ಗೋವಾ ಎಕ್ಸ್ ಪ್ರೆಸ್

ಕನ್ನಡ ಕರಾವಳಿಯವರಿಗೆ ರೈಲು ಮಾರ್ಗ ಕನಸಿನ ಕೂಸೇ ಆಗಿತ್ತು. ಅದು ನನಸಾಗಿದ್ದು ೧೯೯೮ ರಲ್ಲಿ ಕೊಂಕಣ್ ರೈಲು ಹಾದಿಯಲ್ಲಿ ದಶಕಗಳ ಕಾಲದಿಂದಲೂ ಕಾತುರದಿಂದ ಕಾಯುತ್ತಿದ್ದ ರೈಲು ಮುಂಬಯಿಯಿಂದ ಮಂಗಳೂರಿನ ಮಾರ್ಗವಾಗಿ ನೇತ್ರಾವತಿ ಎಕ್ಸ್ಪ್ರೆಸ್ಸಿನ ರೂಪದಲ್ಲಿ ಹರಿದುಬಂದಾಗ. ಕರಾವಳಿಯಲ್ಲಿ ಅಲ್ಲಿಯವರೆಗೂ ಬಸ್ಸು , ಕಿಕ್ಕಿರಿದು ತುಂಬಿದ ಟ್ಯಾಕ್ಸಿ, ಟೆಂಪೋಗಳದ್ದೇ ಗಡದ್ದು ಕಾರುಬಾರು. ಮಂಗಳೂರನ್ನು ಬಿಟ್ಟರೆ ಬೇರೆ ವಿಮಾನ ನಿಲ್ದಾಣವೂ ಇಲ್ಲ. ಅಲ್ಲೇ ಹುಟ್ಟಿ ಬೆಳೆದವರು ಕೇವಲ ಪತ್ರಿಕೆಗಳಲ್ಲಿ / ಪುಸ್ತಕಗಳಲ್ಲಿನ ಚಿತ್ರದಲ್ಲಿ ಮಾತ್ರ ರೈಲನ್ನು ಕಂಡಿರಬಹುದು. ವಿಶೇಷವೆಂದರೆ ಕನ್ನಡದಲ್ಲಿ ರೈಲಿನ ಕುರಿತಾದ ಶಿಶುಗೀತೆಗಳೂ ಇರಲಿಲ್ಲ. ಈ ಹಿನ್ನಲೆಯಲ್ಲಿ ಬೆಳೆದು ಬಂದ ನನ್ನಂಥವನಿಗೆ ರೈಲು ಅದ್ಯಾವ ಮೋಡಿ ಹಾಕಿತ್ತೋ ಭಗವಂತನೇ ಬಲ್ಲ. ಕಾಲಮಾನಗಳ ನಂತರ ಬರಡಾದ ಮರುಭೂಮಿಯಲ್ಲಿ ಮಳೆ ಬಂದ ಮೇಲೆ ಹಸಿರೊಡೆಯುವಂತೆ, ಕಾಲೇಜಿನ ಕೊನೆಯ ದಿನಗಳಲ್ಲಿ ಮೊದಲ ಬಾರಿ ಮಾಡಿದ ಎರಡು ದಿನಗಳ ಕಾಲದ ರೈಲು ಯಾತ್ರೆಯಿಂದ ರೈಲಿನ ಆಕರ್ಷಣೆಯನ್ನು ನೂರ್ಪಟ್ಟು ಹಿಗ್ಗಿಸಿದೆ. ಈ ಯಾತ್ರೆಯ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಇದು .

೧೯೯೩ ರ ನವೆಂಬರ್, ದೆಹಲಿಯಿಂದ ಕೇಂದ್ರ ಲೋಕ ಸೇವಾ ಆಯೋಗದ ಸಂದರ್ಶನಕ್ಕೆ ಕರೆ ಬಂದಿತ್ತು. ನಮ್ಮ ಕ್ಲಾಸಿನ ನಾಲ್ಕು ವಿದ್ಯಾರ್ಥಿಗಳಿಗೆ ಸಿಕ್ಕಿದ ಅವಕಾಶವದು. ಹುಬ್ಬಳ್ಳಿಯಿಂದ ದೆಹಲಿಗೆ ಪ್ರಯಾಣ ಮಾಡಬೇಕೆಂದರೆ ರೈಲೇ ಅನುಕೂಲಕರ ಮಾರ್ಗವಾಗಿತ್ತು. ಆಗಿನ್ನೂ ಉತ್ತರ ಕರ್ನಾಟಕದಲ್ಲಿ ಬ್ರಾಡ್ ಗೇಜ್ ರೈಲು ಮಾರ್ಗವಿರಲಿಲ್ಲ. ಕರಾವಳಿಯಲ್ಲಿ ಹಳಿಯೇ ಹಾಕಿರಲಿಲ್ಲ, ಬೆಂಗಳೂರು ಬಿಟ್ಟರೆ ಕರ್ನಾಟಕದ ಕಡೆ ಬ್ರಾಡ್ ಗೇಜ್ ಹಣಕಿಯೂ ಹಾಕಿರಲಿಲ್ಲ. ಇದು ಅಂದಿನ ಕರ್ನಾಟಕದ ರೈಲಿನ ಪರಿಸ್ಥಿತಿ! ಹುಬ್ಬಳಿಯಿಂದ ರಾತ್ರೆ ಹೊರಟ ರೈಲು ಬೆಳಗಿನ ಜಾವ ಮಿರಜ್ ಜಂಕ್ಷನ್ ಸೇರುತ್ತಿತ್ತು. ಅಲ್ಲಿಂದ ರೈಲು ಬದಲಾಯಿಸಿದರೆ ಗಮ್ಯ ಸ್ಥಾನ ದೆಹಲಿಯ ಹಝರತ್ ನಿಜಾಮುದ್ದಿನ್ ನಿಲ್ದಾಣ ತಲುಪಲು ಅಧಿಕೃತವಾಗಿ ೪೨ ಘಂಟೆ ಬೇಕಿತ್ತು. ಹೈಸ್ಕೂಲಿನಲ್ಲಿರುವಾಗ ಅಳ್ನಾವರದಿಂದ ಗೋವಾಕ್ಕೆ ಎನ್.ಸಿ.ಸಿ ಕ್ಯಾಮ್ಪಿಗೆ ಹೋಗಿದ್ದೆ. ಅದು ಪಶ್ಚಿಮ ಘಟ್ಟವನ್ನು ಬಳಸಿ ದೂಧ್ ಸಾಗರ್ ಜಲಪಾತದ ತಪ್ಪಡಿಯಲ್ಲಿ ತೆವಳುತ್ತ ಸಾಗುವ ಅದ್ಭುತರಮ್ಯ ಹಾದಿ. ಕೆಲವೇ ಘಂಟೆಗಳ ಆ ಪ್ರಯಾಣ ನನಗೆ ರೈಲು ಪ್ರಯಾಣದ ಹುಚ್ಚು ಹಿಡಿಸಿತ್ತು. ಕಲ್ಲಿದ್ದಲಿನಿಂದ ಚಲಿಸುವ ಆ ಉಗಿಬಂಡಿಯಿಂದ ಇಳಿದಾಗ ಮುಖ, ಬಟ್ಟೆಯೆಲ್ಲ ಕಪ್ಪಾಗಿದ್ದರೂ ನನ್ನ ರೈಲು ಪ್ರಯಾಣದ ಉತ್ಸಾಹಕ್ಕೆ ಅದು ಬೂದಿ ಎರಚಲಿಲ್ಲ.

