ಎರಡು ಕವನಗಳು

ರಾಮ ರಾಮ

ಈ ಭವ್ಯ ರಾಮ ಮಂದಿರ

ಬೇಕೆಂದನೆ ಆ ದಿವ್ಯ ರಾಮ ಚಂದಿರ

ಮನೆ ಮನೆಯಲ್ಲೂ ನಾನಿರುವೆನೆಂದ
ಮನ ಮನದಲ್ಲೂ ನಾ ನಗುವೆನೆಂದ
ಮನೆಗೊಂದು ಇಟ್ಟಿಗೆ ಕಂಭ ಕೇಳ್ದನೇ
ಮನದೊಳಗೆ ಇದ ನೋಡಿ ನಕ್ಕನೇ

ಅಮ್ಮ ನೊಂದ ಮಾತಿಗೆ ರಾಜ್ಯ ಕೊಟ್ಟ
ಅಗಸನೆಂದ ನೀತಿಗೆ ಹೆಂಡತಿ ಬಿಟ್ಟ
ರಹೀಮನಿಗೆಂದು ಬಿಟ್ಟ ಸ್ಥಾನ ಕೇಳ್ದನೇ
ಮನದೊಳಗೆ ಇದ ನೋಡಿ ನಕ್ಕನೇ

ಕಾವಿ ಕೇಸರಿ ದರ್ಪದಿ ಆವನೆಂದೂ ಉಡಲಿಲ್ಲ
ಭಸ್ಮ ಕುಂಕುಮಾದಿ ಹಣೆಯಲ್ಲಿ ಧರಿಸಿಲ್ಲ
ಈ ವೇಷ ಈ ರೋಷ ಅವ ಕೇಳ್ದನೇ
ಮನದೊಳಗೆ ಇದ ನೋಡಿ ನಕ್ಕನೇ

  • ಡಾ. ಗುರುಪ್ರಸಾದ್ ಪಟ್ವಾಲ್

——————————————————————————————————————–

ಆನಂದದ ಬೇನೆ

ನನ್ನ ಕಣ್ ಹೃನ್ಮನಗಳನು ಸೂಜಿಗಲ್ಲಿನಂತೆ ಸೆಳೆಯುವ ಸುಂದರ ಸುಮಗಳೇ

(ಚಿತ್ರಕೃಪೆ: ವಿಜಯನರಸಿಂಹ)

ನಿಮ್ಮನು ದಿನವೂ ನೋಡುತಿರುವಾಸೆ

ನಿಮ್ಮೊಂದಿಗೆ ದಿನವೂ ಮಾತಾಡುವಾಸೆ

ನನ್ನ ನಿತ್ಯದ ಆಗು ಹೋಗುಗಳನು ನಿಮಗೆ ಹೇಳುವಾಸೆ

ನನ್ನ ಇಷ್ಟ ಕಷ್ಟಗಳನು ನಿಮಗೆ ತಿಳಿಸುವಾಸೆ

ನನ್ನ ಸುಖ ದುಃಖಗಳನು ಹಂಚಿಕೊಳುವಾಸೆ

ನನ್ನ ಪ್ರತಿಯೊಂದು ನಿರ್ಧಾರದ ಪರಿಣಾಮಗಳನು ಕಡೆಯುವಾಸೆ

ನನ್ನ ಚಿಂತೆಗಳ ಕಾರಣಗಳನು ನಿಮ್ಮೊಂದಿಗೆ ಮಂಥಿಸುವಾಸೆ

ನನ್ನ ಸುತ್ತಲಿನ ಜಗದ ಜನರ ಕುಟಿಲತೆಯನ್ನು ಕುಟುಕುವಾಸೆ

ನನ್ನೊಳಗಿನ ಎಲ್ಲ ಭಾವಗಳನು ತಿಳಿನೀರಿನ ಕೊಳದ ರೀತಿ ನಿಮಗೆ ತೋರುವಾಸೆ

(ಚಿತ್ರಕೃಪೆ: ರಾಮ್)

