ಏನಿಲ್ಲ, ಎಲ್ಲವೂ ಬರೀ ಮೊಸರನ್ನ!

ಏನಾದರೂ ಬರೆಯಬೇಕು, ಬರೆಯಲೇಬೇಕು ಎಂದು ಪಟ್ಟಿ ಮಾಡಿ ಇಟ್ಟುಕೊಂಡ, ಅರ್ಧ ಬರೆದು ಡ್ರಾಫ್ಟ್‌ನಲ್ಲಿ ಹೆಪ್ಪು ಹಾಕಿಟ್ಟ ಲೇಖನಗಳನ್ನು ವಾರಕ್ಕೊಂದರಂತೆ ಬರೆದರೂ ಸಾಕು, ಅದೆಷ್ಟು ಪುಸ್ತಕಗಳಿಗೆ ಸರಕಾಗುತ್ತದೆಯೋ ಎಂಬ ಆಲೋಚನೆಯನ್ನು ಮನಸ್ಸಿನಲ್ಲೇ ಮಥಿಸುತ್ತ, ಕೈಗೆ ಸಿಗದ ಕನಸಿನ ನವನೀತ ಕೂಡಿಟ್ಟು, ಅದು ಹೇಳಹೆಸರಿಲ್ಲದೆ ಕರಗಿಯೂ ಹೋಗಿದೆ.

ಯಾಕೆ ಬರೆಯಲು ಸಾಧ್ಯವಾಗುತ್ತಿಲ್ಲ? ಉತ್ತರ ನನ್ನ ಬಳಿಯೂ ಇಲ್ಲ. ರಾತ್ರಿ ಹಾಸಿಗೆಗೆ ಬೆನ್ನು ತಾಗಿಸುತ್ತಲೇ ಒಂದು ಜಾದೂ ಘಟಿಸುತ್ತದೆ. ಕಣ್ಣು ಸೀಲಿಂಗ್ ನೋಡುತ್ತಲೇ ಮನಸ್ಸು ಆ ಮಂದಗತ್ತಲಿನಲ್ಲೇ ಸ್ಪುಟವಾಗಿ ಬರೆಯಲು ಶುರುಮಾಡುತ್ತದೆ.

ಛೇ! ಎಷ್ಟು ಚಂದದ ಸಾಲು ಇದು, ನನ್ನ ದೃಷ್ಟಿಯೇ ತಾಕುವಷ್ಟು ಚಂದದ ವಿಷಯ ಮಂಡನೆ. ಆಗಿದ್ದಾಗಲಿ, ಈಗಲೇ ಎದ್ದು ಕುಳಿತು ಸೀಲಿಂಗ್ ಮೇಲೆ ಗೀಚಿದ್ದನ್ನು ಪೇಪರ್ ಮೇಲೋ ಕಿಲೀಮಣೆಯನ್ನೇ ತಟ್ಟುತ್ತ ಕುಟ್ಟುತ್ತ ಬರೆದೇ ಬಿಡೋಣ ಅಂತ ಅನಿಸುತ್ತದೆ. ಆದರೂ ಮತ್ತದೇ ಉದಾಸೀನದ ಅಪರಾವತಾರದಂತಿರುವ ಅಮಿತೆಯ ಮನಸು, `ಅಯ್ಯೋ ಮಲ್ಕೊಳಮ್ಮ ಸುಮ್ಮನೆ ಸಾಕು, ನಾಳೆ ಸಾವಿರ ಕೆಲಸ ಇದೆ` ಅಂತ ಲಾಲಿಯಂತೆ ರಾಗವಾಗಿ ಹೇಳಿ ಹೇಳಿ ಮಲಗುವಂತೆ ಮಾಡಿಬಿಡುತ್ತದೆ. ನಿದ್ದೆ ಬಂದವರಿಗೆ ಹಾಸಿಗೆ ತೋರಿಸುವುದು ಅನ್ನುವುದು ಇದಕ್ಕೇ ಇರಬೇಕು.

ಈ ವಾರ `ಅನಿವಾಸಿ` ಸಂಚಿಕೆಗೆ ಬರೆಯಬೇಕು, ಏನಿದೆ ಸರಕು? ಎಂಬ ರಿಮೈಂಡರ್ ಶೈಲಿಯ ಪ್ರಶ್ನೆ ಮನಸ್ಸಿನಲ್ಲಿ ಬರುತ್ತಲೇ ಇತ್ತು. ಬರೆಯಲು ಒಲ್ಲದ ಮನಸ್ಸು, ಅದು-ಇದು ಕಥೆ ಹಾರಿಸುತ್ತ ಒಮ್ಮೆಲೇ, `ಅಮಿತಾ, ನೀನು ಅಡುಗೆ ಮಾಡಿಲ್ಲ ಇನ್ನೂ…` ಹಾಗೆಂದು ನೆನಪಿಸಿತು. ಏನು ಬರೆಯಲಿ? ಎಂಬ ಪ್ರಶ್ನೆ ಹೋಗಿ, ಏನಡುಗೆ ಮಾಡಲಿ ಎಂಬ ಪ್ರಶ್ನೆ ಕಾಡತೊಡಗಿತು.

ಇಂದು ಮಕ್ಕಳು, ಮನೆಯವರು ಯಾರೂ ಇಲ್ಲ. ಒಬ್ಬಳಿಗೆಂದು ಏನು ಮಾಡೋದು? ಎಂಬೆಲ್ಲ ಸಬೂಬು ಹೇಳಿ ಏನಾದರೊಂದು ಮಾಡಿ ತಿಂದು ಮುಗಿಸುವ ಜೀವವಲ್ಲ ನನ್ನದು. ಮನೆಯಲ್ಲಿ ಯಾರೂ ಇಲ್ಲ ಅಂತಾದರೆ ಅಮಿತಾಳಿಗೆ ಇಷ್ಟವಿರುವ, ಮನೆಯವರು ಮಕ್ಕಳು ಅಷ್ಟೇನೂ ಇಷ್ಟಪಡದ ಅಡುಗೆಗಳನ್ನು, ತರಹೇವಾರಿ ಪಲ್ಯ, ಚಟ್ನಿ, ಮತ್ತೊಂದು-ಇನ್ನೊಂದು ಮಾಡಿ ಅಚ್ಚುಕಟ್ಟಾಗಿ ತಟ್ಟೆಯಲ್ಲಿ ರಂಗೋಲಿಯಂತೆ ಜೋಡಿಸಿ, ಒಂದೆರಡು ಫೋಟೋ ತೆಗೆದು, ಪ್ರತಿ ತುತ್ತು ತಿನ್ನುವಾಗ ಅಜ್ಜಿ, ಅಮ್ಮ, ದೊಡ್ಡಮ್ಮ, ಚಿಕ್ಕಮ್ಮ, ಸೋದರತ್ತೆಯರನ್ನ ನೆನಪು ಮಾಡಿಕೊಳ್ಳುತ್ತ, ಅಡುಗೆ-ಊಟದ ಕುರಿತು ಈ ಪರಿ ಪ್ರೀತಿಯನ್ನು ನನ್ನಲ್ಲಿ ತುಂಬಿದ ಭಗವಂತನಿಗೆ ಥ್ಯಾಂಕ್ಸ್ ಹೇಳುತ್ತಾ ನಿರುಮ್ಮಳವಾಗಿ ಊಟ ಮಾಡುತ್ತೇನೆ.

