ಮತ್ತು ಹಣವನ್ನು (ಆಗಿನ ಕಾಲದಲ್ಲಿ Rs 36,000) ದಾನ ಮಾಡಿದರು.
ನಾಗರತ್ನಮ್ಮನವರ ವ್ಯಕ್ತಿತ್ವ
ಅವರೊಬ್ಬ ಕಲಾವಿದೆ ಮತ್ತು ಕಲಾಭಿಮಾನಿ ಸಹ. ಚಿಕ್ಕ ವಯಸ್ಸಿನಿಂದ ಸಂಗೀತ, ನೃತ್ಯ, ಹರಿಕತೆಗಳಿಗೆಜೀವನವನ್ನೇ ಮುಡುಪಾಗಿಯಿಟ್ಟಿದ್ದರು. ತ್ಯಾಗರಾಜರ ಸಂಗೀತ ಪರಂಪರೆಯನ್ನು ಆರಾಧನೆಯ ಮೂಲಕ ಅಮರವಾಗಿ ಮಾಡಿದರು. ಇವತ್ತಿಗೂ ಅದು ಸಂಗೀತಪ್ರಿಯರಿಗೆ ರಸದೌತಣ. ಅವರು ಕ್ರಿಯಾವಾದಿ (activist). ಅವರ ಕಾಲದಲ್ಲಿ ಹೆಂಗಸರಿಗೆ ಅಷ್ಟು ಮರ್ಯಾದೆ ಇರಲಿಲ್ಲ. ಸಮಾಜದಲ್ಲಿ ಕೀಳು ಸ್ಥಿತಿ. ಅದರಲ್ಲೂ ದೇವದಾಸಿಯರನ್ನು ಕಡೆಗಣಿಸುತ್ತಿದ್ದರು. ಪುರುಷ ಸಂಗೀತಗಾರರು ತ್ಯಾಗರಾಜರ ಆರಾಧನೆಯ ಸಮಯದಲ್ಲಿ ಅವರಿಗೆ ಗುಡಿಯೊಳಗೆ ಹಾಡಲು ಅವಕಾಶ ಕೊಡುತ್ತಿರಲಿಲ್ಲ. ಅದಕ್ಕೆ ಸವಾಲಾಗಿ ಎಂಬಂತೆ ನಾಗರತ್ನಮ್ಮನವರು ತಮ್ಮದೇ ಆದ ಒಂದು ”ಸಂಗೀತ ಸಭೆ”ಯನ್ನು ಗುಡಿಯ ಹಿಂಭಾಗದಲ್ಲಿ ಶುರುಮಾಡಿದರು. ಕಾಲಾನಂತರ ಮಹಿಳೆಯರಿಗೂ ಪುರುಷರ ಸಮನಾಗಿ ಸಮಾರಂಭಗಳಲ್ಲಿ ಭಾಗವಹಿಸಲು ಅವಕಾಶವಾಯ್ತು. ಅವರು ಮೊಟ್ಟ ಮೊದಲ ’ದೇವದಾಸಿ ಸಂಘ’ ಕಟ್ಟಿದರು. ದೇವದಾಸಿಯರು ವೇಶ್ಯೆಯರಲ್ಲ, ಕಲಾಭಿಮಾನಿಗಳೆಂದು ಸಾರಿದರು. ಅವರು ಪ್ರಪ್ರಥಮ ರೆಕಾರ್ಡಿಂಗ್ ಆರ್ಟಿಸ್ಟ್ ಗಳಲ್ಲೊಬ್ಬರು. ಆಗಿನ ಇಡೀ ಮದರಾಸು ಪ್ರೆಸಿಡೆನ್ಸಿಯಲ್ಲೇ ಇನ್ಕಮ್ ಟ್ಯಾಕ್ಸ್ ಕಟ್ಟಿದ ಪ್ರಥಮ ಮಹಿಳೆ ಅವರಾಗಿದ್ದರು. ಅವರು ವಿದ್ವಾಂಸಿ. ಅನೇಕ ಪುಸ್ತಕಗಳನ್ನು ಪ್ರಕಟಿಸಿದ ಮಹಿಳೆಯೆಂಬ ಹೆಗ್ಗಳಿಕೆ ಅವರದು. ಬಹು ಭಾಷಾ ಪರಿಣತಿಯರಾದ ಅವರು ಕವಿತೆ,ಮತ್ತಿತರ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರು 1952ರಲ್ಲಿ ನಿಧನರಾದರು.
Photos: Creative Commons License
ನಾಟಕದ ಬಗ್ಗೆ ಒಂದು ಅನಿಸಿಕೆ:
ನಾಟಕ ರೂಪವನ್ನು ಬರೆದವರು ಪ್ರತಿಭಾ ನಂದಕುಮಾರ್ ಮತ್ತು ಹೂಲಿ ಶೇಖರ್. ಸಂಗೀತ ಸಂಯೋಜನೆ ಮತ್ತು ನಿರ್ಮಾಣ ಡಾ ಪಿ. ರಮಾ ಅವರದು. ಬೆನಕ ಮತ್ತು ಸಂಗೀತ ಸಂಭ್ರಮ ಅವರು ಅರ್ಪಣೆ. ಮೊದಲ ಬಾರಿಗೆ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಸರಿಯಾಗಿ ಮೂರು ವರ್ಷದ ಕೆಳಗೆ 27-12-2019ರಂದು ಪ್ರದರ್ಶನಗೊಂಡಿತು. ಮೊದಲನೆಯ ದೃಶ್ಯದಲ್ಲಿ ಪಿರಿಯ ಕಚ್ಚಿ ಮತ್ತಿ ಚಿನ್ನ ಕಚ್ಚಿ ನಡುವೆ ಆರಾಧನೆಯ ಸಮಯದಲ್ಲಿ ಸುದೀರ್ಘ ವಿವಾದ ನಡೆಯುತ್ತದೆ. ಪುರುಷರ ಪೆರಿಯ ಕಚ್ಚಿ’ ಸ್ತ್ರೀಯರ ಸಂಗ ’ಚಿನ್ನ ಕಚ್ಚಿ’ಗೆ ಹಾಡಲು ಅವಕಾಶ ಕೊಡುತ್ತಿಲ್ಲ. ಆಗ ನಾಗರತ್ನಮ್ಮನವರು ತಮ್ಮ ಸಂಗೀತವನ್ನು ಪ್ರಾರಂಭಿಸುತ್ತಾರೆ. ಬೆಂಕಿಯ ಗಲಾಟೆಯಲ್ಲಿ ಸಮಾರಂಭ ನಿಲ್ಲಿಸಬೇಕಾಗುತ್ತದೆ. (ಬೆಂಕಿ ಹಚ್ಚಿದ್ದು ನಾಗರತ್ನಮ್ಮನವರ ಜಿದ್ದಿನಿಂದ!) ಹೀಗೆ ನಾಟಕ ನಾಗರತ್ನಮ್ಮನವರ ಜೀವನಕತೆ ಮೆಟ್ಟಲು ಮೆಟ್ಟಲಾಗಿ ಗಮಕ ಸಂಗೀತದಲ್ಲಿ ಸಾಗುತ್ತದೆ. ಅದರಲ್ಲಿ ’ನರಹರಿ ರಾಯರ ಮತ್ತು ಪತ್ನಿಯ ಸಂವಾದ,’ ನಾಗರತ್ನಮ್ಮನವರು ಒಡವೆ, ದುಡ್ಡು ಎಲ್ಲವನ್ನು ತ್ಯಾಗರಾಜರ ಆರಾಧನೆಗಾಗಿ ಕೊಡುವದು, ದೇವದಾಸಿಯರಿಗೆ ಸಹಾಯ ಮಾಡುವುದು, ಅವರ ಅಪಾರ ಕೊಡುಗೆಯನ್ನು ಮನಮುಟ್ಟುವಂತೆ ನಾಟಕದಲ್ಲಿ ಪ್ರದರ್ಶಿಸಿದ್ದಾರೆ. ನಾಟಕ ಬಹಳ ಗಂಭೀರವಾದ ವ್ಯಕ್ತಿ ಚಿತ್ರ. ಅದನ್ನು ಐದಾರು ಜನ ಸಂಗೀತಗಾರರು ಪಕ್ಕವಾದ್ಯಗಳ ಜೊತೆಗೆ ಒಂದೇ ರಾಗದಲ್ಲಿ ಅವರ ಜೀವನ ಚರಿತ್ರೆ ವಿವರಿಸುತ್ತಾರೆ. ಕೇಳುಗರಿಗೆ ಗಮಕ ಶೈಲಿ ಅರ್ಥವಾಗದಲ್ಲಿಕಥೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಹುದು. ಲಘು ಹಾಸ್ಯ ಸೇರಿಸಿದ್ದರೆ ಹಗುರವಾಗುತ್ತಿತ್ತೇನೋ ಎನಿಸುತ್ತದೆ. ಮಧ್ಯೆ ನಾಗರತ್ನಮ್ಮನ ಹಾಡುಗಳ, ತುಣುಕುಗಳ ಾವರ ಸಂಗೀತ ತಿಳಿಯದಿದ್ದವರಿಗೆ ಕಷ್ಟವೆನಿಸಿತು. ನಟನಟಿಯರು ಭಾವ್ಪೂರ್ವಗಿ ನಟಿಸಿದ್ದಾರೆ. Screen set up ಆಗಿನ ಕಾಲಕ್ಕೆ ಸರಿಯಾಗಿ ಜೋಡಿಸಿದ್ದಾರೆ. ನಾಗರತನಮ್ಮನವರ ವ್ಯಕ್ತಿತ್ವ ಚೆನ್ನಾಗಿ ಮೂಡಿ ಬಂದಿದೆ. ಅವರ ಜೀವನ ಚರಿತ್ರೆ ತಿಳಿಯದವರಿಗೆ musical follow ಮಾಡೋದು ಸ್ವಲ್ಪ ಕಷ್ಟವಾದರೂ ಕನ್ನಡದಲ್ಲಿ ಈ ಮ್ಯೂಸಿಕಲ್ ಮಾಡಿದ ನಾಗಾಭರಣ ಅವರಿಗೆ ಅನಂತ ವಂದನೆಗಳು
---ವತ್ಸಲ ರಾಮಮೂರ್ತಿ
2) ತಲಾಷ್ -3 - ಶಿವ ಮೇಟಿಯವರ ಕಥೆಯ ಕೊನೆಯ ಭಾಗ
(ಇಲ್ಲಿಯ ವರೆಗೆ: ಅಂಜಲಿ ಎನ್ನುವ ಶಾಲಾಬಾಲಕಿ ಇನ್ನೂ ಶಾಲೆಯಿಂದ ಮನೆಗೆ ಬಂದಿಲ್ಲ. ಆಲದ ಮರದ ಕೆಳಗೆ ಕುಳಿತ ಹುಚ್ಚಪ್ಪನ ಭವಿಷ್ಯವಾಣಿಯ ಜಾಡು ಹಿಡಿಯಬೇಕೆ? ಎನ್ನುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ ತಂದೆ ತಾಯಿಗಳು. ಮುಂದೆ ಓದಿ ...)
ವಸುಂಧರೆಯ ಮನಸಿನಲ್ಲಿ ಹುಚ್ಚಪ್ಪನ ಮಾತುಗಳು ಪ್ರತಿಧ್ವನಿಸುತಿದ್ದವು . ಅವನಾಡುವ ಪದಗಳು ಒಗಟಿನಂತೆ ಕಂಡರೂ, ಒರೆ ಹಚ್ಚಿ ನೋಡಿದಾಗ ಒಂದೊಂದು ಪದಕ್ಕೂ ಅರ್ಥವಿರುತ್ತಿತ್ತು . ಉತ್ತರ ದಿಕ್ಕಿನ ಕಡೆ ಆರು ಮೈಲಿನ ಅಂತರದಲ್ಲಿ ಅಂತದೇನು ವಿಶೇಷವಿದೆ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಂಡಳು. ಅವಳ ತಲೆಗೆ ಹೊಳೆದಿದ್ದು ಪಕ್ಕದ ಊರಿನ ಕಾಡಿನ ಆದಿಯಲ್ಲಿ ಇರುವ 'ದುರ್ಗಿ'ಯ ಗುಡಿ. ಕುರಿ ಕೋಣಗಳ ಬಲಿಗಳೊಂದಿಗೆ ಭರ್ಜರಿಯಾಗಿ ವರ್ಷಕ್ಕೊಮ್ಮೆ ನಡೆಯುತಿದ್ದ ದುರ್ಗಿಯ ಜಾತ್ರೆಗೆ ಅವಳೂ ಸಹ ಕೆಲವು ಸಲ ಹೋಗಿದ್ದಳು. ಆದರೆ ಅಂಜಲಿಗೂ ದುರ್ಗಿಯ ಗುಡಿಗೂ ಏನು ಸಂಬಂಧ?
ಅಷ್ಟರಲ್ಲಿಯೇ ರಾಮುನ ಫೋನು ಒದರತೊಡಗಿತ್ತು.
ಪೊಲೀಸ್ ಸ್ಟೇಷನ್ ನಿಂದ ಕರೆ: " ಸರ್ ಅಂಜಲಿಯ ಟೀಚರ್ ಮತ್ತು ಅಸಿಸ್ಟಂಟ್ ಇಬ್ಬರು ಸವದತ್ತಿಯಲ್ಲಿ ಸಿಕ್ಕಿದ್ದಾರೆ ವಿಚಾರಣೆ ಮುಂದುವರೆದಿದೆ; ಇಷ್ಟರಲ್ಲಿಯೇ ಎಲ್ಲಾ ಗೊತ್ತಾಗಬಹುದು, ನಿಮಗೆ ಮತ್ತೆ ಕರೆ ಮಾಡುತ್ತೇವೆ."
" ದಯವಿಟ್ಟು ಕರೆ ಮಾಡಿ " ಎಂದು ಹೇಳಿದ ರಾಮುವಿನ ಮುಖದಲ್ಲಿ ಸ್ವಲ್ಪ ಭರವಸೆಯ ಚಿನ್ಹೆ ಮೂಡಿತ್ತು.
" ವಸುಂಧರೆ ನಿನಗೇನು ಗೊತ್ತಾಗಿದೆ ಎಂದು ನನಗೂ ಸ್ವಲ್ಪ ಹೇಳಿಬಿಡೆ " ಎಂದು ಹೆಂಡತಿಯನ್ನು ಕೇಳಿದ.
"ಇಷ್ಟರಲ್ಲಿಯೇ ಎಲ್ಲಾ ಗೊತ್ತಾಗುತ್ತೆ , ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ " ಎಂದು ಅನ್ನುವಷ್ಟರಲ್ಲಿಯೇ ಅವರಿಬ್ಬರೂ ಮನೆಯನ್ನು ಸೇರಿದ್ದರು.
' ಅರಿಷಿಣ ಕುಂಕುಮ ------- ಅರಿಷಿಣ ಕುಂಕುಮ' ಮತ್ತೆ ಹುಚ್ಚಪ್ಪನ ಮಾತುಗಳು ವಸುಂಧರೆಯ ಕಿವಿಯಲ್ಲಿ . ನೇರವಾಗಿ ದೇವರ ಕೋಣೆಗೆ ಹೋದಳು. ದೊಡ್ಡ ಕುಂಕುಮ ಮತ್ತು ಅರಿಷಿಣದ ಭರಣಿಗಳು ಕೋಣೆಯಿಂದ ಮಾಯವಾಗಿದ್ದವು. ವಸುಂಧರೆಯ ಮನಸಿನಲ್ಲಿ ಇದ್ದ ಸಂಶಯ ಇನ್ನಷ್ಟು ಗಟ್ಟಿಯಾಯಿತು . ಅತ್ತೆಯ ಕೋಣೆಯ ಬಾಗಿಲನ್ನು ತೆರೆದಳು . ಮಂಚದ ಮೇಲೆ ತೆರೆದ ಪುಸ್ತಕಗಳು ಹರಡಿದ್ದವು. ಕೆಲವು ಪುಟಗಳಲ್ಲಿ ಪೆನ್ನಿನಿಂದ ಮಾಡಿದ ಗುರುತುಗಳಿದ್ದವು , ಪುಟಗಳ ಅಂಚಿನಲ್ಲಿ ಅದೇನೋ ಟಿಪ್ಪಣಿಗಳಿದ್ದವು. ಅತ್ತೆಯು ಅದಾವುದೋ ' ತಲಾಷ್' ನಲ್ಲಿ ತೊಡಗಿದ್ದಳು ಎಂಬುವದರಲ್ಲಿ ಸಂಶಯವಿರಲಿಲ್ಲ.
ಇತ್ತೀಚಿನ ದಿನಗಳಲ್ಲಿ ಅತ್ತೆಯಲ್ಲಿ ಆಗುತ್ತಿರುವ ವ್ಯತ್ಯಾಸವನ್ನು ವಸುಂಧರೆ ಸೂಕ್ಷ್ಮವಾಗಿ ನಿರೀಕ್ಷಿಸುತಿದ್ದಳು. ಕೋಣೆಯಿಂದ ಹೊರಗೆ ಬರುವದು ಕಡಿಮೆ ---- ಅದೇನೋ ಓದುತ್ತಿದ್ದಳು. ಕೆಲವು ಸಲ ತನ್ನ ಮನಸ್ಸಿನಲ್ಲಿಯೇ ಅದಾವುದೋ ಮಂತ್ರವನ್ನು ಜಪಿಸುತಿದ್ದಳು
--- ಕೆಲವು ಸಲ ಯಾರದೋ ಜೊತೆಗೆ ತಾಸುಗಟ್ಟಲೆ ಫೋನಿನಲ್ಲಿ ಮಾತನಾಡುತ್ತಿದ್ದಳು. ರಾಮುನ ಜೊತೆಗೂ ಮಾತು ಕಡಿಮೆಯಾಗಿತ್ತು . ವಸುಂಧರೆ ಅಂದಿದ್ದಳು " ಅತ್ತೆ ಯಾಕೋ ಇತ್ತೀಚಲಾಗಿ ಒಂದ ಥರಾ ಇದ್ದಾಳ."
"ವಯಸ್ಸಿಗೆ ತಕ್ಕ ಬದಲಾವಣೆ ಇರಬಹುದು ಬಿಡು " ಎಂದು ರಾಮು ಮಾತು ಮರೆಸಿದ್ದ.
ಎರಡು ದಿನಗಳ ಮುಂಚೆ ಅತ್ತೆ ಧಾರವಾಡದಲ್ಲಿರುವ ತನ್ನ ತಮ್ಮನ ಮನೆಗೆ ಹೋಗಿದ್ದಳು ವಸುಂಧರೆ ಕೋಣೆಯ ಹೊರಗೆ ಬಂದು ರಾಮುನಿಗೆ ಹೇಳುತ್ತಿದ್ದಳು:
" ರೀ -- ಅತ್ತೆಗೆ ತಕ್ಷಣವೇ ಫೋನು ಮಾಡಿರಿ "
" ಅವಳಿಗೆ ಫೋನು ಮಾಡಿದರೆ ಏನು ಸಿಗುತ್ತೆ?" ಎಂದ ರಾಮು.
" ರೀ -- ನಿಮಗ ಗೊತ್ತಾಗುದಿಲ್ಲ , ಜಲ್ದಿ ಫೋನ್ ಮಾಡರಿ."
ಹೆಂಡತಿಯ ಬಲವಂತಿಕೆಗೆ ರಾಮು ತಾಯಿಗೆ ಫೋನು ಮಾಡಿದ, ಆದರೆ ತಾಯಿ ಮಾತ್ರ ಫೋನು ಎತ್ತಲಿಲ್ಲ. ರಾಮುನಿಗೆ ಯಾಕೋ ಭಯವಾಯಿತು.
ಧಾರವಾಡದ ಮಾವನಿಗೆ ಫೋನು ಮಾಡಿದ . ಉತ್ತರವನ್ನು ಕೇಳಿ ಇನ್ನೂ ಭಯವಾಯಿತು . ಮಾವ ಹೇಳಿದ್ದ - ಅವಳು ಧಾರವಾಡಕ್ಕೆ ಬಂದೆ ಇಲ್ಲವೆಂದು.
"ವಸುಂಧರಾ! ಅವ್ವ ಧಾರವಾಡಕ್ಕೆ ಹೋಗೆ ಇಲ್ಲವಂತೆ , ನನಗ್ಯಾಕೊ ಭಯ ಆಗತಾ ಇದೆ , ಅದೆಲ್ಲಿ ಹೋದಳೇನೋ?"
" ರೀ -- ನಿಮಗಿಂತ ಜಾಸ್ತಿ ಭಯ ನನಗ ಆಗೈತಿ. "
'ಅರೆ ರಾತ್ರಿ, ಟೈಮ್ ಇಲ್ಲ ' ಹುಚ್ಚಪ್ಪನ ಕೊನೆಯ ಮಾತುಗಳು ವಸುಂಧರೆ ಟೈಮ್ ನೋಡಿದಳು, ಆಗಲೇ ರಾತ್ರಿ ಒಂಭತ್ತು ಹತ್ತಿರವಾಗುತ್ತಿತ್ತು .
"ರೀ -- ಟೈಮ್ ಜಾಸ್ತಿ ಇಲ್ಲ ಬೇಗನೆ ನಡೀರಿ."
"ಎಲ್ಲಿಗೆ ಹೋಗಬೇಕೆ ? ನನಗೆ ಸ್ವಲ್ಪನೂ ಅರ್ಥ ಆಗತಾ ಇಲ್ಲ."
"ನಿಮ್ಮ ಬೈಕ್ ತೆಗಿರಿ , ದುರ್ಗಿ ಗುಡಿಗೆ ಹೋಗಬೇಕು."
"ನಿನಗೇನು ತಲೆ ಕೆಟ್ಟಿದೆ ಏನೇ ? ಈ ರಾತ್ರಿಯಲ್ಲಿ ದುರ್ಗಿ ಗುಡಿಯಲ್ಲಿ ಏನು ಮಾಡಬೇಕು?"
"ನನಗೆ ತಲೆ ಕೆಟ್ಟಿಲ್ಲ , ನಿಮ್ಮ ತಾಯಿಗೆ ತಲೆ ಕೆಟ್ಟಿದೆ, ಸಮಯ ಜಾಸ್ತಿ ಇಲ್ಲ ಜಲ್ದಿ ನಡೀರಿ."
ಉತ್ತರವಿಲ್ಲದೆ ರಾಮು ತನ್ನ ಬೈಕ್ ಅನ್ನು ಹೊರಗೆ ತೆಗೆದ. ಗಾಬರಿಯಲ್ಲಿದ್ದ ವಸುಂಧರೆಯನ್ನು ಕುಳ್ಳರಿಸಿಕೊಂಡು ದುರ್ಗಿಯ ಗುಡಿಯತ್ತ ಸಾಗಿದ.
ಆಲದ ಕಟ್ಟೆಯ ಮೇಲೆ ಅರೆಬೆಳಕಿನಲ್ಲಿ ಕುಳಿತಿದ್ದ ಹುಚ್ಚಪ್ಪ ಇವರ ಬೈಕ್ ಅನ್ನು ಕಂಡು ಒದರುತ್ತಿದ್ದ "ಸಿಗತಾಳ್ ---- ಸಿಗತಾಳ್ --- ಅಂಜಲಿ ಸಿಗತಾಳ್ " ಅರೆಬೆಳಕಿನ ಅಡ್ಡ ರೋಡಿನಲ್ಲಿ ಸರ್ಕಸ್ ಮಾಡುತ್ತ ಬೈಕು ಗುಡಿಯ ಹತ್ತಿರ ಬಂದಿತ್ತು ವಸುಂಧರೆ ಬೈಕ್ ಅನ್ನು ದೂರವೇ ನಿಲ್ಲಿಸಲು ಹೇಳಿದಳು.
ಸದ್ದಿಲ್ಲದೆ ನಿಧಾನವಾಗಿ ನಡೆಯುತ್ತಾ ಗುಡಿಯ ಕಡೆಗೆ ಸಾಗಿದರು. ಗುಡಿಯ ಮುಂದೆ ಬೆಂಕಿ ಉರಿಯುತ್ತಿತ್ತು, ಅದೇನೋ ಮಂತ್ರ ಪಠನೆ ಆಗುತಿತ್ತು, ನಡು ನಡುವೆ ಘಂಟೆಯ ಧ್ವನಿ ಕೇಳಿಸುತಿತ್ತು . ಇನ್ನೂ ಹತ್ತಿರ ಬಂದಾಗ ಯಜ್ಞದ ಬೆಂಕಿಯ ಮುಂದೆ ಅತ್ತೆಯ ಮುಖ ಸ್ಪಷ್ಟವಾಗಿ ಕಾಣಿಸತೊಡಗಿತು. ಇನ್ನೊಂದು ಕಡೆ ಒಬ್ಬ ವ್ಯಕ್ತಿ ಬೆಂಕಿಗೆ ತುಪ್ಪ ಸುರುವುತ್ತ ಮಂತ್ರ ಪಠನೆ ಮಾಡುತಿದ್ದ ಇಬ್ಬರ ನಡುವೆ ಅಂಜಲಿ ಕುಳಿತಿದ್ದಳು . ಆಕೆಯ ಮೈ ತುಂಬ ಅರಿಶಿಣ ಮತ್ತು ಕುಂಕುಮವನ್ನು ಸವರಿದ್ದರು . ಬಾಯಿಗೆ ಅರಿವೆಯನ್ನು ಕಟ್ಟಿದ್ದರು.
ಇದೆಲ್ಲವನ್ನು ಕಂಡು ರೊಚ್ಚಿಗೆದ್ದ ವಸುಂಧರೆ "ಸಾಕು ಮಾಡ್ರಿ-- ಸಾಕು ಮಾಡ್ರಿ -- ನಿಮ್ಮನ್ನು ಸುಮ್ಮನೆ ಬಿಡುಲ್ಲಾ" ಎಂದು ಅವರತ್ತ ಧಾವಿಸಿದಳು.
ಹಠಾತನೆ ಇವರನ್ನು ಕಂಡು ಬೆಚ್ಚಿ ಬಿದ್ದ ಅವರಿಗೆ ಏನು ಮಾಡಬೇಕೆಂದು ತೋರಲಿಲ್ಲ. ಮಂತ್ರ ಪಠಿಸುತ್ತಿದ್ದ ವ್ಯಕ್ತಿ ಕತ್ತಲಲ್ಲಿ ಓಡಲು ಪ್ರಾರಂಭಿಸಿದ, ರಾಮು ಅವನನ್ನು ಹಿಡಿಯಲು ಹಿಂಬಾಲಿಸಿದ್ದ. ಅಂಜಲಿ ಅಳುತ್ತ ಅಮ್ಮನನ್ನು ತಬ್ಬಿಕೊಂಡಳು. ಅತ್ತೆ ಹುಚ್ಚಿಯಂತೆ ಜೋಲಿ ಹೊಡಿಯುತಿದ್ದಳು, ಒಮ್ಮೆ ಗಟ್ಟಿಯಾಗಿ ನಕ್ಕು ಮತ್ತೊಮ್ಮೆ ಜೋರಾಗಿ ಅಳುತೊಡಗಿದಳು. ಉರಿಯುವ ಜ್ವಾಲೆಯ ಮುಂದೆ ಕುಂಕುಮಿನಿಂದ ಅಲಂಕೃತವಾದ ಹರಿತವಾದ ಆಯುಧ ಥಳ ಥಳಿಸುತಿತ್ತು. ಅತ್ತೆಯ ಮೂಢ ನಂಬಿಕೆ ಮತ್ತು ಕಂದಾಚಾರದ ' ತಲಾಷ್ ' ವ್ಯರ್ಥವಾಗಿತ್ತು!
( ಮುಗಿಯಿತು )
---ಶಿವ ಮೇಟಿ
ಕಥೆ ಇಲ್ಲಿ ಮುಗಿದರು ಮಾತ್ರ ನಿಜ ಜೀವನದಲ್ಲಿ ನೀವು ಇಂಥ ಅಸಹ್ಯಯಕರ ಘಟನೆಯನ್ನು ಕೇಳುವದು ಮತ್ತು ಓದುವುದು ಎಂದೂ ಮುಗಿಯುವದಿಲ್ಲ!
ನಾಗಾಭರಣ ಅವರು ನವೆಂಬರ್ 2022ರಲ್ಲಿ ”YSKB ಯೊಡನೆ ಸಂವಾದ”ದಲ್ಲಿ ಬೆಂಗಳೂರು ನಾಗರತ್ನಮ್ಮನವರ ಹಾಡಿನ ತುಣುಕಿನ ನಂತರ ಅವರ ಕಥೆ ಹೇಳುತ್ತಿದ್ದಾರೆ …
ಈ ವಾರದ ಅಂಕಣದ ಎರಡನೆಯ ಭಾಗದಲ್ಲಿ ಓದುಗರು ಕುತೂಹಲದಿಂದ ಕಾಯುತ್ತಿರುವ ಶಿವ ಮೇಟಿಯವರ ’ತಲಾಷ್’ ಕಥೆಯ ಎರಡನೆಯ ಭಾಗ ಕಳೆದ ವಾರದಿಂದ ಮುಂದುವರೆದಿದೆ. ಅದಕ್ಕೂ ಮೊದಲು ಶ್ರೀವತ್ಸ ದೇಸಾಯಿಯವರು ಬರೆದ ಇಂಗ್ಲೆಂಡಿನ ಮಧ್ಯಯುಗದ ಅರಸನ ದಂತದ ಕಥೆಯನ್ನು ಓದುಗರಿಗಾಗಿ ಇಡಲಾಗುತ್ತಿದೆ. ಫ್ರಾನ್ಸ್ ಮೂಲದ ಪ್ಲಾಂಟಾಂಜೆನೆಟ್ ವಂಶದ ಕೊನೆಯ ಅರಸ ಮೂರನೆಯ ರಿಚರ್ಡ್ ದೊರೆ ಕಾರಣಾಂತರಗಳಿಂದ ಆ ಕಾಲದ ಇತಿಹಾಸದಲ್ಲಿ ಪ್ರಸಿದ್ಧನೂ ನಿಜ, ಕುಪ್ರಸಿದ್ಧನೂ ಸಹ. ನೂರು ವರ್ಷಗಳ ಕಾಲ (1337-1453) ಫ್ರಾನ್ಸಿನೊಡನೆ ಈ ದೇಶ ಬಿಟ್ಟೂ ಬಿಡದೆ ಸಂಗ್ರಾಮದಲ್ಲಿ ತೊಡಗಿತ್ತು. ಅದು ಮುಗಿಯುತ್ತಿದ್ದಂತೆಯೇ War of the Roses ಪ್ರಾರಂಭವಾಗಿತ್ತು.ಆ ಸಮಯದಲ್ಲಿಯೇ ಹುಟ್ಟಿದ ಮೂರನೆಯ ರಿಚರ್ಡ್ ಮೂರು ದಶಕಗಳ ನಂತರ ಪಟ್ಟಕ್ಕೇರಿದರೂ ಆತ ಆಳಿದ್ದು ಕೇವಲ ಎರಡೂವರೆ ವರ್ಷ(1483-1485). ಆತ ತನ್ನ ಅಣ್ಣನ ಇಬ್ಬರ ಮಕ್ಕಳನ್ನು ಟಾವರ್ ಆಫ್ ಲಂಡನ್ನಿನಲ್ಲಿ ಸೆರೆಹಿಡಿದಿಟ್ಟಿದ್ದ, ಆತ ಗೂನನಲ್ಲದಿದ್ದರೂ ಆತನ ಬೆನ್ನು ಬಾಗಿತ್ತು, ಒಂದು ಕೈ ಮುರುಟಿತ್ತು, ಒಂದು ಕಾಲಿನಲ್ಲಿ ಕುಂಟುತ್ತಿದ್ದ, ಹೀಗೆಲ್ಲ ವರ್ಣಿಸಿ ಆತನನ್ನು ಖಳನಾಯಕನನ್ನಾಗಿ ಮಾಡಿ ಹೀಗಳೆದವರಲ್ಲಿ ಶೇಕ್ಸ್ಪಿಯರ್ ಮಹಾ ಕವಿ ಸಹ ಒಬ್ಬ. ಆತನ ಜೀವನ ಮತ್ತು ಮೃತ್ಯು ಅನೇಕ ದಂತ ಕಥೆಗಳನ್ನು ಹುಟ್ಟು ಹಾಕಿತ್ತು. ಆತನ ಬಗ್ಗೆ ಇತಿಹಾಸಕ್ತರ ಕುತೂಹಲ ಇತ್ತೀಚಿನ ವರೆಗೂ ಇತ್ತು; ಇನ್ನೂ ಇದೆ. ಆಧುನಿಕ ವಿಜ್ಞಾನದ ಸಂಶೋಧನೆ ಮತ್ತು ತಂತ್ರಗಳಿಂದ ಆತನ ಅಂತ್ಯದ ಬಗೆಗೆ ಬೆಳಕು ಚೆಲ್ಲುವ ಸ್ವಾರಸ್ಯಕರ ವೃತ್ತಾಂತವನ್ನು ನಿಮ್ಮೆದುರು ಇಡುವ ಪ್ರಯತ್ನ ಈ ಕೆಳಗಿನ ಲೇಖನದಲ್ಲಿದೆ. ಒಂದು ವಿಡಿಯೋ ಸಹ ಇದೆ. ಓದುಗರಿಗೆ ಹಿಡಿಸೀತೆಂಬ ಭರವಸೆಯಿದೆ. ಹೆಚ್ಚಿನ ಮಾಹಿತಿಗೆ ಲೆಸ್ಟರಿಗೆ ಭೇಟಿ ಕೊಡಬಹುದು. (ಸಂ )
1 ”ಕಾರ್ ಪಾರ್ಕ್ ರಾಜ’ -ಒಂದು ದಂತದ ಕಥೆ
ತನ್ನ ಮೈ ಮೇಲೆ ಸಾವಿರಾರು ಕಾರುಗಳು ಬಂದು, ನಿಂತು ದಾಟಿ ಹೋಗುತ್ತಿದ್ದರೂ ಐದು ಶತಮಾನಕ್ಕೂ ಮೇಲು ತನ್ನ ರಹಸ್ಯವನ್ನು R- ಅಡಿ ಬಚ್ಚಿಟ್ಟುಕೊಂಡು ಪವಡಿಸಿದ್ದ ಒಬ್ಬ ಅರಸನ ಕಥೆ ಇದು. ಒಬ್ಬ ಮೊಮ್ಮಗ ಅಜ್ಜನಿಗೆ ಹೇಳಿದ ’ದಂತ’ ಕಥೆ ಇದು. ಒಬ್ಬ ’ಕಿಂಗ್’ ಇನ್ನೊಬ್ಬ ಕಿಂಗನ ಅಸ್ಮಿತೆಯನ್ನು ಬಯಲು ಮಾಡಿದ ಕಥೆ. ಆಧುನಿಕ ವಿಜ್ಞಾನದ ಯಶೋಗಾಥೆ ಇದು!
