ನಮ್ಮ ಆಹಾರ ಮತ್ತು ಆರೋಗ್ಯ – ಬಾಲ್ಯದ ನೆನಪುಗಳು ಮತ್ತು ಈಗಿನ ಜ್ಞಾನ: ರವಿರಾಜ್ ಉಪ್ಪೂರ್ ಭಟ್.

"You can’t just eat good food. You’ve got to talk about it too. And you’ve got to talk about it to somebody who understands that kind of food." - Kurt Vonnegut

"Most of us have fond memories of food from our childhood. Whether it was our mom's homemade lasagna or a memorable chocolate birthday cake, food has a way of transporting us back to the past." - Homaro Cantu.

ನಮಸ್ಕಾರ ಅನಿವಾಸಿ ಬಳಗಕ್ಕೆ.
ಮೇಲಿನ ಎರಡೂ ಹೇಳಿಕೆಗಳನ್ನು ಒಪ್ಪದೇ ಇರಲು ಸಾಧ್ಯವಿಲ್ಲ. ಊಟ ಎಲ್ಲಿಯದಾದರೇನು, ಅಮ್ಮನ ಕೈಯಡಿಗೆಯ ರುಚಿ ಬೇರೆಡೆ ಬಂದೀತೇ? ಇದನ್ನೇ ಮಿತ್ರ ರವಿರಾಜ ಉಪ್ಪೂರ್ ಭಟ್ ಅವರ ಮಾತಿನಲ್ಲಿ ಕೇಳೋಣ. ಎಂದಿನಂತೆ ಓದಿ, ನಿಮ್ಮ ಅನಿಸಿಕೆ, ಪ್ರತಿಕ್ರಿಯೆ ಹಂಚಿಕೊಳ್ಳಿ. - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).
**********************************************************
ಊಟ ಬಲ್ಲವನಿಗೆ ರೋಗವಿಲ್ಲ; ಮಾತು ಬಲ್ಲವನಿಗೆ ಜಗಳವಿಲ್ಲ ...

ಎಷ್ಟು ಚೆನ್ನಾಗಿ ಈ ಒಂದು ಗಾದೆ ಮಾತು ನಮಗೆ ಹೇಗೆ ಆರೋಗ್ಯದ ಬಗ್ಗೆ ಒಂದು ಕಿವಿಮಾತು ಹೇಳಿದೆ ನೋಡಿ. ನಮ್ಮ ಈಗಿನ ಹೊಸ ಪೀಳಿಗೆಯವರಿಗೆ ಇದರ ಬಗ್ಗೆ ಅರಿವು ತುಂಬಾ ಇದ್ದಂತಿಲ್ಲ. ಇದೇನೇ ಇದ್ದ್ರೂ ನಮ್ಮ ಪೀಳಿಗೆಯವರ ಆಹಾರ ಪದ್ಧತಿ ಹೇಗಿತ್ತೆಂದು ನೋಡೋಣ.

ನಾನು ಮೂಲತಃ ಉಡುಪಿಯವನು ಮಾರಾಯ್ರೆ. ಉಡುಪಿಯವ್ರು ಅಂದ್ರೆ ನಿಮಗೆಲ್ಲ ಮೊದ್ಲು ನೆನಪಾಗುದೇ ಹೋಟೆಲ್ ಅಂತ ನಂಗೆ ಗೊತ್ತುಂಟು ಮಾರಾಯ್ರೆ ... ಅದೇನೇ ಇದ್ದ್ರೂ ನಂಗೂ ಉಡುಪಿ ಹೋಟೆಲ್ಗೂ ಯಂತ ಕನೆಕ್ಷನ್ ಇಲ್ಲ ಮಾರಾಯ್ರೆ ....

ನಾನು ಹುಟ್ಟಿ ಬೆಳೆದಿದ್ದೆಲ್ಲಾ ಉಡುಪಿಯ ಒಂದು ಸಣ್ಣ ಹಳ್ಳಿಯಲ್ಲಿ. ನಮ್ಮ ಮನೆ ಒಂದು ಹಳೆ (ಸಾಧಾರಣ 200 ವರ್ಷ ಹಳೆಯ ಮನೆ) ಬಂಗ್ಲೊ. ಅದ್ರಲ್ಲಿ ನನ್ನ ಅಜ್ಜ, ಅಪ್ಪ, ಅಮ್ಮ, ನನ್ನ ಅಣ್ಣ, ತಮ್ಮ, ನಾನು ಹಾಗೂ ನಮ್ಮ ಚಿಕ್ಕಪ್ಪ ಮತ್ತು ಅವರ ಕುಟುಂಬ ಇದ್ದೆವು. ನಮ್ಮನೆ ಎಲ್ಲರ ಊಟ ತಿಂಡಿಯ ವ್ಯವಸ್ಥೆ ಮಾಡುವುದು ನಮ್ಮಮ್ಮನೇ.

ನಂಗೆ ಇನ್ನೂ ಹಚ್ಚ ಹಸಿರಾಗಿಯೇ ಇದೆ ಆ ಹಳೆ ನೆನಪುಗಳು ... ಮನೆ ತುಂಬಾ ಜನ ... ಮಳೆಗಾಲದಲ್ಲಿ ನಟ್ಟಿಯ ಸಮಯ ಮನೆಯ ಕೆಲಸದಾಳುಗಳು, ನಟ್ಟಿ ನಡುವೆ ಹೆಂಗಸರೂ, ಹಾಗೂ ಹೂಟೆಗೆ ಕಟ್ಟುವ ಒಂದು ಜೊತೆ ಎತ್ತು ಹಾಗು ಕೋಣ ಮತ್ತೆ 3-4 ದನ ಎಮ್ಮೆಗಳು ಕರಾವಿಗೆ ಇರುತ್ತಿದ್ದವು. ಅಮ್ಮ ಹಾಗೂ ನಿತ್ಯದ ಕೆಲಸದಾಳು ಕೂಸ ಸುಮಾರಿಗೆ ಬೆಳಿಗ್ಗೆ 5 ಗಂಟೆಗೆಲ್ಲ ಎದ್ದು ಮನೆಯವರಿಗೆಲ್ಲ ಬೆಳಿಗ್ಗಿನ ಕೊಚ್ಚಿಗೆ ಅಕ್ಕಿ ಗಂಜಿ ಹಾಗೂ ಹಟ್ಟಿಯ ಗಂಟಿಗಳಿಗೆಲ್ಲ 'ಬಾಯಿರು' (ಗಂಟಿಗಳಿಗೆ ಹಾಕುವ ಕಲಗಚ್ಚು ಮಿಶ್ರಿತ ಅನ್ನ ಹಾಗೂ ತೌಡು) ತಯಾರು ಮಾಡುವರು. ನಾವು ಶಾಲೆಗೆ ಹೋಗುವ ಮಕ್ಕಳೆಲ್ಲ 6- 6:30ರ ಸುಮಾರಿಗೆ ಎದ್ದು ಬಚ್ಚಲು ಒಲೆಯಲ್ಲಿ ಬಾಯಿರು ಬಿಸಿಮಾಡುವ ಒಲೆಯ ಎದುರು ಕೂತು ಸ್ವಲ್ಪ ಹೊತ್ತು ಚಳಿ ಕಾಸಿ ಕೂಸನೊಂದಿಗೆ (ಮನೆ ಕೆಲಸದವನು) ಹರಟೆ ಹೊಡೆಯುವುದು ದಿನನಿತ್ಯದ ಪದ್ಧತಿ. ನಮ್ಮೊಟ್ಟಿಗೆ ಮನೆಯ 'ರಾಜು' ನಾಯಿ ಕೂಡ ಪಕ್ಕದಲ್ಲೇ ಕೂತಿರುವುದು ಒಂದು ವಾಡಿಕೆ. ಹಾಗೆ ಚಳಿ ಕಾಸುವಾಗ ಒಲೆಯೊಳಗೆ ಹುಣಸೆ ಬೀಜವನ್ನೋ, ಹಲಸಿನ ಹಣ್ಣಿನ ಒಣಗಿದ ಬೀಜವನ್ನೋ ಕೆಂಪಿನ ಕೆಂಡದೊಳಗೆ ಹಾಕಿ ಹದನಾಗಿ ಸುಡುವುದು ನಾವು ಶಾಲೆ ಹುಡುಗರ ಒಂದು 'ಹೋಮ್ ವರ್ಕ್'. ಹೀಗೆ ಹದನಾಗಿಸಿದ ಹುಣಸೆ ಬೀಜ ಮತ್ತೆ ದಾಣಿ (ಹಲಸಿನ ಬೀಜಕ್ಕೆ ನಮ್ಕಡೆ ದಾಣಿ ಅಂತಲೂ ಹೇಳುವುದು ಒಂದು ವಾಡಿಕೆ ... ಬಹುಶಃ ಆಡುಭಾಷೆ ತುಳುವಿನಿಂದ ಬಂದದ್ದಿರಬೇಕು) ಎರಡೂ ಸರಿಯಾಗಿ ಪಾಲಾಗಿ ನಮ್ಮ ಕಂಪಾಸ್ ಪೆಟ್ಟಿಗೆಯೊಳಗೋ, ಇಲ್ಲ ಕಾಲಿ ಬೆಂಕಿಪೆಟ್ಟಿಗೆಯೊಳಗೋ , ಇಲ್ಲ ಶಾಲೆಯ ಚೀಲದೊಳಗೋ ಹೋಗಿ ಸೇರುತ್ತಿತ್ತು. ಇದೇ ನಮ್ಮ ಶಾಲೆಯ ವಿರಾಮದ ಸಮಯ್ದ 'tuck time ಫುಡ್'. ನೆನೆಸಿದರೆ ಈಗಲೂ ನನ್ನ ಬಾಯಲ್ಲಿ ನೀರೂರುತ್ತದೆ.

