ಕೊನೆಯ ಚಿತ್ರ 

ಡಾ. ಮುರಳಿ ಹತ್ವಾರ್ ಅವರು ಬರೆದಿರುವ ‘ಕೊನೆಯ ಚಿತ್ರ’ ಎಂಬ ಲೇಖನ  ಮತ್ತು ‘ಸ್ತಬ್ಧ’ ಎಂಬ ಕವನ ವಿಷಾದ  ಮತ್ತು ಕರಾಳ ವಿಷಯವಾದರೂ ಅದು ಪ್ರಸ್ತುತವಾದ ಮತ್ತು ಸೂಕ್ಷ್ಮವಾದ ವಿಚಾರ. ಕಷ್ಟಗಳ ಸುರಿಮಳೆಯನ್ನು ಎದುರಿಸಿದಾಗ ನಾವು ನಮ್ಮ ವೈಯುಕ್ತಿಕ ಸಾಮರ್ಥ್ಯಯಕ್ಕೆ ತಕ್ಕಂತೆ ಅದನ್ನು ಬೇರೆ ಬೇರೆ ರೀತಿ ನಿಭಾಯಿಸಿ ನಿವಾರಿಸಿಕೊಳ್ಳುತ್ತೇವೆ. ಬದುಕಿನ ಹಲವಾರು ಅಡಚಣೆಗಳನ್ನು ಎದುರಿಸಲು ಎಲ್ಲರೂ ಸಿದ್ಧರಾಗಿರುವುದಿಲ್ಲ ಮತ್ತು ಎಲ್ಲರೂ ಏಕರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ. ಕೆಲವರು ತಮ್ಮ ಬದುಕಿನಲ್ಲಿ  ಹೊಂದಾಣಿಕಗಳನ್ನು ಮಾಡಿಕೊಂಡು ಸ್ನೇಹಿತರು ಮತ್ತು ಬಂಧುಗಳ ವಿಶ್ವಾಸದಿಂದ, ಸ್ಥೈರ್ಯ ದಿಂದ ಪರಿಹಾರವನ್ನು ಕಂಡುಕೊಂಡು ಕಷ್ಟಗಳನ್ನು ದಾಟಿ ಬರುತ್ತಾರೆ. ಇನ್ನು ಕೆಲವರು, ಅದರಲ್ಲೂ ಸೂಕ್ಷ್ಮ ಸ್ವಭಾವದವರು, ಅಂತರ್ಮುಖಿಗಳು, ಮಾನಸಿಕ ತೊಂದರೆಗಳಿಗೆ ಒಳಗಾದವರು ಈ ಅಡಚಣೆಗಳನ್ನು ಹತ್ತಿಕ್ಕಲು ಹೆಣಗುತ್ತಾರೆ. ಇಂತಹ ಒಂದು ಕ್ಲಿಷ್ಟ ಪರಿಸ್ಥಿತಿಯಲ್ಲಿ ಭಾವೋದ್ರೇಕದಲ್ಲಿ  ಅವರು ಆತ್ಮಹತ್ಯೆಯ ಮಾರ್ಗವನ್ನು ಹಿಡಿಯಬಹುದು. ಮಾನಸಿಕ ಆರೋಗ್ಯ ದೈಹಿಕ ಆರೋಗ್ಯದಷ್ಟೇ ಮುಖ್ಯ. ಮಾನಸಿಕ ತೊಂದರೆಗೀಡಾದವರು ಆತ್ಮಹತ್ಯೆಯಲ್ಲಿ ತೊಡಗುವ ಸಾಧ್ಯತೆಗಳು ಹೆಚ್ಚು. ಎಷ್ಟೋ ವೇಳೆ ಒಬ್ಬ ವ್ಯಕ್ತಿಗೆ ಮಾನಸಿಕ ತೊಂದರೆ ಇದದ್ದು ತಿಳಿಯುವುದಿಲ್ಲ ಅವರ ಆತ್ಮಹತ್ಯೆಯ ನಂತರದ ವಿಶ್ಲೇಷಣೆಯಲ್ಲಿ ಈ ವಿಚಾರ ಬೆಳಕಿಗೆ ಬರುತ್ತದೆ. ಈ ಆತ್ಮಹತ್ಯೆಯ ಆಲೋಚನೆಗಳು ಬರಿ ದೊಡ್ಡವರ ಸಮಸ್ಯೆ ಅಷ್ಟೇ ಅಲ್ಲ ಏಕೆಂದರೆ ಶಾಲಾ ಮಕ್ಕಳು ಕೂಡಾ ಆತ್ಮಹತ್ಯೆಯಲ್ಲಿ ತೊಡಗಬಹುದು.  ಪರಿಸ್ಥಿತಿಯ ಒತ್ತಡದಲ್ಲಿ ಮೂಡಿಬರುವ ಈ ಆತ್ಮಹತ್ಯೆಯ ಆಲೋಚನೆ ತೀವ್ರ ವಾಗುವುದು ಒಂದು ಸಣ್ಣ ಘಳಿಗೆಯಲ್ಲಿ ಮತ್ತು ಅದು ಆಂತರಿಕ ಆವೇಗ ಎಂದು ಭಾವಿಸಬಹುದು. ಆ ಸಮಯದಲ್ಲಿ ಅದನ್ನು ಗುರುತಿಸಿ ನೆರವು ನೀಡಿದಲ್ಲಿ ಈ ಹಠಾತ್ ಪ್ರಚೋದನೆಯನ್ನು ತಡೆಗಟ್ಟಬಹುದು. ಆತ್ಮಹತ್ಯೆ ಒಂದು ತೀವ್ರ ಪ್ರಚೋದನೆಯ ಕ್ಷಣವಾದರೂ ಅದರ ಹಿಂದೆ ಸಾಮಾಜಿಕ, ಆರ್ಥಿಕ, ವೈಯುಕ್ತಿಕ ವೈಫಲ್ಯಗಳು ಇರುವುದು ಸಾಮಾನ್ಯ. ಈ ಕಾರಣಗಳಿಂದ ಖಿನ್ನರಾದವರು ಈ ಪಲಾಯನ ಮಾರ್ಗವನ್ನು ಹಿಡಿಯುವುದು ಶೋಚನೀಯ. ಚಲನಶೀಲವಾದ ನಮ್ಮ ಬದುಕಿನಲ್ಲಿ ಗಂಟೆ ಗಂಟೆಗೂ, ದಿನ ದಿನಕ್ಕೂ ಬದುಕಿನ ಪರಿಸ್ಥಿತಿ ಬದಲಾಗುವ ಅನೇಕ ಅವಕಾಶಗಳು ಬಂದು ಹೋಗುತ್ತಿರುವಾಗ, ಅನೇಕ ಆಶಾದಾಯಕ ಸಾಧ್ಯತೆಗಳು ಮೂಡುತ್ತಿರುವಾಗ ಕೆಲವರು ದುಡುಕಿ ಆತ್ಮಹತ್ಯೆಯ ಮಾರ್ಗವನ್ನು ಹಿಡಿಯುವುದು ವಿಷಾದದ ಸಂಗತಿ. ಇದನ್ನು ತಡೆಗಟ್ಟುವುದು ಎಲ್ಲರ ಜವಾಬ್ದಾರಿ. ಆದರೆ ಆತ್ಮಹತ್ಯೆ ಕೈಗೊಳ್ಳುವವರ ಸ್ವಾಭಾವಿಕ, ಮಾನಸಿಕ ಲಕ್ಷಣಗಳನ್ನು ಗುರುತಿಸುವುದು ಸುಲಭವಲ್ಲ. ಜನ ಸಾಮಾನ್ಯರಲ್ಲಿ ಅದರ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಅರಿವು ಮೂಡಿಸದರೆ ಅಷ್ಟೇ ಸಾಲದು ಆ ವ್ಯಕ್ತಿಗೆ ಬೇಕಾದ ತುರ್ತು ಸಹಾಯ ಮತ್ತು ಕೌನ್ಸೆಲಿಂಗ್ ಒದಗಿಸಲು ಸಂಪನ್ಮೂಲಗಳು ಬೇಕು. ಪಾಶ್ಚಿಮಾತ್ಯ ದೇಶಗಳಲ್ಲಿ ಹಲವಾರು ಸರ್ಕಾರಿ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಘಟನೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ವೈಯುಕ್ತಿಕ ನೆಲೆಯಲ್ಲಿ ಪ್ರತಿಯೊಬ್ಬರಿಗೂ ಆತ್ಮಹತ್ಯೆಯನ್ನು ತಡೆಗಟ್ಟುವ, ಇನ್ನೊಬ್ಬರಿಗೆ ಸಹಾಯ ಮಾಡುವ ಜವಾಬ್ದಾರಿಯಿದೆ ಎನ್ನುವುದನ್ನು ಮರೆಯಬಾರದು. ‘ಪ್ರತಿಯೊಂದು ಕಾರ್ಮೋಡಕ್ಕೂ ಒಂದು ಬೆಳ್ಳಿಯ ಅಂಚಿದೆ’ ಎನ್ನುವ ವಿಚಾರವನ್ನು ಅರಿಯಬೇಕಾಗಿದೆ.  ಭರವಸೆ ಎಂಬುದು ಬದುಕಿನ ಬುನಾದಿ.

