ಅನಿವಾಸಿ ಬಳಗದ ಯುಗಾದಿ ಸಂಭ್ರಮ

ಅನಿವಾಸಿ ಬಳಗದ 'ರಂಗ' ಯುಗಾದಿ  
- ಅಮಿತಾ ರವಿಕಿರಣ್

ಈ 'ಅನಿವಾಸಿ' ಎಂಬ ಪದ, ಕನ್ನಡ ಬಲ್ಲ ಸರ್ವರಿಗೂ ಅರ್ಥವಾಗುವ ರೀತಿ ಒಂದು ತೆರನಾದರೆ, ನನಗೆ ಅರ್ಥವಾಗುವ ರೀತಿಯೇ ಬೇರೆ. ಅನಿವಾಸಿ ಎಂಬುದು ದೇಶದಿಂದ ದೂರವಿರುವ ಅಥವಾ ಪ್ರಸ್ತುತ ತಾಯಿನೆಲದಲಿ, ಸ್ವದೇಶದಲ್ಲಿ ನೆಲೆಸದ ಅನ್ನುವ ಅರ್ಥವಿದ್ಯಾಗ್ಯೂ ನನಗೆ ಅನಿವಾಸಿ ಎಂಬ ಪದ ಕೇಳಿದೊಡನೆ ಆತ್ಮೀಯ, ಹತ್ತಿರದ, ಪ್ರೀತಿಯ, ಅಕ್ಕರೆಯ ಅಂತಃಕರಣದ, ನಾಡು ನುಡಿಗಳ ಕುರಿತು ಸದಾ ತುಡಿಯುವ ಮಿಡಿಯುವ ಮನಸುಗಳ, ನನ್ನದಲ್ಲದ ನೆಲದಲ್ಲಿ ನನ್ನ ತವರಿನಂತಿರುವ ಒಂದು ಸಹೃದಯಿ ಗುಂಪು ಎಂಬ ಚಿತ್ರ ಮನಃಪಟಲದಲ್ಲಿ ಮೂಡುತ್ತದೆ. ಸಾಹಿತ್ಯ ಸಂಗೀತಗಳಿಂದ ಆಂತರ್ಯವನ್ನು ಚೊಕ್ಕಟವಾಗಿಡಲು, ಸೃಜನಶೀಲತೆಯ ಸ್ಪುರಣದಂತಿರುವ ಅನಿವಾಸಿ ಬಳಗಕ್ಕೆ ಏಳುವರ್ಷಗಳ ಹಿಂದೆ ನನ್ನ ಪರಿಚಯಿಸಿದ್ದು ನಮ್ಮ ಕಥೆಗಾರ್ತಿ ಕವಯಿತ್ರಿ ಅದಮ್ಯ ಉತ್ಸಾಹದ ಚಿಲುಮೆಯಂತಿರುವ ಡಾ ಪ್ರೇಮಲತಾ.

ಅನಿವಾಸಿಯ ಪ್ರತಿಯೊಬ್ಬ ಸದಸ್ಯರ ಕುರಿತು ನನಗೆ ಗೌರವ, ಅಚ್ಚರಿ! ಎಲ್ಲರೂ ಒಂದಲ್ಲ ಕ್ಷೇತ್ರದಲ್ಲಿ ಸಾಧನೆಗೈದವರು, ವೃತ್ತಿಯೊಂದಿಗೆ ಪ್ರವೃತ್ತಿಯನ್ನೂ ಹವ್ಯಾಸ ಆಸಕ್ತಿಗಳನ್ನು ಅಷ್ಟೇ ಆಸ್ಥೆಯಿಂದ ಬೆಳೆಸಿಕೊಂಡು ಅದರ ನಿರಂತರತೆಯನ್ನು ಕಾಪಾಡಿಕೊಂಡು ಬಂದವರು. ಇಲ್ಲಿ ಬರೆಯುವ ಎಲ್ಲರ ಘನವಾದ ಬರವಣಿಗೆಯ ಮುಂದೆ ನನಗೆ ನನ್ನ ಬರಹಗಳು ಆವತ್ತಿಗೂ, ಇವತ್ತಿಗೂ, ಯಾವತ್ತಿಗೂ ತರಗೆಲೆಯಂತೆ ಅನಿಸುತ್ತದೆ. ನನ್ನ ಜೀವನದಲ್ಲಿ ಅನಿವಾಸಿ ಈಗ ಬರೀ ಒಂದು ವಾಟ್ಸಾಪ್ ಗುಂಪು ಅಥವಾ ಬ್ಲಾಗ್ ಬರಹಗಳ ವೇದಿಕೆಗಿಂತ ಹೆಚ್ಚಿನದ್ದು. ನನಗೆ ಶಿಸ್ತು, ಬದ್ಧತೆಯನ್ನು ಮತ್ತೆ ಮತ್ತೆ ಕಲಿಸುವ ತಿಳಿಸುವ ಅನಿವಾಸಿ ಬಳಗವನ್ನು
ಒಮ್ಮೆಯಾದರೂ ಭೇಟಿ ಮಾಡಬೇಕು ಅನ್ನುವುದು ನನ್ನ ಬಹುಕಾಲದ ಕನಸಾಗಿತ್ತು.

