ಕ್ರಿಕೆಟಿನ ತವರುಮನೆಯ ಕಳವಳಗಳು – ಯೋಗೀಂದ್ರ ಮರವಂತೆ

ಆಶಸ್ ಟ್ರೋಫಿ

ಆಶಸ್ ನಡೆಯುತ್ತಿರುವಾಗ ಕ್ರಿಕೆಟಿನ ಬಗ್ಗೆ ಮಾತನಾಡಿದರೆ, ಬೇಸಿಗೆಯ ಕ್ರಿಕೆಟ್ ಮಾಸ
ಮುಗಿದು ಮೂರು ತಿಂಗಳು ಕಳೆದ ಚಳಿಗಾಲದ ಇಂಗ್ಲೆಂಡಿನಲ್ಲಿ ವಿಷಯಾಂತರವೇನೂ
ಆಗಲಿಕ್ಕಿಲ್ಲ.  ಕಡುಚಳಿಯ ಪರೀಕ್ಷೆ ನಿರೀಕ್ಷೆಯಲ್ಲಿ ಮುಸುಕುಹೊದ್ದು ಮಲಗಿರುವ
ಇಂಗ್ಲೆಂಡಿನ  ಕ್ರಿಕೆಟ್ ಮೈದಾನಗಳಿಂದ  ಹದಿನೈದು ಸಾವಿರ ಕಿಲೋಮೀಟರು ದೂರದ ಬೆಚ್ಚನೆ
ಬಿಸಿಲಿನ ಆಸ್ಟ್ರೇಲಿಯದಲ್ಲಿ ಈ ಸಲದ ಆಶಸ್ ಸರಣಿ ಶುರು ಆಗಿದೆ. “ಆಶಸ್” ಆಂಗ್ಲ ಶಬ್ದದ
ಕನ್ನಡ ರೂಪ “ಬೂದಿ” ಎಂದಾದರೂ , ಈ ಎರಡು ತಂಡಗಳ ನಡುವೆ ನಡೆಯುವ  ಸ್ಪರ್ಧೆ  ಬೂದಿ
ಮುಚ್ಚಿದ ಕೆಂಡದಂತೆ ಯಾವಾಗಲೂ ನಿಗಿನಿಗಿ.  ಆದರೆ, ಸಾಂಪ್ರದಾಯಿಕ ಮತ್ತು ಕಲಾತ್ಮಕ
ಕ್ರಿಕೆಟಿನ ಹೆಮ್ಮೆಯ ಐದು ದಿನಗಳ ಟೆಸ್ಟ್ ಮಾದರಿಯಲ್ಲಿಯೇ  ವಿಶಿಷ್ಟ ಪರಂಪರೆ ಇರುವ
ಆಸ್ಟ್ರೇಲಿಯ-ಇಂಗ್ಲೆಂಡ್ ನಡುವಿನ ಪ್ರಸಕ್ತ ಹಣಾಹಣಿಯ ಮೊದಲ ಪಂದ್ಯ, ಎರಡೇ ದಿನಗಳಲ್ಲಿ
ಮುಗಿದು ಹೋಗಿ ಇತಿಹಾಸಪ್ರಿಯ ಆಂಗ್ಲರ  ಮಟ್ಟಿಗೆ ಕರಾಳ ಚರಿತ್ರೆಯಾಗಿ ದಾಖಲಾಗಿದೆ.
ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಗಳ ನಡುವಿನ ಮೊತ್ತಮೊದಲ
ಟೆಸ್ಟ್ ಪಂದ್ಯ ೧೮೭೭ರಲ್ಲಿ  ನಡೆದಿದ್ದರೂ , ಆಶಸ್ ಮಾದರಿಯ ಸರಣಿ ಶುರು ಆದದ್ದು
೧೮೮೨ರಲ್ಲಿ . ಲಂಡನ್ನಿನ ಓವಲ್ ಅಲ್ಲಿ ನೆಡೆದಿದ್ದ  ಆ ಪಂದ್ಯದಲ್ಲಿ ಇಂಗ್ಲೆಂಡ್
ಸೋತಿತ್ತು. ಸ್ಪೋರ್ಟಿಂಗ್ ಟೈಮ್ಸ್ ಪತ್ರಿಕೆ ಅಂದಿನ  ಸೋಲನ್ನು ಆಂಗ್ಲ ಕ್ರಿಕೆಟಿನ
ಸಾವೆಂದು  ಗೇಲಿ ಮಾಡಿತ್ತು. “ಆಂಗ್ಲ ಕ್ರಿಕೆಟಿನ ಶವಸಂಸ್ಕಾರ  ಮಾಡಲಾಗುತ್ತದೆ,
ಬೂದಿಯನ್ನು ಆಸ್ಟ್ರೇಲಿಯಾಕ್ಕೆ  ಒಯ್ಯಲಾಗುತ್ತದೆ ” ಎಂದು ಅಣಕು ಸಂತಾಪ ಸೂಚಿಸಿತ್ತು.
ಪತ್ರಿಕೆ ಪ್ರಕಟಿಸಿದ ಅಣಕು ಪದವನ್ನೇ ಬಳಸಿಕೊಂಡು ಆಗಿನ ಇಂಗ್ಲೆಂಡ್ ತಂಡದ  ನಾಯಕ,
ಮುಂದಿನ ತಿರುಗಾಟದಲ್ಲಿ “ಬೂದಿ”ಯನ್ನು ಮರಳಿ ತರುತ್ತೇವೆ ಎಂದು ಆಂಗ್ಲ ಕ್ರಿಕೆಟ್
ಪ್ರೇಮಿಗಳಿಗೆ ಭರವಸೆ ನೀಡಿದ್ದ. ೧೮೮೨ರ ಮೊದಲ ಸೋಲಿನ ನಂತರದ ಎಂಟು ಆಶಸ್ ಸರಣಿಗಳಲ್ಲಿ
ಇಂಗ್ಲೆಂಡ್ ನಿರಂತರ ಜಯಗಳಿಸಿತ್ತು.  ಜಿದ್ದು ಮತ್ತು ಮುಯ್ಯಿಗಳ ಸರಣಿ ಪಾರಂಪರಿಕ
ಸ್ಪರ್ಧೆಯಾಗಿ ಬೆಳೆಯಿತು ಮುಂದುವರಿಯಿತು. ಎರಡು ವರ್ಷಕ್ಕೊಮ್ಮೆ ನಡೆಯುವ  ಕ್ರಿಕೆಟ್
ಸರಣಿಯಲ್ಲಿ  ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳು ಉತ್ಸುಕತೆ ಆತಂಕದಲ್ಲಿ ಕಾಯುವ
ವಾತಾವರಣವನ್ನು ಹುಟ್ಟಿಸಿತು.

