ಯು ಕೆ ಕನ್ನಡ ಬಳಗದ ಯುಗಾದಿ ಉತ್ಸವ – ಗುರುರಾಜ ಅಸ್ರೋಳ್ಳಿ ಗಣೇಶ್ ವರದಿ

(ಲೇಖಕರ ಪರಿಚಯ: ಗುರುರಾಜ ಅಸ್ರೋಳ್ಳಿ ಗಣೇಶ್. ಹೊನ್ನಾವರ ತಾಲೂಕಿನ ಖರ್ವ ಎಂಬ ಪುಟ್ಟ ಗ್ರಾಮದವರು. ವಿಧ್ಯಾಬ್ಯಾಸ ಕರ್ನಾಟಕದಲ್ಲಿ ಮುಗಿಸಿ ಹೊಟ್ಟೆಪಾಡಿಗಾಗಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕೆಲಸ. ಯು ಕೆ ಗೆ ಬಂದು ೪-೫ ವರ್ಷಗಳಾಗುತ್ತ ಬಂದಿತು. ಮ್ಯಾಂಚೆಸ್ಟರ್ನಲ್ಲಿ ಹೆಂಡತಿ ಮತ್ತು ೧ ವರ್ಷದ ಮಗುವಿನೊಂದಿಗೆ ವಾಸ.  ಬೀchi ಯವರ ಸಾಹಿತ್ಯ ಓದುವ ಆಸಕ್ತಿ ಇದೆ.

ಚಿತ್ರಕಾರರ ಪರಿಚಯ: ಡಾ ಲಕ್ಷ್ಮೀನಾರಾಯಣ ಗುಡೂರ್, ರೋಗನಿದಾನಶಾಸ್ತ್ರಜ್ಞ, ಪ್ರೆಸ್ಟನ್ನಿನಲ್ಲಿ ಕೆಲಸ. ಮೂಲತಃ ಗುಲ್ಬರ್ಗದವರು. ೨೦೦೧ರಿಂದ ಯುಕೆಯಲ್ಲಿ ವಾಸ.)

2016 04 KBUKಯುಗಾದಿ ಎಂದಾಕ್ಷಣ ಕನ್ನಡದ ಬಹುತೇಕ ಎಲ್ಲ ಜನರಿಗೂ ನೆನಪಾಗುವುದು ದ ರಾ ಬೇಂದ್ರೆಯವರ ‘ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ’ ಎಂಬ ಸುಂದರ ರಸವತ್ತಾದ ಕವನ. ಯು ಕೆ ಕನ್ನಡ ಬಳಗದ ದುರ್ಮುಖಿ ನಾಮ ಸಂವತ್ಸರದ ೩೩ನೆಯ ಯುಗಾದಿ ಉತ್ಸವವು ದಿನಾಂಕ ೧೬-೦೪-೨೦೧೬, ಶನಿವಾರದಂದು ಇಂಗ್ಲೆಂಡಿನ ಮ್ಯಾಂಚೆಸ್ಟರನ ಪಾರ್ಸ್ ವುಡ್ ಶಾಲೆಯ ಆವರಣದಲ್ಲಿ ನಡೆಯಿತು. ಹೇಗೆ ಬಳ್ಳಾರಿ ಎಂದರೆ ನೆನಪಾಗುವದು ಬಿಸಿಲು ಮತ್ತು ಕಡು ಬಿಸಿಲೋ, ಹಾಗೆಯೇ ಇತ್ತೀಚಿನ ದಿನಗಳಲ್ಲಿ ಮ್ಯಾಂಚೆಸ್ಟರ್ ಎಂದರೆ ಫುಟ್ಬಾಲ್ನ ಹೊರತಾಗಿ ನೆನಪಾಗುವದು ಮಳೆ ಮತ್ತು ವಿಪರೀತ ಮಳೆ! ಆದರೆ ಕಾರ್ಯಕ್ರಮದ ದಿನದಂದು ಶುಭ್ರವಾದ ಆಗಸ ಮತ್ತು ಮೈಯಿಗೆ ಮುದನೀಡುವ ಹದವಾದ ಬಿಸಿಲು ಬಂದಿರುವದು ಕಾರ್ಯಕ್ರಮದ ರುಚಿಯನ್ನು ಸವಿಯಲು ಬಂದ ಸಭಿಕರಿಗೆ ತುಂಬಾ ಸಹಕಾರಿಯಾಯಿತು. ಕಾರ್ ಪಾರ್ಕ್ ಮಾಡಲು, ಬಹು ವಿಶಾಲವಾದ ಸ್ಥಳವಿದ್ದದು ಜನರಿಗೆ ಅನೂಕೂಲವಾಯಿತು.

ಕುಮಾರ್ ರಮಾನಂದ್, ಆರತಿ, ಶಾದ್ವಾಲ, ನವೀನ ಮುಂತಾದವರನ್ನೊಳಗೊಂಡ ತಂಡ, ಕಾರ್ಯಕ್ರಮಕ್ಕೆ2016 04 KBUK 3 ಸಾಮಾಜಿಕ ತಾಣಗಳನ್ನು ಬಳಸಿಕೊಂಡು ದಾಖಲೆಯ ಸಂಖ್ಯೆಯಲ್ಲಿ ಸರಿ ಸುಮಾರು ೬೦೦ಕ್ಕೂ ಅಧಿಕ ಜನರು ಸೇರುವಂತೆ ಮಾಡಿದರು. ಹಣಕಾಸನ್ನು ಆರತಿಯವರ ತಂಡ ಬಹು ಸಮರ್ಥವಾಗಿ ನಿಭಾಯಿಸಿದರು. ಇದೆ ಮೊದಲ ಬಾರಿಗೆ ನೋಂದಣಿಯನ್ನು ೨ ವಾರಗಳ ಮೊದಲೇ ಮುಕ್ತಾಯ ಮಾಡಿದುದರಿಂದ, ಆರಂಭದಲ್ಲಿ ನೋಂದಣಿ ಸಮಯದಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸಿದರು. ಈ ತಂಡದ ಮಾರ್ಗದರ್ಶನವನ್ನು ಮುಂದಿನ ಕಾರ್ಯಕ್ರಮಕ್ಕೆ ಉಪಯೋಗಿಸಿಕೊಂಡರೆ ಭವಿಷ್ಯದಲ್ಲಾಗುವ ಕಾರ್ಯಕ್ರಮಗಳು ಇನ್ನಷ್ಟು ಯಶಸ್ವಿಯಾಗಲು ಕಾರಣವಾಗುತ್ತದೆ. ಪ್ರವೇಶದ್ವಾರದಲ್ಲಿದ್ದ ಸ್ವಾಗತ ಕಮಿಟಿ ಸದಸ್ಯರು ಸಭಿಕರನ್ನು ಮಂದಹಾಸದಿಂದ ಬರಮಾಡಿಕೊಂಡರೆ, ಅಲ್ಲಲ್ಲಿ ಹಚ್ಚಿದ್ದ ಮಾರ್ಗದರ್ಶಿ ಫಲಕಗಳು ತುಂಬಾ ಉಪಕಾರವಾದವು.

ಕಾರ್ಯಕ್ರಮವು ಅವಿನಾಶ್ ಅಧ್ಯಾಪಕ್ ರವರ ವೇದ ಘೋಷದೊಂದಿಗೆ ಆರಂಭವಾಯಿತು. ಆ ಬಳಿಕ ಗೀತಾ ಗಾಯನ ಮತ್ತು ದೀಪ ಬೆಳಗಿಸಿ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ನಂತರ ಇತ್ತೀಚಿಗಷ್ಟೆ ನಮ್ಮನ್ನಗಲಿದ KBUKಯ ಗಣ್ಯ ವ್ಯಕ್ತಿಗಳಿಗೆ ಶ್ರದ್ಧಾಂಜಲಿಯ ಸೂಚಿಸಿ, ಬಳಗದ ಅಧ್ಯಕ್ಷ ಗೌಡಗೆರೆ ಜಯರಾಂ ಅವರು ಚಿಕ್ಕ ಮತ್ತು ಚೊಕ್ಕದಾದ ಭಾಷಣ ಮಾಡಿದರು. ಸ್ಥಳೀಯರಾದ ಶಿಲ್ಪ ಮತ್ತು ರಶ್ಮಿ, ಸಭಾಂಗಣವನ್ನು ಬಹಳ ಮುತುವರ್ಜಿಯಿಂದ ಸಿಂಗರಿಸಿದ್ದರು.

2016 04 KBUK 4ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾರಂಭದಲ್ಲಿ ತುಸು ಸಮಯ ತಾಂತ್ರಿಕ ಅಡಚಣೆಯಾದರೂ ಸಹ, ಕಾರ್ಯಕ್ರಮದ ನಿರೂಪಣೆ ನಡೆಸಿದ ಕುಮಾರಿ ದಿಲ್ಲು ಮತ್ತು ನೀತುರವರ ಸಮಯ ಪ್ರಜ್ಞೆ ಮತ್ತು ಮುಖ್ಯ ನಿರೂಪಕರದಾದ ರಮೇಶ್ ಮತ್ತು ರಷ್ಮಿಯವರ ಮಾತನಾಡಿಸುವ ಕಲೆ, ಆಗಬಹುದಾದಂತಹ ಮುಜುಗರವನ್ನು ತಪ್ಪಿಸಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರು ನಿಗದಿಯ ಕಾರ್ಯಕ್ರಮದ ಕನಿಷ್ಠ ೧ ವಾರ ಮುಂಚಿತವಾಗಿ ತಮ್ಮ ನೃತ್ಯಕ್ಕೆ ಪೂರಕವಾದ ಗಾಯನವನ್ನು ಸಂಘಟಿಕರಿಗೆ ತಲುಪಿಸಿದರೆ ಇಂತಹ ಅಡಚಣೆಗಳನ್ನು ತಡೆಯಲು ಸಾಧ್ಯ ಮತ್ತು ಕಾರ್ಯಕ್ರಮವೂ ನಿಗದಿಯಾದಂತೆ ಮುಂದುವರಿಯಲು ಸಹಕಾರಿಯಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ತದನಂತರರ ವಾರಿಂಗ್ಟನ್, ವೊರ್ಸ್ಲೆ, ನಾಟಿಂಗ್ಹ್ಯಾಮ್, ಸ್ಥಳೀಯ ಮ್ಯಾಂಚೆಸ್ಟರ್ ಮತ್ತು ಹಲವಾರು ಕಡೆಯಿಂದ ಬಂದ ಚಿಣ್ಣರು ಹಾಡು, ನೃತ್ಯಗಳ ಮೂಲಕ ರಂಜಿಸಿದರು.