ಇವತ್ತು ಅಂಥದ್ದೇ ಒಂದು ಸುದಿನ. ಆದರೆ ಇವತ್ತು ಮನಸ್ಸು, ನಾಲಿಗೆ, ಬುದ್ಧಿ, ಹೃದಯ ಎಲ್ಲರ ಬಯಕೆ ಒಂದೇ! ಮೊಸರು ಬುತ್ತಿ. ಇದು ಸರ್ವಸಮ್ಮತವಾಗಿ ನಿರ್ಧಾರವಾದ ಅಡುಗೆ. ಆದ್ದರಿಂದ ಅಡುಗೆಮನೆಯಲ್ಲಿಯೂ ನನ್ನೊಳಗೂ ಒಂದು ಬಗೆಯ ಉಲ್ಲಾಸ ತುಂಬಿ, ಖುಷಿಯಲ್ಲಿ ಹಾಡುಗಳು ತನ್ನಿಂದತಾನೇ ಒಂದೊಂದಾಗಿ ಅಪ್ರಯತ್ನಪೂರ್ವಕವಾಗಿ ಹೊಮ್ಮತೊಡಗಿದವು. ಅಕ್ಕಿ ತೊಳೆದು ಒಂದಷ್ಟು ಹೆಚ್ಚಿಗೆಯೇ ನೀರಿಟ್ಟು ಮಿಜ್ಜಿ ಅನ್ನದ ತಯಾರಿ ಶುರುಮಾಡಿದೆ. ಅದರ ಜೊತೆಗೆ ಒಂದಷ್ಟು ಮಜ್ಜಿಗೆ ಮೆಣಸು, ಬೆಳ್ಳುಳ್ಳಿ ಸಂಡಿಗೆ, ಹುರುಳಿ ಹಪ್ಪಳ ಹುರಿದು ಗಾಳಿಯಾಡದ ಡಬ್ಬದಲ್ಲಿ ಪೇರಿಸಿದೆ.

ಕೆಂಪು ಈರುಳ್ಳಿ, ಹಸಿಮೆಣಸು, ಕೊತ್ತಂಬರಿಸೊಪ್ಪು ಸಣ್ಣಗೆ ಹೆಚ್ಚಿಟ್ಟುಕೊಂಡು, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕಲ್ಬತ್ತಿನಲ್ಲಿ ಜಜ್ಜಿಕೊಂಡೆ. ಅನ್ನ ಆಗಲು ಇನ್ನೂ ಸಮಯವಿತ್ತು. ಮತ್ತೇನು ಮಾಡೋದು? ನಾನು ನನ್ನೊಂದಿಗೇ ಹರಟೆ ಹೊಡೆಯಲು ಶುರು ಮಾಡಿದೆ. ಈ ಮೊಸರನ್ನ ಎಂಬುದು ಅದೆಷ್ಟು ಸರಳ ಅಲ್ವಾ? ಜೀವಕ್ಕೂ ಹಿತ ಮಾಡಲೂ ಸುಲಭ. ಹಾಗೆ ನೋಡಿದರೆ ಮೊಸರನ್ನ ಆಧ್ಯಾತ್ಮದ ತತ್ವವನ್ನು ತಟ್ಟೆಯಲ್ಲಿದ್ದೇ ಮೌನವಾಗಿಯೇ ಬೋಧಿಸುತ್ತದೆ.

`ಅಯ್ಯೋ ಮೊಸರನ್ನವಾ? ಮಕ್ಕಳೂ ಕಲಸಬಹುದು.` ಹಾಗಾದರೆ ಎಷ್ಟೊಂದು ಸರಳ ಮಸರನ್ನ ಇರುವಾಗ ನಾವ್ಯಾಕೆ ಸಂಕೀರ್ಣತೆಯ ಹಿಂದೆ ಬಿದ್ದು ಒದ್ದಾಡುತ್ತೇವೆ? ನಿಜಕ್ಕೂ ಈ ಜೀವನಕ್ಕೆ ಬೇಕಾಗಿರೋದು ಒಂದು ತಟ್ಟೆ ಮೊಸರನ್ನ ಅಷ್ಟೇ! ಹೀಗೆಲ್ಲ ನನ್ನ ತಲೆ ಮಾತಾ ಅಮಿತಾನಂದಮಯಿಯಂತೆ ಪ್ರವಚನ ಕೊಡುತ್ತಿರುವಾಗ, ನಾನು ಎದ್ದು ಅನ್ನ ಬೆಂದಿದೆ ಹೇಗೆ ಬೇಕೋ ಹಾಗೇ ಎಂದು ನನ್ನಷ್ಟಕ್ಕೆ ಖುಷಿ ಪಟ್ಟೆ.

ಈ ಬುತ್ತಿ ಅನ್ನ ಉಳಿದ ಮೊಸರನ್ನದ ರೀತಿಯಲ್ಲ. ಉತ್ತರ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಮಂದಿಗೆ, ಅಥವಾ ಉತ್ತರ ಕರ್ನಾಟಕ ಭಾಗದ ಆತ್ಮೀಯ ಸ್ನೇಹಿತರು ನಿಮಗಿದ್ದರೆ ಮಾತ್ರ ಈ ವಿಧದ ಮೊಸರನ್ನದ ರುಚಿ ನಿಮಗೆ ಗೊತ್ತಿರುತ್ತದೆ ಅಥವಾ ದಕ್ಕಿರುತ್ತದೆ.

ಮೆತ್ತಗೆ ಬೇಯಿಸಿಕೊಂಡ ಅನ್ನ, ಕೆನೆ ಮೊಸರು, ಒಂಚೂರು ಹಾಲು, ಉಪ್ಪು, ಹೆಚ್ಚಿಕೊಂಡ ಈರುಳ್ಳಿ, ಹಸಿಮೆಣಸು, ಜಜ್ಜಿಕೊಂಡ ಬೆಳ್ಳುಳ್ಳಿ ಮತ್ತು ಶುಂಠಿ ಇಷ್ಟನ್ನೂ ಸೇರಿಸಿ ಅನ್ನವನ್ನು ನುರಿಯುತ್ತ, ಉಂಡೆ ಕಟ್ಟುವ ಹದಕ್ಕೆ ಬಂದಾಗ ರಾಗಿ ಮುದ್ದೆಯ ಅಳತೆಯ ಉಂಡೆ ಕಟ್ಟಬೇಕು.

ಈ ಬುತ್ತಿಯನ್ನ ಮದುವೆಯ ಮೊದಲು, ಮದುವೆಯ ನಂತರ, ಶುಭಕಾರ್ಯಗಳು ಇದ್ದಾಗ ನೆಂಟರ ಮನೆಗೆ, ಬೀಗರ ಮನೆಗೆ ರೊಟ್ಟಿ, ವಿಧವಿಧದ ಪಲ್ಯ, ಚಟ್ನಿ, ಪುಡಿ, ಸಿಹಿ, ಝುಣುಕದ ವಡಿ, ಉಂಡಿ, ಕರ್ಜಿಕಾಯಿ, ಕರಿದ ಸಂಡಿಗೆ, ವಡೆ, ಹಪ್ಪಳಗಳೊಂದಿಗೆ ಕಳಿಸಿಕೊಡಲಾಗುತ್ತದೆ. ಹಾಗೆ ಆ ಊರಿನಿಂದ ಬಂದು ಸೇರಿದ ಬುತ್ತಿಯನ್ನು ಈ ಊರಿನ ಪರಿಚಿತ, ಆತ್ಮೀಯರೊಂದಿಗೆ ಹಂಚಿಕೊಂಡು ಸಂಭ್ರಮಿಸಿದಾಗಲೇ ಆ ಊಟಕ್ಕೊಂದು ಮೆರಗು ಬರುವುದು.

ನನ್ನ ತವರುಮನೆ ಮುಂಡಗೋಡದಲ್ಲಿ ನಮಗೆ ಎಲ್ಲರೂ ಪರಿಚಿತರಾಗಿರುವುದಕ್ಕೆ ಇಂಥ ಅಸಂಖ್ಯಾತ ಬುತ್ತಿ ಊಟಗಳನ್ನು ಆಸ್ವಾಧಿಸಿದ್ದೇನೆ. `ಇನ್ನೂ ಬುತ್ತಿ ತಂದುಕೊಟ್ಟಿಲ್ವೇ?` ಎಂದು ಕಾತರತೆಯಿಂದ ಕಾದು ಕುಳಿತದ್ದು ಇದೆ. ಒಂದು ರೀತಿಯಲ್ಲಿ `ಅಜ್ಜಿಗೆ ಅಜ್ಜನ ಚಿಂತೆಯಾದರೆ ಮೊಮ್ಮಗಳಿಗೆ ಕಜ್ಜಾಯದ ಚಿಂತೆ` ಎಂಬ ಗಾದೆಮಾತು ನನಗೆಂದೇ ರಚನೆಯಾಗಿದ್ದು ಎಂದು ಎಷ್ಟೋ ಸಲ ಅನಿಸಿದ್ದಿದೆ.

