ಕವಿ, ಕವಿತೆ ಮತ್ತು ಭಾವಗೀತೆ – ಡಾ. ಜಿ. ಎಸ್. ಶಿವಪ್ರಸಾದ್

“ಕವಿದ ಪರದೆಯನ್ನು ತಳ್ಳಿ, ಅದು ಮುಚ್ಚಿಟ್ಟ ಜಗತ್ತಿನ ಸೌಂದರ್ಯವನ್ನು ಹೊರತಂದು, ಪರಿಚಿತವಾದದ್ದರಲ್ಲೇ ಹೊಸತನ್ನು ತೋರುವ ಶಕ್ತಿ ಕವಿತೆ / ಕಾವ್ಯಕ್ಕಿದೆ.” – ಪರ್ಸಿ ಶೆಲ್ಲಿ. ಅಂತಹ ಶಕ್ತಿಯುಳ್ಳ ಕವಿತೆಯ, ಬರೆಯುವ ಕವಿಯ ಮನೋಭಾವದ ಬಗ್ಗೆ ಈ ಕೆಳಗಿನ ಸುಂದರ ಲೇಖನದಲ್ಲಿ ವಿವರಿಸಿದ್ದಾರೆ, ನಮ್ಮ ಡಾ ಜಿ ಎಸ್ ಶಿವಪ್ರಸಾದ್. ಈ ಲೇಖನ ಹೋದವಾರ ಪ್ರಕಟವಾದ ಕಾವ್ಯ ಭಾವ – ಸಂಗೀತ ಸೌರಭ ಕಾರ್ಯಕ್ರಮದ ಹಿನ್ನೆಲೆಯಲ್ಲೇ ಮೂಡಿಬಂದಿದೆ. ಎಂದಿನಂತೆ ಓದಿ ಆನಂದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. – ಎಲ್ಲೆನ್ ಗುಡೂರ್ (ಸಂ.)

ಕವಿತೆಯೆಂದರೇನು? ಎಂಬ ಪ್ರಶ್ನೆಗೆ, ಒಬ್ಬ ಕವಿ ತನ್ನ ಬಾಹ್ಯ ಜಗತ್ತನ್ನು ಗ್ರಹಿಸಿ ತನ್ನ ಬದುಕಿನ ಅನುಭವವನ್ನು ಸಂಚಯಿಸಿ ಆ ಅನುಭವಗಳನ್ನು ಸ್ಫೂರ್ತಿ ಒದಗಿದಾಗ ಒಂದು ಕಾವ್ಯ ಸ್ವರೂಪದಲ್ಲಿ ಲಯ ಪ್ರಾಸಗಳೊಂದಿಗೆ ಛಂದೋಬದ್ಧವಾಗಿ ಅಭಿವ್ಯಕ್ತಿಗೊಳಿಸಿದಾಗ ಅದು ಕವಿತೆಯಾಗುತ್ತದೆ ಎಂದು ಸರಳವಾಗಿ ಹೇಳಬಹುದು.

ಡಾ. ಜಿ.ಎಸ್.ಎಸ್ ಅವರು ತಮ್ಮ ‘ಕಾವ್ಯಾರ್ಥ ಚಿಂತನ’ ಎಂಬ ಪ್ರೌಢ ಗ್ರಂಥದಲ್ಲಿ ಕಾವ್ಯದ ಬಗ್ಗೆ  ಹೀಗೆ ಹೇಳುತ್ತಾರೆ; “ಕಾವ್ಯ ಮೂಲತಃ ಒಂದು ಅನುಭವ ವಿಶೇಷ. ಈ ಒಂದು ಅನುಭವ ವಿಶೇಷವೇ ಕಾವ್ಯದ ಮೊದಲೂ ಹೌದು, ತುದಿಯೂ ಹೌದು, ಪ್ರೇರಣೆಯೂ ಹೌದು, ಪ್ರಯೋಜನವೂ ಹೌದು. ಓದುಗನ ಅನುಭವ ವಿಶೇಷವಾಗಿಸಲು ಒದಗಿ ಬರತಕ್ಕವು ಭಾಷೆ, ಛಂದಸ್ಸು ಪ್ರತಿಮೆ ಇತ್ಯಾದಿಗಳು. ಕಾವ್ಯ ಅಭಿವ್ಯಕ್ತಿಸುವುದು ಅನುಭವವನ್ನು ಎನ್ನದೆ ‘ಅನುಭವ ವಿಶೇಷ’ವೆಂದು ಹೇಳುವುದರಲ್ಲಿ ಅರ್ಥವಿದೆ. ಲೋಕದ ಅನುಭವವನ್ನು ಇದ್ದಹಾಗೆ ಹೇಳುವುದಾದರೆ ಅದು ಕಾವ್ಯವಾಗುವುದಿಲ್ಲ; ಅದು ವರದಿಯಾಗುತ್ತದೆ ಅಥವಾ ‘ವಾರ್ತೆ’ಯಾಗುತ್ತದೆ. ಬುದ್ಧಿಯ ಮೂಲಕ ಲೋಕ ವಿಷಯಗಳನ್ನು ಗ್ರಹಿಸಿ, ವಿಶ್ಲೇಷಿಸಿ, ತರ್ಕಬದ್ಧವಾಗಿ ನಿರೂಪಿಸುವ ಕ್ರಮವನ್ನು ಶಾಸ್ತ್ರವೆಂದೂ, ಭಾವದ ಮೂಲಕ ಗ್ರಹಿಸಿ ಅದನ್ನು ಅಭಿವ್ಯಕ್ತಿಸುವ ವಿಷಯ ಕ್ರಮವನ್ನು ಕಾವ್ಯವೆಂದೂ ಪರಿಗಣಿಸಲಾಗಿದೆ”.  ಜಿ ಎಸ್ ಎಸ್ ಅವರ ಈ ಒಂದು ವಿಶ್ಲೇಷಣೆ ಜನಸಾಮಾನ್ಯರಿಗೆ ಕವಿತೆ ಎಂದರೇನು ಎಂಬ ಮೂಲಭೂತವಾದ ಪ್ರಶ್ನೆಗೆ ತಕ್ಕಮಟ್ಟಿಗೆ ವಿವರಣೆ ನೀಡುತ್ತದೆ.

ಒಬ್ಬ ಕವಿಯು ತನ್ನ ಸ್ವಂತ ಅನುಭವಗಳನ್ನು ವಿಶೇಷಗೊಳಿಸಿ, ಭಾವನೆಗಳನ್ನು ಕವನದಲ್ಲಿ ತಂದಾಗ ಅದು ಭಾವನಿಷ್ಠ ಕವಿತೆಯಾಗುತ್ತದೆ. ಇದನ್ನು Subjective Poetry ಎಂದು ಗುರುತಿಸಿಬಹುದು. ಕವಿ ತನ್ನ ಪರಿಸರದಲ್ಲಿ ಸಂಗತಿಸಿದ ಒಂದು ವಿಚಾರವನ್ನು ತೆಗೆದುಕೊಂಡು ಅದರಿಂದ ತನ್ನ ಕಾವ್ಯವನ್ನು ಸೃಷ್ಟಿಸಿದಾಗ ಅದು ವಸ್ತುನಿಷ್ಠ ಕವಿತೆಯಾಗುತ್ತದೆ. ಇದನ್ನು Objective Poetry ಎಂದು ಗುರುತಿಸಬಹುದು. ವಸ್ತುನಿಷ್ಠ ಕವಿತೆಗಳು ಮಹಾಕಾವ್ಯವಾಗಿರಬಹುದು. ನಮ್ಮ ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅದು ಪುರಾಣ ಕಥೆಗಳಾಗಿರಬಹುದು. ಪುರಾತನ ಗ್ರೀಕ್ ಹಿನ್ನೆಲೆಯಲ್ಲಿ ಅಲ್ಲಿಯ ಪುರಾಣ ಕಥೆಯಾಗಿರಬಹುದು. ಈ ರೀತಿಯ ಕವನದಲ್ಲಿ ಕವಿಗಿಂತ ಕವಿತೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಕವಿಯನ್ನು ಮೀರಿ ನಿಲ್ಲಬಹುದು.

ಇಂಗ್ಲೆಂಡಿನಲ್ಲಿ ೧೮ನೇ ಶತಮಾನದ ಆದಿಯಲ್ಲಿ  ವರ್ಡ್ಸ್ ವರ್ತ್ ಅವರ ಗೆಳೆಯ, ಸಮಕಾಲೀನ ಕವಿ ಕೋಲ್ ರಿಡ್ಜ್,   ಒಬ್ಬ ಕವಿಯಲ್ಲಿ ಇರುವ ವಿಶೇಷ ಶಕ್ತಿಯನ್ನು ಹೀಗೆ  ವಿಶ್ಲೇಷಿಸಿದ್ದಾನೆ; ಒಂದು ಕವಿತೆ ಮೂಡಬೇಕಾದರೆ ಒಂದು ಅರಿವಿನ ಮೂಲ ಕಲ್ಪನಾ ಶಕ್ತಿ (Imagination) ಅಗತ್ಯ. ಬಾಹ್ಯ ಜಗತ್ತನ್ನು ಗ್ರಹಿಸಲು ಎಲ್ಲರಿಗೂ ಸಹಜವಾಗಿ ದೊರಕುವ ಆ ಸಾಮರ್ಥ್ಯವನ್ನು ಮೂಲ ಕಲ್ಪನಾ ಶಕ್ತಿ (Primary Imagination) ಎಂದು ಕರೆಯುತ್ತಾನೆ. ನಾವು ದಿನ ನಿತ್ಯ ಸಾಧಾರಣ ಗ್ರಹಿಕೆಯಿಂದ ಪಡೆದುಕೊಂಡ ಅನುಭವವನ್ನು ಕರಗಿಸಿ ಮತ್ತೆ ಕೂಡಿಸಿ ಯಾವುದೂ ಒಂದು ಹೊಸ ಆಕೃತಿಯನ್ನು ನಿರ್ಮಾಣ ಮಾಡುವ ಸಾಮರ್ಥ್ಯ ನಮಗೆ ಒದಗಿರುವುದು ದ್ವಿತೀಯ (ಅಥವಾ ಅದ್ವಿತೀಯ) ಕಲ್ಪನಾ ಶಕ್ತಿ (Secondary Imagination) ಯಿಂದ ಎಂದು ಕೋಲ್ ರಿಡ್ಜ್ ಭಾವಿಸಿದ್ದಾನೆ. ಈ ದ್ವಿತೀಯ ಕಲ್ಪನಾ ಶಕ್ತಿ ಬಹುಶಃ ಕವಿಗಳಿಗಷ್ಟೇ ದಕ್ಕುವ ಸಾಮರ್ಥ್ಯ. ಈ ಒಂದು ಸಾಮರ್ಥ್ಯ ಅವನಿಗೆ ಪ್ರಜ್ಞಾಪೂರ್ವಕವಾಗಿಯೂ ಮತ್ತು ಉಪಪ್ರಜ್ಞೆಯಿಂದ (Sub-conscious) ನಿಲುಕಬಹುದು ಎಂದು ಕೋಲ್ ರಿಡ್ಜ್ ಅಭಿಪ್ರಾಯ ಪಟ್ಟಿದ್ದಾನೆ. ಈ ಒಂದು ಕಲ್ಪನಾ ಶಕ್ತಿಯ ಜೊತೆಗೆ ಕಾವ್ಯಕ್ಕೆ ರೂಪಕಗಳು (Metaphors) ಪ್ರತಿಮೆಗಳು (Images) ಆದಿ ಪ್ರಾಸ (Alliterations) ಎಂಬ ಅಲಂಕಾರಗಳನ್ನು (Fancy) ಪೂರಕವಾಗಿ ಬೆರೆಸಿದಾಗ ಕವಿತೆ ಸುಂದರವಾಗುತ್ತದೆ.

ಮೇಲೆ ತಿಳಿಸಿದ ಹಾಗೆ ಕವಿ ತನ್ನ ಅನುಭವಗಳನ್ನು ವಿಶೇಷಗೊಳಿಸಲು ಮತ್ತು ಕಾವ್ಯಸ್ವರೂಪದಲ್ಲಿ ಅಭಿವ್ಯಕ್ತಗೊಳಿಸಲು ಅವನಲ್ಲಿ ಕವಿಪ್ರತಿಭೆ ಇರಬೇಕು. ಕವಿಯು ಲೋಕದ ಅನುಭವಗಳನ್ನು ಗ್ರಹಿಸಿ ತನ್ನ ಸೃಜನಶೀಲತೆಯಿಂದ ಸಾಧಾರಣ ವಿಚಾರಗಳನ್ನು ವಾಸ್ತವಿಕ ನೆಲೆಯಿಂದ ಭಾವನಾತ್ಮಕ ನೆಲೆಗೆ ಕೊಂಡೊಯ್ಯುತ್ತಾನೆ.  ಬಹಳ ಹಿಂದೆ ಎಲ್ಲ ಸಂಸ್ಕೃತಿಗಳಲ್ಲಿ ಕವಿಯ ಸಾಮರ್ಥ್ಯ ದೈವದತ್ತವಾದದ್ದೆಂದು ಜನರು ನಂಬಿದ್ದರು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಿಂದೆ ಕವಿ ಸರಸ್ವತಿಪುತ್ರನೆಂದು, ಅವನಿಗೆ ಒಂದು ಹಂತದಲ್ಲಿ ಸರಸ್ವತಿಯ ಅನುಗ್ರಹವಾಗಿ ಅವನು ಕವಿಯಾದನೆಂಬ ನಂಬಿಕೆಗಳನ್ನು ಕಟ್ಟುಕಥೆಗಳಲ್ಲಷ್ಟೇ ಕಾಣಬಹುದು.  Art is human and not divine; profane and not sacred ಎಂಬ ವಿಚಾರವನ್ನು ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಪ್ರಸ್ತಾಪ ಮಾಡಲಾಗಿದೆ.

