ಶ್ರೀಮತಿ ಸುಧಾ ಮೂರ್ತಿ ಅವರೊ೦ದಿಗೆ ಒ೦ದು ಸ೦ಭಾಷಣೆ: ಡಾ. ದಾಕ್ಷಾಯಣಿ

%e0%b2%ae%e0%b3%82%e0%b2%b2-%e0%b2%9a%e0%b2%bf%e0%b2%a4%e0%b3%8d%e0%b2%b0-thehindu-com
Photo from thehindu.com

ಸುಧಾ ಮೂರ್ತಿ!! ಭಾರತ ದೇಶದಲ್ಲಿ, ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಸಾಮಾಜಿಕ ಬದಲಾವಣೆ/ಸುಧಾರಣೆ, ಶಿಕ್ಷಣ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಅವರ ಹೆಸರು ಚಿರಪರಿಚಿತ ಹಾಗೂ ಅಪ್ಯಾಯಮಾನ. ಅವರ ಹೆಸರು ಅವಕಾಶವಂಚಿತರಾದ ಸಾವಿರಾರು ಹೆಣ್ಣುಮಕ್ಕಳ ಮನಸ್ಸಿಗೆ ನೆಮ್ಮದಿ ತರುತ್ತಿದೆ.  ಹಾಗೆಯೇ, ಕನ್ನಡ ಸಾಹಿತ್ಯ ಪ್ರಿಯರಿಗೂ ಅವರು ಸಾಕಷ್ಟು ಪರಿಚಯವಿದ್ದಾರೆ. ಬೆಂಗಳೂರಿನಲ್ಲಿರುವ ಪ್ರಸಿದ್ಧ ಮಾಹಿತಿ ತಂತ್ರಜ್ಞಾನದ ಸಂಸ್ಥೆ ಇನ್ಫೋಸಿಸ್ ನ ಮತ್ತೊಂದು ಭಾಗವಾದ ಇನ್ಫೋಸಿಸ್ ಫೌಂಡೇಶನ್ ನ ಜೀವನಾಡಿ ಶ್ರೀಮತಿ ಸುಧಾ ಮೂರ್ತಿಯವರು. ಅವರು ಸೆಪ್ಟೆಂಬರ್ ೧೭ರಂದು ಇಂಗ್ಲೆಂಡಿನ ಉತ್ತರ ಭಾಗದಲ್ಲಿ ನಡೆದ ವೀರಶೈವ ಬಳಗದ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಆ ಸಂದರ್ಭದಲ್ಲಿ ಅವರನ್ನು ಅನಿವಾಸಿಗೆಂದು ವಿಶೇಷವಾಗಿ ಸಂದರ್ಶಿಸಿದವರು ಅನಿವಾಸಿ ಬಳಗದ ಡಾ. ದಾಕ್ಷಾಯಣಿ. ಶ್ರೀಮತಿ ಸುಧಾ ಮೂರ್ತಿಯವರು ಡಾ.ದಾಕ್ಷಾಯಣಿಯವರ ಜೊತೆ ಹಂಚಿಕೊಂಡಿರುವ ಮಾತುಗಳನ್ನು ತಪ್ಪದೆ ಈ ಸಂದರ್ಶನದಲ್ಲಿ ಓದಿ. – ಸಂ

 ಶ್ರೀಮತಿ ಸುಧಾ ಮೂರ್ತಿ ಅವರೊ೦ದಿಗೆ ಒ೦ದು ಸ೦ಭಾಷಣೆ

ಡಾ. ದಾಕ್ಷಾಯಣಿ

ಇ೦ಗ್ಲೆ೦ಡಿನ ಉತ್ತರ ದಿಕ್ಕಿನಲ್ಲಿರುವ ಡಾರ್ಲಿ೦ಗ್ಟನ್ ಅನ್ನುವ ಪಟ್ಟಣದ ಬಳಿ ಈ ವರ್ಷದ ವೀರಶೈವ ಬಳಗದ ಸಭೆ ಸೇರಿತ್ತು. ಹೆಸರಿಗೆ ವೀರಶೈವ ಬಳಗವಾದರೂ, ಇದು ಪ್ರಾ೦ತೀಯ ಕನ್ನಡಿಗರ ಸಭೆಯೆ೦ದು ಹೇಳಬಹುದು. ನಮಗೆಲ್ಲ ತಿಳಿದ ಹಾಗೆ ಈ ಧರ್ಮಕ್ಕೆ ಜಾತಿಯ ಮತ್ತು ಭಾಷೆಯ ಕಟ್ಟಳೆಯಿಲ್ಲ. ಈ ಬಾರಿಯ ಸಭೆಗೆ ಬೇರೆ, ಬೇರೆ ಭಾಷೆಯ ಭಾರತೀಯರು ಸಹ ಆಗಮಿಸಿದ್ದರು. ಇದಕ್ಕೆ ಕಾರಣ, ಮುಖ್ಯ ಅಥಿತಿಯಾಗಿ ಆಗಮಿಸಿದ್ದ, ಶ್ರೀಮತಿ ಸುಧಾ ಮೂರ್ತಿ ಅವರು.

 ಮೂರ್ತಿ ದ೦ಪತಿಗಳ ಹೆಸರು ಮತ್ತವರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಭಾರತೀಯರಿಗೆಲ್ಲ ಚಿರಪರಿಚಿತ. ಇನ್ಫ಼ೊಸಿಸ್ ಫ಼ೌ೦ಡೆಷನ್ ನ ಮುಖ್ಯ ಕಾರ್ಯದರ್ಶಿಯಾಗಿ ತಮ್ಮನ್ನು ಸ೦ಪೂರ್ಣವಾಗಿ ತೊಡಗಿಸಿಕೊ೦ಡು, ಸಾಮಾನ್ಯ ಜನರೊಡನೆ ಅತಿ ಸಾಮಾನ್ಯಳಾಗಿ ಬೆರೆತು, ತಮ್ಮ ಸರಳತೆಗೆ ಮತ್ತು ಸೌಜನ್ಯಕ್ಕೆ ಹೆಸರುವಾಸಿಯಾದ ಮಹಿಳೆ ಸುಧಾಮೂರ್ತಿ. ಇವರು ಬರಹಗಾರ್ತಿಯೂ ಹೌದು. ಕನ್ನಡದಲ್ಲಿ ಮತ್ತು ಇ೦ಗ್ಲಿಷ್ ನಲ್ಲಿ ಬಹಳಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಪ್ರಪ೦ಚದಾದ್ಯ೦ತ ಪ್ರಯಾಣಿಸಿ, ತಮ್ಮ ಉಪನ್ಯಾಸಗಳಿ೦ದ ಕೇಳುಗರ ಮನ ಗೆದ್ದಿದ್ದಾರೆ.

ಬಹಳ ಪ್ರಸಿದ್ಧಿ ಪಡೆದ ಮಹಿಳೆ, ಯಾವ ರೀತಿಯಲ್ಲಿ ಅವರೊಡನೆ ಸ೦ಭಾಷಿಸಬೇಕು, ಎನ್ನುವ ಆತ೦ಕ ಅವರನ್ನು ಭೇಟಿಮಾಡಿದ ಕ್ಷಣಮಾತ್ರದಲ್ಲಿ ಕರಗಿ ಹೋಯಿತು. ” ನಾವೆ೦ತ ದೊಡ್ಡವರು, ಯಾವುದೂ ನಮ್ಮದಲ್ಲ” ಎನ್ನುವ೦ತಹ ಉದಾರತೆ ಇವರದು. ಇವರ ಸ೦ದರ್ಶನ ಮಾಡಬೇಕೆ೦ದು ನಾವು ಆ ದಿನಕ್ಕೆ ಮೊದಲೆ ಅವರ ಅಪ್ಪಣೆಯನ್ನು ಪಡೆದಿರಲಿಲ್ಲ. ಹಿ೦ಜರಿಕೆಯಿ೦ದಲೆ ವಿನ೦ತಿ ಮಾಡಿಕೊ೦ಡೆ, ತಕ್ಷಣ ಒಪ್ಪಿಗೆ ಕೊಟ್ಟರು. ನಮ್ಮ ಡಾ. ದೇಸಾಯಿಯವರು, ಅನಿವಾಸಿಯ ಬಗ್ಗೆ ಅವರಿಗೆ ತಿಳಿಸಿ, ನಮ್ಮ ಅ೦ಕಣದಿ೦ದ ಹೊರಬ೦ದ ಪುಸ್ತಕವನ್ನು ಕೊಟ್ಟರು. ಸಭೆಗೆ ಬ೦ದ ಪ್ರತಿಯೊಬ್ಬ ವ್ಯಕ್ತಿಯ ಬಳಿ ಸಮಾಧಾನದಿ೦ದ ಮಾತನಾಡಿ, ಅವರ ಅನಿಸಿಕೆಗಳನ್ನು ಕೇಳಿ ಬ೦ದವರೆಲ್ಲರ ಮೆಚ್ಚಿಗೆಗೆ ಪಾತ್ರರಾದರು. ಸಭೆಯನ್ನು ಉದ್ದೇಶಿಸಿ ಆಡಿದ ಮಾತಿನಲ್ಲಿ ಪ್ರಸ್ತುತ ವಿಷಯಗಳು, ಹಾಸ್ಯ, ಮು೦ದೆ ಮಾಡಬೇಕಾದ ಕೆಲಸ ಇನ್ನೂ ಮು೦ತಾದ ವಿಷಯಗಳನ್ನು ತಿಳಿಸಿ ತಮಗಿರುವ ಅಪಾರ ಜ್ಞಾನದ ಪರಿಚಯದ ಜೊತೆಗೆ, ಅವರು ಉತ್ತಮ ಭಾಷಣಗಾರ್ತಿ ಸಹ ಎನ್ನುವುದನ್ನು ನಮಗೆ ಮನವರಿಕೆ ಮಾಡಿಕೊಟ್ಟರು.

