ಕಳೆದ ಸೆಪ್ಟಂಬರ್ ೩೦ ಮತ್ತು ಅಕ್ಟೋಬರ್ ೧ ನೆಯ ತಾರೀಕು ಲಂಡನ್ನಿನ ಬೈರನ್ ಹಾಲ್ ದಲ್ಲಿ ಕನ್ನಡ ಬಳಗ ಯು ಕೆ ತನ್ನ ನಲವತ್ತನೆಯ ವರ್ಷೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು. ಆಮಂತ್ರಿತ ಮುಖ್ಯ ಅತಿಥಿಗಳಲ್ಲಿ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರರು ಅಗ್ರ ಪೀಠವನ್ನು ಜಪಾನಂದ ಸ್ವಾಮಿಗಳಿಗೇ ಬಿಟ್ಟುಕೊಟ್ಟದ್ದಲ್ಲದೆ ತಮ್ಮ ಸರಳ ವೇಷ ಭೂಷಣ ಮತ್ತು ಮನ ಮುಟ್ಟುವ ಭಾಷಣದಿಂದಲೂ ಸಭಿಕರ ಮನಸ್ಸನ್ನು ಗೆದ್ದರು. ಅವರಲ್ಲದೆ ಪ್ರಸಿದ್ಧ ವಾಗ್ಮಿ ಗುರುರಾಜ ಕರಜಗಿ, ಪತ್ರಕರ್ತರಾದ ವಿಶ್ವೇಶ್ವರ ಭಟ್, ರವಿ ಹೆಗಡೆ ಮತ್ತು ಗಾಯಕ-ನಟ ರಾಜೇಶ್ ಕೃಷ್ಣನ್ ಸಭಿಕರನ್ನು ರಂಜಿಸಿದರು. ಸ್ಥಳೀಯ ಕಲಾವಿದರು ತಮ್ಮ ನೃತ್ಯ, ಯಕ್ಷಗಾನ ಮತ್ತು ವೃಂದಗಾನಗಳಿಂದ ಅವರ ಮನಸ್ಸನ್ನು ಸೂರೆಗೊಂಡರು. ಕನ್ನಡ ಬಳಗದ ಸ್ಥಾಪನೆಯ ಕಾಲದಿಂದಲೂ ಪ್ರತಿವರ್ಷದ ಕಾರ್ಯಕ್ರಮಗಳಲ್ಲಿ ತಪ್ಪದೆ ಪಾಲುಗೊಂಡ ನನಗೆ ಈ ಮೈಲಿಗಲ್ಲು ದಾಟಿದ್ದು ವಿಶೇಷ ಸಂಭ್ರಮವಾಗಿತ್ತು. ಯು ಕೆ ಕನ್ನಡ ಬಳಗಕ್ಕಾಗಿಯೇ ರಚಿಸಿ ಹಾಡಿದ ಮಾಣಿಕ್ಯ ಸಂಭ್ರಮ ಗೀತೆಯನ್ನು (anthem) ಕೇಳಿದಾಗ ನಮಗೆಲ್ಲ ಪುಳಕವುಂಟಾದದ್ದು ಸತ್ಯ. ಅದರ ಬಗ್ಗೆ ಶ್ರೀರಂಜಿನಿಯವರು ಈ ಸಂಚಿಕೆಯ ಕೊನೆಯಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಲಗತ್ತಿಸಿದ ಯೂಟ್ಯೂಬಿನಲ್ಲಿ ಕೇಳಲೂ ಬಹುದು. ಎರಡು ದಿನಗಳ ಇಡೀ ’ಸಂಭ್ರಮ’ದ ಬಗ್ಗೆ ರಾಂಶರಣ್ ಅವರು ಬರೆದ ಸಾರಾಂಶವನ್ನು ಮೊದಲು ಕೊಟ್ಟಿದೆ. ಅದರ ನಂತರ ಅನ್ನಪೂರ್ಣ ಆನಂದ್ ಅವರ ಲೇಖನದಲ್ಲಿ ಮೊದಲ ದಿನದ ಕಾರ್ಯಕ್ರಮ ವರ್ಣನೆಯಿದೆ. ರಾಜಂ ಕೃಷ್ಣ ಅವರ ಸಂಗೀತ ಸಂಜೆಯ ವಿವರವನ್ನು ರಮ್ಯ ಭಾದ್ರಿ ಸುರಮ್ಯವಾಗಿ ಚಿತ್ರಿಸಿದ್ದಾರೆ. ಕೊನೆಯಲ್ಲಿ ’ನಮ್ಮಇತಿಹಾಸಕಾರ’ ಬೇಸಿಂಗ್ಸ್ಟೋಕ್ ರಾಮಮೂರ್ತಿಯವರು ಬರೆದ ’ಅಂದು-ಇಂದಿನ’ ಸ್ವಾರಸ್ಯವನ್ನು ತಪ್ಪದೆ ಓದಿರಿ. (ಸಂ -ಶ್ರೀವತ್ಸ ದೇಸಾಯಿ)
ಮಹಾರಾಜರು ತಮ್ಮ ಸಂದೇಶದಲ್ಲಿ ೧೯೩೯ರಲ್ಲಿ ಅಂದಿನ ಯುವರಾಜರು ಲಂಡನ್ನಿನಲ್ಲಿ ದಸರಾ ಹಬ್ಬವನ್ನು ಆಚರಿಸಿ ಕನ್ನಡದಲ್ಲಿ ಮಾಡಿದ ಭಾಷಣವನ್ನು ನೆನೆದರು. ಕರ್ನಾಟಕದ ವೈಭವ, ಶ್ರೀಮಂತ ಸಂಸ್ಕೃತಿ, ಲೋಕಕ್ಕೆ ಎಂದೆಂದಿಗೂ ಮಾದರಿಯಾದ ಬಸವ ತತ್ವ, ಸೈದ್ಧಾಂತಿಕ, ವೇದಾಂತಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕ ಕೊಡುಗೆಗಳನ್ನು ಸ್ಮರಿಸಿದರು. ಕನ್ನಡಿಗರು ಈ ಕೊಡುಗೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು, ಇವುಗಳಿಂದ ಪ್ರೇರೇಪಿತರಾಗಿ ಬಾಳಿನ ಎಲ್ಲ ದಿಶೆಗಳಲ್ಲಿ ಹೆಚ್ಚಿನ ಯಶಸ್ವಿಯನ್ನು ಪಡೆದು ಪ್ರಭಾವಶಾಲಿಗಳಾಗಬೇಕೆಂದು ಕರೆ ಕೊಟ್ಟರು. ತದನಂತರ ನಾಡಿನ ಪ್ರಮುಖ ಸಾಹಿತಿಗಳು, ಯು.ಕೆ. ಕನ್ನಡಿಗರು ಬರೆದ ಲೇಖನ, ಕವನಗಳ ಸ್ಮರಣ ಸಂಚಿಕೆ “ಸಂಭ್ರಮ”ವನ್ನು ಬಿಡುಗಡೆ ಮಾಡಿದರು.