 ಕ್ರೀಡೆಯೊಂದರ ಕಲೆ ಕ್ಷಮತೆ ಕೌಶಲ ಸೇಡು ಪ್ರತಿಷ್ಠೆಗಳ ಪರಾಕಾಷ್ಠೆಗಳಿಗೆ
ಹೆಸರಾಗಿದ್ದ ಆಶಸ್ ನ ದೀರ್ಘ ಇತಿಹಾಸದ ಹೊಚ್ಚ ಹೊಸ ಪುಟವಾದ ಮೊನ್ನೆಮೊನ್ನಿನ ಸೋಲು
ಕ್ರಿಕೆಟಿನ ಹುಟ್ಟೂರಿನಲ್ಲಿ ಕ್ರಿಕೆಟಿನ ಪ್ರಸ್ತುತ ಪರಿಸ್ಥಿತಿಯ ಬಗೆಗಿನ
ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಅನಿರೀಕ್ಷಿತ ತಿರುವುಗಳು , ಊಹಿಸಲಾಗದ
ಫಲಿತಾಂಶಗಳ ಕಾರಣಕ್ಕೆ ಕೆಲವೊಮ್ಮೆ ಮನುಷ್ಯ ಜೀವನಕ್ಕೆ ಹೋಲಿಸಲ್ಪಡುವ ಕ್ರಿಕೆಟ್
ಪಂದ್ಯದಲ್ಲಿ  ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕಾದ  ಪಾಠ, ಭಗ್ನ ಹೃದಯಿಯ
ಯಾತನೆಗೆ ಹೋಲಿಸಬಹುದಾದ ಹತಾಶೆಯ ಅನುಭವ  ಸಾಮಾನ್ಯ ಆದರೂ ಮತ್ತೆ ಆ ಕಾರಣಗಳಿಗಾಗಿಯೇ
ಜನಾಕರ್ಷಣೆ ಪಡೆದಿರುತ್ತಿದ್ದ ಇಂಗ್ಲಿಷ್ ಕ್ರಿಕೆಟ್ ಇತ್ತೀಚಿನ ವರ್ಷಗಳಲ್ಲಿ ಹೊಸ
ತಲೆಮಾರಿನ ಪ್ರೇಕ್ಷಕರನ್ನು  ಸೆಳೆಯುವಲ್ಲಿ ವಿಫಲ ಆಗುತ್ತಿದೆ. ಇಂಗ್ಲೆಂಡಿನ  ಜನರ
ನಿತ್ಯದ ಹರಟೆಯೊಳಗೆ ಸ್ಥಾನ ಪಡೆಯುವಲ್ಲಿ ಸೋಲುತ್ತಿದೆ. ಯುವಜನತೆಯ ಆಸಕ್ತಿ  ಮತ್ತು
ನೆನಪುಗಳಿಂದ ದೂರ ಆಗುತ್ತಿದೆ.  ಬೇಸಿಗೆಯಲ್ಲಿ ಕ್ರಿಕೆಟ್ ಪಂದ್ಯಗಳು ಹಿಂದಿಗಿಂತ
ಹೆಚ್ಚೇ ನಡೆದರೂ  ಕ್ರೀಡಾಂಗಣದ ಆಸನದಲ್ಲಿ ದಕ್ಷಿಣ ಏಷ್ಯಾ ಮೂಲದ ಪ್ರೇಕ್ಷಕರೇ
ಹೆಚ್ಚಾಗಿ ಕಾಣಿಸುವುದು ಸಾಮನ್ಯ ಆಗಿದೆ.

೭೦-೮೦ರ ದಶಕದಲ್ಲಿ ಜೆಫ್  ಬಾಯ್ಕಾಟ್ ಅಥವ ಇಯಾನ್ ಬೋಥಮ್ ರು ಇಂಗ್ಲೆಂಡಿನ
ಮನೆಮಾತಾಗಿದ್ದವರು, ಆ ಕಾಲದ ಅತ್ಯಂತ ಪ್ರಸಿದ್ಧ ಫುಟ್ಬಾಲ್ ತಾರೆಯರಷ್ಟೇ ಜನಪ್ರಿಯತೆ
ಪಡೆದಿದ್ದವರು. ಆದರೆ ಪ್ರಸ್ತುತ ಇಂಗ್ಲೆಂಡ್ ತಂಡದ ನಾಯಕ ಅಥವಾ ಮುಖ್ಯ ಆಟಗಾರರ ಹೆಸರು
ಇಂಗ್ಲೆಂಡಿನ ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ. ಜೋ ರೂಟ್ ಎಲ್ಲಾದರೂ
ಬೀದಿಯಲ್ಲಿಯೋ ಅಂಗಡಿಯಲ್ಲಿಯೋ ಎದುರಾದರೆ ಹಸ್ತಾಕ್ಷರಕ್ಕೆ ದುಂಬಾಲು ಬೀಳುವುದು ಬಿಡಿ
ಗುರುತು ಹಿಡಿಯುವವರೇ ವಿರಳ ಇರಬಹುದು.  ಇಂಗ್ಲೆಂಡಿನಲ್ಲಿ ಹುಟ್ಟಿ ಬಲಿತ ,
ಇಂಗ್ಲಿಷರು ತಕ್ಕಡಿ ಹಿಡಿದು ಹೋದಲ್ಲೆಲ್ಲ ಬಿತ್ತಿ ಬೆಳೆದ ಕ್ರೀಡೆಯೊಂದು ಯಾಕೆ
ಅಸಡ್ಡೆಗೆ ಗುರಿ ಆಗುತ್ತಿರಬಹುದು ಎನ್ನುವುದರ ವಿಶ್ಲೇಷಣೆಯೂ ಆಶಸ್ ನ ಮೊದಲ ಪಂದ್ಯದ
ಅಪಮಾನಕರ ಸೋಲಿನಿಂದ , ಸ್ಟುಡಿಯೋದಲ್ಲಿ ಕುಳಿತು ಕ್ರಿಕೆಟನ್ನು ಚರ್ಚಿಸುವ ಬಿಳಿಕೂದಲ
ಗತಕಾಲದ ಇಂಗ್ಲಿಷ್ ಕ್ರೀಡಾ  ಪಂಡಿತರ ಕಾಮೆಂಟರಿಯೊಳಗೆ ಸೇರಿಕೊಂಡಿದೆ , ದಿನಪತ್ರಿಕೆಯ
ಮೂಲೆಯಲ್ಲಿ ಅಭಿಮತವಾಗಿ ಜಾಗ ಪಡೆದಿದೆ. ಆಂಗ್ಲರು ನಿಜವಾದ ಕ್ರಿಕೆಟ್ ಎಂದು ಕರೆಯುವ,
ಐದು ದಿನಗಳ ಟೆಸ್ಟ್ ಪಂದ್ಯಗಳು ಒಂದು ಕಾಲದಲ್ಲಿ ಉಚಿತವಾಗಿ ದೂರದರ್ಶನದಲ್ಲಿ
ಪ್ರಸಾರಗೊಳ್ಳುತ್ತಿದ್ದವು. ಆಶಸ್ ನ ವೀರೋಚಿತ ಸೋಲು ಗೆಲುವುಗಳು ಟಿವಿ ಇರುವ ಪ್ರತಿ
ಮನೆಯನ್ನೂ  ರೇಡಿಯೋ ಆಲಿಸುವ ಜೋಡಿ ಕಿವಿಗಳನ್ನೂ ಸುಲಭವಾಗಿ ತಲುಪುತ್ತಿದ್ದವು. ಈ
ಕಾಲದಲ್ಲಿ ಪ್ರಸಾರದ ಹಕ್ಕುಗಳನ್ನು ಚಂದಾ ನೀಡಬೇಕಾದ ಚಾನೆಲ್ ಗಳಿಗೆ ಮಾರಲಾಗಿದೆ.
ಕ್ರಿಕೆಟ್ ನಿಯಂತ್ರಣ ಮಂಡಳಿಗಳಿಗೆ ಅಲ್ಪಾವಧಿಯಲ್ಲಿ ಹಣ ಹರಿದು ಬರುವುದು
ಹೆಚ್ಚಿದೆಯಾದರೂ  ದೀರ್ಘಾವಧಿಯಲ್ಲಿ ಕ್ರಿಕೆಟಿನ ಜನಪ್ರಿಯತೆಯನ್ನು  ಕುಗ್ಗಿಸಿದೆ.
೨೦೧೯ರ ವಿಶ್ವಕಪ್ ಫೈನಲ್ಸ್ ಚಾನೆಲ್ ೪ರಲ್ಲಿ ಉಚಿತವಾಗಿ ಪ್ರಸಾರವಾಗಿದ್ದು , ತಮ್ಮ
ತಂಡ ಜಯಗಳಿಸಿದ್ದನ್ನು  ಇಂಗ್ಲೆಂಡಿನ ಉದ್ದಗಲಕ್ಕೆ  ಸಂಭ್ರಮಿಸಿದ್ದು , ಇಂಗ್ಲಿಷ್
ಮಣ್ಣಿನ ಕ್ರೀಡೆಗೆ ಸಿಕ್ಕ ಆತ್ಮೀಯತೆಯ ಕೊನೆಯ ಉದಾಹರಣೆ ಇರಬಹುದು.