ರಾತ್ರೆ ಹೊದೆಯಲೊಂದು ಚಾದರ, ಒಂದು ಸಣ್ಣ ಸೂಟ್ ಕೇಸಿನಲ್ಲಿ ನಾಲ್ಕೈದು ಬಟ್ಟೆಗಳನ್ನು ತುರುಕಿದ್ದಷ್ಟೇ ನನ್ನ ತಯ್ಯಾರಿ. ನಾವು ಸ್ಲೀಪರ್ ಕೋಚನ್ನು ರಿಸರ್ವ್ ಮಾಡಿದ್ದೆವು. ಹಿಂದಿನ ಪ್ರಯಾಣದಲ್ಲಿ ಗಾಂಧಿ ಕ್ಲಾಸಿನ ಒರಟು ಮರದ ಬೆಂಚಿನಲ್ಲೇ ಪ್ರಯಾಣ ಮಾಡಿದ್ದ ನನಗೆ, ಮೆತ್ತನೆಯ ಮಡಚುವ ಸೀಟುಗಳನ್ನ ಕಂಡು ಮನ ಪುಳಕಿತಗೊಂಡಿತು. ಮತ್ತೆ ಮತ್ತೆ ಒತ್ತಿ ನೋಡಿ ಖುಶಿ ಪಟ್ಟುಕೊಂಡೆ. ಸೂಟ್ ಕೇಸನ್ನು ಸೀಟಿನ ಅಡಿಗೆ ನೂಕಿ, ಯಾರೂ ಕದ್ದೊಯ್ಯಬಾರದೆಂದು ಸರಪಳಿಯಿಂದ ಬಿಗಿದು ಬೀಗ ಜಡಿದು, ಎಳೆದು ನೋಡಿ ತೃಪ್ತಿಯಾದ ಮೇಲೆ ಬೀಗದ ಕೈಯನ್ನು ಜತನವಾಗಿ ಪ್ಯಾಂಟಿನ ಜೇಬಿಗಿಳಿಸಿ ಮೆತ್ತನೆಯ ಸೀಟಿನ ಮೇಲೆ ಆಸೀನನಾಗಿ, ಮೇಲೆ ತಿರುಗುವ ಫ್ಯಾನನ್ನು ಅವಲೋಕಿಸುತ್ತ ಸೀಟನ್ನು ಸವರುತ್ತ ಒಂದು ಅಲೌಕಿಕ ಆನಂದವನ್ನು ಅನುಭವಿಸುತ್ತಿದ್ದಂತೆ ಗಾರ್ಡ್ ಸೀಟಿ ಊದಿದ್ದು ಕೇಳಿಸಿತು. ರೈಲಿನ ಚಕ್ರ ಮೆಲ್ಲನೆ ಕಬ್ಬಿಣದ ಹಳಿಯ ಮೇಲೆ ಜಾರುತ್ತ ತಿರುಗಲು ಶುರುವಾದಂತೆ ನಾವು ಬಾಗಿಲಿನ ಬಳಿ ಸಾಗಿ ದೇಹದ ಅರ್ಧಭಾಗವನ್ನ ರೈಲಿನ ಹೊರಗಿಟ್ಟು ಸಿನೆಮಾ ಹೀರೋಗಳಂತೆ ನಿಂತೆವು. ಹುಬ್ಬಳ್ಳಿ ಬಿಡುತ್ತಿದ್ದಂತೆ ಹಾದಿಯಲ್ಲಿ ಕೆ. ಎಂ. ಸಿ ಹಾಗೂ ನೃಪತುಂಗ ಬೆಟ್ಟದ ದರುಶನ ಮಾಡಲೇಬೇಕಲ್ಲ! ಇದು ಡೀಸಲ್ ರೈಲಾಗಿದ್ದರಿಂದ ಮೈ – ಮೊರೆ ಕಪ್ಪಾಗುವ ಹೆದರಿಕೆಯೂ ಇರಲಿಲ್ಲ. ಮುಖಕ್ಕೆ ಎರಚುವ ಗಾಳಿಯ ರಭಸವನ್ನು, ರೈಲಿನ ಶಿಳ್ಳೆಯ ಸಂಗೀತವನ್ನು ಅನುಭವಿಸುವ ಸುಖದ ಮತ್ತೇರುತ್ತಿದಂತೇ ಕಣ್ಣು ಕೂರಲು ಆರಂಭಿಸಿತು. ಸೀಸನ್ಡ್ ಯಾತ್ರಿಗಳು ಆಗಲೇ ಹಾಸಿಗೆ ತಯಾರಿ ಮಾಡಿ, ಮಂಕಿ ಕ್ಯಾಪ್ ಹಾಕಿ, ರಗ್ಗು ಹೊದ್ದು ಲಘುವಾದ ಗೊರಕೆ ಹೊಡೆಯುತ್ತಿದ್ದರು. ಬರ್ತ್ ಹತ್ತಿ ಪವಡಿಸಿದಂತೇ, ರೈಲಿನ ರೈಲು – ಹಳಿಗಳ ತಾಳಬದ್ಧವಾದ ಜುಗಲಬಂದಿಯ ಜೋಗುಳ ಗಾಯನಕ್ಕೆ ಜೋಮ್ಪು ಹತ್ತಿತ್ತು. ಮಧ್ಯರಾತ್ರಿಯಲ್ಲಿ ರೈಲು ಯಾವುದೊ ನಿಲ್ದಾಣದಲ್ಲಿ ನಿಂತ ಅರಿವಾಯಿತು. ಸುಮಾರು ಹೊತ್ತಾದರೂ ಅಲ್ಲಾಡದಿದ್ದರಿಂದ ರೈಲು ಹಾಳಾಗಿ ನಿಂತಿದೆಯೇ ಎಂಬ ಸಂದೇಹ ಬಂತು. ಕೇವಲ ಬಸ್ಸುಗಳಲ್ಲೇ ಪ್ರಯಾಣ ಮಾಡಿದವರಿಗೆ ಬಸ್ಸು ಅವಶ್ಯಕ್ಕಿಂತ ಜಾಸ್ತಿ ನಿಂತರೆ ಗಾಡಿ ಹಾಳಾಗಿದೆ ಎನ್ನುವ ಅನುಮಾನ ಬರುವುದು ಸಹಜ. ನಿಲ್ದಾಣವಾದರೂ ಯಾವುದು ಎಂಬ ಕುತೂಹಲದಿಂದ ಬಾಗಿಲಿನಿಂದ ಹಣಕಿ ಹಾಕಿದಾಗ ಲೋಂಡಾ ನಿಲ್ದಾಣವದು ಎಂಬ ಅರಿವಾಯಿತು. ಪಕ್ಕದಲ್ಲೇ ನಿಂತು ಬೀಡಿ ಸೇದುತ್ತಿದ್ದ ಮಹಾನುಭಾವರನ್ನು ಕೇಳಿದಾಗ ರೈಲು ಸುಮ್ಮನೆ ನಿಂತಿಲ್ಲ, ಗೋವಾದಿಂದ ಬರುವ ರೈಲಿಗೆ ಕಾಯುತ್ತಿದೆ ಎಂದು ತಿಳಿದು ಬಂತು. ಹುಬ್ಬಳ್ಳಿಯಿಂದ ಬರುವ ರೈಲು, ಗೋವಾದಿಂದ ಬರುವ ರೈಲಿಗೆ ಜೋಡಿಯಾಗಿ ಮೀರಜ್ ತಲುಪಿ, ಗೇಜ್ ಬದಲಾಯಿಸಿ, ಮತ್ತಷ್ಟು ಬೋಗಿಗಳನ್ನು ಅಂಟಿಸಿಕೊಂಡು ದೆಹಲಿಗೆ ಓಡುತ್ತಿತ್ತು. ಅದಕ್ಕಾಗೇ ನಾವು ಹೋಗುತ್ತಿರುವ ರೈಲಿನ ಹೆಸರು ಗೋವಾ ಎಕ್ಸ್ಪ್ರೆಸ್. ಬೇರೆ ಬೇರೆ ಮೂಲಗಳಿಂದ ಬಂದ ಹೊಳೆಗಳು ಕೂಡಿ ನದಿಯಾಗಿ ಮುಂದೆ ಸಾಗರ ಸೇರಿದಂತೆ. ವಾಸ್ಕೋದಿಂದ ಬಂದ ರೈಲಿಗೆ ನಮ್ಮ ಬೋಗಿಯನ್ನು ಅಂಟಿಸುವ ಕೈಂಕರ್ಯ ನೋಡಿ ಧನ್ಯನಾದೆ. ಆದರೆ ಮಧ್ಯದಲ್ಲಿದ್ದ ನಮ್ಮ ಬೋಗಿ ಈಗ ಹೊಸ ರೈಲಿನ ಕೊನೆಯಲ್ಲಿದೆಯಲ್ಲ ಎಂದು ಸ್ವಲ ಬೇಜಾರೂ ಆಯಿತು. ಕೊನೆಯಲ್ಲಿದ್ದರೂ ಬಸ್ಸಿನ ಹಿಂದಿನ ಸೀಟುಗಳು ಹಾರುವಂತೆ ರೈಲಿನಲ್ಲಾಗುವುದಿಲ್ಲ ಎಂಬುದೇ ಸಮಾಧಾನವಾಗಿತ್ತು.

(ಚಿತ್ರ : ಜೆಮಿನಿ ಕೃತಕ ಬುದ್ಧಿಮತ್ತೆ)

ಬೆಳಕು ಹರಿಯುತ್ತಿದ್ದಂತೆ ಮೀರಜ್ ತಲುಪಿದೆವು. ಮೀಟರ್ ಗೇಜಿನ ಪ್ಲಾಟ್ಫಾರಂ ಅಸ್ಪ್ರಶ್ಯನಂತೆ ಮುಖ್ಯ ಪ್ಲಾಟಫಾರಂಗಳಿಂದ ಸ್ವಲ್ಪ ದೂರದಲ್ಲಿತ್ತು. ಲೋಂಡಾದಲ್ಲಿ ವಾಸ್ಕೋ ರೈಲು ತಡವಾಗಿ ಬಂದಿದ್ದರಿಂದ ಮುಂದಿನ ರೈಲು ತಪ್ಪೀತು ಎಂಬ ಅಳುಕಿತ್ತು; ಆದರೆ ರೈಲು ತಯಾರಾಗಿ ನಿಂತಿದ್ದನ್ನು ಕಂಡು ಸಮಾಧಾನವಾಯಿತು. ನಿಲ್ದಾಣದಲ್ಲಿ ಛಾ, ಕಾಫಿ ಮಾರಾಟಗಾರರು ತಾರಕ ಸ್ವರದಲ್ಲಿ ತಮ್ಮ ಅಸ್ತಿತ್ವವನ್ನು ಘೋಷಿಸುತ್ತ, ಬೋಗಿ ಬೋಗಿಗಳನ್ನು ಹೊಕ್ಕಿ, ಗಟ್ಟಿಯಾಗಿ ಅದುಮಿದರೆ ತಿರುಚಿ ಹೋಗುವಂಥ ಪ್ಲಾಸ್ಟಿಕ್ ಕಪ್ಪುಗಳಲ್ಲಿ ಬಿಸಿ ಬಿಸಿಯಾದ ಜೀವ ದ್ರವ್ಯವನ್ನು ವಿಲೇವಾರಿ ಮಾಡುವಲ್ಲಿ ವ್ಯಸ್ತವಾಗಿದ್ದರು. ಒಂದು ಗುಟುಕು ಚಹಾ ಒಳ ಸೇರಿದಂತೆ, ನಾಲಿಗೆ ಚುರುಕಾಗಿ, ಗಂಟಲಲ್ಲಿಳಿದು ದೇಹವೆಲ್ಲ ಬಿಸಿಯಾಗಿ ಮೂಲೆಯಲ್ಲಿ ಮುದುಡಿದ್ದ ನಿದ್ದೆಯನ್ನು ಒದ್ದೋಡಿಸಿತು. ನಮ್ಮ ಬರ್ತ್ ಗುರುತಿಸಿಕೊಂಡು, ಹಿಂದಿನ ರಾತ್ರೆಯಂತೇ ಸೂಟ್ ಕೇಸಿಗೆ ಲಂಗರು ಹಾಕಿ ನೆಲೆಯೂರಿದಂತೆ ವ್ಯಕ್ತವಾಗಿದ್ದು, ಈ ಜಾಗೆ ಕೆಲವೇ ಗಂಟೆಗಳಿಗೆ ಸೀಮಿತವಲ್ಲ, ಒಂದೂವರೆ ದಿನಗಳ ವರೆಗೂ ನಮ್ಮ ತಾಣ ಎಂಬ ಸತ್ಯ. ನಮ್ಮ ಜೊತೆಯಲ್ಲಿದ್ದವರು ಹಿಂದಿಯಂಥ ಭಾಷೆ ಮಾತಾಡುತ್ತಿದ್ದರು. ಪರಿಚಯವಾದ ಮೇಲೆ ಗೊತ್ತಾಯಿತು, ಅವರು ಹುಬ್ಬಳ್ಳಿಯಲ್ಲಿ ನೆಲೆಸಿರುವ ಮಾರವಾಡಿ ಹಲ್ವಾಯಿಗಳು ಎಂದು.

