ಇತ್ತೀಚಿನ ಆರ್ಟೆಮಿಸ್ ಚಂದ್ರಯಾನದ ಬಗ್ಗೆ ಹಲವು ಕವನಗಳು - ಚುಟುಕ, ಕವನ, ಜನಪದ ಶೈಲಿಯ ಪ್ರಯತ್ನಗಳ ಸಂಕಲನ ಇಂದಿನ ಪ್ರಸ್ತುತಿ. ಮೆಚ್ಚಿಗೆಯಾದರೆ ಒಂದು ಲೈಕನ್ನೊತ್ತಿ, ಕಾಮೆಂಟ್ ಹಾಕಿದರೆ ಇನ್ನೂ ಚೆನ್ನ. ಕೇಳಿದೊಡನೆ ಬರೆದು ಕಳಿಸಿದ ಮುರಳಿ ಹತ್ವಾರ್, ವೆಂಕಟೇಶ್ವರ ರೆಡ್ಡಿ, ರವಿರಾಜ್ ಉಪ್ಪೂರ್ ಭಟ್ ಅವರಿಗೆ ನಾನು ಆಭಾರಿ. ಮುರಳಿ ಹತ್ವಾರರ ಪರಿಚಯ ಎಲ್ಲರಿಗೂ ಇದ್ದೇ ಇದೆ, ರವಿರಾಜ್ ಅವರೂ ಮುಂಚೆ ಅನಿವಾಸಿಗೆ ಬರೆದವರೇ. ವೆಂಕಟೇಶ್ವರ ರೆಡ್ಡಿಯವರ ಕವನ ಅನಿವಾಸಿಗೆ ಮೊದಲನೆಯ ಕವನ. ಪ್ರೆಸ್ಟನ್ನಿನಲ್ಲಿ ವಾಸವಾಗಿರುವ ವೆಂಕಿ, ಉದ್ಯೋಗದಿಂದ ಕಂಪ್ಯೂಟರ್ ಅಡ್ಮಿನ್ ಆಗಿದ್ದಾರೆ. ಕೊನೆಯಲ್ಲಿ, ಜಾನಪದ ಶೈಲಿಯಲ್ಲಿ ಬರೆಯುವ ಒಂದು ಬಾಲಿಶ ಪ್ರಯತ್ನ ನಾನೂ ಮಾಡಿದ್ದೇನೆ (ಕ್ಷಮೆಯಿಟ್ಟು ಓದಿರಿ!). - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ)
******************************************
ಮುರಳಿ ಹತ್ವಾರ್:
ಸುತ್ತು ಸುತ್ತುವ ನೌಕೆಯ ನೋಡಿ ‘ಇದೆಲ್ಲಿ ಉಪದ್ರ’ ಎಂದು ಬಿಳಿಚಿಕೊಂಡನಂತೆ ಚಂದಿರ ನಂದಿ ಆಹಾ! ಎಂಥ ಚೆಂದದ ಬೆಳದಿಂಗಳೆಂದು ಕುಪ್ಪಳಿಸಿದರಂತೆ ಆರ್ಟೆಮಿಸ್ಸಿನ ಮನೆಯ ಮಂದಿ.
******************************************
ವೆಂಕಟೇಶ್ವರ ರೆಡ್ಡಿ:
ನೀರಲ್ಲಿ ತೇಲೋ ಆಸೆ ನಂದು ಗಗನದಲಿ ಚಂದ್ರನೆಡೆಗೆ ಹಾರೋ ಕನಸು ನಂದು ಮುನುಗುವ ಜೀವನ ಎದ್ದೇಳುವುದೆಂದಿಗೋ ನಕ್ಷತ್ರಗಳ ನಡುವೆ ಕರಗುವ ನನ್ನ ಆಸೆ ಚಂದ್ರನ ತಲುಪುವ ಕನಸಿನ ಹೆಜ್ಜೆ ನನ್ನದು…
******************************************
ರವಿರಾಜ್ ಉಪ್ಪೂರ್ ಭಟ್:
ಶಶಿಯ ಶಿಖೆಗೆ ಆರ್ಟಿಮಿಸ್ ಪಯಣ
ಚಂದಿರನ ಸಂಗವ ಮಾಡಿ ಅರ್ಧ ಶತಕದ ಮೇಲಾಯ್ತು … ವಿರಹ ವೇದನೆ ಹೆಚ್ಚಾಯ್ತು ನಾಸಾದ ವಿಜ್ಞಾನಿಗಳೆಲ್ಲರೂ ಮಾಡೇ ಬಿಟ್ಟರು ಧೃಡ ನಿರ್ಧಾರವ .. ಚಿಮ್ಮಿಸುವೆವು ನಾಲ್ಕು ಯಾತ್ರಿಗಳನು ಕಂಡರಿಯಲು ಶಶಿಯ ಬೆನ್ನಹಿಂದಿನ ರಹಸ್ಯಗಳನು
ನಿಗದಿತವಾಯ್ತು ಏಪ್ರಿಲ್ ತಿಂಗಳೊಳ್ 'ತಿಂಗಳ' ಪಯಣದ ಮುಹೂರ್ತ. ಹತ್ತು ದಿನದ ಈ 'ಪಿಕ್ನಿಕ್' ಪಯಣ ಭೂಮಿ-ಚಂದಿರನ ಸುತ್ತ.
ಹೊಡೆದರು ಹಲವಾರು ರೌಂಡು ಆರ್ಟೆಮಿಸ್ ಮಿಷನ್ನ ಶಶಿ ಶಿಕಾರಿಗಳ ದಂಡು.
ಸಾವಿರಾರು ಮೈಲಿಗಳ ಪಯಣದಿ ಕಂಡರು ನೀಲಿ ವರ್ಣದ ಹೊಳೆಯುವ ಪ್ಲಾನೆಟ್ .. ಫ್ಲಶ್ ಆಗದ ಓರಿಯನ್ ಕ್ಯಾಪ್ಸುಲ್ನ ಟಾಯ್ಲೆಟ್.. ಹೆಪ್ಪುಗಟ್ಟಿದ ಮಂಜು ಕರಗಿಸಲು ಬಾಹ್ಯಾಕಾಶ ನೌಕೆಯನು ತಿರುಗಿಸಿದರು ಬೆನ್ನು ಮಾಡಿ ಸೂರ್ಯನೆಡೆಗೆ ! ಸುಗಮವಾಯಿತು ಮುಂದಿನ ಪಯಣವು ಚಂದಿರನ ಬೆನ್ನೆಡೆಗೆ.
