ಕೆಹನಾ ಕ್ಯಾ ಚಾಹತೇ ಹೋ?

ಕೆಹನಾ ಕ್ಯಾ ಚಾಹತೇ ಹೋ?

ಈ ವಾರದ ಲೇಖನ ಓದಲು ಕೊಟ್ಟಾಗ ಹೆಂಡತಿಯ ಮೊದಲ ಉದ್ಘಾರ ಇದು. ವಿಜ್ಞಾನ, ದೇವರು, ಧರ್ಮ ಏನೆಲ್ಲಾ ವಿಷಯ ಒಂದೇ ಲೇಖನದಲ್ಲಿ ಹಾಕಿ ಅದನ್ನು ಚಿತ್ರಾನ್ನ ಮಾಡಿದ್ದಿಯ ಎಂದು ತನ್ನ ಅಭಿಪ್ರಾಯ ತಿಳಿಸಿದಳು, ನನ್ನ ಅಣ್ಣನೂ ಹಲವು ಸಲ ನನಗೆ ರಿಸರ್ಚ್ ಲೇಖನ ಬರೆಯುದು ಬಿಟ್ಟು ನಿನ್ನ ವಿಚಾರ ಹಂಚಿಕೊ ಎಂದು ಹೇಳುತ್ತಿರುತ್ತಾನೆ. ನನಗೋ ಓದಿದ ವಿಷಯ, ಕೇಳಿದ ವಿಷಯ ಒಂದೆಡೆ ಸೇರಿಸಿ ಅದನ್ನು ಹದವಾಗಿ ಕಲಿಸಿ, ಉಣಿಸಿದಾಗ ಖುಷಿ ಸಿಗುತ್ತದೆ. ಸಂಕೀರ್ಣ ವಿಷಯ ತಿಳಿಸುವಾಗ ನನ್ನದಷ್ಟೇ ವಿಚಾರಗಳನ್ನು ಹಂಚಿಕೊಳ್ಳದೇ, ಅದನ್ನು ಬೇರೆಯವರು ನೋಡುವ ಪರಿ ಸೇರಿಸಿದಾಗ ಸರಳ ಮಾಡಬಹುದೆಂಬ ಅನಿಸಿಕೆ ನನ್ನದು. ಅಂತಹದೇ ಒಂದು ಪ್ರಯತ್ನ ಇಂದಿನ ಲೇಖನ, ಹದವಾಗಿದೆ ಬೆರಸಿದ್ದೇನೆ ಅಂದುಕೊಳ್ಳುತೇನೆ.

“Science without religion is lame, religion without science is blind”
(Albert Einstein )

ಮೇಲಿನ ಸಾಲುಗಳು ಆಲ್ಬರ್ಟ್ ಐನ್ಸ್ಟೀನ್ ಅವರ ಅಭಿಪ್ರಾಯ, ಇನ್ನೂ ಸ್ಟೀಫನ್ ಹಾಕಿಂಗ್ ಏನು ಹೇಳುತ್ತಾರೆ ನೋಡೋಣ, ಅವರು ತಮ್ಮ ಒಂದು ಸಂದರ್ಶನದಲ್ಲಿ ಹೇಳುತ್ತಾರೆ “ಶತಮಾನಗಳಿಂದ, ನನ್ನಂತಹ ಅಂಗವಿಕಲರು ದೇವರು ಕೊಟ್ಟ ಶಾಪದಿಂದ ಈ ರೀತಿ ಬದುಕುತ್ತಿದ್ದಾರೆ ಎಂದು ನಂಬಲಾಗಿದೆ. ಸರಿ, ನಾನು ಯಾರಿಗಾದರೂ ತಪ್ಪು ಅಥವಾ ಅಸಮಾಧಾನಗೊಳಿಸಿರಬಹುದು ಎಂದು ನಾನು ಭಾವಿಸುತ್ತೇನೆ, ಆದರೆ ಈ ಎಲ್ಲವನ್ನೂ ಪ್ರಕೃತಿಯ ನಿಯಮಗಳಿಂದ ಇನ್ನೊಂದು ರೀತಿಯಲ್ಲಿ ವಿವರಿಸಬಹುದು. ನೀವು ವಿಜ್ಞಾನವನ್ನು ನಂಬಿದರೆ, ಯಾವಾಗಲೂ ಪಾಲಿಸಬೇಕಾದ ಕೆಲವು ನಿಯಮಗಳಿವೆ ಎಂದು ನೀವು ನಂಬುತ್ತೀರಿ. ನೀವು ಬಯಸಿದರೆ, ನಿಯಮಗಳು ದೇವರ ಕೆಲಸ ಎಂದು ನೀವು ಹೇಳಬಹುದು, ಆದರೆ ಅದು ದೇವರ ಅಸ್ತಿತ್ವದ ಪುರಾವೆಗಿಂತ ಹೆಚ್ಚಾಗಿ ಅವನ ವ್ಯಾಖ್ಯಾನವಾಗಿದೆ.”

ಧರ್ಮ, ದೇವರು, ವಿಜ್ಞಾನ, ಈ ವಿಚಾರವಾಗಿ ಹಿಂದಿನಿಂದಲೂ ಜನರ ಭಿನ್ನಾಭಿಪ್ರಾಯ ಅಥವಾ ತಿಕ್ಕಾಟ ನಡೆಯುತ್ತಲೇ ಇದೆ. ಗೆಲಿಲಿಯೋ ಭೂಮಿ ಸೂರ್ಯನ ಸುತ್ತ ತಿರುಗತ್ತದೆ ಎಂದು ಪ್ರತಿಪಾದಿಸಿದಾಗ ಅವನನ್ನು ಗ್ರಹ ಬಂಧನದಲ್ಲಿ ಇರಿಸಿ ಅವನ ಪುಸ್ತಕಗಳ ನಿಷೇದ ಮಾಡಿದ್ದು ಕೆಲವು ಧರ್ಮ ಗುರುಗಳು. ಇಂದಿನ ನನ್ನ ಲೇಖನದಲ್ಲಿ ನಾನು ಧರ್ಮವನ್ನು ಸರಿ ಎಂದು ಅಥವಾ ವಿಜ್ಞಾನ ಸರಿ ಎಂದು ವಾದಿಸುತ್ತಿಲ್ಲ, ವಿಷಯವನ್ನು ಅರಿಯುವ ಒಂದು ಪ್ರಯತ್ನ ಅಷ್ಟೇ. ಕೆಲವು ವಿಚಾರಗಳನ್ನು ಅರಿತು, ಅದನ್ನು ವಿಭಿನ್ನ ರೀತಿಯಲ್ಲಿ ಹೇಗೆ ನೋಡಬಹುದೆಂಬ ಒಂದು ಪ್ರಯತ್ನ.