(ಚಿತ್ರ : ಜೆಮಿನಿ ಕೃತಕ ಬುದ್ಧಿಮತ್ತೆ )

ರೈಲು ಪ್ರಯಾಣದ ಅವಿಭಾಜ್ಯ ಅಂಗ, ಒಂದು ರೀತಿಯಲ್ಲಿ ಮಹತ್ವ ಅಂಗ ಎಂದರೆ ಸದಾ ಎಲ್ಲ ದಿಕ್ಕಿನಿಂದಲೂ ಲಭ್ಯವಾಗುವ ತಿನಿಸುಗಳು. ನಮ್ಮ ರೈಲಿನಲ್ಲಿ ಅಡುಗೆ ಮನೆಯೂ ಇತ್ತು (ಪ್ಯಾಂಟ್ರಿ ಕಾರ್). ಹಿಂದಿನ ದಿನ ಹಾಸ್ಟೆಲ್ ನಲ್ಲಿ ಉಂಡು, ರಾತ್ರಿ ಮಲಗಿದ್ದರಿಂದ ಈ ತಿನಿಸುಗಳ ಸಾಮ್ರಾಜ್ಯದ ಪರಿಚಯವಾಗಿರಲಿಲ್ಲ; ಅಪರಾತ್ರಿಯಲ್ಲಿ ಯಾರೂ ಏನನ್ನೂ ಮಾರಲೂ ಬಂದಿರಲಿಲ್ಲ. ನಮ್ಮ ಬೆಳಗಿನ ಉಪಾಹಾರ ಸ್ಯಾಂಡ್ವಿಚ್. ಹೆಸರು ಕೇಳಿ ಮುಖ ತಿರುಚಬೇಡಿ, ಅದು ರುಚಿ ರಹಿತ ಬ್ರಿಟಿಷ್ ಸ್ಯಾಂಡ್ವಿಚ್ ಅಲ್ಲ. ಸಸ್ಯಾಹಾರಿಗಳಿಗೆ ವೆಜ್ ಕಟ್ಲೆಟ್ ಸ್ಯಾಂಡ್ವಿಚ್, ಅಲ್ಲದವರಿಗೆ ಆಮ್ಲೆಟ್ ಸ್ಯಾಂಡ್ವಿಚ್; ರುಚಿಯಾದ ಟೊಮ್ಯಾಟೋ ಕೆಚಪ್ ಜೊತೆಗೆ. ಆಹಾ, ಅದರ ರುಚಿ ವರ್ಣಿಲಸದಳ! ಇಂದಿಗೂ ನಾಲಿಗೆ ತುದಿಯಲ್ಲಿದೆ. ದಾರಿಗುಂಟ ರೈಲಿನೊಳಗೆ, ಪ್ಲಾಟಫಾರಂ ಮೇಲೆ ಸರಬರಾಜಾಗುವ, ದೊರೆಯಯುವ ಟೊಮ್ಯಾಟೋ ಸೂಪ್ (ಕ್ರೂಟೋನ್ ಜೊತೆ), ಭೇಲ್, ತರಹೇವಾರಿ ಹಣ್ಣುಗಳು, ವಡಾ ಪಾವ್ (ಮಹಾರಾಷ್ಟ್ರದ ಜನಪ್ರಿಯ ಬರ್ಗರ್ ಪರಿಚಯವಾಗಿದ್ದೇ ಈ ಯಾತ್ರೆಯಲ್ಲಿ), ಸಮೋಸಾ, ಪೂರಿ-ಆಲೂ ಸಬ್ಜಿ, ಕಬ್ಬಿನ ಹಾಲು, ದೇಶದ ವಿವಿಧ ಪ್ರದೇಶಗಳ ಆಹಾರ ಪದ್ಧತಿಯ ವೈವಿಧ್ಯವನ್ನು ಅನಾವರಣಗೊಳಿಸುತ್ತಾ ಹೋಯಿತು ನಮ್ಮ ರೈಲು. ಸ್ಟೀಲಿನ ಖಾನೆ – ಖಾನೇ ತಟ್ಟೆಗಳಲ್ಲಿ ಕೊಡುವ ಊಟಕ್ಕೂ ಒಂದು ವಿಶೇಷ ರುಚಿ. ರೈಲಿನ ಬೋಗಿಯಲ್ಲಿ ಮಹದಾದ ಪಾತ್ರೆಗಳಲ್ಲಿ ಮಾರುದ್ದದ ಸಾವುಟಗಳನ್ನು ತಿರುವುತ್ತ ವಿಶಿಷ್ಟ ಜಾದೂ ಮಾಡುತ್ತಿದ್ದರು ಆ ಬಾಣಸಿಗರು. ಜೊತೆಯಲ್ಲಿದ್ದ ಮಾರವಾಡಿಗಳು ಊಟದ ಸಮಯದಲ್ಲಿ ಹಿಂದೆಂದೂ ಕಂಡಿರದ ದೈತ್ಯಾಕಾರದ ಟಿಫಿನ್ ಬಾಕ್ಸ್ ನಲ್ಲಿ ತಂದಿದ್ದ ಮನೆ ಊಟವನ್ನು ಹರಡುತ್ತಿದರು. ವಾರೆಗಣ್ಣಿನಿಂದ ಈ ದೃಶ್ಯವನ್ನೇ ನಿಲುಕಿಸುತ್ತಿದ್ದ ನಮ್ಮೊಡನೆ ಹಂಚಿಕೊಂಡು ನಮ್ಮ ಜಿಹ್ವಾ ಚಾಪಲ್ಯ / ಕುತೂಹಲವನ್ನು ತಣಿಸುತ್ತಿದ್ದರು. ಆ ಯಾತ್ರೆಯಲ್ಲಿ ಆಸ್ವಾದಿಸಿದ ಅದೆಷ್ಟೋ ತಿನಿಸುಗಳು ಇಂದೂ ನೆನಪಿನ ಡಬ್ಬಿಯಲ್ಲಿ ಬೆಚ್ಚಗಾಗಿ ಕುಳಿತಿದೆ. ಇಂದಿನ ದಿನಗಳಲ್ಲಿ ಅದೆಷ್ಟೋ ರೆಸ್ಟೋರೆಂಟ್ ಗಳ ಮೆನು ಕಾರ್ಡಿನಲ್ಲಿ ರೇಲ್ವೆ ದಾಲ್, ಕಟ್ಲೆಟ್ ಎಂದೆಲ್ಲ ಓದಿದಾಗ, ಆ ನೆನಪುಗಳು ಮೂಲೆಯಿಂದ ರಗ್ಗನ್ನು ಕಿತ್ತೆಸೆದು ಮಸ್ತಕದ ವೇದಿಕೆಯಲ್ಲಿ ತಾಂಡವ ಆಡಿ, ಆ ಆವೇಶದ ಒತ್ತಡಕ್ಕೆ ಮಣಿದು ಆರ್ಡರ್ ಮಾಡಿದಾಗ ಇಂದಿನ ತಿನಿಸಿನ ರುಚಿ ಪೇಲವ ಎನಿಸಿದ್ದೇ ಜಾಸ್ತಿ. ಇಟಾರ್ಸಿ ಜಂಕ್ಷನ್ ನಲ್ಲಿ ನಾನು ಮೊತ್ತ ಮೊದಲು ಕಂಡಿದ್ದು ಕುಲ್ಹಡ್ ಚಹಾ. ಹಿಂದಿನ ಸ್ಟೇಶನಗಳಲ್ಲಿ ಕುಡಿದಾದ ಮೇಲೆ ಪ್ಲಾಸ್ಟಿಕ್ ಕಪ್ಪುಗಳನ್ನು ಯಾವ ಯೋಚನೆಯೂ ಇಲ್ಲದೇ ಎಲ್ಲರೂ ಹೊರಗೆಸೆಯುತ್ತಿದ್ದರು. ಅದೆಷ್ಟು ಟನ್ ಪ್ಲಾಸ್ಟಿಕ್ ಕಸವನ್ನು ರೈಲು ಪ್ರಯಾಣಿಕರು ಎಸೆದಿರಲಿಕ್ಕಿಲ್ಲ ಪ್ರತಿದಿನ! ಈ ಕುಲ್ಹಡ್ ದೇಶದ ಬೇರೆಡೆ ಯಾಕೆ ಪ್ರಚಲಿತವಾಗಿಲ್ಲ ಎಂದು ಅರ್ಥವಾಗಿಲ್ಲ.