ಇದು ಹದಿನೈದನೆಯ ಶತಮಾನದ ಇಂಗ್ಲೆಂಡಿನ ಒಬ್ಬ ಅರಸನ ದಂತದ ಕಥೆ! ಕ್ರಿ ಶ 1485ರಲ್ಲಿ ಇಂಗ್ಲೆಂಡಿನ ಮಧ್ಯಭಾಗದಲ್ಲಿ ಲೆಸ್ಟರ್ ಪಕ್ಕದ ಬಾಸ್ವರ್ತ್(Bosworth) ಕಾಳಗದಲ್ಲಿ ಮೂರನೆಯ ರಿಚರ್ಡ್ ರಾಜ (ಎಡಗಡೆಯ ಚಿತ್ರ) ಬಿದ್ದು ಕುದುರೆಯನ್ನು ಕಳಕೊಂಡು ಕಾದುತ್ತಲೇ ಲ್ಯಾಂಕಾಸ್ಟ್ರಿಯನ್ ರಿಚ್ಮಂಡ್ (ಮುಂದೆ ಏಳನೆಯ ಹೆನ್ರಿ) ಸೈನ್ಯದ ಪ್ರಹಾರದಿಂದ ಮೃತನಾದ. ಶೇಕ್ಸ್ಪಿಯರನ ಅದೇ ಹೆಸರಿನ ನಾಟಕದಲ್ಲಿ ಬರೆದಂತೆ “A horse, a horse, My kingdom for a horse” ಅಂತ ಪರಿತಪಿಸುತ್ತ ಮಡಿದ. ಐದೂವರೆ ನೂರು ವರ್ಷಗಳ ವರೆಗೆ ಆತನ ದೇಹದ ಅವಶೇಷಗಳ ಬಗ್ಗೆ ಊಹಾ ಪೋಹವೇ ಬೆಳೆದು ದಂತ ಕಥೆಗಳು ಹುಟ್ಟಿಕೊಡಿದ್ದವು. ಆತನೆ ಆಕಾರ-ಸ್ವಭಾವಗಳ ಬಗ್ಗೆ ಮಹಾಕವಿ ಶೇಕ್ಸ್ಪಿಯರ್ ಸಹ ಆ ದಂತಕಥೆಗಳ ಆಧಾರದ ಮೇಲೆ ತನ್ನ ನಾಟಕದಲ್ಲಿ ಆತನ ಅಸಾಮಂಜಸ ವರ್ಣನೆಯನ್ನೇ ಕೊಟ್ಟಿದ್ದಾನೆ. ಆತನ ಅಸ್ಥಿಗಳು 2012ರಲ್ಲಿ ಲೆಸ್ಟರ್ ಮಹಾನಗರದ ಮಧ್ಯದ ಒಂದು ಕಾರ್ ಪಾರ್ಕಿನಡಿಯಲ್ಲಿ ಆರ್ (R) ಅಕ್ಷರದಡಿ ಆರಡಿ ಕೆಳಗೆ ಸಿಕ್ಕವು. ಈಗ ಈ ವಿಸ್ಮಯಕಾರಕ, ರೋಚಕ ಕಥೆ ಇತಿಹಾಸಕಾರರನ್ನು ನಿರಂತರವಾಗಿ ಆಕರ್ಷಿಸುತ್ತಿದೆಯಲ್ಲದೆ ಅರ್ಕಿಯಾಲಜಿಸ್ಟ್ ಮತ್ತು ವಿಜ್ಞಾನಿಗಳ ಕುತೂಹಲವನ್ನೂ ಕೆರಳಿಸಿದ ಒಂದು ಕಥೆಯಾಗಿದೆ. ಆತನ ಕಥೆಯನ್ನು ಹೇಳುವ ಲೆಸ್ಟರ್ ಮ್ಯೂಸಿಯಮ್ ’RIII’ಗೆ ಈಗ ತಂಡೋಪ ತಂಡವಾಗಿ ಜನರು ಮತ್ತು ಶಾಲಾ ಮಕ್ಕಳೂ ಸಹ ಭೇಟಿ ಕೊಡುತ್ತಿದ್ದಾರೆ
ಫ್ರಾನ್ಸ್ ಮೂಲದ ಪ್ಲಾಂಟಾಜೆನೆಟ್ (Plantangenet) ಮನೆತನದ ಕೊನೆಯ ಅರಸ ರಿಚರ್ಡ್ನ ಅಸ್ಥಿ ಮತ್ತಿತರ ಪಳೆಯುಳಿಕೆಗಳು ಸಿಕ್ಕ ಜಾಗವನ್ನು ಸಹ ನೆಲದ ಮೇಲಿನ ಗಾಜಿನ ಮುಖಾಂತರ ನೋಡಬಹುದು ಅಂತ ತಿಳಿದಿದ್ದರಿಂದ ಬಲು ಉತ್ಸುಕನಾಗಿದ್ದ ಹತ್ತು ವರ್ಷದ ನನ್ನ ಮೊಮ್ಮಗ ಅಕ್ಷಯನನ್ನು ಕರೆದು ಕೊಂಡು ಕಳೆದ ತಿಂಗಳು ಲೆಸ್ಟರ್ ಊರಿನ ಮ್ಯೂಸಿಯಮ್ಗೆ ಹೊರಟೆ. ಶಾಲೆಯಲ್ಲಿ ಮೊದಲೇ ಆ ಬಗ್ಗೆ ಕಲಿತಿದ್ದ ಆತನೇ ನನಗೆ ’ಆರ’ಡಿ (R-ಅಡಿ) ಹೂತ ರಾಜನ ವಿಷಯ ಹೇಳಿದ್ದು. ಈಗಿನ ಮಹಾ ನಗರದ ಮಧ್ಯವರ್ತಿ ಕಾರ್ ರ್ಪಾರ್ಕಿನ ಅಡಿಯಲ್ಲಿ ಹಿಂದಿನ ಕಾಲದಲ್ಲಿ ನೆಲಸಮವಾದ ಗ್ರೇ ಫ್ರಯರ್ಸ್ ಚರ್ಚಿನಲ್ಲೇ ಹದಿನೈದನೆಯ ಶತಮಾನದಲ್ಲಿ ರಾಜನನ್ನು ಅವಸರದಲ್ಲಿ ದಫನ ಮಾಡಿದ ಹಳೆಯ ಕೆಲವು ದಾಖಲೆಗಳಿದ್ದವು. ಅದನ್ನು ಖಚಿತ ಪಡಿಸಿಕೊಳ್ಳಲು ಮುಮ್ಮಡಿ ರಿಚರ್ಡ್ ಸಂಸ್ಥೆ 13,000 ಪೌಂಡುಗಳ ಹಣ ಸಂಗ್ರಹ ಮಾಡಿ ನಗರ ಪಾಲಿಕೆಯ ಅನುಮತಿ ಪಡೆದು ಜಿ ಪಿ ಆರ್ ರಾಡಾರ್ ಸಹಾಯದಿಂದ ಆತ ಹೂತಿರುವ ಜಾಗದ ಪತ್ತೆ ಹಚ್ಚಿದ ನಂತರ ಉತ್ಖನನ ಪ್ರಾರಂಭವಾಯಿತು. ಮೊದಲು ಸಿಕ್ಕದ್ದು ತೊಡೆಯ ಎಲುವು. ಬೆನ್ನೆಲುಬು ಬಾಗಿತ್ತು (scoliosis). ತಲೆಬುರುಡೆಯ ಕೆಳಭಾಗದಲ್ಲಿ ಆಳವಾದ ಗಾಯಗಳ ಕುರುಹುಗಳಿದ್ದವು. ಶೇಕ್ಸ್ಪಿಯರ್ ಸಹ ಆಗಿನ ಕಾಲದ ಪ್ರಚಲಿತ ವಿದ್ಯಮಾನಕ್ಕನುಗುಣವಾಗಿ ತನ್ನ ’ಕಿಂಗ್ ರಿಚರ್ಡ್’ ನಾಟಕದಲ್ಲಿ ಆತನಿಗೆ, ’ಗೂನ, ಒಂದು ಕೈ ಮುರುಟಿತ್ತು, ಒಂದು ಕಾಲು ಕುಂಟುತ್ತಿತ್ತು’ ಎನ್ನುವ ವಿಕಾರ ರೂಪ ಕೊಟ್ಟಿದ್ದಲ್ಲದೇ ಅವನನ್ನು ಒಬ್ಬ ಖಳನಾಯಕನನ್ನಾಗಿ ವರ್ಣಿಸಿದ್ದಾನೆ (ಮೊದಲ ಮೂವತ್ತು ಸಾಲುಗಳಲ್ಲಿ). ತನ್ನ ಅಣ್ಣನ ಇಬ್ಬರು ಎಳೆಯ ಮಕ್ಕಳನ್ನು (”Princes in the Tower”) ಸೆರೆಹಿಡಿದಿಟ್ಟ ನಂತರ ಬಹುಶಃ ಕೊಲ್ಲಿಸಿ ಕುಖ್ಯಾತನನ್ನಾಗಿ ಮಾಡಿದ್ದಾನೆ. ’ನಾನು ಹೊರಟರೆ ನಾಯಿಗಳೂ ಸಹ ನಿಂತು ಬೊಗಳುತ್ತವೆ!’ ಎನ್ನುವ ಆತನ ಸ್ವಗತ ಆ ನಾಟಕದಲ್ಲಿ ಹೀಗಿದೆ:
Deform’d, unfinish’d, sent before my time
Into this breathing world, scarce half made up(Richard III, 1.1.14-31) ಇತ್ತೀಚಿನ ಸಂಶೋಧಕರ ಅಭಿಪ್ರಾಯದ ಪ್ರಕಾರ ಇದು ಅತಿರೇಕದ ವರ್ಣನೆ, ರಿಚರ್ಡನ ಮರಣದ ನಂತರ ಬಂದ ಟ್ಯೂಡರ್ ಮನೆತನದ ಪರವಾಗಿದ್ದವರ ಪ್ರಚಾರದಿಂದ ಪ್ರೇರಿತವಾದ ತೇಜೊವಧೆ ಎನ್ನುವ ಮತಕ್ಕೆ ಬಂದಿದ್ದಾರೆ.
ಶಾಲಾ ಬಾಲಕ ಗಾಜಿನಡಿಯಲ್ಲಿಯ ಅಸ್ಥಿಯನ್ನು ನೋಡುತ್ತಿರುವ ದೃಶ್ಯಬಾಗಿದ ಬೆನ್ನೆಲುಬಿನ ಅರಸ ರಿಚರ್ಡ್ನ ಅಸ್ಥಿ
ಲೆಸ್ಟರ್ (Leicester) ಐತಿಹಾಸಿಕ ಸ್ಥಳ
ಇಂಗ್ಲೆಂಡಿನ ಮಧ್ಯದಲ್ಲಿರುವ ಈ ಮಹಾನಗರ ಇತಿಹಾಸದ ಕೇಂದ್ರಬಿಂದುವಾಗಿ ಉಲ್ಲೇಖ ಪಡೆದಿದೆ. ಇತ್ತೀಚೆಗಷ್ಟೇ 2022 ರ ದೀಪಾವಳಿಗೆ ಮುಂಚೆ ಇಲ್ಲಿ ಮತೀಯ ಗಲಭೆಗಳುಂಟಾಗಿ ಜಗತ್ತಿನಲ್ಲೆಲ್ಲ ಹೆಡ್ಲೈನ್ ಸುದ್ದಿ ಮಾಡಿತ್ತು. ಸದ್ಯಕ್ಕಂತೂ ಇಲ್ಲಿ ಶಾಂತಿ ನೆಲೆಸಿದೆ. ಪೋಲೀಸರ ’ರಕ್ಷೆ’ಯಲ್ಲಿ ದೀಪಾವಳಿ ಹಬ್ಬ ವಿಜೃಂಭಣೆಯಿಂದ ಸಾಂಗವಾಗಿ ಜರಿದು ನಿಟ್ಟುಸಿರು ಬಿಟ್ಟೆವು. ಅದಕ್ಕೂ ಪೂರ್ವದಲ್ಲಿ 1974ರಲ್ಲಿ ದಕ್ಷಿಣ ಏಷಿಯಾದ ಮೂಲದ ಹೆಂಗಸರು ಬಿಳಿಯರಿಗಿಂತ ಅದೇ ಕೆಲಸಕ್ಕಾಗಿ ತಮಗೆ ಕಡಿಮೆ ವೇತನ ಕೊಟ್ಟದ್ದಕ್ಕಾಗಿ ಸಂಪು ಹೂಡಿ, ಕೊನೆಗೆ ಇಂಪೀರಿಯಲ್ ಟೈಪ್ ರೈಟರ್ ಕಂಪನಿಯನ್ನು ಮುಚ್ಚುವಂತೆ ಮಾಡಿ ಇತಿಹಾಸವನ್ನೇ ಬರೆದರು. ಅದಕ್ಕೂ ಮೊದಲು ಐದೂವರೆ ನೂರು ವರ್ಷಗಳ ಹಿಂದೆ ಅನತಿ ದೂರದಲ್ಲಿರುವ ಬಾಸ್ವರ್ತ್ ಮೈದಾನದಲ್ಲಿ ಮಡಿದು ಮೂರನೆಯ ರಿಚರ್ಡ್ ರಾಜ ಊರ ಮಧ್ಯದ ಫ್ರಯರಿ ಚರ್ಚಿನಲ್ಲಿ ಅವಸರದ ಸಮಾಧಿಯನ್ನು ಹೊಕ್ಕುಇಲ್ಲಿಯ ವರೆಗೆ ಗುಲ್ಲೆಬ್ಬಿಸದೆ ಪವಡಿಸಿದ್ದ!
ಕಿಂಗ್ ರಿಚರ್ಡ್ ವಿಸಿಟರ್ ಸೆಂಟರ್, ಲೆಸ್ಟರ್
ಲೆಸ್ಟರಿನ ಯಾವದೇ ಮೂಲೆಯಲ್ಲಿಯೂ ಒಂದು ಕಿರೀಟದ ಕೆಳಗೆ ದೊಡ್ಡ 'R' ಎನ್ನುವ ಅಕ್ಷರವಿರುವ (ಲೋಗೋ) ಲಾಂಛನವನ್ನು ಕಾಣ ಬಹುದು. ಮ್ಯೂಸಿಯಂ ಮೂರು ಭಾಗಗಳಲ್ಲಿ ಈ ಕಥೆಯನ್ನು ಹೇಳುತ್ತದೆ: ವಂಶಾವಳಿ(Dynasty), ಮೃತ್ಯು(Death)ಮತ್ತು ವೈಜ್ಞಾನಿಕ ಅನ್ವೇಶಣೆ(Discovery).
RIII ಮ್ಯೂಸಿಯಂ ಒಳಗೆ …
1.ವಂಶಾವಳಿ: ಹದಿನಾಲ್ಕನೆಯ ಶತಮಾನದ ಆದಿಯಲ್ಲಿ ಮೂರನೆ ಎಡ್ವರ್ಡ್ ರಾಜ 50 ವರ್ಷ ನೆಮ್ಮದಿಯಾಗಿ ಆಳಿದ ನಂತರ ಫ್ರಾನ್ಸ್ ನೊಡನೆ ’ಒಂದು ಶತಮಾನ ದ ಯುದ್ಧ’ದಲ್ಲಿ ತೊಡಗಿ ಸೋತಿತ್ತು ಇಂಗ್ಲೆಂಡ್. ಆತನ ವಂಶದ ಎರಡು ಶಾಖೆಯ ಮರಿಮಕ್ಕಳು ದಾಯಾದಿಗಳಾಗಿ ಮೂವತ್ತು ವರ್ಷ ಸತತವಾಗಿ ಬಡಿದಾಡಿದ್ದೇ ”ವಾರ್ ಆಫ್ ಥಿ ರೋಸಸ್’ ಎನ್ನುವ ಹೆಸರು ಪಡೆಯಿತು. ಲ್ಯಾಂಕಾಸ್ಟರ್ ಮನೆತನ ಲಾಂಛನ ಕೆಂಪು ಗುಲಾಬಿ ಯಾಗಿದ್ದರೆ ಯಾರ್ಕ್ ಮನೆತನದ್ದು ಬಿಳಿ ಗುಲಾಬಿ (Yorkists). ಈ ಮನೆತನದ ಕೊನೆಯ ರಾಜನೇ ಯುದ್ಧದಲ್ಲಿ ಮಡಿದ ಕೊನೆಯ ಇಂಗ್ಲೆಂಡಿನ ರಾಜ ನಮ್ಮ ಕಥಾನಾಯಕ ಮೂರನೆಯ ರಿಚರ್ಡ್. ಆತನ ಮರಣದ ನಂತರ ಇವೆರಡೂ ಶಾಖೆಗಳು ವಿವಾಹದಿಂದ ಒಂದಾಗಿ ಟ್ಯೂಡರ್ ಮನೆತನ ಆರಂಭವಾಯಿತು. ಇದು ಸಂಕ್ಷಿಪ್ತ ಇತಿಹಾಸ.
2.ಮೃತ್ಯು
ಲೆಸ್ಟರಿನ ಬ್ಲೂ ಬೋರ್ ಎನ್ನುವ ಇನ್ ದಲ್ಲಿ (ತಂಗುದಾಣ) ರಿಚರ್ಡ್ ತನ್ನ ಕೊನೆಯ ರಾತ್ರಿಯನ್ನು ಕಳೆದ. ವೇಲ್ಸ್ ಕಡೆಯಿಂದ ಇನ್ನೂ ಪಡೆಯೊಂದಿಗೆ ಬರುತ್ತಿದ್ದ ಹೆನ್ರಿಯನ್ನು ಎದುರಿಸಲು ಬಾಸ್ವರ್ತ್ಗೆ ಕಾಳಗಕ್ಕೆ ಹೊರಟ. ರಿಚರ್ಡನ ಸೈನ್ಯ ದೊಡ್ಡದಿದ್ದರೂ ಆತನಿಗೆ ಬೆಂಬಲ ಕೊಡಬೇಕಾಗಿದ್ದ ಲಾರ್ಡ್ ಸ್ಟಾನ್ಲಿ ಕೊನೆಯ ಗಳಿಗೆಯಲ್ಲಿ ಅವನ ಸಹಾಯ ಮಾಡದೆ ವೈರಿಯ ಪಂಗಡವನ್ನು ಸೇರಿದ. ರಿಚರ್ಡ್ ಮಾತ್ರ ಕೆಸರಿನಲ್ಲಿ ತನ್ನ ಕುದುರೆ ಸಿಕ್ಕಿ ಬಿದ್ದಿದ್ದರಿಂದ ಕೆಳಗಿಳಿಯ ಬೇಕಾಯಿತು. ಆತನ ಕಿರೀಟ, ಶಿರಸ್ತ್ರಾಣ ಕಳಚಿ ಬಿದ್ದಿತ್ತು. ಯುದ್ದ ಮಾಡುತ್ತ ಸಾವನ್ನಪ್ಪಿದ. ಮೇಲೆ ಉದ್ಧರಿಸಿದಂತೆ, ’ಒಂದು ಕುದುರೆ ಬೇಕು! ಇದು ಸ್ಟಾನ್ಲಿಯ ಫಿತೂರಿ’, ಅನ್ನುತ್ತಲೇ ಮಡಿದ. ಒಂದು ಕುದುರೆಗಾಗಿ ನನ್ನ ರಾಜ್ಯವನ್ನೇ ಕೊಡುವೆ ಅನ್ನುವ ಇಂಗ್ಲಿಷ್ ಪದಪುಂಜ ಮಹಾಕವಿ ಶೇಕ್ಸ್ಪಿಯರನ ನಂತರ ಮನೆಮಾತಾಗಿದೆ. ಅದನ್ನೇ ತಿರುಚಿ ಈಗಲೂ ಸಹ "I will give an arm and a leg" ಅಂತ ಜನರಾಡುವದನ್ನು ಈಗಲೂ ನಾವು ಕೇಳ ಬಹುದು. ಆತನ ದೇಹಕ್ಕೆ ಬಿದ್ದ ಹನ್ನೊಂದು ಪ್ರಹಾರಗಳಲ್ಲಿ ತಲೆಯ ಕೆಳಭಾಕಕ್ಕೆ ತಗಲಿದ ಎರಡು ಮಾರಕವಾಗಿದ್ದವು ಅಂತ ಸಿದ್ಧವಾಗಿವೆ. ಆತನ ಬತ್ತಲೆ ದೇಹವನ್ನು ಆಗಿನ ರೂಢಿಯಂತೆ ಜನರೆಲ್ಲ ನೋಡಲೆಂದು ಎರಡು ದಿನ ಪಕ್ಕದಲ್ಲಿದ್ದ ಒಂದು ಚರ್ಚಿನಲ್ಲಿ ಪ್ರದರ್ಶನ ಮಾಡಿದ ನಂತರ ಗ್ರೇ ಪಾದ್ರಿಗಳು ಅವಸರದಲ್ಲಿ (ಅದಕ್ಕೇ ತಲೆ ಸೊಟ್ಟಾಗಿ ಕುಳಿತಿದೆ) ಶವ ಸಂಸ್ಕಾರ ಮಾಡಿದರೆಂದು ಸಂಶೋಧಕರ ಅಭಿಮತ.
ರುವ ಲೇಖನಗಳಿಂದ ತಿಳಿದು ಬರುತ್ತದೆ.
3. ದಂತ ಮತ್ತು ವಂಶವಾಹಿನಿ
ನಿನ್ನಜ್ಜ ಮುತ್ತಜ್ಜ ಮೂಲಜ್ಜರೆಲ್ಲರುಂ
ನಿನ್ನೊಳವತರಿಸಿ ಮುಂದಿನ್ನು ಜನಿಸಲಿಹ
ನಿನ್ನ ಮಗ ಮೊಮ್ಮ ಮರಿಮೊಮ್ಮರೊಳು ಜೀವಿಪ್ಪರ್
ಅನ್ವಯ ಚಿರಂಜೀವಿ -ಮಂಕುತಿಮ್ಮ.
25 ಆಗಸ್ಟ್, 2012 ರಂದು ರಿಚರ್ಡ್ ಸೊಸೈಟಿಯವರ ((ಲೆಸ್ಟರ್ ರಿಕಾರ್ಡಿಯನ್ಸ್) ಪ್ರಯತ್ನದ ಫಲವಾಗಿ ಊರ ಮಧ್ಯದ ಸೋಶಿಯಲ್ ಸರ್ವಿಸಸ್ ಕಾರ್ ಪಾರ್ಕಿನಲ್ಲಿ ಡಿಗ್ಗರ್ ಗಳು ಕೆಲಸ ಪ್ರಾರಂಭ ಮಾಡಿದವು. ಮೂರು ಟ್ರೆಂಚುಗಳನ್ನು ಅಗಿಯುವ ಯೋಜನೆ. ಕಾರ್ ಪಾರ್ಕಿನ ನೆಲದ ಮೇಲೆ ಬರೆದ ಬಿಳಿಯ 'R' ಅಕ್ಷರದ ಹತ್ತಿರವೇ ಅಗಿದ ಮೊದಲನೆಯ ಟ್ರೆಂಚ್. ಕೆಲವೇ ತಾಸುಗಳಲ್ಲಿ ಸಿಕ್ಕ ತೊಡೆಯ ಎಲುಬು ರಿಚರ್ಡನದೇ ಅಂತ ವೈಜ್ಞಾನಿಕವಾಗಿ ನಂತರದ ಡಿ ಎನ್ ಎ ಸಂಶೋಧನೆಯಲ್ಲಿ ಸಾಬೀತಾದುದು ಕಾಕತಾಳೀಯವೇ! ಎಲುಬುಗಳ ಸ್ಕ್ಯಾನ್ನಿಂದ ಆತ 32 ರಿಂದ 34 ವಯಸ್ಸಿನವ ಅಂತ ಗೊತ್ತಾಯಿತು. ಅಷ್ಟೇ ಅಲ್ಲ, ಆ ಎಲುಬುಗಳ ಕೊಲಾಜನ್ನಿನ ಆಕ್ಸಿಜನ್, ಸ್ಟ್ರಾನ್ಷಿಯಮ್, ಕಾರ್ಬನ್ ಡೇಟಿಂಗ್ ಮತ್ತು ನೈಟ್ರೋಜನ್ ಐಸೊಟೋಪುಗಳ ವಿಶ್ಲೇಷಣೆಯಿಂದ ಆತ 1483ರಲ್ಲಿ ಪಟ್ಟಕ್ಕೇರಿದ ರಾಜನೇ ಅನ್ನುವದರಲ್ಲಿ ಸಂಶಯ ಉಳಿಯಲಿಲ್ಲ. ಆನಂತರ ಸೇವಿಸಿದ ರಾಜ ವೈಭವದ ಆಹಾರದಲ್ಲಿ ಹಂಸ, ಕೊಕ್ಕರೆ ಮತ್ತು ಸಾರಸ, ಅಪರೂಪದ ಮೀನ ಇತ್ಯಾದಿ ಇದ್ದವು ಅನ್ನುವ ಮಾಹಿತಿ ಗಣ್ಯ ವೈಜ್ಞಾನಿಕ ಜರ್ನಲ್ಗಳಲ್ಲಿ ಪ್ರಕಟಗೊಂಡ ಲೇಖನಗಳಿಂದ ತಿಳಿದು ಬರುತ್ತದೆ
ಚ್ಯೂರಿಯ ಚೂರ್ಣ ಮತ್ತು ದಂತದ ಕಥೆ:
ಕಟ್ಟ ಕಡೆಗೆ ಆತನದೇ ಆ ಅಸ್ಥಿ ಅಂತ 99.999% ಪುರಾವೆ ಸಿಕ್ಕಿದ್ದು ಆತನೆಯ ಹಲ್ಲುಗಳ ಡಿ ಎನ್ಎ ಗಳಿಂದ. ಆತನ ಬಗ್ಗೆ ಹಬ್ಬಿದ್ದ ಎಷ್ಟೋ ಸಂಗತಿಗಳು (ಉದಾ ಸೊಟ್ಟವಾದ ಬೆನ್ನು, ಗೂನ ಅಲ್ಲ) ಬರೀ ದಂತ ಕಥೆಯಲ್ಲ ಅಂತ ಕೊನೆಗೂ ರುಜು ಸಿಕ್ಕಿತು. ಲೆಸ್ಟರ್ ಯುನಿವರ್ಸಿಟಿಯ ಚ್ಯೂರಿ ಕಿಂಗ್ (Dr Turi King) ಎನ್ನುವ ಜೆನೆಟಿಕ್ಸ್ ಮತ್ತು ಜೀನೋಮ್ ಬಯಾಲಜಿ ಪ್ರೊಫೆಸರ್ ಅವಳಿಗೆ ಅದರ ಹೊಣೆಯನ್ನು ಹೊರಿಸಿದ್ದರು. ಈ ವಿಷಯದಲ್ಲಿ ಅಪಾರ ಅನುಭವ ಆಕೆಗೆ. ಸದ್ಯ ಮೂವತ್ತುಮೂರನೇ ವಯಸ್ಸಿಗೇ ಜೀವ ತೆತ್ತಿದ್ದ ರಿಚಡನ ಕೆಳದವಡೆಯಲ್ಲಿ ಸಾಕಷ್ಟು ಹಲ್ಲುಗಳಿದ್ದವು. ಹಲ್ಲಿನ ಡಿ ಎನ್ ಎ ಸುಲಭದಲ್ಲಿ ಕ್ಷಯವಾಗುವದಿಲ್ಲವಂತೆ. ಸುದೈವದಿಂದ ದೇಹದ ಹತ್ತಿರದಲ್ಲೇ ತೇವವಿದ್ದರೂ ಎಲುವುಗಳು ನೀರಲ್ಲಿ ಮುಳುಗಿ ಹಾನಿಯಾಗಿರಲಿಲ್ಲ. ಮೆಲ್ಲ ಮೆಲ್ಲಗೆ ಒಂದು ಹಲ್ಲನ್ನು ಹತ್ತಾರು ನಿಮಿಷ ಅಲ್ಲಾಡಿಸುತ್ತ ಅಲ್ಲಾಡಿಸುತ್ತ ಕೊನೆಗೆ ಅದನ್ನು ಕಿತ್ತಿ ಸ್ವಚ್ಛ ಪಾಕೀಟಿನಲ್ಲಿ ಹಾಕಿ ಅದರ ಚೂರ್ಣದಿಂದ ತನ್ನ ಸಂಶೋಧನೆ ಮಾಡಿ ಅದರಲ್ಲಿ ದೊರೆತ (ತಾಯಿಯ ವಂಶಾವಳಿಯಿಂದ ಮುಂದುವರೆದ) ಮೈಟೋಕೋಂಡ್ರಿಯಲ್ ಡಿ ಎನ್ ಎ ರಿಚರ್ಡನ ಮನೆತನದ ಹೆಣ್ಣು ಸಂತತಿಯ ಹದಿನಾರನೆಯ ಪೀಳಿಗೆಯ ಮೈಕಲ್ ಇಬ್ಸೆನ್ ಮತ್ತು ಹದಿನೆಂಟನೆಯ ಪೀಳಿಗೆಯ ವೆಂಡಿ ಡಲ್ಡಿಗ್ ಅವರ ವಂಶವಾಹಿನಿಗಳ ಅತ್ಯಂತ ನಿಕಟ ಹೋಲಿಕೆ (ಮೇಲಿನ ಕಗ್ಗ ಹೇಳುವ ’ಅನ್ವಯ’) ಇರುವುದನ್ನು ಸಾಬೀತು ಮಾಡಿ ಕೊನೆಗೂ ಆ ಅಸ್ಥಿಗಳು 99.999% ಆತನದೇ ಅನ್ನುವ ರುಜುವಾತನ್ನು ಸ್ಥಾಪಿಸಿದ್ದು ಅದ್ಭುತವೇ ಸರಿ. Y ವರ್ಣತಂತುವಿನ (chromosome) ಜಾಡು ಹಿಡಿದು ಹೊರಟಾಗ ಸಿಕ್ಕ ಐವರು ವಂಶಜರಲ್ಲಿ ಒಬ್ಬರದೂ ಡಿ ಎನ್ ಎ ದಲ್ಲಿ ಹೊಂದಿಕೆ ಸಿಗದಿದ್ದರೂ ಆ ಎಲುಬುಗಳು ರಿಚರ್ಡನದೇ ಅನ್ನುವ ನಿರ್ಣಯಕ್ಕೆ ವ್ಯತಿರಿಕ್ತವಾಗಿರಲಿಲ್ಲ. ಗೀತೆ ಹೇಳಿದ ವರ್ಣಸಂಕರ ನೆನಪಾಗುತ್ತದೆ! ನಿಮಗೆ ಅವಕಾಶ ಸಿಕ್ಕರೆ ಲೆಸ್ಟರ್ಗೆ ಅವಶ್ಯ ಭೇಟಿ ಕೊಡಿ. ಒಮ್ಮೆ ಕೊಂಡ ತಿಕೀಟಿಗೆ ಮಾತ್ರ ಒಂದೇ ಒಂದು ವರ್ಷದ ಬಾಳಿಕೆಯಿದೆ!
Turi King removing a tooth from lower jaw of Richard III
ಶೇಕ್ಸ್ಪಿಯರಾಯಣ
What’s in a name? (Or in a letter?)
ಇಲ್ಲಿ ಒಂದು ಸಾಮ್ಯತೆಯಿದೆ. ಆತನ ನಾಟಕದಲ್ಲಿ ಒಬ್ಬ G ಅಕ್ಷರದವ ಎಡ್ವರ್ಡ್ ರಾಜನ ಸಂತತಿಯನ್ನು ಕೊಲೆಮಾಡುವದಾಗಿ ಭವಿಷ್ಯವಾಣಿ ಹೇಳುತ್ತದೆ. ಯಾರು ಆ G? ಅದು ನಾಟಕದಲ್ಲಿ ಬರುವ ರಹಸ್ಯ.
EIIR, VR ಮತ್ತು ಸದ್ಯ CR ಇತ್ಯಾದಿ ಬ್ರಿಟಿಷ್ ರಾಜ ಮುದ್ರೆಯಲ್ಲಿ ಕ್ರಮವಾಗಿ, ಎಲಿಝಬೆತ್, ವಿಕ್ಟೋರಿಯಾ, ಚಾರ್ಲ್ಸ್ ಇವರಲ್ಲಿ R- Regina (ರಾಣಿ) ಅಥವಾ Rex (ರಾಜ)ನನ್ನು ಸೂಚಿಸುತ್ತದೆ. ಅಂದರೆ ಲೆಸ್ಟರಿನ ಕಾರ್ ಪಾರ್ಕಿನ R? Reserved ಇರಬಹುದೇನೋ!
‘ದಂತ ಕಥೆ’ ಹೇಗೆ ಹುಟ್ಟಿತು?
ಇನ್ನು ಪಾವೆಂ ಅವರ ಪದಾರ್ಥ ಚಿಂತಾಮಣಿಯಿಂದ (ಪು:241): ”ದಂತಕ್ಕೂ ಕಥೆಗೂ ಏನು ಸಂಬಂಧ? ದಂತ ಕಥೆ ಎನ್ನುವ ಪದ ಎಲ್ಲರಿಗೂ ಗೊತ್ತು. ಯಾವ ಖಚಿತ ಆಧಾರವಿಲ್ಲದೆ ಬಾಯಿಂದ ಬಾಯಿಗೆ ತಲೆಮಾರುಗಳಿಗೆ ಹಬ್ಬುತ್ತ ಬೆಳೆದ ವಾರ್ತೆ ದಂತ ಕಥೆಯೆನಿಸುತ್ತದೆ. ಮಾಸ್ತಿಯವರು ಇದಕ್ಕೊಂದು ವ್ಯುತ್ಪತ್ತಿಯನ್ನು ಊಹಿಸುತ್ತಾರೆ. ದಂತ ಕಥೆಯ ದಂತ, ಹಲ್ಲು ಅಲ್ಲವೇ ಅಲ್ಲ, ’ಉದಂತ’ ಎಂದರೆ ಸಂಸ್ಕೃತದಲ್ಲಿ ವೃತ್ತಾಂತ, ವರ್ತಮಾನ(ಉದಾ: ರಾಮೋದಂತಃ). ಈ ಉದಂತದಲ್ಲಿ ಪ್ರಥಮಾಕ್ಷರ ಉದುರಿ ಹೋಗಿ ’ದಂತ’ ಮಾತ್ರ ಉಳಿಯಿತು. ಉದಂತ ಮತ್ತು ಕಥೆ ಸುಮಾರಾಗಿ ಒಂದೇ ಅರ್ಥದ ಶಬ್ದಗಳು. ಹೇಗಿದೆ ಈ ’ದಂತ ಕಥೆ’ಯ ವೃತ್ತಾಂತ?
ಲೇಖನ ಮತ್ತು ಫೋಟೋಗಳು: ಶ್ರೀವತ್ಸ ದೇಸಾಯಿ (ಎರಡು ಚಿತ್ರಗಳು ಗೈಡ ಬುಕ್ ಕೃಪೆ).
Links:
King Richard III Visitor Centre, 4A St Martins, Leicester LE1 5DB
(ಮುಂದುವರೆದುದು)
ಇಲ್ಲಿಯ ವರೆಗೆ: ಅಂಜಲಿ ಶಾಲೆಯಿಂದ ಇನ್ನೂ ಮನೆಗೆ ಬಂದಿಲ್ಲ. ಎಲ್ಲಿಗೆ ಹೋದಳೋ? ತಲಾಷ್ (ಶೋಧ) ಪ್ರಾರಂಭವಾಗಿದೆ. ಇನ್ನು ಓದಿರಿ.
ರಾಮೂನು ಆಲದ ಮರದ ಕಟ್ಟೆಯ ಹತ್ತಿರ ಬಂದು ಸೇರಿದ್ದ. ವಿಷಯ ಗೊತ್ತಾಗಿ ಓಣಿಯ ಜನರೂ ಧಾವಿಸಿದ್ದರು.
ಕಟ್ಟೆಯ ಹತ್ತಿರ ಕೆಲವು ಕ್ಷಣ ಮೌನವಾಗಿದ್ದ ನಾಯಿ ಮತ್ತೇ ಬೊಗಳತೊಡಗಿತು. ವಸುಂಧರೆಯ ಸೆರಗನ್ನು ಕಚ್ಚಿ ಎಲ್ಲಿಯೋ ಕರೆದುಕೊಂಡು ಹೋಗಲು ಪ್ರಯತ್ನಿಸುತಿತ್ತು. ಎಲ್ಲರೂ ಅದರ ಜೊತೆಗೆ ಮುನ್ನೆಡೆದರು . ಕಟ್ಟೆಯಿಂದ ಉತ್ತರ ದಿಕ್ಕಿನೆಡೆಗೆ ನಡೆದ ನಾಯಿಯು ಸುಮಾರು ನೂರು ಮೀಟರುಗಳಾದ ಮೇಲೆ ನಿಂತುಕೊಂಡಿತು.
ಅಲ್ಲೇನಿದೆ ಎಂದು ನೋಡಲು, ಹತ್ತಿರದಲ್ಲಿಯೇ ಅಂಜಲಿಯು ಶಾಲೆಗೆ ಒಯ್ಯುತ್ತಿದ್ದ ನೀರಿನ ಬಾಟಲಿ ಬಿದ್ದಿತ್ತು . ಅಂಜಲಿಯು ಈ ದಿಕ್ಕಿನಲ್ಲಿಯೆ ಎಲ್ಲಿಯೋ ಮರೆಯಾಗಿದ್ದಾಳೆ ಎಂಬುವದು ಅಲ್ಲಿದ್ದವರಿಗೆಲ್ಲ ಖಾತರಿಯಾಯಿತು. ಬೀದಿಯ ನಾಯಿಯಾಗಿದ್ದರೂ 'ಅನ್ನ ತಿಂದ ಮನೆಯ ಋಣವನ್ನು' ತೀರಿಸಿತ್ತು. ಆ ದಿಕ್ಕಿನಲ್ಲಿಯೇ ಸುಮಾರು ಜನರು ಅಲೆದು ಬಂದರೂ ಎಲ್ಲಿಯೂ ಅಂಜಲಿಯ ಸುಳಿವು ಸಿಗಲಿಲ್ಲ. ಚಿಂತಾಕ್ರಾಂತವಾಗಿ ರೋಧಿಸುತ್ತಿದ್ದ ವಸುಂಧರೆಯನ್ನು ಬಿಟ್ಟು, ರಾಮು ಪೊಲೀಸ್ ಸ್ಟೇಷನ್ ಕಡೆಗೆ ನಡೆದಿದ್ದ. ನೆರೆದವರೆಲ್ಲ 'ಎಲ್ಲ ಸರಿಹೋಗುವದೆಂದು' ವಸುಂಧರೆಗೆ ಸಮಾಧಾನ ಹೇಳುತ್ತಿದ್ದರು.
ಕೆಲವು ಸಮಯದ ನಂತರ ರಾಮು ಪೋಲೀಸರ ವಾಹನದೊಂದಿಗೆ ಮರಳಿ ಸ್ಥಳಕ್ಕೆ ಬಂದಿದ್ದ. ಸಹಜವಾಗಿ, ಕೆಲಸವೆಲ್ಲ ಮುಗಿದ ಮೇಲೆ ಪ್ರತ್ಯಕ್ಶವಾಗುವ ಪೊಲೀಸರು ಇಷ್ಟು ಬೇಗನೆ ಬಂದಿದ್ದು ಜನರಲ್ಲಿ ಆಶ್ಚರ್ಯವನ್ನು ಮೂಡಿಸಿತ್ತು. ಪೊಲೀಸರು ಸೂಕ್ಷ್ಮರೀತಿಯಾಗಿ ಪರಿಶೋಧಿಸಿದಾಗ ಅಲ್ಲಿಂದ ಅಡ್ಡದಾರಿಯಲ್ಲಿ ನಾಲ್ಕು ಚಕ್ರದ ವಾಹನ ಹೋಗಿರುವದು ಖಾತ್ರಿಯಾಯಿತು. ತಕ್ಷಣವೇ ಅವರು ಶಾಲಾವಾಹನದ ಚಾಲಕನನ್ನು ಫೋನಿನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರು, ಸಾಧ್ಯವಾಗದೇ ಇದ್ದಾಗ ಪೋಲೀಸರ ಜೀಪು ಚಾಲಕನ ಮನೆಯತ್ತ ಸಾಗಿತು. ಪೊಲೀಸರನ್ನು ಕಂಡು ನಡುಗುತ್ತಿದ್ದ ಚಾಲಕನು ತನ್ನ ವಿವರಣೆಯನ್ನು ಕೊಟ್ಟನು. 'ಅಂಜಲಿಯು ಶಾಲೆ ಮುಗಿದಾದ ಮೇಲೆ ಶಾಲಾವಾಹನದಲ್ಲಿ ಹತ್ತಿದ್ದು ಮತ್ತು ತನ್ನ ಗೆಳೆಯರೊಂದಿಗೆ ಕಟ್ಟೆಯ ಸ್ಟಾಪಿನಲ್ಲಿ ಇಳಿದಿದ್ದು ನಿಜವೆಂದು ಹಾಗು ಅದನ್ನು ಬಿಟ್ಟು ತನಗೆ ಬೇರೆ ಏನೂ ಗೊತ್ತಿಲ್ಲವೆಂದು, ತಾನು ಯಾವ ರೀತಿಯ ಶೋಧನೆಗೂ ಸಿದ್ದನೆಂದು ಪ್ರಮಾಣಮಾಡಿ ಹೇಳಿದನು.
