ಜಲಧಾರೆ ಹಾಗೂ ತಿರುವು- ಸವಿತಾ ಮಧುಸೂದನ

ಪೃಕೃತಿ ಕವಿಗಳಿಗೆ ಸದಾ ಸ್ಫೂರ್ತಿಯ ಚಿಲುಮೆ. ಅದರ ಚೆಲುವನ್ನು ಸವಿಯುತ್ತ, ಋತುಗಳ ಮಾಯೆಯ ಮೋಡಿಗೆ ಸಿಲುಕಿ ಆಧ್ಯಾತ್ಮದ ಸುಳಿಯಲ್ಲಿ ಕೊಚ್ಚಿ ಹೋಗುವುದ ಸಹಜ.  ಸವಿತಾ ಮಧುಸೂದನ್ ದೀಪಾವಳಿ ಕನ್ನಡ ಕಾವ್ಯ ಸಮ್ಮೇಳನದಲ್ಲಿ ಎಚ್ಚೆಸ್ವಿ ಅವರ ಸಮ್ಮುಖದಲ್ಲಿ ಓದಿದ ಕವನಗಳು ಇದಕ್ಕೆ ಸಾಕ್ಷಿ.


ಜಲಧಾರೆ

ಧಮನೆ ಧುಮುಕುತಲಿದೆ

ಬಂಡೆಗಳನ್ನೊಡೆದು,

ಪ್ರಪಾತದಲ್ಲಡಗಿರುವ ಗುಪ್ತ

ಆತ್ಮಲಿಂಗಕೆ ಕ್ಷೀರಾಭಿಷೇಕವಿದು

ಕೆಳಗೆ ತಾ ಧುಮಕುತಲು

ಈ ಮನವ ಮೇಲೆತ್ತುತಿದೆ

ಅನ್ಯ ಗದ್ದಲವ ನುಂಗಿ ಆ ಧ್ವನಿಯು

ದೀರ್ಘ ಧ್ಯಾನ ಧಾರೆಯಂತಿರೆ

ತೊರೆದು ಚಂಚಲತೆಯ ಅದರಂತೆ

ಭಾವಾತಿಶಯದಲಿ ಮನವು,

ಅಂತರಾಳದಿ ಭಾವಾತೀತನೆಡೆಗೆ

ಅವತರಿಸಬಾರದೇಕಿಂದು?

ದಿಶೆ ತಪ್ಪಿ ದೂರವಾಗಿಯೂ

ಮತ್ತೆ ಕೂಡುವಂತೆ ಝರಿಯು,

ಐಕ್ಯವಾಗುತಲಿರಲಿ ಭಾವಗಳು

ಭಕ್ತಿ ಧಾರೆಯಲಿ, ಅತ್ತಿತ್ತ ಅಲೆದು


ತಿರುವು

ನಿನ್ನ ಪುಸ್ತಕದಲಿಹುದು

ಹೊಸ ಕುಡಿಗಳ; ಹಸಿರೆಲೆಗಳ

ಬಿಂಕ;

ನಿನ್ನದೇ ಪದದಡಿಯಲಿಹುದು

ಸೊರಗೊಣಗಿದ ಮೃತ ಎಲೆಗಳ

ಸಾಂದ್ರ.

ನಿಂತಿರುವೆ ನೀ ಸೂರ್ಯೋದಯದ

ಶುಭಗಳಿಗೆಯಿಂದ ಸೂರ್ಯಾಸ್ತವನು

ಕಾದು;

ಮತ್ತೆ ಸೂರ್ಯಾಗಮನವ ಕಾಯ್ವೆ

ಮತ್ತೊಂದು ಮಬ್ಬು ರಾತ್ರೆಯನು

ಹಾದು.

