ವಲಸೆ ಬಂದ ಹಕ್ಕಿಗಳು


ಪ್ರಿಯ ಓದುಗರಿಗೆ, ಈ ವಾರದ ಸಂಚಿಕೆಯಲ್ಲಿ ನನ್ನದೊಂದು ಕಥೆ. ಎರಡು ವರುಷಗಳ ಹಿಂದೆ ಸುಧಾ ಪತ್ರಿಕೆಯಲ್ಲಿ ಪ್ರಕಟವಾದ “ಯುದ್ಧಗಳು” ಎಂಬ ನನ್ನ ಕಥೆಯ ಎರಡನೆಯ ಭಾಗವೆಂದು ಪರಿಗಣಿಸಬಹುದು. ಸಾಧ್ಯವಾದರೆ ಓದಿ ಅಭಿಪ್ರಾಯ ತಿಳಿಸಿ – ಇಂತಿ ಸಂಪಾದಕ


ಚದುರಿದ್ದ ಸಣ್ಣ ಬಿಳಿ ಮೋಡಗಳು ಮೆಲ್ಲನೆ ಒಟ್ಟಿಗೆ ಸೇರಿ, ಬ್ರಹದಾಕಾರದ ಕರಿಮೋಡಾಗಿ, ನಸು ನಗುತ್ತಿದ್ದ ಸೂರ್ಯನನ್ನು
ಮರೆಮಾಚಿ ಮಳೆ ಸುರಿಸುವ ಸೂಚನೆಯನ್ನು ಸೂಸುತ್ತಿದ್ದವು. ಶನಿವಾರದ ಮಧ್ಯಾಹ್ನದ ವೇಳೆಗೆ, ಸ್ಕಾಟ್ಲೆಂಡಿನ ಗ್ಲಾಸ್ಗೋ ಪಟ್ಟಣದ ಮೂಲೆ ಮೂಲೆಯಿಂದ, ಗುಂಪು ಗುಂಪಾಗಿ, ಹರಿದು ಬಂದ ಜನ, ಜಾರ್ಜ್ಬೀದಿಯಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿ, ಮುಗುಲಿನಲ್ಲಿದ್ದ ಮೋಡಗಳನ್ನು ಮುಟ್ಟುವಂತೆ ಕೂಗುತ್ತಲಿದ್ದರು ” ನಿರಾಶ್ರಿತರಿಗೆ ನೆಲೆ ಬೇಡಾ, ನಮ್ಮ ದೇಶ ನಮಗೆ, ನೋ ಟು ಇಮಿಗ್ರೇಷನ್, ಗಡೀಪಾರು ಮಾಡಿ, ದೇಶ ಉಳಿಸಿ”
ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಮರಿಯಾಳಿಗೆ ಆ ಘೋಷಣೆಗಳೆಲ್ಲವೂ ಹರಿತವಾದ ಚೂರಿಗಳಂತೆನಿಸಿ ಎದೆಯನ್ನು
ಇರಿದಂತೆ ಭಾಸವಾಯಿತು. ಒಂದು ಕ್ಷಣ ಮೈಯಲ್ಲಿ ನಡುಕು ಹುಟ್ಟಿ, ಕಾಲುಗಳು ನಡುಗಿ, ಬೆವರಾಡಿ, ಕಣ್ಣಿಗೆ ಕತ್ತಲೆ
ಕಟ್ಟಿದಂತಾದರೂ, ಸಾವರಿಸಿಕೊಂಡು ಮುಂದೆ ಹೆಜ್ಜೆ ಹಾಕತೊಡಗಿದಳು. ದಿನಾಲೂ ಕೆಲಸಕ್ಕೆ ಹೋಗುವಾಗ ಆ ಬೀದಿಯಲ್ಲಿ
ನೂರಾರು ಹಸನ್ಮುಖಗಳನ್ನು ಕಾಣುತ್ತಿದ್ದ ಅವಳಿಗೆ, ಈ ಹೊತ್ತು ನೆರೆದಿದ್ದ ಬ್ರಹತ್ ಗುಂಪು ಮತ್ತು ಅವರ ಘೋಷಣೆಗಳು ವಿಚಿತ್ರವೆನಿಸಿ, ಮನದಲ್ಲಿ ತಲ್ಲಣವನ್ನುಂಟು ಮಾಡಿದ್ದವು. ಹೇಗೋ ಅಲ್ಲಿಂದ ಮರೆಯಾಗಿ ಮನೆಯತ್ತ ದಾಪುಗಾಲು ಹಾಕತೊಡಗಿದಳು. ಮೂರು ವರ್ಷಗಳ ಹಿಂದೆ ಯುದ್ಧವೆಂಬ ಪಿಶಾಚಿಗೆ ಬಲಿಯಾಗಿ, ಪ್ರಾಣಭಯದಿಂದ ಉಕ್ರೈನಿನ ಕಾರ್ಕಿವಿನಿಂದ ಪಲಾಯನಗೈದು ಇಲ್ಲಿಗೆ ಆಗಮಿಸಿದಾಗ, ಆದರದಿಂದ ಬರಮಾಡಿಕೊಂಡವರು ಇವರೇ ಏನು? ಹಾಗಾದರೆ, ಈ ಅಲ್ಪಸಮಯದಲ್ಲಿ ಇವರಿಗೇನಾಯಿತು? ಇವರ ಮನಸಿನಲ್ಲಿ ಯಾವ ವಿಷಜಂತು ತಿರಸ್ಕಾರದ ವಿಷವನ್ನು ಬಿತ್ತಿತು? ಯಾಕೆ ಈ ಆಕ್ರೋಶದ ಹೊಗೆ ಎದ್ದಿತು? ಮನದಲ್ಲಿ ಭುಗಿಲೆದ್ದ ಪ್ರಶ್ನೆಗಳಿಗೆ ತನ್ನಲ್ಲಿ ಉತ್ತರವಿಲ್ಲವೆಂದು ಗೊತ್ತಾಗುವಷ್ಟರಲ್ಲಿಯೇ ಮರಿಯಾ,
ತಾನಿದ್ದ ಪೇಯಿಂಗ್ ಗೆಸ್ಟ್ ಮನೆಯ ಬಾಗಿಲವನ್ನು ತಟ್ಟಿದ್ದಳು. ಬಾಗಿಲವನ್ನು ತೆರೆದು ಬರಮಾಡಿಕೊಂಡ ಮನೆಯ ಒಡತಿ ಸಿಸ್ಟೆರ್
ಲೂಸಿ, ಅವಳ ಚಿಂತಾಕ್ರಾಂತವಾದ ಮುಖವನ್ನು ಕಂಡು,
“ಪ್ರತಿಭಟನೆ ಇದೆ, ಬೇಡವೆಂದರೂ ರಾತ್ರಿಯ ಕೆಲಸಕ್ಕೆ ಹೋಗಿದ್ದೆ, ಎಲ್ಲವೂ ಸರಿ ತಾನೆ?” ಎಂತೆಂದರು.
ಮೈಮೇಲಿದ್ದ ಭಾರವಾದ ಕೋಟನ್ನು ಕಳಚುತ್ತ ಮರಿಯಾ,
” ಎಲ್ಲವೂ ಸರಿ ಇರದಿದ್ದರೂ, ಸರಿಯಾಗಿದೆ ಎಂದುಕೊಂಡು ಬದುಕಬೇಕಲ್ಲಾ ಸಿಸ್ಟೆರ್”
ಅವಳ ಮನದಾಳವನ್ನು ಅರಿತುಕೊಂಡ ಸಿಸ್ಟೆರ್ ಲೂಸಿ,
“ಲಂಚ್ ತಯ್ಯಾರಾಗಿದೆ ಮರಿಯಾ, ಫ್ರೆಶ್ ಆಗಿ ಬಂದು ಬಿಡು, ಊಟ ಮಾಡುತ್ತಾ ಮಾತಾಡೋಣ” ಎಂದು ತಟ್ಟೆಗಳನ್ನು
ಟೇಬಲ್ಮೇಲೆ ಇಡತೊಡಗಿದರು. ಕ್ವೀನ್ ಎಲಿಜಬೆತ್ ಆಸ್ಪತ್ರೆಯ ಪ್ರಸೂತಿ ವಿಭಾಗದಲ್ಲಿ ಹೆಡ್ ಸಿಸ್ಟೆರ್ ಆಗಿ ಕೆಲಸ ಮಾಡುತ್ತಿದ್ದ
ಸಿಸ್ಟೆರ್ ಲೂಸಿ ನಿವೃತ್ತಿ ಜೀವನಕ್ಕೆ ಇಳಿದು ಎರಡು ವರ್ಷಗಳು ಕಳೆದಿದ್ದವು. ಮಕ್ಕಳಿಲ್ಲದ ಸಿಸ್ಟೆರ್ ಲೂಸಿ ತಮ್ಮ ನಿವೃತ್ತಿ
ಜೀವನವನ್ನು, ನಿರಾಶ್ರಿತರಿಗೆ ಸಹಾಯ ಮಾಡುವ ಚಾರಿಟಿ ಸಂಘಟನೆಗೆ ಮುಡಿಪಾಗಿರಿಸಿಕೊಂಡಿದ್ದರು.
ಯುದ್ಧವೆಂಬ ಪೈಶಾಚಿಕತೆಯಲ್ಲಿ, ಸೈನಿಕರ ಅಮಾನವೀಯ ಅಟ್ಟಹಾಸದಲ್ಲಿ, ಅಮಾಯಕ ಮಹಿಳೆಯರ ಮೇಲೆ ನಡೆದ
ಅತ್ಯಾಚಾರದಲ್ಲಿ ಬಲಿಪಶುವಾಗಿ, ಪ್ರಾಣಭಯದಿಂದ ನಿರಾಶ್ರಿತೆಯಾಗಿ ಪಲಾಯನಗೈದು ಆಸ್ಪತ್ರೆಯಲ್ಲಿ ನೋಂದಣಿಯಾದಾಗ, ತನ್ನ ಮೇಲೆ ನಡೆದಿದ್ದ ಹೀನಾಯ ಕೃತ್ಯದಿಂದ ಗರ್ಭವತಿಯಾಗಿರುವೆನೆಂದು ತಿಳಿದು, ಪಾಪದ ಪಿಂಡವನ್ನು ತೆಗೆದು ಬೀಸಾಕಿರೆಂದು ಗೋಗರಿಯುತ್ತಿದ್ದ ಮರಿಯಾಳನ್ನು ಸಂತೈಸಿ, ಬದುಕುವ ಹಾದಿಯನ್ನು ತೋರಿಸಿಕೊಟ್ಟಿದ್ದರು ಆಗ ಆಸ್ಪತ್ರೆಯ ಕೆಲಸದಲ್ಲಿದ್ದ ಸಿಸ್ಟರ್ ಲೂಸಿ.
ಟೆಸ್ಕೋ ಎಂಬ ದೊಡ್ಡ ಆಹಾರ ಮತ್ತು ದಿನಸಿ ಮಳಿಗೆಯಲ್ಲಿ ಕೆಲಸ ದೊರೆತ ಮೇಲೆ, ನಿರಾಶ್ರಿತರ ಆಶ್ರಯ ಸ್ಥಾನದಿಂದ ಬಿಡುಗಡೆ
ಹೊಂದಿ, ಅತ್ಯಾಚಾರದಿಂದ ಜನ್ಮವೆತ್ತಿದ ಮಗುವನ್ನು ಅಪ್ಪಿಕೊಂಡು, ಬೆಳೆಸಿ ಪೋಷಿಸುತ್ತೇನೆ ಎಂಬ ಗಟ್ಟಿ ನಿರ್ಧಾರದಿಂದ
ಪೇಯಿಂಗ್ ಗೆಸ್ಟ್ ಆಗಿ, ಎರಡು ವರ್ಷಗಳ ಹಿಂದೆ ಸಿಸ್ಟೆರ್ ಲೂಸಿಯ ಮನೆಗೆ ತೆರಳಿದ್ದಳು ಮರಿಯಾ. ಹಲ್ಲುಜ್ಜಿ, ಮುಖತೊಳೆದು ಫ್ರೆಶ್ ಆಗಿ ಬಂದ ಮರಿಯಾಗೆ ತನ್ನ ಮಗನ ಮುಖವು ಕಾಣಿಸದೆ ಇದ್ದಾಗ,
“ಸಿಸ್ಟೆರ್, ಪೆಟ್ರೋ ಎಲ್ಲಿ ಕಾಣಿಸ್ತಾನೆೇ ಇಲ್ಲ?”
“ಅವನೆಲ್ಲಿ ಹೋಗುತ್ತಾನೆ? ಬ್ರೇಕ್ಫಾಸ್ಟ್ ತಿಂದು ಮೇಲಿನ ಕೋಣೆಯಲ್ಲಿ ಪಕ್ಕದ ಮನೆಯ ಇವಾನನ ಜೊತೆಗೆ ಬ್ಯುಸಿ ಆಗಿದ್ದಾನೆ.
ಅವನ ಪ್ರೀತಿಯ ಹಾವು ಏಣಿ ಆಟದಲ್ಲಿ ಮೈಮರೆತಿರಬಹುದು. ಇಷ್ಟೊಂದು ಸಣ್ಣ ವಯಸ್ಸಿನಲ್ಲಿಯೇ ಆಟದಲ್ಲಿ ಎಷ್ಟೊಂದು ಆಸಕ್ತಿ”
ಎಂದು ಮೆಚ್ಚಿಗೆಯ ವರದಿಯನ್ನು ಒಪ್ಪಿಸಿದರು ಲೂಸಿ.
“ಪೆಟ್ರೋ…. ಲಂಚ್ ರೆಡಿ .. ” ಜೋರಾಗಿ ಕೂಗಿದಳು ಮರಿಯಾ.
ಅಮ್ಮನ ಕರೆಯನ್ನು ಕೇಳಿ ಓಡುತ್ತ ಬಂದ ಪೆಟ್ರೋ ಗಟ್ಟಿಯಾಗಿ ಅವಳನ್ನು ಅಪ್ಪಿಕೊಂಡನು. ಪೆಟ್ರೋನ ಮುಖವು ತನ್ನ ಬಾಳನ್ನೇ
ಹಾಳುಮಾಡಿದ ಆ ಪಿಶಾಚಿ ಸೈನಿಕನ ತದ್ರೂಪವೆನಿಸಿ ಮನದಲ್ಲಿ ಎಷ್ಟೋ ಸಲ ತಾತ್ಸಾರ ಮೂಡಿದ್ದರೂ, ಕಂದನ ಬಿಸಿ
ಅಪ್ಪಿಗೆಯಲ್ಲಿ ತಾಯ್ತನದ ಮಮಕಾರವರಳಿ ಜಗತ್ತನ್ನೇ ಮರೆತು ಬಿಡುತ್ತಿದ್ದಳು ಮರಿಯಾ. ಯುದ್ಧದ ಕಠೋರತೆಯಲ್ಲಿ ತನ್ನ ಶೀಲ ಮತ್ತು ಭವಿಷ್ಯದ ಕನಸುಗಳನ್ನೆಲ್ಲ ಕಳೆದುಕೊಂಡು, ಎಲ್ಲವೂ ಹಾಳಾಗಿ ಹೋಗಿ ಜೀವನದಲ್ಲಿ ಏನಿದೆ ಎಂದು ಯೋಚಿಸಿ, ಇಷ್ಟವಿರದಿದ್ದರೂ ಬೇರೆ ಯಾವ ಆಯ್ಕೆಯಿಲ್ಲದೆ ಜನ್ಮಕೊಟ್ಟು, ಅನಾಥಾಶ್ರಮಕ್ಕೆ ಇವನನ್ನು ಸೇರಿಸಿ ಮರೆಯಾಗಿ ಬಿಡೋಣವೆಂದು ಒದ್ದಾಡುತ್ತಿದ್ದಾಗ, ತಾಯ್ತನದ ಅಂಕುರವನ್ನು ಮೂಡಿಸಿ ಬದುಕಬೇಕೆಂಬ ಆಸೆಯ ಚಿಗುರನ್ನು ಹುಟ್ಟಿಸಿದವನು ಪೆಟ್ರೋ ತಾನೇ? ಅವನ ದೇಹದಲ್ಲಿ ಹರಿಯುತ್ತಿರುವುದು ತನ್ನ ರಕ್ತ ತಾನೇ? ಅವನ ಬಾಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುವುದು ತನ್ನ ಕರ್ತವ್ವ್ಯ ತಾನೇ? ಎಂದು ಯೋಚಿಸಿ ನೆಮ್ಮದಿಯ ಉಸಿರಿನೊಂದಿಗೆ ಬಾಳ ಬಂಡಿಯನ್ನು ಎಳೆಯುತ್ತಲಿದ್ದ ಮರಿಯಾಗೆ, ಈ ದಿನ ಬೀದಿಯಲ್ಲಿ ಕಂಡ ಮತ್ತು ಇತ್ತೀಚಿಗೆ ಬೇರೆಡೆಯಲ್ಲಿ ನಡೆಯುತ್ತಲಿರುವ ಇಂತ ಘಟನೆಗಳು ದೊಡ್ಡ ಆಘಾತವನ್ನೇ ಮೂಡಿಸಿದ್ದವು.
ಅಮ್ಮನ ಅಪ್ಪುಗೆಯಿಂದ ಬಿಡಿಸಿಕೊಂಡು, ಟೇಬಲ್ ಮೇಲಿದ್ದ ಸಲಾಡ್ ಬನ್ನನ್ನು ಎತ್ತಿಕೊಳ್ಳುತ್ತ ಪೆಟ್ರೋ,
“ಅಮ್ಮ, ಹಾವು ಏಣಿಯಾಟದಲ್ಲಿ ಇವಾನನ್ನು ಸೋಲಿಸಿಬಿಟ್ಟೆ” ಎಂದು ಗರ್ವದಿಂದ ಹೇಳಿದನು.
“ಮಗು, ಜೀವನದ ಏಣಿಯನ್ನು ಏರುವುದೂ ಅಷ್ಟೇ ಕಷ್ಟ. ಪ್ರತಿಯೊಂದು ಮೆಟ್ಟಲಿನಲ್ಲಿಯೂ, ಕಷ್ಟವೆಂಬ ಕಾಣದ ಹಾವುಗಳು ಕಚ್ಚಲು ಕಾತೊರೆದು ಕುಳಿತ್ತಿರುತ್ತವೆ”
ಮುಗ್ದ ಮನಸಿಗೆ ಅಮ್ಮನ ಮಾತಿನ ಪದಗಳ ಅರ್ಥವಾಗದಿದ್ದರೂ, ತಲೆಯನ್ನಾಲಿಡಿಸುತ್ತ, ಕೈಯಲ್ಲಿ ಗೆಳೆಯ ಇವಾನಿಗೊಂದು
ಬನ್ನನ್ನು ಹಿಡಿದುಕೊಂಡು, ಆಟವನ್ನು ಮುಂದುವರೆಸಲು ಮೇಲಿನ ಕೋಣೆಗೆ ಓಡಿಹೋದನು ಪೆಟ್ರೋ.

