ದಿನ ನಿತ್ಯ ಬದುಕುಳಿಯುವ ಕಥೆ

ಉಮೈರಾ ಅವರು ಅನಿವಾಸಿಗಳ ದಿನನಿತ್ಯದ ಗೋಳು ಮನಸ್ಸು ಬಿಚ್ಚಿ ನಮ್ಮೊಂದಿದೆ ಹಂಚಿಕೊಂಡಿದ್ದಾರೆ.

ಇದರಿಂಗ ಪ್ರೇರೇಪಿತಳಾದ ನಾನು ತ್ರಿಶಂಕುವಾದ ನನ್ನ ಆಫೀಸಿನ ಗೀಳನ್ನು ಕಾಫಿ ಟಾಕ್ ಸ್ (small talks) – ‘ಚಾ ಜೋಡಿ ಚೂಡಾ’ಅಲ್ಲ ರೀ, ಬರಿ ವಣ ವಣ ಬ್ರೆಡ್ ಗತೆ ಏನು ಸತ್ವವಿಲ್ಲದ, ಮನಸ್ಸು ಬಿಚ್ಚಿ ಮಾತನಾಡಲಾಗದ ದೈನಂದಿನ ದೃಶ್ಯ. ನಿಮ್ಮೆಲ್ಲರ ಅನುಭವಕ್ಕೆ ಈಗಾಗಲೇ ಬಂದಿರುವ ಸನ್ನಿವೇಶಗಳು.
ದಯವಿಟ್ಟು ಓದಿ ನಿಮ್ಮ ಅನುಭವ ಹಂಚಿಕೊಳ್ಳಿ
~ಸಂ

ಅಲ್ಲೊಂದು ಕೋಮು ಗಲಭೆಯಂತೆ
ಕೇಳಿ ಎದೆಯಲ್ಲೊಂದು,
ಬೆಂಕಿ ಇಟ್ಟಂತೆ ಭಾಸ ,
ಅಲ್ಲೊಬ್ಬ ಕೊಲೆಯಾದನಂತೆ,

ಪತ್ರಿಕೆಯೊಳಗೆ ಕಣ್ಣಾಯಿಸಿದೆ ,
ಕೊಲೆ ಮಾಡಿದವನ ಹೆಸರೇನು,
ಜಾತಿಯೇನು,
ಯಾವ ಊರಿನವನು,
ನಮ್ಮ ಜಾತಿಯವನೇ ಆದರೆ,
ಇನ್ನೂ ಚಿಂತೆ ಅಳುಕು

ವಿಧಿ ಸಾಗರದಾಚೆ
ನನ್ನ ಚಿಟಕ್ಕೆಂದು
ಎಳೆದು ತಂದಿತು,
ಈಗ ಹೊಸ ರೀತಿಯ ಗುಲ್ಲು,
ಬೇಲಿ ಹಿಡಿದಂತೆ ಜೀವದ ಮೇಲೆ

ಬೀದಿಯಲ್ಲೊಂದು ಫಲಕ:
“Immigrants, we
don’t need you here”

ಮತ್ತೆ ಕಾಡಿತು ಆ ಗೊಂದಲ,
ನಾನು ಎಲ್ಲಿ ಸಲ್ಲುವವಳು?

ಬಿಡುವಿಲ್ಲದೆ ದುಡಿದು,
ಕೆಲವೊಮ್ಮೆ ಊರ
ಸುಗಂಧ ಕಾಡಿದಾಗ,
ಊರಿಗೆ ಹೊರಟಾಗಲೆಲ್ಲ
ನಮ್ಮವರದೇ ಧ್ವನಿ ,
ಅವರೇನು ಮಾರಾಯ NRI ಗಳು,
ಎಲ್ಲಿ ಹೋದರೂ NRI quota

ಆಗೊಂದು ICICI ಗ್ರಾಹಕ
ಪ್ರತಿನಿಧಿಯ ಕರೆ ,
ನೀವು ನಮ್ಮ
ಪ್ರೀಮಿಯಂ ಗ್ರಾಹಕರು,
ನಿಮಗೆ ಲೋನ್ ಇದೆ,
ಸ್ಪೆಷಲ್ ಕ್ರೆಡಿಟ್ ಕಾರ್ಡ್ ಇದೆ,

ಎಲ್ಲೂ ಸಲ್ಲದಿದ್ದರೂ
ನಾನು,
ಇಲ್ಲಿ ಸಲ್ಲುವೆ ..

