ಸಾವಿರ ವರ್ಷಗಳ ಸಾವಿರದ ಆಟ – ಯೋಗೀಂದ್ರ ಮರವಂತೆ

ಸದ್ಯದಲ್ಲಿ ಬಿಡುಗಡೆ ಆಗಲಿರುವ, ನವಕರ್ನಾಟಕ ಪ್ರಕಾಶನ ಸಂಸ್ಥೆಯ ಕೋರಿಕೆಯ ಮೇಲೆ ಬರೆದ ಚೆಸ್ ಕುರಿತಾದ ಪುಸ್ತಕದ ಒಂದು ಅಧ್ಯಾಯ

ಚಿತ್ರ: ಏಐ (ಸೂಚನೆ: ಕೇಶವ)

ತಮ್ಮ ಮುಂದಿನ ನಡೆಯ ಬಗ್ಗೆ ಯೋಚಿಸುತ್ತ  ಬೋರ್ಡ್ ಮುಂದೆ  ಕೂತಿರುವ ಯಾರಾದರೂ ಪ್ರಸಿದ್ಧ  ಗ್ರಾಂಡ್  ಮಾಸ್ಟರ್ ಗ್ಯಾರಿ ಕಾಸ್ಪರೋವ್ ರ  “ಚೆಸ್ ಒಂದು ಮಾನಸಿಕ ಹಿಂಸೆ” ಎನ್ನುವ  ತಲ್ಲಣವನ್ನು  ಖಂಡಿತ ಒಪ್ಪುತ್ತಾರೆ. ಆದರೆ, ಚೆಸ್ ತನ್ನ ದೀರ್ಘ ಇತಿಹಾಸದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಅಥವಾ ಎಲ್ಲರಿಗೆ ಎಲ್ಲವೂ  ಆಗಿದೆ: ಪ್ರತಿಭೆಯ ಕ್ರೂರ ಮಾಪಕ, ಮಾನವ ಅನುಭವದ ರೂಪಕ, ರಾಜಕೀಯ ಆಯುಧ, ಬುದ್ಧಿಮತ್ತೆಯ ಪ್ರದರ್ಶನ,  ಮೋಜಿನ ಸಣ್ಣ ಹವ್ಯಾಸ. ನೆಟ್‌ಫ್ಲಿಕ್ಸ್ ನಾಟಕ “ದಿ ಕ್ವೀನ್ಸ್ ಗ್ಯಾಂಬಿಟ್” ನ ಯಶಸ್ಸು ಆಟದಲ್ಲಿ ಸಾಮಾನ್ಯರ ಜನಪ್ರಿಯ ಆಸಕ್ತಿಗೆ  ಮರುಜೀವ ನೀಡಿದೆ , ಆದರೆ ನಾಗರಿಕತೆಯ ಬಟ್ಟೆಯಲ್ಲಿ ಚೆಸ್ ಅನ್ನು ಎಷ್ಟು ಸಮಯದಿಂದ ಹೆಣೆಯಲಾಗಿದೆ? ಇಂದಿಗೂ ಜೀವಂತವಾಗಿರುವ ಆಸಕ್ತಿ ಎಲ್ಲಿಂದ, ಯಾಕೆ, ಹೇಗೆ? ಹಾಗಾದರೆ ಚೆಸ್ ಬರೇ ಆಟವಾಗಿ ಬೆಳವಣಿಗೆ ಕಂಡುದು ಅಷ್ಟೆಯೇ?

ಭಾರತದ ಚದುರಂಗ ಕಾಲಾನಂತರದಲ್ಲಿ,  ಪರ್ಶಿಯಾದ ಶತರಂಜ್ ಆಗಿದ್ದು ನಂತರ  ಇರಾನ್‌ಗೆ  ವಲಸೆಯಾಗಿ  ಚತ್ರಂಗ್ ಎಂಬ ಹೊಸ ಆಟವಾಗಿ ವಿಕಸನಗೊಂಡಿತು, ಅದರ ನಿಯಮಗಳು ಆಧುನಿಕ ದಿನದ ಚೆಸ್ ಹತ್ತಿರವಾಗಿದ್ದವು. ರಾಜನನ್ನು ‘ಚೆಕ್’ ಮೂಲಕ ಎಚ್ಚರಿಸುವ ಕಲ್ಪನೆಯನ್ನು ಪರಿಚಯಿಸಿದವರು ಪರ್ಶಿಯನ್ನರು.

ಪರ್ಶಿಯಾದ ಸಂಸ್ಕೃತಿಗೆ ಚತ್ರಂಗ್‌ ಎಷ್ಟು ಮಹತ್ವದ್ದು ಎಂದು ತಿಳಿಯಬೇಕಿದ್ದರೆ ಅವರ ಮಹಾಕಾವ್ಯವಾದ ಶಹನಾಮೆಯನ್ನು ಓದಬೇಕು. ಇಂಗ್ಲೆಂಡಿನ   ಷೇಕ್ಸ್‌ಪಿಯರ್ ಅಥವಾ ಇಟಲಿಯ ಡಾಂಟೆಯಂತಹ ಮಹಾನ್ ಸಾಹಿತಿಗಳಿಗೆ ಸಮನಾಗಿದ್ದವನು  ಎಂದು ಇರಾನಿಗರು ವ್ಯಾಪಕವಾಗಿ ಪರಿಗಣಿಸುವ ಬರಹಗಾರ  ಫೆರ್ಡೋವ್ಸಿ ಬರೆದ ಶಹನಾಮೆ  ಒಂದು ರೀತಿಯಲ್ಲಿ ಚೆಸ್ ನ  ಮೂಲ ಕಥೆಯನ್ನು ತಿಳಿಸುತ್ತದೆ.   ಭಾರತದಿಂದ ಆಗಮಿಸಿದ್ದ  ರಾಯಭಾರಿಯೊಬ್ಬ  ಪರ್ಶಿಯನ್  ನ್ಯಾಯಾಲಯಕ್ಕೆ ಒಂದು ಲೇಖನವನ್ನು ತಂದಿರುತ್ತಾನೆ  ಜೊತೆಗೆ  ನಿಗೂಢ ಹಲಗೆ ಮತ್ತು ತುಣುಕುಗಳನ್ನು ಕೂಡ. ರಾಯಭಾರಿ ಹೇಳುತ್ತಾನೆ  ‘ಓ ಮಹಾನ್ ದೊರೆಯೇ , ನಿಮ್ಮ ನೆಲದ ಬುದ್ಧಿವಂತರನ್ನು ಕರೆತನ್ನಿ ಮತ್ತು ಈ ಆಟದ ರಹಸ್ಯಗಳನ್ನು ಅವರು ಪರಿಹರಿಸಲಿ. ಅವರು ಯಶಸ್ವಿಯಾದರೆ  , ನನ್ನೊಡೆಯ  ಹಿಂದ್‌ನ ರಾಜನು  ಕಪ್ಪಕಾಣಿಕೆ ಸಲ್ಲಿಸುತ್ತಾನೆ, ಆದರೆ ಅವರು ವಿಫಲವಾದರೆ ಪರ್ಶಿಯನ್ನರು  ಕಡಿಮೆ ಬುದ್ಧಿಶಕ್ತಿ ಇರುವವರು  ಎಂಬುದಕ್ಕೆ ಪುರಾವೆ ಸಿಕ್ಕಿದಂತಾಗುತ್ತದೆ  ಮತ್ತು ನಾವು ಇರಾನ್‌ನಿಂದ ಕಪ್ಪಕಾಣಿಕೆಯನ್ನು ಕೇಳುತ್ತೇವೆ”. ಹಿಂದ್ ಪ್ರಾಂತ್ಯದಿಂದ ಚದುರಂಗ ತಲುಪಿದ ರೀತಿಯನ್ನು ನಿರೂಪಿಸಲು ಮಹಾಕಾವ್ಯದ ಈ ಕೆಲವು ಸಾಲುಗಳೇ ಸಾಕು. ರಾಯಭಾರಿಯ ಲೇಖನ ಒಡ್ಡುವ ಸವಾಲು, ನಿಗೂಢ ಹಲಗೆ , ತುಣುಕುಗಳು ನೀಡುತ್ತಿರುವ ಆಹ್ವಾನ ಮತ್ತೆ ದೂರದೇಶದ ಹೊಸ ಆಟವೊಂದು ಪರ್ಶಿಯಾದ ಸಂಸ್ಕೃತಿಯಿಂದ ಕೊಟ್ಟು ತೆಗೆದುಕೊಂಡ ಬಗೆಗಳ ಕುರಿತು ಅದು ನಮ್ಮ ಕಲ್ಪನೆಯನ್ನು ಕದಡುತ್ತದೆ.