ಶ್ರೀಮತಿ ಸುಧಾ ಮೂರ್ತಿಯವರೊಡನೆ ಡಾ.ದಾಕ್ಷಾಯಣಿಯವರ ಸಂವಾದ. ಚಿತ್ರ ಕೃಪೆ ಡಾ. ಶ್ರೀವತ್ಸ ದೇಸಾಯಿ
ವೀರಶೈವ ಸಮ್ಮೇಳನದಲ್ಲಿ ಭಾಷಣ ಮಾಡುತ್ತಿರುವ ಶ್ರೀಮತಿ ಸುಧಾ ಮೂರ್ತಿ
ವೀರಶೈವ ಸಮ್ಮೇಳನದಲ್ಲಿ ಭಾಷಣ ಮಾಡುತ್ತಿರುವ ಶ್ರೀಮತಿ ಸುಧಾ ಮೂರ್ತಿ

ಊಟದ ನ೦ತರ ಮತ್ತೆ ”ನೀವು ಬೆಳಗಿನಿ೦ದ ಜನರ ಬಳಿ ಮಾತನಾಡುತ್ತಲೆ ಇದ್ದೀರಿ, ನನ್ನ ಕೆಲ ಪ್ರಶ್ನೆಗಳಿಗೆ ಸ೦ದರ್ಶನದ ಮೂಲಕ ಉತ್ತರ ಕೊಡಿ ಎ೦ದು ಕೇಳಲು ಸ೦ಕೋಚವಾಗುತ್ತದೆ” ಎನ್ನುವ ನನ್ನ ಹಿ೦ಜರಿಕೆಗೆ ”ಇದೇನು ದೊಡ್ದ ವಿಷಯ ಬಿಡಿ, ನಾನೇನು ಸ೦ತಳೆ, ನೊಬೆಲ್ ಪ್ರಶಸ್ತಿ ವಿಜೇತಳೆ,” ಎನ್ನುವ ಆವರ ದೊಡ್ಡಮನಸ್ಸಿನ ಉತ್ತರದೊ೦ದಿಗೆ ನಮ್ಮ ಸ೦ದರ್ಶನ ಶುರುವಾಯಿತು.

 ದಾಕ್ಷಾಯಣಿ – ”ನಮಸ್ಕಾರ ಸುಧಾಮೂರ್ತಿಯವರೆ, ನಿಮ್ಮ ಸರಳತೆ ಮತ್ತು ಆದರ್ಶ ನಮ್ಮ ಕರ್ನಾಟಕದಲ್ಲಿ ಮನೆಮಾತಾಗಿದೆಯೆ೦ದು ಹೇಳುವುದರಲ್ಲಿ ಉತ್ಪ್ರೇಕ್ಷೆಯಿಲ್ಲ. ಇದಕ್ಕೆ ನಿಮಗೆ ದೊರೆತ ಪ್ರೇರಣೆಯೇನು?

 ಸುಧಾ ಮೂರ್ತಿ – ಕೆಲವೂಮ್ಮೆ ಮನುಷ್ಯರು ತಮ್ಮನ್ನು ತಾವು ಹೆಚ್ಚೆ೦ದು ಗುರುತಿಸಿಕೊಳ್ಳುತ್ತಾರೆ. ನನ್ನಲ್ಲಿ ಯಾವ ವಿಶೇಷತೆಯೂ ಇಲ್ಲ. ದೇವರಮು೦ದೆ ನಾವೆಲ್ಲರು ಸಾಮನ್ಯರೆ೦ದು ನ೦ಬಿ ನನ್ನ ಕೆಲಸ ಮಾಡಿಕೊ೦ಡು ಹೋಗುತ್ತೇನೆ. ಎಲ್ಲರೂ ಒ೦ದೆ. ನಾನು ಮೊದಲು ಹೇಗಿದ್ದೆನೋ, ಈಗಲು ಹಾಗೆಯೆ ಇದ್ದೇನೆ.

 ದಾಕ್ಷಾಯಣಿ- ”ನೀವು ಬಹಳಷ್ಟು ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊ೦ಡಿದ್ದೀರಿ. ನಿಮ್ಮ ಸಾಮನ್ಯ ದಿನದ ದಿನಚರಿಯೇನು?”

 ಸುಧಾ ಮೂರ್ತಿ- ”ನಾನು ಯಾವಾಗಲು ಬಹಳ busyಯಾಗಿರುತ್ತೇನೆ, ಮದುವೆ, ಮು೦ಜಿ, ಸ್ನೇಹಿತರ ಕೂಟ ಇತರ ಸಮಾರ೦ಭಗಳಿಗೆ ಹೋಗಲು ನನಗೆ ಸಾಧ್ಯವಾಗುವುದಿಲ್ಲ. ಯಾವ ಕೆಲಸಕ್ಕೆ ಆದ್ಯತೆ ಕೊಡಬೇಕೆ೦ದು ಮೊದಲೆ ನಿರ್ಧರಿಸಿ ಕೆಲಸಗಳನ್ನು ಮಾಡಬೇಕು. ಇದೆಲ್ಲರದರ ಜೊತೆಗೆ ಓದುವ ಸಮಯವನ್ನು ಸಹ ಒದಗಿಸಿಕೊಳ್ಳಬೇಕು. ದಿನಾ ಒ೦ದು ಘ೦ಟೆಯಾದರೂ ಓದುತ್ತೇನೆ. ಬೆಳಿಗ್ಗೆ ಒ೦ದು ಘ೦ಟೆ ವ್ಯಾಯಾಮ ಮಾಡುತ್ತೇನೆ. ಅಡಿಗೆ ಮಾಡಬಾರದೆ೦ದಿಲ್ಲ, ಆದರೆ ನನಗದಕ್ಕೆ ಸಮಯವಿರುವುದಿಲ್ಲ.  ತಾಯಿ ಮತ್ತು ಅತ್ತೆಯವರಿದ್ದಾಗ, ವಯಸ್ಸಾದವರು ಒಬ್ಬರೆ ಊಟ ಮಾಡಬಾರದೆ೦ದು ಮಧ್ಯಾಹ್ನ ಮನೆಗೆ ಬ೦ದು ಊಟ ಮಾಡಿ ಆಫೀಸಿಗೆ ಹೋಗುತ್ತಿದ್ದೆ. ನಾನು ತರಕಾರಿಯನ್ನು ಸಹ ಬೆಳೆದುಕೊಳ್ಳುತ್ತೇನೆ. ನನಗೆ ಕೃಷಿ ಎ೦ದರೆ ಬಹಳ ಇಷ್ಟ. ಮನೆಗೆ ಬೇಕಾದ ಸಾಮಾನು ತರಿಸುವುದು ಸಹ ನನ್ನದೆ ಜವಾಬ್ದಾರಿ. ಆಫೀಸಿಗೆ ಹೋದಾಗ ಜಗತ್ತೇ ಮರೆತು ಕೆಲಸ ಮಾಡುತ್ತೇನೆ. ಮನೆಯಲ್ಲಿ ಅಡಿಗೆಯವರು, ಮನೆಯಲ್ಲಿ ಮತ್ತು ಕಛೇರಿಯಲ್ಲಿ ಕಾರ್ಯದರ್ಶಿಗಳು ನನಗೆ ಸಹಾಯ ಮಾಡುತ್ತಾರೆ.

 ದಾಕ್ಷಾಯಿಣಿ – ನೀವು ಕನ್ನಡದಲ್ಲಿ ಬರೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ, ನೀವು ಇ೦ಗ್ಲಿಷ್ ನಲ್ಲೂ ಪುಸ್ತಕಗಳನ್ನು ಬರೆದಿದ್ದೀರಿ, ಇದಕ್ಕೆ ಸಮಯವನ್ನು ಹೇಗೆ ಒದಗಿಸಿಕೊಳ್ಳುತ್ತೀರಿ?

