ಸಿರಿಗನ್ನಡಂ ಗೆಲ್ಗೆ..ಸಿರಿಗನ್ನಡಂ ಬಾಳ್ಗೆ

ಅನಿವಾಸಿ ಓದುಗರಿಗೆಲ್ಲ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ‘ಕನ್ನಡವೆಂದರೆ ಬರೀ ನುಡಿಯಲ್ಲ ; ಹಿರಿದಿದೆ ಅದರರ್ಥ’ ಎಂದ ನಮ್ಮ ನಿತ್ಯೋತ್ಸವದ  ಕವಿ ನಿಸಾರರ ಮಾತು ಅಕ್ಷರಶ: ಸತ್ಯ  ಎಂಬುದನ್ನು ನಮ್ಮಂಥ ಅನಿವಾಸಿಗಳಿಗಿಂತ ಮಿಗಿಲಾಗಿ ಬಲ್ಲವರಾರು ಅಲ್ಲವೇ?  ನಿಜ; ಕನ್ನಡ ಬರೀ ನಾಡು-ನುಡಿಯಲ್ಲ.. ಅದು ನಮ್ಮ ಇರವು,ಅರಿವು,ಹರವು,ಕಸುವು, ಜಸವು..ಅದೆಮ್ಮ ಬಲವು, ಒಲವು, ಗೆಲುವು..ಅದ ಬಿಟ್ಟರಾವ ಅಸ್ಮಿತೆಯೂ ಎಮಗಿಲ್ಲ. ಅದಕ್ಕೆಂದೇ ಕನ್ನಡವೇ ಸತ್ಯ..ಕನ್ನಡವೇ ನಿತ್ಯ. 

ನಲುಮೆಯ ಓದುಗರೇ, ಈ ರಾಜ್ಯೋತ್ಸವದ ಸಂದರ್ಭದಲ್ಲಿ ಭಾರತೀಯ ವಿದ್ಯಾಭವನದ ಚೈತನ್ಯಮೂರ್ತಿ ಶ್ರೀಯುತ ನಂದ ಕುಮಾರ ಅವರ ಸುಂದರ-ಸುಲಲಿತ  ಪದ್ಯವೊಂದು ಓದಿಗಾಗಿ  ನಿಮ್ಮ ಕೈ ಸೇರಲಿದೆ. ಓದಿ, ಆನಂದಿಸಿ. 

ಜೊತೆಗೇ ನಾನೊಂದು ಹೋಟೆಲಿನ ಪರಿಚಯ ಮಾಡಿಸುತ್ತಿದ್ದೇನೆ. ‘ ಪುಸ್ತಕ, ಸಿನೆಮಾ, ಕವಿ-ಕೃತಿ ಪರಿಚಯಗಳೇನೋ ಸರಿ..ಆದರೆ ಇದೇನಿದು ಹೋಟೆಲ್ ಪರಿಚಯ?!’ ಎಂದು ಹುಬ್ಬೇರಿಸಬೇಡಿ..ನೋಡಿ ಹೇಳಿ. 

~ ಸಂ

ಕನ್ನಡಮ್ಮನ ಬಳಸಿರಿ

ಹಸುರು ಸೊಬಗಿನ, ಬಯಲುಗಿರಿಗಳ ಉದಧಿನದಿಗಳ ನಾಡಿದು
ನಗೆಯಮಲ್ಲಿಗೌ, ಚಿಗುರುಕೇದಗೆ, ಸಕಲಸುಮಗಳ ಬೀಡಿದು
ಬಸವ ಸರ್ವಜ್ಞಾದಿ ದಾಸರ, ನಾರಣಪ್ಪನ ಮಾಡಿದು
ಹೊನ್ನ ಸಿರಿನುಡಿ ಕನ್ನಡಮ್ಮನ ಕಂದರೆಲ್ಲರ ಗೂಡಿದು ⎮⎮
ಮುಗಿಲುಮುಟ್ಟುವ, ದಿಗಿಲುಗೊಳಿಸುವ ತರುವರಂಗಳ ಕಾನನ
ನವಿಲು ಕೋಗಿಲೆ, ಗಿಳಿಯ ಚಿಲಿಪಿಲಿ ವಿಹಗಗಳ ಬೃಂದಾವನ
ಆನೆ ಹುಲಿ ನರಿ ಮೃಗಗಳೆಲ್ಲಕು ಆಸರೆಯು ಈ ತಾಯ್ನೆಲ
ಅಲ್ಲಿ ಅಗೋ ಬಲು, ಸುಂದರತರ, ಗುಡಿಯಗೋಪುರ ನೋಡುವಾ ⎮⎮
ಸ್ವಾರ್ಥವೆಣಿಸದೇ ನಾಡಹಿತವನು ಬಯಸಿ ದುಡಿದರ ನೆಲೆಯಿದು
ಕಲಿಕೆ ಎಲ್ಲರ ಸ್ವತ್ತು ಹಿಂದಡಿಯಿಡದಿರೆಂದರ ಸೆಲೆಯಿದು
ಸಕಲ ಉನ್ನತ ಗುಣಗಣಂಗಳ ಪಡೆದ ಸುಜನರ ಕುಲವಿದು
ಭೇದವೇ ಇರದಿರುವ ಬಾಳನು ಬಾಳಿದಂತರ ನೆಲವಿದು ⎮⎮
ಬಯಸಿದೆಲ್ಲವ ಆಗು ಮಾಡಿದ ಭಾರತಾಂಬೆಯ ಕರುವಿದು
ಬಯಸದೆಯೆ ನಮಗೆಲ್ಲ ನೀಡಿಹ ನಮ್ಮಗಳ ಕರುನಾಡಿದು
ಮನದ ಭಾವವ ಮೂಡಿಸಲು ಸರಿಯುಂಟೆ ನಮ್ಮೀಭಾಷೆಗೆ?
ನೆನೆಯುತಲಿ ತಾಯೊಲವ ಗೆಳೆಯಾ ಉಬ್ಬಿಹೋಗಿದೆ ನನ್ನೆದೆ ⎮⎮
ಭಾಷೆ ದೇಶದ ಭಾವನಾಡಿಯು ಭಾಷೆ ಬದುಕಿಗೆ ಕನ್ನಡಿ
ಕನ್ನಡದ ಕಸ್ತೂರಿ ಮರೆತರೆ ನಷ್ಟ ನಮಗೇ ನೆನಪಿಡಿ!
ನೂರುಭಾಷೆಯ ದಾಳಿಯಾಗುವ ಮುನ್ನ ಏಳಿರಿ ಬನ್ನಿರಿ
ಭಾರತದ ಕಣ್ಮಣಿಯ, ಹನುಮನ, ಕನ್ನಡಮ್ಮನ ಬಳಸಿರಿ. ⎮⎮

~ಮತ್ತೂರು ನಂದಕುಮಾರ, ಭಾರತೀಯ ವಿದ್ಯಾಭವನ.