ಆದರೆ ನನ್ನ ಅಮ್ಮನಿಗೆ ಮಾತ್ರ ಈ ಬುತ್ತಿ ಅನ್ನ ಇಷ್ಟವಾಗದು. ಒಂದು, ಅದರಲ್ಲಿ ಬೆಳ್ಳುಳ್ಳಿ ಹಾಕುತ್ತಾರೆ ಎಂದು. ಮತ್ತೊಂದು, ಅನ್ನದ ಉಂಡೆ ಕಟ್ಟುವುದು ಪಿಂಡ ಇಡುವಾಗ ಮಾತ್ರ ಎಂಬುದು ಅವಿಭಜಿತ ದಕ್ಷಿಣ ಕನ್ನಡ ಮೂಲದ ಅಮ್ಮನ ಬಲವಾದ ನಂಬಿಕೆ. ಅದಕ್ಕೆ ಉಂಡೆ ಕಟ್ಟಿರುವ ಮೊಸರು ಬುತ್ತಿ ಅಮ್ಮ ತಿನ್ನುವುದಿಲ್ಲ.

ಹೇಗೂ ಮೊಸರನ್ನದ ಶ್ರುತಿ ತೀಡಿಯಾಗಿದೆ. ಇನ್ನೊಂದಿಷ್ಟು ಅದರ ಬಗ್ಗೆಯೇ ಹೇಳಿ ಬಿಡುವೆ. ಮೊಸರನ್ನ ಎಂಬ ಹೆಸರು ಒಂದೇ ಆದರೂ ಪ್ರಕಾರಗಳು ಹಲವು.

ಬುತ್ತಿ ಅನ್ನದ ನಂತರ ನನಗೆ ನೆನಪಿರುವ ಮತ್ತೊಂದು ಮೊಸರನ್ನದ ರುಚಿ ಎಂದರೆ ಆಂಧ್ರ ಮೂಲದ ಮಂದಿ ಮಾಡುವ ಉದ್ದಿನಬೇಳೆ, ಕಡಲೆಬೇಳೆ, ಶುಂಠಿ, ಚೂರೇ ಚೂರು ಅರಿಶಿನ ಹಾಕಿ ಚಂದದ ಒಗ್ಗರಣೆ ಕೊಟ್ಟು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಾಡಿದ, ಬಾಯಲ್ಲಿಟ್ಟರೆ ಕರಗಿಯೇ ಹೋಯಿತು ಅನ್ನುವಷ್ಟು ಹಗುರ-ಹಗುರವಾದ ಮೊಸರನ್ನ. ಇದರ ರುಚಿ ನೋಡುವ ಅವಕಾಶ ಸಿಕ್ಕಿದ್ದು ಪುಟ್ಟಪರ್ತಿಯಲ್ಲಿ. ಆಹಾ! ಅದೆಂಥ ಚಂದದ ಅನುಭೂತಿ ಅದು!

ನನ್ನ ಹೈಸ್ಕೂಲ್ ದಿನಗಳಲ್ಲಿ ಮೆತ್ತಗೆ ಮಾತನಾಡುವ, ಅಷ್ಟೇ ಚುರುಕು ಹುಡುಗಿ ಒಬ್ಬಳಿದ್ದಳು. ಆಕೆಯ ಹೆಸರು ನೇತ್ರಾವತಿ. ನಾವು ಸುಮಾರು ಎಂಟು ಸ್ನೇಹಿತೆಯರು ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳುತ್ತಿದ್ದೆವು. ಊಟವನ್ನು ಹಂಚಿಕೊಳ್ಳುತ್ತಿದ್ದೆವು ಕೂಡ. ನೇತ್ರಾವತಿಯ ಅಮ್ಮ ಕಟ್ಟಿ ಕಳಿಸುತ್ತಿದ್ದ ಆ ಮೊಸರನ್ನ ತುಂಬಾ ವಿಭಿನ್ನವಾಗಿತ್ತು. ಆಕೆ ಮೊಸರನ್ನ ತಂದರೆ ಅರ್ಧ ಡಬ್ಬಿ ನನಗೆ ಎಂದು ಫಿಕ್ಸ್ ಆಗಿಬಿಟ್ಟಿತ್ತು. ಆಕೆಯನ್ನು ಕಾಡಿಸಿ ಪೀಡಿಸಿ ಆ ರೆಸಿಪಿಯನ್ನು ನಮ್ಮ ಮಸ್ತಿಷ್ಕದೊಳಗೆ ಸೇರಿಸಿಕೊಳ್ಳಲಾಯಿತು.

ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು, ಅದಕ್ಕೆ ಹದ ಬಿಸಿಮಾಡಿದ ತೆಂಗಿನ ಎಣ್ಣೆ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ, ಅದಕ್ಕೆ ಮೊಸರು ಬೆರೆಸಿ, ಅದಕ್ಕೆ ತಣಿದ ಅನ್ನವನ್ನು ಬೆರೆಸಿ ಚೆನ್ನಾಗಿ ಕಲಸಿದರೆ ಆಯಿತು. ಇದರ ಜೊತೆ ಒಂದು ಹೋಳು ನಿಂಬೆ ಉಪ್ಪಿನಕಾಯಿ ಇದ್ದರಂತೂ ಊಟ ಸ್ವರ್ಗದ ಹಿತ್ತಲಿನಲ್ಲಿ ಕುಳಿತು ಸವಿದಷ್ಟು ರುಚಿ.

ನಾನು ಯೂನಿವರ್ಸಿಟಿಯಲ್ಲಿ ಇರುವಾಗ ಸೋಷಿಯಾಲಜಿ ಡಿಪಾರ್ಟ್ಮೆಂಟ್‌ನಲ್ಲಿ ಓದುತ್ತಿದ್ದ ಸರಸ್ವತಿ ಜೋಶಿ ಆತ್ಮೀಯ ಸ್ನೇಹಿತೆಯಾಗಿದ್ದಳು. ಪರೀಕ್ಷೆಗಳಿರುವಾಗ, ಅಥವಾ ಬೇಗನೆ ಕಾಲೇಜ್ ತಲುಪಬೇಕಾದ ದಿನಗಳಲ್ಲಿ ನಾನು ಸರಸ್ವತಿಯ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಅವರ ಅಮ್ಮ ನನ್ನನ್ನು ತಮ್ಮ ಮಗಳಂತೆಯೇ ನೋಡಿಕೊಳ್ಳುತ್ತಿದ್ದರು. ಅವರು ಮಾಡುತ್ತಿದ್ದ ಮೊಸರನ್ನವೂ ವಿಶಿಷ್ಟ. ಅನ್ನ ಮತ್ತು ಮೊಸರನ್ನು ಉಪ್ಪಿನೊಂದಿಗೆ ಹದವಾಗಿ ಕಲಸಿ, ತುಪ್ಪದಲ್ಲಿ ಜಜ್ಜಿದ ಲವಂಗ, ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಹದವಾಗಿ ತಾಳ್ಮೆಯಿಂದ ಹುರಿದು ಅನ್ನಕ್ಕೆ ಒಗ್ಗರಣೆ ಕೊಡುತ್ತಿದ್ದರು. ತುಪ್ಪದಲ್ಲಿ ಕರಿದ-ಹುರಿದ ಆ ಲವಂಗ ಹಲ್ಲಿಗೆ ಸಿಕ್ಕಾಗ `ಕುರ್ರುಮ್` ಎಂದು ನಮಗಷ್ಟೇ ಕೇಳುವ ಹಿತವಾದ ಸದ್ದು, ಒಣದ್ರಾಕ್ಷಿ ಕೊಡುತ್ತಿದ್ದ ಸಿಹಿಯಾದ `ಪಂಚ್`. ಜೊತೆಗೆ ಒಂದಷ್ಟು ಗೋಡಂಬಿಯ ಶ್ರೀಮಂತಿಕೆ! ಆ ಮೊಸರನ್ನದ ಚಂದವೇ ಬೇರೆ.

