ಬದುಕು ಜಟಕಾಬಂಡಿ

ನಲುಮೆಯ ಓದುಗರೇ ನಮಸ್ಕಾರ. ‘ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ಈಯವನಿಯೊಲೆಯೊಳೆಮ್ಮಯ ಬಾಳ- ನಟ್ಟು ವಿಧಿ ಬಾಯ ಚಪ್ಪರಿಸುವನು ಮಂಕುತಿಮ್ಮ|’ ಎನ್ನುತ್ತಾರೆ ತಿಮ್ಮಗುರು ಡಿ.ವಿ.ಜಿ. ನಿತ್ಯ ನಿರಂತರತೆ, ಸದೈವ ಜೀವಂತತೆ ಬದುಕಿನ ಲಕ್ಷಣ. ಎಂದೂ, ಎಲ್ಲೂ , ಯಾವ ಪ್ರಸಂಗದಲ್ಲೂ ಬದುಕ ಬಂಡಿ ನಿಲ್ಲುವುದಿಲ್ಲ; ಚಲಿಸುತ್ತಲೇ ಇರುತ್ತದೆ..ಏರು-ತಗ್ಗಿನಲಿ, ಕಾಣದಿಹ ಅನಂತ ತಿರುವುಗಳಲ್ಲಿ, ಬಿಸಿಲು-ಮಳೆಗಳಲ್ಲಿ, ವಸಂತ-ಗ್ರೀಷ್ಮಗಳಲ್ಲಿ..ನಾವಿದ್ದರೂ..ಇಲ್ಲದಿದ್ದರೂ ‘ಬದುಕು ಸೂಜಿದಾರದಂತೆ.ಒಂದು ಕಡೆ ಚುಚ್ಚುತ್ತ ಹಿಂದೆಯೇ ಹೊಲೆಯುತ್ತ ಹೋಗುತ್ತದೆ ಸಾರ್’ ಎನ್ನುತ್ತಾನೆ ನಮ್ಮ ಕೆ.ನಲ್ಲತಂಬಿಯವರ ಕೋಶಿ’ಸ್ ಕವಿತೆಗಳ […]

ಜಯಂತ್ ವಿಷ್ಣು ನಾರ್ಲೀಕರ್ (JVN)- ಭಾರತೀಯ ವಿಜ್ಞಾನ ಲೋಕದ ಹೊಳೆ ಹೊಳೆಯುವ ಧ್ರುವತಾರೆ – ಡಾ ಉಮಾ ವೆಂಕಟೇಶ್ ಬರೆದ ಲೇಖನ

 ನಮ್ಮ ಭಾರತ ದೇಶದಲ್ಲಿ ಜ್ಞಾನ ವಿಜ್ಞಾನದ ಬೆಳಕನ್ನು ಹರಡುವ ಅನೇಕ ಜ್ವಲಂತ ನಕ್ಷತ್ರಗಳಿವೆ. ಈ ನಕ್ಷತ್ರಗಳ ಹೊಳಪನ್ನು ಅನೇಕ ಕ್ಷೇತ್ರಗಳು ಪ್ರತಿಫಲಿಸುತ್ತಿವೆ. ಆರೋಗ್ಯದಲ್ಲಾದರೆ ಆಯುರ್ವೇದವಿದೆ; ಗಣಿತದಲ್ಲಾದರೆ ಶೂನ್ಯದ ಕೊಡುಗೆಯಿದೆ; ಪಾಕಶಾಸ್ತ್ರದಿಂದ ಹಿಡಿದು ಪರಿಪಕ್ವವಾದ ಅನೇಕ ಕಲೆಗಳು, ಸಂಗೀತ, ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆಗಳು, ಚಳವಳಿಗಳು – ಅನೇಕಾನೇಕ ಧಾರೆಗಳು ಹರಿದ ನೆಲವದು. ಅಂತಹ ಧಾರೆಗಳಲ್ಲಿ ಒಂದು ಮಿನುಗುವ ಧ್ರುವತಾರೆ ಜಯಂತ್ ನಾರ್ಲೀಕರ್. ವಿಶ್ವಮಟ್ಟದಲ್ಲಿ ಅತ್ಯುತ್ತಮ ಭೌತಶಾಸ್ತ್ರದ ವಿಜ್ಞಾನಿಯಾಗಿ ಜಯಂತ್ ನಾರ್ಲೀಕರ್ ಖಭೌತ ಶಾಸ್ತ್ರದಲ್ಲೂ ಮಹತ್ತರ ಕೊಡುಗೆಯಿತ್ತು ಭಾರತದ ಕೀರ್ತಿ ರತ್ನವಾಗಿದ್ದಾರೆ. ಅವರ ಬಗ್ಗೆ ಡಾ.ಉಮಾ ವೆಂಕಟೇಶ್ ಸವಿವರವಾಗಿ, ಸುಲಲಿತವಾಗಿ ಬರೆದಿದ್ದಾರೆ. ಅವರ ಈ ಮತ್ತೊಂದು ವಿಜ್ಞಾನ-ವಿಶೇಷದ ಲೇಖನವನ್ನು ಓದಿ. ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ಇತರ ಸಹೃದಯ ಓದುಗರೊಡನೆ ಹಂಚಿಕೊಳ್ಳಿ. ಸಂ

1964 ಕೊನೆಯ ದಿನಗಳವು; ದೇಶದಾದ್ಯಂತ ಎಲ್ಲಾ ವೃತ್ತಪತ್ರಿಕೆಗಳೂ ತಮ್ಮ ಮೊದಲ ಪುಟದಲ್ಲಿ, ಪ್ರಸಿದ್ಧ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಒಬ್ಬ ಯುವ ಭಾರತೀಯ ಪ್ರಾಧ್ಯಾಪಕ, ಮತ್ತು ಅವನ ಹಿರಿಯ ಸಂಶೋಧನಾ ಸಹಭಾಗಿ ಇಬ್ಬರೂ, ತಮ್ಮ ನೂತನ ಗುರುತ್ವಾಕರ್ಷಣೆಯ ಸಿದ್ಧಾಂತದಲ್ಲಿ, ಐನಸ್ಟೈನನನ್ನೂ ಮೀರಿಸಿದ ಪ್ರತಿಪಾದನೆಯನ್ನು ಮಾಡಲು ಸಾಧ್ಯವಾಗಿತ್ತು ಎನ್ನುವ ಬಿಸಿ ಸುದ್ದಿಯನ್ನು ಸಿಡಿಸಿದ್ದರು. ಆಗ ತಾನೇ ಲಂಡನ್ನಿನ ಪ್ರತಿಷ್ಟಿತ ರಾಯಲ್ ಖಗೋಳ ಸೊಸೈಟಿಯ ಸಭೆಯಲ್ಲಿ ಘೋಷಿಸಲಾಗಿದ್ದ ಈ

