ಹೀಗೊಂದು ಸಿನೆಮಾ ವಿಹಾರ, ಹಾಗೊಂದು ಹರಟೆ

ಅನಿವಾಸಿ ಬಳಗಕ್ಕೆ ನಮಸ್ಕಾರ. ಯುಗಾದಿ, ರಾಮನವಮಿ, ಹನುಮಜಯಂತಿ, ಕೋಸಂಬರಿ-ಪಾನಕ, ಮಾವು ಎಂದೆಲ್ಲ ಚೈತ್ರದ ಸಂಭ್ರಮದಲ್ಲಿ ಮಿಂದೆದ್ದಿದ್ದಾಯಿತು. ಇದೀಗ ಈಸ್ಟರ್ ನ ರಜೆಯ ದಿನಗಳು. ಬೆಳಗ್ಗೆ ಮಕ್ಕಳ ಶಾಲೆಯ ಅವಸರವಿರದ, ತಡ ರಾತ್ರಿಯ ಟಿ.ವಿ. ವೀಕ್ಷಣೆಗೆ ಸೂಕ್ತ ದಿನಗಳು. ಅದಕ್ಕೆಂದೇ ನಮ್ಮ ಅನಿವಾಸಿಯ ಹೊಸ ಬರಹಗಾರರಾದ ಪ್ರಮೋದ್ ಸಾಲಿಗ್ರಾಮ ಅವರು ನೋಡಿ ವಿಶ್ಲೇಷಿಸಿದ ಸಿನೆಮಾವೊಂದರ ಲೇಖನ ಇಂದಿನ ಸಂಚಿಕೆಯಲ್ಲಿದೆ. ನಮ್ಮಲ್ಲಿರುವ ಬಹು ಮಂದಿ ಸಿನೆಮಾಪ್ರಿಯರಿಗೆ ಇದು ಮೆಚ್ಚುಗೆಯಾದೀತೆಂಬ ಭರವಸೆಯಿದೆ. ಜೊತೆಗೆ ನನ್ನದೊಂದು ಲಘು ಹರಟೆಯೂ ಉಂಟು. ಓದಿ ಲಗೂನೆ ಒಂದೆರಡು ಕಮೆಂಟೂ ಮಾಡ್ರಿ. ಹಂಗೇ ಪ್ರಮೋದ್ ಅವರು ಹೇಳಿದ ಸಿನೆಮಾನೂ ನೋಡ್ರಿ..ಅವರ ಅನಿಸಿಕೆಗಳ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನೂ ಹಂಚಗೊಳ್ರಿ. – ಸಂಪಾದಕಿ

ನಾ ಕಂಡ ವಿಡುದಲೈ – ೧

ಬರಹಗಾರ ಜೆಯಮೋಹನ್ ರವರ ಸಣ್ಣಕಥೆ ಆಧಾರಿತ ಸಿನಿಮಾ. ಮೈನಿಂಗ್ ಹೆಸರಲ್ಲಿ ಸರ್ಕಾರವೊಂದು  ಜನರಿಗೆ ಮಣ್ಣೆರಚುತ್ತಾ : ಕ್ರಾಂತಿಕಾರಿಯೋರ್ವನನ್ನು ದೇಶದ್ರೋಹಿಯಾಗಿಸಿ ; ಪೊಲೀಸ್ ಪಡೆಯೊಂದು ಅವನ ಬೆನ್ನಟ್ಟಿರುವ ಹಿನ್ನಲೆಯಲ್ಲಿ ಈ ಚಿತ್ರ . 

ಪೊಲೀಸ್ ದೌರ್ಜನ್ಯದ ಮುನ್ನಲೆಯಲ್ಲಿ ಡ್ರಾಮಾ ರಚಿಸಿ , ಕಥಾಪಾತ್ರಗಳೆಲ್ಲ ಬಂದು ಕಥೆಗೆ ನಟಿಸಿ ಹೋಗುತ್ತಾರೆ ಅಷ್ಟೇ. ಕಥೆಯೇ ಸಿನಿಮಾದ ಜೀವಾಳ . ಇದು ನಿರ್ದೇಶಕ ವೆಟ್ರಿಮಾರನ್ ಗೆ ಹೊಸದಲ್ಲ- ಅವರ ಹಿಂದಿನ ಸಿನಿಮಾ : ವಿಸಾರಣೈ ಒಂದೊಮ್ಮೆ ನೋಡಿ ಬನ್ನಿ . ಇವರು ಪಾತ್ರಗಳ ನಿಟ್ಟಿನಲ್ಲಿ ಕಥೆ ಹೇಳುವ ಕಲೆಯನ್ನ ,ಹೇಗೆ ಕರಗತ ಮಾಡಿಕೊಂಡ್ದಿದಾರೆ ಅನ್ನೋ ಆಶ್ಚರ್ಯ ನಿಮ್ಮನ್ನ ಪಕ್ಕಾ ಕಾಡುತ್ತದೆ .  ಗುಡ್ಡುಗಾಡಿನ ಗ್ರಾಮಸ್ಥರು , ಪೋಲಿಸಿನವರು , ರಾಜಕಾರಣಿ , ಮಾಧ್ಯಮದವರು, ನಾಯಕ -ನಾಯಕಿ ಎಲ್ಲರ ಮಧ್ಯದಲ್ಲೊಂದು balancing act ನಿರ್ದೇಶಕನ ಕೈಚಳಕ . ಮೊದಲ ಹತ್ತು ನಿಮಿಷದ ರೈಲು ಆಕ್ಸಿಡೆಂಟ್ ದೃಶ್ಯದಲ್ಲೇ ದೊಡ್ಡ Long -Shot  ಮುಖಾಂತರ ಕ್ಯಾಮೆರಾ ಕಣ್ಣಲ್ಲಿ ಟ್ರೈನ್ ಕಿಟಕಿಯೊ ಳಗೆ ಹೊಕ್ಕು ಗಾಯಗಳು , ಸಾವು ನೋವು , ವೇದನೆ , ಅನುಕಂಪ , ಮನುಷ್ಯತ್ವ ಎಲ್ಲವನ್ನುತೋರಿಸುತ್ತ ಕಥೆಯಲ್ಲಿ ಮುಳಿಗಿಸಿಬಿಡುತ್ತಾರೆ . ನಂತರ ಬರುವುದೆಲ್ಲಾ Bonus.  

ದಮನಿತರ ರಕ್ಷಣೆಗೆ ನಿಂತಂತೆ ಇರುವ ಕ್ರಾಂತಿಕಾರಿ ಪೆರುಮಾಳ್ ವಾದಿಯಾರ್ (ವಿಜಯ್ ಸೇತುಪತಿ)ಗೆ ಭಾಗ ಒಂದರಲ್ಲಿ ಕಡಿಮೆ ಪಾತ್ರ ಆದರೂ ಮನಸ್ಸಿಗೆ ಹತ್ತಿರವಾಗುತ್ತಾರೆ . Climax ನಲ್ಲಿ ಬರುವ ಅವರ ಭಾಗ -೨ರ ತುಣುಕುಗಳಲ್ಲಿ powerful Dialogue ನಿಂದ ಮುಂದೇನಾಗಬಹುದು ಅನ್ನೋ ಕುತೂಹಲ.  

ಪೊಲೀಸ್ ಇಲಾಖೆಯ ಸಾಮಾನ್ಯ ಪೇದೆ ಕುಮರೇಸನ್(ಸೂರಿ) ಈ ಕಥೆಯ ಮುಖ್ಯ ಪಾತ್ರಧಾರಿ .ಈ ಮುನ್ನ ಬರೀ comedian ಆಗೇ ನಟಿಸಿದಂತ ಸೂರಿ ಅವರನ್ನ ಸಿನಿಮಾದ ಹೀರೋವನ್ನಾಗಿಸಿರುವ ನಿರ್ದೇಶಕರ ಗಟ್ಟಿ ನಿರ್ಧಾರ ಮೆಚ್ಚಬೇಕಾದಂತದ್ದು . ಕಾರಣ ಪಾತ್ರಕ್ಕೆ ಬೇಕಾದ ಮುಗ್ಧತೆ , ಅಸಹಾಯಕತೆ , ಹತಾಶೆ ಇವೆಲ್ಲದರ ಮಧ್ಯೆ ನೈತಿಕತೆಯ ಮೂರ್ತರೂಪ ಸೂರಿ . ತಾನು ತಪ್ಪು ಮಾಡದೆ ಇದ್ದಾಗ ಕ್ಷಮೆ ಕೇಳಲಿಚ್ಛಿಸದ ಛಲವಾದಿ -  ಮನಸ್ಸಿಗೆ ಹತ್ತಿರವಾಗುತ್ತಾರೆ . ನಮ್ಮ - ನಿಮ್ಮಂತೆ ವ್ಯವಸ್ಥೆಯ ಮೇಲೆ ಭರವಸೆ ಇಟ್ಟಿರುವ ಕುಮರೇಸ ವಿನಾಕಾರಣ ಪನಿಶ್ಮೆಂಟ್ ತಿನ್ನುವಾಗ ಕರುಳು ಚುರುಕ್ ಅನ್ನತ್ತೆ.  ಕುಮರೇಸ- ನಾವೇ ಏನೋ ಅನ್ನಿಸೋ ಅಷ್ಟು ಆಕ್ರಮಿಸುತ್ತಾರೆ , ಪ್ರಭಾವ ಬೀರುತ್ತಾರೆ. 

ನಾಯಕಿ ತಮಿಳರಸಿಯಾಗಿ (ಭವಾನಿ ಶ್ರೀ) ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತಾರೆ. ಪರದೆಯ ಮೇಲಿನ ಲವ್ ಟ್ರ್ಯಾಕ್ ನಮ್ಮನ್ನು ಎಲ್ಲೂ ಬೋರ್ ಹೊಡಿಸದಂತೆ ಸಮಗ್ರವಾಗಿ ಮತ್ತು ಅದ್ಭುತವಾಗಿ ಬರೆಯಲಾಗಿದೆ.ಅದಕ್ಕೆ ಕಾರಣ ನಾಯಕಿಯ ಭಾವನಾತ್ಮಕ ಆಘಾತಗಳು , ಜನಾಂಗದ ಹಿನ್ನೆಲೆ, ಫ್ಲ್ಯಾಷ್‌ಬ್ಯಾಕ್ ಎಲ್ಲವೂ ಕಥೆಗೆ ಪೂರಕವಾಗಿರೊದು. ತುಂಬಾ ಹಿಡಿಸುವ scene ಒಂದು ನೆನಪಿಗೆ  ಬರುತ್ತಿದೆ : ಸರಿಯಾಗಿ ಸ್ಪಂದಿಸದ ಕಾರಣ ನಾಯಕಿಯ ಎದುರು ಕುಮರೇಸ ಬಂದು ಬೇಷರತ್ ಕ್ಷಮೆಯಾಚಿಸಿ , ತಪ್ಪನ್ನು ಸಮರ್ಥಿಸಿಕೊಳ್ಳದೆ , ಏನನ್ನೂ ವೈಭವೀಕರಿಸದಿರುವ scene - ತುಂಬಾ Beautiful ಹಾಗೂ Rare ಕೂಡ . 

ಕುಮರೇಸನಿಗೆ ನರಕ ತೋರಿಸುವ ವ್ಯವಸ್ಥೆಯ ರೂವಾರಿಯಾಗಿ ಪೊಲೀಸ್ ಅಧಿಕಾರಿ ಓ.ಸಿ (ಚೇತನ್). ಈತ ಚಿತ್ರದ ದೊಡ್ಡ ಅಚ್ಚರಿ. ಪೋಲೀಸರ ದೌರ್ಜನ್ಯದ ಮುಖವಾಗಿ ಮತ್ತು ಕ್ರೂರಿಯಾಗಿ ಪಾತ್ರವನ್ನು ನೆನಪಿನಲ್ಲಿರುವಂತೆ ನಟಿಸಿದ್ದಾರೆ. DSP ಯಾಗಿ ಗೌತಮ್ ವಾಸುದೇವ್ ಮೆನನ್ , Chief Secretary ಆಗಿ ರಾಜೀವ್ ಮೆನನ್ Perfect . ಸಣ್ಣ ಪೋಷಕ ಪಾತ್ರಗಳು ಕೂಡ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.   