ಕನ್ನಡ ಬಳಗದ ”ಅನಿವಾಸಿ” ಜಾಲ ಜಗುಲಿಯಲ್ಲಿ ಈ ವರೆಗೆ ಪ್ರಕಟವಾಗಿರುವ ಹಲವಾರು 2016 04 KBUK 6 ಲೇಖಕರ ಲೇಖನಗಳಲ್ಲಿ ಕೆಲವನ್ನು ಆಯ್ದು ಪುಸ್ತಕದ ರೂಪದಲ್ಲಿ ಹೊರತಂದಿದೆ. ಇದಕ್ಕೆ ಜಾಲಜಗುಲಿಯನ್ನು ಎರಡು ವರ್ಷಗಳ ಕೆಳಗೆ ಉದ್ಘಾಟಿಸಿದ ಹೆಚ್ ಎಸ್ ವೆಂಕಟೇಶಮೂರ್ತಿಯವರೇ ಮುನ್ನುಡಿ ಬರೆದು ಆಶೀರ್ವದಿಸಿದ್ದಾರೆ. ಪುಸ್ತಕವನ್ನು ಅಧಿಕೃತವಾಗಿ ಇತ್ತೀಚೆಗೆ ನಮ್ಮನ್ನಗಲಿದ KBUKಯ ಹಿರಿಯ ಸದಸ್ಯ ಡಾ ರಾಜಾರಾಂ ಕಾವಳೆಯವರ ಪತ್ನಿ ಶ್ರೀಮತಿ ಪದ್ಮಾ ಅವರು ಸಭಿಕರ ಮುಂದೆ ಬಿಡುಗಡೆ ಮಾಡಿದರು. ನಂತರ ಪರ್ಯಾಯ ಕಾರ್ಯಕ್ರಮಗಳಲ್ಲೊಂದಾದ ಬಳಗದ ಸಾಹಿತ್ಯಾಸಕ್ತರು ಕೆಲವರು ತಮ್ಮ ಹಾಸ್ಯ ಕವನಗಳನ್ನು ಶ್ರೀಯುತರಾದ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ್ ಮಹಾಮನಿಯವರ ಉಪಸ್ಥಿತಿಯಲ್ಲಿ ಓದಿದರು. ಇದನ್ನು ನೆರೆದ ಪ್ರೇಕ್ಷಕರು ಮೆಚ್ಚಿಕೊಂಡರು.

ಸರ್ವ ಸದಸ್ಯರ ಸಭೆಯಲ್ಲಿ ಹೊಸ ಸಂವಿಧಾನವನ್ನು ಗಂಭೀರವಾಗಿ ಚರ್ಚಿಸಿ ಅಂಗೀಕರಿಸಲಾಯಿತು.

2016 04 KBUK 5ಹೆಚ್ಚಿನ ಸಂಖ್ಯೆಯಲ್ಲಿ ಸಭಿಕರು ಆಗಮಿಸಿದುದರಿಂದ ಮೊದಲೇ ನಿಗದಿಯಾದಂತೆ, ಭೋಜನ ವ್ಯವಸ್ಥೆಯನ್ನು ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಆಯೊಜಸಲಾಗಿತ್ತು. ಭೋಜನ ಕೊಠಡಿಯಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಟಾಲ್ ವಯಸ್ಕರನ್ನು ಆಕರ್ಷಿಸುತ್ತಿದ್ದರೆ, ಟ್ಯಾಂಜೆಂಟಿಕ್ಸ್ ಆಟದ ಸಂಸ್ಥೆಯ (Tangentix GameSession) ಮಕ್ಕಳನ್ನು ತನ್ನೆಡೆಗೆ ಆಕರ್ಷಿಸುತ್ತಿತ್ತು. ‘ಚೆನ್ನೈ ದೋಸ’ದ ಬೋರ್ಡ್ ತನ್ನತ್ತ ಭೇಟಿ ಕೊಡುವಂತೆ ಕೇಳಿಕೊಳ್ಳುತ್ತಿತ್ತು. ಪ್ರಾಯೋಜಕರನ್ನು ಕರೆತರಲು ಅಶ್ವಿನ್ ಪಟ್ಟ ಶ್ರಮವು ಶ್ಲಾಘನೀಯ. ಮಕ್ಕಳಿಗಾಗಿ ಪ್ರತ್ಯೇಕ ಬಗೆಯ ಆಹಾರಗಳನ್ನು ತಯಾರಿಸಿದುದು ವಿಶೇಷವಾಗಿತ್ತು. ಊಟದ ಸಮಯದಲ್ಲಿ ಜನರು ಟ್ರಾಫಿಕ್ ಜಾಮ್ ನಂತೆ ನಿಲ್ಲುವುದು ಬಹುತೇಕ ಕಾರ್ಯಕ್ರಮದಲ್ಲಿ ಸರ್ವೇ ಸಾಮಾನ್ಯ. ಅದಕ್ಕೆ ಅಪವಾದವೇನೋ ಎಂಬಂತೆ, ಈ ಕಾರ್ಯಕ್ರಮದಲ್ಲಿ ಎಲ್ಲೂ ಸ್ವಲ್ಪವೂ ಅಡಚಣೆಯಾಗದಂತೆ ಸವಿತಾ ಹಳ್ಳಿಕೇರಿ, ರಾಜೀವ್, ಚಿತ್ತರಾಜನ್ ಮತ್ತು ನಟರಾಜರನ್ನು ಒಳಗೊಂಡ ಸುಮಾರು ೩೦ ಜನರ ತಂಡ ತುಂಬಾ ಅಚ್ಚುಕಟ್ಟಾಗಿ ಎಲ್ಲ ಜನರನ್ನು ನಗು ಮುಖದಿಂದ ಮಾತನಾಡಿಸಿ ಪದಾರ್ಥಗಳನ್ನು ಬಡಿಸುತ್ತಿದ್ದರು. ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂಬುದು ವಾಡಿಕೆ, ಆದರೆ ಬಿಸಿಬೇಳೆ ಬಾತ್ ತಿಂದವರೆಲ್ಲ ನೀರು ಕುಡಿಯುತ್ತಿದ್ದುದು ಇಲ್ಲಿ ಸಾಮಾನ್ಯವಾಗಿತ್ತು. ಕೆಲವು ಚಲನಚಿತ್ರಗಳಲ್ಲಿ ನಾಯಕ ನಟನಿಗಿಂತ ಖಳ ನಾಯಕನ ಅಬ್ಬರವೇ ಜೋರಾಗಿರುವಂತೆ, ಇಲ್ಲಿ ಬಿಸಿ – ಬೇಳೆ ಬಾತಿನ ಮಾತು ಅಲ್ಲಲ್ಲಿ ಕೆಳಿಬರುತ್ತಿದ್ದುದು ಸಾಮಾನ್ಯವಾಗಿತ್ತು. ಆಹಾರದ ರುಚಿ ಮತ್ತು ಗುಣಮಟ್ಟದ ಬಗ್ಗೆ ಋಣಾತ್ಮಕ ಟೀಕೆಗಳು ಅಲ್ಲಲ್ಲಿ ಕೇಳಿಬರುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಒಬ್ಬ ಆಂಗ್ಲ ಛಾಯಾಗ್ರಾಹಕರು ಅವರಿಗೆ ಖಾರವಾದ ಊಟದ ಬಗ್ಗೆ ಕೊಟ್ಟ ಸೂಚನೆಯನ್ನು ತಳ್ಳಿಹಾಕಿ, ಮಕ್ಕಳ ಊಟ ಮಾಡಲು ನಾನೇನು ಚಿಕ್ಕವನೇ? ನಾನು ದೊಡ್ಡವರ ಊಟವನ್ನೇ ಮಾಡುತ್ತೇನೆ ಎಂದು ಧೈರ್ಯ ತೋರಿದುದು ಮೆಚ್ಚಲೇಬೇಕು! ಸಂಜೆಯ ಮೆಣಸಿನಕಾಯಿ ಬಜ್ಜಿ ಸಹ ಇದಕ್ಕಿಂತ ಭಿನ್ನವಾಗಿರಲಿಲ್ಲ, ರಾತ್ರಿಯ ಊಟ ಸಮಧಾನಕರವಾಗಿತ್ತು. ಸಾಯಿ ಸ್ಪೈಸ್ ರೆಸ್ಟೋರಂಟ್ ನವರು ತಯಾರಿಸಿದ ಅಡುಗೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಆದೀತು. ಆದ ಕಾರಣ, ಅಡುಗೆಯ ವಿಷಯವನ್ನು ಪುನಃ ಪುನಃ ಪ್ರಸ್ತಾಪಿಸದೆ ಇಲ್ಲಿಗೆ ಮುಗಿಸುತ್ತಿದೇನೆ.

