ಹೀಗೊಂದು ಹರಟೆ

ನಮಸ್ಕಾರ ಅನಿವಾಸಿ ಬಳಗಕ್ಕೆ. 
ಮೇ ಮಾಸ( ತಿಂಗಳಿನ) ದಲ್ಲಿ ಕವೀಂದ್ರ ರವೀಂದ್ರರ ಜನುಮದಿನದ ಸಂಭ್ರಮಾಚರಣೆಯ ಜೊತೆಗೇ ಭಾರತದಲ್ಲಿ 'ತಾಯಂದಿರ ದಿನ' ದ ಸಡಗರವೂ. ಈ ಬಳಗದೆಲ್ಲ ತಾಯಂದಿರಿಗೂ, ತಾಯಂಥಕರಣದ ಎಲ್ಲ ಸಹೃದಯರಿಗೂ ಶುಭಾಶಯಗಳು. ಸುಜಲಾಂ ಸುಫಲಾಂ ವಂದೇ ಮಾತರಂ ಎಂದು ತಾಯ್ನಾಡಿಗೆ ವಂದಿಸುತ್ತ ' ಜಡೆಯಾಚೆ ಮೊಗದಿರುಹಿಯೂ' ಜಗವನ್ನೆಲ್ಲ ಪೊರೆಯುತ್ತಿರುವ ಜಗನ್ಮಾತೆಗೆ ಮಣಿಯುತ್ತ ನನ್ನದೊಂದು ಹಳೆಯ ಬರಹವನ್ನು ಹಂಚಿಕೊಳ್ಳುತ್ತಿರುವೆ..

~ ಸಂಪಾದಕಿ.

ಹೆರಳು – ಮಾರಿ. 

ಏನಪಾ ಇದು ಅಂತ ನೀವು ತಲಿ ತುರಸಕೊಳ್ಳೂದರಾಗೇ  ನಾನೇ ಹೇಳಿಬಿಡತೀನಿ. ನಮ್ಮ ಉತ್ತರ ಕರ್ನಾಟಕದ ಮಂದಿಗೆ ಈ ಪದ ಚಿರಪರಿಚಿತ. ಇನ್ನ ಉಳದವರಿಗೆ ಹೆರಳು ಗೊತ್ತಿರತದ. ಮಾರಿ ತಿಳೀಲಿಕ್ಕಿಲ್ಲ. ಆದ್ರೂ ಇಲ್ಲಿನ ಸದಸ್ಯರೆಲ್ಲ ಬೇಂದ್ರೆ ಅಜ್ಜನ ‘ ಮುಗಿಲ ಮಾರಿಗೆ ರಾಗರತಿಯ’ ಕೇಳೇ ಇರತೀರಿ. ಹೂಂ.. ನಾನೂ ಅದೇ ಮಾರಿ ಅಂದ್ರ ಮುಖದ ಬಗ್ಗೆನೇ ಹೇಳುತ್ತಿರುವುದು.  

ಈ ‘ ಹೆರಳು – ಮಾರಿ’ ದು ಒಂದು ದೊಡ್ಡ ಸುದ್ದಿ. ಮುಂಜಾನಿ ಆಗತಿದ್ದ ಹಂಗೇ “ ಕ್ಯಾಮಾರಿ ಮಾಡಕೊಂಡು ಕೂಡಬ್ಯಾಡ್ರಿ. ಲಗೂ ಲಗೂ ಹೆರಳು-ಮಾರಿ ಮಾಡಕೋರಿ” ಅನ್ನಾಕಿ ನಮ್ಮಾಯಿ. ಮಧ್ಯಾಹ್ನ 4 ಆಯಿತಿಲ್ಲೋ “ ಮೂರುಸಂಜಿ ಆಗಲಿಕ್ಕೆ ಬಂತು, ಎದ್ದು ಹೆರಳು-ಮಾರಿ ಮಾಡಕೋರಿನ್ನ” ಅನ್ನಾಕಿ. ಹೀಂಗs ಮುಂಜಾನೆದ್ರ ಹೆರಳು-ಮಾರಿ, ಸಂಜಿ ಆದ್ರ ಹೆರಳು-ಮಾರಿ, ಹೊರಗ ಹೊಂಟ್ರ ಹೆರಳು-ಮಾರಿ, ಯಾರರೇ ಮನಿಗೆ ಬರತಾರಂದ್ರ ಹೆರಳು-ಮಾರಿ.. ಹೆರಳು-ಮಾರಿ ಸಂಭ್ರಮವೇ ಸಂಭ್ರಮ.