ಜಯಂತ್ ವಿಷ್ಣು ನಾರ್ಲೀಕರ್
ಜಯಂತ್ ವಿಷ್ಣು ನಾರ್ಲೀಕರ್ b 1938

ಸುದ್ದಿಯನ್ನು, ವೈಜ್ಞಾನಿಕ ಪ್ರಪಂಚವು ಬಹಳ ಉತ್ಸಾಹದಿಂದಲೇ ಸ್ವಾಗತಿಸಿತ್ತು. ಬ್ರಿಟಿಷರ ದಾಸ್ಯದಿಂದ ವಿಮುಕ್ತವಾದ ತರುಣ ಭಾರತ ದೇಶಕ್ಕೆ, ಅಂತಹ ಭಾರಿ ಮನ್ನಣೆಯ ಅಗತ್ಯವಿತ್ತು. ಸ್ವತಂತ್ರ ಭಾರತವು ಸಮಾಜದ ಸರ್ವ ರಂಗಗಳಲ್ಲೂ, ಅದರಲ್ಲೂ ವೈಜ್ಞಾನಿಕ ವಲಯದಲ್ಲಿ ಪಾಶ್ಚಿಮಾತ್ಯ ದೇಶಗಳೊಂದಿಗೆ ಸರಿಸಮನಾಗಿ ಹೆಜ್ಜೆಹಾಕುತ್ತಾ ಮುಂದುವರೆಯುವ ಉತ್ಸಾಹ ಮತ್ತು ತವಕಗಳನ್ನು ಹೊಂದಿದ್ದು, ದೇಶವೊಂದರ ವಸ್ತುಪ್ರಗತಿಯಲ್ಲಿ, ವಿಜ್ಞಾನವು ಒಂದು ಪ್ರಮುಖ ಪರಿವರ್ತನಾ ವಾಹನವೆಂದು ನಂಬಲಾಗಿತ್ತು. ಭಾರತೀಯ ವಿಜ್ಞಾನ ದಿಗಂತದಲ್ಲಿ ಈ ರೀತಿಯ ಒಂದು ಮಹಾಸ್ಫೋಟದಂತೆ ತಮ್ಮ ಛಾಪನ್ನು ಒತ್ತಿದ ಆ ತರುಣ ವಿಜ್ಞಾನಿಯೇ ಜಯಂತ್ ವಿಷ್ಣು ನಾರ್ಲೀಕರ್. ರಾತ್ರೋರಾತ್ರಿ ಮನೆಮಾತಾದ ಅವರ ಯಶಸ್ಸಿನ ಕಥೆಯನ್ನು ತಿಳಿಯಲು ಓದುಗ ತನ್ನ ಕಲ್ಪನೆಯನ್ನು ಬಹಳ ವಿಸ್ತರಿಸಬೇಕಿಲ್ಲ. ಉದಯೋನ್ಮುಖ ಮತ್ತು ಮಹತ್ವಾಕಾಂಕ್ಷಿ ಭಾರತೀಯ ವಿಜ್ಞಾನ ಲೋಕದ ಉಜ್ವಲ ತಾರೆ, ಹಾಗೂ ಅಪ್ರತಿಮ ಆದರ್ಶ ಮಾದರಿಯಾದ ಜಯಂತ್ ನಾರ್ಲೀಕರ್, ತಮ್ಮ ಅಸಾಧಾರಣ ಪ್ರತಿಭೆ ಮತ್ತು ವೈಜ್ಞಾನಿಕ ಸಾಧನೆಗಳಿಗೆ ಭಾರತ ಸರ್ಕಾರದ ಅತ್ಯುತ್ತಮ ನಾಗರೀಕ ಪುರಸ್ಕಾರವಾದ ಪದ್ಮಭೂಷಣ ಪ್ರಶಸ್ತಿಯನ್ನು ತಮ್ಮ ಕಿರಿಯ ವಯಸ್ಸಿನಲ್ಲೇ ಪಡೆದ ಪ್ರತಿಭಾವಂತ ವ್ಯಕ್ತಿ, ಹಾಗೂ ಈ ಪ್ರಶಸ್ತಿಗೆ ಪಾತ್ರರಾದ ಅತ್ಯಂತ ಕಿರಿಯ ವ್ಯಕ್ತಿಯೂ ಹೌದು.

1938ರ ಜುಲೈ 19ರಂದು, ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಪಟ್ಟಣದಲ್ಲಿ (ಅಂದು ಕೊಲ್ಲಾಪುರ ಒಬ್ಬ ಸ್ವತಂತ್ರ ಅರಸನ ರಾಜ್ಯಾಡಳಿತಕ್ಕೆ ಒಳಪಟ್ಟಿತ್ತು) ಜನಿಸಿದ ಜಯಂತ್ ನಾರ್ಲೀಕರ್ (JVN) ಅವರ ತಂದೆ ವಿಷ್ಣು ವಾಸುದೇವ್ ನಾರ್ಲೀಕರ್ (VVN), ವಾರಾಣಾಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಒಬ್ಬ ಪ್ರಸಿದ್ಧ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದು, ತಾಯಿ ಸುಮತಿ ಸಂಸ್ಕೃತ ವಿದ್ವಾಂಸರೆನಿಸಿದ್ದರು. ಹಾಗಾಗಿ ಜಯಂತ್ ಅವರಿಗೆ ಇಂದು ಬಹುತೇಕವಾಗಿ ನಮಗೆಲ್ಲಾ ಕೊರತೆಯಿರುವ, ಒಂದು ಸುಂದರವಾದ ಶಾಸ್ತ್ರೀಯ ಸ್ಪರ್ಶ ಮತ್ತು ಅಭಿರುಚಿಗಳ ಉತ್ತಮ ಸಂಯೋಜನೆಯಾದ ಸಂಸ್ಕೃತ ಭಾಷೆಯ ಒಂದು ಸುಸಂಸ್ಕೃತ ಹಾಗೂ ಆದರ್ಶ ಪಾಲನೆಯು ಅವರ ಪಾಲಿಗೆ ಲಭ್ಯವಾಗಿತ್ತು. ಆದ್ದರಿಂದಲೇ ಜಯಂತ್ ತಮ್ಮ ಮಾತುಕತೆಗಳ ಮಧ್ಯದಲ್ಲಿ ಸಂಸ್ಕೃತ ಭಾಷೆಯ ಸೂಕ್ತ ಹಾಗೂ ಶ್ರೇಷ್ಠ ಉಲ್ಲೇಖಗಳನ್ನು ಲೀಲಾಜಾಲವಾಗಿ ಬೆರೆಸುತ್ತಾ ನಡೆದಾಗ ಆಶ್ಚರ್ಯವೆನಿಸುವುದಿಲ್ಲ. ಭಾರತದಲ್ಲಿ ಅಂದು ಸಾಮಾನ್ಯ ಸಾಪೇಕ್ಷತೆಯ ಬಗ್ಗೆ (General Relativity) ನಡೆಸುತ್ತಿದ್ದ ಪ್ರಥಮಾನ್ವೇಷಕ ಸಂಶೋಧನೆಯಲ್ಲಿ ತೊಡಗಿದ್ದ  ವಿಜ್ನಾನಿಗಳಲ್ಲಿ, ಜಯಂತ್ ಅವರ ತಂದೆ ವಿಷ್ಣು ನಾರ್ಲೀಕರ ಮತ್ತು ಕಲ್ಕತ್ತಾದ ಎನ್.ಆರ್.ಸೆನ್ (N.R.Sen) ಸೇರಿದ್ದರು. ಹೀಗೆ ಜಯಂತ್ ನಾರ್ಲೀಕರ್ ಹುಟ್ಟುವಾಗಲೇ ಸಾಪೇಕ್ಷತೆಯನ್ನು ತಮ್ಮ ಮೊದಲ “ಜನ್ಮಘುಂಟಿ” ಅಂದರೆ ಮೊದಲ ನೀರಿನ ಗುಟುಕೆಂಬಂತೆ ಕುಡಿಯುತ್ತಲೇ ಬೆಳೆದಿದ್ದರೆನ್ನಬಹುದು. ಆದರೂ ಸಹಾ ಆಶ್ಚರ್ಯಕರವೆಂಬ ರೀತಿಯಲ್ಲಿ ಆ ಗಮನಾರ್ಹವಾದ ದೀಕ್ಷೆಗೆ ತಕ್ಕಂತೆಯೇ ತಮ್ಮ ಜೀವನದಲ್ಲಿ ವೈಜ್ಞಾನಿಕ ಸಾಧನೆಗೈದರು ಎನ್ನುವುದು ಇಲ್ಲಿ ಮುಖ್ಯ.

