“ಕೃಷ್ಣಾರೂಷ” – ನಂಬಿಕೆಯೇ ಜೀವನದ ಆಧಾರ

ಹಿಂದಿನ ಲೇಖನದಲ್ಲಿ “ದೇವರ ಅಸ್ತಿತ್ವ ಉಳಿದವರ ಕಣ್ಣಲ್ಲಿ” ಎನ್ನುವ ಬಗ್ಗೆ ಚರ್ಚಿಸಿದ್ದೆ, ಅವನನ್ನು ಹೇಗೆ ವಿವಿಧ ರೂಪಗಳಲ್ಲಿ ಪೂಜಿಸುತ್ತಾರೆಂದು ನನ್ನ ವಿಚಾರಗಳನ್ನು ಹಂಚಿಕೊಂಡಿದ್ದೆ. ಈ ಬಾರಿ ಲೇಖನಕ್ಕೆ ಅದೇ ವಿಚಾರ ಮುಂದುವರಿಸುವ ಕುರಿತು ಯೋಚಿಸುತ್ತಿರುವಾಗ, ವಿವಿಡ್ಲಿಪಿ ಪ್ರಕಾಶನದ ಪುಸ್ತಕ “ಕೃಷ್ಣಾರೂಷ” ಬಗ್ಗೆ ವಿಚಾರ ಹಂಚಿಕೊಳ್ಳೋಣ ಅನಿಸಿತು. “ಕೃಷ್ಣಾರೂಷ” ಇಂಗ್ಲಿಷ್ನಲ್ಲಿ ಪ್ರಕಟವಾದ ಒಂದು ಪುಸ್ತಕ, ಅತ್ಯಂತ ಸರಳ ಭಾಷೆಯಲ್ಲಿ ಲೇಖಕರು ಜೀವನದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಅನುಭವ ವಿವರಿಸುವಾಗ ಅದಕ್ಕೆ ತಕ್ಕದಾದ ಶ್ಲೋಕ, ಭಗವದ್ಗೀತೆ, ಶ್ರೀಮದ್ಭಾಗವತ ಇತ್ಯಾದಿ ಯಿಂದ ಆಯ್ದು ಆಯಾ ಭಾಗದಲ್ಲಿ ಹಂಚಿಕೊಂಡಿದ್ದಾರೆ. ಈ ಪುಸ್ತಕವನ್ನು ಸತ್ಯೇಶ್ ಬೆಳ್ಳೂರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲ ಲೇಖಕರು ಡಿಂಪಲ್ ಅಗ್ರವಾಲ್, ಇವರು ಕೃಷ್ಣನ ಭಕ್ತರು. ಅವರು ತಮ್ಮ ಅನುಭವಗಳನ್ನು ಮತ್ತು ಕೃಷ್ಣನ ಲೀಲೆಗಳನ್ನು ಇದರಲ್ಲಿ ಬಣ್ಣಿಸಿದ್ದಾರೆ. ಅವರ ಪುಸ್ತಕ ನಮ್ಮ ಪ್ರಕಾಶನದ ಎಂಟನೆಯ ಪುಸ್ತಕ. ಇದು ಆಕಸ್ಮಿಕವೋ ಅಥವಾ ನಮಗೆ ಪ್ರಸಾದದ ರೂಪದಲ್ಲಿ ಬಂದಿದೆಯೋ ಗೊತ್ತಿಲ್ಲ.

ಕೆಲವು ದಿನಗಳ ಹಿಂದೆ ನಮ್ಮ ಪರಿಚಿತರೊಬ್ಬರೊಂದಿಗೆ ಮಾತನಾಡುವಾಗ ತಾವು ನಾಸ್ತಿಕರೆಂದು ತಿಳಿಸುತ್ತಾ ಅದಕ್ಕೆ ದೇವೆರೇ ಕಾರಣ ಎಂದರು. ವಿಚಾರಿಸಿದಾಗ ಗೊತ್ತಾಯಿತು ಅವರ ಪ್ರೀತಿಯ ವ್ಯಕ್ತಿ ಕೋವಿಡ್ ಇಂದ ಅಸ್ವಸ್ಥರಾದಾಗ ಇವರು ದೇವರಲ್ಲಿ ಬೇಡಿಕೊಂಡರೂ ಅವರು ಉಳಿಯಲಿಲ್ಲ. ಅವರವರ ಪರಿಸ್ಥಿತಿ ಅನುಗುಣವಾಗಿ ಜನರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ, ಯಾರೂ ತಪ್ಪಲ್ಲ. ಈ ಲೇಖನದಲ್ಲಿ ಹಂಚಿಕೊಂಡ ಪುಸ್ತಕದ ಮೂಲ ಲೇಖಕರು ಕ್ಯಾನ್ಸರ್ನಿಂದ ತಮ್ಮ ಜೀವನ ಅಸ್ತವ್ಯಸ್ತವಾದಾಗ ಕೃಷ್ಣನನ್ನೇ ತಮ್ಮ ಮಗನೆಂದು ಪ್ರೀತಿಸಿ, ಪೂಜಿಸಿ ಜೀವಿಸಿದರು. ಆಗ ಅವರಿಗೆ ಮಾನಸಿಕವಾಗಿ ದೊರೆತ ಆಸರೆ ಮುದ್ದು ಕೃಷ್ಣ. ಈ ಪುಸ್ತಕದ ಕೆಲವು ವಿಷಯಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಅರೋಷ್ ಎಂಬ ಪದದ ಅರ್ಥ ಸೂರ್ಯನ ಮೊದಲ ಕಿರಣ; ಅರೋಷ್ ಮತ್ತು ಕೃಷ್ಣ ನನ್ನಿಬ್ಬರು ಮಕ್ಕಳ ಹೆಸರುಗಳು. ಮೊದಲನೆಯವ ನನ್ನ ಕರುಳ ಬಳ್ಳಿ – ನನ್ನ ರಕ್ತ ಹಂಚಿಕೊಂಡು ಹುಟ್ಟಿದವ, ಎರಡನೆಯವನು ನನ್ನ ಭಾವಬಳ್ಳಿ – ನನ್ನ ಶ್ರದ್ದೆಯಿಂದ ಜನಿಸಿದ (ಇದು ಲೇಖಕರ ಮಾತು). ಇವರ ಜೀವನದ ಅನುಭಗಳು ಪ್ರಾರಂಭ ಆಗುವುದು ಅವರ ಭಿಲಾಯ್ ನಗರದಿಂದ, ಅವರ ತಂದೆ ಮತ್ತು ತಾಯಿ ವಿವರ ಹಾಗು ಮಧ್ಯಮ ವರ್ಗದ ಕುಟುಂಬದೊಂದಿಗೆ. ಇವರ ವಿವರಣೆಯಲ್ಲಿ ಕಂಡು ಬರುವ ಮುಖ್ಯ ವಿಷಯ ಹೇಗೆ ಸರಳ ಜೀವನದಲ್ಲಿ ಬೆಳೆದು ಬಂದದ್ದು, ಪ್ರೀತಿಯಿಂದ ಬೆಸೆದ ಕುಟುಂಬ ಮತ್ತು ಅವರ ಬಾಲ್ಯದಿಂದಲೇ ಭಕ್ತಿ ಜೀವನದ ಒಂದು ಅಂಗವಾಗಿದ್ದು. ಇಂತಹ ವಿವರಣೆ ಕೇಳಿದೊಡನೆ ನೆನಪಾಗುವುದು ಕೆಳಗಿನ ಸಾಲುಗಳು