ಹೊರಗಿನವನು ಹೇಗೆ ಒಳಗಿನವನಾಗುತ್ತಾನೆ ? ನಿರಪರಾಧಿ ಹೇಗೆ ನಿಜಾಯಿತಿ ಅರಿಯುತ್ತಾನೆ ? ಸತ್ಯದಿಂದ ದೂರವಾದ ಮಾಧ್ಯಮಗಳ ಪ್ರಚಾರ , ವ್ಯವಸ್ಥಿತ ರಾಜಕೀಯ, ಮೇಲ್ದರ್ಜೆಯವರ ದರ್ಪ - ಪೊಲೀಸರನ್ನು ಹೊಕ್ಕಿದಾಗ ಜನರಿಗಾಗುವ ಸಂಕಷ್ಟಗಳು ,ಒಳ್ಳೆಯದಾವುದು - ಕೆಟ್ಟದಾವುದು ಎಂಬ ಸಂಘರ್ಷ. ಯಾರ ಪರವಾಗಿ ಹೋರಾಡುವುದು ? ಹೀಗೆ ನಾನಾ ವಿಷಯಗಳನ್ನು ಅವರವರ ದೃಷ್ಟಿಕೋನದಲ್ಲಿ ಹೇಳಿರುವ ಕಥೆ ತೆರೆಯ ಮೇಲೆ ಸ್ಪಷ್ಠವಾಗಿ ಕಾಣಸಿಗುತ್ತದೆ . ಹಾಗಾಗಿ ನಾವು ಕೂಡ ಬರೀ ಪ್ರೇಕ್ಷಕರೆನ್ನುವುದು ಮರೆತು ಹೋಗಿ ಪಾತ್ರಗಳಾಗಿರುತ್ತೇವೆ . 

ಪೊಲೀಸ್ ದೌರ್ಜನ್ಯ, Raw ಅಂಡ್ Rustic ಆಗಿ ಮೂಡಿಬರಬೇಕು ಅಂತ ಚಿತ್ರದಲ್ಲಿ ಸಾಕಷ್ಟು Aggression, Nudity, Vulgarity ಎಲ್ಲವೂ ಇದ್ದು disturb ಆಗಿಬಿಡಬಹುದು . ಹಾಗೂ ಚಿತ್ರದಲ್ಲಿ  ಅಲ್ಲಲ್ಲಿ ಡಬ್ಬಿಂಗ್ lip Sync issues ಅನ್ನಿಸ್ತು.  

ಕ್ಯಾಮೆರಾ ವರ್ಕ್ ವೇಲರಾಜ್ , ಕಲಾ ನಿರ್ದೇಶನ  Jackie, ಎಡಿಟರ್ ರಾಮರ್  ನಿಮಗೆ ದೊಡ್ಡ ಸಲಾಂ .ಇಳಯರಾಜರ ಇಂಪಾದ ಸಂಗೀತವಿದೆ. ಹಾಡೊಂದಕ್ಕೆ ಕನ್ನಡತಿ ಅನನ್ಯ ಭಟ್ ದನಿಯಿದೆ. ಸಿನಿಮಾದ geography  - locations ಎಲ್ಲವೂ ಕಥೆಗೆ ಪೂರಕ .  ಸಿನಿಮಾನೇ ಜೀವನ ಅಂತ ಇಷ್ಟಪಡುವ ಹಲವು ಜನರ ಕೈಂಕರ್ಯದ ಫಲ ವಿಡುದಲೈ  . ಪೊಲೀಸ್ ದೌರ್ಜನ್ಯದ ದೃಶ್ಯಗಳು ಬಲು ಹಿಂಸಾತ್ಮಕ - ಸ್ವತಃ ಪೊಲೀಸ್ ಒಬ್ಬಾತನಿಗೂ ತನ್ನ ಕೆಲಸದ ಮೇಲೆ ವಿಷಾದ ಮೂಡಬಹುದು . ಆದರೂ ಸಹ ಸಮುದಾಯದ ತಳವರ್ಗ / ಬುಡಕಟ್ಟು ಜನರ ಕಷ್ಟ-ಕಾರ್ಪಣ್ಯ ಗಳಿಗೆ ಕನ್ನಡಿ . ಮನಸ್ಸು ಕರಗಿ , ನಮ್ಮನು ನಾವೇ ಅರ್ಥೈಸಿಕೊಳ್ಳಬಹುದಾದ ಪ್ರಶ್ನೆಗಳು ಮೂಡುತ್ತವೆ. ಅದಕ್ಕೆ ಏನೋ  ಈ ಸಿನೆಮಾಗೆ ವಿಡುದಲೈ ಅಂದರೆ ಬಿಡುಗಡೆ/ಸ್ವಾತಂತ್ರ್ಯ ಅನ್ನೋ ಹೆಸರು. 

Rating: ೮೫/೧೦೦

-ಪ್ರಮೋದ್ ಸಾಲಿಗ್ರಾಮ ರಾಮಕೃಷ್ಣ

ಪಂಜಾದ ಮ್ಯಾಲೊಂದು ಪ್ರಬಂಧ

ಸ್ನೇಹಿತರೇ ನಮಸ್ಕಾರ.’ಪಂಜಾನs' ಅಂತ ಒಮ್ಮಿಗಲೇ ಆವಾಕ್ಕಾಗಬ್ಯಾಡ್ರಿ.ಈ ಪಂಜಾ ಹುಲಿ-ಸಿಂಹದ ಪಂಜಾ ಅಲ್ರಿ .  ಮತ್ತ ನಮ್ಮ ಬೆಂಗಳೂರು -ಮೈಸೂರಿನ
ಪಂಚೆನೂ ಅಲ್ರಿ.ಯಾಕಂದ್ರ ಆ ಪಂಚೆಯ ಠೀವಿ  ಬ್ಯಾರೆನೇ ಇರತದ.ಕೆಂಪು-ಹಸಿರು ಬಣ್ಣದ ಎರಡು  ಬಟ್ಟಿನ ಜರದ ಅಂಚೇನು? ಬೆಳ್ಳಗ ಶುಭ್ರ ಕೊಕ್ಕರೆಯಂಥ ಅದರ ಮಿನುಗೇನು?......ಅದಲ್ಲ ತಗೀರಿ,ಇದು ನಮ್ಮ ಉತ್ತರ ಕನಾ೯ಟಕದ ಪಂಜಾsರೀ..

ಜೀವನದಾಗ ಒಂದು ಗುರಿ ಇರಬೇಕು ;ಕೆಲವೊಂದು ರೂಲ್ಸ್ ,ಕಂಡೀಷನ್ಸ ಇರಬೇಕು  ಅನ್ನೋದು ಬಲ್ಲವರ ಮಾತು.ನಮ್ಮ ಡಿ.ವಿ.ಜಿ.ಯವರಂತೂ”ಜೀವಗತಿಗೊಂದು ರೇಖಾಲೇಖವಿರಬೇಕು  ನಾವಿಕನಿಗೆ ಇರುವಂತೆ  ದಿಕ್ಕು  ದಿನವೆಣಿಸೆ’ ಅಂತ ಖಡಾಖಂಡಿತವಾಗೇ ಹೇಳಿಬಿಟ್ಟಾರ.ಆದ್ರ ನಮ್ಮ ಈ ಕೈಮಗ್ಗದ , ಖಾದಿಭಂಡಾರದ ಪಂಜಾಕ್ಕ ಇವು ಯಾವ ಮಾತೂ ಅಪ್ಲೈ
ಆಗಂಗಿಲ್ಲ.ಅದಕ್ಯಾವ ಘನಂದಾರಿ ಗೊತ್ತು ಗುರಿ ಏನೂ ಇಲ್ಲ.ಅದರಲೆ ತಲಿ ಅರೆ  ಒರಸಕೋರಿ, ಮಾರಿ ಅರೆ ಒರಸಕೋರಿ ,ಮುಸುರಿಗೈ ಅರೆ ಒರಸಕೋರಿ, ಅಳ್ಳಕ ಆಗಿದ್ದ ಹೂರಣ ಅರೆ ಸೋಸರಿ,ಅನ್ನದ ಗಂಜಿ ಬಸೀರಿ,ಶ್ರೀಖಂಡಕ್ಕ ಮಸರರೆ ಕಟ್ರಿ, ಮೊಳಕಿ ಬರಸಲಿಕ್ಕೆ ಕಾಳ ಅರೆ ಕಟ್ಟಿಡ್ರಿ, ದೇವರ ಒರಸೂ ವಸ್ತ್ರ ಮಾಡ್ರಿ,ಮಡೀಲೆ ಒಣಗಹಾಕಿ ದೇವರ ಪೂಜಾ ಅರೇ ಮಾಡ್ರಿ ..ಇಲ್ಲಾ  ಶ್ರಾದ್ಧ-ಪಕ್ಷ -ತಿಥಿ ಮಾಡ್ರಿ..  ಎಲ್ಲಾ ನಡೀತದ.ಫಲಾಫಲದ ಚಿಂತೆಯಿಲ್ಲದ ಕಮ೯ಯೋಗಿಯಂತೆ ಯಾವ ಕೆಲಸವನ್ನಾದರೂ ನಿಷ್ಠೆಯಿಂದ  ಮಾಡುವ ಹಿರಿಮೆ ಇದರದು.ನಾ ಮೊದಲೇ ಹೇಳಿದ್ಹಂಗ ಇದು ಯಾವ ನಿಯಮಗಳ ಮುಲಾಜಿಲ್ಲದ ಸವ೯ತಂತ್ರ ಸ್ವತಂತ್ರ ವಾದದ್ದು.ಅದಕ್ಕ ಯಾವದೇ ಪಂಜಾದ ಮ್ಯಾಲೂ ‘ವಾಶಿಂಗ್ ಇನ್ ಸ್ಟ್ರಕ್ಶನ್ಸ’ ಇರಂಗಿಲ್ಲ ನೋಡ್ರಿ.”only hand wash,only dry clean ,keep away from the fire,only machine wash in 40 degree ,do not iron ..ಇಂಥ ಯಾವ  ರಗಳೇನೂ ಇಲ್ಲ.ಕೈಲೇರೆ ಒಗೀರಿ,ಮಶೀನ್ ನಾಗರೆ ಹಾಕ್ರಿ,ಅಗಸರವನಿಗೇ ಕೊಡ್ರಿ...ಎಲ್ಲಾನೂ ನಡೀತದ.ಇದ್ರ ಒಂಚೂರು ನಿರಮಾನೋ,ನೀಲಿಪಾಲಿನೋ ಹಾಕಿದರೂ ನಡದೀತು! ಇಲ್ಲಂದ್ರ ಬರೀ ನೀರಲ್ಲಿ ಕೈಯಿಂದ ಕುಕ್ಕಿ ಹಾಕಿದರೂ ಆಯಿತು.ಬಿಚ್ಚಿ ಹರವಿದ್ರ ಐದು ನಿಮಿಷದಾಗ ಒಣಗೇ ಬಿಡತದ. ಇಸ್ತ್ರಿ ಪಸ್ತ್ರಿ ಮಾಡೂ ತಂಟೆನೂ  ಇಲ್ಲ.
ಇನ್ನು ಇವುಗಳ ಸೈಜೋ? ದಶಾವತಾರದ ವಾಮನನಿಂದ ಹಿಡಿದು ತ್ರಿವಿಕ್ರಮನವರೆಗೆ..ಅಂಗೈ ಅಗಲದಿಂದ ಹಿಡಿದು ನವ್ವಾರಿ ಸೀರಿಯಷ್ಟು ದೊಡ್ಡದೂ ಸಿಗತಾವ.ಕನಾ೯ಟಕ ಬಿಟ್ಟು ಸುಮಾರು ೨೫ ವಷ೯ಗಳಿಂದ ದೆಹಲಿ – ಲಂಡನ್ ಅಂತ ಎಲ್ಲೇ ಅಡ್ಡಾಡಿದರೂ ನಮ್ಮ ಮನೆಯ  ಕಪಾಟಿನಾಗ ಪಂಜಾಕ್ಕೊಂದು ಜಾಗ ರಿಸವ್೯ ಇರೂದಂತೂ ಗ್ಯಾರಂಟಿ .ನಾನು ಪ್ರತಿಸಲ ಸೂಟಿಗೆ  ಅಂತ ನನ್ನ ತವರು  ಮನಿಗೆ ಹೋದ್ರ  ಏನು ಬಿಟ್ಟರೂ ,ಬ್ಯಾರೆ ಬ್ಯಾರೆ ಸೈಜಿನ  ನಾಲ್ಕು ಪಂಜಾ ತರೂದಂತೂ ತಪ್ಪಸಂಗಿಲ್ರಿ.ಎರಕೊಂಡ ಮ್ಯಾಲೆ ಪಂಜಾದಲೆ ತಲಿ ಒರಸಿಕೊಳ್ಳುದರ ಮಜಾನೇ ಬ್ಯಾರೆ.soft ಆದ  cotton ಬಟ್ಟಿ...ಸಂಪೂಣ೯ವಾಗಿ ನೀರು ಹೀರಿಕೊಳ್ಳುವ  ಅದರ ವೈಶಿಷ್ಟ್ಯ.. ಈ  ಟರ್ಕಿ - ಪರ್ಕಿ ಒಳಗ ಆ ಮಜಾ ಇಲ್ಲ ಬಿಡ್ರಿ.
 ನಾವು ಸಣ್ಣವರಿದ್ದಾಗ ನಮ್ಮ ಸೋದರಮಾವ  ಚ್ಯಾಷ್ಟಿ ಮಾಡತಿದ್ರು...”ನೈನಂ ಛಿಂದಂತಿ ಶಸ್ತ್ರಾಣಿ  ನೈನಂ ದಹತಿ ಪಾವಕ: “ ಅಂತ ಶ್ರೀಕೃಷ್ಣಗ ಭಗವದ್ಗೀತಾ ಒಳಗ ಆತ್ಮದ ಲಕ್ಷಣ ಹೇಳೂ ಐಡಿಯಾ ನಮ್ಮ ಸುಬ್ಬಣ್ಣಾಚಾರ್ಯರ ಪಂಜಾ ನೋಡಿನೇ ಬಂದಿರಬೇಕು ಅಂತ.ಹಂಗs  ಅವಾಗಿನ ಅಂದ್ರ 60- 70 ರ ದಶಕದ ಸುಬ್ಬಣಾಚಾಯ೯ರಿಂದ ಈಗ  2022-23 ರ ನಮ್ಮ ಪವಮಾನಚಾರ್ಯರತನಕ ಇದರ ಜಾಗ ಏನೂ ಬದಲಾಗಿಲ್ಲ. ನಮ್ಮ ಪವಮಾನಾಚಾರ್ಯರು  face-book,WhatsApp  ಎಲ್ಲಾದರಾಗೂ ಇದ್ದಾರ.ಕಂಪ್ಯೂಟರ್ ನಾಗ ಕುಂಡಲಿ  ತಗೀತಾರ.ವಿಮಾನದಾಗ ಓಡಾಡತಾರ.ಆದ್ರ ಪಂಜಾದ ಜಾಗಾದಾಗ ಮಾತ್ರ ಇನ್ನೊಂದು  ಸಾಮಾನು ಬಂದಿಲ್ಲ ನೋಡ್ರಿ.ಇವುಗಳದು ತಲೆ-ತಲಾಂತರದಿಂದ ಒಂಥರಾ ‘ಏಕಮೇವ ಚಕ್ರಾಧಿಪತ್ಯ’.  ‘ಸೂಯ೯ನ ಕಾಂತಿಗೆ ಸೂಯ೯ನೇ ಸಾಟಿ  .ಹೋಲಿಸಲಾರಿಲ್ಲ.’ ಅಂದ್ಹಂಗ ಪಂಜಾದ ಹಿರಿಮೆಗೆ ಪಂಜಾನೇ ಸಾಟಿ .ಹೋಲಿಸಲಾರಿಲ್ಲ.’ಮಡಿವಾಳರ ಶತ್ರು ,ಮಠದಯ್ಯಗಳ ಮಿತ್ರ....ಲಂಗೋಟಿ ಬಲು ಒಳ್ಳೇದಣ್ಣ  - ಒಬ್ರ ಹಂಗಿಲ್ಲದೇ ಮಡಿಗೆ ಒದಗುವುದಣ್ಣ ‘ ಅಂತ ಪುರಂದರದಾಸರು ಹಾಡಿದರಲ್ಲ.....ನಾವು ಬೇಕಾದರ ಲಂಗೋಟಿಗೆ ಪಯಾ೯ಯವಾಗಿ ಪಂಜಾ ಬಳಸಿಕೊಂಡ್ರ ಏನೂ ತಪ್ಪಿಲ್ಲವೇನೋ?! ಈ ಪಂಜಾಗಳಿಗೆ ರೇಶ್ಮೆಯಂಥಾ ರೇಶ್ಮೆಯಿಂದನೂ ಕಾಂಪಿಟೇಶನ್ ಇಲ್ಲ ಬಿಡ್ರಿ.

