ಸ್ವರ್ಗಸ್ಥ ತಂದೆಯ ಅಭಯ ಹಸ್ತ

ಈ ವಾರದ ಪ್ರಸ್ತುತಿ ಕಥೆಗಳಲ್ಲೊಂದು ಕಥೆ, ಸ್ವಲ್ಪ ಆತ್ಮ ಕಥೆ ಸಹ. ಇದನ್ನು ಬರೆಯುವಾಗ ನನಗೆ ಸ್ವಲ್ಪ ಮುಜುಗರವಾಗುತ್ತಿದೆ. ಯಾಕೆ ಅಂತ ಮುಂದೆ ಓದಿದರೆ ನಿಮಗೇ ಗೊತ್ತಾಗುತ್ತದೆ. ಈ ವಾರವೂ ಒಂದು ಪುಸ್ತಕ ಪರಿಚಯ ಬರೆಯಲೂ ಹಿಂದೇಟು ಹಾಕುತ್ತಿದ್ದೇನೆ.ದಯವಿಟ್ಟು ಎಂದಿನಂತೆ ಓದಿ ಕಮೆಂಟ್ ಮಾಡಲು  ಮರೆಯ ಬೇಡಿ! (ಸಂ)


ಅನಿರೀಕ್ಷಿತವಾಗಿ ಕೈಗೆ ಬಂತು ಪುಸ್ತಕ
Written in stone ಎನ್ನುವ ಆಂಗ್ಲ ನುಡಿಗಟ್ಟು ಇದೆ. ಅಂದರೆ ಒಮ್ಮೆ ಹೇಳಿದ್ದು, ನಿರ್ಧರಿಸಿದ್ದು ಅದನ್ನು ಬದಲಾಗಿಸಲಾಗುವದಿಲ್ಲಂತ. ಒಮ್ಮೊಮ್ಮೆ ಅದನ್ನು carved in stone ಎನ್ನುತ್ತಾರೆ. ಭಾರತದಲ್ಲಿ ಕಾಗದ ಮತ್ತು ಅದರ ಮೇಲೆ ಪ್ರಿಂಟಿಂಗ್ ಮಾಡುವುದು ತಡವಾಗಿ ಬಂದಿತು ಅಂತ ವಸುಧೇಂದ್ರರವರು ತಮ್ಮ ’ರೇಶ್ಮೆ ಬಟ್ಟ’ ಚರ್ಚಿಸುತ್ತ ಹೇಳಿದಂತೆ ನೆನಪು. ಅದಕ್ಕೇ ನಮ್ಮ ದೇಶದಲ್ಲಿ ಐತಿಹಾಸಿಕ ದಾಖಲೆಗಳು ತಾಮ್ರ ಶಾಸನ, ಶಿಲಾ ಶಾಸನ ಅಥವಾ ತಾಳೆಗೆರೆಯ ಬರಹಗಳನ್ನು ಆಧರಿಸಿ ರೂಪಗೊಂಡಿರುವದು ಸಹಜ. ನನ್ನ ದಿವಂಗತ ತಂದೆಯವರು ಒಬ್ಬ ಇತಿಹಾಸಜ್ಞರು, ಶಾಸನತಜ್ಞರು ಅಂತ ಪ್ರಸಿದ್ಧರಾಗಿದ್ದರು. ನಾನು ಚಿಕ್ಕಂದಿನಿಂದ ನಮ್ಮ ಮನೆಯಲ್ಲಿ ಅವರ ಶಿಲಾಶಾಸನದ ಪ್ರತಿಗಳ ವೈಯಕ್ತಿಕ ಸಂಗ್ರಹವನ್ನು ನೋಡಿದ್ದು ನೆನಪಿದೆ. ಶಾಸನಗಳ ಪ್ರಾರಂಭದಲ್ಲಿ ಮೊದಲು ’ಓಮ್, ಸ್ವಸ್ತಿ, ಶ್ರೀ’ ಇತ್ಯಾದಿ ಹೇಳಿದ ನಂತರ ಒಂದು ಶಿವ ಅಥವಾ ವಿಷ್ಣು ದೇವಸ್ತುತಿಯಿರುತ್ತದೆ:
’ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ
ತ್ರೈಲೋಕ್ಯ ನಗರಾರಂಭ ಮೂಲಸ್ಥಂಭಾಯ ಶಂಭವೇ’