ಬೆಳಿಗ್ಗಿನ ನಿತ್ಯಕರ್ಮಗಳನ್ನೆಲ್ಲಾ ಕ್ಲಪ್ತವಾಗಿ ಮುಗಿಸಿ ಕುಚ್ಚಲಕ್ಕಿ ಗಂಜಿ ಊಟ ಮಾಡಬೇಕಿತ್ತು. ಗಂಜಿಯೊಂದಿಗೆ ತುಪ್ಪ, ಚಿಟಿಕೆ ಉಪ್ಪು ಹಾಗೂ ನೆಂಜಿಕೊಳ್ಳಲು ಉಪ್ಪಿನಕಾಯಿಯೋ, ಕೊತ್ತಂಬರಿಸೊಪ್ಪಿನ ಚಟ್ನಿಯೋ, ಮಾವಿನಕಾಯಿಯ ತೊಕ್ಕು ಇಲ್ಲ ಮಜ್ಜಿಗೆ ಮೆಣಸು ಅಥವಾ ಹಿಂದಿನ ದಿನದ ಹುಳಿ (ನಮ್ ಕಡೆ ತೆಂಗಿನಕಾಯಿ ರುಬ್ಬಿ ಮಸಾಲೆ ಹಾಕಿ ಮಾಡಿದ 'ಸಾಂಬಾರು'). ನನ್ನ ಅಣ್ಣ ಹಾಗೂ ಅಪ್ಪನಿಗೆ ಗಂಜಿ ಊಟ ಅಂದ್ರೆ ಪಂಚ ಪ್ರಾಣ. ನನಗೆ ಹಾಗು ನನ್ನ ತಮ್ಮನಿಗೆ ಗಂಜಿ ಊಟ ಅಂದ್ರೆ ಅಷ್ಟಕ್ಕಷ್ಟೇ. ನಾನು ಅರ್ಧ ಗಂಜಿ ತಿಂದು ಉಳಿದರ್ಧ ನನ್ನ ಪ್ರೀತಿಯ ರಾಜು ನಾಯಿಯ ಕೊರಿಕೆಗೆ (ನಾಯಿಗೆ ತಿನ್ನಲು ಹಾಕುವ ಕಲ್ಲಿನ ದಪ್ಪ 'ತಟ್ಟೆ') ಹಾಕುತ್ತಿದ್ದೆ. ಅದಕ್ಕೆ ದಿನಾ ಅಮ್ಮನಿಂದ ಬೈಸಿಕೊಳ್ಳಬೇಕಿತ್ತು. ಅಜ್ಜನಂತೂ ನನ್ನ ಗಂಜಿ ಊಟದ ಸ್ಪೀಡ್ ನೋಡಿ ಯಾವಾಗಲೂ ಹೇಳುವವರು “ಇಷ್ಟು ಮೆಲ್ಲ ತಿಂದ್ರೆ ಹ್ಯಾಂಗೆ ತಿಂದಿದ್ದು ಮೈಗೆ ಹಿಡಿತ್ ... ಆಡು ಮೆಂದ ಹಾಗೆ ತಿನ್ನಬೇಕಂತೆ ... ಆನೆ ಮಿಂದಹಾಗೆ ಮೀಯಬೇಕಂತೆ (ಸ್ನಾನ ಮಾಡಬೇಕಂತೆ)” ಅಂತ.

ಆ ಗಂಜಿ ಊಟಕ್ಕೆ ಮುಕ್ತಿ ಸಿಕ್ಕಿದ್ದು ನಾ ಮೆಡಿಕಲ್ ಮಾಡಲು ಬಳ್ಳಾರಿಗೆ ಹೋದಮೇಲೆಯೇ. ಈಗಿನ ನನ್ನ ಮಕ್ಕಳಿಗಂತೂ ಗಂಜಿ ಊಟದ ಮಜವೇ ಗೊತ್ತಿಲ್ಲ..... ಹಾಗೆಯೇ ಸುಟ್ಟ ಹುಣಸೇ ಬೀಜ, ಹದವಾಗಿ ಸುಟ್ಟ ದಾಣಿ, ಉಪ್ಪು ಕಾರಪುಡಿ ಹಾಕಿದ ಹುಳಿ ಹಪ್ಪಟೆ ಮಾವಿನ ಕಾಯಿ - ಇದ್ಯಾವುದೂ ಗೊತ್ತೇ ಇಲ್ಲ! ಅದ್ರ ಮಜವೇ ಬೇರೆ. ನಾವು ಮಕ್ಕಳಿಗೆಲ್ಲ ಬೆಳಿಗ್ಗೆ ಗಂಜಿ ಕಡ್ಡಾಯ, ಆದ್ರೆ ಅಜ್ಜನಿಗೆ ಬೆಳಿಗ್ಗೆ ತಿಂಡಿ ಆಗಬೇಕಿತ್ತು. ಅಜ್ಜನಿಗೆ ಗೋಧಿಯಿಂದ ಮಾಡಿದ ಏನಾದ್ರೂ ತಿಂಡಿ ಅಂದ್ರೆ ಶ್ರೇಷ್ಠ ..... ಗೋಧಿ ಹಿಟ್ಟಿನ ತೆಳ್ಳಗಿನ ನೀರು ದೋಸೆ ಅಥವಾ ರವೆ ಉಪ್ಪಿಟ್ಟು ಹೀಗೆ ಏನಾದ್ರೂ ತಿಂಡಿ ಆಗಲೇ ಬೇಕು. ಹೀಗೆ ಅಜ್ಜನಿಗೆ ಮಾಡಿದ ತಿಂಡಿ ಸ್ವಲ್ಪ ಏನಾದ್ರೂ ಉಳಿದ್ರೆ ನಂಗೆ ಗಂಜಿಯೊಟ್ಟಿಗೆ ಅಮ್ಮ ಸ್ವಲ್ಪ ಕೊಡ್ತಿದ್ದ್ರು... ಅದೂ ಅಜ್ಜ ಆಚೆ ಕಡೆ ಹೋದ ಮೇಲೆ. ಅಜ್ಜ ಏನಾದ್ರೂ ನೋಡಿದ್ರೆ ನನ್ನ ಅಮ್ಮನ್ನ ಬೈಯ್ಯುವರು .... ಮಕ್ಕಳು ಬೆಳಿಗ್ಗೆ ತಿಂಡಿ ತಿಂದ್ರೆ ಹೊಟ್ಟೆ ಹಾಳಾಗ್ತದೆ ಅಂತ!

