ಏನಾದರೂ ಬರೆಯಬೇಕು, ಬರೆಯಲೇಬೇಕು ಎಂದು ಪಟ್ಟಿ ಮಾಡಿ ಇಟ್ಟುಕೊಂಡ, ಅರ್ಧ ಬರೆದು ಡ್ರಾಫ್ಟ್ನಲ್ಲಿ ಹೆಪ್ಪು ಹಾಕಿಟ್ಟ ಲೇಖನಗಳನ್ನು ವಾರಕ್ಕೊಂದರಂತೆ ಬರೆದರೂ ಸಾಕು, ಅದೆಷ್ಟು ಪುಸ್ತಕಗಳಿಗೆ ಸರಕಾಗುತ್ತದೆಯೋ ಎಂಬ ಆಲೋಚನೆಯನ್ನು ಮನಸ್ಸಿನಲ್ಲೇ ಮಥಿಸುತ್ತ, ಕೈಗೆ ಸಿಗದ ಕನಸಿನ ನವನೀತ ಕೂಡಿಟ್ಟು, ಅದು ಹೇಳಹೆಸರಿಲ್ಲದೆ ಕರಗಿಯೂ ಹೋಗಿದೆ.
ಯಾಕೆ ಬರೆಯಲು ಸಾಧ್ಯವಾಗುತ್ತಿಲ್ಲ? ಉತ್ತರ ನನ್ನ ಬಳಿಯೂ ಇಲ್ಲ. ರಾತ್ರಿ ಹಾಸಿಗೆಗೆ ಬೆನ್ನು ತಾಗಿಸುತ್ತಲೇ ಒಂದು ಜಾದೂ ಘಟಿಸುತ್ತದೆ. ಕಣ್ಣು ಸೀಲಿಂಗ್ ನೋಡುತ್ತಲೇ ಮನಸ್ಸು ಆ ಮಂದಗತ್ತಲಿನಲ್ಲೇ ಸ್ಪುಟವಾಗಿ ಬರೆಯಲು ಶುರುಮಾಡುತ್ತದೆ.
ಛೇ! ಎಷ್ಟು ಚಂದದ ಸಾಲು ಇದು, ನನ್ನ ದೃಷ್ಟಿಯೇ ತಾಕುವಷ್ಟು ಚಂದದ ವಿಷಯ ಮಂಡನೆ. ಆಗಿದ್ದಾಗಲಿ, ಈಗಲೇ ಎದ್ದು ಕುಳಿತು ಸೀಲಿಂಗ್ ಮೇಲೆ ಗೀಚಿದ್ದನ್ನು ಪೇಪರ್ ಮೇಲೋ ಕಿಲೀಮಣೆಯನ್ನೇ ತಟ್ಟುತ್ತ ಕುಟ್ಟುತ್ತ ಬರೆದೇ ಬಿಡೋಣ ಅಂತ ಅನಿಸುತ್ತದೆ. ಆದರೂ ಮತ್ತದೇ ಉದಾಸೀನದ ಅಪರಾವತಾರದಂತಿರುವ ಅಮಿತೆಯ ಮನಸು, `ಅಯ್ಯೋ ಮಲ್ಕೊಳಮ್ಮ ಸುಮ್ಮನೆ ಸಾಕು, ನಾಳೆ ಸಾವಿರ ಕೆಲಸ ಇದೆ` ಅಂತ ಲಾಲಿಯಂತೆ ರಾಗವಾಗಿ ಹೇಳಿ ಹೇಳಿ ಮಲಗುವಂತೆ ಮಾಡಿಬಿಡುತ್ತದೆ. ನಿದ್ದೆ ಬಂದವರಿಗೆ ಹಾಸಿಗೆ ತೋರಿಸುವುದು ಅನ್ನುವುದು ಇದಕ್ಕೇ ಇರಬೇಕು.
ಈ ವಾರ `ಅನಿವಾಸಿ` ಸಂಚಿಕೆಗೆ ಬರೆಯಬೇಕು, ಏನಿದೆ ಸರಕು? ಎಂಬ ರಿಮೈಂಡರ್ ಶೈಲಿಯ ಪ್ರಶ್ನೆ ಮನಸ್ಸಿನಲ್ಲಿ ಬರುತ್ತಲೇ ಇತ್ತು. ಬರೆಯಲು ಒಲ್ಲದ ಮನಸ್ಸು, ಅದು-ಇದು ಕಥೆ ಹಾರಿಸುತ್ತ ಒಮ್ಮೆಲೇ, `ಅಮಿತಾ, ನೀನು ಅಡುಗೆ ಮಾಡಿಲ್ಲ ಇನ್ನೂ…` ಹಾಗೆಂದು ನೆನಪಿಸಿತು. ಏನು ಬರೆಯಲಿ? ಎಂಬ ಪ್ರಶ್ನೆ ಹೋಗಿ, ಏನಡುಗೆ ಮಾಡಲಿ ಎಂಬ ಪ್ರಶ್ನೆ ಕಾಡತೊಡಗಿತು.
ಇಂದು ಮಕ್ಕಳು, ಮನೆಯವರು ಯಾರೂ ಇಲ್ಲ. ಒಬ್ಬಳಿಗೆಂದು ಏನು ಮಾಡೋದು? ಎಂಬೆಲ್ಲ ಸಬೂಬು ಹೇಳಿ ಏನಾದರೊಂದು ಮಾಡಿ ತಿಂದು ಮುಗಿಸುವ ಜೀವವಲ್ಲ ನನ್ನದು. ಮನೆಯಲ್ಲಿ ಯಾರೂ ಇಲ್ಲ ಅಂತಾದರೆ ಅಮಿತಾಳಿಗೆ ಇಷ್ಟವಿರುವ, ಮನೆಯವರು ಮಕ್ಕಳು ಅಷ್ಟೇನೂ ಇಷ್ಟಪಡದ ಅಡುಗೆಗಳನ್ನು, ತರಹೇವಾರಿ ಪಲ್ಯ, ಚಟ್ನಿ, ಮತ್ತೊಂದು-ಇನ್ನೊಂದು ಮಾಡಿ ಅಚ್ಚುಕಟ್ಟಾಗಿ ತಟ್ಟೆಯಲ್ಲಿ ರಂಗೋಲಿಯಂತೆ ಜೋಡಿಸಿ, ಒಂದೆರಡು ಫೋಟೋ ತೆಗೆದು, ಪ್ರತಿ ತುತ್ತು ತಿನ್ನುವಾಗ ಅಜ್ಜಿ, ಅಮ್ಮ, ದೊಡ್ಡಮ್ಮ, ಚಿಕ್ಕಮ್ಮ, ಸೋದರತ್ತೆಯರನ್ನ ನೆನಪು ಮಾಡಿಕೊಳ್ಳುತ್ತ, ಅಡುಗೆ-ಊಟದ ಕುರಿತು ಈ ಪರಿ ಪ್ರೀತಿಯನ್ನು ನನ್ನಲ್ಲಿ ತುಂಬಿದ ಭಗವಂತನಿಗೆ ಥ್ಯಾಂಕ್ಸ್ ಹೇಳುತ್ತಾ ನಿರುಮ್ಮಳವಾಗಿ ಊಟ ಮಾಡುತ್ತೇನೆ. 
ಇವತ್ತು ಅಂಥದ್ದೇ ಒಂದು ಸುದಿನ. ಆದರೆ ಇವತ್ತು ಮನಸ್ಸು, ನಾಲಿಗೆ, ಬುದ್ಧಿ, ಹೃದಯ ಎಲ್ಲರ ಬಯಕೆ ಒಂದೇ! ಮೊಸರು ಬುತ್ತಿ. ಇದು ಸರ್ವಸಮ್ಮತವಾಗಿ ನಿರ್ಧಾರವಾದ ಅಡುಗೆ. ಆದ್ದರಿಂದ ಅಡುಗೆಮನೆಯಲ್ಲಿಯೂ ನನ್ನೊಳಗೂ ಒಂದು ಬಗೆಯ ಉಲ್ಲಾಸ ತುಂಬಿ, ಖುಷಿಯಲ್ಲಿ ಹಾಡುಗಳು ತನ್ನಿಂದತಾನೇ ಒಂದೊಂದಾಗಿ ಅಪ್ರಯತ್ನಪೂರ್ವಕವಾಗಿ ಹೊಮ್ಮತೊಡಗಿದವು. ಅಕ್ಕಿ ತೊಳೆದು ಒಂದಷ್ಟು ಹೆಚ್ಚಿಗೆಯೇ ನೀರಿಟ್ಟು ಮಿಜ್ಜಿ ಅನ್ನದ ತಯಾರಿ ಶುರುಮಾಡಿದೆ. ಅದರ ಜೊತೆಗೆ ಒಂದಷ್ಟು ಮಜ್ಜಿಗೆ ಮೆಣಸು, ಬೆಳ್ಳುಳ್ಳಿ ಸಂಡಿಗೆ, ಹುರುಳಿ ಹಪ್ಪಳ ಹುರಿದು ಗಾಳಿಯಾಡದ ಡಬ್ಬದಲ್ಲಿ ಪೇರಿಸಿದೆ.