-ಉಮೈರ
Gloucester

Coffee with Karen (kitchen + Random office person)

ಬೆಳಿಗ್ಗೆ 9:07ಕ್ಕೆ ನಾನು ಒಂದು ದೊಡ್ಡ ತಪ್ಪು ಮಾಡಿದೆ.

ಆಫೀಸ್ ಕಿಚನ್‌ಗೆ ಹೋದೆ.

ಕೆಟಲ್ ಈಗಾಗಲೇ ಆನ್ ಆಗಿತ್ತು. ಒಳಗೆ ಇನ್ನೊಬ್ಬ ಸಹೋದ್ಯೋಗಿ ನಿಂತಿದ್ದರು.
ಅಷ್ಟೇ… ಏನೋ ದಿಗಿಲು.
ಯಾಕಂದ್ರೆ ಕೆಲಸದ ಜಾಗದ ಸ್ಮಾಲ್ ಟಾಕ್ ಅಂದರೆ ಸುಮ್ಮನೆ ಮಾತಾಡೋದು ಅಲ್ಲ.
ಅದು ಒಂದು ಕಲೆ. ಒಂದು ವಿಧಿ.
ಕೈಯಲ್ಲಿ ಕಾಫಿ ಮಗ್ಗು ಹಿಡಿದು ಮಾಡುವ ಸಾಮಾಜಿಕ ಪರೀಕ್ಷೆ.

“ಗುಡ್ ಮಾರ್ನಿಂಗ್,” ನಾನು ಹೇಳಿದೆ.

ನನ್ನ ಧ್ವನಿಯಲ್ಲಿದ್ದ ಆತ್ಮವಿಶ್ವಾಸ ಕೇಳಿ ನನಗೇ ಅನುಮಾನ ಬಂತು.

“ಗುಡ್ ಮಾರ್ನಿಂಗ್,” ಅವರು ಉತ್ತರಿಸಿದರು.
ನ್ಯೂಟ್ರಲ್. ಸೇಫ್.
ಇಬ್ಬರೂ ಮೊದಲ ಹಂತವನ್ನು ಯಶಸ್ವಿಯಾಗಿ ದಾಟಿದ್ದೆವು.
ಆಮೇಲೆ ಮೊದಲ ಪ್ರಶ್ನೆ ಬಂತು.
” Guess ! it ‘s a busy day today?

ಆಹಾ… ಸ್ಮಾಲ್ ಟಾಕ್‌ನ ಮೊದಲ ನಿಯಮ.

ಈ ಪ್ರಶ್ನೆಗೆ ಯಾರೂ ನಿಜವಾದ ಉತ್ತರ ಕೊಡುವುದಿಲ್ಲ.

“Yeah ! It has been busy off late ” ಎಂದು ನಾನು ತಲೆಯಾಡಿಸಿದೆ.

ನನಗೆ ಏನೂ ಗೊತ್ತಿಲ್ಲ.
ಅವರಿಗೆ ಏನೂ ಗೊತ್ತಿಲ್ಲ.
ಆದರೂ ಇಬ್ಬರೂ ಅರ್ಥ ಮಾಡಿಕೊಂಡಂತೆ ತಲೆ ಆಡಿಸಿದ್ದೇವೆ.

ಅಷ್ಟರಲ್ಲಿ ಕೆಟಲ್ “ಕ್ಲಿಕ್” ಅಂತ ಆಫ್ ಆಯ್ತು.
ತುಂಬಾ ಬೇಗ ನೀರು ಕುದಿಯಿತು ಅನಿಸಿತು.
ಮಾತುಕತೆ ಇನ್ನೂ ಮುಗಿದಿರಲಿಲ್ಲ.

ಮುಂದಿನ obvious ಪ್ರಶ್ನೆ “ಭಯಂಕರ ಶೆಕೆ?” ಅವರು ಕೇಳಿದರು.

ಅಯ್ಯೋ ಹೌದು ತಡೆಯಲಾರದಷ್ಟು ಬಿಸಿಲು ಧಗೆ ಅಂದೇ.

ಇಂಗ್ಲೆಂಡಿನಲ್ಲಿ ಹವಾಮಾನ ಅಂದ್ರೆ ಹವಾಮಾನ ಅಲ್ಲ.

ಅದು ಸಂಭಾಷಣೆ ಶುರು ಮಾಡುವ ಅಧಿಕೃತ ವಿಷಯ.