ಸಣ್ಣವರಿದ್ದಾಗ ಅಮ್ಮನೋ, ಮಾಮಿಯೋ, ಮಾಂಶಿಯೋ ಯಾರೋ ಒಬ್ಬರು ಜಿಪುಣತನ ಮಾಡದೇ ಛಂದಾಗಿ ಖೊಬ್ರಿ ಎಣ್ಣಿ ಹಚ್ಚಿ, ಹಣಗೀಲೇ ತೀಡಿ ತೀಡಿ ಹಿಕ್ಕಿ ಬಿಗತಾನ ಬಿಗದು ಎರಡು ಹೆರಳು ಹಾಕಿ ರಿಬ್ಬನ್ನು ಕಟ್ಟಿದರಂದ್ರ ಎಂಥ ಗಾಳಿಗೂ ಆ ಕೂದಲನ್ನ ಹಾರಾಡಿಸೋ ಶಕ್ತಿ ಇರತಿರಲಿಲ್ಲ. ಮುಂಗುರುಳು- ಪಿಂಗುರುಳು, ಪುಡಿಗೂದಲು ಎಲ್ಲ ಮಾಯ ಆಗಿಬಿಟ್ಟಿರತಿದ್ವು. ಎಷ್ಟೋ ಸಲ ಕುತಿಗಿ ಸೈತ ಅಲ್ಲಾಡಿಸಲಿಕ್ಕೆ ಬರತಿರಲಿಲ್ಲ. ಹಿಂತಲೆಯ ಕೂದಲು ಜಗ್ಗಿ ಗುಳ್ಳೆಗಳೆದ್ದು ಬಿಡಬೇಕು ಹಂಗ ಹೆರಳು ಹಾಕಿರತಿದ್ರು. “ ಮ್ಯಾಲ ಕಟ್ಟಬ್ಯಾಡ, ಕೆಳಗೇ ಬಿಡು, ರಿಬ್ಬನ್ ನಾಗ 4 ಅಲ್ಲ 6 ಹೂವು ಮಾಡು, ಅಷ್ಟ ಬಿಗಿ ಬ್ಯಾಡ ಸ್ವಲ್ಪ ಸಡಿಲ ಹಾಕು” ಅಂತೆಲ್ಲ ನಾವು ಏನು ಹೇಳಿದರೂ ‘ಹಾಂ ಹೂಂ’ ಸಹಿತ ಅನ್ನದೇ ತಮ್ಮದೇ ಮನಮಾನಿ ಮಾಡತಿದ್ರು. “ ನಿಮಗೇನ ತಿಳೀತದ? ನೀವು ಹೇಳಿದ್ಹಾಂಗ ಮಾಡಿದ್ರ ಮುಗೀತು. ತಲ್ಯಾಗ ಎರಡು ಕೂದಲ ಉಳ್ಯಂಗಿಲ್ಲ ಆಮ್ಯಾಲೆ” ಅಂತ ಹೆದರಸತಿದ್ರು. ಬಾಬ್ ಕಟ್, ಪೋನಿ ಟೇಲ್, ಸ್ಟೆಪ್ ಕಟ್ ಗಳಾಗಲಿ, ಶಾಂಪೂ ಮಾಡಿಕೊಂಡು ಸಿಲ್ಕಿ ಸಿಲ್ಕಿ ಕೂದಲಾ ಹಾರಾಡಿಸೂದಾಗಲಿ, ಬೆನ್ನಹಿಂದ ಕೂದಲ ಹರವಿಕೊಂಡು ಅಡ್ಡಾಡೂದಾಗಲಿ, ಮುಂಗುರುಳು ತೀಡಿಕೊಳ್ಳೂದಾಗಲಿ ಬಿಲ್ಕುಲ್ ಮಾಡೂಹಂಗಿರಲಿಲ್ರೀ.
ಒಮ್ಮೆ ಯಾರೋ ತಿರುಪತಿಗೆ ಹೋಗಿದ್ವಿ ಅಂತ ಪ್ರಸಾದದ ಲಾಡು ಕೊಡ್ಲಿಕ್ಕೆ ಬಂದಿದ್ದರು. ಅವರು ಹಂಗs ಮಾತಾಡಕೋತ ಅವರ ಮನೆಯಾಗ ತಿರುಪತಿಗೆ ಹೋದರೆ ಹೆಣ್ಣು ಮಕ್ಕಳು ಗಂಡಸರು ಅನ್ನಲಾರದೆ ಎಲ್ಲಾರು ಮುಡಿ ಒಪ್ಪಿಸೋ ಪದ್ಧತಿ ಅದ ತಮ್ಮ ಮನ್ಯಾಗ ಅಂತ ಹೇಳುತ್ತಿದ್ದರು. ಅವರು ಹೋದಮೇಲೆ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದ ನನ್ನ ಮಗ “ ನೀನೋ! ನಿನ್ನ ವೆಂಕಪ್ಪನೋ!” ಎಂದು ನಗೆಯಾಡಿ “ ಏನೇ ಅನ್ನು ಅವನ ಲಡ್ಡು ಮಾತ್ರ ಮಸ್ತ ಇರ್ತಾವ” ಅಂತ ನನಗೆ ಅಣಕಿಸಿ ಉಂಡಿ ಮೆದ್ದು ಎದ್ದು ಹೋದ. ಆಮೇಲೆ ‘ಓ ಮೈ ಗಾಡ್’ ಸಿನಿಮಾದಾಗ ಇದೇ ಮುಡಿ ಕೊಡುವ ಪದ್ಧತಿಯ ಬಗ್ಗೆ ಪರೇಶ್ ರಾವಲ್ ‘ಮುಂಜಾನೆದ್ದು ಬಾಗಲ ತೆಗೆದು ಕೂಡಲೇ ರಾಶಿ ರಾಶಿ ಕೂದಲು ನಿಮ್ಮ ಮನೆ ಮುಂದೆ ಹರಡಿದ್ದರೆ ನಿಮಗೆ ಖುಷಿ ಅನಿಸುವುದೇ’ ಎಂಬರ್ಥ ಬರುವ ಮಾತಿನ ಮೂಲಕ ವ್ಯಂಗ್ಯವಾಡುವ ಸೀನ್ ಅದ. ಆಗಾಗ ಹೌದು, ಯಾಕಿರಬಹುದು ಇಂಥ ಪದ್ಧತಿ ಅಂತ ಯೋಚಿಸಿದಾಗಲೆಲ್ಲ ಅನ್ನಿಸುವುದಿಷ್ಟೇ. ಮನುಷ್ಯ ಅಥವಾ ಭಕ್ತ ಅಲ್ಲಿ ಮುಡಿ ಕೊಡುತ್ತಿರುವುದು ಬರಿ ತನ್ನ ಕೂದಲಿನ ರಾಶಿಯನ್ನಲ್ಲ, ತನ್ನ ರೂಪವನ್ನು.. ಸೌಂದರ್ಯವನ್ನು. ಒಂದರ್ಥದಾಗ ತನ್ನತನವನ್ನು, ತನ್ನ ಅಸ್ತಿತ್ವವನ್ನು ಅಂತ. ನೋಡಿ ಕೂದಲು ದೇಹದ ನಿರ್ಜೀವವಾದ ಒಂದು ಭಾಗ. ಆದರೆ ಅದು ನಮಗೆ ಕೊಡುವ ಖುಷಿ, ಆತ್ಮವಿಶ್ವಾಸ, ಹೆಮ್ಮೆಗಳು ಅಷ್ಟಿಷ್ಟಲ್ಲ. ಕನ್ನಡಿ ಮುಂದೆ ನಿಂತು ಕೂದಲು ತೀಡದ, ಮುಂಗುರುಳನ್ನು ಬೆರಳಲ್ಲಿ ಸುತ್ತದ ಒಂದೇ ಒಂದು ಮಾನವ ಜೀವಿಯನ್ನು ತೋರಿಸಿ ಬಿಡಿ ಸಾಕು. ಹುಡುಗಿಯರಿಗಂತೂ ಅವರ ಜಡೆ, ಕೂದಲು ಸರ್ವಸ್ವ. ಹಂಗಂತ ಹುಡುಗರೇನೂ ಕಮ್ಮಿ? ದಿನಕ್ಕ ನೂರು ಸಲ ಹೋಗುತ್ತಾ ಬರುತ್ತಾ ಕನ್ನಡಿ ಮುಂದೆ ನಿಂದ್ರೋದೇನು? ಒಮ್ಮೆ ಕೈಯಿಂದ, ಒಮ್ಮೆ ಬ್ರಷ್ ನಿಂದ, ಒಮ್ಮೆ ಪಾಕೆಟ್ ನ ಪುಟ್ಟ ಬಾಚಣಿಕೆಯಿಂದ ಕ್ರಾಪ್ ತೀಡಿದ್ದೇ ತೀಡಿದ್ದು. ಹಿಂಗ ಕೂದಲು ಸೌಂದರ್ಯದ ಪ್ರತೀಕ. ಅದನ್ನೇ ತೆಗೆದು ದೇವನಡಿ ಇಡುವುದು ನಾವು ನೀವು ಚ್ಯಾಷ್ಟಿ ಮಾಡಿ ನಕ್ಕಷ್ಟು ಸುಲಭದ ಕೆಲಸ ಏನಲ್ಲ.

ಈ ಕೂದಲಿನ ರಗಳೆ ಇರಲಿಲ್ಲ ಅಂದರೆ 108 ತರದ ಹೇರ್ ಆಯಿಲ್ ಗಳು, ಸಾವಿರಾರು ತರದ ಶಾಂಪೂ, ಕಂಡಿಷನರ್, ಹೇರ್ ಜೆಲ್,ಹೇರ್ ಕ್ರೀಮ್, ಹೇರ್ ಡೈಗಳು ಇತ್ಯಾದಿಗಳನ್ನೆಲ್ಲ ಉತ್ಪಾದಿಸುವ ಕಾರ್ಖಾನೆಗಳು, ಅವುಗಳ ಮೂಲಕ ಅನ್ನ ಸಂಪಾದಿಸುವ ಲಕ್ಷಾಂತರ ಕುಟುಂಬಗಳ ಗತಿ ಏನಾಗುತ್ತಿತ್ತು? ಸಲೂನ್ ಗಳು, ಹೇರ್ ಹೆಡ್ ಮಸಾಜ್ ಸೆಂಟರ್ ಗಳು, ಹೇರ್ ಸ್ಪಾ, ಬ್ಯೂಟಿ ಪಾರ್ಲರ್ ಗಳು ಇವುಗಳೆಲ್ಲ ಬಾಗಿಲು ಬಂದ್ ಮಾಡಿಕೊಂಡು ಹೋಗಬೇಕಾಗುತ್ತಿತ್ತು. ನಾನಾ ತರದ ಹೂವುಗಳು, ಕಸ್ತೂರಿದವನಗಳು, ಕ್ಯಾದಿಗೆಗಳು, ಆಭರಣಗಳು, ನೂರಾರು ತರದ ಫ್ಯಾಶನೇಬಲ್ hair accessories, ಕ್ಲಿಪ್ಸ್, ರಬ್ಬರ್ ಬ್ಯಾಂಡ್, ಹೇರ್ ಪಿನ್ ಕೇಳುವವರಿಲ್ಲದೆ ಅನಾಥವಾಗುತ್ತಿದ್ದವು. ಕವಿಗಳಿಗೆ ಬರೆಯಲು ಮುಖ್ಯವಾದ ಒಂದು ವಿಷಯ ಕಮ್ಮಿಯಾಗುತ್ತಿತ್ತು. ನಲ್ಲ ಬಂದು ಹೂ ಮುಡಿಸಿ ನಲ್ಲೆಗೆ ಪ್ರೇಮ ನಿವೇದನೆ ಮಾಡಿಕೊಳ್ಳಲಾಗುತ್ತಿರಲಿಲ್ಲ. ಮೊಗ್ಗಿನ ಜಡೆ ಹೆಣೆಯುವವರ, ದಂಡೆ ಮಾಲೆ ಕಟ್ಟುವವರ ಕಸುಬಿಗೆ ಕಲ್ಲು ಬೀಳುತ್ತಿತ್ತು.
ಎಲ್ಲೆರೇ ಊಟ ತಿನಿಸಿನಲ್ಲಿ ಒಂದೆಳೆ ಕೂದಲು ಕಂಡರೆ ಕಸಿವಿಸಿ ಪಡ್ತೀವಿ. ಆದರೆ ಕೂದಲವಿಲ್ಲದ ಜೀವನ ಊಹಿಸಿಕೊಳ್ಳುವುದು ಕಷ್ಟ. ಈ ಕೇಶದ ಮಹಿಮೆ, ಸಾಮರ್ಥ್ಯ ಅಗಾಧವಾದದ್ದು. ಪುರಾಣ, ಇತಿಹಾಸಗಳು ಇದಕ್ಕೆ ಸಾಕ್ಷಿಯಾಗಿವೆ. ಸುರಗಂಗೆ ಭೂಲೋಕಕ್ಕೆ ಅವತರಿಸಬೇಕಾದರೆ ಶಿವನ ಜಡೆಯೇ ಬೇಕಾಯಿತು. ರಭಸದಿಂದ ಧಮ್ಮಿಕ್ಕುವ ಅವಳನ್ನು ತಡೆಯಲು ಶಿವನ ಜಡೆ ಇರದಿದ್ದರೆ ಆ ಮಂದಾಕಿನಿಯ ರಭಸದ ಸೊಕ್ಕಿಗೆ ಜಗತ್ತೇ ದಿಕ್ಕೇಡಿಯಾಗುತ್ತಿತ್ತೇನೋ? ಪಕ್ಷಕ್ಕೊಮ್ಮೆ ಬಿಳಿ ಪತ್ತಲ ನೇಯುವ ಹುಣ್ಣಿಮೆ ಹಸ್ತದ ಚಂದ್ರನಿಗೂ ಆಶ್ರಯ ಈ ಜಡೆಯೇ. ನಮ್ಮ ನಾಡಿನ ಅನೇಕ ಮನೆತನಗಳ ಕುಲದೈವವಾದ ವೀರಭದ್ರನೂ ಕೂಡ ಶಿವನ ಜಟೆಯಿಂದಲೇ ಹುಟ್ಟಿದವನೆಂಬ ಪ್ರತೀತಿ.