ಒಬ್ಬ ಕವಿಯ ಮನಸ್ಸು ಹೇಗಿರಬಹುದು? ಎಂಬ ಕುತೂಹಲಕ್ಕೆ ತಕ್ಕ ಉತ್ತರವನ್ನು  ಕೋಲ್ ರಿಡ್ಜ್ ಕೊಟ್ಟಿರುವ ಶಾಸ್ತ್ರೋಕ್ತ  ವಿವರಣೆಯನ್ನು ಮೇಲೆ ಪ್ರಾಸ್ತಾಪ ಮಾಡಲಾಗಿದೆ. ಭಾವನೆಗಳ ನೆಲೆಯಲ್ಲಿ ಕವಿಯ ಮನಸ್ಸು ಹೇಗಿರಬಹುದು? ಎಂಬುದನ್ನು ಅರ್ಥಮಾಡಿಕೊಳ್ಳಲು ಜಿ. ಎಸ್. ಎಸ್ ಅವರ “ಕವಿಯ ಮನಸು” ಎಂಬ ಕೆಳಗಿನ ಕವಿತೆಯನ್ನು ಗಮನಿಸೋಣ;

ಪ್ರಕೃತಿಯಂತೆ ಕವಿಯ ಮನಸು
ವಿಪುಲರೂಪಧಾರಿಣಿ
ಬ್ರಹ್ಮನೆದೆಯ ಕನಸಿನಂತೆ
ಕೋಟಿಕಲ್ಪಗಾಮಿನಿ
 
ಕಡಲಿನಂತೆ ಕವಿಯ ಮನಸು
ರತ್ನಗರ್ಭರಾಗಿಣಿ
ಯುಗ ಯುಗಗಳ ನಶ್ವರಕೆ
ಅಮೃತಕವಚದಾಯಿನಿ
 
ಬಾನಿನಂತೆ ಕವಿಯ ಮನಸು
ಭಾವಮೇಘಚಾರಿಣಿ
ಬೆಂದ ಭುವಿಯ ಹಸುರಿನೆದೆಗೆ
ರುಚಿರ ವರ್ಷ ರೂಪಿಣಿ

ಒಬ್ಬ ಕವಿಯ ಮನಸು ಪ್ರಕೃತಿಯಂತೆ ಬಹಳ ವೈವಿಧ್ಯವಾದದ್ದು, ಬ್ರಹ್ಮನೆದೆಯ ಕನಸುಗಳಂತೆ ಅಸಂಖ್ಯಾತ ಸಾಧ್ಯತೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಉಳದ್ದು, ಅನರ್ಘ್ಯ ಚಿಂತನೆ ಮತ್ತು ಮೌಲ್ಯಗಳಿಂದ ತುಂಬಿದ್ದು ಅದನ್ನು ನಶ್ವರ ಗೊಳಿಸದೆ ಕಾಪಾಡುವಂಥದ್ದು ಮತ್ತೆ ಭಾವ ಲೋಕದಲ್ಲಿ ಕವಿಯ ಮನಸು ಮೋಡಗಳಂತೆ ವಿಹರಿಸಿ ಮಳೆಗರೆದು ಬೆಂದ ಹೃದಯಕ್ಕೆ ನೆಮ್ಮದಿ ನೀಡುವ ಹಂಬಲ ಉಳ್ಳದ್ದು ಎಂಬುದು ಕವಿತೆಯ ಇಂಗಿತ. ಇದು ಜಿ. ಎಸ್. ಎಸ್ ಅವರು ತಮ್ಮ ಸಹೃದಯ ಕವಿಗಳಿಗೆ ಕೊಟ್ಟಿರುವ ಅಮೂಲ್ಯವಾದ ನುಡಿನಮನ ಎಂದು ಪರಿಗಣಿಸಬಹುದು.

“ರವಿ ಕಾಣದ್ದನ್ನು ಕವಿ ಕಂಡ” ಎಂಬ ಉಕ್ತಿಯನ್ನು ಎಲ್ಲರೂ ಕೇಳಿದ್ದೇವೆ. ನಮ್ಮ ಆಕಾಶದಲ್ಲಿ ತೇಲಿಹೋಗುವ ಮೋಡಗಳನ್ನು ನಾವೆಲ್ಲ ಗಮನಿಸಿದ್ದು ಅದರಲ್ಲಿ ಯಾವ ವಿಶೇಷತೆಯನ್ನು ನಾವು ಕಾಣದೆ ಹೋಗಬಹುದು. ಇವತ್ತು ಮೋಡವಾಗಿದೆ ಮಳೆ ಬರಬಹುದು ಅಥವಾ ಇವತ್ತಿನ ಆಕಾಶದಲ್ಲಿ ತಿಳಿಮೋಡವಿದೆ ಛತ್ರಿಯ ಅಗತ್ಯವಿಲ್ಲ ಎಂಬ ಈ ಆಲೋಚನೆಗಳು ನಮಗೆ ಮೂಡಿದರೆ, ಕವಿ ಜಿ. ಎಸ್. ಎಸ್ ಅವರ ಮನಸ್ಸು ಗ್ರಹಿಸುವುದು ಹೀಗೆ;

ಮೋಡಗಳೇ ಮೋಡಗಳೇ
ಋತು ಋತುವಿಗೂ ಬಹು ರೂಪದಿ ಚಲಿಸುವ 
ನೆಲಮುಗಿಲಿನ ಸಂತಾನಗಳೇ
 
ಬೆಂದ ನೆಲಕೆ ತಂಪೆರೆಯುವ
ಮನಸಿನ ಉದಾರ ಕರುಣೆಯ ಕನಸುಗಳೆ
ಆಷಾಢ ಆಕಾಶದ ಪಾತ್ರಾದಿ
ಹರಿವ ಕಲ್ಪನೆಯ ಹೊನಲುಗಳೆ
 
ಶಾರದಾ ನೀರದ ಶಿಲ್ಪಾಕೃತಿಗಳ
ಬಾನೊಳು ರಚಿಸುವ ಪ್ರತಿಭೆಗಳೆ
ಗುಡುಗು ಮಿಂಚುಗಳ ರಮ್ಯಾದ್ಭುತದಲಿ
ತಲ್ಲಣಗೊಳಿಸುವ ಸಂಚುಗಳೆ
 
ಗಡ ಮೀರದೆ ಹೊಯ್ದಾಡುವ ಕಡಲಿನ
ಬಿಡುಗಡೆಯಾಸೆಯ ರೂಪಗಳೆ
ಎಂದಿನಿಂದಲೂ ಬೆರಗು ಹುಟ್ಟಿಸುತ 
ತೇಲುವ ನೀರಿನ ತೇರುಗಳೆ

ಇಲ್ಲಿ ಮೋಡಗಳು ನೆಲ-ಮುಗಿಲಿನ ಸಂತಾನಗಳಾಗುತ್ತವೆ, ಕರುಣೆಯ ಕನಸುಗಳಾಗುತ್ತವೆ, ಕಲ್ಪನೆಯ ಹೊನಲಾಗುತ್ತವೆ, ಕಲಾಕೃತಿಗಳನ್ನು ರಚಿಸುವ ಪ್ರತಿಭೆಗಳಾಗುತ್ತವೆ, ತೇಲುವ ನೀರಿನ ತೇರುಗಳಾಗುತ್ತವೆ. ಇಲ್ಲಿ ಬರುವ ಪ್ರತಿಮೆಗಳು ಬಹಳ ಉತ್ಕೃಷ್ಟವಾಗಿವೆ.

ಕುವೆಂಪು ಅವರ “ಬಾ ಫಾಲ್ಗುಣ ರವಿ ದರ್ಶನಕೆ” ಎಂಬ ಕವಿತೆಯಲ್ಲಿ ಮಲೆನಾಡಿನಲ್ಲಿ ಸಂಭವಿಸುವ ಸೂರ್ಯೋದಯದ ಸೊಬಗನ್ನು ವೀಕ್ಷಿಸಲು “ಶಿವ ಮಂದಿರ ಸಮ ವನಸುಂದರ ಸುಮ ಶೃಂಗಾರದ ಗಿರಿ ಶೃಂಗಕೆ ಬಾ” ಎಂದು ಓದುಗನಿಗೆ ಆಹ್ವಾನ ನೀಡುತ್ತಾರೆ. ಅಲ್ಲಿ ಸೂರ್ಯ ಕುಂಕುಮ ಧೂಳಿಯ ಓಕುಳಿಯಲ್ಲಿ ಮಿಂದೇಳುವುದನ್ನು, ಚಿನ್ನದ ಚೆಂಡಾಗುವುದನ್ನು ಕವಿ ವರ್ಣಿಸುತ್ತಾರೆ.  ಇವೆಲ್ಲಾ ನಡೆಯುವುದು ಮಲೆನಾಡಿನ ಬನಸಿರಿ ತುಂಬಿದ ಕಣಿವೆಯಲ್ಲಿ! ಈ ಒಂದು ಸುಂದರ ಚಿತ್ರಣ, ಈ ಒಂದು ಕವಿಸಮಯದಲ್ಲಿ, ಕವಿಗೆ ಸ್ಪೂರ್ತಿ ನೀಡುತ್ತದೆ.  ಕವಿಗೆ ತನ್ನ ಬದುಕಿನ ಅಧ್ಯಾತ್ಮವು, ತಾನು ಅರಿತ ಸಕಲ ಆರಾಧನೆ, ಸಾಧನೆ, ಬೋಧನೆ, ತಾನು ಕಂಡ ಅನುಭವರಸ ಅಲ್ಲಿ ದೊರೆಯುತ್ತದೆ.  ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿ ಮನಸ್ಸು ಉರಿದೇಳುತ್ತದೆ.  ಈ ಕ್ಷಣದಲ್ಲಿ ಮರಗಿಡದಲ್ಲಿರುವ ಜಡತೆ ಕಳೆದು ಅದರ ಒಡಲಲ್ಲಿ ಭಾವಜ್ವಾಲೆ ಸ್ಪಂದಿಸಲು ಮೊದಲುಗೊಳ್ಳುತ್ತದೆ. ಕವಿ ಸೌಂದರ್ಯ ಸಮಾಧಿ ಸ್ಥಿತಿಯಲ್ಲಿ ತನ್ನನು ತಾನೇ ಮರೆತು ಬಿಡುತ್ತಾನೆ. ಈ ರಸ ಘಳಿಗೆ ಅವನಿಗೆ ಸರ್ವಾತ್ಮನ ಸನ್ನಿಧಿಯಾಗುತ್ತದೆ. ಈ ಒಂದು ಸುಂದರ ಸನ್ನಿವೇಶದಲ್ಲಿ ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಸಿ ರವಿ ದಯಮಾಡುವನು! ಈ ಒಂದು ಕವಿತೆ ಒಂದು ವಸ್ತುನಿಷ್ಠ ಸೂರ್ಯೋದಯದಿಂದ ಶುರುವಾಗಿ ಭಾವನಿಷ್ಠ ಪರಾಕಾಷ್ಠತೆಯನ್ನು ತಲುಪುತ್ತದೆ. ಇಲ್ಲಿ ಗಂಟೆ ಘೋಷಣೆಯ ಸದ್ದು ಗದ್ದಲವಿಲ್ಲದೆ ನಡೆಯುವಂತಹ ಪ್ರಕೃತಿಯ ಪೂಜೆಯ ಚಿತ್ರಣ ಬಹಳ ಉತ್ಕೃಷ್ಟವಾದದ್ದು ಎನ್ನಬಹುದು. ಕುವೆಂಪು ಅವರ ಈ ರಚನೆ ಕನ್ನಡದ ಶ್ರೇಷ್ಠ ಕವಿತೆಗಳ ಸಾಲಿನಲ್ಲಿ ಎದ್ದು ನಿಲ್ಲುವ ಕವನ. ಈ ಕವಿತೆಯನ್ನು “ನವಿಲುಕಲ್ಲು” ಎಂಬ ಶಿಖರಸ್ಥಾನದಲ್ಲಿ ಉಷಃಕಾಲದಲ್ಲಿ ನಿಂತು ದೊರೆಕಿಸಿಕೊಂಡ ದರ್ಶನ ಎಂದು ಸ್ವತಃ ಕುವೆಂಪು ಅವರು ಸೂಚಿಸಿದ್ದಾರೆ. ಈ ಕವಿತೆಯನ್ನು ಕೆಳಗೆ ಒದಗಿಸಲಾಗಿದೆ.

ಶಿವಮಂದಿರ ಸಮ  ವನಸುಂದರ ಸುಮ ಶೃಂಗಾರದ ಗಿರಿ ಶೃಂಗಕೆ ಬಾ;
ಬಾ ಫಾಲ್ಗುಣ ರವಿ ದರ್ಶನಕೆ
 
ಕುಂಕುಮ ಧೂಳಿಯ ದಿಕ್ತಟ ವೇದಿಯೊಳೋಕುಳಿಯಲಿ ಮಿಂದೇಳುವನು;
ಕೋಟಿ ವಿಹಂಗಮ ಮಂಗಲರವ ರಸ ನೈವೇದ್ಯಕೆ ಮುದ ತಾಳುವನು;
ಚಿನ್ನದ ಚಂಡನೆ ಮೂಡುವನು; ಹೊನ್ನನೆ ಹೊಯ್ ನೀರ್ ನೀಡುವನು
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆ ಹರಿಯಿಸಿ ರವಿ ದಯಮಾಡುವನು!
 
ತೆರೆತೆರೆಯಾಗಿಹ ನೊರೆ ನೊರೆ ಕಡಲನೆ ನೋಡುವ ಕಣ್ಣೋಡುವವರೆಗೆ
ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳಿ ಸಮಹಿಮಾ ಬಾನ್ ಕರೆಗೆ
ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿಮನ ತಾನುರಿದುರಿದೇಳೆ
ಮರಗಿಡದಲಿ ಜಡದೊಡದಲಿ ಇದೆಕೋ ಸ್ಪಂದಿಸುತಿದೆ ಭಾವಜ್ವಾಲೆ!
 
ವರ್ಣನದಿಂದ್ರಿಯ ನಂದನವನು ದಾಂಟುತೆ ದರ್ಶನ ಮುಕ್ತಿಯು ಸೇರಿ
ವ್ಯಕ್ತಿತೆ ಮೈಮರೆವುದು ಸೌಂದರ್ಯ ಸಮಾಧಿಯೊಳಾನಂದವ ಹೀರಿ:
ಸರ್ವೇ೦ದ್ರಿಯ ಸುಖನಿಧಿ ಅಲ್ಲಿ; ಸರ್ವಾತ್ಮನ ಸನ್ನಿಧಿ ಅಲ್ಲಿ;
ಸಕಲಾರಾಧನ ಸಾಧನ ಬೋಧನದನುಭಾವರಸ ತಾನಹುದಲ್ಲಿ!

ಹಿಂದೆ ತಿಳಿಸಿದ ಅಲಂಕಾರ (Fancy) ಒಂದು ಕವಿತೆಯನ್ನು ಹೇಗೆ ಶ್ರೀಮಂತ ಗೊಳಿಸುವುದು ಎನ್ನುವುದಕ್ಕೆ ಮೇಲಿನ ಕುವೆಂಪು  ಅವರ ಕವನ ಸಾಕ್ಷಿಯಾಗಿದೆ. ಇಡೀ ಒಂದು ಕವಿತೆ ಒಂದು ಸೂರ್ಯೋದಯದ ಪ್ರತಿಮೆಯ (Image) ಕುರಿತಾಗಿದೆ. ಅದಕ್ಕೆ ವೈದೃಶ್ಯವಾಗಿ ಒಂದೇ ಕವಿತೆಯಲ್ಲಿ ಹಲವಾರು ಪ್ರತಿಮೆಗಳಿರಲು ಸಾಧ್ಯ.ನಾನೇ ರಚಿಸಿರುವ “ಒಂದು ಹಳೆಯ ಸವಿನೆನಪು” ಎಂಬ ಕವಿತೆಯ ಕೆಲವು ಸಾಲುಗಳನ್ನು ನಿದರ್ಶನಕ್ಕೆಂದು ಇಲ್ಲಿ ನಿಮ್ಮ ಗಮನಕ್ಕೆ ತಂದಿದ್ದೇನೆ.