ಊರು ಸುಟ್ಟರೂ ಹಣಮಪ್ಪ ಹೊರಗೆ ಅನ್ನುವ ಗಾದೆ ಮಾತಿನಂತೆ, UK ಯಲ್ಲಿ ಇದ್ದಾಗ್ಯೂ ಈ ತನಕ ನನಗೆ ಕನ್ನಡ ಬಳಗ ಅಥವಾ ಅನಿವಾಸಿಯ ಯಾವ ಕಾರ್ಯಕ್ರಮದಲ್ಲೂ ಭಾಗಹಿಸಲು ಆಗಿಲ್ಲ, ಕಾರಣ ವಿಮಾನಯಾನ ಅಥವಾ ಜಲಯಾನ ಮಾಡಿ ಬರಬೇಕಾದ ಅನಿವಾರ್ಯತೆ ಒಂದುಕಡೆಯಾದರೆ, ಪುಟ್ಟ ಮಕ್ಕಳು ಇರುವ ಮನೆಯಲ್ಲಿ ಎಲ್ಲ ಜವಾಬ್ದಾರಿಗಳು ಜಯಮಾಲೆಯಂತೆ ಕೊರಳಿಗೆ ಬಂದು ತಾನೇ ತೂಗು ಹಾಕಿಕೊಂಡಿರುವ ಬಿಡಿಸಿಕೊಳ್ಳಲಾರದ ಜವಾಬ್ದಾರಿಗಳು ಮತ್ತೊಂದೆಡೆ.
ಅದು ಹೇಗೋ ಎಲ್ಲಾ ಗ್ರಹ ನಕ್ಷತ್ರ ಬಲ ಕೂಡಿ ಬಂತು; ನಾನೂ ಈ ಸಲದ ಕನ್ನಡ ಬಳಗ ಯುಕೆ ಮತ್ತು ಲೆಸ್ಟರ್ ಕನ್ನಡ ಬಳಗದ ಯುಗಾದಿ ಸಂಭ್ರಮದಲ್ಲಿ ಭಾಗವಹಿಸುವ ಯೋಗಾಯೋಗ ಒದಗಿ ಬಂತು.
ಈ ಯುಗಾದಿ ನಿಜಕ್ಕೂ, ನಾಡಿನಲ್ಲಿದ್ದು ಯುಗಾದಿ ಹಬ್ಬ ಆಚರಿಸಿದ್ದಕ್ಕಿಂತ ಹೆಚ್ಚು ಸಂಭ್ರಮದಲ್ಲಿ ಜರುಗಿತು.
ಪ್ರತಿಬಾರಿ ಅನಿವಾಸಿ ಬ್ಲಾಗ್ ಮತ್ತು ಗ್ರೂಪ್ ಫೋಟೋಗಳಲ್ಲಿ ನೋಡಿ ಖುಷಿ ಪಡುತ್ತಿದ್ದ ಅನಿವಾಸಿ ಸಾಹಿತಿಕ ಕಾರ್ಯಕ್ರಮದಲ್ಲಿ ನಾನೂ ಈ ಬಾರಿ ಭಾಗವಹಿಸಿದ್ದು ನನಗೆ ಹೆಮ್ಮೆಯ ಸಂಗತಿ.

ಅನಿವಾಸಿ ಕಾರ್ಯಕ್ರಮ

ಪ್ರತಿಬಾರಿಯಂತೆ, ಈ ಸಲವೂ ಕಾರ್ಯಕ್ರಮಕ್ಕೆ ಬರುವ ಅಥಿತಿಗಳ ವೈಶಿಷ್ಟತೆಗೆ ಅನುಗುಣವಾಗಿ ಕಾರ್ಯಕ್ರಮವನ್ನು ರೂಪುಗೊಳಿಸುವುದು ಎಂಬ ನಿರ್ಧಾರವಾದ ಕೆಲ ದಿನಗಳಲ್ಲೇ ರಂಗಭೂಮಿ, ನಟ ನಿರ್ದೇಶಕ, ಕಿರುತೆರೆ, ಬೆಳ್ಳಿತೆರೆಯ ಮೇಲೆ ತಮ್ಮ ವಿಶಿಷ್ಟ ಛಾಪು ಮೂಡಿಸಿ ನೆನಪಿನಲ್ಲಿ ಉಳಿಯುವಂಥ ಹಲವಾರು ಕ್ರೀಯಾಶೀಲ ಪ್ರಸ್ತುತಿಗಳನ್ನು ರಂಗದಮೇಲೆ ನಟಿಸಿ ನಿರ್ದೇಶಿಸಿದ ಅದ್ಭುತ ಕಲಾವಿದ ಶ್ರೀ ಶ್ರೀನಿವಾಸ ಪ್ರಭು ಅವರು ಅತಿಥಿಯಾಗಿ ಬರುತ್ತಿದ್ದಾರೆ ಎಂಬ ವಿಷಯ ಗೊತ್ತಾದ ಮರುಗಳಿಗೆಯಿಂದ ಅನಿವಾಸಿ ಅಂಗಳ ಮತ್ತಷ್ಟು ಕ್ರಿಯಾಶೀಲವಾಯಿತು .
ಎಲ್ಲ ಚರ್ಚೆಗಳು, zoom, ಗೂಗಲ್ ಮೀಟ್ ಗಳಲ್ಲಿ ವಿಚಾರ ವಿನಿಮಯದ ನಂತರ, ಅನಿವಾಸಿ ಬಳಗದ ಉತ್ಸಾಹಿ ದಂಪತಿಗಳಾದ ಅನ್ನಪೂರ್ಣ ಮತ್ತು ಆನಂದ ಅವರು ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊತ್ತು, ಎಲ್ಲರ ಸಲಹಾ ಸೂಚನೆಗಳನ್ನು ಪರಾಂಬರಿಸಿ ರಂಗಭೂಮಿ ನಾಟಕ ಕುರಿತಾದ ಕಾರ್ಯಾಗಾರವನ್ನುಏರ್ಪಡಿಸುವ ಕುರಿತು ಅತಿಥಿಗಳೊಂದಿಗೆ ಮಾತನಾಡಿ ಕಾರ್ಯಕ್ರಮದ ರೂಪರೇಶೆ ತಯಾರಿಸಿದರು. ಜೊತೆಗೆ ಆಸಕ್ತರು ಅತಿಥಿಗಳಿಗೆ ಪ್ರಶ್ನೆಗಳನ್ನು ಕೇಳಬೇಕು ಅಂತಿದ್ದರೆ ಮೊದಲೇ ಕಳುಹಿಸಬೇಕಾಗಿ ವಿನಂತಿಸಲಾಯಿತು.

