ಹೀಗೊಂದು ಹರಟೆ

ನಮಸ್ಕಾರ ಅನಿವಾಸಿ ಬಳಗಕ್ಕೆ. 
ಮೇ ಮಾಸ( ತಿಂಗಳಿನ) ದಲ್ಲಿ ಕವೀಂದ್ರ ರವೀಂದ್ರರ ಜನುಮದಿನದ ಸಂಭ್ರಮಾಚರಣೆಯ ಜೊತೆಗೇ ಭಾರತದಲ್ಲಿ 'ತಾಯಂದಿರ ದಿನ' ದ ಸಡಗರವೂ. ಈ ಬಳಗದೆಲ್ಲ ತಾಯಂದಿರಿಗೂ, ತಾಯಂಥಕರಣದ ಎಲ್ಲ ಸಹೃದಯರಿಗೂ ಶುಭಾಶಯಗಳು. ಸುಜಲಾಂ ಸುಫಲಾಂ ವಂದೇ ಮಾತರಂ ಎಂದು ತಾಯ್ನಾಡಿಗೆ ವಂದಿಸುತ್ತ ' ಜಡೆಯಾಚೆ ಮೊಗದಿರುಹಿಯೂ' ಜಗವನ್ನೆಲ್ಲ ಪೊರೆಯುತ್ತಿರುವ ಜಗನ್ಮಾತೆಗೆ ಮಣಿಯುತ್ತ ನನ್ನದೊಂದು ಹಳೆಯ ಬರಹವನ್ನು ಹಂಚಿಕೊಳ್ಳುತ್ತಿರುವೆ..

~ ಸಂಪಾದಕಿ.

ಹೆರಳು – ಮಾರಿ. 

ಏನಪಾ ಇದು ಅಂತ ನೀವು ತಲಿ ತುರಸಕೊಳ್ಳೂದರಾಗೇ  ನಾನೇ ಹೇಳಿಬಿಡತೀನಿ. ನಮ್ಮ ಉತ್ತರ ಕರ್ನಾಟಕದ ಮಂದಿಗೆ ಈ ಪದ ಚಿರಪರಿಚಿತ. ಇನ್ನ ಉಳದವರಿಗೆ ಹೆರಳು ಗೊತ್ತಿರತದ. ಮಾರಿ ತಿಳೀಲಿಕ್ಕಿಲ್ಲ. ಆದ್ರೂ ಇಲ್ಲಿನ ಸದಸ್ಯರೆಲ್ಲ ಬೇಂದ್ರೆ ಅಜ್ಜನ ‘ ಮುಗಿಲ ಮಾರಿಗೆ ರಾಗರತಿಯ’ ಕೇಳೇ ಇರತೀರಿ. ಹೂಂ.. ನಾನೂ ಅದೇ ಮಾರಿ ಅಂದ್ರ ಮುಖದ ಬಗ್ಗೆನೇ ಹೇಳುತ್ತಿರುವುದು.  

ಈ ‘ ಹೆರಳು – ಮಾರಿ’ ದು ಒಂದು ದೊಡ್ಡ ಸುದ್ದಿ. ಮುಂಜಾನಿ ಆಗತಿದ್ದ ಹಂಗೇ “ ಕ್ಯಾಮಾರಿ ಮಾಡಕೊಂಡು ಕೂಡಬ್ಯಾಡ್ರಿ. ಲಗೂ ಲಗೂ ಹೆರಳು-ಮಾರಿ ಮಾಡಕೋರಿ” ಅನ್ನಾಕಿ ನಮ್ಮಾಯಿ. ಮಧ್ಯಾಹ್ನ 4 ಆಯಿತಿಲ್ಲೋ “ ಮೂರುಸಂಜಿ ಆಗಲಿಕ್ಕೆ ಬಂತು, ಎದ್ದು ಹೆರಳು-ಮಾರಿ ಮಾಡಕೋರಿನ್ನ” ಅನ್ನಾಕಿ. ಹೀಂಗs ಮುಂಜಾನೆದ್ರ ಹೆರಳು-ಮಾರಿ, ಸಂಜಿ ಆದ್ರ ಹೆರಳು-ಮಾರಿ, ಹೊರಗ ಹೊಂಟ್ರ ಹೆರಳು-ಮಾರಿ, ಯಾರರೇ ಮನಿಗೆ ಬರತಾರಂದ್ರ ಹೆರಳು-ಮಾರಿ.. ಹೆರಳು-ಮಾರಿ ಸಂಭ್ರಮವೇ ಸಂಭ್ರಮ.

ಸಣ್ಣವರಿದ್ದಾಗ ಅಮ್ಮನೋ, ಮಾಮಿಯೋ, ಮಾಂಶಿಯೋ ಯಾರೋ ಒಬ್ಬರು ಜಿಪುಣತನ ಮಾಡದೇ ಛಂದಾಗಿ ಖೊಬ್ರಿ ಎಣ್ಣಿ ಹಚ್ಚಿ, ಹಣಗೀಲೇ ತೀಡಿ ತೀಡಿ ಹಿಕ್ಕಿ ಬಿಗತಾನ ಬಿಗದು ಎರಡು ಹೆರಳು ಹಾಕಿ ರಿಬ್ಬನ್ನು ಕಟ್ಟಿದರಂದ್ರ ಎಂಥ ಗಾಳಿಗೂ ಆ ಕೂದಲನ್ನ ಹಾರಾಡಿಸೋ ಶಕ್ತಿ ಇರತಿರಲಿಲ್ಲ. ಮುಂಗುರುಳು- ಪಿಂಗುರುಳು, ಪುಡಿಗೂದಲು ಎಲ್ಲ ಮಾಯ ಆಗಿಬಿಟ್ಟಿರತಿದ್ವು. ಎಷ್ಟೋ ಸಲ ಕುತಿಗಿ ಸೈತ ಅಲ್ಲಾಡಿಸಲಿಕ್ಕೆ ಬರತಿರಲಿಲ್ಲ. ಹಿಂತಲೆಯ ಕೂದಲು ಜಗ್ಗಿ ಗುಳ್ಳೆಗಳೆದ್ದು ಬಿಡಬೇಕು ಹಂಗ ಹೆರಳು ಹಾಕಿರತಿದ್ರು. “ ಮ್ಯಾಲ ಕಟ್ಟಬ್ಯಾಡ, ಕೆಳಗೇ ಬಿಡು, ರಿಬ್ಬನ್ ನಾಗ 4 ಅಲ್ಲ 6 ಹೂವು ಮಾಡು, ಅಷ್ಟ ಬಿಗಿ ಬ್ಯಾಡ ಸ್ವಲ್ಪ ಸಡಿಲ ಹಾಕು” ಅಂತೆಲ್ಲ ನಾವು ಏನು ಹೇಳಿದರೂ ‘ಹಾಂ ಹೂಂ’ ಸಹಿತ ಅನ್ನದೇ ತಮ್ಮದೇ ಮನಮಾನಿ ಮಾಡತಿದ್ರು. “ ನಿಮಗೇನ ತಿಳೀತದ? ನೀವು ಹೇಳಿದ್ಹಾಂಗ ಮಾಡಿದ್ರ ಮುಗೀತು. ತಲ್ಯಾಗ ಎರಡು ಕೂದಲ ಉಳ್ಯಂಗಿಲ್ಲ ಆಮ್ಯಾಲೆ” ಅಂತ ಹೆದರಸತಿದ್ರು. ಬಾಬ್ ಕಟ್, ಪೋನಿ ಟೇಲ್, ಸ್ಟೆಪ್ ಕಟ್ ಗಳಾಗಲಿ, ಶಾಂಪೂ ಮಾಡಿಕೊಂಡು ಸಿಲ್ಕಿ ಸಿಲ್ಕಿ ಕೂದಲಾ ಹಾರಾಡಿಸೂದಾಗಲಿ, ಬೆನ್ನಹಿಂದ ಕೂದಲ ಹರವಿಕೊಂಡು ಅಡ್ಡಾಡೂದಾಗಲಿ, ಮುಂಗುರುಳು ತೀಡಿಕೊಳ್ಳೂದಾಗಲಿ ಬಿಲ್ಕುಲ್ ಮಾಡೂಹಂಗಿರಲಿಲ್ರೀ.
ಒಮ್ಮೆ ಯಾರೋ ತಿರುಪತಿಗೆ ಹೋಗಿದ್ವಿ ಅಂತ ಪ್ರಸಾದದ ಲಾಡು ಕೊಡ್ಲಿಕ್ಕೆ ಬಂದಿದ್ದರು. ಅವರು ಹಂಗs ಮಾತಾಡಕೋತ ಅವರ ಮನೆಯಾಗ ತಿರುಪತಿಗೆ ಹೋದರೆ ಹೆಣ್ಣು ಮಕ್ಕಳು ಗಂಡಸರು ಅನ್ನಲಾರದೆ ಎಲ್ಲಾರು ಮುಡಿ ಒಪ್ಪಿಸೋ ಪದ್ಧತಿ ಅದ ತಮ್ಮ ಮನ್ಯಾಗ ಅಂತ ಹೇಳುತ್ತಿದ್ದರು. ಅವರು ಹೋದಮೇಲೆ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದ ನನ್ನ ಮಗ “ ನೀನೋ! ನಿನ್ನ ವೆಂಕಪ್ಪನೋ!” ಎಂದು ನಗೆಯಾಡಿ “ ಏನೇ ಅನ್ನು ಅವನ ಲಡ್ಡು ಮಾತ್ರ ಮಸ್ತ ಇರ್ತಾವ” ಅಂತ ನನಗೆ ಅಣಕಿಸಿ ಉಂಡಿ ಮೆದ್ದು ಎದ್ದು ಹೋದ. ಆಮೇಲೆ ‘ಓ ಮೈ ಗಾಡ್’ ಸಿನಿಮಾದಾಗ ಇದೇ ಮುಡಿ ಕೊಡುವ ಪದ್ಧತಿಯ ಬಗ್ಗೆ ಪರೇಶ್ ರಾವಲ್ ‘ಮುಂಜಾನೆದ್ದು ಬಾಗಲ ತೆಗೆದು ಕೂಡಲೇ ರಾಶಿ ರಾಶಿ ಕೂದಲು ನಿಮ್ಮ ಮನೆ ಮುಂದೆ ಹರಡಿದ್ದರೆ ನಿಮಗೆ ಖುಷಿ ಅನಿಸುವುದೇ’ ಎಂಬರ್ಥ ಬರುವ ಮಾತಿನ ಮೂಲಕ ವ್ಯಂಗ್ಯವಾಡುವ ಸೀನ್ ಅದ. ಆಗಾಗ ಹೌದು, ಯಾಕಿರಬಹುದು ಇಂಥ ಪದ್ಧತಿ ಅಂತ ಯೋಚಿಸಿದಾಗಲೆಲ್ಲ ಅನ್ನಿಸುವುದಿಷ್ಟೇ. ಮನುಷ್ಯ ಅಥವಾ ಭಕ್ತ ಅಲ್ಲಿ ಮುಡಿ ಕೊಡುತ್ತಿರುವುದು ಬರಿ ತನ್ನ ಕೂದಲಿನ ರಾಶಿಯನ್ನಲ್ಲ, ತನ್ನ ರೂಪವನ್ನು.. ಸೌಂದರ್ಯವನ್ನು. ಒಂದರ್ಥದಾಗ ತನ್ನತನವನ್ನು, ತನ್ನ ಅಸ್ತಿತ್ವವನ್ನು ಅಂತ. ನೋಡಿ ಕೂದಲು ದೇಹದ ನಿರ್ಜೀವವಾದ ಒಂದು ಭಾಗ. ಆದರೆ ಅದು ನಮಗೆ ಕೊಡುವ ಖುಷಿ, ಆತ್ಮವಿಶ್ವಾಸ, ಹೆಮ್ಮೆಗಳು ಅಷ್ಟಿಷ್ಟಲ್ಲ. ಕನ್ನಡಿ ಮುಂದೆ ನಿಂತು ಕೂದಲು ತೀಡದ, ಮುಂಗುರುಳನ್ನು ಬೆರಳಲ್ಲಿ ಸುತ್ತದ ಒಂದೇ ಒಂದು ಮಾನವ ಜೀವಿಯನ್ನು ತೋರಿಸಿ ಬಿಡಿ ಸಾಕು. ಹುಡುಗಿಯರಿಗಂತೂ ಅವರ ಜಡೆ, ಕೂದಲು ಸರ್ವಸ್ವ. ಹಂಗಂತ ಹುಡುಗರೇನೂ ಕಮ್ಮಿ? ದಿನಕ್ಕ ನೂರು ಸಲ ಹೋಗುತ್ತಾ ಬರುತ್ತಾ ಕನ್ನಡಿ ಮುಂದೆ ನಿಂದ್ರೋದೇನು? ಒಮ್ಮೆ ಕೈಯಿಂದ, ಒಮ್ಮೆ ಬ್ರಷ್ ನಿಂದ, ಒಮ್ಮೆ ಪಾಕೆಟ್ ನ ಪುಟ್ಟ ಬಾಚಣಿಕೆಯಿಂದ ಕ್ರಾಪ್ ತೀಡಿದ್ದೇ ತೀಡಿದ್ದು. ಹಿಂಗ ಕೂದಲು ಸೌಂದರ್ಯದ ಪ್ರತೀಕ. ಅದನ್ನೇ ತೆಗೆದು ದೇವನಡಿ ಇಡುವುದು ನಾವು ನೀವು ಚ್ಯಾಷ್ಟಿ ಮಾಡಿ ನಕ್ಕಷ್ಟು ಸುಲಭದ ಕೆಲಸ ಏನಲ್ಲ.