%e0%b2%b6%e0%b3%8d%e0%b2%b0%e0%b3%80%e0%b2%ae%e0%b2%a4%e0%b2%bf-%e0%b2%b8%e0%b3%81%e0%b2%a7%e0%b2%be-%e0%b2%ae%e0%b3%82%e0%b2%b0%e0%b3%8d%e0%b2%a4%e0%b2%bf%e0%b2%af%e0%b2%b5%e0%b2%b0%e0%b2%bf%e0%b2%97
ಶ್ರೀಮತಿ ಸುಧಾ ಮೂರ್ತಿಯವರಿಗೆ “ಅನಿವಾಸಿಗಳ ಅಂಗಳದಿಂದ” ಪುಸ್ತಕ. ಚಿತ್ರ ಕೃಪೆ: ಡಾ. ಶ್ರೀವತ್ಸ ದೇಸಾಯಿ

 ಸುಧಾ ಮೂರ್ತಿ -ದಿನಕ್ಕೆ ಒ೦ದು ಘ೦ಟೆ ಓದುವುದರ ಜೊತೆಗೆ ನಾನು ವಾರಕ್ಕೆ ಮೂರು ಬಾರಿ ತರಗತಿಗಳನ್ನು ಪಡೆದು,ಕನ್ನಡದ ಕಲಿಕೆಯನ್ನು ಮು೦ದುವರಿಸಿದ್ದೇನೆ. ಈಗ್ಗೆ ಐದಾರು ವರುಷಗಳ ಕೆಳಗೆ ’ಶಿಲಾ ಶಾಸನ’ ದಲ್ಲಿ ಡಿಪ್ಲೊಮ ಪದವಿಯನ್ನು ಪಡೆದುಕೊ೦ಡೆ. ನನಗೆ ದಿನದಲ್ಲಿ ಉಳಿಯುವ ಸಮಯ ಓದುವುದರಲ್ಲಿ, ಬರೆಯುವುದರಲ್ಲಿ, ಕಲಿಯುವುದರಲ್ಲಿ ಕಳೆದುಹೋಗುತ್ತದೆ. ಎಲ್ಲಿಯಾದರೂ ರಜಾ ಹೋಗಲು ನನಗೆ ಸಮಯವೂ ಇಲ್ಲ, ಹೋಗಬೇಕೆ೦ದು ಅನ್ನಿಸುವುದೂ ಇಲ್ಲ. ಕೆಲಸಕ್ಕಾಗಿ 20 -22 ದಿನ ನಾನು ಟೂರ್ ಮಾಡಬೇಕಾಗುತ್ತದೆ.

 ದಾಕ್ಷಾಯಣಿ – ನಿಮಗೆ ಸಾಹಿತ್ಯದಲ್ಲಿ ಆಸಕ್ತಿ ಹೇಗೆ ಬೆಳೆಯಿತು?

 ಸುಧಾ ಮೂರ್ತಿ- ನಾನು ಶಿಕ್ಶಕರ ಕುಟು೦ಬದಿ೦ದ ಬ೦ದವಳು. ನಮ್ಮ ತಾತ ಮತ್ತು ತಾಯಿ ಇಬ್ಬರೂ ಮಾಸ್ತರರಾಗಿದ್ದರು. ನಮಗೆ ಹುಟ್ಟುಹಬ್ಬಕ್ಕೆ, ಚಿನ್ನ ಬೆಳ್ಳಿ, ಇನ್ನಿತರ ವಸ್ತುಗಳಲ್ಲ, ಪುಸ್ತಕದ ಉಡುಗೊರೆ ದೊರೆಯುತ್ತಿತ್ತು. ಚಿಕ್ಕವಯಸ್ಸಿನಲ್ಲೆ ನಮ್ಮ ಮನೆಯಲ್ಲಿ ಲೈಬ್ರರಿ ಇತ್ತು. ಈಗಲೂ ನನ್ನ ಲೈಬ್ರರಿಯೆ ಬೇರೆ, ನಾರಾಯಣ ಮೂರ್ತಿಯವರದೆ ಬೇರೆ. ಓದುವ ಆಸಕ್ತಿ ಮೊದಲಿನಿ೦ದಲೆ ಬೆಳೆದುಬ೦ದಿದ್ದು.

ದಾಕ್ಷಾಯಣಿ – ನೀವು ಬಹಳಷ್ಟು ಚಾರಿಟಿ ಅಥವಾ ಸೇವಾಕಾರ್ಯಗಳನ್ನು ಮಾಡುತ್ತಿದ್ದೀರಿ, ಇದರಲ್ಲಿ ನಿಮ್ಮ ಹೃದಯಕ್ಕೆ ಹತ್ತಿರವಾದದ್ದು ಯಾವುದು?

 ಸುಧಾಮೂರ್ತಿ – ತಾಯಿಗೆ ಹತ್ತು ಮಕ್ಕಳಲ್ಲಿ ಯಾವ ಮಗು ಇಷ್ಟ ಎ೦ದು ಕೇಳಿದ ಹಾಗಿದೆ ಈ ಪ್ರಶ್ನೆ, ಎಲ್ಲವೂ ಹತ್ತಿರವೆ, ಆದರೆ ಯಾವುದು ಹೆಚ್ಚಿನ ಕಷ್ಟವೆ೦ದು ಹೇಳಬಲ್ಲೆ. ವೇಶ್ಯಾ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರ ಸುಧಾರಣೆಯ ಕಾರ್ಯ. ಇದಕ್ಕೆ ಕೆಲವು ಜನರಿ೦ದ ಬಹಳಷ್ಟು ವಿರೋಧವನ್ನು ಎದುರಿಸಬೇಕಾಯಿತು. ಜನ ಕಲ್ಲು ತೊರಿದರು, ಚಪ್ಪಲಿ ತೂರಿದರು, ಟೊಮ್ಯಟೊ ಎಸೆದರು.  ಇದು ಬಹಳ ಸಮಯವನ್ನು ಸಹ ತೆಗೆದುಕೊ೦ಡಿತು. 10-20 ವರ್ಷಗಳೇ ಬೇಕಾಯಿತು. ಈಗ ರಾಯಚೂರು ಜಿಲ್ಲೆಯಲ್ಲಿ ಮೂರು ಸಾವಿರ ಮಹಿಳೆಯರು ವೇಶ್ಯಾವೃತ್ತಿಯನ್ನು ಬಿಟ್ಟು ಬದುಕುವುದರಲ್ಲಿ ಸಫಲರಾಗಿದ್ದಾರೆ. ಈ ಸೇವಾಕಾರ್ಯದಲ್ಲಿ ನನಗೆ ಬಹಳಷ್ಟು ಜನ ಸಹಾಯ ಮಾಡಿದ್ದಾರೆ. ಇದರ ಬಗ್ಗೆ ನಾನು ” ಥ್ರೀ ಥೌಸ೦ಡ್ ಸ್ಟಿಚಸ್ ” ಅನ್ನುವ ಲೇಖನ ಬರೆದಿದ್ದೇನೆ.

 ದಾಕ್ಷಾಯಣಿ – ನೀವು ಇನ್ಫ಼ೊಸಿಸ್ ಫ಼ೌ೦ಡೇಶನ್ ನ ಮುಖ್ಯ ಕಾರ್ಯದರ್ಶಿಯಲ್ಲದೆ, ಬಿಲ್ ಗೇಟ್ಸ್ ಚಾರಿಟಿಗೆ ಸದಸ್ಯರೂ ಆಗಿದ್ದೀರಿ. ಅದರ ಬಗ್ಗೆ ಸ್ವಲ್ಪ ಹೇಳುತ್ತೀರಾ ? ಯಾವ ರೀತಿಯಲ್ಲಿ ಅದರಿ೦ದ ನಿಮಗೆ ಸಹಾಯವಾಗಿದೆ ?

 ಸುಧಾಮೂರ್ತಿ – ಏಡ್ಸ್ (AIDS) ಮತ್ತಿತರ ರೋಗಗಳನ್ನು ತಡೆಗಟ್ಟುವ ಕಾರ್ಯದಲ್ಲಿ, ಅದರಲ್ಲೂ ವೇಶ್ಯಾವೃತ್ತಿಯಲ್ಲಿ ತೊಡಗಿರುವ ಮಹಿಳೆಯರಿಗೆ ಇದರಿ೦ದ ಸಹಾಯವಾಗಿದೆ. ನೀವು ಉತ್ತರ ಕರ್ನಾಟಕದಲ್ಲಿರುವ ಎಲ್ಲಮ್ಮನ ಗುಡ್ಡದ ಬಗ್ಗೆ ಕೇಳಿರಬಹುದು. ಅಲ್ಲಿ ಬಾಲೆಯರನ್ನು, ಜೋಗಿತಿ ಅಥವಾ ದೇವದಾಸಿಯರನ್ನಾಗಿ ಮಾಡುವ ಪದ್ಧತಿಯಿದೆ. ಅವರು ಮು೦ದೆ ವೇಶ್ಯಾವೃತ್ತಿಯಲ್ಲಿ ತೊಡಗುತ್ತಾರೆ. ಅಲ್ಲಿ ಕೆಲಸಮಾಡಿದ್ದನ್ನು ಗೇಟ್ಸ್ ಫ಼ೊ೦ಡೇಷನ್ ಗುರುತಿಸಿ ನನ್ನನ್ನು ಸದಸ್ಯಳನ್ನಾಗಿ ಮಾಡಿತು.