ಅಂತ ಕಂಡರೆ ಅದು ಶಿವಾರಾಧಕರಿಂದ. ಈ ಎರಡು ಸಾಲಿನ ಶ್ಲೋಕವನ್ನಷ್ಟೇ ಕಲಿತು ಮನನ ಮಾಡಿ ಅದರ ಆಧಾರದ ಮೇಲೆಯೇ ಕಲಿತು ಕುಕನೂರಿನ ಸುತ್ತಮುತ್ತಲ್ಲಿನ, ಗುಡಿಗಳ ಮುಂದೆ ಇದ್ದ, ಕಣ್ಣಿಗೆ ಕಂಡ, ವಿಪುಲವಾಗಿ ಅಲ್ಲಲ್ಲಿ ಸಿಕ್ಕ ಶಿಲಾಶಾಸನಗಳನ್ನು ಓದುವದನ್ನು ಅವರು ಸ್ವಾಧ್ಯಾಯದಿಂದಲೇ ಕಲಿತು ಕರಗತ ಮಾಡಿಕೊಂಡಿದ್ದಂತರಂತೆ. ನನಗೆ ಅವರ ವಿವಿಧ ಭಾಷೆಗಳಲ್ಲಿ ಬರೆದ ಐತಿಹಾಸಿಕ ಸಂಶೋಧನಾತ್ಮಕ ಲೇಖನ ಮತ್ತು ಪುಸ್ತಕಗಳ ಪರಿಚಯವಿದ್ದರೂ, (ಒಂದೆರಡು ಕಥೆಗಳನ್ನು ಬಿಟ್ಟರೆ) ಅವರು ಕಥೆಗಾರರು ಸಹ ಆಗಿದ್ದರು ಎನ್ನುವದರ ಬಗ್ಗೆ ಗಂಧವೇ ಇರಲಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆ ರಹಸ್ಯ ಬಯಲಾದದ್ದು, ಅಕಸ್ಮಾತ್ತಾಗಿ ಕಳೆದವಾರದಲ್ಲಷ್ಟೇ ನನ್ನ ಕೈಗೆ ಬಂದ ಯಾರೋ ಒಬ್ಬರು ಅವರ ಕಥಾಸಂಗ್ರಹವನ್ನು ಸಂಪಾದಿಸಿ ಅಚ್ಚು ಹಾಕಿಸಿದ ಪ್ರತಿ! ಅದರ ಬಗ್ಗೆ ಹೇಳುವ ಮೊದಲು ನನ್ನ ಕನ್ನಡ ಕಲಿಕೆಯ ಬಗ್ಗೆ ಒಂದು ಚಿಕ್ಕ ವಿಷಯವನ್ನು ಹೇಳಬೇಕೆಂದಿರುವೆ.
ತಮಿಳು (ಬಾಲಿಶ) ತಲೆಗಳ ನಡುವೆ 
ಈ ಶಿರ್ಷಿಕೆ ನಿಮಗೆ ಬಿ ಜಿ ಎಲ್ ಸ್ವಾಮಿ ಅವರ ಇದೇ ತರದ ಹೆಸರಿನ ಪುಸ್ತಕವನ್ನು ನೆನಪಿಗೆ ತರಬಹುದು. ಅವರು ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ತಮಿಳು ನಾಡಿಗೆ ಹೋಗುವ ಮೊದಲೇ ನಾನು ಹುಟ್ಟಿದ್ದು ಧಾರವಾಡದಲ್ಲಿಯಾದರೂ ಆ ನಂತರ ಊಟಿಯಲ್ಲಿ ಬಾಲ್ಯಾವಸ್ಥೆಯನ್ನು ಆರಂಭಿಸಿದ್ದೆ! ನನಗೆ ಕನ್ನಡದಲ್ಲಿ ಅಕ್ಷರಾಭ್ಯಾಸವಾದದ್ದೇ ನೆನಪಿಲ್ಲ. ತಿರುವಳ್ಳುವರ ಮೊದಲ ದ್ವಿಪದಿ ’ಅಗರ ಮೊದಲೆಳುತ್ತೆಲ್ಲಾಮ್’ ಹೇಳುವಂತೆ ಕಲಿತು, ತಮಿಳು ಶಾಲೆಗಳಲ್ಲಿಯೇ ಟೀನೇಜರ್ ಆಗುವ ವರೆಗೆ ಕಲಿತೆ. ತಮಿಳು ಮಗ್ಗಿಗಳಿಂದ ಹಿಡಿದು (ಇಂದಿಗೂ ಗುಣಾಕಾರಕ್ಕೆ ಅವುಗಳೇ ಮೊದಲು ನೆನಪಾಗುವವು) ಸಂಗಮ್ ತಮಿಳಿನ ಭೋ ಪರಾಕ್ ಹೇಳುತ್ತ ಬೆಳೆದೆ. ನಿಮಗೆಲ್ಲ ಗೊತ್ತಿರುವಂತೆ ತಮಿಳಿನಲ್ಲಿ ಮಹಾಪ್ರಾಣದ ಉಚ್ಚಾರವಿಲ್ಲ. ಕಾಗುಣಿತ ಎಂದರೇನು ಸಹ ಗೊತ್ತಿರದ ನನಗೆ ವರ್ಣಮಾಲೆಯ ನಾಲ್ಕೂ ವ್ಯಂಜನಕ್ಷರಗಳಿಗೆ ಒಂದನ್ನೇ ಉಪಯೋಗಿಸಿ ರೂಡಿ. ನಾವು ಮೂವರು ಅಣ್ಣತಮ್ಮಂದಿರು ನಮ್ಮೊಳಗೆ ಮಾತನಾಡುತ್ತಿದ್ದುದು ತಮಿಳಿನಲ್ಲಿಯೇ. ಇಲ್ಲಿಯ ನಮ್ಮ ಮಕ್ಕಳಲ್ಲೂ ಸಾಮಾನ್ಯವಾಗಿ ಇದೇ ತರಹದ ಅನುಭವವನ್ನು ಕಾಣುತ್ತೇವೆ ಎನ್ನ ಬಹುದು, ಕೆಲವು ಅಪವಾದಗಳನ್ನು ಬಿಟ್ಟರೆ. ಅದಕ್ಕೇ ನಮ್ಮ ತಂದೆ ನಮ್ಮನ್ನು ’ಅಲ್ಪಪ್ರಾಣಿಗಳು ನೀವು’ ಕೊಂಗರ ಭಾಷೆಯನ್ನು ಮಾತಾಡ ಬೇಡಿ, ಅಂತೆಲ್ಲ ಟೀಕಿಸುತ್ತಿದ್ದರು. ತಾವಾಯಿತು, ತಮ್ಮ ಲೇಖನಗಳಾಯಿತು ಅಂತ ಯಾವಾಗಲೂ ಬರಹದಲ್ಲಿ ಮುಳುಗಿರುತ್ತಿದ್ದ ಅವರು ಒಂದು ಉಪಕಾರವನ್ನು ಮಾಡದಿರಲಿಲ್ಲ. ಕನ್ನಡ ಅಕ್ಷರಗಳನ್ನು ಕಲಿಸಿದ್ದು ಮತ್ತೆ ತಾವು ವಿಪುಲವಾಗಿ ಕನ್ನಡ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣಗಳು ಮತ್ತು ಕರ್ಮವೀರದಂಥ ನಿಯತ ಕಾಲಿಕಗಳಲ್ಲಿ ಮತ್ತು ಎರಡು ಮೂರು ಪತ್ರಿಕೆಗಳ ದೀಪಾವಳಿ ವಿಶೇಷಾಂಕಗಳಲ್ಲಿ ಬರೆಯುತ್ತಿದ್ದ ಲೇಖನಗಳನ್ನು ನನಗೆ ಕೊಟ್ಟು ಅವುಗಳ ಕಾಪಿ ಮಾಡಿಸುತ್ತಿದ್ದರು, ನಮಗೆ ಕನ್ನಡದ ರೂಢಿಯಾಗಲೆಂದು. ಆದರೆ ಕಥೆ ಪುಸ್ತಕ, ಕನ್ನಡ ಪಠ್ಯ ಪುಸ್ತಕಗಳನ್ನು ಧಾರವಾಡಕ್ಕೆ ಹನ್ನೆರಡನೇ ವರ್ಷದಲ್ಲಿ ಬರುವ ವರೆಗೆ ಕಂಡಿರಲಿಲ್ಲ.

