ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು (UAE) ಭಾಗ ೨
ಡಾ. ಜಿ. ಎಸ್. ಶಿವಪ್ರಸಾದ್





ಕಳೆದ ವಾರ ಪ್ರಕಟಿತವಾದ ‘ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು’ ಎಂಬ ಲೇಖನದ ಎರಡನೇ ಭಾಗವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಈ ಎರಡನೇ ಸಂಚಿಕೆಯಲ್ಲಿ ಅರಬ್ ಜನರ ಸಂಸ್ಕೃತಿಯ ಬಗ್ಗೆ , ಇಲ್ಲಿಯ ವಿಶಿಷ್ಟತೆಯ ಬಗ್ಗೆ, ಈ ರಾಷ್ಟ್ರದ ಹೆಮ್ಮೆಯ ಮಹಾನಗರವಾದ ದುಬೈ ಮತ್ತು ಅಲ್ಲಿಯ ಜನಜೀವನವನ್ನು ಕುರಿತಾಗಿ ಲೇಖಕರ ಅನಿಸಿಕೆಗಳಿವೆ. ದಯವಿಟ್ಟು ಓದಿ ಸ್ಪಂದಿಸಿ – ಸಂ

ಅಲೈನ್ ನಗರದ ಮಧ್ಯೆ ಇರುವ ಅಲೈನ್ ಓಯಸಿಸ್ ಒಂದು ಮುಖ್ಯ ಆಕರ್ಷಣೆ. ಮರಳುಗಾಡಿನ ಹಸಿರು ತಾಣಗಳ ಬಗ್ಗೆ ನನಗೆ ಹಿಂದಿನಿಂದ ಕುತೂಹಲ. ಬೆಟ್ಟದ ಆಸುಪಾಸಿನಲ್ಲಿರುವ ಈ ಓಯಸಿಸ್ ನೂರಾರು ಎಕರೆ ವಿಸ್ತಾರವಾಗಿದ್ದು ಇಲ್ಲಿ ಹಲವಾರು ಜಾತಿಯ ಹಸಿರುಮರಗಳಿದ್ದು ಡೇಟ್ಸ್ ಮರಗಳೇ ಹೆಚ್ಚು. ಬೆಟ್ಟದಿಂದ ಹರಿದುಬರುವ ನೀರನ್ನು ಪುರಾತನವಾದ 'ಫಲಾಜ್ ನೀರಾವರಿ ' ತಂತ್ರಜ್ಞಾನದಲ್ಲಿ ಇಲ್ಲಿ ನೀರನ್ನು ಹಾಯಿಸಿದ್ದಾರೆ. ಇಟಲಿ ಮತ್ತು ಇಂಗ್ಲೆಂಡಿನಲ್ಲಿ ರೋಮನ್ನರು ಕಟ್ಟಿದ್ದ ಅಕ್ವಾಡಕ್ಟ್ ಗಳನ್ನು ಹೋಲುವ ಈ ಮಾನವ ನಿರ್ಮಿತ ಕಾಲುವೆಗಳು ಒಳಚರಂಡಿಯಂತೆ ಮುಚ್ಚಿದ್ದು ಒಂದು ರೀತಿ ಗುಪ್ತಗಾಮಿನಿಗಳಾಗಿ ಹರಿಯುತ್ತವೆ. ಬಹುಶ ಓಪನ್ ವ್ಯವಸ್ಥೆಯಲ್ಲಿ ನೀರು ಸೆಖೆಗೆ ಆವಿಯಾಗಬಹುದು ಮತ್ತು ಮುಚ್ಚಿರುವ ಕಾಲುವೆಯಲ್ಲಿ ನೀರು ತಣ್ಣಗಿರುವ ಸಾಧ್ಯತೆ ಹೆಚ್ಚು. ಅಲ್ಲಲ್ಲೇ ಸಣ್ಣ ಸಣ್ಣ ಕಟ್ಟೆಗಳನ್ನು ಕಟ್ಟಿ ನೀರನ್ನು ಎಲ್ಲ ದಿಕ್ಕುಗಳಿಗೆ ಹಾಯಿಸಿದ್ದಾರೆ. ಇನ್ನೊಂದು ಸ್ವಾರಸ್ಯಕರವಾದ ಸಂಗತಿ ಎಂದರೆ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಡೇಟ್ಸ್ ಮರಗಳನ್ನು ಗಂಡು ಮತ್ತು ಹೆಣ್ಣು ಮರಗಳು ಎಂದು ವಿಂಗಡಿಸಿ ಗುರುತಿಸಬಹುದು. ಗಂಡು ಮರಗಳಲ್ಲಿ ಬಿಜೋತ್ಪತ್ತಿಯಾಗುತ್ತದೆ ಆದರೆ ಅವು ಫಲವನ್ನು ಕೊಡುವುದಿಲ್ಲ. ನಿಸರ್ಗದಲ್ಲಿ ಗಾಳಿಯು, ಗಂಡು ಮತ್ತು ಹೆಣ್ಣು ಮರಗಳ ನಡುವೆ ಪರಾಗ ಸ್ಪರ್ಶವನ್ನು ಮಾಡುತ್ತದೆ, ಆದರೆ ಅಧಿಕ ಸಂಖ್ಯೆಯಲ್ಲಿ ಸಮರ್ಥವಾಗಿ ಹಣ್ಣುಗಳನ್ನು ಪಡೆಯುವ ಉದ್ದೇಶದಿಂದ ಗಂಡು-ಹೆಣ್ಣು ಮರಗಳ ನಡುವೆ ಪರಾಗಸ್ಪರ್ಶವನ್ನು ಇಲ್ಲಿ ಮನುಷ್ಯ ಮಾಡುತ್ತಿದ್ದಾನೆ. ಇದಕ್ಕೆ ಬೇಕಾದ ಬೀಜಗಳು ಮಾರ್ಕೆಟ್ಟಿನಲ್ಲಿ ದೊರೆಯುತ್ತವೆ. ಹೀಗಾಗಿ ಹೆಣ್ಣು ಡೇಟ್ಸ್ ಮರಗಳನ್ನು ಕೃಷಿ ಮಾಡುವವರೇ ಜಾಸ್ತಿ. ಸಿಹಿಯಾದ ಡೇಟ್ಸ್ ಹಣ್ಣು ಬಿಡುವುದು ಮೇ ತಿಂಗಳಾದ ಮೇಲೆ. ನಾವು ಓಯಸಿಸ್ ಉದ್ದಗಲಕ್ಕೂ ವಿಹರಿಸಿದೆವು. ಇದು ಬಹಳ ಸುಂದರ, ಪ್ರಶಾಂತವಾದ ತಾಣ.  ನಾವು ಅಗ್ಗದ ದರದಲ್ಲಿ ಸಿಗುವ ಸಿಹಿಯಾದ ಡೇಟ್ಸ್ ಗಳನ್ನು ಕೊಂಡುಕೊಂಡೆವು.

ನಾವು ಅರಬ್ಬರನ್ನು ಹತ್ತಿರದಿಂದ ಕಂಡದ್ದು ಅಲೈನ್ ನಗರದ ಪ್ರತಿಷ್ಠಿತ 'ಲಾ ಬ್ರಯೋಷ್' ಎಂಬ ಫ್ರೆಂಚ್ ಕೆಫೆಯಲ್ಲಿ. ಇಲ್ಲಿ ಗಂಡಸರು ಅಡಿಯಿಂದ ಮುಡಿಯವರೆಗೆ ಶುಭ್ರವಾದ ನೀಟಾಗಿ ಇಸ್ತ್ರಿ ಮಾಡಿದ ಬಿಳಿ ನಿಲುವಂಗಿಯನ್ನು ತೊಟ್ಟು ತಲೆಗೆ ಒಂದು ಬಿಳಿ ವಸ್ತ್ರವನ್ನು ಇಳಿಬಿಟ್ಟು ಅದನ್ನು ತಲೆಸುತ್ತಳತೆಗೆ ಹೊಂದುವಂತಹ ಕರಿಪಟ್ಟಿಯಲ್ಲಿ ನೀಟಾಗಿ ತಲೆಯಮೇಲೆ ನಿಲ್ಲುವಂತೆ ಕಟ್ಟಿರುತ್ತಾರೆ. ತಮ್ಮ ಗಡ್ಡಗಳನ್ನು ಟ್ರಿಮ್ ಮಾಡಿ, ದೃಢಕಾಯರಾಗಿ, ಕೂಲಿಂಗ್ ಗ್ಲಾಸ್ ಏರಿಸಿ, ಘಮ ಘಮಿಸುವ ಪರ್ಫ್ಯೂಮ್ ಧರಿಸಿ ನೋಡಲು ಸ್ಮಾರ್ಟ್ ಆಗಿರುತ್ತಾರೆ. ಗಂಡಸರು ತೊಡುವ ಈ ನಿಲುವಂಗಿಗೆ ಕಂದೂರವೆಂದು ಕರೆಯಲಾಗುತ್ತದೆ. ಇಲ್ಲಿ ಬಹಳಷ್ಟು ಜನ ಶ್ರೀಮಂತರಾಗಿ, ಶಿಕ್ಷಿತರಾಗಿರುವಂತೆ ಕಂಡರು. ಇಲ್ಲಿ ಜೋರಾಗಿ ಮಾತನಾಡುವ, ಕ್ಯಾಕರಿಸಿ ಉಗಿಯುವ, ಗುಡುಗುಡಿ ಸೇದುವ ಜನರು ಕಾಣಲಿಲ್ಲ. ಹೆಂಗಸರು ತೆಳ್ಳಗೆ ಬೆಳ್ಳಗೆ ಇದ್ದು, ಮುಖಕ್ಕೆ ಮೇಕಪ್, ಲಿಪ್ಸ್ಟಿಕ್ ಹಾಕಿಕೊಂಡು ಅಬಯ್ ಎಂಬ ಕರಿ ನಿಲುವಂಗಿಯನ್ನು ತೊಟ್ಟು ತಲೆಗೆ ಹಿಜಾಬ್ ಧರಿಸಿರುತ್ತಾರೆ. ಇಲ್ಲಿಯ ಜನರು ಬೇರೆಯವರ ಜೊತೆ ದೃಷ್ಠಿ ಹಾಯಿಸಿ ‘ಹಾಯ್’ ಎನ್ನುವವರಲ್ಲ. ಕಿರುನಗೆಯನ್ನು ಬಿರುವವರಲ್ಲ, ಹೊರಗಿನವರ ಬಗ್ಗೆ ಅವರಿಗೆ ಆಸಕ್ತಿ ಇರುವಂತೆ ಕಾಣಲಿಲ್ಲ. ಇದು ಸರಿ ತಪ್ಪುಗಳ ವಿಮರ್ಶೆಯಲ್ಲ, ಅವರವರ ಸಂಸ್ಕೃತಿಗೆ ಸಂಬಂಧ ಪಟ್ಟ ವಿಚಾರವಷ್ಟೇ. ಸ್ಥಳೀಯರು ಅವರಪಾಡಿಗೆ ಅವರಿದ್ದು ಇಲ್ಲವೇ ಅವರ ಜನರ ಜೊತೆ ಬೆರೆತು ಮಾತನಾಡುತ್ತಾರೆ. ಹೆಂಗಸರ ಬಗ್ಗೆ ವಿಶೇಷವಾದ ಗೌರವ ಮತ್ತು ಮಡಿವಂತಿಕೆ ಇದೆ. ಅರಬ್ಬರಿಗೆ ಸಂಜೆಯಾದ ಮೇಲೆ ಅಥವಾ ವಾರಾಂತ್ಯದಲ್ಲಿ ನಗರದ ಪಾರ್ಕುಗಳಲ್ಲಿ, ಸಮುದ್ರ ತೀರಗಳಲ್ಲಿ ಕಾಲಕಳೆಯುವುದೆಂದರೆ ಬಲು ಖುಷಿ. ಇವರ ಜೀವನ ಪ್ರೀತಿ ಅದಮ್ಯವಾದದ್ದು. ಅವರ ಸಂಸಾರ ಕೂಡ ದೊಡ್ಡದು. ಕುಟುಂಬದ ಹಿರಿಯ ಕಿರಿಯ ಗಂಡಸರು ಹೆಂಗಸರು ಸದಸ್ಯರು ದೊಡ್ಡ ದೊಡ್ಡ ಕಾರುಗಳಲ್ಲಿ ಬಂದು ಪಿಕ್ನಿಕ್ ಮಾಡುತ್ತಾರೆ. ಹೊರಾಂಗಣದಲ್ಲಿ ತಿನ್ನುವುದು ಇಲ್ಲಿ ಸಾಮಾನ್ಯ. ಎಲ್ಲಿಯೂ ಒಂದಿಷ್ಟು ಕಸವನ್ನು ಎಸೆಯದೆ ಎಲ್ಲಿಯೂ ಗಲೀಜು ಮಾಡದ ಹಾಗೆ ಎಚ್ಚರಿಕೆ ವಹಿಸುತ್ತಾರೆ. ಒಂದು ಸಂಜೆ ಸೂರ್ಯಾಸ್ತವನ್ನು ನೋಡಿ ನಂತರ ಝಬೀಲ್ ಹಫೀತ್ ಬೆಟ್ಟದ ಬುಡದಲ್ಲಿರುವ ಸಂತೆಯಲ್ಲಿ ಚಾ ಮತ್ತು ಜಾಮೂನಿನಂತೆ ಕಾಣುವ ಲಗೈಮತ್ ಎಂಬ ಸಿಹಿ ಖಾದ್ಯವನ್ನು, ಬಿಸಿಬಿಸಿಯಾದ ಫಲಾಫಲ್ ಎಂಬ ಚೆನ್ನಾಕಾಳಿನ ಮಸಾಲೆ ಉಂಡೆಗಳನ್ನು ಸೇವಿಸಿದೆವು. ಇವರಿಗೆ ಮೀನು, ಲ್ಯಾಮ್ಬ್ ಮತ್ತು ಬಿರಿಯಾನಿ ಅನ್ನವೆಂದರೆ ಇಷ್ಟವೆಂದು, ಅದು ಇಲ್ಲಿಯ ಆಹಾರವೆಂದು ಕೇಳಿದೆ.