ತಮ್ಮ ಶಾಲಾ ದಿನಗಳಿಂದಲೇ ಜೆ.ವಿ.ಎನ್ ಒಬ್ಬ ಅಸಾಧಾರಣನಾದ ಸರ್ವತೋಮುಖ ವಿದ್ಯಾರ್ಥಿಯಾಗಿದ್ದು, ಎಲ್ಲಾ ವಿಷಯಗಳಲ್ಲೂ ಉತ್ತಮ ಅಂಕಗಳನ್ನು ಗಳಿಸುತ್ತಿದ್ದರು. ಅಷ್ಟೇ ಅಲ್ಲದೇ ಒಬ್ಬ ಕ್ರೀಡಾಳುವೂ ಆಗಿದ್ದು, ಉತ್ತಮ ಬ್ಯಾಡಮಿಂಟನ್ ಆಟಗಾರನಾಗಿದ್ದರು (ನಂತರ ದಿನಗಳಲ್ಲಿ ಟೆನಿಸ್ ಆಟಕ್ಕೆ ತಮ್ಮ ಆಸಕ್ತಿಯನ್ನು ಬದಲಿಸಿ, ಪುಣೆಯಲ್ಲಿ IUCAA ಸಂಸ್ಥೆಯ ನಿರ್ದೇಶಕರಾಗಿದ್ದಾಗ, ಪ್ರತಿ ದಿನ ಬೆಳಿಗ್ಗೆ ಟೆನಿಸ್ ಆಟದಲ್ಲಿ ಒಂದು ಸೆಟ್ ಆಡುವುದನ್ನು ತಪ್ಪಿಸುತ್ತಿರಲಿಲ್ಲ). ವಾರಾಣಾಸಿಯಲ್ಲಿ ಬೆಳೆದ ಜಯಂತ್ ಅವರು, ಉತ್ತರ ಭಾರತದ ಭಾಷೆ ಮತ್ತು ನಡವಳಿಕೆಗಳನ್ನು ರೂಢಿಸಿಕೊಂಡಿದ್ದರು. ತಮ್ಮ ಮಾತಾಪಿತೃಗಳಿಂದ ಬಳುವಳಿಯಾಗಿ ಬಂದಿದ್ದ ಮರಾಠಿಯ ನೇರವಾದ ಮತ್ತು ಶಿಸ್ತುಗಳೊಂದಿಗೆ ಮೇಳೈಸಿತ್ತಲ್ಲದೇ, ಮುಂದೆ ಅವರ ಕೇಂಬ್ರಿಡ್ಜಿನ ದಿನಗಳಲ್ಲೂ ಮತ್ತೊಮ್ಮೆ ಬಲವರ್ಧಿತವಾಗಿತ್ತು. ಅಷ್ಟೇ ಅಲ್ಲದೇ ಈ ಶಿಸ್ತು ಮನೆಯಲ್ಲಿ ಸದಾಕಾಲ ಅವರ ತಂದೆ ವಿಷ್ಣು ನಾರ್ಲೀಕರ್ ರೂಪದಲ್ಲಿ (VVN), ಮನೆಯಲ್ಲಿ ಒಂದು ಜೀವಂತ ಕೇಂಬ್ರಿಡ್ಜಿನಂತೆ ಕಂಡುಬರುತ್ತಿತ್ತು. ಈ ಸಾಂಸ್ಕೃತಿಕ ಮಾರ್ಗದರ್ಶನದ ಫಲಿತಾಂಶವನ್ನು, ಅವರ ಅದ್ಭುತವಾದ ವರ್ತನೆ ಮತ್ತು ನಡವಳಿಕೆಯ ವಿಶಿಷ್ಟತೆಯಲ್ಲಿ ಕಾಣಬಹುದಾಗಿತ್ತು. ಬನಾರಸ್ ವಿಶ್ವವಿದ್ಯಾಲಯದಂತಹ ಸ್ಥಳದ ಗತದಿನಗಳು, ಇಂತಹ ಸುಂದರವಾದ ಸಾಮಾಜಿಕ ತತ್ವಗಳನ್ನು ಪೋಷಿಸುತ್ತಿತ್ತು.

ಬನಾರಸ್ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದ ನಂತರ, ತಮ್ಮ ತಂದೆಯಂತೆ ಜೆವಿಎನ್ ಕೂಡಾ, ಪ್ರತಿಷ್ಟಿತ ಟಾಟಾ ವಿದ್ವತ್ ವೇತನವನ್ನು ಪಡೆದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಹೋದರು, ಹಾಗೂ ಅಲ್ಲಿನ ಅಸಾಧಾರಣವೆನಿಸಿದ ಗಣಿತದ ಟ್ರೈಪೋಸ್ ಪರೀಕ್ಷೆಯನ್ನು ದಾಖಲೆಯ ಸಮಯದಲ್ಲಿ ಮಾಡಿ ಮುಗಿಸಿ, ಸೀನಿಯರ್ ರಾಂಗ್ಲರ್ ಪದವಿ ಪಡೆದು ತಮ್ಮ ಕೀರ್ತಿಯನ್ನು ಮೆರೆದಿದ್ದರು. ಆ ಸಮಯದಲ್ಲಿ ಕೇಂಬ್ರಿಡ್ಜಿನಲ್ಲಿದ್ದ ಫ಼್ರೆಡ್ ಹಾಯ್ಲ್ ಎಂಬ ಪ್ರಸಿದ್ಧ ಭೌತಶಾಸ್ತ್ರಜ್ಞರು (Fred Hoyle), ಖಗೋಳಶಾಸ್ತ್ರದಲ್ಲಿ ಸಂಶೋಧನೆಗೆ ಹೆಸರುವಾಸಿಯಾಗಿದ್ದು, ಡಾಕ್ಟರೇಟ್ ಪದವಿಯ ಮಾರ್ಗದರ್ಶನಕ್ಕೆ ಬಹಳ ಬೇಡಿಕೆಯಲ್ಲಿದ್ದ ವ್ಯಕ್ತಿಯಾಗಿದ್ದರು. ಜಯಂತರ ಜೊತೆಯಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಬಳಗದಲ್ಲಿ, ಅತ್ಯಂತ ಪ್ರತಿಭಾವಂತರ ಸಾಲೇ ಇದ್ದು, ಅವರಲ್ಲಿ ಸ್ಟೀಫನ್ ಹಾಕಿನ್ಸ್ (Stephen Hawking), ಮಾರ್ಟಿನ್ ರೀಸ್ (Martin Rees), ಬ್ರಾಂಡನ್ ಕಾರ್ಟರ್ (Brandon Carter), ಮತ್ತು ಜಾರ್ಜ್ ಎಲ್ಲಿಸ್ (George Ellis) ರಂತಹ ಅತ್ಯಂತ ಸುಪ್ರಸಿದ್ಧರ ಗೋಷ್ಠಿಯೇ ಇತ್ತಲ್ಲದೇ, ಅವರೆಲ್ಲಾ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿರುವ ವಿಜ್ಞಾನಿಗಳೆನಿಸಿದ್ದಾರೆ.