ಪರ್ಶಿಯನ್ನರ  ಅದೃಷ್ಟಕ್ಕೆ , ಅವರಲ್ಲಿ ಒಬ್ಬರಾದ ಬೊಜೋರ್ಗ್‌ಮೆಹರ್ ಎಂಬ ಬುದ್ಧಿವಂತ ವ್ಯಕ್ತಿ ಈ ಆಟವನ್ನು ಹೇಗೆ ಆಡಬೇಕೆಂದು ಎಂದು ಕಂಡುಕೊಳ್ಳುವಲ್ಲಿ  ಯಶಸ್ವಿಯಾದನಂತೆ.  ಭಾರತೀಯ ಆಟವನ್ನು ಪರ್ಶಿಯನ್  ಚತ್ರಂಗ್‌ನ  ಆಗಿ ಪರಿವರ್ತಿಸಲು ದಾರಿ ಮಾಡಿಕೊಟ್ಟ ಐತಿಹಾಸಿಕ ಕ್ಷಣ ಅದು. ಆಟದ ಈ ಮೂಲಪುರಾಣದಲ್ಲಿ ಎಷ್ಟು  ಸತ್ಯವಿದೆ ಅಥವಾ ಇಲ್ಲ, ಎಂಬುದನ್ನು ಖಡಾಖಂಡಿತವಾಗಿ ಹೇಳುವವರು ಇಲ್ಲ. ಆದರೆ ಚತ್ರಂಗ್‌ ಪರ್ಶಿಯಾದಲ್ಲಿ   ಖಂಡಿತವಾಗಿಯೂ ಜನಪ್ರಿಯ ಕಾಲಕ್ಷೇಪವಾಗಿತ್ತು ಮತ್ತು ಪರ್ಶಿಯವನ್ನು  ಮುಸ್ಲಿಂ ದೊರೆಗಳು ಆಕ್ರಮಿಸಿ ವಿಜಯ ಸಾಧಿಸಿದಾಗಲೂ ಅಲ್ಲೇ ಉಳಿಯಿತು. ವ್ಯಾಪಾರಿಗಳು ಮತ್ತು ಆಕ್ರಮಣಕಾರರು ಆಟವನ್ನು  ವ್ಯಾಪಕವಾಗಿ ಸ್ವೀಕರಿಸಿದಾಗ  ಆಟವು ಮುಸ್ಲಿಂ ಪ್ರಪಂಚದಾದ್ಯಂತ ಮತ್ತು ಅದರಾಚೆಗೂ ಹರಡಿತು.

ಚೆಸ್‌ನ ಆರಂಭಿಕ ಮಾದರಿಗಳು ಶ್ರೀಮಂತರು, ಮಂದಿರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಪಾದ್ರಿಗಳಲ್ಲಿ ಜನಪ್ರಿಯವಾದವು. ವಿವಿಧ ಪ್ರದೇಶಗಳಲ್ಲಿ ಆಟದ ಜನಪ್ರಿಯತೆಯ ಬಗ್ಗೆ  ನೈತಿಕ ಭೀತಿಯೂ ಇತ್ತು , ಇದು ಸಮಕಾಲೀನ ಜಗತ್ತಿನಲ್ಲಿ ಮಕ್ಕಳ ಮನಸ್ಸನ್ನು ಆವರಿಸಿರುವ  ದೂರದರ್ಶನ ಅಥವಾ ವಿಡಿಯೋ ಗೇಮ್‌ಗಳ ಬಗ್ಗೆ ಇರುವ  ಚರ್ಚೆ , ಕಾಳಜಿಗಳಂತೆಯೇ ಇತ್ತು. ೧೦೦೫ರಲ್ಲಿ   ಈಜಿಪ್ಟ್‌ನಲ್ಲಿ ಚೆಸ್ ನ್ನು ನಿಷೇಧಿಸಲಾಯಿತು. ೧೦೬೧ ರಲ್ಲಿ ಚರ್ಚ್ ನ ಸಲಹೆಗಾರರು , ಪೋಪ್ ರಿಗೆ  ಅರ್ಚಕ ವೃತ್ತಿಯವರು  ಚೆಸ್ ಆಡುವಲ್ಲೇ  ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ದೂರು ನೀಡಿದರು. ಕೆಲವು ಶತಮಾನಗಳ ನಂತರ,   ೯ನೆಯ ಲೂಯಿಸ್ ಫ್ರಾನ್ಸ್‌ನಲ್ಲಿ ಚೆಸ್ ಅನ್ನು ನಿಷೇಧಿಸಿದ, ಈ ಆಟದಿಂದ  ಬರೇ ಸಮಯ ಹಾಳು ಎಂದ.