ನಮ್ಮ ಸಂಸಾರ ಆನಂದ ಸಾಗರ,
ಪ್ರೀತಿಎಂಬ ದೈವವೇ ನಮಗಾಧಾರಾ,
ಆ ದೈವ ತಂದ ವರದಿಂದ,
ಬಾಳೇ ಬಂಗಾರಾ

ತಮ್ಮ ಜೀವನದ ವಿವರಗಳನ್ನು ಹಂಚಿಕೊಳ್ಳುತ್ತ ಲೇಖಕರು ಮದುವೆ ಮತ್ತು ನಂತರ ದಿನಗಳ ಬಗ್ಗೆ ತಿಳಿಸುತ್ತಾರೆ. ಮದುವೆ, ನಂತರ ಗಂಡನ ಮನೆಯ ವಿಷಯ, ಅತ್ತೆ ವಿಷಯ ಎಲ್ಲ ಸಂತೋಷದ ವಿವರ ಹಂಚಿಕೊಂಡು ಮಗನ ಹುಟ್ಟು, ಅರೋಷ್ ಆಗಮನ ಈ ಎಲ್ಲ ಸಂತೋಷದ ಘಳಿಗೆಯಲ್ಲಿ ಬರುವುದು ಆಘಾತವಾದ ವಿಷಯ “ಮಗನ ಕ್ಯಾನ್ಸರ್”. ಅರೋಷ್ಗೆ diffuse pontine glioma, ಒಂದು ಗಡ್ಡೆ ಅವನ ಮೆದುಳಿನಲ್ಲಿ ಇದೆ ಎಂಬುದು ತಿಳಿದು ಅವರ ಜೀವನ ಅಲ್ಲೋಲಕಲ್ಲೋಲವಾಗಿತ್ತು. ಪೂಜೆ, ಪುನಸ್ಕಾರ, ಹೋಮ, ದೇವಸ್ಥಾನ, ದರ್ಗಾ, ಆಯುರ್ವೇದ, ಹೋಮಿಯೋಪಥಿ… ಎಲ್ಲ ಪ್ರಯತ್ನ ನಡೆದರೂ ಕೊನೆಗೆ ಸೂರ್ಯನ ಮೊದಲ ಕಿರಣ ಕಾಣದಾಯಿತು, ಅರೋಷ್ ಅವರನ್ನು ಬಿಟ್ಟು ಹೋದನು. ೨೦೧೪ರಲ್ಲಿ ಬಿಡುಗಡೆಯಾದ “ಹರಿವು” ಚಿತ್ರ ಈ ಒಂದು ಜೀವನದ ತಿರುವಿನಲ್ಲಿ ಬರುವ ಕಠಿಣ ಪಯಣ ಮನ ಮುಟ್ಟುವಂತೆ ಚಿತ್ರಿಸುತ್ತದೆ, ಇದು ನಿಜ ಜೀವನದಲ್ಲಿ ನಡೆದ ಕಥೆಯಾಧಾರಿತ ಚಿತ್ರ. ಸಂಚಾರಿ ವಿಜಯ್ ತಂದೆಯ ಪಾತ್ರದಲ್ಲಿ ಮಾಡಿದ ನಟನೆ ಹೃದಯ ಹಿಂಡುವಂತಿದೆ. ತಾಯಿ ಪ್ರೀತಿಯಂತೆ, ತಂದೆಯ ಪ್ರೀತಿ ಮಗನಿಗೆ ಎಷ್ಟು ಆಳವಾಗಿ ಇರುತ್ತದೆ ಮತ್ತು ಮಗನಿಗಾಗಿ ತಂದೆ ಎಂತಹ ಸಾಹಸಕ್ಕೂ ಸಿದ್ದ ಎಂದು ಇದರಲ್ಲಿ ತೋರಿಸಿದ್ದಾರೆ, ನೋಡಿರದಿದ್ದರೆ ತಪ್ಪದೆ ನೋಡಿ. ಡಿಂಪಲ್ ದಂಪತಿಗಳು ತಮ್ಮ ಮಗ “ಅರೋಷ್” ನ ಕೊನೆಯ ದಿನಗಳ ವಿವರಣೆ ನೀಡುವಾಗ ನನ್ನ ಕಣ್ಣ ಮುಂದೆ ಹರಿವು ಚಿತ್ರ ನೋಡಿದಾಗ ಅದ ಮನ ಕಲುಕುವ ಅನುಭವ ಆಯಿತು. ಇಂತಹದೇ ಕಠಿಣ ಪರಿಸ್ಥಿತಿ ಬಂದಾಗ, ಡಿಂಪಲ್ ದಂಪತಿಗಳಿಗೆ ಬಂದ ಪ್ರಶ್ನೆ “ದೇವರು ಇಂತಹ ಕಠಿಣ ಪರೀಕ್ಷೆ ಯಾವ ಕಾರಣಕ್ಕೆ ಒಡ್ಡುತ್ತಾನೆ”.

ನಾಗರ ಹೊಳೆಯ ಚಿತ್ರ ಹಾಡಿನ ಸಾಲುಗಳು ನಿಜ ಎನಿಸುತ್ತದೆ

ಇಲ್ಲೇ ಸ್ವರ್ಗ, ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು..
ಹುಟ್ಟು ಸಾವು ಎರಡರ ಮಧ್ಯೆ..
ಮೂರು ದಿನದ ಬಾಳು

“ಅರೋಷ್” ಇಲ್ಲದ ಬರಿದಾದ ಜೀವನದಲ್ಲಿ ಕಷ್ಟದಿಂದ ಜೀವನ ಸವೆಸುತ್ತಿರುವಾಗ ಡಿಂಪಲ್ ದಂಪತಿಗಳಿಗೆ ಆಸರೆಯಾಗಿ ಸಿಕ್ಕಿದ್ದು ಭಗವದ್ಗೀತೆ, ಮತ್ತು ಮುದ್ದು ಕೃಷ್ಣ. ಅವರ ನೆರೆಮನೆಯ ಗೆಳತೀ ಶ್ವೇತಾ ಚತುರ್ವೇದಿ ಅವರು ಪರಿಚಯಿಸಿದ ಇಸ್ಕಾನ್ ಶಿಬಿರ ಅವರಿಗೆ ಹೊಸ ದಾರಿ ಒದಗಿಸಿತು.

ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ |
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ |
(ಭಗವದ್ಗೀತೆ ೪-೧೧)

ವಿವರ: ಯಾರು ತಮ್ಮನು ಯಾವ ರೀತಿಯಲ್ಲಿ ನನ್ನಲ್ಲಿ ಅರ್ಪಿಸಿಕೊಳ್ಳುತ್ತಾರೋ, ಅವರನ್ನು ಅದೇ ರೀತಿಯಲ್ಲಿ ಅನುಗ್ರಹಿಸುತ್ತೇನೆ.

ಭಕ್ತ ಕುಂಬಾರದ ಹಾಡು ಇಲ್ಲಿ ಸೂಕ್ತವೆನಿಸುತ್ತದೆ

ನಾನೂ ನೀನೂ ನೆಂಟರಯ್ಯಾ
ನಮಗೆ ಭೇದ ಇಲ್ಲವಯ್ಯಾ
ಮಾಧವ, ನಿನ್ನ ನಾಮಾಮೃತದ
ಸಾಧನೆ ಒಂದೇ ಸಾಕಯ್ಯ ತಂದೆ

“ಕೃಷ್ಣ ನಿನ್ನ ನಾಮಾಮೃತದ ಪ್ರೀತಿ ಒಂದೇ ಸಾಕಯ್ಯ ಮಗನೆ” ಎನ್ನುವ ಭಾವದಲ್ಲಿ ಡಿಂಪಲ್ ದಂಪತಿಗಳು ಕೃಷ್ಣನನ್ನು ತಮ್ಮ ಮಗನೆಂದು ಆರಾಧಿಸಲು ಆರಂಭಿಸಿದರು. ಕುಳಿತರೆ ಕೃಷ್ಣ, ನಿಂತರೆ ಕೃಷ್ಣ, ಉಂಡರೆ ಕೃಷ್ಣ ಅನ್ನುವ ತನಕ ಕೃಷ್ಣನನ್ನು ಮಗನೆಂದು ಪ್ರೀತಿಸಿದರು, ಪೂಜಿಸದರು. ಅವರಿಗೆ ಕೃಷ್ಣನೇ ಅರೋಷನಾದ, ಮತ್ತು ಅರೋಷ ಕೃಷ್ಣನಾದ. ಅವರ ಈ ಪ್ರೀತಿಗೆ ಅಕಸ್ಕಿವಾಗಿ ಅವರಿಗೆ ಜಗನಾಥಪುರಿಗೆ ಹೋಗುವ ಅವಕಾಶ ದೊರೆಯಿತು, ನಂತರ ಶ್ರೀಮದ್ಭಾಗವತ ಓದುವ ಅವಕಾಶ ದೊರಕಿತು. ತಮ್ಮ ಭಕ್ತಿ ಪಥದ ಅನುಭವಗಳನ್ನು ಮುಂದಿನ ಅಧ್ಯಾಯಗಳಲ್ಲಿ ಸುಂದರವಾಗಿ ವಿವರಿಸಿದ್ದಾರೆ.

ಸಮೋಽಹಂ ಸರ್ವಭೂತೇಷು ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ |
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ ||
ಭವದ್ಗೀತೆ (೯ -೨೯)

ಭಗವಂತನಿಗೆ ಎಲ್ಲರೂ ಸಮಾನರು. ದೇವರಿಗೆ ಅಚ್ಚುಮೆಚ್ಚಿನವರು ಅಥವಾ ದ್ವೇಷಿಸಲ್ಪಡುವವರು ಯಾರೂ ಇಲ್ಲ. ಆದರೆ, ಯಾರು ನಿಷ್ಕಲ್ಮಷ ಭಕ್ತಿಯಿಂದ ಭಗವಂತನನ್ನು ಆರಾಧಿಸುತ್ತಾರೋ, ಭಗವಂತನು ಅಂತಹ ಭಕ್ತರ ಹೃದಯದಲ್ಲಿ ಇರುತ್ತಾನೆ.

ಅವರ ಪ್ರೀತಿ ಮತ್ತು ಭಕ್ತಿಗೆ ಮೆಚ್ಚಿ ಅವರಿಗೆ ಎರಡನೆಯ ಮಗು ಬರುವ ಸುದ್ದಿ ಅವರ ಜೀವನದ ಸಂತೋಷದ ಕ್ಷಣಗಳ ಆಗಮನವಾಯಿತು. ಅವರ ಜೀವನದಲ್ಲಿ ಒಂದರ ನಂತರ ಇನ್ನೊಂದು, ಹೀಗೆ ಎರಡು ಹೆಣ್ಣು ಮಕ್ಕಳ ಸೌಭಾಗ್ಯ ದೊರಕಿತು.

ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ಅಂತೆಯೇ ಎರಡು ಮಕ್ಕಳ ಆಗಮನ ಡಿಂಪಲ್ ದಂಪತಿಗಳ ಜೀವನ ಬದಲಾಯಿಸಿತು. ಸಂತೋಷದ ಜೀವನ ಅನುಭವಿಸಿದರು ಆದರೂ ಅದು ಹೆಚ್ಚು ದಿನ ಉಳಿಯಲಿಲ್ಲ. ಜೀವನದ ಮತ್ತೊಂದು ತಿರುವು ಬಂದು, ಮೂಲ ಲೇಖಕರಾದ ಡಿಂಪಲ್ ಅವರಿಗೆ ಕ್ಯಾನ್ಸರ್ ಆಗಿ ಚೇತರಿಸಿಕೊಳ್ಳುತ್ತಿದ್ದಾರೆ.