ಕರ್ನಾಟಿಕ್ ಕೆಫೆ

ಕಳೆದ ವರುಷ ಹೀಗೇ ಚಳಿ ಸಣ್ಣಗೆ ಬಾಲ ಬಿಚ್ಚುತ್ತಿರುವ ನವೆಂಬರ್ ತಿಂಗಳು. ಹೊರಗೆ ಮೋಡ ಕವಿದು ಹಗಲು ಹನ್ನೆರಡರ ಹೊತ್ತಿನಲ್ಲೂ ಮಬ್ಬುಗತ್ತಲು.  ಹೊರೆ ಕೆಲಸವಿದ್ದರೂ ಮಾಡಲು ಮೂಡಿಲ್ಲದೇ ‘ಥ್ರೋ’ ಮೈಮೇಲೆ ಥ್ರೋ ಮಾಡಿಕೊಂಡು, ಕೈಯಲ್ಲಿ ಜಂಗಮವಾಣಿಯನ್ನು ಸ್ಥಾಪಿಸಿಕೊಂಡು  ಸೋಫಾದ ಮೂಲೆಯಲ್ಲಿ  ಮುದುಡಿ ಕುಳಿತ ಸೋಮಾರಿ ಹಗಲು. ಒಮ್ಮೆಲೇ ದೆಹಲಿಯಲ್ಲಿರುವ  ಮಗರಾಯನ ಕಾಲು.( ಇಂಗ್ಲೀಷಿನ call ಕನ್ನಡದ ಪ್ರಥಮಾ ‘ಉ” ವಿಭಕ್ತಿಯೊಂದಿಗೆ) ‘ಇದೇನಿದು’ ಎಂದು ನನಗೆ ದಿಗಿಲು.  ಹತ್ತು ಸಲ ನಾ  call ಮಾಡಿದರೇ ಎತ್ತಿ ಉತ್ತರಿಸದ ಭೂಪ.ಅವನದೇ  call, ಅದೂ ನನಗೆ ಬಂದರೆ ಅದು ‘ಗಾಡಿ ಮ್ಯಾಲಿಂದ ಬಿದ್ದೆ, ನಂದೇನೂ ತಪ್ಪಿರಲಿಲ್ಲ. ಬರೇ ಒಂಚೂರು ಕೈ ಫ್ರಾಕ್ಚರ್ ಆಗೇದ. ಒಂದೂವರೆ ತಿಂಗಳು ಪ್ಲಾಸ್ಟರ್ ಹಾಕ್ಕೋಬೇಕಷ್ಟೇ.. ಹಂಗೇ ಗಾಡಿಗೊಂಚೂರು  ಅಲ್ಲಿಲ್ಲೆ ರಿಪೇರಿಗೆ ಒಂದ ಹತ್ತ-ಹದಿನೈದು ಖರ್ಚಾಗಬಹುದು’  ಅಂತಲೋ ಅಥವಾ, ‘ ನಿನ್ನೆ ರಾತ್ರಿ ಶಿವಾಂಶನ ಮನಿಯಿಂದ ಬರೂ ಮುಂದ ನಾಯಿ ಕಡಿಸಿಕೊಂಡೆ. ನೀ ಏನ ಗಾಬರಿಯಾಗಬ್ಯಾಡ..ಇಂಜಕ್ಷನ್ ಮಾಡಸಗೊಂಡು ಬಂದೀನಿ. ಆದ್ರ ಆ ನಾಯಿ ಮ್ಯಾಲ ಕಣ್ಣಿಟ್ಟರಲಿಕ್ಕೆ ಹೇಳ್ಯಾರ ಡಾಕ್ಟರು..ಅದು ಸಾಯಬಾರದಂತ. ಸತ್ರ ಸ್ವಲ್ಪ ಡೇಂಜರ್ ಅಂತ’(ಅದ್ಯಾವುದೋ ಬೀದಿನಾಯಿ ಮ್ಯಾಲ ಕಣ್ಣಿಡಲಿಕ್ಕೆ ಅದೇನು ತನ್ನ ಅಡ್ರೆಸ್ ಹೇಳಿರತದಾ ಇವಂಗ?!) ಅಂತಲೋ ಎದೆ ಒಡೆಸೋ ವಿಷಯಾನೇ ಇರತಾವ. ಅದಕ್ಕೇ ಸ್ವಲ್ಪ ಗಾಬರಿಯಿಂದಲೇ ಎತ್ತಿ ‘ ಹಲೋ ಮತ್ತೇನಾತಪಾ’ ಎಂದೆ. ‘ಅಮ್ಮಾ, ಇಷ್ಟ ದಿನಾ ಆದ್ರೂ  ನೀ ನಂಗ ಒಮ್ಮೆನೂ ಹಂಪಿಗೆ ಯಾಕ ಕರಕೊಂಡು ಹೋಗಿಲ್ಲ? ಈ ಸಲ ಬಂದಾಗ ಅಲ್ಲೇ ಹೋಗೂಣು ಸೂಟಿಗೆ’ ಅಂದವನೇ ‘ ನಾ ಈಗ ಹೋಟೆಲ್ ಗೆ ಬಂದಿದ್ದೆ. ಆ ಮ್ಯಾಲೆ ಮಾಡತೀನಿ’ ಅಂತ  ಫೋನಿಟ್ಟ..
ಈ ಹೋಟೆಲ್ ಮತ್ತ ಹಂಪಿಯ ಬಾದರಾಯಣದ ತಲೆಬುಡ ತಿಳಿಯಲಿಲ್ಲ ನನಗೆ. ಆದರೂ ಮಗ ಹಂಪಿ ನೋಡಬೇಕು ಅಂದಿದ್ದೇ ಖುಷಿಯ ವಿಚಾರವಾಗಿತ್ತು. ಕನ್ನಡ ಇತಿಹಾಸಕ್ಕೆ ಸುವರ್ಣ ಯುಗ ಸೇರಿಸಿದ ಹಂಪೆ, ಕೃಷ್ಣದೇವರಾಯ-ಚಿನ್ನಾದೇವಿ-ತಿರುಮಲಾಂಬೆಯರ ಹಂಪೆ, ರಸ್ತೆ ಬದಿಯಲ್ಲಿ ಸೇರಿನಿಂದ ಮುತ್ತುರತ್ನವನಳೆದ ಹಂಪೆ, ವಿರೂಪಾಕ್ಷ-ವಿಜಯವಿಠ್ಠಲರ ದಿವ್ಯ ಸಾನಿಧ್ಯದ ಹಂಪೆ, ಕಲ್ಲುಕಲ್ಲಿನಲೂ ಕನ್ನಡ ನುಡಿ ಮೊಳಗಿಸಿದ ಹಂಪೆ, ಶಿಲೆಯಲ್ಲೂ ಸರಿಗಮದ ಸಂಗೀತದಲೆ ಹೊಮ್ಮಿಸುವ ಹಂಪೆ, ಹನುಮನ ಹಂಪೆ, ಹರಿದಾಸ ಗುರು ವ್ಯಾಸರಾಯರ, ಪುರಂದರರ ಹಂಪೆ, ತುಂಗಭದ್ರೆ ಹರಿವ ಹಂಪೆ..ವಸುಧೇಂದ್ರರ ಇತ್ತೀಚಿನ ಕಾದಂಬರಿ ತೇಜೋತುಂಗಭದ್ರಾದ ಹಂಪೆ..ಎಂದೆಲ್ಲ ನನ್ನ ಮನ ಭಾವುಕವಾಯಿತು. ‘ಆತ ಬಿಡ್ರಿ, ಏನೋ ಹೋಟೆಲ್ ಅಂದು ಇದೇನು ಇತಿಹಾಸ, ಪುರಾಣ ಹಚಗೊಂಡ ಕೂತೀರಿ ಆವಾಗಿಂದ’ ಅಂತ ನಿಮ್ಮ ಸಹನೆ ಕಳಕೋಬ್ಯಾಡ್ರಿ

ಈಗ ಸೀದಾ ಅಲ್ಲೇ ಕರಕೊಂಡು ಹೋಗತೀನಿ. ಇದು ದೆಹಲಿ NCR ದಲ್ಲಿರುವ CARNATIC CAFE. ಮತ್ತ ಹೋಟೆಲ್ ಅಂದ್ರೆಲಾ ಅಂತಿರೇನು? ಖರೇ ಹೇಳತೀನಿ ಈ ಹೋಟೆಲ್, ರೆಸ್ಟೋರೆಂಟ್, ಕೆಫೆ ಇತ್ಯಾದಿಗಳ ವ್ಯತ್ಯಾಸ ಅಷ್ಟ ಖಾಸೇನ ತಿಳ್ಯಂಗಿಲ್ರಿ ನನಗ. ನಮ್ಮೂರ ‘ ಸಂಗಮೇಶ್ವರ ಟೀ ಕ್ಲಬ್’, ಧಾರವಾಡದ ಕಾಮತ್, ಬಸಪ್ಪನ ಖಾನಾವಳಿ, ಹೈ ವೇ ದ ಢಾಬಾ, ಹುಬ್ಬಳ್ಳಿಯ ಉಡುಪಿ ಹೋಟೆಲ್, ಶಿರಸಿಯ ಸತ್ಕಾರ್, ಬಿಜಾಪೂರದ ಮೈಸೂರ ರೆಸ್ಟಾರೆಂಟ್, ಬೆಂಗಳೂರಿನ ಓಣ್ಯೋಣಿ ದರ್ಶಿನಿಗಳು, ದೆಹಲಿಯ ಕರ್ನಾಟಕ ಭವನ. ಕೊನೆಗೆ ಇಲ್ಲಿನ ಮೋಟರ್ ವೇ ಸರ್ವೀಸಿನ costa, subway ಹೊಟ್ಟೆ ತುಂಬಿಸುವ ತಾಣಗಳೆಲ್ಲ ನನ್ನ ಮಟ್ಟಿಗೆ   ಹೋಟೆಲ್ ಗಳೇ..