ಬ್ರಾಹ್ಮಣರ  ಮನ್ಯಾಗ ಏನು ಇಲ್ಲಂದ್ರೂ ನಡೀತದ.ಆದ್ರ ಈ ಪಂಜಾ ಇಲ್ಲಂದ್ರ ನಡ್ಯಂಗಿಲ್ಲ ನೋಡ್ರಿ.ದೇವರ  ಪೂಜಾದ ಸಮಯಕ್ಕ ಉಪಯೋಗಿಸಿದಂಥ ಪಂಜಾನ್ನ ಆಮ್ಯಾಲೆ ಬಿಚ್ಚಿ ನೋಡಬೇಕ್ರಿ..ಅದರ ಮ್ಯಾಲೆ ಒಂದು  ಸುಂದರ ವಣ೯ಚಿತ್ರ , ಒಂದು  modern art ಆಗಿಬಿಟ್ಟಿರತದ.ಅಕ್ಷಂತಿ,ಗಂಧ,ಅರಿಶಿನ,ಕುಂಕುಮ ಎಲ್ಲದರ ಸುಂದರ ಚಿತ್ತಾರ...ಇನ್ನ ದೊಡ್ಡ  ದೊಡ್ಡ  ಸಮಾರಾಧನಿ ಅಡಿಗಿಗೆ ಪಂಜಾ ಬೇಕೇ ಬೇಕ್ರಿ.ದೊಡ್ಡ  ದೊಡ್ಡ ಪಾತೇಲಿ ಒಲಿ ಮ್ಯಾಲಿಂದ ಇಳಸಲಿಕ್ಕೆ ಒದ್ದಿ ಪಂಜಾನೇ ಬೇಕ್ರಿ.ಹಾಂ,ಮಸಾಲಿಪುಡಿ,ಖಾರಪುಡಿ ,ಅರಿಶಿನ ಪುಡಿ ಎಲ್ಲಾ ಮೆತ್ತಿದ ಅದರ ಸೌಂದರ್ಯನೇ ಬ್ಯಾರೆ. ಇಷ್ಟ ಯಾಕ್ರಿ ಸ್ವಾಮಿಗೋಳು ಮುದ್ರಾ ಹಾಕಬೇಕಂದ್ರೂ ಈ ಪಂಜಾ ಜೋಡಿಗೆ ಬರಬೇಕ್ರಿ.ಒದ್ದಿ ಪಂಜಾದ ಮ್ಯಾಲೆ ಮುದ್ರಿ ಒತ್ತಿದ ಮ್ಯಾಲೆನೇ ಅದು ನಮ್ಮ ಮೈ ಮ್ಯಾಲೆ ಮೂಡೂದರಿ.
ನಮ್ಮ ಗದಗಿನ ಕುಮಾರ ವ್ಯಾಸನ ಭಾರತಕ್ಕೂ ಇದು ತನ್ನ ಕೊಡುಗೆ ಸಲ್ಲಿಸಿದ್ದ ಗೊತ್ತಿರಬೇಕ ನಿಮಗ. ಬಾವಿ ನೀರಿನ ಸ್ನಾನಮಾಡಿ ಉಟಗೊಂಡಿದ್ದ ಒದ್ದಿ ಪಂಜಾ ಆರೂತನಾ ಕುಮಾರವ್ಯಾಸಗ ಕಾವ್ಯ ಸ್ಫೂರ್ತಿ ಇರತಿತ್ತು ಅಂತಲೂ, ಕಂಬಕ್ಕೆ ಆರಲೆಂದು ಕಟ್ಟಿದ ಪಂಜಾದ ಮ್ಯಾಲ ನಾರಾಣಪ್ಪಗ ಮಹಾಭಾರತ ಸಚಿತ್ರವಾಗಿ ಕಾಣಿಸುತ್ತಿತ್ತು ಅಂತಲೂ ದಂತಕಥೆಗಳು ಪ್ರಚಲಿತದಾಗ ಅವ. 
ಹಂಗಂತ ಇದರ ಜಾಗಾ ಬರೇ ಬಡ ಬ್ರಾಹ್ಮಣರ ಮನ್ಯಾಗ ಮತ್ತ ಮಠದಾಗಷ್ಟೇ ಅಂತ ತಿಳಕೋಬ್ಯಾಡ್ರಪಾ.ಇದು ರಗಡ ಸಲ ಬಾಲಿವುಡ್ ಸವಾರಿನೂ ಮಾಡಿ  ಬಂದದ.ನಮ್ಮ ರಾಜಕಪೂರ್ ಫ್ಯಾಮಿಲಿಯವರಿಗಂತೂ ಇದು ಫೇವರಿಟ್. ‘ ತುಝೆ ಬುಲಾಯೆ ಯೆ ಮೇರಿ ಬಾಹೇಂ...ಗಂಗಾ  ಯೆ ತೇರಿ ಹೈ ಫಿರ್ ಕೈಸಿ ದೇರಿ ಹೈ’ಅಂತಲೂ, ‘ಸತ್ಯಂ ಶಿವಂ ಸುಂದರಂ ‘ ಅಂತಲೂ ಹಾಡಿ ತಾನೂ ಕುಣಿಯೂದಲ್ಲದ ಎಲ್ಲಾರ ಮೈ-ಮನಸ್ಸನ್ನೂ ಕುಣಿಸಿ -ತಣಿಸೇದ ಅನ್ನೂದನ್ನ ಮರೀಬ್ಯಾಡ್ರಿ.
ಇಷ್ಟೆಲ್ಲಾ  ಆದ್ರೂ ಸೊಕ್ಕಿಲ್ಲ ನೋಡ್ರಿ ಅದಕ್ಕ.”ತುಂಬಿದ ಕೊಡ ತುಳಕಂಗಿಲ್ಲ “ಅನ್ನೂಹಂಗ ಸದ್ದಿರದೇ ತನ್ನ ಕತ೯ವ್ಯದಲ್ಲಿ ನಿರತವಾಗಿರತದ.ಫಲಾಫಲಾಪೇಕ್ಷೆಯಿಲ್ಲದೇ ,ಮೇಲು -ಕೀಳು ಎನ್ನದೇ ಕಮ೯ಯೋಗಿಯಂತೆ ತಾನಾಯಿತು ತನ್ನ ಕಾಯಕವಾಯಿತು ಎಂಬಂತಿರತದ.

ಮತ್ತ ಇಂಥ ಪಂಜಾಕ್ಕ  ಒಂದು ಮೆಚ್ಚುಗಿ ಮಾತ ಬರಲೆಲಾ ನಿಮ್ಮ ಕಡೆಯಿಂದ.

- ಗೌರಿ ಪ್ರಸನ್ನ

ಸಂಕ್ರಾಂತಿ ವಿಶೇಷ: ಯೋಗೀಂದ್ರ ಮರವಂತೆ ಬರೆದ `ಶ್ಯಾವಿಗೆ ಹಬ್ಬ` ಮತ್ತು ಕೇಶವ ಕುಲಕರ್ಣಿ ಬರೆದ `ಅಮರಪ್ರೇಮ` ಕತೆಯ ಕೊನೆಯ ಭಾಗ

ನಮಸ್ಕಾರ ಅನಿವಾಸಿ ಬಂಧುಗಳೇ. ಬೆಳಗಾದರೆ ಭೋಗಿ-ಸಂಕ್ರಾಂತಿಗಳು.  ಸುಗ್ಗಿಯ ಹಬ್ಬ ತಮ್ಮೆಲ್ಲರಿಗೂ ಹಿಗ್ಗನ್ನು ತರಲಿ. ಹುಗ್ಗಿಯ  ಘಮದಂತೆ ಬದುಕು ಹಿತವಾಗಲಿ 

ಎಳ್ಳು-ಬೆಲ್ಲದ ಸಿಹಿ ಬಾಳ ತುಂಬಿರಲಿ. ಸಿಹಿಗಬ್ಬು, ಬಾಳೆ- ಬಾರೆ, ಸೀತನಿ-ಸುಲಗಾಯಿ..ಆಹಾ! 'ಈ ಜನುಮವೇ   ಆಹಾ ದೊರಕಿದೆ ರುಚಿ ಸವಿಯಲು.. ಈ ಜಗವಿದೆ ನವರಸಗಳ ಉಣಬಡಿಸಲು' ಅಲ್ಲವೇ? 

ಬನ್ನಿ.. ಇವತ್ತು ಮರವಂತೆಯವರ ಮನೆಯಲ್ಲಿ ಶ್ಯಾವಿಗೆಯಂತೆ. ಎಂಥಾ  ಸೊಗಸಾದ ಊಟ  ಉಣಬಡಿಸಿದ್ದಾರೆ  ಸವಿಯಬನ್ನಿ.

ಉಂಡಾದ ಮೇಲೆ ಹಾಯಾಗಿ ಅಡ್ಡಾಗಿ ಅಮರಪ್ರೇಮ ಕಥಾಯಾನ ಮಾಡಿ ಸಂಕ್ರಾಂತಿ ಸಂಭ್ರಮ ಹೆಚ್ಚಿಸಿಕೊಳ್ಳಿ. 
 
