ಪುಸ್ತಕ ಪರಿಚಯ ಮತ್ತು ಒಂದು ಕವಿತೆ

ಡಾ ಜಿ ಎಸ್ ಪ್ರಸಾದ್

ಆತ್ಮೀಯ ಅನಿವಾಸಿ ಓದುಗರೇ, ಈ ವಾರದ ಸಂಚಿಕೆಯಲ್ಲಿ ಡಾ ಪ್ರೇಮಲತಾ ಅವರ ಇತ್ತೀಚಿನ ಕೃತಿ 'ವಿದೇಶ ಪ್ರಯಾಣ ಕೈತುಂಬಾ ಕಾಂಚಾಣ' ಕುರಿತಾಗಿ ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. ಇದನ್ನು ಪುಸ್ತಕ ಪರಿಚಯವೆಂದು ಕೂಡ ಪರಿಗಣಿಸಬಹುದು. ಈ ಪುಸ್ತಕವನ್ನು ಸಾವಣ್ಣ ಎಂಟರ್ಪ್ರೈಜ್ ಬೆಂಗಳೂರು ಸಂಸ್ಥೆ ಪ್ರಕಟಿಸಿದೆ. ಇನ್ನೂರು ಪುಟಗಳ ಈ ಪುಸ್ತಕಕ್ಕೆ ಖ್ಯಾತ ಲೇಖಕ ಎಸ್ ದಿವಾಕರ್ ಅವರು ಮುನ್ನುಡಿ ಬರೆದಿದ್ದಾರೆ. 

ಇಂದು ವಿಶ್ವ ಪರಿಸರ ದಿನ, ಈ ಒಂದು ಸಂದರ್ಭದಲ್ಲಿ ನಾನು ಹಿಂದೆ ರಚಿಸಿದ 'ಪರಿಸರ ಗೀತೆ' ಎಂಬ ಕವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದು ಹಿಂದೆ ಅನಿವಾಸಿ ತಾಣದಲ್ಲಿ ಪ್ರಕಟಗೊಂಡಿರಬಹುದಾದರೂ, ಇಲ್ಲಿ ಹೊಸ ಓದುಗರು ಅನೇಕರು ನಮ್ಮೊಡನೆ ಇರುವುದರಿಂದ ಅವರಿಗೆ ಅದು ಹೊಸತು ಎಂಬ ಭಾವನೆಯಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಪರಿಸರ ನಾಶದ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡುವುದು ಸೂಕ್ತ. ಕವಿತೆ ಹಳೆಯದಾದರೂ ಭಾವ ಹೊಸತು. ಕವಿತೆಯ ಆಶಯ ಹಿರಿದು.

-ಸಂ
ಪ್ರೇಮಲತಾ ಅವರ 'ವಿದೇಶ ಪ್ರಯಾಣ ಕೈ ತುಂಬಾ ಕಾಂಚಾಣ' ಎಂಬ ಪುಸ್ತಕವನ್ನು ತಡವಾಗಿಯಾದರೂ ಈಗ ಓದಿ ಮುಗಿಸಿದೆ. ಎಲ್ಲಾ ಕನ್ನಡಿಗರು ಓದಲೇ ಬೇಕಾಗಿರುವ ಪುಸ್ತಕ. ಕಾಂಚಾಣಕ್ಕಾಗಿ ನಾವೆಲ್ಲಾ ವಿದೇಶಕ್ಕೆ ಬಂದಿರುವುದೇನೋ ನಿಜ ಆದರೆ ಅದರ ಜೊತೆ ಜೊತೆಗೆ ಈ ವಿದೇಶ ನೆಲದಲ್ಲಿ ನಾವು ನಮ್ಮ ಚಿಂತನೆಗಳಲ್ಲಿ, ನಡವಳಿಕೆಗಳಲ್ಲಿ, ಸಂಸ್ಕೃತಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಕೆಲವೊಮ್ಮೆ ನಮ್ಮ ಅರಿವಿಗೆ ತಿಳಿಯದೆ ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಗಳು ಉಂಟಾಗಿವೆ. 