ಆದರೂ , ಆಟದ ಜನಪ್ರಿಯತೆ ಕಡಿಮೆಯಾಗಲಿಲ್ಲ, ಮತ್ತು ೧೫ನೆಯ ಶತಮಾನದ ವೇಳೆಗೆ ಆಟದ ನಿಯಮಗಳು ಮತ್ತಷ್ಟು ಬದಲಾದವು, ಇಂದು ನಾವು ಗುರುತಿಸುವ ಚೆಸ್ ಆಗಿ ಮಾರ್ಪಟ್ಟವು. ಗಮನಾರ್ಹವಾಗಿ, ಒಂದು ಕಾಲದಲ್ಲಿ “ವಜೀರ್” ಎಂದು ಕರೆಯಲ್ಪಡುತ್ತಿದ್ದ ತುಣುಕು, ಬೋರ್ಡ್‌ನಲ್ಲಿ ಸೀಮಿತ ವ್ಯಾಪ್ತಿಯನ್ನು ಹೊಂದಿತ್ತು, ಅದೇ ಮುಂದೆ  ಅಸಾಧಾರಣ ಶಕ್ತಿಯ ರಾಣಿಯಾಗಿ ವಿಕಸನಗೊಂಡಿತು. ಸ್ತ್ರೀವಾದಿ ಇತಿಹಾಸಕಾರ ಮರ್ಲಿನ್ ಯಾಲೋಮ್ ಸೇರಿದಂತೆ ಕೆಲವು ವಿದ್ವಾಂಸರು,  ಆ ಪರಿವರ್ತನೆ   ಕ್ರಿಸ್ಟೋಫರ್ ಕೊಲಂಬಸ್‌ನ ಹೊಸ ಜಗತ್ತಿನ ಅನ್ವೇಷಣೆಗಳನ್ನು  ಬೆಂಬಲಿಸಿದ್ದ ಫ್ರೆಂಚ್ ರಾಣಿ ಎಲೆನಾರ್  ಮತ್ತು  ಸ್ಪ್ಯಾನಿಷ್ ರಾಣಿ  ಇಸಾಬೆಲ್ಲರ  ನಿಜ ಜೀವನದಿಂದ ಪ್ರಭಾವಿತವಾಗಿದೆ ಎಂದಿದ್ದರು.

ಹಾಗಂತ  ಚೆಸ್ ಔಪಚಾರಿಕವಾಗಿ ರಚನಾತ್ಮಕ ಕ್ರೀಡೆಯಾಗಲು ಇನ್ನೂ ಸ್ವಲ್ಪ ಸಮಯ ಹಿಡಿಯಿತು . ೧೯ನೆಯ ಶತಮಾನದಲ್ಲಿ ಚೆಸ್ ಸಂಬಂಧಿ  ಪುಸ್ತಕಗಳು , ಸಮುದಾಯಗಳುಮತ್ತು ಸಂಸ್ಥೆಗಳು ಪ್ರವರ್ಧಮಾನಕ್ಕೆ ಬಂದವು.  ಮೊದಲ ಅಂತರರಾಷ್ಟ್ರೀಯ ಚೆಸ್ ಪಂದ್ಯ ೧೮೫೧ ರಲ್ಲಿ ಲಂಡನ್‌ನಲ್ಲಿ ನಡೆಯಿತು. ಇದನ್ನು  ಇಂಗ್ಲಿಷ್ ಆದ್ಯ ಆಟಗಾರ ಹೊವಾರ್ಡ್ ಸ್ಟೌಂಟನ್ ಆಯೋಜಿಸಿದ್ದು . ಇಂದಿಗೂ ಎಲ್ಲೆಡೆ ಬಳಸಲಾಗುವ ಪ್ರಮಾಣಿತ ಚೆಸ್ ಸೆಟ್ ಅನ್ನು ಆತನ ನೆನಪಲ್ಲಿ ಸ್ಟೌಂಟನ್ ಚೆಸ್ ಸೆಟ್ ಎಂದು ಕರೆಯಲಾಗುತ್ತದೆ . ಆ ಪಂದ್ಯಾವಳಿಯ ವಿಜೇತ  ಜರ್ಮನ್ ದೈತ್ಯ ಪ್ರತಿಭೆ  ಅಡಾಲ್ಫ್ ಆಂಡರ್ಸನ್. ಅವನ ಆಂದಿನ ಆಟ ೧೯ನೆಯ ಶತಮಾನದ ‘ರೊಮ್ಯಾಂಟಿಕ್’ ಶೈಲಿಗೆ ಸಾಕ್ಷಿಯಾಗಿತ್ತು. ಆಟದುದ್ದಕ್ಕೂ ಧೈರ್ಯಶಾಲಿ ಆಕ್ರಮಣಕಾರಿ ನಡೆಗಳು, ಉಳಿವಿಗಾಗಿ ನೀಡುವ ಬಲಿ ,  ಅನಿರೀಕ್ಷಿತ ತಿರುವುಗಳು ಕಂಡವು . ಇದು  ನಂತರ  ರೂಢಿಗೆ ಬಂದ   ಗುಪ್ತ ಯುದ್ಧತಂತ್ರ, ನಿಧಾನವಾಗಿ ಹತೋಟಿ ಪಡೆಯುವ  ವಿಧಾನಗಳಿಂದ  ತುಂಬ ಬೇರೆಯಾಗಿತ್ತು. ೧೮೫೧ರಲ್ಲಿ ಅಂಡರ್ಸ್ಸನ್  ಆಡಿದ ಇನ್ನೊಂದು ಪಂದ್ಯ ‘ಇಮ್ಮಾರ್ಟಲ್ ಗೇಮ್’ ಅಥವಾ  ಅಮರ್ತ್ಯ ಆಟ ಎನ್ನುವ ಹೆಸರಲ್ಲಿ ಚೆಸ್ ಇತಿಹಾಸದಲ್ಲಿ ದಾಖಲಾಗಿದೆ ಮತ್ತೆ ಇಂದಿಗೂ ಮೆಚ್ಚುಗೆಯನ್ನು ಪಡೆದಿದೆ, ಚೆಸ್ ವಿದ್ಯಾರ್ಥಿಗಳ ಅಧ್ಯಯನದ ವಿಷಯವಾಗಿದೆ.  ಅಗಾಧ ಧೈರ್ಯದಿಂದ, ಆಂಡರ್ಸನ್ ತನ್ನ ಎರಡೂ ರೂಕ್‌ಗಳನ್ನು, ಬಿಷಪ್ ಮತ್ತು  ರಾಣಿಯನ್ನು ತ್ಯಾಗ ಮಾಡಿಯೂ ಆಟವನ್ನು ಗೆದ್ದುದು ನಾಟಕೀಯ ಶೈಲಿಯ ಆಟದ ಉತ್ತಮ ಉದಾಹರಣೆಯಾಗಿದೆ.

