ಬೇಸಿಂಗ್ ಹೌಸ್ ಮುತ್ತಿಗೆ ಪ್ರಕರಣ – ರಾಮಮೂರ್ತಿ, ಬೇಸಿಂಗ್ ಸ್ಟೋಕ್

ಈ ದೇಶದಲ್ಲಿ (ಯುನೈಟೆಡ್ ಕಿಂಗ್ಡಮ್) ನೀವು ಎಲ್ಲೇ ಇರಿ, ನಿಮಗೆ ಹತ್ತಿರದಲ್ಲೇ ಒಂದು ಐತಿಹಾಸಿಕ ಸ್ಥಳ ಇರುವ ಸಾಧ್ಯತೆ ಇರುತ್ತದೆ.  ಅದು ನೂರಾರು ವರ್ಷಗಳ ಹಿಂದೆ ಕಟ್ಟಿದ ಮನೆ ಇರಬಹುದು, ಹೆಸರಾಂತ ಪುರುಷ ಅಥವಾ ಮಹಿಳೆ ಬದುಕಿದ್ದ ಊರು ಇರಬಹುದು ಅಥವಾ ಯುದ್ಧ ನಡೆದ ಸ್ಥಳ ಇರಬಹುದು. ಇವು ಯಾವುವೂ ಇಲ್ಲದಿದ್ದರೆ ನೂರಾರು ವರ್ಷಗಳ ಹಳೆಯ ಆದರೆ ಇನ್ನೂ ಬದುಕಿಕೊಂಡು ಬಂದಿರುವ ಒಂದು ಪಬ್ ಅಂತೂ ಇದ್ದೇ ಇರುತ್ತದೆ!

ಇಲ್ಲಿನ ಅನೇಕ ಸಂಸ್ಥೆಗಳು (ಉದಾ: English Heritage, National Trust) ಇಂಥ ಜಾಗಗಳ ಸಂರಕ್ಷಣೆಯ ಹೊರೆಯನ್ನು ತೆಗೆದುಕೊಂಡಿರುತ್ತಾರೆ. ಅದಲ್ಲದೇ, ನೂರಾರು ವರ್ಷಗಳ ಹಿಂದಿನ ಮೂಲದಾಖಲೆಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಅನೇಕ ಸಂಸ್ಥೆಗಳಿವೆ (ಉದಾ: National Archives, Public Records Office, British Library). ಅಷ್ಟೇ ಅಲ್ಲದೇ ಬಹುಷಃ ಎಲ್ಲ ಚರ್ಚುಗಳೂ ಸಹ ಸ್ಥಳೀಯ ದಾಖಲೆಗಳನ್ನು ಕಾಪಾಡಿಕೊಂಡು ಬಂದಿರುತ್ತವೆ.  

ನಾವಿರುವ ಹತ್ತಿರದ ಊರಿನಲ್ಲಿ, ಕೇವಲ ಎರಡು ಮೈಲಿ ದೂರದಲ್ಲಿ ೧೬ನೇ ಶತಮಾನದ ಬೇಸಿಂಗ್ ಮನೆ (Basing House) ಮತ್ತು ಹತ್ತು ಮೈಲಿ ದೂರದಲ್ಲಿ ಚಾವ್ಟನ್ ವಿಲೇಜ್ (Chawton village)ನಲ್ಲಿ ೧೯ನೇ ಶತಮಾನದಲ್ಲಿದ್ದ ಪ್ರಸಿದ್ಧ ಸಾಹಿತಿ ಜೇನ್ ಆಸ್ಟೆನ್ (Jane Austen) ವಾಸವಾಗಿದ್ದ ಮನೆ ಇದೆ.  ಅಂದ ಹಾಗೆ ಸಮೀಪದಲ್ಲಿ ಡಮ್ಮರ್ ಅನ್ನುವ ಹಳ್ಳಿಯಲ್ಲಿ ೪೦೦ ವರ್ಷಗಳಷ್ಟು ಹಳೆಯ Queen Inn PUB ಇದೆ!

ಬೇಸಿಂಗ್ ಮನೆ

ಈ ಲೇಖನ `ಬೇಸಿಂಗ್ ಹೌಸ್` ಬಗ್ಗೆ. ಸ್ಥಳೀಯ ಚರಿತ್ರೆಯಲ್ಲಿ ಇಲ್ಲಿ ಕ್ರಿ.ಶ. ೧೧೦೦ ನಲ್ಲಿ `ಡಿ ಪೋರ್ಟ್` ಮನೆತನದವರು ೧೫ ಎಕರೆ ಜಾಗದಲ್ಲಿ ಒಂದು ವಿಶಾಲವಾದ ಕೋಟೆಯನ್ನು ಕಟ್ಟಿದ ವಿವರಗಳಿವೆ. ಇವರು ೧೦೬೬ರಲ್ಲಿ ಬಂದ ವಿಲಿಯಂ (William, the Conqueror)ನ ಕಡೆಯವರು. ಕೋಟೆಯ ಸುತ್ತಲೂ ರಕ್ಷಣೆಗಾಗಿ ಅನೇಕ ಗುಂಡಿ ಮತ್ತು ಕಾಲುವೆಗಳನ್ನು ಕಟ್ಟಿದರು. ನಂತರ ಬಂದವನು ವಿಲಿಯಂ ಪ್ಯಾಲೆಟ್. ಈತ ಹೆನ್ರಿ-೮ನ  ಆಸ್ಥಾನದಲ್ಲಿ   ಉನ್ನತ ಹುದ್ದೆಯಲ್ಲಿ ಇದ್ದವನು. ಕಾರ್ಡಿನಲ್ ವುಲ್ಸಿ (Cardinal Woolsey) ಜೊತೆಯಲ್ಲಿ ಕೆಲಸ ಮಾಡಿದ ನಂತರ ಹಣಕಾಸಿನ ಸಚಿವನಾದವನು (ಈಗಿನ Chancellor of the Exchequer ತರಹ). ಕ್ರಿ.ಶ. ೧೫೩೫ರಲ್ಲಿ ಹಳೆಯ ಕೋಟೆಯ ಪಕ್ಕದಲ್ಲಿ ೩೬೫ ಕೊಠಡಿಗಳ ಅರಮನೆಯನ್ನು ಕಟ್ಟಿಸಿದ. ಈ ಮನೆ ಆಗ ರಾಜ್ಯದಲ್ಲೇ ಅತ್ಯಂತ ದೊಡ್ಡ ಮನೆ ಆಗಿತ್ತು. ಅನೇಕ ರಾಜ್ಯವಂಶದ ಮನೆಯವರು ಇಲ್ಲಿಗೆ ಬರುತ್ತಿದ್ದರು. ಹೆನ್ರಿ-೮ ಸಹ ಭೇಟಿ ಕೊಟ್ಟಿದ್ದ. ರಾಣಿ ಎಲಿಝಬೆತ್-೧, ೧೫೬೦, ೧೫೬೯ ಮತ್ತು ೧೬೦೧ ನಲ್ಲಿ ಇಲ್ಲಿ ಬಂದು ಅನೇಕ ದಿನಗಳನ್ನು ಕಳೆದಿದ್ದಳು. ೧೫೫೧ರಲ್ಲಿ ಎಡ್ವರ್ಡ್-೬ ಈತನಿಗೆ Marquess of Winchester ಅನ್ನುವ ಬಿರುದನ್ನು ಕೊಟ್ಟು ಗೌರವಿಸಿದ. 