ಮನೆ ಹಿತ್ತಲಿನಲ್ಲಿ ತಿಂಗಳ ಬೆಳಕಿನ ಹೊಳೆ ಹರಿದಿತ್ತು
ಚಾಮರ ಬೀಸುವ ತೆಂಗಿನ ಗರಿಗಳ ನಡುವೆ
ಸರಸ ಸಂಭಾಷಣೆ ನಡೆದಿತ್ತು
ಹುಣ್ಣಿಮೆ ಚಂದಿರ ಬೆಳ್ಳಿಯ ಬಾನಲಿ ತೇಲಿತ್ತು
ಮೋಡದ ಮೆರವಣಿಗೆಯು ಸಾಗಿತ್ತು
 
ಅಪ್ಪನ ಕವಿಮನ ಮುಗಿಯದ ಕವನಕೆ
ಪದಗಳ ಹುಡುಕಲು ಹೊರಟಿತ್ತು
ಹರಡಿದ ಲಂಗದ ಮಧ್ಯದಿ ಕುಳಿತ
ಅಕ್ಕನ ಹಾಡಿನ ಇಂಪಿತ್ತು
 
ಸೋರುವ ನಲ್ಲಿಯ ತಟಪಟ ಶಬ್ದವು
ರಾಗಕೆ ತಾಳವ ಹಿಡಿದಿತ್ತು
ಹಿತ್ತಲ ಗಿಡದಲಿ ಅರಳಿದ ಹೂಗಳ ಕಂಪಿತ್ತು
ತಂಗಾಳಿಯು ಮೆಲ್ಲಗೆ ಸುಳಿದಿತ್ತು
 
ಬಾವಿಲಿ ಇಣುಕುವ ಅಣ್ಣನ ಚೇಷ್ಟೆಯು
ಅಮ್ಮನಿಗಾಬರಿಗಿಟ್ಟಿತ್ತು ದನಿ ಏರಿತ್ತು!

ಈ ಒಂದು ಕವನವನ್ನು ಹಿಂದೆ ನಾನು ಒಂದು ಕಾರ್ಯಕ್ರಮದಲ್ಲಿ ಪ್ರಸ್ತುತಿ ಪಡಿಸಿದಾಗ ಅಲ್ಲಿ ಆಗಮಿಸಿದ್ದ ಯು. ಆರ್. ಅನಂತಮೂರ್ತಿ ಅವರು ನನ್ನನ್ನು ಕರೆದು ನನ್ನ ಈ ಒಂದು ಕವಿತೆಯಲ್ಲಿ ಹಲವಾರು ಸುಂದರ ಇಮೇಜಸ್ ಇದೆಯೆಂದು ಅಭಿನಂದಿಸಿದರು. ನನ್ನ ಈ ಒಂದು ಕವಿತೆಯಲ್ಲಿ ಮನೆ ಹಿತ್ತಲು, ತೆಂಗಿನ ಮರ, ಬೆಳದಿಂಗಳು, ತಿಳಿಗಾಳಿ, ಕವಿತೆಗೆ ಪದಗಳನ್ನು ಹುಡುಕಿಕೊಂಡು ಹೊರಟ ಅಪ್ಪನ ಕವಿ ಮನಸ್ಸು, ಹಾಡುತ್ತಿರುವ ಅಕ್ಕ, ಅವಳ ಹರಡಿರುವ ಲಂಗ, ಸೋರುತ್ತಿರುವ ನಲ್ಲಿ, ಹೊಗಳ ಕಂಪು, ಅಣ್ಣನ ಚೇಷ್ಟೆ, ಅಮ್ಮನ ಗಾಬರಿ ಹೀಗೆ ಹತ್ತಾರು ಚಿತ್ತಾರಗಳಿವೆ.

ಸೂಕ್ಷ್ಮ ಸಂವೇದನೆ ಉಳ್ಳ ಕವಿಗೆ ಜಗತ್ತಿನ ವಿಸ್ಮಯಗಳು ಬಹಳ ಪ್ರಸ್ತುತವಾಗುತ್ತದೆ. ಈ ವಿಚಾರವನ್ನು ಜಿ.ಎಸ್. ಎಸ್. ತಮ್ಮ ಕಾವ್ಯಾರ್ಥ ಚಿಂತನೆಯಲ್ಲಿ ಹೀಗೆ ಹೇಳುತ್ತಾರೆ; ಎಳೆಯಂದಿನಲ್ಲಿ ನಾವು ಕಾಣುತ್ತಿದ್ದ ವಿಸ್ಮಯ ಬರು ಬರುತ್ತಾ ದೈನಂದಿನ ಚಿರಪರಿಚಿತ ಸಾಧಾರಣತೆಯಲ್ಲಿ ಲಯವಾಗಿ ಹೋಗುತ್ತದೆ. ಅನಂತರ ನಾವು ವಿಸ್ಮಯಗಳನ್ನು ಬೇರೆ ಬೇರೆ ಕಡೆಯಲ್ಲಿ ಹುಡುಕಲು ತೊಡಗುತ್ತೇವೆ. ಹರಿಯುವ ನೀರು ವಿಸ್ಮಯ, ಅದು ಮೇಲೇರಿ ಆಕಾಶದಲ್ಲಿ ಮೋಡವಾಗುವುದು ವಿಸ್ಮಯ, ಗಿಡದಲ್ಲಿ ಬೆಳಗಾದಾಗ ಬಣ್ಣ ಬಣ್ಣದ ಹೂ ಅರಳಿ ಕಣ್ಣನ್ನು ಸೆಳೆಯುವುದು ವಿಸ್ಮಯ. ಯಾರನ್ನು ಕವಿ ಅಥವಾ ಕಲಾವಿದ ಎಂದು ಕರೆಯುತ್ತೇವೂ ಅವರು ಉದ್ದಕ್ಕೂ ಈ ವಿಸ್ಮಯವನ್ನು ಉಳಿಸಿಕೊಂಡು ಬಂದವರಾಗಿರುತ್ತಾರೆ. ವಿಸ್ಮಯವನ್ನು ಕಾಣುವ ಕಟ್ಟುವ ಸಾಮರ್ಥ್ಯವನ್ನು ಬೆಳಸಿಕೊಂಡಿರುತ್ತಾರೆ.” ಈ ವಿಸ್ಮಯ ಅಂಶ ಕವಿತೆಯಲ್ಲಿ ಹೇಗೆ ಮೂಡಿದೆ ಎಂಬುದನ್ನು ಅವರದೇ ಆದ “ಮಲ್ಲಿಗೆ” ಎಂಬ ಪದ್ಯದ ಆಯ್ದ ಸಾಲುಗಳಲ್ಲಿ ಕಾಣಬಹುದು;

ನೋಡು ಇದೊ ಇಲ್ಲರಳಿ ನಗುತಿದೆ
ಏಳು ಸುತ್ತಿನ ಮಲ್ಲಿಗೆ.
ಇಷ್ಟು ಹಚ್ಚನೆ ಹಸುರ ಗಿಡದಿಂ
ದೆಂತು ಮೂಡಿತು ಬೆಳ್ಳಗೆ!
 
ಕವಿಯ ಮನದಿಂದುದಿಸಿ ಮೆಲ್ಲನೆ
ಅರಳಿ ಬರುವೊಲು ಕಲ್ಪನೆ
ಎಂಥ ನವುರಿನ ಕುಶಲ ಕಲೆಯಿದು
ತನಗೆ ತಾನೇ ಮೂಡಿದೆ!

ಮೇಲಿನ ಕವಿತೆಯ ಸಾಲಿನಲ್ಲಿ ಕಾಣುವ ಆ ವಿಸ್ಮಯ ಅಚ್ಚರಿಗಳಲ್ಲದೆ ಅಲ್ಲಿ ಉಪಮೆ ಕೂಡ ಇದೆ. ಕವಿಯ ಮನಸ್ಸಿನಿಂದ ಉದಿಸುವ ಕಾವ್ಯ ಕಲ್ಪನೆಗೂ ಮತ್ತು ಹಸುರು ಗಿಡದಿಂದ ಮೂಡುವ ಬಿಳಿ ಮಲ್ಲಿಗೆಗೂ ಇರುವ ಸಾದೃಶ್ಯವನ್ನು ಕವಿ ನೋಡುತ್ತಾರೆ. ಒಂದು ಕವಿತೆಯಲ್ಲಿನ ರೂಪಕಕ್ಕೆ (Meatphor) ಒಂದು ಮಾಂತ್ರಿಕ ಶಕ್ತಿ ಇದೆ.  ಕಾವ್ಯದಲ್ಲಿನ ರೂಪಕವು ಹಲವಾರು ಸಾಧ್ಯತೆಗಳನ್ನು ತೆರೆದಿಡುತ್ತದೆ. ಓದುಗರು ತಮ್ಮ ಜೀವನದ ಅನುಭವಕ್ಕೆ ತಕ್ಕಂತೆ ಅದನ್ನು ಗ್ರಹಿಸುತ್ತಾ ಹೊದಂತೆ ಕವನಕ್ಕೆ ಬೇರೆ ಬೇರೆ ಅರ್ಥಗಳು ಹುಟ್ಟಿಕೊಂಡು ಕವಿತೆ ಇನ್ನು ಸಮೃದ್ಧಿಗೊಳ್ಳುತ್ತದೆ. “ಕಾಣದ ಕಡಲಿಗೆ ಹಂಬಲಿಸಿದೆ ಮನ” ಕವಿತೆಯಲ್ಲಿ ಕವಿ ತನ್ನ ಅಧ್ಯಾತ್ಮ ತೃಷೆಯನ್ನು ತೋಡಿಕೊಳ್ಳುವ ಉದ್ದೇಶದಿಂದ ರಚಿಸಿದ್ದರೆ ಅಲ್ಲಿ ಕಾಣದ ಕಡಲಿಗೆ ಸೇರುವ ತೊರೆ ಗುರು ಶಿಷ್ಯರ ಸಂಬಂಧದ ಪ್ರತೀಕವಾಗಿರಬಹುದು, ಅಲ್ಲಿ ಪ್ರಿಯತಮೆಯ ಕಾತರತೆ ಇರಬಹುದು. ಈ ರೂಪಕಗಳ ಬಳಕೆಯ ಸಾಮರ್ಥ್ಯದ ಬಗ್ಗೆ ಯಾರ್ಕ್ ಶೈರ್ ಕವಿ ಹರ್ಬರ್ಟ್ ರೀಡ್ ಹೇಗೆ ಹೇಳಿದ್ದಾನೆ; “ಒಬ್ಬ ನಿಜವಾದ ಕವಿಯ ಸಾಮರ್ಥ್ಯವನ್ನು ಅಳೆಯಬೇಕಾದದ್ದು ಅವನು ಪ್ರಯೋಗಿಸುವ ರೂಪಕಗಳ ಸ್ವಂತಿಕೆ ಹಾಗು ಶಕ್ತಿಯ ಮೇಲೆ”.    

ಒಂದು ಕವಿತೆ ಯಾವಾಗ ಭಾವಗೀತೆಯಾಗಬಹುದು? ಎಂಬ ಪ್ರಶ್ನೆ ಉದ್ಭವಿಸಿದಾಗ ಯಾವ ಕವಿತೆಯಲ್ಲಿ ವಸ್ತುನಿಷ್ಠೆಗಿಂತ ಭಾವನಿಷ್ಠೆ ಎದ್ದು ತೋರುತ್ತದೆಯೋ ಅದು ಭಾವಗೀತೆಯಾಗಬಲ್ಲುದು ಎನ್ನುತ್ತಾರೆ ಡಾ. ಪ್ರಭುಶಂಕರ್. ‘ಕನ್ನಡದಲ್ಲಿ ಭಾವಗೀತೆ’ ಎಂಬ ತಮ್ಮಗ್ರಂಥದಲ್ಲಿ ಭಾವಗೀತೆಗಳ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ. ಈ ಒಂದು ವಿಚಾರವನ್ನು ಮುಂದಕ್ಕೆ ವಿಸ್ತರಿಸಲು ಡಾ. ಪ್ರಭುಶಂಕರ್ ಅವರು ತಮ್ಮ ಆಪ್ತಮಿತ್ರರಾದ ಜಿ.ಎಸ್.ಎಸ್ ಅವರ “ಹೂಬಳ್ಳಿ” ಎಂಬ ಕವನವನ್ನು ವಿಶ್ಲೇಷಿಸಿದ್ದಾರೆ. ಆ ಕವನದ ಕೆಲವು ಸಾಲುಗಳು ಹೀಗಿವೆ;

ಯಾರೂ ತುಳಿಯದ ಹಾದಿಯ ಬದಿಯಲಿ
ಮೌನದೊಳಿರುವಳು ಈ ಚಲುವೆ
ಪ್ರಕೃತಿಯ ಸುಂದರ ಹಂದರದಲ್ಲಿ
ವಧುವಾಗಿರುವಳು ಈ ಮುಗುದೆ 
 
ಹಕ್ಕಿಯ ಇನಿದನಿಯುಂಡವಳು
ಸಗ್ಗದ ಕಂಬನಿ ಕುಡಿದವಳು
ಹೊಂಗಿರಣದ ಮೃದು ಚುಂಬನದಲ್ಲಿ
ತುಟಿಯನು ಅರಳಿಸಲರಿತವಳು
 
ಮೃದು ಗಾಳಿಯ ಮರ್ಮರ ನಾದದಲಿ
ಬಳುಕುತ ಲಾಸ್ಯವನಾಡುವಳು
ದೂರದ ದುಂಬಿಯ ಗುಂಜಾರವವನು
ಮೆಲ್ಲಗೆ ತನ್ನೆಡೆ ಸೆಳೆದವಳು

ಯಾರೂ ತುಳಿಯದ ಹಾದಿಯ ಬಳಿ ಇದ್ದ ಒಂದು ಹೂಬಳ್ಳಿ ಕವನದ ವಸ್ತುವಾಗಿ ಅಥವಾ ವಸ್ತುನಿಷ್ಠೆಯಾಗಿ ಓದುಗರ ಗಮನವನ್ನು ಸೆಳೆಯುತ್ತದೆ. ಅದನ್ನು ಪ್ರಕೃತಿಯ ಹಂದರದಲ್ಲಿ ಮುಗುದೆಯಾಗಿ ಕಾಣುವ ಕವಿ, ತನ್ನ ಕಾವ್ಯಪ್ರಜ್ಞೆಯಿಂದ ವಸ್ತುವಿಗೆ ಜೀವವನ್ನು ತುಂಬುತ್ತಾನೆ. ಮುಂದಿನ ಸಾಲುಗಳಲ್ಲಿ ಹೂಬಳ್ಳಿ ಚಲುವೆಯಾಗಿ ತನ್ನ ಸುತ್ತಣ ಹಕ್ಕಿಯ ಇಂಚರಕ್ಕೆ, ಹೊಂಗಿರಣಕ್ಕೆ ಸ್ಪಂದಿಸುವುದನ್ನು, ಮೃದು ಗಾಳಿಯ ಮರ್ಮರದಲ್ಲಿ ಲಾಸ್ಯವಾಡುವುದನ್ನು ಕಾಣಬಹುದು. ಈ ಕವನ ವಸ್ತುನಿಷ್ಠೆಯಿಂದ ಹಿಡಿದ ಮಾರ್ಗವನ್ನು ಬಿಟ್ಟು ಭಾವನಿಷ್ಠೆಯ ಜಾಡಿನಲ್ಲಿ ಸಾಗುತ್ತದೆ. ಇದು ಭಾವಗೀತೆಯ ಮುಖ್ಯ ಲಕ್ಷಣ. ಹೊರಜಗತ್ತಿನ ರೀತಿ ನಿಯಮಾವಳಿಗಳನ್ನು ಮೀರಿ ಕವಿಯ ಹೃದಯದಿಂದ ಮೂಡುವ ಭಾವನೆಯುಳ್ಳ ಕವಿತೆ ಭಾವಗೀತೆಯಾಗುತ್ತದೆ. ಸಾಮಾನ್ಯವಾಗಿ ಮೇಲ್ನೋಟಕ್ಕೆ ಸರಳವೆನಿಸಿದರೂ ಕೆಲವು ಭಾವಗೀತೆಗಳು ಗಂಭೀರವಾಗಿ, ಆಳವಾಗಿರುತ್ತವೆ. ಭಾವಗೀತೆಗಳು ತಮ್ಮ ಲಯ, ಪ್ರಾಸ, ಮತ್ತು ಛಂದಸ್ಸಿನಿಂದ ಸಂಗೀತಕ್ಕೆ ಸುಲಭವಾಗಿ ಹೊಂದಿಕೊಂಡು ಹೋಗುತ್ತವೆ. ಭಾವಗೀತೆಗಳನ್ನು ಸಂಗೀತಕ್ಕೆಂದೇ ಬರೆಯುವ ಗೀತೆಗಳಿಗಿಂತ ಸಂಗೀತಕ್ಕೆ ಒದಗುವ ಗೀತೆಗಳು ಎನ್ನಬಹುದು. ಸಂಗೀತಕ್ಕಾಗಿಯೇ ಬರೆದ ಚಿತ್ರಗೀತೆಗಳನ್ನು ಚಿತ್ರಗೀತೆಗಳೆಂದು ಮತ್ತು ಅದರ ಕರ್ತೃವನ್ನು ಕವಿ ಎಂದು ಕರೆಯದೆ ಗೀತರಚನಾಕಾರರೆಂದು ಕರೆಯುವುದು ವಾಡಿಕೆಯಾಗಿದೆ. ಹಾಗೆ ನೋಡಿದರೆ ಚಿತ್ರಗೀತೆಯಲ್ಲೂ ಭಾವಗೀತೆಯಾಗುವ ಗುಣಮಟ್ಟ ಮತ್ತು ಲಕ್ಷಣಗಳಿವೆ.   

