ರಾಜಕುಮಾರಿ ಸೋಫಿಯಾ ದುಲೀಪ್ ಸಿಂಗ್ (೧೮೭೬-೧೯೪೮) – ರಾಮಮೂರ್ತಿ ಎಚ್ ಎನ್.

ನಮಸ್ಕಾರ.  ನಮ್ಮ ಅನಿವಾಸಿ ಬಳಗದ ಉತ್ಸಾಹಿ ಬರಹಗಾರ, ಇತಿಹಾಸದ ಅಧ್ಯೇತೃ (ಬೇಸಿಂಗ್‍ಸ್ಟೋಕ್) ರಾಮಮೂರ್ತಿ ಅವರು ಬರೆದಿರುವ ಇನ್ನೊಂದು ಲೇಖನ. ಪಂಜಾಬಿನ ಕೊನೆಯ ರಾಜ ದುಲೀಪ್ ಸಿಂಹರ ಮಗಳು ರಾಜಕುಮಾರಿ ಸೋಫಿಯಾ ಅವರ ಜೀವನ ಚಿತ್ರಣ ಇಲ್ಲಿದೆ.  ಬರಿಯ ರಾಜಕುಮಾರಿಯಾಗಿ ಉಳಿಯದೇ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ, ಮೊದಲ ಮಹಾಯುದ್ಧದ ವೇಳೆಯಲ್ಲಿ ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದ, ಆ ಕಾರಣಕ್ಕಾಗಿ ಬ್ರಿಟಿಷ್ ಸರಕಾರದಿಂದ ಗೌರವಿಸಲ್ಪಟ್ಟ ಮಹಿಳೆ.  
ಎಂದಿನಂತೆ ಓದಿ, ಪ್ರತಿಕ್ರಯಿಸಿ, ನಿಮ್ಮ ಅನಿಸಿಕೆಗಳನ್ನು ಬ್ಲಾಗಿನಲ್ಲಿ ಹಂಚಿಕೊಳ್ಳಿ. ಧನ್ಯವಾದಗಳೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ಈ ವಾರದ ಸಂಪಾದಕಿ ಅಮಿತಾ ರವಿಕಿರಣ ಅವರ ಪರವಾಗಿ).

********************

ದುಲೀಪ್ ಸಿಂಹ ಮತ್ತು ರಾಜಕುಮಾರಿ ಸೋಫಿಯಾ (ಚಿತ್ರಕೃಪೆ: ವಿವಿಧ ಅಂತರ್ಜಾಲತಾಣಗಳು)
೨೦ನೇ ಶತಮಾನದ ಆದಿಯಲ್ಲಿ ಇಂಗ್ಲೆಂಡ್ ದೇಶದ ಮಹಿಳೆಯರು ಮೂಲಭೂತ ಮತ್ತು ಮತದಾನದ ಹಕ್ಕು ಪಡೆಯಲು ನಡೆಸಿದ ಚಳುವಳಿಗಳಿಗೆ (Suffragette Movement) ಹೋರಾಡಿದ ಭಾರತ ಮೂಲದ ರಾಜಕುಮಾರಿ ಸೋಫಿಯಾ.  ಈಕೆ, ಭಾರತದ ಮತ್ತು ಇಂಗ್ಲೆಂಡಿನ ಶ್ರೀಮಂತ ಕುಟುಂಬದ ಆಶ್ರಯದಲ್ಲಿ ಬೆಳೆದರೂ ಅವಳ ಹೋರಾಟ ರಾಜಕೀಯ ಚಟುವಟಿಕೆಯಲ್ಲೇ ಇತ್ತು.

ಇವಳ ತಂದೆ ಪಂಜಾಬಿನ ಕೊನೆಯ ಮಹಾರಾಜ ದುಲೀಪ್ ಸಿಂಗ್. ಪಂಜಾಬಿನ “ಸಿಂಹ” ಮಹಾರಾಜ ರಂಜಿತ್ ಸಿಂಗ್‍ರ (೧೭೮೦-೧೮೩೯) ನಿಧನವಾದಮೇಲೆ ಆ ಪಟ್ಟಕ್ಕೇರಲು ಅನೇಕರು ಹೋರಾಡಿ, ಕೊನೆಗೆ ಐದು ವರ್ಷದ ದುಲೀಪ್ ಸಿಂಗ್‍ನನ್ನು ರಾಜನನ್ನಾಗಿ ಮಾಡಿದರು. ಆದರೆ ರಾಜ್ಯದಲ್ಲಿ ಅಸ್ಥಿರತೆ ಇರುವುದನ್ನು ಕಂಡು ೧೮೪೯ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ಎರಡನೆಯ ಆಂಗ್ಲೋ-ಸಿಖ್ ಯುದ್ಧದ ನಂತರ ಪಂಜಾಬ್ ಪ್ರಾಂತ್ಯವನ್ನು ಆಕ್ರಮಿಸಿಕೊಂಡು ಹತ್ತು ವರ್ಷದ ದುಲೀಪ್ ಸಿಂಗ್‍ನಿಂದ ಅವನ ಜಮೀನು ಮತ್ತು ಕೊಹಿನೂರ್ ವಜ್ರವನ್ನು ಕಸಿದುಕೊಂಡರು. ನಂತರ ದುಲೀಪ್ ಸಿಂಗನಿಗೆ ಪಿಂಚಿಣಿ ಕೊಟ್ಟು ಇಂಗ್ಲೆಂಡ್‍ನಲ್ಲಿ ವಾಸಮಾಡುವುದಕ್ಕೆ ಏರ್ಪಾಡು ಮಾಡಿದರು, ಇದಲ್ಲದೆ ಸಿಖ್ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ, ಬಹುಶಃ ಬಲವಂತದಿಂದ, ಮಾಡಿದರು.

ಸೋಫಿಯಾ ೮/೦೮/೧೮೭೬ ರಂದು ಲಂಡನ್ ನಗರದ ಬೆಲ್‍ಗ್ರೇವಿಯದಲ್ಲಿ ಜನಿಸಿದಳು. ತಾಯಿ, ಬಾಂಬ ಮುಲ್ಲರ್ (ಜರ್ಮನ್ ಮತ್ತು ಇಥಿಯೋಪಿಯಾ ಮೂಲದವಳು). ದುಲೀಪ್ ಸಿಂಗ್ ೧೮೬೩ರಲ್ಲಿ Suffolk ನಲ್ಲಿ ಇರುವ ೧೭,೦೦೦ ಎಕರೆ Elvedon Hall ಕೊಂಡಿದ್ದ (ಲಂಡನ್‍ನಲ್ಲಿದ್ದ India Office ನ ಸಹಾಯದಿಂದ). ಅವನ ಕುಟುಂಬ ಲಂಡನ್‍ನಿಂದ ಇಲ್ಲಿಗೆ ಬಂದು ನೆಲೆಸಿದರು. ರಾಣಿ ವಿಕ್ಟೊರಿಯಾ ದುಲೀಪ್ ಸಿಂಗನ ಮಕ್ಕಳನ್ನು, ಅದರಲ್ಲೂ ಸೋಫಿಯಾಳನ್ನು, ಸಾಕುಮಕ್ಕಳಂತೆ ಪರಿಗಣಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಳು.

೧೮೮೭ ರಲ್ಲಿ ಬಾಂಬ ಮುಲ್ಲರ್ ಜ್ವರದಿಂದ ನಿಧನಳಾದ ಮೇಲೆ, ದುಲೀಪ್ ಸಿಂಗ್ ೧೮೮೯ರಲ್ಲಿ ಪುನಃ ಮದುವೆಯಾದ. ಆದರೆ ಇವನ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ ಹದಗೆಟ್ಟು ೧೮೮೦ ರಲ್ಲಿ Elvendon Hall ಬಿಡಬೇಕಾಯಿತು. ಸೋಫಿಯಾ ಹತ್ತು ವರ್ಷವಾಗಿದ್ದಾಗ, ದುಲೀಪ್ ಸಿಂಗ್ ತನ್ನ ಸಂಸಾರದ ಜೊತೆಯಲ್ಲಿ ಪಂಜಾಬಿಗೆ ಹಿಂತಿರುಗಲು ಮಾಡಿದ ಪ್ರಯತ್ನ ವಿಫಲವಾಯಿತು. ಹಡಗು ಏಡನ್ ತಲಪಿದಾಗ ಇವರ ಬಂಧನಕ್ಕೆ ಬ್ರಿಟಿಷ್ ಸರ್ಕಾರದ ವಾರಂಟ್ ಕಾದಿತ್ತು. ನಂತರ ದುಲೀಪ್ ಸಿಂಗ್ ಪ್ಯಾರಿಸ್ ನಗರದಲ್ಲಿ ಹಲವು ವರ್ಷಗಳನ್ನು ಕಳೆದು ೫೫ ನೇ ವಯಸ್ಸಿನಲ್ಲಿ ೧೮೯೩ರಲ್ಲಿ ನಿಧನನಾದ.

