ಭೈರಪ್ಪ ನಮನ


ಅನಿವಾಸಿ ಬಂಧುಗಳಿಗೆಲ್ಲ ನಮಸ್ಕಾರ. ಜೊತೆಗೇ ನಾಡಹಬ್ಬ ದಸರೆಯ ಹಾರ್ದಿಕ ಶುಭಾಶಯಗಳು. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನವದುರ್ಗೆಯರು ತಮ್ಮೆಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.
ಈ ನಾಡ ಹಬ್ಬದ ಸರಸ್ವತಿ ಪೂಜೆಯ ಸಂದರ್ಭದಲ್ಲಿ ಸರಸ್ವತಿ ಸಮ್ಮಾನರಾದ ಸರಸ್ವತಿ ಪುತ್ರನನ್ನು ನಾಡು ಕಳೆದುಕೊಂಡ ವಿಷಾದವಿದೆಯಾದರೂ ಅಕ್ಷರಗಳಿಗೆಂದಿಗೂ ಸಾವಿಲ್ಲ, ಅಕ್ಷಯ ಆಯಸ್ಸು ಅವುಗಳಿಗೆ. ನಾಡಿನ ಹೆಮ್ಮೆಯ ಹೆಸರಾಂತ ಸಾಹಿತಿ ಭೈರಪ್ಪನವರು ಆ ಅಕ್ಷರ ರೂಪದಲ್ಲಿ ಕೀರ್ತಿ ಶರೀರದಲ್ಲಿ ಚಿರಕಾಲ ನಮ್ಮೊಡನೆ ಇರುತ್ತಾರೆ ಎಂಬುದು ಸಮಾಧಾನದ ವಿಷಯ.
ಒಂದು ರೀತಿಯಲ್ಲಿ ನನ್ನನ್ನು ಈ ಅನಿವಾಸಿ ಗುಂಪಿಗೆ ಸೇರಿಸಿದ ಶ್ರೇಯವೂ ಪರೋಕ್ಷವಾಗಿ ಭೈರಪ್ಪನವರಿಗೇ ಸೇರಬೇಕು ಎನ್ನಿ. 2019ರ ನಾಡಹಬ್ಬದ ಉದ್ಘಾಟನೆ ಮುಗಿಸಿದ ಭೈರಪ್ಪನವರು ಶತಾವಧಾನಿ ಗಣೇಶರೊಂದಿಗೆ ನೇರ ಲಂಡನ್ ಗೆ ಬಂದಿಳಿದಿದ್ದರು.ಆ ಕಾರ್ಯಕ್ರಮದಲ್ಲಿ ನಾನು ಮೊದಲ ಬಾರಿಗೆ ಅನಿವಾಸಿಯ ಘಟಾನುಘಟಿಗಳಾದ ಪ್ರೇಮಲತಾ ರಾಮ್ ಹಾಗೂ ಕೇಶವ್ ಅವರ ಸಂಪರ್ಕಕ್ಕೆ ಬಂದಿದ್ದು. ಈ ಅನಿವಾಸಿಯನ್ನು ನನ್ನದಾಗಿಸಿಕೊಂಡಿದ್ದು.
ಅವತ್ತಿನ ಆ ಕಾರ್ಯಕ್ರಮ ನನ್ನ ಜೀವಮಾನವಿಡೀ ನೆನಪಿಡುವಂತಹ ಅವಿಸ್ಮರಣೀಯ ಕಾರ್ಯಕ್ರಮ. ಶ್ರೀಯುತ ಎಸ್ ಎಲ್ ಭೈರಪ್ಪ ಮತ್ತು ಶತಾವಧಾನಿ ಗಣೇಶರಂಥ ನಡೆದಾಡುವ ವಿಶ್ವಕೋಶಗಳನ್ನು ಸ್ಟೇಜ್ ಮೇಲೆ ಏಕಕಾಲಕ್ಕೆ ನೋಡುವ ಅವರ ಮಾತು ಕೇಳುವ ಅವರ ಕೃತಿಗಳ ಬಗ್ಗೆ ತೊದಲ ನುಡಿ ಆಡುವ ಅವಕಾಶ ಸಿಕ್ಕಿತ್ತಂದು ಸಾಹಿತ್ಯದ ರಸಗಳ ಗುಣಪಡಿಸಿ ನಮ್ಮ ಆತ್ಮವನ್ನು ತೃಪ್ತಪಡಿಸುವ ಅವರಿಗೆ ಅಂದು ನಮ್ಮ ಮನೆಯಲ್ಲಿ ನಮ್ಮ ಕೈಯಾರೆ ಗುಣಪಡಿಸುವ ಭಾಗ್ಯವು ಸಿಕ್ಕಿತ್ತು ಅದೇ ನೆನೆಸಿಕೊಂಡರೆ ಈಗಲೂ ಹೃದಯ ಖುಷಿಯಿಂದ ಧನ್ಯತೆಯಿಂದ ಮೂಕವಾಗುತ್ತದೆ.
ಇಂದಿನ ಸಂಚಿಕೆಯಲ್ಲಿ ಅಂದಿನ ನನ್ನ ಮಾತುಗಳನ್ನೇ ಹಂಚಿಕೊಳ್ಳುತ್ತಿದ್ದೇನೆ.
ಅವರಿನ್ನಿಲ್ಲ ಎಂದರಿವಾದಾಗ ಮನಭಾರವಾಗುತ್ತದೆ.ಮಾತು ಮೂಕವಾಗುತ್ತದೆ. ಹೃದಯ ಒದ್ದೆಯಾಗುತ್ತದೆ. ಆದರೆ ಭೈರಪ್ಪನವರು ಹಚ್ಚಿದ ಅಕ್ಷರ ಜ್ಯೋತಿ ‘ ಮಾತು ಮನಂಗಳಿಂದ ಅತ್ತತ್ತ ಮೀರಿ, ನಿರುಪಾಧಿಕ ನಿರ್ಮಲವಾಗಿ ಬೆಳಗುತ್ತಲೇ ಇರುತ್ತದೆ.. ಬೆಳಕ ಹಬ್ಬಿಸುತ್ತಲೇ ಇರುತ್ತದೆ.