ಕಾರ್ಯಕ್ರಮದ ದಿನಕ್ಕಿಂತ ಅದರ ಸಿದ್ಧತೆಗಳನ್ನು, ಪೂರ್ವ ತಯಾರಿಗಳನ್ನು ನೋಡುವುದು ಮತ್ತು ಆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದೇ ಒಂದು ಮಜಾ ಅನುಭವ. ನಾನು, ಡಾ ಶ್ರೀವತ್ಸ ದೇಸಾಯಿ ಅವರೊಂದಿಗೆ ಕಾರ್ಯಕ್ರಮದ ಮುನ್ನಾದಿನ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಿ ಮತ್ತಿಬ್ಬರು volunteers ಜೊತೆಗೂಡಿ ಖುರ್ಚಿ, ಮೇಜು ಜೋಡಿಸಿ ಬ್ಯಾನರ್ ಹಾಕಿ, ಎಲ್ಲವನ್ನು ಸಿದ್ಧಮಾಡಿ ಬಂದೆವು.
ಆದರೆ ಮರುದಿನ ಅನಿವಾರ್ಯ ಕಾರಣಗಳಿಂದಾಗಿ ಆ ಜಾಗದಲ್ಲಿ ಅನಿವಾಸಿ ಕಾರ್ಯಕ್ರಮ ನಿಗದಿತ ಸಮಯಕ್ಕೆ ನಡೆಯದೆ ಸ್ವಲ್ಪ ನಿರಾಸೆ ಉಂಟುಮಾಡಿತು. ಆದರೆ ಇತ್ತ ಹಬ್ಬದಡಿಗೆಯ ಅದ್ಭುತ ರುಚಿಯ ಬಾಳೆಎಲೆ ಊಟ ಉಂಡು ಸಾಂಸ್ಕೃತಿಕ ಕಾರ್ಯಕ್ರಮ ನೋಡುತ್ತಾ ಕುಳಿತಿರುವಾಗ ಅನಿವಾಸಿ ಕಾರ್ಯಕ್ರಮ ನಾಲ್ಕು ಘಂಟೆಗೆ ನಿಗದಿಯಾಗಿದೆ ಎಂದು ಸಂಘಟಕರು ತಿಳಿಸಿದ್ದು ನಿಜಕ್ಕೂ ಮನಸನ್ನು ಪ್ರಫುಲ್ಲ ಗೊಳಿಸಿತು.

