ಈ ವಾರದ ಪ್ರಸ್ತುತಿ ಕಥೆಗಳಲ್ಲೊಂದು ಕಥೆ, ಸ್ವಲ್ಪ ಆತ್ಮ ಕಥೆ ಸಹ. ಇದನ್ನು ಬರೆಯುವಾಗ ನನಗೆ ಸ್ವಲ್ಪ ಮುಜುಗರವಾಗುತ್ತಿದೆ. ಯಾಕೆ ಅಂತ ಮುಂದೆ ಓದಿದರೆ ನಿಮಗೇ ಗೊತ್ತಾಗುತ್ತದೆ. ಈ ವಾರವೂ ಒಂದು ಪುಸ್ತಕ ಪರಿಚಯ ಬರೆಯಲೂ ಹಿಂದೇಟು ಹಾಕುತ್ತಿದ್ದೇನೆ.ದಯವಿಟ್ಟು ಎಂದಿನಂತೆ ಓದಿ ಕಮೆಂಟ್ ಮಾಡಲು ಮರೆಯ ಬೇಡಿ! (ಸಂ)
ಇತಿಹಾಸದ ದಾಖಲೆ ’ಅನಿವಾಸಿ’ ಬ್ಲಾಗ್ ಜಾಲತಾಣ ಯು ಕೆ ಕನ್ನಡಿಗರ ತಂಗುದಾಣ ಎನ್ನುವ ಉಪಶೀರ್ಷಿಕೆಯನ್ನು ಹೊತ್ತು ೨೦೧೪ರಲ್ಲಿ ಶುರುವಾದಾಗಿನಿಂದ ತಪ್ಪದೇ ವಾರಕ್ಕೊಮ್ಮೆಪ್ರತಿ ಶುಕ್ರವಾರದಂದು ಒಂದು ಬರಹವನ್ನೊ, ಕವಿತೆ, ಕಥೆ, ವಿಮರ್ಶೆ, ಹರಟೆ, ಪುಸ್ತಕ ಪರಿಚಯ ಹೀಗೇ ಯವುದೇ ಒಂದು ಹೊಸ ಬರಹವನ್ನು ಪ್ರಕಟಿಸುತ್ತಲೇ ಬಂದಿದೆ. ತಪ್ಪಿದರೆ ವಾರಾಂತ್ಯದಲ್ಲಿ; ಕೆಲವೊಮ್ಮೆ ವಿಶೇಷ ಪ್ರಸಂಗಗಳಲ್ಲಿ ಉತ್ಸಾಹಿ ಸಂಪಾದಕರ ಸರತಿ ಬಂದಾಗ, ಪ್ರಸಿದ್ಧ ಸಾಹಿತಿ ಅಥವಾ ಕವಿವರ್ಯರ ಜನ್ಮದಿನ ಬಂದಾಗ ವಾರಕ್ಕೆರಡು ಸಲ ಸಹ, ಅನಿವಾಸಿ ಸಂಚಿಕೆ ಹೊರಬಂದಿದ್ದಿದೆ! ಸೂರ್ಯ ಪೂರ್ವದಲ್ಲಿ ಉದಯವಾಗುವದು ತಪ್ಪಿರಬಹುದು, ಆದರೆ ಅನಿವಾಸಿ ಮಾತ್ರ ಒಮ್ಮೆಯೂ ಉದಯವಾಗಲು ತಪ್ಪಿಸಿಲ್ಲ, ಎಂದು ಈಗ ಹೇಳಲಿಕ್ಕೆ ಹೊರಟಿದ್ದೆ, ಆದರೆ ಒಂದೇ ಒಂದು ಸಲ ಮಾತ್ರ ಅಚಾತುರ್ಯದಿಂದ ಒಂದು ಸಂಚಿಕೆ ತಪ್ಪಿ ಹೋಗಿತ್ತು, ಅಂದರೆ ೨೪ ತಾಸಿನ ಸೂರ್ಯಗ್ರಹಣ ಹಿಡಿದಿತ್ತು ಅನ್ನಿ. ಆ ದಿನ ಓದುಗರಲ್ಲಿ ಮತ್ತು ಅಂದಿನ ಸಂಪಾದಕರಲ್ಲಿ ಕೋಲಾಹಲ! ನನ್ನನ್ನು ಯಾಕೆ ಹಿಡಿದುಕೊಂಡರೋ ಏನೋ, ಯಾಕೆ ಈ ಸಲ ಅನಿವಾಸಿ ಬಂದಿಲ್ಲ ಅಂತ, ನನಗೇ ಈ-ಮೇಲು ಫೋನ್ ಕರೆಗಳ ಸುರಿಮಳೆ! ಆಗ ಪುಣ್ಯಕ್ಕೆ ವಾಟ್ಸಪ್ ಹಾವಳಿ ಇರಲಿಲ್ಲ! ಅದು ಯಾರ ಸರತಿಯಿತ್ತು ಅಂತ ನೆನಪಿಲ್ಲ. ಅವರು ಒಳಗೊಳಗೇ ಛಿಮಾರಿ ಹಾಕಿಕೊಂಡಂತೆ ಒದ್ದಾಡಿ ಬಿಟ್ಟರು!
ಇತ್ತೀಚೆಗೆ ಮತ್ತೆ ಒಬ್ಬರು ತಮ್ಮ ಪಾಳಿ (ಸರತಿ) ಪ್ರಕಾರ ’ಮೊಟ್ಟೆ ಇಡಲು’ ಮರೆತಾಗ ಇನ್ನೊಬ್ಬರ ಮೊರೆ ಹೋಗ ಬೇಕಾಯಿತು. ಮಾತುಕೊಟ್ಟಿದ್ದ ಅವರಿಗೂ ಅನಿವಾರ್ಯ ಕಾರಣಗಳಿಂದ ಆ ಗಡುವಿನಲ್ಲಿ ಬರೆದು ಕಳಿಸಲು ಅದು ಸಾಧ್ಯವಾಗದೆ ಈ ವಾರ ನಾನು ಪ್ರಕಟಿಸಬೇಕಾಗಿದ್ದ ಲೇಖನವನ್ನು ಆ ದಿನಕ್ಕೆ ನಾನೇ ಉಪಯೊಗಿಸಿದ್ದೆ. ಅಂದರೆ ಈ ವಾರ ರಿಕ್ತವಾಯಿತು. ಈ ವಾರಕ್ಕೆ ಏನು ಪ್ರಕಟಿಸುವಾ ಅಂತ ಯೋಚಿಸುತ್ತಾ ಇದ್ದೆ. ’ಸ್ಟಾಕ್’ ಸರಕು ಯಾವುದೂ ಇರಲಿಲ್ಲ. ಅಷ್ಟು ದೊಡ್ಡ ಸರಕಿನ ಮೂಟೆ ಗೋದಾಮಿನಲ್ಲಿ ಇಟ್ಟಿರಲು ನಾನೇನೂ ಆ ಪ್ರತಿಭಾವಂತ ಲೇಖಕ-ಲೇಖಕಿಯರಂತೆಯೇ? ಏನೋ ಒಂದನ್ನು ’ಕಾಸಿ ಬಡಿ’ಯುವವನಾಗಿದ್ದೆ. ಅದು ಸಹ ಅಷ್ಟು ಸಮರ್ಕಪವಾಗಿ ಕೂಡಲಿಲ್ಲ. ಮತ್ತೆ ಇತಿಹಾಸದ ಪುನರಾವರ್ತನೆ ಆಗುವದರಲ್ಲಿತ್ತು. ಆಗ ಕೈಕೂಡಿಸಿ ನನ್ನನ್ನು ಬಚಾವು ಮಾಡಿದ್ದು ಒಬ್ಬ ಗತ ಇತಿಹಾಸಕಾರರೇ! ಕುತೂಹಲ ಕೆರಳಿತೇ? ಅದು ನನ್ನ ತಂದೆಯೇ!