ಕ್ಲಾಸ್ ತುಂಬ ಹಲ್ ಕಟ್ಟರು!
ಹಟಾತ್ತನೆ ಪಠ್ಯಕ್ರಮದ ಮಾಧ್ಯಮ ಒಮ್ಮೆಲೆ ತಮಿಳಿನಿಂದ ಕನ್ನಡಕ್ಕೆ ಓವರ್ನೈಟ್ ಬದಲಾದ ಕೂಡಲೇ ನಮಗೆ ಆದದ್ದು systemic shock! ಯಾರಾದರೂ ಮಾತನಾಡಿಸಿದರೆ ಉತ್ತರ ಹೇಳಲು ಬಾಯಿ ತೆರೆದಾಗ ಬಾಯಿಂದ ಹೊರಬೀಳುತ್ತಿದ್ದುದು ತಮಿಳಿನ ’ಜಿಬ್ಬರಿಷ್’ ಅಂತ ಸಹಪಾಠಿಗಳ ಕಂಪ್ಲೇಂಟ್! ಏನು ಬಡಬಡಿಸುತ್ತಾ ಇದ್ದೀಯಾ, ಅನ್ನಬೇಕು ಅರ್ಥವಾಗದ ಹುಡುಗರೆಲ್ಲ! ತಮಿಳು ನಾಡಿನಲ್ಲಿ ಅವರಿಗೆ ಅಡ್ಡ ಹೆಸರಿಲ್ಲ. ಉತ್ತರ ಕರ್ನಾಟಕದ ಗಂಡುಮೆಟ್ಟಿನ ಸ್ಥಳವಾದ ಧಾರವಾಡದಲ್ಲಿ ಒಂದಕ್ಕೆ ನಾಲ್ಕು ಅಥವಾ ಆರರವರೆಗೆ ಒಂದು ಕ್ಲಾಸಿನಲ್ಲಿ ಕುಲಕರ್ಣಿ, ಪಾಟೀಲ, ’ಮನಿ’ಗಳು (ಮುಂದಿನ ಮನಿ, ಹಿತ್ತಲಮನಿ, ಮಿಟ್ಟಿಮನಿ,ಮೇಲ್ಮನಿ, ದೊಡ್ಮನಿ ಇತ್ಯಾದಿ) ಇರುತ್ತಿದ್ದರು! ವಿವಿಧ ’ಕಟ್ಟಿ’ಗಳ ಅಡ್ಡಹೆಸರಿನ ನಾಮಧೇಯ ಹೊತ್ತ ಸಾಧು ಹುಡುಗರು ಸಹ ಇದ್ದರು. ಇದೆಲ್ಲ ನಮಗೆ ಹೊಸತು; ಮತ್ತು ತಮಾಷೆ, ಸಹ! ಕ್ಲಾಸಿನಲ್ಲಿ ಪೀರಿಯಡ್ ಗಳ ಮಧ್ಯೆ, ’ಬ್ರೆಕ್’ ವಿರಾಮದಲ್ಲಿ ಗೋಲಿ (marbles) ಆಟ. ಅಂದರೆ ಜಗಳಾಟ. ಒಬ್ಬ ಹುಡುಗನನ್ನು ರೇಗಿಸುತ್ತಿದ್ದಾಗ ಆತ ಎಲ್ಲರನ್ನೂ ಬೈಯುತ್ತ ’ಅಂವ ಒಬ್ಬ ಹಲಕಟ್ಟ, ಇಂವ ಒಬ್ಬ ಹಲಕಟ್ಟ, ಎಲ್ಲರೂ ಸೂ...ಮಕ್ಕಳು’ ಅಂತ ಶಿಷ್ಟ ಭಾಷೆಯಲ್ಲಿ ಮಂತ್ರ ಪುಷ್ಪ ತೂರುತ್ತಿದ್ದ. ಆ ದಿನ ಸಂಜೆಗೆ ಮನೆಗೆ ಹೋಗಿ ನಾವು ಆ ದಿನದ ಶಾಲೆಯ ವೃತ್ತಾಂತವೆಲ್ಲವನ್ನೂ ತಾಯಿಗೆ ಒಪ್ಪಿಸುವುದು. ಆಕೆ ಎಲ್ಲವನ್ನು ಲಕ್ಷ್ಯಗೊಟ್ಟು ಕೇಳಿ ನಮ್ಮನ್ನು ಸಾಂತ್ವನ ಮಾಡುತ್ತ ಹುರಿದುಂಬಿಸುತ್ತಿದ್ದರು. ತಾಳ್ಮೆಯಿಂದ ಕೇಳುತ್ತಿದ್ದರು ಅವ್ವ. ಆಕೆಗೆ ಗೊತ್ತು, ಕನ್ನಡ ನಾಡಿನಲ್ಲಿ ತಮಿಳು ತಲೆಗಳಾಗಿದ್ದ ನಮ್ಮ ಪರದಾಟ! ಟಾಕು ಮಸಿ ದೌತಿ, ಬರೆಯಲು ಕಾಗದ, ಇವುಗಳ ಸಮುದ್ರದಲ್ಲಿ ತಂದೆಯವರು ಯಾವಾಗಲೋ ಕಳೆದು ಹೋಗಿರುತ್ತಿದ್ದರು. ಆ ದಿನ ನಾನು ಕೊಟ್ಟ ವರದಿ ನಮ್ಮ ಕ್ಲಾಸಿನಲ್ಲಿ ಒಂದೇ ಅಡ್ಡ ಹೆಸರಿನ ನಾಮಧಾರಿಗಳ ಲೇಟೆಸ್ಟ್ ’ಸ್ಕೋರ್’ ಹೇಳುತ್ತ, ’ನಮ್ಮ ಕ್ಲಾಸಿನಾಗ ಈಗ ನಾಲ್ಕು ಹಲಕಟ್ಟರು ಭರ್ತಿಯಾಗ್ಯಾರ’ ಅಂದೆ. ಅದನ್ನು ಕೇಳಿ ಬಿದ್ದು ಬಿದ್ದು ನಕ್ಕ ನಮ್ಮ ತಾಯಿ ’ಬರೀ ನಾಲ್ಕೇ? ನೀವು ಹೋಗೋ ಆ ಸಾಲಿ ಪ್ರಸಿದ್ಧ ಅದs. ಒಂದಿಪ್ಪತ್ತು ಹಲಕಟ್ಟರಾದರೂ ಸಿಗತಾರ ಆ ಸಾಲ್ಯಾಗ!’ ಅಂತ ಹೇಳಿ, ಆ ’ಬಿರುದಿನ’ ಅರ್ಥವನ್ನು ತಿಳಿಸಿ ಹೇಳಿದ್ದು ಇನ್ನೂ ನೆನಪಾಗುತ್ತದೆ, ಇದನ್ನು ಬರೆಯುವಾಗ. ವಾಯವ್ಯ ಗೊತ್ತಿಲ್ಲ; ಅವಯವದಂತೆ ಅವ್ವುಯ್ಯನೂ ಒಂದು ದೇಹದ ಭಾಗವನ್ನೇ ಸೂಚಿಸುತ್ತದೆಯೇ ಅಂತ ನಮಗೆ ಗೊಂದಲ. ಅವೆಲ್ಲವನ್ನು ಹಿಂದೆ ಹಾಕಿ ಅದು ಹೇಗೆ ಕನ್ನಡ ಕಲಿತೆವು ಅನ್ನುವ ವಿಷಯ ನನಗೆ ಇನ್ನೂ ವಿಸ್ಮಯದಾಯಕ!

