ಯುಕೆ ದ ಜಲಮಾರ್ಗಗಳಲ್ಲಿ ಹಾಸ್ಯದ ಹೊನಲು -ಶ್ರೀವತ್ಸ ದೇಸಾಯಿ

ಶೀರ್ಷಿಕೆಯನ್ನೋದಿದಾಗ ನಿಮ್ಮ ತಲೆಯಲ್ಲಿ ಅನೇಕ ಅಲೆಗಳ ತಾಕಲಾಟವಾಗುತ್ತಿರಬೇಕು! ಇದೇನು ಪ್ರವಾಸ ಕಥನವೋ, ಇತಿಹಾಸವೋ, ಹರಟೆಯೋ, ಪುಸ್ತಕ ವಿಮರ್ಶೆಯೋ, ನೋಸ್ಟಾಲ್ಜಿಯಾವೋ - ಅಂತ. ಇವು ಯಾವೂ ಪ್ರತ್ಯೇಕವಾಗಿರದೇ ಅವೆಲ್ಲವುಗಳ ಸಂಗಮವಿದೆ ಇಲ್ಲಿ. ಅಂತೆಯೇ ಅವೆಲ್ಲವನ್ನೂ ಒಂದೇ ಉಸಿರಿನಲ್ಲಿ ಓದುವ, ಅಗಸ್ತ್ಯನಂತೆ ಕುಡಿದು ನುಂಗುವ ಅವಶ್ಯಕತೆಯಿಲ್ಲ. ಕಂತು ಕಂತಾಗಿ ಓದಲೂ ಬಹುದು, ಇಂಗ್ಲೆಂಡಿನಕಾಲುವೆಗಳಲ್ಲಿ ಸಂಚರಿಸುವ ಸಪೂರ ದೋಣಿಗಳು (ನ್ಯಾರೋ ಬೋಟ್) ಜಲಬಂಧಗಳಲ್ಲಿ (locks) ನಿಂತು ನಿಂತು ಏಣಿಯೇರಿ ಮುಂದೆ ಸಾಗಿದಂತೆ!
ಎಲ್ಲಿಂದ ಶುರು ಮಾಡಲಿ? ನದಿಯಂತೆ ಉಗಮದಿಂದಲೇ ಪ್ರಾರಂಭಿಸುವೆ. ಕಳೆದ ವಾರದ ಅನಿವಾಸಿ ಸಂಚಿಕೆಯಲ್ಲಿ ಅಮಿತಾ ಅವರು ವರ್ಣಿಸಿದಂತೆ, ಯುಕೆ ಕನ್ನಡ ಬಳಗದ ಯುಗಾದಿ ೨೦೨೪ರ ಸಂಭ್ರಮ ಲೆಸ್ಟರ್ ನಗರದಲ್ಲಿ ನೆರವೇರಿತು. ಹಿಂದಿನ ದಿನವೇ ನಾವಿಬ್ಬರೂ ಲೆಸ್ಟರ್ ತಲುಪಿದ್ದೆವು. ರಾಜಶ್ರೀ ಮತ್ತು ವೀರೇಶ ಅವರ ಒಲವಿನ ಆಮಂತ್ರಣದ ಮೇರೆಗೆ ಮಧ್ಯಾಹ್ನದ ಸ್ವಾದಿಷ್ಠ ಭೋಜನವನ್ನು ಅವರ ಅತಿಥ್ಯದಲ್ಲಿ ಸವಿದು ಅನತಿ ದೂರದಲ್ಲಿದ್ದ ಹತ್ತು ಲಾಕ್ಸ್(locks) ಗಳ ಏಣಿಗೆ ಪ್ರಸಿದ್ಧವಾದ ಫಾಕ್ಸ್ಟನ್  ಕಾಲುವೆಯನ್ನು ನೋಡಲು ಹೊರಟೆವು. ಅದು ಗ್ರಾಂಡ್ ಯೂನಿಯನ್ ಕೆನಾಲಿನ ಲೆಸ್ಟರ್ ಭಾಗ. ಈ ಮೊದಲು ಇಂಗ್ಲೆಂಡಿನ ಆದ್ಯಂತ ಪಸರಿಸಿರುವ ೭೦೦೦ ಮೈಲುದ್ದದ್ದ ಕಾಲುವೆಗಳ ಜಾಲದ ಪರಿಚವಿರದವರಿಗೆ ಅದೊಂದು ಅವಿಸ್ಮರಣೀಯ ದೃಶ್ಯ ಮತ್ತು ಅನುಭವ. ಈ ಕಾಲುವೆಗಳು ಏಳರಿಂದ ಹತ್ತು ಮೀಟರ್ ಅಗಲವಿರುತ್ತವೆ. ಅದಕ್ಕೇ ಸುಮಾರು ಏಳು ಅಡಿ ಅಗಲ ಮತ್ತು ಎಪ್ಪತ್ತು ಅಡಿಗಳ ಈ ಸಪೂರ ನ್ಯಾರೋ ಬೋಟ್ ಗಳಿಗಷ್ಟೇ ಇಲ್ಲಿ ಸಂಚರಿಸಲು ಅನುಮತಿಯಿದೆ. ಬಣ್ಣ ಬಣ್ಣದ ಸುಂದರ ದೋಣಿಗಳೊಳಗೆ ವಾಸಿಸಲು ಸಹ ಬರುವಂಥ ಅನೇಕ ಸೌಕರ್ಯಗಳನ್ನೊಳಗೊಂಡವವು ಇವು. ಛತ್ತಿನ ಮೇಲೆ ಪುಟ್ಟ ಪುಟ್ಟ ಹೂವಿನ ತೊಟ್ಟಿಗಳನ್ನು ಹೊತ್ತು ಸಾಗುತ್ತ ಮಧ್ಯದಲ್ಲಿ ಸಿಗುವ ಲಾಕ್ ಗಳಲ್ಲಿ ಒಂದರ ನಂತರ ಒಂದಾಗಿ ೭೫ ಅಡಿ ಏರಿ ಮಾರ್ಕೆಟ್ ಹಾರ್ಬರಾದತ್ತ ಸಾಗುವದನ್ನು ನೋಡಿದೆವು. ಇಕ್ಕೆಲಗಳಲ್ಲಿ ಜಲಮಾರ್ಗಗಳನ್ನು ಸುಸ್ಥಿತಿಯಲ್ಲು ಕಾಪಾಡುವ ಲಾಕ್ ಕೀಪರ್‌ಗಳ  ಪುಟ್ಟ ಪುಟ್ಟ ಮನೆಗಳು, ಪಕ್ಕದಲ್ಲೇ ವಿಹಾರಕ್ಕೆ ಬಂದವರ ತೃಷೆ ತಣಿಸುವ ಇನ್ ಅಥವಾ ಪಬ್; ಹಿಂದಿನ ಕಾಲದಲ್ಲಿ ದೋಣಿಗಳನ್ನು ಎಳೆಯುತ್ತಿದ್ದ ಜನರ ಅಥವಾ ಕುದೆರೆಗಳಿಗಾಗಿ ಕಟ್ಟಿದ ಪಥಗಳು (Tow paths) ಇವೆಲ್ಲ ಸಾಯಂಕಾಲದ ಬೆಳಕಿನಲ್ಲಿ ರಮಣೀಯವಾಗಿ ಕಂಡವು. ಅವುಗಳನ್ನು ವಿವಿಧ ಕೋನಗಳಲ್ಲಿ ಅಮಿತಾ ಸೆರೆಹಿಡಿಯುತ್ತಿದ್ದರು. ಎತ್ತರದಿಂದ ವಿಹಂಗಮ ನೋಟ, ಬಗ್ಗಿ ನೆಲಕ್ಕೆ ಕ್ಯಾಮರಾ ತಾಗಿಸಿ ಪಿಪೀಲಿಕಾ ನೋಟ (Ant's eye view) ಎಲ್ಲಾ ಮೂಡಿಸಿದರು! ಅಲ್ಲಿ ವಿಹಾರಕ್ಕೆ ಹೊರಟ ದೋಣಿಗಳನ್ನು ನೋಡಿ ನಾನಗೋ ಶಾಲೆಯಲ್ಲಿದ್ದಾಗ  ”ಥ್ರೀ ಮೆನ್ ಇನ್ ಯ ಬೋಟ್’ ಓದಿ ನನ್ನ ಅಣ್ಣಂದಿರೊಂದಿಗೆ ಹೊಟ್ಟೆ ತುಂಬ ನಕ್ಕ ದಿನಗಳ ನೆನಪಾಯಿತು!
Capturing Ant’s eye view of Foxton Locks, Leicestershire
ಥೇಮ್ಸ್ ನದಿ ವಿಹಾರಕ್ಕೆ ಹೊರಟ ಮೂರು ಗೆಳೆಯರು ಯಾರು?

ಜೆರೋಮ್ ಕೆ ಜೆರೋಮ್ (ಪುಸ್ತಕದಲ್ಲಿ ಆತನ ಹೆಸರು ’ಜೆ’) ಬರೆದ ೧೮೮೯ರಲ್ಲಿ ಮೊದಲ ಬಾರಿಗೆ ಪ್ರಕಟವಾದ Three Men in a Boat (To say nothing of the Dog)ಎನ್ನುವ ಈ ಕಿರುಪುಸ್ತಕ ಎರಡೂವರೆ ಶತಮಾನದಲ್ಲಿ ಭಾರತವನ್ನೊಳಗೊಂಡು ಇಂಗ್ಲಿಷ್ ಬಲ್ಲ ಜಗತ್ತಿನ ಎಲ್ಲ ದೇಶಗಳಲ್ಲಿ ಜನಪ್ರಿಯವಾಗಿದೆ. ಅವರ ವಿಶಿಷ್ಠ ಶೈಲಿ ಮತ್ತು ಹೊಸತರದ ದೃಷ್ಟಿಕೋನದ ಹಾಸ್ಯ ಪಿ ಜಿ ವುಡ್ ಹೌಸ್ ಪೂರ್ವದ್ದು. ಇಂಗ್ಲೆಂಡಿನ ವಾಲ್ಸಾಲ್ ದಲ್ಲಿ ಹುಟ್ಟಿದ ಆತನ ಕಾಲ: (2 May 1959 – 14 June 1927). ಈ ಪುಸ್ತಕ ಮೊದಲು ಸರಣಿರೂಪದಲ್ಲಿ ಪ್ರಕಟವಾದಾಗ ಕೆಲವು ವಿಮರ್ಶಕರಿಂದ ಕಟುವಾಗಿ ಟೀಕಿಸಲ್ಪಟ್ಟರೂ ( ‘that the British Empire was in danger,’ ಆತನನ್ನು ಕೆಳ ದರ್ಜೆಯವನು ಅಂತ ಕರೆದು ‘ಹ’ಕಾರ ತೊರೆದು ‘Arry K. ‘Arry ಅಂತ ಹೀಯಾಳಿಸಿದರು! ಹಕಾರ- ಅಕಾರ ಅದಲುಬದಲು ಆಂಗ್ಲರಲ್ಲೂ ಪ್ರಚಲಿತ ದುಃಶ್ಚಟ!)  ಸಾಮಾನ್ಯ ಓದುಗರು ಮಾತ್ರ ಬಹಳ ಮೆಚ್ಚಿಕೊಂಡು ಒಂದು ಸಾವಿರ ಪ್ರತಿಗಳು ಖರ್ಚಾಗಳು ಸಮಯ ಹಿಡಿಯಲಿಲ್ಲ. ಅದರಿಂದಾಗಿ ಅಮೇರಿಕೆಯಲ್ಲಿ ಅದರ ಅನಧಿಕೃತ ಕಾಪಿಗಳು ಮಾರಾಟವಾಗಿ ಆತನಿಗೆ ಸಿಗಬೇಕಾದ ಸಂಭಾವನೆ ಸಿಗದಿದ್ದು ದುರ್ದೈವ ಏಕೆಂದರೆ ಅದು ಕಾಪಿರೈಟ್ ನಿಯಮಗಳು ಜಾರಿ ಬರುವ ಪೂರ್ವ ಕಾಲದ್ದು ಮತ್ತು ಆತನೇನೂ ಆಗ ಅಷ್ಟು ಅನುಕೂಲಸ್ಥನಾಗಿರಲಿಲ್ಲ. ಮೊದಲು ಅದೊಂದು ಪ್ರವಾಸಕಥನ ಎಂದು ಬರೆಯಲು ಶುರುಮಾಡಿದ್ದ, ಆಮೇಲೆ ವಿಡಂಬನೆಯುಕ್ತ ಅಡ್ಡಕತೆಗಳು ಸೇರಿ ಕಥೆಯನ್ನು ಸಮೃದ್ಧಗೊಳಿಸಿತು.