ಹತ್ತು ಹಲವಾರು,ಥರದ ದೋಸೆಗಳು, ಇಡ್ಲಿ-ವಡೆ-ಸಾಂಬಾರ್ ಗಳು,  ಬಿಸಿಬೇಳೆ-ಮೊಸರನ್ನಗಳು, ಕರುನಾಡ ಎವರ್ ಗ್ರೀನ್ ಸ್ಪೆಷಲ್  ಕೇಸರಿಭಾತು, ಮೈಸೂರುಪಾಕು, ಒಬ್ಬಟ್ಟುಗಳು, ಘಮಘಮಿಸುವ ಫಿಲ್ಟರ್ ಕಾಫಿ..ಇದಿಷ್ಟೇ ಆಗಿದ್ದರೆ ವಿಶೇಷವಿರುತ್ತಿರಲಿಲ್ಲ..ನಾನಿಲ್ಲಿ ಅದರ ಬಗ್ಗೆ ಪ್ರಸ್ತಾಪಿಸುತ್ತಲೂ ಇರುತ್ತಿರಲಿಲ್ಲ. (ಉತ್ತರ ಭಾರತದಲ್ಲಿ ನಮ್ಮ ದಕ್ಷಿಣದವರ ಅಥೆಂಟಿಕ್ ಟೇಸ್ಟ್ ನ ಖಾದ್ಯಗಳು ದೊರೆವುದು ಸಹ ಅಪರೂಪವೇ ಎನ್ನಿ.) ಇಲ್ಲಿ ನನ್ನ ಸೆಳೆದದ್ದು ಅಪರೂಪದ ಮೆನ್ಯು ಕಾರ್ಡ್.. ಮಧ್ಯೆ ಪುರಂದರದಾಸರ ಅಂಚೆಚೀಟಿ, ಪಕ್ಕದಲ್ಲಿ ರಾಮನಾಮ ಪಾಯಸಕ್ಕೆ ಹಾಡು. ಪಕ್ಕದ ಗೋಡೆಗಳ ಮೇಲೆ ದಾಸವರೇಣ್ಯರ ಹಾಗೂ  ಯಂತ್ರೋದ್ಧಾರನ ಫೋಟೊ, ಎದುರಿನ ಗೋಡೆಯ ಟಿ.ವಿ.ಯ ದೊಡ್ಡ ಸ್ಕ್ರೀನ್ ಮೇಲೆ ಅನವರತವಾಗಿ ನಡೆಯುತ್ತಲೇ ಇರುವ ಗಿರೀಶ್ ಕಾರ್ನಾಡರ ನಿರ್ದೇಶನದ, ಶಂಕರ್ ನಾಗ್, ಅರುಂಧತಿ ನಾಗ್ ಹಾಗೂ ಶ್ರೀನಿವಾಸ ಪ್ರಭು ಅವರ ಅಭಿನಯದ ‘ಕನಕ-ಪುರಂದರ’ ಡಾಕ್ಯುಮೆಂಟರಿ. ಹೊರನಾಡಿನಲ್ಲಿ ನಮ್ಮ ನೆಲದ ಸವಿ ಕಣ್ಣು, ಕಿವಿ, ನಾಲಗೆಗಳಿಗೆ ಸಿಕ್ಕರೆ ಆಗುವ ಆನಂದಾನುಭೂತಿ ಎಂಥದೆಂದು ನಮ್ಮ ಅನಿವಾಸಿ ಬಳಗಕ್ಕೆ ವಿವರಿಸಬೇಕಾದ್ದಿಲ್ಲ ಅಲ್ಲವೇ? ತೆಂಗಿನ ಪರಟಿಯಲ್ಲಿ ಬಂದ ಬಡೇಸೋಪು ಸಹ ವಿಶೇಷವೆನ್ನಿಸಿತು ನನಗೆ. ದೆಹಲಿ, ನೊಯಿಡಾ ಕಡೆಗೇನಾದರೂ ಹೋದರೆ ಖಂಡಿತ ಇಲ್ಲೊಮ್ಮೆ ಭೇಟಿಕೊಡಿ..ಕರುನಾಡಿನವನು(ಳು) ನಾನೆಂದು ಹೆಮ್ಮೆ ಪಡಿ. ‘ಜೈನರ ಕಾವ್ಯದ ಶರಣರ ವಚನದ ದಾಸರ ಹಾಡಿನದೀ ನಾಡು’ ಎಂದೊಮ್ಮೆ ಮನದಲ್ಲೇ ಹಾಡಿ.( ನಿಮ್ಮ ಸ್ವರತಾಳಲಯದ ಬಗ್ಗೆ ನಂಬುಗೆಯಿದ್ದವರು ದನಿ ತೆಗೆದೇ ಹಾಡಲಡ್ಡಿಯಿಲ್ಲ.) ಕನ್ನಡ ತಾಯ ಜಯಕಾರ ಮಾಡಿ.

ಜೈ ಭುವನೇಶ್ವರಿ.