ರೈಲು ಪ್ರಯಾಣದ ಇನ್ನೊಂದು ಪ್ರಮುಖ ಆಕರ್ಷಣೆ ಹೊರಗಿನ ನೋಟ. ಹುಬ್ಬಳ್ಳಿಯಿಂದ ಮೀರಜ್ ವರೆಗೆ ಕತ್ತಲೆ ಕಾಡಿನಲ್ಲಿ ಕಂಡಿದ್ದೇನಿಲ್ಲ. ಮೀರಜ್ ನಿಂದ ಪುಣೆ ದಾಟುವವರೆಗೂ ರೈಲು ದಖ್ಖನ್ ಪ್ರಸ್ತಭೂಮಿಯ ಪರ್ವತಗಳನ್ನು ಬಳಸುತ್ತ, ಪರ್ವತ ಗರ್ಭವನ್ನು ಸೀಳುವ ಸುರಂಗಗಳನ್ನು ಭೇದಿಸುತ್ತ ಸಾಗುತ್ತದೆ. ಈ ಪರ್ವತಗಳು ಕುರುಚಲು ಕಾಡು, ದಟ್ಟ ಹಸಿರು ಹುಲ್ಲನ್ನಷ್ಟೇ ಹೊದ್ದು ನಿಂತಿವೆ. ಸಹಸ್ರಾರು ವರ್ಷಗಳ ಕಾಲ ಪೇರಿಸಿಟ್ಟ ಪದರುಗಳನ್ನು ನೋಡುವುದೇ ಚಂದ. ಅದ್ಯಾವದೋ ಕಾಲದಲ್ಲಿ ಇದೆಲ್ಲ ಜ್ವಾಲಾಮುಖಿಯ ಬಾಯಿಂದ ಹೊರಬಂದ ಲಾವಾ. ಅಲ್ಲಲ್ಲಿ ದೂರದಲ್ಲಿ ಕಾಣುವ ಕೋಟೆ-ಕೊತ್ತಲಗಳು ಮರಾಠ ಸಾಮ್ರಾಜ್ಯದ ಕಥೆಗಳನ್ನು ಕಿವಿಯಲ್ಲಿ ಪಿಸುಗುಟ್ಟುತ್ತವೆ, ಅದಕ್ಕೆ ಸರಿಯಾಗಿ ರೈಲು ಶಿಳ್ಳೆ ಹಾಕಿ ಭಲೇ ಎಂದು ಉದ್ಗರಿಸುತ್ತದೆ. ಇತಿಹಾಸ, ಭೂಗೋಳ, ಭೂಗರ್ಭ ಶಾಸ್ತ್ರ ಇವೆಲ್ಲ ಒಮ್ಮೆಲೇ ರಿವಿಷನ್ ಆದೀತು. ಈ ಪ್ರಯಾಣದಲ್ಲಿ ಕಂಡ ಒಂದೆರಡು ದೃಶ್ಯಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿವೆ. ಮೊದಲ ದಿನ ಸಂಜೆ ಆಗುತ್ತಿದ್ದಂತೆ ಸೂರ್ಯ ಮೆಲ್ಲನೆ ಪಶ್ಚಿಮ ದಿಗಂತದಂಚಿಗೆ ಜರುಗುತ್ತಿದಂತೆ ನಮ್ಮ ಪ್ರಯಾಣಕ್ಕೆ ಶುಭಾಶಯ ಕೋರಲು ದೂರದಲ್ಲಿ ಯಾರೋ ಥಮ್ಸ್ ಅಪ್ ಮಾಡುವಂತೆ ಕಾಣುತ್ತಿತ್ತು. ಬಳಿ ಬಂದಂತೆ ಅದೊಂದು ಪರ್ವತದ ಮೇಲಿನ ಶೀಲಾ ರಚನೆ ಎಂಬ ಅರಿವಾಯಿತು. ಇದನ್ನು ಪ್ರವಾಸಿಗರು ಥಮ್ಸ್ ಅಪ್ ಗುಡ್ಡ ಎಂದೇ ಕರೆಯುತ್ತಾರೆ. ಮರಾಠಿಯಲ್ಲಿ ‘ಹಡ್ಬಿಚಿ ಶೇಂಡಿ’ (ಗೂನು ಬೆನ್ನಿನವನ ಜುಟ್ಟು) ಎಂದು ಕರೆಯುತ್ತಾರೆ. ಈ ಗುಡ್ಡವನ್ನು ಸುತ್ತುವರೆಯುತ್ತ ರೈಲು ಮನಮಾಡ್ ಜಂಕ್ಷನ್ ಸೇರುತ್ತದೆ, ರಾತ್ರೆಯ ಊಟಕ್ಕೆ ಆರ್ಡರ್ ಕೊಡುವ ಸಮಯಕ್ಕೆ ಸರಿಯಾಗಿ. ಈ ಸ್ಟೇಷನ್ ನಲ್ಲಿ ಉತ್ತಮ ವಡಾ-ಪಾವ್ ಚಹಾ ಸಿಗುವುದುದ್ ಒಂದು ಬೋನಸ್. ನೆತ್ತರು ಚಲ್ಲಿದ ಆಗಸದ ಹಿನ್ನಲೆಯಲ್ಲಿ ತಲೆಯೆತ್ತಿ ನನ್ನನ್ನು ಗೆದ್ದು ನೋಡು ಎಂಬ ಸವಾಲೆಸೆಯುವ ಹೆಬ್ಬೆರಳನ್ನು ಮರೆಯಲು ಸಾಧ್ಯವೇ? ಎರಡನೇ ದೃಶ್ಯ ಗ್ವಾಲಿಯರ್ ಕೋಟೆ. ಇಂದಿಗೂ ತನ್ನ ಗಾಂಭೀರ್ಯ, ಭವ್ಯತೆಯನ್ನು ಕಾದುಕೊಂಡಿದೆ. ಕೆಲವೇ ತಾಸುಗಳಲ್ಲಿ ರೈಲು ಉತ್ತರ ಪ್ರದೇಶವನ್ನು ಹೊಕ್ಕುತ್ತದೆ. ಮಧ್ಯಪ್ರದೇಶ – ಉತ್ತರ ಪ್ರದೇಶದ ಗಡಿಯಲ್ಲಿರುವುದೇ ಕುಖ್ಯಾತ ಚಂಬಲ್ ಕಣಿವೆ. ಪಶ್ಚಿಮ ಘಟ್ಟಗಳಲ್ಲಿ ಕಾನನ ಆವರಿಸಿದ ಬೆಟ್ಟಗಳ ನಡುವಿನ ಆಳವಾದ ಕಣಿವೆಗಳೇ ನಮ್ಮ ಮನಸ್ಸಿಲ್ಲಿತ್ತು ಚಂಬಲ್ ದರ್ಶನ ಆಗುವವರೆಗೆ. ಇವು ಕುರುಚಲು ಗಿಡ, ಬರಡು ಗುಡ್ಡಗಳ ನಡುವೆ ಮೇಜ್ಹ್ ನಂತೆ ಹರಡಿದ ಕಣಿವೆಗಳ ಸಂಕೀರ್ಣ. ರೈಲು ಈ ಕಣಿವೆಗಳ ಮೇಲೆ ಕಟ್ಟಿದ ಸೇತುವೆ (ವಯಾ ಡಕ್ಟ್) ಮೇಲೆ ಚಲಿಸುವಾಗ ಚಂಬಲ್ ನ ವಿಹಂಗಮ ನೋಟ ತೆರೆದುಕೊಳ್ಳುತ್ತದೆ. ಅದೆಲ್ಲಿಂದಲೋ ಹರಿದು ಬರುವ ನದಿ, ಅದರ ದಡದಲ್ಲೊಂದು ಮುರುಕು ದೇಗುಲ ಇವನ್ನೆಲ್ಲ ಕಂಡಾಗ ಹಿಂದಿ ಸಿನೆಮಾದ ದೃಶ್ಯದ ಮಧ್ಯದಲ್ಲಿ ನಿಂತ ರೋಮಾಂಚನ. ಆ ಪಾಳು ದೇಗುಲದಲ್ಲಿ ಕಾಳಿಗೆ ಢಾಕುಗಳು ಪೂಜೆ ಸಲ್ಲಿಸುತ್ತಿರಬಹುದೇ, ಅಂದಿನ ದಾಳಿಗೆ ಯೋಜನೆ ಹಾಕುತ್ತಿರಬಹುದೇ! ಹಿಂದೆಲ್ಲ ಈ ಭಾಗದಲ್ಲಿ ರೈಲನ್ನು ಅಡ್ಡ ಹಾಕಿ ದರೋಡೆ ಮಾಡುತ್ತಿದ್ದುದು ಸುಳ್ಳಲ್ಲ. ೯೦ ರ ದಶಕ ತಲುಪಿದಾಗ ಫೂಲನ್ ದೇವಿ ಕೋವಿಯ ಬಲ ತೊರೆದು ರಾಜಕೀಯ ಬಲವನ್ನು ಅಪ್ಪಿಕೊಂಡಾಗಿತ್ತಲ್ಲ! ಈ ಕಾಲದಲ್ಲಿ ನಮ್ಮ ರೈಲು ಸುರಕ್ಷಿತ ಎಂದು ನೆಮ್ಮದಿ ಎನಿಸಿತು. ಚಂಬಲ್ ಕಣಿವೆ, ಆಳದಲ್ಲಿ ಎಂದೆಂದೂ ಆರದ ರಕ್ತಸಿಕ್ತ ಇತಿಹಾಸ ಈ ಹಾದಿಯನ್ನು ಹಾದು ಹೋಗುವಾಗ ಕಾಡದೇ ಇರದು.