ಸಂಭ್ರಮ: ಕನ್ನಡ ಬಳಗ (ಯು.ಕೆ) ಗೆ ಮಾಣಿಕ್ಯ ಹುಟ್ಟಿದ ಹಬ್ಬ ಲೇಖಕರು: ರಾಮಶರಣ ಲಕ್ಷ್ಮೀನಾರಾಯಣ ಯುನೈಟೆಡ್ ಕಿಂಗ್ಡಮ್ ನ ಮೊದಲ ಕನ್ನಡ ಸಂಘ ಕನ್ನಡ ಬಳಗ (ಯು.ಕೆ). ೪೦ ವರ್ಷಗಳ ಹಿಂದೆ ಐವರು ದಂಪತಿಗಳು ದೀಪಾವಳಿಯ ಶುಭದಿನದಂದು ಕನ್ನಡ ಸಂಘವೊಂದರ ದೀಪ ಬೆಳೆಗಿದರು. ಅದು ಇಂದಿಗೂ ಯು.ಕೆಯಲ್ಲಿ ನೆಲೆಸಿರುವ ಕನ್ನಡಿಗರ ಮನೆ-ಮನಗಳಲ್ಲಿ ಬೆಳಗುತ್ತಿದೆ. ಈ ವಾರಾಂತ್ಯ (ಸಪ್ಟೆಂಬರ್ ೩೦, ಅಕ್ಟೋಬರ್ ೧) ಕನ್ನಡ ಬಳಗ ತನ್ನ ಹುಟ್ಟುಹಬ್ಬ “ಸಂಭ್ರಮ”ವನ್ನು ವಿಜೃಂಭಣೆಯಿಂದ ಲಂಡನ್ ನಗರದಲ್ಲಿ ಸಂಸ್ಥಾಪಕ ಹಿರಿ ಜೀವಿಗಳೊಂದಿಗೆ, ನಾಡಿನ ಹಲವು ಮೂಲೆಗಳಿಂದ ಬಂದ ಎಲ್ಲ ವಯಸ್ಸಿನ ಕನ್ನಡಿಗರೊಂದಿಗೆ ಆಚರಿಸಿದ್ದು ತನ್ನ ‘ಹಳೆ ಬೇರು, ಹೊಸ ಚಿಗುರು’ ಧ್ಯೇಯ ವಾಕ್ಯಕ್ಕೆ ತಕ್ಕುದಾಗಿತ್ತು. ಈ ಕಾರ್ಯಕ್ರಮವನ್ನು ಯಶಸ್ಸಿಗೆ ಕಾರಣೀಕರ್ತರು, ಕನ್ನಡ ಬಳಗದ ಅಧ್ಯಕ್ಷೆ ಸುಮನಾ ಗಿರೀಶ್, ಉಪಾಧ್ಯಕ್ಷೆ ಸ್ನೇಹಾ ಕುಲಕರ್ಣಿ, ಕಾರ್ಯದರ್ಶಿ ಮಧುಸೂಧನ್, ಖಜಾಂಚಿ ರಶ್ಮಿ ಮಂಜುನಾಥ್, ಸಾಂಸ್ಕೃತಿಕ ಕಾರ್ಯದರ್ಶಿ ವ್ರತ ಚಿಗಟೇರಿ, ಯುವ ಕಾರ್ಯದರ್ಶಿ ವಿದ್ಯಾರಾಣಿ, ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾದ ಚಂದ್ರಪ್ಪ, ಆಶೀರ್ವಾದ ಮರ್ವೇ, ರಾಜೀವ ಮೇತ್ರಿ ಹಾಗೂ ಪ್ರವೀಣ್ ತ್ಯಾರಪ್ಪ. ಅಧ್ಯಕ್ಷೆ ಸುಮನಾ ಗಿರೀಶ್, ಗಣ್ಯ ಅತಿಥಿಗಳಾದ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರೊಫೆಸರ್ ಗುರುರಾಜ ಕರ್ಜಗಿ, ಪತ್ರಕರ್ತರಾದ ಶ್ರೀಯುತ ವಿಶ್ವೇಶ್ವರ ಭಟ್, ರವಿ ಹೆಗಡೆ ಹಾಗೂ ಸ್ವಾಮಿ ಜಪಾನಂದಜಿ ಹಾಗೂ ನೆರೆದ 1500 (ಎರಡು ದಿನಗಳಲ್ಲಿ ಸೇರಿ) ಕನ್ನಡಿಗರನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಅಮೃತ ಹಸ್ತದಿಂದ “ಸಂಭ್ರಮ” ಕಾರ್ಯಕ್ರಮವನ್ನು ಬೈರನ್ ಸಭಾಂಗಣದಲ್ಲಿ ಪ್ರಾರಂಭ ಮಾಡಿದರು. ಸಾಂಪ್ರದಾಯಿಕ ಭರತನಾಟ್ಯ, ಕೂಚಿಪುಡಿ ನೃತ್ಯಗಳಿಂದ ಯು.ಕೆ ಕನ್ನಡಿಗರ ಕಲಾಪ್ರದರ್ಶನ ಪ್ರಾರಂಭವಾಯಿತು. ‘ಬಾರಿಸು ಕನ್ನಡ ಡಿಂಡಿಮವ’ ಎಂಬ ವಿಶಿಷ್ಟ ನೃತ್ಯ ರೂಪಕ, ದರ್ಶಕರಿಗೆ ಶತಮಾನಗಳ ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿಗಳನ್ನು ಮನಮೋಹಕವಾಗಿ ಬಣ್ಣಿಸಿತು. ಕನ್ನಡ ಬಳಗ ಚಿಣ್ಣರಲ್ಲಿ ಕನ್ನಡವನ್ನು ಕಲಿಸಿ, ಬೆಳೆಸುವ ಶ್ಲಾಘನೀಯ ಕೆಲಸವನ್ನು ‘ಕನ್ನಡ ಕಲಿ’ ಕಾರ್ಯಕ್ರಮದ ಮೂಲಕ ಮಾಡುತ್ತಲೇ ಬಂದಿದೆ. ಈ ಮಕ್ಕಳು ಕಿರು ನಾಟಕ, ಹಾಡುಗಳ ಮೂಲಕ ತಮ್ಮ ಪ್ರತಿಭೆಯ ಪ್ರದರ್ಶನ ಮಾಡಿದರು. ಪ್ರೊಫೆಸರ್ ಗುರುರಾಜ ಕರ್ಜಗಿಯವರು ಮಾನವನಿಗೆ ನಂಬಿಕೆ ಎಷ್ಟು ಮುಖ್ಯ, ಏಕೆ ಬೇಕು ಎಂಬ ಮನಮುಟ್ಟುವ ವಿವರಣೆಯಿಂದ , ಸಭಿಕರನ್ನು ಮಂತ್ರ ಮುಗ್ಧರನ್ನಾಗಿಸಿದರು. ಈ ವಿದ್ವತ್ಪೂರ್ಣ ಭಾಷಣದ ನಂತರ ಖ್ಯಾತ ಗಾಯಕ ಶ್ರೀ ರಾಜೇಶ್ ಕೃಷ್ಣನ್ ತಮ್ಮ ಸುಮಧುರ ಗಾಯನದಿಂದ ನೆರೆದವರ ಮನತಣಿಸಿ, ಸಭಿಕರೊಡನೆ ಹೆಜ್ಜೆ ಹಾಕಿ ಕುಣಿಸಿದರು.(ಇದರ ಬಗ್ಗೆ ರಮ್ಯ ಭಾದ್ರಿ ಬರೆದ ವಿಸ್ತೃತ ಲೇಖನ ಕೆಳಗೆ ಕೊಟ್ಟಿದೆ.) ಎರಡನೇ ದಿನದ ಮನರಂಜನಾ ಕಾರ್ಯಕ್ರಮದಲ್ಲಿ ಯಾರ್ಕ್ ಶೈರ್ ಕನ್ನಡ ಬಳಗದ ಗಾಯಕ ವೃಂದ ಪ್ರಸ್ತುತ ಪಡಿಸಿದ ಚಿರನೂತನ ‘ನಿತ್ಯೋತ್ಸವ’, ನಾಡ ಭಕ್ತಿ ಉಕ್ಕಿಸುವ ‘ಅಪಾರ ಕೀರ್ತಿ’ ಚಿತ್ರಗೀತೆಗಳು ಸಭಿಕರನ್ನು ಕನ್ನಡತೆಯ ಭಾವನೆಯಲ್ಲಿ ತೇಲಿಸಿದವು. ಗುರುಪ್ರಸಾದ್ ಪಟ್ವಾಲ್ ಇಲ್ಲಿಯೇ ತರಬೇತಿ ಕೊಟ್ಟು ಬೆಳೆಸಿದ ತಂಡ ಪ್ರದರ್ಶಿಸಿದ ‘ಪಂಚವಟಿ’ ಯಕ್ಷಗಾನ ಕಿರು ಪ್ರಸಂಗ ಕನ್ನಡದ ಜಾನಪದ ಕಲೆಯ ವೈವಿಧ್ಯತೆಯ ಪ್ರದರ್ಶನದೊಂದಿಗೆ, ಯು.ಕೆ ಯಲ್ಲಿ ಈ ಪ್ರಕಾರವನ್ನು ಬೆಳೆಸಿ, ಪ್ರಚಲಿತಗೊಳಿಸುವ ಸಾಹಸದ ದ್ಯೋತಕವಾಗಿತ್ತು. ಕನ್ನಡ ಪ್ರಭದ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆಯವರು, ಕನ್ನಡ ಬಳಗದ ಕಾರ್ಯವನ್ನು ಶ್ಲಾಘಿಸುತ್ತ, ಬಳಗ ನೂರ್ಕಾಲ ಬಾಳಲಿ, ಕನ್ನಡದ ಬಾವುಟವನ್ನು ವಿದೇಶಿ ನೆಲದಲ್ಲಿ ಹಾರಿಸಲಿ, ಸಾಂಕೇತಿಕವಾಗಿ ಕನ್ನಡದ ಸೀಮೆಯನ್ನು ಕರ್ನಾಟಕದಿಂದಾಚೆ ವಿಸ್ತರಿಸುತ್ತಿರಲಿ ಎಂದು ಆಶಿಸಿದರು. ವಿಶ್ವವಾಣಿಯ ಪ್ರವರ್ತಕರೂ, ಪ್ರಧಾನ ಸಂಪಾದಕರೂ ಆದ ಶ್ರೀ ವಿಶೇಶ್ವರ ಭಟ್ಟರು, ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಅನಿವಾಸಿ ಕನ್ನಡಿಗ ಸಂಘಗಳ ಮಹತ್ವ, ಇತರ ಭಾಷಿಕರಿಂದ ನಾವು ಮಾತೃ ಭಾಷೆಯ ಉಳಿವಿಗೆ, ಪ್ರಸಾರಕ್ಕೆ ಕಲಿಯಬೇಕಾದ ವಿಷಯಗಳನ್ನು ಸುಂದರವಾಗಿ ವಿವರಿಸಿದರು. ಅನ್ಯ ದೇಶಗಳಲ್ಲಿರುವ ಕನ್ನಡ ಸಂಘಗಳ ಅನುಭವಗಳನ್ನು ಹೀರಿ ಕನ್ನಡ ಬಳಗ ಹೇಗೆ ಅಭಿವೃದ್ಧಿಯಾಗಬಹುದು ಎಂದು ವಿಸ್ತರಿಸಿದರು. ಸ್ವಾಮಿ ಜಪಾನಂದಜಿಯವರು ಕನ್ನಡ ಭಾಷೆ ನಶಿಸಬಾರದು, ಬಳಗ ಮಾಡುತ್ತಿರುವ ಕಾರ್ಯ ಈ ದಿಶೆಯಲ್ಲಿ ಮಹತ್ತರವಾಗಿದೆ; ಈ ಕಾರ್ಯಕ್ಕೆ ಕನ್ನಡಿಗರೆಲ್ಲರೂ ನೂರಾನೆಯ ಬಲ ಸೇರಿಸಿ ಎಂದು ನೆರೆದವರಲ್ಲಿ ಉತ್ಸಾಹ ತುಂಬಿದರು.