ಕೆಂಪು ಈರುಳ್ಳಿ, ಹಸಿಮೆಣಸು, ಕೊತ್ತಂಬರಿಸೊಪ್ಪು ಸಣ್ಣಗೆ ಹೆಚ್ಚಿಟ್ಟುಕೊಂಡು, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕಲ್ಬತ್ತಿನಲ್ಲಿ ಜಜ್ಜಿಕೊಂಡೆ. ಅನ್ನ ಆಗಲು ಇನ್ನೂ ಸಮಯವಿತ್ತು. ಮತ್ತೇನು ಮಾಡೋದು? ನಾನು ನನ್ನೊಂದಿಗೇ ಹರಟೆ ಹೊಡೆಯಲು ಶುರು ಮಾಡಿದೆ. ಈ ಮೊಸರನ್ನ ಎಂಬುದು ಅದೆಷ್ಟು ಸರಳ ಅಲ್ವಾ? ಜೀವಕ್ಕೂ ಹಿತ ಮಾಡಲೂ ಸುಲಭ. ಹಾಗೆ ನೋಡಿದರೆ ಮೊಸರನ್ನ ಆಧ್ಯಾತ್ಮದ ತತ್ವವನ್ನು ತಟ್ಟೆಯಲ್ಲಿದ್ದೇ ಮೌನವಾಗಿಯೇ ಬೋಧಿಸುತ್ತದೆ.
`ಅಯ್ಯೋ ಮೊಸರನ್ನವಾ? ಮಕ್ಕಳೂ ಕಲಸಬಹುದು.` ಹಾಗಾದರೆ ಎಷ್ಟೊಂದು ಸರಳ ಮಸರನ್ನ ಇರುವಾಗ ನಾವ್ಯಾಕೆ ಸಂಕೀರ್ಣತೆಯ ಹಿಂದೆ ಬಿದ್ದು ಒದ್ದಾಡುತ್ತೇವೆ? ನಿಜಕ್ಕೂ ಈ ಜೀವನಕ್ಕೆ ಬೇಕಾಗಿರೋದು ಒಂದು ತಟ್ಟೆ ಮೊಸರನ್ನ ಅಷ್ಟೇ! ಹೀಗೆಲ್ಲ ನನ್ನ ತಲೆ ಮಾತಾ ಅಮಿತಾನಂದಮಯಿಯಂತೆ ಪ್ರವಚನ ಕೊಡುತ್ತಿರುವಾಗ, ನಾನು ಎದ್ದು ಅನ್ನ ಬೆಂದಿದೆ ಹೇಗೆ ಬೇಕೋ ಹಾಗೇ ಎಂದು ನನ್ನಷ್ಟಕ್ಕೆ ಖುಷಿ ಪಟ್ಟೆ.
ಈ ಬುತ್ತಿ ಅನ್ನ ಉಳಿದ ಮೊಸರನ್ನದ ರೀತಿಯಲ್ಲ. ಉತ್ತರ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಮಂದಿಗೆ, ಅಥವಾ ಉತ್ತರ ಕರ್ನಾಟಕ ಭಾಗದ ಆತ್ಮೀಯ ಸ್ನೇಹಿತರು ನಿಮಗಿದ್ದರೆ ಮಾತ್ರ ಈ ವಿಧದ ಮೊಸರನ್ನದ ರುಚಿ ನಿಮಗೆ ಗೊತ್ತಿರುತ್ತದೆ ಅಥವಾ ದಕ್ಕಿರುತ್ತದೆ.
ಮೆತ್ತಗೆ ಬೇಯಿಸಿಕೊಂಡ ಅನ್ನ, ಕೆನೆ ಮೊಸರು, ಒಂಚೂರು ಹಾಲು, ಉಪ್ಪು, ಹೆಚ್ಚಿಕೊಂಡ ಈರುಳ್ಳಿ, ಹಸಿಮೆಣಸು, ಜಜ್ಜಿಕೊಂಡ ಬೆಳ್ಳುಳ್ಳಿ ಮತ್ತು ಶುಂಠಿ ಇಷ್ಟನ್ನೂ ಸೇರಿಸಿ ಅನ್ನವನ್ನು ನುರಿಯುತ್ತ, ಉಂಡೆ ಕಟ್ಟುವ ಹದಕ್ಕೆ ಬಂದಾಗ ರಾಗಿ ಮುದ್ದೆಯ ಅಳತೆಯ ಉಂಡೆ ಕಟ್ಟಬೇಕು.
ಈ ಬುತ್ತಿಯನ್ನ ಮದುವೆಯ ಮೊದಲು, ಮದುವೆಯ ನಂತರ, ಶುಭಕಾರ್ಯಗಳು ಇದ್ದಾಗ ನೆಂಟರ ಮನೆಗೆ, ಬೀಗರ ಮನೆಗೆ ರೊಟ್ಟಿ, ವಿಧವಿಧದ ಪಲ್ಯ, ಚಟ್ನಿ, ಪುಡಿ, ಸಿಹಿ, ಝುಣುಕದ ವಡಿ, ಉಂಡಿ, ಕರ್ಜಿಕಾಯಿ, ಕರಿದ ಸಂಡಿಗೆ, ವಡೆ, ಹಪ್ಪಳಗಳೊಂದಿಗೆ ಕಳಿಸಿಕೊಡಲಾಗುತ್ತದೆ. ಹಾಗೆ ಆ ಊರಿನಿಂದ ಬಂದು ಸೇರಿದ ಬುತ್ತಿಯನ್ನು ಈ ಊರಿನ ಪರಿಚಿತ, ಆತ್ಮೀಯರೊಂದಿಗೆ ಹಂಚಿಕೊಂಡು ಸಂಭ್ರಮಿಸಿದಾಗಲೇ ಆ ಊಟಕ್ಕೊಂದು ಮೆರಗು ಬರುವುದು.
ನನ್ನ ತವರುಮನೆ ಮುಂಡಗೋಡದಲ್ಲಿ ನಮಗೆ ಎಲ್ಲರೂ ಪರಿಚಿತರಾಗಿರುವುದಕ್ಕೆ ಇಂಥ ಅಸಂಖ್ಯಾತ ಬುತ್ತಿ ಊಟಗಳನ್ನು ಆಸ್ವಾಧಿಸಿದ್ದೇನೆ. `ಇನ್ನೂ ಬುತ್ತಿ ತಂದುಕೊಟ್ಟಿಲ್ವೇ?` ಎಂದು ಕಾತರತೆಯಿಂದ ಕಾದು ಕುಳಿತದ್ದು ಇದೆ. ಒಂದು ರೀತಿಯಲ್ಲಿ `ಅಜ್ಜಿಗೆ ಅಜ್ಜನ ಚಿಂತೆಯಾದರೆ ಮೊಮ್ಮಗಳಿಗೆ ಕಜ್ಜಾಯದ ಚಿಂತೆ` ಎಂಬ ಗಾದೆಮಾತು ನನಗೆಂದೇ ರಚನೆಯಾಗಿದ್ದು ಎಂದು ಎಷ್ಟೋ ಸಲ ಅನಿಸಿದ್ದಿದೆ.
ಆದರೆ ನನ್ನ ಅಮ್ಮನಿಗೆ ಮಾತ್ರ ಈ ಬುತ್ತಿ ಅನ್ನ ಇಷ್ಟವಾಗದು. ಒಂದು, ಅದರಲ್ಲಿ ಬೆಳ್ಳುಳ್ಳಿ ಹಾಕುತ್ತಾರೆ ಎಂದು. ಮತ್ತೊಂದು, ಅನ್ನದ ಉಂಡೆ ಕಟ್ಟುವುದು ಪಿಂಡ ಇಡುವಾಗ ಮಾತ್ರ ಎಂಬುದು ಅವಿಭಜಿತ ದಕ್ಷಿಣ ಕನ್ನಡ ಮೂಲದ ಅಮ್ಮನ ಬಲವಾದ ನಂಬಿಕೆ. ಅದಕ್ಕೆ ಉಂಡೆ ಕಟ್ಟಿರುವ ಮೊಸರು ಬುತ್ತಿ ಅಮ್ಮ ತಿನ್ನುವುದಿಲ್ಲ.
ಹೇಗೂ ಮೊಸರನ್ನದ ಶ್ರುತಿ ತೀಡಿಯಾಗಿದೆ. ಇನ್ನೊಂದಿಷ್ಟು ಅದರ ಬಗ್ಗೆಯೇ ಹೇಳಿ ಬಿಡುವೆ. ಮೊಸರನ್ನ ಎಂಬ ಹೆಸರು ಒಂದೇ ಆದರೂ ಪ್ರಕಾರಗಳು ಹಲವು.
ಬುತ್ತಿ ಅನ್ನದ ನಂತರ ನನಗೆ ನೆನಪಿರುವ ಮತ್ತೊಂದು ಮೊಸರನ್ನದ ರುಚಿ ಎಂದರೆ ಆಂಧ್ರ ಮೂಲದ ಮಂದಿ ಮಾಡುವ ಉದ್ದಿನಬೇಳೆ, ಕಡಲೆಬೇಳೆ, ಶುಂಠಿ, ಚೂರೇ ಚೂರು ಅರಿಶಿನ ಹಾಕಿ ಚಂದದ ಒಗ್ಗರಣೆ ಕೊಟ್ಟು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಾಡಿದ, ಬಾಯಲ್ಲಿಟ್ಟರೆ ಕರಗಿಯೇ ಹೋಯಿತು ಅನ್ನುವಷ್ಟು ಹಗುರ-ಹಗುರವಾದ ಮೊಸರನ್ನ. ಇದರ ರುಚಿ ನೋಡುವ ಅವಕಾಶ ಸಿಕ್ಕಿದ್ದು ಪುಟ್ಟಪರ್ತಿಯಲ್ಲಿ. ಆಹಾ! ಅದೆಂಥ ಚಂದದ ಅನುಭೂತಿ ಅದು!
