
ಕೆಲವು ತಿಂಗಳ ಹಿಂದೆ ಡಾ. ಎಸ್.ಎಲ್. ಭೈರಪ್ಪನವರ ಬರಹಗಳನ್ನು ಕುರಿತು ಲಂಡನ್ನಿನ ನೆಹರು ಕೇಂದ್ರದಲ್ಲಿ ಒಂದು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದ್ದು ಆ ಸಂದರ್ಭದಲ್ಲಿ ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ‘ ಕಾದಂಬರಿಯನ್ನು ಕುರಿತು ಮಾತನಾಡುವ ಅಪೂರ್ವ ಅವಕಾಶ ನನಗೆ ಒದಗಿ ಬಂದಿತು. ನಾನು ಆಗ ಆಡಿದ ಮಾತುಗಳನ್ನು ಈಗ ಬರವಣಿಗೆಯ ಮೂಲಕ ದಾಖಲಿಸುತ್ತಿದ್ದೇನೆ. ಭೈರಪ್ಪನವರು ಸುಮಾರು ಐವತ್ತು ವರ್ಷಗಳ ಹಿಂದೆ ( ೧೯೬೮) ಬರೆದ ಈ ಕಾದಂಬರಿಯನ್ನು ಈಗ ಪುನರಾವಲೋಕಿಸಲು ಕೆಲವು ಕಾರಣಗಳಿವೆ. ಈ ಕಥೆಯಲ್ಲಿ ಪೂರ್ವ ಮತ್ತು ಪಶ್ಚಿಮಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಭೈರಪ್ಪನವರು ವಿಮರ್ಶೆ ಮಾಡಿದ್ದಾರೆ. ಎರಡು ಸಂಸ್ಕೃತಿಗಳ ನಡುವೆ ಸಂಭವಿಸುವ ಘರ್ಷಣೆಗಳನ್ನು ಕಥೆಯಲ್ಲಿ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ನಮ್ಮ ರಾಜಕೀಯ ಮತ್ತು ಸಾಮಾಜಿಕ ಪರಿಸರದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿದೆ. ಈ ಹಿನ್ನೆಲೆ ಗಳಲ್ಲಿ ಈ ಕಥೆಯನ್ನು ಮರುಪರಿಶೀಲಿಸಲಾಗಿದೆ.

ನಾನು ಹಿಂದೆ ವಿದ್ಯಾರ್ಥಿಯಾಗಿದ್ದಾಗ ಈ ಕಾದಂಬರಿಯನ್ನು ಓದಿದ್ದು, ಇತ್ತೀಚಿಗೆ ಮತ್ತೆ ಈ ಕಾದಂಬರಿಯನ್ನು ಓದಿದಾಗ ಅದರಲ್ಲಿನ ಕೆಲವು ವಿಶೇಷ ಅಂಶಗಳನ್ನು ನಾನು ಗ್ರಹಿಸಿದ್ದೇನೆ. ಕಾದಂಬರಿಯಲ್ಲಿ ಭೈರಪ್ಪನವರು ತರುವ ಮುಖ್ಯ ಪಾತ್ರವಾದ ಕಾಳಿಂಗ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ವ್ಯಾಸಂಗಕ್ಕೆಂದು ಅಮೇರಿಕಾಗೆ ತೆರಳಿ ಅಲ್ಲಿ ಕೆಲಕಾಲ ವಾಸವಾಗಿದ್ದು ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ತನ್ನದಾಗಿಸಿಕೊಂಡು ಅಲ್ಲಿಯ ಬಿಳಿ ಹೆಂಗಸು ಹಿಲ್ಡಾಳನ್ನು ಪ್ರೀತಿಸಿ ಮದುವೆಯಾಗಿ ಸಂಸಾರ ಸಮೇತ ಭಾರತಕ್ಕೆ ಮರಳಿ ಬರುತ್ತಾನೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿಪರ ಮತ್ತು ಆಧುನಿಕ ಯೋಜನೆಗಳನ್ನು ಭಾರತದಲ್ಲಿ ಅನುಷ್ಠಾನಗೊಳಿಸುವ ಸುಂದರ ಕನಸುಗಳನ್ನು ಅವನು ಮತ್ತು ಹಿಲ್ಡಾ ಹೊತ್ತು ಕಾಳೇನಹಳ್ಳಿಗೆ ಧಾವಿಸುತ್ತಾರೆ. ಆನಂತರ ಇಲ್ಲಿ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಗಳನ್ನು ಸಾಮಾನ್ಯ ಓದುಗರು ತಮ್ಮ ಭಾರತೀಯತೆಯ ದೃಷ್ಟಿ ಕೋನದಿಂದ ಅರಿತುಕೊಳ್ಳಬಹುದು. ಕಳೆದ ಎರಡು ದಶಕಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ ನನಗೆ ಭಾರತೀಯತೆ ಮತ್ತು ಪಾಶ್ಚಿಮಾತ್ಯ ಮೌಲ್ಯ ಈ ಎರಡೂ ದೃಷ್ಟಿ ಕೋನಗಳು ಲಭ್ಯವಾಗಿರುವುದರಿಂದ ನಾನು ‘ತಬ್ಬಲಿಯು ನೀನಾದೆ ಮಗನೆ’ ಮರುವಿಮರ್ಶೆಗೆ ಕೈ ಹಾಕಿದ್ದೇನೆ.

ಈ ಕಥೆಯಲ್ಲಿ ನಿರ್ದಿಷ್ಟವಾದ ಎರಡು ಅಧ್ಯಾಯಗಳನ್ನು ಗುರುತಿಸಬಹುದು . ಕಥೆಯ ಮೊದಲ ಅಧ್ಯಾಯದಲ್ಲಿ ಕಾಳೇನಹಳ್ಳಿ ಮುಖ್ಯಸ್ಥ ಕಾಳಿಂಗ ಗೌಡಜ್ಜನ ಮುಗ್ಧತೆ, ಆಶಯಗಳು, ಹತಾಶೆ ಅವನ ಧಾರ್ಮಿಕ ನಂಬುಗೆಗಳು ಮತ್ತು ಆಘಾತಗಳನ್ನು ಕಾಣಬಹುದು. ಎರಡನೇ ಅಧ್ಯಾಯದಲ್ಲಿ ಗೌಡಜ್ಜ ತೀರಿದ ಬಳಿಕ ಅವನ ಮೊಮ್ಮಗ ಕಾಳಿಂಗ ಮತ್ತು ಬಿಳಿ ಸೊಸೆ ಹಿಲ್ಡಾರ ಅನುಭವಗಳು, ಸಂಕಟಗಳು ಹಾಗೂ ಎರಡು ಸಂಸ್ಕೃತಿಗಳ ನಡುವೆ ಇರುವ ಕಂದರಗಳು ಓದುಗರ ಕಲ್ಪನೆಗೆ ನಿಲುಕುತ್ತವೆ . ಭೈರಪ್ಪನವರು ಮುನ್ನುಡಿಯಲ್ಲಿ ಹೇಳುವಂತೆ ಈ ಕಥೆಯ ಹಿನ್ನೆಲೆಯಾದ ಕಾಳೇನಹಳ್ಳಿ ಭಾರತದ ಯಾವುದೇ ಕ್ಷೇತ್ರವಾಗಿರಬಹುದು. ಈ ಹಳ್ಳಿ ಯಾವ ಜಿಲ್ಲೆಗೆ ಅಥವಾ ಪ್ರದೇಶಕ್ಕೆ ಸೇರಿರಬಹುದು ಎಂಬ ವಿಚಾರವನ್ನು ಓದುಗರ ಊಹೆಗೆ ಬಿಟ್ಟಿದ್ದಾರೆ. ಈ ಕಥೆಯಲ್ಲಿ ಬರುವ ಸಾಂಸಾರಿಕ ಬಿಕ್ಕಟ್ಟು ಸಂಘರ್ಷಣೆಗಳು ಭಾರತೀಯತೆ ಎಂಬ ಚೌಕಟ್ಟಿನ ಒಳಗೆ ಸೀಮಿತಗೊಂಡಿರುವುದರಿಂದ ಭಾರತದ ಯಾವ ಮೂಲೆಯಲ್ಲಿಯಾದರೂ ನೆಲೆಸಿರುವ ಭಾರತೀಯರ ಬದುಕಿಗೆ ಪ್ರಸ್ತುತವಾಗುತ್ತದೆ. ಈ ಕಾದಂಬರಿ ಇತರ ಭಾಷೆಗೆ ಅನುವಾದಗೊಂಡಾಗಲೂ ಅದು ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳುತ್ತದೆ.
