ಕಳೆದ ವರ್ಷಅಟ್ಲಾಂಟಿಕ್ ಸಾಗರವನ್ನು ಏಕಾಕಿಯಾಗಿ ಹುಟ್ಟು ಹಾಕುತ್ತ ದಾಟಿ ಆಂಟಿಗದಲ್ಲಿ ಮುಕ್ತಾಯಗೊಳಿಸಿ ದಾಖಲು ಸ್ಥಾಪಿಸಿದ (ಮೇಲಿನ ಚಿತ್ರದಲ್ಲಿಯ) ಅನನ್ಯ ಪ್ರಸಾದ್ ಅವರ ಸಾಹಸಗಾಥೆಯನ್ನು ಆಕೆಯ ತಂದೆಯ ಪುಸ್ತಕದಲ್ಲಿ ಮನದಟ್ಟುವಂತೆ ತಮ್ಮ ಪುಸ್ತಕದಲ್ಲಿ ಚಿತ್ರಿಸಿದ್ದಾರೆ. ಅದನ್ನೋದಿ ಡಾ ರಾಂಶರಣ್, ಡಾ ಶ್ರೀರಾಮುಲು, ಶ್ರೀ ರಾಮಮೂರ್ತಿ, ಸುಮಾ ಚಿಲ್ಲಾಳ, ಡಾ ರಾಜಶ್ರೀ ಪಾಟೀಲ, ಶಾಲಿನಿ ಜ್ಞಾನಸುಬ್ರಮಣಿಯನ್ ಮುಂತಾಗಿ ಅನೇಕರು ಈ ವಾರದ ಅನಿವಾಸಿಯಲ್ಲಿ ಎರಡನೆಯ ಕಂತಿನಲ್ಲಿ ಇನ್ನಿಷ್ಟು ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು (ಸ್ವೀಕರಿಸಿದ ಕಾಲಾನುಕ್ರಮದಲ್ಲಿ) ಪ್ರಕಟಿಸಲು ಸಂತೋಷವಾಗುತ್ತದೆ. ಪುಸ್ತಕದ ಲೇಖಕ ಶಿವಪ್ರಸಾದ್ ಅವರು ಪುಸ್ತಕವನ್ನು ಅರ್ಪಿಸಿದ ಅನನ್ಯಳ ದೋಣಿಯನ್ನು ನೆನೆದು, ಮತ್ತು ಶಾಲಿನಿಯವರು ನೆನಪಿಸುವಂತೆ ಕಾಕತಾಳಿಯವಾಗಿ ಇಂದೇ (ಜುಲೈ ೧೭) ಒಡಿಸ್ಸಿ (The Odyssey) ಎನ್ನುವ ಸಿನಿಮಾ ಬಿಡುಗಡೆಯಾಗಿದೆ!ಎರಡೂ ಸಂಚಿಕೆಯ ಬರಹಗಳ ಪ್ರತಿಕ್ರಿಯೆಗಳಿಗೆ ಇನ್ನೂ ಸ್ವಾಗತವಿದೆ. (ಸಂ)
ಸಾಗರದಲ್ಲಿ ಸಾಹಸಿ ಡಾರ್ಬಿಯಿಂದ ಡಾ ರಾಂ ಶರಣ್ ಬರೆಯುತಾರೆ. ತಂದೆ- ತಾಯಿ ದುಃಖ ತಪ್ತರಾಗಿ ಮನಸ್ಸಿಲ್ಲದ ಮನಸ್ಸಿನಿಂದ ಹರಸಿ ಹುಟ್ಟು ಹಿಡಿದ ಮಗಳನ್ನು ಬೀಳ್ಕೊಡುತ್ತಿದ್ದಾರೆ. ನಿಧಾನವಾಗಿ ಅವರ ವಂಶದ ಕುಡಿ ಕ್ಷಿತಿಜದಲ್ಲಿ ಕಣವಾಗಿ ಕಣ್ಮರೆಯಾಗುತ್ತದೆ. ತಿಂಗಳೊಪ್ಪತ್ತಿನಲ್ಲಿ ಅದೇ ಕಣ ಕ್ಷಣ ಕ್ಷಣಕ್ಕೂ ಉದ್ದೀಪವಾಗಿ ಸಾಗರದದಿಂದ ಹೊರ ಹೊಮ್ಮಿ ತಂದೆ-ತಾಯಿಯರ ಬಾಹುಗಳಲ್ಲೊಂದಾಗಿ ಆನಂದ ಭಾಷ್ಪ ಹೊಮ್ಮಿಸುತ್ತದೆ.
ಶಿವಪ್ರಸಾದ್ ಬರೆದಿರುವ ಅನನ್ಯಳ ಸಾಹಸಗಾಥೆಯ ಅನನ್ಯ ಕೃತಿ ನಿಮ್ಮ ಕಣ್ಣುಗಳಲ್ಲಿ ಈ ರೀತಿ ಮೂರ್ತವಾದರೆ ಆಶ್ಚರ್ಯವಿಲ್ಲ. ಮಹಾಸಾಗರವನ್ನು ಏಕಾಂಗಿಯಾಗಿ ಎಂದೂ ತನ್ನ ಜೀವನದಲ್ಲಿ ಪ್ರಯತ್ನಿಸದ ಪ್ರಕಾರದಲ್ಲಿ ಅನನ್ಯ ದಾಟಲು ಯೋಚಿಸಿದ್ದೇ ಒಂದು ಸೋಜಿಗ! ಋತುಮಾನ, ಹಾದಿಯನ್ನು ಯೋಜಿಸಿ, ಆಧುನಿಕ ಯಂತ್ರಗಳನ್ನು ಬಳಸಿದರೂ ಸಾಗರ ತಂದೊಡ್ಡುವ ಆಕಸ್ಮಿಕಗಳು ಅಗಾಧ. ಅವೆಲ್ಲವನ್ನು ಹಿಮ್ಮೆಟ್ಟಿಸಿ ಸಾವಿರಾರು ಮೈಲಿಗಳನ್ನು ಕ್ರಮಿಸಿ, ಪ್ರಕೃತಿಗೆ ತಲೆಬಾಗಿದ ಯಶೋಗಾಥೆ ಕೇವಲ ವರ್ಣೀಯರಿಗೆ, ಮಹಿಳೆಯರಿಗಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಶಿವಪ್ರಸಾದ್ ಈ ಪುಸ್ತಕದಲ್ಲಿ ತಮ್ಮ ಏಕೈಕ ಪುತ್ರಿ ತನ್ನ ಮಹಾತ್ವಾಕಾಂಕ್ಷೆಯನ್ನು ಹಂಚಿಕೊಂಡಾಗ ಉಂಟಾದ ಮಾನಸಿಕ ತುಮುಲವನ್ನು ಉತ್ತಮವಾಗಿ ವರ್ಣಿಸಿದದ್ದಾರೆ. ಕಠಿಣವಾದ ಪ್ರಸಂಗಗಳು ಬದುಕಿನಲ್ಲಿ ಎದುರಾದಾಗ ಅದು ಅಸ್ತಿತ್ವದಲ್ಲಿಲ್ಲ ಎಂದೆನಿಸುವುದು ಮಾನವ ಸಹಜ ಪ್ರಥಮ ಪ್ರತಿಕ್ರಿಯೆ. ತದ ನಂತರ ಈ ಪರಿಸ್ಥಿತಿ ನನಗೇಕೆ ಬಂತು ಎಂದೆನಿಸುವುದು. ಸ್ವಲ್ಪ ಸಮಯಾನಂತರ ಈ ಸಂಧಿಗ್ದ ಪರಿಸ್ಥಿತಿ ದೂರವಾಗದು ಎಂಬ ನೈಜತೆ ಮನದಾಳಕ್ಕೆ ಇಳಿಯುತ್ತಿದ್ದಂತೆ ಇದನ್ನು ಪರಿಹರಿಸುವುದೋ, ಅದರೊಡನೆ ಸಹಬಾಳ್ವೆ ಮಾಡುವುದೋ ಎಂಬ ಹಾದಿಯಲ್ಲಿ ಮನಸ್ಸು ಯೋಚಿಸತೊಡಗುತ್ತದೆ. ಏರುಪೇರಿಲ್ಲದ ಹವಾಮಾನದಲ್ಲಿ ಬಿರುಗಾಳಿ ಮಳೆಗೆ ಗಿಡಮರಗಳುರುಳಿ, ಭೂಮಿ ತಂಪಾಗಿ, ಮಳೆ ನೀರು ಅಂತರಾಳಕ್ಕಿಳಿದ ನಂತರ ಹಸಿರುಕ್ಕುವಂತೆ. ಇವೆಲ್ಲ ಮಜಲುಗಳನ್ನು ದಾಟಿ, ಮಗಳ ಆಸೆಗೆ ಪೂರಕವಾಗಿ, ತನು-ಮನ-ಧನಗಳಿಂದ ಪ್ರೋತ್ಸಾಹ ಕೊಟ್ಟ ಪ್ರಸಾದ್ ದಂಪತಿಗಳದ್ದೂ ಸಾಹಸಗಾಥೆ ಇದು. ಪ್ರಸಾದ್ ಈ ಪುಸ್ತಕದಲ್ಲಿ ವಿವರಿಸುವ ಭಾರತೀಯರ ಮನೋಧರ್ಮ ಹಾಗೂ ಅವರಿಬ್ಬರೂ ಇತರರಿಂದ ಎದುರಿಸಿದ ಪ್ರಶ್ನೆಗಳನ್ನು ಅವಲೋಕಿಸಿದಾಗ ಕರಳುಬಳ್ಳಿಯನ್ನು ಈ ಸಾಹಸ ಕೈಗೊಳ್ಳಲು ಅವಕಾಶ ಮಾಡಿಕೊಟ್ಟ ಪ್ರಸಾದ್ ದಂಪತಿಗಳು ವಿಶೇಷ ಮನ್ನಣೆಗೆ ಪಾತ್ರರು ಎನ್ನಿಸುವುದು ಸಹಜ. ಯುರೋಪಿಯನ್ನರ ಸಾಹಸ ಪ್ರಿಯತೆ, ಅನ್ವೇಷಣಾ ಮನೋಭಾವ ಹಾಗೂ ಭಾರತೀಯರ ವಿಭಿನ್ನ ದೃಷ್ಟಿಕೋನಗಳಿಗೆ ಭಾರತದ ನೈಸರ್ಗಿಕ ಸಂಪನ್ಮೂಲದ ಹಿರಿಮೆ ಕಾರಣವೇ ಎಂದು ಪ್ರಸಾದ್ ಪ್ರಶ್ನಿಸುತ್ತಾರೆ. ಕೆಲವು ಮಟ್ಟಿಗೆ ಅದು ಕಾರಣವಾದರೂ ಇತಿಹಾಸವನ್ನು ಅವಲೋಕಿಸಿದಾಗ ನಮ್ಮಲ್ಲೂ ಸಾಹಸಿಗಳಿಗೆ, ಅನ್ವೇಷಕರಿಗೆ ಕೊರತೆ ಇರಲಿಲ್ಲ. ಆದರೆ ಕಳೆದೆರಡು ಮೂರು ಶತಮಾನಗಳಲ್ಲಿ ವಿದೇಶೀಯರ ಆಕ್ರಮಣಕ್ಕೆ ತುತ್ತಾದ ಭಾರತೀಯರಿಗೆ ದೈನಂದಿನ ಹೋರಾಟ ಹಾಗೂ ತದನಂತರ ದೇಶ ನಿರ್ಮಾಣದ ಒತ್ತಡದಲ್ಲಿ ಹೆಚ್ಚಿನ ಸಾಧನೆಗಳಿಗೆ ಸಂಪನ್ಮೂಲ, ಶಕ್ತಿ, ಸಮಯದ ಅವಕಾಶ ದುರ್ಲಭವಾಗಿತ್ತು. ಈ ಅಡೆತಡೆಗಳನ್ನು ದಾಟಿ ನಿಂತಿರುವ ಹೊಸ ಸಹಸ್ರಮಾನದ ಭಾರತೀಯರಿಂದು ನಿಧಾನವಾಗಿ ಸಾಹಸ ಜಗತ್ತಿನಲ್ಲಿ ತಮ್ಮ ಛಾಪನ್ನುತ್ತಲು ಪ್ರಾರಂಭಿಸಿದ್ದಾರೆ. ಈ ದಿಸೆಯಲ್ಲಿ ಅನನ್ಯಳದ್ದೂ ಒಂದು ಪ್ರಮುಖ ಮೈಲಿಗಲ್ಲು.
ಅನನ್ಯಳ ದೈಹಿಕ, ಆರ್ಥಿಕ ಹಾಗೂ ಮಾನಸಿಕ ಸಿದ್ಧತೆಗಳನ್ನು ಪ್ರಸಾದ್ ಈ ಪುಸ್ತಕದಲ್ಲಿ ವರ್ಣಿಸಿದ್ದಾರೆ. ಜಗತ್ತಿನ ಅತ್ಯಂತ ಕಠಿಣವಾದ ಸಾಗರ ದಾಟುವ ಪಂದ್ಯದ ಹುಟ್ಟು, ಅದರ ಧ್ಯೇಯೋದ್ದೇಶಗಳು, ಪ್ರಾಯೋಜಕರು ಪಂದ್ಯದಲ್ಲಿ ಭಾಗವಹಿಸುವವರಿಗೆ, ಅವರ ಪರಿವಾರದವರಿಗೆ ನೀಡುವ ಬೆಂಬಲ ಇವನ್ನೆಲ್ಲ ಚೆನ್ನಾಗಿ ವಿವರಿಸಿದ್ದಾರೆ. ಸಾಕಷ್ಟು ವಿಪುಲವಾಗೇ ಬರುವ ಮಾನಸಿಕ ಘರ್ಷಣೆ, ವೈಚಾರಿಕ ಚರ್ಚೆ, ವೈಯಕ್ತಿಕ ತುಮುಲಗಳು ಪುಸ್ತಕದ ವಿಷಯಕ್ಕೆ ಪೂರಕವಾಗಿವೆ. ಹೊರತಾಗಿ, ದೈನಂದಿನ ಜೀವನದಲ್ಲಿ ಬರುವ ಸವಾಲುಗಳಿಗೆ ಅನ್ವಯಿಸುತ್ತವೆ. ಅಲ್ಲಲ್ಲಿ ಬರುವ ಸಾಹಿತ್ಯಿಕ ವಿವರಣೆಗಳು, ಟಿಪ್ಪಣಿಗಳು ಈ ಪುಸ್ತಕವನ್ನು ಮಗಳ ಯಶಸ್ಸನ್ನು ವೈಭವೀಕರಿಸುವ ತಂದೆಯ ಪ್ರಯತ್ನಕ್ಕೂ ಮಿಗಿಲಾದ ಸಾಹಿತ್ಯಿಕ ಕೃತಿಯನ್ನಾಗಿಸುತ್ತದೆ ಎಂಬುದು ನನ್ನ ಅನಿಸಿಕೆ.
ಇನ್ನೂ ಹಲವು ವಿಚಾರಗಳು ಪುಸ್ತಕಕ್ಕೆ ಹೆಚ್ಚಿನ ಮೆರುಗು ನೀಡುತ್ತಿತ್ತೇನೋ ಎಂಬುದೂ ನನ್ನ ಅನಿಸಿಕೆ. ಸಮುದ್ರ ತೀರದಿಂದ ದೂರವೇ ಹುಟ್ಟಿ ಬೆಳೆದ ಅನನ್ಯಳನ್ನು ಸಾಗರದೆಡೆ ಎಳೆದ ಶಕ್ತಿ ಯಾವುದು ಎಂಬುದು ನನ್ನ ಕುತೂಹಲ. ಅನನ್ಯಳಿಗೆ ಸ್ಪೂರ್ತಿಯಾಗಿದ್ದು ಎಲೆನ್ ಮೆಕಾರ್ಥರೇ ? ಆಕೆ ವಿಶ್ವವನ್ನು ಏಕಾಂಗಿಯಾಗಿ ಅತಿ ವೇಗವಾಗಿ ಹಾಯಿ ದೋಣಿಯಲ್ಲಿ ಸುತ್ತಿದವಳು. ಇದನ್ನರಿಯಲು ಅನನ್ಯಳ ಪುಸ್ತಕಕ್ಕೆ ಕಾಯಬೇಕೇನೋ? ಅಂಟೀಗಾ ತಲುಪಿದ ಮೇಲೆ ಒಡಿಷಿಯಸ್ ದೋಣಿಯನ್ನು ವಾಪಸ್ ತರಲಾಯಿತೆ? ಅದು ಮತ್ತೆ ಅಂಟ್ಲಾಂಟಿಕ್ ಸಾಗರ ದಾಟಲು ಸಹಕಾರಿಯಾಯಿತೇ? ಓದುಗರಾಗಿ ನಮಗಿರುವ ಸವಾಲು ಅನನ್ಯ, ಪ್ರಸಾದ್ ಹಾಗೂ ಪೂರ್ಣಿಮಾ ಅವರ ಅನುಭವಗಳನ್ನು ಓದುವುದರಿಂದ ಅವರು ಎದುರಿಸಿದ ದುಗುಡ, ದುಮ್ಮಾನ, ಅನಿಶ್ಚಿತತೆ, ಎಲ್ಲವನ್ನೂ ಗೆದ್ದುಬಂದ ಆತ್ಮ ಸಂತೃಪ್ತಿಯನ್ನು ಸಂಪೂರ್ಣವಾಗಿ ಆಂತರೀಕರಿಸಿ ಅನುಭವಿಸುವುದು. ಇವೆಲ್ಲವನ್ನು ನಾವು ಪ್ರಸಾದ್ ಅವರ ಮಸೂರದಲ್ಲಿ ನೋಡುತ್ತೇವೆ. ಅಲ್ಲಲ್ಲಿ ಪೂರ್ಣಿಮಾ ಅವರ ಅನಿಸಿಕೆಗಳು ಪ್ರಸಾದ್ ಅವರ ಅನಿಸಿಕೆಯೊಡನೆ ಜೊತೆಯಾಗಿ ವ್ಯಕ್ತವಾಗಿದೆ. ಆದರೆ ತಾಯಿಯ ಭಾವನೆಗಳು ತಂದೆಗಿಂತಲೂ ವಿಭಿನ್ನವಾಗಿರುವುದು ಸಹಜ. ಪೂರ್ಣಿಮಾ ಅವರ ಅನಿಸಿಕೆಗಳು, ತುಮುಲಗಳು, ಜಿಜ್ಞಾಸೆಗಳನ್ನು ಅಳವಡಿಸಿದ್ದರೆ ಅನನ್ಯಳ ಸಾಹಸವನ್ನು ದುರ್ಬೀನಿನಿಂದ ನೋಡಿದ ಅನುಭವ ಪ್ರಾಪ್ತವಾಗುತ್ತಿತ್ತೆಂಬುವುದು ನನ್ನ ಅಭಿಪ್ರಾಯ.
