ಓದುಗರೆ, ಹನಿಗವನಗಳ ಹೆಜ್ಜೆಯ, ಗೆಜ್ಜೆಯ ನಾದದ ಇ೦ಪು ಕೇಳಿದಷ್ಟೂ ಚೆ೦ದ.
ಈ ವಾರ ಈ ಕ೦ಪನ್ನು ಅರವಿ೦ದ ಕುಲ್ಕರ್ಣಿ ಮತ್ತು ಪ್ರಸಾದ್ ರವರು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಾರೆ. ಪ್ರತಿಯೊ೦ದು ಕವನದ ಹಾದಿ ಬೇರೆ, ನಾದ ಬೇರೆ ಆದರೆ ಗುರಿ ಒ೦ದೆ, ಅದೇನೆ೦ದರೆ ನಾಲ್ಕು ಸಾಲುಗಳಲ್ಲಿ ಅರ್ಥ ತು೦ಬಿ ನಿಮ್ಮನ್ನು ರ೦ಜಿಸುವುದು-ಸ೦
ಪ್ರಸಾದ್ ಹನಿಗವಿತೆಗಳು:
ಜಮುನ
ಜೋಡಿ ಜಡೆ ಜಮುನ
ಕೊಡು ಇತ್ತ ಕಡೆ ಗಮನ.
ನನ್ನ ಮೊಬೈಲ್ ನಂಬರ್ ಕೇಳಿದ್ದಾಳೆ
ಆಚೆ ಮನೆ ನಯನ
ಕಂಡಾಗಲೆಲ್ಲ ಕಣ್ಣರಳಿಸಿ ಹಾಯ್
ಎನ್ನುತ್ತಾಳೆ ಈಚೆ ಮನೆ ಸುಮನ
***
ರಾಧೆ – ಕೃಷ್ಣರ ಸಲ್ಲಾಪ
ಕೃಷ್ಣ ನೀ ಬೇಗನೆ ಬಾರೋ ಎಂದಳು ರಾಧ
ಎಲ್ಲಿಗೆ ಎಂದ ಕೃಷ್ಣ
ಮತ್ತೆಲ್ಲಿಗೆ ಪಕ್ಕದ ಪಾರ್ಕಿಗೆ ಎಂದಳು ರಾಧೆ
ಕೊಳಲನ್ನು ತರಲೆ ಎಂದ ಕೃಷ್ಣ
‘ಯು ಟ್ಯೂಬ್’ ಇರುವಾಗ ಆ ಟ್ಯೂಬ್ ಏಕೆ
ಎಂದಳು ರಾಧೆ!
***
ಕುರುಕ್ಷೇತ್ರದಲ್ಲಿ ದಾಹ
ಶರಶಯ್ಯಯಲ್ಲಿ ಮಲಗಿದ ಭೀಷ್ಮರೆಂದರು
ಬಿಸಿಲೇರಿ ಬಾಯಾರಿದೆ.
ಬಾಣ ಹೂಡದ ಅರ್ಜುನನೆಂದ
ಗುರುಗಳೇ
ಮಳೆಯಿಲ್ಲದೆ ನೆಲವಾರಿದೆ.
ಇಗೋ ಕೊಳ್ಳಿ ಬಿಸಿಲೆರಿ ಬಾಟಲ್
ಇದು ಕೂಡ ಮಿನರಲ್ ವಾಟರ್!
***
ಕವಿ ಜಿ. ಎಸ್. ಎಸ್. ಮತ್ತು ಪೂಜಾರಿ
‘ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ’
ಎಂದರು ಕವಿ ಜಿ. ಎಸ್. ಎಸ್
ಕನ್ನಡಕ ಹಾಕಿಕೊಂಡು
ಸರಿಯಾಗಿ ಮತ್ತೆ ಹುಡುಕಿ ಸಾರ್
ಎಂದ
ಗಾಬರಿಯಿಂದ, ಒಳಗಿದ್ದ ಪೂಜಾರಿ!