“ಧರಣಿ ಮಂಡಳ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು”
ಎಂದು ಮೊದಲುಗೊಳ್ಳುವ ಪುಣ್ಯಕೋಟಿ ಗೋವಿನಹಾಡು ಈ ಕಥೆಗೆ ಮೌಲಿಕವಾದ ತಳಹದಿಯನ್ನು ನೀಡಿರುವುದಲ್ಲದೆ ಒಂದು ರೂಪಕವಾಗಿ ಕೂಡ ಪರಿಣಮಿಸಿದೆ. ಗೌಡಜ್ಜ ಅನಕ್ಷರಸ್ತ ಮುಗ್ಧನಾಗಿದ್ದರೂ ಅವನಿಗೊಂದು ಸಂಸ್ಕಾರ ಮತ್ತು ವ್ಯವಹಾರ ಜ್ಞಾನವಿರುವುದನ್ನು ಕಾಣಬಹುದು. ಅವನು ಸ್ಥಳೀಯ ಶಾಲಾ ಮಾಸ್ತರರಿಂದ ಕೇಳಿದ ಪದ್ಯ;
“ಹಾದಿ ಬೀದಿಯಲಿರುವ ಕಸದ ಹುಲ್ಲನು ಹುಡುಕಿ ಮೇದು ಮನೆಗೈದು ಅಮೃತವೀವೆ
ಅದನುಂಡು ನನಗೆರಡು ಬಗೆವ ಮಾನವ ಹೇಳು, ನೀನಾರಿಗಾದೆಯೋ ಎಲೆಮಾನವ “
ಅವನ ನಂಬಿಕೆಗಳಿಗೆ ಭಧ್ರವಾದ ಬುನಾದಿಯನ್ನು ಒದಗಿಸುತ್ತದೆ. ಹಿಂದೂ ಧರ್ಮದಲ್ಲಿ ಅತೀ ಪೂಜನೀಯವಾದ ಗೋವಿನ ಬಗ್ಗೆ ಅವನ ಪ್ರೀತಿ ಗೌರವಗಳು ಇಮ್ಮಡಿಯಾಗುತ್ತವೆ. ಗೋವು ಗೌಡಜ್ಜನ ಭಾವನೆಗಳಲ್ಲಿ ಒಂದು ದೇವತೆಯಾಗಿ ಹಾಗೂ ಅವನ ತಾಯಿಯಾಗಿ ಕಾಣತೊಡಗುತ್ತದೆ. ತನ್ನ ಬದುಕಿನ ಪ್ರತಿಯೊಂದು ಕ್ಷಣವನ್ನು ಗೋವಿನ ಏಳಿಗೆಗಾಗಿ ಮೀಸಲಿಡುತ್ತಾನೆ. ತನ್ನ ಮನೆಯಲ್ಲಿ ನಡೆದ ಕೆಲವು ಪವಾಡ ಸದೃಶ ಸನ್ನಿವೇಶಗಳು ಉದಾಹರಣೆಗೆ ಮೊಮ್ಮಗ ತಾಯಿಯ ಎದೆಹಾಲು ಇಲ್ಲದೆ ಕ್ಷೀಣವಾಗುತ್ತಿರುವಾಗ ಪುಣ್ಯಕೋಟಿ ಹಸುವಿನ ಮೊಲೆಗೆ ಮಗುವಿನ ಬಾಯಿಟ್ಟು ಹಾಲು ಚಿಮ್ಮಿಸುವ ಘಟನೆ ಅವನ ನಂಬಿಕೆಗಳನ್ನು ಮತ್ತಷ್ಟು ಧೃಢವಾಗಿಸುತ್ತದೆ
ಪಶುಗಳನ್ನು ಪಶುಗಳಂತೆ ಪರಿಗಣಿಸಿ ಗೌಡಜ್ಜನ ಭಾವನೆಗಳಿಗೆ ಸ್ಪಂದಿಸಲಾರದ ಮತ್ತು ಹಿಂದೂ ಧರ್ಮದ ಸೂಕ್ಷ್ಮತೆಗಳನ್ನು ಗ್ರಹಿಸಲಾರದ ಕೆಲವು ಸರ್ಕಾರಿ ಆಫೀಸರ್ಗಳು ಗೌಡಜ್ಜನಿಗೆ ಕೆಲವು ಬಿಕ್ಕಟ್ಟುಗಳನ್ನು ಮತ್ತು ಸವಾಲುಗಳನ್ನು ಒಡ್ಡುತ್ತಾರೆ . ಉದಾಹರಣೆಗೆ ಗೌಡಜ್ಜನ ಮಗ ಕೃಷ್ಣ ಮತ್ತು ಪುಣ್ಯಕೋಟಿ ಗೋವು ಇಬ್ಬರೂ ಕಿರುಬನ ಆಕ್ರಮಣಕ್ಕೆ ತುತ್ತಾಗಿ ಅವರ ಶವಸಂಸ್ಕಾರ ಮಾಡಿರುವ ಗೋಮಾಳದ ಮೇಲೆ ಸಾರ್ವಜನಿಕ ಮೋಟಾರು ರಸ್ತೆಯನ್ನು ನಿರ್ಮಿಸಲು ಸರ್ಕಾರ ಆದೇಶ ನೀಡಿದಾಗ ಮತ್ತು ಗೋಮಾಳ ಪ್ರದೇಶಗಳನ್ನು ಕೃಷಿಭೂಮಿಯಾಗಿ ಪರಿವರ್ತನೆ ಮಾಡಲು ಸರ್ಕಾರ ಮುಂದಾದಾಗ ಗೌಡಜ್ಜನ ನಂಬಿಕೆಗಳಿಗೆ ಕೊಡಲಿ ಪೆಟ್ಟು ಬೀಳುತ್ತದೆ. ಸರ್ಕಾರದ ಈ ಧೋರಣೆಗಳು ಮತ್ತು ಅದರ ಹಿನ್ನೆಲೆಗಳು ಅವನಿಗೆ ಅರ್ಥವಾಗುವುದಿಲ್ಲ. ಈ ರೀತಿಯಾದ ಕೆಲವು ಘಟನೆಗಳಿಂದ ಅವನಿಗೆ ನಿರಾಶೆಯುಂಟಾಗಿ ಮಾನಸಿಕ ಆಘಾತಗಳು ಉಂಟಾಗುತ್ತವೆ. ಇಷ್ಟಾದರೂ ಗೌಡಜ್ಜ “ಗೋವಾದಿ”ಯಾಗಿ ತನ್ನ ಸಕಲ ಪ್ರಯತ್ನಗಳಿಂದ ಪುಣ್ಯಕೋಟಿಗೆಂದೇ ಮೀಸಲಾದ ಒಂದು ದೇವಸ್ಥಾನವನ್ನು ಕಟ್ಟಿಸಿ ಸಂತೃಪ್ತನಾಗುತ್ತಾನೆ
ಭೈರಪ್ಪನವರು ಕಥೆಯ ಉದ್ದಕ್ಕೂ ಪ್ರಗತಿ ಮತ್ತು ಜನರ ನಂಬಿಕೆ ಹಾಗೂ ಭಾವನೆಗಳ ನಡುವೆ ಸಂಭವಿಸುವ ತುಮುಲಗಳನ್ನು ಮತ್ತು ಘರ್ಷಣೆಗಳನ್ನು ಪರಿಣಾಮಕಾರಿಯಾಗಿ ಸೆರೆ ಹಿಡಿದಿಟ್ಟಿದ್ದಾರೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಸರ್ಕಾರ ತೆಗದುಕೊಳ್ಳುವ ಕೆಲವು ಕ್ರಮಗಳು ಒಬ್ಬ ವ್ಯಕ್ತಿಯ ಒಂದು ಆರ್ಥಿಕ ಪರಿಸ್ಥಿತಿಗೆ ಅಥವಾ ನಂಬಿಕೆ ಮತ್ತು ಭಾವನೆಗಳಿಗೆ ನಷ್ಟವನ್ನು ಉಂಟುಮಾಡಬಹುದು. ಹೀಗಾದಾಗ ಸರ್ಕಾರ ಸೂಕ್ತವಾದ ಪರಿಹಾರ ಧನವನ್ನು ನೀಡುತ್ತದೆ. ಇದರಿಂದ ಆರ್ಥಿಕ ನಷ್ಟವನ್ನು ತುಂಬಬಹುದಾದರೂ ನಂಬಿಕೆ ಮತ್ತು ಭಾವನೆಗಳಿಗಾದ ನಷ್ಟವನ್ನು ತುಂಬಲು ಸಾಧ್ಯವೇ ? ಎಂಬ ಪ್ರಶ್ನೆ ಓದುಗರಲ್ಲಿ ಮೂಡುತ್ತದೆ.
ಗೌಡಜ್ಜನ ಮೊಮ್ಮಗ ಕಾಳಿಂಗ ತನ್ನ ವಂಶಸ್ಥರು ಪಾರಂಪಾರಿಕವಾಗಿ ನಡೆಸಿಕೊಂಡು ಬಂದಿರುವ ಪಶುಸಂಗೋಪನೆ ಮತ್ತು ಕೃಷಿ ಇವುಗಳ ಬಗ್ಗೆ ಹೆಚ್ಚಿನ ಶಿಕ್ಷಣಕ್ಕಾಗಿ ತನ್ನ ಹಳ್ಳಿಯನ್ನು ತೊರೆಯುತ್ತಾನೆ. ಗೌಡಜ್ಜನ ನಿರೀಕ್ಷೆಗಳನ್ನು ನಿರ್ಲಕ್ಷಿಸಿ ಉನ್ನತ ವ್ಯಾಸಂಗಕ್ಕೆಂದು ಅಮೇರಿಕಾಗೆ ತೆರಳುತ್ತಾನೆ. ಗೌಡಜ್ಜನ ಸಂಸಾರದಲ್ಲಿ ಉಂಟಾಗುವ ಏರುಪೇರುಗಳಿಂದ ನಿರಾಶೆ ಆವರಿಸಿಕೊಂಡರೂ ಗೌಡಜ್ಜ ಅವುಗಳನ್ನು ಎದುರಿಸಿ ಮುಂದೆ ಸಾಗುತ್ತಾನೆ. ತನ್ನದೇ ಆದ ನಂಬಿಕೆಗಳನ್ನು ಕಟ್ಟಿಕೊಂಡು ಅದನ್ನು ಉಳಿಸಿಕೊಂಡು ಒಬ್ಬ ಆದರ್ಶವಾದಿಯಾಗುತ್ತಾನೆ. ಭೈರಪ್ಪನವರು ಈ ಗೌಡಜ್ಜನ ಪಾತ್ರವನ್ನು ಲೌಕಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಒತ್ತು ನೀಡಿ ಬೆಳೆಸಿದ್ದಾರೆ ಎನ್ನಬಹುದು. ಎಲ್ಲ ಕಥೆಗಳಲ್ಲೂ ಸಮಾಜಕ್ಕೆ ಅಗತ್ಯವಿರುವ ಒಂದು ನೈತಿಕ ಸಂದೇಶವನ್ನು ಓದುಗರು ನಿರೀಕ್ಷಿಸುವುದು ಸಹಜ. ಇದನ್ನು ಪೂರೈಸುವುದು ಲೇಖಕನ ಹೊಣೆ. ಈ ಕಥೆಯಲ್ಲಿ ಗೌಡಜ್ಜನಲ್ಲದೆ ಪುರೋಹಿತ ವೆಂಕಟರಮಣ ಕೂಡಾ ತನ್ನ ಸಂಪ್ರದಾಯ ಮತ್ತು ನಂಬಿಕೆಗಳಿಗೆ ಬದ್ಧನಾಗಿ ಅವುಗಳನ್ನು ತನ್ನ ಬದುಕಿನಲ್ಲಿ ಅನುಷ್ಠಾನ ಗೊಳಿಸುವ ಮೂಲಕ ಓದುಗರ ನಿರೀಕ್ಷೆಗೆ ನಿಲುಕುತ್ತಾನೆ.
‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯಲ್ಲಿ ಸೌಂದರ್ಯ ಅಥವಾ ಅಲಂಕಾರ ಶಾಸ್ತ್ರ (Aesthetics) ಅಡಗಿದೆಯೇ ಎಂಬ ವಿಚಾರ ಬಂದಾಗ ಕಥೆಯಲ್ಲಿನ ಹಲವು ಸೊಗಸಾದ ಭಿತ್ತಿಗಳು ನಮ್ಮ ನೆನಪಿನಲ್ಲಿ ಸುಳಿಯುತ್ತವೆ. ಗೌಡಜ್ಜನ ಮಗ ಕೃಷ್ಣೇಗೌಡ ಎತ್ತರವಾದ ಆಳು. ಹಣೆಗೆ ತಿಲಕವಿಟ್ಟು ಕೊರಳಿಗೆ ಬಿಲ್ಲ ಸರ ಮತ್ತು ಬೆರಳುಗಳಿಗೆ ಮುದ್ರೆಯುಂಗುರ ತೊಟ್ಟು ಬಾಯಿತುಂಬಾ ವೀಳ್ಯಜಗಿದು ಕೆಂದುಟಿಗಳನ್ನು ಜೋಡಿಸಿ ಅರುಣಾದ್ರಿ ಬೆಟ್ಟದ ತಪ್ಪಲಿನ ಹಸಿರುಹುಲ್ಲುಗಾವಲಿನಲ್ಲಿ ಕೊಳಲುನ್ನುಊದಿದಾಗ ಪುಂಡ ಹಸುಗಳು ಅವನ ಸುತ್ತ ನೆರದು ಪಿಳ್ಳಂಗೋವಿಯ ಸ್ವರಕ್ಕೆ ಅವು ಮರುಳಾಗುವ ಚಿತ್ರಣ ನಮಗೆ ತಟ್ಟನೆ ನೀಲಿವರ್ಣದ ಶ್ಯಾಮ ಯಮುನೆಯ ತಟದಲ್ಲಿ ಮರದ ಕೆಳೆಗ ನಿಂತು ಹಸುಗಳ ನಡುವೆ ಕೊಳಲನ್ನೂದುವ ಹಲವಾರು ಖ್ಯಾತ ಕುಂಚದ ಕಲೆಗಳನ್ನು ನೆನಪಿಗೆ ತರುತ್ತದೆ.
ಭೈರಪ್ಪನವರು ತರುವ ಹಳ್ಳಿ ಚಿತ್ರಣಗಳು ಕಣ್ಣಿಗೆ ಕಟ್ಟಿದಂತೆ ಗೋಚರಿಸುತ್ತವೆ. ಮೇಲೆ ಪ್ರಸ್ತಾಪ ಮಾಡಿದ ಪ್ರಶಾಂತ ಚಿತ್ರಕ್ಕೆ ಅಭಿಮುಖವಾಗಿರುವ ರೌದ್ರ ಸನ್ನಿವೇಶವನ್ನು ಕೂಡ ಭೈರಪ್ಪನವರು ಚಿತ್ರಿಸಿದ್ದಾರೆ. ಮಾರಿಕೇರಿ ಮಾರಮ್ಮನ ಜಾತ್ರೆಯನ್ನು ವೀಕ್ಷಿಸಲು ಗೌಡಜ್ಜನ ಮೊಮ್ಮಗ ಕಾಳಿಂಗ, ಅವನ ಹೆಂಡತಿ ಹಿಲ್ಡಾ ಮತ್ತು ಮಗ ಜ್ಯಾಕ್ ಆಗಮಿಸುತ್ತಾರೆ. ಈ ಜಾತ್ರೆಯಲ್ಲಿ ಕೋಣನ ಬಲಿಕೊಡುವ ದೃಶ್ಯ ಬಹಳ ಪರಿಣಾಮಕಾರಿಯಾಗಿದೆ. ಮಾರಮ್ಮನ ಜಾತ್ರೆಯಲ್ಲಿ ಸೇರಿದ ಜನ ಜಂಗುಳಿ, ಉರಿಯುವ ಬಿಸಿಲು, ಮೈಗೆ ಮುಖಕ್ಕೆ ಕುಂಕುಮ ಲೇಪಿಸಿಕೊಂಡು ಬರುವ ಭೀಮಕಾಯದ ಗಂಡಾಳು ಬೇವಿನ ಸೊಪ್ಪಿನಿಂದ ಬುಸುಗುಟ್ಟುತ್ತಿರುವ ಕೋಣಗಳ ಮೇಲೆ ನೀರು ಸಿಂಪಡಿಸಿ ಎಳೆದು ಹಿಡಿದ ಕೋಣಗಳ ಮೇಲೆ ತಮ್ಮಟೆಯ ರುದ್ರ ಬಡಿತಗಳ ಹಿನ್ನೆಲೆಯಲ್ಲಿ ಹರಿತವಾದ ಕೊಡಲಿಯಿಂದ ಪ್ರಹಾರ ಮಾಡಿ ಒಂದೊಂದು ಕೋಣಗಳ ಶಿರಚ್ಛೇದನ ಮಾಡುತ್ತಾನೆ. ಅಲ್ಲಿ ರಕ್ತದ ಕಾಲುವೆ ಹರಿದು ಸತ್ತ ಕೋಣಗಳ ಶವದ ರಾಶಿಯೇ ಬೆಳದು ಹೋಗುವ ಒಂದು ಭೀಕರ ಸನ್ನಿವೇಶವನ್ನು ಭೈರಪ್ಪನವರು ಚಿತ್ರಿಸಿದ್ದಾರೆ. “ಡಿಯರ್ ಈ ಅನಾಗರಿಕ ಹಿಂಸೆಯ ದೃಶ್ಯ ಸಾಕು ನಡಿ ಮನೆಗೆ ಹೋಗೋಣ” ವೆಂದು ಹಿಲ್ಡಾ ತನ್ನ ಗಂಡ ಕಾಳಿಂಗನಿಗೆ ಸೂಚಿಸುವಲ್ಲಿ ಈ ರೌದ್ರ ಸನ್ನಿವೇಶ ಕೊನೆಗೊಳ್ಳುತ್ತದೆ.
“ಗೋವಿನ ಸಂರಕ್ಷಣೆಗಾಗಿ ಶಸ್ತ್ರಧಾರಣೆ ಮಾಡಬೇಕು” “ಯಾರ ಮನೇಲಿ ಹಸು ದುಃಖ ಪಡುತ್ತೋ ಅವನು ನರಕಕ್ಕೆ ಹೋಗುತ್ತಾನೆ” ಎಂಬ ವಿಚಾರಗಳನ್ನು ತಂದು ಭೈರಪ್ಪನವರು ಗೋವು ಹಿಂದುಗಳಿಗೆ ಎಷ್ಟು ಪವಿತ್ರ ಎಂಬುದನ್ನು ಮನದಟ್ಟು ಮಾಡುತ್ತಾರೆ. ಕಥೆಯ ಮೊದಲರ್ಧದಲ್ಲಿ ಬೆಳಸಿದ ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತರಾರ್ಧದಲ್ಲಿ ತೀಕ್ಷ್ಣ ವಿಮರ್ಶೆಗೆ ಒಳಪಡಿಸುತ್ತಾರೆ.
