ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು (UAE) ಭಾಗ ೨
ಡಾ. ಜಿ. ಎಸ್. ಶಿವಪ್ರಸಾದ್





ಕಳೆದ ವಾರ ಪ್ರಕಟಿತವಾದ ‘ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು’ ಎಂಬ ಲೇಖನದ ಎರಡನೇ ಭಾಗವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಈ ಎರಡನೇ ಸಂಚಿಕೆಯಲ್ಲಿ ಅರಬ್ ಜನರ ಸಂಸ್ಕೃತಿಯ ಬಗ್ಗೆ , ಇಲ್ಲಿಯ ವಿಶಿಷ್ಟತೆಯ ಬಗ್ಗೆ, ಈ ರಾಷ್ಟ್ರದ ಹೆಮ್ಮೆಯ ಮಹಾನಗರವಾದ ದುಬೈ ಮತ್ತು ಅಲ್ಲಿಯ ಜನಜೀವನವನ್ನು ಕುರಿತಾಗಿ ಲೇಖಕರ ಅನಿಸಿಕೆಗಳಿವೆ. ದಯವಿಟ್ಟು ಓದಿ ಸ್ಪಂದಿಸಿ – ಸಂ

ಅಲೈನ್ ನಗರದ ಮಧ್ಯೆ ಇರುವ ಅಲೈನ್ ಓಯಸಿಸ್ ಒಂದು ಮುಖ್ಯ ಆಕರ್ಷಣೆ. ಮರಳುಗಾಡಿನ ಹಸಿರು ತಾಣಗಳ ಬಗ್ಗೆ ನನಗೆ ಹಿಂದಿನಿಂದ ಕುತೂಹಲ. ಬೆಟ್ಟದ ಆಸುಪಾಸಿನಲ್ಲಿರುವ ಈ ಓಯಸಿಸ್ ನೂರಾರು ಎಕರೆ ವಿಸ್ತಾರವಾಗಿದ್ದು ಇಲ್ಲಿ ಹಲವಾರು ಜಾತಿಯ ಹಸಿರುಮರಗಳಿದ್ದು ಡೇಟ್ಸ್ ಮರಗಳೇ ಹೆಚ್ಚು. ಬೆಟ್ಟದಿಂದ ಹರಿದುಬರುವ ನೀರನ್ನು ಪುರಾತನವಾದ 'ಫಲಾಜ್ ನೀರಾವರಿ ' ತಂತ್ರಜ್ಞಾನದಲ್ಲಿ ಇಲ್ಲಿ ನೀರನ್ನು ಹಾಯಿಸಿದ್ದಾರೆ. ಇಟಲಿ ಮತ್ತು ಇಂಗ್ಲೆಂಡಿನಲ್ಲಿ ರೋಮನ್ನರು ಕಟ್ಟಿದ್ದ ಅಕ್ವಾಡಕ್ಟ್ ಗಳನ್ನು ಹೋಲುವ ಈ ಮಾನವ ನಿರ್ಮಿತ ಕಾಲುವೆಗಳು ಒಳಚರಂಡಿಯಂತೆ ಮುಚ್ಚಿದ್ದು ಒಂದು ರೀತಿ ಗುಪ್ತಗಾಮಿನಿಗಳಾಗಿ ಹರಿಯುತ್ತವೆ. ಬಹುಶ ಓಪನ್ ವ್ಯವಸ್ಥೆಯಲ್ಲಿ ನೀರು ಸೆಖೆಗೆ ಆವಿಯಾಗಬಹುದು ಮತ್ತು ಮುಚ್ಚಿರುವ ಕಾಲುವೆಯಲ್ಲಿ ನೀರು ತಣ್ಣಗಿರುವ ಸಾಧ್ಯತೆ ಹೆಚ್ಚು. ಅಲ್ಲಲ್ಲೇ ಸಣ್ಣ ಸಣ್ಣ ಕಟ್ಟೆಗಳನ್ನು ಕಟ್ಟಿ ನೀರನ್ನು ಎಲ್ಲ ದಿಕ್ಕುಗಳಿಗೆ ಹಾಯಿಸಿದ್ದಾರೆ. ಇನ್ನೊಂದು ಸ್ವಾರಸ್ಯಕರವಾದ ಸಂಗತಿ ಎಂದರೆ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಡೇಟ್ಸ್ ಮರಗಳನ್ನು ಗಂಡು ಮತ್ತು ಹೆಣ್ಣು ಮರಗಳು ಎಂದು ವಿಂಗಡಿಸಿ ಗುರುತಿಸಬಹುದು. ಗಂಡು ಮರಗಳಲ್ಲಿ ಬಿಜೋತ್ಪತ್ತಿಯಾಗುತ್ತದೆ ಆದರೆ ಅವು ಫಲವನ್ನು ಕೊಡುವುದಿಲ್ಲ. ನಿಸರ್ಗದಲ್ಲಿ ಗಾಳಿಯು, ಗಂಡು ಮತ್ತು ಹೆಣ್ಣು ಮರಗಳ ನಡುವೆ ಪರಾಗ ಸ್ಪರ್ಶವನ್ನು ಮಾಡುತ್ತದೆ, ಆದರೆ ಅಧಿಕ ಸಂಖ್ಯೆಯಲ್ಲಿ ಸಮರ್ಥವಾಗಿ ಹಣ್ಣುಗಳನ್ನು ಪಡೆಯುವ ಉದ್ದೇಶದಿಂದ ಗಂಡು-ಹೆಣ್ಣು ಮರಗಳ ನಡುವೆ ಪರಾಗಸ್ಪರ್ಶವನ್ನು ಇಲ್ಲಿ ಮನುಷ್ಯ ಮಾಡುತ್ತಿದ್ದಾನೆ. ಇದಕ್ಕೆ ಬೇಕಾದ ಬೀಜಗಳು ಮಾರ್ಕೆಟ್ಟಿನಲ್ಲಿ ದೊರೆಯುತ್ತವೆ. ಹೀಗಾಗಿ ಹೆಣ್ಣು ಡೇಟ್ಸ್ ಮರಗಳನ್ನು ಕೃಷಿ ಮಾಡುವವರೇ ಜಾಸ್ತಿ. ಸಿಹಿಯಾದ ಡೇಟ್ಸ್ ಹಣ್ಣು ಬಿಡುವುದು ಮೇ ತಿಂಗಳಾದ ಮೇಲೆ. ನಾವು ಓಯಸಿಸ್ ಉದ್ದಗಲಕ್ಕೂ ವಿಹರಿಸಿದೆವು. ಇದು ಬಹಳ ಸುಂದರ, ಪ್ರಶಾಂತವಾದ ತಾಣ.  ನಾವು ಅಗ್ಗದ ದರದಲ್ಲಿ ಸಿಗುವ ಸಿಹಿಯಾದ ಡೇಟ್ಸ್ ಗಳನ್ನು ಕೊಂಡುಕೊಂಡೆವು.