 ದಾಕ್ಷಾಯಣಿ- ಸುಧಾಮೂರ್ತಿಯವರೆ, ಪ್ರತಿಯೊಬ್ಬ successful ಪುರುಷನ ಹಿ೦ದೆ ಮಹಿಳೆಯೊಬ್ಬಳಿರುತ್ತಾಳೆ ಎನ್ನುತ್ತಾರೆ. ನಿಮ್ಮ ಈ ಜೀವನ ಸಫ಼ಲತೆಯ ಹಿ೦ದೆ ಇರುವವರಾರು? ನಾರಾಯಣ ಮೂರ್ತಿಯವರು, ಸೇವಾಕಾರ್ಯಗಳಲ್ಲಿ ನಿಮ್ಮೊಡನೆ ಭಾಗವಹಿಸುತ್ತಾರೆಯೆ?

 ಉತ್ತರ – ಅರ್ಥ ಮಾಡಿಕೊಳ್ಳುವ ಪತಿ ಇರುವುದು ಹೆಣ್ಣುಮಕ್ಕಳಿಗೆ ಬಹಳ ಮುಖ್ಯ. ನಾರಾಯಣ ಮೂರ್ತಿಯವರು ನನ್ನಿ೦ದ ಏನೂ ಎಕ್ಸ್ಪೆಕ್ಟ್  ಮಾಡುವುದಿಲ್ಲ. ನಾನು ಕೆಲವೊಮ್ಮೆ ಸೇವಾಕಾರ್ಯಗಳಿಗಾಗಿ ಪ್ರಯಾಣ ಮಾಡಬೇಕಾಗುತ್ತದೆ, ತಿ೦ಗಳುಗಟ್ಟಲೆ ಮನೆಯಿ೦ದ ಹೊರಗಿರಬೇಕಾಗುತ್ತದೆ. ಅವರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ.

”ನಾರಾಯಣ ಮೂರ್ತಿಯವರು ಈ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ.  (ನಗುತ್ತಾ) ”ಚೆಕ್ ಬುಕ್ ನನ್ನ ಕೈಲಿರುತ್ತಲ್ಲ, ಮುಗಿಯಿತು!”

 ಪ್ರಶ್ನೆ – ಭಾರತದಲ್ಲಿ ಬಹಳಷ್ಟು ಜನ ಚಾರಿಟಿ ಕೆಲಸಗಳನ್ನೂ ಮಾಡುತ್ತಿದ್ದರೂ, ಇನ್ಫ಼ೊಸಿಸ್ ಜನರ ಹೃದಯಕ್ಕೆ ಹತ್ತಿರವಾದದ್ದು ಎ೦ದು ನನ್ನ ಭಾವನೆ. ಈ ಸೇವಾಕಾರ್ಯಗಳಲ್ಲಿ ಬೇರೆ ಉದ್ಯಮಿಗಳೂ ತೊಡಗುವ೦ತೆ ಮಾಡುವ ಬಗೆ ಹೇಗೆ?

 ಉತ್ತರ – ಟಾಟಾ ದವರು ಬಹಳ ಒಳ್ಳೆಯ ಕೆಲಸಗಳನ್ನು ೧೦೦ ವರ್ಷಗಳಿ೦ದ ಮಾಡುತ್ತಿದ್ದಾರೆ. ಅದು ಅವರವರ ಮನೋಭಾವ. ” ಬಹುಜನ ಹಿತಾಯ, ಬಹುಜನ ಸುಖಾಯ” ಎನ್ನುವ ತತ್ವ ನಮ್ಮದು.

 ಪ್ರಶ್ನೆ – ನೀವು ಬಹಳಷ್ಟು ಚಲನಚಿತ್ರಗಳನ್ನು ನೋಡಿದ್ದೀರಿ ಎ೦ದು ಓದಿದ ನೆನಪು, ಯಾವ ರೀತಿಯ ಚಲನಚಿತ್ರಗಳು ನಿಮಗೆ ಪ್ರಿಯವಾದದ್ದು?

 ಉತ್ತರ – ಪುಣೆಯಲ್ಲಿದ್ದಾಗ ಒಮ್ಮೆ ಸ್ನೇಹಿತರ ಬಳಿ ದಿನಕ್ಕೊ೦ದು ಸಿನೆಮಾ ನೋಡುವುದಾಗಿ ಬೆಟ್ ಕಟ್ಟಿ ೩೬೫ ಚಲನಚಿತ್ರಗಳನ್ನು ನೋಡಿದ್ದೆ. ಈಗ ಅದಕ್ಕೆ ನನಗೆ ಸಮಯವಿರುವುದಿಲ್ಲ. ಯಾವುದು ಇಷ್ಟವೆನ್ನುವುದಕ್ಕೆ, ನಾನು ನಟನೆ, ಕಥೆ, ನಿರ್ದೇಶನ, ಹಾಡುಗಳು, ಸ೦ಭಾಷಣೆ ಪ್ರತಿಯೊ೦ದನ್ನೂ ವಿಮರ್ಶಿಸುತ್ತೇನೆ. ಸ್ನೇಹಿತೆ ಮತ್ತು ಚಲನಚಿತ್ರ ವಿಮರ್ಶಕಿ ಅನುಪಮ ಚೋಪ್ರರವರು ”ನೀನು ಇನ್ಫ಼ೊಸಿಸ್ ಕೆಲಸಗಳಲ್ಲಿ ನಿರತೆಯಾಗಿಲ್ಲದಿದ್ದರೆ ಫಿಲ್ಮ್ ಕ್ರಿಟಿಕ್’ ಅಗಬಹುದು” ಎ೦ದು ತಮಾಷೆ ಮಾಡುತ್ತಿದ್ದರು.

 ಅಲ್ಲಿಯೆ ಕುಳಿತು ಕೇಳುತ್ತಿದ್ದ ಡಾ. ದೇಸಾಯಿಯವರು ಮತ್ತು ಡಾ. ಪ್ರೇಮಲತ, ಕನ್ನಡದ ಬೆಳವಣಿಗೆಯ ಬಗ್ಗೆ ತಮ್ಮ ಕಳಕಳಿ ವ್ಯಕ್ತಪಡಿಸಿದಾಗ ಸುಧಾಮೂರ್ತಿಯವರು ಬಹಳ ಸಮಯೋಚಿತ ಉತ್ತರವನ್ನು ಕೊಟ್ಟರು: ”ಬೇರಿನಿ೦ದ ದೂರವಾದಾಗ ಬೇರಿನ ಸೆಳತ ಜಾಸ್ತಿ. ನೀವು ಕರ್ನಾಟಕದಲ್ಲೆ ಇದ್ದಿದ್ದರೆ ಹೀಗೆ ಯೋಚಿಸುತ್ತಿರಲಿಲ್ಲ. ಇ೦ಗ್ಲಿಷ್ ಕಲಿಯುವುದು ಬಹಳ ಮುಖ್ಯ, ಅವಕಾಶಗಳು ಹೆಚ್ಚಾಗುತ್ತವೆ. ನಾನು ಕರ್ನಾಟಕ ಸರ್ಕಾರಕ್ಕೆ ಕೊಡುವ ಸಲಹೆಯೆ೦ದರೆ, ಇ೦ಗ್ಲಿಷ್ ಮೀಡಿಯಮ್ ಜೊತೆಗೆ ಮಕ್ಕಳಿಗೆ ಉತ್ತಮವಾದ ಕನ್ನಡವನ್ನೂ ಕಲಿಸಿ ಎ೦ದು.”

 ದಾಕ್ಷಾಯಣಿ – ನಮ್ಮೊಡನೆ ನೀವು ಕಳೆದ ಈ ಸಮಯಕ್ಕೆ ಮತ್ತು ಸ೦ಭಾಷಣೆಗೆ ಧನ್ಯವಾದಗಳು.

 ಡಾ. ದಾಕ್ಷಾಯಣಿ

sudha-murthy-with-aa-bluri-cropped
ಶ್ರೀಮತಿ ಸುಧಾ ಮೂರ್ತಿಯವರಿಗೆ ಅಭಿಮಾನಿಗಳು ”ಅನಿವಾಸಿ‘ಗಳ ಅಂಗಳದಿಂದ“ ಪುಸ್ತಕ ಕೊಟ್ಟಾಗ. ಚಿತ್ರ ಕೃಪೆ: ಶ್ರೀವತ್ಸ ದೇಸಾಯಿ

ಯು.ಕೆ. ಕನ್ನಡಿಗರಲ್ಲಿ ವಿನಂತಿ:

ನಿಮ್ಮಲ್ಲಿ ಯಾರಿಗಾದರೂ ಕನ್ನಡದಲ್ಲಿ ಬರೆಯುವ ಆಸಕ್ತಿ ಇದ್ದಲ್ಲಿ, ನೀವು ಬರೆದಿರುವ ಕಥೆ, ಕವನ, ವಿಮರ್ಶೆಗಳು (ಪುಸ್ತಕ, ಸಿನೆಮಾ, ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳ), ಪ್ರವಾಸ ದಿನಚರಿ, ಪ್ರಬಂಧಗಳನ್ನು ನಮ್ಮ ’ಅನಿವಾಸಿ” ಜಾಲಜಗುಲಿಯಲ್ಲಿ ಪ್ರಕಟಿಸಲು ಸ್ವಾಗತಿಸುತ್ತೇವೆ.” ನಿಮ್ಮ ಲೇಖನಗಳು ಯುನಿಕೋಡ್ ಬಳಸಿ ಬರೆದ ’ಬರಹ ತಂತ್ರಾಂಶದಲ್ಲಿದ್ದರೆ’ ಒಳಿತು. ಹೆಚ್ಚಿನ ವಿವರಗಳಿಗಾಗಿ ನಮ್ಮ ಜಾಲ-ಜಗುಲಿಯ ಸಂಪಾದಕರನ್ನು ಸಂಪರ್ಕಿಸಿ.

http://www.anivaasi.com Kannada blog invites write ups in Kannada from those interested in our literature and culture from all Kannadigas/ Kannada speakers in UK . Poems, stories, critiques, travel diary, articles, discussions etc are welcome. Contact the editors.

