“ಪಯಣ” ಪುಸ್ತಕ ವಿಮರ್ಶೆ-ಡಾ.ಕೇಶವ ಕುಲಕರ್ಣಿ, ಡಾ. ದಿವ್ಯತೇಜ, ಡಾ.ನವೀನ್

ಪ್ರಿಯ ಓದುಗರೆ, ಅನಿವಾಸಿ ಓದುಗರಿಗೆ ಡಾ. ಪ್ರಸಾದ್ ರವರು, ಈ ಜಗುಲಿಯ ಸದಸ್ಯರಾಗಿ, ಬರಹಗಾರರಾಗಿ ಮತ್ತು ಓದುಗರಾಗಿ ಪರಿಚಿತರು. ಅವರ ಪಯಣ ಪುಸ್ತಕವು ಖ್ಯಾತ ವಿಮರ್ಶಕ ಮತ್ತು ಸಾಹಿತಿ ಟಿ.ಪಿ ಅಶೋಕರವರ ಮುನ್ನುಡಿ ಮತ್ತು ಖ್ಯಾತ, ಜನಪ್ರಿಯ ಕವಿ ಎಚ್.ಸ್. ವೆಂಕಟೇಶಮೂರ್ತಿ ಮತ್ತು ಪ್ರಸಿದ್ಧ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರರವರ ಹಿನ್ನುಡಿಯೊಂದಿಗೆ ಸ್ವಪ್ನ ಬುಕ್ ಹೌಸ್ ಪ್ರಕಾಶನದಲ್ಲಿ ೭.೦೨.೨೦೨೧ ರಂದು ಪ್ರಕಟಗೊಂಡಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಕೋವಿಡ್ ಕಾರಣ ಪುಸ್ತಕದ ಪ್ರಕಟಣೆಯನ್ನು ಜಾಲಜಗುಲಿಯಲ್ಲಿ ಶ್ರೀಮತಿ ಸುಧಾಮೂರ್ತಿಯವರು ನೆರವೇರಿಸಿದರು (ವಿವರಗಳು ಕೊನೆಯ ಪುಟದ ಆಹ್ವಾನ ಪತ್ರಿಕೆಯಲ್ಲಿದೆ). ಲೇಖಕರ ಕಿರುಪರಿಚಯವನ್ನು ಕೇಶವ್ ರವರು ಮಾಡಿಕೊಟ್ಟಿದ್ದಾರೆ. ಪುಸ್ತಕವನ್ನು ಓದಿ ತಮ್ಮ ವಿಮರ್ಶೆಯನ್ನು ಕೇಶವ್, ದಿವ್ಯತೇಜ ಮತ್ತು ನವೀನ್ ರವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ-ಸಂ

1 ಪ್ರಸಾದ್ ಅವರ ‘ಪಯಣ’ ಕಾದಂಬರಿ: ಒಂದು ಪರಿಚಯಕೇಶವ ಕುಲಕರ್ಣಿ

ಡಾ. ಜಿ.ಎಸ್. ಶಿವಪ್ರಸಾದ್

‘ಅನಿವಾಸಿ’ಯ ನಿಯಮಿತ ಬರಹಗಾರರಾಗಿರುವ, ‘ಕೆ‍.ಎಸ್‍.ಎಸ್‍.ವಿ.ವಿ’ ಯ ಸಂಸ್ಥಾಪಕರಲ್ಲೊಬ್ಬರಾಗಿರುವ, ‘ಕನ್ನಡ ಬಳಗ, ಯು.ಕೆ’ಯ ಕಾರ್ಯಕಾರಿ ಸಮಿತಿಯಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡಿರುವ, ‘ಕನ್ನಡ ಬಳಗ, ಯಾರ್ಕ್‌ಶೈರ್ ಅಧ್ಯಾಯ’ದ ಸಂಸ್ಥಾಪಕರಾಗಿರುವ, ಕನ್ನಡ ಸಾಹಿತ್ಯ ಮತ್ತು ಸಿನೆಮಾದ ದಿಗ್ಗಜರನ್ನು ಇಂಗ್ಲೆಂಡಿಗೆ ಕರೆತರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ, ಮುಂದಾಳುವಾಗಿ, ವ್ಯವಸ್ಥಾಪಕರಾಗಿ, ಕವಿಯಾಗಿ, ಸನ್ಮಿತ್ರರಾಗಿ, ಕನ್ನಡದ ಖ್ಯಾತ ಕವಿ ಡಾ. ಜಿ ಎಸ್ ಶಿವರುದ್ರಪ್ಪನವರ ಮಗನಾಗಿ, ಮಕ್ಕಳ ತಜ್ಞರಾಗಿ, ಡಾ. ಜಿ ಎಸ್ ಶಿವಪ್ರಸಾದ್ (ನಮಗೆಲ್ಲ ಅವರು ಪ್ರಸಾದ್) ಅವರನ್ನು ಗೊತ್ತಿಲ್ಲದ ಕನ್ನಡಿಗ ಇಂಗ್ಲೆಂಡಿನಲ್ಲಿ ಇಲ್ಲ ಎಂದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ ಎಂದುಕೊಂಡಿದ್ದೇನೆ. ಈಗಾಗಲೇ ಸಾಕಷ್ಟು ಲೇಖನಗಳನ್ನು ಕವನಗಳನ್ನು ಬರೆದಿರುವ ಪ್ರಸಾದ್ ಅವರು ‘ಅನಿವಾಸಿ ತಾಣದಲ್ಲಿ ಮಾತ್ರವಲ್ಲದೇ, ಕನ್ನಡ ಪತ್ರಿಕೆಗಳಲ್ಲೂ ಪ್ರಕಟಿಸಿದ್ದಾರೆ. 2016ರಲ್ಲಿ ‘ಇಂಗ್ಲೆಂಡಿನಲ್ಲಿ ಕನ್ನಡಿಗ’ ಎನ್ನುವ 60 ಕವನಗಳ (ಇಂಗ್ಲೀಷ್ ಮತ್ತು ಕನ್ನಡ ಭಾಷೆ) ಸಂಕಲನವನ್ನೂ, 2018 ರಲ್ಲಿ ‘ದಕ್ಷಿಣ ಅಮೇರಿಕ – ಒಂದು ಸುತ್ತು’ ಎನ್ನುವ ಪ್ರವಾಸ ಕಥನವನ್ನೂ ಪ್ರಕಟಿಸಿದ್ದಾರೆ. ಇದುವರೆಗೂ ತಮ್ಮನ್ನು ಕವನ ಮತ್ತು ಲೇಖನಗಳಿಗೆ ಸೀಮಿತಗೊಳಿಸಿದ್ದ ಪ್ರಸಾದ್ ಅವರು, ಇದೀಗ ಕಥಾಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ, ಅವರ ಮೊದಲ ಕಾದಂಬರಿ ‘ಪಯಣ’.