ಜೆರೋಮನ ಸಂಗಡಿಗರು ಜಾರ್ಜ್ ಮತ್ತು ಹ್ಯಾರಿಸ್. ಜೊತೆಗೆ ಅವರ್ ನಾಯಿ - ಮಾನ್ಟ್ ಮೊರೆನ್ಸಿ ಅವರು ಆತನ ನಿಜ ಜೀವನದ ಗೆಳೆಯರೆಂದು ಗುರುತಿಸಲಾಗಿದೆಯಾದರೂ ಎಲ್ಲ ಕಥೆಗಳು ನಿಜವಾಗಿ ನಡೆದ ಘಟನೆಗಳನ್ನಾಧರಿಸಿವೆಯಾದರೂ ಕಾಲಕ್ರಮವನ್ನು ಬದಲಾಯಿಸಲಾಗಿದೆ ಮತ್ತು ಹಾಸ್ಯಕ್ಕಾಗಿ ಅಲ್ಲಲಿಇ ಉತ್ಪ್ರೇಕ್ಷೆ ಇಣುಕಿರಬಹುದು. ಅತಿಯಾದ ಕೆಲಸದಿಂದ ಬಳಲಿದ್ದೇವೆಂದು ಅಂದುಕೊಂಡು (ಬ್ರಿಟಿಶ್ ಮ್ಯೂಸಿಯಮ್ ಲೈಬ್ರರಿಯಲ್ಲಿ ಓದಿ ರೋಗಿಷ್ಟನಾದದ್ದು ಖಾತ್ರಿಯಾಗಿ) ವಿಹಾರಕ್ಕಾಗಿ ಲಂಡನ್ ಹತ್ತಿರದ ಕಿಂಗ್ಸ್ಟನ್ನಿನಿಂದ ಹೊರಟು ಥೇಮ್ಸ್ ನದಿಯ ಪ್ರವಾಹದ ವಿರುದ್ಧ ಆಕ್ಸ್ಫರ್ಡ್ ವರೆಗೆ ಬಾಡಿಗೆಗೆ ತೊಗೊಂಡ ನ್ಯಾರೋ ಬೋಟ್ ಅಲ್ಲದಿದ್ದರೂ ಸ್ಕಿಫ್ (skiff) ಎನ್ನುವ ಹುಟ್ಟು ದೋಣಿಯಲ್ಲಿ ಎರಡು ವಾರ ಕಳೆದ ಕಥೆಯಿದು. ಕಾಲಕ್ಷೇಪದಂತೆ ಮುಖ್ಯ ಪ್ರವಾಸದ ವಿವರಣೆಗಿಂತ ಎರಡು ಪಟ್ಟು ಉಪಕಥೆಗಳೇ ಹೆಚ್ಚು. ದಿನದ, ಶುಷ್ಕ ಜೀವನದ ಘಟನೆಗಳನ್ನು ನೋಡುವ ದೃಷ್ಟಿ, ನಿತ್ಯ ಸತ್ಯಗಳನ್ನು ಅಲ್ಲಲ್ಲಿ ಚೆಲ್ಲಿದ ರೀತಿ ಮತ್ತು ಹಾಸ್ಯ ಇವನ್ನು ಕೇಂಬ್ರಿಜ್ಜಿನಲ್ಲಿದ್ದಾಗ ಓದಿ ಮೆಚ್ಚಿದ ಆಗಿನ ಪ್ರಧಾನ ಮಂತ್ರಿ ”ಜೆರೋಮ್ ಕೆ ಜೆರೋಮ್ ನ ಬರವಣಿಗೆ ನನ್ನ ಮಟ್ಟಿಗೆ ವಿನೋದದ ಪರಾಕಾಷ್ಠೆ!” ಎಂದು ಉದ್ಗರಿಸಿದ್ದು ಈಗಲೂ ನೆನಪಿದೆ. ತಾನು ಬರೆದ ೧೫೦ ಪುಟಗಳಲ್ಲಿ ಅವರು ’ದಾರಿ’ಯಲ್ಲಿ ಕಂಡ, ತಂಗಿದ ಸ್ಥಳಗಳ ಬಗ್ಗೆ, ಮತ್ತು ಬರೀ ಈ ದೇಶದ ಇತಿಹಾಸವನ್ನಷ್ಟೇ ಅಲ್ಲ ಬೇರೆ ಜಗತ್ತನ್ನೇ ತೆರೆದಿಡುತ್ತಾನೆ ಲೇಖಕ. ಅದು ಗಾರ್ಡಿಯನ್ ಪತ್ರಿಕೆಯ ನೂರು ಬೆಸ್ಟ್ ನಾವೆಲ್ಸ್ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ, ಒಂದು ವರ್ಷ.
’ಥ್ರೀ ಮೆನ್’ ಹಿಂದಿನ ನಿಜವಾದ ಮೂವರು: ಕಾರ್ಲ್ ಹೆನ್ಚೆಲ್ (ಹ್ಯಾರಿಸ್), ಜಾರ್ಜ್ ವಿನ್ಗ್ರೇವ್ (ಜಾರ್ಜ್) ಮತ್ತು ಕಾರ್ಲ್ ಹೆನ್ಚೆಲ್ (ಹ್ಯಾರಿಸ್)Picture Courtesy: Jerome K Jerome Society