ಹೆಜ್ಜೆ ಹಾಕದೆಯೂ ಕದ್ದರು ಸುಧಾಕರನ 'ಕಪ್ಪು ಬಿಳುಪಿನ' ಚಿತ್ರವ ಜಗತ್ತಿಗೇ ಕಾಣದ ಆ 'ಕಪ್ಪು ಮೊಗವ' ಕಣ್ತುಂಬ ನೋಡಿ ಕುಣಿದಾಡಿತು ಮನುಕುಲವು ಕೃತಕ ಗ್ರಹಣವ ಕಂಡೆಲ್ಲರೂ ದಿಗ್ಬ್ರಮೆಗೊಂಡೆವು
ಶೂನ್ಯದ ಮಧ್ಯೆ ಅದೆಷ್ಟು ಅಂದವಾಗಿ ಮಿಂಚುತ್ತಿತ್ತು, ಯಾರೋ ಎಸೆದ ಹೊಳೆಯುವ ಗಾಜಿನ ಗೋಲಿಯಂತೆ! ಹಸಿರು ನೀಲಿಯ ಧರೆ ಬಾನಂಗಳದ ಮುತ್ತು ಜಗದ ಸಂಸಾರ, ಸಮರಗಳೆಲ್ಲಾ ಅಡಗಿದೆ ಅದರೊಳು ನಾಣ್ಗೆಟ್ಟು .. ಚಂದ್ರನ ಬಂಜರು ನೆಲದಿಂದ ನೋಡಿದರೆ ಎಲ್ಲವೂ ಬಲು "ಸೈಲೆಂಟ್" ವಿಶ್ವದ ಅಗಾಧತೆಗೆ ಹೋಲಿಸಿದರೆ ನಾವೆಲ್ಲರೂ ಲಿಲಿಪುಟ್ ಭೂಮಿಯೇ ನಮಗೆಲ್ಲರಿಗೂ ದಕ್ಕಿದ ಏಕೈಕ ಅಪಾರ್ಟ್ಮೆಂಟ್
ಚಂದಿರನ ಸ ಕ್ಕುಗಟ್ಟಿದ ಬೆನ್ನಹಿಂದಿನ ದುರ್ಬೀನು ನೋಟಕೆ ಮನುಕುಲದ ತಾಣವಾಯ್ತು ಬರೀಯ ನೀಲಿ ಚುಕ್ಕೆ ಅಗಾಧ ಶೂನ್ಯದಿ ಹುಡುಕಿದೆ ಮಚ್ಚೆ!
ಸದಾ ಒಂದೇ ಮೊಗವ ತೋರಿಸಿ ಮುಗುಳು ನಗುತಿಹನು ಶಶಿಯು ಇಳೆಯೊಡನೆ ಅತೀತ ಪ್ರೀತಿಯ ನಾಟ್ಯಾಭಿನಯವು ಎಂದೆಂದೂ ತೋರುವನು ತನ್ನ ನಗು ಮುಖವ ಅನವರತ
ಹದಿನಾಲ್ಕು ದಿನದ ಸುಡುಬಿಸಿಲು ಈ ‘ಮೂನಿಗೆ' ಮತ್ತೆ ಹದಿನಾಲ್ಕು ದಿನದ ಮೈ ನಡುಗುವ ಕಗ್ಗತ್ತಲೆ ಸೂರ್ಯನ ಶಾಖಕೆ ಹಿಮವಾಗಿ ಸುಟ್ಟು ಕರಗುವ ಹಣೆಬರಹ!
ಆಕಾಶದಂಗಳದಿ ನಾಗಾಲೋಟವ ಮುಗಿಸಿ ಭೂಮಿಯ ಮಡಿಲಿಗೆ ಮರಳಿತು ಒರಿಯನ್ ಕವಚ ಬೆಂಕಿಯ ಉಂಡೆಯಂತೆ ನುಗ್ಗಿತು ಭೂ ಮಂಡಲದೊಳಗೆ ನೀಲಿ ಕಡಲ ಮೇಲೆ ಮೆಲ್ಲನೆ ತೇಲಿತು ಆ ಕವಚ "ಸ್ಪ್ಲ್ಯಾಶ್ ಡೌನ್" ಅಂತು ಪೆಸಿಫಿಕ್ ಸಮುದ್ರ
ಪುಳಕಿತ ವಾಯ್ತು ಈ ಮನುಕುಲವು ಎಲ್ಲವೂ ಮಂಗಳವಾಯ್ತು 'ತಿಂಗಳಿನ' ಪಯಣ
ಮುಂದಿನ ಗುರಿಯು 'ಮಂಗಳನ' ಅಂಗಳಕೆ!
******************************************
ಲಕ್ಷ್ಮೀನಾರಾಯಣ ಗುಡೂರ್:
ಸುತ್ತಿ ಬರೋಣು ನಮ್ ಚಂದಪ್ಪನ್ನ ..