ಇನ್ನು ಮಹಾಭಾರತ ನಡೆದದ್ದೇ ದ್ರೌಪದಿಯ ಮುಡಿಯಿಂದ. ಅವಳು ಮುಡಿಬಿಚ್ಚಿದಾಗ ಭಾರತ ಆರಂಭವಾಯಿತು, ಕಟ್ಟಿದಾಗ ಮುಕ್ತಾಯವಾಯಿತೆಂಬ ಮಾತಿದೆ. ತನ್ನ ಕೂದಲಿಗೆ ಕೈ ಹಾಕಿ ಎಳೆದೊಯ್ದ ದುರುಳನ ಕರುಳ ಬಿಗಿದು ಅವನ ರಕ್ತದಿಂದ ಅದನ್ನುತೊಯ್ಯಿಸದೇ ತಾನು ಮುಡಿ ಕಟ್ಟಲಾರೆನೆಂಬ ದ್ರೌಪದಿಯ ಪ್ರತಿಜ್ಞೆಗೆ 18 ಅಕ್ಷೋಹಿಣಿ ಸೈನ್ಯದ ಭಾರತ ಯುದ್ಧವೇ ನಡೆಯಬೇಕಾಯಿತು. ಹೌದಲ್ಲವೇ? ದುಶ್ಯಾಸನ ಕೈ ಹಾಕಿದ್ದು ಬರೀ ಹೆಣ್ಣೋರ್ವಳ ತಲೆ ಕೂದಲಿಗೆ ಅಲ್ಲ, ಯುಗದ ಅಸ್ಮಿತೆಗೆ.. ಸ್ತ್ರೀತನದ ಗರಿಮೆಗೆ.. ಸಂಸ್ಕಾರ ಸಂಸ್ಕೃತಿಗಳ ಬುಡಕ್ಕೇ ಕೈ ಹಾಕಿದ್ದ. ಅದಕ್ಕೆಂದೇ ಅದಕ್ಕೆ ಸಾಕ್ಷಿಯಾದ, ನೇರವಾಗಿ ಪರೋಕ್ಷವಾಗಿ ಭಾಗಿಯಾದ ಎಲ್ಲರೂ ಅದಕ್ಕೆ ಬೆಲೆ ತೆರಲೇಬೇಕಾಯಿತು ಮಾಡಿದ್ದುಣ್ಣೋ ಮಹಾರಾಯ ಅನ್ನೋ ಹಂಗ.

ಧನನಂದನಿಂದ ಅಪಮಾನಕ್ಕೆ ಒಳಗಾದ ಆಚಾರ್ಯ ಚಾಣಕ್ಯನೂ ಸಹ ವೈರಿಯನ್ನು ಅಮೂಲಾಗ್ರವಾಗಿ ನಾಶ ಮಾಡದೆ ಶಿಖೆ ಕಟ್ಟಲಾರೆನೆಂದು ಪ್ರತಿಜ್ಞೆಗೈದು ಶಿಖೆಯ ಕೂದಲು ಬಿಟ್ಟದ್ದು. ಯಾವ ಅಸ್ತ್ರಗಳಿಗೂ ಇರದ ಮೊನಚನ್ನು ಅವನ ಶಿಖೆಯ ಕೇಶದಲ್ಲಿ ಕಂಡಿತು ಮನುಕುಲದ ಇತಿಹಾಸ. ಭಾರತದ ಇತಿಹಾಸಕ್ಕೆ ಚಂದ್ರಗುಪ್ತ ಮೌರ್ಯ, ಅಶೋಕರಂತಹ ಅರಸರ ಸುವರ್ಣ ಯುಗವನ್ನು ದಯಪಾಲಿಸಿದ್ದು ಇದೇ ಕೇಶ ಎಂದಾಯಿತಲ್ಲವೇ?

ಕೆಡುವ ಗಂಡರನ್ನು ತೊರೆದು ಚೆನ್ನಮಲ್ಲಿಕಾರ್ಜುನನತ್ತ ಮೊಗದಿರುಹಿ ಹೊರಟ ಅಕ್ಕಳನ್ನು ಸಂರಕ್ಷಿಸಿದ್ದೇ ಈ ಕೇಶ ರಾಶಿ. ಇನ್ನು ನಮ್ಮ ಸಾಹಿತ್ಯದಲ್ಲಿ ಈ ಜಡೆಯ, ಕೇಶರಾಶಿಯ, ಮುಂಗುರುಳಿನ ವರ್ಣನೆಗಳು ಹೇರಳವಾಗಿ ದೊರೆಯುತ್ತವೆ. ನೀಲವೇಣಿ, ನಾಗವೇಣಿ ಇತ್ಯಾದಿ ಹೆಸರುಗಳನ್ನು ಕೇಳಿದೊಡನೆ ತೊನೆದಾಡುವ ಜಡೆಗಳ ಚಿತ್ರ ಕಣ್ಮುಂದೆ ಬರುತ್ತದೆ. “ ಅವಳೊಮ್ಮೆ ಹರಳಕೆದರಿ ಕಪ್ಪು ಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ ದೂರದಲ್ಲಿ ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ” ಎಂದು ಮನದನ್ನೆಯನ್ನು ವರ್ಣಿಸುವ ಕೆ ಎಸ್ ಎನ್ “ನಾಗರ ಕುಚ್ಚಿನ ನಿಡು ಜಡೆಯವಳು ಈಕೆಯು ಬಂದುದು ಎಲ್ಲಿಂದ” ಎಂದು ಅಚ್ಚರಿ ಪಡುತ್ತಾರೆ. “ ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೇ ಸಿಂಗಾರ ಕಾಣದ ಹೆರಳು “ ಎಂದು ಅಕ್ಕಿ ಆರಿಸುವಾಗ ಕವಿತೆಯಲ್ಲಿ ಬಣ್ಣಿಸುತ್ತಾರೆ.

ಮುಂಗುರುಳು ದುಂಬಿಗಳಂತೆ ಅಂತಲೂ, ಯೆ ಜುಲ್ಫೆಹೈ ಜೈಸೆ ಕಾಂಧೋ ಪೆ ಬಾದಲ್ ಗಿರೆ ಹುವೆ’ ಅಂತಲೂ, ಉಡೆ ಜಬ್ ಜಬ್ ಜುಲ್ಫೆ ತೇರಿ ಎಂದೂ, ಯೆ ಗೇಸುವೋಂಕಿ ಘನಿ ಛಾವ್ ಹೈ ಮೇರೆ ಖಾತಿರ್ ಅಂತಲೂ ನೂರಾರು ಸಿನೆಮಾ ಹಾಡುಗಳು ಈಗಲೂ ರಸಿಕರ ಹೃದಯಕ್ಕ ಲಗ್ಗೆ ಹಾಕತಾವ. ಸರ್ ಜೋ ತೇರಾ ಚಕರಾಯೆ ಯಾ ದಿಲ್ ಡೂಬಾ ಜಾಯೆ ಆಜಾ ಪ್ಯಾರೆ ಪಾಸ್ ಹಮಾರೆ ಕಾಹೆ ಘಬರಾಯೆ ಅಂತ ಚಂಪಿ ( ಮಸಾಜ್) ಮಾಡತಾ ಹಾಡು ಹೇಳೋ ಜಾನಿ ವಾಕರ್ ನನ್ನು ಮೆಚ್ಚದವರೇ ಇಲ್ಲ.