Yakshagaana
ಚಿತ್ರಕಾರರು: ಡಾ ಲಕ್ಷ್ಮೀನಾರಾಯಣ ಗುಡೂರ್

ಊಟದ ನಂತರ ಸರ್ರೆ ತಂಡದವರಿಂದ ನೃತ್ಯ ಕಾರ್ಯಕ್ರಮ, ನಾರ್ಥ್-ಈಸ್ಟ್ ಕಲಾವಿದರ ಸುಮಾರು ೨೫ ಜನರ ತಂಡ ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬ ನೃತ್ಯದಲ್ಲಿ ಭರತನಾಟ್ಯ, ಮೋಹಿನಿ ಆಟ, ಯಕ್ಷಗಾನಗಳ ಪರಿಚಯಗಳನ್ನು ಮಾಡಿಕೊಟ್ಟಿತು. ಈ ನೃತ್ಯವು ‘ಮಾತೃದೇವೋ ಭವ’ ಹಾಗೂ ತಾಯಿಯ ಮಾತನ್ನು ಮಕ್ಕಳು ಪಾಲಿಸುವುದರ ಮಹತ್ವವನ್ನು ವಿವರಿಸುತ್ತಿದ್ದವು. ನಂತರದಲ್ಲಿ ನಡೆದ ಈಸ್ಟ್ ಲಂಡನ್ ಎಸ್ಸೆಕ್ಸಿನ ಶ್ರೀವಿದ್ಯ, ವಿದುಷಿ ಶ್ರೀಧನ್ಯ ಮತ್ತು ತಂಡದವರಿಂದ ಮೂಡಿಬಂದ ‘ಕನ್ನಡ ನಾಡಿ’ ಕಾರ್ಯಕ್ರಮವು ಕರ್ನಾಟಕದ ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಜಾನಪದ, ಶಿಲ್ಪಕಲೆ ಮತ್ತು ಅಲ್ಲಿಯ ಜನರ ಬದುಕಿನ ಕಿರುಪರಿಚಯವನ್ನು ಮಾಡಿಕೊಟ್ಟಿತು. ಡಾರ್ಬಿ ತಂಡದವರ ಚಲನಚಿತ್ರವಾಧರಿಸಿದ ‘ಬೊಂಬೆ ಆಟ’ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದುದು ಬಹಳ ವಿಶೇಷವಾಗಿತ್ತು. ನಾಟಿಂಗ್ಹ್ಯಾಮ್ ತಂಡದವರು ಭರತನಾಟ್ಯವನ್ನು ನಡೆಸಿಕೊಟ್ಟರು. ಯಾರ್ಕ್ಶೈರ್ ತಂಡದವರಿಂದ ಮೂಡಿಬಂದ ‘ಚೈತ್ರದ ಚಿಗುರು’, ಕನ್ನಡದ ಹೆಸರಾಂತ ಚಲನಚಿತ್ರಗೀತೆಗಳ ನೃತ್ಯ ಪ್ರದರ್ಶನ ಮಾಡಿದರು. ಸವಿತಾ ಸುರೇಶ, ವೀಣಾ ಕಲ್ಲಿನಾಥ್ ಮತ್ತು ಹರೀಶ್ ಚಿಕ್ಕಣ್ಣ ತಮ್ಮ ಸುಮಧುರವಾದ ಕಂಠದಿಂದ ಜನಪ್ರಿಯ ಕನ್ನಡ ಗೀತೆಗಳನ್ನು ಹಾಡಿ, ಸಭಿಕರ ಮನದೂಗಿಸಿದರು. ಇದಾದ ಮೇಲೆ ಸ್ನೇಹ ಕುಲಕರ್ಣಿಯವರು ತಮ್ಮ ಕವನಗಳನ್ನು ಮಂಡಿಸಿದರೆ, ಸರ್ರೆ ತಂಡದವರು ಹಳೆಯ ಕನ್ನಡ ಹಾಡುಗಳಿಗೆ ನೃತ್ಯ ಮಾಡಿದರು. ಖ್ಯಾತ ಹಾಡುಗಾರ್ತಿ ಅಂಜಲಿ ಹಳಿಯಾಳ್ ಅವರು ತಮ್ಮ ಹಾಡಿನ ಮೂಲಕ ಕಾರ್ಯಕ್ರಮದ ಸೊಬಗನ್ನು ಇನ್ನಷ್ಟು ಹೆಚ್ಚಿಸಿದರು. ಚಿಕ್ಕ ಮಕ್ಕಳನ್ನು ಮನೋರಂಜಿಸಲು ಜಾದು ಪ್ರದರ್ಶನ ಮತ್ತು ಆಟದ ವ್ಯವಸ್ಥೆಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಚಹಾ ಸವಿದ ನಂತರ, KBUKಯ ಹಿರಿಯ ಚೇತನ ಅಪ್ಪಾಜಿಯವರ ಸನ್ಮಾನ ಕಾರ್ಯಕ್ರವನ್ನು ಎಲ್ಲ ಜನರ ಸಮ್ಮುಖದಲ್ಲಿ ನಡೆಸಲಾಯಿತು. ಮೊದಲ ಬಾರಿಗೆ ಕನ್ನಡ ಬಳಗದ ಕಾರ್ಯಕ್ರಮ ನಡೆದಾಗ ಅಪ್ಪಾಜಿಯವರು ಮಾಡಿದ ಸಹಾಯವನ್ನು ಬಳಗದ ಸದಸ್ಯರು ಕೊಂಡಾಡಿದರು. ಇದೆ ಸಮಯದಲ್ಲಿ, ಪ್ರೊ|| ಕೃಷ್ಣೆ ಗೌಡರು ಅಪ್ಪಾಜಿಯವರ ಮತ್ತು ಬಳಗದ ಬಗ್ಗೆ ಬರೆದ ಲೇಖನವನ್ನು ಓದಿ ಅವರನ್ನು ಗೌರವಿಸಲಾಯಿತು.

ಸ್ಥಳೀಯ ಮ್ಯಾಂಚೆಸ್ಟರ್ ಕನ್ನಡಿಗರು (ಮಂಕು) ನಡೆಸಿಕೊಟ್ಟ ಕನ್ನಡದ ಆಧುನಿಕ ‘SHOLAY’ ಎಂಬ ಕಿರು ನಾಟಕ ಜನ ಸಾಗರವನ್ನು ರಂಜಿಸಿತು. ಅದರಲ್ಲಿನ ‘ವೀರು’ ಪಾತ್ರವನ್ನು ಮಾಡಿದ ರಮೇಶರವರು, ಕಾರ್ಯಕ್ರಮದ ನಂತರವೂ ಸಹ ‘ವೀರು’ವಾಗಿಯೇ ಗುರುತಿಸಲ್ಪಟ್ಟುದು ವಿಶೇಷವಾಗಿತ್ತು. ಕಾರ್ಯಕ್ರಮದ ಎಲ್ಲ ಪಾತ್ರಗಳ ಅಭಿನಯವೂ ಚಲನಚಿತ್ರ ನಟರನ್ನೂ ಸಹ ನಾಚುವಂತಿಸುತ್ತಿತ್ತು. ಸ್ಥಳೀಯ ಕನ್ನಡ ಮಹಿಳಾ ಸದಸ್ಯರು ಪ್ರಜ್ಯೋತಿಯವರ ಮಾರ್ಗದರ್ಶನದಲ್ಲಿ ಅಭಿನಯಿಸಿದ ‘ರಾಸಲೀಲ’ ನೃತ್ಯ ಬಹು ಸೊಗಸಾಗಿ ಮೂಡಿಬಂದಿತು. ಪುಟಾಣಿಗಳಾದ, ನೀತಿ ಮತ್ತು ಸ್ನೇಹ Raffle Tickets ಗಳನ್ನು ಹಂಚಿದರು.

Gangavati Pranesh
ಗಂಗಾವತಿ ಪ್ರಾಣೇಶ: ಚಿತ್ರ ರಚನೆ: ಡಾ.ಲಕ್ಷ್ಮೀನಾರಾಯಣ ಗುಡೂರ್

 

ಇದಾಗುತ್ತಿದ್ದಂತೆಯೇ, ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಬಸವರಾಜ್ ಮಹಾಮನಿ ಮತ್ತು ಕನ್ನಡದ ಅಭಿನವ ಬೀಚಿ ಗಂಗಾವತಿಯ ಪ್ರಾಣೇಶರವರ   ಕಾರ್ಯಕ್ರಮವು ನಡೆಯಿತು. ಇದೆ ಮೊದಲ ಬಾರಿಗೆ ಯುಕೆಯಲ್ಲಿ ಕಾರ್ಯಕ್ರಮ ಕೊಟ್ಟ ಇಬ್ಬರು ಮಹನೀಯರೂ ತಮ್ಮ ಹಾಸ್ಯ ಚಟಾಕಿಯ ಮೂಲಕ ಸೇರಿದ್ದ ಸಭಿಕರನ್ನು ಹೊಟ್ಟೆ ಹುಣ್ಣಾಗುವಂತೆ ನಗೆಸಾಗರದಲ್ಲಿ ಮುಳುಗಿಸಿದರು. ಇಲ್ಲಿ ಹುಟ್ಟಿ ಬೆಳೆಯುವ ಮಕ್ಕಳಿಗೆ ಮನೆಯಲ್ಲಿ ಕನ್ನಡ ಮಾತನಾಡುವುದನ್ನೇ ಕಲಿಸಲು ಈ ಮೂಲಕ ತಮ್ಮ ಹಾಸ್ಯದ ಮೂಲಕವೇ ಕೇಳಿಕೊಂಡರು. ಕಾರ್ಯಕ್ರಮ ನಿಗದಿಯಾದ ಸಮಯಕ್ಕಿಂತ ತಡವಾಗಿ ಪ್ರಾರಂಭವಾದುದು ಸ್ವಲ್ಪ ವಿಷಾದನೀಯ. ಕಾರ್ಯಕ್ರಮದ ಮುಗಿಯುವ ಹಂತದಲ್ಲಿ ಚಿಕ್ಕ ಮಕ್ಕಳ ಹುಡುಗಾಟ ಸ್ವಲ್ಪ ಹೆಚ್ಚಾಗಿದ್ದರಿಂದ, ಮಕ್ಕಳ ಪೋಷಕರ ಹತ್ತಿರ ಅವರನ್ನು ಸ್ವಲ್ಪ ಸುಮ್ಮನಿರಲು ಸೂಚಿಸುವದನ್ನೂ ಸಹ ಪ್ರಾಣೇಶರವರು ಹಾಸ್ಯವಾಗಿಯೇ ಮನವಿ ಮಾಡಿಕೊಂಡರು.