ಅನನ್ಯಳ ಸಾಹಸ ಹಲವು ಮಜಲುಗಳಲ್ಲಿ ಮಾಡಿದ ಪ್ರಯತ್ನದ ಫಲ. ಇದರ ಹಿಂದಿರುವ ಅನನ್ಯ ತ್ಯಾಗ, ಶ್ರಮಗಳೊಂದಿಗೆ ಅವಳ ಕುಟುಂಬದವರ, ಟ್ರೇನರ್, ಕೈಗೂಡಿಸಿದ ಸಂಸ್ಥೆಗಳ ಪ್ರತ್ಯಕ್ಷ ಹಾಗೂ ಪರೋಕ್ಷವಾದ ತ್ಯಾಗ ಹಾಗೂ ಶ್ರಮ ಸೇರಿವೆ. ಈ ಸಂಪೂರ್ಣ ಗಾಥೆಯನ್ನು ಬಟ್ಟಲಲ್ಲಿ ಹಿಡಿದಿಡುವ ಪ್ರಯತ್ನ ತನ್ನದೇ ರೀತಿಯಲ್ಲಿ ಸಫಲವಾಗಿ ಪುಸ್ತಕರೂಪದಲ್ಲಿ ನಮ್ಮ ಕೈಯಲ್ಲಿದೆ.
ರಾಂ
ಡಾ ಶ್ರೀರಾಮುಲು ಬರೆಯುತಾರೆ ನಮಸ್ಕಾರ ಪ್ರಸಾದ್, ಮೊದಲಿಗೆ ನನ್ನ ತಡವಾದ ಪ್ರತಿಕ್ರಿಯೆಗಾಗಿ ಕ್ಷಮಾಪಣೆ. ನಿಮ್ಮ ಅಮೂಲ್ಯವಾದ ಪುಸ್ತಕ ತಲುಪಿದ ಮರುದಿನವೇ ಮುಗಿಸಿದೆ. ಮಿಷೆಲ್ಲಿನ್ ಸ್ಟಾರ್ರ್ಡ್ ಶೆಫ್ ಒಂದು ನವ್ಯ ಖಾದ್ಯವನ್ನು ತಯಾರಿಸಿದರೆ ಪಾಕ ಪ್ರವೀಣರು ಮತ್ತು ರಸಿಕ ಸಾರ್ವಜನಿಕರು ಮೊದಲಗಿಂತ ಉತ್ತಮವಾಗಿರುವಂತೆ ನಿರೀಕ್ಷಿಸುತ್ತಾರೆ. ಆ ಉಪಮೇಯ ನಿಮ್ಮ ಪುಸ್ತಕಕ್ಕೆ ಚೆನ್ನಾಗಿ ಅನ್ವಯಿಸುತ್ತದೆ! ಪುಸ್ತಕದಲ್ಲಿ ನೀವು ಅನನ್ಯಳ ’ಜಗತ್ತಿನ ಅತಿ ಕಠಿಣವಾದ ಯಾ”ವನ್ನು ಬಹು ಸುಂದರವಾಗಿ ಬರೆದಿದ್ದೀರಿ. ಓದುವರಿಗೆ ತಾವೇ ಸ್ವತಃ ಭಯಾನಕ ಮತ್ತು ಅಮೋಘವಾದ ಯಾನ ಅನುಭವಸಿದಂತೆ ಭಾವನೆ ಮೂಡಿ ಬರುತ್ತೆ . ಅದು ಹೊರತುಪಡಿಸಿ ತಂದೆ, ತಾಯಿಗಳ ಆತಂಕ, ಹೇಳಲಾಗದ ಮತ್ತು ವಿವರಿಸಲಾಗದ ಭಯವನ್ನು ಚೆನ್ನಾಗಿ ವಿವರಿಸಿದ್ದೀರ. ಅದರಲ್ಲೂ ಭಾರತೀಯ ಮೂಲದ ಪೋಷಕರು ತಮ್ಮ ಮಕ್ಕಳ ಬಗ್ಗೆ ಏನೇನೋ ಕನಸು ಕಂಡಿರುತ್ತಾರೆ, ಅವರ ನಿರೀಕ್ಷೆಯೇ ಬೇರೆ. ನಿಮ್ಮವಿಷಯದಲ್ಲಿ ಅನನ್ಯಳ ಕನಸಲ್ಲೂ ಊಹಿಸಲಾಗದ, ನೆನಸಲಾಗದ, ಸಾಗರದ ಸಾಹಸ, ನಿಜಕ್ಕೂ ಬಂಧು ಬಳಗ ಮತ್ತು ಮಿತ್ರರಿಗೂ ಬಹು ಹೆಮ್ಮೆಯ ವಿಷಯ.
ನಾನು cruise ಹೋಗಿದ್ದಾಗ ಹಡಗಿನ ತಲ್ಲಣ ಮಿತಿ ಮೀರಿದಾಗ ಸುರಕ್ಷತಾ barrier ಗಟ್ಟಿಯಾಗಿ ಹಿಡಕೊಂಡು ಓಡಾಡಿದ್ದು ಇನ್ನೂ ಜ್ಞಾಪಕದಲ್ಲಿದೆ. ಆ ಕರಾಳ ಕಗ್ಗತ್ತಿನಲ್ಲಿ, ಭಯಾನಕ ಅಲೆಗಳ ಮತ್ತು ತನು, ಮನ, ತಲ್ಲಣಿಸುವ ಹಡಗಿನ ಅಲುಗಾಟಗಳನ್ನು ಅನನ್ಯ ಒಬ್ಬಂಟಿಯಾಗಿ ಹೇಗೆ ನಿಭಾಯಸಿದರೋ ಅನಿಸುತ್ತೆ. ನಿಮ್ಮ ಈ ಕೃತಿಯನ್ನು ಆಂಗ್ಲ ಭಾಷೆಯಲ್ಲಿ ತರ್ಜುಮೆ ಮಾಡಿದರೆ (ತಾನೇ ಬರೆದರೆ ಇನ್ನೂ ಉತ್ತಮ!) ನಮ್ಮ ಮುಂದಿನ ಪೀಳಿಗೆ ಮತ್ತು ಕನ್ನಡ ಓದು ಬರದವರಿಗೂ ತಲುಪುತ್ತೆ ಮತ್ತು ಪ್ರೋತ್ಸಾಹಕರ ಅಂತ ನನ್ನ ಭಾವನೆ. ನಿಮ್ಮ ಬರಹದಲ್ಲಿ ಒಂದು ವೈಶಿಷ್ಟ್ಯವಿದೆ . ನಿಮ್ಮ ಈ ಪ್ರತಿಭೆ ಮುಂದುವರಿಯಲಿ ಎಂದು ಆಶಿಸುತ್ತೇನೆ.
ಡಾ ಶ್ರೀರಾಮುಲು, (ಈಗ ಲಂಡನ್ ವಾಸಿ.)
ಕಾಂಗಲ್ ಟನ್ನಿಂದ ಶ್ರೀ ರಾಮಮೂರ್ತಿ ಬರೆಯುತ್ತಾರೆ:
“ಸಾಗರದಲ್ಲಿ ಸಾಹಸಿ” ಪುಸ್ತಕವನ್ನು ಓದಿದಾಗ, ಇಲ್ಲಿ ವರ್ಣಿಸಿರುವುದೆಲ್ಲವೂ ಕಣ್ಣಮುಂದೆ ಬರುತ್ತಿತ್ತು. ಅನನ್ಯ ತನ್ನ ನಿರ್ಧಾರವನ್ನು ತಿಳಿಸಿದಾಗ ಆದ ಆತಂಕ ಎಲ್ಲಾ ತಂದೆ-ತಾಯಿಯರಿಗೂ ಆಗುವುದು ಸಹಜ. ಆದರೆ ಅವಳ ನಿರ್ಧಾರದ ಬಗ್ಗೆ ಅವಳೊಂದಿಗೆ ಮಾತನಾಡಿ, ಎಲ್ಲಾ ವಿಷಯಗಳನ್ನು ತಿಳಿದು ಒಪ್ಪಿಗೆ ಕೊಟ್ಟಿದ್ದು ಬಹಳ ಶ್ಲಾಘನೀಯ. ನಂತರ ಸುಮಾರು ಮೂರು ವರ್ಷಗಳ ಸಿದ್ಧತೆ, ದೋಣಿಯನ್ನು ನಡೆಸುವ ಅಥವಾ ಹುಟ್ಟುಹಾಕುವ ವಿಧಾನ ಮಾತ್ರವಲ್ಲದೆ, ದೀರ್ಘ ಪ್ರಯಾಣಕ್ಕೆ ಬೇಕಾದ ಸಾಮಗ್ರಿಗಳು ಮತ್ತು ನೌಕಾಯಾನದ ತಾಂತ್ರಿಕ ಅಂಶಗಳು ಇತ್ಯಾದಿ ಅನೇಕ ವಿಷಯಗಳ ಬಗ್ಗೆ ವಿವರವಾದ ವರ್ಣನೆ ಇಲ್ಲಿದೆ.