ಈ ಕೂದಲಿನ ರಗಳೆ ಇರಲಿಲ್ಲ ಅಂದರೆ 108 ತರದ ಹೇರ್ ಆಯಿಲ್ ಗಳು, ಸಾವಿರಾರು ತರದ ಶಾಂಪೂ, ಕಂಡಿಷನರ್, ಹೇರ್ ಜೆಲ್,ಹೇರ್ ಕ್ರೀಮ್, ಹೇರ್ ಡೈಗಳು ಇತ್ಯಾದಿಗಳನ್ನೆಲ್ಲ ಉತ್ಪಾದಿಸುವ ಕಾರ್ಖಾನೆಗಳು, ಅವುಗಳ ಮೂಲಕ ಅನ್ನ ಸಂಪಾದಿಸುವ ಲಕ್ಷಾಂತರ ಕುಟುಂಬಗಳ ಗತಿ ಏನಾಗುತ್ತಿತ್ತು? ಸಲೂನ್ ಗಳು, ಹೇರ್ ಹೆಡ್ ಮಸಾಜ್ ಸೆಂಟರ್ ಗಳು, ಹೇರ್ ಸ್ಪಾ, ಬ್ಯೂಟಿ ಪಾರ್ಲರ್ ಗಳು ಇವುಗಳೆಲ್ಲ ಬಾಗಿಲು ಬಂದ್ ಮಾಡಿಕೊಂಡು ಹೋಗಬೇಕಾಗುತ್ತಿತ್ತು. ನಾನಾ ತರದ ಹೂವುಗಳು, ಕಸ್ತೂರಿದವನಗಳು, ಕ್ಯಾದಿಗೆಗಳು, ಆಭರಣಗಳು, ನೂರಾರು ತರದ ಫ್ಯಾಶನೇಬಲ್ hair accessories, ಕ್ಲಿಪ್ಸ್, ರಬ್ಬರ್ ಬ್ಯಾಂಡ್, ಹೇರ್ ಪಿನ್ ಕೇಳುವವರಿಲ್ಲದೆ ಅನಾಥವಾಗುತ್ತಿದ್ದವು. ಕವಿಗಳಿಗೆ ಬರೆಯಲು ಮುಖ್ಯವಾದ ಒಂದು ವಿಷಯ ಕಮ್ಮಿಯಾಗುತ್ತಿತ್ತು. ನಲ್ಲ ಬಂದು ಹೂ ಮುಡಿಸಿ ನಲ್ಲೆಗೆ ಪ್ರೇಮ ನಿವೇದನೆ ಮಾಡಿಕೊಳ್ಳಲಾಗುತ್ತಿರಲಿಲ್ಲ. ಮೊಗ್ಗಿನ ಜಡೆ ಹೆಣೆಯುವವರ, ದಂಡೆ ಮಾಲೆ ಕಟ್ಟುವವರ ಕಸುಬಿಗೆ ಕಲ್ಲು ಬೀಳುತ್ತಿತ್ತು.
ಎಲ್ಲೆರೇ ಊಟ ತಿನಿಸಿನಲ್ಲಿ ಒಂದೆಳೆ ಕೂದಲು ಕಂಡರೆ ಕಸಿವಿಸಿ ಪಡ್ತೀವಿ. ಆದರೆ ಕೂದಲವಿಲ್ಲದ ಜೀವನ ಊಹಿಸಿಕೊಳ್ಳುವುದು ಕಷ್ಟ. ಈ ಕೇಶದ ಮಹಿಮೆ, ಸಾಮರ್ಥ್ಯ ಅಗಾಧವಾದದ್ದು. ಪುರಾಣ, ಇತಿಹಾಸಗಳು ಇದಕ್ಕೆ ಸಾಕ್ಷಿಯಾಗಿವೆ. ಸುರಗಂಗೆ ಭೂಲೋಕಕ್ಕೆ ಅವತರಿಸಬೇಕಾದರೆ ಶಿವನ ಜಡೆಯೇ ಬೇಕಾಯಿತು. ರಭಸದಿಂದ ಧಮ್ಮಿಕ್ಕುವ ಅವಳನ್ನು ತಡೆಯಲು ಶಿವನ ಜಡೆ ಇರದಿದ್ದರೆ ಆ ಮಂದಾಕಿನಿಯ ರಭಸದ ಸೊಕ್ಕಿಗೆ ಜಗತ್ತೇ ದಿಕ್ಕೇಡಿಯಾಗುತ್ತಿತ್ತೇನೋ? ಪಕ್ಷಕ್ಕೊಮ್ಮೆ ಬಿಳಿ ಪತ್ತಲ ನೇಯುವ ಹುಣ್ಣಿಮೆ ಹಸ್ತದ ಚಂದ್ರನಿಗೂ ಆಶ್ರಯ ಈ ಜಡೆಯೇ. ನಮ್ಮ ನಾಡಿನ ಅನೇಕ ಮನೆತನಗಳ ಕುಲದೈವವಾದ ವೀರಭದ್ರನೂ ಕೂಡ ಶಿವನ ಜಟೆಯಿಂದಲೇ ಹುಟ್ಟಿದವನೆಂಬ ಪ್ರತೀತಿ.