ಡಾ. ಮುರಳಿ ಹತ್ವಾರ್ ಒಬ್ಬ ಅನುಕಂಪೆ ಉಳ್ಳ ವೈದ್ಯರಾಗಿ, ಸಾಮಾಜಿಕ ಕಾಳಜಿ ಇರುವ ಸತ್ಪ್ರಜೆಯಾಗಿ ಆತ್ಮ ಹತ್ಯೆಯನ್ನು ಕುರಿತ ವಿಚಾರಗಳನ್ನು ಚಿಂತನೆಗೆ ಒಳಪಡಿಸಿದ್ದಾರೆ. ಅವರು ಲಂಡನ್ನಿನ ಥೇಮ್ಸ್ ನದಿ ದಡದಲ್ಲಿ ಒಮ್ಮೆ ವಿಹಾರಕ್ಕೆಂದು ಹೋದಾಗ ಅಲ್ಲಿ ಕಂಡ ಚಿತ್ರಪ್ರದರ್ಶನ ಅವರ ಆಲೋಚನೆಗಳನ್ನು ಪ್ರಚೋದಿಸಿದ ಪರಿಣಾಮವೇ "ಕೊನೆಯ ಚಿತ್ರ" ಮತ್ತು "ಸ್ತಬ್ಧ" ಎಂಬ ಕವನ
     -ಸಂಪಾದಕ 