ಬರ್ರೇ ಅಕ್ಕಂದ್ರ, ಬರ್ರೋ ಅಣ್ಣಂದ್ರ ಜಲ್ದಿ ಜಲ್ದಿ ಬರ್ರಿ ಎಲ್ಲ ಕೂಡ್ರಿ ಬಂದ ಚಂದ್ರನ ಸುತ್ತ ಹೋಗಿ ಬಂದಂಥ ಸುದ್ದಿ ಹೇಳತೀನಿ ನಿಮ್ಮ ಮುಂದ... ಹೊಸ ಸುದ್ದಿ ಹೇಳತೀನಿ ಕೇಳ ಮುಂದ ||
ಅರವತ್ತರಿಂದನ ದೊಡ್ಡ ದೇಶಗಳು ಮಾಡಿ ರಾಕೆಟು ಬಿಟ್ಟಾರಂತ ಆಕಾಶದಾಗ ಹಾರಿ ಚಂದ್ರನ ಹಿಡಿಲಿಕ್ಕೆ ನಾನಾ ನೀನಾ ಅನ್ನ ಹಠ ತೊಟ್ಟಾರಂತ ... ದೊಡ್ಡ ಪಟಾಕಿಯಂಥವು ಮಾಡಿ ಸುಟ್ಟಾರಂತ ||
ನಮ್ ಟ್ರಂಪಣ್ಣನ ಅಮೆರಿಕಾದಾಗ ಸಂಸ್ಥಿ ಒಂದೈತಿ ನಾಸಾಂತ ಚಂದ್ರನ ಮ್ಯಾಲ ಮನಿ ಮಾಡಲಿಕ್ಕೆ ಪ್ಲಾನೊಂದ ಮಾಡ್ಯಾರ ಪಾಸಂತ ... ಕೋಟಿ ಇಟ್ಟಾರ ಅದಕ್ಕ ಕಾಸಂತ ||
ಸುಮ್ಮನ ಹೋಗಿ ನೋಡಿ ಬರೋದಕ್ಕ ಕಳಿಸ್ಯಾರ ಹಾರೋದೊಂದು ಬಸ್ಸಂತ ನಾಕ ಮಂದಿ ಇರೋ ವಾಹನಕಿಟ್ಟಾರ ಹೆಸರು ಕೇಳ್ರಿ ಆರ್ಟಿಮಿಸ್ಸಂತ .... ನೆನಪಿರಲಿ .... ಆರ್ಟಿಮಿಸ್ ಅಂತ ||
ಹತ್ತು ದಿನ ರಾತ್ರಿ ಕಡುಗತ್ಲ ಹಾದ್ಯಾಗ ಹಾರಿಕೋತ ಹೋಗ್ಯಾರ ಜುಂಯಂತ ಹುರುಪಿನ ಹೊಸ ಹೊಸ ಪ್ರಯೋಗ ಮಾಡಲಿಕ್ಕೆ ಎರಡು ಲಕ್ಷ ಮೈಲು ಕುಣಕೊಂತಾ ... ಕಟ್ಟಿಕೊಂಡ ಬುತ್ತಿ ಉಣಕೊಂತ ||
ಕಗ್ಗ ಕತ್ತಲಾಗ ನೀಲಿ ವಜ್ರಧಂಗ ಹೊಳೆಹೊಳೆ ಭೂಮಿನ್ನ ಕಂಡಾರಂತ ಹೊನ್ನ ಸ್ವರ್ಗಕಿಂತ ನನ್ನ ಊರೇ ಚಂದ ಚನ್ನಚಂದ್ರಂಗಿಂತ ನನ್ನ ಭೂಮಿ ಅಂದ ಅಂದಾರಂತ ಹವಣಿಲೆ ಬಂದು ಇಳದಾರಂತ ... ಭೂಮಿಗ್ ನಕ್ಕೋತ ಬಂದು ಕುಣದಾರಂತ ||
"You can’t just eat good food. You’ve got to talk about it too. And you’ve got to talk about it to somebody who understands that kind of food." - Kurt Vonnegut
"Most of us have fond memories of food from our childhood. Whether it was our mom's homemade lasagna or a memorable chocolate birthday cake, food has a way of transporting us back to the past." - Homaro Cantu.
ನಮಸ್ಕಾರ ಅನಿವಾಸಿ ಬಳಗಕ್ಕೆ. ಮೇಲಿನ ಎರಡೂ ಹೇಳಿಕೆಗಳನ್ನು ಒಪ್ಪದೇ ಇರಲು ಸಾಧ್ಯವಿಲ್ಲ. ಊಟ ಎಲ್ಲಿಯದಾದರೇನು, ಅಮ್ಮನ ಕೈಯಡಿಗೆಯ ರುಚಿ ಬೇರೆಡೆ ಬಂದೀತೇ? ಇದನ್ನೇ ಮಿತ್ರ ರವಿರಾಜ ಉಪ್ಪೂರ್ ಭಟ್ ಅವರ ಮಾತಿನಲ್ಲಿ ಕೇಳೋಣ. ಎಂದಿನಂತೆ ಓದಿ, ನಿಮ್ಮ ಅನಿಸಿಕೆ, ಪ್ರತಿಕ್ರಿಯೆ ಹಂಚಿಕೊಳ್ಳಿ. - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).
ಊಟ ಬಲ್ಲವನಿಗೆ ರೋಗವಿಲ್ಲ; ಮಾತು ಬಲ್ಲವನಿಗೆ ಜಗಳವಿಲ್ಲ ...
ಎಷ್ಟು ಚೆನ್ನಾಗಿ ಈ ಒಂದು ಗಾದೆ ಮಾತು ನಮಗೆ ಹೇಗೆ ಆರೋಗ್ಯದ ಬಗ್ಗೆ ಒಂದು ಕಿವಿಮಾತು ಹೇಳಿದೆ ನೋಡಿ. ನಮ್ಮ ಈಗಿನ ಹೊಸ ಪೀಳಿಗೆಯವರಿಗೆ ಇದರ ಬಗ್ಗೆ ಅರಿವು ತುಂಬಾ ಇದ್ದಂತಿಲ್ಲ. ಇದೇನೇ ಇದ್ದ್ರೂ ನಮ್ಮ ಪೀಳಿಗೆಯವರ ಆಹಾರ ಪದ್ಧತಿ ಹೇಗಿತ್ತೆಂದು ನೋಡೋಣ.
ನಾನು ಮೂಲತಃ ಉಡುಪಿಯವನು ಮಾರಾಯ್ರೆ. ಉಡುಪಿಯವ್ರು ಅಂದ್ರೆ ನಿಮಗೆಲ್ಲ ಮೊದ್ಲು ನೆನಪಾಗುದೇ ಹೋಟೆಲ್ ಅಂತ ನಂಗೆ ಗೊತ್ತುಂಟು ಮಾರಾಯ್ರೆ ... ಅದೇನೇ ಇದ್ದ್ರೂ ನಂಗೂ ಉಡುಪಿ ಹೋಟೆಲ್ಗೂ ಯಂತ ಕನೆಕ್ಷನ್ ಇಲ್ಲ ಮಾರಾಯ್ರೆ ....
