ಯು ಕೆ ರಸಿಕರಿಗೆ ಯಕ್ಷಗಾನದ ರಸದೌತಣ ಉಣಿಸಿದ ಯಕ್ಷಧ್ರುವ ಕಲಾವಿದರು

ಕರ್ನಾಟಕದ ಕರಾವಳಿ ಪ್ರದೇಶದ ವಿಶೇಷ ಕಲೆಯಾದ ಯಕ್ಷಗಾನಕ್ಕೆ ಆರು ಶತಮಾನಗಳ ಇತಿಹಾಸ ಇದೆ.  ಹಳ್ಳಿಯಲ್ಲಿದ್ದಾಗ ಬಡಿದೆಬ್ಬಿಸುವ ಚಂಡೆ ಮದ್ದಳೆಗಳ ಶಬ್ದ ಕೇಳಿ ಬರುತ್ತಲೇ ಚೌಕಿಮನೆಯತ್ತ ಧಾವಿಸಿದ ಬಾಲ್ಯದ ನೆನಪುಗಳನ್ನು ಅಲ್ಲಿ ಬೆಳೆದ ಮಿತ್ರರು ಮೆಲಕು ಹಾಕುತ್ತಿರುತ್ತಾರೆ. ಅದಕ್ಕೆ ಅಂಥ ಮೋಡಿ. ಇದೇ ಜೂನ್ ತಿಂಗಳಲ್ಲಿ ಯು ಕೆ ಪ್ರವಾಸ ಕೈಕೊಂಡ ಯಕ್ಷಧ್ರುವ ಪಟ್ಲ ಫ಼ೌಂಡೇಷನ್ ಟ್ರಸ್ಟ್ ಅವರ ಪ್ರದರ್ಶನಗಳಲ್ಲಿ ಶ್ರೇಷ್ಠ ಗಾಯನ, ಕುಣಿತ ಮತ್ತು ಭಾಗವತಿಕೆ ಇವೆಲ್ಲ ಮೇಳೈಸಿವೆ. ಅದನ್ನು ವೀಕ್ಷಿಸಿದ ಹಲವಾರು ”ಅನಿವಾಸಿ”ಯ ಸದಸ್ಯರು ತಮ್ಮ ಅನುಭವಗಳನ್ನು ಈ ವಾರದ ಸಂಚಿಕೆಯಲ್ಲಿ ಹಂಚಿಕೊಂಡಿದ್ದಾರೆ.  ಚಿಕ್ಕಂದಿನಲ್ಲೇ ಯಕ್ಷಗಾನದ ಜೊತೆಯಲ್ಲೇ ಬೆಳೆದ ರಾಂಶರಣ್ ಅವರು ಯಕ್ಷಗಾನದ ಪರಿಚಯ ಮಾಡಿಕೊಟ್ಟಿದ್ದಾರೆ. ಟಿಪ್ಟನ್ನಿನಲ್ಲಾದ ’ನರಕಾಸುರ ಮೋಕ್ಷ’ ಯಕ್ಷಗಾನವನ್ನು  ಪ್ರಥಮ ಸಲ ನೋಡಿದ ಕುಚಿಪುಡಿ ಮತ್ತು ಭರತನಾಟ್ಯ ಕಲಿತ  ಅದಿತಿ ಗುಡೂರ್ ತನ್ನ ಅನುಭವವನ್ನು ಇಂಗ್ಲಿಷ್ ಲೇಖನದಲ್ಲಿ ಸುಂದರವಾಗಿ ಬರೆದಿದ್ದಾಳೆ.  ಶ್ರೀವತ್ಸ ದೇಸಾಯಿ ಟಿಪ್ಟನ್ ಮತ್ತು ಲೀಡ್ಸ್ ನಗರಗಳಲ್ಲಾದ ಎರಡು ಮೂರು ಪ್ರದರ್ಶನಗಳನ್ನು ನೋಡಿ ಪ್ರೊ ಎಂ ಎಲ್ ಸಾಮಗ ಅವರೊಡನೆ ನಡೆದ ಕಿರು ಸಂದರ್ಶನದ ವರದಿಯನ್ನೂ ಹಂಚಿಕೊಂಡಿದ್ದಾರೆ. ಲಕ್ಷ್ಮೀನಾರಾಯಣ ಗುಡೂರ್ ಮತ್ತು ಅವರ ಮಗಳು ಯಾಮಿನಿ ಗುಡೂರ್ ವರ್ಣಚಿತ್ರ ಮತ್ತು ರೇಖಾಚಿತ್ರಗಳನ್ನು ಕಳಿಸಿ ಈ ಲೇಖನಗಳಿಗೆ ಹೆಚ್ಚಿನ ಶೋಭೆ ಕೊಟ್ಟಿದ್ದಾರೆ. ಅನೇಕರು ತಮ್ಮ ಲೇಖನ ಮತ್ತು ಫೋಟೋಗಳನ್ನು ಕೊಟ್ಟಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆಗಳು. (ಸಂ - ಶ್ರೀವತ್ಸ ದೇಸಾಯಿ)
*************************
ಕಲೆ: ಡಾ ಲಕ್ಷ್ಮೀನಾರಾಯಣ ಗುಡೂರ್
                            ಇಂಗ್ಲೆಂಡಿನಲ್ಲಿಳಿದ ಮೇಳದ ಯಕ್ಷಲೋಕ!  - ರಾಂಶರಣ್

