‘ಸಾಗರದಲ್ಲಿ ಸಾಹಸಿ’- ಭಾಗ 2

ಅನನ್ಯ ಸಾಗರೋಲ್ಲಂಘನ : ಸಾಹಸ ಕಥನ ವಿಮರ್ಶೆ - ಡಾ ರಾಜಶ್ರೀ ಪಾಟೀಲ ಅವರಿಂದ

ಓಡಿಸ್ಸಿಯಸ್ ನಾಮವೆತ್ತ ಕೈದೋಣಿಯನ್ನೇ ಬರೋಬ್ಬರಿ 52 ದಿನ 5 ಗಂಟೆ ಮನೆಯಾಗಿಸಿಕೊಂಡು ,
ತೋಳ್ಬಲವನ್ನೇ ಆಸ್ತಿ ಮಾಡಿಕೊಂಡು,
ಹಿಂದೆ ಮುಂದೆ ಕೈಚಾಚಿದರೆ ಸಹಾಯ ಮಾಡೋ ಕೈಗಳಿಲ್ಲವೆಂದರಿತೂ ,
ವ್ಯವಸ್ಥಾಪಕರ ಕಿರುನೆರವು , ಆಶ್ವಾಸನೆ ಮಾತುಗಳನ್ನೇ ನಂಬಿಕೆಯಾಗಿಟ್ಟುಕೊಂಡು ,
ಟೈಟಾನಿಕ್ ಅಂಥ ಬೃಹತ್ ಹಡಗೇನೋ ಅನ್ನುವಂತೆ ತನ್ನ ಪಾಲುಮಾಡಿಕೊಂಡಂತ ಅಟ್ಲಾಂಟಿಕ್ ಮಹಾಸಾಗರದ ನಿಲ್ದಾಣವಿಲ್ಲದ 3,000 ಮೈಲಿಯ ಒಂಟಿ ಪಯಣವನ್ನ ಮನೆಯ ಏಕೈಕ ಕುಡಿ ಮಾಡುವೆನೆಂದಾಗ, ಅತೀ ಕಾಳಜಿಯಿಂದ ಕಾಪಾಡಿದ ಏಕೈಕ ಮನೆಯ ದೀಪ ಇಂಥ ಸಾಹಸಕ್ಕೆ ಕೈ ಹಾಕುವೆನೆಂದಾಗ,
ಹೆತ್ತವರ ಮನಸ್ಸಿನ ತಳಮಳ , ಆತಂಕ , ಮುಂಬರುವ ಅಪಾಯಗಳ ಬಗೆಗಿನ ಮನಸ್ಸ್ಸಿನ ಮಂಥನದ ವಿಶ್ಲೇಷಣೆ ಅತೀ ನೈಜವಾಗಿದ್ದು ಮತ್ತು ವಾಸ್ತವಿಕವಾಗಿದ್ದು. ಅಸ್ತಿತ್ವ ಕಳೆದುಕೊಳ್ಳುವ ಭಯವಿದ್ದರೂ ಸಾಗರ ಸೇರಿ ಸಾಗರವೇ ತಾನಾಗುವ ನದಿಯ ಉಪಮೇಯವನ್ನಿಟ್ಟುಕೊಂಡು ಗಿಬ್ರಾನ್ ಬರೆದ 'ಫಿಯರ್' (Fear) ಕವಿತೆಯ ವಿಸ್ತಾರವಾದ ರೂಪಕದ ಪ್ರಸ್ತಾವನೆ, ಈ ಸಾಹಸ ಸಾಧನೆ ಅವರ ಕುಟುಂಬದ ಮೇಲೆ ಮೂಡಿಸಿದ ಭಯದ ಛಾಯೆಯನ್ನ ಮತ್ತು ಅದನ್ನ ಮೀರಿ ಹೊರಬಂದ ಬಗೆಯನ್ನ ಬಿಂಬಿಸುತ್ತದೆ.
ಪ್ರಸಾದವರು ತಮ್ಮ ಬರವಣಿಗೆಯಿಂದ ಓದುಗನನ್ನು ಅವರ ಮನದಲ್ಲಾದ ಅಲ್ಲೋಲ ಕಲ್ಲೋಲಗಳಲ್ಲಿ ಒಂದಾಗಿಸಿದ್ದಾರೆ .ಅವರ ಬರವಣಿಗೆಯ ಶೈಲಿ, ಓದುಗನೂ ಅನನ್ಯಳ ಅನನ್ಯ ಪಯಣದಲ್ಲಿ ಅವರ ಅಪ್ಪನ ಜೊತೆಯಲ್ಲಿಯೇ ಇದ್ದೆನೇನೋ ಅನ್ನುವಷ್ಟು ಹತ್ತಿರ ಮಾಡುವಂತಿದೆ .

ಇತ್ತ ಅಜ್ಜ ಜೆ ಎಸ್ಎಸ್ ಅವರ ಸುಂದರ ಪದಗಳಲ್ಲಿ ವರ್ಣಿತವಾದ
‘ಸುನೀಲ , ವಿಸ್ತರ , ತರಂಗ ಶೋಭಿತ ಗಂಭೀರಾಂಬುಧಿಯಲ್ಲಿ’ ಅಂತರಂಗದ ಅನ್ವೇಷಣೆ ಮತ್ತು ನಿಶ್ಶಬ್ದದ ನಡುವಿನ ಆಧ್ಯಾತ್ಮ ಪಯಣ ಮಾಡುವೆನೆನ್ನುವ ಮಗಳ ಮಾನಸಿಕ ಪ್ರಬುದ್ಧತೆ, ಅದಕ್ಕಾಗಿ ಸತತ ಮೂರು ವರ್ಷಗಳ ಕಾಲ ದೇಹ ಮತ್ತು ಮನಸ್ಸನ್ನ ಯಾವುದೇ ಸ್ವಂತವಾದ ಅಪೇಕ್ಷೆಯಿಲ್ಲದೆ ದುಡಿಸಿ ದಣಿಸಿ ತಯಾರಿ ನಡೆಸುವ ಮಗಳ ಹರಸಾಹಸ,
ಭಾರತೀಯರ, ಕನ್ನಡಿಗರ, ವರ್ಣೀಯ ಜನಾಂಗದ ನೀರಿಕ್ಷೆಯನ್ನ ಹೊತ್ತು , ಹಲವಾರು ಪಾಶ್ಚಿಮಾತ್ಯ ದೇಶಗಳ ಭಾವುಟಗಳ ನಡುವೆ ಕೇಸರಿ ಬಿಳಿ ಹಸಿರು ಬಣ್ಣಗಳ ಪತಾಕೆ ಹೊತ್ತು ಸಾಗರದ ಒಂಟಿ ಪಯಣಕ್ಕೆ ಮಗಳು ಹೆಜ್ಜೆಯಿಟ್ಟು ಮುನ್ನಡೆದಾಗ, ಮಗಳು ಬೆಳೆದ ರೀತಿಯ ಬಗ್ಗೆ ಅಪ್ಪನ ಹೃದಯ ತುಂಬಿ ಬರುವ ಹೊಗಳಿಕೆಯ ಮಾತುಗಳು, ಎಲ್ಲೂ ಉತ್ಪ್ರೇಕ್ಷೆಯಾಗದೆ, ಕೆಲವೊಂದು ಬಾರಿ ಬರಹಗಾರ ಸ್ವಲ್ಪ ಉದಾರತೆಯನ್ನ ತೋರಬಹುದಿತ್ತೇನೋ ಅನ್ನಿಸುವಂತಿದೆ .