ಮನಮಾಡದ ಥಮ್ಸ್ ಅಪ್ ಬೆಟ್ಟ (ಚಿತ್ರ : ಗೂಗಲ್ ಕೃಪೆ )

ಲಕ್ಷ್ಮೀಬಾಯಿಯ ಝಾನ್ಸಿ, ಆಗ್ರಾ ಬಂದಂತೆಲ್ಲ ನಮ್ಮ ಗಮ್ಯ ಸ್ಥಾನ ಹತ್ತಿರವಾಗುತ್ತಿದೆ ಎಂಬ ಭಾವನೆ ತೇಲುತ್ತ, ದಟ್ಟವಾಗುತ್ತ ಮನಸ್ಸನ್ನೆಲ್ಲ ಆವರಿಸುತ್ತದೆ. ಗೋವಾ ಎಕ್ಸ್ಪ್ರೆಸ್ ಆಗ್ರಾ ನಗರದೊಳಗೆ ನುಗ್ಗದೇ, ಕಂಟೋನ್ಮೆಂಟ್ ನಿಲ್ದಾಣಕ್ಕೆ ಬರುತ್ತದೆ. ತಾಜ್ ಮಹಲ್ ಕಂಡಿತೇ ಎಂಬ ಕುತೂಹಲವಿದ್ದರೆ ಎದುರಾಗುವುದು ಬಿಸಿಲಲ್ಲಿ ಒಣಗುತ್ತಿರುವ ನಿರ್ಜನ ನಿಲ್ದಾಣ. ತಾಜಾ ಮಹಲಿನ ರಮ್ಯತೆಗೆ ವಿರೋಧಾಭಾಸವಾಗಿದೆ ಆಗ್ರಾ ದಂಡು ನಿಲ್ದಾಣ. ಆಗ್ರಾ ಎಂದರೆ ಏನೇನೋ ಕಲ್ಪಿಸಿಕೊಂಡ ನನಗೆ ಹಾಗೆನಿಸಿರಬಹದು ಬಿಡಿ. ಹಿಂದಿಯಲ್ಲಿ ಕಂಟೋನ್ಮೆಂಟಿಗೆ ಛಾವಣಿ ಎನ್ನುತ್ತಾರೆಂಬುದೂ ನನಗೆ ಅವತ್ತು ಗೊತ್ತಾಯಿತು, ನಿಲ್ದಾಣದ ಹೆಸರಿನ ಫಲಕವನ್ನು ಓದಿದಾಗ. ಹಿಂದಿನ ಕಾಲದಲ್ಲಿ ಸೈನ್ಯ ತಂಗಿದಲ್ಲೆಲ್ಲ ಹುಲ್ಲಿನ ಛಾವಣಿಯನ್ನು ಕಟ್ಟುತ್ತಿದ್ದರಿಂದ, ದಂಡು ಪ್ರದೇಶಕ್ಕೆ ಹಿಂದಿಯಲ್ಲಿ ಛಾವಣಿ ಎಂದು ಕರೆಯುತ್ತಾರಂತೆ. ಇಲ್ಲಿಂದ ಮುಂದೆ ಮಾತ್ರ ಇದು ಎಂದೂ ಮುಗಿಯದ ಹಾದಿ ಎಂದೆನಿಸಲು ಶುರುವಾಗುತ್ತದೆ. ಉತ್ತರ ಭಾರತದ ಸೆಖೆ, ಬಸವನ ಹುಳದಂದದ ವೇಗ, ದಾರಿಯ ಪಕ್ಕದಲ್ಲಿ ಹರಿಯುವ ಕೊಳೆತ ನಾಲೆಯ ದುರ್ನಾತದಿಂದ ರಸಭರಿತ ಸಿನೆಮಾ ನಿರಾಶಾದಾಯಕವಾಗಿ ಕೊನೆಯಾಗುತ್ತಿದೆಯಲ್ಲ ಎಂದು ದುಃಖವಾಯಿತು. ಮುಂದೆ ದೆಹಲಿಯಲ್ಲೇ ಸ್ವಲ್ಪ ಕಾಲ ಉದ್ಯೋಗ ಮಾಡುವ ಅವಕಾಶ ಸಿಕ್ಕು, ಇದೆ ಹಾದಿಯಲ್ಲಿ ವಿವಿಧ ಋತುಗಳಲ್ಲಿ ಪ್ರಯಾಣ ಮಾಡಿದ್ದೇನೆ. ಭಾರತದ ಇತಿಹಾಸದಲ್ಲಿ ತಮ್ಮ ಹೆಸರನ್ನು ಕೆತ್ತಿದ ಊರುಗಳು, ಅಲ್ಲಿನ ನಾಯಕರು – ಖಳನಾಯಕರು ಸಿನೆಮಾದ ರೀಲುಗಳಂತೆ ನನ್ನ ಕಣ್ಮುಂದೆ ಓಡಿದ್ದಾರೆ. ಮತ್ತೊಮ್ಮೆ ಈ ಹಾದಿಯಲ್ಲಿ ರೈಲಿನಲ್ಲೇ ಪ್ರಯಾಣ ಮಾಡುವ ಕನಸಿದೆ, ನವ ಭಾರತದ ನವ ರೈಲುಗಳಲ್ಲಿ. ಹೊಸತು ಕಂಡಿತೇ?

-ರಾಂ

ಏನಿಲ್ಲ, ಎಲ್ಲವೂ ಬರೀ ಮೊಸರನ್ನ!

ಏನಾದರೂ ಬರೆಯಬೇಕು, ಬರೆಯಲೇಬೇಕು ಎಂದು ಪಟ್ಟಿ ಮಾಡಿ ಇಟ್ಟುಕೊಂಡ, ಅರ್ಧ ಬರೆದು ಡ್ರಾಫ್ಟ್‌ನಲ್ಲಿ ಹೆಪ್ಪು ಹಾಕಿಟ್ಟ ಲೇಖನಗಳನ್ನು ವಾರಕ್ಕೊಂದರಂತೆ ಬರೆದರೂ ಸಾಕು, ಅದೆಷ್ಟು ಪುಸ್ತಕಗಳಿಗೆ ಸರಕಾಗುತ್ತದೆಯೋ ಎಂಬ ಆಲೋಚನೆಯನ್ನು ಮನಸ್ಸಿನಲ್ಲೇ ಮಥಿಸುತ್ತ, ಕೈಗೆ ಸಿಗದ ಕನಸಿನ ನವನೀತ ಕೂಡಿಟ್ಟು, ಅದು ಹೇಳಹೆಸರಿಲ್ಲದೆ ಕರಗಿಯೂ ಹೋಗಿದೆ.

ಯಾಕೆ ಬರೆಯಲು ಸಾಧ್ಯವಾಗುತ್ತಿಲ್ಲ? ಉತ್ತರ ನನ್ನ ಬಳಿಯೂ ಇಲ್ಲ. ರಾತ್ರಿ ಹಾಸಿಗೆಗೆ ಬೆನ್ನು ತಾಗಿಸುತ್ತಲೇ ಒಂದು ಜಾದೂ ಘಟಿಸುತ್ತದೆ. ಕಣ್ಣು ಸೀಲಿಂಗ್ ನೋಡುತ್ತಲೇ ಮನಸ್ಸು ಆ ಮಂದಗತ್ತಲಿನಲ್ಲೇ ಸ್ಪುಟವಾಗಿ ಬರೆಯಲು ಶುರುಮಾಡುತ್ತದೆ.

ಛೇ! ಎಷ್ಟು ಚಂದದ ಸಾಲು ಇದು, ನನ್ನ ದೃಷ್ಟಿಯೇ ತಾಕುವಷ್ಟು ಚಂದದ ವಿಷಯ ಮಂಡನೆ. ಆಗಿದ್ದಾಗಲಿ, ಈಗಲೇ ಎದ್ದು ಕುಳಿತು ಸೀಲಿಂಗ್ ಮೇಲೆ ಗೀಚಿದ್ದನ್ನು ಪೇಪರ್ ಮೇಲೋ ಕಿಲೀಮಣೆಯನ್ನೇ ತಟ್ಟುತ್ತ ಕುಟ್ಟುತ್ತ ಬರೆದೇ ಬಿಡೋಣ ಅಂತ ಅನಿಸುತ್ತದೆ. ಆದರೂ ಮತ್ತದೇ ಉದಾಸೀನದ ಅಪರಾವತಾರದಂತಿರುವ ಅಮಿತೆಯ ಮನಸು, `ಅಯ್ಯೋ ಮಲ್ಕೊಳಮ್ಮ ಸುಮ್ಮನೆ ಸಾಕು, ನಾಳೆ ಸಾವಿರ ಕೆಲಸ ಇದೆ` ಅಂತ ಲಾಲಿಯಂತೆ ರಾಗವಾಗಿ ಹೇಳಿ ಹೇಳಿ ಮಲಗುವಂತೆ ಮಾಡಿಬಿಡುತ್ತದೆ. ನಿದ್ದೆ ಬಂದವರಿಗೆ ಹಾಸಿಗೆ ತೋರಿಸುವುದು ಅನ್ನುವುದು ಇದಕ್ಕೇ ಇರಬೇಕು.

ಈ ವಾರ `ಅನಿವಾಸಿ` ಸಂಚಿಕೆಗೆ ಬರೆಯಬೇಕು, ಏನಿದೆ ಸರಕು? ಎಂಬ ರಿಮೈಂಡರ್ ಶೈಲಿಯ ಪ್ರಶ್ನೆ ಮನಸ್ಸಿನಲ್ಲಿ ಬರುತ್ತಲೇ ಇತ್ತು. ಬರೆಯಲು ಒಲ್ಲದ ಮನಸ್ಸು, ಅದು-ಇದು ಕಥೆ ಹಾರಿಸುತ್ತ ಒಮ್ಮೆಲೇ, `ಅಮಿತಾ, ನೀನು ಅಡುಗೆ ಮಾಡಿಲ್ಲ ಇನ್ನೂ…` ಹಾಗೆಂದು ನೆನಪಿಸಿತು. ಏನು ಬರೆಯಲಿ? ಎಂಬ ಪ್ರಶ್ನೆ ಹೋಗಿ, ಏನಡುಗೆ ಮಾಡಲಿ ಎಂಬ ಪ್ರಶ್ನೆ ಕಾಡತೊಡಗಿತು.