ನಾ ಮಾಡಿದ ಕರ್ಮ ಬಲವಂತವಾದರೆ
ನೀ ಮಾಡುವುದೇನೋ ದೇವ ಸಾಮಾನ್ಯವಲ್ಲಿದು
ಬ್ರಹ್ಮ ಬರೆದ ಬರಹ ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ

ಕೃಷ್ಣನ ಜೊತೆಗಿದ್ದರೂ ದ್ರೌಪದಿ ತನ್ನ ಪಾಲಿನ ಪಡೆದ ಸಂಕಷ್ಟಗಳನ್ನು ಅನುಭವಿಸಬೇಕಾಯಿತು, ಅಂತಹ ಸಂಕಟಗಳ ನಡೆವೆಯೂ ಕೃಷ್ಣನ ಸಾಂಗತ್ಯ ಅವಳಿಗೆ ಬಲದಂತೆ ಇತ್ತು. ಇಂತಹ ಸಾಂಗತ್ಯ ಇದೆ ಎಂಬ ನಂಬಿಕೆ ಎಂತಹ ಕಷ್ಟ ಕಾಲದಲ್ಲೂ ಪರಿಸ್ಥಿತಿ ಎದರಿಸಲು ಧೈರ್ಯ, ಸ್ಥೈರ್ಯ ಕೊಡುತ್ತದೆ. ಈ ನಂಬಿಕೆಯೇ ಜೀವನಕ್ಕೆ ರಕ್ಷಣೆ ನೀಡಿ, ಮಾರ್ಗದರ್ಶಿ ಆಗುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಎಷ್ಟು ಕಷ್ಟ ಇದ್ದರೂ ಹೇಗೆ ಅದನ್ನು ಎದುರಿಸಿದರು ಎಂದು ಸಂಕ್ಷಿಪ್ತವಾಗಿ ಅವರ ಜೀವನಗಾಥೆ ವಿವರ ಇಲ್ಲಿ ಹಂಚಿಕೊಂಡಿದ್ದೇನೆ.

ಕೆಹನಾ ಕ್ಯಾ ಚಾಹತೇ ಹೋ?

ಕೆಹನಾ ಕ್ಯಾ ಚಾಹತೇ ಹೋ?

ಈ ವಾರದ ಲೇಖನ ಓದಲು ಕೊಟ್ಟಾಗ ಹೆಂಡತಿಯ ಮೊದಲ ಉದ್ಘಾರ ಇದು. ವಿಜ್ಞಾನ, ದೇವರು, ಧರ್ಮ ಏನೆಲ್ಲಾ ವಿಷಯ ಒಂದೇ ಲೇಖನದಲ್ಲಿ ಹಾಕಿ ಅದನ್ನು ಚಿತ್ರಾನ್ನ ಮಾಡಿದ್ದಿಯ ಎಂದು ತನ್ನ ಅಭಿಪ್ರಾಯ ತಿಳಿಸಿದಳು, ನನ್ನ ಅಣ್ಣನೂ ಹಲವು ಸಲ ನನಗೆ ರಿಸರ್ಚ್ ಲೇಖನ ಬರೆಯುದು ಬಿಟ್ಟು ನಿನ್ನ ವಿಚಾರ ಹಂಚಿಕೊ ಎಂದು ಹೇಳುತ್ತಿರುತ್ತಾನೆ. ನನಗೋ ಓದಿದ ವಿಷಯ, ಕೇಳಿದ ವಿಷಯ ಒಂದೆಡೆ ಸೇರಿಸಿ ಅದನ್ನು ಹದವಾಗಿ ಕಲಿಸಿ, ಉಣಿಸಿದಾಗ ಖುಷಿ ಸಿಗುತ್ತದೆ. ಸಂಕೀರ್ಣ ವಿಷಯ ತಿಳಿಸುವಾಗ ನನ್ನದಷ್ಟೇ ವಿಚಾರಗಳನ್ನು ಹಂಚಿಕೊಳ್ಳದೇ, ಅದನ್ನು ಬೇರೆಯವರು ನೋಡುವ ಪರಿ ಸೇರಿಸಿದಾಗ ಸರಳ ಮಾಡಬಹುದೆಂಬ ಅನಿಸಿಕೆ ನನ್ನದು. ಅಂತಹದೇ ಒಂದು ಪ್ರಯತ್ನ ಇಂದಿನ ಲೇಖನ, ಹದವಾಗಿದೆ ಬೆರಸಿದ್ದೇನೆ ಅಂದುಕೊಳ್ಳುತೇನೆ.

“Science without religion is lame, religion without science is blind”
(Albert Einstein )

ಮೇಲಿನ ಸಾಲುಗಳು ಆಲ್ಬರ್ಟ್ ಐನ್ಸ್ಟೀನ್ ಅವರ ಅಭಿಪ್ರಾಯ, ಇನ್ನೂ ಸ್ಟೀಫನ್ ಹಾಕಿಂಗ್ ಏನು ಹೇಳುತ್ತಾರೆ ನೋಡೋಣ, ಅವರು ತಮ್ಮ ಒಂದು ಸಂದರ್ಶನದಲ್ಲಿ ಹೇಳುತ್ತಾರೆ “ಶತಮಾನಗಳಿಂದ, ನನ್ನಂತಹ ಅಂಗವಿಕಲರು ದೇವರು ಕೊಟ್ಟ ಶಾಪದಿಂದ ಈ ರೀತಿ ಬದುಕುತ್ತಿದ್ದಾರೆ ಎಂದು ನಂಬಲಾಗಿದೆ. ಸರಿ, ನಾನು ಯಾರಿಗಾದರೂ ತಪ್ಪು ಅಥವಾ ಅಸಮಾಧಾನಗೊಳಿಸಿರಬಹುದು ಎಂದು ನಾನು ಭಾವಿಸುತ್ತೇನೆ, ಆದರೆ ಈ ಎಲ್ಲವನ್ನೂ ಪ್ರಕೃತಿಯ ನಿಯಮಗಳಿಂದ ಇನ್ನೊಂದು ರೀತಿಯಲ್ಲಿ ವಿವರಿಸಬಹುದು. ನೀವು ವಿಜ್ಞಾನವನ್ನು ನಂಬಿದರೆ, ಯಾವಾಗಲೂ ಪಾಲಿಸಬೇಕಾದ ಕೆಲವು ನಿಯಮಗಳಿವೆ ಎಂದು ನೀವು ನಂಬುತ್ತೀರಿ. ನೀವು ಬಯಸಿದರೆ, ನಿಯಮಗಳು ದೇವರ ಕೆಲಸ ಎಂದು ನೀವು ಹೇಳಬಹುದು, ಆದರೆ ಅದು ದೇವರ ಅಸ್ತಿತ್ವದ ಪುರಾವೆಗಿಂತ ಹೆಚ್ಚಾಗಿ ಅವನ ವ್ಯಾಖ್ಯಾನವಾಗಿದೆ.”