ಕಥೆಯ ಎರಡನೆ ಭಾಗದಲ್ಲಿ ಅಮೇರಿಕಾದ ಸ್ನಾತಕೋತ್ತರ ಪದವಿ ಪಡೆದ ಕಾಳಿಂಗ ಪಾಶ್ಚಿಮಾತ್ಯ ಸಾಂಸ್ಕೃತಿಕ ಮೌಲ್ಯಗಳನ್ನು ತನ್ನದಾಗಿಸಿಕೊಂಡು ಹೆಂಡತಿ ಹಿಲ್ಡಾ ಜೊತೆ ತನ್ನ ಸ್ವಗ್ರಾಮಕ್ಕೆ ಮರಳುತ್ತಾನೆ. ಆಧುನಿಕ ಉತ್ತಮ ಕೃಷಿ ತಂತ್ರಜ್ಞಾನದ ಮೂಲಕ ಉತ್ಪನ್ನಗಳನ್ನು ಹೆಚ್ಚು ಗೊಳಿಸುವ ಕನಸುಗಳನ್ನು ಹೊತ್ತು ತರುತ್ತಾನೆ. ಅವನ ಬಾಲ್ಯಗೆಳಯ ವೆಂಕಟರಮಣ ಶಾಲಾ ಮೇಷ್ಟ್ರಾಗಿ ಕಾಳೇನಹಳ್ಳಿಯಲ್ಲಿ ನೆಲೆಸಿರುತ್ತಾನೆ. ತಂದೆ ಜೋಯಿಸರಾದ್ದರಿಂದ ಸಂಸ್ಕೃತಪಾಠ ಕಲಿತು ಪುರೋಹಿತ್ಯದಲ್ಲಿ ತೊಡಗಿ, ಗೌಡಜ್ಜ ಕಟ್ಟಿಸಿದ ಪುಣ್ಯಕೋಟಿ ದೇವಸ್ಥಾನದಲ್ಲಿ ಅರ್ಚಕನಾಗಿರುತ್ತಾನೆ. ಹಿಲ್ಡಾ ಜೊತೆ ಮಾತಾನಾಡುವ ಮಟ್ಟಿಗೆ ಇಂಗ್ಲೀಷ್ ಬಲ್ಲವನಾಗಿರುತ್ತಾನೆ. ಅವನ ಮಡಿ ಮೈಲಿಗೆ ಮತ್ತು ಸಂಪ್ರದಾಯಿಕ ಚಿಂತನೆಗಳು, ಕಾಳಿಂಗ ಮತ್ತು ಹಿಲ್ಡಾರ ವೈಚಾರಿಕ, ವೈಜ್ಞಾನಿಕ ಪಾಶ್ಚಿಮಾತ್ಯ ಆಲೋಚನೆಗಳ ಜೊತೆ ಆಗಾಗ್ಗೆ ಸಂಘರ್ಷಿಸುತ್ತವೆ. ಹಿಲ್ಡಾ ಒಂದು ಹೆಣ್ಣಾಗಿ ಗಂಡಸಿನಂತೆ ದುಡಿಯುವುದು, ಮೆಶೀನುಗಳಿಂದ ಹಾಲು ಕರೆಯುವುದು, ಮಾಂಸಾಹಾರ ಅದರಲ್ಲೂ ಗೋಭಕ್ಷಣೆ ಮಾಡುವುದು ವೆಂಕಟರಮಣನನ್ನು ಕೆರಳಿಸುತ್ತವೆ. ವೆಂಕಟರಮಣ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನಾಗರಿಕ ಸಂಸ್ಕೃತಿಯೆಂದು ಪರಿಗಣಿಸುತ್ತಾನೆ. ಹಿಲ್ಡಾ ವೆಂಕಟರಮಣನ ನಂಬಿಕೆಗಳನ್ನು ವೈಜ್ಞಾನಿಕ ವಸ್ತುನಿಷ್ಠೆಗಳ ಮೂಲಕ ಪ್ರಶ್ನಿಸುತ್ತಾ ಹೋಗುತ್ತಾಳೆ. ಗೋವನ್ನು ಮನುಷ್ಯರ ಹಿತದೃಷ್ಟಿಗಿಂತ ಮೇಲಿಟ್ಟು ನೋಡುವ ಮಾನವೀಯತೆಯ ನಿಲುವನ್ನು ಅಣಕಿಸುತ್ತಾಳೆ. ಮಾಂಸಾಹಾರ ಪಾಪವಾದರೆ ಇತರ ಮಾಂಸಾಹಾರಗಳಾದ ಆಡು, ಕುರಿ, ಕೋಳಿ, ಮೀನುಗಳನ್ನು ತಿನ್ನುವ ಭಾರತೀಯರಿಗೆ ಗೋಮಾಂಸವಷ್ಟೇ ಏಕೆ ವರ್ಜ್ಯ ? ಎಂದು ವಾದಿಸುತ್ತಾಳೆ. ಈ ಇಬ್ಬರ ನಡುವಿನ ವಾಗ್ವಾದ ವೆಂಕಟರಮಣನನ್ನು ಎಷ್ಟರ ಮಟ್ಟಿಗೆ ಕೆರಳಿಸುವುದೋ ಅಷ್ಟರ ಮಟ್ಟಿಗೆ ಹಿಲ್ಡಾಳನ್ನು ಕೆರಳಿಸುತ್ತದೆ. ಅದೇ ಸಿಟ್ಟಿನಲ್ಲಿ ಹಿಲ್ಡಾ ತನ್ನ ಸ್ವತ್ತಿನಲ್ಲಿರುವ ಪುಣ್ಯ ಕೋಟಿ ತಳಿಯ ಗೋವನ್ನು ತನ್ನ ಕೆಲಸದಾಳು ಜಮಾಲಾನ ಸಹಾಯದಿಂದ ಕೊಂದು ಗೋಮಾಂಸದ ಅಡುಗೆ ಮಾಡಿಸಿಕೊಂಡು ತಿಂದು ಬಿಡುತ್ತಾಳೆ. ಈ ವಿಚಾರ ಹಳ್ಳಿಯವರಿಗೆ ತಲುಪಿ ಕಾಳಿಂಗ ಮತ್ತು ಅವನ ಹೆಂಡತಿಗೆ ಯಾವ ರೀತಿ ಮತ್ತು ಎಷ್ಟರ ಮಟ್ಟಿಗೆ ಶಿಕ್ಷೆ ವಿಧಿಸಬೇಕು ಎಂಬ ವಿಚಾರದ ಬಗ್ಗೆ ಹಳ್ಳಿಜನಗಳು ಹೇಗೆ ಭಾವೋದ್ವೇಗದಿಂದ ಪ್ರತಿಕ್ರಿಯೆ ತೋರುತ್ತಾರೆ ಎಂಬುದನ್ನು ಭೈರಪ್ಪನವರು ಸ್ವಾರಸ್ಯಕರವಾಗಿ ಕಥೆಯಲ್ಲಿ ದಾಖಲಿಸಿದ್ದಾರೆ. ಕಾನೂನಿನ ಬಗ್ಗೆ ತಿಳುವಳಿಕೆ ಇಲ್ಲದ ಹಳ್ಳಿ ಜನಗಳ ಮುಗ್ಧತೆ, ಹಿಲ್ಡಾ ಮತ್ತು ಕಾಳಿಂಗನ ಮನೆಯಲ್ಲಿ ಬಂದೂಕ ವಿಟ್ಟುಕೊಂಡಿರುವುದರ ಬಗ್ಗೆ ಭಯ , ಅಸಹಾಯಕತೆ, ಆಕ್ರೋಶ ಈ ಭಾವನೆಗಳನ್ನೊಳಗೊಂಡ ಸನ್ನಿವೇಶದಲ್ಲಿ ಹಾಸ್ಯದ ಎಳೆಯ ಜೊತೆಗೆ ಗಂಭೀರ ಗ್ರಾಮೀಣ ರಾಜಕೀಯದ ಒಳನೋಟವನ್ನು ಕಾಣಬಹುದು.
ಕಾಳಿಂಗನ ತಾಯಿ ತಾಯವ್ವ, ತನ್ನ ಮಗ ಮತ್ತು ಬಿಳಿ ಸೊಸೆಯ ಧರ್ಮಹೀನ ಬದುಕನ್ನು ವೀಕ್ಷಿಸುತ್ತ ತನ್ನ ಗ್ರಾಮೀಣ ಸಮಾಜ ಅಂಗೀಕರಿಸಲಾಗದ ನಡೆ ನುಡಿಗಳನ್ನು ಕಂಡಾಗ ಅವಳಿಗೆ ತೀವ್ರ ಅಸಮಾಧಾನ ಉಂಟಾಗುತ್ತದೆ. ಮಗ ಮತ್ತು ಸೊಸೆಯ ಮೇಲಿನ ಪ್ರೀತಿ ಮತ್ತು ದ್ವೇಷ ಅವಳ ಅಂತರಂಗದಲ್ಲಿ ಭಾವನೆಗಳ ಅಲ್ಲೋಲ ಕಲ್ಲೋಲವನ್ನು ಉಂಟುಮಾಡುತ್ತದೆ. ತಾನು ಮೂಕಿಯಾದುದರಿಂದ ತನ್ನ ಭಾವನೆಗಳನ್ನು ವ್ಯಕ್ತಪಡಿಸಲಾಗದೆ ನಿಸ್ಸಹಾಯಕಳಾಗಿ ನಡೆಯುತ್ತಿರುವ ಅನಾಚಾರಗಳ ಬಗ್ಗೆ ಮೂಕ ಸಾಕ್ಷಿಯಾಗಿ ಪರಿತಪಿಸುವುದು ಕಥೆಗೆ ವಿಶೇಷವಾದ ಆಯಾಮವನ್ನು ತಂದು ಕೊಟ್ಟಿದೆ. ಪರಿವರ್ತನೆಯೆಂಬ ಅನಿವಾರ್ಯ ಪ್ರವಾಹದಲ್ಲಿ ಹಳೆ ಮೌಲ್ಯಗಳು ಕೊಚ್ಚಿಕೊಂಡು ಹೋಗುವಾಗ ಅದನ್ನು ನಂಬಿಕೊಂಡವರ ಖೇದವನ್ನು ಮಾತಿನಲ್ಲಿ ಕೂಡ ಅಭಿವ್ಯಕಪಡಿಸಲು ಸಾಧ್ಯವಿಲ್ಲದಿರುವಾಗ ಮೂಕಿ ತಾಯವ್ವ ಹೇಗೆ ತನ್ನ ಅಸಮ್ಮತಿಯನ್ನು ತಿಳಿಸಬಲ್ಲಳು? ಹಲವಾರು ಅನ್ಯಾಯಗಳ ಬಗ್ಗೆ ಮೌನವಾಗಿ ಪ್ರತಿಭಟನೆ ನಡೆಸುವ ಗಾಂಧಿ ತತ್ವಕ್ಕೆ ತಾಯವ್ವನ ಮೂಕಸಾಕ್ಷಿ ಪ್ರತೀಕವಾದಂತಿದೆ.