ಅದ್ಯಾವ ಪುಸ್ತಕ?
ನನ್ನ ಕೈಗೆ ಸಿಕ್ಕ ಪುಸ್ತಕವೆಂದರೆ ಈಗ ತಾನೆ ಅಚ್ಚಿನ ಮನೆಯಿಂದ ಹೊರಬಿದ್ದ ೧೯೫೧ ರಿಂದ ೧೯೫೩ರರ ಮಧ್ಯದಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ಕರ್ಮವೀರ ವಾರ ಪತ್ರಿಕೆಯಲ್ಲಿ ನನ್ನ ತಂದೆಯವರು (ಡಾ ಪಾಂಡುರಂಗ ದೇಸಾಯಿ) ಮಕ್ಕಳಿಗಾಗಿ ವಾರ ತಪ್ಪದೆ ಬರೆದ ಕಥೆಗಳ ಗುಚ್ಛ. ಬೇರೆ ಒಂದು ಪ್ರಾಜೆಕ್ಟ್ ಸಲುವಾಗಿ ಧಾರವಾಡದ ಕಿಟಲ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದ ಲೇಖಕ-ವಿಮರ್ಶಕ ಡಾ ಜಿ ಎಂಹೆಗಡೆಯವರು ಹುಬ್ಬಳ್ಳಿಗೆ ಹೋಗಿ ಹೋಗಿ ಈಗ ಝಿರಾಕ್ಸ್ ಮಾಡಿ ಪುಡಿಪುಡಿಯಾಗುತ್ತಿರುವ ಹಾಳೆಗಳ ಪ್ರತಿಗಳನ್ನು ಸಂಗ್ರಹಿಸಿ ಸಂಪಾದಿಸಿದ್ದು. ಅದು ಇನ್ನೂ ಲೋಕಾರ್ಪಣೆಯಾಗಿಲ್ಲ. ನನಗೆ ತುರ್ತು ಸುದ್ದಿ ತಲುಪಿಸೋಣ ಎಂದು ಫೋನು ಮಾಡಿದಾಗ ಅವರಿಗೆ ತಿಳಿಸಿ ವಿನಂತಿಸಿದೆ. ಅಕಸ್ಮಾತ್ತಾಗಿ ಒಂದು ವಾರದ ನಂತರ ಯು ಕೆ ಗೆ ಪ್ರಯಾಣಮಾಡುತ್ತಿದ್ದ ನನ್ನ ಮಿತ್ರರಿಗೆ ಆ ಪುಸ್ತಕದ ಎರಡು ಪ್ರತಿಗಳನ್ನು ಕಳಿಸಿದರು. ಅದರ ಹೊದಿಕೆಯನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಅದರ ಹಿನ್ನುಡಿಯಲ್ಲಿ ಮೂಲ ಲೇಖಕರ ವಿವರದೊಂದಿಗೆ ಕಥೆಗಳ ವಿಸ್ತಾರದ ಪರಿಚಯ ಸಹ ನಿಮಗೆ ಓದಲು ಸಿಗುತ್ತದೆ. ಅವುಗಳ ಬಗ್ಗೆ ಸವಿಸ್ತಾರದ ವಿಮರ್ಶೆ ಮಾಡಲಾರೆ ಮತ್ತು ನನ್ನಿಂದ ಅದು ಉಚಿತವೂ ಅಲ್ಲ. ಅದನ್ನು ಓದುಗ ಪ್ರಾಜ್ಞರಿಗೆ ಬಿಟ್ಟಿದ್ದು. ನನಗೆ ಮಾತ್ರ ನನ್ನ ತಂದೆ ಮಕ್ಕಳ ಕಥೆಗಳನ್ನು ಸಹ ಬರೆದಿದ್ದರು ಎನ್ನುವ ಸುದ್ದಿ ಗೊತ್ತೇ ಇರಲಿಲ್ಲ, ಅದು ಮಾತ್ರ ಸತ್ಯ. ಇತಿಹಾಸದ ಸಂಬಂದಿಸಿದ ಕಥೆ ಕಾದಂಬರಿ, ಮತ್ತು ವೈಚಾರಿಕ, ಸಂಶೋಧನಾತ್ಮಕ ಕೃತಿಗಳನ್ನು ಬರೆದುದ್ದುದು ಮಾತ್ರ ನನಗೆ ಗೊತ್ತಿತ್ತು. ಈಗ ೭೫ ವರ್ಷಗಳ ಹಿಂದಿನ ವಿವಿಧ ವಿಷಯಗಳನ್ನು ವಸ್ತುವಾಗಿಟ್ಟುಕೊಂಡು ಅವರು ಬರೆದ ಕಥೆಗಳು ಇದರಲ್ಲಿವೆ. ಕೆಲವುಗಳಲ್ಲಿ ಹಿತೋಪದೇಶದಲ್ಲಿದ್ದಂತೆ ಮಾತಾಡುವ ಪ್ರಾಣಿಗಳ ಪಾತ್ರಗಳನ್ನು ಸೃಜಿಸಿದ್ದಿದೆ. ಪುಸ್ತಕದ ಪರಿಚಯವನ್ನಷ್ಟೇ ಮಾಡುವುದು ಈ ಲೇಖನದ ನನ್ನ ಉದ್ದೇಶವಾಗಿತ್ತು. ಆಸಕ್ತರಿಗೆ ಬೇಕಾದ ಉಳಿದ ವಿವರಗಳು ಕವರ್ ಚಿತ್ರದಲ್ಲಿ ಸಿಗುತ್ತವೆ. ಸಂಪಾದಿಸಿ ಪ್ರಕಟಿಸಿದ ಡಾ ಜಿ ಎಂ ಹೆಗಡೆಯವರಿಗೆ ಮತ್ತು ಇಲ್ಲಿಗೆ ತಂದು ಪೋಸ್ಟ್ ಮಾಡಿದ ನನ್ನ ಮಿತ್ರ ಡಾ ಶಿವಶಂಕರ್ ಅವರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