ಅಣ್ಣ-ತಮ್ಮ, ಅಕ್ಕ ತಂಗಿಯರ ಜಗಳಕ್ಕ ಈ ಕೂದಲ ಬೇಕೇ ಬೇಕು ಅವರ ಜುಟ್ಟು ಇವರ ಕೈಯಾಗ ಇವರ ಜುಟ್ಟು ಅವರ ಕೈಯಾಗ ಅಂದಾಗನೇ ಅದು ಖರೇ ಸೋದರ ಪ್ರೇಮ. ಕೈ ಕೈ ಜಗಳಕ್ಕಿಂತ ಕೂದಲ ಕೂದಲ ಜಗಳಾನೇ ಬಹಳ ಆಗ್ಯಾವರಿ ನಾವು ಸಣ್ಣವರಿದ್ದಾಗ. ಈಗಲೂ ಅಷ್ಟೇ ಬಹಳ ಸಿಟ್ಟು ಬಂತಂದ್ರ ಮೈ ಹರಕೊಂಡು ಕೂದಲ ಕಿತ್ತುಕೊಳ್ಳುವಷ್ಟs ಸಂತಾಪ ಆಗುತದ್ರೀ.

ಇನ್ನೊಂದ ವಿಷಯ.. ಈ ಕೂದಲಾನ್ನ ಕತ್ತರಿಸೂದು ಅಂದ್ರ ಹೇರ್ ಕಟ್ ಎಲ್ಲಾ ಯಾವಾಗ ಬೇಕಂದ್ರ ಆವಾಗ ಮಾಡೂ ಹಂಗಿರಲಿಲ್ರೀ. ಹುಣ್ಣಿಮೆ, ಅಮವಾಸಿ, ಏಕಾದಶಿ, ದ್ವಾದಶಿ, ವೆಂಕಪ್ಪನ ಒಕ್ಕಲದವರಿದ್ರ ಶನಿವಾರ ಹೀಂಗ ದಿನಾ ನೋಡಿ ಸಲೂನ್ ಗೆ ಹೋಗಬೇಕಾಗಿತ್ತು. ಹೆಣ್ಣು ಮಕ್ಕಳಂತೂ ಕೂದಲಿಗೆ ಕತ್ತರಿನೇ ಹಚ್ಚೂ ಹಂಗಿರಲಿಲ್ರೀ. ಗಂಡಸರೂ ಸಹ ಹಜಾಮತಿ ಮಾಡಿಸಿಕೊಂಡು ಬಂದಮ್ಯಾಲೆ ಹಾಕಿದ್ದ ಬಟ್ಟೆ ಎಲ್ಲ ತೊಯ್ಯಿಸಿಟ್ಟು ಕೈಯಾಗ ಒಂದ ಹನಿ ಖೊಬ್ರಿ ಎಣ್ಣಿ ಹಾಕಿಸಿಕೊಂಡು ತಲಿಗೆ ಹಚಗೊಂಡು ಎರಡು ತಂಬಿಗೆ ಯಾರದರೇ ಕಡೆ ನೀರು ಹಾಕಿಸಿಕೊಂಡ ಮ್ಯಾಲೆನೇ ಗಂಗಾಳು – ತಂಬಿಗಿ ಮುಟ್ಟೂದು. ನಮ್ಮ ಮಕ್ಕಳಿಗೆ ಈಗ ಇವನ್ನೆಲ್ಲ ಹೇಳಿದ್ರ’ ಐಯ್’ ಅಂತ ಬಾಯಿ ತಕ್ಕೊಂಡು ನಂಬಲಾರದ ಕೂತಿರತಾರ ಕೇಳಕೋತ. ನಮಗೂ ಅಷ್ಟೇ. ತಲಿಗೆ ಹರಸಿ ಒಂದ್ಹನಿ ಎಣ್ಣಿ ಹಚಗೊಳ್ಳದ ತಲಿಸ್ನಾನ ಮಾಡೂ ಹಂಗಿರಲಿಲ್ಲ. ಒಣ ನೀರು ಹಾಕಿಕೊಳ್ಳೂದು ಅನಿಷ್ಟ ಅಂತ ನಂಬಿಕೆ. ದ್ವಾದಶಿ ಅಂತೂ ಅಪ್ಪಿ ತಪ್ಪಿನೂ ಎರಕೊಳ್ಳೂ ಹಂಗಿರಲಿಲ್ಲ. ಇವಕ್ಕೆಲ್ಲ ಕಾರಣಗಳೂ ಹಲವಾರು ಇದ್ದಾವು! ಹುಡುಕಿ ನೋಡಿದರೆ ಸಿಕ್ಕಾವು!!

ನಮ್ಮ ಬಲಕುಂದ್ಯಾಗ ಒಬ್ಬ ಮುತ್ಯಾ ಬರತಿದ್ದರೀ. ಬಾಂಬೆ ಮಿಠಾಯಿ, ಅಜ್ಜೀ ಕೂದಲಾ ( cotton candy )ಎಲ್ಲಾ ತಗೊಂಡು. ಅವನಿಗೆ ಹೋಗಿ ನಮ್ಮ ಉದುರಿದ ಕೂದಲನ್ನ ಕೊಟ್ರ ಆ ತಿಂಡಿ ತಿನಿಸುಗಳನ್ನೆಲ್ಲ ಪುಗಸೆಟ್ಟೆ ಕೊಡತಿದ್ದ. ಅದಕ್ಕಂತ ಹೆರಳ ಆದ ಕೂಡಲೇ ನಾವೆಲ್ಲ ಮಕ್ಕಳು ಹಣಿಗೆ ಒಳಗಿನ ಕೂದಲಾ ತೆಗೆದು ಸುರಳಿ ಸುತ್ತಿ ನಮ್ಮ ನಮ್ಮ ಕೂದಲನ್ನ ಬ್ಯಾರೆ ಬ್ಯಾರೆ ಮಾಡಿಕೊಂಡು ಮನಿ ಹಿಂದಿನ ಮಾಡದಾಗ ಒಯ್ದು ಇಡತಿದ್ದ ನೆನಪು. ಬಹುಶ: ಅವುಗಳಿಂದ ಚೌರಿ ಇತ್ಯಾದಿಗಳನ್ನು ಮಾಡುತ್ತಿದ್ದರೋ ಏನೋ? ತಿರುಪತಿ – ತಿರುಮಲಗಳಲ್ಲಂತೂ ಈ ಕೂದಲುಗಳದೇ ಕೋಟ್ಯಂತರ ರೂಪಾಯಿಗಳ ಆದಾಯ ಅದ ಅಂತ್ರೀ. ಅದರಿಂದಲೇ ತಿರುಪತಿ _ತಿರುಮಲ ದೇವಸ್ಥಾನದವರು ಅನೇಕ ಆಸ್ಪತ್ರೆ, ಶಾಲಾಕಾಲೇಜುಗಳು ಧರ್ಮಛತ್ರಗಳು, ಪುನರುಜ್ಜೀವನಗಳಂಥ ಚಾರಿಟಿ ಟ್ರಸ್ಟ್ ಗಳನ್ನು ನಡೆಸುತ್ತಾರೆಂದು ಎಲ್ಲೋ ಓದಿದ ನೆನಪು.

ನಾವು ಸಣ್ಣವರಿದ್ದಾಗ ಓದೂ ಚಂದಮಾಮಾ, ಬಾಲಮಿತ್ರ ಕಥಿ ಒಳಗ ಈ ಕೂದಲೆಳೆ ತಗೊಂಡು ಕಾಲಾ ಜಾದೂ, ಮಾಟಮಂತ್ರ, ಭಾನಾಮತಿ ಮಾಡಿದಂಥ ಕಥೆಗಳನ್ನೋದಿ ಮೈ ಜುಮ್ ಅನ್ನಿಸಿಕೊಂಡಿದ್ದೂ ನೆನಪಿದೆ. ಎಲ್ಲೆರೇ ನಮ್ಮ ಕೂದಲೆಳೆಯನ್ನೂ ಯಾರರೇ ತಗೊಂಡು ಕಾಲಾಜಾದೂ ಮಾಡಿದ್ರ ಅನಸತಿತ್ತು. ಆದ್ರ ಹಂಗಾಗಲಿಕ್ಕೆ ನಾವೇನು ರಾಜಕುಮಾರಿಯರೋ, ಶ್ರೀಮಂತ ವಣಿಕ್ ಪುತ್ರಿಯರೋ, ಸುರಸುಂದರಿಯರೋ ಇರಲಿಲ್ಲ ಅನ್ನೋದು ಅರ್ಥವಾಗದ ವಯಸ್ಸು ಅದು.
ತಾಯ ಹೊಟ್ಟೆಯಲ್ಲಿ ಮಗುವಿದ್ದಾಗಲಿಂದಲೇ ಮಗುವಿನ ಕೂದಲಿನ ಅಂದಾಜು ನಡದಿರತದ್ರೀ. ನಮ್ಮ ಕಡೆಯೆಲ್ಲ 7-8 ತಿಂಗಳಿಗೆಲ್ಲ ಸ್ವಲ್ಪ ಎದೆ ಯುರಿ ಎಲ್ಲಾ ಬಂದ್ರ ‘ ಕೂಸಿಗೆ ಜಾವಳ ಭಾಳ ಇರಬೇಕು. ಅದಕ್ಕs ಎದಿ ಉರೀತದ ಅಂತಾರ ಮನ್ಯಾಗಿನ ಹಿರಿಯರು. ಕೂಸು ಹುಟ್ಟಿದ ಮ್ಯಾಲೆನೂ ಅಷ್ಟೇ. ಕೂಸು ಆರಾಂ ಅದನ? ಯಾರಂಗ ಅದ? ಜಾವಳ ಭೇಷ್ ಅವನ?ಅಂತಾನೇ ಎಲ್ಲರ ಪ್ರಶ್ನೆ. ಮುಂದ ಜಾವಳ, ಮುಂಜವಿ ಅಂತ ಈ ಕೂದಲಿಗೆ ಸಂಬಂಧಿಸಿದ ಕಾರ್ಯಕ್ರಮ ಗಳೇ. ಹೆಣ್ಣು ಮಗು ಇದ್ರ ದಿನಕ್ಕೊಂದು ಕೇಶಾಲಂಕಾರ.. ಹೂವು.. ಶೖಂಗಾರ.