ಸಾಯಂಕಾಲ ಶಾಲೆ ಮುಗಿಸಿ ಬರುವಾಗ ದಾರಿಯಲ್ಲಿ ಮಾವಿನಕಾಯಿಗೆ ಗುರಿ ಇಟ್ಟು ಕಲ್ಲು ಹೊಡೆದುರುಳಿಸಿ ಅದರ ಸೊನೆ ಅಲ್ಲೇ ಕೆಳಗೆ ಹುಲ್ಲಿನಲ್ಲಿ ಒರೆಸಿ ತಿಂದರೆ ಅದ್ರ ಹುಳಿ ಹಪ್ಪಟೆ ರುಚಿಗೆ ಒಂದು ಸರ್ತಿ ಮೈಯೆಲ್ಲಾ ಜುಂ ಅನ್ನುವ ಮಜಾನೇ ಬೇರೆ. ಈಗೆಲ್ಲಿದೆ ಅದರ ಸುಖ ??...

ಮಾವಿನ ಕಾಯಿಯ ಸೀಸನ್ ಅಲ್ಲದೆ ಇದ್ರೆ ಬೇಲಿಯಲ್ಲಿರುವ ಕರಂಡೆ ಕಾಯಿ ಇಲ್ಲ ಹಣ್ಣು, ಕಿಸ್ಕಾರ್ ಹಣ್ಣು, ನೇರಳೆ ಹಣ್ಣು, ಜಂಗಮನ ಹಣ್ಣು, ಪೇರಳೆ ಹಣ್ಣು, ರೆಂಜೆ ಹಣ್ಣು ...ಹೀಗೆ ಏನಾದ್ರೂ ಒಂದು ಸಿಕ್ಕೇ ಸಿಗುತ್ತದೆ.

ಇನ್ನೂ ಶನಿವಾರ ಮಧ್ಯಾಹ್ನದ ಮೇಲೆ ರಜೆ.
ಹಾಗೆ ಭಾನುವಾರ ನಮ್ಮ ಮನೆಯಲ್ಲಿ ಗಂಜಿಗೂ ರಜೆ. ಸಾದಾರಣವಾಗಿ ಆವತ್ತು ಇಡ್ಲಿ ಅಥವಾ ದೋಸೆ. ಹಾಗಾಗಿ ನಂಗಂತೂ ಭಾನುವಾರ ಅಂದ್ರೆ ಇಷ್ಟ. ತಿಂಡಿ ತಿಂದು ಟಿವಿಯಲ್ಲಿ ಹೀಮ್ಯಾನ್, Tom & Jerry ನೋಡಿ ಮುಗಿಯುವಷ್ಟರಲ್ಲಿ ರಾಮಾಯಣ ಇಲ್ಲ ಮಹಾಭಾರತ ಸೀರಿಯಲ್ ಶುರುವಾಗುವುದು.

ಹೀಗೆ ಮುಂದುವರಿದು ಮೆಡಿಕಲ್ ಕಾಲೇಜ್ ಸೇರಿದಮೇಲೆ ಈ ದಿನಚರಿಗೆ ಒಂದು ಮುಕ್ತಾಯ ಹಾಡಿದೆವು. ಆಮೇಲೆ ಬಳ್ಳಾರಿಯಲ್ಲಿ ಹಾಸ್ಟೆಲ್ ದಿನಚರಿ ಆರಂಭ. ಹಾಸ್ಟೆಲ್ ಅಂದಮೇಲೆ ನಿಮಗೆಲ್ಲಾ ಗೊತ್ತೇ ಇದೆಯಲ್ಲ .... ಬೆಳಿಗ್ಗಿನ ತಿಂಡಿಗೆ ಚೌ ಚೌ ಬಾತ್, ಕಾಂಕ್ರೀಟ್ (ಉಪ್ಪಿಟ್ಟಿಗೆ ಹಾಸ್ಟೆಲ್ ನಲ್ಲಿ ನಾವಿಟ್ಟಿದ್ದ ಹೆಸರು), ಇಡ್ಲಿ, ದೋಸೆ, ಬ್ರೆಡ್, ಚಿತ್ರಾನ್ನ, ವಾಂಗೀಬಾತ್ .... ಹೀಗೆ ನಾನಾ ವಿಧದ ಟಿಫನ್ ಗಳು. ಅದರಲ್ಲೂ ಬಳ್ಳಾರಿಯ ಸ್ಪೆಷಲ್ ತಿಂಡಿ ... ಮೆಣಸಿನ ಕಾಯಿ ಬಜ್ಜಿ (ಪುಗ್ಗಿ) ಹಾಗೂ ಮಂಡಕ್ಕಿ (ಮಂಡಾಳು) ಒಗ್ಗರಣೆಯನ್ನು ಹೇಳದಿದ್ದರೆ ಹೇಗೆ? ಇವತ್ತು ಬೆಳಿಗ್ಗೆ ಏನಾದ್ರೂ ಇದನ್ನು ತಿಂದ್ರೆ .... ಅದ್ರ ಪರಿಣಾಮ ಮಾರನೆಯ ದಿನ ಬೆಳಿಗ್ಗೆ ಬಹಿರ್ದೆಸೆಗೆ ಹೋದಾಗಲೇ ಗೊತ್ತಾಗುವುದು!