************************
ಎಲ್ಲಾ ಫೋಟೋ ಕೃಪೆ – ಡಾ ಮುರಳಿ ಹತ್ವಾರ್
ಕೊನೆಯ ಚಿತ್ರ 
ಡಾ. ಮುರಳಿ ಹತ್ವಾರ್ 

ದ ಲಾಸ್ಟ್  ಫೋಟೋ. ಇದೊಂದು ಚಿತ್ರ ಪ್ರದರ್ಶನ. ಯಾವುದೊ ದೊಡ್ಡ ಮ್ಯೂಸಿಯಂ ಅಥವಾ ಗ್ಯಾಲರಿಯಲ್ಲಲ್ಲ, ಥೆಮ್ಸ್ ನದಿ ದಂಡೆಯಲ್ಲಿ, ಪಾದಚಾರಿಗಳ, ಟೂರಿಸ್ಟರ ಆರಾಮ ನಡುಗೆಗೆಂದು ಹಾಸಿರುವ ಕಲ್ನೆಲದ ಮೇಲೆ. ದೂರದಿಂದಲೇ ಕಾಣುವ ದೊಡ್ಡ ಗಾತ್ರದ ನಗು ಮುಖಗಳ ಪೋರ್ಟ್ರೇಟ್ಗಳನ್ನ ನಡುವೆ ಒಬ್ಬರು ನಡೆಯುವಷ್ಟು ಜಾಗ ಬಿಟ್ಟು ಆಚೆಗೊಂದು ಈಚೆಗೊಂದು ಸಾಲಿನಲ್ಲಿ ಜೋಡಿಸಿಟ್ಟ ಪ್ರದರ್ಶನ. ಹತ್ತಿರ ಹೋದಾಗಲೇ ಗೊತ್ತಾಗೋದು ಇವು ಆ ನಗು ತುಂಬಿದ ಮುಖಗಳ ಕೊನೆಯ ಚಿತ್ರ ಎನ್ನೋ ವಿಷಾದದ ವಿಚಾರ. 

ನಗೆ ಮುಖದ, ಒಬ್ಬರೇ ಇರುವ, ಇಲ್ಲ ಮಕ್ಕಳು, ಮನೆಯವರು, ಸ್ನೇಹಿತರ ಜೊತೆ ಇರುವ, ಸಾಲಿನಲ್ಲಿ ಜೋಡಿಸಿಟ್ಟಿರುವ ದೊಡ್ಡ ಸೈಜಿನ ವ್ಯಕ್ತಿ ಚಿತ್ರಗಳು (portrait), ಅವುಗಳ ಕೆಳಗೆ ಆ ವ್ಯಕ್ತಿಯ ಕಿರು ಪರಿಚಯ ಓದಲು ಬೇಕಾದ QR Code.  ಒಂದಲ್ಲಾ ಒಂದು ಕಾರಣದಿಂದ ತಮ್ಮೆ ಜೀವ ತೆಗೆದುಕೊಂಡವರ ಕೊನೆಯ ಚಿತ್ರಗಳವು. ಈ ಪ್ರದರ್ಶನ ಆಯೋಜಿಸಿದ್ದು  ಲಂಡನ್ನಿನ CALM (Campaign Against Living Miserably) ಸಂಸ್ಥೆ; ಈ ಸಂಸ್ಥೆ ಸುಮಾರು ೨೫ ವರ್ಷಗಳಿಂದ ಖಿನ್ನತೆ ಮತ್ತಿತರ ಕಾರಣಗಳಿಂದ ಆತ್ಮಹತ್ಯೆಯ ರಿಸ್ಕ್ ಹೆಚ್ಚಿರುವವರಿಗೆ ಸಹಾಯ ಮಾಡುತ್ತಿದೆ. 

ಆತ್ಮಹತ್ಯೆಗೆ ಅದೇ ಇದೇ ಕಾರಣ ಅಂತಿಲ್ಲ. ಆ ವ್ಯಕ್ತಿಗಳಿಗೆ ಕಾಣುವಂತ ಖಾಯಿಲೆ, ತೊಂದರೆ ಇರಬೇಕಂತಲೂ ಇಲ್ಲ. ಒಂದು ವೇಳೆ ದೈಹಿಕ, ಮಾನಸಿಕ, ಆರ್ಥಿಕ, ಮತ್ಯಾವುದೋ ತೊಂದರೆ ಇದ್ದರೂ, ಅದು ಮೇಲ್ನೋಟಕ್ಕೆ ಕಾಣುಬೇಕಂತಲೂ ಇಲ್ಲ. ಹಾಗಾಗಿ, ಈ ಅನ್ಯಾಯದ ಸಾವನ್ನ ತಡೆಯುವದು ಕಷ್ಟ. ಆದರೆ, ಒಂದು ವೇಳೆ, ಆ ಅತಿ ದುರ್ಬಲ ಕ್ಷಣದಲ್ಲಿ ಸಹಾಯದ ಹುಲ್ಲು ಕಡ್ಡಿ ಸಿಕ್ಕಿ ಬದುಕಿನತ್ತ ಮತ್ತೆ ನಡೆಯುವ ಜನರಲ್ಲಿ ಶೇ. ೯೦ ಜನ ಮತ್ತೆ ಆ ಕಡೆ ನಡೆಯುವುದಿಲ್ಲ. ಇದೊಂದು ಕಾರಣ ಸಾಕಲ್ಲವೇ, ಆತ್ಮಹತ್ಯೆಗೆ ಪೂರಕವಾಗುವ ಸೂಕ್ಷ್ಮ ವಿಚಾರಗಳ, ಕ್ಷಣಗಳ ಮನನ ಮಾಡಿಕೊಂಡು, ಅಂತಹ ಸಂದರ್ಭಗಳೇನಾದರೂ ಬಂದರೆ, ಎಚ್ಚರಗೊಳ್ಳಲು? ಈ ಸೂಕ್ಷ್ಮ ವಿಚಾರಗಳ ಅರಿವು ಮೂಡಿಸುವದೇ CALM ಸಂಸ್ಥೆಯ ಸದುದ್ದೇಶ. 