ಅವನನ್ನು ಜೀಪಿನಲ್ಲಿ ಕೂರಲು ಹೇಳಿ, ಪೊಲೀಸರು ಅಂಜಲಿಯ ತರಗತಿಯ ಶಿಕ್ಷಕನ ಮನೆಯತ್ತ ಧಾವಿಸಿದರು. ಶಿಕ್ಷಕನ ಮನೆಗೆ ಬೀಗ ಹಾಕಿತ್ತು. ಈಗೇನು ಮಾಡುವದು ಎಂದು ಯೋಚಿಸಿದ ಅವರು ನೇರವಾಗಿ ಶಾಲೆಯ ಪ್ರಿನ್ಸಿಪಾಲರ ಮನೆಯತ್ತ ಸಾಗಿದರು.
ಬಂದ ವಿಷಯವನ್ನು ಹೇಳಿದಾಗ ಅವರು 'ಅಂಜಲಿಯ ಕ್ಲಾಸಿನ ಶಿಕ್ಷಕ ಮತ್ತು ಉಪಶಿಕ್ಷಕರು ಕಳೆದ ಎರಡು ದಿನಗಳಿಂದ ರಜೆಯ ಮೇಲಿರುವದಾಗಿಯೂ ಮತ್ತು ಇನ್ನೊಬ್ಬ ಶಿಕ್ಷಕಿಯು ತರಗತಿಯನ್ನು ನೋಡಿಕೊಳ್ಳುತ್ತಿರುವದಾಗಿಯೂ' ಮಾಹಿತಿಯನ್ನು ನೀಡಿದರು.
ತರಗತಿಯನ್ನು ನೋಡಿಕೊಳ್ಳುತ್ತಿದ್ದ ಶಿಕ್ಷಕಿಯನ್ನು ಫೋನಿನಲ್ಲಿ ಮಾತನಾಡಿಸಿದಾಗ 'ಅಂಜಲಿಯು ಪೂರ್ತಿ ದಿನ ಶಾಲೆಯಲ್ಲಿ ಇದ್ದಿದ್ದು ಖಚಿತವಾಯಿತು'.
"ಹಲ್ಕಾ ನನ್ನ ಮಕ್ಕಳು! ಈ ಶಿಕ್ಷಕರದೇ ಕಿತಾಪತಿ, " ಎಂದು ಪೊಲೀಸರು ಮಾತನಾಡುವದನ್ನು ಕೇಳಿ ರಾಮುಗೆ ಭಯ ಬಂದಿತ್ತು . ಎಂದೂ ದೇವರಿಗೆ ಕೈ ಮುಗಿಯದವನು 'ಅಪ್ಪ ದೇವರೇ ! ನನ್ನ ಮಗಳನ್ನು ಸುರಕ್ಷಿತವ್ವಾಗಿ ಮನೆಗೆ ತಲುಪಿಸು,' ಎಂದು ಮನದಲ್ಲೇ ದೇವರಿಗೆ ಬೇಡಿಕೊಂಡಿದ್ದ. ರಾಮುನನ್ನು ಆಲದ ಕಟ್ಟೆಯ ಹತ್ತಿರ ಬಿಟ್ಟು ಪೊಲೀಸರು ಮುಂದಿನ ಕಾರ್ಯಾಚರಣೆಗೆ ಸ್ಟೇಷನ್ ಗೆ ಮರಳಿದ್ದರು.
ಇವನ ಬರುವಿಕೆಗಾಗಿಯೇ ಕಾಯುತ್ತಿದ್ದ ವಸುಂಧರೆ ಕೇಳಿದಳು
"ಏನಾದರೂ ಗೊತ್ತಾಯ್ತೆನ್ರಿ?"
ಏನು ಹೇಳಬೇಕೆಂದು ತೋಚದೆ ರಾಮು ತೊದಲುತ್ತ ನುಡಿದಿದ್ದ
" ಇನ್ನೂ ಏನು ಗೊತ್ತಾಗಿಲ್ಲ, ಇಷ್ಟರಲ್ಲಿಯೇ ಗೊತ್ತಾಗಬಹುದು "
ಅಷ್ಟರಲ್ಲಿಯೇ ಜನರಲ್ಲಿ ಯಾರೋ ಅನ್ನುತ್ತಿದ್ದರು: "ಪೋಲೀಸರ ಕೈಯಲ್ಲಿ ಅಷ್ಟು ಬೇಗನೆ ಆಗುವ ಕೆಲಸ ಇದಲ್ಲ. ನಮ್ಮ ಹುಚ್ಚಪ್ಪನನ್ನು ಕೇಳಿದರೆ ಎಲ್ಲ ಗೊತ್ತಾಗಬಹುದು, ಅವನಿಗೆ ಗೊತ್ತಿಲ್ಲದಿರುವದು ಈ ಊರಲ್ಲಿ ಏನಿದೆ ?"
ಹೌದು; ಅವನೊಬ್ಬ ಹುಚ್ಚ. ಅವನ ಇಟ್ಟ ಹೆಸರು ಬಹು ಜನರಿಗೆ ಗೊತ್ತಿಲ್ಲದಿದ್ದರೂ ಕೊಟ್ಟ ಹೆಸರು ಮಾತ್ರ ಎಲ್ಲರಿಗೂ ಗೊತ್ತು. 'ಹುಚ್ಚಪ್ಪ'! ಐವತ್ತರ ಗಡಿಯಲ್ಲಿ ಇರುವ ಅವನ ಬಗ್ಗೆ ಊರ ಜನರಿಗೆ ಇಷ್ಟು ಮಾತ್ರ ಗೊತ್ತು-
'ಅವನು ಭಾಳ ಸಾಲಿ ಓದ್ಯಾನಂತ, ಇಪ್ಪತ್ತು ವರ್ಷದ ಹಿಂದ ಬೆಳಗಾವಿ ಲಿಂಗರಾಜ ಕಾಲೇಜಿನಾಗ ಪದವಿ ಮುಗಿಸ್ಯಾನಂತ , ಅಷ್ಟ ಸಾಲಿ ಓದಿ ನೌಕರಿ ಸಿಗದಿದ್ದಕ್ಕ, ಊರ ಸುಧಾರಣೆ ಮಾಡಾಕ ಹೋಗಿ ತಾನ ಹುಚ್ಚ ಆಗ್ಯಾನಂತ ‘ ಎಂದು.
ಹಗಲಿನಲ್ಲೆಲ್ಲ ಊರಿನ ಬೀದಿ ಬೀದಿ ಅಲೆಯುತಿದ್ದ ಅವನು ಇಳಿ ಹೊತ್ತಾದರೆ ಆಲದ ಕಟ್ಟೆಯನ್ನು ಸೇರಿಕೊಳ್ಳುತಿದ್ದ. ಊರಿನಲ್ಲಿರುವ ಎಲ್ಲ ಮನೆಗಳ ಗುಟ್ಟು ಅವನಿಗೆ ಗೊತ್ತು. ಮಾತು ಕಡಿಮೆ ನೋಟ ಜಾಸ್ತಿ.
ಅದೇನೋ ಕಾರಣಕ್ಕಾಗಿ ಆ ಸಮಯದಲ್ಲಿ ಅವನೂ ಸಹ ಆಲದ ಕಟ್ಟೆಯ ಹತ್ತಿರವಿರಲಿಲ್ಲ. ಜನರೆಲ್ಲಾ ಅವನ ಬಗ್ಗೆಯೇ ಮಾತನಾಡುತ್ತಿದ್ದಾಗ ಆಕಡೆಯಲ್ಲೋ ಅವನ ಆಗಮನ ಆಗುತ್ತಿದ್ದದ್ದು ಕಂಡು ಬಂತು.
ಅವನ ಬರುವಿಕೆಗಾಗಿಯೇ ಕಾಯುತ್ತಿದ್ದ ವಸುಂಧರೆ ದಗ್ಧ ದನಿಯಲ್ಲಿ ಕೇಳಿದಳು
" ಹುಚ್ಚಪ್ಪ, ಅಂಜಲಿ ಎಲ್ಲೋ ಮಾಯ ಆಗ್ಯಾಳ, ಎಲ್ಲೂ ಸುಳುವು ಸಿಗವಲ್ಲದು "
ಅವಳ ಕಣ್ಣಲ್ಲೆ ನೋಡುತ್ತ ಅವನು ನುಡಿದ: "ಸಿಗತಾಳು! ಆರ ಮೈಲು, ಉತ್ತರ ದಿಕ್ಕು, ಅರೆ ರಾತ್ರಿ, ಅರಿಶಿಣ ಕುಂಕುಮ, ಟೈಮ್ ಜಾಸ್ತಿ ಇಲ್ಲ "
ಅಲ್ಲಿದ್ದವರಿಗೆ ಅದೇನೂ ಅರ್ಥವಾಗಲಿಲ್ಲ. ವಸುಂಧರೆ ಮನದಲ್ಲೇ ಅವನ ಒಗಟಿನ ಪದಗಳಿಗೆ ಅರ್ಥ ಹುಡುಕುತ್ತಿದ್ದಳು.
ಒಮ್ಮೆಲೇ ಅವಳಿಗೆ ಅದೇನೋ ಅರ್ಥವಾಯಿತು .
ರಾಮುನಿಗೆ ಜೋರಾಗಿ ಹೇಳುತ್ತಿದ್ದಳು.
" ಅರ್ಥ ಆಯ್ತು, ಅರ್ಥ ಆಯ್ತು, ಬೇಗ ಮನೆಗೆ ನಡೀರಿ, ಟೈಮ್ ಜಾಸ್ತಿ ಇಲ್ಲ "
ರಾಮುನಿಗೆ ಅದೇನು ಅವಳಿಗೆ ಅರ್ಥ ಆಯಿತು ಎಂದು ಸ್ವಲ್ಪವೂ ತಿಳಿಯಲಿಲ್ಲ ಆದರೂ ಅವಳ ಮಾತಿನಂತೆ ಅವಸರದಿಂದ ಮನೆಯ ಕಡೆಗೆ ನಡೆದ.
( ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವದು )
ಶಿವ ಮೇಟಿ
ಕಾಲ ಚಕ್ರ ಉರುಳಿ ಶತ ಶತಮಾನಗಳು ಗತಿಸಿದರೂ , ಆಧುನಿಕತೆಯ ಗಾಳಿಯು ಬೀಸಿದರೂ , ಸಮಾಜದಲ್ಲಿ ಹೆಣ್ಣಿನ ಶೋಷಣೆ ಮಾತ್ರ ಹಾಗೆಯೇ ಮುಂದುವರೆದಿರುವದು ಕಟು ಸತ್ಯ . ಜಗತ್ತಿನ ಮೂಲೆ ಮೂಲೆಗಳಲ್ಲಿ ಈ ಅನಿಷ್ಟ ಪದ್ಧತಿ ಇನ್ನೂ ಬೇರೂರಿರುವದು ದುಃಖಕರ ಸಂಗತಿ . ಬದಲಾವಣೆಯ ಅಲೆಯು ಭಾರತದ ಹಳ್ಳಿಗಳಲ್ಲಿ ಬಿಸುತ್ತಿದ್ದರೂ ಲಿಂಗ ಬೇಧ ಮಾತ್ರ ಕೊನೆ ಕಂಡಿಲ್ಲ . ಅಕ್ಷರವಂತರು , ಶ್ರೀಮಂತ ಕುಟುಂಬಗಳು ಇದಕ್ಕೇನು ಹೊರತಾಗಿಲ್ಲ .ಈ ದೇಶಕ್ಕೆ ಬರುವ ಮುನ್ನ ನಾನು ಕೆಲಸಮಾಡುತ್ತಿದ್ದ ಸ್ಥಳದಲ್ಲಿ ನಡೆದ ಒಂದು ಘಟನೆ ಇನ್ನೂ ಮನಸಿನಲ್ಲಿ ಹಾಗೆಯೇ ಉಳಿದಿದೆ . ಘಟನೆಗೆ ಅವಶ್ಯಕ ಬದಲಾವಣೆಗಳನ್ನು ಮಾಡಿ ಒಂದು ಕಥೆ ಬರೆಯಬೇಕು ಎಂದು ಅನಿಸಿತು ಅದಕ್ಕಾಗಿ ಬರೆದಿರುವೆ , ನಿಮ್ಮ ಮುಂದೆ ಇಟ್ಟಿರುವೆ. ದಯವಿಟ್ಟು ಸಮಯ ದೊರೆತಾಗ ಓದಿರಿ ಹಾಗೆಯೇ ಒಂದೆರಡು ಅಕ್ಷರದ ಅನಿಸಿಕೆಯನ್ನು ಗೀಚಲು ಮರೆಯದಿರಿ – (ಸಂಪಾದಕ)
ತಲಾಷ್ ( ಶೋಧ )
“ಅಮ್ಮ; ಅಂಜಲಿ ಇನ್ನೂ ಶಾಲೆಯಿಂದ ಮನೆಗೆ ಬಂದಿಲ್ಲ “ ಅಟ್ಟದ ಮೇಲಿದ್ದ ತಾಯಿಗೆ ದೊಡ್ಡ ಮಗಳು ಕೂಗಿ ಹೇಳುತ್ತಿದ್ದಳು. ಇಕ್ಕಿದ ಸಂಡಿಗೆಯನ್ನು ಆರು ಹಾಕುತ್ತಿದ್ದ ವಸುಂಧರೆ ಉತ್ತರಿಸಿದಳು ” ಇಷ್ಟರಲ್ಲಿಯೆ ಬರಬಹುದು ಬಿಡು …., ಆ ಬೀದಿಯ ನಾಯಿಯ ಜೊತೆಗೊ ಅಥವಾ ಹುಚ್ಚಪ್ಪನ ಜೊತೆಗೊ ಆಟವಾಡುತ್ತಿರಬಹುದು ” ಎಂದು. ಅಂಜಲಿ ಆರು ವರ್ಷದ ಮೂರನೆಯ ಮುದ್ದಿನ ಮಗಳು . ವಸುಂಧರೆಯ ಪಾಲಿಗಂತೂ ವಿಶೇಷ ಮಗಳು . ಮೊಮ್ಮಗ ಬೇಕೆಂದು ಹರ ಸಾಹಸ ಮಾಡುತ್ತಿರುವ ಅತ್ತೆಯ ನಿರೀಕ್ಷೆಗೆ ವಿರುದ್ಧವಾಗಿ ಹುಟ್ಟಿದವಳು . ಗಂಡನಿಗೂ ಮತ್ತೆ ‘ಹೆಣ್ಣಾಯಿತಲ್ಲ’ ಎಂಬ ನಿರಾಸೆಯಿದ್ದರೂ ಚಿಕ್ಕ ಮಗಳೆಂದು ಪ್ರೀತಿ ಜಾಸ್ತಿ . ಚೊಚ್ಚಲು ಮೊಮ್ಮಗು ಹೆಣ್ಣಾದಾಗ ಅತ್ತೆ, ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ . ‘ಇರಲಿ ಬಿಡು ಮುಂದಿನದಾದರೂ ಗಂಡಾದರೆ ಸಾಕು’ ಎಂದು ನಿಟ್ಟುಸಿರು ಬಿಟ್ಟಿದ್ದಳು . ಆದರೆ , ಎರಡನೆಯ ಮೊಮ್ಮಗೂ ಕೂಡ ಹೆಣ್ಣೆಂದು ಗೊತ್ತಾದಾಗ ಗರಬಡಿದವಳ ಹಾಗೆ ಕುಳಿತುಕೊಂಡಿದ್ದಳು . ಮಗನ ಮುಂದೆ ತನ್ನ ಮನದ ದುಗುಡನ್ನು ತೋರಿಕೊಂಡು;” ಏನಪ್ಪಾ ರಾಮು ! ಹೀಗೇಕಾಯಿತು …. ? ನನಗೆ ಇರುವವನು ನೀನೊಬ್ಬನೇ ಮಗ , ನಿನಗೆ ಗಂಡು ಮಗು ಆಗದಿದ್ದರೆ ಈಮನೆತನದ ವಂಶೋದ್ಧಾರನೆ ಹೇಗೆ ಸಾಧ್ಯ….. ? “ಎಂದು ಕಣ್ಣೀರು ಸುರಿಸಿದ್ದಳು . ರಾಮು ಅಷ್ಟೇ ಶಾಂತವಾಗಿಉತ್ತರಿಸಿದ್ದ ;” ಇರಲಿ ಬಿಡಮ್ಮ , ಅವರನ್ನೇ ಗಂಡು ಮಕ್ಕಳ ಹಾಗೆ ಬೆಳೆಸಿದರಾಯಿತು . ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳುಗಂಡಸರಿಗಿಂತ ಯಾವುದರಲ್ಲಿ ಕಡಿಮೆ ಇದ್ದಾರೆ…? . ತಂದೆ ತಾಯಿಗಳ ಮೇಲೆ ಅವರಿಗಿರುವಷ್ಟು ಪ್ರೀತಿ ಗಂಡುಮಕ್ಕಳಿಗೆ ಎಲ್ಲಿದೆ? ಯಾಕೆ ಹೀಗೆ ಮಕ್ಕಳಲ್ಲಿ ಭೇಧ ಭಾವ ಮಾಡ್ತಿಯಾ ?” ಎಂದು ಸಮಾಧಾನ ಹೇಳಿದ್ದ ” ನನ್ನ ಸಂಕಟ ನಿನಗೆ ಹೇಗೆ ಗೊತ್ತಾಗುತ್ತದೆ . ಪುರಾಣ , ವೇದಗಳಲ್ಲಿ ಹೇಳಿಲ್ಲವೇನೋ….’ ಗಂಡು ಮಗು ಇಲ್ಲದಿದ್ದರೆ ಮೋಕ್ಷ ಸಾಧ್ಯವಿಲ್ಲವೆಂದು …’ . ಹೆಣ್ಣು ಎಂದಾದರು ಪರರ ಆಸ್ತಿ . ಇಷ್ಟೊಂದು ಪಿತ್ರಾರ್ಜಿತ ಆಸ್ತಿಯನ್ನು ಬೇರೆಯವರ ಪಾಲು ಮಾಡಲು ನನಗೆ ಎಳ್ಳಷ್ಟೂ ಇಷ್ಟವಿಲ್ಲ “ ಎಂದು ಬೇಸರದಿಂದ ನುಡಿದಿದ್ದಳು. ” ಅಮ್ಮಾ, ಪುರಾಣ ವೇದಗಳಲ್ಲಿ ಹೆಣ್ಣು ಮಕ್ಕಳ ಕುರಿತು ಒಳ್ಳೆಯದನ್ನೂ ಹೇಳಿದ್ದಾರೆ . ಒಳ್ಳೆಯದನ್ನು ಆರಿಸಿಕೊಂಡು ಕೆಟ್ಟದ್ದನ್ನು ಬಿಟ್ಟರಾಯಿತು . ಸತ್ತ ಮೇಲೆ ಸ್ವರ್ಗ ನರಕ ಯಾರಿಗೆ ತಿಳಿದಿದೆ …?” ಎಂದು ತಾಯಿಯನ್ನು ಸಮಾಧಾನ ಪಡಿಸಲು ಯತ್ನಿಸಿದ್ದ . ಆದರೆ ತಾಯಿಯು ತಾನೂ ಒಂದು ಹೆಣ್ಣು ಎಂಬುವದನ್ನು ಮರೆತು ಇದಕ್ಕೆ ಯಾವುದಕ್ಕೂ ಜಗ್ಗಿದಂತೆ ಕಾಣಿಸಿರಲಿಲ್ಲ. ಅದೊಂದು ದಿನ ಮನೆ ಕೆಲಸದ ಸುಬ್ಬಿ ವಸುಂಧರೆಗೆ ಹೇಳುತ್ತಿದ್ದಳು ” ನೋಡಮ್ಮ ನಮ್ಮ ಪಕ್ಕದ ಮನೆ ಅನುಸುಯಿಗೆ ಮಕ್ಕಳಾಗಲಿಲ್ಲ ಅಂತ ಅವಳ ಗಂಡ ಇನ್ನೊಂದು ಹೆಣ್ಣನ್ನ ಕಟ್ಟಿಕೊಂಡಾನ್ ….ಆದರ ಆರು ತಿಂಗಳಾದರೂ ಅದಕ್ಕೂ ಗರ್ಭ ತುಂಬಿಲ್ಲ …..ಅವಳ ಅತ್ತಿ ಇನ್ನ ಮುಂದ ಏನ್ ಮಾಡ್ತಾಳಂತ ಗೊತ್ತಿಲ್ಲ” “ಅದೇನ್ ಹೊಸಾದ ಬಿಡ ಸುಬ್ಬಿ ….ರಾಮಾಯಣದ ಸೀತವ್ವನ ಹಿಡಕೊಂಡು ಇಲ್ಲಿವರೆಗೂ ಹೆಣ್ಣಿನ ಮ್ಯಾಲ ದಬ್ಬಾಳಿಕಿ ನಡದ ಐತಿ … ಮಕ್ಕಳಾಗದಿದ್ದರೆ ‘ಬಂಜಿ ‘ ಎಂಬ ಪಟ್ಟಾ ಕಟ್ಟತಾರ , ಹೆಣ್ಣು ಹೆತ್ತರ ಗಂಡು ಹಡಿಯಲಿಲ್ಲ ಎಂದು ಶಪಿಸತಾರ್ … ಗಂಡಸರು ಮಾತ್ರ ಏನೂ ತಪ್ಪಿಲ್ಲ ಎಂದು ಮೌನವಾಗಿರತಾರ್ ….ನಮ್ಮ ಅತ್ತಿಗೂ ಸ್ವಲ್ಪ ಹೇಳಿಬಿಡು “ ಅಂತ ಸುಬ್ಬಿಗೆ ಹೇಳಿದ್ದಳು . ಅತ್ತೆ ಮಾತು ಕೇಳಿಸಿಕೊಂಡರು ಏನು ಮಾತನಾಡಿರಲಿಲ್ಲ ಮನೆಯಲ್ಲಿ ಅತ್ತೆಯ ವಿರುದ್ಧವಾಗಿ ಹೋಗುವ ಶಕ್ತಿ ಯಾರಿಗೂ ಇರಲಿಲ್ಲ . ರಾಮು , ಹೆಂಡತಿಯ ಮೇಲಿದ್ದ ಪ್ರೀತಿಯನ್ನ ಕಡೆಗಣಿಸಲಾಗದೆ , ತಾಯಿಯ ವಿರುದ್ಧ ಮಾತನಾಡುವ ಶಕ್ತಿಯಿಲ್ಲದೆ ತ್ರಿಶಂಕು ನರಕದಲ್ಲಿ ಸಿಕ್ಕಿಹಾಕಿಕೊಂಡಿದ್ದನು . ವಸುಂಧರೆ ಮತ್ತೆ ಗರ್ಭವತಿ ಎಂದು ಗೊತ್ತಾದಾಗ ಅತ್ತೆಗೆ ಸಂತೋಷವೂ ಆಗಿತ್ತು ಹಾಗೆಯೆ ಚಿಂತೆಯೂ ಮೂಡಿತ್ತು. ‘ದೇವರೆ ! ಈ ಸಾರಿಯಾದರೂ ನನ್ನ ಆಸೆಯನ್ನು ಪೂರೈಸು ಎಂದು ದೊಡ್ಡ ನಮಸ್ಕಾರವನ್ನು ಹಾಕಿದ್ದಳು’ , ತಕ್ಷಣವೇ ಅವಳನ್ನು ತನಗೆ ಗೊತ್ತಿದ್ದ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದ್ದಳು . ಅಡ್ಡದಾರಿಯಲ್ಲಿ ವೈದ್ಯರಿಂದ ಲಿಂಗ ಪರೀಕ್ಷೆಯೂ ಆಗಿತ್ತು . ಗಂಡು ಮಗು ಎಂಬ ಆಶ್ವಾಸನೆಯು ದೊರಕಿದಾಗ ಅವಳ ಆನಂದಕ್ಕೆ ಪಾರವೇ ಇರಲಿಲ್ಲ . ಸೊಸೆಯನ್ನು ಅಪ್ಪಿ ಮುದ್ದಾಡಿದ್ದಳು, ‘ದೇವರು ಕೊನೆಗೂ ತನ್ನ ಮೇಲೆ ಕರುಣೆ ತೋರಿದನಲ್ಲಾ’ ಎಂದು ಸಂತೋಷದ ಉಸಿರನ್ನು ಬಿಟ್ಟಿದ್ದಳು. ಆದರೆ ಅತ್ತೆಗೆ ಗೊತ್ತಾಗಿರಲಿಲ್ಲ ‘ ತಾನೊಂದು ಬಗೆದರೆ,ದೈವ ಇನ್ನೊಂದು ಬಗೆಯುವದೆಂದು’. ಅದೊಂದು ದಿನ ವಸುಂಧರೆಗೆ ಹೆರಿಗೆ ಆಯಿತು ಆದರೆ ಅವರೆಂದುಕೊಂಡಂತೆ ಗಂಡು ಮಗವಾಗಿರಲಿಲ್ಲ ಮತ್ತೆ ಇನ್ನೊಂದು ಹೆಣ್ಣು ಮಗುವಿನ ಆಗಮನವಾಗಿತ್ತು . ವೈಧ್ಯರ ಪರೀಕ್ಷೆ ಸುಳ್ಳಾಗಿತ್ತು. ಅತ್ತೆಯ ಪೂಜೆಗೆ ಯಾವ ದೇವರೂ ವರ ಕೊಟ್ಟಿರಲಿಲ್ಲ ಅದಷ್ಟೇ ಅಲ್ಲದೆ ಮಗು ‘ಮೂಲಾ ‘ ನಕ್ಷತ್ರದಲ್ಲಿ ಹುಟ್ಟಿತ್ತು . ಒಂದರಮೇಲೊಂದು ಆಘಾತವನ್ನು ಅನುಭವಿಸಿದ ಅತ್ತೆಯ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಿತ್ತು . ಮೂಲಾ ನಕ್ಷತ್ರದಲ್ಲಿ ಮಗು ಹುಟ್ಟಿದರೆ ತಂದೆಯ ಪ್ರಾಣಕ್ಕೆ ಅಪಾಯ ಎಂಬುದು ಬಹು ಜನರ ನಂಬಿಕೆ . ಅತ್ತೆಯೂ ಅದಕ್ಕೇನು ಹೊರತಾಗಿರಲಿಲ್ಲ . ಈ ಅನಿಷ್ಟ ಮಗು ಏಕೆ ಈ ಮನೆಯಲ್ಲಿ ಹುಟ್ಟಿತೆಂದು ಪರಿತಪಿಸಿದ್ದಳು. ಮಗನ ಜೊತೆಗೆ ವಿಷಯವನ್ನು ಎತ್ತಿದಾಗ ಅವನೇನು ತಲೆಕೆಡಿಸಿಕೊಳ್ಳಲಿಲ್ಲ . ” ಮಗು ಮುದ್ದಾಗಿದೆಯಮ್ಮ! ಎತ್ತಿ ಮುದ್ದಾಡಿಬಿಡು. ಮೂಢನಂಬಿಕೆಗಳಿಗೆಲ್ಲ ಸುಮ್ಮನೆ ತಲೆ ಕೆಡಿಸಿಕೊಂಡು ಯಾಕೆ ನಿನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿ ಮತ್ತು ಮನೆಯ ನೆಮ್ಮದಿಯನ್ನೂ ಕೂಡಾ ಕೆಡಿಸುತ್ತಿ” ಅಂತ ಅವಳನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದನು . ಅಮ್ಮನ ಮನಸು ಅಷ್ಟು ಸುಲಭವಾಗಿ ಒಪ್ಪುವದಿಲ್ಲವೆಂದು ಅವನಿಗೆ ಗೊತ್ತಿತ್ತು. ಅತ್ತೆಯ ವರ್ತನೆಯಿಂದ ವಸುಂಧರೆಗೆ ರೋಷಿ ಹೋಗಿತ್ತು. ಇವಳೂ ಒಬ್ಬಳು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಭಾವನೆಗಳನ್ನು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರಮಾಡಿಕೊಂಡಿದ್ದಳು. ಅತ್ತೆಗೆ ಎದುರಾಗಿ ಎಂದೂ ಮಾತನಾಡದವಳು ಅದೊಂದು ದಿನ ಘಟ್ಟಿ ಮನಸಿನಿಂದ ಹೇಳಿಬಿಟ್ಟಿದ್ದಳು . ” ನೋಡು ಅತ್ತೆಮ್ಮ…..ನಿಮ್ಮ ಗಂಡು ಮೊಮ್ಮಗನ ಆಸೆಯಿಂದ ನನಗೆ ಮತ್ತೆ ಮಕ್ಕಳನ್ನು ಹೆರಲು ಹೇಳಬೇಡಿ . ನಾನೇನು ಮಕ್ಕಳನ್ನು ಹೆರುವ ಫ್ಯಾಕ್ಟರಿ ಅಲ್ಲ . ಇದ್ದ ಮೂವರು ಮಕ್ಕಳನ್ನು ಚನ್ನಾಗಿ ಬೆಳೆಸುವ ಜವಾಬ್ಧಾರಿ ನನಗೆ ಸಾಕು. ಗರ್ಭದಲ್ಲಿ ಜೀವ ಮೂಡುವದಕ್ಕೆ ಗಂಡ ಹೆಂಡತಿ ಹೇಗೆ ಕಾರಣರೊ……ಹಾಗೆಯೇ ಮೂಡಿದ ಜೀವ ಹೆಣ್ಣು ಅಥವಾ ಗಂಡು ಎಂದು ಮಾರ್ಪಡಲು ಅವರಿಬ್ಬರೂ ಅಷ್ಟೆ ಸಮಪಾಲರು ಎಂಬುವದನ್ನು ಮರೆಯಬೇಡಿರಿ“ ಎಂದಿದ್ದಳು . ಸೊಸೆಯ ಈ ಮಾತಿನಿಂದ ಆಘಾತವಾಗಿದ್ದರು ಏನನ್ನು ತಿರುಗಿ ಮಾತನಾಡದೆ ಸುಮ್ಮನಾಗಿದ್ದಳು . ತನ್ನ ಮನಸಿನ ವೇದನೆಯನ್ನು , ವಸುಂಧರೆ ಗಂಡನಿಗೂ ಮುಟ್ಟಿಸಿದ್ದಳು” ನನಗೆ ಇನ್ನು ಮುಂದೆ ಮಕ್ಕಳು ಬೇಡ ….ನಿಮಗೇನಾದರೂ ನಿಮ್ಮ ತಾಯಿಯ ಹಾಗೆ ಗಂಡುಮಗುವಿನ ಆಸೆಯಿದ್ದರೆ ……? ಇನ್ನೊಂದು ಮದುವೆಯನ್ನು ಮಾಡಿಕೊಳ್ಳಿ …ನನಗೇನೂ ತೊಂದರೆ ಇಲ್ಲ . ನನ್ನನ್ನು ನನ್ನ ಪಾಲಿಗೆ ಬಿಟ್ಟುಬಿಡಿ ” ಎಂದು . ವಸುಂಧರೆಯನ್ನು ಸಮಾಧಾನಪಡಿಸಿ ಅವನು ಹೇಳಿದ್ದ ” ಇದಕ್ಕೆಲ್ಲ ಯಾಕೆ ತಲೆಕೆಡಿಸಿಕೊಳ್ಳುತ್ತೀಯ ಸ್ವಲ್ಪ ಸಮಯದ ನಂತರ ಎಲ್ಲ ಸರಿಯಾಗುತ್ತದೆ ಬಿಡು ” ಎಂದು . ಕಾಲಚಕ್ರ ತಿರುಗುತ್ತಿತ್ತು , ಅಂಜಲಿ ಅಷ್ಟರಲ್ಲಿಯೇ ಆರು ವಸಂತಗಳನ್ನು ಕಳೆದಿದ್ದಳು . ತಂದೆ ತಾಯಿಯರ ಇಚ್ಛೆಯಂತೆ ಮನೆಯಿಂದ ಸುಮಾರು ಮೂರು ಮೈಲು ದೂರವಿದ್ದ ಇಂಗ್ಲಿಷ್ ಶಾಲೆಗೆ ಪಾದಾರ್ಪಣೆ ಮಾಡಿದ್ದಳು . ಮನೆಯಿಂದ ನೂರು ಮೀಟರ್ ನಡೆದರೆ ಆಲದ ಮರದ ಕಟ್ಟೆ . ಅಲ್ಲಿಗೆ ಶಾಲೆಯ ವಾಹನ ಬಂದು ಮಕ್ಕಳನ್ನು ಕರೆದೊಯ್ಯುತ್ತಿತ್ತು . ಅಂಜಲಿಗೆ ಪ್ರಾಣಿಗಳನ್ನು ಕಂಡರೆ ತುಂಬಾ ಅನುಕಂಪ , ಮನೆಯ ಮುಂದೆ ಮಲಗುತ್ತಿದ್ದ ಬೀದಿಯ ನಾಯಿಗೆ ದಿನಾಲೂಊಟವನ್ನು ಹಾಕಿ ಸ್ನೇಹವನ್ನು ಗಿಟ್ಟಿಸಿದ್ದಳು. ತಿಂದ ಅನ್ನದ ಋಣ ಎಂಬುವಂತೆ ದಿನಾಲೂ ಮನೆಯಿಂದ ಆಲದ ಕಟ್ಟೆಯವರೆಗೂ ಅದು ಅವಳನ್ನು ಹಿಂಬಾಲಿಸುತ್ತಿತ್ತು ಮತ್ತು ಸಾಯಂಕಾಲ ಅವಳ ಬರುವಿಕೆಗಾಗಿ ಕಟ್ಟೆಯ ಹತ್ತಿರ ಕಾಯುತ್ತಿತ್ತು . ಸಾಯಂಕಾಲ ಐದು ಘಂಟೆಯಾದರೂ ಅಂಜಲಿ ಮನೆ ಸೇರದಿದ್ದಾಗ ವಸುಂಧರೆಗೆ ಚಿಂತೆಯಾಗತೊಡಗಿತು….. ಆಲದ ಕಟ್ಟೆಯವರೆಗೂ ಹೋಗಿನೋಡೊಣವೆಂದು ಮನೆಯ ಹೊರಗೆ ಬಂದಳು . ಬಾಗಿಲಿನ ಎದುರು ಬೀದಿ ನಾಯಿ ಒಂಟಿಯಾಗಿ ಜೋರಾಗಿ ಬೊಗಳುತ್ತ ನಿಂತಿತ್ತು ಆದರೆ ಅಂಜಲಿ ಇರಲಿಲ್ಲ . ನಾಯಿಯು ಏನೋ ಸಂದೇಶವನ್ನು ಹೇಳಲು ಪ್ರಯತ್ನಿಸುತಿತ್ತು ವಸುಂಧರೆಗೆ ಯಾಕೋ ಭಯವಾಗತೊಡಗಿತು . ಗಂಡನಿಗೆ ಫೋನು ಮಾಡಿ ತಕ್ಷಣವೇ ಮನೆಗೆ ಬರಲು ಹೇಳಿ , ನಾಯಿಯ ಜೊತೆಗೆ ಆಲದ ಮರದ ಕಟ್ಟೆಯಕಡೆಗೆ ನಡೆದಳು . ( ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವದು )
ಈ ವಾರ ನಿಮ್ಮ ಮುಂದಿದೆ ಕಳೆದ ಶನಿವಾರ ಹೆಸರಾಂತ ನಿರ್ದೇಶಕ, ರಂಗ ಕರ್ಮಿ ಟಿ. ಎಸ್. ನಾಗಾಭರಣರೊಡನೆ ಅನಿವಾಸಿಗಳು ನಡೆಸಿದ ಸಂವಾದದ ವರದಿ.
ನವೆಂಬರ್ ೨೬ರಂದು ಕನ್ನಡ ಬಳಗ (ಯು.ಕೆ) ಸ್ಟೋಕ್ ಆನ್ ಟ್ರೆಂಟ್ ನಗರದಲ್ಲಿ ದೀಪಾವಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅಂದು ಮುಖ್ಯ ಅತಿಥಿಗಳಾಗಿ ಹೆಸರಾಂತ ನಿರ್ದೇಶಕ, ರಂಗಕರ್ಮಿ ಶ್ರೀ. ಟಿ. ಎಸ್. ನಾಗಾಭರಣ ಕರ್ನಾಟಕದಿಂದ ಆಗಮಿಸಿದ್ದರು. ಅವರು ಬರುವ ವಿಚಾರ ನಮಗೆ ಸಪ್ಟೆಂಬರ್ ತಿಂಗಳಲ್ಲೇ ತಿಳಿದಿತ್ತು. ಅದಕ್ಕನುಗುಣವಾಗಿ ಸಂಪ್ರದಾಯದಂತೆ ಅನಿವಾಸಿ ಹುಟ್ಟಿದಾಗಿನಿಂದ ನಡೆಸಿಕೊಂಡು ಬಂದಿರುವ ಗೋಷ್ಠಿಗೆ ನಾಗಾಭರಣರ ನಾಟಕ ಹಾಗೂ ಸಿನಿಮಾಗಳ ವಿಶ್ಲೇಷಣೆ ಮಾಡುವ ನಿರ್ಧಾರಕ್ಕೆ ಬಂದಿದ್ದೆವು. ಇದರೊಡನೆ, ಅವುಗಳ ಬಗ್ಗೆ ಮಾತಾಡುವ ಸದಸ್ಯರಿಗೆ ನಾಗಾಭರಣರನ್ನು ಪ್ರಶ್ನಿಸುವ ಅವಕಾಶವನ್ನು ಕೊಡಲಾಯಿತು.