ಕಥೆಯ ಕೊನೆಯಲ್ಲಿ ಹಿಲ್ಡಾ ಕೆಲವು ವಯಸ್ಸಾದ ಗೋವುಗಳನ್ನು ಕೆಲವು ದಲ್ಲಾಳಿಗಳ ಮೂಲಕ ಕಸಾಯಿಖಾನೆಗೆ ಮಾರಿಕೊಳ್ಳುತ್ತಾಳೆ. ಕಥೆಯಲ್ಲಿನ ಈ ಹಂತದಲ್ಲಿ ಕಾಳಿಂಗ ತನ್ನ ತಂದೆ, ತಾಯಿ, ಅಜ್ಜ ಅಜ್ಜಿಯರನ್ನು ಕಳೆದುಕೊಂಡಿರುತ್ತಾನೆ. ಹಳ್ಳಿಗರ ಆಕ್ರೋಶಕ್ಕೆ ತುತ್ತಾಗಿ ಅವರ ಮತ್ತು ತನ್ನ ಆಪ್ತಗೆಳೆಯ ವೆಂಕಟರಮಣನ ಸ್ನೇಹ ವಿಶ್ವಾಸಗಳನ್ನೂ ಕಳೆದುಕೊಳ್ಳುತ್ತಾನೆ. ಅವನ ಪ್ರೀತಿಯ ಮಡದಿ ಹಿಲ್ಡಾ ಅಮೆರಿಕಾಗೆ ವಾಪಸ್ಸು ತೆರಳುವ ಮಾತುಗಳನ್ನಾಡುತ್ತಾಳೆ. ಈ ಆಘಾತಗಳಲ್ಲದೆ ಕಾಳಿಂಗ ತನಗೆ ಮತ್ತು ತನ್ನ ಮಗಳು ಎಸ್ತರಿಗೆ ಕೆಚ್ಚಲಿನ ಹಾಲುಣಿಸಿ ಬದುಕಿಸಿದ ಪುಣ್ಯಕೋಟಿ ಹಸುಗಳನ್ನು ಕಸಾಯಿಖಾನೆಗೆ ಕಳೆದುಕೊಂಡು ತಬ್ಬಲಿಯಾಗುತ್ತಾನೆ! ಅವನಿಗೆ ಹಿಲ್ಡಾ ಹಸುಗಳನ್ನು ಮಾರಿರುವ ವಿಚಾರ ತಿಳಿದಕೊಡಲೆ ಗೋವುಗಳನ್ನರಸಿಕೊಂಡು ಅವು ಮುಂಬೈನಲ್ಲಿ ಇರಬಹುದೆಂಬ ಸುಳಿ ಸಿಕ್ಕಾಗ ಅಲ್ಲಿಯ ಕಸಾಯಿಖಾನೆಗೆ ತ್ವರಿತದಲ್ಲಿ ತೆರಳುತ್ತಾನೆ. ಅಲ್ಲಿ ನೆರೆದ ನೂರಾರು ಗೋವುಗಳಲ್ಲಿ ತನ್ನ ಪುಣ್ಯಕೋಟಿ ಗೋವುಗಳನ್ನು ಗುರುತಿಸಲು ಎಷ್ಟು ಪ್ರಯತ್ನಿಸಿದರೂ ಅವನಿಗೆ ಸಾಧ್ಯವಾಗುವುದಿಲ್ಲ. ಈ ಒಂದು ಹಂತದಲ್ಲಿ ‘ತಬ್ಬಲಿಯು ನೀನಾದೆ ಮಗನೆ’ ಎಂಬ ಕಥೆಯ ನಿಜವಾದ ಅರ್ಥ ಓದುಗರ ಕಲ್ಪನೆಗೆ ದೊರೆಯುತ್ತದೆ .
ಭೈರಪ್ಪನವರ ಕೆಲವು ಕೃತಿಗಳಲ್ಲಿ ಕಥೆಗೆ ಒಂದು ನಿರ್ದಿಷ್ಟವಾದ ಅಂತ್ಯವಿಲ್ಲ ಎನ್ನುವ ವಿಚಾರವನ್ನು ಗಮನಿಸಬಹುದು. ಇದನ್ನು ಭೈರಪ್ಪನವರೇ ಒಂದು ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯು ಈ ಹಿನ್ನೆಲೆಯಲ್ಲಿ ಹೊರತಾಗಿಲ್ಲ ಎನ್ನಬಹುದು. ಕಥೆಯಲ್ಲಿ ಹಿಲ್ಡಾ ಕೊನೆಗೆ ಭಾರತದಲ್ಲೇ ಉಳಿದಳೇ ಅಥವಾ ಅಮೆರಿಕಾಗೆ ವಾಪಸ್ಸು ತೆರಳಿದಳೇ ? ಕಾಳಿಂಗ ತಾನು ಕಂಡ ಕೃಷಿ ಅಭಿವೃದ್ಧಿ ಕನಸುಗಳು ನನಸಾದವೇ ? ಕುಪಿಸ್ಥರಾಗಿದ್ದ ಹಳ್ಳಿಯವರು ಹಿಲ್ಡಾ ಮತ್ತು ಕಾಳಿಂಗನನ್ನು ಮುಂದಕ್ಕೆ ಸಹಿಸಿಕೊಂಡರೆ? ಈ ವಿಚಾರಗಳನ್ನು ಭೈರಪ್ಪನವರು ಓದುಗರಿಗೆ ಬಿಟ್ಟಿರುತ್ತಾರೆ. ಲೇಖಕರು ತಮ್ಮ ನಿರ್ಣಾಯಕ ಅಭಿಪ್ರಾಯಗಳನ್ನು ಓದುಗರ ಮೇಲೆ ಹೇರದೆ ಓದುಗರೇ ತಮ್ಮ ಅನುಭವದ ಮೇಲೆ ಅದನ್ನು ಕಂಡುಕೊಳ್ಳಲು ಅನುವುಮಾಡಿಕೊಡುವುದು ಉತ್ತಮ ಲೇಖಕನ ಜವಾಬ್ದಾರಿ.
ಭೈರಪ್ಪನವರೇ ಹೇಳುವಂತೆ ಅವರ ಕಾದಂಬರಿಗಳನ್ನು ಅರ್ಥಮಾಡಿಕೊಳ್ಳಲು ಓದುಗರಿಗೆ ಭಾರತೀಯತೆಯ ಅರಿವಿರಬೇಕು. ಭಾರತೀಯ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳ ಪರಿಚಯವಿರಬೇಕು. ಈ ಕಾದಂಬರಿಯಲ್ಲಿ ಆ ಭಾರತೀಯತೆಯ ಎರಡು ಚಹರೆ ಗಳನ್ನು ಕಾಣಬಹುದು. ಮೊದಲನೆಯದಾಗಿ ಪುರೋಹಿತ ವೆಂಕಟರಮಣನ ಮೂಲಕ ಅಭಿವಕ್ತಗೊಳ್ಳುವ ವೇದ, ಶಾಸ್ತ್ರ, ಪುರಾಣಗಳನ್ನು ಆಧರಿಸಿದ ಸಾಂಪ್ರದಾಯಿಕ ಭಾರತೀಯತೆಯನ್ನು ಕಾಣಬಹುದು. ಹಾಗೆಯೇ ಗೌಡಜ್ಜನ ಕಲ್ಪನೆಗೆ ಮತ್ತು ಅರಿವಿಗೆ ಎಟುಕಬಹುದಾದ ಸರಳವಾದ ಜಾನಪದ ನೀತಿ ಬೋಧಕ ಪುಣ್ಯಕೋಟಿ ಮತ್ತು ಇತರ ದಂತಕಥೆ ಹಾಡುಗಳಿಂದ ಮೂಡುವ ಭಾರತೀಯತೆಯನ್ನೂ ಕಾಣಬಹುದು.