ಮೇಲೆ ಪ್ರಸ್ತಾಪಿಸಿದ ಬದಿಕಿನ ಚಿತ್ರಣ ಅರಬ್ ದೇಶದ ಒಳನಾಡಿನದ್ದಾದರೆ, ಇಲ್ಲಿಯ ಮಹಾ ನಗರಗಳಾದ ದುಬೈ ಅಬುದಾಬಿಯಲ್ಲಿನ ಜೀವನ ಸ್ವಲ್ಪ ಭಿನ್ನ ವಾಗಿದೆ. ಇವುಗಳನ್ನು ಪಾಶ್ಚಿಮಾತ್ಯ ನಗರಗಳಾದ ಲಂಡನ್ ಅಥವಾ ನ್ಯೂಯಾರ್ಕ್ ನಗರಗಳಿಗೆ ಹೋಲಿಸಬಹುದು. ಇಲ್ಲಿ ಸ್ಥಳೀಯ ಎಮಿರಾಟಿ ಗಳು ಯಾರು? ಹೊರಗಿನಿಂದ ವಲಸೆ ಬಂದವರು ಯಾರು? ಪ್ರವಾಸಿಗರು ಯಾರು? ಎಂದು ಗುರುತಿಸುವುದು ಕಷ್ಟ. ಈ ನಗರದಲ್ಲಿ ೩.6 ಮಿಲಿಯನ್ ಜನರು ವಾಸವಾಗಿದ್ದಾರೆ. ಯಾರು ಕಾರ್ಮಿಕ ವರ್ಗದವರು, ಯಾರು ವೈಟ್ ಕಾಲರ್ ಹುದ್ದೆಗಳಲ್ಲಿರುವವರು ಎಂದು ಸುಲಭವಾಗಿ ಗುರುತಿಸಬಹುದು. ಇಲ್ಲಿ ಹಲವಾರು ದೇಶಗಳಿಂದ ವಲಸೆ ಬಂದ ಜನರಿದ್ದಾರೆ. ಇದು ಬಹುಮುಖಿ ಸಂಸ್ಕೃತಿಯ ನಗರ. ತೀವ್ರಗತಿಯಲ್ಲಿ ನಗರ ಬೆಳೆಯುತ್ತಿದೆ. ಇಲ್ಲಿಯ ಜನಗಣತಿ
(ಡೆಮೊಗ್ರಾಫಿ) ಮಾಹಿತಿಗಳು ಸ್ವಾರಸ್ಯಕರವಾಗಿದೆ. ಇಲ್ಲಿ ಸುಮಾರು ೬೦% ದಕ್ಷಿಣ ಏಷ್ಯಾ ಮೂಲದವರು; ಭಾರತೀಯರು ೪೦%, ಪಾಕಿಸ್ತಾನಗಳು ೧೦%, ಬಾಂಗ್ಲಾದೇಶದವರು ೧೦%, ಈಜಿಪ್ಟಿನವರು ೧೦%, ಫಿಲಿಫೈನ್ಸ್ ೬%, ಪಶಿಮತ್ಯ ಮತ್ತು ಇತರರು ೧೩%. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸ್ಥಳೀಯ ಎಮಿರಾಟಿಗಳು ೧೨% ಅಷ್ಟೇ! ಒಟ್ಟಾರೆ ನೋಡಿದಾಗ ಹೊರಗಿನಿಂದ ವಲಸೆ ಬಂದವರು ೮೮%, ಮತ್ತು ಸ್ಥಳೀಯರು ಕೇವಲ ೧೨%. ಅಂದರೆ ಸಂಖ್ಯೆ ಲೆಕ್ಕದಲ್ಲಿ ಇಲ್ಲಿ ಎಮಿರಾಟಿಗಳೇ ಅಲ್ಪಸಂಖ್ಯಾತರು! ಪಾಶ್ಚಿಮಾತ್ಯ ದೇಶಗಳಲ್ಲಿ ವಲಸೆ ಬರುವವರ ಬಗ್ಗೆ ಅಂಜಿಕೆ ಇರುವವವರು ಈ ಡೆಮೊಗ್ರಾಫಿಯನ್ನು ಗಮನಿಸಬೇಕು. ವಲಸೆ ಬಂದವರು ಒಂದು ದೇಶಕ್ಕೆ ಹೊರೆಯಾಗದೇ ಅದರ ಆರ್ಥಿಕ ಉನ್ನತಿಗೆ ಕಾರಣರಾಗಬಹುದು ಎಂಬ ವಿಚಾರವನ್ನು ಈ ಅರಬ್
ರಾಷ್ಟ್ರದ ಮಾದರಿಯ ಹಿನ್ನೆಲೆಯಲ್ಲಿ ಕಲಿಯಬೇಕು. ಸಂಯುಕ್ತ ಅರಬ್ ಸಂಸ್ಥಾನಗಳ ಈ ದೇಶದ ಮತ್ತು ಪಾಶ್ಚಿಮಾತ್ಯದೇಶಗಳ ಹೋಮ್ ಆಫೀಸ್ ಮತ್ತು ವೀಸಾ ನಿಯಮಗಳನ್ನು, ಅರ್ಹತೆ ಮತ್ತು ಹಕ್ಕುಗಳನ್ನು ಹೋಲಿಸಲು ಸಾಧ್ಯವಿಲ್ಲವಾದರೂ ಈ ಮಾಹಿತಿಗಳು ಗಮನಾರ್ಹ. ಪಾಶ್ಚಿಮಾತ್ಯ ದೇಶಗಳಲ್ಲಿ ವಲಸೆ ಎಂಬುದುನ್ನು ನೇತ್ಯಾತ್ಮಕವಾಗಿ ಕಾಣಲಾಗುತ್ತಿದೆ ಮತ್ತು ಅಲ್ಲಿನ ಬಿಳಿಯರು ವಲಸಿಗರನ್ನು ಅನ್ಯರೆಂಬ ಭಾವನೆಯಲ್ಲಿ ಕಂಡು ಅವರು ತಮ್ಮ ದೇಶದ ಸಂಪನ್ಮೂಲಗಳನ್ನು ಕಬಳಿಸುತ್ತಾರೆ, ತಮ್ಮ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಾರೆ ಎಂಬ ಊಹೆಯಲ್ಲಿ ಆತಂಕಗೊಂಡಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ವಲಸೆ ಎಂಬುದು ಜನಾಂಗಭೇಧ (ರೇಸಿಸಂ) ಭಾವನೆಗಳನ್ನು ಮೂಡಿಸಿ ಘರ್ಷಣೆಗೆ ಕಾರಣವಾಗಿದೆ. ಯು.ಕೆ ಯಲ್ಲಿ ಮಧ್ಯ ಪೂರ್ವ ರಾಷ್ಟ್ರಗಳ ಮತ್ತು ಆಫ್ರಿಕಾ ದೇಶಗಳ ಬಡ ನಿರಾಶ್ರಿತರು ಮಿತಿಮೀರಿದ ಸಂಖ್ಯೆಯಲ್ಲಿ ವಲಸೆ ಬಂದಾಗ ಎಲ್ಲರನ್ನೂ ಒಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಬ್ರಿಟನ್ನಿನ ಆತಂಕ ಅರ್ಥವಾಗುವಂತಹುದು. ಆದರೆ ಕಳೆದ ಕೆಲವು ವರ್ಷಗಳ ಹಿಂದೆ ತಮ್ಮದೇ ಸಂಸ್ಕೃತಿಯ, ತಮ್ಮದೇ ಧರ್ಮದ, ತಮ್ಮದೇ ಬಣ್ಣದ ಯೂರೋಪಿನ್ ವಲಸಿಗರ ಯು.ಕೆಗೆ ಉದ್ಯೋಗವನ್ನು ಅರಸಿ ಬರುತ್ತಿರುವಾಗ ಅವರ ಬಗ್ಗೆ ಸಂಶಯಾಸ್ಪದಗಳು ಮೂಡಿ ಅದು ಬ್ರೆಕ್ಸಿಟ್ಟಿಗೆ ಕಾರಣವಾಯಿತು. ಬಹುಶ ಇಂಡಿಯಾ ಮತ್ತು ಇತರ ಉಪ ರಾಷ್ಟ್ರಗಳಿಂದ ಉದ್ಯೋಗ ಅರಸಿ ದುಬೈಗೆ ಬರುವ ವಲಸಿಗರ ಬಗ್ಗೆ ಅರಬ್ಬರಿಗೆ ಸಧ್ಯಕ್ಕೆ ಆ ಆತಂಕವಿಲ್ಲವೆನ್ನಬಹುದು. ಈ ರಾಷ್ಟ್ರಗಳು ಇನ್ನು ಅಭಿವೃದ್ಧಿಗೊಳ್ಳುತ್ತಿವೆ, ಉದ್ಯೋಗ ಅವಕಾಶ ಇನ್ನೂ ಇದೆ, ಮುಂದೆ ಇವರ ನಿಲುವು ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕು.

ದುಬೈ ಮತ್ತು ಇತರ ನಗರಗಳ ಬಹು ಅಂತಸ್ತಿನ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವವರು ಬಹುಪಾಲು ದಕ್ಷಿಣ ಏಷ್ಯಾದಿಂದ ಬಂದ ಬಡ ವಲಸಿಗರು. ಅದರಲ್ಲೂ ಕೇರಳದಿಂದ ಬಂದ ಜನರು ಅಧಿಕ. ಕೇರಳದಲ್ಲಿ ಟ್ರೇಡ್ ಯೂನಿಯನ್ ಗಳು ಬಲವಾಗಿದ್ದು ಅಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳನ್ನು ಚಲಾಯಿಸಿ ಹೆಜ್ಜೆ ಹೆಜ್ಜೆಗೂ ಹರತಾಳವನ್ನು ಕೈಗೊಳ್ಳುತ್ತಾರೆ ಎಂದು ತಿಳಿದಿದ್ದೇನೆ. ಅರಬ್ ರಾಷ್ಟ್ರಗಳಲ್ಲಿ ಈ ಕಾರ್ಮಿಕರಿಗೆ ಯಾವ ಟ್ರೇಡ್ ಯೂನಿಯನ್ ಗಳನ್ನೂ ಕಟ್ಟಿಕೊಳ್ಳುವ ಹಕ್ಕಿಲ್ಲ. ಇವರಲ್ಲಿ ಕೆಲವರು ಶೋಷಣೆಗೆ ಒಳಗಾಗಿದ್ದಾರೆ ಎಂದು ಕೆಲವು ಮಾನವೀಯ ಹಕ್ಕುಗಳ ಸಂಘ ಸಂಸ್ಥೆಗಳು ಅಸಮಾಧಾನವನ್ನು ವ್ಯಕ್ತಪಡಿಸಿವೆ. ಅವರ ಕ್ಷೇಮಾಭಿವೃದ್ಧಿಯನ್ನು ಗಮನಿಸ ಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇಲ್ಲಿ ಹರತಾಳ ಮಾಡುವ ಕಾರ್ಮಿಕರನ್ನು ಡಿಪೊರ್ಟ್ ಮಾಡಲಾಗುತ್ತದೆ. ನನ್ನ ಮಿತವಾದ ಅರಿವಿನಲ್ಲಿ, ಇಲ್ಲಿಯ ಭಾರತೀಯ ಮೂಲದವರೊಡನೆ ಮಾತನಾಡಿದ ಬಳಿಕ ಇಲ್ಲಿ ವಲಸೆ ಬಂದ ಉದ್ದಿಮೆದಾರರು, ವೃತ್ತಿಪರರು, ಕೆಳವರ್ಗದ ಕಾರ್ಮಿಕರು ಎಲ್ಲರೂ ಖುಷಿಯಿಂದ ಇದ್ದಾರೆ ಎಂದೆನಿಸಿತು. ಅವರವರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಇಲ್ಲಿ ಊಟ, ತಿಂಡಿ, ಮನೋರಂಜನೆ ಬಟ್ಟೆ ಬರೆ ದೊರೆಯುತ್ತದೆ. ಸಾರ್ವಜನಿಕ ಸಾರಿಗೆ ಸೌಲಭ್ಯಗಳು ಇನ್ನು ಉತ್ತಮವಾಗಬಹುದು. ದುಬೈ ಮೆಟ್ರೋವನ್ನು ಎಲ್ಲರೂ ಬಳಸುತ್ತಿದ್ದಾರೆ. ದುಬೈ, ಅಬುದಾಬಿ ಮತ್ತು ಇತರ ನಗರಗಳಲ್ಲಿ ಪ್ರಪಂಚದ ಎಲ್ಲರೀತಿ ಊಟ ತಿಂಡಿ ದೊರೆಯುತ್ತದೆ. ಹಲವು ಸಂಸ್ಕೃತಿಗಳು ಕರಗುವ ಕಡಾಯಿ ಅಮೇರಿಕ ಮತ್ತು ಯುರೋಪ್ ನಗರಗಳಷ್ಟೇ ಅಲ್ಲ, ದುಬೈ ಕೂಡ ಅದರಲ್ಲಿ ಒಂದು ಎಂದು ಪರಿಗಣಿಸಬಹುದು. ದುಬೈ ಕ್ರೀಕ್ ಪಕ್ಕದಲ್ಲೇ ಇರುವ ಹಳೇ ಬರ್ ದುಬೈ ಪ್ರದೇಶದಲ್ಲಿರುವ ಮೀನಾ ಬಜಾರನ್ನು ನಾವು ಪ್ರವೇಶಿಸಿದಾಗ ಅಲ್ಲಿ ಕಾಣುವುದು ನಮ್ಮ ಭಾರತದ ಉಡುಪು, ತಿಂಡಿ, ಚಿನ್ನ, ಆಭರಣ, ದಿನ ನಿತ್ಯ ಬಳಕೆ ವಸ್ತು ಇವುಗಳನ್ನು ಮಾರುವ ನೂರಾರು ಅಂಗಡಿಗಳು! ಗ್ರಾಹಕರನ್ನು ಹಲವಾರು ಭಾರತೀಯ ಭಾಷೆಗಳಲ್ಲಿ 'ಬನ್ನಿ ಸಾರ್, ಬನ್ನಿ ಮೇಡಂ; ಪರ್ಸ್ ನೋಡಿ, ವಾಚ್ ನೋಡಿ' ಎಂದು ದುಂಬಾಲು ಬೀಳುವ ವ್ಯಾಪಾರಿಗಳನ್ನು, ಅವರ ಸೇಲ್ಸ್ ಏಜೆಂಟುಗಳನ್ನು ಗಮನಿಸಿದಾಗ ನಾವು ಬೆಂಗಳೂರಿನ ಚಿಕ್ಕಪೇಟೆಯಲ್ಲೋ ಅಥವಾ ಚೆನ್ನಾಯಿನ ಮಾರ್ಕೆಟ್ಟಿನಲ್ಲೊ ಇದ್ದಂತೆ ಅನಿಸುತ್ತದೆ. ಇವುಗಳ ನಡುವೆ ನಮಗೆ ದೊರಕಿದ ಹಲ್ದಿರಾಮ್, ಪೂರಣಮಲ್, ಕೊನೆಗೆ ನಮ್ಮ ದಕ್ಷಿಣ ಭಾರತದ ಸರ್ವಾಣ ಭವನ್ ಖುಷಿ ತಂದಿತು. ಈ ಪ್ರದೇಶವನ್ನು ಬಿಟ್ಟು ಮೆಟ್ರೋ ಹತ್ತಿ ದುಬೈ ಮಾಲ್ ಆಸುಪಾಸನ್ನು ತಲುಪಿದರೆ ಅಲ್ಲಿ ಲೆಕ್ಕವಿಲ್ಲದ ನೂತನ ವಿನ್ಯಾಸದ ಕಟ್ಟಡಗಳು, ನಗರ ಮಧ್ಯದ ಕಾಲುವೆಗಳು, ಕಾರಂಜಿಗಳು, ಥಳ ಥಳಿಸುವ ದೀಪಾಲಂಕಾರಗಳು, ದುಬಾರಿ ಬೆಲೆ ವಸ್ತುಗಳನ್ನು ಮಾರುವ ಹೈ ಎಂಡ್ ಶೋ ರೂಂಗಳು ಕಾಣುತ್ತವೆ. ಇಲ್ಲಿ ಪಾಶ್ಚಿಮಾತ್ಯರು ಅಧಿಕ ಸಂಖ್ಯೆಯಲ್ಲಿ ಕಾಣುತ್ತಾರೆ. ಇವೆಲ್ಲಾ ನೋಡಿದಾಗ ನಾವು ಯೂರೋಪಿನಲ್ಲೋ ಅಥವಾ ಅಮೆರಿಕದಲ್ಲೋ ಇರುವ ಭಾವನೆ ಉಂಟಾಗುತ್ತದೆ. ಹೀಗೆ ದುಬೈ ಏಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ಸೇತುವೆಯಾಗಿ ನಿಂತಿದೆ. ಇಲ್ಲಿ ನೆಲೆಸಿರುವ ಪ್ರಪಂಚದ ಎಲ್ಲ ಜನರು ತಮ್ಮ ತಮ್ಮ ಸಾಂಸ್ಕೃತಿಕ ಪ್ರಜ್ಞೆಗೆ ನಿಲುಕುವ ಈ ನಗರವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇಲ್ಲಿಯ ಎಮಿರಾಟಿಗಳು ಸ್ಥಳೀಯರಾಗಿದ್ದು ಜನಸಂಖ್ಯೆಯಲ್ಲಿ ಅವರೇ ಮೈನಾರಿಟಿಗಳಾಗಿದ್ದರೂ ಸರ್ಕಾರದ ಮತ್ತು ಆಡಳಿತದ ಸ್ಥಾನ ಅವರಿಗಷ್ಟೇ ಮೀಸಲಾಗಿದೆ. ವಲಸೆ ಬಂದವರಿಗೆ ಕೆಲಸಕ್ಕೆ ಹೊಂದುವಂತಹ ವೀಸಾ ಕೊಡಲಾಗುತ್ತದೆ. ವೀಸಾ ಪಡೆದನಂತರ ಸ್ಥಳೀಯ ನೌಕರಿ ನೀಡಿದ್ದ ಸಂಸ್ಥೆ ಒಂದರಿಂದ ಮೂರು ವರ್ಷದ ವರೆಗೆ ರೆಸಿಡೆನ್ಸ್ ಸ್ಟೇಟಸ್ ನೀಡುತ್ತದೆ. ಅದನ್ನು ಮತ್ತೆ ಮತ್ತೆ ವಿಸ್ತರಿಸಬೇಕಾಗುತ್ತದೆ. ಇಲ್ಲಿ ಖಾಯಂ ಆಗಿ ನೆಲೆಸಲು ಸಾಧ್ಯವಿಲ್ಲ. ಬಹುಶ ಈ ಕಾರಣಕ್ಕಾಗಿ ಹೆಚ್ಚಿನ ಜನ ಈ ದೇಶಗಳಿಗೆ ನಿರಾಶ್ರಿತರಾಗಿ ಬರುವುದಿಲ್ಲ. ವಿಶೇಷ ತಜ್ಞರಿಗೆ ೧೦ ವರ್ಷಗಳ ಮಟ್ಟಿಗೆ ರೆಸಿಡೆನ್ಸಿ ದೊರಕಬಹುದು. ನಿವೃತ್ತಿ ನಂತರ ಉದ್ಯೋಗಿಗಳು ತಮ್ಮ ದೇಶಕ್ಕೆ ಮರಳಬೇಕಾಗುತ್ತದೆ. ಇಲ್ಲಿ ಕೆಲವು ಹೊರತುಗಳು ಇರಬಹುದು. ಸ್ಥಳೀಯ ಎಮಿರಾಟಿಗಳಿಗೆ ವಿಶೇಷ ಸೌಲಭ್ಯಗಳಿವೆ. ಹೀಗಾಗಿ ಅರಬ್ಬರು “ಹುಟ್ಟಿದರೇ….ಎಮಿರಾಟಿಗಳಾಗಿ ಹುಟ್ಟಬೇಕು"! ಎಂದು ಹಾಡಬಹುದು.

