‘ಸಾಗರದಲ್ಲಿ ಸಾಹಸಿ’- ಭಾಗ 2

ಅನನ್ಯ ಸಾಗರೋಲ್ಲಂಘನ : ಸಾಹಸ ಕಥನ ವಿಮರ್ಶೆ - ಡಾ ರಾಜಶ್ರೀ ಪಾಟೀಲ ಅವರಿಂದ

ಓಡಿಸ್ಸಿಯಸ್ ನಾಮವೆತ್ತ ಕೈದೋಣಿಯನ್ನೇ ಬರೋಬ್ಬರಿ 52 ದಿನ 5 ಗಂಟೆ ಮನೆಯಾಗಿಸಿಕೊಂಡು ,
ತೋಳ್ಬಲವನ್ನೇ ಆಸ್ತಿ ಮಾಡಿಕೊಂಡು,
ಹಿಂದೆ ಮುಂದೆ ಕೈಚಾಚಿದರೆ ಸಹಾಯ ಮಾಡೋ ಕೈಗಳಿಲ್ಲವೆಂದರಿತೂ ,
ವ್ಯವಸ್ಥಾಪಕರ ಕಿರುನೆರವು , ಆಶ್ವಾಸನೆ ಮಾತುಗಳನ್ನೇ ನಂಬಿಕೆಯಾಗಿಟ್ಟುಕೊಂಡು ,
ಟೈಟಾನಿಕ್ ಅಂಥ ಬೃಹತ್ ಹಡಗೇನೋ ಅನ್ನುವಂತೆ ತನ್ನ ಪಾಲುಮಾಡಿಕೊಂಡಂತ ಅಟ್ಲಾಂಟಿಕ್ ಮಹಾಸಾಗರದ ನಿಲ್ದಾಣವಿಲ್ಲದ 3,000 ಮೈಲಿಯ ಒಂಟಿ ಪಯಣವನ್ನ ಮನೆಯ ಏಕೈಕ ಕುಡಿ ಮಾಡುವೆನೆಂದಾಗ, ಅತೀ ಕಾಳಜಿಯಿಂದ ಕಾಪಾಡಿದ ಏಕೈಕ ಮನೆಯ ದೀಪ ಇಂಥ ಸಾಹಸಕ್ಕೆ ಕೈ ಹಾಕುವೆನೆಂದಾಗ,
ಹೆತ್ತವರ ಮನಸ್ಸಿನ ತಳಮಳ , ಆತಂಕ , ಮುಂಬರುವ ಅಪಾಯಗಳ ಬಗೆಗಿನ ಮನಸ್ಸ್ಸಿನ ಮಂಥನದ ವಿಶ್ಲೇಷಣೆ ಅತೀ ನೈಜವಾಗಿದ್ದು ಮತ್ತು ವಾಸ್ತವಿಕವಾಗಿದ್ದು. ಅಸ್ತಿತ್ವ ಕಳೆದುಕೊಳ್ಳುವ ಭಯವಿದ್ದರೂ ಸಾಗರ ಸೇರಿ ಸಾಗರವೇ ತಾನಾಗುವ ನದಿಯ ಉಪಮೇಯವನ್ನಿಟ್ಟುಕೊಂಡು ಗಿಬ್ರಾನ್ ಬರೆದ 'ಫಿಯರ್' (Fear) ಕವಿತೆಯ ವಿಸ್ತಾರವಾದ ರೂಪಕದ ಪ್ರಸ್ತಾವನೆ, ಈ ಸಾಹಸ ಸಾಧನೆ ಅವರ ಕುಟುಂಬದ ಮೇಲೆ ಮೂಡಿಸಿದ ಭಯದ ಛಾಯೆಯನ್ನ ಮತ್ತು ಅದನ್ನ ಮೀರಿ ಹೊರಬಂದ ಬಗೆಯನ್ನ ಬಿಂಬಿಸುತ್ತದೆ.
ಪ್ರಸಾದವರು ತಮ್ಮ ಬರವಣಿಗೆಯಿಂದ ಓದುಗನನ್ನು ಅವರ ಮನದಲ್ಲಾದ ಅಲ್ಲೋಲ ಕಲ್ಲೋಲಗಳಲ್ಲಿ ಒಂದಾಗಿಸಿದ್ದಾರೆ .ಅವರ ಬರವಣಿಗೆಯ ಶೈಲಿ, ಓದುಗನೂ ಅನನ್ಯಳ ಅನನ್ಯ ಪಯಣದಲ್ಲಿ ಅವರ ಅಪ್ಪನ ಜೊತೆಯಲ್ಲಿಯೇ ಇದ್ದೆನೇನೋ ಅನ್ನುವಷ್ಟು ಹತ್ತಿರ ಮಾಡುವಂತಿದೆ .

