‘ಸಂಕಟ ಬಂದಾಗ ವೆಂಕಟರಮಣ’

ಸಂಕಟ ಬಂದಾಗ ವೆಂಕಟರಮಣ ಎಂಬುದು ಕನ್ನಡದಲ್ಲಿ ಬಹಳೇ ಪ್ರಚಲಿತ ಇರುವ ಗಾದೆ . ನಮ್ಮ ಪೂರ್ವಜರು ಬಹಳ
ಅನುಭವದಿಂದ ಹೇಳಿರುವ ಮಾತು . ನನಗೂ ಸಹ ಯಾಕೋ ಇದರ ಮೇಲೆ ಸ್ವಲ್ಪ ಹರಟೆ ಹೊಡೆಯಬೇಕು ಎಂದು ಅನಿಸಿತು .
ಹರಟೆ ಎಂದ ತಕ್ಷಣ ನಮ್ಮೂರಿನ ಆಲದ ಮರದ ಹರಟೆಯ ಕಟ್ಟೆಯ ನೆನಪು ಬರುತ್ತದೆ . ಸಂಜೆಯಾದರೆ ಊರ ಜನರು ಸೇರಿ
ಹರಟೆ ಹೊಡೆಯುತ್ತಿದ್ದ ಆ ಕಟ್ಟೆ ಇನ್ನೂ ಇದೆ , ಆದರೆ ಈಗ ಹರಟೆ ಹೊಡೆಯುವರಿಲ್ಲ ಬದಲು ಫೋನು ಹಿಡಿದುಕೊಂಡು
ವಿಡಿಯೋ ನೋಡುವ ಪಡ್ಡೆ ಹುಡುಗರು ಇದ್ದಾರೆ . ನಾನೂ ಇಲ್ಲಿ ಕುಳಿತು ಒಂದು ಕಟ್ಟೆ ನೋಡುತ್ತಿದ್ದೆ , ಹರಟೆ ಹೊಡೆಯಲು .
ಅನಿವಾಸಿ ಕಟ್ಟೆ ಸಿಕ್ಕಿತು . ಒಬ್ಬನೇ ಕುಳಿತು ಹರಟೆ ಹೊಡೆದಿದ್ದೇನೆ. ಸಮಯ ಸಿಕ್ಕರೆ ಓದಿ , ಹಾಗೆಯೆ ಒಂದೆರಡು ಸಾಲು
ಅನಿಸಿಕೆಗಳನ್ನು ದಯವಿಟ್ಟು ಗೀಚಿ .


ಸಂಕಟ ಬಂದಾಗ ಸಹಾಯಕ್ಕೆ ಮೊರೆಹೋಗುವುದು ಎಲ್ಲ ಜೀವಿಗಳ ಸಹಜವಾದ ಸ್ವಭಾವ . ಭೂಮಂಡಲದಲ್ಲಿ ತಾನೇ
ಶ್ರೇಷ್ಠನೆಂದು ಬೀಗುವ ಮನುಜ ಇದಕ್ಕೇನು ಹೊರತಾಗಿಲ್ಲ . ಸಂಕಟ ಬಂದಾಗ ಅಥವಾ ಬರಿಸಿಕೊಂಡಾಗ ಹತ್ತು ಹಲವಾರು
ಮಾರ್ಗಗಳ ಅನ್ವೇಷಣೆಯಲ್ಲಿ ತೊಡಗುತ್ತಾನೆ . ಅಡ್ಡದಾರಿ ಹುಡುಕುವದು , ಮೋಸ ಮಾಡುವದು , ಇನ್ನೊಬ್ಬರಿಗೆ
ಅನ್ಯಾಯವೆಸಗುವದು , ಲಂಚ ಕೊಡುವದು ಇವೆಲ್ಲವೂ ಫಲ ನೀಡದಿದ್ದಾಗ ಕೊನೆಯ ಪ್ರಯತ್ನವಾಗಿ ದೇವರಿಗೆ ಮೊರೆ
ಹೋಗುವದು ಸಾಮಾನ್ಯ . ಎಷ್ಟೋ ಜನರಿಗೆ ನಿತ್ಯ ಜೀವನದಲ್ಲಿ ಲಂಚವನ್ನು ಕೊಟ್ಟು, ಪಡೆದು ಅಸಾಧ್ಯವಾದ ಕೆಲಸಗಳನ್ನು
ಸರಾಗವಾಗಿ ಗಿಟ್ಟಿಸಿಕೊಂಡು , ಬಂದ ಸಂಕಟವನ್ನು ಹಾಗೆಯೆ ಪರಿಹರಿಸಿಕೊಂಡ ಅಭ್ಯಾಸ .

ಸಂಕಟದ ಪರಿಸ್ಥಿತಿ ಬಂದಾಗ , ತಮ್ಮ ಮನಸಿನಂತೆ ದೇವರ ಮನಸೂ ಇರಬಹುದೆಂದು ಊಹಿಸಿ , ದೇವರಿಗೂ ಸಹ
ಲಂಚಕೊಡಲು ಮುಂದಾದ ಮಹಾಶಯರಿಗೆ ಏನೂ ಕೊರತೆಯಿಲ್ಲ . ಲಂಚ ಕೊಡುವ ರೀತಿ ಮಾತ್ರ ವಿಭಿನ್ನವಾಗಿರಬಹುದು .
ಇತ್ತೀಚಿಗೆ ನಮ್ಮ ಹಳ್ಳಿಯಲ್ಲಿ ನಡೆದ ಪಂಚಾಯತ ಸದಸ್ಯರ ಚುನಾವಣೆಗೆ ಬಸಪ್ಪ ಶೆಟ್ಟಿ ಸ್ಪರ್ಧಿಸಿದ್ದ . ಅಂಗಡಿಯ ವ್ಯವಹಾರ
ಚನ್ನಾಗಿದ್ದಿದ್ದರಿಂದ ಒಳ್ಳೆಯ ಹಣವನ್ನು ಸಂಪಾದಿಸಿದ್ದ . ಅದೆಷ್ಟೇ ಹಣ ಖರ್ಚಾದರೂ ಚುನಾವಣೆಯನ್ನು ಗೆಲ್ಲಲೇ ಬೇಕೆಂದು
ಶಪಥಪಟ್ಟಿದ್ದ . ಮೊದಲಿನಿಂದಲೂ ದಾಯಾದಿಯಾಗಿದ್ದ ಎದುರು ಮನೆಯ ನಂಜಪ್ಪನಿಗೆ ವಿಷಯ ಗೊತ್ತಾಗಿ ಹೊಟ್ಟೆಯಲ್ಲಿ ಕಸಿವಿಸಿ ಉಂಟಾಗಿ ನಿದ್ರೆಬಾರದಾಗಿತ್ತು. ಹೇಗಾದರೂ ಮಾಡಿ ಶೆಟ್ಟಿಯನ್ನು ಸೋಲಿಸಲೇ ಬೇಕೆಂದು ತಂತ್ರವನ್ನು ಹೂಡತೊಡಗಿದ್ದ .ಆದರೆ ಶೆಟ್ಟಿಯಲ್ಲಿದ್ದಷ್ಟು ಹಣವೂ ಇರಲಿಲ್ಲ ಜನಬಲವೂ ಇರಲಿಲ್ಲ . ಹಗಲೂ ರಾತ್ರಿ ಕೊರಗುತ್ತಿದ್ದ ಅವನಿಗೆ ಕೊನೆಗೊಂದು ದಿನ ಸರಳ ಉಪಾಯ ಹೊಳೆಯಿತು . ತಿರುಪತಿ ತಿಮ್ಮಪ್ಪನಿಗೆ ಮೊರೆ ಹೋದ . ಶೆಟ್ಟಿಯನ್ನು ಚುನಾವಣೆಯಲ್ಲಿ ಸೋಲಿಸಿದರೆ ತಿಮ್ಮಪ್ಪನ
ಹುಂಡಿಗೆ ೫೦೦೧ ರೂಪಾಯಿ ಹಾಕುವದಾಗಿ ಹರಕೆ ಹೊತ್ತ . ವಿಷಯ ಶೆಟ್ಟಿಗೆ ಗೊತ್ತಾಗಿ ಅವನಿಗೂ ಕಸಿವಿಸಿಯಾಗತೊಡಗಿತು .