ಈ ವಂಶದ  ಜಾನ್ ಪೌಲೆಟ್, ಐದನೇಯ Marquess of Winchester, ಕಾಲದಲ್ಲಿ ಈ ಮನೆ ನಾಶವಾಯಿತು. ಇದರ ಕಾರಣ,  English Civil War (೧೬೪೨-೧೬೫೧); ಇದರ ಬಗ್ಗೆ ಇಲ್ಲಿ ಸಂಕ್ಷಿಪ್ತ ವಿವರಣೆ ಸೂಕ್ತ.

ಕ್ಯಾಥೋಲಿಕ್ ಮತ್ತು ಪ್ರಾಟೆಸ್ಟೆಂಟ್ ಪಂಗಡದವರ ಮನಸ್ತಾಪ, ಚಾರ್ಲ್ಸ್-೧ನ ಅತೃಪ್ತಿಕರ ರಾಜ್ಯಭಾರ ಮತ್ತು ಆಡಳಿತ ತನ್ನ ಹಕ್ಕು ಮಾತ್ರ ಎಂಬ ಅಹಂಕಾರ, ಪಾರ್ಲಿಮೆಂಟಿಗೆ  ರಾಜನ  ಆಡಳಿತದ ಅಧಿಕಾರ ಕಡಿಮೆ ಮಾಡುವ ಪ್ರಯತ್ನ, ಪ್ರಜಾಪ್ರಭುತ್ವ ಪಂಗಡದ ಮುಖ್ಯಸ್ಥನಾದ ಆಲಿವರ್ ಕ್ರಾಂವೆಲ್-ಗೆ ಇಂಗ್ಲೆಂಡ್ ದೇಶದಲ್ಲಿ ಪ್ರಾಟೆಸ್ಟಂಟ್ ಜಾತಿ ಮಾತ್ರ ಉಳಿಯಬೇಕೆಂಬ ಉದ್ದೇಶ – ಇವು ಕೆಲವು ಮುಖ್ಯ ಕಾರಣಗಳು.

ವಿಲಿಯಂ ಪೌಲೆಟ್

ಚಾರ್ಲ್ಸ್-೧ ಕ್ಯಾಥೋಲಿಕ್ ಪಂಗಡದವರ ಹಿತೈಷಿ ಮತ್ತು ಈ ಜಾತಿಗೆ ಸೇರಿದ್ದ ಹೆನ್ನಿರೀತ ಮರಿಯ ಮದುವೆ ಆಗಿದ್ದು ಅನೇಕರಿಗೆ ಅಸಮಾಧಾನ ಉಂಟಾಯಿತು. ಕ್ಯಾಥೋಲಿಕ್ ಪಂಗಡದವರ ಮಾದರಿಯ ಚರ್ಚುಗಳಿಗೆ  ಹೆಚ್ಚು ಸ್ವಾತಂತ್ರ ಕೊಡುವ,  ಪಾರ್ಲಿಮೆಂಟಿನ ಅನುಮತಿ ಇಲ್ಲದೇ ಹಣವನ್ನು ತನ್ನ ಯುದ್ಧಗಳಿಗೆ ಬಳಸುವ ಮತ್ತು ಅನೇಕ ಸಲ ಪಾರ್ಲಿಮೆಂಟನ್ನೇ ರದ್ದುಮಾಡಿ ಸರ್ವಾಧಿಕಾರಿಯಾಗಿ ರಾಜ್ಯವನ್ನು ಆಳುವ ಪ್ರಯತ್ನಗಳನ್ನು ಮಾಡಿದ. 

ಪ್ರಾಟೆಸ್ಟಂಟ್ ಪಂಗಡದ ನಾಯಕ ಆಲಿವರ್ ಕ್ರಾಂವೆಲ್  ಪ್ರಜಾಪ್ರಭುತ್ವದ ಮುಂದಾಳಾಗಿ ಚಾರ್ಲ್ಸ್ ಮೇಲೆ ಹೋರಾಟ ಆರಂಭಿಸಿದ. ಆದರೆ ಕ್ಯಾಥೋಲಿಕ್ ಪಂಗಡವರು ರಾಜನ ನೆರವಿಗೆ   ಮುಂದೆ ಬಂದರು. ಹೀಗಾಗಿ ೧೬೪೨ ರಿಂದ ೧೬೫೧ ಈ ದೇಶದಲ್ಲಿ ಅನೇಕ ಕಡೆ ಯುದ್ಧಗಳಾದವು. ಇದಲ್ಲದೆ ಹಲವಾರು ಪ್ರಬಲ ಕ್ಯಾಥೋಲಿಕ್ ಮನೆತನದವರ ಮೇಲೂ ಧಾಳಿ ನಡೆಯಿತು. ಅದರಲ್ಲಿಈ ಬೇಸಿಂಗ್ ಹೌಸ್ ಕೂಡ ಒಂದು. ಇದರ ಮಾಲಿಕ, ಜಾನ್ ಪೌಲೆಟ್, ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವರು ಮತ್ತು ಚಾರ್ಲ್ಸ್-೧ನ ಹಿತೈಷಿ. 

ಚಾರ್ಲ್ಸ್-೧

ಈ ಮನೆಯ ಮೇಲೆ ಮೊದಲ ಬಾರಿಗೆ ೧೬೪೨ರಲ್ಲಿ, ಕರ್ನಲ್ ನಾರ್ಟನ್-ನ ನೇತೃತ್ವದಲ್ಲಿ ಪ್ರಜಾಪ್ರಭುತ್ವದ ಸೇನೆ ಧಾಳಿ ನಡೆಸಿತು. ಆದರೆ ಚಾರ್ಲ್ಸ್ ತನ್ನ ಸೈನ್ಯದ  ಒಂದು ತುಂಡನ್ನು ಜಾನ್ ಪೌಲೆಟ್ ಸಹಾಯಕ್ಕೆ ಕಳಿಸಿದ್ದರಿಂದ ಧಾಳಿ ಯಶಸ್ವಿ ಆಗಲಿಲ್ಲ. 