ನನ್ನ ಹೈಸ್ಕೂಲ್ ದಿನಗಳಲ್ಲಿ ಮೆತ್ತಗೆ ಮಾತನಾಡುವ, ಅಷ್ಟೇ ಚುರುಕು ಹುಡುಗಿ ಒಬ್ಬಳಿದ್ದಳು. ಆಕೆಯ ಹೆಸರು ನೇತ್ರಾವತಿ. ನಾವು ಸುಮಾರು ಎಂಟು ಸ್ನೇಹಿತೆಯರು ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳುತ್ತಿದ್ದೆವು. ಊಟವನ್ನು ಹಂಚಿಕೊಳ್ಳುತ್ತಿದ್ದೆವು ಕೂಡ. ನೇತ್ರಾವತಿಯ ಅಮ್ಮ ಕಟ್ಟಿ ಕಳಿಸುತ್ತಿದ್ದ ಆ ಮೊಸರನ್ನ ತುಂಬಾ ವಿಭಿನ್ನವಾಗಿತ್ತು. ಆಕೆ ಮೊಸರನ್ನ ತಂದರೆ ಅರ್ಧ ಡಬ್ಬಿ ನನಗೆ ಎಂದು ಫಿಕ್ಸ್ ಆಗಿಬಿಟ್ಟಿತ್ತು. ಆಕೆಯನ್ನು ಕಾಡಿಸಿ ಪೀಡಿಸಿ ಆ ರೆಸಿಪಿಯನ್ನು ನಮ್ಮ ಮಸ್ತಿಷ್ಕದೊಳಗೆ ಸೇರಿಸಿಕೊಳ್ಳಲಾಯಿತು.
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು, ಅದಕ್ಕೆ ಹದ ಬಿಸಿಮಾಡಿದ ತೆಂಗಿನ ಎಣ್ಣೆ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ, ಅದಕ್ಕೆ ಮೊಸರು ಬೆರೆಸಿ, ಅದಕ್ಕೆ ತಣಿದ ಅನ್ನವನ್ನು ಬೆರೆಸಿ ಚೆನ್ನಾಗಿ ಕಲಸಿದರೆ ಆಯಿತು. ಇದರ ಜೊತೆ ಒಂದು ಹೋಳು ನಿಂಬೆ ಉಪ್ಪಿನಕಾಯಿ ಇದ್ದರಂತೂ ಊಟ ಸ್ವರ್ಗದ ಹಿತ್ತಲಿನಲ್ಲಿ ಕುಳಿತು ಸವಿದಷ್ಟು ರುಚಿ.
ನಾನು ಯೂನಿವರ್ಸಿಟಿಯಲ್ಲಿ ಇರುವಾಗ ಸೋಷಿಯಾಲಜಿ ಡಿಪಾರ್ಟ್ಮೆಂಟ್ನಲ್ಲಿ ಓದುತ್ತಿದ್ದ ಸರಸ್ವತಿ ಜೋಶಿ ಆತ್ಮೀಯ ಸ್ನೇಹಿತೆಯಾಗಿದ್ದಳು. ಪರೀಕ್ಷೆಗಳಿರುವಾಗ, ಅಥವಾ ಬೇಗನೆ ಕಾಲೇಜ್ ತಲುಪಬೇಕಾದ ದಿನಗಳಲ್ಲಿ ನಾನು ಸರಸ್ವತಿಯ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಅವರ ಅಮ್ಮ ನನ್ನನ್ನು ತಮ್ಮ ಮಗಳಂತೆಯೇ ನೋಡಿಕೊಳ್ಳುತ್ತಿದ್ದರು. ಅವರು ಮಾಡುತ್ತಿದ್ದ ಮೊಸರನ್ನವೂ ವಿಶಿಷ್ಟ. ಅನ್ನ ಮತ್ತು ಮೊಸರನ್ನು ಉಪ್ಪಿನೊಂದಿಗೆ ಹದವಾಗಿ ಕಲಸಿ, ತುಪ್ಪದಲ್ಲಿ ಜಜ್ಜಿದ ಲವಂಗ, ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಹದವಾಗಿ ತಾಳ್ಮೆಯಿಂದ ಹುರಿದು ಅನ್ನಕ್ಕೆ ಒಗ್ಗರಣೆ ಕೊಡುತ್ತಿದ್ದರು. ತುಪ್ಪದಲ್ಲಿ ಕರಿದ-ಹುರಿದ ಆ ಲವಂಗ ಹಲ್ಲಿಗೆ ಸಿಕ್ಕಾಗ `ಕುರ್ರುಮ್` ಎಂದು ನಮಗಷ್ಟೇ ಕೇಳುವ ಹಿತವಾದ ಸದ್ದು, ಒಣದ್ರಾಕ್ಷಿ ಕೊಡುತ್ತಿದ್ದ ಸಿಹಿಯಾದ `ಪಂಚ್`. ಜೊತೆಗೆ ಒಂದಷ್ಟು ಗೋಡಂಬಿಯ ಶ್ರೀಮಂತಿಕೆ! ಆ ಮೊಸರನ್ನದ ಚಂದವೇ ಬೇರೆ.
ಇನ್ನು ಹಣ್ಣುಗಳನ್ನು ಸೇರಿಸಿ ಮೊಸರನ್ನ ಕಲಸಿದ್ದನ್ನು ನಾನು ಮೊದಲು ತಿಂದಿದ್ದು, `Zee Sa Re Ga Ma Pa` ಎಂಬ ರಿಯಾಲಿಟಿ ಶೋಗೆ ಹೋದಾಗ. ಸ್ನೇಹಿತೆ, ಮತ್ತೀಗ ಪ್ರಸಿದ್ಧ ಹಿನ್ನೆಲೆ ಗಾಯಕಿಯಾಗಿರುವ ಶ್ರುತಿ ಪ್ರಶಾಂತ್ ಅವರ ಅಮ್ಮ ಎಲ್ಲ ಸ್ಪರ್ಧಿಗಳಿಗಾಗಿ ತಾವೇ ಅಡುಗೆ ಮಾಡಿಕೊಂಡು ಬಂದು, ಅಕ್ಕರೆಯಿಂದ ಉಣಬಡಿಸಿದಾಗ. ಅಲ್ಲೊಂದು-ಇಲ್ಲೊಂದು ಸಿಗುವ ದ್ರಾಕ್ಷಿ, ಹಾಗೇ ಬಾಯಲ್ಲಿ ಊಟೆಯಾಗುವ ದಾಳಿಂಬೆ ಕಾಳು, ಸಣ್ಣದಾಗಿ ಹೆಚ್ಚಿ ಹಾಕಿದ ಸೇಬು. ಅದಕ್ಕೆಲ್ಲ ಕಿರೀಟವಿಟ್ಟಂತೆ ಇದ್ದ ಸಣ್ಣಗೆ ಹೆಚ್ಚಿದ ಶುಂಠಿ, ಕರಿಬೇವು, ಉದ್ದಿನಬೇಳೆ, ಸಾಸಿವೆ, ಇಂಗಿನ ಒಗ್ಗರಣೆ. ದೇವರೇ, ಅದೆಷ್ಟು ರುಚಿಯಾಗಿತ್ತು! ಜೊತೆಗೆ ಬದನೆಕಾಯಿ ಎಣ್ಣೆಗಾಯಿ ಕೂಡ ಇತ್ತು. 
ಅನ್ನ ಬೇಡ ಅಂದರೆ, ಮೊಸರವಲಕ್ಕಿಯೂ ಅಷ್ಟೇ ರುಚಿ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಭವನದ ಪಕ್ಕದಲ್ಲಿ ಆಗೊಂದು ಪುಟ್ಟ ಟೀ ಅಂಗಡಿ ಇತ್ತು. ಬಸಣ್ಣನ ಡಬ್ಬಿ ಅಂಗಡಿ ಅಂತಲೇ ಪ್ರಸಿದ್ಧವದು. ಅವಲಕ್ಕಿ, ಮಂಡಕ್ಕಿ, ಪುಲಾವ್, ಉಪ್ಪಿಟ್ಟು ಚಹಾ ಇಷ್ಟೇ ಅಲ್ಲಿಯ ಮೆನು.
ವಿಶೇಷ ಎಂದರೆ ಬಸಣ್ಣನ ನಗು ಮತ್ತು ಆತ್ಮೀಯತೆ.
ಅಕ್ಕಾರ್ ಬರ್ರಿ ಇವತ್ತೆನ್ ಕೊಡುನು ರಿ? ಪಲಾವ್? ಮೊಸರವಲಕ್ಕಿ? ಅನ್ನುತ್ತಲೇ ನನ್ನ ಉತ್ತರ ಸಿಗುವ ಮೊದಲೇ ಅವಲಕ್ಕಿ ತಟ್ಟೆ ಮುಂದೆ ಇಡುತ್ತಿದ್ದರು.
ಬಿಳಿ ಅವಲಕ್ಕಿ ಮೊಸರು, ಅದರಮೇಲೆ ಒಂದಷ್ಟು ಕೇಸರಿ ಬಣ್ಣದ ಪುಟಾಣಿ ಚಟ್ನಿ ಪುಡಿ. ಅಲ್ಲಲ್ಲಿ ತೇಲುತ್ತಿದ್ದ ಹಸಿಮೆಣಸು, ಕೊತ್ತಂಬರಿ ಸೊಪ್ಪು. ಬಿಸಿಲಿಗೆ ಮೊಸರು ಅವಲಕ್ಕಿ ತುಂಬಿದ ಆ ಕೈಅಗಲದ ತಟ್ಟೆ ಅಮೃತ ಸಮಾನವೆನಿಸುತ್ತಿತ್ತು.