ಲೇಖನ ಮತ್ತು ಚಿತ್ರಗಳು: ಶ್ರೀವತ್ಸ ದೇಸಾಯಿ

“ಕೃಷ್ಣಾರೂಷ” – ನಂಬಿಕೆಯೇ ಜೀವನದ ಆಧಾರ

ಹಿಂದಿನ ಲೇಖನದಲ್ಲಿ “ದೇವರ ಅಸ್ತಿತ್ವ ಉಳಿದವರ ಕಣ್ಣಲ್ಲಿ” ಎನ್ನುವ ಬಗ್ಗೆ ಚರ್ಚಿಸಿದ್ದೆ, ಅವನನ್ನು ಹೇಗೆ ವಿವಿಧ ರೂಪಗಳಲ್ಲಿ ಪೂಜಿಸುತ್ತಾರೆಂದು ನನ್ನ ವಿಚಾರಗಳನ್ನು ಹಂಚಿಕೊಂಡಿದ್ದೆ. ಈ ಬಾರಿ ಲೇಖನಕ್ಕೆ ಅದೇ ವಿಚಾರ ಮುಂದುವರಿಸುವ ಕುರಿತು ಯೋಚಿಸುತ್ತಿರುವಾಗ, ವಿವಿಡ್ಲಿಪಿ ಪ್ರಕಾಶನದ ಪುಸ್ತಕ “ಕೃಷ್ಣಾರೂಷ” ಬಗ್ಗೆ ವಿಚಾರ ಹಂಚಿಕೊಳ್ಳೋಣ ಅನಿಸಿತು. “ಕೃಷ್ಣಾರೂಷ” ಇಂಗ್ಲಿಷ್ನಲ್ಲಿ ಪ್ರಕಟವಾದ ಒಂದು ಪುಸ್ತಕ, ಅತ್ಯಂತ ಸರಳ ಭಾಷೆಯಲ್ಲಿ ಲೇಖಕರು ಜೀವನದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಅನುಭವ ವಿವರಿಸುವಾಗ ಅದಕ್ಕೆ ತಕ್ಕದಾದ ಶ್ಲೋಕ, ಭಗವದ್ಗೀತೆ, ಶ್ರೀಮದ್ಭಾಗವತ ಇತ್ಯಾದಿ ಯಿಂದ ಆಯ್ದು ಆಯಾ ಭಾಗದಲ್ಲಿ ಹಂಚಿಕೊಂಡಿದ್ದಾರೆ. ಈ ಪುಸ್ತಕವನ್ನು ಸತ್ಯೇಶ್ ಬೆಳ್ಳೂರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲ ಲೇಖಕರು ಡಿಂಪಲ್ ಅಗ್ರವಾಲ್, ಇವರು ಕೃಷ್ಣನ ಭಕ್ತರು. ಅವರು ತಮ್ಮ ಅನುಭವಗಳನ್ನು ಮತ್ತು ಕೃಷ್ಣನ ಲೀಲೆಗಳನ್ನು ಇದರಲ್ಲಿ ಬಣ್ಣಿಸಿದ್ದಾರೆ. ಅವರ ಪುಸ್ತಕ ನಮ್ಮ ಪ್ರಕಾಶನದ ಎಂಟನೆಯ ಪುಸ್ತಕ. ಇದು ಆಕಸ್ಮಿಕವೋ ಅಥವಾ ನಮಗೆ ಪ್ರಸಾದದ ರೂಪದಲ್ಲಿ ಬಂದಿದೆಯೋ ಗೊತ್ತಿಲ್ಲ.