ನನ್ನ ಇಷ್ಟದ ತಿಂಡಿ ವಾಂಗೀಬಾತ್ ಆಗಿತ್ತು. ವಾಂಗಿಬಾತ್ ಮಾಡಿದ ದಿನ ನನ್ನ ತಟ್ಟೆಯ್ಲಲಿ ಒಂದು ಸಣ್ಣ ಗುಡ್ಡೆಯಾಕಾರದಲ್ಲಿ ವಾಂಗೀಬಾತ್ ಇರುತ್ತಿತ್ತು. ಇದರಿಂದಾಗಿ ನನ್ನ ಫ್ರೆಂಡ್ಸ್ ಎಲ್ಲ ನನ್ನನ್ನು ವಾಂಗಿಪ್ರಿಯ ಅಂತಲೇ ಕರೆಯಲು ಶುರು ಮಾಡಿದ್ರು.
ಹೀಗೆ ಮುಂದುವರಿದು ಒಂದು ತಿಂಗಳಿಗೆ ನಾನೂ ಕೂಡ ಮೆಸ್ಸ್ prefect ಆದೆ. ಆ ತಿಂಗಳು ನನಗೆ ಇಷ್ಟವಾದ ತಿಂಡಿಗಳನ್ನು ಹೇಳಿ ಮಾಡಿಸಿಕೊಂಡು ತಿಂದಿದ್ದೇ ತಿಂದಿದ್ದು. ಒಮ್ಮೆ ಭಾನುವಾರ, ನನ್ನ ಇಬ್ಬರು ಗೆಳೆಯರ ಜೊತೆ ದೋಸೆ ತಿನ್ನುವ ಸ್ಪರ್ಧೆ ನಡೆಯಿತು. ಆವತ್ತು ಮಸಾಲೆ ದೋಸೆ ಟಿಫನ್. ನನ್ನ ಇಬ್ಬರು ಆಪ್ತ ಗೆಳೆಯರು ಒಬ್ಬೊಬ್ಬರೂ ಹತ್ತೋ ಹನ್ನೆರಡೋ ಮಸಾಲೆ ದೋಸೆ ಭುಂಜಿಸಿದರು ... ಕೊನೆಗೆ ನನ್ನ ಸರಣಿ .... ಲೆಕ್ಕ ಮಾಡಿ ನಾನು ಅಂದು 16 ಮಸಾಲೆ ದೋಸೆ ಗುಳುಂಮಾಯಿಸಿದೆ.
ಹಾಗೇ ಇನ್ನೊಂದು ಸಲ ಯಾವುದೋ ಒಂದು ಹಾಸ್ಟೆಲ್ ಡೇ celeberation ದಿನದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ 2 ನಿಮಿಷದಲ್ಲಿ 21 ಇಡ್ಲಿ ತಿಂದು 2ನೇ ಸ್ಥಾನ ಗಿಟ್ಟಿಸಿಕೊಂಡವ ನಾನು.
ಈಗ ನೋಡಿದ್ರೆ ಅದೆಲ್ಲ ಗತ ವೈಭವ ಅನ್ನಿಸುತ್ತೆ 😁
ಎಡಗಡೆ ಮೇಲಿನಿಂದ, ಗಡಿಯಾರದ ಚಲನೆಯಂತೆ: ೧. ಕುಚ್ಚಲು ಅಕ್ಕಿ ಗಂಜಿ ಉಪ್ಪಿನ ಕಾಯಿ, ಮಜ್ಜಿಗೆ ಮೆಣಸು, ಚಟ್ನಿ, ಹಲಸಿನ ಹಪ್ಪಳ; ೨. ಹುಳಿ ಹಪ್ಪಟೆ ಮಾವಿನ ಕಾಯಿ ಉಪ್ಪು ಖಾರ; ೩. ಮಂಡಕ್ಕಿ ಒಗ್ಗರಣೆ ಹಾಗೂ ಮೆಣಸಿನ ಕಾಯಿ ಬಜ್ಜಿ – ಬಳ್ಳಾರಿ ಮೆಸ್ಸ್ ಸ್ಪೆಷಲ್; ೪. ಉಪ್ಪಿಟ್ಟು – ಶಿರಾದ ಚೌ ಚೌ ಭಾತ್.
(ಎಲ್ಲಾ ಚಿತ್ರಗಳು ಲೇಖಕರು ಗೂಗಲ್ ನಿಂದ ಪಡೆದದ್ದು.)
ಫಾಸ್ಟ್ ಫಾರ್ವರ್ಡ್ .... ಕೋವಿಡ್ ನಂತರದ ದಿನಗಳು ...ಈಗಿನ ಆಹಾರ ಪದ್ದತಿಯ ಬಗ್ಗೆ ಒಂದು ಇಣುಕು ನೋಟ ಹಾಕೋಣ -
ಇತ್ತೀಚಿನ ದಿನಗಳಲ್ಲಿ ನಮ್ಮ ಊಟ ತಿಂಡಿಗಳಲ್ಲೆಲ್ಲಾ ಪ್ರೋಸೆಸ್ಸ್ಡ್ ಫುಡ್ ಹಾಗೂ ಫಾಸ್ಟ್ ಫುಡ್ ಗಳದ್ದೇ ಕಾರುಬಾರು .....
ಬರಬರುತ್ತಾ ನಮ್ಮ ದೇಹಶ್ರಮ ಕೂಡ ಕಡಿಮೆ ಆಗುತ್ತಾ ಬರುತ್ತಿದೆ! ತಿಂದ ಆಹಾರದ ಪಚನಕ್ರಿಯೆ ಹಾಗು ಮೈಗೆ ಹತ್ತಲು ಸಮತೂಕದ ಆಹಾರ ಹಾಗೂ ಸಾಧಾರಣ ಮಟ್ಟದ ದೇಹಶ್ರಮ ಕೂಡಾ ಅಗತ್ಯ
ನಮ್ಮ ಆದುನಿಕ ಸರ್ವಜ್ಞ ಡಿವಿಜಿ ಅವರು ಹೇಳಿದಂತೆ -
ಎಷ್ಟು ನೀನುಂಡರೇಂ ಪುಷ್ಟಿ ಮೈಗಾಗುವುದು ।
ಹೊಟ್ಟೆ ಜೀರ್ಣಿಸುವಷ್ಟೆ ಮಿಕ್ಕುದೆಲ್ಲ ಕಸ ।।
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು ।
ಮುಷ್ಠಿ ಪಿಷ್ಟವು ತಾನೆ ಮಂಕುತಿಮ್ಮ ।।

ನೀನು ಎಷ್ಟು ಆಹಾರವನ್ನು ತಿಂದರೂ, ಅದರಿಂದ ದೇಹಕ್ಕೆ ಪುಷ್ಟಿಸಿಗುವುದು, ನಿನ್ನ ದೇಹ ಜೀರ್ಣಿಸಿಕೊಳ್ಳುವಷ್ಟು ಮಾತ್ರ. ಅಧಿಕವಾಗಿ ತಿಂದದ್ದೆಲ್ಲ ಜೀರ್ಣವಾಗದೆ, ಮಲರೂಪದಲ್ಲಿ ಕಸವಾಗಿ ಹೊರಬರುತ್ತದೆ. ಎಷ್ಟು ಸಂಪತ್ತನ್ನು ಗಳಿಸಿದರೂ ಹಸಿವಾದಾಗ ನೀನು ಸೇವಿಸಲಾಗುವುದು ಕೇವಲ ಒಂದು ಮುಷ್ಠಿ ಅನ್ನ ತಾನೆ? ಎಂದು ಕೇಳುತ್ತಾ ನಮ್ಮ ಮಿತಿಗಳನ್ನು ಅರ್ಥ ಮಾಡಿಕೊಳ್ಳುವಂತೆ ನಮಗೆ ಸೂಚನೆಯನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದ ಮಾತಿನಲ್ಲಿ.

ಹಾಗಾಗಿ ಮಿತಿಯರಿಯಬೇಕು. ಮಿತಿಯಿಂದಿದ್ದರೆ ಬಾಳು ಹಿತ. ಇದು ಕೇವಲ ಆಹಾರಕ್ಕಷ್ಟೇ ಸೀಮಿತವಲ್ಲ. ಬದುಕಿನ ನಮ್ಮ ಎಲ್ಲ ಆಯಾಮಗಳಿಗೂ ಇದನ್ನು ಅನ್ವಯಿಸಿಕೊಳ್ಳಬೇಕು. ನಮ್ಮ ಕ್ಷಮತೆ ಮತ್ತು ಯೋಗ್ಯತೆಗನುಗುಣವಾಗಿ ಒಂದು ‘ಗೆರೆ’ ಎಳೆದುಕೊಳ್ಳಬೇಕು. ಆ ಮಿತಿಯ ವೃತ್ತದ ಪರಿಧಿಯಲ್ಲೇ ನಮ್ಮ ಕಾರ್ಯಕ್ಷೇತ್ರವಿರಬೇಕು. ನಮ್ಮ ಕ್ಷಮತೆಯನ್ನು ಹೆಚ್ಚಿಸಿಕೊಂಡ ಹಾಗೆ ಆ ವೃತ್ತದ ಪರಿಧಿಯೂ ಹೆಚ್ಚುತ್ತಾ ಹೋಗುತ್ತದೆ. ದೇಹವು ಆಹಾರದಲ್ಲಿನ ಸತ್ವವನ್ನು ಮಾತ್ರ ಸ್ವೀಕರಿಸಿ ಮಿಕ್ಕದ್ದನ್ನು ತ್ಯಜಿಸುವಹಾಗೆ, ನಾವು ಈ ಜಗತ್ತಿನಲ್ಲಿ ಸತ್ವವನ್ನು ಮಾತ್ರ ಹೀರಿಕೊಳ್ಳಬೇಕು.
ಮಿತವಾಗಿ ಉಂಡರೆ ಅಮಿತ ಸುಖದಲಿ ಹಿತವಾಗಿ ಬದುಕುವೆ.
ನಾವೆಲ್ಲ ನೆನಪಿನಲ್ಲಿ ಇಡಬೇಕಾದ್ದು:
* ಮಿತವಾಗಿ ತಿನ್ನುವುದು,
* ಸಮತೂಕದ ಆಹಾರವಿರಲಿ: 40-50% ಶರ್ಕರ ಪಿಷ್ಟ (carbohydrates), 20-30% - ಕೊಬ್ಬಿನ ಅಂಶ (fats), 10-30% ಪ್ರೊಟೀನ್, 10-20% - ನಾರಿನ ಅಂಶ (fibre).
* ಸಾಧ್ಯವಾದಷ್ಟೂ ಕಡಿಮೆ ಸಂಸ್ಕರಿಸಿದ ಆಹಾರದ (processed food) ಉಪಯೋಗ.
* ಸಂಸ್ಕರಿಸಿದ ಸಕ್ಕರೆಯನ್ನು ಸಾಧ್ಯವಾದಷ್ಟೂ ಕಡಿಮೆ ಉಪಯೋಗಿಸುವುದು.
* ಊಟಗಳ ಮದ್ಯೆ ಕುರುಕಲು ತಿಂಡಿಗಳನ್ನು (snacks) ತಿನ್ನುವುದನ್ನು ಸಾಧ್ಯವಾದಷ್ಟೂ ಕಡಿತಗೊಳಿಸುವುದು.
* ಊಟವಾದ ಮೇಲೆ 15-20 ನಿಮಿಷ ಮೆಲ್ಲಗೆ ನಡೆದಾಟ / ಅಡ್ಡಾಡುವುದನ್ನು ರೂಢಿಗೊಳಿಸಿಕೊಳ್ಳುವುದು, ಇಲ್ಲವೇ ಸಣ್ಣ ಪುಟ್ಟ ಮನೆ ಕೆಲಸ ಮಾಡುವುದು.
* ಕರಿದ ತಿಂಡಿಯನ್ನು ತಿನ್ನುವುದನ್ನು ಸಾಧ್ಯವಾದಷ್ಟೂ ಮಿತಗೊಳಿಸುವುದು.
* ಸಿಹಿ ತಿನ್ನಬೇಕೆನಿಸಿದರೆ ಕಾಲಿ ಹೊಟ್ಟೆಯಲ್ಲಿ ತಿನ್ನುವುದಕ್ಕಿಂತ ಊಟ ಆದ ಮೇಲೆ ತಿನ್ನುವುದು ಒಳ್ಳೆಯದು. ಸಿಹಿಯ ಜೊತೆ ಬಾದಾಮಿ ಇಲ್ಲ ಪಿಸ್ತಾ (ಯಾವುದೇ dry fruits / nuts ) ಬೆರಸಿ ತಿನ್ನುವುದು. ಇಲ್ಲ ಹೋಳಿಗೆ ತಿನ್ನುವುದಾದರೆ ಅದರ ಜೊತೆ ಸ್ವಲ್ಪ(ವೇ!) ತುಪ್ಪ ಸೇರಿಸಿ ತಿನ್ನುವುದು.