“ಒಳ್ಳೆಯ ಮನುಷ್ಯನ ಬದುಕು ಒಳ್ಳೆಯ ಕತೆಯಾಗಲು ಸಾಧ್ಯವಿಲ್ಲ” ಎನ್ನುವ ಮಾತಿದೆ. ಕೆಟ್ಟ ಪಾತ್ರಗಳಿಲ್ಲದಿದ್ದರೆ ಅದು ‘ಕತೆ’ ಹೇಗೆ ಆಗುತ್ತೆ ಎನ್ನುವುದು ವಿಮರ್ಶಕರ  ತಕರಾರು. ಕೆಟ್ಟ ಪಾತ್ರಗಳಿಲ್ಲದಿದ್ದರೂ ಕತೆ ಹೇಳಲು ಸಾಧ್ಯ ಎಂದು ಸವಾಲು ಹಾಕುವಂತೆ ಡಾ. ಜಿ ಎಸ್ ಶಿವಪ್ರಸಾದ್ (ಪ್ರಸಾದ್) ಅವರು ‘ಪಯಣ’ವನ್ನು  ಬರೆದಿದ್ದಾರೆ.

ಇತ್ತೀಚೆಗೆ ‘ಕನ್ನಡ ಬಳಗ’ಕ್ಕಾಗಿ ಪ್ರೋ.ಕೃಷ್ಣೇಗೌಡರು ಮಾತಾಡಿದಾಗ ಪ್ರಸಿದ್ಧ ಲೇಖಕರೊಬ್ಬರ ಬಗ್ಗೆ ಪ್ರಸ್ತಾಪಿಸುತ್ತಾ, ಅವರ ಒಂದು ಕಾದಂಬರಿಯಲ್ಲಿ ಕೆಟ್ಟ ಪಾತ್ರಗಳೇ ಇರಲಿಲ್ಲವಂತೆ. ಅದು ಹೇಗೆ ಸಾಧ್ಯ ಎಂದು ಅವರನ್ನು ಕೇಳಿದ್ದಕ್ಕೆ, ‘ಪ್ರಪಂಚದಲ್ಲಿ ಎಂಥೆಂಥ ಜನರಿದ್ದರೂ ನಮಗೆ ಒಳ್ಳೆಯವರು ಅನಿಸಿದವರನ್ನು ಮಾತ್ರ ನಮ್ಮ ಮನೆಯೊಳಗೆ ಬಿಟ್ಟುಕೊಳ್ಳುವಂತೆ, ಕಾದಂಬರಿಯಲ್ಲೂಅದನ್ನೇ ಮಾಡಿದ್ದೇನೆ, ಮನೆಯೊಳಗೆ ಬಿಟ್ಟುಕೊಂಡವರ ಬಗ್ಗೆ ಮಾತ್ರ ಕತೆ ಬರೆದಿದ್ದೇನೆ,’ ಎಂದರಂತೆ. ‘ಪಯಣ’ದ ವಿಷಯದಲ್ಲೂ ಅದೇ ಮಾತನ್ನು ಹೇಳಬೇಕಾಗುತ್ತದೆ.  ಪ್ರಸಾದ್ ಅವರ ಜೊತೆ ಸುಮಾರು ವರ್ಷಗಳಿಂದ ಬೇರೆ ಬೇರೆ ಸಂದರ್ಭದಲ್ಲಿ ಮಾತಾನಾಡಿದ್ದೇನೆ, ಒಡನಾಡಿದ್ದೇನೆ, ಅವರ ಮನೆಯ ಆತಿಥ್ಯವನ್ನೂ ಸವಿದಿದ್ದೇನೆ; ಅವರ ಸಭ್ಯತೆ, ವಿನಯಶೀಲತೆ, ಸ್ನೇಹಪರತೆ ಮತ್ತು ಒಳ್ಳೆಯತನಗಳಿಂದಾಗಿ ಅವರು ಎಲ್ಲದರಲ್ಲಿಯೂ ಎಲ್ಲರಲ್ಲಿಯೂ ಒಳ್ಳೆಯದನ್ನು ಮಾತ್ರ ಕಾಣಬಲ್ಲ ಉದಾರ ಹೃದಯಿಗಳು. ಹಾಗಾಗಿ ಅವರ ‘ಪಯಣ‘ದಲ್ಲಿ ‘ವಿಲನ್‘ ಇಲ್ಲದಿರುವುದು ಆಶ್ಚರ್ಯವೇನಲ್ಲ.

ಇದೊಂದು ನಾಯಿಯ ಕತೆ. ನಾಯಿ ಬೀಗಲ್ ಜಾತಿಯದು. ಮಗಳ ಜೊತೆ ಆಟಕ್ಕೆ ಇರಲಿ ಎಂದು ಪುಟ್ಟಮರಿಯಾಗಿ ಸಿನೆಮಾ ನಿರ್ದೇಶಕನೊಬ್ಬನ ಮನೆಗೆ ‘ಸ್ನೂಪಿ’ಯಾಗಿ ಬರುತ್ತದೆ; ಮನೆಯಲ್ಲಿ ಇನ್ನೇನು ಹೊಂದಿಕೊಳ್ಳುತ್ತಿದೆ ಎನ್ನುವಾಗ ಮನೆಯಿಂದ ತಪ್ಪಿಸಿಕೊಂಡು ಬೀದಿನಾಯಿಯಾಗಿ ತನ್ನ ಹೆಸರನ್ನು ಕಳೆದುಕೊಳ್ಳುತ್ತದೆ. ಕಾರ್ಪೋರೇಷನ್ ಅವರಿಂದಾಗಿ ಸಂತಾನಹರಣ ಚಿಕಿತ್ಸೆಯನ್ನು ಮಾಡಿಸಿಕೊಂಡು ಹೆಸರಿಲ್ಲದ ನಾಯಿ ಕೈದಿಗಳಂತೆ ‘2025’ ಎನ್ನುವ ಸಂಖ್ಯೆಯಾಗುತ್ತದೆ. ನಂತರ ದತ್ತು ಸ್ವೀಕಾರವಾಗಿ ‘ಆರ್ಚಿ’ಯಾಗುತ್ತದೆ. ಬೆಳೆಯುತ್ತ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತ ಪೋಲೀಸರಿಗೆ ಸಹಾಯ ಮಾಡುತ್ತದೆ. ಪೋಲೀಸ್ ನಾಯಿಪಡೆಯ ಬಗ್ಗೆ ಸಾಕ್ಷ್ಯಚಿತ್ರ ಮಾಡುವಾಗ ಮತ್ತೆ ಸಿನೆಮಾ ನಿರ್ದೇಶಕನಿಗೆ ‘ಆರ್ಚಿ’ಯೇ ‘ಸ್ನೂಪಿ’ ಎಂದು ಗೊತ್ತಾಗುತ್ತದೆ. ‘ಆರ್ಚಿ’ ಮತ್ತೆ ‘ಸ್ನೂಪಿ’ಯಾಗುತ್ತಾ, ಮತ್ತೆ ನಿರ್ದೇಶಕನ ಮನೆ ಸೇರುತ್ತಾ ಎನ್ನುವುದೇ ಕತೆ. ಕತೆಯ ಕೊನೆ ತುಂಬ ಸ್ವಾರಸ್ಯಕರವಾಗಿದೆ.

ಪುಟ್ಟ ಮಗುವಾದಾಗಿನಿಂದ ನಿವೃತ್ತ(!)ನಾಗುವವರೆಗಿನ ನಾಯಿಯ ಕತೆಯಿದು. ಟಿಪಿಕಲ್ ಬೆಂಗಳೂರಿಗನಂತೆ ಕನ್ನಡ, ತಮಿಳು ಮತ್ತು ಇಂಗ್ಲೀಷ್ (ನಾಯಿ ತರಬೇತಿಗೆ ಪೋಲೀಸ್ ಇಲಾಖೆಯವವರು ಇಂಗ್ಲೀಷ್ ಬಳಸುತ್ತಾರೆ ಎನ್ನುವ ಊಹೆ ನನ್ನದು) ಮೂರೂ ಭಾಷೆಯಲ್ಲಿ ಪರಿಣಿತಿ ಪಡೆಯುವ ನಾಯಿಯಿದು.