ಇನ್ನೊಂದು ಉದಾಹರಣೆ “ಹಿಮಾಲಯದ ಮಹಾತ್ಮರ ಸನ್ನಿದಿಯಲ್ಲಿ” ಪುಸ್ತಕದಲ್ಲಿ ಹಲವು ಮಹಾತ್ಮರ ಬಗ್ಗೆ ಉಲ್ಲೇಖವಿದೆ, ಅವರು ತಮ್ಮ ತನು, ಮನ ನಿಯಂತ್ರಣದಿಂದ ಸಾಮಾನ್ಯ ಮನುಷ್ಯನಿಗೆ ಆಗದ ಕಾರ್ಯ ಮಾಡಿದ್ದಾರೆ, ವಯಸ್ಸು ಮತ್ತು ಸಾವನ್ನು ತಮ್ಮ ಹಿಡಿತದಲ್ಲಿ ಇರಿಸಿದ್ದಾರೆ. ಅವರ ದೇಹದ ಹಾಗೂ ಮನಸ್ಸಿನ ನಿಯಂತ್ರಣ ವಿಜ್ಞಾನದಿಂದಲೂ ಸುಲಭವಾಗಿ ವಿವರಿಸಲು ಅಸಾಧ್ಯ. ಆ ಪುಸ್ತಕದಲ್ಲೇ ಇನ್ನೊಂದು ತರಹದ ವ್ಯಕ್ತಿಗಳ ಬಗ್ಗೆ ತಿಳಿಸುತ್ತಾರೆ, ಕೊರಳಿಗೆ ಹಾವನ್ನು ಹಾಕಿಕೊಂಡು ಬಂದು ನಮ್ಮ ಮನದಲ್ಲಿ ನಡೆಯುತ್ತಿರುವ ವಿಚಾರವನ್ನು ಸರಾಗವಾಗಿ ಹೇಳುವ, ಹಣ ಕೇಳುವ ಜನರ ಕಪಟತನದ ಬಗ್ಗೆ. ಮನಸ್ಸನ್ನು ಅರಿಯುವ ಚತುರತೆಯಿಂದ ಇಂತಹ ಜನರು ವಿಜ್ಞಾನವನ್ನು (ದುರು) ಉಪಯೋಗಿಸಿ ನಿಂಬೆ ಹಣ್ಣಿನಲ್ಲಿ ರಕ್ತ ಬರಿಸುವುದು, ಕರ್ಪೂರ ಹೊತ್ತಿ ಉರಿಸುವದು ಮಾಡಿ ಜನರಿಗೆ ಧರ್ಮದ ಹೆಸರಿನಲ್ಲಿ ಮೋಡಿ ಮಾಡುತ್ತಾರೆ.

ವಿಜ್ಞಾನ ಮತ್ತು ಧರ್ಮ ಕೂಡಿಸಲು ಆಗದ ಮತ್ತು ಬಿಡಿಸಲೂ ಆಗದ ಸಂಬಂಧ, ಇದನ್ನು ಸುಂದರವಾಗಿ ಡ್ಯಾನ್ ಬ್ರೌನ್ ತನ್ನ ಪುಸ್ತಕ “ಏಂಜೆಲ್ಸ್ ಅಂಡ್ ಡೆಮಾನ್ಸ್ ” ನಲ್ಲಿ ತೋರಿಸುತ್ತಾನೆ. ಪುಸ್ತಕದ ಕಥೆ ಇರುವದೇ ವಿಜ್ಞಾನ ಮತ್ತು ಧರ್ಮ ಹೊಡೆದಾಟದ ಕುರಿತು, ಆದರೂ ಇದರ ಕೊನೆ ವಿಜ್ಞಾನ ಅಥವಾ ಧರ್ಮ ಸರಿ ಎಂದು ಸಮರ್ಥಿಸಲು ಅಲ್ಲ. ಈ ಪುಸ್ತಕದಲ್ಲಿ ಯುರೋಪಿಯನ್ ನ್ಯೂಕ್ಲಿಯರ್ ರಿಸರ್ಚ್ ಸಂಸ್ಥೆಯ ಒಂದು ವೈಜ್ಞಾನಿಕ ಶೋಧನೆ “Antimatter ” ಬಗ್ಗೆ ಪ್ರಸ್ತಾಪವಿದೆ. ದ್ರವ್ಯ (ಮ್ಯಾಟರ್) ಮತ್ತು ಪ್ರತಿದ್ರವ್ಯ (ಆಂಟಿಮ್ಯಾಟರ್) ಒಂದೇ ಪ್ರತಿರೂಪಗಳು ಆದರೆ ವಿರುದ್ಧ ವಿದ್ಯುದಾಂಶವನ್ನು ಹೊಂದಿರುತ್ತವೆ. ದ್ರವ್ಯ ಮತ್ತು ಪ್ರತಿದ್ರವ್ಯ ಜೊತೆಗೆ ಸಂಪರ್ಕಕ್ಕೆ ಬಂದರೆ, ಶುದ್ಧ ಶಕ್ತಿಯಾಗಿ ನಾಶವಾಗುತ್ತದೆ. ಇನ್ನು ನಾವು ವಾಸಿಸುವ ಭೂಮಿ ದ್ರವ್ಯದಿಂದ ಕೂಡಿದೆ; ಪ್ರತಿ ಒಂದು ಕಣ, ಸ್ಥಳದಲ್ಲಿ ದ್ರವ್ಯ ಇದೆ. ಎಲ್ಲೆಲ್ಲೂ ದೃವ್ಯ ಇದೆ ಎಂದು ಬರೆಯುವಾಗ ಕನಕದಾಸರ ಮತ್ತು ಅವರ ಗುರುಗಳ ಒಂದು ಪ್ರಸಂಗ ನೆನಪು ಬಂತು, ಅದನ್ನು ಓದಿ ಮುಂದುವರೆಯೋಣ,

ಒಂದು ಸಲ, ಏಕಾದಶಿಯ ಉಪವಾಸದ ದಿನ, ವ್ಯಾಸರಾಜರು ತಮ್ಮ ಎಲ್ಲ ವಿದ್ಯಾರ್ಥಿಗಳನ್ನು ಕರೆದು, ‘ನಾನು ನಿಮಗೆ ಒಬ್ಬೊಬ್ಬರಿಗೂ ಒಂದೊಂದು ಬಾಳೆಹಣ್ಣು ನೀಡುತ್ತಿದ್ದೇನೆ, ಯಾರೂ ನಿಮ್ಮನ್ನು ನೋಡದ ಸ್ಥಳವನ್ನು ನೀವು ಕಂಡುಕೊಂಡರೆ ನೀವು ಅದನ್ನು ತಿನ್ನಬಹುದು’ ಎಂದು ಹೇಳಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಬಾಳೆಹಣ್ಣನ್ನು ತೆಗೆದುಕೊಂಡು ರಹಸ್ಯ ಸ್ಥಳಗಳನ್ನು ಹುಡುಕಲು ಪ್ರಾರಂಭಿಸಿದರು. ಸಂಜೆ ಗುರು ವ್ಯಾಸತೀರ್ಥರು ಪಾಠದ ನಂತರ ಅವರು ತಮ್ಮ ಬಾಳೆಹಣ್ಣುಗಳನ್ನು ಎಲ್ಲಿ ಮತ್ತು ಹೇಗೆ ತಿಂದರು ಎಂದು ಕೇಳಿದರು. ಕೆಲವರು ಅವರು ಕತ್ತಲೆಯ ಮೂಲೆಗೆ ಹೋದರು, ಇತರರು ಮರದ ಹಿಂದೆ ಅಡಗಿಕೊಂಡರು ಅಥವಾ ಕಾಡಿಗೆ ಹೋಗಿದ್ದಾರೆ ಎಂದು ಹೇಳಿದರು. ಕನಕ ದಾಸರ ಸರದಿ ಬಂದಾಗ, ಅವರು ತಮ್ಮ ತಿನ್ನದ ಬಾಳೆಹಣ್ಣನ್ನು ತೋರಿಸಿ, ‘ಕ್ಷಮಿಸಿ, ನಾನು ನನ್ನ ಬಾಳೆಹಣ್ಣನ್ನು ತಿನ್ನಲಿಲ್ಲ. ನಾನು ತುಂಬಾ ಹುಡುಕಿದೆ ಆದರೆ ಯಾರೂ ಇಲ್ಲದ ಸ್ಥಳ ನನಗೆ ಸಿಗಲಿಲ್ಲ. ನಾನು ಎಲ್ಲಿಗೆ ಹೋದರೂ, ದೇವರು ಯಾವಾಗಲೂ ನನ್ನನ್ನು ನೋಡುತ್ತಿದ್ದನು. ಯಾರಿಗೂ ತಿಳಿಯದಂತೆ ನಾನು ತಿನ್ನಬೇಕೆಂದು ನೀವು ಹೇಳಿದ್ದೀರಿ, ನಾನು ಹಾಗೆ ಮಾಡಲು ಸಾಧ್ಯವಿಲ್ಲ ಏಕೆಂದರೆ ದೇವರು ಎಲ್ಲೆಡೆ ಇದ್ದನು’. ದ್ರವ್ಯ ಇರದ ಸ್ಥಳದಲ್ಲಿ ಬಾಳೆಹಣ್ಣನ್ನು ತಿನ್ನಲು ಹೇಳಿದರೆ, ನಾವು ಅದನ್ನು ತಿನ್ನದೇ ಒಯ್ಯಬೇಕಾಗುತ್ತದೆ.