ನಮ್ಮ ಹಳೇ ಮನೆಯ ಮುಂದೆ ನಮ್ಮದೇ ಸಾರಸ್ವತ ಸಮುದಾಯದ ಕುಟುಂಬದವರು ವಾಸವಿದ್ದರು. ಆ ಮನೆಯ ಮಕ್ಕಳು ಕರೆವಂತೆಯೇ ನಾವೂ ಆ ಮನೆಯ ಹಿರಿಯರನ್ನು ಆಯಿ ಮತ್ತು ಪಪ್ಪಾ ಅಂತಲೇ ಕರೆಯುತ್ತಿದ್ದೆವು. ಅವರ ಅಡುಗೆ ನಮ್ಮ ಅಡುಗೆ ಒಂದೇ ರೀತಿ ಆದರೂ ಆಯಿಯ ಕೈಯ ಕೆಲವೊಂದು ಅಡುಗೆಗಳು ಅತ್ಯದ್ಭುತವಾಗಿರುತ್ತಿದ್ದವು. ಅದರಲ್ಲಿ ಒಂದು ಈ ಮೊಸರವಲಕ್ಕಿ. ಅವಲಕ್ಕಿಯ ಪ್ರತಿ ಅಗಳು ಕೂಡ ಇಂಗು, ಕರಿಬೇವು, ಒಣಮೆಣಸಿನ ಒಗ್ಗರಣೆಯ ಘಮದಲ್ಲಿ ಮಿಂದು ಉಪ್ಪು ಒಂಚೂರು ಸಕ್ಕರೆಯನ್ನು ಮಯ್ಯಿಗೆ ಮೆತ್ತಿಕೊಂಡು ತುಳಸಿ ಪೂಜೆಯ ನಂತರ ನೈವೇದ್ಯವಾಗಲು ಕಾಯುತ್ತ ಕುಳಿತಿರುತ್ತಿತ್ತು ಮತ್ತು, ನಾವು ಅದನ್ನು ತಿನ್ನಲು. ನೆನೆಸಿಕೊಂಡರೆ ಈಗಲೂ ಬಾಯಿ ನೀರೂರುತ್ತದೆ.
ಶ್ರೀಲಲಿತಾ ಸಹಸ್ರನಾಮದಲ್ಲಿ ಶ್ರೀಮಾತೆಯನ್ನು ‘ದಧ್ಯನ್ನಾಸಕ್ತಹೃದಯಾ’ ಎಂದು ಕರೆದಿದ್ದಾರೆ, ಜಗನ್ಮಾತೆಯೇ ಮೊಸರನ್ನದಲ್ಲಿ ಆಸಕ್ತಿ ಹೊಂದಿರುವಾಗ, ನಾವೆಲ್ಲ ಮೊಸರನ್ನದ ಮೋಹದಿಂದ ಹೇಗೆ ತಪ್ಪಿಸಿಕೊಂಡೇವು? ನೀವೇ ಹೇಳಿ.
ಈಗಲೂ ಕಣ್ಣು ಮುಚ್ಚಿ ನೆನಪಿಸಿಕೊಂಡರೆ, ಈ ಎಲ್ಲ ದೃಶ್ಯ, ರುಚಿ, ಘಮ ನನ್ನ ಚಿತ್ತಕ್ಕೆ ಬಂದು ಮತ್ತೊಮ್ಮೆ ಈ ಎಲ್ಲ ರಸಾಸ್ವಾಧನೆಗೆ ನನ್ನನ್ನು ಅಣಿಮಾಡುತ್ತವೆ. ಪ್ರಾಯಶಃ ನನಗೆ ಮೊಸರನ್ನ ಕಲಸಿಕೊಟ್ಟ, ಮಾಡಿಕೊಟ್ಟ ಯಾರಿಗೂ ಅದು ಅಂಥಹ ವಿಶೇಷ ತಿನಿಸು, ಖಾದ್ಯ ಆಗಿರಲಿಕ್ಕಿಲ್ಲ. ಆದರೆ ಇವೆಲ್ಲ ರುಚಿಗಳು ನನ್ನ ನೆನಪಿನ ಕೌದಿಯ ರಂಗು-ರಂಗು ಚೌಕಗಳು.
ಸರಿ-ಸರಿ, ನಾನು nostalgic ನಾರೀಮಣಿ ಸಂಪೂರ್ಣವಾಗಿ ಬದಲಾಗುವ ಮುನ್ನ ನನ್ನೇ ನಾನು ಟೈಮ್ ಟ್ರಾವೆಲ್ ಟ್ರ್ಯಾಪ್ನಿಂದ ಈಚೆಗೆ ಕರೆದು, ನನ್ನನ್ನು ಮಾತ್ರವಲ್ಲ ನಿಮ್ಮನ್ನೂ ಬಚಾವು ಮಾಡಿದೆ.
ಇಲ್ಲದಿದ್ದರೆ ನನ್ನ ನೆನಪಿನ ಪರಿಷೆ ನಿಲ್ಲುವುದಿಲ್ಲ. ಯಾಕೆಂದರೆ ಹೀಗೆ ಅದೆಷ್ಟು ಲೆಕ್ಕಕ್ಕೆ ಸಿಗದಷ್ಟು ನೆನಪುಗಳಿವೆ ನನ್ನ ಬಳಿ. ಈ ವಿಷಯದಲ್ಲಿ ಮಾತ್ರ ನಾನು ಜಗತ್ತಿನ ಅತೀ ಶ್ರೀಮಂತರ ಪಟ್ಟಿಯಲ್ಲಿ ಸೇರಿದರೂ ಆಶ್ಚರ್ಯವಿಲ್ಲ.
ನೋಡಿ, ಏನು ಬರೆಯಲಿ ಎಂದು ಶುರುಮಾಡಿದವಳು, ಎಲ್ಲಿ ನಿಲ್ಲಿಸಲಿ ಎಂದು ಅರ್ಥವಾಗದೆ ನೆನಪುಗಳ ಸುರುಳಿಯನ್ನು ಬಿಚ್ಚಿ ಬಿಚ್ಚಿ ಹಾಕಿದ್ದೇನೆ.
ಪ್ರೀತಿಯಿಂದ ಓದಿ. ನಿಮಗೂ ಈ ನೆನಪುಗಳು ತಂಪು ಅನಿಸಿದರೆ, ಅಲ್ಲೆಲ್ಲೋ ಬದುಕಿನ ದಾರಿಯಲ್ಲಿ ಯಾವುದೋ ಮರೆಯಲಾಗದ ರುಚಿಯನ್ನು ನಿಮ್ಮ ನೆನಪಿನ ಬುಟ್ಟಿಗೆ ಪ್ರೀತಿಯಿಂದ ಬುತ್ತಿ ತುಂಬಿ ಕಳಿಸಿದವರು ನೆನಪಾದರೆ ನನ್ನೊಂದಿಗೂ ಹಂಚಿಕೊಳ್ಳಿ.
ವಂದನೆಗಳು,
ಅಮಿತಾ ರವಿಕಿರಣ್
Tag: ಕನ್ನಡ
ಹೀಗೊಂದು ಹರಟೆ
ನಮಸ್ಕಾರ ಅನಿವಾಸಿ ಬಳಗಕ್ಕೆ.
ಮೇ ಮಾಸ( ತಿಂಗಳಿನ) ದಲ್ಲಿ ಕವೀಂದ್ರ ರವೀಂದ್ರರ ಜನುಮದಿನದ ಸಂಭ್ರಮಾಚರಣೆಯ ಜೊತೆಗೇ ಭಾರತದಲ್ಲಿ 'ತಾಯಂದಿರ ದಿನ' ದ ಸಡಗರವೂ. ಈ ಬಳಗದೆಲ್ಲ ತಾಯಂದಿರಿಗೂ, ತಾಯಂಥಕರಣದ ಎಲ್ಲ ಸಹೃದಯರಿಗೂ ಶುಭಾಶಯಗಳು. ಸುಜಲಾಂ ಸುಫಲಾಂ ವಂದೇ ಮಾತರಂ ಎಂದು ತಾಯ್ನಾಡಿಗೆ ವಂದಿಸುತ್ತ ' ಜಡೆಯಾಚೆ ಮೊಗದಿರುಹಿಯೂ' ಜಗವನ್ನೆಲ್ಲ ಪೊರೆಯುತ್ತಿರುವ ಜಗನ್ಮಾತೆಗೆ ಮಣಿಯುತ್ತ ನನ್ನದೊಂದು ಹಳೆಯ ಬರಹವನ್ನು ಹಂಚಿಕೊಳ್ಳುತ್ತಿರುವೆ..
~ ಸಂಪಾದಕಿ.
ಹೆರಳು – ಮಾರಿ.
ಏನಪಾ ಇದು ಅಂತ ನೀವು ತಲಿ ತುರಸಕೊಳ್ಳೂದರಾಗೇ ನಾನೇ ಹೇಳಿಬಿಡತೀನಿ. ನಮ್ಮ ಉತ್ತರ ಕರ್ನಾಟಕದ ಮಂದಿಗೆ ಈ ಪದ ಚಿರಪರಿಚಿತ. ಇನ್ನ ಉಳದವರಿಗೆ ಹೆರಳು ಗೊತ್ತಿರತದ. ಮಾರಿ ತಿಳೀಲಿಕ್ಕಿಲ್ಲ. ಆದ್ರೂ ಇಲ್ಲಿನ ಸದಸ್ಯರೆಲ್ಲ ಬೇಂದ್ರೆ ಅಜ್ಜನ ‘ ಮುಗಿಲ ಮಾರಿಗೆ ರಾಗರತಿಯ’ ಕೇಳೇ ಇರತೀರಿ. ಹೂಂ.. ನಾನೂ ಅದೇ ಮಾರಿ ಅಂದ್ರ ಮುಖದ ಬಗ್ಗೆನೇ ಹೇಳುತ್ತಿರುವುದು.