ಧರ್ಮ, ದೇವರು, ವಿಜ್ಞಾನ, ಈ ವಿಚಾರವಾಗಿ ಹಿಂದಿನಿಂದಲೂ ಜನರ ಭಿನ್ನಾಭಿಪ್ರಾಯ ಅಥವಾ ತಿಕ್ಕಾಟ ನಡೆಯುತ್ತಲೇ ಇದೆ. ಗೆಲಿಲಿಯೋ ಭೂಮಿ ಸೂರ್ಯನ ಸುತ್ತ ತಿರುಗತ್ತದೆ ಎಂದು ಪ್ರತಿಪಾದಿಸಿದಾಗ ಅವನನ್ನು ಗ್ರಹ ಬಂಧನದಲ್ಲಿ ಇರಿಸಿ ಅವನ ಪುಸ್ತಕಗಳ ನಿಷೇದ ಮಾಡಿದ್ದು ಕೆಲವು ಧರ್ಮ ಗುರುಗಳು. ಇಂದಿನ ನನ್ನ ಲೇಖನದಲ್ಲಿ ನಾನು ಧರ್ಮವನ್ನು ಸರಿ ಎಂದು ಅಥವಾ ವಿಜ್ಞಾನ ಸರಿ ಎಂದು ವಾದಿಸುತ್ತಿಲ್ಲ, ವಿಷಯವನ್ನು ಅರಿಯುವ ಒಂದು ಪ್ರಯತ್ನ ಅಷ್ಟೇ. ಕೆಲವು ವಿಚಾರಗಳನ್ನು ಅರಿತು, ಅದನ್ನು ವಿಭಿನ್ನ ರೀತಿಯಲ್ಲಿ ಹೇಗೆ ನೋಡಬಹುದೆಂಬ ಒಂದು ಪ್ರಯತ್ನ.

ಇನ್ನೊಂದು ಉದಾಹರಣೆ “ಹಿಮಾಲಯದ ಮಹಾತ್ಮರ ಸನ್ನಿದಿಯಲ್ಲಿ” ಪುಸ್ತಕದಲ್ಲಿ ಹಲವು ಮಹಾತ್ಮರ ಬಗ್ಗೆ ಉಲ್ಲೇಖವಿದೆ, ಅವರು ತಮ್ಮ ತನು, ಮನ ನಿಯಂತ್ರಣದಿಂದ ಸಾಮಾನ್ಯ ಮನುಷ್ಯನಿಗೆ ಆಗದ ಕಾರ್ಯ ಮಾಡಿದ್ದಾರೆ, ವಯಸ್ಸು ಮತ್ತು ಸಾವನ್ನು ತಮ್ಮ ಹಿಡಿತದಲ್ಲಿ ಇರಿಸಿದ್ದಾರೆ. ಅವರ ದೇಹದ ಹಾಗೂ ಮನಸ್ಸಿನ ನಿಯಂತ್ರಣ ವಿಜ್ಞಾನದಿಂದಲೂ ಸುಲಭವಾಗಿ ವಿವರಿಸಲು ಅಸಾಧ್ಯ. ಆ ಪುಸ್ತಕದಲ್ಲೇ ಇನ್ನೊಂದು ತರಹದ ವ್ಯಕ್ತಿಗಳ ಬಗ್ಗೆ ತಿಳಿಸುತ್ತಾರೆ, ಕೊರಳಿಗೆ ಹಾವನ್ನು ಹಾಕಿಕೊಂಡು ಬಂದು ನಮ್ಮ ಮನದಲ್ಲಿ ನಡೆಯುತ್ತಿರುವ ವಿಚಾರವನ್ನು ಸರಾಗವಾಗಿ ಹೇಳುವ, ಹಣ ಕೇಳುವ ಜನರ ಕಪಟತನದ ಬಗ್ಗೆ. ಮನಸ್ಸನ್ನು ಅರಿಯುವ ಚತುರತೆಯಿಂದ ಇಂತಹ ಜನರು ವಿಜ್ಞಾನವನ್ನು (ದುರು) ಉಪಯೋಗಿಸಿ ನಿಂಬೆ ಹಣ್ಣಿನಲ್ಲಿ ರಕ್ತ ಬರಿಸುವುದು, ಕರ್ಪೂರ ಹೊತ್ತಿ ಉರಿಸುವದು ಮಾಡಿ ಜನರಿಗೆ ಧರ್ಮದ ಹೆಸರಿನಲ್ಲಿ ಮೋಡಿ ಮಾಡುತ್ತಾರೆ.

ವಿಜ್ಞಾನ ಮತ್ತು ಧರ್ಮ ಕೂಡಿಸಲು ಆಗದ ಮತ್ತು ಬಿಡಿಸಲೂ ಆಗದ ಸಂಬಂಧ, ಇದನ್ನು ಸುಂದರವಾಗಿ ಡ್ಯಾನ್ ಬ್ರೌನ್ ತನ್ನ ಪುಸ್ತಕ “ಏಂಜೆಲ್ಸ್ ಅಂಡ್ ಡೆಮಾನ್ಸ್ ” ನಲ್ಲಿ ತೋರಿಸುತ್ತಾನೆ. ಪುಸ್ತಕದ ಕಥೆ ಇರುವದೇ ವಿಜ್ಞಾನ ಮತ್ತು ಧರ್ಮ ಹೊಡೆದಾಟದ ಕುರಿತು, ಆದರೂ ಇದರ ಕೊನೆ ವಿಜ್ಞಾನ ಅಥವಾ ಧರ್ಮ ಸರಿ ಎಂದು ಸಮರ್ಥಿಸಲು ಅಲ್ಲ. ಈ ಪುಸ್ತಕದಲ್ಲಿ ಯುರೋಪಿಯನ್ ನ್ಯೂಕ್ಲಿಯರ್ ರಿಸರ್ಚ್ ಸಂಸ್ಥೆಯ ಒಂದು ವೈಜ್ಞಾನಿಕ ಶೋಧನೆ “Antimatter ” ಬಗ್ಗೆ ಪ್ರಸ್ತಾಪವಿದೆ. ದ್ರವ್ಯ (ಮ್ಯಾಟರ್) ಮತ್ತು ಪ್ರತಿದ್ರವ್ಯ (ಆಂಟಿಮ್ಯಾಟರ್) ಒಂದೇ ಪ್ರತಿರೂಪಗಳು ಆದರೆ ವಿರುದ್ಧ ವಿದ್ಯುದಾಂಶವನ್ನು ಹೊಂದಿರುತ್ತವೆ. ದ್ರವ್ಯ ಮತ್ತು ಪ್ರತಿದ್ರವ್ಯ ಜೊತೆಗೆ ಸಂಪರ್ಕಕ್ಕೆ ಬಂದರೆ, ಶುದ್ಧ ಶಕ್ತಿಯಾಗಿ ನಾಶವಾಗುತ್ತದೆ. ಇನ್ನು ನಾವು ವಾಸಿಸುವ ಭೂಮಿ ದ್ರವ್ಯದಿಂದ ಕೂಡಿದೆ; ಪ್ರತಿ ಒಂದು ಕಣ, ಸ್ಥಳದಲ್ಲಿ ದ್ರವ್ಯ ಇದೆ. ಎಲ್ಲೆಲ್ಲೂ ದೃವ್ಯ ಇದೆ ಎಂದು ಬರೆಯುವಾಗ ಕನಕದಾಸರ ಮತ್ತು ಅವರ ಗುರುಗಳ ಒಂದು ಪ್ರಸಂಗ ನೆನಪು ಬಂತು, ಅದನ್ನು ಓದಿ ಮುಂದುವರೆಯೋಣ,