೨೦ನೆಯ ಶತಮಾನದಲ್ಲಿ , ವಿಶೇಷವಾಗಿ ಯುಎಸ್ಎಸ್ಆರ್ ಸ್ಥಾಪನೆಯ ನಂತರ, ಚೆಸ್  ರಾಜಕೀಯ ಆಯಾಮವನ್ನು ಪಡೆಯಿತು. ಗ್ಯಾರಿ ಕಾಸ್ಪರೋವ್ ಒಂದೆಡೆ ಹೇಳಿದಂತೆ , ‘ಕುಸಿಯುತ್ತಿದ್ದ  ಪಶ್ಚಿಮದ  ಮೇಲೆ ಸೋವಿಯತ್ ಕಮ್ಯುನಿಸ್ಟ್ ಆಡಳಿತದ ಬೌದ್ಧಿಕ ಶ್ರೇಷ್ಠತೆಯನ್ನು ಪ್ರದರ್ಶಿಸಲು ಸೋವಿಯತ್ ಅಧಿಕಾರಿಗಳು ಚೆಸ್ ನ್ನು ಬಹಳ ಉಪಯುಕ್ತ ಸೈದ್ಧಾಂತಿಕ ಸಾಧನವಾಗಿ ಪರಿಗಣಿಸಿದರು”.  ಸೋವಿಯತ್ ಒಕ್ಕೂಟವು ಚೆಸ್ ತರಬೇತಿ ಮತ್ತು ಪ್ರತಿಭೆಯನ್ನು ಪೋಷಿಸುವಲ್ಲಿ ಹೊಂದಿದ್ದ ಅತಿರೇಕದ  ಆಸಕ್ತಿ  ದಶಕಗಳ ಕಾಲ ಆಟದ ಮೇಲೆ ಅದರ ಪ್ರಾಬಲ್ಯಕ್ಕೆ ಕಾರಣವಾಯಿತು. ಬ್ಯಾಲೆ ಮತ್ತು ಕವಿತೆಗಳ ಜೊತೆಗೆ ಚೆಸ್ ಕೂಡ ಸೋವಿಯೆತ್ ಸಮಾಜದ ಸಾಂಸ್ಕೃತಿಕ ಅಸ್ಮಿತೆಯಾಯಿತು. ಸೋವಿಯತ್ ಚಾಂಪಿಯನ್ ಬೋರಿಸ್ ಸ್ಪಾಸ್ಕಿ ಮತ್ತು  ಅಮೆರಿಕದ ವಿಶಿಷ್ಟ ಪ್ರತಿಭಾನ್ವಿತ  ಬಾಬಿ ಫಿಷರ್ ನಡುವಿನ ‘ಶತಮಾನದ ಆಟ ‘ ಎಂದು ಕರೆಯುವ ಪಂದ್ಯ  ೧೯೭೨ರಲ್ಲಿ ನಡೆಯಿತು. ಮತ್ತೆ ಆ ಪಂದ್ಯ  ಸೋವಿಯತ್ ಪ್ರಾಬಲ್ಯಕ್ಕೆ  ಸವಾಲೊಡ್ಡಿತು. ಅವರಿಬ್ಬರ ಮುಖಾಮುಖಿ ಅಮೆರಿಕ -ಸೋವಿಯೆತ್ ಗಳ ನಡುವಿನ  ಶೀತಲ ಸಮರವನ್ನು ಚೆಸ್ ಬೋರ್ಡಿಗೂ  ತಂದಿತು . ಇಡೀ ಪಂದ್ಯ, ಗೆಲುವಿಗಾಗಿ ಬಳಸಲಾಗುವ ರಹಸ್ಯ ಮತ್ತು ಅನುಚಿತ ತಂತ್ರಗಳಿಂದ , ಪರಸ್ಪರರ ಬಗೆಗಿನ  ಅವ್ಯಕ್ತ ಸಂಶಯಗಳಿಂದ ತುಂಬಿತ್ತು. ಸ್ವತಃ  ಚಂಚಲ ಮನಸ್ಥಿತಿಯ , ಹೋರಾಟದ ವ್ಯಕ್ತಿತ್ವದ  ಫಿಷರ್ , ತಾನೆಂದಿಗೂ ಈ ಪಂದ್ಯವನ್ನು ಆಡಲು  ಬರುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ನಂತರ ಅಮೆರಿಕದ ರಾಯಭಾರಿ ಹೆನ್ರಿ ಕಿಸ್ಸಿಂಗರ್   ವಿಶೇಷ ಫೋನ್ ಕರೆ ಮಾಡಿ ಮನವೊಲಿಸಬೆಕಾಯಿತು.

ಫಿಷರ್ ಅಂದಿನ ಐತಿಹಾಸಿಕ ಪಂದ್ಯದಲ್ಲಿ ಸ್ಪಾಸ್ಕಿಯನ್ನು ಸೋಲಿಸಿದರು,  ‘ಸುಳ್ಳು, ಮೋಸ, ಬೂಟಾಟಿಕೆ’ಯ  ಸೋವಿಯತ್ ಚೆಸ್ ಯಂತ್ರದ ವಿರುದ್ಧ ‘ಸ್ವತಂತ್ರ ಜಗತ್ತು’  ಗೆಲುವು ಸಾಧಿಸಿತು ಎಂದು ಅಮೆರಿಕ ತಿಳಿಯಿತು. ಈ ಗೆಲುವು ಫಿಷರ್ ಗೆ , ಬಾಕ್ಸಿಂಗ್ ಜಗತ್ತಿನಲ್ಲಿ ಮುಹಮ್ಮದ್ ಅಲಿಗೆ ದೊರಕಿದ್ದ ರೀತಿಯ  ಜನಪ್ರಿಯತೆಯನ್ನು  ನೀಡಿತು. ಅಂದಿನಿಂದ ಇಂದಿನವರೆಗೂ  ಚೆಸ್ ಜಗತ್ತು ಹಲವು ಸಾರ್ವಕಾಲಿಕ ಅತ್ಯುತ್ತಮ ಆಟಗಾರರು ಎಂದು ಪರಿಗಣಿಸಬಹುದಾದವರನ್ನು ಕಂಡಿದೆ, ಕಾಣುತ್ತಿದೆ. ಇಂಟರ್ನೆಟ್‌ನ ಉದಯದಿಂದಾಗಿ ಈಗ ಎಂದಿಗಿಂತಲೂ ಹೆಚ್ಚು ಜನಪ್ರಿಯವಾಗಿದೆ, ಇದು ಪ್ರಪಂಚದಾದ್ಯಂತ ಲಕ್ಷಾಂತರ  ಅಭಿಮಾನಿಗಳಿಗೆ ಚೆಸ್ ಬಗ್ಗೆ ಮಾತನಾಡಲು ಮತ್ತು ಆಡಲು ಅನುವು ಮಾಡಿಕೊಡುತ್ತಿದೆ ,  ಚೆಸ್ ಅಸ್ತಿತ್ವಕ್ಕೆ ಬಂದ ಒಂದೂವರೆ ಸಹಸ್ರಮಾನಕ್ಕೂ  ಹೆಚ್ಚಿನ  ಕಾಲದ ನಂತರವೂ   ಇತಿಹಾಸ ಬೆಳೆಯುತ್ತಿದೆ ಬದಲಾಗುತ್ತಲೇ ಇದೆ, ಮಾನವ  ಬೌದ್ಧಿಕ ರಾಜಕೀಯ ಸಾಂಸ್ಕೃತಿಕ ವಿಕಸನದಲ್ಲಿ ಸಾಧನವಾಗಿ ಸರಕಾಗಿ ವೇದಿಕೆಯಾಗಿ ಇಂದಿಗೂ ಉಳಿದಿದೆ, ಮುಂದೆಯೂ ಉಳಿಯಲಿದೆ.

