ಗೋವಾ ಎಕ್ಸ್ ಪ್ರೆಸ್

ಕನ್ನಡ ಕರಾವಳಿಯವರಿಗೆ ರೈಲು ಮಾರ್ಗ ಕನಸಿನ ಕೂಸೇ ಆಗಿತ್ತು. ಅದು ನನಸಾಗಿದ್ದು ೧೯೯೮ ರಲ್ಲಿ ಕೊಂಕಣ್ ರೈಲು ಹಾದಿಯಲ್ಲಿ ದಶಕಗಳ ಕಾಲದಿಂದಲೂ ಕಾತುರದಿಂದ ಕಾಯುತ್ತಿದ್ದ ರೈಲು ಮುಂಬಯಿಯಿಂದ ಮಂಗಳೂರಿನ ಮಾರ್ಗವಾಗಿ ನೇತ್ರಾವತಿ ಎಕ್ಸ್ಪ್ರೆಸ್ಸಿನ ರೂಪದಲ್ಲಿ ಹರಿದುಬಂದಾಗ. ಕರಾವಳಿಯಲ್ಲಿ ಅಲ್ಲಿಯವರೆಗೂ ಬಸ್ಸು , ಕಿಕ್ಕಿರಿದು ತುಂಬಿದ ಟ್ಯಾಕ್ಸಿ, ಟೆಂಪೋಗಳದ್ದೇ ಗಡದ್ದು ಕಾರುಬಾರು. ಮಂಗಳೂರನ್ನು ಬಿಟ್ಟರೆ ಬೇರೆ ವಿಮಾನ ನಿಲ್ದಾಣವೂ ಇಲ್ಲ. ಅಲ್ಲೇ ಹುಟ್ಟಿ ಬೆಳೆದವರು ಕೇವಲ ಪತ್ರಿಕೆಗಳಲ್ಲಿ / ಪುಸ್ತಕಗಳಲ್ಲಿನ ಚಿತ್ರದಲ್ಲಿ ಮಾತ್ರ ರೈಲನ್ನು ಕಂಡಿರಬಹುದು. ವಿಶೇಷವೆಂದರೆ ಕನ್ನಡದಲ್ಲಿ ರೈಲಿನ ಕುರಿತಾದ ಶಿಶುಗೀತೆಗಳೂ ಇರಲಿಲ್ಲ. ಈ ಹಿನ್ನಲೆಯಲ್ಲಿ ಬೆಳೆದು ಬಂದ ನನ್ನಂಥವನಿಗೆ ರೈಲು ಅದ್ಯಾವ ಮೋಡಿ ಹಾಕಿತ್ತೋ ಭಗವಂತನೇ ಬಲ್ಲ. ಕಾಲಮಾನಗಳ ನಂತರ ಬರಡಾದ ಮರುಭೂಮಿಯಲ್ಲಿ ಮಳೆ ಬಂದ ಮೇಲೆ ಹಸಿರೊಡೆಯುವಂತೆ, ಕಾಲೇಜಿನ ಕೊನೆಯ ದಿನಗಳಲ್ಲಿ ಮೊದಲ ಬಾರಿ ಮಾಡಿದ ಎರಡು ದಿನಗಳ ಕಾಲದ ರೈಲು ಯಾತ್ರೆಯಿಂದ ರೈಲಿನ ಆಕರ್ಷಣೆಯನ್ನು ನೂರ್ಪಟ್ಟು ಹಿಗ್ಗಿಸಿದೆ. ಈ ಯಾತ್ರೆಯ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಇದು .

೧೯೯೩ ರ ನವೆಂಬರ್, ದೆಹಲಿಯಿಂದ ಕೇಂದ್ರ ಲೋಕ ಸೇವಾ ಆಯೋಗದ ಸಂದರ್ಶನಕ್ಕೆ ಕರೆ ಬಂದಿತ್ತು. ನಮ್ಮ ಕ್ಲಾಸಿನ ನಾಲ್ಕು ವಿದ್ಯಾರ್ಥಿಗಳಿಗೆ ಸಿಕ್ಕಿದ ಅವಕಾಶವದು. ಹುಬ್ಬಳ್ಳಿಯಿಂದ ದೆಹಲಿಗೆ ಪ್ರಯಾಣ ಮಾಡಬೇಕೆಂದರೆ ರೈಲೇ ಅನುಕೂಲಕರ ಮಾರ್ಗವಾಗಿತ್ತು. ಆಗಿನ್ನೂ ಉತ್ತರ ಕರ್ನಾಟಕದಲ್ಲಿ ಬ್ರಾಡ್ ಗೇಜ್ ರೈಲು ಮಾರ್ಗವಿರಲಿಲ್ಲ. ಕರಾವಳಿಯಲ್ಲಿ ಹಳಿಯೇ ಹಾಕಿರಲಿಲ್ಲ, ಬೆಂಗಳೂರು ಬಿಟ್ಟರೆ ಕರ್ನಾಟಕದ ಕಡೆ ಬ್ರಾಡ್ ಗೇಜ್ ಹಣಕಿಯೂ ಹಾಕಿರಲಿಲ್ಲ. ಇದು ಅಂದಿನ ಕರ್ನಾಟಕದ ರೈಲಿನ ಪರಿಸ್ಥಿತಿ! ಹುಬ್ಬಳಿಯಿಂದ ರಾತ್ರೆ ಹೊರಟ ರೈಲು ಬೆಳಗಿನ ಜಾವ ಮಿರಜ್ ಜಂಕ್ಷನ್ ಸೇರುತ್ತಿತ್ತು. ಅಲ್ಲಿಂದ ರೈಲು ಬದಲಾಯಿಸಿದರೆ ಗಮ್ಯ ಸ್ಥಾನ ದೆಹಲಿಯ ಹಝರತ್ ನಿಜಾಮುದ್ದಿನ್ ನಿಲ್ದಾಣ ತಲುಪಲು ಅಧಿಕೃತವಾಗಿ ೪೨ ಘಂಟೆ ಬೇಕಿತ್ತು. ಹೈಸ್ಕೂಲಿನಲ್ಲಿರುವಾಗ ಅಳ್ನಾವರದಿಂದ ಗೋವಾಕ್ಕೆ ಎನ್.ಸಿ.ಸಿ ಕ್ಯಾಮ್ಪಿಗೆ ಹೋಗಿದ್ದೆ. ಅದು ಪಶ್ಚಿಮ ಘಟ್ಟವನ್ನು ಬಳಸಿ ದೂಧ್ ಸಾಗರ್ ಜಲಪಾತದ ತಪ್ಪಡಿಯಲ್ಲಿ ತೆವಳುತ್ತ ಸಾಗುವ ಅದ್ಭುತರಮ್ಯ ಹಾದಿ. ಕೆಲವೇ ಘಂಟೆಗಳ ಆ ಪ್ರಯಾಣ ನನಗೆ ರೈಲು ಪ್ರಯಾಣದ ಹುಚ್ಚು ಹಿಡಿಸಿತ್ತು. ಕಲ್ಲಿದ್ದಲಿನಿಂದ ಚಲಿಸುವ ಆ ಉಗಿಬಂಡಿಯಿಂದ ಇಳಿದಾಗ ಮುಖ, ಬಟ್ಟೆಯೆಲ್ಲ ಕಪ್ಪಾಗಿದ್ದರೂ ನನ್ನ ರೈಲು ಪ್ರಯಾಣದ ಉತ್ಸಾಹಕ್ಕೆ ಅದು ಬೂದಿ ಎರಚಲಿಲ್ಲ.