ರಾಣಿ ವಿಕ್ಟೋರಿಯಾ ಈ ಮಕ್ಕಳ ಯೋಗಕ್ಷೇಮವನ್ನು ಆಲಿಫಂಟ್ ಕುಟುಂಬಕ್ಕೆ ವಹಿಸಿ, ಬ್ರೈಟನ್ ನಗರದಲ್ಲಿ ವಿದ್ಯಾಭ್ಯಾಸ ಮುಂದುವರೆಸುವುದಕ್ಕೆ ಮತ್ತು ವಾಸಕ್ಕೆ ರಾಜ ಮನೆತನದ ಹ್ಯಾಂಪ್ಟನ್ ಕೋರ್ಟ್ ಆವರಣದಲ್ಲಿ ಏರ್ಪಾಡು ಮಾಡಲಾಯಿತು.

ಸೋಫಿಯಾ ಮೊದಲ ಕೆಲವು ವರ್ಷಗಳು ಅತ್ಯಂತ ಆರಾಮದ ಜೀವನವನ್ನು ಕಳೆದಳು. ಆದರೆ ೧೯೦೭ ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಟ್ಟಾಗ, ಅಲ್ಲಿನ ಜನರ ಬಡತನ ಮತ್ತು ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನೋಡಿ ಅವಳ ಮನಸ್ಸು ಪರಿವರ್ತನೆ ಆಯಿತು.
೧೯೧೦ ರವರೆಗೂ ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಯಾವ ರೀತಿಯ ಹಕ್ಕುಗಳೂ ಇರಲಿಲ್ಲ. ಇದನ್ನು ಪ್ರತಿಭಟಿಸಿ "Women's Social and Political Union" (WSPU) ಅನ್ನುವ ಸಂಸ್ಥೆ ಎಮೆಲೀನ್ ಪ್ಯಾಂಕ್‍ಹರ್ಸ್ಟ್ (Emmeline Pankhurst) ಳ ನೇತೃತ್ವದಲ್ಲಿ ಪ್ರಾರಂಭವಾಗಿತ್ತು. ಸೋಫಿಯಾ ಈ ಚಳುವಳಿಯಲ್ಲಿ ಭಾಗವಹಿಸಿವುದಕ್ಕೆ ನಿರ್ಧರಿಸಿ, ಈ ಸಂಸ್ಥೆಯ ಸದಸ್ಯೆ ಆಗಿ ಅನೇಕ ರೀತಿಯಲ್ಲಿ ಸಹಾಯ ಮಾಡಿದಳು. ಸೋಫಿಯಾ ತಾನು ವಾಸವಾಗಿದ್ದ ಹ್ಯಾಂಪ್ಟನ್ ಕೋರ್ಟ್ ಹೆಬ್ಬಾಗಿಲಿನ ಮುಂದೆ ನಿಂತು The Suffragette ಪತ್ರಿಕೆಯ ಮಾರಾಟವನ್ನು ಸಹ ಮಾಡುತಿದ್ದಳು.

೧೯೧೦ ರಲ್ಲಿ ಲಂಡನ್ ನಗರದಲ್ಲಿ ನಡೆದ Black Friday ಪ್ರತಿಭಟನೆಯಲ್ಲಿ ೩೦೦ ಮಹಿಳೆಯರ ತಂಡದೊಂದಿಗೆ ಸೋಫಿಯಾ ಭಾಗವಹಿಸಿ ಕ್ಯಾಸ್ಟನ್ ಹಾಲ್‍ನಿಂದ ಪಾರ್ಲಿಮೆಂಟಿನವರೆಗೆ ನಡೆದು, ಅಲ್ಲಿ ಪ್ರಧಾನ ಮಂತ್ರಿಗಳನ್ನು ಭೆಟ್ಟಿಯಾಗಲು ಪ್ರಯತ್ನಿಸಿದರು. ಆದರೆ ಅವರು ನಿರಾಕರಿಸಿದ್ದರಿಂದ ಈ ತಂಡ ಅಲ್ಲೇ ಕುಳಿತು ಘೋಷಣೆಗಳನ್ನು ಕೂಗುವುದಕ್ಕೆ ಪ್ರಾರಂಭಿಸಿದಾಗ ಪೊಲೀಸರು ಇವರ ಮೇಲೆ ಅತ್ಯಂತ ದೌರ್ಜನ್ಯದಿಂದ ವರ್ತಿಸಿದರು. ಈ ತಂಡದ ಅನೇಕರು ಗಾಯಗೊಂಡು ಇಬ್ಬರ ಮರಣಕ್ಕೂ ಪೋಲೀಸರ ದೌರ್ಜನ್ಯ ಕಾರಣವಾಯಿತು. ಅಂದಿನ ಗೃಹಮಂತ್ರಿ ಸರ್ ವಿನ್ಸ್ಟನ್ ಚರ್ಚಿಲ್ ಪೊಲೀಸರಿಗೆ ಉತ್ತೇಜನ ಕೊಟ್ಟರು ಅನ್ನುವ ಆರೋಪ ಸಹ ಬಂದಿತ್ತು.

೧೯೧೧ ರಲ್ಲಿ ನಡೆದ ಜನಗಣತಿಯಲ್ಲಿ (Census) ಭಾಗವಹಿಸುವುದಕ್ಕೆ ಸೋಫಿಯಾ ಮತ್ತು ಸಂಸ್ಥೆಯವರು ನಿರಾಕರಿಸಿದರು. ಸೋಫಿಯಾ ಜನಗಣತಿಯ ಚೀಟಿಯ ಮೇಲೆ ಈ ರೀತಿ ಬರೆದು ಚೀಟಿಯನ್ನು ಹಿಂತಿರಿಗಿಸಿದಳು (ಕೆಳಗೆ ಚಿತ್ರ ನೋಡಿ) - No Vote, No Census. As women do not count, they refuse to be counted; I have a conscientious objection to filling up this form.
No Vote, No Tax.

ಮತದಾನದ ಹಕ್ಕು ಇಲ್ಲದೆ ವರಮಾನ ತೆರಿಗೆ ಕೊಡುವುದಕ್ಕೂ ಸೋಫಿಯಾ ನಿರಾಕರಿಸಿದ್ದರಿಂದ ನ್ಯಾಯಾಲಯ £೧೨ ದಂಡ ಹಾಕಿತು. ಆದರೆ ಇದನ್ನು ಪ್ರತಿಭಟಿಸಿ ದಂಡವನ್ನು ಕಟ್ಟಲಿಲ್ಲವಾದ ಕಾರಣದಿಂದಿಂದ ಅವಳ ಕೆಲವು ಆಭರಣಗಳನ್ನು ವಶಪಡಿಸಿಕೊಂಡು ಹರಾಜು ಮಾಡಲಾಯಿತು. ಆದರೆ WSPUನ ಕಾರ್ಯದರ್ಶಿ ಈ ಹರಾಜಿನಲ್ಲಿ ಭಾಗವಹಿಸಿ ಆಭರಣಗಳನ್ನು ಕೊಂಡುಕೊಂಡು ಸೋಫಿಯಾಗೆ ವಾಪಸ್ಸು ಕೊಟ್ಟರು.