ಭೈರಪ್ಪನವರು ಈ ಕಥೆಯನ್ನು ಬರೆದು ಐವತ್ತು ವರ್ಷಗಳಾಗಿವೆ. ನಮ್ಮ ಗ್ರಾಮೀಣ ಜನ ಜೀವನದಲ್ಲಿ ಈ ಕಳೆದ ಐದು ದಶಕಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿರಬಹುದು. ಈಗ ಕೃಷಿ ಕ್ಷೇತ್ರ ಮತ್ತು ಹಾಲು ಉತ್ಪಾದನೆ ಕೈಗಾರಿಕೆಗಳಲ್ಲಿ ಅಭಿವೃದ್ಧಿಯನ್ನು ಕಂಡಿದ್ದೇವೆ. ಜಾಗತೀಕರಣದ ಹಿನ್ನೆಲೆಯಲ್ಲಿ ಮೊಬೈಲ್ ಫೋನುಗಳ ಮೂಲಕ ಜನರ ಪರಸ್ಪರ ಸಂಪರ್ಕ ಸುಧಾರಿಸಿದೆ. ಸಹಕಾರಿ ಸಂಘಗಳು ಗ್ರಾಮೀಣ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಇತರ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಹೀಗೆ ಸಾಕಷ್ಟು ಪ್ರಗತಿಪರ ಮತ್ತು ಆರ್ಥಿಕ ಬದಲಾವಣೆಗಳನ್ನು ಕಂಡಿದ್ದರೂ ನಗರಗಳಿಗೆ ಹೋಲಿಸಿದರೆ ನಮ್ಮ ಗ್ರಾಮೀಣ ಸಾಮಾಜಿಕ ಜೀವನ, ನಂಬಿಕೆ ಮತ್ತು ಸಂಪ್ರದಾಯಗಳಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುತ್ತಿಲ್ಲ. ಕಾಲ್ಪನಿಕವಾಗಿ ಅದೇ ಕಾಳಿಂಗ ಮತ್ತು ಹಿಲ್ಡಾ ಈಗಿನ ಕಾಲಕ್ಕೆ ಬಂದು ಕಾಳೇನಹಳ್ಳಿಯಲ್ಲಿ ನೆಲೆಸಿದರೆ ಅವರು ಭೈರಪ್ಪನವರ ಕಥೆಯಲ್ಲಿ ಸೃಷ್ಟಿಸಿದ ಬಿಕ್ಕಟ್ಟುಗಳನ್ನು ಎದುರಿಸುವ ಸಾಧ್ಯತೆಗಳಿವೆ. ಅನ್ಯ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಹಿಂದಿಗಿಂತ ಇಂದು ಹೆಚ್ಚು ಅಸಹಿಷ್ಣುತೆ ಕಂಡುಬರುತ್ತಿದೆ. ಇದು ಸರಿಯೇ? ಅಥವಾ ತಪ್ಪೇ ? ಎಂದು ಚರ್ಚಿಸುವುದು ಈ ಬರವಣಿಗೆಯ ಮಿತಿಯ ಹೊರಗಿದೆ. ಅಂದ ಹಾಗೆ ‘ತಬ್ಬಲಿಯು ನೀನಾದೆ ಮಗನೆ’ ಕಥೆಯನ್ನು ಹಿಂದೆ ಕಾರ್ನಾಡರು ಚಲನ ಚಿತ್ರ ಮಾಡಿ, ಆ ಚಿತ್ರದಲ್ಲಿ ನಾಸಿರುದ್ದೀನ್ ಷಾ ಅವರು ಪುರೋಹಿತನಾದ ವೆಂಕಟರಮಣನ ಪಾತ್ರವನ್ನು ಉತ್ತಮವಾಗಿ ನಟಿಸಿ ಈ ಪಾತ್ರಕ್ಕೆ ಜೀವಕಳೆ ತುಂಬಿದ್ದರು. ಈಗಿನ ಪರಿಸ್ಥಿಯಲ್ಲಿ ಒಬ್ಬ ಮುಸ್ಲಿಂ ನಟ ಪುರೋಹಿತನ ಪಾತ್ರ ವಹಿಸುವುದು ಊಹಿಸಿಲಾರದ ಸಂಗತಿ!
ಇನ್ನೊಂದು ವಿಚಾರ, ಭೈರಪ್ಪನವರು ಗೌಡಜ್ಜನ ಮೂಲಕ ಎತ್ತಿ ಹಿಡಿಯುವ ಗೋಸಂರಕ್ಷಣಾ ಕಾರ್ಯವನ್ನು ಇಂದು ಆಳುತ್ತಿರುವ ಸರ್ಕಾರವೇ ತನ್ನ ವಶಕ್ಕೆ ತೆಗೆದುಕೊಂಡಿದೆ. ಧಾರ್ಮಿಕ ನಂಬಿಕೆಗಳ ಹೊರಗೆ ಪರಿಸರ ಹಿತದೃಷ್ಟಿಯಿಂದ ನೋಡಿದಾಗ ಗೋಮಾಂಸ ಭಕ್ಷಣೆಯಿಂದ ಹೆಚ್ಚು ಪರಿಸರ ಮಾಲಿನ್ಯ ಒದಗಬಹುದು ಎಂಬ ವಿಚಾರ ವೈಜ್ಞಾನಿಕವಾಗಿ ನಮಗೀಗ ತಿಳಿದಿದೆ. ಸಸ್ಯಾಹಾರ ತರುವ ಅನೇಕ ಅರೋಗ್ಯ ಅನುಕೂಲತೆಗಳು ಬೆಳಕಿಗೆ ಬಂದಿವೆ. ಈ ರೀತಿಯ ಸಸ್ಯಾಹಾರ ಪ್ರಚೋದನೆ ಅನ್ಯಧರ್ಮಿಗಳಿಗೂ ಮತ್ತು ವಿಚಾರವಂತರಿಗೂ ನಿಲಕುವ ತರ್ಕಬದ್ಧವಾದ ಆಲೋಚನೆ ಎನ್ನಬಹುದು. ಸಸ್ಯಾಹಾರವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಕೂಡ ಪ್ರಚೋದಿಸಲಾಗಿದೆ
ಭಾರತಕ್ಕೆ ಭೇಟಿ ನೀಡುತ್ತಿರುವ ಅಸಂಖ್ಯಾತ ಪಾಶ್ಚಿಮಾತ್ಯರಿಗೆ ನಮ್ಮ ಸಂಸ್ಕೃತಿಯ ಸೂಕ್ಷ್ಮತೆಗಳ ಅರಿವಿದೆ. ಅನಿವಾಸಿ ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಯ ಮಧ್ಯೆ ಬದುಕುತ್ತಾ ಅಲ್ಲಿಯ ಉತ್ತಮ ಮೌಲ್ಯಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಾಗತೀಕರಣದ ಹಿನ್ನೆಲೆಯಲ್ಲಿ ‘ತಬ್ಬಲಿಯು ನೀನಾದೆ ಮಗನೆ’ ಕಥೆಯನ್ನು ಮತ್ತೆ ಓದಿದಾಗ ಈ ಐದು ದಶಕಗಳಲ್ಲಿ ನಮ್ಮ ಸಮಾಜ ಎಷ್ಟರ ಮಟ್ಟಿಗೆ ಮತ್ತು ಯಾವ ರೀತಿ ಬದಲಾಗಿದೆ ಎಂಬುದನ್ನು ಓದುಗರು ಗ್ರಹಿಸಬಹುದು, ಹಾಗೆಯೇ ಆ ವಿಚಾರಗಳ ಬಗ್ಗೆ ಚಿಂತಿಸಬಹುದು.
ಒಂದು ಕಥೆ ಜನರ ಭಾವನೆಗಳನ್ನು ಮತ್ತು ಹೃದಯವನ್ನು ಮುಟ್ಟಿ ಉತ್ಕೃಷ್ಟವಾದ ಕಥೆ ಎಂದು ಪರಿಗಣಿಸಲು ಕೆಲವು ಅಂಶಗಳನ್ನು ಒಳಗೊಂಡಿರಬೇಕು. ಕಥೆಯಲ್ಲಿ ಮನುಷ್ಯರ ನಡುವಿನ ಭಾವನೆಗಳ ಏರುಪೇರುಗಳಿರಬೇಕು. ಸುಖ ದುಃಖ, ಹತಾಶೆ ಭರವಸೆ ಮತ್ತು ದ್ವೇಷ ಪ್ರೀತಿ ಮುಂತಾದ ರಸಗಳಿರಬೇಕು. ನಮ್ಮ ಬದುಕಿನಲ್ಲಿ ಕಾಣುವ ಸಾಮಾನ್ಯ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿಂತನೆಗಳಿರಬೇಕು. ಕಥೆಯಲ್ಲಿನ ಸನ್ನಿವೇಶಗಳು ನಮ್ಮ ದಿನನಿತ್ಯ ಬದುಕಿಗೆ ಪ್ರಸ್ತುತವಾಗಿರಬೇಕು, ಕಾಲ್ಪನಿಕ ಪ್ರಪಂಚದಿಂದ ದೂರವಿರಬೇಕು. ಓದುಗರಿಗೆ ಒಂದು ಕ್ಷೇತ್ರದ ಭೌಗೋಳಿಕ ಸಾಂಸ್ಕೃತಿಕ ಮತ್ತು ಕಥೆ ನಡೆಯುವ ಕಾಲ ಘಟ್ಟದ ಪರಿಚಯ ಮಾಡಿಕೊಡಬೇಕು. ಸಾಂಪ್ರದಾಯಿಕ ನಿಲುವನ್ನು ಮತ್ತು ಸೈಧಾಂತಿಕ ತತ್ವಗಳನ್ನು ವಿಮರ್ಶೆಗೆ ಒಳಪಡಿಸಬೇಕು. ಕಥೆಯಲ್ಲಿ ಆಳ ವಿಸ್ತಾರಗಳಿರಬೇಕು. ಈ ಅಂಶಗಳಿದ್ದಲ್ಲಿ ಅದು ಉತ್ತಮವಾದ ಕಥೆಯಾಗಬಲ್ಲದು. ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯು ಈ ಎಲ್ಲ ಮೇಲಿನ ಅಂಶಗಳನ್ನು ಒಳಗೊಂಡಿದೆ ಎನ್ನಬಹುದು.
ಫೋಟೋ ಕೃಪೆ : ಡಾ. ಜಿ. ಎಸ್. ಶಿವಪ್ರಸಾದ್
ಎಂದೋ ನೋಡಿದ್ದ ತಬ್ಬಲಿಯು ನೀನಾದೆ… ಸಿನೆಮಾದ ಮಸುಕು ಮಸುಕು ನೆನಪನ್ನ ಮತ್ತೆ ತಾಜಾಗೊಳಿಸಿದ್ದಷ್ಟೇ ಅಲ್ಲದೆ, ಕಾದಂಬರಿಯ ಪಾತ್ರಗಳ, ವಿಚಾರಗಳ ಅರ್ಥಪೂರ್ಣ ಮತ್ತು ಭಾವಪೂರ್ಣ ವಿಮರ್ಶೆ, ಭೈರಪ್ಪನವರ ಈ ಕೃತಿಯನ್ನು ಓದಬೇಕೆನಿಸುವಷ್ಟು ಪ್ರೋತ್ಸಾಹಿಸಿದೆ.