ದಕ್ಷಿಣೋತ್ತರ ಕನ್ನಡ ಜಿಲ್ಲೆಯವರಿಗೆ ಯಕ್ಷಗಾನ ಧಮನಿಗಳಲ್ಲಿ ಹರಿಯುವ ಕಲೆ. ಜನಸಾಮಾನ್ಯರಲ್ಲಿ “ಆಟ” ಎಂದೇ ಪ್ರಚಲಿತ. ರಾತ್ರಿಯಿಡೀ ಯಕ್ಷಲೋಕವನ್ನೇ ಧರೆಗಿಳಿಸುವ ನೃತ್ಯ - ನಾಟಕವೆಂದರೆ ಆಬಾಲ ವೃದ್ಧರೆಲ್ಲ ಕಿತ್ತೆದ್ದು ಹೋಗುವುದು ಸರ್ವೇಸಾಮಾನ್ಯ. ಯಕ್ಷಗಾನದ ಕಥಾನಕಗಳನ್ನು “ಪ್ರಸಂಗ” ಎಂದು ಕರೆಯುತ್ತಾರೆ. ಈ ಪ್ರಸಂಗಗಳು ರಾಮಾಯಣ, ಮಹಾಭಾರತ, ಭಾಗವತದಂತಹ ಪುರಾಣಗಳಲ್ಲಿ ಬರುವ ಉಪಕಥೆಗಳನ್ನು ಆಧರಿಸಿರುತ್ತವೆ. ಇವೆಲ್ಲವೂ ನಡುಗನ್ನಡದಲ್ಲಿ ಬರೆದ ಹಾಡುಗಳ ರೂಪದಲ್ಲಿರುತ್ತವೆ. ಈ ಹಾಡುಗಳನ್ನು ಕರ್ನಾಟಕ ಸಂಗೀತದ ರಾಗಗಳಿಗೆ ಸಂಯೋಜಿಸಿರುತ್ತಾರೆ. ಇವನ್ನು ಕಂಚಿನ ಕಂಠದಲ್ಲಿ ಹಾಡುವ ಭಾಗವತ, ವೇದಿಕೆಯ ಮೇಲೆ ನಿರ್ಮಿಸಿದ ಇನ್ನೊಂದು ಚಿಕ್ಕ ಕಟ್ಟೆಯ ಮೇಲೆ ಕುಳಿತು ಸೂತ್ರಧಾರನಾಗಿ ಪ್ರಸಂಗವನ್ನುನಿರ್ವಹಿಸುತ್ತಾನೆ. ಆತನ ಪಕ್ಕದಲ್ಲಿ ಮೃದಂಗ ವಾದಕ ಕುಳಿತು ಸಾಥ್ ಕೊಡುತ್ತಾನೆ. ನರ್ತಿಸುತ್ತ, ಮಾತಿನ ಮಾಧ್ಯಮದಲ್ಲಿ ಈ ಹಾಡುಗಳಿಗೆ ಅರ್ಥೈಸುವ ನಟ ಯಕ್ಷಗಾನದ ಕೇಂದ್ರ ಬಿಂದು. ಚಂಡೆ ಯಕ್ಷಗಾನಕ್ಕೆ ವಿಶಿಷ್ಟವಾದ  ತಾಳ ವಾದ್ಯ. ಈ ವಾದ್ಯಕ್ಕೆ ಕೇಳುಗರನ್ನು ಕುಳಿತಲ್ಲೇ ಕುಣಿಸುವ ಸಮ್ಮೋಹಕ ಶಕ್ತಿಯಿದೆ. ಆಟ ಶುರುವಾಗುವ ಮೊದಲು ಬಾರಿಸುವ ಚಂಡೆಯ ಸದ್ದು ಊರ ಜನರನ್ನೆಲ್ಲ ಚುಂಬಕದಂತೆ ಆಟದ ಆವಾರಕ್ಕೆ ಆಕರ್ಷಿಸುತ್ತಿತ್ತು. ಯಕ್ಷಗಾನದ ತಂಡಗಳಿಗೆ “ಮೇಳ” ಎಂದು ಕರೆಯುತ್ತಾರೆ. ಹಿಂದೆಲ್ಲ ನೂರಾರು ಮೇಳಗಳು ದೀಪಾವಳಿಯ ನಂತರ ಮಳೆ ಹಿಡಿಯುವವರೆಗೂ ಹಳ್ಳಿ-ಹಳ್ಳಿಗಳನ್ನು ತಿರುಗಿ ನಮ್ಮನ್ನೆಲ್ಲ ಮನರಂಜಿಸುತ್ತಿದ್ದವು. ಆಟ ನೋಡಿ ಬಂದ ಚಿಣ್ಣರೆಲ್ಲರೂ ತೆಂಗಿನ ಗರಿಗಳಿಂದ ಸಿಂಗರಿಸಿಕೊಂಡು “ಭೂಪ ಕೇಳೆಂದ” ಎಂದು ರಾಗವೆಳೆಯುತ್ತ ಮನೆ ಜನರೆದುರು ಕುಣಿದು ಕುಪ್ಪಳಿಸಿ “ಎಷ್ಟು ಚೊಲೋ ಆಟ ಕುಣಿತಾ” ಎಂದು ಶಭಾಷ್ ಗಿಟ್ಟಿಸಿ ಪೊಗರು ಹಾರಿಸುವುದು ಬಾಲ್ಯದ ಅವಿಭಾಜ್ಯ ಅಂಗವಾಗಿತ್ತು. 