ಕೊನೆಯ ಕೊಸರು:
- ನಮ್ಮ ದೇಹದ ಆರೋಗ್ಯ (ಅಕ್ಷರಶಃ) ನಮ್ಮ ಕೈಯಲ್ಲಿ (ಅಥವಾ ಚಮಚೆಯಲ್ಲಿ) ಇದೆ ಹಾಗೂ ಬಹುತೇಕ ನಾವು ತಿನ್ನುವ ಆಹಾರವನ್ನು ಅವಲಂಬಿಸಿದೆ.
- ನೆನಪಿನಲ್ಲಿರಲಿ - ಊಟ ಬಲ್ಲವನಿಗೆ ರೋಗವಿಲ್ಲ.... ಮಾತು ಬಲ್ಲವನಿಗೆ ಜಗಳವಿಲ್ಲ!

ಡಾ. ರವಿರಾಜ್ ಉಪ್ಪೂರ್ ಭಟ್.
ಲ್ಯಾಂಕಾಸ್ಟರ್.

**********************************************************

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಅನಿವಾಸಿ ಬಂಧುಗಳಿಗೆ ನಮಸ್ಕಾರ. ಎರಡು ವಾರದಿಂದ ಭಾರತ  ಪ್ರವಾಸದಲ್ಲಿದ್ದೇನೆ. ಗೃಹಪ್ರವೇಶ, ಮದುವೆ ಸಮಾರಂಭಗಳನ್ನು ಅಟೆಂಡ್ ಮಾಡುತ್ತ, ಬಂಧು ಬಳಗ, ಸ್ನೇಹಿತರನ್ನು ಭೇಟಿಯಾಗುತ್ತ  ದೆಹಲಿ, ಮುಂಬಯಿ, ಪುಣೆ, ಧಾರವಾಡ ಎಂದೆಲ್ಲ ಸುತ್ತಾಡುತ್ತ ,  ದೆಹಲಿಯ ಚಳಿಗಾಲ  ಕಳೆದು  ಈಗಷ್ಟೇ ಆರಂಭವಾಗುತ್ತಿರುವ  ಎಳೆಯ ಬಿಸಿಲನ್ನೂ, ಮುಂಬಯಿಯ  ಆ humid ಶೆಕೆಯನ್ನೂ, ಪುಣೆಯ ಸಂಜೆ ಮುಂಜಾನೆಗಳ ಆಹ್ಲಾದಕರ ತಂಪು ಹವೆಯನ್ನೂ , ಧಾರವಾಡದ  ಬಿಸಿಲು ಮಳೆಗಳ  ಸಮ್ಮಿಶ್ರ ಹವಾಮಾನವನ್ನೂ, ಲಿಠ್ಠಿ ಛೌಕಾ, ದಾಲ್ ಮುರಾದಾಬಾದಿ, ಮಿಸಳ್ ಪಾವ್, ಭಾಕರ್ ವಡಿ, ಶ್ರೀಖಂಡ, ಗಿರಮಿಟ್, ಫೇಡೆಗಳನ್ನೂ  ಸಮಸಮವಾಗಿ ಆಸ್ವಾದಿಸುತ್ತ  ಜೊತೆಗೇ ಒಂದಷ್ಟು ನೆಗಡಿ, ಕೆಮ್ಮು ಎಂದು ಆರೋಗ್ಯ ಕೆಡಿಸಿಕೊಂಡು ಔಷಧಿ, ಗಳಿಗೆಯನ್ನೂ ಸೇವಿಸುತ್ತ ರಜಾದ ಮಜಾ ಸವಿಯುತ್ತಿದ್ದೇವೆ. ಹೀಗಾಗಿ ಈ ಸಲ ಅನಿವಾಸಿಯ ಓದಿಗೆ ಚಿಕ್ಕದಾದೊಂದು ವಸ್ತುವಿನ ಬಗ್ಗೆ ಒಂದು ಚಿಕ್ಕ ಲೇಖನ. ಒಪ್ಪಿಸಿಕೊಳ್ಳಿ.

~ ಸಂಪಾದಕಿ

ಸೇಫ್ಟಿ ಪಿನ್

ಕೆಲ ದಿನಗಳ ಹಿಂದೆ ಜಯಂತ ಕಾಯ್ಕಿಣಿಯವರ ‘ಅನಾರ್ಕಲಿಯ ಸೇಫ್ಟಿ ಪಿನ್’ ಓದುತ್ತಿರುವಾಗ ಈ ಸೇಫ್ಟಿ ಪಿನ್ ಗೂ, ಆ ಅನಾರ್ಕಲಿಗೂ ಅದೇನು ಸಂಬಂಧವಿರಬಹುದು ಎಂಬ ಗೊಂದಲದ ಭಾವ  ನನ್ನನ್ನು ಕಾಡಿತ್ತು. ಆಮೇಲೆ ಹೊಳೆದ ಸತ್ಯವೇನೆಂದರೆ ಅನಾರ್ಕಲಿಯೋ, ಚಂಪಾಕಲಿಯೋ, ಚಮೇಲಿಯೋ ಯಾರೇ ಇರಲಿ ಸೇಫ್ಟಿ ಪಿನ್ ಮಾತ್ರ ಎಲ್ಲರಿಗೂ ಬೇಕೇ ಬೇಕು ಎಂಬುದು. ಈ ಸೇಫ್ಟಿ ಪಿನ್ ಗಳಿಗೂ  ಹೆಂಗಳೆಯರಿಗೂ ಬಿಡಿಸಲಾಗದ ನೆಂಟು. ಹೆಂಗಳೆಯರ ಸೀರೆ ಬ್ಲೌಜ್ ಗಳಿಗೂ ಈ ಪಿನ್ನು ಗಳಿಗಂತೂ ಅವಿನಾಭಾವ ಸಂಬಂಧ. ‘ವಾಗರ್ಥ ವಿವ ಸಂಪ್ರೃಕ್ತೌ ವಾಗರ್ಥ ಪ್ರತಿಪತ್ತಯೇ’ ಎಂದು ಕಾಳಿದಾಸ ಹೇಳಿದಂತೆ. 