೧೯೧೪ ನಲ್ಲಿ ಮೊದಲನೇ ಮಹಾಯುದ್ಧ ಪ್ರಾರಂಭವಾದ್ದರಿಂದ ಮಹಿಳೆಯರು ತಮ್ಮ ಹೋರಾಟವನ್ನು ನಿಲ್ಲಿಸಿ, ದೇಶದ ಮತ್ತು ಸರಕಾರದ ಪರವಾಗಿ ನಿಂತು ಸಹಾಯ ಮಾಡುವುದಕ್ಕೆ ಸಿದ್ದರಾದರು. ಲಕ್ಷಾಂತರ ಭಾರತೀಯ ಸೈನಿಕರು ಈ ಯುದ್ಧದಲ್ಲಿ ಭಾಗವಹಿಸಿದ್ದರು, ಇವರ ಯೋಗಕ್ಷೇಮ ಕಾಯಲು ಸೋಫಿಯಾ ನೆರವಾಗಿ Red Cross ಸಂಸ್ಥೆಯ ಪರವಾಗಿ ಹಣ ಸಂಗ್ರಹಣೆ ಮಾಡಿದಳು. ಸ್ವತಃ ೧೯೧೫ರಲ್ಲಿ ಮಿಲಿಟರಿ ಆಸ್ಪತ್ರೆಯಲ್ಲಿ ಬ್ರಿಟಿಷ್ ರೆಡ್‍ಕ್ರಾಸ್ ನರ್ಸ್ ಆಗಿ ಸೇರಿ ಸೇವೆ ಮಾಡಿದಳು. ೧೯೧೮ ರಲ್ಲಿ YMCA War Emergency Committee ಯ ಕಾರ್ಯದರ್ಶಿಯಾಗಿ, ಲಂಡನ್‍ನಲ್ಲಿ “ಧ್ವಜ ದಿವಸ” (Flag Day) ನಡೆದ ನಂತರ “ಭಾರತೀಯ ದಿವಸ” (India day)ದ ಆಚರಣೆಯನ್ನು ಮಾಡಿ, ೫೦೦೦೦ ವಸತಿಗೃಹಗಳನ್ನು ಗಾಯಗೊಂಡ ಭಾರತೀಯ ಸೈನಿಕರು ವಾಸಕ್ಕೆ ಒದಗಿಸಲು ಕಾರಣಳಾದಳು.
ಯುದ್ಧ ಮುಗಿದ ಮೇಲೆ (೧೯೧೮) ಆಂಗ್ಲ ಸರ್ಕಾರ "The Representation of the People Act" ಕಾನೂನು ಜಾರಿಯಾದಾಗ ೩೦ ವರ್ಷ ಮೀರಿದ ಮಹಿಳೆಯರಿಗೂ, ೧೯೨೮ ರ “Franchise Act” ಕಾನೂನು ಹೊರಬಂದಾಗ ೨೧ ವರ್ಷ ಮೀರಿದ ಮಹಿಳೆಯರಿಗೂ ಮತದಾನದ ಹಕ್ಕು ಬಂತು.

ಈ ದೇಶದಲ್ಲಿ ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಇರುವ ಹಕ್ಕು ಮತ್ತು ಸ್ವಾತಂತ್ರಕ್ಕೆ ಕಾರಣ ಸೋಫಿಯಾ ಮತ್ತು ಅವಳ ಸಂಗಡಿಗರ ಹೋರಾಟವೇ ಕಾರಣ ಅನ್ನುವುದರಲ್ಲಿ ಸಂದೇಹವೇ ಇಲ್ಲ.
೨೨/೦೮/೧೯೪೮ ರಲ್ಲಿ ಸೋಫಿಯಾ ಬಕಿಂಗ್‍ಹ್ಯಾಮ್‍ಶೈರ್ನಲ್ಲಿರುವ ಪೆನ್ನ್ ಊರಿನಲ್ಲಿ ಅವಳ ತಂಗಿಯ ಮನೆಯಲ್ಲಿ ತನ್ನ ೭೨ನೇ ವಯಸ್ಸಿನಲ್ಲಿ ನಿಧನಾದಳು.  ರಾಜಕುಮಾರಿ ಸೋಫಿಯಾಳ ಅಂತ್ಯಕ್ರಿಯೆ Golders Green crematorium ನಲ್ಲಿ ೨೬/೦೮/೧೯೪೮ ರಂದು ನಡೆಯಿತು. ಅವಳ ಕೊನೆ ಇಚ್ಛೆ ತನ್ನ ಅಂತಕ್ರಿಯೆಯು ಸಿಖ್ ಪದ್ಧತಿಯಲ್ಲಿ ನಡೆಯಬೇಕೆಂದು ಇತ್ತು. 

ಸೋಫಿಯಾಗೆ ದೊರೆತ ಮರಣೋತ್ತರ ಮಾನ್ಯತೆಗಳು ಅನೇಕ; ರಾಯಲ್ ಮೇಲ್‍ನವರ "Votes for Women" ದಿನಾಚರಣೆಯಲ್ಲಿ ೧೫/೦೨/೨೦೧೮ ಸೋಫಿಯಾ The Suffragette ಪತ್ರಿಕೆಯನ್ನು ಮಾರುತ್ತಿರುವ ಚಿತ್ರವುಳ್ಳ ಅಂಚೆಚೀಟಿ (postage stamp) ಬಿಡುಗಡೆ ಆಯಿತು.

ಏಪ್ರಿಲ್ ೨೦೧೮ ರಲ್ಲಿ ಪಾರ್ಲಿಮೆಂಟ್ ಮುಂದಿರುವ ಕಂಬದ ಮೇಲೆ ಸೋಫಿಯಾಳ ಚಿತ್ರ ಮತ್ತು ಹೆಸರನ್ನು ಕೆತ್ತಲಾಗಿದೆ.
A Princess' Guide to Burning Issue ಅನ್ನುವ ಮಕ್ಕಳಿಗಾಗಿ ಮಾಡಿದ ನಾಟಕ ಅನೇಕ ಶಾಲೆಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ.
English Heritage ನವರು ಹ್ಯಾಂಪ್ಟನ್ ಕೋರ್ಟ್‍ನ ಹತ್ತಿರದ ಮನೆಯ ಮೇಲೆ ನೀಲಿ ಫಲಕದ (Blue Plaque) ಅನಾವರಣೆಯನ್ನು ೨೦೨೩ರಲ್ಲಿ ಮಾಡಿದರು.

ಸೋಫಿಯಾ ಜೀವನ ಚರಿತ್ರೆಯ ಬಗ್ಗೆ ಅನೇಕ ಲೇಖನಗಳು ಮತ್ತು ಪುಸ್ತಕಗಳು ಪ್ರಕಟವಾಗಿವೆ. ಉದಾಹರಣೆಗೆ, ಅನಿತಾ ಆನಂದ್ ಅವರ Suffragette Revolutionary (೨೦೧೫, ISBN ೯೭೮೧೪೦೮೮೩೫೪೫೬).

ಕೊನೆಯ ಮಾತು: ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಮತದಾನ ಮಾಡುವ ಹಕ್ಕು ೧೯೨೮ರಲ್ಲಿ, ಅದೂ ೨೧ ವರ್ಷಕ್ಕೆ ಮೀರಿದವರಿಗೆ ಮಾತ್ರ ದೊರೆತಿತ್ತು; ದಕ್ಷಿಣ ಭಾರತದಲ್ಲಿ, ಮೈಸೂರು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರು ೧೯೨೩ ರಲ್ಲಿಯೇ ಮಹಿಳೆಯರಿಗೆ ಈ ಹಕ್ಕನ್ನು ಕೊಟ್ಟಿದ್ದರ ಮಹತ್ವವನ್ನು ಇಲ್ಲಿ ಮರೆಯಬಾರದು.

- ರಾಮಮೂರ್ತಿ ಎಚ್ ಎನ್.
ಕಾಂಗಲ್‍ಟನ್, ಚೆಶೈರ್.