ಭಾವಗೀತೆಯ ಸಂಪ್ರದಾಯವನ್ನು ನಾವು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಸಾಹಿತ್ಯದಲ್ಲಿ ಕಾಣಬಹುದು. ಬಹಳ ಹಿಂದೆ ಗ್ರೀಕ್ ಸಂಸ್ಕೃತಿಯಲ್ಲಿ ಕಂಡ ಈ ಒಂದು ಪರಂಪರೆ ಸುಮಾರು ೧೩ರನೇ ಶತಮಾನದಲ್ಲಿ ಇಟಾಲಿಯನ್ ಸಾಹಿತ್ಯದಲ್ಲಿ ೧೪ ಸಾಲುಗಳ ಕವನಗಳಾಗಿ ಸಾನೆಟ್ ಎಂದು ಗುರುತಿಸಲಾಯಿತು. ಇದು ೧೬ನೇ ಶತಮಾನದಲ್ಲಿ ಇಂಗ್ಲೆಂಡ್ ತಲುಪಿ ಇಲ್ಲಿ ಶೇಕ್ಸ್ ಪಿಯರ್ ಮತ್ತು ವರ್ಡ್ಸ್ ವರ್ತ್ ರಂತ ಕವಿಗಳು ಅದನ್ನು ಎತ್ತರಕ್ಕೆ ಬೆಳೆಸಿದರು. ಭಾವಗೀತೆಯ ಇನ್ನೊಂದು ಪ್ರಕಾರವನ್ನು ಓಡ್ (Ode) ಎಂದು ಗುರುತಿಸಬಹುದು. ಇದು ಹುಟ್ಟಿದ್ದು ಗ್ರೀಕ್ ಸಂಸ್ಕೃತಿಯಲ್ಲಿ. ಈ ಕವನಗಳಲ್ಲಿ ಒಂದು ಸಮುದಾಯದ, ಒಂದು ನೆಲದ ಅಥವಾ ಒಬ್ಬ ವ್ಯಕ್ತಿಯ ಗುಣಗಾನ ಮಾಡಲು ಬಳಸಲಾಗಿತ್ತು. ಈ ಹಿನ್ನೆಲೆಯಲ್ಲಿ ಒಂದು ರಾಷ್ಟ್ರಗೀತೆಯನ್ನು ಓಡ್ ಎಂದು ಕರೆದರೆ ಬಹುಶಃ ತಪ್ಪಾಗಲಾರದು. ಭಾವಗೀತೆಯ ಇನ್ನೊಂದು ಪ್ರಕಾರವೆಂದರೆ ಲಿರಿಕಲ್ ಗೀತೆಗಳು (Lyrical Poetry) ಸಾಮಾನ್ಯವಾಗಿ ಪಕ್ಕವಾದ್ಯದೊಂದಿಗೆ ಹಾಡಬಹುದಾದ ಕವಿತೆಯನ್ನು ಲಿರಿಕಲ್ ಕವಿತೆಗಳೆಂದು ಶುರುವಿನಲ್ಲಿ ಗುರುತಿಸಲಾಯಿತು. ೧೯ನೇ ಶತಮಾನದಲ್ಲಿ ಬರೆದ ಲಿರಿಕಲ್ ಗೀತೆಗಳು ರೋಮ್ಯಾಂಟಿಕ್ ಲಿರಿಕಲ್ ಗೀತೆಗಳೆಂದು ಹೆಸರುವಾಸಿಯಾದವು. ಆ ಸಮಯದಲ್ಲಿ ಸಂಭವಿಸಿದ ಸಾಹಿತ್ಯದ ಹೊಸ ಅಲೆ (Literary Renaissance) ಯೂರೋಪಿನ ಸಾಹಿತ್ಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎನ್ನಬಹುದು. ಲಿರಿಕಲ್ ಗೀತೆಗಳಲ್ಲಿ ಭಾಷೆ ಸುಮಧುರವಾಗಿದ್ದು ೨೦ನೇ ಶತಮಾನದ ಇಂಗ್ಲಿಷ್ ಕವಿ ಟಿ. ಎಸ್. ಎಲಿಯಟ್ ಈ ಗೀತೆಯ ಶೈಲಿಯನ್ನು ತಿರಸ್ಕರಿಸಿದನೆಂಬ ಸಂಗತಿ ಸ್ವಾರಸ್ಯಕರವಾಗಿದೆ. ಇಡಿಲ್ (Idle) ಎಂಬ ಭಾವಗೀತೆಯ ಪ್ರಕಾರದಲ್ಲಿ ಹಳ್ಳಿಯ ಜೀವನದ ಚಿತ್ರಗಳಿದ್ದು ಅದನ್ನು ಆಡುಭಾಷೆಯಲ್ಲಿ ಬರೆಯುವುದು ಸಾಮಾನ್ಯವಾಗಿತ್ತು. ವರ್ಡ್ಸ್ ವರ್ತ್ ಬರೆದ ‘ಸಾಲಿಟರಿ ರೀಪರ್’ (Solitary Reaper) ಎಂಬ ಜನಪ್ರಿಯ ಕವಿತೆ ಈ ಪ್ರಕಾರಕ್ಕೆ ಸೇರಿರುವ ಕವಿತೆಯೆಂದು ಗುರುತಿಸಲಾಗಿದೆ. ಈ ಕವಿತೆಯನ್ನು ಕುವೆಂಪು ಅವರು ಅನುವಾದಗೊಳಿಸಿದ್ದಾರೆ. ಅದರ ಒಂದೆರಡು ಪಂಕ್ತಿಯನ್ನು ಇಲ್ಲಿ ಒದಗಿಸಲಾಗಿದೆ;

ಹೊಲದೊಳಗೊಬ್ಬಳು ಹಳದಿಯ ಪಯಿರನು
ಕೊಯ್ಯುವ ಬಾಲೆಯ ನೋಡಲ್ಲಿ
ತನ್ನೊಳು ತಾನೇ ಹಾಡುತ ನಲಿವಳು
ಮೆಲ್ಲಡಿಯಿಡು ಬಾ ನಿಲ್ಲಿಲ್ಲಿ   
 
ಒಬ್ಬಳೇ ಕೊಯ್ವಳು ಹೊರೆಯನು ಮಾಡಿ
ಎದೆಯನು ಸೆಳೆಯುವ ಹಾಡನು ಹಾಡಿ
ಆಲಿಸು ಸದ್ದಲ್ಲಿ ಕಣಿವೆಯ ಪೆ೦ಪು
ಹೆಚ್ಚಲು ಹರಿವುದು ಗಾಣದ ಇಂಪು   

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕೃತ ಶ್ಲೋಕ, ಉಪನಿಷತ್ ಮತ್ತು ಭಗವದ್ಗೀತೆಯಲ್ಲಿ ಭಾವಗೀತೆಯ ಅಂಶವನ್ನು ಕಾಣಬಹುದು. ನಮ್ಮ ಕನ್ನಡ ಸಾಹಿತ್ಯದಲ್ಲಿ, ೧೨ನೇ ಶತಮಾನದಲ್ಲಿ, ಶರಣರು ರಚಿಸಿದ ವಚನಗಳಲ್ಲಿ ಭಾವಗೀತೆಯನ್ನು ಕಾಣಬಹುದು. ಅಲ್ಲಮ ಪ್ರಭುಗಳ ವಚನದಲ್ಲಿ ನಿಗೂಢಾರ್ಥವನ್ನು ಮತ್ತು ಹಲವಾರು ರೂಪಕಗಳನ್ನು ಕಾಣಬಹುದು. “ತನುವ ತೋಂಟವಮಾಡಿ, ಮನವ ಗುದ್ದಲಿ ಮಾಡಿ, ಅಗೆದು ಕಳೆದೆನಯ್ಯ ಭ್ರಾಂತಿಯ ಬೇರನು. ಒಡೆದು ಸಂಸಾರದ ಹೆಂಟೆಯ ಬಗೆದು, ಬಿತ್ತಿದೆನಯ್ಯ ಬ್ರಹ್ಮ ಬೀಜವ” ಎಂಬ ವಚನದಲ್ಲಿ ನಮ್ಮ ದೇಹವನ್ನೇ ತೋಟಮಾಡಿಕೊಂಡು ಮನಸ್ಸಿನ ಸಂಯಮವನ್ನು ಗುದ್ದಲಿ ಮಾಡಿಕೊಂಡು, ವಿಷಯಸುಖಗಳೆಂಬ ಭ್ರಾಂತಿಯ ಬೇರನ್ನು ಕಿತ್ತೊಗೆದು ಹಸನಗೊಳಿಸಿ, ಆಧ್ಯಾತ್ಮ ಕೃಷಿ ಮಾಡುವಲ್ಲಿ ಕಂಡುಬರುವ ಉಪಮೆಗಳು, ರೂಪಕಗಳು ಸೊಗಸಾಗಿವೆ. ಅಲ್ಲಿಂದ ಮುಂದಕ್ಕೆ ದಾಸ ಸಾಹಿತ್ಯ ವಚನಗಳಂತೆ ಸರಳವಾಗಿ ಹಾಗೆ ಭಕ್ತಿ ಪ್ರಧಾನವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ತನ್ನನ್ನೇ ತಾನು ದಕ್ಕಿಸಿಕೊಂಡಿತು. ಜಾನಪದ ಗೀತೆಗಳು ಒಬ್ಬರ ಬಾಯಿಂದ ಇನ್ನೊಬ್ಬರಿಗೆ ಹಾಡುಗಳಾಗಿ ಹಲವಾರು ಪೀಳಿಗೆಗಳನ್ನು ದಾಟಿ ಹರಿದುಬಂದಿದೆ. ಅವುಗಳನ್ನೂ ಕೂಡ ಭಾವಗೀತೆಯ ಪರಿಮತಿಯಲ್ಲಿ ಸೇರಿಸಬಹುದು. “ಅಳುವ ಕಂದನ ತುಟಿಯು ಹವಳದ ಕುಡಿಹಾಂಗ ಕುಡಿ ಹುಬ್ಬು ಬೇವಿನ ಎಸಳಂಗ, ಕಣ್ಣೋಟ ಶಿವನ ಕೈಯಲಗು ಹೊಳೆದಾಂಗ” ಎಂಬ ಈ ಜಾನಪದ ಗೀತೆಯಲ್ಲಿ ಅಳುತ್ತಿರುವ ಕಂದನಲ್ಲೂ ತಾಯಿ ಕಾಣುವ ರಸಾನುಭವ ಎದ್ದು ತೋರುತ್ತದೆ.      

ಭಾವಗೀತೆಗಳ ವಿಶಾಲ ವ್ಯಾಪ್ತಿಯ ಬಗ್ಗೆ ಡಾ. ಪ್ರಭುಶಂಕರ್ ಹೇಗೆ ಬರೆಯುತ್ತಾರೆ; “ಪ್ರಾರಂಭದಲ್ಲಿ ಭಾವಗೀತೆ ಸರಳವಾದ ರಾಗಗಳ ಮಧುರ ಗೀತೆ. ಈ ತಿಳಿಯಾದ ಬುಗ್ಗೆಯಲ್ಲೇ ಸಂತೃಪ್ತಿ ಪಡೆದು ಅದು ವಿರಮಿಸಬಹುದು; ಇಲ್ಲವೇ ಚಿಂತನೆಯಿಂದ ಭಾರವಾದ ಹೆಜ್ಜೆಗಳನ್ನಿಡುತ್ತಾ ನಡೆಯಬಹುದು, ಧ್ಯಾನಪೂರ್ಣವಾಗಬಹುದು. ಮತ್ತೆ ಕೆಲವು ಸಲ ತನ್ನ ರೆಕ್ಕೆಗಳನ್ನು ಕೆದರಿ ಮಹಾಕಾವ್ಯದ ವಿಸ್ತಾರದಲ್ಲಿ ಹಾರಬಹುದು. ಅಥವಾ ಕ್ರಿಯೆಯ ಒಂದಾದ ಮೇಲೊಂದರಂತೆ ಬರುವ ಕ್ಷಣಗಳನ್ನು ಭಾವ ಗೀತಾತ್ಮಕವನ್ನಾಗಿ ಮಾಡಿ ಹೃದಯ ಹೃದಯದೊಂದಿಗೆ, ಬುದ್ಧಿ ಬುದ್ಧಿಯೊಂದಿಗೆ, ಆತ್ಮ ಆತ್ಮದೊಂದಿಗೆ ನಡೆಯುವಂತೆ ಮಾಡಿ, ಭಾವ ಭಾವನೆ ಅನುಭವಗಳ ನಡುವೆ ಸಂಚರಿಸಿ, ಅವುಗಳಿಗೆ ಧ್ವನಿ ತುಂಬಿ ನಾಟಕವನ್ನು ರಚಿಸಬಹುದು”