(ಕೆಳಗೆ ಕೊಟ್ಟ ಶ್ರೀಮತಿ ಶ್ರೀರಂಜಿನಿ ಸಿಂಹ ಅವರ ಲೇಖನದಲ್ಲಿ ಇನ್ನಷ್ಟು ವಿವರಗಳಿವೆ.) ಕನ್ನಡ ಬಳಗ ವಿಶೇಷವಾಗಿ ಕನ್ನಡ ಸಾಹಿತ್ಯವನ್ನು ಬೆಂಬಲಿಸುತ್ತ ಬಂದಿದೆ. ಕನ್ನಡ ಬಳಗದ ಸಾಹಿತ್ಯಾಸಕ್ತ ಸದಸ್ಯರು ಹುಟ್ಟುಹಾಕಿದ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಚಾರ ವೇದಿಕೆ ತನ್ನ ಅನಿವಾಸಿ (anivaasi.com) ಜಾಲತಾಣದಲ್ಲಿ ವಾರಕ್ಕೊಮ್ಮೆ ಲೇಖನ, ಕಥೆ, ಕವನ, ಪ್ರಬಂಧಗಳನ್ನು ಪ್ರಕಟಿಸುತ್ತಿದೆ. ಹಾಗೆಯೇ, ಕನ್ನಡ ಬಳಗದ ಕಾರ್ಯಕ್ರಮಗಳಿಗೆ ಬರುವ ಸಾಹಿತ್ಯಾಸಕ್ತರನ್ನು ಒತ್ತಟ್ಟಿಗೆ ತಂದು ಸಮಾನಾಂತರ ಸಭೆಗಳನ್ನು ಕಳೆದ ಒಂದು ದಶಕದಿಂದ ನಡೆಸುತ್ತಿದೆ. ಈ ಬಾರಿ ಕನ್ನಡದ ಮೂರು ಪ್ರಮುಖ ಆಹ್ವಾನಿತರು ಅನಿವಾಸಿ ಸಭೆಯಲ್ಲಿ ಸಕ್ರಿಯವಾಗಿ ಪಾಲುಗೊಂಡರು. ಶಿಕ್ಷಣ ನೀತಿ, ಮಾಧ್ಯಮಗಳ ಪ್ರಬಲತೆ-ಪ್ರಭಾವ ಎಂಬ ಎರಡು ವಿಷಯಗಳು ಅತಿಥಿಗಳಾದ ಪ್ರೊಫೆಸರ್ ಕರ್ಜಗಿ, ಶ್ರೀಯುತ ರವಿ ಹೆಗಡೆ ಹಾಗೂ ವಿಶ್ವೇಶ್ವರ ಭಟ್ಟರ ಸಮ್ಮುಖದಲ್ಲಿ ಚರ್ಚಿಸಲ್ಪಟ್ಟವು. ಸದಸ್ಯರ ಚರ್ಚೆಯ ನಂತರ ಅತಿಥಿಗಳು ತಮ್ಮ ಅಭಿಪ್ರಾಯಗಳನ್ನು ಸಭಿಕರಿಗೆ ಸುದೀರ್ಘವಾಗಿ ತಿಳಿಸಿದ್ದಲ್ಲದೆ, ಆಧುನಿಕ ತಂತ್ರಜ್ಞಾನ ಕಲಿಕೆ, ಮಾಧ್ಯಮ ಹಾಗು ಭಾಷೆಯ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಿಸಿದರು. ಸಭಿಕರೊಡನೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಮೇಲಿನ ಪ್ರಶ್ಳಿಗಳಿಗೆ ಪಾಂಡಿತ್ಯಪೂರ್ಣ ಉತ್ತರಗಳನ್ನು ನೀಡಿ, ಸಭಿಕರೊಡನೆ ಬೆರೆತು ಸಂಭಾಷಿಸಿದರು. (ಇದರ ಪ್ರತ್ಯೇಕ ವರದಿಯನ್ನು ಕಳೆದ ವಾರದ ’ಅನಿವಾಸಿ’ ಸಂಚಿಕೆಯಲ್ಲಿ ನೋಡಿರಿ) https://anivaasi.com/2023/10/06/%e0%b2%85%e0%b2%a8%e0%b2%bf%e0%b2%b5%e0%b2%be%e0%b2%b8%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%95%e0%b2%b9%e0%b2%b3/ ಕನ್ನಡ ಬಳಗ ದತ್ತಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಯು.ಕೆ ಹಾಗೂ ಕರ್ನಾಟಕದಲ್ಲಿ ಹಲವಾರು ಸಂಘ-ಸಂಸ್ಥೆಗಳೊಡನೆ ಜೊತೆಯಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಬಂದಿದೆ. ಈ ಉದಾತ್ತ ಕಾರ್ಯ, ಕಾರ್ಯಕ್ರಮದುದ್ದಕ್ಕೂ ಹಲವು ಮಾಧ್ಯಮಗಳಲ್ಲಿ ಬಿತ್ತರವಾಯಿತು. ಎರಡು ದಿನಗಳ ರಂಜಿತ ಕಾರ್ಯಕ್ರಮ ಎಲ್ಲ ವಯೋಧರ್ಮಗಳಿಗೆ ಪೂರಕವಾಗಿದ್ದಲ್ಲದೆ, ಕಲೆತ ಕನ್ನಡಿಗರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದ್ದಲ್ಲಿ ಸಂದೇಹವಿಲ್ಲ.
1.1 ಉದ್ಘಾಟನೆ ಮತ್ತು ಪ್ರಥಮ ದಿನದ ಬೆಳಗಿನ ಕಾರ್ಯಕ್ರಮ ೩೦ ಸೆಪ್ಟಂಬರ್, ೨೦೨೩
ಲೇಖನ: ಅನ್ನಪೂರ್ಣ ಆನಂದ್
ಸೆಪ್ಟೆಂಬರ್, ಅಕ್ಟೋಬರ್ UK ಚಳಿಗಾಲಕ್ಕೆ ಕಾಲಿಡುವ ಸಮಯ. ಆದರೆ, ೩೦ ನೇ ಸೆಪ್ಟೆಂಬರ್, ಸೂರ್ಯ, ಕನ್ನಡ ಬಳಗ ಯು.ಕೆ (KBUK) ಯ ೪೦ ನೇ ವಾರ್ಷಿಕೋತ್ಸವದ ‘ಸಂಭ್ರಮ’ ವನ್ನು ವೀಕ್ಷಿಸಲು ಬರುತ್ತಿದ್ದಾನೆ ಅನ್ನುವಂತೆ, ತನ್ನ ಎಳೆ ಬಿಸಿಲನ್ನು ಪಸರಿಸುತ್ತಾ ಆಗಸದಲ್ಲಿ ಏರತೊಡಗಿದ. ಲಂಡನ್, ಹಾರೋ ದಲ್ಲಿರುವ ಬೈರನ್ ಹಾಲ್ ನಲ್ಲಿ ಚಟುವಟಿಕೆಯಿಂದ ಕೆಲಸಗಳು ಶುರುವಾದವು. KBUK ಯ ಸ್ವಯಂ ಸೇವಕರು ಸಭಾಂಗಣವನ್ನು ಹಾರ ತುರಾಯಿಗಳೊಂದಿಗೆ ಸಿಂಗರಿಸಲು ಪ್ರಾರಂಭಿಸಿದರೆ, ಅಡಿಗೆಯವರು ಉಪಹಾರದ ವ್ಯವಸ್ಥೆಯಲ್ಲಿ ತೊಡಗಿದರು. ನಿಧಾನವಾಗಿ ಜನಸ್ತೋಮ ಆಗಮಿಸತೊಡಗಿತು. ಹೆಂಗಸರು ರೇಷ್ಮೆ ಸೀರೆ, ಒಡವೆಗಳಿಂದ ಸಿಂಗರಿಸಿಕೊಂಡಿದ್ದರೆ, ಗಂಡಸರು, ಥರಾವರೀ ಶೇರ್ವಾಣಿ, ಸೂಟ್ ಬೂತುಗಳಲ್ಲಿ ಬಂದರು. ಮಕ್ಕಳು ಮುದ್ದಾಗಿ ಸಿಂಗರಿಸಿಕೊಂಡು ಕುಣಿದಾಡುತ್ತಾ ಆಗಮಿಸಿದರು. ಸದ್ದು ಹದ್ದಳ ಮದುವೆ ಮನೆಯ ಕಳೆಯನ್ನು ತಂದಿತು.