ಇಂತಹ ಅಸಾಧಾರಣ ಪ್ರತಿಭೆ, ಮತ್ತು ಬುದ್ಧಿವಂತಿಕೆಯ ಸಮೃದ್ಧಿಯ ಮಧ್ಯೆ, ಹಾಯ್ಲ್ ಅವರು, ಜಯಂತ್ ನಾರ್ಲೀಕರ್ ಅವರನ್ನು ತಮ್ಮ ಡಾಕ್ಟರೇಟ್ ವಿದ್ಯಾರ್ಥಿಯನ್ನಾಗಿ ಆರಿಸಿದ್ದು, ಒಬ್ಬ ವಿದ್ಯಾರ್ಥಿಯಾಗಿ ಅವರಿಗಿದ್ದ ಪ್ರಖ್ಯಾತಿ, ಅವರ ಬುದ್ದಿಮತ್ತೆ ಮತ್ತು ಸ್ಥಾನಮಾನಗಳನ್ನು ಎತ್ತಿ ತೋರುತ್ತದೆ. ಅಷ್ಟೇ ಅಲ್ಲದೇ, ಒಬ್ಬ ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ಗಣ್ಯನೀಯವೆನಿಸಿದ್ದ ಸ್ಮಿತ್ ಪ್ರಶಸ್ತಿಯನ್ನು ಪಡೆದಿದ್ದ ಜಯಂತ್, ಮುಂದೆ ಐದು ವರ್ಷಗಳ ನಂತರ ರೋಜರ್ ಪೆನ್ರೋಸ್ (Roger Penrose) ಮತ್ತು ಸ್ಟೀಫನ್ ಹಾಕಿನ್ಸ್ ಅಂತಹವರ ಭವ್ಯ ಸನ್ನಿಧಿಯಲ್ಲಿ ಗಳಿಸಿದ್ದ ಮತ್ತೊಂದು ಪ್ರತಿಷ್ಟಿತ ಪುರಸ್ಕಾರವಾದ ಆಡಮ್ಸ್ ಪ್ರಶಸ್ತಿ ಇಲ್ಲಿ ಖಂಡಿತವಾಗಿಯೂ ಉಲ್ಲೇಖಾರ್ಹವಾದ ಸಂಗತಿ. ತಮ್ಮ ಗುರು ಮತ್ತು ಮಾರ್ಗದರ್ಶಿ ಫ಼್ರೆಡ್ ಹಾಯ್ಲರಂತೆ, ಜಯಂತ್ ಕೂಡಾ ಸಂಪ್ರದಾಯಕವಲ್ಲದ, ಆದರೆ ಮೂಲಭೂತವೆನಿಸಿದ ವೈಜ್ಞಾನಿಕ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವುದನ್ನು ಇಷ್ಟಪಡುತ್ತಿದ್ದರು. ಖಗೋಳಶಾಸ್ತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡುವ ಕಾರ್ಯವನ್ನು ಮುಂದುವರೆಸಿದ ಜಯಂತ್ ನಾರ್ಲೀಕರ್ ಅವರ ಕಾರ್ಯಕ್ಕೆ ದೊರೆಯಬೇಕಾಗಿದ್ದ ಅರ್ಹ ಮೆಚ್ಚುಗೆ ಸಿಗಲಿಲ್ಲ. ಅಂದು ಅವರು ನುಡಿದಿದ್ದ ಹಲವಾರು ಭವಿಷ್ಯವಾಣಿಗಳು ಮತ್ತು ಕಲ್ಪನೆಗಳು ಆ ಸಮಯಕ್ಕೆ ಮೀರಿದ ವಿಷಯಗಳೆನಿಸಿದ್ದು, ಅಂದು ಅವನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಆದಾಗ್ಯೂ ಮುಂದೆ ವೀಕ್ಷಣೆಗಳ ಮೂಲಕ ಪರಿಶೀಲಿಸಿದ ನಂತರ, ವೈಜ್ಞಾನಿಕ ಸಮುದಾಯದವರು ಆ ಕಲ್ಪನೆಗಳನ್ನು ಅಂಗೀಕರಿಸಿದ್ದಾರೆ. ವಿಜ್ಞಾನದಲ್ಲಿ ಯಾವುದೇ ಒಬ್ಬ ವಿಜ್ಞಾನಿಯ ಕಾರ್ಯದ ನಿಜವಾದ ಮಾಪನವು, ಹೊಸ ಕಲ್ಪನೆಯೊಂದನ್ನು ಪ್ರತಿಪಾದಿಸುವ, ಅಥವಾ ಯಾವುದೋ ಭೌತಿಕ ವಿದ್ಯಮಾನವೊಂದನ್ನು ಮುನ್ನುಡಿಯುವ ಸೃಜನಶೀಲತೆಯಾಗಿದ್ದು, ಅದನ್ನು ಒಂದಲ್ಲಾ ಒಂದು ದಿನ ವೈಜ್ಞಾನಿಕ ಪರಿಶೀಲನೆಗಳ ಮೂಲಕ ಎಲ್ಲರೂ ಸ್ವೀಕರಿಸುತ್ತಾರೆ. ಆ ರೀತಿಯಲ್ಲಿ ಜಯಂತ್ ನಾರ್ಲೀಕರ್ ಅವರ ಕೊಡುಗೆಗಳು ಇಂದಿಗೂ ಅತ್ಯಂತ ಉತ್ತಮವಾದ ವೈಜ್ಞಾನಿಕ ಸಾಧನೆಗಳ ನಡುವೆ ಇದೆಯಾದರೂ, ಅವುಗಳು ಅರ್ಹವಾದ ಗಮನ ಸೆಳೆಯುವಲ್ಲಿ ವಿಫಲವಾಗಿವೆ. ಖಗೋಳ ವೀಕ್ಷಣೆಗಳು ನಿರ್ಣಾಯಕ ಉತ್ತರಗಳನ್ನು ನೀಡುವಷ್ಟು ಸದಾ ತೀಕ್ಷ್ಣವಾಗಿಲ್ಲದಿರಬಹುದು, ಆದರೆ ಎಲ್ಲಾ ವೀಕ್ಷಣೆಗಳನ್ನು ಒಂದು ಸೈದ್ಧಾಂತಿಕ ಮಾದರಿಯ ಚೌಕಟ್ಟಿನಲ್ಲಿ ನಿರೂಪಿಸಲಾಗುತ್ತದೆ. ಈ ನಿರೂಪಣೆಗಳು ಅತ್ಯಂತ ಜಟಿಲ ಮತ್ತು ಸಂಕೀರ್ಣವಾದ ವಿಷಯವಾಗಿದೆ. ಪ್ರಾಮಾಣಿಕವಾಗಿ ಸತ್ಯವನ್ನರಸುವ ಪ್ರತಿಯೊಬ್ಬರ ಮನಸ್ಸು, ಒಂದು ಮೂಲಭೂತದ ಮಟ್ಟದಲ್ಲಿ ಮುಕ್ತವಾಗಿರಬೇಕು. ಆದರೆ ದುರದೃಷ್ಟವಶಾತ್ ಇಂದಿನ ವೈಜ್ಞಾನಿಕ ಸಮುದಾಯದಲ್ಲಿ ಇಂತಹದೊಂದು ಅಪೇಕ್ಷಣೀಯ ಮತ್ತು ತಾರ್ಕಿಕವಾದ ನಿಲುವು ಕಂಡುಬರುವುದಿಲ್ಲ. ಇಂದು ಪ್ರತಿಯೊಬ್ಬರ ಗಮನವೂ “ಗೆದ್ದೆತ್ತಿನ ಬಾಲಹಿಡಿಯುವ’’ ವಿಚಾರಗಳತ್ತ ಸೆಳೆಯಲ್ಪಟ್ಟಿದೆ, ಹಾಗೂ ಇತರ ಸಮರ್ಥವಾದ ಪರ್ಯಾಯಗಳನ್ನು ಯಾರೂ ಗೌರವಿಸದೆ ಬಹಿಷ್ಕರಿಸುತ್ತಿದ್ದಾರೆ. ಇದು ವಿಜ್ಞಾನಕ್ಕೆ ಮತ್ತು ಅದರ ಬೆಳವಣಿಗೆಗೆ ಆರೋಗ್ಯಕರವಲ್ಲ.