ನಾನು ಹುಟ್ಟಿ ಬೆಳೆದಿದ್ದೆಲ್ಲಾ ಉಡುಪಿಯ ಒಂದು ಸಣ್ಣ ಹಳ್ಳಿಯಲ್ಲಿ. ನಮ್ಮ ಮನೆ ಒಂದು ಹಳೆ (ಸಾಧಾರಣ 200 ವರ್ಷ ಹಳೆಯ ಮನೆ) ಬಂಗ್ಲೊ. ಅದ್ರಲ್ಲಿ ನನ್ನ ಅಜ್ಜ, ಅಪ್ಪ, ಅಮ್ಮ, ನನ್ನ ಅಣ್ಣ, ತಮ್ಮ, ನಾನು ಹಾಗೂ ನಮ್ಮ ಚಿಕ್ಕಪ್ಪ ಮತ್ತು ಅವರ ಕುಟುಂಬ ಇದ್ದೆವು. ನಮ್ಮನೆ ಎಲ್ಲರ ಊಟ ತಿಂಡಿಯ ವ್ಯವಸ್ಥೆ ಮಾಡುವುದು ನಮ್ಮಮ್ಮನೇ.
ನಂಗೆ ಇನ್ನೂ ಹಚ್ಚ ಹಸಿರಾಗಿಯೇ ಇದೆ ಆ ಹಳೆ ನೆನಪುಗಳು ... ಮನೆ ತುಂಬಾ ಜನ ... ಮಳೆಗಾಲದಲ್ಲಿ ನಟ್ಟಿಯ ಸಮಯ ಮನೆಯ ಕೆಲಸದಾಳುಗಳು, ನಟ್ಟಿ ನಡುವೆ ಹೆಂಗಸರೂ, ಹಾಗೂ ಹೂಟೆಗೆ ಕಟ್ಟುವ ಒಂದು ಜೊತೆ ಎತ್ತು ಹಾಗು ಕೋಣ ಮತ್ತೆ 3-4 ದನ ಎಮ್ಮೆಗಳು ಕರಾವಿಗೆ ಇರುತ್ತಿದ್ದವು. ಅಮ್ಮ ಹಾಗೂ ನಿತ್ಯದ ಕೆಲಸದಾಳು ಕೂಸ ಸುಮಾರಿಗೆ ಬೆಳಿಗ್ಗೆ 5 ಗಂಟೆಗೆಲ್ಲ ಎದ್ದು ಮನೆಯವರಿಗೆಲ್ಲ ಬೆಳಿಗ್ಗಿನ ಕೊಚ್ಚಿಗೆ ಅಕ್ಕಿ ಗಂಜಿ ಹಾಗೂ ಹಟ್ಟಿಯ ಗಂಟಿಗಳಿಗೆಲ್ಲ 'ಬಾಯಿರು' (ಗಂಟಿಗಳಿಗೆ ಹಾಕುವ ಕಲಗಚ್ಚು ಮಿಶ್ರಿತ ಅನ್ನ ಹಾಗೂ ತೌಡು) ತಯಾರು ಮಾಡುವರು. ನಾವು ಶಾಲೆಗೆ ಹೋಗುವ ಮಕ್ಕಳೆಲ್ಲ 6- 6:30ರ ಸುಮಾರಿಗೆ ಎದ್ದು ಬಚ್ಚಲು ಒಲೆಯಲ್ಲಿ ಬಾಯಿರು ಬಿಸಿಮಾಡುವ ಒಲೆಯ ಎದುರು ಕೂತು ಸ್ವಲ್ಪ ಹೊತ್ತು ಚಳಿ ಕಾಸಿ ಕೂಸನೊಂದಿಗೆ (ಮನೆ ಕೆಲಸದವನು) ಹರಟೆ ಹೊಡೆಯುವುದು ದಿನನಿತ್ಯದ ಪದ್ಧತಿ. ನಮ್ಮೊಟ್ಟಿಗೆ ಮನೆಯ 'ರಾಜು' ನಾಯಿ ಕೂಡ ಪಕ್ಕದಲ್ಲೇ ಕೂತಿರುವುದು ಒಂದು ವಾಡಿಕೆ. ಹಾಗೆ ಚಳಿ ಕಾಸುವಾಗ ಒಲೆಯೊಳಗೆ ಹುಣಸೆ ಬೀಜವನ್ನೋ, ಹಲಸಿನ ಹಣ್ಣಿನ ಒಣಗಿದ ಬೀಜವನ್ನೋ ಕೆಂಪಿನ ಕೆಂಡದೊಳಗೆ ಹಾಕಿ ಹದನಾಗಿ ಸುಡುವುದು ನಾವು ಶಾಲೆ ಹುಡುಗರ ಒಂದು 'ಹೋಮ್ ವರ್ಕ್'. ಹೀಗೆ ಹದನಾಗಿಸಿದ ಹುಣಸೆ ಬೀಜ ಮತ್ತೆ ದಾಣಿ (ಹಲಸಿನ ಬೀಜಕ್ಕೆ ನಮ್ಕಡೆ ದಾಣಿ ಅಂತಲೂ ಹೇಳುವುದು ಒಂದು ವಾಡಿಕೆ ... ಬಹುಶಃ ಆಡುಭಾಷೆ ತುಳುವಿನಿಂದ ಬಂದದ್ದಿರಬೇಕು) ಎರಡೂ ಸರಿಯಾಗಿ ಪಾಲಾಗಿ ನಮ್ಮ ಕಂಪಾಸ್ ಪೆಟ್ಟಿಗೆಯೊಳಗೋ, ಇಲ್ಲ ಕಾಲಿ ಬೆಂಕಿಪೆಟ್ಟಿಗೆಯೊಳಗೋ , ಇಲ್ಲ ಶಾಲೆಯ ಚೀಲದೊಳಗೋ ಹೋಗಿ ಸೇರುತ್ತಿತ್ತು. ಇದೇ ನಮ್ಮ ಶಾಲೆಯ ವಿರಾಮದ ಸಮಯ್ದ 'tuck time ಫುಡ್'. ನೆನೆಸಿದರೆ ಈಗಲೂ ನನ್ನ ಬಾಯಲ್ಲಿ ನೀರೂರುತ್ತದೆ.