ಇದು ಮೂಲ ಕತೆಯ ಎಳೆಯಾದರೆ, ಇದರಲ್ಲಿ ಮೂರು ಮಕ್ಕಳ ಉಪಕತೆಗಳಿವೆ. ಒಂದೊಂದು ಮಗುವಿನ ಕತೆಯೂ ಈ ನಾಯಿಯ ಬದುಕಿನ ಜೊತೆ ಬೆರೆತುಕೊಂಡಿವೆ. ಯಾವ ಭಾತೃಗಳೂ ಇಲ್ಲವೆಂದು ಒಂಟಿಯಾಗಿರುವ ಮಗುವಿಗೆ ನಾಯಿ ತಮ್ಮನಾಗುತ್ತಾನೆ, ಗೆಳೆಯನಾಗುತ್ತಾನೆ. ಸೂರಿಲ್ಲದ ಹುಡುಗಿಗೆ ಜೊತೆಗಾರನಾಗುತ್ತಾನೆ, ರಕ್ಷಕನಾಗುತ್ತಾನೆ. ಆಟಿಸಂ ಇರುವ ಮಗುವಿನ ಆರೈಕೆಗೆ ಸಹಾಯವಾಗುತ್ತಾನೆ. ಮೂರೂ ಮಕ್ಕಳ ಕತೆಗಳು ಮೂಲ ಕತೆಗೆ ಧಕ್ಕೆ ಬರದಂತೆ ಗುಪ್ತಗಾಮಿನಿಯಾಗಿ ಹರಿಯುತ್ತವೆ. ಮಕ್ಕಳ ದೃಷ್ಟಿಯಿಂದ ನಾಯಿಗಳ ಬಗ್ಗೆ ಇರುವ ಪ್ರೀತಿ ಮತ್ತು ತುಂಟತನವನ್ನು ನಾವು ಕಂಡುಕೊಳ್ಳುತ್ತೇವೆ. ನಾಯಿಗಳಿಗೂ ಮಕ್ಕಳಿಗೂ ಅಂಥ ವ್ಯತ್ಯಾಸವೇನೂ ಇಲ್ಲ ಎನ್ನುವುದನ್ನು ಪ್ರಸಾದ್ ಸೂಕ್ಷ್ಮವಾಗಿ ನಿರೂಪಿಸುತ್ತಾರೆ.

ಕತೆಯ ತಂತ್ರ ಸರಳ ಮತ್ತು ಶೈಲಿ ನೇರ. ಅಲ್ಲಲ್ಲಿ ಮಾಹಿತಿಗಳೂ ಬಂದು ಕತೆಯ ಓಟಕ್ಕೆ ಕಡಿವಾಣ ಹಾಕುತ್ತವಾದರೂ ಕತೆಗೆ ಪೂರಕವಾಗುವಂತೆ ವಿಷಯ ಗೊತ್ತಿಲ್ಲದವರಿಗೆ ಗೊತ್ತಿರಲಿ ಎನ್ನುವಂತೆ ತೋಳ-ನಾಯಿಗಳ ಇತಿಹಾಸ, ಬೀದಿನಾಯಿಗಳ ಸಂತಾನಶಕ್ತಿಹರಣ ಚಿಕಿತ್ಸೆ, ನಾಯಿಗಳ ತರಬೇತಿ, ಪೋಲಿಸ್ ಪಡೆಯಲ್ಲಿ ನಾಯಿಗಳ ಪಾತ್ರಗಳ ಬಗ್ಗೆ ವಿವರವಾದ ಮಾಹಿತಿಗಳಿವೆ.

ಕತೆ ಓದಿ ಮುಗಿಸಿದಾಗ ಒಂದು ಕಾಮಿಕ್ ಪುಸ್ತಕವನ್ನು ಅಥವಾ ಒಂದು ‘ಡಿಸ್ನಿ‘ ಸಿನೆಮಾ ನೋಡಿದಂತಾಯಿತು, ಜೊತೆಗೆ ನಾಯಿಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ಕಲಿತಂತಾಯಿತು. ಇದೊಂದು ಸುಂದರ ‘ಮಕ್ಕಳ ಕಾದಂಬರಿ’ ಅಲ್ಲವೇ ಅನಿಸಿತು. ಕನ್ನಡದಲ್ಲಿ ಮಕ್ಕಳ ಕಾದಂಬರಿಗಳಿಲ್ಲ ಎನ್ನುವ ಕೊರತೆಯನ್ನು ಈ ಪುಸ್ತಕ ಖಂಡಿತವಾಗಿಯೂ ನೀಗಿಸುತ್ತದೆ ಎಂದು ನನ್ನ ಅನಿಸಿಕೆ. ಕನ್ನಡ ಭಾಷೆಯಲ್ಲಿ ಕತೆ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಲು ಇಚ್ಛಿಸುವ ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ಕನ್ನಡದ ಮಕ್ಕಳಿಗೆ ಈ ಪುಸ್ತಕದಿಂದ ಕನ್ನಡದ ಓದನ್ನು ಶುರು ಮಾಡಿದರೆ ಅವರಿಗೆ ಕನ್ನಡದ ಓದಿನಲ್ಲಿ ಆಸಕ್ತಿ ಹುಟ್ಟಬಹುದು.

ಕಾದಂಬರಿಯ ಅಂತ್ಯದಲ್ಲಿ ಬರೆದಿರುವಂತೆ, ಈ ಕಾದಂಬರಿಯನ್ನು ಸಿನೆಮಾ ಮಾಡಬಹುದು, ಒಂದು ಒಳ್ಳೆಯ ಅನಿಮೇಷನ್ ಸಿನೆಮಾ ಮಾಡುವ ಎಲ್ಲ ಸರಕೂ ಈ ಕಾದಂಬರಿಯಲ್ಲಿದೆ. ಪ್ರಸಾದ್ ಅವರು ಇನ್ನೂ ಹಲವು ಕಾದಂಬರಿಗಳನ್ನು ಬರೆಯಲಿ ಎನ್ನುವುದು ನನ್ನ ಅಪೇಕ್ಷೆ.