ನಾವು ಅರಬ್ಬರನ್ನು ಹತ್ತಿರದಿಂದ ಕಂಡದ್ದು ಅಲೈನ್ ನಗರದ ಪ್ರತಿಷ್ಠಿತ 'ಲಾ ಬ್ರಯೋಷ್' ಎಂಬ ಫ್ರೆಂಚ್ ಕೆಫೆಯಲ್ಲಿ. ಇಲ್ಲಿ ಗಂಡಸರು ಅಡಿಯಿಂದ ಮುಡಿಯವರೆಗೆ ಶುಭ್ರವಾದ ನೀಟಾಗಿ ಇಸ್ತ್ರಿ ಮಾಡಿದ ಬಿಳಿ ನಿಲುವಂಗಿಯನ್ನು ತೊಟ್ಟು ತಲೆಗೆ ಒಂದು ಬಿಳಿ ವಸ್ತ್ರವನ್ನು ಇಳಿಬಿಟ್ಟು ಅದನ್ನು ತಲೆಸುತ್ತಳತೆಗೆ ಹೊಂದುವಂತಹ ಕರಿಪಟ್ಟಿಯಲ್ಲಿ ನೀಟಾಗಿ ತಲೆಯಮೇಲೆ ನಿಲ್ಲುವಂತೆ ಕಟ್ಟಿರುತ್ತಾರೆ. ತಮ್ಮ ಗಡ್ಡಗಳನ್ನು ಟ್ರಿಮ್ ಮಾಡಿ, ದೃಢಕಾಯರಾಗಿ, ಕೂಲಿಂಗ್ ಗ್ಲಾಸ್ ಏರಿಸಿ, ಘಮ ಘಮಿಸುವ ಪರ್ಫ್ಯೂಮ್ ಧರಿಸಿ ನೋಡಲು ಸ್ಮಾರ್ಟ್ ಆಗಿರುತ್ತಾರೆ. ಗಂಡಸರು ತೊಡುವ ಈ ನಿಲುವಂಗಿಗೆ ಕಂದೂರವೆಂದು ಕರೆಯಲಾಗುತ್ತದೆ. ಇಲ್ಲಿ ಬಹಳಷ್ಟು ಜನ ಶ್ರೀಮಂತರಾಗಿ, ಶಿಕ್ಷಿತರಾಗಿರುವಂತೆ ಕಂಡರು. ಇಲ್ಲಿ ಜೋರಾಗಿ ಮಾತನಾಡುವ, ಕ್ಯಾಕರಿಸಿ ಉಗಿಯುವ, ಗುಡುಗುಡಿ ಸೇದುವ ಜನರು ಕಾಣಲಿಲ್ಲ. ಹೆಂಗಸರು ತೆಳ್ಳಗೆ ಬೆಳ್ಳಗೆ ಇದ್ದು, ಮುಖಕ್ಕೆ ಮೇಕಪ್, ಲಿಪ್ಸ್ಟಿಕ್ ಹಾಕಿಕೊಂಡು ಅಬಯ್ ಎಂಬ ಕರಿ ನಿಲುವಂಗಿಯನ್ನು ತೊಟ್ಟು ತಲೆಗೆ ಹಿಜಾಬ್ ಧರಿಸಿರುತ್ತಾರೆ. ಇಲ್ಲಿಯ ಜನರು ಬೇರೆಯವರ ಜೊತೆ ದೃಷ್ಠಿ ಹಾಯಿಸಿ ‘ಹಾಯ್’ ಎನ್ನುವವರಲ್ಲ. ಕಿರುನಗೆಯನ್ನು ಬಿರುವವರಲ್ಲ, ಹೊರಗಿನವರ ಬಗ್ಗೆ ಅವರಿಗೆ ಆಸಕ್ತಿ ಇರುವಂತೆ ಕಾಣಲಿಲ್ಲ. ಇದು ಸರಿ ತಪ್ಪುಗಳ ವಿಮರ್ಶೆಯಲ್ಲ, ಅವರವರ ಸಂಸ್ಕೃತಿಗೆ ಸಂಬಂಧ ಪಟ್ಟ ವಿಚಾರವಷ್ಟೇ. ಸ್ಥಳೀಯರು ಅವರಪಾಡಿಗೆ ಅವರಿದ್ದು ಇಲ್ಲವೇ ಅವರ ಜನರ ಜೊತೆ ಬೆರೆತು ಮಾತನಾಡುತ್ತಾರೆ. ಹೆಂಗಸರ ಬಗ್ಗೆ ವಿಶೇಷವಾದ ಗೌರವ ಮತ್ತು ಮಡಿವಂತಿಕೆ ಇದೆ. ಅರಬ್ಬರಿಗೆ ಸಂಜೆಯಾದ ಮೇಲೆ ಅಥವಾ ವಾರಾಂತ್ಯದಲ್ಲಿ ನಗರದ ಪಾರ್ಕುಗಳಲ್ಲಿ, ಸಮುದ್ರ ತೀರಗಳಲ್ಲಿ ಕಾಲಕಳೆಯುವುದೆಂದರೆ ಬಲು ಖುಷಿ. ಇವರ ಜೀವನ ಪ್ರೀತಿ ಅದಮ್ಯವಾದದ್ದು. ಅವರ ಸಂಸಾರ ಕೂಡ ದೊಡ್ಡದು. ಕುಟುಂಬದ ಹಿರಿಯ ಕಿರಿಯ ಗಂಡಸರು ಹೆಂಗಸರು ಸದಸ್ಯರು ದೊಡ್ಡ ದೊಡ್ಡ ಕಾರುಗಳಲ್ಲಿ ಬಂದು ಪಿಕ್ನಿಕ್ ಮಾಡುತ್ತಾರೆ. ಹೊರಾಂಗಣದಲ್ಲಿ ತಿನ್ನುವುದು ಇಲ್ಲಿ ಸಾಮಾನ್ಯ. ಎಲ್ಲಿಯೂ ಒಂದಿಷ್ಟು ಕಸವನ್ನು ಎಸೆಯದೆ ಎಲ್ಲಿಯೂ ಗಲೀಜು ಮಾಡದ ಹಾಗೆ ಎಚ್ಚರಿಕೆ ವಹಿಸುತ್ತಾರೆ. ಒಂದು ಸಂಜೆ ಸೂರ್ಯಾಸ್ತವನ್ನು ನೋಡಿ ನಂತರ ಝಬೀಲ್ ಹಫೀತ್ ಬೆಟ್ಟದ ಬುಡದಲ್ಲಿರುವ ಸಂತೆಯಲ್ಲಿ ಚಾ ಮತ್ತು ಜಾಮೂನಿನಂತೆ ಕಾಣುವ ಲಗೈಮತ್ ಎಂಬ ಸಿಹಿ ಖಾದ್ಯವನ್ನು, ಬಿಸಿಬಿಸಿಯಾದ ಫಲಾಫಲ್ ಎಂಬ ಚೆನ್ನಾಕಾಳಿನ ಮಸಾಲೆ ಉಂಡೆಗಳನ್ನು ಸೇವಿಸಿದೆವು. ಇವರಿಗೆ ಮೀನು, ಲ್ಯಾಮ್ಬ್ ಮತ್ತು ಬಿರಿಯಾನಿ ಅನ್ನವೆಂದರೆ ಇಷ್ಟವೆಂದು, ಅದು ಇಲ್ಲಿಯ ಆಹಾರವೆಂದು ಕೇಳಿದೆ.