ಇಂಗ್ಲೆಂಡಿನಂತಹ ಸಣ್ಣ ದೇಶದಲ್ಲೇ ವಾರಕ್ಕೆ ೧೨೫ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೆಲವು ಅಂಕಿಗಳ ಪ್ರಕಾರ ಪ್ರಪಂಚದಲ್ಲಿ ಒಟ್ಟಾರೆ ವರ್ಷಕ್ಕೆ ೮೦೦೦೦೦ ಜನ ಹೀಗೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚು ಯುವ ಜೀವಗಳ ಖಾಲಿಯಾಗುವದು ಇದರಿಂದಲೇ. ಗಂಡಸರ ಪ್ರಮಾಣ ಹೆಂಗಸರಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚು. ಮಾನಸಿಕ ಖಾಯಿಲೆ ಇರುವವರಿಗೆ ಹೆಚ್ಚಿನ ರಿಸ್ಕ್, ಆದರೆ ಯಾವುದೇ ತರಹದ ತಡೆಯಲಾಗದ ತೀವ್ರ ಒತ್ತಡವೂ ಮನಸ್ಸನ್ನ ಜೀವ ಕಳೆಯುವಷ್ಟು ಬಲಹೀನ ಮಾಡಬಲ್ಲದು. 

ಆ ದುರ್ಬಲ ಸನ್ನಿವೇಶದಲ್ಲಿ, ಅಡುಗೆ ಮನೆಯ ಒಲೆ, ಕತ್ತಿ, ಚಾಕು; ಗಿಡಕ್ಕೆ ಹೊಡೆಯುವ ಔಷಧಿ; ಇಲಿ ಪಾಷಾಣ; ಕೈಗೆ ಸಿಕ್ಕುವ ಮಾತ್ರೆಗಳು; ಸೀರೆ, ಪಂಚೆ; ಕೆರೆ, ಬಾವಿ, ನದಿ, ಸಮುದ್ರ; ರಸ್ತೆಯ ಬಸ್ಸು, ರೈಲಿನ ಪಟ್ಟಿ. . . ಯಾವುದೋ ಒಂದರ ದಾರಿ ಹಿಡಿದು ಹೊರಡುತ್ತದೆ ಮನಸು. ಒಮ್ಮೆ ಕಳೆದರೆ ಮತ್ತೆ ಬಾರದ ಆ ಮನಸು, ದೇಹಗಳು ಕಳೆದುಕೊಂಡದ್ದು, ಆವರ ಅಗಲಿಕೆಯಿಂದ ಅವರ ಮನೆಯವರಿಗೆ, ಸ್ನೇಹಿತರಿಗೆ, ಸಮಾಜಕ್ಕೆ ಆಗುವ ನಷ್ಟವನ್ನ ತುಂಬುವದು ಕಷ್ಟ.  

ಆ ಚಿತ್ರಗಳನ್ನು ನೋಡುತ್ತಾ ನಡೆಯುವಾಗ ಹೊಟ್ಟೆ ಕಿವುಚಿ, ಮುಖ ತುಂಬಿ, ಕಣ್ಣೀರು ಧುಮುಕುವಷ್ಟು ತೀವ್ರ ಉತ್ಪಾತ ಮನಸ್ಸಿನಲ್ಲಿ. ಕಣ್ಣ ಮುಂದಿರುವ ಅಪರಿಚಿತರ ಚಿತ್ರಗಳಡಿಯ ನೋವಷ್ಟೇ ಅಲ್ಲದೆ, ನನ್ನ ಬದುಕಿನ ಪಯಣದಲ್ಲಿ ಹೀಗೆ ಮರೆಯಾದವರ ನೆನಪುಗಳೆಲ್ಲ ಮತ್ತಷ್ಟು ಮನಸ್ಸನ್ನ ಒದ್ದೆ ಮಾಡಿತು. ಪರಿಚಿತರ ಮನೆಯ ಆ ಹೈಸ್ಕೂಲಿನ ಹುಡುಗಿ - ಹುಷಾರಿಲ್ಲವೆಂದು ಶಾಲೆಗೆ ಹೋಗದಿದ್ದಕ್ಕೆ ಅಮ್ಮನನ್ನು ಕರೆಸಿ ಹೆಡ್ ಮಿಸ್ ಎರ್ರಾಬಿರ್ರಿ ಬೈದರೆಂದು ನೊಂದು ಮಾರನೇ ದಿನ ಮನೆಯ ಮಾಡಿ ಮೇಲಿನ ಕೋಣೆಯಲ್ಲಿ... . ಎಷ್ಟು ನೊಂದಿರಬೇಕು ಆ ಚಿಕ್ಕ ಮನಸು. ಹೆಡ್ಮಿಸ್ಸಿಗೆ ನೂರಾರು ಮಕ್ಕಳಿದ್ದಾರೆ ಶಾಲೆಯಲ್ಲಿ. ಆದರೆ, ಆ ಮನೆಗಿದ್ದದ್ದು ಅವಳೊಬ್ಬಳೇ. ಸ್ವಲ್ಪ ಅವರ ಭಾಷೆಯಲ್ಲಿ, ಭಾವದಲ್ಲಿ ತಾಳ್ಮೆ, ಸಾಂತ್ವನವಿದ್ದಿದ್ದರೆ?. . . ಖಂಡಿತ ಬದುಕುತ್ತಿದ್ದಳು ಆ ಹುಡುಗಿ. . .