ಅನಿವಾಸಿ ಕಾರ್ಯಕ್ರಮಕ್ಕೆ ಉತ್ತಮವಾದ ವಿಂಡ್ಸರ್ ಕೋಣೆ ಹಾಗು ಸೂಕ್ತವಾದ ಧ್ವನಿ ವ್ಯವಸ್ಥೆಯ ಅನುಕೂಲ ಮಾಡಿಕೊಟ್ಟವರು ಕನ್ನಡ ಬಳಗದ ಅಧ್ಯಕ್ಷರಾದ ಶ್ರೀಮತಿ ಸುಮನಾ ಗಿರೀಶ್. ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದವರು ಡಾ. ಲಕ್ಷ್ಮೀನಾರಾಯಣ ಗುಡೂರ್. ಆರು ಅನಿವಾಸಿಗಳು ತಮಗೆ ಬೇಕಾದ ಸಿನಿಮಾಗಳನ್ನು ಆರಿಸಿಕೊಂಡು, ವಿಶ್ಲೇಷಿಸಿದರು. ಪ್ರತಿಯೊಬ್ಬರಿಗೂ ಸರಿ ಸುಮಾರು ಹತ್ತು ನಿಮಿಷಗಳ ಕಾಲಾವಕಾಶವಿತ್ತು. ಮೊದಲ ಒಂದೆರಡು ನಿಮಿಷಗಳು ಸಿನಿಮಾ ಕಥೆಯ ವಿವರಣೆಗೆ ಮೀಸಲಿಡಲು ಸೂಚಿಸಲಾಗಿತ್ತು. ನಂತರದ ಎರಡು ನಿಮಿಷಗಳನ್ನು ಸಿನಿಮಾದ ತುಣುಕನ್ನು ತೋರಿಸಲು ಹಾಗು ಉಳಿದ ಸಮಯದಲ್ಲಿ ವಿಶ್ಲೇಷಣೆ ಹಾಗು ನಾಗಾಭರಣರೊಡನೆ ಆ ಸಿನಿಮಾ ಕುರಿತಾದ ಸಂವಾದಕ್ಕೆಂದು ಗುರುತಿಸಿಕೊಂಡಿದ್ದೆವು. ವಿಶ್ಲೇಷಕರಿಗೆ ಬೇಕಾದ ಸಿನಿಮಾ ತುಣುಕುಗಳನ್ನು ಮುತುವರ್ಜಿಯಿಂದ ತಯಾರಿಸಿ ಒದಗಿಸಿದವರು ಡಾ. ಶ್ರೀವತ್ಸ ದೇಸಾಯಿ.
ಅನಿವಾಸಿಗಳ ಆಯ್ಕೆ ಈ ಕೆಳಗಿನಂತಿದ್ದವು:
೧. ಡಾ. ಕೇಶವ ಕುಲಕರ್ಣಿ: ಅನ್ವೇಷಣೆ (ಬಿಡುಗಡೆ: ೧೯೮೩)
೨. ಡಾ. ಜಿ.ಎಸ್. ಶಿವಪ್ರಸಾದ: ಅಲ್ಲಮ (ಬಿಡುಗಡೆ: ೨೦೧೭)
೩. ಡಾ. ರಶ್ಮಿ ಮಂಜುನಾಥ: ಚಿನ್ನಾರಿ ಮುತ್ತ (ಬಿಡುಗಡೆ: ೧೯೯೩)
೪. ಡಾ. ರಾಮಶರಣ ಲಕ್ಷ್ಮೀನಾರಾಯಣ: ನಾಗಮಂಡಲ (ಬಿಡುಗಡೆ: ೧೯೯೭)
೫. ಡಾ. ಶ್ರೀವತ್ಸ ದೇಸಾಯಿ: ಸಿಂಗಾರೆವ್ವ (ಬಿಡುಗಡೆ: ೨೦೦೩)
೬. ಡಾ. ಲಕ್ಷ್ಮೀನಾರಾಯಣ ಗುಡೂರ್: ಮೈಸೂರು ಮಲ್ಲಿಗೆ (ಬಿಡುಗಡೆ: ೧೯೯೧)
ಉತ್ತಮವಾದ ಪ್ರತಿ ಸಿಗದ ಕಾರಣ ಕೇಶವ ಕುಲಕರ್ಣಿಯವರು ಸಿನಿಮಾದ ತುಣುಕನ್ನು ತೋರಿಸದಿದ್ದರೂ, ಅವರ ತಮ್ಮ ಹೇಗೆ ಸಿನಿಮಾದ ಪ್ರಾರಂಭದಲ್ಲಿನ ದೃಶ್ಯವೊಂದರ ಬಳಿಕ ಹೆದರಿ ಪರದೆಗೆ ಬೆನ್ನು ಮಾಡಿ ಕುಳಿತಿದ್ದನೆಂಬುದನ್ನು ಕೇಳಿದವರಿಗೆ ಸಿನಿಮಾ ಟ್ರೇಲರ್ ನೋಡಿದ ಅನುಭವವಾಗಿರಬಹುದು. ಜನಮನದ ಗೀತೆಗಳನ್ನು ಆಧಾರಿಸಿ ನಿರ್ಮಿಸಿದ ಸಿನಿಮಾವಾಗಿದ್ದರಿಂದ ಗುಡೂರರು ಸಿನಿಮಾದ ಹಾಡುಗಳ ಸಂಗೀತವನ್ನು ಕತ್ತರಿಸಿ ಧ್ವನಿ ಕೊಲಾಜನ್ನು ಪ್ರಸ್ತುತ ಪಡಿಸಿದರು. ಇಡೀ ಹಾಡನ್ನು ನಿರೀಕ್ಷಿಸುತ್ತಿದ್ದವರಿಗೆ, ಒಮ್ಮೆಲೇ ಇನ್ನೊಂದು ಹಾಡು ಶುರುವಾಗಿ ತಬ್ಬಿಬ್ಬಾಗಿದ್ದು (ನಾಗಾಭರಣರನ್ನೂ ಸೇರಿ) ಈ ಪ್ರಯೋಗದ ವೈಶಿಷ್ಠ್ಯ.
ನಮ್ಮ ಕಾರ್ಯಕ್ರಮದ ವಿಶೇಷ ನಾಗಾಭರಣರೊಂದಿಗಿನ ಸಂವಾದ. ಅವರ ಸಿನೆಮಾಗಳ ಬೆಳವಣಿಗೆಯ ಹಿಂದಿನ ಕುತೂಹಲಕಾರಿ ಕಥೆಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು, ಆಶ್ಚರ್ಯಚಕಿತರಾಗಿಸಿದವು. ‘ಅನ್ವೇಷಣೆ’ ನಾಗಾಭರಣರ ಎರಡನೇ ಸಿನೆಮಾ. ಅವರ ಗುರು ಗಿರೀಶ್ ಕಾರ್ನಾಡರು. ಅವರ ಸಲಹೆಯಂತೆ ಸ್ಮಿತಾ ಪಾಟೀಲರನ್ನು ನಾಯಕಿಯಾಗಿ ಆರಿಸಿದ್ದರು ನಾಗಾಭರಣ. ಅದಕ್ಕೆ ಎರಡು ಕಾರಣಗಳು: ಆಕೆ ಚಿತ್ರಕಥೆ ಇಷ್ಟ ಪಟ್ಟು ತಾನೇ ನಾಯಕಿಯಾಗಿ ನಟಿಸುತ್ತೇನೆಂದಿದ್ದು ಹಾಗು ನಾಗಾಭರಣರ ಕಾಸಿನ ಕಷ್ಟ ನೋಡಿ ಸಂಭಾವನೆ ಇಲ್ಲದೇ ಕೆಲಸ ಮಾಡುವೆನೆಂದು ಒಪ್ಪಿದ್ದು. ನಾಯಕ ಅನಂತನಾಗ್ ಪ್ರೇಮದ ಕಡಲಲ್ಲಿ ಈಸುತ್ತ, ನಾಗಾಭರಣರನ್ನು ಇರುಸು-ಮುರಿಸಿನ ಪ್ರಸಂಗಕ್ಕೆ ಸಿಲುಕಿಸಿದ್ದನ್ನು ಹಂಚಿಕೊಂಡರು. ಕೇವಲ ೨.೫ ಲಕ್ಷದಲ್ಲಿ ತಯಾರಿಸಿದ ಚಿತ್ರವಿದಾಗಿತ್ತು. ಮಕ್ಕಳ ಚಿತ್ರ ಜಗತ್ತಿನಲ್ಲೇ ಹೆಚ್ಚು ಕಡೆಗಣಿಸಲ್ಪಟ್ಟ ಪ್ರಕಾರ ಎಂಬುದು ನಾಗಾಭರಣರ ಅಂಬೋಣ. ‘ಚಿನ್ನಾರಿ ಮುತ್ತ’ ಕ್ಕೆ ಪ್ರೇರಣೆ ಡಿಕನ್ಸ್ ನ ಓಲಿವರ್ ಟ್ವಿಸ್ಟ್. ಕವಿ ಎಚ್ಚೆಸ್ವಿಯವರಿಗೆ ಸವಾಲು ಹಾಕಿ ಕಥೆ, ಸಂಭಾಷಣೆ, ಹಾಡು ಬರೆಸಿ ತಯಾರಿಸಿದ ಸಿನಿಮಾ. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿತ್ತು. ಹೀಗೇ ನಾಲಕ್ಕು ಮಕ್ಕಳ ಚಿತ್ರಗಳನ್ನು ತಯಾರಿಸಿ, ಪ್ರಶಸ್ತಿ ಪಡೆದ ಹೆಗ್ಗಳಿಕೆ ನಾಗಾಭರಣರದ್ದು.
ಸಂಗೀತ ನಾಗಾಭರಣರ ಚಿತ್ರಗಳ ಜೀವಾಳ. ಅದಕ್ಕೆ ಅವರಿಗೆ ಹೆಗಲು ಕೊಟ್ಟಿದ್ದು ಹೆಸರಾಂತ ಕಲಾವಿದ ಸಿ. ಅಶ್ವಥ್. ಇವರ ಯಮಳ ಪ್ರಯೋಗಗಳನ್ನು ಹೆಚ್ಚಿನ ಪ್ರಸಿದ್ಧ ಸಿನಿಮಾಗಳಲ್ಲಿ ಕಾಣುತ್ತೇವೆ (ಮೈಸೂರು ಮಲ್ಲಿಗೆ, ಚಿನ್ನಾರಿ ಮುತ್ತ, ಸಂತ ಶಿಶುನಾಳ ಶರೀಫ, ನಾಗಮಂಡಲ, ಸಿಂಗಾರೆವ್ವ). ‘ಮೈಸೂರು ಮಲ್ಲಿಗೆ’ ನಾಗಾಭರಣರಿಗೆ ವಿಶೇಷ ಸವಾಲನ್ನು ಒಡ್ಡಿದ ಪ್ರಯೋಗ. ಕೇವಲ ಹಾಡುಗಳನ್ನು ಆಧರಿಸಿ ಹೊಸೆದ ಕಥೆಯಿದು. ಸುಮಾರು ಹದಿನೈದು ಹೆಸರಾಂತ ಕವಿಗಳೊಡನೆ ಸಮಾಲೋಚಿಸಿದರೂ, ದಾರಿ ಕಾಣದಾದಾಗ, ನಾಗಾಭರಣರೇ ಕಥೆಯನ್ನು ಹೊಸೆಯುವ ನಿರ್ಧಾರ ಮಾಡಿದರು. ಹಲವು ಆವೃತ್ತಿಗಳನ್ನು ಕವಿತೃಯರಾದ ಎಚ್ಚೆಸ್ವಿ, ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗು ವ್ಯಾಸರಾಯರೊಡನೆ ಚರ್ಚಿಸಿದ್ದರಂತೆ. ಒಂದು ಬೆಳಗಿನ ಝಾವ ಬುಲ್ ಟೆಂಪಲ್ ಎದುರಿನ ಕಟ್ಟೆಯ ಮೇಲೆ ಅಶ್ವಥ್ ಜೊತೆ ಕುಳಿತಿದ್ದಾಗ ಬಲ್ಬ್ ತಟ್ಟನೆ ಫ್ಲಾಶ್ ಆಗಿ ಕಥೆಗೊಂದು ರೂಪ ಬಂದಿತ್ತೆಂದು ವಿವರಿಸಿದರು. ಇದರಲ್ಲಿ ಅವರು ಕಾಣುವುದು ಸಂಘರ್ಷ: ಸ್ವಾತಂತ್ರ್ಯ ಹೋರಾಟ, ಸರಕಾರದ ಪರವಾದ ಶಾನುಭೋಗರೊಂದೆಡೆ, ಸಂಗ್ರಾಮದ ಪರವಾದ ಅವರ ಅಳಿಯ, ಇವರ ನಡುವೆ ಬಳಲುವ ಪದುಮ. ಈ ಸಿನೆಮಾದ ತೆರೆಯ ಮರೆಯಲ್ಲಿ ಆದ ಸಂಘರ್ಷ ನಮಗೆಲ್ಲ ನಾಗಾಭರಣರ ಜಿದ್ದು, ಸಿನಿಮಾ ಕ್ಷೇತ್ರದಲ್ಲಿ ಅವರಿಗಿದ್ದ ಪ್ರಭಾವಗಳನ್ನೂ ಪರಿಚಯ ಮಾಡಿಸಿತು. ಮೈಸೂರು ಮಲ್ಲಿಗೆ ಧ್ವನಿ ಸುರುಳಿಯ ಯಶಸ್ಸಿನ ಹಿಂದಿನ ರೂವಾರಿ ಅಶ್ವಥ್ ಎಂಬುದು ಎಲ್ಲರಿಗೂ ಗೊತ್ತಿದ್ದದ್ದೇ. ಆದರೆ ನಾಗಾಭರಣರಿಗೆ ಬೇಕಿದ್ದುದು ಯುವಕನಿಗೆ ಹೊಂದುವ ಧ್ವನಿ. ಹೇಗೆ ಅವರು ಎಸ್ಪಿ ಬಾಲಸುಬ್ರಹ್ಮಣ್ಯರನ್ನು ಅಶ್ವಥ್ ಬದಲು ಅಶ್ವಥ್ ನಿರ್ದೇಶನದಲ್ಲೇ ಹಾಡಿಸಿದರು ಎಂಬುದನ್ನು ಕೇಳಿ ಪ್ರೇಕ್ಷಕರೆಲ್ಲ ದಿಗ್ಭ್ರಂತರಾದರು, ಮನಸಾರೆ ನಕ್ಕರು.
‘ನಾಗಮಂಡಲದ’ ಲ್ಲಿ ಅವರು ತೋರಬಯಸುವುದು ರಾಣಿಯ ಬಯಕೆ, ಮುಗ್ಧತೆ, ಸಂವೇದನೆಗಳು. ಇದರಲ್ಲಿ ಬರುವ ಹಲವು ಸನ್ನಿವೇಶಗಳು, ಬದುಕಿನ ವಿಪರ್ಯಾಸಗಳಿಗೆ ರೂಪಕಗಳು. ನಾಗಪ್ಪ – ಅಣ್ಣಪ್ಪ ಎರಡು ಪಾತ್ರಗಳಲ್ಲ. ಒಬ್ಬನೇ ವ್ಯಕ್ತಿಯ ಎರಡು ಮನಸ್ಥಿತಿಗಳ ಸಂಕೇತ, ಅವುಗಳ ನಡುವಿನ ಸಂಘರ್ಷ. ಕೊನೆಯಲ್ಲಿ ಕಂಡುಬರುವುದು ರಾಣಿಯ ಪ್ರೀತಿಯ ಗೆಲುವು. ಕಾರ್ನಾಡರ ಪ್ರಸಿದ್ಧ ನಾಟಕವನ್ನಾಧರಿಸಿದ ನಾಗಮಂಡಲವನ್ನು ನೋಡಿ ಮೆಚ್ಚಿದ ಕಾರ್ನಾಡರು ನೀಡಿದ ಪ್ರತಿಕ್ರಿಯೆಯೇ ನಾಗಾಭರಣರಿಗೆ ಚಿತ್ರಕ್ಕೆ ಸಿಕ್ಕ ಇತರ ಪ್ರಶಸ್ತಿಗಳಿಗಿಂತ ಅತ್ಯಮೂಲ್ಯವಾಗಿದ್ದರಲ್ಲಿ ಸಂದೇಹವೇ ಇಲ್ಲ. ‘ಸಿಂಗಾರೆವ್ವ’ ದಲ್ಲಿ ನಾಗಾಭರಣರು ಕಾಣುವುದು ವರ್ಗ ಸಂಘರ್ಷ, ಇರುವವರ-ಇಲ್ಲದವರ ನಡುವಿನ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ. ಇಲ್ಲಿ ಸಿಂಗಾರೆವ್ವ ಪ್ರಕೃತಿಯ ಸಂಕೇತ. ಪ್ರಕೃತಿ ನಾಶವಾದಂತೆ ಹೇಗೆ ಪುರುಷ ನಾಶವಾಗುತ್ತಾನೆ ಎಂಬುದನ್ನು ಅವರು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ‘ಅಲ್ಲಮ’ ದಲ್ಲಿ ಆತನ ಚಿಂತನೆಗಳನ್ನು ಪ್ರಸ್ತುತಕ್ಕೆ ಹೊಂದಿಸುವ ಪ್ರಯತ್ನ ಮಾಡಿದ್ದಾರೆ. ಅವಧೂತನಾದ ಅಲ್ಲಮನ ವಚನಗಳನ್ನೇ ಸಂಭಾಷಣೆಯನ್ನಾಗಿ ಉಪಯೋಗಿಸಿದ್ದಾರೆ. ಅವನ ವಚನಗಳನ್ನು ದೃಶ್ಯ ರೂಪದಲ್ಲಿ ನೋಡುಗರ ಕಣ್ಮುಂದೆ ತಂದಿದ್ದಾರೆ. ಈ ಪ್ರಯೋಗವು ಅವರಿಗೆ ಹೊಸ ಸವಾಲನ್ನೆಸೆದಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ ತೃಪ್ತಿ ಅವರಿಗಿದೆ.
ಸುದೀರ್ಘವಾಗಿ, ನಗೆ ಚಾಟಿಕೆಗಳ ನಡುವೆ ತಮ್ಮ ಸಿನಿಮಾ ಪಯಣವನ್ನು ಹಂಚಿಕೊಂಡ ನಾಗಾಭರಣರು, ತಮ್ಮ ಪ್ರತಿಭೆ, ಸರಳತೆ, ಯೋಚನಾ ಲಹರಿಯ ಹರಿವು – ದಿಕ್ಕುಗಳನ್ನು ಪರಿಚಯಿಸಿದರು. ಬಂದ ಪ್ರೇಕ್ಷಕರೆಲ್ಲ ಸಂವಾದವನ್ನು ತುಂಬು ಹೃದಯದಿಂದ ಅನುಭವಿಸಿದರು. ಅವರಿಗೂ ಸಂವಾದಿಸುವ ಅವಕಾಶ ಸಮಯಾಭಾವದಿಂದ ಸಿಗದೇ ನಿರಾಶರಾಗಿದ್ದು ಪ್ರಯೋಜಕರಿಗೆ ವೇದ್ಯವಾಗಿತ್ತು.
ಅನಿವಾಸಿಯ ಬಂಧುಗಳಿಗೆಲ್ಲ ನಮಸ್ಕಾರಗಳು. ಈ ಶುಕ್ರವಾರ ದಿಢೀರ್ ದೋಸೆಯಂತೆ ಕೊನೆಯ ಗಳಿಗೆಯಲ್ಲಿ ಬಡಿಸುತ್ತಿರುವ ಕವನಗಳು, ಡಾ. ರವಿರಾಜ್ ಉಪ್ಪೂರರ ಹಂಚಿನಲ್ಲಿ ತಯಾರಾದವು. ಮೂಲತಃ ಉಡುಪಿಯವರಾದ ರವಿರಾಜ್, ವೃತ್ತಿಯಲ್ಲಿ ಕ್ಷ-ಕಿರಣ ತಜ್ಞರು. 2010ರಿಂದ ಇಂಗ್ಲಂಡಿನಲ್ಲಿ ತಮ್ಮ ಪತ್ನಿ-ಪುತ್ರರೊಂದಿಗೆ ವಾಸವಾಗಿರುವ ರವಿರಾಜ್ ಕವನ ಗೀಚುವುದಲ್ಲದೇ (ಅವರದೇ ಮಾತಿನಲ್ಲಿ), ಯಕ್ಷಗಾನದಲ್ಲೂ ಆಸಕ್ತಿ ಉಳ್ಳವರು. ಬನ್ನಿ, ಏನು ಹೇಳುತ್ತಾರೋ ನೋಡೋಣ – ಲಕ್ಷ್ಮೀನಾರಾಯಣ ಗುಡೂರ, ಸಂಪಾದಕ (ಸಬ್ಸ್ಟಿಟ್ಯೂಟ್).
ಭಾರತೀಯ ಮೂಲದವರಾದ ರಿಷಿ ಸುನಾಕ್ ಅವರು ಪ್ರಧಾನಿಯಾದ ಹಿನ್ನೆಲೆಯಲ್ಲಿ ವಿಶ್ವವಾಣಿ ಕ್ಲಬ್ ಹೌಸ್ ಏರ್ಪಡಿಸಿದ್ದ ಒಂದು ವಿಚಾರ ಸಂಕೀರಣದಲ್ಲಿ ನೀಡಿದ ಉಪನ್ಯಾಸವನ್ನು ಆಧರಿಸಿದ ಮತ್ತು ಆ ಉಪನ್ಯಾಸಕ್ಕೆ ಕೆಲವು ಅಂಶಗಳನ್ನು ಸೇರಿಸಿ ಬರೆದಿರುವ ಲೇಖನ. ಈ ಲೇಖನದಲ್ಲಿ ರಿಷಿ ಅವರ ವೈಯುಕ್ತಿಕ ಹಿನ್ನೆಲೆ, ಅವರು ರಾಜಕಾರಣಿಯಾಗಿ ನಡೆದು ಬಂದ ದಾರಿ, ಪ್ರಧಾನಿಯಾಗುವ ಮುನ್ನ ನಡೆದ ರೋಚಕ ಸಂಗತಿಗಳು, ಜನಾಭಿಪ್ರಾಯ ಮುಂತಾದ ವಿಷಯಗಳನ್ನು ನನ್ನ ಕೆಳಗಿನ ಧೀರ್ಘ ಬರಹ ಒಳಗೊಂಡಿದೆ. ರಾಜಕಾರಣಿಗಳನ್ನು ಕುರಿತ ಲೇಖನಗಳು ಅನಿವಾಸಿ ಜಾಲ ಜಗುಲಿಯಲ್ಲಿ ವಿರಳ. ಹೀಗಾಗಿ ಇದು ಓದುಗರನ್ನು ಆಕರ್ಷಿಸಬಹುದು ಎಂದು ನಂಬಿರುತ್ತೇನೆ. ರಿಷಿ ಇದೀಗಷ್ಟೇ ಪ್ರಧಾನಿಯಾಗಿದ್ದು ಈ ಬರಹ ಸಮಯೋಚಿತವಾಗಿದೆ ಎಂದು ಭಾವಿಸುತ್ತೇನೆ.
-ಸಂಪಾದಕ
***
ರಿಷಿ ಸುನಾಕ್ ಅವರು ೨೪ ಅಕ್ಟೊಬರ್ ೨೦೨೨ ದೀಪಾವಳಿಯ ಹಬ್ಬದ ದಿನದಂದು ಬ್ರಿಟನ್ನಿನ ಪ್ರಧಾನ ಮಂತ್ರಿಯಾದರು. ಐತಿಹಾಸಿಕವಾಗಿ ಇದು ಒಂದು ಮೈಲಿಗಲ್ಲು ಮತ್ತು ಮಹತ್ವದ ಘಳಿಗೆ. ರಿಷಿ ಹುಟ್ಟಿನಲ್ಲಿ ಬ್ರಿಟಿಷರಾದರೂ ಅವರು ಭಾರತೀಯ ಮೂಲದವರು. ಆಂಗ್ಲನಾಡಿನಲ್ಲಿ ಮೈನಾರಿಟೀ ಸಮುದಾಯದಿಂದ ಬಂದು ಎತ್ತರಕ್ಕೆ ಏರಿ ಪ್ರಧಾನಿಯಾಗುವುದು ಇದುವರೆವಿಗೂ ಅಸಾಧ್ಯವಾಗಿತ್ತು. ಆಂಗ್ಲರು ಜಾನಾಂಗವಾದಿಗಳೆಂಬ ಒಂದು ಕಳಂಕ ಇದ್ದು ರಿಷಿ ಅವರನ್ನು ಪ್ರಧಾನಿಯಾಗಿ ಆಯ್ಕೆಮಾಡಿದ ಮೇಲೆ ಅವರು ಆ ಕಳಂಕದಿಂದ ಮುಕ್ತರಾಗಿದ್ದಾರೆ. ಇದಷ್ಟೇ ಅಲ್ಲದೆ ರಿಷಿ ರಾಜಕೀಯ ಕ್ಷೇತ್ರದಲ್ಲಿ ಕಾಲಿಟ್ಟು ಕೇವಲ ಏಳು ವರ್ಷಗಳಾಗಿದ್ದು ಇಷ್ಟು ಕಡಿಮೆ ಸಮಯದಲ್ಲಿ ಎಲ್ಲರ ಮನ್ನಣೆ ಮತ್ತು ವಿಶ್ವಾಸಗಳನ್ನು ಗಳಿಸಿಕೊಂಡು ಪ್ರಧಾನಿ ಪಟ್ಟಕ್ಕೇರಿದ್ದಾರೆ ಮತ್ತು ಕೇವಲ ೪೨ ವರ್ಷ ವಯಸ್ಸಿನಲ್ಲಿ ಪ್ರಧಾನಿಯಾಗಿರುವುದೂ ವಿಶೇಷ. ಈ ಕಾರಣಕ್ಕಾಗಿ ಇದು ಮಹತ್ವ ಘಳಿಗೆ ಎಂದು ಭಾವಿಸಬಹುದು.
‘ಋಷಿ ಮೂಲ ಹುಡುಕಬಾರದಾದರೂ’ ಇಲ್ಲಿ ರಿಷಿ ಅವರ ಕೆಲವು ವೈಯುಕ್ತಿಕ ಹಿನ್ನೆಲೆಯನ್ನು ಪ್ರಸ್ತಾಪಿಸುವುದು ಉಚಿತ. ರಿಷಿ ಅವರು ಬ್ರಿಟನ್ನಿನಲ್ಲಿ ಹುಟ್ಟಿದ್ದರೂ ಅವರ ಪೂರ್ವಜರು ಹಿಂದಿನ ಅವಿಭಾಜಿತ ಭಾರತದ, ಈಗಿನ ಪಂಜಾಬ್ ಪ್ರಾಂತ್ಯದಿಂದ ಬಂದವರು. ಅವರ ಪರಿವಾರದವರು ಮೊದಲಿಗೆ ಈಶಾನ್ಯ ಆಫ್ರಿಕಾದ ದೇಶಗಳಿಗೆ ವಲಸೆ ಹೋಗಿ ಅಲ್ಲಿ ನೆಲಸಿ ೬೦ರ ದಶಕದಲ್ಲಿ ರಿಷಿ ಅವರ ತಂದೆ ತಾಯಿ ಇಂಗ್ಲೆಂಡಿಗೆ ವಲಸೆ ಬಂದು ಸೌತ್ ಹ್ಯಾಂಪ್ಟನ್ ನಗರದಲ್ಲಿ ನೆಲೆಸಿದರು. ಅವರ ತಂದೆ ಒಬ್ಬ ಸಾಧಾರಣ ವೈದ್ಯ ಮತ್ತು ತಾಯಿ ಫಾರ್ಮಸಿಸ್ಟ್ ಆಗಿದ್ದು ಆರ್ಥಿಕವಾಗಿ ಅವರು ಮಧ್ಯಮ ವರ್ಗದವರೇ. ಅವರಿಗೆ ಲಕ್ಷಿ ಕಟಾಕ್ಷ ಪ್ರಾಪ್ತವಾಗಿದ್ದು ನಂತರದಲ್ಲಿ. ವಿದ್ಯಾರ್ಥಿ ದೆಸೆಯಲ್ಲಿ ರಿಷಿ ಬಹಳ ಪ್ರತಿಭಾವಂತರಾಗಿ ಆಕ್ಸ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಪದವಿ ಪಡೆದುಕೊಂಡು ನಂತರ ಕ್ಯಾಲಿಫೋರ್ನಿಯಾದಲ್ಲಿ ಎಂಬಿಎ ಪದವಿ ಪಡೆದು ಕ್ಯಾಲಿಫೋರ್ನಿಯಾ ಮತ್ತು ಲಂಡನ್ನಿನ ಫೈನ್ಯಾನ್ಸ್ ಕಂಪನಿಗಳಲ್ಲಿ ಕೆಲಸ ಮಾಡಿದರು. ಅವರು ಕ್ಯಾಲಿಫೋರ್ನಿಯಾದಲ್ಲಿ ಇದ್ದಾಗ ಇನ್ಫೋಸಿಸ್ ಕಂಪನಿಯ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರ ಪುತ್ರಿ ಅಕ್ಷತಾ ಅವರನ್ನು ಭೇಟಿಯಾಗಿ ಪ್ರೇಮಾಂಕುರವಾಗಿ ಮದುವೆಯಾದರು. ಈ ಒಂದು ಹಿನ್ನೆಲೆಯಲ್ಲಿ ಅವರನ್ನು ಕರ್ನಾಟಕದ ಅಳಿಯ ಎಂದು ಕನ್ನಡಿಗರು ಸಂಭೋದಿಸುವುದು ಸಮಂಜಸವಾಗಿದೆ.
೨೦೧೫ ರಲ್ಲಿ ಉತ್ತರ ಇಂಗ್ಲೆಂಡಿನ ಯಾರ್ಕ್ ಶೈರ್ ಪ್ರಾಂತ್ಯದ ರಿಚ್ಮಂಡ್ ಎಂಬ ಊರಿನಲ್ಲಿ ಪ್ರಭಾವಿತ ಮಂತ್ರಿಗಳಾಗಿದ್ದ ವಿಲಿಯಂ ಹೇಗ್ ಅವರು ನಿವೃತ್ತಿಯಾದ ಬಳಿಕ ಅದೇ ಕ್ಷೇತ್ರದಿಂದ ಕನ್ಸರ್ವೇಟಿವ್ ಪಾರ್ಟಿ ಟಿಕೆಟ್ ಹಿಡಿದು ರಿಷಿ ಎಂಪಿಯಾಗಿ ಆಯ್ಕೆಗೊಂಡರು. ಅಲ್ಲಿಂದ ಮುಂದಕ್ಕೆ ೨೦೧೯ರಲ್ಲಿ ಬೋರಿಸ್ ಜಾನ್ಸನ್ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಹಣಕಾಸು ವಿಭಾಗದ ಕಾರ್ಯದರ್ಶಿಯಾಗಿ ಆ ಕೆಲಸವನ್ನು ದಕ್ಷತೆಯಿಂದ ನಿಭಾಯಿಸಿ ಬೋರಿಸ್ ಅವರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ೨೦೨೦ರ ಸಮಯದಲ್ಲಿ ಛಾನ್ಸೆಲರ್ ಆಫ್ ಎಕ್ಸ್ ಚೆಕರ್ ಅಂದರೆ ಆರ್ಥಿಕ ಮಂತ್ರಿಯಾಗಿ ಬೋರಿಸ್ ಅವರ ಮಂತ್ರಿ ಮಂಡಳವನ್ನು ಸೇರಿಕೊಂಡರು. ಅದೇ ಸಮಯಕ್ಕೆ ಯೂರೋಪಿನಲ್ಲಿ ಕೋವಿಡ್ ಕಾಣಿಸಿಕೊಂಡು ಬ್ರಿಟನ್ನಿನಲ್ಲಿ ಈ ವೈರಸ್ ಪಿಡುಗು ವ್ಯಾಪಕವಾಗಿ ಹಬ್ಬಿಕೊಂಡಿತು. ಇದರ ಪರಿಣಾಮವಾಗಿ ಜನಸಾಮಾನ್ಯರು ನಿರುದ್ಯೋಗಿಗಳಾಗಿ ಆರ್ಥಿಕ ತೊಂದರೆಯನ್ನು ಅನುಭವಿಸಿದರು. ರಿಷಿ ಅವರು ಈ ಒಂದು ಸಂದರ್ಭದಲ್ಲಿ, ಫರ್ಲೊ ಎಂಬ ಆಯೋಜನೆಯಲ್ಲಿ ನಿರುದ್ಯೋಗಿಗಳಿಗೆ ಪರಿಹಾರ ನಿಧಿಯನ್ನು ಒದಗಿಸಿದರು. ರಿಷಿ ಅವರು 'ಹೆಲ್ಪ್ ಟು ಇಟ್ ಔಟ್' ಎಂಬ ಯೋಜನೆಯನ್ನು ಹುಟ್ಟು ಹಾಕಿ ರೆಸ್ಟೋರೆಂಟ್ ಮಾಲೀಕರಿಗೆ ಮತ್ತು ಜನರಿಗೆ ಸಹಾಯವಾಗುವಂತೆ ಊಟ ತಿಂಡಿ ಬಿಲ್ಲಿನಲ್ಲಿ ಹತ್ತು ಪೌಂಡಿನ ವರೆಗೆ ಶೇಕಡಾ ೫೦% ರಿಯಾಯ್ತಿ ಒದಗಿಸಲಾಗಿತ್ತು. ಒಟ್ಟಾರೆ ಈ ಸಂಕಷ್ಟಗಳ ನಡುವೆ ರಿಷಿ ಅವರು ಅನೇಕ ಜನಪರ ಆರ್ಥಿಕ ಯೋಜನೆಗಳನ್ನು ಹಾಕಿಕೊಟ್ಟರು. ತಮ್ಮ ಸಹೋದ್ಯೋಗಿ ಎಂಪಿ ಮತ್ತು ಜನರ ವಿಶ್ವಾಸವನ್ನು ಗಳಿಸಿಕೊಂಡರು.
ಕೋವಿಡ್ ಪಿಡುಗಿನ ಮಧ್ಯೆ ಲಾಕ್ ಡೌನ್ ಸಮಯದಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕೆಲವು ಸಾರ್ವಜನಿಕ ಆರೋಗ್ಯ ನಿಯಮಗಳ ಉಲ್ಲಂಘನೆ ಮಾಡಿದ್ದು ಅದು 'ಪಾರ್ಟಿಗೇಟ್' ಹಗರಣವೆಂಬ ಹೆಸರಿನಲ್ಲಿ ಬಹಿರಂಗಗೊಂಡಿತು. ಬೋರಿಸ್ ಅದಕ್ಕೆ ದಂಡ ತೆತ್ತು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕಾಯಿತು. ಇದಾದನಂತರ ಬೋರಿಸ್ ಅವರು ತಮ್ಮ ರಾಜಕೀಯ ಪಕ್ಷದ 'ಚೀಫ್ ವಿಪ್' ಕ್ರಿಸ್ ಪಿಂಚೆರ್ ಅವರ ನೇಮಕಾತಿಯಲ್ಲಿ ಕೆಲವು ಮುಖ್ಯ ಅಂಶಗಳನ್ನು ಬಚ್ಚಿಟ್ಟಿದ್ದರು ಎಂಬ ಅಪವಾದದಲ್ಲಿ ಮತ್ತೆ ಸಿಕ್ಕಿಕೊಂಡರು. ಈ ಎಲ್ಲ ಹಗರಣಗಳ ಹಿನ್ನೆಲೆಯಲ್ಲಿ ತಮ್ಮ ಮಂತ್ರಿಮಂಡಳದ ಸಹೋದ್ಯೋಗಿಗಳ ವಿಶ್ವಾಸಗಳನ್ನು ಕಳೆದುಕೊಂಡರು. ಈ ಹಿನ್ನೆಲೆಯಲ್ಲಿ ರಿಷಿ ಅವರು ತಾವು ರಾಜಕೀಯ ಮೌಲ್ಯಗಳಿಗೆ ಬದ್ಧರೆಂದು ಬೋರಿಸ್ ಅವರ ಈ ಹಗರಣದ ಹಿನ್ನೆಲೆಯಲ್ಲಿ ಅವಿಶ್ವಾಸದ ಮೇಲೆ ರಾಜೀನಾಮೆ ನೀಡಿದರು, ಅವರ ಹಿಂದೆ ಉಳಿದೆಲ್ಲ ಕ್ಯಾಬಿನೆಟ್ ಮಂತ್ರಿಗಳು ರಾಜೀನಾಮೆ ನೀಡಲು ಮೊದಲುಗೊಂಡರು. ಬೋರಿಸ್ ಕೊನೆಗೆ ತಮ್ಮ ನೈತಿಕ ಜವಾಬ್ದಾರಿಯ ನಷ್ಟದ ಸಲುವಾಗಿ ರಾಜೀನಾಮೆ ನೀಡ ಬೇಕಾಯಿತು.