ಇತ್ತ ಅಜ್ಜ ಜೆ ಎಸ್ಎಸ್ ಅವರ ಸುಂದರ ಪದಗಳಲ್ಲಿ ವರ್ಣಿತವಾದ
‘ಸುನೀಲ , ವಿಸ್ತರ , ತರಂಗ ಶೋಭಿತ ಗಂಭೀರಾಂಬುಧಿಯಲ್ಲಿ’ ಅಂತರಂಗದ ಅನ್ವೇಷಣೆ ಮತ್ತು ನಿಶ್ಶಬ್ದದ ನಡುವಿನ ಆಧ್ಯಾತ್ಮ ಪಯಣ ಮಾಡುವೆನೆನ್ನುವ ಮಗಳ ಮಾನಸಿಕ ಪ್ರಬುದ್ಧತೆ, ಅದಕ್ಕಾಗಿ ಸತತ ಮೂರು ವರ್ಷಗಳ ಕಾಲ ದೇಹ ಮತ್ತು ಮನಸ್ಸನ್ನ ಯಾವುದೇ ಸ್ವಂತವಾದ ಅಪೇಕ್ಷೆಯಿಲ್ಲದೆ ದುಡಿಸಿ ದಣಿಸಿ ತಯಾರಿ ನಡೆಸುವ ಮಗಳ ಹರಸಾಹಸ,
ಭಾರತೀಯರ, ಕನ್ನಡಿಗರ, ವರ್ಣೀಯ ಜನಾಂಗದ ನೀರಿಕ್ಷೆಯನ್ನ ಹೊತ್ತು , ಹಲವಾರು ಪಾಶ್ಚಿಮಾತ್ಯ ದೇಶಗಳ ಭಾವುಟಗಳ ನಡುವೆ ಕೇಸರಿ ಬಿಳಿ ಹಸಿರು ಬಣ್ಣಗಳ ಪತಾಕೆ ಹೊತ್ತು ಸಾಗರದ ಒಂಟಿ ಪಯಣಕ್ಕೆ ಮಗಳು ಹೆಜ್ಜೆಯಿಟ್ಟು ಮುನ್ನಡೆದಾಗ, ಮಗಳು ಬೆಳೆದ ರೀತಿಯ ಬಗ್ಗೆ ಅಪ್ಪನ ಹೃದಯ ತುಂಬಿ ಬರುವ ಹೊಗಳಿಕೆಯ ಮಾತುಗಳು, ಎಲ್ಲೂ ಉತ್ಪ್ರೇಕ್ಷೆಯಾಗದೆ, ಕೆಲವೊಂದು ಬಾರಿ ಬರಹಗಾರ ಸ್ವಲ್ಪ ಉದಾರತೆಯನ್ನ ತೋರಬಹುದಿತ್ತೇನೋ ಅನ್ನಿಸುವಂತಿದೆ .

ಅಪ್ಪನ ಗಂಡುಮನಸ್ಸನ್ನ ಕರಗಿಸಿ ಗಳಗಳನೆ ಅಳಿಸಿ, ಅಪಾರ ಸಮುದ್ರದ ಅಂಚಿನಲ್ಲಿ ಹುಟ್ಟುದೋಣಿಯ ಜೊತೆಗೆ ಒಂದು ಸಣ್ಣ ಚುಕ್ಕಿಯಂತೆ ಮರೆಯಾಗಿ,
ಮೊಬೈಲ್ ಕಳೆದರೇನು, ಡಿ ಸಲೈನೇಷನ್ ಯಂತ್ರ ಮುರಿದರೇನು , ದೋಣಿಯ ಚುಕ್ಕಾಣಿ ನೀರಲ್ಲಿ ಮುರಿದರೇನು, ಕೊನೆಗೆ ಹುಟ್ಟುದೋಣಿಯ ಹುಟ್ಟೇ ಮುರಿದರೇನು, ನನ್ನ ಪಯಣ, ಗುರಿ ಮುಟ್ಟದೆ ನಿಲ್ಲದೆಂದು ಪರಿಹಾರ ಹುಡುಕುತ್ತ ಸಾಗುವ ಅನನ್ಯಳ ಸಾಹಸ ಪಯಣ ಹೃದಯ ಸ್ತಂಭನಳಿಸುವಂತದು. ಅದನ್ನ ಓದುಗರ ಮನಕ್ಕೆ ಅತಿಯಾಗದೆ, ತೀರಾ ಮಿತವಾಗದೆ, ನಿಜಕ್ಕೆ ಹತ್ತಿರವಾಗಿ ವಿವರಣೆ ಮಾಡಿರುವ ಲೇಖಕರ ಪರಿ ಮೆಚ್ಚುಗೆಯಾಗುವಂತದ್ದು.