ಮೇಲೆ ಪ್ರಸ್ತಾಪಿಸಿದ ಬದಿಕಿನ ಚಿತ್ರಣ ಅರಬ್ ದೇಶದ ಒಳನಾಡಿನದ್ದಾದರೆ, ಇಲ್ಲಿಯ ಮಹಾ ನಗರಗಳಾದ ದುಬೈ ಅಬುದಾಬಿಯಲ್ಲಿನ ಜೀವನ ಸ್ವಲ್ಪ ಭಿನ್ನ ವಾಗಿದೆ. ಇವುಗಳನ್ನು ಪಾಶ್ಚಿಮಾತ್ಯ ನಗರಗಳಾದ ಲಂಡನ್ ಅಥವಾ ನ್ಯೂಯಾರ್ಕ್ ನಗರಗಳಿಗೆ ಹೋಲಿಸಬಹುದು. ಇಲ್ಲಿ ಸ್ಥಳೀಯ ಎಮಿರಾಟಿ ಗಳು ಯಾರು? ಹೊರಗಿನಿಂದ ವಲಸೆ ಬಂದವರು ಯಾರು? ಪ್ರವಾಸಿಗರು ಯಾರು? ಎಂದು ಗುರುತಿಸುವುದು ಕಷ್ಟ. ಈ ನಗರದಲ್ಲಿ ೩.6 ಮಿಲಿಯನ್ ಜನರು ವಾಸವಾಗಿದ್ದಾರೆ. ಯಾರು ಕಾರ್ಮಿಕ ವರ್ಗದವರು, ಯಾರು ವೈಟ್ ಕಾಲರ್ ಹುದ್ದೆಗಳಲ್ಲಿರುವವರು ಎಂದು ಸುಲಭವಾಗಿ ಗುರುತಿಸಬಹುದು. ಇಲ್ಲಿ ಹಲವಾರು ದೇಶಗಳಿಂದ ವಲಸೆ ಬಂದ ಜನರಿದ್ದಾರೆ. ಇದು ಬಹುಮುಖಿ ಸಂಸ್ಕೃತಿಯ ನಗರ. ತೀವ್ರಗತಿಯಲ್ಲಿ ನಗರ ಬೆಳೆಯುತ್ತಿದೆ. ಇಲ್ಲಿಯ ಜನಗಣತಿ
(ಡೆಮೊಗ್ರಾಫಿ) ಮಾಹಿತಿಗಳು ಸ್ವಾರಸ್ಯಕರವಾಗಿದೆ. ಇಲ್ಲಿ ಸುಮಾರು ೬೦% ದಕ್ಷಿಣ ಏಷ್ಯಾ ಮೂಲದವರು; ಭಾರತೀಯರು ೪೦%, ಪಾಕಿಸ್ತಾನಗಳು ೧೦%, ಬಾಂಗ್ಲಾದೇಶದವರು ೧೦%, ಈಜಿಪ್ಟಿನವರು ೧೦%, ಫಿಲಿಫೈನ್ಸ್ ೬%, ಪಶಿಮತ್ಯ ಮತ್ತು ಇತರರು ೧೩%. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸ್ಥಳೀಯ ಎಮಿರಾಟಿಗಳು ೧೨% ಅಷ್ಟೇ! ಒಟ್ಟಾರೆ ನೋಡಿದಾಗ ಹೊರಗಿನಿಂದ ವಲಸೆ ಬಂದವರು ೮೮%, ಮತ್ತು ಸ್ಥಳೀಯರು ಕೇವಲ ೧೨%. ಅಂದರೆ ಸಂಖ್ಯೆ ಲೆಕ್ಕದಲ್ಲಿ ಇಲ್ಲಿ ಎಮಿರಾಟಿಗಳೇ ಅಲ್ಪಸಂಖ್ಯಾತರು! ಪಾಶ್ಚಿಮಾತ್ಯ ದೇಶಗಳಲ್ಲಿ ವಲಸೆ ಬರುವವರ ಬಗ್ಗೆ ಅಂಜಿಕೆ ಇರುವವವರು ಈ ಡೆಮೊಗ್ರಾಫಿಯನ್ನು ಗಮನಿಸಬೇಕು. ವಲಸೆ ಬಂದವರು ಒಂದು ದೇಶಕ್ಕೆ ಹೊರೆಯಾಗದೇ ಅದರ ಆರ್ಥಿಕ ಉನ್ನತಿಗೆ ಕಾರಣರಾಗಬಹುದು ಎಂಬ ವಿಚಾರವನ್ನು ಈ ಅರಬ್
ರಾಷ್ಟ್ರದ ಮಾದರಿಯ ಹಿನ್ನೆಲೆಯಲ್ಲಿ ಕಲಿಯಬೇಕು. ಸಂಯುಕ್ತ ಅರಬ್ ಸಂಸ್ಥಾನಗಳ ಈ ದೇಶದ ಮತ್ತು ಪಾಶ್ಚಿಮಾತ್ಯದೇಶಗಳ ಹೋಮ್ ಆಫೀಸ್ ಮತ್ತು ವೀಸಾ ನಿಯಮಗಳನ್ನು, ಅರ್ಹತೆ ಮತ್ತು ಹಕ್ಕುಗಳನ್ನು ಹೋಲಿಸಲು ಸಾಧ್ಯವಿಲ್ಲವಾದರೂ ಈ ಮಾಹಿತಿಗಳು ಗಮನಾರ್ಹ. ಪಾಶ್ಚಿಮಾತ್ಯ ದೇಶಗಳಲ್ಲಿ ವಲಸೆ ಎಂಬುದುನ್ನು ನೇತ್ಯಾತ್ಮಕವಾಗಿ ಕಾಣಲಾಗುತ್ತಿದೆ ಮತ್ತು ಅಲ್ಲಿನ ಬಿಳಿಯರು ವಲಸಿಗರನ್ನು ಅನ್ಯರೆಂಬ ಭಾವನೆಯಲ್ಲಿ ಕಂಡು ಅವರು ತಮ್ಮ ದೇಶದ ಸಂಪನ್ಮೂಲಗಳನ್ನು ಕಬಳಿಸುತ್ತಾರೆ, ತಮ್ಮ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಾರೆ ಎಂಬ ಊಹೆಯಲ್ಲಿ ಆತಂಕಗೊಂಡಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ವಲಸೆ ಎಂಬುದು ಜನಾಂಗಭೇಧ (ರೇಸಿಸಂ) ಭಾವನೆಗಳನ್ನು ಮೂಡಿಸಿ ಘರ್ಷಣೆಗೆ ಕಾರಣವಾಗಿದೆ. ಯು.ಕೆ ಯಲ್ಲಿ ಮಧ್ಯ ಪೂರ್ವ ರಾಷ್ಟ್ರಗಳ ಮತ್ತು ಆಫ್ರಿಕಾ ದೇಶಗಳ ಬಡ ನಿರಾಶ್ರಿತರು ಮಿತಿಮೀರಿದ ಸಂಖ್ಯೆಯಲ್ಲಿ ವಲಸೆ ಬಂದಾಗ ಎಲ್ಲರನ್ನೂ ಒಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಬ್ರಿಟನ್ನಿನ ಆತಂಕ ಅರ್ಥವಾಗುವಂತಹುದು. ಆದರೆ ಕಳೆದ ಕೆಲವು ವರ್ಷಗಳ ಹಿಂದೆ ತಮ್ಮದೇ ಸಂಸ್ಕೃತಿಯ, ತಮ್ಮದೇ ಧರ್ಮದ, ತಮ್ಮದೇ ಬಣ್ಣದ ಯೂರೋಪಿನ್ ವಲಸಿಗರ ಯು.ಕೆಗೆ ಉದ್ಯೋಗವನ್ನು ಅರಸಿ ಬರುತ್ತಿರುವಾಗ ಅವರ ಬಗ್ಗೆ ಸಂಶಯಾಸ್ಪದಗಳು ಮೂಡಿ ಅದು ಬ್ರೆಕ್ಸಿಟ್ಟಿಗೆ ಕಾರಣವಾಯಿತು. ಬಹುಶ ಇಂಡಿಯಾ ಮತ್ತು ಇತರ ಉಪ ರಾಷ್ಟ್ರಗಳಿಂದ ಉದ್ಯೋಗ ಅರಸಿ ದುಬೈಗೆ ಬರುವ ವಲಸಿಗರ ಬಗ್ಗೆ ಅರಬ್ಬರಿಗೆ ಸಧ್ಯಕ್ಕೆ ಆ ಆತಂಕವಿಲ್ಲವೆನ್ನಬಹುದು. ಈ ರಾಷ್ಟ್ರಗಳು ಇನ್ನು ಅಭಿವೃದ್ಧಿಗೊಳ್ಳುತ್ತಿವೆ, ಉದ್ಯೋಗ ಅವಕಾಶ ಇನ್ನೂ ಇದೆ, ಮುಂದೆ ಇವರ ನಿಲುವು ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕು.