ನನ್ನ ತಪ್ಪುಗಳನು ತಿದ್ದಿಕೊಳುವ ಬಗೆಗಳನು ನಿಮ್ಮಿಂದ ಕೇಳುವಾಸೆ

ನನ್ನ ಭೂತ, ವರ್ತಮಾನ, ಭವಿತವ್ಯಗಳನು ತೆರೆದಿಡುವಾಸೆ

ಆದರೆ ನಿಮ್ಮ ಸುಂದರ ನಗೆ ಮೊಗಗಳು ನನ್ನನ್ನು ಮೂಕನಾಗಿಸಿಬಿಡುತ್ತವೆ

ಆಗ ನೀವೂ ಮೂಕ , ನಾನೂ ಮೂಕ

ಇರಲಿ ಬಿಡಿ ಹೀಗೆ ನನ್ನ ನಿಮ್ಮ ನಡುವಿನ ಮೂಕ ಸಂವೇದನೆ

ಇದರ ಆನಂದವನು ನಾನು ಹೀಗೇ ಸವಿಯುವ ಬೇನೆ

🖋ವಿಜಯನರಸಿಂಹ

ಸೌಂದರ್ಯ ಸಾಹಸ ಸಂಮೋಹಕ – ರಾಧಿಕಾ ಜೋಶಿ

”ಯೂರೋಪಿನ ಅತ್ಯಂತ ಸುಂದರ ದೇಶಗಳಲ್ಲೊಂದು’ ಎನ್ನುವ ಖ್ಯಾತಿಯ ಸ್ವಿಜ್ಜರ್ ಲ್ಯಾಂಡ್ ಒಮ್ಮೆಯಾದರೂ ಆಯುಷ್ಯದಲ್ಲಿ ನೋಡ ಬೇಕಾದ ಸ್ಠಳ ಅಂತ ಬಹಳ ಜನರ ಮತ. ವರ್ಣನೆಗೆ ನಿಲುಕದ ಪ್ರಕೃತಿ ಸೌಂದರ್ಯ, ಸ್ವಚ್ಛತೆ, ಸಮಯನಿಷ್ಠೆಗಳಿಗೆ ಹೆಸರುವಾಸಿಯಾದ ನಾಡು ಅದು. ಅದು ಬರೀ ಚಾಕಲೇಟು, ಗಡಿಯಾರಗಳು (ಕುಕ್ಕೂ ಕ್ಲಾಕ್ ಸಹ) ಮತ್ತು precision engineering ಗೆ ಅಷ್ಟೇ ಅದರ ಪ್ರಸಿದ್ಧಿ ಸೀಮಿತವಲ್ಲ. ಒಂದು ಕಾಲಕ್ಕೆ ’See Naples and Die' ಅನ್ನುವ ಉತ್ಪ್ರೇಕ್ಷೆಯಿತ್ತು. ಅದೇ ಪಟ್ಟಿಯಲ್ಲೇ ಆಲ್ಪ್ಸ್ ಮಡಿಲಲ್ಲಿ ಪವಡಿಸಿರುವ ಈ ದೇಶದ ಎಷ್ಟೋ ಸ್ಥಳಗಳಿಗಳಿಗೂ ಈ ಪಟ್ಟವನ್ನು ಕಟ್ಟಬಹುದೇನೋ. ಇತ್ತೀಚೆಗೆ ಅಲ್ಲಿಗೆ ಹೋಗಿ ಬಂದ ರಾಧಿಕಾ ಜೋಶಿಯವರು ಈ ಚಿಕ್ಕ ಲೇಖನದಲ್ಲಿ ಮುಂದೆ ಬರಲಿರುವ ಪ್ರವಾಸ ಕಥನಕ್ಕೆ ಪೀಠಿಕೆಯೇನೊ ಅನ್ನುವಂತೆ ಬರಹ-ಕವಿತೆ-ಫೋಟೊಗಳ ಚಿತ್ತಾರವನ್ನು ಕೊಟ್ಟಿದ್ದಾರೆ. ಅವರು ’ಆಲ್ಪ್ಸ್ ನ ಎದುರಲ್ಲಿ ತಮ್ಮ ಅಲ್ಪತೆಯನ್ನು’ ಕಂಡವರು! ಅವರ ಬರಹದಲ್ಲಿ ಅವರ ರೈಲು ಪ್ರವಾಸದ ನಕ್ಷೆ ಸಹ ಇದೆ. ಅದರಲ್ಲಿ ಅಲ್ಲಿಯ ಸೌಂದರ್ಯಕ್ಕೆ ಮಾರುಹೋದದ್ದನ್ನು ಕಾಣಬಹುದು.  ರಾಧಿಕಾ ಅವರು ’ಅನಿವಾಸಿ’ಗೆ ಹೊಸಬರಲ್ಲ. ಹಿಂದೆ ಅನೇಕ ಲೇಖನಗಳನ್ನು ಕೊಟ್ಟಿದ್ದಾರೆ. ಇಲ್ಲಿ ಕೆಲವರು ಹೊಸದಾಗಿ ಸೇರಿರಬಹುದೆಂದು ನನ್ನ ಸಲಹೆಯ ಮೇರೆಗೆ ಮತ್ತೆ ತಮ್ಮ ಕಿರುಪರಿಚಯದಿಂದ ಲೇಖನವನ್ನು ಪ್ರಾರಂಭ ಮಾಡಿದ್ದಾರೆ. ಅವರದು ತಮ್ಮದೇ ಒಂದು ಬ್ಲಾಗ್ ಸಹ ಇದ್ದು ಅದರಲ್ಲಿ ಆಗಾಗ ಬರೆಯುತ್ತಿರುತ್ತಾರೆ. (ಸಂಪಾದಕ)
ನನ್ನ ಪರಿಚಯ: 