ಅವಳ ಮಾತಿನ ಅರ್ಥವನ್ನು ಗ್ರಹಿಸಿ, ಅವಳ ತಲೆಯಲ್ಲಿ ಏನು ತುಮುಲು ನಡೆದಿದೆ ಎಂಬುವುದನ್ನು ಅರ್ಥೈಸಿಕೊಂಡು, ತಟ್ಟೆಯಲ್ಲಿ ಆಹಾರವನ್ನು ಹಾಕಿಕೊಳ್ಳುತ್ತಾ ಪಕ್ಕದಲ್ಲಿಯೇ ಕುಳಿತಿದ್ದ ಮರಿಯಾಗೆ,
“ನಿನ್ನ ಮನಸಿನ ದುಗುಡು ಅರ್ಥವಾಗುತ್ತಿದೆ. ಎಲ್ಲವೂ ಸರಿಯಾಗುತ್ತದೆ ಬಿಡು” ಎಂದು ಅವಳ ತಟ್ಟೆಗೂ ಆಹಾರವನ್ನು ಬಡಿಸಿದರು
ಲೂಸಿ.
“ಉದ್ಭವಿಸಿರುವ ಈ ದ್ವೇಷದ ಜ್ವಾಲೆ ಅಷ್ಟೊಂದು ಸುಲಭವಾಗಿ ಶಮನವಾಗುವದಿಲ್ಲವೆಂದು ಅನಿಸುತ್ತಿದೆ. ಹಿಂದಿನ ವಾರ ಲಂಡನ್
… ಈ ವಾರ ಗ್ಲ್ಯಾಸ್ಗೋ … ಮುಂದಿನ ವಾರ ಸ್ಟಾರ್ಲಿಂಗ್ … ಹಾಗೆಯೇ ಪಟ್ಟಿ ಉದ್ದವಾಗುತ್ತಲೇ ಹೋಗುತ್ತಿದೆ. ಭಾಗವಹಿಸುತ್ತಿರುವವರ ಸಂಖ್ಯೆ ಲಕ್ಷಗಂಟೆಲೆ ಬೆಳೆಯುತ್ತಲೇ ಇದೆ. ಇದು ನನ್ನಂತ ವಲಸಿಗರಿಗೆ ಚಿಂತೆಯ ವಿಷಯವಲ್ಲವೇ
ಸಿಸ್ಟೆರ್?” ಎಂತೆಂದಳು ಮರಿಯಾ.
“ನಿನಗೊಬ್ಬಳಿಗೇಕೆ? ನನ್ನಂತ ಸಾಮಾನ್ಯ ಜೀವಿಗೂ ಇದು ಚಿಂತೆಯ ವಿಷಯವಲ್ಲವೇ? ಇದಷ್ಟೇ ಏಕೆ? ಈಗ ಜಗತ್ತಿನಲ್ಲಿ
ನಡೆಯುತ್ತಿರುವ ವಿದ್ಯಮಾನವೆಲ್ಲವೂ ಚಿಂತೆಯ ಹಂದರವಲ್ಲವೇ? ಜಾತಿ, ಧರ್ಮ, ಪಂಗಡ, ಬಣ್ಣ ಎಲ್ಲದರಲ್ಲೂ ಪರದಾಟ
ಬಡಿದಾಟ. ಎಲ್ಲೆಲ್ಲಿಯೂ ಪ್ರಚೋದನೆ, ಪ್ರತಿರೋಧ, ಪ್ರತೀಕಾರ. ಯುದ್ಧ, ಕ್ರಾಂತಿ, ಕೊಲೆ, ಕಡಿ ಬಡಿ ಎಂಬ ಅಂಧಃಕಾರದ ಕೇಕೆ.
ಮಾನವೀತೆಯ ಹರಣ, ಬರೀ ಮಾರಣಹೋಮ. ಮನಸುಗಳನ್ನರಿಯದೆ ಉಕ್ಕುತ್ತಿರುವ ಮತ್ಸರ, ತಾರಕಕ್ಕೇರುತ್ತಿರುವ
ತಾತ್ಸಾರದ ಅಪಸ್ವರ. ಯಾರು ಕಾರಣ? ರೂಢಿಯಾಗುತ್ತಿರುವ ವ್ಯವಸ್ಥೆಯೇ? ಮೃಗವಾಗುತ್ತಿರುವ ಮಾನವನೇ?”
ಭಾವುಕರಾಗಿ ಮನದ ಭಾವನೆಗಳನ್ನೆಲ್ಲಾ ಹೊರ ಹಾಕಿ, ಗಟ ಗಟನೆ ಒಂದು ಲೋಟ ನೀರನ್ನು ಕುಡಿದು ಕ್ಷಣಕಾಲ ತಟಸ್ಥರಾದರು
ಸಿಸ್ಟೆರ್ ಲೂಸಿ.
ಕ್ಷಣಕಾಲ ಆವರಿಸಿದ ಮೌನವನ್ನು ಮುರಿದು, ತಾನೂ ಒಂದು ಗುಟುಕು ನೀರು ನುಂಗಿ ಮರಿಯಾ,
“ಕಾರಣ ಹುಡುಕುವುದು ಎಷ್ಟು ಕಷ್ಟವೋ, ಹಾಗೆಯೇ ಅದರಿಂದಾಗುವ ಯಾತನೆಯನ್ನು ಅನುಭವಿಸುವುದು ಇನ್ನೂ ಕಷ್ಟವಲ್ಲವೇ ಸಿಸ್ಟರ್? ಯಾರು ಕಾರಣರೆಂದು ಯಾರಿಗೆ ಗೊತ್ತು?”
ಟೇಬಲ್ ಮೇಲಿದ್ದ ಬುಟ್ಟಿಯತ್ತ ಕಣ್ಣಾಡಿಸಿ,
“ಸಿಸ್ಟರ್! ಕೊಳೆತ ಒಂದು ಹಣ್ಣು ಸಾಕಲ್ಲವೇ ಆ ಬುಟ್ಟಿಯಲ್ಲಿರುವ ಹಣ್ಣುಗಳನ್ನೆಲ್ಲಾ ಹಾಳುಮಾಡಲಿಕ್ಕೆ ಹಾಗೆಯೇ, ಯಾರದೋ
ತಾತ್ಸಾರದ ಒಂದು ಕೂಗು ಸಾಕಲ್ಲವೇ ತಿರಸ್ಕಾರದ ಹೊಗೆಯನ್ನು ಹಬ್ಬಿಸಲಿಕ್ಕೆ”
ಸಿಸ್ಟರ್ ಲೂಸಿಯ ಪ್ಲೇಟಿನಲ್ಲಿದ್ದ ಖಾಲಿ ಲೋಟಕ್ಕೆ ಟೊಮ್ಯಾಟೋ ಸೂಪ್ ಸುರಿಯುತ್ತ ಮತ್ತೆ ಮಾತು ಮುಂದುವರೆಸಿದಳು,
“ನುಸುಳಿ ನುಗ್ಗುವ ನಿರಾಶ್ರಿತರು, ಹಾರಿ ಹರಿದು ಬರುವ ವಲಸಿಗರೆಲ್ಲರೂ ಒಳ್ಳೆಯವರೆಂದು ನಾನು ಹೇಳಲಾರೆ. ನಿಜವಾದ
ಆಶ್ರಯದ ಅವಶ್ಯಕತೆಯಿದ್ದವರು ಎಷ್ಟು ಜನ? ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುವವರು ಇನ್ನೆಷ್ಟು ಜನ? ಮೈ ಮುರಿದು ಬೆವರು ಸುರಿಸಿ ಬದುಕುವವರು ಎಷ್ಟು ಜನ? ದೊರಕುವ ಸಹಾಯದಿಂದ ಸೋಮಾರಿ ಕಟ್ಟೆಯಲ್ಲಿ ಕುಳಿತು ಬೀಡಿ ಸಿಗರೇಟ್ಸೇ ದುವವರು ಇನ್ನೆಷ್ಟು ಜನ? ಈ ನೆಲದಲ್ಲಿ ಹುಟ್ಟಿದ ನನಗೇನೇ ಎಲ್ಲ ಸ್ವಾತಂತ್ರ್ಯ ಎಂದು ಬೀಗುವವರು
ಮತ್ತೆಷ್ಟು ಜನ? ಪರಕೀಯಳಾಗಿ ಕಷ್ಟಪಟ್ಟು ದುಡಿದು ಬದಕುತ್ತಿದ್ದರೂ, ಇವರ ಆಕ್ರೋಶಕ್ಕೆ ಬಲಿಯಾಗುವ ನನ್ನಂತವರು ಇನ್ನೆಷ್ಟೋ ಜನ? ಎಲ್ಲಾ ನನ್ನ ಹಣೆಬರಹವಲ್ಲವೇ?” ಮಾತು ಮುಗಿಸಿ ಉದಾಸೀನತೆಯ ಉಸಿರನ್ನೆಳೆದಳು ಮರಿಯಾ.