********************

ಕ್ರಿಕೆಟಿನ ತವರುಮನೆಯ ಕಳವಳಗಳು – ಯೋಗೀಂದ್ರ ಮರವಂತೆ

ಆಶಸ್ ಟ್ರೋಫಿ

ಆಶಸ್ ನಡೆಯುತ್ತಿರುವಾಗ ಕ್ರಿಕೆಟಿನ ಬಗ್ಗೆ ಮಾತನಾಡಿದರೆ, ಬೇಸಿಗೆಯ ಕ್ರಿಕೆಟ್ ಮಾಸ
ಮುಗಿದು ಮೂರು ತಿಂಗಳು ಕಳೆದ ಚಳಿಗಾಲದ ಇಂಗ್ಲೆಂಡಿನಲ್ಲಿ ವಿಷಯಾಂತರವೇನೂ
ಆಗಲಿಕ್ಕಿಲ್ಲ.  ಕಡುಚಳಿಯ ಪರೀಕ್ಷೆ ನಿರೀಕ್ಷೆಯಲ್ಲಿ ಮುಸುಕುಹೊದ್ದು ಮಲಗಿರುವ
ಇಂಗ್ಲೆಂಡಿನ  ಕ್ರಿಕೆಟ್ ಮೈದಾನಗಳಿಂದ  ಹದಿನೈದು ಸಾವಿರ ಕಿಲೋಮೀಟರು ದೂರದ ಬೆಚ್ಚನೆ
ಬಿಸಿಲಿನ ಆಸ್ಟ್ರೇಲಿಯದಲ್ಲಿ ಈ ಸಲದ ಆಶಸ್ ಸರಣಿ ಶುರು ಆಗಿದೆ. “ಆಶಸ್” ಆಂಗ್ಲ ಶಬ್ದದ
ಕನ್ನಡ ರೂಪ “ಬೂದಿ” ಎಂದಾದರೂ , ಈ ಎರಡು ತಂಡಗಳ ನಡುವೆ ನಡೆಯುವ  ಸ್ಪರ್ಧೆ  ಬೂದಿ
ಮುಚ್ಚಿದ ಕೆಂಡದಂತೆ ಯಾವಾಗಲೂ ನಿಗಿನಿಗಿ.  ಆದರೆ, ಸಾಂಪ್ರದಾಯಿಕ ಮತ್ತು ಕಲಾತ್ಮಕ
ಕ್ರಿಕೆಟಿನ ಹೆಮ್ಮೆಯ ಐದು ದಿನಗಳ ಟೆಸ್ಟ್ ಮಾದರಿಯಲ್ಲಿಯೇ  ವಿಶಿಷ್ಟ ಪರಂಪರೆ ಇರುವ
ಆಸ್ಟ್ರೇಲಿಯ-ಇಂಗ್ಲೆಂಡ್ ನಡುವಿನ ಪ್ರಸಕ್ತ ಹಣಾಹಣಿಯ ಮೊದಲ ಪಂದ್ಯ, ಎರಡೇ ದಿನಗಳಲ್ಲಿ
ಮುಗಿದು ಹೋಗಿ ಇತಿಹಾಸಪ್ರಿಯ ಆಂಗ್ಲರ  ಮಟ್ಟಿಗೆ ಕರಾಳ ಚರಿತ್ರೆಯಾಗಿ ದಾಖಲಾಗಿದೆ.
ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಗಳ ನಡುವಿನ ಮೊತ್ತಮೊದಲ
ಟೆಸ್ಟ್ ಪಂದ್ಯ ೧೮೭೭ರಲ್ಲಿ  ನಡೆದಿದ್ದರೂ , ಆಶಸ್ ಮಾದರಿಯ ಸರಣಿ ಶುರು ಆದದ್ದು
೧೮೮೨ರಲ್ಲಿ . ಲಂಡನ್ನಿನ ಓವಲ್ ಅಲ್ಲಿ ನೆಡೆದಿದ್ದ  ಆ ಪಂದ್ಯದಲ್ಲಿ ಇಂಗ್ಲೆಂಡ್
ಸೋತಿತ್ತು. ಸ್ಪೋರ್ಟಿಂಗ್ ಟೈಮ್ಸ್ ಪತ್ರಿಕೆ ಅಂದಿನ  ಸೋಲನ್ನು ಆಂಗ್ಲ ಕ್ರಿಕೆಟಿನ
ಸಾವೆಂದು  ಗೇಲಿ ಮಾಡಿತ್ತು. “ಆಂಗ್ಲ ಕ್ರಿಕೆಟಿನ ಶವಸಂಸ್ಕಾರ  ಮಾಡಲಾಗುತ್ತದೆ,
ಬೂದಿಯನ್ನು ಆಸ್ಟ್ರೇಲಿಯಾಕ್ಕೆ  ಒಯ್ಯಲಾಗುತ್ತದೆ ” ಎಂದು ಅಣಕು ಸಂತಾಪ ಸೂಚಿಸಿತ್ತು.
ಪತ್ರಿಕೆ ಪ್ರಕಟಿಸಿದ ಅಣಕು ಪದವನ್ನೇ ಬಳಸಿಕೊಂಡು ಆಗಿನ ಇಂಗ್ಲೆಂಡ್ ತಂಡದ  ನಾಯಕ,
ಮುಂದಿನ ತಿರುಗಾಟದಲ್ಲಿ “ಬೂದಿ”ಯನ್ನು ಮರಳಿ ತರುತ್ತೇವೆ ಎಂದು ಆಂಗ್ಲ ಕ್ರಿಕೆಟ್
ಪ್ರೇಮಿಗಳಿಗೆ ಭರವಸೆ ನೀಡಿದ್ದ. ೧೮೮೨ರ ಮೊದಲ ಸೋಲಿನ ನಂತರದ ಎಂಟು ಆಶಸ್ ಸರಣಿಗಳಲ್ಲಿ
ಇಂಗ್ಲೆಂಡ್ ನಿರಂತರ ಜಯಗಳಿಸಿತ್ತು.  ಜಿದ್ದು ಮತ್ತು ಮುಯ್ಯಿಗಳ ಸರಣಿ ಪಾರಂಪರಿಕ
ಸ್ಪರ್ಧೆಯಾಗಿ ಬೆಳೆಯಿತು ಮುಂದುವರಿಯಿತು. ಎರಡು ವರ್ಷಕ್ಕೊಮ್ಮೆ ನಡೆಯುವ  ಕ್ರಿಕೆಟ್
ಸರಣಿಯಲ್ಲಿ  ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳು ಉತ್ಸುಕತೆ ಆತಂಕದಲ್ಲಿ ಕಾಯುವ
ವಾತಾವರಣವನ್ನು ಹುಟ್ಟಿಸಿತು.

 ಕ್ರೀಡೆಯೊಂದರ ಕಲೆ ಕ್ಷಮತೆ ಕೌಶಲ ಸೇಡು ಪ್ರತಿಷ್ಠೆಗಳ ಪರಾಕಾಷ್ಠೆಗಳಿಗೆ
ಹೆಸರಾಗಿದ್ದ ಆಶಸ್ ನ ದೀರ್ಘ ಇತಿಹಾಸದ ಹೊಚ್ಚ ಹೊಸ ಪುಟವಾದ ಮೊನ್ನೆಮೊನ್ನಿನ ಸೋಲು
ಕ್ರಿಕೆಟಿನ ಹುಟ್ಟೂರಿನಲ್ಲಿ ಕ್ರಿಕೆಟಿನ ಪ್ರಸ್ತುತ ಪರಿಸ್ಥಿತಿಯ ಬಗೆಗಿನ
ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಅನಿರೀಕ್ಷಿತ ತಿರುವುಗಳು , ಊಹಿಸಲಾಗದ
ಫಲಿತಾಂಶಗಳ ಕಾರಣಕ್ಕೆ ಕೆಲವೊಮ್ಮೆ ಮನುಷ್ಯ ಜೀವನಕ್ಕೆ ಹೋಲಿಸಲ್ಪಡುವ ಕ್ರಿಕೆಟ್
ಪಂದ್ಯದಲ್ಲಿ  ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕಾದ  ಪಾಠ, ಭಗ್ನ ಹೃದಯಿಯ
ಯಾತನೆಗೆ ಹೋಲಿಸಬಹುದಾದ ಹತಾಶೆಯ ಅನುಭವ  ಸಾಮಾನ್ಯ ಆದರೂ ಮತ್ತೆ ಆ ಕಾರಣಗಳಿಗಾಗಿಯೇ
ಜನಾಕರ್ಷಣೆ ಪಡೆದಿರುತ್ತಿದ್ದ ಇಂಗ್ಲಿಷ್ ಕ್ರಿಕೆಟ್ ಇತ್ತೀಚಿನ ವರ್ಷಗಳಲ್ಲಿ ಹೊಸ
ತಲೆಮಾರಿನ ಪ್ರೇಕ್ಷಕರನ್ನು  ಸೆಳೆಯುವಲ್ಲಿ ವಿಫಲ ಆಗುತ್ತಿದೆ. ಇಂಗ್ಲೆಂಡಿನ  ಜನರ
ನಿತ್ಯದ ಹರಟೆಯೊಳಗೆ ಸ್ಥಾನ ಪಡೆಯುವಲ್ಲಿ ಸೋಲುತ್ತಿದೆ. ಯುವಜನತೆಯ ಆಸಕ್ತಿ  ಮತ್ತು
ನೆನಪುಗಳಿಂದ ದೂರ ಆಗುತ್ತಿದೆ.  ಬೇಸಿಗೆಯಲ್ಲಿ ಕ್ರಿಕೆಟ್ ಪಂದ್ಯಗಳು ಹಿಂದಿಗಿಂತ
ಹೆಚ್ಚೇ ನಡೆದರೂ  ಕ್ರೀಡಾಂಗಣದ ಆಸನದಲ್ಲಿ ದಕ್ಷಿಣ ಏಷ್ಯಾ ಮೂಲದ ಪ್ರೇಕ್ಷಕರೇ
ಹೆಚ್ಚಾಗಿ ಕಾಣಿಸುವುದು ಸಾಮನ್ಯ ಆಗಿದೆ.