೧೬೪೩ ರಲ್ಲಿ ಸರ್ ವಿಲಿಯಂ ವಾಲ್ಲರ್ ೫೦೦ ಸೈನಿಕರು ಮತ್ತು ೫೦೦ ಕುದುರೆಗಳ ಪಡೆಯನ್ನು ತಂದು ಮೂರು ದಿನ ಈ ಮನೆ ಮುತ್ತಿಗೆ ಹಾಕಿ, ಮನೆಯ ಪಕ್ಕದಲ್ಲಿದ್ದ ದೊಡ್ಡ ಕೊಟ್ಟಿಗೆಯನ್ನು ಆಕ್ರಮಿಸಿಕೊಂಡ. ಜಾನ್ ಪೌಲೆಟ್  ಶರಣಾಗತನಾದರೆ ರಕ್ತಪಾತ  ತಪ್ಪಿಸಬಹುದು ಎಂದು ಸಂದೇಶವನ್ನು ಕಳಿಸಿದ.  ಆದರೆ ಇದನ್ನು ನಿರಾಕರಿಸಿ ರಾಜ್ಯವಂಶದ ಬೆಂಬಲಿಗರಿಂದ ಹೋರಾಟ ಮುಂದುವರೆಸಿ  ಮನೆಯ ಮೇಲಿನಿಂದ ಫಿರಂಗಿಗಳನ್ನು ನಿಲ್ಲಿಸಿ ಎದುರಾಳಿಗಳ ಮೇಲೆ ಹಲ್ಲೆ ಮಾಡಿದರು. ಈ ಕದನದಲ್ಲಿ ಪ್ರಜಾಪ್ರಭುತ್ವದ ಕ್ಯಾಪ್ಟನ್ದ ಕ್ಲಿನ್ಸನ್ ಮರಣ ಹೊಂದಿದ. ಇದನ್ನು ತಡೆಯಲಾರದೆ ಮರುಗುಂಪು ಮಾಡುವುದಕ್ಕೆ  ಈ ಸೈನ್ಯ ಹತ್ತಿರದ ಬೇಸಿಂಗ್ ಸ್ಟೋಕ್-ನಲ್ಲಿ ಸೇರಿದರು. ಪದೇ ಪದೇ ಧಾಳಿ ನಡೆಸಿದರೂ  ಬೇಸಿಂಗ್ ಮನೆಯನ್ನು ವಶಪಡೆಯುವುದಕ್ಕೆ ಸಾಧ್ಯವಾಗಲಿಲ್ಲ. 

ಕೊನೆಗೆ, ಮೂರು ವರ್ಷದ ನಂತರ, ಆಲಿವರ್ ಕ್ರಾಂವೆಲ್ ಸ್ವತಃ ತನ್ನ ಸೈನ್ಯದೊಂದಿಗೆ ಬಂದು (೧೪/೧೦/೧೬೪೫ ) ಮನೆಯ ಮುಂದಿನ ಹೆಬ್ಬಾಲಿಗೆ ಫಿರಂಗಿನಿಂದ ಹೊಡೆದು ಓಳಗೆ ನುಗ್ಗಿ ಮನೆಯನ್ನು ಲೂಟಿ ಮಾಡಿದ ನಂತರ ಕರ್ನಲ್ ಡಾಲ್ಬಿರ್ ಈ ಮನೆಗೆ ಬೆಂಕಿ ಹಚ್ಚಿ  ನಾಶ ಮಾಡಿದ.  ಸ್ಥಳೀಯ ಜನರು ಬಂದು ಈ ಮನೆಯನ್ನು ಲೂಟಿ ಮಾಡಿದರೆ ಅಪರಾಧ ಇಲ್ಲ ಅನ್ನುವ ಸಂದೇಶವನ್ನು ಆಲಿವರ್ ಕ್ರಾಂವೆಲ್ ಕೊಟ್ಟ. 

ಆಲಿವರ್ ಕ್ರಾಂವೆಲ್

ಜಾನ್ ಪೌಲೆಟ್ ಶರಣಾಗತನಾದ ಮೇಲೆ ಲಂಡನ್ ಟವರಿನಲ್ಲಿ (London Tower) ಅನೇಕ ವರ್ಷ ಸೆರೆಯಲ್ಲಿದ್ದ. ೧೬೫೮ರಲ್ಲಿ ಆಲಿವರ್ ಕ್ರಾಂವೆಲ್ ಮರಣವಾದ ನಂತರ ಒಳಜಗಳಗಳು ಶುರುವಾಗಿ ರಾಜ್ಯವಂಶದವರನ್ನು ಬಿಟ್ಟು ಪ್ರಜಾಪ್ರಭುತ್ವ ಮಾತ್ರದಿಂದ ರಾಜ್ಯವನ್ನು ಆಳುವುದು  ಸಾಧ್ಯವಾಗಲಿಲ್ಲ. ಈ ಕಾರಣದಿಂದ, ಚಾರ್ಲ್-೧ನ ಮಗ ಸ್ಕಾಟ್ಲೆಂಡಿನಲ್ಲಿ ರಾಜನಾಗಿದ್ದ. ಚಾರ್ಲ್ಸ್-೨ನನ್ನು  ೧೬೬೦ರಲ್ಲಿ ಪಟ್ಟಕ್ಕೆ ತಂದರು. ರಾಜಪ್ರಭುತ್ವ ಪುನಃ ಮರಳಿ ಬಂತು ಮತ್ತು  ಪ್ರಜಾಪ್ರಭುತ್ವದ  ಪ್ರಭಾವವೂ  ಹೆಚ್ಚಾಯಿತು. 

ಈ ಯುದ್ದದ ನಂತರ, ಚಾರ್ಲ್ಸ್ ಮೇಲೆ  ದೇಶದ್ರೋಹಿ ಎಂಬ ಅಪರಾಧಕ್ಕೆ ಮರಣ ದಂಡನೆ ಶಿಕ್ಷೆ ವಿಧಿಸಿ, ಜನವರಿ ೩೦, ೧೬೪೯ರಲ್ಲಿ ಬಹಿರಂಗವಾಗಿ ಈಗಿನ White Hall ನಲ್ಲಿ ಶಿರಚ್ಛೇದನ ಮಾಡಲಾಯಿತು. 