ಹಾಗೆ ನೋಡಿದರೆ ಕ್ರಿಕೆಟ್  ಆಂಗ್ಲರ  ಕೈಬಿಟ್ಟು … ಆಂಗ್ಲರು  ಕ್ರಿಕೆಟಿನ ಕೈ
ಬಿಟ್ಟು  ದಶಕಗಳೇ  ಕಳೆದಿವೆ. ಇದು ಕ್ರಿಕೆಟಿಗೂ ಮತ್ತು ಅದರ ಅಳಿದುಳಿದ ಆಂಗ್ಲ
ಅಭಿಮಾನಿಗಳಿಗೂ ಬಹಳ ಬೇಸರದ  ವಿಷಯವೇನೂ  ಇರಲಿಕ್ಕಿಲ್ಲ. ಇಂಗ್ಲೆಂಡಿನಲ್ಲಿ ಈ  ಬಗ್ಗೆ
ಕಳವಳ ಪಡುತ್ತಿರುವುದಿದ್ದರೆ  ಅದು  “ಕ್ರಿಕೆಟಿನ  ತವರು ” ಎಂದು ಶತಮಾನದಿಂದ
ಕರೆಸಿಕೊಳ್ಳುತ್ತ  ಹೊಗಳಿಕೆ  ಪ್ರೀತಿ ಹೆಮ್ಮೆ ಮತ್ತು ಹೊಣೆಗಾರಿಕೆಯ  ಭಾರ ಹೊತ್ತ
ಲಾರ್ಡ್ಸ್  ಮೈದಾನ ಇರಬಹುದು .  ಲಾರ್ಡ್ಸ್  ನ ಪೆವಿಲಿಯನ್ ಗೆ ನೀವು ಭೇಟಿ
ನೀಡಿದ್ದರೆ ಆ ಐತಿಹಾಸಿಕ ಮೈದಾನದಲ್ಲಿ ಸಾಹಸ  ಮೆರೆದ  ಕ್ರಿಕೆಟಿಗರ  ಹೆಸರುಗಳ
ಫಲಕವನ್ನು ಗೋಡೆಗೆ   ತೂಗು  ಹಾಕಿದ್ದು ಗಮನಿಸಿರುತ್ತೀರಿ  , ಮತ್ತೆ ಅದರಲ್ಲಿ  ವರ್ಷ
ಕಳೆದಂತೆ ಆಂಗ್ಲರ  ಹೆಸರು ಕಡಿಮೆ  ಆಗುತ್ತಿರುವುದನ್ನೂ .  ಕಣ್ಣುಕುಕ್ಕುವ ಹಚ್ಚ
ಹಸಿರಿನ ಹುಲ್ಲಿನ ಹೊದಿಕೆಯ ಕೆಳಗೆ , ಮೆತ್ತಗೆ ಹೆಜ್ಜೆ  ಇಟ್ಟು ನಡೆಯುವ ಮತ್ತೆ
ಬೀಸುವ ತಂಗಾಳಿಗೆ  ಮೈ ಸೆಟೆದು ಪಟ ಪಟ ರೆಕ್ಕೆ ಬಡಿದು ಹಾರುವ  ಪಾರಿವಾಳಗಳ ಗುಂಪಿನ
ನೆರಳಲ್ಲಿ   ಮತ್ತು ಮೈದಾನವನ್ನು ಕೋಟೆಯಂತೆ ಸುತ್ತುವರಿದ ಹಳೆಯ ಕಟ್ಟಡಗಳು ,
ಪವಿಲಿಯನ್ ಮತ್ತು  ಡ್ರೆಸಿಂಗ್ ರೂಂಗಳ ಸುತ್ತಿನ ಕೋಟೆಯ ಒಳಗೆ  ಹುದುಗಿ  ಸೆರಗಿನ
ತುದಿಯನ್ನು ಬೆರಳಿಗೆ ಸುತ್ತುತ್ತ ಯೋಚಿಸುತ್ತಿರುವುದಿದ್ದರೆ  ಅದು  ಲಾರ್ಡ್ಸ್ ಮಾತ್ರ
ಇರಬಹುದು .

ಭಾರತದಲ್ಲಿ  ಮಣ್ಣಿನ ಆಟವಾದ  ಹಾಕಿಯನ್ನು ಹಿಂದೆ  ತಳ್ಳಿ   ಕ್ರಿಕೆಟ್
ಮೆರೆಯುವಂತೆ, ಇಂಗ್ಲೆಂಡಿನ ಕ್ರಿಕೆಟ್ ಮೈದಾನಗಳಲ್ಲಿನ  ಸಣ್ಣ ಪುಟ್ಟ ಚಪ್ಪಾಳೆ
ಶಿಳ್ಳೆಗಳನ್ನು ಮಿಕ್ಕಿಮೀರಿ  ಫುಟ್ಬಾಲ್ ರಗ್ಬಿಗಳ ಉನ್ಮಾದ ಉತ್ಸಾಹ
ಮುಗಿಲುಮುಟ್ಟುತ್ತದೆ . ಎಲ್ಲೆಂದರಲ್ಲಿ ಯಾವಾಗ ಬೇಕಾದರೂ ಅತಿ ಸುಲಭದಲ್ಲಿ ಕಡಿಮೆ
ಖರ್ಚಿನಲ್ಲಿ ಆಡಬಹುದಾದ  ಫುಟ್ಬಾಲ್  ಮಕ್ಕಳನ್ನು ಎಚ್ಚರದಲ್ಲೂ ಸ್ವಪ್ನದಲ್ಲೂ
ಕಾಡುತ್ತದೆ.  ಲೀಗ್  ಫುಟ್ಬಾಲಲ್ಲಿರುವ  ಅಪಾರ  ಹಣ , ಜನಪ್ರಿಯತೆ , ಜಾಹಿರಾತು
,ವ್ಯಾಪಾರೀ ತಂತ್ರ ಎಲ್ಲವೂ ಸೇರಿ  ಹೊಸ ಪ್ರೇಕ್ಷಕರನ್ನು ಸೇರಿಸಿಕೊಳ್ಳುತ್ತದೆ.
ಟಿವಿ, ಸಾಮಾಜಿಕ ಮಾಧ್ಯಮ , ಪಬ್ಬಿನಲ್ಲಿ ಶುಕ್ರವಾರ ಸಂಜೆಯ ಹರಟೆ ಹೀಗೆ ಎಲ್ಲೆಡೆಯೂ
ಹರಡುತ್ತದೆ.   ಜೆಂಟಲ್ ಮ್ಯಾನ್ ಗಳ ಆಟ ಎಂದು ಹೆಸರಾದ ಕ್ರಿಕೆಟ್  ಆಟದ ಈಗಿನ
ಇಂಗ್ಲಿಷ್ ಪ್ರೇಕ್ಷಕ ವರ್ಗದಲ್ಲಿ ಬಹುಪಾಲು ಜನರು ನಲವತ್ತು ಐವತ್ತು ವರ್ಷ ಮೇಲಿನವರು
ಅಂದರೆ ನಿಜವಾಗಲೂ ಪ್ರಬುಧ್ಧ  ವಯಸ್ಕ ಜೆಂಟಲ್ ಮ್ಯಾನ್ ಗಳು.