ಅನಿವಾಸಿಯ ಈ ಕಾರ್ಯಾಗಾರಕ್ಕೆಂದೇ ಕಟ್ಟಿದ್ದರೇನೋ ಅನ್ನುವಷ್ಟು ಅಚ್ಚುಕಟ್ಟಿನ ಪುಟ್ಟ ಸುಂದರ ಕೋಣೆಯಲ್ಲಿ ಆಸಕ್ತರು ಸೇರಿದ ಮೇಲೆ, ಕಾರ್ಯಕ್ರಮದ ಆರಂಭಕ್ಕೆ ಒಂದು ನಾಂದಿ ಗೀತೆ ಹಾಡುವ ಅವಕಾಶ ನನಗೆ ಒದಗಿ ಬಂತು. ಕಾರ್ಯಕ್ರಮವನ್ನು ಅನ್ನಪೂರ್ಣ ಅವರು ಈ ಮೊದಲೇ ಕಳಿಸಲಾಗಿದ್ದ ಪ್ರಶ್ನೆಗಳನ್ನು ಒಂದೊಂದಾಗಿ ಸ್ಪಷ್ಟತೆಯಿಂದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀನಿವಾಸ ಪ್ರಭು ಅವರಿಗೆ ಕೇಳುತ್ತ ಹೊದರು. ಶ್ರೀನಿವಾಸ ಪ್ರಭುಗಳು ಕೂಡ ಪ್ರತಿ ಪ್ರಶ್ನೆಗೂ ತಮ್ಮ ಅನುಭವದ ಬುತ್ತಿಯಿಂದ ರುಚಿಯಾದ ತುತ್ತುಗಳನ್ನೇ ನಮಗೆ ಉಣಬಡಿಸಿದರು.
ಒಂದು ನಾಟಕವನ್ನು ಪುಸ್ತಕದಿಂದ ರಂಗದ ಮೇಲೆ ತರುವಾಗ ಎದುರಾಗುವ ಸವಾಲುಗಳು, ಎಲ್ಲಿ ನಿಯಮಗಳನ್ನು ಸಡಿಲಿಸಬಹುದು , ಯಾವುದನ್ನು ಸಡಲಿಸಬಾರದು? ಹವ್ಯಾಸಿ ರಂಗಭೂಮಿ ನಟರಿಗೆ ಎದುರಾಗುವ ಸಮಸ್ಯೆಗಳು. ಕ್ರಿಯಾಶೀಲ ಜಗತ್ತಿನ ವಿಪರ್ಯಾಸಗಳ ಕುರಿತು ಸ್ಪಷ್ಟ ಮಾತುಗಳಲ್ಲಿ ವಿವರಿಸಿದರು.
ಅವರ ಮಾತುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಳುಗರನ್ನು ಅದೆಷ್ಟು ತಾಕಿದವೆಂದರೆ, ಒಂದು ನಾಟಕದ ತಂಡವನ್ನೇ ಕಟ್ಟುವ ಹುರುಪಿನಲ್ಲಿ ಆಸಕ್ತರ ಪಟ್ಟಿಕೂಡಾ ಸಿದ್ಧವಾಯಿತು. ಇವೆಲ್ಲ ಖುಷಿಯ ವಿಷಯಗಳು ಜರುಗುವಾಗ ದೇಸಾಯಿಯವರು ಕಾರ್ಯಕ್ರಮಕ್ಕೆ ನಿಗದಿಯಾದ ಒಂದು ಘಂಟೆಯ ಕಾಲಾವಕಾಶ ಮುಗಿಯುತ್ತ ಬಂದಿದ್ದನ್ನು ನಿರ್ವಾಹಕ ಗಮನಕ್ಕೆ ತಂದು ನಮ್ಮನ್ನೆಲ್ಲ ಮತ್ತೆ ವಾಸ್ತವಕ್ಕೆ ಕರೆತಂದರು. ಛೇ ಇಷ್ಟು ಬೇಗ ಮುಗಿದೇ ಹೋಯಿತೇ ಅನ್ನುವಂಥ ಭಾವ ದಟ್ಟವಾಗುವ ಮುನ್ನವೇ, ಆನಂದ ಅವರು ವಂದನಾರ್ಪಣೆ ನಡೆಸಿಕೊಟ್ಟರು.
ಅತಿಥಿಗಳೊಂದಿಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಅನಿವಾಸಿ ಸದಸ್ಯರು ಗ್ರೂಪ್ ಫೋಟೋ ತೆಗೆಸಿಕೊಂಡ ನಂತರವೂ ಶ್ರೀನಿವಾಸ ಪ್ರಭುಗಳೊಂದಿಗೆ ಹಲವರು ನಾಟಕದ ಬಗ್ಗೆ ಚರ್ಚೆ ನಡೆಸುತ್ತಿದ್ದುದು ಕಾರ್ಯಕ್ರಮ ಸಾರ್ಥಕ್ಯ ಎಂದರೂ ಅತಿಶಯೋಕ್ತಿ ಅಲ್ಲ.


			

ಇಂಗ್ಲೆಂಡಿನಲ್ಲಿ ಯುಗಾದಿ: ವಸಂತನಾಗಮನದ ನಾಂದಿ

ಸಪ್ಟೆಂಬರ್ ತಿಂಗಳಿನಿಂದ ನಿರಂತರ ಮಳೆಯ ಆಘಾತಕ್ಕೆ ತುತ್ತಾಗಿರುವ ಇಂಗ್ಲೆಂಡಿನಲ್ಲಿ ಕಳೆದ ಕೆಲವು ದಿನಗಳಿಂದ ಸೂರ್ಯ ಮಹಾಶಯ ಮೋಡಗಳ ಚಾದರದ ಮರೆಯಿಂದ ಹಣಕಿ ಹಾಕುತ್ತ ಕವಿದಿರುವ ಛಳಿಯ ಬಲೆಯನ್ನು ಹರಿದು ಬದಿಗೊಡ್ಡಲು ಪ್ರಯತ್ನಿಸುತ್ತಿದ್ದಾನೆ. ಅವನ ಕ್ಷೀಣ ಪ್ರಯತ್ನವನ್ನು ಹುರಿದುಂಬಿಸಲು ಒಣಗಿ ನಿಂತ ಗಿಡ ಮರಗಳು ಟಿಸಿಲೊಡೆಯುತ್ತ, ಮೈತುಂಬ ಬಣ್ಣ ಬಣ್ಣದ ಹೂಗಳನ್ನು ಹೊತ್ತು ಚಿಯರ್ ಚಿಣ್ಣರಂತೆ ಉತ್ಸಾಹದಿಂದ ತಲೆದೂಗುವುದ ಕಂಡಾಗ ವಸಂತ ಬಂದ ಎಂಬ ಉತ್ಸಾಹ ನಮ್ಮಲ್ಲೂ. ವಾತಾವರಣದಲ್ಲಿ ಕಾವು ಕೂಡುತ್ತಿದ್ದಂತೇ ಗೂಡುಗಳಿಂದ ಹೊರಬಿದ್ದು ಹೊಂಬಿಸಿಲ ಹೊಲದಲ್ಲಿ ಹೊರಳಾಡುವ ಹಂಬಲ ಹೊಮ್ಮುವುದು ಸಹಜ. ಇಂತಹ ಹಂಬಲಕ್ಕೆ ಇಂಬಾಗುವುದು ಯುಗಾದಿ. ಪ್ರತಿವರ್ಷದಂತೆ ಈ ವರ್ಷವೂ ಕನ್ನಡ ಬಳಗ ಯು.ಕೆ ಯುಗಾದಿ ಹಬ್ಬದ ಸಂಭ್ರಮದ ಕಾರ್ಯಕ್ರಮವನ್ನು ಏಪ್ರಿಲ್ ೧೩ರಂದು ಲೆಸ್ಟರ್ ನಗರದಲ್ಲಿ ಏರ್ಪಡಿಸಿತ್ತು. ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣೀ ಭೂತರಲ್ಲಿ ಒಬ್ಬರಾದ, ಅನಿವಾಸಿ ಬಳಗದ ಸದಸ್ಯರೂ ಆದ ಡಾ. ರಾಜಶ್ರೀ ಪಾಟೀಲರು ತಮ್ಮ ಅನಿಸಿಕೆಗಳನ್ನು ಚಿತ್ರ ಸಮೇತ ಇಲ್ಲಿ ಉಣಬಡಿಸಿದ್ದಾರೆ. ಕಾರಣಾಂತರಗಳಿಂದ ಅಂದು ಬರಲಾಗದವರಿಗೆ, ವಿದೇಶಗಳಲ್ಲಿರುವ ನಮ್ಮ ಓದುಗರಿಗೆ ಈ ವರದಿ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಿದ ಅನುಭವ ಕೊಡುವುದರಲ್ಲಿ ಸಂದೇಹವಿಲ್ಲ. ಪ್ರತೀ ಕನ್ನಡ ಬಳಗದ ದೀಪಾವಳಿ-ಯುಗಾದಿ ಕಾರ್ಯಕ್ರಮದಲ್ಲಿ ನಮ್ಮ ಅನಿವಾಸಿ ಬಳಗ ಸಮಾನಾಂತರವಾಗಿ ಸಾಹಿತ್ಯಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ಬಾರಿ ರಂಗಕರ್ಮಿ ಶ್ರೀ. ಶ್ರೀನಿವಾಸ ಪ್ರಭು ಅವರೊಂದಿಗೆ ನಡೆಸಿದ ಸಂವಾದದ ಅನುಭವವನ್ನು ಉತ್ತರ ಐರ್ಲ್ಯಾನ್ಡ್ ನಿಂದ ಮೊದಲ ಬಾರಿಗೆ ಭಾಗವಹಿಸಿದ ಶ್ರೀಮತಿ ಅಮಿತ ರವಿಕಿರಣ್ ಮುಂದಿನ ವಾರ ವಿಶದವಾಗಿ ಹಂಚಿಕೊಳ್ಳಲಿದ್ದಾರೆ. (ಸಂ)