ಒಂದು ಸಲ, ಏಕಾದಶಿಯ ಉಪವಾಸದ ದಿನ, ವ್ಯಾಸರಾಜರು ತಮ್ಮ ಎಲ್ಲ ವಿದ್ಯಾರ್ಥಿಗಳನ್ನು ಕರೆದು, ‘ನಾನು ನಿಮಗೆ ಒಬ್ಬೊಬ್ಬರಿಗೂ ಒಂದೊಂದು ಬಾಳೆಹಣ್ಣು ನೀಡುತ್ತಿದ್ದೇನೆ, ಯಾರೂ ನಿಮ್ಮನ್ನು ನೋಡದ ಸ್ಥಳವನ್ನು ನೀವು ಕಂಡುಕೊಂಡರೆ ನೀವು ಅದನ್ನು ತಿನ್ನಬಹುದು’ ಎಂದು ಹೇಳಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಬಾಳೆಹಣ್ಣನ್ನು ತೆಗೆದುಕೊಂಡು ರಹಸ್ಯ ಸ್ಥಳಗಳನ್ನು ಹುಡುಕಲು ಪ್ರಾರಂಭಿಸಿದರು. ಸಂಜೆ ಗುರು ವ್ಯಾಸತೀರ್ಥರು ಪಾಠದ ನಂತರ ಅವರು ತಮ್ಮ ಬಾಳೆಹಣ್ಣುಗಳನ್ನು ಎಲ್ಲಿ ಮತ್ತು ಹೇಗೆ ತಿಂದರು ಎಂದು ಕೇಳಿದರು. ಕೆಲವರು ಅವರು ಕತ್ತಲೆಯ ಮೂಲೆಗೆ ಹೋದರು, ಇತರರು ಮರದ ಹಿಂದೆ ಅಡಗಿಕೊಂಡರು ಅಥವಾ ಕಾಡಿಗೆ ಹೋಗಿದ್ದಾರೆ ಎಂದು ಹೇಳಿದರು. ಕನಕ ದಾಸರ ಸರದಿ ಬಂದಾಗ, ಅವರು ತಮ್ಮ ತಿನ್ನದ ಬಾಳೆಹಣ್ಣನ್ನು ತೋರಿಸಿ, ‘ಕ್ಷಮಿಸಿ, ನಾನು ನನ್ನ ಬಾಳೆಹಣ್ಣನ್ನು ತಿನ್ನಲಿಲ್ಲ. ನಾನು ತುಂಬಾ ಹುಡುಕಿದೆ ಆದರೆ ಯಾರೂ ಇಲ್ಲದ ಸ್ಥಳ ನನಗೆ ಸಿಗಲಿಲ್ಲ. ನಾನು ಎಲ್ಲಿಗೆ ಹೋದರೂ, ದೇವರು ಯಾವಾಗಲೂ ನನ್ನನ್ನು ನೋಡುತ್ತಿದ್ದನು. ಯಾರಿಗೂ ತಿಳಿಯದಂತೆ ನಾನು ತಿನ್ನಬೇಕೆಂದು ನೀವು ಹೇಳಿದ್ದೀರಿ, ನಾನು ಹಾಗೆ ಮಾಡಲು ಸಾಧ್ಯವಿಲ್ಲ ಏಕೆಂದರೆ ದೇವರು ಎಲ್ಲೆಡೆ ಇದ್ದನು’. ದ್ರವ್ಯ ಇರದ ಸ್ಥಳದಲ್ಲಿ ಬಾಳೆಹಣ್ಣನ್ನು ತಿನ್ನಲು ಹೇಳಿದರೆ, ನಾವು ಅದನ್ನು ತಿನ್ನದೇ ಒಯ್ಯಬೇಕಾಗುತ್ತದೆ.

ದೇವರು ಯಾರು? ಪ್ರತಿಯೊಬ್ಬರದು ಒಂದೊಂದು ಅನುಭವ, ಅಭಿಪ್ರಾಯ

ದೇವರ ಆಟ ಬಲ್ಲವರಾರು.. ಆತನ ಎದಿರು ನಿಲ್ಲುವರಾರು..
ಕೇಳದೆ ಸುಖವ ತರುವ.. ಹೇಳದೆ ದುಃಖವ ಕೊಡುವ..
ತನ್ನ ಮನದಂತೆ ಕುಣಿಸಿ ಆಡುವ..

ಇಲ್ಲಿ “ದೇವರು” ಎಂದರೆ ಯಾರು ಎಂಬ ಪ್ರಶ್ನೆ ಮುಖ್ಯ? ಬಲ್ಲವರು ಅದನ್ನು ಮಹಾಶಕ್ತಿ ಅನ್ನಬಹುದು, ಇನ್ನೂ ಕೆಲವರು ಅದಕ್ಕೆ ರೂಪ ಕೊಡಬಹುದು. ಅದಕ್ಕೆ ಮಹಾನ್ ಶಕ್ತಿ ಇರುವ ಕಾರಣ ಅದನ್ನು ಒಳಿತಿಗಾಗಿ ಪೂಜಿಸಬಹುದು. ಇದೆ ಕಾರಣ ಇರಬಹುದು ಮೊದಲು ಶಕ್ತಿ ಪೂಜೆ ಆಗಿದ್ದು …ನೀರು, ನೆಲ, ಗಾಳಿ, ಬೆಂಕಿ ಮತ್ತು ಆಕಾಶ ಪಂಚಭೂತಗಳು ದೈವಗಳಾಗಿದ್ದು. ನಿಸರ್ಗದ ಆಟ ಪ್ರತಿ ವರ್ಷ ನಾವು ನೋಡುತ್ತೇವೆ, ಪ್ರವಾಹ ಬಂದು ಮುಳುಗಿದ ಜನ ವಸತಿಗಳೆಷ್ಟೋ, ಸುಟ್ಟ ಕಾಡುಗಳ ಬೆಂಕಿ ಊರೊಳಗೆ ಬಂದು ರುದ್ರ ನರ್ತನ ಮಾಡಿವೆ, ಸರಿದ ನೆಲ ಊರನ್ನೇ ನುಂಗಿ ಹಾಕಿದೆ, ಸುಂಟರ ಗಾಳಿಗೆ ಮನೆಗಳೇ ಹಾರಿ ಹೋಗಿವೆ, ಇಂತಹ ಪ್ರಕೋಪಗಳನ್ನು ಮಾನವನು ತಡೆಯಬಲ್ಲನೆ? ಹಾಗಿದ್ದರೆ ಈ ನಿಸರ್ಗದ ಆಟ ಯಾವದೂ ಮಹಾನ್ ಶಕ್ತಿ ಕಾರಣವಿರಬಹುದೇ?