” ರಾತ್ರಿ ಕೆಲಸ ಮಾಡಿ ಬಳಲಿರುವೆ ಹೋಗಿ ಮಲಗಿಕೊ. ಸಾಯಂಕಾಲ ಮಾತಾಡೋಣ” ಎಂತೆಂದು ತಮ್ಮ ಕೋಣೆಯತ್ತ ನಡೆದರು ಲೂಸಿ. ಬೆಳಿಗ್ಗೆ ಮುಸುಕಿದ್ದ ಮೋಡಗಳು ತೆರವಾಗಿ, ಆಕಾಶದಲ್ಲಿ ಸೂರ್ಯನು ಮತ್ತೆ ಪ್ರಜ್ವಲಿಸತೊಡಗಿದ್ದನು. ಸಂಜೆ ಆರು ಗಂಟೆಯಾಗಿದ್ದರೂ ನಿಖರವಾದ ಬೆಳಕು ಹಿತ್ತಲಿನಲ್ಲಿ ಇನ್ನೂ ನಗುತ್ತಲಿತ್ತು. ಮಾಡಿದ್ದ ಕಾಫಿಯನ್ನು ಕಪ್ಪಿಗೆ ಸುರುವುತ್ತ,
“ಸಿಸ್ಟರ್ ಕಾಫಿ ರೆಡಿ … ಪ್ಲೀಸ್ ಕಮ್” ಎಂದು ಮರಿಯಾ ಕೂಗುತ್ತಲಿದ್ದಳು.
ಕೋಣೆಯಿಂದ ಹೊರಬಂದ ಲೂಸಿ,
“ಓಹ್! ಎಷ್ಟೊಂದು ಸುಂದರವಾದ ಸಂಜೆ. ಕಮಾನ್ … ಗಾರ್ಡನ್ನಲ್ಲಿ ಕುಳಿತು ಕಾಫಿ ಹೀರೋಣ”
ಎಂದು ಇಬ್ಬರೂ ಹೊರ ನಡೆದರು. ಕುಕ್ಕೂ … ಕುಕ್ಕೂ … ಎಂದು ದೂರದಿಂದ ಕೇಳಿಬರುತ್ತಿದ್ದ ಪಕ್ಷಿಯ ಕೂಗನ್ನು ಅನುಕರಣೆ
ಮಾಡುತ್ತಾ ಪೆಟ್ರೋ ಕೂಡ ಗಾರ್ಡನ್ನನಲ್ಲಿ ಜಿಗಿದು ಆಟವಾಡತೊಡಗಿದನು.
“ಸಿಸ್ಟರ್! ಆ ಪಕ್ಷಿ ಎಷ್ಟೊಂದು ಚನ್ನಾಗಿ ಹಾಡುತ್ತಿದೆಯಲ್ಲ, ಬಹುಷಃ ದುಃಖವನ್ನೆಲ್ಲ ಮರೆತು”
ಕಾಫಿಯ ಗುಟುಕನ್ನು ಹೀರುತ್ತಾ ಲೂಸಿ ಅಂದರು,
“ಹೌದು, ಕುಕ್ಕು ಹಕ್ಕಿ, ಬಹಳ ಇಂಪಾಗಿ ಹಾಡುತ್ತೆ … ಬೇಸಿಗೆಯ ಮೂರು ತಿಂಗಳು ಇಲ್ಲಿ ಕಾಣಿಸಿಕೊಳ್ಳುತ್ತೆ … ಬಹುಷಃ
ಇನ್ನೊಂದಷ್ಟು ದಿನಗಳು … ಆ ಮೇಲೆ ಹಾರಿಹೋಗುತ್ತೆ”
ಮರಿಯಾ ಪ್ರಶ್ನಾರ್ತಿತವಾಗಿ ಅವರ ಮುಖವನ್ನು ನೋಡಿದಳು.
“ಹೌದು ಮರಿಯಾ ಇದು ವಲಸೆ ಹಕ್ಕಿ. ಇದಕ್ಕೆ ತನ್ನದೇ ಆದ ದೇಶವಿಲ್ಲ. ಅನಾನುಕೂಲವಾದ ಜಾಗದಿಂದ ಅನುಕೂಲವಾದ ಜಾಗಕ್ಕೆ ಆಗಾಗ್ಗೆ ಹಾರುತ್ತಲೇ ಇರುತ್ತದೆ. ಹೊಸ ಜಾಗ ತನ್ನದೇ ಎಂದು ಭಾವಿಸಿ ಅದರ ಸವಿಯೊಂದಿಗೆ ಸಂತೋಷವಾಗಿ ಹಾಡುತ್ತ ಕಾಲ ಕಳೆಯುತ್ತೆ. ತನ್ನದೇ ಆದ ಗೂಡು ಇರದಿದ್ದರೂ, ಬೇರೆಯವರ ಗೂಡಿನಲ್ಲಿ ಮರಿ ಹುಟ್ಟಿಸಿ, ಪ್ರತಿಕೂಲವಾದ ಸಮಯ ಎದುರಾಗುವ ಮುನ್ನವೇ ಜಾಗವನ್ನು ಖಾಲಿ ಮಾಡುತ್ತೆ” ಎಂದು ಕುಕ್ಕುವಿನ ಬಗ್ಗೆ ತಮಗೆ ತಿಳಿದಿದ್ದ ವಿಷಯವನ್ನು ಹರಿಬಿಟ್ಟರು ಲೂಸಿ.
“ಓಹ್! ಇದು ನನಗೆ ಗೊತ್ತೇ ಇರಲಿಲ್ಲ. ಇಂಪಾಗಿ ಹಾಡಿದರೂ ಇದೆಂತ ಸ್ವಾರ್ಥ ಕಪಟ ಹಕ್ಕಿ” ಎಂದು ಉದ್ಘಾರ ತೆಗೆದಳು
ಮರಿಯಾ.

“ನೋ! ಅದು ಕಪಟ ಹಕ್ಕಿ ಅಲ್ಲಾ, ಬದುಕುವುದು ಹೇಗೆಂದು ಚನ್ನಾಗಿ ಅರಿತಿರುವ ಜಾಣ ಹಕ್ಕಿ. ಜಾಣರೂ ಸಹ ಸಮಯಕ್ಕೆ ತಕ್ಕಂತೆ
ಸ್ವಾರ್ಥಿಗಳು ಎಂಬುವದನ್ನು ಮರೆಯಬೇಡ ಮರಿಯಾ. ಕಾಫಿ ಆರಿ ಹೋಗುತ್ತೆ ಕುಡಿದು ಬಿಡು” ಎಂದು ಕಪ್ಪನ್ನು ಅವಳತ್ತ ಸರಿಸಿದರು ಲೂಸಿ.

ಇನ್ನೂ ಜೋರಾಗಿ ಕೇಳಿಬರುತ್ತಲಿದ್ದ ಆ ಹಕ್ಕಿಯ ಕುಕ್ಕು ಹಾಡನ್ನು ಆಲಿಸುತ್ತ ಕಾಫಿಯನ್ನು ಮುಗಿಸಿದಳು ಮರಿಯಾ.
“ನಿನಗೊಂದು ಹೊಸ ಸುದ್ಧಿ. ನನ್ನ ಸಂಘಟನೆಯಿಂದ ಕರೆ ಬಂದಿತ್ತು. ಮುಂದಿನ ಶನಿವಾರ ಈ ದಿನ ನಡೆದ ಪ್ರತಿಭಟನೆಗೆ
ಪ್ರತಿಕಾರವಾಗಿ ನಮ್ಮಂತ ಎಲ್ಲ ಸಂಘಟನೆಯವರಿಂದ ಪ್ಪ್ರತಿಭಟನೆ ಇದೆ. ಕೆಲಸಕ್ಕೆ ಚಕ್ಕರ್ ಹೊಡೆದು ಬಂದು ಬಿಡು. ನಮ್ಮ
ಭಲವೂ ಬಲಿಷ್ಠವಿದೆ ಎಂದು ತೋರಿಸಬೇಕಾಗಿದೆ” ಎಂತೆಂದರು ಲೂಸಿ.
“ಈ ನಾಡಿನಲ್ಲಿ ಹುಟ್ಟಿದವರ ಚಿಂತನೆಗಳ ಜೊತೆಗೆ ಪ್ರತಿರೋಧ ವ್ಯಕ್ತ ಪಡಿಸುವ ಹಕ್ಕು, ಎಲ್ಲಿಂದಲೋ ಬಂದಿರುವ ನಮಗೂ
ಇದೆಯೇ ಸಿಸ್ಟರ್”
“ಹುಟ್ಟಿದ ಜೀವಿಗಳಿಗೆಲ್ಲವೂ ಭೂಮಿಯ ಮೇಲೆ ಬದುಕುವ ಹಕ್ಕು ಇದೆ ಎಂಬುವುದನ್ನು ಮರೆಯಬೇಡ ಮರಿಯಾ.
ಕತ್ತಲಾಗತೊಡಗಿದೆ ಒಳ್ಳೆಯ ಡಿನ್ನರ್ ಮಾಡೋಣ ಬಾ”ಎಂದು ಮೇಲೆದ್ದರು ಸಿಸ್ಟರ್ ಲೂಸಿ.
ಸಿಸ್ಟರ್ ಹೇಳಿದ ಮಾತು ಸರಿಯೆನಿಸಿದರೂ, ಹೋಗುವುದೋ ಬೇಡವೋ ಎಂಬ ದ್ವಂದ್ವದಲ್ಲಿ ವಾರವು ಉರುಳಿ ಹೋಗಿದ್ದು
ಮರಿಯಾಗೆ ಗೊತ್ತೇ ಆಗಿರಲಿಲ್ಲ. ಇನ್ನೊಂದು ಶನಿವಾರದ ಮುಂಜಾನೆ … ಅದೇ ಸ್ಥಳ, ಅದೇ ಬೀದಿ, ಜನರು ಬೇರೆ,
ಘೋಷಣೆಗಳು ಬೇರೆ, ಉದ್ದೇಶ ಬೇರೆ. ಪ್ರತಿಭಟನೆಕಾರಕ್ಕಿಂತ ಪೊಲೀಸರ ಸಂಖ್ಯೆಯೇ ಜಾಸ್ತಿ ಎನಿಸಿತು ಮರಿಯಾಗೆ. ‘ಕಳೆದ
ವಾರ ಸೇರಿದ ಜನಸಾಗರವೆಲ್ಲಿ? ಈಹೊತ್ತಿನ ಗುಂಪೆಲ್ಲಿ? ಆದರೂ ಮನಸುಗಳನ್ನರಿತು ಮಾನವೀತೆಯನ್ನು ಮೆರೆಯುವ
ಇಷ್ಟಾದರೂ ಜನರಿದ್ದಾರಲ್ಲ’ ಎಂದು ಮನದಲ್ಲಿಯೇ ನೆಮ್ಮದಿಯ ಉಸಿರನ್ನೆಳೆದಳು ಮರಿಯಾ. ಶಾಂತಿಯುತವಾಗಿ ನಡೆದ
ಪ್ರತಿಭಟನೆ ಇಳಿ ಸಂಜೆಹೊತ್ತಿಗೆ ಮುಗಿದು ಹೋಗಿತ್ತು. ಮನೆಗೆ ಮರಳೋಣವೆಂದು ಯೋಚಿಸುತ್ತಿದ್ದ ಮರಿಯಾಗೆ,
“ವಾಟ್ ಎ ಲವ್ಲೀ ಡೇ, ಹತ್ತಿರವಿರುವ ಕ್ಲೈಡ್ ನದಿಯ ದಂಡೆಯಲ್ಲಿ ಸ್ವಲ್ಪ ಹೊತ್ತು ಸುತ್ತಾಡಿಕೊಂಡು ಹೋಗೋಣವೆ?” ಎಂತೆಂದರು ಲೂಸಿ.
“ಅವಶ್ಯವಾಗಿ ಸಿಸ್ಟರ್! ಆ ನದಿಯ ದಂಡೆಯನ್ನು, ಅಲ್ಲಿ ತಂಗಿದ್ದ ಆ ಹಡಗನ್ನು ಜೀವನದಲ್ಲಿ ಮರೆಯಲು ಸಾಧ್ಯವೇ?” ಎಂದು
ಅವರನ್ನು ಹಿಂಬಾಲಿಸಿದಳು ಮರಿಯಾ. ಮೂರು ವರ್ಷಗಳ ಹಿಂದೆ ಉಕ್ರೈನಿನಿಂದ ಬಂದ ನಿರಾಶ್ರಿತರಿಗೆ, ಕ್ಲೈಡ್ ನದಿಯ
ದಂಡೆಯಲ್ಲಿ ಸ್ಕಾಟ್ಲೆಂಡ್ ಸರಕಾರವು ‘ಎಂ ಎಸ್ ಅಂಬಿಷನ್’ ಎಂಬ ದೊಡ್ಡ ಪ್ರವಾಸಿ ಹಡಗವನ್ನು ಕಟ್ಟಿ ಹಾಕಿ, ತಾತ್ಕಾಲಿಕ
ನೆಲೆಯನ್ನು ಒದಗಿಸಿದ್ದೂ, ವರ್ಷ ಕಾಲ ಪೆಟ್ರೋನೊಂದಿಗೆ ಅದೇ ಹಡಗಿನಲ್ಲಿ ಜೀವನ ಕಳೆದಿದ್ದೂ ಅವಳ ಮನಸಿನಲ್ಲಿ ಇನ್ನೂ ಹಚ್ಚು ಹಸಿರಾಗಿ ಉಳಿದಿತ್ತು. ನದಿಯತ್ತ ಒಮ್ಮೆ ಕಣ್ಣಾಡಿಸಿ ಮರಿಯಾ,
“ಸಿಸ್ಟರ್! ಅವೇ ಅಲೆಗಳು, ಅದೇ ದಂಡೆ, ಅದೇ ಓಡಾಡುವ ಜನರು ಆದರೆ, ಕಟ್ಟಿ ಹಾಕಿದ್ದ ಹಡಗು ಮಾತ್ತ್ರ ಕಾಣೆಯಾಗಿದೆ.
ಸೆರೆಯಿಂದ ಬಿಡುಗಡೆಯಾಗಿ ಸಂತೋಷದಿಂದ ಸಾಗರದಲ್ಲಿ ತೇಲುತ್ತಿರಬಹುದಲ್ಲವೇ?”