ಡಾ.ಕೇಶವ ಕುಲಕರ್ಣಿ

2 ಆತ್ಮೀಯತೆಯೆನ್ನು ಒಳಗೊಂಡಿರುವ “ಪಯಣ”ದಿವ್ಯತೇಜ

ಶ್ರೀಯುತ ಡಾ.|ಶಿವಪ್ರಸಾದ್ ಅವರಿಗೆ “ಪಯಣ” ಕಾದಂಬರಿಯ ಪ್ರಕಟಣೆಗೆ ಅಭಿನಂದನೆಗಳು. ಅವರ ಪುಸ್ತಕ ಬಿಡುಗಡೆ ಸಮಾರಂಭ ದಿನದ ನಂತರ ಪುಸ್ತಕ ದೊರಕುವುದಕ್ಕೆ ಕಾತರದಿಂದ ಎದುರು ನೋಡುತ್ತಿದ್ದೆನು. ಪ್ರಸಾದ್ ಅವರು ಬೆಂಗಳೂರಿನಿಂದ ಕೆಲವು ಪುಸ್ತಕಗಳನ್ನು ತರಿಸಿದಾಗ ನಮಗೂ ಒಂದು ಪ್ರತಿಯನ್ನು ಕಳುಹಿಸಿದರು. ಶುಕ್ರವಾರ ಪುಸ್ತಕ ಬಂದು ತಲುಪಿತು. ರಾತ್ರಿ ಮಲಗುವ ಮುನ್ನ ಕಾದಂಬರಿ ಓದಲು ಪ್ರಾರಂಭಿಸಿದೆ. ಕಥೆಯಲ್ಲಿ ಸಂಪೂರ್ಣ ಮಗ್ನನಾದ ನಾನು, ಮಧ್ಯೆ ನಿಲ್ಲಿಸಲು ಮನಸ್ಸೇ ಬರಲಿಲ್ಲ. ಕಾದಂಬರಿ ಮುಗಿಸಿದಾಗ ಸರಿ ರಾತ್ರಿ ಎರಡು ಘಂಟೆ. ಕಾದಂಬರಿಯ ನಿರೂಪಣೆ ಸರಳವಾಗಿ, ಸುಲಲಿತವಾಗಿ ಮೂಡಿ ಬಂದಿದೆ. ಸ್ನೂಪಿ /ಆರ್ಚಿ ಯ ಪಯಣ, ಮಾನವ ಮತ್ತು ಶುನಕದ ನಡುವೆಯ ವಿಶೇಷ ಸ್ನೇಹವನ್ನು ಸುಂದರವಾಗಿ ವಿವರಿಸುತ್ತದೆ.
ಮಾಧ್ಯಮ ವರ್ಗದವರ ಮನೆಯಲ್ಲಿ ಕುಟುಂಬದ ಸದಸ್ಯನಾಗಿದ್ದ ಸ್ನೂಪಿ, ನಂತರ ಬೀದಿ ನಾಯಿಯಾಗಿ ಮಾರ್ಪಟ್ಟಾಗ ಪಡುವ ಕಷ್ಟ, ನಂತರ ಪೊಲೀಸ್ ನಾಯಿಯಾಗಿ ತನ್ನ ಅಸಾಮಾನ್ಯ ಘ್ರಾಣ ಶಕ್ತಿಯಿಂದ ಕಥಾನಾಯಕನಾಗುವುದು ಬಹಳ ಸೊಗಸಾಗಿ ಮೂಡಿ ಬಂದಿದೆ.  ಇದೆಲ್ಲರ ನಿರುಪಣೆ ಬಹಳ ನೈಜತೆಯಿಂದ ಕೂಡಿದ್ದು ನಮ್ಮ ಕಣ್ಮುಂದೆಯೇ ನಡೆದಿರುವ ಕಥೆಯಂತೆ ತೋರುವುದು ಈ ಕಾದಂಬರಿಯ ವಿಶೇಷತೆ. ಪ್ರಸಾದ್ ಅವರ ಪರಿಚಿತರಿಗೆ ಕಾದಂಬರಿಯಲ್ಲಿ ಬರುವ ಪಾತ್ರದಾರಿಗಳಿಗೂ ಮತ್ತು ಪ್ರಸಾದ್ ಅವರ ಕುಟುಂಬ  ಸದಸ್ಯರಿಗೂ ಇರುವ ಸಾಮ್ಯ ಗೋಚರಿಸುತ್ತದೆ. ಇದು ಕಥೆಗೆ ನಮ್ಮದೇ ಅನ್ನುವ ಆತ್ಮೀಯ ಭಾವವನ್ನು ಕೊಡುತ್ತದೆ.

ಪ್ರಸಾದ್ ಅವರು ಈ ಕಾದಂಬರಿಯಲ್ಲಿ ತಮ್ಮ ವೈದ್ಯಕೀಯ ಪರಿಣತಿಯನ್ನು ಪ್ರದರ್ಶಿಸುತ್ತಾ ಕಾದಂಬರಿಗೆ ತಮ್ಮದೇ ಆದ ಛಾಪು ಕೊಟ್ಟಿದ್ದಾರೆ. ಅಲ್ಲದೆ ಕಾರ್ಮಿಕ ವರ್ಗದವರ ಕಷ್ಟ, ವಿವಿಧ ಜನಾಂಗಗಳ ಸಂಸ್ಕೃತಿಯ ಪರಿಚಯ, ಸ್ವಲೀನತೆ (ಆಟಿಸಂ) ನಿಭಾಯಿಸುವಲ್ಲಿ ಪ್ರಾಣಿಗಳ ಸಹಕಾರ, ಹೀಗೆ ಅನೇಕ ವಿಷಯಗಳನ್ನು ನಮಗೆ ಕಾದಂಬರಿಯ ಮೂಲಕ ವಿವರಿಸಿದ್ದಾರೆ. ಕಾದಂಬರಿಯ ಮೂಲ ಕಥೆಗೆ ಪೂರಕವಾಗಿ ಇವೆಲ್ಲವನ್ನೂ ವಿವರಿಸಿರುವುದು ಶ್ಲಾಘನೀಯ ಪ್ರಯತ್ನವೇ ಸರಿ.

ಅವರ ಅನಿಸಿಕೆಯಂತೆ ಈ ಕಾದಂಬರಿಯನ್ನು ದೃಶ್ಯ ಮಾಧ್ಯಮಕ್ಕೆ ಪರಿವರ್ತಿಸಿ ಬಹಳಷ್ಟು ಜನರಿಗೆ ಮುಟ್ಟುವಂತಾಗಲಿ ಎಂದು ಆಶಿಸುತ್ತೇನೆ.