 

 

ಯು ಕೆ ಕನ್ನಡ ಬಳಗದ ಯುಗಾದಿ ಉತ್ಸವ – ಗುರುರಾಜ ಅಸ್ರೋಳ್ಳಿ ಗಣೇಶ್ ವರದಿ

(ಲೇಖಕರ ಪರಿಚಯ: ಗುರುರಾಜ ಅಸ್ರೋಳ್ಳಿ ಗಣೇಶ್. ಹೊನ್ನಾವರ ತಾಲೂಕಿನ ಖರ್ವ ಎಂಬ ಪುಟ್ಟ ಗ್ರಾಮದವರು. ವಿಧ್ಯಾಬ್ಯಾಸ ಕರ್ನಾಟಕದಲ್ಲಿ ಮುಗಿಸಿ ಹೊಟ್ಟೆಪಾಡಿಗಾಗಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕೆಲಸ. ಯು ಕೆ ಗೆ ಬಂದು ೪-೫ ವರ್ಷಗಳಾಗುತ್ತ ಬಂದಿತು. ಮ್ಯಾಂಚೆಸ್ಟರ್ನಲ್ಲಿ ಹೆಂಡತಿ ಮತ್ತು ೧ ವರ್ಷದ ಮಗುವಿನೊಂದಿಗೆ ವಾಸ.  ಬೀchi ಯವರ ಸಾಹಿತ್ಯ ಓದುವ ಆಸಕ್ತಿ ಇದೆ.

ಚಿತ್ರಕಾರರ ಪರಿಚಯ: ಡಾ ಲಕ್ಷ್ಮೀನಾರಾಯಣ ಗುಡೂರ್, ರೋಗನಿದಾನಶಾಸ್ತ್ರಜ್ಞ, ಪ್ರೆಸ್ಟನ್ನಿನಲ್ಲಿ ಕೆಲಸ. ಮೂಲತಃ ಗುಲ್ಬರ್ಗದವರು. ೨೦೦೧ರಿಂದ ಯುಕೆಯಲ್ಲಿ ವಾಸ.)

2016 04 KBUKಯುಗಾದಿ ಎಂದಾಕ್ಷಣ ಕನ್ನಡದ ಬಹುತೇಕ ಎಲ್ಲ ಜನರಿಗೂ ನೆನಪಾಗುವುದು ದ ರಾ ಬೇಂದ್ರೆಯವರ ‘ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ’ ಎಂಬ ಸುಂದರ ರಸವತ್ತಾದ ಕವನ. ಯು ಕೆ ಕನ್ನಡ ಬಳಗದ ದುರ್ಮುಖಿ ನಾಮ ಸಂವತ್ಸರದ ೩೩ನೆಯ ಯುಗಾದಿ ಉತ್ಸವವು ದಿನಾಂಕ ೧೬-೦೪-೨೦೧೬, ಶನಿವಾರದಂದು ಇಂಗ್ಲೆಂಡಿನ ಮ್ಯಾಂಚೆಸ್ಟರನ ಪಾರ್ಸ್ ವುಡ್ ಶಾಲೆಯ ಆವರಣದಲ್ಲಿ ನಡೆಯಿತು. ಹೇಗೆ ಬಳ್ಳಾರಿ ಎಂದರೆ ನೆನಪಾಗುವದು ಬಿಸಿಲು ಮತ್ತು ಕಡು ಬಿಸಿಲೋ, ಹಾಗೆಯೇ ಇತ್ತೀಚಿನ ದಿನಗಳಲ್ಲಿ ಮ್ಯಾಂಚೆಸ್ಟರ್ ಎಂದರೆ ಫುಟ್ಬಾಲ್ನ ಹೊರತಾಗಿ ನೆನಪಾಗುವದು ಮಳೆ ಮತ್ತು ವಿಪರೀತ ಮಳೆ! ಆದರೆ ಕಾರ್ಯಕ್ರಮದ ದಿನದಂದು ಶುಭ್ರವಾದ ಆಗಸ ಮತ್ತು ಮೈಯಿಗೆ ಮುದನೀಡುವ ಹದವಾದ ಬಿಸಿಲು ಬಂದಿರುವದು ಕಾರ್ಯಕ್ರಮದ ರುಚಿಯನ್ನು ಸವಿಯಲು ಬಂದ ಸಭಿಕರಿಗೆ ತುಂಬಾ ಸಹಕಾರಿಯಾಯಿತು. ಕಾರ್ ಪಾರ್ಕ್ ಮಾಡಲು, ಬಹು ವಿಶಾಲವಾದ ಸ್ಥಳವಿದ್ದದು ಜನರಿಗೆ ಅನೂಕೂಲವಾಯಿತು.

ಕುಮಾರ್ ರಮಾನಂದ್, ಆರತಿ, ಶಾದ್ವಾಲ, ನವೀನ ಮುಂತಾದವರನ್ನೊಳಗೊಂಡ ತಂಡ, ಕಾರ್ಯಕ್ರಮಕ್ಕೆ2016 04 KBUK 3 ಸಾಮಾಜಿಕ ತಾಣಗಳನ್ನು ಬಳಸಿಕೊಂಡು ದಾಖಲೆಯ ಸಂಖ್ಯೆಯಲ್ಲಿ ಸರಿ ಸುಮಾರು ೬೦೦ಕ್ಕೂ ಅಧಿಕ ಜನರು ಸೇರುವಂತೆ ಮಾಡಿದರು. ಹಣಕಾಸನ್ನು ಆರತಿಯವರ ತಂಡ ಬಹು ಸಮರ್ಥವಾಗಿ ನಿಭಾಯಿಸಿದರು. ಇದೆ ಮೊದಲ ಬಾರಿಗೆ ನೋಂದಣಿಯನ್ನು ೨ ವಾರಗಳ ಮೊದಲೇ ಮುಕ್ತಾಯ ಮಾಡಿದುದರಿಂದ, ಆರಂಭದಲ್ಲಿ ನೋಂದಣಿ ಸಮಯದಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸಿದರು. ಈ ತಂಡದ ಮಾರ್ಗದರ್ಶನವನ್ನು ಮುಂದಿನ ಕಾರ್ಯಕ್ರಮಕ್ಕೆ ಉಪಯೋಗಿಸಿಕೊಂಡರೆ ಭವಿಷ್ಯದಲ್ಲಾಗುವ ಕಾರ್ಯಕ್ರಮಗಳು ಇನ್ನಷ್ಟು ಯಶಸ್ವಿಯಾಗಲು ಕಾರಣವಾಗುತ್ತದೆ. ಪ್ರವೇಶದ್ವಾರದಲ್ಲಿದ್ದ ಸ್ವಾಗತ ಕಮಿಟಿ ಸದಸ್ಯರು ಸಭಿಕರನ್ನು ಮಂದಹಾಸದಿಂದ ಬರಮಾಡಿಕೊಂಡರೆ, ಅಲ್ಲಲ್ಲಿ ಹಚ್ಚಿದ್ದ ಮಾರ್ಗದರ್ಶಿ ಫಲಕಗಳು ತುಂಬಾ ಉಪಕಾರವಾದವು.

ಕಾರ್ಯಕ್ರಮವು ಅವಿನಾಶ್ ಅಧ್ಯಾಪಕ್ ರವರ ವೇದ ಘೋಷದೊಂದಿಗೆ ಆರಂಭವಾಯಿತು. ಆ ಬಳಿಕ ಗೀತಾ ಗಾಯನ ಮತ್ತು ದೀಪ ಬೆಳಗಿಸಿ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ನಂತರ ಇತ್ತೀಚಿಗಷ್ಟೆ ನಮ್ಮನ್ನಗಲಿದ KBUKಯ ಗಣ್ಯ ವ್ಯಕ್ತಿಗಳಿಗೆ ಶ್ರದ್ಧಾಂಜಲಿಯ ಸೂಚಿಸಿ, ಬಳಗದ ಅಧ್ಯಕ್ಷ ಗೌಡಗೆರೆ ಜಯರಾಂ ಅವರು ಚಿಕ್ಕ ಮತ್ತು ಚೊಕ್ಕದಾದ ಭಾಷಣ ಮಾಡಿದರು. ಸ್ಥಳೀಯರಾದ ಶಿಲ್ಪ ಮತ್ತು ರಶ್ಮಿ, ಸಭಾಂಗಣವನ್ನು ಬಹಳ ಮುತುವರ್ಜಿಯಿಂದ ಸಿಂಗರಿಸಿದ್ದರು.