“ಜೀವನವೂ ಹಾಗೇಯಲ್ಲವೇ ಮರಿಯಾ! ನಿಂತ ನೀರಾಗಬಾರದು, ಹರಿಯಿತ್ತುರುವ ನದಿಯಾಗಬೇಕು, ತೇಲುತ್ತಿರುವ
ನೌಕೆಯಾಗಿ, ಬೇಕಿದ್ದ ದಡವನ್ನು ಸೇರಲೇಬೇಕು. ಸರಿ! ಸಂಜೆಯಾಗುತ್ತಿದೆ, ಪೆಟ್ರೋ ಇವಾನನ ಮನೆಯಲ್ಲಿ ಕಾಯುತ್ತಿರುವನು
ಮತ್ತೆ ಇನ್ನೊಂದು ದಿನ ಬರೋಣ” ಎಂದು ಸಿಸ್ಟರ್ ಲೂಸಿ ಕಾರಿನತ್ತ ನಡೆದರು.
ರಾತ್ರಿಯ ಹೊತ್ತಿನಲ್ಲಿ ಸಿಸ್ಟರ್ ಲೂಸಿಯ ಮನೆಯ ಬಾಗಿಲಿಗೆ ಯಾರೋ ಮೊಟ್ಟೆಗಳನ್ನೆಸೆದು ‘ಬೀ ಕೇರ್ಫುಲ್’ ಎಂದು ಗೋಡೆಯ
ಮೇಲೆ ಬರೆದು ಹೋಗಿದ್ದರು. ಇದನ್ನು ಕಂಡು ಮರಿಯಾ ದಂಗಾಗಿ ಹೋಗಿದ್ದಳು. ಸಿಸ್ಟರ್ ಲೂಸಿ ಜೋರಾಗಿ ಕಿರುಚಾಡುತ್ತಿದ್ದರು,
“ಈ ಕಿತಾಪತಿಯೆಲ್ಲವೂ ಆ ಕೌನ್ಸಿಲ್ ಹೌಸಿನ ಮಕ್ಕಳದೇ. ಕುಳಿತು ಪುಕಸಟ್ಟೆ ತಿನ್ನಲು ಗೊತ್ತು. ಸಂಸ್ಕಾರವಿಲ್ಲಾ, ಸಂಸ್ಕೃತಿಯಿಲ್ಲ.
ನಾನೇನು ಸುಮ್ಮನೆ ಬಿಡುವುದಿಲ್ಲ. ಪೊಲೀಸರಿಗೆ ಫೋನು ಮಾಡುತ್ತೇನೆ. ಅವರಿಗೆ ತಕ್ಕ ಪಾಠ ಕಲಿಸುತ್ತೇನೆ” ಏನಾಗಿದೆ ಎಂಬ
ಅರಿವಾಗದಿದ್ದರೂ, ಲೂಸಿಯ ಇಂತ ಕಿರುಚಾಟವನ್ನು ಎಂದೂ ಕಾಣದಿದ್ದ ಪೆಟ್ರೋ ಭಯಭೀತನಾಗಿ ಮೂಲೆಯಲ್ಲಿ ನಿಂತು
ಅವರನ್ನೇ ನೋಡುತ್ತಲಿದ್ದನು. ಪೆಟ್ರೋನ ತಲೆಯನ್ನು ಸವರುತ್ತ ಮರಿಯಾ,
“ಸಿಸ್ಟರ್! ಸಾರೀ, ನನ್ನಿಂದ ನಿಮಗೆ ಇಷ್ಟೊಂದು ತೊಂದರೆಯಾಗುತ್ತಿದೆ. ನಾನೇ ಬೇರೆ ಕಡೆಗೆ ಹೋದರೆ ಹೇಗೆ ಎಂದು
ಯೋಚಿಸುತ್ತಿರುವೆ”
“ಬೇರೆಕಡೆಯಲ್ಲಿ ಇಂತವರು ಇರುವದಿಲ್ಲ ಎಂದು ಅಂದುಕೊಂಡಿರುವೆಯಾ? ಇಂತ ಕಿತಾಪತಿಗಳಿಗೆ ಎಲ್ಲಿಯಾದರೂ ಕೊರತೆ
ಏನು? ನೀನೇನು ಹೆದರಿಕೊಳ್ಳಬೇಡ. ಇಂತವರನ್ನು ಜೀವನದಲ್ಲಿ ಎಷ್ಟೋ ಕಂಡಿರುವೆ. ನೀನು ಧೈರ್ಯದಿಂದಿರು, ನಾನು ಎಲ್ಲ ಸರಿ
ಮಾಡುತ್ತೇನೆ” ಎಂತೆಂದು ಪೆಟ್ರೋನ ಕೆನ್ನೆಯನ್ನು ಸವರಿದರು ಲೂಸಿ.


ದೇಶದ ವಿವಿದೆಡೆಯಲ್ಲಿ, ಪಕ್ಕದ ದೇಶಗಳಲ್ಲಿ ನಡೆಯುತ್ತಿರುವ ಇಂತಹ ಘಟನೆಗಳ ವಿವರಗಳು ಟಿವಿ ಯಲ್ಲಿ, ಅಂತರ್ಜಾಲದಲ್ಲಿ
ದಿನಾಲೂ ಹರಿದಾಡತೊಡಗಿದ್ದವು. ಮರಿಯಾಗೆ ನಿರಾಳವಾಗಿ ಅಡ್ಡಾಡಲೂ ಕೂಡಾ ಭಯವಾಗತೊಡಗಿತ್ತು. ಯುದ್ಧ ನಿರಾಶ್ರಿತರ
ಬಗ್ಗೆ ಮೊದಲಿದ್ದ ಜನರ ಕನಿಕರ ಕಾಲ ಕಳೆದಂತೆ ಮರೆಯಾಗುತ್ತಿದೆ ಎಂಬ ವಿಷಯ ಅವಳಿಗೆ ಮನದಟ್ಟಾಗತೊಡಗಿತ್ತು.
ಆಕ್ರೋಶದೊಂದಿಗೆ ಅಸಮಾಧಾನದ ಹೊಗೆಯನ್ನು ಹೊರಹಾಕುತ್ತಿರುವವರು ಹದಿ ಹರೆಯದ ಭಾವಿ ನಾಗರೀಕರೆಂಬುವುದು
ಅವಳ ಸೂಕ್ಷ್ಮ ಮನಕ್ಕೆ ಆಗಲೇ ಅರಿವಾಗಿತ್ತು. ಅವರಾದರೂ ಎಷ್ಟು ದಿನವೆಂದು ಸಹಿಸಿಕೊಂಡಾರು?
ಹಾಗಾದರೆ, ನನ್ನಂತ ನಿರಾಶ್ರಿತ ವಲೆಸಿಗರ ಭವಿಷ್ಯವೇನು? ಮನುಷ್ಯನೇ ರೂಪಿಸಿರುವ ಈ ಮಾನವೀಯ ಭಿಕ್ಕಟ್ಟಿಗೆ
ಪರಿಹಾರವೇನು? ಭವಿಷ್ಯವನ್ನು ನಾನೇ ರೂಪಿಸಿಕೊಳ್ಳಬೇಕು, ಪರಿಹಾರವನ್ನು ನಾನೇ ಕಂಡುಕೊಳ್ಳಬೇಕು ತಾನೇ?
ಯಾವುದೇ ಕಾರಣವಿರಲಿ, ಬಂದಿದ್ದು ನನ್ನ ತಪ್ಪಲ್ಲವೇ? ನನಗೂ ಸ್ವಾಭಿಮಾನ, ಸ್ವಂತ ಕಾಲಮೇಲೆ ನಿಂತು ಬದುಕುವ ಸಾಮರ್ಥ್ಯ
ಇದೆಯಲ್ಲವೇ? ಬದಲಾವಣೆ ಪ್ರಕೃತಿಯ ನಿಯಮ, ಅದರ ಜೊತೆಗೆ ತಾನೂ ಬದಲಾಗಬೇಕಲ್ಲವೇ? ಸಿಸ್ಟರ್ ಹೇಳಿದಂತೆ
ಜೀವನವು ನಿಂತ ನೀರಾಗಬಾರದಲ್ಲವೇ? ಅವಳ ಮನಸಿನಲ್ಲಿ ಇಂತ ಸಾವಿರಾರು ಆಲೋಚನೆಗಳು ಸುತ್ತತೊಡಗಿದ್ದವು.
ಅದೊಂದು ಸಂಜೆ ಮನೆಯ ಗಾರ್ಡನ್ನಲ್ಲಿ ಸಿಸ್ಟರ್ ಲೂಸಿ ಜೊತೆಗೂಡಿ ಕಾಫಿ ಕುಡಿಯುತ್ತಿದ್ದಾಗ ಮರಿಯಾ ಮಾತೆತ್ತಿದಳು ,