ಚರ್ಲ್ಸ್-೨ನು ಜಾನ್ ಪೌಲೆಟ್ ಮೇಲಿನ ಅಪರಾಧಗಳನ್ನು ರದ್ದು ಮಾಡಿ ಸೆರೆಯಿಂದ ಬಿಡುಗಡೆ  ಮಾಡಿದ.  ಬೇಸಿಂಗ್ ಮನೆಯನ್ನು ವಶ ಮಾಡಿಕೊಂಡ, ಆದರೆ ಈ ನೆಲಸಮವಾದ ಮನೆಯನ್ನು ಪುನಃ ಕಟ್ಟುವ ಆರ್ಥಿಕ ಶಕ್ತಿ ಇರಲಿಲ್ಲ. ಇವನ ಮಗ  ಚಾರ್ಲ್ಸ್ ಹತ್ತಿರದಲ್ಲಿ ಬೇರೆ ಮನೆ  ಕಟ್ಟಿದ. ಈಗ ಉಳಿದಿರುವುದು  ಅಡಿಪಾಯ ಮತ್ತು ಒಂದು ದೊಡ್ಡ ಕೊಟ್ಟಿಗೆ. ಈ ಮನೆಗೆ ಸಂಬಂಧಪಟ್ಟ ವಸ್ತುಸಂಗ್ರಾಲಯ. ಇದರ ಆಡಳಿತ Hampshire Cultural Trust ನೋಡಿಕೊಳ್ಳುತ್ತದೆ. 

(ಚಿತ್ರಗಳು: ವಿವಿಧ ಮೂಲಗಳಿಂದ)

ಅಮರಪ್ರೇಮ (ಕತೆ) – ಕೇಶವ ಕುಲಕರ್ಣಿ

ಭಾಗ 1: ಇಸ್ವಿ 1987 

ಅಮರನಿಗೆ ಪ್ರೇಮಾಳನ್ನು ನೋಡಬೇಕು ಎನ್ನುವ ಅದಮ್ಯ ಹಂಬಲ ಹುಟ್ಟಿದ್ದು ಇದೇ ಮೊದಲ ಸಲವೂ ಅಲ್ಲ, ಕೊನೆಯ ಸಲವೂ ಅಲ್ಲ. 

ಅಂಥ ಒಂದು ಬಯಕೆ ಅಮರನಲ್ಲಿ ಹುಟ್ಟಿದ್ದು, ತನ್ನ ಮತ್ತು ಉಷಾಳ ಮದುವೆಯ ಆಮಂತ್ರಣ ಪತ್ರಿಕೆ ಕೈಗೆ ಸಿಕ್ಕಾಗ. ಅಪ್ಪ-ಅಮ್ಮ ಗೊತ್ತು ಮಾಡಿದ ಹುಡುಗಿಯಾಗಿದರೂ, ಅಮರನಿಗೆ ಉಷಾ ಮೊದಲ ನೋಟಕ್ಕೇ ಇಷ್ಟವಾಗಿದ್ದಳು, ಮೊದಲ ಮಾತಿನಲ್ಲೇ ಆತ್ಮೀಯಳಂತೆ ಕಂಡಿದ್ದಳು. ನಿಶ್ಚಿತಾರ್ಥವಾದ ಮೇಲೆ ಪುಣೆಯಿಂದ ಹುಬ್ಬಳ್ಳಿಗೆ ಬಂದಾಗಲೆಲ್ಲ ಉಣಕಲ್ ಕೆರೆ, ನೃಪತುಂಗ ಬೆಟ್ಟ, ಕರ್ನಾಟಕ ವಿಶ್ವವಿದ್ಯಾಲಯ, ಅಪ್ಸರಾ ಸುಜಾತಾ ಥೇಟರುಗಳ ತುಂಬೆಲ್ಲ ಓಡಾಡಿದ್ದರು, ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಅನ್ನುವಂತೆ. 

ತನ್ನ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ತರಲು ಅಮರ ಪ್ರಿಂಟಿಂಗ್ ಪ್ರೆಸ್ಸಿಗೆ ಹೋಗಿದ್ದ. ಕೈಯಲ್ಲಿ ಐನೂರು ಆಮಂತ್ರಣ ಪತ್ರಗಳನ್ನು ಹಿಡಿದು, ಅದರಲ್ಲಿಯ ಒಂದು ಕಾರ್ಡನ್ನು ತೆಗೆದು, ಆ ಕಾರ್ಡಿನಲ್ಲಿ ತನ್ನ ಭಾವಿ ಮಡದಿ, ‘ಉಷಾ‘ ಎಂಬ ಹೆಸರನ್ನು ನೋಡಿ ಪುಲಕಿತಗೊಂಡು, ಆ ಹೆಸರಿನ ಮೇಲೆ ಕೈಯಾಡಿಸಿ, ಕಣ್ಣು ಮುಚ್ಚಿ ಆ ಹೆಸರಿನ ಮೇಲೊಂದು ಮುತ್ತು ಕೊಡಬೇಕು ಎಂದು ಕಾರ್ಡನ್ನು ತುಟಿಯ ಬಳಿ ತಂದದ್ದೇ, ಆ ಹೊಸ ಮದುವೆ ಕಾರ್ಡಿನ ವಾಸನೆ ಮೂಗಿಗೆ ಬಡಿದು, ಇದ್ದಕ್ಕಿದ್ದಂತೆ ಪ್ರೇಮಾಳನ್ನು ನೋಡಬೇಕು ಅನಿಸಿಬಿಟ್ಟಿತು. ಇಂಥ ರೋಮ್ಯಾಂಟಿಕ್ ಮೂಡಿನಲ್ಲಿ ಇರಬೇಕಾದರೆ ಪ್ರೇಮಾಳ ನೆನಪು ಏಕೆ ಆಯಿತು, ಅವಳನ್ನು ನೋಡುವ ಆಸೆ ಯಾಕೆ ಹುಟ್ಟಿತು ಎಂದು ತನ್ನ ಮೇಲೆ ತನಗೆ ಕೋಪ ಬಂದಿತು. 