ಮುಖ್ಯ ಅತಿಥಿಗಳಾದ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರನ್ನು, ಪೂರ್ಣ ಕುಂಭ ಮತ್ತು ವೇದ ಮಂತ್ರಗಳೊಂದಿಗೆ, ವಿಜೃಂಭಣೆಯಿಂದ ಸ್ವಾಗತಿಸಲಾಯಿತು. ಮಿಕ್ಕ ಅತಿಥಿಗಳಾದ ಡಾ| ಗುರುರಾಜ ಕರ್ಜಗಿ, ವಿಶ್ವೇಶ್ವರ ಭಟ್, ರವಿ ಹೆಗಡೆ, ಕಿರಣ್ ಉಪಾಧ್ಯಾಯ, ಡಾ| ನಂದಕುಮಾರ್ ಆಗಮಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗನ್ನು ತಂದರು.
KBUK ಕಾರ್ಯಕಾರಿ ಸಮಿತಿಯ ಸದಸ್ಯೆಯಾದ ಶ್ರೀಮತಿ | ವಿದ್ಯಾರಾಣಿಯವರ ಸ್ವಾಗತ ಮತ್ತು ಚೆಸ್ಟರ್ ನ ಉಷಾ ರಾವ್ ಅವರ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. KBUK ಕಾರ್ಯದರ್ಶಿ ಡಾ| ಮಧುಸೂದನ್ ರಾಘವೇಂದ್ರ ಅತಿಥಿಗಳ ಬಗ್ಗೆ ಮತ್ತು ಕನ್ನಡ ಬಳಗದ ಬಗ್ಗೆ ಕೆಲವು ಮಾತನಾಡಿದರು. ನಂತರ ಅಧ್ಯಕ್ಷೆ ಶ್ರೀಮತಿ| ಸುಮನಾ ಗಿರೀಶ್ , KBUK ಬೆಳದು ಬಂದ ಹಾದಿಯನ್ನು ಕುರಿತು ಎಲ್ಲರಿಗೂ ತಿಳಿಸಿದರು. ಅಥಿತಿಗಳೆಲ್ಲ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಾರಾಜರು ಮತ್ತು ಡಾ| ಕರ್ಜಗಿ ಅವರ ಹಿತ-ಮಿತ ಮಾತುಗಳ ನಂತರ ಮಹಾರಾಜರನ್ನು ಸನ್ಮಾನಿಸಲಾಯಿತು. ಮಹಾರಾಜರ ವಿನಮ್ರತೆ ಮತ್ತು ಸರಳತೆ ಎಲ್ಲರ ಮನಸ್ಸನ್ನು ಸೂರೆಗೊಂಡಿತು ಎಂದರೆ ಅತಿಶಯೋಕ್ತಿಯಲ್ಲ! ಆನಂತರ ‘ಸಂಭ್ರಮ’ - ೪೦ ನೇ ವರ್ಷದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ನಂತರ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮ ಅನ್ನಪೂರ್ಣ ಆನಂದ್ ಮತ್ತು ರಾಧಿಕಾ ಜೋಶಿ ಅವರ ನಿರೂಪಣೆಯೊಂದಿಗೆ ಪ್ರಾರಂಭವಾಯಿತು. ಮೊದಲಿಗೆ, ಉಷಾ ರಾವ್ ಅವರ ಭರತನಾಟ್ಯ ಶಾಲೆಯ ವಿದ್ಯಾರ್ಥಿನಿಯರು ಗಣೇಶ ಸ್ತುತಿಯನ್ನು ಉತ್ತಮವಾಗಿ ಪ್ರದರ್ಶಿಸಿದರು. ನಂತರ, ವ್ರತ ಚಿಗಟೇರಿ ಮತ್ತು ಅವರ ಶಿಷ್ಯೆಯರು ಕೂಚುಪುಡಿ ಶೈಲಿಯಲ್ಲಿ ನಂದಿ ಶ್ಲೋಕವನ್ನು ಬಹಳ ಅಚ್ಚುಕಟ್ಟಾಗಿ ಪ್ರದರ್ಶಿಸಿದರು.
ಲಂಡನ್ ನಗರದಲ್ಲಿ ಹಲವು ವಾರಗಳ ಹಿಂದೆ ನಡೆದ ‘saree walkathlon ‘ ನಲ್ಲಿ ಭಾಗವಹಿಸಿದ್ದ ಹಲವು ಕನ್ನಡತಿಯರನ್ನು ವೇದಿಕೆಗೆ ಕರೆದು ಪ್ರಶಂಸಿಸಲಾಯಿತು. ನಂತರ ಕುಮಾರಿ|ಅನನ್ಯ ಕದಡಿ ಬಹಳ ಸುಶ್ರಾವ್ಯವಾಗಿ ‘ಶ್ರೀ ಚಾಮುಂಡೇಶ್ವರಿ’ ಕೀರ್ತನೆಯನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಹಾಡಿದರು.
ಹಾರೋ (Harrow) ಕುವೆಂಪು ಸಂಘದ ಚಿಣ್ಣೆಯರು ಪ್ರಸಿದ್ಧ ಕನ್ನಡ ಚಲನಚಿತ್ರದ ಹಾಡುಗಳಿಗೆ ನೃತ್ಯ ಮಾಡಿ ಸಿಳ್ಳೆಗಳನ್ನು ಗಿಟ್ಟಿಸಿದರು. ಗುರು ಅಶ್ವಥಿ ಅವರು ಸಂಯೋಜಿಸಿದ ವಿನಾಯಕ ಕೃತಿಯನ್ನು ಅವರ ಶಿಷ್ಯೆಯರು ಭರತನಾಟ್ಯ ಶೈಲಿಯಲ್ಲಿ ಪ್ರಸ್ತುತಪಡಿಸಿದರು. ನಂತರ ಅನೂಪ್ ರಾವ್, ಗಿಟಾರೊಂದಿಗೆ ‘ಬಾನಿಗೊಂದು ಎಲ್ಲೆ ಎಲ್ಲಿದೆ’ - ಪ್ರಸಿದ್ಧ ಚಲನಚಿತ್ರದ ಹಾಡನ್ನು ಬಹಳ ಚೆನ್ನಾಗಿ ಹಾಡಿ ಚಪ್ಪಾಳೆಗಿಟ್ಟಿಸಿದರು.
ಬೆಳಗಿನ ಸಾಂಸ್ಕೃತಿಕ ಕಾರ್ಯಕ್ರಮದ ಕಡೆಯ ಪ್ರದರ್ಶನ ಯಾರ್ಕ್ಶೈರ್ ಕನ್ನಡ ಬಳಗದ ಸದಸ್ಯರಿಂದ ‘ಬಾರಿಸು ಕನ್ನಡ ದಿಂಡಿಮವ’ ನೃತ್ಯ ನಾಟಕ. ಸುಮಾರು ೪೦ ಕ್ಕೂ ಹೆಚ್ಚು ಮಂದಿ ಭಾಗವಹಿಸಿದ ಈ ಭವ್ಯ ನೃತ್ಯನಾಟಕ ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿ ಯನ್ನು ಬಹಳ ಅದ್ಭುತವಾಗಿ ಪ್ರದರ್ಶಿಸಿತು. ಡಾ| ಸುಮನಾ ನಾರಾಯಣ್ ಮತ್ತು ವ್ರತ ಚಿಗಟೇರಿ ಅವರ ನಾಟ್ಯ ಸಂಯೋಜನೆಯಲ್ಲಿ, ರಾಜ ವಿಷ್ಣುವರ್ಧನನಿಂದ ಪ್ರಾರಂಭವಾಗಿ, ಈಗಿನ ಮೈಸೂರು ಒಡೆಯರ್ ವರೆಗಿನ ಪ್ರಮುಖ ಐತಿಹಾಸಿಕ ಘಟನೆಗಳು, ರಾಜ್ಯದ ಪ್ರಗತಿ, ಜನತೆಯ ಸಂಸ್ಕೃತಿಯನ್ನು ಮನೋಜ್ಞವಾಗಿ ಪ್ರದರ್ಶಿಸಿದರು.