ಡಾ ಪ್ರೇಮಲತಾ ಅವರನ್ನೂ ಒಳಗೊಂಡು ಭಾರತದಲ್ಲಿ ಬ್ಯುಸಿ ವೈದ್ಯರಾಗಿದ್ದ ನಮ್ಮಂತಹ ಕೆಲವರಿಗೆ ವಿದೇಶದಲ್ಲಿ ದೊರಕುವ ವಾರಾಂತ್ಯ ಮತ್ತು ಸಂಜೆ ವೇಳೆಯ ಬಿಡುವು ನಮ್ಮ ಸಾಹಿತ್ಯಿಕ ಹವ್ಯಾಸಗಳನ್ನು ಉದ್ದೀಪನಗೊಳಿಸಲು ಪೂರಕವಾಗಿದೆ. ನಮ್ಮಲ್ಲಿ ಹಲವಾರು ಮಂದಿ ಕನ್ನಡ ಸಾಹಿತ್ಯವನ್ನು, ಬರವಣಿಗೆಯನ್ನು ಅಭ್ಯಾಸಮಾಡಿಕೊಂಡು ಪುಸ್ತಕವನ್ನು ರಚಿಸಲು ಸಾಧ್ಯವಾಗಿದೆ. ಇದರ ಪರಿಣಾಮವೇ ಪ್ರೇಮಲತಾ ಅವರ 'ವಿದೇಶ ಪ್ರಯಾಣ ಕೈ ತುಂಬಾ ಕಾಂಚಾಣ'

ನಾನು ಹಿಂದೆ ಒಂದು ಪ್ರವಾಸ ಕಥನ ಮತ್ತು ಇಂಗ್ಲೆಂಡ್ ಜೀವನದ ಬಗ್ಗೆ ನನ್ನ ಕೃತಿಗಳಲ್ಲಿ ಬರೆದಿದ್ದೇನೆ. ಹೀಗೆ
ಬರೆಯುವಾಗ ನಮ್ಮಂಥ ಅನಿವಾಸಿಗಳು ನಮ್ಮ ಜನ್ಮ ಭೂಮಿ ಮತ್ತು ಕರ್ಮಭೂಮಿಗಳ ನಡುವಿನ ತುಲನಾತ್ಮಕ ವಿಮರ್ಶೆಗೆ ತೊಡಗುವುದು ಅನಿವಾರ್ಯ. ಇದು ನಮ್ಮ ಬದುಕಿನ ಒಂದು ಸ್ವಮಿರ್ಶೆಯೂ, ಆತ್ಮಾವಲೋಕನವೂ ಆಗಿರುತ್ತದೆ. ಇಲ್ಲಿ ಬಂದು ವಾಸಮಾಡುವ ಪ್ರೇಮಲತಾ ರೀತಿಯ ಸೂಕ್ಷ್ಮ ಮತಿಗಳಿಗೆ, ನೋಡುವ ಕಣ್ಣು, ಕೇಳುವ ಕಿವಿಗಳು ಇದ್ದವರಿಗೆ ವಿದೇಶ ಮತ್ತು ಸ್ವದೇಶದ ನಡುವೆ ಇರುವ ವ್ಯತ್ಯಾಸಗಳು ಅರ್ಥವಾಗುತ್ತವೆ. ಈ ಪುಸ್ತಕದಲ್ಲಿ ಅವುಗಳ ಉಲ್ಲೇಖ ಹೇರಳವಾಗಿದ್ದು ಅನೇಕ ಚಿಂತನೆಗಳಿಗೆ ಎಡೆಮಾಡಿಕೊಡುತ್ತದೆ. ಬ್ರಿಟಿಷ್ ಸಂಸ್ಕೃತಿಯನ್ನು ಇತಿಹಾಸದ ದುರ್ಬಿನ್ನುಗಳಲ್ಲಿ ನೋಡಿ, ಪೂರ್ವಗ್ರಹಪೀಡಿತ ಆಲೋಚನಗಳಿಂದ, ಅನುಮಾನದಿಂದ ನೋಡುವವರು, ಬ್ರಿಟಿಷರು ರೇಸಿಸ್ಟ್ಗಳು ಅಂದುಕೊಂಡವರು, ಇಲ್ಲಿಯ ಲೈಂಗಿಕ ಸ್ವೇಚ್ಛೆ, ಮದ್ಯಪಾನ, ಮಾಂಸಾಹಾರ ಇವುಗಳ ಹಿನ್ನೆಲೆಯಲ್ಲಷ್ಟೇ ನೋಡಿ ಬ್ರಿಟನ್ನಿನ ಜನರನ್ನು ಅಳೆಯುವವರು ಮೊದಲು ಈ ಪುಸ್ತಕವನ್ನು ಓದಬೇಕಾಗಿದೆ.