ಊರ ಜನರಿಗೆ ತಾನು ಎಷ್ಟೊಂದು ಹಣವನ್ನು ಖರ್ಚು ಮಾಡಿದರೂ ತಿಮ್ಮಪ್ಪನ ಕರುಣೆ ನಂಜಪ್ಪನಿಗೆ ಗಿಟ್ಟಿಬಿಟ್ಟರೆ ಏನು ಗತಿ ?
ಎಂದು ದಿನವಿಡೀ ತವಕಾಡತೊಡಗಿದ . ಯಾವುದಕ್ಕೂ ಸ್ವಲ್ಪನೂ ಅಪಾಯವನ್ನು ತೆಗೆದುಕೊಳ್ಳಬಾರದು ಎಂದು ಅವನ
ಸ್ನೇಹಿತರೆಲ್ಲ ಹೇಳತೊಡಗಿದ್ದರು . ನಿದ್ರೆಬಾರದ ರಾತ್ರಿಯಲ್ಲಿ ಒಂದು ನಿರ್ಧಾರ ತೆಗೆದೇಕೊಂಡ . ನಂಜಪ್ಪನಿಗಿಂತ ಎರಡು ಪಟ್ಟು
ಹಣವನ್ನು ಹುಂಡಿಗೆ ಹಾಕುವದಾಗಿ ತಾನೂ ಸಹ ತಿಮ್ಮಪ್ಪನಿಗೊಂದು ಹರಕೆ ಹೊತ್ತೇಬಿಟ್ಟ . ಈಗ ನೀವೇ ಹೇಳಿ ತಿಮ್ಮಪ್ಪ ಏನು
ಮಾಡಬೇಕೆಂದು ? ತಾವೇ ಬರಿಸಿಕೊಂಡ ಇವರ ಸಂಕಟವನ್ನು ಅವನು ಹೇಗೆ ಬಗೆಹರಿಸಬೇಕೆಂದು ? . ಇವರಿಬ್ಬರು ತಮ್ಮ
ವಯಕ್ತಿಕ ಕಿತ್ತಾಟದಲ್ಲಿ ತಿಮ್ಮಪ್ಪನನ್ನು ಇಕ್ಕಟ್ಟಿಗೆ ಸಿಕ್ಕಿಸಿಹಾಕಿದ್ದು ಮಾತ್ರ ನಿಜ .ಎಲ್ಲ ಕಡೆಯಲ್ಲೂ ಇಂಥ ಮಹಾಶಯರಿಗೇನು
ಕೊರತೆಯಿಲ್ಲ ಹಾಗೆಯೆ ದೇವರನಿಗೂ ಸಂಕಟ ತಪ್ಪಿದ್ದಲ್ಲ .
ಹಣವಿದ್ದವರು ದೇವರಿಗೆ ಈ ರೀತಿಯ ಹಣದಾಸೆ ತೋರಿಸಿದರೆ ಇನ್ನು ಹಣವಿಲ್ಲದವರು ಏನು ಮಾಡಬೇಕು ? ಹಾಗೇನೆಂದುಕೊಳ್ಳಬೇಡಿ ! ಏನೂ ಇಲ್ಲದಿದ್ದರೂ ಏನೋ ಒಂದು ವಿಚಾರಿಸಿ ಕೊನೆಗೊಂದು ಮಾರ್ಗವನ್ನು ಕಂಡುಕೊಳ್ಳುವವರಿಗೇನು ಕೊರತೆಯಿಲ್ಲ.

ನಮ್ಮ ‘ಕೆ ಎಂ ಸಿ’ ಯ ಕಾಲೇಜಿನ ಅವರಣದಲ್ಲೊಂದು ಹನುಮಪ್ಪನ ಮಂದಿರವಿತ್ತು . ಪ್ರತಿ ಶನಿವಾರ ಸಾಯಂಕಾಲ ತಪ್ಪದೆ ಕೆಲವು ಹುಡುಗರು ಮತ್ತು ಹುಡುಗಿಯರು ಹನುಮಪ್ಪನನ್ನು ಭಕ್ತಿಯಿಂದ ಪ್ರದಕ್ಷಿಣೆ ಹಾಕುತ್ತಿದ್ದರು . ಅವರು ನಿಜವಾದ ಭಕ್ತರು ಎಂಬುದರಲ್ಲಿ ಸಂಶಯವಿಲ್ಲ . ಆದರೆ ವಾರ್ಷಿಕ ಪರೀಕ್ಷೆಗಳು ಹತ್ತಿರ
ಬರುತ್ತಿದ್ದಂತೆ ಹನುಮಪ್ಪನ ಭಕ್ತರ (?) ಸಂಖ್ಯೆ ತ್ರಿಗುಣಗೊಳ್ಳುತ್ತಿತ್ತು . ಇನ್ನು ಕೆಲವರು ತಾಸುಗಂಟಲೇ ಸಂಚರಿಸಿ ದೂರದಲ್ಲಿದ್ದ ರಾಯರ ಮಂಟಪಕ್ಕೆ ದರ್ಶನಕೊಡುತ್ತಿದ್ದರು . ನಿಜವಾದ ಭಕ್ತರಿಗೆ ಯಾವಾಗಲು ಭಕ್ತಿಯ ಭಾವ ಇದ್ದಿದ್ದು ಬೇರೆ ಸಂಗತಿ ಆದರೆ ,
ವರ್ಷವಿಡೀ ಮಜಾ ಮಾಡಿ , ಸರಿಯಾಗಿ ಓದದೆ , ಕೊನೆಯಲ್ಲಿ ಪರೀಕ್ಷೆಯ ಬಿಸಿ ತಟ್ಟಿದ್ದಾಗ ದೇವರನ್ನು ಪ್ರದಕ್ಷಣೆ ಹಾಕುತ್ತಿದ್ದ
ಇವರಿಗೆ ಏನೆನ್ನಬೇಕು ? ( ಅವರಲ್ಲಿ ನಾನೂ ಒಬ್ಬ ಎಂಬುದು ಬೇರೆ ವಿಷಯ!).