~ ಗೌರಿಪ್ರಸನ್ನ

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಎನಿತು ಇನಿದು ಈ ಕನ್ನಡ ನುಡಿಯು 

ಮನವನು ತಣಿಸಿದ ಮೋಹನ ಸುಧೆಯು

 ಗಾನವ ಬೆರೆಯಿಸಿ ವೀಣೆಯ ದನಿಯೊಳು

ವಾಣಿಯ ನೇಪುರ ನುಡಿಸುತೆ ಕುಣಿಯಲು

 ಮಾಣದೆ ಮೆರೆಯುವ ಮಂಜುಲ ರವವೋ

 ಎನಿತು ಇನಿದು ಈ ಕನ್ನಡ ನುಡಿಯು

 – ಆನಂದಕಂದ 
ಇಂಥ ಮಧುರವಾದ ಭಾಷೆಯನ್ನು ಬಳುವಳಿಯಾಗಿ ಪಡೆದ ನಾವೇ ಧನ್ಯರು! ಅನಿವಾಸಿಯಲ್ಲಿ ರಾಜ್ಯೋತ್ಸವ ವಿಶೇಷ ಸಂಚಿಕೆಗೆಂದು ಲೇಖನ, ಕವನ,ನಾಡಗೀತೆ,ಅನುಭವ ಕಥನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದೇ ಎಂದು ಕೇಳಿದಾಗ ಪ್ರೀತಿ ಅಭಿಮಾನದಿಂದ ಬರೆದು,ಹಾಡಿ ಕಳಿಸಿದ ಅನಿವಾಸಿ ಓದುಗರೆಲ್ಲರಿಗೂ ವಂದನೆಗಳು. 
ಈ ಸಂಚಿಕೆಯಲ್ಲಿ ಗೌರಿ ಪ್ರಸನ್ನ ಮತ್ತು ಗಿರೀಶ್ ಪ್ರಸಾದ್ ಅವರು ರಾಜ್ಯೋತ್ಸವದ ನವಿರು ನೆನಪುಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಡಾ ರಾಮಶರಣ್ ಅವರು ಬರೆದ ”ಕಂಡಲ್ಲಿ ಕನ್ನಡ”ಎಂಬ ಸುಂದರ ಕವನವಿದೆ. ಜೊತೆಗೆ ‘ಅನಿವಾಸಿ’ಗೆ ಇದೇ  ಮೊದಲ ಬಾರಿ ಬರೆಯುತ್ತಿರುವ ಡಾ ಶ್ರೀಕಾಂತ ಕೃಷ್ಣಮೂರ್ತಿ ಅವರು ತಾಯಿ ‘ಕಾವೇರಿ’ ಯನ್ನು ತ್ರಿಪದಿಯಲ್ಲಿ ಪೋಣಿಸಿ ತಂದಿದ್ದಾರೆ. ಇದಲ್ಲದೆ ಈ ಸಂಚಿಕೆಯಲ್ಲಿ ತಮ್ಮರಾಜ್ಯೋತ್ಸವದೆನಪುಗಳನ್ನು ಬರೆಯುತ್ತಾ ಕನ್ನಡದ ಹಿರಿಯ ಕವಿಗಳಾದ ಸಾಲಿ ರಾಮಚಂದ್ರ ರಾಯರ – ಕನ್ನಡದ ನೆಲದ ಪುಲ್ಲೆನಗೆ. ಈ ಗೀತೆಯ ಹಿನ್ನೆಲೆ, ಇತಿಹಾಸವನ್ನ ಕವಿಯ ಮೊಮ್ಮಗ ಡಾ ಶ್ರೀವತ್ಸ ದೇಸಾಯಿ ಅವರು ಬರೆದಿದ್ದಾರೆ. ಮತ್ತು ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪನವರು ಅನಿವಾಸಿ ಕನ್ನಡಿಗರಿಗೆಂದೆ ಬರೆದಿರುವ – ”ಕಡಲಾಚೆಯ ಕನ್ನಡಿಗರ ಸ್ವಗತ” ಎನ್ನುವ ಎರಡು ಕನ್ನಡ ಗೀತೆಗಳಿವೆ. ಇವೆರಡನ್ನೂ ಈ ಸಂಚಿಕೆಗಾಗಿಯೇ ಹಾಡಿದ ವಿಡಿಯೋಗಳನ್ನು ಕೊಂಡಿಯನ್ನೊತ್ತಿ ’ಅನಿವಾಹಿನಿ’ಯಲ್ಲಿ ಕೇಳಿರಿ.

ಅನಿವಾಸಿ ಓದುಗರಿಗೆ ೬೬ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 

ಈ ವಿಶೇಷ ಸಂಚಿಕೆಯ ಓದಿಗೆ ನಿಮಗಿದೋ ಸ್ವಾಗತ 

-ಸಂಪಾದಕಿ 

 

ನನ್ನ ರಾಜ್ಯೋತ್ಸವದ ನೆನಪುಗಳು ಮತ್ತು ‘ನಾಡಗೀತೆ’ಯ ಪೂರ್ವೇತಿಹಾಸ – ಡಾ ಶ್ರೀವತ್ಸ ದೇಸಾಯಿ

ಇವೆಲ್ಲ ಹಳೆಯ ಮಾತುಗಳಾದರೂ ಈ ಲೇಖನದಲ್ಲಿ ಕೆಲವು ಎಲ್ಲರಿಗೂ ಗೊತ್ತಿರದ ಒಂದೆರಡು ಹೊಸ ಮಾಹಿತಿಯಿದೆ.

1956 ರಲ್ಲಿ ರಾಜ್ಯ ಏಕೀಕರಣಗೊಂಡರೂ ಕನ್ನಡ ಮಾತಾಡುವ ಈ ನಾಡನ್ನು ಅಧಿಕೃತವಾಗಿ ’ಮೈಸೂರು ಪ್ರಾಂತ ’ ಎಂದೇ ನಾವು ಶಾಲೆಯಲ್ಲಿದ್ದಾಗ ಕರೆಯುತ್ತಿದ್ದೆವು. ಆಗ ಒಂದು ಅಧಿಕೃತ ನಾಡಗೀತೆಯಿರಲಿಲ್ಲ. ’ಹಳೆಯ ಮೈಸೂರಲ್ಲಿ’ ಕುವೆಂಪು ಅವರು ಬರೆದ ’ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಗೀತೆ ಪ್ರಚಲಿತವಿದ್ದರೆ ಬೇರೆ ಕೆಲವು ಕನ್ನಡದ ದೇಶಭಕ್ತಿಯ ಗೀತೆಗಳು ಸಹ ನಾಡಗೀತೆಯೆಂದು ಕೆಲವರಿಂದ ಕರೆಯಲಾಗುತ್ತಿದ್ದವು. ಉದಾಹರಣೆಗಾಗಿ “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ” ಎಂಬ ಮೊದಲ ರಾಷ್ಟ್ರಕವಿ ಗೋವಿಂದ ಪೈ ವಿರಚಿತ ಹಾಡು ನಿರಂತರವಾಗಿ ಕನ್ನಡಿಗರ ತನುಮನ ಗಳಲ್ಲಿ ಮಾರ್ದನಿಸುತ್ತಿದ್ದ ’ನಾಡ ಭಕ್ತಿಗೀತೆ’ಯಾಗಿತ್ತು.  ಆ ಮೊದಲು ಮುಂಬಯಿ ಕರ್ನಾಟಕದಲ್ಲಿ ಸೇರ್ಪಡೆಯಾಗಿದ್ದ ನಾಲ್ಕು ಜಿಲ್ಹೆಗಳಲ್ಲಿ ಹುಯಿಲಗೋಳು ನಾರಾಯಣರಾಯರು ರಚಿಸಿದ ”ಉದಯವಾಗಲಿ ನಮ್ಮ ಕನ್ನಡ ನಾಡು” ಗೀತೆಯನ್ನೇ ಆಗ ನಾಡಗೀತೆಯೆಂದು ಕರೆಯಲಾಗುತ್ತಿತ್ತು ಮತ್ತು ನಾವೆಲ್ಲ ಶಾಲೆಯಲ್ಲಿ ಅದನ್ನು ಉತ್ಸಾಹದಿಂದ ಹಾಡುತ್ತಿದ್ದ ನೆನಪು. ಎಲ್ಲ ಸಾರ್ವಜನಿಕ ಸಮಾರಂಭಗಳಲ್ಲಿಯೂ ಅದನ್ನೇ ಹಾಡಲಾಗುತ್ತಿತ್ತು.  ’ಕರ್ನಾಟಕದ ಗತ ವೈಭವ’ವನ್ನು ಬರೆದು ಉತ್ತರ ಕರ್ನಾಟಕದಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ದುಡಿದು ಕರ್ನಾಟಕದ ಕುಲಪುರೋಹಿತರೆಂದೇ ಜನರು ಕರೆಯುತ್ತಿದ್ದ ಆಲೂರು ವೆಂಕಟರಾಯರು ಸಾಧನಕೇರಿಯಿಂದ ಬೆಳಿಗ್ಗೆ ವಾಕಿಂಗ್ಘೋಗುತ್ತಿರುವಾಗ ನಮ್ಮ ಕಣ್ಣಿಗೆ ಬೀಳುತ್ತಿದ್ದರು. ಅವರು ಯಾವಾಗಲೂ ಬಿಳಿ ಗಡ್ಡ, ಶುಭ್ರವಾದ ಬಿಳಿ ನಿಲುವಂಗಿ, ಬಿಳಿ ಧೋತರ ಉಟ್ಟು, ನೆಟ್ಟನೆ ಬೆನ್ನು, ಕೈಯಲ್ಲೊಂದು ಕೋಲು ಹಿಡಿದು ಹೊರತರೆ ಅದೇನು ಗಾಂಭೀರ್ಯ! ಆ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದೆ. ಹುಯಿಲಗೋಳು ನಾರಾಯಣರಾಯರದೋ ತಲೆಗೆ ರುಮಾಲು, ಬಿಳಿ ಕೋಟು ಮತ್ತು ಧೋತರ ಉಟ್ಟು ಒಂದು ಸಮಾರಂಭಕ್ಕೆ ಬಂದಾಗ ನೋಡಿದ ನೆನಪು. ಅವರು ಬರೆದ ನಾಡಗೀತೆಯ ಮೊದಲ ಸಾಲು ’ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’. ಚಲುವ, ಚೆಲುವ ಎರಡೂ ಪದಗಳು ಚಾಲ್ತಿಯಲ್ಲಿದ್ದರೂ ಅವರು ಬರೆದದ್ದು ’ಚಲುವ’. ಅದನ್ನು ತಪ್ಪಾಗಿ ಚೆಲುವ ಅಂತ ಬರೆದವರೇ ಹೆಚ್ಚು. ಅದು ಮೊದಲ ಬಾರಿ ಸ್ವಾಗತಗೀತೆಯಾಗಿ  1924 ರಲ್ಲಿ ಬೆಳಗಾವಿಯಲ್ಲಿ ಜರುಗಿದ 43ನೆಯ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಅದರ ಉಗಮದ ಕಥೆ ಸ್ವಾರಸ್ಯಕರವಾಗಿದೆ. ಸ್ವಾಗತ ಕಮಿಟಿಯವರು ಒಂದು ಸ್ಪರ್ಧೆಯನ್ನಿಟ್ಟು ಹಾಡುಗಳನ್ನು ಆಹ್ವಾನಿಸಲಾಯಿತು. ಆಗ ನಾರಾಯಣರಾಯರು ಮಲೇರಿಯಾದಿಂದ ಹಾಸಿಗೆ ಹಿಡಿದಿದ್ದರು. ಅವರ ಮಿತ್ರರು ವೃತ್ತಪತ್ರಿಕೆಯನ್ನು ತೋರಿಸಿ ಅವರ ಗೆಳೆಯರು ’ನೀವು ಏಕೆ ಬರೆಯಬಾರದು’ ಎಂದು ಕೇಳಿಕೊಂಡರಂತೆ. ಅದೇ ಪ್ರೇರಣೆಯಾಗಿ ಅವರು ಬರೆದರು. ಅದು ಆಯ್ಕೆಯಾಯಿತು. ಅದನ್ನು ಅಲ್ಲಿ ಹಾಡಿದವರು ಧಾರವಾಡದ ಗವಯ್ಯಿ ಸುಬ್ಬರಾಯರು, ಸಾಮಾಜಿಕ ತಾಣಗಳಲ್ಲಿ, ವೃತ್ತ ಪತ್ರಿಕೆಗಳಲ್ಲಿ ಕಾಣ ಬರುವ ಹೆಸರು ’ಹನ್ನೊಂದು ವರ್ಷದ ಗಂಗೂ ಬಾಯಿ ಹಾನಗಲ್’ ಎನ್ನುವದು ತಪ್ಪು (ಆಧಾರ: ಡಾ ಜಿ ಡಿ ಜೋಶಿ ಬರೆದ ಪಿ ಹೆಚ್ ಡಿ ಗಾಗಿ ಬರೆದ ಪುಸ್ತಕ -ಮುಂಬಯಿ ವಿಶ್ವ ವಿದ್ಯಾಲಯ,1996). ಅದರಲ್ಲಿ ನಾರಯಣರಾಯರ ಸ್ವಹಸ್ತದಿಂದ ಬರೆದ ಆ ಗೀತೆ ಇದೆ. ಒಮ್ಮೆ ಎನ್ಕೆ ಕುಲಕರ್ಣಿಯವರು ಗಂಗೂಬಾಯಿಯವರ ಸಂದರ್ಶನದಲ್ಲಿ ಬರೆದ ಕೆಲ ಸಾಲುಗಳೆ ಆ ತಪ್ಪು ಗ್ರಹಿಕೆಗೆ ಮೂಲ ಎಂದು ನನಗೆ ತಿಳಿದು ಬಂದಿದೆ.