ಕರ್ನಾಟಕದಲ್ಲಿ ಬ್ರಿಟನ್ ಕುರಿತಾದ ಕೆಲವು ತಪ್ಪು ಕಲ್ಪನೆಗಳನ್ನು, ಕಟ್ಟು ಕತೆಗಳನ್ನು ತೊಡೆದುಹಾಕುವಲ್ಲಿ ಪ್ರೇಮಲತಾ ಯಶಸ್ವಿಯಾಗಿದ್ದಾರೆ. ಈಗ ಭಾರತದ ಆಚೆ ಪ್ರವಾಸ ಮಾಡುವುದು ಹೆಚ್ಚಿನ ವಿಚಾರವೇನಲ್ಲ, ಹಾಗೆಯೇ ವಿದೇಶಕ್ಕೆ ಬಂದು ಬದುಕನ್ನು ಕಟ್ಟಿಕೊಳ್ಳಲು ಅತಿ ಹೆಚ್ಚಿನ ಪ್ರತಿಭೆ ಮತ್ತು ಬುದ್ಧಿವಂತಿಕೆಗಳು ಬೇಕಾಗಿಲ್ಲ. ಇಷ್ಟು ಪ್ರಬುದ್ಧವಾಗಿರುವ ನಾಡಿನಲ್ಲೂ ನಮ್ಮ ಅನಿವಾಸಿಗಳಲ್ಲಿ ಅಂಧ ಶ್ರದ್ದೆ, ವ್ಯಕ್ತಿಪೂಜೆ ಇದೆ, ಕನ್ನಡ ಸಂಘಗಳಲ್ಲಿ ಬಿರುಕುಗಳಿವೆ ಎನ್ನುವ ವಿಚಾರಗಳು ಅವರಿಗೆ ಅಸಮಾಧಾನವನ್ನು ನೀಡಿದಂತಿದೆ. ವಿದೇಶದಲ್ಲಿ ಹಣ ಗಳಿಸಿದರೂ ತೆರಿಗೆ ಕಾರಣದಿಂದ ಇಲ್ಲಿ ಅತಿ ಶ್ರೀಮಂತಿಕೆ ಸಾಧ್ಯವಿಲ್ಲ. ಬ್ರಿಟಿಷ್ ಜನರಲ್ಲೂ ಅನಕ್ಷರತೆ, ಬಡತನವಿದೆ ಎಂಬ ವಿಚಾರಗಳು ಪ್ರಸ್ತಾಪಗೊಂಡಿದೆ. ಭಾರತದಲ್ಲೇ ನೆಲಸಿ ಅಲ್ಲೇ ವೃತ್ತಿಯನ್ನು ಮುಂದುವರಿಸಿದ ಕೆಲವರು ಅನಿವಾಸಿ ವೃತ್ತಿಪರರಿಗಿಂತ ಅನುಕೂಲವಾಗಿರುವ ಪರಿಸ್ಥಿಯಲ್ಲಿದ್ದಾರೆ, ಎನ್ನುತ್ತಾರೆ ಪ್ರೇಮಲತಾ.

ಈ ಬರಹದಲ್ಲಿ ಬ್ರಿಟಿಷ್ ಜನರ ಸಜ್ಜನಕೆ, ಮುತ್ತಿನಹಾರದಂತಿರುವ ನುಡಿಗಳು, ಶಿಷ್ಟಾಚಾರ, ನೆಲದ ರಮ್ಯತೆ, ಇಲ್ಲಿನ ವಿಶಿಷ್ಟತೆ, ಕರ್ತವ್ಯ ನಿಷ್ಠೆ, ಸಮಯಪ್ರಜ್ಞೆ, ವೈಜ್ಞಾನಿಕ ದೃಷ್ಟಿ ಕೋನ ಇವುಗಳನ್ನು ಪ್ರೇಮಲತಾ ತಮ್ಮ ಸ್ವಂತ ಅನುಭವಗಳೊಂದಿಗೆ ವಿವರಿಸಿ ಹೇಳಿರುವುದು ಪರಿಣಾಮಕಾರಿಯಾಗಿದೆ. ಅನಿವಾಸಿಗಳ ಬದುಕಿನ ಸಾಂಸ್ಕೃತಿಕ ಸಂದಿಗ್ಧತೆಗಳನ್ನೂ ಇಲ್ಲಿ ಕಾಣಬಹುದು. ಅನಿವಾಸಿ ಕನ್ನಡ ಓದುಗರಿಗೆ ಇದರ ನೇರ ಪರಿಚಯವಿದ್ದರೂ ಪ್ರೇಮಲತಾ ಅವರ ಮಾತುಗಳಿಂದ ಕೇಳುವುದರಲ್ಲಿ ಒಂದು ಹೊಸತನವಿದೆ. ಹೀಗಾಗಿ ಈ ಪುಸ್ತಕವು ನಿವಾಸಿ ಮತ್ತು ಅನಿವಾಸಿ ಕನ್ನಡಿಗರ ಕಲ್ಪನೆಗೆ ನಿಲುಕುತ್ತದೆ.