ಕ್ರೀಡೆ ಯಾವುದೇ ಇದ್ದರೂ , ಗತಕಾಲದ ಘಟನೆಗಳಿಂದಾಗಿ ಆಯಾ ಕ್ರೀಡೆಗೆ ತಕ್ಕಂತೆ  ಕೆಲವು
 ದೇಶಗಳ  ವಿರುದ್ಧ  ಆಡುವಾಗ  ತಾವು ಗೆಲ್ಲಲೇ  ಬೇಕೆಂದು  ಇಂಗ್ಲಿಷ್
ಕ್ರೀಡಾಭಿಮಾನಿಗಳು  ಹಾರೈಸುತ್ತಾರೆ. ಕ್ರಿಕೆಟಿನ  ಮಟ್ಟಿಗೆ  ಅದು  ಆಸ್ಟ್ರೇಲಿಯದ
ವಿರುದ್ಧ , ಫುಟ್ಬಾಲ್  ಆದರೆ  ಜರ್ಮನಿ, ಫ್ರಾನ್ಸ್ ಗಳ  ವಿರುದ್ಧ. ತಮ್ಮ ಬದ್ದ
ವೈರಿಯ ಜೊತೆ ಒಂದು ವೇಳೆ ಸೋತರೆ,  ವಿಶೇಷ ಟಿಪ್ಪಣಿ ಅಥವಾ ವ್ಯಂಗ್ಯದಲ್ಲೇ  ಪಂದ್ಯ
ಮತ್ತು ವಿಶ್ಲೇಷಣೆ  ಎರಡನ್ನೂ ಮುಗಿಸುತ್ತಾರೆ.  ಈ ಹಿಂದೊಮ್ಮೆ  ಇಂಗ್ಲಂಡ್
ಆಸ್ಟ್ರೇಲಿಯಾಕ್ಕೆ ಸೋತಾಗ ಬೇಸರಗೊಂಡ ನನ್ನ ಕಚೇರಿಯ  ಕ್ರಿಕೆಟ್ ಅಭಿಮಾನಿ,
ಕ್ರಿಕೆಟ್  ಮಟ್ಟಿಗೆ ಆಸ್ಟ್ರೇಲಿಯಾಕ್ಕೆ ಎಷ್ಟು  ಅದೃಷ್ಟ  ಇದೆಯೋ  ತಮ್ಮ   ದೇಶಕ್ಕೆ
 ಅಷ್ಟೇ ಪಾಲಿನ  ದುರಾದೃಷ್ಟ   ಇದೆ  ಎಂದು ಸಮರ್ಥನೆ ನೀಡಿದ್ದ ! ಹಾಗಂತ ಇಂತಹ ಹಲವು
ಸೋಲುಗಳನ್ನು ಅರಗಿಸಿಕೊಂಡಿರುವ ಲಾರ್ಡ್ಸ್ ಮೈದಾನ ಇದನ್ನು  ತನ್ನ ದುರಾದೃಷ್ಟ ಎಂದೇ
ತಿಳಿಯಬಹುದು.  ಲಾರ್ಡ್ಸ್ ನಲ್ಲಿ ನಡೆದ ೨೦೦೨ ರ  ನಾಟ್ ವೆಸ್ಟ್  ಸರಣಿಯ  ಕೊನೆಯ
ಪಂದ್ಯದಲ್ಲಿ  ಭಾರತ  ಇಂಗ್ಲೆಂಡನ್ನು ವೀರೋಚಿತವಾಗಿ ಹೋರಾಡಿ ಸೋಲಿಸಿತ್ತು. ಯುವರಾಜ್
ಮತ್ತು  ಕೈಫ್ ಅಂದಿನ ಪಂದ್ಯದ  ಜೋಡಿ ಹೀರೋಗಳು . ಈ ಪಂದ್ಯವನ್ನು  ಭಾರತ ತಂಡದ
ಡ್ರೆಸಿಂಗ್ ರೂಮಿನ ಬಾಲ್ಕನಿಯಲ್ಲಿ ನಿಂತು ಉಗುರು ಕಚ್ಚುತ್ತ ನೋಡಿ ಮುಗಿಸಿದ್ದ ಆಗಿನ
 ನಾಯಕ  ಗಂಗೂಲಿ , ತಡೆಯಲಾಗದ ಉದ್ವೇಗ  ಸಂತೋಷದಲ್ಲಿ  ಬಾಲ್ಕನಿಯಲ್ಲೇ  ನಿಂತು
ಎಲ್ಲರೆದುರೇ   ಅಂಗಿಯನ್ನು  ಕಳಚಿ  ಕೈಯಲ್ಲಿ ಹಿಡಿದು ಗರಗರ  ತಿರುಗಿಸಿದ್ದು . ಈಗಲೂ
 ಆ  ಕಾರಣಕ್ಕೆ  ಅತಿಥಿ ತಂಡದ  ಬಾಲ್ಕನಿಯನ್ನು ‘ಗಂಗೂಲಿ  ಬಾಲ್ಕನಿ ‘ ಎಂದೇ
ಅನೌಪಚಾರಿಕವಾಗಿ ಕರೆಯುತ್ತಾರೆ . ಎಷ್ಟೇ ಆನಂದ  ಆಗಲಿ    ಇಂಗ್ಲೆಂಡಿನ  ಕ್ರಿಕೆಟಿನ
ಸಂಪ್ರದಾಯಸ್ಥ   ಪ್ರೇಕ್ಷಕರು   ಹೆಚ್ಚೆಂದರೆ  ಕೂತಲ್ಲೇ ,ಅಲ್ಲದಿದ್ದರೆ ಎದ್ದು
ನಿಂತು ಕೈ  ತಟ್ಟಿ  ಅತಿಯಾದ ಹರ್ಷವನ್ನು ಸೂಚಿಸುವವರು , ಕ್ರಿಕೆಟಿನ “ಜೆಂಟಲ್
ಮ್ಯಾನ್ ” ಪರಂಪರೆಯನ್ನು ಮುರಿದ ಆ ಘಟನೆಗೆ ಬೆರಗಾಗಿದ್ದರು .  ಲಾರ್ಡ್ಸ್ ಮೈದಾನವಂತೂ
 ಆಂಗ್ಲ ಸಂಪ್ರದಾಯ ರಿವಾಜನ್ನು ಮೀರಿದ ಭಾರತೀಯನ ನಡವಳಿಕೆಗೆ ನಾಚಿ ಮುದ್ದೆ
ಆಗಿರಬಹುದು. ಇದೇ  ಮೈದಾನದಲ್ಲಿ ನಡೆದ ಇನ್ನೊಂದು  ಪಂದ್ಯದಲ್ಲಿ , ಆಸ್ಟ್ರೇಲಿಯ
ತಂಡದ  ರೋಚಕ  ಗೆಲುವನ್ನು ಸಂಭ್ರಮಿಸಲು   ಶೇನ್   ವಾರ್ನ್  ಕೂಡ  ಅತಿಥಿ ತಂಡದ
ಬಾಲ್ಕನಿಯಲ್ಲಿ  ಗಂಗೂಲಿಯಂತೆ  ಅಂಗಿ  ಕಳಚಿ  ಎಸೆದಿದ್ದ  . ಆಮೇಲೆ   ಕೆಲವರು ಈ
ಬಾಲ್ಕನಿಯನ್ನು  ‘ವಾರ್ನ್  ಬಾಲ್ಕನಿ’ಯಂತಲೂ ಕರೆಯತೊಡಗಿದ್ದರು .