ಬೆಳಿಗ್ಗಿನ ನಿತ್ಯಕರ್ಮಗಳನ್ನೆಲ್ಲಾ ಕ್ಲಪ್ತವಾಗಿ ಮುಗಿಸಿ ಕುಚ್ಚಲಕ್ಕಿ ಗಂಜಿ ಊಟ ಮಾಡಬೇಕಿತ್ತು. ಗಂಜಿಯೊಂದಿಗೆ ತುಪ್ಪ, ಚಿಟಿಕೆ ಉಪ್ಪು ಹಾಗೂ ನೆಂಜಿಕೊಳ್ಳಲು ಉಪ್ಪಿನಕಾಯಿಯೋ, ಕೊತ್ತಂಬರಿಸೊಪ್ಪಿನ ಚಟ್ನಿಯೋ, ಮಾವಿನಕಾಯಿಯ ತೊಕ್ಕು ಇಲ್ಲ ಮಜ್ಜಿಗೆ ಮೆಣಸು ಅಥವಾ ಹಿಂದಿನ ದಿನದ ಹುಳಿ (ನಮ್ ಕಡೆ ತೆಂಗಿನಕಾಯಿ ರುಬ್ಬಿ ಮಸಾಲೆ ಹಾಕಿ ಮಾಡಿದ 'ಸಾಂಬಾರು'). ನನ್ನ ಅಣ್ಣ ಹಾಗೂ ಅಪ್ಪನಿಗೆ ಗಂಜಿ ಊಟ ಅಂದ್ರೆ ಪಂಚ ಪ್ರಾಣ. ನನಗೆ ಹಾಗು ನನ್ನ ತಮ್ಮನಿಗೆ ಗಂಜಿ ಊಟ ಅಂದ್ರೆ ಅಷ್ಟಕ್ಕಷ್ಟೇ. ನಾನು ಅರ್ಧ ಗಂಜಿ ತಿಂದು ಉಳಿದರ್ಧ ನನ್ನ ಪ್ರೀತಿಯ ರಾಜು ನಾಯಿಯ ಕೊರಿಕೆಗೆ (ನಾಯಿಗೆ ತಿನ್ನಲು ಹಾಕುವ ಕಲ್ಲಿನ ದಪ್ಪ 'ತಟ್ಟೆ') ಹಾಕುತ್ತಿದ್ದೆ. ಅದಕ್ಕೆ ದಿನಾ ಅಮ್ಮನಿಂದ ಬೈಸಿಕೊಳ್ಳಬೇಕಿತ್ತು. ಅಜ್ಜನಂತೂ ನನ್ನ ಗಂಜಿ ಊಟದ ಸ್ಪೀಡ್ ನೋಡಿ ಯಾವಾಗಲೂ ಹೇಳುವವರು “ಇಷ್ಟು ಮೆಲ್ಲ ತಿಂದ್ರೆ ಹ್ಯಾಂಗೆ ತಿಂದಿದ್ದು ಮೈಗೆ ಹಿಡಿತ್ ... ಆಡು ಮೆಂದ ಹಾಗೆ ತಿನ್ನಬೇಕಂತೆ ... ಆನೆ ಮಿಂದಹಾಗೆ ಮೀಯಬೇಕಂತೆ (ಸ್ನಾನ ಮಾಡಬೇಕಂತೆ)” ಅಂತ.
ಆ ಗಂಜಿ ಊಟಕ್ಕೆ ಮುಕ್ತಿ ಸಿಕ್ಕಿದ್ದು ನಾ ಮೆಡಿಕಲ್ ಮಾಡಲು ಬಳ್ಳಾರಿಗೆ ಹೋದಮೇಲೆಯೇ. ಈಗಿನ ನನ್ನ ಮಕ್ಕಳಿಗಂತೂ ಗಂಜಿ ಊಟದ ಮಜವೇ ಗೊತ್ತಿಲ್ಲ..... ಹಾಗೆಯೇ ಸುಟ್ಟ ಹುಣಸೇ ಬೀಜ, ಹದವಾಗಿ ಸುಟ್ಟ ದಾಣಿ, ಉಪ್ಪು ಕಾರಪುಡಿ ಹಾಕಿದ ಹುಳಿ ಹಪ್ಪಟೆ ಮಾವಿನ ಕಾಯಿ - ಇದ್ಯಾವುದೂ ಗೊತ್ತೇ ಇಲ್ಲ! ಅದ್ರ ಮಜವೇ ಬೇರೆ. ನಾವು ಮಕ್ಕಳಿಗೆಲ್ಲ ಬೆಳಿಗ್ಗೆ ಗಂಜಿ ಕಡ್ಡಾಯ, ಆದ್ರೆ ಅಜ್ಜನಿಗೆ ಬೆಳಿಗ್ಗೆ ತಿಂಡಿ ಆಗಬೇಕಿತ್ತು. ಅಜ್ಜನಿಗೆ ಗೋಧಿಯಿಂದ ಮಾಡಿದ ಏನಾದ್ರೂ ತಿಂಡಿ ಅಂದ್ರೆ ಶ್ರೇಷ್ಠ ..... ಗೋಧಿ ಹಿಟ್ಟಿನ ತೆಳ್ಳಗಿನ ನೀರು ದೋಸೆ ಅಥವಾ ರವೆ ಉಪ್ಪಿಟ್ಟು ಹೀಗೆ ಏನಾದ್ರೂ ತಿಂಡಿ ಆಗಲೇ ಬೇಕು. ಹೀಗೆ ಅಜ್ಜನಿಗೆ ಮಾಡಿದ ತಿಂಡಿ ಸ್ವಲ್ಪ ಏನಾದ್ರೂ ಉಳಿದ್ರೆ ನಂಗೆ ಗಂಜಿಯೊಟ್ಟಿಗೆ ಅಮ್ಮ ಸ್ವಲ್ಪ ಕೊಡ್ತಿದ್ದ್ರು... ಅದೂ ಅಜ್ಜ ಆಚೆ ಕಡೆ ಹೋದ ಮೇಲೆ. ಅಜ್ಜ ಏನಾದ್ರೂ ನೋಡಿದ್ರೆ ನನ್ನ ಅಮ್ಮನ್ನ ಬೈಯ್ಯುವರು .... ಮಕ್ಕಳು ಬೆಳಿಗ್ಗೆ ತಿಂಡಿ ತಿಂದ್ರೆ ಹೊಟ್ಟೆ ಹಾಳಾಗ್ತದೆ ಅಂತ!