ಇನ್ನು ಮಹಾಭಾರತ ನಡೆದದ್ದೇ ದ್ರೌಪದಿಯ ಮುಡಿಯಿಂದ. ಅವಳು ಮುಡಿಬಿಚ್ಚಿದಾಗ ಭಾರತ ಆರಂಭವಾಯಿತು, ಕಟ್ಟಿದಾಗ ಮುಕ್ತಾಯವಾಯಿತೆಂಬ ಮಾತಿದೆ. ತನ್ನ ಕೂದಲಿಗೆ ಕೈ ಹಾಕಿ ಎಳೆದೊಯ್ದ ದುರುಳನ ಕರುಳ ಬಿಗಿದು ಅವನ ರಕ್ತದಿಂದ ಅದನ್ನುತೊಯ್ಯಿಸದೇ ತಾನು ಮುಡಿ ಕಟ್ಟಲಾರೆನೆಂಬ ದ್ರೌಪದಿಯ ಪ್ರತಿಜ್ಞೆಗೆ 18 ಅಕ್ಷೋಹಿಣಿ ಸೈನ್ಯದ ಭಾರತ ಯುದ್ಧವೇ ನಡೆಯಬೇಕಾಯಿತು. ಹೌದಲ್ಲವೇ? ದುಶ್ಯಾಸನ ಕೈ ಹಾಕಿದ್ದು ಬರೀ ಹೆಣ್ಣೋರ್ವಳ ತಲೆ ಕೂದಲಿಗೆ ಅಲ್ಲ, ಯುಗದ ಅಸ್ಮಿತೆಗೆ.. ಸ್ತ್ರೀತನದ ಗರಿಮೆಗೆ.. ಸಂಸ್ಕಾರ ಸಂಸ್ಕೃತಿಗಳ ಬುಡಕ್ಕೇ ಕೈ ಹಾಕಿದ್ದ. ಅದಕ್ಕೆಂದೇ ಅದಕ್ಕೆ ಸಾಕ್ಷಿಯಾದ, ನೇರವಾಗಿ ಪರೋಕ್ಷವಾಗಿ ಭಾಗಿಯಾದ ಎಲ್ಲರೂ ಅದಕ್ಕೆ ಬೆಲೆ ತೆರಲೇಬೇಕಾಯಿತು ಮಾಡಿದ್ದುಣ್ಣೋ ಮಹಾರಾಯ ಅನ್ನೋ ಹಂಗ.

ಧನನಂದನಿಂದ ಅಪಮಾನಕ್ಕೆ ಒಳಗಾದ ಆಚಾರ್ಯ ಚಾಣಕ್ಯನೂ ಸಹ ವೈರಿಯನ್ನು ಅಮೂಲಾಗ್ರವಾಗಿ ನಾಶ ಮಾಡದೆ ಶಿಖೆ ಕಟ್ಟಲಾರೆನೆಂದು ಪ್ರತಿಜ್ಞೆಗೈದು ಶಿಖೆಯ ಕೂದಲು ಬಿಟ್ಟದ್ದು. ಯಾವ ಅಸ್ತ್ರಗಳಿಗೂ ಇರದ ಮೊನಚನ್ನು ಅವನ ಶಿಖೆಯ ಕೇಶದಲ್ಲಿ ಕಂಡಿತು ಮನುಕುಲದ ಇತಿಹಾಸ. ಭಾರತದ ಇತಿಹಾಸಕ್ಕೆ ಚಂದ್ರಗುಪ್ತ ಮೌರ್ಯ, ಅಶೋಕರಂತಹ ಅರಸರ ಸುವರ್ಣ ಯುಗವನ್ನು ದಯಪಾಲಿಸಿದ್ದು ಇದೇ ಕೇಶ ಎಂದಾಯಿತಲ್ಲವೇ?

ಕೆಡುವ ಗಂಡರನ್ನು ತೊರೆದು ಚೆನ್ನಮಲ್ಲಿಕಾರ್ಜುನನತ್ತ ಮೊಗದಿರುಹಿ ಹೊರಟ ಅಕ್ಕಳನ್ನು ಸಂರಕ್ಷಿಸಿದ್ದೇ ಈ ಕೇಶ ರಾಶಿ. ಇನ್ನು ನಮ್ಮ ಸಾಹಿತ್ಯದಲ್ಲಿ ಈ ಜಡೆಯ, ಕೇಶರಾಶಿಯ, ಮುಂಗುರುಳಿನ ವರ್ಣನೆಗಳು ಹೇರಳವಾಗಿ ದೊರೆಯುತ್ತವೆ. ನೀಲವೇಣಿ, ನಾಗವೇಣಿ ಇತ್ಯಾದಿ ಹೆಸರುಗಳನ್ನು ಕೇಳಿದೊಡನೆ ತೊನೆದಾಡುವ ಜಡೆಗಳ ಚಿತ್ರ ಕಣ್ಮುಂದೆ ಬರುತ್ತದೆ. “ ಅವಳೊಮ್ಮೆ ಹರಳಕೆದರಿ ಕಪ್ಪು ಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ ದೂರದಲ್ಲಿ ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ” ಎಂದು ಮನದನ್ನೆಯನ್ನು ವರ್ಣಿಸುವ ಕೆ ಎಸ್ ಎನ್ “ನಾಗರ ಕುಚ್ಚಿನ ನಿಡು ಜಡೆಯವಳು ಈಕೆಯು ಬಂದುದು ಎಲ್ಲಿಂದ” ಎಂದು ಅಚ್ಚರಿ ಪಡುತ್ತಾರೆ. “ ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೇ ಸಿಂಗಾರ ಕಾಣದ ಹೆರಳು “ ಎಂದು ಅಕ್ಕಿ ಆರಿಸುವಾಗ ಕವಿತೆಯಲ್ಲಿ ಬಣ್ಣಿಸುತ್ತಾರೆ.

ಮುಂಗುರುಳು ದುಂಬಿಗಳಂತೆ ಅಂತಲೂ, ಯೆ ಜುಲ್ಫೆಹೈ ಜೈಸೆ ಕಾಂಧೋ ಪೆ ಬಾದಲ್ ಗಿರೆ ಹುವೆ’ ಅಂತಲೂ, ಉಡೆ ಜಬ್ ಜಬ್ ಜುಲ್ಫೆ ತೇರಿ ಎಂದೂ, ಯೆ ಗೇಸುವೋಂಕಿ ಘನಿ ಛಾವ್ ಹೈ ಮೇರೆ ಖಾತಿರ್ ಅಂತಲೂ ನೂರಾರು ಸಿನೆಮಾ ಹಾಡುಗಳು ಈಗಲೂ ರಸಿಕರ ಹೃದಯಕ್ಕ ಲಗ್ಗೆ ಹಾಕತಾವ. ಸರ್ ಜೋ ತೇರಾ ಚಕರಾಯೆ ಯಾ ದಿಲ್ ಡೂಬಾ ಜಾಯೆ ಆಜಾ ಪ್ಯಾರೆ ಪಾಸ್ ಹಮಾರೆ ಕಾಹೆ ಘಬರಾಯೆ ಅಂತ ಚಂಪಿ ( ಮಸಾಜ್) ಮಾಡತಾ ಹಾಡು ಹೇಳೋ ಜಾನಿ ವಾಕರ್ ನನ್ನು ಮೆಚ್ಚದವರೇ ಇಲ್ಲ.

ಅಣ್ಣ-ತಮ್ಮ, ಅಕ್ಕ ತಂಗಿಯರ ಜಗಳಕ್ಕ ಈ ಕೂದಲ ಬೇಕೇ ಬೇಕು ಅವರ ಜುಟ್ಟು ಇವರ ಕೈಯಾಗ ಇವರ ಜುಟ್ಟು ಅವರ ಕೈಯಾಗ ಅಂದಾಗನೇ ಅದು ಖರೇ ಸೋದರ ಪ್ರೇಮ. ಕೈ ಕೈ ಜಗಳಕ್ಕಿಂತ ಕೂದಲ ಕೂದಲ ಜಗಳಾನೇ ಬಹಳ ಆಗ್ಯಾವರಿ ನಾವು ಸಣ್ಣವರಿದ್ದಾಗ. ಈಗಲೂ ಅಷ್ಟೇ ಬಹಳ ಸಿಟ್ಟು ಬಂತಂದ್ರ ಮೈ ಹರಕೊಂಡು ಕೂದಲ ಕಿತ್ತುಕೊಳ್ಳುವಷ್ಟs ಸಂತಾಪ ಆಗುತದ್ರೀ.

ಇನ್ನೊಂದ ವಿಷಯ.. ಈ ಕೂದಲಾನ್ನ ಕತ್ತರಿಸೂದು ಅಂದ್ರ ಹೇರ್ ಕಟ್ ಎಲ್ಲಾ ಯಾವಾಗ ಬೇಕಂದ್ರ ಆವಾಗ ಮಾಡೂ ಹಂಗಿರಲಿಲ್ರೀ. ಹುಣ್ಣಿಮೆ, ಅಮವಾಸಿ, ಏಕಾದಶಿ, ದ್ವಾದಶಿ, ವೆಂಕಪ್ಪನ ಒಕ್ಕಲದವರಿದ್ರ ಶನಿವಾರ ಹೀಂಗ ದಿನಾ ನೋಡಿ ಸಲೂನ್ ಗೆ ಹೋಗಬೇಕಾಗಿತ್ತು. ಹೆಣ್ಣು ಮಕ್ಕಳಂತೂ ಕೂದಲಿಗೆ ಕತ್ತರಿನೇ ಹಚ್ಚೂ ಹಂಗಿರಲಿಲ್ರೀ. ಗಂಡಸರೂ ಸಹ ಹಜಾಮತಿ ಮಾಡಿಸಿಕೊಂಡು ಬಂದಮ್ಯಾಲೆ ಹಾಕಿದ್ದ ಬಟ್ಟೆ ಎಲ್ಲ ತೊಯ್ಯಿಸಿಟ್ಟು ಕೈಯಾಗ ಒಂದ ಹನಿ ಖೊಬ್ರಿ ಎಣ್ಣಿ ಹಾಕಿಸಿಕೊಂಡು ತಲಿಗೆ ಹಚಗೊಂಡು ಎರಡು ತಂಬಿಗೆ ಯಾರದರೇ ಕಡೆ ನೀರು ಹಾಕಿಸಿಕೊಂಡ ಮ್ಯಾಲೆನೇ ಗಂಗಾಳು – ತಂಬಿಗಿ ಮುಟ್ಟೂದು. ನಮ್ಮ ಮಕ್ಕಳಿಗೆ ಈಗ ಇವನ್ನೆಲ್ಲ ಹೇಳಿದ್ರ’ ಐಯ್’ ಅಂತ ಬಾಯಿ ತಕ್ಕೊಂಡು ನಂಬಲಾರದ ಕೂತಿರತಾರ ಕೇಳಕೋತ. ನಮಗೂ ಅಷ್ಟೇ. ತಲಿಗೆ ಹರಸಿ ಒಂದ್ಹನಿ ಎಣ್ಣಿ ಹಚಗೊಳ್ಳದ ತಲಿಸ್ನಾನ ಮಾಡೂ ಹಂಗಿರಲಿಲ್ಲ. ಒಣ ನೀರು ಹಾಕಿಕೊಳ್ಳೂದು ಅನಿಷ್ಟ ಅಂತ ನಂಬಿಕೆ. ದ್ವಾದಶಿ ಅಂತೂ ಅಪ್ಪಿ ತಪ್ಪಿನೂ ಎರಕೊಳ್ಳೂ ಹಂಗಿರಲಿಲ್ಲ. ಇವಕ್ಕೆಲ್ಲ ಕಾರಣಗಳೂ ಹಲವಾರು ಇದ್ದಾವು! ಹುಡುಕಿ ನೋಡಿದರೆ ಸಿಕ್ಕಾವು!!