ಪ್ರಸಾದ್ ದಂಪತಿಗಳು ಭಾರತಕ್ಕೆ ಹೋದಾಗ ಅಲ್ಲಿ ಕೆಲವರು, "ಈ ‘ಹುಚ್ಚು’ ಸಾಹಸಕ್ಕೆ ಹೇಗೆ ಅನುಮತಿ ಕೊಟ್ಟರಿ?" ಎಂದು ಕೇಳಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ. ಅಲ್ಲಿನ ಜನರ ಮನಸ್ಥಿತಿಯ (mindset) ಬದಲಾವಣೆಗೆ ಸಮಾಜ ಇನ್ನೂ ತಯಾರಾಗಿಲ್ಲವೇನೋ ಅನಿಸುತ್ತದೆ. ಕೆನೆರಿ ದ್ವೀಪದಿಂದ ಅನನ್ಯಳನ್ನು ಬೀಳ್ಕೊಟ್ಟ ವರ್ಣನೆ ಭಾವನಾತ್ಮಕವಾಗಿದೆ. ನಂತರ ಅವಳು ಎದುರಿಸಿದ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಂಡಿದ್ದು, ದೋಣಿಯ ಬುಡದಲ್ಲಿ ಈಜಿ ಅಂಟಿಕೊಂಡಿದ್ದ ಬಾರ್ನಕಲ್ಸ್ (barnacles) ಗಳನ್ನು ಬ್ರಷ್ನಿಂದ ಸ್ವಚ್ಛಗೊಳಿಸಿದ್ದು ಮತ್ತು ಇನ್ನೊಂದು ಸಂದರ್ಭದಲ್ಲಿ ದೋಣಿಯ ಹಿಂಭಾಗದ ಕೆಳಗಿದ್ದ ರಡ್ಡರ್ (rudder) ರಿಪೇರಿ ಮಾಡಿದ್ದನ್ನು ನೆನೆಸಿಕೊಂಡರೆ, ಅನನ್ಯ ಎಂತಹ ಸಾಹಸಗಾರ್ತಿ ಎನ್ನುವುದು ಗೊತ್ತಾಗುತ್ತದೆ. ಈ ವಿಷಯಗಳನ್ನು ಅನನ್ಯಳಿಂದ ತಿಳಿದುಕೊಂಡು ಪ್ರಸಾದ್ ಅವರು ಈ ಪುಸ್ತಕದಲ್ಲಿ ವಿವರವಾಗಿ ಮತ್ತು ಸರಳವಾಗಿ ಬರೆದಿರುವುದನ್ನು ಇಲ್ಲಿ ಗಮನಿಸಬಹುದು. ಅಲ್ಲಲ್ಲಿ ಹಲವಾರು ಇಂಗ್ಲಿಷ್ ಕವಿಗಳು ಬರೆದ ಪದ್ಯಗಳ ಬಳಕೆ ಸೂಕ್ತವಾಗಿದೆ. ಉದಾಹರಣೆಗೆ, ಭಯದ ಬಗ್ಗೆ (ಪುಟ ೫೧) ಖಲೀಲ್ ಗಿಬ್ರಾನ್ ರಚಿಸಿರುವ 'Fear' ಅನ್ನುವ ಕವಿತೆ. ಅಲ್ಲದೆ ಮಧ್ಯೆ ಮಧ್ಯೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಬರೆದ ಕವನಗಳ ಪ್ರಸ್ತುತತೆಯೂ ಇದೆ.
ಅನನ್ಯಳ ಐವತ್ತೆರಡು ದಿನಗಳ ಯಾತ್ರೆ ಮುಗಿದು ಆಂಟಿಗ ದ್ವೀಪವನ್ನು ಸೇರಿದಾಗ ಪ್ರಸಾದ್ ದಂಪತಿಗಳ, ವ್ಯವಸ್ಥಾಪಕರ ಮತ್ತು ಅಲ್ಲಿ ನೆಲೆಸಿರುವ ಕೆಲವು ಕನ್ನಡಿಗರ ಹಾಗೂ ಭಾರತೀಯರಿಂದ ಅದ್ಭುತವಾದ ಸ್ವಾಗತ ದೊರಕಿತು. ಈ ಸಾಹಸದ ಮುಖ್ಯ ಗುರಿ ಹಲವಾರು ಸಂಸ್ಥೆಗಳಿಗೆ ಧನಸಹಾಯ ಮಾಡುವುದಾಗಿದೆ. ಅವಳ ದೊಡ್ಡಪ್ಪ ನಡೆಸುತ್ತಿರುವ 'ದೀನಬಂಧು' ಸಂಸ್ಥೆಯೂ ಅದರಲ್ಲಿ ಒಂದು.
ಕೇವಲ ನೂರು ಪುಟಗಳಲ್ಲಿ ಈ ಸಾಹಸದ ಬಗ್ಗೆ ಬರೆದಿರುವ “ಸಾಗರದಲ್ಲಿ ಸಾಹಸಿ“ ಪುಸ್ತಕವನ್ನು ಎಲ್ಲಾ ಕನ್ನಡಿಗರೂ ಓದಲೇಬೇಕು.
ರಾಮಮೂರ್ತಿ, ಕಾಂಗಲ್ ಟನ್, ಚಶೈರ್
ಸುಮಾ ಚಿಲ್ಲಾಳ (ಡೋಂಕಾಸ್ಟರ್) ಬರೆಯುತ್ತಾರೆ: The book ಸಾಗರದಲಿ ಸಾಹಸಿ (’Sagaradalli Sahasi’) is an inspiring book about courage, strength and the willpower. It’s book about a beautiful bond between father, mother and daughter. I must say, I could experience the emotions the parents were going through the whole journey. How would you let your only daughter go on a 3000-mile solo row across the Atlantic Ocean. Not only that, but they also had to give Ananya the courage, strength, encouragement. The incident where the rudder was broken and Dr Prasad encouraged Ananya to replace the rudder, for me this was “the“moment and it was when my respect and admiration for the parents reached the zenith. Keeping aside their fear and anxiety, they provided unwavering support throughout the expedition. The book is a personal perspective about the anxieties, hopes and pride of a father and mother watching their daughter undertake the challenges. A proud character sketch of Ananya bring out childhood memories. Her determination, resilience, meticulous preparation, mental strength and at the same time her generosity. The book answered questions I had in my mind about drinking water, food etc and most importantly the communication difficulties, which is so important to keep in touch. Overall, ಸಾಗರದಲಿ ಸಾಹಸಿ is a heartfelt tribute to human endurance and parental support. A true story of adventure, resilience and the power of family I wish Ananya writes her story in English, for people like me who are unfamiliar with Kannada, or who are not comfortable reading in Kannada.