“ ಹೆಣ್ಣು ಮಕ್ಕಳಿಗೆ ಕೂದಲು ಉದ್ದಾ ಇದ್ರೆ ನೋಡೋಕೇನೋ ಚಂದ. ಆದ್ರೆ ಆರೈಕೆ ಭಾಳ ಕಷ್ಟ” ಎನ್ನುತ್ತಾರೆ ನಮ್ಮ ಹೆಂಗರುಳ ಕವಿ ಎಚ್ಚೆಸ್ವಿ ತಮ್ಮ ‘ ಉರಿಯ ಉಯ್ಯಾಲೆ’ಯಲ್ಲಿ. “ ರೋಮ ರೋಮಗಳಲ್ಲಿ ಭೀಮರಕ್ಷಿಯ ಬಲ ಕೊರಳಾಗ ಕಟ್ಟೀರಿ ಒಂದಾನ” ಎಂದು ಕರಡಿ ಕುಣಿತದಲ್ಲಿ ಹೇಳುತ್ತಾರೆ ನಮ್ಮ ವರಕವಿ. ಅಂದಹಂಗ ಜಿ. ಎಸ್. ಎಸ್. ರ ಜಡೆ ನಿಮಗೆಲ್ಲ ಗೊತ್ತಿರತದ. ಆದ್ರೂ ನನ್ನ ಖುಷಿಗೆ ಮತ್ತೊಮ್ಮೆ ಇಲ್ಲಿ ಹಂಚಿಕೊಳ್ಳುತ್ತಿರುವೆ.
“ಲಲನೆಯರ ಬೆನ್ನಿನೆಡೆ ಹಾವಿನೊಲು ಜೋಲ್ವ ಜಡೆ ಅತ್ತಿತ್ತ ಹರಿದ ಜಡೆ
ಚೇಳ್ ಕೊಂಡಿಯಂಥ ಜಡೆ ಮೋಟು ಜಡೆ, ಚೋಟು ಜಡೆ ಚಿಕ್ಕವರ ಚಿನ್ನ ಜಡೆ
ಎಣ್ಣೆ ಕಾಣದೇ ಹಿಣಿಲು ಹಿಣಿಲಾಗಿ ಹೆಣೆದ ಜಡೆ
ಬೆವರಿನಲಿ, ಧೂಳಿನಲಿ ನೆನೆದುಕೊಂಡಿರುವ ಗಂಟು ಜಡೆ ಅಕ್ಕತಂಗಿಯ ಮುಡಿಯ ಹಿಡಿದು ನಾನೆಳೆದಂಥ ಮಲ್ಲಿಗೆಯ ಕಂಪು ಜಡೆ
ಮಾತೖಮಮತಾವೖಕ್ಷ ಬಿಟ್ಟ ಬಿಳಲಿನಂತೆ ಹರಿವ ತಾಯ್ ಜಡೆ ‘ ಕುರುಕುಲ ಜೀವಾಕರ್ಷಣ ಪರಿಣತ’ ಆ ಪಾಂಚಾಲಿಯ ಜಡೆ ಸಂಜೆಯಲಿ ಹಗಲು ಕೆದರುವ ಕತ್ತಲೆಯ ಕಪ್ಪು ಜಡೆ
ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ ಬೆಳಕು ಜಡೆ
ಒಮ್ಮೊಮ್ಮೆ ಮುಗಿಲಲ್ಲಿ ತೇಲುತ ಬರುವಂಥ ಬೆಳ್ಳಕ್ಕಿಗಳ ಜಡೆ
ಕ್ರೌಂಚಗಳ ಜಡೆ
ಮಾಮರದಿ ಬಳುಕುತಿಹ ಹೂ ಬಿಟ್ಟ ಬಳ್ಳಿ ಜಡೆ
ಕಾಡು ಬಯಲಿನ ಹಸುರು ಹಸುರಲಿ ಹರಿ ಹರಿದು ಮುನ್ನಡೆವ ಹೊಳೆಯ ಜಡೆ
ಶ್ರೇಣಿ ಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ
ಗಿರಿಶಿವನ ಶಿರದಿಂದ ಹಬ್ಬಿ ಪಸರಿಸಿದ ಕಾನನದ ಹಸುರು ಜಡೆ
ನಕ್ಷತ್ರಗಳ ಮುಡಿದ ನಟ್ಟಿರುಳ ನಭದ ಜಡೆ
ಮುಂಗಾರು ಮೋಡಗಳು ದಿಕ್ಕು ದಿಕ್ಕಿಗೆ ಬಿಚ್ಚಿ ಹರಡಿರುವ ಮಳೆಯ ಜಡೆ
ಚಂದ್ರಚೂಡನ ವ್ಯೋಮಕೇಶನ ವಿಶ್ವವನೇ ವ್ಯಾಪಿಸುತ ತುಂಬಿರುವ ಜಡೆ
ಗಾನಗಳ, ಕಾವ್ಯಗಳ, ಶಿಲ್ಪಗಳ ಕಲೆಯ ಜಡೆ
ಎಲ್ಲವೂ ರಮ್ಯವೆಲ್ಲ! ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ ಕಾಣದಲ್ಲ!!

ಒಟ್ಟಿನಾಗ ಈ ಹೆರಳು ಮಾರಿಯಿಂದ ಇಷ್ಟೆಲ್ಲ ಮಾತು ಆತು ನೋಡ್ರಿ. ಓದಿ ಹೆಂಗನ್ನಸ್ತು ಅಂತ ನಿಮ್ಮದೂ ಎರಡು ಮಾತು ಸೇರಸ್ರಿ.

~ ಗೌರಿಪ್ರಸನ್ನ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಅನಿವಾಸಿ ಬಂಧುಗಳಿಗೆ ನಮಸ್ಕಾರ. ಎರಡು ವಾರದಿಂದ ಭಾರತ  ಪ್ರವಾಸದಲ್ಲಿದ್ದೇನೆ. ಗೃಹಪ್ರವೇಶ, ಮದುವೆ ಸಮಾರಂಭಗಳನ್ನು ಅಟೆಂಡ್ ಮಾಡುತ್ತ, ಬಂಧು ಬಳಗ, ಸ್ನೇಹಿತರನ್ನು ಭೇಟಿಯಾಗುತ್ತ  ದೆಹಲಿ, ಮುಂಬಯಿ, ಪುಣೆ, ಧಾರವಾಡ ಎಂದೆಲ್ಲ ಸುತ್ತಾಡುತ್ತ ,  ದೆಹಲಿಯ ಚಳಿಗಾಲ  ಕಳೆದು  ಈಗಷ್ಟೇ ಆರಂಭವಾಗುತ್ತಿರುವ  ಎಳೆಯ ಬಿಸಿಲನ್ನೂ, ಮುಂಬಯಿಯ  ಆ humid ಶೆಕೆಯನ್ನೂ, ಪುಣೆಯ ಸಂಜೆ ಮುಂಜಾನೆಗಳ ಆಹ್ಲಾದಕರ ತಂಪು ಹವೆಯನ್ನೂ , ಧಾರವಾಡದ  ಬಿಸಿಲು ಮಳೆಗಳ  ಸಮ್ಮಿಶ್ರ ಹವಾಮಾನವನ್ನೂ, ಲಿಠ್ಠಿ ಛೌಕಾ, ದಾಲ್ ಮುರಾದಾಬಾದಿ, ಮಿಸಳ್ ಪಾವ್, ಭಾಕರ್ ವಡಿ, ಶ್ರೀಖಂಡ, ಗಿರಮಿಟ್, ಫೇಡೆಗಳನ್ನೂ  ಸಮಸಮವಾಗಿ ಆಸ್ವಾದಿಸುತ್ತ  ಜೊತೆಗೇ ಒಂದಷ್ಟು ನೆಗಡಿ, ಕೆಮ್ಮು ಎಂದು ಆರೋಗ್ಯ ಕೆಡಿಸಿಕೊಂಡು ಔಷಧಿ, ಗಳಿಗೆಯನ್ನೂ ಸೇವಿಸುತ್ತ ರಜಾದ ಮಜಾ ಸವಿಯುತ್ತಿದ್ದೇವೆ. ಹೀಗಾಗಿ ಈ ಸಲ ಅನಿವಾಸಿಯ ಓದಿಗೆ ಚಿಕ್ಕದಾದೊಂದು ವಸ್ತುವಿನ ಬಗ್ಗೆ ಒಂದು ಚಿಕ್ಕ ಲೇಖನ. ಒಪ್ಪಿಸಿಕೊಳ್ಳಿ.