ನಂತರ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಊಟದ ಬಗ್ಗೆ ನಾನೇನು ಹೇಳುವದಿಲ್ಲ!! ಲೋಪದೋಷಗಳನ್ನು ಎತ್ತಿ ಹೇಳಿದರೆ ತಪ್ಪಾಗುವದಿಲ್ಲವೆಂದು ನನ್ನ ಅನಿಸಿಕೆ. ಮುಂದಿನ ಕಾರ್ಯಕ್ರಮಗಳಲ್ಲಿ, ‘ಅತಿಥಿ ದೇವೋ ಭವ’ ಎಂಬಂತೆ ಕಾರ್ಯಕ್ರಮಕ್ಕೆ ವಿದೇಶದಿಂದ ನಮ್ಮ ಸಲುವಾಗಿ ಬಂದಿರುವ ಅತಿಥಿಗಳಿಗೆ ಮೊದಲು ಊಟ ಮಾಡಲು ಅವಕಾಶಮಾಡಿಕೊಡುವದು ಉತ್ತಮವಾದ ನಡೆವಳಿಕೆ ಎಂಬುದು ನನ್ನ ಅಭಿಪ್ರಾಯ. ಹಾಗೆಯೇ, ಊಟದ ನಂತರ ಊಟದ ತಟ್ಟೆ, ಲೋಟಗಳನ್ನು ಬಹುತೇಕ ಮಂದಿ ಅಲ್ಲಲ್ಲೇ ಇಟ್ಟು ಹೋಗಿರುವ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಹೀಗೆ ಇದು ಮುಂದಿನ ಕಾರ್ಯಕ್ರಮಗಳಲ್ಲಿ ಮುಂದುವರೆದರೆ ‘ಸ್ವಚ್ಚ KBUK ಕಾರ್ಯಕ್ರಮ’ದ ಫಲಕವನ್ನು ಹಾಕುವ ದಿನ ಬಹು ದೂರವಿಲ್ಲದಿರುವದು ಬಹಳ ವಿಪರ್ಯಾಸದ ಸಂಗತಿ!

Mahamani
ಮಹಾಮನಿ: ಚಿತ್ರರಚನೆ: ಡಾ ಲಕ್ಷ್ಮೀನಾರಾಯಣ ಗುಡೂರ

ಕಾರ್ಯಕ್ರಮದ ಕೊನೆಯ ಹಂತವಾಗಿ ಖ್ಯಾತ ಹಾಡುಗಾರ್ತಿ ಹಳಿಯಾಳ್ ರವರ ಸುಶ್ರಾವ್ಯ ಕಂಠದಿಂದ ಬಂದ ಸುಮಧುರ ಚಲನಚಿತ್ರ ಗೀತೆಗಳಿಗೆ ಸಭಿಕರು ಹೆಜ್ಜೆ ಹಾಕಿದ್ದುದು ವಿಶೇಷವಾಗಿತ್ತು. ಧ್ವನಿ ಮತ್ತು ಬೆಳಕಿನ ಕಾರ್ಯವನ್ನು ಬಹು ಅಚ್ಚುಕಟ್ಟಾಗಿ ನಿರ್ವಹಿಸಿದ ‘Parswood’ ನ ಜ್ಯಾಕ್ ತಮ್ಮದೇ ಶೈಲಿಯಲ್ಲಿ ಕೆಲವು ಹೆಜ್ಜೆಗಳನ್ನು ಹಾಕಿದುದು ಬಹು ಸೊಗಸಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ರುವಾರಿ ಮತ್ತೂ ಹಾಸ್ಯಕಲಾವಿದರನ್ನು ಯು ಕೆ ಗೆ ಕರೆತರುವಲ್ಲಿ ಶ್ರಮ ಪಟ್ಟ ಆನಂದ್ ಕುಲಕರ್ಣಿಯವರು ಬಹಳ ತಾಳ್ಮೆಯಿಂದ ಕಾರ್ಯಕ್ರಮದ ಆರಂಭದಿಂದ ಮುಕ್ತಾಯದವರೆಗೂ ತಮ್ಮ ಕಾರ್ಯಕ್ರಮವನ್ನು ನಿರ್ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು, ವಿಶ್ವನಾಥ್ ಮತ್ತು ಅರವಿಂದ್ ಅವರು ಕಾರ್ಯಕ್ರಮದ ಪ್ರತಿಯೊಂದು ಹಂತದಲ್ಲೂ ಬಹಳ ಆಸಕ್ತಿ ಮತ್ತು ಮಾರ್ಗದರ್ಶನ ನೀಡುತ್ತ ಕಾರ್ಯಕ್ರಮದ ಯಶಸ್ಸಿಗೆ ಸಹಕಾರಿಯಾದರು. ಇನ್ನು ಬಹುತೇಕ ಮಂದಿ ಪರದೆಯ ಹಿಂದೆ ಮತ್ತು ಪರದೆಯ ಮುಂದೆ ಈ ಕಾರ್ಯಕ್ರಮದ ಯಶಸ್ಸಿಗಾಗಿ ಕ್ಷಮಿಸಿದ್ದಾರೆ. ಅವರ ಹೆಸರನ್ನು ನಾನು ಇಲ್ಲಿ ಉಲ್ಲೇಖಿಸದಿದ್ದರೆ, ದಯವಿಟ್ಟು ಕ್ಷಮೆ ಇರಲಿ.

ಮುಂದಿನ ದಿನಗಳಲ್ಲಿ ಬಳಗವು ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ ಕನ್ನಡ ಭಾಷೆ ಮತ್ತೂ ಸಂಸ್ಕೃತಿಯ ಕಂಪನ್ನು ಶ್ರೀಗಂಧದಂತೆ  ಯು ಕೆ ಯಲ್ಲಿ ಇನ್ನಷ್ಟು ಬೀರಲಿ ಎಂದು ಹಾರೈಸುವೆ.

‘ಟೆನೆರಿಫ್’ ಎಂಬ ಸಮ್ಮೋಹಕ ದ್ವೀಪ – ಪ್ರೇಮಲತಾ ಬರೆದ ಪ್ರವಾಸ ಕಥನ

ಸ್ಪೇನ್ ದೇಶದ ದಕ್ಷಿಣ ಭಾಗದಲ್ಲಿ ಕೆನೆರಿಯ ದ್ವೀಪಗಳಿವೆ. ಈ ಏಳು ದ್ವೀಪಗಳಲ್ಲಿ ಟೆನೆರಿಫ಼್ ದ್ವೀಪ ಅತಿ ದೊಡ್ಡದು ಮತ್ತು ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಂತದ್ದು.  ನಮ್ಮಲ್ಲಿ ಪ್ರತಿ ವರ್ಷ ಕಾಶಿ –ರಾಮೇಶ್ವರಕ್ಕೆ ತಪ್ಪದೆ ಹೋಗುವಂತೆ, ಪ್ರಪಂಚದ ನಾನಾ ದೇಶಗಳಿಂದ ಟೆನೆರಿಫ಼್ ದ್ವೀಪಕ್ಕೆ ಬರುವವರಿದ್ದಾರೆ!.

ಮಕ್ಕಳಿಗೆ ಬಂದ  ಕಳೆದ ಫ಼ೆಬ್ರವರಿಯ ಶಾಲಾ ರಜೆಯಲ್ಲಿ ಸ್ಪೈನ್ ದೇಶದ ಟೆನೆರಿಫ಼್ ದ್ವೀಪಕ್ಕೆ ಹೋಗಲು ತಯಾರಿ ನಡೆಯಿತು. ಈ ದ್ವೀಪ ಪ್ರವಾಸಿಗರಿಗೆ ಅತಿ ಪ್ರೀಯವಾದ ತಾಣ. ಇಂಗ್ಲೆಂಡಿನ ಚಳಿಗಾಲದಲ್ಲಿ ನರಳಿ ಸ್ವಲ್ಪ ಸೂರ್ಯನ ಶಾಖದಲ್ಲಿ ಮೀಯಲು ಉತ್ಸುಕರಾಗಿ ಹೊರೆಟೆವು. ಇಂಗ್ಲೆಂಡಿನ ಆಂಗ್ಲರಿಗೆ “ಸ್ಪೇನ್“ ಮತ್ತು ’ಬಿಸಿಲು’ ಒಂದು ರೀತಿಯಲ್ಲಿ ಪರ್ಯಾಯ ಪದಗಳು. ಅದರಲ್ಲೂ ದಕ್ಷಿಣ ಭಾಗದ ಸ್ಪೇನಿನ ದ್ವೀಪಗಳಲ್ಲಿ ಸೂರ್ಯನ ಬಿಸಿಲು ಹುಡುಕಿ ಹೊರಟವರಿಗೆ ನಿರಾಸೆಯಿಲ್ಲ. ಹಾಗಾಗಿ ಹಲವರು ಈ ದ್ವೀಪದಲ್ಲಿ ಮನೆಗಳನ್ನು, ಫ್ಲಾಟುಗಳನ್ನು  ಕೊಂಡುಕೊಂಡು ಇಡೀ ಚಳಿಗಾಲವನ್ನು ಇಲ್ಲಿ ಕಳೆಯುತ್ತಾರೆ. ಮಿಕ್ಕಂತೆ, ಈ ಮನೆಗಳನ್ನು ಇತರೆ ಪ್ರವಾಸಿಗರಿಗೆ ಬಾಡಿಗೆ ನೀಡಿ ಖರ್ಚು ಹುಟ್ಟಿಸಿಕೊಳ್ಳುತ್ತಾರೆ.