~ ಗೌರಿ ಪ್ರಸನ್ನ, ಸಂಪಾದಕರು

ಶ್ಯಾವಿಗೆ ಹಬ್ಬ – ಯೋಗೀಂದ್ರ ಮರವಂತೆ

ಇವತ್ತು ಶ್ಯಾವಿಗೆ. ಇಂತಹ ಇವತ್ತು  ವಾರಾಂತ್ಯದ ದಿನಗಳಾದ ಶನಿವಾರ  ಆದಿತ್ಯವಾರ ಅಲ್ಲದಿದ್ದರೆ ಯಾವುದೊ ಹಬ್ಬದ ರಜೆಯ ದಿವಸ ಬರುತ್ತದೆ. ಇಲ್ಲದಿದ್ದರೆ ಶ್ಯಾವಿಗೆಯಂತಹ ಪ್ರಯಾಸಕರ ಸಾಹಸವನ್ನು ದೈನಿಕದ ಕೆಲಸ ಇರುವ ವಾರದ ನಡುವೆ  ಯಾರಾದರೂ ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಕಡಿಮೆ. ಶ್ಯಾವಿಗೆಯನ್ನು ತಲೆಮಾರುಗಳಿಂದ ತಯಾರಿಸಿ  ಪ್ರೀತಿಸಿ ಆಸ್ವಾದಿಸಿ ಬಡಿಸಿ ಉಣಿಸಿ ತಣಿಸಿದ ಪರಂಪರೆಯಲ್ಲಿ ಹುಟ್ಟಿದ್ದು ನನ್ನ ಭಾಗ್ಯ ಇರಬೇಕು. ಸಂಗೀತ ನೃತ್ಯ  ಪ್ರಕಾರಗಳಲ್ಲಿ ಇಂತಹ ಶೈಲಿ ಘರಾನಾ ತಿಟ್ಟು ಮಟ್ಟು  ಎಂದೆಲ್ಲ ಇದೆಯಲ್ಲ. ಪರಂಪರೆಯೊಂದು ಗುರುವಿನಿಂದ ಶುರುವಾಗಿ  ಶಿಷ್ಯರ ತಲಾಂತರಗಳಿಗೆ ವಿಶಿಷ್ಟ ಗುರುತಾಗಿ  ಹರಿದು ಹೋಗುವಂತಹದು. ಹೀಗೆ ಹೆಸರಾಂತ ಪರಂಪರೆಯಿಂದ ಬಂದವರನ್ನು ನೋಡಿದ ಕೇಳಿದ ತಕ್ಷಣ ಇನ್ಯಾರೋ ,"ಓ ಇವರು ಇಂತಹಲ್ಲಿಗೆ ಸೇರಿದವರು "ಎಂದು ಸುಲಭವಾಗಿ ಗುರುತಿಸುವುದಿದೆ.  ಅಂತಹ ಯಾವುದೇ  ಗಾಯಕ ವೈಣಿಕ ನರ್ತಕ ಕಲಾವಿದರ  ಸಾಲಿಗೆ ಪರಂಪರೆಗೆ  ಸೇರದ ನಾನು  , ಆದರೆ, ಒಂದು ವೇಳೆ ಮನುಷ್ಯರೇ ಆರೋಪಿಸಿಕೊಂಡ  ಸಾಮೂಹಿಕ ಗುರುತಿಗೆ  ಸೇರಲೇಬೇಕಾದ  ಸಂದರ್ಭದಲ್ಲಿ   " ಶ್ಯಾವಿಗೆ ಘರಾನಾ"ಕ್ಕೆ ಮಾತ್ರ ಸೇರಬೇಕಾದವನು ಎಂದು ಅನಿಸಿದ್ದಿದೆ. ಶ್ಯಾವಿಗೆಯನ್ನು  ತಿಂಡಿ ಎಂತಲೋ  ಕಜ್ಜಾಯ ಊಟ ಉಪಹಾರ ಎಂತಲೋ ವರ್ಗೀಕರಿಸಿದವರಿದ್ದಾರೆ. ಮತ್ತೆ ಕೆಲವರು ಅದರ ತಯಾರಿಯ ಹಿಂದಿನ ಸಿದ್ಧತೆ ಬದ್ಧತೆ ಶ್ರಮ ಸಾಹಸಗಳನ್ನು ಕಂಡು ಅಡಿಗೆಯ ಪ್ರಕಾರದಿಂದಲೇ ಹೊರಗಿಟ್ಟು ದೂರ ಉಳಿದಿದ್ದಾರೆ. ನನ್ನ ಮಟ್ಟಿಗೆ ಶ್ಯಾವಿಗೆ ಇಂತಹ ಮಾನವ ಮಿತಿಯ ವಿವರ ವರ್ಣನೆಗಳನ್ನು ಮೀರಿದ ಒಂದು ಮಹಾ ಕುಸುರಿ ಕೆತ್ತನೆ  ಕಾವ್ಯ.

ಈ ಕಾಲದಲ್ಲಿ ಉಪ್ಪಿಟ್ಟನ್ನು  ಪಾಯಸ  ಫಲೂದಂತಹ ಸಿಹಿಖಾದ್ಯಗಳನ್ನೂ ಶ್ಯಾವಿಗೆ ಬಳಸಿ  ತಯಾರಿಸುವುದು  ಜನಪ್ರಿಯವಾಗಿರುವವಾದರೂ  "ಒತ್ತು ಶ್ಯಾವಿಗೆ"ಯನ್ನೇ ಶ್ಯಾವಿಗೆ ಎಂದು ಸಂಬೋಧಿಸುವುದು ಕೆಲವು ಊರು ಮನೆಗಳಲ್ಲಿ ಇಂದಿಗೂ  ಕ್ರಮ.  ಹಲವು ಮಾದರಿ ಬಗೆಗಗಳ ಶ್ಯಾವಿಗೆಳು ಅಸ್ತಿತ್ವದಲ್ಲಿ ಇದ್ದರೂ ಅದರ  ಉಗಮ ಮೂಲ ನಾಲ್ಕು ಸಾವಿರ ವರ್ಷಗಳ ಹಿಂದೆ ಚೈನಾದಲ್ಲಿ ಆಯಿತು ಎಂದು ಕೆಲವು ಆಹಾರ ಇತಿಹಾಸಕಾರರು ಬರೆದಿಟ್ಟಿದ್ದಾರೆ. ಇನ್ನು ಕೆಲವರು ಅನಾದಿ ಕಾಲದಲ್ಲಿ ನೂಡಲ್ಸ್ ನಂತಹ ತಿನಿಸು ಇಟೆಲಿಯಲ್ಲಿ ಇತ್ತು ಎಂದೂ ಹೇಳಿದ್ದಾರೆ. ಮತ್ತೊಬ್ಬರು ಕ್ರಿಸ್ತ ಪೂರ್ವ ೨೦೦೦ದ ಹೊತ್ತಿಗೆ ಭಾರತದಲ್ಲಿಯೂ ಶ್ಯಾವಿಗೆ ಮಾದರಿಯ ಊಟ ತಿಂಡಿ ಇದ್ದುದರ ಕುರುಹು ಇದೆ ಎನ್ನುತ್ತಾರೆ. ಹಲವು ನೂರು, ಕೆಲವು ಸಾವಿರ ವರ್ಷಗಳ ಹಿಂದೆ ಶ್ಯಾವಿಗೆಯ ಹುಟ್ಟು ಎಲ್ಲೇ ಆಗಿದ್ದರೂ ,ಅಂದಿನಿಂದ ಇಂದಿನ ತನಕದ ಸುದೀರ್ಘ ಯಾನದಲ್ಲಿ  ಜಗತ್ತಿನ ಬೇರೆ ಬೇರೆ ಮೂಲೆಗಳಿಗೆ  ಹರಡಿ ಹಲವು ಮಾರ್ಪಾಟುಗಳನ್ನು ಕಂಡು ಇಂದು ಇಲ್ಲಿ ಹೀಗೆ ಹಸನಾಗಿ ಬದುಕಿ ಬಾಳಿಕೊಂಡಿದೆ.

ಶ್ಯಾವಿಗೆ ಮಾಡುವವರು ತಯಾರಿಯನ್ನು ಹಿಂದಿನ ದಿನ ಅರೆಯುವ ಕೆಲಸದಿಂದ ಆರಂಭಿಸಿರುತ್ತಾರೆ. ಇನ್ನು ನನ್ನಂತೆ ತಿನ್ನುವುದರಲ್ಲಿ  ತೀವ್ರ  ಆಸಕ್ತಿ ಇರುವವರು ಅದಕ್ಕಿಂತಲೂ ಮೊದಲೇ ಒಂದು ಮಾನಸಿಕ ಸಿದ್ಧತೆ  ಪ್ರತೀಕ್ಷೆಯಲ್ಲಿ ಇರುತ್ತಾರೆ. ಬಿಡಿ,ಅರೆಯುವುದು ಶ್ಯಾವಿಗೆ ಯಾನದ  ಮೊದಲ ಹಂತವಾದರೂ ಅದಕ್ಕೂ ಪೂರ್ವದಲ್ಲಿ  ಶ್ಯಾವಿಗೆ ಸ್ನೇಹಿ ಅಕ್ಕಿ ಕೈವಶವಾಗಿರಬೇಕು. ಶ್ಯಾವಿಗೆಗೆ ಸಮರ್ಪಕ  ಅಕ್ಕಿ ಯಾವುದು ಎಂದು ಅರಸುವುದು ಮತ್ತೆ ಕಂಡುಹಿಡಿಯುವುದು ಪರಂಪರೆ ಪ್ರಯೋಗಗಳು ಕಲಿಸಿಕೊಡುವ ಗುಟ್ಟುಗಳಲ್ಲಿ ಒಂದು. ಬಿಳಿಯಾಗಿ ಹೊಳೆಯುವ ಯಾವುದೋ  ಅಕ್ಕಿ, ದುಬಾರಿಯಾದ ಕಾರಣಕ್ಕೆ ಒಳ್ಳೆಯದು ಎನ್ನುವ ಹೆಸರು ಪಡೆದ ಅಕ್ಕಿ ಇಂತಹವನ್ನು ತಂದು ಅರೆದು ಶ್ಯಾವಿಗೆ ಮಾಡಲು ಕೈಹಾಕಿದರೆ ಉದ್ದುದ್ದ ಎಳೆಯಾಗಿ ನಿಂತು ನಲಿದು ಬಾಳಬೇಕಾದ  ಶ್ಯಾವಿಗೆ ನೂಲುಗಳು ಕ್ಷಣಮಾತ್ರದಲ್ಲಿ  ತುಂಡು ತುಂಡಾಗಿ ಹರಿದು ಛಿದ್ರವಾಗಿ ನಾಲಿಗೆಯಲ್ಲಿ ನಿಲ್ಲದೆ ಕರಗಿ ನಿರಾಸೆ ಜಿಗುಪ್ಸೆ ಹುಟ್ಟಿಸುವ ಸಾಧ್ಯತೆಯೇ ಹೆಚ್ಚು. ಕೇರಳದ ಕಡೆಯ  ಶ್ಯಾವಿಗೆ ಬಿಳಿ ಅಲ್ಲದೇ ಕೆಂಪು ಅಕ್ಕಿಯಿಂದಲೂ  ತಯಾರಾಗುತ್ತದೆ."ಇಡಿಯಪ್ಪಂ" ಎನ್ನುವ ಹೆಸರಿನ ಕೇರಳದ ಶಾವಿಗೆ ಪ್ರಕಾರಕ್ಕೆ ನೂಲುಪೊಟ್ಟು ,ನೂಲಪ್ಪಮ್ ಎಂಬ ಹೆಸರುಗಳೂ ದಕ್ಷಿಣ ಭಾರತದಲ್ಲಿ ಪ್ರಚಲಿತದಲ್ಲಿ ಇವೆ. ಇನ್ನು ಆಂಗ್ಲ ಭಾಷೆಯಲ್ಲಿಯೇ ಹೆಸರು ಬೇಕೆಂದು ಬಯಸುವವರು  ರೈಸ್ ನೂಡಲ್ಸ್ ಅಥವಾ ಸ್ಟ್ರಿಂಗ್ ಹೋಪರ್ ಎಂದೂ ಕರೆದು ಕೃತಾರ್ತರಾಗಬಹುದು. ರುಚಿ ಗಂಧಗಳಲ್ಲಿ ಕೇರಳದ ಅಥವಾ ಇನ್ಯಾವುದೋ ರಾಜ್ಯದ  ಶ್ಯಾವಿಗೆ ಕನ್ನಡದ ಶ್ಯಾವಿಗೆಗಿಂತ ಭಿನ್ನ. ಮೇಲುನೋಟಕ್ಕೆ ಎಲ್ಲ ಬಗೆಯ ಶ್ಯಾವಿಗೆಗಳೂ  ಸುರುಳಿಸುತ್ತಿದ ನೂಲಿನ ಮುದ್ದೆಯಾದರೂ  ಅವುಗಳೊಳಗೆ ವೈವಿಧ್ಯ ಇದೆ. ವೈವಿಧ್ಯಮಯ ಶ್ಯಾವಿಗೆಯನ್ನು  ಪ್ರೀತಿಸಿ ಸ್ವಯಂ ತಯಾರಿಸುವವರು  ಜಗತ್ತಿನ ಯಾವುದೇ  ಮೂಲೆಯಲ್ಲಿ ಇದ್ದರೂ ಅಲ್ಲಿನ ಸ್ಥಳೀಯ ಅಂಗಡಿಗಳಲ್ಲಿ ಸಿಗುವ ಅಕ್ಕಿಗಳಲ್ಲಿ ಶ್ಯಾವಿಗೆಗೆ ಹೊಂದುವ ಅಕ್ಕಿ ಯಾವುದು ಎಂದು ತಮ್ಮ ಅಡುಗೆಯ ವಿಜ್ಞಾನ  ಗಣಿತ ಪ್ರಯೋಗಗಳನ್ನು  ಜೊತೆಮಾಡಿಸಿ ಕಂಡುಕೊಂಡಿರುತ್ತಾರೆ. ಅದಕ್ಕಿಂತ ಮುಖ್ಯವಾಗಿ ತಾವಿರುವ ಊರಿಗೆ ಶ್ಯಾವಿಗೆ ಒತ್ತುವ ಒರಳನ್ನೂ ಕೊಂಡೊಯ್ದಿರುತ್ತಾರೆ. ಹಿತ್ತಾಳೆಯ ಹೊಳೆಯುವ ಒರಳುಗಳು ಸಣ್ಣ ದೊಡ್ಡ ಗಾತ್ರದಲ್ಲಿ ಕನ್ನಡ ನಾಡಿನ ಅಂಗಡಿಗಳಲ್ಲಿ ದೊರೆಯುತ್ತವೆ. ವಿದೇಶ ಪ್ರವಾಸದ ಬ್ಯಾಗಿನ ಅಚ್ಚುಕಟ್ಟಿನ ಜಾಗದಲ್ಲಿ ಸಾಗಿಸಲು  ಅನುಕೂಲಕರ ಆಗಲಿ ಎಂದು ಒರಳಿನ ಭಾಗಗಳನ್ನು ಹೊರಡುವಾಗ  ಬಿಡಿಸಿ ಮತ್ತೆ ತಲುಪಿದ ಮೇಲೆ ಜೋಡಿಸಲಾಗುವ ನಮೂನೆಗಳೂ ದೊರೆಯುತ್ತವೆ. ಅಂತೂ ಒರಳೂ ಇದ್ದು, ಸೂಕ್ತವಾದ ಅಕ್ಕಿಯೂ ದಕ್ಕಿದ ಮೇಲೆ ,  ಮರುದಿನ ಬೆಳಿಗ್ಗೆಯ ಶ್ಯಾವಿಗೆ ತಯಾರಿಗೆ  ಹಿಂದಿನ ಸಂಜೆ  ಅರೆದಿಡಬಹುದು ,  ಜೊತೆಗೆ  ತೆಂಗಿಕಾಯಿ ತುರಿದು ಸೇರಿಸುವ ಪದ್ಧತಿಯೂ ಇದೆ. ಕೆಲವು ಊರು ಮನೆಗಳಲ್ಲಿ ತೆಂಗಿನ ಕಾಯಿ ಹಾಕದೆಯೂ  ಶ್ಯಾವಿಗೆ ಮಾಡುತ್ತಾರೆ.