“ಹೌದು,” ನಾನು ಹೇಳಿದೆ.
“ನಿನ್ನೆ ಚಳಿ ಇತ್ತು. ಇವತ್ತು ಕೂಡ ಎಲ್ಲಿ ಚಳಿ ಆಗತ್ತೋ ಅಂತ ಇಂದು ತಪ್ಪು ಜಾಕೆಟ್ ಹಾಕಿಕೊಂಡು ಬಂದಿದ್ದೀನಿ.”

ಇದಂತೂ ಹಸಿ ಸುಳ್ಳು.

ನಾನು ಪ್ರತಿದಿನ ಅದೇ ಜಾಕೆಟ್ ಹಾಕುತ್ತೇನೆ.

ಆದರೆ ಸ್ಮಾಲ್ ಟಾಕ್‌ನಲ್ಲಿ ಸ್ವಲ್ಪ ಗೊಂದಲ ಇರಬೇಕು ಅನ್ನೋದು ನಿಯಮ.

ನಾವು ಇಬ್ಬರೂ ನಕ್ಕೆವು.

ಜೋರಾಗಿ ಅಲ್ಲ.

ಬಾಯಲ್ಲಿ ಮಾತ್ರ ಕಾಣಿಸುವ, ಕಣ್ಣಿಗೆ ತಲುಪದ ನಗು.

ಆಮೇಲೆ ಅತ್ಯಂತ ಅಪಾಯಕಾರಿ ಪ್ರಶ್ನೆ.

“ವೀಕೆಂಡ್‌ಗೆ ಏನಾದರೂ ಪ್ಲ್ಯಾನ್ಸ್ ಇದೆಯಾ?”

ಈ ಪ್ರಶ್ನೆ ಒಂದು ಬಲೆ. ಸ್ವಲ್ಪ ಯೋಚಿಸಿ ಉತ್ತರ ಕೊಡಬೇಕು.

“ಏನೂ ಇಲ್ಲ” ಅಂದ್ರೆ ಬೋರ್.

“ಮನೆಲ್ಲೇ ರೆಸ್ಟ್ ಮಾಡ್ತೀನಿ” ಅಂದ್ರೆ ಸೋಮಾರಿ.

ತುಂಬಾ ಗ್ರ್ಯಾಂಡ್ ಪ್ಲ್ಯಾನ್ ಹೇಳಿದ್ರೆ ಶೋಆಫ್.

ಹಾಗಾಗಿ ನಾನು ಸುರಕ್ಷಿತ ಉತ್ತರ ಕೊಟ್ಟೆ.

“ಏನೋ… ಬ್ಯುಸಿಯಾಗೇ ಇರುತ್ತೀನಿ.”

(ಅಂದ್ರೆ ? ಅಂತ ಮಾತ್ರ ಕೇಳಬೇಡಿ. ಯಾಕಂದ್ರೆ ಯಾರಿಗೂ ಗೊತ್ತಿಲ್ಲ.

ಬಹುಶಃ ಮನೆ ಸ್ವಚ್ಛತಾ ಕಾರ್ಯಕ್ರಮ. ಲಾಂಡ್ರಿ, ದಿನಸಿ ಸಾಮಾನು ಶಾಪಿಂಗ್.

ಅಥವಾ ಜೀವನದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನೇ ಮರುಪರಿಶೀಲಿಸುತ್ತಿರಬಹುದು.)

ಅವರು ತಲೆಯಾಡಿಸಿದರು.

ಸರಿಯಾದ ಉತ್ತರ ಸಿಕ್ಕಂತಾಯಿತು.

ಮಗ್ಗಿಗೆ ಹಾಲು ಸುರಿಯಿತು.ಕಾಫಿ ತಯಾರಾಯಿತು.ಮಗ್ಗುಗಳು ತುಂಬಿದವು.

ಆದರೆ ಮೌನ ಮಾತ್ರ ಇನ್ನೂ ತುಂಬಲೇ ಇಲ್ಲ.ಹಾಗಾಗಿ ಕೊನೆಯ ಹಂತ ಶುರುವಾಯಿತು.

“ಈ ವರ್ಷ ಎಷ್ಟು ಬೇಗ ಹೋಗ್ತಿದೆ ಅಲ್ವಾ?”

ಹೌದು.

ಸಮಯ ಯಾವಾಗಲೂ ವೇಗವಾಗಿಯೇ ಹೋಗುತ್ತದೆ.