ನಿಸರ್ಗ ಶಕ್ತಿಯಾಗಿ ನಮ್ಮನ್ನು ನಡೆಸಲ್ಲದಾದರೆ; ಅದರ ಸುಂದರತೆ ನಮ್ಮ ಮನ ತಣಿಸಿ, ನಮ್ಮನ್ನು ಕುಣಿಸಬಹದು. ಕುವೆಂಪು ಅವರು ಪೂಜಿಸುವ ಪರಿ ನೋಡೋಣ ಈ ಕೆಳಗಿನ ಸಾಲುಗಳಲ್ಲಿ

ಶಿವಮಂದಿರ ಸಮ ವನಸುಂದರ ಸುಮ ಶೃಂಗಾರದ ಗಿರಿಶೃಂಗಕೆ ಬಾ!
ಬಾ ಫಾಲ್ಗುಣ ರವಿ ದರ್ಶನಕೆ!
ಕುಂಕುಮ ಧೂಳಿಯ ದಿಕ್ತಟವೇದಿಯೊಳೋಕುಳಿಯಲಿ ಮಿಂದೇಳುವನು
ಕೋಟಿವಿಹಂಗಮ ಮಂಗಲರವರಸನೈವೇದ್ಯಕೆ ಮುದ ತಾಳುವನು
ಚಿನ್ನದ ಚೆಂಡನೆ ಮೂಡುವನು; ಹೊನ್ನನೆ ಹೊಯ್‌ನೀರ್ ನೀಡುವನು
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು |

ಈ ಸುಂದರತೆ ಶಕ್ತಿಯಾದರೆ, ಈ ಶಕ್ತಿಯನ್ನೇ ನಾವು ದೈವ ಎಂದೇವೆ? ಕಾಣದ ಈ ಶಕ್ತಿಯನ್ನು ದೇವರೆನ್ನಬಹುದೇ?

ಯುರೋಪಿಯನ್ ನ್ಯೂಕ್ಲಿಯರ್ ರಿಸರ್ಚ್ ಸಂಸ್ಥೆಯ ವೈಜ್ಞಾನಿಕ ಶೋಧನೆ “Antimatter ” ಬಗ್ಗೆ ಮತ್ತೆ ವಿಚಾರಕ್ಕೆ ಬರೋಣ. ನಾವು ದ್ರವ್ಯ (ಮ್ಯಾಟರ್) ಮತ್ತು ಪ್ರತಿದ್ರವ್ಯ (ಆಂಟಿಮ್ಯಾಟರ್) ವಿಷಯ ತಿಳಿಯುವಾಗ ಇವೆರಡಲ್ಲದೆ ಇನ್ನೊಂದು ಪ್ರಕಾರದ ದ್ರವ್ಯ ನೋಡೋಣ, ಅದು ಡಾರ್ಕ್ ಮ್ಯಾಟರ್. ಇದಕ್ಕೆ ಕನ್ನಡ ಪದ ಸಿಗದ ಕಾರಣ ಇದನ್ನು ಇಲ್ಲಿ ಕತ್ತಲದ್ರವ್ಯ ಅಥವಾ ಅಂಧಕಾರದ ದ್ರವ್ಯ ಎನ್ನಬಹುದೇ?
ಇಲ್ಲಿ ದ್ರವ್ಯ ಭೂಮಿ ಮತ್ತು ಇತರ ಸೃಷ್ಟಿ ಪ್ರಕಾರ ಇದ್ದಂತೆ, ಪ್ರತಿದ್ರವ್ಯ ಮತ್ತು ಡಾರ್ಕ್ ಮ್ಯಾಟರ್ ಇನ್ನೊಂದು ಸೃಷ್ಟಿಗೆ ಕಾರಣವಿರುತ್ತದೆ. ಈ ಕಾರಣಕ್ಕಾಗಿ, ಮೂರು ಪ್ರಕಾರಗಳನ್ನು ನಾವು ಮೂರು ಲೋಕಕ್ಕೆ ಹೊಂದಿಸಬಹುದೇ?

ಭೂಲೋಕ, ಸ್ವರ್ಗ, ಪಾತಾಳಲೋಕ – ಮಾನವರು ಮತ್ತು ಪ್ರಾಣಿ/ಪಕ್ಷಿ/ಜೀವಗಳು ವಾಸಿಸುವ ಲೋಕ ಭೂಲೋಕ. ದೇವತೆಗಳು, ಅಪ್ಸರೆಯರು ವಾಸಿಸುವ ಉನ್ನತ ಲೋಕ ಸ್ವರ್ಗ ಮತ್ತು ಭೂಮಿಯ ಕೆಳಗಿರುವ ಅಸುರರ ಕೇಳರಿಯದ, ನೋಡದ ಲೋಕ ಪಾತಾಳಲೋಕ. ಜೀವಗಳು ವಾಸಿಸುವ ಲೋಕ ಭೂಲೋಕದಲ್ಲಿ ಎಲ್ಲಕೂ ದ್ರವ್ಯ ರೂಪಕ, ಆದುದರಿಂದ ಇದನ್ನು ದ್ರವ್ಯ ಪ್ರಕಾರದಲ್ಲಿ ನೋಡುತ್ತೇವೆ. ಉನ್ನತ ಲೋಕದ ಭಿನ್ನ ಜಗತ್ತನ್ನು ಪ್ರತಿದ್ರವ್ಯ ಎಂದು, ಕಾಣದ ಕತ್ತಲ ಪಾತಾಳ ಲೋಕವನ್ನು ಡಾರ್ಕ್ ಮ್ಯಾಟರ್ ಎಂದು ನೋಡೋಣ.