***
ನನ್ನ ಅಪ್ಪ ಅಮ್ಮ
‘ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೇ ಸಾಕೆ’
ಎಂದರು ನನ್ನ ಅಪ್ಪ
ಬಿಕ್ಕಿ ಬಿಕ್ಕಿ ಅತ್ತಳು ನನ್ನಮ್ಮ!!
***
ದಶಾವತಾರ
ಧರ್ಮ ಸಂರಕ್ಷಿಸಲು
ಭಗವಂತ ಎತ್ತಿದ್ದಾನೆ ದಶಾವತಾರ
ಈಗ ‘ಹಿಂದೂವಾದಿ’ ಅವತಾರ
ಧರ್ಮದ ಹೆಸರಿನಲ್ಲಿ
ಏಕೆ ದ್ವೇಷ ತಿರಸ್ಕಾರ?
ಇರಲಿ ಧರ್ಮ ಮತ್ತು ರಾಜಕೀಯಗಳ
ನಡುವೆ ಅಂತರ.
***
ದೀಪಾವಳಿ
ದೀಪಾವಳಿ ಬಂತು ದೀಪಾವಳಿ
ಪಟಾಕಿ ಸದ್ದು ಗದ್ದಲಗಳ ಹಾವಳಿ
ಹಣತೆ ಹಣತೆಗಳು ಸೇರಿ ಬೆಳಗಲಿ
ಅಜ್ಞಾನದ ಅಂಧಕಾರವು ಕಳೆಯಲಿ
ಪ್ರೀತಿ ವಿಶ್ವಾಸಗಳು ಬೆಳಗಲಿ.
ಡಾ// ಶಿವಪ್ರಸಾದ್
***********************************************************************
ಅರವಿ೦ದ ಕುಲ್ಕರ್ಣಿಯವರ ಹನಿಗವನಗಳು:
ಅoದು-ಇoದು
ಕಡಬು ಕಡಲೆ ಸವಿದು ಬೆಳೆದೆ ಹಳ್ಯಾಗ
ಜಿಗಳಿ ಚೀಪಿ , ಲಗಳಿ ಹಾಕ್ಕೊಂಡು
ಜಿಗೀತಿದ್ದೆ ಮಂಗ್ಯಾನ್ಹಾಂಗ
ಗಾಳಿಪಟ, ಕುಸ್ತಿ, ಗಿಲ್ಲಿದಾಂಡು, ಬೈಲಾಗ!
ಅಭ್ಯಾಸ? ನಾಳೆ ಯಾತಕ್ಕಿದೆ ?
ಅಪ್ಪ ಮಾಡಿಟ್ಟ ಗಂಟು ದಕ್ಕಿದೆ
ಜನ್ಮಭೂಮಿ ತೊರೆದೆ ಮೂವತ್ತರಾಗ
ಈ ಕರ್ಮಭೂಮ್ಯಾಗ ಕೂತೇನಿ ಎಪ್ಪತ್ತರಾಗ
ಏನು ಕರ್ಮ ಅಂತ ದಿನಾ ಅದೇ ರಾಗ!
ಕಾಲ!
ಹಾಯ್ ಡಾರ್ಲಿಂಗ್: ಡೇಟಿಂಗ್ ಕಾಲ
ಹಾಯ್ ಹನಿ: ವೆಡ್ಡಿಂಗ್ ಸಮಯ
ನೀವೇ ನನ್ನ ಪ್ರಾಣ, ನನ್ನ ದೇವರು: ಹನಿಮೂನ ಕಾಲ
” ಸಾಕಾಗ್ಯೇದ ಈ ಗೋಳು, ಈ ಸಂಸಾರ”: ವಿರಕ್ತಿ ಕಾಲ
” ನಾ ಹೊರಟೆ, ನೀವೇ ಸಂಭಾಳಿಸಿ ಮಕ್ಕಳನ್ನ”: ಪ್ರಿ- ಡಿವೋರ್ಸ್ ಕಾಲ!