ರಾತ್ರೆ ಹೊದೆಯಲೊಂದು ಚಾದರ, ಒಂದು ಸಣ್ಣ ಸೂಟ್ ಕೇಸಿನಲ್ಲಿ ನಾಲ್ಕೈದು ಬಟ್ಟೆಗಳನ್ನು ತುರುಕಿದ್ದಷ್ಟೇ ನನ್ನ ತಯ್ಯಾರಿ. ನಾವು ಸ್ಲೀಪರ್ ಕೋಚನ್ನು ರಿಸರ್ವ್ ಮಾಡಿದ್ದೆವು. ಹಿಂದಿನ ಪ್ರಯಾಣದಲ್ಲಿ ಗಾಂಧಿ ಕ್ಲಾಸಿನ ಒರಟು ಮರದ ಬೆಂಚಿನಲ್ಲೇ ಪ್ರಯಾಣ ಮಾಡಿದ್ದ ನನಗೆ, ಮೆತ್ತನೆಯ ಮಡಚುವ ಸೀಟುಗಳನ್ನ ಕಂಡು ಮನ ಪುಳಕಿತಗೊಂಡಿತು. ಮತ್ತೆ ಮತ್ತೆ ಒತ್ತಿ ನೋಡಿ ಖುಶಿ ಪಟ್ಟುಕೊಂಡೆ. ಸೂಟ್ ಕೇಸನ್ನು ಸೀಟಿನ ಅಡಿಗೆ ನೂಕಿ, ಯಾರೂ ಕದ್ದೊಯ್ಯಬಾರದೆಂದು ಸರಪಳಿಯಿಂದ ಬಿಗಿದು ಬೀಗ ಜಡಿದು, ಎಳೆದು ನೋಡಿ ತೃಪ್ತಿಯಾದ ಮೇಲೆ ಬೀಗದ ಕೈಯನ್ನು ಜತನವಾಗಿ ಪ್ಯಾಂಟಿನ ಜೇಬಿಗಿಳಿಸಿ ಮೆತ್ತನೆಯ ಸೀಟಿನ ಮೇಲೆ ಆಸೀನನಾಗಿ, ಮೇಲೆ ತಿರುಗುವ ಫ್ಯಾನನ್ನು ಅವಲೋಕಿಸುತ್ತ ಸೀಟನ್ನು ಸವರುತ್ತ ಒಂದು ಅಲೌಕಿಕ ಆನಂದವನ್ನು ಅನುಭವಿಸುತ್ತಿದ್ದಂತೆ ಗಾರ್ಡ್ ಸೀಟಿ ಊದಿದ್ದು ಕೇಳಿಸಿತು. ರೈಲಿನ ಚಕ್ರ ಮೆಲ್ಲನೆ ಕಬ್ಬಿಣದ ಹಳಿಯ ಮೇಲೆ ಜಾರುತ್ತ ತಿರುಗಲು ಶುರುವಾದಂತೆ ನಾವು ಬಾಗಿಲಿನ ಬಳಿ ಸಾಗಿ ದೇಹದ ಅರ್ಧಭಾಗವನ್ನ ರೈಲಿನ ಹೊರಗಿಟ್ಟು ಸಿನೆಮಾ ಹೀರೋಗಳಂತೆ ನಿಂತೆವು. ಹುಬ್ಬಳ್ಳಿ ಬಿಡುತ್ತಿದ್ದಂತೆ ಹಾದಿಯಲ್ಲಿ ಕೆ. ಎಂ. ಸಿ ಹಾಗೂ ನೃಪತುಂಗ ಬೆಟ್ಟದ ದರುಶನ ಮಾಡಲೇಬೇಕಲ್ಲ! ಇದು ಡೀಸಲ್ ರೈಲಾಗಿದ್ದರಿಂದ ಮೈ – ಮೊರೆ ಕಪ್ಪಾಗುವ ಹೆದರಿಕೆಯೂ ಇರಲಿಲ್ಲ. ಮುಖಕ್ಕೆ ಎರಚುವ ಗಾಳಿಯ ರಭಸವನ್ನು, ರೈಲಿನ ಶಿಳ್ಳೆಯ ಸಂಗೀತವನ್ನು ಅನುಭವಿಸುವ ಸುಖದ ಮತ್ತೇರುತ್ತಿದಂತೇ ಕಣ್ಣು ಕೂರಲು ಆರಂಭಿಸಿತು. ಸೀಸನ್ಡ್ ಯಾತ್ರಿಗಳು ಆಗಲೇ ಹಾಸಿಗೆ ತಯಾರಿ ಮಾಡಿ, ಮಂಕಿ ಕ್ಯಾಪ್ ಹಾಕಿ, ರಗ್ಗು ಹೊದ್ದು ಲಘುವಾದ ಗೊರಕೆ ಹೊಡೆಯುತ್ತಿದ್ದರು. ಬರ್ತ್ ಹತ್ತಿ ಪವಡಿಸಿದಂತೇ, ರೈಲಿನ ರೈಲು – ಹಳಿಗಳ ತಾಳಬದ್ಧವಾದ ಜುಗಲಬಂದಿಯ ಜೋಗುಳ ಗಾಯನಕ್ಕೆ ಜೋಮ್ಪು ಹತ್ತಿತ್ತು. ಮಧ್ಯರಾತ್ರಿಯಲ್ಲಿ ರೈಲು ಯಾವುದೊ ನಿಲ್ದಾಣದಲ್ಲಿ ನಿಂತ ಅರಿವಾಯಿತು. ಸುಮಾರು ಹೊತ್ತಾದರೂ ಅಲ್ಲಾಡದಿದ್ದರಿಂದ ರೈಲು ಹಾಳಾಗಿ ನಿಂತಿದೆಯೇ ಎಂಬ ಸಂದೇಹ ಬಂತು. ಕೇವಲ ಬಸ್ಸುಗಳಲ್ಲೇ ಪ್ರಯಾಣ ಮಾಡಿದವರಿಗೆ ಬಸ್ಸು ಅವಶ್ಯಕ್ಕಿಂತ ಜಾಸ್ತಿ ನಿಂತರೆ ಗಾಡಿ ಹಾಳಾಗಿದೆ ಎನ್ನುವ ಅನುಮಾನ ಬರುವುದು ಸಹಜ. ನಿಲ್ದಾಣವಾದರೂ ಯಾವುದು ಎಂಬ ಕುತೂಹಲದಿಂದ ಬಾಗಿಲಿನಿಂದ ಹಣಕಿ ಹಾಕಿದಾಗ ಲೋಂಡಾ ನಿಲ್ದಾಣವದು ಎಂಬ ಅರಿವಾಯಿತು. ಪಕ್ಕದಲ್ಲೇ ನಿಂತು ಬೀಡಿ ಸೇದುತ್ತಿದ್ದ ಮಹಾನುಭಾವರನ್ನು ಕೇಳಿದಾಗ ರೈಲು ಸುಮ್ಮನೆ ನಿಂತಿಲ್ಲ, ಗೋವಾದಿಂದ ಬರುವ ರೈಲಿಗೆ ಕಾಯುತ್ತಿದೆ ಎಂದು ತಿಳಿದು ಬಂತು. ಹುಬ್ಬಳ್ಳಿಯಿಂದ ಬರುವ ರೈಲು, ಗೋವಾದಿಂದ ಬರುವ ರೈಲಿಗೆ ಜೋಡಿಯಾಗಿ ಮೀರಜ್ ತಲುಪಿ, ಗೇಜ್ ಬದಲಾಯಿಸಿ, ಮತ್ತಷ್ಟು ಬೋಗಿಗಳನ್ನು ಅಂಟಿಸಿಕೊಂಡು ದೆಹಲಿಗೆ ಓಡುತ್ತಿತ್ತು. ಅದಕ್ಕಾಗೇ ನಾವು ಹೋಗುತ್ತಿರುವ ರೈಲಿನ ಹೆಸರು ಗೋವಾ ಎಕ್ಸ್ಪ್ರೆಸ್. ಬೇರೆ ಬೇರೆ ಮೂಲಗಳಿಂದ ಬಂದ ಹೊಳೆಗಳು ಕೂಡಿ ನದಿಯಾಗಿ ಮುಂದೆ ಸಾಗರ ಸೇರಿದಂತೆ. ವಾಸ್ಕೋದಿಂದ ಬಂದ ರೈಲಿಗೆ ನಮ್ಮ ಬೋಗಿಯನ್ನು ಅಂಟಿಸುವ ಕೈಂಕರ್ಯ ನೋಡಿ ಧನ್ಯನಾದೆ. ಆದರೆ ಮಧ್ಯದಲ್ಲಿದ್ದ ನಮ್ಮ ಬೋಗಿ ಈಗ ಹೊಸ ರೈಲಿನ ಕೊನೆಯಲ್ಲಿದೆಯಲ್ಲ ಎಂದು ಸ್ವಲ ಬೇಜಾರೂ ಆಯಿತು. ಕೊನೆಯಲ್ಲಿದ್ದರೂ ಬಸ್ಸಿನ ಹಿಂದಿನ ಸೀಟುಗಳು ಹಾರುವಂತೆ ರೈಲಿನಲ್ಲಾಗುವುದಿಲ್ಲ ಎಂಬುದೇ ಸಮಾಧಾನವಾಗಿತ್ತು.

(ಚಿತ್ರ : ಜೆಮಿನಿ ಕೃತಕ ಬುದ್ಧಿಮತ್ತೆ)

ಬೆಳಕು ಹರಿಯುತ್ತಿದ್ದಂತೆ ಮೀರಜ್ ತಲುಪಿದೆವು. ಮೀಟರ್ ಗೇಜಿನ ಪ್ಲಾಟ್ಫಾರಂ ಅಸ್ಪ್ರಶ್ಯನಂತೆ ಮುಖ್ಯ ಪ್ಲಾಟಫಾರಂಗಳಿಂದ ಸ್ವಲ್ಪ ದೂರದಲ್ಲಿತ್ತು. ಲೋಂಡಾದಲ್ಲಿ ವಾಸ್ಕೋ ರೈಲು ತಡವಾಗಿ ಬಂದಿದ್ದರಿಂದ ಮುಂದಿನ ರೈಲು ತಪ್ಪೀತು ಎಂಬ ಅಳುಕಿತ್ತು; ಆದರೆ ರೈಲು ತಯಾರಾಗಿ ನಿಂತಿದ್ದನ್ನು ಕಂಡು ಸಮಾಧಾನವಾಯಿತು. ನಿಲ್ದಾಣದಲ್ಲಿ ಛಾ, ಕಾಫಿ ಮಾರಾಟಗಾರರು ತಾರಕ ಸ್ವರದಲ್ಲಿ ತಮ್ಮ ಅಸ್ತಿತ್ವವನ್ನು ಘೋಷಿಸುತ್ತ, ಬೋಗಿ ಬೋಗಿಗಳನ್ನು ಹೊಕ್ಕಿ, ಗಟ್ಟಿಯಾಗಿ ಅದುಮಿದರೆ ತಿರುಚಿ ಹೋಗುವಂಥ ಪ್ಲಾಸ್ಟಿಕ್ ಕಪ್ಪುಗಳಲ್ಲಿ ಬಿಸಿ ಬಿಸಿಯಾದ ಜೀವ ದ್ರವ್ಯವನ್ನು ವಿಲೇವಾರಿ ಮಾಡುವಲ್ಲಿ ವ್ಯಸ್ತವಾಗಿದ್ದರು. ಒಂದು ಗುಟುಕು ಚಹಾ ಒಳ ಸೇರಿದಂತೆ, ನಾಲಿಗೆ ಚುರುಕಾಗಿ, ಗಂಟಲಲ್ಲಿಳಿದು ದೇಹವೆಲ್ಲ ಬಿಸಿಯಾಗಿ ಮೂಲೆಯಲ್ಲಿ ಮುದುಡಿದ್ದ ನಿದ್ದೆಯನ್ನು ಒದ್ದೋಡಿಸಿತು. ನಮ್ಮ ಬರ್ತ್ ಗುರುತಿಸಿಕೊಂಡು, ಹಿಂದಿನ ರಾತ್ರೆಯಂತೇ ಸೂಟ್ ಕೇಸಿಗೆ ಲಂಗರು ಹಾಕಿ ನೆಲೆಯೂರಿದಂತೆ ವ್ಯಕ್ತವಾಗಿದ್ದು, ಈ ಜಾಗೆ ಕೆಲವೇ ಗಂಟೆಗಳಿಗೆ ಸೀಮಿತವಲ್ಲ, ಒಂದೂವರೆ ದಿನಗಳ ವರೆಗೂ ನಮ್ಮ ತಾಣ ಎಂಬ ಸತ್ಯ. ನಮ್ಮ ಜೊತೆಯಲ್ಲಿದ್ದವರು ಹಿಂದಿಯಂಥ ಭಾಷೆ ಮಾತಾಡುತ್ತಿದ್ದರು. ಪರಿಚಯವಾದ ಮೇಲೆ ಗೊತ್ತಾಯಿತು, ಅವರು ಹುಬ್ಬಳ್ಳಿಯಲ್ಲಿ ನೆಲೆಸಿರುವ ಮಾರವಾಡಿ ಹಲ್ವಾಯಿಗಳು ಎಂದು.