ಯಕ್ಷಗಾನಕ್ಕೆ ಸುಮಾರು ಐದಾರು ಶತಮಾನಗಳ ಇತಿಹಾಸವಿದೆ. ವರ್ಣರಂಜಿತ ಪೋಷಾಕುಗಳನ್ನು ಧರಿಸಿ ಗಂಡಸರು ಪುರುಷ ಹಾಗೂ ಸ್ತ್ರೀ ಪಾತ್ರಗಳನ್ನು ನಿರ್ವಹಿಸುವುದು ಇಂದಿಗೂ ನಡೆದು ಬಂದಿರುವ ಸಂಪ್ರದಾಯ. ರಾತ್ರೆಯಿಡೀ ಕುಣಿದು ಪ್ರತಿ ದಿನ ಊರಿಂದೂರಿಗೆ ತಿರುಗುವ ಜೀವನ ಶೈಲಿ ಸ್ತ್ರೀಯರಿಗೆ ಹೊಂದಿಕೆಯಾಗದಿರುವುದೇ ಈ ಪದ್ಧತಿಗೆ ಕಾರಣ. ಈಗ ಮಹಿಳೆಯರೇ ತಂಡಗಳನ್ನು ಕಟ್ಟಿ ಪ್ರಸಂಗವಾಡಿದರೂ ಗಂಡಸರು - ಹೆಂಗಸರು ಒಟ್ಟಿಗೆ ನಟಿಸುವುದು ಅತಿ ವಿರಳ. ಯಕ್ಷಗಾನ ಪದ್ಧತಿಯಲ್ಲಿ ಎರಡು ಮುಖ್ಯ ಪ್ರಕಾರಗಳಿವೆ. ಬ್ರಹ್ಮಾವರ ನದಿಯ ಉತ್ತರಕ್ಕೆ ಬಡಗು ತಿಟ್ಟು, ದಕ್ಷಿಣಕ್ಕೆ ತೆಂಕು ತಿಟ್ಟು ಶೈಲಿ. ಭಾಗವತಿಕೆಯಲ್ಲಿ ಹೆಚ್ಚಿನ ಭಿನ್ನತೆಯಿಲ್ಲದಿದ್ದರೂ ನರ್ತನ ಶೈಲಿಯಲ್ಲಿ, ಪೋಷಾಕು ಹಾಗು ಪ್ರಸಾಧನದಲ್ಲಿ ವಿಭಿನ್ನತೆಯನ್ನು ಗಮನಿಸಬಹುದು. ತೆಂಕು ತಿಟ್ಟಿನ ನರ್ತನ ಶೈಲಿ ನವಿರಾಗಿದ್ದು, ಹೆಚ್ಚು ಭಾವಪೂರ್ಣವಾಗಿರುವುದನ್ನು ಕಾಣಬಹುದು. ಚಂಡೆಗಳ ಆಯಾಮದಲ್ಲಿ ವ್ಯತ್ಯಾಸವಿದ್ದು, ಬಡಗು ತಿಟ್ಟಿನಲ್ಲಿ ವಾದಕ ರಂಗದ ಬಲ ಭಾಗದಲ್ಲಿ ಕುಳಿತಿದ್ದರೆ, ತೆಂಕು ತಿಟ್ಟಿನಲ್ಲಿ, ಚಂಡೆಯನ್ನು ಕೊರಳಿಗೆ ನೇತು ಹಾಕಿಕೊಂಡು ರಂಗದ ಎಡ ಭಾಗದಲ್ಲಿ ನಿಂತು ಬಾರಿಸುವುದು ಸಾಮಾನ್ಯ. 

ನಮಗೆ ನಟರೆಲ್ಲ ಸೂಪರ್ ಸ್ಟಾರ್ ಗಳಾಗಿದ್ದರು. ಮಕ್ಕಳಿಗೆ ವಿದೂಷಕ ವಿಶೇಷ ಆಕರ್ಷಣೆಯಾಗಿರುತ್ತಿದ್ದ. ಹಿರಿಯರಿಗೆ ಭಾಗವತರೂ ವಿಶೇಷ ಆಕರ್ಷಣೆಯಾಗಿರುತ್ತಿದ್ದರು.  ನಾನು ಉತ್ತರ ಕನ್ನಡದಲ್ಲಿ ಹುಟ್ಟಿ ಬೆಳೆದವನು, ಹಾಗಾಗೇ ನನಗೆ ಬಡಗು ತಿಟ್ಟಿನ ಪ್ರಕಾರ, ಅಲ್ಲಿನ ನಟರ, ಭಾಗವತರ ಪರಿಚಯ ಜಾಸ್ತಿ. ಎಷ್ಟೋ ಸಲ ಒಂದೇ ಕುಟುಂಬದ ಹಲವು ತಲೆಮಾರಿನವರು ಮನೆ ಮಾತಾಗಿರುವುದನ್ನೂ ಕಾಣಬಹುದು. ಬಡಗು ತಿಟ್ಟಿನ ಕೆರೆಮನೆಯ ಕುಟುಂಬದ ದಿವಂಗತ ಶಿವರಾಮ, ಶಂಭು, ಗಜಾನನ, ಮಹಾಬಲ ಹೆಗಡೆಯವರು ಅನೇಕ ಪ್ರಶಸ್ತಿಗಳನ್ನು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಪಡೆದಿದ್ದರು. ತೆಂಕು ತಿಟ್ಟಿನ ಸಾಮಗ ಮನೆತನದ ರಾಮದಾಸ ಹಾಗು ಶಂಕರನಾರಾಯಣ ಸಾಮಗರು, ಅವರ ಮಕ್ಕಳು ಹೆಸರುವಾಸಿಯಾದ ಕಲಾವಿದರು. 