ಇನ್ನು ಹಣ್ಣುಗಳನ್ನು ಸೇರಿಸಿ ಮೊಸರನ್ನ ಕಲಸಿದ್ದನ್ನು ನಾನು ಮೊದಲು ತಿಂದಿದ್ದು, `Zee Sa Re Ga Ma Pa` ಎಂಬ ರಿಯಾಲಿಟಿ ಶೋಗೆ ಹೋದಾಗ. ಸ್ನೇಹಿತೆ, ಮತ್ತೀಗ ಪ್ರಸಿದ್ಧ ಹಿನ್ನೆಲೆ ಗಾಯಕಿಯಾಗಿರುವ ಶ್ರುತಿ ಪ್ರಶಾಂತ್ ಅವರ ಅಮ್ಮ ಎಲ್ಲ ಸ್ಪರ್ಧಿಗಳಿಗಾಗಿ ತಾವೇ ಅಡುಗೆ ಮಾಡಿಕೊಂಡು ಬಂದು, ಅಕ್ಕರೆಯಿಂದ ಉಣಬಡಿಸಿದಾಗ. ಅಲ್ಲೊಂದು-ಇಲ್ಲೊಂದು ಸಿಗುವ ದ್ರಾಕ್ಷಿ, ಹಾಗೇ ಬಾಯಲ್ಲಿ ಊಟೆಯಾಗುವ ದಾಳಿಂಬೆ ಕಾಳು, ಸಣ್ಣದಾಗಿ ಹೆಚ್ಚಿ ಹಾಕಿದ ಸೇಬು. ಅದಕ್ಕೆಲ್ಲ ಕಿರೀಟವಿಟ್ಟಂತೆ ಇದ್ದ ಸಣ್ಣಗೆ ಹೆಚ್ಚಿದ ಶುಂಠಿ, ಕರಿಬೇವು, ಉದ್ದಿನಬೇಳೆ, ಸಾಸಿವೆ, ಇಂಗಿನ ಒಗ್ಗರಣೆ. ದೇವರೇ, ಅದೆಷ್ಟು ರುಚಿಯಾಗಿತ್ತು! ಜೊತೆಗೆ ಬದನೆಕಾಯಿ ಎಣ್ಣೆಗಾಯಿ ಕೂಡ ಇತ್ತು.

ಅನ್ನ ಬೇಡ ಅಂದರೆ, ಮೊಸರವಲಕ್ಕಿಯೂ ಅಷ್ಟೇ ರುಚಿ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಭವನದ ಪಕ್ಕದಲ್ಲಿ ಆಗೊಂದು ಪುಟ್ಟ ಟೀ ಅಂಗಡಿ ಇತ್ತು. ಬಸಣ್ಣನ ಡಬ್ಬಿ ಅಂಗಡಿ ಅಂತಲೇ ಪ್ರಸಿದ್ಧವದು. ಅವಲಕ್ಕಿ, ಮಂಡಕ್ಕಿ, ಪುಲಾವ್, ಉಪ್ಪಿಟ್ಟು ಚಹಾ ಇಷ್ಟೇ ಅಲ್ಲಿಯ ಮೆನು.
ವಿಶೇಷ ಎಂದರೆ ಬಸಣ್ಣನ ನಗು ಮತ್ತು ಆತ್ಮೀಯತೆ.
ಅಕ್ಕಾರ್ ಬರ್ರಿ ಇವತ್ತೆನ್ ಕೊಡುನು ರಿ? ಪಲಾವ್? ಮೊಸರವಲಕ್ಕಿ? ಅನ್ನುತ್ತಲೇ ನನ್ನ ಉತ್ತರ ಸಿಗುವ ಮೊದಲೇ ಅವಲಕ್ಕಿ ತಟ್ಟೆ ಮುಂದೆ ಇಡುತ್ತಿದ್ದರು.
ಬಿಳಿ ಅವಲಕ್ಕಿ ಮೊಸರು, ಅದರಮೇಲೆ ಒಂದಷ್ಟು ಕೇಸರಿ ಬಣ್ಣದ ಪುಟಾಣಿ ಚಟ್ನಿ ಪುಡಿ. ಅಲ್ಲಲ್ಲಿ ತೇಲುತ್ತಿದ್ದ ಹಸಿಮೆಣಸು, ಕೊತ್ತಂಬರಿ ಸೊಪ್ಪು. ಬಿಸಿಲಿಗೆ ಮೊಸರು ಅವಲಕ್ಕಿ ತುಂಬಿದ ಆ ಕೈಅಗಲದ ತಟ್ಟೆ ಅಮೃತ ಸಮಾನವೆನಿಸುತ್ತಿತ್ತು.

ನಮ್ಮ ಹಳೇ ಮನೆಯ ಮುಂದೆ ನಮ್ಮದೇ ಸಾರಸ್ವತ ಸಮುದಾಯದ ಕುಟುಂಬದವರು ವಾಸವಿದ್ದರು. ಆ ಮನೆಯ ಮಕ್ಕಳು ಕರೆವಂತೆಯೇ ನಾವೂ ಆ ಮನೆಯ ಹಿರಿಯರನ್ನು ಆಯಿ ಮತ್ತು ಪಪ್ಪಾ ಅಂತಲೇ ಕರೆಯುತ್ತಿದ್ದೆವು. ಅವರ ಅಡುಗೆ ನಮ್ಮ ಅಡುಗೆ ಒಂದೇ ರೀತಿ ಆದರೂ ಆಯಿಯ ಕೈಯ ಕೆಲವೊಂದು ಅಡುಗೆಗಳು ಅತ್ಯದ್ಭುತವಾಗಿರುತ್ತಿದ್ದವು. ಅದರಲ್ಲಿ ಒಂದು ಈ ಮೊಸರವಲಕ್ಕಿ. ಅವಲಕ್ಕಿಯ ಪ್ರತಿ ಅಗಳು ಕೂಡ ಇಂಗು, ಕರಿಬೇವು, ಒಣಮೆಣಸಿನ ಒಗ್ಗರಣೆಯ ಘಮದಲ್ಲಿ ಮಿಂದು ಉಪ್ಪು ಒಂಚೂರು ಸಕ್ಕರೆಯನ್ನು ಮಯ್ಯಿಗೆ ಮೆತ್ತಿಕೊಂಡು ತುಳಸಿ ಪೂಜೆಯ ನಂತರ ನೈವೇದ್ಯವಾಗಲು ಕಾಯುತ್ತ ಕುಳಿತಿರುತ್ತಿತ್ತು ಮತ್ತು, ನಾವು ಅದನ್ನು ತಿನ್ನಲು. ನೆನೆಸಿಕೊಂಡರೆ ಈಗಲೂ ಬಾಯಿ ನೀರೂರುತ್ತದೆ.

ಶ್ರೀಲಲಿತಾ ಸಹಸ್ರನಾಮದಲ್ಲಿ ಶ್ರೀಮಾತೆಯನ್ನು ‘ದಧ್ಯನ್ನಾಸಕ್ತಹೃದಯಾ’ ಎಂದು ಕರೆದಿದ್ದಾರೆ, ಜಗನ್ಮಾತೆಯೇ ಮೊಸರನ್ನದಲ್ಲಿ ಆಸಕ್ತಿ ಹೊಂದಿರುವಾಗ, ನಾವೆಲ್ಲ ಮೊಸರನ್ನದ ಮೋಹದಿಂದ ಹೇಗೆ ತಪ್ಪಿಸಿಕೊಂಡೇವು? ನೀವೇ ಹೇಳಿ.