“ಸಿಸ್ಟರ್! ನಿಮ್ಮ ಸಹಾಯಕ್ಕೆ ನಾನು ಚಿರಋಣಿ. ಮನಸ್ಸನ್ನು ಉಕ್ರೈನಿನಲ್ಲಿ ಬಿಟ್ಟು, ದೇಹವನ್ನು ಸ್ಕಾಟ್ಲೆಂಡಿನಲ್ಲಿ ಇಟ್ಟು, ಇಲ್ಲಿಯೇ
ಬದುಕು ಕಟ್ಟಿಕೊಳ್ಳೋಣವೆಂದು ಬಯಸಿದ್ದೆ. ಆದರೆ ಇತ್ತೀಚಿನ ಘಟನೆಗಳಿಂದ, ಪರಕೀಯರ ಮೇಲೆ ಅಲ್ಲಲ್ಲಿ ನಡೆಯುತ್ತಿರುವ
ಹಲ್ಲೆಗಳನ್ನು ಕಂಡು, ಯಾಕೋ ಬೀದಿಯಲ್ಲಿ ನಡೆಯುತ್ತಿದ್ದರೆ ಎಲ್ಲರೂ ತನ್ನನ್ನೇ ನೋಡುತ್ತಿರಬಹುದೇನೋ, ಕೆಲಸದಲ್ಲಿ ಇದ್ದರೆ ಸಹದ್ಯೋಗಿಗಳೆಲ್ಲ ತನ್ನ ಬಗ್ಗೆನೇ ಮಾತನಾಡಬಹುತ್ತಿರುವರೇನೋ , ಪೆಟ್ರೋನನ್ನು ಯಾರಾದರೂ ಎತ್ತಿಕೊಂಡುಹೋಗಬಹುದೇನೋ, ಯಾರೋ ಅಸಡ್ಡೆ ಹುಡುಗರು ತನ್ನ ಮೇಲೆ ಹಲ್ಲೆಮಾಡಬಹುದೇನೋ ಎಂದೆನಿಸುತ್ತಿದೆ. ಇಂತಹ ಮಾನಸಿಕ ವೇದನೆಯಲ್ಲಿ ಹೀಗೆಯೇ ಎಷ್ಟೊಂದು ದಿನ ಬದುಕುವುದು? ಇಂತಹ ವಾತಾವರಣದಲ್ಲಿ ಪೆಟ್ರೋನನ್ನು ಹೇಗೆ ಬೆಳಸುವುದು? ಎಂದು ದಿನಾಲೂ ಯೋಚಿಸಿ ಸಾಕಾಗಿಹೋಗಿದೆ”
ಲೂಸಿ ಅವಳ ಮುಖವನ್ನೇ ನೋಡುತ್ತಾ,
“ಮರಿಯಾ ನೀನು ಧೈರ್ಯವಂತೆ ಎಂದು ಅಂದುಕೊಂಡಿದ್ದೆ”
“ಸಿಸ್ಟರ್! ಭೀತಿಯಿಂದ ನನ್ನ ದೇಶವನ್ನು ಬಿಟ್ಟು ಪಲಾಯನಗೈಯುವಾಗ ಹೇಡಿಯಾಗಿದ್ದೆ. ಯುದ್ಧದಲ್ಲಿ ಧುಮುಕುತ್ತಿರುವ ಸಾವಿರ
ಹೆಂಗಳೆಯರಂತೆ, ನಾನೂ ಸಹ ಸೈನ್ಯವನ್ನು ಸೇರಿ ವೈರಿಗಳನ್ನು ಎದುರಿಸುವದನ್ನು ಬಿಟ್ಟು ಓಡಿ ಬಂದಿದ್ದಕ್ಕೆ ನಾಚಿಕೆಯಾಗುತ್ತಿದೆ.
ಈ ಮೂರು ವರ್ಷದಲ್ಲಿ ಜೀವನವು ಸಾಕಷ್ಟು ಪಾಠವನ್ನು ಕಲಿಸಿದೆ, ಈಗ ಧೈರ್ಯವಂತೆಯಾಗಿರುವೆ. ಅನಿಶ್ಚಿತತೆಯಲ್ಲಿ ಪೆಟ್ರೋನ
ಬಾಳನ್ನು ರೂಪಿಸಲು ಮನಸಿಲ್ಲ. ಅದಕ್ಕೆ, ಧೈರ್ಯದಿಂದ ಉಕ್ರೈನ್ನಗೆ ಮರಳಿ ಹೋಗಬೇಕೆಂದು ನಿರ್ಧರಿಸಿರುವೆ”
“ಅನಿಶ್ಚಿತತೆ ಅಲ್ಲಿ ಇಲ್ಲ ಎಂದು ಅಂದುಕೊಂಡಿರುವೆಯಾ?” ಎಂತೆಂದರು ಲೂಸಿ.
ಅನಿಶ್ಚಿತತೆ ಎಲ್ಲ ಕಡೆಯಲ್ಲಿಯೂ ಹಬ್ಬಿಕೊಂಡಿದೆ ಸಿಸ್ಟರ್! ಆದರೆ,
ಏನೇ ಆದರೂ ಅದು ನನ್ನ ದೇಶ ತಾನೇ? ನನಗೆ ಅಲ್ಲಿ ಹೊರಗೆ ಹೋಗು ಅನ್ನುವವರು ಯಾರು? ಇಂತ ಮಾನಸಿಕ ಅಸ್ಥಿರತೆಯಲ್ಲಿ
ಇಲ್ಲಿ ಬಾಳುವುದಕ್ಕಿಂತ, ಗಂಜಿಯನ್ನಾದರೂ ಕುಡಿದು ನನ್ನ ಸ್ವಂತ ದೇಶದಲ್ಲಿ ಬಾಳುವುದೇ ಲೇಸು ಎಂಬ ನಿರ್ಧಾರಕ್ಕೆ ಬಂದಿರುವೆ”
“ನಿರ್ಧಾರ ತೆಗೆದುಕೊಳ್ಳಲು ನೀನು ಸ್ವತಂತ್ರೆ. ನೀನು ಏನೇ ನಿರ್ಧಾರ ತೆಗೆದುಕೊಂಡರೂ ಯೋಚಿಸಿ ತೆಗೆದುಕೊಂಡಿರುವೆ ಎಂದು
ನಂಬಿರುವೆ. ಆದರೆ, ಮತ್ತೊಮ್ಮೆ ಯೋಚಿಸು ಎಂಬುವುದೇ ನನ್ನ ಸಲಹೆ”
“ಸಿಸ್ಟರ್! ಬಹಳೇ ಯೋಚಿಸಿ ಈ ನಿರ್ಧಾರಕ್ಕೆ ಬಂದಿರುವೆ”
ಮರಿಯಾಳ ಮುಖದಲ್ಲಿ ಕಾಣುತ್ತಿರುವ ಗಟ್ಟಿತನವನ್ನು ಕಂಡು ಲೂಸಿ,
“ಹಾಗಾದರೆ ನನ್ನನ್ನು, ಈ ದೇಶವನ್ನು ಮರೆತು ಬಿಡುವೆಯಾ?”
“ಸಿಸ್ಟರ್! ಕತ್ತಲೆಯಾಗಿದ್ದ ನನ್ನ ಬಾಳಿನಲ್ಲಿ ಆಶಾಕಿರಣವಾಗಿ ಬಂದವರು ನೀವು ಮತ್ತು ಈ ದೇಶಾ. ಏಳೇಳು ಜನುಮದಲ್ಲಿಯೂ
ನಿಮ್ಮನ್ನು ಮರೆಯಲು ಸಾಧ್ಯವೇ? ನಾನು ಮತ್ತು ಪೆಟ್ರೋ ಬದುಕಿರುವುದೇ ನಿಮ್ಮಿಂದ. ದಿನಾಲೂ ನಿಮ್ಮ ಹೆಸರನ್ನು ನೆನೆದು
ನಾವಿಬ್ಬರೂ ಜೀವನ ಮಾಡುತ್ತೇವೆ. ಖಂಡಿತ ನಿಮ್ಮನ್ನು ನೋಡಲು ಬರುತ್ತೇವೆ ಆದರೆ, ನಿರಾಶ್ರಿತರಾಗಿಯಲ್ಲ ಪ್ರವಾಸಿಕರಾಗಿ”
ಅಷ್ಟರಲ್ಲಿಯೇ ಸಪ್ಪೆ ಮುಖಹಾಕಿಕೊಂಡು ಬಂದ ಪೆಟ್ರೋ,
“ಅಮ್ಮಾ, ಯಾಕೋ ಕುಕ್ಕು ಹಕ್ಕಿ ಹಾಡ್ತಾ ಇಲ್ಲಾ” ಎಂದು ಬೇಸರವ್ಯಕ್ತಪಡಿಸಿದನು. ಅವನ ಮುಗ್ದ ಮೊಗವನ್ನೇ ನೋಡುತ್ತಾ
ಮರಿಯಾ,

“ಮಗು, ಕೇಳದೇ ಬಂದಿದ್ದ ಕುಕ್ಕು ಹಕ್ಕಿ, ಪ್ರತಿಕೂಲತೆ ಉದ್ಭವಿಸುವ ಮುನ್ನವೇ, ಯಾರಿಗೂ ಹೇಳದೆಯೇ ಹಾರಿ ಹೋಗಿದೆ” ಎಂದು
ಆಕಾಶದತ್ತ ನೋಡಿದಳು. ಅಮ್ಮನ ಮಾತಿನ ಅರ್ಥವಾಗದ ಪೆಟ್ರೋ ಲೂಸಿಯವರ ಮುಖವನ್ನೇ ನೋಡುತ್ತಾ ನಿಂತನು.

———– ಡಾ. ಶಿವಶಂಕರ್ ಮೇಟಿ

ಗೋವಾ ಎಕ್ಸ್ ಪ್ರೆಸ್

ಕನ್ನಡ ಕರಾವಳಿಯವರಿಗೆ ರೈಲು ಮಾರ್ಗ ಕನಸಿನ ಕೂಸೇ ಆಗಿತ್ತು. ಅದು ನನಸಾಗಿದ್ದು ೧೯೯೮ ರಲ್ಲಿ ಕೊಂಕಣ್ ರೈಲು ಹಾದಿಯಲ್ಲಿ ದಶಕಗಳ ಕಾಲದಿಂದಲೂ ಕಾತುರದಿಂದ ಕಾಯುತ್ತಿದ್ದ ರೈಲು ಮುಂಬಯಿಯಿಂದ ಮಂಗಳೂರಿನ ಮಾರ್ಗವಾಗಿ ನೇತ್ರಾವತಿ ಎಕ್ಸ್ಪ್ರೆಸ್ಸಿನ ರೂಪದಲ್ಲಿ ಹರಿದುಬಂದಾಗ. ಕರಾವಳಿಯಲ್ಲಿ ಅಲ್ಲಿಯವರೆಗೂ ಬಸ್ಸು , ಕಿಕ್ಕಿರಿದು ತುಂಬಿದ ಟ್ಯಾಕ್ಸಿ, ಟೆಂಪೋಗಳದ್ದೇ ಗಡದ್ದು ಕಾರುಬಾರು. ಮಂಗಳೂರನ್ನು ಬಿಟ್ಟರೆ ಬೇರೆ ವಿಮಾನ ನಿಲ್ದಾಣವೂ ಇಲ್ಲ. ಅಲ್ಲೇ ಹುಟ್ಟಿ ಬೆಳೆದವರು ಕೇವಲ ಪತ್ರಿಕೆಗಳಲ್ಲಿ / ಪುಸ್ತಕಗಳಲ್ಲಿನ ಚಿತ್ರದಲ್ಲಿ ಮಾತ್ರ ರೈಲನ್ನು ಕಂಡಿರಬಹುದು. ವಿಶೇಷವೆಂದರೆ ಕನ್ನಡದಲ್ಲಿ ರೈಲಿನ ಕುರಿತಾದ ಶಿಶುಗೀತೆಗಳೂ ಇರಲಿಲ್ಲ. ಈ ಹಿನ್ನಲೆಯಲ್ಲಿ ಬೆಳೆದು ಬಂದ ನನ್ನಂಥವನಿಗೆ ರೈಲು ಅದ್ಯಾವ ಮೋಡಿ ಹಾಕಿತ್ತೋ ಭಗವಂತನೇ ಬಲ್ಲ. ಕಾಲಮಾನಗಳ ನಂತರ ಬರಡಾದ ಮರುಭೂಮಿಯಲ್ಲಿ ಮಳೆ ಬಂದ ಮೇಲೆ ಹಸಿರೊಡೆಯುವಂತೆ, ಕಾಲೇಜಿನ ಕೊನೆಯ ದಿನಗಳಲ್ಲಿ ಮೊದಲ ಬಾರಿ ಮಾಡಿದ ಎರಡು ದಿನಗಳ ಕಾಲದ ರೈಲು ಯಾತ್ರೆಯಿಂದ ರೈಲಿನ ಆಕರ್ಷಣೆಯನ್ನು ನೂರ್ಪಟ್ಟು ಹಿಗ್ಗಿಸಿದೆ. ಈ ಯಾತ್ರೆಯ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಇದು .

೧೯೯೩ ರ ನವೆಂಬರ್, ದೆಹಲಿಯಿಂದ ಕೇಂದ್ರ ಲೋಕ ಸೇವಾ ಆಯೋಗದ ಸಂದರ್ಶನಕ್ಕೆ ಕರೆ ಬಂದಿತ್ತು. ನಮ್ಮ ಕ್ಲಾಸಿನ ನಾಲ್ಕು ವಿದ್ಯಾರ್ಥಿಗಳಿಗೆ ಸಿಕ್ಕಿದ ಅವಕಾಶವದು. ಹುಬ್ಬಳ್ಳಿಯಿಂದ ದೆಹಲಿಗೆ ಪ್ರಯಾಣ ಮಾಡಬೇಕೆಂದರೆ ರೈಲೇ ಅನುಕೂಲಕರ ಮಾರ್ಗವಾಗಿತ್ತು. ಆಗಿನ್ನೂ ಉತ್ತರ ಕರ್ನಾಟಕದಲ್ಲಿ ಬ್ರಾಡ್ ಗೇಜ್ ರೈಲು ಮಾರ್ಗವಿರಲಿಲ್ಲ. ಕರಾವಳಿಯಲ್ಲಿ ಹಳಿಯೇ ಹಾಕಿರಲಿಲ್ಲ, ಬೆಂಗಳೂರು ಬಿಟ್ಟರೆ ಕರ್ನಾಟಕದ ಕಡೆ ಬ್ರಾಡ್ ಗೇಜ್ ಹಣಕಿಯೂ ಹಾಕಿರಲಿಲ್ಲ. ಇದು ಅಂದಿನ ಕರ್ನಾಟಕದ ರೈಲಿನ ಪರಿಸ್ಥಿತಿ! ಹುಬ್ಬಳಿಯಿಂದ ರಾತ್ರೆ ಹೊರಟ ರೈಲು ಬೆಳಗಿನ ಜಾವ ಮಿರಜ್ ಜಂಕ್ಷನ್ ಸೇರುತ್ತಿತ್ತು. ಅಲ್ಲಿಂದ ರೈಲು ಬದಲಾಯಿಸಿದರೆ ಗಮ್ಯ ಸ್ಥಾನ ದೆಹಲಿಯ ಹಝರತ್ ನಿಜಾಮುದ್ದಿನ್ ನಿಲ್ದಾಣ ತಲುಪಲು ಅಧಿಕೃತವಾಗಿ ೪೨ ಘಂಟೆ ಬೇಕಿತ್ತು. ಹೈಸ್ಕೂಲಿನಲ್ಲಿರುವಾಗ ಅಳ್ನಾವರದಿಂದ ಗೋವಾಕ್ಕೆ ಎನ್.ಸಿ.ಸಿ ಕ್ಯಾಮ್ಪಿಗೆ ಹೋಗಿದ್ದೆ. ಅದು ಪಶ್ಚಿಮ ಘಟ್ಟವನ್ನು ಬಳಸಿ ದೂಧ್ ಸಾಗರ್ ಜಲಪಾತದ ತಪ್ಪಡಿಯಲ್ಲಿ ತೆವಳುತ್ತ ಸಾಗುವ ಅದ್ಭುತರಮ್ಯ ಹಾದಿ. ಕೆಲವೇ ಘಂಟೆಗಳ ಆ ಪ್ರಯಾಣ ನನಗೆ ರೈಲು ಪ್ರಯಾಣದ ಹುಚ್ಚು ಹಿಡಿಸಿತ್ತು. ಕಲ್ಲಿದ್ದಲಿನಿಂದ ಚಲಿಸುವ ಆ ಉಗಿಬಂಡಿಯಿಂದ ಇಳಿದಾಗ ಮುಖ, ಬಟ್ಟೆಯೆಲ್ಲ ಕಪ್ಪಾಗಿದ್ದರೂ ನನ್ನ ರೈಲು ಪ್ರಯಾಣದ ಉತ್ಸಾಹಕ್ಕೆ ಅದು ಬೂದಿ ಎರಚಲಿಲ್ಲ.

ರಾತ್ರೆ ಹೊದೆಯಲೊಂದು ಚಾದರ, ಒಂದು ಸಣ್ಣ ಸೂಟ್ ಕೇಸಿನಲ್ಲಿ ನಾಲ್ಕೈದು ಬಟ್ಟೆಗಳನ್ನು ತುರುಕಿದ್ದಷ್ಟೇ ನನ್ನ ತಯ್ಯಾರಿ. ನಾವು ಸ್ಲೀಪರ್ ಕೋಚನ್ನು ರಿಸರ್ವ್ ಮಾಡಿದ್ದೆವು. ಹಿಂದಿನ ಪ್ರಯಾಣದಲ್ಲಿ ಗಾಂಧಿ ಕ್ಲಾಸಿನ ಒರಟು ಮರದ ಬೆಂಚಿನಲ್ಲೇ ಪ್ರಯಾಣ ಮಾಡಿದ್ದ ನನಗೆ, ಮೆತ್ತನೆಯ ಮಡಚುವ ಸೀಟುಗಳನ್ನ ಕಂಡು ಮನ ಪುಳಕಿತಗೊಂಡಿತು. ಮತ್ತೆ ಮತ್ತೆ ಒತ್ತಿ ನೋಡಿ ಖುಶಿ ಪಟ್ಟುಕೊಂಡೆ. ಸೂಟ್ ಕೇಸನ್ನು ಸೀಟಿನ ಅಡಿಗೆ ನೂಕಿ, ಯಾರೂ ಕದ್ದೊಯ್ಯಬಾರದೆಂದು ಸರಪಳಿಯಿಂದ ಬಿಗಿದು ಬೀಗ ಜಡಿದು, ಎಳೆದು ನೋಡಿ ತೃಪ್ತಿಯಾದ ಮೇಲೆ ಬೀಗದ ಕೈಯನ್ನು ಜತನವಾಗಿ ಪ್ಯಾಂಟಿನ ಜೇಬಿಗಿಳಿಸಿ ಮೆತ್ತನೆಯ ಸೀಟಿನ ಮೇಲೆ ಆಸೀನನಾಗಿ, ಮೇಲೆ ತಿರುಗುವ ಫ್ಯಾನನ್ನು ಅವಲೋಕಿಸುತ್ತ ಸೀಟನ್ನು ಸವರುತ್ತ ಒಂದು ಅಲೌಕಿಕ ಆನಂದವನ್ನು ಅನುಭವಿಸುತ್ತಿದ್ದಂತೆ ಗಾರ್ಡ್ ಸೀಟಿ ಊದಿದ್ದು ಕೇಳಿಸಿತು. ರೈಲಿನ ಚಕ್ರ ಮೆಲ್ಲನೆ ಕಬ್ಬಿಣದ ಹಳಿಯ ಮೇಲೆ ಜಾರುತ್ತ ತಿರುಗಲು ಶುರುವಾದಂತೆ ನಾವು ಬಾಗಿಲಿನ ಬಳಿ ಸಾಗಿ ದೇಹದ ಅರ್ಧಭಾಗವನ್ನ ರೈಲಿನ ಹೊರಗಿಟ್ಟು ಸಿನೆಮಾ ಹೀರೋಗಳಂತೆ ನಿಂತೆವು. ಹುಬ್ಬಳ್ಳಿ ಬಿಡುತ್ತಿದ್ದಂತೆ ಹಾದಿಯಲ್ಲಿ ಕೆ. ಎಂ. ಸಿ ಹಾಗೂ ನೃಪತುಂಗ ಬೆಟ್ಟದ ದರುಶನ ಮಾಡಲೇಬೇಕಲ್ಲ! ಇದು ಡೀಸಲ್ ರೈಲಾಗಿದ್ದರಿಂದ ಮೈ – ಮೊರೆ ಕಪ್ಪಾಗುವ ಹೆದರಿಕೆಯೂ ಇರಲಿಲ್ಲ. ಮುಖಕ್ಕೆ ಎರಚುವ ಗಾಳಿಯ ರಭಸವನ್ನು, ರೈಲಿನ ಶಿಳ್ಳೆಯ ಸಂಗೀತವನ್ನು ಅನುಭವಿಸುವ ಸುಖದ ಮತ್ತೇರುತ್ತಿದಂತೇ ಕಣ್ಣು ಕೂರಲು ಆರಂಭಿಸಿತು. ಸೀಸನ್ಡ್ ಯಾತ್ರಿಗಳು ಆಗಲೇ ಹಾಸಿಗೆ ತಯಾರಿ ಮಾಡಿ, ಮಂಕಿ ಕ್ಯಾಪ್ ಹಾಕಿ, ರಗ್ಗು ಹೊದ್ದು ಲಘುವಾದ ಗೊರಕೆ ಹೊಡೆಯುತ್ತಿದ್ದರು. ಬರ್ತ್ ಹತ್ತಿ ಪವಡಿಸಿದಂತೇ, ರೈಲಿನ ರೈಲು – ಹಳಿಗಳ ತಾಳಬದ್ಧವಾದ ಜುಗಲಬಂದಿಯ ಜೋಗುಳ ಗಾಯನಕ್ಕೆ ಜೋಮ್ಪು ಹತ್ತಿತ್ತು. ಮಧ್ಯರಾತ್ರಿಯಲ್ಲಿ ರೈಲು ಯಾವುದೊ ನಿಲ್ದಾಣದಲ್ಲಿ ನಿಂತ ಅರಿವಾಯಿತು. ಸುಮಾರು ಹೊತ್ತಾದರೂ ಅಲ್ಲಾಡದಿದ್ದರಿಂದ ರೈಲು ಹಾಳಾಗಿ ನಿಂತಿದೆಯೇ ಎಂಬ ಸಂದೇಹ ಬಂತು. ಕೇವಲ ಬಸ್ಸುಗಳಲ್ಲೇ ಪ್ರಯಾಣ ಮಾಡಿದವರಿಗೆ ಬಸ್ಸು ಅವಶ್ಯಕ್ಕಿಂತ ಜಾಸ್ತಿ ನಿಂತರೆ ಗಾಡಿ ಹಾಳಾಗಿದೆ ಎನ್ನುವ ಅನುಮಾನ ಬರುವುದು ಸಹಜ. ನಿಲ್ದಾಣವಾದರೂ ಯಾವುದು ಎಂಬ ಕುತೂಹಲದಿಂದ ಬಾಗಿಲಿನಿಂದ ಹಣಕಿ ಹಾಕಿದಾಗ ಲೋಂಡಾ ನಿಲ್ದಾಣವದು ಎಂಬ ಅರಿವಾಯಿತು. ಪಕ್ಕದಲ್ಲೇ ನಿಂತು ಬೀಡಿ ಸೇದುತ್ತಿದ್ದ ಮಹಾನುಭಾವರನ್ನು ಕೇಳಿದಾಗ ರೈಲು ಸುಮ್ಮನೆ ನಿಂತಿಲ್ಲ, ಗೋವಾದಿಂದ ಬರುವ ರೈಲಿಗೆ ಕಾಯುತ್ತಿದೆ ಎಂದು ತಿಳಿದು ಬಂತು. ಹುಬ್ಬಳ್ಳಿಯಿಂದ ಬರುವ ರೈಲು, ಗೋವಾದಿಂದ ಬರುವ ರೈಲಿಗೆ ಜೋಡಿಯಾಗಿ ಮೀರಜ್ ತಲುಪಿ, ಗೇಜ್ ಬದಲಾಯಿಸಿ, ಮತ್ತಷ್ಟು ಬೋಗಿಗಳನ್ನು ಅಂಟಿಸಿಕೊಂಡು ದೆಹಲಿಗೆ ಓಡುತ್ತಿತ್ತು. ಅದಕ್ಕಾಗೇ ನಾವು ಹೋಗುತ್ತಿರುವ ರೈಲಿನ ಹೆಸರು ಗೋವಾ ಎಕ್ಸ್ಪ್ರೆಸ್. ಬೇರೆ ಬೇರೆ ಮೂಲಗಳಿಂದ ಬಂದ ಹೊಳೆಗಳು ಕೂಡಿ ನದಿಯಾಗಿ ಮುಂದೆ ಸಾಗರ ಸೇರಿದಂತೆ. ವಾಸ್ಕೋದಿಂದ ಬಂದ ರೈಲಿಗೆ ನಮ್ಮ ಬೋಗಿಯನ್ನು ಅಂಟಿಸುವ ಕೈಂಕರ್ಯ ನೋಡಿ ಧನ್ಯನಾದೆ. ಆದರೆ ಮಧ್ಯದಲ್ಲಿದ್ದ ನಮ್ಮ ಬೋಗಿ ಈಗ ಹೊಸ ರೈಲಿನ ಕೊನೆಯಲ್ಲಿದೆಯಲ್ಲ ಎಂದು ಸ್ವಲ ಬೇಜಾರೂ ಆಯಿತು. ಕೊನೆಯಲ್ಲಿದ್ದರೂ ಬಸ್ಸಿನ ಹಿಂದಿನ ಸೀಟುಗಳು ಹಾರುವಂತೆ ರೈಲಿನಲ್ಲಾಗುವುದಿಲ್ಲ ಎಂಬುದೇ ಸಮಾಧಾನವಾಗಿತ್ತು.