ಈ ಒಂದು ಹಿನ್ನೆಲೆಯಲ್ಲಿ ಒಂದು ಲಘು ಹಾಸ್ಯ ಪ್ರಸಂಗವನ್ನು ಹಂಚಿಕೊಳ್ಳುತ್ತಿದ್ದನೇ. ನಾವು, ರಮೇಶ್ ಮತ್ತು ಅವರ ಮಿತ್ರರಾದ ಪ್ರತಾಪ್ ಮತ್ತು ವಿಜಯ ಅವರ ಅಬುದಾಬಿ ಮನೆಯಲ್ಲಿ ತಂಗಿದ್ದೆವು. ಒಂದು ಬೆಳಗ್ಗೆ ಉಪಹಾರದ ವೇಳೆಯಲ್ಲಿ ನಾನು ರೆಡಿಯಾಗಿ ಗರಿ ಗರಿಯಾಗಿ ಇಸ್ತ್ರಿಮಾಡಿದ್ದ ಪ್ಯಾಂಟ್, ಶರ್ಟ್ ಮತ್ತು ಥಳ ಥಳಿಸುವ ಶೂ ಕಟ್ಟಿ ಕೆಳಗೆ ಬಂದೆ. ನನ್ನನ್ನು ಗಮನಿಸಿದ ಪ್ರತಾಪ್ ಕೂಡಲೇ "ನೋಡಿ ಪೂರ್ಣಿಮಾ, ಪ್ರಸಾದ್ ಅವರು ಯಂಗ್ ಆಗಿ, ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ, ಅವರಿಗೆ ಇನ್ನೊಂದು ಮಾಡುವೆ ಮಾಡಿಬಿಡಬಹುದು" ಎಂದು ಕೀಟಲೆಯ ಮಾತುಗಳನ್ನಾಡಿದರು. ನಾನು ಕೂಡಲೇ "ಪ್ರತಾಪ್ ನನಗೊಂದು ಎಮಿರಾಟಿ ಹೆಣ್ಣನ್ನು ನೋಡಿ, ನಾನು ಮದುವೆಯಾಗಿ ಅಬುದಾಬಿಯಲ್ಲಿ ಶೇಕ್ ಆಗಿ, ನಿಶ್ಚಿಂತೆಯಾಗಿ, ಖಾಯಂ ಆಗಿ ಇದ್ದು ಬಿಡುತ್ತೇನೆ" ಎಂದೆ. ಅಂದಹಾಗೆ ಎಮಿರಾಟಿ ಹೆಂಗಸರು ಹೊರಗಿನವರನ್ನು ಮದುವೆಯಾಗುವುದು ನಿಷಿದ್ಧ. ಕಾನೂನು ಬಾಹಿರವಾದದ್ದು.

ಇಲ್ಲಿ ಎಮಿರಾಟಿಗಳೇ ಆಗಿರಲಿ ಅಥವಾ ಹೊರಗಿನವರೇ ಆಗಿರಲಿ ಗಂಡು ಹೆಣ್ಣುಗಳು ಬಹಿರಂಗವಾಗಿ ತಮ್ಮ ಪ್ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಇತ್ತೀಚಿಗೆ ಕಾನೂನು ಸ್ವಲ್ಪ ಸಡಿಲಗೊಂಡು ಕೈ ಕೈ ಹಿಡಿಯಬಹುದು. ಹಿಂದೆ ಇಲ್ಲಿ ಬಹಿರಂಗವಾಗಿ ಚುಂಬನದಲ್ಲಿ ತೊಡಗಿದ್ದ ಪಾಶ್ಚಿಮಾತ್ಯ ಗಂಡು ಹೆಣ್ಣು ಜೋಡಿಯನ್ನು ಅಪರಾಧಿಗಳೆಂದು ಪರಿಗಣಿಸಲಾಗಿತ್ತು. ದುಬೈ, ಅಬುದಾಬಿಗೆ ಬರುವ ಪ್ರವಾಸಿಗಳು ಇಲ್ಲಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ನಿಯಮಗಳನ್ನು ಅರಿತುಕೊಳ್ಳುವುದು ಒಳಿತು. ಧಾರ್ಮಿಕ ಸ್ಥಳಗಳನ್ನು ಹೊರತಾಗಿ ಇಸ್ಲಾಂ ಧರ್ಮದ ಹೊರಗಿನ ಗಂಡಸರ ಮತ್ತು ಹೆಂಗಸರ ಉಡುಗೆ ತೊಡುಗೆಗಳ ಬಗ್ಗೆ ಹೆಚ್ಚಿನ ನಿರ್ಬಂಧೆಗಳು ಇಲ್ಲ. ಆದರೂ ಹೆಂಗಸರು ತಮ್ಮ ಉಡುಗೆಯ ಬಗ್ಗೆ, ಸಭ್ಯತೆಯ ಬಗ್ಗೆ, ಗಮನ ನೀಡುವುದು ಒಳಿತು. ಇಲ್ಲಿಯ ನ್ಯಾಯಾಂಗದಲ್ಲಿ ಇಸ್ಲಾಂ ಧರ್ಮದವರಿಗೆ ಮದುವೆ, ವಿವಾಹ ವಿಚ್ಛೇದನೆ, ಅಸ್ತಿ ವಿಸರ್ಜನೆ ಈ ವಿಷಯಗಳಲ್ಲಿ ಷರಿಯಾ ಕಾನೂನು ಅನ್ವಯವಾಗುತ್ತದೆ. ಅನ್ಯ ಧರ್ಮಿಗಳಿಗೆ ಸಿವಿಲ್ ಕಾನೂನು ಅನ್ವಯವಾಗುತ್ತದೆ. ಹಿಂದೆ ಇದ್ದ ಭಯಂಕರ ಉಗ್ರ ಶಿಕ್ಷೆಗಳಾದ ಕೈ ಕಡಿಯುವುದು, ಚಾಟಿ ಏಟು ಮುಂತಾದ ಹಿಂಸಾತ್ಮಕ ಶಿಕ್ಷೆಗಳನ್ನು ರದ್ದುಮಾಡಲಾಗಿದೆ. ನಾಸ್ತಿಕ ವಾದ ಮತ್ತು ಧರ್ಮ ನಿರಪೇಕ್ಷೆ ಒಂದು ಆಯ್ಕೆ ಅಲ್ಲ. ಇಲ್ಲಿ ಅದು ಅಪರಾಧ. ಇಲ್ಲಿ ಹೊರಗಿನವರು ಪರ್ಮಿಟ್ ಇರುವ ನಿಗದಿತ ಬಾರುಗಳಲ್ಲಿ, ಹೋಟೆಲಿನಲ್ಲಿ, ಮನೆಗಳಲ್ಲಿ ಮದ್ಯಪಾನ ಮಾಡಬಹುದು. ಇಲ್ಲಿ ಎಲ್ಲ ದೇಶಗಳ ವಿಸ್ಕಿ, ವೈನ್ ಇತ್ಯಾದಿ ದೊರೆಯುವ ಅಂಗಡಿಗಳು ತೆರೆಯಲ್ಪಟ್ಟಿವೆ. ಇಲ್ಲಿ ವಾರಾಂತ್ಯವನ್ನು ಶುಕ್ರವಾರದ ಬದಲಿಗೆ ಪ್ರಪಂಚದ ಇತರ ದೇಶಗಳ ಅಂತರರಾಷ್ಟ್ರೀಯ ಕೆಲಸ ಕಾರ್ಯಗಳಿಗೆ ಹೊಂದುವಂತೆ ಶನಿವಾರ ಮತ್ತು ಭಾನುವಾರ ರಜಾದಿನಗಳಾಗಿ ಬದಲಾಯಿಸಲಾಗಿದೆ. ಇಸ್ಲಾಂ ಧರ್ಮಾದವರಿಗೆ ಶುಕ್ರವಾರ ಪ್ರಾರ್ಥನೆ ಮಾಡಲು ಅನುವು ಮಾಡಿಕೊಡಲಾಗಿದೆ. ನಿಧಾನವಾಗಿ ಹೊರಗಿನ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಾ ಒಂದು ಹದವಾದ ಹತೋಟಿಯಲ್ಲಿ ಈ ರಾಷ್ಟ್ರ ಬದಲಾಗುತ್ತಿದೆ.