ನಾನಂತೂ ಶ್ಯಾವಿಗೆ ಪರಂಪರೆಯಲ್ಲಿ "ತೆಂಗಿನಕಾಯಿ ಸಹಿತ" ಸಂತತಿಗೆ  ಸೇರಿದವನು. ಶ್ಯಾವಿಗೆಯನ್ನು ಆಘ್ರಾಣಿಸಿಯೇ ಅದಕ್ಕೆ ತೆಂಗಿನ ಕಾಯಿ ಹಾಕಿದ್ದಾರೋ ಇಲ್ಲವೋ ಎಂದು ಹೇಳಬಲ್ಲ ಹುಟ್ಟಾ  ಕಟ್ಟಾ ಶ್ಯಾವಿಗೆ ಪ್ರೇಮಿಗಳೂ ಇದ್ದಾರೆ.  ಎಷ್ಟು ಅಕ್ಕಿಗೆ ಎಷ್ಟು ತೆಂಗಿನಕಾಯಿ  ಸೇರಿಸಿ  ಅರೆಯಬೇಕು ಎನ್ನುವುದು ಶ್ಯಾವಿಗೆಯ ಸೂಕ್ಶ್ಮಾತಿಸೂಕ್ಷ್ಮಗಳಲ್ಲಿ  ಇನ್ನೊಂದು. ಈ ಹಂತದಲ್ಲಿ ಕಾಯಿ ಹೆಚ್ಚು ಸೇರಿಸಿದರೆ ಶ್ಯಾವಿಗೆ ತಯಾರಾಗುವ ಕೊನೆಯ ಹಂತದಲ್ಲಿ ಎಳೆಗಳು ತೀರಾ ದುರ್ಬಲವಾಗಿ ಪುಡಿ ಪುಡಿ ಆಗುತ್ತವೆ.ಕಡಿಮೆ ಆದರೆ ಎಳೆಗಳು ಗಟ್ಟಿಯಾಗಿ ತಿನ್ನುವ ಅನುಭವ ಕೆಡುತ್ತದೆ.  ಚದುರಂಗದ ಆಟದಲ್ಲಿ ಹಲವು ಹೆಜ್ಜೆಗಳ ಮುಂದಿನ ಪರಿಣಾಮವನ್ನು ಅಳೆದು ಮೊದಲೇ ಯೋಜನೆ ಮಾಡಿ ಜಾಗರೂಕವಾಗಿ ಮುನ್ನಡೆಯುವಂತೆ   ಈ ಮಹಾಖಾದ್ಯದ ತಯಾರಿಯೂ.  ಒಂದಾನೊಂದು ಕಾಲದಲ್ಲಿ ನನ್ನ ತಂದೆ ತಾಯಿಯರ  ಕಡೆಯ ಅಮ್ಮಮ್ಮಂದಿರು (ಅಜ್ಜಿಯರು) ಶಿಲೆಯ ಅರೆಯುವ  ಕಲ್ಲುಗಳ ಎದುರು ನೇರ  ಕುಳಿತು ಒಂದು ಕೈಯಿಂದ ಕಲ್ಲನ್ನು ತಿರುವುತ್ತಾ ಮತ್ತೊಂದರಲ್ಲಿ ಅಷ್ಟಷ್ಟೇ ಅಕ್ಕಿ ತುರಿದ ಕಾಯಿಯನ್ನು ಕಲ್ಲಿನ ಕುಳಿಗೆ ಜಾರಿಸುತ್ತಾ ನಡುನಡುವೆ ಹಣೆಯ ಬೆವರನ್ನೂ ಸೆರಗಿಂದ ಒರಸುತ್ತ  ಸಣ್ಣ ಸದ್ದಿನಲ್ಲಿ ಅರೆಯುತ್ತಿದ್ದ  ಪ್ರಕ್ರಿಯೆ ಇದೀಗ ತಲೆಮಾರುಗಳನ್ನು ದಾಟಿ ಬಟನ್ ಒತ್ತಿದೊಡನೆ ಕರ್ಕಶವಾಗಿ ಗಿರಗಿಟ್ಟುವ ಮಿಕ್ಸರ್ ಗ್ರೈಂಡರ್ ಗಳ  ಶಬ್ದದ  ನಡುವೆ  ನುಣ್ಣಗೆ ತೆಳ್ಳಗಾಗುವುದಕ್ಕೆ ಒಗ್ಗಿಕೊಂಡಿವೆ. ಹೀಗೆ ಸಿದ್ಧವಾದ ನೀರುನೀರಾದ ಶ್ಯಾವಿಗೆ ಹಿಟ್ಟು ಒಂದು ರಾತ್ರಿಯನ್ನು  ಏನೂ  ಮಾಡದೇ ಪಾತ್ರೆಯೊಂದರಲ್ಲಿ ಬೆಳಗಿನ ನಿರೀಕ್ಷೆಯಲ್ಲಿ ಕಳೆಯುತ್ತದೆ . ,ಮರುದಿನ ಬೆಳಗಿಗೆ ತುಸು ಹುಳಿಯಾಗಿ ಮುಂದಿನ ಹಂತಕ್ಕೆ ಅಣಿಗೊಳ್ಳುತ್ತದೆ. ಇನ್ನು ಶ್ಯಾವಿಗೆ ಸಂಭ್ರಮದ ದಿನದ ಬೆಳಿಗ್ಗೆ  ಒಲೆಯ ಮೇಲಿರುವ ಬಾಣಾಲೆಯನ್ನು ಏರಿದ   ತೆಳ್ಳಗಿನ ಹಿಟ್ಟು ,ಮನೆಯ ನಿಷ್ಣಾತ ಬಾಣಸಿಗರ ಸುಪರ್ದಿಯಲ್ಲಿ   ನಿಧಾನವಾಗಿ ಕುದಿಯುತ್ತಾ   ಮಗುಚಿಸಿಕೊಳ್ಳುತ್ತ   ಮುದ್ದೆಯಾಗುತ್ತದೆ   , ಮತ್ತೆ ಆ ಗಟ್ಟಿ ಮುದ್ದೆ ಕೈಮುಷ್ಟಿಯ ಬಿಗಿಯಲ್ಲಿ  ಉಂಡೆಯ ರೂಪವನ್ನು ಪಡೆದು  ಇಡ್ಲಿ ಅಟ್ಟ  ಅಥವಾ ಕುಕರ್ ಒಳಗೆ ನಂತರ ಬೇಯುತ್ತದೆ ತೋಯುತ್ತದೆ . ತೆಳ್ಳಗಿನ ಹಿಟ್ಟು ಯಾವ ಬೆಂಕಿಯಲ್ಲಿ ಎಷ್ಟೊತ್ತು ಕುದಿಯಬೇಕು ಎಷ್ಟು ಗಟ್ಟಿಯಾಗಬೇಕು ಮತ್ತೆ  ಎಷ್ಟು ಬೇಯಬೇಕು ಎನ್ನುವುದು ಕೂಡ ಶ್ಯಾವಿಗೆಯ ಯಶಸ್ಸಿನ ಹಿಂದೆ ದುಡಿಯುವ  ನಯ ನಾಜೂಕಿನ ವಿಚಾರಗಳು.