ದುಬೈ ಮತ್ತು ಇತರ ನಗರಗಳ ಬಹು ಅಂತಸ್ತಿನ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವವರು ಬಹುಪಾಲು ದಕ್ಷಿಣ ಏಷ್ಯಾದಿಂದ ಬಂದ ಬಡ ವಲಸಿಗರು. ಅದರಲ್ಲೂ ಕೇರಳದಿಂದ ಬಂದ ಜನರು ಅಧಿಕ. ಕೇರಳದಲ್ಲಿ ಟ್ರೇಡ್ ಯೂನಿಯನ್ ಗಳು ಬಲವಾಗಿದ್ದು ಅಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳನ್ನು ಚಲಾಯಿಸಿ ಹೆಜ್ಜೆ ಹೆಜ್ಜೆಗೂ ಹರತಾಳವನ್ನು ಕೈಗೊಳ್ಳುತ್ತಾರೆ ಎಂದು ತಿಳಿದಿದ್ದೇನೆ. ಅರಬ್ ರಾಷ್ಟ್ರಗಳಲ್ಲಿ ಈ ಕಾರ್ಮಿಕರಿಗೆ ಯಾವ ಟ್ರೇಡ್ ಯೂನಿಯನ್ ಗಳನ್ನೂ ಕಟ್ಟಿಕೊಳ್ಳುವ ಹಕ್ಕಿಲ್ಲ. ಇವರಲ್ಲಿ ಕೆಲವರು ಶೋಷಣೆಗೆ ಒಳಗಾಗಿದ್ದಾರೆ ಎಂದು ಕೆಲವು ಮಾನವೀಯ ಹಕ್ಕುಗಳ ಸಂಘ ಸಂಸ್ಥೆಗಳು ಅಸಮಾಧಾನವನ್ನು ವ್ಯಕ್ತಪಡಿಸಿವೆ. ಅವರ ಕ್ಷೇಮಾಭಿವೃದ್ಧಿಯನ್ನು ಗಮನಿಸ ಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇಲ್ಲಿ ಹರತಾಳ ಮಾಡುವ ಕಾರ್ಮಿಕರನ್ನು ಡಿಪೊರ್ಟ್ ಮಾಡಲಾಗುತ್ತದೆ. ನನ್ನ ಮಿತವಾದ ಅರಿವಿನಲ್ಲಿ, ಇಲ್ಲಿಯ ಭಾರತೀಯ ಮೂಲದವರೊಡನೆ ಮಾತನಾಡಿದ ಬಳಿಕ ಇಲ್ಲಿ ವಲಸೆ ಬಂದ ಉದ್ದಿಮೆದಾರರು, ವೃತ್ತಿಪರರು, ಕೆಳವರ್ಗದ ಕಾರ್ಮಿಕರು ಎಲ್ಲರೂ ಖುಷಿಯಿಂದ ಇದ್ದಾರೆ ಎಂದೆನಿಸಿತು. ಅವರವರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಇಲ್ಲಿ ಊಟ, ತಿಂಡಿ, ಮನೋರಂಜನೆ ಬಟ್ಟೆ ಬರೆ ದೊರೆಯುತ್ತದೆ. ಸಾರ್ವಜನಿಕ ಸಾರಿಗೆ ಸೌಲಭ್ಯಗಳು ಇನ್ನು ಉತ್ತಮವಾಗಬಹುದು. ದುಬೈ ಮೆಟ್ರೋವನ್ನು ಎಲ್ಲರೂ ಬಳಸುತ್ತಿದ್ದಾರೆ. ದುಬೈ, ಅಬುದಾಬಿ ಮತ್ತು ಇತರ ನಗರಗಳಲ್ಲಿ ಪ್ರಪಂಚದ ಎಲ್ಲರೀತಿ ಊಟ ತಿಂಡಿ ದೊರೆಯುತ್ತದೆ. ಹಲವು ಸಂಸ್ಕೃತಿಗಳು ಕರಗುವ ಕಡಾಯಿ ಅಮೇರಿಕ ಮತ್ತು ಯುರೋಪ್ ನಗರಗಳಷ್ಟೇ ಅಲ್ಲ, ದುಬೈ ಕೂಡ ಅದರಲ್ಲಿ ಒಂದು ಎಂದು ಪರಿಗಣಿಸಬಹುದು. ದುಬೈ ಕ್ರೀಕ್ ಪಕ್ಕದಲ್ಲೇ ಇರುವ ಹಳೇ ಬರ್ ದುಬೈ ಪ್ರದೇಶದಲ್ಲಿರುವ ಮೀನಾ ಬಜಾರನ್ನು ನಾವು ಪ್ರವೇಶಿಸಿದಾಗ ಅಲ್ಲಿ ಕಾಣುವುದು ನಮ್ಮ ಭಾರತದ ಉಡುಪು, ತಿಂಡಿ, ಚಿನ್ನ, ಆಭರಣ, ದಿನ ನಿತ್ಯ ಬಳಕೆ ವಸ್ತು ಇವುಗಳನ್ನು ಮಾರುವ ನೂರಾರು ಅಂಗಡಿಗಳು! ಗ್ರಾಹಕರನ್ನು ಹಲವಾರು ಭಾರತೀಯ ಭಾಷೆಗಳಲ್ಲಿ 'ಬನ್ನಿ ಸಾರ್, ಬನ್ನಿ ಮೇಡಂ; ಪರ್ಸ್ ನೋಡಿ, ವಾಚ್ ನೋಡಿ' ಎಂದು ದುಂಬಾಲು ಬೀಳುವ ವ್ಯಾಪಾರಿಗಳನ್ನು, ಅವರ ಸೇಲ್ಸ್ ಏಜೆಂಟುಗಳನ್ನು ಗಮನಿಸಿದಾಗ ನಾವು ಬೆಂಗಳೂರಿನ ಚಿಕ್ಕಪೇಟೆಯಲ್ಲೋ ಅಥವಾ ಚೆನ್ನಾಯಿನ ಮಾರ್ಕೆಟ್ಟಿನಲ್ಲೊ ಇದ್ದಂತೆ ಅನಿಸುತ್ತದೆ. ಇವುಗಳ ನಡುವೆ ನಮಗೆ ದೊರಕಿದ ಹಲ್ದಿರಾಮ್, ಪೂರಣಮಲ್, ಕೊನೆಗೆ ನಮ್ಮ ದಕ್ಷಿಣ ಭಾರತದ ಸರ್ವಾಣ ಭವನ್ ಖುಷಿ ತಂದಿತು. ಈ ಪ್ರದೇಶವನ್ನು ಬಿಟ್ಟು ಮೆಟ್ರೋ ಹತ್ತಿ ದುಬೈ ಮಾಲ್ ಆಸುಪಾಸನ್ನು ತಲುಪಿದರೆ ಅಲ್ಲಿ ಲೆಕ್ಕವಿಲ್ಲದ ನೂತನ ವಿನ್ಯಾಸದ ಕಟ್ಟಡಗಳು, ನಗರ ಮಧ್ಯದ ಕಾಲುವೆಗಳು, ಕಾರಂಜಿಗಳು, ಥಳ ಥಳಿಸುವ ದೀಪಾಲಂಕಾರಗಳು, ದುಬಾರಿ ಬೆಲೆ ವಸ್ತುಗಳನ್ನು ಮಾರುವ ಹೈ ಎಂಡ್ ಶೋ ರೂಂಗಳು ಕಾಣುತ್ತವೆ. ಇಲ್ಲಿ ಪಾಶ್ಚಿಮಾತ್ಯರು ಅಧಿಕ ಸಂಖ್ಯೆಯಲ್ಲಿ ಕಾಣುತ್ತಾರೆ. ಇವೆಲ್ಲಾ ನೋಡಿದಾಗ ನಾವು ಯೂರೋಪಿನಲ್ಲೋ ಅಥವಾ ಅಮೆರಿಕದಲ್ಲೋ ಇರುವ ಭಾವನೆ ಉಂಟಾಗುತ್ತದೆ. ಹೀಗೆ ದುಬೈ ಏಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ಸೇತುವೆಯಾಗಿ ನಿಂತಿದೆ. ಇಲ್ಲಿ ನೆಲೆಸಿರುವ ಪ್ರಪಂಚದ ಎಲ್ಲ ಜನರು ತಮ್ಮ ತಮ್ಮ ಸಾಂಸ್ಕೃತಿಕ ಪ್ರಜ್ಞೆಗೆ ನಿಲುಕುವ ಈ ನಗರವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇಲ್ಲಿಯ ಎಮಿರಾಟಿಗಳು ಸ್ಥಳೀಯರಾಗಿದ್ದು ಜನಸಂಖ್ಯೆಯಲ್ಲಿ ಅವರೇ ಮೈನಾರಿಟಿಗಳಾಗಿದ್ದರೂ ಸರ್ಕಾರದ ಮತ್ತು ಆಡಳಿತದ ಸ್ಥಾನ ಅವರಿಗಷ್ಟೇ ಮೀಸಲಾಗಿದೆ. ವಲಸೆ ಬಂದವರಿಗೆ ಕೆಲಸಕ್ಕೆ ಹೊಂದುವಂತಹ ವೀಸಾ ಕೊಡಲಾಗುತ್ತದೆ. ವೀಸಾ ಪಡೆದನಂತರ ಸ್ಥಳೀಯ ನೌಕರಿ ನೀಡಿದ್ದ ಸಂಸ್ಥೆ ಒಂದರಿಂದ ಮೂರು ವರ್ಷದ ವರೆಗೆ ರೆಸಿಡೆನ್ಸ್ ಸ್ಟೇಟಸ್ ನೀಡುತ್ತದೆ. ಅದನ್ನು ಮತ್ತೆ ಮತ್ತೆ ವಿಸ್ತರಿಸಬೇಕಾಗುತ್ತದೆ. ಇಲ್ಲಿ ಖಾಯಂ ಆಗಿ ನೆಲೆಸಲು ಸಾಧ್ಯವಿಲ್ಲ. ಬಹುಶ ಈ ಕಾರಣಕ್ಕಾಗಿ ಹೆಚ್ಚಿನ ಜನ ಈ ದೇಶಗಳಿಗೆ ನಿರಾಶ್ರಿತರಾಗಿ ಬರುವುದಿಲ್ಲ. ವಿಶೇಷ ತಜ್ಞರಿಗೆ ೧೦ ವರ್ಷಗಳ ಮಟ್ಟಿಗೆ ರೆಸಿಡೆನ್ಸಿ ದೊರಕಬಹುದು. ನಿವೃತ್ತಿ ನಂತರ ಉದ್ಯೋಗಿಗಳು ತಮ್ಮ ದೇಶಕ್ಕೆ ಮರಳಬೇಕಾಗುತ್ತದೆ. ಇಲ್ಲಿ ಕೆಲವು ಹೊರತುಗಳು ಇರಬಹುದು. ಸ್ಥಳೀಯ ಎಮಿರಾಟಿಗಳಿಗೆ ವಿಶೇಷ ಸೌಲಭ್ಯಗಳಿವೆ. ಹೀಗಾಗಿ ಅರಬ್ಬರು “ಹುಟ್ಟಿದರೇ….ಎಮಿರಾಟಿಗಳಾಗಿ ಹುಟ್ಟಬೇಕು"! ಎಂದು ಹಾಡಬಹುದು.