ನಾನು ಪ್ರವಾಸ ಮಾಡುವ ಸಂದರ್ಭದಲ್ಲಿ ಭಾರತದ ಪ್ರಧಾನಿ ಮೋದಿ ಅವರು ಆಗಮಿಸಿ ಅಬುದಾಬಿಯ ಹಿಂದೂ ದೇವಾಲಯದ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದರು ಎಂದು ಸುದ್ದಿವಾಹಿನಿಯಿಂದ ತಿಳಿದೆ. ಇಸ್ಲಾಂ ಧರ್ಮದ ಕಟ್ಟು ನಿಟ್ಟುಗಳ ಮಧ್ಯೆ ಸಂಯುಕ್ತ ಅರಬ್ ರಾಷ್ಟ್ರದಲ್ಲಿ (UAE) ಪ್ರಸಕ್ತ ಭಾರತಕ್ಕಿಂತ ಹೆಚ್ಚು ಧಾರ್ಮಿಕ ಸಹಿಷ್ಣುತೆ ಇದೆಯೆಂದು ಅರಿತ್ತಿದ್ದೇನೆ. ಇಲ್ಲಿ ಮಸೀದಿ, ಮಂದಿರ ಮತ್ತು ಚರ್ಚುಗಳು ಒಂದರ ಪಕ್ಕ ಇನ್ನೊಂದಿದ್ದು ಜನ ಧಾರ್ಮಿಕ ಸೌಹಾರ್ದತೆಯನ್ನು ಉಳಿಸಿಕೊಂಡಿದ್ದಾರೆ, ಎಲ್ಲರಿಗೂ ಅವರವರ ಧಾರ್ಮಿಕ ನಂಬಿಕೆಗಳ ಜೊತೆ ಅನ್ಯ ಧರ್ಮದವರ ಬಗ್ಗೆ ಗೌರವವಿದೆ ಎಂದು ನಮನ್ನು ದುಬೈ ನಗರದಿಂದ ಅಲೈನ್ ನಗರಕ್ಕೆ ಕರೆತಂದ ಪಾಕಿಸ್ತಾನದ ಪೇಶಾವರ್ ಮೂಲದ ಪಠಾಣ್ ಖಾನ್ ಎಂಬ ಟ್ಯಾಕ್ಸಿ ಡ್ರೈವರ್ ಮೂಲಕ ತಿಳಿಯಿತು. ಈತನಿಗೆ ಭಾರತೀಯ ಮೂಲದ ಜನರ ಬಗ್ಗೆ ಸ್ನೇಹ ವಿಶ್ವಾಸ ಗೌರವಗಳಿರುವುದನ್ನು ಕಂಡು ಸಂತೋಷವಾಯಿತು. ಇಂದಿನ ಭಾರತದಲ್ಲಿ ಧರ್ಮವೆಂಬ ಅಮಲಿನಲ್ಲಿ ನಾವು ಹಿಂದೂ ಅಲ್ಲದವರನ್ನು, ಅದರಲ್ಲೂ ಇಸ್ಲಾಂ ಧರ್ಮದವರನ್ನು ಹೀಯಾಳಿಸಿ ಎರಡನೇದರ್ಜೆ ಪ್ರಜೆಗಳಂತೆ ಕಾಣುತ್ತಿರುವ ಪರಿಸ್ಥಿತಿಯಲ್ಲಿ ಪಠಾಣ್ ಖಾನ್ ಒಬ್ಬ ಆಪ್ತನಾಗಿ ಕಂಡುಬಂದ. ಅವನು ತನ್ನ ಪಾಕಿಸ್ತಾನದ ರಾಜಕೀಯ ಹುಳುಕುಗಳನ್ನು, ಅಲ್ಲಿಯ ಅಸಮರ್ಥ ಆಡಳಿತವನ್ನು ಮತ್ತು ತನ್ನ ಸ್ವಂತ ಕಷ್ಟಗಳನ್ನು ನಮ್ಮೊಂದಿಗೆ ಹಂಚಿಕೊಂಡ. “ಹಿಂದೊಮ್ಮೆ ನಾವು ಒಂದೇ ಅವಿಭಾಜ್ಯ ದೇಶದ ಪ್ರಜೆಗಳಾಗಿದ್ದೆವು, ವೈಯುಕ್ತಿಕ ನೆಲೆಯಲ್ಲಿ ನಾವೆಲ್ಲಾ ಮಿತ್ರರೇ ಆಗಿದ್ದರೂ, ಎರಡೂ ದೇಶಗಳ ರಾಜಕಾರಣ ನಮ್ಮನ್ನು ದೂರವಾಗಿಸಿದೆ” ಎಂದು ವ್ಯಥೆ ಪಟ್ಟ. ಅವನ ಪ್ರಾಮಾಣಿಕ ಅನಿಸಿಕೆಗಳನ್ನು ನಾವು ಒಪ್ಪಿಕೊಂಡೆವು. ಒಂದು ದೇಶದ ಒಳಗೇ ಬದುಕುತ್ತಿರುವಾಗ ಒಂದು ಸಂಕುಚಿತ ಐಡಿಯಾಲಾಜಿಗೆ ಬದ್ಧರಾಗಿ, ನಮ್ಮ ಆಲೋಚನಾಕ್ರಮಗಳ ಆಚೆಗೆ ನಾವು ವಿಚಾರ ಮಾಡುವುದಿಲ್ಲ. ನಮಗೆ ತಿಳಿದದ್ದೇ ಸರಿ, ಎಲ್ಲರು ಹೇಳುತ್ತಿರುವುದು ಸರಿ ಎಂದು ಕುರಿಯ ಮಂದೆಯ ಹಾಗೆ ಪರಿಣಾಮಗಳನ್ನು ಚಿಂತಿಸದೆ ಅನುಸರಿಸುತ್ತೇವೆ. ದೇಶ, ಗಡಿ ಸಂಸ್ಕೃತಿಗಳನ್ನು ದಾಟಿ ಹೊಸ ದಿಂಗಂತದಲ್ಲಿ ಕಾಲಿಟ್ಟಾಗ ಹಳೇ ಬ್ಯಾಗೇಜುಗಳಾದ ದೇಶಭಕ್ತಿ, ದೇಶಪ್ರೇಮಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡು ಅಲ್ಲಿ ವಿಶ್ವ ಮಾನವ ಪ್ರಜ್ಞೆ ಉಂಟಾಗುತ್ತದೆ. ಈ ವಿಚಾರವನ್ನು ಅರಿಯಲು ದೇಶದ ಹೊರಗೇನು ಕಾಲಿಡಬೇಕಾಗಿಲ್ಲ. ಒಂದು ಬಹುಮುಖಿ ಸಂಸ್ಕೃತಿಯಲ್ಲಿ ಬದುಕುವವರಿಗೆ ಹೊಳೆಯಬೇಕು. ಕೆಲವರಿಗೆ ಈ ವಿಚಾರಗಳು ಸುಲಭದಲ್ಲಿ ಹೊಳೆಯುತ್ತವೆ, ಕೆಲವರಿಗೆ ಹೊಳೆಯುವುದಿಲ್ಲ. ಮುಸ್ಲಿಂ ಧರ್ಮಾಂದತೆ, ಐಸಿಸ್ ಭಯೋತ್ಪಾದನೆ, ಹಿಂದೂಗಳ ಹಿಂದುತ್ವ ವಾದ, ಜಾತಿವಾದ, ಬಿಳಿಯರ ರೇಸಿಸಂ ಹೀಗೆ ಒಂದೊಂದು ಐಡಿಯಾಲಜಿಯ ಆಳಕ್ಕೆ ಇಳಿದವರನ್ನು ಕಂಡಾಗ ಒಂದು ಉಕ್ತಿ ನೆನಪಾಗುತ್ತದೆ ಅದು ಹೀಗಿದೆ; "ಭಾವಿಯ ಒಳಗೇ ಇರುವ ಕಪ್ಪೆಗಳಿಗೆ ಸಾಗರದ ವಿಸ್ತಾರವನ್ನು ತೋರಿಸುವುದಾದರೂ ಹೇಗೆ?"

ಅಂದಹಾಗೆ ಅರಬ್ ಸಂಯುಕ್ತ ರಾಷ್ಟ್ರವು ವಾಸಿಸಲು ಯೋಗ್ಯಸ್ಥಳವಾಗಿ ಇಲ್ಲಿ ಹಲವಾರು ಉದ್ಯೋಗ ಅವಕಾಶಗಳು ಇರುವಾಗ ಮಧ್ಯಪೂರ್ವ ದೇಶಗಳಾದ ಸಿರಿಯಾ, ಲಿಬಿಯಾ, ಇರಾಕ್ ಮುಂತಾದ ದೇಶಗಳಲ್ಲಿ ಯುದ್ಧಗಳಾಗಿ ಸ್ಥಳಾಂತರಗೊಂಡ ನಿರಾಶ್ರಿತರಿಗೆ ಈ ಶ್ರೀಮಂತ ಅರಬ್ ರಾಷ್ಟ್ರಗಳು ಏಕೆ ಆಶ್ರಯ ನೀಡುತ್ತಿಲ್ಲ? ಅವರು ಇಸ್ಲಾಂ ಧರ್ಮದವರಲ್ಲವೇ? ದೂರದಲ್ಲಿರುವ ಮತ್ತು ಭಿನ್ನ ಸಂಸ್ಕೃತಿಯುಳ್ಳ ಅಮೇರಿಕ, ಯು.ಕೆ, ಯುರೋಪ್ ದೇಶಗಳಿಗೆ ಏಕೆ ಈ ನಿರಾಶ್ರಿತರು ಲಗ್ಗೆ ಇಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಅರಬ್ ರಾಷ್ಟ್ರಗಳಿಗೂ ಸಾಮಾಜಿಕ ಜವಾಬ್ದಾರಿಗಳು ಇರಬೇಕಲ್ಲವೇ?

ಸಂಯುಕ್ತ ಅರಬ್ ಸಂಸ್ಥಾನಗಳ ಈ ರಾಷ್ಟ್ರವು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಅಧಿಕವಾದ ಅನಿಲ ಮತ್ತು ತೈಲ ಸಂಪನ್ಮೂಲಗಳನ್ನು ಒಳಗೊಂಡು ಅದನ್ನು ಸರಿಯಾಗಿ ವ್ಯವಸ್ಥಿತವಾಗಿ ಬಳಸಿ, ದಕ್ಷ ಆಡಳಿತವನ್ನು ನೀಡುತ್ತಾ ಬಂದಿದೆ. ಈ ಸಂಯುಕ್ತ ಅರಬ್ ರಾಷ್ಟ ಇಷ್ಟರ ಮಟ್ಟಿಗೆ ಬೆಳೆಯಲು ನೈಸರ್ಗಿಕ ಸಂಪನ್ಮೂಲಗಳಷ್ಟೇ ಕಾರಣವಲ್ಲ. ಇಲ್ಲಿ ಸ್ಥಿರವಾದ ರಾಜಕಾರಣವಿದೆ, ನಾಯಕತ್ವವಿದೆ. ಅಬುದಾಬಿಯ ರಾಜರು ಈ ಸಂಯುಕ್ತ ದೇಶದ ಅಧ್ಯಕ್ಷರು. ದುಬೈ ರಾಜ ಇಲ್ಲಿಯ ಪ್ರಧಾನಿ. ಅಬುದಾಬಿ ಈ ರಾಷ್ಟ್ರದ ರಾಜಧಾನಿ. ಇಲ್ಲಿಯಾ ಫೆಡರಲ್ ನ್ಯಾಷನಲ್ ಕೌನ್ಸಿಲ್ ಆಡಳಿತ ನಡೆಸುತ್ತದೆ. ೫೦% ಸದಸ್ಯರನ್ನು ನೇಮಕ ಮಾಡಲಾಗುತ್ತದೆ, ಉಳಿದರ್ಧ ಸದಸ್ಯರನ್ನು ಚುನಾಯಿಸಲಾಗುತ್ತದೆ. ಕೆಲವು ಮಧ್ಯಪೂರ್ವ ರಾಷ್ಟ್ರಗಳಲ್ಲಿ ಅರಬ್ ಸ್ಪ್ರಿಂಗ್ ಎಂಬ ಸರಕಾರದ ವಿರುದ್ಧ ನಡೆದ ಚಳುವಳಿ ಮತ್ತು ಪ್ರತಿಭಟನೆ ಈ ಅರಬ್ ಸಂಯುಕ್ತ ರಾಷ್ಟ್ರದಲ್ಲಿ ನಡೆದಿಲ್ಲ ಎಂಬುದನ್ನು ಗಮನಿಸಬೇಕು. ಇದಕ್ಕೆ ಕಾರಣವೆಂದರೆ ಇಲ್ಲಿರುವ ಹೆಚ್ಚಿನ ನಿವಾಸಿಗಳಲ್ಲಾ ಹೊರಗಿನವರೇ, ಅವರಿಗೆ ಪ್ರತಿಭಟಿಸುವ ಹಕ್ಕಿಲ್ಲ. ಪ್ರತಿಭಟಿಸಿದರೆ ಎಮಿರಾಟಿಗಳೇ ಪ್ರತಿಭಟಿಸಬೇಕು. ಎಮಿರಾಟಿ ಸಮುದಾಯದ ಕೆಲವರು ಪ್ರಭುತ್ವವನ್ನು ಪ್ರಶ್ನಿಸಿರುವ ಪ್ರಸಂಗಗಳಿವೆ, ಅದನ್ನು ಹತ್ತಿಕ್ಕಿ ಹತೋಟಿಯಲ್ಲಿಡಲಾಗಿದೆ. ಅನಿಲ ಮತ್ತು ತೈಲ ಸಂಪನ್ಮೂಲಗಳು ಶಾಶ್ವತವಲ್ಲ. ಮೇಲಾಗಿ ವಿಶ್ವದಲ್ಲೇ ಫಾಸ್ಸಿಲ್ ಇಂಧನ ಬಳಕೆ ಕಡಿಮೆ ಮಾಡಿ ಜಾಗತಿಕ ತಾಪಮಾನವನ್ನು ಹತೋಟಿಯಲ್ಲಿ ಇಡಲು ನಿರ್ಬಂಧನೆಗಳು ಮೂಡುತ್ತಿವೆ. ಈ ಹಿನ್ನಲೆಯಲ್ಲಿ ಅರಬ್ ಸಂಯುಕ್ತ ರಾಷ್ಟ್ರವು ಪ್ರವಾಸೋದ್ಯಮ, ವಿಮಾನ ಸಾರಿಗೆ, ಟೆಕ್ ಕಂಪನಿಗಳ ಉದ್ಯಮ, ಕೃಷಿ ಮತ್ತು ಇನ್ನಿತರ ಆದಾಯಗಳ ಕಡೆ ಗಮನ ಹರಿಸಬೇಕಾಗಿದೆ. ಹೊಸ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಬೇಕಾಗಿದೆ, ಇವುಗಳ ನಡುವೆ ಮಾನವೀಯ ಹಕ್ಕುಗಳನ್ನು, ಇಸ್ಲಾಂ ಧರ್ಮದ ಕಟ್ಟು ನಿಟ್ಟುಗಳನ್ನು, ಜಾಗತೀಕರಣ ತರುವ ಬದಲಾವಣೆಗಳನ್ನು, ಮತ್ತು ಇತರ ಸವಲಗಳನ್ನು ಎದುರಿಸಬೇಕಾಗಿದೆ. ಉದಾರವಾದ ನೀತಿಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ. 'ಪರಿವರ್ತನೆ ಜಗದ ನಿಯಮ' ಎಂಬ ವಿಚಾರ ಅರಬ್ಬರನ್ನೂ ತಟ್ಟುತ್ತಿದೆ.