ಪ್ರೇಮಲತಾ ಅವರು ಇಂಗ್ಲೆಂಡಿಗೆ ವಲಸೆ ಬರುವ ಹೊಸ್ತಿಲಲ್ಲಿ ನಡೆದ ಕೆಲವು ವೈಯಕ್ತಿಕ ಘಟನೆಗಳನ್ನು, ಜೊತೆಗೆ ಅವರ ಕರ್ಮ ಭೂಮಿ ಅನುಭವವನ್ನು, ಸ್ಕಾಟ್ಲೆಂಡ್ ಬಗ್ಗೆ ಅವರಿಗಿರುವ ವಿಶೇಷ ಪ್ರೀತಿಯನ್ನು ವಿವರವಾಗಿ ದಾಖಲಿಸಿದ್ದಾರೆ. ಈ ಕಾರಣದಿಂದಾಗಿ ಪುಸ್ತಕದ ಕೆಲವು ಭಾಗಗಳು ಆತ್ಮಕಥೆಯಂತೆ ಓದಿಕೊಳ್ಳುತ್ತದೆ. ಪ್ರೇಮಲತಾ ಕೆಲವು ಕಡೆ ಕರ್ನಾಟಕದ ಓದುಗರಿಗೆ ಇಂಗ್ಲೆಂಡ್ ಪರಿಚಯಿಸುವ ಪ್ರಯತ್ನದಲ್ಲಿ ಅನೇಕ ಮಾಹಿತಿಗಳನ್ನು ವಿವರಗಳನ್ನು ನೀಡುವುದು ಅನಿವಾರ್ಯವಾಗಿದೆ. ಇನ್ನೇನು ಅದು ರಸಹೀನವಾಗುತ್ತಿದಂತೆ ಭಾಷೆ ಥಟ್ಟನೆ ಬದಲಾಗಿ ಅಲ್ಲಿ ಕಾವ್ಯ ಸ್ವರೂಪವೊಂದು ಹುಟ್ಟಿಕೊಂಡು ಓದು ಚುರುಕಾಗುತ್ತದೆ.

ಪುಸ್ತಕ ಶೀರ್ಷಿಕೆ ಬಹಳ ಅರ್ಥಪೂರ್ಣವಾಗಿದೆ. ವಿದೇಶಕ್ಕೆ ವಲಸೆ ಬರುವವರ ಕನಸುಗಳನ್ನು ಆಶಯಗಳನ್ನು ಬಿಂಬಿಸುತ್ತದೆ. ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಉಪಸಂಹಾರ/ಸಾರಾಂಶ ರೂಪದಲ್ಲಿ ಪುಸ್ತಕದ ಒಟ್ಟಾರೆ ವಿಚಾರಗಳನ್ನು ಸಂಕ್ಷಿಪ್ತವಾಗಿ 12 ಪಾಯಿಂಟುಗಳಲ್ಲಿ "ದೊರಕಿತೆ ಕೈತುಂಬಾ ಕಾಂಚಾಣ" ಎಂಬ ಪ್ರಶ್ನೆಗೆ ಕಾಂಚಾಣವೇನೊ ದೊರಕಿತು ಆದರೆ ಅದರ ಮೌಲ್ಯ, ಅದರಿಂದ ಪಡೆದದ್ದು ಏನು, ಕಳಕೊಂಡದ್ದು ಏನು ಎಂಬ ವಿಶ್ಲೇಷಣೆ ವಿಶೇಷವಾಗಿದೆ.

ಪರಿಸರದ ಗೀತೆ 

(ಡಾ ಜಿ ಎಸ್ ಪ್ರಸಾದ್)

ಮರಗಳು, ಮರಗಳು, ಮರಗಳು
ಎಲ್ಲೆಡೆ ಹಸುರಿನ ಮರಗಳು
ಗಿರಿಯನು ತಬ್ಬಿದ ತರುಗಳು
ಕಣಿವೆಯ ತುಂಬಿದ ವನಗಳು

ಉಸಿರನ್ನೀಯುವ ಮರಗಳು
ಸಿಹಿ ಕಹಿಯನ್ನುಣಿಸುವ ಮರಗಳು
ಸ್ಥಾವರ ಹಸುರಿನ ಸಂತಾನಗಳು
ನಿಶ್ಚಲ ಮೌನ ತಪಸ್ವಿಗಳು

ಹೂವನು ತೊಟ್ಟು ಮೆರೆಯುವ ಮರಗಳು
ಹಣ್ಣನು ಕೊಟ್ಟು ಹರಸಿದ ಮರಗಳು
ಋತು ಋತುವಿಗು ಬದಲಾಗುವ ಮರಗಳು
ಸಾರ್ಥಕ ಪರಾರ್ಥಕ ಜೀವಿಗಳು

ಬಂದೇ ಬಂದ ಸ್ವಾರ್ಥ ಮಾನವ
ಕೊಡಲಿಯ ಹಿಡಿದ ಧೂರ್ತ ದಾನವ
ಕೊಚ್ಚಿದ, ಚಚ್ಚಿದ ಮರಗಳ ಬುಡವ
ಸ್ತಬ್ಧವಾಯಿತು ಕಾನನ ಕಲರವ