ಜಲಪ್ರಯಾಣ ಸಿದ್ಧತೆಗೆಂದು ಪ್ಯಾಕ್ಕಿಂಗ್ ಮಾಡಲು ಪ್ರಾರಂಭ.
ಆತನ ಇಬ್ಬರು ಸಹಪ್ರಯಾಣಿಕರೆಂದರೆ ಜಾರ್ಜ್ ಮತ್ತು ಹ್ಯಾರಿಸ್. (ಹುಟ್ಟು ಹಾಕಲು ಬೇಕಲ್ಲ, ಕೂಲಿಗಳು!)”ಜೆ’ ಜಂಬದಿಂದ ಹೇಳುತ್ತಾನೆ. ”ನನಗೆ ಪ್ಯಾಕಿಂಗ್ ಎಂದರೆ ಗರ್ವ.ಅದರ ಬಗ್ಗೆ ನನಗೆ ಗೊತ್ತಿದ್ದಷ್ಟು ಯಾರೂ ಇಲ್ಲ. ಇಂಥ ಅನೇಕ ಕಲೆಗಳುಂಟು ಅಂತ ನನಗೇ ಅಚ್ಚರಿ. ಎಲ್ಲವನ್ನೂ ನನಗೇ ಬಿಟ್ಟು ಬಿಡಿ ಅಂತ ಅವರಿಬ್ಬರಿಗೆ ಹೇಳಿದ ಕ್ಷಣ ಗ್ಜಾರ್ಜ್ ಪೈಪ್ ಹೊತ್ತಿಸಿ ಈಸಿ ಚೇರ್ ಮೇಲೆ ವ್ಯಾಪಿಸಿಬಿಟ್ಟ; ಹ್ಯಾರಿಸ್ ಟೇಬಲ್ ಮೇಲೆ ಕಾಲು ಇಳಿಬಿಟ್ಟು ಸಿಗಾರ್ ಸೇದಲಾರಂಭಿಸಿದ. ನಾನಂದುಕೊಂಡಿದ್ದರ ವಿರುದ್ಧವಾಯಿತು ಇದು. ನಾನು ಬಾಸ್ ಅವರು ನನ್ನ ಆರ್ಡರ್ ಪ್ರಕಾರ ಓಡಾಡಬೇಕೆಂದು ನಾನು ತಿಳಿದಿದ್ದೆ. ನನಗೆ ಇದು ಬೇಸರ ತಂದಿತು. ನಾನು ಕೆಲಸ ಮಾಡುವಾಗ ಉಳಿದವರು ಕುಳಿತು ನೋಡುವದಕ್ಕಿಂತ ಹೀನ ಕೆಲಸ ಜಗತ್ತಿನಲ್ಲಿಲ್ಲ ...!” ಇದು ಸಾರ್ವಕಾಲಿಕ ಸತ್ಯವಲ್ಲವೆ? ಆದರೂ ಆತ ಹೇಳೋದು: ”ನನಗೆ ಪರಿಶ್ರಮ ಇಷ್ಟ. ಅದು ನನ್ನನ್ನು ಬಹಳ ಅಕರ್ಷಿಸುತ್ತದೆ.(it fascinates me.) ನಾನದನ್ನು ಇಡೀ ದಿನ ಕುಳಿತು ನೋಡ ಬಲ್ಲೆ!”
ಹ್ಯಾಂಪ್ಟನ್ ಕೋಟ್ ಪ್ಯಾಲೆಸ್, ನೀರಿನಲ್ಲಿ ಪ್ರತಿಬಿಂಬ ಮತ್ತು ಎಡಗಡೆ Maze : photo by author
ನಿರರ್ಗಳವಾಗಿ ಹರಿವ ಇತಿಹಾಸ
ಲಂಡನ್ ಗೊತ್ತಿದ್ದವರಿಗೆ ಕಿನ್ಗ್ ಸ್ಟನ್ (Kingston upon Thames) ಅಂದಕೂಡಲೇ ನೆನಪಾಗುವುದು ಆರು ರಾಣಿಯರನ್ನು ಮದುವೆಯ ಖ್ಯಾತಿಯ ಎಂಟನೆಯ ಹೆನ್ರಿ ಮತ್ತು ಅವನ ಭವ್ಯ ಪ್ಯಾಲೆಸ್ ಮತ್ತು ಹನ್ನೆರಡು ಮೀಟರ್ ಸುತ್ತಳತೆಯ ಹಳೆಯ ’ವೈನ್’’ ದ್ರಾಕ್ಷೆ ಬಳ್ಳಿ ಇದ್ದ ಹ್ಯಾಂಪ್ಟನ್ ಕೋರ್ಟ್. ಅದು ಥೇಮ್ಸ್ ದಂಡೆಯ ಮೇಲೆಯೇ ಇದೆ. ಆಗಿನಂತೆ ಈಗಲೂ ಪ್ರೇಕ್ಷಕರು ಮುಗಿ ಬೀಳುತ್ತಾರೆ. ಆತನ ಆಳಿಕೆಯ ನಂತರ ಕೊನೆಯ ಟ್ಯೂಡರ್ ರಾಣಿ ಒಂದನೆಯ ಎಲಿಝಬೆತ್ ಸಹ ಅಲ್ಲಿ ಕೆಲಕಾಲ ಸೆರೆಯಾಳಾಗಿದ್ದಳು. ಮಾರ್ಲೋ ಊರು, ಕಿಂಗ್ ಜಾನ್ ಮತ್ತು ಆತ ಸಹಿ ಮಾಡಿದ ಮ್ಯಾಗ್ನಾ ಕಾರ್ಟಾ ಐಲಂಡ್ ಇವುಗಳ ವರ್ಣನೆ ಸಹ ಬರುತ್ತದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಊಟಿಯಲ್ಲಿದ್ದಾಗ ನಾವು ಮೂವರು ಅಣ್ಣತಮ್ಮಂದಿರನ್ನು ಆಕರ್ಷಿಸಿದ್ದು ಆ ಪುಸ್ತಕದಲ್ಲಿ ಬರುವ ಹ್ಯಾಂಪ್ಟನ್ ಕೋರ್ಟ್ ಮೇಝ್ (Maze of hedges) -ಹೂದೋಟದಲ್ಲಿ ಪೊದೆಗಳಿಂದ ರಚಿಸಿದ ಸಿಕ್ಕು ದಾರಿ. ಅದನ್ನು ಹಿಂದಿಯಲ್ಲಿ ಭೂಲ್ ಭುಲಯ್ಯ ಎನ್ನುವರು. ಅದರಲ್ಲಿ ಹೊಕ್ಕರೆ ದಾರಿ ತಪ್ಪಿಸಿಕೊಂಡು ಹೊರಬರುವದೇ ಕಷ್ಟ. ಒಂದು ರೀತಿಯ ಪದ್ಮವ್ಯೂಹ ಎನ್ನ ಬಹುದು. ನಾನು ಇತ್ತೀಚೆಗೆ ಹ್ಯಾಂಪ್ಟನ್ ಕೋರ್ಟ್ ಗೆ ಭೆಟ್ಟಿ ಕೊಟ್ಟಾಗ ಆ ಮೇಝಿಗೂ ಹೋಗಿ ಬಂದೆ. ಮೊದಲ ಸಲ ಹ್ಯಾರಿಸ್ ಹೇಳಿದ ಕಥೆಯನ್ನು ಮೆಲಕು ಹಾಕಿದೆ. ಮನೆಗೆ ಬಂದು ಅದನ್ನು ಓದಿದೆ. ಅದರ ಝಲಕ್ ಇಲ್ಲಿದೆ:
ಉಪಕಥೆಗಳಲ್ಲದೆ ನೇರವಾಗಿ ನೀರಿನ ಪ್ರವಾಸದ ಬಗೆಗಿನ ತಮಾಷೆಯ ವಿಷಯಗಳೂ ಅನೇಕ.  ನೀರಿನ ಪಾತಳು ಸಮ ಪಡಿಸಲು ಒಮ್ಮೆ ಲಾಕ್ ಒಳಗೆ ಹೊಕ್ಕ ಅವರ ಬೋಟಿನ ಕಿರಿಮೂಲೆಯ ಮುಂಬದಿ (nose of the boat) ದ್ವಾರದ ಸಂದಿಯಲ್ಲಿ ಸಿಕ್ಕಿಕೊಂದು ದೋಣಿಯ ತುದಿ ಏರುತ್ತಿರುವಾಗ ಅದರ ಪರಿವೆಯಿಲ್ಲದೆ ಫೋಟೊಗ್ರಾಫರನ ಮೇಲೆ ಪೂರ್ತಿ ಲಕ್ಷ್ಯವಿಟ್ಟು ''Nose! Nose!'' ಅಂತ ಜನ ಎಚ್ಚರಿಸಿದಾಗಲೂ ಮೂಗು ಮುಟ್ಟಿಕೊಂಡು ಎಲ್ಲ ಸರಿಯಾಗಿದೆ ಅಂತ ಗಂಡಾಂತರದಿಂಅ ಸ್ವಲ್ಪದರಲ್ಲೇ ಪಾರಾದದ್ದು, ಮತ್ತು ಟಿನ್ ಓಪನರ್ ಇಲ್ಲದೆ ಅನಾನಸ್ ಹಣ್ಣಿನ ಟಿನ್ನನ್ನು ಭೇದಿಸಲು ಪಟ್ಟ ಕಷ್ಟ, ಜಜ್ಜಿ ಪಚ್ಚೆ ಮಾಡಿದ ಕಥೆ ...ಅದರ ತುಂಬ ಹರಿಯುವದು ಥೇಮ್ಸ್ ಅಲ್ಲ, ಹಾಸ್ಯ.
ಅಂದರೆ ಪುಸ್ತಕದಲ್ಲಿ ಋಣಾತ್ಮಕ ಗುಣಗಳೇ ಇಲ್ಲವೆ? ನೆನ್ನೆಗೆ (ಮೇ ೨) ಜೆರೋಮ್ ಹುಟ್ಟಿ ೧೬೫ ವರ್ಷಗಳು ತುಂಬುತ್ತವೆಯೆಂದ ಮೇಲೆ, ಆಗಿನ ಭಾಷೆ ಮತ್ತು ಕಥನ ಶೈಲಿ ಸುಲಲಿತ ಎಂದು ಎಲ್ಲರೂ ಒಪ್ಪುವದಿಲ್ಲ. ಆ ಕಾರನಕ್ಕೇ ಈ ಮೊದಲೇ ಉಲ್ಲೇಖಿಸಿದಂತೆ ’ಅಪ್ಪಿಟಿ’ ವಿಮರ್ಶಕರು ಕೊಟ್ಟಿದ್ದು ಆ ತರದ ಅಭಿಪ್ರಾಯ. ಕಥೆಯ ಓಘಕ್ಕೆ ಅಲ್ಲಲ್ಲಿ ತಡೆಯಿದೆ. ಮತ್ತು ಭಾಷೆ ಪೆಡಸು (clunky ಎನ್ನಬಹುದು). ಆಶ್ಚರ್ಯವೆಂದರೆ ಅದರಲ್ಲಿ ಉಲ್ಲೇಖಿತವಾದ ಐತಿಹಾಸಿಕ ಸ್ಥಳಗಳು, ಪಬ್ ಮತ್ತು ಇನ್ ಗಳು (ಒಂದೆರಡನ್ನು ಬಿಟ್ಟರೆ) ಇನ್ನೂ ಹಾಗೆಯೇ ಇವೆ. ಅವುಗಳ ವ್ಯಾಪಾರಕ್ಕೆ ಈ ಪುಸ್ತಕದ್ದೂ ಸ್ವಲ್ಪ ಪ್ರಭಾವವಿರಲು ಸಾಕು. ಅದಲ್ಲದೆ. ಅನೇಕ ಜನರು ತಾವು ಸಹ ಆ ಪ್ರವಾಸವನ್ನು ಮಾಡಿ ತೋರಿಸಿದ್ದಾರೆ, ಬರೆದಿದ್ದಾರೆ, ಟೆಲಿವಿಜನ್ನಿನಲ್ಲಿ ಸಹ ಅದರ ಒಂದು ಸರಣಿಯನ್ನು ನೋಡಿದ ನೆನಪು.
ಕೊನೆಯಲ್ಲಿ, ಅಂಕಲ್ ಪಾಡ್ಜರನು ಹೊಸದಾಗಿ ಕಟ್ಟು ಹಾಲಿಸಿದ ಚಿತ್ರವೊದನ್ನುನೇತು ಹಾಕುವ ಕಥೆಯನ್ನು ಉಲ್ಲೇಖಿಸದೆ ಯಾವ ’ಥ್ರೀ ಮೆನ್ ’ ಕಥೆಯೂ ಮುಕ್ತಾಯವಾಗೋದಿಲ್ಲಂತ ಅದರ ವರ್ಣನೆಯ ಕೆಲವು ಸಾಲುಗಳೊಂದಿಗೆ ಲೇಖನ ಮುಗಿಸುವೆ. ಅದು ಎಷ್ಟೋ ಶಾಲೆಗಳ ಪಠ್ಯಪುಸ್ತಕದಲ್ಲಿ ಸಹ ಸೇರ್ಪಡೆಯಾಗಿತ್ತಂತೆ. ನಿಮ್ಮಲ್ಲನೇಕರು ತಮ್ಮ ಅವಿಭಕ್ತ ಕುಟುಂಬದಲ್ಲಿ ಇಂತಹ ಒಬ್ಬ ’ದೊಡ್ಡ’ ಅರ್ಭಟ ವ್ಯಕ್ತಿಯನ್ನು ಕಂಡಿರಲಿಕ್ಕೆ ಸಾಕು!