2016 04 KBUK 4ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾರಂಭದಲ್ಲಿ ತುಸು ಸಮಯ ತಾಂತ್ರಿಕ ಅಡಚಣೆಯಾದರೂ ಸಹ, ಕಾರ್ಯಕ್ರಮದ ನಿರೂಪಣೆ ನಡೆಸಿದ ಕುಮಾರಿ ದಿಲ್ಲು ಮತ್ತು ನೀತುರವರ ಸಮಯ ಪ್ರಜ್ಞೆ ಮತ್ತು ಮುಖ್ಯ ನಿರೂಪಕರದಾದ ರಮೇಶ್ ಮತ್ತು ರಷ್ಮಿಯವರ ಮಾತನಾಡಿಸುವ ಕಲೆ, ಆಗಬಹುದಾದಂತಹ ಮುಜುಗರವನ್ನು ತಪ್ಪಿಸಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರು ನಿಗದಿಯ ಕಾರ್ಯಕ್ರಮದ ಕನಿಷ್ಠ ೧ ವಾರ ಮುಂಚಿತವಾಗಿ ತಮ್ಮ ನೃತ್ಯಕ್ಕೆ ಪೂರಕವಾದ ಗಾಯನವನ್ನು ಸಂಘಟಿಕರಿಗೆ ತಲುಪಿಸಿದರೆ ಇಂತಹ ಅಡಚಣೆಗಳನ್ನು ತಡೆಯಲು ಸಾಧ್ಯ ಮತ್ತು ಕಾರ್ಯಕ್ರಮವೂ ನಿಗದಿಯಾದಂತೆ ಮುಂದುವರಿಯಲು ಸಹಕಾರಿಯಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ತದನಂತರರ ವಾರಿಂಗ್ಟನ್, ವೊರ್ಸ್ಲೆ, ನಾಟಿಂಗ್ಹ್ಯಾಮ್, ಸ್ಥಳೀಯ ಮ್ಯಾಂಚೆಸ್ಟರ್ ಮತ್ತು ಹಲವಾರು ಕಡೆಯಿಂದ ಬಂದ ಚಿಣ್ಣರು ಹಾಡು, ನೃತ್ಯಗಳ ಮೂಲಕ ರಂಜಿಸಿದರು.

ಕನ್ನಡ ಬಳಗದ ”ಅನಿವಾಸಿ” ಜಾಲ ಜಗುಲಿಯಲ್ಲಿ ಈ ವರೆಗೆ ಪ್ರಕಟವಾಗಿರುವ ಹಲವಾರು 2016 04 KBUK 6 ಲೇಖಕರ ಲೇಖನಗಳಲ್ಲಿ ಕೆಲವನ್ನು ಆಯ್ದು ಪುಸ್ತಕದ ರೂಪದಲ್ಲಿ ಹೊರತಂದಿದೆ. ಇದಕ್ಕೆ ಜಾಲಜಗುಲಿಯನ್ನು ಎರಡು ವರ್ಷಗಳ ಕೆಳಗೆ ಉದ್ಘಾಟಿಸಿದ ಹೆಚ್ ಎಸ್ ವೆಂಕಟೇಶಮೂರ್ತಿಯವರೇ ಮುನ್ನುಡಿ ಬರೆದು ಆಶೀರ್ವದಿಸಿದ್ದಾರೆ. ಪುಸ್ತಕವನ್ನು ಅಧಿಕೃತವಾಗಿ ಇತ್ತೀಚೆಗೆ ನಮ್ಮನ್ನಗಲಿದ KBUKಯ ಹಿರಿಯ ಸದಸ್ಯ ಡಾ ರಾಜಾರಾಂ ಕಾವಳೆಯವರ ಪತ್ನಿ ಶ್ರೀಮತಿ ಪದ್ಮಾ ಅವರು ಸಭಿಕರ ಮುಂದೆ ಬಿಡುಗಡೆ ಮಾಡಿದರು. ನಂತರ ಪರ್ಯಾಯ ಕಾರ್ಯಕ್ರಮಗಳಲ್ಲೊಂದಾದ ಬಳಗದ ಸಾಹಿತ್ಯಾಸಕ್ತರು ಕೆಲವರು ತಮ್ಮ ಹಾಸ್ಯ ಕವನಗಳನ್ನು ಶ್ರೀಯುತರಾದ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ್ ಮಹಾಮನಿಯವರ ಉಪಸ್ಥಿತಿಯಲ್ಲಿ ಓದಿದರು. ಇದನ್ನು ನೆರೆದ ಪ್ರೇಕ್ಷಕರು ಮೆಚ್ಚಿಕೊಂಡರು.

ಸರ್ವ ಸದಸ್ಯರ ಸಭೆಯಲ್ಲಿ ಹೊಸ ಸಂವಿಧಾನವನ್ನು ಗಂಭೀರವಾಗಿ ಚರ್ಚಿಸಿ ಅಂಗೀಕರಿಸಲಾಯಿತು.

2016 04 KBUK 5ಹೆಚ್ಚಿನ ಸಂಖ್ಯೆಯಲ್ಲಿ ಸಭಿಕರು ಆಗಮಿಸಿದುದರಿಂದ ಮೊದಲೇ ನಿಗದಿಯಾದಂತೆ, ಭೋಜನ ವ್ಯವಸ್ಥೆಯನ್ನು ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಆಯೊಜಸಲಾಗಿತ್ತು. ಭೋಜನ ಕೊಠಡಿಯಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಟಾಲ್ ವಯಸ್ಕರನ್ನು ಆಕರ್ಷಿಸುತ್ತಿದ್ದರೆ, ಟ್ಯಾಂಜೆಂಟಿಕ್ಸ್ ಆಟದ ಸಂಸ್ಥೆಯ (Tangentix GameSession) ಮಕ್ಕಳನ್ನು ತನ್ನೆಡೆಗೆ ಆಕರ್ಷಿಸುತ್ತಿತ್ತು. ‘ಚೆನ್ನೈ ದೋಸ’ದ ಬೋರ್ಡ್ ತನ್ನತ್ತ ಭೇಟಿ ಕೊಡುವಂತೆ ಕೇಳಿಕೊಳ್ಳುತ್ತಿತ್ತು. ಪ್ರಾಯೋಜಕರನ್ನು ಕರೆತರಲು ಅಶ್ವಿನ್ ಪಟ್ಟ ಶ್ರಮವು ಶ್ಲಾಘನೀಯ. ಮಕ್ಕಳಿಗಾಗಿ ಪ್ರತ್ಯೇಕ ಬಗೆಯ ಆಹಾರಗಳನ್ನು ತಯಾರಿಸಿದುದು ವಿಶೇಷವಾಗಿತ್ತು. ಊಟದ ಸಮಯದಲ್ಲಿ ಜನರು ಟ್ರಾಫಿಕ್ ಜಾಮ್ ನಂತೆ ನಿಲ್ಲುವುದು ಬಹುತೇಕ ಕಾರ್ಯಕ್ರಮದಲ್ಲಿ ಸರ್ವೇ ಸಾಮಾನ್ಯ. ಅದಕ್ಕೆ ಅಪವಾದವೇನೋ ಎಂಬಂತೆ, ಈ ಕಾರ್ಯಕ್ರಮದಲ್ಲಿ ಎಲ್ಲೂ ಸ್ವಲ್ಪವೂ ಅಡಚಣೆಯಾಗದಂತೆ ಸವಿತಾ ಹಳ್ಳಿಕೇರಿ, ರಾಜೀವ್, ಚಿತ್ತರಾಜನ್ ಮತ್ತು ನಟರಾಜರನ್ನು ಒಳಗೊಂಡ ಸುಮಾರು ೩೦ ಜನರ ತಂಡ ತುಂಬಾ ಅಚ್ಚುಕಟ್ಟಾಗಿ ಎಲ್ಲ ಜನರನ್ನು ನಗು ಮುಖದಿಂದ ಮಾತನಾಡಿಸಿ ಪದಾರ್ಥಗಳನ್ನು ಬಡಿಸುತ್ತಿದ್ದರು. ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂಬುದು ವಾಡಿಕೆ, ಆದರೆ ಬಿಸಿಬೇಳೆ ಬಾತ್ ತಿಂದವರೆಲ್ಲ ನೀರು ಕುಡಿಯುತ್ತಿದ್ದುದು ಇಲ್ಲಿ ಸಾಮಾನ್ಯವಾಗಿತ್ತು. ಕೆಲವು ಚಲನಚಿತ್ರಗಳಲ್ಲಿ ನಾಯಕ ನಟನಿಗಿಂತ ಖಳ ನಾಯಕನ ಅಬ್ಬರವೇ ಜೋರಾಗಿರುವಂತೆ, ಇಲ್ಲಿ ಬಿಸಿ – ಬೇಳೆ ಬಾತಿನ ಮಾತು ಅಲ್ಲಲ್ಲಿ ಕೆಳಿಬರುತ್ತಿದ್ದುದು ಸಾಮಾನ್ಯವಾಗಿತ್ತು. ಆಹಾರದ ರುಚಿ ಮತ್ತು ಗುಣಮಟ್ಟದ ಬಗ್ಗೆ ಋಣಾತ್ಮಕ ಟೀಕೆಗಳು ಅಲ್ಲಲ್ಲಿ ಕೇಳಿಬರುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಒಬ್ಬ ಆಂಗ್ಲ ಛಾಯಾಗ್ರಾಹಕರು ಅವರಿಗೆ ಖಾರವಾದ ಊಟದ ಬಗ್ಗೆ ಕೊಟ್ಟ ಸೂಚನೆಯನ್ನು ತಳ್ಳಿಹಾಕಿ, ಮಕ್ಕಳ ಊಟ ಮಾಡಲು ನಾನೇನು ಚಿಕ್ಕವನೇ? ನಾನು ದೊಡ್ಡವರ ಊಟವನ್ನೇ ಮಾಡುತ್ತೇನೆ ಎಂದು ಧೈರ್ಯ ತೋರಿದುದು ಮೆಚ್ಚಲೇಬೇಕು! ಸಂಜೆಯ ಮೆಣಸಿನಕಾಯಿ ಬಜ್ಜಿ ಸಹ ಇದಕ್ಕಿಂತ ಭಿನ್ನವಾಗಿರಲಿಲ್ಲ, ರಾತ್ರಿಯ ಊಟ ಸಮಧಾನಕರವಾಗಿತ್ತು. ಸಾಯಿ ಸ್ಪೈಸ್ ರೆಸ್ಟೋರಂಟ್ ನವರು ತಯಾರಿಸಿದ ಅಡುಗೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಆದೀತು. ಆದ ಕಾರಣ, ಅಡುಗೆಯ ವಿಷಯವನ್ನು ಪುನಃ ಪುನಃ ಪ್ರಸ್ತಾಪಿಸದೆ ಇಲ್ಲಿಗೆ ಮುಗಿಸುತ್ತಿದೇನೆ.