ಯಕ್ಷಗಾನ ಕಲಾವಿದರೆಲ್ಲ ವೃತ್ತಿಪರರಾದರೂ ಒಂದರ್ಥದಲ್ಲಿ ಹವ್ಯಾಸಕ್ಕಾಗಿ ಆಟ ಕುಣಿಯುವವರು, ಹಾಡುವವರು, ವಾದಕರು. ಸರಸ್ವತಿಯ ಆರಾಧಕರೇ ಹೊರತು ಲಕ್ಷ್ಮೀ ಪುತ್ರರಲ್ಲ. ಕೋವಿಡ್ ಕಾಲದಲ್ಲಿ ಆರ್ಥಿಕವಾಗಿ ಬಳಲುತ್ತಿದ್ದ ಯಕ್ಷಗಾನ ಕಲಾವಿದರಿಗೆ ಸಹಾಯ ಮಾಡಲೆಂದು ಇಂಗ್ಲೆಂಡಿನಲ್ಲಿ ಹುಟ್ಟಿದ “ಆಯಾಮ” ಸಂಘಟನೆ ಅಂತರ್ಜಾಲದಲ್ಲಿ ಭಾರತದಿಂದ ನೇರವಾಗಿ ಕೆಲವು ಪ್ರಸಂಗಗಳನ್ನು ಪ್ರಸಾರ ಮಾಡಿದ್ದು, ಇಲ್ಲಿನ ಕಲಾರಸಿಕರ ಮನದಲ್ಲಿ ಹೊಸ ಹುಮ್ಮಸ್ಸನ್ನು ಕೆರಳಿಸಿತ್ತು. ಎರಡು ವಾರಗಳ ಹಿಂದೆ ಈ ಸಂಘಟನೆ ಕರ್ನಾಟಕದಿಂದ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದ ಯಕ್ಷಧ್ರುವ ತಂಡವನ್ನು ಆಹ್ವಾನಿಸಿ ನಮ್ಮೆದರು ಯಕ್ಷಲೋಕವನ್ನು ಅನಾವರಣಗೊಳಿಸಿ ಇಂಗ್ಲೆಂಡಿಗೆ ಬಂದು ಸುಮಾರು ಕಾಲು ಶತಮಾನವೇ ಕಳೆದರೂ ಮೇಳದ ಆಟವನ್ನು ಕಣ್ಣೆದುರೇ ನೋಡಿರದ ನನ್ನಂಥವರ ಕನಸನ್ನು ನನಸಾಗಿಸಿದರು. ಈ ಪ್ರದರ್ಶನಗಳ ವಿವರಣೆ ಈ ಸಂಚಿಕೆಯಲ್ಲಿ ನೀವು ಶ್ರೀವತ್ಸ ದೇಸಾಯಿ ಹಾಗೂ  ಇಲ್ಲಿಯೇ ಹುಟ್ಟಿ ಬೆಳೆದ ನೃತ್ಯ ಪಟು ಕುಮಾರಿ ಅದಿತಿ ಗುಡೂರ್ ಅವರ ಬರಹಗಳಲ್ಲಿ ಓದಬಹುದು. 

ಸತೀಶ್ ಶೆಟ್ಟಿಯವರ ಅದ್ಭುತ ಕಂಚಿನ ಕಂಠ, ಇಳಿ ವಯಸ್ಸಿನಲ್ಲೂ ನವ ಯುವಕನಂತೆ ನರ್ತಿಸಿದ ಪ್ರೊ. ಎಂ. ಎಲ್. ಸಾಮಗರು, ಕೃಷ್ಣ -ಸತ್ಯಭಾಮೆಯರ ಸರಸ ಸಲ್ಲಾಪವನ್ನು ಚಿತ್ರಿಸಿದ ಚಂದ್ರಶೇಖರ ಧರ್ಮಸ್ಥಳ- ಪ್ರಶಂತ ನೆಲ್ಯಾಡಿ, ನರಕಾಸುರನ ಬಣ್ಣದ ವೇಷದಲ್ಲಿ ಕೃಷ್ಣನನ್ನು ಬದಿಗಿಕ್ಕಿದ ಮೋಹನ ಬೆಳ್ಳಿಪಾಡಿ, ವಿದೂಷಕನಾಗಿ ಮನಸೆಳೆದ ಮಹೇಶ ಮಣಿಯಾಣಿಯವರು ದಶಕಗಳಿಂದ ಹಾತೊರೆದ ಅಭಿಮಾನಿಗಳ ಮನಸೂರೆಗೊಂಡಿದ್ದರಲ್ಲಿ ಸಂದೇಹವೇ ಇಲ್ಲ. 