‘ಬೇವಿನಕಹಿ ಬಾಳಿನಲಿ, ಹೂವಿನ ನಸುಗಂಪ ಸೂಸಿ ಜೀವಕಳೆಯ ತರುತಿದೆ. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.’
ನಮ್ಮೆಲ್ಲರ ಜೀವನ ಜಂಜಾಟಗಳ ನಡುವೆ ಸಂಭ್ರಮದ ಕಳೆ ತರಲು ಯುಗಾದಿ ಸಂಭ್ರಮ ಮತ್ತೆ ಬಂದಿತ್ತು ೧೩/೦೪/೨೪ ಲೆಸ್ಟರ್ ಗೆ. ಲೆಸ್ಟರ್ ಕನ್ನಡಿಗರು ೨೦೧೬ ನಿಂದ ಸಾಂಪ್ರದಾಯಿಕವಾಗಿ ಯುಗಾದಿಯನ್ನ ಸಂಭ್ರಮದಿಂದ ಆಚರಿಸುತ್ತ ಬಂದಿದ್ದಾರೆ  ಆದರೆ ಈ ಬಾರಿ ಕನ್ನಡ ಬಳಗದ ಸಹಯೋಗ ಅದರ ಮೆರಗನ್ನ ಇನ್ನೂ ಹೆಚ್ಚಿಸಿತ್ತು. ದೇಶದ ಹಲವಾರು ಮೂಲೆಗಳಿಂದ  ೬೦೦ಕ್ಕೂ ಹೆಚ್ಚು ಜನರು ಯುಗಾದಿ ಸಂಭ್ರಮವನ್ನು  ಆಚರಿಸಲು ನೆರೆದಿದ್ದರು. ಅದೇ ದಿನದಂದು ಹಲವಾರು ಕಡೆ ಯುಗಾದಿ ಸಂಭ್ರಮಾಚರಣೆ ಇದ್ದರೂ ಲೆಸ್ಟರನಲ್ಲಿ ಇಷ್ಟೊಂದು ಜನ ಸೇರಿದ್ದು ಇನ್ನೂ ವಿಶೇಷವಾಗಿತ್ತು.

ಕಾರ್ಯಕ್ರಮಕ್ಕೆ ವಿಧಿವತ್ತಾಗಿ  ವಿಘ್ನ ನಿವಾರಕ ವಿಘ್ನೇಶ್ವರನ ಪೂಜೆಯೊಂದಿಗೆ ಮತ್ತು ಸ್ತುತಿಹಾಡಿನೊಂದಿಗೆ ಓಂಕಾರ ದೊರಕಿತು. ಲೆಸ್ಟರ್ ಕನ್ನಡಿಗರು ಮತ್ತು ಕನ್ನಡ ಬಳಗ ಯುಕೆ ತಂಡಗಳು ಭಾರತದಿಂದ ಆಗಮಿಸಿದ ಜನಪ್ರಿಯ ಗಣ್ಯ ಅತಿಥಿಗಳಾದ ಶ್ರೀಯುತ ಸಿಹಿ ಕಹಿ ಚಂದ್ರು, ಶ್ರೀನಿವಾಸ ಪ್ರಭು, ವಿಶ್ವೇಶ್ ಭಟ್ ಅವರನ್ನ ಮತ್ತೂ ದೇಶದ ಮೂಲೆ ಮೂಲೆಯಿಂದ ಬಂದ ಕನ್ನಡಿಗರನ್ನ ಹೃದಯ ಪೂರ್ವಕವಾಗಿ ಬೇವು ಬೆಲ್ಲವನ್ನ ಹಂಚುವದರೊಂದಿಗೆ ಸ್ವಾಗತಿಸಿದರು. ಗಣ್ಯರು ದೀಪ ಬೆಳಗಿಸುವದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶುಭಕೋರಿದರು.

ಸಾಂಪ್ರದಾಯಿಕ ಭರತನಾಟ್ಯ ನೃತ್ಯಗಳಿಂದ ಕಲಾಪ್ರದರ್ಶನ ಪ್ರಾರಂಭವಾಯಿತು. ಬಿಡುವಿಲ್ಲದೆ ಸತತ ೫ ಘಂಟೆಗಳ ಕಾಲ ಕಲಾಪ್ರದರ್ಶನ ಯುಕೆಯ ವಿವಿಧ ಪ್ರದೇಶಗಳಿಂದ ಬಂದ ಕಲಾವಿದರಿಂದ ನಡೆಯಿತು .  ಚಿಕ್ಕ ಪುಟಾಣಿಗಳು ‘ಸಿಂಡರೆಲ್ಲ’ ನೃತ್ಯರೂಪಕ , ಧಾರ್ಮಿಕ ಭಾವನೆಯನ್ನು ಪುಟಿಸಿದ, ನಾಟಕೀಯ ಕನ್ನಡ ಭಾಷೆಯಲ್ಲಿ ಮೂಡಿ ಬಂದ ‘ಸೀತಾ ಅಗ್ನಿಪ್ರವೇಶ’ ದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕರ್ನಾಟಕದ ಶ್ರೀಮಂತ ನೃತ್ಯ ವೈವಿದ್ಯತೆಯನ್ನ ಪ್ರದರ್ಶಿಸುವ ಕೋಲಾಟ , ಕಂಸಾಳೆ, ಡೊಳ್ಳು ಕುಣಿತ, ಕೊಡವ ನೃತ್ಯ ಮತ್ತು ಹುಲಿಕುಣಿತವನ್ನೊಳಗೊಂಡ ‘ಕರ್ನಾಟಕ ನೃತ್ಯದರ್ಶನ’, ಭಾರತದ ವಿವಿಧ ರಾಜ್ಯಗಳ ಮದುವೆ ಶೃಂಗಾರವನ್ನ ಬಿಂಬಿಸುವ ‘ಲಗ್ನ ಶೃಂಗಾರ’, ‘ಹಚ್ಚೇವು ಕನ್ನಡದ ದೀಪ’ ನೃತ್ಯ ರೂಪಕ, ಜನಪ್ರಿಯ ಗೀತೆಗಳನ್ನಾಧರಿಸಿದ ನೃತ್ಯಗಳು, ಹಾಡು, ವೀಣೆ ಹಾಗು ಗಿಟಾರ್ ವಾದನ ಕಾರ್ಯಕ್ರಮಗಳು ನೆರೆದವರ ಮನಸೆಳೆದವು.

ಈ ಎಲ್ಲ ಕಾರ್ಯಕ್ರಗಳು ಒಂದು ಕಡೆಯಾದರೆ, ಇನ್ನೊಂದೆಡೆ ಬಹು ಪ್ರಸಿದ್ದಿ ಪಡೆದಿರುವ ಲೆಸ್ಟರ್ ಬಾಳೆ ಎಲೆ ಭೋಜನ ಯುಗಾದಿ ಸಂಭ್ರಮಕ್ಕೆ ಸಾಂಪ್ರದಾಯಿಕ ಹೊಳಪನ್ನು ಕೊಟ್ಟಿತ್ತು. ಹೋಳಿಗೆ, ಪಾಯಸ, ಭಜಿ, ಪಲ್ಯಗಳು, ಪೂರಿ, ಚಿತ್ರಾನ್ನ, ಅನ್ನ, ಸಾರು, ಸಾಂಬಾರ್, ಉಪ್ಪಿನಕಾಯಿ, ಕೋಸಂಬ್ರಿ ಹೀಗೆ ಭಕ್ಷ್ಯಗಳ ಪಟ್ಟಿ ಎಷ್ಟು ದೊಡ್ಡದಿತ್ತೋ, ಊಟಮಾಡಿದವರಿಂದ ಊಟದ ಬಗೆಗಿನ ಹೊಗಳಿಕೆ ಪಟ್ಟಿನೂ ಅಷ್ಟೇ ದೊಡ್ಡದಾಗಿತ್ತು! ಲೆಸ್ಟರ್ ಆಯೋಜಕರೇ ಟೊಂಕಕಟ್ಟಿ ಈ ಭೂರಿ ಭೋಜನದ ಅಡುಗೆಯನ್ನು ಮಾಡಿ, ಬಡಿಸಿದ್ದು ಇನ್ನೂ ವಿಶೇಷವಾಗಿತ್ತು! ಊಟದ ವ್ಯವಸ್ಥೆ ಯಶಸ್ವಿಯಾಗಲು ಲೆಸ್ಟರ್ ಕನ್ನಡ ಕುಟುಂಬದೊಟ್ಟಿಗೆ ಹಲವಾರು ಸ್ವಯಂಸೇವಕರು ಕೆಲಸಮಾಡಿದ್ದರು. ಕರ್ನಾಟಕದಿಂದ ಬಂದ ಲೆಸ್ಟರ್ ಮತ್ತು ಡಿ ಮೊಂಟೊಫೋರ್ಟ್ ಯೂನಿವರ್ಸಿಟಿ ವಿದ್ಯಾರ್ಥಿಗಳು , ಶಿವಾಲಯ ಲೆಸ್ಟರ್ ಗುಂಪು ಮತ್ತು ಹೆಚ್ ಎಸ್ ಎಸ್ ಸ್ವಯಂಸೇವಕರು ನಗುಮುಖದಿಂದ ತಮ್ಮ ನಿಸ್ವಾರ್ಥ ಸಹಾಯ ಒದಗಿಸಿದರು.