~ ಸಂಪಾದಕಿ

ಸೇಫ್ಟಿ ಪಿನ್

ಕೆಲ ದಿನಗಳ ಹಿಂದೆ ಜಯಂತ ಕಾಯ್ಕಿಣಿಯವರ ‘ಅನಾರ್ಕಲಿಯ ಸೇಫ್ಟಿ ಪಿನ್’ ಓದುತ್ತಿರುವಾಗ ಈ ಸೇಫ್ಟಿ ಪಿನ್ ಗೂ, ಆ ಅನಾರ್ಕಲಿಗೂ ಅದೇನು ಸಂಬಂಧವಿರಬಹುದು ಎಂಬ ಗೊಂದಲದ ಭಾವ  ನನ್ನನ್ನು ಕಾಡಿತ್ತು. ಆಮೇಲೆ ಹೊಳೆದ ಸತ್ಯವೇನೆಂದರೆ ಅನಾರ್ಕಲಿಯೋ, ಚಂಪಾಕಲಿಯೋ, ಚಮೇಲಿಯೋ ಯಾರೇ ಇರಲಿ ಸೇಫ್ಟಿ ಪಿನ್ ಮಾತ್ರ ಎಲ್ಲರಿಗೂ ಬೇಕೇ ಬೇಕು ಎಂಬುದು. ಈ ಸೇಫ್ಟಿ ಪಿನ್ ಗಳಿಗೂ  ಹೆಂಗಳೆಯರಿಗೂ ಬಿಡಿಸಲಾಗದ ನೆಂಟು. ಹೆಂಗಳೆಯರ ಸೀರೆ ಬ್ಲೌಜ್ ಗಳಿಗೂ ಈ ಪಿನ್ನು ಗಳಿಗಂತೂ ಅವಿನಾಭಾವ ಸಂಬಂಧ. ‘ವಾಗರ್ಥ ವಿವ ಸಂಪ್ರೃಕ್ತೌ ವಾಗರ್ಥ ಪ್ರತಿಪತ್ತಯೇ’ ಎಂದು ಕಾಳಿದಾಸ ಹೇಳಿದಂತೆ. 

ಸೀರೆಯ ಚಂದದ ಸೆರಗನ್ನು ನೀಟಾಗಿ ಹಿಡಿದಿಡಲು, ಸಡಿಲವಾದ ಬ್ಲೌಸ್ ಅನ್ನು ಫಿಟ್ ಮಾಡಲು, ಬಿಗಿಯಾದ ಬ್ಲೌಸಿನ ಒಳಮೈ ಯ್ಯ ಹೊಲಿಗೆ ಬಿಚ್ಚಲು ಸೀರೆಯ ನೆರಿಗೆಗಳನ್ನು ಒಪ್ಪವಾಗಿಸಲು ಈ ಪಿನ್ನು ಬೇಕೇ ಬೇಕು. ಬ್ಲೌಸುಗಳಂತೂ ಈ ಪಿನ್ನುಗಳ ಭರವಸೆಯ ಮೇಲೆಯೇ ಬದುಕುವುದು. ಏಕೆಂದರೆ ನೀವು ಎಷ್ಟರೇ ರೊಕ್ಕ ಸುರದು ಬೇಕಾದಂತಹ ಡಿಸೈನರ್ ಬೋಟಿಕ್ ನಾಗ ಹೊಲಿಸಿದ್ರೂ ಅವು ನಿಮ್ಮ ಮೈ ಏರುವಾಗ ಲೂಸೋ, ಬಿಗಿಯೋ, ತೋಳು ಇಳಿಯುವುದೋ ಏನೋ ಒಂದು ಆಗಲೇಬೇಕು. ನನಗಂತೂ ಒಮ್ಮೊಮ್ಮೆ ಡೌಟು..ಚಂದದ ಕಿಮ್ಮತ್ತಿನ ಸೀರೆಗಳನ್ನು ದೌಲತ್ತಿನಿಂದ ಉಟ್ಟು ದಿಮಾಕಿನಿಂದ ನಡೆವ ಲಲನಾಮಣಿಯರನ್ನು ಕಂಡು ಹೊಟ್ಟೆ ಉರಿದವರ್ಯಾರದೋ ಕೆಟ್ಟ ದೃಷ್ಟಿತಾಗಿಯೋ,ಶಾಪ ತಟ್ಟಿಯೋ ಈ ಬ್ಲೌಸ್ ಗಳು ಹಾಳಾಗಬಹುದೆಂದು. ಅಂಥ ಸಮಯದಲ್ಲಿ ಶಾಪ ವಿಮೋಚಕನಾಗಿ ನಮಗೆ ನೆರವಾಗುವುದು ಇದೇ ಸೇಫ್ಟಿ ಪಿನ್ನು.

ಈ ಪಿನ್ನಿನ ಋಣ ಭಾರವಿಲ್ಲದ ಹೆಂಗಳೆಯರೇ ಇಲ್ಲ. ಸಾಲ ಸೋಲ ಎಂದರಾಗದ ನಿಯತ್ತಿನ ಜೀವಗಳನ್ನೂ ಇವು ಕಾಡದೇ ಬಿಡುವುದಿಲ್ಲ. ಎಷ್ಟರೇ ಡಜನ್ಗಟ್ಟಲೆ ಪಿನ್ನು ಖರೀದಿ ಮಾಡಿಟ್ಟಿರಿ ಬೇಕಾದ ಸಮಯಕ್ಕೆ ಸಿಗದೇ ಪಕ್ಕದಲ್ಲಿದ್ದ ಅಕ್ಕನೋ, ಅತ್ತಿಗೆಯೋ, ಅಮ್ಮನೋ, ಗೆಳತಿಯೋ ಯಾರ ಬಳಿಯಲ್ಲಾದರೂ ‘ಒಂದು ಪಿನ್ ಇದ್ರೆ ಕೊಡ’ ಎಂದು ನೀವು ಒಮ್ಮಿಲ್ಲ ಒಮ್ಮೆ ಕೇಳೇ ಕೇಳಿರುತ್ತೀರಿ. ಆ ಪಿನ್ನಿನ ಋಣದಲ್ಲಿ ಬಿದ್ದೇ ಇರುತ್ತೀರಿ. ನಿಮಗೆ ಅತಿ ಅವಶ್ಯಕತೆ ಇದ್ದಾಗ, ಬೇಕೆಂದಾಗ ಆ ಪಿನ್ನುಗಳು ನಿಮಗೆ ಸಿಕ್ಕದಿರಲಿ ಎಂದು ಅದ್ಯಾವ ಪರಶುರಾಮ ಶಾಪ ಕೊಟ್ಟನೋ ಕಾಣೆ ಬೇಕೆಂದಾಗ ಡ್ರಾತೆಗೆದು, ಡಬ್ಬಿ ತೆಗೆದು, ಪರ್ಸ್ ತಡಕಾಡಿ ಡ್ರೆಸ್ಸಿಂಗ್ ಟೇಬಲ್ ಜಾಲಾಡಿದರೂ ಅವು ಕಾಣದಂತೆ ಅದೃಶ್ಯವಾಗಿ ಬಿಟ್ಟಿರುತ್ತವೆ. ಎಲ್ಲಿಟ್ಟಿರುವೆವೆಂಬ ನೆನಪು ಬಾರದೆ ನಾವೂ ಸಹ ಆ ಮಹಾಭಾರತದ ಕರ್ಣನಂತೆ ಒದ್ದಾಡುತ್ತಿರುತ್ತೇವೆ.

