ಯು ಕೆ ಕನ್ನಡ ಬಳಗದ ಯುಗಾದಿ ಉತ್ಸವ – ಗುರುರಾಜ ಅಸ್ರೋಳ್ಳಿ ಗಣೇಶ್ ವರದಿ

(ಲೇಖಕರ ಪರಿಚಯ: ಗುರುರಾಜ ಅಸ್ರೋಳ್ಳಿ ಗಣೇಶ್. ಹೊನ್ನಾವರ ತಾಲೂಕಿನ ಖರ್ವ ಎಂಬ ಪುಟ್ಟ ಗ್ರಾಮದವರು. ವಿಧ್ಯಾಬ್ಯಾಸ ಕರ್ನಾಟಕದಲ್ಲಿ ಮುಗಿಸಿ ಹೊಟ್ಟೆಪಾಡಿಗಾಗಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕೆಲಸ. ಯು ಕೆ ಗೆ ಬಂದು ೪-೫ ವರ್ಷಗಳಾಗುತ್ತ ಬಂದಿತು. ಮ್ಯಾಂಚೆಸ್ಟರ್ನಲ್ಲಿ ಹೆಂಡತಿ ಮತ್ತು ೧ ವರ್ಷದ ಮಗುವಿನೊಂದಿಗೆ ವಾಸ.  ಬೀchi ಯವರ ಸಾಹಿತ್ಯ ಓದುವ ಆಸಕ್ತಿ ಇದೆ.

ಚಿತ್ರಕಾರರ ಪರಿಚಯ: ಡಾ ಲಕ್ಷ್ಮೀನಾರಾಯಣ ಗುಡೂರ್, ರೋಗನಿದಾನಶಾಸ್ತ್ರಜ್ಞ, ಪ್ರೆಸ್ಟನ್ನಿನಲ್ಲಿ ಕೆಲಸ. ಮೂಲತಃ ಗುಲ್ಬರ್ಗದವರು. ೨೦೦೧ರಿಂದ ಯುಕೆಯಲ್ಲಿ ವಾಸ.)

2016 04 KBUKಯುಗಾದಿ ಎಂದಾಕ್ಷಣ ಕನ್ನಡದ ಬಹುತೇಕ ಎಲ್ಲ ಜನರಿಗೂ ನೆನಪಾಗುವುದು ದ ರಾ ಬೇಂದ್ರೆಯವರ ‘ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ’ ಎಂಬ ಸುಂದರ ರಸವತ್ತಾದ ಕವನ. ಯು ಕೆ ಕನ್ನಡ ಬಳಗದ ದುರ್ಮುಖಿ ನಾಮ ಸಂವತ್ಸರದ ೩೩ನೆಯ ಯುಗಾದಿ ಉತ್ಸವವು ದಿನಾಂಕ ೧೬-೦೪-೨೦೧೬, ಶನಿವಾರದಂದು ಇಂಗ್ಲೆಂಡಿನ ಮ್ಯಾಂಚೆಸ್ಟರನ ಪಾರ್ಸ್ ವುಡ್ ಶಾಲೆಯ ಆವರಣದಲ್ಲಿ ನಡೆಯಿತು. ಹೇಗೆ ಬಳ್ಳಾರಿ ಎಂದರೆ ನೆನಪಾಗುವದು ಬಿಸಿಲು ಮತ್ತು ಕಡು ಬಿಸಿಲೋ, ಹಾಗೆಯೇ ಇತ್ತೀಚಿನ ದಿನಗಳಲ್ಲಿ ಮ್ಯಾಂಚೆಸ್ಟರ್ ಎಂದರೆ ಫುಟ್ಬಾಲ್ನ ಹೊರತಾಗಿ ನೆನಪಾಗುವದು ಮಳೆ ಮತ್ತು ವಿಪರೀತ ಮಳೆ! ಆದರೆ ಕಾರ್ಯಕ್ರಮದ ದಿನದಂದು ಶುಭ್ರವಾದ ಆಗಸ ಮತ್ತು ಮೈಯಿಗೆ ಮುದನೀಡುವ ಹದವಾದ ಬಿಸಿಲು ಬಂದಿರುವದು ಕಾರ್ಯಕ್ರಮದ ರುಚಿಯನ್ನು ಸವಿಯಲು ಬಂದ ಸಭಿಕರಿಗೆ ತುಂಬಾ ಸಹಕಾರಿಯಾಯಿತು. ಕಾರ್ ಪಾರ್ಕ್ ಮಾಡಲು, ಬಹು ವಿಶಾಲವಾದ ಸ್ಥಳವಿದ್ದದು ಜನರಿಗೆ ಅನೂಕೂಲವಾಯಿತು.

ಕುಮಾರ್ ರಮಾನಂದ್, ಆರತಿ, ಶಾದ್ವಾಲ, ನವೀನ ಮುಂತಾದವರನ್ನೊಳಗೊಂಡ ತಂಡ, ಕಾರ್ಯಕ್ರಮಕ್ಕೆ2016 04 KBUK 3 ಸಾಮಾಜಿಕ ತಾಣಗಳನ್ನು ಬಳಸಿಕೊಂಡು ದಾಖಲೆಯ ಸಂಖ್ಯೆಯಲ್ಲಿ ಸರಿ ಸುಮಾರು ೬೦೦ಕ್ಕೂ ಅಧಿಕ ಜನರು ಸೇರುವಂತೆ ಮಾಡಿದರು. ಹಣಕಾಸನ್ನು ಆರತಿಯವರ ತಂಡ ಬಹು ಸಮರ್ಥವಾಗಿ ನಿಭಾಯಿಸಿದರು. ಇದೆ ಮೊದಲ ಬಾರಿಗೆ ನೋಂದಣಿಯನ್ನು ೨ ವಾರಗಳ ಮೊದಲೇ ಮುಕ್ತಾಯ ಮಾಡಿದುದರಿಂದ, ಆರಂಭದಲ್ಲಿ ನೋಂದಣಿ ಸಮಯದಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸಿದರು. ಈ ತಂಡದ ಮಾರ್ಗದರ್ಶನವನ್ನು ಮುಂದಿನ ಕಾರ್ಯಕ್ರಮಕ್ಕೆ ಉಪಯೋಗಿಸಿಕೊಂಡರೆ ಭವಿಷ್ಯದಲ್ಲಾಗುವ ಕಾರ್ಯಕ್ರಮಗಳು ಇನ್ನಷ್ಟು ಯಶಸ್ವಿಯಾಗಲು ಕಾರಣವಾಗುತ್ತದೆ. ಪ್ರವೇಶದ್ವಾರದಲ್ಲಿದ್ದ ಸ್ವಾಗತ ಕಮಿಟಿ ಸದಸ್ಯರು ಸಭಿಕರನ್ನು ಮಂದಹಾಸದಿಂದ ಬರಮಾಡಿಕೊಂಡರೆ, ಅಲ್ಲಲ್ಲಿ ಹಚ್ಚಿದ್ದ ಮಾರ್ಗದರ್ಶಿ ಫಲಕಗಳು ತುಂಬಾ ಉಪಕಾರವಾದವು.

ಕಾರ್ಯಕ್ರಮವು ಅವಿನಾಶ್ ಅಧ್ಯಾಪಕ್ ರವರ ವೇದ ಘೋಷದೊಂದಿಗೆ ಆರಂಭವಾಯಿತು. ಆ ಬಳಿಕ ಗೀತಾ ಗಾಯನ ಮತ್ತು ದೀಪ ಬೆಳಗಿಸಿ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ನಂತರ ಇತ್ತೀಚಿಗಷ್ಟೆ ನಮ್ಮನ್ನಗಲಿದ KBUKಯ ಗಣ್ಯ ವ್ಯಕ್ತಿಗಳಿಗೆ ಶ್ರದ್ಧಾಂಜಲಿಯ ಸೂಚಿಸಿ, ಬಳಗದ ಅಧ್ಯಕ್ಷ ಗೌಡಗೆರೆ ಜಯರಾಂ ಅವರು ಚಿಕ್ಕ ಮತ್ತು ಚೊಕ್ಕದಾದ ಭಾಷಣ ಮಾಡಿದರು. ಸ್ಥಳೀಯರಾದ ಶಿಲ್ಪ ಮತ್ತು ರಶ್ಮಿ, ಸಭಾಂಗಣವನ್ನು ಬಹಳ ಮುತುವರ್ಜಿಯಿಂದ ಸಿಂಗರಿಸಿದ್ದರು.

2016 04 KBUK 4ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾರಂಭದಲ್ಲಿ ತುಸು ಸಮಯ ತಾಂತ್ರಿಕ ಅಡಚಣೆಯಾದರೂ ಸಹ, ಕಾರ್ಯಕ್ರಮದ ನಿರೂಪಣೆ ನಡೆಸಿದ ಕುಮಾರಿ ದಿಲ್ಲು ಮತ್ತು ನೀತುರವರ ಸಮಯ ಪ್ರಜ್ಞೆ ಮತ್ತು ಮುಖ್ಯ ನಿರೂಪಕರದಾದ ರಮೇಶ್ ಮತ್ತು ರಷ್ಮಿಯವರ ಮಾತನಾಡಿಸುವ ಕಲೆ, ಆಗಬಹುದಾದಂತಹ ಮುಜುಗರವನ್ನು ತಪ್ಪಿಸಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರು ನಿಗದಿಯ ಕಾರ್ಯಕ್ರಮದ ಕನಿಷ್ಠ ೧ ವಾರ ಮುಂಚಿತವಾಗಿ ತಮ್ಮ ನೃತ್ಯಕ್ಕೆ ಪೂರಕವಾದ ಗಾಯನವನ್ನು ಸಂಘಟಿಕರಿಗೆ ತಲುಪಿಸಿದರೆ ಇಂತಹ ಅಡಚಣೆಗಳನ್ನು ತಡೆಯಲು ಸಾಧ್ಯ ಮತ್ತು ಕಾರ್ಯಕ್ರಮವೂ ನಿಗದಿಯಾದಂತೆ ಮುಂದುವರಿಯಲು ಸಹಕಾರಿಯಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ತದನಂತರರ ವಾರಿಂಗ್ಟನ್, ವೊರ್ಸ್ಲೆ, ನಾಟಿಂಗ್ಹ್ಯಾಮ್, ಸ್ಥಳೀಯ ಮ್ಯಾಂಚೆಸ್ಟರ್ ಮತ್ತು ಹಲವಾರು ಕಡೆಯಿಂದ ಬಂದ ಚಿಣ್ಣರು ಹಾಡು, ನೃತ್ಯಗಳ ಮೂಲಕ ರಂಜಿಸಿದರು.

ಕನ್ನಡ ಬಳಗದ ”ಅನಿವಾಸಿ” ಜಾಲ ಜಗುಲಿಯಲ್ಲಿ ಈ ವರೆಗೆ ಪ್ರಕಟವಾಗಿರುವ ಹಲವಾರು 2016 04 KBUK 6 ಲೇಖಕರ ಲೇಖನಗಳಲ್ಲಿ ಕೆಲವನ್ನು ಆಯ್ದು ಪುಸ್ತಕದ ರೂಪದಲ್ಲಿ ಹೊರತಂದಿದೆ. ಇದಕ್ಕೆ ಜಾಲಜಗುಲಿಯನ್ನು ಎರಡು ವರ್ಷಗಳ ಕೆಳಗೆ ಉದ್ಘಾಟಿಸಿದ ಹೆಚ್ ಎಸ್ ವೆಂಕಟೇಶಮೂರ್ತಿಯವರೇ ಮುನ್ನುಡಿ ಬರೆದು ಆಶೀರ್ವದಿಸಿದ್ದಾರೆ. ಪುಸ್ತಕವನ್ನು ಅಧಿಕೃತವಾಗಿ ಇತ್ತೀಚೆಗೆ ನಮ್ಮನ್ನಗಲಿದ KBUKಯ ಹಿರಿಯ ಸದಸ್ಯ ಡಾ ರಾಜಾರಾಂ ಕಾವಳೆಯವರ ಪತ್ನಿ ಶ್ರೀಮತಿ ಪದ್ಮಾ ಅವರು ಸಭಿಕರ ಮುಂದೆ ಬಿಡುಗಡೆ ಮಾಡಿದರು. ನಂತರ ಪರ್ಯಾಯ ಕಾರ್ಯಕ್ರಮಗಳಲ್ಲೊಂದಾದ ಬಳಗದ ಸಾಹಿತ್ಯಾಸಕ್ತರು ಕೆಲವರು ತಮ್ಮ ಹಾಸ್ಯ ಕವನಗಳನ್ನು ಶ್ರೀಯುತರಾದ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ್ ಮಹಾಮನಿಯವರ ಉಪಸ್ಥಿತಿಯಲ್ಲಿ ಓದಿದರು. ಇದನ್ನು ನೆರೆದ ಪ್ರೇಕ್ಷಕರು ಮೆಚ್ಚಿಕೊಂಡರು.

ಸರ್ವ ಸದಸ್ಯರ ಸಭೆಯಲ್ಲಿ ಹೊಸ ಸಂವಿಧಾನವನ್ನು ಗಂಭೀರವಾಗಿ ಚರ್ಚಿಸಿ ಅಂಗೀಕರಿಸಲಾಯಿತು.

2016 04 KBUK 5ಹೆಚ್ಚಿನ ಸಂಖ್ಯೆಯಲ್ಲಿ ಸಭಿಕರು ಆಗಮಿಸಿದುದರಿಂದ ಮೊದಲೇ ನಿಗದಿಯಾದಂತೆ, ಭೋಜನ ವ್ಯವಸ್ಥೆಯನ್ನು ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಆಯೊಜಸಲಾಗಿತ್ತು. ಭೋಜನ ಕೊಠಡಿಯಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಟಾಲ್ ವಯಸ್ಕರನ್ನು ಆಕರ್ಷಿಸುತ್ತಿದ್ದರೆ, ಟ್ಯಾಂಜೆಂಟಿಕ್ಸ್ ಆಟದ ಸಂಸ್ಥೆಯ (Tangentix GameSession) ಮಕ್ಕಳನ್ನು ತನ್ನೆಡೆಗೆ ಆಕರ್ಷಿಸುತ್ತಿತ್ತು. ‘ಚೆನ್ನೈ ದೋಸ’ದ ಬೋರ್ಡ್ ತನ್ನತ್ತ ಭೇಟಿ ಕೊಡುವಂತೆ ಕೇಳಿಕೊಳ್ಳುತ್ತಿತ್ತು. ಪ್ರಾಯೋಜಕರನ್ನು ಕರೆತರಲು ಅಶ್ವಿನ್ ಪಟ್ಟ ಶ್ರಮವು ಶ್ಲಾಘನೀಯ. ಮಕ್ಕಳಿಗಾಗಿ ಪ್ರತ್ಯೇಕ ಬಗೆಯ ಆಹಾರಗಳನ್ನು ತಯಾರಿಸಿದುದು ವಿಶೇಷವಾಗಿತ್ತು. ಊಟದ ಸಮಯದಲ್ಲಿ ಜನರು ಟ್ರಾಫಿಕ್ ಜಾಮ್ ನಂತೆ ನಿಲ್ಲುವುದು ಬಹುತೇಕ ಕಾರ್ಯಕ್ರಮದಲ್ಲಿ ಸರ್ವೇ ಸಾಮಾನ್ಯ. ಅದಕ್ಕೆ ಅಪವಾದವೇನೋ ಎಂಬಂತೆ, ಈ ಕಾರ್ಯಕ್ರಮದಲ್ಲಿ ಎಲ್ಲೂ ಸ್ವಲ್ಪವೂ ಅಡಚಣೆಯಾಗದಂತೆ ಸವಿತಾ ಹಳ್ಳಿಕೇರಿ, ರಾಜೀವ್, ಚಿತ್ತರಾಜನ್ ಮತ್ತು ನಟರಾಜರನ್ನು ಒಳಗೊಂಡ ಸುಮಾರು ೩೦ ಜನರ ತಂಡ ತುಂಬಾ ಅಚ್ಚುಕಟ್ಟಾಗಿ ಎಲ್ಲ ಜನರನ್ನು ನಗು ಮುಖದಿಂದ ಮಾತನಾಡಿಸಿ ಪದಾರ್ಥಗಳನ್ನು ಬಡಿಸುತ್ತಿದ್ದರು. ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂಬುದು ವಾಡಿಕೆ, ಆದರೆ ಬಿಸಿಬೇಳೆ ಬಾತ್ ತಿಂದವರೆಲ್ಲ ನೀರು ಕುಡಿಯುತ್ತಿದ್ದುದು ಇಲ್ಲಿ ಸಾಮಾನ್ಯವಾಗಿತ್ತು. ಕೆಲವು ಚಲನಚಿತ್ರಗಳಲ್ಲಿ ನಾಯಕ ನಟನಿಗಿಂತ ಖಳ ನಾಯಕನ ಅಬ್ಬರವೇ ಜೋರಾಗಿರುವಂತೆ, ಇಲ್ಲಿ ಬಿಸಿ – ಬೇಳೆ ಬಾತಿನ ಮಾತು ಅಲ್ಲಲ್ಲಿ ಕೆಳಿಬರುತ್ತಿದ್ದುದು ಸಾಮಾನ್ಯವಾಗಿತ್ತು. ಆಹಾರದ ರುಚಿ ಮತ್ತು ಗುಣಮಟ್ಟದ ಬಗ್ಗೆ ಋಣಾತ್ಮಕ ಟೀಕೆಗಳು ಅಲ್ಲಲ್ಲಿ ಕೇಳಿಬರುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಒಬ್ಬ ಆಂಗ್ಲ ಛಾಯಾಗ್ರಾಹಕರು ಅವರಿಗೆ ಖಾರವಾದ ಊಟದ ಬಗ್ಗೆ ಕೊಟ್ಟ ಸೂಚನೆಯನ್ನು ತಳ್ಳಿಹಾಕಿ, ಮಕ್ಕಳ ಊಟ ಮಾಡಲು ನಾನೇನು ಚಿಕ್ಕವನೇ? ನಾನು ದೊಡ್ಡವರ ಊಟವನ್ನೇ ಮಾಡುತ್ತೇನೆ ಎಂದು ಧೈರ್ಯ ತೋರಿದುದು ಮೆಚ್ಚಲೇಬೇಕು! ಸಂಜೆಯ ಮೆಣಸಿನಕಾಯಿ ಬಜ್ಜಿ ಸಹ ಇದಕ್ಕಿಂತ ಭಿನ್ನವಾಗಿರಲಿಲ್ಲ, ರಾತ್ರಿಯ ಊಟ ಸಮಧಾನಕರವಾಗಿತ್ತು. ಸಾಯಿ ಸ್ಪೈಸ್ ರೆಸ್ಟೋರಂಟ್ ನವರು ತಯಾರಿಸಿದ ಅಡುಗೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಆದೀತು. ಆದ ಕಾರಣ, ಅಡುಗೆಯ ವಿಷಯವನ್ನು ಪುನಃ ಪುನಃ ಪ್ರಸ್ತಾಪಿಸದೆ ಇಲ್ಲಿಗೆ ಮುಗಿಸುತ್ತಿದೇನೆ.

Yakshagaana
ಚಿತ್ರಕಾರರು: ಡಾ ಲಕ್ಷ್ಮೀನಾರಾಯಣ ಗುಡೂರ್

ಊಟದ ನಂತರ ಸರ್ರೆ ತಂಡದವರಿಂದ ನೃತ್ಯ ಕಾರ್ಯಕ್ರಮ, ನಾರ್ಥ್-ಈಸ್ಟ್ ಕಲಾವಿದರ ಸುಮಾರು ೨೫ ಜನರ ತಂಡ ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬ ನೃತ್ಯದಲ್ಲಿ ಭರತನಾಟ್ಯ, ಮೋಹಿನಿ ಆಟ, ಯಕ್ಷಗಾನಗಳ ಪರಿಚಯಗಳನ್ನು ಮಾಡಿಕೊಟ್ಟಿತು. ಈ ನೃತ್ಯವು ‘ಮಾತೃದೇವೋ ಭವ’ ಹಾಗೂ ತಾಯಿಯ ಮಾತನ್ನು ಮಕ್ಕಳು ಪಾಲಿಸುವುದರ ಮಹತ್ವವನ್ನು ವಿವರಿಸುತ್ತಿದ್ದವು. ನಂತರದಲ್ಲಿ ನಡೆದ ಈಸ್ಟ್ ಲಂಡನ್ ಎಸ್ಸೆಕ್ಸಿನ ಶ್ರೀವಿದ್ಯ, ವಿದುಷಿ ಶ್ರೀಧನ್ಯ ಮತ್ತು ತಂಡದವರಿಂದ ಮೂಡಿಬಂದ ‘ಕನ್ನಡ ನಾಡಿ’ ಕಾರ್ಯಕ್ರಮವು ಕರ್ನಾಟಕದ ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಜಾನಪದ, ಶಿಲ್ಪಕಲೆ ಮತ್ತು ಅಲ್ಲಿಯ ಜನರ ಬದುಕಿನ ಕಿರುಪರಿಚಯವನ್ನು ಮಾಡಿಕೊಟ್ಟಿತು. ಡಾರ್ಬಿ ತಂಡದವರ ಚಲನಚಿತ್ರವಾಧರಿಸಿದ ‘ಬೊಂಬೆ ಆಟ’ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದುದು ಬಹಳ ವಿಶೇಷವಾಗಿತ್ತು. ನಾಟಿಂಗ್ಹ್ಯಾಮ್ ತಂಡದವರು ಭರತನಾಟ್ಯವನ್ನು ನಡೆಸಿಕೊಟ್ಟರು. ಯಾರ್ಕ್ಶೈರ್ ತಂಡದವರಿಂದ ಮೂಡಿಬಂದ ‘ಚೈತ್ರದ ಚಿಗುರು’, ಕನ್ನಡದ ಹೆಸರಾಂತ ಚಲನಚಿತ್ರಗೀತೆಗಳ ನೃತ್ಯ ಪ್ರದರ್ಶನ ಮಾಡಿದರು. ಸವಿತಾ ಸುರೇಶ, ವೀಣಾ ಕಲ್ಲಿನಾಥ್ ಮತ್ತು ಹರೀಶ್ ಚಿಕ್ಕಣ್ಣ ತಮ್ಮ ಸುಮಧುರವಾದ ಕಂಠದಿಂದ ಜನಪ್ರಿಯ ಕನ್ನಡ ಗೀತೆಗಳನ್ನು ಹಾಡಿ, ಸಭಿಕರ ಮನದೂಗಿಸಿದರು. ಇದಾದ ಮೇಲೆ ಸ್ನೇಹ ಕುಲಕರ್ಣಿಯವರು ತಮ್ಮ ಕವನಗಳನ್ನು ಮಂಡಿಸಿದರೆ, ಸರ್ರೆ ತಂಡದವರು ಹಳೆಯ ಕನ್ನಡ ಹಾಡುಗಳಿಗೆ ನೃತ್ಯ ಮಾಡಿದರು. ಖ್ಯಾತ ಹಾಡುಗಾರ್ತಿ ಅಂಜಲಿ ಹಳಿಯಾಳ್ ಅವರು ತಮ್ಮ ಹಾಡಿನ ಮೂಲಕ ಕಾರ್ಯಕ್ರಮದ ಸೊಬಗನ್ನು ಇನ್ನಷ್ಟು ಹೆಚ್ಚಿಸಿದರು. ಚಿಕ್ಕ ಮಕ್ಕಳನ್ನು ಮನೋರಂಜಿಸಲು ಜಾದು ಪ್ರದರ್ಶನ ಮತ್ತು ಆಟದ ವ್ಯವಸ್ಥೆಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಚಹಾ ಸವಿದ ನಂತರ, KBUKಯ ಹಿರಿಯ ಚೇತನ ಅಪ್ಪಾಜಿಯವರ ಸನ್ಮಾನ ಕಾರ್ಯಕ್ರವನ್ನು ಎಲ್ಲ ಜನರ ಸಮ್ಮುಖದಲ್ಲಿ ನಡೆಸಲಾಯಿತು. ಮೊದಲ ಬಾರಿಗೆ ಕನ್ನಡ ಬಳಗದ ಕಾರ್ಯಕ್ರಮ ನಡೆದಾಗ ಅಪ್ಪಾಜಿಯವರು ಮಾಡಿದ ಸಹಾಯವನ್ನು ಬಳಗದ ಸದಸ್ಯರು ಕೊಂಡಾಡಿದರು. ಇದೆ ಸಮಯದಲ್ಲಿ, ಪ್ರೊ|| ಕೃಷ್ಣೆ ಗೌಡರು ಅಪ್ಪಾಜಿಯವರ ಮತ್ತು ಬಳಗದ ಬಗ್ಗೆ ಬರೆದ ಲೇಖನವನ್ನು ಓದಿ ಅವರನ್ನು ಗೌರವಿಸಲಾಯಿತು.

ಸ್ಥಳೀಯ ಮ್ಯಾಂಚೆಸ್ಟರ್ ಕನ್ನಡಿಗರು (ಮಂಕು) ನಡೆಸಿಕೊಟ್ಟ ಕನ್ನಡದ ಆಧುನಿಕ ‘SHOLAY’ ಎಂಬ ಕಿರು ನಾಟಕ ಜನ ಸಾಗರವನ್ನು ರಂಜಿಸಿತು. ಅದರಲ್ಲಿನ ‘ವೀರು’ ಪಾತ್ರವನ್ನು ಮಾಡಿದ ರಮೇಶರವರು, ಕಾರ್ಯಕ್ರಮದ ನಂತರವೂ ಸಹ ‘ವೀರು’ವಾಗಿಯೇ ಗುರುತಿಸಲ್ಪಟ್ಟುದು ವಿಶೇಷವಾಗಿತ್ತು. ಕಾರ್ಯಕ್ರಮದ ಎಲ್ಲ ಪಾತ್ರಗಳ ಅಭಿನಯವೂ ಚಲನಚಿತ್ರ ನಟರನ್ನೂ ಸಹ ನಾಚುವಂತಿಸುತ್ತಿತ್ತು. ಸ್ಥಳೀಯ ಕನ್ನಡ ಮಹಿಳಾ ಸದಸ್ಯರು ಪ್ರಜ್ಯೋತಿಯವರ ಮಾರ್ಗದರ್ಶನದಲ್ಲಿ ಅಭಿನಯಿಸಿದ ‘ರಾಸಲೀಲ’ ನೃತ್ಯ ಬಹು ಸೊಗಸಾಗಿ ಮೂಡಿಬಂದಿತು. ಪುಟಾಣಿಗಳಾದ, ನೀತಿ ಮತ್ತು ಸ್ನೇಹ Raffle Tickets ಗಳನ್ನು ಹಂಚಿದರು.

Gangavati Pranesh
ಗಂಗಾವತಿ ಪ್ರಾಣೇಶ: ಚಿತ್ರ ರಚನೆ: ಡಾ.ಲಕ್ಷ್ಮೀನಾರಾಯಣ ಗುಡೂರ್

 

ಇದಾಗುತ್ತಿದ್ದಂತೆಯೇ, ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಬಸವರಾಜ್ ಮಹಾಮನಿ ಮತ್ತು ಕನ್ನಡದ ಅಭಿನವ ಬೀಚಿ ಗಂಗಾವತಿಯ ಪ್ರಾಣೇಶರವರ   ಕಾರ್ಯಕ್ರಮವು ನಡೆಯಿತು. ಇದೆ ಮೊದಲ ಬಾರಿಗೆ ಯುಕೆಯಲ್ಲಿ ಕಾರ್ಯಕ್ರಮ ಕೊಟ್ಟ ಇಬ್ಬರು ಮಹನೀಯರೂ ತಮ್ಮ ಹಾಸ್ಯ ಚಟಾಕಿಯ ಮೂಲಕ ಸೇರಿದ್ದ ಸಭಿಕರನ್ನು ಹೊಟ್ಟೆ ಹುಣ್ಣಾಗುವಂತೆ ನಗೆಸಾಗರದಲ್ಲಿ ಮುಳುಗಿಸಿದರು. ಇಲ್ಲಿ ಹುಟ್ಟಿ ಬೆಳೆಯುವ ಮಕ್ಕಳಿಗೆ ಮನೆಯಲ್ಲಿ ಕನ್ನಡ ಮಾತನಾಡುವುದನ್ನೇ ಕಲಿಸಲು ಈ ಮೂಲಕ ತಮ್ಮ ಹಾಸ್ಯದ ಮೂಲಕವೇ ಕೇಳಿಕೊಂಡರು. ಕಾರ್ಯಕ್ರಮ ನಿಗದಿಯಾದ ಸಮಯಕ್ಕಿಂತ ತಡವಾಗಿ ಪ್ರಾರಂಭವಾದುದು ಸ್ವಲ್ಪ ವಿಷಾದನೀಯ. ಕಾರ್ಯಕ್ರಮದ ಮುಗಿಯುವ ಹಂತದಲ್ಲಿ ಚಿಕ್ಕ ಮಕ್ಕಳ ಹುಡುಗಾಟ ಸ್ವಲ್ಪ ಹೆಚ್ಚಾಗಿದ್ದರಿಂದ, ಮಕ್ಕಳ ಪೋಷಕರ ಹತ್ತಿರ ಅವರನ್ನು ಸ್ವಲ್ಪ ಸುಮ್ಮನಿರಲು ಸೂಚಿಸುವದನ್ನೂ ಸಹ ಪ್ರಾಣೇಶರವರು ಹಾಸ್ಯವಾಗಿಯೇ ಮನವಿ ಮಾಡಿಕೊಂಡರು.

ನಂತರ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಊಟದ ಬಗ್ಗೆ ನಾನೇನು ಹೇಳುವದಿಲ್ಲ!! ಲೋಪದೋಷಗಳನ್ನು ಎತ್ತಿ ಹೇಳಿದರೆ ತಪ್ಪಾಗುವದಿಲ್ಲವೆಂದು ನನ್ನ ಅನಿಸಿಕೆ. ಮುಂದಿನ ಕಾರ್ಯಕ್ರಮಗಳಲ್ಲಿ, ‘ಅತಿಥಿ ದೇವೋ ಭವ’ ಎಂಬಂತೆ ಕಾರ್ಯಕ್ರಮಕ್ಕೆ ವಿದೇಶದಿಂದ ನಮ್ಮ ಸಲುವಾಗಿ ಬಂದಿರುವ ಅತಿಥಿಗಳಿಗೆ ಮೊದಲು ಊಟ ಮಾಡಲು ಅವಕಾಶಮಾಡಿಕೊಡುವದು ಉತ್ತಮವಾದ ನಡೆವಳಿಕೆ ಎಂಬುದು ನನ್ನ ಅಭಿಪ್ರಾಯ. ಹಾಗೆಯೇ, ಊಟದ ನಂತರ ಊಟದ ತಟ್ಟೆ, ಲೋಟಗಳನ್ನು ಬಹುತೇಕ ಮಂದಿ ಅಲ್ಲಲ್ಲೇ ಇಟ್ಟು ಹೋಗಿರುವ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಹೀಗೆ ಇದು ಮುಂದಿನ ಕಾರ್ಯಕ್ರಮಗಳಲ್ಲಿ ಮುಂದುವರೆದರೆ ‘ಸ್ವಚ್ಚ KBUK ಕಾರ್ಯಕ್ರಮ’ದ ಫಲಕವನ್ನು ಹಾಕುವ ದಿನ ಬಹು ದೂರವಿಲ್ಲದಿರುವದು ಬಹಳ ವಿಪರ್ಯಾಸದ ಸಂಗತಿ!

Mahamani
ಮಹಾಮನಿ: ಚಿತ್ರರಚನೆ: ಡಾ ಲಕ್ಷ್ಮೀನಾರಾಯಣ ಗುಡೂರ

ಕಾರ್ಯಕ್ರಮದ ಕೊನೆಯ ಹಂತವಾಗಿ ಖ್ಯಾತ ಹಾಡುಗಾರ್ತಿ ಹಳಿಯಾಳ್ ರವರ ಸುಶ್ರಾವ್ಯ ಕಂಠದಿಂದ ಬಂದ ಸುಮಧುರ ಚಲನಚಿತ್ರ ಗೀತೆಗಳಿಗೆ ಸಭಿಕರು ಹೆಜ್ಜೆ ಹಾಕಿದ್ದುದು ವಿಶೇಷವಾಗಿತ್ತು. ಧ್ವನಿ ಮತ್ತು ಬೆಳಕಿನ ಕಾರ್ಯವನ್ನು ಬಹು ಅಚ್ಚುಕಟ್ಟಾಗಿ ನಿರ್ವಹಿಸಿದ ‘Parswood’ ನ ಜ್ಯಾಕ್ ತಮ್ಮದೇ ಶೈಲಿಯಲ್ಲಿ ಕೆಲವು ಹೆಜ್ಜೆಗಳನ್ನು ಹಾಕಿದುದು ಬಹು ಸೊಗಸಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ರುವಾರಿ ಮತ್ತೂ ಹಾಸ್ಯಕಲಾವಿದರನ್ನು ಯು ಕೆ ಗೆ ಕರೆತರುವಲ್ಲಿ ಶ್ರಮ ಪಟ್ಟ ಆನಂದ್ ಕುಲಕರ್ಣಿಯವರು ಬಹಳ ತಾಳ್ಮೆಯಿಂದ ಕಾರ್ಯಕ್ರಮದ ಆರಂಭದಿಂದ ಮುಕ್ತಾಯದವರೆಗೂ ತಮ್ಮ ಕಾರ್ಯಕ್ರಮವನ್ನು ನಿರ್ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು, ವಿಶ್ವನಾಥ್ ಮತ್ತು ಅರವಿಂದ್ ಅವರು ಕಾರ್ಯಕ್ರಮದ ಪ್ರತಿಯೊಂದು ಹಂತದಲ್ಲೂ ಬಹಳ ಆಸಕ್ತಿ ಮತ್ತು ಮಾರ್ಗದರ್ಶನ ನೀಡುತ್ತ ಕಾರ್ಯಕ್ರಮದ ಯಶಸ್ಸಿಗೆ ಸಹಕಾರಿಯಾದರು. ಇನ್ನು ಬಹುತೇಕ ಮಂದಿ ಪರದೆಯ ಹಿಂದೆ ಮತ್ತು ಪರದೆಯ ಮುಂದೆ ಈ ಕಾರ್ಯಕ್ರಮದ ಯಶಸ್ಸಿಗಾಗಿ ಕ್ಷಮಿಸಿದ್ದಾರೆ. ಅವರ ಹೆಸರನ್ನು ನಾನು ಇಲ್ಲಿ ಉಲ್ಲೇಖಿಸದಿದ್ದರೆ, ದಯವಿಟ್ಟು ಕ್ಷಮೆ ಇರಲಿ.

ಮುಂದಿನ ದಿನಗಳಲ್ಲಿ ಬಳಗವು ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ ಕನ್ನಡ ಭಾಷೆ ಮತ್ತೂ ಸಂಸ್ಕೃತಿಯ ಕಂಪನ್ನು ಶ್ರೀಗಂಧದಂತೆ  ಯು ಕೆ ಯಲ್ಲಿ ಇನ್ನಷ್ಟು ಬೀರಲಿ ಎಂದು ಹಾರೈಸುವೆ.

The Man Who Knew Infinity- ಅನಂತದ ಒಡನಾಟದಲ್ಲಿ ಅರಳಿದ ಅಸಾಧಾರಣ ಗಣಿತ ಪ್ರತಿಭೆ ರಾಮಾನುಜನ್– ಡಾ ಉಮಾ ವೆಂಕಟೇಶ್

“Every positive integer is a friend of Ramanujan”

ಈ ಮಾತುಗಳನ್ನು ಹೇಳಿದ ವ್ಯಕ್ತಿ ಜಾನ್ ಲಿಟ್ಟಲ್ ವುಡ್, ಕೇಂಬ್ರಿಜ್ಜಿನ ಟ್ರಿನಿಟಿ ಕಾಲೇಜಿನಲ್ಲಿ ರಾಮಾನುಜನ್ ಜೊತೆಯಲ್ಲಿದ್ದ ಒಬ್ಬ ಪ್ರಖ್ಯಾತ ಗಣಿತಜ್ಞ.

ನಮ್ಮಲ್ಲಿ ಗಣಿತವನ್ನು ಬಲ್ಲ, ಗಣಿತದಲ್ಲಿ ಆಸಕ್ತಿಯುಳ್ಳ ಯಾರೇ ಆಗಲಿ, ಶ್ರೀನಿವಾಸ ರಾಮಾನುಜನ್ ಅವರ ಹೆಸರು ಹಾಗೂ ಆತನ ಗಣಿತದ ಪ್ರತಿಭೆಯ ಬಗ್ಗೆ ತಿಳಿಯದಿದ್ದವರು ಬಹಳ ಅಪರೂಪ. ೧೯ನೆಯ ಶತಮಾನದಲ್ಲಿ, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಉತ್ತುಂಗದಲ್ಲಿ, ಭಾರತದ ದಕ್ಷಿಣದಲ್ಲಿರುವ ತಮಿಳುನಾಡಿನ ಒಂದು ಸಣ್ಣ ಪಟ್ಟಣದಲ್ಲಿ ಅರಳಿದ ಈ ಅಸಾಧಾರಣ ಗಣಿತದ ಪ್ರತಿಭೆಯೊಂದು, ಮುಂದೆ ಪೂರ್ವ-ಪಶ್ಚಿಮಗಳೆರಡನ್ನೂ ಸಮಾನವಾಗಿ ಬೆರಗುಗೊಳಿಸಿತ್ತು. ಒಬ್ಬ ಸಾಮಾನ್ಯನಾದ, ಅರ್ಥವ್ಯಾಪ್ತಿಗೆ ಸಿಲುಕದ ಮೇಧಾವಿ ರಾಮಾನುಜನ್ ಜೀವನ ವೃತ್ತಾಂತವು, ಒಂದು ನಿಗೂಢ ಹಾಗೂ ಚಮತ್ಕಾರಿಕ ಅಂತಃಸತ್ವದ ಕಥೆಯಾಗಿದ್ದು, ನನಗೆ ಅದರ ಬಗ್ಗೆ ಅಷ್ಟಿಷ್ಟು ತಿಳಿದಿತ್ತು. ೧೯೯೬ರಲ್ಲಿ ಬ್ರಿಟನ್ನಿಗೆ ಬಂದ ನಂತರ, ಒಮ್ಮೆ ನಮ್ಮ ಗೆಳೆಯರಲ್ಲಿ ಹಲವರು ತಾವು ಓದಿದ ಪುಸ್ತಕವೊಂದರ ಬಗ್ಗೆ ಒಮ್ಮೆ ಚರ್ಚೆ ನಡೆಸಿದ್ದರು. ಅವರು ಚರ್ಚಿಸುತ್ತಿದ್ದ ಆ ಪುಸ್ತಕದ ಹೆಸರೇ ನನ್ನ ಈ ಲೇಖನದ ಶೀರ್ಷಿಕೆ The Man Who Knew Infinity. ಅವರೆಲ್ಲಾ ಕೊಂಡಾಡುತ್ತಿದ್ದ ವ್ಯಕ್ತಿಯೇ, ನಾನೀಗ ವಿಶ್ಲೇಷಿಸಲಿರುವ ಚಲನಚಿತ್ರದ ನಾಯಕನೂ ಹೌದು.

Robert Kanigel CC:Wiki
Robert Kanigel CC:Wiki

ಕಳೆದ ೨೫ ವರ್ಷಗಳಿಂದ ಒಬ್ಬ ಖಭೌತಶಾಸ್ತ್ರಜ್ಞನ ಜೊತೆ ದಾಂಪತ್ಯ ನಡೆಸಿರುವ ನನಗೆ, ಗಣಿತಶಾಸ್ತ್ರದ  ಚರ್ಚೆ ಅಪರೂಪದ ವಿಷಯವೇನಲ್ಲ. ರಾಮಾನುಜನ್ ಬಗ್ಗೆ ಆಗಾಗ್ಗೆ ಹಲವಾರು ಆಸಕ್ತಿಪೂರ್ಣ ವಿಷಯಗಳನ್ನು ನನ್ನವರ ಬಾಯಲ್ಲಿ ಕೇಳುತ್ತಲೇ ಇರುತ್ತೇನೆ. ಆದರೆ ೧೯೯೧ರಲ್ಲಿ ಪ್ರಕಟವಾಗಿದ್ದ ಈ ಪುಸ್ತಕದ ಲೇಖಕನಾದ ರಾಬರ್ಟ್ ಕಾನಿಗೆಲ್, ಒಬ್ಬ ಅಮೆರಿಕನ್ ಲೇಖಕ. ಈ ಪುಸ್ತಕವನ್ನು ಬರೆಯುವ ಮೊದಲು ಆತನಿಗೆ, ರಾಮಾನುಜನ್ ಬಗ್ಗೆ, ಅವನ ಸಾಧನೆಗಳ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲವಂತೆ. ಆದರೆ ಹಲವಾರು ಪುಸ್ತಕಗಳನ್ನು ಬರೆದು ಹೆಸರುವಾಸಿಯಾಗಿದ್ದ ವ್ಯಕ್ತಿ. ೧೯೮೮ರಲ್ಲಿ, ಆತ ರಾಮಾನುಜನ್ ಬಗ್ಗೆ ಓದಿ, ಕೇಳಿ ತಿಳಿದುಕೊಂಡನಂತರ, ತುಂಬಾ ಪ್ರಭಾವಿತನಾಗಿ ರಾಮಾನುಜನ್ ಜೀವನಚರಿತ್ರೆಯನ್ನು ಬರೆಯುವ ನಿರ್ಧಾರ ಮಾಡಿದನೆಂದು ಓದಿದ್ದೆ. ಸುಮಾರು ೨ ವರ್ಷಗಳ ಕಾಲ, ಈತ ಭಾರತದ ದಕ್ಷಿಣದಲ್ಲಿರುವ ತಮಿಳುನಾಡಿಗೆ ಹೋಗಿ, ಅಲ್ಲಿಯೇ ವಾಸಿಸುತ್ತಾ, ರಾಮಾನುಜನ್ ಹುಟ್ಟಿ, ಬೆಳೆದು, ಓದಿ, ಕೆಲಸಮಾಡಿದ್ದ ಸ್ಥಳಗಳಲ್ಲೆಲ್ಲಾ ತಿರುಗಾಡಿ, ಅವರೊಂದಿಗೆ ಒಡನಾಟವಿದ್ದ ವ್ಯಕ್ತಿಗಳು ಮತ್ತು ಅವರ ಕುಟುಂಬದವರೊಡನೆ ಬೆರೆತು ಮಾತನಾಡಿ ಸಂಗ್ರಹಿಸಿದ ವಿಷಯಗಳು, ಹಾಗೂ ಇಂಗ್ಲೆಂಡಿನ ಪ್ರಸಿದ್ಧ ಕೇಂಬ್ರಿಜ್ ವಿಶ್ವವಿದ್ಯಾಲಯದ, ಟ್ರಿನಿಟಿ ಕಾಲೇಜಿನಲ್ಲಿ ರಾಮಾನುಜನ್ ನಡೆಸಿದ ಮಹಾನ್ ಗಣಿತ ಸಂಶೋಧನೆ ಮತ್ತು ರಾಮಾನುಜನ್ ಟಿ.ಬಿ (ಕ್ಷಯ) ರೋಗಕ್ಕೆ ತುತ್ತಾದಾಗ ಅವರು ಅನುಭವಿಸಿದ ಕಷ್ಟಕಾರ್ಪಣ್ಯಗಳ ಬಗ್ಗೆ ಮತ್ತು ತಿರುಗಿ ಭಾರತಕ್ಕೆ ಮರಳಿದ ನಂತರ ಅವರ ಅಲ್ಪಾವಧಿಯ ಜೀವನ ಹಾಗೂ ಅವರ ಅಂತಿಮ ದಿನಗಳ ವರ್ಣನೆ ಇಷ್ಟನ್ನೂ ಸೇರಿಸಿ ಬರೆದಿರುವ ಈ ಪುಸ್ತಕವು, ಬಹುಶಃ ರಾಮಾನುಜನ್ ಬಗ್ಗೆ ಇದುವರೆಗೂ ಪ್ರಕಟವಾಗಿರುವ ಪುಸ್ತಕಗಳಲ್ಲೇ ಅತ್ಯುತ್ತಮವಾದದ್ದು ಎಂದು ಅನೇಕರು ಹೇಳಿರುವುದನ್ನು ಕೇಳಿದ್ದೇನೆ.

Mathematics Genius
Mathematics Genius, CC: Wiki

ಈಗ ೪ ವರ್ಷಗಳ ಹಿಂದೆ, ೨೦೧೧ರಲ್ಲಿ, ಈ ಮಹಾನ್ ಗಣಿತಜ್ಞನ ೧೨೫ ನೆಯ ಜನ್ಮ-ಶತಾಬ್ದಿಯ ಸಂದರ್ಭದಲ್ಲಿ, ರಾಬರ್ಟ್ ಕಾನಿಗೆಲ್ ಪುಸ್ತಕವನ್ನು ಭಾರತದ ಹಲವಾರು ಭಾಷೆಗಳಿಗೆ ತರ್ಜುಮೆ ಮಾಡುವ ಕಾರ್ಯಕ್ರಮವನ್ನು ಪ್ರಖ್ಯಾತ ಪ್ರಕಾಶನ ಸಂಸ್ಥೆ, National Book Trust of India ಕೈಗೊಂಡಿತ್ತು. ನನ್ನ ಆತ್ಮೀಯ ಸ್ನೇಹಿತ ಹಾಗೂ ಗಣಿತಶಾಸ್ತ್ರ ಪ್ರಾಧ್ಯಾಪಕನಾದ ಡಾ ಅರವಿಂದ ಶಾಸ್ತ್ರಿ, ತಾನು ಗಣಿತಜ್ಞ ರಾಮಾನುಜನ್ ಜೀವನ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯಕ್ಕೆ, ಪ್ರತಿಷ್ಟಿತ ಪ್ರಕಾಶಕರಾದ ನ್ಯಾಶನಲ್ ಬುಕ್ ಟ್ರಸ್ಟ್ ವತಿಯಿಂದ ನೇಮಿಸಲ್ಪಟ್ಟಿದ್ದೇನೆ, ಹಾಗೂ ಆ ಕಾರ್ಯವನ್ನು ಪ್ರಾರಂಭಿಸಿ ನಡೆಸುತ್ತಿರುವೆ ಎಂದು ತಿಳಿಸಿದ್ದನು. ಆ ವಿಷಯ ತಿಳಿದ ಕೂಡಲೆ, ನಾನೂ ಅದರಲ್ಲಿ ಭಾಗವಹಿಸಿ, ಅಲ್ಪಸ್ವಲ್ಪವಾದರೂ ನನ್ನ ಕೈಲಾಗುವ ಸಹಾಯ ಮಾಡಬೇಕೆಂಬ ಅಭಿಲಾಷೆ ಹುಟ್ಟಿತು. ನನ್ನ ಉತ್ಸಾಹವನ್ನು ಕಂಡ ಅರವಿಂದ, ನನಗೆ ಪುಸ್ತಕವನ್ನು ಓದಲು ತಿಳಿಸಿದ. ಸರಿ ಅಮೆಝಾನ್ ಮೂಲಕ ಥಟ್ಟನೆ ಪುಸ್ತಕ ತರಿಸಿ ಓದಲು ಪ್ರಾರಂಭಿಸಿದೆ. ಈ ಪುಸ್ತಕ ಒಂದೇ ದಿನದಲ್ಲಿ ನನ್ನ ಮನವನ್ನು ಸಂಪೂರ್ಣವಾಗಿ ಅಪಹರಿಸುವುದರಲ್ಲಿ ಯಶಸ್ವಿಯಾಗಿತ್ತು. ಅದನ್ನು ಕೆಳಗಿಡುವ ಮನಸ್ಸೇ ಇರಲಿಲ್ಲ. ಇಂತಹ ಅಸಾಧಾರಣ ಮೇಧಾವಿಯ ಜೀವನದಲ್ಲಿ ಇಷ್ಟೊಂದು ಕಷ್ಟಕಾರ್ಪಣ್ಯಗಳಿದ್ದವೇ? ಅದೆಲ್ಲವನ್ನೂ ಎದುರಿಸಿ ಆತ ನಡೆಸಿದ್ದ ಅಸಾಮಾನ್ಯ ಸಂಶೋಧನೆ, ಆತನ ಜೀವಿತದ ಸಮಯದಲ್ಲಿ ಅಂದಿನ ಬಹುತೇಕ ಮಂದಿಗೆ ತಿಳಿಯದೇ ಅಜ್ಞಾತವಾಗೇ ಉಳಿದಿತ್ತು ಎನ್ನುವ ಸಂಗತಿ ಮನಸ್ಸನ್ನು ಬಹಳ ನೋಯಿಸಿತ್ತು. ಎಲ್ಲದಕ್ಕಿಂತಲೂ, ಅಂತಹ ಅಸಾಧಾರಣ ಪ್ರತಿಭೆಗೆ ಅಷ್ಟು ಕಡಿಮೆ ಆಯಸ್ಸೇ? ಕೇವಲ ೩೨ ವರ್ಷಗಳ ತನ್ನ ಜೀವಿತಾವಧಿಯಲ್ಲಿ ಆತ ಬರೆದ ಪ್ರಮೇಯಗಳು, ಸೂತ್ರಗಳ ಬಗ್ಗೆ ಇಂದಿಗೂ ಪ್ರಪಂಚದ ಅನೇಕ ಗಣಿತಜ್ಞರು ತಮ್ಮ ಸಂಶೋಧನೆಗಳನ್ನು ಮುಂದುವರೆಸಿದ್ದಾರೆ. ಆತನ ಕಾರ್ಯಗಳು ಇನ್ನೂ ಗಣಿತಜ್ಞರನ್ನು ಆಶ್ಚರ್ಯಗೊಳಿಸತ್ತಲೇ ಇದೆ, ಮತ್ತು ಆತನ ಹಲವಾರು ಪ್ರಮೇಯಗಳು ಮತ್ತು ಸೂತ್ರಗಳನ್ನು ಇಂದು ಭೌತಶಾಸ್ತ್ರಜ್ನರು ತಮ್ಮ ಸಂಶೋಧನೆಗಳಲ್ಲಿ ಮತ್ತು ತಂತ್ರಜ್ನಾನದಲ್ಲಿ ಅಳವಡಿಸುತ್ತಿದ್ದಾರೆ ಎನ್ನುವುದು ಹೆಮ್ಮೆ ಮತ್ತು ಬೆರಗುಗೊಳಿಸುವ ಸಂಗತಿಯಲ್ಲವೇ!

ಇಂತಹ ಮಹಾನ್ ವ್ಯಕ್ತಿಯ ಜೀವನಚರಿತ್ರೆಯನ್ನಾಧರಿಸಿ ಚಲನಚಿತ್ರವೊಂದನ್ನು ನಿರ್ಮಿಸಲಾಗುತ್ತಿದೆ ಎನ್ನುವ ವಿಷಯ ನನಗೆ ತಿಳಿದಾಗ, ಅದನ್ನು ಬಹಳ ಕಾತುರದಿಂದ ನಿರೀಕ್ಷಿಸುತ್ತಿದ್ದೆ. ಪುಸ್ತಕದಲ್ಲಿ ಮುದ್ರಿತವಾದ ವಿಷಯಗಳು ನಮ್ಮನ್ನು ಎಷ್ಟೇ ಪ್ರಭಾವಿತಗೊಳಿಸಿದರೂ, ದೃಶ್ಯ ಮಾಧ್ಯಮ ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎನ್ನುವುದರಲ್ಲಿ ಸಂದೇಹವಿಲ್ಲ. ಸಿನಿಮಾ ಮಾಧ್ಯಮವು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಪರಿಣಾಮಕಾರಿಯಾಗಿ ತಲಪುವುದು ಎನ್ನುವುದು ಒಂದು ವಾಸ್ತವ ಸಂಗತಿ. ಹಾಗಾಗಿ ರಾಮಾನುಜನ್ ಚಲನಚಿತ್ರವನ್ನು ನಾವು ಎದಿರುನೋಡುತ್ತಿದ್ದೆವು. ಕಡೆಗೆ ನಾವು ನಿರೀಕ್ಷಿಸುತ್ತಿದ್ದ ಘಳಿಗೆ ಬಂದು, ಬ್ರಿಟನ್ನಿನ ನಿರ್ದೇಶಕ ಮ್ಯಾಥ್ಯು ಬ್ರೌನ್ ನಿರ್ದೇಶನದಲ್ಲಿ, ವಾರ್ನರ್ ಬ್ರದರ್ಸ್ ನಿರ್ಮಾಣ ಸಂಸ್ಥೆ ನಿರ್ಮಿಸಿದ ಈ ಮೇಲಿನ ಶೀರ್ಷಿಕೆಯ ಚಲನಚಿತ್ರ ಕಳೆದ ವಾರ ಬಿಡುಗಡೆಯಾಯಿತು. ಸುಮಾರು 1:54 ನಿಮಿಷಗಳ ಅವಧಿಯ ಈ ಚಿತ್ರವನ್ನು ವೀಕ್ಷಿಸಿದ ನಂತರ, ಈ ಸಿನಿಮಾ ಬಗ್ಗೆ ನನ್ನ ವಿಶ್ಲೇಷಣೆ ಇಂತಿದೆ.

British-Hollywood film CC:Wiki
British-Hollywood film
CC:Wiki

ಇದೊಂದು ಅಲ್ಪಾವಧಿಯ ಚಲನಚಿತ್ರವಾದ್ದರಿಂದ, ಇಲ್ಲಿ ರಾಮಾನುಜನ್ ಅವರ ಬಾಲ್ಯ, ಶಾಲಾ-ಕಾಲೇಜಿನ ದಿನಗಳನ್ನು ಪೂರ್ಣವಾಗಿ ಕೈಬಿಡಲಾಗಿದೆ. ಕೇವಲ ಗಣಿತದಲ್ಲಿ ಮಾತ್ರಾ ಆಸ್ಥೆಯಿದ್ದ ರಾಮಾನುಜನ್ ಬೇರೆ ವಿಷಯಗಳಲ್ಲಿ ಎಂದಿಗೂ ಆಸಕ್ತಿ ತೋರಲೇ ಇಲ್ಲ. ಹಾಗಾಗಿ ಅವರು ಎಷ್ಟೇ ಪ್ರಯತ್ನಿಸಿದ್ದರೂ ಕೂಡಾ, ಅವರಿಗೆ ವಿಶ್ವವಿದ್ಯಾಲಯದ ಪದವಿಯನ್ನು ಸಂಪಾದಿಸಲಾಗಲಿಲ್ಲ. ಬ್ರಿಟಿಷ್ ವಸಾಹತು ಆಳ್ವಿಕೆಯ ಉತ್ತುಂಗದ ಆ ದಿನಗಳಲ್ಲಿ, ಸರ್ಟಿಫ಼ಿಕೇಟ್ ಇಲ್ಲದ ಜ್ಞಾನಕ್ಕೆ ಎಲ್ಲಿಯೂ ಬೆಲೆ ಇರಲಿಲ್ಲ. ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನದೆದಿರು ಹೋರಾಡುತ್ತಿದ್ದ ರಾಮಾನುಜನ್, ಕೆಲಸಕ್ಕಾಗಿ ಅಲೆಯುವ ದೃಶ್ಯ ನಿಜಕ್ಕೂ ದಾರುಣವೆನಿಸುತ್ತದೆ. ಅವರ ಗಣಿತದ ಪ್ರಾವಿಣ್ಯತೆಯ ಬಗ್ಗೆ ಅರಿವಿದ್ದ ಪರಿಚಿತ ನಾರಾಯಣ ಅಯ್ಯರ್ ಅವರ ಶಿಫ಼ಾರಸಿನ ಫಲವಾಗಿ, ಕಡೆಗೊಮ್ಮೆ ಅವರಿಗೆ ಮದ್ರಾಸಿನ ಪೋರ್ಟ್ ಟ್ರಸ್ಟ್ ಆಫ಼ೀಸಿನಲ್ಲಿ ಲೆಕ್ಕಿಗನ ಕಾರ್ಯ ದೊರಕುತ್ತದೆ. ಈ ಚಲನಚಿತ್ರವನ್ನು ಅಲ್ಲಿಂದ ಪ್ರಾರಂಭಿಸಿದ್ದಾರೆ. ತನ್ನ ಲೆಕ್ಕಿಗನ ಕೆಲಸಗಳ ಜೊತೆಗೆ, ಬಿಡುವಿನ ಸಮಯದಲ್ಲಿ ಗಣಿತದ ಪ್ರಮೇಯಗಳು, ಸೂತ್ರಗಳು, ಸಮೀಕರಣಗಳನ್ನು ಸೃಷ್ಟಿಸಿ ಬಿಡಿಸುವ ರಾಮಾನುಜನ್ (ಚಿತ್ರದಲ್ಲಿ- Dev Patel), ಪೋರ್ಟ್ ಟ್ರಸ್ಟ್ ಅಧಿಕಾರಿ ಸರ್ ಫ಼್ರಾನ್ಸಿಸ್ ಸ್ಪ್ರಿಂಗನ (ಚಿತ್ರದಲ್ಲಿ- Stephen Fry) ಮೂಲಕ, ಅಂದು ಕೇಂಬ್ರಿಜ್ಜಿನ ಟ್ರಿನಿಟಿ ಕಾಲೇಜಿನಲ್ಲಿದ್ದ ಪ್ರಖ್ಯಾತ ಗಣಿತಶಾಸ್ತ್ರಜ್ಞನೆಂದೆನಿಸಿದ್ದ ಗಾಡ್ಫ಼್ರೆ ಹೆರಾಲ್ಡ್ ಹಾರ್ಡಿಗೆ, ರಾಮಾನುಜನ್ ತಾವು ಸೃಷ್ಟಿಸಿದ್ದ ಗಣಿತದ ಪ್ರಮೇಯಗಳು ಮತ್ತು ಸೂತ್ರಗಳಿದ್ದ ಕಾಗದಗಳನ್ನು ಕಳಿಸಿಕೊಡುತ್ತಾರೆ. ಆ ಕಾಗದ ಮತ್ತು ಪುಸ್ತಕಗಳಲ್ಲಿದ್ದ ಗಣಿತದ ಪ್ರಮೇಯಗಳನ್ನು ನೋಡಿ ದಿಗ್ಬ್ರಮೆಗೊಂಡ ಹಾರ್ಡಿ ಮತ್ತು ಅವನ ಸ್ನೇಹಿತ ಮತ್ತು ಸಹೋದ್ಯೋಗಿ ಜಾನ್ ಲಿಟ್ಟಲ್ ವುಡ್, ರಾಮಾನುಜನ್ ಒಬ್ಬ ಮೇಧಾವಿ ಇರಬೇಕು, ಇಲ್ಲವೇ ಒಬ್ಬ ಕುಯುಕ್ತಿಯವನಿರಬೇಕೆಂದು ತೀರ್ಮಾನಿಸುತ್ತಾರೆ. ಆದರೆ ಮೇಲಿಂದ ಮೇಲೆ ರಾಮಾನುಜನ್ ಕಳಿಸಿದ ಮತ್ತಷ್ಟು ಗಣಿತದ ಸಮಸ್ಯೆಗಳನ್ನು ನೋಡಿದ ಹಾರ್ಡಿ (ಚಿತ್ರದಲ್ಲಿ-Jeremy Irons) ಅವನೊಬ್ಬ ಅಸಾಧಾರಣ ಪ್ರತಿಭೆಯ ಗಣಿತಜ್ಞನೇ ಇರಬೇಕೆಂದು, ಅವನಿಗೆ ಟ್ರಿನಿಟಿ ಕಾಲೇಜಿನ ವಿದ್ವತ್ ವೇತನವಿತ್ತು, ಅವನನ್ನು ಕೇಂಬ್ರಿಜ್ಜಿಗೆ ಬರಲು ಆಹ್ವಾನಿಸುತ್ತಾರೆ. ಅಂದು ಸಮುದ್ರ ದಾಟುವ ಪದ್ಧತಿ ಬ್ರಾಹ್ಮಣರಲ್ಲಿ ಇರಲಿಲ್ಲ. ಸಮುದ್ರ ದಾಟಿದವರನ್ನು ಸಮಾಜದಿಂದ ಬಹಿಷ್ಕಾರ ಹಾಕುತ್ತಿದ್ದ ಆ ಕಾಲದಲ್ಲಿ, ತಾಯಿ ಮತ್ತು ಕುಟುಂಬದವರನ್ನು ಕಷ್ಟಪಟ್ಟು ಮನವೊಲಿಸಿದ ರಾಮಾನುಜನ್, ತನ್ನ ಗಣಿತ ಪ್ರತಿಭೆಯನ್ನು ಪಶ್ಚಿಮ ದೇಶದಲ್ಲಿ ಬೆಳಗುವ ಮಹತ್ವಾಕಾಂಕ್ಷೆಯನ್ನು ಹೊತ್ತು, ಹಡಗನ್ನೇರಿ ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಹೆಸರಾಗಿದ್ದ, ಬ್ರಿಟಿಷ್ ದ್ವೀಪಗಳತ್ತ ಪ್ರಯಾಣ ಬೆಳಸುತ್ತಾರೆ.

ಅಂದಿನ ಸಮಯದಲ್ಲಿ ಪ್ರಪಂಚದ ಅತ್ಯುತ್ತಮ ಜ್ಞಾನಸಂಪಾದನೆಯ ಕೇಂದ್ರವೆನಿಸಿದ್ದ ಕೇಂಬ್ರಿಜ್ಜ್ ವಿಶ್ವವಿದ್ಯಾಲಯದ, ಟ್ರಿನಿಟಿ ಕಾಲೇಜನ್ನು ಪ್ರವೇಶಿಸುವ ರಾಮಾನುಜನ್, ಅಲ್ಲಿನ ಪ್ರವೇಶ ಪ್ರಾಂಗಣದಲ್ಲಿ ಇರಿಸಿದ್ದ ಸರ್ವಕಾಲಿಕ ಮೇಧಾವಿ ಸರ್ ಆಲ್ಬರ್ಟ್ ಐಸ್ಯಾಕ್ ನ್ಯೂಟನ್ ಪ್ರತಿಮೆಯನ್ನೇ ಆರಾಧನಾಭಾವದಿಂದ ನೋಡುತ್ತಾರೆ. ರಾಮಾನುಜನ್ ಈಗಾಗಲೇ ಕಳಿಸಿದ್ದ ಪ್ರಮೇಯಗಳು, ಸೂತ್ರಗಳನ್ನು ನೋಡಿದ್ದ ಹಾರ್ಡಿ, ಈ ಪ್ರಮೇಯಗಳಿಗೆ ಸಾಕ್ಷ್ಯಾಧಾರಗಳನ್ನು ಒದಗಿಸದಿದ್ದಲ್ಲಿ, ಅವನ್ನು ಇತರ ಗಣಿತಜ್ಞರು ಗಂಭೀರವಾಗಿ ಸ್ವೀಕರಿಸುವುದಿಲ್ಲ ಎಂದು ಪದೇ ಪದೇ ಒತ್ತಿ ಹೇಳುತ್ತಾರೆ. ಸ್ವಲ್ಪ ಅಹಂಕಾರದಿಂದಲೇ ರಾಮಾನುಜನ್, ಆ ಪ್ರಮೇಯಗಳೆಲ್ಲಾ ಸರಿಯಾಗಿವೆ, ತನ್ನ ಸಂಶೋಧನೆ ಪರಿಪೂರ್ಣ ಎನ್ನುವ ವಾದವನ್ನು ಪಟ್ಟುಹಿಡಿದು ಮುಂದಿಟ್ಟಾಗ, ಸಿಟ್ಟಿಗೇಳುವ ಹಾರ್ಡಿಯ ಹತಾಶೆಯ ಭಾವನೆಗಳನ್ನು ನಟ ಜೆರಮಿ ಐರನ್ಸ್ ಬಹಳ ಚೆನ್ನಾಗಿ ವ್ಯಕ್ತಪಡಿಸಿದ್ದಾನೆ. ತಾನು ಸಾವಿರಾರು ಮೈಲಿ ಪ್ರಯಾಣಿಸಿ, ಕೇಂಬ್ರಿಜ್ಜಿಗೆ ಬಂದಿರುವುದು ತನ್ನ ಕಾರ್ಯವನ್ನು ಪ್ರಕಟಿಸುವ ಸಲುವಾಗಿ ಎಂದು ತನ್ನ ವಾದವನ್ನು ಮುಂದುವರೆಸುವ ರಾಮಾನುಜನ್, ಮತ್ತು ಅದನ್ನು ವಿರೋಧಿಸುವ ಇತರ ಗಣಿತಜ್ಞರ ನಡುವಿನ ಕಲಹ ಮುಂದುವರೆದಾಗ, ಇದರ ಮಧ್ಯದಲ್ಲಿ ಸಿಲುಕುವ ಹಾರ್ಡಿ ಮತ್ತು ಲಿಟ್ಟಲ್ ವುಡ್ (ಚಿತ್ರದಲ್ಲಿ- Toby Jones) ಪರಿಸ್ಥಿತಿ ಪ್ರೇಕ್ಷಕರಲ್ಲಿ ಅನುಕಂಪವನ್ನುಂಟು ಮಾಡುತ್ತದೆ.

ರಾಮಾನುಜನ್ ಬಂದ ಕೆಲವೇ ತಿಂಗಳಲ್ಲಿ, ಮೊದಲ ಮಹಾಯುದ್ಧ ಪ್ರಾರಂಭವಾಗಿ, ಟ್ರಿನಿಟಿ ಕಾಲೇಜಿನ ಆವರಣವನ್ನು ತಾತ್ಕಾಲಿಕ ಸೈನಿಕ ಶಿಬಿರ ಮತ್ತು ಆಸ್ಪತ್ರೆಯಾಗಿ ಪರಿವರ್ತನೆಗೊಳ್ಳುತ್ತದೆ. ಮೊದಲೇ ಸಸ್ಯಾಹಾರಿಯಾದ ರಾಮಾನುಜನ್,  ಅಲ್ಲಿ ಸರಿಯಾದ ಪೌಷ್ಟಿಕ ಆಹಾರವಿಲ್ಲದೆ ಪರದಾಡುತ್ತಿದ್ದಾಗ, ಯುದ್ಧದ ರೇಶನ್ ಸಮಸ್ಯೆಯೂ ಸೇರಿ, ಊಟವಿಲ್ಲದೇ ಕೇವಲ ಅನ್ನ ಮತ್ತು ನಿಂಬೆಹಣ್ಣಿನ ರಸವನ್ನು ತಿನ್ನುವ ದೃಶ್ಯ ಮನಕಲಕುತ್ತದೆ. ಪೌಷ್ಟಿಕತೆಯ ಕೊರತೆಯಿಂದಾಗಿ ದುರ್ಬಲಗೊಂಡ ರಾಮಾನುಜನ್, ಬಹುಬೇಗನೆ ಟಿ.ಬಿ ವ್ಯಾಧಿಗೆ ತುತ್ತಾಗುತ್ತಾರೆ. ರೋಗದ ಬಗ್ಗೆ ಯಾರಿಗೂ ಸುಳಿವು ಕೊಡದೆ, ಕಡೆಗೊಮ್ಮೆ ಹಾರ್ಡಿಯ ಒತ್ತಾಯದ ಮೇರೆಗೆ ತನ್ನ ಪ್ರಮೇಯಗಳಿಗೆ ಹಂತ ಹಂತವಾಗಿ ಸಾಕ್ಷ್ಯಾಧಾರಗಳನ್ನು ಒದಗಿಸುವ ಕಾರ್ಯವನ್ನು ರಾಮಾನುಜನ್ ಹಗಲೂ ರಾತ್ರಿಯೆನ್ನದೆ ಕುಳಿತು ನಡೆಸುತ್ತಾರೆ. ಅವರ ಈ ಸಂಶೋಧನೆಯನ್ನು ಕಂಡು ತೃಪ್ತಿಗೊಂಡ ಹಾರ್ಡಿ, ಅದನ್ನು  ಪ್ರಕಟಿಸುವ ನಿರ್ಧಾರ ತಿಳಿಸಿದಾಗ, ಅವರಿಬ್ಬರ ಮಧ್ಯೆ ನಡೆಯುತ್ತಿದ್ದ ಶೀತಲ ಯುದ್ಧ ಮುಗಿದು ವಾತಾವರಣ ತಿಳಿಯಾಗುತ್ತದೆ. ಅವರ ನಡುವಿನ ಸಮರಕ್ಕೆ ಸಾಕ್ಷಿಯಾಗಿದ್ದ ಲಿಟ್ಟಲ್ ವುಡ್ ಮಹಾಯುದ್ಧದಲ್ಲಿ ಕ್ಷಿಪಣಿಗಳನ್ನು ಹಾರಿಸುವ ಕಾರ್ಯದ ಸಂಶೋಧನೆಯಲ್ಲಿ ಪಾಲ್ಗೊಳ್ಳಲು ಯುದ್ಧಭೂಮಿಗೆ ತೆರಳಿದಾಗ, ರಾಮಾನುಜನ್ ಅವರ ಒಡನಾಡಿತ್ವವೂ ಇಲ್ಲದೇ ಒಂಟಿಯಾಗುತ್ತಾರೆ.

ಅದೇ ವಿಭಾಗದಲ್ಲಿದ್ದ ಮೇಜರ್ ಮ್ಯಾಕಮಹಾನ್ ಎಂಬ ಮತ್ತೊಬ್ಬ ಗಣಿತಜ್ಞನು, Partitions ಎಂಬ ಸಮಸ್ಯೆಯನ್ನು ತಾನು ಅತ್ಯಂತ ಯಶಸ್ವಿಯಾಗಿ ಬಿಡಿಸಿದ್ದೇನೆ ಎಂದು ಹೆಮ್ಮೆಯಿಂದ ಬೀಗುತ್ತಿದ್ದ ಸಮಯದಲ್ಲಿ, ರಾಮಾನುಜನ್ ಅದನ್ನು ಅತ್ಯಂತ ಸರಳವಾಗಿ ಬಿಡಿಸುವ ಸೂತ್ರವೊಂದನ್ನು ಕಂಡುಹಿಡಿದ್ದಾನೆ ಎನ್ನುವ ವಿಷಯವನ್ನು ಹಾರ್ಡಿ ಆತನಿಗೆ ತಿಳಿಸುತ್ತಾನೆ. ಮ್ಯಾಕಮಹಾನ್ ಅದರಲ್ಲಿ ವಿಶ್ವಾಸ ತೋರದೆ ಇದ್ದಾಗ, ಒಂದು ನಿಗದಿ ಪಡಿಸಿದ ದಿನ ಮತ್ತು ಸಮಯದಂದು ಅವರಿಬ್ಬರೂ ಮುಖಾಮುಖಿ ತಾವು ನಡೆಸಿದ್ದ ಲೆಕ್ಕಾಚಾರಗಳನ್ನು ಹೋಲಿಸಿ ನೋಡಿದಾಗ, ಮ್ಯಾಕಮೋಹನ್ ಆ ಸಮಸ್ಯೆಯನ್ನು ಬಿಡಿಸಲು ಒಂದು ತಿಂಗಳ ಕಾಲ ಎಡಬಿಡದ ಪರಿಶ್ರಮ ನಡೆಸಿರುತ್ತಾನೆ, ಆದರೆ ರಾಮಾನುಜನ್ ತನ್ನ ಮೇಧಾವಿತನದಿಂದ ಕಂಡುಹಿಡಿದ ಕೇವಲ ಒಂದು ಸೂತ್ರದ ಸಹಾಯದಿಂದ, ಅದೇ ಸಮಸ್ಯೆಯನ್ನು ಅಲ್ಪಾವಧಿಯಲ್ಲಿ ಅತ್ಯಂತ ಪರಿಪೂರ್ಣವಾಗಿ ಬಿಡಿಸುವುದರಲ್ಲಿ ಯಶಸ್ವಿಯಾಗಿದ್ದರು. ಈ ಸನ್ನಿವೇಶವನ್ನು ನಿರ್ದೇಶಕ ಅತ್ಯಂತ ಚಾಕಚಕ್ಯತೆಯಿಂದ ಚಿತ್ರೀಕರಿಸಿ, ಕೇವಲ ಆ ಒಂದೇ ದೃಶ್ಯದಲ್ಲಿ ರಾಮಾನುಜನ್ ಅವರಿಗಿದ್ದ ಪ್ರತಿಭೆಯನ್ನು ಪ್ರೇಕ್ಷಕರಿಗೆ ತೋರಿಸುವುದರಲ್ಲಿ ಯಶಸ್ವಿಯಾಗಿದ್ದಾನೆ.

ಈ ಎಲ್ಲಾ ಸನ್ನಿವೇಶಗಳ ನಡುವೆ, ರಾಮಾನುಜನ್ ತನ್ನ ಕುಟುಂಬದವರಿಂದ, ಅದರಲ್ಲೂ ತಮ್ಮ ಪತ್ನಿಯಿಂದ ಯಾವ ಕಾಗದವೂ ಬರದಿದ್ದರಿಂದ ಬಹಳ ಖಿನ್ನರಾಗಿ, ಒಂದು ದುರ್ಬಲ ಘಳಿಗೆಯಲ್ಲಿ ಲಂಡನ್ನಿನಲ್ಲಿ ರೈಲಿನ ಕೆಳಗೆ ಬಿದ್ದು ಆತ್ಮಹತ್ಯೆಗೂ ಪ್ರಯತ್ನಿಸುತ್ತಾರೆ. ಪ್ರಕಟವಾಗದ ತಮ್ಮ ಗಣಿತದ ಫಲಿತಾಂಶ, ಕಾಡುತ್ತಿದ್ದ ಒಂಟಿತನ, ಸರಿಯಾಗಿ ಮಾತನಾಡಲು ಸಿಕ್ಕದ ಸ್ನೇಹಿತರು, ಅಪೌಷ್ಟಿಕ ಆಹಾರ ಹೀಗೆ ಹಲವು ಹತ್ತು ಸಮಸ್ಯೆಗಳಿಂದ ನರಳುವ ರಾಮಾನುಜನ್ ಸ್ಥಿತಿ ನಿಜಕ್ಕೂ ಮನಮಿಡಿಯುತ್ತದೆ. ಅವರಿಗೆ ಅಂಟಿದ್ದ ಟಿ.ಬಿ ರೋಗವು ದಿನದಿನಕ್ಕೆ ವಿಷಮಿಸಿದಾಗ, ಅವರ ಸ್ಥಿತಿಯನ್ನು ಕಂಡ ಹಾರ್ಡಿ, ಅವರ ಆರೋಗ್ಯ ಸರಿಯಿಲ್ಲವೆಂದು ತಿಳಿದಾಗ ಬಹಳ ವ್ಯಥೆಪಡುತ್ತಾರೆ. ಲಂಡನ್ನಿನ ಪಟ್ನಿಯಲ್ಲಿರುವ ಒಂದು ಸ್ಯಾನಿಟೋರಿಯಮ್ಮಿನಲ್ಲಿ ನರಳುತ್ತಾ ಮಲಗಿದ್ದ ರಾಮಾನುಜನ್ ಅವರನ್ನು ಹಾರ್ಡಿ ಭೇಟಿಯಾಗಲು ಹೋದಾಗ, ಅವರು ಕುಳಿತ ಟಾಕ್ಸಿಯ ನಂಬರ್ 1729 ಆಗಿರುತ್ತದೆ. ಅವರು ರಾಮಾನುಜನ್ ಜೊತೆ ಆ ನಂಬರ್ ಬಹಳ ಸಪ್ಪೆಯಾದ ಸಂಖ್ಯೆ ಎಂದಾಗ, ರಾಮಾನುಜನ್ ತನ್ನ ಖಾಯಿಲೆಯ ಸ್ಥಿತಿಯಲ್ಲೂ ಕೂಡಾ ಆ ಸಂಖ್ಯೆಯ ವೈಶಿಷ್ಟ್ಯತೆಯನ್ನು ವಿವರಿಸುತ್ತಾ, ಕ್ಷಣಾರ್ಧದಲ್ಲಿ ಆ ಸಂಖ್ಯೆ ಬಹಳ ಆಸಕ್ತಿಪೂರ್ಣವಾದ ಸಂಖ್ಯೆ ಎನ್ನುತ್ತಾ ಅದರ ಮಹತ್ವವನ್ನು ವಿವರಿಸುತ್ತಾ, ಅದು ಎರಡು ರೀತಿಯಲ್ಲಿ, ಎರಡು ಘನಗಳ ಮೊತ್ತದಂತೆ ನಿರೂಪಿಸಬಹುದಾದ ಅತಿ ಚಿಕ್ಕ ಸಂಖ್ಯೆ” ಎಂದು ತಿಳಿಸಿದಾಗ, ಹಾರ್ಡಿ ಈ ಹಿಂದೆ ಲಿಟ್ಟಲ್ ವುಡ್ “ಪ್ರತಿಯೊಂದು ಧನಾತ್ಮಕ ಪೂರ್ಣಾಂಕವೂ, ರಾಮಾನುಜನನ ಸಂಗಾತಿಗಳು”, ಎಂದು ಹೇಳಿದ್ದ ಸಂಗತಿಯನ್ನು ಜ್ಞಾಪಿಸಿಕೊಳ್ಳುತ್ತಾರೆ. ಇಂದು ಆ ಸಂಖ್ಯೆಯನ್ನು ಹಾರ್ಡಿ-ರಾಮಾನುಜನ್ ನಂಬರ್ ೧೭೨೯ ಎಂದೇ ಕರೆಯಲಾಗುತ್ತದೆ. ಆ ಸನ್ನಿವೇಶವನ್ನು ಚಿತ್ರದಲ್ಲಿ ತೋರಿಸಿರುವ ಸಮಯ ಮತ್ತು ಸನ್ನಿವೇಶ ಸ್ವಲ್ಪ ಬೇರೆಯಿದ್ದರೂ, ರಾಮಾನುಜನ್ ಮೇಧಾವಿತನಕ್ಕೆ ಸಾಕ್ಷಿಯಾದ ಈ ಪ್ರಸಂಗ ಪ್ರೇಕ್ಷಕರನ್ನು ಬೆರಗಾಗಿಸುತ್ತದೆ.

ರಾಮಾನುಜನ್ ತನ್ನ ಸ್ಥಿತಿಯಲ್ಲಿ ಇನ್ನು ಹೆಚ್ಚು ದಿನ ತನಗೆ ಬದುಕುವ ಅವಕಾಶವಿಲ್ಲ ಎಂದು ತಿಳಿದು, ಹಾರ್ಡಿಯೊಡನೆ ತಾನು ಮರಳಿ ಮದ್ರಾಸಿಗೆ ಹೋಗುವುದಾಗಿ ತಿಳಿಸುತ್ತಾರೆ. ಮಹಾಯುದ್ಧ ಆಗತಾನೆ ಕೊನೆಗೊಂಡು ಯೂರೋಪಿನ ಜನ ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಡುತ್ತಾರೆ. ಹಾರ್ಡಿ ಹೇಗಾದರೂ ಮಾಡಿ ರಾಮಾನುಜನ್ ಮಾಡಿದ ಅಪ್ರತಿಮ ಕಾರ್ಯಕ್ಕೆ ದಕ್ಕಬೇಕಾದ ಗೌರವವನ್ನು ಅವನಿಗೆ ಕೊಡಿಸಲೇ ಬೇಕು ಎನ್ನುವ ದೃಢನಿರ್ಧಾರ ಮಾಡಿ, ಟ್ರಿನಿಟಿ ಕಾಲೇಜ್ ಮತ್ತು ರಾಯಲ್ ಸೊಸೈಟಿಯ ಫ಼ೆಲೋ ಎಂಬ ಗೌರವ ಸದಸ್ಯತ್ವಕ್ಕೆ ಅವನ ಹೆಸರನ್ನು ಸೂಚಿಸುತ್ತಾರೆ. ಆ ಎರಡೂ ಸಂಸ್ಥೆಗಳಲ್ಲಿದ್ದ ಅಧಿಕಾರಿಗಳು, ಅಂದಿನ ಸನ್ನಿವೇಶದಲ್ಲಿ ಯಾವುದೇ ರೀತಿಯ ವಿಶ್ವವಿದ್ಯಾಲಯದ ಪದವಿ ಸಂಪಾದಿಸಿಲ್ಲದ ರಾಮಾನುಜನ್ ಅವರಿಗೆ, ಈ ಗೌರವ ನೀಡಲು ಬಹಳ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಆದರೆ ಹಾರ್ಡಿಯೂ ತಾನು ಹಿಡಿದ ಪಟ್ಟನ್ನು ಬಿಡದೆ, ರಾಮಾನುಜನ್ ಪ್ರತಿಭೆಯನ್ನು, ಅವರ ಕಾರ್ಯಗಳನ್ನು ಸದಸ್ಯರ ಮುಂದಿಟ್ಟು, ಅದರ ಪರವಾಗಿ ಇನ್ನೂ ಹಲವು ಸದಸ್ಯರ ಬೆಂಬಲ ಪಡೆದು ಅಂತಿಮವಾಗಿ ಅವರಿಗೆ ಈ ಎರಡೂ ಸಂಸ್ಥೆಗಳ ಗೌರವ ಸದಸ್ಯತ್ವವನ್ನು ಕೊಡಿಸುವುದರಲ್ಲಿ ಯಶಸ್ವಿಯಾಗುತ್ತಾರೆ. ಹಾರ್ಡಿ, ರಾಮಾನುಜನ್ ಪರವಾಗಿ ಈ ಸಂಸ್ಥೆಗಳ ಎದಿರು ಮಾಡುವ ವಾದ ನಿಜಕ್ಕೂ ಪರಿಣಾಮಕಾರಿಯಾಗಿದೆ. ಜೆರಮಿ ಐರನ್ಸ್ ಈ ದೃಶ್ಯದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ರಾಮಾನುಜನ್ ಆರೋಗ್ಯ ಸ್ವಲ್ಪ ಉತ್ತಮಗೊಂಡು, ಅವರು ಕಾಲೇಜಿಗೆ ಮರಳಿದಾಗ ಟ್ರಿನಿಟಿ ಕಾಲೇಜಿನ ಸದಸ್ಯತ್ವ ಅವರಿಗೆ ನೀಡುವ ಸಂದರ್ಭವನ್ನು ತೋರಿಸಿದಾಗ, ಪ್ರೇಕ್ಷಕರ ಕಣ್ಣುಗಳು ಒದ್ದೆಯಾದರೆ ಯಾವ ಆಶ್ಚರ್ಯವೂ ಇಲ್ಲ. ಆ ಮಹಾನ್ ಪ್ರತಿಭೆಗೆ ಸಂದ ಗೌರವ, ಇಡೀ ಗಣಿತದ ಪ್ರಪಂಚಕ್ಕೆ ಸಂದ ಗೌರವ ಎನ್ನುವ ಭಾವನೆ ಹುಟ್ಟುವುದು.

ರಾಮಾನುಜನ್ ಮರಳಿ ಮದ್ರಾಸಿಗೆ ಬಂದ ಹಲವೇ ತಿಂಗಳುಗಳಲ್ಲೇ, ಅವರ ಸ್ಥಿತಿ ವಿಷಮಿಸಿ ಅವರು ತೀರಿಕೊಂಡ ಸುದ್ದಿ ಹಾರ್ಡಿಯನ್ನು ತಲುಪಿದಾಗ, ಹಾರ್ಡಿಯ ದುಃಖ ಉಕ್ಕಿ ಕಣ್ಣಿರಾಗಿ ಹರಿಯುತ್ತದೆ ಎನ್ನುವಲ್ಲಿಗೆ ಈ ಚಿತ್ರವನ್ನು ಅಂತ್ಯಗೊಳಿಸಲಾಗಿದೆ.

“ದೈವದ ಒಂದು ಚಿಂತನೆಯನ್ನು ಪ್ರತಿನಿಧಿಸದ ಯಾವುದೇ ಸಮೀಕರಣವೂ, ನನ್ನ ಹೃದಯವನ್ನು ತಟ್ಟುವುದಿಲ್ಲ,” ಎಂದು ಹೇಳುತ್ತಿದ್ದ ರಾಮಾನುಜನ್, ಒಬ್ಬ ಕಟ್ಟಾ ದೈವಭಕ್ತನಾಗಿದ್ದರು. ತಮ್ಮ ಕುಲದೇವತೆ ನಾಮಕಲ್ಲಿನ ದೇವಿ ತಮ್ಮ ಕನಸಿನಲ್ಲಿ ಬಂದು, ತಮ್ಮ ನಾಲಿಗೆಯ ಮೇಲೆ ಸೂತ್ರಗಳನ್ನು ಬರೆಯುತ್ತಾಳೆ ಎಂದು ಒಮ್ಮೆ ಅವರು ನೀಡಿದ್ದ ವಿವರಣೆಯನ್ನು, ನಾಸ್ತಿಕನಾಗಿದ್ದ ಹಾರ್ಡಿಗೆ ನಂಬಲು ಅಸಾಧ್ಯವಾಗಿತ್ತು. ಹೀಗೆ ಸಾಂಸ್ಕೃತಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಇತರ ಚಿಂತನೆಗಳಲ್ಲಿ ಅಪಾರವಾದ ಭಿನ್ನತೆಯನ್ನು ಹೊಂದಿದ್ದ ಈ ವ್ಯಕ್ತಿಗಳ ನಡುವೆ ಇದ್ದ ಬಾಂಧವ್ಯದ ಒಂದೇ ಒಂದು ಸಂಪರ್ಕ ಕೊಂಡಿ ಕೇವಲ ಗಣಿತವಾಗಿತ್ತು.  ತಮ್ಮ ಜೀವನದಲ್ಲಿ ಕಂಡ “ಅತ್ಯಂತ ಪ್ರತಿಭಾಶಾಲಿ ಹಾಗೂ ಸೃಜನಶೀಲ ಗಣಿತಶಾಸ್ತ್ರಜ್ಞನೆಂದರೆ ರಾಮಾನುಜನ್”, ಎಂದಿದ್ದ ಹಾರ್ಡಿ, ತನ್ನ ಜೀವನದ ಅತ್ಯಂತ ಮಹತ್ವದ ಅನ್ವೇಷಣೆಯೂ ಆತನೇ ಎಂದಿದ್ದರು. ಇಂದು ಪ್ರಪಂಚದಲ್ಲಿ ರಾಮಾನುಜನ್ ಮತ್ತು ಆತನ ಗಣಿತೀಯ ಸಾಧನೆಗಳು ಗಳಿಸಿರುವ ಅತ್ಯುನ್ನತ ಸ್ಥಾನ ಮತ್ತು ಹೆಗ್ಗಳಿಕೆಗಳಿಗೆ ಕಾರಣಕರ್ತನೆಂದರೆ, ಗಾಡ್ಫ಼್ರೆ ಹೆರಾಲ್ಡ್ ಹಾರ್ಡಿ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ರಾಮಾನುಜನ್ ನಂತಹ ಒಂದು ಅಮೂಲ್ಯ ವಜ್ರವನ್ನು, ಗಣಿತ ಪ್ರಪಂಚದ ರತ್ನಹಾರಕ್ಕೆ ಸೇರಿಸಿದ ಕೀರ್ತಿ ಆತನಿಗೇ ಸಲ್ಲಬೇಕು.

ಈ ಚಲನಚಿತ್ರದಲ್ಲಿ ರಾಮಾನುಜನ್ ಮತ್ತು ಹಾರ್ಡಿಯ ನಡುವಣದ ಬಾಂಧವ್ಯವನ್ನು ಅತ್ಯಂತ ಸೂಕ್ಷ್ಮವಾಗಿ, ನವಿರಾಗಿ ಚಿತ್ರಿಸಲಾಗಿದೆ. ರಾಮಾನುಜನ್ ಪಾತ್ರದ ದೇವ್ ಪಟೇಲ್, ಹಾರ್ಡಿ ಪಾತ್ರದ ಜೆರಮಿ ಐರನ್ಸ್ ತಮ್ಮ ಅಭಿನಯದಲ್ಲಿ ಮಿಂಚಿದ್ದಾರೆ. ಲಿಟ್ಟಲ್ ವುಡ್ ಪಾತ್ರದಲ್ಲಿ ಅಭಿನಯಿಸಿರುವ ಟೋಬಿ ಜೋನ್ಸ್, ತಮಗೆ ಸಿಕ್ಕ ಅಲ್ಪ ಸಮಯದಲ್ಲೇ ತಮ್ಮ ಪ್ರತಿಭೆ ತೋರಿದ್ದಾರೆ ಎನ್ನಬಹುದು. ಗಣಿತದ ಬಗ್ಗೆ, ರಾಮಾನುಜನ್ ಬಗ್ಗೆ ಅಭಿಮಾನ ಉಳ್ಳ ಪ್ರೇಕ್ಷಕರು ಬಹಳ ನಿರೀಕ್ಷೆಗಳನ್ನು ಹೊತ್ತು ಈ ಚಿತ್ರ ನೋಡಲು ಹೋದರೆ, ಸಮಯ ಮತ್ತು ಹಣದ ಅಭಾವದಿಂದಾಗಿ, ಚಿತ್ರದಲ್ಲಿನ ಹಲವಾರು ನ್ಯೂನತೆ ಮತ್ತು ಕೊರತೆಗಳು ಅವರನ್ನು ನಿರಾಸೆಗೊಳಿಸಬಹುದು. ಆದರೂ ರಾಮಾನುಜನ್ ಕುರಿತಾಗಿ ನಿರ್ಮಿಸಿರುವ ಈ ಚಲನಚಿತ್ರ, ಒಂದು ಮೈಲುಗಲ್ಲೆಂದೇ ನನ್ನ ಅಭಿಪ್ರಾಯ.

ಇಂತಹ ಮಹಾನ್ ವ್ಯಕ್ತಿಯೊಬ್ಬನನ್ನು ಪ್ರಪಂಚಕ್ಕೆ ಕೊಡುಗೆ ಇತ್ತ ನಮ್ಮ ಭಾರತ ದೇಶದಲ್ಲಿ, ಅಲ್ಲಿನ ಚಲನಚಿತ್ರರಂಗ ಇದುವರೆಗೂ ಈತನ ಮೇಧಾವಿತನದ ಬಗ್ಗೆ ಒಂದು ಉತ್ತಮವಾದ ಸಿನಿಮಾ ಮಾಡಿಲ್ಲ. ೨೦೧೪ರಲ್ಲಿ ಬಿಡುಗಡೆಯಾದ ಒಂದು ತಮಿಳಿನ ಚಿತ್ರ ಭಾರತದಲ್ಲಿ (ಪ್ರಮುಖವಾಗಿ ತಮಿಳುನಾಡಿನಲ್ಲಿ) ಅಲ್ಪಸ್ವಲ್ಪ ಯಶಸ್ಸನ್ನು ಗಳಿಸಿದೆ. ಆದರೆ ರಾಷ್ಟ್ರ ಮಟ್ಟದಲ್ಲಿ, ಭಾರತೀಯರೆಲ್ಲರೂ ಹೆಮ್ಮೆ ಪಡಬಹುದಾದ ಚಿತ್ರವೊಂದನ್ನು ಇನ್ನೂ ನಿರ್ಮಿಸಿಲ್ಲ ಎನ್ನುವುದು ಬಹಳ ವಿಶಾದದ ಸಂಗತಿ. ನಮ್ಮ ರಾಷ್ಟ್ರ ಪಿತಾಮಹ “ಗಾಂಧಿಯ” ಬಗ್ಗೆ ಚಲನಚಿತ್ರ ನಿರ್ಮಿಸದೆ, ೧೯೮೩ರವರೆಗೆ ಸುಮ್ಮನಿದ್ದು,  ಅದರ ಗೌರವ ಮತ್ತು  ಹೆಗ್ಗಳಿಕೆಗಳು ಒಬ್ಬ ಬ್ರಿಟಿಷ್ ಚಿತ್ರ ನಿರ್ಮಾಪಕ, ನಿರ್ದೇಶಕನಾದ ಸರ್ ರಿಚರ್ಡ್ ಅಟೆನಬರೋ ಅವರಿಗೆ  ಸಲ್ಲುವಂತೆ ಮಾಡಿದ ದೇಶ ನಮ್ಮದು.

 ಗಾಂಧಿಯನ್ನೇ ಕಡೆಗಣಿಸಿದ ನಾವು, ರಾಮಾನುಜನ್ ಅವರನ್ನು ಮೂಲೆಗೊತ್ತಿದ್ದರೆ ಆಶ್ಚರ್ಯವೇನು!