ಇನ್ನು ಪಾಪ , ಹನುಮಪ್ಪ ಏನು ಮಾಡಬೇಕು ಹೇಳಿ ? . ಖಂಡಿತ ಅವನೂ ಸಹ ಗೊಂದಲದಲ್ಲಿ ಬಿದ್ದಿರಬಹುದು . ಈ
ಅವಕಾಶವಾದಿ ‘ ಮೊಸಳೆ ಕಣ್ಣೀರಿನ ‘ ಪ್ರದಕ್ಷಣೆಗಾರರಿಗೆ ಸಹಾಯಮಾಡಬೇಕೆ ? ಅಥವಾ ವರ್ಷವಿಡೀ ಓದಿದ ಶ್ರಮಜೀವಿಗಳಿಗೆ
ಅಸ್ತು ಅನ್ನಬೇಕೆ ?. ಇವರೆಲ್ಲಾ ತಮ್ಮ ನಡುವಳಿಕೆಯಿಂದ , ಸಂಕಟವನ್ನು ತಾವೇ ಬರಿಸಿಕೊಂಡು , ಕೊನೆಯ ಗಳಿಗೆಯಲ್ಲಿ
ಹನುಮಪ್ಪನ ಮೊರೆ ಹೋಗಿ , ಅವನಿಗೂ ಸಂಕಟ ತಂದೊದಗಿದ್ದು ಸುಳ್ಳೇನಲ್ಲ . ತಾಸುಗಂಟಲೆಯ ಸಮಯವನ್ನು ಪ್ರದಕ್ಷಣೆಗಾಗಿ
ಕಳೆಯುವದಕ್ಕಿಂತ , ಅವನನ್ನು ಮನದಲ್ಲೇ ನೆನೆದು , ಅದೇ ಸಮಯವನ್ನು ಓದಿಗಾಗಿ ಉಪಯೋಗಿಸಿದ್ದಿದ್ದರೆ ಹನುಮಪ್ಪ
ಪ್ರಸನ್ನವಾಗಿರುತ್ತಿದ್ದಿದ್ದು ಮಾತ್ರ ಸತ್ಯ .

ಇಂಥವರದೊಂದು ಕಥೆಯಾದರೆ ಬೇರೆಯವರದು ಇನ್ನೊಂದು ಕಥೆ . ನಮ್ಮ ಪಕ್ಕದ ಮನೆಯ ಗೌರಕ್ಕನಿಗೆ ಒಳ್ಳೆಯ ಗಂಡ
ಸಿಕ್ಕು ಅದ್ದೂರಿಯಿಂದ ಮದುವೆ ಆಗಿ ಹೋಯಿತು . ಗೌರಕ್ಕ ನಮ್ಮ ಅಕ್ಕನಿಗಿಂತ ಒಂದು ವರ್ಷ ದೊಡ್ಡವಳು .ಪೂಜೆ ಪುರಸ್ಕಾರ
ಮತ್ತು ಉಪವಾಸಗಳಲ್ಲಿ ತುಂಬಾ ಆಸಕ್ತಿ . ಅವಳ ಭಕ್ತಿಗೆ ಮೆಚ್ಚಿ ದೇವರು ಒಳ್ಳೆಯ ಗಂಡನನ್ನು ದಯಪಾಲಿಸಿದನೆಂಬುವದು ಊರ
ಜನರ ನಂಬಿಕೆ. ಇದನ್ನು ಕಂಡು ನಮ್ಮಕ್ಕನಿಗೆ ಏನಾಯಿತೋ ಕಾಣೆ ( ಬಹುಶಃ, ಮನದಲ್ಲಿ ಸಂಕಟ ಆರಂಭವಾಗಿರಬಹುದು ) .

ಅವಳ ಹಾಗೆ ತನಗೂ ಸಹ ಒಳ್ಳೆಯ ಗಂಡನು ಸಿಗಲೆಂದು ಒಮ್ಮಿಂದೊಮ್ಮಲೆ ಸೋಮಪ್ಪನ ಭಕ್ತೆಯಾಗಿ ಬಿಟ್ಟಳು .ಪ್ರತಿ ಸೋಮವಾರ ಬೆಳಿಗ್ಗೆ ಮನೆಯಲ್ಲಿ ತಾಸುಗಂಟಲೇ ಪೂಜೆ ಪುರಸ್ಕಾರ ನಡೆಯತೊಡಗಿತು . ಬರಿ ಪೂಜೆ ಮಾಡಿದರೆ ಸಾಕಾಗಿತ್ತೇನೋ ಅದರ ಜೊತೆಗೆ ”ಉಪವಾಸವನ್ನು” ಕೂಡ ಸುರು ಹಚ್ಚಿಕೊಂಡಿದ್ದಳು . ಉಪವಾಸ ಎಂದ ಕ್ಷಣ ಸ್ವಲ್ಪ ಹೆಚ್ಚಿಗೇನೇ ಹೇಳಬೇಕೆನಿಸುತ್ತಿದೆ .
ಉಪವಾಸ ಮಾಡುವವರಲ್ಲಿ ಬೇರೆ ಬೇರೆ ವರ್ಗಗಳಿವೆ . ಉಪವಾಸವೆಂದರೆ ಕೆಲವರು ಆಹಾರ ಬಿಡಿ ! ನೀರನ್ನೂ ಸಹ
ಮುಟ್ಟುವದಿಲ್ಲ . ಕೆಲವರಿಗೆ ಉಪವಾಸವೆಂದರೆ ಲಘು ಆಹಾರ ಸೇವನೆ . ಇನ್ನು ಕೆಲವರು ಊಟಕ್ಕಿಂತಲೂ ಹೆಚ್ಚು ಉಪಹಾರ
ತಿಂದು , ಉಪವಾಸವಿದ್ದೆ ಎಂದು ಸಂತೋಷಪಡುವದುಂಟು . ನಮ್ಮ ಅಕ್ಕಳು ಸಹ ಈ ಕೊನೆಯ ಗುಂಪಿಗೆ ಸೇರಿದವಳು .ಅವಳ
ಉಪವಾಸ ಬೆಳಿಗ್ಗೆ ಎಂಟು ಘಂಟೆಗೆ ಪಾವ್ ಕಿಲೋ ನೆನೆಸಿದ ಅವಲಕ್ಕಿಯನ್ನು ತಿಂದು ಪ್ರಾರಂಭವಾಗುತ್ತಿತ್ತು . ಮಧ್ಯಾಹ್ನ
ಕೇವಲ ? ನಾಲ್ಕೈದು ಬಾಳೆ ಹಣ್ಣು , ಒಂದು ಹಿಡಿ ಖರ್ಜುರು ಮತ್ತು ಒಂದು ದೊಡ್ಡ ಗ್ಲಾಸು ಹಾಲು , ಮತ್ತೆ ಸುಮಾರು ಇಳಿಹೊತ್ತಿಗೆ
ಇನ್ನೆರಡು ಬೇರೆ ತರಹದ ಹಣ್ಣುಗಳು . ಪಾಪ !! ಹೆಸರಿಗೆ ಊಟ ಮಾತ್ರ ಇರಲಿಲ್ಲ . ಅವಳಿಗೆ ಸಿಗುತ್ತಿದ್ದ ಈ ವಿಶೇಷ ಸೇವನೆಗಳನ್ನು ನೋಡಿ ನನಗೂ ಆ ಸಣ್ಣ
ವಯಸಿನಲ್ಲಿ ಉಪವಾಸ ಮಾಡಬೇಕೆಂದಿನಿಸಿತ್ತು . ಅವಳ ಉಪವಾಸದ ಫಲವಾಗಿ ಮೈತೂಕ ಹೆಚ್ಚಾಗಿತ್ತೆ ವಿನಃ
ಕಡಿಮೆಯಾಗಿರಲಿಲ್ಲ . ಪಾಪ !! ಇಂಥ ಭಕ್ತರಿಗೆ ದೇವರು ಹೇಗೆ ಸಹಾಯಮಾಡಬೇಕು ? . ಮೈತೂಕ ಇಳಿಸಲು ಕೋರಿ ಇವಳು
ಇನ್ನೊಂದು ಪೂಜೆಯ ಮೊರೆ ಹೋದರೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಿರಬಹುದು ಸೋಮಪ್ಪ . ಹಾಗು ಹೀಗೂ
ನಮ್ಮಕ್ಕನಿಗೆ ಒಳ್ಳೆಯ ಗಂಡ ಸಿಕ್ಕಿದ್ದ ನಿಜ ಆದರೆ ಅವಳ ಉಪವಾಸದಿಂದ ಅಲ್ಲ ಎಂಬುವುದು ನನ್ನ ನಂಬಿಕೆ .