ಈ ಒಂದು ಹಿನ್ನೆಲೆಯಲ್ಲಿ ಒಂದು ಲಘು ಹಾಸ್ಯ ಪ್ರಸಂಗವನ್ನು ಹಂಚಿಕೊಳ್ಳುತ್ತಿದ್ದನೇ. ನಾವು, ರಮೇಶ್ ಮತ್ತು ಅವರ ಮಿತ್ರರಾದ ಪ್ರತಾಪ್ ಮತ್ತು ವಿಜಯ ಅವರ ಅಬುದಾಬಿ ಮನೆಯಲ್ಲಿ ತಂಗಿದ್ದೆವು. ಒಂದು ಬೆಳಗ್ಗೆ ಉಪಹಾರದ ವೇಳೆಯಲ್ಲಿ ನಾನು ರೆಡಿಯಾಗಿ ಗರಿ ಗರಿಯಾಗಿ ಇಸ್ತ್ರಿಮಾಡಿದ್ದ ಪ್ಯಾಂಟ್, ಶರ್ಟ್ ಮತ್ತು ಥಳ ಥಳಿಸುವ ಶೂ ಕಟ್ಟಿ ಕೆಳಗೆ ಬಂದೆ. ನನ್ನನ್ನು ಗಮನಿಸಿದ ಪ್ರತಾಪ್ ಕೂಡಲೇ "ನೋಡಿ ಪೂರ್ಣಿಮಾ, ಪ್ರಸಾದ್ ಅವರು ಯಂಗ್ ಆಗಿ, ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ, ಅವರಿಗೆ ಇನ್ನೊಂದು ಮಾಡುವೆ ಮಾಡಿಬಿಡಬಹುದು" ಎಂದು ಕೀಟಲೆಯ ಮಾತುಗಳನ್ನಾಡಿದರು. ನಾನು ಕೂಡಲೇ "ಪ್ರತಾಪ್ ನನಗೊಂದು ಎಮಿರಾಟಿ ಹೆಣ್ಣನ್ನು ನೋಡಿ, ನಾನು ಮದುವೆಯಾಗಿ ಅಬುದಾಬಿಯಲ್ಲಿ ಶೇಕ್ ಆಗಿ, ನಿಶ್ಚಿಂತೆಯಾಗಿ, ಖಾಯಂ ಆಗಿ ಇದ್ದು ಬಿಡುತ್ತೇನೆ" ಎಂದೆ. ಅಂದಹಾಗೆ ಎಮಿರಾಟಿ ಹೆಂಗಸರು ಹೊರಗಿನವರನ್ನು ಮದುವೆಯಾಗುವುದು ನಿಷಿದ್ಧ. ಕಾನೂನು ಬಾಹಿರವಾದದ್ದು.

ಇಲ್ಲಿ ಎಮಿರಾಟಿಗಳೇ ಆಗಿರಲಿ ಅಥವಾ ಹೊರಗಿನವರೇ ಆಗಿರಲಿ ಗಂಡು ಹೆಣ್ಣುಗಳು ಬಹಿರಂಗವಾಗಿ ತಮ್ಮ ಪ್ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಇತ್ತೀಚಿಗೆ ಕಾನೂನು ಸ್ವಲ್ಪ ಸಡಿಲಗೊಂಡು ಕೈ ಕೈ ಹಿಡಿಯಬಹುದು. ಹಿಂದೆ ಇಲ್ಲಿ ಬಹಿರಂಗವಾಗಿ ಚುಂಬನದಲ್ಲಿ ತೊಡಗಿದ್ದ ಪಾಶ್ಚಿಮಾತ್ಯ ಗಂಡು ಹೆಣ್ಣು ಜೋಡಿಯನ್ನು ಅಪರಾಧಿಗಳೆಂದು ಪರಿಗಣಿಸಲಾಗಿತ್ತು. ದುಬೈ, ಅಬುದಾಬಿಗೆ ಬರುವ ಪ್ರವಾಸಿಗಳು ಇಲ್ಲಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ನಿಯಮಗಳನ್ನು ಅರಿತುಕೊಳ್ಳುವುದು ಒಳಿತು. ಧಾರ್ಮಿಕ ಸ್ಥಳಗಳನ್ನು ಹೊರತಾಗಿ ಇಸ್ಲಾಂ ಧರ್ಮದ ಹೊರಗಿನ ಗಂಡಸರ ಮತ್ತು ಹೆಂಗಸರ ಉಡುಗೆ ತೊಡುಗೆಗಳ ಬಗ್ಗೆ ಹೆಚ್ಚಿನ ನಿರ್ಬಂಧೆಗಳು ಇಲ್ಲ. ಆದರೂ ಹೆಂಗಸರು ತಮ್ಮ ಉಡುಗೆಯ ಬಗ್ಗೆ, ಸಭ್ಯತೆಯ ಬಗ್ಗೆ, ಗಮನ ನೀಡುವುದು ಒಳಿತು. ಇಲ್ಲಿಯ ನ್ಯಾಯಾಂಗದಲ್ಲಿ ಇಸ್ಲಾಂ ಧರ್ಮದವರಿಗೆ ಮದುವೆ, ವಿವಾಹ ವಿಚ್ಛೇದನೆ, ಅಸ್ತಿ ವಿಸರ್ಜನೆ ಈ ವಿಷಯಗಳಲ್ಲಿ ಷರಿಯಾ ಕಾನೂನು ಅನ್ವಯವಾಗುತ್ತದೆ. ಅನ್ಯ ಧರ್ಮಿಗಳಿಗೆ ಸಿವಿಲ್ ಕಾನೂನು ಅನ್ವಯವಾಗುತ್ತದೆ. ಹಿಂದೆ ಇದ್ದ ಭಯಂಕರ ಉಗ್ರ ಶಿಕ್ಷೆಗಳಾದ ಕೈ ಕಡಿಯುವುದು, ಚಾಟಿ ಏಟು ಮುಂತಾದ ಹಿಂಸಾತ್ಮಕ ಶಿಕ್ಷೆಗಳನ್ನು ರದ್ದುಮಾಡಲಾಗಿದೆ. ನಾಸ್ತಿಕ ವಾದ ಮತ್ತು ಧರ್ಮ ನಿರಪೇಕ್ಷೆ ಒಂದು ಆಯ್ಕೆ ಅಲ್ಲ. ಇಲ್ಲಿ ಅದು ಅಪರಾಧ. ಇಲ್ಲಿ ಹೊರಗಿನವರು ಪರ್ಮಿಟ್ ಇರುವ ನಿಗದಿತ ಬಾರುಗಳಲ್ಲಿ, ಹೋಟೆಲಿನಲ್ಲಿ, ಮನೆಗಳಲ್ಲಿ ಮದ್ಯಪಾನ ಮಾಡಬಹುದು. ಇಲ್ಲಿ ಎಲ್ಲ ದೇಶಗಳ ವಿಸ್ಕಿ, ವೈನ್ ಇತ್ಯಾದಿ ದೊರೆಯುವ ಅಂಗಡಿಗಳು ತೆರೆಯಲ್ಪಟ್ಟಿವೆ. ಇಲ್ಲಿ ವಾರಾಂತ್ಯವನ್ನು ಶುಕ್ರವಾರದ ಬದಲಿಗೆ ಪ್ರಪಂಚದ ಇತರ ದೇಶಗಳ ಅಂತರರಾಷ್ಟ್ರೀಯ ಕೆಲಸ ಕಾರ್ಯಗಳಿಗೆ ಹೊಂದುವಂತೆ ಶನಿವಾರ ಮತ್ತು ಭಾನುವಾರ ರಜಾದಿನಗಳಾಗಿ ಬದಲಾಯಿಸಲಾಗಿದೆ. ಇಸ್ಲಾಂ ಧರ್ಮಾದವರಿಗೆ ಶುಕ್ರವಾರ ಪ್ರಾರ್ಥನೆ ಮಾಡಲು ಅನುವು ಮಾಡಿಕೊಡಲಾಗಿದೆ. ನಿಧಾನವಾಗಿ ಹೊರಗಿನ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಾ ಒಂದು ಹದವಾದ ಹತೋಟಿಯಲ್ಲಿ ಈ ರಾಷ್ಟ್ರ ಬದಲಾಗುತ್ತಿದೆ.