ಮೇಲೆ ಹೇಳಿದ ಆ 1924 ರ ಬೆಳಗಾವಿಯ ಅಧಿವೇಶನಕ್ಕೆ ಗಾಂಧೀಜಿಯವರು ಪ್ರಥಮ ಬಾರಿ ಕನ್ನಡ ನಾಡಿಗೆ ಬಂದಿದ್ದರು. ಅವರು ಹಿಂದಿಯಲ್ಲಿ ಮಾಡಿದ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ ಹೆಮ್ಮೆ (ನನ್ನ ಅಜ್ಜ) ಸಾಲಿ ರಾಮಚಂದ್ರರಾಯರದಾಗಿತ್ತು (1888-1978) . ”ಅವರ ದೇಶಭಕ್ತಿ, ಗಾಂಧೀ ಪ್ರೀತಿ, ಭಾಷಾ ಪರಿಣತಿ ಮತ್ತು ಇತ್ತೀಚೆಗೆ ಸಾಧಿಸಿದ್ದ ಹಿಂದೀಭಾಷಾಜ್ಞಾನಕ್ಕಾಗಿ ಅವರನ್ನು ಆರಿಸಲಾಗಿತ್ತು”. (ಹೇಮಾ ಪಟ್ಟಣಶೆಟ್ಟಿ: ಸಾಲಿ ರಾಮಚಂದ್ರ ರಾಯ, ಸಾಹಿತ್ಯ ಅಕಾದೆಮಿ, 2012). ಅವರು 1939ರಲ್ಲಿ ವಾರ್ಧಕ ಷಟ್ಪದಿಯಲ್ಲಿ ರಚಿಸಿದ  ”ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ” ಎಂದು ಆರಂಭವಾಗುವ ಕವನವನ್ನು ಹಲವುಕಡೆ ’ನಾಡಗೀತೆ’ಯೆಂದು ಉಲ್ಲೇಖಿಸಲಾಗಿದೆ. ಅದಕ್ಕೆ ರಾಗಸಂಯೋಜನೆ ಮಾಡಿ ಅಮಿತಾ ರವಿಕಿರಣ ಅವರು ಹಾಡಿದ್ದಾರೆ. (ಕೊಂಡಿಯನ್ನು ಕೆಳಗೆ ಕೊಡಲಾಗಿದೆ -1) ಅವರ ಹಸ್ತಾಕ್ಷರದಲ್ಲಿಯೇ ಬರೆದ ಕವನವನ್ನೂ ಇಲ್ಲಿ ಕೊಟ್ಟಿದೆ.

  ಭಾಷಾವಾರು ಪ್ರಾಂತಗಳ ವಿಂಗಡನೆಯಾದ ನಂತರ ಹೊಸ ಹೆಸರಿಡುವ ಆಂದೋಲನ ಶುರುವಾಯಿತು. ವಿಧಾನ ಸಭೆಯಲ್ಲಿ ’ಕರ್ನಾಟಕ’ ಎಂದು ಹೆಸರಿಡುವ ಬಗ್ಗೆ ಚರ್ಚೆ ನಡೆದಾಗ ದಕ್ಷಿಣ ಭಾಗದ ಸದಸ್ಯರು ವಿರೋಧಿಸಿ ಮಾತಾಡಿದ್ದು ನೆನಪಿದೆ. ಒಬ್ಬರ ವಾದ ಈಗಲೂ ಹಾಸ್ಯಾಸ್ಪದವೆನಿಸುತ್ತದೆ: ’ತಮಿಳಿನಲ್ಲಿ ಕರ್ನಾಡಗಮ್ ಎಂದರೆ ಹಳ್ಳಿ ಗಮಾರ ಎಂದು ಅಭಿಪ್ರಾಯ” ಎನ್ನುವ ನೆಪ. ಕರ್ನಾಟಕ ಎನ್ನುವ ಹೆಸರು ಅಧಿಕೃತವಾಗಿ ಅಂಗೀಕಾರವಾದದ್ದು 1973 ರಲ್ಲಿ. 1971-72 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಅವರ ಗೀತೆಯನ್ನು ’ನಾಡಗೀತೆ’ ಎಂದು ಘೋಷಿಸಿಯಾಗಿತ್ತು. ಆದರೆ ಸರಕಾರ ಹಾಗೆ ಮಾಡಿದ್ದು ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ 2004 ರಲ್ಲಿ. ಆನಂತರವೂ ಆಗಿಂದಾಗ ಚರ್ಚೆ ವಿವಾದ ನಡೆದಿವೆ. ಅದು ಈ ಕಿರುಲೇಖನದ ವಸ್ತು ಅಲ್ಲವೆಂದು ಕೈಬಿಟ್ಟಿದ್ದೇನೆ.