ಮೂಲತಃ ಹುಬ್ಬಳ್ಳಿ ನನ್ನ ಊರಾದರು, ಮೈಸೂರಿನಲ್ಲಿ ನನ್ನ ಪ್ರಾಥಮಿಕ ಹಾಗು ಉನ್ನತ ವಿದ್ಯಾಭ್ಯಾಸ ಹೀಗಾಗಿ ಅದೇ ತವರು ಎಂಬ ಭಾವನೆ. ಸುಮಾರು 14 ವರ್ಷಗಳಿಂದ ಲಂಡನ್ ವಾಸಿ. ವೃತ್ತಿ ಇಂದ ಅಕೌಂಟೆಂಟ್ (ಸಿಎ). ಈಗ ಕೆಲವು ವರುಷಗಳಿಂದ
ಅಧ್ಯಾಪಕಿ ಆಗಿ ವೃತ್ತಿ ನಿರತಳಾಗಿದ್ದೇನೆ. ಪುಟ್ಟ ಕವನಗಳು ಬರೆಯುವುದು ನನ್ನ ಹವ್ಯಾಸ.

ರಾಧಿಕಾ ಜೋಶಿ
ಹಿಮಭರಿತ ಶೃಂಗ ಆಹಾ! ಇದೆ ಸ್ವರ್ಗ
ಇಂತಹ ಅದ್ಭುತ ದೃಶ್ಯ ನನ್ನ ಬಂಧಿಸಿ
ಕಣ್ಣ್ಮನ ಸೆಳೆದು ಎಲ್ಲವು ನಿಶಬ್ದವಾಗಿಸಿ
ಪರ್ವತ ಶ್ರೇಣಿಗಳ ಆ ರಮ್ಯ ದರ್ಶನ
ನಾನು ಮತ್ತು ನನ್ನ ಅಲ್ಪತೆಯ ನಿದರ್ಶನ
ಮಂತ್ರ ಮುಗ್ಧಳಾಗಿ ನಿಂದು
ಹಿಮದ ಸೊಬಗಿನಲ್ಲಿ ನಡೆದು
ಶೀತಲ ಹವೆಯು ಮೊದಲಬಾರಿಗೆ ಮನ ಸೆಳೆದು
ಹೃದಯ ಮಿಡಿತದ ಹೊರತು ಮತ್ತೇನು ಕೇಳದು
ಇದಕ್ಕಿಂತ ಇನ್ನೇನು ಪವಿತ್ರ ನಿಷ್ಕಲ್ಮಶ
ಉತ್ತುಂಗದ ವಜ್ರಕಾಯ ಸಾಹಸದ ವಿಸ್ಮಯ
ಸೂರ್ಯನ ಆ ತೀಕ್ಷ್ಣ ಕಿರಣ
ಎಲ್ಲವು ಮುತ್ತು ವಜ್ರಗಳ ಆಭರಣ
ಆ ಶಿಖರಗಳು ಪ್ರತಿಧ್ವನಿಸುವ ಭಯವು
ಅಲ್ಲೇ ಐಕ್ಯವಾದ ನನ್ನ ಮನವು
ಮರುಕಳಿಸಲಿ ಶಾಂತಿ ನೆಮ್ಮದಿಯ ಆ ನಿಮಿಷಗಳು
ಆಲ್ಪ್ಸ್ ನ ನಯನ ಮನೋಹರ ಆ ಕ್ಷಣಗಳು
ಹಿಮಭರಿತ ಶೃಂಗ ಆಹಾ! ಅದೇ ಸ್ವರ್ಗ

ರಾಧಿಕಾ ಜೋಶಿ

ಲೇಖನ ಮತ್ತು ಚಿತ್ರ ಕೃಪೆ: ಲೇಖಕಿ.