ಹೃ.ದಿವ್ಯತೇಜ

3. ‘ಪಯಣ’ದ ಜೊತೆ ಚಲಿಸುತ್ತಿದ್ದಂತೆ ಮೂಡಿಬಂದ ಭಾವನೆಗಳುನವೀನ

ಯುನೈಟೆಡ್ ಕಿಂಗ್ಡಮಿನ ಕ್ರಿಯಾತ್ಮಕ ಕನ್ನಡ ಬಳಗಗಳು ಕನ್ನಡ ಪ್ರೇಮಿಗಳಿಗೆ ರಸದೌತಣವನ್ನೇ ಉಣ್ಣಿಸುತ್ತಿವೆ ಎನ್ನಬಹುದು. ಅಂತಹ ಒಂದು ಸಂಘದ ಪ್ರತಿಭಾವಂತ ರೂವಾರಿ, ಗೆಳೆಯ ಶಿವಪ್ರಸಾದರು. ಇವರ ಮೊಟ್ಟಮೊದಲಿನ ಕಾದಂಬರಿ, ‘ಪಯಣ’ವನ್ನು ಈಗಷ್ಟೆ ಓದಿ ಮುಗಿಸಿದ್ದೇನೆ. ಹಿಂದೆ, ವಿಶೇಷವಾಗಿ ಶಾಲಾಕಾಲೇಜಿನಲ್ಲಿದ್ದಾಗ, ಬಹಳಷ್ಟು ಕಥೆ ಕಾದಂಬರಿಗಳನ್ನು ಓದಿದ್ದೆ. ನಂತರ, ಜೀವನದ ಜಂಜಾಟ, ಹೋರಾಟ, ಒದ್ದಾಟದಲ್ಲಿ, ಜೊತೆಗೆ ಸುಲಭವಾಗಿ ಹಸ್ತಕ್ಕೆ ನಿಲುಕುವ ‘ಅಲೆಯುಲಿ(ಮೊಬೈಲ್ ಫೋನ್)’ಯಲ್ಲಿ ದೊರಕುವ ’ಜ್ಞಾನ’ದಿಂದಲೊ ಏನೊ, ದಪ್ಪ ಪುಸ್ತಕ ಹಿಡಿದು ಓದುವ ರೂಢಿಯೆ ಕಡಿಮೆಯಾಗಿತ್ತು. ಹಾಗೆ ನೋಡಿದ್ದಲ್ಲಿ ‘ಪಯಣ’ವೆಂಬ ಈ ಕಾದಂಬರಿ ಅಷ್ಟೊಂದು ದೊಡ್ಡದಲ್ಲ. ಕ್ಲಿಷ್ಟ ಪದಗಳಾಗಲಿ, ಗಾಢವಾಗಿ ಆಲೋಚಿಸಿ ಅರ್ಥ ಹುಡುಕುವಂತ ವಾಕ್ಯಗಳಾಗಲಿ ಇಲ್ಲದೆ ಸಾಮಾನ್ಯ ಓದುಗರೂ ಸರಾಗವಾಗಿ ಒಂದೇಸಲ ಕುಳಿತು ಕೊನೆಯವರೆಗು ಓದಿ ಮುಗಿಸುವಂತ ಸರಳ ರಚನೆ. ಹಾಗಂದ ಮಾತ್ರಕ್ಕೆ, ಗಾಢವಾದ ಅಂಶಗಳಿಂದ ಕೂಡಿಲ್ಲವೆಂದಲ್ಲ. ಜೀವನದಲ್ಲಿ ನಮ್ಮ ಹೃದಯಕ್ಕೆ ನಿಕಟವಾಗಿರುವಂತವು ಬಹಳ ಸರಳವೆ ಸರಿ. ‘ಪಯಣ’ ಓದುಗರನ್ನು ಮೊದಲಿನಿಂದ ಅಂತದವರೆಗು ಕುತೂಹಲದೊಂದಿಗೆ ಕರೆದೊಯ್ಯುತ್ತದೆ. ಓದುತ್ತ ಓದುತ್ತ ನಾನೂ ಸ್ನೂಪಿ,ಆರ್ಚಿ ಮತ್ತು ಅವನ ಅನೇಕ ಮನುಜ ಸಂಗಾತಿಯರೊಡನೆ ಒಂದಾಗಿಬಿಟ್ಟೆ.

ಬೃಹತ್ ನಗರದ ಜೀವನ ಮನುಷ್ಯರ ಪ್ರಾಕೃತಿಕ ಸಂಪರ್ಕಕ್ಕೆ ಒಂದು ತರಹದ ಕಡಿವಾಣ ಹಾಕಿದಂತಿದೆ. ವಿಶೇಷವಾಗಿ, ಮಕ್ಕಳು ಮುಂಚಿನ ಹಾಗೆ ಆಚೆ ಹೋಗಿ ಬೀದಿಗಳಲ್ಲಿ ಸಂದಿಗಳಲ್ಲಿ ಆಟವಾಡುವಂತಿಲ್ಲ. ನಾವು ಚಿಕ್ಕವರಿದ್ದಾಗ ಗೋಲಿ, ಬುಗುರಿ, ಗಿಲ್ಲಿದಾಂಡು, ಲಗೋರಿ ಆಡ್ತಿದ್ವಿ. ಶಾಲೆಯಿಂದ ಬರುವುದೆ ತಡ, ಪುಸ್ತಕಗಳ ಚೀಲ ಎಸೆದು ಬೀದಿಗಿಳಿತಿದ್ವಿ; ಪಕ್ಕದ ಮನೆ, ಆಚೆ ಬೀದಿ ಮನೆಗಳ ಮಕ್ಕಳ ಗುಂಪು ಜೊತೆ ಸೇರಿ ಕುಣಿದು ಕುಪ್ಪಳಿಸ್ತಿದ್ವಿ. ಈಗ ಆ ಆತಂಕವಿಲ್ಲದ ದಿನಗಳಿಲ್ಲ ನಮ್ಮ ನಗರಗಳಲ್ಲಿ ಬೆಳೆಯುವ ಮಕ್ಕಳಿಗೆ. ವಿಪರೀತ ವಾಹನ ಚಲನೆ, ಜೊತೆಗೆ ಖಾಲಿ ಜಾಗಗಳಿಲ್ಲ. ಇಂತಹ ಸನ್ನಿವೇಶದಲ್ಲಿ ‘ಪಯಣ’ದ ಮುಖ್ಯ ಪಾತ್ರದಾರಿ ಮಕ್ಕಳಾದ ಅರ್ಚನ, ಸೆಲ್ವಿ ಮತ್ತು ಸಹನರಿಗೆ ‘ಸ್ನೂಪಿ’ ‘ಆರ್ಚಿ’ ತಮ್ಮ ಪ್ರೀತಿ, ಸ್ನೇಹ, ಸುಪ್ತ ಚೈತನ್ಯ ವ್ಯಕ್ತ ಪಡಿಸಲು ಒಂದು ಮಾರ್ಗ ಕಲ್ಪಿಸಿದ. ದೊಡ್ಡವರಿಗಿಂತ ಹೆಚ್ಚಾಗಿ ಮಕ್ಕಳು ನಾಯಿಗಳ ಜೊತೆ ಅವರದೆ ಆದ ವಿಶಿಷ್ಟ ರೀತಿಯಲ್ಲಿ ಸಂಬಂಧ ಬೆಳೆಸಿಕೊಳ್ಳುತ್ತಾರೆ. ನಾಯಿಗಳೂ ಅಷ್ಟೆ. ಮಕ್ಕಳೊಡನೆ ಶೀಘ್ರವಾಗಿ ಒಡನಾಟ ಸಲಿಗೆ ಸ್ನೇಹ ವೃದ್ಧಿಗೊಳಿಸುಕೊಳ್ಳುತ್ತವೆ. ಎಷ್ಟೊಂದು ನಾವು ನೋಡಿಲ್ಲ ಉದ್ಯಾನವನಗಳಲ್ಲಿ ನಡೆಯುವಾಗ. ತಮ್ಮ ಮಾಲಿಕರಲ್ಲದೆ ಇತರರನ್ನು ಆಕರ್ಶಿಸಿ ಅವರೊಡನೆ ಒಂದಷ್ಟು ಆಟವಾಡಿ, ಮೂಸಿ, ಮೈಮೇಲೆತ್ತಿ ಮೈ ಸವರಿಸಿಕೊಂಡು ಚೆಂಡಿನಂತೆ ಪುಟ ಪುಟಿಸುವುವದು ಸಾಮಾನ್ಯ ದೃಶ್ಯ. ನಾಯಿಯಿಂದಾಗಿ ಮನುಷ್ಯರು ಒಂದೆರಡು ಮಾತಾಡಿ ಪರಿಚಯ ಮಾಡಿಕೊಳ್ಳುತ್ತಾರೆ. ಕೆಲವರ ಏಕಾಂಗಿತನ ಸ್ವಲ್ಪವಾದರೂ ನಿವಾರಣೆಯಾಗುವುದಕ್ಕೆ ಇದೊಂದು ಅವಕಾಶ.