( Govind Pai’s handwritten poem : “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ”By Mysore University Declaration certificate.pdf – Mysore University Declaration certificate.pdf, CC BY-SA 3.0, https://commons.wikimedia.org/w/index.php?curid=33265882 below

ಕವಿಗಳ ಹಸ್ತಾಕ್ಷರಗಳಲ್ಲಿ

ಕಡಲಾಚೆಯ ಕನ್ನಡ ಕುಲ ನಾವು – ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ

ಎರಡು ವರ್ಷಗಳ ಹಿಂದೆ ಕುವೈತ್ ನಿಂದ ಸ್ನೇಹಿತೆಯೊಬ್ಬರು ನನಗೆ ರಾಗ ಸಂಯೋಜನೆ ಮಾಡಿಕೊಡಲಾದೀತೇ ಎಂದು ಒಂದು ಕವಿತೆಯನ್ನು ಕಳಿಸಿದ್ದರು.ಕಡಲಾಚೆಯ ಕನ್ನಡಿಗರ ಸ್ವಗತ ಎನ್ನುವ ಈ ಕವಿತೆಯನ್ನು ಮೊದಲಬಾರಿ ಓದಿದಾಗಲೇ ತುಂಬಾ ಇಷ್ಟವಾಗಿತ್ತು. ಅನಿವಾಸಿ ಕನ್ನ್ನಡಿಗರ ಮನಸ್ಥಿತಿ, ವ್ಯಾಕುಲತೆ, ದೂರವಿದ್ದು ನಾಡಿನ ಗುಂಗಿನಲ್ಲಿರುವ ನಮ್ಮೆಲ್ಲರ ಮನದ ಮಾತಿನಂತಿದೆ ಈ ಕವಿತೆ. ನನ್ನ ಸಂಯೋಜನೆಯನ್ನ ‘ಅನಿವಾಸಿ’ಯ ಹೊಸ ಸದಸ್ಯೆ ಲೇಖಕಿ – ಗಾಯಕಿ ಶ್ರೀರಂಜನೀ ಸಿಂಹ ಅವರು ಹಾಡಿದ್ದಾರೆ. (ಕೊಂಡಿಯನ್ನು ಕೆಳಗೆ ಕೊಡಲಾಗಿದೆ -2)

 -ಅಮಿತಾ ರವಿಕಿರಣ್ 

ರಾಜ್ಯೋತ್ಸವದ ಸವಿ ನೆನಪು – ಗೌರಿ ಪ್ರಸನ್ನ

ಮತ್ತೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ. ಹೊರನಾಡಿನ ಕನ್ನಡಿಗರು, ಕನ್ನಡ ಸಂಘಗಳು ನಾಡು-ನುಡಿಯ ಪ್ರೇಮದಲ್ಲಿ ಮತ್ತೆ ಮಿಂದೇಳುವ ಶುಭ ಸಮಯ. ಎಲ್ಲರಿಗೂ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

     ‘ಅ ಆ ಇ ಈ ಕನ್ನಡದ ಅಕ್ಷರಮಾಲೆ -ಅಮ್ಮಾ ಎನುವುದೇ ಕಂದನ ಕರುಳಿನ ಕರೆಯೋಲೆ’ ಎನ್ನುವ ಗೀತೆ ಕೇಳುತ್ತಲೇ ಬಾಲ್ಯ ಕಳೆದದ್ದು. ಸ್ವಲ್ಪ ಬುದ್ಧಿ ಬರುವ ಹೊತ್ತಿಗೆ‘ ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ’ ಹಾಡಿಗೆ ಮಾರುಹೋಗಿ ಏನೇ ಆದರೂ ಕನ್ನಡ ನಾಡಿನಿಂದ ಹೊರಗೆ ಹೋಗೆನೆಂಬ ಧೃಢಸಂಕಲ್ಪವನ್ನು ಮಾಡಿದ್ದೆಷ್ಟು ಬಾರಿಯೋ? ‘ಕೃಷ್ಣ  ಶರಾವತಿ ತುಂಗಾ ಕಾವೇರಿಯ ವರರಂಗಾ’ ಎಂದು ಮಧ್ಯಾಹ್ನ 11:00 ಗಂಟೆಗೆ ಶಾಲೆಯ ಪ್ರಾರ್ಥನೆಯಲ್ಲಿ  ನಾಡಗೀತೆಯನ್ನು ಹಾಡುತ್ತಿರುವಾಗ ಬಿಜಾಪೂರದ ಬಿರುಬಿಸಿಲಿನಲ್ಲೂ ಎದೆಯಲ್ಲಿ ತಣ್ಣನೆಯ ನದಿಯ ಪ್ರವಾಹವೊಂದು ಹರಿಯುತ್ತಿದ್ದುದು ಸುಳ್ಳಲ್ಲ. ನಿತ್ಯೋತ್ಸವದ ಕ್ಯಾಸೆಟ್ ‘ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ’ ಎಂದು ಹಾಡುತ್ತಿದ್ದರೆ ಮೈಯೆಲ್ಲ ಮುಳ್ಳೆದ್ದು ಹೃದಯದ ತುಂಬ ಹೆಮ್ಮೆಯ ಸಂಚಾರ.

  ಜೀವನದ ಮೊದಲ ಮೂರು ದಶಕಗಳಲ್ಲಿ ನಾಡು-ನುಡಿಗಳಿಂದ ದೂರವಾಗಬಹುದಾದ ಕಿಂಚಿತ್ ಕಲ್ಪನೆಯೂ ಇರಲಿಲ್ಲ. ಆದರೆ ನೆಲ-ನೀರು-ಅನ್ನದ ಋಣಗಳು ನಮ್ಮನ್ನು ಒಂದೆಡೆ ಇರಗೊಡುವುದಿಲ್ಲವೇನೋ? ನಾಡಿನಿಂದ ದೂರ ಬಹುದೂರವಿದ್ದರೂ ನುಡಿ ಮಾತ್ರ ಈಗಲೂ ಜೀವನಾಡಿ ಎಂಬುದೇ ಸಧ್ಯಕ್ಕಿರುವ ಸಮಾಧಾನ. ಕನ್ನಡದ ಹೊರತೆನಗೆ ಮತಿಯಿಲ್ಲ-ಗತಿಯಿಲ್ಲ.ನನ್ನ ಮಟ್ಟಿಗೆ ನನ್ನ ಇರವು,ಅರಿವು, ಖೂನು ಗುರುತು, ಮೂಲ ಬೇರು ಎಲ್ಲವೂ ಕನ್ನಡವೇ. ಕನ್ನಡದಿಂದ ಪ್ರತ್ಯೇಕಿಸಿಕೊಳ್ಳುವುದು ಸಾಧ್ಯವೇ ಇಲ್ಲವೇನೋ?

  ಕನ್ನಡವನ್ನು ನಾವು ಉಳಿಸಬೇಕು, ಬೆಳೆಸಬೇಕು ಅನ್ನುವುದು ಬಾಲಿಶವೆನಿಸುತ್ತದೆ ಒಮ್ಮೊಮ್ಮೆ. ನಮ್ಮನ್ನು ಉಳಿಸಿದ್ದು,ಬೆಳೆಸಿದ್ದು, ಬಾಳಿಸಿದ್ದೇ ಕನ್ನಡವೆನ್ನವುದು ಸೂಕ್ತವೆನ್ನಬಹುದೇನೋ?