ಡಾ//ಅರವಿoದ ಕುಲ್ಕರ್ಣಿ
ಚಂದವಾದ ಹನಿಗವನಗಳು. ಅವತ್ತಿನಂತೆಯೇ ಮತ್ತೆ ನಗಿಸಿದವು.ಮತ್ತೂ ಬರೆಯುತ್ತಿರಿ.
LikeLiked by 1 person
ಅರವಿಂದ್ ಅವರೇ
ಕಾಲನ ಮಹಿಮೆಯ ಪರಿಣಾಮ ಪ್ರೇಮದಿಂದ ಹಿಡಿದು ಡಿವೋರ್ಸ್ ವರೆಗೆ ತಲುಪಿರುವ ಚಿತ್ರಣ ಸೊಗಸಾಗಿದೆ
ಅದೇ ಕಾಲನ ಮಹಿಮೆಯಿಂದೆ ನಮ್ಮೆಲ್ಲರ ಅಂದು-ಇಂದು ನೆನಪುಗಳು ಕೂಡ ರೂಪುಗೊಂಡಿವೆ
ಎಪ್ಪತ್ತರಲ್ಲಿ ತಾವು ಅದೇ ರಾಗವನ್ನು ಹಾಡದೆ ಇನ್ನು ಮುಂದಕ್ಕೆ ಹನಿಗವನದ ಹೊಸ ರಾಗವನ್ನು ಹಾಡುವಿರೆಂದು ಆಶಿಸುತ್ತಾ
ನಿಮ್ಮಿಂದ ಇನ್ನು ಹೆಚ್ಚಿನ ಹನಿಗವನದ ನಿರೀಕ್ಷಣೆಯಲ್ಲಿ…. ತಮ್ಮ ವಿಶ್ವಾಸಿ ಶಿವಪ್ರಸಾದ್
LikeLiked by 1 person
ಶಿವಪ್ರಸಾದ್ ಮತ್ತು ಅರವಿಂದ ಕುಲಕರ್ಣಿ ಅವರ ಕವನಗಳು ನಿಜಕ್ಕೂ ಕಚುಗುಳಿಯಿಟ್ಟು ನಗಿಸುವಂತಿವೆ. ಕೃಷ್ಣನ ಕೊಳಲಿನ ಕರೆಯನ್ನು ಯುಟ್ಯೂಬಿಗೆ ಹೋಲಿಸಿರುವ ವೈಖರಿ ನಿಜಕ್ಕೂ ಮೆಚ್ಚಬೇಕಾದ್ದೇ!
ಉಮಾ ವೆಂಕಟೇಶ್
LikeLiked by 1 person
ಸಭೆಯಲ್ಲಿ ಕೇಳಿ ನಕ್ಕಿದ್ದೆವು ಈ ಹನಿಗವನಗವಳನ್ನು. ಇನ್ನೂ ಕಚಕುಳಿಯಿಡುತ್ತಿವೆ! ಯೂಟ್ಯೂಬಿನಲ್ಲಿ ಎಷ್ಟೋ ಚಾನೆಲ್ಲುಗಳಲ್ಲಿ ಎಂಥ ಮಹಾಪೂರ ಹರಿದರೂ ಕೃಷ್ಣನ ವೇಣುವಿನ ಆ ಎರಡು ಸ್ವರಕ್ಕೆ ಸರಿಸಾಟಿಯೇ? ಇನ್ನೊಂದು ದೊಡ್ಡ ‘ಹನಿ’ಯಲ್ಲಿ ಯೂ ಬಾಲ್ಯದ ‘ಕೃಷ್ಣ ಲೀಲೆ’ಯ ವರ್ಣನೆ!
LikeLiked by 1 person