ಕಳೆದ ವರುಷ ನಮ್ಮ ಹಳ್ಳಿಗೆ ಹೋಗಿದ್ದೆ. ವಿಪರೀತ ಮಳೆ . ನಾನು ಬಂದಿರುವ ವಿಷಯ ತಿಳಿದು ನನ್ನ ‘ ಚಡ್ಡಿ ದೋಸ್ತ ‘ ಕಲ್ಲೇಶಿ
ನನ್ನನ್ನು ಭೇಟಿಯಾಗಲು ಬಂದಿದ್ದ . ಹಳೆಯ ಗೆಳೆತನ ತಾನೆ ? ಸಲುಗೆಯಿಂದ ಮಾತು ಪ್ರಾರಂಭಿಸಿದ್ದೆ . “ಏನ್ ಕಲ್ಲ್ಯಾ ಹ್ಯಾಂಗ್
ಆದಿ ” ಅಂತ ಅಂದಿದ್ದೆ ಸಾಕು , ತನ್ನ ಗೋಳನ್ನು ಸುರು ಮಾಡಿಕೊಂಡುಬಿಡುವುದೆ ?. ” ಏನ್ ಹೇಳುದು ಬಿಡಪ್ಪಾ ಎರಡ
ವರ್ಷದಿಂದ ಬರೇ ಮಳಿ ಹತ್ತಿ , ಬೆಳಿಯೆಲ್ಲ ಹಾಳಾಗಿ ಹೋಗಿ , ಸಾಲಾ ಜಾಸ್ತಿ ಆಗಿ ಬಿಟ್ಟೈತಿ ಅದಕ್ಕ ಈ ಸಾರಿ ಒಂದ್ ಉಪಾಯ
ಮಾಡೀನಿ ” . ನಾನು ಅಂದುಕೊಂಡೆ, ಏನಾದರು ನನ್ನ ಹತ್ತಿರ ಹಣದ ಸಹಾಯ ಕೇಳಲು ಬಂದಿರಬಹುದೆಂದು . “ಅದೇನು
ಉಪಾಯಪ್ಪ ” ಎಂದೆ , ” ಊರ ದೇವಿ ದ್ಯಾಮವ್ವ ಬಾಳ ಸಿಟ್ಟ ಮಾಡಿಕೊಂಡಂಗೈತಿ ಅದಕ್ಕ ಇಷ್ಟೊಂದ್ ಸಂಕಟ , ಅದಕ್ಕ
ಇನ್ನಷ್ಟ್ ಸಾಲ ಅದರೂ ಸರಿ ಈ ಸರಿ ಜಾತ್ರಿಗೆ ಒಂದು ಕುರಿ ಕೊಯ್ಯಬೇಕಂತ ವಿಚಾರ ಮಾಡೀನಿ ” ಎಂದ . “ಅಲ್ಲೋ ಇನ್ನಷ್ಟ
ಸಾಲಾ ಮಾಡಿ , ಅವಳ ಹೆಸರಲ್ಲಿ ಕುರಿ ಕೊಯ್ದು, ನೀನು ಮತ್ತು ನಿಮ್ಮ ಸಂಸಾರಾ ಕುರಿ ತಿಂದರ ದ್ಯಾಮವ್ವ ಮಳಿ ಹ್ಯಾಂಗ್
ನಿಲ್ಲಸತಾಳು ? ” ಎಂದೆ . ” ನಿಮ್ಮಂತ ಓದಿದವರಿಗೆ ಇದೆಲ್ಲ ಗೊತ್ತಾಗುದಿಲ್ಲ ಬಿಡಪ್ಪಾ ” ಎಂದು ಮಾತು ಮುಂದುವರಿಸದೆ
ಹಾಗೆಯೆ ಹೋಗಿಯೇ ಬಿಟ್ಟ . ನನಗಂತೂ ಗೊತ್ತಾಗಲಿಲ್ಲ ಅದು ‘ ದ್ಯಾಮವ್ವನ ತಪ್ಪೋ , ಕಲ್ಲೇಶಿಯ ತಪ್ಪೋ ಅಥವಾ ನನ್ನ
ತಪ್ಪೋ ‘ಎಂದು .
ಹೋಗಲಿ ಬಿಡಿ ಹಾಗೆಯೆ ಹರಟುತ್ತ ಹೋದರೆ ಇದು ಮುಗಿಯುವ ವಿಷಯವಲ್ಲ . ಇದಂತು ನಿಜ , ಇಂಥ ಜನರು , ಇಂಥ ನಂಬಿಕೆ
ನಮ್ನ ದೇಶಕ್ಕೆ ಅಥವಾ ಧರ್ಮಕ್ಕೆ ಮಾತ್ರ ಸೀಮಿತವಲ್ಲ . ಎಲ್ಲ ದೇಶಗಳಲ್ಲೂ , ಪಂಗಡಗಳಲ್ಲೂ ಇದು ಇರುವುದು ಕಟು ಸತ್ಯ .
ಆದರೆ ಪದ್ಧತಿ ಬೇರೆ ಇರಬಹುದು .