ಒತ್ತಡ, ಸ್ಟ್ರೆಸ್, ಬುಲ್ಯಿಂಗ್, ಬಡತನ, ಸಾಲ, ಅತಿ ನಿರೀಕ್ಷೆ, ಸೋಲು, ಗುಣವಾಗದ ಖಾಯಿಲೆ. . . ಹೀಗೆ ಕಾರಣ ನೂರಾರು. ಇಂತಹ ಯಾವುದಾದರೂ ಪರಿಸ್ಥಿತಿಯಲ್ಲಿ ನಡೆಯುತ್ತಿರುವವರನ್ನ ಸ್ವಲ್ಪ ಎಚ್ಚರದಿಂದ ಗಮನಿಸುತ್ತಾ, ಅವರ ದೈನಂದಿನ ಚಟುವಟಿಕೆ, ಮಾತು, ಹಾವಭಾವ, ಬಟ್ಟೆ, ಇನ್ನಿತರ ವಿಚಾರಗಳಲ್ಲಿ ಯಾವುದಾದರೂ ಬದಲಾವಣೆ ಕಂಡಲ್ಲಿ, ಮನೆಯವರಾಗಲಿ, ಸ್ನೇಹಿತರಾಗಲಿ, ಕೇಳುವ ಕಿವಿ ಕೊಟ್ಟು, ಮಾತಾಡಲು ಜಾಗ ಕೊಟ್ಟು, ಸಹಾಯಕ್ಕೆ ನಿಂತರೆ ಸಣ್ಣದರಲ್ಲಿಯೇ ತಪ್ಪಿಸಲು ಅವಕಾಶವಿದೆ. ಎಲ್ಲರಿಗೂ ಮನ ಬಿಚ್ಚಿ ಮಾತಾಡಲು ಬರುವುದಿಲ್ಲ. ಹಾಗೆ ಬರುವವರಿಗೂ, ಕೇಳುವವರಿಲ್ಲದೆ ಮಾತಾಡಲಾಗದು. ಹೀಗಾಗಿ, ಖಿನ್ನತೆ, ಒತ್ತಡ ಇವೆಲ್ಲ ಮನಸಿನ ಒಳಗೇ ಕುದ್ದು ಕುದ್ದು ಕೊನೆಗೊಮ್ಮೆ ಸ್ಫೋಟಗೊಳ್ಳೋದು. ಉರಿ ಹತ್ತುವ ಮುನ್ನವೇ ಆರಿಸಬೇಕು. ಯಾರಾದರೂ ಒಂಟಿಯಾಗಿದ್ದಾರೆ ಎನ್ನಿಸಿದರೆ. ಕೆಲಸದಲ್ಲಿ, ಜೀವನದಲ್ಲಿ, ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎನಿಸಿದರೆ, ಮುಟ್ಟಿ ಮಾತಾಡಿಸಬೇಕು. ಮಕ್ಕಳ ಅಳುವಿನಂತೆ ಬೆಳೆದವರ ಅಳು ಕೇಳಿಸುವುದಿಲ್ಲ, ಆದರೆ ಮನಸ್ಸಿನೊಳಗೆ ಎಲ್ಲರೂ ಮಕ್ಕಳೇ. ಆಗಾಗ ಅಮ್ಮನ, ಅಪ್ಪನ, ಅಣ್ಣನ, ಅಕ್ಕನ, ಗೆಳೆಯರ ಮಡಿಲಿನ ನೆಮ್ಮದಿಯ ಮನೆ ಬೇಕು ಆರಡಿಯ, ಅರವತ್ತು ದಾಟಿದ ದೇಹಗಳಿಗೂ. . 

ಮನೆಯವರಷ್ಟೇ ಅಲ್ಲ, ಸಮಾಜದ ಎಲ್ಲರೂ, ಎಲ್ಲ ಕ್ಷಣದಲ್ಲೂ ಎಚ್ಚರವಿದ್ದರೆ, ಒಂದಷ್ಟು ಜೀವಗಳನ್ನ ಉಳಿಸಬಹುದು. ರೈಲ್ವೆ ಸ್ಟೇಷನ್ನಿನಲ್ಲಿ ಒಂಟಿಯಾಗಿ ಮಾತಾಡಿಕೊಂಡು ಚಟಪಟನೇ ತಿರುಗುತ್ತಿರುವ ವ್ಯಕ್ತಿ, ಇಲ್ಲ ಏನೂ ಮಾತಾಡದೆ ಪ್ಲಾಟ್ಫಾರ್ಮಿನ ಅಂಚಿನಲ್ಲಿ ನಿಂತಿರುವ ವ್ಯಕ್ತಿಯನ್ನ ಒಮ್ಮೆ ಹಲೋ ಎಂದು ಮಾತಾಡಿಸಿದರೆ ಅಷ್ಟೇ ಸಾಕಾಗಬಹುದು ಆ ವ್ಯಕ್ತಿ ತನ್ನ ನಿರ್ಧಾರ ಬದಲಿಸಿ ರೈಲಿನಡಿಯ ಬದಲು ಮತ್ತೆ ಬದುಕಿನ ರೈಲಿನೊಳಗೆ ಓಡಲು. ಆ ಎಚ್ಚರದ ಕಣ್ಣುಗಳು, ಬೇರೊಂದು ಜೀವದ ಬಗ್ಗೆ ತುಡಿತ, ಆ ಆತ್ಮೀಯ ಸ್ಪಂದನೆ, ಮೊಬೈಲಿನಲ್ಲಿ ನಮಗೇ ನಾವು ಅಪರಿಚಿತರಂತೆ ಮುಳುಗಿರುವ ಈ 'ಬ್ಯುಸಿ-ಬ್ಯುಸಿ' ಟೈಮಿನಲ್ಲಿ ಸುಲಭವಲ್ಲ. ಆದರೆ, ಆ ಸಂಕಷ್ಟದ ಕ್ಷಣಗಳ ಸಂಧರ್ಭಕ್ಕೆ ಮಿಡಿದರೆ ಅದರಿಂದ ಆಗುವ ಲಾಭ ಅಪಾರ. 