ಸಾಯಂಕಾಲ ಶಾಲೆ ಮುಗಿಸಿ ಬರುವಾಗ ದಾರಿಯಲ್ಲಿ ಮಾವಿನಕಾಯಿಗೆ ಗುರಿ ಇಟ್ಟು ಕಲ್ಲು ಹೊಡೆದುರುಳಿಸಿ ಅದರ ಸೊನೆ ಅಲ್ಲೇ ಕೆಳಗೆ ಹುಲ್ಲಿನಲ್ಲಿ ಒರೆಸಿ ತಿಂದರೆ ಅದ್ರ ಹುಳಿ ಹಪ್ಪಟೆ ರುಚಿಗೆ ಒಂದು ಸರ್ತಿ ಮೈಯೆಲ್ಲಾ ಜುಂ ಅನ್ನುವ ಮಜಾನೇ ಬೇರೆ. ಈಗೆಲ್ಲಿದೆ ಅದರ ಸುಖ ??...
ಮಾವಿನ ಕಾಯಿಯ ಸೀಸನ್ ಅಲ್ಲದೆ ಇದ್ರೆ ಬೇಲಿಯಲ್ಲಿರುವ ಕರಂಡೆ ಕಾಯಿ ಇಲ್ಲ ಹಣ್ಣು, ಕಿಸ್ಕಾರ್ ಹಣ್ಣು, ನೇರಳೆ ಹಣ್ಣು, ಜಂಗಮನ ಹಣ್ಣು, ಪೇರಳೆ ಹಣ್ಣು, ರೆಂಜೆ ಹಣ್ಣು ...ಹೀಗೆ ಏನಾದ್ರೂ ಒಂದು ಸಿಕ್ಕೇ ಸಿಗುತ್ತದೆ.
ಇನ್ನೂ ಶನಿವಾರ ಮಧ್ಯಾಹ್ನದ ಮೇಲೆ ರಜೆ. ಹಾಗೆ ಭಾನುವಾರ ನಮ್ಮ ಮನೆಯಲ್ಲಿ ಗಂಜಿಗೂ ರಜೆ. ಸಾದಾರಣವಾಗಿ ಆವತ್ತು ಇಡ್ಲಿ ಅಥವಾ ದೋಸೆ. ಹಾಗಾಗಿ ನಂಗಂತೂ ಭಾನುವಾರ ಅಂದ್ರೆ ಇಷ್ಟ. ತಿಂಡಿ ತಿಂದು ಟಿವಿಯಲ್ಲಿ ಹೀಮ್ಯಾನ್, Tom & Jerry ನೋಡಿ ಮುಗಿಯುವಷ್ಟರಲ್ಲಿ ರಾಮಾಯಣ ಇಲ್ಲ ಮಹಾಭಾರತ ಸೀರಿಯಲ್ ಶುರುವಾಗುವುದು.
ಹೀಗೆ ಮುಂದುವರಿದು ಮೆಡಿಕಲ್ ಕಾಲೇಜ್ ಸೇರಿದಮೇಲೆ ಈ ದಿನಚರಿಗೆ ಒಂದು ಮುಕ್ತಾಯ ಹಾಡಿದೆವು. ಆಮೇಲೆ ಬಳ್ಳಾರಿಯಲ್ಲಿ ಹಾಸ್ಟೆಲ್ ದಿನಚರಿ ಆರಂಭ. ಹಾಸ್ಟೆಲ್ ಅಂದಮೇಲೆ ನಿಮಗೆಲ್ಲಾ ಗೊತ್ತೇ ಇದೆಯಲ್ಲ .... ಬೆಳಿಗ್ಗಿನ ತಿಂಡಿಗೆ ಚೌ ಚೌ ಬಾತ್, ಕಾಂಕ್ರೀಟ್ (ಉಪ್ಪಿಟ್ಟಿಗೆ ಹಾಸ್ಟೆಲ್ ನಲ್ಲಿ ನಾವಿಟ್ಟಿದ್ದ ಹೆಸರು), ಇಡ್ಲಿ, ದೋಸೆ, ಬ್ರೆಡ್, ಚಿತ್ರಾನ್ನ, ವಾಂಗೀಬಾತ್ .... ಹೀಗೆ ನಾನಾ ವಿಧದ ಟಿಫನ್ ಗಳು. ಅದರಲ್ಲೂ ಬಳ್ಳಾರಿಯ ಸ್ಪೆಷಲ್ ತಿಂಡಿ ... ಮೆಣಸಿನ ಕಾಯಿ ಬಜ್ಜಿ (ಪುಗ್ಗಿ) ಹಾಗೂ ಮಂಡಕ್ಕಿ (ಮಂಡಾಳು) ಒಗ್ಗರಣೆಯನ್ನು ಹೇಳದಿದ್ದರೆ ಹೇಗೆ? ಇವತ್ತು ಬೆಳಿಗ್ಗೆ ಏನಾದ್ರೂ ಇದನ್ನು ತಿಂದ್ರೆ .... ಅದ್ರ ಪರಿಣಾಮ ಮಾರನೆಯ ದಿನ ಬೆಳಿಗ್ಗೆ ಬಹಿರ್ದೆಸೆಗೆ ಹೋದಾಗಲೇ ಗೊತ್ತಾಗುವುದು!