ಬೋರಿಸ್ ಅವರ ರಾಜೀನಾಮೆಯಿಂದ ತೆರವಾದ ಪ್ರಧಾನಿ ಹುದ್ದೆಗೆ ರಿಷಿ ಸುನಾಕ್ ಮತ್ತು ಲಿಜ್ ಟ್ರಸ್ಸ್ ನಡುವೆ ಪೈಪೋಟಿ ಉಂಟಾಯಿತು. ಎಂಪಿಗಳ ಬೆಂಬಲವಿದ್ದರೂ ಪ್ರಧಾನಿಯ ಆಯ್ಕೆ ಇಲ್ಲಿಯ ನಿಯಮಾನುಸಾರವಾಗಿ
ಸಾರ್ವಜನಿಕರ ವೋಟಿನ ಅಗತ್ಯವಿಲ್ಲದೆ, ಕನ್ಸರ್ವೇಟಿವ್ ಪಾರ್ಟಿ ಸದಸ್ಯರಿಂದ ನಡೆದು ಕೊನೆಗೆ ಲಿಜ್ ಟ್ರಸ್ಸ್ ಪ್ರಧಾನಿಯಾದರು. ರಿಷಿಗೆ ಪ್ರಧಾನಿಯಾಗುವ ಅರ್ಹತೆ ಇದ್ದರೂ ಅವರು ಹಿಂದೆ ಉಳಿಯಬೇಕಾದುದು ಬಹಳ ಜನರಿಗೆ ನಿರಾಸೆ ಉಂಟಾಯಿತು. ಅಂದಹಾಗೆ ಲಿಜ್ ಟ್ರಸ್ ಪ್ರಧಾನಿಯಾದ ನಂತರ ಅವರು ಕೈಗೊಂಡ ಆರ್ಥಿಕ ಯೋಜನೆಗಳು ನಿಷ್ಫಲವಾಗಿ ಎಲ್ಲ ಮಾರುಕಟ್ಟೆಗಳಲ್ಲಿ ಪೌಂಡ್ ಬೆಲೆ ಕುಸಿಯಲು ಮೊದಲುಗೊಂಡಿತು. ಮೊದಲೇ ನರಳುತ್ತಿದ್ದ ಆರ್ಥಿಕ ಪರಿಸ್ಥಿತಿ ಇನ್ನೂ ಹದಗೆಡುವ ಸೂಚನೆಗಳು ಕಾಣತೊಡಗಿದವು. ಇದರ ಬಗ್ಗೆ ರಿಷಿ ಎಚ್ಚರಿಕೆಯ ಕರೆಗೆಂಟೆಯನ್ನು ಕೊಟ್ಟಿದ್ದರು ಎಂದುದನ್ನು ಇಲ್ಲಿ ನೆನೆಯಬಹುದು. ಇದೇ ಹಿನ್ನೆಲೆಯಲ್ಲಿ ಲಿಜ್ ಟ್ರಸ್ಸ್ ರಾಜೀನಾಮೆ ನೀಡಬೇಕಾಯಿತು. ಯಶಸ್ವಿಯಾದ ನಾಯಕತ್ವವಿಲ್ಲದ ಬ್ರಿಟನ್ ಇತರ ದೇಶಗಳ ನಗೆಪಾಟಲಿಗೆ ಗುರಿಯಾಯಿತು. ಈ ಒಂದು ಕ್ಲಿಷ್ಟ ಪರಿಸ್ಥಿತಿಯಲ್ಲಿ ರಿಷಿ ಸುನಾಕ್ ಪ್ರಧಾನಿಯಾಗಲು ಮತ್ತೆ ಅರ್ಜಿಸಲ್ಲಿಸಿದರು. ಅವರ ಜೊತೆ ಪೆನ್ನಿ ಮಾರ್ಡೆಂಟ್ ಎಂಬ ಜನಪ್ರಿಯ ಎಂಪಿ (ಪಾರ್ಲಿಮೆಂಟ್ ಸದಸ್ಯೆ) ತಾನೂ ಪ್ರಧಾನಿಯಾಗಲು ಅರ್ಜಿ ಸಲ್ಲಿಸಿದಳು. ಇದರ ಮಧ್ಯೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಕುಳಿತ್ತಿದ್ದ ಬೋರಿಸ್ ಜಾನ್ಸನ್ ತಾನು ಮತ್ತೆ ಪ್ರಧಾನಿಯಾಗಿ ಬರುತ್ತೇನೆ ಎಂದು ಅರ್ಜಿ ಸಲ್ಲಿಸಿದ ವಿಚಾರ ಎಲ್ಲರಿಗೂ ಆಶ್ಚರ್ಯದ ಜೊತೆಗೆ ಹಾಸ್ಯಾಸ್ಪದವಾಗಿ ಕಾಣಿಸಿತು. ಬೋರಿಸ್ ಜಾನ್ಸನ್ ಹಗರಣಗಳ ತನಿಖೆ ವಿಚಾರಣಾ ಹಂತದಲ್ಲಿ ಇರುವಾಗ ಅರ್ಜಿಸಲ್ಲಿಸಿರುವುದು ಸರಿಯಲ್ಲವೆಂದು ನಿರ್ಧರಿಸಿ ಕೊನೆಗೆ ಬೋರಿಸ್ ಅರ್ಜಿಯನ್ನು ಹಿಂದೆ ತೆಗೆದುಕೊಳ್ಳಬೇಕಾಯಿತು. ದೇಶದ ಸದರಿ ಆರ್ಥಿಕ ಪರಿಸ್ಥಿಯ ಹಿನ್ನೆಲೆಯಲ್ಲಿ ಮತ್ತು ಎಂಪಿಗಳ ಬೆಂಬಲ ಇಲ್ಲದ ಪೆನ್ನಿ ಮಾರ್ಡೆಂಟ್ ಕೊನೆ ಘಳಿಗೆಯಲ್ಲಿ ತಮ್ಮ ಅರ್ಜಿಯನ್ನು ಹಿಂದಕ್ಕೆ ತೆಗೆದುಕೊಂಡರು. ಅತಿ ಹೆಚ್ಚಿನ ಎಂಪಿಗಳ ಬೆಂಬಲವಿರುವ ರಿಷಿ ಕೊನೆಗೂ ಪ್ರಧಾನಿಯಾದರು.
ಪಾಶ್ಚಿಮಾತ್ಯ ದೇಶಗಳಲ್ಲಿ ರಾಜಕಾರಣ ಕೆಲವು ಮೌಲ್ಯಗಳಿಗೆ ಬದ್ಧವಾಗಿದೆ. ಇಲ್ಲಿಯ ವ್ಯವಸ್ಥೆಯಲ್ಲಿ ನೈತಿಕ ಜವಾಬ್ದಾರಿ, ನಿಯಮಗಳ ಪಾಲನೆ, ಆಡಳಿತಾಂಗ, ನ್ಯಾಯಾಂಗ ಮತ್ತು ಸಂವಿಧಾನದಕ್ಕೆ ಗೌರವ ಇವುಗಳನ್ನು ಕಾಣಬಹುದು. ಒಬ್ಬ ಜನ ನಾಯಕನ ನಿರ್ಣಯದಿಂದ ಮೌಲ್ಯ ನಷ್ಟವಾದಲ್ಲಿ ಕೂಡಲೇ ಅವರು ತಪ್ಪನ್ನು ಒಪ್ಪಿಕೊಂಡು ರಾಜೀನಾಮೆ ನೀಡುತ್ತಾರೆ. ಅಭಿವೃದ್ಧಿ ಗೊಳ್ಳುತ್ತಿರುವ ಕೆಲವು ದೇಶಗಳಲ್ಲಿ ನೈತಿಕ ಹೊಣೆಗಾರಿಕೆಯ ಕಾರಣವಾಗಿ ರಾಜೀನಾಮೆ ನೀಡುವವರು ವಿರಳ. ಹಗರಣಗಳ ಮೇಲೆ ಹಗರಣಗಳು ನಡೆದರೂ ತಾವು ಮಾಡಿದುದು ಸರಿಯೇ ಎಂದು ಸಮರ್ಥಿಸಿಕೊಳ್ಳುತ್ತ, ಮಾಧ್ಯಮಗಳ ಬಾಯಿ ಮುಚ್ಚಿಸುತ್ತಾ ಕುರ್ಚಿಗೆ ಅಂಟುಕೊಳ್ಳುವ ರಾಜಕಾರಣವನ್ನು ಕಾಣಬಹುದು. ಇನ್ನು ಕೆಲವು ರಾಷ್ಟ್ರಗಳಲ್ಲಿ ನಾಯಕತ್ವದ ಮತ್ತು ರಾಜಕೀಯದ ಬಿಕ್ಕಟ್ಟಿನಲ್ಲಿ ಪ್ರಜಾಪ್ರಭುತ್ವವನ್ನು ಪಕ್ಕಕ್ಕೆ ತಳ್ಳಿ ಮಿಲಿಟಿರಿ ಸರ್ವಾಧಿಕಾರಿಗಳು ಬಂದು ಕೂರುವುದನ್ನು ಕಾಣಬಹುದು. ಬ್ರಿಟನ್ನಿನಲ್ಲಿ ಪ್ರತಿಭೆಗಷ್ಟೇ ಪುರಸ್ಕಾರ. ಹೀಗೆ ಹೇಳುತ್ತಾ ಬ್ರಿಟನ್ನಿನಲ್ಲಿ ಎಲ್ಲ ಸುಗಮವಾಗಿದೆ ಎಂದು ಹೇಳಲಾಗದು. ಎಲ್ಲ ಪ್ರಜಾಪ್ರಭುತ್ವದಲ್ಲಿ ಅನಿಶ್ಚಿತ ತಿರುವುಗಳು ಇರುತ್ತವೆ. ರಾಜಕೀಯ ಕ್ಷೇತ್ರದ ಕಸುಬೇ ಹೀಗೆ. ಅನಿರೀಕ್ಷಿತ ಸನ್ನಿವೇಶಗಳು ಅಲೆಗಳಂತೆ ಅಪ್ಪಳಿಸುತ್ತವೆ. ಈ ಅಲೆಗಳಲ್ಲಿ ಎದ್ದವರು ಬಿದ್ದವರು ಇರುತ್ತಾರೆ. ಪ್ರಪಂಚದಲ್ಲಿ ಎಲ್ಲೇ ಆದರೂ ರಾಜಕೀಯ ವಿದ್ಯಮಾನಗಳ ಇತಿಹಾಸವನ್ನು ಗಮನಿಸಿದಾಗ ಒಬ್ಬರು ಇನ್ನೊಬ್ಬರ ಬೆನ್ನ ಹಿಂದೆ ಚೂರಿ ಹಾಕುವುದು, ಪಿತೂರಿ-ಒಳಸಂಚನ್ನು ಹೂಡುವುದು ಇವುಗಳನ್ನು ಕಾಣಬಹುದು. ರಾಜಕಾರಣದಲ್ಲಿ ಒಳಪಂಗಡಗಳು, ಚಿಂತನೆಗಳ ಸಂಘರ್ಷಣೆಗಳು, ಬಲಪಂಥ ಎಡ ಪಂಥ ವಿಭಜನೆಗಳು ಸಾಮಾನ್ಯ. ಬ್ರಿಟನ್ನಿನ ರಾಜಕಾರಣದಲ್ಲಿ ಜಾತಿ, ಮತ, ಧರ್ಮಗಳ ವಿಚಾರದಲ್ಲಿ ಬೇಧವಿಲ್ಲ. ಇಲ್ಲಿ ಧರ್ಮ ಮತ್ತು ರಾಜಕೀಯ ಇವೆರಡು ಬೇರೆ ಬೇರೆ. ಪ್ರಪಂಚದ ಇತರ ದೇಶಗಳಲ್ಲಿ ಕೆಲವು ಕಡೆ ಇರುವಂತೆ ರಾಜಕೀಯ ಮತ್ತು ಧರ್ಮಗಳ ಬೆರಕೆ ಇಲ್ಲ.
ಅವರವರ ಧರ್ಮ ಅವರಿಗೆ ವೈಯುಕ್ತಿಕವಾದ ವಿಚಾರ. ಬಹಿರಂಗದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಅದರ ಪ್ರಸ್ತಾಪವೂ ಇರುವುದಿಲ್ಲ. ಹೀಗಿದ್ದರೂ ಪಕ್ಕದ ಐರ್ಲೆಂಡಿನಲ್ಲಿ ಧರ್ಮ ಬಹಳ ಮುಖ್ಯವಾದ ವಿಚಾರ. ಉತ್ತರ ಮತ್ತು ದಕ್ಷಿಣ ಐರ್ಲೆಂಡಿನಲ್ಲಿ ಧರ್ಮದ ಹೆಸರಿನಲ್ಲಿ, ಕ್ರೈಸ್ತ ಮತದ ಒಳಪಂಗಡದಲ್ಲೇ ಸಾಕಷ್ಟು ರಾಜಕೀಯ ನಡೆದಿದೆ ಎನ್ನ ಬಹುದು.
ರಿಷಿ ಸುನಾಕ್ ಅವರು ಪ್ರಧಾನಿಯಾದ ವಿಚಾರ ಎಲ್ಲರಿಗು ಸಂತಸವನ್ನು ತಂದಿದ್ದು ಆ ಸಂಭ್ರಮದಲ್ಲಿ ನಾವೆಲ್ಲಾ ವಿಜೃಂಭಿಸುತ್ತಿರಬಹುದು. ಆದರೆ ಈಗ ಬ್ರಿಟನ್ನಿನ ಪ್ರಸ್ತುತ ರಾಜಕೀಯ ಸಾಮಾಜಿಕ ಪರಿಸ್ಥಿತಿ ಬಹಳ ಬಿಕ್ಕಟ್ಟಿನಲ್ಲಿದೆ. ರಿಷಿ ಅವರು ಎದುರಿಸ ಬೇಕಾದ ಸವಾಲುಗಳು ಬಹಳಷ್ಟಿದೆ. ಕನ್ಸರ್ವೇಟಿವ್ ಪಾರ್ಟಿಯ ಒಳಗೇ ಬಿರುಕಗಳಿವೆ.
ರಿಷಿ ಸುನಾಕ್ ಅವರು ಪ್ರಧಾನಿಯಾದ ಮೊದಲ ಕ್ಷಣದಿಂದಲೇ ಅಪಸ್ವರಗಳು ಕೇಳಿ ಬರುತ್ತಿದೆ. ರಿಷಿ ಅವರು ತಮ್ಮ ಮಂತ್ರಿ ಮಂಡಳ ರಚಿಸಿದ ಹಿನ್ನೆಲೆಯಲ್ಲಿ, ಮಂತ್ರಿಗಳ ಆಯ್ಕೆಯಲ್ಲಿ ತೆಗೆದುಗೊಂಡ ನಿರ್ಣಯದಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸಿದೆ. ಬ್ರಿಟನ್ನಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಬೆಲೆಯುಬ್ಬರದ ಬವಣೆಗಳನ್ನು ("ಕಾಸ್ಟ್ ಆಫ್ ಲಿವಿಂಗ್ ಕ್ರೈಸಿಸ್") ನಿಭಾಯಿಸುವುದು ರಿಷಿ ಅವರಿಗೆ ದೊಡ್ಡ ಸವಾಲಾಗಿದೆ. ಯುಕ್ರೇನ್ ಯುದ್ಧದ ಪರಿಣಾಮದಿಂದ ಇಂಧನದ ಸರಬರಾಜು ಸ್ಥಗಿತಗೊಂಡು ಬೆಲೆ ಹೆಚ್ಚಾಗಿದೆ. ಚಳಿಗಾಲದಲ್ಲಿ ಬ್ರಿಟನ್ನಿನ ಮನೆಗಳನ್ನು ಬೆಚ್ಚಗಿಡಲು ಹೆಣಗಬೇಕಾಗಿದೆ. ಯುದ್ಧದಲ್ಲಿ ಸ್ಥಳಾಂತರಗೊಂಡ ಮತ್ತು ಇತರ ಬಡ ದೇಶಗಳಿಂದ ವಲಸೆ ಬರುತ್ತಿರುವ ನಿರಾಶ್ರಿತರನ್ನು ನಿಯಂತ್ರಿಸಬೇಕಾಗಿದೆ. ರಾಷ್ಟ್ರೀಯ ಅರೋಗ್ಯ ಸಂಸ್ಥೆಯಲ್ಲಿ ನರ್ಸ್ಗಳು, ಮತ್ತು ಸಾರಿಗೆ ವಿಭಾಗದಲ್ಲಿ ರೈಲ್ವೆ ಸಿಬ್ಬಂಧಿಗಳು ಮುಷ್ಕರವನ್ನು ಶುರುಮಾಡಿದ್ದಾರೆ. ಹಣದುಬ್ಬರದಿಂದ ಆಹಾರ ಮತ್ತು ದಿನನಿತ್ಯ ಬಳಕೆಯ ವಸ್ತುಗಳ ಬೆಲೆಗಳು ಏರಿವೆ. ಇಡೀ ರಾಷ್ತ್ರದ ಆತ್ಮವಿಶ್ವಾಸವನ್ನು ರಿಷಿ ಅವರು ಹಿಡಿದೆತ್ತಬೇಕಾಗಿದೆ. ರಿಷಿ ಅವರ ಮುಂದಿನ ದಾರಿ ಸುಗಮವಂತೂ ಅಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಯಾರಿಗೆ ತಾನೇ ಬೇಕು ಈ ಪ್ರಧಾನಿ ಪಟ್ಟ? ಎಂದು ಬಿ.ಬಿ.ಸಿಯ ಖ್ಯಾತ ವರದಿಗಾರರಾದ ಲಾರಾ ಕೂನ್ಸ್ ಬರ್ಗ್ ಪ್ರಶ್ನಿಸಿದ್ದಾರೆ.
ರಿಷಿ ಅವರು ಪ್ರಧಾನಿಯಾದಾಗ ಹಲವಾರು ಮಾಧ್ಯಮಗಳು ಜನಾಭಿಪ್ರಾಯವನ್ನು ಪಡೆಯಲು ಮುಂದಾದವು. ಜನರು ಒಬ್ಬ ಪ್ರಧಾನಿಯ ಯೋಗ್ಯತೆಯನ್ನು ಅವನ ಅವಧಿಯ ಕೊನೆಗೆ ಅಳೆಯಬೇಕೆ ಹೊರತು ಪ್ರಾರಂಭದಲ್ಲಿ ಅಲ್ಲ! ಇದೇನೆಯಿರಲಿ ಸುಶೀಕ್ಷಿತರು, ರಾಜಕಾರಣಿಗಳು ರಿಷಿ ಬಗ್ಗೆ ತಮ್ಮ ವಿಶ್ವಾಸವನ್ನು, ಒಳ್ಳೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಮಿಕ ವರ್ಗದವರು, ಬಡ ಜನಸಾಮಾನ್ಯರು ರಿಷಿ ಶ್ರೀಮಂತ ವರ್ಗದವರು ಅವರಿಗೆ ಬಡತನದ ಬವಣೆಗಳು ಹೇಗೆ ಅರ್ಥವಾದೀತು? ಎಂಬ ಅಭಿಪ್ರಾಯವನ್ನು ನೀಡಿ ರಿಷಿ ಅವರ ಸಾಮರ್ಥ್ಯದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದರು. ಹಾಗೆ ನೋಡಿದರೆ ರಿಷಿ ಮೂಲದಲ್ಲಿ ಮಾಧ್ಯಮವರ್ಗದವರೇ, ತಮ್ಮ ಸ್ವಪ್ರತಿಭೆಯಿಂದ ಮೇಲೆ ಬಂದು ಈಗ ಹಣವಂತರಾಗಿದ್ದಾರೆ ಅಷ್ಟೇ. ಇನ್ನು ಕೆಲವು ದಿನಪತ್ರಿಕೆಗಳು ರಿಷಿ "ಮತಗಳಿಸದೆ ಪಟ್ಟಕ್ಕೇರಿದ ಪ್ರಧಾನಿ" ಎಂದು ಕಟುವಾಗಿ ಟೀಕಿಸಿತು. ಬ್ರಿಟನ್ನಿನ ಜನತೆ ಎಂಪಿಗಳನ್ನು ಚುನಾಯಿಸಿದ್ದು, ಅದೇ ಎಂಪಿಗಳು ರಿಷಿಯನ್ನು ಬಹುಮತದಿಂದ ಪ್ರಧಾನಿಯಾಗಿ ಆರಿಸಿದ್ದಾರೆ ಎಂದ ಮೇಲೆ ಇದು ಸತ್ಯಕ್ಕೆ ದೂರವಾದ ಮಾತು ಮತ್ತು ಅಸಂಗತ ಪ್ರಲಾಪ. ಅಂದಹಾಗೆ ಬ್ರಿಟನ್ನಿನ ರಾಜಕೀಯ ವ್ಯವಸ್ಥೆಯಲ್ಲಿ ಮತದಾರರು ಒಂದು ಪಾರ್ಟಿಗೆ ತಮ್ಮ ಮತವನ್ನು ನೀಡುತ್ತಾರೆ ಹೊರತು ಒಬ್ಬ ಪ್ರಧಾನ ಮಂತ್ರಿಗಲ್ಲ. ಆ ಪ್ರಧಾನಮಂತ್ರಿಯನ್ನು ಪಾರ್ಟಿ ಸದಸ್ಯರು ಚುನಾಯಿಸುತ್ತಾರೆ. ಬ್ರಿಟನ್ನಿನ ನಿವಾಸಿಗಳು ಯಾರು ಬೇಕಾದರೂ ಸ್ವಲ್ಪ ಹಣ ತೆತ್ತು ಪಾರ್ಟಿಯ ಸದಸ್ಯತ್ವವನ್ನು ಪಡೆಯಬಹುದು. ಇನ್ನು ನಮ್ಮ ಭಾರತೀಯ ಮೂಲದ ಅನಿವಾಸಿಗಳಿಗೆ ರಿಷಿ ಸುನಾಕ್ ಪ್ರಧಾನಿಯಾದದ್ದು ಅತ್ಯಂತ ಹೆಮ್ಮೆಯ ವಿಷಯ. ಈ ಸುವಾರ್ತೆಯನ್ನು ಎಲ್ಲರು ಹಂಚಿಕೊಂಡು ಸಂಭ್ರಮಿಸಿದರು. ಇಷ್ಟೇ ಅಲ್ಲದೆ ರಿಷಿ ಪೂರ್ವಜರು ಇಂದಿನ ಪಾಕಿಸ್ತಾನದ ಪಂಜಾಬಿನ ಮೂಲದವರು ಎಂದು ತಿಳಿದ ಕೂಡಲೇ ಪಾಕಿಸ್ಥಾನಿಗಳೂ ರಿಷಿ ಅವರ ಕೀರ್ತಿಯಲ್ಲಿ ಪಾಲುದಾರರಾಗಲು ಹವಣಿಸುತ್ತಿದ್ದಾರೆ. ಬಿದ್ದವರನ್ನು ಕಡೆಗಣಿಸಿ ಗೆದ್ದವರ ಯಶಸ್ಸಿನಲ್ಲಿ ಭಾಗಿಗಳಾಗಲು ಹಾತೊರೆಯುವುದು ಲೋಕಾರೂಢಿಯಲ್ಲವೇ?
ರಿಷಿ ಸುನಾಕರಿಂದ ವಿಶೇಷವಾಗಿ ಭಾರತೀಯ ಮೂಲದವರು ಏನನ್ನು ನಿರೀಕ್ಷಿಸಬಹುದು? ಎಂಬ ಪ್ರಶ್ನೆ ಮೂಡುವುದು ಸಹಜ. ರಿಷಿ ಸುನಾಕ್ ಬಹಿರಂಗವಾಗಿ ಭಾರತದವರಂತೆ ಕಂಡರೂ ಇಲ್ಲಿ ಹುಟ್ಟಿ ಬೆಳೆದ ನಮ್ಮ ಅನಿವಾಸಿ ಎರಡನೇ ಪೀಳಿಗೆಯವರಂತೆ ಅವರೂ ಅಂತರಂಗದಲ್ಲಿ ಬ್ರಿಟಿಷ್ ಅಸ್ಮಿತೆಯನ್ನು ಉಳ್ಳವರು. ಇಂತಹ ಹಿನ್ನೆಲೆಯಲ್ಲಿ ಅವರಿಂದ ಯಾವುದೇ ವಿಶೇಷ ರಿಯಾಯ್ತಿಯನ್ನು ನಾವು ನಿರೀಕ್ಷಿಸುವುದು ತರವಲ್ಲ. ಇದೆಲ್ಲಕ್ಕೂ ಮಿಗಿಲಾಗಿ ಮೇಲೆ ಪ್ರಸ್ತಾಪಿಸಿದಂತೆ ಬ್ರಿಟನ್ನಿನ ಪ್ರಸಕ್ತ ಆರ್ಥಿಕ ಮತ್ತು ಇನ್ನೂ ಅನೇಕ ಸವಾಲುಗಳನ್ನು
ರಿಷಿ ಬಗೆಹರಿಸಬೇಕಾಗಿದೆ. ಭಾರತ ಮತ್ತು ಬ್ರಿಟನ್ನಿನ ನಡುವೆ ವಾಣಿಜ್ಯ ಮತ್ತು ತಂತ್ರಜ್ಞಾನ ವಿನಿಮಯ, ವೀಸಾ ಪಡೆಯುವ ವಿಧಾನದಲ್ಲಿ ಸರಳೀಕರಣ, ಭಾರತೀಯ ಮೂಲದ ಪರಿಣಿತರಿಗೆ ಬ್ರಿಟನ್ನಿನಲ್ಲಿ ಉದ್ಯೋಗಾವಕಾಶ, ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗದ ಅವಕಾಶ ಇವುಗಳನ್ನು ನಾವು ನೀರೀಕ್ಷಿಸುವುದು ಸಹಜ. ಈ ವಿಚಾರದಲ್ಲಿ ರಿಷಿ ಅವರ ಸಹಕಾರವನ್ನು ನಾವು ಪಡೆಯುವ ಸಾಧ್ಯತೆಗಳಿವೆ. ರಿಷಿ ಅವರು ಬ್ರಿಟನ್ನಿನ ಹೊರಗೆ ಅಂತರಾಷ್ಟ್ರೀಯ ಮಟ್ಟದಲ್ಲಿ, ಯೂರೋಪಿನ ಒಕ್ಕೂಟದ ಜೊತೆಗೂಡಿ ಯುಕ್ರೇನಿನಲ್ಲಿ ಸಮರವನ್ನು ನಿಲ್ಲಿಸಲು ಸಾಧ್ಯವೇ? ರಷ್ಯಾ ಮತ್ತು ಚೈನಾದಂತಹ ಪ್ರಬಲವಾದ ಎದುರಾಳಿಗಳನ್ನು ನಿಭಾಯಿಸುವ ರಾಜತಾಂತ್ರಿಕ ಅನುಭವವಿದೆಯೇ? ಸಾಮರ್ಥ್ಯವಿದೆಯೇ? ಈ ವಿಚಾರದ ಬಗ್ಗೆ ನಾವೆಲ್ಲಾ ಸ್ವಲ್ಪ ಅನುಮಾನದಿಂದಲೇ ಗಮನಿಸುತ್ತಿದ್ದೇವೆ. ರಿಷಿ ಅವರು ಆಗಲೇ ಆರ್ಥಿಕ ಮಂತ್ರಿಯಾಗಿದ್ದು ಮತ್ತು ಅವರ ಶಿಕ್ಷಣ ಇದಕ್ಕೆ ಪೂರಕವಾಗಿದ್ದು ಅವರು ಬ್ರಿಟನ್ನಿನ ಸಧ್ಯದ ಆರ್ಥಿಕ ಬಿಕ್ಕಟನ್ನು ಬಗೆಹರಿಸುವುದರ ಬಗ್ಗೆ ಎಲ್ಲರಿಗೂ ಸಂಪೂರ್ಣ ವಿಶ್ವಾಸವಿದೆ ಎನ್ನ ಬಹುದು.
ಒಟ್ಟಿನಲ್ಲಿ ರಿಷಿ ಸುನಾಕ್ ಆಂಗ್ಲ ಜನಾಂಗದ ಹೊರಗಿನ ಭಾರತೀಯ ಮೂಲದ ಒಬ್ಬ ವ್ಯಕ್ತಿ. ಬ್ರಿಟನ್ನಿನ ಅತ್ಯಂತ ಕಠಿಣವಾದ ಪರಿಸ್ಥಿತಿಯಲ್ಲಿ ಆಂಗ್ಲ ಜನತೆ ಅವರನ್ನು ತಮ್ಮ ಜನನಾಯಕನಾಗಿ ಒಪ್ಪಿರುವುದು ಐತಿಹಾಸಿಕವಾಗಿ ಮಹತ್ವವಾದ ವಿಷಯ. ಇದು ಬ್ರಿಟಿಷ್ ಜನರ ಸಹಿಷ್ಣುತೆಗೆ ಮತ್ತು ಉದಾರತೆಗೆ ಸಾಕ್ಷಿಯಾಗಿದೆ. ಈ ನೆಲದಲ್ಲಿ ಯಾವ ವರ್ಣದವರಾದರೂ, ಯಾವ ಜನಾಂಗದವರಾದರೂ, ಯಾವ ಜಾತಿ, ಮತ, ಧರ್ಮಾದವರಾದರೂ ಅವನಿಗೆ ಅಥವಾ ಅವಳಿಗೆ ಪ್ರತಿಭೆ ಮತ್ತು ಸಾಮರ್ಥ್ಯವಿದ್ದಲ್ಲಿ ಈ ದೇಶದ ಪ್ರಧಾನಿಯಾಗಬಹುದು. ನಮ್ಮ ಭಾರತದಲ್ಲಿ ಯುರೋಪಿಯನ್ ಅಥವಾ ಆಫ್ರಿಕಾ ಮೂಲದ ವಲಸಿಗನೊಬ್ಬ ಬಂದು ನೆಲೆಯೂರಿ, ದೇಶದ ನಿಯಮಗಳು ಒಂದು ವೇಳೆ ಅವಕಾಶ ಮಾಡಿಕೊಟ್ಟರೆ ಆ ವ್ಯಕ್ತಿ ಪ್ರಧಾನಿಯಾಗಲು ಸಾಧ್ಯವೇ? ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಭಾರತದಲ್ಲೇ ಹುಟ್ಟಿದ್ದು ಹಿಂದೂ ಧರ್ಮದ ಹೊರಗಿನವರು ಎಷ್ಟು ಜನ ಮಂತ್ರಿ ಮಂಡಳದಲ್ಲಿ ಇದ್ದಾರೆ? ಅನ್ಯ ಧರ್ಮೀಯರು ಪ್ರಧಾನಿಯಾಗಲು ಸಾಧ್ಯವೇ? ಎಂಬ ಮುಜುಗರದ
ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುವುದು ಸಹಜ. ಬ್ರಿಟಿಷ್ ಜನರಿಗಿರುವ ಆ ಸಹಿಷ್ಣುತೆ, ಉದಾರತೆ ನಮ್ಮಲ್ಲಿ ಇದೆಯೇ? ಎಂಬ ವಿಚಾರದ ಬಗ್ಗೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು.
ಕೀನ್ಯಾ ಮೂಲದ ಅಮೇರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಭಾರತೀಯ ಮೂಲದ ಬ್ರಿಟನ್ನಿನ ರಿಷಿ ಸುನಾಕ್, ಐರ್ಲೆಂಡಿನ ಭಾರತೀಯ ಮೂಲದ ಮಾಜಿ ಪ್ರಧಾನಿ ಲಿಯೋ ವರಾಡ್ಕರ್ ಮತ್ತು ಇಟಲಿ ಮೂಲದ ಸೋನಿಯಾ ಗಾಂಧಿ, ಈ ಜನನಾಯಕರಲ್ಲಿ ಒಂದು ಸಾದೃಶ್ಯವಿದೆ. ಇವರು ಅಥವಾ ಇವರ ಪೂರ್ವಜರು ವಲಸಿಗರು. ಅವರು ಹಲವು ಕನಸುಗಳನ್ನು ಹೊತ್ತು ವಿದೇಶಗಳನ್ನು ತಮ್ಮ ದೇಶವಾಗಿಸಿಕೊಂಡು ಅಲ್ಲಿಯ ಸಂಸ್ಕೃತಿಯನ್ನು ಹೀರಿಕೊಂಡು ಸತ್ಪ್ರಜೆಗಳಾಗಿ ಕೊನೆಗೆ ಆಯಾ ದೇಶಗಳ ನಾಯಕರಾಗಿದ್ದಾರೆ. ಇದಕ್ಕೆ ಮೂಲ ಕಾರಣಗಳು ಇವರ ಪ್ರತಿಭೆ, ಶ್ರದ್ಧೆ ಮತ್ತು ಪ್ರಾಮಾಣಿಕತೆ. ಇನ್ನೊಂದು ಕಡೆ ಜಾಗತೀಕರಣ, ಅವಕಾಶ, ಆಯಾದೇಶದ ಜನರ ಉದಾತ್ತ ಮೌಲ್ಯಗಳು, ಎಲ್ಲರನ್ನೂ ಒಳಗೊಳ್ಳುವ ಆಶಯ ಮತ್ತು ಮತಾತೀತ ನಿಲುವುಗಳು ಕಾರಣವಿರಬಹುದು.
ರಿಷಿ ಸುನಾಕ್ ಅವರ ಮುಂದಿನ ದಾರಿ ಸುಗಮವಾಗಲಿ ಅವರು ಒಬ್ಬ ಅದ್ವಿತೀಯ ಪ್ರಧಾನಿ ಮತ್ತು ಲೋಕನಾಯಕನಾಗಲಿ ಎಂದು ಹಾರೈಸೋಣ.
ಡಾ ಜಿ ಎಸ್ ಶಿವಪ್ರಸಾದ್
***
ಅನಿವಾಸಿ ಓದುಗರಿಗೆಲ್ಲ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ‘ಕನ್ನಡವೆಂದರೆ ಬರೀ ನುಡಿಯಲ್ಲ ; ಹಿರಿದಿದೆ ಅದರರ್ಥ’ ಎಂದ ನಮ್ಮ ನಿತ್ಯೋತ್ಸವದ ಕವಿ ನಿಸಾರರ ಮಾತು ಅಕ್ಷರಶ: ಸತ್ಯ ಎಂಬುದನ್ನು ನಮ್ಮಂಥ ಅನಿವಾಸಿಗಳಿಗಿಂತ ಮಿಗಿಲಾಗಿ ಬಲ್ಲವರಾರು ಅಲ್ಲವೇ? ನಿಜ; ಕನ್ನಡ ಬರೀ ನಾಡು-ನುಡಿಯಲ್ಲ.. ಅದು ನಮ್ಮ ಇರವು,ಅರಿವು,ಹರವು,ಕಸುವು, ಜಸವು..ಅದೆಮ್ಮ ಬಲವು, ಒಲವು, ಗೆಲುವು..ಅದ ಬಿಟ್ಟರಾವ ಅಸ್ಮಿತೆಯೂ ಎಮಗಿಲ್ಲ. ಅದಕ್ಕೆಂದೇ ಕನ್ನಡವೇ ಸತ್ಯ..ಕನ್ನಡವೇ ನಿತ್ಯ.
ನಲುಮೆಯ ಓದುಗರೇ, ಈ ರಾಜ್ಯೋತ್ಸವದ ಸಂದರ್ಭದಲ್ಲಿ ಭಾರತೀಯ ವಿದ್ಯಾಭವನದ ಚೈತನ್ಯಮೂರ್ತಿ ಶ್ರೀಯುತ ನಂದ ಕುಮಾರ ಅವರ ಸುಂದರ-ಸುಲಲಿತ ಪದ್ಯವೊಂದು ಓದಿಗಾಗಿ ನಿಮ್ಮ ಕೈ ಸೇರಲಿದೆ. ಓದಿ, ಆನಂದಿಸಿ.
ಜೊತೆಗೇ ನಾನೊಂದು ಹೋಟೆಲಿನ ಪರಿಚಯ ಮಾಡಿಸುತ್ತಿದ್ದೇನೆ. ‘ ಪುಸ್ತಕ, ಸಿನೆಮಾ, ಕವಿ-ಕೃತಿ ಪರಿಚಯಗಳೇನೋ ಸರಿ..ಆದರೆ ಇದೇನಿದು ಹೋಟೆಲ್ ಪರಿಚಯ?!’ ಎಂದು ಹುಬ್ಬೇರಿಸಬೇಡಿ..ನೋಡಿ ಹೇಳಿ.
~ ಸಂ
ಕನ್ನಡಮ್ಮನ ಬಳಸಿರಿ
ಹಸುರು ಸೊಬಗಿನ, ಬಯಲುಗಿರಿಗಳ ಉದಧಿನದಿಗಳ ನಾಡಿದು
ನಗೆಯಮಲ್ಲಿಗೌ, ಚಿಗುರುಕೇದಗೆ, ಸಕಲಸುಮಗಳ ಬೀಡಿದು
ಬಸವ ಸರ್ವಜ್ಞಾದಿ ದಾಸರ, ನಾರಣಪ್ಪನ ಮಾಡಿದು
ಹೊನ್ನ ಸಿರಿನುಡಿ ಕನ್ನಡಮ್ಮನ ಕಂದರೆಲ್ಲರ ಗೂಡಿದು ⎮⎮
ಮುಗಿಲುಮುಟ್ಟುವ, ದಿಗಿಲುಗೊಳಿಸುವ ತರುವರಂಗಳ ಕಾನನ
ನವಿಲು ಕೋಗಿಲೆ, ಗಿಳಿಯ ಚಿಲಿಪಿಲಿ ವಿಹಗಗಳ ಬೃಂದಾವನ
ಆನೆ ಹುಲಿ ನರಿ ಮೃಗಗಳೆಲ್ಲಕು ಆಸರೆಯು ಈ ತಾಯ್ನೆಲ
ಅಲ್ಲಿ ಅಗೋ ಬಲು, ಸುಂದರತರ, ಗುಡಿಯಗೋಪುರ ನೋಡುವಾ ⎮⎮
ಸ್ವಾರ್ಥವೆಣಿಸದೇ ನಾಡಹಿತವನು ಬಯಸಿ ದುಡಿದರ ನೆಲೆಯಿದು
ಕಲಿಕೆ ಎಲ್ಲರ ಸ್ವತ್ತು ಹಿಂದಡಿಯಿಡದಿರೆಂದರ ಸೆಲೆಯಿದು
ಸಕಲ ಉನ್ನತ ಗುಣಗಣಂಗಳ ಪಡೆದ ಸುಜನರ ಕುಲವಿದು
ಭೇದವೇ ಇರದಿರುವ ಬಾಳನು ಬಾಳಿದಂತರ ನೆಲವಿದು ⎮⎮
ಬಯಸಿದೆಲ್ಲವ ಆಗು ಮಾಡಿದ ಭಾರತಾಂಬೆಯ ಕರುವಿದು
ಬಯಸದೆಯೆ ನಮಗೆಲ್ಲ ನೀಡಿಹ ನಮ್ಮಗಳ ಕರುನಾಡಿದು
ಮನದ ಭಾವವ ಮೂಡಿಸಲು ಸರಿಯುಂಟೆ ನಮ್ಮೀಭಾಷೆಗೆ?
ನೆನೆಯುತಲಿ ತಾಯೊಲವ ಗೆಳೆಯಾ ಉಬ್ಬಿಹೋಗಿದೆ ನನ್ನೆದೆ ⎮⎮
ಭಾಷೆ ದೇಶದ ಭಾವನಾಡಿಯು ಭಾಷೆ ಬದುಕಿಗೆ ಕನ್ನಡಿ
ಕನ್ನಡದ ಕಸ್ತೂರಿ ಮರೆತರೆ ನಷ್ಟ ನಮಗೇ ನೆನಪಿಡಿ!
ನೂರುಭಾಷೆಯ ದಾಳಿಯಾಗುವ ಮುನ್ನ ಏಳಿರಿ ಬನ್ನಿರಿ
ಭಾರತದ ಕಣ್ಮಣಿಯ, ಹನುಮನ, ಕನ್ನಡಮ್ಮನ ಬಳಸಿರಿ. ⎮⎮
~ಮತ್ತೂರು ನಂದಕುಮಾರ, ಭಾರತೀಯ ವಿದ್ಯಾಭವನ.