ಈ ದ್ವೀಪ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನು ಮನರಂಜಿಸಲು ಸಿದ್ದವಾದ ತಾಣ. ಪ್ರವಾಸೋದ್ಯಮ ಈ ದ್ವೀಪಗಳ ಮುಖ್ಯ ಆದಾಯಮೂಲ ಕೂಡ. ಈ ಕೆನೆರಿಯ ದ್ವೀಪಗಳ ವೈಶಿಷ್ಟವೆಂದರೆ ಈ ಏಳೂ ದ್ವೀಪಗಳು ಅಗ್ನಿಪರ್ವತಗಳ ಸಿಡಿತದಿಂದ ಸಮುದ್ರದಲ್ಲಿ  ಉದ್ಭವವಾದಂತವು. ಪ್ರಾಚೀನ ಕಾಲದ ಲ್ಯಾಟಿನ್ನಿನಲ್ಲಿ ’ಕೆನೆರಿಯ ದ್ವೀಪ’ ಅಂದರೆ ’ನಾಯಿಗಳ ದ್ವೀಪ’ ಎಂದು. ಇಲ್ಲಿ ಅಂತಹ ನಾಯಿಗಳೇನೂ ಇಲ್ಲ. ಸಮುದ್ರದ ಭಾರೀ ಗಾತ್ರದ  ಅಪಾರ ಸಂಖ್ಯೆಯ ’ಸೀಲು” ಗಳನ್ನು ಉದ್ದೇಶಿಸಿ  ಹಿಂದಿನ ಕಾಲದಲ್ಲಿ ರೋಮನ್ನರಿಟ್ಟ ಹೆಸರೇ  ಈಗಲೂ ಉಳಿದಿದೆ. ವಿಪರ್ಯಾಸ ಅಂದರೆ ಈಗ ಆ ಜಾತಿಯ ಸೀಲ್ ಗಳು ಸಂಪೂರ್ಣ ಅವನತಿಯಾಗಿರುವುದು! ಕೆನೆರಿಯ ದ್ವೀಪಗಳ ಹೆಸರಿನ ಬಗ್ಗೆ ಇನ್ನೂ ಅನೇಕ ಪ್ರತೀತಿಗಳಿವೆ.

tanarife

ಉತ್ತರ ಟೆನೆರಿಫ್ ನ ಒಂದು ವಿಹಂಗಮ ನೋಟ

ಈ ದ್ವೀಪಗಳ ಆದಿವಾಸಿಗಳು ಗ್ವಾಂಚೆಸ್ ಅನ್ನುವ ಜನರು. ಇವರು ನಾಯಿಯ ತಲೆಯಿದ್ದ ದೇವರನ್ನು ಪೂಜಿಸುತ್ತಿದ್ದರೆಂಬ ಕಾರಣಕ್ಕೆ ಈ ಹೆಸರು ಬಂದಿರಬಹುದು ಎಂದು ಕೂಡ ಕೆಲವರು ಹೇಳುತ್ತಾರೆ.ಅನುಬಿಸ್ ಎನ್ನುವ ನಾಯಿಯ ತಲೆಯಿರುವ ಈಜಿಪ್ಟ್ ದೇಶದ ದೇವರಿಂದ ಈ ದ್ವೀಪಗಳಿಗೆ ನಾಯಿಗಳ ದ್ವೀಪ ಎಂಬ ಹೆಸರು ಬಂತು ಎಂಬ ಮಾತು ಕೂಡ ಕೇಳಿಬಂದಿದೆ.

ಟೆನೆರಿಫ಼್ ಸುಮಾರು ೮ ಮಿಲಿಯನ್ ವರ್ಷಗಳಷ್ಟು ಹಳೆಯದು. ಮೂರು ಮಿಲಿಯನ್ ವರ್ಷಗಳಲ್ಲಿ ಒಂದಾದ ಮೇಲೆ ಒಂದರಂತೆ ಅಗ್ನಿಪರ್ವತಗಳು ಸಿಡಿದು ಈ ದ್ವೀಪದ ಸೃಷ್ಟಿಯಾಗಿದೆ.

ಆಗ್ನಿಪರ್ವತದ ಆಸ್ಪೋಟ, ಅದರ ಹಿಂದೆ ಶಿಲೆಗಳ ಕೊರೆತ, ವಿಶಿಷ್ತ್ಟ ಆಕೃತಿಯ ನೆಲವನ್ನು ಸೃಷ್ಟಿಸಿದೆ. ಇಲ್ಲಿನ ನೆಲ ಬರಡು ಬರಡು. ಬರಿಯ ಬಂಡೆಗಳು, ಕಲ್ಲು, ಕೊರಕಲುಗಳು ತುಂಬಿರುವ ಈ ದ್ವೀಪದಲ್ಲಿ ಹತ್ತು ತಿಂಗಳಾದರೂ ಮಳೆ ಬರುವುದಿಲ್ಲವಂತೆ. ಎಲ್ಲೆಲ್ಲಿಯೂ ಕತ್ತಾಳೆ, ಶಾಖವನ್ನು ತಡೆಯುವ ಶಕ್ತಿಯಿರುವ ಪೈನ್ ಮರಗಳು.

ಆಗ್ನಿ ಪರ್ವತದ ಸಿಡಿತಗಳಿಂದಾಗಿ ನಿರ್ಮಿತವಾದ ಈ ದ್ವೀಪಗಳು ಮೊದಲು ಬರಿ ಬಂಡೆಗಳಾಗಿದ್ದವಂತೆ. ಹುಲ್ಲುಗರಿಕೆ ಅಥವಾ ಕುರುಚಲು ಪೊದೆಗಳು ಇಲ್ಲಿ ಬೆಳೆಯಲು ಹಲವು ಮಿಲಿಯನ್ ವರ್ಷಗಳೇ ತಗುಲಿವೆ ಎನ್ನುತ್ತಾರೆ. ಮಾನವರು ಈ ದ್ವೀಪಗಳನ್ನು ತಮ್ಮದಾಗಿಸಿಕೊಂಡು ಹಲವು ಹೊಸ ತಳಿಗಳನ್ನು ಈ ದ್ವೀಪಕ್ಕೆ ಪರಿಚಯಿಸಿದ್ದಾರೆ. ಕಾಲಾನುಕ್ರಮದಲ್ಲಿ ಬಂಡೆಗಳು ಕರಗಿ, ನಶಿಸಿ, ಸೃಷ್ಟಿಸಿದ ಫಲವತ್ತಾದ ಮಣ್ಣಿನಲ್ಲಿ ಮಾನವರು ಕೃಷಿಯನ್ನು ಆರಂಭಿಸಿದ್ದಾರೆ.