ಈಗ  ಮೃದುವಾಗಿ ಹದವಾಗಿ ಕುದಿದು ಬೆಂದ ಉಂಡೆಗಳು ಒತ್ತಿಸಿಕೊಳ್ಳಲಿಕ್ಕೆ ತಯಾರು. ಎಂದೋ ಯಾರೋ ಮಹಾ ಇಂಜಿನೀಯರ್ ಒಬ್ಬರು ಸಂಶೋಧನೆಯ ಕಾರಣಕ್ಕೆ  ಈಗಲೂ ಅವರಿಗೆ  ಪುಣ್ಯ ಸಂಚಯ ಮಾಡಿಸುತ್ತಿರುವ   "ಶ್ಯಾವಿಗೆ ಒರಳು" ಇಷ್ಟೊತ್ತಿಗೆ ಮೈಮುರಿದು ಅಡುಗೆ ಮನೆಯಲ್ಲಿ ಪ್ರತ್ಯಕ್ಷ ಆಗಿರುತ್ತದೆ. ಸಾಮಾನ್ಯವಾಗಿ ಮನೆಯ ಅಟ್ಟದಲ್ಲೋ ಅಡುಗೆ ಮನೆಯ ನೇಪತ್ಯದಲ್ಲೋ ನಿಷ್ಕ್ರಿಯವಾಗಿರುವ  ಒರಳು, ಶ್ಯಾವಿಗೆ ಒತ್ತಬೇಕಾದ ಅಪರೂಪದ ವಿಶೇಷ ದಿನಗಳಲ್ಲಿ ಮಾತ್ರ ಹೊರಬಂದು ಕತ್ತು ಗಿರಗಿರ ತಿರುಗಿಸುವ  ಮೂರು ಕಾಲಿನ ವಿಚಿತ್ರ ಜಂತುವಾಗಿ ಜೀವ ತಳೆಯುತ್ತದೆ  . ಒರಳಿನ  ತಿರುಗಿಸುವ  ಹಿಡಿಯ ಕೆಳಗಿನ ಭಾಗಕ್ಕೆ ತೆಂಗಿನ ಎಣ್ಣೆ ಸವರುವುದು  ಪ್ರತಿ ಒತ್ತಿಗೂ  ಮೇಲೆ ಕೆಳಗೆ ಹೋಗುವಾಗ ಆಗುವ ಘರ್ಷಣೆಯನ್ನು ತಗ್ಗಿಸುತ್ತದೆ, ಅಮೂಲ್ಯವಾದ ಒರಳಿನ ಆಯಸ್ಸನ್ನು ವರ್ಧಿಸುತ್ತದೆ ಎನ್ನುವುದನ್ನು ಅಡುಗೆಮನೆ ನಿರ್ವಹಿಸುವ ಅನುಭವದ ಯಾರೂ ಹೇಳಬಲ್ಲರು. ಹೀಗೆ ಒರಳುಯಂತ್ರದ ಪ್ರವೇಶ ಅಲಂಕಾರ ಆಗುತ್ತಿರುವಾಗ  ಒಲೆಯ ಮೇಲೆ ಬೆಂದ ಹಿಟ್ಟಿನ ಉಂಡೆಗಳ ಬಿಸಿ ಆರದಂತೆ ಸಣ್ಣ ಬೆಂಕಿ ಮುಂದುವರಿಯುತ್ತಿರುತ್ತದೆ. ಇನ್ನು ಅಕ್ಕಿ ಕಾಯಿಯಗಳು ಅರೆದು ಬೆಂದ  ಉಂಡೆಗಳು ಶ್ಯಾವಿಗೆಯ ಎಳೆಗಳಾಗಿ ಮಾರ್ಪಡುವ ದಿವ್ಯ ಘಳಿಗೆ ಸನ್ನಹಿತವಾದಾಗ ಆಯಾ ಮನೆಯ ಬಲಿಷ್ಠ ಒತ್ತುಗಾರರಿಗೆ ಒಂದು ಕೂಗು ಕರೆ ಹೋಗುತ್ತದೆ. ಒಬ್ಬರು ಶ್ಯಾವಿಗೆ ಒರಳಿನ ಒತ್ತು ಪಾತ್ರೆ ಹಿಡಿಯುವಷ್ಟು ಬೆಂದ ಹಿಟ್ಟಿನ ಉಂಡೆಯನ್ನು ಕುಳಿತು ತುಂಬಿಸಿದರೆ  ಇನ್ನೊಬ್ಬರು ನಿಂತು, ಒರಳಿನ ಎರಡು ಕಾಲುಗಳನ್ನು ತಮ್ಮ ಪಾದಗಳಿಂದ ಅದುಮಿ ಹಿಡಿದು ಎರಡು ಕೈಯಲ್ಲಿ ಹ್ಯಾಂಡಲ್ ಬಾರ್ ತಿರುಗಿಸುತ್ತಾ ಶ್ಯಾವಿಗೆ ಒತ್ತುತ್ತಾರೆ. ಪ್ರತಿ ಸುತ್ತಿಗೂ ಅಷ್ಟಷ್ಟು ಶ್ಯಾವಿಗೆ ಎಳೆಯಾಗಿ ನೂಲಾಗಿ  ಒರಳಿನ ಕೆಳಗಿರುವ ಅಚ್ಚಿನಿಂದ ಹೊರ ಬರುತ್ತದೆ, ಕುಳಿತವರು ಪ್ಲೇಟ್ ಅನ್ನು  ಎಳೆಗಳು ಹೊರ ಬರುವ ಲಯಕ್ಕೆ ಹೊಂದಿಕೊಂಡು ತಿರುಗಿಸುತ್ತಾ  ಸುರುಳಿಯಾಗಿ ಸುತ್ತಿಸಿ ಮುದ್ದೆಯನ್ನು ಹಿಡಿಯುತ್ತಾರೆ . ಶ್ಯಾವಿಗೆ ಮಾಡುವುದರಲ್ಲಿ ಪಳಗಿರುವ  ಅಜ್ಜಿ ಅಮ್ಮ ಹೆಂಡತಿ  ದೊಡ್ಡಮ್ಮ ಚಿಕ್ಕಮ್ಮ ಅತ್ತಿಗೆ ಹೆಂಡತಿಯಂತಹ ಮಹಾನ್ ಬಾಣಸಿಗರು ಬಿಸಿ ಹಿಟ್ಟಿನ ಮುದ್ದೆಯನ್ನು ಒರಳಿಗೆ ತುಂಬುವ ಮತ್ತೆ  ಒತ್ತಿದಾಗ ಕೆಳಗೆ ಧಾರೆಯಾಗಿ ಇಳಿಯುವ ಶ್ಯಾವಿಗೆಯನ್ನು ಪ್ಲೇಟು ಹಿಡಿದು ಸುತ್ತಿಸಿ ಹದ್ದುಬಸ್ತಿನಲ್ಲಿಡುವ ಕೆಲಸ ಮಾಡಿದರೆ, ರಟ್ಟೆಯ ಬಲ ಹೆಚ್ಚಿರುವ ಗಂಡ ಮಗ ಅಳಿಯ ಮೊಮ್ಮಗರಂತವರು  ಒರಳು ತಿರುಗಿಸುವ ಹೊಣೆಗಾರಿಕೆಯನ್ನು  ನಿರ್ವಹಿಸುತ್ತಾರೆ.ಕೆಲವು ಪ್ರದರ್ಶನಗಲ್ಲಿ ಈ ಪಾತ್ರಗಳು ಬದಲಾಗುವುದು ಒಬ್ಬರೇ ಎರಡು ಮೂರು ಪಾತ್ರ ಮಾಡಬೇಕಾದ ಅನಿವಾರ್ಯತೆ ಬರುವುದೂ ಇರುತ್ತದೆ. ಕಾರ್ಖಾನೆಯೊಂದರ ನಿರ್ಧರಿತ  ನಿಯಮಿತ ಚಲನೆಗಳಂತೆ  ಕುಕ್ಕರಿನಲ್ಲಿ ಹದ ಬಿಸಿಯಲ್ಲಿರುವ ಒಂದೊಂದೇ ಹಿಟ್ಟಿನ ಉಂಡೆಗಳು  ಒರಳಿನ ತೂತು ಅಚ್ಚುಗಳ ಮೂಲಕ ಹಾದು ನೀಳ  ನೂಲಿನ ಗುಚ್ಛದ ಸ್ವರೂಪವನ್ನು  ಪಡೆದು ಪ್ಲೇಟಿನಲ್ಲಿ ಇಳಿದು ದೊಡ್ಡ ಪಾತ್ರಕ್ಕೆ ವರ್ಗಾವಣೆ ಆಗುತ್ತಿರುತ್ತವೆ. ಇಡೀ ಕುಟುಂಬ ಮನೆಯನ್ನು, ತಾನು ರೂಪ ಆಕಾರ ಪಡೆಯುವ ಪ್ರಸನ್ನ ಘಳಿಗೆಯಲ್ಲಿ ಅಡಿಗೆಮನೆಯ ಸೂರಿನ ಕೆಳಗೆ ಒಂದು ಮಾಡಿಸುವ ಸಾಮರ್ಥ್ಯ  ಶ್ಯಾವಿಗೆ ಎನ್ನುವ ಅದ್ಭುತ ಪ್ರಕ್ರಿಯೆಗೆ ಇದೆ. 

ಹೀಗೆ ತಯಾರಾದ ಶ್ಯಾವಿಗೆಯನ್ನು ಹೇಗೆ ತಿನ್ನಬೇಕು ಬಾರದು ಎನ್ನುವುದರ ಬಗ್ಗೆ ಅದರ ಪ್ರೇಮಿಗಳಲ್ಲಿ ಜಿಜ್ಞಾಸೆ ಇದೆ ಅವರೊಳಗೆ ಪಂಥ  ಗುಂಪುಗಳೂ ಇವೆ .ಈ ಗುಂಪುಗಾರಿಕೆ ಒಡಕುಗಳು ಶ್ಯಾವಿಗೆ  ಹುಟ್ಟಿತು ಎನ್ನಲಾದ ಕೆಲ ಸಾವಿರ ವರ್ಷಗಳ ಹಿಂದೆಯೂ ಇದ್ದವೋ   ಇತ್ತೀಚಿಗೆ ಹುಟ್ಟಿಕೊಂಡದ್ದೋ  ಆ ಶ್ಯಾವಿಗೆಯ ಎಳೆಗಳೇ ಹೇಳಬೇಕು.  ಕೆಲವರು ಶ್ಯಾವಿಗೆ ಮುದ್ದೆಗೆ  ತೆಂಗಿನೆ ಎಣ್ಣೆ ಕಲಸಿಕೊಂಡು ಉಪ್ಪಿನ ಕಾಯಿಯ ಜೊತೆ ತಿನ್ನುವ, ಅಲ್ಲವೇ ಕಾಯಿರಸ, ಸಾಂಬಾರ್ ಇನ್ನೇನೋ ಖಾರ ಪದಾರ್ಥದ  ಜೊತೆ ಸೇವಿಸುವ  ಖಡಕ್ ಮನುಷ್ಯರು. ಇನ್ನು ಕೆಲವರು ತುರಿದ ತೆಂಗಿನ ಕಾಯಿಯನ್ನು ಮಿಕ್ಸರ್ ಅಲ್ಲಿ ಅರೆದು ಹಿಂಡಿದ  ಹಾಲಿಗೆ ಬೆಲ್ಲ ಸೇರಿಸಿ ತಯಾರಾದ ಕಾಯಿಹಾಲಿನ ಜೊತೆ ಮಾತ್ರ ಶ್ಯಾವಿಗೆಯನ್ನು ಸವಿಯ ಬಲ್ಲ ಸಂಕುಲದವರು. ತಿನ್ನುವ ಹೊತ್ತಿನಲ್ಲಿ ನಮ್ಮೊಳಗೇ ಭಿನ್ನಾಭಿಪ್ರಾಯ ಎಷ್ಟೇ ಇದ್ದರೂ  ಶ್ಯಾವಿಗೆಯ ಕುರಿತಾದ ಅಭಿಮಾನ ಒತ್ತಾಯ ಪ್ರೀತಿಯ ವಿಷಯದಲ್ಲಿ ಎಲ್ಲರೂ ಸಂಘಟಿತರು.

 ಮರವಂತೆಯ ನನ್ನ ಬಾಲ್ಯದ ಬೇಸಿಗೆ ರಜೆಯಯಲ್ಲಿ  ಮಂಗಳೂರು ಚಿಕ್ಕಮ್ಮನ ಮನೆಗೆ ಹೋಗಿದ್ದಾಗ, ಅಲ್ಲಿ ವಾಸಿಸುತ್ತಿದ್ದ ಅಮ್ಮಮ್ಮನಿಗೂ ನನಗೂ ಒಂದು ಪಂಥ ಬಿದ್ದ್ದಿತ್ತು.  ಒಂದೋ ಆಕೆ ನಿತ್ಯವೂ ಶ್ಯಾವಿಗೆ ಮಾಡಿ ದಣಿದು ನಿಲ್ಲಿಸಬೇಕು, ಇಲ್ಲದಿದ್ದರೆ  ನಾನು ದಿನಾ  ತಿಂದು ತಿಂದು ಸಾಕೆನ್ನಬೇಕು. ಈ ಪಂಥದ ಪ್ರಕಾರ ಪ್ರತಿ ದಿನ ಬೆಳಿಗ್ಗೆ ಅಮ್ಮಮ್ಮನಿಂದ ಹೊಚ್ಚ ಹೊಸ ಶ್ಯಾವಿಗೆ ತಯಾರಿ ಮತ್ತೆ  ನಿತ್ಯವೂ  ನಾನು ತಿನ್ನುವುದು ನಡೆಯಿತು. ಒಂದು ವಾರದ  ಪರಿಯಂತ ನಿತ್ಯ ನಡೆದ ಈ ಹಿತಸ್ಪರ್ಧೆಯಲ್ಲಿ ಸೋಲು ಗೆಲುವುಗಳ ನಿರ್ಧಾರ ಆಗದೇ , ಲೋಕಹಿತಕ್ಕಾಗಿ ನಾವಿಬ್ಬರೂ ಹೊಂದಾಣಿಕೆ ಒಪ್ಪಂದ ಮಾಡಿಕೊಂಡು  ಪಂಥವನ್ನು ಕೈಬಿಟ್ಟಿದ್ದೆವು.  ಶ್ಯಾವಿಗೆಯ ಸುದೀರ್ಘ ಇತಿಹಾಸದಲ್ಲಿ ದಾಖಲಾದ ಅವಿಸ್ಮರಣೀಯ ಜಿದ್ದು  ಇದಾಗಿದ್ದಿರಬಹುದು.  ಇಂದಿಗೂ ಶ್ಯಾವಿಗೆ -ಕಾಯಿ ಹಾಲುಗಳ ಜೋಡಿಯನ್ನು ಮೀರಿದ ಸುಖ ರಸಸೃಷ್ಟಿ  ಇನ್ನೊಂದಿಲ್ಲ ಎಂದು ನಂಬುವ ಕೆಲವರಲ್ಲಿಯಾದರೂ ನಾನೊಬ್ಬ. ಶ್ಯಾವಿಗೆಯನ್ನು ಇನ್ನೊಂದು ಆಹಾರ ಎಂತಲೋ ವಿಶೇಷ ತಿಂಡಿ ಎಂದೋ  ಹಲವರು  ಕರೆಯಬಹುದಾದರೂ ನನ್ನ ಮಟ್ಟಿಗೆ ಶ್ಯಾವಿಗೆ ಯಾವಾಗಲೂ ಹಬ್ಬ; ಮತ್ತೆ ಇವತ್ತು ಮನೆಯಲ್ಲಿ ಶ್ಯಾವಿಗೆ.