ದೇವರು ಯಾರು? ಪ್ರತಿಯೊಬ್ಬರದು ಒಂದೊಂದು ಅನುಭವ, ಅಭಿಪ್ರಾಯ

ದೇವರ ಆಟ ಬಲ್ಲವರಾರು.. ಆತನ ಎದಿರು ನಿಲ್ಲುವರಾರು..
ಕೇಳದೆ ಸುಖವ ತರುವ.. ಹೇಳದೆ ದುಃಖವ ಕೊಡುವ..
ತನ್ನ ಮನದಂತೆ ಕುಣಿಸಿ ಆಡುವ..

ಇಲ್ಲಿ “ದೇವರು” ಎಂದರೆ ಯಾರು ಎಂಬ ಪ್ರಶ್ನೆ ಮುಖ್ಯ? ಬಲ್ಲವರು ಅದನ್ನು ಮಹಾಶಕ್ತಿ ಅನ್ನಬಹುದು, ಇನ್ನೂ ಕೆಲವರು ಅದಕ್ಕೆ ರೂಪ ಕೊಡಬಹುದು. ಅದಕ್ಕೆ ಮಹಾನ್ ಶಕ್ತಿ ಇರುವ ಕಾರಣ ಅದನ್ನು ಒಳಿತಿಗಾಗಿ ಪೂಜಿಸಬಹುದು. ಇದೆ ಕಾರಣ ಇರಬಹುದು ಮೊದಲು ಶಕ್ತಿ ಪೂಜೆ ಆಗಿದ್ದು …ನೀರು, ನೆಲ, ಗಾಳಿ, ಬೆಂಕಿ ಮತ್ತು ಆಕಾಶ ಪಂಚಭೂತಗಳು ದೈವಗಳಾಗಿದ್ದು. ನಿಸರ್ಗದ ಆಟ ಪ್ರತಿ ವರ್ಷ ನಾವು ನೋಡುತ್ತೇವೆ, ಪ್ರವಾಹ ಬಂದು ಮುಳುಗಿದ ಜನ ವಸತಿಗಳೆಷ್ಟೋ, ಸುಟ್ಟ ಕಾಡುಗಳ ಬೆಂಕಿ ಊರೊಳಗೆ ಬಂದು ರುದ್ರ ನರ್ತನ ಮಾಡಿವೆ, ಸರಿದ ನೆಲ ಊರನ್ನೇ ನುಂಗಿ ಹಾಕಿದೆ, ಸುಂಟರ ಗಾಳಿಗೆ ಮನೆಗಳೇ ಹಾರಿ ಹೋಗಿವೆ, ಇಂತಹ ಪ್ರಕೋಪಗಳನ್ನು ಮಾನವನು ತಡೆಯಬಲ್ಲನೆ? ಹಾಗಿದ್ದರೆ ಈ ನಿಸರ್ಗದ ಆಟ ಯಾವದೂ ಮಹಾನ್ ಶಕ್ತಿ ಕಾರಣವಿರಬಹುದೇ?

ನಿಸರ್ಗ ಶಕ್ತಿಯಾಗಿ ನಮ್ಮನ್ನು ನಡೆಸಲ್ಲದಾದರೆ; ಅದರ ಸುಂದರತೆ ನಮ್ಮ ಮನ ತಣಿಸಿ, ನಮ್ಮನ್ನು ಕುಣಿಸಬಹದು. ಕುವೆಂಪು ಅವರು ಪೂಜಿಸುವ ಪರಿ ನೋಡೋಣ ಈ ಕೆಳಗಿನ ಸಾಲುಗಳಲ್ಲಿ

ಶಿವಮಂದಿರ ಸಮ ವನಸುಂದರ ಸುಮ ಶೃಂಗಾರದ ಗಿರಿಶೃಂಗಕೆ ಬಾ!
ಬಾ ಫಾಲ್ಗುಣ ರವಿ ದರ್ಶನಕೆ!
ಕುಂಕುಮ ಧೂಳಿಯ ದಿಕ್ತಟವೇದಿಯೊಳೋಕುಳಿಯಲಿ ಮಿಂದೇಳುವನು
ಕೋಟಿವಿಹಂಗಮ ಮಂಗಲರವರಸನೈವೇದ್ಯಕೆ ಮುದ ತಾಳುವನು
ಚಿನ್ನದ ಚೆಂಡನೆ ಮೂಡುವನು; ಹೊನ್ನನೆ ಹೊಯ್‌ನೀರ್ ನೀಡುವನು
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು |

ಈ ಸುಂದರತೆ ಶಕ್ತಿಯಾದರೆ, ಈ ಶಕ್ತಿಯನ್ನೇ ನಾವು ದೈವ ಎಂದೇವೆ? ಕಾಣದ ಈ ಶಕ್ತಿಯನ್ನು ದೇವರೆನ್ನಬಹುದೇ?