ಹಸಿರನ್ನು ಅಗ್ನಿಪರ್ವತಗಳ ದ್ವೀಪದಲ್ಲಿ ಕಾಣಿಸಲು ಮಾನವನ ಪ್ರಯತ್ನ  ನಿರಂತರವಾಗಿ ಸಾಗಿದೆ. ಗಾಲ್ಫಿನ ಮೈದಾನಗಳು, ಶಾಖವನ್ನು ತಡೆಯಬಲ್ಲ ಕಣಿಗಿಲೆ, ಕತ್ತಾಳೆಯ ವಿವಿಧ ಪೊದೆಗಳು, ಗಂಟೆ ಹೂವು, ಪೇಪರ್ ಹೂವಿನ ಅರ್ಥಾತ್ ಬೋಗನವಿಲ್ಲಾ ಬಳ್ಳಿಗಳ ಮೇಲೆ ಸರ್ಕಾರ ಅಪಾರ ಹಣ ಸುರಿದಿದೆ.ಸಮುದ್ರದ ನೀರಿನಿಂದ ಉಪ್ಪಿನ ಅಂಶವನ್ನು ಬೇರ್ಪಡಿಸಿ, ಅದನ್ನೇ ಮನೆ ಬಳಕೆಗೆ, ಹೂ ದೋಟಗಳಿಗೆ ಹಾಯಿಸಿ ಬದುಕುತ್ತಾರೆ.ಇಲ್ಲಿನ ಭೂಮಿ ಒಣ ಮರುಭೂಮಿಯಾದರು, ಅಗ್ನಿಪರ್ವತದ ಸ್ಪೋಟದಿಂದ ಖನಿಜಭರಿತವಾಗಿದೆ . ಹೀಗಾಗಿ ಕಣ್ಣು ಹಾಯಿಸುವಷ್ಟು ದೂರಕ್ಕೂ ಪರದೆಗಳನ್ನು ಹಾಯಿಸಿ ಅದರ ನೆರಳಿನಲ್ಲಿ ಅಪಾರವಾಗಿ ಬಾಳೆಯನ್ನು ಬೆಳೆಯುತ್ತಾರೆ.ಇದನ್ನು ಇಡೀ ದ್ವೀಪದಲ್ಲಿ ಮತ್ತು ದೇಶದಲ್ಲಿ ಸರಬರಾಜು ಮಾಡುತ್ತಾರೆ. ಅಷ್ಟೇ ಅಲ್ಲದೆ, ಟೆನೆರಿಫಿನ ರಾಜಧಾನಿಯಾದ ಸಾಂತಾಕ್ರೂಜಿನ ಬಂದರುಗಳಿಗೆ ಪೆಟ್ರೋಲ್  ತುಂಬಿಸಿಕೊಳ್ಳಲು ಬರುವ ಮೆಡಿಟರೇನಿಯನ್ ಸಮುದ್ರದ ಹಡಗುಗಳಿಗೂ ಸರಬರಾಜು ಮಾಡುತ್ತಾರೆ.  ತಂಬಾಕು, ತರಕಾರಿ, ಕಬ್ಬು,  ಬಾದಾಮಿ ಮತ್ತು ಅಂಜೂರದ ಹಣ್ಣುಗಳನ್ನು ಕೂಡ ಬೆಳೆಯುತ್ತಾರೆ. ಅಪಾರವಾಗಿ ನಡೆವ ಈ ಕೃಷಿಯ ಪರಿಣಾಮವಾಗಿ, ಇಲ್ಲಿರುವ ಮಣ್ಣಿನ ಫಲವತ್ತತೆ ಕಡಿಮೆಯಾಗುವ ಬಗ್ಗೆ ಮುನ್ನೆಚ್ಚರಿಕೆ ಕೇಳಿಬಂದಿದೆ.

ಭೂಗೋಳದ ಪರಿಮಿತಿಯಲ್ಲಿ ಈ ದ್ವೀಪವು ಆಫ್ರಿಕ ಖಂಡಕ್ಕೆ ಸೇರುತ್ತದೆ.ಆದರೆ ಈ ಏಳೂ  ಕೆನೆರಿಯ ದ್ವೀಪಗಳನ್ನು ಗೆದ್ದು ವಶಪಡಿಸಿಕೊಂಡು,  ಅವನ್ನು ಸ್ಪೇನ್ ದೇಶ ತನ್ನ ಆಡಳಿತಕ್ಕೆ ಒಳಪಡಿಸಿಕೊಂಡಿದೆ. ಈ ದ್ವೀಪಗಳ ವಿಶೇಷತೆಯನ್ನು ವೃದ್ಧಿಪಡಿಸಿ ಸಿರಿವಂತ ದ್ವೀಪಗಳನ್ನಾಗಿಸಿದೆ.

ಹಾಗಾದರೆ ಕುಡಿಯುವ ನೀರು? ಇದನ್ನು ತಿಳಿಯಲು ಈ ದ್ವೀಪದ ಉತ್ತರ ಭಾಗಕ್ಕೆ ಹೋಗಬೇಕು. ಉತ್ತರ ಭಾಗ, ದಕ್ಷಿಣ ಭಾಗದಷ್ಟು ಒಣ ಭೂಮಿಯಲ್ಲ. ಇಲ್ಲಿ ಹಸಿರನ್ನು ಕಾಣಬಹುದು. ಕಿತ್ತಳೆ, ನಿಂಬೆ, ಆಲೂಗೆಡ್ಡೆ, ಬಾರ್ಲಿ, ಟೊಮಟೊಗಳನ್ನು ಬೆಳೆಯುವಷ್ಟು ಇಲ್ಲಿನ ವಾತಾವರಣ ಹದವಾಗಿದೆ.  ಆದರೆ ಇದು ಮಳೆಯಿಂದ ಸಾದ್ಯವಾದದ್ದಲ್ಲ! ಈ ಭಾಗ ಸಮುದ್ರ ಮಟ್ಟದಿಂದ ಬಹಳ ಎತ್ತರದಲ್ಲಿದ್ದು, ಇಲ್ಲಿನ ಪೈನ್ ಮರಗಳು ನೀರನ್ನು ಹಾದುಹೋಗುವ ಮೋಡಗಳಿಂದ ಸೂಜಿಮೊನೆಯಂತ ಎಲೆಗಳಿಂದ ಹೀರಿ ನೆಲಕ್ಕೆ ಕಳಿಸುವ ಪರಿಣಿತಿಯನ್ನು ಹೊಂದಿದ್ದು, ದಿನಕ್ಕೆ ಪ್ರತಿ ಮರವೂ ಸುಮಾರು ಹತ್ತು ಲೀಟರುಗಳಷ್ಟು ನೀರನ್ನು ಸಂಗ್ರಹಿಸುವುದರಿಂದ, ಆ ಸಿಹಿ ನೀರನ್ನು ಶೇಖರಿಸಿ, ಬಾಟಲುಗಳಿಗೆ ತುಂಬಿ ಮಾರಾಟ ಮಾಡುತ್ತಾರೆ! ಇಲ್ಲಿ ಬೆಳೆದಿರುವ ಈ ವಿಶೇಷ ಜಾತಿಯ ಪೈನ್ ಮರಗಳಿಗೆ ಕೆನೆರಿಯ ಪೈನ್ ಮರಗಳೆಂದೇ ಹೆಸರು.

ಕೆಲವು ಜಾತಿಯ ಜೇಡ, ಹಲ್ಲಿಗಳ ಹೊರತಾಗಿ ಇಲ್ಲಿ ಬದುಕಿ ಬೆಳೆದು ರಕ್ಷಿತವಾಗಿರುವ ಜೀವಜಾಲ ಯಾವುದೂ ಇಲ್ಲ.

ಟೆನರಿಫ್ ಒಟ್ಟು ಜನಸಂಖ್ಯೆ ೯೦೬,೮೫೪ ಮಾತ್ರ. ೨೦೩೪ ಚದರ ಕಿ.ಮೀ. ವಿಸ್ತಾರವಾದ ಟೆನೆರಿಫ್, ಕೆನೆರಿಯ ದ್ವೀಪಗಳಲ್ಲೆ ಅತ್ಯಂತ ದೊಡ್ಡ ದ್ವೀಪ. ಬಂದರುಗಳಿರುವ ಎರಡು ದೊಡ್ಡ ನಗರಗಳು ಇಲ್ಲಿವೆ. ಇಂದಿನ ರಾಜಧಾನಿಯಾದ ಸಂತಾಕ್ರೂಜ್ ನಗರ ಮತ್ತು ಹಳೆಯ ರಾಜಧಾನಿ ಲ ಲಗುನ. ಲ ಲಗುನದಲ್ಲಿ ಟೆನೆರಿಫ್ ದ್ವೀಪಗಳಲ್ಲಿಯೇ ಪುರಾತನವಾದ ಯೂನಿವರ್ಸಿಟಿಯಿದೆ. ಟೆನೆರಿಫ಼ ಪುಟ್ಟ ದ್ವೀಪದಲ್ಲಿಯೇ, ದಕ್ಶಿಣಕ್ಕೊಂದು ಮತ್ತು ಉತ್ತರದಲ್ಲೊಂದು ವಿಮಾನ ನಿಲ್ದಾಣಗಳಿವೆ.

ಟೆನೆರಿಫ್ ನ ಟೈಡೆ ಅಗ್ನಿ ಪರ್ವತ

೧೨,೭೧೮ ಅಡಿ ಎತ್ತರವಿರುವ ಟೈಡೆ ಅಗ್ನಿಪ್ರರ್ವತ ಇಡೀ ಸ್ಪೇನ್ ದೇಶದಲ್ಲೇ ಅತಿ ಎತ್ತರದ ಪರ್ವತ. ಈ ಪ್ರರ್ವತಕ್ಕೆ  ಪ್ರತಿ ವರ್ಷ ೩ ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ. ಕೇಬಲ್ ಕಾರಿನಲ್ಲಿ ( ಪ್ರತಿಬಾರಿ ೩೪-೩೮ ಜನರಂತೆ) ಈ ಅಗ್ನಿಪರ್ವತ ಶಿಖರದ ತುದಿಯಲ್ಲಿರುವ ಅದರ ಬಾಯಿಯೊಳಕ್ಕೆ (೧೧,೬೬೩ ಅಡಿ) ಒಂದು ಮೈಲಿ ಕೆಳಗಿನವರೆಗೂ ಹೋಗಬಹುದು. ಹವಾಮಾನ ಸರಿಯಿಲ್ಲದಿದ್ದರೆ ಅದೂ ಇಲ್ಲ. ಇಲ್ಲಿಂದ ಮೇಲಕ್ಕೆ ಚಾರಣ ಮಾಡಿದರೆ ಅದರ ಬಾಯಲ್ಲಿ ಇಣುಕಿ ನೋಡಬಹುದು.