ಈಗಲೂ ಕಣ್ಣು ಮುಚ್ಚಿ ನೆನಪಿಸಿಕೊಂಡರೆ, ಈ ಎಲ್ಲ ದೃಶ್ಯ, ರುಚಿ, ಘಮ ನನ್ನ ಚಿತ್ತಕ್ಕೆ ಬಂದು ಮತ್ತೊಮ್ಮೆ ಈ ಎಲ್ಲ ರಸಾಸ್ವಾಧನೆಗೆ ನನ್ನನ್ನು ಅಣಿಮಾಡುತ್ತವೆ. ಪ್ರಾಯಶಃ ನನಗೆ ಮೊಸರನ್ನ ಕಲಸಿಕೊಟ್ಟ, ಮಾಡಿಕೊಟ್ಟ ಯಾರಿಗೂ ಅದು ಅಂಥಹ ವಿಶೇಷ ತಿನಿಸು, ಖಾದ್ಯ ಆಗಿರಲಿಕ್ಕಿಲ್ಲ. ಆದರೆ ಇವೆಲ್ಲ ರುಚಿಗಳು ನನ್ನ ನೆನಪಿನ ಕೌದಿಯ ರಂಗು-ರಂಗು ಚೌಕಗಳು.

ಸರಿ-ಸರಿ, ನಾನು nostalgic ನಾರೀಮಣಿ ಸಂಪೂರ್ಣವಾಗಿ ಬದಲಾಗುವ ಮುನ್ನ ನನ್ನೇ ನಾನು ಟೈಮ್ ಟ್ರಾವೆಲ್ ಟ್ರ್ಯಾಪ್‌ನಿಂದ ಈಚೆಗೆ ಕರೆದು, ನನ್ನನ್ನು ಮಾತ್ರವಲ್ಲ ನಿಮ್ಮನ್ನೂ ಬಚಾವು ಮಾಡಿದೆ.
ಇಲ್ಲದಿದ್ದರೆ ನನ್ನ ನೆನಪಿನ ಪರಿಷೆ ನಿಲ್ಲುವುದಿಲ್ಲ. ಯಾಕೆಂದರೆ ಹೀಗೆ ಅದೆಷ್ಟು ಲೆಕ್ಕಕ್ಕೆ ಸಿಗದಷ್ಟು ನೆನಪುಗಳಿವೆ ನನ್ನ ಬಳಿ. ಈ ವಿಷಯದಲ್ಲಿ ಮಾತ್ರ ನಾನು ಜಗತ್ತಿನ ಅತೀ ಶ್ರೀಮಂತರ ಪಟ್ಟಿಯಲ್ಲಿ ಸೇರಿದರೂ ಆಶ್ಚರ್ಯವಿಲ್ಲ.

ನೋಡಿ, ಏನು ಬರೆಯಲಿ ಎಂದು ಶುರುಮಾಡಿದವಳು, ಎಲ್ಲಿ ನಿಲ್ಲಿಸಲಿ ಎಂದು ಅರ್ಥವಾಗದೆ ನೆನಪುಗಳ ಸುರುಳಿಯನ್ನು ಬಿಚ್ಚಿ ಬಿಚ್ಚಿ ಹಾಕಿದ್ದೇನೆ.

ಪ್ರೀತಿಯಿಂದ ಓದಿ. ನಿಮಗೂ ಈ ನೆನಪುಗಳು ತಂಪು ಅನಿಸಿದರೆ, ಅಲ್ಲೆಲ್ಲೋ ಬದುಕಿನ ದಾರಿಯಲ್ಲಿ ಯಾವುದೋ ಮರೆಯಲಾಗದ ರುಚಿಯನ್ನು ನಿಮ್ಮ ನೆನಪಿನ ಬುಟ್ಟಿಗೆ ಪ್ರೀತಿಯಿಂದ ಬುತ್ತಿ ತುಂಬಿ ಕಳಿಸಿದವರು ನೆನಪಾದರೆ ನನ್ನೊಂದಿಗೂ ಹಂಚಿಕೊಳ್ಳಿ.

ವಂದನೆಗಳು,
ಅಮಿತಾ ರವಿಕಿರಣ್

ಸಾವಿರ ವರ್ಷಗಳ ಸಾವಿರದ ಆಟ – ಯೋಗೀಂದ್ರ ಮರವಂತೆ

ಸದ್ಯದಲ್ಲಿ ಬಿಡುಗಡೆ ಆಗಲಿರುವ, ನವಕರ್ನಾಟಕ ಪ್ರಕಾಶನ ಸಂಸ್ಥೆಯ ಕೋರಿಕೆಯ ಮೇಲೆ ಬರೆದ ಚೆಸ್ ಕುರಿತಾದ ಪುಸ್ತಕದ ಒಂದು ಅಧ್ಯಾಯ

ಚಿತ್ರ: ಏಐ (ಸೂಚನೆ: ಕೇಶವ)

ತಮ್ಮ ಮುಂದಿನ ನಡೆಯ ಬಗ್ಗೆ ಯೋಚಿಸುತ್ತ  ಬೋರ್ಡ್ ಮುಂದೆ  ಕೂತಿರುವ ಯಾರಾದರೂ ಪ್ರಸಿದ್ಧ  ಗ್ರಾಂಡ್  ಮಾಸ್ಟರ್ ಗ್ಯಾರಿ ಕಾಸ್ಪರೋವ್ ರ  “ಚೆಸ್ ಒಂದು ಮಾನಸಿಕ ಹಿಂಸೆ” ಎನ್ನುವ  ತಲ್ಲಣವನ್ನು  ಖಂಡಿತ ಒಪ್ಪುತ್ತಾರೆ. ಆದರೆ, ಚೆಸ್ ತನ್ನ ದೀರ್ಘ ಇತಿಹಾಸದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಅಥವಾ ಎಲ್ಲರಿಗೆ ಎಲ್ಲವೂ  ಆಗಿದೆ: ಪ್ರತಿಭೆಯ ಕ್ರೂರ ಮಾಪಕ, ಮಾನವ ಅನುಭವದ ರೂಪಕ, ರಾಜಕೀಯ ಆಯುಧ, ಬುದ್ಧಿಮತ್ತೆಯ ಪ್ರದರ್ಶನ,  ಮೋಜಿನ ಸಣ್ಣ ಹವ್ಯಾಸ. ನೆಟ್‌ಫ್ಲಿಕ್ಸ್ ನಾಟಕ “ದಿ ಕ್ವೀನ್ಸ್ ಗ್ಯಾಂಬಿಟ್” ನ ಯಶಸ್ಸು ಆಟದಲ್ಲಿ ಸಾಮಾನ್ಯರ ಜನಪ್ರಿಯ ಆಸಕ್ತಿಗೆ  ಮರುಜೀವ ನೀಡಿದೆ , ಆದರೆ ನಾಗರಿಕತೆಯ ಬಟ್ಟೆಯಲ್ಲಿ ಚೆಸ್ ಅನ್ನು ಎಷ್ಟು ಸಮಯದಿಂದ ಹೆಣೆಯಲಾಗಿದೆ? ಇಂದಿಗೂ ಜೀವಂತವಾಗಿರುವ ಆಸಕ್ತಿ ಎಲ್ಲಿಂದ, ಯಾಕೆ, ಹೇಗೆ? ಹಾಗಾದರೆ ಚೆಸ್ ಬರೇ ಆಟವಾಗಿ ಬೆಳವಣಿಗೆ ಕಂಡುದು ಅಷ್ಟೆಯೇ?

ಭಾರತದ ಚದುರಂಗ ಕಾಲಾನಂತರದಲ್ಲಿ,  ಪರ್ಶಿಯಾದ ಶತರಂಜ್ ಆಗಿದ್ದು ನಂತರ  ಇರಾನ್‌ಗೆ  ವಲಸೆಯಾಗಿ  ಚತ್ರಂಗ್ ಎಂಬ ಹೊಸ ಆಟವಾಗಿ ವಿಕಸನಗೊಂಡಿತು, ಅದರ ನಿಯಮಗಳು ಆಧುನಿಕ ದಿನದ ಚೆಸ್ ಹತ್ತಿರವಾಗಿದ್ದವು. ರಾಜನನ್ನು ‘ಚೆಕ್’ ಮೂಲಕ ಎಚ್ಚರಿಸುವ ಕಲ್ಪನೆಯನ್ನು ಪರಿಚಯಿಸಿದವರು ಪರ್ಶಿಯನ್ನರು.