ಅಂಕಲ್ ಪಾಡ್ಜರ್ ನೇತು ಹಾಕಿದ ಚಿತ್ರ

ಒಂದು ಸಾಯಂಕಾಲದ ಮಬ್ಬುಗತ್ತಲೆಯಲ್ಲಿ ಆಂಟಿ ಪಾಡ್ಜರ್ ಫ್ರೇಮ್ ಹಾಕಿಸಿ ತಂದ ಚಿತ್ರವನ್ನು ನೇತು ಹಾಕೋರು ಯಾರು ಅಂತ ಕೇಳಿದಳು. ”ನನಗೆ ಬಿಟ್ಟು ಬಿಡಿರಿ, ಚಿಂತೆ ಬೇಡ. ನಾನು ಮಾಡುತ್ತೇನೆ,” ಅನ್ನುತ್ತ ತನ್ನ ಕೋಟು ಬಿಚ್ಚುತ್ತ ಆರಂಭ ಮಾಡಿದ ಅಂಕಲ್ ಪಾಡ್ಜರ್. ಹಿರಿಯ ಮಗಳನ್ನು ಮೊಳೆಗಳನ್ನು ತರಲು ಕಳಿಸಿದ.ಆಕೆಯೇ ಹಿಂದೆಯೆ ಒಬ್ಬ ಹುಡುಗನ ರವಾನಿ - ಉದ್ದಳತೆ ತಿಳಿಸಲು. ಅವು ಬರೀ ಪ್ರಾರಂಭದ ಆರ್ಡರ್ಗಳು, ಇಡೀ ಮನೆ ತುಂಬ ಕೋಲಾಹಲ. ”ನನ್ನ ಸುತ್ತಿಗೆ ತೊಗೊಂಡು ಬಾ, ವಿಲಿಯಮ್,” ಅಂತ ಕೂಗಿದ. ”ನನ್ನ ರೂಲರ್ ಎಲ್ಲಿ, ಟಾಮ್, ಮತ್ತು ನನ್ನ ಏಣಿಯನ್ನು ತರಲು ಮರೆಯ ಬೇಡ. ಕುರ್ಚಿ ಸಹ ಇರಲಿ, ಬೇಕಾದೀತು. ಹ್ಞಾ, ಜಿಮ್, ಸ್ವಲ್ಪ ನಯವಾಗಿ ಮಾತಾಡಿಸಿ, ಅವರ ಕಾಲೂತದ ಬಗ್ಗೆ ವಿಚಾರಿಸಿ ಪಕ್ಕದ ಮನೆಯವರಿಂದ ಸ್ಪಿರಿಟ್ ಲೆವಲ್ ಕಡ ತಾರಪ್ಪ! ... ಮರಿಯಾ, ನೀನು ತೊಲಗ ಬೇಡ, ನನಗೆ ದೀಪ ತೋರಿಸ ಬೇಕು.” ಹಿರಿಯ ಮಗಳು ಬಂದ ಮೇಲೆ ಮತ್ತೆ ಓಡಿ ಹೋಗ ಬೇಕು. ಹಗ್ಗ ತರಲು. ಟಾಮ್, ಓ ಟಾಮ್, ಎಲ್ಲಿ ಅವನು? ಟಾಮ್, ಇಲ್ಲಿ ಬಂದು ನಿಲ್ಲು, ನನಗೆ ಆ ಚಿತ್ರವನ್ನು ಎತ್ತಿ ಕೊಡ ಬೇಕು, ಸ್ವಲ್ಪ ವಜ್ಜ ಐತಿ. ಆನಂತರ ಅಂಕಲ್ ಚಿತ್ರವನ್ನು ಕೈಯಲ್ಲಿ ಎತ್ತಿ ಹಿಡಿಯುವಷ್ಟರಲ್ಲಿ ಆತನ ಕೈಯಿಂದ ಜಾರಿ ಬಿತ್ತು. ಫ್ರೇಮು ಸಹ ಬಿಚ್ಚಿದ್ದರಿಂದ ಗಾಜನ್ನು ಉಳಿಸಲು ಹೋಗಿ ಅದು ಕೈ ಕತ್ತರಿಸಿತು. ಕುಣಿಯುತ್ತ, ತತ್ತಿರಿಸುತ್ತ ಕೋಣೆ ತುಂಬ ಪರ್ಯಟನ, ತನ್ನ ಕರವಸ್ತ್ರ ಹುಡುಕುತ್ತ. ಅದು ಸಿಗಲಿಲ್ಲ ಯಾಕಂದರೆ ಅದು ಕೋಟಿನ ಕಿಸೆಯಲ್ಲಿದೆ, ಕೋಟು ಎಲ್ಲಿ ಹಾಕಿದ್ದ ಅಂತ ನೆನಪಿಲ್ಲ. ಮನೆಯವರೆಲ್ಲ ಆತನ ಉಪಕರಣಗಳ ಅನ್ವೇಷಣೆಯಲ್ಲಿ ಎಲ್ಲೆಡೆ ಚೆಲ್ಲಾಪಿಲ್ಲಿಯಾದರು. ಕೆಲವರು ಆತನ ಕೋಟನ್ನು ಹುಡುಕುತ್ತ ಹೊರಟಾಗ ಆತನೋ ಅತ್ತಿತ್ತ ಕುಣಿಯುತ್ತ ಎಲ್ಲರ ಕಾಲಲ್ಲಿ ಸಿಗುತ್ತ ತಿರುಗುತ್ತಿದ್ದ .
”ಇಷ್ಟು ಜನರಲ್ಲಿ, ಯಾರಿಗೂ ನನ್ನ ಕೋಟೆಲ್ಲಿದೆ ಗೊತ್ತಿಲ್ವಾ? ಇಂಥ ನಾಲಾಯಕರನ್ನು ಜನ್ಮದಲ್ಲಿ ಕಂಡಿಲ್ಲ. ನಿಜವಾಗಿಯೂ ನೀವು ಆರು ಜನರಿಗೂ ಐದು ನಿಮಿಷದ ಹಿಂದೆ ಇಟ್ಟ ಕೋಟನ್ನು ಹುಡುಕಲಾಗಲಿಲ್ಲವಲ್ಲ ...” ಅನ್ನುತ್ತ ಕುರ್ಚಿಯಿಂದ ಎದ್ದಾಗ ಅದರ ಮೇಲೆಯೇ ತಾನು ಇಷ್ಟು ಹೊತ್ತು ಕೂತಿದ್ದು ಗೊತ್ತಾಗಿ, ”ಈಗ ಬಿಡ್ರೆಪ್ಪ, ಅಂತೂ ಇದೀಗ ನಾನೇ ಹುಡುಕಿದೆ, ನಮ್ಮ ಸಾಕು ಬೆಕ್ಕು ನಿಮಗಿಂತ ಬೇಗ ಹುಡುಕುತ್ತಿತ್ತೇನೋ.”
ಅರ್ಧ ಗಂಟೆಯೇ ಬೇಕಾಯಿತು, ಆತನ ಬೊಟ್ಟಿಗೆ ಬ್ಯಾಂಡೇಜ್ ಮಾಡಿ, ಹೊಸ ಗಾಜನ್ನು ತರಿಸಿ, ಸಾಧನಗಳು, ಏಣಿ, ಕುರ್ಚಿ, ಮೋಂಬತ್ತಿ, ಎಲ್ಲ ತಂದ ಮೇಲೆ ಮನೆಯವರು, ಕೆಲಸದಾಕೆ, ಆಕೆಯ ಮಗಳು ಇವರೆಲ್ಲ ಕೈಕೊಡಲು ಅರ್ಧ ವರ್ತುಲಾಕಾರದಲ್ಲಿ ನಿಂತಿರಲು ಆತನ ಮತ್ತೊಂದು ಪ್ರಯತ್ನ ಶುರು... ಇಬ್ಬರು ಕುರ್ಚಿಯನ್ನು ಭದ್ರವಾಗಿ ಹಿಡಿಯಲು,ಮೂರನೆಯವ ಅಂಕಲನ್ನು ಮೇಲೆ ಹತ್ತಿಸಿ ಬಿಗಿಯಾಗಿ ಹಿಡಿದಿರಲು, ನಾಲ್ಕನೆಯವರು ಮೊಳೆಯನ್ನು ಆತನ ಕೈಗಿಡಲು, ಐದನೆಯವನು ಸುತ್ತಿಗೆಯನ್ನು ಆತನಿಗೆ ಕೊಡಲು ತುದಿಗಾಲ ಮೇಲೆ ನಿಂತಿರುವ. ಸರಿ, ಅಂಕಲ್ಲೋ ಕೈಯಲ್ಲಿ ಮೊಳೆಯನ್ನು ಹಿಡಿದ ಮರುಕ್ಷಣದಲ್ಲಿ ಕೆಳಗೆ ಬೀಳಿಸಿ ಬಿಟ್ಟ.
”ಅಯ್ಯೊ, ಈಗ ಮೊಳೆ ಬಿತ್ತಲ್ಲ” ಅಂತ ಗಾಯ ಪಟ್ಟವನ ಆರ್ತನಾದ. ಈಗ ಎಲ್ಲರೂ ಮೊಣಕಾಲ ಮೇಲೆ ಸರಿದು ಅದರ ಹುಡುಕಾಟದಲ್ಲಿ ಮಗ್ನರಾಗಿರುವಾಗ ಆತ ಕುರ್ಚಿಯ ಮೇಲೆ ಗೊಣಗುತ್ತ ನಿಂತು, ’ನನ್ನನ್ನು ಇಡೀ ರಾತ್ರಿ ಹಿಂಗ ಕಳೀ ಬೇಕಂತ ಮಾಡೀರೇನು?’ ಅಂತ ಹಂಗಿಸುತ್ತ ಕೂಡುವ. ಕೊನೆಗೆ ಮೊಳೆ ಸಿಕ್ಕಿತು ಆದರೆ ಆತ ಸುತ್ತಿಗೆಯನ್ನು ಅಷ್ಟರಲ್ಲಿ ಎಲ್ಲೋ ಕಳಕೊಂಡಿದ್ದ. “ಎಲ್ಲಿ ಆ ಸುತ್ತಿಗೆ, ಏಳು ಮಂದಿ ಮೂರ್ಖರು ಬಾಯಿ ಕಳಕೊಂಡು ಏನು ಮಾಡುತ್ತಿದ್ರಿ?”
ನಾವು ಸುತ್ತಿಗೆ ಹುಡುಕಿದೆವೇನೋ ಸರಿ, ಆತ ಮೊಳೆ ಹೊಡೆಯಲು ಮಾಡಿದ ಗುರುತು ಸಿಗವಲ್ತು. ಒಬ್ಬೊಬ್ಬರಾಗಿ ನಾವೆಲ್ಲ ಕುರ್ಚಿ ಹತ್ತಿ ಹುಡುಕುತ್ತ ಹೋದಂತೆ ಒಬ್ಬರು ಕಂಡು ಹಿಡಿದ ಜಾಗ ಇನ್ನೊಬ್ಬರೊಂದಿಗೆ ಹೊಂದದೆ ಎಲ್ಲರೂ ಮತ್ತೆ ಮೂರ್ಖರಾದೆವು. ಎಲ್ಲರನ್ನೂ ಸ್ವಸ್ಥಾನಕ್ಕೆ ಕಳಿಸಿ ತಾನೆ ಅಳೆದು ಲೆಕ್ಕ ಹಾಕಿ, ದೂರ ಗೋಡೆಯ ತುದಿಯಿಂದ ಮೂವತ್ತೊಂದು ಮತ್ತು ಮೂರೆಂಟಾಂಶ ಇಂಚು, ಅಂತ ಮನಸ್ಸಿನಲ್ಲೆ ಲೆಕ್ಕ ಹಾಕುತ್ತ ತಲೆ ಬಿಸಿಮಾಡಿಕೊಳ್ಳುವ. ಎಲ್ಲರೂ ತಮ್ಮ ತಲೆಯಲ್ಲೇ ಲೆಕ್ಕ ಹಾಕಿ ಬೇರೆ ಬೇರೆ ಉತ್ತರ ಕೊಟ್ಟರು. ಒಂದೇ ಉಪಾಯ ಅಂದರೆ ಮತ್ತೆ ಅಳೆಯ ಬೇಕೆಂದು ಈ ಸಲ ದಾರ ಹಿಡಿದು ಅಳೆಯಲು ಹೋದಾಗ ಮೂರಿಂಚು ಕೂಡಿಸಿ ಹಿಡಿದ ಗುರುತನ್ನು ಬರೆಯಲು ಇನ್ನಷ್ಟು ಮೈ ಚಾಚಬೇಕಾಗಿ ನಲವತ್ತೈದು ಡಿಗ್ರಿಗಿಂತ ಹೆಚ್ಚಾಗಿ ವಾಲಿದ್ದರಿಂದ ದಾರ ಕೈಯಿಂದ ಜಾರಿ ಬಿತ್ತು, ಜೊತೆಗೆ ತಾನೂ ಸಹ ಕೆಳಗಿದ್ದ ಪಿಯಾನೋ ಮೇಲೆ ಬಿದ್ದಿದ್ದರಿಂದ, ಅಚಾನಕ್ಕಾಗಿ ಆತನ ತಲೆ ಮತ್ತು ಶರೀರ ಕೂಡಿಯೇ ಏಕ ಕಾಲಕ್ಕೆ ಪಿಯಾನೋದ ಅಷ್ಟೂ ಕೀಗಳ ಮೇಲೆ ಒತ್ತಿದ್ದರಿಂದ ಒಂದು ತರದ ಸುಂದರ ಸ್ವರಸಂಗಮ ಉತ್ಪನ್ನವಾಯಿತು.
ಎದ್ದು, ಅಂತೂ ಕೊನೆಗೆ ಗುರುತು ಮಾಡಿದಲ್ಲಿ ಮೊಳೆಯ ಮೊನೆಯನ್ನು ಎಡಗೈಯಿಂದ ಗೋಡೆಯ ಮೇಲಿರಿಸಿ ಬಲಗೈಯಲ್ಲಿ ಸುತ್ತಿಗೆ ಹಿಡಿದ. ಮೊದಲ ಪೆಟ್ಟುಬಿದ್ದಿದ್ದು ಸರಿಯಾಗಿ ಹೆಬ್ಬೊಟ್ಟಿನ ಮೇಲೆ. ಆತ ಚೀರುತ್ತ ಕೆಡವಿದ ಸುತ್ತಿಗೆ ಬಿದ್ದದ್ದು ಯಾರದೋ ಕಾಲ್ಬೆರಳುಗಳ ಮೇಲೆ. ಆಂಟಿ ಮರಿಯಾ ಆಗ ಮೆಲುದನಿಯಲ್ಲಿ ಪಣ ತೊಟ್ಟಿದ್ದು ಮುಂದಿನ ಸಲ ಆತನ ಕೈಯಲ್ಲಿ ಮೊಳೆ-ಸುತ್ತಿಗೆ ಏರುದ ಸಮಯ ಯಾರಾದರೂ ಅವಳಿಗೆ ಮುನ್ಸೂಚನೆ ಕೊಟ್ಟರೆ ತಾನು ಒಂದು ವಾರ ತವರಿಗೆ ಹೋಗಿ ಇರುವ ವ್ಯವಸ್ಥೆ ಮಾಡುತ್ತೇನೆ ಎಂದು.
ಕೊನೆಗೆ, ಮಧ್ಯರಾತ್ರಿಗೆ ಸರಿಯಾಗಿ ಆ ಚಿತ್ರ ಗೋಡೆಯಮೇಲೆ ನೇತು ಹಾಕಲ್ಪಟ್ಟಿತ್ತು - ಸ್ವಲ್ಪ ಸೊಟ್ಟಗೆ ಮತ್ತು ಯಾವ ಕ್ಷಣದಲ್ಲೂ ಕೆಳಗೆ ಸರಿಯುವದೇನೋ ಅನ್ನುವ ಭಂಗಿಯಲ್ಲಿ, ಸುತ್ತಲಿನ ಗೋಡೆ ಮಾತ್ರ ಸುತ್ತಿಗೆ ಪೆಟ್ಟಿನಿಂದ ನುಗ್ಗು ಮುಗ್ಗಾಗಿತ್ತು. ಆ ಹೊತ್ತಿನಲ್ಲಿ ಎಲ್ಲರಿಗೂ ಸುಸ್ತು-ಅಂಕಲ್ ಒಬ್ಬರನ್ನು ಬಿಟ್ಟು!

ಶ್ರೀವತ್ಸ ದೇಸಾಯಿ
Uncle Podger hangs a picture.
(Now out of copyright, Three Men in a Boat is available from many sources including Punguin, Wordworth classics etc.)

ಕೈ ಹಿಡಿದು ನಡೆಸಿದ ಗುರುವಿನ ಕುರಿತು..