ಕನ್ನಡ ಆಧುನಿಕ ಸಾಹಿತ್ಯದಲ್ಲಿ ಬಿ.ಎಂ.ಶ್ರೀ, ಡಿ.ವಿ.ಜಿ, ಕುವೆಂಪು, ಬೇಂದ್ರೆ, ರಾಜರತ್ನಂ, ಪುತಿನ, ಅಡಿಗ, ಕೆ.ಎಸ್.ಎನ್, ಜಿ.ಎಸ್.ಎಸ್, ಕಣವಿ, ನಿಸ್ಸಾರ್ ಅಹ್ಮದ್, ಲಕ್ಷ್ಮೀನಾರಾಯಣ ಭಟ್ಟ, ಎಚ್ಚೆಸ್ವಿ, ಲಕ್ಷ್ಮಣರಾವ್, ಸಿದ್ದಲಿಂಗಯ್ಯ, ವ್ಯಾಸ ರಾವ್ ಮತ್ತು ಇನ್ನೂ ಅನೇಕ ಕವಿಗಳು ಬರೆದ ಕವನಗಳಲ್ಲಿ ಭಾವಗೀತೆಗಳನ್ನು ಕಾಣಬಹುದು. ಈ ಕವನಗಳಿಗೆ ಹೆಸರಾಂತ ಸಂಗೀತ ನಿರ್ದೇಶಕರಾದ ಪಿ.ಕಾಳಿಂಗರಾವ್, ಪದ್ಮಚರಣ್, ಸಿ. ಅಶ್ವಥ್, ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ಮಾಡಿ, ಕೆಲವು ಗೀತೆಗಳನ್ನು ತಾವೇ ಹಾಡಿ ಸುಗಮ ಸಂಗೀತವೆಂಬ ಹೊಸ ಪರಂಪರೆಯನ್ನು ಹುಟ್ಟುಹಾಕಿದರು. ರತ್ನಮಾಲಾ ಪ್ರಕಾಶ್, ಸಂಗೀತಾ ಕಟ್ಟಿ, ಬಿ. ಆರ್. ಛಾಯಾ, ಮಂಜುಳಾ ಗುರುರಾಜ್, ಎಂ.ಡಿ ಪಲ್ಲವಿ, ಅರ್ಚನಾ ಉಡುಪ, ಶ್ರೀನಿವಾಸ  ಉಡುಪ, ನರಸಿಂಹ ನಾಯಕ ಪುತ್ತೂರು, ಶಂಕರ್ ಶಾನಭಾಗ್, ಹಳಿಬಂಡಿ, ರಾಜು, ಸುನೀತಾ ಮತ್ತು ಅನಿತಾ ಅನಂತಸ್ವಾಮಿ ಮುಂತಾದ ಗಾಯಕರು ಭಾವಪೂರ್ಣವಾಗಿ ಹಾಡಿ ಹಲವಾರು ಧ್ವನಿಸುರುಳಿಯನ್ನು, ಧ್ವನಿಮುದ್ರಿಕೆಗಳನ್ನು ತಂದು ಸುಗಮ ಸಂಗೀತ ಈಗ ದೊಡ್ಡ ಉದ್ಯಮೆಯಾಗಿದೆ. ಹಲವಾರು ಕವಿತೆಗಳು ಗೀತೆಗಳಾಗಿ ಸಾಹಿತ್ಯವಲಯದಿಂದಾಚೆಗೆ ಬಂದು ಜನ ಸಾಮಾನ್ಯರಿಗೆ ನಿಲುಕಿ ಕವಿ ಮತ್ತು ಅವನ ಕವನ ಜನಪ್ರಿಯಗೊಂಡಿದೆ. ಹಲವಾರು ಭಾವಗೀತೆಗಳನ್ನು ಕನ್ನಡ ಚಲನ ಚಿತ್ರ ಅಳವಡಿಸಿಕೊಂಡಿದೆ.

ಒಟ್ಟಾರೆ ಕವಿಯ ಮನಸ್ಸು, ಆ ಮನಸ್ಸಿನ ಹಿಂದೆ ಇರಬಹುದಾದ ಪ್ರತಿಭೆ, ಸ್ಪೂರ್ತಿ, ಕಾವ್ಯ ಸ್ವರೂಪ, ಕವಿತೆ ಮತ್ತು ಭಾವಗೀತೆಗೂ ಇರುವ ವ್ಯತ್ಯಾಸ, ಭಾವಗೀತೆಗಳ ಪ್ರಕಾರ, ಅದು ಬೆಳೆದು ಬಂದ ದಾರಿ, ಈ ವಿಚಾರಗಳ ಬಗ್ಗೆ ಸ್ಥೂಲ ಪರಿಚಯ ಮಾಡಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

* * *

ಉಲ್ಲೇಖ:

  1. ಕಾವ್ಯಾರ್ಥ ಚಿಂತನ ಡಾ. ಜಿ. ಎಸ್. ಶಿವರುದ್ರಪ್ಪ (ಕೇಂದ್ರ ಸಾಹಿತ್ಯ ಅಕೆಡಮಿ ಪುರಸ್ಕೃತ ಗ್ರಂಥ)
  2. ಕನ್ನಡದಲ್ಲಿ ಭಾವಗೀತೆ ಡಾ. ಪ್ರಭುಶಂಕರ್ (ಡಾಕ್ಟರೇಟ್ ಪಡೆದ ಪ್ರಬಂಧ/ಗ್ರಂಥ)
  3. ಕುವೆಂಪು ಸಮಗ್ರ ಕಾವ್ಯ
  4. ಜಿ.ಎಸ್.ಎಸ್ ಸಮಗ್ರ ಕಾವ್ಯ
  5. The Ode Less Travelled; Unlocking the poet within, Stephen Fry
  6. English Romantic Poetry an Anthology (Courtesy Google)

‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯ ಪುನರಾವಲೋಕನ

ಡಾ. ಜಿ. ಎಸ್. ಶಿವಪ್ರಸಾದ್

ಕೆಲವು ತಿಂಗಳ ಹಿಂದೆ ಡಾ. ಎಸ್.ಎಲ್. ಭೈರಪ್ಪನವರ ಬರಹಗಳನ್ನು ಕುರಿತು ಲಂಡನ್ನಿನ ನೆಹರು ಕೇಂದ್ರದಲ್ಲಿ ಒಂದು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದ್ದು ಆ ಸಂದರ್ಭದಲ್ಲಿ ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ‘ ಕಾದಂಬರಿಯನ್ನು ಕುರಿತು ಮಾತನಾಡುವ ಅಪೂರ್ವ ಅವಕಾಶ ನನಗೆ ಒದಗಿ ಬಂದಿತು. ನಾನು ಆಗ ಆಡಿದ ಮಾತುಗಳನ್ನು ಈಗ ಬರವಣಿಗೆಯ ಮೂಲಕ ದಾಖಲಿಸುತ್ತಿದ್ದೇನೆ. ಭೈರಪ್ಪನವರು ಸುಮಾರು ಐವತ್ತು ವರ್ಷಗಳ ಹಿಂದೆ ( ೧೯೬೮) ಬರೆದ ಈ ಕಾದಂಬರಿಯನ್ನು ಈಗ ಪುನರಾವಲೋಕಿಸಲು ಕೆಲವು ಕಾರಣಗಳಿವೆ. ಈ ಕಥೆಯಲ್ಲಿ ಪೂರ್ವ ಮತ್ತು ಪಶ್ಚಿಮಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಭೈರಪ್ಪನವರು ವಿಮರ್ಶೆ ಮಾಡಿದ್ದಾರೆ. ಎರಡು ಸಂಸ್ಕೃತಿಗಳ ನಡುವೆ ಸಂಭವಿಸುವ ಘರ್ಷಣೆಗಳನ್ನು ಕಥೆಯಲ್ಲಿ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ನಮ್ಮ ರಾಜಕೀಯ ಮತ್ತು ಸಾಮಾಜಿಕ ಪರಿಸರದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಬಗ್ಗೆ  ಜನಸಾಮಾನ್ಯರಲ್ಲಿ ಜಾಗೃತಿ ಮೂಡಿದೆ. ಈ ಹಿನ್ನೆಲೆ ಗಳಲ್ಲಿ ಈ ಕಥೆಯನ್ನು ಮರುಪರಿಶೀಲಿಸಲಾಗಿದೆ.

ನಾನು ಹಿಂದೆ ವಿದ್ಯಾರ್ಥಿಯಾಗಿದ್ದಾಗ ಈ ಕಾದಂಬರಿಯನ್ನು ಓದಿದ್ದು, ಇತ್ತೀಚಿಗೆ ಮತ್ತೆ ಈ ಕಾದಂಬರಿಯನ್ನು ಓದಿದಾಗ ಅದರಲ್ಲಿನ ಕೆಲವು ವಿಶೇಷ ಅಂಶಗಳನ್ನು ನಾನು ಗ್ರಹಿಸಿದ್ದೇನೆ. ಕಾದಂಬರಿಯಲ್ಲಿ ಭೈರಪ್ಪನವರು ತರುವ ಮುಖ್ಯ ಪಾತ್ರವಾದ  ಕಾಳಿಂಗ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ವ್ಯಾಸಂಗಕ್ಕೆಂದು ಅಮೇರಿಕಾಗೆ ತೆರಳಿ ಅಲ್ಲಿ ಕೆಲಕಾಲ ವಾಸವಾಗಿದ್ದು ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ತನ್ನದಾಗಿಸಿಕೊಂಡು ಅಲ್ಲಿಯ ಬಿಳಿ ಹೆಂಗಸು ಹಿಲ್ಡಾಳನ್ನು ಪ್ರೀತಿಸಿ ಮದುವೆಯಾಗಿ ಸಂಸಾರ ಸಮೇತ ಭಾರತಕ್ಕೆ ಮರಳಿ ಬರುತ್ತಾನೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿಪರ ಮತ್ತು ಆಧುನಿಕ ಯೋಜನೆಗಳನ್ನು  ಭಾರತದಲ್ಲಿ ಅನುಷ್ಠಾನಗೊಳಿಸುವ ಸುಂದರ ಕನಸುಗಳನ್ನು ಅವನು ಮತ್ತು ಹಿಲ್ಡಾ ಹೊತ್ತು ಕಾಳೇನಹಳ್ಳಿಗೆ ಧಾವಿಸುತ್ತಾರೆ. ಆನಂತರ ಇಲ್ಲಿ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಗಳನ್ನು ಸಾಮಾನ್ಯ ಓದುಗರು ತಮ್ಮ ಭಾರತೀಯತೆಯ ದೃಷ್ಟಿ ಕೋನದಿಂದ ಅರಿತುಕೊಳ್ಳಬಹುದು. ಕಳೆದ ಎರಡು ದಶಕಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ  ನನಗೆ ಭಾರತೀಯತೆ ಮತ್ತು  ಪಾಶ್ಚಿಮಾತ್ಯ    ಮೌಲ್ಯ ಈ ಎರಡೂ ದೃಷ್ಟಿ ಕೋನಗಳು ಲಭ್ಯವಾಗಿರುವುದರಿಂದ ನಾನು ‘ತಬ್ಬಲಿಯು ನೀನಾದೆ ಮಗನೆ’ ಮರುವಿಮರ್ಶೆಗೆ ಕೈ ಹಾಕಿದ್ದೇನೆ.

ಈ ಕಥೆಯಲ್ಲಿ ನಿರ್ದಿಷ್ಟವಾದ ಎರಡು ಅಧ್ಯಾಯಗಳನ್ನು ಗುರುತಿಸಬಹುದು . ಕಥೆಯ ಮೊದಲ ಅಧ್ಯಾಯದಲ್ಲಿ ಕಾಳೇನಹಳ್ಳಿ ಮುಖ್ಯಸ್ಥ ಕಾಳಿಂಗ ಗೌಡಜ್ಜನ ಮುಗ್ಧತೆ, ಆಶಯಗಳು, ಹತಾಶೆ ಅವನ ಧಾರ್ಮಿಕ ನಂಬುಗೆಗಳು ಮತ್ತು ಆಘಾತಗಳನ್ನು ಕಾಣಬಹುದು. ಎರಡನೇ ಅಧ್ಯಾಯದಲ್ಲಿ ಗೌಡಜ್ಜ ತೀರಿದ ಬಳಿಕ ಅವನ ಮೊಮ್ಮಗ ಕಾಳಿಂಗ ಮತ್ತು ಬಿಳಿ ಸೊಸೆ ಹಿಲ್ಡಾರ ಅನುಭವಗಳು, ಸಂಕಟಗಳು ಹಾಗೂ ಎರಡು ಸಂಸ್ಕೃತಿಗಳ ನಡುವೆ ಇರುವ ಕಂದರಗಳು ಓದುಗರ ಕಲ್ಪನೆಗೆ ನಿಲುಕುತ್ತವೆ . ಭೈರಪ್ಪನವರು ಮುನ್ನುಡಿಯಲ್ಲಿ ಹೇಳುವಂತೆ ಈ ಕಥೆಯ ಹಿನ್ನೆಲೆಯಾದ ಕಾಳೇನಹಳ್ಳಿ ಭಾರತದ ಯಾವುದೇ ಕ್ಷೇತ್ರವಾಗಿರಬಹುದು. ಈ ಹಳ್ಳಿ ಯಾವ ಜಿಲ್ಲೆಗೆ ಅಥವಾ ಪ್ರದೇಶಕ್ಕೆ ಸೇರಿರಬಹುದು ಎಂಬ ವಿಚಾರವನ್ನು ಓದುಗರ ಊಹೆಗೆ ಬಿಟ್ಟಿದ್ದಾರೆ. ಈ ಕಥೆಯಲ್ಲಿ ಬರುವ  ಸಾಂಸಾರಿಕ ಬಿಕ್ಕಟ್ಟು ಸಂಘರ್ಷಣೆಗಳು ಭಾರತೀಯತೆ ಎಂಬ ಚೌಕಟ್ಟಿನ ಒಳಗೆ ಸೀಮಿತಗೊಂಡಿರುವುದರಿಂದ ಭಾರತದ ಯಾವ ಮೂಲೆಯಲ್ಲಿಯಾದರೂ ನೆಲೆಸಿರುವ ಭಾರತೀಯರ ಬದುಕಿಗೆ ಪ್ರಸ್ತುತವಾಗುತ್ತದೆ. ಈ ಕಾದಂಬರಿ ಇತರ ಭಾಷೆಗೆ ಅನುವಾದಗೊಂಡಾಗಲೂ ಅದು ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳುತ್ತದೆ.