ಕೇಶವರ ಕೃತಿ ಮತ್ತು ಸಿನೆಮಾದ ವಿವಿಧ ವ್ಯಾಖ್ಯಾನಗಳ ಟಿಪ್ಪಣಿಯಿಂದ, ಸಿನೆಮಾ ಕೃತಿಯೆಂಬ ನದಿಯಿಂದ ತೆಗೆದ ಬೊಗಸೆ ನೀರಷ್ಟೇ ಎನ್ನುವ ಅರ್ಥವನ್ನ ಹೆಕ್ಕಿದ್ದೇನೆ.
murali
LikeLiked by 1 person
ಕೇಶವ್ ನಾನು ನಿಮ್ಮ ಸಿನಿಮಾ ವಿಮರ್ಶೆಯನ್ನು ಮೆಚ್ಚಿದೆ. ಅದು ಹಿಂದೆ ಪ್ರಕಟಿತವಾದದ್ದು ನನ್ನ ನೆನಪಿನಲ್ಲಿಲ್ಲ.
Thanks for the timely reminder. Readers have got an opportunity to understand your views albeit on the cinema version.
LikeLike
ವಿಜಯ್ ಅವರೇ , ನನ್ನ ಈ ಪುನರಾವಲೋಕನ ಪುಸ್ತಕದ ವಿಮರ್ಶೆಯಲ್ಲದೆ ಅದು ಕಥೆಯ ಕಿರುಪರಿಚಯವಾಗಿದ್ದಲ್ಲಿ ಸಂತೋಷ.
LikeLike
ನಾನು ‘ತಬ್ಬಲಿಯು ನೀನಾದೆ ಮಗನೆ’
ಕಾದಂಬರಿಯನ್ನು ಓದಿಲ್ಲವಾದರೂ
ಪ್ರಸಾದ್ ಅವರ ವಿಮರ್ಶೆ ಸಮಗ್ರ ಚಿತ್ರಣವನ್ನು ಮುಂದಿಟ್ಟಿದೆ ಎಂದು ಅನಿಸುತ್ತದೆ
ಅಲ್ಲಿ ಬರುವ ಎಲ್ಲ ಪಾತ್ರಗಳ ಮನಹೊಕ್ಕು
ಭಾವನೆಗಳ ಹೆಕ್ಕಿ ಭಾರತೀಯ ಮತ್ತು ಪಾಶ್ಚಿಮ ಸಂಸ್ಕೃತಿಗಳ ಪರಸ್ಪರ ಪ್ರಭಾವಗಳು ಇಂದಿಗೂ ಎಷ್ಟು ಪ್ರಸ್ತುತ
ಮತ್ತು ಅದರಿಂದ ಆಗುವ ಅನರ್ಥಗಳು
ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ ವಿಮರ್ಶಿಸಿದ್ದಾರೆ .
ನಿಮ್ಮ ವಿಮರ್ಶೆಯ ಪರಿಪೂರ್ಣತೆಗೆ ನನ್ನ ವಂದನೆಗಳು 🙏
LikeLiked by 1 person
ಉತ್ತಮ ಕೃತಿಗಳನ್ನು ಮತ್ತೆ ಮತ್ತೆ ಓದಿದಾಗ ನಾವು ಹೊಸ ಅರ್ಥಥಗಳನ್ನು ಕಾಣುತ್ತೇವೆ. ಇದನ್ನು ಪ್ರಸಾದ್ ಸುಂದರವಾಗಿ, ಸರಳವಾಗಿ ನಮ್ಮ ಮುಂದಿಟ್ಟಿದ್ದಾರೆ. ನಾನೇ ಇನ್ನೊಮ್ಮೆ ಕಾದಂಬರಿಯನ್ನು ಓದಿದೆ ಎಂಬ ಅನಿಸಿಕೆ ಮೊದಲ ಭಾಗದ ಕೊನೆಯಲ್ಲಿ. ಎರಡನೇ ಭಾಗದಲ್ಲಿರುವ ವಿಶ್ಲೇಷಣೆ ಹದವಾಗಿ ಮೂಡಿ ಬಂದಿದೆ. ಎರಡು ವಿಚಾರಗಳ ನಡುವಿನ ಘರ್ಷಣೆಯನ್ನು ಬೌದ್ದಿಕ ಸಮತೋಲನವನನ್ನ ಕಾಯ್ದು ಚಿತ್ರಿಸಿದ್ದಿeರಿ.
ಕೆಲವೆಡೆ ‘ಕಾಳಿಂಗ ಹಿಂದಿರುಗಿದ ‘ ಎಂಬ ವಾಕ್ಯಗಳ ಮರುಕಳಿಕೆಯನ್ನು ಕತ್ತರಿಸಬಹುದಿತ್ತು. “ಪ್ರಚೋದನೆ’ ಎಂಬ ಶಬ್ದದ ಬದಲು ‘ಉತ್ತೇಜನೆ’ ಎಂಬ ಶಬ್ದದ ಬಳಕೆ ಸಮಂಜಸವಾಗುತ್ತಿತ್ತು ಎಂಬುದು ನನ್ನ ಅಂಬೋಣ.
– ರಾಂ
LikeLike
ಪ್ರಸಾದ್ ಅವರ ವಿಮರ್ಶೆ ವಿಶಾಲವಾಗಿದೆ, ಆಳವಾಗಿದೆ. ಪೂರ್ವ ಪಶ್ಚಿಮಗಳ ದೃಷ್ಟಿಕೋನಗಳ ಸಮ್ಮಿಲನವಿದೆ. ದ್ವಂದ್ವಗಳ ಚರ್ಚೆಯಿದೆ. ಕಾದಂಬರಿಯನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಕೆಲವು ಒಳನೋಟಗಳು ಅಚ್ಚ ಹೊಸವು. ತುಂಬ ಸಂಯಮದ ವಿಮರ್ಶೆ.
ನಾನು ಈ ಹಿಂದೆ ಈಸಿನೆಮಾದ ಬಗ್ಗೆ ನಾಕಾರು ಸಾಲುಗಳನ್ನು ಬರೆದಿದ್ದೆ. ಅದನ್ನೇ ಇಲ್ಲಿ ಮತ್ತೆ ಉದ್ಧರಿಸುತ್ತಿದ್ದೇನೆ:
ಶಿಕ್ಶ್ಷಿತ-ಪಾಶ್ಚ್ಯಾತ್ಯ-ಆಧುನಿಕ-ಬಂಡವಾಳಶಾಹಿತನ ಮತ್ತು ಅಶಿಕ್ಷಿತ-ಭಾರತೀಯ-ಸನಾತನ-ಸಮಾಜವಾದಗಳ ನಡುವಿನ ಸಂಕೀರ್ಣ ತಿಕ್ಕಾಟವೇ ಕತೆಯ ವಸ್ತು. ಚಿತ್ರ ಗೋವಿನ ಹಾಡಿನಿಂದ ಶುರುವಾಗುತ್ತದೆ ಮತ್ತು ಚಿತ್ರದ undercurrent ಸಂಕೇತವೂ ಆಗುತ್ತದೆ. ಅಮೇರಿಕದಲ್ಲಿ ಓದಿ, ಅಲ್ಲಿಯವಳನ್ನೇ ಮದುವೆಯಾಗಿ, ತನ್ನ ಹಳ್ಳಿಯಲ್ಲಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಧೃಡನಿಶ್ಚಯದಿಂದ ಭಾರತಕ್ಕೆ ನಾಯಕ ಮರಳುತ್ತಾನೆ. ತಂದೆ ಸತ್ತಾಗ ತಲೆ ಬೋಳಿಸಿಕೊಳ್ಳುವುದರಿಂದ ಶುರುವಾಗುವ ಈ ಘರ್ಷಣೆ, ನಾಯಕನ ಹೆಂಡತಿ ಹಳ್ಳಿಗೆ ಬರುವುದು, ನಾಯಕನ ತಾಯಿಯ ಮರಣ, ನಾಯಕನ ಹೆಂಡತಿ ಗೋಮಾಂಸ ತಿನ್ನುವುದು – ಈ ದೃಶ್ಯಗಳಲ್ಲಿ ಬಿಚ್ಹಿಕೊಳ್ಳುತ್ತ, ನಾಯಕನ ಮಗುವಿಗೆ ಹಾಲು ಬೇಕಾಗುವ ದೃಶ್ಯದಲ್ಲಿ ಪರಾಕಾಷ್ಟೆ ತಲುಪುತ್ತದೆ. ಇದೆಲ್ಲದರಿಂದ ಬೇಸತ್ತು, ಹಳ್ಳಿಯನ್ನು ಬಿಟ್ಟು ಮರಳಿ ಅಮೇರಿಕಕ್ಕೆ ಹೋಗುವ ನಿರ್ಧಾರ ಮಾಡುತ್ತಾನೆ ನಾಯಕ. ಅಂತ್ಯದಲ್ಲಿ, ಮರಳಿ ಮಣ್ಣಿಗೆ ಮರಳುವ ನಿಶ್ಚಯದಿಂದ ತನ್ನ ಮಾರಿದ ಗೋವುಗಳನ್ನು ಗುರುತಿಸಲಾಗದೇ ಗೋವಿಗಳ ಹೆಸರುಗಳನ್ನು ಕೂಗುವ ವ್ಯರ್ಥ ಪ್ರಯತ್ನದಲ್ಲಿ ಚಿತ್ರ ಮುಗಿಯುತ್ತದೆ. ಗೋವಿನ ಹಾಡಿನಲ್ಲಿ ಗೊಲ್ಲ ಕೂಗಿದರೆ ಎಲ್ಲ ಹಸುಗಳೂ ಬಂದು ನಿಲ್ಲುತ್ತವೆ, ಇಲ್ಲಿ ನಾಯಕನಿಗೆ ತನ್ನ ಹಸುಗಳು ಯಾವುವು, ಅವುಗಳ ಹಿಸರು ಗೊತ್ತಿಲ್ಲ, ಸುಮ್ಮನೇ ‘ಗಂಗೇ, ತುಂಗೇ…’ ಎಂದು ಕೂಗುತ್ತಾನೆ; ಚಿತ್ರದ ಆರಂಭದ ಗೋವಿನ ಹಾಡು, ಚಿತ್ರದ ಅಂತ್ಯದಲ್ಲಿ ಸಫಲಗೊಳ್ಳುತ್ತದೆ.