ನಾನು ಪ್ರವಾಸ ಮಾಡುವ ಸಂದರ್ಭದಲ್ಲಿ ಭಾರತದ ಪ್ರಧಾನಿ ಮೋದಿ ಅವರು ಆಗಮಿಸಿ ಅಬುದಾಬಿಯ ಹಿಂದೂ ದೇವಾಲಯದ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದರು ಎಂದು ಸುದ್ದಿವಾಹಿನಿಯಿಂದ ತಿಳಿದೆ. ಇಸ್ಲಾಂ ಧರ್ಮದ ಕಟ್ಟು ನಿಟ್ಟುಗಳ ಮಧ್ಯೆ ಸಂಯುಕ್ತ ಅರಬ್ ರಾಷ್ಟ್ರದಲ್ಲಿ (UAE) ಪ್ರಸಕ್ತ ಭಾರತಕ್ಕಿಂತ ಹೆಚ್ಚು ಧಾರ್ಮಿಕ ಸಹಿಷ್ಣುತೆ ಇದೆಯೆಂದು ಅರಿತ್ತಿದ್ದೇನೆ. ಇಲ್ಲಿ ಮಸೀದಿ, ಮಂದಿರ ಮತ್ತು ಚರ್ಚುಗಳು ಒಂದರ ಪಕ್ಕ ಇನ್ನೊಂದಿದ್ದು ಜನ ಧಾರ್ಮಿಕ ಸೌಹಾರ್ದತೆಯನ್ನು ಉಳಿಸಿಕೊಂಡಿದ್ದಾರೆ, ಎಲ್ಲರಿಗೂ ಅವರವರ ಧಾರ್ಮಿಕ ನಂಬಿಕೆಗಳ ಜೊತೆ ಅನ್ಯ ಧರ್ಮದವರ ಬಗ್ಗೆ ಗೌರವವಿದೆ ಎಂದು ನಮನ್ನು ದುಬೈ ನಗರದಿಂದ ಅಲೈನ್ ನಗರಕ್ಕೆ ಕರೆತಂದ ಪಾಕಿಸ್ತಾನದ ಪೇಶಾವರ್ ಮೂಲದ ಪಠಾಣ್ ಖಾನ್ ಎಂಬ ಟ್ಯಾಕ್ಸಿ ಡ್ರೈವರ್ ಮೂಲಕ ತಿಳಿಯಿತು. ಈತನಿಗೆ ಭಾರತೀಯ ಮೂಲದ ಜನರ ಬಗ್ಗೆ ಸ್ನೇಹ ವಿಶ್ವಾಸ ಗೌರವಗಳಿರುವುದನ್ನು ಕಂಡು ಸಂತೋಷವಾಯಿತು. ಇಂದಿನ ಭಾರತದಲ್ಲಿ ಧರ್ಮವೆಂಬ ಅಮಲಿನಲ್ಲಿ ನಾವು ಹಿಂದೂ ಅಲ್ಲದವರನ್ನು, ಅದರಲ್ಲೂ ಇಸ್ಲಾಂ ಧರ್ಮದವರನ್ನು ಹೀಯಾಳಿಸಿ ಎರಡನೇದರ್ಜೆ ಪ್ರಜೆಗಳಂತೆ ಕಾಣುತ್ತಿರುವ ಪರಿಸ್ಥಿತಿಯಲ್ಲಿ ಪಠಾಣ್ ಖಾನ್ ಒಬ್ಬ ಆಪ್ತನಾಗಿ ಕಂಡುಬಂದ. ಅವನು ತನ್ನ ಪಾಕಿಸ್ತಾನದ ರಾಜಕೀಯ ಹುಳುಕುಗಳನ್ನು, ಅಲ್ಲಿಯ ಅಸಮರ್ಥ ಆಡಳಿತವನ್ನು ಮತ್ತು ತನ್ನ ಸ್ವಂತ ಕಷ್ಟಗಳನ್ನು ನಮ್ಮೊಂದಿಗೆ ಹಂಚಿಕೊಂಡ. “ಹಿಂದೊಮ್ಮೆ ನಾವು ಒಂದೇ ಅವಿಭಾಜ್ಯ ದೇಶದ ಪ್ರಜೆಗಳಾಗಿದ್ದೆವು, ವೈಯುಕ್ತಿಕ ನೆಲೆಯಲ್ಲಿ ನಾವೆಲ್ಲಾ ಮಿತ್ರರೇ ಆಗಿದ್ದರೂ, ಎರಡೂ ದೇಶಗಳ ರಾಜಕಾರಣ ನಮ್ಮನ್ನು ದೂರವಾಗಿಸಿದೆ” ಎಂದು ವ್ಯಥೆ ಪಟ್ಟ. ಅವನ ಪ್ರಾಮಾಣಿಕ ಅನಿಸಿಕೆಗಳನ್ನು ನಾವು ಒಪ್ಪಿಕೊಂಡೆವು. ಒಂದು ದೇಶದ ಒಳಗೇ ಬದುಕುತ್ತಿರುವಾಗ ಒಂದು ಸಂಕುಚಿತ ಐಡಿಯಾಲಾಜಿಗೆ ಬದ್ಧರಾಗಿ, ನಮ್ಮ ಆಲೋಚನಾಕ್ರಮಗಳ ಆಚೆಗೆ ನಾವು ವಿಚಾರ ಮಾಡುವುದಿಲ್ಲ. ನಮಗೆ ತಿಳಿದದ್ದೇ ಸರಿ, ಎಲ್ಲರು ಹೇಳುತ್ತಿರುವುದು ಸರಿ ಎಂದು ಕುರಿಯ ಮಂದೆಯ ಹಾಗೆ ಪರಿಣಾಮಗಳನ್ನು ಚಿಂತಿಸದೆ ಅನುಸರಿಸುತ್ತೇವೆ. ದೇಶ, ಗಡಿ ಸಂಸ್ಕೃತಿಗಳನ್ನು ದಾಟಿ ಹೊಸ ದಿಂಗಂತದಲ್ಲಿ ಕಾಲಿಟ್ಟಾಗ ಹಳೇ ಬ್ಯಾಗೇಜುಗಳಾದ ದೇಶಭಕ್ತಿ, ದೇಶಪ್ರೇಮಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡು ಅಲ್ಲಿ ವಿಶ್ವ ಮಾನವ ಪ್ರಜ್ಞೆ ಉಂಟಾಗುತ್ತದೆ. ಈ ವಿಚಾರವನ್ನು ಅರಿಯಲು ದೇಶದ ಹೊರಗೇನು ಕಾಲಿಡಬೇಕಾಗಿಲ್ಲ. ಒಂದು ಬಹುಮುಖಿ ಸಂಸ್ಕೃತಿಯಲ್ಲಿ ಬದುಕುವವರಿಗೆ ಹೊಳೆಯಬೇಕು. ಕೆಲವರಿಗೆ ಈ ವಿಚಾರಗಳು ಸುಲಭದಲ್ಲಿ ಹೊಳೆಯುತ್ತವೆ, ಕೆಲವರಿಗೆ ಹೊಳೆಯುವುದಿಲ್ಲ. ಮುಸ್ಲಿಂ ಧರ್ಮಾಂದತೆ, ಐಸಿಸ್ ಭಯೋತ್ಪಾದನೆ, ಹಿಂದೂಗಳ ಹಿಂದುತ್ವ ವಾದ, ಜಾತಿವಾದ, ಬಿಳಿಯರ ರೇಸಿಸಂ ಹೀಗೆ ಒಂದೊಂದು ಐಡಿಯಾಲಜಿಯ ಆಳಕ್ಕೆ ಇಳಿದವರನ್ನು ಕಂಡಾಗ ಒಂದು ಉಕ್ತಿ ನೆನಪಾಗುತ್ತದೆ ಅದು ಹೀಗಿದೆ; "ಭಾವಿಯ ಒಳಗೇ ಇರುವ ಕಪ್ಪೆಗಳಿಗೆ ಸಾಗರದ ವಿಸ್ತಾರವನ್ನು ತೋರಿಸುವುದಾದರೂ ಹೇಗೆ?"

ಅಂದಹಾಗೆ ಅರಬ್ ಸಂಯುಕ್ತ ರಾಷ್ಟ್ರವು ವಾಸಿಸಲು ಯೋಗ್ಯಸ್ಥಳವಾಗಿ ಇಲ್ಲಿ ಹಲವಾರು ಉದ್ಯೋಗ ಅವಕಾಶಗಳು ಇರುವಾಗ ಮಧ್ಯಪೂರ್ವ ದೇಶಗಳಾದ ಸಿರಿಯಾ, ಲಿಬಿಯಾ, ಇರಾಕ್ ಮುಂತಾದ ದೇಶಗಳಲ್ಲಿ ಯುದ್ಧಗಳಾಗಿ ಸ್ಥಳಾಂತರಗೊಂಡ ನಿರಾಶ್ರಿತರಿಗೆ ಈ ಶ್ರೀಮಂತ ಅರಬ್ ರಾಷ್ಟ್ರಗಳು ಏಕೆ ಆಶ್ರಯ ನೀಡುತ್ತಿಲ್ಲ? ಅವರು ಇಸ್ಲಾಂ ಧರ್ಮದವರಲ್ಲವೇ? ದೂರದಲ್ಲಿರುವ ಮತ್ತು ಭಿನ್ನ ಸಂಸ್ಕೃತಿಯುಳ್ಳ ಅಮೇರಿಕ, ಯು.ಕೆ, ಯುರೋಪ್ ದೇಶಗಳಿಗೆ ಏಕೆ ಈ ನಿರಾಶ್ರಿತರು ಲಗ್ಗೆ ಇಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಅರಬ್ ರಾಷ್ಟ್ರಗಳಿಗೂ ಸಾಮಾಜಿಕ ಜವಾಬ್ದಾರಿಗಳು ಇರಬೇಕಲ್ಲವೇ?