ಆದರೆ ಕೊನೆಯ ೬೬೦ ಅಡಿಗಳನ್ನು ಹತ್ತಲು ಪರ್ಮಿಟ್ಟಿನ ಅಗತ್ಯವಿದೆ.ಮಧ್ಯೆ ಮಧ್ಯೆ ಹೊಗೆಯಾಡುವ ಹಲವು ರಂಧ್ರಗಳಿದ್ದು, ಭೂಗರ್ಭದಲ್ಲಿ ಈಗಲೂ ಕುದಿಯುತ್ತಿರುವ ಶಾಖವನ್ನು ನೆನಪಿಸುತ್ತದೆ.  ಗಂಧಕಾಮ್ಲದ (Sulphuric acid) ವಾಸನೆ, ಕೊಳೆತ ಮೊಟ್ಟೆಯ ವಾಸನೆಯಾಗಿ ದಾರಿಯುದ್ದಕ್ಕೂ ಕಾಡುತ್ತದೆ. ಪರ್ವತದ ಕೆಳಭಾಗದಲ್ಲಿ ೨೨ ಡಿಗ್ರಿ ಹವಾಮಾನವಿದ್ದರೆ, ಶಿಖರದಲ್ಲಿ ಕೇವಲ ೩ ಡಿಗ್ರಿಯಿದ್ದು,  ಗಂಟೆಗೆ ೫೦ಮೈಲಿ ವೇಗದಲ್ಲಿ ಗಾಳಿ ಬೀಸುತಿತ್ತು. ಸುತ್ತಲೂ ಉಂಡೆ-ಉಂಡೆಯಾಗಿ ಹಲವಾರು ಮೈಲಿಗಳ ಉದ್ದಕ್ಕೂ ಲಾವಾ ಹರಿದು ಗಟ್ಟಿಯಾಗಿ ಕಲ್ಲುಗಳಾಗರುವುದನ್ನು ಕಂಡೆವು. ಹೀಗೆ ಹರಿದು ಗಟ್ಟಿಯಾದ ಲಾವಾದ ಕಲ್ಲುಗಳನ್ನು ಕಡಿದು, ಕೊರೆದು ರಸ್ತೆಗಳನ್ನು ನಿರ್ಮಿಸಿದ್ದಾರೆ. ಹಲವು ಬಂಡೆಗಳಲ್ಲಿನ ಕಬ್ಬಿಣದ ಅಂಶ ಹೊರಗಿನ ಹವಾಮಾನಕ್ಕೆ ತೆರೆದುಕೊಂಡ ಕಾರಣ ನೀಲಿ, ಹಸಿರು ಬಂಡೆಗಳಾಗಿದ್ದರೆ, ಸಾವಿರಾರು ವರ್ಷಗಳ ಕೊರೆತಕ್ಕೆ ಒಳಗಾಗಿ ಹಲವು ರೂಪುಗಳನ್ನು ತಾಳಿದ ಬಂಡೆಗಳು ನಮ್ಮ ಕಲ್ಪನೆಯನ್ನು ಕೆದಕುತ್ತವೆ.

tanarife 2                                ಟೈಡೆ ಅಗ್ನಿ ಪರ್ವತ ಮತ್ತು ಕುರುಚಲು ಪೊದೆಗಳು

ಸಮುದ್ರದ ತಳದಿಂದ ಮೇಲಕ್ಕೆ ೨೪.೬೦೦ ಅಡಿ ಎತ್ತರವಿರುವ ಈ ಪರ್ವತವು, ಹವಾಯಿ ದ್ವೀಪದಲ್ಲಿರುವ ಮೊನಾ ಕೇಯಾ, ಮೊನಾ ಲೊವಗಳ ನಂತರ ಅಗ್ನಿಪರ್ವತದ ದ್ವೀಪಗಳಲ್ಲೇ ಅತಿ ಎತ್ತರದ ಅಗ್ನಿಪರ್ವತವೆನಿಸಿದೆ .  ಎತ್ತರದಲ್ಲಿ, ಟೆನೆರಿಫ಼ ಪ್ರಪಂಚದಲ್ಲೇ ೧೦ನೆ ಎತ್ತರದ ದ್ವೀಪವಾಗಿದೆ. ಈ ಪರ್ವತದಲ್ಲಿ ಇತ್ತೀಚೆಗೆ ಆದ ಸ್ಪೋಟವೆಂದರೆ ಅದು ೧೯೦೯ರಲ್ಲಿ. ಆಗ ಸಂಭವಿಸಿದ ದುರಂತದ ನಂತರ ಟೈಡೆ ಪರ್ವತವನ್ನು ಅಪಾಯಕಾರಿ ಪ್ರರ್ವತಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರ ಸುತ್ತ ಮುತ್ತಲ ೭೩ ಚದರ ಮೈಲಿ ಪ್ರಾಂತ್ಯವನ್ನು ಯುನೆಸ್ಕೋ ಜೂನ್ ೨೯, ೨೦೦೭ರಲ್ಲಿ, ಸಂರಕ್ಷಿತ ಪ್ರಾಂತ್ಯವೆಂದು ಘೋಷಿ ಸಲಾಗಿದೆ. ಹಾಗಾಗಿ, ಇಲ್ಲಿಂದ ಒಂದು ಸಣ್ಣ ಕಲ್ಲನ್ನು ಕೂಡ ಹೊರಗೊಯ್ಯಲು ಬಿಡುವುದಿಲ್ಲ.

ಹಲವು ಪರ್ವತಗಳಿಗಿರುವಂತೆ ಈ ಪರ್ವತಕ್ಕೂ ಅಂಟಿದಂತೆ ಕೆಲವು ಪೌರಾಣಿಕ ಕತೆಗಳಿವೆ. ಗ್ವಾಯಿಟೆ ಎಂಬ ರಾಕ್ಷಸನು ಮ್ಯಜಿಕ್ ಎಂಬ ಬೆಳಕಿನ ದೇವನನ್ನು ಅಪಹರಿಸಿ ಈ ಪರ್ವತದ ಹೊಟ್ಟೆಯಲ್ಲಿ ಬಚ್ಚಿಟ್ಟು ಇಡೀ ಪ್ರಪಂಚವನ್ನು ಅಂಧಕಾರದಲ್ಲಿ ಮುಳುಗಿಸಿದನಂತೆ. ಈ ದ್ವೀಪದ ವಾಸಿಗಳು ತಮ್ಮ ಪರಮ ದೈವವಾದ ಅಚಮನನ್ನು ಪ್ರಾರ್ಥಿಸಿದರಂತೆ. ಅಚಮನು, ಗ್ವಯಿಟೆಯ ಜೊತೆ ಕಾದಾಡಿ ಶಾಖ ಮತ್ತು ಬೆಳಕಿನ ದೈವವಾದ ಮ್ಯಜಿಕನನ್ನು ಬಿಡುಗಡೆ ಮಾಡಿ, ಟೈಡೆ ಪರ್ವತದ ಹೊಟ್ಟೆಯಲ್ಲಿ ಗ್ವಾಯಿಟೆಯನ್ನು ಬಂಧಿಸಿದನಂತೆ. ಈ ಅಗ್ನಿ ಪರ್ವತ ಸ್ಪೋಟವಾದಾಗಲೆಲ್ಲ ಜನರು ಪಟಾಕಿಗಳನ್ನು ಹಚ್ಚಿ ಅವನು  ಹೊರಬರದಂತೆ ಹೆದರಿಸುವುದನ್ನು ಈಗಲೂ ಮಾಡುತ್ತಾರೆ. ಇವನನ್ನು ಕರೀ ನಾಯಿಯ ರೂಪದಲ್ಲಿ ಪ್ರತಿಪಾದಿಸುತ್ತಾರೆ.

tanarife 3                                    ಅಗ್ನಿ ಪರ್ವತದ ಶಿಖರದಲ್ಲಿ ಲೇಖಕಿ ಮಗನೊಂದಿಗೆ

ಕಾಕತಾಳೀಯವೆಂಬಂತೆ, ಹವಾಯಿಯಲ್ಲೂ ಕೂಡಾ ಜನರು ಇಂತಹ ಒಂದು ಕತೆಯಲ್ಲಿ ನಂಬಿಕೆಯಿಟ್ಟಿದ್ದಾರೆ. ವ್ಯತ್ಯಾಸ ಅಂದರೆ, ಹವಾಯಿಯಲ್ಲಿ ಇದು ಹೆಣ್ಣು ದೇವತೆ.

ಟೈಡೆ ಪರ್ವತದಲ್ಲಿ ೨೦೦೩ ರಲ್ಲಿ ಕೂಡ ಅಗ್ನಿ ಸ್ಫೋಟದ ಚಟುವಟಿಕೆ ಕಾಣಿಸಿಕೊಂಡು ಜನರಲ್ಲಿ ಭೀತಿಯನ್ನುಂಟು ಮಾಡಿತ್ತು . ಮುಂದಿನ ಹಲವು ನೂರು ವರ್ಷಗಳಲ್ಲಿ ಇದು ಮತ್ತೆ ಆಸ್ಪೋಟಿಸುತ್ತದೆ ಎಂದೂ, ಇದು ದಕ್ಷಿಣ ಇಟಲಿಯಲ್ಲಿರುವ ಪ್ರಸಿದ್ಧ ಅಗ್ನಿಪರ್ವತಗಳಾದ, ವೆಸೂವಿಯೆಸ್ ಮತ್ತು ಎತ್ನಾ ಪರ್ವತಗಳಂತೆ  ಜನರನ್ನು ದೊಡ್ಡ ದುರಂತಕ್ಕೆ ಈಡು ಮಾಡುತ್ತದೆಯೆಂದು ಇಲ್ಲಿನವರೆಗಿನ ವಿದ್ಯಮಾನಗಳಿಂದ ತಿಳಿದುಬಂದಿದೆ. ಈ ಪರ್ವತದ ಕಟ್ಟು ಸ್ಥಿರವಾಗಿರದ ಕಾರಣ ಒಂದು ಭಾಗ  ಸಮುದ್ರದಲ್ಲಿ ಕುಸಿದು ಅಟ್ಲಾಂಟಿಕ್ ಸಮುದ್ರದಲ್ಲಿ ಭಾರೀ ಸುನಾಮಿಯನ್ನು ಉಂಟು ಮಾಡಿ, ಅದರಿಂದ ಉತ್ಪನ್ನವಾಗುವ ದೈತ್ಯಾಕಾರದ ಅಲೆಗಳು, ಉತ್ತರ ಅಮೆರಿಕೆಯ ಪೂರ್ವದಿಕ್ಕಿನಲ್ಲಿರುವ ದೊಡ್ಡ ನಗರಗಳನ್ನೇ ಕಬಳಿಸುವ ಸಾಧ್ಯತೆಗಳಿವೆ ಎಂದು ಭೂಗರ್ಭಶಾಸ್ತ್ರಜ್ಯರು ಭವಿಷ್ಯವಾಣಿ ನುಡಿದಿದ್ದಾರೆ.