ಎರಡನೇ ಮಹಾಯುದ್ಧದ ಬ್ರಿಟಿಷ್ ಗೂಢಚಾರಿಣಿ ನೂರ್ ಇನಾಯತ್ ಖಾನ್ (1914–1944) The Spy Princess -ರಾಮಮೂರ್ತಿ ಲೇಖನ.

ದೇಶಭಕ್ತಿ ಎಂದರೆ ಗಡಿಯಲ್ಲಿ ಶಸ್ತ್ರ ಹಿಡಿದು ಹೋರಾಡುವುದಕ್ಕೆ ಸೀಮಿತವಿಲ್ಲ; ಅಗತ್ಯ ಬಂದಾಗ ತನ್ನ ವೈಯಕ್ತಿಕ ಸುಖ–ಸೌಕರ್ಯ, ಭಯ, ಭವಿಷ್ಯ ಎಲ್ಲವನ್ನೂ ಬದಿಗಿಟ್ಟು ದೇಶಕ್ಕಾಗಿ ನಿಲ್ಲುವ ಧೈರ್ಯವೇ ನಿಜವಾದ ದೇಶಭಕ್ತಿ. ಇಂತಹ ಮೌನವಾದ, ಆದರೆ ಅಪಾರ ತ್ಯಾಗದಿಂದ ಕೂಡಿದ ದೇಶಭಕ್ತಿಯ ಪ್ರತೀಕವೇ ನೂರ್ ಇನಾಯತ್ ಖಾನ್.ಇತಿಹಾಸದ ಪುಟಗಳಲ್ಲಿ ಬಹಳಷ್ಟು ಬಾರಿ ಮಹಿಳೆಯರ ತ್ಯಾಗಗಳು ಅಂಚಿಗೆ ಸರಿದಿವೆ. ವಿಶೇಷವಾಗಿ ವಸಾಹತುಶಾಹಿಯ ಕಾಲಘಟ್ಟದಲ್ಲಿ ಭಾರತ ಮೂಲದ ಅನೇಕರು ನೀಡಿದ ಕೊಡುಗೆಗಳು ಸೂಕ್ತ ಗೌರವವನ್ನು ಪಡೆಯಲಿಲ್ಲ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಗೂಢಚರ್ಯಾ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿದ ನೂರ್ ಇನಾಯತ್ ಖಾನ್ ಅವರ ಜೀವನವು, ದೇಶಭಕ್ತಿಯ ಅರ್ಥಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ಈ ಲೇಖನವು ನೂರ್ ಇನಾಯತ್ ಖಾನ್ ಅವರ ಜೀವನ ಕಥೆಯನ್ನು ಮಾತ್ರವಲ್ಲ, ದೇಶಭಕ್ತಿ ಎಂಬ ಮೌಲ್ಯವು ಜಾತಿ, ಧರ್ಮ, ಲಿಂಗ, ರಾಷ್ಟ್ರಗಳ ಗಡಿಗಳನ್ನು ಮೀರಿ ಮಾನವೀಯತೆಯೊಂದಿಗೆ ಬೆಸೆಯಲ್ಪಟ್ಟಿರುತ್ತದೆ ಎಂಬ ಸತ್ಯವನ್ನು ನಮ್ಮ ಮುಂದಿಡುತ್ತದೆ. ಇಂತಹ ಮರೆತುಹೋಗಿರುವ ವೀರಗಾಥೆಗಳು ಪುನಃ ಓದಿಗೆ ಬರುವುದೇ ನಮ್ಮ ಇತಿಹಾಸದ ಜವಾಬ್ದಾರಿ.ನೂರ್ ಇನಾಯತ್ ಖಾನ್ ಅವರ ಕಥೆ, ದೇಶಭಕ್ತಿ ಎಂದರೆ ಘೋಷಣೆ ಅಲ್ಲ; ಅದು ಮೌನ ತ್ಯಾಗ, ಅಚಲ ನಿಷ್ಠೆ ಮತ್ತು ಕೊನೆಯ ಉಸಿರಿನವರೆಗಿನ ಧೈರ್ಯ ಎಂಬುದನ್ನು ನಮಗೆ ನೆನಪಿಸುತ್ತದೆ.
ಇಂತಹ ಮೈಜುಮ್ಮೆನ್ನುವ ರೋಚಕ ಜೀವನ ಚರಿತ್ರೆಯನ್ನು ನಮ್ಮೊಂದಿದೆ ಹಂಚಿಕೊಂಡಿದ್ದಕ್ಕೆ ಈಗಾಗಲೇ ‘ಅನಿವಾಸಿ’ಗೆ ಅನೇಕ ಅಮೂಲ್ಯ ಇತಿಹಾಸ ಪ್ರಬಂಧಗಳನ್ನು ಕೊಟ್ಟು ಸುಪರಿಚಿತರಾದ ರಾಮಮೂರ್ತಿಯವರಿಗೆ ಧನ್ಯವಾದಗಳು.
~ ರಾಧಿಕಾ ಜೋಶಿ

1914–1918 ಮತ್ತು 1939–1945ರಲ್ಲಿ ನಡೆದ ಈ ಎರಡು ಮಹಾಯುದ್ಧಗಳಲ್ಲಿ ಭಾರತದ ಸುಮಾರು ಇಪ್ಪತ್ತು ಲಕ್ಷ ಸೈನಿಕರು ಭಾಗವಹಿಸಿದ್ದರು. ಆದರೆ ಇವರ ತ್ಯಾಗವನ್ನು ನೆನಪಿಸಿಕೊಂಡು ನವೆಂಬರ್ ತಿಂಗಳಲ್ಲಿ ನಡೆಯುವ Remembrance Day ದಿನದಂದು Poppy Wreath ಇಡುವುದು ಅಪರೂಪವಾಗಿದೆ. ಈ ಯುದ್ಧಗಳಲ್ಲಿ ಅನೇಕ ಮಹಿಳೆಯರೂ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸಿದ್ದರು. ಅವರಲ್ಲಿ ನೂರ್ ಇನಾಯತ್ ಖಾನ್ ಒಬ್ಬಳು. ಈ ಹೆಸರನ್ನು ನೀವು ಬಹುಶಃ ಕೇಳಿರಲಿಕ್ಕಿಲ್ಲ. 112 ವರ್ಷಗಳ ಹಿಂದೆ ಜನಿಸಿದ ಭಾರತ ಮೂಲದ ನೂರ್ ಇನಾಯತ್ ಖಾನ್ ಈ ದೇಶಕ್ಕೆ ನೀಡಿದ ಕೊಡುಗೆ ಅಪಾರವಾದುದು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಅಂದಿನ ಪ್ರಧಾನಮಂತ್ರಿ ಸರ್ ವಿಂಸ್ಟನ್ ಚರ್ಚಿಲ್ ಸ್ಥಾಪಿಸಿದ Special Operations Executive (SOE) ವಿಭಾಗಕ್ಕೆ ಸೇರಿ, ಫ್ರಾನ್ಸ್ ದೇಶದಲ್ಲಿದ್ದು ಶತ್ರುಗಳ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ಅತ್ಯಂತ ಗುಪ್ತವಾಗಿ ವೈರ್‌ಲೆಸ್ ಮೂಲಕ ಲಂಡನ್ ಕಚೇರಿಗೆ ಕಳುಹಿಸುವುದು ಅವಳ ಕೆಲಸವಾಗಿತ್ತು. ಆ ಸಮಯದಲ್ಲಿ ನಾಜಿ ಜರ್ಮನಿ ಫ್ರಾನ್ಸ್ ದೇಶವನ್ನು ಆಕ್ರಮಿಸಿಕೊಂಡಿತ್ತು. ಆದ್ದರಿಂದ ಬ್ರಿಟಿಷ್ ಗೂಢಚಾರಿಗಳು ಅತ್ಯಂತ ಸೂಕ್ಷ್ಮತೆ ಮತ್ತು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿತ್ತು. ಸಿಕ್ಕಿಬಿದ್ದರೆ ಸಾವೇ ಶಿಕ್ಷೆ.