ಇಂದು ಮಕ್ಕಳು, ಮನೆಯವರು ಯಾರೂ ಇಲ್ಲ. ಒಬ್ಬಳಿಗೆಂದು ಏನು ಮಾಡೋದು? ಎಂಬೆಲ್ಲ ಸಬೂಬು ಹೇಳಿ ಏನಾದರೊಂದು ಮಾಡಿ ತಿಂದು ಮುಗಿಸುವ ಜೀವವಲ್ಲ ನನ್ನದು. ಮನೆಯಲ್ಲಿ ಯಾರೂ ಇಲ್ಲ ಅಂತಾದರೆ ಅಮಿತಾಳಿಗೆ ಇಷ್ಟವಿರುವ, ಮನೆಯವರು ಮಕ್ಕಳು ಅಷ್ಟೇನೂ ಇಷ್ಟಪಡದ ಅಡುಗೆಗಳನ್ನು, ತರಹೇವಾರಿ ಪಲ್ಯ, ಚಟ್ನಿ, ಮತ್ತೊಂದು-ಇನ್ನೊಂದು ಮಾಡಿ ಅಚ್ಚುಕಟ್ಟಾಗಿ ತಟ್ಟೆಯಲ್ಲಿ ರಂಗೋಲಿಯಂತೆ ಜೋಡಿಸಿ, ಒಂದೆರಡು ಫೋಟೋ ತೆಗೆದು, ಪ್ರತಿ ತುತ್ತು ತಿನ್ನುವಾಗ ಅಜ್ಜಿ, ಅಮ್ಮ, ದೊಡ್ಡಮ್ಮ, ಚಿಕ್ಕಮ್ಮ, ಸೋದರತ್ತೆಯರನ್ನ ನೆನಪು ಮಾಡಿಕೊಳ್ಳುತ್ತ, ಅಡುಗೆ-ಊಟದ ಕುರಿತು ಈ ಪರಿ ಪ್ರೀತಿಯನ್ನು ನನ್ನಲ್ಲಿ ತುಂಬಿದ ಭಗವಂತನಿಗೆ ಥ್ಯಾಂಕ್ಸ್ ಹೇಳುತ್ತಾ ನಿರುಮ್ಮಳವಾಗಿ ಊಟ ಮಾಡುತ್ತೇನೆ.

ಇವತ್ತು ಅಂಥದ್ದೇ ಒಂದು ಸುದಿನ. ಆದರೆ ಇವತ್ತು ಮನಸ್ಸು, ನಾಲಿಗೆ, ಬುದ್ಧಿ, ಹೃದಯ ಎಲ್ಲರ ಬಯಕೆ ಒಂದೇ! ಮೊಸರು ಬುತ್ತಿ. ಇದು ಸರ್ವಸಮ್ಮತವಾಗಿ ನಿರ್ಧಾರವಾದ ಅಡುಗೆ. ಆದ್ದರಿಂದ ಅಡುಗೆಮನೆಯಲ್ಲಿಯೂ ನನ್ನೊಳಗೂ ಒಂದು ಬಗೆಯ ಉಲ್ಲಾಸ ತುಂಬಿ, ಖುಷಿಯಲ್ಲಿ ಹಾಡುಗಳು ತನ್ನಿಂದತಾನೇ ಒಂದೊಂದಾಗಿ ಅಪ್ರಯತ್ನಪೂರ್ವಕವಾಗಿ ಹೊಮ್ಮತೊಡಗಿದವು. ಅಕ್ಕಿ ತೊಳೆದು ಒಂದಷ್ಟು ಹೆಚ್ಚಿಗೆಯೇ ನೀರಿಟ್ಟು ಮಿಜ್ಜಿ ಅನ್ನದ ತಯಾರಿ ಶುರುಮಾಡಿದೆ. ಅದರ ಜೊತೆಗೆ ಒಂದಷ್ಟು ಮಜ್ಜಿಗೆ ಮೆಣಸು, ಬೆಳ್ಳುಳ್ಳಿ ಸಂಡಿಗೆ, ಹುರುಳಿ ಹಪ್ಪಳ ಹುರಿದು ಗಾಳಿಯಾಡದ ಡಬ್ಬದಲ್ಲಿ ಪೇರಿಸಿದೆ.

ಕೆಂಪು ಈರುಳ್ಳಿ, ಹಸಿಮೆಣಸು, ಕೊತ್ತಂಬರಿಸೊಪ್ಪು ಸಣ್ಣಗೆ ಹೆಚ್ಚಿಟ್ಟುಕೊಂಡು, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕಲ್ಬತ್ತಿನಲ್ಲಿ ಜಜ್ಜಿಕೊಂಡೆ. ಅನ್ನ ಆಗಲು ಇನ್ನೂ ಸಮಯವಿತ್ತು. ಮತ್ತೇನು ಮಾಡೋದು? ನಾನು ನನ್ನೊಂದಿಗೇ ಹರಟೆ ಹೊಡೆಯಲು ಶುರು ಮಾಡಿದೆ. ಈ ಮೊಸರನ್ನ ಎಂಬುದು ಅದೆಷ್ಟು ಸರಳ ಅಲ್ವಾ? ಜೀವಕ್ಕೂ ಹಿತ ಮಾಡಲೂ ಸುಲಭ. ಹಾಗೆ ನೋಡಿದರೆ ಮೊಸರನ್ನ ಆಧ್ಯಾತ್ಮದ ತತ್ವವನ್ನು ತಟ್ಟೆಯಲ್ಲಿದ್ದೇ ಮೌನವಾಗಿಯೇ ಬೋಧಿಸುತ್ತದೆ.

`ಅಯ್ಯೋ ಮೊಸರನ್ನವಾ? ಮಕ್ಕಳೂ ಕಲಸಬಹುದು.` ಹಾಗಾದರೆ ಎಷ್ಟೊಂದು ಸರಳ ಮಸರನ್ನ ಇರುವಾಗ ನಾವ್ಯಾಕೆ ಸಂಕೀರ್ಣತೆಯ ಹಿಂದೆ ಬಿದ್ದು ಒದ್ದಾಡುತ್ತೇವೆ? ನಿಜಕ್ಕೂ ಈ ಜೀವನಕ್ಕೆ ಬೇಕಾಗಿರೋದು ಒಂದು ತಟ್ಟೆ ಮೊಸರನ್ನ ಅಷ್ಟೇ! ಹೀಗೆಲ್ಲ ನನ್ನ ತಲೆ ಮಾತಾ ಅಮಿತಾನಂದಮಯಿಯಂತೆ ಪ್ರವಚನ ಕೊಡುತ್ತಿರುವಾಗ, ನಾನು ಎದ್ದು ಅನ್ನ ಬೆಂದಿದೆ ಹೇಗೆ ಬೇಕೋ ಹಾಗೇ ಎಂದು ನನ್ನಷ್ಟಕ್ಕೆ ಖುಷಿ ಪಟ್ಟೆ.

ಈ ಬುತ್ತಿ ಅನ್ನ ಉಳಿದ ಮೊಸರನ್ನದ ರೀತಿಯಲ್ಲ. ಉತ್ತರ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಮಂದಿಗೆ, ಅಥವಾ ಉತ್ತರ ಕರ್ನಾಟಕ ಭಾಗದ ಆತ್ಮೀಯ ಸ್ನೇಹಿತರು ನಿಮಗಿದ್ದರೆ ಮಾತ್ರ ಈ ವಿಧದ ಮೊಸರನ್ನದ ರುಚಿ ನಿಮಗೆ ಗೊತ್ತಿರುತ್ತದೆ ಅಥವಾ ದಕ್ಕಿರುತ್ತದೆ.

ಮೆತ್ತಗೆ ಬೇಯಿಸಿಕೊಂಡ ಅನ್ನ, ಕೆನೆ ಮೊಸರು, ಒಂಚೂರು ಹಾಲು, ಉಪ್ಪು, ಹೆಚ್ಚಿಕೊಂಡ ಈರುಳ್ಳಿ, ಹಸಿಮೆಣಸು, ಜಜ್ಜಿಕೊಂಡ ಬೆಳ್ಳುಳ್ಳಿ ಮತ್ತು ಶುಂಠಿ ಇಷ್ಟನ್ನೂ ಸೇರಿಸಿ ಅನ್ನವನ್ನು ನುರಿಯುತ್ತ, ಉಂಡೆ ಕಟ್ಟುವ ಹದಕ್ಕೆ ಬಂದಾಗ ರಾಗಿ ಮುದ್ದೆಯ ಅಳತೆಯ ಉಂಡೆ ಕಟ್ಟಬೇಕು.

ಈ ಬುತ್ತಿಯನ್ನ ಮದುವೆಯ ಮೊದಲು, ಮದುವೆಯ ನಂತರ, ಶುಭಕಾರ್ಯಗಳು ಇದ್ದಾಗ ನೆಂಟರ ಮನೆಗೆ, ಬೀಗರ ಮನೆಗೆ ರೊಟ್ಟಿ, ವಿಧವಿಧದ ಪಲ್ಯ, ಚಟ್ನಿ, ಪುಡಿ, ಸಿಹಿ, ಝುಣುಕದ ವಡಿ, ಉಂಡಿ, ಕರ್ಜಿಕಾಯಿ, ಕರಿದ ಸಂಡಿಗೆ, ವಡೆ, ಹಪ್ಪಳಗಳೊಂದಿಗೆ ಕಳಿಸಿಕೊಡಲಾಗುತ್ತದೆ. ಹಾಗೆ ಆ ಊರಿನಿಂದ ಬಂದು ಸೇರಿದ ಬುತ್ತಿಯನ್ನು ಈ ಊರಿನ ಪರಿಚಿತ, ಆತ್ಮೀಯರೊಂದಿಗೆ ಹಂಚಿಕೊಂಡು ಸಂಭ್ರಮಿಸಿದಾಗಲೇ ಆ ಊಟಕ್ಕೊಂದು ಮೆರಗು ಬರುವುದು.

ನನ್ನ ತವರುಮನೆ ಮುಂಡಗೋಡದಲ್ಲಿ ನಮಗೆ ಎಲ್ಲರೂ ಪರಿಚಿತರಾಗಿರುವುದಕ್ಕೆ ಇಂಥ ಅಸಂಖ್ಯಾತ ಬುತ್ತಿ ಊಟಗಳನ್ನು ಆಸ್ವಾಧಿಸಿದ್ದೇನೆ. `ಇನ್ನೂ ಬುತ್ತಿ ತಂದುಕೊಟ್ಟಿಲ್ವೇ?` ಎಂದು ಕಾತರತೆಯಿಂದ ಕಾದು ಕುಳಿತದ್ದು ಇದೆ. ಒಂದು ರೀತಿಯಲ್ಲಿ `ಅಜ್ಜಿಗೆ ಅಜ್ಜನ ಚಿಂತೆಯಾದರೆ ಮೊಮ್ಮಗಳಿಗೆ ಕಜ್ಜಾಯದ ಚಿಂತೆ` ಎಂಬ ಗಾದೆಮಾತು ನನಗೆಂದೇ ರಚನೆಯಾಗಿದ್ದು ಎಂದು ಎಷ್ಟೋ ಸಲ ಅನಿಸಿದ್ದಿದೆ.