--ರಾಮಶರಣ ಲಕ್ಷ್ಮೀನಾರಾಯಣ

**************************
ಕಲೆ: ಯಾಮಿನಿ ಗುಡೂರ್
‘Narakasura Moksha’ The Yakshagaana, my experience - Aditi Gudur. 
  
Expectation versus reality. Everyone has preconceptions before they experience art in whatever form it may be. For me, I knew Yakshagaana was a beautiful artform from the land I call mine, Karnataka, with focus on storytelling from Hindu mythology and with incredibly vibrant and expressive costumes and facial expressions. These all proved to be true, in only a fraction of the brilliance displayed by the artists on the performance day. What I had not realised was that despite not fully understanding the poetic-sounding Kannada dialect used in the performance, I would still be able to fully immerse myself in the story that was being portrayed. I felt the emotions of each character, laughed with them, got angry with them. This is truly the power of art, when you can convey the story and emotions to someone who does not fully understand the literature. 

The artists were so talented, in fact this is an understatement. Each movement was so striking and they all displayed such athleticism, as a dancer myself, I could appreciate this even more. The live music accompaniment only added to the atmosphere, making everything brighter, richer, more enhanced. The singer's tone was especially beautiful, and he showed his mastery of his art - skilfully commanding the attention of the audience, like the ringmaster of the circus whilst surfing through the octaves of notes with immense ease. The dancers and musicians complemented each other so well, the harmony and trust they had in each other was clear as day. The footwork captured my attention for its precision and intricacy. Overall, it was a wonderful and enriching experience, one that made me proud of my heritage and left me with a thirst to see more and learn more about it.

   -- Aditi Gudur
*************************
'ಯಕ್ಷಧ್ರುವ'ದ ಯು ಕೆ ಟೂರ್ -ಶ್ರೀವತ್ಸ ದೇಸಾಯಿ
ಇದೇ ವರ್ಷದ (2023) ಜೂನ್ ತಿಂಗಳಿನ ಎರಡು ವಾರ ವಿವಿಧ ಮೇಳಗಳಿಂದ ಆಯ್ದ ಒಂಭತ್ತು ಕಲಾವಿದರ ತಂಡ ಮಂಗಳೂರಿನ ಯಕ್ಷಧ್ರುವ ಪಟ್ಲ ಫ಼ೌಂಡೇಷನ್ ಟ್ರಸ್ಟ್ ನ ನಾಮಾಂಕಿತದಲ್ಲಿ, ಈ ನಾಡಿನಲ್ಲಿ ಬೇರೆ ಬೇರೆ ಪ್ರದರ್ಶನಗಳಲ್ಲಿ ಭಾಗವಹಿಸಿ ಹೊಸ ದಾಖಲೆಯನ್ನೇ ಸ್ಥಾಪಿಸಿದೆ. ಹಿಂದಿನ ನಾಲ್ಕು ದಶಕಗಳಲ್ಲಿ ಎರಡು ಯಕ್ಷಗಾನ ತಂಡಗಳು ಬಂದಿದ್ದವು. ಈ ನಾಡಿನ ಅತ್ಯಂತ ಹಳೆಯ ದತ್ತಿ ಕನ್ನಡ ಸಂಸ್ಥೆಯಾದ ಕನ್ನಡ ಬಳಗ ಯು ಕೆ 1983 ರಲ್ಲಿ ಹುಟ್ಟಿ 1988ರಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಆಚರಿಸಿದಾಗ ಅತಿಥಿಗಳಾಗಿ ಬಂದಿದ್ದ ಕಡಲತೀರದ ಭಾರ್ಗವ ಶಿವರಾಮ ಕಾರಂತರು ಮರು ವರ್ಷ ತಂದ ”ಪ್ರಾಯೋಗಿಕ’’ ತಂಡವೇ ನನಗೆ ತಿಳಿದಂತೆ ಈ ಮಣ್ಣಿನ ಮೇಲೆ ಕಾಲಿಟ್ಟ ಪ್ರಪ್ರಥಮ ಯಕ್ಷಗಾನ ತಂಡವಾಗಿತ್ತು. ಆಗ ಮೂರು ಪಟ್ಟಣಗಳಲ್ಲಿ ಪ್ರದರ್ಶನ ಕೊಟ್ಟಿದ್ದರು. ”ಪಂಚವಟಿ” ಆಟವನ್ನು ನನ್ನನ್ನೂ ಸೇರಿ ಅನೇಕಾನೇಕ ಕನ್ನಡಿಗರು ನೋಡಿ ಮೆಚ್ಚಿದ್ದರು. ಅದು ಸಾಂಪ್ರದಾಯಿಕ ಯಕ್ಷಗಾನಕ್ಕಿಂತ ಕೊಂಚ ಭಿನ್ನವಾಗಿತ್ತು ಎಂದು ಹೇಳಲಾಗುತ್ತಿದೆ. ಆನಂತರ 2015 ರಲ್ಲಿ ವಿದ್ಯಾ ಕೊಲ್ಯೂರ್ ಅವರ ಯಕ್ಷ ಮಂಜೂಷ ತಂಡ ಭೇಟಿ ಕೊಟ್ಟು ತೆಂಕು ತಿಟ್ಟು ಶೈಲಿಯ ಎರಡು ಪ್ರದರ್ಶನಗಳನ್ನು ಕೊಟ್ಟಿದ್ದಾಗಿ ತಿಳಿದು ಬರುತ್ತದೆ. ಈ ವರ್ಷ ಬಂದಿರುವ ’ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮೂರನೆಯ ತಂಡವಷ್ಟೇ. ಅವರು ಲಂಡನ್ (ಫೆಲ್ಟಂ), ಬರ್ಮಿಂಗಮ್ (ಟಿಪ್ಟನ್), ಯಾರ್ಕ್ ಶೈರಿನ ಲೀಡ್ಸ್, ಅದಕ್ಕೂ ಉತ್ತರದಲ್ಲಿಯ ಡರ್ರಂ ನಗರ ಅಷ್ಟೇ ಅಲ್ಲದೇ ಮೊದಲ ಬಾರಿಗೆ ಸ್ಕಾಟ್ಲಂಡಿನಲ್ಲಿ ಎಡಿನ್ಬರಾದಲ್ಲಿ 200 ಜನರ ಮುಂದೆ ಒಂದು ಪ್ರದರ್ಶನ ಕೊಟ್ಟಿದ್ದು ಸಹ ಐತಿಹಾಸಿಕ ದಾಖಲೆಯೇ!