ಪ್ರತಿ ದಿನ ಒಂದು ಸುರಕ್ಷಿತ ಮನೆಯಿಂದ ಇನ್ನೊಂದು ಮನೆಗೆ ಗುಪ್ತವಾಗಿ ಸ್ಥಳಾಂತರಗೊಂಡು, ಅಟ್ಟದಲ್ಲೋ ಅಥವಾ ನೆಲಮಾಳಿಗೆಯಲ್ಲೋ ವೈರ್‌ಲೆಸ್ ಉಪಕರಣಗಳನ್ನು ಜೋಡಿಸಿ ಸಂದೇಶ ಕಳುಹಿಸುವುದು ಸುಲಭದ ಕೆಲಸವಾಗಿರಲಿಲ್ಲ. ಶತ್ರುಗಳಿಗೆ ಸುಳಿವು ಸಿಗದಂತೆ ಅವಳು ಅನೇಕ ಹೆಸರುಗಳನ್ನು ಬಳಸುತ್ತಿದ್ದಳು—ಮ್ಯಾಡಲೀನ್, ನೊರಾ ಇತ್ಯಾದಿ. ಆದರೆ ಕೊನೆಗೆ ಒಬ್ಬ ದ್ರೋಹಿಯ ಕಾರಣದಿಂದ ಶತ್ರುಗಳಿಗೆ ಸಿಕ್ಕಿಬಿದ್ದು, ಹಲವಾರು ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿ ಭೀಕರ ಚಿತ್ರಹಿಂಸೆಯನ್ನು ಸಹಿಸಿದರೂ, ಒಂದು ಚೂರು ರಹಸ್ಯವನ್ನೂ ಬಿಟ್ಟು ಕೊಡದ ಧೈರ್ಯಕ್ಕಾಗಿ Dachau Concentration Camp ನಲ್ಲಿ Gestapo ಗುಂಡಿನಿಂದ ಹತ್ಯೆಗೊಳಗಾದಳು.

ಬಾಲ್ಯ ಜೀವನ ಮತ್ತು ಕುಟುಂಬ ಹಿನ್ನೆಲೆ

ತಂದೆ ಹಜರತ್ ಇನಾಯತ್ ಖಾನ್ ಬರೋಡಾ ನಗರದಲ್ಲಿ ಜನಿಸಿದರು. ತಾಯಿ ಕಡೆಯಿಂದ ಅವರು ಮೈಸೂರಿನ ಟಿಪ್ಪು ಸುಲ್ತಾನನ ವಂಶಸ್ಥರು(ಮರಿಮಗ). ಟಿಪ್ಪು ಸುಲ್ತಾನ ಬ್ರಿಟಿಷರ ವಿರುದ್ಧ ಯುದ್ಧ ಮಾಡಿ 1799ರಲ್ಲಿ ಮರಣ ಹೊಂದಿದರು. ಹಜರತ್ ಇನಾಯತ್ ಖಾನ್ ಶಾಂತಿಪ್ರಿಯರಾಗಿದ್ದು, ಇಸ್ಲಾಂ ಧರ್ಮದ ಸೂಫಿ ಪರಂಪರೆಯನ್ನು ಅನುಸರಿಸಿ ಸಂಗೀತವನ್ನು ಕಲಿತವರು. ಈ ಸಂಪ್ರದಾಯವನ್ನು ವಿಶ್ವದಾದ್ಯಂತ ಹರಡುವ ಉದ್ದೇಶದಿಂದ ಅಮೆರಿಕಾ ಮತ್ತು ಯುರೋಪ್‌ನಲ್ಲಿ ಪ್ರವಾಸ ಮಾಡಿದರು.

ತಾಯಿ ಅಮೆರಿಕಾದ ಪ್ರಜೆ ಒರಾ ರೇ ಬೇಕರ್; ನಂತರ ಇಸ್ಲಾಂ ಧರ್ಮ ಸ್ವೀಕರಿಸಿ ಅಮೀನಾ ಬೇಗಂ ಎಂದು ಹೆಸರು ಪಡೆದರು. ಯುರೋಪ್‌ನಲ್ಲಿ ಸಂಚರಿಸಿ ಕೆಲ ವರ್ಷಗಳು ಮಾಸ್ಕೋ ನಗರದಲ್ಲಿ ವಾಸಿಸಿ, 1914ರಲ್ಲಿ ಮೊದಲ ಮಹಾಯುದ್ಧ ಆರಂಭವಾಗುವ ಮೊದಲು ಕುಟುಂಬದೊಂದಿಗೆ ಲಂಡನ್‌ನ ಬ್ಲೂಮ್ಸ್‌ಬರಿ (Bloomsbury)ಯಲ್ಲಿ ನೆಲೆಸಿದರು. ನೂರ್ 01-01-1914ರಂದು ಮಾಸ್ಕೋ ನಗರದಲ್ಲಿ ಜನಿಸಿದರು.

ಮಹಾಯುದ್ಧ ಮುಗಿದ ನಂತರ 1920ರಲ್ಲಿ ಲಂಡನ್‌ನಿಂದ ಪ್ಯಾರಿಸ್‌ಗೆ ಬಂದು ನೆಲೆಸಿದರು. ಇನಾಯತ್ ಖಾನ್ ಸಂಗೀತ ಮತ್ತು ಸೂಫಿ ಧರ್ಮದ ಪ್ರಚಾರ ಆರಂಭಿಸಿದರು. ಆದರೆ 1927ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಅನಾರೋಗ್ಯದಿಂದ ನಿಧನರಾದರು.