(ಚಿತ್ರ : ಜೆಮಿನಿ ಕೃತಕ ಬುದ್ಧಿಮತ್ತೆ)

ಬೆಳಕು ಹರಿಯುತ್ತಿದ್ದಂತೆ ಮೀರಜ್ ತಲುಪಿದೆವು. ಮೀಟರ್ ಗೇಜಿನ ಪ್ಲಾಟ್ಫಾರಂ ಅಸ್ಪ್ರಶ್ಯನಂತೆ ಮುಖ್ಯ ಪ್ಲಾಟಫಾರಂಗಳಿಂದ ಸ್ವಲ್ಪ ದೂರದಲ್ಲಿತ್ತು. ಲೋಂಡಾದಲ್ಲಿ ವಾಸ್ಕೋ ರೈಲು ತಡವಾಗಿ ಬಂದಿದ್ದರಿಂದ ಮುಂದಿನ ರೈಲು ತಪ್ಪೀತು ಎಂಬ ಅಳುಕಿತ್ತು; ಆದರೆ ರೈಲು ತಯಾರಾಗಿ ನಿಂತಿದ್ದನ್ನು ಕಂಡು ಸಮಾಧಾನವಾಯಿತು. ನಿಲ್ದಾಣದಲ್ಲಿ ಛಾ, ಕಾಫಿ ಮಾರಾಟಗಾರರು ತಾರಕ ಸ್ವರದಲ್ಲಿ ತಮ್ಮ ಅಸ್ತಿತ್ವವನ್ನು ಘೋಷಿಸುತ್ತ, ಬೋಗಿ ಬೋಗಿಗಳನ್ನು ಹೊಕ್ಕಿ, ಗಟ್ಟಿಯಾಗಿ ಅದುಮಿದರೆ ತಿರುಚಿ ಹೋಗುವಂಥ ಪ್ಲಾಸ್ಟಿಕ್ ಕಪ್ಪುಗಳಲ್ಲಿ ಬಿಸಿ ಬಿಸಿಯಾದ ಜೀವ ದ್ರವ್ಯವನ್ನು ವಿಲೇವಾರಿ ಮಾಡುವಲ್ಲಿ ವ್ಯಸ್ತವಾಗಿದ್ದರು. ಒಂದು ಗುಟುಕು ಚಹಾ ಒಳ ಸೇರಿದಂತೆ, ನಾಲಿಗೆ ಚುರುಕಾಗಿ, ಗಂಟಲಲ್ಲಿಳಿದು ದೇಹವೆಲ್ಲ ಬಿಸಿಯಾಗಿ ಮೂಲೆಯಲ್ಲಿ ಮುದುಡಿದ್ದ ನಿದ್ದೆಯನ್ನು ಒದ್ದೋಡಿಸಿತು. ನಮ್ಮ ಬರ್ತ್ ಗುರುತಿಸಿಕೊಂಡು, ಹಿಂದಿನ ರಾತ್ರೆಯಂತೇ ಸೂಟ್ ಕೇಸಿಗೆ ಲಂಗರು ಹಾಕಿ ನೆಲೆಯೂರಿದಂತೆ ವ್ಯಕ್ತವಾಗಿದ್ದು, ಈ ಜಾಗೆ ಕೆಲವೇ ಗಂಟೆಗಳಿಗೆ ಸೀಮಿತವಲ್ಲ, ಒಂದೂವರೆ ದಿನಗಳ ವರೆಗೂ ನಮ್ಮ ತಾಣ ಎಂಬ ಸತ್ಯ. ನಮ್ಮ ಜೊತೆಯಲ್ಲಿದ್ದವರು ಹಿಂದಿಯಂಥ ಭಾಷೆ ಮಾತಾಡುತ್ತಿದ್ದರು. ಪರಿಚಯವಾದ ಮೇಲೆ ಗೊತ್ತಾಯಿತು, ಅವರು ಹುಬ್ಬಳ್ಳಿಯಲ್ಲಿ ನೆಲೆಸಿರುವ ಮಾರವಾಡಿ ಹಲ್ವಾಯಿಗಳು ಎಂದು.

(ಚಿತ್ರ : ಜೆಮಿನಿ ಕೃತಕ ಬುದ್ಧಿಮತ್ತೆ )

ರೈಲು ಪ್ರಯಾಣದ ಅವಿಭಾಜ್ಯ ಅಂಗ, ಒಂದು ರೀತಿಯಲ್ಲಿ ಮಹತ್ವ ಅಂಗ ಎಂದರೆ ಸದಾ ಎಲ್ಲ ದಿಕ್ಕಿನಿಂದಲೂ ಲಭ್ಯವಾಗುವ ತಿನಿಸುಗಳು. ನಮ್ಮ ರೈಲಿನಲ್ಲಿ ಅಡುಗೆ ಮನೆಯೂ ಇತ್ತು (ಪ್ಯಾಂಟ್ರಿ ಕಾರ್). ಹಿಂದಿನ ದಿನ ಹಾಸ್ಟೆಲ್ ನಲ್ಲಿ ಉಂಡು, ರಾತ್ರಿ ಮಲಗಿದ್ದರಿಂದ ಈ ತಿನಿಸುಗಳ ಸಾಮ್ರಾಜ್ಯದ ಪರಿಚಯವಾಗಿರಲಿಲ್ಲ; ಅಪರಾತ್ರಿಯಲ್ಲಿ ಯಾರೂ ಏನನ್ನೂ ಮಾರಲೂ ಬಂದಿರಲಿಲ್ಲ. ನಮ್ಮ ಬೆಳಗಿನ ಉಪಾಹಾರ ಸ್ಯಾಂಡ್ವಿಚ್. ಹೆಸರು ಕೇಳಿ ಮುಖ ತಿರುಚಬೇಡಿ, ಅದು ರುಚಿ ರಹಿತ ಬ್ರಿಟಿಷ್ ಸ್ಯಾಂಡ್ವಿಚ್ ಅಲ್ಲ. ಸಸ್ಯಾಹಾರಿಗಳಿಗೆ ವೆಜ್ ಕಟ್ಲೆಟ್ ಸ್ಯಾಂಡ್ವಿಚ್, ಅಲ್ಲದವರಿಗೆ ಆಮ್ಲೆಟ್ ಸ್ಯಾಂಡ್ವಿಚ್; ರುಚಿಯಾದ ಟೊಮ್ಯಾಟೋ ಕೆಚಪ್ ಜೊತೆಗೆ. ಆಹಾ, ಅದರ ರುಚಿ ವರ್ಣಿಲಸದಳ! ಇಂದಿಗೂ ನಾಲಿಗೆ ತುದಿಯಲ್ಲಿದೆ. ದಾರಿಗುಂಟ ರೈಲಿನೊಳಗೆ, ಪ್ಲಾಟಫಾರಂ ಮೇಲೆ ಸರಬರಾಜಾಗುವ, ದೊರೆಯಯುವ ಟೊಮ್ಯಾಟೋ ಸೂಪ್ (ಕ್ರೂಟೋನ್ ಜೊತೆ), ಭೇಲ್, ತರಹೇವಾರಿ ಹಣ್ಣುಗಳು, ವಡಾ ಪಾವ್ (ಮಹಾರಾಷ್ಟ್ರದ ಜನಪ್ರಿಯ ಬರ್ಗರ್ ಪರಿಚಯವಾಗಿದ್ದೇ ಈ ಯಾತ್ರೆಯಲ್ಲಿ), ಸಮೋಸಾ, ಪೂರಿ-ಆಲೂ ಸಬ್ಜಿ, ಕಬ್ಬಿನ ಹಾಲು, ದೇಶದ ವಿವಿಧ ಪ್ರದೇಶಗಳ ಆಹಾರ ಪದ್ಧತಿಯ ವೈವಿಧ್ಯವನ್ನು ಅನಾವರಣಗೊಳಿಸುತ್ತಾ ಹೋಯಿತು ನಮ್ಮ ರೈಲು. ಸ್ಟೀಲಿನ ಖಾನೆ – ಖಾನೇ ತಟ್ಟೆಗಳಲ್ಲಿ ಕೊಡುವ ಊಟಕ್ಕೂ ಒಂದು ವಿಶೇಷ ರುಚಿ. ರೈಲಿನ ಬೋಗಿಯಲ್ಲಿ ಮಹದಾದ ಪಾತ್ರೆಗಳಲ್ಲಿ ಮಾರುದ್ದದ ಸಾವುಟಗಳನ್ನು ತಿರುವುತ್ತ ವಿಶಿಷ್ಟ ಜಾದೂ ಮಾಡುತ್ತಿದ್ದರು ಆ ಬಾಣಸಿಗರು. ಜೊತೆಯಲ್ಲಿದ್ದ ಮಾರವಾಡಿಗಳು ಊಟದ ಸಮಯದಲ್ಲಿ ಹಿಂದೆಂದೂ ಕಂಡಿರದ ದೈತ್ಯಾಕಾರದ ಟಿಫಿನ್ ಬಾಕ್ಸ್ ನಲ್ಲಿ ತಂದಿದ್ದ ಮನೆ ಊಟವನ್ನು ಹರಡುತ್ತಿದರು. ವಾರೆಗಣ್ಣಿನಿಂದ ಈ ದೃಶ್ಯವನ್ನೇ ನಿಲುಕಿಸುತ್ತಿದ್ದ ನಮ್ಮೊಡನೆ ಹಂಚಿಕೊಂಡು ನಮ್ಮ ಜಿಹ್ವಾ ಚಾಪಲ್ಯ / ಕುತೂಹಲವನ್ನು ತಣಿಸುತ್ತಿದ್ದರು. ಆ ಯಾತ್ರೆಯಲ್ಲಿ ಆಸ್ವಾದಿಸಿದ ಅದೆಷ್ಟೋ ತಿನಿಸುಗಳು ಇಂದೂ ನೆನಪಿನ ಡಬ್ಬಿಯಲ್ಲಿ ಬೆಚ್ಚಗಾಗಿ ಕುಳಿತಿದೆ. ಇಂದಿನ ದಿನಗಳಲ್ಲಿ ಅದೆಷ್ಟೋ ರೆಸ್ಟೋರೆಂಟ್ ಗಳ ಮೆನು ಕಾರ್ಡಿನಲ್ಲಿ ರೇಲ್ವೆ ದಾಲ್, ಕಟ್ಲೆಟ್ ಎಂದೆಲ್ಲ ಓದಿದಾಗ, ಆ ನೆನಪುಗಳು ಮೂಲೆಯಿಂದ ರಗ್ಗನ್ನು ಕಿತ್ತೆಸೆದು ಮಸ್ತಕದ ವೇದಿಕೆಯಲ್ಲಿ ತಾಂಡವ ಆಡಿ, ಆ ಆವೇಶದ ಒತ್ತಡಕ್ಕೆ ಮಣಿದು ಆರ್ಡರ್ ಮಾಡಿದಾಗ ಇಂದಿನ ತಿನಿಸಿನ ರುಚಿ ಪೇಲವ ಎನಿಸಿದ್ದೇ ಜಾಸ್ತಿ. ಇಟಾರ್ಸಿ ಜಂಕ್ಷನ್ ನಲ್ಲಿ ನಾನು ಮೊತ್ತ ಮೊದಲು ಕಂಡಿದ್ದು ಕುಲ್ಹಡ್ ಚಹಾ. ಹಿಂದಿನ ಸ್ಟೇಶನಗಳಲ್ಲಿ ಕುಡಿದಾದ ಮೇಲೆ ಪ್ಲಾಸ್ಟಿಕ್ ಕಪ್ಪುಗಳನ್ನು ಯಾವ ಯೋಚನೆಯೂ ಇಲ್ಲದೇ ಎಲ್ಲರೂ ಹೊರಗೆಸೆಯುತ್ತಿದ್ದರು. ಅದೆಷ್ಟು ಟನ್ ಪ್ಲಾಸ್ಟಿಕ್ ಕಸವನ್ನು ರೈಲು ಪ್ರಯಾಣಿಕರು ಎಸೆದಿರಲಿಕ್ಕಿಲ್ಲ ಪ್ರತಿದಿನ! ಈ ಕುಲ್ಹಡ್ ದೇಶದ ಬೇರೆಡೆ ಯಾಕೆ ಪ್ರಚಲಿತವಾಗಿಲ್ಲ ಎಂದು ಅರ್ಥವಾಗಿಲ್ಲ.