ಇದು ಎಲ್ಲರಿಗೂ ಗೊತ್ತಿರುವ ಸತ್ಯ.

“ನಂಬೋಕಾಗಲ್ಲ,” ಎಂದು ನಾನು ಉತ್ತರಿಸಿದೆ.

ಜನವರಿಯನ್ನು ನಾನು ವೈಯಕ್ತಿಕವಾಗಿ ಭೇಟಿ ಮಾಡಿದ್ದವನಂತೆ ಗಂಭೀರವಾಗಿ ತಲೆಯಾಡಿಸುತ್ತಾ.

ಕೊನೆಗೂ ಆ ಪವಿತ್ರ ವಾಕ್ಯ ಬಂತು.

“ಸರಿ… ಮತ್ತೆ ಕೆಲಸಕ್ಕೆ ಹೋಗ್ಬೇಕು.”

ಇದರ ಅರ್ಥ:

ಸಂಪ್ರದಾಯ ವಿಧಿವತ್ತಾಗಿ ಯಶಸ್ವಿಯಾಯಿತು.

(ಯಾರೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಹೇಳಲಿಲ್ಲ.ಯಾರೂ ಅಸಹಜ ಪರಿಸ್ಥಿತಿ ಸೃಷ್ಟಿಸಲಿಲ್ಲ.)

ನಾವು ಇಬ್ಬರೂ ಹೊರಗೆ ನಡೆದೆವು.

ಇನ್ನೂ 43 ನಿಮಿಷಗಳಲ್ಲಿ ಮತ್ತೆ ಇದೇ ಕಿಚನ್‌ನಲ್ಲಿ ಭೇಟಿಯಾಗುತ್ತೇವೆ ಅನ್ನೋದು ಗೊತ್ತಿದ್ದರೂ…

ಗೊತ್ತಿಲ್ಲ ಅನ್ನೋ ಹಾಗೆ ನಡೆದೆವು.ನಾಳೆಯೂ ಇದೇ ಕಾರ್ಯಕ್ರಮ.

ಮೊದಲು ಹವಾಮಾನ.

ಆಮೇಲೆ ಬ್ಯುಸಿ ಡೇ.

ನಂತರ ವೀಕೆಂಡ್ ಪ್ಲ್ಯಾನ್ಸ್.

ಕೊನೆಯಲ್ಲಿ…

“ಸರಿ… ಮತ್ತೆ ಕೆಲಸಕ್ಕೆ ಹೋಗ್ಬೇಕು.”

ಯಾಕಂದ್ರೆ ಕೆಲಸದ ಜಾಗದ ಸ್ಮಾಲ್ ಟಾಕ್‌ನ ಉದ್ದೇಶ ಸ್ನೇಹ ಮಾಡೋದು ಅಲ್ಲ.

ಅದರ ಉದ್ದೇಶ ಒಂದೇ:

ನೀವು ಸ್ನೇಹಪರ.ಆದರೆ ಅತಿಯಾಗಿ ಅಲ್ಲ.

ನೀವು ಮನುಷ್ಯ.ಆದರೆ ತುಂಬಾ ಭಾವನಾತ್ಮಕ ಅಲ್ಲ.

ನೀವು ಬದುಕಿದ್ದೀರಿ. ಆದರೆ ಅದನ್ನು ಬೊಬ್ಬಾಟ ಮಾಡುವುದಿಲ್ಲ.

ನಿಜ ಹೇಳಬೇಕಂದ್ರೆ…

ಇದು ಕೂಡ ಒಂದು ಕೌಶಲ್ಯ.

ಸರಿ, ನಾನು ಹೊರಡ್ತೀನಿ.

ನಾಳೆ ಕಿಚನ್‌ನಲ್ಲಿ ಹವಾಮಾನದ ಬಗ್ಗೆ ಹೊಸ ಅಭಿಪ್ರಾಯ ಹೇಳಲು ಈಗಿನಿಂದಲೇ ಅಭ್ಯಾಸ ಮಾಡ್ಬೇಕು.

ಒಂದುವೇಳೆ… ಹವಾಮಾನ ಬದಲಾಗಿದ್ರೆ!