 ಸಧ್ಯಕ್ಕೆ ನನ್ನಾಶೆ..’ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..ಬದುಕಿದರೆ ಕನ್ನಡ ನೆಲದಲ್ಲೇ ಬದುಕಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು. ಮತ್ತದೇ ಮಣ್ಣಲ್ಲಿ ಮಣ್ಣಾಗಬೇಕು.’

“ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ.”

*******************************************************************

ನನ್ನೂರಿನ ರಾಜ್ಯೋತ್ಸವದ ನೆನಪು ಗಳು – ಗಿರೀಶ ಪ್ರಸಾದ್

ನವೆಂಬರ್ ತಿಂಗಳಿಗೂ ನನಗೂ ಬಹಳ ವಿಶೇಷವಾದ ನಂಟು. ನಾನೊಬ್ಬ ಕನ್ನಡಿಗ ಎಂಬುದು ಒಂದು ಮುಖ್ಯ ಕಾರಣವಾದರೆ, ಆ ತಿಂಗಳಲ್ಲಿ ನನ್ನ ಹುಟ್ಟಿದ ದಿನ ಎಂಬುದು ಮತ್ತೊಂದು ಕಾರಣವಿರಬಹುದು. ರಾಜ್ಯೋತ್ಸವವೆಂದರೆ ನನಗೆ ಹುಟ್ಟಿದ ದಿನವಿದ್ದಂತೆ. ಹೇಗೆ ನಾವು ಕೇವಲ ಒಂದು ದಿನ ನಮ್ಮ ಹುಟ್ಟಿದ ದಿನ ಆಚರಿಸಿದರೂ ಪ್ರತಿ ನಿತ್ಯ ಜೀವನವನ್ನು ಸಂಭ್ರಮಿಸುತ್ತೇವೆಯೋ ಹಾಗೇ ರಾಜ್ಯೋತ್ಸವ ಕೂಡ. ಭಾಷೆಯನ್ನು ಸಂಭ್ರಮಿಸುವ, ಪ್ರೀತಿಸುವ , ಆಚರಿಸುವ ದಿನ. ನಾನು ಕಂಡಿರುವ ಸಂಭ್ರಮಿಸಿರುವ ರಾಜ್ಯೋತ್ಸವವೇ ಬೇರೆ ರೀತಿಯದು. “ನಾನು ನವೆಂಬರ್ ಕನ್ನಡಿಗನಲ್ಲ ” ಎಂದು ಹೇಳುವ ಪ್ರಮೇಯವೇ ಬರದಂಥ ಸ್ಥಳದಲ್ಲಿ ಹುಟ್ಟಿದವನು ನಾನು. ಅನೇಕ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು, ಒಂದೇ ಒಂದು ಆಂಗ್ಲ ಮಾಧ್ಯಮ ಶಾಲೆ ಇದ್ದ ಊರು ನನ್ನದು. ಸ್ವಾಭಾವಿಕವಾಗಿ ಕನ್ನಡವೇ ಪ್ರಧಾನ ವ್ಯವಹಾರ ಭಾಷೆ. ಯಾರಿಗೂ ಬೇರೆ ಭಾಷೆ ಕಲಿಯುವ ಧಾವಂತ ಇದ್ದಂತೆ ಕಾಣದ ಕಾಲವದು. ಇಂಥ ಒಂದು ಊರಲ್ಲಿ ಕನ್ನಡ ರಾಜ್ಯೋತ್ಸವ ಕೇವಲ ರಾಜ್ಯ ರಚನೆ ಆದ ದಿನ ಆಗದೆ, ನಮ್ಮತನವನ್ನ ಆಚರಿಸುವ ಹಬ್ಬದಂತಿರುತಿದ್ದುದು ವಿಶೇಷ. ಇಡೀ ಊರಿಗೇ ಊರೇ ಸೇರಿ ಆಚರಣೆಯಲ್ಲಿ ಭಾಗವಹಿಸುತ್ತಿದ್ದುದ್ದು , ಎಲ್ಲಾ ಬಸ್ ಮಾಲೀಕರು, ಆಟೋ ಚಾಲಕರು ತಮ್ಮ ವಾಹನಗಳನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಊರಲೆಲ್ಲಾ ಓಡಾಡುತ್ತಿದ್ದುದ್ದು ನನ್ನ ಮನಸಲ್ಲಿ ಅಚ್ಚಳಿಯದೆ ಉಳಿದಿದೆ.

ಒಂದು ತಿಂಗಳಿಂದಲೇ ಎಲ್ಲಾ ೧೫ ಶಾಲೆಗಳಲ್ಲೂ ಕವಾಯಿತು , ವಿಶೇಷ ವೇಷ ಭೂಷಗಳ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಿದ್ದತೆಗಳು ಜೋರಾಗಿರುತ್ತಿದ್ದವು. ಹಬ್ಬದ ದಿನ ಬೆಳಿಗ್ಗೆ ೭ ಗಂಟೆಗೆ ಎಲ್ಲಾ ಶಾಲೆಗಲ್ಲಿ ಧ್ವಜಾರೋಹಣದ ನಂತರ ಸಾಲಾಗಿ ಊರಿನ ಕೋಟೆ ಮೈದಾನದಲ್ಲಿ ಒಟ್ಟಿಗೆ ಸೇರಿ ಮತ್ತೊಮ್ಮೆ ಅಲ್ಲಿ ಧ್ವಜಾರೋಹಣದ ನಂತರ ಊರಿನ ಎಲ್ಲಾ ರಾಜಬೀದಿಗಳಲ್ಲಿ ಕವಾಯಿತು ನಡೆಸುವ ಸಂಭ್ರಮ ನೋಡಿಯೇ ತಿಳಿಯಬೇಕು. ಶಾಲಾ ಮಕ್ಕಳ ಕವಾಯಿತಿನ ಜೊತೆಗೆ ಅನೇಕ ಜಾನಪದ ಕಲೆ ಪ್ರಕಾರಗಳು ಅನಾವರಣ ಗೊಳ್ಳುತ್ತಿದ್ದ ರೀತಿ ಬಹಳ ವಿಸ್ಮಯಕಾರಿಯಾಗಿರುತಿತ್ತು .
ಒಂದು ವರ್ಷದ ವೇಷಭೂಷಣ ಸ್ಪರ್ಧೆಯಲ್ಲಿ ನನ್ನ ಕೃಷ್ಣ ದೇವರಾಯ ವೇಷಕ್ಕೆ ಬಹುಮಾನ ವಿಜೇತನಾಗಿದ್ದಲ್ಲದೆ ನನ್ನ ವೇಷದ ವೈಖರಿಗೆ ಮನಸೋತ ಆಯೋಜಕರು ನಮ್ಮ ಇಡೀ ಊರಿನಲ್ಲಿ ಆನೆಯ ಮೇಲೆ ನನ್ನ ಮೆರವಣಿಗೆ ನಡೆಸಿದ್ದು ಮನಸ್ಸಲ್ಲಿ ಅಚ್ಚ ಹಸಿರಾಗಿ ಉಳಿದಿರುವ ರಾಜ್ಯೋತ್ಸವ ನೆನಪುಗಳಲ್ಲೊಂದು .
ಬಹುಷಃ ಕಳೆದ 20 ವರ್ಷಗಳಲ್ಲಿ ನನ್ನೂರು ಬದಲಾಗಿರಬಹುದು .ಅಲ್ಲಿನ ಆಚರಣೆಗಳು ಬದಲಾಗಿರಬಹುದು, ಆದರೆ ಊರಿನ ಜನರ ಮನದಲ್ಲಿ ಈಗಲೂ ಭಾಷೆಯ ಬಗ್ಗೆ ಇರುವ ಒಲವು ಕಡಿಮೆ ಆಗಿಲ್ಲ.