ಹೀಗೆ ಕ್ರಿಕೆಟ್ ಚರಿತ್ರೆಯ ಮಾಹಾಸಂಪುಟವನ್ನು ತನ್ನೊಳಗೆ ಹುದುಗಿಸಿಕೊಂಡಿರುವ
ಲಾರ್ಡ್ಸ್ ಗೆ ಇಂಗ್ಲೆಂಡಿನ ಚರಿತ್ರೆಯಲ್ಲಿಯೂ  ವಿಶಿಷ್ಟ  ಪಾಲುದಾರಿಕೆ ಇದೆ.
ಇತಿಹಾಸದ ಜೊತೆಗೆ   ಸಣ್ಣ  ಸಂಬಂಧ  ಹೊಂದಿದ  ವಸ್ತುವನ್ನೂ  ವಿಷಯವನ್ನೂ
ವೈಭವೀಕರಿಸಿ ಪ್ರವಾಸೋದ್ಯಮದಲ್ಲಿ  ಸೇರಿಸಿಕೊಳ್ಳುವ  ಇಂಗ್ಲೆಂಡಿನಲ್ಲಿ  ,
ಕ್ರಿಕೆಟಿನ ಜನಪ್ರಿಯತೆ  ಕುಗ್ಗಿದ್ದರೂ   ಲಂಡನ್ ಪ್ರವಾಸೋದ್ಯಮದ ನಕ್ಷೆಯಲ್ಲಿ
ಲಾರ್ಡ್ಸ್ ಮೈದಾನಕ್ಕೆ  ವಿಶೇಷ ಗುರುತು ಇದೆ. ಈ ಗುರುತಿನ ಬೆನ್ನು ಹಿಡಿದು  ದುಬಾರಿ
ಎಂದು ತೋರುವ ಟಿಕೇಟು ಪಡೆದು ಮೈದಾನದ ಒಳ ನಡೆದರೆ  ಅಲ್ಲೊಬ್ಬ   ಗೈಡ್   ಲಾರ್ಡ್ಸ್
ಒಳಗೆಲ್ಲ  ಸುತ್ತಾಡಿಸಿ   ಗೋಡೆ ಫಲಕ ಮೈದಾನ ಕಂಬ ಕಿಟಕಿಗಳ ಇತಿಹಾಸ ಕಥೆ  ಹೇಳಿ
ನಿಮ್ಮನ್ನು ರಂಜಿಸುತ್ತಾನೆ. ಮತ್ತೆ  ಲಾರ್ಡ್ಸ್  ಒಳಗಿನ  ಅಂಗಡಿಯಲ್ಲಿ  ನಮ್ಮ  ನಮ್ಮ
 ರುಚಿಗೆ ಮತ್ತು  ಕಿಸೆಗೆ  ತಕ್ಕಂತೆ  ದೊರೆಯುವ ಸ್ಮರಣಿಕೆಗಳ ಕಡೆಗೂ ಗಮನ
ಸೆಳೆಯುತ್ತಾನೆ . ಲಾರ್ಡ್ಸ್ ಮೈದಾನಕ್ಕೆ ಇನ್ನಷ್ಟು ಮುಜುಗರ ಹುಟ್ಟಿಸುತ್ತಾನೆ.
ಲಾರ್ಡ್ಸ್ ನ ಹಳೆಯ ವೈಭವನ್ನು ಮೆಲುಕು ಹಾಕುತ್ತ ಗೈಡನ ಹಿಂದೆ  ಕೈ ಕಟ್ಟಿಕೊಂಡು
ದೂರದೂರದ ಪ್ರವಾಸಿ ಕ್ರಿಕೆಟ್ ಪ್ರೇಮಿಗಳು ಹಿಂಬಾಲಿಸುವಾಗ  ಲಾರ್ಡ್ಸ್ ಒಂದು
ನಿಟ್ಟುಸಿರು ಬಿಡುತ್ತದೆ, ಕ್ಯಾಮೆರ ಹಿಡಿದು ಮೈದಾನದ ವಿವಿಧ ದಿಕ್ಕುದೆಸೆಗಳ ಭಂಗಿಗಳ
ಛಾಯಾಚಿತ್ರ ತೆಗೆಯ ಹೊರಟವರಿಗೂ ಲಾರ್ಡ್ಸ್ ಮನದುಂಬಿ ನಕ್ಕಿದ್ದನ್ನು ಕ್ಲಿಕ್ಕಿಸುವುದು
 ಸಾಧ್ಯ ಆಗಲಿಕ್ಕಿಲ್ಲ . ಪ್ರೇಮಿಗಳಿಗೆ  ಕಾಶ್ಮೀರದ  ಕಣಿವೆಯಲ್ಲೋ ,
ಸ್ವಿಜರ್ಲ್ಯಾಂಡಿನ  ಹಿಮ ಶಿಖರದಲ್ಲೋ  ಸಿಗುವ ರೋಮಾಂಚನವನ್ನು ಲಾರ್ಡ್ಸ್ ಮೈದಾನ
ಕ್ರಿಕೆಟ್  ಆಟಗಾರರಿಗೆ ,  ಪ್ರೇಕ್ಷಕರಿಗೆ  ನೀಡುತ್ತಲೇ ಬಂದಿದೆ.  ಕ್ರಿಕೆಟ್
ಆಟಗಾರರು  ಪಂದ್ಯವೊಂದರಲ್ಲಿ ಶತಕವನ್ನೋ  ಅಥವಾ  ಐದು  ವಿಕೆಟುಗಳನ್ನೋ  ಪಡೆದು
ಅಲ್ಲಿನ ಶಾಶ್ವತ ಫಲಕದಲ್ಲಿ  ತಮ್ಮ  ಹೆಸರು  ಸೇರಿದರೆ  ತಮ್ಮ ಕ್ರೀಡಾ ಜನುಮಕ್ಕೆ
ಮೋಕ್ಷ  ಸಿಕ್ಕಿದವರಂತೆ  ಖುಶಿ  ಪಡುತ್ತಾರೆ . ಕ್ರಿಕೆಟಿನ  ಅಪ್ಪಟ  ಪ್ರೇಮಿಗಳು
ಲಾರ್ಡ್ಸ್ ಅಲ್ಲಿ ಕುಳಿತು  ಒಂದು  ಪಂದ್ಯವನ್ನಾದರು  ನೋಡಬೇಕೆಂದು  ಕನಸು
ಕಾಣುತ್ತಾರೆ. ಕೋಟ್ಯಾಂತರ ಜನರ ತಲೆಯಲ್ಲಿ ಗುಂಯ್ ಗುಂಯ್ ಗುಟ್ಟುವ  ಇಂತಹ ಕನವರಿಕೆಗೆ
 ತಾನೇ ಕಾರಣ  ಎನ್ನುವ ಹೆಮ್ಮೆಯಲ್ಲಿದ್ದ ಲಾರ್ಡ್ಸ್ , ತವರಿನ ತಂಡದ ಕಳಪೆ ಸಾಧನೆ,
ವಿಮುಖರಾದ ಅಭಿಮಾನಿಗಳು ಮತ್ತೆ ಕರಗುತ್ತಿರುವ ಆಸಕ್ತಿ ಜನಪ್ರಿಯತೆಗಳಿಂದ
ಸೊರಗಿಹೋಗಿದೆ  .