(ಚಿತ್ರ : ಜೆಮಿನಿ ಕೃತಕ ಬುದ್ಧಿಮತ್ತೆ )

ರೈಲು ಪ್ರಯಾಣದ ಅವಿಭಾಜ್ಯ ಅಂಗ, ಒಂದು ರೀತಿಯಲ್ಲಿ ಮಹತ್ವ ಅಂಗ ಎಂದರೆ ಸದಾ ಎಲ್ಲ ದಿಕ್ಕಿನಿಂದಲೂ ಲಭ್ಯವಾಗುವ ತಿನಿಸುಗಳು. ನಮ್ಮ ರೈಲಿನಲ್ಲಿ ಅಡುಗೆ ಮನೆಯೂ ಇತ್ತು (ಪ್ಯಾಂಟ್ರಿ ಕಾರ್). ಹಿಂದಿನ ದಿನ ಹಾಸ್ಟೆಲ್ ನಲ್ಲಿ ಉಂಡು, ರಾತ್ರಿ ಮಲಗಿದ್ದರಿಂದ ಈ ತಿನಿಸುಗಳ ಸಾಮ್ರಾಜ್ಯದ ಪರಿಚಯವಾಗಿರಲಿಲ್ಲ; ಅಪರಾತ್ರಿಯಲ್ಲಿ ಯಾರೂ ಏನನ್ನೂ ಮಾರಲೂ ಬಂದಿರಲಿಲ್ಲ. ನಮ್ಮ ಬೆಳಗಿನ ಉಪಾಹಾರ ಸ್ಯಾಂಡ್ವಿಚ್. ಹೆಸರು ಕೇಳಿ ಮುಖ ತಿರುಚಬೇಡಿ, ಅದು ರುಚಿ ರಹಿತ ಬ್ರಿಟಿಷ್ ಸ್ಯಾಂಡ್ವಿಚ್ ಅಲ್ಲ. ಸಸ್ಯಾಹಾರಿಗಳಿಗೆ ವೆಜ್ ಕಟ್ಲೆಟ್ ಸ್ಯಾಂಡ್ವಿಚ್, ಅಲ್ಲದವರಿಗೆ ಆಮ್ಲೆಟ್ ಸ್ಯಾಂಡ್ವಿಚ್; ರುಚಿಯಾದ ಟೊಮ್ಯಾಟೋ ಕೆಚಪ್ ಜೊತೆಗೆ. ಆಹಾ, ಅದರ ರುಚಿ ವರ್ಣಿಲಸದಳ! ಇಂದಿಗೂ ನಾಲಿಗೆ ತುದಿಯಲ್ಲಿದೆ. ದಾರಿಗುಂಟ ರೈಲಿನೊಳಗೆ, ಪ್ಲಾಟಫಾರಂ ಮೇಲೆ ಸರಬರಾಜಾಗುವ, ದೊರೆಯಯುವ ಟೊಮ್ಯಾಟೋ ಸೂಪ್ (ಕ್ರೂಟೋನ್ ಜೊತೆ), ಭೇಲ್, ತರಹೇವಾರಿ ಹಣ್ಣುಗಳು, ವಡಾ ಪಾವ್ (ಮಹಾರಾಷ್ಟ್ರದ ಜನಪ್ರಿಯ ಬರ್ಗರ್ ಪರಿಚಯವಾಗಿದ್ದೇ ಈ ಯಾತ್ರೆಯಲ್ಲಿ), ಸಮೋಸಾ, ಪೂರಿ-ಆಲೂ ಸಬ್ಜಿ, ಕಬ್ಬಿನ ಹಾಲು, ದೇಶದ ವಿವಿಧ ಪ್ರದೇಶಗಳ ಆಹಾರ ಪದ್ಧತಿಯ ವೈವಿಧ್ಯವನ್ನು ಅನಾವರಣಗೊಳಿಸುತ್ತಾ ಹೋಯಿತು ನಮ್ಮ ರೈಲು. ಸ್ಟೀಲಿನ ಖಾನೆ – ಖಾನೇ ತಟ್ಟೆಗಳಲ್ಲಿ ಕೊಡುವ ಊಟಕ್ಕೂ ಒಂದು ವಿಶೇಷ ರುಚಿ. ರೈಲಿನ ಬೋಗಿಯಲ್ಲಿ ಮಹದಾದ ಪಾತ್ರೆಗಳಲ್ಲಿ ಮಾರುದ್ದದ ಸಾವುಟಗಳನ್ನು ತಿರುವುತ್ತ ವಿಶಿಷ್ಟ ಜಾದೂ ಮಾಡುತ್ತಿದ್ದರು ಆ ಬಾಣಸಿಗರು. ಜೊತೆಯಲ್ಲಿದ್ದ ಮಾರವಾಡಿಗಳು ಊಟದ ಸಮಯದಲ್ಲಿ ಹಿಂದೆಂದೂ ಕಂಡಿರದ ದೈತ್ಯಾಕಾರದ ಟಿಫಿನ್ ಬಾಕ್ಸ್ ನಲ್ಲಿ ತಂದಿದ್ದ ಮನೆ ಊಟವನ್ನು ಹರಡುತ್ತಿದರು. ವಾರೆಗಣ್ಣಿನಿಂದ ಈ ದೃಶ್ಯವನ್ನೇ ನಿಲುಕಿಸುತ್ತಿದ್ದ ನಮ್ಮೊಡನೆ ಹಂಚಿಕೊಂಡು ನಮ್ಮ ಜಿಹ್ವಾ ಚಾಪಲ್ಯ / ಕುತೂಹಲವನ್ನು ತಣಿಸುತ್ತಿದ್ದರು. ಆ ಯಾತ್ರೆಯಲ್ಲಿ ಆಸ್ವಾದಿಸಿದ ಅದೆಷ್ಟೋ ತಿನಿಸುಗಳು ಇಂದೂ ನೆನಪಿನ ಡಬ್ಬಿಯಲ್ಲಿ ಬೆಚ್ಚಗಾಗಿ ಕುಳಿತಿದೆ. ಇಂದಿನ ದಿನಗಳಲ್ಲಿ ಅದೆಷ್ಟೋ ರೆಸ್ಟೋರೆಂಟ್ ಗಳ ಮೆನು ಕಾರ್ಡಿನಲ್ಲಿ ರೇಲ್ವೆ ದಾಲ್, ಕಟ್ಲೆಟ್ ಎಂದೆಲ್ಲ ಓದಿದಾಗ, ಆ ನೆನಪುಗಳು ಮೂಲೆಯಿಂದ ರಗ್ಗನ್ನು ಕಿತ್ತೆಸೆದು ಮಸ್ತಕದ ವೇದಿಕೆಯಲ್ಲಿ ತಾಂಡವ ಆಡಿ, ಆ ಆವೇಶದ ಒತ್ತಡಕ್ಕೆ ಮಣಿದು ಆರ್ಡರ್ ಮಾಡಿದಾಗ ಇಂದಿನ ತಿನಿಸಿನ ರುಚಿ ಪೇಲವ ಎನಿಸಿದ್ದೇ ಜಾಸ್ತಿ. ಇಟಾರ್ಸಿ ಜಂಕ್ಷನ್ ನಲ್ಲಿ ನಾನು ಮೊತ್ತ ಮೊದಲು ಕಂಡಿದ್ದು ಕುಲ್ಹಡ್ ಚಹಾ. ಹಿಂದಿನ ಸ್ಟೇಶನಗಳಲ್ಲಿ ಕುಡಿದಾದ ಮೇಲೆ ಪ್ಲಾಸ್ಟಿಕ್ ಕಪ್ಪುಗಳನ್ನು ಯಾವ ಯೋಚನೆಯೂ ಇಲ್ಲದೇ ಎಲ್ಲರೂ ಹೊರಗೆಸೆಯುತ್ತಿದ್ದರು. ಅದೆಷ್ಟು ಟನ್ ಪ್ಲಾಸ್ಟಿಕ್ ಕಸವನ್ನು ರೈಲು ಪ್ರಯಾಣಿಕರು ಎಸೆದಿರಲಿಕ್ಕಿಲ್ಲ ಪ್ರತಿದಿನ! ಈ ಕುಲ್ಹಡ್ ದೇಶದ ಬೇರೆಡೆ ಯಾಕೆ ಪ್ರಚಲಿತವಾಗಿಲ್ಲ ಎಂದು ಅರ್ಥವಾಗಿಲ್ಲ.