ಈ ‘ ಹೆರಳು – ಮಾರಿ’ ದು ಒಂದು ದೊಡ್ಡ ಸುದ್ದಿ. ಮುಂಜಾನಿ ಆಗತಿದ್ದ ಹಂಗೇ “ ಕ್ಯಾಮಾರಿ ಮಾಡಕೊಂಡು ಕೂಡಬ್ಯಾಡ್ರಿ. ಲಗೂ ಲಗೂ ಹೆರಳು-ಮಾರಿ ಮಾಡಕೋರಿ” ಅನ್ನಾಕಿ ನಮ್ಮಾಯಿ. ಮಧ್ಯಾಹ್ನ 4 ಆಯಿತಿಲ್ಲೋ “ ಮೂರುಸಂಜಿ ಆಗಲಿಕ್ಕೆ ಬಂತು, ಎದ್ದು ಹೆರಳು-ಮಾರಿ ಮಾಡಕೋರಿನ್ನ” ಅನ್ನಾಕಿ. ಹೀಂಗs ಮುಂಜಾನೆದ್ರ ಹೆರಳು-ಮಾರಿ, ಸಂಜಿ ಆದ್ರ ಹೆರಳು-ಮಾರಿ, ಹೊರಗ ಹೊಂಟ್ರ ಹೆರಳು-ಮಾರಿ, ಯಾರರೇ ಮನಿಗೆ ಬರತಾರಂದ್ರ ಹೆರಳು-ಮಾರಿ.. ಹೆರಳು-ಮಾರಿ ಸಂಭ್ರಮವೇ ಸಂಭ್ರಮ.
ಸಣ್ಣವರಿದ್ದಾಗ ಅಮ್ಮನೋ, ಮಾಮಿಯೋ, ಮಾಂಶಿಯೋ ಯಾರೋ ಒಬ್ಬರು ಜಿಪುಣತನ ಮಾಡದೇ ಛಂದಾಗಿ ಖೊಬ್ರಿ ಎಣ್ಣಿ ಹಚ್ಚಿ, ಹಣಗೀಲೇ ತೀಡಿ ತೀಡಿ ಹಿಕ್ಕಿ ಬಿಗತಾನ ಬಿಗದು ಎರಡು ಹೆರಳು ಹಾಕಿ ರಿಬ್ಬನ್ನು ಕಟ್ಟಿದರಂದ್ರ ಎಂಥ ಗಾಳಿಗೂ ಆ ಕೂದಲನ್ನ ಹಾರಾಡಿಸೋ ಶಕ್ತಿ ಇರತಿರಲಿಲ್ಲ. ಮುಂಗುರುಳು- ಪಿಂಗುರುಳು, ಪುಡಿಗೂದಲು ಎಲ್ಲ ಮಾಯ ಆಗಿಬಿಟ್ಟಿರತಿದ್ವು. ಎಷ್ಟೋ ಸಲ ಕುತಿಗಿ ಸೈತ ಅಲ್ಲಾಡಿಸಲಿಕ್ಕೆ ಬರತಿರಲಿಲ್ಲ. ಹಿಂತಲೆಯ ಕೂದಲು ಜಗ್ಗಿ ಗುಳ್ಳೆಗಳೆದ್ದು ಬಿಡಬೇಕು ಹಂಗ ಹೆರಳು ಹಾಕಿರತಿದ್ರು. “ ಮ್ಯಾಲ ಕಟ್ಟಬ್ಯಾಡ, ಕೆಳಗೇ ಬಿಡು, ರಿಬ್ಬನ್ ನಾಗ 4 ಅಲ್ಲ 6 ಹೂವು ಮಾಡು, ಅಷ್ಟ ಬಿಗಿ ಬ್ಯಾಡ ಸ್ವಲ್ಪ ಸಡಿಲ ಹಾಕು” ಅಂತೆಲ್ಲ ನಾವು ಏನು ಹೇಳಿದರೂ ‘ಹಾಂ ಹೂಂ’ ಸಹಿತ ಅನ್ನದೇ ತಮ್ಮದೇ ಮನಮಾನಿ ಮಾಡತಿದ್ರು. “ ನಿಮಗೇನ ತಿಳೀತದ? ನೀವು ಹೇಳಿದ್ಹಾಂಗ ಮಾಡಿದ್ರ ಮುಗೀತು. ತಲ್ಯಾಗ ಎರಡು ಕೂದಲ ಉಳ್ಯಂಗಿಲ್ಲ ಆಮ್ಯಾಲೆ” ಅಂತ ಹೆದರಸತಿದ್ರು. ಬಾಬ್ ಕಟ್, ಪೋನಿ ಟೇಲ್, ಸ್ಟೆಪ್ ಕಟ್ ಗಳಾಗಲಿ, ಶಾಂಪೂ ಮಾಡಿಕೊಂಡು ಸಿಲ್ಕಿ ಸಿಲ್ಕಿ ಕೂದಲಾ ಹಾರಾಡಿಸೂದಾಗಲಿ, ಬೆನ್ನಹಿಂದ ಕೂದಲ ಹರವಿಕೊಂಡು ಅಡ್ಡಾಡೂದಾಗಲಿ, ಮುಂಗುರುಳು ತೀಡಿಕೊಳ್ಳೂದಾಗಲಿ ಬಿಲ್ಕುಲ್ ಮಾಡೂಹಂಗಿರಲಿಲ್ರೀ.
ಒಮ್ಮೆ ಯಾರೋ ತಿರುಪತಿಗೆ ಹೋಗಿದ್ವಿ ಅಂತ ಪ್ರಸಾದದ ಲಾಡು ಕೊಡ್ಲಿಕ್ಕೆ ಬಂದಿದ್ದರು. ಅವರು ಹಂಗs ಮಾತಾಡಕೋತ ಅವರ ಮನೆಯಾಗ ತಿರುಪತಿಗೆ ಹೋದರೆ ಹೆಣ್ಣು ಮಕ್ಕಳು ಗಂಡಸರು ಅನ್ನಲಾರದೆ ಎಲ್ಲಾರು ಮುಡಿ ಒಪ್ಪಿಸೋ ಪದ್ಧತಿ ಅದ ತಮ್ಮ ಮನ್ಯಾಗ ಅಂತ ಹೇಳುತ್ತಿದ್ದರು. ಅವರು ಹೋದಮೇಲೆ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದ ನನ್ನ ಮಗ “ ನೀನೋ! ನಿನ್ನ ವೆಂಕಪ್ಪನೋ!” ಎಂದು ನಗೆಯಾಡಿ “ ಏನೇ ಅನ್ನು ಅವನ ಲಡ್ಡು ಮಾತ್ರ ಮಸ್ತ ಇರ್ತಾವ” ಅಂತ ನನಗೆ ಅಣಕಿಸಿ ಉಂಡಿ ಮೆದ್ದು ಎದ್ದು ಹೋದ. ಆಮೇಲೆ ‘ಓ ಮೈ ಗಾಡ್’ ಸಿನಿಮಾದಾಗ ಇದೇ ಮುಡಿ ಕೊಡುವ ಪದ್ಧತಿಯ ಬಗ್ಗೆ ಪರೇಶ್ ರಾವಲ್ ‘ಮುಂಜಾನೆದ್ದು ಬಾಗಲ ತೆಗೆದು ಕೂಡಲೇ ರಾಶಿ ರಾಶಿ ಕೂದಲು ನಿಮ್ಮ ಮನೆ ಮುಂದೆ ಹರಡಿದ್ದರೆ ನಿಮಗೆ ಖುಷಿ ಅನಿಸುವುದೇ’ ಎಂಬರ್ಥ ಬರುವ ಮಾತಿನ ಮೂಲಕ ವ್ಯಂಗ್ಯವಾಡುವ ಸೀನ್ ಅದ. ಆಗಾಗ ಹೌದು, ಯಾಕಿರಬಹುದು ಇಂಥ ಪದ್ಧತಿ ಅಂತ ಯೋಚಿಸಿದಾಗಲೆಲ್ಲ ಅನ್ನಿಸುವುದಿಷ್ಟೇ. ಮನುಷ್ಯ ಅಥವಾ ಭಕ್ತ ಅಲ್ಲಿ ಮುಡಿ ಕೊಡುತ್ತಿರುವುದು ಬರಿ ತನ್ನ ಕೂದಲಿನ ರಾಶಿಯನ್ನಲ್ಲ, ತನ್ನ ರೂಪವನ್ನು.. ಸೌಂದರ್ಯವನ್ನು. ಒಂದರ್ಥದಾಗ ತನ್ನತನವನ್ನು, ತನ್ನ ಅಸ್ತಿತ್ವವನ್ನು ಅಂತ. ನೋಡಿ ಕೂದಲು ದೇಹದ ನಿರ್ಜೀವವಾದ ಒಂದು ಭಾಗ. ಆದರೆ ಅದು ನಮಗೆ ಕೊಡುವ ಖುಷಿ, ಆತ್ಮವಿಶ್ವಾಸ, ಹೆಮ್ಮೆಗಳು ಅಷ್ಟಿಷ್ಟಲ್ಲ. ಕನ್ನಡಿ ಮುಂದೆ ನಿಂತು ಕೂದಲು ತೀಡದ, ಮುಂಗುರುಳನ್ನು ಬೆರಳಲ್ಲಿ ಸುತ್ತದ ಒಂದೇ ಒಂದು ಮಾನವ ಜೀವಿಯನ್ನು ತೋರಿಸಿ ಬಿಡಿ ಸಾಕು. ಹುಡುಗಿಯರಿಗಂತೂ ಅವರ ಜಡೆ, ಕೂದಲು ಸರ್ವಸ್ವ. ಹಂಗಂತ ಹುಡುಗರೇನೂ ಕಮ್ಮಿ? ದಿನಕ್ಕ ನೂರು ಸಲ ಹೋಗುತ್ತಾ ಬರುತ್ತಾ ಕನ್ನಡಿ ಮುಂದೆ ನಿಂದ್ರೋದೇನು? ಒಮ್ಮೆ ಕೈಯಿಂದ, ಒಮ್ಮೆ ಬ್ರಷ್ ನಿಂದ, ಒಮ್ಮೆ ಪಾಕೆಟ್ ನ ಪುಟ್ಟ ಬಾಚಣಿಕೆಯಿಂದ ಕ್ರಾಪ್ ತೀಡಿದ್ದೇ ತೀಡಿದ್ದು. ಹಿಂಗ ಕೂದಲು ಸೌಂದರ್ಯದ ಪ್ರತೀಕ. ಅದನ್ನೇ ತೆಗೆದು ದೇವನಡಿ ಇಡುವುದು ನಾವು ನೀವು ಚ್ಯಾಷ್ಟಿ ಮಾಡಿ ನಕ್ಕಷ್ಟು ಸುಲಭದ ಕೆಲಸ ಏನಲ್ಲ.