ಕೆಲವು ದಿನಗಳ ಹಿಂದೆ ನಮ್ಮ ಪರಿಚಿತರೊಬ್ಬರೊಂದಿಗೆ ಮಾತನಾಡುವಾಗ ತಾವು ನಾಸ್ತಿಕರೆಂದು ತಿಳಿಸುತ್ತಾ ಅದಕ್ಕೆ ದೇವೆರೇ ಕಾರಣ ಎಂದರು. ವಿಚಾರಿಸಿದಾಗ ಗೊತ್ತಾಯಿತು ಅವರ ಪ್ರೀತಿಯ ವ್ಯಕ್ತಿ ಕೋವಿಡ್ ಇಂದ ಅಸ್ವಸ್ಥರಾದಾಗ ಇವರು ದೇವರಲ್ಲಿ ಬೇಡಿಕೊಂಡರೂ ಅವರು ಉಳಿಯಲಿಲ್ಲ. ಅವರವರ ಪರಿಸ್ಥಿತಿ ಅನುಗುಣವಾಗಿ ಜನರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ, ಯಾರೂ ತಪ್ಪಲ್ಲ. ಈ ಲೇಖನದಲ್ಲಿ ಹಂಚಿಕೊಂಡ ಪುಸ್ತಕದ ಮೂಲ ಲೇಖಕರು ಕ್ಯಾನ್ಸರ್ನಿಂದ ತಮ್ಮ ಜೀವನ ಅಸ್ತವ್ಯಸ್ತವಾದಾಗ ಕೃಷ್ಣನನ್ನೇ ತಮ್ಮ ಮಗನೆಂದು ಪ್ರೀತಿಸಿ, ಪೂಜಿಸಿ ಜೀವಿಸಿದರು. ಆಗ ಅವರಿಗೆ ಮಾನಸಿಕವಾಗಿ ದೊರೆತ ಆಸರೆ ಮುದ್ದು ಕೃಷ್ಣ. ಈ ಪುಸ್ತಕದ ಕೆಲವು ವಿಷಯಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಅರೋಷ್ ಎಂಬ ಪದದ ಅರ್ಥ ಸೂರ್ಯನ ಮೊದಲ ಕಿರಣ; ಅರೋಷ್ ಮತ್ತು ಕೃಷ್ಣ ನನ್ನಿಬ್ಬರು ಮಕ್ಕಳ ಹೆಸರುಗಳು. ಮೊದಲನೆಯವ ನನ್ನ ಕರುಳ ಬಳ್ಳಿ – ನನ್ನ ರಕ್ತ ಹಂಚಿಕೊಂಡು ಹುಟ್ಟಿದವ, ಎರಡನೆಯವನು ನನ್ನ ಭಾವಬಳ್ಳಿ – ನನ್ನ ಶ್ರದ್ದೆಯಿಂದ ಜನಿಸಿದ (ಇದು ಲೇಖಕರ ಮಾತು). ಇವರ ಜೀವನದ ಅನುಭಗಳು ಪ್ರಾರಂಭ ಆಗುವುದು ಅವರ ಭಿಲಾಯ್ ನಗರದಿಂದ, ಅವರ ತಂದೆ ಮತ್ತು ತಾಯಿ ವಿವರ ಹಾಗು ಮಧ್ಯಮ ವರ್ಗದ ಕುಟುಂಬದೊಂದಿಗೆ. ಇವರ ವಿವರಣೆಯಲ್ಲಿ ಕಂಡು ಬರುವ ಮುಖ್ಯ ವಿಷಯ ಹೇಗೆ ಸರಳ ಜೀವನದಲ್ಲಿ ಬೆಳೆದು ಬಂದದ್ದು, ಪ್ರೀತಿಯಿಂದ ಬೆಸೆದ ಕುಟುಂಬ ಮತ್ತು ಅವರ ಬಾಲ್ಯದಿಂದಲೇ ಭಕ್ತಿ ಜೀವನದ ಒಂದು ಅಂಗವಾಗಿದ್ದು. ಇಂತಹ ವಿವರಣೆ ಕೇಳಿದೊಡನೆ ನೆನಪಾಗುವುದು ಕೆಳಗಿನ ಸಾಲುಗಳು