ಅಪ್ಪನ ಗಂಡುಮನಸ್ಸನ್ನ ಕರಗಿಸಿ ಗಳಗಳನೆ ಅಳಿಸಿ, ಅಪಾರ ಸಮುದ್ರದ ಅಂಚಿನಲ್ಲಿ ಹುಟ್ಟುದೋಣಿಯ ಜೊತೆಗೆ ಒಂದು ಸಣ್ಣ ಚುಕ್ಕಿಯಂತೆ ಮರೆಯಾಗಿ,
ಮೊಬೈಲ್ ಕಳೆದರೇನು, ಡಿ ಸಲೈನೇಷನ್ ಯಂತ್ರ ಮುರಿದರೇನು , ದೋಣಿಯ ಚುಕ್ಕಾಣಿ ನೀರಲ್ಲಿ ಮುರಿದರೇನು, ಕೊನೆಗೆ ಹುಟ್ಟುದೋಣಿಯ ಹುಟ್ಟೇ ಮುರಿದರೇನು, ನನ್ನ ಪಯಣ, ಗುರಿ ಮುಟ್ಟದೆ ನಿಲ್ಲದೆಂದು ಪರಿಹಾರ ಹುಡುಕುತ್ತ ಸಾಗುವ ಅನನ್ಯಳ ಸಾಹಸ ಪಯಣ ಹೃದಯ ಸ್ತಂಭನಳಿಸುವಂತದು. ಅದನ್ನ ಓದುಗರ ಮನಕ್ಕೆ ಅತಿಯಾಗದೆ, ತೀರಾ ಮಿತವಾಗದೆ, ನಿಜಕ್ಕೆ ಹತ್ತಿರವಾಗಿ ವಿವರಣೆ ಮಾಡಿರುವ ಲೇಖಕರ ಪರಿ ಮೆಚ್ಚುಗೆಯಾಗುವಂತದ್ದು.

ಸಾಹಸ ಪ್ರಯಾಣ ಕೊನೆಯ ಹಂತ ತಲುಪುವ ಸುದ್ದಿ ತಿಳಿದು ಸ್ವಾಗತ ಮಾಡಲು ಅಂಟಿಗಕ್ಕೆ ಪ್ರಯಾಣ ಬೆಳೆಸಿ ಎತ್ತರದ ವಿಮಾನದಲ್ಲಿ ಕುಳಿತು ಮಹಾಸಾಗರದಲ್ಲಿ ಮಗಳ ಚುಕ್ಕಿ ದೋಣಿಯನ್ನ ಹುಡುಕುವ ಅಪ್ಪ ಅಮ್ಮನ ಮುಗ್ದತೆ ತುಂಬಿದ ಕಾತುರತೆ ಓದುಗನಲ್ಲಿ ಕಿರುನಗೆಯನ್ನ ಹೊರಹಾಕುವಂತಿದೆ.

ಚುಕ್ಕಿಯಂತೆ ಮರೆಯಾಗಿ ಅನನ್ಯ ಸಮುದ್ರ ಸಾಹಸವನ್ನು ಮುಗಿಸಿ, ಮಿನುಗುವ ನಕ್ಷತ್ರದಂತೆ ಧರೆಗೆ ಮರಳಿ ತನ್ನ ಮೊದಲ ಹೆಜ್ಜೆ ಇಟ್ಟಾಗ ಅಪ್ಪನ ಮನಸ್ಸಿನಲ್ಲಾಗುವ ಅಗಾಧ ನಿರಾಳ ಭಾವ, ಸಂಭ್ರಮ ಮತ್ತು ಹೆಮ್ಮೆ ಮನಮುಟ್ಟುವಂತಿದೆ. ಸಾಹಸ ಮತ್ತು ಸಾಹಸದ ತದನಂತರದ ಘಟನೆಗಳ ಭಿತ್ತಿಚಿತ್ರಣ ಆಯ್ಕೆ ಲೇಖಕರ ನಿಖರತೆಯನ್ನ ತಿಳಿಸುವಂತಿದೆ .

ಒಟ್ಟಾರೆ ಪುಸ್ತಕ ಓದುಗನಿಗೆ ತಾನು ಸಾಹಸಗಾಥೆಯ ಭಾಗವೇನೋ ಎನ್ನಿಸಿ ಸಾರ್ಥಕತೆಯ ಭಾವ ಮೂಡಿಸುವಂತಿದೆ.
ಆದರೆ ನನಗಂತೂ ಅರ್ಥಗರ್ಭಿತ ಹೆಸರನ್ನ ನಾಮಕರಣ ಮಾಡಿ, ಸಂಪೂರ್ಣ ವೈಯಕ್ತಿಕ ಸ್ವಾತಂತ್ರ್ಯ ನೀಡಿ, ಮಗಳ ಕನಸನ್ನ ಇಚ್ಛೆಯ ಜೊತೆಗೆ ಆಯ್ಕೆಯನ್ನಾಗಿಸಿಕೊಂಡ ತಂದೆ ತಾಯಿಯನ್ನ ಪಡೆದ ಅನನ್ಯಳ ಬಗ್ಗೆ ತುಸು ಹೊಟ್ಟೆಕಿಚ್ಚು ಮೂಡಿದ್ದಂತೂ ಸತ್ಯ.

ಡಾ ರಾಜಶ್ರೀ ಪಾಟೀಲ, ಲೆಸ್ಟರ್, ಯು ಕೆ

ಶ್ರೀಹರ್ಷ ನೀರಗುಂದ ನಾಗರಾಜ್ ಬರೆಯುತ್ತಾರೆ:

ಸಾಗರದಲ್ಲಿ ಸಾಹಸಿ- ಬ್ರಿಲಿಯಂಟ್ ಅನುಭವ ನನಗೆ

ಕೆಲವು ಪುಸ್ತಕಗಳು ಕೇವಲ ಕಥೆಯನ್ನು ಹೇಳುವುದಿಲ್ಲ; ಅವು ನಮ್ಮ ಮನಸ್ಸನ್ನು ತಟ್ಟುತ್ತವೆ, ನಮ್ಮ ಆಲೋಚನೆಗಳನ್ನು ಬದಲಿಸುತ್ತವೆ ಮತ್ತು ಬದುಕನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡುತ್ತವೆ. ಅಂತಹ ಅಪರೂಪದ ಕೃತಿಗಳಲ್ಲಿ ಡಾ. ಜಿ. ಎಸ್. ಶಿವಪ್ರಸಾದ್ ಅವರು ರಚಿಸಿರುವ “ಸಾಗರದಲ್ಲಿ ಸಾಹಸಿ” ಒಂದು. ಈ ಪುಸ್ತಕವನ್ನು ಓದಿದ ನಂತರ ನನ್ನ ಮನಸ್ಸಿನಲ್ಲಿ ಮೂಡಿದ ಭಾವನೆ ಒಂದೇ ಇದು ಕೇವಲ ಸಮುದ್ರಯಾನದ ಕಥೆಯಲ್ಲ, ಇದು ಮಾನವನ ಅಚಲ ಸಂಕಲ್ಪ, ಅಸಾಧ್ಯವನ್ನು ಸಾಧ್ಯವಾಗಿಸುವ ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮದ ಜೀವಂತ ದಾಖಲೆಯಾಗಿದೆ.

ಈ ಪುಸ್ತಕದ ಅತ್ಯಂತ ವಿಶೇಷ ಅಂಶವೆಂದರೆ, ಲೇಖಕರು ತಮ್ಮ ಮಗಳ ಸಾಹಸಮಯ ಸಮುದ್ರಯಾನವನ್ನು ಕೇವಲ ಘಟನೆಗಳ ಸರಣಿಯಾಗಿ ಹೇಳದೆ, ಓದುಗನನ್ನು ಆ ಪಯಣದ ಸಹಯಾತ್ರಿಯನ್ನಾಗಿ ಮಾಡುತ್ತಾರೆ. ಪ್ರತಿಯೊಂದು ಅಧ್ಯಾಯದಲ್ಲೂ ಭಾವನೆ, ಉತ್ಸಾಹ, ಆತಂಕ, ನಿರೀಕ್ಷೆ ಮತ್ತು ವಿಜಯದ ಕ್ಷಣಗಳು ಅಷ್ಟು ಸಹಜವಾಗಿ ಮೂಡಿಬಂದಿವೆ ಎಂದು ಓದುತ್ತಿರುವಾಗ ನಾವೇ ಆ ಪುಟ್ಟ ದೋಣಿಯಲ್ಲಿ ಸಾಗರದ ಅಲೆಗಳೊಂದಿಗೆ ಹೋರಾಡುತ್ತಿರುವ ಅನುಭವವಾಗುತ್ತದೆ.