ನಮ್ಮ ಬಲಕುಂದ್ಯಾಗ ಒಬ್ಬ ಮುತ್ಯಾ ಬರತಿದ್ದರೀ. ಬಾಂಬೆ ಮಿಠಾಯಿ, ಅಜ್ಜೀ ಕೂದಲಾ ( cotton candy )ಎಲ್ಲಾ ತಗೊಂಡು. ಅವನಿಗೆ ಹೋಗಿ ನಮ್ಮ ಉದುರಿದ ಕೂದಲನ್ನ ಕೊಟ್ರ ಆ ತಿಂಡಿ ತಿನಿಸುಗಳನ್ನೆಲ್ಲ ಪುಗಸೆಟ್ಟೆ ಕೊಡತಿದ್ದ. ಅದಕ್ಕಂತ ಹೆರಳ ಆದ ಕೂಡಲೇ ನಾವೆಲ್ಲ ಮಕ್ಕಳು ಹಣಿಗೆ ಒಳಗಿನ ಕೂದಲಾ ತೆಗೆದು ಸುರಳಿ ಸುತ್ತಿ ನಮ್ಮ ನಮ್ಮ ಕೂದಲನ್ನ ಬ್ಯಾರೆ ಬ್ಯಾರೆ ಮಾಡಿಕೊಂಡು ಮನಿ ಹಿಂದಿನ ಮಾಡದಾಗ ಒಯ್ದು ಇಡತಿದ್ದ ನೆನಪು. ಬಹುಶ: ಅವುಗಳಿಂದ ಚೌರಿ ಇತ್ಯಾದಿಗಳನ್ನು ಮಾಡುತ್ತಿದ್ದರೋ ಏನೋ? ತಿರುಪತಿ – ತಿರುಮಲಗಳಲ್ಲಂತೂ ಈ ಕೂದಲುಗಳದೇ ಕೋಟ್ಯಂತರ ರೂಪಾಯಿಗಳ ಆದಾಯ ಅದ ಅಂತ್ರೀ. ಅದರಿಂದಲೇ ತಿರುಪತಿ _ತಿರುಮಲ ದೇವಸ್ಥಾನದವರು ಅನೇಕ ಆಸ್ಪತ್ರೆ, ಶಾಲಾಕಾಲೇಜುಗಳು ಧರ್ಮಛತ್ರಗಳು, ಪುನರುಜ್ಜೀವನಗಳಂಥ ಚಾರಿಟಿ ಟ್ರಸ್ಟ್ ಗಳನ್ನು ನಡೆಸುತ್ತಾರೆಂದು ಎಲ್ಲೋ ಓದಿದ ನೆನಪು.

ನಾವು ಸಣ್ಣವರಿದ್ದಾಗ ಓದೂ ಚಂದಮಾಮಾ, ಬಾಲಮಿತ್ರ ಕಥಿ ಒಳಗ ಈ ಕೂದಲೆಳೆ ತಗೊಂಡು ಕಾಲಾ ಜಾದೂ, ಮಾಟಮಂತ್ರ, ಭಾನಾಮತಿ ಮಾಡಿದಂಥ ಕಥೆಗಳನ್ನೋದಿ ಮೈ ಜುಮ್ ಅನ್ನಿಸಿಕೊಂಡಿದ್ದೂ ನೆನಪಿದೆ. ಎಲ್ಲೆರೇ ನಮ್ಮ ಕೂದಲೆಳೆಯನ್ನೂ ಯಾರರೇ ತಗೊಂಡು ಕಾಲಾಜಾದೂ ಮಾಡಿದ್ರ ಅನಸತಿತ್ತು. ಆದ್ರ ಹಂಗಾಗಲಿಕ್ಕೆ ನಾವೇನು ರಾಜಕುಮಾರಿಯರೋ, ಶ್ರೀಮಂತ ವಣಿಕ್ ಪುತ್ರಿಯರೋ, ಸುರಸುಂದರಿಯರೋ ಇರಲಿಲ್ಲ ಅನ್ನೋದು ಅರ್ಥವಾಗದ ವಯಸ್ಸು ಅದು.
ತಾಯ ಹೊಟ್ಟೆಯಲ್ಲಿ ಮಗುವಿದ್ದಾಗಲಿಂದಲೇ ಮಗುವಿನ ಕೂದಲಿನ ಅಂದಾಜು ನಡದಿರತದ್ರೀ. ನಮ್ಮ ಕಡೆಯೆಲ್ಲ 7-8 ತಿಂಗಳಿಗೆಲ್ಲ ಸ್ವಲ್ಪ ಎದೆ ಯುರಿ ಎಲ್ಲಾ ಬಂದ್ರ ‘ ಕೂಸಿಗೆ ಜಾವಳ ಭಾಳ ಇರಬೇಕು. ಅದಕ್ಕs ಎದಿ ಉರೀತದ ಅಂತಾರ ಮನ್ಯಾಗಿನ ಹಿರಿಯರು. ಕೂಸು ಹುಟ್ಟಿದ ಮ್ಯಾಲೆನೂ ಅಷ್ಟೇ. ಕೂಸು ಆರಾಂ ಅದನ? ಯಾರಂಗ ಅದ? ಜಾವಳ ಭೇಷ್ ಅವನ?ಅಂತಾನೇ ಎಲ್ಲರ ಪ್ರಶ್ನೆ. ಮುಂದ ಜಾವಳ, ಮುಂಜವಿ ಅಂತ ಈ ಕೂದಲಿಗೆ ಸಂಬಂಧಿಸಿದ ಕಾರ್ಯಕ್ರಮ ಗಳೇ. ಹೆಣ್ಣು ಮಗು ಇದ್ರ ದಿನಕ್ಕೊಂದು ಕೇಶಾಲಂಕಾರ.. ಹೂವು.. ಶೖಂಗಾರ.