ಈಗೀಗ ನನ್ನ ನಿರೂಪಣೆಯನ್ನು ನೋಡಿ, ಕೇಳಿ ಯಾರಾದರೂ ಬಂದು, ನಿಮ್ಮ ಕನ್ನಡ ಬಹಳ ಚೆನ್ನಾಗಿದೆ, ಭಾಷೆಯನ್ನ ಕಾಪಾಡಿಕೊಂಡಿದ್ದೀರಿ ಎಂದರೆ, ಹೆಮ್ಮೆ ಹಾಗೂ ಬೇಸರ ಎರಡೂ ಒಟ್ಟಿಗೆ ಆಗುತ್ತೆ. ಭಾಷೆಯ ಬಗ್ಗೆ ಹೆಮ್ಮೆ ಎನಿಸಿದರೆ, ಎಲ್ಲರ ಮನಸಲ್ಲಿ, ಮನೆಯಲ್ಲಿ ಮುಕ್ತವಾಗಿ, ಸುಲಲಿತವಾಗಿ ಹರಿದಾಡ ಬೇಕಿರುವ ಭಾಷೆಯನ್ನು ಕಾಪಾಡಿಕೊಳ್ಳುವ ಪ್ರಮೇಯ ಬಂದಿದೆಯಲ್ಲ ಎನ್ನುವುದು. ಅದೇನೇ ಇರಲಿ ಭಾಷೆಯ ಬಳಕೆ ನಿತ್ಯ ಮಂತ್ರವಾಗಿ ಮನ ಮನಗಳಲ್ಲಿ ಕನ್ನಡದ ಬೆಳಕು ಪಸರಿಸಲಿ .

ಜೈ ಕನ್ನಡಿಗ

ಕಂಡಲ್ಲಿ ಕನ್ನಡ – ಡಾ ರಾಮ್ ಶರಣ್

ದೂರದೂರಿನಲಿ ಮಿಡಿಯುತಿದೆ ಮನ
ಬೇಕೆಲ್ಲೆಲ್ಲೂ ಕನ್ನಡ ಪ್ರತಿದಿನ
ಕನ್ನಡಿಯಲ್ಲೇ ಕನ್ನಡ ಪ್ರತಿಫಲನ?
ಬಂದಿರುವುದೇಕೆಂಬುದೇ ನಿತ್ಯ ಮಥನ


ಮಂಜು ಹಾಕಿದ ಮುಸುಕಿನಲಿ
ಬಾಗಿ ಮರಗಳ ಸಾಲಿನಲಿ
ಚೆಲ್ಲಿ ಹರಡಿದ ಎಲೆಗಳಲಿ
ನಾಡ ಬಣ್ಣಗಳು ಕಂಡವಲ್ಲಿ


ಹಗುರು ಬಿಸಿಲಿನ ಕಾವಿನಲಿ
ರೆನ್, ರಾಬಿನ್ನುಗಳ ಇಂಚರದಿ
ವೀಕೆಂಡ್ ಕನ್ನಡ ಸಾಲೆಯಲಿ
ಚಿಣ್ಣರ ಕನ್ನಡ ಕಂಠದಲಿ


ದೂರದೂರಿನಲಿ ಮಿಡಿಯುತಿದೆ ಮನ
ದಿಟ್ಟಿಸಿದಲ್ಲಿಹುದು ಕನ್ನಡತನ
ಇರುವಲ್ಲಿ ಬಿತ್ತಿ ಬೆಳೆಯುವೆ ಅಣ್ಣ
ಕಂಡಲ್ಲಿ ಕನ್ನಡದ ಬಣ್ಣ
-ರಾಂ

( ಚಿತ್ರ ; ಡಾ ರಾಮ್ ಶರಣ್ )

*********************************************************************************

ಶ್ರೀಕಾಂತ್ ಕೃಷ್ಣಮೂರ್ತಿ ಅವರು ಬರ್ಮಿಂಗಹ್ಯಾಮ್ನಲ್ಲಿ consultant psychiatrist ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸಂಗೀತದ ವಾಗ್ಗೇಯಕಾರರಾಗಿರುವ ಶ್ರೀಕಾಂತ್ ಅವರು ಕನ್ನಡ, ತಮಿಳು, ಸಂಕೇತಿ ಭಾಷೆಗಳಲ್ಲಿ ಹಾಡುಗಳನ್ನು ಬರೆದು ಸಂಯೋಜಿಸಿದ್ದಾರೆ. ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನ ಸಂಕೇತಿ ಅನುವಾದ ಮಾಡಿದ್ದಾರೆ. ಹೈಕು ಕವಿಗಳಾಗಿರುವ ಇವರು ಎರಡುವರ್ಷಗಳ ಕಾಲ British Haiku Society ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.”ephemere” ಎಂಬ ಹೈಕು ಪತ್ರಿಕೆಯನ್ನು ಕೂಡ ಪ್ರಕಟಿಸಿದ್ದಾರೆ.-ಸಂ

ಕಾಯೇ ಕಾವೇರೀ! – ಡಾ ಶ್ರೀಕಾಂತ್ ಕೃಷ್ಣಮೂರ್ತಿ

ಕುಣಿಯುತ್ತ ಸಾಗಿದ ಫಣಿವೇಣಿ ಹೆಣ್ಣಿಗೆ
ಮಣಿದು ತಾ ಬಂದು ಮಳೆರಾಯ ಕೂಡಿದ
ಅಣಿಯಾಗಾಷಾಡ ಮಾಸದಿ

ಅಮ್ಮ ನೀನೀವಾಗ ಬಿಮ್ಮನಸೆಯು ಜೋಕೆ
ಧುಮ್ಮಿಕ್ಕುವಾಗ ದುಡುಕೇಕೆ ದಯೆಮಾಡೆ
ನಮ್ಮಯ ಬಾಳು ನಲಿಯೋಕೆ

ಜಂಬವ ಬಿಟ್ಟೀಗ ತುಂಬಿದ ಬಸುರಿ ನೀ
ಅಂಬೋಧಿ ಕಡೆಗೆ ಹಾಯಾಗಿ ಎಲ್ಲರಿ-
ಗುಂಬುದಕಿತ್ತು ಹೊರಟೆಯಾ

ತಡೆದುಕೋ ದಮ್ಮಯ್ಯ ಮಿಡುಕದಿರಮ್ಮಯ್ಯ
ಹಡೆವಾಗ ನಮ್ಮ ಭಾಗ್ಯವನಾಚೀಚೆ
ದಡಗಳನೊಡೆದು ದಾಟೀಯ

ಹಸುಗೂಸು ಹುಟ್ಟಿದೆ ಹಸುರನು ತೊಟ್ಟಿದೆ
ತುಸು ಈಗ ತಲೆಯನೆತ್ತಿದೆ ತೊಡೆಮೇಲೆ
ಸಿಸುವಿಟ್ಟು ಉಣಿಸಿ ಹರಸಮ್ಮ

ಹೆಚ್ಚಿಗೆ ಕೊಟ್ಟೀಯ ಉಚ್ಚಿಕೊಂಡಾಮೇಲೆ
ಕೊಚ್ಚಿ ಹೋದೀತು ಕೂಸೆಮ್ಮ ಭಾಗ್ಯಕೆ
ಕಿಚ್ಚಿಡ ಬೇಡ ಕಾವೇರಿ

*********************************************************************

ಕೃಪೆ: ಹುಯಿಲಗೋಳ ನಾರಾಯಣರಾಯರ ಕವಿತೆಯ ಫೋಟೋ ಮತ್ತು ಮಾಹಿತಿ: ಹರ್ಷ ಡಂಬಳ್ ಅವರಿಂದ

1. ’ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ ’ -ಅಮಿತಾ ರವಿಕಿರಣ ಅವರು ಹಾಡಿದ್ದಾರೆ

2 ‘ಕಡಲಾಚೆಯ ಕನ್ನಡಿಗರ ಸ್ವಗತ” – ಶ್ರೀರಂಜನೀ ಸಿಂಹ ಅವರು ಹಾಡಿದ್ದಾರೆ