ಉರುಳುತ ಬಿದ್ದವು ಮರಗಳು
ಕಂಬನಿಗರೆದವು ಮಳೆ ಹನಿಗಳು
ನಿಡುಸುಯ್ದವು ಕಾನನ ಸ್ವರಗಳು
ವಿಕಾರ ವಿನಾಶದ ಚಿತ್ತಾರಗಳು

ಕಾಡಿಗೆ ಹಚ್ಚಿದ ಬೆಂಕಿಯ ಕಿಚ್ಚು
ತಾಯಿಯ ಬೆತ್ತಲೆಗೊಳಿಸುವ ಹುಚ್ಚು
ಅಂದಿನ ಸುಂದರ ಸಮೃದ್ಧಿಯ ಕಾಡು
ಇಂದಿನ ದಾರುಣ ಸುಡುಗಾಡು

ಕುಗ್ಗಿವೆ, ತಗ್ಗಿವೆ, ಹಸುರಿನ ನೆಲೆಗಳು
ಬತ್ತಿವೆ ನದಿ ಹೊಳೆ ಕೆರೆಗಳು
ಪ್ರಗತಿಯ ಹೆಸರಲಿ ವಿಶ್ವ ವಿನಾಶ
ಬಿಸಿಲು ಮಳೆಗಳ ತೀವ್ರ ಆಕ್ರೋಶ

ಬನ್ನಿರಿ ತರುಣರೆ ಛಲವನು ಹಿಡಿದು
ಹಸುರಿನ ಕ್ರಾಂತಿಯು ನಡೆಯಲಿ ಇಂದು
ತೊಲಗಲಿ ಸ್ವಾರ್ಥ ಪ್ರಲೋಭಗಳು
ಚಿಮ್ಮಲಿ ಹಸುರಿನ ಸಸಿಗಳು

ನಾಳಿನ ನಾಡಿದು ನಿಮ್ಮಯದು
ಉಳಿಸುವ ಹೊಣೆ ನಮ್ಮೆಲ್ಲರದು
ಪರಿಸರ ಪ್ರೇಮವ ಬೆಳೆಸೋಣ
ಮರಗಳ ಹಸಿರನು ಉಳಿಸೋಣ