“ ಹೆಣ್ಣು ಮಕ್ಕಳಿಗೆ ಕೂದಲು ಉದ್ದಾ ಇದ್ರೆ ನೋಡೋಕೇನೋ ಚಂದ. ಆದ್ರೆ ಆರೈಕೆ ಭಾಳ ಕಷ್ಟ” ಎನ್ನುತ್ತಾರೆ ನಮ್ಮ ಹೆಂಗರುಳ ಕವಿ ಎಚ್ಚೆಸ್ವಿ ತಮ್ಮ ‘ ಉರಿಯ ಉಯ್ಯಾಲೆ’ಯಲ್ಲಿ. “ ರೋಮ ರೋಮಗಳಲ್ಲಿ ಭೀಮರಕ್ಷಿಯ ಬಲ ಕೊರಳಾಗ ಕಟ್ಟೀರಿ ಒಂದಾನ” ಎಂದು ಕರಡಿ ಕುಣಿತದಲ್ಲಿ ಹೇಳುತ್ತಾರೆ ನಮ್ಮ ವರಕವಿ. ಅಂದಹಂಗ ಜಿ. ಎಸ್. ಎಸ್. ರ ಜಡೆ ನಿಮಗೆಲ್ಲ ಗೊತ್ತಿರತದ. ಆದ್ರೂ ನನ್ನ ಖುಷಿಗೆ ಮತ್ತೊಮ್ಮೆ ಇಲ್ಲಿ ಹಂಚಿಕೊಳ್ಳುತ್ತಿರುವೆ.
“ಲಲನೆಯರ ಬೆನ್ನಿನೆಡೆ ಹಾವಿನೊಲು ಜೋಲ್ವ ಜಡೆ ಅತ್ತಿತ್ತ ಹರಿದ ಜಡೆ
ಚೇಳ್ ಕೊಂಡಿಯಂಥ ಜಡೆ ಮೋಟು ಜಡೆ, ಚೋಟು ಜಡೆ ಚಿಕ್ಕವರ ಚಿನ್ನ ಜಡೆ
ಎಣ್ಣೆ ಕಾಣದೇ ಹಿಣಿಲು ಹಿಣಿಲಾಗಿ ಹೆಣೆದ ಜಡೆ
ಬೆವರಿನಲಿ, ಧೂಳಿನಲಿ ನೆನೆದುಕೊಂಡಿರುವ ಗಂಟು ಜಡೆ ಅಕ್ಕತಂಗಿಯ ಮುಡಿಯ ಹಿಡಿದು ನಾನೆಳೆದಂಥ ಮಲ್ಲಿಗೆಯ ಕಂಪು ಜಡೆ
ಮಾತೖಮಮತಾವೖಕ್ಷ ಬಿಟ್ಟ ಬಿಳಲಿನಂತೆ ಹರಿವ ತಾಯ್ ಜಡೆ ‘ ಕುರುಕುಲ ಜೀವಾಕರ್ಷಣ ಪರಿಣತ’ ಆ ಪಾಂಚಾಲಿಯ ಜಡೆ ಸಂಜೆಯಲಿ ಹಗಲು ಕೆದರುವ ಕತ್ತಲೆಯ ಕಪ್ಪು ಜಡೆ
ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ ಬೆಳಕು ಜಡೆ
ಒಮ್ಮೊಮ್ಮೆ ಮುಗಿಲಲ್ಲಿ ತೇಲುತ ಬರುವಂಥ ಬೆಳ್ಳಕ್ಕಿಗಳ ಜಡೆ
ಕ್ರೌಂಚಗಳ ಜಡೆ
ಮಾಮರದಿ ಬಳುಕುತಿಹ ಹೂ ಬಿಟ್ಟ ಬಳ್ಳಿ ಜಡೆ
ಕಾಡು ಬಯಲಿನ ಹಸುರು ಹಸುರಲಿ ಹರಿ ಹರಿದು ಮುನ್ನಡೆವ ಹೊಳೆಯ ಜಡೆ
ಶ್ರೇಣಿ ಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ
ಗಿರಿಶಿವನ ಶಿರದಿಂದ ಹಬ್ಬಿ ಪಸರಿಸಿದ ಕಾನನದ ಹಸುರು ಜಡೆ
ನಕ್ಷತ್ರಗಳ ಮುಡಿದ ನಟ್ಟಿರುಳ ನಭದ ಜಡೆ
ಮುಂಗಾರು ಮೋಡಗಳು ದಿಕ್ಕು ದಿಕ್ಕಿಗೆ ಬಿಚ್ಚಿ ಹರಡಿರುವ ಮಳೆಯ ಜಡೆ
ಚಂದ್ರಚೂಡನ ವ್ಯೋಮಕೇಶನ ವಿಶ್ವವನೇ ವ್ಯಾಪಿಸುತ ತುಂಬಿರುವ ಜಡೆ
ಗಾನಗಳ, ಕಾವ್ಯಗಳ, ಶಿಲ್ಪಗಳ ಕಲೆಯ ಜಡೆ
ಎಲ್ಲವೂ ರಮ್ಯವೆಲ್ಲ! ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ ಕಾಣದಲ್ಲ!!

ಒಟ್ಟಿನಾಗ ಈ ಹೆರಳು ಮಾರಿಯಿಂದ ಇಷ್ಟೆಲ್ಲ ಮಾತು ಆತು ನೋಡ್ರಿ. ಓದಿ ಹೆಂಗನ್ನಸ್ತು ಅಂತ ನಿಮ್ಮದೂ ಎರಡು ಮಾತು ಸೇರಸ್ರಿ.

~ ಗೌರಿಪ್ರಸನ್ನ

ನಮ್ಮ ಆಹಾರ ಮತ್ತು ಆರೋಗ್ಯ – ಬಾಲ್ಯದ ನೆನಪುಗಳು ಮತ್ತು ಈಗಿನ ಜ್ಞಾನ: ರವಿರಾಜ್ ಉಪ್ಪೂರ್ ಭಟ್.

"You can’t just eat good food. You’ve got to talk about it too. And you’ve got to talk about it to somebody who understands that kind of food." - Kurt Vonnegut

"Most of us have fond memories of food from our childhood. Whether it was our mom's homemade lasagna or a memorable chocolate birthday cake, food has a way of transporting us back to the past." - Homaro Cantu.

ನಮಸ್ಕಾರ ಅನಿವಾಸಿ ಬಳಗಕ್ಕೆ.
ಮೇಲಿನ ಎರಡೂ ಹೇಳಿಕೆಗಳನ್ನು ಒಪ್ಪದೇ ಇರಲು ಸಾಧ್ಯವಿಲ್ಲ. ಊಟ ಎಲ್ಲಿಯದಾದರೇನು, ಅಮ್ಮನ ಕೈಯಡಿಗೆಯ ರುಚಿ ಬೇರೆಡೆ ಬಂದೀತೇ? ಇದನ್ನೇ ಮಿತ್ರ ರವಿರಾಜ ಉಪ್ಪೂರ್ ಭಟ್ ಅವರ ಮಾತಿನಲ್ಲಿ ಕೇಳೋಣ. ಎಂದಿನಂತೆ ಓದಿ, ನಿಮ್ಮ ಅನಿಸಿಕೆ, ಪ್ರತಿಕ್ರಿಯೆ ಹಂಚಿಕೊಳ್ಳಿ. - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).
**********************************************************
ಊಟ ಬಲ್ಲವನಿಗೆ ರೋಗವಿಲ್ಲ; ಮಾತು ಬಲ್ಲವನಿಗೆ ಜಗಳವಿಲ್ಲ ...

ಎಷ್ಟು ಚೆನ್ನಾಗಿ ಈ ಒಂದು ಗಾದೆ ಮಾತು ನಮಗೆ ಹೇಗೆ ಆರೋಗ್ಯದ ಬಗ್ಗೆ ಒಂದು ಕಿವಿಮಾತು ಹೇಳಿದೆ ನೋಡಿ. ನಮ್ಮ ಈಗಿನ ಹೊಸ ಪೀಳಿಗೆಯವರಿಗೆ ಇದರ ಬಗ್ಗೆ ಅರಿವು ತುಂಬಾ ಇದ್ದಂತಿಲ್ಲ. ಇದೇನೇ ಇದ್ದ್ರೂ ನಮ್ಮ ಪೀಳಿಗೆಯವರ ಆಹಾರ ಪದ್ಧತಿ ಹೇಗಿತ್ತೆಂದು ನೋಡೋಣ.

ನಾನು ಮೂಲತಃ ಉಡುಪಿಯವನು ಮಾರಾಯ್ರೆ. ಉಡುಪಿಯವ್ರು ಅಂದ್ರೆ ನಿಮಗೆಲ್ಲ ಮೊದ್ಲು ನೆನಪಾಗುದೇ ಹೋಟೆಲ್ ಅಂತ ನಂಗೆ ಗೊತ್ತುಂಟು ಮಾರಾಯ್ರೆ ... ಅದೇನೇ ಇದ್ದ್ರೂ ನಂಗೂ ಉಡುಪಿ ಹೋಟೆಲ್ಗೂ ಯಂತ ಕನೆಕ್ಷನ್ ಇಲ್ಲ ಮಾರಾಯ್ರೆ ....

ನಾನು ಹುಟ್ಟಿ ಬೆಳೆದಿದ್ದೆಲ್ಲಾ ಉಡುಪಿಯ ಒಂದು ಸಣ್ಣ ಹಳ್ಳಿಯಲ್ಲಿ. ನಮ್ಮ ಮನೆ ಒಂದು ಹಳೆ (ಸಾಧಾರಣ 200 ವರ್ಷ ಹಳೆಯ ಮನೆ) ಬಂಗ್ಲೊ. ಅದ್ರಲ್ಲಿ ನನ್ನ ಅಜ್ಜ, ಅಪ್ಪ, ಅಮ್ಮ, ನನ್ನ ಅಣ್ಣ, ತಮ್ಮ, ನಾನು ಹಾಗೂ ನಮ್ಮ ಚಿಕ್ಕಪ್ಪ ಮತ್ತು ಅವರ ಕುಟುಂಬ ಇದ್ದೆವು. ನಮ್ಮನೆ ಎಲ್ಲರ ಊಟ ತಿಂಡಿಯ ವ್ಯವಸ್ಥೆ ಮಾಡುವುದು ನಮ್ಮಮ್ಮನೇ.