Suma Chillal, from Doncaster
ಅನನ್ಯ ಸಾಗರೋಲ್ಲಂಘನ : ಸಾಹಸ ಕಥನ ವಿಮರ್ಶೆ - ಡಾ ರಾಜಶ್ರೀ ಪಾಟೀಲ ಅವರಿಂದ
ಓಡಿಸ್ಸಿಯಸ್ ನಾಮವೆತ್ತ ಕೈದೋಣಿಯನ್ನೇ ಬರೋಬ್ಬರಿ 52 ದಿನ 5 ಗಂಟೆ ಮನೆಯಾಗಿಸಿಕೊಂಡು , ತೋಳ್ಬಲವನ್ನೇ ಆಸ್ತಿ ಮಾಡಿಕೊಂಡು, ಹಿಂದೆ ಮುಂದೆ ಕೈಚಾಚಿದರೆ ಸಹಾಯ ಮಾಡೋ ಕೈಗಳಿಲ್ಲವೆಂದರಿತೂ , ವ್ಯವಸ್ಥಾಪಕರ ಕಿರುನೆರವು , ಆಶ್ವಾಸನೆ ಮಾತುಗಳನ್ನೇ ನಂಬಿಕೆಯಾಗಿಟ್ಟುಕೊಂಡು , ಟೈಟಾನಿಕ್ ಅಂಥ ಬೃಹತ್ ಹಡಗೇನೋ ಅನ್ನುವಂತೆ ತನ್ನ ಪಾಲುಮಾಡಿಕೊಂಡಂತ ಅಟ್ಲಾಂಟಿಕ್ ಮಹಾಸಾಗರದ ನಿಲ್ದಾಣವಿಲ್ಲದ 3,000 ಮೈಲಿಯ ಒಂಟಿ ಪಯಣವನ್ನ ಮನೆಯ ಏಕೈಕ ಕುಡಿ ಮಾಡುವೆನೆಂದಾಗ, ಅತೀ ಕಾಳಜಿಯಿಂದ ಕಾಪಾಡಿದ ಏಕೈಕ ಮನೆಯ ದೀಪ ಇಂಥ ಸಾಹಸಕ್ಕೆ ಕೈ ಹಾಕುವೆನೆಂದಾಗ, ಹೆತ್ತವರ ಮನಸ್ಸಿನ ತಳಮಳ , ಆತಂಕ , ಮುಂಬರುವ ಅಪಾಯಗಳ ಬಗೆಗಿನ ಮನಸ್ಸ್ಸಿನ ಮಂಥನದ ವಿಶ್ಲೇಷಣೆ ಅತೀ ನೈಜವಾಗಿದ್ದು ಮತ್ತು ವಾಸ್ತವಿಕವಾಗಿದ್ದು. ಅಸ್ತಿತ್ವ ಕಳೆದುಕೊಳ್ಳುವ ಭಯವಿದ್ದರೂ ಸಾಗರ ಸೇರಿ ಸಾಗರವೇ ತಾನಾಗುವ ನದಿಯ ಉಪಮೇಯವನ್ನಿಟ್ಟುಕೊಂಡು ಗಿಬ್ರಾನ್ ಬರೆದ 'ಫಿಯರ್' (Fear) ಕವಿತೆಯ ವಿಸ್ತಾರವಾದ ರೂಪಕದ ಪ್ರಸ್ತಾವನೆ, ಈ ಸಾಹಸ ಸಾಧನೆ ಅವರ ಕುಟುಂಬದ ಮೇಲೆ ಮೂಡಿಸಿದ ಭಯದ ಛಾಯೆಯನ್ನ ಮತ್ತು ಅದನ್ನ ಮೀರಿ ಹೊರಬಂದ ಬಗೆಯನ್ನ ಬಿಂಬಿಸುತ್ತದೆ. ಪ್ರಸಾದವರು ತಮ್ಮ ಬರವಣಿಗೆಯಿಂದ ಓದುಗನನ್ನು ಅವರ ಮನದಲ್ಲಾದ ಅಲ್ಲೋಲ ಕಲ್ಲೋಲಗಳಲ್ಲಿ ಒಂದಾಗಿಸಿದ್ದಾರೆ .ಅವರ ಬರವಣಿಗೆಯ ಶೈಲಿ, ಓದುಗನೂ ಅನನ್ಯಳ ಅನನ್ಯ ಪಯಣದಲ್ಲಿ ಅವರ ಅಪ್ಪನ ಜೊತೆಯಲ್ಲಿಯೇ ಇದ್ದೆನೇನೋ ಅನ್ನುವಷ್ಟು ಹತ್ತಿರ ಮಾಡುವಂತಿದೆ .
ಇತ್ತ ಅಜ್ಜ ಜೆ ಎಸ್ಎಸ್ ಅವರ ಸುಂದರ ಪದಗಳಲ್ಲಿ ವರ್ಣಿತವಾದ ‘ಸುನೀಲ , ವಿಸ್ತರ , ತರಂಗ ಶೋಭಿತ ಗಂಭೀರಾಂಬುಧಿಯಲ್ಲಿ’ ಅಂತರಂಗದ ಅನ್ವೇಷಣೆ ಮತ್ತು ನಿಶ್ಶಬ್ದದ ನಡುವಿನ ಆಧ್ಯಾತ್ಮ ಪಯಣ ಮಾಡುವೆನೆನ್ನುವ ಮಗಳ ಮಾನಸಿಕ ಪ್ರಬುದ್ಧತೆ, ಅದಕ್ಕಾಗಿ ಸತತ ಮೂರು ವರ್ಷಗಳ ಕಾಲ ದೇಹ ಮತ್ತು ಮನಸ್ಸನ್ನ ಯಾವುದೇ ಸ್ವಂತವಾದ ಅಪೇಕ್ಷೆಯಿಲ್ಲದೆ ದುಡಿಸಿ ದಣಿಸಿ ತಯಾರಿ ನಡೆಸುವ ಮಗಳ ಹರಸಾಹಸ, ಭಾರತೀಯರ, ಕನ್ನಡಿಗರ, ವರ್ಣೀಯ ಜನಾಂಗದ ನೀರಿಕ್ಷೆಯನ್ನ ಹೊತ್ತು , ಹಲವಾರು ಪಾಶ್ಚಿಮಾತ್ಯ ದೇಶಗಳ ಭಾವುಟಗಳ ನಡುವೆ ಕೇಸರಿ ಬಿಳಿ ಹಸಿರು ಬಣ್ಣಗಳ ಪತಾಕೆ ಹೊತ್ತು ಸಾಗರದ ಒಂಟಿ ಪಯಣಕ್ಕೆ ಮಗಳು ಹೆಜ್ಜೆಯಿಟ್ಟು ಮುನ್ನಡೆದಾಗ, ಮಗಳು ಬೆಳೆದ ರೀತಿಯ ಬಗ್ಗೆ ಅಪ್ಪನ ಹೃದಯ ತುಂಬಿ ಬರುವ ಹೊಗಳಿಕೆಯ ಮಾತುಗಳು, ಎಲ್ಲೂ ಉತ್ಪ್ರೇಕ್ಷೆಯಾಗದೆ, ಕೆಲವೊಂದು ಬಾರಿ ಬರಹಗಾರ ಸ್ವಲ್ಪ ಉದಾರತೆಯನ್ನ ತೋರಬಹುದಿತ್ತೇನೋ ಅನ್ನಿಸುವಂತಿದೆ .
ಅಪ್ಪನ ಗಂಡುಮನಸ್ಸನ್ನ ಕರಗಿಸಿ ಗಳಗಳನೆ ಅಳಿಸಿ, ಅಪಾರ ಸಮುದ್ರದ ಅಂಚಿನಲ್ಲಿ ಹುಟ್ಟುದೋಣಿಯ ಜೊತೆಗೆ ಒಂದು ಸಣ್ಣ ಚುಕ್ಕಿಯಂತೆ ಮರೆಯಾಗಿ, ಮೊಬೈಲ್ ಕಳೆದರೇನು, ಡಿ ಸಲೈನೇಷನ್ ಯಂತ್ರ ಮುರಿದರೇನು , ದೋಣಿಯ ಚುಕ್ಕಾಣಿ ನೀರಲ್ಲಿ ಮುರಿದರೇನು, ಕೊನೆಗೆ ಹುಟ್ಟುದೋಣಿಯ ಹುಟ್ಟೇ ಮುರಿದರೇನು, ನನ್ನ ಪಯಣ, ಗುರಿ ಮುಟ್ಟದೆ ನಿಲ್ಲದೆಂದು ಪರಿಹಾರ ಹುಡುಕುತ್ತ ಸಾಗುವ ಅನನ್ಯಳ ಸಾಹಸ ಪಯಣ ಹೃದಯ ಸ್ತಂಭನಳಿಸುವಂತದು. ಅದನ್ನ ಓದುಗರ ಮನಕ್ಕೆ ಅತಿಯಾಗದೆ, ತೀರಾ ಮಿತವಾಗದೆ, ನಿಜಕ್ಕೆ ಹತ್ತಿರವಾಗಿ ವಿವರಣೆ ಮಾಡಿರುವ ಲೇಖಕರ ಪರಿ ಮೆಚ್ಚುಗೆಯಾಗುವಂತದ್ದು.
ಸಾಹಸ ಪ್ರಯಾಣ ಕೊನೆಯ ಹಂತ ತಲುಪುವ ಸುದ್ದಿ ತಿಳಿದು ಸ್ವಾಗತ ಮಾಡಲು ಅಂಟಿಗಕ್ಕೆ ಪ್ರಯಾಣ ಬೆಳೆಸಿ ಎತ್ತರದ ವಿಮಾನದಲ್ಲಿ ಕುಳಿತು ಮಹಾಸಾಗರದಲ್ಲಿ ಮಗಳ ಚುಕ್ಕಿ ದೋಣಿಯನ್ನ ಹುಡುಕುವ ಅಪ್ಪ ಅಮ್ಮನ ಮುಗ್ದತೆ ತುಂಬಿದ ಕಾತುರತೆ ಓದುಗನಲ್ಲಿ ಕಿರುನಗೆಯನ್ನ ಹೊರಹಾಕುವಂತಿದೆ.