ಸಭಾಂಗಣದ ಪಕ್ಕದಲ್ಲಿ ಆಯೋಜಿಸಿದ ಕೆಲ ಜಾಹಿರಾತುದಾರರ ಅಂಗಡಿಗಗಳು ಜನರ ಆಕರ್ಷಣೆಗೆ ಒಳಗಾದವು . ಇವುಗಳ ಜೊತೆ ಮ್ಯಾಕ್ ಮಿಲನ್ ಚಾರಿಟಿಗೋಸ್ಕರ ೧೩ ವರ್ಷದ ಹುಡುಗಿ ಖುಷಿ ಪಾಟೀಲ್ ತನ್ನ ಕೈಯಾರೆ ಬೇಕ್ ಮಾಡಿದ ವಿವಿಧ ರೀತಿಯ ಕೇಕುಗಳು ಮತ್ತು ಬಿಸ್ಕತ್ಗಳನ್ನೊಳಗೊಂಡ ಅಂಗಡಿ ಚಿಕ್ಕ ಮಕ್ಕಳು ತಮ್ಮ ತಂದೆ ತಾಯಂದಿರನ್ನ ಅಲ್ಲಿಗೆ ಕರೆದೊಯ್ಯುವಂತೆ ಮಾಡಿತ್ತು. ನೆರೆದವರ ಧಾರಾಳ ಕಾಣಿಕೆ ಜಾಹಿರಾತಿನ ನೆರವಿಲ್ಲದೆ ಅವಳ ನೀರಿಕ್ಷೆಗೂ ಮೀರಿ ಹಣಕೂಡಿಸುವಲ್ಲಿ ಯಶಸ್ವಿಯಾಯಿತು. ಅನನ್ಯ ಪ್ರಸಾದ್ (ಡಾ ಜಿ ಎಸ್ ಶಿವಪ್ರಸಾದರವರ ಮಗಳು) ಈ ವರ್ಷಾಂತ್ಯದಲ್ಲಿ ತಾವು ಒಂಟಿಯಾಗಿ ದತ್ತಿ ಕಾರ್ಯಕ್ಕಾಗಿ ಅಟ್ಲಾಂಟಿಕ್ ಸಾಗರವನ್ನು ಹುಟ್ಟು ದೋಣಿಯಲ್ಲಿ ದಾಟುವ ಸಾಹಸದ ಮಾಹಿತಿಯನ್ನು ಹಂಚಿಕೊಂಡರು. ಸಂಗ್ರಹಿಸಲಿರುವ ಹಣವನ್ನು ಯು.ಕೆ ಯ ಮಾನಸಿಕ ಆರೋಗ್ಯ ದತ್ತಿ ಮತ್ತು ಭಾರತದ ದೀನಬಂಧು ಟ್ರಸ್ಟ್ ಗಳೊಂದಿಗೆ ಹಂಚುವ ಆಕಾಂಕ್ಷೆ ಅವರದ್ದು. ಅವರ ಈ ಪ್ರಯತ್ನ ಯಶಸ್ವಿಯಾದರೆ, ಅಟ್ಲಾಂಟಿಕ್ ಸಾಗರವನ್ನು ಒಬ್ಬಂಟಿಯಾಗಿ ಹುಟ್ಟು ದೋಣಿಯಲ್ಲಿ ಕ್ರಮಿಸಿದ ಪ್ರಥಮ ಬಣ್ಣದ ಮಹಿಳೆಯಾಗಲಿದ್ದಾರೆ ಎಂಬುದು ಕನ್ನಡಿಗರಿಗೆ/ಭಾರತೀಯರಿಗೆ ಹೆಮ್ಮೆಯ ವಿಷಯ. ಅವರ ಈ ಪ್ರಯತ್ನ ಯಶಸ್ವಿಯಾಗಲೆಂದು ಎಲ್ಲರೂ ಹಾರೈಸಿದರು.  ಇದರೊಟ್ಟಿಗೆ ಕನ್ನಡ ಬಳಗ ಯುಕೆ ತಂಡದ ವಾರ್ಷಿಕ ಸಾಮಾನ್ಯ ಸಭೆ (ಎಜಿಮ್) ಮತ್ತು ಅನಿವಾಸಿ ಬಳಗದ ಕಾರ್ಯಕ್ರಮ (ಇದರ ವಿಶೇಷ ವಿವರ ಮುಂದಿನ ವಾರ) ಸಮಾನಾಂತರವಾಗಿ ನಡೆದವು.