ರಿಕ್ತವಾದ ಋಣಾನುಬಂಧ


ಅದೊಂದು ದಿನ ನಿನ್ನ ಪ್ರಭಾವದಿಂದ ಹೊರಬಂದು ನನ್ನ ನೆಲೆಯನ್ನು ಮತ್ತೆ ನಾ ಕಂಡುಕೊಂಡೇನು ಎಂಬ ಆಶಂಕೆಯಿಂದಲೇ
ಇಷ್ಟು ತಿಂಗಳುಗಳನ್ನು ತಳ್ಳಿಹೆನು. ನಿನ್ನ ಜೀವನದ ವಿಸ್ತಾರದಲ್ಲಿ ನನಗೆ ಸ್ಥಾನವಿಲ್ಲವೆಂದರಿತ ಮೇಲೂ ಮನಸು ನಿನ್ನ ಕುರಿತ
ಆಲೋಚನೆಯನ್ನು ಬಿಡಲೊಲ್ಲದು. ಅದೊಂದು ಸಮ್ಮಿಶ್ರ ಭಾವ… ಬಿಟ್ಟುಕೊಡಲು ಬಯಸದಂಥ ಸುಖದಾಯಕ ನೋವು. ಆ
ಭಾವವನ್ನು ನಾನೂ ಕೂಡ ವ್ಯತ್ಯಯಗೊಳಿಸಿದರೆ ನಮ್ಮಿಬ್ಬರ ನಡುವೆ ಮಿಡಿದ ತಂತಿ ಮೌನಸಿದ್ಧವಾಗುವುದಂತೂ ಸತ್ಯ. ಪದೇ
ಪದೇ ಮರುಕಳಿಸಿ ಆ ಕ್ಷಣಗಳನ್ನು ಮತ್ತೇ ಜೀವಿಸದಿದ್ದರೆ ಆ ಭಾವ ಶಾಶ್ವತವಾಗಿಯೇ ನಿಶ್ಚಲವಾಗಿ ಬಿಡುವುದು. ಸದ್ಯಕ್ಕೆ ಆ
ಭಾವದೀಪಕ್ಕೆ ನೆನಪುಗಳ ತೈಲವನೆರೆದು ಸಮಯದ ಬತ್ತಿಯನ್ನು ಸೂಡಿ ಬೆಳಗುತ್ತಿರುವೆನು. ನಿನ್ನಿಂದ ಏನೊಂದನ್ನುಅಪೇಕ್ಷಿಸಿಹೆನು. ಮೊದಮೊದಲು ನೀನು ನನ್ನ ಭಾವನೆಗಳಿಗೆ ತಿಳಿನೀರಿನ ಪ್ರತಿಬಿಂಬವಾಗಿ ತೋರಿದೆ. ನನ್ನ ಧ್ವನಿಗೆ ಪ್ರತಿಧ್ವನಿಯಾಗಿ ನುಡಿದೆ. ಒಲವಿನ ಹೊನ್ನೊಳೆ ನಮ್ಮಿಬ್ಬರ ಮನದಲ್ಲಿ ನಿರಂತರವಾಗಿ ಪ್ರವಹಿಸಿತ್ತು. ನಿನ್ನೊಡನೆಯ ಮಾತುಗಳು ಯಾರೊಂದಿಗೂ ಸಂಭಾಷಿಸಲಾಗದ, ನನ್ನನ್ನು ನಾನೇ ಅರಿಯದ ಯಾವುದೋ ಪ್ರಬುದ್ಧಲೋಕಕ್ಕೆ ಕರೆದೊಯ್ಯುತ್ತಿದ್ದವು. ಸ್ವಯಂಯೋಚನೆಯಿಂದ ಬಗೆಹರಿಯದ ಪ್ರಶ್ನೆಗಳು ನಿನ್ನೊಂದಿಗೆ ವಿವೇಚಿಸುತ್ತಲೇ ತಿಳಿಗೊಳ್ಳುತ್ತಿದ್ದವು. ಜೀವನದ ಎಂದೂ ಕಾಣದೇ ಇದ್ದ ಆಯಾಮಗಳು ನಿನ್ನ ಸನ್ನಿಧಿಯಲ್ಲಿ ಗೋಚರಿಸಿ ಮುಗುಳ್ನಗುತ್ತಿದ್ದವು. ಯಾರಿಗೂ ಅರ್ಥವಾಗದ ನನ್ನ ಕನಸುಗಳು ನಿನಗೆ ಅದ್ಭುತವೆಂದೆನಿಸುತ್ತಿದ್ದವು.ಲೌಕಿಕ ಲೋಕದ ಲಘುತನದಿಂದ ಮೇಲೆಮೇಲೇರಿ ಯಾರೊಂದಿಗೂ ಮೇಳೈಸದ ಆಪ್ತತೆಯನ್ನು ನಿನ್ನಲ್ಲಿ ಕಂಡುಕೊಂಡೆನು. ಜನ್ಮಜನ್ಮಾಂತರದಲ್ಲಿ ಎಲ್ಲೋ ಕಳೆದು ಹೋದ ನನ್ನ ಆತ್ಮದ ಚೂರೊಂದನ್ನು ನಿನ್ನಲ್ಲಿ ಗುರುತಿಸಿದೆನು.