ಕರ್ನಾಟಿಕ್ ಕೆಫೆ
ಕಳೆದ ವರುಷ ಹೀಗೇ ಚಳಿ ಸಣ್ಣಗೆ ಬಾಲ ಬಿಚ್ಚುತ್ತಿರುವ ನವೆಂಬರ್ ತಿಂಗಳು. ಹೊರಗೆ ಮೋಡ ಕವಿದು ಹಗಲು ಹನ್ನೆರಡರ ಹೊತ್ತಿನಲ್ಲೂ ಮಬ್ಬುಗತ್ತಲು. ಹೊರೆ ಕೆಲಸವಿದ್ದರೂ ಮಾಡಲು ಮೂಡಿಲ್ಲದೇ ‘ಥ್ರೋ’ ಮೈಮೇಲೆ ಥ್ರೋ ಮಾಡಿಕೊಂಡು, ಕೈಯಲ್ಲಿ ಜಂಗಮವಾಣಿಯನ್ನು ಸ್ಥಾಪಿಸಿಕೊಂಡು ಸೋಫಾದ ಮೂಲೆಯಲ್ಲಿ ಮುದುಡಿ ಕುಳಿತ ಸೋಮಾರಿ ಹಗಲು. ಒಮ್ಮೆಲೇ ದೆಹಲಿಯಲ್ಲಿರುವ ಮಗರಾಯನ ಕಾಲು.( ಇಂಗ್ಲೀಷಿನ call ಕನ್ನಡದ ಪ್ರಥಮಾ ‘ಉ” ವಿಭಕ್ತಿಯೊಂದಿಗೆ) ‘ಇದೇನಿದು’ ಎಂದು ನನಗೆ ದಿಗಿಲು. ಹತ್ತು ಸಲ ನಾ call ಮಾಡಿದರೇ ಎತ್ತಿ ಉತ್ತರಿಸದ ಭೂಪ.ಅವನದೇ call, ಅದೂ ನನಗೆ ಬಂದರೆ ಅದು ‘ಗಾಡಿ ಮ್ಯಾಲಿಂದ ಬಿದ್ದೆ, ನಂದೇನೂ ತಪ್ಪಿರಲಿಲ್ಲ. ಬರೇ ಒಂಚೂರು ಕೈ ಫ್ರಾಕ್ಚರ್ ಆಗೇದ. ಒಂದೂವರೆ ತಿಂಗಳು ಪ್ಲಾಸ್ಟರ್ ಹಾಕ್ಕೋಬೇಕಷ್ಟೇ.. ಹಂಗೇ ಗಾಡಿಗೊಂಚೂರು ಅಲ್ಲಿಲ್ಲೆ ರಿಪೇರಿಗೆ ಒಂದ ಹತ್ತ-ಹದಿನೈದು ಖರ್ಚಾಗಬಹುದು’ ಅಂತಲೋ ಅಥವಾ, ‘ ನಿನ್ನೆ ರಾತ್ರಿ ಶಿವಾಂಶನ ಮನಿಯಿಂದ ಬರೂ ಮುಂದ ನಾಯಿ ಕಡಿಸಿಕೊಂಡೆ. ನೀ ಏನ ಗಾಬರಿಯಾಗಬ್ಯಾಡ..ಇಂಜಕ್ಷನ್ ಮಾಡಸಗೊಂಡು ಬಂದೀನಿ. ಆದ್ರ ಆ ನಾಯಿ ಮ್ಯಾಲ ಕಣ್ಣಿಟ್ಟರಲಿಕ್ಕೆ ಹೇಳ್ಯಾರ ಡಾಕ್ಟರು..ಅದು ಸಾಯಬಾರದಂತ. ಸತ್ರ ಸ್ವಲ್ಪ ಡೇಂಜರ್ ಅಂತ’(ಅದ್ಯಾವುದೋ ಬೀದಿನಾಯಿ ಮ್ಯಾಲ ಕಣ್ಣಿಡಲಿಕ್ಕೆ ಅದೇನು ತನ್ನ ಅಡ್ರೆಸ್ ಹೇಳಿರತದಾ ಇವಂಗ?!) ಅಂತಲೋ ಎದೆ ಒಡೆಸೋ ವಿಷಯಾನೇ ಇರತಾವ. ಅದಕ್ಕೇ ಸ್ವಲ್ಪ ಗಾಬರಿಯಿಂದಲೇ ಎತ್ತಿ ‘ ಹಲೋ ಮತ್ತೇನಾತಪಾ’ ಎಂದೆ. ‘ಅಮ್ಮಾ, ಇಷ್ಟ ದಿನಾ ಆದ್ರೂ ನೀ ನಂಗ ಒಮ್ಮೆನೂ ಹಂಪಿಗೆ ಯಾಕ ಕರಕೊಂಡು ಹೋಗಿಲ್ಲ? ಈ ಸಲ ಬಂದಾಗ ಅಲ್ಲೇ ಹೋಗೂಣು ಸೂಟಿಗೆ’ ಅಂದವನೇ ‘ ನಾ ಈಗ ಹೋಟೆಲ್ ಗೆ ಬಂದಿದ್ದೆ. ಆ ಮ್ಯಾಲೆ ಮಾಡತೀನಿ’ ಅಂತ ಫೋನಿಟ್ಟ..
ಈ ಹೋಟೆಲ್ ಮತ್ತ ಹಂಪಿಯ ಬಾದರಾಯಣದ ತಲೆಬುಡ ತಿಳಿಯಲಿಲ್ಲ ನನಗೆ. ಆದರೂ ಮಗ ಹಂಪಿ ನೋಡಬೇಕು ಅಂದಿದ್ದೇ ಖುಷಿಯ ವಿಚಾರವಾಗಿತ್ತು. ಕನ್ನಡ ಇತಿಹಾಸಕ್ಕೆ ಸುವರ್ಣ ಯುಗ ಸೇರಿಸಿದ ಹಂಪೆ, ಕೃಷ್ಣದೇವರಾಯ-ಚಿನ್ನಾದೇವಿ-ತಿರುಮಲಾಂಬೆಯರ ಹಂಪೆ, ರಸ್ತೆ ಬದಿಯಲ್ಲಿ ಸೇರಿನಿಂದ ಮುತ್ತುರತ್ನವನಳೆದ ಹಂಪೆ, ವಿರೂಪಾಕ್ಷ-ವಿಜಯವಿಠ್ಠಲರ ದಿವ್ಯ ಸಾನಿಧ್ಯದ ಹಂಪೆ, ಕಲ್ಲುಕಲ್ಲಿನಲೂ ಕನ್ನಡ ನುಡಿ ಮೊಳಗಿಸಿದ ಹಂಪೆ, ಶಿಲೆಯಲ್ಲೂ ಸರಿಗಮದ ಸಂಗೀತದಲೆ ಹೊಮ್ಮಿಸುವ ಹಂಪೆ, ಹನುಮನ ಹಂಪೆ, ಹರಿದಾಸ ಗುರು ವ್ಯಾಸರಾಯರ, ಪುರಂದರರ ಹಂಪೆ, ತುಂಗಭದ್ರೆ ಹರಿವ ಹಂಪೆ..ವಸುಧೇಂದ್ರರ ಇತ್ತೀಚಿನ ಕಾದಂಬರಿ ತೇಜೋತುಂಗಭದ್ರಾದ ಹಂಪೆ..ಎಂದೆಲ್ಲ ನನ್ನ ಮನ ಭಾವುಕವಾಯಿತು. ‘ಆತ ಬಿಡ್ರಿ, ಏನೋ ಹೋಟೆಲ್ ಅಂದು ಇದೇನು ಇತಿಹಾಸ, ಪುರಾಣ ಹಚಗೊಂಡ ಕೂತೀರಿ ಆವಾಗಿಂದ’ ಅಂತ ನಿಮ್ಮ ಸಹನೆ ಕಳಕೋಬ್ಯಾಡ್ರಿ
ಈಗ ಸೀದಾ ಅಲ್ಲೇ ಕರಕೊಂಡು ಹೋಗತೀನಿ. ಇದು ದೆಹಲಿ NCR ದಲ್ಲಿರುವ CARNATIC CAFE. ಮತ್ತ ಹೋಟೆಲ್ ಅಂದ್ರೆಲಾ ಅಂತಿರೇನು? ಖರೇ ಹೇಳತೀನಿ ಈ ಹೋಟೆಲ್, ರೆಸ್ಟೋರೆಂಟ್, ಕೆಫೆ ಇತ್ಯಾದಿಗಳ ವ್ಯತ್ಯಾಸ ಅಷ್ಟ ಖಾಸೇನ ತಿಳ್ಯಂಗಿಲ್ರಿ ನನಗ. ನಮ್ಮೂರ ‘ ಸಂಗಮೇಶ್ವರ ಟೀ ಕ್ಲಬ್’, ಧಾರವಾಡದ ಕಾಮತ್, ಬಸಪ್ಪನ ಖಾನಾವಳಿ, ಹೈ ವೇ ದ ಢಾಬಾ, ಹುಬ್ಬಳ್ಳಿಯ ಉಡುಪಿ ಹೋಟೆಲ್, ಶಿರಸಿಯ ಸತ್ಕಾರ್, ಬಿಜಾಪೂರದ ಮೈಸೂರ ರೆಸ್ಟಾರೆಂಟ್, ಬೆಂಗಳೂರಿನ ಓಣ್ಯೋಣಿ ದರ್ಶಿನಿಗಳು, ದೆಹಲಿಯ ಕರ್ನಾಟಕ ಭವನ. ಕೊನೆಗೆ ಇಲ್ಲಿನ ಮೋಟರ್ ವೇ ಸರ್ವೀಸಿನ costa, subway ಹೊಟ್ಟೆ ತುಂಬಿಸುವ ತಾಣಗಳೆಲ್ಲ ನನ್ನ ಮಟ್ಟಿಗೆ ಹೋಟೆಲ್ ಗಳೇ..
ಹತ್ತು ಹಲವಾರು,ಥರದ ದೋಸೆಗಳು, ಇಡ್ಲಿ-ವಡೆ-ಸಾಂಬಾರ್ ಗಳು, ಬಿಸಿಬೇಳೆ-ಮೊಸರನ್ನಗಳು, ಕರುನಾಡ ಎವರ್ ಗ್ರೀನ್ ಸ್ಪೆಷಲ್ ಕೇಸರಿಭಾತು, ಮೈಸೂರುಪಾಕು, ಒಬ್ಬಟ್ಟುಗಳು, ಘಮಘಮಿಸುವ ಫಿಲ್ಟರ್ ಕಾಫಿ..ಇದಿಷ್ಟೇ ಆಗಿದ್ದರೆ ವಿಶೇಷವಿರುತ್ತಿರಲಿಲ್ಲ..ನಾನಿಲ್ಲಿ ಅದರ ಬಗ್ಗೆ ಪ್ರಸ್ತಾಪಿಸುತ್ತಲೂ ಇರುತ್ತಿರಲಿಲ್ಲ. (ಉತ್ತರ ಭಾರತದಲ್ಲಿ ನಮ್ಮ ದಕ್ಷಿಣದವರ ಅಥೆಂಟಿಕ್ ಟೇಸ್ಟ್ ನ ಖಾದ್ಯಗಳು ದೊರೆವುದು ಸಹ ಅಪರೂಪವೇ ಎನ್ನಿ.) ಇಲ್ಲಿ ನನ್ನ ಸೆಳೆದದ್ದು ಅಪರೂಪದ ಮೆನ್ಯು ಕಾರ್ಡ್.. ಮಧ್ಯೆ ಪುರಂದರದಾಸರ ಅಂಚೆಚೀಟಿ, ಪಕ್ಕದಲ್ಲಿ ರಾಮನಾಮ ಪಾಯಸಕ್ಕೆ ಹಾಡು. ಪಕ್ಕದ ಗೋಡೆಗಳ ಮೇಲೆ ದಾಸವರೇಣ್ಯರ ಹಾಗೂ ಯಂತ್ರೋದ್ಧಾರನ ಫೋಟೊ, ಎದುರಿನ ಗೋಡೆಯ ಟಿ.ವಿ.ಯ ದೊಡ್ಡ ಸ್ಕ್ರೀನ್ ಮೇಲೆ ಅನವರತವಾಗಿ ನಡೆಯುತ್ತಲೇ ಇರುವ ಗಿರೀಶ್ ಕಾರ್ನಾಡರ ನಿರ್ದೇಶನದ, ಶಂಕರ್ ನಾಗ್, ಅರುಂಧತಿ ನಾಗ್ ಹಾಗೂ ಶ್ರೀನಿವಾಸ ಪ್ರಭು ಅವರ ಅಭಿನಯದ ‘ಕನಕ-ಪುರಂದರ’ ಡಾಕ್ಯುಮೆಂಟರಿ. ಹೊರನಾಡಿನಲ್ಲಿ ನಮ್ಮ ನೆಲದ ಸವಿ ಕಣ್ಣು, ಕಿವಿ, ನಾಲಗೆಗಳಿಗೆ ಸಿಕ್ಕರೆ ಆಗುವ ಆನಂದಾನುಭೂತಿ ಎಂಥದೆಂದು ನಮ್ಮ ಅನಿವಾಸಿ ಬಳಗಕ್ಕೆ ವಿವರಿಸಬೇಕಾದ್ದಿಲ್ಲ ಅಲ್ಲವೇ? ತೆಂಗಿನ ಪರಟಿಯಲ್ಲಿ ಬಂದ ಬಡೇಸೋಪು ಸಹ ವಿಶೇಷವೆನ್ನಿಸಿತು ನನಗೆ. ದೆಹಲಿ, ನೊಯಿಡಾ ಕಡೆಗೇನಾದರೂ ಹೋದರೆ ಖಂಡಿತ ಇಲ್ಲೊಮ್ಮೆ ಭೇಟಿಕೊಡಿ..ಕರುನಾಡಿನವನು(ಳು) ನಾನೆಂದು ಹೆಮ್ಮೆ ಪಡಿ. ‘ಜೈನರ ಕಾವ್ಯದ ಶರಣರ ವಚನದ ದಾಸರ ಹಾಡಿನದೀ ನಾಡು’ ಎಂದೊಮ್ಮೆ ಮನದಲ್ಲೇ ಹಾಡಿ.( ನಿಮ್ಮ ಸ್ವರತಾಳಲಯದ ಬಗ್ಗೆ ನಂಬುಗೆಯಿದ್ದವರು ದನಿ ತೆಗೆದೇ ಹಾಡಲಡ್ಡಿಯಿಲ್ಲ.) ಕನ್ನಡ ತಾಯ ಜಯಕಾರ ಮಾಡಿ.
ಜೈ ಭುವನೇಶ್ವರಿ.
~ ಗೌರಿಪ್ರಸನ್ನ
ಅನಿವಾಸಿ ಮಿತ್ರರಿಗೆಲ್ಲ ದೀಪಾವಳಿ ಹಬ್ಬದ ಶುಭಾಶಯಗಳು. ಹಬ್ಬ ಹರಿದಿನಗಳಲ್ಲಿ, ನಮ್ಮ ಬಾಲ್ಯದ, ನಾವು ಬೆಳೆದುಬಂದ ಜಾಗದ ನೆನಪಾಗುವುದು ಸಹಜ. ಮನೆ, ಜನ ನೆನೆಸಿಕೊಂಡು ಮನಸ್ಸು ಚಿಕ್ಕದಾಗುವುದೂ ಸಹಜವೇ. ಆದರೆ ವರ್ಷಗಳು ಉರುಳಿ ಕಾಲ ಬದಲಾದಂತೆಲ್ಲ, ಎಲ್ಲಿದ್ದರೂ ಬದಲಾವಣೆಗೆ ಹೊಂದದ ಹೊರತು, ಪರ್ಯಾಯವಿಲ್ಲ. ಹಳೆತನ್ನು ಮರೆತು, ಪ್ರಸ್ತುತ ಬದುಕನ್ನ ಅರಿತು, ಬಾಳಿದರೆ ಸಂತಸ ತನ್ನದಾಗುವ ಸಾಧ್ಯತೆ ಹೆಚ್ಚು. ಇದು ಸುಲಭದ ಕಾರ್ಯವೇನಲ್ಲ. ಪ್ರಾಯೋಗಿಕ ನಡುವಳಿಕೆ ಇದ್ದವರಿಗೆ ಬದಲಾವಣೆ, ಭಾವುಕರಿಗಿಂತ ಲೇಸು ಎನ್ನಬಹುದು. ಆಂಗ್ಲನಾಡಿನ ನನ್ನ ಅನುಭವದ ದೀಪಾವಳಿ ನಿಮ್ಮೊಂದಿಗೆ ಹಂಚಿಕೊಳ್ಳುವೆ.
ದೀಪಾವಳಿ ಹೋಗಿ ದೀವಾಲಿ ಆದದ್ದು ….
ವಲಸೆಗಾರರ ಹಬ್ಬ 'festival of lights' ಆಂತಾಗಿ,
ಏಕೈಕ ಗುರುತಿನ, ಆನ್ಲೈನ್ ಹೆಸರಿನ ದೀವಾಲಿಯಾಗಿ.
Gunpowder, treason and plotನ ದಿನಕ್ಕೂ ಹತ್ತಿರವಾಗಿ,
ನಮ್ಮ ಪಟಾಕಿಯೋ, ಆಂಗ್ಲರ ಧಮಾಕಿಯೋ ಗೊಂದಲವಾಗಿಜೆಲೀಬಿ, ಲಡ್ಡು, ಕಜ್ಜಾಯಗಳ ಜೊತೆ ಚಾಕಲೇಟ್ ಸೇರಿ,
ಚಕ್ಕಲಿ, ಕೋಡುಬಳೆ ಜೊತೆ crisp ನ ಗರಿಗರಿ.
ಪಿಜ್ಜಾ ,ಬರ್ಗರ್ ಗಳಿಗೂ ಇಂದು ಆಹ್ವಾನ ಇದೇರಿ
ದೀವಾಲಿ ದಿನಾಂಕ ಯಾವತ್ತಿರಲಿ, 'ಆ ವೀಕೆಂಡ್ನ' ಹಬ್ಬ ನಮ್ಮ ಪರಿ.
ಕುಟುಂಬದ ಜೊತೆ, ಆನ್ಲೈನ್ನಲ್ಲಿ ಬೆರೆತು, ಮಾತಾಡಿ,
ಹತ್ತಿರದ, ವಿಸ್ತೃತ ಕುಟುಂಬದವರೆಲ್ಲರ ಓಡಗೂಡಿ,
ಎಲ್ಲರ ಮನೆಗಳ ಉತ್ತಮ ಭಕ್ಷ್ಯಗಳ ರುಚಿ ನೋಡಿ
ಸುರ್ ಸುರ್ ಬತ್ತಿ , ಹೂವಿನ ಕುಂಡಗಳ ಆಟವಾಡಿ.
ಅನಿವಾಸಿಯಾದರೇನು ಹಬ್ಬ ನಿವಾಸಿಯಲ್ಲವೇನು?
ಎಲ್ಲಿದ್ದರೇನು ದೀಪಾವಳಿ ನಮ್ಮೊಂದಿಗೆ ಬಾರದೇನು?
ಹಿತೈಷಿ, ಸ್ನೇಹಿತರ ಬಾಂಧ್ಯವ್ಯ, ಸಂಬಂಧಗಳ ವೈಶಿಷ್ಠ್ಯ
ಅನಿವಾಸಿ, ನಿನ್ನ ಈ ದೀವಾಳಿ ಹೊಸ ಕೊಡುಗೆ, ಹೊಸಬಗೆಯ ಅದೃಷ್ಟ. - ಡಾ. ದಾಕ್ಷಾಯಿಣಿ ಗೌಡ
ರಜೆಯಲ್ಲಿ ದೂರದ ಅಜ್ಜಿ ಮನೆಗೆ ಹೋಗುವಾಗ ಸಿಗುತ್ತಿದ್ದ ದೇವಿಮನೆ ಘಟ್ಟ. ಅದು ನಾನು ನೋಡಿದ ಮೊದಲ ದಟ್ಟ ಅರಣ್ಯ. ಕತೆಯಲ್ಲಿ ಕೇಳುತ್ತಿದ್ದ `ಕಾಡು` ಎಂಬ ಪದದ ಕಲ್ಪನೆಗೆ ದೃಶ್ಯ ರೂಪ ಕೊಟ್ಟ ಜಾಗ ಅದು. ಜಿರ್ರ್ ಜಿರ್ರ್ ಎಂಬ ಝೇಂಕಾರ ಹಕ್ಕಿಗಳ ಸಂಗೀತ, ಕಾಡು ಹೂಗಳ ಘಮ, ಬೆಣ್ಣೆಯಂತೇ ಹರಿಯುವ ಬೆಣ್ಣೆ ಹೊಳೆ ಮತ್ತು ಅಲ್ಲಿ ನೆಲ ಕಾಣಿಸುವ ತಿಳಿನೀರು, ಎಲ್ಲೆಲ್ಲೂ ನೆರಳು, ಅದೆಲ್ಲೋ ಒಂದಷ್ಟು ಕಂಡರೂ ಕಾಣಿಸದಂತೆ ಮುಖ ಮರೆಸಿಕೊಳ್ಳುತ್ತಿದ್ದ ಬಿಸಿಲು. ಹಸಿರು ಹಸಿರು ಹಸಿರು. ಇಲ್ಲಿ ಯಾವ ದೇವಿ ಮನೆ ಮಾಡಿ ನಿಂತರೂ ಆಶ್ಚರ್ಯ ಪಡಬೇಕಿಲ್ಲ!
ಬರೀ ಬಸ್ಸಿನ ಕಿಟಕಿಯಿಂದಲೇ ಈ ದೇವಿಮನೆ ಘಟ್ಟವನ್ನ ನೋಡುತ್ತಿದ್ದ ನನಗೆ, ಇಂತಹ ಕಾಡನ್ನೊಮ್ಮೆ ಅಲೆದು ಬರಬೇಕು ಅದರ ಸನ್ನಿಧಿಯಲ್ಲಿ ಸಮಾಧಾನಿಸಬೇಕು ಎಂಬುದು ಬಾಲ್ಯದಿಂದಲೂ ಮನಸಿನಲ್ಲಿ ಘಟ್ಟಿಯಾಗುತ್ತಿದ್ದ ಕನಸು. ಭಾರತದಲ್ಲಿದ್ದಷ್ಟು ದಿನವೂ ಏನಾದರೊಂದು ಕಾರಣದಿಂದ ಅಂತಹ ಅವಕಾಶ ಕೈ ತಪ್ಪಿ ಹೋಗುತ್ತಿತ್ತು. ಗಣೇಶ ಚವತಿಗೆ ಮಂಟಪ ಸಿಂಗರಿಸಲು ಶತಾವರಿ ಗಿಡಗಳನ್ನು ಹುಡುಕಿಕೊಂಡು ಹೊಲದ ಬದುವಿನಲ್ಲಿದ್ದ ಪುಟ್ಟ ಕಾಡಿಗೆ ಹೋದಾಗ ಅಥವಾ ಮುಂಡಗೋಡ-ಯಲ್ಲಾಪುರದ ನಡುವೆ ಪ್ರಯಾಣಿಸುವಾಗಲೊಮ್ಮೆ ದೇವಿಮನೆ ಸುತ್ತುವ ಆಸೆ ಮತ್ತೆ ಮನದಲ್ಲಿ ಮೂಡುತ್ತಿತ್ತು.
ನಾನು ನಾರ್ದರ್ನ್ ಐರ್ಲೆಂಡ್ ಗೆ ಬಂದ ನಂತರ ಈ ದೇಶದಲ್ಲಿ ನನಗೆ ಅತಿಯಾಗಿ ಇಷ್ಟವಾದ ವಿಷಯವೇ ಈ ಹಸಿರು ಶುದ್ಧ ಪರಿಸರ. ಮತ್ತದನ್ನು ಸ್ವಚ್ಛವಾಗಿಡಲು ಸರ್ವ ರೀತಿಯಿಂದಲೂ ಸಹಕರಿಸುತ್ತಿದ್ದ ನಾಗರೀಕರು. ಎಲ್ಲಡೆ ಹಸಿರು ನೀರಿನ ನೀಲಿ ಕಾಣ ಸಿಗುತಿತ್ತು, ಆದರೆ ಇಲ್ಲಿ ಕಾಡು ಇರಬಹುದೇ? ಎಂಬ ಪ್ರಶ್ನೆ ಮನದಲ್ಲಿದ್ದುದು ಸುಳ್ಳಲ್ಲ. ಜುಲೈ ಅಗಸ್ಟ್ ತಿಂಗಳು ಇಲ್ಲಿ ಹೆಸರಿಗೊಂದು ಬೇಸಿಗೆ ಬರುತ್ತದೆ. ಮಕ್ಕಳಿಗೆ ರಜೆ ಇರುವ ಕಾರಣ ನಾವೆಲ್ಲರೂ ಈ ನಾಮಕಾವಾಸ್ತೆ ಬರುವ ಬೇಸಿಗೆಯಲ್ಲಿ ಸ್ಥಳೀಯ ಜಾಗೆಗಳನ್ನ ತಿರುಗಾಡುವ ಪ್ಲಾನ್ ಮಾಡ್ತೀವಿ. ಹಾಗೆ ಬೇಸಿಗೆಯ ಒಂದು ದಿನ ಇಂಟರ್ನೆಟ್ ತಡಕಾಡಿ ಹುಡುಕಿ ತೆಗೆದಿದ್ದು ''ಟೊಲಿಮೊರ್ ಪಾರ್ಕ್''ಎಂಬ ಸ್ಥಳದ ಪೋಸ್ಟ್ ಕೋಡ್. ಹತ್ತಿರ ಇತ್ತಾದ್ದರಿಂದ ಒಂದೇ ದಿನದಲ್ಲಿ ಹಿಂದಿರುಗಲು ಅನುಕೂಲ ಎಂಬ ಕಾರಣದಿಂದ ನಾವು ಅಲ್ಲಿ ಹೊರಟಿದ್ದೆವು. ಪಾರ್ಕ್ ಎಂಬುದನ್ನ ಕೇಳಿದ ಕೂಡಲೇ ಮಕ್ಕಳು ಆಡುವಂತ ಸ್ಥಳ ಅಂದುಕೊಂಡು ಮತ್ತೊಂದಿಷ್ಟು ಪೂರ್ವಾಗ್ರಹದೊಂದಿಗೆ ನಾವು ಹೊರಟಿದ್ದು ನಾರ್ದರ್ನ್ ಐರ್ಲೆಂಡನ ಟೊಲಿಮೊರ ಎಂಬ ಫಾರೆಸ್ಟ್ ಪಾರ್ಕ್ ಗೆ.
ಟೊಲಿಮೊರ ಪಾರ್ಕ್
ಕಲ್ಲಿನ ಮಾಹಾದ್ವಾರದ ಮೇಲೆ ಕೆತ್ತಿದ ೧೭೮೬ ಎಂಬುದನ್ನು ನೋಡಿಯೇ ಇದು ಬಹು ಪುರಾತನ ಐತಿಹಾಸಿಕ ಸ್ಥಳ ಎಂಬುದು ಮನದಟ್ಟಾಗಿತ್ತು. ದ್ವಾರದ ಒಳಗೆ ಹೆಜ್ಜೆ ಇಟ್ಟಂತೆ ನಾವು ಎಲ್ಲಿ ಇದ್ದೇವೆ ಅನ್ನೋದನ್ನ ಮರೆಸಿ ಬಿಡುವ ದಿವ್ಯ ಪರಿಸರ ಹಸಿರು, ತಿಳಿ ಹಸಿರು, ಕಡು ಹಸಿರು. ಗಿಳಿ ಹಸಿರು, ಕೆಂಪು ಹಸಿರು, ಹಸಿರು ಹಸಿರು. ಎದುರಿನಲ್ಲೇ ಅರಣ್ಯ ಇಲಾಖೆಯ ಪುಟ್ಟ ಕುಟೀರ ಇತ್ತು. ಅಲ್ಲಿ ಅರಣ್ಯದ ನಕ್ಷೆ ತೆಗೆದುಕೊಂಡು ನಾವು ನಡಿಗೆ ಶುರು ಮಾಡಿದೆವು. ಕೆಲವು ನಿರ್ದಿಷ್ಟ ಜಾಗೆಗಳಲ್ಲಿ ಟೆಂಟ ಮತ್ತು ಕಾರವನ್ಗಳು ಸುಮಾರು ಸಂಖ್ಯೆಯಲ್ಲಿ ಇದ್ದವು. ಅಲ್ಲೇ ಅಡುಗೆ BBQ ಗಳನ್ನ ಮಾಡಿಕೊಂಡು ಆರಾಮ ಆಗಿ ಕುಳಿತ ಜನರನ್ನ ನೋಡಿದರೆ ನಾವು ರೆಸ್ಟಿಂಗ್ zone ಗೆ ಬಂದಿದ್ದೇವೇನೋ ಅನ್ನೋ ಅನುಮಾನ. ಈ ಸ್ಥಳದ ಪ್ರತಿ ಅಂಗುಲದಲ್ಲೂ ಸಮಾಧಾನ, ನಿಧಾನ, ತಂಪು, ಕಂಪು ತುಂಬಿಕೊಂಡಿದೆ ಅನಿಸುತ್ತಿತ್ತು. ಎಷ್ಟು ಜನರಿದ್ದರು ಅಲ್ಲಿ, ಆದರೂ ಒಂಚೂರು ಗದ್ದಲವಿಲ್ಲ. ಎಲ್ಲಿ ಪ್ರಕೃತಿ ಮಾತೆಯ ಮಂಪರು ಮಾಯವಾಗುವುದೋ ಅನ್ನುವ ಆತಂಕವೇ? ಅಥವಾ ಆ ಮೌನದಲ್ಲೇ ಅವರು ಅಲ್ಲಿಯ ಆನಂದ ಸವಿಯುತ್ತಿದ್ದರೆ? ಒಟ್ಟಿನಲ್ಲಿ ಆ ದಿವ್ಯ ಮೌನ ಬಹಳ ಹಿತ ಕೊಡುತ್ತಿತ್ತು.
ಇತಿಹಾಸ
೧೬೧೧ ರಲ್ಲಿ ಮೆಗನ್ನಿಸ್ ಎಂಬ ಕುಟುಂಬದ ಒಡೆತನದಿಂದ ಇದರ ಇತಿಹಾಸ ಆರಂಭವಾಗುತ್ತದೆ. ಇದು ೧೭೮೬ ರ ತನಕವೂ ದಾಯಾದಿಗಳಲ್ಲೇ ಹಸ್ತಾಂತರ ಗೊಳ್ಳುತ್ತ ಇರುತ್ತದೆ. ಈ ಸ್ಥಳದ ಇತಿಹಾಸದ ಬಗ್ಗೆ ಓದುವಾಗ ನಾನು ಗಮನಿಸಿದ ಒಂದು ವಿಷಯವೆಂದರೆ ಯಾರೇ ಇದರ ಒಡೆತನಕ್ಕೆ ಬಂದಿರಲಿ ಒಂದೇ ಅವರು ಮದುವೆ ಆಗುವುದಿಲ್ಲ, ಆದವರಿಗೆ ಮಕ್ಕಳಾಗುವುದಿಲ್ಲ . ಆಗ ಈ ಕಾಡಿನ ಒಡೆತನ ಸೋದರಿಯ ಸಂತಾನಗಳಿಗೆ ವರ್ಗಾವಣೆ ಆಗುತ್ತದೆ ಇದು ಆ ಸ್ಥಳ ಮಹಿಮೆಯೋ ಏನೋ.
ಟೈಟಾನಿಕ್ ಹಡಗಿನ ಹೆಸರನ್ನು ಕೇಳದವರು ವಿರಳ. ಆ ಹಡಗಿನ ನಿರ್ಮಾಣಕ್ಕೆ ಕಟ್ಟಿಗೆ ಒದಗಿಸಿದ್ದು ಇದೇ ಟೋಲಿಮೋರ ಅರಣ್ಯ. ಇಲ್ಲಿದ್ದ ಒಂದು ಅರಮನೆಯಲ್ಲಿ ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಅಮೇರಿಕನ್ ಸೈನಿಕರು ಉಳಿದು ಕೊಂಡಿದ್ದರು, ಆದರೆ ಆ ಸುಂದರ ಕಟ್ಟಡ ಈಗ ನೆಲಸಮ ಮಾಡಲಾಗಿದೆ. ೧೯೩೦ ರಲ್ಲಿ ಅರಣ್ಯ ಇಲಾಖೆಯವರಿಗೆ ಈ ಅರಣ್ಯದ ಮೇಲ್ವಿಚಾರಣೆ ವಹಿಸಿದ ನಂತರ ನಿರಂತರ ಬೆಳವಣಿಗೆ ಕಂಡ ಇದನ್ನು ೧೯೫೫ ರಲ್ಲಿ ನಾರ್ದರ್ನ್ ಐರ್ಲೆಂಡ್ ನ ಮೊದಲ ಅರಣ್ಯ ಉದ್ಯಾನ ಎಂದು ಘೋಷಿಸಲಾಯಿತು.
ವಿಶೇಷ
ಇದು ಮೌರ್ನ ಪರ್ವತ ಶ್ರೇಣಿಯ ಒಡಲಲ್ಲಿ ಇರುವ ಅರಣ್ಯ. ಅದೇ ಕಾರಣಕ್ಕೆ ಇಲ್ಲಿಂದ ಕಾಣುವ ದೃಶ್ಯಗಳು ಪ್ರಕೃತಿ ಪ್ರಿಯರಿಗೆ ರಸದೂಟ, ಛಾಯಾಚಿತ್ರಕಾರರಿಗೆ ಸ್ವರ್ಗ ಸಮ ಅನುಭವ ನೀಡುತ್ತವೆ. ಶಿಮ್ನಾ ಮತ್ತು ಸ್ಪಿಂಕ್ವೀ ನದಿಗಳು ಈ ಅರಣ್ಯದಲ್ಲಿ ಸಂಗಮ ಗೊಳ್ಳುತ್ತವೆ ಮತ್ತು ಈ ನದಿಗಳು ಸಾಲಮನ್ ಮೀನಿನ ಆಗರಗಳು. ಕಾಡನ್ನು ಎರಡು ಭಾಗಗಳಾಗಿ ವಿಭಾಗಿಸಿದ ಈ ನದಿಗಳಿಂದಲೇ ಹುಟ್ಟಿಕೊಂಡ ಮತ್ತೊಂದು ಆಕರ್ಷಣೆ ಇಲ್ಲಿರುವ ಸೇತುವೆಗಳು. ಅರಣ್ಯದಲ್ಲಿ ಒಟ್ಟು ೧೬ ಸೇತುವೆಗಳು ಇವೆ. ಪ್ರತಿ ಸೇತುವೆಯ ಹಿಂದೊಂದು ಕಥೆಯಿದೆ. ಕೆಲವು ಕಲ್ಲಿನ ಸೇತುವೆಗಳು ಕೆಲವು ತೂಗು ಸೇತುವೆ, ಮತ್ತೆ ಕೆಲವು ಕಟ್ಟಿಗೆಯವು.
ಹರ್ಮಿಟೆಜ್ ಇದರಲ್ಲಿ ಮುಖ್ಯವಾದುದು ಈ ಸೇತುವೆಯ ಪಕ್ಕ ಒಂದು ಸುಂದರ ಕಲ್ಲಿನ ಸೂರು ಇದೆ,ಆಗ ಇಲ್ಲಿ ವಾಸಿಸುತ್ತಿದ್ದ ಜೇಮ್ಸ್ ಹಾಮಿಲ್ಟನ್ ವಿರಾಮ ಸಮಯದಲ್ಲಿ ಇಲ್ಲಿ ಮೀನು ಹಿಡಿಯಲು ಬರುತ್ತಿದ್ದರು ಮತ್ತು ಅವರ ಪತ್ನಿ ಆಕೆಯ ಸ್ನೇಹಿತೆಯರು ಈ ಕಲ್ಲಿನ ಸೂರಿನಡಿಯಲ್ಲಿ ಕಸೂತಿ ಮಾಡುತ್ತ, ಹರಟೆ ಹೊಡೆಯುತ್ತ ಪ್ರಕೃತಿ ಸೌಂದರ್ಯ ಆಸ್ವಾಧಿಸುತ್ತಿದ್ದರು. ಈ ಕಾರಣಕ್ಕೆ ಈ ಸೇತುವೆ ಈ ಕಲ್ಲಿನ ಸೂರನ್ನು ಕಟ್ಟಲಾಗಿತ್ತು ಎಂಬುದು ಈ ಸ್ಥಳದ ಇತಿಹಾಸಬಗೆಗೆ ಇರುವ ಲೇಖನಗಳು ತಿಳಿಸುತ್ತವೆ. ಒಂದೆರಡು ಕಡೆ ನದಿಯ ನಡುವೆ ಚಂದದ ಕಲ್ಲುಗಳನ್ನು ಜೋಡಿಸಿ ನೀರು ಕಡಿಮೆ ಇದ್ದ ಕಡೆ ನಡಿಗೆಯಲ್ಲೇ ನದಿಯನ್ನು ದಾಟಬಹುದಾದ ಚಂದದ ವಿನ್ಯಾಸ ಕೂಡ ಕಾಣಬಹುದು. ನಮ್ಮದು ಭಾರತೀಯ ಮನಸ್ಸು ಆ ಸುಂದರ ತಿಳಿನೀರನ್ನು ಕಂಡ ಮೇಲೆ ಕೊನೆಪಕ್ಷ ಕಾಲು ಮುಳುಗಿಸಿ ಸ್ವಲ್ಪ ಆಟ ಆಡಿ ಬರೋಣ ಅನ್ನಿಸಿತು. ನೀರಲ್ಲಿ ಕಾಲಿಟ್ಟರೆ ಅಲ್ಲೇ ಫ್ರೀಜ್ ಆಗಿ ಹೋಗುವೆನೋ ಎಂಬ ಭಾವ ಬಂದಿದ್ದು ಸುಳ್ಳಲ್ಲ. ಬಿರು ಬೇಸಿಗೆಯಲ್ಲೂ ಅಷ್ಟು ತಂಪಿತ್ತು ಆ ನೀರು
ದ್ವಾರದಿಂದಲೇ ಕಾಣುವ ಮೌರ್ನ್ ಪರ್ವತ ಶೃಂಗಗಳ ವಿಹಂಗಮ ನೋಟ, ಚಾರಣ ಮಾಡಿದರೆ ಪರ್ವತದ ತುದಿಯಿಂದ ಕಾಣುವ ಅಟ್ಲಾಂಟಿಕ್ ಸಾಗರ, ಐರಿಷ್ ಸಮದ್ರ ಸನ್ನಿಧಿ, ಪರ್ವತವೇರಿದ ಆಯಾಸವನ್ನು ತಣಿಸುತ್ತವೆ. ಕಾಡಿನ ತುಂಬಾ ಹಲವು ಅಪರೂಪದ ಜೀವವೈವಿದ್ಯಗಳಿವೆ ಕೆಂಪು ಅಳಿಲು ಅವುಗಳಲ್ಲೊಂದು.