ಯುರೋಪಿಯನ್ ನ್ಯೂಕ್ಲಿಯರ್ ರಿಸರ್ಚ್ ಸಂಸ್ಥೆಯ ವೈಜ್ಞಾನಿಕ ಶೋಧನೆ “Antimatter ” ಬಗ್ಗೆ ಮತ್ತೆ ವಿಚಾರಕ್ಕೆ ಬರೋಣ. ನಾವು ದ್ರವ್ಯ (ಮ್ಯಾಟರ್) ಮತ್ತು ಪ್ರತಿದ್ರವ್ಯ (ಆಂಟಿಮ್ಯಾಟರ್) ವಿಷಯ ತಿಳಿಯುವಾಗ ಇವೆರಡಲ್ಲದೆ ಇನ್ನೊಂದು ಪ್ರಕಾರದ ದ್ರವ್ಯ ನೋಡೋಣ, ಅದು ಡಾರ್ಕ್ ಮ್ಯಾಟರ್. ಇದಕ್ಕೆ ಕನ್ನಡ ಪದ ಸಿಗದ ಕಾರಣ ಇದನ್ನು ಇಲ್ಲಿ ಕತ್ತಲದ್ರವ್ಯ ಅಥವಾ ಅಂಧಕಾರದ ದ್ರವ್ಯ ಎನ್ನಬಹುದೇ?
ಇಲ್ಲಿ ದ್ರವ್ಯ ಭೂಮಿ ಮತ್ತು ಇತರ ಸೃಷ್ಟಿ ಪ್ರಕಾರ ಇದ್ದಂತೆ, ಪ್ರತಿದ್ರವ್ಯ ಮತ್ತು ಡಾರ್ಕ್ ಮ್ಯಾಟರ್ ಇನ್ನೊಂದು ಸೃಷ್ಟಿಗೆ ಕಾರಣವಿರುತ್ತದೆ. ಈ ಕಾರಣಕ್ಕಾಗಿ, ಮೂರು ಪ್ರಕಾರಗಳನ್ನು ನಾವು ಮೂರು ಲೋಕಕ್ಕೆ ಹೊಂದಿಸಬಹುದೇ?

ಭೂಲೋಕ, ಸ್ವರ್ಗ, ಪಾತಾಳಲೋಕ – ಮಾನವರು ಮತ್ತು ಪ್ರಾಣಿ/ಪಕ್ಷಿ/ಜೀವಗಳು ವಾಸಿಸುವ ಲೋಕ ಭೂಲೋಕ. ದೇವತೆಗಳು, ಅಪ್ಸರೆಯರು ವಾಸಿಸುವ ಉನ್ನತ ಲೋಕ ಸ್ವರ್ಗ ಮತ್ತು ಭೂಮಿಯ ಕೆಳಗಿರುವ ಅಸುರರ ಕೇಳರಿಯದ, ನೋಡದ ಲೋಕ ಪಾತಾಳಲೋಕ. ಜೀವಗಳು ವಾಸಿಸುವ ಲೋಕ ಭೂಲೋಕದಲ್ಲಿ ಎಲ್ಲಕೂ ದ್ರವ್ಯ ರೂಪಕ, ಆದುದರಿಂದ ಇದನ್ನು ದ್ರವ್ಯ ಪ್ರಕಾರದಲ್ಲಿ ನೋಡುತ್ತೇವೆ. ಉನ್ನತ ಲೋಕದ ಭಿನ್ನ ಜಗತ್ತನ್ನು ಪ್ರತಿದ್ರವ್ಯ ಎಂದು, ಕಾಣದ ಕತ್ತಲ ಪಾತಾಳ ಲೋಕವನ್ನು ಡಾರ್ಕ್ ಮ್ಯಾಟರ್ ಎಂದು ನೋಡೋಣ.

ವಿಶ್ವಾಮಿತ್ರ ಮತ್ತು ತ್ರಿಶಂಕು ಕಥೆ ನೋಡೋಣ, ಸತ್ಯವ್ರತ ರಾಜ (ಮುಂದೆ ತ್ರಿಶಂಕು ಎಂದು ಕರೆಯಲ್ಪಟ್ಟ) ಸ್ವರ್ಗಕ್ಕೆ ಹೋಗಲು ಇಚ್ಛಿಸಿ ವಿಶ್ವಾಮಿತ್ರರನ್ನು ಕೇಳಿಕೊಂಡಾಗ, ವಿಶ್ವಾಮಿತ್ರರು ಯಾಗದಿಂದ ರಾಜನನ್ನು ಸ್ವರ್ಗದ ಬಾಗಿಲಿಗೆ ಕಳುಹಿಸಿದರು. ಆದರೆ ಇಂದ್ರ ರಾಜನನ್ನು ಕೆಳಕ್ಕೆ ನೂಕಿದಾಗ, ವಿಶ್ವಾಮಿತ್ರರು ಸತ್ಯವ್ರತ ರಾಜನನ್ನ ಮಧ್ಯದಲ್ಲಿ ನಿಲ್ಲಿಸಿ ಅವನಿಗೆ ಒಂದು ಸ್ವರ್ಗವನ್ನೇ ನಿರ್ಮಿಸಿದರು. ಈ ಕಥೆ ಇಲ್ಲಿ ತಿಳಿಸಿದ ಕಾರಣ, ಇದನ್ನು ಇನ್ನೊಂದು ರೀತಿಯಲ್ಲಿ ನೋಡಲು – ವಿಶ್ವಾಮಿತ್ರರು ರಾಜನನ್ನು ದ್ರವ್ಯ ಪ್ರಕಾರದ ಲೋಕದಿಂದ ಪ್ರತಿದ್ರವ್ಯ ಲೋಕಕ್ಕೆ ಕಳುಹಿಸಲು ವಿರುದ್ಧ ವಿದ್ಯುದಾಂಶ ಉಪಯೋಗಿಸಿದರೆ? ರಾಜನನ್ನು ಕೆಳಕ್ಕೆ ನೂಕಿದಾಗ ಎರಡು ಲೋಕದ ಮಧ್ಯ ವಿದ್ಯುದಾಂಶದ ಸಮತೋಲನದಲ್ಲಿ ನಿಲ್ಲಿಸಿದರೆ?
ಮೇಲಿನ ವಿಷಯ ನೋಡಿದಾಗ ಕಥೆ ಎನಿಸಬಹುದು…
ಹಲವು ದಶಕಗಳ ಹಿಂದೆ ಸಂಜಯನ ಮಹಾಭಾರತದ ಯುದ್ಧ ಲೈವ್ ಕಾಮೆಂಟರಿ ಎಲ್ಲರಿಗೂ ಕಥೆ ಎನಿಸಿತಿತ್ತು, ಆದರೆ ದೂರದರ್ಶನದ ನಂತರ ಮತ್ತು ಇತ್ತೀಚಿನ ಜೂಮ್ ಕಾಲ್ ನಂತರ ಪ್ರತಿ ಒಂದು ಸಣ್ಣ ಕಾರ್ಯಕ್ರಮ ಸಂಜಯನ ಲೈವ್ ಟೆಲಿಕಾಸ್ಟ್ ನಂತೆ ನೋಡಬಹುದಾಗಿದೆ. ವಿಜ್ಞಾನ ಮುಂದುವರೆದು ಹೊಸ ಆವಿಷ್ಕಾರ ಮಾಡುತ್ತ ಹೋದರೂ ಹೊಸ ವಿಸ್ಮಯಗಳು ನಮ್ಮೆದುರಿಗೆ ದುತ್ತೆಂದು ಬಂದು ನಿಲ್ಲುತ್ತವೆ. ವಿಸ್ಮಯಗಳ ಈ ಸಾಗರವೇ ಕಾಣದ, ತಿಳಿಯದ ಶಕ್ತಿ ಆಗಿದೆ.