ಅಂತಹ ಒಂದು ಘಟನೆ, ಮತ್ತೊಮ್ಮೆ ನೆನಪಿಗೆ ಬಂತು. ಹೀಗೆ ಒಮ್ಮೆ, ಬೆಳಗಿನ ವಾಕಿಂಗಿಗೆ ನದಿಯ ದಂಡೆಯ ಮೇಲೆ ನಡೆದು ಹೋಗುತ್ತಿದ್ದಾಗ, ದೂರದಲ್ಲಿ ಮಹಿಳೆಯೊಬ್ಬರು ಆಚೆಗಿಷ್ಟು ಈಚೆಗಿಷ್ಟು ಹೆಜ್ಜೆ ಮತ್ತೆ ಮತ್ತೆ ಓಡಿ ಸಣ್ಣ ಜಾಗದಲ್ಲೇ ಸುತ್ತುತ್ತಿದ್ದದ್ದು ವಿಚಿತ್ರವೆನಿಸಿತ್ತು. ಅವರ ತುಸು ಹತ್ತಿರ ನಡೆದಾಗ, ಅವರು ಹೆಜ್ಜೆ ಬೆಳೆಸಿ ನನ್ನತ್ತ ಓಡಿ ಪಕ್ಕ ನಿಂತು, ಆತಂಕ ತುಂಬಿದ ಏದುಸಿರಿನಲ್ಲಿ, "ಅಲ್ಲಿ ನೋಡಿ, ಅವನು, ಚಪ್ಪಲಿ ಕೆಳಗೆ ಬಿಟ್ಟು, ನದಿಯ ಅಂಚಿನ ಬೇಲಿಗೆ ಅಂಟುಕೊಂಡು ನಿಂತಿದ್ದಾನೆ, ಕಣ್ಣು ಮುಚ್ಚಿಕೊಂಡು. ಹತ್ತು ನಿಮಿಷದಿಂದ ನೋಡುತ್ತಿದ್ದೇನೆ, ಅಲ್ಲಾಡಿಲ್ಲ ". ನದಿಯತ್ತ ನೋಡಿದರೆ, ಯುವಕನೊಬ್ಬ ತಟಸ್ಥನಾಗಿ ನದಿಯ ಕಡೆ ಮುಖಮಾಡಿ ಬರಿಗಾಲಿನಲ್ಲಿ ನಿಂತಿದ್ದು ಕಾಣಿಸಿತು. ಎರಡು ಹೆಜ್ಜೆ ಹಿಂದೆ ಒಂದು ಜೊತೆ ಚಪ್ಪಲಿ ಇತ್ತು. ಏನೂ ವಿಶೇಷ ಅನ್ನಿಸಲಿಲ್ಲ. ಆಕೆ ಮುಂದುವರೆದು: "ನಾನು ಹೆಂಗಸು, ನಿಮ್ಮಂತ ಗಂಡಸರು ಬರುವದನ್ನು ಕಾಯುತ್ತಿದೆ. ಸ್ವಲ್ಪ ಮಾತಾಡಿಸಿ, ನನಗೇನೋ ಆತಂಕ"* ಎಂದು ನಾನು ಬಾಯಿ ತೆರೆಯುವದರೊಳಗೆ, ನನ್ನಿಂದ ದೂರ ದಿಕ್ಕಿನಲ್ಲಿ ಒಂದೇ ಸಮ ಓಡಿದರು. ನಾನು ನಿಂತೆ. 