ಸ್ತ್ರೀಯರ ವ್ಯಾನಿಟಿ ಬ್ಯಾಗ್ ಅಂದ್ರೆ ಅದರಲ್ಲಿ ಏನೇ ಇರಲಿ ಬಿಡಲಿ ಈ ನಾಲ್ಕಾರು ಪಿನ್ನುಗಳಂತೂ ಇರಲೇಬೇಕು. ಒಮ್ಮೆ ನಾನು ದೆಹಲಿಯಿಂದ ಹುಬ್ಬಳ್ಳಿಗೆ ಹೊರಟಿದ್ದೆ. ಸೆಕ್ಯೂರಿಟಿ ಚೆಕ್ ನಲ್ಲಿ ನನ್ನ ವ್ಯಾನಿಟಿ ಬ್ಯಾಗ್ ತನ್ನ ನೇರ ರಸ್ತೆ ಬಿಟ್ಟು ಪಕ್ಕಕ್ಕೆ ಹೊರಳಿ ಅಲ್ಲಿದ್ದ ಅಧಿಕಾರಿಗಳ ಕೈಗೆ ಸಿಕ್ಕಿ ಬಿಟ್ಟಿತು. ಹತ್ತತ್ತು ಸಲ ಚೆಕ್ ಮಾಡಿದರೂ ಏನೂ ಸಿಗುತ್ತಿಲ್ಲವಾದರೂ ಸ್ಕ್ಯಾನ್ ನಲ್ಲಿ ಏನೋ ಇದೆಯೆಂದು ತೋರಿಸುತ್ತಿದೆ. ಅಲ್ಲಿನ ಅಧಿಕಾರಿಗಳು ನನ್ನನ್ನು ನೋಡುವ ರೀತಿಗೆ ‘ ಅಯ್ಯಾ, ನನ್ನ ಈ ಬ್ಯಾಗನ್ನು ನೀನೇ ಇಟ್ಟುಕೊಂಡುಬಿಡು’ ಎಂದು ಹೇಳಬೇಕೆನಿಸಿಬಿಟ್ಟಿತು.ಮುಂದೆ ಒಂದು ದಿನ ಅವತ್ತು ಅವರ ಕೈಗೆ ಸಿಗದ ಈ ಪಿನ್ನಿನ ಗೊಂಚಲು ಅಚಾನಕ್ಕಾಗಿ ನನಗೆ ಸಿಕ್ಕಿತ್ತು. ಬ್ಯಾಗಿನ ಒಳಭಾಗದ zip ನ ಬಟ್ಟೆಗೊಂದು ಸಣ್ಣ ತೂತಾಗಿ ಆ ಕಿಂಡಿಯಿಂದ ಹೈದರಾಲಿಯ ಸೈನಿಕನಂತೆ ನುಸುಳಿ ಅವಿತುಕೊಂಡಿದ್ದ ಆ ಪಿನ್ನಿನ ಗೊಂಚಲು ಅಂತೂ ಸೆಕ್ಯೂರಿಟಿಯ ಓಬವ್ವನ ಕೈಗೆ ಸಿಗದೆ ತಪ್ಪಿಸಿಕೊಂಡು ಹೊರಬಂದಿತ್ತು.

ಫ್ಲೈಟ್ ನಲ್ಲಿ ಕೊಡುವ ಈ ಸ್ನಾಕ್ಸ್ ಪ್ಯಾಕೆಟ್ ಹರಿಯಲು, ಕಿವಿ ಗುಳುಗುಳು ಎಂದರೆ ಇಯರ್ ಬಡ್ ನಂತೆ ಕೆಲಸ ಮಾಡಲು, ಹಲ್ಲು ಸಂದಿಯಲ್ಲಿ ಸಿಕ್ಕಿದ ಬೇಳೆಕಾಳು ಸೊಪ್ಪನ್ನು ತೆಗೆಯಲು ಟೂತ್ ಪಿಕ್ ನಂತೆಯೂ ಹಲವಾರು ರೀತಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಈ ಸೇಫ್ಟಿ ಪಿನ್. ಕಾಲಿಗೆ ನೆಟ್ಟ ಮುಳ್ಳು ತೆಗೆಯಲು, ಉಗುರು ಸಂದಿಯಲ್ಲಿ ಅವಿತ ಕೊಳಕು ತೆಗೆಯಲು, ಹಣಿಗೆಯ ಹಲ್ಲುಗಳನ್ನು ಸ್ವಚ್ಛಗೊಳಿಸಲು ಈ ಪಿನ್ನು ಬೇಕೇ ಬೇಕು . ನಿಮ್ಮ ಪ್ರೆಷರ್ ಕುಕ್ಕರ್ ಸೀಟಿಯಲ್ಲಿ ಸಿಕ್ಕಿಕೊಂಡ ಅನ್ನದ ಅಗುಳಿನ ತುಂಡನ್ನೋ, ಬೆಂದ ಬೇಳೆಯನ್ನೋ ತೆಗೆಯಲು ಇದು ಬೇಕೇ ಬೇಕು . ಕೆಲವೊಮ್ಮೆ ಹರಿದ ಚಪ್ಪಲಿಗೂ ಇದರ ನೆರವು ಬೇಕಾಗುತ್ತದೆ.

ಮನೆಯ ಅಂಗಳದಲ್ಲಿ ಅರಳುತ್ತಿದ್ದ ನಾಲ್ಕಾರು ದುಂಡು ಮಲ್ಲಿಗೆಯನ್ನು ಒಂದು ಪಿನ್ನಿನಲ್ಲಿ ವೃತ್ತಾಕಾರವಾಗಿ ಚುಚ್ಚಿ ಮುಡಿಗೇರಿಸಿಕೊಂಡು ಡೌಲು ಬಡಿಯುತ್ತಿದ್ದ, ಆ ಮಲ್ಲಿಗೆಯ ಘಮದಲ್ಲಿ ತೇಲಿ ಹೋಗುತ್ತಿದ್ದ ಬಾಲ್ಯದ ದಿನಗಳು ಈಗಲೂ ಮೆರವಣಿಗೆ ಹೊರಡುತ್ತವೆ. ಹೆರಳ ತೊಡಕು ಬಿಡಿಸುವಾಗ ಉದುರಿದ ಕೂದಲನ್ನು ಕೂಡಿಟ್ಟು ಆ ಕೂದಲ ಬದಲಿಗೆ ಈ ಪಿನ್ನುಗಳನ್ನು ಖರೀದಿಸುತ್ತಿದ್ದ ನನ್ನ ಬಾಲ್ಯಕಾಲದ ಹಳ್ಳಿಯ ಜೀವನ ಈಗಲೂ ಗುಂಗಾಗಿ ಕಾಡುತ್ತದೆ.

ಹಂಗಂತ ಈ ಸೇಫ್ಟಿ ಪಿನ್ ಗಳು ಬಹಳ ಸಾಚಾ ಅಂತನೂ ತಿಳ್ಕೋಬ್ಯಾಡ್ರಿ. ಇವುಗಳು ಮಾಡೋ ಅವಾಂತರ ನಮಗೆ ಅಂದರೆ ಹೆಂಗಳೆಯರಿಗೇ ಗೊತ್ತು. ಬೆಲೆ ಬಾಳುವ ಚಂದನೆಯ ರೇಷ್ಮೆ ಸೀರೆ, ಬ್ಲೌಜ್ ಗಳಿಗೆ ಕೆಲವೊಮ್ಮೆ ನಿರ್ದಯವಾಗಿ ತೂತು ಬೀಳಿಸಿ ಬಿಡುತ್ತವೆ. ದೊಡ್ಡ ಪಿನ್ನು ಮೊಂಡಹಡಿ ಇದ್ದು ಸೀರೆಗೆ ಚುಚ್ಚದೆ ಕೈ ನೋವು ಬರಿಸಿದರೆ ಗಿಡ್ಡ ಮೆಣಸಿನಕಾಯಿ ಅಂತಹ ಮರಿ ಪಿನ್ನು ಕಚಕ್ ನೇ ಚುಚ್ಚಿ ‘ಆ’ ಎನ್ನುವಂತೆ ಮಾಡುತ್ತದೆ. ಹೀಗಾಗಿ ನೀವು ಬೇರೆ ಯಾರದೋ ಸೀರೆಯನ್ನ ಏನಾದರೂ ಕಡ ತೆಗೆದುಕೊಂಡು ಉಡುತ್ತಿದ್ದರೆ ಬಹಳ ಹುಷಾರಾಗಿರಬೇಕಾಗುತ್ತದೆ.