ಈ ಕೂದಲಿನ ರಗಳೆ ಇರಲಿಲ್ಲ ಅಂದರೆ 108 ತರದ ಹೇರ್ ಆಯಿಲ್ ಗಳು, ಸಾವಿರಾರು ತರದ ಶಾಂಪೂ, ಕಂಡಿಷನರ್, ಹೇರ್ ಜೆಲ್,ಹೇರ್ ಕ್ರೀಮ್, ಹೇರ್ ಡೈಗಳು ಇತ್ಯಾದಿಗಳನ್ನೆಲ್ಲ ಉತ್ಪಾದಿಸುವ ಕಾರ್ಖಾನೆಗಳು, ಅವುಗಳ ಮೂಲಕ ಅನ್ನ ಸಂಪಾದಿಸುವ ಲಕ್ಷಾಂತರ ಕುಟುಂಬಗಳ ಗತಿ ಏನಾಗುತ್ತಿತ್ತು? ಸಲೂನ್ ಗಳು, ಹೇರ್ ಹೆಡ್ ಮಸಾಜ್ ಸೆಂಟರ್ ಗಳು, ಹೇರ್ ಸ್ಪಾ, ಬ್ಯೂಟಿ ಪಾರ್ಲರ್ ಗಳು ಇವುಗಳೆಲ್ಲ ಬಾಗಿಲು ಬಂದ್ ಮಾಡಿಕೊಂಡು ಹೋಗಬೇಕಾಗುತ್ತಿತ್ತು. ನಾನಾ ತರದ ಹೂವುಗಳು, ಕಸ್ತೂರಿದವನಗಳು, ಕ್ಯಾದಿಗೆಗಳು, ಆಭರಣಗಳು, ನೂರಾರು ತರದ ಫ್ಯಾಶನೇಬಲ್ hair accessories, ಕ್ಲಿಪ್ಸ್, ರಬ್ಬರ್ ಬ್ಯಾಂಡ್, ಹೇರ್ ಪಿನ್ ಕೇಳುವವರಿಲ್ಲದೆ ಅನಾಥವಾಗುತ್ತಿದ್ದವು. ಕವಿಗಳಿಗೆ ಬರೆಯಲು ಮುಖ್ಯವಾದ ಒಂದು ವಿಷಯ ಕಮ್ಮಿಯಾಗುತ್ತಿತ್ತು. ನಲ್ಲ ಬಂದು ಹೂ ಮುಡಿಸಿ ನಲ್ಲೆಗೆ ಪ್ರೇಮ ನಿವೇದನೆ ಮಾಡಿಕೊಳ್ಳಲಾಗುತ್ತಿರಲಿಲ್ಲ. ಮೊಗ್ಗಿನ ಜಡೆ ಹೆಣೆಯುವವರ, ದಂಡೆ ಮಾಲೆ ಕಟ್ಟುವವರ ಕಸುಬಿಗೆ ಕಲ್ಲು ಬೀಳುತ್ತಿತ್ತು.
ಎಲ್ಲೆರೇ ಊಟ ತಿನಿಸಿನಲ್ಲಿ ಒಂದೆಳೆ ಕೂದಲು ಕಂಡರೆ ಕಸಿವಿಸಿ ಪಡ್ತೀವಿ. ಆದರೆ ಕೂದಲವಿಲ್ಲದ ಜೀವನ ಊಹಿಸಿಕೊಳ್ಳುವುದು ಕಷ್ಟ. ಈ ಕೇಶದ ಮಹಿಮೆ, ಸಾಮರ್ಥ್ಯ ಅಗಾಧವಾದದ್ದು. ಪುರಾಣ, ಇತಿಹಾಸಗಳು ಇದಕ್ಕೆ ಸಾಕ್ಷಿಯಾಗಿವೆ. ಸುರಗಂಗೆ ಭೂಲೋಕಕ್ಕೆ ಅವತರಿಸಬೇಕಾದರೆ ಶಿವನ ಜಡೆಯೇ ಬೇಕಾಯಿತು. ರಭಸದಿಂದ ಧಮ್ಮಿಕ್ಕುವ ಅವಳನ್ನು ತಡೆಯಲು ಶಿವನ ಜಡೆ ಇರದಿದ್ದರೆ ಆ ಮಂದಾಕಿನಿಯ ರಭಸದ ಸೊಕ್ಕಿಗೆ ಜಗತ್ತೇ ದಿಕ್ಕೇಡಿಯಾಗುತ್ತಿತ್ತೇನೋ? ಪಕ್ಷಕ್ಕೊಮ್ಮೆ ಬಿಳಿ ಪತ್ತಲ ನೇಯುವ ಹುಣ್ಣಿಮೆ ಹಸ್ತದ ಚಂದ್ರನಿಗೂ ಆಶ್ರಯ ಈ ಜಡೆಯೇ. ನಮ್ಮ ನಾಡಿನ ಅನೇಕ ಮನೆತನಗಳ ಕುಲದೈವವಾದ ವೀರಭದ್ರನೂ ಕೂಡ ಶಿವನ ಜಟೆಯಿಂದಲೇ ಹುಟ್ಟಿದವನೆಂಬ ಪ್ರತೀತಿ.
ಇನ್ನು ಮಹಾಭಾರತ ನಡೆದದ್ದೇ ದ್ರೌಪದಿಯ ಮುಡಿಯಿಂದ. ಅವಳು ಮುಡಿಬಿಚ್ಚಿದಾಗ ಭಾರತ ಆರಂಭವಾಯಿತು, ಕಟ್ಟಿದಾಗ ಮುಕ್ತಾಯವಾಯಿತೆಂಬ ಮಾತಿದೆ. ತನ್ನ ಕೂದಲಿಗೆ ಕೈ ಹಾಕಿ ಎಳೆದೊಯ್ದ ದುರುಳನ ಕರುಳ ಬಿಗಿದು ಅವನ ರಕ್ತದಿಂದ ಅದನ್ನುತೊಯ್ಯಿಸದೇ ತಾನು ಮುಡಿ ಕಟ್ಟಲಾರೆನೆಂಬ ದ್ರೌಪದಿಯ ಪ್ರತಿಜ್ಞೆಗೆ 18 ಅಕ್ಷೋಹಿಣಿ ಸೈನ್ಯದ ಭಾರತ ಯುದ್ಧವೇ ನಡೆಯಬೇಕಾಯಿತು. ಹೌದಲ್ಲವೇ? ದುಶ್ಯಾಸನ ಕೈ ಹಾಕಿದ್ದು ಬರೀ ಹೆಣ್ಣೋರ್ವಳ ತಲೆ ಕೂದಲಿಗೆ ಅಲ್ಲ, ಯುಗದ ಅಸ್ಮಿತೆಗೆ.. ಸ್ತ್ರೀತನದ ಗರಿಮೆಗೆ.. ಸಂಸ್ಕಾರ ಸಂಸ್ಕೃತಿಗಳ ಬುಡಕ್ಕೇ ಕೈ ಹಾಕಿದ್ದ. ಅದಕ್ಕೆಂದೇ ಅದಕ್ಕೆ ಸಾಕ್ಷಿಯಾದ, ನೇರವಾಗಿ ಪರೋಕ್ಷವಾಗಿ ಭಾಗಿಯಾದ ಎಲ್ಲರೂ ಅದಕ್ಕೆ ಬೆಲೆ ತೆರಲೇಬೇಕಾಯಿತು ಮಾಡಿದ್ದುಣ್ಣೋ ಮಹಾರಾಯ ಅನ್ನೋ ಹಂಗ.
ಧನನಂದನಿಂದ ಅಪಮಾನಕ್ಕೆ ಒಳಗಾದ ಆಚಾರ್ಯ ಚಾಣಕ್ಯನೂ ಸಹ ವೈರಿಯನ್ನು ಅಮೂಲಾಗ್ರವಾಗಿ ನಾಶ ಮಾಡದೆ ಶಿಖೆ ಕಟ್ಟಲಾರೆನೆಂದು ಪ್ರತಿಜ್ಞೆಗೈದು ಶಿಖೆಯ ಕೂದಲು ಬಿಟ್ಟದ್ದು. ಯಾವ ಅಸ್ತ್ರಗಳಿಗೂ ಇರದ ಮೊನಚನ್ನು ಅವನ ಶಿಖೆಯ ಕೇಶದಲ್ಲಿ ಕಂಡಿತು ಮನುಕುಲದ ಇತಿಹಾಸ. ಭಾರತದ ಇತಿಹಾಸಕ್ಕೆ ಚಂದ್ರಗುಪ್ತ ಮೌರ್ಯ, ಅಶೋಕರಂತಹ ಅರಸರ ಸುವರ್ಣ ಯುಗವನ್ನು ದಯಪಾಲಿಸಿದ್ದು ಇದೇ ಕೇಶ ಎಂದಾಯಿತಲ್ಲವೇ?