೭೦-೮೦ರ ದಶಕದಲ್ಲಿ ಜೆಫ್  ಬಾಯ್ಕಾಟ್ ಅಥವ ಇಯಾನ್ ಬೋಥಮ್ ರು ಇಂಗ್ಲೆಂಡಿನ
ಮನೆಮಾತಾಗಿದ್ದವರು, ಆ ಕಾಲದ ಅತ್ಯಂತ ಪ್ರಸಿದ್ಧ ಫುಟ್ಬಾಲ್ ತಾರೆಯರಷ್ಟೇ ಜನಪ್ರಿಯತೆ
ಪಡೆದಿದ್ದವರು. ಆದರೆ ಪ್ರಸ್ತುತ ಇಂಗ್ಲೆಂಡ್ ತಂಡದ ನಾಯಕ ಅಥವಾ ಮುಖ್ಯ ಆಟಗಾರರ ಹೆಸರು
ಇಂಗ್ಲೆಂಡಿನ ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ. ಜೋ ರೂಟ್ ಎಲ್ಲಾದರೂ
ಬೀದಿಯಲ್ಲಿಯೋ ಅಂಗಡಿಯಲ್ಲಿಯೋ ಎದುರಾದರೆ ಹಸ್ತಾಕ್ಷರಕ್ಕೆ ದುಂಬಾಲು ಬೀಳುವುದು ಬಿಡಿ
ಗುರುತು ಹಿಡಿಯುವವರೇ ವಿರಳ ಇರಬಹುದು.  ಇಂಗ್ಲೆಂಡಿನಲ್ಲಿ ಹುಟ್ಟಿ ಬಲಿತ ,
ಇಂಗ್ಲಿಷರು ತಕ್ಕಡಿ ಹಿಡಿದು ಹೋದಲ್ಲೆಲ್ಲ ಬಿತ್ತಿ ಬೆಳೆದ ಕ್ರೀಡೆಯೊಂದು ಯಾಕೆ
ಅಸಡ್ಡೆಗೆ ಗುರಿ ಆಗುತ್ತಿರಬಹುದು ಎನ್ನುವುದರ ವಿಶ್ಲೇಷಣೆಯೂ ಆಶಸ್ ನ ಮೊದಲ ಪಂದ್ಯದ
ಅಪಮಾನಕರ ಸೋಲಿನಿಂದ , ಸ್ಟುಡಿಯೋದಲ್ಲಿ ಕುಳಿತು ಕ್ರಿಕೆಟನ್ನು ಚರ್ಚಿಸುವ ಬಿಳಿಕೂದಲ
ಗತಕಾಲದ ಇಂಗ್ಲಿಷ್ ಕ್ರೀಡಾ  ಪಂಡಿತರ ಕಾಮೆಂಟರಿಯೊಳಗೆ ಸೇರಿಕೊಂಡಿದೆ , ದಿನಪತ್ರಿಕೆಯ
ಮೂಲೆಯಲ್ಲಿ ಅಭಿಮತವಾಗಿ ಜಾಗ ಪಡೆದಿದೆ. ಆಂಗ್ಲರು ನಿಜವಾದ ಕ್ರಿಕೆಟ್ ಎಂದು ಕರೆಯುವ,
ಐದು ದಿನಗಳ ಟೆಸ್ಟ್ ಪಂದ್ಯಗಳು ಒಂದು ಕಾಲದಲ್ಲಿ ಉಚಿತವಾಗಿ ದೂರದರ್ಶನದಲ್ಲಿ
ಪ್ರಸಾರಗೊಳ್ಳುತ್ತಿದ್ದವು. ಆಶಸ್ ನ ವೀರೋಚಿತ ಸೋಲು ಗೆಲುವುಗಳು ಟಿವಿ ಇರುವ ಪ್ರತಿ
ಮನೆಯನ್ನೂ  ರೇಡಿಯೋ ಆಲಿಸುವ ಜೋಡಿ ಕಿವಿಗಳನ್ನೂ ಸುಲಭವಾಗಿ ತಲುಪುತ್ತಿದ್ದವು. ಈ
ಕಾಲದಲ್ಲಿ ಪ್ರಸಾರದ ಹಕ್ಕುಗಳನ್ನು ಚಂದಾ ನೀಡಬೇಕಾದ ಚಾನೆಲ್ ಗಳಿಗೆ ಮಾರಲಾಗಿದೆ.
ಕ್ರಿಕೆಟ್ ನಿಯಂತ್ರಣ ಮಂಡಳಿಗಳಿಗೆ ಅಲ್ಪಾವಧಿಯಲ್ಲಿ ಹಣ ಹರಿದು ಬರುವುದು
ಹೆಚ್ಚಿದೆಯಾದರೂ  ದೀರ್ಘಾವಧಿಯಲ್ಲಿ ಕ್ರಿಕೆಟಿನ ಜನಪ್ರಿಯತೆಯನ್ನು  ಕುಗ್ಗಿಸಿದೆ.
೨೦೧೯ರ ವಿಶ್ವಕಪ್ ಫೈನಲ್ಸ್ ಚಾನೆಲ್ ೪ರಲ್ಲಿ ಉಚಿತವಾಗಿ ಪ್ರಸಾರವಾಗಿದ್ದು , ತಮ್ಮ
ತಂಡ ಜಯಗಳಿಸಿದ್ದನ್ನು  ಇಂಗ್ಲೆಂಡಿನ ಉದ್ದಗಲಕ್ಕೆ  ಸಂಭ್ರಮಿಸಿದ್ದು , ಇಂಗ್ಲಿಷ್
ಮಣ್ಣಿನ ಕ್ರೀಡೆಗೆ ಸಿಕ್ಕ ಆತ್ಮೀಯತೆಯ ಕೊನೆಯ ಉದಾಹರಣೆ ಇರಬಹುದು.