***

1976ನಲ್ಲಿ ಎಂ.ಬಿ.ಬಿ.ಎಸ್ ಓದಲು ‘ಮೈಸೂರು ಮೆಡಿಕಲ್ ಕಾಲೇಜು’ ಸೇರಿದಾಗಿನಿಂದಲೂ ಅಮರನ ಕಣ್ಣಿದ್ದುದು ತನ್ನ ಜೊತೆಗೇ ಓದುತ್ತಿದ್ದ, ಒಂದೇ ಬ್ಯಾಚಿನಲ್ಲಿದ್ದ, ದಿನವೂ ಸಿಗುತ್ತಿದ್ದ ಪ್ರೇಮಾಳ ಮೇಲೆ. ಅಮರ ಚರಂತಿಮಠ ಜಮಖಂಡಿಯವನು, ಪ್ರೇಮಾ ಗೌಡ ಬೆಂಗಳೂರಿನವಳು. ಅಮರ ಲಿಂಗಾಯತ, ಪ್ರೇಮಾ ಒಕ್ಕಲಿಗಳು. ಅಮರ ಶಾಲಾಮಾಸ್ತರನ ಮಗ, ಪ್ರೇಮಾ ಇಂಜಿನಿಯರನ ಮಗಳು. ಅಮರನ ಮನೆಯಲ್ಲಿ ಒಬ್ಬಳು ಅಕ್ಕ, ಇಬ್ಬರು ತಂಗಿಯರು ( ತಂಗಿಯರ ಮದುವೆಯ ಜವಾಬ್ದಾರಿ ಅಮರನದು ಎನ್ನುವುದು ಅಲಿಖಿತ ನಿಯಮ), ಪ್ರೇಮಾಳೇ ಅವಳ ಮನೆಯಲ್ಲಿ ಹಿರಿಯಳು, ಅವಳಿಗೆ ಒಬ್ಬ ತಮ್ಮ. ಅಮರ ಕನ್ನಡ ಮಾಧ್ಯಮ, ಪ್ರೇಮಾ ಇಂಗ್ಲೀಷ್ ಮೀಡಿಯಂ. ಅಮರ ಸಂಕೋಚದ ಮುದ್ದೆ, ಪ್ರೇಮಾ ಉತ್ಸಾಹದ ಬುಗ್ಗೆ. ಅಮರನಿಗೆ ಹಿಂದಿ ಹಾಡುಗಳೆಂದರೆ ಪ್ರಾಣ, ಪ್ರೇಮಾಳಿಗೆ ಇಂಗ್ಲೀಷ್ ಹಾಡುಗಳ ಹುಚ್ಚು. ಒಟ್ಟಿನಲ್ಲಿ ಅವರಿಬ್ಬರೂ ‘ಮೈಸೂರು ಮೆಡಿಕಲ್ ಕಾಲೇಜಿ’ನಲ್ಲಿ ಒಂದೇ ಕ್ಲಾಸಿನಲ್ಲಿ ಅದರಲ್ಲೂ ಒಂದೇ ಬ್ಯಾಚಿನಲ್ಲಿ ಇರುತ್ತಾರೆ ಎನ್ನುವುದರ ಹೊರತಾಗಿ, ಇಬ್ಬರಲ್ಲೂ ಹೊಂದುವ ಒಂದೇ ಒಂದು ಗುಣವೂ ಇರಲಿಲ್ಲವಾದರೂ, ಅಮರನಿಗೆ ಪ್ರೇಮಾ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದ್ದಳು.   

ಮೊದಲ ವರ್ಷದ ಅಂಗರಚನಾಶಾಸ್ತ್ರದಿಂದ ಹಿಡಿದು ಕೊನೆಯ ವರ್ಷದ ಕೊನೆಯ ಕ್ಲಿನಿಕ್‍ವರೆಗೆ ಇಬ್ಬರೂ ಒಂದೇ ಬ್ಯಾಚಿನಲ್ಲಿದ್ದರು. ಏಕವಚನದಲ್ಲಿ ಮಾತಾಡುತ್ತಾರೆ ಎನ್ನುವುದನ್ನು ಬಿಟ್ಟರೆ ಅವರಿಬ್ಬರ ನಡುವೆ ಅಂಥ ಸಲಿಗೆ ಏನೂ ಇರಲಿಲ್ಲ. ಗುಂಪಿನಲ್ಲಿ ಎಲ್ಲರೂ ಮಾತಾಡುವಂತೆ ಮಾತಾಡುತ್ತಿದ್ದರು. ಆದರೆ ಅಮರ ಅವಳು ಬೆಳಿಗ್ಗೆ ಸಿಗುವುದನ್ನೇ ಕಾಯುತ್ತ ಪ್ರತಿ ರಾತ್ರಿ ನಿದ್ದೆ ಹೋಗುತ್ತಿದ್ದ. ಅಮರನಿಗೆ ಕನಸುಗಳನ್ನು ಹೆಣೆಯಲು, ಅವಳ ಒಂದು ‘ಗುಡ್ ಮಾರ್ನಿಂಗ್’, ಒಂದು ಮುಗುಳ್ನಗು, ಒಂದು ಹಿಡಿಯಷ್ಟು ಮಾತು ಸಾಕಾಗುತ್ತಿತ್ತು. ತನಗೆ ಅವಳನ್ನು ಕಂಡರೆ ಇಷ್ಟ ಎನ್ನುವ ಸುಳಿವನ್ನು ಅವಳಿಗೇನು, ತನ್ನ ಹಾಸ್ಟೇಲಿನ ರೂಮ್‍ಮೇಟ್ ಮಲ್ಲಿಕಾರ್ಜುನನಿಗೂ ಬಿಟ್ಟುಕೊಟ್ಟಿರಲಿಲ್ಲ. ಎಲ್ಲಿ ಅವಳ ಆ ಒಂದು ನಗು ಮತ್ತು ಒಂದಿಷ್ಟು ಮಾತು ಕೂಡ ಕಳೆದು ಹೋಗಿ ಬಿಡುವುದೋ ಎನ್ನುವ ಭಯ. ಗುಂಪಿನಲ್ಲಿ ಗೋವಿಂದನಾಗಿ ಕ್ಯಾಂಟೀನಿಗೆ ಹೋಗುತ್ತಿದ್ದ, ಆಗಾಗ ಡಿನ್ನರಿಗೆ ಗೆಳೆಯರೆಲ್ಲ ಸೇರಿ ಆರ್-ಆರ್-ಆರ್-ಗೆ (ಮೈಸೂರಿನ ಪ್ರಸಿದ್ಧ ಆಂಧ್ರದ ಚಿಕನ್ ಬಿರಿಯಾನಿ ಸಿಗುವ ಹೊಟೇಲು) ಹೋಗುತ್ತಿದ್ದರು (ಪ್ರೇಮಾ ಚಿಕನ್ ಬಿರಿಯಾನಿ ತಿನ್ನುವಾಗ, ತಾನು ಸೊಪ್ಪಿನ ಸಾರು ಹಾಕಿಕೊಂಡು ಅನ್ನ ತಿನ್ನುತ್ತಿದ್ದ). ಬೈಕಿನಲ್ಲಿ ಚಾಮುಂಡಿ ಬೆಟ್ಟಕ್ಕೋ, ಕನ್ನಂಬಾಡಿಗೋ (ಕೆ ಆರ್ ಎಸ್ ಆಣೆಕಟ್ಟು) ಹೋಗುತ್ತಿದ್ದರು; ಅಂಥ ದಿನಗಳಲ್ಲಿ ಅವಳು ಒಬ್ಬಳೇ ಒಂದೈದು ನಿಮಿಷ ಮಾತಿಗೆ ಸಿಕ್ಕರೂ ಆಕಾಶದಲ್ಲಿ ಹಾರಾಡುತ್ತಿದ್ದ. ಇಷ್ಟೆಲ್ಲ ಆದರೂ ಅಮರ ನಾಕೂವರೆ ವರ್ಷದಲ್ಲಿ ಪ್ರೇಮಾಳ ಜೊತೆ ಒಂದೇ ಒಂದು ಗೆರೆ ಮುಂದೆ ದಾಟಲಿಲ್ಲ, ಒಂದೇ ಒಂದು ಮಾತು ಹೆಚ್ಚು ಆಡಲಿಲ್ಲ. 