ಅನಿರೀಕ್ಷಿತವಾಗಿ ಕೈಗೆ ಬಂತು ಪುಸ್ತಕ Written in stone ಎನ್ನುವ ಆಂಗ್ಲ ನುಡಿಗಟ್ಟು ಇದೆ. ಅಂದರೆ ಒಮ್ಮೆ ಹೇಳಿದ್ದು, ನಿರ್ಧರಿಸಿದ್ದು ಅದನ್ನು ಬದಲಾಗಿಸಲಾಗುವದಿಲ್ಲಂತ. ಒಮ್ಮೊಮ್ಮೆ ಅದನ್ನು carved in stone ಎನ್ನುತ್ತಾರೆ. ಭಾರತದಲ್ಲಿ ಕಾಗದ ಮತ್ತು ಅದರ ಮೇಲೆ ಪ್ರಿಂಟಿಂಗ್ ಮಾಡುವುದು ತಡವಾಗಿ ಬಂದಿತು ಅಂತ ವಸುಧೇಂದ್ರರವರು ತಮ್ಮ ’ರೇಶ್ಮೆ ಬಟ್ಟ’ ಚರ್ಚಿಸುತ್ತ ಹೇಳಿದಂತೆ ನೆನಪು. ಅದಕ್ಕೇ ನಮ್ಮ ದೇಶದಲ್ಲಿ ಐತಿಹಾಸಿಕ ದಾಖಲೆಗಳು ತಾಮ್ರ ಶಾಸನ, ಶಿಲಾ ಶಾಸನ ಅಥವಾ ತಾಳೆಗೆರೆಯ ಬರಹಗಳನ್ನು ಆಧರಿಸಿ ರೂಪಗೊಂಡಿರುವದು ಸಹಜ. ನನ್ನ ದಿವಂಗತ ತಂದೆಯವರು ಒಬ್ಬ ಇತಿಹಾಸಜ್ಞರು, ಶಾಸನತಜ್ಞರು ಅಂತ ಪ್ರಸಿದ್ಧರಾಗಿದ್ದರು. ನಾನು ಚಿಕ್ಕಂದಿನಿಂದ ನಮ್ಮ ಮನೆಯಲ್ಲಿ ಅವರ ಶಿಲಾಶಾಸನದ ಪ್ರತಿಗಳ ವೈಯಕ್ತಿಕ ಸಂಗ್ರಹವನ್ನು ನೋಡಿದ್ದು ನೆನಪಿದೆ. ಶಾಸನಗಳ ಪ್ರಾರಂಭದಲ್ಲಿ ಮೊದಲು ’ಓಮ್, ಸ್ವಸ್ತಿ, ಶ್ರೀ’ ಇತ್ಯಾದಿ ಹೇಳಿದ ನಂತರ ಒಂದು ಶಿವ ಅಥವಾ ವಿಷ್ಣು ದೇವಸ್ತುತಿಯಿರುತ್ತದೆ: ’ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ ತ್ರೈಲೋಕ್ಯ ನಗರಾರಂಭ ಮೂಲಸ್ಥಂಭಾಯ ಶಂಭವೇ’ ಅಂತ ಕಂಡರೆ ಅದು ಶಿವಾರಾಧಕರಿಂದ. ಈ ಎರಡು ಸಾಲಿನ ಶ್ಲೋಕವನ್ನಷ್ಟೇ ಕಲಿತು ಮನನ ಮಾಡಿ ಅದರ ಆಧಾರದ ಮೇಲೆಯೇ ಕಲಿತು ಕುಕನೂರಿನ ಸುತ್ತಮುತ್ತಲ್ಲಿನ, ಗುಡಿಗಳ ಮುಂದೆ ಇದ್ದ, ಕಣ್ಣಿಗೆ ಕಂಡ, ವಿಪುಲವಾಗಿ ಅಲ್ಲಲ್ಲಿ ಸಿಕ್ಕ ಶಿಲಾಶಾಸನಗಳನ್ನು ಓದುವದನ್ನು ಅವರು ಸ್ವಾಧ್ಯಾಯದಿಂದಲೇ ಕಲಿತು ಕರಗತ ಮಾಡಿಕೊಂಡಿದ್ದಂತರಂತೆ. ನನಗೆ ಅವರ ವಿವಿಧ ಭಾಷೆಗಳಲ್ಲಿ ಬರೆದ ಐತಿಹಾಸಿಕ ಸಂಶೋಧನಾತ್ಮಕ ಲೇಖನ ಮತ್ತು ಪುಸ್ತಕಗಳ ಪರಿಚಯವಿದ್ದರೂ, (ಒಂದೆರಡು ಕಥೆಗಳನ್ನು ಬಿಟ್ಟರೆ) ಅವರು ಕಥೆಗಾರರು ಸಹ ಆಗಿದ್ದರು ಎನ್ನುವದರ ಬಗ್ಗೆ ಗಂಧವೇ ಇರಲಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆ ರಹಸ್ಯ ಬಯಲಾದದ್ದು, ಅಕಸ್ಮಾತ್ತಾಗಿ ಕಳೆದವಾರದಲ್ಲಷ್ಟೇ ನನ್ನ ಕೈಗೆ ಬಂದ ಯಾರೋ ಒಬ್ಬರು ಅವರ ಕಥಾಸಂಗ್ರಹವನ್ನು ಸಂಪಾದಿಸಿ ಅಚ್ಚು ಹಾಕಿಸಿದ ಪ್ರತಿ! ಅದರ ಬಗ್ಗೆ ಹೇಳುವ ಮೊದಲು ನನ್ನ ಕನ್ನಡ ಕಲಿಕೆಯ ಬಗ್ಗೆ ಒಂದು ಚಿಕ್ಕ ವಿಷಯವನ್ನು ಹೇಳಬೇಕೆಂದಿರುವೆ.
ತಮಿಳು (ಬಾಲಿಶ) ತಲೆಗಳ ನಡುವೆ ಈ ಶಿರ್ಷಿಕೆ ನಿಮಗೆ ಬಿ ಜಿ ಎಲ್ ಸ್ವಾಮಿ ಅವರ ಇದೇ ತರದ ಹೆಸರಿನ ಪುಸ್ತಕವನ್ನು ನೆನಪಿಗೆ ತರಬಹುದು. ಅವರು ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ತಮಿಳು ನಾಡಿಗೆ ಹೋಗುವ ಮೊದಲೇ ನಾನು ಹುಟ್ಟಿದ್ದು ಧಾರವಾಡದಲ್ಲಿಯಾದರೂ ಆ ನಂತರ ಊಟಿಯಲ್ಲಿ ಬಾಲ್ಯಾವಸ್ಥೆಯನ್ನು ಆರಂಭಿಸಿದ್ದೆ! ನನಗೆ ಕನ್ನಡದಲ್ಲಿ ಅಕ್ಷರಾಭ್ಯಾಸವಾದದ್ದೇ ನೆನಪಿಲ್ಲ. ತಿರುವಳ್ಳುವರ ಮೊದಲ ದ್ವಿಪದಿ ’ಅಗರ ಮೊದಲೆಳುತ್ತೆಲ್ಲಾಮ್’ ಹೇಳುವಂತೆ ಕಲಿತು, ತಮಿಳು ಶಾಲೆಗಳಲ್ಲಿಯೇ ಟೀನೇಜರ್ ಆಗುವ ವರೆಗೆ ಕಲಿತೆ. ತಮಿಳು ಮಗ್ಗಿಗಳಿಂದ ಹಿಡಿದು (ಇಂದಿಗೂ ಗುಣಾಕಾರಕ್ಕೆ ಅವುಗಳೇ ಮೊದಲು ನೆನಪಾಗುವವು) ಸಂಗಮ್ ತಮಿಳಿನ ಭೋ ಪರಾಕ್ ಹೇಳುತ್ತ ಬೆಳೆದೆ. ನಿಮಗೆಲ್ಲ ಗೊತ್ತಿರುವಂತೆ ತಮಿಳಿನಲ್ಲಿ ಮಹಾಪ್ರಾಣದ ಉಚ್ಚಾರವಿಲ್ಲ. ಕಾಗುಣಿತ ಎಂದರೇನು ಸಹ ಗೊತ್ತಿರದ ನನಗೆ ವರ್ಣಮಾಲೆಯ ನಾಲ್ಕೂ ವ್ಯಂಜನಕ್ಷರಗಳಿಗೆ ಒಂದನ್ನೇ ಉಪಯೋಗಿಸಿ ರೂಡಿ. ನಾವು ಮೂವರು ಅಣ್ಣತಮ್ಮಂದಿರು ನಮ್ಮೊಳಗೆ ಮಾತನಾಡುತ್ತಿದ್ದುದು ತಮಿಳಿನಲ್ಲಿಯೇ. ಇಲ್ಲಿಯ ನಮ್ಮ ಮಕ್ಕಳಲ್ಲೂ ಸಾಮಾನ್ಯವಾಗಿ ಇದೇ ತರಹದ ಅನುಭವವನ್ನು ಕಾಣುತ್ತೇವೆ ಎನ್ನ ಬಹುದು, ಕೆಲವು ಅಪವಾದಗಳನ್ನು ಬಿಟ್ಟರೆ. ಅದಕ್ಕೇ ನಮ್ಮ ತಂದೆ ನಮ್ಮನ್ನು ’ಅಲ್ಪಪ್ರಾಣಿಗಳು ನೀವು’ ಕೊಂಗರ ಭಾಷೆಯನ್ನು ಮಾತಾಡ ಬೇಡಿ, ಅಂತೆಲ್ಲ ಟೀಕಿಸುತ್ತಿದ್ದರು. ತಾವಾಯಿತು, ತಮ್ಮ ಲೇಖನಗಳಾಯಿತು ಅಂತ ಯಾವಾಗಲೂ ಬರಹದಲ್ಲಿ ಮುಳುಗಿರುತ್ತಿದ್ದ ಅವರು ಒಂದು ಉಪಕಾರವನ್ನು ಮಾಡದಿರಲಿಲ್ಲ. ಕನ್ನಡ ಅಕ್ಷರಗಳನ್ನು ಕಲಿಸಿದ್ದು ಮತ್ತೆ ತಾವು ವಿಪುಲವಾಗಿ ಕನ್ನಡ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣಗಳು ಮತ್ತು ಕರ್ಮವೀರದಂಥ ನಿಯತ ಕಾಲಿಕಗಳಲ್ಲಿ ಮತ್ತು ಎರಡು ಮೂರು ಪತ್ರಿಕೆಗಳ ದೀಪಾವಳಿ ವಿಶೇಷಾಂಕಗಳಲ್ಲಿ ಬರೆಯುತ್ತಿದ್ದ ಲೇಖನಗಳನ್ನು ನನಗೆ ಕೊಟ್ಟು ಅವುಗಳ ಕಾಪಿ ಮಾಡಿಸುತ್ತಿದ್ದರು, ನಮಗೆ ಕನ್ನಡದ ರೂಢಿಯಾಗಲೆಂದು. ಆದರೆ ಕಥೆ ಪುಸ್ತಕ, ಕನ್ನಡ ಪಠ್ಯ ಪುಸ್ತಕಗಳನ್ನು ಧಾರವಾಡಕ್ಕೆ ಹನ್ನೆರಡನೇ ವರ್ಷದಲ್ಲಿ ಬರುವ ವರೆಗೆ ಕಂಡಿರಲಿಲ್ಲ.