ಆದರೆ J.V.N ಯಾವಾಗಲೂ ಈ “ಗೆದ್ದೆತ್ತಿನ-ಬಾಲ ಹಿಡಿಯುವ ರೋಗಗ್ರಸ್ಥರ” ಒಂದು ಬಲಿಷ್ಠ ಸಮಾನಸ್ಕಂದರ ಗುಂಪನ್ನು ಕೆಣಕುವಂತಹ ಮೂಲಭೂತ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸುವುದರಲ್ಲಿ ಆಸಕ್ತಿಹೊಂದಿದ್ದು, ಆ ಗುಂಪಿನಲ್ಲಿ ಎದ್ದುಕಾಣುವ ವ್ಯಕ್ತಿಯೆನಿಸಿದ್ದಾರೆ. 1960ರ ಆರಂಭಿಕ ದಿನಗಳಲ್ಲಿ ಕೇಂಬ್ರಿಡ್ಜಿನಲ್ಲಿದ್ದ ಸಮಯದಿಂದಲೂ ಅವರಲ್ಲಿದ್ದ ಈ ವಿಶಿಷ್ಟ ಗುಣವನ್ನು ನಾವು, ಇಂದಿಗೂ ಕಾಣಬಹುದು. ಈ ಹಿಂದೆಯೇ ಹೇಳಿದಂತೆ, ಈ ಗುಣವನ್ನು ಅವರು ತಮ್ಮ ಗುರು ಫ಼್ರೆಡ್ ಹಾಯ್ಲರಿಂದ ಬಹುಶಃ ಸಂಪಾದಿಸಿರಬಹುದು. ಅದಕ್ಕಿಂತಲೂ ಮುಖ್ಯವಾಗಿ, ಹಾಯ್ಲರಂತೆಯೇ, ಜಯಂತ್ ನಾರ್ಲೀಕರ್ ಅವರಿಗೂ ತಮ್ಮದೇ ಆದ ಒಂದು ಸ್ವಂತಿಕೆಯಿದ್ದು, ಸದಾ ಕಾಲವೂ ತೀವ್ರವಾದ ಸ್ವತಂತ್ರ ಮನೋಭಾವ, ಹಾಗೂ ಗೆದ್ದೆತ್ತಿನ ಬಾಲವನ್ನನುಸರಿಸುವವರ ವಿರುದ್ಧ ಹೋರಾಡುವ ಒಂದು ಸ್ವಭಾವವಿದೆ. ಅಷ್ಟೇ ಅಲ್ಲದೇ, ತಮ್ಮ ಸ್ವಂತ ನಿರ್ಧಾರಣದ ಪ್ರಕಾರ, ಯಾವುದೇ ಒಂದು ದೃಢವಾದ ಸಿದ್ಧಾಂತವೂ, ಒಂದು ಸ್ವತಂತ್ರವಾದ, ಮತ್ತು ನಿಷ್ಪಕ್ಷವಾದ ಪರೀಕ್ಷೆಗೊಳಗಾಗಿ, ಅದನ್ನೆದುರಿಸಿ ನಿಲ್ಲದಿದ್ದಲ್ಲಿ, ಅದನ್ನು ಪ್ರಶ್ನಿಸಿ, ಅದಕ್ಕೆ ಸವಾಲೊಡ್ಡುವಂತಹ ಒಂದು ಧೈರ್ಯ ಮತ್ತು ಗಾಢ-ನಂಬಿಕೆಗಳು ಅವರಲ್ಲಿವೆ. ಇದನ್ನೇ ಅವರು ತಮ್ಮ ವೈಜ್ಞಾನಿಕ ವೃತ್ತಿಜೀವನದುದ್ದಕ್ಕೂ ನಡೆಸುತ್ತಲೇ ಬಂದಿದ್ದಾರೆ. ಅವರ ಆನಂತರದ ವೃತ್ತಿಪರ ಪ್ರತ್ಯೇಕೀಕರಣವು, ಸತ್ಯ ಮತ್ತು ತತ್ವಗಳನ್ನು ವಸ್ತುನಿಷ್ಠವಾಗಿ, ಹಾಗೂ ನಿಷ್ಪಕ್ಷಪಾತವಾಗಿ ಪರಿಶೀಲಿಸುವಾಗ, ಹಿಂಜರಿಯದೆ, ಖಚಿತವಾದ ನಿಷ್ಠೆಗೆ ಅಂಟಿಕೊಳ್ಳುವ ಒಂದು ಸ್ವಭಾವದಿಂದಲೇ ಉದ್ಭವಿಸಿದೆ ಎಂದು ಹೇಳಬಹುದು.

ಈಗಂತೂ ಬಿಗ್-ಬ್ಯಾಂಗ್ ಮಹಾಸ್ಫೋಟ ಸಿದ್ಧಾಂತದ ವಿರುದ್ಧ ದನಿಯೆತ್ತಿರುವ ಗುಂಪಿನ ಏಕೈಕ ಸದಸ್ಯರಾಗಿರುವ ಒಂದು ಹಾಸ್ಯಾಸ್ಪದ ಅಲ್ಪಸಂಖ್ಯಾತ ಕುಲದ JVN, ಅವರ ಪ್ರಚಲಿತ ವಿಶ್ವವಿಜ್ಞಾನದ ವಿರುದ್ಧದ ಟೀಕೆಯನ್ನು ಇನ್ನೂ ವಿಜ್ಞಾನಿಗಳು ಗೌರವದಿಂದ ಗಂಭೀರವಾಗಿಯೇ ಪರಿಗಣಿಸುತ್ತಿದ್ದಾರೆ. ಇದಕ್ಕೆ ಕಾರಣ ಅವರು ನೀಡಿರುವ ಹಲವಾರು ಮೂಲಭೂತ ಕೊಡುಗೆಗಳು. ಅವನ್ನು ಯಾರೂ ಕಡೆಗಣಿಸಲು ಸಾಧ್ಯವಾಗಿಲ್ಲ. ಅವುಗಳ ಸ್ವಂತಿಕೆ ಮತ್ತು ಸೃಜನಶೀಲತೆಯನ್ನು ಗುರ್ತಿಸಿರುವ ವೈಜ್ಞಾನಿಕ ಸಮುದಾಯವು, ಅವರನ್ನು 1994-1997ರ ಅವಧಿಯಲ್ಲಿ, ಅಂತರಾಷ್ಟ್ರೀಯ ಖಗೋಳಶಾಸ್ತ್ರ ಸಂಘದ, ವಿಶ್ವವಿಜ್ಞಾನ ಆಯೋಗದ ಅಧ್ಯಕ್ಷರನ್ನಾಗಿ ಚುನಾಯಿಸಿದ್ದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಇದೊಂದು ಆರೋಗ್ಯಕರ ಬೆಳವಣಿಗೆಯಾಗಿದ್ದು, ಪ್ರಾಮಾಣಿಕವಾಗಿ ಸತ್ಯವನ್ನರಸುವ ವಿಜ್ಞಾನದ ಅಭಿವೃದ್ಧಿಗೆ ಇದರ ಅವಶ್ಯಕತೆಯಿದೆ. JVN ನಿಜವಾಗಿಯೂ ಇಂತಹ ಪರಂಪರೆಯನ್ನು ಅನುಸರಿಸುತ್ತಾ ನಡೆದಿರುವ ಒಬ್ಬ ಆದರ್ಶ ವಿಜ್ಞಾನಿಯೆನಿಸಿದ್ದಾರೆ. ಜನಗಳ ನಿತ್ಯ ಜೀವನದಲ್ಲಿ ವಿಜ್ಞಾನವು ವಹಿಸಿರುವ ಅರ್ಥಪೂರ್ಣ ಪಾತ್ರದ ಬಗ್ಗೆ ಪ್ರವಚನಗಳನ್ನು ನೀಡಿ, ಅವರ ಮನಗಳಲ್ಲಿ ವೈಜ್ಞಾನಿಕ ಪದ್ಧತಿಗಳ ಬಗ್ಗೆ ತಿಳುವಳಿಕೆಯನ್ನು ನೀಡುವ ಕಾರ್ಯವನ್ನು, ಒಂದು ಪೂರ್ಣ ವಿಶ್ವಾಸ ಮತ್ತು ನಿಷ್ಠೆಯಿಂದ ನಡೆಸುತ್ತಾ ಬಂದಿರುವ ಜಯಂತ್ ನಾರ್ಲೀಕರ್, ಭಾರತದ ಜನಗಳ ಮನದಲ್ಲಿರುವ ಮೂಢನಂಬಿಕೆಗಳು, ಮತ್ತು ಜ್ಯೋತಿಶಾಸ್ತ್ರಗಳಲ್ಲಿರುವ ಅಂಧ ವಿಶ್ವಾಸದ ವಿರುದ್ಧ ತಮ್ಮ ಧ್ವನಿಯನ್ನು ನಿರಂತರವಾಗಿ ಎತ್ತಿ ಹಿಡಿದ ಒಬ್ಬ ಪ್ರಮುಖ ವಿಜ್ಞಾನಿಯೆನಿಸಿದ್ದಾರೆ.