ಕೆಡುವ ಗಂಡರನ್ನು ತೊರೆದು ಚೆನ್ನಮಲ್ಲಿಕಾರ್ಜುನನತ್ತ ಮೊಗದಿರುಹಿ ಹೊರಟ ಅಕ್ಕಳನ್ನು ಸಂರಕ್ಷಿಸಿದ್ದೇ ಈ ಕೇಶ ರಾಶಿ. ಇನ್ನು ನಮ್ಮ ಸಾಹಿತ್ಯದಲ್ಲಿ ಈ ಜಡೆಯ, ಕೇಶರಾಶಿಯ, ಮುಂಗುರುಳಿನ ವರ್ಣನೆಗಳು ಹೇರಳವಾಗಿ ದೊರೆಯುತ್ತವೆ. ನೀಲವೇಣಿ, ನಾಗವೇಣಿ ಇತ್ಯಾದಿ ಹೆಸರುಗಳನ್ನು ಕೇಳಿದೊಡನೆ ತೊನೆದಾಡುವ ಜಡೆಗಳ ಚಿತ್ರ ಕಣ್ಮುಂದೆ ಬರುತ್ತದೆ. “ ಅವಳೊಮ್ಮೆ ಹರಳಕೆದರಿ ಕಪ್ಪು ಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ ದೂರದಲ್ಲಿ ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ” ಎಂದು ಮನದನ್ನೆಯನ್ನು ವರ್ಣಿಸುವ ಕೆ ಎಸ್ ಎನ್ “ನಾಗರ ಕುಚ್ಚಿನ ನಿಡು ಜಡೆಯವಳು ಈಕೆಯು ಬಂದುದು ಎಲ್ಲಿಂದ” ಎಂದು ಅಚ್ಚರಿ ಪಡುತ್ತಾರೆ. “ ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೇ ಸಿಂಗಾರ ಕಾಣದ ಹೆರಳು “ ಎಂದು ಅಕ್ಕಿ ಆರಿಸುವಾಗ ಕವಿತೆಯಲ್ಲಿ ಬಣ್ಣಿಸುತ್ತಾರೆ.
ಮುಂಗುರುಳು ದುಂಬಿಗಳಂತೆ ಅಂತಲೂ, ಯೆ ಜುಲ್ಫೆಹೈ ಜೈಸೆ ಕಾಂಧೋ ಪೆ ಬಾದಲ್ ಗಿರೆ ಹುವೆ’ ಅಂತಲೂ, ಉಡೆ ಜಬ್ ಜಬ್ ಜುಲ್ಫೆ ತೇರಿ ಎಂದೂ, ಯೆ ಗೇಸುವೋಂಕಿ ಘನಿ ಛಾವ್ ಹೈ ಮೇರೆ ಖಾತಿರ್ ಅಂತಲೂ ನೂರಾರು ಸಿನೆಮಾ ಹಾಡುಗಳು ಈಗಲೂ ರಸಿಕರ ಹೃದಯಕ್ಕ ಲಗ್ಗೆ ಹಾಕತಾವ. ಸರ್ ಜೋ ತೇರಾ ಚಕರಾಯೆ ಯಾ ದಿಲ್ ಡೂಬಾ ಜಾಯೆ ಆಜಾ ಪ್ಯಾರೆ ಪಾಸ್ ಹಮಾರೆ ಕಾಹೆ ಘಬರಾಯೆ ಅಂತ ಚಂಪಿ ( ಮಸಾಜ್) ಮಾಡತಾ ಹಾಡು ಹೇಳೋ ಜಾನಿ ವಾಕರ್ ನನ್ನು ಮೆಚ್ಚದವರೇ ಇಲ್ಲ.
ಅಣ್ಣ-ತಮ್ಮ, ಅಕ್ಕ ತಂಗಿಯರ ಜಗಳಕ್ಕ ಈ ಕೂದಲ ಬೇಕೇ ಬೇಕು ಅವರ ಜುಟ್ಟು ಇವರ ಕೈಯಾಗ ಇವರ ಜುಟ್ಟು ಅವರ ಕೈಯಾಗ ಅಂದಾಗನೇ ಅದು ಖರೇ ಸೋದರ ಪ್ರೇಮ. ಕೈ ಕೈ ಜಗಳಕ್ಕಿಂತ ಕೂದಲ ಕೂದಲ ಜಗಳಾನೇ ಬಹಳ ಆಗ್ಯಾವರಿ ನಾವು ಸಣ್ಣವರಿದ್ದಾಗ. ಈಗಲೂ ಅಷ್ಟೇ ಬಹಳ ಸಿಟ್ಟು ಬಂತಂದ್ರ ಮೈ ಹರಕೊಂಡು ಕೂದಲ ಕಿತ್ತುಕೊಳ್ಳುವಷ್ಟs ಸಂತಾಪ ಆಗುತದ್ರೀ.
ಇನ್ನೊಂದ ವಿಷಯ.. ಈ ಕೂದಲಾನ್ನ ಕತ್ತರಿಸೂದು ಅಂದ್ರ ಹೇರ್ ಕಟ್ ಎಲ್ಲಾ ಯಾವಾಗ ಬೇಕಂದ್ರ ಆವಾಗ ಮಾಡೂ ಹಂಗಿರಲಿಲ್ರೀ. ಹುಣ್ಣಿಮೆ, ಅಮವಾಸಿ, ಏಕಾದಶಿ, ದ್ವಾದಶಿ, ವೆಂಕಪ್ಪನ ಒಕ್ಕಲದವರಿದ್ರ ಶನಿವಾರ ಹೀಂಗ ದಿನಾ ನೋಡಿ ಸಲೂನ್ ಗೆ ಹೋಗಬೇಕಾಗಿತ್ತು. ಹೆಣ್ಣು ಮಕ್ಕಳಂತೂ ಕೂದಲಿಗೆ ಕತ್ತರಿನೇ ಹಚ್ಚೂ ಹಂಗಿರಲಿಲ್ರೀ. ಗಂಡಸರೂ ಸಹ ಹಜಾಮತಿ ಮಾಡಿಸಿಕೊಂಡು ಬಂದಮ್ಯಾಲೆ ಹಾಕಿದ್ದ ಬಟ್ಟೆ ಎಲ್ಲ ತೊಯ್ಯಿಸಿಟ್ಟು ಕೈಯಾಗ ಒಂದ ಹನಿ ಖೊಬ್ರಿ ಎಣ್ಣಿ ಹಾಕಿಸಿಕೊಂಡು ತಲಿಗೆ ಹಚಗೊಂಡು ಎರಡು ತಂಬಿಗೆ ಯಾರದರೇ ಕಡೆ ನೀರು ಹಾಕಿಸಿಕೊಂಡ ಮ್ಯಾಲೆನೇ ಗಂಗಾಳು – ತಂಬಿಗಿ ಮುಟ್ಟೂದು. ನಮ್ಮ ಮಕ್ಕಳಿಗೆ ಈಗ ಇವನ್ನೆಲ್ಲ ಹೇಳಿದ್ರ’ ಐಯ್’ ಅಂತ ಬಾಯಿ ತಕ್ಕೊಂಡು ನಂಬಲಾರದ ಕೂತಿರತಾರ ಕೇಳಕೋತ. ನಮಗೂ ಅಷ್ಟೇ. ತಲಿಗೆ ಹರಸಿ ಒಂದ್ಹನಿ ಎಣ್ಣಿ ಹಚಗೊಳ್ಳದ ತಲಿಸ್ನಾನ ಮಾಡೂ ಹಂಗಿರಲಿಲ್ಲ. ಒಣ ನೀರು ಹಾಕಿಕೊಳ್ಳೂದು ಅನಿಷ್ಟ ಅಂತ ನಂಬಿಕೆ. ದ್ವಾದಶಿ ಅಂತೂ ಅಪ್ಪಿ ತಪ್ಪಿನೂ ಎರಕೊಳ್ಳೂ ಹಂಗಿರಲಿಲ್ಲ. ಇವಕ್ಕೆಲ್ಲ ಕಾರಣಗಳೂ ಹಲವಾರು ಇದ್ದಾವು! ಹುಡುಕಿ ನೋಡಿದರೆ ಸಿಕ್ಕಾವು!!
ನಮ್ಮ ಬಲಕುಂದ್ಯಾಗ ಒಬ್ಬ ಮುತ್ಯಾ ಬರತಿದ್ದರೀ. ಬಾಂಬೆ ಮಿಠಾಯಿ, ಅಜ್ಜೀ ಕೂದಲಾ ( cotton candy )ಎಲ್ಲಾ ತಗೊಂಡು. ಅವನಿಗೆ ಹೋಗಿ ನಮ್ಮ ಉದುರಿದ ಕೂದಲನ್ನ ಕೊಟ್ರ ಆ ತಿಂಡಿ ತಿನಿಸುಗಳನ್ನೆಲ್ಲ ಪುಗಸೆಟ್ಟೆ ಕೊಡತಿದ್ದ. ಅದಕ್ಕಂತ ಹೆರಳ ಆದ ಕೂಡಲೇ ನಾವೆಲ್ಲ ಮಕ್ಕಳು ಹಣಿಗೆ ಒಳಗಿನ ಕೂದಲಾ ತೆಗೆದು ಸುರಳಿ ಸುತ್ತಿ ನಮ್ಮ ನಮ್ಮ ಕೂದಲನ್ನ ಬ್ಯಾರೆ ಬ್ಯಾರೆ ಮಾಡಿಕೊಂಡು ಮನಿ ಹಿಂದಿನ ಮಾಡದಾಗ ಒಯ್ದು ಇಡತಿದ್ದ ನೆನಪು. ಬಹುಶ: ಅವುಗಳಿಂದ ಚೌರಿ ಇತ್ಯಾದಿಗಳನ್ನು ಮಾಡುತ್ತಿದ್ದರೋ ಏನೋ? ತಿರುಪತಿ – ತಿರುಮಲಗಳಲ್ಲಂತೂ ಈ ಕೂದಲುಗಳದೇ ಕೋಟ್ಯಂತರ ರೂಪಾಯಿಗಳ ಆದಾಯ ಅದ ಅಂತ್ರೀ. ಅದರಿಂದಲೇ ತಿರುಪತಿ _ತಿರುಮಲ ದೇವಸ್ಥಾನದವರು ಅನೇಕ ಆಸ್ಪತ್ರೆ, ಶಾಲಾಕಾಲೇಜುಗಳು ಧರ್ಮಛತ್ರಗಳು, ಪುನರುಜ್ಜೀವನಗಳಂಥ ಚಾರಿಟಿ ಟ್ರಸ್ಟ್ ಗಳನ್ನು ನಡೆಸುತ್ತಾರೆಂದು ಎಲ್ಲೋ ಓದಿದ ನೆನಪು.