”ನರಕಾಸುರ ಮೋಕ್ಷ” ಆಟದ (ಟಿಪ್ಟನ್ನಲ್ಲಿ) ಕೆಲ ದೃಶ್ಯಗಳು (ಕೃಪೆ: ಡಾ ಗುಡೂರ್)
ಮುಂದಿನ ಕ್ಯಾಂಪ್, ಇಂಗ್ಲೆಂಡಿನ ಉತ್ತರ ಭಾಗದಲ್ಲಿಯ ಯಾರ್ಕ್ ಶೈರಿನ  ಲೀಡ್ಸ್ ನಗರದಲ್ಲಿ. ದೇವಿಕಾ ಡಾನ್ಸ್ ಥಿಯೇಟರ್  ಸಂಸ್ಥೆಯ ವತಿಯಿಂದ ಯಕ್ಷಗಾನದಲ್ಲಿ ಅತೀವ ಆಸ್ಥೆಯುಳ್ಳ ಮತ್ತು ಅದರ ಸ್ಥಾಪಕರಾದ ದೇವಿಕಾ ಅವರು ’ಸ್ಟೇಜ್’ದ ನಿರ್ದೇಶಕ ಸ್ಟೀವ್ ಆನ್ಸೆಲ್ ಮತ್ತು ಬಲಬೀರ್ ಸಿಂಗ್ ಡಾನ್ಸ್ ಕಂಪನಿಯ ನಿರ್ದೇಶಕರ ಸಹಕಾರದಿಂದ ನಾಲ್ಕೈದು ಕಾರ್ಯಕ್ರಮಗಳನ್ನು ಯೋಜಿಸಿದ್ದರು. ರೋದರಮ್ಮಿನ (Rotherham) ಒಂದು ಶಾಲೆಯಲ್ಲಿ ಯಕ್ಷಗಾನದ ಬಗ್ಗೆ ಮಕ್ಕಳಿಗೆ ಪರಿಚಯಿಸಿದರು. ಲೀಡ್ಸ್ ಹತ್ತಿರದ ಗ್ಲೆಡೊ ಪಾರ್ಕ್ನಲ್ಲಿ 'A dance in the woods' ಎನ್ನುವ ಬಲಬೀರ್ ಸಿಂಗ್ ಡಾನ್ಸ್ ಕಂಪನಿಯ ಕಾರ್ಯಕ್ರಮ ಇತ್ತು.
 ಡರ್ರಂ ವಿಶ್ವವಿದ್ಯಾಲಯದ ಆಶ್ರಯದಲ್ಲಿ ’ಅನ್ಮಾಸ್ಕಿಂಗ್ ಪೇಯ್ನ್ ” (Unmasking Pain -directed by Balbir Singh) ಎನ್ನುವ ಯೋಜನೆಯಲ್ಲಿ ಪಾರ್ಕಿನ್ಸನ್ ಖಾಯಿಲೆ, ಮುಪ್ಪಿನಲ್ಲಿ ದೀರ್ಘಕಾಲಿಕ ವೇದನೆ,  ಮತ್ತಿತರ ಅಂಗಚಲನೆಯ ಅಸ್ವಾಸ್ಥ್ಯತೆಯಿಂದ ಬಳಲುವವರು ನೆರೆದಿದ್ದರು. ಮುಖವಾಡಗಳಿಗೆ ಮುಖವರ್ಣ ತಯಾರಿಕೆ, ಬಣ್ಣ ಕೊಡುವುದು ಇಂಥ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಅವರೆದುರು ಕಲಾವಿದರು ವೇಷ ಧರಿಸಿ, ಆಡಿ, ನೃತ್ಯ ಪ್ರದರ್ಶಿಸಿ ಸ್ಥಳೀಯ ಸಮುದಾಯದೊಂದಿಗೆ ಬೆರೆತು ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡ ಅನುಭವ ತಮಗೆ ಮತ್ತು ತಂಡದವರಿಗೆ ಅದ್ವಿತೀಯವಾಗಿತ್ತೆನ್ನುವುದನ್ನು ಪ್ರೊ ಸಾಮಗ ಅವರು ಇಲ್ಲಿಯವರೆಗಿನ ಯುಕೆ ಪ್ರವಾಸದ ಬಗ್ಗೆ ಮಾತಾಡುತ್ತ ನನ್ನೊಡನೆ ಹಂಚಿಕೊಂಡರು. ಶಾಲೆಯೊಂದರಲ್ಲಿ ಯಕ್ಷಗಾನದ ವೇಷ ಭೂಷಣದ ಪ್ರಸ್ತುತಿಯಲ್ಲಿ ಉಪಸ್ಥಿತರಿದ್ದ ಮಕ್ಕಳು ಅದಕ್ಕೆ ಸಂಬಂಧಿಸಿದ ತರತರದ ಪ್ರಶ್ನೆಗಳನ್ನು ಕೇಳಿದ ಕೌತುಕವನ್ನು ನೆನೆದರು. 