ಎಂ.ಬಿ.ಬಿ.ಎಸ್ ಮುಗಿದು ಜ್ಯೂನಿಯರ್ ಡಾಕ್ಟರ್ (ಇಂಟರ್ನ್‍‍ಶಿಪ್) ಆಗಿ ಕೆಲಸ ಬರುತ್ತಿದ್ದಂತೆ ಅಮರ ಸ್ವಲ್ಪ ಚಿಗುರಿಕೊಂಡ, ಏಕೆಂದರೆ ಮೊಟ್ಟಮೊದಲ ಬಾರಿಗೆ ಸ್ಟೈಪೆಂಡ್ ಎಂಬ ಹೆಸರಿನಲ್ಲಿ ಕೈಯಲ್ಲಿ ಒಂಡಿಷ್ಟು ದುಡ್ಡು ತಿಂಗಳೂ ತಿಂಗಳೂ ಕೈಬರುವ ದಿನಗಳವು. ಮೊಟ್ಟಮೊದಲ ಬಾರಿಗೆ ಅವಳ ಜೊತೆ ಕಾಲೇಜ್ ಕ್ಯಾಂಟೀನಿನಲ್ಲಿ ಒಬ್ಬನೇ ಕೂತು ಕಾಫಿ ಕುಡಿಯುತ್ತಿದ್ದ. ಕಲ್‍ಬಿಲ್ಡಿಂಗನ್ನೂ ದಾಟಿ, ಧನ್ವಂತ್ರಿ ರೋಡಿನ ‘ಗಾಯತ್ರಿ ಭವನ’ದಲ್ಲಿ ಅವಳೊಟ್ಟಿಗೆ ದೋಸೆ ತಿನ್ನುತ್ತಿದ್ದ. ಪ್ರೇಮಾ ಕೂಡ ಅವನು ಕರೆದಾಗಲೆಲ್ಲ ಖುಷಿ ಖುಷಿಯಲ್ಲಿ ಬರುತ್ತಿದ್ದಳು. ಆರು ತಿಂಗಳು ಮುಗಿಯುತ್ತಿದ್ದಂತೆ ಅವರ ರೂರಲ್ ಪೋಸ್ಟಿಂಗುಗಳು ಶುರುವಾದವು. ಆಗ ಅಮರನು ಎಲ್ಲೊ, ಪ್ರೇಮಳು ಏಲ್ಲೋ. ಆಗಿನ್ನೂ ಮೊಬೈಲು ಇಂಟರ್ನೆಟ್ಟು ಯಾವುದೂ ಇರಲಿಲ್ಲ. ಹೀಗಾಗಿ ಅವರಿಬ್ಬರ ಸಂಪರ್ಕ ಮತ್ತು ಭೇಟಿ ಹೆಚ್ಚು ಕಡಿಮೆ ನಿಂತೇ ಹೋಯಿತು. ಇತ್ತ ಪಿ.ಜಿ ಎಂಟ್ರನ್ಸ್ ಪರೀಕ್ಷೆ ಕೂಡ ಹತ್ತಿರ ಬರುತ್ತಿತ್ತು. ಎಲ್ಲರೂ ಪರೀಕ್ಷೆಯ ತಯಾರಿಯಲ್ಲಿ ತೊಡಗಿದರು. ಅಮರನೂ ಓದಲು ಕೂತ, ಒಳ್ಳೆಯ ಕಡೆ ಪಿ.ಜಿ ಸೀಟು ಸಿಕ್ಕಿದರೆ ಪ್ರೇಮಾಳಿಗೆ ತನ್ನ ಮನಸ್ಸಿನ ಹಂಬಲ ಹೇಳಿ ಬಿಡುವ ಆಸೆಯಿಂದ ಎಲ್ಲರಿಗಿಂತ ತುಸು ಚೆನ್ನಾಗಿಯೇ ಓದಿದ. ಎಂಟ್ರನ್ಸ್ ಬರೆಯುವಾಗ ಪ್ರೇಮಾ ಸಿಕ್ಕಿದಳು, ಪರೀಕ್ಷೆ ಮುಗಿದ ಮೇಲೆ ಗೆಳೆಯರ ಗುಂಪಿನಲ್ಲಿ `ಮೈಲಾರಿ`ಗೆ ಹೋಗಿ ದೋಸೆ ತಿಂದು, ಅಲ್ಲಿಂದ ಚಾಮುಂಡಿ ಬೆಟ್ಟಕ್ಕೆ ಹೋಗಿ ತಮಗೆ ಓಳ್ಳೆಯ ರ‍್ಯಾಂಕ್‌ ಬರಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದರು. ಆಗ ಪ್ರೇಮಾ ಅವನ ತಲೆಗೆ ತಿಲಕವನ್ನು ಇಟ್ಟು `ಬೆಸ್ಟ್ ಆಫ್ ಲಕ್` ಹೇಳಿದಳು. ಚಾಮುಂಡೇಶ್ವರಿಗೆ ಮನದಲ್ಲೇ ಕೃತಜ್ಞತೆ ಸಲ್ಲಿಸಿದ ಅಮರನಿಗೆ ಆಕಾಶಕ್ಕೆ ಮೂರೇ ಗೇಣು.    