ನಮ್ಮ ಸಂಸಾರ ಆನಂದ ಸಾಗರ,
ಪ್ರೀತಿಎಂಬ ದೈವವೇ ನಮಗಾಧಾರಾ,
ಆ ದೈವ ತಂದ ವರದಿಂದ,
ಬಾಳೇ ಬಂಗಾರಾ

ತಮ್ಮ ಜೀವನದ ವಿವರಗಳನ್ನು ಹಂಚಿಕೊಳ್ಳುತ್ತ ಲೇಖಕರು ಮದುವೆ ಮತ್ತು ನಂತರ ದಿನಗಳ ಬಗ್ಗೆ ತಿಳಿಸುತ್ತಾರೆ. ಮದುವೆ, ನಂತರ ಗಂಡನ ಮನೆಯ ವಿಷಯ, ಅತ್ತೆ ವಿಷಯ ಎಲ್ಲ ಸಂತೋಷದ ವಿವರ ಹಂಚಿಕೊಂಡು ಮಗನ ಹುಟ್ಟು, ಅರೋಷ್ ಆಗಮನ ಈ ಎಲ್ಲ ಸಂತೋಷದ ಘಳಿಗೆಯಲ್ಲಿ ಬರುವುದು ಆಘಾತವಾದ ವಿಷಯ “ಮಗನ ಕ್ಯಾನ್ಸರ್”. ಅರೋಷ್ಗೆ diffuse pontine glioma, ಒಂದು ಗಡ್ಡೆ ಅವನ ಮೆದುಳಿನಲ್ಲಿ ಇದೆ ಎಂಬುದು ತಿಳಿದು ಅವರ ಜೀವನ ಅಲ್ಲೋಲಕಲ್ಲೋಲವಾಗಿತ್ತು. ಪೂಜೆ, ಪುನಸ್ಕಾರ, ಹೋಮ, ದೇವಸ್ಥಾನ, ದರ್ಗಾ, ಆಯುರ್ವೇದ, ಹೋಮಿಯೋಪಥಿ… ಎಲ್ಲ ಪ್ರಯತ್ನ ನಡೆದರೂ ಕೊನೆಗೆ ಸೂರ್ಯನ ಮೊದಲ ಕಿರಣ ಕಾಣದಾಯಿತು, ಅರೋಷ್ ಅವರನ್ನು ಬಿಟ್ಟು ಹೋದನು. ೨೦೧೪ರಲ್ಲಿ ಬಿಡುಗಡೆಯಾದ “ಹರಿವು” ಚಿತ್ರ ಈ ಒಂದು ಜೀವನದ ತಿರುವಿನಲ್ಲಿ ಬರುವ ಕಠಿಣ ಪಯಣ ಮನ ಮುಟ್ಟುವಂತೆ ಚಿತ್ರಿಸುತ್ತದೆ, ಇದು ನಿಜ ಜೀವನದಲ್ಲಿ ನಡೆದ ಕಥೆಯಾಧಾರಿತ ಚಿತ್ರ. ಸಂಚಾರಿ ವಿಜಯ್ ತಂದೆಯ ಪಾತ್ರದಲ್ಲಿ ಮಾಡಿದ ನಟನೆ ಹೃದಯ ಹಿಂಡುವಂತಿದೆ. ತಾಯಿ ಪ್ರೀತಿಯಂತೆ, ತಂದೆಯ ಪ್ರೀತಿ ಮಗನಿಗೆ ಎಷ್ಟು ಆಳವಾಗಿ ಇರುತ್ತದೆ ಮತ್ತು ಮಗನಿಗಾಗಿ ತಂದೆ ಎಂತಹ ಸಾಹಸಕ್ಕೂ ಸಿದ್ದ ಎಂದು ಇದರಲ್ಲಿ ತೋರಿಸಿದ್ದಾರೆ, ನೋಡಿರದಿದ್ದರೆ ತಪ್ಪದೆ ನೋಡಿ. ಡಿಂಪಲ್ ದಂಪತಿಗಳು ತಮ್ಮ ಮಗ “ಅರೋಷ್” ನ ಕೊನೆಯ ದಿನಗಳ ವಿವರಣೆ ನೀಡುವಾಗ ನನ್ನ ಕಣ್ಣ ಮುಂದೆ ಹರಿವು ಚಿತ್ರ ನೋಡಿದಾಗ ಅದ ಮನ ಕಲುಕುವ ಅನುಭವ ಆಯಿತು. ಇಂತಹದೇ ಕಠಿಣ ಪರಿಸ್ಥಿತಿ ಬಂದಾಗ, ಡಿಂಪಲ್ ದಂಪತಿಗಳಿಗೆ ಬಂದ ಪ್ರಶ್ನೆ “ದೇವರು ಇಂತಹ ಕಠಿಣ ಪರೀಕ್ಷೆ ಯಾವ ಕಾರಣಕ್ಕೆ ಒಡ್ಡುತ್ತಾನೆ”.

ನಾಗರ ಹೊಳೆಯ ಚಿತ್ರ ಹಾಡಿನ ಸಾಲುಗಳು ನಿಜ ಎನಿಸುತ್ತದೆ

ಇಲ್ಲೇ ಸ್ವರ್ಗ, ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು..
ಹುಟ್ಟು ಸಾವು ಎರಡರ ಮಧ್ಯೆ..
ಮೂರು ದಿನದ ಬಾಳು

“ಅರೋಷ್” ಇಲ್ಲದ ಬರಿದಾದ ಜೀವನದಲ್ಲಿ ಕಷ್ಟದಿಂದ ಜೀವನ ಸವೆಸುತ್ತಿರುವಾಗ ಡಿಂಪಲ್ ದಂಪತಿಗಳಿಗೆ ಆಸರೆಯಾಗಿ ಸಿಕ್ಕಿದ್ದು ಭಗವದ್ಗೀತೆ, ಮತ್ತು ಮುದ್ದು ಕೃಷ್ಣ. ಅವರ ನೆರೆಮನೆಯ ಗೆಳತೀ ಶ್ವೇತಾ ಚತುರ್ವೇದಿ ಅವರು ಪರಿಚಯಿಸಿದ ಇಸ್ಕಾನ್ ಶಿಬಿರ ಅವರಿಗೆ ಹೊಸ ದಾರಿ ಒದಗಿಸಿತು.

ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ |
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ |
(ಭಗವದ್ಗೀತೆ ೪-೧೧)

ವಿವರ: ಯಾರು ತಮ್ಮನು ಯಾವ ರೀತಿಯಲ್ಲಿ ನನ್ನಲ್ಲಿ ಅರ್ಪಿಸಿಕೊಳ್ಳುತ್ತಾರೋ, ಅವರನ್ನು ಅದೇ ರೀತಿಯಲ್ಲಿ ಅನುಗ್ರಹಿಸುತ್ತೇನೆ.

ಭಕ್ತ ಕುಂಬಾರದ ಹಾಡು ಇಲ್ಲಿ ಸೂಕ್ತವೆನಿಸುತ್ತದೆ

ನಾನೂ ನೀನೂ ನೆಂಟರಯ್ಯಾ
ನಮಗೆ ಭೇದ ಇಲ್ಲವಯ್ಯಾ
ಮಾಧವ, ನಿನ್ನ ನಾಮಾಮೃತದ
ಸಾಧನೆ ಒಂದೇ ಸಾಕಯ್ಯ ತಂದೆ