ಹಾಗೆ ನೋಡಿದರೆ ಕ್ರಿಕೆಟ್  ಆಂಗ್ಲರ  ಕೈಬಿಟ್ಟು … ಆಂಗ್ಲರು  ಕ್ರಿಕೆಟಿನ ಕೈ
ಬಿಟ್ಟು  ದಶಕಗಳೇ  ಕಳೆದಿವೆ. ಇದು ಕ್ರಿಕೆಟಿಗೂ ಮತ್ತು ಅದರ ಅಳಿದುಳಿದ ಆಂಗ್ಲ
ಅಭಿಮಾನಿಗಳಿಗೂ ಬಹಳ ಬೇಸರದ  ವಿಷಯವೇನೂ  ಇರಲಿಕ್ಕಿಲ್ಲ. ಇಂಗ್ಲೆಂಡಿನಲ್ಲಿ ಈ  ಬಗ್ಗೆ
ಕಳವಳ ಪಡುತ್ತಿರುವುದಿದ್ದರೆ  ಅದು  “ಕ್ರಿಕೆಟಿನ  ತವರು ” ಎಂದು ಶತಮಾನದಿಂದ
ಕರೆಸಿಕೊಳ್ಳುತ್ತ  ಹೊಗಳಿಕೆ  ಪ್ರೀತಿ ಹೆಮ್ಮೆ ಮತ್ತು ಹೊಣೆಗಾರಿಕೆಯ  ಭಾರ ಹೊತ್ತ
ಲಾರ್ಡ್ಸ್  ಮೈದಾನ ಇರಬಹುದು .  ಲಾರ್ಡ್ಸ್  ನ ಪೆವಿಲಿಯನ್ ಗೆ ನೀವು ಭೇಟಿ
ನೀಡಿದ್ದರೆ ಆ ಐತಿಹಾಸಿಕ ಮೈದಾನದಲ್ಲಿ ಸಾಹಸ  ಮೆರೆದ  ಕ್ರಿಕೆಟಿಗರ  ಹೆಸರುಗಳ
ಫಲಕವನ್ನು ಗೋಡೆಗೆ   ತೂಗು  ಹಾಕಿದ್ದು ಗಮನಿಸಿರುತ್ತೀರಿ  , ಮತ್ತೆ ಅದರಲ್ಲಿ  ವರ್ಷ
ಕಳೆದಂತೆ ಆಂಗ್ಲರ  ಹೆಸರು ಕಡಿಮೆ  ಆಗುತ್ತಿರುವುದನ್ನೂ .  ಕಣ್ಣುಕುಕ್ಕುವ ಹಚ್ಚ
ಹಸಿರಿನ ಹುಲ್ಲಿನ ಹೊದಿಕೆಯ ಕೆಳಗೆ , ಮೆತ್ತಗೆ ಹೆಜ್ಜೆ  ಇಟ್ಟು ನಡೆಯುವ ಮತ್ತೆ
ಬೀಸುವ ತಂಗಾಳಿಗೆ  ಮೈ ಸೆಟೆದು ಪಟ ಪಟ ರೆಕ್ಕೆ ಬಡಿದು ಹಾರುವ  ಪಾರಿವಾಳಗಳ ಗುಂಪಿನ
ನೆರಳಲ್ಲಿ   ಮತ್ತು ಮೈದಾನವನ್ನು ಕೋಟೆಯಂತೆ ಸುತ್ತುವರಿದ ಹಳೆಯ ಕಟ್ಟಡಗಳು ,
ಪವಿಲಿಯನ್ ಮತ್ತು  ಡ್ರೆಸಿಂಗ್ ರೂಂಗಳ ಸುತ್ತಿನ ಕೋಟೆಯ ಒಳಗೆ  ಹುದುಗಿ  ಸೆರಗಿನ
ತುದಿಯನ್ನು ಬೆರಳಿಗೆ ಸುತ್ತುತ್ತ ಯೋಚಿಸುತ್ತಿರುವುದಿದ್ದರೆ  ಅದು  ಲಾರ್ಡ್ಸ್ ಮಾತ್ರ
ಇರಬಹುದು .

ಭಾರತದಲ್ಲಿ  ಮಣ್ಣಿನ ಆಟವಾದ  ಹಾಕಿಯನ್ನು ಹಿಂದೆ  ತಳ್ಳಿ   ಕ್ರಿಕೆಟ್
ಮೆರೆಯುವಂತೆ, ಇಂಗ್ಲೆಂಡಿನ ಕ್ರಿಕೆಟ್ ಮೈದಾನಗಳಲ್ಲಿನ  ಸಣ್ಣ ಪುಟ್ಟ ಚಪ್ಪಾಳೆ
ಶಿಳ್ಳೆಗಳನ್ನು ಮಿಕ್ಕಿಮೀರಿ  ಫುಟ್ಬಾಲ್ ರಗ್ಬಿಗಳ ಉನ್ಮಾದ ಉತ್ಸಾಹ
ಮುಗಿಲುಮುಟ್ಟುತ್ತದೆ . ಎಲ್ಲೆಂದರಲ್ಲಿ ಯಾವಾಗ ಬೇಕಾದರೂ ಅತಿ ಸುಲಭದಲ್ಲಿ ಕಡಿಮೆ
ಖರ್ಚಿನಲ್ಲಿ ಆಡಬಹುದಾದ  ಫುಟ್ಬಾಲ್  ಮಕ್ಕಳನ್ನು ಎಚ್ಚರದಲ್ಲೂ ಸ್ವಪ್ನದಲ್ಲೂ
ಕಾಡುತ್ತದೆ.  ಲೀಗ್  ಫುಟ್ಬಾಲಲ್ಲಿರುವ  ಅಪಾರ  ಹಣ , ಜನಪ್ರಿಯತೆ , ಜಾಹಿರಾತು
,ವ್ಯಾಪಾರೀ ತಂತ್ರ ಎಲ್ಲವೂ ಸೇರಿ  ಹೊಸ ಪ್ರೇಕ್ಷಕರನ್ನು ಸೇರಿಸಿಕೊಳ್ಳುತ್ತದೆ.
ಟಿವಿ, ಸಾಮಾಜಿಕ ಮಾಧ್ಯಮ , ಪಬ್ಬಿನಲ್ಲಿ ಶುಕ್ರವಾರ ಸಂಜೆಯ ಹರಟೆ ಹೀಗೆ ಎಲ್ಲೆಡೆಯೂ
ಹರಡುತ್ತದೆ.   ಜೆಂಟಲ್ ಮ್ಯಾನ್ ಗಳ ಆಟ ಎಂದು ಹೆಸರಾದ ಕ್ರಿಕೆಟ್  ಆಟದ ಈಗಿನ
ಇಂಗ್ಲಿಷ್ ಪ್ರೇಕ್ಷಕ ವರ್ಗದಲ್ಲಿ ಬಹುಪಾಲು ಜನರು ನಲವತ್ತು ಐವತ್ತು ವರ್ಷ ಮೇಲಿನವರು
ಅಂದರೆ ನಿಜವಾಗಲೂ ಪ್ರಬುಧ್ಧ  ವಯಸ್ಕ ಜೆಂಟಲ್ ಮ್ಯಾನ್ ಗಳು.