ನನ್ನ ಇಷ್ಟದ ತಿಂಡಿ ವಾಂಗೀಬಾತ್ ಆಗಿತ್ತು. ವಾಂಗಿಬಾತ್ ಮಾಡಿದ ದಿನ ನನ್ನ ತಟ್ಟೆಯ್ಲಲಿ ಒಂದು ಸಣ್ಣ ಗುಡ್ಡೆಯಾಕಾರದಲ್ಲಿ ವಾಂಗೀಬಾತ್ ಇರುತ್ತಿತ್ತು. ಇದರಿಂದಾಗಿ ನನ್ನ ಫ್ರೆಂಡ್ಸ್ ಎಲ್ಲ ನನ್ನನ್ನು ವಾಂಗಿಪ್ರಿಯ ಅಂತಲೇ ಕರೆಯಲು ಶುರು ಮಾಡಿದ್ರು. ಹೀಗೆ ಮುಂದುವರಿದು ಒಂದು ತಿಂಗಳಿಗೆ ನಾನೂ ಕೂಡ ಮೆಸ್ಸ್ prefect ಆದೆ. ಆ ತಿಂಗಳು ನನಗೆ ಇಷ್ಟವಾದ ತಿಂಡಿಗಳನ್ನು ಹೇಳಿ ಮಾಡಿಸಿಕೊಂಡು ತಿಂದಿದ್ದೇ ತಿಂದಿದ್ದು. ಒಮ್ಮೆ ಭಾನುವಾರ, ನನ್ನ ಇಬ್ಬರು ಗೆಳೆಯರ ಜೊತೆ ದೋಸೆ ತಿನ್ನುವ ಸ್ಪರ್ಧೆ ನಡೆಯಿತು. ಆವತ್ತು ಮಸಾಲೆ ದೋಸೆ ಟಿಫನ್. ನನ್ನ ಇಬ್ಬರು ಆಪ್ತ ಗೆಳೆಯರು ಒಬ್ಬೊಬ್ಬರೂ ಹತ್ತೋ ಹನ್ನೆರಡೋ ಮಸಾಲೆ ದೋಸೆ ಭುಂಜಿಸಿದರು ... ಕೊನೆಗೆ ನನ್ನ ಸರಣಿ .... ಲೆಕ್ಕ ಮಾಡಿ ನಾನು ಅಂದು 16 ಮಸಾಲೆ ದೋಸೆ ಗುಳುಂಮಾಯಿಸಿದೆ. ಹಾಗೇ ಇನ್ನೊಂದು ಸಲ ಯಾವುದೋ ಒಂದು ಹಾಸ್ಟೆಲ್ ಡೇ celeberation ದಿನದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ 2 ನಿಮಿಷದಲ್ಲಿ 21 ಇಡ್ಲಿ ತಿಂದು 2ನೇ ಸ್ಥಾನ ಗಿಟ್ಟಿಸಿಕೊಂಡವ ನಾನು. ಈಗ ನೋಡಿದ್ರೆ ಅದೆಲ್ಲ ಗತ ವೈಭವ ಅನ್ನಿಸುತ್ತೆ 😁
ಎಡಗಡೆ ಮೇಲಿನಿಂದ, ಗಡಿಯಾರದ ಚಲನೆಯಂತೆ: ೧. ಕುಚ್ಚಲು ಅಕ್ಕಿ ಗಂಜಿ ಉಪ್ಪಿನ ಕಾಯಿ, ಮಜ್ಜಿಗೆ ಮೆಣಸು, ಚಟ್ನಿ, ಹಲಸಿನ ಹಪ್ಪಳ; ೨. ಹುಳಿ ಹಪ್ಪಟೆ ಮಾವಿನ ಕಾಯಿ ಉಪ್ಪು ಖಾರ; ೩. ಮಂಡಕ್ಕಿ ಒಗ್ಗರಣೆ ಹಾಗೂ ಮೆಣಸಿನ ಕಾಯಿ ಬಜ್ಜಿ – ಬಳ್ಳಾರಿ ಮೆಸ್ಸ್ ಸ್ಪೆಷಲ್; ೪. ಉಪ್ಪಿಟ್ಟು – ಶಿರಾದ ಚೌ ಚೌ ಭಾತ್. (ಎಲ್ಲಾ ಚಿತ್ರಗಳು ಲೇಖಕರು ಗೂಗಲ್ ನಿಂದ ಪಡೆದದ್ದು.)
ಫಾಸ್ಟ್ ಫಾರ್ವರ್ಡ್ .... ಕೋವಿಡ್ ನಂತರದ ದಿನಗಳು ...ಈಗಿನ ಆಹಾರ ಪದ್ದತಿಯ ಬಗ್ಗೆ ಒಂದು ಇಣುಕು ನೋಟ ಹಾಕೋಣ - ಇತ್ತೀಚಿನ ದಿನಗಳಲ್ಲಿ ನಮ್ಮ ಊಟ ತಿಂಡಿಗಳಲ್ಲೆಲ್ಲಾ ಪ್ರೋಸೆಸ್ಸ್ಡ್ ಫುಡ್ ಹಾಗೂ ಫಾಸ್ಟ್ ಫುಡ್ ಗಳದ್ದೇ ಕಾರುಬಾರು ..... ಬರಬರುತ್ತಾ ನಮ್ಮ ದೇಹಶ್ರಮ ಕೂಡ ಕಡಿಮೆ ಆಗುತ್ತಾ ಬರುತ್ತಿದೆ! ತಿಂದ ಆಹಾರದ ಪಚನಕ್ರಿಯೆ ಹಾಗು ಮೈಗೆ ಹತ್ತಲು ಸಮತೂಕದ ಆಹಾರ ಹಾಗೂ ಸಾಧಾರಣ ಮಟ್ಟದ ದೇಹಶ್ರಮ ಕೂಡಾ ಅಗತ್ಯ ನಮ್ಮ ಆದುನಿಕ ಸರ್ವಜ್ಞ ಡಿವಿಜಿ ಅವರು ಹೇಳಿದಂತೆ - ಎಷ್ಟು ನೀನುಂಡರೇಂ ಪುಷ್ಟಿ ಮೈಗಾಗುವುದು । ಹೊಟ್ಟೆ ಜೀರ್ಣಿಸುವಷ್ಟೆ ಮಿಕ್ಕುದೆಲ್ಲ ಕಸ ।। ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು । ಮುಷ್ಠಿ ಪಿಷ್ಟವು ತಾನೆ ಮಂಕುತಿಮ್ಮ ।।
ನೀನು ಎಷ್ಟು ಆಹಾರವನ್ನು ತಿಂದರೂ, ಅದರಿಂದ ದೇಹಕ್ಕೆ ಪುಷ್ಟಿಸಿಗುವುದು, ನಿನ್ನ ದೇಹ ಜೀರ್ಣಿಸಿಕೊಳ್ಳುವಷ್ಟು ಮಾತ್ರ. ಅಧಿಕವಾಗಿ ತಿಂದದ್ದೆಲ್ಲ ಜೀರ್ಣವಾಗದೆ, ಮಲರೂಪದಲ್ಲಿ ಕಸವಾಗಿ ಹೊರಬರುತ್ತದೆ. ಎಷ್ಟು ಸಂಪತ್ತನ್ನು ಗಳಿಸಿದರೂ ಹಸಿವಾದಾಗ ನೀನು ಸೇವಿಸಲಾಗುವುದು ಕೇವಲ ಒಂದು ಮುಷ್ಠಿ ಅನ್ನ ತಾನೆ? ಎಂದು ಕೇಳುತ್ತಾ ನಮ್ಮ ಮಿತಿಗಳನ್ನು ಅರ್ಥ ಮಾಡಿಕೊಳ್ಳುವಂತೆ ನಮಗೆ ಸೂಚನೆಯನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದ ಮಾತಿನಲ್ಲಿ.