ಪಯಣ ಓದುತ್ತಿದ್ದಾಗ ನನ್ನ ಕಣ್ಣುಮುಂದೆ ಹಾದುಹೋದವು ಪುಸ್ತಕದಲ್ಲಿ ಬರುವ ನಾಯಿಗಳಿಗೆ ಸಂಬಂಧ ಪಟ್ಟಂತ ನೆನಪುಗಳು. ಬೀದಿನಾಯಿಗಳ ಹಿಂಡು ರಸ್ತೆ ಸಂದಿಗಳಲ್ಲಿ ಹಾವಳಿ ಎಬ್ಬಿಸಿ ನಮ್ಮ ಸಂಜೆಯ ಆಟಕ್ಕೆ ಬಹಳ ಅಡಚಣೆ ತರುತ್ತಿದ್ದವು. ಅವುಗಳು ಓಡಿಸಿಕೊಂಡು ಬಂದು ಕಚ್ಚುವ ಭಯವೂ ತುಂಬಿರುತ್ತಿತ್ತು. ಬೆಂಗಳೂರು ನಗರ ಪಾಲಿಕೆಯವರು ಆಗಾಗ್ಗೆ ವ್ಯಾನಲ್ಲಿ ಬಂದು ನಾಯಿಗಳನ್ನು ಸೆರೆ ಹಿಡಿದುಕೊಂಡು ಹೋಗುತ್ತಿದ್ದರು. ಆ ನಾಯಿಗಳ ಮುಂದಿನ ಗತಿ ನಮಗೆ ತಿಳಿಯುತ್ತಿರಲಿಲ್ಲ. ಪಯಣ ಕಾದಂಬರಿಯಿಂದ ಬೀದಿನಾಯಿಗಳ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವ ಅವಕಾಶ ಒದಗಿತು. ವಿಶೇಷವಾಗಿ ಅವುಗಳಿಗೆ ಸಂತಾನ ನಿಲ್ಲಿಸಲು ಮಾಡುವ ಶಸ್ತ್ರಕ್ರಿಯೆ, ಪ್ರಾಣಿ ಹಿಂಸೆ ತಡೆಯುವ ಸಂಘಗಳ ಪ್ರಭಾವ, ಬೆಂಗಳೂರು ಪೋಲಿಸ್ ಇಲಾಖೆ ನಾಯಿಗಳಿಗೆ ಏರ್ಪಡಿಸುವ ತರಬೇತಿ ವ್ಯವಸ್ಥೆ, ಅಂತಹ ನಾಯಿಗಳಿಂದ ಆಗುವ ಪ್ರಯೋಜನ – ಅದರಲ್ಲೂ ಮಾದಕ ಸಾಮಾಗ್ರಿ ಮತ್ತು ಭಯೋತ್ಪಾದಕ ಅಥವಾ ಸಿಡಿಮದ್ದುಗಳನ್ನು ಗೊತ್ತು ಹಚ್ಚುವಿಕೆ – ಇಷ್ಟೆಲ್ಲ ಸಂಕ್ಷಿಪ್ತವಾಗಿ ‘ಪಯಣ’ ಮನವರಿಕೆ ಮಾಡುತ್ತೆ.
ಮುಖ್ಯವಾಗಿ ನಾಯಿ ಮನುಷ್ಯರ ಸಂಬಂಧ ಎತ್ತಿ ತೋರಿಸುವಂತ ಕೃತಿ ಇದು. ತಮ್ಮದೆ ಆದ ಜಂಜಟದಲ್ಲಿರುವ, ಒಬ್ಬೊಬ್ಬರ ದೃಷ್ಟಿಕೋನ ವಿಭಿನ್ನದಿಂದಿರುವ ಮಹೇಶ, ನಿರ್ಮಲ, ನಿಖಿಲ್, ರಮ್ಯ ಮತ್ತು ಪುಟ್ಟ ಅರ್ಚನರನ್ನು ಒಂದುಗೂಡಿಸಿ, ಕುಟುಂಬವೆಲ್ಲ ಕುಳಿತು ಆನಂದಿಸುವುದಕ್ಕೆ ಸ್ನೂಪಿ ಹಾದಿ ಮಾಡಿಕೊಡುತ್ತದೆ. ಬೆಳೆಯುತ್ತಿರುವ ಬಾಲಕಿಗೆ ಶಾಲೆನಂತರ ಗೆಳೆಯ ಗೆಳತಿಯರೊಡನೆ ಬೆರೆಯಲಾಗುತ್ತಿಲ್ಲವಲ್ಲ ಎಂಬ ನ್ಯೂನತೆಗೆ ಪರಿಹಾರ ತುಂಬಿಸುತ್ತದೆ. ಮುಂದೆ ಬರುವ ಸೆಲ್ವಿ ಮತ್ತು ಸಹನ ಎಂಬ ಬಾಲಕಿಯರೂ ತಮ್ಮಲ್ಲಿ ಅಜಗಜಾಂತರ ಸಾಮಾಜಿಕ ವ್ಯವಸ್ಥೆಯ ಅಂತರವಿದ್ದರೂ ಅರ್ಚನಳಂತೆ ಸ್ನೂಪಿ ಆರ್ಚಿಗೆ ಹೊಂದಿಕೂಳ್ಳುವುದು ನಾಯಿ-ಮನುಜರ, ಅದರಲ್ಲು ಮಕ್ಕಳು-ನಾಯಿಗಳ ಮಧ್ಯೆ ಉಂಟಾಗುವ ಬಾಂಧವ್ಯವನ್ನು ಮನದಟ್ಟು ಮಾಡುತ್ತದೆ. ನಾಯಿಯೊಂದೆ. ಆದರೆ ಅದೇ ನಾಯಿ ಎಷ್ಟೇ ಸಾಮಾಜಿಕ, ಆರ್ಥಿಕ, ಬೌದ್ಧಿಕ ಅಂತರ ಇದ್ದರೂ, ಆ ಮೂರು ಕುಟುಂಬಗಳಲ್ಲಿ ಸಮಾನಾದ ಪ್ರೀತಿ ವಿಶ್ವಾಸ ಪಡೆದು, ತಾನು ಖುಷಿಯಿಂದ ಕುಣಿದು ಕುಪ್ಪಳಿಸಿ ಮನುಷ್ಯರಿಗೂ ಮನ ತನ ತಣಿಸುತ್ತದೆ. ಇಂತಹ ಸಂಬಂಧ, ಒಬ್ಬ ಮನುಷ್ಯನಿಂದ ಮತ್ತೊಬ್ಬನಿಗೆ ಸಿಗುವುದೆ ಎಂಬ ಸಂಶಯ ಓದುಗರಿಗೆ ಕಾಡದೆ ಇರುವುದಿಲ್ಲ ಎನಿಸುತದೆ.