ಕ್ರೀಡೆ ಯಾವುದೇ ಇದ್ದರೂ , ಗತಕಾಲದ ಘಟನೆಗಳಿಂದಾಗಿ ಆಯಾ ಕ್ರೀಡೆಗೆ ತಕ್ಕಂತೆ  ಕೆಲವು
 ದೇಶಗಳ  ವಿರುದ್ಧ  ಆಡುವಾಗ  ತಾವು ಗೆಲ್ಲಲೇ  ಬೇಕೆಂದು  ಇಂಗ್ಲಿಷ್
ಕ್ರೀಡಾಭಿಮಾನಿಗಳು  ಹಾರೈಸುತ್ತಾರೆ. ಕ್ರಿಕೆಟಿನ  ಮಟ್ಟಿಗೆ  ಅದು  ಆಸ್ಟ್ರೇಲಿಯದ
ವಿರುದ್ಧ , ಫುಟ್ಬಾಲ್  ಆದರೆ  ಜರ್ಮನಿ, ಫ್ರಾನ್ಸ್ ಗಳ  ವಿರುದ್ಧ. ತಮ್ಮ ಬದ್ದ
ವೈರಿಯ ಜೊತೆ ಒಂದು ವೇಳೆ ಸೋತರೆ,  ವಿಶೇಷ ಟಿಪ್ಪಣಿ ಅಥವಾ ವ್ಯಂಗ್ಯದಲ್ಲೇ  ಪಂದ್ಯ
ಮತ್ತು ವಿಶ್ಲೇಷಣೆ  ಎರಡನ್ನೂ ಮುಗಿಸುತ್ತಾರೆ.  ಈ ಹಿಂದೊಮ್ಮೆ  ಇಂಗ್ಲಂಡ್
ಆಸ್ಟ್ರೇಲಿಯಾಕ್ಕೆ ಸೋತಾಗ ಬೇಸರಗೊಂಡ ನನ್ನ ಕಚೇರಿಯ  ಕ್ರಿಕೆಟ್ ಅಭಿಮಾನಿ,
ಕ್ರಿಕೆಟ್  ಮಟ್ಟಿಗೆ ಆಸ್ಟ್ರೇಲಿಯಾಕ್ಕೆ ಎಷ್ಟು  ಅದೃಷ್ಟ  ಇದೆಯೋ  ತಮ್ಮ   ದೇಶಕ್ಕೆ
 ಅಷ್ಟೇ ಪಾಲಿನ  ದುರಾದೃಷ್ಟ   ಇದೆ  ಎಂದು ಸಮರ್ಥನೆ ನೀಡಿದ್ದ ! ಹಾಗಂತ ಇಂತಹ ಹಲವು
ಸೋಲುಗಳನ್ನು ಅರಗಿಸಿಕೊಂಡಿರುವ ಲಾರ್ಡ್ಸ್ ಮೈದಾನ ಇದನ್ನು  ತನ್ನ ದುರಾದೃಷ್ಟ ಎಂದೇ
ತಿಳಿಯಬಹುದು.  ಲಾರ್ಡ್ಸ್ ನಲ್ಲಿ ನಡೆದ ೨೦೦೨ ರ  ನಾಟ್ ವೆಸ್ಟ್  ಸರಣಿಯ  ಕೊನೆಯ
ಪಂದ್ಯದಲ್ಲಿ  ಭಾರತ  ಇಂಗ್ಲೆಂಡನ್ನು ವೀರೋಚಿತವಾಗಿ ಹೋರಾಡಿ ಸೋಲಿಸಿತ್ತು. ಯುವರಾಜ್
ಮತ್ತು  ಕೈಫ್ ಅಂದಿನ ಪಂದ್ಯದ  ಜೋಡಿ ಹೀರೋಗಳು . ಈ ಪಂದ್ಯವನ್ನು  ಭಾರತ ತಂಡದ
ಡ್ರೆಸಿಂಗ್ ರೂಮಿನ ಬಾಲ್ಕನಿಯಲ್ಲಿ ನಿಂತು ಉಗುರು ಕಚ್ಚುತ್ತ ನೋಡಿ ಮುಗಿಸಿದ್ದ ಆಗಿನ
 ನಾಯಕ  ಗಂಗೂಲಿ , ತಡೆಯಲಾಗದ ಉದ್ವೇಗ  ಸಂತೋಷದಲ್ಲಿ  ಬಾಲ್ಕನಿಯಲ್ಲೇ  ನಿಂತು
ಎಲ್ಲರೆದುರೇ   ಅಂಗಿಯನ್ನು  ಕಳಚಿ  ಕೈಯಲ್ಲಿ ಹಿಡಿದು ಗರಗರ  ತಿರುಗಿಸಿದ್ದು . ಈಗಲೂ
 ಆ  ಕಾರಣಕ್ಕೆ  ಅತಿಥಿ ತಂಡದ  ಬಾಲ್ಕನಿಯನ್ನು ‘ಗಂಗೂಲಿ  ಬಾಲ್ಕನಿ ‘ ಎಂದೇ
ಅನೌಪಚಾರಿಕವಾಗಿ ಕರೆಯುತ್ತಾರೆ . ಎಷ್ಟೇ ಆನಂದ  ಆಗಲಿ    ಇಂಗ್ಲೆಂಡಿನ  ಕ್ರಿಕೆಟಿನ
ಸಂಪ್ರದಾಯಸ್ಥ   ಪ್ರೇಕ್ಷಕರು   ಹೆಚ್ಚೆಂದರೆ  ಕೂತಲ್ಲೇ ,ಅಲ್ಲದಿದ್ದರೆ ಎದ್ದು
ನಿಂತು ಕೈ  ತಟ್ಟಿ  ಅತಿಯಾದ ಹರ್ಷವನ್ನು ಸೂಚಿಸುವವರು , ಕ್ರಿಕೆಟಿನ “ಜೆಂಟಲ್
ಮ್ಯಾನ್ ” ಪರಂಪರೆಯನ್ನು ಮುರಿದ ಆ ಘಟನೆಗೆ ಬೆರಗಾಗಿದ್ದರು .  ಲಾರ್ಡ್ಸ್ ಮೈದಾನವಂತೂ
 ಆಂಗ್ಲ ಸಂಪ್ರದಾಯ ರಿವಾಜನ್ನು ಮೀರಿದ ಭಾರತೀಯನ ನಡವಳಿಕೆಗೆ ನಾಚಿ ಮುದ್ದೆ
ಆಗಿರಬಹುದು. ಇದೇ  ಮೈದಾನದಲ್ಲಿ ನಡೆದ ಇನ್ನೊಂದು  ಪಂದ್ಯದಲ್ಲಿ , ಆಸ್ಟ್ರೇಲಿಯ
ತಂಡದ  ರೋಚಕ  ಗೆಲುವನ್ನು ಸಂಭ್ರಮಿಸಲು   ಶೇನ್   ವಾರ್ನ್  ಕೂಡ  ಅತಿಥಿ ತಂಡದ
ಬಾಲ್ಕನಿಯಲ್ಲಿ  ಗಂಗೂಲಿಯಂತೆ  ಅಂಗಿ  ಕಳಚಿ  ಎಸೆದಿದ್ದ  . ಆಮೇಲೆ   ಕೆಲವರು ಈ
ಬಾಲ್ಕನಿಯನ್ನು  ‘ವಾರ್ನ್  ಬಾಲ್ಕನಿ’ಯಂತಲೂ ಕರೆಯತೊಡಗಿದ್ದರು .