ನದಿಯತ್ತ ತಿರುಗಿ ಅವನನ್ನ ನೋಡಿದೆ. ಹಾಗೇ ನಿಂತಿದ್ದ. ನಾನೂ ನಿಧಾನಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಅವನ ಮುಖ ಕಾಣುವಂತೆ ದಡದ ಬೇಲಿಗೆ ಅಂಟಿಕೊಂಡು ನಿಂತೆ. ಅವನು ಕಣ್ಣು ಮುಚ್ಸಿ ನಿಂತಿದ್ದ. ಮುಖದ ಭಾವ ಶಾಂತವೆನಿಸಿತ್ತು. ಮೋಡದ ಮರೆಯಿಂದ ತಪ್ಪಿಸಿಕೊಂಡು ಸರಿಯಲು ಪ್ರಯತ್ನಿಸುತ್ತಾ ಉದಯಿಸುತ್ತಿರುವ ಸೂರ್ಯನ ಬೆಳಕು ಅವನ ಮುಖವನ್ನ ಹೊಳೆಸಿತ್ತು. ನನ್ನ ಮನಸ್ಸಿನ್ನೂ  ಅಪರಿಚಿತೆಯೊಬ್ಬಳು ಒಪ್ಪಿಸಿದ ಜವಾಬ್ದಾರಿಯ ಭಾರದಲ್ಲಿ ಹೊಯ್ದಾಡುತ್ತಿತ್ತು. ಸಮಾಧಾನಕ್ಕೆ, ನಾನೂ ಸೂರ್ಯನತ್ತ ಮುಖ ಮಾಡಿ ಕಣ್ಮುಚ್ಚಿ ನಿಂತೆ. ಆ ಕ್ಷಣಕ್ಕೆ ಮೋಡದಿಂದ ಹೊರಬಂದ ಸೂರ್ಯನ ತೀಕ್ಷ್ಣಬೆಳಕು ಕಣ್ಣಿಗೆ ರಾಚಿ, ಮೂಗಿನ ಹೊಳ್ಳೆಯಿಂದ ಸೀನೊಂದು ಜೋರಾಗಿ ಹಾರಿತು. ಆ ಗದ್ದಲಕ್ಕೆ ಅವನು ಕಣ್ಬಿಟ್ಟು ನನ್ನತ್ತ ನೋಡಿದ. ಅವನ ತನ್ಮಯತೆ ಭಂಗ ಮಾಡಿದ ಪಾಪ ಪ್ರಜ್ಞೆಯಲ್ಲಿ ಸಾರೀ ಎಂದೆ. ಅವನು, "ಬ್ಲೆಸ್ ಯೂ"" ಎಂದ. ಇದೇ ಅವಕಾಶವೆಂಬಂತೆ, ಒಂದೆರಡು ಮಾತಾಡಿ ಮನಸ್ಸಿನ ಆತಂಕವಿಳಿಸಿಕೊಂಡು ನನ್ನ ನಡುಗೆ ಮುಂದುವರೆಸಿದೆ. 

ಮೇಲಿನ ಘಟನೆ, ಏನೂ ಅಲ್ಲದ, ಏನೂ ಆಗದ ಸಂಗತಿಯಾದರೂ, ನನಗೊಂದು ಪಾಠ ಕಲಿಸಿತು. ನಮ್ಮ ಸುತ್ತ ಮುತ್ತಿನ ವಿಚಾರಗಳ, ಜನರನ್ನ, ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ, ನಮ್ಮ ಜೀವನ ಕಾಲದಲ್ಲಿ ಒಬ್ಬಿಬ್ಬರ ಜೀವವನ್ನಾದರೂ ಉಳಿಸಬಹುದೇನೋ ಅಂತ. ಆ ಸೂಕ್ಷ್ಮತೆಯನ್ನ , ಮನೆಯವರಲ್ಲಿ, ಕೆಲಸದಲ್ಲಿ ಜೊತೆಗೊಯ್ದರೆ, ಸಂಕಷ್ಟದಲ್ಲಿರುವ ಮನಸಿನ ಎಳೆಗಳನ್ನ ಮಾತಿನಲ್ಲೋ, ಉಡುಗೆಯಲ್ಲೋ, ಅಭ್ಯಾಸದಲ್ಲೋ ಕಾಣುತ್ತ, ಪರಿಹಾರದ ದಿಕ್ಕಿನಲ್ಲಿ ಅವರನ್ನ ಕಳಿಸುವಂತಾದರೆ , ಕೊನೆಯ ಫೋಟೋಗಳ ಕ್ಷಣಗಳು ಬರುವದು ತುಂಬು ಜೀವನದ ಕೊನೆಯ ಹಂತಗಳಲ್ಲಿ. ಆ ನಿಟ್ಟಿನ ಪ್ರಯತ್ನ, CALM ಸಂಸ್ಥೆಯದ್ದು. ಅದು ಎಲ್ಲರದ್ದೂ ಆಗಬೇಕೆನ್ನುವ ಸದಾಶೆಯ ಪ್ರದರ್ಶನ, The Last Photo. 


ಟಿಪ್ಪಣಿ ೧: 
(*ಆಕೆ, 'ನಾನು ಹೆಂಗಸು. . .' ಎಂದು ಸಬೂಬು ಹೇಳಿದ್ದು ಯಾಕಿರಬಹುದು ಎನ್ನುವ ಪ್ರಶ್ನೆ ಆಗಾಗ ಈಗಲೂ ಕಾಡುತ್ತದೆ. ಬಹುಶ, ಗಂಡಸರ ಸಮಸ್ಯೆಗಳಿಗೆ ಸಾವಿರಾರು ವರ್ಷಗಳಿಂದ ಹೆಂಗಸರು ಸಮಾಧಾನ ಹುಡುಕಿದ್ದು ಸಾಕು, ಈಗ ಗಂಡಸರೇ ಸುಧಾರಿಸಿಕೊಳ್ಳಬೇಕು ಎನ್ನುವ ಆಲೋಚನೆಯಿರಬಹುದೇ? ವಿಪರ್ಯಾಸವೆಂದರೆ, ಆ ಘಟನೆ ನಡೆದಾಗ, ಎಲಿಜಬೆತ್ ರಾಣಿಯ ಈ ದೇಶದ ಪ್ರಧಾನಿ ಮಹಿಳೆ (ತೆರೇಸಾ ಮೇ) ಮತ್ತು ಲಂಡನ್ನಿನ ಮುಖ್ಯ ಪೊಲೀಸ್ ಆಫೀಸರೂ ಮಹಿಳೆ (ಕ್ರೆಸಿಡಾ ಡಿಕ್))