ನಂಗೆ ಇನ್ನೂ ಹಚ್ಚ ಹಸಿರಾಗಿಯೇ ಇದೆ ಆ ಹಳೆ ನೆನಪುಗಳು ... ಮನೆ ತುಂಬಾ ಜನ ... ಮಳೆಗಾಲದಲ್ಲಿ ನಟ್ಟಿಯ ಸಮಯ ಮನೆಯ ಕೆಲಸದಾಳುಗಳು, ನಟ್ಟಿ ನಡುವೆ ಹೆಂಗಸರೂ, ಹಾಗೂ ಹೂಟೆಗೆ ಕಟ್ಟುವ ಒಂದು ಜೊತೆ ಎತ್ತು ಹಾಗು ಕೋಣ ಮತ್ತೆ 3-4 ದನ ಎಮ್ಮೆಗಳು ಕರಾವಿಗೆ ಇರುತ್ತಿದ್ದವು. ಅಮ್ಮ ಹಾಗೂ ನಿತ್ಯದ ಕೆಲಸದಾಳು ಕೂಸ ಸುಮಾರಿಗೆ ಬೆಳಿಗ್ಗೆ 5 ಗಂಟೆಗೆಲ್ಲ ಎದ್ದು ಮನೆಯವರಿಗೆಲ್ಲ ಬೆಳಿಗ್ಗಿನ ಕೊಚ್ಚಿಗೆ ಅಕ್ಕಿ ಗಂಜಿ ಹಾಗೂ ಹಟ್ಟಿಯ ಗಂಟಿಗಳಿಗೆಲ್ಲ 'ಬಾಯಿರು' (ಗಂಟಿಗಳಿಗೆ ಹಾಕುವ ಕಲಗಚ್ಚು ಮಿಶ್ರಿತ ಅನ್ನ ಹಾಗೂ ತೌಡು) ತಯಾರು ಮಾಡುವರು. ನಾವು ಶಾಲೆಗೆ ಹೋಗುವ ಮಕ್ಕಳೆಲ್ಲ 6- 6:30ರ ಸುಮಾರಿಗೆ ಎದ್ದು ಬಚ್ಚಲು ಒಲೆಯಲ್ಲಿ ಬಾಯಿರು ಬಿಸಿಮಾಡುವ ಒಲೆಯ ಎದುರು ಕೂತು ಸ್ವಲ್ಪ ಹೊತ್ತು ಚಳಿ ಕಾಸಿ ಕೂಸನೊಂದಿಗೆ (ಮನೆ ಕೆಲಸದವನು) ಹರಟೆ ಹೊಡೆಯುವುದು ದಿನನಿತ್ಯದ ಪದ್ಧತಿ. ನಮ್ಮೊಟ್ಟಿಗೆ ಮನೆಯ 'ರಾಜು' ನಾಯಿ ಕೂಡ ಪಕ್ಕದಲ್ಲೇ ಕೂತಿರುವುದು ಒಂದು ವಾಡಿಕೆ. ಹಾಗೆ ಚಳಿ ಕಾಸುವಾಗ ಒಲೆಯೊಳಗೆ ಹುಣಸೆ ಬೀಜವನ್ನೋ, ಹಲಸಿನ ಹಣ್ಣಿನ ಒಣಗಿದ ಬೀಜವನ್ನೋ ಕೆಂಪಿನ ಕೆಂಡದೊಳಗೆ ಹಾಕಿ ಹದನಾಗಿ ಸುಡುವುದು ನಾವು ಶಾಲೆ ಹುಡುಗರ ಒಂದು 'ಹೋಮ್ ವರ್ಕ್'. ಹೀಗೆ ಹದನಾಗಿಸಿದ ಹುಣಸೆ ಬೀಜ ಮತ್ತೆ ದಾಣಿ (ಹಲಸಿನ ಬೀಜಕ್ಕೆ ನಮ್ಕಡೆ ದಾಣಿ ಅಂತಲೂ ಹೇಳುವುದು ಒಂದು ವಾಡಿಕೆ ... ಬಹುಶಃ ಆಡುಭಾಷೆ ತುಳುವಿನಿಂದ ಬಂದದ್ದಿರಬೇಕು) ಎರಡೂ ಸರಿಯಾಗಿ ಪಾಲಾಗಿ ನಮ್ಮ ಕಂಪಾಸ್ ಪೆಟ್ಟಿಗೆಯೊಳಗೋ, ಇಲ್ಲ ಕಾಲಿ ಬೆಂಕಿಪೆಟ್ಟಿಗೆಯೊಳಗೋ , ಇಲ್ಲ ಶಾಲೆಯ ಚೀಲದೊಳಗೋ ಹೋಗಿ ಸೇರುತ್ತಿತ್ತು. ಇದೇ ನಮ್ಮ ಶಾಲೆಯ ವಿರಾಮದ ಸಮಯ್ದ 'tuck time ಫುಡ್'. ನೆನೆಸಿದರೆ ಈಗಲೂ ನನ್ನ ಬಾಯಲ್ಲಿ ನೀರೂರುತ್ತದೆ.

ಬೆಳಿಗ್ಗಿನ ನಿತ್ಯಕರ್ಮಗಳನ್ನೆಲ್ಲಾ ಕ್ಲಪ್ತವಾಗಿ ಮುಗಿಸಿ ಕುಚ್ಚಲಕ್ಕಿ ಗಂಜಿ ಊಟ ಮಾಡಬೇಕಿತ್ತು. ಗಂಜಿಯೊಂದಿಗೆ ತುಪ್ಪ, ಚಿಟಿಕೆ ಉಪ್ಪು ಹಾಗೂ ನೆಂಜಿಕೊಳ್ಳಲು ಉಪ್ಪಿನಕಾಯಿಯೋ, ಕೊತ್ತಂಬರಿಸೊಪ್ಪಿನ ಚಟ್ನಿಯೋ, ಮಾವಿನಕಾಯಿಯ ತೊಕ್ಕು ಇಲ್ಲ ಮಜ್ಜಿಗೆ ಮೆಣಸು ಅಥವಾ ಹಿಂದಿನ ದಿನದ ಹುಳಿ (ನಮ್ ಕಡೆ ತೆಂಗಿನಕಾಯಿ ರುಬ್ಬಿ ಮಸಾಲೆ ಹಾಕಿ ಮಾಡಿದ 'ಸಾಂಬಾರು'). ನನ್ನ ಅಣ್ಣ ಹಾಗೂ ಅಪ್ಪನಿಗೆ ಗಂಜಿ ಊಟ ಅಂದ್ರೆ ಪಂಚ ಪ್ರಾಣ. ನನಗೆ ಹಾಗು ನನ್ನ ತಮ್ಮನಿಗೆ ಗಂಜಿ ಊಟ ಅಂದ್ರೆ ಅಷ್ಟಕ್ಕಷ್ಟೇ. ನಾನು ಅರ್ಧ ಗಂಜಿ ತಿಂದು ಉಳಿದರ್ಧ ನನ್ನ ಪ್ರೀತಿಯ ರಾಜು ನಾಯಿಯ ಕೊರಿಕೆಗೆ (ನಾಯಿಗೆ ತಿನ್ನಲು ಹಾಕುವ ಕಲ್ಲಿನ ದಪ್ಪ 'ತಟ್ಟೆ') ಹಾಕುತ್ತಿದ್ದೆ. ಅದಕ್ಕೆ ದಿನಾ ಅಮ್ಮನಿಂದ ಬೈಸಿಕೊಳ್ಳಬೇಕಿತ್ತು. ಅಜ್ಜನಂತೂ ನನ್ನ ಗಂಜಿ ಊಟದ ಸ್ಪೀಡ್ ನೋಡಿ ಯಾವಾಗಲೂ ಹೇಳುವವರು “ಇಷ್ಟು ಮೆಲ್ಲ ತಿಂದ್ರೆ ಹ್ಯಾಂಗೆ ತಿಂದಿದ್ದು ಮೈಗೆ ಹಿಡಿತ್ ... ಆಡು ಮೆಂದ ಹಾಗೆ ತಿನ್ನಬೇಕಂತೆ ... ಆನೆ ಮಿಂದಹಾಗೆ ಮೀಯಬೇಕಂತೆ (ಸ್ನಾನ ಮಾಡಬೇಕಂತೆ)” ಅಂತ.

ಆ ಗಂಜಿ ಊಟಕ್ಕೆ ಮುಕ್ತಿ ಸಿಕ್ಕಿದ್ದು ನಾ ಮೆಡಿಕಲ್ ಮಾಡಲು ಬಳ್ಳಾರಿಗೆ ಹೋದಮೇಲೆಯೇ. ಈಗಿನ ನನ್ನ ಮಕ್ಕಳಿಗಂತೂ ಗಂಜಿ ಊಟದ ಮಜವೇ ಗೊತ್ತಿಲ್ಲ..... ಹಾಗೆಯೇ ಸುಟ್ಟ ಹುಣಸೇ ಬೀಜ, ಹದವಾಗಿ ಸುಟ್ಟ ದಾಣಿ, ಉಪ್ಪು ಕಾರಪುಡಿ ಹಾಕಿದ ಹುಳಿ ಹಪ್ಪಟೆ ಮಾವಿನ ಕಾಯಿ - ಇದ್ಯಾವುದೂ ಗೊತ್ತೇ ಇಲ್ಲ! ಅದ್ರ ಮಜವೇ ಬೇರೆ. ನಾವು ಮಕ್ಕಳಿಗೆಲ್ಲ ಬೆಳಿಗ್ಗೆ ಗಂಜಿ ಕಡ್ಡಾಯ, ಆದ್ರೆ ಅಜ್ಜನಿಗೆ ಬೆಳಿಗ್ಗೆ ತಿಂಡಿ ಆಗಬೇಕಿತ್ತು. ಅಜ್ಜನಿಗೆ ಗೋಧಿಯಿಂದ ಮಾಡಿದ ಏನಾದ್ರೂ ತಿಂಡಿ ಅಂದ್ರೆ ಶ್ರೇಷ್ಠ ..... ಗೋಧಿ ಹಿಟ್ಟಿನ ತೆಳ್ಳಗಿನ ನೀರು ದೋಸೆ ಅಥವಾ ರವೆ ಉಪ್ಪಿಟ್ಟು ಹೀಗೆ ಏನಾದ್ರೂ ತಿಂಡಿ ಆಗಲೇ ಬೇಕು. ಹೀಗೆ ಅಜ್ಜನಿಗೆ ಮಾಡಿದ ತಿಂಡಿ ಸ್ವಲ್ಪ ಏನಾದ್ರೂ ಉಳಿದ್ರೆ ನಂಗೆ ಗಂಜಿಯೊಟ್ಟಿಗೆ ಅಮ್ಮ ಸ್ವಲ್ಪ ಕೊಡ್ತಿದ್ದ್ರು... ಅದೂ ಅಜ್ಜ ಆಚೆ ಕಡೆ ಹೋದ ಮೇಲೆ. ಅಜ್ಜ ಏನಾದ್ರೂ ನೋಡಿದ್ರೆ ನನ್ನ ಅಮ್ಮನ್ನ ಬೈಯ್ಯುವರು .... ಮಕ್ಕಳು ಬೆಳಿಗ್ಗೆ ತಿಂಡಿ ತಿಂದ್ರೆ ಹೊಟ್ಟೆ ಹಾಳಾಗ್ತದೆ ಅಂತ!