ರೈಲು ಪ್ರಯಾಣದ ಇನ್ನೊಂದು ಪ್ರಮುಖ ಆಕರ್ಷಣೆ ಹೊರಗಿನ ನೋಟ. ಹುಬ್ಬಳ್ಳಿಯಿಂದ ಮೀರಜ್ ವರೆಗೆ ಕತ್ತಲೆ ಕಾಡಿನಲ್ಲಿ ಕಂಡಿದ್ದೇನಿಲ್ಲ. ಮೀರಜ್ ನಿಂದ ಪುಣೆ ದಾಟುವವರೆಗೂ ರೈಲು ದಖ್ಖನ್ ಪ್ರಸ್ತಭೂಮಿಯ ಪರ್ವತಗಳನ್ನು ಬಳಸುತ್ತ, ಪರ್ವತ ಗರ್ಭವನ್ನು ಸೀಳುವ ಸುರಂಗಗಳನ್ನು ಭೇದಿಸುತ್ತ ಸಾಗುತ್ತದೆ. ಈ ಪರ್ವತಗಳು ಕುರುಚಲು ಕಾಡು, ದಟ್ಟ ಹಸಿರು ಹುಲ್ಲನ್ನಷ್ಟೇ ಹೊದ್ದು ನಿಂತಿವೆ. ಸಹಸ್ರಾರು ವರ್ಷಗಳ ಕಾಲ ಪೇರಿಸಿಟ್ಟ ಪದರುಗಳನ್ನು ನೋಡುವುದೇ ಚಂದ. ಅದ್ಯಾವದೋ ಕಾಲದಲ್ಲಿ ಇದೆಲ್ಲ ಜ್ವಾಲಾಮುಖಿಯ ಬಾಯಿಂದ ಹೊರಬಂದ ಲಾವಾ. ಅಲ್ಲಲ್ಲಿ ದೂರದಲ್ಲಿ ಕಾಣುವ ಕೋಟೆ-ಕೊತ್ತಲಗಳು ಮರಾಠ ಸಾಮ್ರಾಜ್ಯದ ಕಥೆಗಳನ್ನು ಕಿವಿಯಲ್ಲಿ ಪಿಸುಗುಟ್ಟುತ್ತವೆ, ಅದಕ್ಕೆ ಸರಿಯಾಗಿ ರೈಲು ಶಿಳ್ಳೆ ಹಾಕಿ ಭಲೇ ಎಂದು ಉದ್ಗರಿಸುತ್ತದೆ. ಇತಿಹಾಸ, ಭೂಗೋಳ, ಭೂಗರ್ಭ ಶಾಸ್ತ್ರ ಇವೆಲ್ಲ ಒಮ್ಮೆಲೇ ರಿವಿಷನ್ ಆದೀತು. ಈ ಪ್ರಯಾಣದಲ್ಲಿ ಕಂಡ ಒಂದೆರಡು ದೃಶ್ಯಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿವೆ. ಮೊದಲ ದಿನ ಸಂಜೆ ಆಗುತ್ತಿದ್ದಂತೆ ಸೂರ್ಯ ಮೆಲ್ಲನೆ ಪಶ್ಚಿಮ ದಿಗಂತದಂಚಿಗೆ ಜರುಗುತ್ತಿದಂತೆ ನಮ್ಮ ಪ್ರಯಾಣಕ್ಕೆ ಶುಭಾಶಯ ಕೋರಲು ದೂರದಲ್ಲಿ ಯಾರೋ ಥಮ್ಸ್ ಅಪ್ ಮಾಡುವಂತೆ ಕಾಣುತ್ತಿತ್ತು. ಬಳಿ ಬಂದಂತೆ ಅದೊಂದು ಪರ್ವತದ ಮೇಲಿನ ಶೀಲಾ ರಚನೆ ಎಂಬ ಅರಿವಾಯಿತು. ಇದನ್ನು ಪ್ರವಾಸಿಗರು ಥಮ್ಸ್ ಅಪ್ ಗುಡ್ಡ ಎಂದೇ ಕರೆಯುತ್ತಾರೆ. ಮರಾಠಿಯಲ್ಲಿ ‘ಹಡ್ಬಿಚಿ ಶೇಂಡಿ’ (ಗೂನು ಬೆನ್ನಿನವನ ಜುಟ್ಟು) ಎಂದು ಕರೆಯುತ್ತಾರೆ. ಈ ಗುಡ್ಡವನ್ನು ಸುತ್ತುವರೆಯುತ್ತ ರೈಲು ಮನಮಾಡ್ ಜಂಕ್ಷನ್ ಸೇರುತ್ತದೆ, ರಾತ್ರೆಯ ಊಟಕ್ಕೆ ಆರ್ಡರ್ ಕೊಡುವ ಸಮಯಕ್ಕೆ ಸರಿಯಾಗಿ. ಈ ಸ್ಟೇಷನ್ ನಲ್ಲಿ ಉತ್ತಮ ವಡಾ-ಪಾವ್ ಚಹಾ ಸಿಗುವುದುದ್ ಒಂದು ಬೋನಸ್. ನೆತ್ತರು ಚಲ್ಲಿದ ಆಗಸದ ಹಿನ್ನಲೆಯಲ್ಲಿ ತಲೆಯೆತ್ತಿ ನನ್ನನ್ನು ಗೆದ್ದು ನೋಡು ಎಂಬ ಸವಾಲೆಸೆಯುವ ಹೆಬ್ಬೆರಳನ್ನು ಮರೆಯಲು ಸಾಧ್ಯವೇ? ಎರಡನೇ ದೃಶ್ಯ ಗ್ವಾಲಿಯರ್ ಕೋಟೆ. ಇಂದಿಗೂ ತನ್ನ ಗಾಂಭೀರ್ಯ, ಭವ್ಯತೆಯನ್ನು ಕಾದುಕೊಂಡಿದೆ. ಕೆಲವೇ ತಾಸುಗಳಲ್ಲಿ ರೈಲು ಉತ್ತರ ಪ್ರದೇಶವನ್ನು ಹೊಕ್ಕುತ್ತದೆ. ಮಧ್ಯಪ್ರದೇಶ – ಉತ್ತರ ಪ್ರದೇಶದ ಗಡಿಯಲ್ಲಿರುವುದೇ ಕುಖ್ಯಾತ ಚಂಬಲ್ ಕಣಿವೆ. ಪಶ್ಚಿಮ ಘಟ್ಟಗಳಲ್ಲಿ ಕಾನನ ಆವರಿಸಿದ ಬೆಟ್ಟಗಳ ನಡುವಿನ ಆಳವಾದ ಕಣಿವೆಗಳೇ ನಮ್ಮ ಮನಸ್ಸಿಲ್ಲಿತ್ತು ಚಂಬಲ್ ದರ್ಶನ ಆಗುವವರೆಗೆ. ಇವು ಕುರುಚಲು ಗಿಡ, ಬರಡು ಗುಡ್ಡಗಳ ನಡುವೆ ಮೇಜ್ಹ್ ನಂತೆ ಹರಡಿದ ಕಣಿವೆಗಳ ಸಂಕೀರ್ಣ. ರೈಲು ಈ ಕಣಿವೆಗಳ ಮೇಲೆ ಕಟ್ಟಿದ ಸೇತುವೆ (ವಯಾ ಡಕ್ಟ್) ಮೇಲೆ ಚಲಿಸುವಾಗ ಚಂಬಲ್ ನ ವಿಹಂಗಮ ನೋಟ ತೆರೆದುಕೊಳ್ಳುತ್ತದೆ. ಅದೆಲ್ಲಿಂದಲೋ ಹರಿದು ಬರುವ ನದಿ, ಅದರ ದಡದಲ್ಲೊಂದು ಮುರುಕು ದೇಗುಲ ಇವನ್ನೆಲ್ಲ ಕಂಡಾಗ ಹಿಂದಿ ಸಿನೆಮಾದ ದೃಶ್ಯದ ಮಧ್ಯದಲ್ಲಿ ನಿಂತ ರೋಮಾಂಚನ. ಆ ಪಾಳು ದೇಗುಲದಲ್ಲಿ ಕಾಳಿಗೆ ಢಾಕುಗಳು ಪೂಜೆ ಸಲ್ಲಿಸುತ್ತಿರಬಹುದೇ, ಅಂದಿನ ದಾಳಿಗೆ ಯೋಜನೆ ಹಾಕುತ್ತಿರಬಹುದೇ! ಹಿಂದೆಲ್ಲ ಈ ಭಾಗದಲ್ಲಿ ರೈಲನ್ನು ಅಡ್ಡ ಹಾಕಿ ದರೋಡೆ ಮಾಡುತ್ತಿದ್ದುದು ಸುಳ್ಳಲ್ಲ. ೯೦ ರ ದಶಕ ತಲುಪಿದಾಗ ಫೂಲನ್ ದೇವಿ ಕೋವಿಯ ಬಲ ತೊರೆದು ರಾಜಕೀಯ ಬಲವನ್ನು ಅಪ್ಪಿಕೊಂಡಾಗಿತ್ತಲ್ಲ! ಈ ಕಾಲದಲ್ಲಿ ನಮ್ಮ ರೈಲು ಸುರಕ್ಷಿತ ಎಂದು ನೆಮ್ಮದಿ ಎನಿಸಿತು. ಚಂಬಲ್ ಕಣಿವೆ, ಆಳದಲ್ಲಿ ಎಂದೆಂದೂ ಆರದ ರಕ್ತಸಿಕ್ತ ಇತಿಹಾಸ ಈ ಹಾದಿಯನ್ನು ಹಾದು ಹೋಗುವಾಗ ಕಾಡದೇ ಇರದು.

ಮನಮಾಡದ ಥಮ್ಸ್ ಅಪ್ ಬೆಟ್ಟ (ಚಿತ್ರ : ಗೂಗಲ್ ಕೃಪೆ )

ಲಕ್ಷ್ಮೀಬಾಯಿಯ ಝಾನ್ಸಿ, ಆಗ್ರಾ ಬಂದಂತೆಲ್ಲ ನಮ್ಮ ಗಮ್ಯ ಸ್ಥಾನ ಹತ್ತಿರವಾಗುತ್ತಿದೆ ಎಂಬ ಭಾವನೆ ತೇಲುತ್ತ, ದಟ್ಟವಾಗುತ್ತ ಮನಸ್ಸನ್ನೆಲ್ಲ ಆವರಿಸುತ್ತದೆ. ಗೋವಾ ಎಕ್ಸ್ಪ್ರೆಸ್ ಆಗ್ರಾ ನಗರದೊಳಗೆ ನುಗ್ಗದೇ, ಕಂಟೋನ್ಮೆಂಟ್ ನಿಲ್ದಾಣಕ್ಕೆ ಬರುತ್ತದೆ. ತಾಜ್ ಮಹಲ್ ಕಂಡಿತೇ ಎಂಬ ಕುತೂಹಲವಿದ್ದರೆ ಎದುರಾಗುವುದು ಬಿಸಿಲಲ್ಲಿ ಒಣಗುತ್ತಿರುವ ನಿರ್ಜನ ನಿಲ್ದಾಣ. ತಾಜಾ ಮಹಲಿನ ರಮ್ಯತೆಗೆ ವಿರೋಧಾಭಾಸವಾಗಿದೆ ಆಗ್ರಾ ದಂಡು ನಿಲ್ದಾಣ. ಆಗ್ರಾ ಎಂದರೆ ಏನೇನೋ ಕಲ್ಪಿಸಿಕೊಂಡ ನನಗೆ ಹಾಗೆನಿಸಿರಬಹದು ಬಿಡಿ. ಹಿಂದಿಯಲ್ಲಿ ಕಂಟೋನ್ಮೆಂಟಿಗೆ ಛಾವಣಿ ಎನ್ನುತ್ತಾರೆಂಬುದೂ ನನಗೆ ಅವತ್ತು ಗೊತ್ತಾಯಿತು, ನಿಲ್ದಾಣದ ಹೆಸರಿನ ಫಲಕವನ್ನು ಓದಿದಾಗ. ಹಿಂದಿನ ಕಾಲದಲ್ಲಿ ಸೈನ್ಯ ತಂಗಿದಲ್ಲೆಲ್ಲ ಹುಲ್ಲಿನ ಛಾವಣಿಯನ್ನು ಕಟ್ಟುತ್ತಿದ್ದರಿಂದ, ದಂಡು ಪ್ರದೇಶಕ್ಕೆ ಹಿಂದಿಯಲ್ಲಿ ಛಾವಣಿ ಎಂದು ಕರೆಯುತ್ತಾರಂತೆ. ಇಲ್ಲಿಂದ ಮುಂದೆ ಮಾತ್ರ ಇದು ಎಂದೂ ಮುಗಿಯದ ಹಾದಿ ಎಂದೆನಿಸಲು ಶುರುವಾಗುತ್ತದೆ. ಉತ್ತರ ಭಾರತದ ಸೆಖೆ, ಬಸವನ ಹುಳದಂದದ ವೇಗ, ದಾರಿಯ ಪಕ್ಕದಲ್ಲಿ ಹರಿಯುವ ಕೊಳೆತ ನಾಲೆಯ ದುರ್ನಾತದಿಂದ ರಸಭರಿತ ಸಿನೆಮಾ ನಿರಾಶಾದಾಯಕವಾಗಿ ಕೊನೆಯಾಗುತ್ತಿದೆಯಲ್ಲ ಎಂದು ದುಃಖವಾಯಿತು. ಮುಂದೆ ದೆಹಲಿಯಲ್ಲೇ ಸ್ವಲ್ಪ ಕಾಲ ಉದ್ಯೋಗ ಮಾಡುವ ಅವಕಾಶ ಸಿಕ್ಕು, ಇದೆ ಹಾದಿಯಲ್ಲಿ ವಿವಿಧ ಋತುಗಳಲ್ಲಿ ಪ್ರಯಾಣ ಮಾಡಿದ್ದೇನೆ. ಭಾರತದ ಇತಿಹಾಸದಲ್ಲಿ ತಮ್ಮ ಹೆಸರನ್ನು ಕೆತ್ತಿದ ಊರುಗಳು, ಅಲ್ಲಿನ ನಾಯಕರು – ಖಳನಾಯಕರು ಸಿನೆಮಾದ ರೀಲುಗಳಂತೆ ನನ್ನ ಕಣ್ಮುಂದೆ ಓಡಿದ್ದಾರೆ. ಮತ್ತೊಮ್ಮೆ ಈ ಹಾದಿಯಲ್ಲಿ ರೈಲಿನಲ್ಲೇ ಪ್ರಯಾಣ ಮಾಡುವ ಕನಸಿದೆ, ನವ ಭಾರತದ ನವ ರೈಲುಗಳಲ್ಲಿ. ಹೊಸತು ಕಂಡಿತೇ?

-ರಾಂ