ಎಲ್ಲರಿಗೂ ನಮಸ್ಕಾರ,
ನಾನು ಇಂದು ಬರೆಯುತ್ತಿರುವುದು, ನನ್ನ ಪ್ರೀತಿಯ ಗುರುಗಳಾದ ಡಾ. ಶಾಲಿನಿ ರಘುನಾಥ್ ಅವರ ಕುರಿತು. ಡಾ. ಶಾಲಿನಿ ರಘುನಾಥ್ ಅವರು
ನಮ್ಮ ಕನ್ನಡ ನಾಡಿನ ಹೆಸರಾಂತ ಜಾನಪದ ವಿದ್ವಾಂಸರು. ಭಾಷಾ ವಿಜ್ಞಾನದಲ್ಲಿ ಹಲವು ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದಾರೆ.
ಜಾನಪದ ಸಂಶೋಧನೆ ಮತ್ತು ಸಂಗ್ರಹಕಾರ್ಯದಲ್ಲೂ ಅವರು ತಮ್ಮ ವಿಶೇಷ ಛಾಪು ಮೂಡಿಸಿದ್ದಾರೆ. ತಮ್ಮ ಉದ್ಯೋಗವನ್ನು ತಪಸ್ಸಿನಂತೆ
ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಅಧ್ಯಯನದ ರುಚಿ ಹತ್ತಿಸಿದವರು. ಕಲಿತ ವಿದ್ಯೆಯನ್ನು ಬದುಕಿಗೆ ಅಳವಡಿಸಿಕೊಂಡು ನಿರಂತರವಾಗಿ ಚಿಂತನೆ ಮಾಡುವ ಹಾದಿಯಲ್ಲಿ ನನ್ನನು ಕೈಹಿಡಿದು ನಡೆಸಿದವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವರ ವಿದ್ಯಾರ್ಥಿಯಾಗಿ ನಾನು
ಕಳೆದ ಎರಡು ವರ್ಷಗಳು ಆ ನಂತರದ ಈ 14 ವರ್ಷಗಳೂ ನನ್ನನು ಅದೇ ಕಲಿಕೆಯ ಹಾದಿಯಲ್ಲಿಟ್ಟಿವೆ. ಅಂತಹ ಗುರುವಿನ ಜೊತೆಗೆ ನನ್ನ ಒಡನಾಟದ ಕುರಿತು ನನ್ನ ಈ ಲೇಖನ.
- ಅಮಿತಾ ರವಿಕಿರಣ್
ಚಿತ್ರಕೃಪೆ; ಗೂಗಲ್
ಪದವಿಯು ಮುಗಿದು ನಾಲ್ಕು ವರ್ಷಗಳ ಧೀರ್ಘ ಅಂತರದ ನಂತರ ಮತ್ತೆ ಕಾಲೇಜ್ ಸೇರಿಕೊಳ್ಳುವ ಸುಯೋಗ ಬಂದಿತ್ತು ಕಲಿಯಬೇಕೆಂಬ ಆಸೆ
ಇತ್ತಾದರೂ ಅದನ್ನು ಆಚರಣೆಗೆ ಹೇಗೆ ತರುವುದು ಎಂಬುದು ತಿಳಿದಿರಲಿಲ್ಲ. ಪದವಿ ಪಡೆದಿದ್ದು ಸಂಗೀತದಲ್ಲಿ ಆದರೆ ಸ್ನಾತಕೋತ್ತರ
ಅಧ್ಯಯನವನ್ನು ಸಂಗೀತದಲ್ಲೇ ಮುಂದುವರಿಸುವ ಮನಸ್ಸಿರಲಿಲ್ಲ ಸಂಗೀತ ಬಿಡುವ ಮನಸ್ಸು ಇರಲಿಲ್ಲ. ಈ ನಡುವೆ ಅತಿಯಾಗಿ ನನ್ನ ಮನಸನ್ನ
ಆವರಿಸಿದ್ದ ವಿಷಯ ಜಾನಪದ. ಆಗ ನನಗೆ ಜನಪದ ಜಾನಪದ ದ ನಡುವಿನ ವ್ಯತ್ಯಾಸವು ತಿಳಿದಿರಲಿಲ್ಲ.
ನನ್ನ ದನಿ ಕೇಳಿದ ಹಲವು ಮಂದಿ ಜನಪದ ಸಂಗೀತವನ್ನು ಮುಂದುವರಿಸಿಕೊಂಡು ಹೋಗು ಎಂದು ಹೇಳುತ್ತಿದ್ದರು ಮತ್ತು ಯಾವ
ಕಾರ್ಯಕ್ರಮಕ್ಕೆ ಹೋದರೂ ಜಾನಪದ ಗೀತೆಗಳನ್ನು ಹಾಡು ಎಂಬ ಅಪೇಕ್ಷೆ ಮುಂದಿಡುತ್ತಿದ್ದರು. ಆ ಒಂದು ಹಿನ್ನೆಲೆಯಲ್ಲಿ ಜನಪದ ಸಂಗೀತದ
ಬಗೆಗೆ ಏನಾದರು ಹೆಚ್ಚಿನದ್ದು ಕಲಿಯಬೇಕು ಎಂಬ ಸ್ಪಷ್ಟ ಉದ್ದೇಶದೊಂದಿಗೆ ನಾನು ಜಾನಪದ ಅಧ್ಯಯನ ಪೀಠದ ಹೊಸ್ತಿಲನ್ನು ತುಳಿದಿದ್ದೆ.

ಆ ದಿನ ನಮ್ಮ ಪ್ರವೇಶ ಪ್ರಕ್ರಿಯೆ ಆರಂಭವಾದ ದಿನ. ನಾನು ಮೊದಲ ಬಾರಿ ಶಾಲಿನಿ ಮೇಡಂ ಅವರನ್ನು ನೋಡಿದ್ದು ಹಸಿರು ಕೆಂಪಂಚಿನ
ಧಾರವಾಡ ಸೀರೆಯಲ್ಲಿ ನಗು ಮೊಗದಿಂದ ವಿದ್ಯಾರ್ಥಿಗಳನ್ನು ಮಾತನಾಡಿಸುತ್ತಿದ್ದರು. ಅದೆಷ್ಟು ಸರಳತೆಯಿಂದ ಅವರು ನಮ್ಮೊಂದಿಗೆ
ಮಾತನಾಡಿದ್ದರೆಂದರೆ, ಅವರು ಅಧ್ಯಯನ ಪೀಠದ ಅಧ್ಯಕ್ಷೆ ಎಂಬುದು ನನಗೆ ತಿಳಿಯಲೇ ಇಲ್ಲ.
ಅಡ್ಮಿಷನ್ ಆಗಿ ಮನೆಗೆ ಹೋದಾಗ ಅದೇ ತಿಂಗಳ ಕಸ್ತೂರಿ ಮಾಸಪತ್ರಿಕೆಯಲಿ ಭಾಷಾ ಶಾಸ್ತ್ರ ಕುರಿತಾದ ಒಂದು ಲೇಖನದಲ್ಲಿ ಅವರ ಹೆಸರು
ಉಲ್ಲೇಖಿಸಲಾಗಿತ್ತು. ಅವರಲ್ಲಿರುವ ಅಪರೂಪದ ಪುಸ್ತಕ ಸಂಗ್ರಹದ ಬಗ್ಗೆ ಲೇಖಕ ತುಂಬಾ ಚನ್ನಾಗಿ ಬರೆದಿದ್ದರು. ಅವರೇ ಇವರು ಎಂದು
ತಿಳಿದಾಗ ಮನಸ್ಸು ಸಂಭ್ರಮಿಸಿತ್ತು.

ಕಾಲೇಜ್ ಶುರುವಾದ ನಂತರ ನಾವು ಅವರನ್ನು ಭೇಟಿ ಮಾಡಲು ಅವರ ಚೇಂಬರ್ ಗೆ ಹೋದಾಗ ಅವರು ಮಾತನಾಡಿದ ಶೈಲಿ, ಅವರ
ಆತ್ಮೀಯತೆ ನನ್ನ ಶಿಕ್ಷಣ ಮುಂದುವರಿಸುವ ಕುರಿತು ಇದ್ದ ಹಲವು ದುಗುಡ ಕಡಿಮೆ ಮಾಡಿದ್ದವು. ಜೊತೆಗೆ ಅಷ್ಟೇ ಕಳಕಳಿಯಲ್ಲಿ ಹೇಳಿದ್ದರು.
ಜಾನಪದವನ್ನು ಸುಲಭ , ಡಿಗ್ರಿ ಮುಗಿಸಲು ಒಂದು ಸರಳ ವಿಷಯ ಎಂಬ ಭಾವನೆ ಸಾಮಾನ್ಯ. ಮತ್ತು ಅಧ್ಯಯನ ಪೀಠಕ್ಕೆ ಬರುವ ಹಲವರಲ್ಲಿ
ಈ ಆಲೋಚನೆಯೇ ಇರುತ್ತದೆ ಆದರೆ ನೀವು ಅದನ್ನು ನಿಜಕ್ಕೂ ಇಷ್ಟಪಟ್ಟು ಅಭ್ಯ್ಯಸಿಸಿ ಏನಾದರು ಹೊಸ ದಿಶೆಯಲ್ಲಿ ಆಲೋಚಿಸಬೇಕು. ಬರೀ
ಜಾಬ್ ಗಿಟ್ಟಿಸಲು ಒಂದು ಡಿಗ್ರಿ ಅಂದುಕೊಳ್ಳದೆ ಪ್ರೀತಿಯಿಂದ ಅಧ್ಯಯನ ಶುರು ಮಾಡಿ, ಎಲ್ಲಿ ನೋಡಿದರೂ ನಿಮಗೆ ಜನಪದವೇ ಕಾಣಬೇಕು. ಈ
ವಿಷಯವನ್ನು ಮನದಟ್ಟು ಮಾಡಿಕೊಂಡೆ ಕ್ಲಾಸಿಗೆ ಬನ್ನಿ ಮತ್ತು ತರಗತಿಗಳನ್ನು ತಪ್ಪಿಸಬೇಡಿ ಅಂದರು.

ಮೊದಲ ಸೆಮಿಸ್ಟರ್ ನಲ್ಲಿ ಜಗತ್ತಿನ ಜಾನಪದ ಇತಿಹಾಸ ಎಂಬ ವಿಷದೊಂದಿಗೆ ಮೇಡಂ ಮೊದಲಬಾರಿ ನಮ್ಮ ಮುಂದಿದ್ದರು , ಯುರೋಪ್
ಅಮೇರಿಕ ಮತ್ತು ರಷ್ಯ ಭಾರತದ ಜನಪದ ಇತಿಹಾಸವನ್ನು ಹೇಳುವುದರೊಂದಿಗೆ ಇತಿಹಾಸ ಓದುವುದು ನಮ್ಮ ವರ್ತಮಾನಕ್ಕೆ ಹೇಗೆ
ಉಪಯೋಗಕಾರಿ ? ಅನ್ನುವ ವಿಷಯವನ್ನು ಅದೆಷ್ಟೋ ಉದಾಹರಣೆಗಳೊಂದಿಗೆ ವಿವರಿಸಿದ್ದರು ಅದರಲ್ಲೂ ಎಂದೋ ಕಳೆದು ಹೋದ ಫಿನ್ಲ್ಯಾಂಡ್
ನ ಕಲೆವಾಲ್ ಎಂಬುವ ಕಥನಗೀತೆಯನ್ನು ಸಂಪಾದಿಸಿದ ರೀತಿ ಅದು ಅಲ್ಲಿನ ಜನಮಾನಸದ ಮೇಲೆ ಬೀರಿದ ಪರಿಣಾಮ. ಮತ್ತು ಅದೇ
ಕ್ರಮವನ್ನು ಬಳಸಿ ತುಳುನಾಡಿನ ಸಿರಿ ಪಾಡ್ದನಗಳನ್ನು ಸಂಗ್ರಹಿಸಿದ ಕ್ರಮವನ್ನು ಅದರ ಸುತ್ತಲಿನ ವಿಷಯವನ್ನು ಮನಮುಟ್ಟುವಂತೆ
ಅರ್ಥಮಾಡಿಸಿದ್ದರು.