ಅಮರಪ್ರೇಮ (ಕತೆ): ಕೇಶವ ಕುಲಕರ್ಣಿ (ಕೊನೆಯ ಕಂತು)

ಮೊದಲ ಕಂತನ್ನು ಇನ್ನೂ ಓದಿಲ್ಲದಿದ್ದರೆ, ಓದಲು ಇಲ್ಲಿ ಒತ್ತಿ

ಎರಡನೆಯ ಕಂತನ್ನು ಇನ್ನೂ ಓದಿಲ್ಲದಿದ್ದರೆ, ಓದಲು ಇಲ್ಲಿ ಒತ್ತಿ

ಅಮರನಿಗೆ ಪ್ರೇಮಾಳನ್ನು ನೋಡುವ ಅದಮ್ಯ ಹಂಬಲ ಪರಾಕಾಷ್ಠೆಗೆ ತಲುಪಿದ್ದು, ೨೦ನೇ ವರ್ಷದ ಪುನರ್ಮಿಲನದ ಕಾರ್ಯಕ್ರಮದ ಸಲುವಾಗಿ, ಪುಣೆಯಿಂದ ಬೆಂಗಳೂರಿಗೆ ರೈಲಿನಲ್ಲಿ, ಬೆಂಗಳೂರಿನಿಂದ ಮೈಸೂರಿಗೆ ಬಸ್ಸಿನಲ್ಲಿ ಪಯಣಿಸಿ, ಬಸ್ ನಿಲ್ದಾಣದಿಂದ ಹೊಟೇಲಿಗೆ ಆಟೋದಲ್ಲಿ ಬಂದಿಳಿದ ಆ ಒಂದು ದಿನದ ಸುದೀರ್ಘ ಪಯಣದಲ್ಲಿ. 

ಪ್ರೇಮಾ ಬರುತ್ತಾಳೆ, ಬರುವುದಿಲ್ಲ ಎನ್ನುವ ಚಡಪಡಿಕೆ; ಜೊತೆಗೆ ಅವಳ ಗಂಡನೂ ಬರಬಹುದು, ಬರಲಿಕ್ಕಿಲ್ಲ ಎನ್ನುವ ಗೊಂದಲ. ಗಂಡ ಬರದಿದ್ದರೆ ಒಳ್ಳೆಯದು, ಅವಳ ಜೊತೆ ಕೂತು ನಾಕು ಮಾತಾದರೂ ಆಡಲು ಸಮಯ ಸಿಕ್ಕಬಹುದು ಎಂಬ ಹಂಬಲ. ಆದರೆ ಅಮೇರಿಕದಲ್ಲಿ ಈಗ ರಜೆಯ ಸಮಯವಲ್ಲವೇ, ಅವಳು ಕುಟುಂಬ ಸಮೇತ ಬಂದೇ ಬರುತ್ತಾಳೆ ಎನ್ನುವ ತರ್ಕ. ಅವಳಿಗೆ ಬಹುಷಃ ಇಬ್ಬರು ಮಕ್ಕಳಿರಬಹುದು. ತನ್ನ ಮಗಳಿಗಿಂತ ದೊಡ್ಡ ಮಕ್ಕಳಿರುತ್ತಾರೆ, ಏಕೆಂದರೆ ಅವಳಿಗೆ ತನಗಿಂತ ಮೊದಲು ಮದುವೆ ಆಯಿತಲ್ಲವೇ?  ಸ್ವಲ್ಪ ದಪ್ಪಗಾಗಿರಬಹುದು, ಇಲ್ಲ, ಅಮೇರಿಕದಲ್ಲಿರುವವರಿಗೆ ದೇಹದ ಬಗ್ಗೆ ತುಂಬ ಕಾಳಜಿಯಂತೆ, ಮೊದಲಿಗಿಂತ ಸಪೂರವಾಗಿರಬಹುದು ಎಂದೆಲ್ಲ ಪ್ರಯಾಣದ ತುಂಬ ಯೋಚಿಸಿದ. 

ಪ್ರೇಮಾ ಎದುರಾದಾಗ ಯಾವ ಮಾತಿನಿಂದ ಶುರು ಮಾಡುವುದು, ಯಾವ ಯಾವ ಹಳೆಯ ವಿಷಯಗಳ ಬಗ್ಗೆ ಮಾತಾಡುವುದು ಎಂದು ಮನದಲ್ಲೇ ಪಟ್ಟಿ ಮಾಡಿಕೊಂಡ. ಕಾಲೇಜಿನಲ್ಲಿರುವಾಗ ಇದ್ದ ತನ್ನ ದಟ್ಟ ಕಪ್ಪು ಕೂದಲು ಬಹಳಷ್ಟು ಮಾಯವಾಗಿ ಉಳಿದ ಅರೆಬಕ್ಕ ತಲೆಯ ಬಗ್ಗೆ ಕಸಿವಿಸಿಯಾಯಿತು. ನಿಯಮಿತವಾಗಿ ವ್ಯಾಯಾಮ ಮಾಡಿದ್ದರೆ ಇಷ್ಟು ಹೊಟ್ಟೆ ಬರುತ್ತಿರಲಿಲ್ಲ ಎಂದು ಮೊಟ್ಟಮೊದಲ ಬಾರಿಗೆ ತನ್ನ ಹೊಟ್ಟೆಯ ಬಗ್ಗೆ ಬೇಸರ ಮೂಡಿತು.

ಅವಳಿಗೆ ತನ್ನ ಹೆಂಡತಿಯನ್ನು ಹೇಗೆ ಪರಿಚಯಿಸುವುದು, ಅದಕ್ಕಿಂತ ಹೆಚ್ಚಾಗಿ ತನ್ನ ಮಗಳ ಹೆಸರು ಕೂಡ `ಪ್ರೇಮಾ` ಎಂದು ಹೇಗೆ ಹೇಳುವುದು ಎನ್ನುವ ಪ್ರಶ್ನೆಗಳಿಗೆ ಇಡೀ ಪ್ರಯಾಣದಲ್ಲಿ ಉತ್ತರಗಳೇ ಸಿಗಲಿಲ್ಲ. ಹಲವಾರು ಸನ್ನಿವೇಷಗಳನ್ನು ತಾನೇ ಸೃಷ್ಟಿಸಿಕೊಂಡು ಅದನ್ನು ಹೇಗೆ ನಿಭಾಯಿಸುವುಸುದು ಎಂದು ಪ್ರಯಾಣದ ಪೂರ್ತಿ ನಾನಾ ರೀತಿಯ ಲೆಖ್ಖಾಚಾರ ಹಾಕುತ್ತಲೇ ಇದ್ದ. ಹೆಂಡತಿ ಮತ್ತು ತಾಯಿಯ ಮಾತನ್ನು ಕೇಳಿ ಮಗಳಿಗೆ `ಪ್ರೇಮಾ` ಎನ್ನುವ ಹೆಸರನ್ನು ಯಾವ ಕಾರಣಕ್ಕೂ ಇಡಲು ಬಿಡಬಾರದಿತ್ತು ಎಂದು ತನ್ನನ್ನೇ ಬಯ್ದುಕೊಂಡ. ಏನಾದರೂ ಕಾರಣ ಹೇಳಿ ಹೆಂಡತಿ ಮಗಳನ್ನು ಕರೆತರಬಾರದಿತ್ತು ಎಂದುಕೊಂಡ. ಹೊಟೇಲು ತಲುಪಿದರೂ ತನ್ನ ಸಮಸ್ಯೆಗೆ ಯಾವ ಸಮಂಜಸ ಉತ್ತರವೂ ದೊರಕದೇ, ಹೇಗೆ ಆಗುತ್ತೋ ಹಾಗೆ ಆಗಲಿ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡ. 

ಮೊದಲೇ ಬುಕ್ ಮಾಡಿರುವ ಹೋಟೀಲು ತಲುಪಿದಾಗ ಆಗಲೇ ಸಂಜೆ ಆಗಿತ್ತು. ಎಲ್ಲ ಕ್ಲಾಸ್‍ಮೇಟುಗಳೂ ಆಗಲೇ ಮುಖ್ಯ ಸಭಾಂಗಣಕ್ಕೆ ಹೋಗಿಯಾಗಿತ್ತು. ಹಾಗಾಗಿ ಅಮರನಿಗೆ ಯಾವ ಗೆಳೆಯರೂ ಸಿಗಲಿಲ್ಲ. 

ರೂಮಿಗೆ ಬಂದವರೇ ಸ್ನಾನ ಮಾಡಿ, `ಪುನರ್ಮಿಲನ`ಕ್ಕಾಗಿಯೇ ಖರೀದಿಸಿದ ಹೊಸ ಬಟ್ಟೆಗಳನ್ನು ಮೂವರೂ ಹಾಕಿಕೊಂಡರು. ಉಷಾ ಮದುವೆಯ ಮನೆಗೆ ಹೋಗುವವಳಂತೆ ಶೃಂಗಾರ ಮಾಡಿಕೊಂಡು ನಳನಳಿಸುತ್ತಿದ್ದಳು. ಎಂದೂ ಅಷ್ಟಾಗಿ ಹೊಗಳದ ಅಮರ `ಚೆನ್ನಾಗಿ ಕಾಣುತ್ತಿದ್ದೀಯಾ,` ಎಂದು ಹೆಂಡತಿಯನ್ನು ಹೊಗಳಿದ. ಮಗಳೂ ಚೆನ್ನಾಗಿ ಡ್ರೆಸ್ ಮಾಡಿದ್ದಳು, `ಸೋ ಕ್ಯೂಟ್,` ಎಂದು ಮಗಳ ಕೆನ್ನೆಗೆ ಮುತ್ತನಿಟ್ಟ. `ಏನು ಯಜಮಾನರು, ಇವತ್ತು ಭಾರೀ ಮೂಡಿನಲ್ಲಿ ಇರುವಂತಿದೆ!` ಎಂದು ಉಷಾ ತಮಾಷೆ ಮಾಡಿದಳು. ಮಗಳ ಮುಂದೆಯೇ ಹೆಂಡತಿಯ ಕೆನ್ನೆಗೂ ಒಂದು ಮುತ್ತನಿತ್ತ. ಮಗಳು ಖುಷಿಯಲ್ಲಿ ನಕ್ಕಳು. ಲಿಫ್ಟಿನಿಂದ ಇಳಿದು `ಪುನರ್ಮಿಲನ` ನಡೆಯುತ್ತಿರುವ ಹೊಟೀಲಿನ ಸಭಾಂಗಣದತ್ತ ಹೊರಡಲು ಹೊಟೇಲಿನ ಲಾಬಿಗೆ ಬಂದರು. 

ಹೆಂಡತಿ ಮಗಳನ್ನು ಹೊಟೇಲ್ ಲಾಬಿಯಲ್ಲಿ ಕೂರಲು ಹೇಳಿ, ಸಭಾಂಗಣ ಎಲ್ಲಿದೆ ಎಂದು ರೆಸೆಪ್ಷೆನ್ನಿನಲ್ಲಿ ಕೇಳಿಕೊಂಡು ಬರುತ್ತೇನೆ ಎಂದು ಅಮರ ರಿಸೆಪ್ಷನ್ನಿಗೆ ಬಂದು, ಅಲ್ಲಿರುವ ಹುಡುಗನಿಗೆ ಕೇಳಿದ.

ಅಷ್ಟರಲ್ಲಿ ಹಿಂದಿನಿಂದ ಯಾರೋ ಬಂದು ಅವನ ಕಣ್ಣು ಮುಚ್ಚಿದರು. ಯಾರು ಎಂದು ಅಮರನಿಗೆ ಗೊತ್ತಾಗದಿದ್ದರೂ ಬಳೆಗಳ ಸದ್ದು ಮತ್ತು ಪರ್ಫ್ಯೂಮಿನ ವಾಸನೆಯಿಂದ ಹೆಣ್ಣು ಎನ್ನುವುದಂತೂ ಗೊತ್ತಾಯಿತು. ಬಂದಿದ್ದು ರಿ-ಯುನಿಯನ್ನಿಗೆ ತಾನೆ, ತನಗೆ ಪ್ರೇಮಾಳನ್ನು ಬಿಟ್ಟರೆ ಇನ್ಯಾರೂ ಸನಿಹದ ಗೆಳತಿಯರಿರಲಿಲ್ಲ. ಕಾಲೇಜಿನಲ್ಲಿ ಇರುವಾಗ ಒಂದೇ ಒಂದು ದಿನವೂ ಸಲಿಗೆಯಿಂದ ಭುಜವನ್ನೂ ತಟ್ಟಿರದ ಹುಡುಗಿ, ಈಗ ಹಿಂದಿನಿಂದ ಬಂದು ಕಣ್ಣು ಮುಚ್ಚುವುದೆಂದರೆ!  ಅವಳು ಪ್ರೇಮಾ ಅಲ್ಲದಿದ್ದರೆ ಅಥವಾ ತನ್ನನ್ನು ಇನ್ನಾರೋ ಎಂದು ಅಂದುಕೊಂಡು ಬೇರೆ ಯಾರೋ ಕ್ಲಾಸ್‍ಮೇಟ್ ಹುಡುಗಿ ತನ್ನ ಕಣ್ಣು ಮುಚ್ಚಿದ್ದರೆ ಎಂದು ಅಂದುಕೊಂಡು, `ಯಾರು? ಹು ಈಸ್ ಇಟ್?` ಎಂದ. 