---------------
The Last Photo ಪ್ರದರ್ಶನದಿಂದ ಪ್ರೇರಿತ ಕವನ:
ಸ್ತಬ್ಧ

ಮನ ಸಂಗಮ, ಮನ ಜಂಗಮ
ಗುರುವಿಲ್ಲದ ಗುಡಿಯ ಘಂಟೆಗಳು
ಹೊಡೆಯುತ್ತಿವೆ ಸದ್ದಿಲ್ಲದೆ

ಮುಗಿಲಾಳದ ಗುಡುಗುಗಳು
ಕೇಳಿಸದಷ್ಟು ಕಳೆದುಹೋಗಿವೆ
ತಂಗಾಳಿಗೆ ಮೈಯೊಡ್ಡಿದ ಕಿವಿಗಳು

ಎಷ್ಟೇ ಮಳೆ ಸುರಿದರೂ
ತೋಯುವುದಿಲ್ಲ ಕೆಲವು ಬಯಲುಗಳು!

ಮುನ್ನೀರಿನ ಅಲೆಅಲೆಯ ಮೇಲೆ
ಹರಿದ ಕನಸುಗಳು ತೇಲಿವೆ
ಕಮಲವರಳಿದ ಕೆಸರಿನಡಿಯ
ಮೀನಿನ ಉಸಿರೆಲ್ಲ ಕರಗಿವೆ 

ಕಳೆ ಕೀಳುವ ಹನಿಗಳಿಗೆ
ಹೂವೊಂದು ಬಾಡಿ ಕರಟಿದೆ
ನೋವೆಳೆಯುವ ಹುಡಿಗಳಿಗೆ
ನುಡಿಯೊಂದು ಮೌನವಾಗಿದೆ

ಕಿಟಕಿಯಿಲ್ಲದ ಮನೆಯ ಬಾಗಿಲಿಗೂ ಬೀಗ
ಪುಸ್ತಕ ತುಂಬಿದ ಪಾಠೀಚೀಲ,
ಪಾಲೀಶು ಮಾಡಿದ ಶೂ
ಕಾಯುತ್ತಿವೆ ತನ್ನೊಡೆಯರಿಗೆ

ಮೂಲೆ ಕೋಣೆಯ ಸೀಲಿಂಗಿಗಂಟಿದ
ಫ್ಯಾನೊಂದು ತಿರುತಿರುಗಿ ಮತ್ತದೇ
ಕಥೆ ಹೇಳುತಿದೆ:

ಜೋಲಿ ತೂಗುವ ಸೀರೆಯ ತುಣುಕೊಂದು
ಧೂಳಿನಡಿಯಲಿ ಮಲಗಿದೆ
ಅಂಗಳದಲಿ ಹಸಿದ ಕೂಸೊಂದು
ಅಮ್ಮನ ಮೊಲೆ ಬೇಕೆಂದು ಕೂಗಿ ಅಳುತಿದೆ.

ಮುರಳಿ ಹತ್ವಾರ್
೨೪.೦೬.೨೦೨೨



ಬದುಕು ಜಟಕಾಬಂಡಿ

ನಲುಮೆಯ ಓದುಗರೇ ನಮಸ್ಕಾರ. ‘ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ಈಯವನಿಯೊಲೆಯೊಳೆಮ್ಮಯ ಬಾಳ- ನಟ್ಟು ವಿಧಿ ಬಾಯ ಚಪ್ಪರಿಸುವನು ಮಂಕುತಿಮ್ಮ|’ ಎನ್ನುತ್ತಾರೆ ತಿಮ್ಮಗುರು ಡಿ.ವಿ.ಜಿ. ನಿತ್ಯ ನಿರಂತರತೆ, ಸದೈವ ಜೀವಂತತೆ ಬದುಕಿನ ಲಕ್ಷಣ. ಎಂದೂ, ಎಲ್ಲೂ , ಯಾವ ಪ್ರಸಂಗದಲ್ಲೂ ಬದುಕ ಬಂಡಿ ನಿಲ್ಲುವುದಿಲ್ಲ; ಚಲಿಸುತ್ತಲೇ ಇರುತ್ತದೆ..ಏರು-ತಗ್ಗಿನಲಿ, ಕಾಣದಿಹ ಅನಂತ ತಿರುವುಗಳಲ್ಲಿ, ಬಿಸಿಲು-ಮಳೆಗಳಲ್ಲಿ, ವಸಂತ-ಗ್ರೀಷ್ಮಗಳಲ್ಲಿ..ನಾವಿದ್ದರೂ..ಇಲ್ಲದಿದ್ದರೂ ‘ಬದುಕು ಸೂಜಿದಾರದಂತೆ.ಒಂದು ಕಡೆ ಚುಚ್ಚುತ್ತ ಹಿಂದೆಯೇ ಹೊಲೆಯುತ್ತ ಹೋಗುತ್ತದೆ ಸಾರ್’ ಎನ್ನುತ್ತಾನೆ ನಮ್ಮ ಕೆ.ನಲ್ಲತಂಬಿಯವರ ಕೋಶಿ’ಸ್ ಕವಿತೆಗಳ […]