ಬೆಳಗಿನ ಎಲ್ಲ ಕಾರ್ಯಕ್ರಮಗಳನ್ನು ಮನಸ್ಸಿಟ್ಟು ನೋಡಿ, ಮೆಚ್ಚಿದ ಕನ್ನಡ ಜನರ ಮನ ತೃಪ್ತಿಯಿಂದ ತುಂಬಿತ್ತು. ಹೊಟ್ಟೆಯನ್ನು ಸಂತೃಪ್ತಿಗೊಳಿಸಲು ಊಟದ ಸಾಲಿನಲ್ಲಿ ಹೋಗಿ ನಿಲ್ಲಲುಪಕ್ರಮಿಸಿದರು.
1. 2.ಸುಮಧುರ ಸಂಜೆ ರಾಜೇಶ್ ಕೃಷ್ಣನ್ ನೊಂದಿಗೆ …
ಕನ್ನಡ ಬಳಗದ ೪೦ನೇ ಸಂಭ್ರಮಾಚರಣೆ ಅದ್ದೂರಿಯಾಗಿ ನಡೆಯುತಿತ್ತು. ಬೆಳಗಿನಿಂದ ಸಂಜೆಯವರೆಗೂ ವ್ಯವಿಧ್ಯಮಯ ಕಾರ್ಯಕ್ರಮಗಳು ನೂರಾರು ಕನ್ನಡಾಭಿಮಾನಿಗಳ ಮನ ಸೆಳೆದಿದ್ದವು, ಇನ್ನೇನು ಸಂಜೆಯ ಕಾರ್ಯಕ್ರಮ ಶುರುವಾಗುವುದರಲ್ಲಿತ್ತು. ಜೇನಿನ ಸವಿಯ, ಸುಮಧುರ ಕಂಠದ ಸರದಾರ ರಾಜೇಶ್ ಕೃಷ್ಣನ್ ರವರನ್ನು ಸಂಗೀತೋತ್ಸವಕ್ಕೆ ಬರಮಾಡಿಕೊಳ್ಳುವುದಕ್ಕೆ ನೆರೆದಿದ್ದ ಪ್ರತಿಯೊಬ್ಬರೂ ಕಾತುರತೆಯಿಂದ ಕಾದಿದ್ದರು. ಎಲ್ಲರೂ ಸಂಧರ್ಭಕ್ಕೆ ತಕ್ಕ ಉಡುಗೆ ತೊಡುಗೆಯನ್ನು ತೊಟ್ಟು ತಯಾರಾಗಿದ್ದರು. ಈ ರಸ ಸಂಜೆಗೆ ಕಳೆ ಕಟ್ಟಲು ಮುಖ್ಯ ಅತಿಥಿಗಳಾದ ಮೈಸೂರು ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರೊ ಗುರುರಾಜ ಕರಜಗಿ, ಶ್ರೀ ವಿಶ್ವೇಶ್ವರ ಭಟ್, ಶ್ರೀ ರವಿ ಹೆಗೆಡೆ ಯವರುಗಳು ಉಪಸ್ಥಿತರಿದ್ದರು. ರಾಜೇಶ್ ಕೃಷ್ಣನ್ ರವರ ಬರುವಿಕೆಗೆ ಎದುರು ನೋಡುತಿದ್ದ ಸಭಿಕರ ಗಮನ ಸೆಳೆಯುತ್ತ ತಮ್ಮ ಸುಂದರ ಗಾಯನದಿಂದ ಗಾಯಕಿ ಪುಷ್ಪ ಆರಾಧ್ಯರವರು ‘ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆ ಎಲ್ಲಿರುವೆ’ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು’ ಎಂದು ಹಾಡಿ ಮುಗಿಸುತ್ತಿದ್ದಂತೆಯೇ ‘ಆರ್ ಕೆ, ಆರ್ ಕೆ, ಆರ್ ಕೆ’ ಎಂಬ ಅಭಿಮಾನಿಗಳ ಉದ್ಘೋಷದೊಂದಿಗೆ ರಾಜೇಶ್ ಕೃಷ್ಣನ್ ರವರ ಆಗಮನವಾಯಿತು. ಅಭಿಮಾನಿಗಳೆಲ್ಲ ತಾ ಮುಂದು ನಾ ಮುಂದು ಎಂದು ಅವರ ಕೈ ಕುಲುಕಲು, ಸೆಲ್ಫಿ ತೆಗಿಸಿಕೊಳ್ಳಲು ಉತ್ಸುಕರಾದರು. (–>Photo: Ramya)
(ಮುಂದುವರೆದುದು) ನಮ್ಮ ರಸರಿಷಿ ಕುವೆಂಪುರವರ 'ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು' ಸಾಲಿನಂತೆ ಪ್ರಪಂಚದ ಯಾವ ಮೂಲೆಯಲ್ಲಿದ್ದರು ಕನ್ನಡವನ್ನು ಉಳಿಸಿ, ಬೆಳೆಸಿ ಸಂಭ್ರಮಿಸಲು ಸಿಗುವ ಪ್ರತಿಯೊಂದು ಅವಕಾಶವು ಸುವರ್ಣ ಅವಕಾಶವೇ ಹೀಗಿರುವಾಗ, ಇಂತಹ ದೊಡ್ಡ ಮಟ್ಟದಲ್ಲಿ ಇಷ್ಟು ವಿಜೃಂಭಣೆಯಿಂದ ಕನ್ನಡವನ್ನು ಸಂಭ್ರಮಿಸಲು ಅವಕಾಶ ಕಲ್ಪಿಸಿ ಕೊಟ್ಟ ಕನ್ನಡ ಬಳಗ ತಂಡದವರ ಪರಿಶ್ರಮ ಅತ್ಯಂತ ಶ್ಲಾಘನೀಯ. ನಮ್ಮ ಪ್ರೀತಿಯ ಗುರುರಾಜ ಕರಜಗಿಯವರ ಮಾತಿನಲ್ಲಿ ಹೇಳೋದಾದರೆ, ಕನ್ನಡ ನಾಡಿನಲ್ಲಿ ಹುಟ್ಟಿದ್ದು ಪ್ರಕೃತಿ, ನಾಡು ಬಿಟ್ಟರು ಭಾಷೆಯನ್ನು ಬಿಡದೆ ಇರುವುದು ನಮ್ಮ ಸಂಸ್ಕೃತಿ. ಈ ಸಂಸ್ಕೃತಿಯ ವೈಭವಕ್ಕೆ ಕಿರೀಟ ಪ್ರಾಯ ನಮ್ಮ ಸಾಂಸ್ಕೃತಿಕ ನಗರಿ ಮೈಸೂರು ಮಹಾರಾಜರ ಆಗಮನ. ಇಂತಹ ಅಪೂರ್ವ ಕ್ಷಣವನ್ನು ಸಾಧ್ಯವಾಗಿಸಿದ ಹೆಗ್ಗಳಿಕೆ ಕನ್ನಡ ಬಳಗಕ್ಕೆ ಸೇರಿದ್ದು. ನಮ್ಮ ಹೆಮ್ಮೆಯ ಕನ್ನಡಿಗ ರಾಜೇಶ್ ಕೃಷ್ಣನ್ ರವರು ಕೂಡ ಮೈಕ್ ಹಿಡಿದು ಸ್ಟೇಜ್ ಏರುತ್ತಿದ್ದಂತೆ ಹಾಡಿದ ಮೊದಲ ಪದ 'ಕನ್ನಡ'! 'ಕನ್ನಡ ರೋಮಾಂಚನವಿ ಕನ್ನಡ' ವೆಂದು ಅವರ ಕಂಠದಿಂದ ಹೊರ ಹೊಮ್ಮುತಿದಂತೆಯೇ ಇಡೀ ಸಭಾಂಗಣ ರೋಮಾಂಚನಗೊಂಡಿತು. ಕನ್ನಡ ನಾಡಿನ ಜೀವನದಿ ತಾಯಿ ಕಾವೇರಿಗೆ ನಮಿಸುತ್ತಾ ಕನ್ನಡ ತನದಲಿ ತೊಯ್ದ ಸಭಿಕರು ಪುಳಕಿತರಾದರು. ಪ್ರತಿಯೊಬ್ಬ ಕನ್ನಡಿಗನ ಇಂಗಿತವನ್ನು ಸಾರುವ 'ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ' ಎಂದು ಭಾವತುಂಬಿ ಹಾಡಿದ ಪರಿಗೆ ತಲೆದೂಗಿದವರೇ ಎಲ್ಲಾ. ನೆರದಿದ್ದ ರಸಿಕರೆಲ್ಲ ತಮ್ಮ ತಮ್ಮ ಮೊಬೈಲ್ ಟಾರ್ಚ್ ಹಿಡಿದು ಹಾಡಿನ ಲಯಕ್ಕೆ ಕೈದೂಗಲು 'ಇದೆ ನಾಡು ಇದೆ ಭಾಷೆ ಎಂದೆಂದೂ ನನ್ನದಾಗಿರಲಿ' ಎಂದು ಹಾಡಿ ಮುಗಿಸುತಿದ್ದಂತೆಯೇ ಕರತಾಡನ ಮುಗಿಲುಮುಟ್ಟಿತು. ರಾಜೇಶ್ ಕೃಷ್ಣನ್ ರವರ ಹಾಡು ಕೇಳಿದಾಗಲೆಲ್ಲ ಎಸ್ ಪಿ ಬಾಲಸುಬ್ರಮಣ್ಯಂ ರವರು ನೆನಪಾಗುತ್ತಾರೆ. ಗಾನ ಗಂಧರ್ವ ಎಸ್. ಪಿ. ಬಿ ಸಂಗೀತಲೋಕದ ಅನರ್ಘ್ಯ ರತ್ನ, ಅವರಷ್ಟು ವ್ಯವಿಧ್ಯಮಯ, ವೈಶಿಷ್ಟ್ಯಪೂರ್ಣ ಹಾಡುಗಾರರು ಮತ್ತೊಬ್ಬರಿಲ್ಲ ಆದರೆ ಅವರ ಕಂಠವನ್ನು ಹೋಲುವ ಮತ್ತೊಂದು ಕಂಠ ರಾಜೇಶ್ ಕೃಷ್ಣನ್ ರವರದ್ದು ಎಂದರೆ ಅತಿಶಯೋಕ್ತಿ ಅಲ್ಲ. ಎಸ್. ಪಿ. ಬಿಯವರ ಪ್ರಭಾವ ಹಾಗು ಆಶೀರ್ವಾದ ರಾಜೇಶ್ ಕೃಷ್ಣನ್ ಮೇಲೆ ಅಪಾರವಾಗಿದೆ ಅನ್ನುವುದಕ್ಕೆ ಅವರ ಭಾವ ತುಂಬಿದ ಗಾಯನವೇ ಸಾಕ್ಷಿ. ಇಂತಹ ಅದ್ಬುತ ಪ್ರತಿಭೆ ನಮ್ಮ ಕನ್ನಡದ ಹೆಮ್ಮ. ಅವರ ಎವರ್ಗ್ರೀನ್ ಸೂಪರ್ ಹಿಟ್ ಹಾಡುಗಳನ್ನು ಹಾಡಲು ಪ್ರಾರಂಭಿಸಿದೊಡನೆ ಅಭಿಮಾನಿಗಳೆಲ್ಲ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. 'ಯಾರೋ ಕಣ್ಣಲ್ಲಿ ಕಣ್ಣನಿಟ್ಟು', 'ನೂರು ಜನ್ಮಕೂ ನೂರಾರು ಜನ್ಮಕೂ ', 'ಉಸಿರೇ ಉಸಿರೇ', 'ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು', 'ಜೊತೆಯಲಿ ಜೊತೆಜೊತೆಯಲಿ ', ಹಾಡುತ್ತಾ ಅಭಿಮಾನಿಗಳಿಂದ ಹಾಡಿಸುತ್ತಾ ಸಂಜೆಯನ್ನು ಮತ್ತಷ್ಟು ರಸಮಯವಾಗಿಸಿದರು. ಅಭಿಮಾನಿಗಳ ಉತ್ಸಾಹಕ್ಕೆ, ಪ್ರೀತಿಗೆ ಮನಸೋತು ಹಿನ್ನಲೆ ವಾದ್ಯಘೋಷ್ಠಿ (ಕ್ಯಾ ರಿಯೋಕೆ) ಇಲ್ಲದೆ ಜನರು ಕೇಳಿದ ಹಾಡುಗಳನ್ನು ಸಹ ಹಾಡಿದರು. ರಾಜೇಶ್ ಕೃಷ್ಣನ್ unplugged ಸೆಶನ್ ಬಹಳ ವಿಶೇಷವಾಗಿತ್ತು 'ಒಂದೇ ಉಸಿರಂತೆ ಇಂದು ನಾನು ನೀನು', 'ಮಾಮರವೆಲ್ಲೋ ಕೋಗಿಲೆಯೆಲ್ಲೋ' , 'ಒಂದೊಂದೇ ಬಚ್ಚಿಟ್ಟ ಮಾತು', 'ಹೊಂಬಾಳೆ ಹೊಂಬಾಳೆ', 'ಕೇಳದೆ ನಿಮಗೀಗ' ಹಾಗು 'ಶ್ರೀಗಂಧ ಶ್ರೀಗಂಧ ಶ್ರೀಗಂಧ', ಅಂತ ಹಾಡ್ತಾ ಗಂಧದ ಗುಡಿಗೆ ಕರೆದೊಯ್ದರು. ಇಷ್ಟೆಲ್ಲಾ ಹಾಡುಗಳ ಮನೋರಂಜನೆಯಿಂದ ಬೇರೆಯೆ ಲೋಕದಲ್ಲಿ ತೇಲುತಿದ್ದ ಅಭಿಮಾನಿಗಳನ್ನು ಮತ್ತಷ್ಟು ರಂಜಿಸಲು ಅವರ ಸಹ ಗಾಯಕ ನಟರಾಜ್ ರವರೊಂದಿಗೆ 'ಕುರುಬನ ರಾಣಿ', 'ಕೂರಕ್ಕೆ ಕುಕ್ರಳ್ಳಿ ಕೆರೆ', 'ಏನೆ ಕನ್ನಡತಿ', 'ಪಾಪಿ ಕಲಿಗಾಲ ಕೆಟ್ಟೋಯ್ತಯ್ಯಾ', 'ಮಸ್ತ್ ಮಸ್ತ್ ಹುಡುಗಿ', 'ಮಾರಿ ಕಣ್ಣು ಹೋರಿ ಮ್ಯಾಗೆ', ಹೀಗೆ ಒಂದರ ನಂತರ ಇನ್ನೊಂದು ನಾನ್ ಸ್ಟಾಪ್ ಹಾಡಿದ ರಾಜೇಶ್ ಕೃಷ್ಣನ್ ಮ್ಯಾಜಿಕ್ ಗೆ ಜನರು ಪರವಶರಾದರು. ಊಟದ ಸಾಲಿನಲ್ಲಿ ನಿಂತವರು ಸಹ ಹಾಡಿಗೆ ಹೆಜ್ಜೆ ಹಾಕುತ್ತಿದಂತೆಯೇ ಕಾರ್ಯಕ್ರಮ ಮುಕ್ತಾಯ ಹಂತವನ್ನು ತಲುಪಿತ್ತು. ರಾಜೇಶ್ ಕೃಷ್ಣನ್ ಹಾಗು ಅವರ ತಂಡದವರಿಗೆ ಧನ್ಯವಾದಗಳನ್ನು ಕೋರುತ್ತಾ, ಕನ್ನಡ ಬಳಗದ ವತಿಯಿಂದ ಗೌರವನ್ನು ಸಮರ್ಪಿಸಿ, ಸನ್ಮಾನಿಸಿ ಬೀಳ್ಕೊಡಲಾಯಿತು. ಕಿಕ್ಕಿರಿದು ತುಂಬಿದ್ದ ಜನರು ಕಾರ್ಯಕ್ರಮ ಮುಗಿದೇ ಹೋಯ್ತು ಎಂಬ ಬೇಸರದಲ್ಲಿದ್ದರೂ ಬಿಸಿ ಬಿಸಿ ಭರ್ಜರಿ ಊಟದ ಸುವಾಸನೆಯ ಸೆಳೆತಕ್ಕೆ ಸೋತು ಹೊಟ್ಟೆ ತುಂಬಾ ಉಂಡು ಹಾಡುಗಳನ್ನು ಗುನುಗುತ್ತ ತಮ್ಮ ತಮ್ಮ ಗೂಡಿನತ್ತ ಮರಳಿದರು. ಬಹುಶ ನೀವು ಕೂಡ ಈಗಾಗಲೇ ಮೇಲಿನ ಹಾಡುಗಳನ್ನು ಗುನುಗುತ್ತಿರಬಹುದು. ಅದು ಯಾವ ಹಾಡೆಂದು ಕಾಮೆಂಟ್ ಮಾಡಿ ತಿಳಿಸಿ. ರಮ್ಯ ಭಾದ್ರಿ
2. ಸ್ಥಳೀಯ ಕಲಾವಿದರ ಕಲಾ ಪ್ರದರ್ಶನ - ಎರಡನೆಯ ದಿನ ೧ ನೇ ಅಕ್ಟೋಬರ್, ೨೦೨೩
ಲೇಖಕಿ: ಶ್ರಿಮತಿ ಶ್ರಿರಂಜಿನಿ