ನಾನು ಎಂ ಎ ಸೇರಿಕೊಂಡ ವರುಷವೇ ಮೊದಲಬಾರಿ ವಿಶ್ವವಿದ್ಯಾಲಯ ಮುಕ್ತ ವಿಷಯೊಂದನ್ನು ಆಯ್ಕೆಮಾಡಿಕೊಳ್ಳುವ ಹೊಸ ವಿಧಾನವನ್ನು
ಪರಿಚಯಿಸಿತ್ತು. ಅದನ್ನು open elective subject ಎಂದು ಕರೆದಿದ್ದರು ನಾವು ಆಯ್ದುಕೊಂಡ ವಿಷಯದ ಜೊತೆಗೆ open elective ವಿಷಯದ
ತರಗತಿಯ ಹಾಜರಿ ಮತ್ತು ಅದರ ಅಂಕಗಳು ಮುಖ್ಯವಾಗಿದ್ದವು. ಆ ಹೊತ್ತಿನಲ್ಲಿ ನನ್ನ ಕರೆದು ಮೇಡಂ ಹೇಳಿದ್ದರು 'ಯಾವ ವಿಷಯ ತಗೋಬೇಕು ಅನ್ನುವುದರ ಬಗ್ಗೆ ನಿಮಗೆ ಪೂರ್ಣ ಸ್ವಾತಂತ್ರವಿದೆ ಆದರೆ ನಿಮಗೊಂದು ಸಲಹೆ ಕೊಡುತ್ತೇನೆ. ಯಾವುದಾದರು ವಿದೇಶಿ
ಭಾಷೆಯನ್ನು ಆಯ್ಕೆಮಾಡಿ. ಅದರಿಂದ ನಿಮ್ಮ ಕಲಿಕೆ ಇನ್ನು ಉತ್ತಮಗೊಳ್ಳುತ್ತದೆ, ಮತ್ತು ಜಾನಪದ ವಿಧ್ಯಾರ್ಥಿಗಳು ಆಂಗ್ಲ ಭಾಷೆ ಮತ್ತು ಇತರ
ಭಾಷೆಗಳನ್ನು ಕಲಿಯಬೇಕು ಅದರಿಂದ ಅಧ್ಯಯನದಲ್ಲಿ ಹೊಸತನ ಕಾಣ ಸಿಗುತ್ತದೆ ಎಂದರು. ಅವರ ಮಾತಿನ ಅರ್ಥ,ದೂರದರ್ಶಿತ್ವ ಆಗ ನನಗೆ ನಿಜಕ್ಕೂ ಅರ್ಥವಾಗಿರಲಿಲ್ಲ. ಆದರೆ ಅವರ ಮಾತನ್ನು ಮೀರದೆ ಅವರ ಸಲಹೆಯಂತೆ ನಾನು ಕ್ರಮವಾಗಿ ಜರ್ಮನ್ ಮತ್ತು ಫ್ರೆಂಚ್ ಭಾಷೆಗಳನ್ನು ಆಯ್ಕೆ ಮಾಡಿಕೊಂಡು ಆ ಭಾಷೆಗಳ ಪ್ರಾರಂಭಿಕ ಕಲಿಕೆ ಮಾಡಲು ಸಾಧ್ಯವಾಯಿತು ,

`The dream begins with a teacher who believes in you ,who tugs and pushes and leads you to the next plateau sometimes poking you with a sharp stick' ಅನ್ನುವ ಮಾತು ಅದೆಷ್ಟು ಸತ್ಯ ನನ್ನಲ್ಲಿ ಅವರು ಕನಸುಗಳನ್ನು ಬಿತ್ತುತ್ತಿದ್ದರು ಸ್ನಾತಕೋತ್ತರ ಜಾನಪದ ಪದವಿ ಪಡೆದವರಿಗೆ ಲೆಕ್ಚರರಿಕೆ ಒಂದೇ ಆಯ್ಕೆ ಅಲ್ಲ! ಅದಲ್ಲದೆ ಹಲವಾರು ಕ್ರಿಯಾಶೀಲ ಕ್ಷೇತ್ರಗಳು ಕಾಯುತ್ತಿವೆ. ಆದರೆ ನಾವು ಅದರ ಬಗ್ಗೆ ಧೇನಿಸುತ್ತಿರಬೇಕು. ಸದಾಕಾಲ ಒಂದು ಎಚ್ಚರಿಕೆ ನಮ್ಮಲ್ಲಿರಬೇಕು. ಆ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ? ಯಾಕೆ ಹೀಗಲ್ಲದಿದ್ದರೆ ಹೇಗೆ ಆಗಬಹುದಿತ್ತು? ಅನ್ನುವ ಪ್ರಶ್ನೆಗಳನ್ನು ಪ್ರತಿ ವಿಷಯಕ್ಕೂ ನಮ್ಮನ್ನು ನಾವು ಕೇಳಿಕೊಳ್ಳಬೇಕು ಅದು ನಮ್ಮ ಆಲೋಚನೆಯನ್ನು ಮೊನಚು ಮಾಡುತ್ತದೆ ಎಂಬುದು ವಿದ್ಯಾರ್ಥಿಗಳಿಗೆಲ್ಲರಿಗೂ ಅವರು ಹೇಳುತ್ತಿದ್ದ ಕಿವಿಮಾತು.

ವಿರಾಮವಿರದ ಅವರ ದಿನಚರಿಯಲ್ಲೂ ಕ್ಲಾಸ್ ಗೆ ಒಮ್ಮೆಲೇ ಬಂದು ಯಾವುದಾದರೂ ವಿಷಯಗಳನ್ನು ಕೊಟ್ಟು ಅದರ ಬಗ್ಗೆ ಬರೆದು ತರಲು
ಹೇಳುತ್ತಿದ್ದರು ಮತ್ತು ಪ್ರತಿ ಬರಹವನ್ನು ಕೂಲಂಕಷವಾಗಿ ಪರಿಶಿಲಿಸಿ ತಿದ್ದುಪಡಿ ಹೇಳುತಿದ್ದರು.
ಆ ನಿಟ್ಟಿನಲ್ಲಿ ನಾನು ಹಲವು ಚಿಕ್ಕಪುಟ್ಟ ಲೇಖನ ಬರೆಯುತ್ತಿದ್ದೆ. ಅದರಲ್ಲಿ ಮುಖ್ಯವಾದದ್ದು ಚಿತ್ರರಂಗ ಮತ್ತು ಜಾನಪದ ಎಂಬ ವಿಷಯದ ಬಗ್ಗೆ
ವಿವರವಾಗಿ ಬರೆದ ನಿಬಂಧ. ಅದನ್ನು ನೆನೆಸಿಕೊಂಡರೆ ಈಗಲೂ ನನಗೆ ನಗು ಬರುತ್ತದೆ. ಸಾಕಷ್ಟು ವಿಷಯಗಳನ್ನು ಇಂಟರ್ನೆಟ್ ನಿಂದ
ಸಂಗ್ರಹಿಸಿದ್ದೆ. ಮೇಡಂ ಅವರಿಂದ ಸಾಕಷ್ಟು ಮೆಚ್ಚುಗೆಯನ್ನೂ ನಿರೀಕ್ಷಿಸಿದ್ದೆ. ಆದರೆ ಅವರು ಮಾತ್ರ 'ಸಂಗ್ರಹ ಚನ್ನಾಗಿದೆ ತುಂಬಾ ವಿಷಯ ಹುಡುಕಿದೀರಿ ಅನ್ನೋದನ್ನು ಬಿಟ್ಟು ಬೇರೇನೂ ಹೇಳಲೇ ಇಲ್ಲ. ನನಗೆ ನಿಜಕ್ಕೂ ಬೇಜಾರಾಗಿತ್ತು.
ಕೆಲವು ವಾರಗಳ ನಂತರ ನನ್ನ ಕರೆದು ಹೇಳಿದರು ‘ನೀವು ತುಂಬಾ ಶ್ರಮ ಪಡ್ತೀರಿ,ವಿಷಯ ಸಂಗ್ರಹಿಸ್ತೀರಿ ಬರೀತೀರಿ ಕೂಡ ಆದರೆ ಅದನ್ನು
ವ್ಯವಸ್ತಿತವಾಗಿ ಜೋಡಿಸುವುದರಲ್ಲಿ ಮುಗ್ಗರಿಸುತ್ತೀರಿ ಇದೊಂಥರ ಇಟ್ಟಿಗೆ ಸಿಮೆಂಟ್ ಕಲ್ಲು ಎಲ್ಲ ವನ್ನು ತಂದು ರಾಶಿ ಹಾಕಿ ಒಮ್ಮೆಲೇ ಮನೆ
ಕಟ್ಟುವ ಹುರುಪಿನಂತೆ. ಆದರೆ ಮನೆ ಕಟ್ಟಲು ಒಂದು ಕ್ರಮವಿದೆ ಅದನ್ನು ನೀವು ಕಲಿಬೇಕು ಅದಕ್ಕೆ ನೀವು ಬಹಳ ಓದಬೇಕು ಅಂದು ತಮ್ಮಲ್ಲಿದ್ದ
ಹಲವಾರು ಪುಸ್ತಕಗಳನ್ನು ನನಗೆ ಓದಲು ಕೊಟ್ಟಿದ್ದರು. ಬರವಣಿಗೆಯ ಮುನ್ನ ಸಂಗ್ರಹಿಸಿದ ವಿಷಯವನ್ನು ಹೇಗೆ ವಿಂಗಡಿಸುವುದು. ಕ್ರಮವಾಗಿ
ಜೋಡಿಸುವುದು ಮತ್ತು ನಿರೂಪಿಸುವುದು ಹೇಗೆ ಅನ್ನುವುದನ್ನು ಉದಾಹರಣೆಗಳ ಸಮೇತ ವಿವರಿಸಿದ್ದರು.

'A teacher is who gives you something to take home to Think about ,besides homework'
ಅವರು ಕಲಿಸುತ್ತಿದ್ದುದೆ ಹಾಗೆ, ಪಾಠಗಳು ನಿಮಿತ್ಯ ಮಾತ್ರ ಆದರೆ ನಿಜವಾದ ಪಾಠಶಾಲೆ ಸಮಾಜ, ಜನಪದವನ್ನು ನಾಲ್ಕು ಗೋಡೆಗಳ ಮಧ್ಯೆ
ಕುಳಿತು ಕಲಿಯಾಲಾಗದು, ನಿಮಗೆ ಅದರ ಗುಂಗು ಹಿಡಿಯಬೇಕು ಅನ್ನುತ್ತಿದ್ದರು ಮತ್ತು ಅದು ನನಗೆ ಹಿಡಿದೇ ಬಿಟ್ಟಿತು. ಕಾಲೇಜಿಗೆ ಹೋಗಲು
ನಾನು ದಿನ ಮುಂಡಗೊಡಿನಿಂದ ಧಾರವಾಡಕ್ಕೆ, ಮತ್ತೆ ವಾಪಸ್ ಮನೆಗೆ ಬರಲು ಬಸ್ನಲ್ಲಿ 150ಕಿಲೋಮೀಟರ್ ಪ್ರಯಾಣ ಮಾಡಬೇಕಿತ್ತು. ಆ
ಪಯಣದಲ್ಲಿ ದಿನದ ನಾಲ್ಕು ಘಂಟೆಗಳು ವ್ಯಯವಾಗುತಿದ್ದವು, ಅಷ್ಟು ಸಮಯ ನನ್ನ ಆಲೋಚನೆ ಓದು ಬರೀ ಜನಪದವೇ. ಕುರಿಮಂದೆಯ
ಹೆಣ್ಣುಮಗಳ ಕಿವಿಯಲ್ಲಿಯುವ ಬುಗುಡಿ ಯಿಂದ ಅದ್ಯಾರೊ ಹಿಡಿದು ಬಂದ ಕಸೂತಿ ಚೀಲದವರೆಗೆ. ಆಟೋ ರಿಕ್ಷಾ ಹಿಂಬದಿಯ ತಮಾಷೆ
ಬರಹಗಳಿಂದ ಹಿಡಿದು, ಜಗಳದಲ್ಲಿ ಬಳಸಲ್ಪಡುವ ಬೈಗುಳದಲ್ಲಿಯೂ, ಎಲ್ಲಿ ನೋಡಿದರಲ್ಲಿ ಜನಪದವೇ ಕಾಣುತಿತ್ತು.

ಮೇಡಂ ಅವರು ನನ್ನ ಮೇಲೆ ಅಷ್ಟು ಪರಿಣಾಮ ಬೀರಿದ್ದರು ಮಾತಿನಲ್ಲಿ, ಹಾಡಿನಲ್ಲಿ,ಕುಣಿತದಲ್ಲಿ ,ನಡೆಯಲ್ಲಿ ,ಹಿತ್ತಲ ಕಸದಲ್ಲೂ ಜನಪದೀಯ
ಅಂಶಗಳು ಕುಣಿದಾಡುತ್ತಿದ್ದವು. ಆಗ ನನ್ನ ಮನಸು ಬುದ್ದಿ ಅನುಭವಿಸಿದ ಆ ಖುಷಿ, ಆತ್ಮ ಸಂತೃಪ್ತಿಯನ್ನು ಬರಹದಲ್ಲಿ ಹಿಡಿದಿದಲಾಗದು. ಇಷ್ಟು
ವರ್ಷ ನಾನು ಹುಡುಕುತ್ತಿದ್ದುದು ಇದೆ ಏನೋ ಅನ್ನ್ನಿಸುವುದಕ್ಕೆ ಶುರುವಾಗಿದ್ದು ನನ್ನ ಎಲ್ಲ ಚಡಪಡಿಕೆಗಳಿಗೆ ಉತ್ತರ ಜಾನಪದ ಮಾತ್ರವೇ
ನೀಡಬಲ್ಲದು ಎಂಬ ಸತ್ಯ ಅರಿವಾಗಿತ್ತು.