ರೈಲು ಪ್ರಯಾಣದ ಇನ್ನೊಂದು ಪ್ರಮುಖ ಆಕರ್ಷಣೆ ಹೊರಗಿನ ನೋಟ. ಹುಬ್ಬಳ್ಳಿಯಿಂದ ಮೀರಜ್ ವರೆಗೆ ಕತ್ತಲೆ ಕಾಡಿನಲ್ಲಿ ಕಂಡಿದ್ದೇನಿಲ್ಲ. ಮೀರಜ್ ನಿಂದ ಪುಣೆ ದಾಟುವವರೆಗೂ ರೈಲು ದಖ್ಖನ್ ಪ್ರಸ್ತಭೂಮಿಯ ಪರ್ವತಗಳನ್ನು ಬಳಸುತ್ತ, ಪರ್ವತ ಗರ್ಭವನ್ನು ಸೀಳುವ ಸುರಂಗಗಳನ್ನು ಭೇದಿಸುತ್ತ ಸಾಗುತ್ತದೆ. ಈ ಪರ್ವತಗಳು ಕುರುಚಲು ಕಾಡು, ದಟ್ಟ ಹಸಿರು ಹುಲ್ಲನ್ನಷ್ಟೇ ಹೊದ್ದು ನಿಂತಿವೆ. ಸಹಸ್ರಾರು ವರ್ಷಗಳ ಕಾಲ ಪೇರಿಸಿಟ್ಟ ಪದರುಗಳನ್ನು ನೋಡುವುದೇ ಚಂದ. ಅದ್ಯಾವದೋ ಕಾಲದಲ್ಲಿ ಇದೆಲ್ಲ ಜ್ವಾಲಾಮುಖಿಯ ಬಾಯಿಂದ ಹೊರಬಂದ ಲಾವಾ. ಅಲ್ಲಲ್ಲಿ ದೂರದಲ್ಲಿ ಕಾಣುವ ಕೋಟೆ-ಕೊತ್ತಲಗಳು ಮರಾಠ ಸಾಮ್ರಾಜ್ಯದ ಕಥೆಗಳನ್ನು ಕಿವಿಯಲ್ಲಿ ಪಿಸುಗುಟ್ಟುತ್ತವೆ, ಅದಕ್ಕೆ ಸರಿಯಾಗಿ ರೈಲು ಶಿಳ್ಳೆ ಹಾಕಿ ಭಲೇ ಎಂದು ಉದ್ಗರಿಸುತ್ತದೆ. ಇತಿಹಾಸ, ಭೂಗೋಳ, ಭೂಗರ್ಭ ಶಾಸ್ತ್ರ ಇವೆಲ್ಲ ಒಮ್ಮೆಲೇ ರಿವಿಷನ್ ಆದೀತು. ಈ ಪ್ರಯಾಣದಲ್ಲಿ ಕಂಡ ಒಂದೆರಡು ದೃಶ್ಯಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿವೆ. ಮೊದಲ ದಿನ ಸಂಜೆ ಆಗುತ್ತಿದ್ದಂತೆ ಸೂರ್ಯ ಮೆಲ್ಲನೆ ಪಶ್ಚಿಮ ದಿಗಂತದಂಚಿಗೆ ಜರುಗುತ್ತಿದಂತೆ ನಮ್ಮ ಪ್ರಯಾಣಕ್ಕೆ ಶುಭಾಶಯ ಕೋರಲು ದೂರದಲ್ಲಿ ಯಾರೋ ಥಮ್ಸ್ ಅಪ್ ಮಾಡುವಂತೆ ಕಾಣುತ್ತಿತ್ತು. ಬಳಿ ಬಂದಂತೆ ಅದೊಂದು ಪರ್ವತದ ಮೇಲಿನ ಶೀಲಾ ರಚನೆ ಎಂಬ ಅರಿವಾಯಿತು. ಇದನ್ನು ಪ್ರವಾಸಿಗರು ಥಮ್ಸ್ ಅಪ್ ಗುಡ್ಡ ಎಂದೇ ಕರೆಯುತ್ತಾರೆ. ಮರಾಠಿಯಲ್ಲಿ ‘ಹಡ್ಬಿಚಿ ಶೇಂಡಿ’ (ಗೂನು ಬೆನ್ನಿನವನ ಜುಟ್ಟು) ಎಂದು ಕರೆಯುತ್ತಾರೆ. ಈ ಗುಡ್ಡವನ್ನು ಸುತ್ತುವರೆಯುತ್ತ ರೈಲು ಮನಮಾಡ್ ಜಂಕ್ಷನ್ ಸೇರುತ್ತದೆ, ರಾತ್ರೆಯ ಊಟಕ್ಕೆ ಆರ್ಡರ್ ಕೊಡುವ ಸಮಯಕ್ಕೆ ಸರಿಯಾಗಿ. ಈ ಸ್ಟೇಷನ್ ನಲ್ಲಿ ಉತ್ತಮ ವಡಾ-ಪಾವ್ ಚಹಾ ಸಿಗುವುದುದ್ ಒಂದು ಬೋನಸ್. ನೆತ್ತರು ಚಲ್ಲಿದ ಆಗಸದ ಹಿನ್ನಲೆಯಲ್ಲಿ ತಲೆಯೆತ್ತಿ ನನ್ನನ್ನು ಗೆದ್ದು ನೋಡು ಎಂಬ ಸವಾಲೆಸೆಯುವ ಹೆಬ್ಬೆರಳನ್ನು ಮರೆಯಲು ಸಾಧ್ಯವೇ? ಎರಡನೇ ದೃಶ್ಯ ಗ್ವಾಲಿಯರ್ ಕೋಟೆ. ಇಂದಿಗೂ ತನ್ನ ಗಾಂಭೀರ್ಯ, ಭವ್ಯತೆಯನ್ನು ಕಾದುಕೊಂಡಿದೆ. ಕೆಲವೇ ತಾಸುಗಳಲ್ಲಿ ರೈಲು ಉತ್ತರ ಪ್ರದೇಶವನ್ನು ಹೊಕ್ಕುತ್ತದೆ. ಮಧ್ಯಪ್ರದೇಶ – ಉತ್ತರ ಪ್ರದೇಶದ ಗಡಿಯಲ್ಲಿರುವುದೇ ಕುಖ್ಯಾತ ಚಂಬಲ್ ಕಣಿವೆ. ಪಶ್ಚಿಮ ಘಟ್ಟಗಳಲ್ಲಿ ಕಾನನ ಆವರಿಸಿದ ಬೆಟ್ಟಗಳ ನಡುವಿನ ಆಳವಾದ ಕಣಿವೆಗಳೇ ನಮ್ಮ ಮನಸ್ಸಿಲ್ಲಿತ್ತು ಚಂಬಲ್ ದರ್ಶನ ಆಗುವವರೆಗೆ. ಇವು ಕುರುಚಲು ಗಿಡ, ಬರಡು ಗುಡ್ಡಗಳ ನಡುವೆ ಮೇಜ್ಹ್ ನಂತೆ ಹರಡಿದ ಕಣಿವೆಗಳ ಸಂಕೀರ್ಣ. ರೈಲು ಈ ಕಣಿವೆಗಳ ಮೇಲೆ ಕಟ್ಟಿದ ಸೇತುವೆ (ವಯಾ ಡಕ್ಟ್) ಮೇಲೆ ಚಲಿಸುವಾಗ ಚಂಬಲ್ ನ ವಿಹಂಗಮ ನೋಟ ತೆರೆದುಕೊಳ್ಳುತ್ತದೆ. ಅದೆಲ್ಲಿಂದಲೋ ಹರಿದು ಬರುವ ನದಿ, ಅದರ ದಡದಲ್ಲೊಂದು ಮುರುಕು ದೇಗುಲ ಇವನ್ನೆಲ್ಲ ಕಂಡಾಗ ಹಿಂದಿ ಸಿನೆಮಾದ ದೃಶ್ಯದ ಮಧ್ಯದಲ್ಲಿ ನಿಂತ ರೋಮಾಂಚನ. ಆ ಪಾಳು ದೇಗುಲದಲ್ಲಿ ಕಾಳಿಗೆ ಢಾಕುಗಳು ಪೂಜೆ ಸಲ್ಲಿಸುತ್ತಿರಬಹುದೇ, ಅಂದಿನ ದಾಳಿಗೆ ಯೋಜನೆ ಹಾಕುತ್ತಿರಬಹುದೇ! ಹಿಂದೆಲ್ಲ ಈ ಭಾಗದಲ್ಲಿ ರೈಲನ್ನು ಅಡ್ಡ ಹಾಕಿ ದರೋಡೆ ಮಾಡುತ್ತಿದ್ದುದು ಸುಳ್ಳಲ್ಲ. ೯೦ ರ ದಶಕ ತಲುಪಿದಾಗ ಫೂಲನ್ ದೇವಿ ಕೋವಿಯ ಬಲ ತೊರೆದು ರಾಜಕೀಯ ಬಲವನ್ನು ಅಪ್ಪಿಕೊಂಡಾಗಿತ್ತಲ್ಲ! ಈ ಕಾಲದಲ್ಲಿ ನಮ್ಮ ರೈಲು ಸುರಕ್ಷಿತ ಎಂದು ನೆಮ್ಮದಿ ಎನಿಸಿತು. ಚಂಬಲ್ ಕಣಿವೆ, ಆಳದಲ್ಲಿ ಎಂದೆಂದೂ ಆರದ ರಕ್ತಸಿಕ್ತ ಇತಿಹಾಸ ಈ ಹಾದಿಯನ್ನು ಹಾದು ಹೋಗುವಾಗ ಕಾಡದೇ ಇರದು.

ಮನಮಾಡದ ಥಮ್ಸ್ ಅಪ್ ಬೆಟ್ಟ (ಚಿತ್ರ : ಗೂಗಲ್ ಕೃಪೆ )

ಲಕ್ಷ್ಮೀಬಾಯಿಯ ಝಾನ್ಸಿ, ಆಗ್ರಾ ಬಂದಂತೆಲ್ಲ ನಮ್ಮ ಗಮ್ಯ ಸ್ಥಾನ ಹತ್ತಿರವಾಗುತ್ತಿದೆ ಎಂಬ ಭಾವನೆ ತೇಲುತ್ತ, ದಟ್ಟವಾಗುತ್ತ ಮನಸ್ಸನ್ನೆಲ್ಲ ಆವರಿಸುತ್ತದೆ. ಗೋವಾ ಎಕ್ಸ್ಪ್ರೆಸ್ ಆಗ್ರಾ ನಗರದೊಳಗೆ ನುಗ್ಗದೇ, ಕಂಟೋನ್ಮೆಂಟ್ ನಿಲ್ದಾಣಕ್ಕೆ ಬರುತ್ತದೆ. ತಾಜ್ ಮಹಲ್ ಕಂಡಿತೇ ಎಂಬ ಕುತೂಹಲವಿದ್ದರೆ ಎದುರಾಗುವುದು ಬಿಸಿಲಲ್ಲಿ ಒಣಗುತ್ತಿರುವ ನಿರ್ಜನ ನಿಲ್ದಾಣ. ತಾಜಾ ಮಹಲಿನ ರಮ್ಯತೆಗೆ ವಿರೋಧಾಭಾಸವಾಗಿದೆ ಆಗ್ರಾ ದಂಡು ನಿಲ್ದಾಣ. ಆಗ್ರಾ ಎಂದರೆ ಏನೇನೋ ಕಲ್ಪಿಸಿಕೊಂಡ ನನಗೆ ಹಾಗೆನಿಸಿರಬಹದು ಬಿಡಿ. ಹಿಂದಿಯಲ್ಲಿ ಕಂಟೋನ್ಮೆಂಟಿಗೆ ಛಾವಣಿ ಎನ್ನುತ್ತಾರೆಂಬುದೂ ನನಗೆ ಅವತ್ತು ಗೊತ್ತಾಯಿತು, ನಿಲ್ದಾಣದ ಹೆಸರಿನ ಫಲಕವನ್ನು ಓದಿದಾಗ. ಹಿಂದಿನ ಕಾಲದಲ್ಲಿ ಸೈನ್ಯ ತಂಗಿದಲ್ಲೆಲ್ಲ ಹುಲ್ಲಿನ ಛಾವಣಿಯನ್ನು ಕಟ್ಟುತ್ತಿದ್ದರಿಂದ, ದಂಡು ಪ್ರದೇಶಕ್ಕೆ ಹಿಂದಿಯಲ್ಲಿ ಛಾವಣಿ ಎಂದು ಕರೆಯುತ್ತಾರಂತೆ. ಇಲ್ಲಿಂದ ಮುಂದೆ ಮಾತ್ರ ಇದು ಎಂದೂ ಮುಗಿಯದ ಹಾದಿ ಎಂದೆನಿಸಲು ಶುರುವಾಗುತ್ತದೆ. ಉತ್ತರ ಭಾರತದ ಸೆಖೆ, ಬಸವನ ಹುಳದಂದದ ವೇಗ, ದಾರಿಯ ಪಕ್ಕದಲ್ಲಿ ಹರಿಯುವ ಕೊಳೆತ ನಾಲೆಯ ದುರ್ನಾತದಿಂದ ರಸಭರಿತ ಸಿನೆಮಾ ನಿರಾಶಾದಾಯಕವಾಗಿ ಕೊನೆಯಾಗುತ್ತಿದೆಯಲ್ಲ ಎಂದು ದುಃಖವಾಯಿತು. ಮುಂದೆ ದೆಹಲಿಯಲ್ಲೇ ಸ್ವಲ್ಪ ಕಾಲ ಉದ್ಯೋಗ ಮಾಡುವ ಅವಕಾಶ ಸಿಕ್ಕು, ಇದೆ ಹಾದಿಯಲ್ಲಿ ವಿವಿಧ ಋತುಗಳಲ್ಲಿ ಪ್ರಯಾಣ ಮಾಡಿದ್ದೇನೆ. ಭಾರತದ ಇತಿಹಾಸದಲ್ಲಿ ತಮ್ಮ ಹೆಸರನ್ನು ಕೆತ್ತಿದ ಊರುಗಳು, ಅಲ್ಲಿನ ನಾಯಕರು – ಖಳನಾಯಕರು ಸಿನೆಮಾದ ರೀಲುಗಳಂತೆ ನನ್ನ ಕಣ್ಮುಂದೆ ಓಡಿದ್ದಾರೆ. ಮತ್ತೊಮ್ಮೆ ಈ ಹಾದಿಯಲ್ಲಿ ರೈಲಿನಲ್ಲೇ ಪ್ರಯಾಣ ಮಾಡುವ ಕನಸಿದೆ, ನವ ಭಾರತದ ನವ ರೈಲುಗಳಲ್ಲಿ. ಹೊಸತು ಕಂಡಿತೇ?