13 ವರ್ಷದ ನೂರ್ ಮೇಲೆ ಕುಟುಂಬದ ಹೊಣೆಗಾರಿಕೆ ಬಿದ್ದರೂ, ಅವಳ ವಿದ್ಯಾಭ್ಯಾಸವನ್ನು ಮುಂದುವರೆಸಿ ಪ್ರಸಿದ್ಧ Sorbonne ವಿಶ್ವವಿದ್ಯಾಲಯದಲ್ಲಿ ಮಕ್ಕಳ ಮನೋವಿಜ್ಞಾನ (Child Psychology) ಪದವಿ ಪಡೆದಳು. ಸಂಗೀತದಲ್ಲೂ ಅವಳು ಪ್ರವೀಣಳಾಗಿದ್ದಳು. ನಂತರ ಮಕ್ಕಳ ಪುಸ್ತಕಗಳ ಲೇಖಕಿಯಾಗಿ, 1939ರಲ್ಲಿ ಬೌದ್ಧ ಧರ್ಮದಿಂದ ಪ್ರೇರಿತವಾದ “ಇಪ್ಪತ್ತು ಜಾತಕ ಕಥೆಗಳು” ಸೇರಿದಂತೆ ಹಲವು ಬರಹಗಳು ಫ್ರೆಂಚ್ ಭಾಷೆಯಲ್ಲಿ ಪ್ರಕಟವಾದವು.

ಎರಡನೇ ಮಹಾಯುದ್ಧದಲ್ಲಿ ವೈರ್‌ಲೆಸ್ ಆಪರೇಟರ್

1939ರಲ್ಲಿ ನಾಜಿ ಜರ್ಮನಿ ಯುರೋಪ್ ಖಂಡವನ್ನು ಕಬಳಿಸುವ ಪ್ರಯತ್ನದಿಂದ ಯುದ್ಧ ಆರಂಭವಾಯಿತು. 1940ರಲ್ಲಿ ಫ್ರಾನ್ಸ್ ಜರ್ಮನಿಯ ವಶವಾಯಿತು. ಅಹಿಂಸಾವಾದಿಗಳಾದ ಈ ಕುಟುಂಬ Bordeaux ನಿಂದ ಸರಕು ಸಾಗಿಸುವ ಹಡಗಿನಲ್ಲಿ ಲಂಡನ್‌ಗೆ ಮರಳಿದರು.
ನೂರ್ ಮತ್ತು ಅವಳ ಸಹೋದರ ವಿಲಾಯತ್ ಅವರ ತಂದೆಯಂತೆ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ವಿಮುಕ್ತವಾಗಬೇಕೆಂದು ಕನಸು ಕಂಡಿದ್ದರು. ಆದರೆ ಈಗ ಜರ್ಮನಿ ಯುರೋಪ್ ಖಂಡವನ್ನೇ ಆಕ್ರಮಿಸುವ ಅಪಾಯ ಎದುರಾದ್ದರಿಂದ, ಇದನ್ನು ತಡೆಯಲು ತಮ್ಮ ಕೈಲಾದ ಸೇವೆ ಸಲ್ಲಿಸಲು ನಿರ್ಧರಿಸಿದರು.

ನೂರ್ ಆಗತಾನೆ ಆರಂಭವಾಗಿದ್ದ WAAF (Women’s Auxiliary Air Force) ಗೆ ಸೇರಿ Signals ಮತ್ತು Wireless ವಿಭಾಗದಲ್ಲಿ ತರಬೇತಿ ಪಡೆದು, ಜೂನ್ 1943ರಲ್ಲಿ ಫ್ರಾನ್ಸ್‌ನಲ್ಲಿ ಕೆಲಸ ಆರಂಭಿಸಿದಳು. Gestapo ಪ್ಯಾರಿಸ್‌ನಲ್ಲಿ ಅನೇಕ ಬ್ರಿಟಿಷ್ ಗೂಢಚಾರಿಗಳನ್ನು ಹಿಡಿದು ಕ್ರೂರ ಶಿಕ್ಷೆ ವಿಧಿಸುತ್ತಿತ್ತು. ಇಂತಹ ಅಪಾಯಕರ ಪರಿಸ್ಥಿತಿಯಲ್ಲೂ ನೂರ್ ವೇಷ ಬದಲಿಸಿ ಸುರಕ್ಷಿತ ಮನೆಗಳಿಂದ ಮನೆಗಳಿಗೆ ಸ್ಥಳಾಂತರಗೊಳ್ಳುತ್ತಾ ತನ್ನ ಕೆಲಸ ಮುಂದುವರೆಸಿದಳು.

ಅವಳ ಫ್ರೆಂಚ್ ಭಾಷೆಯ ಉಚ್ಚಾರಣೆ ಸ್ಥಳೀಯರಂತೆಯೇ ಇದ್ದುದರಿಂದ ಅವಳ ಮೇಲೆ ಸಂಶಯ ಬಹಳ ಕಡಿಮೆ ಇತ್ತು. ಅವಳು ಅತ್ಯಂತ ಶಿಸ್ತಿನಿಂದ ನಿರ್ವಹಿಸುತ್ತಿದ್ದ ಕೆಲಸ ಲಂಡನ್‌ನಲ್ಲೂ ಮೆಚ್ಚುಗೆ ಪಡೆದಿತ್ತು. ಆದರೂ ಅವಳ ಸುರಕ್ಷತೆ ಬಗ್ಗೆ ಆತಂಕವಿತ್ತು; ಹಲವು ಬಾರಿ ಅವಳನ್ನು ವಾಪಸ್ಸು ಬರಲು ಕರೆ ಮಾಡಲಾಯಿತು. ಆದರೆ ನೂರ್ ಅದನ್ನು ನಿರಾಕರಿಸಿ ಫ್ರಾನ್ಸ್‌ನಲ್ಲೇ ಕೆಲಸ ಮುಂದುವರೆಸಿದಳು.
ದುರದೃಷ್ಟವಶಾತ್, ಫ್ರಾನ್ಸ್‌ನ ಒಬ್ಬ Double Agent ದ್ರೋಹ ಮಾಡಿದ್ದರಿಂದ Gestapo ನೂರ್ ಅನ್ನು ಸೆರೆಹಿಡಿಯಲು ಸಾಧ್ಯವಾಯಿತು.

ಕೊನೆಯ ದಿನಗಳು

Gestapo ಕಾರಾಗೃಹದಲ್ಲಿ ಇಟ್ಟ ಮೊದಲ ದಿನವೇ ಕಿಟಕಿಯ ಮೂಲಕ ತಪ್ಪಿಸಿಕೊಳ್ಳಲು ಅವಳು ಪ್ರಯತ್ನಿಸಿದಳು. Gestapo ಎಷ್ಟೇ ಹಿಂಸೆ ನೀಡಿದರೂ ನೂರ್ ತನ್ನ Code Word ಸೇರಿದಂತೆ ಯಾವುದೇ ರಹಸ್ಯವನ್ನೂ ಬಿಟ್ಟು ಕೊಡಲಿಲ್ಲ. ಇತರ ಬಂಧಿಗಳೊಂದಿಗೆ ಸೆರೆಯ ಕಂಬಿಗಳನ್ನು ಮುರಿದು ತಪ್ಪಿಸಿಕೊಳ್ಳುವ ಪ್ರಯತ್ನ ವಿಫಲವಾಯಿತು.