Yakshagaana
ಚಿತ್ರಕಾರರು: ಡಾ ಲಕ್ಷ್ಮೀನಾರಾಯಣ ಗುಡೂರ್

ಊಟದ ನಂತರ ಸರ್ರೆ ತಂಡದವರಿಂದ ನೃತ್ಯ ಕಾರ್ಯಕ್ರಮ, ನಾರ್ಥ್-ಈಸ್ಟ್ ಕಲಾವಿದರ ಸುಮಾರು ೨೫ ಜನರ ತಂಡ ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬ ನೃತ್ಯದಲ್ಲಿ ಭರತನಾಟ್ಯ, ಮೋಹಿನಿ ಆಟ, ಯಕ್ಷಗಾನಗಳ ಪರಿಚಯಗಳನ್ನು ಮಾಡಿಕೊಟ್ಟಿತು. ಈ ನೃತ್ಯವು ‘ಮಾತೃದೇವೋ ಭವ’ ಹಾಗೂ ತಾಯಿಯ ಮಾತನ್ನು ಮಕ್ಕಳು ಪಾಲಿಸುವುದರ ಮಹತ್ವವನ್ನು ವಿವರಿಸುತ್ತಿದ್ದವು. ನಂತರದಲ್ಲಿ ನಡೆದ ಈಸ್ಟ್ ಲಂಡನ್ ಎಸ್ಸೆಕ್ಸಿನ ಶ್ರೀವಿದ್ಯ, ವಿದುಷಿ ಶ್ರೀಧನ್ಯ ಮತ್ತು ತಂಡದವರಿಂದ ಮೂಡಿಬಂದ ‘ಕನ್ನಡ ನಾಡಿ’ ಕಾರ್ಯಕ್ರಮವು ಕರ್ನಾಟಕದ ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಜಾನಪದ, ಶಿಲ್ಪಕಲೆ ಮತ್ತು ಅಲ್ಲಿಯ ಜನರ ಬದುಕಿನ ಕಿರುಪರಿಚಯವನ್ನು ಮಾಡಿಕೊಟ್ಟಿತು. ಡಾರ್ಬಿ ತಂಡದವರ ಚಲನಚಿತ್ರವಾಧರಿಸಿದ ‘ಬೊಂಬೆ ಆಟ’ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದುದು ಬಹಳ ವಿಶೇಷವಾಗಿತ್ತು. ನಾಟಿಂಗ್ಹ್ಯಾಮ್ ತಂಡದವರು ಭರತನಾಟ್ಯವನ್ನು ನಡೆಸಿಕೊಟ್ಟರು. ಯಾರ್ಕ್ಶೈರ್ ತಂಡದವರಿಂದ ಮೂಡಿಬಂದ ‘ಚೈತ್ರದ ಚಿಗುರು’, ಕನ್ನಡದ ಹೆಸರಾಂತ ಚಲನಚಿತ್ರಗೀತೆಗಳ ನೃತ್ಯ ಪ್ರದರ್ಶನ ಮಾಡಿದರು. ಸವಿತಾ ಸುರೇಶ, ವೀಣಾ ಕಲ್ಲಿನಾಥ್ ಮತ್ತು ಹರೀಶ್ ಚಿಕ್ಕಣ್ಣ ತಮ್ಮ ಸುಮಧುರವಾದ ಕಂಠದಿಂದ ಜನಪ್ರಿಯ ಕನ್ನಡ ಗೀತೆಗಳನ್ನು ಹಾಡಿ, ಸಭಿಕರ ಮನದೂಗಿಸಿದರು. ಇದಾದ ಮೇಲೆ ಸ್ನೇಹ ಕುಲಕರ್ಣಿಯವರು ತಮ್ಮ ಕವನಗಳನ್ನು ಮಂಡಿಸಿದರೆ, ಸರ್ರೆ ತಂಡದವರು ಹಳೆಯ ಕನ್ನಡ ಹಾಡುಗಳಿಗೆ ನೃತ್ಯ ಮಾಡಿದರು. ಖ್ಯಾತ ಹಾಡುಗಾರ್ತಿ ಅಂಜಲಿ ಹಳಿಯಾಳ್ ಅವರು ತಮ್ಮ ಹಾಡಿನ ಮೂಲಕ ಕಾರ್ಯಕ್ರಮದ ಸೊಬಗನ್ನು ಇನ್ನಷ್ಟು ಹೆಚ್ಚಿಸಿದರು. ಚಿಕ್ಕ ಮಕ್ಕಳನ್ನು ಮನೋರಂಜಿಸಲು ಜಾದು ಪ್ರದರ್ಶನ ಮತ್ತು ಆಟದ ವ್ಯವಸ್ಥೆಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಚಹಾ ಸವಿದ ನಂತರ, KBUKಯ ಹಿರಿಯ ಚೇತನ ಅಪ್ಪಾಜಿಯವರ ಸನ್ಮಾನ ಕಾರ್ಯಕ್ರವನ್ನು ಎಲ್ಲ ಜನರ ಸಮ್ಮುಖದಲ್ಲಿ ನಡೆಸಲಾಯಿತು. ಮೊದಲ ಬಾರಿಗೆ ಕನ್ನಡ ಬಳಗದ ಕಾರ್ಯಕ್ರಮ ನಡೆದಾಗ ಅಪ್ಪಾಜಿಯವರು ಮಾಡಿದ ಸಹಾಯವನ್ನು ಬಳಗದ ಸದಸ್ಯರು ಕೊಂಡಾಡಿದರು. ಇದೆ ಸಮಯದಲ್ಲಿ, ಪ್ರೊ|| ಕೃಷ್ಣೆ ಗೌಡರು ಅಪ್ಪಾಜಿಯವರ ಮತ್ತು ಬಳಗದ ಬಗ್ಗೆ ಬರೆದ ಲೇಖನವನ್ನು ಓದಿ ಅವರನ್ನು ಗೌರವಿಸಲಾಯಿತು.

ಸ್ಥಳೀಯ ಮ್ಯಾಂಚೆಸ್ಟರ್ ಕನ್ನಡಿಗರು (ಮಂಕು) ನಡೆಸಿಕೊಟ್ಟ ಕನ್ನಡದ ಆಧುನಿಕ ‘SHOLAY’ ಎಂಬ ಕಿರು ನಾಟಕ ಜನ ಸಾಗರವನ್ನು ರಂಜಿಸಿತು. ಅದರಲ್ಲಿನ ‘ವೀರು’ ಪಾತ್ರವನ್ನು ಮಾಡಿದ ರಮೇಶರವರು, ಕಾರ್ಯಕ್ರಮದ ನಂತರವೂ ಸಹ ‘ವೀರು’ವಾಗಿಯೇ ಗುರುತಿಸಲ್ಪಟ್ಟುದು ವಿಶೇಷವಾಗಿತ್ತು. ಕಾರ್ಯಕ್ರಮದ ಎಲ್ಲ ಪಾತ್ರಗಳ ಅಭಿನಯವೂ ಚಲನಚಿತ್ರ ನಟರನ್ನೂ ಸಹ ನಾಚುವಂತಿಸುತ್ತಿತ್ತು. ಸ್ಥಳೀಯ ಕನ್ನಡ ಮಹಿಳಾ ಸದಸ್ಯರು ಪ್ರಜ್ಯೋತಿಯವರ ಮಾರ್ಗದರ್ಶನದಲ್ಲಿ ಅಭಿನಯಿಸಿದ ‘ರಾಸಲೀಲ’ ನೃತ್ಯ ಬಹು ಸೊಗಸಾಗಿ ಮೂಡಿಬಂದಿತು. ಪುಟಾಣಿಗಳಾದ, ನೀತಿ ಮತ್ತು ಸ್ನೇಹ Raffle Tickets ಗಳನ್ನು ಹಂಚಿದರು.