-ರಾಂ

ಕನ್ನಡ ಬಳಗ ದೀಪಾವಳಿ/ರಾಜ್ಯೋತ್ಸವ ನವೆಂಬರ್ ೨೦೨೫: ಅನಿವಾಸಿಯಿಂದ ಭೈರಪ್ಪನವರಿಗೆ ಶ್ರದ್ಧಾಂಜಲಿ

ಕನ್ನಡ ಬಳಗ, ಮಿಲ್ಟನ್ ಕಿನ್ಸ್ ನ ಅನಿಕೇತನ ಸಂಸ್ಥೆಯ ಜೊತೆ ಕೈ ಗೂಡಿಸಿ, ನವೆಂಬರ್ ೮ ರಂದು ದೀಪಾವಳಿ ಹಾಗು ರಾಜ್ಯೋತ್ಸವಗಳನ್ನು ಆಚರಿಸಿತು. ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ‘ಅನಿವಾಸಿ’ ಯ ಸಮಾನಾಂತರ ಸಭೆ ಈಗ ಸಂಪ್ರದಾಯವೇ ಆಗಿದೆ. ಹೆಚ್ಚಾಗಿ, ಮುಖ್ಯ ಕಾರ್ಯಕ್ರಮದ ಉದ್ಘಾಟನೆ ಹಾಗೂ ಹಿತನುಡಿಗಳ ನಂತರದ ಸಮಯ ಇದಕ್ಕಾಗೇ ಮೀಸಲು. ಇತ್ತೀಚಿಗೆ ಕಾಣದ ಲೋಕಕ್ಕೆ ತೆರಳಿದ ಭೈರಪ್ಪನವರ ಅಗಲಿಕೆ ಕನ್ನಡಿಗರಿಗೆ ಅತೀವ ದುಃಖದಾಯಕ ಕಾರಣವಾಗಿದೆ. ಕನ್ನಡದ ಮಹಾನ್ ಕಾದಂಬರಿಕಾರರಲ್ಲಿ ಒಬ್ಬರಾದ ಭೈರಪ್ಪನವರಿಗೆ ಶ್ರದ್ಧಾಂಜಲಿ ಅರ್ಪಿಸುವುದೇ ಈ ಬಾರಿಯ ಅನಿವಾಸಿ ಕಾರ್ಯಕ್ರಮಕ್ಕೆ ತಕ್ಕುದಾದ ವಿಷಯವೆಂದು ಮೊದಲೇ ತೀರ್ಮಾನವಾಗಿತ್ತು. ಸದಸ್ಯರು ತಮಗೆ ಇಷ್ಟವಾದ ಕಾದಂಬರಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದು ಮೊದಲ ಭಾಗ. ಮುಖ್ಯ ಅತಿಥಿಯಾಗಿ ಬರುವ ಶ್ರೀ. ಮತ್ತೂರು ನಂದಕುಮಾರರಿಂದ ಅವರ- ಭೈರಪ್ಪನವರ ಒಡನಾಟದ ವಿಶಿಷ್ಟ ಅನುಭವಗಳ ಅವಲೋಕನೆ ಎರಡನೇ ಭಾಗದಲ್ಲಿ ಎಂದು ನಿಶ್ಚಯಿಸಿದ್ದೆವು. ಕಾರ್ಯಕ್ರಮದ ಮುಖ್ಯ ಸಂಘಟಕರಾದ ಆನಂದ್ ಕೇಶವಮೂರ್ತಿ ಹಾಗೂ ಅನ್ನಪೂರ್ಣ ಆನಂದ್, ಮುಖ್ಯ ಅತಿಥಿಯವರ ಅನುಮೋದನೆ ಪಡೆದು ಯೋಜನೆಯನ್ನು ಕಾರ್ಯಗತಗೊಳಿಸಿದರು. ಈ ಸಂಚಿಕೆಯಲ್ಲಿ ಕಾದಂಬರಿಗಳ ವಿಶ್ಲೇಷಣೆ ಹಾಗೂ ಮತ್ತೂರರ ಭಾಷಣವದ ವಿವರಗಳಿವೆ. ಜೊತೆಯಲ್ಲೇ ಆತಿಥೇಯ ನಗರ ಮಿಲ್ಟನ್ ಕೀನ್ಸ್ ನವರೇ ಆದ ನಾಗರಾಜ ಬಸವರಾಜು ಅವರು ಬರೆದ ಇಡೀ ದಿನದ ಕಾರ್ಯಕ್ರಮಗಳ ವರದಿಯೂ ಇದೆ. ಕೊನೆಯಲ್ಲಿ ಡಾ . ಶ್ರೀವತ್ಸ ದೇಸಾಯಿ ಅವರು ಚಿತ್ರೀಕರಿಸಿದ ಕಾರ್ಯಕ್ರಮದ ಮುಖ್ಯಾಂಶಗಳ ಚಿಕ್ಕ ವಿಡಿಯೋವನ್ನು ನೋಡಲು ಮರೆಯದಿರಿ. -ರಾಮಶರಣ ಲಕ್ಷ್ಮೀನಾರಾಯಣ

ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮದ ಪರಿಚಯವನ್ನು ಆನಂದ್ ಮಾಡಿಕೊಟ್ಟರು. ಮುಖ್ಯ ಅತಿಥಿಗಳ ಪರಿಚಯವನ್ನು ಶ್ರೀವತ್ಸ ದೇಸಾಯಿಯವರು ನೆರವೇರಿಸಿದರು. ಕೊನೆಯಲ್ಲಿ ಜಿ.ಎಸ್.ಶಿವಪ್ರಸಾದ್ ಸಾಂಗವಾಗಿ ಆಭಾರ ಮನ್ನಿಸಿದರು. 

ಪರ್ವ: ಸಾರ್ವಕಾಲಿಕ ನೆಚ್ಚಿನ ಕಾದಂಬರಿ – ಅನ್ನಪೂರ್ಣ ಆನಂದ್ 

ಚಿತ್ರಕೃಪೆ : ಕೇಶವ ಕುಲಕರ್ಣಿ

ಹೈಸ್ಕೂಲಿನಿಂದ ಕಾದಂಬರಿ ಓದುವ ಗೀಳು ಹತ್ತಿತ್ತು. ನನಗೆ ಮೊದಲು ಸಿಕ್ಕಿದ ಭೈರಪ್ಪನವರ ಕಾದಂಬರಿ ‘ವಂಶವೃಕ್ಷ’. ಅವರ ಬರಹದ ಶೈಲಿ, ಪಾತ್ರ ಪೋಷಣೆ, ಕಥೆಯ ಹಂದರ ನನ್ನ ಮನತಟ್ಟಿದವು. ‘ಧರ್ಮಶ್ರೀ’ ಹಾಗು ‘ದೂರಸರಿದರು’ ಗಳ ನಂತರ ಕೈಗೆಟುಕಿದ್ದು ‘ಪರ್ವ’. ಭಾರತೀಯ ಮಕ್ಕಳೆಲ್ಲ ಮಹಾಭಾರತದ ಕಥೆಗಳನ್ನು ಓದಿ, ಕೇಳಿಯೇ ಬೆಳೆಯುತ್ತಾರೆ. ಮಂತ್ರ ಪ್ರಭಾವದಿಂದ ಮಕ್ಕಳಾಗುವುದು, ಗಾಂಧಾರಿ ಹೊಟ್ಟೆ ಕಿವುಚಿಕೊಂಡು ನೂರು ಮಕ್ಕಳನ್ನು ಪಡೆಯುವುದು, ಕೃಷ್ಣನ ಚಮತ್ಕಾರಗಳು, ಇವೆಲ್ಲ ಕಲ್ಪನೆಗೆ ಮೀರಿದ ವಿಚಿತ್ರ ಭಾವನೆಗಳನ್ನು ಮೂಡಿಸುತ್ತಿದ್ದವು. ‘ಪರ್ವ’ ಮಹಾಭಾರತದ ಪಾತ್ರಗಳನ್ನೆಲ್ಲ ಮಾನವ ಸದೃಶಗೊಳಿಸುತ್ತವೆ. ಇಲ್ಲಿ ಚಮತ್ಕಾರಗಳಿಲ್ಲ. ಕೃಷ್ಣ, ಚಾಣಾಕ್ಷನೂ, ಮುತ್ಸದ್ದಿಯೂ ಆದ ವ್ಯಕ್ತಿ. ಕಥೆಯೂ  ಅಂತಃ ಸಂವಾದ, ಕೆದಕಿದ ನೆನಪು, ಪ್ರತಿಕ್ರಿಯೆಯ ರೂಪದಲ್ಲಿ ಸಾಗುವುದರಿಂದ, ಪುರಾಣವಾಗದೇ ಒಂದು ಐತಿಹಾಸಿಕ ಕಥೆಯಾಗಿ ಅನಾವರಣಗೊಳ್ಳುತ್ತದೆ. ಕುರುಕ್ಷೇತ್ರ ಯುದ್ಧ ವೈಭವೀಕರಣಗೊಳ್ಳದೇ ಕೊಳೆತು ನಾರುವ ಹೆಣದ ರಾಶಿ, ಯುದ್ಧ ತರುವ ಗೋಳು, ಹೊಲಸು ಇವನ್ನೆಲ್ಲ ತೋರುತ್ತ ಜಿಗುಪ್ಸೆ ಹುಟ್ಟುವಂತೆ ಮಾಡುತ್ತದೆ. ಸ್ತ್ರೀಪಾತ್ರಗಳಿಗೆ ಇಲ್ಲಿ ಪುರುಷ ಪಾತ್ರಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಇದೆ. ದ್ರೌಪದಿಯ ಪ್ರತೀಕಾರ, ಕುಂತಿಯ ಆಂತರಿಕ ತಲ್ಲಣ, ಗಾಂಧಾರಿಯ ಮಾತೃತ್ವದ ಬಂಧನ ಮನತಟ್ಟುತ್ತವೆ. ‘ಪರ್ವ’ ವನ್ನು ನಾನು ಹಲವು ಬರಿ ಓದಿದ್ದೇನೆ; ಪ್ರತಿಸಲವೂ ಹೊಸತನ್ನು ಕಂಡಿದ್ದೇನೆ. ಭೈರಪ್ಪನವರ ಕಾದಂಬರಿಗಳಲ್ಲೆಲ್ಲ ಇದು ನನ್ನ ಸಾರ್ವಕಾಲಿಕ ನೆಚ್ಚಿನ ಕೃತಿ.   