ಹಾಗಾಗಿ ಮಿತಿಯರಿಯಬೇಕು. ಮಿತಿಯಿಂದಿದ್ದರೆ ಬಾಳು ಹಿತ. ಇದು ಕೇವಲ ಆಹಾರಕ್ಕಷ್ಟೇ ಸೀಮಿತವಲ್ಲ. ಬದುಕಿನ ನಮ್ಮ ಎಲ್ಲ ಆಯಾಮಗಳಿಗೂ ಇದನ್ನು ಅನ್ವಯಿಸಿಕೊಳ್ಳಬೇಕು. ನಮ್ಮ ಕ್ಷಮತೆ ಮತ್ತು ಯೋಗ್ಯತೆಗನುಗುಣವಾಗಿ ಒಂದು ‘ಗೆರೆ’ ಎಳೆದುಕೊಳ್ಳಬೇಕು. ಆ ಮಿತಿಯ ವೃತ್ತದ ಪರಿಧಿಯಲ್ಲೇ ನಮ್ಮ ಕಾರ್ಯಕ್ಷೇತ್ರವಿರಬೇಕು. ನಮ್ಮ ಕ್ಷಮತೆಯನ್ನು ಹೆಚ್ಚಿಸಿಕೊಂಡ ಹಾಗೆ ಆ ವೃತ್ತದ ಪರಿಧಿಯೂ ಹೆಚ್ಚುತ್ತಾ ಹೋಗುತ್ತದೆ. ದೇಹವು ಆಹಾರದಲ್ಲಿನ ಸತ್ವವನ್ನು ಮಾತ್ರ ಸ್ವೀಕರಿಸಿ ಮಿಕ್ಕದ್ದನ್ನು ತ್ಯಜಿಸುವಹಾಗೆ, ನಾವು ಈ ಜಗತ್ತಿನಲ್ಲಿ ಸತ್ವವನ್ನು ಮಾತ್ರ ಹೀರಿಕೊಳ್ಳಬೇಕು. ಮಿತವಾಗಿ ಉಂಡರೆ ಅಮಿತ ಸುಖದಲಿ ಹಿತವಾಗಿ ಬದುಕುವೆ.
ನಾವೆಲ್ಲ ನೆನಪಿನಲ್ಲಿ ಇಡಬೇಕಾದ್ದು: * ಮಿತವಾಗಿ ತಿನ್ನುವುದು, * ಸಮತೂಕದ ಆಹಾರವಿರಲಿ: 40-50% ಶರ್ಕರ ಪಿಷ್ಟ (carbohydrates), 20-30% - ಕೊಬ್ಬಿನ ಅಂಶ (fats), 10-30% ಪ್ರೊಟೀನ್, 10-20% - ನಾರಿನ ಅಂಶ (fibre). * ಸಾಧ್ಯವಾದಷ್ಟೂ ಕಡಿಮೆ ಸಂಸ್ಕರಿಸಿದ ಆಹಾರದ (processed food) ಉಪಯೋಗ. * ಸಂಸ್ಕರಿಸಿದ ಸಕ್ಕರೆಯನ್ನು ಸಾಧ್ಯವಾದಷ್ಟೂ ಕಡಿಮೆ ಉಪಯೋಗಿಸುವುದು. * ಊಟಗಳ ಮದ್ಯೆ ಕುರುಕಲು ತಿಂಡಿಗಳನ್ನು (snacks) ತಿನ್ನುವುದನ್ನು ಸಾಧ್ಯವಾದಷ್ಟೂ ಕಡಿತಗೊಳಿಸುವುದು. * ಊಟವಾದ ಮೇಲೆ 15-20 ನಿಮಿಷ ಮೆಲ್ಲಗೆ ನಡೆದಾಟ / ಅಡ್ಡಾಡುವುದನ್ನು ರೂಢಿಗೊಳಿಸಿಕೊಳ್ಳುವುದು, ಇಲ್ಲವೇ ಸಣ್ಣ ಪುಟ್ಟ ಮನೆ ಕೆಲಸ ಮಾಡುವುದು. * ಕರಿದ ತಿಂಡಿಯನ್ನು ತಿನ್ನುವುದನ್ನು ಸಾಧ್ಯವಾದಷ್ಟೂ ಮಿತಗೊಳಿಸುವುದು. * ಸಿಹಿ ತಿನ್ನಬೇಕೆನಿಸಿದರೆ ಕಾಲಿ ಹೊಟ್ಟೆಯಲ್ಲಿ ತಿನ್ನುವುದಕ್ಕಿಂತ ಊಟ ಆದ ಮೇಲೆ ತಿನ್ನುವುದು ಒಳ್ಳೆಯದು. ಸಿಹಿಯ ಜೊತೆ ಬಾದಾಮಿ ಇಲ್ಲ ಪಿಸ್ತಾ (ಯಾವುದೇ dry fruits / nuts ) ಬೆರಸಿ ತಿನ್ನುವುದು. ಇಲ್ಲ ಹೋಳಿಗೆ ತಿನ್ನುವುದಾದರೆ ಅದರ ಜೊತೆ ಸ್ವಲ್ಪ(ವೇ!) ತುಪ್ಪ ಸೇರಿಸಿ ತಿನ್ನುವುದು.
ಕೊನೆಯ ಕೊಸರು: - ನಮ್ಮ ದೇಹದ ಆರೋಗ್ಯ (ಅಕ್ಷರಶಃ) ನಮ್ಮ ಕೈಯಲ್ಲಿ (ಅಥವಾ ಚಮಚೆಯಲ್ಲಿ) ಇದೆ ಹಾಗೂ ಬಹುತೇಕ ನಾವು ತಿನ್ನುವ ಆಹಾರವನ್ನು ಅವಲಂಬಿಸಿದೆ. - ನೆನಪಿನಲ್ಲಿರಲಿ - ಊಟ ಬಲ್ಲವನಿಗೆ ರೋಗವಿಲ್ಲ.... ಮಾತು ಬಲ್ಲವನಿಗೆ ಜಗಳವಿಲ್ಲ!