“ಕೃಷ್ಣ ನಿನ್ನ ನಾಮಾಮೃತದ ಪ್ರೀತಿ ಒಂದೇ ಸಾಕಯ್ಯ ಮಗನೆ” ಎನ್ನುವ ಭಾವದಲ್ಲಿ ಡಿಂಪಲ್ ದಂಪತಿಗಳು ಕೃಷ್ಣನನ್ನು ತಮ್ಮ ಮಗನೆಂದು ಆರಾಧಿಸಲು ಆರಂಭಿಸಿದರು. ಕುಳಿತರೆ ಕೃಷ್ಣ, ನಿಂತರೆ ಕೃಷ್ಣ, ಉಂಡರೆ ಕೃಷ್ಣ ಅನ್ನುವ ತನಕ ಕೃಷ್ಣನನ್ನು ಮಗನೆಂದು ಪ್ರೀತಿಸಿದರು, ಪೂಜಿಸದರು. ಅವರಿಗೆ ಕೃಷ್ಣನೇ ಅರೋಷನಾದ, ಮತ್ತು ಅರೋಷ ಕೃಷ್ಣನಾದ. ಅವರ ಈ ಪ್ರೀತಿಗೆ ಅಕಸ್ಕಿವಾಗಿ ಅವರಿಗೆ ಜಗನಾಥಪುರಿಗೆ ಹೋಗುವ ಅವಕಾಶ ದೊರೆಯಿತು, ನಂತರ ಶ್ರೀಮದ್ಭಾಗವತ ಓದುವ ಅವಕಾಶ ದೊರಕಿತು. ತಮ್ಮ ಭಕ್ತಿ ಪಥದ ಅನುಭವಗಳನ್ನು ಮುಂದಿನ ಅಧ್ಯಾಯಗಳಲ್ಲಿ ಸುಂದರವಾಗಿ ವಿವರಿಸಿದ್ದಾರೆ.

ಸಮೋಽಹಂ ಸರ್ವಭೂತೇಷು ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ |
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ ||
ಭವದ್ಗೀತೆ (೯ -೨೯)

ಭಗವಂತನಿಗೆ ಎಲ್ಲರೂ ಸಮಾನರು. ದೇವರಿಗೆ ಅಚ್ಚುಮೆಚ್ಚಿನವರು ಅಥವಾ ದ್ವೇಷಿಸಲ್ಪಡುವವರು ಯಾರೂ ಇಲ್ಲ. ಆದರೆ, ಯಾರು ನಿಷ್ಕಲ್ಮಷ ಭಕ್ತಿಯಿಂದ ಭಗವಂತನನ್ನು ಆರಾಧಿಸುತ್ತಾರೋ, ಭಗವಂತನು ಅಂತಹ ಭಕ್ತರ ಹೃದಯದಲ್ಲಿ ಇರುತ್ತಾನೆ.

ಅವರ ಪ್ರೀತಿ ಮತ್ತು ಭಕ್ತಿಗೆ ಮೆಚ್ಚಿ ಅವರಿಗೆ ಎರಡನೆಯ ಮಗು ಬರುವ ಸುದ್ದಿ ಅವರ ಜೀವನದ ಸಂತೋಷದ ಕ್ಷಣಗಳ ಆಗಮನವಾಯಿತು. ಅವರ ಜೀವನದಲ್ಲಿ ಒಂದರ ನಂತರ ಇನ್ನೊಂದು, ಹೀಗೆ ಎರಡು ಹೆಣ್ಣು ಮಕ್ಕಳ ಸೌಭಾಗ್ಯ ದೊರಕಿತು.

ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ಅಂತೆಯೇ ಎರಡು ಮಕ್ಕಳ ಆಗಮನ ಡಿಂಪಲ್ ದಂಪತಿಗಳ ಜೀವನ ಬದಲಾಯಿಸಿತು. ಸಂತೋಷದ ಜೀವನ ಅನುಭವಿಸಿದರು ಆದರೂ ಅದು ಹೆಚ್ಚು ದಿನ ಉಳಿಯಲಿಲ್ಲ. ಜೀವನದ ಮತ್ತೊಂದು ತಿರುವು ಬಂದು, ಮೂಲ ಲೇಖಕರಾದ ಡಿಂಪಲ್ ಅವರಿಗೆ ಕ್ಯಾನ್ಸರ್ ಆಗಿ ಚೇತರಿಸಿಕೊಳ್ಳುತ್ತಿದ್ದಾರೆ.

ನಾ ಮಾಡಿದ ಕರ್ಮ ಬಲವಂತವಾದರೆ
ನೀ ಮಾಡುವುದೇನೋ ದೇವ ಸಾಮಾನ್ಯವಲ್ಲಿದು
ಬ್ರಹ್ಮ ಬರೆದ ಬರಹ ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ

ಕೃಷ್ಣನ ಜೊತೆಗಿದ್ದರೂ ದ್ರೌಪದಿ ತನ್ನ ಪಾಲಿನ ಪಡೆದ ಸಂಕಷ್ಟಗಳನ್ನು ಅನುಭವಿಸಬೇಕಾಯಿತು, ಅಂತಹ ಸಂಕಟಗಳ ನಡೆವೆಯೂ ಕೃಷ್ಣನ ಸಾಂಗತ್ಯ ಅವಳಿಗೆ ಬಲದಂತೆ ಇತ್ತು. ಇಂತಹ ಸಾಂಗತ್ಯ ಇದೆ ಎಂಬ ನಂಬಿಕೆ ಎಂತಹ ಕಷ್ಟ ಕಾಲದಲ್ಲೂ ಪರಿಸ್ಥಿತಿ ಎದರಿಸಲು ಧೈರ್ಯ, ಸ್ಥೈರ್ಯ ಕೊಡುತ್ತದೆ. ಈ ನಂಬಿಕೆಯೇ ಜೀವನಕ್ಕೆ ರಕ್ಷಣೆ ನೀಡಿ, ಮಾರ್ಗದರ್ಶಿ ಆಗುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಎಷ್ಟು ಕಷ್ಟ ಇದ್ದರೂ ಹೇಗೆ ಅದನ್ನು ಎದುರಿಸಿದರು ಎಂದು ಸಂಕ್ಷಿಪ್ತವಾಗಿ ಅವರ ಜೀವನಗಾಥೆ ವಿವರ ಇಲ್ಲಿ ಹಂಚಿಕೊಂಡಿದ್ದೇನೆ.