ಇನ್ನೊಂದು ಕರಾಳ ವಸ್ತು. ಬಡತನ ಬೇಗೆಯಿಂದ ಬಳಲುತ್ತಿದ್ದು, ಸ್ಥಿರವಾದ ನೆಲೆಯಿಲ್ಲದೆ, ಮಗಳ ವಿದ್ಯೆಗೂ ಹಣವಿಲ್ಲದಂತ ಜೀವನ ನಡೆಸುತ್ತಿದ್ದ ಆರ್ಮುಗಂಗೆ ಒದಗಿದ ದುರಂತ. ಕಷ್ಟಪಟ್ಟು, ಪ್ರಾಮಾಣಿಕತೆಯಿಂದ ದುಡಿದು ಸಂಸಾರ ಸಾಗಿಸಿ, ಸರಕಾರಿ ಆಸ್ಪತ್ರೆಯಲ್ಲಿ ಮಗಳ ಚಿಕೆತ್ಸೆಗೆ ಲಂಚವನ್ನು ಕೊಟ್ಟು ಉಳಿಸಿಕೊಂಡು, ಮಿಕ್ಕ ಕಾಸಿನಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ದೇವರ ದರ್ಶನ ಪಡೆಯಲು ಹೋಗಿ ತಾನೇ ಆಹುತಿಯಾದದ್ದು. ಎಂತಹ ದುಷ್ಪರಿಣಾಮ! ಹೆಂಡತಿ ಕನ್ನಗಿ ಮತ್ತು ಮಗಳು ಸೆಲ್ವಿ ಅನಾಥರಾಗುತ್ತಾರೆ. ನಂಬಿಕೆಗೆ ಇದು ದೊರಕಿದ ದೊಡ್ಡ ಪೆಟ್ಟು. ಕನ್ನಗಿ ದೇವರ ಅಸ್ತಿತ್ವವನ್ನೆ ಪ್ರಶ್ನಿಸುವುದರಲ್ಲಿ ತಪ್ಪಿಲ್ಲವೇನೊ!
ಮತ್ತೊಂದು ವಿಷಯ ನನ್ನಲ್ಲಿ ಗಲಿಬಲಿ ಮತ್ತು ಸಂಕಟ ತಂದಿತು. ಆರ್ಚಿ ಸಹನಳ ಆತ್ಮೀಯ ಸಂಗಾತಿಯಲ್ಲದೆ, ಅವಳು ಬಳಲುತ್ತಿದ್ದ, ತಜ್ಞರಿಗೂ ಸವಾಲಾಗಿದ್ದ ಮಾನಸಿಕ ಗೊಂದಲಕ್ಕೆ ಒಂದು ರೀತಿಯ ಚಿಕಿತ್ಸಕನಾಗಿದ್ದ. ಆರ್ಚಿ ಬಂದ ಮೇಲೆ ಆಕೆಯ ಬೆಳವಣಿಗೆಯಲ್ಲಿ ತೃಪ್ತಿ ಕೊಡುವಂತ ಮಾರ್ಪಾಟಾಗಿತ್ತು. ಆಕೆಯ ಸಾಕು ತಂದೆತಾಯಿಯರಿಗು ಸಂತೃಪ್ತಿ ಉಂಟಾಗಿತ್ತು ಮಗಳಲ್ಲಾದ ಬದಲಾವಣೆಯಿಂದ ಮತ್ತು ಆರ್ಚಿಯ ಒಡನಾಟದಿಂದ. ಹಾಗಿದ್ದಲ್ಲಿ ಆರ್ಚಿಯನ್ನು ಅವಳಿಂದ ಬೇರ್ಪಡಿಸಿದ್ದು ಖೇದವೆನಿಸಿತು. ಬೀಗಲ್ ಜಾತಿಯ ನಾಯಿಗಳು ಇನ್ನಿರಲಿಲ್ಲವೆ?ಪೋಲಿಸ್ ಇಲಾಖೆ ಶ್ರಮವಹಿಸಿ ಹುಡುಕಿದ್ದರೆ ಬೇರೆಯವು ಸಿಕ್ಕುತ್ತಿದ್ದವೇನೊ ಎನಿಸಿತು. ಆದರೆ ಆರ್ಚಿ ಆಗಾಗಲೆ ಹೆಸರು ಮಾಡಿದಂತ ಪ್ರಾಣಿ. ಆತನ ಉತ್ತಮ ಮಟ್ಟ ಎಲ್ಲರಿಗು ಅರಿವಾಗಿತ್ತು. ಒಂದು ಕುಟುಂಬಕ್ಕಲ್ಲದೆ, ಸಮಾಜಕ್ಕೆ, ದೇಶದ ಒಳಿತಕ್ಕೆ ಅವನು ಅರ್ಹ ಎಂಬುದು ಮನದಟ್ಟಾಗಿತ್ತು. ಆರ್ಚಿ ಕೊನೆಯವರೆಗು ಇಲಾಖೆಯ ನಿರೀಕ್ಷಿತ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಿಕೊಡುವುದು ಪ್ರಶಂಸನೀಯ.

ಕಾದಂಬರಿ ಓದುತ್ತಿದ್ದಂತೆ ನಾನಾತರಹದ ತರಂಗಳು ಚಿಮ್ಮುವುದರಲ್ಲಿ ಸಂಶಯವಿಲ್ಲ. ಓದುಗರೆ, ಉದ್ಭವಿಸುವ ಸಮಸ್ಯೆಗಳಿಗೆ ಅಥವ ದ್ವಂದ್ವಕ್ಕೆ ತಮಗನುಸಾರ ವಿವರಣೆ ಕೊಟ್ಟುಕೊಳ್ಳಬಹುದು. ಒಟ್ಟಿನಲ್ಲಿ ಇದೊಂದು ನಿಜ ಕಥೆಯೆನಿಸುತದೆ. ನಿರೂಪಣೆ ಒಂದು ಚಲನ ಚಿತ್ರಕ್ಕೆ ಅನ್ವಯವಾಗುವಂತದು. ಇದನ್ನು ಒಂದು ಅನಿಮೇಷನ್ ಚಿತ್ರವಾಗಿ ನಿರ್ಮಿಸಿದರೆ ಮಕ್ಕಳಿಗೆ (ದೊಡ್ಡವರಿಗು ಸಹ)ಇಷ್ಟವಾಗುವುದರಲ್ಲಿ ಸಂದೇಹವಿಲ್ಲ ಎಂಬುದು ನನ್ನ ಅನಿಸಿಕೆ. ಲೇಖಕರ ಸಾಧನೆ ಶ್ಲಾಘನೀಯ.

ನವೀನ, ಲೀಡ್ಸ್

ಪಯಣ” ಪುಸ್ತಕ ಪ್ರಕಟಣೆಯ ಆಹ್ವಾನ ಪತ್ರಿಕೆ

ಶಿವಪ್ರಸಾದ್ ಮತ್ತು ಅರವಿoದ ಕುಲ್ಕರ್ಣಿಯವರ ಹನಿಗವನಗಳು.

ಓದುಗರೆ, ಹನಿಗವನಗಳ ಹೆಜ್ಜೆಯ, ಗೆಜ್ಜೆಯ ನಾದದ ಇ೦ಪು ಕೇಳಿದಷ್ಟೂ ಚೆ೦ದ.
ಈ ವಾರ ಈ ಕ೦ಪನ್ನು ಅರವಿ೦ದ ಕುಲ್ಕರ್ಣಿ ಮತ್ತು ಪ್ರಸಾದ್ ರವರು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಾರೆ. ಪ್ರತಿಯೊ೦ದು ಕವನದ ಹಾದಿ ಬೇರೆ, ನಾದ ಬೇರೆ ಆದರೆ ಗುರಿ ಒ೦ದೆ, ಅದೇನೆ೦ದರೆ ನಾಲ್ಕು ಸಾಲುಗಳಲ್ಲಿ ಅರ್ಥ ತು೦ಬಿ ನಿಮ್ಮನ್ನು ರ೦ಜಿಸುವುದು-ಸ೦

ಪ್ರಸಾದ್ ಹನಿಗವಿತೆಗಳು:

 ಜಮುನ

ಜೋಡಿ ಜಡೆ ಜಮುನ

ಕೊಡು ಇತ್ತ ಕಡೆ ಗಮನ.