ಚುಕ್ಕಿಯಂತೆ ಮರೆಯಾಗಿ ಅನನ್ಯ ಸಮುದ್ರ ಸಾಹಸವನ್ನು ಮುಗಿಸಿ, ಮಿನುಗುವ ನಕ್ಷತ್ರದಂತೆ ಧರೆಗೆ ಮರಳಿ ತನ್ನ ಮೊದಲ ಹೆಜ್ಜೆ ಇಟ್ಟಾಗ ಅಪ್ಪನ ಮನಸ್ಸಿನಲ್ಲಾಗುವ ಅಗಾಧ ನಿರಾಳ ಭಾವ, ಸಂಭ್ರಮ ಮತ್ತು ಹೆಮ್ಮೆ ಮನಮುಟ್ಟುವಂತಿದೆ. ಸಾಹಸ ಮತ್ತು ಸಾಹಸದ ತದನಂತರದ ಘಟನೆಗಳ ಭಿತ್ತಿಚಿತ್ರಣ ಆಯ್ಕೆ ಲೇಖಕರ ನಿಖರತೆಯನ್ನ ತಿಳಿಸುವಂತಿದೆ .
ಒಟ್ಟಾರೆ ಪುಸ್ತಕ ಓದುಗನಿಗೆ ತಾನು ಸಾಹಸಗಾಥೆಯ ಭಾಗವೇನೋ ಎನ್ನಿಸಿ ಸಾರ್ಥಕತೆಯ ಭಾವ ಮೂಡಿಸುವಂತಿದೆ. ಆದರೆ ನನಗಂತೂ ಅರ್ಥಗರ್ಭಿತ ಹೆಸರನ್ನ ನಾಮಕರಣ ಮಾಡಿ, ಸಂಪೂರ್ಣ ವೈಯಕ್ತಿಕ ಸ್ವಾತಂತ್ರ್ಯ ನೀಡಿ, ಮಗಳ ಕನಸನ್ನ ಇಚ್ಛೆಯ ಜೊತೆಗೆ ಆಯ್ಕೆಯನ್ನಾಗಿಸಿಕೊಂಡ ತಂದೆ ತಾಯಿಯನ್ನ ಪಡೆದ ಅನನ್ಯಳ ಬಗ್ಗೆ ತುಸು ಹೊಟ್ಟೆಕಿಚ್ಚು ಮೂಡಿದ್ದಂತೂ ಸತ್ಯ.
ಡಾ ರಾಜಶ್ರೀ ಪಾಟೀಲ, ಲೆಸ್ಟರ್, ಯು ಕೆ
ಶಾಲಿನಿ ಜ್ಞಾನಸುಬ್ರಮಣಿಯನ್ ಅವರ ಲೇಖನ:
ಒಡಿಸ್ಸಿ (ರಾಜಾ ಒಡಿಸ್ಸಿಯಸ್ ಕುರಿತು ನಿರ್ಮಿತವಾದ ಚಲನಚಿತ್ರ The Odessey ) ಇತ್ತೀಚೆಗೆ ಬಿಡುಗಡೆಯಾಗಿದೆ; ಅದೇ ಸಮಯದಲ್ಲಿ ಅನನ್ಯ ಪ್ರಸಾದ್ನ ಹಡಗನ್ನು (Atlantic Odyssey) row ಮಾಡಿದ ಅವಳ ಶೌರ್ಯವನ್ನು ವರ್ಣಿಸುವ ಪುಸ್ತಕ ‘ಸಾಗರದಲ್ಲಿ ಸಾಹಸಿ’ ಹೊರಬಂದಿದೆ. ಎರಡರ ಬಗ್ಗೆಯೂ ನನಗೆ ತುಂಬಾ ಉತ್ಸಾಹ. ಅನನ್ಯಳ ಕಥೆ ಓದಿದಾಗ, ಈ ಪೌರಾಣಿಕ* ಹೆಸರನ್ನು ವಾಸ್ತವಕ್ಕೆ ತಂದ ಧೈರ್ಯ, ದೃಢತೆ, ಮತ್ತು ಜ್ವಾಲೆಯ ಬಗ್ಗೆ ಅಪಾರವಾದ ಗೌರವ ನನ್ನೊಳಗೆ ಮೂಡಿತು. ಪುಸ್ತಕವನ್ನು ಆರಂಭದಿಂದ ಅಂತ್ಯವರೆಗೆ ಓದುವುದು ಸಂಪೂರ್ಣವಾಗಿ ಮನಸೂರೆಗೊಂಡ ಅನುಭವವಾಗಿತ್ತು; ಮೊದಲನೇ ಬಾರಿಗೆ ಇಷ್ಟು ಕಡಿಮೆ ಸಮಯದಲ್ಲಿ, ಎರಡು ದಿನಗಳಲ್ಲಿ ನಾನು ಓದಿ ಮುಗಿಸಿರುವ ಕನ್ನಡ ಪುಸ್ತಕ. (*ಸಂಸ್ಕೃತದ ಪುರಾ ಶಬ್ದದ ಅರ್ಥ ಬಹಳ ಹಳೆಯ ಕಾಲ ಅಂತ. ಆ ಅರ್ಥದಲ್ಲಿ ಇಲ್ಲಿ ’ಪೌರಾಣಿಕ’ ಪದವನ್ನುಶಾಲಿನಿ ಅವರು ಉಪಯೋಗಿಸಿದ್ದಾರೆ.-ಸಂ)
2025ರ ಫೆಬ್ರವರಿಯಲ್ಲಿ ಅನನ್ಯ ಬಗ್ಗೆ ಸುದ್ದಿಯಲ್ಲಿ ಓದಿದ್ದೆ; ಭಾರತೀಯ ಮೂಲದ, ಕನ್ನಡತಿ, ಮತ್ತು ನಮ್ಮ ಅತ್ಯಂತ ಪ್ರೀತಿಪಾತ್ರ ಕವಿ ಜಿ.ಎಸ್. ಶಿವರುದ್ರಪ್ಪ ಅವರ ಮೊಮ್ಮಗಳು — ಎಂತಹ ಹೆಮ್ಮೆಯ ವಿಷಯ! ಮತ್ತು ಆಕೆ ಯಾವುದೇ ಮಹಾಸಾಗರವನ್ನು ಏಕಾಂಗಿಯಾಗಿ ದಾಟಿದ ಮೊದಲ ವರ್ಣೀಯ ಮಹಿಳೆ ಎಂಬುದನ್ನು ತಿಳಿದಾಗ, ಅನೇಕ ಭಾವನೆಗಳು ನನ್ನೊಳಗೆ ಹರಿದುಬಂದವು. ಆ ದಿನ ನನ್ನ ಮನಸ್ಸಿನಲ್ಲಿ ಉದ್ಭವಿಸಿದ ಅನೇಕ ಪ್ರಶ್ನೆಗಳಿಗೆ, ಆಕೆಯ ತಂದೆ ಡಾ. ಜಿ.ಎಸ್. ಪ್ರಸಾದ್ ಅವರು ಬರೆದ ಈ ಅದ್ಭುತ ಪುಸ್ತಕ ಉತ್ತರ ನೀಡಿತು.
ಒಬ್ಬ ಪೋಷಕರಾಗಿ, ನನ್ನ ಮೊದಲ ಚಿಂತನೆ — ಅನನ್ಯಳ ಪೋಷಕರು ಹೇಗೆ ಆತಂಕ, ಅಸ್ಪಷ್ಟತೆ ಯನ್ನು ಎದುರಿಸಿದರು? ತಮ್ಮ ಮಗಳು ಅಟ್ಲಾಂಟಿಕ್ ಸಮುದ್ರವನ್ನು ಏಕಾಂಗಿಯಾಗಿ ದಾಟುತ್ತೇನೆಂದು ತಿಳಿಸಿದಾಗ ಅವರು ಹೇಗೆ ಭಾವನೆಗಳ ಸಮತೋಲನ ತಂದುಕೊಂಡರು ಎಂದು. ಈ ಪ್ರಶ್ನೆ ಎಷ್ಟೋ ಸಾರಿ ನಾನು ತಾಯಿಯಾಗಿ ಯೋಚಿಸುತ್ತೇನೆ. ಡಾ. ಪ್ರಸಾದ್ ಅವರು ಪುಸ್ತಕದ ಅನೇಕ ಭಾಗಗಳಲ್ಲಿ ಇದನ್ನು ಅತಿ ಸುಂದರವಾಗಿ ಮತ್ತು ಪ್ರಾಯೋಗಿಕವಾಗಿ ವಿವರಿಸಿದ್ದಾರೆ. ಹಂತ ಹಂತವಾಗಿ ಮಾಡಿದ ಯೋಜನೆ, ಪೋಷಕರು ನಡೆಸಿದ ಆರಂಭಿಕ ಸಂಶೋಧನೆ, ಮಗಳೊಂದಿಗೆ ನಡೆದ ಮಾತುಕತೆಗಳು, ನಿದ್ರಾಹೀನ ರಾತ್ರಿಗಳು, ಪೋಷಕರ ಅಂಜಿಕೆಗಳು, ಮಕ್ಕಳ ಕನಸುಗಳಿಗೆ , ಅಭಿವೃದ್ಧಿಗೆ ಅಸಾವಧಾನವಾಗಿ ಅಡ್ಡಿಯಾಗುವುದರ ಬಗ್ಗೆ ಜಾಗರೂಕರಿಗಿರುವುದು, ನೋಡಿಕೊಳ್ಳುವುದು, ಮಾನಸಿಕವಾಗಿ ತಾವು ಸಿದ್ಧರಾಗುವುದು, ಪೋಷಕರ ಪ್ರೋತ್ಸಾಹದ ನುಡಿಗಳು — ಇವೆಲ್ಲವೂ ನನಗೆ ಉತ್ತರಗಳಾಗಿದ್ದವು.