ಬಹು ಉಪಯೋಗಿ ಈ ಪಿನ್ನುಗಳು ನಿಮಗೆ ಜನರನ್ನು ಯಾವ ಪ್ರಾಂತ್ಯದವರೆಂದು ಗುರುತಿಸಲು ಸಹ ನೆರವು ನೀಡುತ್ತವೆ. ಅದ್ಹೆಂಗ ಅಂತ ಹುಬ್ಬೇರಿಸಬ್ಯಾಡ್ರಿ. ಉದಾಹರಣೆ ಸಮೇತ ಹೇಳತೀನಿ ನೋಡ್ರಿ . ಒಮ್ಮೆ ದೆಹಲಿಯಲ್ಲಿ ಅಕ್ಷರಧಾಮಕ್ಕೆ ಹೋಗಿದ್ವಿ ಅಲ್ಲಿ ಪಾಳಿಯೊಳಗೆ ಇಬ್ಬರು ಮಧ್ಯವಯಸ್ಕ ಗಂಡ ಹೆಂಡತಿ ನಿಂತಿದ್ದರು. ನಾನು ನನ್ನ ಮಗನಿಗೆ ಅವರನ್ನು ಮಾತನಾಡಿಸಿ ಬರುವೆ, ಅವರು ಪಕ್ಕಾ ನಮ್ಮ ಕಡೆಯವರೇ ( ಉತ್ತರ ಕರ್ನಾಟಕ) ಇರುತ್ತಾರೆ ಅಂದೆ. ಅವನು ‘ಅದ್ಹೆಂಗ ಹೇಳತಿ’ಎಂದು ಸವಾಲೆಸೆದ. ಹೋಗಿ ಮಾತನಾಡಿಸಿದರೆ ಅವರು ಗುಲ್ಬರ್ಗದವರಿದ್ದರು. ಆ ಹೆಣ್ಣು ಮಗಳ ಕೈಯ ಕಾಜಿನ ಬಳೆ, ಪಾಟಲಿ, ಬಿಲವಾರದಲ್ಲಿ ಜೋತಾಡುತ್ತಿದ್ದ ಒಂದು ಹಳದಿ ಮರಿ ಪಿನ್ನು, ಒಂದು ಸ್ಟೀಲಿನ ದೊಡ್ಡ ಪಿನ್ನು ನೋಡಿಯೇ ನಾನು ಗುರುತು ಹಿಡಿದಿದ್ದು. ಈಗಲೂ ನಮ್ಮಮ್ಮ, ಅತ್ತೆಯರು ಪಿನ್ ಕೇಳಿದರೆ ತಕ್ಷಣ ಬಳೆ, ಮಂಗಳ ಸೂತ್ರದಿಂದ ತೆಗೆದುಕೊಡುತ್ತಾರೆ. ಮಂಗಳಸೂತ್ರ ಬಳೆ ಇರುವುದೇ ಈ ಪಿನ್ನುಗಳನ್ನು ಕಾಪಿಟ್ಟುಕೊಳ್ಳಲೇನು ಎಂಬ ಸಂಶಯ ನನ್ನನ್ನು ಕಾಡುತ್ತದೆ. ಒಮ್ಮೊಮ್ಮೆ ಈ ಶಿರಸಿ, ಮೈಸೂರು, ಬೆಂಗಳೂರು, ಮಂಗಳೂರಿನ ಹೆಂಗಳೆಯರ ಬಗ್ಗೆ ನನಗೆ ಗೊತ್ತಿಲ್ಲ ಆದರೆ ನಮ್ಮ ಕಡೆ ಹೆಣ್ಣು ಮಕ್ಕಳ ಕೈಯಲ್ಲಿ ಕೊರಳಲ್ಲಿ ಇವು ಇರಲೇಬೇಕು.. ಇರತಾವ ಕಾಸಿನ ಕಿಮ್ಮತ್ತಿನ ಈ ಪಿನ್ ಮಹಾಶಯ ಬಂಗಾರದ ಬಳೆ, ಸರಗಳಲ್ಲಿ ಮೆರೆಯುತ್ತಿರುತ್ತಾನೆ. ‘ ನಸೀಬ್ ಅಪನಾ ಅಪನಾ’ ಅನ್ನೋದು ಸುಳ್ಳಲ್ಲ ನೋಡ್ರಿ.

ಪಿಂಡಾಂಡದಲ್ಲಿ ಬ್ರಹ್ಮಾಂಡ ಎನ್ನುವ ತತ್ವ ಇವುಗಳನ್ನು ನೋಡಿಯೇ ಬಂದಿರಬೇಕು. ಆತ್ಮ ಸಂಗಾತಿಗಳು ಇವು. ಮಾನ ಕಾಯುವ, ಕಾಪಿಡುವ ಭಗವಂತನಿದ್ದಂತೆ ಗೀತೆಯ ವಿಭೂತಿ ಯೋಗದಲ್ಲಿ ಶ್ರೀ ಕೃಷ್ಣ ಹೇಳುತ್ತಾನಲ್ಲವೇ? “ನಾನು ನದಿಗಳಲ್ಲಿ ಗಂಗೆ, ಪರ್ವತಗಳಲ್ಲಿ ಮೇರು, ಯೋಧರಲ್ಲಿ ರಾಮ, ಸರ್ಪಗಳಲ್ಲಿ ಅನಂತ” ಅಂತೆಲ್ಲ.. ಈ ಪಿನ್ನುಗಳನ್ನು ಕಂಡಿದ್ದರೆ ಪಿನ್ನುಗಳಲ್ಲಿ ನಾನು ಸೇಫ್ಟಿ ಪಿನ್ನು ಎಂದು ಖಂಡಿತ ಹೇಳಿರುತ್ತಿದ್ದ.( ಸೂಜಿ, ಗುಂಡು ಸೂಜಿ, ಗುಂಡು ಪಿನ್ನು, ಪೇಪರ್ ಪಿನ್ನು, ಹೇರ್ ಪಿನ್ನು, ಸಾಡಿ ಪಿನ್ನು ಇತ್ಯಾದಿಗಳಲ್ಲಿ ).
ಹೀಗೆ ಆಪತ್ಕಾಲೀನ ಸಮಯದಲ್ಲಿ ಆಪದ್ಬಾಂಧವನಂತೆ ಕಣ್ಣಿಗೆ ಕಾಣದೆ ಒಳಗೆ ಸೇರಿಕೊಂಡು ಅದೃಶ್ಯವಾಗಿ ಈ ಸೇಫ್ಟಿ ಪಿನ್ನುಗಳು ಮಾನ ಕಾಯ್ದರೆ ಇದೇ ಕುಲದ ಸಾಡಿ ಪಿನ್ನುಗಳು ಎಲ್ಲರಿಗೂ ಕಂಡು ಸೀರೆಯ, ಸೀರೆಯುಟ್ಟ ನೀರೆಯ ಸೊಬಗು ಹೆಚ್ಚಿಸುತ್ತವೆ. ನವಿಲಿನಂಥ, ಹೂವಿನಂಥ, ಎಲೆ ಬಳ್ಳಿಯಂಥ, ಮುತ್ತಿನ ನತ್ತಿನಂತ ತರಾವರಿ ಸಾಡಿಪಿನ್ನುಗಳು ಮಾರ್ಕೆಟ್ನಲ್ಲಿ ಲಭ್ಯ.

1849ರಲ್ಲಿ ಅಮೆರಿಕನ್ ಮೆಕ್ಯಾನಿಕ್ ವಾಟರ್ ಹಂಟ್ ತನ್ನ ಹೆಂಡತಿಯ ಉಡುಪಿನ ಗುಂಡಿ ಕಿತ್ತು ಹೋದಾಗ ತಕ್ಷಣಕ್ಕೆ ಉಪಯೋಗವಾಗಲಿ ಎಂದು ಇದನ್ನು ಕಂಡುಹಿಡಿದನಂತೆ. ‘ಅವನ ಹೆಂಡತಿ ಸಂತತಿ ಸಾವಿರವಾಗಲಿ’. ಅವಳ ಗುಂಡಿ ಅಂದು ಕಿತ್ತಿರದಿದ್ದರೆ ಈ ಪಿನ್ನು ಸಿಕ್ಕುತ್ತಲೇ ಇರಲಿಲ್ಲ. ಹೆಗ್ಗಳಿಕೆ ಎಂದರೆ ಅಂದಿನಿಂದ ಇಂದಿನವರೆಗೂ ಅದರ ಗಾತ್ರ ವಿನ್ಯಾಸಗಳಲ್ಲಿ ಬಹುಶ: ದರದಲ್ಲಿಯೂ ಅಂಥದೇನೂ ವಿಶೇಷ ಬದಲಾವಣೆ ಆಗಿಲ್ಲ.
ಒಂಥರ ದೇಶಕಾಲಾದಿಗಳಿಗೆ ಸಿಕ್ಕಿಯೂ ಬದಲಾಗದಂತಹ ಸಂತ ಮಹಾಂತರ ಗುಣವಿದಕ್ಕೆ. ಇದರ ಮೂರ್ತಿ ಚಿಕ್ಕದಾದರೂ ಕೀರ್ತಿ ಬಲು ದೊಡ್ಡದು. ಅಂತಹ ಸೇಫ್ಟಿ ಪಿನ್ ಗೆ ಹೃದಯಾಳದ ನನ್ನಿಗಳು.

~ ಗೌರಿಪ್ರಸನ್ನ