” ಸಂಕಟ ಬಂದಾಗ ವೆಂಕಟರಮಣ ” ಅಂತ ಅನ್ನುವದಕ್ಕಿಂತಲೂ –
” ಸಂಕಟ ಬಂದಾಗ ಧೈರ್ಯವೇ ಭೂಷಣ ” ಅಂತ ತಿಳಿದರೆ ಎಷ್ಟೊಂದು ಚನ್ನಾಗಿರುತ್ತಲ್ಲವೆ ?
ಇನ್ನು, ರಾತ್ರಿಯೆಲ್ಲಾ ಪುರಾಣವನ್ನು ಹೇಳಿ ಬೆಳಿಗ್ಗೆ ಬದನೇಕಾಯಿ ತಿನ್ನದೇ ಇರಲಿಕ್ಕೆ ಸಾಧ್ಯವೇ ? ಇದಕ್ಕೆ ನಾನೇನು
ಹೊರತಾಗಿಲ್ಲ . ನಾನೂ ಹತ್ತು ಹಲುವಾರು ಹರಕೆಗಳನ್ನು ಹೊತ್ತಿರುವೆ, ಆದರೆ ಇನ್ನೂ ತೀರಿಸಲು ಆಗಿಲ್ಲ . ನೀವೂ ಏನಾದರು
ಹರಕೆಗಳನ್ನು ಹೊತ್ತಿದ್ದರೆ , ನಿಮ್ನ ಅಭ್ಯಂತರವಿಲ್ಲದಿದ್ದರೆ ನನಗೂ ಸ್ವಲ್ಪ ತಿಳಿಸಿಬಿಡಿ . ನಿಮ್ಮ ಹರಕೆಗಳನ್ನು ನನ್ನಂತೆ ಇನ್ನೂ
ಪೂರೈಸದಿರಲು ಸಾಧ್ಯವಾಗಿಲ್ಲದಿದ್ದರೂ ಪರವಾಗಿಲ್ಲ , ನೀವೇನು ಚಿಂತಿಸದಿರಿ . ಏಕೆಂದರೆ – ಹರಕೆ ತೀರಿಸಲು ಹತ್ತು ವರುಷ
ಇರುತ್ತದೆ ಅಂತ, ನಮ್ಮ ಅಜ್ಜಿ ಹೇಳುತ್ತಿದ್ದಳು .

-ಡಾ . ಶಿವಶಂಕರ ಮೇಟಿ

ತಲಾಷ್ ( ಶೋಧ )

ಕಾಲ ಚಕ್ರ ಉರುಳಿ ಶತ ಶತಮಾನಗಳು ಗತಿಸಿದರೂ , ಆಧುನಿಕತೆಯ ಗಾಳಿಯು ಬೀಸಿದರೂ , ಸಮಾಜದಲ್ಲಿ ಹೆಣ್ಣಿನ ಶೋಷಣೆ ಮಾತ್ರ ಹಾಗೆಯೇ ಮುಂದುವರೆದಿರುವದು ಕಟು ಸತ್ಯ . ಜಗತ್ತಿನ ಮೂಲೆ ಮೂಲೆಗಳಲ್ಲಿ ಈ ಅನಿಷ್ಟ ಪದ್ಧತಿ ಇನ್ನೂ ಬೇರೂರಿರುವದು ದುಃಖಕರ ಸಂಗತಿ . ಬದಲಾವಣೆಯ ಅಲೆಯು ಭಾರತದ ಹಳ್ಳಿಗಳಲ್ಲಿ ಬಿಸುತ್ತಿದ್ದರೂ ಲಿಂಗ ಬೇಧ ಮಾತ್ರ ಕೊನೆ ಕಂಡಿಲ್ಲ . ಅಕ್ಷರವಂತರು , ಶ್ರೀಮಂತ ಕುಟುಂಬಗಳು ಇದಕ್ಕೇನು ಹೊರತಾಗಿಲ್ಲ .ಈ ದೇಶಕ್ಕೆ ಬರುವ ಮುನ್ನ ನಾನು ಕೆಲಸಮಾಡುತ್ತಿದ್ದ ಸ್ಥಳದಲ್ಲಿ ನಡೆದ ಒಂದು ಘಟನೆ ಇನ್ನೂ ಮನಸಿನಲ್ಲಿ ಹಾಗೆಯೇ ಉಳಿದಿದೆ . ಘಟನೆಗೆ ಅವಶ್ಯಕ ಬದಲಾವಣೆಗಳನ್ನು ಮಾಡಿ ಒಂದು ಕಥೆ ಬರೆಯಬೇಕು ಎಂದು ಅನಿಸಿತು ಅದಕ್ಕಾಗಿ ಬರೆದಿರುವೆ , ನಿಮ್ಮ ಮುಂದೆ ಇಟ್ಟಿರುವೆ. ದಯವಿಟ್ಟು ಸಮಯ ದೊರೆತಾಗ ಓದಿರಿ ಹಾಗೆಯೇ ಒಂದೆರಡು ಅಕ್ಷರದ ಅನಿಸಿಕೆಯನ್ನು ಗೀಚಲು ಮರೆಯದಿರಿ – (ಸಂಪಾದಕ)

ತಲಾಷ್ ( ಶೋಧ )

“ಅಮ್ಮ; ಅಂಜಲಿ ಇನ್ನೂ ಶಾಲೆಯಿಂದ ಮನೆಗೆ ಬಂದಿಲ್ಲ “
ಅಟ್ಟದ ಮೇಲಿದ್ದ ತಾಯಿಗೆ ದೊಡ್ಡ ಮಗಳು ಕೂಗಿ ಹೇಳುತ್ತಿದ್ದಳು. ಇಕ್ಕಿದ ಸಂಡಿಗೆಯನ್ನು ಆರು ಹಾಕುತ್ತಿದ್ದ ವಸುಂಧರೆ ಉತ್ತರಿಸಿದಳು ” ಇಷ್ಟರಲ್ಲಿಯೆ ಬರಬಹುದು ಬಿಡು …., ಆ ಬೀದಿಯ ನಾಯಿಯ ಜೊತೆಗೊ ಅಥವಾ ಹುಚ್ಚಪ್ಪನ ಜೊತೆಗೊ ಆಟವಾಡುತ್ತಿರಬಹುದು ” ಎಂದು. ಅಂಜಲಿ ಆರು ವರ್ಷದ ಮೂರನೆಯ ಮುದ್ದಿನ ಮಗಳು . ವಸುಂಧರೆಯ ಪಾಲಿಗಂತೂ ವಿಶೇಷ ಮಗಳು . ಮೊಮ್ಮಗ ಬೇಕೆಂದು ಹರ ಸಾಹಸ ಮಾಡುತ್ತಿರುವ ಅತ್ತೆಯ ನಿರೀಕ್ಷೆಗೆ ವಿರುದ್ಧವಾಗಿ ಹುಟ್ಟಿದವಳು . ಗಂಡನಿಗೂ ಮತ್ತೆ ‘ಹೆಣ್ಣಾಯಿತಲ್ಲ’ ಎಂಬ ನಿರಾಸೆಯಿದ್ದರೂ ಚಿಕ್ಕ ಮಗಳೆಂದು ಪ್ರೀತಿ ಜಾಸ್ತಿ . ಚೊಚ್ಚಲು ಮೊಮ್ಮಗು ಹೆಣ್ಣಾದಾಗ ಅತ್ತೆ, ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ . ‘ಇರಲಿ ಬಿಡು ಮುಂದಿನದಾದರೂ ಗಂಡಾದರೆ ಸಾಕು’ ಎಂದು ನಿಟ್ಟುಸಿರು ಬಿಟ್ಟಿದ್ದಳು . ಆದರೆ , ಎರಡನೆಯ ಮೊಮ್ಮಗೂ ಕೂಡ ಹೆಣ್ಣೆಂದು