ಸಾಯಂಕಾಲ ಶಾಲೆ ಮುಗಿಸಿ ಬರುವಾಗ ದಾರಿಯಲ್ಲಿ ಮಾವಿನಕಾಯಿಗೆ ಗುರಿ ಇಟ್ಟು ಕಲ್ಲು ಹೊಡೆದುರುಳಿಸಿ ಅದರ ಸೊನೆ ಅಲ್ಲೇ ಕೆಳಗೆ ಹುಲ್ಲಿನಲ್ಲಿ ಒರೆಸಿ ತಿಂದರೆ ಅದ್ರ ಹುಳಿ ಹಪ್ಪಟೆ ರುಚಿಗೆ ಒಂದು ಸರ್ತಿ ಮೈಯೆಲ್ಲಾ ಜುಂ ಅನ್ನುವ ಮಜಾನೇ ಬೇರೆ. ಈಗೆಲ್ಲಿದೆ ಅದರ ಸುಖ ??...

ಮಾವಿನ ಕಾಯಿಯ ಸೀಸನ್ ಅಲ್ಲದೆ ಇದ್ರೆ ಬೇಲಿಯಲ್ಲಿರುವ ಕರಂಡೆ ಕಾಯಿ ಇಲ್ಲ ಹಣ್ಣು, ಕಿಸ್ಕಾರ್ ಹಣ್ಣು, ನೇರಳೆ ಹಣ್ಣು, ಜಂಗಮನ ಹಣ್ಣು, ಪೇರಳೆ ಹಣ್ಣು, ರೆಂಜೆ ಹಣ್ಣು ...ಹೀಗೆ ಏನಾದ್ರೂ ಒಂದು ಸಿಕ್ಕೇ ಸಿಗುತ್ತದೆ.

ಇನ್ನೂ ಶನಿವಾರ ಮಧ್ಯಾಹ್ನದ ಮೇಲೆ ರಜೆ.
ಹಾಗೆ ಭಾನುವಾರ ನಮ್ಮ ಮನೆಯಲ್ಲಿ ಗಂಜಿಗೂ ರಜೆ. ಸಾದಾರಣವಾಗಿ ಆವತ್ತು ಇಡ್ಲಿ ಅಥವಾ ದೋಸೆ. ಹಾಗಾಗಿ ನಂಗಂತೂ ಭಾನುವಾರ ಅಂದ್ರೆ ಇಷ್ಟ. ತಿಂಡಿ ತಿಂದು ಟಿವಿಯಲ್ಲಿ ಹೀಮ್ಯಾನ್, Tom & Jerry ನೋಡಿ ಮುಗಿಯುವಷ್ಟರಲ್ಲಿ ರಾಮಾಯಣ ಇಲ್ಲ ಮಹಾಭಾರತ ಸೀರಿಯಲ್ ಶುರುವಾಗುವುದು.

ಹೀಗೆ ಮುಂದುವರಿದು ಮೆಡಿಕಲ್ ಕಾಲೇಜ್ ಸೇರಿದಮೇಲೆ ಈ ದಿನಚರಿಗೆ ಒಂದು ಮುಕ್ತಾಯ ಹಾಡಿದೆವು. ಆಮೇಲೆ ಬಳ್ಳಾರಿಯಲ್ಲಿ ಹಾಸ್ಟೆಲ್ ದಿನಚರಿ ಆರಂಭ. ಹಾಸ್ಟೆಲ್ ಅಂದಮೇಲೆ ನಿಮಗೆಲ್ಲಾ ಗೊತ್ತೇ ಇದೆಯಲ್ಲ .... ಬೆಳಿಗ್ಗಿನ ತಿಂಡಿಗೆ ಚೌ ಚೌ ಬಾತ್, ಕಾಂಕ್ರೀಟ್ (ಉಪ್ಪಿಟ್ಟಿಗೆ ಹಾಸ್ಟೆಲ್ ನಲ್ಲಿ ನಾವಿಟ್ಟಿದ್ದ ಹೆಸರು), ಇಡ್ಲಿ, ದೋಸೆ, ಬ್ರೆಡ್, ಚಿತ್ರಾನ್ನ, ವಾಂಗೀಬಾತ್ .... ಹೀಗೆ ನಾನಾ ವಿಧದ ಟಿಫನ್ ಗಳು. ಅದರಲ್ಲೂ ಬಳ್ಳಾರಿಯ ಸ್ಪೆಷಲ್ ತಿಂಡಿ ... ಮೆಣಸಿನ ಕಾಯಿ ಬಜ್ಜಿ (ಪುಗ್ಗಿ) ಹಾಗೂ ಮಂಡಕ್ಕಿ (ಮಂಡಾಳು) ಒಗ್ಗರಣೆಯನ್ನು ಹೇಳದಿದ್ದರೆ ಹೇಗೆ? ಇವತ್ತು ಬೆಳಿಗ್ಗೆ ಏನಾದ್ರೂ ಇದನ್ನು ತಿಂದ್ರೆ .... ಅದ್ರ ಪರಿಣಾಮ ಮಾರನೆಯ ದಿನ ಬೆಳಿಗ್ಗೆ ಬಹಿರ್ದೆಸೆಗೆ ಹೋದಾಗಲೇ ಗೊತ್ತಾಗುವುದು!

ನನ್ನ ಇಷ್ಟದ ತಿಂಡಿ ವಾಂಗೀಬಾತ್ ಆಗಿತ್ತು. ವಾಂಗಿಬಾತ್ ಮಾಡಿದ ದಿನ ನನ್ನ ತಟ್ಟೆಯ್ಲಲಿ ಒಂದು ಸಣ್ಣ ಗುಡ್ಡೆಯಾಕಾರದಲ್ಲಿ ವಾಂಗೀಬಾತ್ ಇರುತ್ತಿತ್ತು. ಇದರಿಂದಾಗಿ ನನ್ನ ಫ್ರೆಂಡ್ಸ್ ಎಲ್ಲ ನನ್ನನ್ನು ವಾಂಗಿಪ್ರಿಯ ಅಂತಲೇ ಕರೆಯಲು ಶುರು ಮಾಡಿದ್ರು.
ಹೀಗೆ ಮುಂದುವರಿದು ಒಂದು ತಿಂಗಳಿಗೆ ನಾನೂ ಕೂಡ ಮೆಸ್ಸ್ prefect ಆದೆ. ಆ ತಿಂಗಳು ನನಗೆ ಇಷ್ಟವಾದ ತಿಂಡಿಗಳನ್ನು ಹೇಳಿ ಮಾಡಿಸಿಕೊಂಡು ತಿಂದಿದ್ದೇ ತಿಂದಿದ್ದು. ಒಮ್ಮೆ ಭಾನುವಾರ, ನನ್ನ ಇಬ್ಬರು ಗೆಳೆಯರ ಜೊತೆ ದೋಸೆ ತಿನ್ನುವ ಸ್ಪರ್ಧೆ ನಡೆಯಿತು. ಆವತ್ತು ಮಸಾಲೆ ದೋಸೆ ಟಿಫನ್. ನನ್ನ ಇಬ್ಬರು ಆಪ್ತ ಗೆಳೆಯರು ಒಬ್ಬೊಬ್ಬರೂ ಹತ್ತೋ ಹನ್ನೆರಡೋ ಮಸಾಲೆ ದೋಸೆ ಭುಂಜಿಸಿದರು ... ಕೊನೆಗೆ ನನ್ನ ಸರಣಿ .... ಲೆಕ್ಕ ಮಾಡಿ ನಾನು ಅಂದು 16 ಮಸಾಲೆ ದೋಸೆ ಗುಳುಂಮಾಯಿಸಿದೆ.
ಹಾಗೇ ಇನ್ನೊಂದು ಸಲ ಯಾವುದೋ ಒಂದು ಹಾಸ್ಟೆಲ್ ಡೇ celeberation ದಿನದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ 2 ನಿಮಿಷದಲ್ಲಿ 21 ಇಡ್ಲಿ ತಿಂದು 2ನೇ ಸ್ಥಾನ ಗಿಟ್ಟಿಸಿಕೊಂಡವ ನಾನು.
ಈಗ ನೋಡಿದ್ರೆ ಅದೆಲ್ಲ ಗತ ವೈಭವ ಅನ್ನಿಸುತ್ತೆ 😁
ಎಡಗಡೆ ಮೇಲಿನಿಂದ, ಗಡಿಯಾರದ ಚಲನೆಯಂತೆ: ೧. ಕುಚ್ಚಲು ಅಕ್ಕಿ ಗಂಜಿ ಉಪ್ಪಿನ ಕಾಯಿ, ಮಜ್ಜಿಗೆ ಮೆಣಸು, ಚಟ್ನಿ, ಹಲಸಿನ ಹಪ್ಪಳ; ೨. ಹುಳಿ ಹಪ್ಪಟೆ ಮಾವಿನ ಕಾಯಿ ಉಪ್ಪು ಖಾರ; ೩. ಮಂಡಕ್ಕಿ ಒಗ್ಗರಣೆ ಹಾಗೂ ಮೆಣಸಿನ ಕಾಯಿ ಬಜ್ಜಿ – ಬಳ್ಳಾರಿ ಮೆಸ್ಸ್ ಸ್ಪೆಷಲ್; ೪. ಉಪ್ಪಿಟ್ಟು – ಶಿರಾದ ಚೌ ಚೌ ಭಾತ್.
(ಎಲ್ಲಾ ಚಿತ್ರಗಳು ಲೇಖಕರು ಗೂಗಲ್ ನಿಂದ ಪಡೆದದ್ದು.)
ಫಾಸ್ಟ್ ಫಾರ್ವರ್ಡ್ .... ಕೋವಿಡ್ ನಂತರದ ದಿನಗಳು ...ಈಗಿನ ಆಹಾರ ಪದ್ದತಿಯ ಬಗ್ಗೆ ಒಂದು ಇಣುಕು ನೋಟ ಹಾಕೋಣ -
ಇತ್ತೀಚಿನ ದಿನಗಳಲ್ಲಿ ನಮ್ಮ ಊಟ ತಿಂಡಿಗಳಲ್ಲೆಲ್ಲಾ ಪ್ರೋಸೆಸ್ಸ್ಡ್ ಫುಡ್ ಹಾಗೂ ಫಾಸ್ಟ್ ಫುಡ್ ಗಳದ್ದೇ ಕಾರುಬಾರು .....
ಬರಬರುತ್ತಾ ನಮ್ಮ ದೇಹಶ್ರಮ ಕೂಡ ಕಡಿಮೆ ಆಗುತ್ತಾ ಬರುತ್ತಿದೆ! ತಿಂದ ಆಹಾರದ ಪಚನಕ್ರಿಯೆ ಹಾಗು ಮೈಗೆ ಹತ್ತಲು ಸಮತೂಕದ ಆಹಾರ ಹಾಗೂ ಸಾಧಾರಣ ಮಟ್ಟದ ದೇಹಶ್ರಮ ಕೂಡಾ ಅಗತ್ಯ
ನಮ್ಮ ಆದುನಿಕ ಸರ್ವಜ್ಞ ಡಿವಿಜಿ ಅವರು ಹೇಳಿದಂತೆ -
ಎಷ್ಟು ನೀನುಂಡರೇಂ ಪುಷ್ಟಿ ಮೈಗಾಗುವುದು ।
ಹೊಟ್ಟೆ ಜೀರ್ಣಿಸುವಷ್ಟೆ ಮಿಕ್ಕುದೆಲ್ಲ ಕಸ ।।
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು ।
ಮುಷ್ಠಿ ಪಿಷ್ಟವು ತಾನೆ ಮಂಕುತಿಮ್ಮ ।।