“ಧರಣಿ ಮಂಡಳ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು”

ಎಂದು ಮೊದಲುಗೊಳ್ಳುವ ಪುಣ್ಯಕೋಟಿ ಗೋವಿನಹಾಡು ಈ ಕಥೆಗೆ ಮೌಲಿಕವಾದ ತಳಹದಿಯನ್ನು ನೀಡಿರುವುದಲ್ಲದೆ ಒಂದು ರೂಪಕವಾಗಿ ಕೂಡ ಪರಿಣಮಿಸಿದೆ. ಗೌಡಜ್ಜ ಅನಕ್ಷರಸ್ತ ಮುಗ್ಧನಾಗಿದ್ದರೂ ಅವನಿಗೊಂದು ಸಂಸ್ಕಾರ ಮತ್ತು  ವ್ಯವಹಾರ ಜ್ಞಾನವಿರುವುದನ್ನು ಕಾಣಬಹುದು. ಅವನು ಸ್ಥಳೀಯ ಶಾಲಾ ಮಾಸ್ತರರಿಂದ ಕೇಳಿದ ಪದ್ಯ;  

“ಹಾದಿ ಬೀದಿಯಲಿರುವ ಕಸದ ಹುಲ್ಲನು ಹುಡುಕಿ ಮೇದು ಮನೆಗೈದು ಅಮೃತವೀವೆ
ಅದನುಂಡು ನನಗೆರಡು ಬಗೆವ ಮಾನವ ಹೇಳು, ನೀನಾರಿಗಾದೆಯೋ ಎಲೆಮಾನವ

ಅವನ ನಂಬಿಕೆಗಳಿಗೆ ಭಧ್ರವಾದ ಬುನಾದಿಯನ್ನು ಒದಗಿಸುತ್ತದೆ. ಹಿಂದೂ ಧರ್ಮದಲ್ಲಿ ಅತೀ ಪೂಜನೀಯವಾದ ಗೋವಿನ ಬಗ್ಗೆ ಅವನ ಪ್ರೀತಿ ಗೌರವಗಳು ಇಮ್ಮಡಿಯಾಗುತ್ತವೆ. ಗೋವು ಗೌಡಜ್ಜನ ಭಾವನೆಗಳಲ್ಲಿ ಒಂದು ದೇವತೆಯಾಗಿ ಹಾಗೂ   ಅವನ ತಾಯಿಯಾಗಿ ಕಾಣತೊಡಗುತ್ತದೆ. ತನ್ನ ಬದುಕಿನ ಪ್ರತಿಯೊಂದು ಕ್ಷಣವನ್ನು ಗೋವಿನ ಏಳಿಗೆಗಾಗಿ ಮೀಸಲಿಡುತ್ತಾನೆ. ತನ್ನ ಮನೆಯಲ್ಲಿ ನಡೆದ ಕೆಲವು ಪವಾಡ ಸದೃಶ ಸನ್ನಿವೇಶಗಳು ಉದಾಹರಣೆಗೆ ಮೊಮ್ಮಗ ತಾಯಿಯ ಎದೆಹಾಲು ಇಲ್ಲದೆ ಕ್ಷೀಣವಾಗುತ್ತಿರುವಾಗ ಪುಣ್ಯಕೋಟಿ ಹಸುವಿನ ಮೊಲೆಗೆ ಮಗುವಿನ ಬಾಯಿಟ್ಟು ಹಾಲು ಚಿಮ್ಮಿಸುವ ಘಟನೆ ಅವನ ನಂಬಿಕೆಗಳನ್ನು ಮತ್ತಷ್ಟು ಧೃಢವಾಗಿಸುತ್ತದೆ

ಪಶುಗಳನ್ನು ಪಶುಗಳಂತೆ ಪರಿಗಣಿಸಿ ಗೌಡಜ್ಜನ ಭಾವನೆಗಳಿಗೆ ಸ್ಪಂದಿಸಲಾರದ ಮತ್ತು ಹಿಂದೂ ಧರ್ಮದ ಸೂಕ್ಷ್ಮತೆಗಳನ್ನು ಗ್ರಹಿಸಲಾರದ ಕೆಲವು ಸರ್ಕಾರಿ ಆಫೀಸರ್ಗಳು ಗೌಡಜ್ಜನಿಗೆ ಕೆಲವು ಬಿಕ್ಕಟ್ಟುಗಳನ್ನು ಮತ್ತು ಸವಾಲುಗಳನ್ನು ಒಡ್ಡುತ್ತಾರೆ . ಉದಾಹರಣೆಗೆ ಗೌಡಜ್ಜನ ಮಗ ಕೃಷ್ಣ ಮತ್ತು ಪುಣ್ಯಕೋಟಿ ಗೋವು ಇಬ್ಬರೂ ಕಿರುಬನ ಆಕ್ರಮಣಕ್ಕೆ ತುತ್ತಾಗಿ ಅವರ ಶವಸಂಸ್ಕಾರ ಮಾಡಿರುವ ಗೋಮಾಳದ ಮೇಲೆ ಸಾರ್ವಜನಿಕ ಮೋಟಾರು ರಸ್ತೆಯನ್ನು ನಿರ್ಮಿಸಲು ಸರ್ಕಾರ ಆದೇಶ ನೀಡಿದಾಗ ಮತ್ತು ಗೋಮಾಳ ಪ್ರದೇಶಗಳನ್ನು ಕೃಷಿಭೂಮಿಯಾಗಿ ಪರಿವರ್ತನೆ ಮಾಡಲು ಸರ್ಕಾರ ಮುಂದಾದಾಗ ಗೌಡಜ್ಜನ ನಂಬಿಕೆಗಳಿಗೆ ಕೊಡಲಿ ಪೆಟ್ಟು ಬೀಳುತ್ತದೆ. ಸರ್ಕಾರದ ಈ ಧೋರಣೆಗಳು ಮತ್ತು ಅದರ ಹಿನ್ನೆಲೆಗಳು ಅವನಿಗೆ ಅರ್ಥವಾಗುವುದಿಲ್ಲ. ಈ ರೀತಿಯಾದ ಕೆಲವು ಘಟನೆಗಳಿಂದ ಅವನಿಗೆ ನಿರಾಶೆಯುಂಟಾಗಿ ಮಾನಸಿಕ ಆಘಾತಗಳು ಉಂಟಾಗುತ್ತವೆ. ಇಷ್ಟಾದರೂ ಗೌಡಜ್ಜ “ಗೋವಾದಿ”ಯಾಗಿ ತನ್ನ ಸಕಲ ಪ್ರಯತ್ನಗಳಿಂದ ಪುಣ್ಯಕೋಟಿಗೆಂದೇ ಮೀಸಲಾದ ಒಂದು ದೇವಸ್ಥಾನವನ್ನು ಕಟ್ಟಿಸಿ ಸಂತೃಪ್ತನಾಗುತ್ತಾನೆ 

ಭೈರಪ್ಪನವರು ಕಥೆಯ ಉದ್ದಕ್ಕೂ ಪ್ರಗತಿ ಮತ್ತು ಜನರ ನಂಬಿಕೆ ಹಾಗೂ ಭಾವನೆಗಳ ನಡುವೆ ಸಂಭವಿಸುವ ತುಮುಲಗಳನ್ನು ಮತ್ತು ಘರ್ಷಣೆಗಳನ್ನು ಪರಿಣಾಮಕಾರಿಯಾಗಿ ಸೆರೆ ಹಿಡಿದಿಟ್ಟಿದ್ದಾರೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಸರ್ಕಾರ ತೆಗದುಕೊಳ್ಳುವ ಕೆಲವು ಕ್ರಮಗಳು ಒಬ್ಬ ವ್ಯಕ್ತಿಯ ಒಂದು ಆರ್ಥಿಕ ಪರಿಸ್ಥಿತಿಗೆ ಅಥವಾ ನಂಬಿಕೆ ಮತ್ತು ಭಾವನೆಗಳಿಗೆ ನಷ್ಟವನ್ನು ಉಂಟುಮಾಡಬಹುದು. ಹೀಗಾದಾಗ ಸರ್ಕಾರ ಸೂಕ್ತವಾದ ಪರಿಹಾರ ಧನವನ್ನು ನೀಡುತ್ತದೆ. ಇದರಿಂದ  ಆರ್ಥಿಕ ನಷ್ಟವನ್ನು ತುಂಬಬಹುದಾದರೂ ನಂಬಿಕೆ ಮತ್ತು ಭಾವನೆಗಳಿಗಾದ ನಷ್ಟವನ್ನು ತುಂಬಲು ಸಾಧ್ಯವೇ ? ಎಂಬ ಪ್ರಶ್ನೆ ಓದುಗರಲ್ಲಿ ಮೂಡುತ್ತದೆ.

ಗೌಡಜ್ಜನ ಮೊಮ್ಮಗ ಕಾಳಿಂಗ ತನ್ನ ವಂಶಸ್ಥರು ಪಾರಂಪಾರಿಕವಾಗಿ ನಡೆಸಿಕೊಂಡು ಬಂದಿರುವ ಪಶುಸಂಗೋಪನೆ ಮತ್ತು ಕೃಷಿ ಇವುಗಳ ಬಗ್ಗೆ ಹೆಚ್ಚಿನ ಶಿಕ್ಷಣಕ್ಕಾಗಿ ತನ್ನ ಹಳ್ಳಿಯನ್ನು ತೊರೆಯುತ್ತಾನೆ. ಗೌಡಜ್ಜನ ನಿರೀಕ್ಷೆಗಳನ್ನು ನಿರ್ಲಕ್ಷಿಸಿ ಉನ್ನತ ವ್ಯಾಸಂಗಕ್ಕೆಂದು ಅಮೇರಿಕಾಗೆ ತೆರಳುತ್ತಾನೆ. ಗೌಡಜ್ಜನ  ಸಂಸಾರದಲ್ಲಿ ಉಂಟಾಗುವ  ಏರುಪೇರುಗಳಿಂದ ನಿರಾಶೆ  ಆವರಿಸಿಕೊಂಡರೂ  ಗೌಡಜ್ಜ ಅವುಗಳನ್ನು ಎದುರಿಸಿ ಮುಂದೆ ಸಾಗುತ್ತಾನೆ. ತನ್ನದೇ ಆದ ನಂಬಿಕೆಗಳನ್ನು ಕಟ್ಟಿಕೊಂಡು ಅದನ್ನು ಉಳಿಸಿಕೊಂಡು ಒಬ್ಬ ಆದರ್ಶವಾದಿಯಾಗುತ್ತಾನೆ. ಭೈರಪ್ಪನವರು ಈ ಗೌಡಜ್ಜನ ಪಾತ್ರವನ್ನು ಲೌಕಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಒತ್ತು ನೀಡಿ ಬೆಳೆಸಿದ್ದಾರೆ ಎನ್ನಬಹುದು. ಎಲ್ಲ ಕಥೆಗಳಲ್ಲೂ ಸಮಾಜಕ್ಕೆ ಅಗತ್ಯವಿರುವ ಒಂದು ನೈತಿಕ  ಸಂದೇಶವನ್ನು ಓದುಗರು ನಿರೀಕ್ಷಿಸುವುದು ಸಹಜ. ಇದನ್ನು ಪೂರೈಸುವುದು ಲೇಖಕನ ಹೊಣೆ. ಈ ಕಥೆಯಲ್ಲಿ ಗೌಡಜ್ಜನಲ್ಲದೆ ಪುರೋಹಿತ ವೆಂಕಟರಮಣ ಕೂಡಾ ತನ್ನ ಸಂಪ್ರದಾಯ ಮತ್ತು ನಂಬಿಕೆಗಳಿಗೆ ಬದ್ಧನಾಗಿ ಅವುಗಳನ್ನು ತನ್ನ ಬದುಕಿನಲ್ಲಿ ಅನುಷ್ಠಾನ ಗೊಳಿಸುವ ಮೂಲಕ  ಓದುಗರ ನಿರೀಕ್ಷೆಗೆ ನಿಲುಕುತ್ತಾನೆ. 

‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯಲ್ಲಿ ಸೌಂದರ್ಯ ಅಥವಾ ಅಲಂಕಾರ ಶಾಸ್ತ್ರ (Aesthetics) ಅಡಗಿದೆಯೇ ಎಂಬ ವಿಚಾರ ಬಂದಾಗ ಕಥೆಯಲ್ಲಿನ ಹಲವು ಸೊಗಸಾದ ಭಿತ್ತಿಗಳು ನಮ್ಮ ನೆನಪಿನಲ್ಲಿ ಸುಳಿಯುತ್ತವೆ. ಗೌಡಜ್ಜನ ಮಗ ಕೃಷ್ಣೇಗೌಡ ಎತ್ತರವಾದ ಆಳು. ಹಣೆಗೆ ತಿಲಕವಿಟ್ಟು ಕೊರಳಿಗೆ ಬಿಲ್ಲ ಸರ  ಮತ್ತು ಬೆರಳುಗಳಿಗೆ ಮುದ್ರೆಯುಂಗುರ ತೊಟ್ಟು ಬಾಯಿತುಂಬಾ ವೀಳ್ಯಜಗಿದು ಕೆಂದುಟಿಗಳನ್ನು ಜೋಡಿಸಿ ಅರುಣಾದ್ರಿ ಬೆಟ್ಟದ ತಪ್ಪಲಿನ ಹಸಿರುಹುಲ್ಲುಗಾವಲಿನಲ್ಲಿ ಕೊಳಲುನ್ನುಊದಿದಾಗ ಪುಂಡ ಹಸುಗಳು ಅವನ ಸುತ್ತ ನೆರದು ಪಿಳ್ಳಂಗೋವಿಯ ಸ್ವರಕ್ಕೆ ಅವು ಮರುಳಾಗುವ ಚಿತ್ರಣ ನಮಗೆ ತಟ್ಟನೆ ನೀಲಿವರ್ಣದ ಶ್ಯಾಮ ಯಮುನೆಯ ತಟದಲ್ಲಿ ಮರದ ಕೆಳೆಗ ನಿಂತು ಹಸುಗಳ ನಡುವೆ ಕೊಳಲನ್ನೂದುವ ಹಲವಾರು ಖ್ಯಾತ  ಕುಂಚದ ಕಲೆಗಳನ್ನು ನೆನಪಿಗೆ ತರುತ್ತದೆ. 

ಭೈರಪ್ಪನವರು ತರುವ ಹಳ್ಳಿ ಚಿತ್ರಣಗಳು ಕಣ್ಣಿಗೆ ಕಟ್ಟಿದಂತೆ ಗೋಚರಿಸುತ್ತವೆ. ಮೇಲೆ ಪ್ರಸ್ತಾಪ ಮಾಡಿದ ಪ್ರಶಾಂತ ಚಿತ್ರಕ್ಕೆ ಅಭಿಮುಖವಾಗಿರುವ ರೌದ್ರ ಸನ್ನಿವೇಶವನ್ನು ಕೂಡ ಭೈರಪ್ಪನವರು ಚಿತ್ರಿಸಿದ್ದಾರೆ. ಮಾರಿಕೇರಿ ಮಾರಮ್ಮನ ಜಾತ್ರೆಯನ್ನು ವೀಕ್ಷಿಸಲು ಗೌಡಜ್ಜನ ಮೊಮ್ಮಗ ಕಾಳಿಂಗ, ಅವನ ಹೆಂಡತಿ ಹಿಲ್ಡಾ ಮತ್ತು ಮಗ ಜ್ಯಾಕ್ ಆಗಮಿಸುತ್ತಾರೆ. ಈ ಜಾತ್ರೆಯಲ್ಲಿ ಕೋಣನ ಬಲಿಕೊಡುವ ದೃಶ್ಯ ಬಹಳ ಪರಿಣಾಮಕಾರಿಯಾಗಿದೆ. ಮಾರಮ್ಮನ ಜಾತ್ರೆಯಲ್ಲಿ ಸೇರಿದ ಜನ ಜಂಗುಳಿ, ಉರಿಯುವ ಬಿಸಿಲು, ಮೈಗೆ ಮುಖಕ್ಕೆ ಕುಂಕುಮ ಲೇಪಿಸಿಕೊಂಡು ಬರುವ  ಭೀಮಕಾಯದ ಗಂಡಾಳು ಬೇವಿನ ಸೊಪ್ಪಿನಿಂದ ಬುಸುಗುಟ್ಟುತ್ತಿರುವ ಕೋಣಗಳ ಮೇಲೆ ನೀರು ಸಿಂಪಡಿಸಿ ಎಳೆದು ಹಿಡಿದ ಕೋಣಗಳ ಮೇಲೆ ತಮ್ಮಟೆಯ ರುದ್ರ ಬಡಿತಗಳ  ಹಿನ್ನೆಲೆಯಲ್ಲಿ  ಹರಿತವಾದ ಕೊಡಲಿಯಿಂದ  ಪ್ರಹಾರ ಮಾಡಿ ಒಂದೊಂದು ಕೋಣಗಳ ಶಿರಚ್ಛೇದನ ಮಾಡುತ್ತಾನೆ. ಅಲ್ಲಿ ರಕ್ತದ ಕಾಲುವೆ ಹರಿದು ಸತ್ತ ಕೋಣಗಳ ಶವದ ರಾಶಿಯೇ ಬೆಳದು ಹೋಗುವ ಒಂದು ಭೀಕರ ಸನ್ನಿವೇಶವನ್ನು ಭೈರಪ್ಪನವರು ಚಿತ್ರಿಸಿದ್ದಾರೆ. “ಡಿಯರ್ ಈ ಅನಾಗರಿಕ ಹಿಂಸೆಯ ದೃಶ್ಯ ಸಾಕು ನಡಿ ಮನೆಗೆ ಹೋಗೋಣ” ವೆಂದು  ಹಿಲ್ಡಾ ತನ್ನ ಗಂಡ ಕಾಳಿಂಗನಿಗೆ ಸೂಚಿಸುವಲ್ಲಿ ಈ ರೌದ್ರ ಸನ್ನಿವೇಶ ಕೊನೆಗೊಳ್ಳುತ್ತದೆ.