ಆದರೆ ನನ್ನ ಅಮ್ಮನಿಗೆ ಮಾತ್ರ ಈ ಬುತ್ತಿ ಅನ್ನ ಇಷ್ಟವಾಗದು. ಒಂದು, ಅದರಲ್ಲಿ ಬೆಳ್ಳುಳ್ಳಿ ಹಾಕುತ್ತಾರೆ ಎಂದು. ಮತ್ತೊಂದು, ಅನ್ನದ ಉಂಡೆ ಕಟ್ಟುವುದು ಪಿಂಡ ಇಡುವಾಗ ಮಾತ್ರ ಎಂಬುದು ಅವಿಭಜಿತ ದಕ್ಷಿಣ ಕನ್ನಡ ಮೂಲದ ಅಮ್ಮನ ಬಲವಾದ ನಂಬಿಕೆ. ಅದಕ್ಕೆ ಉಂಡೆ ಕಟ್ಟಿರುವ ಮೊಸರು ಬುತ್ತಿ ಅಮ್ಮ ತಿನ್ನುವುದಿಲ್ಲ.

ಹೇಗೂ ಮೊಸರನ್ನದ ಶ್ರುತಿ ತೀಡಿಯಾಗಿದೆ. ಇನ್ನೊಂದಿಷ್ಟು ಅದರ ಬಗ್ಗೆಯೇ ಹೇಳಿ ಬಿಡುವೆ. ಮೊಸರನ್ನ ಎಂಬ ಹೆಸರು ಒಂದೇ ಆದರೂ ಪ್ರಕಾರಗಳು ಹಲವು.

ಬುತ್ತಿ ಅನ್ನದ ನಂತರ ನನಗೆ ನೆನಪಿರುವ ಮತ್ತೊಂದು ಮೊಸರನ್ನದ ರುಚಿ ಎಂದರೆ ಆಂಧ್ರ ಮೂಲದ ಮಂದಿ ಮಾಡುವ ಉದ್ದಿನಬೇಳೆ, ಕಡಲೆಬೇಳೆ, ಶುಂಠಿ, ಚೂರೇ ಚೂರು ಅರಿಶಿನ ಹಾಕಿ ಚಂದದ ಒಗ್ಗರಣೆ ಕೊಟ್ಟು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಾಡಿದ, ಬಾಯಲ್ಲಿಟ್ಟರೆ ಕರಗಿಯೇ ಹೋಯಿತು ಅನ್ನುವಷ್ಟು ಹಗುರ-ಹಗುರವಾದ ಮೊಸರನ್ನ. ಇದರ ರುಚಿ ನೋಡುವ ಅವಕಾಶ ಸಿಕ್ಕಿದ್ದು ಪುಟ್ಟಪರ್ತಿಯಲ್ಲಿ. ಆಹಾ! ಅದೆಂಥ ಚಂದದ ಅನುಭೂತಿ ಅದು!

ನನ್ನ ಹೈಸ್ಕೂಲ್ ದಿನಗಳಲ್ಲಿ ಮೆತ್ತಗೆ ಮಾತನಾಡುವ, ಅಷ್ಟೇ ಚುರುಕು ಹುಡುಗಿ ಒಬ್ಬಳಿದ್ದಳು. ಆಕೆಯ ಹೆಸರು ನೇತ್ರಾವತಿ. ನಾವು ಸುಮಾರು ಎಂಟು ಸ್ನೇಹಿತೆಯರು ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳುತ್ತಿದ್ದೆವು. ಊಟವನ್ನು ಹಂಚಿಕೊಳ್ಳುತ್ತಿದ್ದೆವು ಕೂಡ. ನೇತ್ರಾವತಿಯ ಅಮ್ಮ ಕಟ್ಟಿ ಕಳಿಸುತ್ತಿದ್ದ ಆ ಮೊಸರನ್ನ ತುಂಬಾ ವಿಭಿನ್ನವಾಗಿತ್ತು. ಆಕೆ ಮೊಸರನ್ನ ತಂದರೆ ಅರ್ಧ ಡಬ್ಬಿ ನನಗೆ ಎಂದು ಫಿಕ್ಸ್ ಆಗಿಬಿಟ್ಟಿತ್ತು. ಆಕೆಯನ್ನು ಕಾಡಿಸಿ ಪೀಡಿಸಿ ಆ ರೆಸಿಪಿಯನ್ನು ನಮ್ಮ ಮಸ್ತಿಷ್ಕದೊಳಗೆ ಸೇರಿಸಿಕೊಳ್ಳಲಾಯಿತು.

ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು, ಅದಕ್ಕೆ ಹದ ಬಿಸಿಮಾಡಿದ ತೆಂಗಿನ ಎಣ್ಣೆ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ, ಅದಕ್ಕೆ ಮೊಸರು ಬೆರೆಸಿ, ಅದಕ್ಕೆ ತಣಿದ ಅನ್ನವನ್ನು ಬೆರೆಸಿ ಚೆನ್ನಾಗಿ ಕಲಸಿದರೆ ಆಯಿತು. ಇದರ ಜೊತೆ ಒಂದು ಹೋಳು ನಿಂಬೆ ಉಪ್ಪಿನಕಾಯಿ ಇದ್ದರಂತೂ ಊಟ ಸ್ವರ್ಗದ ಹಿತ್ತಲಿನಲ್ಲಿ ಕುಳಿತು ಸವಿದಷ್ಟು ರುಚಿ.

ನಾನು ಯೂನಿವರ್ಸಿಟಿಯಲ್ಲಿ ಇರುವಾಗ ಸೋಷಿಯಾಲಜಿ ಡಿಪಾರ್ಟ್ಮೆಂಟ್‌ನಲ್ಲಿ ಓದುತ್ತಿದ್ದ ಸರಸ್ವತಿ ಜೋಶಿ ಆತ್ಮೀಯ ಸ್ನೇಹಿತೆಯಾಗಿದ್ದಳು. ಪರೀಕ್ಷೆಗಳಿರುವಾಗ, ಅಥವಾ ಬೇಗನೆ ಕಾಲೇಜ್ ತಲುಪಬೇಕಾದ ದಿನಗಳಲ್ಲಿ ನಾನು ಸರಸ್ವತಿಯ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಅವರ ಅಮ್ಮ ನನ್ನನ್ನು ತಮ್ಮ ಮಗಳಂತೆಯೇ ನೋಡಿಕೊಳ್ಳುತ್ತಿದ್ದರು. ಅವರು ಮಾಡುತ್ತಿದ್ದ ಮೊಸರನ್ನವೂ ವಿಶಿಷ್ಟ. ಅನ್ನ ಮತ್ತು ಮೊಸರನ್ನು ಉಪ್ಪಿನೊಂದಿಗೆ ಹದವಾಗಿ ಕಲಸಿ, ತುಪ್ಪದಲ್ಲಿ ಜಜ್ಜಿದ ಲವಂಗ, ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಹದವಾಗಿ ತಾಳ್ಮೆಯಿಂದ ಹುರಿದು ಅನ್ನಕ್ಕೆ ಒಗ್ಗರಣೆ ಕೊಡುತ್ತಿದ್ದರು. ತುಪ್ಪದಲ್ಲಿ ಕರಿದ-ಹುರಿದ ಆ ಲವಂಗ ಹಲ್ಲಿಗೆ ಸಿಕ್ಕಾಗ `ಕುರ್ರುಮ್` ಎಂದು ನಮಗಷ್ಟೇ ಕೇಳುವ ಹಿತವಾದ ಸದ್ದು, ಒಣದ್ರಾಕ್ಷಿ ಕೊಡುತ್ತಿದ್ದ ಸಿಹಿಯಾದ `ಪಂಚ್`. ಜೊತೆಗೆ ಒಂದಷ್ಟು ಗೋಡಂಬಿಯ ಶ್ರೀಮಂತಿಕೆ! ಆ ಮೊಸರನ್ನದ ಚಂದವೇ ಬೇರೆ.

ಇನ್ನು ಹಣ್ಣುಗಳನ್ನು ಸೇರಿಸಿ ಮೊಸರನ್ನ ಕಲಸಿದ್ದನ್ನು ನಾನು ಮೊದಲು ತಿಂದಿದ್ದು, `Zee Sa Re Ga Ma Pa` ಎಂಬ ರಿಯಾಲಿಟಿ ಶೋಗೆ ಹೋದಾಗ. ಸ್ನೇಹಿತೆ, ಮತ್ತೀಗ ಪ್ರಸಿದ್ಧ ಹಿನ್ನೆಲೆ ಗಾಯಕಿಯಾಗಿರುವ ಶ್ರುತಿ ಪ್ರಶಾಂತ್ ಅವರ ಅಮ್ಮ ಎಲ್ಲ ಸ್ಪರ್ಧಿಗಳಿಗಾಗಿ ತಾವೇ ಅಡುಗೆ ಮಾಡಿಕೊಂಡು ಬಂದು, ಅಕ್ಕರೆಯಿಂದ ಉಣಬಡಿಸಿದಾಗ. ಅಲ್ಲೊಂದು-ಇಲ್ಲೊಂದು ಸಿಗುವ ದ್ರಾಕ್ಷಿ, ಹಾಗೇ ಬಾಯಲ್ಲಿ ಊಟೆಯಾಗುವ ದಾಳಿಂಬೆ ಕಾಳು, ಸಣ್ಣದಾಗಿ ಹೆಚ್ಚಿ ಹಾಕಿದ ಸೇಬು. ಅದಕ್ಕೆಲ್ಲ ಕಿರೀಟವಿಟ್ಟಂತೆ ಇದ್ದ ಸಣ್ಣಗೆ ಹೆಚ್ಚಿದ ಶುಂಠಿ, ಕರಿಬೇವು, ಉದ್ದಿನಬೇಳೆ, ಸಾಸಿವೆ, ಇಂಗಿನ ಒಗ್ಗರಣೆ. ದೇವರೇ, ಅದೆಷ್ಟು ರುಚಿಯಾಗಿತ್ತು! ಜೊತೆಗೆ ಬದನೆಕಾಯಿ ಎಣ್ಣೆಗಾಯಿ ಕೂಡ ಇತ್ತು.