ಬಸಂತ ಋತು ಬರಲು

ಮೈದುಂಬಿ, ಮನದಣಿಯೆ ಹಿಗ್ಗಿ

 ನಲಿವೆ;

ಮುನ್ನಡೆದು ಹೇಮಂತದಲಿ

ಸಿರಿತನವ ಕಳೆದು ಬರಿಗೈಯ್ಯಲೂ

ನಿಲ್ಲುವೆ

ಹಸಿರೆಲೆಗಳಿಗೂ, ತರಗೆಲೆಗಳಿಗೂ

ನೆಲೆಯಾಗಿ ತಂಗಿ, ಎಸಗುತಿದೆ

ಸೃಷ್ಟಿ;

ಹಗಳನಲ್ಲದೆ ಇರುಳನೂ

ಹೊತ್ತು ಸೂಸುತಿದೆ, ಸುಖ ದುಃಖಗಳ

ವೃಷ್ಟಿ.

ತೊಳಲಾಟ

ದಾಕ್ಷಾಯಿಣಿ ಇಂಗ್ಲಂಡಿನ ಉತ್ತರ ಭಾಗದಲ್ಲಿ ವೈದ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ. ಅನಿವಾಸಿಯ ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯರು. ಈ ಕವನವನ್ನು ಅಕ್ಟೋಬರ್ ತಿಂಗಳಿನಲ್ಲಿ ನಡೆದ ದೀಪಾವಳಿ ಕವಿಗೋಷ್ಠಿಯಲ್ಲಿ ಡಾ. ವೆಂಕಟೇಶಮೂರ್ತಿಯವರ ಸಮ್ಮುಖದಲ್ಲಿ ಅವರು ಸಾದರ ಪಡಿಸಿದ್ದರು. ಅನಿವಾಸಿಗಳ ಮನದಲ್ಲಿ  ಸ್ವದೇಶ-ಸದ್ಯ ನೆಲೆಸಿರುವ ದೇಶಗಳ ಮಧ್ಯದ ಭಿನ್ನತೆ, ಅನುಪಮತೆಗಳ ಮಜ್ಜಿಗೆ ಕಡೆದು, ಬೆಣ್ಣೆಯಂತೆ ಹಿತವಾದ ತಾತ್ಪರ್ಯವನ್ನು ಉಣಬಡಿಸಿದ್ದಾರೆ.

 

ಇಂಡಿಯಾ ಅಥವಾ ಇಂಗ್ಲೆಂಡ್ 

ನಿರಂತರ ಹೋರಾಟ ಮನದಲ್ಲಿ,

ಹೃದಯಕ್ಕೆ ಬೇಕು ಇಂಗ್ಲೆಂಡಿನ  ತಂಪು,

ಮನಸ್ಸಿಗೆ ಬೇಕು ತಾಯ್ನಾಡಿನ ಸೊಂಪು,

ಅಲ್ಲಿನ ಗಲಾಟ ಗದ್ದಲ ಕಿವಿಗೆ ಕರ್ಕಷ.

ಇಲ್ಲಿನ ನಿಃಶಬ್ದವೂ  ಬೇಸರ, ನೀರಸ

 ಪ್ರಶಾಂತ ಜೀವನ, ಪರಿಣಿತಿಗೆ ಆಹ್ವಾನವಿಲ್ಲಿ,

ಕಲಕಲದ ಕಿತಾಪತಿಯೂ ಬೇಕು ಜೀವನದಲ್ಲಿ.

Image result for BURGER

ಬರ್ಗರ್, ಬನ್, ಬ್ರೆಡ್, ತಿಂದು ಬೋರು,

ಮಸಾಲೆದೋಸೆ ಜಾಸ್ತಿಯಾದರೂ ದೇಹಕ್ಕೆ ತಕರಾರುImage result for DOSA

 ಎಲ್ಲವೂ ಬೇಕು ಅದರದೆ ಪರಿಮಿತಿಯಲ್ಲಿ,

 ಈ ಸಮಸ್ಯೆಗೆ ಪರಿಹಾರವೆಲ್ಲಿ?

                                                        ತ್ರಿಶಂಕು ಸಹ ತರಲಾರ ಉತ್ತರ ನಮ್ಮ ಇಬ್ಬದ

                                                        ನಾವೇ ತರಬೇಕು ಶಾಂತಿ, ಸಂತೋಷ ನಮ್ಮ ಮನಸ್ಸಿಗೆ.

 

                                                                                                                                                                                                                                                                                                                                                                                                                                             -ದಾಕ್ಷಾಯಿಣಿ ಗೌಡ