ಲೇಖಕರ ಬರವಣಿಗೆಯ ಶೈಲಿ ತುಂಬಾ ಸರಳ, ಸುಂದರ ಮತ್ತು ಹೃದಯಸ್ಪರ್ಶಿಯಾಗಿದೆ. ಅನಗತ್ಯ ಅಲಂಕಾರಿಕ ಭಾಷೆಯನ್ನು ಬಳಸದೆ, ನೇರವಾದ ಆದರೆ ಪರಿಣಾಮಕಾರಿಯಾದ ನಿರೂಪಣೆಯ ಮೂಲಕ ಅವರು ಓದುಗರ ಮನಸ್ಸನ್ನು ಗೆಲ್ಲುತ್ತಾರೆ. ಪ್ರತಿಯೊಂದು ಪುಟವೂ ಕುತೂಹಲವನ್ನು ಹೆಚ್ಚಿಸುತ್ತದೆ. ಮುಂದಿನ ಪುಟದಲ್ಲಿ ಏನಾಗುತ್ತದೆ ಎಂಬ ನಿರೀಕ್ಷೆಯಿಂದ ಪುಸ್ತಕವನ್ನು ಕೆಳಗಿಡಲು ಮನಸ್ಸೇ ಆಗುವುದಿಲ್ಲ. ಇದೇ ಒಬ್ಬ ಉತ್ತಮ ಲೇಖಕರ ಯಶಸ್ಸಿನ ಗುರುತು ಎಂದು ನಾನು ಭಾವಿಸುತ್ತೇನೆ.

ಈ ಕೃತಿಯಲ್ಲಿ ನನ್ನನ್ನು ಅತ್ಯಂತ ಹೆಚ್ಚು ಪ್ರಭಾವಿಸಿದ ವಿಷಯವೆಂದರೆ, ಒಂದು ಮಹತ್ತರ ಕನಸನ್ನು ನನಸಾಗಿಸಲು ಬೇಕಾದ ದೈಹಿಕ ಸಾಮರ್ಥ್ಯ, ಮಾನಸಿಕ ದೃಢತೆ ಮತ್ತು ಭಾವನಾತ್ಮಕ ಸಮತೋಲನ. ಸಾವಿರಾರು ಕಿಲೋಮೀಟರ್‌ಗಳ ಸಮುದ್ರವನ್ನು ಒಬ್ಬರೇ ದಾಟುವುದು ಹೊರಗಿನಿಂದ ನೋಡಿದರೆ ಸಾಹಸವೆನಿಸುತ್ತದೆ. ಆದರೆ ಅದರ ಹಿಂದೆ ಅಡಗಿರುವ ಅನೇಕ ವರ್ಷಗಳ ಅಭ್ಯಾಸ, ಕಟ್ಟುನಿಟ್ಟಾದ ತರಬೇತಿ, ವೈಜ್ಞಾನಿಕ ಸಿದ್ಧತೆ, ಶಿಸ್ತು, ಸಮಯಪಾಲನೆ, ಆಹಾರ ಪದ್ಧತಿ ಮತ್ತು ಮನಸ್ಸಿನ ನಿಯಂತ್ರಣವನ್ನು ಈ ಪುಸ್ತಕ ಬಹಳ ಸುಂದರವಾಗಿ ವಿವರಿಸುತ್ತದೆ.

ಈ ಪುಸ್ತಕವನ್ನು ಓದುತ್ತಾ ಹೋದಂತೆ, ಯಾವುದೇ ಸಾಧನೆಗೆ ಅದೃಷ್ಟಕ್ಕಿಂತ ಹೆಚ್ಚು ಮುಖ್ಯವಾದುದು ನಿರಂತರ ಪರಿಶ್ರಮ ಮತ್ತು ಗುರಿಯ ಮೇಲಿನ ಅಚಲ ನಂಬಿಕೆ ಎಂಬ ಸತ್ಯ ಮತ್ತೆ ಮತ್ತೆ ಮನವರಿಕೆಯಾಗುತ್ತದೆ. ಪ್ರತಿಯೊಂದು ಯಶಸ್ಸಿನ ಹಿಂದೆ ಕಾಣದ ತ್ಯಾಗ, ಅನೇಕ ವಿಫಲ ಪ್ರಯತ್ನಗಳು, ಕಣ್ಣೀರು ಮತ್ತು ಆತ್ಮವಿಶ್ವಾಸ ಅಡಗಿರುತ್ತವೆ ಎಂಬುದನ್ನು ಲೇಖಕರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

ನನಗೆ ಇನ್ನೊಂದು ವಿಶೇಷವಾಗಿ ಇಷ್ಟವಾದ ಅಂಶವೆಂದರೆ, ಈ ಕಥೆಯಲ್ಲಿ ಕುಟುಂಬದ ಪಾತ್ರವನ್ನು ಲೇಖಕರು ಬಹಳ ನೈಜವಾಗಿ ಬಿಂಬಿಸಿದ್ದಾರೆ. ಮಗಳ ಕನಸಿನ ಹಿಂದೆ ನಿಂತಿರುವ ತಂದೆಯ ಪ್ರೋತ್ಸಾಹ, ಮಾರ್ಗದರ್ಶನ, ಕಾಳಜಿ ಮತ್ತು ನಂಬಿಕೆ ಪ್ರತಿಯೊಂದು ಪುಟದಲ್ಲೂ ಸ್ಪಷ್ಟವಾಗಿ ಕಾಣಿಸುತ್ತದೆ. ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳ ಕನಸುಗಳಿಗೆ ರೆಕ್ಕೆಗಳನ್ನು ನೀಡಿದರೆ, ಮಕ್ಕಳು ಜಗತ್ತಿನ ಯಾವುದೇ ಶಿಖರವನ್ನು ತಲುಪಬಹುದು ಎಂಬ ಸಂದೇಶವನ್ನು ಈ ಪುಸ್ತಕ ಅತ್ಯಂತ ಸುಂದರವಾಗಿ ಸಾರುತ್ತದೆ.

ಸಮುದ್ರ ಎಂಬುದು ಕೇವಲ ನೀರಿನ ವಿಶಾಲ ಹರಡುವಿಕೆಯಲ್ಲ; ಅದು ಅನಿಶ್ಚಿತತೆ, ಭಯ, ಏಕಾಂತ ಮತ್ತು ಸವಾಲುಗಳ ಸಂಕೇತವಾಗಿದೆ. ಅಂತಹ ಸಾಗರವನ್ನು ಎದುರಿಸುತ್ತಾ ಪ್ರತಿಕ್ಷಣವೂ ಧೈರ್ಯದಿಂದ ಮುನ್ನಡೆಯುವ ವ್ಯಕ್ತಿಯ ಕಥೆಯನ್ನು ಓದುವುದು ನಿಜಕ್ಕೂ ರೋಮಾಂಚನಕಾರಿ ಅನುಭವ. ಪ್ರತಿಯೊಂದು ಅಲೆ, ಪ್ರತಿಯೊಂದು ಬಿರುಗಾಳಿ, ಪ್ರತಿಯೊಂದು ಕಠಿಣ ಕ್ಷಣವೂ ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಪ್ರತೀಕವಾಗಿ ಕಾಣುತ್ತವೆ. ಅವುಗಳನ್ನು ಎದುರಿಸಿ ಗೆಲ್ಲುವ ಮನೋಬಲವೇ ನಿಜವಾದ ಯಶಸ್ಸಿನ ಗುಟ್ಟು ಎಂಬುದನ್ನು ಈ ಕೃತಿ ನಮಗೆ ತಿಳಿಸುತ್ತದೆ.