ಪುಸ್ತಕ ಅನೇಕ ಸ್ಥಳಗಳಲ್ಲಿ ರೋಮಾಂಚಕವಾಗಿದೆ. ವಿಶೇಷವಾಗಿ ಗರ್ಜಿಸುವ ಅಲೆಗಳ ನಡುವೆ ದೋಣಿಯ ಕೆಳಗೆ ಮುಳುಗಿ ಅನನ್ಯ ಅದನ್ನು ಸ್ವಚ್ಛಗೊಳಿಸಬೇಕಾದ ಮೊದಲ ಘಟನೆ. ಆ ಕಲ್ಪನೆಯೇ ಭಯ ಹುಟ್ಟಿಸುವುದು. ‘ಕೆಲಸವನ್ನು ತಡವಾಗಿ ಮಾಡುವುದಕ್ಕಿಂತ ಬೇಗ ಮುಗಿಸು’ ಎಂದು ಪೋಷಕರು ನೀಡಿದ ಪ್ರೋತ್ಸಾಹದ ಮಾತುಗಳು ಅವಳಿಗೆ ಭಯವನ್ನು ನಿಭಾಯಿಸಲು ಮಾಯದ ಮದ್ದುಗಳಂತೆ ಕೆಲಸ ಮಾಡಿದ್ದವು. ಆ ಭಾಗವನ್ನು ಓದುವಾಗ ನನಗೂ ಭಯದ ಅನುಭವವಾಗಿತ್ತು; ಆಕೆ ಮತ್ತೆ ದೋಣಿಯ ಮೇಲೆ ಏರುವ ಕ್ಷಣವನ್ನು ಓದಲು ಕಾತರವಾಗಿದ್ದೆ.
ಅನನ್ಯ ದೃಢಮನದ ಧೀರ ಹೃದಯಿ! ಮಾನವರನ್ನು ಇಷ್ಟು ಸಾಧಕರನ್ನಾಗಿ ಮಾಡಿಸುವುದು ಏನು? ಸಾಧಕರ ಗುಣಗಳೇನು ಎಂಬ ಪ್ರಶ್ನೆ ಇದ್ದಲ್ಲಿ ಅದಕ್ಕೆ ಉತ್ತರಗಳು ಈ ಪುಸ್ತಕದಲ್ಲಿ ದೊರಕುತ್ತದೆ. ಆಕಾಂಕ್ಷೆ, ಕನಸು, ದೃಢತೆ, ಇತರರು ಹೆಜ್ಜೆ ಇಟ್ಟಿರದ ಸ್ಥಳಕ್ಕೆ ಹೆಜ್ಜೆ ಇಡುವ ಮನೋಬಲ, ಬಿರುಗಾಳಿಯಲ್ಲಿಯೂ ಶಾಂತ ಚಿತ್ತ — ಅನನ್ಯಳ ಬಗ್ಗೆ ನಾನು ತಿಳಿದಿದ್ದು ಈ ಪುಸ್ತಕ ಮುಖಾಂತರ. ನನಗೆ ಭಗವದ್ಗೀತೆಯ ಈ ಶ್ಲೋಕ ನೆನಪಾಯಿತು: “ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ” BG 6.5
ಅನನ್ಯಳ ಕಥೆ, ಮನಸ್ಸಿನ ಶಕ್ತಿಯಿಂದ ಮತ್ತು ಸ್ವಪ್ರಯತ್ನದಿಂದ ತನ್ನನ್ನು ತಾನೇ ಎತ್ತಿಕೊಳ್ಳುವ ಅದ್ಭುತ ಉದಾಹರಣೆ. ಅವಳ ಪ್ರತಿಯೊಂದು ಚಿಂತನಾ ಮಾದರಿ, ಮಾನಸಿಕ ಅಭ್ಯಾಸ, ಕ್ರೀಡಾಸ್ಫೂರ್ತಿ — ಇವೆಲ್ಲವೂ ಆಕೆಯನ್ನು ಎತ್ತರಗೊಳಿಸುವ ಮಾರ್ಗದಲ್ಲಿ ಕರೆದೊಕೊಂಡು ಹೋಗಿವೆ ಎನ್ನಬಹುದು. ಮೊಬೈಲ್ ಫೋನ್ ನೀರಿಗೆ ಬಿದ್ದ ಪ್ರಸಂಗದಲ್ಲಿ ಆಕೆ ನಿರಾಶೆಯಾಗದೆ, ಉಪಗ್ರಹ ಫೋನ್ ಬಳಸಿ ಹೊಸ ಸಂಖ್ಯೆಯಿಂದ ಪರಿಹಾರ ಕಂಡುಕೊಂಡಳು — ಅದ್ಭುತ ಮನೋಸ್ಥಿತಿ ಅಲ್ಲವೇ ಅದು!
ನನಗೆ ರೋಯಿಂಗ್ ಬಗ್ಗೆ ತಿಳಿದಿರುವುದು ಅಲ್ಪ. ವರ್ಷಗಳ ಹಿಂದೆ ನನ್ನ ಕೆಲಸದ ಸ್ಥಳ ಥೇಮ್ಸ್ ನದಿಯ ತೀರದಲ್ಲಿತ್ತು; ಅದು ಒಲಿಂಪಿಕ್ಸ್ ರೋಯಿಂಗ್ ಮಾರ್ಗ ವಾಗಿತ್ತು. ಮಧ್ಯಾಹ್ನದ lunch ಸಮಯದಲ್ಲಿ ರೋಯರ್ಗಳ ಅಭ್ಯಾಸ ನೋಡುವುದು ನನ್ನ ಹವ್ಯಾಸವಾಗಿತ್ತು. 2012ರಲ್ಲಿ ಬ್ರಿಟಿಷ್ ಮಹಿಳೆಯರ ಜೋಡಿ ರೋಯಿಂಗ್ನಲ್ಲಿ ಮೊದಲ ಒಲಿಂಪಿಕ್ ಚಿನ್ನ ಗೆದ್ದ ಹೆಲೆನ್ ಗ್ರೋವರ್ (ನಂತರ ಹೆಲೆನ್ ಬ್ಯಾಕ್ಷಾಲ್) ಅವರ ಅಭಿಮಾನಿ. ಅನನ್ಯ ಪ್ರಸಾದ್ ಅವರ ಕಥೆ ವಿಶೇಷ — ಏಕೆಂದರೆ ಆಕೆ ನಮ್ಮ ಭಾರತೀಯ ಮೂಲದವಳು, ಜೊತೆಗೆ ಏಕಾಂಗಿಯಾಗಿ rowing ಸಾಧಿಸಿದ್ದಾಳೆ, ಅನೇಕ ವರ್ಣೀಯ ಮಕ್ಕಳಿಗೆ ಕನಸುಗಳನ್ನು ಬೆನ್ನಟ್ಟುವ ಪ್ರೇರಣೆಯನ್ನು ನೀಡುತ್ತಾ.
ಅನನ್ಯಳ ದಿನಚರಿ, 52 ದಿನಗಳು ದೋಣಿಯಲ್ಲಿ ಏಕಾಂಗಿಯಾಗಿ ಕಳೆದದ್ದು, ದಿನವನ್ನು ಯೋಜಿಸಿಕೊಂಡದ್ದು, ಲಭ್ಯವಿದ್ದ ಸಂಪನ್ಮೂಲಗಳನ್ನು ಬಳಸಿಕೊಂಡದ್ದು, ಇನ್ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದದ್ದು — ಇವೆಲ್ಲವೂ ಓದಲು ಮನಮೋಹಕವಾಗಿತ್ತು. ಅವಳು ಆ ದೀರ್ಘ ರಾತ್ರಿಗಳನ್ನು ಭಯಪಡದೆ, ಸಾವಿರಾರು ನಕ್ಷತ್ರಗಳ ಶರಣಾರ್ಥಿ 3,000 ಮೈಲುಗಳ ಸಾಗರದ ಮೇಲಿನ ಪ್ರಯಾಣವನ್ನು ಆನಂದಿಸಿದ್ದಾಳೆ ಎಂಬುದು ಮನಸ್ಸಿಗೆ ಸ್ಪೂರ್ತಿ ನೀಡುತ್ತದೆ. ಎಂತಹ ಅದ್ಭುತ ಸಾಧನೆ! ಅವಳ ಜೀವನದ ಮೇಲೆ ಒಂದು ಚಲನಚಿತ್ರ ಬಂದರೆ ಅದ್ಭುತ. ಅನನ್ಯ ಭಾರತೀಯ ಧ್ವಜವನ್ನು ಬ್ರಿಟಿಷ್ ಧ್ವಜದ ಜೊತೆಗೆ ಹಾರಿಸಿದ ಕ್ಷಣ ಮತ್ತು ದೋಣಿಯ ಮೇಲೆ ಇದ್ದ ಕೃಷ್ಣಯ್ಯ ಚೆಟ್ಟಿ ಲೋಗೋ - ನನಗೆ ಮತ್ತಿಷ್ಟು ಹೆಮ್ಮೆಯನ್ನುಂಟು ಮಾಡಿತು. ಎಲ್ಲೆಡೆ Legacyಯ ಪ್ರತೀಕ ತುಂಬಿ ತುಳುಕುತ್ತಿದೆ ಅಂತ ಭಾವಿಸ್ತೀನಿ.