ಮತ್ತೆ ಸಾಯಂಕಾಲ ಸಭಿಕರೆಲ್ಲ ಕಾತುರದಿಂದ ಕಾಯುತ್ತಿದ್ದ ಗಣ್ಯರ ಕಾರ್ಯಕ್ರಮಗಳು ಶುರುವಾದವು. ಶ್ರೀಯುತ ಶ್ರೀನಿವಾಸ ಪ್ರಭು ತಮ್ಮ ವೃತ್ತಿ ಬದುಕಿನ ಅನುಭವಗಳನ್ನ ಹಂಚಿಕೊಂಡು ಜನರನ್ನ ರಂಜಿಸಿದರು. ಸಭಿಕರ ಕೋರಿಕೆಗೆ ಮಣಿದು, ರಣಧೀರ ಚಿತ್ರದಲ್ಲಿ ಅವರು ನಟ ರವಿಚಂದ್ರನ್ ಅವರಿಗೆ ಧ್ವನಿ ದಾನ ಮಾಡಿದ ಸಂಭಾಷಣೆಗಳನ್ನು ಸಾದರ ಪಡಿಸಿದರು. ಆದರೆ ಅವರು ತಮ್ಮ ಕಂಚಿನ ಕಂಠದಲ್ಲಿ ಪಠಿಸಿದ ಹ್ಯಾಮ್ಲೆಟ್ ನಾಟಕದ ನಾಯಕನ ಕೊನೆಯ ಸಂಭಾಷಣೆ ಅವರ ಭಾಷಣದ ಪ್ರಮುಖ ಆಕರ್ಷಣೆಯಾಗಿತ್ತು. ಶ್ರೀಯುತ  ಸಿಹಿಕಹಿ ಚಂದ್ರು ಅವರಂತೂ ತಮ್ಮ ಮಾತಿನ ಚಾಕಚಕ್ಯತೆಯಿಂದ ಸಭಿಕರನ್ನ ನಗೆಗಡಲಲ್ಲಿ ಮುಳುಗಿಸಿದರು. ಅವರು ಕಲಾಸಾಮ್ರಾಟ್ ರಾಜಕುಮಾರ ಅವರೊಂದಿಗೆ ಕಳೆದ ಕ್ಷಣಗಳು ಎಲ್ಲರ ಮನದಲ್ಲಿ ಮರೆಯದೆ  ಉಳಿಯುವಂತವು. ಅವರು ನಡೆಸಿ ಕೊಡುವ  ಅಡುಗೆ ಕಾರ್ಯಕ್ರಮಗಳು ಕರ್ನಾಟಕದ ಮನೆಮನೆಗಳಲ್ಲಿ ಮಾತಾಗಿವೆ. ಅವರ ಸಲಹೆಯಂತೆ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧಿಗಳು ಮನೆಯಲ್ಲಿ ಮಾಡಿದ ಅಡುಗೆಗಳ ರುಚಿ ನೋಡಿ ಚಂದ್ರು ಅವರು ವಿಜೇತರನ್ನ ಆಯ್ಕೆಮಾಡಿದರು ಮತ್ತು ಅವರ ಹೆಸರಾಂತ ಜನುಮದ ಜೋಡಿ ಸ್ಪರ್ಧೆಯನ್ನೂ ನಡೆಸಿಕೊಟ್ಟರು.

ಸಾಯಂಕಾಲದ ಲಘು ಉಪಾಹಾರ ಮತ್ತು ಚಹಾ ಜನರನ್ನ ಕೊನೆಯ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಿತು. ಶ್ರೀಯುತ ವಿಶ್ವೇಶ್ ಭಟ್ ರವರು ಬಹುಮುಖ ಪ್ರತಿಭೆಯ ಅಭಿಯಂತರು. ಇವರು ವ್ಯಂಗಚಿತ್ರ ಮತ್ತು ಸಂಗೀತ ಲೋಕಗಳಲ್ಲಿ ತಮ್ಮ ಛಾಪನ್ನ ಮೂಡಿಸಿದ್ದಾರೆ. ಇವರ ತಮ್ಮ ವಿಭಿನ್ನ ರೀತಿಯ ಹಲವಾರು ಸಂಗೀತ ಪ್ರಕಾರಗಳನ್ನೊಳಗೊಂಡ ಪ್ರದರ್ಶನದಿಂದ  ಜನರನ್ನ ಮಂತ್ರ ಮುಗ್ಧರನ್ನಾಗಿಸಿದರು. ಇವರ ಹಾಡಿಗೆ ಜನ ಹೆಜ್ಜೆ ಹಾಕಿ ಸಂತೋಷ ವ್ಯಕ್ತ ಪಡಿಸಿದರು. ಕಾರ್ಯಕ್ರಮ ರಾತ್ರಿಯ ಭೋಜನ ಮತ್ತು ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು.

ಒಟ್ಟಾರೆ ಇದು ಒಂದು ಪರಿಪೂರ್ಣವಾದ , ಪಕ್ವವಾದ, ಯುಗಾದಿ ಹಬ್ಬದ ಸಂಭ್ರಮವನ್ನೊಳಗೊಂಡ ಮತ್ತು  ಕರ್ನಾಟಕದ ಸಂಸ್ಕೃತಿಯ ವೈವಿಧ್ಯತೆಯನ್ನ ಎತ್ತಿಹಿಡಿಯುವ ಆಚರಣೆಯಾಗಿತ್ತು. ಹೀಗೆ ಹಲವಾರು ಕಾರ್ಯಕ್ರಮಗಳು ಮುಂಬರುವ ದಿನಗಳಲ್ಲಿ ನಡೆದು ಅನಿವಾಸಿ ಕನ್ನಡಿಗರ ಮನದಲ್ಲಿ ಸದಾ ತಾಯ್ನುಡಿ ಮತ್ತು ತಾಯ್ನೆಲದ ವಾಸನೆಯನ್ನು ತುಡಿಯುತ್ತಿರಲಿ ಎಂದು ಹಾರೈಸೋಣ.

ಡಾ. ರಾಜಶ್ರೀ ಪಾಟೀಲ್