ಹಾರ್ವರ್ಡ್ ಖಗೋಳ ಭೌತಶಾಸ್ತ್ರಜ್ಞ ಡಾ. ವಿಲ್ಲಿ ಸೂನ್ ಅವರ ಅಭಿಪ್ರಾಯದಂತೆ ಜಗತ್ತು ಒಂದು ಮಹಾನ್ ಶಕ್ತಿ ನಡೆಸುತ್ತಿದೆ ಎಂದು ತಿಳಿಸುತ್ತಾರೆ. ದ್ರವ್ಯ, ಪ್ರತಿದ್ರವ್ಯದ ನಿಖರವಾದ ಅಸಮತೋಲನವು ಉದ್ದೇಶಪೂರ್ವಕ ವಿನ್ಯಾಸವನ್ನು ಸೂಚಿಸುತ್ತದೆ, ಈ ಅಸಮತೋಲನ ಇರದಿದ್ದರೆ ಎಲ್ಲವೂ ನಾಶವಾಗುತ್ತಿತ್ತು. ಈ ಒಂದು ದ್ರವ್ಯ, ಪ್ರತಿದ್ರವ್ಯದ ಅಸಮತೋಲನ ಸಮೀಕರಣ ಅದೃಷ್ಟದಲ್ಲ, ಜಗವನ್ನು ಮತ್ತು ಜೀವರಾಶಿಯನ್ನು ನಡೆಸಿಕೊಂಡು ಹೋಗಲು ಮಾಡಿದ ಒಂದು ಮಹಾನ್ ನಿಯಮ. ಇದನ್ನೇ ನಾವು ದಶಾವತಾರದಲ್ಲಿ ಜಗವನ್ನು ಉಳಿಸಲು ಮತ್ಸ್ಯ. ಕೂರ್ಮ, ವರಾಹ ಇತ್ಯಾದಿ ಅವತಾರದಲ್ಲಿ ನೋಡಿದ್ದೇವೆ… ಕಲ್ಕಿಗಾಗಿ ಕಾಯುತ್ತಿದ್ದೇವೆ.

ಲೇಖನ ಅನಿಶ್ಚಿತೆಯಿಂದ ನಿಲ್ಲಿಸುತ್ತಿಲ್ಲ, ವಿಚಾರವನ್ನು ಮುಂದುವರಿಸೋಣ

ಎರಡನೇ ಮಹಾಯುದ್ಧದ ಬ್ರಿಟಿಷ್ ಗೂಢಚಾರಿಣಿ ನೂರ್ ಇನಾಯತ್ ಖಾನ್ (1914–1944) The Spy Princess -ರಾಮಮೂರ್ತಿ ಲೇಖನ.

ದೇಶಭಕ್ತಿ ಎಂದರೆ ಗಡಿಯಲ್ಲಿ ಶಸ್ತ್ರ ಹಿಡಿದು ಹೋರಾಡುವುದಕ್ಕೆ ಸೀಮಿತವಿಲ್ಲ; ಅಗತ್ಯ ಬಂದಾಗ ತನ್ನ ವೈಯಕ್ತಿಕ ಸುಖ–ಸೌಕರ್ಯ, ಭಯ, ಭವಿಷ್ಯ ಎಲ್ಲವನ್ನೂ ಬದಿಗಿಟ್ಟು ದೇಶಕ್ಕಾಗಿ ನಿಲ್ಲುವ ಧೈರ್ಯವೇ ನಿಜವಾದ ದೇಶಭಕ್ತಿ. ಇಂತಹ ಮೌನವಾದ, ಆದರೆ ಅಪಾರ ತ್ಯಾಗದಿಂದ ಕೂಡಿದ ದೇಶಭಕ್ತಿಯ ಪ್ರತೀಕವೇ ನೂರ್ ಇನಾಯತ್ ಖಾನ್.ಇತಿಹಾಸದ ಪುಟಗಳಲ್ಲಿ ಬಹಳಷ್ಟು ಬಾರಿ ಮಹಿಳೆಯರ ತ್ಯಾಗಗಳು ಅಂಚಿಗೆ ಸರಿದಿವೆ. ವಿಶೇಷವಾಗಿ ವಸಾಹತುಶಾಹಿಯ ಕಾಲಘಟ್ಟದಲ್ಲಿ ಭಾರತ ಮೂಲದ ಅನೇಕರು ನೀಡಿದ ಕೊಡುಗೆಗಳು ಸೂಕ್ತ ಗೌರವವನ್ನು ಪಡೆಯಲಿಲ್ಲ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಗೂಢಚರ್ಯಾ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿದ ನೂರ್ ಇನಾಯತ್ ಖಾನ್ ಅವರ ಜೀವನವು, ದೇಶಭಕ್ತಿಯ ಅರ್ಥಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ಈ ಲೇಖನವು ನೂರ್ ಇನಾಯತ್ ಖಾನ್ ಅವರ ಜೀವನ ಕಥೆಯನ್ನು ಮಾತ್ರವಲ್ಲ, ದೇಶಭಕ್ತಿ ಎಂಬ ಮೌಲ್ಯವು ಜಾತಿ, ಧರ್ಮ, ಲಿಂಗ, ರಾಷ್ಟ್ರಗಳ ಗಡಿಗಳನ್ನು ಮೀರಿ ಮಾನವೀಯತೆಯೊಂದಿಗೆ ಬೆಸೆಯಲ್ಪಟ್ಟಿರುತ್ತದೆ ಎಂಬ ಸತ್ಯವನ್ನು ನಮ್ಮ ಮುಂದಿಡುತ್ತದೆ. ಇಂತಹ ಮರೆತುಹೋಗಿರುವ ವೀರಗಾಥೆಗಳು ಪುನಃ ಓದಿಗೆ ಬರುವುದೇ ನಮ್ಮ ಇತಿಹಾಸದ ಜವಾಬ್ದಾರಿ.ನೂರ್ ಇನಾಯತ್ ಖಾನ್ ಅವರ ಕಥೆ, ದೇಶಭಕ್ತಿ ಎಂದರೆ ಘೋಷಣೆ ಅಲ್ಲ; ಅದು ಮೌನ ತ್ಯಾಗ, ಅಚಲ ನಿಷ್ಠೆ ಮತ್ತು ಕೊನೆಯ ಉಸಿರಿನವರೆಗಿನ ಧೈರ್ಯ ಎಂಬುದನ್ನು ನಮಗೆ ನೆನಪಿಸುತ್ತದೆ.
ಇಂತಹ ಮೈಜುಮ್ಮೆನ್ನುವ ರೋಚಕ ಜೀವನ ಚರಿತ್ರೆಯನ್ನು ನಮ್ಮೊಂದಿದೆ ಹಂಚಿಕೊಂಡಿದ್ದಕ್ಕೆ ಈಗಾಗಲೇ ‘ಅನಿವಾಸಿ’ಗೆ ಅನೇಕ ಅಮೂಲ್ಯ ಇತಿಹಾಸ ಪ್ರಬಂಧಗಳನ್ನು ಕೊಟ್ಟು ಸುಪರಿಚಿತರಾದ ರಾಮಮೂರ್ತಿಯವರಿಗೆ ಧನ್ಯವಾದಗಳು.
~ ರಾಧಿಕಾ ಜೋಶಿ