ಇದೆ ಸಮಯದಲ್ಲಿ ಮೇಡಂ ಅವರ ಮತ್ತೊಂದು ಯೋಜನೆಯಿಂದ ನಾನು ಜಾನಪದದ ಮತ್ತೂಂದು ಮಗ್ಗಲು ನೋಡುವಂತಾಯಿತು. ಪ್ರವಾಸೋದ್ಯಮ ಮತ್ತು ಜಾನಪದ ಎಂಬ ವಿಷಯದ ಮೇಲೆ ಮೂರು ದಿನಗಳ ಕಾರ್ಯಾಗಾರ, ನನ್ನ ಸ್ನಾತಕೋತ್ತರ ಅಧ್ಯಯನದ ಇನ್ನೊಂದು ತಿರುವು ಅದು.
ಅಲ್ಲಿ ನಾ ತಿಳಿದ ,ನೋಡಿದ ,ಕಲಿತ ವಿಷಯ ಹಲವು ಅಲ್ಲಿಯ ತನಕ ಸಂಗೀತ ಮತ್ತು ಜಾನಪದವನ್ನು ಜೊತೆಮಾಡಿ ಅದನ್ನೇ ನನ್ನ ಮುಖ್ಯ
ಅಧ್ಯಯನದ ವಿಷಯವನ್ನಾಗಿ ಮಾಡಿಕೊಳ್ಳಬೇಕು, ಸಂಶೋಧನೆಗೆ ಅಣಿಯಾಗಬೇಕು ಅಂದುಕೊಂಡ ನನಗೆ ಜನಪದ ವೈದ್ಯದ ಮೇಲೆ ಪ್ರೀತಿ
ಹುಟ್ಟಿತು. ಅದಕ್ಕೆ ಕಾರಣವಾಗಿದ್ದು ಹೊನ್ನಾವರದ ಜನಪದ ತಜ್ಞೆ ಶ್ರೀಮತಿ ಶಾಂತಿ ನಾಯಕ್ .

ಸೆಮಿನಾರ್ ಮುಗಿಸಿ ಬಂದ ದಿನದಿಂದಲೇ ನಾನು ಮೇಡಂ ಅವರ ಬೆನ್ನು ಬಿದ್ದೆ. ಜನಪದ ವೈದ್ಯದ ಕುರಿತು ಅವರಲ್ಲಿದ್ದ ಅಪರೂಪದ ಪುಸ್ತಕಗಳು
,ಲೇಖನಗಳು, ಅವರಿಗೆ ತಿಳಿದಿದ್ದ ಹಲವಾರು ವಿಷಯಗಳನ್ನು ಸಮಯ ಸಿಕ್ಕಾಗಲೆಲ್ಲ ಚರ್ಚಿಸುತ್ತಿದ್ದರು.ಮತ್ತು ಜನಪದ ವೈದ್ಯದ ಕುರಿತು
ಸಂಶೋಧನೆ ಅಥವಾ ಅಧ್ಯಯನ ಮಾಡುವಾಗ ಎದುರಾಗುವ ಸಮಸ್ಯೆಗಳ ಬಗ್ಗೆ ಮೊದಲೇ ಅವರು ನನಗೆ ಎಚ್ಚರಿಸಲು ಮರೆಯಲಿಲ್ಲ.
ಅವರ ಕಾರಣದಿಂದಲೇ ನಾನು ಶಾಂತಿ ನಾಯಕ್ ,ಏನ್ ಆರ್ ನಾಯಕ್, ಅರವಿಂದ್ ನಾವಡ, ಅಂಬಳಿಕೆ ಹಿರಿಯಣ್ಣ ,ಮತ್ತು ಜಾನಪದ ಲೋಕದ ಹಲವು ದಿಗ್ಗಜರನ್ನು ಭೇಟಿ ಮಾಡಿದೆ.
ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ ಎಂಬ ವಿಷಯದ ಬಗ್ಗೆ ವಿಚಾರ ಕಮ್ಮಟ ಏರ್ಪಡಿಸಿದಾಗ ಅಲ್ಲಿ ಚರ್ಚಿಸಬೇಕಾದ
ವಿಷಯಗಳನ್ನು ಮೇಡಂ ಅದೆಷ್ಟು ಚನ್ನಾಗಿ ಆಯ್ಕೆ ಮಾಡಿದ್ದಾರೆ ವಾಹ್ ಅನ್ನಿಸುತ್ತಿತ್ತು. ಪ್ರತಿಯೊಂದು ವಿಷಯವು ಅನನ್ಯ. ಟಿ ಎಸ ನಾಗಭರಣ
ಅವರನ್ನು ನೇರ ಸಂವಾದಕ್ಕೆ ಕರೆದು ಅದೆಷ್ಟು ಚಂದದ ಕಾರ್ಯಕ್ರಮವನ್ನು ವಿಧ್ಯಾರ್ಥಿಗಳ ಮುಂದೆ ಇಟ್ಟಿದ್ದರು ಮತ್ತು ಅದು ಅಷ್ಟೇ
ಉಪಯುಕ್ತವಾಗಿತ್ತು.
ಅಂಥದೇ ಇನ್ನೊಂದು ಅನನ್ಯ ಕಾರ್ಯಕ್ರಮ ಶಿರಸಿಯ ಅಜ್ಜಿಮನೆಯಲ್ಲಿ ನಡೆದ ಸ್ಥಳೀಯ ಪರಂಪರಾಗತ ಜ್ಞಾನ ಮತ್ತು ಆರೋಗ್ಯ. ಇಲ್ಲಿ
ಚರ್ಚಿತವಾದ ವಿಷಯಗಳೂ ಅಷ್ಟೇ ಈಗಲೂ ಹಸಿರು ಹಸಿರು ಕೆಲವೊಮ್ಮೆ ಶಿಬಿರದ ನಡುವೆ ಮೇಡಂ ನಮಗೆ ವಿಷಯ ಸಂಬಂಧಿ ಪ್ರಶ್ನೆ
ಕೇಳುತ್ತಿದ್ದರು, ಮತ್ತು ಸಂಪನ್ಮೂಲ ವ್ಯಕ್ತಿ ಮಾತನಾಡುತ್ತಿರುವ ವಿಷಯಕ್ಕೆ ನಾವು ಎಷ್ಟರ ಮಟ್ಟಿಗೆ ಕನೆಕ್ಟ್ ಆಗಿದ್ದೇವೆ ಎಂಬುದನ್ನು ಸೂಕ್ಷ್ಮವಾಗಿ
ಪರಿಶೀಲಿಸುತ್ತಿದ್ದರು , ಈ ದಿಸೆಯಲ್ಲಿ ನಾವು ಭೇಟಿಯಾದದ್ದು ಅಪರೂಪದ ವಿಜ್ಞಾನಿ ಪಲ್ಲತಡ್ಕ ಕೇಶವ ಭಟ್ಟ್ ಅವರನ್ನ , ಈ ರೀತಿಯ ಅನನ್ಯ
ವಿಚಾರ ಮತ್ತು ದೃಷ್ಟಿಕೋನ ಮತ್ತು ಸರಳತೆ ಮೇಡಂ ಅವರನ್ನು ಮತ್ತೂ ಹೆಚ್ಚು ಗೌರವಿಸುವಂತೆ ಮಾಡುತ್ತಿದ್ದವು ,

ಆ ವರೆಗೆ ಮೇಡಂ ಅಂದರೆ ನನಗೆ ನನ್ನ ದೊಡ್ಡಮ್ಮ ಚಿಕ್ಕಮ್ಮ ಸೋದರತ್ತೆ ರೂಪದಲ್ಲೇ ಕಂಡಿದ್ದರು. ಅವರು ಯಾವತ್ತು ಸಿಟ್ಟು ಮಾಡಿದ್ದು,
ಜೋರಾಗಿ ಮಾತಾಡಿದ್ದು,ತಾಳ್ಮೆ ಕಳೆದುಕೊಂಡಿದ್ದು ನಾನು ನೋಡೇ ಇಲ್ಲ. ಎಂಥ ಕಠಿಣ ಪರಿಸ್ಥಿತಿಯಲ್ಲೂ ಅವರೊಂದು ಹೊಸ ವಿಚಾರ ಹುಡುಕಿ
ಅದನ್ನು ಹಿಂಬಾಲಿಸಲು ಹೊರಡುತ್ತಿರುವಂತೆ ನನಗೆ ಭಾಸವಾಗುತಿತ್ತು.
ಅದು ನನ್ನ ಕೊನೆ ಸೆಮಿಸ್ಟರ್. ನಾವು ಕ್ಷೇತ್ರ ಕಾರ್ಯ ಮಾಡಿ ನಿಬಂಧವಿ ಬರೆದು ವಿಶ್ವವಿದ್ಯಾಲಯಕ್ಕೆ ಸಾದರಪಡಿಸಬೇಕಿತ್ತು. ನಾನು ಆಯ್ದು
ಕೊಂಡಿದ್ದು ಬಾಣಂತಿ, ನವಜಾತ ಶಿಶುವಿನ ಆರೈಕೆ ಮತ್ತು ಜನಪದ ವೈದ್ಯ ಪದ್ಧತಿ. ಆಗ ಮಾತ್ರ ಮೇಡಂ ಅವರ ಇನ್ನೊಂದು ರೂಪ ನೋಡಿದ್ದು.
ನಾನು ಅತಿ ಭಾವುಕಿ, ಸಿನಿಮ ಕಾದಂಬರಿ ಭಾವಗೀತೆ,ಗಝಲ್ ಹುಚ್ಚು ಇದ್ದಿದ್ದಕ್ಕೋ ಏನೋ ನನ್ನ ಬರವಣಿಗೆ ಒಂದು ವಿಚಿತ್ರ ಧಾಟಿಯಲ್ಲಿ
ಇರುತಿತ್ತು.

ರಜಾ ಅರ್ಜಿಯನ್ನೂ ಕವಿತೆಯಂತೆ ಬರೆಯುತ್ತಿದ್ದೆ. ನಿಬಂದ ಬರೆಯುವಾಗ ನನ್ನ ಅದೇ ಬರವಣಿಗೆ ಮುಂದುವರಿಯಿತು , ಮೇಡಂ ನಾಲ್ಕು ಬಾರಿ
ನನ್ನ ಕರಡು ಪ್ರತಿಯನ್ನು ಸರಿ ಇಲ್ಲ ಎಂದು ಮರಳಿಸಿ ಬಿಟ್ಟರು. ಅದು ಕೊನೆ ಹಂತ ನನ್ನಲ್ಲಿ ಸಾಕಷ್ಟು ಮಾಹಿತಿ ಇತ್ತು ಬರವಣಿಗೆ ಸಂಪೂರ್ಣ
ಗೊಂಡಿತ್ತು. ಯಾಕೆ ?ಏನು ತಪ್ಪು ಎಂಬುದು ಅರಿವಿಗೆ ಬರಲಿಲ್ಲ ,ಮತ್ತೆ ಕೊಟ್ಟೆ ಆಗ ಅಂದರು; ನಿಮ್ಮ ತಪ್ಪು ನಿಮಗೆ ಗೊತ್ತಾಗುತ್ತೆ ಅಂದುಕೊಂಡೆ.
ನೀವು ಅದನ್ನು ಗಮನಿಸಿಯೇ ಇಲ್ಲ ಆದಷ್ಟು ಸರಳ ವಾಕ್ಯಗಳನ್ನು ಬಳಸಿ. ನೇರ ವಿಷಯಗಳನ್ನು ಹೇಳುವಾಗ ಅಷ್ಟೇ ದೃಡವಾಗಿ ನೇರವಾಗಿ
ಹೇಳಬೇಕು ಮತ್ತು ಅದಕ್ಕೊಂದು ಚೌಕಟ್ಟಿರಬೇಕು ಎಲ್ಲೆಂದರಲ್ಲಿ ಹೇಗೆ ಬೇಕೋ ಹಾಗೆ ಬರೆಯೋದಲ್ಲ ಅಂದು ಮತ್ತೆ ವಾಪಸ್ ಮಾಡಿದ್ದರು.
ಬಸ್ಸಿನಲ್ಲಿ ಕುಳಿತು ಮತ್ತೆ ಹಾಳೆಗಳನ್ನು ತಿರುವಿದೆ ಪ್ರತಿ ಪುಟದಲ್ಲೂ ಅವರ ಅಕ್ಷರಗಳು. ಅಷ್ಟೂ ಪುಟಗಳನ್ನು ಓದಿ ಮಾರ್ಕ್ ಮಾಡಿ ಕೊಟ್ಟಿದ್ದರು.
ಅದನ್ನು ಹೇಗೆ ಬರೆಯಬಹುದು ಅನ್ನುವುದನ್ನು ಸೂಚ್ಯವಾಗಿ ಹೇಳಿದ್ದರು ಆಗಲೇ ಅನ್ನಿಸಿದ್ದು, ಕಾವ್ಯಾತ್ಮಕ ಬರವಣಿಗೆ ಮತ್ತು ನೇರ ಬರವಣಿಗೆ
ಅದೆಷ್ಟು ದೂರ ದೂರ. ಸ್ವಲ್ಪ ಆಯ ತಪ್ಪಿದರು ಅರ್ಥ ಅಪಾರ್ಥ ಆಗುವ ಸಂಭವ ಇರುತ್ತದೆ ಅಧ್ಯಯನ ಪ್ರಬಂಧ ಲಲಿತ ಪ್ರಬಂಧವಾಗುವ
ಸಾಧ್ಯತೆ ಇರುತ್ತದೆ. ಅದನ್ನು ಮೇಡಂ ನನಗೆ ಅದೆಷ್ಟು ಚನ್ನಾಗಿ ಅರ್ಥ ಮಾಡಿಸಿದ್ದರು.