photo-2

ತಮ್ಮ ಜನಪ್ರಿಯ ವಿಜ್ಞಾನ ಪ್ರವಚನಗಳನ್ನು ಎಲ್ಲಾ ವರ್ಗಗಳಲ್ಲೂ ನೀಡಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಗಳಲ್ಲಿ ತಮ್ಮ ಪ್ರಖ್ಯಾತಿಯನ್ನು ಮೆರೆದಿದ್ದಾರೆ. ಮೂಲಭೂತ ಭೌತಶಾಸ್ತ್ರ, ಖಭೌತಶಾಸ್ತ್ರ ಮತ್ತು ವಿಶ್ವವಿಜ್ಞಾನಗಳಲ್ಲಿ ಅವರು ನೀಡಿರುವ ಪ್ರಥಮಾನ್ವೇಷಕ ಕೊಡುಗೆಗಳು ಹಲವಾರು. ಅವರ ಅನೇಕ ಕಲ್ಪನೆಗಳು ಅವರು ಪ್ರತಿಪಾದಿಸಿದ ಸಮಯಕ್ಕೆ ಸ್ವಲ್ಪ ತೀವ್ರಗಾಮಿಯೆನಿಸಿದರೂ, ತರುವಾಯ ಸರಿಯೆಂದು ಸಾಬೀತಾಗಿವೆ. ಆದರೆ, ಆ ಕಲ್ಪನೆಗಳಿಗೆ ಸಿಕ್ಕಬೇಕಾದ ಅರ್ಹವಾದ ಮೆಚ್ಚುಗೆ ಇಲ್ಲಿಯವರೆಗೂ ದೊರೆತಿಲ್ಲದಿರುವುದು ಸ್ವಲ್ಪ ವಿಪರ್ಯಾಸವೇ ಅಲ್ಲದೇ, ಒಂದು ನಿಗೂಢವಾದ ವಿಷಯವೂ ಹೌದು.

ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವಿಶ್ವವಿಜ್ಞಾನದ ಸಂಶೋಧನೆಗೆ ಹೆಸರಾದ ಜಯಂತ್, ಜನಪ್ರಿಯ ಬಿಗ್-ಬ್ಯಾಂಗ್ ಮಾದರಿಗೆ ಪರ್ಯಾಯವಾದ, ಸ್ಥಿರಸ್ಥಿತಿ ವಿಶ್ವದ ಮಾದರಿಯನ್ನು ಹುಟ್ಟುಹಾಕಿದವರಲ್ಲಿ ಒಬ್ಬರು. ಗುರುತ್ವದ ಸರಹದ್ದುಗಳು, ಮತ್ತು ಮ್ಯಾಕ್ಸ್ ನಿಯಮಗಳು (Mach’s Principle), ಕ್ವಾಂಟಮ್ ವಿಶ್ವವಿಜ್ಞಾನ (Quantum Cosmology), ಹಾಗೂ ಭೌತಶಾಸ್ತ್ರದಲ್ಲಿ ಹಲವಾರು ಸಕ್ರಿಯವಾದ ಸಂಶೋಧನೆಗಳನ್ನು ನಡೆಸಿರುವ ಜಯಂತ್ ನಾರ್ಲೀಕರ್, ಇತ್ತೀಚೆಗೆ ಬಾಹ್ಯಾಕಾಶ ಸಂಶೋಧನೆಯಲ್ಲೂ ತಮ್ಮ ಹೆಗ್ಗಳಿಕೆಯನ್ನು ಮೆರೆದಿದ್ದಾರೆ. 1999ರಿಂದ, ಅಂತರಾಷ್ಟ್ರೀಯ ಖ್ಯಾತಿಯುಳ್ಳ ವಿಜ್ಞಾನಿಗಳ ತಂಡದ ನಾಯಕತ್ವವನ್ನು ವಹಿಸಿದ್ದಾರೆ. ಅವರು ನಡೆಸುತ್ತಿರುವ ಒಂದು ಪ್ರಥಮಾನ್ವೇಷಕ ಪ್ರಯೋಗದಲ್ಲಿ, ಸುಮಾರು 41 ಕಿಲೋಮೀಟರುಗಳವರೆಗಿನ ಎತ್ತರದವರೆಗೂ ವಾಯುವಿನ ನಮೂನೆಗಳನ್ನು ಸಂಗ್ರಹಿಸಿ, ಅದರಲ್ಲಿನ ಸೂಕ್ಷ್ಮಾಣು ಜೀವಿಗಳನ್ನು ವಿಶ್ಲೇಷಿಸಿ ನೋಡುತ್ತಿದ್ದಾರೆ. ಈ ರೀತಿಯಾಗಿ, 2001, ಮತ್ತು 2005ರಲ್ಲಿ ಸಂಗ್ರಹಿಸಿದ ಸ್ಯಾಂಪಲ್ಲುಗಳು, ಹಲವಾರು ಗುಂಪಿನ ಜೀವ ಕಣಗಳು, ಮತ್ತು ಬ್ಯಾಕ್ಟೀರಿಯಾಗಳನ್ನು ಪತ್ತೆಹಚ್ಚಿ, ನಮ್ಮ ಭೂಮಿಯನ್ನು ಸದಾಕಾಲ ಈ ಸೂಕ್ಷ್ಮಾಣುಜೀವಿಗಳು ಬಂದು ಅಪ್ಪಳಿಸುತ್ತವೆ, ಹಾಗೂ ಇಂತಹ ಜೀವಿಗಳೇ ನಮ್ಮ ಭೂಮಿಯಲ್ಲಿ ಜೀವದ ಬೀಜವನ್ನೂ ಬಿತ್ತಿರಬಹುದು ಎನ್ನುವ ಕುತೂಹಲಕರ ಸಾಧ್ಯತೆಗಳ ಬಗ್ಗೆ ವಿಚಾರವನ್ನು ಪ್ರಾರಂಭಿಸಿದೆ. ವ್ಹೀಲರ್-ಫ಼ೈನಮನ್ ಸಿದ್ಧಾಂತದ ಸಾಮಾನ್ಯೀಕರಣ (Generalization of Wheeler-Feynman’s Theory), ತಾರಾಗಣಗಳ ಕೇಂದ್ರಭಾಗದಲ್ಲಿ ಭಾರಿ ಕಪ್ಪುಕುಳಿಗಳಿರಬಹುದಾದ ಸಾಧ್ಯತೆಗಳು, ಕ್ವಾಂಟಮ್ ವಿಶ್ವವಿಜ್ಞಾನ ಮತ್ತು ವಿಶ್ವದ ವಿಸ್ತರಣೆಯ ಕಲ್ಪನೆಯನ್ನು 15 ವರ್ಷಗಳು ಮುಂಚಿತವಾಗಿ ನಿರೀಕ್ಷಣೆಮಾಡಿದ್ದ ವಿಚಾರ, ಹೀಗೆ ಅವರ ಹಲವಾರು ಪ್ರಥಮಾನ್ವೇಷಕ ಸಂಶೋಧನೆಗಳಿಗೆ ಸಿಗಬೇಕಾಗಿದ್ದ ಮನ್ನಣೆ ಅವರಿಗೆ ಸಿಕ್ಕಿಲ್ಲ.