“ಗೋವಿನ ಸಂರಕ್ಷಣೆಗಾಗಿ  ಶಸ್ತ್ರಧಾರಣೆ  ಮಾಡಬೇಕು” “ಯಾರ ಮನೇಲಿ ಹಸು ದುಃಖ ಪಡುತ್ತೋ ಅವನು ನರಕಕ್ಕೆ ಹೋಗುತ್ತಾನೆ” ಎಂಬ ವಿಚಾರಗಳನ್ನು ತಂದು ಭೈರಪ್ಪನವರು ಗೋವು ಹಿಂದುಗಳಿಗೆ ಎಷ್ಟು ಪವಿತ್ರ ಎಂಬುದನ್ನು ಮನದಟ್ಟು ಮಾಡುತ್ತಾರೆ. ಕಥೆಯ ಮೊದಲರ್ಧದಲ್ಲಿ ಬೆಳಸಿದ ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತರಾರ್ಧದಲ್ಲಿ ತೀಕ್ಷ್ಣ ವಿಮರ್ಶೆಗೆ ಒಳಪಡಿಸುತ್ತಾರೆ.

ಕಥೆಯ ಎರಡನೆ ಭಾಗದಲ್ಲಿ ಅಮೇರಿಕಾದ ಸ್ನಾತಕೋತ್ತರ ಪದವಿ ಪಡೆದ ಕಾಳಿಂಗ ಪಾಶ್ಚಿಮಾತ್ಯ ಸಾಂಸ್ಕೃತಿಕ ಮೌಲ್ಯಗಳನ್ನು ತನ್ನದಾಗಿಸಿಕೊಂಡು ಹೆಂಡತಿ ಹಿಲ್ಡಾ ಜೊತೆ ತನ್ನ ಸ್ವಗ್ರಾಮಕ್ಕೆ ಮರಳುತ್ತಾನೆ. ಆಧುನಿಕ ಉತ್ತಮ ಕೃಷಿ ತಂತ್ರಜ್ಞಾನದ ಮೂಲಕ ಉತ್ಪನ್ನಗಳನ್ನು ಹೆಚ್ಚು ಗೊಳಿಸುವ ಕನಸುಗಳನ್ನು ಹೊತ್ತು ತರುತ್ತಾನೆ. ಅವನ ಬಾಲ್ಯಗೆಳಯ ವೆಂಕಟರಮಣ ಶಾಲಾ  ಮೇಷ್ಟ್ರಾಗಿ ಕಾಳೇನಹಳ್ಳಿಯಲ್ಲಿ ನೆಲೆಸಿರುತ್ತಾನೆ. ತಂದೆ ಜೋಯಿಸರಾದ್ದರಿಂದ ಸಂಸ್ಕೃತಪಾಠ ಕಲಿತು ಪುರೋಹಿತ್ಯದಲ್ಲಿ ತೊಡಗಿ, ಗೌಡಜ್ಜ ಕಟ್ಟಿಸಿದ ಪುಣ್ಯಕೋಟಿ ದೇವಸ್ಥಾನದಲ್ಲಿ ಅರ್ಚಕನಾಗಿರುತ್ತಾನೆ. ಹಿಲ್ಡಾ ಜೊತೆ ಮಾತಾನಾಡುವ ಮಟ್ಟಿಗೆ ಇಂಗ್ಲೀಷ್ ಬಲ್ಲವನಾಗಿರುತ್ತಾನೆ. ಅವನ ಮಡಿ ಮೈಲಿಗೆ ಮತ್ತು ಸಂಪ್ರದಾಯಿಕ ಚಿಂತನೆಗಳು,  ಕಾಳಿಂಗ ಮತ್ತು ಹಿಲ್ಡಾರ ವೈಚಾರಿಕ, ವೈಜ್ಞಾನಿಕ ಪಾಶ್ಚಿಮಾತ್ಯ ಆಲೋಚನೆಗಳ  ಜೊತೆ  ಆಗಾಗ್ಗೆ ಸಂಘರ್ಷಿಸುತ್ತವೆ. ಹಿಲ್ಡಾ ಒಂದು ಹೆಣ್ಣಾಗಿ ಗಂಡಸಿನಂತೆ ದುಡಿಯುವುದು, ಮೆಶೀನುಗಳಿಂದ ಹಾಲು ಕರೆಯುವುದು,  ಮಾಂಸಾಹಾರ ಅದರಲ್ಲೂ ಗೋಭಕ್ಷಣೆ ಮಾಡುವುದು ವೆಂಕಟರಮಣನನ್ನು ಕೆರಳಿಸುತ್ತವೆ. ವೆಂಕಟರಮಣ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನಾಗರಿಕ ಸಂಸ್ಕೃತಿಯೆಂದು ಪರಿಗಣಿಸುತ್ತಾನೆ. ಹಿಲ್ಡಾ ವೆಂಕಟರಮಣನ ನಂಬಿಕೆಗಳನ್ನು ವೈಜ್ಞಾನಿಕ ವಸ್ತುನಿಷ್ಠೆಗಳ ಮೂಲಕ ಪ್ರಶ್ನಿಸುತ್ತಾ ಹೋಗುತ್ತಾಳೆ. ಗೋವನ್ನು ಮನುಷ್ಯರ ಹಿತದೃಷ್ಟಿಗಿಂತ ಮೇಲಿಟ್ಟು ನೋಡುವ ಮಾನವೀಯತೆಯ ನಿಲುವನ್ನು ಅಣಕಿಸುತ್ತಾಳೆ. ಮಾಂಸಾಹಾರ ಪಾಪವಾದರೆ ಇತರ ಮಾಂಸಾಹಾರಗಳಾದ ಆಡು, ಕುರಿ, ಕೋಳಿ, ಮೀನುಗಳನ್ನು ತಿನ್ನುವ ಭಾರತೀಯರಿಗೆ ಗೋಮಾಂಸವಷ್ಟೇ ಏಕೆ ವರ್ಜ್ಯ ? ಎಂದು ವಾದಿಸುತ್ತಾಳೆ. ಈ ಇಬ್ಬರ ನಡುವಿನ ವಾಗ್ವಾದ ವೆಂಕಟರಮಣನನ್ನು ಎಷ್ಟರ  ಮಟ್ಟಿಗೆ ಕೆರಳಿಸುವುದೋ ಅಷ್ಟರ ಮಟ್ಟಿಗೆ ಹಿಲ್ಡಾಳನ್ನು ಕೆರಳಿಸುತ್ತದೆ. ಅದೇ ಸಿಟ್ಟಿನಲ್ಲಿ ಹಿಲ್ಡಾ ತನ್ನ ಸ್ವತ್ತಿನಲ್ಲಿರುವ ಪುಣ್ಯ ಕೋಟಿ ತಳಿಯ ಗೋವನ್ನು ತನ್ನ ಕೆಲಸದಾಳು ಜಮಾಲಾನ ಸಹಾಯದಿಂದ ಕೊಂದು ಗೋಮಾಂಸದ ಅಡುಗೆ ಮಾಡಿಸಿಕೊಂಡು ತಿಂದು ಬಿಡುತ್ತಾಳೆ. ಈ ವಿಚಾರ ಹಳ್ಳಿಯವರಿಗೆ ತಲುಪಿ ಕಾಳಿಂಗ ಮತ್ತು ಅವನ ಹೆಂಡತಿಗೆ ಯಾವ ರೀತಿ ಮತ್ತು ಎಷ್ಟರ ಮಟ್ಟಿಗೆ ಶಿಕ್ಷೆ ವಿಧಿಸಬೇಕು ಎಂಬ ವಿಚಾರದ ಬಗ್ಗೆ ಹಳ್ಳಿಜನಗಳು ಹೇಗೆ ಭಾವೋದ್ವೇಗದಿಂದ ಪ್ರತಿಕ್ರಿಯೆ ತೋರುತ್ತಾರೆ ಎಂಬುದನ್ನು ಭೈರಪ್ಪನವರು ಸ್ವಾರಸ್ಯಕರವಾಗಿ ಕಥೆಯಲ್ಲಿ ದಾಖಲಿಸಿದ್ದಾರೆ.  ಕಾನೂನಿನ ಬಗ್ಗೆ ತಿಳುವಳಿಕೆ ಇಲ್ಲದ  ಹಳ್ಳಿ ಜನಗಳ ಮುಗ್ಧತೆ, ಹಿಲ್ಡಾ ಮತ್ತು ಕಾಳಿಂಗನ ಮನೆಯಲ್ಲಿ ಬಂದೂಕ ವಿಟ್ಟುಕೊಂಡಿರುವುದರ ಬಗ್ಗೆ ಭಯ , ಅಸಹಾಯಕತೆ, ಆಕ್ರೋಶ ಈ ಭಾವನೆಗಳನ್ನೊಳಗೊಂಡ ಸನ್ನಿವೇಶದಲ್ಲಿ ಹಾಸ್ಯದ ಎಳೆಯ ಜೊತೆಗೆ ಗಂಭೀರ ಗ್ರಾಮೀಣ ರಾಜಕೀಯದ ಒಳನೋಟವನ್ನು ಕಾಣಬಹುದು.

ಕಾಳಿಂಗನ ತಾಯಿ ತಾಯವ್ವ, ತನ್ನ ಮಗ ಮತ್ತು ಬಿಳಿ ಸೊಸೆಯ ಧರ್ಮಹೀನ ಬದುಕನ್ನು ವೀಕ್ಷಿಸುತ್ತ ತನ್ನ ಗ್ರಾಮೀಣ ಸಮಾಜ ಅಂಗೀಕರಿಸಲಾಗದ ನಡೆ ನುಡಿಗಳನ್ನು  ಕಂಡಾಗ ಅವಳಿಗೆ  ತೀವ್ರ ಅಸಮಾಧಾನ ಉಂಟಾಗುತ್ತದೆ. ಮಗ ಮತ್ತು ಸೊಸೆಯ ಮೇಲಿನ ಪ್ರೀತಿ ಮತ್ತು ದ್ವೇಷ ಅವಳ ಅಂತರಂಗದಲ್ಲಿ ಭಾವನೆಗಳ ಅಲ್ಲೋಲ ಕಲ್ಲೋಲವನ್ನು ಉಂಟುಮಾಡುತ್ತದೆ. ತಾನು ಮೂಕಿಯಾದುದರಿಂದ ತನ್ನ ಭಾವನೆಗಳನ್ನು ವ್ಯಕ್ತಪಡಿಸಲಾಗದೆ ನಿಸ್ಸಹಾಯಕಳಾಗಿ ನಡೆಯುತ್ತಿರುವ ಅನಾಚಾರಗಳ ಬಗ್ಗೆ ಮೂಕ ಸಾಕ್ಷಿಯಾಗಿ ಪರಿತಪಿಸುವುದು ಕಥೆಗೆ ವಿಶೇಷವಾದ ಆಯಾಮವನ್ನು ತಂದು ಕೊಟ್ಟಿದೆ. ಪರಿವರ್ತನೆಯೆಂಬ  ಅನಿವಾರ್ಯ ಪ್ರವಾಹದಲ್ಲಿ ಹಳೆ ಮೌಲ್ಯಗಳು ಕೊಚ್ಚಿಕೊಂಡು ಹೋಗುವಾಗ ಅದನ್ನು ನಂಬಿಕೊಂಡವರ  ಖೇದವನ್ನು ಮಾತಿನಲ್ಲಿ ಕೂಡ ಅಭಿವ್ಯಕಪಡಿಸಲು ಸಾಧ್ಯವಿಲ್ಲದಿರುವಾಗ ಮೂಕಿ ತಾಯವ್ವ ಹೇಗೆ ತನ್ನ ಅಸಮ್ಮತಿಯನ್ನು ತಿಳಿಸಬಲ್ಲಳು? ಹಲವಾರು ಅನ್ಯಾಯಗಳ ಬಗ್ಗೆ ಮೌನವಾಗಿ ಪ್ರತಿಭಟನೆ ನಡೆಸುವ ಗಾಂಧಿ  ತತ್ವಕ್ಕೆ ತಾಯವ್ವನ ಮೂಕಸಾಕ್ಷಿ ಪ್ರತೀಕವಾದಂತಿದೆ.

ಕಥೆಯ ಕೊನೆಯಲ್ಲಿ ಹಿಲ್ಡಾ ಕೆಲವು ವಯಸ್ಸಾದ ಗೋವುಗಳನ್ನು  ಕೆಲವು ದಲ್ಲಾಳಿಗಳ ಮೂಲಕ  ಕಸಾಯಿಖಾನೆಗೆ ಮಾರಿಕೊಳ್ಳುತ್ತಾಳೆ. ಕಥೆಯಲ್ಲಿನ ಈ ಹಂತದಲ್ಲಿ ಕಾಳಿಂಗ ತನ್ನ ತಂದೆ, ತಾಯಿ, ಅಜ್ಜ ಅಜ್ಜಿಯರನ್ನು ಕಳೆದುಕೊಂಡಿರುತ್ತಾನೆ. ಹಳ್ಳಿಗರ ಆಕ್ರೋಶಕ್ಕೆ ತುತ್ತಾಗಿ ಅವರ ಮತ್ತು ತನ್ನ ಆಪ್ತಗೆಳೆಯ ವೆಂಕಟರಮಣನ ಸ್ನೇಹ ವಿಶ್ವಾಸಗಳನ್ನೂ ಕಳೆದುಕೊಳ್ಳುತ್ತಾನೆ. ಅವನ ಪ್ರೀತಿಯ ಮಡದಿ  ಹಿಲ್ಡಾ ಅಮೆರಿಕಾಗೆ ವಾಪಸ್ಸು ತೆರಳುವ ಮಾತುಗಳನ್ನಾಡುತ್ತಾಳೆ. ಈ ಆಘಾತಗಳಲ್ಲದೆ ಕಾಳಿಂಗ ತನಗೆ ಮತ್ತು ತನ್ನ ಮಗಳು ಎಸ್ತರಿಗೆ ಕೆಚ್ಚಲಿನ ಹಾಲುಣಿಸಿ ಬದುಕಿಸಿದ ಪುಣ್ಯಕೋಟಿ ಹಸುಗಳನ್ನು  ಕಸಾಯಿಖಾನೆಗೆ ಕಳೆದುಕೊಂಡು ತಬ್ಬಲಿಯಾಗುತ್ತಾನೆ! ಅವನಿಗೆ ಹಿಲ್ಡಾ ಹಸುಗಳನ್ನು ಮಾರಿರುವ ವಿಚಾರ ತಿಳಿದಕೊಡಲೆ ಗೋವುಗಳನ್ನರಸಿಕೊಂಡು ಅವು ಮುಂಬೈನಲ್ಲಿ ಇರಬಹುದೆಂಬ ಸುಳಿ ಸಿಕ್ಕಾಗ ಅಲ್ಲಿಯ ಕಸಾಯಿಖಾನೆಗೆ ತ್ವರಿತದಲ್ಲಿ ತೆರಳುತ್ತಾನೆ. ಅಲ್ಲಿ ನೆರೆದ ನೂರಾರು ಗೋವುಗಳಲ್ಲಿ ತನ್ನ ಪುಣ್ಯಕೋಟಿ ಗೋವುಗಳನ್ನು ಗುರುತಿಸಲು ಎಷ್ಟು ಪ್ರಯತ್ನಿಸಿದರೂ ಅವನಿಗೆ ಸಾಧ್ಯವಾಗುವುದಿಲ್ಲ. ಈ ಒಂದು ಹಂತದಲ್ಲಿ ‘ತಬ್ಬಲಿಯು ನೀನಾದೆ ಮಗನೆ’ ಎಂಬ ಕಥೆಯ ನಿಜವಾದ ಅರ್ಥ ಓದುಗರ ಕಲ್ಪನೆಗೆ ದೊರೆಯುತ್ತದೆ .