ಸೀರೆಯ ಚಂದದ ಸೆರಗನ್ನು ನೀಟಾಗಿ ಹಿಡಿದಿಡಲು, ಸಡಿಲವಾದ ಬ್ಲೌಸ್ ಅನ್ನು ಫಿಟ್ ಮಾಡಲು, ಬಿಗಿಯಾದ ಬ್ಲೌಸಿನ ಒಳಮೈ ಯ್ಯ ಹೊಲಿಗೆ ಬಿಚ್ಚಲು ಸೀರೆಯ ನೆರಿಗೆಗಳನ್ನು ಒಪ್ಪವಾಗಿಸಲು ಈ ಪಿನ್ನು ಬೇಕೇ ಬೇಕು. ಬ್ಲೌಸುಗಳಂತೂ ಈ ಪಿನ್ನುಗಳ ಭರವಸೆಯ ಮೇಲೆಯೇ ಬದುಕುವುದು. ಏಕೆಂದರೆ ನೀವು ಎಷ್ಟರೇ ರೊಕ್ಕ ಸುರದು ಬೇಕಾದಂತಹ ಡಿಸೈನರ್ ಬೋಟಿಕ್ ನಾಗ ಹೊಲಿಸಿದ್ರೂ ಅವು ನಿಮ್ಮ ಮೈ ಏರುವಾಗ ಲೂಸೋ, ಬಿಗಿಯೋ, ತೋಳು ಇಳಿಯುವುದೋ ಏನೋ ಒಂದು ಆಗಲೇಬೇಕು. ನನಗಂತೂ ಒಮ್ಮೊಮ್ಮೆ ಡೌಟು..ಚಂದದ ಕಿಮ್ಮತ್ತಿನ ಸೀರೆಗಳನ್ನು ದೌಲತ್ತಿನಿಂದ ಉಟ್ಟು ದಿಮಾಕಿನಿಂದ ನಡೆವ ಲಲನಾಮಣಿಯರನ್ನು ಕಂಡು ಹೊಟ್ಟೆ ಉರಿದವರ್ಯಾರದೋ ಕೆಟ್ಟ ದೃಷ್ಟಿತಾಗಿಯೋ,ಶಾಪ ತಟ್ಟಿಯೋ ಈ ಬ್ಲೌಸ್ ಗಳು ಹಾಳಾಗಬಹುದೆಂದು. ಅಂಥ ಸಮಯದಲ್ಲಿ ಶಾಪ ವಿಮೋಚಕನಾಗಿ ನಮಗೆ ನೆರವಾಗುವುದು ಇದೇ ಸೇಫ್ಟಿ ಪಿನ್ನು.

ಈ ಪಿನ್ನಿನ ಋಣ ಭಾರವಿಲ್ಲದ ಹೆಂಗಳೆಯರೇ ಇಲ್ಲ. ಸಾಲ ಸೋಲ ಎಂದರಾಗದ ನಿಯತ್ತಿನ ಜೀವಗಳನ್ನೂ ಇವು ಕಾಡದೇ ಬಿಡುವುದಿಲ್ಲ. ಎಷ್ಟರೇ ಡಜನ್ಗಟ್ಟಲೆ ಪಿನ್ನು ಖರೀದಿ ಮಾಡಿಟ್ಟಿರಿ ಬೇಕಾದ ಸಮಯಕ್ಕೆ ಸಿಗದೇ ಪಕ್ಕದಲ್ಲಿದ್ದ ಅಕ್ಕನೋ, ಅತ್ತಿಗೆಯೋ, ಅಮ್ಮನೋ, ಗೆಳತಿಯೋ ಯಾರ ಬಳಿಯಲ್ಲಾದರೂ ‘ಒಂದು ಪಿನ್ ಇದ್ರೆ ಕೊಡ’ ಎಂದು ನೀವು ಒಮ್ಮಿಲ್ಲ ಒಮ್ಮೆ ಕೇಳೇ ಕೇಳಿರುತ್ತೀರಿ. ಆ ಪಿನ್ನಿನ ಋಣದಲ್ಲಿ ಬಿದ್ದೇ ಇರುತ್ತೀರಿ. ನಿಮಗೆ ಅತಿ ಅವಶ್ಯಕತೆ ಇದ್ದಾಗ, ಬೇಕೆಂದಾಗ ಆ ಪಿನ್ನುಗಳು ನಿಮಗೆ ಸಿಕ್ಕದಿರಲಿ ಎಂದು ಅದ್ಯಾವ ಪರಶುರಾಮ ಶಾಪ ಕೊಟ್ಟನೋ ಕಾಣೆ ಬೇಕೆಂದಾಗ ಡ್ರಾತೆಗೆದು, ಡಬ್ಬಿ ತೆಗೆದು, ಪರ್ಸ್ ತಡಕಾಡಿ ಡ್ರೆಸ್ಸಿಂಗ್ ಟೇಬಲ್ ಜಾಲಾಡಿದರೂ ಅವು ಕಾಣದಂತೆ ಅದೃಶ್ಯವಾಗಿ ಬಿಟ್ಟಿರುತ್ತವೆ. ಎಲ್ಲಿಟ್ಟಿರುವೆವೆಂಬ ನೆನಪು ಬಾರದೆ ನಾವೂ ಸಹ ಆ ಮಹಾಭಾರತದ ಕರ್ಣನಂತೆ ಒದ್ದಾಡುತ್ತಿರುತ್ತೇವೆ.

ಸ್ತ್ರೀಯರ ವ್ಯಾನಿಟಿ ಬ್ಯಾಗ್ ಅಂದ್ರೆ ಅದರಲ್ಲಿ ಏನೇ ಇರಲಿ ಬಿಡಲಿ ಈ ನಾಲ್ಕಾರು ಪಿನ್ನುಗಳಂತೂ ಇರಲೇಬೇಕು. ಒಮ್ಮೆ ನಾನು ದೆಹಲಿಯಿಂದ ಹುಬ್ಬಳ್ಳಿಗೆ ಹೊರಟಿದ್ದೆ. ಸೆಕ್ಯೂರಿಟಿ ಚೆಕ್ ನಲ್ಲಿ ನನ್ನ ವ್ಯಾನಿಟಿ ಬ್ಯಾಗ್ ತನ್ನ ನೇರ ರಸ್ತೆ ಬಿಟ್ಟು ಪಕ್ಕಕ್ಕೆ ಹೊರಳಿ ಅಲ್ಲಿದ್ದ ಅಧಿಕಾರಿಗಳ ಕೈಗೆ ಸಿಕ್ಕಿ ಬಿಟ್ಟಿತು. ಹತ್ತತ್ತು ಸಲ ಚೆಕ್ ಮಾಡಿದರೂ ಏನೂ ಸಿಗುತ್ತಿಲ್ಲವಾದರೂ ಸ್ಕ್ಯಾನ್ ನಲ್ಲಿ ಏನೋ ಇದೆಯೆಂದು ತೋರಿಸುತ್ತಿದೆ. ಅಲ್ಲಿನ ಅಧಿಕಾರಿಗಳು ನನ್ನನ್ನು ನೋಡುವ ರೀತಿಗೆ ‘ ಅಯ್ಯಾ, ನನ್ನ ಈ ಬ್ಯಾಗನ್ನು ನೀನೇ ಇಟ್ಟುಕೊಂಡುಬಿಡು’ ಎಂದು ಹೇಳಬೇಕೆನಿಸಿಬಿಟ್ಟಿತು.ಮುಂದೆ ಒಂದು ದಿನ ಅವತ್ತು ಅವರ ಕೈಗೆ ಸಿಗದ ಈ ಪಿನ್ನಿನ ಗೊಂಚಲು ಅಚಾನಕ್ಕಾಗಿ ನನಗೆ ಸಿಕ್ಕಿತ್ತು. ಬ್ಯಾಗಿನ ಒಳಭಾಗದ zip ನ ಬಟ್ಟೆಗೊಂದು ಸಣ್ಣ ತೂತಾಗಿ ಆ ಕಿಂಡಿಯಿಂದ ಹೈದರಾಲಿಯ ಸೈನಿಕನಂತೆ ನುಸುಳಿ ಅವಿತುಕೊಂಡಿದ್ದ ಆ ಪಿನ್ನಿನ ಗೊಂಚಲು ಅಂತೂ ಸೆಕ್ಯೂರಿಟಿಯ ಓಬವ್ವನ ಕೈಗೆ ಸಿಗದೆ ತಪ್ಪಿಸಿಕೊಂಡು ಹೊರಬಂದಿತ್ತು.