ಈ ಪುಸ್ತಕ ಕೇವಲ ಸಾಹಸಪ್ರಿಯರಿಗೆ ಮಾತ್ರವಲ್ಲ. ಜೀವನದಲ್ಲಿ ದೊಡ್ಡ ಕನಸು ಕಾಣುವ ಪ್ರತಿಯೊಬ್ಬ ವಿದ್ಯಾರ್ಥಿ, ಕ್ರೀಡಾಪಟು, ವೃತ್ತಿಪರ, ಉದ್ಯಮಿ, ನಾಯಕ ಮತ್ತು ಸಾಮಾನ್ಯ ಓದುಗರಿಗೂ ಇದು ಸಮಾನವಾಗಿ ಸ್ಫೂರ್ತಿ ನೀಡುತ್ತದೆ. ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೂ ಶಿಸ್ತು, ಸಹನೆ, ನಿರಂತರ ಅಭ್ಯಾಸ ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮೂಲ ಎಂಬ ಸಂದೇಶವನ್ನು ಈ ಪುಸ್ತಕ ಸ್ಪಷ್ಟವಾಗಿ ನೀಡುತ್ತದೆ.

ನಾನು ಓದಿದ ಅನೇಕ ಪ್ರೇರಣಾದಾಯಕ ಪುಸ್ತಕಗಳಲ್ಲಿ “ಸಾಗರದಲ್ಲಿ ಸಾಹಸಿ” ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಪುಸ್ತಕದ ಕೊನೆಯ ಪುಟವನ್ನು ಓದಿದಾಗ ಕೇವಲ ಒಂದು ಸಾಹಸದ ಕಥೆಯನ್ನು ಮುಗಿಸಿದ ಅನುಭವವಾಗಲಿಲ್ಲ; ಬದಲಾಗಿ ಜೀವನವನ್ನು ಹೊಸ ದೃಷ್ಟಿಯಿಂದ ನೋಡುವ ಪ್ರೇರಣೆ ದೊರಕಿತು. ಈ ಪುಸ್ತಕ ನನ್ನಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ಕನಸುಗಳ ಹಿಂದೆ ನಿರಂತರವಾಗಿ ಓಡಬೇಕೆಂಬ ಉತ್ಸಾಹವನ್ನು ಹೆಚ್ಚಿಸಿತು.

ಡಾ. ಜಿ. ಎಸ್. ಶಿವಪ್ರಸಾದ್ ಅವರು ತಮ್ಮ ಮಗಳ ಸಾಧನೆಯನ್ನು ದಾಖಲಿಸುವುದರ ಜೊತೆಗೆ, ಇಡೀ ಸಮಾಜಕ್ಕೆ ಒಂದು ಪ್ರೇರಣಾದಾಯಕ ಸಂದೇಶವನ್ನು ನೀಡಿದ್ದಾರೆ. ಅವರ ಬರವಣಿಗೆಯಲ್ಲಿ ತಂದೆಯ ಹೆಮ್ಮೆ, ಮಗಳ ಮೇಲಿನ ಪ್ರೀತಿ ಮತ್ತು ಸಾಧನೆಯ ಮೇಲಿನ ಗೌರವ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಅದೇ ಈ ಕೃತಿಯ ದೊಡ್ಡ ಶಕ್ತಿಯಾಗಿದೆ.

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, “ಸಾಗರದಲ್ಲಿ ಸಾಹಸಿ” ಕೇವಲ ಒಂದು ಪುಸ್ತಕವಲ್ಲ; ಇದು ಧೈರ್ಯ, ಪರಿಶ್ರಮ, ಶಿಸ್ತು, ಸಂಕಲ್ಪ ಮತ್ತು ಆತ್ಮವಿಶ್ವಾಸದ ಪಾಠಶಾಲೆಯಾಗಿದೆ. ಈ ಕೃತಿ ಓದುಗರಲ್ಲಿ ದೊಡ್ಡ ಕನಸು ಕಾಣುವ ಧೈರ್ಯವನ್ನು ಹುಟ್ಟಿಸುತ್ತದೆ ಮತ್ತು ಆ ಕನಸುಗಳನ್ನು ನನಸಾಗಿಸಲು ಬೇಕಾದ ಮನೋಬಲವನ್ನು ನೀಡುತ್ತದೆ. ಇಂತಹ ಅತ್ಯುತ್ತಮ, ಹೃದಯಸ್ಪರ್ಶಿ ಮತ್ತು ಜೀವನಕ್ಕೆ ಹೊಸ ಪ್ರೇರಣೆ ನೀಡುವ ಕೃತಿಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಡಾ. ಜಿ. ಎಸ್. ಶಿವಪ್ರಸಾದ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

ಈ ಪುಸ್ತಕವನ್ನು ಓದಿದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕನಿಷ್ಠ ಒಂದು ಹೊಸ ಕನಸನ್ನು ಕಾಣಲು ಪ್ರೇರೇಪಿತರಾಗುತ್ತಾರೆ ಎಂಬುದು ನನ್ನ ದೃಢ ನಂಬಿಕೆ. “ಸಾಗರದಲ್ಲಿ ಸಾಹಸಿ” ನಿಜಕ್ಕೂ ಒಂದು ಮರೆಯಲಾಗದ ಓದಿನ ಅನುಭವ, ಪ್ರೇರಣೆಯ ಮಹಾಯಾನ ಮತ್ತು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆಯಿಂದ ಓದಲೇಬೇಕಾದ ಕೃತಿ.


ಶ್ರೀಹರ್ಷ ನೀರಗುಂದ ನಾಗರಾಜ್ , ಲೀಡ್ಸ್


‘ಸಾಗರದಲ್ಲಿ ಸಾಹಸಿ’ -ಪುಸ್ತಕ ವಿಮರ್ಶೆಗಳು -ಭಾಗ ೧ – ಡಾ. ದಾಕ್ಷಾಯಿಣಿ ಗೌಡ, ಮತ್ತಿತರರು

 (Map of the journey is shown above. Credit: WTR)
ಈ ಸಲದ ಅನಿವಾಸಿಯಲ್ಲಿ ಒಂದು ಪುಸ್ತಕದ ಬಗ್ಗೆ (ಸಾಗರದಲ್ಲಿ ಸಾಹಸಿ) ಡಾ ದಾಕ್ಷಾಯಿಣಿ ಮುಂತಾಗಿ ಅನೇಕರ ಅನಿಸಿಕೆಗಳ ಸಂಗ್ರಹವಿದೆ. ಸಂಸ್ಕೃತದಲ್ಲೊಂದು ನುಡಿಗಟ್ಟಿದೆ: ”ಪುತ್ರಾದಿಚ್ಛೇದ್ ಪರಾಜಯಂ.” (ಜಗತ್ತಿನಲ್ಲಿ ಉಳಿದ ಎಲ್ಲರನ್ನೂ ಗೆಲ್ಲ ಬೇಕು, ಆದರೆ ಮಕ್ಕಳಿಂದ ಪರಾಜಿತರಾದರೂ ಅಡ್ಡಿಯಿಲ್ಲ.) ಮಕ್ಕಳು ತಮ್ಮನ್ನೂ ಮೀರಿ ಬೆಳೆಯಬೇಕು, ಉನ್ನತಿ, ಮತ್ತು ಕೀರ್ತಿ ಪಡೆಯ ಬೇಕು ಎನ್ನುವ ಅಭಿಲಾಷೆ ತಂದೆತಾಯಂದಿರದು. (ಪು 11). ಅಂಥ ಒಂದು ಸಾಹಸವನ್ನು, ಅಪರೂಪದ ಸಮುದ್ರಯಾನವನ್ನು (World's Toughest Row -WTR ) ಮಾಡಿದವಳು ಯುಕೆಯ ಶೆಫ಼ೀಲ್ಡ್ ನಗರವಾಸಿ ಅನನ್ಯ ಪ್ರಸಾದ್. 130 ವರ್ಷಗಳಿಂದ ಹುಟ್ಟು ಹಾಕುತ್ತ ಅಟ್ಲಾಂಟಿಕ್ ದಾಟಿದ್ದಾನೆ ಮಾನವ. ಆದರೆ ಆಕೆ ಏಕಾಕಿಯಾಗಿ ಅಟ್ಲಾಂಟಿಕ್ ಸಾಗರವನ್ನು 3,000 ಮೈಲಿ ಹುಟ್ಟು ದೋಣಿಯಲ್ಲಿ ದಾಟಿ 2025 ಫೆ.1ರಂದು ದಡ ಸೇರಿ ಇನ್ನಿತರ ರೀತಿಯ ದಾಖಲೆ ಮಾಡಿದಳು. ಆ ಸುದ್ದಿ ಬರಿ ಯುಕೆ, ಯೂರೋಪಲ್ಲದೆ ಈಗಾಗಲೇ ಭಾರತ, ಕರ್ನಾಟಕದಲ್ಲೂ ಪ್ರಸಿದ್ಧಿ ಪಡೆದಿದೆ. ಅದರ ಹಿನ್ನೆಲೆಯ ಬಗ್ಗೆ, ’ಅಪ್ಪನ ಕಾತರ, ಭಯ, ಉದ್ವೇಗ, ಉತ್ಸಾಹ, ರೋಚಕತೆ, ಕೊನೆಗೆ ಸಂತೋಷ’ (ಹಿನ್ನುಡಿಯಿಂದ) ಇವೆಲ್ಲವುಗಳನ್ನು ಸವಿಸ್ತಾರವಾಗಿ ಮೂಡಿಸಿರುವ ಆಕೆಯ ತಂದೆ ಡಾ ಜಿ ಎಸ್ ಶಿವಪ್ರಸಾದ್ ಅವರ ಈ ಪುಸ್ತಕಕ್ಕಾಗಿ ನನ್ನಂತೆ ಬಹು ಜನರು ಕಾಯುತ್ತಿದ್ದರು.
ಈ ಮೊದಲ ಕಂತಿನಲ್ಲಿ ಐದು ಬರಹಗಳಿವೆ - ಡಾ ದಾಕ್ಷಾಯಿಣಿ, ಶ್ರೀವತ್ಸ ದೇಸಾಯಿ, ಎಚ್. ಡುಂಡಿರಾಜ್, ಎಮ್ ಆರ್ ಕಮಲ, ದೀಪಾ ಸಣ್ಣಕ್ಕಿ. ಅವುಗಳನ್ನು ಸ್ವೀಕರಿಸಿದ ಕ್ರಮದಲ್ಲಿಯೇ ಪ್ರಕಟಿಸಿದ್ದೇವೆ. ಇನ್ನೂ ಹಲವಾರು ಜನರ ಬರಹಗಳೂ ಬಂದಿವೆ. ಮುಂದಿನ ವಾರ ಕೆಲವನ್ನು ಪ್ರಕಟಿಸುವ ಯೋಜನೆಯಿದೆ. ಚಿತ್ರಗಳು ಬಹುತೇಕವಾಗಿ ಎಲ್ಲವೂ WTR ಕೃಪೆಯಿಂದ. ಕೊನೆಯಲ್ಲಿ ಒಂದು ವಿಡಿಯೋದ ಕೊಂಡಿಯಿದೆ. ಅದು ನೇರವಾಗಿ ಫೇಸ್ ಬುಕ್ಕಿಗೆ (FB) ಒಯ್ಯುತ್ತದೆ ಎಂದು ಸ್ಪಷ್ಟಪಡಿಸುತ್ತೇನೆ. (ಸಂ)
"ಸಾಗರದಲ್ಲಿ ಸಾಹಸಿ"
ನನ್ನ ಅನಿಸಿಕೆಗಳು --ಡಾ ಶ್ರೀವತ್ಸ ದೇಸಾಯಿ, ಲೆಸ್ಟರ್ UK

ಬರೀ ನೂರೇ ಪುಟಗಳ ಈ ಕಿರುಪುಸ್ತಕ ನನ್ನ ನಿಮ್ಮ ಮನದಲ್ಲಿ ಮತ್ತು ಸಾಹಿತ್ಯ ವಲಯದಲ್ಲಿ ಅಲೆಗಳನ್ನೆಬ್ಬಿಸುವದು ಖಚಿತ. ಇಂಥ ಬರವಣಿಗೆ ಓದುವ ಅವಕಾಶ ಸಿಗುವದು ಅಪರೂಪ. ಇದು ಅದ್ವಿತೀಯ ಸಾಹಸ ಅಂದ ಮೇಲೆ! ಇದನ್ನುಬರೆದ ಯು ಕೆ ವಾಸಿ ಡಾ ಪ್ರಸಾದ್ ಅವರ ಕುಟುಂಬದವರನ್ನು, ಮುಖ್ಯವಾಗಿ ಇದರ ಯುವ ನಾಯಕಿ (34) ಅನನ್ಯಳನ್ನು ನಾವು ಯು.ಕೆ.ದ ಯಾರ್ಕ್ ಶೈರಿನಲ್ಲಿ ವಾಸಿಸುವ ಹಲವಾರು ಕನ್ನಡಿಗರು ಚೆನ್ನಾಗಿ ಬಲ್ಲವರಾಗಿದ್ದೆವು. ಆಕೆಯ ಅಟ್ಲಾಂಟಿಕ್ ಸಾಹಸವನ್ನು ಮೊದಲಿಂದ ಕೊನೆಯ ವರೆಗೆ ಟಿವಿ, ಸ್ಮಾರ್ಟ ಫೋನಿನ ಆಪ್ ಮೇಲೆ ಐವತ್ತೆರಡೂ ದಿನಗಳನ್ನು ಅನುಸರಿಸಿದ್ದೆವು. ಆದುದರಿಂದ ಆ ಯಶಸ್ವಿ ಯಾನದ ಹಿನ್ನೆಲೆ, ಆಕೆಯ ನಿರ್ಧಾರದ ಗುಟ್ಟು ಮತ್ತು ಸಮುದ್ರಯಾನದ ಅನುಭವದ ವಿವರಗಳನ್ನು ಓದಲು ಕಾತುರದಿಂದ ಎದುರು ನೋಡುತ್ತಿದ್ದೆವು. ನಮ್ಮನ್ನು ಕಾಡುತ್ತಿದ್ದ ಅನೇಕ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರ ಸಿಕ್ಕಿವೆ. ಕ್ರಿಕೆಟ್ ಮ್ಯಾಚಿನ ಬಾಲ್ -ಬೈ -ಬಾಲ್ ಕಾಮೆಂಟರಿ ತರಹ ಪ್ರತಿ ಘಟ್ಟದಲ್ಲಾದ ವಿವರಗಳು ಇಲ್ಲಿವೆ. ಅವು ಓದುಗನಲ್ಲಿ ವಿಸ್ಮಯ, ಆತಂಕ, ಕಳವಳ, ಅಂಜಿಕೆ, ಈ ತರದ ಭಾವನೆಗಳೆಬ್ಬಿಸಿದರೆ ಆಶ್ಚರ್ಯವಿಲ್ಲ!
ಕೊನೆಯ ಭಾಗದಲ್ಲಿ (ಇದರ ಆರನೆಯ ಅಧ್ಯಾಯದಲ್ಲಿ) ಅನನ್ಯ World’s Toughest Row ಮುಗಿಸಿ 52ದಿನ 5 ತಾಸು 44 ನಿಮಿಷಗಳ ನಂತರ ಕೈಯಲ್ಲಿ ದೀವಟಿಗೆ ಹಿಡಿದು victory lap ಮಾಡಿದ ನಂತರವೂ ಸ್ವಲ್ಪವೂ ಓಲಾಡದೆ ಭೂಮಿಯ ಮೇಲೆ ಮೊದಲ ಹೆಜ್ಜೆಯನ್ನಿಟ್ಟಾಗ ಕರತಾಡನ ಮಾಡುತ್ತ ನೆರೆದ ಜನಸಮುದಾಯದ ಮುಂಚೂಣಿಯಲ್ಲಿ ಆನಂದ ಬಾಷ್ಪ ಸುರಿಸುತ್ತ ನಿಂತ ತಂದೆತಾಯಿಯವರ ಸಂತೋಷವನ್ನು ಅನುಭವಿಸುವದಲ್ಲಿ ಸಂದೇಹವಿಲ್ಲ. (ವಿಡಿಯೋವನ್ನು ನೋಡಿರಿ- ಕೊಂಡಿ ಕೊನೆಯಲ್ಲಿ)
ಈ ಸಾಹಸ ಬಗ್ಗೆ ಯೋಚಿಸುತ್ತಿದ್ದಾಗ ನನಗೆ ನೆನಪಾದದ್ದು ತಮಿಳಿನ ತಿರುವಳ್ಳುವರ್ ಮುನಿ ತಿರುಕ್ಕುರಳ್ (#70) ದಲ್ಲಿ ಹೇಳುವಮಾತು: ಜನ್ಮ ಕೊಟ್ಟ ತಂದೆಗೆ ಮಗನು (ಅಥವಾ ಮಗಳು) ಮಾಡಬಹುದಾದ ಪ್ರತ್ಯುಪಕಾರವೇನು? ಎಂದು ಚರ್ಚಿಸುತ್ತ: "ಈತನನ್ನುಪಡೆಯಲು ತಂದೆ (ಹಡೆದ ತಂದೆತಾಯಿಗಳು) ಎಂಥ ತಪಸ್ಸು ಮಾಡಿರಬಹುದು ಎಂದು ಜನರು ಕೊಂಡಾಡುವುದು." ಅನನ್ಯಳ ಧೃಡನಿರ್ಧಾರ, ಅದರ ಬಗ್ಗೆ ಆದ ಚರ್ಚೆ, ತಂದೆತಾಯಿಗಳ ಆತಂಕ, ಅವರ ಒಪ್ಪಿಗೆ, ಆಕೆಯ ೩ ವರ್ಷಗಳ ಪೂರ್ವಸಿದ್ಧತೆ, ಇವುಗಳುಮೊದಲ ೪ ಅಧ್ಯಾಯಗಳ ೩೦ ಪುಟಗಳಲ್ಲಿ, ನಂತರದ ಸುದೀರ್ಘ ಭಾಗದಲ್ಲಿ "ದೈತ್ಯ ಅಲೆಗಳ ನಡುವೆ ಅನನ್ಯ" ಎದುರಿಸಿದ ಯಾನದ ಸಾಹಸದ ವಿವಿಧ ಹಂತ ಒಡ್ಡಿದ ಸಮಸ್ಯೆಗಳು, ಕಳಕೊಂಡ ಮೊಬೈಲ್, ಅಲೆಗಳು ದೋಣಿಯನ್ನು ಮಗುಚಿಹಾಕಿದ ಪ್ರಸಂಗ, ಮುರಿದ ಚುಕ್ಕಾಣೆ, ಮತ್ತು ಹುಟ್ಟು, ಅವುಗಳ ರಿಪೇರಿ, ಬೋಟಿ (boat)ನಿಂದ ಹೊರಗಿಳಿದು ಬಾರ್ನಕಲ್ಲುಗಳನ್ನು (barnacles) ಸವರಿ ಅದರ ಹೊರಮೈಯನ್ನು ಸ್ವಚ್ಛಗೊಳಿಸಿದ ಕಷ್ಟ, ಇವೆಲ್ಲವನ್ನೂ ಓದುವಾಗ ಮೈನವಿರೇಳುತ್ತದೆ. ಡಿಸೇಂಬರ್ 11, 2024 ರಂದು ಕ್ಯಾನರಿ ದ್ವೀಪದ ಲಾ ಗೋಮೆರೋ ಬಂದರದಿಂದ ಭಾವಪೂರಿತ ಬಿಳ್ಕೊಡುಕೆವಿಕೆಯ ನಂತರ 3,000 ಮೈಲು ಏಕಾಕಿಯಾಗಿ ಹುಟ್ಟು ಹಾಕುತ್ತ 52 ದಿನಗಳ ಕೊನೆಯಲ್ಲಿ ಕೆರಿಬಿಯನ್ ದ್ವೀಪ ಆಂಟಿಗಾವನ್ನು ಸೇರುವ ವಿಜೃಂಭಣೆಯ ವರ್ಣನೆಯಂತೂ ಬಹಳ ಹೃದಯಸ್ಪರ್ಶಿ!
ಒಬ್ಬ ಕವಿಯ ಪುತ್ರ, ಮತ್ತು ಸ್ವತಃ ಕವಿಯಾದ ಡಾ ಪ್ರಸಾದ್ ಅವರ ಬರವಣಿಗೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಿಕ ಉಲ್ಲೇಖಗಳು, ಅಲ್ಲಲ್ಲಿ ಪುಟ್ಟ ಪುಟ್ಟ ಸುಂದರ ವಾಕ್ಯಗಳುಂಟು: ಕನಸಿಗೆ ಕಡಿವಾಣವಿಲ್ಲ(ಪು 18); ಈ ಯಾನದ ಹಾದಿಯಲ್ಲಿ ನಿಲುಗಡೆ ತಾಣ ಅಥವಾ ದ್ವೀಪಗಳಿಲ್ಲ; ನಡುನೀರಿಗೆ ಇಳಿದವರು ಈಜಲೇಬೇಕಲ್ಲವೆ? (ಪು 36) (ಇಲ್ಲಿ ಹುಟ್ಟು ಹಾಕಲೇ ಬೇಕಲ್ಲವೇ?); ಕಳ್ಳರು ಗೊಜ್ಜವಲಕ್ಕಿ, ಕೋಡುಬಳೆಯನ್ನಷ್ಟೇ ಅವಳಿಂದ ಕದಿಯ ಬಹುದಿತ್ತು (ಪು 67 ). ಈ ಸಮುದ್ರ ಸಾಹಸ ಹಿನ್ನೆಲೆಯಲ್ಲಿ ಹೆಚ್ಚು ಮಾಹಿತಿಈ ಮೊದಲೇ ಗೊತ್ತಿರದ ವಿದೇಶಿ ಓದುಗರಿಗೆ ಅಂಕಿ ಸಂಖ್ಯೆಗಳುಂಟು. ಅನನ್ಯಳ ಪೂರ್ವ ನಿರ್ಧಾರ, ಕೊನೆಗೆ ಯುವಪೀಳಿಗೆಗೆ ಆಕೆಯ ಸಂದೇಶ ಮನತಟ್ಟುವಂತಿದೆ. ಅಟ್ಲಾಂಟಿಕ್ ಸಾಗರವನ್ನು ಈ ರೀತಿ ಹುಟ್ಟುಹಡಗಿನಲ್ಲಿ ದಾಟಿ ದಾಖಲೆ ಮಾಡಿದ ಪ್ರಪ್ರಥಮ ವರ್ಣೀಯ (non-white) ಮಹಿಳೆ ಕನ್ನಡಿತಿ ಎನ್ನುವ ಮಾತು ನಮಗೆಲ್ಲ ಹೆಮ್ಮೆ ಅಲ್ಲವೇ? ಯಾನದ ವಿವರದ ಓದಿಗೆ ಅಡ್ಡಬರದಂತೆ ಸಂಬಂಧಿಸಿದ ೨೦ (B& W) ಕಪ್ಪು ಬಿಳುಪು ಚಿತ್ರಗಳನ್ನುಕೊನೆಯಲ್ಲಿ ಕೊಟ್ಟಿದ್ದಾರೆ.

ಡಾ ಶ್ರೀವತ್ಸ ದೇಸಾಯಿ, ಲೆಸ್ಟರ್ UK

ಈ ಪುಸ್ತಕವನ್ನು ಬೆಂಗಳೂರಿನ ವೀರಲೋಕ ಪ್ರಕಾಶನದವರು ಪ್ರಕಟಿಸಿದ್ದಾರೆ--(ರೂ 140)

FREE USE: TODAY at 10:42 local time, UK/India solo ATLANTIC ODYSSEY completed the WORLD’S TOUGHEST ROW – ATLANTIC 2024. Ananya Prasad is the all time second fastest solo woman to have completed this gruelling 3,000 mile race and crossed the finish line into English Harbour in Antigua in 52 days, 5 hours, and 44 minutes.
Credit: World’s Toughest Row
ಸಾಹಿತಿಗಳ ಅಭಿಪ್ರಾಯಗಳು (ಪುಸ್ತಕದ ಲೇಖಕರನ್ನು  ಸಂಬೋಧಿಸಿ ಬರೆದದ್ದು)

ಎಚ್. ಡುಂಡಿರಾಜ್ ಬರೆಯುತ್ತಾರೆ:
ಪ್ರಿಯ ಶಿವಪ್ರಸಾದ್, ಸಾಗರದಲ್ಲಿ ಸಾಹಸ ಚೆನ್ನಾಗಿ ಓದಿಸಿಕೊಂಡು ಹೋಯಿತು. ಮಗಳ ಮಹತ್ವಾಕಾಂಕ್ಷೆಯ ಸಾಹಸ , ಹೆತ್ತವರ ಆತಂಕ, ಉದ್ದಕ್ಕೂ ಜೊತೆಯಾಗಿ ಸಾಗುವ ಪರಿ ಕುತೂಹಲಕಾರಿ. ಅನನ್ಯಳ ಛಲದಷ್ಟೆ , ಸಾಹಸದಷ್ಟೆ, ನಿಮ್ಮಿಬ್ಬರ ನಿರ್ಧಾರವೂ ಪ್ರಶಂಸನೀಯ. ತಾಂತ್ರಿಕ ವಿವರಗಳನ್ನೂ ಓದುಗರಿಗೆ ಜಟಿಲವಾಗದಂತೆ ವಿವರಿಸಿದ್ದೀರಿ. ನೀವು ಉಲ್ಲೇಖಿಸಿದ ಕವನದ ಸಾಲುಗಳು ಅತ್ಯಂತ ಸೂಕ್ತವಾಗಿವೆ. ಒಟ್ಟಿನಲ್ಲಿ ಅನನ್ಯಳ ಸಾಹಸದಂತೆ ಈ ಪುಸ್ತಕವೂ ಕನ್ನಡದ ಓದುಗರಿಗೆ ನಿಮ್ಮ ಅಪೂರ್ವ ಕೊಡುಗೆ. ನೀವು ಮಾತ್ರ ಬರೆಯಬಹುದಾದ ಉತ್ತಮ ಪುಸ್ತಕ. ಅನನ್ಯಳಿಗೆ, ನಿಮಗೆ ಹಾಗೂ ಪೂರ್ಣಿಮಾ ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು.
-ಎಚ್. ಡುಂಡಿರಾಜ್, ಪ್ರಸಿದ್ಧ ಕವಿ, ಸಾಹಿತಿ, ಬೆಂಗಳೂರು

ಎಮ್ ಆರ್ ಕಮಲ ಪ್ರಸಿದ್ಧ ಸಾಹಿತಿ, ಕವಯಿತ್ರಿ, ಅನುವಾದಕಿ, ಬೆಂಗಳೂರು 

'ಸಾಗರದಲ್ಲಿ ಸಾಹಸಿ’ ಓದಿದೆ. ಒಂಟಿಯಾಗಿ ಸಮುದ್ರದಲ್ಲಿ ಯಾನ ಮಾಡುವುದನ್ನು ಕನಸುವುದಕ್ಕೂ ಆತಂಕ ಪಡುವ ನಮ್ಮಂಥವರಿಗೆ ಅನನ್ಯಳ ಈ 'ಅನನ್ಯ' ಸಾಹಸ ಅಸಾಧಾರಣ ಅನ್ನಿಸಿದ್ದು ಸುಳ್ಳಲ್ಲ.
ಇಂತಹ ಸಾಹಸಕ್ಕೆ ಮಗಳು ಕೈ ಹಾಕಿದಾಗ ಅದನ್ನು ಅರಗಿಸಿಕೊಳ್ಳುವುದು ಅದೆಷ್ಟು ಕಷ್ಟವಾಗಿತ್ತು ಎಂಬುದನ್ನು ನಿಮ್ಮ ಬರಹ ಎದೆಗಿಳಿಸುತ್ತದೆ. ಅದು ನನ್ನನ್ನು ತಟ್ಟಿದ್ದಕ್ಕೆ ಕಾರಣವೂ ಇದೆ. ನನ್ನ ಮಗಳು ಮೈಕ್ರೊ ಬಯಾಲಜಿ ಎಂಎಸ್ಸಿ ಮಾಡಿದ ನಂತರ ಸಂಶೋಧನೆಗೆ ಹೋಗುತ್ತಾಳೆಂದು ಭಾವಿಸಿದ್ದೆ. ಇದ್ದಕ್ಕಿದ್ದಂತೆ ಅವಳು ಉಳಿದವರು ಅಷ್ಟಾಗಿ ಆರಿಸಿಕೊಳ್ಳದ ಕಂಠದಾನ, ಹಾಡು ಎಂದೆಲ್ಲ ಹೊರಟಾಗ ಕೊಂಚ ಆತಂಕವಾಗಿದ್ದು ನಿಜ. ಒಪ್ಪಿಕೊಳ್ಳುವುದು ಸಲೀಸಾಗಿರಲಿಲ್ಲ.
ಆದರೆ ಅನನ್ಯ ಆರಿಸಿಕೊಂಡದ್ದು ಜೀವವನ್ನೇ ಪಣಕ್ಕಿಡುವ ಸಾಗರ ಯಾನ. ಬಹುಶಃ ತಂದೆ ತಾಯಿಯರನ್ನು ಅಲುಗಾಡಿಸುವ ನಿರ್ಧಾರ. ಆದರೂ ನೀವಿಬ್ಬರೂ ಬೆಂಬಲವಾಗಿ, ಅವಳ ಕನಸುಗಳಿಗೆ ಬಣ್ಣ ತುಂಬಲು ಮಾಡಿದ ಪ್ರಯತ್ನ ಅವಳ ಸಾಗರ ಯಾತ್ರೆಯಷ್ಟೇ ಅನುಪಮ ಅನ್ನಿಸಿತು.