ಅತ್ತ ಕಡೆಯಿಂದ ಯಾವ ಉತ್ತರವೂ ಬರಲಿಲ್ಲ. ಅಮರನ ಕಣ್ಣಿನ ಮೇಲಿನ ಬಿಗಿತ ಹೆಚ್ಚಾಯಿತು. ಅಮರನಿಗೆ ಬೇರೆ ದಾರಿಯೇ ಇರಲಿಲ್ಲ, `ಪ್ರೇಮಾ!` ಎಂದ. ಕಣ್ಣು ಕಟ್ಟಿದ್ದ ಕೈ ಸಡಿಲಿತು. ತಿರುಗಿ ನೋಡಿದರೆ, ಸಾಕ್ಷಾತ್ ಪ್ರೇಮಾ ಸಕಲ ಶೃಂಗಾರದೊಂದಿಗೆ ಸೀರೆಯುಟ್ಟು ಮುಖದಲ್ಲಿ ಮಿಲಿಯನ್ ವ್ಯಾಟ್ ಬೆಳಕು ಸೂಸಿ ನಗುತ್ತಿದ್ದಳು. 

`ನನ್ನನ್ನು ಮರೆತೇ ಬಿಟ್ಟಿದ್ದೀಯೇನೋ ಅಂದುಕೊಂಡಿದ್ದೆ, ಪರವಾಗಿಲ್ಲ, ಇನ್ನೂ ನನ್ನ ನೆನಪಿದೆಯಲ್ಲ,` ಎಂದು ಪಾಶ್ಯಾತ್ಯ ದೇಶದಲ್ಲಿ ಭೇಟಿಯಾದಾಗ ಮಾಡುವಂತೆ ಅಮರನನ್ನು ತಬ್ಬಿಕೊಂಡು ಕೆನ್ನೆಯ ಹತ್ತಿರ ಕೆನ್ನೆ ತಂದು ಹಿಂದೆ ಸರಿದಳು. ಅವಳ ತಾಕಿಯೂ ತಾಕದ ದೇಹ, ಕೆನ್ನೆ ಮತ್ತು ಕೇಶರಾಶಿಗೆ ಒಂದು ಕ್ಷಣ ಅಮರ ಮೈಮರೆತ; ಅವಳ ಮೈಗಂಧ ಮೂಗಿನಿಂದ ಹೊರಬಿಡುವ ಮನಸ್ಸಿಲ್ಲದೇ ಉಸಿರು ಹಿಡಿದೇ ನಿಂತ. ಕಾಲೇಜಿನಲ್ಲಿ ಒಟ್ಟಿಗಿದ್ದ ಐದೂವರೆ ವರ್ಷದಲ್ಲಿ ಒಂದೇ ಒಂದು ಸಲವೂ ಇಷ್ಟು ಸನಿಹ ಅವಳ ಹತ್ತಿರ ಬಂದಿರಲಿಲ್ಲ. 

ಲಾಬಿಯಲ್ಲಿ ಮಗಳ ಜೊತೆ ಏನೋ ಮಾತಾಡುತ್ತ ಕುಳಿತ ಉಷಾ ಇದನ್ನು ಗಮನಿಸದೇ ಇರಲಿಲ್ಲ.

`ಹೇಗಿದ್ದೀಯಾ? ಯಾವಾಗ ಬಂದೆ? ನೀನು ಬರುತ್ತೀಯೋ ಇಲ್ಲವೋ ಅಂದುಕೊಂಡಿದ್ದೆ,` ಎಂದ.

`ನಾನು ಅಷ್ಟೇ. ನೀನಂತೂ ಯಾರ ಜೊತೆನಲ್ಲೂ ಸಂಪರ್ಕದಲ್ಲಿಲ್ಲ, ನೀನು ಬರುವುದಿಲ್ಲ ಎಂದೇ ತುಂಬ ಜನ ಹೇಳಿದ್ದರು. ಇನ್ ಫ್ಯಾಕ್ಟ್, ನಿನ್ನನ್ನು ನೋಡಿ ನನಗೆ ಆಶ್ಯರ್ಯವೇ ಆಯಿತು. ಏನೋ ಎಷ್ಟು ವರ್ಷವಾಯಿತೋ? ಎಷ್ಟೊಂದು ಮಾತಾಡಲು ಇದೆಯೋ?` ಎಂದಳು.

`ನೀನೊಬ್ಬಳೇ ಬಂದಿರುವೆಯೋ, ಇಲ್ಲಾ ಎಲ್ಲರೂ ಬಂದ್ದಿದ್ದೀರೋ?` ಎಂದು ಕೇಳಿದ.

`ಎಲ್ಲಾ ಬಂದ್ದಿದ್ದೇವೆ, ನೀನು?` ಎಂದಳು.

ಅದೇ ಸಮಯಕ್ಕೆ ಅವರತ್ತಲೇ ನಡೆದುಕೊಂಡು ಬರುತ್ತಿದ್ದ ಗಂಡಸು ಮತ್ತು ಹುಡುಗನನ್ನು. 

`ಇವನು ನನ್ನ ಗಂಡ ರಾಜ್ ಮತ್ತು ಒಬ್ಬನೇ ಮಗ` ಎಂದು ಪರಿಚಯಿಸಿ, ಗಂಡನಿಗೆ, `ಇವನು ನನ್ನ ಕ್ಲಾಸ್‍ಮೇಟ್` ಎಂದು ಪರಸ್ಪರ ಪರಿಚಯ ಮಾಡಿದಳು. 

ಅಮರ ಕೈಕುಲುಕಿ, `ಹಾಯ್, ನಾನು ಅಮರ ಚರಂತಿಮಠ, ನೈಸ್ ಮೀಟಿಂಗ್ ಯು, ರಾಜಶೇಖರ ಕೃಷ್ಣೇಗೌಡ,` ಎಂದ. ಅಮರನಿಗೆ ತನ್ನ ಗಂಡನ ಪೂರ್ತಿ ಹೆಸರು ನನಪಿರುವುದನ್ನು ಕೇಳಿ ಪ್ರೇಮಾ ಹುಬ್ಬೇರಿಸಿ ಅಮರನತ್ತ ನೋಡಿದಳು. 

ರಾಜಶೇಖರ ಅವಕ್ಕಾಗಿ ಒಂದು ಕ್ಷಣ ಗಲಿಬಿಲಿಗೊಂಡಂತೆ ಕಂಡ, ತಕ್ಷಣವೇ ಸಾವರಿಸಿಕೊಂಡು, `ಹಾಯ್, ನೈಸ್ ಮೀಟಿಂಗ್ ಯು, ಅಮರ್` ಎಂದ. ಅಮರ ಅದನ್ನು ಗಮನಿಸದೇ ಇರಲಿಲ್ಲ.

ಲಾಬಿಯಲ್ಲಿ ಕೂತ ಉಷಾ ಈಗ ಮೈಯೆಲ್ಲ ಕಣ್ಣಾಗಿ ರಿಸೆಪ್ಷನ್ನಿನಲ್ಲಿ ನಡೆಯುತ್ತಿರುವುದನ್ನೆಲ್ಲ ನೋಡುತ್ತಿದ್ದಳು; ತನಗಿಂತ ವಯಸ್ಸಾದ ಹೆಂಗಸೊಂದು ಸಕಲ ಅಲಂಕಾರ ಭೂಷಿತೆಯಾಗಿ ಚಿಕ್ಕ ಹುಡುಗಿಯಂತೆ ಹಿಂದಿನಿಂದ ತನ್ನ ಗಂಡನ ಕಣ್ಣು ಮುಚ್ಚುವುದು, ಇಬ್ಬರೂ ತಬ್ಬಿಕೊಳ್ಳುವುದು, ಕಿಲಕಿಲ ನಗುವುದನ್ನು ನೋಡುತ್ತಲೇ ಇದ್ದಳು. ಅಮರ ಉಷಾಳನ್ನು ಕರೆದ. ಉಷಾ ಗಂಟು ಮುಖ ಹಾಕಿಕೊಂಡು ಮಗಳನ್ನು ಕರೆದುಕೊಂಡು ರಿಸೆಪ್ಷೆನ್ನಿಗೆ ಬಂದಳು. 

ಪ್ರೇಮಾಳಿಗೆ ತನ್ನ ಹೆಂಡತಿಯ ಪರಿಚಯ ಮಾಡಿಸಿದ, `ಇವಳು ನನ್ನ ಹೆಂಡತಿ, ಉಷಾ, ಮತ್ತು ಮಗಳು ಪ್ರೇಮಾ,` ಎಂದ. ಪ್ರೇಮಾಳ ಮುಖದಲ್ಲಿ ಒಂದು ತೆಳುವಾದ ನಗು ಮೂಡಿ, ಅಮರನತ್ತ ಓರೆನೋಟ ಬೀರಿ, ಉಷಾಳ ಕೈ ಕುಲುಕಿದಳು. ಉಷಾ ಕೂಡ ಕೈಕುಲುಕಿ (ಕೃತಕವಾಗಿ) ಮುಗುಳ್ನಕ್ಕಳು. ಅವಳ ಆತ್ಮವಿಶ್ವಾಸ, ಚೆಲುವು, ನಿಲುವು, ಶೃಂಗಾರಗಳನ್ನು ನೋಡಿ ಈರ್ಷೆಯಾದರೂ ತೋರಿಸಿಕೊಳ್ಳಲಿಲ್ಲ.  

ಅಮರ ಹೆಂಡತಿಯತ್ತ ತಿರುಗಿ, `ಇವರು ರಾಜಶೇಖರ ಕೃಷ್ಣೇಗೌಡ, ಅಮೇರಿಕದಲ್ಲಿ ಡಾಕ್ಟರು, ಇವಳು ಅವರ ಹೆಂಡತಿ, ನನ್ನ ಕ್ಲಾಸ್-ಮೇಟ್,` ಎಂದ. 

ಪ್ರೇಮಾ ಕೈ ಚಾಚಿ ಉಷಾಳ ಕೈ ಕುಲುಕಿ ಹತ್ತಿರ ಬಂದು ತಬ್ಬಿಕೊಂಡು, ‘ನಾನು ಪ್ರೇಮಾ,’ ಎಂದಳು. 

ಇಬ್ಬರು `ಪ್ರೇಮಾ`ರ ನಡುವೆ ನಿಂತ ಉಷಾಳ ಮುಖದ ಬಣ್ಣವೇ ಬದಲಾಯಿತು. ಒಂದು ಕ್ಷಣ ತನ್ನ ಮಗಳು ‘ಪ್ರೇಮಾ’ನ್ನೂ ಇನ್ನೊಂದು ಕ್ಷಣ ಅಮರನ ಕ್ಲಾಸ್‍ಮೇಟ್ ‘ಪ್ರೇಮಾ’ಳನ್ನೂ ನೋಡಿದಳು. 

ನಂತರ ಏನು ಮಾಡುವುದೆಂದು ತೋಚದೇ, ತನಗಾದ ಆಘಾತವನ್ನು ಮುಚ್ಚಿಕೊಳ್ಳಲು ಕಣ್ಣು ತಿರುಗಿಸಿದಾಗ, ಅವಳ ದೃಷ್ಟಿ ಅಪ್ಪನ ಕೈಹಿಡಿದು ನಿಂತಿದ್ದ ಪ್ರೇಮಾಳ ಮಗನ ಮೇಲೆ ಬಿತ್ತು. ತನ್ನನ್ನು ಸ್ಥಿಮಿತಕ್ಕೆ ತಂದುಕೊಳ್ಳಲು, ಒಣಗಿಹೋದ ತುಟಿಯಲ್ಲೇ ಹುಡುಗನ ಕೆನ್ನೆ ಸವರಿ `ಎಷ್ಟು ಕ್ಯೂಟಾಗಿದ್ದಾನೆ ನಿಮ್ಮ ಮಗ‘, ಎಂದು, ‘ಏನು ಮರಿ ನಿನ್ನ ಹೆಸರು?` ಎಂದು ಕೇಳಿದಳು. 

ಹುಡುಗ ಹೇಳಿದ, `ಅಮರ್`.

(ಮುಗಿಯಿತು)