ಯಕ್ಷಧ್ರುವ ತಂಡದವರೆಲ್ಲ ಜೂ 24ರಂದು ಲೀಡ್ಸ್ ನಗರದಲ್ಲಿ ಸೇರಿದರು. ದೇವಿಕಾ ರಾವ್ ಅವರು ಕುಚಿಪುಡಿ, ಯಕ್ಷಗಾನ ಮತ್ತು ಭರತನಾಟ್ಯದಲ್ಲಿ ಪಳಗಿದವರು; ಸುರತ್ಕಲ್ ಹತ್ತಿರದ ಕೃಷ್ಣಾಪುರದವರು. ಅವರ ನೇತೃತ್ವದಲ್ಲಿ ಒಂದು ಪೂರ್ವರಂಗದ ನೃತ್ಯ ಕಮ್ಮಟ ನೆರೆವೇರಿತು. ಅದರಲ್ಲಿ ಭಾಗವಹಿಸಿದ ಸ್ಥಳೀಯ ವಿದ್ಯಾರ್ಥಿಗಳಿಗೆ ಯಕ್ಷಗಾನದ ಕಲಾಕಾರರು ಅದರ ಬಗ್ಗೆ ಮಾಹಿತಿ ಕೊಟ್ಟು ಪ್ರಥಮ ಹೆಜ್ಜೆಗಳನ್ನು ಹೇಳಿಕೊಟ್ಟರು. ಪ್ರೊ ಸಾಮಗ ಅವರು ಯಕ್ಷಗಾನದ ಇತಿಹಾಸವನ್ನು ಸಂಕ್ಷಿಪ್ತವಾಗಿ ಹೇಳಿ ಅದರ ಕಥಾವಸ್ತುವನ್ನು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ತಮ್ಮ ಅನುಭವದಿಂದಾಗಿ ಶೇಕ್ಸ್ಪಿಯರ್ ನಾಟಕಗಳಿಗೆ ತಳುಕು ಹಾಕಿದ್ದು ವಿಶೇಷವಾಗಿತ್ತು. ನಾಲ್ಕು ದಿನಗಳ ನಂತರ ದೇವಿಕಾ ಅವರ ವಿದ್ಯಾರ್ಥಿಗಳು ತಾವು ಕಲಿತ ಚಿಕ್ಕ ನೃತ್ಯ ಪ್ರದರ್ಶನ ಮಾಡಿದರು. ಮಧ್ಯದಲ್ಲಿ ಸಿಕ್ಕ ವಿರಾಮ ಸಮಯದಲ್ಲಿ ಮಾತಿಗಿಳಿದಾಗ ಸಾಮಗರು ಅನೇಕ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡರು. ಇತ್ತೀಚೆಗೆ ಯಕ್ಷಧ್ರುವ ಪಟ್ಲ ತಂಡದ ಭಾಗವತರಾದ ಸತೀಶ್ ಪಟ್ಲ ಅವರು ಇಂದಿನ ಯಕ್ಷಗಾನ ರಂಗದಲ್ಲಿ ಗತಕಾಲದ ಚಿತ್ರರಂಗದ ’ಅಣ್ಣಾವ್ರು’ ರಾಜಕುಮಾರರನ್ನು ಹೋಲಿಸುವಂಥ ಖ್ಯಾತಿಶಿಖರಕ್ಕೇರಿದ್ದಾರೆ. ತೆಂಕು - ಬಡಗು ತಿಟ್ಟುಗಳೆಂದು ಭೇದ ಮಾಡದೆ ಎಲ್ಲರನ್ನೂ ಸಮಾನವಾಗಿ ಪೋಷಿಸುತ್ತಿದ್ದಾರೆ. ಈಗ ಇಲ್ಲಿ ಕರೆತಂದ ತಂಡದಲ್ಲಿ ಧರ್ಮಸ್ಥಳ, ಕಟೀಲು, ಪಾವಂಜೆ, ಹನುಮಗಿರಿ ಮೇಳದ ಕಲಾವಿದರನ್ನು ಸೇರಿಸಿಕೊಂಡಿರುವದೇ ಅದಕ್ಕೆ ಸಾಕ್ಷಿ ಎನ್ನುತ್ತಾರೆ. ”ಅನುಕೂಲವಿಲ್ಲದ ಯಕ್ಷಗಾನ ಕಲಾವಿದರಿಗೆ ಪಟ್ಲ ಅವರು ಮಾಡುತ್ತಿರುವ ಸಹಾಯ ಶ್ಲಾಘನೀಯ ಮತ್ತು ಅವರ ಮೇಲೆ ಅಪಾರ ಗೌರವ ಭಾವ ಹುಟ್ಟಿಸುವಂಥದು,’’ ಎಂದು ಹೇಳಿ ಮುಂದುವರೆದು ”He has a vision’’ ಅಂದರು.