1914–1918 ಮತ್ತು 1939–1945ರಲ್ಲಿ ನಡೆದ ಈ ಎರಡು ಮಹಾಯುದ್ಧಗಳಲ್ಲಿ ಭಾರತದ ಸುಮಾರು ಇಪ್ಪತ್ತು ಲಕ್ಷ ಸೈನಿಕರು ಭಾಗವಹಿಸಿದ್ದರು. ಆದರೆ ಇವರ ತ್ಯಾಗವನ್ನು ನೆನಪಿಸಿಕೊಂಡು ನವೆಂಬರ್ ತಿಂಗಳಲ್ಲಿ ನಡೆಯುವ Remembrance Day ದಿನದಂದು Poppy Wreath ಇಡುವುದು ಅಪರೂಪವಾಗಿದೆ. ಈ ಯುದ್ಧಗಳಲ್ಲಿ ಅನೇಕ ಮಹಿಳೆಯರೂ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸಿದ್ದರು. ಅವರಲ್ಲಿ ನೂರ್ ಇನಾಯತ್ ಖಾನ್ ಒಬ್ಬಳು. ಈ ಹೆಸರನ್ನು ನೀವು ಬಹುಶಃ ಕೇಳಿರಲಿಕ್ಕಿಲ್ಲ. 112 ವರ್ಷಗಳ ಹಿಂದೆ ಜನಿಸಿದ ಭಾರತ ಮೂಲದ ನೂರ್ ಇನಾಯತ್ ಖಾನ್ ಈ ದೇಶಕ್ಕೆ ನೀಡಿದ ಕೊಡುಗೆ ಅಪಾರವಾದುದು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಅಂದಿನ ಪ್ರಧಾನಮಂತ್ರಿ ಸರ್ ವಿಂಸ್ಟನ್ ಚರ್ಚಿಲ್ ಸ್ಥಾಪಿಸಿದ Special Operations Executive (SOE) ವಿಭಾಗಕ್ಕೆ ಸೇರಿ, ಫ್ರಾನ್ಸ್ ದೇಶದಲ್ಲಿದ್ದು ಶತ್ರುಗಳ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ಅತ್ಯಂತ ಗುಪ್ತವಾಗಿ ವೈರ್‌ಲೆಸ್ ಮೂಲಕ ಲಂಡನ್ ಕಚೇರಿಗೆ ಕಳುಹಿಸುವುದು ಅವಳ ಕೆಲಸವಾಗಿತ್ತು. ಆ ಸಮಯದಲ್ಲಿ ನಾಜಿ ಜರ್ಮನಿ ಫ್ರಾನ್ಸ್ ದೇಶವನ್ನು ಆಕ್ರಮಿಸಿಕೊಂಡಿತ್ತು. ಆದ್ದರಿಂದ ಬ್ರಿಟಿಷ್ ಗೂಢಚಾರಿಗಳು ಅತ್ಯಂತ ಸೂಕ್ಷ್ಮತೆ ಮತ್ತು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿತ್ತು. ಸಿಕ್ಕಿಬಿದ್ದರೆ ಸಾವೇ ಶಿಕ್ಷೆ.

ಪ್ರತಿ ದಿನ ಒಂದು ಸುರಕ್ಷಿತ ಮನೆಯಿಂದ ಇನ್ನೊಂದು ಮನೆಗೆ ಗುಪ್ತವಾಗಿ ಸ್ಥಳಾಂತರಗೊಂಡು, ಅಟ್ಟದಲ್ಲೋ ಅಥವಾ ನೆಲಮಾಳಿಗೆಯಲ್ಲೋ ವೈರ್‌ಲೆಸ್ ಉಪಕರಣಗಳನ್ನು ಜೋಡಿಸಿ ಸಂದೇಶ ಕಳುಹಿಸುವುದು ಸುಲಭದ ಕೆಲಸವಾಗಿರಲಿಲ್ಲ. ಶತ್ರುಗಳಿಗೆ ಸುಳಿವು ಸಿಗದಂತೆ ಅವಳು ಅನೇಕ ಹೆಸರುಗಳನ್ನು ಬಳಸುತ್ತಿದ್ದಳು—ಮ್ಯಾಡಲೀನ್, ನೊರಾ ಇತ್ಯಾದಿ. ಆದರೆ ಕೊನೆಗೆ ಒಬ್ಬ ದ್ರೋಹಿಯ ಕಾರಣದಿಂದ ಶತ್ರುಗಳಿಗೆ ಸಿಕ್ಕಿಬಿದ್ದು, ಹಲವಾರು ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿ ಭೀಕರ ಚಿತ್ರಹಿಂಸೆಯನ್ನು ಸಹಿಸಿದರೂ, ಒಂದು ಚೂರು ರಹಸ್ಯವನ್ನೂ ಬಿಟ್ಟು ಕೊಡದ ಧೈರ್ಯಕ್ಕಾಗಿ Dachau Concentration Camp ನಲ್ಲಿ Gestapo ಗುಂಡಿನಿಂದ ಹತ್ಯೆಗೊಳಗಾದಳು.

ಬಾಲ್ಯ ಜೀವನ ಮತ್ತು ಕುಟುಂಬ ಹಿನ್ನೆಲೆ

ತಂದೆ ಹಜರತ್ ಇನಾಯತ್ ಖಾನ್ ಬರೋಡಾ ನಗರದಲ್ಲಿ ಜನಿಸಿದರು. ತಾಯಿ ಕಡೆಯಿಂದ ಅವರು ಮೈಸೂರಿನ ಟಿಪ್ಪು ಸುಲ್ತಾನನ ವಂಶಸ್ಥರು(ಮರಿಮಗ). ಟಿಪ್ಪು ಸುಲ್ತಾನ ಬ್ರಿಟಿಷರ ವಿರುದ್ಧ ಯುದ್ಧ ಮಾಡಿ 1799ರಲ್ಲಿ ಮರಣ ಹೊಂದಿದರು. ಹಜರತ್ ಇನಾಯತ್ ಖಾನ್ ಶಾಂತಿಪ್ರಿಯರಾಗಿದ್ದು, ಇಸ್ಲಾಂ ಧರ್ಮದ ಸೂಫಿ ಪರಂಪರೆಯನ್ನು ಅನುಸರಿಸಿ ಸಂಗೀತವನ್ನು ಕಲಿತವರು. ಈ ಸಂಪ್ರದಾಯವನ್ನು ವಿಶ್ವದಾದ್ಯಂತ ಹರಡುವ ಉದ್ದೇಶದಿಂದ ಅಮೆರಿಕಾ ಮತ್ತು ಯುರೋಪ್‌ನಲ್ಲಿ ಪ್ರವಾಸ ಮಾಡಿದರು.

ತಾಯಿ ಅಮೆರಿಕಾದ ಪ್ರಜೆ ಒರಾ ರೇ ಬೇಕರ್; ನಂತರ ಇಸ್ಲಾಂ ಧರ್ಮ ಸ್ವೀಕರಿಸಿ ಅಮೀನಾ ಬೇಗಂ ಎಂದು ಹೆಸರು ಪಡೆದರು. ಯುರೋಪ್‌ನಲ್ಲಿ ಸಂಚರಿಸಿ ಕೆಲ ವರ್ಷಗಳು ಮಾಸ್ಕೋ ನಗರದಲ್ಲಿ ವಾಸಿಸಿ, 1914ರಲ್ಲಿ ಮೊದಲ ಮಹಾಯುದ್ಧ ಆರಂಭವಾಗುವ ಮೊದಲು ಕುಟುಂಬದೊಂದಿಗೆ ಲಂಡನ್‌ನ ಬ್ಲೂಮ್ಸ್‌ಬರಿ (Bloomsbury)ಯಲ್ಲಿ ನೆಲೆಸಿದರು. ನೂರ್ 01-01-1914ರಂದು ಮಾಸ್ಕೋ ನಗರದಲ್ಲಿ ಜನಿಸಿದರು.