ಧರ್ಮಶ್ರೀ: ೬೦ರ ಭಾರತದ ಚಿತ್ರಣ – ಆನಂದ್ ಕೇಶವಮೂರ್ತಿ 

ನಾನು ‘ಧರ್ಮಶ್ರೀ’ಯನ್ನು ಮೊದಲ ಬಾರಿಗೆ ಓದಿದ್ದು ೩೫-೪೦ ವರ್ಷಗಳ ಹಿಂದೆ. ಕಳೆದ ವಾರ ಮತ್ತೊಮ್ಮೆ ಓದಿದಾಗ ಕಂಡದ್ದು ಹಲವು ಹೊಸ ವಿಷಯಗಳು. ೧೯೬೧ ರಲ್ಲಿ ಈ ಕೃತಿ ಬೆಳಕು ಕಂಡಿತು. ಹಾಗಾಗಿ ಇದನ್ನು ಭೈರಪ್ಪನವರು ೧೯೫೯ ಅಥವಾ ೧೯೬೦ರಲ್ಲಿ ಬರೆದಿರಬಹುದು. ಆಗ ಅವರಿಗೆ ೩೦ರ ಹರೆಯ. ಅಷ್ಟು ಚಿಕ್ಕ ವಯಸ್ಸಿನಲ್ಲೇ ಅವರು ಎಷ್ಟೊಂದು ಓದಿದ್ದರು, ಪ್ರೌಢಿಮೆ ಹೊಂದಿದ್ದರು ಎಂಬ ವಿಷಯ ಈ ಕಾದಂಬರಿಯನ್ನು ಓದಿದಾಗ ಅನಿಸುತ್ತದೆ. ೬೦ರ ದಶಕದ ಸಾಮಾಜಿಕ ಬದುಕು, ಕಿತ್ತು ತಿನ್ನುವ ಬಡತನ, ಹಿಂದೂ ಧರ್ಮದಲ್ಲಿ ತಂಡವವಾಡುತ್ತಿದ್ದ ಜಾತೀಯತೆ ಇವನ್ನೆಲ್ಲ ಧರ್ಮಶ್ರೀ ಪ್ರತಿಫಲಿಸುತ್ತದೆ. ಕಾದಂಬರಿಯ ಮೊದಲ ಪುಟಗಳು ಭೈರಪ್ಪನವರ ಮೈಸೂರಿಗೆ ವಿದ್ಯಾಭ್ಯಾಸಕ್ಕೆ ಬರುವವರೆಗಿನ ಆತ್ಮ ಕಥೆಯೇ ಎಂದು ತಮ್ಮ ‘ಭಿತ್ತಿ’ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ. ಹಿಂದೂ ಕಥಾನಾಯಕ ಕ್ರಿಸ್ತ ಧರ್ಮಕ್ಕೆ ಮತಾಂತರ ಹೊಂದಿದ ಮೇಲೆ ಅವನಿಗಾಗುವ ತಳಮಳ, ಅದರ ಪರಿಣಾಮಗಳು ಇದರಲ್ಲಿ ಮನಮುಟ್ಟುವಂತೆ ಚಿತ್ರಿತವಾಗಿವೆ. ರಾಷ್ಟೀಯ ಸ್ವಯಂ ಸೇವಕ ಸಂಘದ ಧ್ಯೇಯೋದ್ದೇಶ, ಸಂಘವನ್ನು ಹತ್ತಿಕ್ಕಲು ಅಂದಿನ ಸರಕಾರ ಮಾಡಿದ ಪ್ರಯತ್ನಗಳು ಇದರಲ್ಲಿವೆ. ಕ್ರಿಶ್ಚಿಯನ್ ಮಿಷನರಿಗಳು ಶೋಷಿತರನ್ನು ಗುರಿಯಾಗಿಸಿಕೊಂಡು, ಆಮಿಷಗಳನ್ನೊಡ್ಡಿ ಮತಾಂತರಗೊಳಿಸುತ್ತಿದ್ದ ಬಗೆ; ಸಮಾನ ಅಂತಸ್ತಿನ ಭರವಸೆ ನೀಡಿದರೂ ಶೋಷಿತರನ್ನು ಶೋಷಿಸುತ್ತಲೇ ಇದ್ದ ಸಂಗತಿಗಳನ್ನು ವಿವರಿಸುತ್ತಾರೆ. ದಿಸ್ತೀನ್ ಗೌಡನ ಪಾತ್ರದ ಮೂಲಕ ಧಾರ್ಮಿಕ ವ್ಯವಸ್ಥೆಯ ಕೊರತೆಗಳನ್ನು ಎತ್ತಿ ತೋರಿಸುತ್ತಾರೆ. ಈ ಕಾದಂಬರಿ ೬೦ರ ದಶಕದ ಸಮಾಜ ವ್ಯವಸ್ಥೆಯ ಅಧ್ಯಯನ, ಧಾರ್ಮಿಕ ಶೋಷಣೆಗೆ ಹಿಡಿಯುವ ಕೈಗನ್ನಡಿ ಎಂದು ಹೇಳಬಹುದು. 

ಮತದಾನ ಹಾಗೂ ಇತರ ಕಾದಂಬರಿಗಳು: ಹಾಜರಿ ಕಡಿಮೆಯಾಗಲು ಕಾರಣೀಭೂತ – ವಿನಯ್ ರಾಯಚೂರ್ 

ಭೈರಪ್ಪನವರ ಕಾದಂಬರಿಗಳು ನನ್ನನ್ನು ಎಷ್ಟು ಆಕರ್ಷಿಸಿದ್ದವೆಂದರೆ, ನಾನು ಕ್ಲಾಸಿಗೆ ಹೋಗದೇ ಪಟ್ಟಾಗಿ ಕುಳಿತು ಮುಗಿಸುತ್ತಿದ್ದೆ. ನನ್ನ ಹಾಜರಿ ಕಡಿಮೆಯಾಗಲು ಇವೇ ಮೂಲ ಕಾರಣ. ಅವರ ಎಲ್ಲ ಕಾದಂಬರಿಗಳನ್ನು ಓದಿದ್ದೇನೆ. ‘ಮತದಾನ’ ಇಷ್ಟವಾಗುವುದಕ್ಕೆ ಮೂರೂ ಕಾರಣಗಳಿವೆ: ಚಿಕ್ಕದಾದರೂ ಚೊಕ್ಕದು ಈ ಕೃತಿ; ಆದರ್ಶಕ್ಕೆ ಜೋತು ಬಿದ್ದರೆ ಬದುಕು ಸಾಗದು; ರಾಜಕೀಯ ಎಂದಿಗೂ ಹೊಲಸೇ ಎನ್ನುವುದನ್ನು ಸಾಬೀತು ಮಾಡುತ್ತದೆ. ‘ಗೃಹಭಂಗ’ ದಲ್ಲಿ ಸಂಘರ್ಷದ ಬದುಕಿನ ಚಿತ್ರಣದ ಜೊತೆಗೆ, ಅಂತಹ ಅನುಭವಕ್ಕೆ ಒಳಗಾದವರಿಗೆ ಸಾಂತ್ವನ ಹೇಳುವ ಧ್ವನಿಯಿದೆ. ಭೈರಪ್ಪನವರ ಕಾದಂಬರಿಗಳಲ್ಲಿ ತತ್ವಶಾಸ್ತ್ರದ ಹೊಳವು ಸರ್ವೇ ಸಾಮಾನ್ಯ. ‘ಸಾಕ್ಷಿ’ ಹಾಗೂ ‘ನಾಯಿ ನೆರಳು’ ಇವೆರಡರಲ್ಲಿ ಆಧ್ಯಾತ್ಮಿಕತೆ, ತತ್ವಶಾಸ್ತ್ರಗಳ ಪ್ರಭಾವವನ್ನು ದಟ್ಟವಾಗಿ ಕಾಣಬಹುದು. ಪುನರ್ಜನ್ಮದ ಜಿಜ್ಞಾಸೆ ಕೂಡ ನಾಯಿನೆರಳಿನಲ್ಲಿ ತೀವ್ರವಾಗಿದೆ. ಅವರ ಯಾವುದೇ ಕಾದಂಬರಿಗಳಲ್ಲಿ ಅಂತಿಮ ನಿಷ್ಕರ್ಷ ಕಾಣ ಬರುವುದಿಲ್ಲ. ಓದುಗರ ಊಹೆಗೆ, ಚರ್ಚೆಗೆ ಅವು ತೆರೆದುಕೊಳ್ಳುತ್ತವೆ. ಅವರ ಕಾದಂಬರಿಗಳಿಂದ ಪ್ರೇರಿತನಾಗಿ, ನಾನು ತತ್ವಶಾಸ್ತ್ರ, ವೈಚಾರಿಕತೆ ಇವನ್ನೆಲ್ಲ ಇನ್ನು ಹೆಚ್ಚಾಗಿ ಅರಿಯುವ ಪ್ರಯತ್ನ ಮಾಡಿದ್ದೇನೆ. 

ಉತ್ತರಕಾಂಡ: ಭೈರಪ್ಪನವರ ಕೊನೆಯ ಕಾದಂಬರಿ – ಕೇಶವ ಕುಲಕರ್ಣಿ 

‘ಪರ್ವ’ದಲ್ಲಿ ಮಹಾಭಾರತವನ್ನು ಬರೆದ ಭೈರಪ್ಪನವರು, ‘ಉತ್ತರಕಾಂಡ’ದಲ್ಲಿ ರಾಮಾಯಣವನ್ನು ಬರೆದದ್ದು ೪೦ ವರ್ಷಗಳ ನಂತರ. ಭಾರತದ ಉದ್ದಗಲಕ್ಕೂ ಗದ್ಯ ಹಾಗೂ ಕಾವ್ಯದ ರೂಪದಲ್ಲಿ ನೂರಾರು ರಾಮಾಯಣಗಳ ಆವೃತ್ತಿಗಳನ್ನು ಕಾಣಬಹುದು. ಪಾಶ್ಚಾತ್ಯ ಶಿಕ್ಷಣದ ಪ್ರಭಾವ ಆಗುವವರೆಗೂ ರಾಮ ದೈವಾಂಶ ಸಂಭೂತನಾಗಿದ್ದ. ಆಧುನಿಕ ಕಾಲದಾರಂಭದಲ್ಲಿ ಪುರುಷೋತ್ತಮನಾದ. ವಿಚಾರವಾದ, ಹೊಸ ಸಿದ್ಧಾಂತಗಳ ಪ್ರಭಾವದಲ್ಲಿ ರಾಮಾಯಣವನ್ನು ವಿಭಿನ್ನ ದೃಷ್ಟಿಕೋನಗಳಿಂದ ನೋಡಲಾಗಿದೆ. ಪೌರಾಣಿಕ ನೋಟದಿಂದ ಹೊರತಾಗಿ, ಐತಿಹಾಸಿಕ ಅಥವಾ ಸಮಕಾಲೀನ ಕಥಾನಕದಂತೆ ಕಂಡವರಿದ್ದಾರೆ. ಕನ್ನಡದಲ್ಲೇ ಪೋಲಂಕಿ ರಾಮಮೂರ್ತಿಯವರು ‘ಸೀತಾಯಣ’ ಬರೆದು ಸಾಕಷ್ಟು ಚರ್ಚೆಗೊಳಗಾಗಿದ್ದರು. 

ಉತ್ತರಕಾಂಡದ ವೈಶಿಷ್ಟ್ಯತೆಯೆಂದರೆ, ಕಥೆ ಪ್ರಾರಂಭವಾಗುವುದೇ ಲವ-ಕುಶ ರ ಜನ್ಮವಾದನಂತರ. ರಾಮಾಯಣವು ಇಲ್ಲಿ ಸೀತೆಯ ಸ್ವಗತದಲ್ಲಿ rewind ಆಗುತ್ತದೆ. ‘ಪರ್ವ’ದಂತೆ ಇಲ್ಲಿನ ಪಾತ್ರಗಳೆಲ್ಲ ಮಾನವೀಕೃತಗೊಂಡಿವೆ. ಸೀತೆಯ ದೃಷ್ಟಿಕೋನದಿಂದ ಭೈರಪ್ಪ ರಾಮನನ್ನು ‘ಕಟ್ಟುತ್ತ’ ಹೋಗುತ್ತಾರೆ. ರಾಜನಾಗಿ ಗೆಲ್ಲುವ ರಾಮ, ಗಂಡನಾಗಿ ಸೋಲುತ್ತಾನೆ. ಅವರು ಈ ಕೃತಿಯಲ್ಲಿ ಸಾಕಷ್ಟು ಕಥೆಗಾರನ ಸ್ವಾತಂತ್ರ್ಯವನ್ನು ಬಳಸಿದ್ದಾರೆ. ಇದನ್ನು ಓದಿದಾಗ, ಭೈರಪ್ಪನವರು ಸಾಹಿತ್ಯ ಓದುಗರ ಕಟ್ಟುಪಾಡನ್ನು ಮೀರಿ ಒಳಗಾಗದೇ ಪಂಥ ಮೀರಿ ಬರೆದದ್ದನ್ನು ಗುರುತಿಸಬಹುದು. ಕೊನೆಯಲ್ಲಿ ವಾಲ್ಮೀಕಿ “ಈ ಕಥೆಗೆ ಸುಖಾಂತವನ್ನೊದಗಿಸಲೆಂದು ಅಯೋಧ್ಯೆಗೆ ಹೋಗಿ ಧರ್ಮಸಭೆ ಏರ್ಪಡಿಸಿದೆ. ಆದರೂ ಕಥೆಯ ದಿಕ್ಕನ್ನು ಬದಲಾಗಿಸಲಾಗಲಿಲ್ಲ” ಎಂದು ಸೋಲೊಪ್ಪಿಕೊಳ್ಳುತ್ತಾನೆ. 