ಜ್ಯೂನಿಯರ್ ಡಾಕ್ಟರ್ ಮುಗಿಯುವ ಸಮಯದಲ್ಲಿ ಪಿ.ಜಿ ಎಂಟ್ರನ್ಸಿನ ಫಲಿತಾಂಶ ಬಂತು. ಅಮರನಿಗೆ ಒಳ್ಳೆಯ ರ‍್ಯಾಂಕ್‌ ಬಂದ್ದಿತ್ತು, ಅವನ ರ‍್ಯಾಂಕಿಗೆ ಅವನಿಗೆ ಒಳ್ಳೆಯ ಕಡೆ ಸೀಟು ಸಿಗುವುದು ಖಾತ್ರಿ ಇತ್ತು. ರಿಸಲ್ಟು ಗೊತ್ತಾದ ತಕ್ಷಣ ಮೊಟ್ಟಮೊದಲು ಅವನಿಗೆ ಹೇಳಬೇಕು ಅನಿಸಿದ್ದು ಪ್ರೇಮಾಳಿಗೆ. ಗೈನೆಕಾಲಾಜಿ ಪೋಸ್ಟಿಂಗಿನಲ್ಲಿದ್ದ ಪ್ರೇಮಾಳಿಗೆ ವಿಚಾರ ತಿಳಿಸಲು ಲಗುಬಗೆಯಿಂದ ನಡೆದ. ಪ್ರೇಮಾಳಿಗೆ ಕೂಡ ಒಳ್ಳೆಯ ರ‍್ಯಾಂಕ್‌ ಬಂದಿತ್ತು. ಚಲುವಾಂಬಾ ಆಸ್ಪತ್ರೆಯ ಹತ್ತಿರ ಹೋಗುತ್ತಿರಬೇಕಾದರೆ, ಪ್ರೇಮಾ ಕೂಡ ಅಷ್ಟೇ ಲಗುಬಗೆಯಿಂದ ಹೊರಬರುತ್ತಿದ್ದಳು. ಅಮರನನ್ನು ನೋಡುತ್ತಿದ್ದಂತೆ ಅವಳ ಕಣ್ಣುಗಳೂ ಅರಳಿದವು, ದೂರದಿಂದಲೇ ಕೈಯಾಡಿಸಿದಳು. ಇಬ್ಬರೂ ಹತ್ತಿರ ಬರುತ್ತಿದ್ದಂತೆ, ಇಬ್ಬರೂ ಒಟ್ಟಿಗೇ `ಕಾಂಗ್ರ್ಯಾಟ್ಸ್` ಹೇಳಿದರು, ನಂತರ ಇಬ್ಬರೂ ಒಟ್ಟಿಗೇ ನಕ್ಕರು, ನಂತರ ಮತ್ತೆ ಒಟ್ಟಿಗೇ `ಕಾಂಗ್ರಾಟ್ಸ್` ಹೇಳಿದರು, ಮತ್ತೆ ನಕ್ಕರು. ಅಮರನಿಗೆ ಪಿಜಿ ಸೀಟು ಸಿಕ್ಕಿದ್ದು ಸಾರ್ಥಕವೆನಿಸಿಬಿಟ್ಟಿತು. ಇಬ್ಬರೂ ಹೊಸ ಊರಿನಲ್ಲಿ (ಮುಂಬೈ ಅಥವಾ ದಿಲ್ಲಿ) ಒಂದೇ ಕಾಲೇಜಿನಲ್ಲಿ ಪಿ.ಜಿ ಮಾಡಬಹುದು, ತನ್ನ ಪ್ರೇಮ ಚಿಗುರೊಡೆಯಬಹುದು ಎಂದೆಲ್ಲ ಅವನ ಮುಂದಿನ ಮೂರು ವರ್ಷದ ಕನಸುಗಳು ಮೂರು ಸೆಕೆಂಡಿನಲ್ಲಿ ಅವನ ಮನಸ್ಸಿನ ಪರದೆಯ ಮೇಲೆ ಚಲಿಸಿದವು. ಆಗ ಪ್ರೇಮಾ ತನ್ನ ಬ್ಯಾಗಿನಿಂದ ಒಂದು ಲಕೋಟೆಯನ್ನು ಕೊಟ್ಟಳು. ಅದೊಂದು ಗ್ರೀಟಿಂಗ್ ಕಾರ್ಡು ತರಹ ಇತ್ತು, ಅದು `ಕಾಂಗ್ರ್ಯಾಚುಲೇನ್` ಕಾರ್ಡಿರಬಹುದು, ಅದರೊಳಗೆ ಪ್ರೇಮಾ ತನ್ನ ಪ್ರೇಮಪತ್ರವನ್ನು ಇಟ್ಟಿರಬಹುದು ಎಂದುಕೊಂಡ. ಲಕೋಟೆಯನ್ನು ಕೈಗೆ ತಗೆದುಕೊಂಡಾಗ ಅವನ ಹೃದಯ ಬಡಿತ ನಗಾರಿಯಾಗಿ ಎಲ್ಲಿ ಪ್ರೇಮಳಿಗೆ ಕೇಳಿಸಿಬಿಡುತ್ತೋ ಎಂದು ನಾಚಿಕೊಂಡ. 

`ಇಲ್ಲೇ ತೆಗೆಯಬಹುದಾ?` ಎಂದ.

`ಪ್ಲೀಸ್,` ಎಂದಳು ಪ್ರೇಮಾ. ಅವಳ ಕಣ್ಣುಗಳು ಮಿಂಚುತ್ತಿದ್ದವು.

ಲಕೋಟೆ ಹರಿದರೆ, ಒಳಗೆ ಕಾರ್ಡು. ಕಾರ್ಡು ಹೊರ ತೆರೆದರೆ ಲಗ್ನಪತ್ರಿಕೆ! ಅದೂ ಪ್ರೇಮಾಳ ಲಗ್ನಪತ್ರಿಕೆ!! 

ಹುಡುಗನೂ ಡಾಕ್ಟರಂತೆ, ಅಮೇರಿಕದಲ್ಲಿ ಪಿ.ಜಿ ಮಾಡುತ್ತಿದ್ದಾನಂತೆ, ತನಗಿಂತ ಬರೀ ಮೂರು ವರ್ಷ ದೊಡ್ಡವನಂತೆ, ಬೆಂಗಳೂರಿನವನಂತೆ, ಬೆಂಗಳೂರಿನಲ್ಲೇ ಎಂ.ಬಿ.ಬಿ.ಎಸ್ ಮಾಡಿದ್ದಂತೆ, ಫ್ಯಾಮಿಲಿ ಫ್ರೆಂಡ್ಸ್ ಅಂತೆ, ಮದುವೆ ಮುಂದಿನ ತಿಂಗಳು ಬೆಂಗಳೂರಿನಲ್ಲಂತೆ, ಖಂಡಿತ ಬರಬೇಕಂತೆ, ಪಿ.ಜಿ.ಯನ್ನು ಅಮೇರಿಕದಲ್ಲೇ ಮಾಡುತ್ತಾಳಂತೆ, ಇನ್ನೂ ತುಂಬಾ ಜನರಿಗೆ ಕಾರ್ಡು ಕೊಡಬೇಕಂತೆ…ಎಂದೆಲ್ಲ ಹೇಳಿ ಪ್ರೇಮಾ ಹೊರಟು ಹೋದಳು. 