ನನ್ನ ಮೊಬೈಲ್ ನಂಬರ್ ಕೇಳಿದ್ದಾಳೆ

ಆಚೆ ಮನೆ ನಯನ

ಕಂಡಾಗಲೆಲ್ಲ ಕಣ್ಣರಳಿಸಿ ಹಾಯ್

ಎನ್ನುತ್ತಾಳೆ ಈಚೆ ಮನೆ ಸುಮನ

***

Image result for cartoon images of krishna and radha

ರಾಧೆ ಕೃಷ್ಣರ ಸಲ್ಲಾಪ

ಕೃಷ್ಣ ನೀ ಬೇಗನೆ ಬಾರೋ ಎಂದಳು ರಾಧ

ಎಲ್ಲಿಗೆ ಎಂದ ಕೃಷ್ಣ

ಮತ್ತೆಲ್ಲಿಗೆ ಪಕ್ಕದ ಪಾರ್ಕಿಗೆ ಎಂದಳು ರಾಧೆ

ಕೊಳಲನ್ನು ತರಲೆ ಎಂದ ಕೃಷ್ಣ

‘ಯು ಟ್ಯೂಬ್’ ಇರುವಾಗ ಆ ಟ್ಯೂಬ್ ಏಕೆ

ಎಂದಳು ರಾಧೆ!

***

Image result for bottled water cartoon images

ಕುರುಕ್ಷೇತ್ರದಲ್ಲಿ ದಾಹ

ಶರಶಯ್ಯಯಲ್ಲಿ ಮಲಗಿದ ಭೀಷ್ಮರೆಂದರು

ಬಿಸಿಲೇರಿ ಬಾಯಾರಿದೆ.

ಬಾಣ ಹೂಡದ ಅರ್ಜುನನೆಂದ

ಗುರುಗಳೇ

ಮಳೆಯಿಲ್ಲದೆ ನೆಲವಾರಿದೆ.

ಇಗೋ ಕೊಳ್ಳಿ ಬಿಸಿಲೆರಿ ಬಾಟಲ್

ಇದು ಕೂಡ ಮಿನರಲ್ ವಾಟರ್!

***

ಕವಿ ಜಿ. ಎಸ್. ಎಸ್. ಮತ್ತು ಪೂಜಾರಿ

‘ಎಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ’

ಎಂದರು ಕವಿ ಜಿ. ಎಸ್. ಎಸ್

ಕನ್ನಡಕ ಹಾಕಿಕೊಂಡು

ಸರಿಯಾಗಿ ಮತ್ತೆ ಹುಡುಕಿ ಸಾರ್

ಎಂದ

ಗಾಬರಿಯಿಂದ,  ಒಳಗಿದ್ದ ಪೂಜಾರಿ!

***

ನನ್ನ ಅಪ್ಪ ಅಮ್ಮ

 

‘ನಿನಗೆ ಬೇರೆ ಹೆಸರು ಬೇಕೇ

ಸ್ತ್ರೀ ಎಂದರೆ ಅಷ್ಟೇ ಸಾಕೆ’

ಎಂದರು ನನ್ನ ಅಪ್ಪ

ಬಿಕ್ಕಿ ಬಿಕ್ಕಿ ಅತ್ತಳು ನನ್ನಮ್ಮ!!

***

ದಶಾವತಾರ

ಧರ್ಮ ಸಂರಕ್ಷಿಸಲು

ಭಗವಂತ ಎತ್ತಿದ್ದಾನೆ ದಶಾವತಾರ

ಈಗ ‘ಹಿಂದೂವಾದಿ’ ಅವತಾರ

ಧರ್ಮದ ಹೆಸರಿನಲ್ಲಿ

ಏಕೆ ದ್ವೇಷ ತಿರಸ್ಕಾರ?

ಇರಲಿ ಧರ್ಮ ಮತ್ತು ರಾಜಕೀಯಗಳ

ನಡುವೆ ಅಂತರ.

***

ದೀಪಾವಳಿ

ದೀಪಾವಳಿ ಬಂತು ದೀಪಾವಳಿ

ಪಟಾಕಿ ಸದ್ದು ಗದ್ದಲಗಳ ಹಾವಳಿ

ಹಣತೆ ಹಣತೆಗಳು ಸೇರಿ ಬೆಳಗಲಿ

ಅಜ್ಞಾನದ ಅಂಧಕಾರವು ಕಳೆಯಲಿ

ಪ್ರೀತಿ ವಿಶ್ವಾಸಗಳು ಬೆಳಗಲಿ.

 

 ಡಾ// ಶಿವಪ್ರಸಾದ್ 

***********************************************************************

ಅರವಿ೦ದ ಕುಲ್ಕರ್ಣಿಯವರ ಹನಿಗವನಗಳು:

ಅoದು-ಇoದು

Image result for gilli danda game images

ಕಡಬು ಕಡಲೆ ಸವಿದು ಬೆಳೆದೆ ಹಳ್ಯಾಗ
ಜಿಗಳಿ ಚೀಪಿ , ಲಗಳಿ ಹಾಕ್ಕೊಂಡು
ಜಿಗೀತಿದ್ದೆ  ಮಂಗ್ಯಾನ್ಹಾಂಗ
ಗಾಳಿಪಟ, ಕುಸ್ತಿ, ಗಿಲ್ಲಿದಾಂಡು, ಬೈಲಾಗ!
ಅಭ್ಯಾಸ? ನಾಳೆ ಯಾತಕ್ಕಿದೆ ?
ಅಪ್ಪ ಮಾಡಿಟ್ಟ ಗಂಟು ದಕ್ಕಿದೆ
ಜನ್ಮಭೂಮಿ ತೊರೆದೆ ಮೂವತ್ತರಾಗ
ಈ ಕರ್ಮಭೂಮ್ಯಾಗ ಕೂತೇನಿ ಎಪ್ಪತ್ತರಾಗ
ಏನು ಕರ್ಮ ಅಂತ ದಿನಾ ಅದೇ ರಾಗ!

ಕಾಲ‌!

ಹಾಯ್ ಡಾರ್ಲಿಂಗ್:  ಡೇಟಿಂಗ್ ಕಾಲ
ಹಾಯ್  ಹನಿ:  ವೆಡ್ಡಿಂಗ್ ಸಮಯ
ನೀವೇ ನನ್ನ ಪ್ರಾಣ, ನನ್ನ ದೇವರು: ಹನಿಮೂನ ಕಾಲ
” ಸಾಕಾಗ್ಯೇದ ಈ ಗೋಳು, ಈ ಸಂಸಾರ”: ವಿರಕ್ತಿ  ಕಾಲ
” ನಾ ಹೊರಟೆ, ನೀವೇ ಸಂಭಾಳಿಸಿ ಮಕ್ಕಳನ್ನ”:  ಪ್ರಿ- ಡಿವೋರ್ಸ್  ಕಾಲ!

                ಡಾ//ಅರವಿoದ ಕುಲ್ಕರ್ಣಿ