ಗೊತ್ತಾದಾಗ ಗರಬಡಿದವಳ ಹಾಗೆ ಕುಳಿತುಕೊಂಡಿದ್ದಳು . ಮಗನ ಮುಂದೆ ತನ್ನ ಮನದ ದುಗುಡನ್ನು ತೋರಿಕೊಂಡು;” ಏನಪ್ಪಾ ರಾಮು ! ಹೀಗೇಕಾಯಿತು …. ? ನನಗೆ ಇರುವವನು ನೀನೊಬ್ಬನೇ ಮಗ , ನಿನಗೆ ಗಂಡು ಮಗು ಆಗದಿದ್ದರೆ ಈಮನೆತನದ ವಂಶೋದ್ಧಾರನೆ ಹೇಗೆ ಸಾಧ್ಯ….. ? “ಎಂದು ಕಣ್ಣೀರು ಸುರಿಸಿದ್ದಳು . ರಾಮು ಅಷ್ಟೇ ಶಾಂತವಾಗಿಉತ್ತರಿಸಿದ್ದ ;” ಇರಲಿ ಬಿಡಮ್ಮ , ಅವರನ್ನೇ ಗಂಡು ಮಕ್ಕಳ ಹಾಗೆ ಬೆಳೆಸಿದರಾಯಿತು . ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳುಗಂಡಸರಿಗಿಂತ ಯಾವುದರಲ್ಲಿ ಕಡಿಮೆ ಇದ್ದಾರೆ…? . ತಂದೆ ತಾಯಿಗಳ ಮೇಲೆ ಅವರಿಗಿರುವಷ್ಟು ಪ್ರೀತಿ ಗಂಡುಮಕ್ಕಳಿಗೆ ಎಲ್ಲಿದೆ? ಯಾಕೆ ಹೀಗೆ ಮಕ್ಕಳಲ್ಲಿ ಭೇಧ ಭಾವ ಮಾಡ್ತಿಯಾ ?” ಎಂದು ಸಮಾಧಾನ ಹೇಳಿದ್ದ
” ನನ್ನ ಸಂಕಟ ನಿನಗೆ ಹೇಗೆ ಗೊತ್ತಾಗುತ್ತದೆ . ಪುರಾಣ , ವೇದಗಳಲ್ಲಿ ಹೇಳಿಲ್ಲವೇನೋ….’ ಗಂಡು ಮಗು ಇಲ್ಲದಿದ್ದರೆ
ಮೋಕ್ಷ ಸಾಧ್ಯವಿಲ್ಲವೆಂದು …’ . ಹೆಣ್ಣು ಎಂದಾದರು ಪರರ ಆಸ್ತಿ . ಇಷ್ಟೊಂದು ಪಿತ್ರಾರ್ಜಿತ ಆಸ್ತಿಯನ್ನು ಬೇರೆಯವರ
ಪಾಲು ಮಾಡಲು ನನಗೆ ಎಳ್ಳಷ್ಟೂ ಇಷ್ಟವಿಲ್ಲ “ ಎಂದು ಬೇಸರದಿಂದ ನುಡಿದಿದ್ದಳು.
” ಅಮ್ಮಾ, ಪುರಾಣ ವೇದಗಳಲ್ಲಿ ಹೆಣ್ಣು ಮಕ್ಕಳ ಕುರಿತು ಒಳ್ಳೆಯದನ್ನೂ ಹೇಳಿದ್ದಾರೆ . ಒಳ್ಳೆಯದನ್ನು ಆರಿಸಿಕೊಂಡು ಕೆಟ್ಟದ್ದನ್ನು ಬಿಟ್ಟರಾಯಿತು . ಸತ್ತ ಮೇಲೆ ಸ್ವರ್ಗ ನರಕ ಯಾರಿಗೆ ತಿಳಿದಿದೆ …?” ಎಂದು ತಾಯಿಯನ್ನು ಸಮಾಧಾನ ಪಡಿಸಲು ಯತ್ನಿಸಿದ್ದ . ಆದರೆ ತಾಯಿಯು ತಾನೂ ಒಂದು ಹೆಣ್ಣು ಎಂಬುವದನ್ನು ಮರೆತು ಇದಕ್ಕೆ ಯಾವುದಕ್ಕೂ ಜಗ್ಗಿದಂತೆ ಕಾಣಿಸಿರಲಿಲ್ಲ. ಅದೊಂದು ದಿನ ಮನೆ ಕೆಲಸದ ಸುಬ್ಬಿ ವಸುಂಧರೆಗೆ ಹೇಳುತ್ತಿದ್ದಳು ” ನೋಡಮ್ಮ ನಮ್ಮ ಪಕ್ಕದ ಮನೆ ಅನುಸುಯಿಗೆ ಮಕ್ಕಳಾಗಲಿಲ್ಲ ಅಂತ ಅವಳ ಗಂಡ ಇನ್ನೊಂದು ಹೆಣ್ಣನ್ನ ಕಟ್ಟಿಕೊಂಡಾನ್ ….ಆದರ ಆರು ತಿಂಗಳಾದರೂ ಅದಕ್ಕೂ ಗರ್ಭ ತುಂಬಿಲ್ಲ …..ಅವಳ ಅತ್ತಿ ಇನ್ನ ಮುಂದ ಏನ್ ಮಾಡ್ತಾಳಂತ ಗೊತ್ತಿಲ್ಲ”
“ಅದೇನ್ ಹೊಸಾದ ಬಿಡ ಸುಬ್ಬಿ ….ರಾಮಾಯಣದ ಸೀತವ್ವನ ಹಿಡಕೊಂಡು ಇಲ್ಲಿವರೆಗೂ ಹೆಣ್ಣಿನ ಮ್ಯಾಲ ದಬ್ಬಾಳಿಕಿ
ನಡದ ಐತಿ … ಮಕ್ಕಳಾಗದಿದ್ದರೆ ‘ಬಂಜಿ ‘ ಎಂಬ ಪಟ್ಟಾ ಕಟ್ಟತಾರ , ಹೆಣ್ಣು ಹೆತ್ತರ ಗಂಡು ಹಡಿಯಲಿಲ್ಲ ಎಂದು
ಶಪಿಸತಾರ್ … ಗಂಡಸರು ಮಾತ್ರ ಏನೂ ತಪ್ಪಿಲ್ಲ ಎಂದು ಮೌನವಾಗಿರತಾರ್ ….ನಮ್ಮ ಅತ್ತಿಗೂ ಸ್ವಲ್ಪ ಹೇಳಿಬಿಡು “
ಅಂತ ಸುಬ್ಬಿಗೆ ಹೇಳಿದ್ದಳು . ಅತ್ತೆ ಮಾತು ಕೇಳಿಸಿಕೊಂಡರು ಏನು ಮಾತನಾಡಿರಲಿಲ್ಲ
ಮನೆಯಲ್ಲಿ ಅತ್ತೆಯ ವಿರುದ್ಧವಾಗಿ ಹೋಗುವ ಶಕ್ತಿ ಯಾರಿಗೂ ಇರಲಿಲ್ಲ . ರಾಮು , ಹೆಂಡತಿಯ ಮೇಲಿದ್ದ ಪ್ರೀತಿಯನ್ನ ಕಡೆಗಣಿಸಲಾಗದೆ , ತಾಯಿಯ ವಿರುದ್ಧ ಮಾತನಾಡುವ ಶಕ್ತಿಯಿಲ್ಲದೆ ತ್ರಿಶಂಕು ನರಕದಲ್ಲಿ ಸಿಕ್ಕಿಹಾಕಿಕೊಂಡಿದ್ದನು . ವಸುಂಧರೆ ಮತ್ತೆ ಗರ್ಭವತಿ ಎಂದು ಗೊತ್ತಾದಾಗ ಅತ್ತೆಗೆ ಸಂತೋಷವೂ ಆಗಿತ್ತು ಹಾಗೆಯೆ ಚಿಂತೆಯೂ ಮೂಡಿತ್ತು.