ಪರ್ಶಿಯಾದ ಸಂಸ್ಕೃತಿಗೆ ಚತ್ರಂಗ್‌ ಎಷ್ಟು ಮಹತ್ವದ್ದು ಎಂದು ತಿಳಿಯಬೇಕಿದ್ದರೆ ಅವರ ಮಹಾಕಾವ್ಯವಾದ ಶಹನಾಮೆಯನ್ನು ಓದಬೇಕು. ಇಂಗ್ಲೆಂಡಿನ   ಷೇಕ್ಸ್‌ಪಿಯರ್ ಅಥವಾ ಇಟಲಿಯ ಡಾಂಟೆಯಂತಹ ಮಹಾನ್ ಸಾಹಿತಿಗಳಿಗೆ ಸಮನಾಗಿದ್ದವನು  ಎಂದು ಇರಾನಿಗರು ವ್ಯಾಪಕವಾಗಿ ಪರಿಗಣಿಸುವ ಬರಹಗಾರ  ಫೆರ್ಡೋವ್ಸಿ ಬರೆದ ಶಹನಾಮೆ  ಒಂದು ರೀತಿಯಲ್ಲಿ ಚೆಸ್ ನ  ಮೂಲ ಕಥೆಯನ್ನು ತಿಳಿಸುತ್ತದೆ.   ಭಾರತದಿಂದ ಆಗಮಿಸಿದ್ದ  ರಾಯಭಾರಿಯೊಬ್ಬ  ಪರ್ಶಿಯನ್  ನ್ಯಾಯಾಲಯಕ್ಕೆ ಒಂದು ಲೇಖನವನ್ನು ತಂದಿರುತ್ತಾನೆ  ಜೊತೆಗೆ  ನಿಗೂಢ ಹಲಗೆ ಮತ್ತು ತುಣುಕುಗಳನ್ನು ಕೂಡ. ರಾಯಭಾರಿ ಹೇಳುತ್ತಾನೆ  ‘ಓ ಮಹಾನ್ ದೊರೆಯೇ , ನಿಮ್ಮ ನೆಲದ ಬುದ್ಧಿವಂತರನ್ನು ಕರೆತನ್ನಿ ಮತ್ತು ಈ ಆಟದ ರಹಸ್ಯಗಳನ್ನು ಅವರು ಪರಿಹರಿಸಲಿ. ಅವರು ಯಶಸ್ವಿಯಾದರೆ  , ನನ್ನೊಡೆಯ  ಹಿಂದ್‌ನ ರಾಜನು  ಕಪ್ಪಕಾಣಿಕೆ ಸಲ್ಲಿಸುತ್ತಾನೆ, ಆದರೆ ಅವರು ವಿಫಲವಾದರೆ ಪರ್ಶಿಯನ್ನರು  ಕಡಿಮೆ ಬುದ್ಧಿಶಕ್ತಿ ಇರುವವರು  ಎಂಬುದಕ್ಕೆ ಪುರಾವೆ ಸಿಕ್ಕಿದಂತಾಗುತ್ತದೆ  ಮತ್ತು ನಾವು ಇರಾನ್‌ನಿಂದ ಕಪ್ಪಕಾಣಿಕೆಯನ್ನು ಕೇಳುತ್ತೇವೆ”. ಹಿಂದ್ ಪ್ರಾಂತ್ಯದಿಂದ ಚದುರಂಗ ತಲುಪಿದ ರೀತಿಯನ್ನು ನಿರೂಪಿಸಲು ಮಹಾಕಾವ್ಯದ ಈ ಕೆಲವು ಸಾಲುಗಳೇ ಸಾಕು. ರಾಯಭಾರಿಯ ಲೇಖನ ಒಡ್ಡುವ ಸವಾಲು, ನಿಗೂಢ ಹಲಗೆ , ತುಣುಕುಗಳು ನೀಡುತ್ತಿರುವ ಆಹ್ವಾನ ಮತ್ತೆ ದೂರದೇಶದ ಹೊಸ ಆಟವೊಂದು ಪರ್ಶಿಯಾದ ಸಂಸ್ಕೃತಿಯಿಂದ ಕೊಟ್ಟು ತೆಗೆದುಕೊಂಡ ಬಗೆಗಳ ಕುರಿತು ಅದು ನಮ್ಮ ಕಲ್ಪನೆಯನ್ನು ಕದಡುತ್ತದೆ.

ಪರ್ಶಿಯನ್ನರ  ಅದೃಷ್ಟಕ್ಕೆ , ಅವರಲ್ಲಿ ಒಬ್ಬರಾದ ಬೊಜೋರ್ಗ್‌ಮೆಹರ್ ಎಂಬ ಬುದ್ಧಿವಂತ ವ್ಯಕ್ತಿ ಈ ಆಟವನ್ನು ಹೇಗೆ ಆಡಬೇಕೆಂದು ಎಂದು ಕಂಡುಕೊಳ್ಳುವಲ್ಲಿ  ಯಶಸ್ವಿಯಾದನಂತೆ.  ಭಾರತೀಯ ಆಟವನ್ನು ಪರ್ಶಿಯನ್  ಚತ್ರಂಗ್‌ನ  ಆಗಿ ಪರಿವರ್ತಿಸಲು ದಾರಿ ಮಾಡಿಕೊಟ್ಟ ಐತಿಹಾಸಿಕ ಕ್ಷಣ ಅದು. ಆಟದ ಈ ಮೂಲಪುರಾಣದಲ್ಲಿ ಎಷ್ಟು  ಸತ್ಯವಿದೆ ಅಥವಾ ಇಲ್ಲ, ಎಂಬುದನ್ನು ಖಡಾಖಂಡಿತವಾಗಿ ಹೇಳುವವರು ಇಲ್ಲ. ಆದರೆ ಚತ್ರಂಗ್‌ ಪರ್ಶಿಯಾದಲ್ಲಿ   ಖಂಡಿತವಾಗಿಯೂ ಜನಪ್ರಿಯ ಕಾಲಕ್ಷೇಪವಾಗಿತ್ತು ಮತ್ತು ಪರ್ಶಿಯವನ್ನು  ಮುಸ್ಲಿಂ ದೊರೆಗಳು ಆಕ್ರಮಿಸಿ ವಿಜಯ ಸಾಧಿಸಿದಾಗಲೂ ಅಲ್ಲೇ ಉಳಿಯಿತು. ವ್ಯಾಪಾರಿಗಳು ಮತ್ತು ಆಕ್ರಮಣಕಾರರು ಆಟವನ್ನು  ವ್ಯಾಪಕವಾಗಿ ಸ್ವೀಕರಿಸಿದಾಗ  ಆಟವು ಮುಸ್ಲಿಂ ಪ್ರಪಂಚದಾದ್ಯಂತ ಮತ್ತು ಅದರಾಚೆಗೂ ಹರಡಿತು.

ಚೆಸ್‌ನ ಆರಂಭಿಕ ಮಾದರಿಗಳು ಶ್ರೀಮಂತರು, ಮಂದಿರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಪಾದ್ರಿಗಳಲ್ಲಿ ಜನಪ್ರಿಯವಾದವು. ವಿವಿಧ ಪ್ರದೇಶಗಳಲ್ಲಿ ಆಟದ ಜನಪ್ರಿಯತೆಯ ಬಗ್ಗೆ  ನೈತಿಕ ಭೀತಿಯೂ ಇತ್ತು , ಇದು ಸಮಕಾಲೀನ ಜಗತ್ತಿನಲ್ಲಿ ಮಕ್ಕಳ ಮನಸ್ಸನ್ನು ಆವರಿಸಿರುವ  ದೂರದರ್ಶನ ಅಥವಾ ವಿಡಿಯೋ ಗೇಮ್‌ಗಳ ಬಗ್ಗೆ ಇರುವ  ಚರ್ಚೆ , ಕಾಳಜಿಗಳಂತೆಯೇ ಇತ್ತು. ೧೦೦೫ರಲ್ಲಿ   ಈಜಿಪ್ಟ್‌ನಲ್ಲಿ ಚೆಸ್ ನ್ನು ನಿಷೇಧಿಸಲಾಯಿತು. ೧೦೬೧ ರಲ್ಲಿ ಚರ್ಚ್ ನ ಸಲಹೆಗಾರರು , ಪೋಪ್ ರಿಗೆ  ಅರ್ಚಕ ವೃತ್ತಿಯವರು  ಚೆಸ್ ಆಡುವಲ್ಲೇ  ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ದೂರು ನೀಡಿದರು. ಕೆಲವು ಶತಮಾನಗಳ ನಂತರ,   ೯ನೆಯ ಲೂಯಿಸ್ ಫ್ರಾನ್ಸ್‌ನಲ್ಲಿ ಚೆಸ್ ಅನ್ನು ನಿಷೇಧಿಸಿದ, ಈ ಆಟದಿಂದ  ಬರೇ ಸಮಯ ಹಾಳು ಎಂದ.

ಆದರೂ , ಆಟದ ಜನಪ್ರಿಯತೆ ಕಡಿಮೆಯಾಗಲಿಲ್ಲ, ಮತ್ತು ೧೫ನೆಯ ಶತಮಾನದ ವೇಳೆಗೆ ಆಟದ ನಿಯಮಗಳು ಮತ್ತಷ್ಟು ಬದಲಾದವು, ಇಂದು ನಾವು ಗುರುತಿಸುವ ಚೆಸ್ ಆಗಿ ಮಾರ್ಪಟ್ಟವು. ಗಮನಾರ್ಹವಾಗಿ, ಒಂದು ಕಾಲದಲ್ಲಿ “ವಜೀರ್” ಎಂದು ಕರೆಯಲ್ಪಡುತ್ತಿದ್ದ ತುಣುಕು, ಬೋರ್ಡ್‌ನಲ್ಲಿ ಸೀಮಿತ ವ್ಯಾಪ್ತಿಯನ್ನು ಹೊಂದಿತ್ತು, ಅದೇ ಮುಂದೆ  ಅಸಾಧಾರಣ ಶಕ್ತಿಯ ರಾಣಿಯಾಗಿ ವಿಕಸನಗೊಂಡಿತು. ಸ್ತ್ರೀವಾದಿ ಇತಿಹಾಸಕಾರ ಮರ್ಲಿನ್ ಯಾಲೋಮ್ ಸೇರಿದಂತೆ ಕೆಲವು ವಿದ್ವಾಂಸರು,  ಆ ಪರಿವರ್ತನೆ   ಕ್ರಿಸ್ಟೋಫರ್ ಕೊಲಂಬಸ್‌ನ ಹೊಸ ಜಗತ್ತಿನ ಅನ್ವೇಷಣೆಗಳನ್ನು  ಬೆಂಬಲಿಸಿದ್ದ ಫ್ರೆಂಚ್ ರಾಣಿ ಎಲೆನಾರ್  ಮತ್ತು  ಸ್ಪ್ಯಾನಿಷ್ ರಾಣಿ  ಇಸಾಬೆಲ್ಲರ  ನಿಜ ಜೀವನದಿಂದ ಪ್ರಭಾವಿತವಾಗಿದೆ ಎಂದಿದ್ದರು.

ಹಾಗಂತ  ಚೆಸ್ ಔಪಚಾರಿಕವಾಗಿ ರಚನಾತ್ಮಕ ಕ್ರೀಡೆಯಾಗಲು ಇನ್ನೂ ಸ್ವಲ್ಪ ಸಮಯ ಹಿಡಿಯಿತು . ೧೯ನೆಯ ಶತಮಾನದಲ್ಲಿ ಚೆಸ್ ಸಂಬಂಧಿ  ಪುಸ್ತಕಗಳು , ಸಮುದಾಯಗಳುಮತ್ತು ಸಂಸ್ಥೆಗಳು ಪ್ರವರ್ಧಮಾನಕ್ಕೆ ಬಂದವು.  ಮೊದಲ ಅಂತರರಾಷ್ಟ್ರೀಯ ಚೆಸ್ ಪಂದ್ಯ ೧೮೫೧ ರಲ್ಲಿ ಲಂಡನ್‌ನಲ್ಲಿ ನಡೆಯಿತು. ಇದನ್ನು  ಇಂಗ್ಲಿಷ್ ಆದ್ಯ ಆಟಗಾರ ಹೊವಾರ್ಡ್ ಸ್ಟೌಂಟನ್ ಆಯೋಜಿಸಿದ್ದು . ಇಂದಿಗೂ ಎಲ್ಲೆಡೆ ಬಳಸಲಾಗುವ ಪ್ರಮಾಣಿತ ಚೆಸ್ ಸೆಟ್ ಅನ್ನು ಆತನ ನೆನಪಲ್ಲಿ ಸ್ಟೌಂಟನ್ ಚೆಸ್ ಸೆಟ್ ಎಂದು ಕರೆಯಲಾಗುತ್ತದೆ . ಆ ಪಂದ್ಯಾವಳಿಯ ವಿಜೇತ  ಜರ್ಮನ್ ದೈತ್ಯ ಪ್ರತಿಭೆ  ಅಡಾಲ್ಫ್ ಆಂಡರ್ಸನ್. ಅವನ ಆಂದಿನ ಆಟ ೧೯ನೆಯ ಶತಮಾನದ ‘ರೊಮ್ಯಾಂಟಿಕ್’ ಶೈಲಿಗೆ ಸಾಕ್ಷಿಯಾಗಿತ್ತು. ಆಟದುದ್ದಕ್ಕೂ ಧೈರ್ಯಶಾಲಿ ಆಕ್ರಮಣಕಾರಿ ನಡೆಗಳು, ಉಳಿವಿಗಾಗಿ ನೀಡುವ ಬಲಿ ,  ಅನಿರೀಕ್ಷಿತ ತಿರುವುಗಳು ಕಂಡವು . ಇದು  ನಂತರ  ರೂಢಿಗೆ ಬಂದ   ಗುಪ್ತ ಯುದ್ಧತಂತ್ರ, ನಿಧಾನವಾಗಿ ಹತೋಟಿ ಪಡೆಯುವ  ವಿಧಾನಗಳಿಂದ  ತುಂಬ ಬೇರೆಯಾಗಿತ್ತು. ೧೮೫೧ರಲ್ಲಿ ಅಂಡರ್ಸ್ಸನ್  ಆಡಿದ ಇನ್ನೊಂದು ಪಂದ್ಯ ‘ಇಮ್ಮಾರ್ಟಲ್ ಗೇಮ್’ ಅಥವಾ  ಅಮರ್ತ್ಯ ಆಟ ಎನ್ನುವ ಹೆಸರಲ್ಲಿ ಚೆಸ್ ಇತಿಹಾಸದಲ್ಲಿ ದಾಖಲಾಗಿದೆ ಮತ್ತೆ ಇಂದಿಗೂ ಮೆಚ್ಚುಗೆಯನ್ನು ಪಡೆದಿದೆ, ಚೆಸ್ ವಿದ್ಯಾರ್ಥಿಗಳ ಅಧ್ಯಯನದ ವಿಷಯವಾಗಿದೆ.  ಅಗಾಧ ಧೈರ್ಯದಿಂದ, ಆಂಡರ್ಸನ್ ತನ್ನ ಎರಡೂ ರೂಕ್‌ಗಳನ್ನು, ಬಿಷಪ್ ಮತ್ತು  ರಾಣಿಯನ್ನು ತ್ಯಾಗ ಮಾಡಿಯೂ ಆಟವನ್ನು ಗೆದ್ದುದು ನಾಟಕೀಯ ಶೈಲಿಯ ಆಟದ ಉತ್ತಮ ಉದಾಹರಣೆಯಾಗಿದೆ.