ಒಂದು ಕಿವಿ ಮಾತು.. ನಿಮಗೆ ಇಷ್ಟವೋ ಕಷ್ಟವೋ ಫುಟ್ಬಾಲ್ ಬಗ್ಗೆ ಮಾತ್ರ ಸ್ವಲ್ಪ ಮಾಹಿತಿ ಇಟ್ಟುಕೊಳ್ಳಿ ನಿಮ್ಮ ಆಫೀಸಿನ ಜೀವನ ಸ್ವಲ್ಪ ಸರಾಗವಾಗಬಹುದೇನೋ.

~ರಾಧಿಕಾ

ನಾಟಿಂಗ್‌ಹ್ಯಾಮಿನ ನೆಲದಿಂದ — ಕನ್ನಡ ಕಾವ್ಯದ ಮೂರು ದನಿಗಳು

ಕನ್ನಡ ಭಾಷೆ ಕೇವಲ ಕರ್ನಾಟಕದ ಮಣ್ಣಿಗೆ ಸೀಮಿತವಾಗಿಲ್ಲ — ಅದು ಕನ್ನಡಿಗರ ಉಸಿರಿನಲ್ಲಿ ಎಲ್ಲೆಲ್ಲೂ ಹರಿಯುತ್ತದೆ ಎಂಬುದಕ್ಕೆ ಟಿ. ಆರ್. ನಾರಾಯಣ್ ಅವರ ಕವಿತೆಗಳು ಜೀವಂತ ನಿದರ್ಶನ. ಇಂಗ್ಲೆಂಡಿನ ನಾಟಿಂಗ್‌ಹ್ಯಾಮ್‌ನಿಂದ ರಚಿತವಾದ ಈ ಮೂರು ಕವಿತೆಗಳು ಭಿನ್ನ ಭಿನ್ನ ಭಾವಪ್ರಪಂಚಗಳ ಬಾಗಿಲು ತೆರೆಯುತ್ತವೆ.

“ಹಿರಿ ಹಕ್ಕಿಯುಲಿತ ಅನನ್ಯಾನುಭವ ಹಿತವಚನ” — ಬಣ್ಣಬಣ್ಣದ ಹಕ್ಕಿಗಳ ಕಲಾಕೃತಿಯಿಂದ ಸ್ಫೂರ್ತಿ ಪಡೆದ ಈ ಕವಿತೆ ಹತ್ತು ಪದ್ಯಗಳ ಮಾಲೆ. ಸಂಬಂಧಗಳ ಸ್ವರೂಪ, ಸತ್ಯಸಂಧತೆ, ಜೀವನದ ಗುರಿ, ದಯಾಶೀಲತೆ — ಇವುಗಳ ಕುರಿತು ಹಿರಿ ಅನುಭವಿ ನೀಡುವ ಹಿತವಚನಗಳಂತೆ ಪ್ರತಿ ಪದ್ಯವೂ ಮನಮುಟ್ಟುತ್ತದೆ.

“ವಸಂತಾಗಮನ” — ಶಿಶಿರದ ತಣ್ಣನೆಯ ಕೊರೆತದ ನಂತರ ಬರುವ ವಸಂತ ಋತುವನ್ನು ಕವಿ ಇಲ್ಲಿ ಕೇವಲ ಪ್ರಕೃತಿ ಬದಲಾವಣೆಯಾಗಿ ಕಾಣದೆ ಮನುಷ್ಯನ ಆಂತರಿಕ ನವಚೇತನದ ಸಂಕೇತವಾಗಿ ಕಾಣುತ್ತಾರೆ. ನಾಟಿಂಗ್‌ಹ್ಯಾಮಿನ ಮುದಯಾನ ಬಿಳಿ ಮೋಡ, ರವಿಕಿರಣ, ಬಿಸಿಲ ಕೋಲುಗಳ ಚಿತ್ರಣ ಕನ್ನಡ ಛಂದಸ್ಸಿನ ಲಯದಲ್ಲಿ ಸುಂದರವಾಗಿ ಮೂಡಿ ಬಂದಿದೆ.

“ವಿಲಯವಾದವರ ಹುಡುಕಾಟದಲ್ಲಿ” — ಈ ಕವಿತೆ ಮೂರರಲ್ಲಿ ಅತ್ಯಂತ ಆಳವಾದ ತಾತ್ವಿಕ ಕೃತಿ. ತೀರಿಕೊಂಡ ಪ್ರಿಯರನ್ನು ಹುಡುಕುವ ಮನಸ್ಸಿನ ವ್ಯಾಕುಲ, ಅವರ ಅಸ್ತಿತ್ವ ಮತ್ತು ಅನಸ್ತಿತ್ವದ ನಡುವಿನ ತೊಳಲಾಟ, ಮಂಕುತಿಮ್ಮನ ಕಗ್ಗದ ದರ್ಶನದ ಉಲ್ಲೇಖದೊಂದಿಗೆ ಜೀವನ-ಮರಣದ ಸತ್ಯವನ್ನು ಸ್ವೀಕರಿಸುವ ಹಾದಿ — ಇವೆಲ್ಲ ಓದುಗರ ಅಂತರಂಗವನ್ನು ತಟ್ಟದೇ ಇರಲಾರವು.