ತಮ್ಮ ಅದ್ಭುತವಾದ ಪುಸ್ತಕಗಳಿಂದ, ಜಗತ್ಪ್ರಸಿದ್ಧ ಶಿಕ್ಷಕರೆನಿಸಿರುವ ಜಯಂತ್ ನಾರ್ಲೀಕರ್, ಜನಪ್ರಿಯ ವಿಜ್ಞಾನದ ಪುಸ್ತಕಗಳನ್ನು ರಚಿಸಿ, ಎಳೆಯ ಮನಗಳನ್ನು ವಿಜ್ಞಾನದತ್ತ ಕೊಂಡೊಯ್ಯಲು ಪ್ರೇರೇಪಿಸುತ್ತಿದ್ದಾರೆ. ವಯಸ್ಸಿನಲ್ಲಿ ತಮಗಿಂತ ಹಿರಿಯ ಮತ್ತು ಕಿರಿಯರಿಬ್ಬರಿಗೂ ಒಬ್ಬ ಅಪೂರ್ವ ಮಾರ್ಗದರ್ಶಕರೆನಿಸಿರುವ ಅವರು, 1972ರಲ್ಲಿ ತಾವು  ಭಾರತಕ್ಕೆ ಮರಳಿದ ನಂತರ, ಕಲಕತ್ತಾದ ಪ್ರಸಿದ್ಧ ಪ್ರೆಸಿಡೆನ್ಸಿ ಕಾಲೇಜಿನ ಎ.ಕೆ. ರಾಯ್ ಚೌಧುರಿಯಂತಹ ಅಪೂರ್ವ ಪ್ರತಿಭೆಯನ್ನು ಹೊರತರುವುದರಲ್ಲಿ ಸಫಲರಾದರು. ಇಂದು ರಾಯ್ ಚೌಧುರಿಯ ಶಿಷ್ಯರು ತಮ್ಮ ಕ್ಷೇತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದವರಾಗಿದ್ದಾರೆ. ಜಯಂತ್ ಭೌತಶಾಸ್ತ್ರದ ತಮ್ಮ ತೀವ್ರ ಕಲ್ಪನೆಗಳನ್ನು ತಮ್ಮ ವಿದ್ಯಾರ್ಥಿಗಳ ಮೇಲೆ ಎಂದೂ ಹೇರಿದವರಲ್ಲ. ಅವರ ವಿದ್ಯಾರ್ಥಿಗಳಿಗೆ ತಮ್ಮ ಕಲ್ಪನೆಗಳನ್ನು ಮುಂದುವರೆಸಿ ಸಂಶೋಧನೆ ನಡೆಸುವ ಸಂಪೂರ್ಣ ಸ್ವಾತಂತ್ರ್ಯವಿದ್ದು, ಇದು ಜಯಂತ್ ಅವರ ಭೌತಿಕ  ದೃಢನಿಷ್ಠೆ ಮತ್ತು ಪ್ರಾಮಾಣಿಕತೆಗಳಿಗೆ ಜ್ವಲಂತ ಸಾಕ್ಷಿಯಾಗಿದೆ.

ಭಾರತೀಯ ವಿಜ್ಞಾನ ಪ್ರಪಂಚಕ್ಕೆ ಜಯಂತ್ ನಾರ್ಲೀಕರ್ ನೀಡಿರುವ ಅತ್ಯುತ್ತಮ ಕೊಡುಗೆಯೆಂದರೆ, ಪುಣೆಯ ವಿಶ್ವವಿದ್ಯಾಲಯದ ಆವರಣದಲ್ಲಿ, ಅವರು ಕಟ್ಟಿ ಬೆಳೆಸಿರುವ ವಿಶ್ವದ ಅಗ್ರಶ್ರೇಣಿಯ ಖಭೌತಶಾಸ್ತ್ರ ಸಂಸ್ಥೆಯಾದ, ಅಂತರ ವಿಶ್ವವಿದ್ಯಾಲಯ ಖಗೋಳಶಾಸ್ತ್ರ ಮತ್ತು ಖಭೌತಶಾಸ್ತ್ರ ಕೇಂದ್ರ (Inter University Center For Astronomy And Astrophysics-IUCAA), ಸಂಸ್ಥೆಯಾಗಿದೆ. ತಮ್ಮ ಕನಸುಗಳು ಮತ್ತು ದೃಷ್ಟಿಕೋನದಲ್ಲಿ, ಎಲ್ಲರನ್ನೂ ಸಮಭಾಗಿಯನ್ನಾಗಿ ಮಾಡುವ ಅವರ ಕಲೆ ನಿಜಕ್ಕೂ ಒಂದು ರೀತಿಯಲ್ಲಿ ಅಲೌಕಿಕವೆನ್ನಬಹುದು. ಸಂಸ್ಥೆಯ ಪ್ರಥಮ ನಿರ್ದೇಶಕರಾಗಿ, ಈ ಸಂಸ್ಥೆಯನ್ನು ಒಂದು ಉನ್ನತ ಮಟ್ಟದಲ್ಲಿ ನಿಲ್ಲಿಸುವ ಅವರ ಪ್ರಯತ್ನದಲ್ಲಿ ತಮ್ಮ ಸಹೋದ್ಯೋಗಿಗಳೊಡನೆ ಅವರ ಸಹಭಾಗಿತ್ವ ಸರ್ವರೀತಿಯಲ್ಲೂ ಪ್ರಜಾಪ್ರಭುತ್ವ ವಿಚಾರಕ್ಕೆ ಒಳಪಟ್ಟಿದೆ. ಇಂದು IUCAA ಸಂಸ್ಥೆಯ ಯುವ ವಿಜ್ಞಾನಿಗಳು, ಹಲವು ಹತ್ತು ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ. ಸರಳತೆ ಮತ್ತು ಸಜ್ಜಿನಿಕೆಗಳ ಸಾಕಾರವಾಗಿರುವ ಜಯಂತ್, ನಾಲ್ಕು ತಲೆಮಾರಿನ ಯುವಜನತೆಗೆ ಆದರ್ಶಪ್ರಾಯವಾಗಿದ್ದು, ಪ್ರೇರಣೆಯಾಗಿದ್ದಾರೆ. ಭಾರತೀಯ ವಿಜ್ಞಾನ ಲೋಕದ ಅಪರೂಪ ತಾರೆಯೆನಿಸಿದ ಜಯಂತ್ ನಾರ್ಲೀಕರ್ ಅವರ ಸಾಧನೆಗಳಿಗೆ ದೊರೆತಿರುವ ಪ್ರಶಸ್ತಿ ಮತ್ತು ಪುರಸ್ಕಾರಗಳ ಒಂದು ಪಟ್ಟಿಯೇ ಇದೆ.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಗೌರವಕ್ಕೆ ಪಾತ್ರರಾದ ಇವರು ಇದುವರೆಗೂ, ಫ಼್ರೆಂಚ್ ಖಗೋಳ ಸಂಘದ ಅಸೊಸಿಯೇಟ್, ರಾಯಲ್ ಖಗೋಳಶಾಸ್ತ್ರ ಸಂಘದ ಅಸೋಸಿಯೇಟ್, UNESCO ಪ್ರಶಸ್ತಿ, ವರ್ಲ್ಡ್ ಅಕ್ಯಾಡೆಮಿ ಆಫ಼್ ಸೈನ್ಸಸ್ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇವರ ಪ್ರತಿಭೆಯನ್ನು ಮೆಚ್ಚಿ ಭಾರತ ಸರ್ಕಾರ ಇವರಿಗೆ 1965ರಲ್ಲಿ ಪದ್ಮಭೂಷಣ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಇವರಾಗಿದ್ದಾರೆ. ಇದರ ಜೊತೆಗೆ, ಭಾರತ ಸರ್ಕಾರದ ಮತ್ತೊಂದು ಮನ್ನಣೆ ಪದ್ಮವಿಭೂಷಣವನ್ನೂ 2004ರಲ್ಲಿ ನೀಡಲಾಯಿತು. ರೇಡಿಯೋ-ದೂರದರ್ಶನದ ಜನಪ್ರಿಯ ವಿಜ್ಞಾನ ಕಾರ್ಯಕ್ರಮಗಳ ಮೂಲಕವೂ ಇವರು ಮನೆಮಾತಾಗಿರುವ ವ್ಯಕ್ತಿ. ತಮ್ಮ ಮೊಮ್ಮಕ್ಕಳನ್ನು ನಮ್ಮ ದೇಶದ ಅಜ್ಜ-ಅಜ್ಜಿಯರು, ಜಯಂತ್ ನಾರ್ಲೀಕರಂತೆ ಕೀರ್ತಿವಂತನಾಗು ಎಂದು ಹರಸುವ ಮಟ್ಟಿಗೆ ಪ್ರಖ್ಯಾತಿ ಪಡೆದ ಜಯಂತ್ ನಾರ್ಲೀಕರ್, ಭಾರತೀಯ ವಿಜ್ಞಾನ ಲೋಕದ ಮಹಾಮೇಧಾವಿಗಳ ಸಾಲಿನಲ್ಲಿ ಅಗ್ರಪಂಕ್ತಿಯವರು ಎಂಬ ಮಾತಿನಲ್ಲಿ ಯಾವ ಸಂಶಯವೂ ಇಲ್ಲ.