ಫ್ಲೈಟ್ ನಲ್ಲಿ ಕೊಡುವ ಈ ಸ್ನಾಕ್ಸ್ ಪ್ಯಾಕೆಟ್ ಹರಿಯಲು, ಕಿವಿ ಗುಳುಗುಳು ಎಂದರೆ ಇಯರ್ ಬಡ್ ನಂತೆ ಕೆಲಸ ಮಾಡಲು, ಹಲ್ಲು ಸಂದಿಯಲ್ಲಿ ಸಿಕ್ಕಿದ ಬೇಳೆಕಾಳು ಸೊಪ್ಪನ್ನು ತೆಗೆಯಲು ಟೂತ್ ಪಿಕ್ ನಂತೆಯೂ ಹಲವಾರು ರೀತಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಈ ಸೇಫ್ಟಿ ಪಿನ್. ಕಾಲಿಗೆ ನೆಟ್ಟ ಮುಳ್ಳು ತೆಗೆಯಲು, ಉಗುರು ಸಂದಿಯಲ್ಲಿ ಅವಿತ ಕೊಳಕು ತೆಗೆಯಲು, ಹಣಿಗೆಯ ಹಲ್ಲುಗಳನ್ನು ಸ್ವಚ್ಛಗೊಳಿಸಲು ಈ ಪಿನ್ನು ಬೇಕೇ ಬೇಕು . ನಿಮ್ಮ ಪ್ರೆಷರ್ ಕುಕ್ಕರ್ ಸೀಟಿಯಲ್ಲಿ ಸಿಕ್ಕಿಕೊಂಡ ಅನ್ನದ ಅಗುಳಿನ ತುಂಡನ್ನೋ, ಬೆಂದ ಬೇಳೆಯನ್ನೋ ತೆಗೆಯಲು ಇದು ಬೇಕೇ ಬೇಕು . ಕೆಲವೊಮ್ಮೆ ಹರಿದ ಚಪ್ಪಲಿಗೂ ಇದರ ನೆರವು ಬೇಕಾಗುತ್ತದೆ.

ಮನೆಯ ಅಂಗಳದಲ್ಲಿ ಅರಳುತ್ತಿದ್ದ ನಾಲ್ಕಾರು ದುಂಡು ಮಲ್ಲಿಗೆಯನ್ನು ಒಂದು ಪಿನ್ನಿನಲ್ಲಿ ವೃತ್ತಾಕಾರವಾಗಿ ಚುಚ್ಚಿ ಮುಡಿಗೇರಿಸಿಕೊಂಡು ಡೌಲು ಬಡಿಯುತ್ತಿದ್ದ, ಆ ಮಲ್ಲಿಗೆಯ ಘಮದಲ್ಲಿ ತೇಲಿ ಹೋಗುತ್ತಿದ್ದ ಬಾಲ್ಯದ ದಿನಗಳು ಈಗಲೂ ಮೆರವಣಿಗೆ ಹೊರಡುತ್ತವೆ. ಹೆರಳ ತೊಡಕು ಬಿಡಿಸುವಾಗ ಉದುರಿದ ಕೂದಲನ್ನು ಕೂಡಿಟ್ಟು ಆ ಕೂದಲ ಬದಲಿಗೆ ಈ ಪಿನ್ನುಗಳನ್ನು ಖರೀದಿಸುತ್ತಿದ್ದ ನನ್ನ ಬಾಲ್ಯಕಾಲದ ಹಳ್ಳಿಯ ಜೀವನ ಈಗಲೂ ಗುಂಗಾಗಿ ಕಾಡುತ್ತದೆ.

ಹಂಗಂತ ಈ ಸೇಫ್ಟಿ ಪಿನ್ ಗಳು ಬಹಳ ಸಾಚಾ ಅಂತನೂ ತಿಳ್ಕೋಬ್ಯಾಡ್ರಿ. ಇವುಗಳು ಮಾಡೋ ಅವಾಂತರ ನಮಗೆ ಅಂದರೆ ಹೆಂಗಳೆಯರಿಗೇ ಗೊತ್ತು. ಬೆಲೆ ಬಾಳುವ ಚಂದನೆಯ ರೇಷ್ಮೆ ಸೀರೆ, ಬ್ಲೌಜ್ ಗಳಿಗೆ ಕೆಲವೊಮ್ಮೆ ನಿರ್ದಯವಾಗಿ ತೂತು ಬೀಳಿಸಿ ಬಿಡುತ್ತವೆ. ದೊಡ್ಡ ಪಿನ್ನು ಮೊಂಡಹಡಿ ಇದ್ದು ಸೀರೆಗೆ ಚುಚ್ಚದೆ ಕೈ ನೋವು ಬರಿಸಿದರೆ ಗಿಡ್ಡ ಮೆಣಸಿನಕಾಯಿ ಅಂತಹ ಮರಿ ಪಿನ್ನು ಕಚಕ್ ನೇ ಚುಚ್ಚಿ ‘ಆ’ ಎನ್ನುವಂತೆ ಮಾಡುತ್ತದೆ. ಹೀಗಾಗಿ ನೀವು ಬೇರೆ ಯಾರದೋ ಸೀರೆಯನ್ನ ಏನಾದರೂ ಕಡ ತೆಗೆದುಕೊಂಡು ಉಡುತ್ತಿದ್ದರೆ ಬಹಳ ಹುಷಾರಾಗಿರಬೇಕಾಗುತ್ತದೆ.