ತಮ್ಮ ಪ್ರತಿ ಕವಿತೆಯ ಜೊತೆ ಶಬ್ದ ವಿಭಾಗ, ಅರ್ಥ ಮತ್ತು ವ್ಯಾಕರಣ ಟಿಪ್ಪಣಿಗಳನ್ನು ನೀಡುವ ಅವರ ಕ್ರಮ ಕನ್ನಡ ಭಾಷೆಯ ಮೇಲಿನ ಆಳವಾದ ಪ್ರೀತಿ ಮತ್ತು ಪಾಂಡಿತ್ಯವನ್ನು ತೋರಿಸುತ್ತದೆ. KBUK ಕುಟುಂಬದ ಪ್ರೀತಿಯ ಕವಿ ಟಿ. ಆರ್. ನಾರಾಯಣ್ ಅವರ ಈ ಮೂರು ಕವಿತೆಗಳನ್ನು ಓದುಗರ ಮುಂದೆ ತರಲು ನಮಗೆ ಸಂತೋಷವಾಗುತ್ತಿದೆ.

ಕವಿ ಪರಿಚಯ

ಟಿ. ಆರ್. ನಾರಾಯಣ್ ಅವರು ಕರ್ನಾಟಕ ವಿದ್ಯುತ್ ಮಂಡಳಿಯಲ್ಲಿ (KEB) ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅಭಿಯಂತರರು. ತಾಂತ್ರಿಕ ವೃತ್ತಿಜೀವನದ ಹೊರತಾಗಿಯೂ ಕನ್ನಡ ಕಾವ್ಯದ ಮೇಲಿನ ಪ್ರೀತಿ ಅವರನ್ನು ಯಾವತ್ತೂ ಬಿಟ್ಟಿಲ್ಲ. ನಿವೃತ್ತಿಯ ನಂತರ ಅವರು ವರ್ಷದ ಅರ್ಧಭಾಗವನ್ನು ಇಂಗ್ಲೆಂಡಿನ ನಾಟಿಂಗ್‌ಹ್ಯಾಮ್‌ನಲ್ಲಿ ಕಳೆಯುತ್ತಾರೆ — ತಮ್ಮ ಮಗಳು, KBUK ಉಪಾಧ್ಯಕ್ಷರೂ, ಪ್ರಸಿದ್ಧ ಭರತನಾಟ್ಯ ಕಲಾವಿದರೂ ಮತ್ತು ತಜ್ಞ ವೈದ್ಯರೂ ಆದ ಡಾ. ಸುಮನಾ ನಾರಾಯಣ್ ಅವರ ಜೊತೆ. ಅರ್ಧ ಅನಿವಾಸಿ ಕನ್ನಡಿಗರಾದ ಟಿ. ಆರ್. ನಾರಾಯಣ್ ಅವರು ವಿದೇಶದ ನೆಲದಲ್ಲಿ ಕುಳಿತು ತಾಯ್ನಾಡಿನ ಭಾಷೆಯಲ್ಲಿ ಕಾವ್ಯ ರಚಿಸುವ ಮೂಲಕ ಕನ್ನಡ ಸಾಹಿತ್ಯದ ಜ್ಯೋತಿಯನ್ನು ಪರದೇಶದಲ್ಲೂ ಬೆಳಗಿಸುತ್ತಿದ್ದಾರೆ. ಅವರ ಕವಿತೆಗಳಲ್ಲಿ ಶಾಸ್ತ್ರೀಯ ಕನ್ನಡದ ಸಂಧಿ-ಸಮಾಸಗಳ ಬಳಕೆ, ತಾತ್ವಿಕ ಚಿಂತನೆ ಮತ್ತು ಜೀವನಾನುಭವದ ಸಾರ ಒಟ್ಟಾಗಿ ಮಿಳಿತವಾಗಿವೆ.

-ಸಂ