ಸಂಯುಕ್ತ ಅರಬ್ ಸಂಸ್ಥಾನಗಳ ಈ ರಾಷ್ಟ್ರವು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಅಧಿಕವಾದ ಅನಿಲ ಮತ್ತು ತೈಲ ಸಂಪನ್ಮೂಲಗಳನ್ನು ಒಳಗೊಂಡು ಅದನ್ನು ಸರಿಯಾಗಿ ವ್ಯವಸ್ಥಿತವಾಗಿ ಬಳಸಿ, ದಕ್ಷ ಆಡಳಿತವನ್ನು ನೀಡುತ್ತಾ ಬಂದಿದೆ. ಈ ಸಂಯುಕ್ತ ಅರಬ್ ರಾಷ್ಟ ಇಷ್ಟರ ಮಟ್ಟಿಗೆ ಬೆಳೆಯಲು ನೈಸರ್ಗಿಕ ಸಂಪನ್ಮೂಲಗಳಷ್ಟೇ ಕಾರಣವಲ್ಲ. ಇಲ್ಲಿ ಸ್ಥಿರವಾದ ರಾಜಕಾರಣವಿದೆ, ನಾಯಕತ್ವವಿದೆ. ಅಬುದಾಬಿಯ ರಾಜರು ಈ ಸಂಯುಕ್ತ ದೇಶದ ಅಧ್ಯಕ್ಷರು. ದುಬೈ ರಾಜ ಇಲ್ಲಿಯ ಪ್ರಧಾನಿ. ಅಬುದಾಬಿ ಈ ರಾಷ್ಟ್ರದ ರಾಜಧಾನಿ. ಇಲ್ಲಿಯಾ ಫೆಡರಲ್ ನ್ಯಾಷನಲ್ ಕೌನ್ಸಿಲ್ ಆಡಳಿತ ನಡೆಸುತ್ತದೆ. ೫೦% ಸದಸ್ಯರನ್ನು ನೇಮಕ ಮಾಡಲಾಗುತ್ತದೆ, ಉಳಿದರ್ಧ ಸದಸ್ಯರನ್ನು ಚುನಾಯಿಸಲಾಗುತ್ತದೆ. ಕೆಲವು ಮಧ್ಯಪೂರ್ವ ರಾಷ್ಟ್ರಗಳಲ್ಲಿ ಅರಬ್ ಸ್ಪ್ರಿಂಗ್ ಎಂಬ ಸರಕಾರದ ವಿರುದ್ಧ ನಡೆದ ಚಳುವಳಿ ಮತ್ತು ಪ್ರತಿಭಟನೆ ಈ ಅರಬ್ ಸಂಯುಕ್ತ ರಾಷ್ಟ್ರದಲ್ಲಿ ನಡೆದಿಲ್ಲ ಎಂಬುದನ್ನು ಗಮನಿಸಬೇಕು. ಇದಕ್ಕೆ ಕಾರಣವೆಂದರೆ ಇಲ್ಲಿರುವ ಹೆಚ್ಚಿನ ನಿವಾಸಿಗಳಲ್ಲಾ ಹೊರಗಿನವರೇ, ಅವರಿಗೆ ಪ್ರತಿಭಟಿಸುವ ಹಕ್ಕಿಲ್ಲ. ಪ್ರತಿಭಟಿಸಿದರೆ ಎಮಿರಾಟಿಗಳೇ ಪ್ರತಿಭಟಿಸಬೇಕು. ಎಮಿರಾಟಿ ಸಮುದಾಯದ ಕೆಲವರು ಪ್ರಭುತ್ವವನ್ನು ಪ್ರಶ್ನಿಸಿರುವ ಪ್ರಸಂಗಗಳಿವೆ, ಅದನ್ನು ಹತ್ತಿಕ್ಕಿ ಹತೋಟಿಯಲ್ಲಿಡಲಾಗಿದೆ. ಅನಿಲ ಮತ್ತು ತೈಲ ಸಂಪನ್ಮೂಲಗಳು ಶಾಶ್ವತವಲ್ಲ. ಮೇಲಾಗಿ ವಿಶ್ವದಲ್ಲೇ ಫಾಸ್ಸಿಲ್ ಇಂಧನ ಬಳಕೆ ಕಡಿಮೆ ಮಾಡಿ ಜಾಗತಿಕ ತಾಪಮಾನವನ್ನು ಹತೋಟಿಯಲ್ಲಿ ಇಡಲು ನಿರ್ಬಂಧನೆಗಳು ಮೂಡುತ್ತಿವೆ. ಈ ಹಿನ್ನಲೆಯಲ್ಲಿ ಅರಬ್ ಸಂಯುಕ್ತ ರಾಷ್ಟ್ರವು ಪ್ರವಾಸೋದ್ಯಮ, ವಿಮಾನ ಸಾರಿಗೆ, ಟೆಕ್ ಕಂಪನಿಗಳ ಉದ್ಯಮ, ಕೃಷಿ ಮತ್ತು ಇನ್ನಿತರ ಆದಾಯಗಳ ಕಡೆ ಗಮನ ಹರಿಸಬೇಕಾಗಿದೆ. ಹೊಸ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಬೇಕಾಗಿದೆ, ಇವುಗಳ ನಡುವೆ ಮಾನವೀಯ ಹಕ್ಕುಗಳನ್ನು, ಇಸ್ಲಾಂ ಧರ್ಮದ ಕಟ್ಟು ನಿಟ್ಟುಗಳನ್ನು, ಜಾಗತೀಕರಣ ತರುವ ಬದಲಾವಣೆಗಳನ್ನು, ಮತ್ತು ಇತರ ಸವಲಗಳನ್ನು ಎದುರಿಸಬೇಕಾಗಿದೆ. ಉದಾರವಾದ ನೀತಿಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ. 'ಪರಿವರ್ತನೆ ಜಗದ ನಿಯಮ' ಎಂಬ ವಿಚಾರ ಅರಬ್ಬರನ್ನೂ ತಟ್ಟುತ್ತಿದೆ.

***






2 thoughts on “

  1. ಪ್ರಸಾದ್ ಅವರು ಎರಡು ಭಾಗಗಳಲ್ಲಿ ಬರೆದ ಯುಎಇ ಪ್ರವಾಸ ಕಥನವನ್ನು ಆಸ್ಥೆಯಿಂದ ಓದಿದೆ. ಪ್ರಸಾದ್ ಅವರ ಬರಹಗಳು ವಿಚಾರಾತ್ಮಕ ಮತ್ತು ಸ್ವಲ್ಪ ಪ್ರಚೋದನಾತ್ಮಕ ಕೂಡ. ಅದಕ್ಕೆ ಈ ಲೇಖವನೂ ಹೊರತಲ್ಲ.

    ನನ್ನಷ್ಟೇ ವಯಸ್ಸಾಗಿರುವ ಯುಎಈ ಎಂಬ ಸಂಯುಕ್ತ ದೇಶವು ಆಧುನಿಕ ಜಗತ್ತಿಗಿಂತಲೂ ಅತ್ಯಾಧುನಿಕವಾಗಿ ಬೆಳೆದು ಪ್ರಪಂಚದ ಬಹುತೇಕ ಎಲ್ಲ ಅಗರ್ಭ ಶ್ರೀಮಂತರನ್ನೂ ತನ್ನ ಮಡಿಲಲ್ಲಿ ಹಾಕಿಕೊಂಡು ತನ್ನ ವಾಣಿಜ್ಯವನ್ನು ಇನ್ನೂ ಬೆಳೆಸುತ್ತಲೇ ಇದೆ.

    ನೀವು ಬರೆದಿರುವ ಇತಿಹಾಸದ ವಿವರಗಳು ದೇಶದ ಸ್ಥೂಲ ಪರಿಚಯವನ್ನು ಮಾಡಿಕೊಡುತ್ತದೆ. ನೀವು ಬರೆದಿರುವ ವಿವರಗಳನ್ನು ಓದುತ್ತ ನಾನು ಈ ಹಿಂದೆ ಮಾಡಿದ ಯುಎಇ ಪ್ರವಾಸವನ್ನು ನೆನಪಿಸಿತು. ಭಾರತವನ್ನು ಯುಎಇ ಜೊತೆ ತುಲನೆ ಮಾಡುತ್ತ ಬರೆದಿರುವ ಮಾತುಗಳು ಸಂವಾದಯೋಗ್ಯವಾಗಿವೆ.