ಈ ಅಪರೂಪದ ವಿಜ್ಞಾನಿ ಮತ್ತು ಅವರ ಸರಳತೆ ಮತ್ತು ಸಜ್ಜನಿಕೆಗಳನ್ನು ಬಹಳ ಹತ್ತಿರದಿಂದ ಕಾಣುವ ಸುವರ್ಣಾವಕಾಶ ನನಗೆ ದೊರೆತಿತ್ತು. ೧೯೯೧ರಲ್ಲಿ ಮದುವೆಯಾದಾಗ, ನನ್ನ ಪತಿ ಸತ್ಯಪ್ರಕಾಶ್ ಇದೇ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಾಗಾಗಿ ಈ ಲೇಖನದಲ್ಲಿ ಉಲ್ಲೇಖವಾಗಿರುವ ಜಯಂತ್ ನಾರ್ಲೀಕರ್ ಅವರ ವ್ಯಕ್ತಿತ್ವದ ಸಂಗತಿಗಳು ನೂರಕ್ಕೆ ನೂರು ಸತ್ಯವಾದ ವಿಷಯಗಳು. ಸುಮಾರು ೪ ವರ್ಷಗಳ ಕಾಲ, ಪುಣೆಯ Inter University For Astronomy and Astrophysics 1%e0%b2%9c%e0%b2%af%e0%b2%82%e0%b2%a4%e0%b3%8d-%e0%b2%a8%e0%b2%be%e0%b2%b0%e0%b3%8d%e0%b2%b2%e0%b3%80%e0%b2%95%e0%b2%b0%e0%b3%8d-%e0%b2%85%e0%b2%b5%e0%b2%b0-%e0%b2%aa%e0%b2%a4%e0%b3%8d%e0%b2%a8ಸಂಸ್ಥೆಯಲ್ಲಿ, ಜಯಂತ್ ನಾರ್ಲೀಕರ್ ಅವರ ಮನೆಯ ಪಕ್ಕದಲ್ಲೇ ವಾಸಿಸುತ್ತಿದ್ದ ನಮಗೆ, ಅವರ ವ್ಯಕ್ತಿತ್ವದ ಉತ್ತಮ ಪರಿಚಯವಿದೆ.

ಇಂದಿನ ವಿಜ್ಞಾನಿಗಳಲ್ಲಿ ಬಹಳ ವಿರಳವೆನಿಸಿದ ಅನೇಕ ಸದ್ಗುಣಗಳನ್ನು ಜಯಂತ್ ಅವರಲ್ಲಿ ಕಾಣಬಹುದು. ಇಂತಹ ಅಪರೂಪ ವ್ಯಕ್ತಿಯ ಮಡದಿ ಡಾ ಮಂಗಳಾ ನಾರ್ಲೀಕರ್, ಇವರಿಗೆ ತಕ್ಕ ಬಾಳಸಂಗಾತಿ. ಮಂಗಳಾ ಅವರ ಬಗ್ಗೆ ನನಗೆ ಬಹಳ ಗೌರವವಿದೆ. ಅಷ್ಟೊಂದು ದೊಡ್ಡ ವಿಜ್ಞಾನಿಯ ಪತ್ನಿ, ಸ್ವತಃ ಉತ್ತಮ ಗಣಿತ ತಜ್ಞೆಯಾದ ಆಕೆಯ ಸರಳತೆಗೆ ನಾನು ಮಾರುಹೋಗಿದ್ದೇನೆ. ಪತಿ-ಪತ್ನಿಯರಿಬ್ಬರೂ ಆದರ್ಶಪ್ರಾಯರು. ಅವರ ಮೂವರು ಹೆಣ್ಣುಮಕ್ಕಳು ಅವರಿಂತ ಬೇರೆಯಲ್ಲ – ಇಂದು ವಿಜ್ಞಾನಿಗಳೆನಿಸಿ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯವನ್ನು ನಡೆಸಿದ್ದಾರೆ. ಇಂದಿನ ತರುಣ ಪೀಳಿಗೆಯ ವಿಜ್ಞಾನಿಗಳು ಇವರಿಂದ ಕಲಿಯಬೇಕಾದ ಬಹಳ ವಿಷಯಗಳಿವೆ. ಜಯಂತ್ ನಾರ್ಲೀಕರ್ ಅವರಂತಹ ವ್ಯಕ್ತಿಗಳನ್ನು ಇಂದಿನ ಸಮಯದಲ್ಲಿ ನೋಡುವುದು ಬಹಳ ಅಪರೂಪವೆನ್ನಬಹುದು.

( ಲೇಖನದ ಪ್ರೇರಣೆ : Living Legends in Indian Science- Jayant Vishnu Narlikar, by Dr Naresh Dadhich, Current Science, July 2014.)

ಡಾ ಉಮಾ ವೆಂಕಟೇಶ್ಸ್ಟೇಟ್ ಕಾಲೇಜ್, ಪೆನ್ಸಿಲ್ವೇನಿಯಾ, ಯು.ಎಸ್.ಎ