೨೦ನೆಯ ಶತಮಾನದಲ್ಲಿ , ವಿಶೇಷವಾಗಿ ಯುಎಸ್ಎಸ್ಆರ್ ಸ್ಥಾಪನೆಯ ನಂತರ, ಚೆಸ್  ರಾಜಕೀಯ ಆಯಾಮವನ್ನು ಪಡೆಯಿತು. ಗ್ಯಾರಿ ಕಾಸ್ಪರೋವ್ ಒಂದೆಡೆ ಹೇಳಿದಂತೆ , ‘ಕುಸಿಯುತ್ತಿದ್ದ  ಪಶ್ಚಿಮದ  ಮೇಲೆ ಸೋವಿಯತ್ ಕಮ್ಯುನಿಸ್ಟ್ ಆಡಳಿತದ ಬೌದ್ಧಿಕ ಶ್ರೇಷ್ಠತೆಯನ್ನು ಪ್ರದರ್ಶಿಸಲು ಸೋವಿಯತ್ ಅಧಿಕಾರಿಗಳು ಚೆಸ್ ನ್ನು ಬಹಳ ಉಪಯುಕ್ತ ಸೈದ್ಧಾಂತಿಕ ಸಾಧನವಾಗಿ ಪರಿಗಣಿಸಿದರು”.  ಸೋವಿಯತ್ ಒಕ್ಕೂಟವು ಚೆಸ್ ತರಬೇತಿ ಮತ್ತು ಪ್ರತಿಭೆಯನ್ನು ಪೋಷಿಸುವಲ್ಲಿ ಹೊಂದಿದ್ದ ಅತಿರೇಕದ  ಆಸಕ್ತಿ  ದಶಕಗಳ ಕಾಲ ಆಟದ ಮೇಲೆ ಅದರ ಪ್ರಾಬಲ್ಯಕ್ಕೆ ಕಾರಣವಾಯಿತು. ಬ್ಯಾಲೆ ಮತ್ತು ಕವಿತೆಗಳ ಜೊತೆಗೆ ಚೆಸ್ ಕೂಡ ಸೋವಿಯೆತ್ ಸಮಾಜದ ಸಾಂಸ್ಕೃತಿಕ ಅಸ್ಮಿತೆಯಾಯಿತು. ಸೋವಿಯತ್ ಚಾಂಪಿಯನ್ ಬೋರಿಸ್ ಸ್ಪಾಸ್ಕಿ ಮತ್ತು  ಅಮೆರಿಕದ ವಿಶಿಷ್ಟ ಪ್ರತಿಭಾನ್ವಿತ  ಬಾಬಿ ಫಿಷರ್ ನಡುವಿನ ‘ಶತಮಾನದ ಆಟ ‘ ಎಂದು ಕರೆಯುವ ಪಂದ್ಯ  ೧೯೭೨ರಲ್ಲಿ ನಡೆಯಿತು. ಮತ್ತೆ ಆ ಪಂದ್ಯ  ಸೋವಿಯತ್ ಪ್ರಾಬಲ್ಯಕ್ಕೆ  ಸವಾಲೊಡ್ಡಿತು. ಅವರಿಬ್ಬರ ಮುಖಾಮುಖಿ ಅಮೆರಿಕ -ಸೋವಿಯೆತ್ ಗಳ ನಡುವಿನ  ಶೀತಲ ಸಮರವನ್ನು ಚೆಸ್ ಬೋರ್ಡಿಗೂ  ತಂದಿತು . ಇಡೀ ಪಂದ್ಯ, ಗೆಲುವಿಗಾಗಿ ಬಳಸಲಾಗುವ ರಹಸ್ಯ ಮತ್ತು ಅನುಚಿತ ತಂತ್ರಗಳಿಂದ , ಪರಸ್ಪರರ ಬಗೆಗಿನ  ಅವ್ಯಕ್ತ ಸಂಶಯಗಳಿಂದ ತುಂಬಿತ್ತು. ಸ್ವತಃ  ಚಂಚಲ ಮನಸ್ಥಿತಿಯ , ಹೋರಾಟದ ವ್ಯಕ್ತಿತ್ವದ  ಫಿಷರ್ , ತಾನೆಂದಿಗೂ ಈ ಪಂದ್ಯವನ್ನು ಆಡಲು  ಬರುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ನಂತರ ಅಮೆರಿಕದ ರಾಯಭಾರಿ ಹೆನ್ರಿ ಕಿಸ್ಸಿಂಗರ್   ವಿಶೇಷ ಫೋನ್ ಕರೆ ಮಾಡಿ ಮನವೊಲಿಸಬೆಕಾಯಿತು.

ಫಿಷರ್ ಅಂದಿನ ಐತಿಹಾಸಿಕ ಪಂದ್ಯದಲ್ಲಿ ಸ್ಪಾಸ್ಕಿಯನ್ನು ಸೋಲಿಸಿದರು,  ‘ಸುಳ್ಳು, ಮೋಸ, ಬೂಟಾಟಿಕೆ’ಯ  ಸೋವಿಯತ್ ಚೆಸ್ ಯಂತ್ರದ ವಿರುದ್ಧ ‘ಸ್ವತಂತ್ರ ಜಗತ್ತು’  ಗೆಲುವು ಸಾಧಿಸಿತು ಎಂದು ಅಮೆರಿಕ ತಿಳಿಯಿತು. ಈ ಗೆಲುವು ಫಿಷರ್ ಗೆ , ಬಾಕ್ಸಿಂಗ್ ಜಗತ್ತಿನಲ್ಲಿ ಮುಹಮ್ಮದ್ ಅಲಿಗೆ ದೊರಕಿದ್ದ ರೀತಿಯ  ಜನಪ್ರಿಯತೆಯನ್ನು  ನೀಡಿತು. ಅಂದಿನಿಂದ ಇಂದಿನವರೆಗೂ  ಚೆಸ್ ಜಗತ್ತು ಹಲವು ಸಾರ್ವಕಾಲಿಕ ಅತ್ಯುತ್ತಮ ಆಟಗಾರರು ಎಂದು ಪರಿಗಣಿಸಬಹುದಾದವರನ್ನು ಕಂಡಿದೆ, ಕಾಣುತ್ತಿದೆ. ಇಂಟರ್ನೆಟ್‌ನ ಉದಯದಿಂದಾಗಿ ಈಗ ಎಂದಿಗಿಂತಲೂ ಹೆಚ್ಚು ಜನಪ್ರಿಯವಾಗಿದೆ, ಇದು ಪ್ರಪಂಚದಾದ್ಯಂತ ಲಕ್ಷಾಂತರ  ಅಭಿಮಾನಿಗಳಿಗೆ ಚೆಸ್ ಬಗ್ಗೆ ಮಾತನಾಡಲು ಮತ್ತು ಆಡಲು ಅನುವು ಮಾಡಿಕೊಡುತ್ತಿದೆ ,  ಚೆಸ್ ಅಸ್ತಿತ್ವಕ್ಕೆ ಬಂದ ಒಂದೂವರೆ ಸಹಸ್ರಮಾನಕ್ಕೂ  ಹೆಚ್ಚಿನ  ಕಾಲದ ನಂತರವೂ   ಇತಿಹಾಸ ಬೆಳೆಯುತ್ತಿದೆ ಬದಲಾಗುತ್ತಲೇ ಇದೆ, ಮಾನವ  ಬೌದ್ಧಿಕ ರಾಜಕೀಯ ಸಾಂಸ್ಕೃತಿಕ ವಿಕಸನದಲ್ಲಿ ಸಾಧನವಾಗಿ ಸರಕಾಗಿ ವೇದಿಕೆಯಾಗಿ ಇಂದಿಗೂ ಉಳಿದಿದೆ, ಮುಂದೆಯೂ ಉಳಿಯಲಿದೆ.