    ಫಲಾಜ್ ನೀರಾವರಿಯ ಬಗ್ಗೆ ಉತ್ತಮ ಮಾಹಿತಿಯನು ಒದಗಿಸಿದ್ದೀರಿ, ಜೊತೆಗೆ ಸಸ್ಯಶಾಸ್ತ್ರದ ಬಗ್ಗೆನೂ ಮಾಹಿತಿಯನ್ನು ಕೊಟ್ಟಿದ್ದೀರಿ. ಎಲ್ಲವನ್ನೂ ತಿಳಿದುಕೊಳ್ಳಬೇಕೆನ್ನುವ ಕುತೂಹಲ ಪ್ರವಾಸವನ್ನು ಇನ್ನಷ್ಟು ಚಂದಗೊಳಿಸುತ್ತದೆ.

    ಯುಎಇ ಮತ್ತು ಯುಕೆಯ ಡೆಮೋಗ್ರಫಿಯನ್ನು ತುಲನೆ ಮಾಡಿ ಬರೆದ ಮಾತುಗಳು, ಮತ್ತು ಭಾರತ-ಪಾಕಿಸ್ಥಾನ, ಹಿಂದು-ಇಸ್ಲಾಂ ಬಗ್ಗೆ ಬರೆದ ಮಾತುಗಳು ಕೂಡ ಸಂವಾದಯೋಗ್ಯವಾಗಿವೆ.

    ತಲೆಗೆ ಸಾಕಷ್ಟು ಕೆಲಸ ಕೊಡುವ ಲೇಖನ – ಕೇಶವ

    Like

  2. ಡಾ ಪ್ರಸಾದವರ ಪ್ರವಾಸ ಕಥನದ ಎರಡನೆಯ ಭಾಗ ಆ ದೇಶದ (ರಾಜ್ಯಗಳ) ಇನ್ನೊಂದು ಪಾರ್ಶ್ವದ ಬಗ್ಗೆ ಬೆಳಕು ಚೆಲ್ಲುತ್ತದೆ ಮತ್ತು ವೀಕ್ಷಕನ  ಅಳತೆಯಲ್ಲಿ ಕಂಡದ್ದರ ಬಗ್ಗೆಯ ಚಿಂತನೆಗಳನ್ನು ತೆರೆದಿಡುತ್ತದೆ. ಇಂಥ  ಎಲ್ಲ ಬರಹಗಳಲ್ಲೂ ಓದುಗನಿಗೆ ಹೊಸ ವಿಷಯಗಳ  ಪರಿಚಯವಾಗುತ್ತದೆ. ಆತನ ಆಸ್ಥೆಗನುಗುಣುವಾಗಿ ಮತ್ತಷ್ಟು ಓದಲು ಪ್ರೇರೇಪಿಸುತ್ತದೆ. ನನಗೆ ಏನೂ ಗೊತ್ತಿರದ ಫಲಾಜ್ ( ಅಲ್  ಆಫ್ಲಾಜ್) ನೀರಾವರಿಯ ಬಗ್ಗೆ ಕುತೂಹಲದಿಂದ ಓದಿದೆ. ೩ ರಿಂದ ೫ ಸಾವಿರ ವರ್ಷಗಳ ಇತಿಹಾಸಡಾ ಆ ನೀರಾವರಿ ವ್ಯವಸ್ಥೆ , ರೋಮನ್ ಅಕ್ವಿಡಕ್ಟ್ ಕಿಂತ ಹಳೆಯದು ಅಂತ ಸಹ ಅಂತರ್ಜಾಲದಲ್ಲಿ ಕೆಲವೆಡೆ ಸಾಧಿಸುವದನ್ನು ಓದಿ ತಿಳಿದೆ. ಅದೇನೇ ಇರಲಿ, ಆ ಓಯಸಿಸ್ ದ ಮತ್ತು National Geographic ನಲ್ಲಿಯ ವಿಡಿಯೋ ನೋಡಿ, ಇದೇ ತರದ ಇರಾಣದ ‘ಕನಾಟ್’ quanat ಗಳ ಬಗ್ಗೆ ತಿಳಿದುಕೊಳ್ಳಲು ನಿಮಿತ್ತರಾದ  ಲೇಖಕರಿಗೆ ಅಭಿನಂದನೆಗಳು. ಈ ಕಲೆ ಸಿಲ್ಕ್ ರೂಟಗುಂಟ ಪೂರ್ವಕ್ಕೆ ಭಾರತ- ಚೀನ ತಲುಪಿತು ಅಂತ ಓದಿ ಆಶ್ಚರ್ಯ ಸಹ ಆಯಿತು. ರೋಮನ್ ಚಕ್ರವರ್ತಿಯ ಮಾತಿನಂತೆ ‘ವಿನಿ-ವಿಡಿ- ವಿಚಿ’ ಬದಲು comparari ( I went, I saw, I compared ) ಅನ್ನುವಂತೆ ತಾವು ಕಾಣುತ್ತಿರುವ ದೇಶವನ್ನು, ಭಾರತ ಮತ್ತು ಯೂರೋಪ್, (ಕರಗುವ ಕಡಾಯಿ) USA ಗೆ ತುಲನೆ ಮಾಡುತ್ತಾ ಸಾಮ್ಯ ವೈಶಿಷ್ಟ್ಯಗಳನ್ನೂ ಹೋಲಿಸುತ್ತ ತಮ್ಮ ವಿಚಾರಗಳನ್ನು ಸಾದರ ಪಡಿಸಿ ಚರ್ಚಿಸಿದ್ದಾರೆ. ನಾನು ಆ ದೇಶಕ್ಕೆ ಹೋಗಿರದ್ದರಿಂದ ಹೆಚ್ಚಿಗೆ ಹೇಳಲಾರೆ. ನನಗನಿಸಿದ  ಮಟ್ಟಿಗೆ ಅಲ್ಲಿಯ ಅಲ್ಪಸಂಖ್ಯಾತ ಅನುಕೂಲಸ್ಥ  ಸ್ಥಳೀಯರಿಗೆ ಉಳಿದೆಡೆಗಳಲ್ಲಿರುವ ‘ಹೊಟ್ಟೆಪಾಡಿಗೆ  ಹೊಡೆತ’ದ ಅಂಜಿಕೆ ಅಷ್ಟಿರಲಿಕ್ಕಿಲ್ಲವೇನೊ ಅಂತ ಅನುಮಾನ ( ಇಲ್ಲಿ ನನ್ನ ತಪ್ಪು ಗ್ರಹಿಕೆ ಇರಬಹುದು). ಮತ್ತು ಹೊಟ್ಟೆ ತುಂಬಿಸಿಕೊಂಡು  ನಿಗದಿತ ಸಮಯದಲ್ಲಿ ತಮ್ಮೂರಿಗೆ ಮರಳುವ ಅವಧಿಯನ್ನಷ್ಟೇ ತಮ್ಮ ದಿಗಂತವೆಂದೆನಿಸಿದ  ವಲಸಿಗರ ಸಂತೋಷ ಸಹಜವೇ ಅಂತ ಅನಿಸಿದ್ದರಲ್ಲಿ ತಪ್ಪಿಲ್ಲವಲ್ಲವೇ? ಆದರೆ ಈ ಚರ್ಚೆಯನ್ನು ಇದುರಿಗಿಟ್ಟಿರುವದೇ travelogue ದ ಉದ್ದೇಶದ ಸಾಫಲ್ಯ ಸಹ? ಶತಮಾನಗಳ ಹಿಂದಿನ ಚೀನದ ಫಾಹಿಯಾನ್, ಹ್ಯೂ ಏನ್ ತ್ಸಾನ್ಗ್ ಕಾಲದ ವರದಿಗಿಂತ ೨೧ನೆಯ ಶತಮಾನದ ಪ್ರವಾಸ ಕಥನ ಬದಲಾಗಿದೆ ಮತ್ತು ಬೋಧಕವೂ ಸಹ. ಈಗಿನ ಮಂಡೂಕಗಳು ಏರ್ ಲೈನ್ ನಲ್ಲಿ ಹಾರಾಡುತ್ತವೆ! ನನಗೂ ಒಮ್ಮೆ ಈ ದೇಶಗಳನ್ನು ನೋಡುವ ಆಸೆಯಾಗಿದೆ! 
    ಲೇಖಕರ ದೃಷ್ಟಿ ಫಾಸಿಲ್ ಇಂಧನದ ಮೇಲೆ ಅವಲಂಬಿತ ರಾಷ್ಯಗಳ ಭವಿಷ್ಯದತ್ತ ಸಹ ಹರಿದು ಎಚ್ಚರಿಕೆ ಕೊಟ್ಟಿದೆ. ಅದಕ್ಕೇ ‘ಅರ್ಧರಾತ್ರಿಯ ಕೊಡೆ’ ಮಡಚುವ ಮೊದಲೇ ಹೋಗಬೇಕೆಂದಿದ್ದೇನೆ!

    ಶ್ರೀವತ್ಸ

    Like

Leave a comment

This site uses Akismet to reduce spam. Learn how your comment data is processed.