‘ದೇವರೆ ! ಈ ಸಾರಿಯಾದರೂ ನನ್ನ ಆಸೆಯನ್ನು ಪೂರೈಸು ಎಂದು ದೊಡ್ಡ ನಮಸ್ಕಾರವನ್ನು ಹಾಕಿದ್ದಳು’ , ತಕ್ಷಣವೇ
ಅವಳನ್ನು ತನಗೆ ಗೊತ್ತಿದ್ದ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದ್ದಳು . ಅಡ್ಡದಾರಿಯಲ್ಲಿ
ವೈದ್ಯರಿಂದ ಲಿಂಗ ಪರೀಕ್ಷೆಯೂ ಆಗಿತ್ತು . ಗಂಡು ಮಗು ಎಂಬ ಆಶ್ವಾಸನೆಯು ದೊರಕಿದಾಗ ಅವಳ ಆನಂದಕ್ಕೆ
ಪಾರವೇ ಇರಲಿಲ್ಲ . ಸೊಸೆಯನ್ನು ಅಪ್ಪಿ ಮುದ್ದಾಡಿದ್ದಳು, ‘ದೇವರು ಕೊನೆಗೂ ತನ್ನ ಮೇಲೆ ಕರುಣೆ ತೋರಿದನಲ್ಲಾ’
ಎಂದು ಸಂತೋಷದ ಉಸಿರನ್ನು ಬಿಟ್ಟಿದ್ದಳು. ಆದರೆ ಅತ್ತೆಗೆ ಗೊತ್ತಾಗಿರಲಿಲ್ಲ ‘ ತಾನೊಂದು ಬಗೆದರೆ,ದೈವ
ಇನ್ನೊಂದು ಬಗೆಯುವದೆಂದು’. ಅದೊಂದು ದಿನ ವಸುಂಧರೆಗೆ ಹೆರಿಗೆ ಆಯಿತು ಆದರೆ ಅವರೆಂದುಕೊಂಡಂತೆ ಗಂಡು ಮಗವಾಗಿರಲಿಲ್ಲ ಮತ್ತೆ ಇನ್ನೊಂದು ಹೆಣ್ಣು ಮಗುವಿನ ಆಗಮನವಾಗಿತ್ತು . ವೈಧ್ಯರ ಪರೀಕ್ಷೆ ಸುಳ್ಳಾಗಿತ್ತು. ಅತ್ತೆಯ ಪೂಜೆಗೆ ಯಾವ ದೇವರೂ ವರ ಕೊಟ್ಟಿರಲಿಲ್ಲ ಅದಷ್ಟೇ ಅಲ್ಲದೆ ಮಗು ‘ಮೂಲಾ ‘ ನಕ್ಷತ್ರದಲ್ಲಿ ಹುಟ್ಟಿತ್ತು . ಒಂದರಮೇಲೊಂದು ಆಘಾತವನ್ನು ಅನುಭವಿಸಿದ ಅತ್ತೆಯ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಿತ್ತು . ಮೂಲಾ ನಕ್ಷತ್ರದಲ್ಲಿ ಮಗು ಹುಟ್ಟಿದರೆ ತಂದೆಯ ಪ್ರಾಣಕ್ಕೆ ಅಪಾಯ ಎಂಬುದು ಬಹು ಜನರ ನಂಬಿಕೆ . ಅತ್ತೆಯೂ ಅದಕ್ಕೇನು
ಹೊರತಾಗಿರಲಿಲ್ಲ . ಈ ಅನಿಷ್ಟ ಮಗು ಏಕೆ ಈ ಮನೆಯಲ್ಲಿ ಹುಟ್ಟಿತೆಂದು ಪರಿತಪಿಸಿದ್ದಳು. ಮಗನ ಜೊತೆಗೆ ವಿಷಯವನ್ನು ಎತ್ತಿದಾಗ ಅವನೇನು ತಲೆಕೆಡಿಸಿಕೊಳ್ಳಲಿಲ್ಲ . ” ಮಗು ಮುದ್ದಾಗಿದೆಯಮ್ಮ! ಎತ್ತಿ ಮುದ್ದಾಡಿಬಿಡು. ಮೂಢನಂಬಿಕೆಗಳಿಗೆಲ್ಲ ಸುಮ್ಮನೆ ತಲೆ ಕೆಡಿಸಿಕೊಂಡು ಯಾಕೆ ನಿನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿ ಮತ್ತು ಮನೆಯ ನೆಮ್ಮದಿಯನ್ನೂ ಕೂಡಾ ಕೆಡಿಸುತ್ತಿ” ಅಂತ ಅವಳನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದನು . ಅಮ್ಮನ ಮನಸು ಅಷ್ಟು ಸುಲಭವಾಗಿ ಒಪ್ಪುವದಿಲ್ಲವೆಂದು ಅವನಿಗೆ ಗೊತ್ತಿತ್ತು. ಅತ್ತೆಯ ವರ್ತನೆಯಿಂದ ವಸುಂಧರೆಗೆ ರೋಷಿ ಹೋಗಿತ್ತು. ಇವಳೂ ಒಬ್ಬಳು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಭಾವನೆಗಳನ್ನು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರಮಾಡಿಕೊಂಡಿದ್ದಳು. ಅತ್ತೆಗೆ ಎದುರಾಗಿ ಎಂದೂ ಮಾತನಾಡದವಳು ಅದೊಂದು ದಿನ ಘಟ್ಟಿ ಮನಸಿನಿಂದ ಹೇಳಿಬಿಟ್ಟಿದ್ದಳು . ” ನೋಡು ಅತ್ತೆಮ್ಮ…..ನಿಮ್ಮ ಗಂಡು ಮೊಮ್ಮಗನ ಆಸೆಯಿಂದ ನನಗೆ ಮತ್ತೆ ಮಕ್ಕಳನ್ನು ಹೆರಲು ಹೇಳಬೇಡಿ . ನಾನೇನು ಮಕ್ಕಳನ್ನು ಹೆರುವ ಫ್ಯಾಕ್ಟರಿ ಅಲ್ಲ . ಇದ್ದ ಮೂವರು ಮಕ್ಕಳನ್ನು ಚನ್ನಾಗಿ ಬೆಳೆಸುವ ಜವಾಬ್ಧಾರಿ ನನಗೆ ಸಾಕು. ಗರ್ಭದಲ್ಲಿ ಜೀವ ಮೂಡುವದಕ್ಕೆ ಗಂಡ ಹೆಂಡತಿ ಹೇಗೆ ಕಾರಣರೊ……ಹಾಗೆಯೇ ಮೂಡಿದ ಜೀವ ಹೆಣ್ಣು ಅಥವಾ ಗಂಡು ಎಂದು ಮಾರ್ಪಡಲು ಅವರಿಬ್ಬರೂ ಅಷ್ಟೆ ಸಮಪಾಲರು ಎಂಬುವದನ್ನು ಮರೆಯಬೇಡಿರಿ“ ಎಂದಿದ್ದಳು . ಸೊಸೆಯ ಈ ಮಾತಿನಿಂದ ಆಘಾತವಾಗಿದ್ದರು ಏನನ್ನು ತಿರುಗಿ ಮಾತನಾಡದೆ ಸುಮ್ಮನಾಗಿದ್ದಳು .