***






ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು (UAE)

ಡಾ. ಜಿ. ಎಸ್. ಶಿವಪ್ರಸಾದ್  

ಕಳೆದ ಕೆಲವು ವಾರಗಳ ಹಿಂದೆ ನಾನು ಸಂಯುಕ್ತ ಅರಬ್ ಸಂಸ್ಥಾನಗಳ ರಾಷ್ಟ್ರದಲ್ಲಿ (UAE) ಪ್ರವಾಸ ಕೈಗೊಂಡಿದ್ದು ಅದರ ಬಗ್ಗೆ ಬರೆದಿರುವ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದು ಪ್ರವಾಸ ಕಥನ ಅನ್ನುವುದಕ್ಕಿಂದಂತ ಒಂದು ವೈಚಾರಿಕ ಲೇಖನವೆಂದು ನಾನು ಭಾವಿಸುತ್ತೇನೆ. ನಾವು ವೀಕ್ಷಸಿದ ಜನಪ್ರೀಯ ಪ್ರೇಕ್ಷಣೀಯ ತಾಣಗಳನ್ನು, ಅಲ್ಲಿಯ ನಿಸರ್ಗ ಸೌಂದರ್ಯವನ್ನು ಮತ್ತು ಅಲ್ಲಿ ನಮಗಾದ ಅನುಭವಗಳನ್ನು ಚಿತ್ರಗಳ ಜೊತೆ ಓದುಗರೊಂದಿಗೆ ಬರಹದಲ್ಲಿ ಹಂಚಿಕೊಂಡಾಗ ಅದು ಪ್ರವಾಸ ಕಥನವಾಗುತ್ತದೆ.  ಆದರೆ ಈ ನನ್ನ ಬರಹದಲ್ಲಿ ಹೆಚ್ಚಾಗಿ ನಾನು ಪ್ರವಾಸ ಮಾಡಿದ ದೇಶದ ಇತಿಹಾಸ, ಜನ ಜೀವನ ಮತ್ತು ಸಂಸ್ಕೃತಿಗಳ ಬಗ್ಗೆ ಪರಿಚಯಮಾಡಿಕೊಟ್ಟು ಅದರೊಡನೆ ನನ್ನ ಸ್ವಂತ ಅನಿಸಿಕೆಗಳನ್ನು ಬೆರೆಸಿ ಆದಷ್ಟು ವಿಮರ್ಶಾತ್ಮಕವಾದ ಲೇಖನವಾಗಿ ಪ್ರಸ್ತುತಿ ಪಡಿಸುವುದು ನನ್ನ ಉದ್ದೇಶವಾಗಿದೆ. ಇಲ್ಲಿ ಸ್ವಲ್ಪಮಟ್ಟಿಗೆ ಪ್ರವಾಸ ಕಥನ ಸೇರಿಕೊಂಡಿರುವುದು ಅನಿವಾರ್ಯವಾಗಿದೆ. ಈ ಬರಹವು ಹಲವಾರು ವಿಚಾರವನ್ನು ಒಳಗೊಂಡು ದೀರ್ಘ ಬರಹವಾದದ್ದರಿಂದ ಇದನ್ನು ಎರಡು ಕಂತುಗಳಲ್ಲಿ ಪ್ರಕಟಪಡಿಸಲಾಗಿದೆ. 
'ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು ಭಾಗ ೧' ಎಂಬ ಈ ಬರಹವನ್ನು ಓದಿ ಮತ್ತು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

- ಸಂ
ಮೂರು  ದಶಕಗಳ ಹಿಂದೆ ಅರಬ್ ಸಂಸ್ಥಾನಗಳೆಂದರೆ ಅಲ್ಲೇನಿದೆ ? ಬರೇ ಮರುಭೂಮಿ, ಒಂಟೆಗಳು ಮತ್ತು ನೆಲೆಯಿಲ್ಲದ ಅಲೆಮಾರಿ ಬೆಡೊವಿನ್ ಅರಬ್ಬರು ಎಂಬ ಕಲ್ಪನೆಗಳಿತ್ತು. ಅಲ್ಲಿಯ ಜನ ಜೀವನದ ಬಗ್ಗೆ, ಕಟುವಾದ ಕೈಕಾಲು ತುಂಡುಮಾಡುವ, ಚಾಟಿ ಏಟು ನೀಡುವ, ಕಲ್ಲಿನಲ್ಲಿ ಹೊಡೆದು ಸಾಯಿಸುವ ಟ್ರೈಬಲ್ ಶಿಕ್ಷೆಗಳ ಬಗ್ಗೆ ಅಂಜಿಕೆಗಳಿತ್ತು. ಪಾಶ್ಚಿಮಾತ್ಯರ ದೃಷ್ಟಿಯಲ್ಲಿ ಇಂಡಿಯಾ ಎಂದರೆ ಭಿಕ್ಷುಕರು, ಬೀದಿಯಲ್ಲಿ ದನಗಳು, ಹಾವಾಡಿಗರು, ಧೂಳು, ಕೊಳಕು ಎಂಬ ಕಲ್ಪನೆಗಳು ಇದ್ದಂತೆ! ಹಿಂದೆ ಅರಬ್ ರಾಷ್ಟ್ರಗಳೆಂದರೆ ಯಾವಾಗಲು ಜಗಳವಾಡಿಕೊಂಡಿದ್ದ ಇರಾನ್, ಇರಾಕ್ ಅಥವಾ ಶ್ರೀಮಂತ ದೇಶವಾದ ಸೌದಿ ಅಷ್ಟೇ ನಮಗೆ ತಿಳಿದಿತ್ತು.  ದುಬೈ ಅಬುದಾಬಿ ಎಂಬ ನಗರಗಳನ್ನು ಕೇಳಿರಲಿಲ್ಲ. ನನ್ನ ಈ ಬರಹದಲ್ಲಿ ಮುಖ್ಯ ವಿಷಯ ವಸ್ತುವಾದ ಸಂಯುಕ್ತ ಅರಬ್ ಸಂಸ್ಥಾನಗಳ 
ಈ ರಾಷ್ಟ್ರದ (United Arab Emirates: UAE) ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ. ಏಕೆಂದರೆ ಈ ದೇಶವು ಅಸ್ತಿತ್ವಕ್ಕೆ ಬಂದದ್ದು ೧೯೭೧ ರಲ್ಲಿ. ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದಾಗ ಇದು ಇನ್ನು ಕಣ್ತೆರೆಯುತ್ತಿರುವ ರಾಷ್ಟ್ರ. ಹಿಂದೆ ಈ ಪ್ರದೇಶವು ಸ್ಥಳೀಯ ಸಣ್ಣ-ಪುಟ್ಟ ರಾಜಮನತನದ ಸ್ವಾಧೀನದಲ್ಲಿದ್ದು ಕಿಂಗ್ಡಮ್ ಅಥವಾ ಶೇಕ್ ಡಾಮ್ ಆಗಿತ್ತು. ಸುಮಾರು ೫೦೦ ವರ್ಷಗಳ ಹಿಂದೆ ಈ ಪ್ರದೇಶವು ಪೋರ್ಚುಗೀಸರ ಆಡಳಿತಕ್ಕೆ ಒಳಪಟ್ಟಿತ್ತು. ಹಿಂದೆ ಸಾಗರದಡಿಯ ಪರ್ಲ್(ಮುತ್ತು) ಟ್ರೇಡಿಂಗ್ ಇಲ್ಲಿಯ ಮುಖ್ಯ ವಾಣಿಜ್ಯ ವ್ಯಾಪಾರವಾಗಿ ಆದಾಯವನ್ನು ತರುತ್ತಿತ್ತು. ಪರ್ಷಿಯನ್ ಗಲ್ಫ್ ಅಂಚಿನ ಇಲ್ಲಿಯ ಜನರು, ವ್ಯಾಪಾರಿಗಳು, ಕಡಲ್ಗಳ್ಳರು ಆಗಾಗ್ಗೆ ಸಂಘರ್ಷಣೆಯಲ್ಲಿ ತೊಡಗಿದ್ದು ಅಶಾಂತಿ ನೆಲೆಸಿತ್ತು. ಪೋರ್ಚುಗೀಸರು ಇಲ್ಲಿಯ ಲಾಭದಾಯಕ ಅವಕಾಶವನ್ನು ಗ್ರಹಿಸಿ, ಆಕ್ರಮಿಸಿ ಕೋಟೆಗಳನ್ನು ಕಟ್ಟಿದರು, ದಬ್ಬಾಳಿಕೆಯಲ್ಲಿ ತೆರೆಗೆ ವಿಧಿಸಲು ಶುರುಮಾಡಿದರು. ನಂತರದ ಕೆಲವು ವರುಷಗಳಲ್ಲಿ ಅರಬ್ಬರ ಒಳಜಗಳವನ್ನು ಬಗೆಹರಿಸಲು ಮತ್ತು ಆಶ್ರಯ ನೀಡಲು ಬ್ರಿಟಿಷರು ಮುಂದಾದರು, ಕಾದಾಡುತ್ತಿರುವ ಅರಬ್ಬರಲ್ಲಿ ಶಾಂತಿಯ ಒಪ್ಪಂದಗಳನ್ನು ತಂದು ಈ ಪ್ರದೇಶಗಳಲ್ಲಿ ಸ್ಥಿರತೆಯನ್ನು ತಂದುಕೊಟ್ಟರು.

೧೯೩೦ರಲ್ಲಿ ಈ ನಾಡಿನಲ್ಲಿ ಅನಿಲ ಮತ್ತು ತೈಲ ಸಂಪನ್ಮೂಲಗಳಿವೆಯೆಂದೇ ತಿಳಿದುಬಂತು. ಇದು ಅರಬ್ಬರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಅಂದಹಾಗೆ ಈ ಪ್ರದೇಶವು ಅನಾದಿಕಾಲದಿಂದಲೂ ಪೂರ್ವ ಮತ್ತು ಪಶ್ಚಿಮ ವಾಣಿಜ್ಯಗಳು ಸಂಧಿಸುವ ತಾಣವಾಗಿತ್ತು. ಭೌಗೋಳಿಕವಾಗಿ ವಾಣಿಜ್ಯ ದೃಷ್ಟಿಯಿಂದ ಅನುಕೂಲಕರವಾಗಿತ್ತು. ಬ್ರಿಟಿಷ್ ಸಂಸ್ಥೆಗಳಿಗೆ ಇಲ್ಲಿಯ ತೈಲ ಅನಿಲ ನಿರ್ವಾಹಣ ಪರ್ಮಿಟ್ ಗಳನ್ನು ಕೊಟ್ಟಿದ್ದು ೬೦ರ ದಶಕದಲ್ಲಿ ಅಮೇರಿಕ ಕಂಪನಿಗಳು ನಿಧಾನಕ್ಕೆ ಆ ಕಂಟ್ರಾಕ್ಟುಗಳನ್ನು ಪಡೆದವು. ೧೯೬೮ರ ಸಮಯದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಈ ಶೇಕ್ ರಾಜ್ಯಗಳಿಗೆ ರಕ್ಷಣೆ ಮತ್ತು ಆಶ್ರಯ ಒದಗಿಸುವುದು ಕಷ್ಟವಾಗತೊಡಗಿತು. ತಾವು ನೀಡುತ್ತಿದ್ದ ಆಶ್ರಯವನ್ನು ರದ್ದುಪಡಿಸಿ, ಅಲ್ಲಿಯ ರಕ್ಷಣಾ ವ್ಯವಸ್ಥೆಯನ್ನು, ಒಪ್ಪಂದವನ್ನು ಕೊನೆಗಾಣಿಸುವ ನಿರ್ಧಾರವನ್ನು ಅಂದಿನ ಪ್ರಧಾನಿ ಹೆರಾಲ್ಡ್ ವಿಲ್ಸನ್ ಬಹಿರಂಗಪಡಿಸಿದರು. ಅನಿಲ ತೈಲ ಸಂಪನ್ಮೂಲಗಳನ್ನು ಹೊಂದಿರುವ ಈ ರಾಷ್ಟ್ರಗಳ ನಾಯಕರು ತಮ್ಮ ಮುಂದಿರುವ ಉಜ್ವಲ ಭವಿಷ್ಯವನ್ನು ಮತ್ತು ಸಾಧ್ಯತೆಗಳನ್ನು ಕಂಡುಕೊಂಡು ೧ನೇ ಡಿಸೆಂಬರ್ ೧೯೭೧ ರಲ್ಲಿ ಸಂಯುಕ್ತ ಅರಬ್ ಸಂಸ್ಥಾನಗಳಾದ ಈ ರಾಷ್ಟ್ರವನ್ನು (UAE) ಹುಟ್ಟುಹಾಕಿದರು. ಹಿಂದೆ ಈ ಒಕ್ಕೂಟವನ್ನು ಸೇರಬೇಕಾಗಿದ್ದ ಕತಾರ್ ಮತ್ತು ಬಹರೈನ್ ದೇಶಗಳು ತಮ್ಮದೇ ಆದ ಸ್ವಾತಂತ್ರ್ಯವನ್ನು ಪಡೆದುಕೊಂಡವು. ಈ ಸಂಯುಕ್ತ ಅರಬ್ ಸಂಸ್ಥಾನಗಳ ಈ ರಾಷ್ಟ್ರದಲ್ಲಿ ಅಬುದಾಬಿ, ದುಬೈ, ಶಾರ್ಜಾ, ಅಜ್ಮಾನ್, ಫುಜೈರ, ಉಮ್ ಅಲ ಕ್ಯೋವೆನ್, ಮತ್ತು ರಾಸ್ ಎಲ್ ಕೈಮ ಎಂಬ ಏಳು ರಾಜಮನೆತನಗಳು ಸೇರಿಕೊಂಡವು. ಅಬುದಾಬಿಯ ರಾಜರಾಗಿದ್ದ ಶೇಕ್ ಜಾಯೀದ್ ಬಿನ್ ಸುಲ್ತಾನ್ ಅಲ ನಹ್ಯಾನ್ ಅವರು ಈ ಸಂಯುಕ್ತ ಅರಬ್ ರಾಷ್ಟ್ರವನ್ನು ಹುಟ್ಟುಹಾಕುವಲ್ಲಿ ನೇತಾರರಾಗಿದ್ದು ಈ ರಾಷ್ಟ್ರದ ಮೊದಲ ಅಧ್ಯಕ್ಷರಾಗಿದ್ದರು. ದುಬೈ ಮತ್ತಿತರ ನಗರಗಳ ಮುಖ್ಯ ರಸ್ತೆಗಳಿಗೆ ಮತ್ತು ಅಬುದಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಟ್ಟು ಗೌರವಿಸಲಾಗಿದೆ. ಹಿಂದೆ ಒಂದು ನೆಲೆಯಲ್ಲಿ ನಿಲ್ಲದೆ, ಅಲೆಮಾರಿ ಬುಡಕಟ್ಟಿನ ಜನಾಂಗದವರಾಗಿ, ಜಂಗಮರಾಗಿದ್ದ ಈ ಜನ ತಮ್ಮ ತೈಲ ಅನಿಲ ಸಂಪನ್ಮೂಲಗಳಿಂದ ಶ್ರೀಮಂತರಾಗಿ ಒಂದು ಮರುಭೂಮಿ ಪ್ರದೇಶವನ್ನು ಕಂಗೊಳಿಸುವ ನೂತನ ನಗರಗಳಾಗಿ, ಸಮುದ್ರದನೀರನ್ನು ಸಿಹಿನೀರಾಗಿ ಪರಿವರ್ತಿಸಿ ಹಸಿರುಮೂಡಿಸಿದ್ದಾರೆ. ಸಂಪನ್ಮೂಲಗಳಿಂದ ಬಂದ ಹಣದಲ್ಲಿ ರಸ್ತೆ, ಆಸ್ಪತ್ರೆ, ಶಾಲಾ ಕಾಲೇಜು ಮತ್ತು ಇತರ ಸಾರ್ವಜನಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ದೇಶವನ್ನು ಕಟ್ಟಿದ್ದಾರೆ. ತೈಲದಿಂದ ಬರುವ ಆದಾಯವನ್ನು ಹೊರತಾಗಿ ಮಲ್ಟಿ ನ್ಯಾಷನಲ್ ವಾಣಿಜ್ಯ ಸಂಸ್ಥೆಗಳಿಗೆ, ಖಾಸಗಿ ಉದ್ದಿಮೆದಾರರಿಗೆ ಕಂಪನಿಗಳನ್ನು ಹೂಡಲು ಅವಕಾಶವನ್ನು ಕಲ್ಪಿಸಿ ವಾಣಿಜ್ಯ ವ್ಯವಹಾರಗಳು ಸುಗಮವಾಗಿ ಸಾಗಿವೆ. ಇತ್ತೀಚಿನ ವರುಷಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಿ ಅದರಿಂದ ಈ ದೇಶಕಕ್ಕೆ ಸಾಕಷ್ಟು ಆದಾಯ ಬರುತ್ತಿದೆ. ಇಲ್ಲಿ ಹಣಹೂಡಿದವರಿಗೆ ತೆರಿಗೆಯಿಂದ ಸ್ವಲ್ಪಮಟ್ಟಿಗೆ ಮುಕ್ತಿಯಿದೆ. ಹಣ, ಉದ್ಯೋಗ ಅವಕಾಶ, ರಾಜಕೀಯ ಸ್ಥಿರತೆ, ದೂರದೃಷ್ಟಿ, ಇಲ್ಲಿಯ ಸರ್ವತೋಮುಖ ಬೆಳವಣಿಗೆಗೆ, ಅಭಿವೃದ್ಧಿಗೆ ಕಾರಣವಾಗಿದೆ.

ನನಗೆ ಈ ಸಂಯುಕ್ತ ಅರಬ್ ರಾಷ್ಟ್ರದ ಪರಿಚಯವಾದದ್ದು ನಾನು ಇಂಗ್ಲೆಂಡಿನಿಂದ ಇಂಡಿಯಾಗೆ ಹೋಗಿ ಬರಲು ಬಳಸುತ್ತಿದ್ದ ಎಮಿರೇಟ್ಸ್, ಎತಿಹಾಡ್ ವಿಮಾನ ಕಂಪನಿಗಳಿಂದ. ಬೆಂಗಳೂರಿಗೆ ಹೋಗುವ ಮಾರ್ಗದಲ್ಲೇ ಅನಾಯಾಸವಾಗಿ ಮೂರು ದಿವಸಗಳ ಮಟ್ಟಿಗೆ ಪ್ರಯಾಣದಲ್ಲಿ ಬ್ರೇಕ್ ಪಡೆದು ಎರಡು ಬಾರಿ ದುಬೈ ನಗರವನ್ನು ವೀಕ್ಷಿಸಿ ಬೆರಗಾಗಿದ್ದೆ. ಅಷ್ಟೇ ಅಲ್ಲದೆ ಇಲ್ಲಿಯ ಅದ್ವಿತೀಯ ಮನುಷ್ಯ ಪ್ರಯತ್ನಗಳನ್ನು ಮೆಚ್ಚಿಕೊಂಡು ಮುಂದೊಮ್ಮೆ ಧೀರ್ಘ ಪ್ರವಾಸದಲ್ಲಿ ಇಲ್ಲಿಯ ಇತರ ನಗರಗಳನ್ನು ಒಳನಾಡ ಪ್ರದೇಶಗಳನ್ನು ವೀಕ್ಷಸಬೇಕೆಂಬ ಹಂಬಲ ಮೂಡಿಬಂತು. ಇದಕ್ಕೆ ಪೂರಕವಾಗಿ ಹಿಂದೆ ನಾವಿದ್ದ ಇಂಗ್ಲೆಂಡಿನ ವುಲ್ವರ್ಹ್ಯಾಂಪ್ಟಾನ್ ಎಂಬ ನಗರದಲ್ಲಿ ನಿವಾಸಿಗಳಾಗಿದ್ದು, ನಮ್ಮ ಮಿತ್ರರಾದ ಡಾ.ರಮೇಶ್ ಮತ್ತು ಅವರ ಪತ್ನಿ ಅನ್ನಪೂರ್ಣ ಅವರು ಈಗ ಅಬುದಾಬಿ ಪಕ್ಕದ ಅಲೈನ್ ನಗರದಲ್ಲಿ ವೃತ್ತಿಯಿಂದಾಗಿ ನೆಲೆಸಿದ್ದು ನಮಗೆ ಬರಲು ಆಹ್ವಾನವನ್ನು ನೀಡಿದರು. ೨೦೨೪ರ ಫೆಬ್ರುವರಿ ತಿಂಗಳ ಮೊದಲವಾರದಲ್ಲಿ ನಾನು ಮತ್ತು ನನ್ನ ಶ್ರೀಮತಿ ಡಾ. ಪೂರ್ಣಿಮಾ ಈ ದೇಶದಲ್ಲಿ ಹತ್ತು ದಿವಸಗಳ ಪ್ರವಾಸವನ್ನು ಕೈಗೊಂಡೆವು. ಪ್ರೇಕ್ಷಣೀಯ ತಾಣಗಳನ್ನು ನೋಡುವುದರ ಜೊತೆಗೆ ಇಲ್ಲಿಯ ದಿನ ನಿತ್ಯ ಬದುಕಿನ ಅನುಭವವನ್ನು ಸಾಧ್ಯವಾದಷ್ಟು ಹತ್ತಿರದಿಂದ ಕಾಣುವ ಕುತೂಹಲ ಮತ್ತು ಹಂಬಲ ನಮ್ಮದಾಗಿತ್ತು.

ಅಬುದಾಬಿ ವಿಮಾನನಿಲ್ದಾಣದಲ್ಲಿ ಡಾ. ರಮೇಶ್ ಅವರು ಕಳುಹಿಸಿಕೊಟ್ಟ ಶಿಜೊ ಎಂಬ ಮಲೆಯಾಳಿ, ಸುಶೀಕ್ಷಿತ, ಸಜ್ಜನ್ ಡ್ರೈವರ್ ಬಂದು ವಿನಮ್ರವಾಗಿ ಸ್ವಾಗತಿಸಿ, ನಮ್ಮ ಲಗೇಜುಗಳನ್ನು ಕಾರಿಗೆ ವರ್ಗಾಯಿಸಲು ನೆರವು ನೀಡಿ, ತನ್ನ ಏಳು ಸೀಟಿನ ಭವ್ಯವಾದ ಟೊಯೋಟಾ ಕಾರಿನಲ್ಲಿ ನಮ್ಮನ್ನು ಕುಳ್ಳಿರಿಸಿಕೊಂಡು ಅಲೈನ್ ಹೆದ್ದಾರಿಯನ್ನು ಹಿಡಿದ. ಇಂಗ್ಲೆಂಡಿನಂತಹ ಪುಟ್ಟ ದೇಶದಲ್ಲಿನ ಪುಟ್ಟ ಪುಟ್ಟ ಕಾರುಗಳನ್ನು ಕಂಡಿರುವ ನಮಗೆ, ಪೆಟ್ರೋಲನ್ನು ಇನ್ನಿಲ್ಲದಂತೆ ಕುಡಿದು ಬಿಡುವ ಇಲ್ಲಿಯ ದೈತ್ಯಾಕಾರದ ಕಾರುಗಳು, ಆರು ಎಂಟು ಲೇನ್ ರಸ್ತೆಗಳು, ೧೬೦ ಕಿಮಿ ವೇಗದಲ್ಲಿ ಸಾಗುವ ವಾಹನಗಳು ಅಚ್ಚರಿಯೊಡನೆ ಸ್ವಲ್ಪ ಭಯವನ್ನೂ ಮೂಡಿಸಿತು. ಪೆಟ್ರೋಲ್ ಬೆಲೆ ಎಲ್ಲ ದೇಶಗಳಲ್ಲಿ ಹೆಚ್ಚಾಗಿರುವಾಗ ಇಲ್ಲಿ ಅದರ ಬೆಲೆ ಅಗ್ಗವಾಗಿದೆ. ಹೀಗಾಗಿ ಈ ದೇಶದಲ್ಲಿ ನೆಲೆಸಿರುವ ಜನಕ್ಕೆ ಅದರ ಬಗ್ಗೆ ಚಿಂತೆಯೇ ಇಲ್ಲ. 'ಘೋಡಾ ಹೈ ಮೈದಾನ್ ಹೈ' ಎಂಬ ಹಿಂದಿ ಉಕ್ತಿ ನೆನಪಿಗೆ ಬಂತು. ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಯೂರೋಪಿನ ಹಲವಾರು ದೇಶಗಳು ಈಗ ಚಿಕ್ಕ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಿರುವಾಗ ಈ ಅರಬ್ಬರು ಮತ್ತು ಅಮೆರಿಕನ್ನರು ಭಾರೀಗಾತ್ರದ ಕಾರುಗಳಲ್ಲಿ ಓಡಾಡುತ್ತಿದ್ದಾರೆ. ನಗರ-ನಗರಗಳನ್ನು ಜೋಡಿಸಿರುವ ಹೆದ್ದಾರಿಗಳಲ್ಲಿ ನೂರಾರು ಮೈಲಿ ಉದ್ದದವರೆಗೆ ಸಾಲು ವಿದ್ಯುತ್ ದೀಪಗಳನ್ನು ಇಡೀ ರಾತ್ರಿ ಹಚ್ಚುತ್ತಾರೆ. ಪ್ರಪಂಚದ ಸಂಪನ್ಮೂಲದ ಬಳಕೆಯ ಬಗ್ಗೆ, ಪರಿಸರದ ಬಗ್ಗೆ ಕಾಳಜಿ ಇವರಿಗಿದೆಯೇ ಎಂಬ ಅನುಮಾನ ಉಂಟಾಗುವುದು ಸಹಜ. ಇತ್ತೀಚಿನ ಜಾಗತಿಕ ತಾಪಮಾನದ ಬಗ್ಗೆ ಚರ್ಚಿಸುವ ಕಾಪ್ ೨೮ ಎಂಬ ೨೦೨೩ ವರ್ಷದ ಸಮಾವೇಶವನ್ನು ದುಬೈನಲ್ಲಿ ನಡೆಸಿದ್ದು ಅದನ್ನು ಹಲವಾರು ದೇಶಗಳು ಪ್ರಶ್ನಿಸಿವೆ. ಈ ಅರಬ್ ರಾಷ್ತ್ರ ೨೦೫೦ರ ಹೊತ್ತಿಗೆ ತಮ್ಮ ಫಾಸಿಲ್ ಇಂಧನದ ಉಪಯೋಗ ಅರ್ಧದಷ್ಟು ಕಡಿಮೆಮಾಡಿ ಪರಿಸರಕ್ಕೆ ಪೂರಕವಾಗುವ ಮತ್ತು ಕಾರ್ಬನ್ ಹೆಜ್ಜೆ ಗುರುತನ್ನು ಕಡಿಮೆಮಾಡುವ ನಿರ್ಧಾರವನ್ನು ಕೈಗೆತ್ತಿಕೊಂಡಿರುವುದು ಸಮಾಧಾನಕರವಾದ ವಿಚಾರ. ಈ ಆಲೋಚನಗಳ ನಡುವೆ ಪ್ರಯಾಣಮಾಡಿ ಒಂದು ಗಂಟೆಯ ಸಮಯದನಂತರ ಒಂದು ಚಿಕ್ಕ ಊರನ್ನು ಹೊಕ್ಕು ಅಲ್ಲಿರುವ ಅಂಗಡಿಸಾಲಿನಲ್ಲಿದ್ದ ಚಿಕ್ಕ ರೆಸ್ಟೋರಾಂಟಿನಲ್ಲಿ ಶಿಜೊ ನೀಡಿದ ಆದೇಶದ ಮೇಲೆ ಒಬ್ಬ ಮಲೆಯಾಳಿ ಹುಡುಗ ಮೂರು ಕಪ್ ಖಡಕ್ ಚಾ ವನ್ನು ಕಾರಿಗೇ ತಂದುಕೊಟ್ಟ. ಒಂದೆರಡು ಗುಟುಕು ಹೀರಿದಾಗ ಚಾ ಒಳಗಿನ ಏಲಕ್ಕಿ ಘಮಲು, ಸಿಹಿ ರುಚಿ, ಗಟ್ಟಿಯಾದ ಹಾಲು ನನ್ನನ್ನು ಕೂಡಲೇ ಕೇರಳದ ವೈನಾಡಿಗೆ ಒಯ್ದಿತ್ತು. ಪಟ್ಟ-ಪಟ್ಟಿ ಪಂಚೆಯ ಮಲಯಾಳಿ ಕಾಕಾಗಳು, ಹಸಿರು ಬೆಟ್ಟಗಳು, ಹೆಮ್ಮರಗಳು ಅದರ ನೆರಳಲ್ಲಿ ಬೆಳೆಯುವ, ಏಲಕ್ಕಿಗಿಡಗಳು ಅದರ ಉದ್ದದ ಹಸುರಿನ ತೆನೆಗಳು ಎಲ್ಲಾ ನನ್ನ ಸ್ಮೃತಿಯಲ್ಲಿ ಹಾದುಹೋದವು. ವಾಸ್ತವದಲ್ಲಿ ನೋಡಿದಾಗ ನನ್ನ ಸುತ್ತ ಮರುಭೂಮಿಯ ರಾಶಿರಾಶಿ ಮರಳು, ಮಸೀದಿಗಳು, ಮಿನಾರೆಟ್ಟುಗಳು, ಅರಬ್ ಜನರು! ಎಲ್ಲಿಯ ಖಡಕ್-ಏಲಕ್ಕಿ ಚಾ ಎಲ್ಲಿಯ ಮರಳುಗಾಡು! ಎತ್ತಣಿಂದೆತ್ತ ಸಂಬಂಧವಯ್ಯ?

ದಾರಿಯುದ್ದಕ್ಕೂ ಬಂಜರು ಭೂಮಿ. ಅಲೆ ಅಲೆಯಾಗಿ ಹಬ್ಬಿರುವ ಮರಳಿನ ದಿಣ್ಣೆಗಳು. ಮರಳಲ್ಲಿ ಗಾಳಿ ಕೆತ್ತಿದ ಚಿತ್ತಾರಗಳು, ಮಕ್ಕಳು ಸ್ಲೇಟಿನ ಮೇಲೆ ಹಳೆ ಚಿತ್ರಗಳನ್ನು ಅಳಿಸಿ ಮತ್ತೆ ಹೊಸ ಚಿತ್ರಗಳನ್ನು ಮೂಡಿಸುವಂತೆ ಗಾಳಿ ಮತ್ತು ಮರಳು ಆಟವಾಡುತ್ತಿದ್ದವು. ನಡುವೆ ನಿರ್ಜನ ಪ್ರದೇಶಗಳು, ಹತ್ತಾರು ಮೈಲಿಗೊಂದು ನಾಗರೀಕತೆಯ ಹತ್ತಿರ ನಾವಿದ್ದೇವೆಂದು ಖಾತ್ರಿಪಡಿಸುವ ಪುಟ್ಟ ತಲೆ, ಎರಡು ಕಾಲು ಮತ್ತು ಎರಡು ಕೈಯನ್ನು ಕೆಳಗೆ ಬಿಟ್ಟಂತಹ ಎಲೆಕ್ಟ್ರಿಕ್ ಪೈಲಾನ್ ಗಳು, ಅದರಿಂದ ತೂಗಿರುವ ವಿದ್ಯುತ್ ತಂತಿಗಳು ಇವು ಇಲ್ಲಿಯ ನೋಟ. ಕೆಲವೊಮ್ಮೆ ಸಮತಟ್ಟಾದ ಪ್ರದೇಶದಲ್ಲಿ ರಸ್ತೆ ಬದಿಯ ಬೇಲಿಯ ಆಚೆಗೆ ತೀವ್ರ ಗತಿಯಲ್ಲಿ ಸಾಗುವ ವಾಹನಗಳನ್ನು ನಿರ್ಲಕ್ಷಿಸಿ ಕೆಲವು ಒಂಟೆಗಳು ತಮ್ಮದೇ ಸಾವಧಾನದಲ್ಲಿ ಒಣಗಿದ್ದ ಕುರುಚಲು ಹುಲ್ಲನ್ನು ಮೇಯುತ್ತಾ, ಹುಲ್ಲನ್ನು ಈ ದವಡೆಯಿಂದ ಆ ದವಡೆಗೆ ವರ್ಗಾಯಿಸಿ, ನಮ್ಮ ಹಳ್ಳಿಯ ವೃದ್ದರು ಹೊಗೆಸೊಪ್ಪನ್ನು ಮೇಯುವಂತೆ ಜಗಿಯುತ್ತಾ ದಿವ್ಯ ಧ್ಯಾನ ಸ್ಥಿತಿಯಲ್ಲಿ ಮಗ್ನರಾಗಿದ್ದವು. ಒಂಟೆಗಳಿಗೆ ಅವಸರ ಎಂಬ ಪದ ಅದರ ಡಿಕ್ಷನರಿಯಲ್ಲಿ ಇಲ್ಲ ಎಂಬುದು ನನ್ನ ಅನಿಸಿಕೆ. ಇಂತಹ ಮಂದಗತಿಯ ಒಂಟೆಗಳನ್ನು ಹಿಡಿದು ಅರಬ್ಬರು ಹೇಗೆ ಕ್ಯಾಮಲ್ ರೇಸ್ ನಡೆಸುತ್ತಾರೋ ನಾ ತಿಳಿಯೆ. ಹಿಂದೆ ಶಿಶುಗಳನ್ನು ಒಂಟೆಯ ಹೊಟ್ಟೆಗೆ ಕಟ್ಟಿ ಕ್ಯಾಮಲ್ ರೇಸ್ ನಡೆಸುತ್ತಿದ್ದು ಈಗ ಆ ಪದ್ದತಿಯನ್ನು ಬಿಟ್ಟು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳೆಸುತ್ತಿದ್ದಾರೆ ಎಂದು ಕೇಳಿದ್ದೇನೆ. ಮಕ್ಕಳು ಹೆದರಿಕೆಯಿಂದ ಚೀರುತ್ತಿದ್ದಾಗ ಗಾಬರಿಗೊಂಡ ಒಂಟೆಗಳು ಜೋರಾಗಿ ಓಡುತ್ತಿದ್ದವು. ಆ ಕ್ರೂರ ಪದ್ಧತಿಯನ್ನು ಈಗ ಕೈ ಬಿಟ್ಟಿರುವುದು ಒಳ್ಳೆಯ ನಿರ್ಧಾರ.

ನಾವು ಅಬುದಾಬಿಯಿಂದ ಅಲೈನ್ ವರಿಗೆ ಕ್ರಯಿಸಿದ ದಾರಿಯಲ್ಲಿ ನೂರಾರು ಕಿಲೋ ಮೀಟರ್ ರಸ್ತೆಯ ಎರಡು ಬದಿಯಲ್ಲಿ ಹಸಿರು ಮರಗಳ ಸಾಲು ಮತ್ತು ರಸ್ತೆ ಮಧ್ಯದ ಡಿವೈಡರ್ ಜಗದಲ್ಲಿ ಸಾಲಾಗಿ ನಿಂತ ಈಚಲು ಮರ ಜಾತಿಯ ಡೇಟ್ಸ್ ಮರಗಳನ್ನು ಕಂಡು ಸೋಜಿಗವಾಯಿತು. "ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ?" ಎಂಬ ದಾಸರ ಪದ ನೆನೆಪಿಗೆ ಬರುತ್ತಿದಂತೆ, ಶಿಜೊ "ಸಾರ್ ರಸ್ತೆ ಪಕ್ಕದಲ್ಲಿರುವ ಮರದ ಬುಡಗಳನ್ನು ಗಮನಿಸಿ, ಅಲ್ಲಿ ಇರುವ ಪೈಪ್ ಗಳನ್ನೂ ನೋಡಿ, ಅರಬ್ಬರು ನೂರಾರು ಮೈಲಿ ಪೈಪ್ಗಳನ್ನು ಎಳೆದು ಈ ಗಿಡಗಳಿಗೆ ಮರುಭೂಮಿಯಲ್ಲಿ ನೀರುಣಿಸುತ್ತಿದ್ದಾರೆ” ಎಂದು ನನ್ನ ಗಮನವನ್ನು ಸೆಳೆದ. ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದಾಗ ದೈವವನ್ನಷ್ಟೇ ನೆನೆಯುವ ನಮ್ಮ ಆಧ್ಯಾತ್ಮಿಕ ಪ್ರಜ್ಞೆಯಿಂದ ಹೊರಬಂದು ವಾಸ್ತವಬದುಕಿನ ಮುಂದಿರುವ ಮನುಷ್ಯ ಪ್ರಯತ್ನವನ್ನು ಕಂಡು ಬೆರಗಾದೆ. ಮನದಲ್ಲೇ ಭೇಷ್ ಎಂದು ಪ್ರಶಂಸಿದೆ. ಇಲ್ಲಿ ಮಳೆ ಹೆಚ್ಚಾಗಿ ಬರುವುದಿಲ್ಲ, ಇದು ಮರುಭೂಮಿ ಹೀಗಿದ್ದರೂ ನೀರು ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ದೇಶದಲ್ಲಿ ನದಿಗಳಲ್ಲಿಲ್ಲ. ಹಾಜರ್ ಬೆಟ್ಟ ಹಾದುಹೋಗುವ ದಕ್ಷಿಣ ಪ್ರದೇಶದಲ್ಲಿ ಕೆಲವು ಅಣೆಕಟ್ಟುಗಳನ್ನು ಕಟ್ಟಿ ನೀರನ್ನು ಶೇಖರಿಸಿದ್ದಾರೆ. ಬಹಳಷ್ಟು ವೇಸ್ಟ್ ನೀರನ್ನು ರಿಸೈಕಲ್ ಮಾಡಿ ಗಿಡ ಮರಗಳಿಗೆ ಬಳಸುತ್ತಾರೆ. ಉಳಿದಂತೆ ಇವರು ಸಮುದ್ರದ ನೀರನ್ನು ಆಧುನಿಕ ತಂತ್ರಜ್ಞಾನದಲ್ಲಿ ದೇಶದುದ್ದಕ್ಕೂ ಸುಮಾರು ೭೦ ಡೀಸಲಿನೇಷನ್ ಘಟಕಗಳನ್ನು ಸ್ಥಾಪಿಸಿ ಅದರಲ್ಲಿ ಸಿಹಿ ನೀರನ್ನು ಉತ್ಪತ್ತಿ ಮಾಡುತ್ತಾರೆ. ಪ್ರವಾಸಿತಾಣಗಳಲ್ಲಿ, ನಗರದ ಪ್ರಮುಖ ರಸ್ತೆಗಳಲ್ಲಿ ಹೂವಿನ ಗಿಡಗಳನ್ನು ನೆಟ್ಟು ಅಂದಗೊಳಿಸಿದ್ದಾರೆ. ದುಬೈನಲ್ಲಿರುವ ಮಿರಾಕಲ್ ಗಾರ್ಡನ್ ಎಂಬ ಅದ್ಭುತ ಹೂಗಳ ಉದ್ಯಾನ ಇವರ ನಿಸರ್ಗಪ್ರೀತಿಗೆ ಸಾಕ್ಷಿಯಾಗಿದೆ. ಇದು ದುಬೈಗೆ ಹೋಗುವ ಎಲ್ಲ ಪ್ರವಾಸಿಗಳು ನೋಡಲೇ ಬೇಕಾದ ಉದ್ಯಾನವನ.

ನಾವು ಅಲೈನ್ ನಗರವನ್ನು ಪ್ರವೇಶಿಸಿದಂತೆ ಅದು ಸಂಯುಕ್ತ ಅರಬ್ ರಾಷ್ಟ್ರದಲ್ಲಿನ ಅತ್ಯಂತ ಹಸಿರು ನಗರವೆಂದು ತಿಳಿಯುತ್ತದೆ. ನಮ್ಮ ಮಿತ್ರರಾದ ಡಾ.ರಮೇಶ್ ಅವರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ತಜ್ಞ ವೈದ್ಯರಾಗಿದ್ದು ಅವರಿಗೆ ಅನುಕೂಲವಾದ ಮನೆಯನ್ನು ಸರ್ಕಾರ ಒದಗಿಸಿದೆ. ಇಲ್ಲಿ ಅನುಕೂಲವಾದ ಎಂಬ ಪದಕ್ಕೆ ವಿಶೇಷ ಅರ್ಥ ಇರಬಹುದು. ನಮ್ಮ ಈ ಅತಿಥಿಗಳ ಬಹು ಅಂತಸ್ತಿನ ಮನೆ ಸುಂದರವಾಗಿ, ಹಿರಿದಾಗಿ ಭವ್ಯವಾಗಿದೆ. ಅರಬ್ ಜನರು ತಮ್ಮ ವಾಸಕ್ಕೆಂದು ಕಟ್ಟಿಕೊಂಡಿದ್ದು ನಂತರದಲ್ಲಿ ಅದನ್ನು ಬಾಡಿಗೆ ಕೊಟ್ಟಂತೆ ಕಾಣುತ್ತದೆ. ಕುಟುಂಬವರ್ಗದವರಿಗೆ, ಹೆಂಗಸರಿಗೆ ಒಂದು ಪ್ರವೇಶ ದ್ವಾರ, ಕುಟುಂಬದ ಹೊರಗಿನ ಗಂಡಸರಿಗೆ ಇನ್ನೊಂದು ಪ್ರವೇಶದ್ವಾರ, ಕೆಲಸದವರು ಪ್ರವೇಶಿಸಲು ಬೇರೊಂದು ದ್ವಾರ! ಇನ್ನು ಮನೆಯೊಳಗೆ ಲೆಕ್ಕವಿಲ್ಲದಷ್ಟು ಕೋಣೆಗಳು ಎನ್ನಬಹುದು. ಇಲ್ಲಿ ಎಲ್ಲರ ಮನೆಯ ಕಾಂಪೌಂಡ್ ಗೋಡೆ ಎತ್ತರವನ್ನು ಗಮನಿಸಿದರೆ ಚಿತ್ರದುರ್ಗದ ಕೋಟೆ ಅಥವಾ ಬೆಂಗಳೂರಿನ ಸೆಂಟ್ರಲ್ ಜೈಲ್ ಜ್ಞಾಪಕಕ್ಕೆ ಬರುತ್ತದೆ. ಮನೆಯೊಳಗೇ ಯಾರಿದ್ದಾರೆ, ಮಕ್ಕಳಿದ್ದಾರೆಯೇ, ಗಿಡ ಮರಗಳು ಹೇಗಿವೆ ಇದರ ಸುಳಿವೇ ಸಿಗುವುದಿಲ್ಲ. ಒಬ್ಬರು ಇನ್ನೊಬ್ಬರನ್ನು ಮಾತನಾಡಿಸುವುದಿರಲಿ ಕಾಣುವುದೂ ಕಷ್ಟ. ಇಡೀ ಮನೆ ತನಗೆ ತಾನೇ ಬುರುಕಾ ಹಾಕಿ ಕೂತಂತೆ ಭಾಸವಾಗುತ್ತದೆ.

ಡಾ. ರಮೇಶ್ ಮತ್ತು ಅನು ಅವರ ಮನೆಯಲ್ಲಿ ಆಕರ್ಷಕವಾಗಿರುವುದು ಮನೆಯ ಮುಂದಿನ ಹಸುರಿನ ಹಾಸು ಮತ್ತು ಗಿಡಗಳು, ಮರಗಳು, ಚಿಲಿಪಿಲಿ ಗುಟ್ಟುವ ತರಾವರಿ ಹಕ್ಕಿಗಳು. ಇಲ್ಲಿ ದಾಳಿಂಬೆ, ನಿಂಬೆ ಗಿಡ, ನುಗ್ಗೆಕಾಯಿ ಮರಗಳು, ದಾಸಿವಾಳ ಮತ್ತು ಕಣಗಲೆ ಗಿಡಗಳು ಇವೆ. ಅವರ ಕಾಂಪೌಂಡ್ ಒಳಗೆ ನಿಂತಾಗ ನಾವು ಒಂದು ಮರುಭೂಮಿಯಲ್ಲಿದ್ದೇವೆ ಎಂಬ ವಿಚಾರ ಮರೆತುಹೋಗುತ್ತದೆ. ಅಂದಹಾಗೆ ಈ ದೇಶದ ಒಳನಾಡಿನಲ್ಲಿ ನವೆಂಬರ್ ತಿಂಗಳಿಂದ ಮೇ ತಿಂಗಳಿನವರೆಗೆ ಹವಾಮಾನ ಒಂದು ಹದದಲ್ಲಿ ಇದ್ದು ಆಮೇಲೆ ಕಡು ಬೇಸಿಗೆ ಶುರುವಾಗುತ್ತದೆ. ಬೇಸಿಗೆಯಲ್ಲಿ ನೀರುಣಿಸಿದರೂ ಬಿಸಿಲಿನ ಝಳಕ್ಕೆ ಒಣಗಿದ ಮರ ಗಿಡಗಳು ಚಳಿಗಾಲಕ್ಕೆ ಮತ್ತೆ ಚಿಗುರುತ್ತವೆ ಎಂದು ಕೇಳಿದಾಗ ಖುಷಿಯಾಯಿತು. ನಾವು ಇಲ್ಲಿ ತಂಗಿದ್ದಾಗ ಅಲೈನ್ ನಗರದಲ್ಲಿ ಒಂದು ರಾತ್ರಿ ವಿಪರೀತ ಬಿರುಗಾಳಿ, ಗುಡುಗು ಸಿಡಿಲಿನೊಂದಿಗೆ ಹುಯ್ದ ಆಲಿಕಲ್ಲು ಮಳೆ ಗಾಬರಿಹುಟ್ಟಿಸಿತು. ಒಂದೊಂದು ಅಲಿ ಕಲ್ಲು ಒಂದು ಟೆನಿಸ್ ಬಾಲ್ ಅಳತೆಗಿಂತ ಹೆಚ್ಚಿದ್ದು ಕೆಲವು ಒಂದು ಇಟ್ಟಿಗೆ ಗಾತ್ರದ್ದಾಗಿದ್ದು ಬೀಸುವ ಬಿರುಗಾಳಿಯಲ್ಲಿ ರಮೇಶ್ ಅವರ ಮನೆಯ ಕೆಲವು ಸೆಕ್ಯೂರಿಟಿ ಕ್ಯಾಮರಾಗಳನ್ನು, ಹೂವಿನ ಕುಂಡಗಳನ್ನು ಒಡೆದು ಚೂರು ಮಾಡಿದವು. ಅಲೈನ್ ನಗರದಲ್ಲಿ ಮರುದಿನ ಜಜ್ಜಿ ಹೋದ ಕಾರುಗಳನ್ನು, ಪುಡಿಯಾದ ಗಾಜುಗಳನ್ನು ನೋಡಿ ಚಕಿತರಾದೆವು. ರಸ್ತೆಗಳಲ್ಲಿ ನೀರು ನಿಂತು, ಚರಂಡಿಗಳು ರಭಸದ ನದಿಗಳಾಗಿದ್ದವು. ಸರಕಾರದ ಆದೇಶದಂತೆ ಒಂದೆರಡು ದಿನ ಎಲ್ಲ ಮನೆಯಲ್ಲೇ ಉಳಿಯಬೇಕಾಯಿತು. ಈ ರೀತಿಯ ಅನಿರೀಕ್ಷಿತ ಮಳೆ, ಫ್ಲಾಶ್ ಫ್ಲಡ್ ಇಲ್ಲಿ ಆಗಾಗ್ಗೆ ಬರುವುದು ಉಂಟು. ನಾನು ವಾಟ್ಸಾಪಿನ ವಿಡಿಯೋ ಚಿತ್ರಗಳನ್ನು ಹಿಂದೆ ನೋಡಿದ್ದೆ. ರಮೇಶ್ ದಂಪತಿಗಳು ತಿಳಿಸಿದಂತೆ ಈ ರೀತಿಯ ಅತಿಯಾದ ಪ್ರಕೃತಿ ವಿಕೋಪ ವಿರಳ. ಅದರ ಮಧ್ಯೆ ನಾವಲ್ಲಿದ್ದು ಪಡೆದ ಅನುಭವ ನಮ್ಮ ಪಾಲಿಗೆ ವಿಶೇಷವಾಗಿತ್ತು. ಇಂಗ್ಲೆಂಡಿನಲ್ಲಿ ಸದಾ ಸುರಿಯುವ ಮಳೆಯನ್ನು ತಪ್ಪಿಸಿಕೊಂಡು ಮರುಭೂಮಿಗೆ ಹೋದರೂ ನಮ್ಮ ದುರಾದೃಷ್ಟಕ್ಕೆ ಅಲ್ಲೂ ಮಳೆ ಬರಬೇಕೆ? ಇನ್ನೊಂದು ಸ್ವಾರಸ್ಯಕರವಾದ ಸಂಗತಿ; ಈ ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ 'ಕ್ಲೌಡ್ ಸೀಡಿಂಗ್' ಎಂಬ ನೂತನ ತಂತ್ರಜ್ಞಾನದಲ್ಲಿ ವಿಶೇಷವಾದ ವಿಮಾನದಲ್ಲಿ ಮೇಲೇರಿ ತಮ್ಮ ಆಕಾಶದಲ್ಲಿ ಹಾದು ಹೋಗುತ್ತಿರುವ ದಟ್ಟ ಮೋಡಗಳ ಮೇಲೆ ಕೆಲವು ರಾಸಾಯನಿಕ ಲವಣೆಗಳನ್ನು ಉದುರಿಸಿ ಆವಿಗಟ್ಟಿರುವ ಮೋಡವನ್ನು ಕರಗಿಸಿ ಮಳೆಬೀಳುವಂತೆ ಮಾಡುತ್ತಾರೆ. ಈ ರೀತಿಯ ಕೃತಕ ಮಳೆ ಬರಿಸುವ ಪ್ರಯತ್ನವನ್ನು ಆಗಾಗ್ಗೆ ಮಾಡುತ್ತಾರೆ ಎಂದು ತಿಳಿದು ಅಚ್ಚರಿಗೊಂಡೆ. ಪ್ರಕೃತಿಗೆ ತನ್ನದೇ ಆದ ನಿಯಮಗಳಿವೆ, ಅದನ್ನು ಹತ್ತಿಕ್ಕಿ ಮನುಷ್ಯ ತನ್ನ ಅನುಕೂಲಕ್ಕೆ ಹಸ್ತಾಕ್ಷೇಪ ಮಾಡುವು ಸರಿಯೇ? ಅದರ ಪರಿಣಾಮಗಳೇನು? ಎಂಬ ನೈತಿಕ ಪ್ರಶ್ನೆಗಳು ನನ್ನನ್ನು ಕಾಡಿವೆ.

ನಮ್ಮ ಗೆಳೆಯರಾದ ರಮೇಶ್ ದಂಪತಿಗಳು ತಮ್ಮ ಹಸಿರಾದ ಅಲೈನ್ ನಗರವನ್ನು ಕೂಲಂಕುಷವಾಗಿ ನಮಗೆ
ಪರಿಚಯಿಸಿದರು. ಅಲೈನ್ ಮೈಸೂರು ಮತ್ತು ಧಾರವಾಡದ ರೀತಿಯಲ್ಲಿ ಸಾಂಸ್ಕೃತಿಕ ಕೇಂದ್ರ. ಇಲ್ಲಿ ಸ್ಥಳೀಯ ಎಮಿರಾಟಿಗಳೇ ಹೆಚ್ಚು. ದುಬೈ ಅಬುದಾಬಿ ನಗರದಷ್ಟು ದಟ್ಟವಾಗಿಲ್ಲ ಬದಲಾಗಿ ಮೈಸೂರಿನಂತೆ ವಿಶಾಲವಾಗಿ ಹಬ್ಬಿಕೊಂಡಿದೆ. ಈ ಊರ ಸರಹದ್ದಿನ ಒಳಗೇ ಇರುವ ಮೂರು ಸಾವಿರ ಅಡಿ ಎತ್ತರದ ಝಬೀಲ್ ಹಫೀತ್ ಎಂಬ ಬೆಟ್ಟ ಮೈಸೂರಿನ ಚಾಮುಂಡಿಬೆಟ್ಟವನ್ನು ನೆನಪಿಗೆ ತರುವಂತಿದೆ. ಇಲ್ಲಿ ಯಾವುದೇ ಕಟ್ಟಡವನ್ನು ಮೂರು ಅಂತಸ್ತಿನ ಮೇಲೆ ಕಟ್ಟುವಂತಿಲ್ಲ. ಎಲ್ಲ ಕಟ್ಟಡಗಳ ವಿನ್ಯಾಸ ಸ್ಥಳೀಯ ಅರಬ್ ಶೈಲಿಯಲ್ಲಿ ಕಟ್ಟಲಾಗಿದ್ದು ಸುಂದರವಾಗಿದೆ. ನಗರದ ಬಹುಪಾಲು ರಸ್ತೆಗಳು ವಿಶಾಲವಾದ ಶುಭ್ರವಾದ ಜೋಡಿರಸ್ತೆಗಳು. ರಸ್ತೆಗಳ ಬದಿಯಲ್ಲಿ ಸಾಲು ಮರಗಳು ಮತ್ತು ಸಾಕಷ್ಟು ಹೂವಿನ ಗಿಡಗಳು ಇದ್ದು ಸುಂದರವಾಗಿದೆ. ದುಬೈನಲ್ಲಿ ಕಾಣುವ ಆಧುನಿಕ ಗ್ಲಾಸ್ ಮತ್ತು ಸ್ಟೀಲ್ ಬಳಸಿ ಕಟ್ಟಿರುವ ಸ್ಕೈ ಸ್ಕ್ರೇಪರ್ ಕಟ್ಟಡಗಳು ಇಲ್ಲಿ ಕಾಣುವುದಿಲ್ಲ. ಅರಬ್ ದೊರೆಗಳು ತಮ್ಮ ಎರಡನೇ ಮನೆಯನ್ನು, ನಿವೃತ್ತ ಪ್ರತಿಷ್ಠಿತರು ದೊಡ್ಡ ಬಂಗಲೆಗಳನ್ನು ಕಟ್ಟಿಕೊಂಡಿದ್ದಾರೆ. ಇಲ್ಲಿ ಎಲ್ಲ ವಾಹನ ಚಾಲಕರು ನಿಯಮವನ್ನು ಪಾಲಿಸುತ್ತಾರೆ, ಬೆಂಗಳೂರಿನ ರಸ್ತೆಯಲ್ಲಿ ಕಾಣುವ ಅಸಹನೆ, ನುಗ್ಗಾಟ, ಕರ್ಕಶಗಳಿಲ್ಲ. ವಾಹನ ಓಡಿಸುವವರು ನಮ್ಮ ಇಂಡಿಯಾ ಪಾಕಿಸ್ತಾನದ ಡ್ರೈವರ್ಗಳೇ, ಇವರೆಲ್ಲ ಅಂತಹ ಸುಶಿಕ್ಷಿತರಲ್ಲ. ನಮ್ಮ ಡ್ರೈವಿಂಗ್ ಶೈಲಿ, ಸ್ವಭಾವ ಅಲ್ಲಿಗೂ ಇಲ್ಲಿಗೂ ಹೇಗೆ ಬದಲಾಗಿದೆ ಎಂಬ ಆಲೋಚನೆಗಳು ನನ್ನ ಮನಸ್ಸಿನಲ್ಲಿ ಮೂಡಿದವು. ವ್ಯತಾಸ ಇಷ್ಟೇ; ಇಂಡಿಯದಲ್ಲಿ ಲಂಚಕೋರತನವಿದೆ, ಶಿಕ್ಷೆ ವಿಧಿಸಲು ಸಾಧ್ಯವಿಲ್ಲ, ವಿಪರೀತ ಜನಸಂದಣಿ, ನಮ್ಮ ಮಹಾ ನಗರಗಳು ತೀವ್ರ ಗತಿಯಲ್ಲಿ ಹತೋಟಿ ತಪ್ಪಿ ಬೆಳೆಯುತ್ತಿವೆ, ರಸ್ತೆಯನ್ನು ಹಿಗ್ಗಿಸಲು ಸಾಧ್ಯವಿಲ್ಲ, ಹಿಗ್ಗಿಸಿದರೆ ಇನ್ನು ಹೆಚ್ಚು ವಾಹನಗಳು ಬಂದು ಸೇರಿಕೊಳ್ಳುತ್ತವೆ. ಮೋಟಾರ್ ಬೈಕುಗಳು, ಆಟೋ ರಿಕ್ಷಾಗಳು, ಕಾರುಗಳು, ಓಲಾ ಊಬರ್ ಟ್ಯಾಕ್ಸಿಗಳು, ಬಸ್ಸುಗಳು, ಲಾರಿಗಳು ಹೀಗೆ ರಸ್ತೆಯಲ್ಲಿ ತರಾವರಿ ವಾಹನಗಳಿವೆ. ಎಲ್ಲರಿಗೂ ಅವಸರ, ಶಿಸ್ತಿನ ಬಗ್ಗೆ ತಿಳುವಳಿಕೆ ಇಲ್ಲ, ಇದ್ದರೂ ಪಾಲಿಸುವುದಿಲ್ಲ. ಒಟ್ಟಾರೆ ಅವ್ಯವಸ್ಥೆಯನ್ನು ಒಪ್ಪಿಕೊಂಡು ಬದುಕುತ್ತಿದ್ದೇವೆ. ಬೆಂಗಳೂರಿನಲ್ಲೇ ಎಲ್ಲಾ ಬೆಳೆವಣಿಗೆಯನ್ನು ಉತ್ತೇಜಿಸುವ ಬದಲು ಡಿಸ್ಟ್ರಿಕ್ಟ್ ಕೇಂದ್ರಿತ ಬೆಳವಣಿಗೆ ನಡೆಯಬೇಕಾಗಿದೆ. ಆಯೋಜಕರಿಗೆ ದೂರ ದೃಷ್ಟಿ ಬೇಕಾಗಿದೆ. ಭಾರತ ಆರ್ಥಿಕ ಪ್ರಗತಿಯನ್ನು ದಾಖಲಿಸಿದ್ದರೂ ಅದು ಇನ್ನೂ ಅಭಿವೃದ್ದಿಗೊಳ್ಳಬೇಕಾದ ದೇಶ.

***

ಮುಂದುವರೆಯುವುದು…. ಈ ಬರಹದ ೨ನೇ ಭಾಗವನ್ನು ಮುಂದಿನ ಶುಕ್ರವಾರ ನಿರೀಕ್ಷಿಸಿ