ಬಹು ಉಪಯೋಗಿ ಈ ಪಿನ್ನುಗಳು ನಿಮಗೆ ಜನರನ್ನು ಯಾವ ಪ್ರಾಂತ್ಯದವರೆಂದು ಗುರುತಿಸಲು ಸಹ ನೆರವು ನೀಡುತ್ತವೆ. ಅದ್ಹೆಂಗ ಅಂತ ಹುಬ್ಬೇರಿಸಬ್ಯಾಡ್ರಿ. ಉದಾಹರಣೆ ಸಮೇತ ಹೇಳತೀನಿ ನೋಡ್ರಿ . ಒಮ್ಮೆ ದೆಹಲಿಯಲ್ಲಿ ಅಕ್ಷರಧಾಮಕ್ಕೆ ಹೋಗಿದ್ವಿ ಅಲ್ಲಿ ಪಾಳಿಯೊಳಗೆ ಇಬ್ಬರು ಮಧ್ಯವಯಸ್ಕ ಗಂಡ ಹೆಂಡತಿ ನಿಂತಿದ್ದರು. ನಾನು ನನ್ನ ಮಗನಿಗೆ ಅವರನ್ನು ಮಾತನಾಡಿಸಿ ಬರುವೆ, ಅವರು ಪಕ್ಕಾ ನಮ್ಮ ಕಡೆಯವರೇ ( ಉತ್ತರ ಕರ್ನಾಟಕ) ಇರುತ್ತಾರೆ ಅಂದೆ. ಅವನು ‘ಅದ್ಹೆಂಗ ಹೇಳತಿ’ಎಂದು ಸವಾಲೆಸೆದ. ಹೋಗಿ ಮಾತನಾಡಿಸಿದರೆ ಅವರು ಗುಲ್ಬರ್ಗದವರಿದ್ದರು. ಆ ಹೆಣ್ಣು ಮಗಳ ಕೈಯ ಕಾಜಿನ ಬಳೆ, ಪಾಟಲಿ, ಬಿಲವಾರದಲ್ಲಿ ಜೋತಾಡುತ್ತಿದ್ದ ಒಂದು ಹಳದಿ ಮರಿ ಪಿನ್ನು, ಒಂದು ಸ್ಟೀಲಿನ ದೊಡ್ಡ ಪಿನ್ನು ನೋಡಿಯೇ ನಾನು ಗುರುತು ಹಿಡಿದಿದ್ದು. ಈಗಲೂ ನಮ್ಮಮ್ಮ, ಅತ್ತೆಯರು ಪಿನ್ ಕೇಳಿದರೆ ತಕ್ಷಣ ಬಳೆ, ಮಂಗಳ ಸೂತ್ರದಿಂದ ತೆಗೆದುಕೊಡುತ್ತಾರೆ. ಮಂಗಳಸೂತ್ರ ಬಳೆ ಇರುವುದೇ ಈ ಪಿನ್ನುಗಳನ್ನು ಕಾಪಿಟ್ಟುಕೊಳ್ಳಲೇನು ಎಂಬ ಸಂಶಯ ನನ್ನನ್ನು ಕಾಡುತ್ತದೆ. ಒಮ್ಮೊಮ್ಮೆ ಈ ಶಿರಸಿ, ಮೈಸೂರು, ಬೆಂಗಳೂರು, ಮಂಗಳೂರಿನ ಹೆಂಗಳೆಯರ ಬಗ್ಗೆ ನನಗೆ ಗೊತ್ತಿಲ್ಲ ಆದರೆ ನಮ್ಮ ಕಡೆ ಹೆಣ್ಣು ಮಕ್ಕಳ ಕೈಯಲ್ಲಿ ಕೊರಳಲ್ಲಿ ಇವು ಇರಲೇಬೇಕು.. ಇರತಾವ ಕಾಸಿನ ಕಿಮ್ಮತ್ತಿನ ಈ ಪಿನ್ ಮಹಾಶಯ ಬಂಗಾರದ ಬಳೆ, ಸರಗಳಲ್ಲಿ ಮೆರೆಯುತ್ತಿರುತ್ತಾನೆ. ‘ ನಸೀಬ್ ಅಪನಾ ಅಪನಾ’ ಅನ್ನೋದು ಸುಳ್ಳಲ್ಲ ನೋಡ್ರಿ.

ಪಿಂಡಾಂಡದಲ್ಲಿ ಬ್ರಹ್ಮಾಂಡ ಎನ್ನುವ ತತ್ವ ಇವುಗಳನ್ನು ನೋಡಿಯೇ ಬಂದಿರಬೇಕು. ಆತ್ಮ ಸಂಗಾತಿಗಳು ಇವು. ಮಾನ ಕಾಯುವ, ಕಾಪಿಡುವ ಭಗವಂತನಿದ್ದಂತೆ ಗೀತೆಯ ವಿಭೂತಿ ಯೋಗದಲ್ಲಿ ಶ್ರೀ ಕೃಷ್ಣ ಹೇಳುತ್ತಾನಲ್ಲವೇ? “ನಾನು ನದಿಗಳಲ್ಲಿ ಗಂಗೆ, ಪರ್ವತಗಳಲ್ಲಿ ಮೇರು, ಯೋಧರಲ್ಲಿ ರಾಮ, ಸರ್ಪಗಳಲ್ಲಿ ಅನಂತ” ಅಂತೆಲ್ಲ.. ಈ ಪಿನ್ನುಗಳನ್ನು ಕಂಡಿದ್ದರೆ ಪಿನ್ನುಗಳಲ್ಲಿ ನಾನು ಸೇಫ್ಟಿ ಪಿನ್ನು ಎಂದು ಖಂಡಿತ ಹೇಳಿರುತ್ತಿದ್ದ.( ಸೂಜಿ, ಗುಂಡು ಸೂಜಿ, ಗುಂಡು ಪಿನ್ನು, ಪೇಪರ್ ಪಿನ್ನು, ಹೇರ್ ಪಿನ್ನು, ಸಾಡಿ ಪಿನ್ನು ಇತ್ಯಾದಿಗಳಲ್ಲಿ ).
ಹೀಗೆ ಆಪತ್ಕಾಲೀನ ಸಮಯದಲ್ಲಿ ಆಪದ್ಬಾಂಧವನಂತೆ ಕಣ್ಣಿಗೆ ಕಾಣದೆ ಒಳಗೆ ಸೇರಿಕೊಂಡು ಅದೃಶ್ಯವಾಗಿ ಈ ಸೇಫ್ಟಿ ಪಿನ್ನುಗಳು ಮಾನ ಕಾಯ್ದರೆ ಇದೇ ಕುಲದ ಸಾಡಿ ಪಿನ್ನುಗಳು ಎಲ್ಲರಿಗೂ ಕಂಡು ಸೀರೆಯ, ಸೀರೆಯುಟ್ಟ ನೀರೆಯ ಸೊಬಗು ಹೆಚ್ಚಿಸುತ್ತವೆ. ನವಿಲಿನಂಥ, ಹೂವಿನಂಥ, ಎಲೆ ಬಳ್ಳಿಯಂಥ, ಮುತ್ತಿನ ನತ್ತಿನಂತ ತರಾವರಿ ಸಾಡಿಪಿನ್ನುಗಳು ಮಾರ್ಕೆಟ್ನಲ್ಲಿ ಲಭ್ಯ.

1849ರಲ್ಲಿ ಅಮೆರಿಕನ್ ಮೆಕ್ಯಾನಿಕ್ ವಾಟರ್ ಹಂಟ್ ತನ್ನ ಹೆಂಡತಿಯ ಉಡುಪಿನ ಗುಂಡಿ ಕಿತ್ತು ಹೋದಾಗ ತಕ್ಷಣಕ್ಕೆ ಉಪಯೋಗವಾಗಲಿ ಎಂದು ಇದನ್ನು ಕಂಡುಹಿಡಿದನಂತೆ. ‘ಅವನ ಹೆಂಡತಿ ಸಂತತಿ ಸಾವಿರವಾಗಲಿ’. ಅವಳ ಗುಂಡಿ ಅಂದು ಕಿತ್ತಿರದಿದ್ದರೆ ಈ ಪಿನ್ನು ಸಿಕ್ಕುತ್ತಲೇ ಇರಲಿಲ್ಲ. ಹೆಗ್ಗಳಿಕೆ ಎಂದರೆ ಅಂದಿನಿಂದ ಇಂದಿನವರೆಗೂ ಅದರ ಗಾತ್ರ ವಿನ್ಯಾಸಗಳಲ್ಲಿ ಬಹುಶ: ದರದಲ್ಲಿಯೂ ಅಂಥದೇನೂ ವಿಶೇಷ ಬದಲಾವಣೆ ಆಗಿಲ್ಲ.
ಒಂಥರ ದೇಶಕಾಲಾದಿಗಳಿಗೆ ಸಿಕ್ಕಿಯೂ ಬದಲಾಗದಂತಹ ಸಂತ ಮಹಾಂತರ ಗುಣವಿದಕ್ಕೆ. ಇದರ ಮೂರ್ತಿ ಚಿಕ್ಕದಾದರೂ ಕೀರ್ತಿ ಬಲು ದೊಡ್ಡದು. ಅಂತಹ ಸೇಫ್ಟಿ ಪಿನ್ ಗೆ ಹೃದಯಾಳದ ನನ್ನಿಗಳು.

~ ಗೌರಿಪ್ರಸನ್ನ