ನಾವು ಸಣ್ಣವರಿದ್ದಾಗ ಓದೂ ಚಂದಮಾಮಾ, ಬಾಲಮಿತ್ರ ಕಥಿ ಒಳಗ ಈ ಕೂದಲೆಳೆ ತಗೊಂಡು ಕಾಲಾ ಜಾದೂ, ಮಾಟಮಂತ್ರ, ಭಾನಾಮತಿ ಮಾಡಿದಂಥ ಕಥೆಗಳನ್ನೋದಿ ಮೈ ಜುಮ್ ಅನ್ನಿಸಿಕೊಂಡಿದ್ದೂ ನೆನಪಿದೆ. ಎಲ್ಲೆರೇ ನಮ್ಮ ಕೂದಲೆಳೆಯನ್ನೂ ಯಾರರೇ ತಗೊಂಡು ಕಾಲಾಜಾದೂ ಮಾಡಿದ್ರ ಅನಸತಿತ್ತು. ಆದ್ರ ಹಂಗಾಗಲಿಕ್ಕೆ ನಾವೇನು ರಾಜಕುಮಾರಿಯರೋ, ಶ್ರೀಮಂತ ವಣಿಕ್ ಪುತ್ರಿಯರೋ, ಸುರಸುಂದರಿಯರೋ ಇರಲಿಲ್ಲ ಅನ್ನೋದು ಅರ್ಥವಾಗದ ವಯಸ್ಸು ಅದು.
ತಾಯ ಹೊಟ್ಟೆಯಲ್ಲಿ ಮಗುವಿದ್ದಾಗಲಿಂದಲೇ ಮಗುವಿನ ಕೂದಲಿನ ಅಂದಾಜು ನಡದಿರತದ್ರೀ. ನಮ್ಮ ಕಡೆಯೆಲ್ಲ 7-8 ತಿಂಗಳಿಗೆಲ್ಲ ಸ್ವಲ್ಪ ಎದೆ ಯುರಿ ಎಲ್ಲಾ ಬಂದ್ರ ‘ ಕೂಸಿಗೆ ಜಾವಳ ಭಾಳ ಇರಬೇಕು. ಅದಕ್ಕs ಎದಿ ಉರೀತದ ಅಂತಾರ ಮನ್ಯಾಗಿನ ಹಿರಿಯರು. ಕೂಸು ಹುಟ್ಟಿದ ಮ್ಯಾಲೆನೂ ಅಷ್ಟೇ. ಕೂಸು ಆರಾಂ ಅದನ? ಯಾರಂಗ ಅದ? ಜಾವಳ ಭೇಷ್ ಅವನ?ಅಂತಾನೇ ಎಲ್ಲರ ಪ್ರಶ್ನೆ. ಮುಂದ ಜಾವಳ, ಮುಂಜವಿ ಅಂತ ಈ ಕೂದಲಿಗೆ ಸಂಬಂಧಿಸಿದ ಕಾರ್ಯಕ್ರಮ ಗಳೇ. ಹೆಣ್ಣು ಮಗು ಇದ್ರ ದಿನಕ್ಕೊಂದು ಕೇಶಾಲಂಕಾರ.. ಹೂವು.. ಶೖಂಗಾರ.
“ ಹೆಣ್ಣು ಮಕ್ಕಳಿಗೆ ಕೂದಲು ಉದ್ದಾ ಇದ್ರೆ ನೋಡೋಕೇನೋ ಚಂದ. ಆದ್ರೆ ಆರೈಕೆ ಭಾಳ ಕಷ್ಟ” ಎನ್ನುತ್ತಾರೆ ನಮ್ಮ ಹೆಂಗರುಳ ಕವಿ ಎಚ್ಚೆಸ್ವಿ ತಮ್ಮ ‘ ಉರಿಯ ಉಯ್ಯಾಲೆ’ಯಲ್ಲಿ. “ ರೋಮ ರೋಮಗಳಲ್ಲಿ ಭೀಮರಕ್ಷಿಯ ಬಲ ಕೊರಳಾಗ ಕಟ್ಟೀರಿ ಒಂದಾನ” ಎಂದು ಕರಡಿ ಕುಣಿತದಲ್ಲಿ ಹೇಳುತ್ತಾರೆ ನಮ್ಮ ವರಕವಿ. ಅಂದಹಂಗ ಜಿ. ಎಸ್. ಎಸ್. ರ ಜಡೆ ನಿಮಗೆಲ್ಲ ಗೊತ್ತಿರತದ. ಆದ್ರೂ ನನ್ನ ಖುಷಿಗೆ ಮತ್ತೊಮ್ಮೆ ಇಲ್ಲಿ ಹಂಚಿಕೊಳ್ಳುತ್ತಿರುವೆ.
“ಲಲನೆಯರ ಬೆನ್ನಿನೆಡೆ ಹಾವಿನೊಲು ಜೋಲ್ವ ಜಡೆ ಅತ್ತಿತ್ತ ಹರಿದ ಜಡೆ
ಚೇಳ್ ಕೊಂಡಿಯಂಥ ಜಡೆ ಮೋಟು ಜಡೆ, ಚೋಟು ಜಡೆ ಚಿಕ್ಕವರ ಚಿನ್ನ ಜಡೆ
ಎಣ್ಣೆ ಕಾಣದೇ ಹಿಣಿಲು ಹಿಣಿಲಾಗಿ ಹೆಣೆದ ಜಡೆ
ಬೆವರಿನಲಿ, ಧೂಳಿನಲಿ ನೆನೆದುಕೊಂಡಿರುವ ಗಂಟು ಜಡೆ ಅಕ್ಕತಂಗಿಯ ಮುಡಿಯ ಹಿಡಿದು ನಾನೆಳೆದಂಥ ಮಲ್ಲಿಗೆಯ ಕಂಪು ಜಡೆ
ಮಾತೖಮಮತಾವೖಕ್ಷ ಬಿಟ್ಟ ಬಿಳಲಿನಂತೆ ಹರಿವ ತಾಯ್ ಜಡೆ ‘ ಕುರುಕುಲ ಜೀವಾಕರ್ಷಣ ಪರಿಣತ’ ಆ ಪಾಂಚಾಲಿಯ ಜಡೆ ಸಂಜೆಯಲಿ ಹಗಲು ಕೆದರುವ ಕತ್ತಲೆಯ ಕಪ್ಪು ಜಡೆ
ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ ಬೆಳಕು ಜಡೆ
ಒಮ್ಮೊಮ್ಮೆ ಮುಗಿಲಲ್ಲಿ ತೇಲುತ ಬರುವಂಥ ಬೆಳ್ಳಕ್ಕಿಗಳ ಜಡೆ
ಕ್ರೌಂಚಗಳ ಜಡೆ
ಮಾಮರದಿ ಬಳುಕುತಿಹ ಹೂ ಬಿಟ್ಟ ಬಳ್ಳಿ ಜಡೆ
ಕಾಡು ಬಯಲಿನ ಹಸುರು ಹಸುರಲಿ ಹರಿ ಹರಿದು ಮುನ್ನಡೆವ ಹೊಳೆಯ ಜಡೆ
ಶ್ರೇಣಿ ಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ
ಗಿರಿಶಿವನ ಶಿರದಿಂದ ಹಬ್ಬಿ ಪಸರಿಸಿದ ಕಾನನದ ಹಸುರು ಜಡೆ
ನಕ್ಷತ್ರಗಳ ಮುಡಿದ ನಟ್ಟಿರುಳ ನಭದ ಜಡೆ
ಮುಂಗಾರು ಮೋಡಗಳು ದಿಕ್ಕು ದಿಕ್ಕಿಗೆ ಬಿಚ್ಚಿ ಹರಡಿರುವ ಮಳೆಯ ಜಡೆ
ಚಂದ್ರಚೂಡನ ವ್ಯೋಮಕೇಶನ ವಿಶ್ವವನೇ ವ್ಯಾಪಿಸುತ ತುಂಬಿರುವ ಜಡೆ
ಗಾನಗಳ, ಕಾವ್ಯಗಳ, ಶಿಲ್ಪಗಳ ಕಲೆಯ ಜಡೆ
ಎಲ್ಲವೂ ರಮ್ಯವೆಲ್ಲ! ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ ಕಾಣದಲ್ಲ!!
ಒಟ್ಟಿನಾಗ ಈ ಹೆರಳು ಮಾರಿಯಿಂದ ಇಷ್ಟೆಲ್ಲ ಮಾತು ಆತು ನೋಡ್ರಿ. ಓದಿ ಹೆಂಗನ್ನಸ್ತು ಅಂತ ನಿಮ್ಮದೂ ಎರಡು ಮಾತು ಸೇರಸ್ರಿ.
~ ಗೌರಿಪ್ರಸನ್ನ