ಮಹಾಯುದ್ಧ ಮುಗಿದ ನಂತರ 1920ರಲ್ಲಿ ಲಂಡನ್‌ನಿಂದ ಪ್ಯಾರಿಸ್‌ಗೆ ಬಂದು ನೆಲೆಸಿದರು. ಇನಾಯತ್ ಖಾನ್ ಸಂಗೀತ ಮತ್ತು ಸೂಫಿ ಧರ್ಮದ ಪ್ರಚಾರ ಆರಂಭಿಸಿದರು. ಆದರೆ 1927ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಅನಾರೋಗ್ಯದಿಂದ ನಿಧನರಾದರು.

13 ವರ್ಷದ ನೂರ್ ಮೇಲೆ ಕುಟುಂಬದ ಹೊಣೆಗಾರಿಕೆ ಬಿದ್ದರೂ, ಅವಳ ವಿದ್ಯಾಭ್ಯಾಸವನ್ನು ಮುಂದುವರೆಸಿ ಪ್ರಸಿದ್ಧ Sorbonne ವಿಶ್ವವಿದ್ಯಾಲಯದಲ್ಲಿ ಮಕ್ಕಳ ಮನೋವಿಜ್ಞಾನ (Child Psychology) ಪದವಿ ಪಡೆದಳು. ಸಂಗೀತದಲ್ಲೂ ಅವಳು ಪ್ರವೀಣಳಾಗಿದ್ದಳು. ನಂತರ ಮಕ್ಕಳ ಪುಸ್ತಕಗಳ ಲೇಖಕಿಯಾಗಿ, 1939ರಲ್ಲಿ ಬೌದ್ಧ ಧರ್ಮದಿಂದ ಪ್ರೇರಿತವಾದ “ಇಪ್ಪತ್ತು ಜಾತಕ ಕಥೆಗಳು” ಸೇರಿದಂತೆ ಹಲವು ಬರಹಗಳು ಫ್ರೆಂಚ್ ಭಾಷೆಯಲ್ಲಿ ಪ್ರಕಟವಾದವು.

ಎರಡನೇ ಮಹಾಯುದ್ಧದಲ್ಲಿ ವೈರ್‌ಲೆಸ್ ಆಪರೇಟರ್

1939ರಲ್ಲಿ ನಾಜಿ ಜರ್ಮನಿ ಯುರೋಪ್ ಖಂಡವನ್ನು ಕಬಳಿಸುವ ಪ್ರಯತ್ನದಿಂದ ಯುದ್ಧ ಆರಂಭವಾಯಿತು. 1940ರಲ್ಲಿ ಫ್ರಾನ್ಸ್ ಜರ್ಮನಿಯ ವಶವಾಯಿತು. ಅಹಿಂಸಾವಾದಿಗಳಾದ ಈ ಕುಟುಂಬ Bordeaux ನಿಂದ ಸರಕು ಸಾಗಿಸುವ ಹಡಗಿನಲ್ಲಿ ಲಂಡನ್‌ಗೆ ಮರಳಿದರು.
ನೂರ್ ಮತ್ತು ಅವಳ ಸಹೋದರ ವಿಲಾಯತ್ ಅವರ ತಂದೆಯಂತೆ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ವಿಮುಕ್ತವಾಗಬೇಕೆಂದು ಕನಸು ಕಂಡಿದ್ದರು. ಆದರೆ ಈಗ ಜರ್ಮನಿ ಯುರೋಪ್ ಖಂಡವನ್ನೇ ಆಕ್ರಮಿಸುವ ಅಪಾಯ ಎದುರಾದ್ದರಿಂದ, ಇದನ್ನು ತಡೆಯಲು ತಮ್ಮ ಕೈಲಾದ ಸೇವೆ ಸಲ್ಲಿಸಲು ನಿರ್ಧರಿಸಿದರು.

ನೂರ್ ಆಗತಾನೆ ಆರಂಭವಾಗಿದ್ದ WAAF (Women’s Auxiliary Air Force) ಗೆ ಸೇರಿ Signals ಮತ್ತು Wireless ವಿಭಾಗದಲ್ಲಿ ತರಬೇತಿ ಪಡೆದು, ಜೂನ್ 1943ರಲ್ಲಿ ಫ್ರಾನ್ಸ್‌ನಲ್ಲಿ ಕೆಲಸ ಆರಂಭಿಸಿದಳು. Gestapo ಪ್ಯಾರಿಸ್‌ನಲ್ಲಿ ಅನೇಕ ಬ್ರಿಟಿಷ್ ಗೂಢಚಾರಿಗಳನ್ನು ಹಿಡಿದು ಕ್ರೂರ ಶಿಕ್ಷೆ ವಿಧಿಸುತ್ತಿತ್ತು. ಇಂತಹ ಅಪಾಯಕರ ಪರಿಸ್ಥಿತಿಯಲ್ಲೂ ನೂರ್ ವೇಷ ಬದಲಿಸಿ ಸುರಕ್ಷಿತ ಮನೆಗಳಿಂದ ಮನೆಗಳಿಗೆ ಸ್ಥಳಾಂತರಗೊಳ್ಳುತ್ತಾ ತನ್ನ ಕೆಲಸ ಮುಂದುವರೆಸಿದಳು.

ಅವಳ ಫ್ರೆಂಚ್ ಭಾಷೆಯ ಉಚ್ಚಾರಣೆ ಸ್ಥಳೀಯರಂತೆಯೇ ಇದ್ದುದರಿಂದ ಅವಳ ಮೇಲೆ ಸಂಶಯ ಬಹಳ ಕಡಿಮೆ ಇತ್ತು. ಅವಳು ಅತ್ಯಂತ ಶಿಸ್ತಿನಿಂದ ನಿರ್ವಹಿಸುತ್ತಿದ್ದ ಕೆಲಸ ಲಂಡನ್‌ನಲ್ಲೂ ಮೆಚ್ಚುಗೆ ಪಡೆದಿತ್ತು. ಆದರೂ ಅವಳ ಸುರಕ್ಷತೆ ಬಗ್ಗೆ ಆತಂಕವಿತ್ತು; ಹಲವು ಬಾರಿ ಅವಳನ್ನು ವಾಪಸ್ಸು ಬರಲು ಕರೆ ಮಾಡಲಾಯಿತು. ಆದರೆ ನೂರ್ ಅದನ್ನು ನಿರಾಕರಿಸಿ ಫ್ರಾನ್ಸ್‌ನಲ್ಲೇ ಕೆಲಸ ಮುಂದುವರೆಸಿದಳು.
ದುರದೃಷ್ಟವಶಾತ್, ಫ್ರಾನ್ಸ್‌ನ ಒಬ್ಬ Double Agent ದ್ರೋಹ ಮಾಡಿದ್ದರಿಂದ Gestapo ನೂರ್ ಅನ್ನು ಸೆರೆಹಿಡಿಯಲು ಸಾಧ್ಯವಾಯಿತು.

ಕೊನೆಯ ದಿನಗಳು

Gestapo ಕಾರಾಗೃಹದಲ್ಲಿ ಇಟ್ಟ ಮೊದಲ ದಿನವೇ ಕಿಟಕಿಯ ಮೂಲಕ ತಪ್ಪಿಸಿಕೊಳ್ಳಲು ಅವಳು ಪ್ರಯತ್ನಿಸಿದಳು. Gestapo ಎಷ್ಟೇ ಹಿಂಸೆ ನೀಡಿದರೂ ನೂರ್ ತನ್ನ Code Word ಸೇರಿದಂತೆ ಯಾವುದೇ ರಹಸ್ಯವನ್ನೂ ಬಿಟ್ಟು ಕೊಡಲಿಲ್ಲ. ಇತರ ಬಂಧಿಗಳೊಂದಿಗೆ ಸೆರೆಯ ಕಂಬಿಗಳನ್ನು ಮುರಿದು ತಪ್ಪಿಸಿಕೊಳ್ಳುವ ಪ್ರಯತ್ನ ವಿಫಲವಾಯಿತು.