ಜಾನಪದ ದ ಬಗ್ಗೆ ಮಾತಾಡುವ ಹಲವರು ಜನಪದ ಕಲಾವಿದರನ್ನು ನಡೆಸಿಕೊಳ್ಳುವ ರೀತಿಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಜನಪದ
ಉಳಿಸಿ ಬೆಳೆಸಿ ಅನ್ನುತ್ತಾ ಭಾಷಣ ಮಾಡಿ ಹಾರ ತುರಾಯಿ ಹಾಕಿಸಿಕೊಂಡು, ಕಾರಿಡಾರಿನಲ್ಲಿ ನಡೆಯುವಾಗ ಅದೇ ಮಗ್ಗುಲಲ್ಲಿ ಕುಳಿತ ಜನಪದ
ಕಲಾವಿದರಿಗೆ ನಕ್ಕು ನಮಸ್ಕರಿಸಿದ ದೊಡ್ಡ ವಿದ್ವಾಂಸರೂ ಈ ಕ್ಷೇತ್ರದಲ್ಲಿ ಇದ್ದಾರೆ.
ಅಂಥಹ ಸಂದರ್ಭದಲ್ಲಿ ನಮ್ಮ ವಿಶ್ವವಿದ್ಯಾಲಯಕ್ಕೆ ಜನಪದ ಕಲೆಗಳು ಪ್ರಾಯೋಗಿಕ ಪರೀಕ್ಷೆಗಳಿಗೆಂದು ಹಾಲಕ್ಕಿ ಸುಗ್ಗಿ, ಕೋಲಾಟ ಕಲಿಸಲು ಬಂದ ಕಲಾವಿದರನ್ನು ಅದೆಷ್ಟು ಆತ್ಮೀಯವಾಗಿ ಮಾತನಾಡಿಸಿ, ಅವರ ಯೋಗಕ್ಷೇಮ ವಿಚಾರಿಸಿ ,ಅವರೊಂದಿಗೆ ಅದೆಷ್ಟು ಸರಳತೆಯಿಂದ
ಸಜ್ಜನಿಕೆಯಿಂದ ವರ್ತಿಸುವ ಮೇಡಂ.ಅವರ ಊಟ ತಿಂಡಿ ವಸತಿ ಬಗೆಗೆ ಮನೆ ಮಂದಿಯ ಬಗ್ಗೆ ವಹಿಸುವ ಕಾಳಜಿಯನ್ನೇ ತೋರಿಸುವುದು
ನೋಡಿದಾಗ ಅವರು ತುಂಬಿದ ಕೊಡ ಅನಿಸಿದ್ದು ಅದೆಷ್ಟು ಸಲವೂ.

ಹಾಗೆ ಒಂದು ದಿನ ಅವರ ಆಫೀಸ್ ನಲ್ಲಿ ನಾನು ಯಾವುದೊ ವಿಷಯ ಅವರೊಂದಿಗೆ ಚರ್ಚಿಸುತ್ತಿದ್ದಾಗ ,ಆಗಷ್ಟೇ ಪಿ ಹೆಚ್ ಡಿ ಸೇರಿಕೊಂಡ ನನ್ನ
ಸಿನಿಯರ್ ಒಬ್ಬರಿಗೆ ಲಕೊಟೆ ಒಂದನ್ನು ಕೊಟ್ಟರು. ನಿಮ್ಮ ಸ್ಕಾಲರ್ಷಿಪ್ ಬರೋತನಕ ಸುಮಾರು ಕೆಲಸ ಮಾಡಲಿಕ್ಕೆ ಇರುತ್ತದೆ, ಮತ್ತು ಖರ್ಚು
ಆಗುತ್ತೆ ಇದು ನನ್ನ ಪುಟ್ಟ ಸಹಾಯ ನಿಮಗೆ.ಅಧ್ಯಯನ ಚೆನ್ನಾಗಿ ನಡೀಲಿ ಎಂದು ಆಶೀರ್ವದಿಸಿದರು. ಆ ವಿದ್ಯಾರ್ಥಿ ಹೊರಗೆ ಹೋದ ನಂತರ
ಪ್ರತಿ ವರ್ಷ ಯೋಗ್ಯ ಅನಿಸಿದ ಒಬ್ಬ ವಿದ್ಯಾರ್ಥಿಗೆ ನನ್ನ ಪತಿಯ ಸ್ಮರಣಾರ್ಥ ಒಂದಷ್ಟು ಸಹಾಯ ಮಾಡ್ತೇನೆ ನನ್ನ ಮನಸಿನ ನೆಮ್ಮದಿಗೆ ಅಂದರು ಆ ದಿನ ಅವರ ಮತ್ತೊಂದು ಅನನ್ಯತೆ ನನಗೆ ಕಾಣಿಸಿತ್ತು.

ನನಗನಿಸಿದ ಪ್ರಕಾರ ಅವರ ಸೃಜನ ಶೀಲತೆ ,ಮತ್ತು ನವೀನ ಆಲೋಚನೆಗಳು ಅವುಗಳನ್ನು ಕಾರ್ಯಗತ ಮಾಡುವಲ್ಲಿ ಹಲವಾರು ಬಾರಿ
ಪೂರಕ ವಾತಾವರಣ ಇರುತ್ತಿರಲಿಲ್ಲ ಸಿಬ್ಬಂದಿ ಸಹಕಾರ ,ಕೆಲವೊಮ್ಮೆ ವಿದ್ಯಾರ್ಥಿಗಳ ನಿರಾಸಕ್ತಿ ಅವರಿಗೆ ಬೇಸರ ತರುತ್ತಿತ್ತು, ಆದರೆ ಎಂದು ಆ
ಕಾರಣ ಕೊಟ್ಟು ಯಾವುದೇ ಯೋಜನೆಯನ್ನು ಅವರು ಕೈಬಿಟ್ಟಿಲ್ಲ. ಜನಪದ ಸಂಗ್ರಹಾಲಯ ಮತ್ತು ಅದಕ್ಕೆ ವಸ್ತುಗಳನ್ನು ಪೇರಿಸುವ ಕೆಲಸದಲ್ಲಿ
ಅವರು ತೋರಿಸುತ್ತಿದ್ದ ಆಸಕ್ತಿ ಪುಟ್ಟ ಮಗು ಹೊಸ ವಿಷಯಕ್ಕೆ ತೋರುವ ಉತ್ಸಾಹದಂಥದ್ದು.

ಒಮ್ಮೆ ನನಗೆ ರಂಗಗೀತೆ ಗಳ ಬಗ್ಗೆ ಸ್ವಲ್ಪ ವಿವರಣೆಗಳು ಬೇಕಿದ್ದವು. ನಾನು ಅವರನ್ನು ಆ ಬಗ್ಗೆ ಕೇಳಿದ್ದೆ ಮತ್ತು ಅದನ್ನು ಮರೆತು ಬಿಟ್ಟಿದ್ದೆ. ಆದರೆ
ಅವರು ತಮ್ಮ ಸಂಗ್ರಹದಲ್ಲಿನ ಪುಸ್ತಕ ಹುಡುಕಿ ಮತ್ತೆ ಸಂಜೆ ನನಗೆ ಫೋನ್ ಮಾಡಿದ್ದರು ನಾಳೆ ಪುಸ್ತಕ ತಗೊಂಡ್ ಹೋಗು ಅದು ಸಿಕ್ಕಿದೆ ಎಂದಾಗ ಅವರು ಆಸಕ್ತ ವಿದ್ಯಾರ್ಥಿಗಳಿಗಾಗಿ ಕೊಡುತ್ತಿದ್ದ ಸಮಯ ಮತ್ತು ಪ್ರಾಮುಖ್ಯತೆ ಅರಿವಿಗೆ ಬಂದಿತ್ತು.
ಕಲಿಯುವ ಮನಸ್ಸಿರುವ ವಿದ್ಯಾರ್ಥಿಗೆ ಇಂಥ ಒಬ್ಬ ಗುರು ದಕ್ಕಿದರೆ ಆ ವಿದ್ಯಾರ್ಥಿಯ ಭವಿಷ್ಯ ಉಜ್ವಲ ವಾದಂತೆಯೇ. ಕಲಿಯುವ ಪಾಠ
ಪಾಠವಾಗಿರದೆ ಅದು ಬದುಕಿಗೆ ಇಂಬುಕೊಡುವ ವಿದ್ಯೆಯಾಗಿತ್ತದೆ.

ನನ್ನ ನೆರವೇರದ ಆಸೆ ಎಂದರೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಬೇಕು ಎಂಬುದು. ಸ್ನಾತಕೋತ್ತರ ಅಧ್ಯಯನ ಮುಗಿದ ನಂತರ ನಾನು ಬೆಲ್ಫಾಸ್ಟ್ ಬಂದು ಸೇರಿದೆ. ವಿಶ್ವವಿದ್ಯಾಲಯದ ಕೆಲವು ನಿಯಮಗಳು ಕಲಿಯುವ ತುಡಿತವಿರುವ ವಿದ್ಯಾರ್ಥಿಗಳಿಗೆ ಬೇಲಿ ಹಾಕಿಬಿಡುತ್ತವೆ.
ಆದರೂ ಇಂದಿಗೂ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವೆ. ನಾನು ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡ ಜನಪದ ನನ್ನ ಕೈಹಿಡಿದು
ಮುನ್ನಡೆಸಿದೆ ಈಗಲೂ ನಾ ಅವರಿಗೆ ಫೋನ್ ಮೂಲಕ ಸಂಪರ್ಕಿಸಿದರೆ ಅದೇ ಆತ್ಮೀಯತೆ ಅಷ್ಟೇ ಆಪ್ಯಾಯತೆ ಅಕ್ಕರೆ. “ಶಾನಭಾಗ್ ಊರಿಗೆ
ಬಂದೀರ?” ಎನ್ನುತ್ತಲೇ ಮಾತು ಶುರುಮಾಡಿ ಅದೆಷ್ಟು ವಿಷಯ, ಉಲ್ಲೇಖ, ನೆನಪು ಹಂಚಿಕೊಳ್ತಾರೆ. ನನ್ನ ಬಾಲಿಶ ಪ್ರಶ್ನೆಗಳಿಗೆ ತಾಳ್ಮೆಯಿಂದ
ಉತ್ತರಿಸುತ್ತಾರೆ , ಅವರ ಶಿಷ್ಯೆ ಅವರ ವಿದ್ಯಾರ್ಥಿನಿ ಅನ್ನಲು ನನಗೆ ಯಾವತ್ತಿಗೂ ಹೆಮ್ಮೆ.