ಹೀಗೆ ಕ್ರಿಕೆಟ್ ಚರಿತ್ರೆಯ ಮಾಹಾಸಂಪುಟವನ್ನು ತನ್ನೊಳಗೆ ಹುದುಗಿಸಿಕೊಂಡಿರುವ
ಲಾರ್ಡ್ಸ್ ಗೆ ಇಂಗ್ಲೆಂಡಿನ ಚರಿತ್ರೆಯಲ್ಲಿಯೂ  ವಿಶಿಷ್ಟ  ಪಾಲುದಾರಿಕೆ ಇದೆ.
ಇತಿಹಾಸದ ಜೊತೆಗೆ   ಸಣ್ಣ  ಸಂಬಂಧ  ಹೊಂದಿದ  ವಸ್ತುವನ್ನೂ  ವಿಷಯವನ್ನೂ
ವೈಭವೀಕರಿಸಿ ಪ್ರವಾಸೋದ್ಯಮದಲ್ಲಿ  ಸೇರಿಸಿಕೊಳ್ಳುವ  ಇಂಗ್ಲೆಂಡಿನಲ್ಲಿ  ,
ಕ್ರಿಕೆಟಿನ ಜನಪ್ರಿಯತೆ  ಕುಗ್ಗಿದ್ದರೂ   ಲಂಡನ್ ಪ್ರವಾಸೋದ್ಯಮದ ನಕ್ಷೆಯಲ್ಲಿ
ಲಾರ್ಡ್ಸ್ ಮೈದಾನಕ್ಕೆ  ವಿಶೇಷ ಗುರುತು ಇದೆ. ಈ ಗುರುತಿನ ಬೆನ್ನು ಹಿಡಿದು  ದುಬಾರಿ
ಎಂದು ತೋರುವ ಟಿಕೇಟು ಪಡೆದು ಮೈದಾನದ ಒಳ ನಡೆದರೆ  ಅಲ್ಲೊಬ್ಬ   ಗೈಡ್   ಲಾರ್ಡ್ಸ್
ಒಳಗೆಲ್ಲ  ಸುತ್ತಾಡಿಸಿ   ಗೋಡೆ ಫಲಕ ಮೈದಾನ ಕಂಬ ಕಿಟಕಿಗಳ ಇತಿಹಾಸ ಕಥೆ  ಹೇಳಿ
ನಿಮ್ಮನ್ನು ರಂಜಿಸುತ್ತಾನೆ. ಮತ್ತೆ  ಲಾರ್ಡ್ಸ್  ಒಳಗಿನ  ಅಂಗಡಿಯಲ್ಲಿ  ನಮ್ಮ  ನಮ್ಮ
 ರುಚಿಗೆ ಮತ್ತು  ಕಿಸೆಗೆ  ತಕ್ಕಂತೆ  ದೊರೆಯುವ ಸ್ಮರಣಿಕೆಗಳ ಕಡೆಗೂ ಗಮನ
ಸೆಳೆಯುತ್ತಾನೆ . ಲಾರ್ಡ್ಸ್ ಮೈದಾನಕ್ಕೆ ಇನ್ನಷ್ಟು ಮುಜುಗರ ಹುಟ್ಟಿಸುತ್ತಾನೆ.
ಲಾರ್ಡ್ಸ್ ನ ಹಳೆಯ ವೈಭವನ್ನು ಮೆಲುಕು ಹಾಕುತ್ತ ಗೈಡನ ಹಿಂದೆ  ಕೈ ಕಟ್ಟಿಕೊಂಡು
ದೂರದೂರದ ಪ್ರವಾಸಿ ಕ್ರಿಕೆಟ್ ಪ್ರೇಮಿಗಳು ಹಿಂಬಾಲಿಸುವಾಗ  ಲಾರ್ಡ್ಸ್ ಒಂದು
ನಿಟ್ಟುಸಿರು ಬಿಡುತ್ತದೆ, ಕ್ಯಾಮೆರ ಹಿಡಿದು ಮೈದಾನದ ವಿವಿಧ ದಿಕ್ಕುದೆಸೆಗಳ ಭಂಗಿಗಳ
ಛಾಯಾಚಿತ್ರ ತೆಗೆಯ ಹೊರಟವರಿಗೂ ಲಾರ್ಡ್ಸ್ ಮನದುಂಬಿ ನಕ್ಕಿದ್ದನ್ನು ಕ್ಲಿಕ್ಕಿಸುವುದು
 ಸಾಧ್ಯ ಆಗಲಿಕ್ಕಿಲ್ಲ . ಪ್ರೇಮಿಗಳಿಗೆ  ಕಾಶ್ಮೀರದ  ಕಣಿವೆಯಲ್ಲೋ ,
ಸ್ವಿಜರ್ಲ್ಯಾಂಡಿನ  ಹಿಮ ಶಿಖರದಲ್ಲೋ  ಸಿಗುವ ರೋಮಾಂಚನವನ್ನು ಲಾರ್ಡ್ಸ್ ಮೈದಾನ
ಕ್ರಿಕೆಟ್  ಆಟಗಾರರಿಗೆ ,  ಪ್ರೇಕ್ಷಕರಿಗೆ  ನೀಡುತ್ತಲೇ ಬಂದಿದೆ.  ಕ್ರಿಕೆಟ್
ಆಟಗಾರರು  ಪಂದ್ಯವೊಂದರಲ್ಲಿ ಶತಕವನ್ನೋ  ಅಥವಾ  ಐದು  ವಿಕೆಟುಗಳನ್ನೋ  ಪಡೆದು
ಅಲ್ಲಿನ ಶಾಶ್ವತ ಫಲಕದಲ್ಲಿ  ತಮ್ಮ  ಹೆಸರು  ಸೇರಿದರೆ  ತಮ್ಮ ಕ್ರೀಡಾ ಜನುಮಕ್ಕೆ
ಮೋಕ್ಷ  ಸಿಕ್ಕಿದವರಂತೆ  ಖುಶಿ  ಪಡುತ್ತಾರೆ . ಕ್ರಿಕೆಟಿನ  ಅಪ್ಪಟ  ಪ್ರೇಮಿಗಳು
ಲಾರ್ಡ್ಸ್ ಅಲ್ಲಿ ಕುಳಿತು  ಒಂದು  ಪಂದ್ಯವನ್ನಾದರು  ನೋಡಬೇಕೆಂದು  ಕನಸು
ಕಾಣುತ್ತಾರೆ. ಕೋಟ್ಯಾಂತರ ಜನರ ತಲೆಯಲ್ಲಿ ಗುಂಯ್ ಗುಂಯ್ ಗುಟ್ಟುವ  ಇಂತಹ ಕನವರಿಕೆಗೆ
 ತಾನೇ ಕಾರಣ  ಎನ್ನುವ ಹೆಮ್ಮೆಯಲ್ಲಿದ್ದ ಲಾರ್ಡ್ಸ್ , ತವರಿನ ತಂಡದ ಕಳಪೆ ಸಾಧನೆ,
ವಿಮುಖರಾದ ಅಭಿಮಾನಿಗಳು ಮತ್ತೆ ಕರಗುತ್ತಿರುವ ಆಸಕ್ತಿ ಜನಪ್ರಿಯತೆಗಳಿಂದ
ಸೊರಗಿಹೋಗಿದೆ  .

ಇಂಗ್ಲೆಂಡಿನ ಕ್ರಿಕೆಟ್ ಮತ್ತೆ ತನ್ನ ವೈಭವದ ದಿನಗಳನ್ನು ಮತ್ತು ಯಶಸನ್ನು
ಕಂಡುಕೊಳ್ಳುತ್ತದೋ ಇಲ್ಲವೋ , ಹೊಸ ಕ್ರಿಕೆಟ್ ಹೀರೋಗಳ ಫೋಟೋಗಳು ಚಿಣ್ಣರ ಬ್ಯಾಟುಗಳ
ಮೇಲೆ, ಶಾಲಾ  ಪುಸ್ತಕದ ಒಳಪುಟಗಳಲ್ಲಿ  ಅವಿತು  ಮಂದಹಾಸ ಬೀರುತ್ತವೋ ಇಲ್ಲವೋ ಆದರೆ
ಕ್ರಿಕೆಟ್ ಎನ್ನುವುದು ದೇಹ ಮನಸುಗಳಿಗೆ ಉಲ್ಲಾಸ ಆರೋಗ್ಯ ತರುವ   ಕ್ರೀಡೆಯಾಗಿ
ಉಳಿಯಲಿ ಎಂದು  ಕ್ರಿಕೆಟಿನ ತವರು  ಆಶಿಸುತ್ತಿರಬಹುದು.  ಜನಪ್ರಿಯತೆಯ
ಉತ್ತುಂಗದಲ್ಲಿರುವ ಫುಟ್ಬಾಲ್ ,   ಕ್ರೀಡೆಯ ಆಯ ಆಕಾರ ಗಾತ್ರವನ್ನು ಮೀರಿ ಬೆಳೆದ
ಬಲಿಷ್ಠ ದೊಡ್ಡ ಉದ್ಯಮವಾದ  ಹೊತ್ತಿನಲ್ಲಿ  , ಕ್ರಿಕೆಟ್ ಕೂಡ ಶುದ್ಧ ಮಾರುಕಟ್ಟೆಯಾಗಿ
ಬದಲಾಗುತ್ತಿರುವುದು,  ಇಂಗ್ಲೆಂಡ್ ನ ಮೈದಾನಗಳಲ್ಲಿ ಕ್ರಿಕೆಟನ್ನು ಆಸ್ವಾದಿಸುವ
ಆಂಗ್ಲ ಪ್ರೇಕ್ಷಕರು ಬಹಳ ಕಡಿಮೆ ಇದ್ದರೂ ಜಗತ್ತಿನ ಮೈದಾನದಲ್ಲಿ ಕ್ರಿಕೆಟ್
ದಿನನಿತ್ಯದ ವ್ಯಾಪಾರವಾಗಿ ಬಹಳ ಬೇಗ ಬೆಳೆಯುತ್ತಿರುವುದು , ಲಾರ್ಡ್ಸ್ ನ ಕಳವಳವನ್ನು
ಹೆಚ್ಚಿಸುತ್ತಿರಬಹುದು. ಇಷ್ಟರಲ್ಲೇ  ಕ್ರಿಕೆಟಿನ ತವರುಮನೆಯ ಮೊದಮೊದಲಿನ ಕಸಿವಿಸಿ
ಮುನಿಸುಗಳು  ಬೇಸರವೂ ಆಗಿ ಪರಿವರ್ತನೆ ಹೊಂದಿರಬಹುದು  . ಲಾರ್ಡ್ಸ್ ನ ಮೋಹಕ ಹಸಿರು
ಸೆರಗಿನ ತುದಿಯಲ್ಲಿ ಗಂಟುಗಳು ಒಂದು ಎರಡು ಮೂರು .. ಇನ್ನೂ ಹೆಚ್ಚಿರಬಹುದು.