ಸುಶ್ರಾವ್ಯವಾದ ಸಂಗೀತ ಸಂಜೆಯ ಕಾರ್ಯಕ್ರಮದ ನಂತರ, ಮರುದಿನವೂ ಅಷ್ಟೇ ಸಂಭ್ರಮದಿಂದ ಎಲ್ಲಾ ಸ್ಥಳೀಯ ಪ್ರತಿಭಾನ್ವಿತ ಕಲಾವಿದರು ವೇದಿಕೆಯಲ್ಲಿ ತಮ್ಮ ತಮ್ಮ ಪ್ರದರ್ಶನದೊಂದಿಗೆ ಸಿದ್ಧರಾಗಿದ್ದರು . ಶಾಸ್ತ್ರೀಯ ನೃತ್ಯ ಪ್ರದರ್ಶನಗಳು , ಸಂಗೀತ ಕಾರ್ಯಕ್ರಮಗಳು ನೆನ್ನೆಯಂತೆ ನಡೆದವು. “ಜೋಗದ ಸಿರಿ ಬೆಳಕಿನಲ್ಲಿ” – ನಿಸಾರ್ ಅಹ್ಮದ್ ರವರ ಗೀತೆ ನಿತ್ಯೋತ್ಸವದಿಂದ ಎರಡೆನೇ ದಿನದ ಕಾರ್ಯಕ್ರಮ YSKB ತಂಡದಿಂದ ಆರಂಭವಾಯಿತು. ಸಣ್ಣ ಮಕ್ಕಳಿಂದ, ಹಿರಿಯ ಸದಸ್ಯರವರೆಗೂ ಎಲ್ಲರೂ ವೇದಿಕೆಯಲ್ಲಿ ಭಾಗವಹಿಸಿದರು. ನಂತರದಲ್ಲಿ ಭರತನಾಟ್ಯ ಪ್ರದರ್ಶನವನ್ನು ಹಲವಾರು ತಂಡಗಳು ನೀಡಿದವು – ಉನ್ನತಿ ಪೈ, ಹ್ಯಾರೋ ಕನ್ನಡ ಸಂಘ ಮತ್ತು ವಸುಂಧರಾ ದೊರೆಸ್ವಾಮಿ ಶಿಷ್ಯವೃಂದ. ಇದಲ್ಲದೆ ಭಾರತದ ಮತ್ತೊಂದು ಶಾಸ್ತ್ರೀಯ ನೃತ್ಯವಾದ ಕಥಕ್ ಪ್ರದರ್ಶನವಂತೂ ಅತ್ಯಂತ ಮನಮೋಹಕ. ಇದು ಕುಮಾರಿ ಸಂಚಿತಾ ಶನೈಳ ಮೊಟ್ಟಮೊದಲ ಯುಕೆ ಪ್ರದರ್ಶನ. (ಕಾಕ ತಾಳೀಯವೆಂದರೆ ಆಕೆ ನಿರುಪಮಾ ಮತ್ತು ರಾಜೇಂದ್ರ ಅವರ ಶಿಷ್ಯೆ. ಅವರು ಈ ಮೊದಲೇ ಕನ್ನಡಬಳಗದ ರಜತ ಮಹೋತ್ಸವದಲ್ಲಿ ಯು ಕೆದಲ್ಲಿ (೨೦೦೮) ತಮ್ಮ ನೃತ್ಯ ಪ್ರದರ್ಶನ ಮಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದರು.-ಸಂ) ಮುಂದಿನ ಕಾರ್ಯಕ್ರಮ “ಬಯಲಾಟ ಯುಕೆ” ತಂಡದವರು ಪ್ರಸ್ತುತ ಪಡಿಸಿದ ದಕ್ಷಿಣ ಕನ್ನಡ ಕಲೆ – ಯಕ್ಷಗಾನ, “ಸೀತಾಪಹರಣ” ಪ್ರೇಕ್ಷಕರಿಗೆ ರೋಮಾಂಚನವನ್ನು ಉಂಟುಮಾಡಿತು. ಅವರ ವೇಷ-ಭೂಷಣ, ಉಡುಗೆ -ತೊಡುಗೆ ವೀಕ್ಷಕರನ್ನು ಮೋಹಕಗೊಳಿಸಿತು.
ಮುಂದಿನ ಪ್ರಸ್ತುತಿ ನಮ್ಮ ತಂಡದ್ದು. ನಮ್ಮ ಪ್ರಸ್ತುತಿ ರಾಗಂ-ತಾನಂ-ಪಲ್ಲವಿ(RTP). ಏನಪ್ಪಾ ಈ RPT ಅಂದ್ರೆ? ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅತ್ಯಂತ ಕಠಿಣವಾದ, ಘನವಾದ ಮನೋಧರ್ಮ ಪ್ರಸ್ತುತಿ. ಒಂದು ರಾಗವನ್ನು ಅಚ್ಚುಕಟ್ಟಾಗಿ ಹಾಡಿ, ಅನಂತನ ನಾಮಸ್ಮರಣೆಯನ್ನು ಲಯದ ಚೌಕಟಲ್ಲಿ ಹಾಡಿದ ನಂತರ ಪಲ್ಲವಿಯನ್ನು ತ್ರಿಕಾಲದಲ್ಲಿ ಹಾಡಿ, ನೆರವಲ್ ಮತ್ತು ಸ್ವರ ಪ್ರಸ್ಥಾನ ಮಾಡಿ ಒಂದು ಮುಕ್ತಾಯಿ ಹಾಡುವುದು. ಶುಭಸ್ಯ ಶೀಘ್ರಮ್ ಅನ್ನೋ ಹಾಗೆ ಸೇರಿಕೋಂಡ ತಂಡ ನಮ್ಮದು. ಅಭ್ಯಾಸಕ್ಕೂ ಸೈ, ಊಟಕ್ಕೂ ಸೈ ಅನ್ನೋ ಹಾಂಗೆ- ಪ್ರಮೋದ್ ಪ್ರಸನ್ನ ಅವರ ಮನೆಯಲ್ಲಿ ಅಭ್ಯಾಸ, ಭೋಜನ ಎಲ್ಲಾ ತಯಾರಿ ನೆಡೆದಿತ್ತು. ನಾವೆಲ್ಲರೂ ಸೆಪ್ಟೆಂಬರ್ ೨೪ನೇ ಭಾನುವಾರ ಬೆಳ್ಳಿಗೆ ಅವರ ಮನೆಯಲ್ಲಿ ಅಭ್ಯಾಸ ಪ್ರಾರಂಭಿಸಿ ಸಾಯಂಕಾಲದವರೆಗೂ ಅಭ್ಯಾಸ ಮುಂದುವರಿಸಿದೆವು. ನಂತರ online ಅಭ್ಯಾಸವನ್ನೂ ಮಾಡಿದವು. ಈ ಪ್ರಸ್ತುತ ಪಲ್ಲವಿಯನ್ನು ವಿದ್ವಾನ್ ಪ್ರಮೋದ್ ರುದ್ರಪಟ್ಟಣ ಪ್ರಸನ್ನ ಕುಮಾರ್ ಸಂಯೋಜಿಸಿದ್ದು – ರಾಗ ಕೀರವಾಣಿ, ಆದಿ ತಾಳ. ಪಲ್ಲವಿಯ ಸಾಲುಗಳು ಹೀಗಿದೆ – “ಕನ್ನಡ ಬಳಗ ಯುಕೆ ಭುವನೇಶ್ವರಿ ನಲವತ್ತರ ಸಂಭ್ರಮ“. ಹಾಡುಗಾರಿಕೆಯಲ್ಲಿ – ಶ್ರೀಮತಿ ಪಾವನ ಕುಂಬ್ಳೆ, ಕುಮಾರಿ ಹರ್ಷಿತ, ಶ್ರೀ ಅರುಣ್ ಕುಕ್ಕೆ, ಶ್ರೀಮತಿ ಶ್ರೀರಂಜಿನಿ, ತಾಳ ಸಹಕಾರದಲ್ಲಿ ಶ್ರೀಮತಿ ಸ್ವಾತಿ ಪ್ರಮೋದ್, ತಬಲಾ ಸಹಕಾರದಲ್ಲಿ ಶ್ರೀ ಅನಿರುದ್ಧ್, ಮೃದಂಗ ಸಹಕಾರದಲ್ಲಿ ಡಾ.ರವೀಶ್ ಶೆಟ್ಟಿ ಇವರಿದ್ದರು.
ಮಾಣಿಕ್ಯ ಸಂಭ್ರಮ ಗೀತೆ (RTP)
ಬೇಸಿಂಗ್ ಸ್ಟೋಕ್ ರಾಮಮೂರ್ತಿ ಬರೆಯುತ್ತಾರೆ:
3 ಇಂದು-ಅಂದು
ಈಚೆಗೆ ನಡೆದ ಕನ್ನಡ ಬಳಗದ ೪೦ನೇ ವಾರ್ಷಿಕೋತ್ಸವದ ಸಮಯದಲ್ಲಿ ಮುಖ್ಯ ಅತಿಥಿಗಳಾಗಿ ಬಂದಿದ್ದ ಯದುವೀರ ಕೃಷ್ಣ ದತ್ತ ಒಡೆಯರ್ ಅವರು ತಮ್ಮ ಪೂರ್ವಿಕರು ಇಂಗ್ಲೆಂಡ್ ಗೆ ಬಂದಿದ್ದ ಬಗ್ಗೆ ಹೇಳಿಕೆ ಕೊಟ್ಟರು. ಈ ವಿಷಯದ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಇಲ್ಲಿ ಒಂದು ಸಂಕ್ಷಿಪ್ತ ವರದಿ.
ನಾಲ್ವಡಿ ಕೃಷ್ಣ ರಾಜ ಒಡೆಯರ್ ಮಹಾರಾಜರ ಆರೋಗ್ಯದ ಬಗ್ಗೆ ೧೯೩೦ರಲ್ಲಿ ಆತಂಕ ಇತ್ತು. ಇವರ ವೈದ್ಯರ ಸಲಹೆ ಮೇಲೆ, ಇಂಗ್ಲೆಂಡ್ ನಲ್ಲಿ ಚಿಕಿತ್ಸೆ ಪಡೆಯಲು ಜೂನ್ ೨೧, ೧೯೩೬ ಬೆಂಗಳೂರಿನಿಂದ ಮುಂಬೈ (ಆಗ ಬಾಂಬೆ) ರೈಲ್ ನಲ್ಲಿ ತಮ್ಮ ದೊಡ್ಡ ಪರಿವಾರದೊಂದಿಗೆ ಪ್ರಯಾಣ ಮಾಡಿದರು. ೩೦ ಸಿಬ್ಬಂದಿ , ಮಹಾರಾಜರಿಗೆ ಬೇಕಾದ ಸಾಮಗ್ರಿ ಗಳು, ಮನೆತನದ ಇಷ್ಟ ದೇವತೆ ಚಾಮುಂಡೇಶ್ವರಿ ವಿಗ್ರಹ, ಇಬ್ಬರು ಪುರೋಹಿತರು, ಯುವರಾಜರು, ಸರ್ ಮಿರ್ಜಾ ಇಸ್ಮಾಯಿಲ್ ಮತ್ತು ಅನೇಕ ಸೇವಕರು ಇವರ ಜೊತೆಯಲ್ಲಿ ಪ್ರಯಾಣ ಮಾಡಿದರು. ಮುಂಬೈನಿಂದ ರಾನ್ ಪುರ (SS Ranpura) ಎಂಬ ಹಡಗಿನಲ್ಲಿ ಹೊರಟು ಜುಲೈ ೨ ಏಡನ್ ನಿಂದ ಹೊರಟು ಫ್ರಾನ್ಸ್ ಗೆ ತೆರಳಿದರು. ಜುಲೈ ೧೦ ರಂದು ಪ್ಯಾರಿಸ್ ತಲಪಿ ಜುಲೈ ಹದಿನಾರು, ೧೯೩೬ ಲಂಡನ್ ವಿಕ್ಟೋರಿಯಾ ರೈಲ್ವೆ ನಿಲ್ದಾಣ ಸೇರಿದರು. ಇದೇ ಹಡಗಿನಲ್ಲಿ ಭಾರತದ ಹಾಕಿ ತಂಡವು ೧೯೩೬ನಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಭಾಗವಹಿಸಲು ಇವರ ಜೊತೆ ಪ್ರಯಾಣ ಮಾಡಿದ್ದರು. ಈ ತಂಡದ ಊಟಕ್ಕೆ ಮಹಾರಾಜರು ದಿನಾಲು ಮೊಸರು ಕಳಿಸುತ್ತಿದ್ದರಂತೆ!
ಅವತ್ತಿನ Daily Sketch ಪತ್ರಿಕೆ ಯಲ್ಲಿ ಬಂದ ವರದಿ ಪ್ರಕಾರ ಇಂಗ್ಲೆಂಡಿನ ಅನೇಕ ಗಣ್ಯ ವ್ಯಕ್ತಿ ಗಳು ಇವರನ್ನು ಸ್ವಾಗತಿಸಿ ಲಂಡನ್ Dorchester ಹೋಟೆಲ್ ಗೆ ಇವರ ಪರಿವಾರವನ್ನು ಕರೆದೊಯ್ದರು. ಈ ಹೋಟೆಲ್ ನಲ್ಲಿ ಪೂಜೆಗಾಗಿ ಒಂದು ಪ್ರತ್ಯೇಕ ಕೋಣೆ ಇತ್ತು. ಪುರೋಹಿತರು ಪ್ರತಿದಿನ ಚಾಮುಂಡೇಶ್ವರಿ ಪೂಜೆ ಮಾಡಿ ಪ್ರಸಾದ ಹಂಚುತ್ತಿದ್ದರು. ಥೇಮ್ಸ್ ನದಿ ದಡದಲ್ಲಿ ಮಹಾರಾಜರ ಉಪಾಕರ್ಮವನ್ನು ಸಹ ನಡಿಸಿದರಂತ. ಆದರೆ ಮಹಾರಾಜರು ಎಷ್ಟು ತಿಂಗಳು ಇಲ್ಲಿ ಇದ್ದರು ಅಥವಾ ಚಿಕಿತ್ಸೆ ಎಲ್ಲಿ ನಡೆಯಿತು ಮತ್ತು ಭಾರತಕ್ಕೆ ಯಾವಾಗ ವಾಪಸ್ಸುಬಂದ ದಿನ ಬಗ್ಗೆ ಮಾಹಿತಿ ಮಾತ್ರ ಇಲ್ಲ.
ಮಹಾರಾಜರು ಆಗಸ್ಟ್ ೩, ೧೯೪೦ ರಲ್ಲಿ ದೈವಾಧೀನರಾದರು . ಜಯಚಾಮರಾಜ ಒಡೆಯರ್ ಮಹಾರಾಜರು ಪಟ್ಟಕ್ಕೆ ಬಂದರು.
--Basingstoke Ramamurthy
Photoes: Kannada Balaga UK (except where credited)
ಪ್ರತಿಕ್ರಿಯೆ ಬರೆದ ಕೇಶವ ಮತ್ತು ಪ್ರಸಾದ ಅವರಿಗೆ ಧನ್ಯವಾದಗಳು. ದುಂಬಾಲೇ ಬೀಳಲಿ, ಗೆದ್ದೆತ್ತಿನ ಬಾಲವೇ ಹಿಡಿಯಲಿ ( ಅಥವಾ ಟ್ವಿಸ್ಟ್ ಮಾಡಲಿ!) ಫಲಿಸುವದು ಕೊಡುವವರ ಮರ್ಜಿಗೆ ಬಿಟ್ಟದ್ದು! ನೀವೂ ಸಹ ಭಾಗವಸಿದ್ದರಿಂದ ಗೊತ್ತೇ ಆದಂತೆ, ಅದೊಂದು ಸಾಮೂಹಿಕ ಪ್ರಯತ್ನ.ಯಶಸ್ವಿಯಾದದ್ದು ಭುವನೇಶ್ವರಿಯ ಕೃಪೆಯಿಂದ, ಆಕೆಯ ಸ್ತುತಿಯನ್ನೂ ಆ RTP ಯಲ್ಲಿ ಪಾಾಡಿದ್ದಾರಲ್ಲವೆ? ಶ್ರೀವತ್ಸ
LikeLike
ದೇಸಾಯಿಯವರದ್ದು ನಿಜವಾಗಿಯೂ ಸಂಪಾದಕರ ಕೆಲಸ. ಅದೂ ದುಂಬಾಲು ಬಿದ್ದು, ಸಮಯದ ಗಡುವಿನಲ್ಲಿ ಬರೆಸಿ, ಕಾಗುಣಿತ ದೋಷಗಳನ್ನು ತಿದ್ದಿ, ಈ ವಾರದ `ಅನಿವಾಸಿ` ಕನ್ನಡ ಬಳಗದ ಕಾರ್ಯಕ್ರಮಗಳನ್ನು ವಿವರವಾಗಿ ಮೂಡಿಸಿದೆ. ಬಹಳಷ್ಟು ಕಾರ್ಯಕ್ರಮಗಳನ್ನು ನೋಡಲಾಗದ ನನಗೆ ಈ ಲೇಖನಮಾಲೆ ತುಂಬ ಉಪಯುಕ್ತ.
– ಕೇಶವ
LikeLike
ಕನ್ನಡ ಬಳಗದ ಎರಡು ದಿನದ ಕಾರ್ಯಕ್ರಮಗಳ ತುಣುಕುಗಳನ್ನು ಜೋಡಿಸಿ ಸಮಗ್ರವಾದ ವರದಿಯನ್ನು ಚೆಂದದ ಚಿತ್ರ ಮತ್ತು ವಿಡಿಯೊದೊಂದಿಗೆ ಜೋಡಿಸಿದ ಅನಿವಾಸಿ ಬಳಗಕ್ಕೆ ಅಭಿನಂದನೆಗಳು. ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮದ ಎರಡೂ ಅಂಗಗಳನ್ನು ಯಥಾವತ್ತಾಗಿ ಅಲ್ಲದೆ ಸ್ವಾರಸ್ಯಕರವಾಗಿಸಿ ಎಲ್ಲ ಬರಹಗಾರರು ದಾಖಲಿಸಿದ್ದಾರೆ. ಇದರ ಹಿಂದೆ ನಿಂತು, ಎಲ್ಲರನ್ನು ಹುರಿದುಂಬಿಸಿ ರೂವಾರಿಯಾಗಿರುವ ಡಾ ದೇಸಾಯಿ ಅವರ ನೇತೃತ್ವ ಶ್ಲಾಘನೀಯವಾದದ್ದು.
LikeLike