ಭೈರಪ್ಪನವರ  ಕೆಲವು ಕೃತಿಗಳಲ್ಲಿ  ಕಥೆಗೆ ಒಂದು ನಿರ್ದಿಷ್ಟವಾದ ಅಂತ್ಯವಿಲ್ಲ ಎನ್ನುವ ವಿಚಾರವನ್ನು ಗಮನಿಸಬಹುದು. ಇದನ್ನು ಭೈರಪ್ಪನವರೇ ಒಂದು ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ   ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯು ಈ ಹಿನ್ನೆಲೆಯಲ್ಲಿ ಹೊರತಾಗಿಲ್ಲ ಎನ್ನಬಹುದು. ಕಥೆಯಲ್ಲಿ ಹಿಲ್ಡಾ ಕೊನೆಗೆ ಭಾರತದಲ್ಲೇ ಉಳಿದಳೇ ಅಥವಾ ಅಮೆರಿಕಾಗೆ ವಾಪಸ್ಸು ತೆರಳಿದಳೇ ? ಕಾಳಿಂಗ ತಾನು ಕಂಡ ಕೃಷಿ ಅಭಿವೃದ್ಧಿ ಕನಸುಗಳು ನನಸಾದವೇ ? ಕುಪಿಸ್ಥರಾಗಿದ್ದ ಹಳ್ಳಿಯವರು ಹಿಲ್ಡಾ ಮತ್ತು ಕಾಳಿಂಗನನ್ನು ಮುಂದಕ್ಕೆ  ಸಹಿಸಿಕೊಂಡರೆ? ಈ ವಿಚಾರಗಳನ್ನು ಭೈರಪ್ಪನವರು ಓದುಗರಿಗೆ ಬಿಟ್ಟಿರುತ್ತಾರೆ. ಲೇಖಕರು ತಮ್ಮ ನಿರ್ಣಾಯಕ ಅಭಿಪ್ರಾಯಗಳನ್ನು ಓದುಗರ ಮೇಲೆ ಹೇರದೆ ಓದುಗರೇ ತಮ್ಮ ಅನುಭವದ ಮೇಲೆ ಅದನ್ನು ಕಂಡುಕೊಳ್ಳಲು ಅನುವುಮಾಡಿಕೊಡುವುದು ಉತ್ತಮ ಲೇಖಕನ ಜವಾಬ್ದಾರಿ.

ಭೈರಪ್ಪನವರೇ ಹೇಳುವಂತೆ ಅವರ ಕಾದಂಬರಿಗಳನ್ನು ಅರ್ಥಮಾಡಿಕೊಳ್ಳಲು ಓದುಗರಿಗೆ ಭಾರತೀಯತೆಯ ಅರಿವಿರಬೇಕು. ಭಾರತೀಯ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳ ಪರಿಚಯವಿರಬೇಕು. ಈ ಕಾದಂಬರಿಯಲ್ಲಿ ಆ ಭಾರತೀಯತೆಯ ಎರಡು ಚಹರೆ ಗಳನ್ನು ಕಾಣಬಹುದು. ಮೊದಲನೆಯದಾಗಿ ಪುರೋಹಿತ ವೆಂಕಟರಮಣನ ಮೂಲಕ ಅಭಿವಕ್ತಗೊಳ್ಳುವ ವೇದ, ಶಾಸ್ತ್ರ, ಪುರಾಣಗಳನ್ನು ಆಧರಿಸಿದ  ಸಾಂಪ್ರದಾಯಿಕ  ಭಾರತೀಯತೆಯನ್ನು ಕಾಣಬಹುದು.   ಹಾಗೆಯೇ  ಗೌಡಜ್ಜನ ಕಲ್ಪನೆಗೆ ಮತ್ತು  ಅರಿವಿಗೆ ಎಟುಕಬಹುದಾದ ಸರಳವಾದ ಜಾನಪದ ನೀತಿ ಬೋಧಕ  ಪುಣ್ಯಕೋಟಿ ಮತ್ತು ಇತರ ದಂತಕಥೆ  ಹಾಡುಗಳಿಂದ ಮೂಡುವ ಭಾರತೀಯತೆಯನ್ನೂ ಕಾಣಬಹುದು. 

ಭೈರಪ್ಪನವರು ಈ ಕಥೆಯನ್ನು ಬರೆದು ಐವತ್ತು ವರ್ಷಗಳಾಗಿವೆ. ನಮ್ಮ ಗ್ರಾಮೀಣ ಜನ ಜೀವನದಲ್ಲಿ ಈ ಕಳೆದ ಐದು ದಶಕಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿರಬಹುದು. ಈಗ ಕೃಷಿ ಕ್ಷೇತ್ರ ಮತ್ತು ಹಾಲು ಉತ್ಪಾದನೆ ಕೈಗಾರಿಕೆಗಳಲ್ಲಿ  ಅಭಿವೃದ್ಧಿಯನ್ನು ಕಂಡಿದ್ದೇವೆ. ಜಾಗತೀಕರಣದ  ಹಿನ್ನೆಲೆಯಲ್ಲಿ ಮೊಬೈಲ್ ಫೋನುಗಳ ಮೂಲಕ ಜನರ ಪರಸ್ಪರ ಸಂಪರ್ಕ ಸುಧಾರಿಸಿದೆ. ಸಹಕಾರಿ ಸಂಘಗಳು ಗ್ರಾಮೀಣ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಇತರ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಹೀಗೆ ಸಾಕಷ್ಟು  ಪ್ರಗತಿಪರ ಮತ್ತು ಆರ್ಥಿಕ ಬದಲಾವಣೆಗಳನ್ನು ಕಂಡಿದ್ದರೂ ನಗರಗಳಿಗೆ ಹೋಲಿಸಿದರೆ ನಮ್ಮ ಗ್ರಾಮೀಣ ಸಾಮಾಜಿಕ ಜೀವನ, ನಂಬಿಕೆ ಮತ್ತು ಸಂಪ್ರದಾಯಗಳಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುತ್ತಿಲ್ಲ. ಕಾಲ್ಪನಿಕವಾಗಿ ಅದೇ ಕಾಳಿಂಗ ಮತ್ತು ಹಿಲ್ಡಾ ಈಗಿನ ಕಾಲಕ್ಕೆ ಬಂದು ಕಾಳೇನಹಳ್ಳಿಯಲ್ಲಿ ನೆಲೆಸಿದರೆ ಅವರು ಭೈರಪ್ಪನವರ ಕಥೆಯಲ್ಲಿ ಸೃಷ್ಟಿಸಿದ ಬಿಕ್ಕಟ್ಟುಗಳನ್ನು ಎದುರಿಸುವ ಸಾಧ್ಯತೆಗಳಿವೆ. ಅನ್ಯ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಹಿಂದಿಗಿಂತ ಇಂದು ಹೆಚ್ಚು ಅಸಹಿಷ್ಣುತೆ ಕಂಡುಬರುತ್ತಿದೆ. ಇದು ಸರಿಯೇ? ಅಥವಾ ತಪ್ಪೇ ? ಎಂದು ಚರ್ಚಿಸುವುದು ಈ ಬರವಣಿಗೆಯ ಮಿತಿಯ ಹೊರಗಿದೆ. ಅಂದ ಹಾಗೆ ‘ತಬ್ಬಲಿಯು ನೀನಾದೆ ಮಗನೆ’ ಕಥೆಯನ್ನು ಹಿಂದೆ ಕಾರ್ನಾಡರು ಚಲನ ಚಿತ್ರ ಮಾಡಿ, ಆ ಚಿತ್ರದಲ್ಲಿ ನಾಸಿರುದ್ದೀನ್ ಷಾ ಅವರು ಪುರೋಹಿತನಾದ ವೆಂಕಟರಮಣನ ಪಾತ್ರವನ್ನು ಉತ್ತಮವಾಗಿ ನಟಿಸಿ ಈ ಪಾತ್ರಕ್ಕೆ ಜೀವಕಳೆ  ತುಂಬಿದ್ದರು. ಈಗಿನ ಪರಿಸ್ಥಿಯಲ್ಲಿ ಒಬ್ಬ ಮುಸ್ಲಿಂ ನಟ ಪುರೋಹಿತನ ಪಾತ್ರ ವಹಿಸುವುದು ಊಹಿಸಿಲಾರದ ಸಂಗತಿ!

ಇನ್ನೊಂದು ವಿಚಾರ, ಭೈರಪ್ಪನವರು ಗೌಡಜ್ಜನ ಮೂಲಕ ಎತ್ತಿ ಹಿಡಿಯುವ ಗೋಸಂರಕ್ಷಣಾ ಕಾರ್ಯವನ್ನು ಇಂದು ಆಳುತ್ತಿರುವ ಸರ್ಕಾರವೇ ತನ್ನ  ವಶಕ್ಕೆ ತೆಗೆದುಕೊಂಡಿದೆ. ಧಾರ್ಮಿಕ ನಂಬಿಕೆಗಳ ಹೊರಗೆ ಪರಿಸರ ಹಿತದೃಷ್ಟಿಯಿಂದ ನೋಡಿದಾಗ ಗೋಮಾಂಸ ಭಕ್ಷಣೆಯಿಂದ ಹೆಚ್ಚು ಪರಿಸರ ಮಾಲಿನ್ಯ ಒದಗಬಹುದು ಎಂಬ ವಿಚಾರ ವೈಜ್ಞಾನಿಕವಾಗಿ  ನಮಗೀಗ ತಿಳಿದಿದೆ. ಸಸ್ಯಾಹಾರ ತರುವ ಅನೇಕ ಅರೋಗ್ಯ ಅನುಕೂಲತೆಗಳು ಬೆಳಕಿಗೆ ಬಂದಿವೆ.  ಈ ರೀತಿಯ ಸಸ್ಯಾಹಾರ ಪ್ರಚೋದನೆ ಅನ್ಯಧರ್ಮಿಗಳಿಗೂ ಮತ್ತು ವಿಚಾರವಂತರಿಗೂ ನಿಲಕುವ ತರ್ಕಬದ್ಧವಾದ ಆಲೋಚನೆ ಎನ್ನಬಹುದು.  ಸಸ್ಯಾಹಾರವನ್ನು  ಪಾಶ್ಚಿಮಾತ್ಯ ದೇಶಗಳಲ್ಲಿ ಕೂಡ ಪ್ರಚೋದಿಸಲಾಗಿದೆ

ಭಾರತಕ್ಕೆ ಭೇಟಿ ನೀಡುತ್ತಿರುವ ಅಸಂಖ್ಯಾತ ಪಾಶ್ಚಿಮಾತ್ಯರಿಗೆ ನಮ್ಮ ಸಂಸ್ಕೃತಿಯ ಸೂಕ್ಷ್ಮತೆಗಳ ಅರಿವಿದೆ. ಅನಿವಾಸಿ ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಯ ಮಧ್ಯೆ ಬದುಕುತ್ತಾ ಅಲ್ಲಿಯ  ಉತ್ತಮ ಮೌಲ್ಯಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಾಗತೀಕರಣದ ಹಿನ್ನೆಲೆಯಲ್ಲಿ ‘ತಬ್ಬಲಿಯು ನೀನಾದೆ ಮಗನೆ’ ಕಥೆಯನ್ನು ಮತ್ತೆ ಓದಿದಾಗ ಈ ಐದು ದಶಕಗಳಲ್ಲಿ ನಮ್ಮ ಸಮಾಜ ಎಷ್ಟರ ಮಟ್ಟಿಗೆ ಮತ್ತು ಯಾವ ರೀತಿ ಬದಲಾಗಿದೆ ಎಂಬುದನ್ನು ಓದುಗರು ಗ್ರಹಿಸಬಹುದು, ಹಾಗೆಯೇ ಆ ವಿಚಾರಗಳ ಬಗ್ಗೆ ಚಿಂತಿಸಬಹುದು. 

ಒಂದು ಕಥೆ ಜನರ ಭಾವನೆಗಳನ್ನು ಮತ್ತು ಹೃದಯವನ್ನು ಮುಟ್ಟಿ ಉತ್ಕೃಷ್ಟವಾದ ಕಥೆ ಎಂದು ಪರಿಗಣಿಸಲು ಕೆಲವು ಅಂಶಗಳನ್ನು ಒಳಗೊಂಡಿರಬೇಕು. ಕಥೆಯಲ್ಲಿ ಮನುಷ್ಯರ ನಡುವಿನ ಭಾವನೆಗಳ ಏರುಪೇರುಗಳಿರಬೇಕು. ಸುಖ ದುಃಖ, ಹತಾಶೆ ಭರವಸೆ ಮತ್ತು ದ್ವೇಷ ಪ್ರೀತಿ ಮುಂತಾದ ರಸಗಳಿರಬೇಕು. ನಮ್ಮ ಬದುಕಿನಲ್ಲಿ ಕಾಣುವ ಸಾಮಾನ್ಯ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿಂತನೆಗಳಿರಬೇಕು. ಕಥೆಯಲ್ಲಿನ ಸನ್ನಿವೇಶಗಳು ನಮ್ಮ ದಿನನಿತ್ಯ ಬದುಕಿಗೆ ಪ್ರಸ್ತುತವಾಗಿರಬೇಕು, ಕಾಲ್ಪನಿಕ ಪ್ರಪಂಚದಿಂದ ದೂರವಿರಬೇಕು. ಓದುಗರಿಗೆ ಒಂದು ಕ್ಷೇತ್ರದ ಭೌಗೋಳಿಕ ಸಾಂಸ್ಕೃತಿಕ ಮತ್ತು ಕಥೆ ನಡೆಯುವ ಕಾಲ ಘಟ್ಟದ ಪರಿಚಯ ಮಾಡಿಕೊಡಬೇಕು. ಸಾಂಪ್ರದಾಯಿಕ ನಿಲುವನ್ನು  ಮತ್ತು ಸೈಧಾಂತಿಕ ತತ್ವಗಳನ್ನು ವಿಮರ್ಶೆಗೆ ಒಳಪಡಿಸಬೇಕು. ಕಥೆಯಲ್ಲಿ ಆಳ ವಿಸ್ತಾರಗಳಿರಬೇಕು. ಈ ಅಂಶಗಳಿದ್ದಲ್ಲಿ ಅದು ಉತ್ತಮವಾದ ಕಥೆಯಾಗಬಲ್ಲದು. ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯು ಈ ಎಲ್ಲ ಮೇಲಿನ ಅಂಶಗಳನ್ನು ಒಳಗೊಂಡಿದೆ ಎನ್ನಬಹುದು.  

ಫೋಟೋ ಕೃಪೆ :  ಡಾ. ಜಿ. ಎಸ್. ಶಿವಪ್ರಸಾದ್