ನಡೆದಷ್ಟು ಕಾಡು, ನೋಡಿದಷ್ಟು ನೀರು, ಮೌನದಲ್ಲಿ ಜೀಗುಟ್ಟುವ ಹಲವು ಕೀಟಗಳ ಸಂಗೀತ, ಮುಗಿಲನ್ನು ಮುಟ್ಟುವ ಓಕ್ ಮರಗಳು--ಇದು ನನ್ನ ದೇವಿ ಮನೆ. ಅದೇ ನನ್ನೆಡೆಗೆ ನಡೆದು ಬಂದಿದೆ ಅಂತ ನನಗೆ ಅನ್ನಿಸಿಬಿಟ್ಟಿತ್ತು. ಹಸಿರು, ಈ ತಂಪಲು, ಹಸಿವು ನೀರಡಿಕೆ ಎಲ್ಲವನ್ನೂ ಮರೆಸುತ್ತವೆ. ಪ್ರತಿ ಋತುವಿನಲ್ಲೂ ತನ್ನ ರೂಪವನ್ನು ಬದಲಿಸಿಕೊಳ್ಳುವ ಈ ಕಾಡು, ಒಮ್ಮೆ ಹಳದಿ ಎಲೆಗಳಿಂದ ಕೂಡಿ ಅಂದವಾದರೆ, ಮತ್ತೊಮ್ಮೆ ಚಿಗುರು ಕೆಂಪು ಸೀರೆಯುಟ್ಟು ಮಗಮಗಿಸುತ್ತದೆ. ತಿಳಿ ನೀರು ಅಲ್ಲಲ್ಲಿ ಪುಟ್ಟ ಪುಟ್ಟ ಜಲಪಾತ ನಿರ್ಮಿಸುತ್ತಾ ನಡೆಯುವ ಶಿಮ್ನಾ -ಸ್ಪಿಂಕ್ವೀ ನದಿಗಳು, ಆ ಸೀರೆಗೊಂದು ಥಳಥಳಿಸುವ ಅಂಚು ಹೊಲಿದಿದ್ದಾವೆ ಅನ್ನಿಸುತ್ತದೆ.
ಕಾಡು ಅಲೆಯಬೇಕು ಅನ್ನೋ ಎಷ್ಟೋ ವರ್ಷದ ಕನಸನ್ನು ನನಸು ಮಾಡಿದ ಶ್ರೇಯ ಈ ಟೊಲಿಮೊರ ಅರಣ್ಯಕ್ಕೆ ಸಲ್ಲುತ್ತದೆ. ಹತ್ತಿರದಲ್ಲೇ ಸೈಲೆಂಟ್ ವ್ಯಾಲಿ, ಟೈಟಾನಿಕ್ ತಯಾರಾದ ಊರು ಬೆಲ್ಫಾಸ್ಟ್, Newcastle, ಜಗತ್ತಿನ ಅಧ್ಬುತಗಳಲ್ಲಿ ಒಂದಾದ Giant's causeway ಗಳಿವೆ.
ನಾನು ಈ ಸ್ಥಳವನ್ನು ಮೊದಲಬಾರಿ ನೋಡಿದ್ದು ೨೦೧೧ ರಲ್ಲಿ. ಆ ನಂತರ ಲೆಕ್ಕವಿಲ್ಲದಷ್ಟು ಬಾರಿ ಭೇಟಿ ನೀಡಿದ್ದೇನೆ, ಎಷ್ಟೋ ಸಲ ದಾರಿ ತಪ್ಪಿ ಕಳೆದು ಹೋಗಿದ್ದೇನೆ, ನೀರಿನಲ್ಲಿ ಕಾಗದದ ದೋಣಿ ಬಿಟ್ಟು ಮಕ್ಕಳೊಂದಿಗೆ ಆಟವಾಡಿದ್ದೇನೆ. ಪ್ರತಿಬಾರಿಯೂ ಮತ್ತೆ ಹೋಗಬೇಕು ಅನ್ನುವ ಆಸೆಯೊಂದಿಗೆ ಮರಳುತ್ತೇನೆ. ಈ ವರ್ಷದ ಬೇಸಿಗೆಯಲ್ಲಿ ಭೇಟಿ ಕೊಟ್ಟಾಗ ಒಂದು ರಾಶಿ ಕಾಡು ಬೆಳ್ಳುಳ್ಳಿ ಸೊಪ್ಪು ಕಿತ್ತುಕೊಂಡು ಬಂದು ಒಳ್ಳೆಯ ಅಕ್ಕಿರೊಟ್ಟಿ, ಪಲ್ಯ,ಚಟ್ನಿ ಮಾಡಿ ಸವಿದಿದ್ದೆ. ಈಗ Autumn ಬಣ್ಣಗಳನ್ನ ನೋಡಲು ಹೋಗಬೇಕು.
ನೀವು Northern Ireland ಗೆ ಭೆಟ್ಟಿ ಕೊಟ್ಟರೆ ಈ ಕಾಡನ್ನ ನೋಡೋದು ಮರೆಯಬೇಡಿ.
ಫೋಟೋಗಳು ಮತ್ತು ಲೇಖನ :-ಅಮಿತಾ ರವಿಕಿರಣ
ಪ್ರಾಚೀನವೂ ಪ್ರಬುದ್ಧವೂ ಆದ ಭಾರತೀಯ ನಾಟ್ಯ ಪದ್ಧತಿಯ ವೃಕ್ಷದ ಶಾಖೆಗಳು ಹಲವು. ದಕ್ಷಿಣ ಭಾರತದಲ್ಲೇ ಭಾರತ ನಾಟ್ಯ, ಕುಚಿಪುಡಿ ಹಾಗೂ ಮೋಹಿನಿ ಅಟ್ಟಂ ಎಂಬ ಮೂರು ಪ್ರಮುಖ ಪ್ರಕಾರಗಳನ್ನು ಕಾಣುತ್ತೇವೆ. ವಿದೇಶದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಭಾರತೀಯ ನೃತ್ಯ ಪದ್ಧತಿಯ ಪರಿಚಯವಾಗುವುದು ಸುಲಭವಲ್ಲ. ಪರಿಚಯವಾದರೂ ಅದರಲ್ಲಿ ತರಬೇತಿಗೆ ಸಿಗುವ ಅವಕಾಶ ಕಡಿಮೆ. ಅವಕಾಶ ಸಿಕ್ಕರೂ ಅದರ ಪ್ರಯೋಜನ ಪಡೆದುಕೊಳ್ಳಲು ಹಲವಾರು ಅಡೆತಡೆಗಳು ಬರುವುದು ಸಹಜ, ಸಾಮಾನ್ಯ. ಇಂತಹ ಸಂದರ್ಭದಲ್ಲಿ ಸಿಕ್ಕ ಅವಕಾಶದ ಸದುಪಯೋಗ ಪಡೆದುಕೊಂಡು, ಪರಿಣತಿ ಪಡೆದ ಯುವತಿಯ ಪರಿಚಯ ಮಾಡಿಕೊಡುವ ಸುಯೋಗ ನನ್ನದು. ರಂಗಪ್ರವೇಶದ ಒಂದು ವಿಡಿಯೋ ತುಣುಕು, ಮನಮೋಹಕ ಸಂಗೀತದ ಧ್ವನಿಮುದ್ರಿಕೆಯನ್ನು ಕೂಡ ನಿಮ್ಮೊಡನೆ ಹಂಚಿಕೊಳ್ಳಲಾಗಿದೆ. ಒಟ್ಟಂದದಲ್ಲಿ ನಿಮಗೆ ಕಾರ್ಯಕ್ರಮದ ಒಳ ನೋಟ ಕೊಡುವ ಪ್ರಯತ್ನವಿದು.
ಅಭಿನಯ ಪ್ರಧಾನವಾದ ಕುಚಿಪುಡಿ ನೃತ್ಯ ಪ್ರಕಾರದಲ್ಲಿ ಹಲವಾರು ವರ್ಷ ತರಬೇತಿ ಪಡೆದು, ಪರಿಣತಿಯನ್ನು ಹೊಂದಿ ರಂಗಪ್ರವೇಶ ಮಾಡಿರುವ ಅದಿತಿಯ ರಂಗ ಪ್ರವೇಶದ ಒಲ್ಮೆಯ ಆಮಂತ್ರಣ ಕೈ ಸೇರಿದಾಗ ಆದ ಸಂತೋಷ, ಹೆಮ್ಮೆ; ಕನ್ನಡತಿ, ಅನಿವಾಸಿ ಬಳಗದ ಲಕ್ಷ್ಮೀನಾರಾಯಣ ಗುಡೂರ್ ಅವರ ಮಗಳು ಎಂದರೆ KSSVVಯ ಹೊಸ ಚಿಗುರು, ಬಾಲ್ಯದಿಂದ ಕಂಡ ಸಿರಿ ಎಂಬ ಹಲವು ಮಟ್ಟದ್ದಾಗಿತ್ತು.
ಐದು ವರ್ಷದ ಅದಿತಿ ಮೊದಲ ದಿನ ನೃತ್ಯ ಕಲಿಯಲು ಹೋದಂದು ತೋರಿದ ಉತ್ಸಾಹ ಗುಲಗಂಜಿಯಷ್ಟೂ ಬತ್ತಿಲ್ಲ ಎಂದು ಅದಿತಿಯ ಅಮ್ಮ ವಿದ್ಯಾ ಹೇಳಿದ ವಿಷಯ ಅದಿತಿಯ ಶಬ್ದಗಳಲ್ಲೂ ಪ್ರತಿಧ್ವನಿಸುತ್ತದೆ. ಶಾಸ್ತ್ರೀಯ ನೃತ್ಯ ಕಷ್ಟಕರವಾದರೂ ತನ್ನನ್ನು ಪರಿಚಯಿಸಿದ್ದಕ್ಕೆ ಅದಿತಿ ಸದಾ ತನ್ನ ತಾಯಿಗೆ ಕೃತಜ್ಞಳು. ನೃತ್ಯವಿಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದುದು ಅಸಾಧ್ಯವೆಂದು ಹೇಳುತ್ತಾಳೆ. ನೃತ್ಯ ಇಂದು ಅದಿತಿಗೆ ತನ್ನ ಬಾಲ್ಯದ ಸಾಕಾರ ರೂಪ, ತನ್ನನ್ನೇ ಅರಿಯಲು ಸಿಕ್ಕ ಅವಕಾಶ, ಭಾರತೀಯ ಸಂಸ್ಕೃತಿಗೆ ಸಂಪರ್ಕ ಕಲ್ಪಿಸಿದ ಸೇತು. ಇವು ಕೇವಲ ಸಂದರ್ಶನಕ್ಕೆ ಬಳಸಿದ ಪೊಳ್ಳು ಶಬ್ದಗಳಲ್ಲ, ಹೃದಯಾಳದಿಂದ ಹೊಮ್ಮಿದ ಅಪ್ಪಟ ಭಾವನೆಗಳೆಂಬುದು ಆಕೆಯ ನೃತ್ಯ ಪ್ರದರ್ಶನ ನೋಡಿದವರೆಲ್ಲರಿಗೂ ಅನಿಸಿದ್ದರೆ ಆಶ್ಚರ್ಯವಲ್ಲ.
ರಂಗಪ್ರವೇಶದಂದು ಹಬ್ಬದ ವಾತಾವರಣವಿತ್ತು. ಅದಿತಿಯ ನರ್ತನ ಭಂಗಿಯ ಚಿತ್ರ ಅತಿಥಿಗಳನ್ನು ಸ್ವಾಗತಿಸುತ್ತಿದ್ದರೆ, ಅವರ ದಾಹ ನಿವಾರಣೆಗೆ ನೀರು-ಬೆಲ್ಲ ಸಾಂಪ್ರದಾಯಿಕ ಮೆರುಗನ್ನು ನೀಡುತ್ತಿದ್ದವು. ಸಮಯಕ್ಕೆ ಸರಿಯಾಗಿ, ಪದ್ಧತಿಯಂತೆ ಗಣಪತಿ, ನಂತರ ಅರ್ಧನಾರೀಶ್ವರನ ಪ್ರಾರ್ಥನೆಗಳೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪುರಂದರ ದಾಸರ “ಗಜವದನಾ ಬೇಡುವೆ” ಭಜನೆ ರಂಗಪ್ರವೇಶದ ಮೊದಲ ನೃತ್ಯವಾಗಿದ್ದು ಮಾತೃಭಾಷೆಯಾದ ಕನ್ನಡದವನ್ನು ಸರಾಗವಾಗಿ ಬಳಸಬಲ್ಲ ಅದಿತಿಯ ಕನ್ನಡ ಪ್ರೇಮಕ್ಕೆ ದ್ಯೋತಕವಾಗಿತ್ತು. ಕುಚಿಪುಡಿ ಪದ್ಧತಿಗೆ ವಿಶೇಷವಾದ ತಟ್ಟೆಯ ಮೇಲೆ ನಿಂತು ತಲೆಯ ಮೇಲೆ ತಂಬಿಗೆಯನ್ನಿಟ್ಟುಕೊಂಡು ಮಾಡುವ “ತರಂಗಂ” ನೃತ್ಯದ ತಾಂತ್ರಿಕತೆ ವೀಕ್ಷಕರನ್ನು ಮೋಡಿ ಮಾಡಿತು.
“ಕೃಷ್ಣಾ ನೀ ಬೇಗನೆ ಬಾರೋ” ಚಿಕ್ಕಂದಿನಿಂದಲೂ ನನ್ನ ಮೆಚ್ಚಿನ ಭಜನೆಗಳಲ್ಲೊಂದು. ವಂಶಿಕೃಷ್ಣರ ಹಾಡುಗಾರಿಕೆ ಪದ್ಯದ ಭಾವವನ್ನು, ವಾತಾವರಣವನ್ನು ಸೃಷ್ಟಿಸಿದರೆ; ಅದಿತಿಯ ಮನಮೋಹಕ ಭಾವಪೂರ್ಣ ಅಭಿನಯ ಯಶೋದೆಯ ಮಾತೃತ್ವ, ಕೃಷ್ಣನ ತುಂಟತನಗಳನ್ನು ನಮ್ಮ ಮುಂದೆ ಮೂರ್ತಗೊಳಿಸಿದ್ದಲ್ಲದೆ, ಮಂತ್ರಮುಗ್ಧರನ್ನಾಗಿಸಿತು. ತನ್ನ ಅಚ್ಚು ಮೆಚ್ಚಿನ ಭಜನೆಯನ್ನು ನಮ್ಮ ಮುಂದೆ ಸಾಕಾರಗೊಳಿಸಿದ ಯಶಸ್ಸಿಗೆ ತನ್ನ ಬದುಕಿನ ಅನುಭವಗಳೇ ಸ್ಫುರ್ತಿಯೆನ್ನುತ್ತಾಳೆ ಅದಿತಿ. ತನ್ನ ತಂಗಿಯ ತುಂಟತನದಲ್ಲಿ ಕೃಷ್ಣನ ತುಂಟತನವನ್ನು ಕಾಣುವ ಅದಿತಿ, ಎಲ್ಲ ವಯಸ್ಸಿನವರಿಗೂ, ಕಾಲಕ್ಕೂ ಅನ್ವಯವಾಗುವ ಕೃಷ್ಣನ ವ್ಯಕ್ತಿತ್ವ ತನಗೆ ಅಪ್ಯಾಯಮಾನ ಎನ್ನುತ್ತಾಳೆ. ಅವಳ ನಾಟ್ಯ-ನಟನಾ ಪರಿಣತಿ ಸಂಪೂರ್ಣವಾಗಿ ಈ ನೃತ್ಯದಲ್ಲಿ ಅಭಿವ್ಯಕ್ತವಾಗಿತ್ತು. ಅಂದು ನಿಸ್ಸಂದೇಹವಾಗಿ “ಕೃಷ್ಣ ನೀ ಬೇಗನೆ ಬಾರೋ” ಸಭಿಕರೆಲ್ಲರ ಮೆಚ್ಚಿನ ನೃತ್ಯವಾಗಿತ್ತೆಂಬುದು ಕರತಾಡನದಲ್ಲೇ ಅರ್ಥವಾಗಿತ್ತು.
“ಕಾಮಾಕ್ಷಿ ಸ್ತುತಿ” ಹಾಗೂ “ನಮೋ ನಮೋ ಲಕ್ಷ್ಮೀ ನರಸಿಂಹ” ನೃತ್ಯಗಳಲ್ಲಿ ಬರುವ ಭಕ್ತಿ, ಶೃಂಗಾರ, ಶಾಂತ, ಕ್ರೋಧ, ಭಯ, ಕರುಣಾ ರಸಗಳ ಪ್ರದರ್ಶನ ಅದಿತಿಯ ನಟನಾ ಪ್ರಬುದ್ಧತೆಗೆ ದ್ಯೋತಕವಾಗಿದ್ದವು. ಅಂತ್ಯದಲ್ಲಿ ಪ್ರದರ್ಶಿಸಿದ ವೇಗ ಪ್ರಧಾನವಾದ ತಿಲ್ಲಾನ ವೀಕ್ಷಕರನ್ನು ಸಂತೃಪ್ತಿಯ ಶಿಖರಕ್ಕೇರಿಸಿತ್ತು.
ಅದಿತಿಯ ಪ್ರತಿಭೆಗೆ ಪುಟ ಕೊಟ್ಟು ಬೆಳಗಿಸಿದ ಗುರು ಅಭಿನಂದನಾ ಕೋದಂಡ ಅವರ ಅಪಾರ ಪರಿಶ್ರಮದ ಅರಿವು ನಮಗೆ ಅಂದಿನ ಪ್ರದರ್ಶನದಲ್ಲಾಯಿತು. ಪ್ರಾರಂಭದಿಂದಲೇ ಅದಿತಿಯ ಪ್ರತಿಭೆಯನ್ನು ಗುರುತಿಸಿ, ಅವಕಾಶ ಕೊಟ್ಟು ಬೆಳೆಸಿದ ಹಿರಿಮೆ ಅವರದ್ದು. ರಂಗಪ್ರವೇಶದ ಯಶಸ್ಸಿಗೆ ಹಿಮ್ಮೇಳದ ಕೊಡುಗೆ ಸರಿಸಮನಾಗೇ ಇರುವುದು ಅತ್ಯವಶ್ಯ. ವಂಶಿಕೃಷ್ಣ ವಿಷ್ಣುದಾಸ್ ಒಬ್ಬ ಅದ್ಭುತ ಹಾಡುಗಾರ ಎಂಬ ಅನುಭವ ಅಂದು ನಮಗಾಯಿತು. ವಿಜಯವೆಂಕಟ್ ಕೊಳಲು ವಾದನದಿಂದ ಕೃಷ್ಣನ ಮೋಡಿ ಹಾಕಿದ್ದರು ಸಭಿಕರ ಮೇಲೆ. ಪ್ರತಾಪ್ ರಾಮಚಂದ್ರರ ಮೃದಂಗ ವಾದನಕ್ಕೆ ವೀಕ್ಷಕರು ಕುಳಿತಲ್ಲೇ ಹೆಜ್ಜೆ ಹಾಕಿದ್ದರು ಕಾರ್ಯಕ್ರಮದುದ್ದ.
ತನ್ನ ನೃತ್ಯ ಪ್ರಯಾಣದ ಹಾದಿಯಲ್ಲಿ ಹಲವು ಗೆಳೆಯರನ್ನು ಪಡೆದಿರುವ ಅದಿತಿಗೆ ಇಂದು ನೃತ್ಯ ಜೀವನದ ಅಂಗವಾಗಿದೆ, ತನ್ನ ಭಾವನೆಗಳ ಅಭಿವ್ಯಕ್ತಿಗೆ ಸಾಧನವಾಗಿದೆ. ಕಲೆ ಆಕೆಗೆ ಜೀವನಾನುಭವಗಳ ಕಿಟಕಿ ತೆರೆಯುವ ಮಾಧ್ಯಮ. ರಂಗಪ್ರವೇಶಕ್ಕೆ ಹಾರೈಸಲು ಬಂದವರನ್ನು, ಅನಾಥ ಮಕ್ಕಳ ಬದುಕನ್ನು ರೂಪಿಸಲು ಹಲವು ವರ್ಷಗಳಿಂದ ನಿರತವಾಗಿರುವ ಚಾಮರಾಜಪೇಟೆಯ ದೀನಬಂಧು ಸಂಸ್ಥೆಗೆ ಕೈಲಾದಷ್ಟು ದಾನ ಮಾಡಿರೆಂಬ ಅದಿತಿಯ ವಿನಂತಿ ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗನ್ನು ನೀಡಿತು.
ವಿಡಿಯೋ ಕೃಪೆ: ಶ್ರೀಮತಿ ಶಾಂತಾ ರಾವ್, ಅನ್ನಪೂರ್ಣ ಇಂಡಿಯನ್ ಡಾನ್ಸ್ ಅಕ್ಯಾಡೆಮಿ, ಯುಕೆ.
ಈ ವಾರ ನಾನು ಬರೆದ ಐದು ಕವನಗಳಿವೆ. ವಿಭಿನ್ನ ರೀತಿಯ ಪ್ರಯತ್ನದ ಕವನಗಳು ಎಂದು ನನ್ನ ಅನಿಸಿಕೆ. ನಿಮ್ಮ ಅನಿಸಿಕೆ, ಪ್ರತಿಕ್ರಿಯೆ ಮತ್ತು ವಿಮರ್ಶೆಗಳನ್ನು ಮರೆಯಬೇಡಿ. ಇಲ್ಲಿರುವ ಎಲ್ಲ ಚಿತ್ರಗಳನ್ನು ಬರೆದದ್ದು ಕೃತಕ ಬುದ್ಧಿಮತ್ತೆ (AI)! – ಕೇಶವ ಕುಲಕರ್ಣಿ
ಸ್ಕ್ರಿಪ್ಟ್
ನನಗೆ ಬೇಕಾದಂತೆ ನನ್ನ ಬದುಕಿನ ಸ್ಕ್ರಿಪ್ಟ್ ಬರೆಯಬೇಕು ಆದರೆ ನನ್ನೊಳಗಿನ ಕತೆಗಾರನ ಪಕ್ಕದಲ್ಲಿ ಕೂತಿದ್ದಾನೆ ನಿರ್ಮಾಪಕ He needs a hit. BLOCK BUSTER! M-O-N-E-Y-S-P-I-N-N-E-R !! ಹೇಳುತ್ತಾನೆ ಕತೆಗಾರನಿಗೆ,
“ನಿನ್ನಂತೆ ಬರೆದರೆ ಒಂದೇ ಒಂದು ಥೇಟರು ಸಿಗುವುದಿಲ್ಲ ಸಿಕ್ಕರೂ ಎರಡನೇ ದಿನ ನೊಣ ಹೊಡೆಯಲೂ ಜನ ಸಿಗುವುದಿಲ್ಲ ಅವಾರ್ಡು ಬರುತ್ತೆ ಅನ್ನುತ್ತೀಯಾ? ಆ ಕಾಲವೂ ಮುಗಿಯಿತಯ್ಯಾ ಅಲ್ಲಿ ಕೂತವರೂ ನನ್ನಂಥವರೇ ನಿನ್ನ ಭಾಷೆ ನಮಗೆ ಅರ್ಥವಾಗುವುದಿಲ್ಲ ಅಪ್ಪಿ ತಪ್ಪಿ ಅವಾರ್ಡು ಬಂತು ಅಂದುಕೋ ಹೊಟ್ಟೆಗೆ ಏನು ಮಾಡ್ತೀಯಾ? ಹಾಕಿದ ದುಡ್ಡು ಹೇಗೆ ವಾಪಸ್ಸು ತೆಗೀತೀಯಾ? ಮಾಡಿದ ಸಾಲ ಹೇಗೆ ತೀರಸ್ತೀಯಾ?”
ಕತೆಗಾರ ಬರೆಯುತ್ತಿದ್ದಾನೆ ನಿರ್ಮಾಪಕ ಹೇಳಿದಂತೆ…
ಪೆಂಡಾಲು ಕಟ್ಟುವ ಹುಡುಗ
ಕತ್ತಲಿನ ಕೊಳಕಲ್ಲಿ ಚರಂಡಿ ಗಲ್ಲಿಗಳಲ್ಲಿ ಚಿಂದಿ ಬಟ್ಟೆಗಳಲ್ಲೇ ಬೆಳೆದ ನನ್ನ ಕಾಯಿಸಿದೆ ಪ್ರೀತಿಸಿದೆ ಚುಂಬಿಸಿದೆ ಕಾಮಿಸಿದೆ ನಿನ್ನ ಪ್ರೀತಿಗೆ ನನ್ನೇ ಎರಕಹೊಯ್ದೆ
ರದ್ದಿಹಾಳೆಯ ಖಾಲಿ ಜಾಗಗಳ ಮೂಲೆಯಲಿ ನಿನ್ನದೇ ಕನಸುಗಳ ಕವಿತೆಗಾಗಿ ಬರೆದ ಪದಗಳ ಮೇಲೇ ಪದಗಳನು ಬರೆಬರೆದು ಹಾಳೆಹರಿದಿತ್ತು ಮಸಿಯ ನುಂಗಿ
ನಿನ್ನ ಪ್ರೀತಿಗೆ ನನ್ನ ಮಾತುಗಳ ಮುತ್ತುಗಳು, ನುಣುಪು ಕೊರಳಿಗೆ ನನ್ನ ತೋಳು ಸರಮಾಲೆ ನಿನ್ನ ಪ್ರೇಮದ ಮದಕೆ ನಾ ಮದಿರೆಯಾದೆ, ನಿನ್ನಿಷ್ಟದಂತೆ ನಾ ಎಲ್ಲ ಮುಚ್ಚಿಟ್ಟೆ
ನನ್ನ ಬಳಿಯಿದ್ದ ಹಣ ವಿದ್ಯೆ ಜಾತಿಗಳಿಂದ ನಿಮ್ಮಪ್ಪ ಬಗ್ಗುವುದೇ ಇಲ್ಲವೆಂದು…
ನಿನ್ನ ಮದುವೆಯ ದಿನ ಯಾವ ಮುಜುಗರವಿಲ್ಲದೇ ಪೆಂಡಾಲು ಕಟ್ಟಿದ್ದೇನೆ
’ಎಲ್ಲ ಮಾನವ ನಿರ್ಮಿತ, ಇದೆಲ್ಲ ಮಾಯೆ’ ಎನ್ನುವ ನಿಮ್ಮಪ್ಪನ ವೇದಾಂತ ಮಾಡಿದ ಕೆಲಸಕ್ಕೆ ದುಡ್ಡು ಎಣಿಸುವಾಗ ಚೌಕಾಸಿಗಿಳಿದಿತ್ತು
ಅದೇ ಮೊಟ್ಟಮೊದಲ ಬಾರಿಗೆ ನಾನು ಮುಖವನೆತ್ತಿ ನಿಮ್ಮಪ್ಪನ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದ್ದು ಮುಖಕ್ಕೆ ಉಗಿದು ಬಾಯಿ ಒರೆಸಿಕೊಂಡಿದ್ದು
ನಮ್ಮ ಮನೆಯ ನಾಯಿ
ನಮ್ಮ ಮನೆಯ ನಾಯಿ ಅಂಗಳದಲ್ಲಿ ಬಿಸಿಲನ್ನು ಕಾಯಿಸಿಕೊಳ್ಳುತ್ತ ನೆರಳಿನ ಜೊತೆ ಜಗಳವಾಡುತ್ತ ಕಿವಿ ಕೆರೆದುಕೊಳ್ಳುತ್ತ ಮುಚ್ಚಿದ ಗೇಟಿನವರೆಗೂ ಓಡುತ್ತ ಮತ್ತೆ ತಲಬಾಗಿಲವರೆಗೂ ತೇಗುತ್ತ ನಾಲಗೆಯಿಂದ ಮೈಯನ್ನೆಲ್ಲ ನೆಕ್ಕಿಕೊಳ್ಳುತ್ತ ಆಗಾಗ ಆಕಳಿಸಿತ್ತ, ಮೈಮುರಿಯುತ್ತ, ಮೈಕೊಡವುತ್ತ
ಇರಲು
ಆಚೆ ಓಣಿಯ ಬೀದಿನಾಯೊಂದು ನಮ್ಮ ಮನೆ ಮುಂದಿನ ರಸ್ತೆಯಲಿ ವಯ್ಯಾರದಲ್ಲಿ ಬರುತ್ತಿರುವ ವಾಸನೆ ಮೂಗಿಗೆ
ಬಡಿದದ್ದೇ
ಈ ನಮ್ಮ ನಾಯಿ ತಲೆಯೆತ್ತಿ ಕಿವಿ ನಿಮಿರಿಸಿ ಬಾಲ ನಿಗುರಿಸಿ ಗೇಟಿನವರೆಗೂ ಧಡಪಡಿಸಿ ಇಸ್ಟಗಲ ಬಾಯಿ ತೆರೆದು ಬೊಗಳಿದ್ದೇ ಬೊಗಳಿದ್ದು
ಆದರೆ ಆ ನಾಯಿ ಈ ನಮ್ಮ ನಾಯಿಯನ್ನು ನೋಡೇ ಇಲ್ಲ ಎನ್ನುವಂತೆ ತನ್ನ ಪಾಡಿಗೆ ತಾನು ಕ್ಯಾರೇ ಎನ್ನದೇ ಆರಾಮವಾಗಿ ನಮ್ಮ ಓಣಿಯನ್ನು ದಾಟಿ ಹೊರಟುಹೋಯಿತು
ಆ ನಾಯಿ ಕಣ್ಣಿಂದ ದೂರಾಗುವವರೆಗೂ ಬೊಗಳಿದ ನಮ್ಮ ನಾಯಿ ಮರಳಿ ನೆರಳಲ್ಲಿ ಕಾಲು ಚಾಚಿ ಎಲ್ಲಂದರಲ್ಲಿ ತನ್ನ ಮೈಯ ನೆಕ್ಕತೊಡಗಿತು
ಇದೆಲ್ಲ ನಡೆಯುತ್ತಲೇ ಇಲ್ಲ ಅಥವಾ ನಡೆದರೂ ಏನಂತೆ ಎನ್ನುವ ದಿವ್ಯ ನಿರ್ಲಿಪ್ತತೆಯಲ್ಲಿ ಅಂಗಳದಲ್ಲೇ ಕುಳಿತಿದ್ದ ನನ್ನ ಅಜ್ಜಿ ಹೂಬತ್ತಿ ಗೆಜ್ಜೆವಸ್ತ್ರ ಬಸಿಯುತ್ತ ದಾಸರ ಪದ ಒಟಗುಟ್ಟುತ್ತಿದ್ದಳು,
‘ಬಂದದ್ದೆಲ್ಲ ಬರಲಿ ಗೋವಿಂದನ ದಯವೊಂದಿರಲಿ’
ಬ್ಯೂಟಿಫುಲ್ ಹುಡ್ಗೀರು
ಈ ಬ್ಯೂಟಿಫುಲ್ ಹುಡ್ಗೀರು ಬಿಎಂಟಿಸಿ ಬಸ್ಸಿದ್ದಂಗೆ ಕಾದಿದ್ದೂ ಕಾದಿದ್ದೇ! ಅಗೋ ಒಂದು ಬಂತು ನಿಂತು ಅನ್ನುತ್ತಿರುವಾಗಲೇ ಒಂದರ ಹಿಂದೆ ಮತ್ತೊಂದು ಮುಗದೊಂದು!
ಯಾವುದು ಫುಲ್ಲು ಯಾವುದು ಎಂಪ್ಟಿ ಯಾವುದು ಹೋಗೋದು ಎಲ್ಲಿಲ್ಲಿಗೆ ಟೈಮು ಬಹಳಷ್ಟಿಲ್ಲ ಡಿಸೈಡು ಮಾಡೊಕ್ಕೆ ಒಂಚೂರು ಮಿಸ್ಟೀಕು ಆಯ್ತೋ ಆಯ್ತು! ಏನ್ಮಾಡೋಕಾಗುತ್ತೆ?
ಜಂಪ್ ಮಾಡಿದ್ರೆ ಕಾಲ್ ಮುರೀಬೌದು ಫುಲ್ ಇದ್ರೆ ನಿಂತು ಕಾಲ್ ನೋಯಬೌದು ತಪ್ಪು ಬೋರ್ಡಾಗಿದ್ರೆ ಮುಂದಿನ ಸ್ಟಾಪು ಇಳಿಬೌದು ಖಾಲಿ ಇದ್ರೆ ನಿದ್ದೆ ಮಾಡಬೌದು
ಇಲ್ಲಾ ಕಿಟಕಿಯಿಂದ ಮಾರುತಿಯಿಂದ ಹಿಡಿದು ಬೆಂಜ್ವರೆಗೆ ಸಾಗುವ ನೂರಾರು ಕಾರುಗಳನ್ನು ನೋಡುತ್ತ ಹೊಟ್ಟೆ ಉರಿಸಿಕೊಳ್ಳಬಹುದು
(ಪ್ರೇರಣೆ: Wendy Cope ಬರೆದ ‘Serious Concerns’ ಸಂಕಲನದ ’Bloody men’ ಕವನ)
ಪಾಪ ಪುಣ್ಯ
ಈ ಭೂಮಿಯಾಚೆ ದೂರದೊಂದು ಗ್ರಹದಲ್ಲಿ ಜನ ಬದುಕಿದ್ದಾರಂತೆ ಅಲ್ಲಿ ಸತ್ತವರೆಲ್ಲ ಈ ಭೂಮಿ ಮೇಲೆ ನಾವು ನೀವಾಗಿ ಹುಟ್ಟುತ್ತಾರಂತೆ
ಅಲ್ಲಿ ಪಾಪ ಮಾಡಿದವರು ಇಲ್ಲಿ ಬದುಕುತ್ತಾರಂತೆ ಕಷ್ಟಪಟ್ಟು ಸಾಲೊಲ್ಲ ತಿಂಗಳ ಸಂಬಳ ತಿಂಗಳಿಗೆ ಸೇದಲ್ಲ ಕುಡದಿಲ್ಲ ಹೆಂಡತಿಯ (ಅಥವಾ ಗಂಡನ)ಬಿಟ್ಟಿನ್ನೊಬ್ಬರನು ಮುಟ್ಟಿಲ್ಲ ಮಗನಗಿನ್ನೂ ನೌಕರಿಯಿಲ್ಲ ಮಗಳಿಗೆ ಮದುವೆಯಾಗಿಲ್ಲ ಜೊತೆಗಿದೆ ಬಿಪಿ ಸಕ್ಕರೆಕಾಯಿಲೆ ಆಸ್ಪತ್ರೆಯಲ್ಲಿ ನರಳಿ ತಿಂಗಳುಗಟ್ಟಲೇ ಸಾಲಬಿಟ್ಟು ಸಾಯುತ್ತಾರೆ ಮತ್ತೆ ಆ ಲೋಕದಲ್ಲಿ ಹುಟ್ಟುತ್ತಾರೆ
ಅಲ್ಲಿ ಪುಣ್ಯ ಗಳಿಸಿದವರು ಬೆಳ್ಳಿ ಚಮಚ ಬಾಯಲ್ಲಿಟ್ಟು ಇಲ್ಲಿ ಹುಟ್ಟುತಾರಂತೆ ಬ್ಲ್ಯಾಕ್ ಮನಿ ಮನೆ ತುಂಬಿ ಮಗನ ಅಮೇರಿಕಕೆ ಕಳಿಸುತ್ತಾರೆ ನೆಗಡಿಯಾದರೆ ಸಾಕು ಅಪೋಲೊ ಆಸ್ಪತ್ರೆ ಸೇರುತ್ತಾರೆ ಹೆಂಡತಿ (ಅಥವಾ ಗಂಡ)ಯ ಹಿಂದಿಂದೆ ಮಗಳ (ಅಥವಾ ಮಗನ) ವಯಸಿನ ಸುಂದರಿಯ ಸವರಿ ಎಪ್ಪತ್ತರಲ್ಲಿ ವಯಾಗ್ರ ನುಂಗಿ ಯಯಾತಿಯಾಗುತ್ತಾರೆ
ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಮ್ಮನ್ನೆಚ್ಚರಿಸುವ ಒಂದು”ಜಿಮ್ನಾಸ್ಟಿಕ್ ಶೋ’ದ ಪರಿಚಯ ಇಲ್ಲಿದೆ.