ಈ ಕಾದಂಬರಿ, ಭೈರಪ್ಪನವರ ಒಳ್ಳೆಯ ಕಾದಂಬರಿ ಎಂದು ನನಗೆನ್ನಿಸುವುದಿಲ್ಲ; ಇದು ಅಷ್ಟಾಗಿ ಚರ್ಚೆಗೋ, ವಿಮರ್ಶೆಗೋ ಒಳಗೊಳ್ಳಲಿಲ್ಲ. 

ಮಂದ್ರ, ಹೆಸರೇ ಸೂಚಿಸುವಂತೆ ಸಂಗೀತದ ತಳಹದಿಯ ಮೇಲೆ ನಿಂತ ಕೃತಿ. ಮುಖ್ಯ ಪಾತ್ರದಾರಿ ಮೋಹನಲಾಲ, ಅಪ್ರತಿಮ ಪ್ರತಿಭೆಯ ಸಂಗೀತಗಾರ. ಹರಿದ್ವಾರ ಘಾಟಿಯಿಂದ ಮುಂಬಯಿಯ ಶಾಸ್ತ್ರೀಯ ಸಂಗೀತ ಲೋಕದ ಮಹಾನ್ ತಾರೆಯಾಗಿ ಬೆಳಗಿದವ. ಆತನ ಬೆಳವಣಿಗೆಯ ಮೂಲಕ ಭೈರಪ್ಪನವರು ಹಿಂದೂಸ್ತಾನಿ ಸಂಗೀತದ ಒಳ ನೋಟದ ಪರಿಚಯ ಮಾಡಿಕೊಡುತ್ತಾರೆ. ಇಲ್ಲಿ ಗುರು-ಶಿಷ್ಯ ಪರಂಪರೆಯ ಚಿತ್ರಣವಿದೆ; ಘರಾಣೆಗಳ ವಿವರವಿದೆ. ಹಲವು ರಾಗಗಳ ವಿವರ, ರಾಗಗಳ ರಸ, ಸಂಗೀತಗಾರ ಹೇಗೆ ಸ್ವರಗಳ ಹಂದರದಲ್ಲಿ ಸ್ವಯಂ ರಸಾಸ್ವಾಧನೆ ಮಾಡುತ್ತ, ಶ್ರೋತೃಗಳಿಗೂ ಉಣಬಡಿಸುತ್ತಾನೆ ಎಂದು ತೋರಿಸುತ್ತಾರೆ. ಜೊತೆಗೇ, ಕಲಾವಿದರ ನಡುವಿನ ಈರ್ಷ್ಯೆ, ಅನಾರೋಗ್ಯಕರ ಸ್ಪರ್ಧೆ ಇವನ್ನೆಲ್ಲ ಕಾಣಬಹುದು. 

ಮೋಹನಲಾಲನ ವಿಷಯ ಲಂಪಟತನ, ಅವಕಾಶವಾದಿ ಮನೋಭಾವ ಸಂಗೀತಕ್ಕಿಂತಲೂ ಮುಖ್ಯವಾದ ವಸ್ತುವಾಗಿ ಕಾಣಬಹುದು. ಆತ ಮಧು ಷಾ ಎಂಬ ಶಿಷ್ಯೆಯನ್ನು ತನ್ನ ಆಪ್ತ ಶಿಷ್ಯೆಯೆಂದು ಕರೆಯುತ್ತ, ಸಂಗೀತದ ಸಂಪೂರ್ಣ ಜ್ಞಾನವನ್ನು ಕೊಡುವ ನೆಪದಲ್ಲಿ ಶೋಷಿಸುವುದನ್ನು ಓದಿದಾಗ, ಇತ್ತೀಚಿಗೆ ಸುದ್ದಿಯಾದ ಸಂಗೀತ ಲೋಕದ ಲೈಂಗಿಕ ಶೋಷಣೆಯ ಕಥೆಗಳ ನೆನಪಾಗುವುದು ಸಹಜ. ಮೋಹನಲಾಲ ತನ್ನ ವೃತ್ತಿ ಜೀವನದ ಮಧ್ಯದಲ್ಲೇ ಮನೋಹರಿ ದಾಸ್ ಎಂಬ ನರ್ತಕಿಯ ಹಿಂದೆ ಓಡಿ  ಹೋಗುತ್ತಾನೆ. ಆಕೆ ತನ್ನ ವೃತ್ತಿಯಲ್ಲಿ ಮುಂದೆಬರಲು ಪಟ್ಟ ಕಷ್ಟಗಳು, ಶೋಷಣೆಗೆ ಒಳಗಾದ ಸಂಗತಿಗಳು; ತದನಂತರ ಆಕೆಯೇ ಸಹ ನರ್ತಕರನ್ನು ಶೋಷಿಸುವ ಪ್ರಸಂಗಗಳು ಕಥೆಯನ್ನು ನೈಜವಾಗಿಡಲು ಸಹಕರಿಸುತ್ತವೆ. 

ಈ ಕಾದಂಬರಿಯಲ್ಲೂ, ಭೈರಪ್ಪನವರ ಇತರ ಕಾದಂಬರಿಗಳಂತೇ ಹಿಂದಿರುವ ಸಂಶೋಧನೆಯ ಆಳ, ವಿಷಯದ ಮೇಲಿರುವ ಹಿಡಿತ, ಪಾತ್ರಗಳು ತಂದಿಡುವ ನೈತಿಕ ಸಂಧಿಗ್ತತೆ ಗಹನವಾಗಿವೆ. ಸಂಗೀತ ಪ್ರಿಯರೆಲ್ಲ ಓದಬೇಕಾದ ಕೃತಿಯೆಂದು ನನ್ನ ಅನಿಸಿಕೆ.  

ಭೈರಪ್ಪನವರೊಡನೆ ಸಹಚಾರ: ಡಾ.ಮತ್ತೂರು ನಂದಕುಮಾರ್ 

ಚಿತ್ರಕೃಪೆ : ಕೇಶವ ಕುಲಕರ್ಣಿ

ಇಂದು ಅನಿವಾಸಿಯ ಸದಸ್ಯರು ಸುಂದರವಾಗಿ ಭೈರಪ್ಪನವರ ಕಾದಂಬರಿಗಳ ಬಗ್ಗೆ ವಿಶ್ಲೇಷಣೆ, ಅನಿಸಿಕೆಗಳನ್ನು ಹಂಚಿಕೊಂಡರು. ಭೈರಪ್ಪನವರು ನನಗೆ ಆತ್ಮೀಯರು. ಅವರು ಮಿತಭಾಷಿ. ಎಂದೂ ಜನರ ಗಮನದ ಕೇಂದ್ರದಿಂದ ದೂರವುಳಿಯುತ್ತಿದ್ದರು. ಅವರ ಪ್ರಥಮ ಭೆಟ್ಟಿ, ನಾನು ಮೈಸೂರಿನಲ್ಲಿ ವ್ಯಾಸಂಗಕ್ಕೆ ಅಣ್ಣನ ಮನೆಯಲ್ಲಿದ್ದಾಗ. ಅಲ್ಲಿ ನಡೆದ ಕಾರ್ಯಕ್ರಮಕ್ಕೆ ದಿನವೂ ಬಂದು ಕುಳಿತು, ಕೇಳಿ ಸದ್ದಿಲ್ಲದೇ ಮರೆಯಾಗುತ್ತಿದ್ದರು. ಎಲ್ಲವನ್ನೂ ಗಮನವಿಟ್ಟು ಕೇಳುತ್ತಿದ್ದರು, ನೋಡುತ್ತಿದ್ದರು. ಸ್ಪಂಜಿನಂತೆ ವಿಚಾರಗಳನ್ನು ಹೀರಿಕೊಳ್ಳುತ್ತಿದ್ದರು. ಸಾಮಾನ್ಯರೊಡನೆ ಸಾಮಾನ್ಯರಾಗಿ ಬೆರೆಯುತ್ತಿದ್ದರು. ಪ್ರವಾಸಕ್ಕೆ ಹೋದಾಗ ಸ್ಥಳಿಯರೊಂದಿಗೇ ಉಳಿದು, ಅಲ್ಲಿನ ಆಚಾರ, ವಿಚಾರ, ವೈಶಿಷ್ಟ್ಯತೆಗಳನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದರೇ ಹೊರತು, ಹೊಟೇಲುಗಳಲ್ಲಿ ತಂಗಿ ನೀರ ಮೇಲಿನ ಕಮಲದ ಎಲೆಯಂತಿರುತ್ತಿರಲಿಲ್ಲ. ಮತ್ತೂರಿಗೆ ಬಂದಾಗ, ನಮ್ಮ ಮನೆಯಲ್ಲೇ ಅವರ ವಾಸ್ತವ್ಯ. ದಿನವೂ ಬೆಳಗ್ಗೆ ನನ್ನೊಡನೆ ಊರಿನ ಕೆರೆಯ ಸುತ್ತ ವಾಕಿಂಗ್ ಹೋಗಲೇ ಬೇಕಿತ್ತು. ಆಗ ಎದುರಾಗುವ ಜನರೊಡನೆ ಕಳೆಯುತ್ತಿದ್ದರು; ವಯಸ್ಸಿನ ಭೇದವಿಲ್ಲದೇ ಚರ್ಚೆ ಮಾಡುತ್ತಿದ್ದರು. ಲಂಡನ್ನಿಗೆ ಬಂದಾಗ ಕೂಡ ನಮ್ಮ ಮನೆಯಲ್ಲೇ ತಂಗುತ್ತಿದ್ದರು. ಆಗ ಅವರು ನನ್ನೊಡನೆ ನೀರನ್ನು ಯಾಕೆ ಪೋಲು ಮಾಡಬಾರದು ಎಂಬ ವಿಷಯವನ್ನು ವರ್ಣಿಸಿದ ನೆನಪು ಮನದಲ್ಲಿ ತೇವವಾಗಿಯೇ ಇದೆ. ದಿನವೂ ವಾಕಿಂಗ್ ಹೋದಾಗ ಹಲವಾರು ವಿಷಯಗಳ ಚರ್ಚೆ ಆಗುತ್ತಿತ್ತು. ಅವರು ಮಂದ್ರ ಬರೆಯುವ ಮೊದಲು ಬೇಕಿದ್ದ ಸಾಮಗ್ರಿಯನ್ನು ಕಲೆ ಹಾಕಲು ನಾನು ಸ್ವಲ್ಪ ಸಹಾಯ ಮಾಡಿದ್ದನ್ನು ಅವರು ಮುನ್ನುಡಿಯಲ್ಲಿ ಉಲ್ಲೇಖಿಸಿದ್ದು  ನನಗೆ ಹೆಮ್ಮೆಯ ಸಂಗತಿ – ಹೂವಿನೊಡನೆ ನಾರೂ ದೇವರ ಮುಡಿಗೇರಿದಂತೆ. ಅವರು ನಂಗೆ ತುಂಬಾ ಆತ್ಮೀಯರು. ಆತ್ಮೀಯರ ಬಗ್ಗೆ ಮಾತನಾಡುವಾಗ ಕಾಲ ಕಳೆದ ಅರಿವೇ ಇರುವುದಿಲ್ಲ.  ಇವತ್ತಿನ ಭೈರಪ್ಪನವರ ಸ್ಮರಣೆ ಅರ್ಥಪೂರ್ಣವಾಗಿದೆ. ಅವರನ್ನು ಓದಬೇಕು, ಓದಿ ಅವರ ನೆನಪನ್ನು ಹಸಿರಾಗಿಡಬೇಕು. 