Gangavati Pranesh
ಗಂಗಾವತಿ ಪ್ರಾಣೇಶ: ಚಿತ್ರ ರಚನೆ: ಡಾ.ಲಕ್ಷ್ಮೀನಾರಾಯಣ ಗುಡೂರ್

 

ಇದಾಗುತ್ತಿದ್ದಂತೆಯೇ, ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಬಸವರಾಜ್ ಮಹಾಮನಿ ಮತ್ತು ಕನ್ನಡದ ಅಭಿನವ ಬೀಚಿ ಗಂಗಾವತಿಯ ಪ್ರಾಣೇಶರವರ   ಕಾರ್ಯಕ್ರಮವು ನಡೆಯಿತು. ಇದೆ ಮೊದಲ ಬಾರಿಗೆ ಯುಕೆಯಲ್ಲಿ ಕಾರ್ಯಕ್ರಮ ಕೊಟ್ಟ ಇಬ್ಬರು ಮಹನೀಯರೂ ತಮ್ಮ ಹಾಸ್ಯ ಚಟಾಕಿಯ ಮೂಲಕ ಸೇರಿದ್ದ ಸಭಿಕರನ್ನು ಹೊಟ್ಟೆ ಹುಣ್ಣಾಗುವಂತೆ ನಗೆಸಾಗರದಲ್ಲಿ ಮುಳುಗಿಸಿದರು. ಇಲ್ಲಿ ಹುಟ್ಟಿ ಬೆಳೆಯುವ ಮಕ್ಕಳಿಗೆ ಮನೆಯಲ್ಲಿ ಕನ್ನಡ ಮಾತನಾಡುವುದನ್ನೇ ಕಲಿಸಲು ಈ ಮೂಲಕ ತಮ್ಮ ಹಾಸ್ಯದ ಮೂಲಕವೇ ಕೇಳಿಕೊಂಡರು. ಕಾರ್ಯಕ್ರಮ ನಿಗದಿಯಾದ ಸಮಯಕ್ಕಿಂತ ತಡವಾಗಿ ಪ್ರಾರಂಭವಾದುದು ಸ್ವಲ್ಪ ವಿಷಾದನೀಯ. ಕಾರ್ಯಕ್ರಮದ ಮುಗಿಯುವ ಹಂತದಲ್ಲಿ ಚಿಕ್ಕ ಮಕ್ಕಳ ಹುಡುಗಾಟ ಸ್ವಲ್ಪ ಹೆಚ್ಚಾಗಿದ್ದರಿಂದ, ಮಕ್ಕಳ ಪೋಷಕರ ಹತ್ತಿರ ಅವರನ್ನು ಸ್ವಲ್ಪ ಸುಮ್ಮನಿರಲು ಸೂಚಿಸುವದನ್ನೂ ಸಹ ಪ್ರಾಣೇಶರವರು ಹಾಸ್ಯವಾಗಿಯೇ ಮನವಿ ಮಾಡಿಕೊಂಡರು.

ನಂತರ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಊಟದ ಬಗ್ಗೆ ನಾನೇನು ಹೇಳುವದಿಲ್ಲ!! ಲೋಪದೋಷಗಳನ್ನು ಎತ್ತಿ ಹೇಳಿದರೆ ತಪ್ಪಾಗುವದಿಲ್ಲವೆಂದು ನನ್ನ ಅನಿಸಿಕೆ. ಮುಂದಿನ ಕಾರ್ಯಕ್ರಮಗಳಲ್ಲಿ, ‘ಅತಿಥಿ ದೇವೋ ಭವ’ ಎಂಬಂತೆ ಕಾರ್ಯಕ್ರಮಕ್ಕೆ ವಿದೇಶದಿಂದ ನಮ್ಮ ಸಲುವಾಗಿ ಬಂದಿರುವ ಅತಿಥಿಗಳಿಗೆ ಮೊದಲು ಊಟ ಮಾಡಲು ಅವಕಾಶಮಾಡಿಕೊಡುವದು ಉತ್ತಮವಾದ ನಡೆವಳಿಕೆ ಎಂಬುದು ನನ್ನ ಅಭಿಪ್ರಾಯ. ಹಾಗೆಯೇ, ಊಟದ ನಂತರ ಊಟದ ತಟ್ಟೆ, ಲೋಟಗಳನ್ನು ಬಹುತೇಕ ಮಂದಿ ಅಲ್ಲಲ್ಲೇ ಇಟ್ಟು ಹೋಗಿರುವ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಹೀಗೆ ಇದು ಮುಂದಿನ ಕಾರ್ಯಕ್ರಮಗಳಲ್ಲಿ ಮುಂದುವರೆದರೆ ‘ಸ್ವಚ್ಚ KBUK ಕಾರ್ಯಕ್ರಮ’ದ ಫಲಕವನ್ನು ಹಾಕುವ ದಿನ ಬಹು ದೂರವಿಲ್ಲದಿರುವದು ಬಹಳ ವಿಪರ್ಯಾಸದ ಸಂಗತಿ!

Mahamani
ಮಹಾಮನಿ: ಚಿತ್ರರಚನೆ: ಡಾ ಲಕ್ಷ್ಮೀನಾರಾಯಣ ಗುಡೂರ

ಕಾರ್ಯಕ್ರಮದ ಕೊನೆಯ ಹಂತವಾಗಿ ಖ್ಯಾತ ಹಾಡುಗಾರ್ತಿ ಹಳಿಯಾಳ್ ರವರ ಸುಶ್ರಾವ್ಯ ಕಂಠದಿಂದ ಬಂದ ಸುಮಧುರ ಚಲನಚಿತ್ರ ಗೀತೆಗಳಿಗೆ ಸಭಿಕರು ಹೆಜ್ಜೆ ಹಾಕಿದ್ದುದು ವಿಶೇಷವಾಗಿತ್ತು. ಧ್ವನಿ ಮತ್ತು ಬೆಳಕಿನ ಕಾರ್ಯವನ್ನು ಬಹು ಅಚ್ಚುಕಟ್ಟಾಗಿ ನಿರ್ವಹಿಸಿದ ‘Parswood’ ನ ಜ್ಯಾಕ್ ತಮ್ಮದೇ ಶೈಲಿಯಲ್ಲಿ ಕೆಲವು ಹೆಜ್ಜೆಗಳನ್ನು ಹಾಕಿದುದು ಬಹು ಸೊಗಸಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ರುವಾರಿ ಮತ್ತೂ ಹಾಸ್ಯಕಲಾವಿದರನ್ನು ಯು ಕೆ ಗೆ ಕರೆತರುವಲ್ಲಿ ಶ್ರಮ ಪಟ್ಟ ಆನಂದ್ ಕುಲಕರ್ಣಿಯವರು ಬಹಳ ತಾಳ್ಮೆಯಿಂದ ಕಾರ್ಯಕ್ರಮದ ಆರಂಭದಿಂದ ಮುಕ್ತಾಯದವರೆಗೂ ತಮ್ಮ ಕಾರ್ಯಕ್ರಮವನ್ನು ನಿರ್ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು, ವಿಶ್ವನಾಥ್ ಮತ್ತು ಅರವಿಂದ್ ಅವರು ಕಾರ್ಯಕ್ರಮದ ಪ್ರತಿಯೊಂದು ಹಂತದಲ್ಲೂ ಬಹಳ ಆಸಕ್ತಿ ಮತ್ತು ಮಾರ್ಗದರ್ಶನ ನೀಡುತ್ತ ಕಾರ್ಯಕ್ರಮದ ಯಶಸ್ಸಿಗೆ ಸಹಕಾರಿಯಾದರು. ಇನ್ನು ಬಹುತೇಕ ಮಂದಿ ಪರದೆಯ ಹಿಂದೆ ಮತ್ತು ಪರದೆಯ ಮುಂದೆ ಈ ಕಾರ್ಯಕ್ರಮದ ಯಶಸ್ಸಿಗಾಗಿ ಕ್ಷಮಿಸಿದ್ದಾರೆ. ಅವರ ಹೆಸರನ್ನು ನಾನು ಇಲ್ಲಿ ಉಲ್ಲೇಖಿಸದಿದ್ದರೆ, ದಯವಿಟ್ಟು ಕ್ಷಮೆ ಇರಲಿ.

ಮುಂದಿನ ದಿನಗಳಲ್ಲಿ ಬಳಗವು ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ ಕನ್ನಡ ಭಾಷೆ ಮತ್ತೂ ಸಂಸ್ಕೃತಿಯ ಕಂಪನ್ನು ಶ್ರೀಗಂಧದಂತೆ  ಯು ಕೆ ಯಲ್ಲಿ ಇನ್ನಷ್ಟು ಬೀರಲಿ ಎಂದು ಹಾರೈಸುವೆ.