ಪ್ರಸಂಗಕ್ಕೊಬ್ಬ ಸೂತ್ರಧಾರನಿರುವಂತೆ ಈ ತಂಡಕ್ಕೆ ‘ಸೂತ್ರಧಾರ‘ನಂತೆ, ಸಂಯೋಜಕ/ನಿರ್ವಾಹಕರಾಗಿ ಬಂದವರು ವಾಸು ಐತಾಳ. ಮೂರು ದಶಕಗಳ ಅಮೇರಿಕ ವಾಸದ ನಂತರ ’ಊರಿಗೆ’ ಮರಳಿದ ಅವರಿಗೆ ಪೂರ್ವ - ಪಶ್ಚಿಮದ ಅನುಭವವಲ್ಲದೆ ಯಕ್ಷಗಾನದ ಬಗ್ಗೆ ಅಪಾರ ಪ್ರೀತಿಯಿರುವದರಿಂದಲೇ ಕಾರಣಾಂತರಗಳಿಂದಾಗಿ ಒಬ್ಬ ಚಂಡೆ ವಾದಕರು ಪ್ರವಾಸದ ಮಧ್ಯದಲ್ಲಿ ಭಾರತಕ್ಕೆ ಮರಳಬೇಕಾದಾಗ ಮದ್ದಳೆ ಬಾರಿಸಲು ಸಹ ತಯಾರಾದರು! ಅವರನ್ನು ಮತ್ತು ನನ್ನೊಡನೆ ಸಹಕರಿಸಿದ ಉಳಿದ ಕಲಾಕಾರರನ್ನು ಸಹ ಇಲ್ಲಿ ನೆನೆಯುತ್ತೇನೆ. ಅದೇ ರೀತಿಯಲ್ಲಿ ಈ ತಂಡದವರ ಆಗಮನಕ್ಕೆ ಮತ್ತು ಇಲ್ಲಿ ಉಳಿದುಕೊಳ್ಳಲು ಅನವರತ ಶ್ರಮ ಪಟ್ಟ”ಆಯಾಮ’’ ಮತ್ತು”ದೇವಿಕಾ ಡಾನ್ಸ್ ಥಿಯೇಟರ್’’ದ ಸಂಘಟಕರರನ್ನೂ ಅಭಿನಂದಿಸಲೇ ಬೇಕು. 

 ಜೂನ್ 27ನೆಯ ತಾರೀಕು ಯಕ್ಷಗಾನದ ಬಗ್ಗೆ ಲೆಕ್ಚರ್ ಮತ್ತು ಸಭಿಕರ ತಿಳುವಳಿಕೆಗಾಗಿ ಚಿಕ್ಕ ಪ್ರದರ್ಶನ ಸಹ ಕೆಲವೇ ಕಲಾವಿದರು ಮಾಡಿ ತೋರಿಸಿದರು. ಮಧ್ಯಾಹ್ನ ಮತ್ತು ಸಂಜೆ ಮತ್ತೆ ನರಕಾಸುರ ಮೋಕ್ಷ ಮತ್ತು ಸುದರ್ಶನ ವಿಜಯ ಎನ್ನುವ ಎರಡು ಪ್ರಸಂಗಗಳನ್ನಾಡಿ ಮನರಂಜಿಸಿ, ನೂರಾರು ಜನರ ಮೆಚ್ಚುಗೆಗೆ ಪಾತ್ರರಾದರು. ಅದರಲ್ಲಿ ಮುಕ್ಕಾಲು ಪಾಲು ಜನರು ಇದೇ ಮೊದಲ ಸಲ ಯಕ್ಷಗಾನವನ್ನು ನೋಡುತ್ತಿದ್ದವರಾಗಿದ್ದರು. ಸತೀಶ್ ಶೆಟ್ಟಿಯವರ ಕಂಠಶ್ರೀಯಲ್ಲಿ ಭಾಗವತಿಕೆ, ನಟರ ಅರ್ಥಗಾರಿಕೆ, ಹೆಣ್ಣಿನ ಪಾತ್ರದಲ್ಲಿ ಪ್ರಶಾಂತ ನೆಲ್ಯಾಡಿಯವರ ಕುಣಿತ ಮತ್ತು ಚಂದ್ರಶೇಖರ ಪೂಜಾರಿಯವರ ’ಧಿಗಿಣ’ (ಗಿರಕಿ) ಕೆಲವರಿಗೆ ಬಹು ವಿಶೇಷವೆನಿಸಿತು. (ಕೆಳಗಿನ ಲಿಂಕ್ ನಿಂದ ವಿಡಿಯೋ ನೋಡಿರಿ).

--ಶ್ರೀವತ್ಸ ದೇಸಾಯಿ
ಚಿತ್ರ ಕೃಪೆ: ರಾಂ
’ಸುದರ್ಶನ ವಿಜಯ’ ಪ್ರಸಂಗದ ಒಂದು ತುಣುಕು
**************************************************