ಇಂಗ್ಲೆಂಡಿನ ಕ್ರಿಕೆಟ್ ಮತ್ತೆ ತನ್ನ ವೈಭವದ ದಿನಗಳನ್ನು ಮತ್ತು ಯಶಸನ್ನು
ಕಂಡುಕೊಳ್ಳುತ್ತದೋ ಇಲ್ಲವೋ , ಹೊಸ ಕ್ರಿಕೆಟ್ ಹೀರೋಗಳ ಫೋಟೋಗಳು ಚಿಣ್ಣರ ಬ್ಯಾಟುಗಳ
ಮೇಲೆ, ಶಾಲಾ  ಪುಸ್ತಕದ ಒಳಪುಟಗಳಲ್ಲಿ  ಅವಿತು  ಮಂದಹಾಸ ಬೀರುತ್ತವೋ ಇಲ್ಲವೋ ಆದರೆ
ಕ್ರಿಕೆಟ್ ಎನ್ನುವುದು ದೇಹ ಮನಸುಗಳಿಗೆ ಉಲ್ಲಾಸ ಆರೋಗ್ಯ ತರುವ   ಕ್ರೀಡೆಯಾಗಿ
ಉಳಿಯಲಿ ಎಂದು  ಕ್ರಿಕೆಟಿನ ತವರು  ಆಶಿಸುತ್ತಿರಬಹುದು.  ಜನಪ್ರಿಯತೆಯ
ಉತ್ತುಂಗದಲ್ಲಿರುವ ಫುಟ್ಬಾಲ್ ,   ಕ್ರೀಡೆಯ ಆಯ ಆಕಾರ ಗಾತ್ರವನ್ನು ಮೀರಿ ಬೆಳೆದ
ಬಲಿಷ್ಠ ದೊಡ್ಡ ಉದ್ಯಮವಾದ  ಹೊತ್ತಿನಲ್ಲಿ  , ಕ್ರಿಕೆಟ್ ಕೂಡ ಶುದ್ಧ ಮಾರುಕಟ್ಟೆಯಾಗಿ
ಬದಲಾಗುತ್ತಿರುವುದು,  ಇಂಗ್ಲೆಂಡ್ ನ ಮೈದಾನಗಳಲ್ಲಿ ಕ್ರಿಕೆಟನ್ನು ಆಸ್ವಾದಿಸುವ
ಆಂಗ್ಲ ಪ್ರೇಕ್ಷಕರು ಬಹಳ ಕಡಿಮೆ ಇದ್ದರೂ ಜಗತ್ತಿನ ಮೈದಾನದಲ್ಲಿ ಕ್ರಿಕೆಟ್
ದಿನನಿತ್ಯದ ವ್ಯಾಪಾರವಾಗಿ ಬಹಳ ಬೇಗ ಬೆಳೆಯುತ್ತಿರುವುದು , ಲಾರ್ಡ್ಸ್ ನ ಕಳವಳವನ್ನು
ಹೆಚ್ಚಿಸುತ್ತಿರಬಹುದು. ಇಷ್ಟರಲ್ಲೇ  ಕ್ರಿಕೆಟಿನ ತವರುಮನೆಯ ಮೊದಮೊದಲಿನ ಕಸಿವಿಸಿ
ಮುನಿಸುಗಳು  ಬೇಸರವೂ ಆಗಿ ಪರಿವರ್ತನೆ ಹೊಂದಿರಬಹುದು  . ಲಾರ್ಡ್ಸ್ ನ ಮೋಹಕ ಹಸಿರು
ಸೆರಗಿನ ತುದಿಯಲ್ಲಿ ಗಂಟುಗಳು ಒಂದು ಎರಡು ಮೂರು .. ಇನ್ನೂ ಹೆಚ್ಚಿರಬಹುದು.

ಪ್ರೆಸ್ಟನ್ ಭಾರತೀಯ ನೃತ್ಯ ಪರಂಪರೆ: ಭರತನಾಟ್ಯ – ಶಿಲ್ಪಾ ಜಗದೀಶ್

ಸಹೃದಯಿ ಅನಿವಾಸಿ ಬಳಗಕ್ಕೆ ನಮಸ್ಕಾರ.  ಪ್ರೆಸ್ಟನ್ನಿನ ಕುಚಿಪುಡಿ ನೃತ್ಯಗಾತಿಯರ ಬಗ್ಗೆ ಮುಂಚೆಯೇ ಬರೆದಿದ್ದೆ. ಅದೇ ಥೀಮನ್ನು ಮುಂದುವರೆಸುತ್ತ, ಇಲ್ಲಿನ ಭರತನಾಟ್ಯದ ತರಗತಿಗಳನ್ನು ಪರಿಚಯಿಸುತ್ತಿರುವೆ, ಆದರೆ ಈ ಬಾರಿ ಸ್ವತಃ ಅಲ್ಲಿ ಉತ್ಸಾಹಿ ವಿದ್ಯಾರ್ಥಿನಿಯಾಗಿರುವ ಶಿಲ್ಪಾ ಜಗದೀಶ್ ಅವರ ಮೂಲಕ. ಎಂದಿನಂತೆ ಓದಿ, ಪ್ರತಿಕ್ರಯಿಸಿ; ಮೊದಲ ಬಾರಿಗೆ ಅನಿವಾಸಿಗೆ ಬರೆಯುತ್ತಿರುವ ಶಿಲ್ಪಾ ಅವರನ್ನು ಪ್ರೋತ್ಸಾಹಿಸಿರೆಂದು ಕೋರುವ - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).
*****************************************

ಮೈಸೂರಿನಲ್ಲಿ ಹುಟ್ಟಿ, ಮಂಗಳೂರಿನಲ್ಲಿ ಬೆಳೆದು, ಈಗ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಇಂಗ್ಲಂಡಿನಲ್ಲಿ ನೆಲೆಸಿರುವ ಶಿಲ್ಪಾ ಜಗದೀಶ್ ವೃತ್ತಿಯಿಂದ ಸಂಧಿವಾತಶಾಸ್ತ್ರ (Rheumatologist) ವೈದ್ಯೆ ಮತ್ತು ಪ್ರವೃತ್ತಿಯಿಂದ ಭರತನಾಟ್ಯ ವಿದ್ಯಾರ್ಥಿನಿ. ಓದುವ ಮತ್ತು ಆಗಾಗ ಬರೆಯುವ ಗೀಳು ತಂದೆಯಿಂದ ಬಂದದ್ದು ಎಂದು ಅವರ ನಂಬಿಕೆ.

*****************************************
ಪ್ರೆಸ್ಟನ್ ಭಾರತೀಯ ನೃತ್ಯ ಪರಂಪರೆ, ಭಾಗ ೨: ಭರತನಾಟ್ಯ 

ಭರತಮುನಿ ವಿರಚಿತ ನಾಟ್ಯಶಾಸ್ತ್ರ ಭಾರತೀಯ ಕಲೆಗಳ ಮೂಲಗ್ರಂಥ. ಅದನ್ನು ಆಧರಿಸಿ ಪ್ರಚಲಿತವಾಗಿರುವ ಭಾರತೀಯ ನೃತ್ಯಪರಂಪರೆಯಲ್ಲಿ ಭರತನಾಟ್ಯ ಒಂದು ಪ್ರಸಿದ್ಧ ಪ್ರಕಾರ.

ಭರತನಾಟ್ಯದ ನಾಲ್ಕು ಪ್ರಸಿದ್ಧ ಶೈಲಿಗಳಲ್ಲಿ ಮೈಸೂರು ಶೈಲಿಯೂ ಒಂದು. ಕಲಾಕ್ಷೇತ್ರ, ಪಂದನಲ್ಲೂರು ಮತ್ತು ತಂಜಾವೂರು ಶೈಲಿಗಳು ಭರತನಾಟ್ಯದ ಉಗಮ ಸ್ಥಾನವಾದ ತಮಿಳುನಾಡಿನಲ್ಲಿ ಉದಯಿಸಿದವು.

ಅಂದಿನ ಕಾಲದಲ್ಲಿ ರಾಜಾಶ್ರಯದಲ್ಲಿ ಏಳಿಗೆ ಪಡೆದ ಭರತನಾಟ್ಯ ಇಂದು ಆಸಕ್ತ ಗುರುಗಳಿಂದ ಅಭಿವೃದ್ಧಿ ಹೊಂದುತ್ತಿದೆ.