ಕಳೆದ ವಾರ ನನ್ನ ಪಕ್ಕದ ಊರಿನ ’ರೋದರಂ ಶೋ’ದ (Rotherham Show at Clifton Park) ಒಂದು ಮುಖ್ಯ ಆಕರ್ಷಣೆ ಎಂದರೆ ಮೈದಾನದ ಮಧ್ಯದಲ್ಲಿಯ ಏಳು ಮೀಟರುಗಲ ಉದ್ದದ ಮರಳು ಗಡಿಯಾರದಲ್ಲಿ ಸಮತೋಲ ಕಾಯಲು ಯತ್ನಿಸುತ್ತಿರುವ ನಾಲ್ವರು. ಅವರು ಭಾಗವಹಿಸಿದ್ದು ಜೋಲಿ ವೈಯಾನ್ (Joly Vyann) ಅವರು ಹುಟ್ಟು ಹಾಕಿದ ಟೈಮ್ಲೆಸ್ (Timeless) ಎನ್ನುವ ಶೋ. ಅಷ್ಟು ದೊಡ್ಡ ಮರಳು ಗಡಿಯಾರ (Hour glass) ಯಾಕೆ ಬೇಕಿತ್ತು? ಅದಕ್ಕೂ ಗ್ಲೋಬಲ್ ವಾರ್ಮಿಂಗ್ (ಜಾಗತಿಕ ಉಷ್ಣೋದ್ದೀಪನ)ಗೂ ಏನು ಸಂಬಂಧ? ಲಂಡನ್ನಿನ ಯು ಸಿ ಎಲ್ ದ ಪ್ರೊಫೆಸರ್, ಅಂಕಣ ಮತ್ತು ಪುಸ್ತಕಗಳ, ವೈಜ್ಞಾನಿಕ ಲೇಖನಗಳ ಬರಹಗಾರ ಬಿಲ್ ಮ್ಯಾಗ್ವೈಯರ್ ಅವರ ಈ ವಾರದ ಹೇಳಿಕೆಯ ಪ್ರಕಾರ ನಾವು 2030 ತಲುಪುವ ಮೊದಲೇ ಜಗತ್ತಿನ ಉಷ್ಣತಾಮಾನದ ಏರಿಕೆ 1.5 ಡಿಗ್ರಿ ಸೆಲ್ಸಿಯಸ್ ಕೆಳಗೆ ಬರುಬೇಕೆಂದು ಪಣ ತೊಟ್ಟ ಗುರಿ ತಲುಪುವದು ಈಗ ಅಸಾಧ್ಯ ಎನಿಸುತ್ತದೆ. ಇತ್ತೀಚೆಗೆಯಷ್ಟೇ ನಾವೆಲ್ಲ ಪಾಕಿಸ್ತಾನದ ಮಹಾಪೂರದಿಂದಾಗಿ ಮೂರೂಕಾಲು ಕೋಟಿಗಿಂತ ಹೆಚ್ಚಿನ ಜನ ಸಂತ್ರಸ್ತರಾದ ಫೋಟೊಗಳನ್ನು ಸಾಕಷ್ಟು ನೋಡಿದ್ದೇವೆ. ಇದೇ ವರ್ಷ ಮೊದಲ ಬಾರಿ ಇಂಗ್ಲೆಂಡಿನ ಉಷ್ಣತಾಮಾನ 40.3 ಸೆ ಮುಟ್ಟಿದ ಹೆಡ್ಲೈನ್ ವರದಿಗಳನ್ನು ಕೇಳಿದ್ದೇವೆ.ಇವು ಗ್ಲೋಬಲ್ ವಾರ್ಮಿಂಗಿನ ಪ್ರತ್ಯಕ್ಷ ಪರಿಣಾಮಗಳೆಂದು ತಿಳಿದು ಬಂದಿದೆ. ಇನ್ನು ’1.5 ಡಿಗ್ರಿ’ ಗುರಿ ಸಾಧಿಸಲು ನಮಗೆ ಸಮಯದ ಅಭಾವವಿದೆ. ಗಡಿಯಾರದ ಮರಳು ಶೀಘ್ರಗತಿಯಲ್ಲಿ ಸೋರಿಹೋಗುತ್ತಿದೆ ಎನ್ನುವ ಸರ್ವವಿದಿತ ಸತ್ಯವನ್ನೇ ಮನದಟ್ಟ ಮಾಡಲು ನೃತ್ಯ, ಸರ್ಕಸ್ ಮತ್ತು ಕಸರತ್ತುಗಳನ್ನು (gymnastics) ಹೆಣೆದು ಜನರಿಗೆ ಪ್ರಸ್ತುತಪಡಿಸುವ ಒಂದು ಕಲಾತ್ಮಕ ಪ್ರದರ್ಶನವೇ ಜೋಲಿ ವೈಯಾನ್ (Joly Vyann) ಅವರು ಹುಟ್ಟು ಹಾಕಿದ ಟೈಮ್ಲೆಸ್ (Timeless) - ಕಾಲಾತೀತ ಎನ್ನುವ ಶೋ. ತಾಪೋದ್ದೀಪನದ ಜೊತೆಗೆ ಪರಿಸರ ಮತ್ತು ಪ್ರಾಣಿಸಂಕುಲನದ ಸಂರಕ್ಷಣೆಯೂ ಆಗ ಬೇಕಾಗಿದೆ. ಆಸಿಡ್ ಮಳೆ, ಹವೆಯಲ್ಲಿ ಹೆಚ್ಚುತ್ತಿರುವ ಇಂಗಾಲದ ಡೈಯಾಕ್ಸೈಡ್ ಇವೆಲ್ಲ ಹಾನಿಕರ. ಇವೆಲ್ಲದರ ಸುಧಾರಣೆಗೆ ಟೈಮ್- ಲೆಸ್, ಸಮಯ ಬಹಳ ಕಡಿಮೆ ಎನ್ನುವ ಸಂದೇಶವೂ ಅದರಲ್ಲಿದೆ.
ಅಂದು ಇಂಗ್ಲೆಂಡಿನ ರಾಣಿಯ ಮೃತ್ಯುವಿನ ಹಿಂದಿನ ರವಿವಾರ. ಇಂಗ್ಲೆಂಡಿನ ಯಾರ್ಕ್ ಶೈರಿನಲ್ಲಿ ಹರಿಯುವ ಡಾನ್ ನದಿಯ ಉಪನದಿಯಾದ ”ರಾದರ್’ ದಂಡೆಯಮೇಲೆ ಬೆಳೆದ ಲಕ್ಷಕ್ಕಿಂತಲೂ ಜಾಸ್ತಿ ಜನವಸತಿಯ ರಾದರಮ್ಮಿನ ವಿಶಾಲವಾದ ಕ್ಲಿಫ್ಟನ್ ಪಾರ್ಕದ ತುಂಬ ವಿವಿಧ ವಸ್ತುಗಳನ್ನು ಮಾರುವ ಮಳಿಗೆಗಳು, ಫುಡ್ ಸ್ಟಾಲ್ ಗಳು ಹರಡಿಕೊಂಡಿದ್ದವು. ಆ ಮಧ್ಯೆ ವಿಂಟೇಜ್ ಕಾರುಗಳ ಮಾಲಕರು ತಮ್ಮ ’ಕೂಸು’ಗಳನ್ನು ತಂದು ಪ್ರದರ್ಶಿಸಿದರು. ಪ್ರದರ್ಶನಗಳ ಸುತ್ತ ಕಿಕ್ಕಿರಿದು ತುಂಬಿದ ಜನಸಂದಣಿ. ಕಳೆದ 43 ವರ್ಷಗಳಿಂದ ಸಾವಿರಾರು ಮಕ್ಕಳು, ತಂದೆತಾಯಿಗಳೊಂದಿಗೆ ಅನೇಕ ಕುಟುಂಬಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆಟ, ಓಡಾಟ ತಿಂಡಿ, ಬರ್ಗರ್, ಪಿಡ್ಝಾ, ಕೋಲಾ, ಪೆಪ್ಸಿ, ಮ್ಯೂಸಿಕ್, ಬ್ಯಾಂಡ್, ಲೌಡ್ ಸ್ಪೀಕರ್, ಇತ್ಯಾದಿಗಳ ಸುತ್ತಲೂ ಜನ. ನೀವು ಊಹಿಸಿರಬಹುದು, ಆ ದೃಶ್ಯವನ್ನು.
’ಟೈಮ್ಲೆಸ್ ’ ಶೋಗೆ ಜೋಲಿ ವಯನ್ ಆರಿಸಿಕೊಂಡಿದ್ದ ಜಾಗ ಸಮತಟ್ಟಾದ ಹುಲ್ಲಿನ ಮೈದಾನದ ಮಧ್ಯದಲ್ಲಿ. ಕಳೆದ ಹತ್ತು ವರ್ಷಗಳಿಂದ ಈ ಪುಟ್ಟ ಸಂಸ್ಥೆ ಅಕ್ರೋಬಾಟಿಕ್ ’ಡೊಂಬರಾಟ’ಯುಕ್ತ ಕಥಾನಕಗಳನ್ನು ಸರ್ಕಸ್-ಡಾನ್ಸ್ ಮತ್ತು ಜಿಮ್ನಾಸ್ಟಿಕ್ಸ್ಗಲ ಮಿಶ್ರಣದ ನಾಲ್ಕು ಹೊರಾಂಗಣದ ಮತ್ತು ಎರಡು ಒಳಾಂಗಣದ ಪ್ರದರ್ಶನಗಳನ್ನು ಈ ದೇಶದಲ್ಲಷ್ಟೇ ಅಲ್ಲದೆ ದಕ್ಷಿಣ ಕೊರಿಯಾದಲ್ಲೂ ಪ್ರದರ್ಶಿಸುತ್ತಿದೆ. ಒಲೀವಿಯಾ ಕೇಲ್ ಮತ್ತು ಯಾನ್ ಪ್ಯಾಟ್ಸ್ಕೀ ಎರಡೂ ಕಲೆಗಳಲ್ಲಿ ನುರಿತವರು.
ಆ ದಿನ ಅಂಗ ಸೌಷ್ಠವವುಳ್ಳ ಧೃಡಕಾಯದ ಇಬ್ಬರು ಗಂಡಸರು ಮತ್ತು ಇಬ್ಬರು ಬೆಡಗಿನ ಯುವತಿಯರು ಪಾಲ್ಗೊಂಡಿದ್ದರು. ಮೊದಲು ಯಾಕೆ ತಾವು ಮನುಕುಲವನ್ನು ಕಾಡುತ್ತಿರುವ ಈ ಸಮಸ್ಯೆಗಳ ಪರಿಹಾರದ ಅವಶ್ಯಕತೆಯನ್ನು ಬಿಂಬಿಸಲು ಮರಳು ಗಡಿಯಾರದ ಆಯ್ಕೆ ಅರ್ಥವತ್ತಾದುದೇ ಅಂತ ಹೇಳಿ ತಮ್ಮ ಅರ್ಧ ಗಂಟೆಯ ’ಆಟ’ವನ್ನು ಪ್ರಾರಂಭಿಸಿದರು. ಮೊದಲು ಒಂದು ಚಿಕ್ಕ ರೂಪಕದಲ್ಲಿ ನಾಲ್ವರೂ ಮಾನವನ ಆದಿಕಾಲದ ಜೀವನದಪರಿಚಯ ಮಾಡಿ ಇಂದಿನ ವರೆಗಿನ ಪ್ರಗತಿಯನ್ನು ನೃತದಲ್ಲಿ ತೋರಿಸಿಕೊಟ್ಟರು. ನಂತರ ಒಬ್ಬೊಬ್ಬ ಗಂಡಸು ಮರಳು ಗಡಿಯಾರದ (hourglass) ಎರಡೂ ಗಾಜಿನ ಗೋಲಕಗಳಲ್ಲಿ ಹೊಕ್ಕು ಸಮತೋಲನ ಸ್ಥಾಪಿಸಿದ ಮೇಲೆ ಇಬ್ಬರು ಹೆಂಗಸರು ಕೋರಿಯೋಗ್ರಫಿಗನುಗುಣವಾಗಿ ನರ್ತಿಸುತ್ತ ಆ ಎರಡು ಗೊಲಕಗಳಲ್ಲಿ ಸೇರಿಕೊಂಡು ಅದರ ಮಧ್ಯದ ಅಚ್ಚಿನ ಸುತ್ತ ಅವರ್ ಗ್ಲಾಸನ್ನು ತಿರುಗಿಸಿದರು. ಕೆಲವಿ ನಿಮಿಷಗಳ ನಂತರ ಅದನ್ನು ನಿಲ್ಲಿಸಿ ಹೊರಬಂದು ಒಂದರಲ್ಲಿ ಮರಳಿನ ಬದಲಾಗಿ ಮರದ ಗೋಲಕಗಳನ್ನು ತುಂಬಿ ಒಂದರಿಂದ ಇನ್ನೊಂದಕ್ಕೆ ಸ್ವಲ್ಪೇ ಸಮದಲ್ಲಿ ಇಳಿದದ್ದನ್ನು ತೋರಿಸಿ ಚಲಿಸುತ್ತಿರುವ ಸಮಯದ ರೂಪಕವಾಗಿ ಪ್ರದರ್ಶಿಸಿದರು. ಆಟದ ಪ್ರದರ್ಶನ ಮುಗಿದಮೇಲೆ ಚಿಕ್ಕ ಪ್ರಶ್ನೋತ್ತರದ ಸಂವಾದದೊಂದಿಗೆ ಆ ಕಾರ್ಯಕ್ರಮ ಮುಕ್ತಾಯವಾಯಿತು.
ಮನುಕುಲಕ್ಕೊದಗಿದ ಈ ಗ್ಲೋಬಲ್ ವಾರ್ಮಿಂಗ್ ಗಂಡಾಂತರವನ್ನು ನಾವು ಹೇಗೆ ಎದುರಿಸುತ್ತೇವೆ ನೋಡಬೇಕಾಗಿದೆ.
ಶ್ರೀವತ್ಸ ದೇಸಾಯಿ
ಚಿತ್ರ ಕೃಪೆ: Luke Witcomb ವಿಡಿಯೋ: ಜೋಲಿ ವೈಯಾನ್
ರುಚಿಯಾದ ಅಡಿಗೆ ಮಾಡುವದು ಕಷ್ಟವೆಂದರೆ ಮಾಡಿದ್ದನ್ನು ತಿನ್ನುವುದೂ ಕೂಡ ಕಷ್ಟವೆಂಬುವುದು ಬಹು ಜನರಿಗೆ ಗೊತ್ತಿರಿಲರಾರದ ಸಂಗತಿ ಇರಬಹುದು . ಪ್ರಪಂಚದ ಬೇರೆ ಬೇರೆ ದೇಶಗಲ್ಲಿ ತಿನ್ನುವ ಆಹಾರ ವಿಭಿನ್ನವಾಗಿದ್ದರೆ, ತಿನ್ನುವ ಪದ್ಧತಿ ಕೂಡ ಅಷ್ಟೇ ವಿಭಿನ್ನವಾಗಿದೆ. ನಾನು ಮೊದಲು ಸಲ ಈ ದೇಶಕ್ಕೆ ಬಂದಾಗ ಫೋರ್ಕ್ ಮತ್ತು ಚಮಚ ಹಿಡಿದು ತಿನ್ನಲು ಹೋಗಿ ಹಾಗು ಜಪನೀಸ ನೂಡಲ್ಸನ್ನು ಕಡ್ಡಿಯಿಂದ ಎತ್ತಲು ಹೋಗಿ ನಗೆಪಾಡಾಗಿದ್ದು ಇನ್ನೂ ನೆನಪು. ಡೈನಿಂಗ್ ಟೇಬಲ್ ಮೇಲೆ ಕುಳಿತು ಆರಾಮವಾಗಿ ತಿನ್ನುವವರಿಗೆ ನಮ್ಮ ಹಳ್ಳಿಗೆ ಕರೆದೊಯ್ದು ಹಾಸಿದ ಚಾಪೆಯ ಮೇಲೆ ಕುಳಿತು ತಿನ್ನಲು ಹೇಳಿದರೆ ಎಂಥ ಕಷ್ಟವಾದೀತು? ಇಂಥ ವಿಷಯದ ಮೇಲೆ ಸರಾಳವಾಗಿ ಜುಳು ಜುಳು ನೀರಿನಂತೆ ಹರಿಯುವ ‘ ಹರಟೆ ‘ ಓದಲು ಸಿಕ್ಕರೆ ಮನಸಿಗೆ ಎಷ್ಟೊಂದು ಖುಷಿ ! ಇಷ್ಟು ಸಲೀಸಾಗಿ ಹರಟೆಯನ್ನು ಬರೆಯಲು ಗೌರಿ ಪ್ರಸನ್ನನವರನ್ನು ಬಿಟ್ಟರೆ ಇನ್ನ್ಯಾರಿಗೆ ಸಾಧ್ಯ? ಬನ್ನಿ, ತಪ್ಪದೆ ಅವರ ಹರಟೆಯನ್ನು ಓದಿ ಆನಂದಿಸಿ .
ಒಬ್ಬೊಬ್ಬರ ಜೀವನದಲ್ಲೂ ಇನ್ನೊಬ್ಬ ಪ್ರಭಾವಿತ ವ್ಯಕ್ತಿಯ ಪ್ರಭಾವ ಇರುವದು ಸಹಜ. ನನ್ನ ಚಿಕ್ಕ ವಯಸಿನಲ್ಲಿ ಕನ್ನಡ ಸಾಹಿತ್ಯದತ್ತ ಅಭಿರುಚಿ ಬೆಳೆಯಲು ಕಾರಣರಾದವರು ನನ್ನ ನೆಚ್ಚಿನ ಕಾದಂಬರಿಕಾರ್ತಿ ‘ತ್ರಿವೇಣಿ’ ಯವರು . ಸೆಪ್ಟೆಂಬರ್ ೧ ಅವರ ಹುಟ್ಟುದಿನ . ಈ ಸಮಯದಲ್ಲಿ ನಾನು ಅವರಿಗೊಂದು ಹೃತ್ಪೂರ್ವಕ ನಮನ ಸಲ್ಲಿಸಲು ಸಣ್ಣ ಬರಹವನ್ನು ಬರೆದಿರುವೆ , ತಾವೆಲ್ಲಾ ಓದುವಿರೆಂದು ಭಾವಿಸಿರುವೆ
ದಯವಿಟ್ಟು ಎರಡೂ ಬರಹಗಳನ್ನು ಸಮಯ ಸಿಕ್ಕಾಗ ಓದಿ , ಹಾಗೆಯೇ ಎರಡಕ್ಷರದ ಅನಿಸಿಕೆಯನ್ನು ಬರೆಯಲು ಮರೆಯಬೇಡಿ
– ಸಂಪಾದಕ
ಒಂದೋ ಎರಡೋ ಬಾಳೆಲೆ ಹರಡೋ
– ಗೌರಿ ಪ್ರಸನ್ನ
‘ಒಂದೋ ಎರಡೋ ಬಾಳೆಲೆ ಹರಡೋ’ ಅನ್ನುವ ಹಾಡಿನಿಂದಲೇ ನಮ್ಮ ಒನ್ನೆತ್ತಾ ಶುರುವಾಗಿ ನಾವು ರಾಕ್ಷಸ ಗಣದಿಂದ ಸಾಕ್ಷರರಾಗುವತ್ತ ಮೊದಲ ಹೆಜ್ಜೆಯಿಟ್ಟದ್ದು. ನಮಗೆ ಆಗಲೂ, ಈಗಲೂ ಊಟದ ಆಟ ಕೊಟ್ಟಷ್ಟು ಖುಷಿ ಬೇರಾವುದೂ ಕೊಟ್ಟಿಲ್ಲ ಅನಬಹುದು. ನಾ ಎಷ್ಟೋ ಸಲ ವಿಚಾರ ಮಾಡತಿರತೀನಿ. ಈ ‘ಊಟ’ ಅನ್ನೂದು ಇರಲಿಲ್ಲಂದ್ರ ಕೆಲಸನs ಇರತಿರಲಿಲ್ಲ ಅಂತ. ನಾವೂ ಗಿಡಮರಬಳ್ಳಿಗಳ ಗತೆ ಅಥವಾ ಕೋಯಿಮಿಲ್ ಗಯಾದ ‘ಜಾದೂ’ ನ ಗತೆ ಬರೀ ಸೂರ್ಯನ ಬಿಸಿಲೋ, ನೀರೋ ಇವುಗಳಿಂದನೇ ಬದುಕೂ ಹಂಗಿದ್ರ ಯಾವ ಕೆಲಸದ ರಗಳೆನೇ ಇರತಿರಲಿಲ್ಲ. ಕನಿಷ್ಠ ಪಕ್ಷ ಪಶುಪಕ್ಷಿಗಳ ಗತೆ ಸೊಪ್ಪು, ಹುಲ್ಲು, ಹಣ್ಣುಹಂಪಲ, ಹಸಿಮಾಂಸಗಳನ್ನು ಹಂಗೇ ನೇರವಾಗಿ ತಿನ್ನೂ ಹಂಗಿದ್ರ ಹೆಂಗಿರತಿತ್ತು..?! ಆವಾಗ ಈ ಭಾಂಡಿ ತೊಳಿ, ಕಟ್ಟಿ ಒರಸು, ಕಿರಾಣಿ ತಗೊಂಬಾ, ಕಾಸು, ಕಟ್ಟು, ಕುದಿಸು, ಬೇಯಿಸು, ಹೆಚ್ಚು, ಕೊಚ್ಚು, ತೊಳಿ, ಬಳಿ ಅನ್ನೋ ಯಾವ ಉಸಾಬರಿನೂ ಇರತಿರಲಿಲ್ಲ. ಹಂಗಂದ್ರ ಈ ಊಟನೇ ಎಲ್ಲಾದಕ್ಕೂ ಮೂಲ ಅಂದ್ಹಂಗಾತು. ದಾಸರೂ ಸಹಿತ ಅದಕ್ಕಾಗೇ ‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಅಂತ ಇನ್ ಡೈರೆಕ್ಟ್ ಆಗಿ ಈ ಊಟದ ಬಗ್ಗೆನೇ ಹೇಳ್ಯಾರ ಅನಸತದ. ‘ತಂಡುಲದ ಹಿಡಿಯೊಂದು, ತುಂಡು ಬಟ್ಟೆಯದೊಂದು ಅಂಡಲೆತವಿದಕೇನೋ ಮಂಕುತಿಮ್ಮ’ ಅಂತಾರ ನಮ್ಮ ತಿಮ್ಮ ಗುರು.
ಊಟಾ ಏನೋ ಎಲ್ಲಾರೂ ಮಾಡತಾರ. ಮಾಡಿದ್ದಣ್ಣೋ ಮಹರಾಯ ಅಂತ ಕೆಲವರು ತಾವೇ ಕೈ ಸುಟಗೊಂಡು ಬಾಯಿನೂ ಸುಟಗೋತಾರ. ಇನ್ನ ಕೆಲವರು ಏನೂ ಬಿಸಿಯಿಲ್ಲದೇ ಖಮ್ಮಗ ಮತ್ತೊಬ್ಬರು ಮಾಡಿ ಹಾಕಿದ್ದನ್ನ ಸುಮ್ಮ ತಿಂದು ಬಿಮ್ಮಗಿರತಾರ. ಮತ್ತೂ ಕೆಲವರು ತಿನ್ನೂತನಾ ತಿಂದು ಆಮ್ಯಾಲೆ “ಹೋಳ ಭಾಳ ಹಣ್ಣ ಬೆಂದಾವ ಅಂತಲೋ, ಬ್ಯಾಳಿ ಬೆಂದೇ ಇಲ್ಲ” ಅಂತನೋ ಕಿಟಿಪಿಟಿ ನಡಸಿರತಾರ. ಅಂತೂ ಊಟ ಅಂಬೋ ಆಟ ಅವರವರದೇ ರೀತಿಯೊಳಗ ಎಲ್ಲಾರೂ ಆಡತಿರತಾರ. ಈ ಊಟ ಮಾಡೂ ರೀತಿ, ಅದರ ವಿಧಿ -ವಿಧಾನಗಳು ಎಷ್ಟೊಂದ ನಮೂನೀರಿ?! ಜಾಗಾದಿಂದ ಜಾಗಾಕ್ಕ ಈ ಊಟದ ರೀತಿ-ನೀತಿಗಳು ಬ್ಯಾರೆ ಬ್ಯಾರೆ ಆಗತಾವ ಅನ್ರಿ. ನಮ್ಮ ಕಡೆ ಅಂದ್ರ ದಕ್ಷಿಣ ಭಾರತದಾಗ ಬಾಳೆ ಎಲೆಗಳ ಸಂಭ್ರಮ. ಏನರೇ ಹಬ್ಬ-ಹುಣ್ಣಿಮಿ, ಮದುವಿ-ಮುಂಜಿವಿ, ಆರಾಧನಿ-ಸಮಾರಾಧನಿ ಅಂತೆಲ್ಲ ಇದ್ರ ಬಾಳೆಎಲೆ ಊಟ ಗ್ಯಾರಂಟೀರಿ. ನಾವು ಸಣ್ಣವರಿದ್ದಾಗ ರವಿವಾರಕ್ಕೊಮ್ಮೆ ಸಂತ್ಯಾಗ ಬಾಳಿ ಎಲಿ ತಂದು, ದಿಂಡ ತಗದು, ಅವನ್ನ ಹೆಚ್ಚಿ ಸಣ್ಣಸಣ್ಣ ಎಲೆಗಳನ್ನಾಗಿ ಮಾಡಿ ಒಂದು ತಟ್ಟಿನ ಚೀಲ ‘ನಮ್’ ಅನ್ನೂ ಅಷ್ಟು ಒದ್ದಿ ಮಾಡಿ ಅದರಾಗ ಸುತ್ತಿ ಇಡತಿದ್ರು ನಮ್ಮ ಮುದ್ದಣ್ಣ ಮಾಮಾ. 15-20 ದಿನಗಟ್ಟಲೇ ಛಲೋ ಇರತಿದ್ವು. ಸ್ವಲ್ಪ ಹಳದಿ ಒಡದ್ರೂ ನಮಗೇನ ಫರಕ ಬೀಳತಿರಲಿಲ್ಲ.( ಯಾಕಂದ್ರ ನಮ್ಮ ಕಣ್ಣೆಲ್ಲ ಎಲೆಯ ಮೇಲಿನ ಖಾದ್ಯಗಳ ಬಣ್ಣದೆಡೆ ನೆಟ್ಟಿರುತ್ತಿದ್ದವೆನ್ನಿ) ಊಟಾ ಆದಮ್ಯಾಲೆ ಅವೇ ಎಲೆಗಳು ಸಾಳುಂಕೆ ಅವರ ಮನೆಯ ಎಮ್ಮೆ-ಆಕಳುಗಳಿಗೆ ಸುಗ್ರಾಸ ಭೋಜನವಾಗುತ್ತಿದ್ದವು.
ಈ ಬಾಳೆ ಎಲಿ ಹೆಂಗ ಹಾಕಬೇಕು ಅನ್ನೂದೇ ಒಂದು ಸಮಸ್ಯೆ ಹಲವರಿಗೆ. ಉದ್ದ ಹಾಕಬೇಕೋ, ಅಡ್ಡ ಹಾಕಬೇಕೋ, ಅದರ ಮಾರಿ ಯಾವ ಕಡೆ ಇರಬೇಕು, ಕುಡಿ ಬಾಳೆ ಎಲಿ ಹಾಕಬೇಕೋ ಬ್ಯಾಡೋ ..ಹೀಂಗ ನೂರಾ ಎಂಟು ಪ್ರಶ್ನೆ ಇರತಾವರೀ ( ಯಾಕಂದ್ರ ಚೊಚ್ಚಲ ಗಂಡಸ ಮಕ್ಕಳಿದ್ದವರು ಕುಡಿ ಬಾಳಿ ಎಲ್ಯಾಗ ಉಣಬಾರದಂತ ಶಾಸ್ತ್ರ ಅದ ಅಂತರಿ). ಎಲಿ ಹಾಕಿದ ಮ್ಯಾಲೆ ಇನ್ನ ಸಾಲಕ ಉಪ್ಪಿನ ಹಿಡಕೊಂಡು ಚಟ್ಟಿ, ಕೋಸಂಬ್ರಿ, ಪಲ್ಯಾ, ಕಾರೇಸಾ, ಬುರಬುರಿ, ಪಾಯಸ, ಅನ್ನ, ತೊವ್ವೆಗಳಿಗಲ್ಲ ಅದರದರದೇ ನಿರ್ದಿಷ್ಟ ಜಾಗ ಇರತಾವರೀ. ಉಪ್ಪು ಎಡಕ್ಕ, ಪಾಯಸ ಬಲಕ್ಕ, ಅನ್ನದ ಬಲಬದಿಗೆ ತೊವ್ವೆ, ಅದರ ಮೇಲೆ ತುಪ್ಪ … ಹೀಂಗ ಏನೇನೋ. ಅವೆಲ್ಲ ಅದಲು ಬದಲು ಆಗೂ ಹಂಗಿಲ್ರೀ. ನೀವೇನರೇ ಪಾಯಸ ಎಡಕ್ಕ ಬಡಸಿದಿರೋ ‘ಹುಚ್ಚ ಖೋಡಿ’ ಅಂತ ಗ್ಯಾರಂಟಿ ಬಯ್ಯಿಸಿಕೋತಿರಿ. ಕೆಲವು ಮಂದಿ ಅಂತೂ ವಾಗತ್ಯ ಮಾಡಿಕೋತಾರ. ಹಂಗಂತ ಇದೇ ಸರಿ ಅಂತ ಅಲ್ರಿ. ಕೆಲವರಲ್ಲಿ ಉಪ್ಪಿಲ್ಲದೇ ಊಟ ಬಡಿಸುವಂತಿಲ್ಲ. ಇನ್ನ ಕೆಲವರಲ್ಲಿ ಮೊದಲು ಉಪ್ಪು ಹಾಕುವಂತಿಲ್ಲ. ಕೆಲವರಲ್ಲಿ ಪಾಯಸ- ಪರಮಾನ್ನದಿಂದ ಊಟ ಆರಂಭ ಆದ್ರ, ಇನ್ನ ಕೆಲವರಲ್ಲಿ ‘ಡೆಸರ್ಟ್’ಅಂತ ಊಟ ಆದಮ್ಯಾಲೆ ತಿಂತಾರ. ಕೆಲವೆಡೆ ಶುಭ ಸಂದರ್ಭಗಳಲ್ಲಿ ಮುದ್ದಿಪಲ್ಯ ನಿಷಿದ್ಧ. ಇನ್ನು ಕೆಲವೆಡೆ ಅದು ಕಂಪಲ್ಸರಿ ಇರಲೇಬೇಕು. ಕೆಲವರಿಗೆ ಭಕ್ರಿ-ಬದನೆಕಾಯಿ ಹಬ್ಬಹರಿದಿನಗಳಲ್ಲಿ ನಿಷಿದ್ಧ. ಇನ್ನು ಕೆಲವರಲ್ಲಿ ಮದುವೆ ಊಟಕ್ಕೂ ಅವು ಬೇಕು. ಹೀಂಗ ದೇಶ-ಕಾಲ ಭೇದಗಳು ಭಾಳ ಇರತಾವ್ರಿ ಈ ಊಟದಾಗ.
ಈ ಬಾಳಿ ಎಲಿ ಊಟದ ಮಜಾನೇ ಬ್ಯಾರೆ ಇರತದ್ರಿ. ಮದುವಿ ಭೂಮದಾಗಂತೂ ಇಷ್ಟುದ್ದ ಏಕ ಎಲಿ ಮ್ಯಾಲೆ ಬಡಿಸಿದ ನಾನಾ ನಮೂನಿ ಸಂಡಿಗಿ-ಹಪ್ಪಳ-ಮಂಡಿಗೆಗಳು, ಶ್ಯಾವಿಗೆ-ಬಟವಿ ಪಾಯಸಗಳು, ಎಲೆ ಮುಂದೆ ಹಾಕಿದ ಬಣ್ಣಬಣ್ಣದ ಮನಸೆಳೆವ ರಂಗೋಲಿಗಳು, ಬೆಳಗುತ್ತಿರುವ ಸಮೆಗಳು… ನೋಡೂ ಹಂಗ ಇರತದ. ಆದ್ರ ಮಣೆ ಮ್ಯಾಲೆ ಕೂತು ಎಲೆ ತುದಿಯ ಖಾದ್ಯಗಳನ್ನೆಲ್ಲ ಬಗ್ಗಿ ಬಗ್ಗಿ ಹೆಕ್ಕಿ ತಿನ್ನೂದರಾಗ ದೊಡ್ಡ ಸರ್ಕಸ್ಸೇ ಆಗತದ. ಮೊನ್ನೆ ಇಲ್ಲೊಬ್ಬರ ಮನ್ಯಾಗ ವಾಸ್ತುಶಾಂತಿಗಂತ ಊಟಕ್ಕ ಕರದಿದ್ರು. ತಾಜಾ ಹಸರ ದೊಡ್ಡದೊಡ್ಡ ಬಾಳಿಎಲಿ ಮ್ಯಾಲೆ ಛಂದಾಗಿ ಬಡಸಿದ್ರು. ಆದ್ರ ಆ ಭಾರೀ ಜರದ ರೇಶ್ಮೆ ಸೀರೆ ಉಟಗೊಂಡು , ನಮ್ಮ ಗಜಗಾತ್ರದ ದೇಹ ಹೊತಗೊಂಡು , ಕೆಳಗ ನೆಲದ ಮ್ಯಾಲೆ ಕೂತು ಊಟಾ ಮಾಡೂದರಾಗ ‘ಊಟಾನೂ ಇಷ್ಟ ತ್ರಾಸಿಂದs’ ಅಂತ ಅನ್ನಿಸಿಬಿಡತರೀ. ಯಾಕಂದ್ರ ಕೋಸಂಬ್ರಿ, ಅಂಬೊಡೆ, ಮೈಸೂರ ಪಾಕು ಎಲ್ಲಾ ಮುಂದ ಹಾಕಿಬಿಟ್ಟಾರ್ರೀ. ಬಗ್ಗಬೇಕಂದ್ರ ನಮ್ಮ ಹೊಟ್ಟಿ ಅಡ್ಡ. ಕಡೀಕೆ ನಾ ಬಡಸಲಿಕ್ಕೆ ಬಂದವರಿಗೆ ಹೇಳೇಬಿಟ್ಟೆ. ’ಇಲ್ಲೇ ಇತ್ತತ್ತೇ ಹಾಕಿಬಿಡ್ರಿ. ಬಗ್ಗಲಿಕ್ಕೆ ಆಗಂಗಿಲ್ಲ’ ಅಂತ. ಅವರೂ ನನ್ನ ಮಾರಿ ನೋಡಿ ನಕ್ಕೋತ ಹಾಕಿ ಹೋದ್ರ ಬಿಡ್ರಿ. ಮತ್ತೇನ ಮಾಡೂದ್ರಿ? ಊಟದ ವಿಷಯ ನಾಚಿಕೊಂಡ ಕೂತರ ಹೆಂಗ ನಡೀತದ್ರೀ?
ಈ ಬಾಳಿ ಎಲಿ ಆವಾಂತರ ಒಂದೊಂದ ಅಲ್ರೀ. ಒಂದ ಸಲ ಶಿರಸಿಗೆ ನನ್ನ ಗೆಳತಿ ಊರಿಗೆ ಹೋಗಿದ್ದೆ. ಅಕಿ ಎಲ್ಲೋ ತಮ್ಮ ನೆಂಟರ ಮನಿಗೆ ನಮ್ಮನ್ನ ಕರಕೊಂಡು ಹೋಗಿದ್ಲು. ಅವರು ನಾವು ಬಯಲುಸೀಮಿಯಿಂದ ಬಂದವರು, ತಮ್ಮೂರಿನ ಸ್ಪೆಷಲ್ ತಿನಸಬೇಕೆಂದು ತೋಟದಿಂದ ತಾಜಾ ಬಾಳಿ ಎಲಿ ಕತ್ತರಿಸಿಕೊಂಡು ಬಂದು ಮನೆಯ ತೋಟದ ರುಚಿರುಚಿಯಾದ ಘಮಗುಡುವ ಮಾವಿನಹಣ್ಣಿನ ಸೀಕರಣೆಯನ್ನು ಹಲಸಿನ ಹಪ್ಪಳದ ಜೋಡಿಗೆ ಅದರಾಗ ಬಡಿಸಿದರು. ನಾ ಕಕ್ಕಾಬಿಕ್ಕಿ. ಬಾಳಿಎಲ್ಯಾಗ ಸೀಕರಣಿ ಹೆಂಗ ತಿನ್ನೂದ್ರಿ?! ಅದು ಹರಕೊಂಡು ಹೊಂಟದ. ಕೈಯಾಗ ತಗೊಂಡು ನೆಕ್ಕಲಿಕ್ಕ ಹೋದ್ರ ಮೊಣಕೈತನಾ ಸೋರಿ ಸೀರಿ ಮ್ಯಾಲೆ ಬೀಳಲಿಕ್ಹತ್ತೇದ. ಅವರು ಆದರ ಮಾಡಿ ಬಲವಂತ ಮಾಡಿದರೂ ಹಾಕಿಸಿಕೊಳ್ಳಲಾರದಂಥ ಪರಿಸ್ಥಿತಿ. ಒಂದ ಬಟ್ಟಲದಾಗೋ, ದೊನ್ನ್ಯಾಗೋ ಹಾಕಿಕೊಡಬಾರದs ಅಂತ ಮನಸಿನಾಗ ಬಯ್ಯಕೋತ ಅಂಥ ರುಚಿಯಾದ ಸೀಕರಣೀನ್ನ ಸುಡ್ಲಿ ಈ ಬಾಳಿ ಎಲ್ಯಾಗ ಬಡಿಸಿದ್ರು ಅಂತ ತಿನ್ನಲಾರದ ಬಿಡೂದಾತು.
ಈ ಬಾಳಿ ಎಲಿ ಊಟೇನೋ ಛಂದ. ಆದ್ರ ಆಮ್ಯಾಲೇನರೇ ಎಂಜಲಾಗ್ವಾಮಾ ಮಾಡೂ ಪಾಳಿ ಬಂತೋ .. ಭಾರೀ ತ್ರಾಸರೀ.
ಅಂತೂ ಊಟಾ ಮಾಡೂದು (ಅದೂ ಬಾಳೆ ಎಲಿದು) ಆಟಾ ಆಡೂದರಷ್ಟ ಸರಳ ಅಲ್ಲಾ ಅನ್ನೂದು ನನ್ನ ಅಂಬೋಣ. ನೀವೇನಂತೀರಿ?
ವಿ.ಸೂ. ಇನ್ನ ನನ್ನ ಕೊರೆತ ಮುಗದಿಲ್ಲಾ. ಈಗ ಒಂದೋ, ಎರಡೋ.. ಆಗೇದ. ಇನ್ನ ಮೂರೋ, ನಾಕೋ, ಐದೋ, ಆರೋ ಎಲ್ಲಾ ಬಾಕಿ ಅವ. ಮಾನಸಿಕವಾಗಿ ಸಿದ್ಧವಾಗಿರಿ ಕೊರೆಸಿಕೊಳ್ಳಲು..