ಸಾಗರ ಯಾನದ ಇತಿಹಾಸ, ಸಾಧಕ ಬಾಧಕ ವಿಚಾರಗಳು, ಯಾನಕ್ಕೆ ಬೇಕಾದ ಸಿದ್ಧತೆ ಇತ್ಯಾದಿಗಳ ಮಹತ್ವಪೂರ್ಣ ಮಾಹಿತಿಗಳನ್ನು ಒದಗಿಸಿರುವುದರಿಂದ ಪುಸ್ತಕಕ್ಕೆ ತಾನಾಗಿಯೇ ಮಹತ್ವ ಬಂದಿದೆ. ಅಲ್ಲಲ್ಲಿ ಕವಿತೆ, ಕಾದಂಬರಿಗಳ ವಿಷಯವನ್ನು ಪೂರಕವಾಗಿ ಬಳಸಿಕೊಂಡಿರುವುದು ವಿಶೇಷ. (Old man and the sea ನನಗೆ ಎಂ.ಎ. ನಲ್ಲಿ ಪಠ್ಯವಾಗಿತ್ತು.) ಅನನ್ಯಳ ಯಾನದ ವಿವರಗಳಂತೂ ನಾವೇ ಅವಳೊಂದಿಗೆ ಈ ಸಾಹಸದಲ್ಲಿ ಪಾಲ್ಗೊಳ್ಳುತ್ತಿದ್ದೇವೇನೋ ಎಂಬ ಭಾವ ಮೂಡಿಸಿತು. ಮೊಬೈಲ್ ಕಳೆದುಕೊಂಡಾಗ, ಚುಕ್ಕಾಣಿಯ ಸಮಸ್ಯೆಯಾದಾಗ ಅವಳ ಆತಂಕ ನಮ್ಮದೇ ಆತಂಕವಾದ ಕಾರಣ ನಿಮ್ಮ ಅಂತಃಕರಣದ
ನಿರೂಪಣೆ. ಮತ್ತೊಬ್ಬರ ಅನುಭವವನ್ನು ಹಿಡಿದಿಡುವುದು ಸುಲಭವೇ ಅಲ್ಲ. ಅಂತಹ ಸಾಹಸವನ್ನು ನೀವೂ ಮಾಡಿದ್ದೀರಿ.
'ಅನನ್ಯ' ನಮ್ಮೆಲ್ಲರ ಹೆಮ್ಮೆ ಎಂಬ ಭಾವದೊಂದಿಗೆ ಪುಸ್ತಕವನ್ನು ಕೆಳಗಿಟ್ಟೆ. ಇದೊಂದು ಭಾವದಲೆಯ ಮೇಲಿನ ಜೀವಯಾನ
... ಅನನ್ಯಳಿಗೆ, ಮುಖ್ಯವಾಗಿ, ಪ್ರೋತ್ಸಾಹಿಸಿದ ತಂದೆತಾಯಿಗಳಿಗೆ ಅಭಿನಂದನೆಗಳು.
ಈ ಪುಸ್ತಕ ಕಳಿಸಿದ್ದಕ್ಕೆ ಧನ್ಯವಾದ.
ಎಮ್ ಆರ್ ಕಮಲ

FREE USE: TODAY at 10:42 local time, UK/India solo ATLANTIC ODYSSEY completed the WORLD’S TOUGHEST ROW – ATLANTIC 2024. Ananya Prasad is the all time second fastest solo woman to have completed this gruelling 3,000 mile race and crossed the finish line into English Harbour in Antigua in 52 days, 5 hours, and 44 minutes.
Credit: World’s Toughest Row
ದೀಪಾ ಸಣ್ಣಕ್ಕಿ ಬರೆಯುತ್ತಾರೆ
"ಸಾಗರದಲ್ಲಿ ಸಾಹಸಿ " ಬರೀ ಅನನ್ಯರವರ ಸಾಹಸಕಥನಕ್ಕೆ ಮತ್ತು ಅವರ ತಂದೆಯ ಸ್ವಾನುಭವದ ಗಾಥೆಗಷ್ಟೇ ಸೀಮಿತವಾದ ಪುಸ್ತಕವಲ್ಲ.
ಇಲ್ಲಿ,
ಬದುಕಿನ ಹಲವಾರು ಮಗ್ಗಲುಗಳನ್ನು ನೋಡಿದ ಅನುಭವಿಯ ಜೀವನಪಾಠಗಳಿವೆ. ಪರಿಸ್ಥಿತಿಯನ್ನು ಸಮಚಿತ್ತದಿಂದ ನಿಭಾಯಿಸಿದ ಸಂಯಮಿಯ ಮಾತುಗಳಿವೆ. ಕಾಲಘಟ್ಟದಲ್ಲಿ ಹಿಂದೆ ಸರಿಯುತ್ತಿರುವ ಹಿರಿ ಜೀವಗಳ ಬಗ್ಗೆ ತುಂಬುಗೌರವವಿದೆ. ಜೊತೆಗೆ ಮುಂಬರುವ ಸಂತಾನಗಳ ಭದ್ರ ಬುನಾದಿಯ ಬಗೆಗೆ ಕಳಕಳಿಯಿದೆ. ಜೀವಿತದ ಪರಿಧಿಯೊಂದಿಗೆ ಮನೋವೈಶಾಲ್ಯವನ್ನು ವಿಸ್ತರಿಸಿಕೊಳ್ಳಬೇಕಾದ ಹಿತವಚನವಿದೆ. ಇವೆಲ್ಲವುಗಳನ್ನು ಮೀರಿ ವಿಶ್ವಮಾನವತೆಯ ಪ್ರಜ್ಞೆಗೆ ನೀಡಿದ ಕರೆ, ಪುಸ್ತಕಕ್ಕೆ ಕಲಶಪ್ರಾಯವಾಗಿದೆ.
ಬರಹ,
ಕಡಲಯಾನದ ಓಡಿಷಿಯಸ್ಸ್ ದೋಣಿಯಂತೆ ಗತಿಗೆಟ್ಟು ಓಲಾಡದೇ ಸಮಸ್ಥಿತಿಯಲ್ಲಿ ನಿರಂತರವಾಗಿ ಓದಿಸಿಕೊಂಡು ಹೋಗುತ್ತದೆ.‌
ವಿಷಯಸಂಬಂಧಿತ ಅಂಕಿ ಸಂಖ್ಯೆಗಳ ಮಾಹಿತಿಯಾಗಲಿ, ಮಗಳ ಬಗೆಗಿನ ಸಮತೋಲಿತ ಹೆಮ್ಮೆ ಪ್ರಶಂಸೆಗಳಾಗಲಿ, ಕುಟುಂಬಕ್ಕೆ ದಕ್ಕಿದ ಆಂತರಿಕ ತುಮುಲಗಳಾಗಲಿ ಅಥವಾ ಸಾಹಸದ ಬಗೆಗಿರುವ ಸ್ವಂತ ದೃಷ್ಟಿಕೋನವಾಗಲಿ ಯಾವುದೂ ಓದುಗನಿಗೆ ಭಾರವೆಂದೆನಿಸುವುದಿಲ್ಲ. ಇಲ್ಲಿ ಭಾವಗಳು ಕೂಡ ವಾಸ್ತವಾಂಶಗಳಷ್ಟೇ ಪ್ರಾಮಾಣಿಕವಾಗಿವೆ ಮತ್ತು ನೈಜಶೀಲವಾಗಿವೆ."ಸಾಗರದಲ್ಲಿ ಸಾಹಸಿ"ಯನ್ನು ಓದಿದ ಒಂದೇ ಒಂದು ಜೀವ, ಸ್ವಯಂ ವಿಧಿತ ನಿರ್ಭಂಧಗಳನ್ನು ತೊಡೆದು ಜೀವನೋತ್ಸಾಹದಿಂದ ಕೊನೆಗಲ್ಲನ್ನು ಮುಟ್ಟಿದರೆ ಪುಸ್ತಕದ ಗರಿಮೆಯ ಪ್ರತಿಮೆಗೆ ಹೂವು ಸಲ್ಲಿಸಿದಂತೆಯೇ ಸರಿ!

ದೀಪಾ ಸಣ್ಣಕ್ಕಿ, ಯು ಕೆ
Video of Successful Completion: Connects to Facebook