ಇಲ್ಲಿ ಮಂಗಳ ಗ್ರಹದ ವಾತಾವರಣವನ್ನು ಅರಿಯಲು ಸುಮಾರು ಸಂಶೋಧನೆಗಳಾಗಿವೆ. ಭಾರೀ ಆಸ್ಪೋಟಗಳ ನಂತರ ಅಲ್ಲಿ ಬದುಕಬಲ್ಲಂತಹ ಸಸ್ಯ ಮತ್ತು ಸಣ್ಣ ಪ್ರಾಣಿ ಸಮುದಾಯಗಳ ಸಂಶೋಧನೆ ಮತ್ತು ಖನಿಜಗಳ ಸಂಶೋದನೆಗಳಲ್ಲಿ  ಅಮೆರಿಕಾದ  ಬಾಹ್ಯಾಕಾಶ ಸಂಸ್ಥೆ “ನಾಸಾ“ ಆಸಕ್ತಿ ತೋರಿದೆ.

ಇತರೆ ಕೆನೆರಿಯ ದ್ವೀಪಗಳು

ಫೋರ್ಟೆವೆನ್ಟುರ, ಗ್ರಾಂಡ್ ಕೆನೆರಿಯಾ, ಲ್ಯಂಜರೋಟಿ , ಲ ಗೊಮೇರ, ಲ ಪಾಮ, ಮತ್ತು  ಎಲ್ ಹೀರೋ  ಕೆನೆರಿಯ ದ್ವೀಪಗಳು ವರ್ಷಕ್ಕೆ ೧೨ ಮಿಲಿಯನ್ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತವೆ.

ಮೊರಕ್ಕೋದಿಂದ ಬರೇ ೬೨ ಮೈಲಿ ದೂರದಲ್ಲಿರುವ ಈ ದ್ವೀಪಗಳ ಬಗ್ಗೆ ಸ್ಪೇನ್ ಮತ್ತು ಮೊರಕ್ಕೋಗಳ ಮಧ್ಯೆ ವೈಮನಸ್ಯಗಳಿವೆ. ಇಲ್ಲಿನ ಕಬ್ಬಿನ ಬೆಳೆ ಮತ್ತು ಸಕ್ಕರೆಯ ಉತ್ಪಾದನೆ ಈ ಪುಟ್ಟ ದ್ವೀಪಗಳಿಗೆ ಪೋರ್ಚುಗೀಸರಿಂದ, ಡಚ್ಚರಿಂದ, ಕಡಲ್ಗಳ್ಳರಿಂದ ಯುದ್ದಗಳನ್ನು ಕೂಡ ತಂದಿವೆ. ಕೆನೆರಿಯ ಜನ ಸಮುದಾಯ, ಸ್ಪೇನ್,ಇಂಗ್ಲೀಷ್,ಇಟಾಲಿಯನ್, ಡಚ್,  ಮೊರೊಕ್ಕೋ ಮತ್ತು  ಇತರ ಆಫ್ರಿಕಾ ದೇಶದ ಜನರನ್ನು ಹೊಂದಿದ್ದು, ಅವರೆಲ್ಲಾ ಸಹಬಾಳ್ವೆಯಿಂದ ಜೀವಿಸುತ್ತಿದ್ದಾರೆ . ಈ ದ್ವೀಪದಲ್ಲಿ ನಮ್ಮ ಭಾರತೀಯರೂ ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ!

ದಕ್ಷಿಣ ಭಾರತದಲ್ಲಿ ಈ ದ್ವೀಪದ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲವಾದರೂ, ಉತ್ತರ ಭಾರತದಲ್ಲಿ ಈ ಸಣ್ಣ ದ್ವೀಪಗಳಿಗೆ ನಮ್ಮ ಭಾರತೀಯರನ್ನು ಕರೆತರುವ ದಲ್ಲಾಳಿಗಳ ದೊಡ್ಡ ಗುಂಪೇ ಇದೆಯಂತೆ. ಟೆನೆರಿಫ಼್ ದ್ವೀಪದಲ್ಲಿಯೇ ಸುಮಾರು ೫೦೦೦ ಮಂದಿ ಭಾರತೀಯರಿದ್ದಾರೆ! ಇತರೆ ದ್ವೀಪಗಳಲ್ಲೂ ಇವರು ಹಂಚಿ ಹೋಗಿದ್ದಾರೆ. ಟೆನೆರಿಫ಼ನ ಉತ್ತರ, ದಕ್ಷಿಣ ಮತ್ತು ಮಧ್ಯ ಭಾಗದಲ್ಲಿ ಹರಡಿಕೊಂಡಿರುವ ಈ ಭಾರತೀಯರು, ವ್ಯಾಪಾರ, ವಹಿವಾಟು, ಹೊಟೆಲ್ಲುಗಳು ಇತ್ಯಾದಿ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಸುಮಾರು ಇಪ್ಪತ್ತೈದು  ವರ್ಷಗಳಿಂದ ಇಲ್ಲಿ ನೆಲೆ ನಿಂತು ಬಟ್ಟೆ ಅಂಗಡಿ, ಎಲೆಕ್ಟ್ರೊನಿಕ್ ಉಪಕರಣಗಳ ಅಂಗಡಿ ಮತ್ತು ಹೊಟೆಲುಗಳನ್ನು ನಡೆಸುತ್ತಿರುವ ಪುಣೆ, ಕಲಕತ್ತ ಮತ್ತು ಗುಜರಾತ್ ರಾಜ್ಯಗಳಿಂದ ಬಂದಿರುವ ಹಲವರನ್ನು ಮಾತಾಡಿಸಿದೆವು. ಸ್ಪೈನ್ ದೇಶದ ಸ್ಪಾನಿಶ್  ಭಾಶೆಯನ್ನು ಕಲಿಯುವುದು ಸುಲಭ  ಎಂದು ಅಭಿಪ್ರಾಯ ಪಡುವ ಇವರು,  ಇಲ್ಲಿಯ ನೆಲ, ಭಾಷೆ ಮತ್ತು ಸಂಪ್ರದಾಯಗಳಿಗೆ ಒಗ್ಗಿಕೊಂಡು, ತಮ್ಮ ಮನೆಗಳಲ್ಲಿ ಭಾರತೀಯತೆಯನ್ನು ಉಳಿಸಿಕೊಂಡು,  ಎಲ್ಲ ಅನಿವಾಸಿ ಭಾರತೀಯರಂತೆಯೇ ಇಬ್ಬಂದಿಯ ಬದುಕಿನಲ್ಲಿ ತೊಡಗಿಕೊಂಡಿದ್ದಾರೆ.

ಆಂಗ್ಲ ಭಾಷೆ ಅಥವಾ ಹಿಂದಿ ಮಾತಾಡಲು ಕೂಡಾ ಗೊತ್ತಿರದ ಜನರನ್ನು ಭಾರತದಿಂದ ಕರೆತರಲು ಅಪಾರ ಹಣಪಡೆದು, ಇನ್ನಿಲ್ಲದ ಕನಸುಗಳ ಪಟ್ಟಿಯನ್ನು ತೋರಿಸಿ ಸವಿಮಾತನ್ನಾಡಿ ಮಧ್ಯಸ್ತಿಕೆಯನ್ನು ವಹಿಸಿ ಭಾರತದಿಂದ ಜನರನ್ನು ಇಲ್ಲಿಗೆ ಕರೆತಂದು, ನಡುನೀರಲ್ಲಿ ಕೈ ಬಿಡುವ  ದಲ್ಲಾಳಿಗಳ ಬಗ್ಗೆ ಎಚ್ಚರದಿಂದಿರಬೇಕೆಂದು ಸಂದೇಶ ಸಾರುತ್ತಾರೆ. ಹೀಗೆ ಕನಸುಗಳನ್ನು ಹೊತ್ತು ಇಲ್ಲಿ ಬಂದು ಬವಣೆ ಪಡುವ ಜನರ ಬಗ್ಗೆ ಮರುಕವಿದೆ.
ಟೆನೆರಿಫ಼ ಸೇರಿದಂತೆ ಏಳೂ  ಕೆನೆರಿಯ ದ್ವೀಪಗಳು ಪ್ರಕೃತಿಯ ಆಟದ, ವಿಕೋಪದ ಪರಿಣಾಮವಾಗಿ ನಿರ್ಮಾಣವಾಗಿವೆ. ಪ್ರಕೃತಿಗೆ ಯಾರೂ ಸಾಟಿಯಲ್ಲ. ಆದರೆ ಮಾನವನ ವಿಶೇಷತೆ, ಕಲ್ಲನ್ನು ಹೂವಿನಂತೆ ಅರಳಿಸಿ ಬದುಕು ಮಾಡಿಕೊಂಡಿರುವುದನ್ನು ಇಲ್ಲಿ ಡಣಾಡಾಳಾಗಿ ಕಾಣಬಹುದು.