ನಂತರ ಅವಳನ್ನು ಏಕಾಂತ ಬಂಧನದಲ್ಲಿ ಇಟ್ಟರೂ ಯಾವುದೂ ಹೊರಬರಲಿಲ್ಲ. ಕೊನೆಗೆ ಅವಳನ್ನು ಸರಪಳಿಗಳಿಂದ ಕಟ್ಟಿ ಜರ್ಮನಿಯ ಕಠಿಣ Pforzheim ಕಾರಾಗೃಹಕ್ಕೆ ಕರೆದೊಯ್ದು ಅಮಾನವೀಯವಾಗಿ ಹಿಂಸೆ ನೀಡಿದರು. ಇದು ನವೆಂಬರ್ 1943. ಹತ್ತು ತಿಂಗಳುಗಳ ಕಾಲ ನಡೆದ ಹಿಂಸೆಯಲ್ಲಿಯೂ ಅವಳಿಂದ ಯಾವುದೇ ರಹಸ್ಯ ಬಯಲಾಗಲಿಲ್ಲ.
ಕೊನೆಗೆ ನೂರ್ ಮತ್ತು ಇನ್ನೂ ನಾಲ್ಕು ಬಂಧಿಗಳನ್ನು Dachau Concentration Camp ಗೆ ಕಳುಹಿಸಿ 13 ಸೆಪ್ಟೆಂಬರ್ 1944ರಂದು ಗುಂಡಿಟ್ಟು ಹತ್ಯೆಗೊಳಗಾದರು (ಇಲ್ಲಿ ಲಕ್ಷಾಂತರ ಯಹೂದಿಗಳನ್ನು ಗ್ಯಾಸ್ಚೇಂಬರ್‌ಗಳಲ್ಲಿ ಹತ್ಯೆ ಮಾಡಲಾಗಿತ್ತು).

ನೂರ್‌ನ ಕೊನೆಯ ಮಾತು ಅವಳ ತುಟಿಗಳಿಂದ ಹೊರಬಂದದ್ದು—“LIBERTÉ”, ಅಂದರೆ ಸ್ವಾತಂತ್ರ್ಯ. ಕೇವಲ 30 ವರ್ಷದ ಈ ಧೈರ್ಯಶಾಲಿ ಮಹಿಳೆ ತನ್ನ ಪ್ರಾಣವನ್ನು ಈ ದೇಶಕ್ಕೆ ಅರ್ಪಿಸಿದಳು.
ಮಹಾಯುದ್ಧ ಮುಗಿದ ನಂತರ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಹೊರಡುವ ಯೋಚನೆ ಅವಳಿಗಿತ್ತು. WAAF ಸೇರಿದ್ದಾಗ ನೂರ್ ಇದನ್ನು ಕೆಲವರ ಮುಂದೆ ಹೇಳಿದ್ದಾಳೆ ಎಂಬುದು ತಿಳಿದುಬರುತ್ತದೆ.

Dachau ನಲ್ಲಿ ಕೊಲೆಯಾದವರ ಅಂತ್ಯಕ್ರಿಯೆ ಯಥೋಚಿತ ಗೌರವದಿಂದ ನಡೆಯುತ್ತಿರಲಿಲ್ಲ; ಇದು Gestapo ಯ ಅಮಾನವೀಯ ವರ್ತನೆಯ ಮತ್ತೊಂದು ಉದಾಹರಣೆ. ಹೀಗೆ ಮೃತರಾದವರ ಸಂಖ್ಯೆ ಅನೇಕ. ಬಹಳ ವರ್ಷಗಳ ನಂತರ ನೂರ್‌ನ ಕೊನೆಯ ದಿನಗಳ ವಿವರಗಳು National Archives ನಲ್ಲಿರುವ ಐತಿಹಾಸಿಕ ದಾಖಲೆಗಳಿಂದ ಬೆಳಕಿಗೆ ಬಂದವು.

ಭಾರತದ ಪತ್ರಕರ್ತೆಯಾದ ಶ್ರೀಮತಿ ಶ್ರಭಾನಿ ಬಸು ಅವರ ಸಂಶೋಧನೆಯಿಂದ ನೂರ್ ಕುರಿತ ಹೆಚ್ಚಿನ ವಿಷಯಗಳು ಬಹಿರಂಗವಾದವು. ನಂತರ “Spy Princess: The Life of Noor Khan” ಎಂಬ ಪುಸ್ತಕ ಪ್ರಕಟವಾಯಿತು.

ಮರಣೋತ್ತರ ಗೌರವಗಳು

ಯುದ್ಧದಲ್ಲಿ ಮೃತರಾದವರ ಸ್ಮಾರಕ Runnymede ನಲ್ಲಿ ಇದೆ; ಅಲ್ಲಿ ನೂರ್ ಹೆಸರನ್ನು ಕಾಣಬಹುದು. ಲಂಡನ್‌ನ ಅನೇಕ ಸ್ಥಳಗಳಲ್ಲಿ ನೂರ್ ಸ್ಮಾರಕಗಳಿವೆ ಮತ್ತು ಅವಳಿಗೆ ಹಲವಾರು ಮರಣೋತ್ತರ ಪ್ರಶಸ್ತಿಗಳು ದೊರೆತಿವೆ. ಮುಖ್ಯವಾದವುಗಳು George Cross ಹಾಗೂ ಫ್ರಾನ್ಸ್ ದೇಶದ Croix de Guerre.
08-11-2012ರಂದು ಅವಳ ಕಂಚಿನ ಪ್ರತಿಮೆಯನ್ನು Bloomsbury ಯ Gordon Square ನಲ್ಲಿ ಅನಾವರಣ ಮಾಡಲಾಯಿತು. ನೂರ್ ವಾಸವಾಗಿದ್ದ Taviton Street ಮನೆಯ ಮುಂದೆ 2020ರಲ್ಲಿ
English Heritage ಸಂಸ್ಥೆ Blue Plaque ಅನ್ನು ಅನಾವರಣ ಮಾಡಿತು. 25-03-2014ರಂದು ನೂರ್ ಭಾವಚಿತ್ರವಿರುವ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಯಿತು.

2019ರ ಚಲನಚಿತ್ರ A Call to Spy ಯಲ್ಲಿ ರಾಧಿಕಾ ಆಪ್ಟೆ ನೂರ್ ಪಾತ್ರದಲ್ಲಿ ನಟಿಸಿದ್ದಾರೆ.
The Independent ಪತ್ರಿಕೆಯಲ್ಲಿ ನೂರ್ ಬಗ್ಗೆ ಹೀಗೆ ಬರೆಯಲಾಗಿದೆ:
She died with “freedom” on her lips. It was hers. And it was ours as well.

— ರಾಮಮೂರ್ತಿ
ಕಾಂಗಲ್ ಟನ್, ಚೆಶೈರ್

Acknowledgements

Images from Google

The Princess who became a Spy: Independent Fed 2016  National Archives National Archives