ಆಂಗ್ಲನಾಡಿನಲ್ಲಿ ಕರುನಾಡ ಸೊಗಡು: ದೀಪಾವಳಿ ಹಾಗೂ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ – ನಾಗರಾಜ ಬಸವರಾಜು

 ದೀಪಗಳ ಹಬ್ಬ ದೀಪಾವಳಿ ಮತ್ತು ನಮ್ಮೆಲ್ಲರ ಹೆಮ್ಮೆಯ ನಾಡಹಬ್ಬ ಕರ್ನಾಟಕ ರಾಜ್ಯೋತ್ಸವ — ಈ ಎರಡೂ ಹಬ್ಬಗಳು ಅನಿವಾಸಿ ಕನ್ನಡಿಗರಿಂದ ನವೆಂಬರ್ ೦೮, ೨೦೨೫ರಂದು ಮಿಲ್ಟನ್ ಕೀನ್ಸ್‌ನಲ್ಲಿ ಅದ್ಧೂರಿಯಾಗಿ ಆಚರಿಸಲ್ಪಟ್ಟವು. ದೂರದ ಬ್ರಿಟನ್ ನೆಲದಲ್ಲಿ, ಅನಿಕೇತನ ಮಿಲ್ಟನ್ ಕೀನ್ಸ್ (ಸ್ಥಳೀಯ ಸಮುದಾಯ ಸಂಸ್ಥೆ) ಮತ್ತು ೪೦ ವರ್ಷಗಳ ಸುದೀರ್ಘ ಇತಿಹಾಸವಿರುವ ಪ್ರತಿಷ್ಠಿತ ಕನ್ನಡ ಬಳಗ ಯು.ಕೆಯ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮವು ಕನ್ನಡಿಗರ, ಕರುನಾಡ ಕುಡಿಗಳ ಹೃದಯಗಳನ್ನು ಬೆಸೆದ ಬೃಹತ್ ಸಾಂಸ್ಕೃತಿಕ ಸೇತುವೆಯಾಗಿತ್ತು.

 ಆದಿಪೂಜಿತ ವಿನಾಯಕನ ಆರಾಧನೆಯೊಂದಿಗೆ, ಉಪಸ್ಥಿತರಿದ್ದ ಗೌರವಾನ್ವಿತ ಅತಿಥಿಗಳಾದ ಡಾ. ಎಂ. ಎನ್. ನಂದಕುಮಾರ್ ಹಾಗೂ ಗಾಯಕ ಶ್ರೀ ಸಂತೋಷ್ ವೆಂಕಿಯವರು ಎರಡೂ ಸಂಘ ಸಂಸ್ಥೆಗಳ ಅಧ್ಯಕ್ಷರು, ನಿರ್ದೇಶಕರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ವಿದೇಶ ನೆಲದಲ್ಲಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ರೀತಿಯ ಆಚರಣೆಗಳು ಮೈಲಿಗಲ್ಲು. ಯುವ ಪೀಳಿಗೆಗೆ ನಮ್ಮ ನಾಡು-ನುಡಿಯ ಮಹತ್ವವನ್ನು ಸಾರುವ ಉದ್ದೇಶದಿಂದ ಆಯೋಜಿಸಲಾದ ಈ ಉತ್ಸವಕ್ಕೆ ಅಪಾರ ಸಂಖ್ಯೆಯ ಸ್ಥಳೀಯ ಕನ್ನಡಿಗರು ಹಾಗು ದೂರದೂರಿನ ಕನ್ನಡ ಬಳಗದ ಸದಸ್ಯರು ಕುಟುಂಬ ಸಮೇತ ಆಗಮಿಸಿ ಕರುನಾಡ ಸೊಗಡನ್ನು ಮೆರೆಸಿದರು. ಕಾರ್ಯಕ್ರಮದ ಗೌರವ ಅತಿಥಿ, ಡಾ. ಎಂ. ಎನ್. ನಂದಕುಮಾರ್ (ಕಾರ್ಯನಿರ್ವಾಹಕ ನಿರ್ದೇಶಕರು, ಭಾರತೀಯ ವಿಧ್ಯಾ ಭವನ, ಲಂಡನ್) ನೆರೆದವರನ್ನು ಉದ್ದೇಶಿಸುತ್ತ, ಈ ರೀತಿಯ ಕಾರ್ಯಕ್ರಮಗಳು ಮತ್ತು ಕನ್ನಡ/ಕರ್ನಾಟಕ ಕುರಿತಾದ ಕಾರ್ಯಕ್ರಮಗಳು ನಾಡಿನಿಂದ ದೂರದ ದೇಶದದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಸೇತುವೆಯಾಗಿ, ಕರ್ನಾಟಕ ಭಾಷೆಗಳ, ಕಲಾ ಸಂಸ್ಕೃತಿ ಪರಂಪರೆಗಳ ಪರಿಚಯವಾಗಿ, ಈ ಅಭಿರುಚಿಗಳ ಬೆಳವಣಿಗೆಗೆ ಪೂರಕವಾಗಿರಲಿ ಎಂದು ಆಶಿಸಿದರು.

 ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಹಲವಾರು ಕಲಾವಿದರ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು. ಮಕ್ಕಳು, ಯುವಕರು ಮತ್ತು ಹಿರಿಯರು ಜಾನಪದ, ಶಾಸ್ತ್ರೀಯ ಸಂಗೀತ, ನೃತ್ಯ ಮತ್ತು ನಾಟಕಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳ ಛದ್ಮವೇಶ, ಜನಪದ ಹಾಗು ಸಿನಿಮಾ ನೃತ್ಯಗಳು, ವಯಸ್ಕರ ಗಾಯನ, ದಂಪತಿಗಳ ಜೋಡಿ ನೃತ್ಯ, ನವರಸ ರೂಪಕ, ರಾಮಾಯಣ ಸಂಗೀತ ನೃತ್ಯ ಹಾಗು ಕರುನಾಡ ವೈಭವ ಕುರಿತಾದ ಫಿನಾಲೆ ನೃತ್ಯ ಸಭಿಕರ ಮನ ಸೂರೆಗೊಂಡವು. ಪ್ರತಿಯೊಂದು ಪ್ರದರ್ಶನವೂ ಕನ್ನಡಿಗರ ಕಲಾಭಿರುಚಿ ಮತ್ತು ನಾಡಿನ ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿಯಾದವು. ದೀಪಾವಳಿಯ ಬೆಳಕು ಮತ್ತು ರಾಜ್ಯೋತ್ಸವದ ಕೆಂಪು-ಹಳದಿ ವರ್ಣಗಳು, ಎಲ್ಲರ ಸಾಂಪ್ರಾದಾಯಿಕ ಉಡುಗೆ ತೊಡುಗೆಗಳು ಹಾಗೂ ಅದಕ್ಕನುಗುಣವಾಗಿ ಒಳಾಂಗಣ ಅಲಂಕಾರಗಳು ಸಮಾರಂಭದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದವು.

ಸ್ಮರಣಾಂಜಲಿ: ಕನ್ನಡದ ದಿಗ್ಗಜರಿಗೆ ನಮನ

ಈ ವರ್ಷ ನಮ್ಮಿಂದ ದೂರವಾದ, ಈ ಹಿಂದೆ ಕನ್ನಡ ಬಳಗ ಯು ಕೆ ಗೆ ಆಹ್ವಾನಿತ ಅತಿಥಿಯಾಗಿ ಬಂದಿದ್ದ ನಾಡೋಜ ಡಾ. ಎಸ್. ಎಲ್. ಭೈರಪ್ಪ ಮತ್ತು ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅಲ್ಲದೆ, ಕನ್ನಡ ಬಳಗ ಯು.ಕೆಯ ಬೆಳವಣಿಗೆಗೆ ಶ್ರಮಿಸಿ, ಇತ್ತೀಚೆಗೆ ಅಗಲಿದ ಹಿರಿಯ ಸದಸ್ಯರ ಆತ್ಮಗಳಿಗೆ ಒಂದು ನಿಮಿಷದ ಮೌನ ಮತ್ತು ನುಡಿನಮನದ ಮೂಲಕ ಗೌರವ ಸಲ್ಲಿಸಲಾಯಿತು. ತಮ್ಮ ನೆಚ್ಚಿನ ಹಿರಿಯರನ್ನು ನೆನೆದು ಅನೇಕರು ಭಾವುಕರಾದರು.

ಬಹುಭಾಷಾ ಗಾಯಕ ಶ್ರೀಯುತ ಸಂತೋಷ್ ವೆಂಕಿ ಅವರ ಸಂಗೀತ ರಸಸಂಜೆ ಮೂಲಕ ನೆರೆದಿದ್ದ ಚಿಣ್ಣರು, ಯುವಕರು ಹಾಗೂ ಹಿರಿಯರೆಲ್ಲ ಕುಣಿದು ಕುಪ್ಪಳಿಸುವಂತೆ ಮಾಡಿದರು. ಈ ಕಾರ್ಯಕ್ರಮ ಕೇವಲ ಹಬ್ಬದ ಆಚರಣೆಯಾಗಿರದೆ, ಹೊರನಾಡ ಕನ್ನಡಿಗರು ತಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಂಡು, ಹೊಸ ಪೀಳಿಗೆಗೆ ಕರುನಾಡ ವೈಭವಯುತ ಸಂಸ್ಕೃತಿಯ, ಪರಂಪರೆಯ ಮಹತ್ವವನ್ನು ತಿಳಿಸುವ ಶ್ಲಾಘನೀಯ ಪ್ರಯತ್ನವಾಯಿತು.

‘ಭೈರಪ್ಪನವರಿಗೆ ಶ್ರದ್ಧಾಂಜಲಿ’ ಕಾರ್ಯಕ್ರಮಕ್ಕೆ ನೆರೆದ ಸಭಿಕರು – ಚಿತ್ರಕೃಪೆ ಆನಂದ ಕೇಶವಮೂರ್ತಿ