ಪ್ರೆಸ್ಟನ್ನಿನ ಗುಜರಾತ್ ಹಿಂದೂ ಸೊಸೈಟಿಯ ದೇವಸ್ಥಾನದಲ್ಲಿ ಭರತನಾಟ್ಯ ಕಲಿಸುತ್ತಿರುವ ಗುರು ಡಾ|| ಸ್ವಾತಿ ರಾವುತ್ ನನ್ನ ಗುರುಗಳು. ಬುಧವಾರ ಗೂಧೂಳಿಯ ಸಮಯದಲ್ಲಿ (ಸಾಯಂಕಾಲ) ತರಗತಿಗಳು ನಡೆಯುತ್ತವೆ. ವಿದ್ಯಾರ್ಥಿಗಳ ಆಸಕ್ತಿ ಅರಿತು ಪೋಷಿಸುವುದಲ್ಲಿ ಅವರು ಕರಗತರು. ಪ್ರೆಸ್ಟನ್ ಅಲ್ಲದೆ ವಿಗನ್ ಮತ್ತು ಲಿವರ್ಪೂಲ್‍ನಲ್ಲಿಯೂ ಅವರು ಭರತನಾಟ್ಯ ಕಲಿಸುತ್ತಾರೆ. ಕಳೆದ ಎರಡು ದಶಕಗಳಿಂದ ಈ ನೃತ್ಯ ಪ್ರಕಾರದ ಏಳಿಗೆಗೆ ಅವಿರತ ಶ್ರಮಿಸಿದ್ದಾರೆ. ಸ್ವಾತಿ ಡಾನ್ಸ್ ಅಕಾಡೆಮಿ ಕಟ್ಟಿ ತಾರತಮ್ಯವಿಲ್ಲದೆ ಎಲ್ಲಾ ವಯಸ್ಸಿನ ಶಿಷ್ಯರಿಗೂ ನಾಟ್ಯಸುಧೆ ಉಣಿಸುತಿದ್ದಾರೆ. ಶಿಷ್ಯರ ಸರ್ವಾoಗೀಣ ವ್ಯಕ್ತಿತ್ವ ಅಭಿವೃದ್ಧಿಗೆ ಪೂರಕ ವಾತಾವರಣ ತರಗತಿಗಳಲ್ಲಿ ಇರುತ್ತದೆ.

ನೃತ್ಯಕ್ಷೇತ್ರದ ಹಲವು ಉಪಾಧಿಗಳು ಅವರನ್ನರಸಿ ಬಂದಿವೆ. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆ ಅವರಿಗೆ ಅನ್ವರ್ಥ. ಪಂದನಲ್ಲೂರು ಬನಿಯೊಂದಿಗೆ ಕೊಂಚ ಕಲಾಕ್ಷೇತ್ರ ಮಿಳಿತವಾಗಿದೆ ನಮ್ಮ ಕಲಿಕೆಯಲ್ಲಿ. ಒಂದು ನೃತ್ಯ ಪ್ರಕಾರ ಕಲಿಯುವುದೇ ಜೀವಮಾನದ ಸಾಧನೆ ಎಂದು ತಿಳಿದಿದ್ದ ನನಗೆ ನಮ್ಮ ಗುರುಗಳು ಎರಡು ಭರತನಾಟ್ಯ ಶೈಲಿಗಳೊಂದಿಗೆ ಮೋಹಿನಿಯಾಟ್ಟಮ್ ಸಹ ಕಲಿತಿದ್ದಾರೆಂದು ತಿಳಿದಾಗ ಅಚ್ಚರಿಯಾಯಿತು ಹಾಗೆ ಗೌರವವು ದುಪ್ಪಟ್ಟಾಯಿತು. ನೃತ್ಯಕ್ಷೇತ್ರದಲ್ಲಿ ಗುರು ಪರಂಪರೆ ಇನ್ನೂ ಚಾಲ್ತಿಯಲ್ಲಿದೆ.

ನೃತ್ಯ ಕಲಿಕೆಗೆ ನನ್ನ ಪ್ರವೇಶ ಬಹಳ ತಡವಾಗಿಯೇ ಆಯಿತೆಂದು ಹೇಳಬಹುದು. ಒಂಬತ್ತನೆ ತರಗತಿಯ ಕೊನೆಯಲ್ಲಿ ಪುತ್ತೂರಿನ ನಮ್ಮ ಮನೆಯ ಬಳಿ ಹೊಸ ಭರತನಾಟ್ಯ ಶಾಲೆ ಶುರುವಾಯಿತು. ಕುಂಟೇಬಿಲ್ಲೆ, ಥ್ರೋ ಬಾಲ್ ಅಡಿ ಮಣ್ಣಿನ ಶಿಲ್ಪದಂತೆ ಮನೆಗೆ ಬರುವ ನಮ್ಮನ್ನು ಈ ಶಾಲೆಗೆ ಸೇರಿಸಿದರು.

ಎಂಟನೇ ಮತ್ತು ಒಂಬತ್ತನೇ ವರ್ಗದಲ್ಲಿ ಶಾಲಾ ನೃತ್ಯದಿಂದ ನಿನಗೆ ಬರುವುದಿಲ್ಲ ಎಂದು ಹೊರದೂಡಿಸಿಕೊಂಡಿದ್ದ ನನಗೆ, ಕಲಿಯೋಣ ಎಂಬ ಆಸಕ್ತಿ ಇದ್ದರೂ ಅನುಕೂಲ ಇರಲಿಲ್ಲ. ನೃತ್ಯ ಕಲಿಯುವ ಹುಮ್ಮಸ್ಸು ಬಹಳ ಇತ್ತು, ಈಗಲೂ ಇದೆ - ಎಂದಿಗೂ ಬತ್ತದಿರುವ ಒರತೆಯಂತೆ.
ವೈದ್ಯಳಾಗುವ ಹಂಬಲ ಮತ್ತು ಅದಕ್ಕೆ ಬೇಕಾಗುವ ತನ್ಮಯತೆಯಿಂದಾಗಿ ನೃತ್ಯ ಕಲಿಕೆ ಅರ್ಧಕ್ಕೆ ನಿಂತು ಹೋಯಿತು. ಮದುವೆಯಾಗಿ ಇಂಗ್ಲೆಂಡಿಗೆ ಬಂದಿಳಿದು, ಕೆಲಸಕ್ಕಾಗಿ ಊರೂರು ಅಲೆದು, ಎರಡು ಮಕ್ಕಳಾದ ಮೇಲೆಯೂ ನಾನಿರುವ ಊರಿನಲ್ಲಿ ಯಾರಾದರೂ ಗುರುಗಳು ಇದ್ದಾರಾ ಎಂದು ಹುಡುಕಾಡುತ್ತಿದ್ದೆ. ಗೆಳತಿಯೊಬ್ಬಳು ಸ್ವಾತಿ ಗುರುಗಳ ಚರದೂರವಾಣಿ ಸಂಖ್ಯೆ ಕೊಟ್ಟಾಗ ಸ್ವರ್ಗಕ್ಕೆ ಮೂರೇ ಗೇಣು ಎಂದೆನಿಸಿತು. ನೀನು ಎಳೆ ಹುಡುಗಿಯoತೆಯೇ ಕಾಣುತ್ತಿಯ, ಅವರೊಂದಿಗೆ ಸೇರಿ ಕಲಿ ಎಂದು ನಾನು ಎಲ್ಲಿಗೆ ಕಲಿಕೆ ನಿಲ್ಲಿಸಿದ್ದೆನೋ ಅದೇ ಸ್ತರಕ್ಕೇ ಸೇರಿಸಿಕೊಂಡರು.