ಕ್ಲಾಸ್ ತುಂಬ ಹಲ್ ಕಟ್ಟರು! ಹಟಾತ್ತನೆ ಪಠ್ಯಕ್ರಮದ ಮಾಧ್ಯಮ ಒಮ್ಮೆಲೆ ತಮಿಳಿನಿಂದ ಕನ್ನಡಕ್ಕೆ ಓವರ್ನೈಟ್ ಬದಲಾದ ಕೂಡಲೇ ನಮಗೆ ಆದದ್ದು systemic shock! ಯಾರಾದರೂ ಮಾತನಾಡಿಸಿದರೆ ಉತ್ತರ ಹೇಳಲು ಬಾಯಿ ತೆರೆದಾಗ ಬಾಯಿಂದ ಹೊರಬೀಳುತ್ತಿದ್ದುದು ತಮಿಳಿನ ’ಜಿಬ್ಬರಿಷ್’ ಅಂತ ಸಹಪಾಠಿಗಳ ಕಂಪ್ಲೇಂಟ್! ಏನು ಬಡಬಡಿಸುತ್ತಾ ಇದ್ದೀಯಾ, ಅನ್ನಬೇಕು ಅರ್ಥವಾಗದ ಹುಡುಗರೆಲ್ಲ! ತಮಿಳು ನಾಡಿನಲ್ಲಿ ಅವರಿಗೆ ಅಡ್ಡ ಹೆಸರಿಲ್ಲ. ಉತ್ತರ ಕರ್ನಾಟಕದ ಗಂಡುಮೆಟ್ಟಿನ ಸ್ಥಳವಾದ ಧಾರವಾಡದಲ್ಲಿ ಒಂದಕ್ಕೆ ನಾಲ್ಕು ಅಥವಾ ಆರರವರೆಗೆ ಒಂದು ಕ್ಲಾಸಿನಲ್ಲಿ ಕುಲಕರ್ಣಿ, ಪಾಟೀಲ, ’ಮನಿ’ಗಳು (ಮುಂದಿನ ಮನಿ, ಹಿತ್ತಲಮನಿ, ಮಿಟ್ಟಿಮನಿ,ಮೇಲ್ಮನಿ, ದೊಡ್ಮನಿ ಇತ್ಯಾದಿ) ಇರುತ್ತಿದ್ದರು! ವಿವಿಧ ’ಕಟ್ಟಿ’ಗಳ ಅಡ್ಡಹೆಸರಿನ ನಾಮಧೇಯ ಹೊತ್ತ ಸಾಧು ಹುಡುಗರು ಸಹ ಇದ್ದರು. ಇದೆಲ್ಲ ನಮಗೆ ಹೊಸತು; ಮತ್ತು ತಮಾಷೆ, ಸಹ! ಕ್ಲಾಸಿನಲ್ಲಿ ಪೀರಿಯಡ್ ಗಳ ಮಧ್ಯೆ, ’ಬ್ರೆಕ್’ ವಿರಾಮದಲ್ಲಿ ಗೋಲಿ (marbles) ಆಟ. ಅಂದರೆ ಜಗಳಾಟ. ಒಬ್ಬ ಹುಡುಗನನ್ನು ರೇಗಿಸುತ್ತಿದ್ದಾಗ ಆತ ಎಲ್ಲರನ್ನೂ ಬೈಯುತ್ತ ’ಅಂವ ಒಬ್ಬ ಹಲಕಟ್ಟ, ಇಂವ ಒಬ್ಬ ಹಲಕಟ್ಟ, ಎಲ್ಲರೂ ಸೂ...ಮಕ್ಕಳು’ ಅಂತ ಶಿಷ್ಟ ಭಾಷೆಯಲ್ಲಿ ಮಂತ್ರ ಪುಷ್ಪ ತೂರುತ್ತಿದ್ದ. ಆ ದಿನ ಸಂಜೆಗೆ ಮನೆಗೆ ಹೋಗಿ ನಾವು ಆ ದಿನದ ಶಾಲೆಯ ವೃತ್ತಾಂತವೆಲ್ಲವನ್ನೂ ತಾಯಿಗೆ ಒಪ್ಪಿಸುವುದು. ಆಕೆ ಎಲ್ಲವನ್ನು ಲಕ್ಷ್ಯಗೊಟ್ಟು ಕೇಳಿ ನಮ್ಮನ್ನು ಸಾಂತ್ವನ ಮಾಡುತ್ತ ಹುರಿದುಂಬಿಸುತ್ತಿದ್ದರು. ತಾಳ್ಮೆಯಿಂದ ಕೇಳುತ್ತಿದ್ದರು ಅವ್ವ. ಆಕೆಗೆ ಗೊತ್ತು, ಕನ್ನಡ ನಾಡಿನಲ್ಲಿ ತಮಿಳು ತಲೆಗಳಾಗಿದ್ದ ನಮ್ಮ ಪರದಾಟ! ಟಾಕು ಮಸಿ ದೌತಿ, ಬರೆಯಲು ಕಾಗದ, ಇವುಗಳ ಸಮುದ್ರದಲ್ಲಿ ತಂದೆಯವರು ಯಾವಾಗಲೋ ಕಳೆದು ಹೋಗಿರುತ್ತಿದ್ದರು. ಆ ದಿನ ನಾನು ಕೊಟ್ಟ ವರದಿ ನಮ್ಮ ಕ್ಲಾಸಿನಲ್ಲಿ ಒಂದೇ ಅಡ್ಡ ಹೆಸರಿನ ನಾಮಧಾರಿಗಳ ಲೇಟೆಸ್ಟ್ ’ಸ್ಕೋರ್’ ಹೇಳುತ್ತ, ’ನಮ್ಮ ಕ್ಲಾಸಿನಾಗ ಈಗ ನಾಲ್ಕು ಹಲಕಟ್ಟರು ಭರ್ತಿಯಾಗ್ಯಾರ’ ಅಂದೆ. ಅದನ್ನು ಕೇಳಿ ಬಿದ್ದು ಬಿದ್ದು ನಕ್ಕ ನಮ್ಮ ತಾಯಿ ’ಬರೀ ನಾಲ್ಕೇ? ನೀವು ಹೋಗೋ ಆ ಸಾಲಿ ಪ್ರಸಿದ್ಧ ಅದs. ಒಂದಿಪ್ಪತ್ತು ಹಲಕಟ್ಟರಾದರೂ ಸಿಗತಾರ ಆ ಸಾಲ್ಯಾಗ!’ ಅಂತ ಹೇಳಿ, ಆ ’ಬಿರುದಿನ’ ಅರ್ಥವನ್ನು ತಿಳಿಸಿ ಹೇಳಿದ್ದು ಇನ್ನೂ ನೆನಪಾಗುತ್ತದೆ, ಇದನ್ನು ಬರೆಯುವಾಗ. ವಾಯವ್ಯ ಗೊತ್ತಿಲ್ಲ; ಅವಯವದಂತೆ ಅವ್ವುಯ್ಯನೂ ಒಂದು ದೇಹದ ಭಾಗವನ್ನೇ ಸೂಚಿಸುತ್ತದೆಯೇ ಅಂತ ನಮಗೆ ಗೊಂದಲ. ಅವೆಲ್ಲವನ್ನು ಹಿಂದೆ ಹಾಕಿ ಅದು ಹೇಗೆ ಕನ್ನಡ ಕಲಿತೆವು ಅನ್ನುವ ವಿಷಯ ನನಗೆ ಇನ್ನೂ ವಿಸ್ಮಯದಾಯಕ!
ಅದ್ಯಾವ ಪುಸ್ತಕ? ನನ್ನ ಕೈಗೆ ಸಿಕ್ಕ ಪುಸ್ತಕವೆಂದರೆ ಈಗ ತಾನೆ ಅಚ್ಚಿನ ಮನೆಯಿಂದ ಹೊರಬಿದ್ದ ೧೯೫೧ ರಿಂದ ೧೯೫೩ರರ ಮಧ್ಯದಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ಕರ್ಮವೀರ ವಾರ ಪತ್ರಿಕೆಯಲ್ಲಿ ನನ್ನ ತಂದೆಯವರು (ಡಾ ಪಾಂಡುರಂಗ ದೇಸಾಯಿ) ಮಕ್ಕಳಿಗಾಗಿ ವಾರ ತಪ್ಪದೆ ಬರೆದ ಕಥೆಗಳ ಗುಚ್ಛ. ಬೇರೆ ಒಂದು ಪ್ರಾಜೆಕ್ಟ್ ಸಲುವಾಗಿ ಧಾರವಾಡದ ಕಿಟಲ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದ ಲೇಖಕ-ವಿಮರ್ಶಕ ಡಾ ಜಿ ಎಂಹೆಗಡೆಯವರು ಹುಬ್ಬಳ್ಳಿಗೆ ಹೋಗಿ ಹೋಗಿ ಈಗ ಝಿರಾಕ್ಸ್ ಮಾಡಿ ಪುಡಿಪುಡಿಯಾಗುತ್ತಿರುವ ಹಾಳೆಗಳ ಪ್ರತಿಗಳನ್ನು ಸಂಗ್ರಹಿಸಿ ಸಂಪಾದಿಸಿದ್ದು. ಅದು ಇನ್ನೂ ಲೋಕಾರ್ಪಣೆಯಾಗಿಲ್ಲ. ನನಗೆ ತುರ್ತು ಸುದ್ದಿ ತಲುಪಿಸೋಣ ಎಂದು ಫೋನು ಮಾಡಿದಾಗ ಅವರಿಗೆ ತಿಳಿಸಿ ವಿನಂತಿಸಿದೆ. ಅಕಸ್ಮಾತ್ತಾಗಿ ಒಂದು ವಾರದ ನಂತರ ಯು ಕೆ ಗೆ ಪ್ರಯಾಣಮಾಡುತ್ತಿದ್ದ ನನ್ನ ಮಿತ್ರರಿಗೆ ಆ ಪುಸ್ತಕದ ಎರಡು ಪ್ರತಿಗಳನ್ನು ಕಳಿಸಿದರು. ಅದರ ಹೊದಿಕೆಯನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಅದರ ಹಿನ್ನುಡಿಯಲ್ಲಿ ಮೂಲ ಲೇಖಕರ ವಿವರದೊಂದಿಗೆ ಕಥೆಗಳ ವಿಸ್ತಾರದ ಪರಿಚಯ ಸಹ ನಿಮಗೆ ಓದಲು ಸಿಗುತ್ತದೆ. ಅವುಗಳ ಬಗ್ಗೆ ಸವಿಸ್ತಾರದ ವಿಮರ್ಶೆ ಮಾಡಲಾರೆ ಮತ್ತು ನನ್ನಿಂದ ಅದು ಉಚಿತವೂ ಅಲ್ಲ. ಅದನ್ನು ಓದುಗ ಪ್ರಾಜ್ಞರಿಗೆ ಬಿಟ್ಟಿದ್ದು. ನನಗೆ ಮಾತ್ರ ನನ್ನ ತಂದೆ ಮಕ್ಕಳ ಕಥೆಗಳನ್ನು ಸಹ ಬರೆದಿದ್ದರು ಎನ್ನುವ ಸುದ್ದಿ ಗೊತ್ತೇ ಇರಲಿಲ್ಲ, ಅದು ಮಾತ್ರ ಸತ್ಯ. ಇತಿಹಾಸದ ಸಂಬಂದಿಸಿದ ಕಥೆ ಕಾದಂಬರಿ, ಮತ್ತು ವೈಚಾರಿಕ, ಸಂಶೋಧನಾತ್ಮಕ ಕೃತಿಗಳನ್ನು ಬರೆದುದ್ದುದು ಮಾತ್ರ ನನಗೆ ಗೊತ್ತಿತ್ತು. ಈಗ ೭೫ ವರ್ಷಗಳ ಹಿಂದಿನ ವಿವಿಧ ವಿಷಯಗಳನ್ನು ವಸ್ತುವಾಗಿಟ್ಟುಕೊಂಡು ಅವರು ಬರೆದ ಕಥೆಗಳು ಇದರಲ್ಲಿವೆ. ಕೆಲವುಗಳಲ್ಲಿ ಹಿತೋಪದೇಶದಲ್ಲಿದ್ದಂತೆ ಮಾತಾಡುವ ಪ್ರಾಣಿಗಳ ಪಾತ್ರಗಳನ್ನು ಸೃಜಿಸಿದ್ದಿದೆ. ಪುಸ್ತಕದ ಪರಿಚಯವನ್ನಷ್ಟೇ ಮಾಡುವುದು ಈ ಲೇಖನದ ನನ್ನ ಉದ್ದೇಶವಾಗಿತ್ತು. ಆಸಕ್ತರಿಗೆ ಬೇಕಾದ ಉಳಿದ ವಿವರಗಳು ಕವರ್ ಚಿತ್ರದಲ್ಲಿ ಸಿಗುತ್ತವೆ. ಸಂಪಾದಿಸಿ ಪ್ರಕಟಿಸಿದ ಡಾ ಜಿ ಎಂ ಹೆಗಡೆಯವರಿಗೆ ಮತ್ತು ಇಲ್ಲಿಗೆ ತಂದು ಪೋಸ್ಟ್ ಮಾಡಿದ ನನ್ನ ಮಿತ್ರ ಡಾ ಶಿವಶಂಕರ್ ಅವರಿಗೂ ಹೃತ್ಪೂರ್ವಕ ಕೃತಜ್ಞತೆಗಳು.
ಈ ವಾರದ ಪ್ರಸ್ತುತಿ ಅಪರೂಪವಾದುದು. ಜಗತ್ತಿನಲ್ಲೆಲ್ಲ ಅದ್ವಿತೀಯ ನಾಟಕಕಾರನೆಂದು ಹೆಸರಾದ ವಿಲಿಯಮ್ ಶೇಕ್ಸ್ಪಿಯರ್ ಹುಟ್ಟಿದ ನಾಡಲ್ಲೆ ಆತನ ಒಂದು ನಾಟಕದ -- ಎಂಥದೇ ಇರಲಿ,-- ಒಂದು ಪಾತ್ರಕ್ಕೆ ಆಯ್ಕೆಯಾಗಿ ರಂಗಮಂಚ ಹತ್ತುವದು ಸಾಮಾನ್ಯವಲ್ಲ. ನನಗೆ ಗೊತ್ತಿರುವವರಲ್ಲಿ ಅಂಥ ಏಕೈಕ ಕನ್ನಡಿಗ ಲೀಡ್ಸ್ನಲ್ಲಿ ವಾಸಿಸುತ್ತಿರುವ ಶ್ರಿಹರ್ಷ ನೀರಗುಂದ ನಾಗರಾಜ್ ಅವರು. ತಮ್ಮ ಆ ಅನುಭವವನ್ನು ಈ ರಸಭರಿತ ಲೇಖನದಲ್ಲಿ ತೆರೆದಿಟ್ಟಿದ್ದಾರೆ, ಆತ ಹುಟ್ಟಿದ ಎಪ್ರಿಲ್ ತಿಂಗಳಲ್ಲೇ (ತಾರೀಕು ಖಚಿತವಿಲ್ಲ) ’ಬಾರ್ಡ್ ಆಫ್ ಏವಾನ್’ ಎಂದು ಬಿರುದು ಪಡೆದ ಆತನ ೪೧೦ನೆಯ ಪುಣ್ಯತಿಥಿ ಇದೇ ಎಪ್ರಿಲ್ ೨೩ ರಂದು. ಶೇಕ್ಸ್ಪಿಯರ್ ನಾಟಕಗಳ ನಿತ್ಯ ಜೀವಂತಿಕೆಗೆ ಕಾರಣ, ಅವನು ಸಂಪೂರ್ಣವಾಗಿ ರಂಗಭೂಮಿಯ ವ್ಯಕ್ತಿಯಾಗಿದ್ದುದು, ಎಂದು ಪಂಡಿತರು ಹೇಳುತ್ತಾರೆ. ಓದುವವರನ್ನು, ನೋಡುವವರನ್ನು ಸದಾ ಎಚ್ಚರದಲ್ಲಿಡುವ ಕಲೆ ಅವನಿಗೆ ಒಲಿದು ಬಿಟ್ಟಿತ್ತು. ದುರಂತ, ಹಾಸ್ಯ, ತೀವ್ರ ಚಿಂತನೆ ಎಲ್ಲವನ್ನೂ ಹೇಳಬಲ್ಲ (೧೫೦೦ಕ್ಕೂ ಮೇಲ್ಪಟ್ಟು) ನುಡಿಗಟ್ಟುಗಳು ದಕ್ಕಿದ್ದವು. ಅವುಗಳನ್ನು ನಾವು ಇಂದಿಗೂ ಇಂಗ್ಲಿಷ್ ದಲ್ಲಿ ಸಂಪೂರ್ಣವಾಗಿ ಅಳವಡಿಸಿ ಕೊಂಡಿದ್ದೇವೆ. ಭಾಷೆಯ ಬಗೆಬಗೆಯ ಆಟಗಳ ಮೂಲಕವೂ ನಮ್ಮನ್ನು ಹಿಡಿದಿಡುವ ಕೌಶಲ ಅವನಿಗಿತ್ತು’ಆತನ ಪಾತ್ರಗಳೆಲ್ಲ ನಮ್ಮ ಒಳಕನ್ನಡಿಗಳಂತೆ ಕಾಣ ತೊಡಗುತ್ತಾರೆ. ಅವನಿಲ್ಲದಿದ್ದರೆ ನಮ್ಮೊಳಗಿದ್ದ ಭಾವಗಳನ್ನು ಕಾಣದೆ ಸುಮ್ಮನಿರುತ್ತಿದ್ದೆವು. ಆತ ರಾಜರುಗಳ ಬಗ್ಗೆ ಬರೆದರೂ ಒಟ್ಟಾರೆಯಾಗಿ ಜನರ ಕಷ್ಟಗಳ ಬಗ್ಗೆ ಬರೆದನೆಂತಲೆ’('ಬಾರ್ಡೋಲೇಟರ್’(Bardolater) ಹೆರಾಲ್ಡ್ ಬ್ಲೂಂ) ಇಂದಿಗೂ ಜಗತ್ತಿನೆಲ್ಲ ನಾಡಲ್ಲೂ ಆತ ನಾಲ್ಕು ಶತಮಾನದ ನಂತರವೂ ಸಲ್ಲುತ್ತಾನೆ. ಇಂಥ ಅಪರೂಪದ ಅವಕಾಶ ಸಿಕ್ಕ ಬಗೆಯನ್ನು ಮತ್ತು ಶ್ರೀಹರ್ಷಅವರ ಸ್ವಪರಿಚಯವನ್ನೂ ಇಲ್ಲಿ ಓದಿರಿ. (ಸಂಪಾದಕ)
ನನ್ನ ಹೆಸರು ಶ್ರೀಹರ್ಷ ನೀರಾಗುಂದ ನಾಗರಾಜ್. ನನ್ನ ಕುಟುಂಬದ ಊರು ನೀರಾಗುಂದ, ಕರ್ನಾಟಕ; ಆದರೆ ನನ್ನ ಬಾಲ್ಯ ಮತ್ತು ಬೆಳವಣಿಗೆ ಬೆಂಗಳೂರು ನಗರದಲ್ಲೇ ನಡೆದದ್ದು. ಪ್ರಸ್ತುತ ನಾನು ಯುನೈಟೆಡ್ ಕಿಂಗ್ಡಮ್ನ ಲೀಡ್ಸ್ ನಗರದಲ್ಲಿ ನೆಲೆಸಿದ್ದು, ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಉದ್ಯಮಶೀಲ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಕಳೆದ ಕೆಲವು ವರ್ಷಗಳಿಂದ ಯುಕೆಯಲ್ಲಿ ವಾಸಿಸುತ್ತಿದ್ದೇನೆ.
ನಾನು ವಿವಾಹಿತರಾಗಿದ್ದು, ನನ್ನ ಪತ್ನಿಯೂ ಸಾಫ್ಟ್ವೇರ್ ಕ್ಷೇತ್ರದಲ್ಲೇ ತಮ್ಮ ವೃತ್ತಿಜೀವನವನ್ನು ಮುಂದುವರಿಸುತ್ತಿದ್ದಾರೆ. ನಾವು ನಮ್ಮ ಇಬ್ಬರು ಮಕ್ಕಳೊಂದಿಗೆ ಲೀಡ್ಸ್ನಲ್ಲಿ ನೆಲೆಸಿದ್ದೇವೆ.
ನನಗೆ ರಂಗಭೂಮಿ ಮತ್ತು ನಾಟಕಗಳ ಬಗ್ಗೆ ಅಪಾರ ಆಸಕ್ತಿ ಇದೆ. ಅದೇ ಆಸಕ್ತಿಯ ಮುಂದುವರಿದ ಭಾಗವಾಗಿ, ನಾನು ಎರಡು ಕನ್ನಡ ಚಲನಚಿತ್ರಗಳಲ್ಲಿ ನಿರ್ಮಾಪಕ ಹಾಗೂ ನಟನಾಗಿ ಕಾರ್ಯನಿರ್ವಹಿಸಿದ್ದೇನೆ. ಜೊತೆಗೆ, ಕಲೆಯ ಮೇಲೆ ಇರುವ ಅಭಿರುಚಿಯಿಂದ ಭರತನಾಟ್ಯದಲ್ಲಿ ತರಬೇತಿ ಪಡೆದಿದ್ದೇನೆ. (ಅವರಿಗೆ ಪಾರ್ಕ್ ರನ್ನಿಂಗ್, ಮ್ಯಾರಥಾನ್ ಓಟದ ಹವ್ಯಾಸವಿದೆ. ಈ ವಾರಾಂತ್ಯದಲ್ಲಿ ಮ್ಯಾಂಚೆಸ್ಟರಿನ ಮ್ಯಾರಥಾನ್ ದಲ್ಲಿ ಕಂಡಾರು! –ಸಂ)
ನನ್ನ ತಂದೆ ಡಾ. ನಾಗರಾಜ್ ನೀರಾಗುಂದ ಅವರು ವಿಜಯ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿದ್ದು, ಕಾದಂಬರಿ ಹಾಗೂ ನಾಟಕ ರಚನೆಯಲ್ಲಿ ಹೆಸರು ಮಾಡಿದವರು. ಅವರ ಸಾಹಿತ್ಯಕೃತಿಗಳನ್ನು ಪ್ರಕಟಿಸುವಲ್ಲಿ, ಗಣಕಯಂತ್ರದ ಮೂಲಕ ಟೈಪಿಂಗ್ ಮಾಡುವುದು, ತಾಂತ್ರಿಕ ಸಹಾಯ ಒದಗಿಸುವುದು ಹಾಗೂ ಪ್ರಕಟಣೆಯ ಕಾರ್ಯಗಳನ್ನು ಸಂಯೋಜಿಸುವುದರಲ್ಲಿ ನಾನು ಭಾಗಿಯಾಗಿದ್ದೇನೆ.
ಈಗ ನನ್ನ ಲೇಖನ ಓದಿರಿ
ರಂಗಭೂಮಿ, ಸ್ನೇಹ ಮತ್ತು ಜೀವನದ ತತ್ತ್ವದ ಒಂದುಪ್ರಯಾಣ
ಬೆಳಕುಗಳು ನಿಧಾನವಾಗಿ ಕಡಿಮೆಯಾದವು. ಒಂದು ಕ್ಷಣಕ್ಕೆ ಆ ಆಡಿಯಟೋರಿಯಂ ಸಂಪೂರ್ಣ ಮೌನದಲ್ಲಿ ಮುಳುಗಿತು. ನಂತರ ಶೇಕ್ಸ್ಪಿಯರ್ ಅವರ ಶಾಶ್ವತ ಪದಗಳು ವೇದಿಕೆಯ ಮೇಲೆ ಪ್ರತಿಧ್ವನಿಸಿದವು. ಕೆಲವೇ ಕ್ಷಣಗಳಲ್ಲಿ ಪ್ರೇಕ್ಷಕರು ಮುಂದೆ ಜೂಕಿದರು. ಚತುರ ಸಂಭಾಷಣೆಗಳಿಗೆ ಅವರು ಮುದ್ದಾಗಿ ನಕ್ಕರು. ಹಾಸ್ಯ ಕ್ಷಣಗಳಲ್ಲಿ ಜೋರಾಗಿ ನಗಾಡಿದರು. ನಾಟಕೀಯ ಪ್ರವೇಶಗಳಿಗೆ ತಾಳಿಯೊಡ್ಡಿದರು. ಮತ್ತೆ ಎಲ್ಲಕ್ಕಿಂತ ಮುಖ್ಯವಾಗಿ ಅವರು ಕಥೆಯೊಂದಿಗೆ ಸಂಪರ್ಕ ಹೊಂದಿದರು. ಮರೆಯಲಾಗದ ಆರು ಸಂಜೆಗಳಲ್ಲಿ, Fulneck Dramatic Society ನಡೆಸಿಕೊಟ್ಟ ಶೇಕ್ಸ್ಪಿಯರ್ ಅವರ ಪ್ರಸಿದ್ಧ ಹಾಸ್ಯ ನಾಟಕ As You Like It ಮೂಲಕ Fulneck Theatre ಎಂಬ ಸಣ್ಣ ಎಪ್ಪತ್ತು ಆಸನಗಳರಂಗಮಂದಿರ ನಗು, ಚಪ್ಪಾಳೆ ಮತ್ತು ಭಾವನೆಗಳಿಂದ ಜೀವಂತವಾಯಿತು. ಪ್ರೇಕ್ಷಕರಿಗೆ ಅದು ಕೇವಲ ನಾಟಕ. ನನಗೆ ಅದು ಇನ್ನಷ್ಟು ಆಳವಾದ ಅನುಭವವಾಯಿತು. ಸಮುದಾಯ, ಸೃಜನಶೀಲತೆ ಮತ್ತು ಜೀವನದ ತತ್ತ್ವವನ್ನು ಅರಿಯುವ ಒಂದು ಪ್ರಯಾಣ. ಆ ಪ್ರಯಾಣದ ಎಲ್ಲೊಂದರಲ್ಲಿ, ಶೇಕ್ಸ್ಪಿಯರ್ “ಲಾರ್ಡ್ ಕೋಹ್ಲಿ”ಯನ್ನು ಭೇಟಿಯಾದರು!
ಬೆಟ್ಟದ ಮೇಲಿರುವ ಆತ್ಮ ಹೊಂದಿದ ರಂಗಮಂದಿರ
ಫುಲ್ನೇಕ್ ಗ್ರಾಮವನ್ನು ನೋಡುತ್ತಾ ಒಂದುಬೆಟ್ಟದ ಮೇಲ್ಮೈಯಲ್ಲಿ ಫುಲ್ನೇಕ್ ಥಿಯೇಟರ್ ಹೆಮ್ಮೆಯಿಂದ ನಿಂತಿದೆ.1740ರ ದಶಕದಲ್ಲಿMoravian Church ಸಹೋದರರು ಸ್ಥಾಪಿಸಿದ ಐತಿಹಾಸಿಕ ಧಾರ್ಮಿಕ ವಸತಿ ಅದು. ಅದರ ಎತ್ತರದ ಸ್ಥಳದಿಂದ, ಈ ರಂಗಮಂದಿರ ಹಸಿರು ಕಣಿವೆಗಳನ್ನು ನೋಡುವ ಸುಂದರ ದೃಶ್ಯವನ್ನು ಹೊಂದಿದೆ. ಇದು ಸುತ್ತಲಿನ ವೆಸ್ಟ್ ಯಾರ್ಕ್ಶೈರ್ನ ನಗರ ಮತ್ತು ಕೈಗಾರಿಕಾ ಪ್ರದೇಶಗಳಿಂದ ದೂರವಿರುವ ಶಾಂತ ಮತ್ತು ಸುಂದರ ವಾತಾವರಣವನ್ನು ಸೃಷ್ಟಿಸುತ್ತದೆ. ಬಹುಮಟ್ಟಿಗೆ ಇದು ಒಂದು ಅಡಗಿದ ಗ್ರಾಮೀಣ ರತ್ನ. ರಂಗಮಂದಿರದ ಒಳಗೆ ಒಂದು ಅಂತರಂಗದ ಎಪ್ಪತ್ತು ಆಸನಗಳ ಆಡಿಟೋರಿಯಂ ಇದೆ.
ಮೂಲ ವೇದಿಕೆ 1920ರ ದಶಕದಲ್ಲಿ ನಿರ್ಮಿಸಲಾಯಿತು. ನಂತರ 1950ರ ದಶಕದಲ್ಲಿ ಒಂದು ಹಳೆಯ ಗೋದಾಮಿನಿಂದ ತೆಗೆದುಕೊಂಡ ಮರವನ್ನು ಮರುಬಳಸಿ ಅದನ್ನು ಪುನರ್ನಿರ್ಮಿಸಲಾಯಿತು. ಸಮುದಾಯ ರಂಗಭೂಮಿಯ ಆತ್ಮವನ್ನು ಪ್ರತಿಬಿಂಬಿಸುವ ಒಂದು ಕಾವ್ಯಮಯ ವಿವರ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಈ ಸಣ್ಣ ವೇದಿಕೆಯಲ್ಲಿ ಸಾಹಿತ್ಯದ ಮಹಾನ್ ಲೇಖಕರ ಕೃತಿಗಳು ಪ್ರದರ್ಶಿಸಲ್ಪಟ್ಟಿವೆ. Geoffrey Chaucer, Anton Chekhov, Henrik Ibsen, ಮತ್ತುWilliam Shakespeare ಅವರ ನಾಟಕಗಳು ಇಲ್ಲಿ ಜೀವಂತವಾಗಿವೆ. ನೂರಕ್ಕೂ ಹೆಚ್ಚು ವರ್ಷಗಳಿಂದ ಫುಲ್ನೇಕ್ ಡ್ರಾಮಾಟಿಕ್ ಸೊಸೈಟಿ ಈ ವಿಶೇಷ ಯಾರ್ಕ್ಶೈರ್ ಪ್ರದೇಶದಲ್ಲಿ ರಂಗಭೂಮಿಯನ್ನು ಜೀವಂತವಾಗಿರಿಸಿದೆ.
ವೇದಿಕೆಯನ್ನು ಜೀವಂತವಾಗಿಡುವ ವ್ಯಕ್ತಿ ಈ ಸೃಜನಾತ್ಮಕ ಪರಂಪರೆಯ ಮಧ್ಯಭಾಗದಲ್ಲಿ ನಿರ್ದೇಶಕ ಡೇವ್ ರಾಬಿನ್ಸ್ (Dave Robbins) ಇದ್ದಾರೆ. 1990ರ ದಶಕದಿಂದ ಅವರು ಈ ರಂಗಮಂದಿರದ ಪ್ರಮುಖ ಸೃಜನಾತ್ಮಕ ನಿರ್ದೇಶಕರಾಗಿದ್ದಾರೆ. ಆದರೆ ಅವರ ಸಂಪರ್ಕ ಇನ್ನೂ ಹಳೆಯದು. 1968ರಲ್ಲಿ ಅವರು ಮೊದಲ ಬಾರಿ ವೇದಿಕೆಗೆ ಬಂದರು, A Christmas Carol ನಾಟಕದಲ್ಲಿ. ಈ ಕಥೆಯನ್ನು ಬರೆದಿದ್ದವರು Charles Dickens. ರಾಬಿನ್ಸ್ ತಮ್ಮ ರಂಗಭೂಮಿ ಪ್ರವೇಶವನ್ನು ನೆನಪಿಸಿಕೊಂಡಾಗ ಅದು ಸಹಜವಾಗಿ ನಡೆದದ್ದೆಂದು ಹೇಳುತ್ತಾರೆ, ಅವರ ಅತ್ಯುತ್ತಮ ಸ್ನೇಹಿತ ಡಿಕ್ ಪೋರ್ಟರ್. ಇವರ ತಂದೆ ಪೀಟರ್ ಪೋರ್ಟರ್ ಆ ಸಮಯದಲ್ಲಿ ಫುಲ್ನೇಕ್ನ ಮುಖ್ಯ ನಿರ್ದೇಶಕರಾಗಿದ್ದರು. ಇವರಿಬ್ಬರ ತಾಯಿಯರೂ ರಂಗಭೂಮಿಯಲ್ಲಿ ಭಾಗಿಯಾಗಿದ್ದರು. “ನನಗೆ ಯಾವುದೇ ಅಧಿಕೃತ ರಂಗಭೂಮಿ ತರಬೇತಿ ಇಲ್ಲ,” ಎಂದು ರಾಬಿನ್ಸ್ ಹೇಳುತ್ತಾರೆ. “ಇತರರನ್ನು ನೋಡುತ್ತಾ ಮತ್ತು ಏನು ಕೆಲಸ ಮಾಡುತ್ತದೆ ಎಂಬುದನ್ನು ನನ್ನ ಅಂತರಂಗದಿಂದ ನಂಬುತ್ತಾ ನಾನು ಕಲಿತೆ.” ದಶಕಗಳ ಕಾಲದಲ್ಲಿ ಅವರು ಐವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಆದರೆ ಅವರಿಗೆ ಅತ್ಯಂತ ಸಂತೋಷ ನೀಡುವುದು ನಾಟಕಗಳ ಸಂಖ್ಯೆ ಅಲ್ಲ, ಜನರು.ಇತ್ತೀಚಿನ ವರ್ಷಗಳಲ್ಲಿ ಯುವಪೀಳಿಗೆಯ ಶಕ್ತಿ ಫುಲ್ನೇಕ್ ಡ್ರಾಮಾಟಿಕ್ ಸೊಸೈಟಿಯನ್ನು ಇನ್ನಷ್ಟು ಜೀವಂತಗೊಳಿಸಿದೆ. ಸೋಶಿಯಲ್ ಮೀಡಿಯಾ ಮತ್ತು ಸಮುದಾಯಸಂಪರ್ಕದ ಮೂಲಕ ಹೊಸ ನಟರು ಸೇರಿದ್ದಾರೆ. ಇಂದು ಈ ರಂಗಮಂದಿರ ಇನ್ನಷ್ಟು ಚೈತನ್ಯದಿಂದ ತುಂಬಿದೆ. ರಾಬಿನ್ಸ್ ಕೆಲವೊಮ್ಮೆ ಶೇಕ್ಸ್ಪಿಯರ್ನ ಪ್ರಸಿದ್ಧ ಭಾಷಣ “Seven Ages of Man” ಬಗ್ಗೆ ಚಿಂತಿಸುತ್ತಾರೆ. “ಆ ವಿಚಿತ್ರ ಜೀವನ ಕಥೆಯಲ್ಲಿ...” ಅವರು ನಗುತ್ತಾರೆ, “ಬಹುಶಃ ನಾನು ಸಹ ಕೊನೆಯ ಅಧ್ಯಾಯದತ್ತ ಸಾಗುತ್ತಿದ್ದೇನೆ.” ಎನ್ನುತ್ತಾರೆ. “ಆದರೆ ಕಾಗದದಲ್ಲಿರುವ ಪದಗಳನ್ನು ಮನರಂಜನೆಯ ಕಥೆಯಾಗಿ ರೂಪಿಸುವ ಸೃಜನಾತ್ಮಕ ಸವಾಲು ಇನ್ನೂ ನನ್ನನ್ನು ಸೆಳೆಯುತ್ತದೆ.” ನಂತರ ಅವರು ಈ ರಂಗಮಂದಿರದ ಆತ್ಮವನ್ನು ವಿವರಿಸುವ ಒಂದುಮಾತು ಹೇಳುತ್ತಾರೆ: “ನಾವೆಲ್ಲ ಇಲ್ಲಿ ಒಂದೇ ಕುಟುಂಬ.” ಎಂದು ಮುಗಿಸುತ್ತಾರೆ
ನನ್ನ ಅನಿರೀಕ್ಷಿತ ಪ್ರವೇಶ ಈ ಐತಿಹಾಸಿಕ ರಂಗಮಂದಿರದೊಳಗೆ ನನ್ನ ಪ್ರಯಾಣ ಸಂಪೂರ್ಣವಾಗಿ ಅನಿರೀಕ್ಷಿತವಾಗಿ ಆರಂಭವಾಯಿತು. ನನಗೆ ಒಂದು ಪುಸ್ತಕ ಓದುವ ಕಾರ್ಯಕ್ರಮಕ್ಕೆ ಆಹ್ವಾನ ಬಂದಿತು. ಸಾಹಿತ್ಯದ ಮೇಲಿನ ಕುತೂಹಲದಿಂದ ನಾನು ಹೋದೆ; ಮತ್ತೆಮತ್ತೆ ಹೋದೆ! ನನಗೇ ತಿಳಿದಿರಲಿಲ್ಲ ಆ ಓದುವ ಕಾರ್ಯಕ್ರಮಗಳು ನಿಜವಾಗಿ ಮೌನವಾಗಿ ನಡೆಯುತ್ತಿದ್ದ ಆಡಿಷನ್ಗಳಾಗಿದ್ದವು ಎಂದು. ಎರಡು ವಾರಗಳ ನಂತರ ನನ್ನ ಫೋನ್ ಮೊಳಗಿತು. ಅದು ಡೇವ್ ರಾಬಿನ್ಸ್. “ನಾನು ಸಾಮಾನ್ಯವಾಗಿ ನಮ್ಮಕಾರ್ಯಾಗಾರಗಳಿಗೆ ಬರುವವರನ್ನೇ ಆಯ್ಕೆ ಮಾಡುತ್ತೇನೆ,” ಅವರು ಹೇಳಿದರು. “ಆದರೆ ನಾನು ನಿಮ್ಮನ್ನು ನಂಬಿದ್ದೇನೆ. ನಿಮ್ಮ ಇಂಗ್ಲಿಷ್ ಉಚ್ಚಾರಣೆ ಉತ್ತಮವಾಗಿದೆ. ನಿಮಗಾಗಿ ಒಂದು ಪಾತ್ರವಿದೆ!” ಹೀಗೆ ನನ್ನಜೀವನದ ಹೊಸ ಅಧ್ಯಾಯಕ್ಕೆ ಪರದೆ ತೆರೆಯಿತು. ನನಗೆ ಕೊಟ್ಟ ಪಾತ್ರ ಹಿಂದಿನ ಸಚಿವ ಸಂಪುಟದ ಸದಸ್ಯನಾಗಿದ್ದ ಸ್ಕಾಟ್ಲಂಡಿನ ಒಬ್ಬ ಲಾರ್ಡ್.
“ಲಾರ್ಡ್ ಕೋಹ್ಲಿ” ಹುಟ್ಟಿದ ಕ್ಷಣ ಒಂದು ರಿಹರ್ಸಲ್ ಸಮಯದಲ್ಲಿ ಡೇವ್ ಹಠಾತ್ ಕೇಳಿದರು: ನಿಮ್ಮ ಮೆಚ್ಚಿನ ಕ್ರಿಕೆಟಿಗ ಯಾರು?” ನಾನು ಕ್ಷಣವೂ ತಡ ಮಾಡದೆ ಉತ್ತರಿಸಿದೆ: ವಿರಾಟ್ ಕೋಹ್ಲಿ ಅಂದೆ. ಡೇವ್ ನಕ್ಕರು.“ಹಾಗಾದರೆ ನೀನು ಲಾರ್ಡ್ ಕೋಹ್ಲಿ.” ಆ ಕ್ಷಣದಿಂದ ಎಲ್ಲರೂ ನನ್ನನ್ನು “ಲಾರ್ಡ್ ಕೋಹ್ಲಿ” ಎಂದು ಕರೆಯಲು ಪ್ರಾರಂಭಿಸಿದರು. ನನ್ನ ಪಾತ್ರ ಸ್ಕಾಟ್ಲ್ಯಾಂಡ್ ಒಂದು ಚತುರ ಸಂಸತ್ತಿನ ಮಾಜಿ ಕ್ಯಾಬಿನೆಟ್ ಸದಸ್ಯನ ಪಾತ್ರ. ಅದು ಜೀವಂತ ಸಂಭಾಷಣೆ ಮತ್ತುಸ್ಮರಣೀಯ ದೃಶ್ಯಗಳನ್ನು ಹೊಂದಿತ್ತು.
ಕುಟುಂಬವಾಗಿ ಮಾರ್ಪಟ್ಟ ಕಲಾವಿದರು ಈ ನಾಟಕದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಇಪ್ಪತ್ತೆರಡರ ವಯಸ್ಸಿನ ಯುವಕರು ಮತ್ತು ಎಪ್ಪತ್ತಕ್ಕೂ ಹೆಚ್ಚುವಯಸ್ಸಿನ ಕಲಾವಿದರು ಒಂದೇ ವೇದಿಕೆಯಲ್ಲಿ ನಟಿಸಿದರು. ರೋಸಲಿಂಡ್, ಒರ್ಲಾಂಡೋ, ಸೆಲಿಯಾ, ಟಚ್ಸ್ಟೋನ್ ಮತ್ತು ಜಾಕ್ಸ್ ಶೇಕ್ಸ್ಪಿಯರ್ನ ಲೋಕವನ್ನು ಜೀವಂತಗೊಳಿಸಿದರು. ಅವರೊಂದಿಗೆ ಡ್ಯೂಕ್ ಸೀನಿಯರ್, ಡ್ಯೂಕ್ ಫ್ರೆಡರಿಕ್, ಒಲಿವರ್, ಸಿಲ್ವಿಯಸ್, ಫೀಬಿ, ಕೊರಿನ್, ಆಡ್ರಿ, ವಿಲಿಯಂ ಮತ್ತು ಇನ್ನೂ ಹಲವರು ಸೇರಿದ್ದರು. ಪ್ರತಿ ಕಲಾವಿದ ತನ್ನದೇ ವ್ಯಕ್ತಿತ್ವವನ್ನು ವೇದಿಕೆಗೆ ತಂದನು. ಕೆಲವು ವಾರಗಳ ರಿಹರ್ಸಲ್ ನಂತರ ಈ ತಂಡ ನಿಧಾನವಾಗಿ ಒಂದು ಕುಟುಂಬವಾಯಿತು. ವೇದಿಕೆಯನ್ನು ಮೀರಿದ ರಿಹರ್ಸಲ್ಗಳು. ಸುಮಾರು ಎರಡು ತಿಂಗಳು ನಾವು ಒಟ್ಟಿಗೆ ಅಭ್ಯಾಸ ಮಾಡಿದೆವು. ಮೊದಲಿಗೆ ನಾನು ಸ್ವಲ್ಪ ಹಿಂಜರಿತ ಅನುಭವಿಸಿದೆ.ನಾನೊಬ್ಬನೇ ತಂಡದಲ್ಲಿದ್ದ ಏಕೈಕ ಭಾರತೀಯ ನಟ. ಆದರೆ ಆ ಹಿಂಜರಿಕೆ ಬೇಗನೆ ಮಾಯವಾಯಿತು. ಎಲ್ಲರೂ ನನ್ನನ್ನು ಹೃದಯಪೂರ್ವಕವಾಗಿ ಸ್ವಾಗತಿಸಿದರು. ಡೇವ್ ರಾಬಿನ್ಸ್ ಪಾತ್ರಗಳನ್ನು ಅನ್ವೇಷಿಸಲು ಸೃಜನಾತ್ಮಕ ಸ್ವಾತಂತ್ರ್ಯವನ್ನು ಕೊಟ್ಟು ಉತ್ತೇಜಿಸಿದರು. ರಿಹರ್ಸಲ್ ನಂತರ ನಾವು ಹತ್ತಿರದ ಪಬ್ಗೆ ಹೋಗುತ್ತಿದ್ದೆವು. ಆಸಂಜೆಗಳು ಅದ್ಭುತವಾಗಿದ್ದವು. ಶೇಕ್ಸ್ಪಿಯರ್ನ ಭಾಷೆ, ಬೆಳಕು, ವಿನ್ಯಾಸ, ವೇಷಭೂಷಣ, ಸಂಗೀತ ಮತ್ತು ಪಾತ್ರಗಳ ಬಗ್ಗೆ ನಾವು ಸದಾ ಚರ್ಚಿಸುತ್ತಿದ್ದೆವು. ಕೆಲವೊಮ್ಮೆ ಚರ್ಚೆಗಳು ಗಂಭೀರವಾಗುತ್ತವೆ. ಕೆಲವೊಮ್ಮೆ ನಗುವಿನಲ್ಲಿ ಕೊನೆಗೊಳ್ಳುತ್ತವೆ. ಆದರೆ ಪ್ರತಿ ಸಾರಿ ನಮ್ಮ ಬಂಧ ಇನ್ನಷ್ಟು ಗಟ್ಟಿಯಾಗುತ್ತಿತ್ತು.
ಜೀವನದ ಕನ್ನಡಿಯಂತೆ: ಶೇಕ್ಸ್ಪಿಯರ್ As You Like It ನಾಟಕದ ಅತ್ಯಂತ ಪ್ರಸಿದ್ಧ ಭಾಗಗಳಲ್ಲಿ ಒಂದು “Seven Ages of Man” ಭಾಷಣ. All the world’s a stage, And all the men and women merely players; They have their exits and their entrances; And one man in his time plays many parts. ಈ ಸಾಲುಗಳಲ್ಲಿ ಶೇಕ್ಸ್ಪಿಯರ್ ಜೀವನದ ತತ್ತ್ವವನ್ನು ಹಿಡಿದಿಡುತ್ತಾರೆ. ಮಾನವನ ಜೀವನದ ಏಳು ಹಂತಗಳನ್ನು ಅವರು ವಿವರಿಸುತ್ತಾರೆ. ಈ ವಿಚಾರವನ್ನು ಸ್ವಲ್ಪ ಇನ್ನಷ್ಟು ಆಳವಾಗಿ ನೋಡೋಣ
1. ಮಗು (Infant ) ಜೀವನದ ಆರಂಭ ಸಂಪೂರ್ಣ ಅವಲಂಬನೆ.ಅಳುವು, ನಗು, ಚಲನೆ ಎಲ್ಲವೂ ಸಹಜ.ಇಲ್ಲಿ ನಿರಪರಾಧಿತ್ವವಿದೆ, ಆದರೆ ಸ್ವತಂತ್ರತೆ ಇಲ್ಲ.ಇದು ಜೀವನದ “ಆರಂಭದ ಸಂಗೀತ” (Beginning of Life’s Music). 2. ಶಾಲೆಗೆ ಹೋಗಲು ಇಷ್ಟವಿಲ್ಲದ ಬಾಲಕ (Schoolboy) “Creeping like snail unwillingly to school.” ಇಲ್ಲಿ ಶೇಕ್ಸ್ಪಿಯರ್ ಬಾಲ್ಯದ ಅಜ್ಞಾನ ಮತ್ತು ಒತ್ತಡವನ್ನು ಹಿಡಿದಿಡುತ್ತಾರೆ. ಕರ್ತವ್ಯ ಮತ್ತು ಸ್ವಾತಂತ್ರ್ಯದ ನಡುವೆ ಮೊದಲ ಸಂಘರ್ಷ. 3. ಪ್ರೇಮಿಯ ಹಂತ (Lover); ಭಾವನೆಗಳ ಸ್ಫೋಟ. ಪ್ರೇಮ, ಕಾವ್ಯ, ಕನಸುಗಳು.ಇಲ್ಲಿ ತರ್ಕಕ್ಕಿಂತ ಹೃದಯವೇ ಮುಖ್ಯ. ಈ ಹಂತದಲ್ಲಿ ಜೀವನ ಒಂದು ಕಾವ್ಯವಾಗುತ್ತದೆ. 4. ಸೈನಿಕ (Soldier)ಆತ್ಮಗೌರವ, ಧೈರ್ಯ, ಮತ್ತು ಹೆಮ್ಮೆ.“Seeking the bubble reputation even in the cannon’s mouth”. ಹೆಸರು, ಮಾನ, ಗುರುತಿಗಾಗಿ ಹೋರಾಟ.ಕೆಲವೊಮ್ಮೆ ಅಪಾಯಕ್ಕೂ ಸಿದ್ಧತೆ (Fight for Identity and Recognition). 5. ನ್ಯಾಯಾಧೀಶ (Justice)ಇದು ಪರಿಪಕ್ವತೆ. ಅನುಭವ, ಜ್ಞಾನ, ಮತ್ತು ಸಮತೋಲನ. ಜೀವನವನ್ನು ಅರ್ಥಮಾಡಿಕೊಂಡಿರುವ ಹಂತ (Stage of Wisdom and Balance).ಇಲ್ಲಿ ವ್ಯಕ್ತಿ ಇತರರಿಗೆ ಮಾರ್ಗದರ್ಶನ ನೀಡುವವನಾಗುತ್ತಾನೆ. 6. ವೃದ್ಧ (Pantaloon) ಶಕ್ತಿ ನಿಧಾನವಾಗಿ ಕಡಿಮೆಯಾಗುತ್ತದೆ. ಶರೀರ ಬದಲಾಗುತ್ತದೆ. ಆದರೆ ಇಲ್ಲಿ ಒಂದು ಸೂಕ್ಷ್ಮ ಹಾಸ್ಯವೂ ಇದೆ ಜೀವನ ತನ್ನ ವಲಯವನ್ನು ಮುಚ್ಚುತ್ತಿದೆ. 7. ಅಂತಿಮ ಹಂತ (Second Childhood) “Sans teeth, sans eyes, sans taste, sans everything: ಮತ್ತೆ ಮಗುತನ — ಆದರೆ ಈ ಬಾರಿ ಕ್ಷೀಣತೆ ಜೊತೆಗೆ .ಇದು ಜೀವನದ ಮೌನ ಸಮಾಪ್ತಿ Sans teeth, sans eyes, sans taste, sans everything.ಆ ವೇದಿಕೆಯಲ್ಲಿ ನಿಂತು ಆ ಪದಗಳು ಪ್ರತಿಧ್ವನಿಸಿದಾಗ ನನಗೆ ಒಂದುಆಳವಾದ ಭಾವನೆ ಉಂಟಾಯಿತು.
ರಂಗಮಂದಿರವು ಕೇವಲ ವೇದಿಕೆಯಾಗಿ ಇರಲಿಲ್ಲ. ಅದು ಜೀವನದ ಕನ್ನಡಿಯಾಯಿತು.
ಆರು ರಾತ್ರಿಗಳ ನಾಟಕದ ಮಾಯೆ ನಾಟಕವು ಆರು ಪ್ರದರ್ಶನಗಳವರೆಗೆ (Feb 28-March 7, 2026) ನಡೆಯಿತು. ಪ್ರತಿಪ್ರದರ್ಶನವೂ ಸಂಪೂರ್ಣವಾಗಿ ಭರ್ತಿಯಾಗಿತ್ತು. ಕೆಲವರು ಟಿಕೆಟ್ಗಾಗಿ ಕಾಯಬೇಕಾಯಿತು. ಆ ಆರು ಸಂಜೆಗಳಲ್ಲಿ ಫುಲ್ನೇಕ್ ರಂಗಮಂದಿರ ನಿಜವಾಗಿಯೂ ಮಾಯೆಯಂತೆ ಕಾಣಿಸಿತು
ಎರಡು ರಂಗಭೂಮಿ ಲೋಕಗಳ ನಡುವಿನ ಸೇತುವೆ ಈ ಅನುಭವ ನನಗೆ ಬೆಂಗಳೂರಿನ Ranga Shankara ರಂಗಮಂದಿರವನ್ನು ನೆನಪಿಸಿತು. ಇದು Arundhati Nag ಅವರು Shankar Nag ಅವರ ಸ್ಮರಣಾರ್ಥ ಸ್ಥಾಪಿಸಿದ ಪ್ರಸಿದ್ಧ ರಂಗಭೂಮಿ. ಸಾವಿರಾರು ಕಿಲೋಮೀಟರ್ ದೂರ ಇದ್ದರೂ, ಫುಲ್ನೇಕ್ ಮತ್ತು ರಂಗ ಶಂಕರ ಒಂದೇ ಆತ್ಮವನ್ನು ಹಂಚಿಕೊಂಡಿವೆ. ಎರಡೂ ಸಮುದಾಯ ರಂಗಭೂಮಿಗಳು. ಎರಡೂ ಹೊಸಬರನ್ನು ಸ್ವಾಗತಿಸುತ್ತವೆ. ಸಾಮಾನ್ಯ ಜನರನ್ನು ಕಥೆ ಹೇಳುವವರಾಗಿ ರೂಪಿಸುತ್ತವೆ.
ಅಂತಿಮ ನಮಸ್ಕಾರ ಈ ಅನುಭವ ಕೇವಲ ಒಂದು ನಾಟಕದಲ್ಲಿ ನಟಿಸಿದುದಕ್ಕಿಂತ ಬಹಳಹೆಚ್ಚು. ಇದು ಧೈರ್ಯದ ಬಗ್ಗೆ, ಸ್ನೇಹದ ಬಗ್ಗೆ, ಸೃಜನಾತ್ಮಕತೆಯ ಬಗ್ಗೆ. ಒಳಗೊಳ್ಳುವಿಕೆಯ ಬಗ್ಗೆ. ಶೇಕ್ಸ್ಪಿಯರ್ ಸರಿಯಾಗಿ ಹೇಳಿದ್ದರು: ಈಸಂಪೂರ್ಣ ಜಗತ್ತೇ ಒಂದು ವೇದಿಕೆ. ಮತ್ತು ನನ್ನ ಜೀವನದ ಒಂದುಮರೆಯಲಾಗದ ಅಧ್ಯಾಯದಲ್ಲಿ, ಆ ವೇದಿಕೆಯಲ್ಲಿ ನಿಲ್ಲುವ ಗೌರವ ನನಗೆ ದೊರೆಯಿತು ಲಾರ್ಡ್ ಕೋಹ್ಲಿಯಾಗಿ!
-- ಶ್ರೀಹರ್ಷ ನೀರಗುಂದ ನಾಗರಾಜ್
ಪಾತ್ರವರ್ಗ (ಪ್ರವೇಶ ಕ್ರಮದಲ್ಲಿ) ಮ್ಯಾಡಮ್ ಲೆ ಬ್ಯೂ (ಹಿರಿಯ ಸಿವಿಲ್ ಸೇವಕ) — ಸ್ಲಾವಿಕಾರಾಂಕೋವಿಕ್ ಒರ್ಲಾಂಡೊ ಡೆ ಬೋಯ್ಸ್ — ಜಾಕ್ ಮಾಸ್ಸಿ ಆಡಮ್ (ಒಲಿವರ್ ಡೆ ಬೋಯ್ಸ್ಗೆ ಸೇವಕ) — ಡಿಕ್ ಪೋರ್ಟರ್ ಒಲಿವರ್ ಡೆ ಬೋಯ್ಸ್ (ಒರ್ಲಾಂಡೊನ ಸಹೋದರ) — ಕ್ರಿಸ್ಲಾಂಗ್ ಡೆನಿಸ್ (ಫ್ರೆಡಾ ಅವರ ಬಾಡಿಗಾರ್ಡ್ಗಳಲ್ಲಿ ಒಬ್ಬರು) — ಜಾರ್ಜಿಯಾನಾ ಗ್ರಾಂಟ್ ಚಾರ್ಲ್ಸ್ (ಫ್ರೆಡಾ ಅವರ ಬಾಡಿಗಾರ್ಡ್ ಹಾಗೂ ಪ್ರಸಿದ್ಧ ಕುಸ್ತಿ ಪಟು) — ಜೋ ಬ್ರಾಹಮ್ ಸಿಲಿಯಾ (ಡಚೆಸ್ ಫ್ರೆಡಾ ಅವರ ಮಗಳು) — ಅಲೆಕ್ಸ್ ವಾಲಿಸ್ ರೊಸಾಲಿಂಡ್ (ಫ್ರೆಡಾ ಅವರ ಸೋದರ ಮಗಳು / ಸಿಲಿಯಾ ಅವರಕಜಿನ್) — ಕ್ಲೇರ್ ಆಂಡ್ರ್ಯೂಸ್ ಟಚ್ಸ್ಟೋನ್ (ಫ್ರೆಡಾ ಅವರ ಅರಮನೆಯ ಹಾಸ್ಯಗಾರ) — ಗ್ರೆಗ್ಆಡಮ್ಸ್ ಡಚೆಸ್ ಫ್ರೆಡಾ (ಹೊಸ ‘ಡಚೆಸ್’) — ಕ್ರಿಸ್ ರಾಬಿನ್ಸ್ ಎಲಿನರ್ (ಹಳೆಯ, ಈಗ ಅಧಿಕಾರ ಕಳೆದುಕೊಂಡ ‘ಡಚೆಸ್’) —ಕ್ರಿಸ್ ಪೋರ್ಟರ್ ಅಮಿಯನ್ಸ್ (ಹಿಂದಿನ ಸಚಿವ ಸಂಪುಟ ಸದಸ್ಯ) — ಮಾಗ್ದಾ ಲೈಡನ್ ಲಾರ್ಡ್ ಕೋಹ್ಲಿ (ಹಿಂದಿನ ಸಚಿವ ಸಂಪುಟ ಸದಸ್ಯ) — ಶ್ರೀಹರ್ಷ ನೀರಗುಂದ ನಾಗರಾಜ್ ಜಾಕ್ವೀಸ್ (ವಿಷಾದಭರಿತ ಸ್ವಭಾವದ ಮಾಜಿ ಸ್ಕಾಟಿಷ್ ಸಂಸದ) — ಡೊಮಿನಿಕ್ ಆಡಮ್ಸ್ ಸಿಲ್ವಿಯಸ್ (ಫೀಬಿಯನ್ನು ಪ್ರೀತಿಸುವ ರೈತ) — ಚಾರ್ಲಿಕ್ರೋಝಿಯರ್ ಕೊರಿನ್ (ಸಿಲ್ವಿಯಸ್ನ ಕುರಿಗಾಹಿ) — ಪಾಲ್ ಕಲ್ಲಿಂಗ್ಫೋರ್ಡ್ ಆಡ್ರಿ (ಚಂಚಲ ಸ್ವಭಾವದ ಕುರಿಗಾಹಿ) — ಹೆಲೆನ್ ಚೆಸ್ಟರ್ಮನ್ ಆಡು (ಧ್ವನಿ ನೀಡಿದವರು) — ಕ್ಲೇರ್ ಆಂಡ್ರ್ಯೂಸ್ ರೆವ್. ಓಲಿವರ್ ಮಾರ್ಟೆಕ್ಸ್ಟ್ (ಅಮೆರಿಕನ್ ಎವಾಂಜೆಲಿಕಲ್ಉಪದೇಶಕ) — ಮೈಕ್ ಹೇಯ್ಸ್ ಫೀಬಿ (ಆಕರ್ಷಕ ಕುರಿಗಾಹಿ, ಸಿಲ್ವಿಯಸ್ನ್ನು ಪ್ರೀತಿಸದವಳು) — ಏಮಿ ವುಡ್ರಫ್ ವಿಲಿಯಂ (ಕಾಡಿನಲ್ಲಿ ಹುಟ್ಟಿದ ಸರಳ ಯುವಕ) — ವಿಲಿಯಂ ಲಿಂಡ್ಲಿ ಆರ್ಡನ್ ಆರ್ಮ್ಸ್ ಪಬ್ನ ಮಾಲೀಕ — ವಿಲಿಯಂ ಲಿಂಡ್ಲಿ ಹೈಮನ್ (ದೈವಿಕ ಪ್ರಯಾಣಿಕ) — ಪಾಲ್ ಕ್ಲಾರ್ಕ್
ಲೇಖನ ಮತ್ತು ಚಿತ್ರಗಳು: ಶ್ರೀಹರ್ಷ ನೀರಗುಂದ ನಾಗರಾಜ್
(ಉದಯವಾಣಿಯNRI ಆವೃತ್ತಿಯಲ್ಲಿ ಇದರ ಸಂಕ್ಷಿಪ್ತ ರೂಪ ಈ ಮೊದಲು ಪ್ರಕಟವಾಗಿತ್ತು.)