ಅಮರ ಕಾರ್ಡನ್ನು ಹಿಡಿದು ಏನೂ ತೋಚದೇ ನಿಂತುಬಿಟ್ಟ. ಕಾರ್ಡಿನ ಮೇಲಿನ ಪ್ರೇಮಾಳ ಹೆಸರಿನ ಪಕ್ಕದಲ್ಲಿ ಇರುವ `ಡಾ. ರಾಜಶೇಖರ ಕೃಷ್ಣೇಗೌಡ` ಎನ್ನುವ ಹುಡುಗನ ಹೆಸರನ್ನು ಬೆರಳಿನಿಂದ ಮುಚ್ಚಿ, ಲಗ್ನಪತ್ರಿಕೆಯನ್ನು ಮುಖದ ಹತ್ತಿರ ತಂದು, `ಪ್ರೇಮಾ` ಎನ್ನುವ ಹೆಸರಿನ ಮೇಲೆ ಒಂದು ಸಲ ತುಟಿ ಆಡಿಸಿದ, ಮೂಗಿಗೆ ಘಮ್ಮೆಂದು ಲಗ್ನಪತ್ರಿಕೆಯ ವಾಸನೆ! 

***

ಅದೇ ವಾಸನೆ! ತನ್ನ ಲಗ್ನಪತ್ರಿಕೆಗೂ ಅದೇ ವಾಸನೆ! ಅದಕ್ಕೇ ಪ್ರೇಮಾಳ ನೆನಪಾದದ್ದು. ಅದಕ್ಕೇ ಪ್ರೇಮಾಳನ್ನು ನೋಡುವ ಆಸೆ ಮೂಡಿದ್ದು ಎಂದು ಅಮರ ತನಗೆ ತಾನೇ ಸಮಾಧಾನ ಮಾಡಿಕೊಂಡು, ತನ್ನ ಮತ್ತು ಉಷಾಳ ಲಗ್ನಪತ್ರಿಕೆಗಳನ್ನು ಹಿಡಿದುಕೊಂಡು ಪ್ರಿಂಟಿಂಗ್ ಪ್ರೆಸ್ಸಿನಿಂದ ಹೊರಬಂದ. 

ಆದರೆ ದಿನ ಕಳೆದಂತೆ ಅಮರನಿಗೆ ಪ್ರೇಮಾಳನ್ನು ನೋಡಬೇಕು ಎನ್ನುವ ಆಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು. ತನ್ನ ನಿಶ್ಚಿತಾರ್ಥ ಆಗಿದೆ, ತನ್ನ ಭಾವಿ ಪತ್ನಿ ಉಷಾ, ತಾನು ಅವಳ ಪ್ರೀತಿಯಲ್ಲಿ ಮುಳುಗಿ ಹೋಗಿದ್ದೇನೆ. ಅತ್ತ ಪ್ರೇಮಾ ಮದುವೆಯಾಗಿ ದೂರದ ಅಮೇರಿಕಕ್ಕೆ ಹೋಗಿದ್ದಾಳೆ. ಅಂಥದರಲ್ಲಿ ಪ್ರೇಮಾಳನ್ನು ನೋಡಬೇಕು ಎನ್ನುವ ಆಸೆ ಪದೇ ಪದೇ ಮೂಡಿದ್ದಕ್ಕೆ ತನ್ನ ಬಗ್ಗೆ ತನಗೇ ಕಳವಳವಾಯಿತು. ಅವಳ ಮದುವೆಗೆ ಹೋಗಿದ್ದರೆ ಬಹುಷಃ ಇಂಥ ಹುಚ್ಚು ಆಸೆ ಮೂಡುತ್ತಿರಲಿಲ್ಲ ಎನಿಸಿತು. ಅವಳ ಹತ್ತಿರ ಮಾತಾಡಿ ಅವಳಿಗೆ ಈಗ ಆಗುತ್ತಿರುವ ತನ್ನ ಮದುವೆಯ ಬಗ್ಗೆ ಹೇಳಿದರೆ ಈ ಭ್ರಾಂತಿ ಕಳೆಯಬಹುದು ಎನಿಸಿತು.

ಎಂ.ಬಿ.ಬಿ.ಎಸ್ ಬೀಳ್ಕೊಡುಗೆ ಸಮಾರಂಭದಲ್ಲಿ ಎಲ್ಲರ ಹೆಸರು, ಜನ್ಮದಿನಾಂಕ ಮತ್ತು ಮನೆಯ ಫೋನ್ ನಂಬರ್ ಇರುವ ಒಂದು ಚಿಕ್ಕ ಹೊತ್ತಿಗೆಯನ್ನು ಎಲ್ಲರಿಗೆ ಕೊಟ್ಟಿದ್ದರು. ಆಗಿನ್ನೂ ಮೊಬೈಲು, ಇ-ಮೇಲು ಇರಲಿಲ್ಲವಲ್ಲ. ಅದರಲ್ಲಿ ಹುಡುಕಿ ಪ್ರೇಮಾಳ ಬೆಂಗಳೂರಿನ ಮನೆಗೆ ಎಸ್.ಟಿ.ಡಿ ಬೂತಿನಿಂದ ಫೋನ್ ಮಾಡಿದ. ಪ್ರೇಮಾಳ ಅಮ್ಮ ಫೋನ್ ಎತ್ತಿಕೊಂಡರು. 

`ಓ ಅಮರನಾ? ಪ್ರೇಮಾ ನಿನ್ನ ಬಗ್ಗೆ ಯಾವಾಗಲೂ ಹೇಳುತ್ತಿರುತ್ತಾಳಪ್ಪಾ. ಏನು? ನಿನ್ನ ಮದುವೆನೇನಪ್ಪಾ? ತುಂಬ ಸಂತೋಷ ಆಯ್ತಪ್ಪಾ! ಅವಳು ಅಮೇರಿಕದಿಂದ ಫೋನ್ ಮಾಡಿದಾಗ ಪ್ರೇಮಾಗೂ ಹೇಳ್ತೀನಪ್ಪಾ. ಅವಳಿಗೂ ತುಂಬ ಸಂತೋಷ ಆಗುತ್ತಪ್ಪಾ` ಎಂದು ಬಿಡದೇ ಮಾತಾಡಿದರು. 

ಪ್ರೇಮಾಳ ಅಮೇರಿಕದ ನಂಬರು ಕೇಳಬೇಕು ಎಂದುಕೊಂಡವನು ಕೇಳದೇ ಹಾಗೆಯೇ ಫೋನು ಇಟ್ಟುಬಿಟ್ಟ. 

(ಮುಂದುವರೆಯುವುದು…)