ನಿನ್ನೊಂದಿಗೆ ನಾನು ಭಾವನಾತ್ಮಕ ಲೋಕದಲ್ಲಿ ಬೆರೆತು ಪರಿಪೂರ್ಣಳಾದೆನು, ಸಂಪೂರ್ಣಳಾದೆನು. ನಿನ್ನ ಜೀವನದೆಡೆಗಿನ
ಅಪಾರ ಪ್ರೀತಿ, ನನ್ನ ಸುಪ್ತವ್ಯಕ್ತಿತ್ವವನ್ನೇ ಕೆಣಕಿ ಹೊಡೆದೆಬ್ಬಿಸಿತು. ನಿನ್ನ ಲವಲವಿಕೆ ನನ್ನ ಅಂತರಾಳದ ಕೋಣೆ ಕೋಣೆಗಳನ್ನು
ಶೋಧಿಸುವಂತೆ ಮಾಡಿತು. ನಿನ್ನ ಬ್ರಹ್ಮಾಂಡಸದೃಶವಾದ ವ್ಯಕ್ತಿತ್ವ, ನಾನು ನನ್ನ ಪರಿಧಿಗಳನ್ನು ಉಲ್ಲಂಘಿಸಿ ವಿಶ್ವವಿಸ್ತಾರಗೊಳ್ಳಲು
ಪ್ರೇರೇಪಿಸಿತು. ಪ್ರೀತಿಪ್ರೇಮಪ್ರಣಯಗಳ ಕ್ಷಣಿಕ ಭಾವಗಳಲ್ಲಿ ಎಂದೂ ನಿನ್ನನ್ನು ತುಲನೆ ಮಾಡದೆಯೇ ನನ್ನೊಳಗಿನ
ಸತ್ಯಾನ್ವೇಷಣೆಗೆ ಜೊತೆಗೂಡಾದ ಆತ್ಮಸಂಗಾತಿಯೆಂದೇ ನಿನ್ನನ್ನು ಸಂಕೇತಿಸಿದ್ದೇನೆ. ಅದರ ಸುಳಿವು ಮತ್ತು ಅರಿವು ನಿನಗೆ
ಚೆನ್ನಾಗಿಯೇ ಇರುವುದೆಂದು ನಾನು ಬಲ್ಲೆನು. ಬರೀ ಮಾಂಸಖಂಡಗಳ ಜಡತ್ವದಿಂದ ಸುಚೇತನೆಯಾಗಿ ನಾನು ಮಾರ್ಪಾಡುಗೊಳ್ಳುತ್ತಿರುವ ಭರದಲ್ಲಿ ನೀನಿಟ್ಟ ಹಿನ್ನಡೆಯ ಹೆಜ್ಜೆಯನ್ನು ನಾನು ಗುರುತಿಸದೆಯೇ ಮುಂದುವರೆದ್ದದ್ದೇ ಈ ಪ್ರಸಂಗದ ಅತಿ ದೊಡ್ಡ ಅವಿವೇಕದ ಮತ್ತು ವಿಪರ್ಯಾಸದ ಸಂಗತಿ! ನಿನ್ನ ಪರೋಕ್ಷವಾದ ಇರುವನ್ನು ನನ್ನ ಜೀವನದ ಪ್ರತಿ ನೂಲಿನೊಂದಿಗೆ ನೇಯುತ್ತಲೇ ಹೋದೆ, ಸೂಕ್ಷ್ಮಾತಿಸೂಕ್ಷ್ಮ ಸಂವೇದನೆಯಲ್ಲೂ ನಿನ್ನಯ ಕಂಪನವನ್ನು ಗುರುತಿಸಿದೆ. ನಿನಗೆ ಪ್ರಾಣಪ್ರಿಯವಾದ ಪ್ರಕೃತಿಯ ಪ್ರತಿ ಸೋಜಿಗದಲ್ಲೂ ನಿನ್ನ ಉಸಿರನ್ನು ಗ್ರಹಿಸಿದೆ. ದಿನನಿತ್ಯದ ಗೋಜಲಿನ ವ್ಯಾಪಾರದಲ್ಲಿ ನಿನಗೆ ಸಹಜವಾದ ಸಕಾರಾತ್ಮಕವನ್ನೇ ಪ್ರಯೋಗಿಸಿ ಸಫಲಳಾದೆ. ನಿನ್ನ ಸಾಂಗತ್ಯದಿಂದ ಒಸರಿದ ಭಾವೋನ್ಮಾದಕ್ಕೆ ಸೃಜನಶೀಲತೆಗೆ ಪದಗುಚ್ಚ್ಛಗಳ ಆಕಾರ ನೀಡಿದೆ.

ನನ್ನ ಜೀವನದ ಸೆಲೆ ಭೋರ್ಗರೆದು ನಾನು ಉತ್ತುಂಗಕ್ಕೆ ಏರುತ್ತಿದ್ದ ಸರಿಸಮಯದಲ್ಲಿಯೇ ನೀನು ತಣ್ಣಗೆ ನಿರ್ಲಿಪ್ತನಾಗಿದ್ದು ಯಾಕೆ
ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದ ಪ್ರಶ್ನೆಯಾಗಿದೆ. ಈ ಪ್ರಶ್ನೆ ಸಾವಿರ ಕಾಳಿಂಗಸರ್ಪದ ರೂಪದಾಳಿ ತಲೆಯೊಳು
ಹೆಡೆಯೆತ್ತಿ ಉತ್ತರ ದೊರಕದೇ ಸೋತು ನಿಸ್ತೇಜವಾಗುತ್ತದೆ. ವಸಂತದ ಸಂಭ್ರಮದಲ್ಲಿದ್ದ ಜಗತ್ತು ತಕ್ಷಣವೇ ನಿಃವರ್ಣವಾಗಿ
ತೋರಲಾರಂಭಿಸುತ್ತದೆ. ಒಡನಾಡಿದ ಮಾತುಗಳು ಮತ್ತೇ ಮತ್ತೇ ಮನಸಿನಲ್ಲಿ ಅನುರಣಿಸುತ್ತವೆ. ನಮ್ಮಿಬ್ಬರ ಸಮೀಕರಣವು
ಎಲ್ಲಿ ಮುಗ್ಗರಿಸಿತು ಎಂದು ಪದೇಪದೇ ಮನವು ಶೋಧಿಸುತ್ತದೆ. ಆದರೆ ಇದೆಲ್ಲ ಪರಿತಾಪಕ್ಕೆ ನಿರುತ್ತರವೇ ನಿನ್ನ ಮಾರುತ್ತರ. ಪ್ರತಿ
ಸನ್ನಿವೇಶದಲ್ಲಿ ರಂಗವೈಭವವನ್ನು ಮೆರೆಯುತ್ತಿದ್ದ ನಿನ್ನ ಮನಸಿನ ಪರದೆ ಈಗ ಬರೀ ಶ್ವೇತಪತ್ರವಾಗಿ “ಏನು ಬೇಕಾದರೂ
ಉತ್ತರ ಬರೆದುಕೋ” ಎಂದು ಅಣಕಿಸುತ್ತದೆ. ಕಳೆದ ಹಲವಾರು ತಿಂಗಳುಗಳಿಂದ ಈ ದಿನಚರಿಯೂ ಒಗ್ಗಿಹೋಗಿದೆ. ಹಿನ್ನೋಟ ಹರಿಸಿ ನೋಡಿದಾಗ ಈ ಅಸಂಬದ್ಧತೆಯಲ್ಲೂ, ಅನಿಶ್ಚಿತತೆಯಲ್ಲೂ ಅಸ್ಪಷ್ಟ ಸಂಕಲ್ಪವೊಂದು ಮಸುಕು ಮಸುಕಾಗಿ ಗೋಚರಿಸುವುದು. ಸುಲಭಕ್ಕೆ ಅರ್ಥವಾಗದೇ ನನ್ನನ್ನು ಹಣ್ಣುಹಣ್ಣಾಗಿಸಿಹುದು.