ನೀನು ಎಷ್ಟು ಆಹಾರವನ್ನು ತಿಂದರೂ, ಅದರಿಂದ ದೇಹಕ್ಕೆ ಪುಷ್ಟಿಸಿಗುವುದು, ನಿನ್ನ ದೇಹ ಜೀರ್ಣಿಸಿಕೊಳ್ಳುವಷ್ಟು ಮಾತ್ರ. ಅಧಿಕವಾಗಿ ತಿಂದದ್ದೆಲ್ಲ ಜೀರ್ಣವಾಗದೆ, ಮಲರೂಪದಲ್ಲಿ ಕಸವಾಗಿ ಹೊರಬರುತ್ತದೆ. ಎಷ್ಟು ಸಂಪತ್ತನ್ನು ಗಳಿಸಿದರೂ ಹಸಿವಾದಾಗ ನೀನು ಸೇವಿಸಲಾಗುವುದು ಕೇವಲ ಒಂದು ಮುಷ್ಠಿ ಅನ್ನ ತಾನೆ? ಎಂದು ಕೇಳುತ್ತಾ ನಮ್ಮ ಮಿತಿಗಳನ್ನು ಅರ್ಥ ಮಾಡಿಕೊಳ್ಳುವಂತೆ ನಮಗೆ ಸೂಚನೆಯನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದ ಮಾತಿನಲ್ಲಿ.

ಹಾಗಾಗಿ ಮಿತಿಯರಿಯಬೇಕು. ಮಿತಿಯಿಂದಿದ್ದರೆ ಬಾಳು ಹಿತ. ಇದು ಕೇವಲ ಆಹಾರಕ್ಕಷ್ಟೇ ಸೀಮಿತವಲ್ಲ. ಬದುಕಿನ ನಮ್ಮ ಎಲ್ಲ ಆಯಾಮಗಳಿಗೂ ಇದನ್ನು ಅನ್ವಯಿಸಿಕೊಳ್ಳಬೇಕು. ನಮ್ಮ ಕ್ಷಮತೆ ಮತ್ತು ಯೋಗ್ಯತೆಗನುಗುಣವಾಗಿ ಒಂದು ‘ಗೆರೆ’ ಎಳೆದುಕೊಳ್ಳಬೇಕು. ಆ ಮಿತಿಯ ವೃತ್ತದ ಪರಿಧಿಯಲ್ಲೇ ನಮ್ಮ ಕಾರ್ಯಕ್ಷೇತ್ರವಿರಬೇಕು. ನಮ್ಮ ಕ್ಷಮತೆಯನ್ನು ಹೆಚ್ಚಿಸಿಕೊಂಡ ಹಾಗೆ ಆ ವೃತ್ತದ ಪರಿಧಿಯೂ ಹೆಚ್ಚುತ್ತಾ ಹೋಗುತ್ತದೆ. ದೇಹವು ಆಹಾರದಲ್ಲಿನ ಸತ್ವವನ್ನು ಮಾತ್ರ ಸ್ವೀಕರಿಸಿ ಮಿಕ್ಕದ್ದನ್ನು ತ್ಯಜಿಸುವಹಾಗೆ, ನಾವು ಈ ಜಗತ್ತಿನಲ್ಲಿ ಸತ್ವವನ್ನು ಮಾತ್ರ ಹೀರಿಕೊಳ್ಳಬೇಕು.
ಮಿತವಾಗಿ ಉಂಡರೆ ಅಮಿತ ಸುಖದಲಿ ಹಿತವಾಗಿ ಬದುಕುವೆ.
ನಾವೆಲ್ಲ ನೆನಪಿನಲ್ಲಿ ಇಡಬೇಕಾದ್ದು:
* ಮಿತವಾಗಿ ತಿನ್ನುವುದು,
* ಸಮತೂಕದ ಆಹಾರವಿರಲಿ: 40-50% ಶರ್ಕರ ಪಿಷ್ಟ (carbohydrates), 20-30% - ಕೊಬ್ಬಿನ ಅಂಶ (fats), 10-30% ಪ್ರೊಟೀನ್, 10-20% - ನಾರಿನ ಅಂಶ (fibre).
* ಸಾಧ್ಯವಾದಷ್ಟೂ ಕಡಿಮೆ ಸಂಸ್ಕರಿಸಿದ ಆಹಾರದ (processed food) ಉಪಯೋಗ.
* ಸಂಸ್ಕರಿಸಿದ ಸಕ್ಕರೆಯನ್ನು ಸಾಧ್ಯವಾದಷ್ಟೂ ಕಡಿಮೆ ಉಪಯೋಗಿಸುವುದು.
* ಊಟಗಳ ಮದ್ಯೆ ಕುರುಕಲು ತಿಂಡಿಗಳನ್ನು (snacks) ತಿನ್ನುವುದನ್ನು ಸಾಧ್ಯವಾದಷ್ಟೂ ಕಡಿತಗೊಳಿಸುವುದು.
* ಊಟವಾದ ಮೇಲೆ 15-20 ನಿಮಿಷ ಮೆಲ್ಲಗೆ ನಡೆದಾಟ / ಅಡ್ಡಾಡುವುದನ್ನು ರೂಢಿಗೊಳಿಸಿಕೊಳ್ಳುವುದು, ಇಲ್ಲವೇ ಸಣ್ಣ ಪುಟ್ಟ ಮನೆ ಕೆಲಸ ಮಾಡುವುದು.
* ಕರಿದ ತಿಂಡಿಯನ್ನು ತಿನ್ನುವುದನ್ನು ಸಾಧ್ಯವಾದಷ್ಟೂ ಮಿತಗೊಳಿಸುವುದು.
* ಸಿಹಿ ತಿನ್ನಬೇಕೆನಿಸಿದರೆ ಕಾಲಿ ಹೊಟ್ಟೆಯಲ್ಲಿ ತಿನ್ನುವುದಕ್ಕಿಂತ ಊಟ ಆದ ಮೇಲೆ ತಿನ್ನುವುದು ಒಳ್ಳೆಯದು. ಸಿಹಿಯ ಜೊತೆ ಬಾದಾಮಿ ಇಲ್ಲ ಪಿಸ್ತಾ (ಯಾವುದೇ dry fruits / nuts ) ಬೆರಸಿ ತಿನ್ನುವುದು. ಇಲ್ಲ ಹೋಳಿಗೆ ತಿನ್ನುವುದಾದರೆ ಅದರ ಜೊತೆ ಸ್ವಲ್ಪ(ವೇ!) ತುಪ್ಪ ಸೇರಿಸಿ ತಿನ್ನುವುದು.

ಕೊನೆಯ ಕೊಸರು:
- ನಮ್ಮ ದೇಹದ ಆರೋಗ್ಯ (ಅಕ್ಷರಶಃ) ನಮ್ಮ ಕೈಯಲ್ಲಿ (ಅಥವಾ ಚಮಚೆಯಲ್ಲಿ) ಇದೆ ಹಾಗೂ ಬಹುತೇಕ ನಾವು ತಿನ್ನುವ ಆಹಾರವನ್ನು ಅವಲಂಬಿಸಿದೆ.
- ನೆನಪಿನಲ್ಲಿರಲಿ - ಊಟ ಬಲ್ಲವನಿಗೆ ರೋಗವಿಲ್ಲ.... ಮಾತು ಬಲ್ಲವನಿಗೆ ಜಗಳವಿಲ್ಲ!

ಡಾ. ರವಿರಾಜ್ ಉಪ್ಪೂರ್ ಭಟ್.
ಲ್ಯಾಂಕಾಸ್ಟರ್.

**********************************************************