ನಂತರ ಅವಳನ್ನು ಏಕಾಂತ ಬಂಧನದಲ್ಲಿ ಇಟ್ಟರೂ ಯಾವುದೂ ಹೊರಬರಲಿಲ್ಲ. ಕೊನೆಗೆ ಅವಳನ್ನು ಸರಪಳಿಗಳಿಂದ ಕಟ್ಟಿ ಜರ್ಮನಿಯ ಕಠಿಣ Pforzheim ಕಾರಾಗೃಹಕ್ಕೆ ಕರೆದೊಯ್ದು ಅಮಾನವೀಯವಾಗಿ ಹಿಂಸೆ ನೀಡಿದರು. ಇದು ನವೆಂಬರ್ 1943. ಹತ್ತು ತಿಂಗಳುಗಳ ಕಾಲ ನಡೆದ ಹಿಂಸೆಯಲ್ಲಿಯೂ ಅವಳಿಂದ ಯಾವುದೇ ರಹಸ್ಯ ಬಯಲಾಗಲಿಲ್ಲ.
ಕೊನೆಗೆ ನೂರ್ ಮತ್ತು ಇನ್ನೂ ನಾಲ್ಕು ಬಂಧಿಗಳನ್ನು Dachau Concentration Camp ಗೆ ಕಳುಹಿಸಿ 13 ಸೆಪ್ಟೆಂಬರ್ 1944ರಂದು ಗುಂಡಿಟ್ಟು ಹತ್ಯೆಗೊಳಗಾದರು (ಇಲ್ಲಿ ಲಕ್ಷಾಂತರ ಯಹೂದಿಗಳನ್ನು ಗ್ಯಾಸ್ಚೇಂಬರ್‌ಗಳಲ್ಲಿ ಹತ್ಯೆ ಮಾಡಲಾಗಿತ್ತು).

ನೂರ್‌ನ ಕೊನೆಯ ಮಾತು ಅವಳ ತುಟಿಗಳಿಂದ ಹೊರಬಂದದ್ದು—“LIBERTÉ”, ಅಂದರೆ ಸ್ವಾತಂತ್ರ್ಯ. ಕೇವಲ 30 ವರ್ಷದ ಈ ಧೈರ್ಯಶಾಲಿ ಮಹಿಳೆ ತನ್ನ ಪ್ರಾಣವನ್ನು ಈ ದೇಶಕ್ಕೆ ಅರ್ಪಿಸಿದಳು.
ಮಹಾಯುದ್ಧ ಮುಗಿದ ನಂತರ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಹೊರಡುವ ಯೋಚನೆ ಅವಳಿಗಿತ್ತು. WAAF ಸೇರಿದ್ದಾಗ ನೂರ್ ಇದನ್ನು ಕೆಲವರ ಮುಂದೆ ಹೇಳಿದ್ದಾಳೆ ಎಂಬುದು ತಿಳಿದುಬರುತ್ತದೆ.

Dachau ನಲ್ಲಿ ಕೊಲೆಯಾದವರ ಅಂತ್ಯಕ್ರಿಯೆ ಯಥೋಚಿತ ಗೌರವದಿಂದ ನಡೆಯುತ್ತಿರಲಿಲ್ಲ; ಇದು Gestapo ಯ ಅಮಾನವೀಯ ವರ್ತನೆಯ ಮತ್ತೊಂದು ಉದಾಹರಣೆ. ಹೀಗೆ ಮೃತರಾದವರ ಸಂಖ್ಯೆ ಅನೇಕ. ಬಹಳ ವರ್ಷಗಳ ನಂತರ ನೂರ್‌ನ ಕೊನೆಯ ದಿನಗಳ ವಿವರಗಳು National Archives ನಲ್ಲಿರುವ ಐತಿಹಾಸಿಕ ದಾಖಲೆಗಳಿಂದ ಬೆಳಕಿಗೆ ಬಂದವು.

ಭಾರತದ ಪತ್ರಕರ್ತೆಯಾದ ಶ್ರೀಮತಿ ಶ್ರಭಾನಿ ಬಸು ಅವರ ಸಂಶೋಧನೆಯಿಂದ ನೂರ್ ಕುರಿತ ಹೆಚ್ಚಿನ ವಿಷಯಗಳು ಬಹಿರಂಗವಾದವು. ನಂತರ “Spy Princess: The Life of Noor Khan” ಎಂಬ ಪುಸ್ತಕ ಪ್ರಕಟವಾಯಿತು.

ಮರಣೋತ್ತರ ಗೌರವಗಳು

ಯುದ್ಧದಲ್ಲಿ ಮೃತರಾದವರ ಸ್ಮಾರಕ Runnymede ನಲ್ಲಿ ಇದೆ; ಅಲ್ಲಿ ನೂರ್ ಹೆಸರನ್ನು ಕಾಣಬಹುದು. ಲಂಡನ್‌ನ ಅನೇಕ ಸ್ಥಳಗಳಲ್ಲಿ ನೂರ್ ಸ್ಮಾರಕಗಳಿವೆ ಮತ್ತು ಅವಳಿಗೆ ಹಲವಾರು ಮರಣೋತ್ತರ ಪ್ರಶಸ್ತಿಗಳು ದೊರೆತಿವೆ. ಮುಖ್ಯವಾದವುಗಳು George Cross ಹಾಗೂ ಫ್ರಾನ್ಸ್ ದೇಶದ Croix de Guerre.
08-11-2012ರಂದು ಅವಳ ಕಂಚಿನ ಪ್ರತಿಮೆಯನ್ನು Bloomsbury ಯ Gordon Square ನಲ್ಲಿ ಅನಾವರಣ ಮಾಡಲಾಯಿತು. ನೂರ್ ವಾಸವಾಗಿದ್ದ Taviton Street ಮನೆಯ ಮುಂದೆ 2020ರಲ್ಲಿ
English Heritage ಸಂಸ್ಥೆ Blue Plaque ಅನ್ನು ಅನಾವರಣ ಮಾಡಿತು. 25-03-2014ರಂದು ನೂರ್ ಭಾವಚಿತ್ರವಿರುವ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಯಿತು.

2019ರ ಚಲನಚಿತ್ರ A Call to Spy ಯಲ್ಲಿ ರಾಧಿಕಾ ಆಪ್ಟೆ ನೂರ್ ಪಾತ್ರದಲ್ಲಿ ನಟಿಸಿದ್ದಾರೆ.
The Independent ಪತ್ರಿಕೆಯಲ್ಲಿ ನೂರ್ ಬಗ್ಗೆ ಹೀಗೆ ಬರೆಯಲಾಗಿದೆ:
She died with “freedom” on her lips. It was hers. And it was ours as well.

— ರಾಮಮೂರ್ತಿ
ಕಾಂಗಲ್ ಟನ್, ಚೆಶೈರ್

Acknowledgements

Images from Google

The Princess who became a Spy: Independent Fed 2016  National Archives National Archives