ಪರುಷಮಣಿಯ ಸ್ಪರ್ಷಮಹಿಮೆದಂತೆ ನಿನ್ನ ಸಾಂಗತ್ಯ, ನನ್ನಯ ಅತ್ಯುತ್ತಮ ಆವೃತ್ತಿಯನ್ನು ಹೊರಡಿಸಲೋಸುಗ ನನ್ನ ನೆಲೆಯಲ್ಲಿ ತತ್ಕಾಲಕ್ಕೆ ನೀನು ಬಂದು ಅಂಕುರಿಸರಬೇಕು.‌ ಇಲ್ಲವೇ, ಇದೆಲ್ಲ ನಾನಾಗಿಯೇ ಕಟ್ಟಿಕೊಂಡ ಭ್ರಮಾಲೋಕದಲ್ಲಿ ನೀನೊಬ್ಬ ಪಾತ್ರಧಾರಿಯಷ್ಟೇ, ಇವನಿಗೂ ನಿಜ ಜೀವನದ ನಿನಗೂ ಎಳ್ಳು ಮಾತ್ರದಷ್ಟೂ ಸಂಬಂಧವಿರಲಿಕ್ಕಿಲ್ಲ. ನನ್ನ ಭಾವಭರಿತ ಒಳದೃಷ್ಟಿಗೆ ಮಹನೀಯನಂತೆ ತೋರುವ ನೀನು, ಅಸಲಿನಲ್ಲಿ ನನ್ನ ಹಾಗೆ ಯಕಶ್ಚಿತ್ ಒಬ್ಬ ಸಾಧುಮನುಷ್ಯನೇ ಆಗಿರಬಹುದು. ಹಾಗೆ ಸುಮ್ಮನೆ ತನ್ನ ಪಾಡಿಗೆ ಹರಿದು ಹೋಗೊ ನೀರಿಗೆ, ಗಾಳಿಗೆ, ಮೋಡಕ್ಕೆ ಆಕಾರ ಮತ್ತೂಉದ್ದೇಶ ನೀಡಿ ಸಂಭ್ರಮಿಸುವ ನನ್ನ ಮುಗ್ಧಮನಸಿನ ಕವಿಯ ಹಂಬಲಿಕೆಯೇ ನೀನಾಗಿರಬಹುದು. ಅಥವಾ ಮುಂದೊಂದು ದಿನ ಸಂಭವಿಸಲಿರುವ ಮಹತ್ಕಾರ್ಯಕ್ಕೆ ನಮ್ಮಿಬ್ಬರ ತೀರದೇ ಉಳಿದ ಋಣಾನುಬಂಧವೇ ಮೊಟ್ಟ ಮೊದಲನೆಯ ಸೋಪಾನವಾಗಿರಬಹುದು, ಯಾರು ಬಲ್ಲರು? ಬಾಳಿನ ಪ್ರತಿ ಘಟಿತಗಳೆಲ್ಲವೂ ಸಂಕ್ಷಿಪ್ತ ವಿವರಣೆಯೊಂದಿಗೆ ಪ್ರಕಟಿತವಾಗುತ್ತಿದ್ದರೆ ಜೀವನ ಸುಲಭವಾದೀತೆ ಅಥವಾ ನೀರಸವೋದೀತೆ?
ಉತ್ತರ ಅವರವರು ಕಂಡಂತೆ!

———- ದೀವಿ (ದೀಪಾ ಸಣ್ಣಕ್ಕಿ)