ನಾನಿಲ್ಲಿ ಈ ಚಿತ್ರವನ್ನು ಕಾದಂಬರಿಯ ಜೊತೆ ಹೋಲಿಸಿ ನೋಡುವುದಿಲ್ಲ. ಬಹುಷಃ ಚಿತ್ರ ಕಾದಂಬರಿಗಿಂತ ಹೆಚ್ಚು ದಟ್ಟವಾಗಿದೆ, ಸಂಕೀರ್ಣವಾಗಿದೆ. ಚಿತ್ರದ ನಿರ್ದೇಶನ ತುಂಬ ಸಂಯಮದಿಂದ ಪ್ರಬುದ್ಧವಾಗುತ್ತ ಸಾಗುತ್ತದೆ. ಸಂಕಲನ, ಸಂಗೀತ ಅಷ್ಟಕ್ಕಷ್ಟೇ. ಚಿತ್ರದ ನಾಯಕನ ಹೊಸ ಮನೆ ಕೃತಕವಾಗಿ ಕಂಡರೂ, ಭಾರತದ ಹಳ್ಳಿಯಲ್ಲಿ ಪಶ್ಚಿಮದ ಆಧುನಿಕತೆಯನ್ನು ತರಲು ಹೆಣಗುವ ನಾಯಕನ ಮನಸ್ಥಿತಿಯ ಕನ್ನಡಿಯಂತಿದೆ. ಹಳ್ಳಿಯ ಹೊರಾಂಗಣ ಚಿತ್ರಣದಲ್ಲಿ ಎಲ್ಲೂ ಹಳ್ಳಿಯ ಅಥವಾ ನಿಸರ್ಗದ romantisism ಇಲ್ಲ; ಬದಲಿಗೆ ಹಳ್ಳಿಯ ದಾರಿದ್ರ್ಯ, ಬಿಸಿಲಿನ ಬೇಗೆ ಕಣ್ಣಿಗೆ ರಾಚುತ್ತದೆ. ಚಿತ್ರದ ಮಾತುಗಳು ಚಿತ್ರದ ಶಕ್ತಿ: ಶಾಸ್ತ್ರಿ ಮತ್ತು ನಾಯಕನ ಮಾತುಗಳಲ್ಲೇ ಭಾರತೀಯತೆ-ಪಾಶ್ಚ್ಯಾತತೆ, ಸಂಪ್ರದಾಯ-ನವ್ಯತೆ, ಸಮಾಜವಾದ-ಬಂಡವಾಳಶಾಹಿ, ಸನಾತನತೆ-ಆಧುನಿಕತೆಗಳ ಗೊಂದಲ, ಘರ್ಷಣೆಗಳ ಜೊತೆಜೊತೆಗೆ ಮನುಷ್ಯ ಸಹಜವಾದ ಈರ್ಷೆ, ದ್ವೇಷ, ಸ್ನೇಹ, ಮಾನವೀಯತೆಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ. ನಸೀರುದ್ದೀನ್ ಷಹಾ ಶಾಸ್ತ್ರಿಯ ಎಲ್ಲ ಗುಣಗಳನ್ನೂ, ಒಂಚೂರೂ ಸಿನಿಮೀಯತೆಯಿಲ್ಲದೇ ನಟಿಸುತ್ತಾನೆ, ಅಷ್ಟೇ ಚೆನ್ನಾಗಿ ಸುಂದರಕೃಷ್ಣ ಅರಸ್ ಧ್ವನಿ ಕೊಟ್ಟಿದಾನೆ. ಮಾನು ಕೆಲವೊಮ್ಮೆ ಎಡವಿದ್ದಾನೆ; ಸುಂದರರಾಜ್ ಪಾತ್ರ ಸ್ವಲ್ಪ loud ಆಯಿತು; ನಾಯಕನ ತಾಯಿಯ ಪಾತ್ರ ಮೂಕತನದಲ್ಲಿ ಮೂಲ ಕಾದಂಬರಿಯಂತೆ ಇದ್ದರೂ, ಕೃತಕವೆನಿಸುತ್ತದೆ; ನಾಯಕನ ಹೆಂಡತಿಯ ಪಾತ್ರ overall OK, ಆದರೆ ಇನ್ನೂ ಜೀವವಿರಬೇಕಿತ್ತು.ಛಾಯಗ್ರಹಣ ಚಿತ್ರಕ್ಕೆ ತುಂಬ ಪೂರಕವಾಗಿದೆ.
ಚಿತ್ರ ನಾಯಕ ಹಳ್ಳಿಯನ್ನು ಬಿಡುವ ನಿರ್ಧಾರ ಮಾಡುವವರೆಗೂ ವಾಸ್ತವಿಕವಾಗಿದೆ, ಅಲ್ಲಿಂದ ಮುಂದೆ ಕತೆ ಇದ್ದಕ್ಕಿದ್ದಂತೆ ಕೃತಕವಾಗಿತ್ತದೆ; ಆದರ್ಶೀಕರಣದತ್ತ, ಭಾರತೀಯತೆಯ ‘ವಿಜಯ (?)’ದತ್ತ ಸಾಗುತ್ತದೆ. ನನ್ನ ದೃಷ್ಟಿಯಲ್ಲಿ ನಾಯಕ ತಬ್ಬಲಿಯಾಗುವುದು ನಿಜ, ಆದರೆ ಚಿತ್ರದಲ್ಲಿರುವ ಹಾಗಲ್ಲ. ವಾಸ್ತವಿಕವಾಗಿ ನೋಡಿದರೆ ನಾಯಕನ ಸ್ಥಿತಿಯಲ್ಲಿ ಯಾರೂ ಹಳ್ಳಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ, ನಾಯಕನ ಹೆಂಡತಿಗಂತೂ ಅಸಾಧ್ಯ. ನನ್ನ ಪ್ರಕಾರ ಚಿತ್ರದ ಅಂತ್ಯ: ಚಿತ್ರ/ ಕಾದಂಬರಿಯಲ್ಲಿ ನಡೆಯುವಂತೆ ನಾಯಕ-ನಾಯಕನ ಹೆಂಡತಿ (ಆಧುನಿಕತೆ-ಪಾಶ್ಚ್ಯಾತ್ಯ-ಶಿಕ್ಷಿತ) ತಮ್ಮ ಮಗುವಿಗಾಗಿ ಗೋವಿನ ಕೆಚ್ಚಲನ್ನು ಹುಡುಕಿಕೊಂಡು ಹೋಗುವುದಿಲ್ಲ (this scene is extremely unnatural unscientific) ಮತ್ತು ಹಳ್ಳಿ (ಸನಾತನ-ಭಾರತೀಯತೆ-ಮೌಢ್ಯ)ಗರ ಮುಂದೆ ಸೋಲನ್ನೂ ಒಪ್ಪಿಕೊಳ್ಳುವುದಿಲ್ಲ. ಆದರೆ ತನ್ನ ಆಸ್ಠಿಯನ್ನೆಲ್ಲ ಮಾರುವ ನಿರ್ಧಾರ ಮಾಡುತ್ತಾನೆ. ನಾಯಕಿಗೆ ದಿನ ಕಳೆದಂತೆ ಇದೆಲ್ಲ ಅಸಹನೀಯವಾಗುತ್ತದೆ. ಆಕೆ ನಾಯಕನನ್ನು ತೊರೆದು (divorce) ಮರಳಿ ಅಮೇರಿಕಕ್ಕೆ ಹೋಗುತ್ತಾಳೆ; ಹಳ್ಳಿಯ ಜನ ಇದು ತಮ್ಮ ವಿಜಯವೆಂದುಕೊಂಡು ನಾಯಕನಿಗೆ ಹಳ್ಳಿಯಲ್ಲಿ ಉಳಿಯಲು ಅಂಗಲಾಚುತ್ತಿರುವಾಗ ನಾಯಕ ಹಳ್ಳಿಯನ್ನು ತೊರೆದು ಹೋಗುವ ದೃಶ್ಯದಲ್ಲಿ ಚಿತ್ರ ಮುಗಿಯುತ್ತದೆ. ನಾಯಕ, ನಾಯಕನ ಹೆಂಡತಿ-ಮಗು ಮತ್ತು ಹಳ್ಳಿ, ಮೂವರೂ ತಬ್ಬಲಿಗಳಾಗುತ್ತಾರೆ.
– ಕೇಶವ
LikeLiked by 1 person
This is a very thoughtful review and fresh take on Bhyarappa’s time honoured classic novel surrounding the issue of reverence for cows and their importance in our daily lives. The article clearly reflects authors vast reading experience and celebrates the beauty of the book lending an original flavour with new insights.
LikeLiked by 1 person