ತನ್ನ ಮನಸಿನ ವೇದನೆಯನ್ನು , ವಸುಂಧರೆ ಗಂಡನಿಗೂ ಮುಟ್ಟಿಸಿದ್ದಳು” ನನಗೆ ಇನ್ನು ಮುಂದೆ ಮಕ್ಕಳು ಬೇಡ
….ನಿಮಗೇನಾದರೂ ನಿಮ್ಮ ತಾಯಿಯ ಹಾಗೆ ಗಂಡುಮಗುವಿನ ಆಸೆಯಿದ್ದರೆ ……? ಇನ್ನೊಂದು ಮದುವೆಯನ್ನು
ಮಾಡಿಕೊಳ್ಳಿ …ನನಗೇನೂ ತೊಂದರೆ ಇಲ್ಲ . ನನ್ನನ್ನು ನನ್ನ ಪಾಲಿಗೆ ಬಿಟ್ಟುಬಿಡಿ ” ಎಂದು . ವಸುಂಧರೆಯನ್ನು
ಸಮಾಧಾನಪಡಿಸಿ ಅವನು ಹೇಳಿದ್ದ ” ಇದಕ್ಕೆಲ್ಲ ಯಾಕೆ ತಲೆಕೆಡಿಸಿಕೊಳ್ಳುತ್ತೀಯ ಸ್ವಲ್ಪ ಸಮಯದ ನಂತರ ಎಲ್ಲ
ಸರಿಯಾಗುತ್ತದೆ ಬಿಡು ” ಎಂದು .
ಕಾಲಚಕ್ರ ತಿರುಗುತ್ತಿತ್ತು , ಅಂಜಲಿ ಅಷ್ಟರಲ್ಲಿಯೇ ಆರು ವಸಂತಗಳನ್ನು ಕಳೆದಿದ್ದಳು . ತಂದೆ ತಾಯಿಯರ ಇಚ್ಛೆಯಂತೆ
ಮನೆಯಿಂದ ಸುಮಾರು ಮೂರು ಮೈಲು ದೂರವಿದ್ದ ಇಂಗ್ಲಿಷ್ ಶಾಲೆಗೆ ಪಾದಾರ್ಪಣೆ ಮಾಡಿದ್ದಳು . ಮನೆಯಿಂದ
ನೂರು ಮೀಟರ್ ನಡೆದರೆ ಆಲದ ಮರದ ಕಟ್ಟೆ . ಅಲ್ಲಿಗೆ ಶಾಲೆಯ ವಾಹನ ಬಂದು ಮಕ್ಕಳನ್ನು ಕರೆದೊಯ್ಯುತ್ತಿತ್ತು .
ಅಂಜಲಿಗೆ ಪ್ರಾಣಿಗಳನ್ನು ಕಂಡರೆ ತುಂಬಾ ಅನುಕಂಪ , ಮನೆಯ ಮುಂದೆ ಮಲಗುತ್ತಿದ್ದ ಬೀದಿಯ ನಾಯಿಗೆ ದಿನಾಲೂಊಟವನ್ನು ಹಾಕಿ ಸ್ನೇಹವನ್ನು ಗಿಟ್ಟಿಸಿದ್ದಳು. ತಿಂದ ಅನ್ನದ ಋಣ ಎಂಬುವಂತೆ ದಿನಾಲೂ ಮನೆಯಿಂದ ಆಲದ ಕಟ್ಟೆಯವರೆಗೂ ಅದು ಅವಳನ್ನು ಹಿಂಬಾಲಿಸುತ್ತಿತ್ತು ಮತ್ತು ಸಾಯಂಕಾಲ ಅವಳ ಬರುವಿಕೆಗಾಗಿ ಕಟ್ಟೆಯ ಹತ್ತಿರ ಕಾಯುತ್ತಿತ್ತು .
ಸಾಯಂಕಾಲ ಐದು ಘಂಟೆಯಾದರೂ ಅಂಜಲಿ ಮನೆ ಸೇರದಿದ್ದಾಗ ವಸುಂಧರೆಗೆ ಚಿಂತೆಯಾಗತೊಡಗಿತು….. ಆಲದ
ಕಟ್ಟೆಯವರೆಗೂ ಹೋಗಿನೋಡೊಣವೆಂದು ಮನೆಯ ಹೊರಗೆ ಬಂದಳು . ಬಾಗಿಲಿನ ಎದುರು ಬೀದಿ ನಾಯಿ
ಒಂಟಿಯಾಗಿ ಜೋರಾಗಿ ಬೊಗಳುತ್ತ ನಿಂತಿತ್ತು ಆದರೆ ಅಂಜಲಿ ಇರಲಿಲ್ಲ . ನಾಯಿಯು ಏನೋ ಸಂದೇಶವನ್ನು
ಹೇಳಲು ಪ್ರಯತ್ನಿಸುತಿತ್ತು
ವಸುಂಧರೆಗೆ ಯಾಕೋ ಭಯವಾಗತೊಡಗಿತು . ಗಂಡನಿಗೆ ಫೋನು ಮಾಡಿ ತಕ್ಷಣವೇ ಮನೆಗೆ ಬರಲು ಹೇಳಿ ,
ನಾಯಿಯ ಜೊತೆಗೆ ಆಲದ ಮರದ ಕಟ್ಟೆಯಕಡೆಗೆ ನಡೆದಳು .
( ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವದು )