ಉಮಾ ವೆಂಕಟೇಶ್ ಬರೆವ ವಿಜ್ಞಾನ ಮತ್ತು ವನಿತೆಯರು ಸರಣಿ: ಲೀಸ ಮೈಟ್ನರ್

ಲೇಖಕರು: ಉಮಾ ವೆಂಕಟೇಶ್

ಉಮಾ ವೆಂಕಟೇಶ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆಯ ಸಂಸ್ಥಾಪಕರಲ್ಲಿ ಒಬ್ಬರು. `ಕನ್ನಡವೆನೆ ಕಿವಿ ನಿಮಿರುವುದು` ಎಂದು ಕವಿ ಇವರನ್ನೇ ನೋಡಿ ಬರೆದಿರಬೇಕು. ಕನ್ನಡದ ಸೇವೆಗೆ ಎಲ್ಲಿದ್ದರೂ ಹಾಜರು. ಕನ್ನಡ ಸಾಹಿತ್ಯ, ಅದರಲ್ಲೂ ವೈಜ್ಞಾನಿಕ ಸಾಹಿತ್ಯ ಇವರ ಮುಖ್ಯ ಆಸಕ್ತಿ. ಇಂಗ್ಲಂಡಿನಲ್ಲಿ ವಿಜ್ಞಾನಿ ಪತಿಯೊಡನೆ `ಅನಿವಾಸಿ` ಬಳಗದ ಪ್ರಮುಖ ಪ್ರೇರಕಶಕ್ತಿಯಾಗಿದ್ದವರು, ಈಗ ಅಮೇರಿಕದಲ್ಲಿ ನೆಲೆಸಿದ್ದಾರೆ. ಆದರೂ ನಮ್ಮ ನಂಟನ್ನು ಬಿಟ್ಟುಕೊಟ್ಟಿಲ್ಲ ಎನ್ನುವುದಕ್ಕೆ ಈ ಲೇಖನ ಬರೆದು ಕೊಟ್ಟಿದ್ದಾರೆ.

ನೋಬೆಲ್ ಪಾರಿತೋಷಕ ವಂಚಿತ ಅಪ್ರತಿಮ ಪ್ರತಿಭಾಶಾಲಿ ಮಹಿಳೆ: ಪರಮಾಣು ವಿದಳನದ ಪ್ರಥಮಾನ್ವೇಷಕಿ ಲೀಸ ಮೈಟ್ನರ್

“ವಿಜ್ಞಾನವು ಸಾಮಾನ್ಯ ಮಾನವರನ್ನು ಸತ್ಯ ಮತ್ತು ವಸ್ತುನಿಷ್ಠತೆಯತ್ತ ನಡೆಯಲು ಪ್ರೇರೇಪಿಸಿ, ವಾಸ್ತವತೆಯನ್ನು ಆಶ್ಚರ್ಯ ಮತ್ತು ಮೆಚ್ಚುಗೆಯೊಂದಿಗೆ ಸ್ವೀಕರಿಸುತ್ತಾ ಮುನ್ನಡೆಯುವುದನ್ನು ಕಲಿಸಿದರೆ, ವಸ್ತುಗಳ ನೈಸರ್ಗಿಕ ಕ್ರಮವು ವಿಜ್ಞಾನಿಗಳಲ್ಲಿ ವಿಸ್ಮಯ ಮತ್ತು ಅತ್ಯಾನಂದದ ಭಾವನೆಗಳನ್ನು ಉಕ್ಕಿಸುತ್ತದೆ”.

1940ನೆ ಇಸವಿಯ ಶರತ್ಕಾಲದಲ್ಲಿ, ದಕ್ಷಿಣ ಆಫ಼್ರಿಕಾದ ನವತರುಣಿಯೊಬ್ಬಳು, ತಾನು ವಿಜ್ಞಾನಿಯಾಗುವ ಆಕಾಂಕ್ಷೆಯ ಹೊಂದಿರುವೆ ಎಂದು ವಿವರಿಸಿ, ಅಂದಿನ ಪ್ರಖ್ಯಾತ ಭೌತಶಾಸ್ತ್ರಜ್ಞನೆನಿಸಿದ್ದ ಸರ್ವಕಾಲಿಕ ಮಹಾಮೇಧಾವಿ ಆಲ್ಬರ್ಟ್ ಐನಸ್ಟೈನನಿಗೆ ಪತ್ರವೊಂದನ್ನು ಬರೆದಿದ್ದಳು. ಆ ಪತ್ರವನ್ನು ಕೊನೆಗೊಳಿಸುವಾಗ ದೈನ್ಯಭಾವದಿಂದ, “ನಾನೊಬ್ಬಳು ಹುಡುಗಿಯೆಂದು ನನ್ನ ಬಗ್ಗೆ ತಪ್ಪಾಗಿ ತಿಳಿಯುವುದಿಲ್ಲ ಎಂದು ಭಾವಿಸುತ್ತೇನೆ,” ಎನ್ನುತ್ತಾ ಮುಗಿಸಿದ್ದಳು. ಅಂದು ಐನಸ್ಟೈನನು ಆಕೆಗೆ ಬರೆದ ಆಶ್ವಾಸನೆಯ ಉತ್ತರದಲ್ಲಿ, ಆತನ ಅಸಾಮಾನ್ಯ ಬುದ್ಧಿವಂತಿಗೆ ಮತ್ತು ಲೋಕಜ್ಞಾನಗಳನ್ನು ಪ್ರತಿಬಿಂಬಿಸುವ ಮಾತುಗಳು ಇಂದಿಗೂ ಅನುರುಣಿಸುತ್ತದೆ: “ನೀನು ಒಬ್ಬಳು ಹುಡುಗಿ ಎನ್ನುವ ವಿಷಯದ ಬಗ್ಗೆ ನನಗೇನೂ ಆಕ್ಷೇಪಣೆಯಿಲ್ಲ; ಆದರೆ ಮುಖ್ಯ ವಿಷಯವೆಂದರೆ ಆ ಅಂಶದ ಕಡೆಗೆ ನೀನೂ ಕೂಡಾ ಗಮನಕೊಡಬಾರದು, ಆ ರೀತಿಯ ಕೀಳುಭಾವನೆಗೆ ಇಲ್ಲಿ ಯಾವ ಕಾರಣಗಳೂ ಇಲ್ಲ,” ಎಂದು ಬರೆದಿದ್ದ ಅವನ ಮಾತುಗಳ ಹಿಂದೆ, ಮಹಿಳೆಯರ ಬಗ್ಗೆ ಅವನಿಗಿದ್ದ ಗೌರವ ಮತ್ತು ವಿಶಾಲ ಮನೋಭಾವನೆಗಳು ವ್ಯಕ್ತವಾಗುತ್ತವೆ. ಆದಾಗ್ಯೂ, ಇಂತಹ ತಾರ್ಕಿಕ ಸಮರ್ಥನೆಗಳ ಹಿಂದೆ ಯಾವಾಗಲೂ ವಿವೇಚನೆ, ವಿವೇಕಗಳು ಇರುತ್ತವೆ ಎಂದು ಹೇಳಲಾಗದು.

ವಿಜ್ಞಾನದ ಇತಿಹಾಸಗಳ ಪುಟಗಳು, ಸ್ವತಃ ಈ ಪ್ರಪಂಚದ ಇತಿಹಾಸದಂತೆ, ಅಸಂಬದ್ಧ ಹಾಗೂ ಅಸಮತೆಗಳಿಂದ ಸುತ್ತುವರಿದ ಅಧಿಕಾರ ಮತ್ತು ಪ್ರಭಾವಗಳಿಂದ ತುಂಬಿಹೋಗಿವೆ. ಈ ಅಧಿಕಾರದ ದಮನಕಾರಿ ಪರಿಣಾಮಗಳ ಕಾರಣದಿಂದಲೇ, ಕೇವಲ ಬೆರಳೆಣಿಸುವಷ್ಟು ಮಹಿಳೆಯರು ಮಾತ್ರ ಇಂತಹ ವಿಜ್ಞಾನ ಪ್ರಪಂಚದಲ್ಲಿ, ತಮ್ಮ ಬುದ್ಧಿಶಕ್ತಿ, ದೃಢತೆ ಮತ್ತು ಅಸಾಮಾನ್ಯ ಪ್ರತಿಭೆಗಳ ಫಲವಾಗಿ ಉತ್ತುಂಗಕ್ಕೇರಲು ಸಾಧ್ಯವಾಗಿದೆ. ಇಂತಹ ಅತ್ಯುತ್ತಮರ ಸಾಲಿಗೆ ಸೇರಿದ್ದರೂ ಕೂಡಾ, ತನ್ನ ಪ್ರತಿಭೆ ಮತ್ತು ಬುದ್ದಿಶಕ್ತಿಗಳಿ ತಕ್ಕಷ್ಟು ಕೀರ್ತಿಯನ್ನು ಪಡೆಯದಿದ್ದ ಪ್ರಥಮಾನ್ವೇಷಕಿ ಮಹಿಳೆಯೇ ಆಸ್ಟ್ರಿಯಾ ದೇಶದ ಭೌತಶಾಸ್ತ್ರಜ್ಞೆ, ಲೀಸ ಮೈಟ್ನರ್ (ನವೆಂಬರ್ ೭, ೧೮೭೮-ಅಕ್ಟೋಬರ್ ೨೭, ೧೯೬೮). ಪರಮಾಣು ವಿದಳನ ಸಂಶೋಧನೆಯ (Atomic Fission) ತಂಡದ ನಾಯಕತ್ವ ವಹಿಸಿದ್ದ ಈಕೆಯನ್ನು, ಇದರ ಅನ್ವೇಷಣೆಯ ಸಲುವಾಗಿ ನೀಡಿದ ನೋಬೆಲ್ ಪಾರಿತೋಷಕದ ಹೆಸರಿನ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಸಣ್ಣ ಆಕೃತಿಯ ಈ ಯಹುದಿ ಮಹಿಳೆಯು, ಹಿಟ್ಲರನ ಸರ್ವಾಧಿಕಾರದಿಂದ ಪಾರಾಗಿ ತನ್ನ ಜೀವವನ್ನುಳಿಸಿಕೊಳ್ಳುವ ಸಲುವಾಗಿ, ತನ್ನ ದೇಶವನ್ನು ತೊರೆದಿದ್ದಳು. ಇವಳ ಬುದ್ದಿಮತ್ತೆ ಮತ್ತು ಸಾಹಸಗಳನ್ನು ಮೆಚ್ಚಿದ್ದ ಅಂದಿನ ಮಹಾಮೇಧಾವಿ ಐನಸ್ಟೈನ್, ಈಕೆಯನ್ನು “ಜರ್ಮನ್ ಭಾಷೆಯನ್ನಾಡುವ ನಮ್ಮ ಕಾಲದ ಮೇರಿ ಕ್ಯೂರಿ” ಎಂದು ಕೊಂಡಾಡಿದ್ದನು.

ಆಸ್ಟ್ರಿಯಾ ದೇಶದ, ವಿಯನ್ನಾ ನಗರದಲ್ಲಿ ಜನ್ಮತಳೆದ ಈಕೆ, ಸಣ್ಣ ವಯಸ್ಸಿನಲ್ಲೇ ಗಣಿತಶಾಸ್ತ್ರದಲ್ಲಿ ತನ್ನ ಪ್ರತಿಭೆಯನ್ನು ತೋರಿದ್ದಳು. ೧೯ನೆಯ ಶತಮಾನದ ಯೂರೋಪಿನಲ್ಲಿ, ಮಹಿಳೆಯರ ಕೌಶಲ್ಯ ಮತ್ತು ಬುದ್ದಿಮತ್ತೆಗಳಿಗೆ ಅಷ್ಟೇನೂ ಅವಕಾಶ ಮತ್ತು ಪ್ರಶಂಸೆಗಳು ದೊರಕುತ್ತಿರಲಿಲ್ಲ. ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ವಿಯನ್ನಾದಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ ಆಕೆಗೆ, ಹಲವು ವರ್ಷಗಳ ನಂತರ, ವಿಶ್ವವಿದ್ಯಾಲಯಗಳು ಮಹಿಳೆಯರನ್ನು ಸೇರಿಸಿಕೊಳ್ಳಲು ಪ್ರಾರಂಭಿಸಿದ ಮೇಲೆ, ಭೌತಶಾಸ್ತ್ರದ ಪದವಿಯಲ್ಲಿ ಅಧ್ಯಯನ ಮಾಡಲು ಅವಕಾಶ ಸಿಕ್ಕಿತು. ಭೌತಶಾಸ್ತ್ರದಲ್ಲಿ ತನ್ನ ಭವಿಶ್ಯವನ್ನು ಹುಡುಕುತ್ತಾ, ಬರ್ಲಿನ್ ನಗರಕ್ಕೆ ಹೋದ ಮೈಟ್ನರಳಿಗೆ, ಅದೃಷ್ಟವಶಾತ್ ಪ್ರಸಿದ್ಧ ವಿಜ್ಞಾನಿ ಮ್ಯಾಕ್ಸ್ ಪ್ಲಾಂಕ್ ಅಂತಹ ಒಬ್ಬ ಸ್ನೇಹಿತ ಮತ್ತು ಓಟ್ಟೋ ಹಾನ್ ಎನ್ನುವ ಒಬ್ಬ ರಸಾಯನಶಾಸ್ತ್ರಜ್ಞನು ಸಹಭಾಗಿಯ ರೂಪದಲ್ಲಿ ದೊರಕಿದರು. ಅವರಿಬ್ಬರೂ ವಿಕಿರಣಶೀಲತೆಯ ಸಂಶೋಧನೆಯಲ್ಲಿ ಸಾಕಷ್ಟು ಹೆಸರನ್ನೂ ಗಳಿಸಿದ್ದರು.

೧೯೨೦ರ ದಶಕದಲ್ಲಿ, ಮೈಟ್ನರ್, ತಾನೆ ಸ್ವತಂತ್ರವಾಗಿ ಪರಮಾಣು ಭೌತಶಾಸ್ತ್ರದ ಸಂಶೋಧನೆಯನ್ನು ಪ್ರಾರಂಭಿಸಿ, ಆಗ ತಾನೆ ಮೊಳೆಯುತ್ತಿದ್ದ ಆ ಕ್ಷೇತ್ರದಲ್ಲಿ ತಾನೇ ಪ್ರಥಮಾನ್ವೇಷಕಿ ಎನ್ನುವ ಖ್ಯಾತಿಯನ್ನೂ ಪಡೆದಿದ್ದಳು. ಬರ್ಲಿನ್ ನಗರದ ಭೌತಶಾಸ್ತ್ರ ವಲಯದಲ್ಲಿ, ಐನಸ್ಟೈನನು ಆಕೆಯನ್ನು ಮೇರಿ ಕ್ಯೂರಿಗೆ ಹೋಲಿಸಿ ಪ್ರಶಂಸಿಸಿದ್ದ ಕಾರಣ, ಅಂದಿನ ಭೌತಶಾಸ್ತ್ರಜ್ಞರು ಆಕೆಯನ್ನು ಆ ದಿನಗಳ ಅತ್ಯುತ್ತಮ ಪ್ರಾಯೋಗಿಕ ವಿಜ್ಞಾನಿಯೆಂದು ಪರಿಗಣಿಸಿದ್ದರು. ಬಹಳ ನಾಚಿಕೆಯ ಸ್ವಭಾವದವಳಾಗಿದ್ದ ಆಕೆ, ಆತ್ಮವಿಶ್ವಾಸ ತುಂಬಿದ, ದೃಢಮನೋಭಾವದ ಪ್ರಾಧ್ಯಾಪಕಳಾಗಿ ಹೆಸರು ಗಳಿಸಿದ್ದಳು. ಅವಳ ಸೋದರ ಸಂಬಂಧಿಕರು ಅವಳನ್ನು, “ಕುಳ್ಳಕಾಯದ, ಶ್ಯಾಮಲವರ್ಣದ, ಬಲುಜೋರಿನ ಹೆಂಗಸು” ಎಂದು ಕುಚೋದ್ಯ ಮಾಡುತ್ತಿದ್ದರು. ಆದಾಗ್ಯೂ, ಅನೇಕ ಬಾರಿ ಆಕೆಯನ್ನು ಒಂದು ರೀತಿಯ ಅಸ್ಥಿರ ಮನೋಭಾವ ಕಾಡುತ್ತಿದ್ದು, ಆಕೆ ಜೀವನದಲ್ಲಿ ಮದುವೆಯಾಗಲಿಲ್ಲ, ಯಾವ ಪುರುಷನೊಡನೆಯೂ ಗಂಭೀರವಾದ ಪ್ರಣಯ ಸಂಬಂಧವನ್ನು ಬೆಳಸಲೇ ಇಲ್ಲ. ಆದರೂ ಕೂಡಾ, ಆಕೆಯ ಜೀವನ ಒಂದು ರೀತಿಯಲ್ಲಿ ಸಂಪೂರ್ಣವೆನಿಸಿದ್ದು, ಒಬ್ಬ ನಿಷ್ಠಾವಂತ ಸ್ನೇಹಿತೆಯೆನಿಸಿದ್ದ ಆಕೆಯ ಸುತ್ತಾ ಸದಾಕಾಲ “ಮಹಾನ್ ಮತ್ತು ಪ್ರೀತಿಯುಳ್ಳ ಜನರು ಇರುತ್ತಿದ್ದರು”. ಇಂತಹ ವ್ಯಕ್ತಿಗಳ ನಡುವೆ ಶೋಭಿಸುತ್ತಿದ್ದ ಲೀಸ ಮೈಟ್ನರ್ ತನ್ನ ಜೀವನವನ್ನು ವಿಜ್ಞಾನಕ್ಕೆ ಮುಡಿಪಾಗಿಟ್ಟಿದ್ದಳು. ವಿಜ್ಞಾನದ ಗೀಳು ಅವಳನ್ನು ಅದೆಷ್ಟು ಮರುಳುಮಾಡಿತ್ತೆಂದರೆ, ಆಕೆ ತಾಳ್ಮೆಯಿಂದ ಎಲ್ಲವನ್ನೂ ಎದುರಿಸುತ್ತಾ, ಸಕಲ ಅಡಚಣೆಗಳನ್ನೂ ಮೀರಿ, ವಿಜ್ಞಾನದೊಂದಿಗೆ ತನಗಿದ್ದ ಅನುರಕ್ತತೆಯನ್ನು ಬೆಳೆಸುತ್ತಾ ಮುನ್ನಡೆದಿದ್ದಳು. ೧೯೦೫ನೆಯ ಇಸವಿಯಲ್ಲಿ, ಆಸ್ಟ್ರಿಯಾ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದ ಮೈಟ್ನರ್, ಅಂದಿನ ಕಾಲಕ್ಕೆ ಅಂತಹ ಸಾಧನೆಯನ್ನು ಮಾಡಿದ್ದ ಬೆರಳೆನಿಸುವಷ್ಟು ಮಹಿಳೆಯರಲ್ಲಿ ಒಬ್ಬಳಾಗಿದ್ದಳು.

೨೯ ವಯಸ್ಸಿನ ಮೈಟ್ನರ್, ಬರ್ಲಿನ್ ನಗರಕ್ಕೆ ಬಂದಾಗ, ಜರ್ಮನಿಯ ವಿಶ್ವವಿದ್ಯಾಲಯಗಳು ಮಹಿಳೆಯರನ್ನು ಇನ್ನೂ ಒಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಹಾಗಾಗಿ, ಮ್ಯಾಕ್ಸ್ ಪ್ಲಾಂಕನ ಉಪನ್ಯಾಸಗಳಿಗೆ ಹಾಜರಾಗಲು, ಮೈಟ್ನರ್ ವಿಶೇಷವಾದ ಅನುಮತಿಯನ್ನು ಪಡೆಯಬೇಕಾಗಿತ್ತು. ೧೯೦೭ರ ಶರತ್ಕಾಲದಲ್ಲಿ, ಅವಳು ತನ್ನಂತೆಯೇ ವಿಕಿರಣಶೀಲತೆಯಲ್ಲಿ ಆಸಕ್ತಿಯುಳ್ಳ, ತನಗಿಂತಲೂ ೪ ತಿಂಗಳು ಕಿರಿಯವನಾಗಿದ್ದ, ಓಟ್ಟೋ ಹಾನ್ (Otto Hahn), ಎನ್ನುವ ಜರ್ಮನ್ ರಸಾಯನಶಾಸ್ತ್ರಜ್ಞನನ್ನು ಭೇಟಿಯಾದಳು. ಆಗಿನ ಸಮಯಕ್ಕೆ ಹೊರತು ಎನ್ನುವಂತಹ ವಿಶಾಲಮನೋಭಾವನೆಯನ್ನು ಹೊಂದಿದ್ದ ಹಾನ್, ಮಹಿಳೆಯೊಂದಿಗೆ ಸಂಶೋಧನೆ ನಡೆಸಲು ಯಾವ ಅಭ್ಯಂತರವನ್ನು ಹೊಂದಿರಲಿಲ್ಲ. ಆದರೆ, ಅಂದು ಮಹಿಳೆಯರಿಗೆ ಬರ್ಲಿನ್ ರಾಸಾಯನಿಕ ಪ್ರಯೋಗಾಲಯ ಸಂಸ್ಥೆಯಲ್ಲಿ ಒಳಗೆ ಪ್ರವೇಶಿಸಲು ಅನುಮತಿಯಿರಲಿಲ್ಲ. ಹಾಗಾಗಿ, ಮೈಟ್ನರ್ ಮತ್ತು ಹಾನ್, ಸಂಶೋಧನೆಯಲ್ಲಿ ಸಹಭಾಗಿತ್ವ ನಡೆಸಲು, ಅಲ್ಲಿನ ಮರಗೆಲಸದ ಅಂಗಡಿಯೊಂದರ ನೆಲಮಾಳಿಗೆಯನ್ನು ಪ್ರಯೋಗಾಲಯವಾಗಿ ಪರಿವರ್ತಿಸಿದ್ದ ಸ್ಥಳದಲ್ಲಿ ತಮ್ಮ ಪ್ರಯೋಗಗಳನ್ನು ನಡೆಸಬೇಕಾಗಿತ್ತು. “ಜೀವನದಲ್ಲಿ ಅಂದು ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೇರುವ ಅವಕಾಶ ಮತ್ತು ಅನುಮತಿಗಳು, ಕೇವಲ ಹಾನನಿಗೆ ಇತ್ತೇ ಹೊರತು, ಲೇಸ ಮೈಟ್ನರಳಿಗೆ ಇರಲಿಲ್ಲ”. ಇಂತಹ ಕಠೋರವಾದ ವಾಸ್ತವತೆ ರೂಪಕೋಕ್ತಿಯ ಪರಮಾವಧಿಯನ್ನೇ ಮೀರಿಸುವಂತಿತ್ತು.

ಈ ಇಬ್ಬರು ವಿಜ್ಞಾನಿಗಳ ನಡುವಿನ ಅಂತರವನ್ನು, ಅವರ ಅಭಿರುಚಿಗಳು ಮತ್ತು ವಿಜ್ಞಾನದ ಬಗ್ಗೆ ಅವರಿಗಿದ್ದ ಒಲವು ಕಡಿಮೆಮಾಡಿತ್ತು. ಭೌತಶಾಸ್ತ್ರದಲ್ಲಿ ಉತ್ತಮ ತರಬೇತಿ ಪಡೆದ ಮೈಟ್ನರ್, ಒಬ್ಬ ತಜ್ಞ ಗಣಿತಶಾಸ್ತ್ರಜ್ಞೆಯೂ ಆಗಿದ್ದಳು. ಹಾಗಾಗಿ, ಅವಳು ಕಲ್ಪನಾತ್ಮಕವಾಗಿ ಆಲೋಚಿಸುವ ಪ್ರತಿಭೆ ಇದ್ದು, ತನ್ನ ಕಲ್ಪನೆಗಳನ್ನು ಒರೆಹಚ್ಚಿನೋಡುವಂತಹ ಸೃಜನಶೀಲ ಪ್ರಯೋಗಗಳನ್ನು ಸರಾಗವಾಗಿ ವಿನ್ಯಾಸಮಾಡುವ ತಿಳುವಳಿಕೆ ಅವಳಲ್ಲಿತ್ತು. ರಸಾಯನಶಾಸ್ತ್ರದಲ್ಲಿ ಪಳಗಿದ್ದ ಹಾನನು, ಪ್ರಯೋಗಾಲಯದ ಅತಿಸೂಕ್ಷ್ಮ ಕಾರ್ಯಗಳಲ್ಲಿ ಶ್ರೇಷ್ಠತೆ ಉಳ್ಳವನಾಗಿದ್ದನು. ಸುಮಾರು ೩೦ ವರ್ಷಗಳ ಕಾಲ ಇವರಿಬ್ಬರೂ ಸಹಭಾಗಿತ್ವದಲ್ಲಿ ಕೆಲಸಮಾಡಿ, ವಿಕಿರಣಶೀಲತೆಯ ಸಂಶೋಧನಾ ಕಾರ್ಯದಲ್ಲಿ ಆದ್ಯಪ್ರವರ್ತಕ ವಿಜ್ಞಾನಿಗಳಾಗಿ ಕೀರ್ತಿಪಡೆದರು. ಅಂತಿಮವಾಗಿ ಮೈಟ್ನರ್, ಹಾನನಿಂದ ಮುಕ್ತಿಪಡೆದು, ೧೯೨೧ರಿಂದ, ೧೯೩೪ರ ನಡುವೆ, ತಾನೇ ಸ್ವತಂತ್ರವಾಗಿ ಸುಮಾರು ೫೬ ಸಂಶೋಧನಾ ಪ್ರಬಂಧಗಳನ್ನು ಬರೆದು ಪ್ರಕಟಿಸಿದ್ದಳು.

ಬರ್ಲಿನ್ನಿನಲ್ಲಿರುವ ಸ್ಮಾರಕ

ಈ ರೀತಿಯಲ್ಲಿ ಅವಳ ವೈಜ್ಞಾನಿಕ ವೃತ್ತಿಯು ಯಶಸ್ವಿಯಾಗಿ ಮುನ್ನಡೆದಿದ್ದ ಸಮಯದಲ್ಲೇ, ನಾಟ್ಝಿ ಜರ್ಮನರು, ಯೂರೋಪನ್ನು ಕಬಳಿಸಲು ಪ್ರಾರಂಭಿಸಿದ್ದರು. ಮೈಟ್ನರ್, ಹಾನ್ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದ ಮೂರನೆಯ ಸಹಭಾಗಿ ವಿಜ್ಞಾನಿ, ಫ಼್ರಿಟ್ಝ್ ಸ್ಟ್ರಾಸ್ಮನ್ (Fritz Strassman), ಈ ನಾಟ್ಝಿಗಳ ಸಂಸ್ಥೆಯನ್ನು ಸೇರಲು ನಿರಾಕರಿಸಿ ಈಗಾಗಲೇ ತೊಂದರೆಯಲ್ಲಿ ಸಿಕ್ಕಿಕೊಂಡಿದ್ದನು. ೧೯೩೮ರಲ್ಲಿ ಈ ಮೂರು ಪ್ರತಿಭಾನ್ವಿತ ವಿಜ್ಞಾನಿಗಳು, ತಮ್ಮ ಅತ್ಯಂತ ಸೃಜನಶೀಲ ಪ್ರಯೋಗಗಳನ್ನು ನಡೆಸುತ್ತಿದ್ದಾಗಲೇ, ನಾಟ್ಝಿ ಸೇನೆಯವರು ಆಸ್ಟ್ರಿಯಾ ದೇಶವನ್ನು ಆಕ್ರಮಿಸಿಕೊಂಡರು. ಮೈಟ್ನರಳು ತನ್ನ ಯಹುದಿ ಪರಂಪರೆಯನ್ನು ಗೋಪ್ಯವಾಗಿಡಲು ನಿರಾಕರಿಸಿದಳು. ಆಗ ಅವಳ ಪಾಲಿಗೆ ಇದ್ದ ಒಂದೇ ಉಪಾಯವೆಂದರೆ, ಜರ್ಮನಿಯನ್ನು ತೊರೆದು ಬೇರೆ ದೇಶಕ್ಕೆ ಪಲಾಯನ ಮಾಡುವುದಾಗಿತ್ತು. ಆದರೆ ಅಷ್ಟು ಹೊತ್ತಿಗಾಗಲೇ, ನಾಟ್ಝಿ ಸರಕಾರವು, ಯಹುದಿ-ವಿರುದ್ಧವಾದ ಕಾನೂನನ್ನು ಜಾರಿಗೆ ತಂದು, ಜರ್ಮನಿಯಲ್ಲಿದ್ದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ದೇಶ ತೊರೆಯುವುದನ್ನು ಬಹಿಷ್ಕರಿಸಿದ್ದರು. ೧೯೩೮ರ ಜುಲೈ ೧೩ರಂದು, ಮೈಟ್ನರ್ ತನ್ನ ಸಹೋದ್ಯೋಗಿ ಹಾನ್ ಮತ್ತು ಇತರ ವಿಜ್ಞಾನಿ ಸ್ನೇಹಿತರ ಸಹಾಯದಿಂದ, ಕೂದಲೆಳೆಯಷ್ಟು ಅಂತರದಲ್ಲಿ ಉಪಾಯದಿಂದ ಜರ್ಮನಿಯ ಗಡಿಯನ್ನು ದಾಟಿ, ಹಾಲೆಂಡ್ ದೇಶಕ್ಕೆ ಹೊರಟುಹೋದಳು. ನಂತರ ಹಾಲೆಂಡಿನಿಂದಲೂ ಹೊರಟು, ಡೆನ್ಮಾರ್ಕ್ ದೇಶಕ್ಕೆ ವಲಸಿಗಳಾಗಿ ಪ್ರಯಾಣಮಾಡಿದಳು. ಅಲ್ಲಿ ತನ್ನ ಸ್ನೇಹಿತನಾಗಿದ್ದ ಪ್ರಸಿದ್ಧ ವಿಜ್ಞಾನಿ ನೀಲ್ಸ್ ಭೋರ್ ಕುಟುಂಬದೊಂದಿಗೆ ಸ್ವಲ್ಪಕಾಲ ವಾಸವಾಗಿದ್ದಳು. ಮುಂದೆ ಸ್ವೀಡನ್ನಿನ ನೋಬೆಲ್ ಭೌತಶಾಸ್ತ್ರ ಸಂಸ್ಥೆಯಲ್ಲಿ, ತನ್ನ ಖಾಯಂ ಆಗಿ ನೆಲಸಿದಳು.

ಅದೇ ರೀತಿಯಲ್ಲೇ, ಮೂರು ಶತಮಾನಗಳ ಹಿಂದೆ, ಗೆಲಿಲಿಯೋನಿಗೆ ವ್ಯಾಟಿಕನ್ ಚರ್ಚಿನ ಅಧಿಕಾರಿಗಳು ನೀಡಿದ ಕಿರುಕುಳವನ್ನು ಕಂಡಿದ್ದ ಡೆಸ್ಕಾರ್ಟೆಸನೂ ಸಹಾ, ಇದೇ ರೀತಿಯಲ್ಲೇ ಸ್ವೀಡನ್ನಿಗೆ ಪಲಾಯನಮಾಡಿದ್ದನಂತೆ! ಆ ವರ್ಷದ ನವೆಂಬರ್ ತಿಂಗಳಲ್ಲಿ, ಮೈಟ್ನರ್, ಹಾನ್ ಮತ್ತು ಸ್ಟ್ರಾಸ್ಮನ್ ಮೂವರೂ, ಗೋಪ್ಯವಾಗಿ ಕೋಪೆನಹೇಗಿನಲ್ಲಿ ಸಂಧಿಸಿ, ಹಾನ್ ಮತ್ತು ಸ್ಟ್ರಾಸ್ಮನ್ನರ ಪ್ರಯೋಗಗಳಲ್ಲಿ ದೊರೆತಿದ್ದ ಹಲವು ಅದ್ಭುತವಾದ ಫಲಿತಾಂಶಗಳನ್ನು ಚರ್ಚಿಸಿದರು. ಅವರ ಪ್ರಯೋಗಗಳಲ್ಲಿ, ಯುರೇನಿಯಮ್ ಪರಮಾಣುವಿನ ಬೀಜಕಣಕೇಂದ್ರವನ್ನು (Nucleus) (ಪರಮಾಣು ಸಂಖ್ಯೆ ೯೨), ಒಂದು ಒಂಟಿ ನ್ಯೂಟ್ರಾನ್ ಕಣದಿಂದ ಅಪ್ಪಳಿಸಿದಾಗ, ಅವರಿಗೆ ಪರಮಾಣು ಸಂಖ್ಯೆ ೮೮ರ ರೇಡಿಯಮ್ ಬೀಜಕಣಕೇಂದ್ರವು (Radium atomic number-88), ದೊರೆತಿತ್ತು. ಈ ಮಾಂತ್ರಿಕ ಪರಿವರ್ತನೆಯು ಅವರಿಗೆ ಭೌತಿಕವಾಗಿ ಅಸಾಧ್ಯವೆಂದು ತೋರಿತ್ತು. ಮಂದ ಗತಿಯಲ್ಲಿ ಚಲಿಸುವ, ಅಂತಹ ಒಂದು ಸಣ್ಣ ನ್ಯೂಟ್ರಾನ್ ಕಣವು, ಪರಮಾಣುವಿಂತಹ ದೃಢವಾದ ವಸ್ತುವನ್ನು ನುಚ್ಚುನೂರಾಗಿಸಿ, ಅದರ ಪರಮಾಣು ಸಂಖ್ಯೆಯನ್ನು ಕೆಳಕ್ಕಿಳಿಸಿ, ಅದರ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಿ, ಅದನ್ನು ಒಂದು ಹೊಸ ಮೂಲಧಾತುವಿಗೆ ಬದಲಾಯಿಸುವ ಆ ಪ್ರಕ್ರಿಯೆಯು, ನಿಜಕ್ಕೂ ಒಂದು ಕಲ್ಪಿತ ಭ್ರಮಾಚಿತ್ರವೆನಿಸಿತ್ತು.

ಆ ಸಮಯದಲ್ಲಿ, ಮೈಟ್ನರ್ ಒಬ್ಬ ಅತ್ಯುತ್ತಮ ಭೌತಶಾಸ್ತ್ರಜ್ಞೆಯೆಂತಲೂ ಮತ್ತು ಹಾನನು ಒಬ್ಬ ಪ್ರಸಿದ್ಧ ರೇಡಿಯೋ-ರಸಾಯನಶಾಸ್ತ್ರಜ್ಞನೆನ್ನುವ ಪ್ರಖ್ಯಾತಿ ಪಡೆದಿದ್ದರು. ಮೈಟ್ನರ್ ಆಗ, ಆ ಪ್ರಯೋಗದ ರಾಸಾಯನಿಕ ಪ್ರಕ್ರಿಯೆಯು, ಭೌತಿಕವಾದ ಯಾವ ಆಧಾರದಿಂದಲೂ ಸಾಧ್ಯವಿಲ್ಲ, ಆದ್ದರಿಂದ ನೀನು ಮತ್ತೊಮ್ಮೆ ಈ ಪ್ರಯೋಗವನ್ನು ನಡೆಸು ಎಂದು ಸ್ಪಷ್ಟವಾಗಿ ಸಲಹೆ ನೀಡಿದಳು. ಈ ಅನಿರೀಕ್ಷಿತವಾದ ಫಲಿತಾಂಶಗಳಿಂದ ಸಂಪೂರ್ಣವಾಗಿ ದಿಗ್ಭ್ರಾಂತಳಾಗಿದ್ದ ಮೈಟ್ನರ್, ಇದರ ಬಗ್ಗೆ ತನ್ನ ಪರ್ಯಾಲೋಚನೆಯನ್ನು ಮುಂದುವರೆಸಿದಳು. ಕಡೆಗೆ ಕ್ರಿಸ್ಮಸ್ ಹಬ್ಬದಂದು ತನ್ನ ಸೋದರಳಿಯ ಮತ್ತು ಸಹಭಾಗಿ ರಾಬರ್ಟ್ ಫ಼್ರಿಷ್ ಜೊತೆಯಲ್ಲಿ ಹಿಮದ ಮೇಲೆ ನಡೆದಾಡುತ್ತಿದ್ದ ಸಮಯದಲ್ಲಿ ಅವಳಿಗೆ ಈ ಫಲಿತಾಂಶದ ಬಗ್ಗೆ ಸಾಕ್ಷಾತ್ಕಾರವಾಯಿತು. ಓಟ್ಟೋ ರಾಬರ್ಟ್ ಫ಼್ರಿಶ್, ತನ್ನ ಆತ್ಮಚರಿತ್ರೆಯಲ್ಲಿ ಆ ಘಟನೆಯ ಬಗ್ಗೆ ಬರೆಯುತ್ತಾ, ಯಾವ ರೀತಿಯಲ್ಲಿ ಮಹಿಳೆಯರು ವಿಜ್ಞಾನದಲ್ಲಿ ತಮ್ಮ ಪುರುಷ ಸಮಾನಸ್ಕಂದರಿಗಿಂತ ಪ್ರಗತಿ ಸಾಧಿಸುತ್ತಾರೆ ಎನ್ನುವ ಬಗ್ಗೆ, ಅನುದ್ದಿಶ್ಯವಾಗಿ ಒಂದು ಅತ್ಯಂತ ಪರಿಪೂರ್ಣವಾದ ರೂಪಕೋಕ್ತಿಯನ್ನು ನೀಡಿದ್ದಾನೆ: (“ನಾವು ಹಿಮದ ಮೇಲೆ ಹಾಗೇ ಅಡ್ಡಾಡುತ್ತಿದ್ದೆವು. ನಾನು ನೀರ್ಗಲ್ಲು-ಹಾವುಗೆಗಳನ್ನು ಧರಿಸಿದ್ದೆ, ಮೈಟ್ನರ್ ಕೇವಲ ತನ್ನ ಪಾದಗಳಲ್ಲಿಯೇ ಚಲಿಸುತ್ತಾ, ನಾನು ಹೀಗೆ ರಭಸವಾಗಿ ನಡೆದು ಮುಂದುವರೆಯುತ್ತೇನೆ ಎಂದಿದ್ದಳು”).

ತಮಗೆ ದೊರೆತಿದ್ದ ಅಸಂಬಂದ್ಧವಾದ ಫಲಿತಾಂಶಗಳನ್ನು ಪರಾಮರ್ಷಿಸುತ್ತಾ ಕಡೆಗೆ, ಮೈಟ್ನರ್ ಮತ್ತು ಫ಼್ರಿಶ್, ಆ ಪ್ರಕ್ರಿಯೆಯನ್ನು ಪರಮಾಣು ವಿದಳನವೆಂದು (Atomic Fission) ಕರೆಯಲು ತೀರ್ಮಾನಿಸಿದರು. ಆ ತಿಂಗಳ ಕೊನೆಯಲ್ಲಿ ಅವರು ಪ್ರಕಟಿಸಿದ ಪ್ರಬಂಧದ ೭ನೆಯ ಪ್ಯಾರಾದಲ್ಲಿ ಮೊದಲ ಬಾರಿಗೆ ಆ ಪದವನ್ನು ಬಳಸಿದ್ದರು. ಪರಮಾಣುವಿನ ನ್ಯೂಕ್ಲಿಯಸ್ ವಿಭಜನೆಯಾಗಿ, ಮತ್ತೊಂದು ನೂತನ ಮೂಲಧಾತುವಾಗಿ ಮಾರ್ಪಡುವ ವಿಚಾರವು ಅತ್ಯಂತ ತೀವ್ರವಾದ ಕಲ್ಪನೆಯಾಗಿತ್ತು. ಆ ಸಮಯಕ್ಕೆ ಆ ಚಿಂತನೆಯನ್ನು ಅರ್ಥಮಾಡಿಕೊಳ್ಳುವುದೇನೂ ಸುಲಭವಾದ ವಿಷಯವಾಗಿರಲಿಲ್ಲ. ಮೈಟ್ನರ್ ಈ ಪ್ರಕ್ರಿಯೆ ಹೇಗೆ ಸಂಭವಿಸುತ್ತದೆ ಎನ್ನುವುದಕ್ಕೆ ಮೊಟ್ಟಮೊದಲಬಾರಿ ತಿಳುವಳಿಕೆಯನ್ನು ನೀಡಿದ್ದಳು. ಪರಮಾಣು ವಿದಳನವು, ಮಾನವಕುಲದ ಇತಿಹಾಸದಲ್ಲಿ ಕಂಡುಹಿಡಿದ ಅತ್ಯಂತ ಅಪಾಯಕಾರಿ ಮತ್ತು ಶಕ್ತಿಶಾಲಿ ಅನ್ವೇಷಣೆಯೆಂದು ಸಾಬೀತಾಗುವುದರಲ್ಲಿತ್ತು, ಅಷ್ಟೇ ಅಲ್ಲದೆ, ಈ ಶೋಧನೆಯು ಉತ್ತಮ ಮತ್ತು ದುಷ್ಟ ಕಾರ್ಯಗಳಿಗೆ ತುತ್ತಾಗಬಹುದಾದ ಮಾನವನ ಉಭಯ ಸಾಮರ್ಥ್ಯಗಳನ್ನು ಹೊರಗೆಡುಹಿತ್ತು. ಮಾನವನ ಇತಿಹಾಸದಲ್ಲಿ ತಯಾರಾದ ಮಾರಣಾಂತಿಕ ಅಸ್ತ್ರಕ್ಕೆ ಬಲವಾದ ಅಡಿಪಾಯವನ್ನು ಹಾಕಿತ್ತು.

ಮೈಟ್ನರಳ ಈ ಅನ್ವೇಷಣೆಯು ಕೇವಲ ವೈಜ್ಞಾನಿಕವಾದ ಹಿತಾಸಕ್ತಿಯನ್ನು ಹೊಂದಿತ್ತು. ಆದರೆ, ಅದರ ಬಳಕೆಯನ್ನು ಮುಂದೇ ಅನೇಕ ವರ್ಷಗಳ ನಂತರ, ಮಾನವನ ಸರ್ವನಾಶದ ಕಾರ್ಯಕ್ಕೆ ನಡೆಸಿದರೂ ಕೂಡಾ, ಸಮಾಜ ಮಾತ್ರ ಅವಳನ್ನು, “ಪರಮಾಣು-ಬಾಂಬಿನ ಯಹುದಿ-ಮಾತೆ,” ಎಂದು ಕ್ರೂರವಾಗಿ ಉಲ್ಲೇಖಿಸಿತ್ತು. ಒಮ್ಮೆ ತನ್ನ ಅನ್ವೇಷಣೆಯ ನಿಯಮವನ್ನು ನಾಶಕಾರಿ ಕಾರ್ಯಕ್ಕೆ ಬಳಸಿದ್ದನ್ನು ಕಂಡ ಲೀಸ್ ಮೈಟ್ನರ್, ಮುಂದೆ ಪರಮಾಣು ಬಾಂಬಿನ ಕಾರ್ಯದಲ್ಲಿ ತಾನು ಭಾಗಿಯಾಗುವುದಿಲ್ಲವೆಂದು ಬಹಳ ನಿಷ್ಠುರವಾಗಿ ನುಡಿದು ಅದರಿಂದ ತನ್ನನ್ನು ದೂರವಿರಿಸಿಕೊಂಡಿದ್ದಳು. ಪ್ರಪಂಚದಲ್ಲಿ ಉಳಿದವರಂತೆ, ಅವಳೂ ಕೂಡಾ “ಪರಮಾಣು ಬಾಂಬಿನ ಪ್ರಯೋಗವು” ಮಾನವಕುಲದ ಇತಿಹಾಸದಲ್ಲಿ ಸಂಭವಿಸಿದ ಒಂದು ಚಿಂತಾಜನಕವಾದ ತಿರುವೆಂದು ಭಾವಿಸಿದ್ದಳು. ಮುಂದೆ ಅನೇಕ ವರ್ಷಗಳ ನಂತರ, ಈ ಮಹತ್ತರ ವೈಜ್ಞಾನಿಕ ಬೆಳವಣಿಗೆಯ ಮೂಲಕ, ಈ ಕಾಲಮಾನದ ಅಂತ್ಯವಾದ ಬಗ್ಗೆ ಕಹಿ-ಸಿಹಿ ಮಿಶ್ರಭಾವನೆಗಳ ವಿಷಾದವನ್ನು ವ್ಯಕ್ತಪಡಿಸಿದ್ದಳು. ಅವಳ ಸಂದೇಶದಲ್ಲಿ “ಮಹತ್ತರವಾದ ಸುಂದರ ವೈಜ್ಞಾನಿಕ ಅನ್ವೇಷಣೆಯ ದುರುಪಯೋಗವಾಗಿ, ಅದರಿಂದ ಭವಿಶ್ಯದಲ್ಲಿ ಮಾನವ ಪೀಳಿಗೆಯು ಹೆದರಿಕೆಯ ನೆರಳಿನಲ್ಲಿ ಜೀವಿಸುವಂತಾಗಬಾರದು”, ಎನ್ನುವ ಸಮ್ಮಿಶ್ರ ಭಾವನೆಗಳನ್ನು ವ್ಯಕ್ತಪಡಿಸಿದ್ದಳು.

ಪರಮಾಣು ವಿದಳನದ ಅವಿಷ್ಕಾರವು, ಮಾನವ ಸಂಶೋಧನೆಯ ಒಂದು ಸುಂದರವಾದ ಉದಾಹರಣೆಯಾಗಿದೆ. ಪ್ರಕೃತಿಯ ರಹಸ್ಯಗಳನ್ನು ಬೇಧಿಸುವಲ್ಲಿ ಮಾನವ ಗಳಿಸಿದ ಜಯಕ್ಕೆ ಹಾಗೂ ಸೃಜನಾತ್ಮಕ ಕ್ರಿಯೆಯ ವ್ಯಾಖ್ಯಾನಕ್ಕೆ ಒಂದು ಉತ್ತಮವಾದ ಪುರಾವೆಯಾಗಿದೆ. ಹಾನನ ಅಸಂಬದ್ಧವಾದ ಪ್ರಾಯೋಗಿಕ ಫಲಿತಾಂಶಗಳಿಗೆ, ಅರ್ಥವತ್ತಾದ ವಿವರಣೆ ನೀಡಿ, ಆ ಫಲಿತಾಂಶಗಳಲ್ಲಿ ಅಡಗಿದ್ದ, ಮಹೋನ್ನತವಾದ ತೊಡಕಿನ ತತ್ವವನ್ನು ಅನ್ವೇಷಿಸಿದ್ದ ಲೀಸ್ ಮೈಟ್ನರಳ ಅಭೂತಪೂರ್ವ ಒಳನೋಟದ ಫಲಿತಾಂಶವನ್ನು ಕದ್ದು ಪಲಾಯನ ಮಾಡಿದ ಹಾನನು, ಅವಳ ಹೆಸರನ್ನು ಉಲ್ಲೇಖಿಸದೆ, ಸಂಶೋಧನ ಪ್ರಬಂಧವನ್ನು ತನ್ನ ಹೆಸರಿನಲ್ಲಿ ಮಾತ್ರಾ ಪ್ರಕಟಿಸಿದನು. ವಯಕ್ತಿಕ ಮಾತ್ಸರ್ಯ ಮತ್ತು ರಾಜಕೀಯ ಹೇಡಿತನದ ವಿಶ್ವಾಸಘಾತ ಕೃತ್ಯವು ಮೈಟ್ನರಳ ಮನಸ್ಸಿಗೆ ಬಹಳ ಆಳವಾದ ಆಘಾತವನ್ನುಂಟು ಮಾಡಿತು. ಇದರ ಬಗ್ಗೆ ತನ್ನ ಸೋದರ ವಾಲ್ಟರನಿಗೆ ಪತ್ರದಲ್ಲಿ, “ನಮ್ಮ ಸಹಭಾಗಿತ್ವದಲ್ಲಿ ನಡೇದ ಸಂಶೋಧನೆಯ ಕಾರ್ಯ ಪ್ರಕಟವಾಗಿರುವುದು ನನಗೆ ಬಹಳ ಸಂತೋಷದ ವಿಷಯ. ಹಾನನಿಗೆ ಸಿಕ್ಕ ಮನ್ನಣೆ ನನ್ನಲ್ಲಿ ಹೆಮ್ಮೆಯುಂಟು ಮಾಡಿದೆ. ಆದರೆ ಈ ಕಾರ್ಯದಲ್ಲಿ ನನ್ನ ವೈಜ್ಞಾನಿಕ ಕೊಡುಗೆಗೆ ಯಾವ ಮನ್ನಣೆ ಗೌರವಗಳನ್ನು ನೀಡದ ಅವನ ಬಗ್ಗೆ ನನ್ನ ಮನದಲ್ಲಿ ಅಸಹ್ಯವಾದ ಭಾವನೆ ಮೂಡಿದೆ ಮತ್ತು ನನ್ನ ಆತ್ಮವಿಶ್ವಾಸ ಸಂಪೂರ್ಣವಾಗಿ ಕುಂದಿಹೋಗಿದೆ”, ಎಂದು ಬರೆದಿದ್ದಳು.

೧೯೪೪ರಲ್ಲಿ, ಪರಮಾಣು ವಿದಳನದ ಅವಿಷ್ಕಾರಕ್ಕೆ, ಕೇವಲ ಹಾನನಿಗೆ ನೋಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ನಾಝಿ ಜರ್ಮನಿಯ ಆಳ್ವಿಕೆಯಲ್ಲಿ ನಡೆದ ಇಂತಹ ದುಷ್ಕೃತ್ಯಗಳು ಮತ್ತು ಅದರ ಪರಿಣಾಮಗಳನ್ನು ಹೇರಳವಾಗಿ ಕಾಣಬಹುದು. ವೈಜ್ಞಾನಿಕ ಗುಣಲಕ್ಷಣಗಳ ಯಾವುದೇ ಮಾನದಂಡದಿಂದ ಅಳೆದರೂ, ಪರಮಾಣು ವಿದಳನದ ಸಂಶೋಧನೆಯಲ್ಲಿ, ಲೀಸ್ ಮೈಟ್ನರಳು ವಹಿಸಿದ ಪಾತ್ರ ಮತ್ತು ಕೊಡುಗೆಯ ಬಗ್ಗೆ ಯಾವುದೇ ಸಂದೇಹವಿರಲಿಲ್ಲ. ಪ್ರಕಟಿತ ದಾಖಲೆಗಳು ಮತ್ತು ವೈಯಕ್ತಿಕ ಪತ್ರವ್ಯವಹಾರಗಳನ್ನು ನೋಡಿದರೆ, ಲೀಸ್ ಮೈಟ್ನರಳು ಈ ಸಂಶೋಧನೆಯ ಎಲ್ಲಾ ಹಂತಗಳಲ್ಲೂ ಪ್ರಮುಖವಾದ ಪಾತ್ರ ವಹಿಸಿದ್ದಳೆಂಬುದು ಸ್ಪಷ್ಟವಾಗಿದೆ. ಮೈಟ್ನರಳು ನಾಝಿ ಜರ್ಮನಿಯಿಂದ ಬಲಾತ್ಕಾರವಾದ ಪಲಾಯನವಿಲ್ಲದಿದ್ದರೆ, ಅವಳ ಕೊಡುಗೆಯನ್ನು ಇಷ್ಟೊಂದು ಸುಲಭವಾಗಿ ಅಲಕ್ಷಿಸಲು ಸಾಧ್ಯವಿರಲಿಲ್ಲ. ಯಾವ ರಾಜಕೀಯ ವ್ಯವಸ್ಥೆಗಳು, ಮೈಟ್ನರಳನ್ನು ಜರ್ಮನಿಯಿಂದ ಓಡಿಹೋಗುವಂತೆ ಒತ್ತಾಯಿಸಿದವೋ, ಅದೇ ವರ್ಣನೀತಿಗಳು, ಹಾನ್ ಮತ್ತು ಸ್ಟ್ರಾಸ್ಮನ್ನಿನ ಸಂಶೋಧನೆಯ ಸಹಭಾಗಿತ್ವದ ಪ್ರಕಟಿತ ಪ್ರಬಂಧದಲ್ಲೂ ಅವಳ ಕೊಡುಗೆಯನ್ನು ಸಂಪೂರ್ಣವಾಗಿ ಅಳಿಸಿಹಾಕಿತ್ತು. ಈ ಅವಿಷ್ಕಾರ ನಡೆದ ಹಲವು ವಾರಗಳಲ್ಲೇ, ಹಾನನು ಈ ಸಂಶೋಧನೆಯ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಿದನಲ್ಲದೇ, ಅದನ್ನು ಕೇವಲ ರಸಾಯನಶಾಸ್ತ್ರದ ಅವಿಷ್ಕಾರವೆಂದು ಘೋಷಿಸಿಕೊಂಡಿದ್ದನು. ಹ್ಯಾನ್ಸನ ಈ ಅಪ್ರಾಮಾಣಿಕತೆಯು ಈ ಅವಿಷ್ಕಾರದ ದಾಖಲೆಯನ್ನು ವಿರೂಪಗೊಳಿಸಿತಲ್ಲದೇ, ಇತಿಹಾಸದಲ್ಲಿ ಲೀಸ್ ಮೈಟ್ನರಳ ಹೆಸರು ಮತ್ತು ಸ್ಥಾನವನ್ನು ಸಂಪೂರ್ಣವಾಗಿ ಅಳಿಸಿಹಾಕಿತು. ಮುಂದೆ ಮೈಟ್ನರ್ ಅನೇಕ ಪುರಸ್ಕಾರಗಳನ್ನು ಪಡೆದಳು; ಅವಳ ಮರಣಾಂನಂತರ ಮೈಟ್ನೀರಿಯಮ್ ಎನ್ನುವ ರಾಸಾಯನಿಕ ಧಾತುವನ್ನು ಅವಳ ಹೆಸರಿನಿಂದ ಕರೆದರು; ಆದರೂ, ಅವಳ ವೈಜ್ಞಾನಿಕ ವೃತ್ತಿಯಲ್ಲಿ ಸಾಧಿಸಿದ ಅದ್ಭುತವಾದ ಸಾಧನೆಯೊಂದಕ್ಕೆ ಅರ್ಹವಾದ ಮನ್ನಣೆ ದೊರಕಲಿಲ್ಲ. ಇಲ್ಲಿ ನೋಬೆಲ್ ಪುರಸ್ಕಾರ ಸಮಿತಿ ಮತ್ತೊಮ್ಮೆ ಎಡವಿತಲ್ಲದೇ, ಅರ್ಹವಾದ ಮಹಿಳೆಯ ಸಾಧನೆಯನ್ನು ಗುರ್ತಿಸಲಿಲ್ಲ. ತನ್ನ ವೈಜ್ಞಾನಿಕ ಶಿಕ್ಷಣವನ್ನು ಮುಂದುವರೆಸಲು ಪ್ರತಿಕೂಲವಾದ ಅಡಚಣೆಗಳನ್ನು ಎದುರಿಸಿದ್ದಳು; ನಾಝಿ ಶೋಷಣೆಯಲ್ಲಿ ಬದುಕುಳಿದಿದ್ದಳು; ದೇಶಭ್ರಷ್ಟತೆಯ ದುಃಖವನ್ನು ಅನುಭವಿಸಿದ್ದಳು; ಈ ಎಲ್ಲಾ ಅನ್ಯಾಯಗಳಿಗಿಂತಲೂ, ನೋಬೆಲ್ ಸಮಿತಿಯಿಂದಾದ ಅನ್ಯಾಯ ಆಕೆಯನ್ನು ಬಹಳವಾಗಿ ಕಾಡಿತ್ತು.

ಆಕೆ ತನ್ನ ಆತ್ಮಚರಿತ್ರೆಯನ್ನು ಬರೆಯಲಿಲ್ಲ; ಇತರರಿಗೆ ಬರೆಯುವ ಅಧಿಕಾರವನ್ನೂ ನೀಡಲಿಲ್ಲ; ತನ್ನ ಜೀವನದ ಹೋರಾಟದ ಬಗ್ಗೆ ಬಹಳ ಅಪರೂಪವಾಗಿ ಮಾತನಾಡಿದ್ದ ಆಕೆಯನ್ನು, ಇಳಿಯ ವಯಸ್ಸಿನಲ್ಲಿ ಅಭದ್ರತೆ ಮತ್ತು ಪ್ರತ್ಯೇಕತೆಗಳು ತೀವ್ರವಾಗಿ ಕಾಡಿದ್ದವು. ಒಬ್ಬ ಮಹಾನ್ ವಿಜ್ಞಾನಿಯಾಗಿದ್ದ ಲೀಸ್ ಮೈಟ್ನರ್, ತನ್ನ ಸಂಶೋಧನೆಯ ಎಲ್ಲಾ ವಿವರಗಳನ್ನು ಬಹಳ ನಿಖರವಾಗಿ ದಾಖಲಿಸಿದ್ದಳು. ಇಂತಹ ಶ್ರೀಮಂತವಾದ ಸಂಗ್ರಹದಿಂದ, ಆಕೆ ಜೀವನದಲ್ಲಿ ಎದುರಿಸಿದ ಅಸಾಧಾರಣವಾದ ಕಷ್ಟ-ನಷ್ಟಗಳ ಬಗ್ಗೆ ವಿವರಗಳು ದೊರಕಿವೆ. ನೋಬೆಲ್ ಸಮಿತಿಯ ಬಹಿಷ್ಕಾರವೊಂದೇ ಅಲ್ಲ, ಅವಳು ಬರ್ಲಿನ್ ಪ್ರಯೋಗಾಲಯದಲ್ಲಿ ಬಳಸಿದ್ದ ವಿದಳನ ಉಪಕರಣವನ್ನು ಮುಂದೆ ಬರ್ಲಿನ್ನಿನ ಮ್ಯೂಸಿಯಮ್ಮಿನಲ್ಲಿ ಇಟ್ಟಾಗಲೂ, ಸುಮಾರು ೩೫ ವರ್ಷಗಳ ಕಾಲ, ಅವಳ ಹೆಸರನ್ನು ಎಲ್ಲೂ ನಮೂದಿಸಿರಲಿಲ್ಲ.

ನೋಬೆಲ್ ಸಮಿತಿಯ ಈ ಲಿಂಗ ಬೇಧ ನೀತಿಯ ಅನ್ಯಾಯಕ್ಕೆ ಒಳಗಾದ ಮಹಿಳೆ ಕೇವಲ ಮೈಟ್ನರ್ ಒಬ್ಬಳೇ ಅಲ್ಲಾ, ಮುಂದೆ ೫೦ ಮತ್ತು ೬೦ರ ದಶಕದಲ್ಲಿ, ಡಾರ್ಕ್ ಮ್ಯಾಟರ್ ಅಸ್ತಿತ್ವವನ್ನು ದೃಢ ಪಡಿಸಿದ ವೆರಾ ರೂಬಿನ್, ಪಲ್ಸಾರ್ ಅನ್ವೇಷಣೆಯಲ್ಲಿ ನಿಖರವಾದ ಪಾತ್ರ ವಹಿಸಿದ ಜೋಸಲೀನ್ ಬೆಲ್ ಜೊತೆಗೂ ಇಂತಹುದೇ ರೀತಿಯಲ್ಲಿ ವರ್ತಿಸಿದ ನೋಬೆಲ್ ಸಮಿತಿ, ಇತಿಹಾಸದ ಪುಟಗಳಲ್ಲಿ ಕುರೂಪದ ದಾಖಲೆಯನ್ನು ಸೃಷ್ಟಿಸಿದರು. ಈ ಎಲ್ಲಾ ಸನ್ನಿವೇಶಗಳಲ್ಲೂ, ವೈಜ್ಞಾನಿಕ ಮನೋಭಾವನೆ ಮತ್ತು ನ್ಯಾಯದ ನೆರಳು ಕಾಣಸಿಗುವುದಿಲ್ಲ. ಜಾನಾ ಲೆವಿನ್, ಒಬ್ಬ ಭೌತಶಾಸ್ತ್ರಜ್ಞೆ ಮತ್ತು ಕಾದಂಬರಿ ಲೇಖಕಿ, ತಾನು ಬರೆದ ಅತ್ಯುತ್ತಮ ಪ್ರಬಂಧವೊಂದರಲ್ಲಿ, “ವಿಜ್ಞಾನಿಗಳು ತಮ್ಮ ಜೀವನವನ್ನೆಲ್ಲಾ ಬ್ರಹ್ಮಾಂಡದ ತನಿಖೆಯ ಸಂಶೋಧನೆಯಲ್ಲಿ ವಿನಿಯೋಗಿಸುವುದು, ಕೇವಲ ಒಂದು ಪ್ರಶಸ್ತಿಗಾಗಿ ಅಲ್ಲಾ, ಆದರೆ, ಮಹತ್ತರವಾದ ಅನ್ವೇಷಣೆಯೊಂದನ್ನು ನಡೆಸಿದಾಗ ಅದಕ್ಕೆ ನ್ಯಾಯವಾದ ಪುರಸ್ಕಾರ ಪಡೆಯುವುದು ಅವರ ಆಜನ್ಮಸಿದ್ಧ ಹಕ್ಕು; ಕೇವಲ ಮಹಿಳೆ ಎಂಬ ಕಾರಣದಿಂದಾಗಿ ಅದರಿಂದ ವಂಚಿತರಾಗುವುದು ಅತ್ಯಂತ ವಿಷಾದನೀಯ ಹಾಗೂ ಅವಮಾನಕರ ಸಂಗತಿ”, ಎಂದು ಬರೆಯುತ್ತಾಳೆ. ಏನಾದರೇನು, ಈ ೨೧ನೆಯ ಶತಮಾನದಲ್ಲೂ ಇನ್ನೂ ಮಹಿಳೆಯರ ವಿರುದ್ಧ ಇಂತಹ ದೌರ್ಜನ್ಯಗಳು ಅವ್ಯಾಹತವಾಗಿ ಜರಗುತ್ತಲೇ ಇವೆ. ಅದು ವಿಜ್ಞಾನವೊಂದೇ ಏನು, ಸಮಾಜದ ಎಲ್ಲಾ ರಂಗಗಳಲ್ಲೂ ಇಂದಿಗೂ ನಡೆಯುತ್ತಿರುವುದು ಮಾನವ ಸಂತತಿಗೆ ಅವಮಾನ!

ಶಿಸ್ತು, ಸೌಜನ್ಯತೆ ಮತ್ತು ಚೆಲುವುಗಳ ಪ್ರತಿರೂಪವೆನಿಸಿದ ನಾಡು ಜಪಾನ್! ಡಾ.ಉಮಾ ವೆಂಕಟೇಶ್

ವಿನಂತಿ: ಉಮಾ ವೆಂಕಟೇಶ್ ಅವರ ಜಪಾನಿನ ಪ್ರವಾಸದ ಸುಂದರ ಬರಹ ಕೆಲವು ವರ್ಷಗಳ ಹಿಂದೆಯೇ ಬರೆದಿದ್ದರಾದರೂ ಅನಿವಾಸಿ ಜಾಲತಾಣದಲ್ಲಿ ಪ್ರಕಟವಾಗಲು ಇಷ್ಟು ಸಮಯ ತೆಗೆದುಕೊಂಡಿತೆಂದು ಹೇಳುತ್ತಾ ಅವರಲ್ಲಿ ಕ್ಷಮೆಯನ್ನು ಕೇಳುತ್ತೇವೆ.

ಪ್ರತಿಯೊಂದು ಪ್ರವಾಸವೂ ಒಂದು ವಿಶಿಷ್ಟ ಅನುಭವ ಕೊಡುತ್ತವೆ, ಅದು ಪಕ್ಕದ ಊರಿರಬಹದು, ದೂರದ ದೇಶವಿರಬಹುದು,ಅಪರಿಚಿತರಿಗೆ ಪ್ರತಿಯೊಂದು ಹೊಸ ಜಾಗವೂ ಪ್ರವಾಸವೇ ಸರಿ.ಪ್ರವಾಸ ಕೈಗೊಳ್ಳುವ ಮುನ್ನ ಅಲ್ಲಿಯ ಕಿರುಪರಿಚಯವನ್ನು, ಮಾಹಿತಿಯನ್ನು ಕಲೆಹಾಕಿ ನಿರೀಕ್ಷೆಗಳನ್ನು, ಕುತೂಹಲವನ್ನು ಹುಟ್ಟಿಸುವ ಅನುಭವ
ಬಹಳ ವಿಶೇಷವಾಗಿರುತ್ತದೆ.ಜಪಾನಿನ ಜನತೆ, ಅವರ ಶಿಸ್ತು, ಸಂಯಮ, ನಿರಂತರ ದುಡಿಮೆ, ದೇಶಾಭಿಮಾನ, ಪ್ರಕೃತಿಯ ಕಾಳಜಿ ಇವೆಲ್ಲವುಗಳನ್ನು ಸೊಗಸಾಗಿ ಕಣ್ಮುಂದೆ ಇಡುವ ಡಾ.ಉಮಾ ವೆಂಕಟೇಶ್ ಅವರ ಈ ಬರಹವನ್ನು ನೀವೂ ಓದಿ ಪ್ರತಿಕ್ರಿಯಿಸಿ.

(ನಾನು ಜಪಾನ್ ದೇಶಕ್ಕೆ ಭೇಟಿ ಇತ್ತು ೫ ವರ್ಷಗಳಾಗಿವೆ. ಏಷಿಯಾ ಖಂಡದ ದೇಶಗಳಲ್ಲೇ  ಅತ್ಯುತ್ತಮ ಪ್ರಗತಿಯನ್ನು ವಿವಿಧ ರಂಗಗಳಲ್ಲಿ ಸಾಧಿಸಿರುವ ಹೆಗ್ಗಳಿಕೆ ಪಡೆದ ಈ ಸುಂದರ ದ್ವೀಪಗುಚ್ಛಗಳ ಇತಿಹಾಸ ಮತ್ತು ಪರಂಪರೆಯನ್ನು ಬಲ್ಲವರು, ಈ ದೇಶವನ್ನೊಮ್ಮೆ ನೋಡಲೇಬೇಕೆನ್ನುವ ಹಂಬಲ ಹೊತ್ತಿರುತ್ತಾರೆ. ಮಹಾಯುದ್ಧಗಳ ಸಮಯದಲ್ಲಿ ಈ ದೇಶ ಸುದ್ದಿಯಲ್ಲಿದ್ದ ವಿಷಯ ಗೊತ್ತಿದೆ. ಆದರೆ ಎರಡನೆಯ ಮಹಾಯುದ್ಧದಲ್ಲಿ ಅಣುಬಾಂಬಿನ ಪ್ರಯೋಗವಾದನಂತರ ಇವರ ಮನೋಭಾವ ಬದಲಾಯಿತು. ತಮ್ಮ ಕಠಿಣ ಪರಿಶ್ರಮ ಮತ್ತು ಸಹನೆಯಿಂದ ಮುಂದುವರೆದು ತಮ್ಮ ದೇಶವನ್ನು ಉನ್ನತಿಗೆ ಒಯ್ದ ಜಪಾನಿಯರ ಮನೋಧರ್ಮವನ್ನು ಮೆಚ್ಚಬೇಕಾದ್ದೇ. ಪೆಸಿಫಿಕ್ ಅಗ್ನಿ ವರ್ತುಲದಲ್ಲಿರುವ ಈ ದೇಶದಲ್ಲಿ ಭೂಕಂಪ, ಅಗ್ನಿಪರ್ವತ ಸ್ಫೋಟ, ಸುನಾಮಿಗಳಂತಹ ಪ್ರಾಕೃತಿಕ ಅನಾಹುತಗಳು ಜರಗುತ್ತಲೇ ಇರುತ್ತವೆ.  ಆದರೆ ಇದನ್ನು ಕೆಚ್ಚೆದೆಯಿಂದ   ನಿಶ್ಯಬ್ದವಾಗಿ ಎದುರಿಸುತ್ತ ಮುಂದುವರೆಯುವ ಈ ಜನರ ತಾಳ್ಮೆಯನ್ನು ನಾವು ಕಲಿಯಬೇಕಿದೆ. –ಉಮಾ)

ಶಿಸ್ತು, ಸೌಜನ್ಯತೆ ಮತ್ತು ಚೆಲುವುಗಳ ಪ್ರತಿರೂಪವೆನಿಸಿದ ನಾಡು ಜಪಾನ್!

ಪ್ರವಾಸ ಪೀಠಿಕೆ: “ಸಾಯೋನಾರಾ ಸಾಯೋನಾರಾ, ವಾದ ನಿಭಾವೋಂಗೆ ಸಾಯೋನಾರ” ಜನಪ್ರಿಯ ಹಿಂದಿ ಚಲನಚಿತ್ರ “Love in Tokyo”ದಲ್ಲಿ ಲತಾ ಮಂಗೇಶ್ಕರ್ ಮಧುರ ಕಂಠಸಿರಿಯಲ್ಲಿನ ಹಾಡನ್ನು ಕೇಳಿ ಆನಂದಿಸದವರ ಸಂಖ್ಯೆ ಬಹಳ ಕಡಿಮೆ. ೬೦ರ ದಶಕದಲ್ಲಿ ನಾವು ಪ್ರಾಥಮಿಕ ಶಾಲೆಯಲ್ಲಿದ್ದಾಗ, ಬಂದ ಹಿಂದಿ ಚಲನ ಚಿತ್ರ “ಲವ್ ಇನ್ ಟೋಕಿಯೋ” ದಲ್ಲಿ ಜಪಾನ್ ದೇಶವನ್ನು ಸ್ವಲ್ಪಮಟ್ಟಿಗೆ ನೋಡಲು ಅವಕಾಶ ಸಿಕ್ಕಿದ್ದ ನನಗೆ, ಈಗ ೨ ವಾರಗಳ ಹಿಂದೆ ಆ ದೇಶವನ್ನು ಮುಖತವಾಗಿ ನೋಡುವ ಸುವರ್ಣಾವಕಾಶವೊಂದು ದೊರಕಿತು. ಯಂತ್ರ-ತಂತ್ರ ವಿಜ್ಞಾನದಲ್ಲಿ ಅಪಾರ ಪ್ರಗತಿಯನ್ನು ಸಾಧಿಸಿ, ತನ್ನ ಶಿಸ್ತು ಮತ್ತು ಕಾರ್ಯದಕ್ಷತೆಗಳಿಗೆ ಪ್ರಪಂಚದಲ್ಲೇ ಹೆಸರಾದ ಈ ದೇಶವನ್ನು ನೋಡಲು ಮನ ಹಾತೊರೆಯುತ್ತಲೂ ಇತ್ತು. ಸಣ್ಣ ವಯಸ್ಸಿನಿಂದಲೂ, ಶಾಲೆ ಕಾಲೇಜಿನ ದಿನಗಳಲ್ಲಿ, ಜಪಾನ್ ಎಂದರೆ ಅಲ್ಲಿನ ಎಲೆಕ್ಟ್ರಾನಿಕ್ ಪದಾರ್ಥಗಳ ವರ್ಣನೆ ಎಲ್ಲರ ಬಾಯಿಯಲ್ಲೂ ನಲಿದಾಡುತ್ತಿತ್ತು. ಅಲ್ಲಿನ ರಿಸ್ಟ್ ವಾಚುಗಳು, ರೇಡಿಯೋ, ಟೇಪರೆಕಾರ್ಡರ್,ಟಿ.ವಿ, ಕಾರ್, ಹೀಗೆ ಹಲವು ಹತ್ತು ಆಧುನಿಕ ಉಪಕರಣಗಳ ಉತ್ಪಾದನೆಯಲ್ಲಿ ಜಗತ್ತಿನ ಜನಗಳ ಜೇಬಿಗೆ ಲಗ್ಗೆಯಿಡುವ ಈ ದೇಶದ ಹೆಸರೆತ್ತಿದೊಡನೆ ನೆನಪಾಗುವುದು ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಎರಡನೆಯ ಮಹಾಯುದ್ಧದ ಅಂತ್ಯದಲ್ಲಿ ನಡೆದ ಅಣು ಬಾಂಬಿನ ದಾಳಿ. ನನ್ನ ಮಗಳ ಶಾಲೆಯಲ್ಲಿ ಅವಳ ಸಹಪಾಠಿಯಾಗಿದ್ದ, ಮಯೋಂಕಿ ಎಂಬ ಸುಂದರ ಜಪಾನಿನ ಹುಡುಗಿ ನಮ್ಮ ಮನೆಗೆ ಆಗಾಗ ಇಲ್ಲಿ ಕಾರ್ಡಿಫ಼್ ನಗರದಲ್ಲಿ ಆಟವಾಡಲು ಬರುತ್ತಿದ್ದಳು. ಆಕೆಯ ಕುಟುಂಬವನ್ನು ಒಮ್ಮೆ ಭೇಟಿ ಮಾಡಿದ್ದ ನಮಗೆ, ಜಪಾನಿಯರ ಶಿಸ್ತು, ಭಾಷಾಭಿಮಾನ, ಸಭ್ಯತೆಗಳ ಲಘು ಪರಿಚಯವಾಗಿತ್ತು. ತಾನು ಜಪಾನಿಗೆ ವಾಪಸ್ ಹೋಗುವ ಮುನ್ನ ನನ್ನ ಮಗಳಿಗೆ ಸುಂದರವಾದ ಜಪಾನ್ ಹುಡುಗಿಯ ಬೊಂಬೆಯೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದ ಆ ನೆನಪು ಇನ್ನೂ ನಮ್ಮ ಮನಗಳಲ್ಲಿ ಹಸಿರಾಗೇ ಇದೆ. ನನ್ನ ಮಗಳಂತೂ ಈ ದೇಶದ ಚರಿತ್ರೆ, ಸಂಸ್ಕೃತಿ, ಸಂಗೀತ ಹೀಗೆ ಹಲವು ಹತ್ತು ವಿಷಯಗಳಿಗೆ ಮಾರು ಹೋಗಿ, ತನ್ನ ತಲೆಯಲ್ಲಿ ಅಲ್ಲಿನ ವಿಷಯದ ಬಗ್ಗೆ ಬೇಕಾದಷ್ಟನ್ನು ಓದಿ ಆ ದೇಶಕ್ಕೆ ಹೋಗಿ ನೆಲಸುವ ಆಸೆಯನ್ನೂ ತುಂಬಿಕೊಂಡಿದ್ದಾಳೆ.   ಭೌಗೋಳಿಕವಾಗಿ ೬,೮೫೨ ಸಣ್ಣ ದ್ವೀಪಗಳ ಗುಂಪಿನ ಈ ದೇಶ “ಪೆಸಫ಼ಿಕ್ ಅಗ್ನಿಯ ವರ್ತುಲದಲ್ಲಿ” ಉಪಸ್ಥಿತವಾಗಿದ್ದು, ಪ್ರಾಕೃತಿಕವಾಗಿ ಭೂಕಂಪ ಮತ್ತು ಸುನಾಮಿಗಳ ಹೊಡೆತದಿಂದ ಆಗಾಗ ತತ್ತರಿಸಬೇಕಾದ ಪರಿಸ್ಥಿತಿಯಲ್ಲಿದೆ. ಇಷ್ಟೆಲ್ಲಾ ಪ್ರತಿಕೂಲ ಪರಿಸ್ಥಿತಿಗಳಲ್ಲೂ ಇಲ್ಲಿನ ಜನತೆ ತನ್ನ ಕಷ್ಟಸಹಿಷ್ಣುತೆ ಮತ್ತು ಪರಿಶ್ರಮದಿಂದ ಸಾಧಿಸಿರುವ ಕಾರ್ಯಗಳು ಅಪಾರ. ಇಷ್ಟಲ್ಲದೇ, ಎರಡನೆಯ ಮಹಾಯುದ್ಧದ ಕೊನೆಯಲ್ಲಿ, ಅಮೆರಿಕೆಯ ಅಣುಬಾಂಬ್ ದಾಳಿಗೆ ತುತ್ತಾಗಿ, ತನ್ನ ಎರಡು ಮುಖ್ಯನಗರಗಳನ್ನು ಪೂರ್ಣವಾಗಿ ಕಳೆದುಕೊಂಡ ಈ ದೇಶದ ಜನತೆ, ಕೇವಲ ಒಂದು ದಶಕದಲ್ಲೇ ಮತ್ತೊಮ್ಮೆ ಪುಟಿದೆದ್ದು, ಯಂತ್ರ-ತಂತ್ರ ಜ್ಞಾನದಲ್ಲಿ ಅಗ್ರಗಣ್ಯರೆನಿಸಿಕೊಂಡು ಪಶ್ಚಿಮ ದೇಶಗಳಿಗೆ ತನ್ನ ಸವಾಲನ್ನು ಎಸೆದು, ಎಲಕ್ಟ್ರಾನಿಕ್ಸ್, ಆಟೋಮೊಬೈಲ್ ಮತ್ತು ಇನ್ನಿತರ ವೈಜ್ಞಾನಿಕ ಕ್ಷೇತ್ರಗಳಲ್ಲಿ ತನ್ನ ಶ್ರೇಷ್ಠತೆಯನ್ನು ಮೆರೆದಿರುವುದು ನಿಜಕ್ಕೂ ಪ್ರಶಂಸನೀಯವಾದ ಸಂಗತಿ.

ಲಂಡನ್ ಟು ಒಸಾಕ: ನನ್ನವರು ಈಗಾಗಲೇ ಸುಮಾರು ೫ ಬಾರಿ ಜಪಾನ್ ದ್ವೀಪಗಳಲ್ಲಿ ಹಲವಕ್ಕೆ ಭೇಟಿಯಿತ್ತಿದ್ದು, ಪ್ರತೀ ಬಾರಿಯೂ ಮಕ್ಕಳ ಶಾಲೆ ಕಾಲೇಜುಗಳ ಚಟುವಟಿಕೆಗಳ ಮಧ್ಯದಲ್ಲಿ ಸಿಲುಕಿದ್ದ ನನಗೆ, ಇತ್ತೀಚೆಗೆ ಈ ಹಾವಳಿಗಳಿಂದ ಮುಕ್ತಿ ದೊರೆತಿರುವ ಕಾರಣ, ಈ ಬಾರಿ ಈ ಪ್ರವಾಸದಲ್ಲಿ ನನ್ನವರ ಜೊತೆ ಪ್ರಯಾಣ ಮಾಡುವ ಅವಕಾಶ ದೊರೆಯಿತು. ಈ ಸುವರ್ಣಾವಕಾಶವನ್ನು ಕಳೆದುಕೊಳ್ಳುವ ಮೂರ್ಖತನ ಮಾಡದೆ ಅವರ ಜೊತೆಯಲ್ಲಿ ನಡೆದೆ. ಲಂಡನ್ನಿನ ಹೀಥ್ರೋ ವಿಮಾನ ನಿಲ್ದಾಣದಿಂದ ಹೊರಟು, ಪ್ಯಾರಿಸ್ ಮಾರ್ಗವಾಗಿ ಸುಮಾರು ೧೨ ಗಂಟೆಗಳ ಪ್ರಯಾಣದ ನಂತರ, ಹಾನ್ಷು ಮುಖ್ಯ ದ್ವೀಪದಲ್ಲಿನ ನಗರಗಳಲ್ಲಿ ಒಂದಾದ ಒಸಾಕವನ್ನು ತಲುಪಿದೆವು. ವಿಮಾನ ನಿಲ್ದಾಣದಲ್ಲೇ ಅಲ್ಲಿನ ಜನರ ಸಭ್ಯ ಸಂಸ್ಕೃತಿಯ ಪರಿಚಯವಾಯಿತು. ನೋಡಿದೊಡನೆ ತಲೆಬಾಗಿಸಿ ಸ್ವಾಗತಿಸುವ ಇಲ್ಲಿನ ಜನತೆ, ಬಲು ಮೃದು ಭಾಷಿಗಳು. ಇಂಗ್ಲೀಷ್ ಭಾಷೆ ತಿಳಿದವರು ಬಹಳ ಕಡಿಮೆ ಮಂದಿ. ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ದೃಢವಾಗಿ ಹಿಡಿದು, ಪಶ್ಚಿಮದ ಸಂಸ್ಕೃತಿಯ ದಾಳಿಗೆ ಆದಷ್ಟೂ ಒಳಗಾಗದಂತೆ ನಿಂತಿರುವ ಜನತೆ, ಪ್ರವಾಸಿಗರಿಗೆ ಸಹಾಯ ತೋರುವುದರಲ್ಲಿ ಹಿಂಜರಿಯರು. ಆದರೆ, ಹೊರಗಿನವರನ್ನು ಇಲ್ಲೇ ನೆಲಸಲೂ ಬಿಟ್ಟಿಲ್ಲಾ ! ಇಲ್ಲಿನ ಜನಸಂಖ್ಯೆಯಲ್ಲಿ, ೯೮.೨% ಜಪಾನಿಯರೇ ಇದ್ದಾರೆ. ಉಳಿದವರು ಚೀನಿಯರು, ದಕ್ಷಿಣ ಕೊರಿಯಾದವರಾಗಿದ್ದು, ಕೇವಲ ೦.೨% ರಷ್ಟು ಮಾತ್ರಾ ಪ್ರಪಂಚದ ಉಳಿದ ದೇಶಗಳ ಜನರಾಗಿದ್ದಾರೆ. ಹೊರಗಿನವರನ್ನು ಆದಷ್ಟೂ ಹೊರಗೇ ಇಟ್ಟಿದ್ದಾರೆ ಎಂಬ ವಿಷಯ ಈ ಅಂಕಿ-ಅಂಶಗಳಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಸರಿ ಇಲ್ಲಿಂದ ಕಿಯೋಟೋ ನಗರಕ್ಕೆ ತೆರಳಲು ನಮಗಾಗಿ ಸೂಪರ್ ಡೀಲಕ್ಸ್ ಟ್ಯಾಕ್ಸಿಯನ್ನು ವ್ಯವಸ್ಥೆ ಮಾಡಲಾಗಿತ್ತು. ಟ್ಯಾಕ್ಸಿಯ ಚಾಲಕ ಧರಿಸಿದ್ದ ಗರಿಮುರಿಯಾಗಿದ್ದ ಸಮವಸ್ತ್ರ, ಟೋಪಿ, ಕೈಯಲ್ಲಿನ ಶ್ವೇತ ವರ್ಣದ ಕೈಚೀಲ, ಬೂಟುಗಳು ಈ ದೇಶದ ಶಿಸ್ತಿನ ರೀತಿ-ರಿವಾಜನ್ನು ಇಲ್ಲಿಯೇ ನಮಗೆ ಪರಿಚಯಿಸಿತು. ತನ್ನ ಹತ್ತಿರದಲ್ಲಿನ, ದೂರನಿಯಂತ್ರಣದ ಗುಂಡಿಯನ್ನದುಮಿ, ಟ್ಯಾಕ್ಸಿಯ ಬಾಗಿಲನ್ನು ತೆಗೆದು ತಲೆಬಾಗಿಸಿ ನಮ್ಮ ಒಳಗೆ ಕುಳಿತುಕೊಳ್ಳುವಂತೆ ವಿನಯಪೂರ್ವಕವಾಗಿ ಆದೇಶಿಸಿ, ನಮ್ಮ ಸಾಮಾನುಗಳನ್ನೆಲ್ಲಾ ತಾನೇ ಒಳಗಿರಿಸಿದ. ಪ್ರಯಾಣಿಕರು ಕೂರುವ ಆಸನಗಳಿಗೆ ಹೊದಿಸಲಾಗಿದ್ದ ಬಿಳಿಯ ಬಣ್ಣದ ಹೊದಿಕೆಯನ್ನು ಕಂಡು, ಅಲ್ಲಿ ಯಾವ ರೀತಿಯ ಕೊಳಕನ್ನೂ ಮಾಡುವುದು ಅನುಚಿತವೆಂದು ಪ್ರಯಾಣಿಕರಿಗೆ ತಕ್ಷಣವೇ ಅರಿವಾಗುವಂತೆ ಮಾಡುವ ಇವರ ಜಾಣ್ಮೆಗೆ ಭೇಷ್ ಎನ್ನಲೇಬೇಕು. ನನ್ನ ಗೆಳೆಯರ ಕುಟುಂಬವೊಂದು, ಈಗ ಮೂರು ವರ್ಷಗಳ ಹಿಂದೆ ಜಪಾನಿಗೆ ಹೋದಾಗ, ವಿಮಾನನಿಲ್ದಾಣದಲ್ಲಿ ಇಮಿಗ್ರೇಶನ್ ಅಧಿಕಾರದ ಕ್ಯೂನಲ್ಲಿದ್ದಾಗ, ಅವರ ೧೫ ವರುಷದ ಬಾಲಕ, ತಾನು ತಿನ್ನುತ್ತಿದ್ದ ಆಲೂ ಚಿಪ್ಸಿನ ಚೂರೊಂದನ್ನು ನೆಲದ ಮೇಲೆ ಬೀಳಿಸಿದ ತಕ್ಷಣವೇ, ಅವನ ಹಿಂದಿದ್ದ ಜಪಾನೀ ತರುಣ ಒಡನೆಯೇ ಅದನ್ನೆತ್ತಿ ಅಲ್ಲಿದ್ದ ಕಸದ ಬುಟ್ಟಿಗೆ ಹಾಕಿದನಂತೆ. ಇದು ನಮ್ಮ ಗೆಳೆಯ ಕುಟುಂಬದವರು ನಾಚಿ ತಲೆತಗ್ಗಿಸುವಂತಾಯಿತು ಎಂದು ಅವರ ಬಾಯಿಂದಲೇ ಕೇಳಿದ್ದ ನಮಗೆ ಈ ದೇಶದ ಶಿಸ್ತಿನ ಅರಿವಿತ್ತು.

ಕಿಯೋಟೋ: ಸುಮಾರು ೧ ಗಂಟೆ ೩೦ ನಿಮಿಷಗಳ ಸುಖಕರ ಪ್ರಯಾಣದ ನಂತರ ಜಪಾನಿನ ಮತ್ತೊಂದು ಮುಖ್ಯ ನಗರ ಕಿಯೋಟೋವನ್ನು ತಲುಪಿದೆವು. ಒಸಾಕಾ ನಗರದಿಂದ, ಕಿಯೋಟೋವರೆಗಿನ ಈ ಪೂರ್ಣ ಮಾರ್ಗದಲ್ಲಿ, ಸ್ವಲ್ಪವನ್ನೂ ಬಿಡದೆ, ಎಲ್ಲೆಡೆ ಕಟ್ಟಡಗಳನ್ನು ನಿರ್ಮಿಸಿರುವ ವ್ಯವಸ್ಥೆ ನೋಡಿದರೆ ತಿಳಿಯುತ್ತದೆ,   ಭೌಗೋಳಿಕವಾಗಿ ಬರಿ ಪರ್ವತಮಯವಾಗಿರುವ ಈ ದೇಶದಲ್ಲಿ, ಸಮತಟ್ಟಾದ ಪ್ರದೇಶ ಬಲು ಕಡಿಮೆ ಎನ್ನುವ ಅಂಶ. ಕ್ರಿ.ಶ.೭೯೪ ರಿಂದ ೧೮೬೮ರ ವರೆಗೆ ಜಪಾನಿನ ರಾಜಧಾನಿ ಮತ್ತು ಚಕ್ರವರ್ತಿಯ ನಿವಾಸ ಸ್ಥಾನವೆನಿಸಿದ್ದ ಈ ನಗರ ಬಲು ಸುಂದರ ಮತ್ತು ಜಪಾನಿನ ಚಾರಿತ್ರಿಕ, ಐತಿಹಾಸಿಕ ಪರಂಪರೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿದು ನಿಂತ ನಗರವೆನಿಸಿದೆ. ಇಲ್ಲಿರುವ ಅನೇಕ ದೇವಾಲಯಗಳು ಮತ್ತಿತರ ಪ್ರಾಚೀನ ಕಟ್ಟಡಗಳು ೨ನೆಯ ಮಹಾಯುದ್ಧದ ಸಮಯದಲ್ಲಿ ಅಮೇರಿಕನ್ನರು ಈ ನಗರಕ್ಕೆ ಅಣುಬಾಂಬಿನ ದಾಳಿಯನ್ನು ನಡೆಸದಂತೆ ಪ್ರೇರೇಪಿಸಿದ್ದು, ಈಗ ಯುನೆಸ್ಕೋ ವಿಶ್ವ ಸಂಸ್ಕೃತಿಯ ಸ್ಮಾರಕಗಳೆಂದು ಗುರುತಿಸಲ್ಪಟ್ಟಿವೆ. ಇಲ್ಲಿನ ನಗರಗಳು ಬಲು ಚೊಕ್ಕ ಮತ್ತು ಸ್ವಚ್ಛ. ಭೌಗೋಳಿಕವಾಗಿ ಬಹುತೇಕ ಪರ್ವತಗಳಿಂದಲೇ ಆವರಿಸಲ್ಪಟ್ಟಿರುವ ಈ ದೇಶದಲ್ಲಿ, ಸಮತಟ್ಟಾದ ಪ್ರದೇಶವೇ ಕಡಿಮೆ. ಆದ್ದರಿಂದಲೇ, ಈ ದ್ವೀಪಗಳ ಗುಂಪಿನಲ್ಲಿ ಹಿರಿಯದಾದ ಈ ಹಾನ್ಷು ದ್ವೀಪದಲ್ಲಿ ಎಲ್ಲೆಡೆಯಲ್ಲಿ ಜನಗಳು ವಾಸವಾಗಿದ್ದು, ನಗರಗಳು ತುಂಬಿವೆ. ಇಲ್ಲಿ ಜನಸಾಂದ್ರತೆ ಬಲು ದಟ್ಟವಾಗಿದ್ದು, ಜನಗಳು ವಾಸಿಸುವ ಮನೆಗಳು ಬಲು ಚಿಕ್ಕವು. ಕೇವಲ ಪೆಟ್ಟಿಗೆಯಂತೆ ಕಟ್ಟಲ್ಪಟ್ಟ ಈ ಮನೆಗಳನ್ನು, ಭೂಕಂಪದ ಹಾವಳಿಯ ಕಾರಣ, ಮರ ಮತ್ತು ರಟ್ಟಿನಂತಹ ಹಗುರಾದ ಸಾಮಗ್ರಿಗಳನ್ನು ಬಳಸಿ ನಿರ್ಮಿಸಲಾಗಿದೆ. ರಸ್ತೆಯ ಎರಡು ಬದಿಯಲ್ಲೂ “ಜೀವಂತ ಪಳಿಯೊಳಕೆ” (Living fossil),ಎಂದೇ ಸಸ್ಯಪ್ರಪಂಚದಲ್ಲಿ ಪರಿಚಿತವಾಗಿರುವ “ಗಿಂಕೋ ಬೈಲೋಬ” (Ginkgo biloba)ವೃಕ್ಷಗಳಿಂದ ಕಂಗೊಳಿಸುತ್ತವೆ. ಈ ಮರಗಳು ಜಪಾನಿಯರಿಗೆ ಬಲು ಪವಿತ್ರವೆನಿಸಿದ್ದು, ಇಲ್ಲಿನ ದೇವಾಲಯಗಳಲ್ಲೂ ಇವನ್ನು ಕಾಣಬಹುದು. ಸರಿ ನಮಗಾಗಿ ವ್ಯವಸ್ಥೆ ಮಾಡಿದ್ದ ಸಣ್ಣ ಫ಼್ಲಾಟ್ ತಲುಪಿದೆವು. ಒಂದು ಕೋಣೆಯ ಈ ಪುಟ್ಟ ಮನೆಯಲ್ಲಿ ಎಲ್ಲವೂ ಚೊಕ್ಕ ಮತ್ತು ಸೌಕರ್ಯಗಳಿಂದ ವ್ಯವಸ್ಥಿತವಾಗಿದ್ದು ನಮ್ಮ ೧೮ ದಿನಗಳ ವಾಸಕ್ಕೆ ಅನುಕೂಲವಾಗಿತ್ತು. ಸರಿ ಸ್ವಲ್ಪ ವಿಶ್ರಮಿಸಿದ ನಂತರ ನಮಗೆ ಬೇಕಾದ ಆಹಾರ ಪದಾರ್ಥಗಳನ್ನು ಕೊಳ್ಳಲು ಅಂಗಡಿಯೆಡೆ ಹೊರಟೆವು. ಜಪಾನಿಯರ ಮುಖ್ಯ ಆಹಾರ ಅಕ್ಕಿ, ಮೀನು ಮತ್ತು ತರಕಾರಿ ಆದ್ದರಿಂದ ನಮಗೆ ಆಹಾರದ ವಿಷಯದಲ್ಲಿ ಅಷ್ಟೇನೂ ತೊಂದರೆಯೆನಿಸಲಿಲ್ಲ. ಹಾಗಲಕಾಯಿ, ಬೂದುಕುಂಬಳಕಾಯಿ, ಕೊತ್ತಂಬರಿ ಸೊಪ್ಪು ಎಲ್ಲವೂ ದೊರೆತವು. ನಾವೇ ಸ್ವಯಂಪಾಕ ನಡೆಸುತ್ತಿದ್ದರಿಂದ, ನಮ್ಮ ಆಹಾರವನ್ನೇ ಸೇವಿಸಿದೆವು.

ಕಿಯೋಟೋ ಪ್ರವಾಸ: ಜಿಂಗು ಶ್ರೈನ್.

DSC_0017
ಜಿಂಗು ಶ್ರೈನ್ , ಕಿಯೋಟೋ

ನನ್ನವರು ಇಲ್ಲಿಗೆ ತಮ್ಮ ಅಕೆಡೆಮಿಕ್ ಕಾರ್ಯಕ್ಕಾಗಿ ಬಂದದ್ದರಿಂದ ಅವರ ಕೆಲಸ ಮರುದಿನವೇ ಪ್ರಾರಂಭವಾಯಿತು. ಸರಿ ನನಗೆ ಪೂರ್ಣ ವಿರಾಮವಾದ್ದರಿಂದ ಈ ಪಟ್ಟಣವನ್ನು ಸುತ್ತುವುದು ಸುಲಭವಾಯಿತು. ಅತ್ಯುತ್ತಮ ಸಾರಿಗೆ ಸಂಪರ್ಕ ಈ ದೇಶದಲ್ಲಿರುವುದರಿಂದ ಸುತ್ತುವ ಕಾರ್ಯ ಕಷ್ಟವೇನಲ್ಲ. ಮೊದಲ ದಿನ ನಮ್ಮ ಮನೆಯ ಹತ್ತಿರದಲ್ಲೇ ಕಾಲುನಡಿಗೆಯಲ್ಲೇ ಕ್ರಮಿಸಬಹುದಾದ ಅಂತರದಲ್ಲಿದ್ದ ಪ್ರಸಿದ್ಧ ಮಂದಿರ “ಹೈನ್ ಜಿಂಗು ಶ್ರೈನ್” ಕಡೆಗೆ ಧಾವಿಸಿದೆ. ೧೯೩೮ರಲ್ಲಿ ಹೈನ್ ರಾಜ್ಯದ ಚಕ್ರವರ್ತಿಗಳಾದ ಕಣ್ಮು ಮತ್ತು ಕೋಮೆ ನೆನಪಿನಲ್ಲಿ ಕಿಯೋಟೋ ನಗರದ ನಾಗರೀಕರು ಇವರೀರ್ವರು ಜಪಾನ್ ದೇಶದ ನಿರ್ಮಾಣದಲ್ಲಿ ಗೈದ ಸಾಧನೆಗಳನ್ನು ಸ್ಮರಿಸುವ ಸಲುವಾಗಿ ಈ ದೇಗುಲವನ್ನು ಪುನರ್ನಿರ್ಮಿಸಿ, ೧೯೪೦ರಲ್ಲಿ ಅದನ್ನು ದೇಶಕ್ಕೆ ಸಮರ್ಪಿಸಿದರು. ಶಾಂತಿ ಸೌಂಧರ್ಯಗಳೇ ಮೈವೆತ್ತಂತಿರುವ ಈ ದೇಗುಲ ವಿಶಾಲವಾದ ಕೆಂಪು ಬಣ್ಣದ ದ್ವಾರವನ್ನೊಳಗೊಂಡಿದ್ದು, ಒಳಗಿನ ಚೌಕಾಕಾರದ ಪ್ರಾಂಗಣ, ಮೂಲದೇವರ ಸ್ಥಾನ ಮತ್ತು ವಿಶಾಲವಾದ ಸುಂದರ ಉದ್ಯಾನವನ್ನು ಹೊಂದಿದೆ. ಜಪಾನಿನ ಉದ್ಯಾನಗಳು ಕಣ್ಣಿಗೆ ಹಬ್ಬ. ನಡುವೆ ಕೊಳ, ಕೊಳದಲ್ಲಿನ ಕೆಂಪು ಮತ್ತು ಬಿಳಿಯ ತಾವರೆಗಳು, ಅದರಲ್ಲಿನ ಬಣ್ಣಬಣ್ಣದ ಮೀನುಗಳು, ಜಪಾನಿಯರ ಅಚ್ಚುಮೆಚ್ಚಿನ ಬೋನ್ಸಾಯಿ ರೀತಿಯಲ್ಲಿ ಬೆಳಸಿದ ಪೈನ್, ಮೇಪಲ್, ಓಕ್, ಬರ್ಚ್ ಜಾತಿಯ ವೃಕ್ಷಗಳು, ಅಲ್ಲಲ್ಲೇ ನಿರ್ಮಿಸಿದ ಚೆಲುವಾದ ಮಂಟಪಗಳು, ಚಿಲಿಪಿಲಿಗುಟ್ಟುವ ಪಕ್ಷಿಗಳು ಮತ್ತು ಇವೆಲ್ಲದಕ್ಕಿಂತ, ಶಾಂತತೆಯೇ ಮೈವೆತ್ತಂತಹ ವಾತಾವರಣ ನಮ್ಮ ಸುತ್ತಲಿನ ಪ್ರಪಂಚವನ್ನೇ ಮರೆಯುವಂತೆ ಮಾಡುತ್ತದೆ. ಹಕ್ಕಿಗಳ ಕಲರವ ನನ್ನ ಕಿವಿಗಳಿಗೆ ಬಿದ್ದರೂ, ಮನ ಈ ಸುಂದರ ವಾತಾವರಣದಲ್ಲಿ, ಕೋಗಿಲೆಯ ಗಾನವಿದ್ದರೆ ಇನ್ನೂ ಹೆಚ್ಚಿನ ಆನಂದ ಲಭಿಸುತ್ತಿತ್ತು ಎಂದು ಹೇಳುತ್ತಿತ್ತು. ಇದು ಹುಚ್ಚಲ್ಲವೇ?  ನಾನು ಜಪಾನ್ ದೇಶದಲ್ಲಿ ಕೋಗಿಲೆಯ ಗಾನವನ್ನರಸುವುದು “ಎತ್ತಣ ಮಾಮರ ಎತ್ತಣ ಕೋಗಿಲೆ” ಎಂಬಂತೆ, ಇಲ್ಲಿ ಬೋನ್ಸಾಯ್ ಮರಗಳಲ್ಲಿ ಕನ್ನಡದ ಕೋಗಿಲೆಯ ಗಾನಕ್ಕೆ ಹಂಬಲಿಸುವುದು ! ನನ್ನ ಕ್ಯಾಮೆರಾ ಸದ್ದಿಲ್ಲದೇ ತನ್ನ ಕೆಲಸ ಮಾಡುತ್ತಿತ್ತು. ಅಲ್ಲಿದ್ದ ಹಲವೇ ಪ್ರವಾಸಿಗಳಲ್ಲಿ ಹೆಚ್ಚಿನವರು ಅಮೆರಿಕನರು. ಅಲ್ಲೊಬ್ಬ ಇಲ್ಲೊಬ್ಬರು ಹಿರಿಯ ಜಪಾನಿ ಪ್ರಜೆಗಳು, ತಮ್ಮ ಕುಟುಂಬದ ಸದಸ್ಯರೊಡನೆ ದೇವಾಲಯಕ್ಕೆ ಭೇಟಿ ನೀಡಿದಂತಿದ್ದ ಆ ದಿನ ಬಲು ಶಾಂತಿಮಯವೆನಿಸತು ನನ್ನ ಪಾಲಿಗೆ. ಸೌಜನ್ಯತೆಯ ಪ್ರತಿರೂಪವೆನಿಸಿದ ಜಪಾನಿಯರು, ನಾನು ನನ್ನ ಛಾಯಾಚಿತ್ರವನ್ನು ತೆಗೆಯಲು ಕೋರಿದೊಡನೆ ನನ್ನ ಕೋರಿಕೆಯನ್ನು ಮನ್ನಿಸಿ ನನ್ನ ಹಲವು ಚಿತ್ರಗಳನ್ನು, ಆ ಸುಂದರ ದೃಶ್ಯದ ಹಿನ್ನೆಲೆಯಲ್ಲಿ ತೆಗೆದರು. ಇಲ್ಲಿ ನಾನು ಹೇಳಲೇ ಬೇಕಾದ ಮತ್ತೊಂದ ಅಂಶವೆಂದರೆ, ಜಪಾನಿಯರಿಗೆ ಕ್ಯಾಮೆರಾ ಮತ್ತು ಫೋಟೋ ತೆಗೆಯುವ ಬಗ್ಗೆ ಇರುವ ಹುಚ್ಚು. ರಸ್ತೆಗಳಲ್ಲಿ, ಎಲ್ಲಾ ಪ್ರವಾಸಿ ತಾಣಗಳಲ್ಲಿ, ಇಲ್ಲಿನ ತರುಣರು ಮತ್ತು ಹಿರಿಯರು ನಿರಂತರವಾಗಿ ತಮ್ಮ ಕ್ಯಾಮೆರಾಗಳನ್ನು ಕ್ಲಿಕ್ಕಿಸುತ್ತಲೇ ಇರುತ್ತಾರೆ. ಹಲವು ಹತ್ತು ಮಾದರಿಗಳ ಅತ್ಯುತ್ತಮ ಕ್ಯಾಮೆರಾ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ನಿರ್ಮಾಣದಲ್ಲಿ ತಮ್ಮ ಹಿರಿಮೆ ಗರಿಮೆಗಳನ್ನು ಮೆರೆದ ಈ ನಾಡಿನ ಜನರಿಗೆ, ಫೋಟೊ ತೆಗೆಯುವ ಹುಚ್ಚು ಇದ್ದರೆ ಆಶ್ಚರ್ಯವೇನು? ಮರುದಿನದ ಕಿಯೋಟೋ ಬೊಟಾನಿಕಲ್ ಗಾರ್ಡನ್ನಿನ ಭೇಟಿಯನ್ನು ನನ್ನ ಮನ ಆಗಲೇ ಎದಿರು ನೋಡುತ್ತಿತ್ತು.

ಕಿಯೋಟೋ ಬೊಟಾನಿಕಲ್ ಗಾರ್ಡನ್:

ತಾವರೆಯ ಕೊಳ
ತಾವರೆಯ ಕೊಳ

 

ದೇಗುಲದ ಉದ್ಯಾನ ಮಂಟಪ
ದೇಗುಲದ ಉದ್ಯಾನ ಮಂಟಪ

ಜಿಂಗು ಶ್ರೈನ್

ಸಸ್ಯಶಾಸ್ತ್ರವನ್ನು ಅಭ್ಯಸಿಸಿದ ನನಗೆ ಈ ಜಾಗ ಬಲು ಪ್ರಿಯವಾದ ಸ್ಥಳ. ಕಿಯೋಟೋ ಪ್ರೆಫ಼ೆಕ್ಟುಯಲ್ ಗಾರ್ಡನ್ ಎಂದೂ ಹೆಸರಾಗಿರುವ, ಸುಮಾರು ೨೪೦,೦೦೦ ಚದುರ ಕಿಲೋಮೀಟರುಗಳ ವಿಶಾಲವಾದ ಪ್ರದೇಶವನ್ನು ಹೊಂದಿರುವ ಈ ಸಸ್ಯೋದ್ಯಾನ ಕಾಮೋ ನದಿಯ ದಡಲ್ಲಿದ್ದು ೧೨,೦೦೦ ಪ್ರಭೇಧಗಳನ್ನೊಳಗೊಂಡ ೧೨೦,೦೦೦ ಸಸ್ಯಗಳನ್ನು ಹೊಂದಿದೆ. ಈ ಪೂರ್ಣ ಸಸ್ಯೋದ್ಯಾನವನ್ನು ಬೊಂಬಿನ ಉದ್ಯಾನ, ಬೋನ್ಸಾಯಿ ಗಿಡಗಳ ಪ್ರದರ್ಶನ ವಿಭಾಗ, ಕಮೀಲಿಯಾ ಉದ್ಯಾನ, ಚೆರ್ರಿ ಮರಗಳ ವಿಭಾಗ, ಯೂರೋಪಿಯನ್ ಮಾದರಿ ಉದ್ಯಾನ, ಗುಲಾಬಿ, ಹೈಡ್ರಾಂಜಿಯ, ಐರಿಸ್, ಪಿಯೋನಿ, ಹಾಗೂ ಲೋಟಸ್ ಕೊಳ ಹೀಗೆ ಅನೇಕ ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ. ನೋಡುಗನ ಕಣ್ಣಿಗೆ ಹಬ್ಬದಂತಿರುವ ಈ ಉದ್ಯಾನವನ ನನ್ನನ್ನು ಮರುಳುಗೊಳಿಸಿತು. ಸುಮಾರು ೪ ಗಂಟೆಗಳ ಕಾಲ ಇಲ್ಲಿ ಸುತ್ತಾಡಿದ ನನಗೆ ಸ್ವಲ್ಪವೂ ದಣಿವೆನಿಸಲಿಲ್ಲ. ಗುಲಾಬಿಯ ವನದಲ್ಲಿನ ಬಣ್ಣದ ಪುಷ್ಪಗಳು ಅಲ್ಲಿದ್ದ ಎಲ್ಲರನ್ನೂ ತನ್ನ ವರ್ಣಗಳ ಓಕುಳಿಯಲ್ಲಿ ಮೀಯಿಸಿತ್ತು. ನೀಲಿ ಬಣ್ಣದ ಗುಲಾಬಿಗಳಂತೂ ತನ್ನ ಬಳಿಯಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ಹೊಂದಿದ್ದು ತೋಟಗಾರಿಕೆಯ ಕಲೆಯಲ್ಲಿನ ಉತ್ಕೃಷ್ಟತೆಯನ್ನು ಎತ್ತಿ ತೋರುತ್ತಿತ್ತು. ಉದ್ಯಾನವನದಲ್ಲಿ ಹೀಗೆ ಸುತ್ತಾಡುತ್ತಿದ್ದಾಗ, ಹಿರಿಯ ಜಪಾನಿ ಪ್ರಜೆಯೊಬ್ಬ ತನ್ನ ಗುಂಪಿನವರನ್ನು ಬಿಟ್ಟು ಅಲ್ಲೇ ಕುಳಿತಿದ್ದ ನನ್ನೆಡೆ ಬಂದು ಇಂಗ್ಲೀಷಿನಲ್ಲಿ “Where are you from?”  ಎಂದು ಪ್ರಶ್ನಿಸಿದಾಗ, ನಾನು ಇಂಗ್ಲೇಂಡಿನಲ್ಲಿರುವ ಲಂಡನ್ ನಗರದಿಂದ ಎಂದಾಗ, ಒಡನೆಯೇ ಅವನ ಮುಖ ಅರಳಿ  “Oh that’s where the queen lives, I love Europe”  ಎಂದು ಉದ್ಗರಿಸಿದ ಆತನನ್ನು ಕಂಡು ನನಗೆ ಖುಷಿಯೆನಿಸಿತು.

ನಲಿವ ಗುಲಾಬಿ ಹೂವು!
ನಲಿವ ಗುಲಾಬಿ ಹೂವು!

ಚೆಲುವಿನ ಹಳದಿ

ಕಿಯೋಟೋ ಮ್ಯೂಸಿಯಮ್: ಸರಿ ಮಾರನೆಯ ದಿನ ನನ್ನ ಗಮನ ಆ ನಗರದಲ್ಲಿದ್ದ ವಸ್ತುಸಂಗ್ರಹಾಲಯಗಳೆಡೆ ಹೊರಳಿತು. ಜಪಾನಿಯರು ಪಿಂಗಾಣಿ ಕಲೆ, ವಸ್ತ್ರವಿನ್ಯಾಸ, ಪುಷ್ಪ ಜೋಡನೆಯ ಕಲೆ “ಇಕೆಬಾನಾ”, ಪೇಪರಿನ ಮಾದರಿ ರಚನೆಯ “ಓರಿಗ್ಯಾಮಿ” ಹೀಗೆ ಹಲವು ಹತ್ತು ಕಲೆಗಳಲ್ಲಿ ಮಾಹೀರರರು ಎಂಬುದು ಜನವಿದಿತವಾದದ್ದು. ಹಾಗಾಗಿ ಅವರ ವಸ್ತುಸಂಗ್ರಹಾಲಯಗಳನ್ನು ನೋಡುವುದು ಬಲು ಆಸಕ್ತಿಯ ವಿಷಯವೆಂದು ಅನೇಕ ಕಡೆಯಲ್ಲಿ ಓದಿದ್ದೆ. ಕಡೆಗೆ ಹತ್ತಿರದಲ್ಲೇ ಇದ್ದ Kyoto National Museum of modern Art , Kyoto municipal museum of Artಗಳನ್ನು ನೋಡಲು ನಿರ್ಧರಿಸಿದೆ. ಜಪಾನಿನ ಸಮಕಾಲೀನ ಕಲಾವಸ್ತುಗಳನ್ನು ಪ್ರದರ್ಶಿಸಿರುವ ಈ ಸಂಗ್ರಹಾಲಯದಲ್ಲಿ, ಪ್ರಸಿದ್ಧ ಜಪಾನಿನ ಕಲಾಕಾರರಾದ ಕಾನ್ಜೀರೋ, ಕಿಯೋಶಿ, ಕೋಬಾಯಾಶಿ ಕೋಕೆ, ಯಸೂಯಿ ಸೊಟಾರೋ, ವಿರಚಿತ ಕಲಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಯೂರೋಪಿನ ಪ್ರಸಿದ್ಧ ವಸ್ತುಸಂಗ್ರಹಾಲಯಗಳನ್ನು ನೋಡಿದ ನಂತರ ಈ ಸಂಗ್ರಹಾಲಯ ಸ್ವಲ್ಪ ನೀರಸವೆಸುತ್ತದೆ. ಆದರೂ ಜಪಾನಿಯರ ನಾಜೂಕಿನ ಕಲಾವಂತಿಕೆಯ ವೈಶಿಷ್ಟ್ಯತೆ ಮನದಲ್ಲಂತೂ ಉಳಿಯುತ್ತದೆ. ಸೆರಾಮಿಕ್ಸ್ ಕಲೆಯಲ್ಲಿನ ಅವರ ಅಪರೂಪದ ಬಣ್ಣಗಳ ಆಯ್ಕೆ, ಚಿತ್ರಗಳ ರಚನೆ ನೋಡುಗರ ಮನಸೆಳೆಯುವಲ್ಲಿ ಯಶಸ್ವಿಯಾಗುವುದು. ಆದರೆ ಇಲ್ಲ್ರುವ ಪ್ರಸಿದ್ಧ ಜಪಾನಿಯರ ಕ್ಯಾಲಿಗ್ರಫಿ ಮ್ಯೂಸಿಯಮ್ ಬಲು ನಿರಾಶಾದಾಯಕವೆನಿಸಿತು. ಕಾರಣ ಅಲ್ಲಿದ್ದ ಪ್ರದರ್ಶಿತ ವಸ್ತುಅಗಳಲ್ಲ! ಅಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಯಾವ ಮಾಹಿತಿಯೂ ಇಲ್ಲದ್ದರಿಂದ, ಅಲ್ಲಿ ಏನಿದೆ ಎನ್ನುವುದೇ ನನಗೆ ತಿಳಿಯಲಿಲ್ಲ! ನಾನು ಅನೇಕ ಸ್ವಯಂಸೇವಕಿಯರನ್ನು ಹತ್ತು ಬಾರಿ ಕೇಳಿ ಸುಸ್ತಾದೆ. ಅವರಿಗೆ ನನಗೇನು ಬೇಕೂ ಎನ್ನುವುದೂ ತಿಳಿಯದಾಯಿತು. ಇಲ್ಲಿ ಇಂಗ್ಲೀಷ್ ಭಾಷಾ ಪರಿಣಿತಿಯ ಕೊರತೆ ಎದ್ದು ಕಾಣುತ್ತದೆ.

ಪಿಂಗಾಣಿ ಶಾಪಿಂಗ್: ಈ ವಸ್ತುಸಂಗ್ರಹಾಲಯಗಳ ಬಳಿ ಇರುವ ಅಂಗಡಿಗಳಲ್ಲಿ ದೊರಕುವ ಅಪರೂಪದ ಜಪಾನಿ ಕಲಾವಂತಿಗೆಯ ನೆನಪಿನ ಕುರುಹುಗಳು ಗ್ರಾಹಕರನ್ನು ಮರುಳುಗೊಳಿಸುತ್ತದೆ. ಜಪಾನಿಯರ ಚಹಾ ಸಂಪ್ರದಾಯ ಪ್ರಪಂಚದಲ್ಲೇ ಹೆಸರಾದದ್ದು. ಚಹಾಪಾನೀಯಕ್ಕೆ ಸಂಬಂಧಪಟ್ಟ ಸಾಮಾನುಗಳ ಅಂಗಡಿಗಳನ್ನು ನೋಡಿ ನೋಡಿ ಮನಸೋತೆ. ನನ್ನ ಮಗಳು ಜಪಾನಿನ ಸಂಸ್ಕೃತಿಗೆ ಪೂರ್ಣವಾಗಿ ಮನಸೋತಿರುವ ಹುಡುಗಿ. ಅಲ್ಲಿನ ಭಾಷೆ, ಚರಿತ್ರೆ, ನಡೆನುಡಿಗಳ ಬಗ್ಗೆ ಓದಿ ನನ್ನ ತಲೆಗೂ ಬೇಕಾದಷ್ಟನ್ನು ತುಂಬಿದ್ದಾಳೆ. ಅವಳ ಕೋರಿಕೆಗಳು ಬಹಳಷ್ಟಿದ್ದವು. ಅವುಗಳಲ್ಲಿ ಒಂದು ಚಹಾ ಕುಡಿಕೆ. ಸರಿ ಅವಳ ಮನಸ್ಸನ್ನು ಸಂತೋಷಪಡಿಸಲು ಹುಡುಕಿಹೊರಟ ನನಗೆ ಯಾವುದನ್ನು ಕೊಳ್ಳಬೇಕೆಂಬುದು ಪೀಕಲಾಟವಾಯಿತು. ಹಲವು ಹತ್ತು ಮಾದರಿಯ ಚಹಾಕುಡುಕೆಗಳಿದ್ದವು ಅಲ್ಲಿ. ಪಿಂಗಾಣಿ, ಬೊಂಬಿನವು, ಲೋಹದಿಂದ ತಯಾರಿಸಿದ್ದು. ಸರಿ ಕಡೆಗೆ ಸಿಕ್ಕಿತು ನನ್ನ ಕೈಗೆಟಕುವ ಬೆಲೆಯಲ್ಲಿ ಅವಳಿಗಿಷ್ಟವಾಗುವ ಚಹಾ ಕುಡಿಕೆ.ಇನ್ನು ಜಪಾನಿಯರು ಊಟಮಾಡುವ ಅನ್ನದ ಬಟ್ಟಲುಗಳು. ಅವಂತೂ ಇನ್ನೂ ನೋಡಲು ಅಂದ. ಮೇಪಲ್, ಓಕ್, ಬರ್ಚ್ ಹೀಗೆ ಹಲವು ರೀತಿಯ ಮರಗಳಿಂದ ತಯಾರಿಸಿದ ವಿವಿಧ ಆಕಾರದ, ಗಾತ್ರದ ಈ ಬಟ್ಟಲುಗಳು, ಅವಕ್ಕೆ ಹೊಂದುವ ಚಮಚಗಳು, ಎಷ್ಟು ನೋಡಿದರೂ ಮನತಣಿಯದು. ಇದರ ಜೊತೆಗೆ ಜಪಾನಿಯರ ಬೊಂಬೆಗಳಂತೂ ಬಹಳ ಚಂದ. ಕೈಯಲ್ಲಿ ಬಣ್ಣ ಬಣ್ಣದ ಬೀಸಣಿಗೆ ಹಿಡಿದ ಹುಡುಗಿಯರು, ಒಂದುಕೈ ಎತ್ತಿ ಕುಳಿತ ಬೆಕ್ಕುಗಳು, ಬುದ್ಧನ ವಿವಿಧ ಭಂಗಿಗಳ ಮೂರ್ತಿಗಳು, ಬೊಂಬಿನ ಮತ್ತು ರಟ್ಟಿನಿಂದ ಮಾಡಿದ ಆಕರ್ಷಕ ಚಿತ್ರಗಳುಳ್ಳ ಜಪಾನೀ ಬೀಸಣಿಗೆಗಳು, ರಂಗುರಂಗಿನ ಕೊಡೆಗಳು, ತಲೆಗೆ ಹುಡುಗಿಯರು ಚುಚ್ಚಿಕೊಳ್ಳುವ ವಿವಿಧ ಬಗೆಯ ತಲೆ ಪಿನ್ನುಗಳು, ಒಂದೇ ಎರಡೇ ಅಬ್ಬಬ್ಬಾ ಹೇಳುತ್ತಾ ಹೋದರೆ ಕೊನೆಯೇ ಇಲ್ಲ! ಸರಿ ಕೊಳ್ಳುವುದನ್ನೆಲ್ಲಾ ಕೊಂಡಾಯಿತು.

ಚಿತ್ರ ಕೃಪೆ ಮತ್ತು ಬರಹ    -ಡಾ.ಉಮಾ ವೆಂಕಟೇಶ್