ಅನ್ನ ಬೇಡ ಅಂದರೆ, ಮೊಸರವಲಕ್ಕಿಯೂ ಅಷ್ಟೇ ರುಚಿ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಭವನದ ಪಕ್ಕದಲ್ಲಿ ಆಗೊಂದು ಪುಟ್ಟ ಟೀ ಅಂಗಡಿ ಇತ್ತು. ಬಸಣ್ಣನ ಡಬ್ಬಿ ಅಂಗಡಿ ಅಂತಲೇ ಪ್ರಸಿದ್ಧವದು. ಅವಲಕ್ಕಿ, ಮಂಡಕ್ಕಿ, ಪುಲಾವ್, ಉಪ್ಪಿಟ್ಟು ಚಹಾ ಇಷ್ಟೇ ಅಲ್ಲಿಯ ಮೆನು.
ವಿಶೇಷ ಎಂದರೆ ಬಸಣ್ಣನ ನಗು ಮತ್ತು ಆತ್ಮೀಯತೆ.
ಅಕ್ಕಾರ್ ಬರ್ರಿ ಇವತ್ತೆನ್ ಕೊಡುನು ರಿ? ಪಲಾವ್? ಮೊಸರವಲಕ್ಕಿ? ಅನ್ನುತ್ತಲೇ ನನ್ನ ಉತ್ತರ ಸಿಗುವ ಮೊದಲೇ ಅವಲಕ್ಕಿ ತಟ್ಟೆ ಮುಂದೆ ಇಡುತ್ತಿದ್ದರು.
ಬಿಳಿ ಅವಲಕ್ಕಿ ಮೊಸರು, ಅದರಮೇಲೆ ಒಂದಷ್ಟು ಕೇಸರಿ ಬಣ್ಣದ ಪುಟಾಣಿ ಚಟ್ನಿ ಪುಡಿ. ಅಲ್ಲಲ್ಲಿ ತೇಲುತ್ತಿದ್ದ ಹಸಿಮೆಣಸು, ಕೊತ್ತಂಬರಿ ಸೊಪ್ಪು. ಬಿಸಿಲಿಗೆ ಮೊಸರು ಅವಲಕ್ಕಿ ತುಂಬಿದ ಆ ಕೈಅಗಲದ ತಟ್ಟೆ ಅಮೃತ ಸಮಾನವೆನಿಸುತ್ತಿತ್ತು.

ನಮ್ಮ ಹಳೇ ಮನೆಯ ಮುಂದೆ ನಮ್ಮದೇ ಸಾರಸ್ವತ ಸಮುದಾಯದ ಕುಟುಂಬದವರು ವಾಸವಿದ್ದರು. ಆ ಮನೆಯ ಮಕ್ಕಳು ಕರೆವಂತೆಯೇ ನಾವೂ ಆ ಮನೆಯ ಹಿರಿಯರನ್ನು ಆಯಿ ಮತ್ತು ಪಪ್ಪಾ ಅಂತಲೇ ಕರೆಯುತ್ತಿದ್ದೆವು. ಅವರ ಅಡುಗೆ ನಮ್ಮ ಅಡುಗೆ ಒಂದೇ ರೀತಿ ಆದರೂ ಆಯಿಯ ಕೈಯ ಕೆಲವೊಂದು ಅಡುಗೆಗಳು ಅತ್ಯದ್ಭುತವಾಗಿರುತ್ತಿದ್ದವು. ಅದರಲ್ಲಿ ಒಂದು ಈ ಮೊಸರವಲಕ್ಕಿ. ಅವಲಕ್ಕಿಯ ಪ್ರತಿ ಅಗಳು ಕೂಡ ಇಂಗು, ಕರಿಬೇವು, ಒಣಮೆಣಸಿನ ಒಗ್ಗರಣೆಯ ಘಮದಲ್ಲಿ ಮಿಂದು ಉಪ್ಪು ಒಂಚೂರು ಸಕ್ಕರೆಯನ್ನು ಮಯ್ಯಿಗೆ ಮೆತ್ತಿಕೊಂಡು ತುಳಸಿ ಪೂಜೆಯ ನಂತರ ನೈವೇದ್ಯವಾಗಲು ಕಾಯುತ್ತ ಕುಳಿತಿರುತ್ತಿತ್ತು ಮತ್ತು, ನಾವು ಅದನ್ನು ತಿನ್ನಲು. ನೆನೆಸಿಕೊಂಡರೆ ಈಗಲೂ ಬಾಯಿ ನೀರೂರುತ್ತದೆ.

ಶ್ರೀಲಲಿತಾ ಸಹಸ್ರನಾಮದಲ್ಲಿ ಶ್ರೀಮಾತೆಯನ್ನು ‘ದಧ್ಯನ್ನಾಸಕ್ತಹೃದಯಾ’ ಎಂದು ಕರೆದಿದ್ದಾರೆ, ಜಗನ್ಮಾತೆಯೇ ಮೊಸರನ್ನದಲ್ಲಿ ಆಸಕ್ತಿ ಹೊಂದಿರುವಾಗ, ನಾವೆಲ್ಲ ಮೊಸರನ್ನದ ಮೋಹದಿಂದ ಹೇಗೆ ತಪ್ಪಿಸಿಕೊಂಡೇವು? ನೀವೇ ಹೇಳಿ.

ಈಗಲೂ ಕಣ್ಣು ಮುಚ್ಚಿ ನೆನಪಿಸಿಕೊಂಡರೆ, ಈ ಎಲ್ಲ ದೃಶ್ಯ, ರುಚಿ, ಘಮ ನನ್ನ ಚಿತ್ತಕ್ಕೆ ಬಂದು ಮತ್ತೊಮ್ಮೆ ಈ ಎಲ್ಲ ರಸಾಸ್ವಾಧನೆಗೆ ನನ್ನನ್ನು ಅಣಿಮಾಡುತ್ತವೆ. ಪ್ರಾಯಶಃ ನನಗೆ ಮೊಸರನ್ನ ಕಲಸಿಕೊಟ್ಟ, ಮಾಡಿಕೊಟ್ಟ ಯಾರಿಗೂ ಅದು ಅಂಥಹ ವಿಶೇಷ ತಿನಿಸು, ಖಾದ್ಯ ಆಗಿರಲಿಕ್ಕಿಲ್ಲ. ಆದರೆ ಇವೆಲ್ಲ ರುಚಿಗಳು ನನ್ನ ನೆನಪಿನ ಕೌದಿಯ ರಂಗು-ರಂಗು ಚೌಕಗಳು.

ಸರಿ-ಸರಿ, ನಾನು nostalgic ನಾರೀಮಣಿ ಸಂಪೂರ್ಣವಾಗಿ ಬದಲಾಗುವ ಮುನ್ನ ನನ್ನೇ ನಾನು ಟೈಮ್ ಟ್ರಾವೆಲ್ ಟ್ರ್ಯಾಪ್‌ನಿಂದ ಈಚೆಗೆ ಕರೆದು, ನನ್ನನ್ನು ಮಾತ್ರವಲ್ಲ ನಿಮ್ಮನ್ನೂ ಬಚಾವು ಮಾಡಿದೆ.
ಇಲ್ಲದಿದ್ದರೆ ನನ್ನ ನೆನಪಿನ ಪರಿಷೆ ನಿಲ್ಲುವುದಿಲ್ಲ. ಯಾಕೆಂದರೆ ಹೀಗೆ ಅದೆಷ್ಟು ಲೆಕ್ಕಕ್ಕೆ ಸಿಗದಷ್ಟು ನೆನಪುಗಳಿವೆ ನನ್ನ ಬಳಿ. ಈ ವಿಷಯದಲ್ಲಿ ಮಾತ್ರ ನಾನು ಜಗತ್ತಿನ ಅತೀ ಶ್ರೀಮಂತರ ಪಟ್ಟಿಯಲ್ಲಿ ಸೇರಿದರೂ ಆಶ್ಚರ್ಯವಿಲ್ಲ.

ನೋಡಿ, ಏನು ಬರೆಯಲಿ ಎಂದು ಶುರುಮಾಡಿದವಳು, ಎಲ್ಲಿ ನಿಲ್ಲಿಸಲಿ ಎಂದು ಅರ್ಥವಾಗದೆ ನೆನಪುಗಳ ಸುರುಳಿಯನ್ನು ಬಿಚ್ಚಿ ಬಿಚ್ಚಿ ಹಾಕಿದ್ದೇನೆ.

ಪ್ರೀತಿಯಿಂದ ಓದಿ. ನಿಮಗೂ ಈ ನೆನಪುಗಳು ತಂಪು ಅನಿಸಿದರೆ, ಅಲ್ಲೆಲ್ಲೋ ಬದುಕಿನ ದಾರಿಯಲ್ಲಿ ಯಾವುದೋ ಮರೆಯಲಾಗದ ರುಚಿಯನ್ನು ನಿಮ್ಮ ನೆನಪಿನ ಬುಟ್ಟಿಗೆ ಪ್ರೀತಿಯಿಂದ ಬುತ್ತಿ ತುಂಬಿ ಕಳಿಸಿದವರು ನೆನಪಾದರೆ ನನ್ನೊಂದಿಗೂ ಹಂಚಿಕೊಳ್ಳಿ.

ವಂದನೆಗಳು,
ಅಮಿತಾ ರವಿಕಿರಣ್