ಲೇಖಕ ಡಾ. ಪ್ರಸಾದ್ ಅವರ ಹಿತನುಡಿಯೊಂದಿಗೆ ಪುಸ್ತಕವನ್ನು ವ್ಯವಸ್ಥೆ ಮಾಡಿದ್ದಕ್ಕಾಗಿ ಡಾ. ಶ್ರೀವತ್ಸ ದೇಸಾಯಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಮತ್ತೆ ಮತ್ತೆ ಓದುವಂತಹ ಪುಸ್ತಕ. ಅನನ್ಯಳ ಭವಿಷ್ಯಕ್ಕೆ ಅನೇಕ ಶುಭಾಶಯಗಳನ್ನು ಈ ಬರಹ ಮೂಲಕ ಕಳಿಸುತ್ತೇನೆ.
ಶಾಲಿನಿ ಜ್ಞಾನಸುಬ್ರಮಣಿಯನ್, ಕಾರ್ಡಿಫ್, ವೇಲ್ಸ್, ಯು ಕೆ
ವಿಜಯ ನರಸಿಂಹ ಬರೆಯುತ್ತಾರೆ
'ಸಾಗರದಲ್ಲಿ ಸಾಹಸಿ' ಡಾ. ಜಿ.ಎಸ್. ಶಿವಪ್ರಸಾದ್ ಅವರ ವಿರಚಿತ ಈ ಕೃತಿ ತಮ್ಮ ಮಗಳ ಸಾಗರ ಯಾನದ ಸಾಹಸಗಾಥೆ ಎಂದೆನಿಸಿದರೂ , ಲೇಖಕರು ಮಾನವ ಜೀವನದ ಹಲವು ಮಜಲುಗಳನ್ನು ಓದುಗರಿಗೆ ಸುಲಭವಾಗಿ ತೆರದಿಟ್ಟಿದ್ದಾರೆ. 'World's Toughest Row' ಮಹಾ ಸಾಗರ ಯಾನದ ಸಾಹಸಕ್ಕೂ ಮತ್ತು ನಮ್ಮ ದಿನನಿತ್ಯದ ಜೀವನಕ್ಕೂ ಇರುವ ಸಾಮ್ಯತೆಗಳನ್ನು ಉಲ್ಲೇಖಿಸಿರುವ ಸಂದರ್ಭಗಳು ನನ್ನ ಮನಸ್ಸನ್ನು ಬಹಳವಾಗಿ ಸೆಳೆದವು. ಅನನ್ಯ ಅವರ ಸಾಧನೆ ನಿಜಕ್ಕೂ ಅನನ್ಯವಾದುದು. ಮೃದು ಸ್ವಭಾವ, ಮಿತಭಾಷಿ, ಅಂತರ್ಮುಖಿ ಗುಣಗಳನ್ನು ಹೊಂದಿರುವ ಮಗಳು ಅಸಾಧಾರಣ ಕೆಲಸವೊಂದಕ್ಕೆ ಅಣಿಯಾಗುವೆ ಎಂದಾಗ ಅದೆಂಥ ದಿಟ್ಟ ತಂದೆ-ತಾಯಿಯರಿಗೂ ಭಯ, ಗೊಂದಲ, ಅಧಿಕಾರಯುತ ನಿರಾಕರಣೆ, ಪ್ರತಿರೋಧ ಭಾವಗಳು ಒಮ್ಮೆಗೇ ಬರುವುದು ಸಹಜ. ಒಂದು ವೇಳೆ ತಂದೆ-ತಾಯಿಯರು ಒಪ್ಪಿಗೆ ಕೊಡದಿದ್ದರೂ ಅನನ್ಯ ಅವರು ಈ ಸಾಧನೆಯನ್ನು ಮಾಡಿಯೇ ತೀರುತ್ತಿದ್ದರು ಎನ್ನುವ ಭಾವ ನನ್ನದು, ಇದಕ್ಕೆ ಕಾರಣ ಅವರ ಈ ಮಹಾ ಯಾನದ ಹಿಂದಿರುವ ಉದ್ದಿಶ್ಯ. ಇನ್ನು ಈ ಸಾಹಸಗಾಥೆಗೆ ಬೇಕಾದ ಪೂರ್ವ ತಯಾರಿ, ದೇಹ ಮತ್ತು ಮನಸ್ಸುಗಳೆರಡನ್ನೂ ಕಠಿಣತೆಗೆ ಒರೆ ಹಚ್ಚಲು ಸಜ್ಜು ಮಾಡಿಕೊಂಡ ಎಲ್ಲ ವಿವರವನ್ನು , ಇದರ ಜೊತೆಗೆ ಸಾಗರ ಪರ್ಯಟನೆಯ ಇತಿಹಾಸ, ಹವಾಮಾನದ ಸೂಕ್ಷ್ಮ ವಿಚಾರಗಳು, ತಂತ್ರಜ್ಞಾನದ ಅವಶ್ಯಕತೆಗಳು ಮತ್ತು ಬಳಕೆಯ ತರಬೇತಿ , ಹೀಗೆ ಹಲವಾರು ವಿಚಾರಗಳನ್ನು ಲೇಖಕರು ಸಮರ್ಪಕವಾಗಿ ವಿವರಿಸಿದ್ದಾರೆ. ಜಿ.ಎಸ್.ಎಸ್ ಅವರ 'ಕಾಣದ ಕಡಲಿಗೆ ಹಂಬಲಿಸಿದೆ ಮನ' ಎನ್ನುವ ಕವಿತೆಯ ಆಂತರ್ಯವನ್ನು ಕವಿ ಖಲೀಲ ಗಿಬ್ರಾನ್ ಅವರ 'Fear' ಕವಿತೆಯ ಸಾಲುಗಳಿಗೆ ಇರುವ ಸಾಮ್ಯತೆಯನ್ನು ಪ್ರಸಾದ್ ಅವರು ಬಹಳ ಚೆನ್ನಾಗಿ ಸಾಂದರ್ಬಿಕವಾಗಿ ಕಟ್ಟಿಕೊಟ್ಟಿದ್ದಾರೆ. ಯಾನದ ನಡುವೆ ಅನನ್ಯ ಅವರು ಎದುರಿಸಬೇಕಾದ ನಿರೀಕ್ಷಿತ ಮತ್ತು ಅನಿರೀಕ್ಷಿತ ಸಮಸ್ಯೆಗಳು ಮತ್ತು ಅವುಗಳನ್ನು ದೋಣಿಯೊಳಗೆ ಮತ್ತೆ ಕೆಲವು ಸಲ ಸಾಗರದೊಳಗೆ ಧುಮುಕಿ ನಿವಾರಿಸಿದ ಬಗೆ ಎಲ್ಲವೂ ನಮಗೆ ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ್ದಾರೆ. ನಾವು ಜೀವನದಲ್ಲಿ ಸಮಸ್ಯೆಗಳನ್ನು ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ಎದುರಿಸಬೇಕೇ ಹೊರೆತು ಸಮಸ್ಯೆ ನಮ್ಮನ್ನು ಹೆದರಿಸುವಂತಾಗಬಾರದು ಎನ್ನುವ ತತ್ವವನ್ನು ಪ್ರಸಾದ್ ಅವರು ತಿಳಿಸಿಕೊಟ್ಟಿದ್ದಾರೆ.
ಅತ್ತ ಮಗಳು ಒಂಟಿಯಾಗಿ ಪ್ರಕೃತಿಯ ಸವಾಲುಗಳನ್ನು ಎದುರಿಸುತ್ತಿರುವಾಗ ಇತ್ತ ತಂದೆ ತಾಯಿಯರು ಪಡುತ್ತಿದ್ದ ಆತಂಕ, ತಲ್ಲಣ, ಭಾವುಕತೆ, ಅಸಹಾಯಕ ಪರಿಸ್ಥಿತಿ ಎಲ್ಲವೂ ಅನುಭವಿಸಿದವರಿಗಷ್ಟೇ ಗೊತ್ತು.
ಅನನ್ಯ ಅವರ ಸಾಧನೆಗೆ ನನ್ನದೊಂದು ದೊಡ್ಡ ಸಲಾಂ ಮತ್ತು ಈ ಸಾಹಸಗಾಥೆಯ ಕೃತಿಗೆ ಪ್ರಸಾದ್ ಅವರಿಗೆ ನನ್ನ ಅಭಿನಂದನೆಗಳು.