ಕಲಿಕೆ ನಿಂತೇ ಇಲ್ಲವೇನೋ ಎಂಬಂತೆ ಮುಂದುವರೆಯಿತು. ಒಂದು ದಶಕದ ಕಂದಕ ಅಷ್ಟು ಬೇಗ ಕಾಣದಂತೆ ಮಾಯವಾದದ್ದು ನೋಡಿ ಅಚ್ಚರಿಯಾಯಿತು. ಬ್ಲಾಕ್‍ಪೂಲ್‍ನಲ್ಲಿ ದೀಪಾವಳಿ ಆಚರಣೆಗೆ ಭಾರತೀಯ ನೃತ್ಯ ತಂಡಗಳಿಗೆ ವಿಶೇಷ ಆಹ್ವಾನವಿತ್ತು. ಅಂದಿನ ದಿನ ಬ್ಲಾಕ್‍ಪೂಲ್ ಟವರ್ ಎದುರು ಹಾಕಿದ್ದ ರಂಗಮಂಚದಲ್ಲಿ ನೂರಾರು ಜನರೆದುರಲ್ಲಿ ತಿಲ್ಲಾನ ನೃತ್ಯ ಪ್ರಸ್ತುತಪಡಿಸಿದೆವು. ಭರತನಾಟ್ಯ ಮಾರ್ಗದ ಉತ್ತರಾರ್ಧದಲ್ಲಿ ತಿಲ್ಲಾನ ಸಂತೋಷ ವ್ಯಕ್ತಪಡಿಸುವ ನಾಟ್ಯ. ರಂಗಪ್ರವೇಶದಲ್ಲಿ ಪ್ರಸ್ತುತ ಪಡಿಸುವ ನೃತ್ಯಸರಣಿಗೆ ಮಾರ್ಗo ಎನ್ನುತ್ತಾರೆ. ತಾತ್ಕಾಲಿಕ ತೆರೆದ ವೇದಿಕೆ ಆದ್ದರಿಂದ ಹತ್ತಿರದಲ್ಲಿ ಯಾವ ಸೌಲಭ್ಯ ಇರಲಿಲ್ಲ. ದೂರದಲ್ಲಿ ಕಾರು ನಿಲ್ಲಿಸಿ ಪೂರ್ತಿ ಭರತನಾಟ್ಯ ವೇಷಭೂಷಣದಲ್ಲಿ ಬ್ಲಾಕ್‍ಪೂಲ್ ರಸ್ತೆಗಳಲ್ಲಿ ನಡೆದು ಬ್ಲಾಕ್‍ಪೂಲ್ ಟವರ್ ತಲುಪಿದ್ದಾಯಿತು, ಅಚ್ಚರಿ ತುಂಬಿದ ನೋಟಗಳ ನಡುವೆ. ನೂರಾರು ಸ್ಥಳೀಯರ ಸಮಕ್ಷಮದಲ್ಲಿ ಭಾರತೀಯ ನೃತ್ಯಗಳ ಪ್ರಸ್ತುತಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮವಾದ ಮೇಲೆ ಮೆರವಣಿಗೆಯಂತೆ ವಾಪಸ್ ಕಾರಿನೆಡೆಗೆ ಬರುವಾಗ ಬಹಳ ಜನ ನನ್ನ ಗುರುತು ಹಿಡಿದು ನಮ್ಮ ನೃತ್ಯ ಅದ್ಭುತವಾಗಿತ್ತು, ಪ್ರತಿವರ್ಷ ನೋಡಲು ಬರುತ್ತೇವೆ ಎಂದು ಕೊಂಡಾಡಿದಾಗ ನಮ್ಮ ಶ್ರಮ ಸಾರ್ಥಕವಾಯಿತು ಎಂದು ಆನಂದವಾಯಿತು.

ನಾವು ಪ್ರತಿವರ್ಷ ಎದುರು ನೋಡುವ ಸಂದರ್ಭ ನಮ್ಮ ಸ್ವಾತಿ ಡಾನ್ಸ್ ಕಂಪನಿ ನೃತ್ಯಶಾಲೆಯ ವಾರ್ಷಿಕ ಕಲಾಪ್ರದರ್ಶನ ‘ಸಮಯೋಗ’. ವರ್ಷದ ಕಲಿಕೆಯನ್ನು ನಮ್ಮ ಕುಟುಂಬ ಮತ್ತು ಅತಿಥಿಗಳೆದುರು ಪ್ರದರ್ಶಿಸುವ ಸದವಕಾಶವನ್ನು ಈ ಕಾರ್ಯಕ್ರಮ ಒದಗಿಸುತ್ತದೆ. ಇದನ್ನು ವಿಶ್ವ ನೃತ್ಯ ದಿನದ ಆಸುಪಾಸಿನಲ್ಲಿ ಸ್ವಾತಿ ಗುರುಗಳು ಆಯೋಜಿಸುತ್ತಾರೆ.

ಈ ವರ್ಷ ಭಾರತದಿಂದ ತಂದೆಯವರು ಬಂದು ವೀಕ್ಷಿಸಿದ್ದು ನನ್ನ ಭಾಗ್ಯ.

ನೃತ್ಯಾಸಕ್ತರಿಗೆಲ್ಲ ಪ್ರಣಾಮಗಳು. ನಿಮಗೂ ಕಲಿಯುವ ಆಸಕ್ತಿ ಇದ್ದರೆ ಕೆಳಗೆ ಕೆಲವು ವೆಬ್ ವಿಳಾಸಗಳನ್ನು ಉಪಯೋಗಿಸಿ ಸಮೀಪ ಇರುವ ಗುರುಗಳ ಮಾಹಿತಿ ಹುಡುಕಿ. ಕಲಾಸಕ್ತರು ಆಯೋಜನೆ ಮಾಡುವ ಕಾರ್ಯಕ್ರಮಗಳ ಮೂಲಕ ನಮ್ಮ ಪ್ರಾಚೀನ ಕಲೆ ಉಳಿಯಲಿ, ಬೆಳೆಯಲಿ ಎಂದು ಆಶಿಸುತ್ತೇನೆ.

ನಮ್ಮ ಶಾಲೆ - https://swatidance.com/
ಡಾನ್ಸ್ ಸ್ಕೂಲ್ ಡೈರೆಕ್ಟರಿ - https://www.akademi.co.uk/resources/dance-school-directory/
ಸಿoಫೊನಿ ಒಫ್ ಮೂವ್ಮೆಂಟ್ ಟ್ರೈಲರ್ - https://youtu.be/XWTo83YkQCE

************************************

ಕೃತಜ್ಞತೆಗಳು –
ನನ್ನ ತಂದೆ ಜಗದೀಶ್ ಅವರಿಗೆ, ಅತ್ಯಮೂಲ್ಯ ಸಲಹೆ ಸೂಚನೆ ನೀಡಿ ಈ ಬರಹ ತಿದ್ದಿದ್ದಕ್ಕಾಗಿ.
ಡಾ. ಗುಡೂರ್ ಅವರಿಗೆ, ಬರೆಯಲು ನಿರಂತರ ಪ್ರೋತ್ಸಾಹ ನೀಡಿದ್ದಕ್ಕೆ.
ಗುರು ಡಾ. ಸ್ವಾತಿ ರೌತ್ ಮತ್ತು ನನ್ನ ಸಹಪಾಠಿಗಳಿಗೆ - ಚಿತ್ರಗಳನ್ನ ಬಳಸಲು ಅನುಮತಿ ನೀಡಿದ್ದಕ್ಕಾಗಿ.

- ಶಿಲ್ಪಾ ಜಗದೀಶ್, ಪ್ರೆಸ್ಟನ್ ಯು ಕೆ.
ಗುರು ಡಾ. ಸ್ವಾತಿ ರಾವುತ್.
ಡಾ. ಸ್ವಾತಿ ರಾವುತ್ ಅವರ ವಿದ್ಯಾರ್ಥಿನಿಯರು.
*****************************************