ಸಾಹಸ ಪ್ರಯಾಣ ಕೊನೆಯ ಹಂತ ತಲುಪುವ ಸುದ್ದಿ ತಿಳಿದು ಸ್ವಾಗತ ಮಾಡಲು ಅಂಟಿಗಕ್ಕೆ ಪ್ರಯಾಣ ಬೆಳೆಸಿ ಎತ್ತರದ ವಿಮಾನದಲ್ಲಿ ಕುಳಿತು ಮಹಾಸಾಗರದಲ್ಲಿ ಮಗಳ ಚುಕ್ಕಿ ದೋಣಿಯನ್ನ ಹುಡುಕುವ ಅಪ್ಪ ಅಮ್ಮನ ಮುಗ್ದತೆ ತುಂಬಿದ ಕಾತುರತೆ ಓದುಗನಲ್ಲಿ ಕಿರುನಗೆಯನ್ನ ಹೊರಹಾಕುವಂತಿದೆ.

ಚುಕ್ಕಿಯಂತೆ ಮರೆಯಾಗಿ ಅನನ್ಯ ಸಮುದ್ರ ಸಾಹಸವನ್ನು ಮುಗಿಸಿ, ಮಿನುಗುವ ನಕ್ಷತ್ರದಂತೆ ಧರೆಗೆ ಮರಳಿ ತನ್ನ ಮೊದಲ ಹೆಜ್ಜೆ ಇಟ್ಟಾಗ ಅಪ್ಪನ ಮನಸ್ಸಿನಲ್ಲಾಗುವ ಅಗಾಧ ನಿರಾಳ ಭಾವ, ಸಂಭ್ರಮ ಮತ್ತು ಹೆಮ್ಮೆ ಮನಮುಟ್ಟುವಂತಿದೆ. ಸಾಹಸ ಮತ್ತು ಸಾಹಸದ ತದನಂತರದ ಘಟನೆಗಳ ಭಿತ್ತಿಚಿತ್ರಣ ಆಯ್ಕೆ ಲೇಖಕರ ನಿಖರತೆಯನ್ನ ತಿಳಿಸುವಂತಿದೆ .

ಒಟ್ಟಾರೆ ಪುಸ್ತಕ ಓದುಗನಿಗೆ ತಾನು ಸಾಹಸಗಾಥೆಯ ಭಾಗವೇನೋ ಎನ್ನಿಸಿ ಸಾರ್ಥಕತೆಯ ಭಾವ ಮೂಡಿಸುವಂತಿದೆ.
ಆದರೆ ನನಗಂತೂ ಅರ್ಥಗರ್ಭಿತ ಹೆಸರನ್ನ ನಾಮಕರಣ ಮಾಡಿ, ಸಂಪೂರ್ಣ ವೈಯಕ್ತಿಕ ಸ್ವಾತಂತ್ರ್ಯ ನೀಡಿ, ಮಗಳ ಕನಸನ್ನ ಇಚ್ಛೆಯ ಜೊತೆಗೆ ಆಯ್ಕೆಯನ್ನಾಗಿಸಿಕೊಂಡ ತಂದೆ ತಾಯಿಯನ್ನ ಪಡೆದ ಅನನ್ಯಳ ಬಗ್ಗೆ ತುಸು ಹೊಟ್ಟೆಕಿಚ್ಚು ಮೂಡಿದ್ದಂತೂ ಸತ್ಯ.

ಡಾ ರಾಜಶ್ರೀ ಪಾಟೀಲ, ಲೆಸ್ಟರ್, ಯು ಕೆ