ವಿಶ್ವಾಮಿತ್ರ ಮತ್ತು ತ್ರಿಶಂಕು ಕಥೆ ನೋಡೋಣ, ಸತ್ಯವ್ರತ ರಾಜ (ಮುಂದೆ ತ್ರಿಶಂಕು ಎಂದು ಕರೆಯಲ್ಪಟ್ಟ) ಸ್ವರ್ಗಕ್ಕೆ ಹೋಗಲು ಇಚ್ಛಿಸಿ ವಿಶ್ವಾಮಿತ್ರರನ್ನು ಕೇಳಿಕೊಂಡಾಗ, ವಿಶ್ವಾಮಿತ್ರರು ಯಾಗದಿಂದ ರಾಜನನ್ನು ಸ್ವರ್ಗದ ಬಾಗಿಲಿಗೆ ಕಳುಹಿಸಿದರು. ಆದರೆ ಇಂದ್ರ ರಾಜನನ್ನು ಕೆಳಕ್ಕೆ ನೂಕಿದಾಗ, ವಿಶ್ವಾಮಿತ್ರರು ಸತ್ಯವ್ರತ ರಾಜನನ್ನ ಮಧ್ಯದಲ್ಲಿ ನಿಲ್ಲಿಸಿ ಅವನಿಗೆ ಒಂದು ಸ್ವರ್ಗವನ್ನೇ ನಿರ್ಮಿಸಿದರು. ಈ ಕಥೆ ಇಲ್ಲಿ ತಿಳಿಸಿದ ಕಾರಣ, ಇದನ್ನು ಇನ್ನೊಂದು ರೀತಿಯಲ್ಲಿ ನೋಡಲು – ವಿಶ್ವಾಮಿತ್ರರು ರಾಜನನ್ನು ದ್ರವ್ಯ ಪ್ರಕಾರದ ಲೋಕದಿಂದ ಪ್ರತಿದ್ರವ್ಯ ಲೋಕಕ್ಕೆ ಕಳುಹಿಸಲು ವಿರುದ್ಧ ವಿದ್ಯುದಾಂಶ ಉಪಯೋಗಿಸಿದರೆ? ರಾಜನನ್ನು ಕೆಳಕ್ಕೆ ನೂಕಿದಾಗ ಎರಡು ಲೋಕದ ಮಧ್ಯ ವಿದ್ಯುದಾಂಶದ ಸಮತೋಲನದಲ್ಲಿ ನಿಲ್ಲಿಸಿದರೆ?
ಮೇಲಿನ ವಿಷಯ ನೋಡಿದಾಗ ಕಥೆ ಎನಿಸಬಹುದು…
ಹಲವು ದಶಕಗಳ ಹಿಂದೆ ಸಂಜಯನ ಮಹಾಭಾರತದ ಯುದ್ಧ ಲೈವ್ ಕಾಮೆಂಟರಿ ಎಲ್ಲರಿಗೂ ಕಥೆ ಎನಿಸಿತಿತ್ತು, ಆದರೆ ದೂರದರ್ಶನದ ನಂತರ ಮತ್ತು ಇತ್ತೀಚಿನ ಜೂಮ್ ಕಾಲ್ ನಂತರ ಪ್ರತಿ ಒಂದು ಸಣ್ಣ ಕಾರ್ಯಕ್ರಮ ಸಂಜಯನ ಲೈವ್ ಟೆಲಿಕಾಸ್ಟ್ ನಂತೆ ನೋಡಬಹುದಾಗಿದೆ. ವಿಜ್ಞಾನ ಮುಂದುವರೆದು ಹೊಸ ಆವಿಷ್ಕಾರ ಮಾಡುತ್ತ ಹೋದರೂ ಹೊಸ ವಿಸ್ಮಯಗಳು ನಮ್ಮೆದುರಿಗೆ ದುತ್ತೆಂದು ಬಂದು ನಿಲ್ಲುತ್ತವೆ. ವಿಸ್ಮಯಗಳ ಈ ಸಾಗರವೇ ಕಾಣದ, ತಿಳಿಯದ ಶಕ್ತಿ ಆಗಿದೆ.

ಹಾರ್ವರ್ಡ್ ಖಗೋಳ ಭೌತಶಾಸ್ತ್ರಜ್ಞ ಡಾ. ವಿಲ್ಲಿ ಸೂನ್ ಅವರ ಅಭಿಪ್ರಾಯದಂತೆ ಜಗತ್ತು ಒಂದು ಮಹಾನ್ ಶಕ್ತಿ ನಡೆಸುತ್ತಿದೆ ಎಂದು ತಿಳಿಸುತ್ತಾರೆ. ದ್ರವ್ಯ, ಪ್ರತಿದ್ರವ್ಯದ ನಿಖರವಾದ ಅಸಮತೋಲನವು ಉದ್ದೇಶಪೂರ್ವಕ ವಿನ್ಯಾಸವನ್ನು ಸೂಚಿಸುತ್ತದೆ, ಈ ಅಸಮತೋಲನ ಇರದಿದ್ದರೆ ಎಲ್ಲವೂ ನಾಶವಾಗುತ್ತಿತ್ತು. ಈ ಒಂದು ದ್ರವ್ಯ, ಪ್ರತಿದ್ರವ್ಯದ ಅಸಮತೋಲನ ಸಮೀಕರಣ ಅದೃಷ್ಟದಲ್ಲ, ಜಗವನ್ನು ಮತ್ತು ಜೀವರಾಶಿಯನ್ನು ನಡೆಸಿಕೊಂಡು ಹೋಗಲು ಮಾಡಿದ ಒಂದು ಮಹಾನ್ ನಿಯಮ. ಇದನ್ನೇ ನಾವು ದಶಾವತಾರದಲ್ಲಿ ಜಗವನ್ನು ಉಳಿಸಲು ಮತ್ಸ್ಯ. ಕೂರ್ಮ, ವರಾಹ ಇತ್ಯಾದಿ ಅವತಾರದಲ್ಲಿ ನೋಡಿದ್ದೇವೆ… ಕಲ್ಕಿಗಾಗಿ ಕಾಯುತ್ತಿದ್ದೇವೆ.

ಲೇಖನ ಅನಿಶ್ಚಿತೆಯಿಂದ ನಿಲ್ಲಿಸುತ್ತಿಲ್ಲ, ವಿಚಾರವನ್ನು ಮುಂದುವರಿಸೋಣ