~ ಸಂಪಾದಕಿ

ಭೈರಪ್ಪನೆಂಬ ದೈತ್ಯ ಪ್ರತಿಭೆ

ಭೈರಪ್ಪನವರು ಒಂದು ಅಗಾಧಸಾಗರ. ಅದರ ಆಳ, ವಿಸ್ತಾರ, ಭೋರ್ಗರೆತ, ಅಲೆಗಳ ಕುಣಿತ ಅಂತರಾಳದಲ್ಲ ಡಗಿರುವ ಹವಳ ಮುತ್ತುಗಳು, ನೂರೆಂಟು ಬಗೆಯ ಸಸ್ಯರಾಜಿಗಳು, ಸಣ್ಣ ಮೀನಿನಿಂದ ಹಿಡಿದು ದೊಡ್ಡ ತಿಮಿಂಗಿಲಿನವರೆಗೆ ಸಾವಿರಾರು ಬಗೆಯ ಜೀವ ವೈವಿಧ್ಯಗಳು, ಅಷ್ಟೇ ಏಕೆ ಅಸ್ತಮಿಸುವ ಸೂರ್ಯ,  ಉದಯಿಸುತ್ತಿರುವ ಚಂದ್ರ ಇವರನ್ನೂ ತನ್ನಲ್ಲಿ ಒಳಗೊಂಡಿರುವಂಥದ್ದು. ಇನ್ನು ನಾನೋ ಸಮುದ್ರದ ದಡದಲ್ಲಿ ಕುಳಿತು ಅಟ್ಟಿ ಬರುವ ಅಲೆಗಳಿಂದ ಪಾದ ತೋಯಿಸಿಕೊಂಡು, ಉಸುಕಿನ ಪುಟ್ಟ ಗುಬ್ಬಿ ಮನೆ ಕಟ್ಟಿ, ದಡಕ್ಕೆ ಬಂದು ಬಿದ್ದ ಒಂದೆರಡು ಶಂಖ ಕಪ್ಪೆ ಚಿಪ್ಪುಗಳನ್ನು ಆರಿಸಿ “ಓಹೋ ಸಾಗರ ತಾನೇ?  ನಾ ಬಲ್ಲೆ” ಎಂದು ಹೇಳುವಂತಹ ದುಸ್ಸಾಹಸ.. ನಾನು ಇಲ್ಲಿ ಬಂದು ಇಂದು ಸಾಕ್ಷಾತ್ ಅವರ ಉಪಸ್ಥಿತಿಯಲ್ಲಿ ಅವರ ಕೃತಿಗಳ ಬಗ್ಗೆ ಮಾತನಾಡುವುದು ಎಂದರೆ. ಸಂಪೂರ್ಣ ವೇದ ವಾಗ್ಮಯದ ಕರ್ತೃವೇ ಆದ ಪರಮಾತ್ಮನೆದಿರು ಒಂದೆರಡು ಶಬ್ದಗಳಿಂದ ಹೆಣೆದ ಸ್ತೋತ್ರ ಒಂದನ್ನು ‘ನಾ ರಚಿಸಿದೆ’ ಎಂದು ಬೀಗುತ್ತಾ ಹಾಡುವ ಭಕ್ತನ ಪಾಡು ನನ್ನದು. ಅವರೊಂದು ಅಗಾಧ ಚೈತನ್ಯ. ಅದಕ್ಕೇ ನಾ ಮುಂಚೆಯೇ ಹೇಳುತ್ತಿರುವೆ. ಈಗ ನಾ ಮಾತಾಡುತ್ತಿರುವುದು ಭೈರಪ್ಪನವರ ಬಗ್ಗೆ ಅಲ್ಲ “ಭೈರಪ್ಪ ನನಗೆ ದಕ್ಕಿದಷ್ಟು” ಎಂಬುದರ ಬಗ್ಗೆ ‘ಬಾಲಕನ ಕಲಭಾಷೆ ಕೇಳಿ ಜನನಿ ಸುಖ ಪಡುವಂದದಿ’ ಎಂದು ದಾಸರು ಹಾಡುವಂತೆ ಅವರೂ ಕೂಡ ನನ್ನೀ ತೊದಲುಗಳನ್ನು ಸಾವಧಾನದಿಂದ ಕೇಳಿಯಾರು ಎಂಬ ವಿಶ್ವಾಸ ನನಗೆ. 

ಭೈರಪ್ಪನವರು ಶತಾವಧಾನಿ ಗಣೇಶರೊಂದಿಗೆ

ಭೈರಪ್ಪನವರ ಕೃತಿಗಳ ಬಗ್ಗೆ ಹೇಳ ಹೊರಟಾಗ ಮೊದಲನೆಯದಾಗಿ ತಾವೇ ತಾವಾಗಿ ಓದಿಸಿಕೊಂಡು ಹೋಗುವ ಅವುಗಳ ಗುಣದ ಬಗ್ಗೆ ಬಹಳ ಅಚ್ಚರಿಯಾಗುತ್ತದೆ. ಕಾದಂಬರಿಯ ವಿಷಯ ವಸ್ತು- ಸಿದ್ಧಾಂತಗಳು ಏನೇ ಇರಲಿ, ಅವುಗಳನ್ನು ನೀವು ಒಪ್ಪಲಿ ಬಿಡಲಿ ಅದು ಬೇರೆ ವಿಷಯ. ಆದರೆ ಪುಸ್ತಕ ಹಿಡಿದರೆ ಸಾಕು ಮುಗಿಸುವ ತನಕ ಒಂದರೆಗಳಿಗೆ ಬಿಡದಂತೆ ನಮ್ಮನ್ನು ಅವಿಶ್ರಾಂತವಾಗಿಸಿ ಒಂದೇ ಗುಕ್ಕಿಗೆ ಓದಿಸಿಕೊಳ್ಳುವಂಥ ಅದ್ಭುತ ಶಕ್ತಿ ಅವುಗಳಿಗೆ. ನಾನಂತೂ ಇದುವರೆಗೂ ಅವರ ಕಾದಂಬರಿಗಳನ್ನು ಓದುತ್ತಾ ಒಲೆಯ ಮೇಲಿಟ್ಟ ಅದೆಷ್ಟು ಪಾತ್ರೆಗಳನ್ನು ಸುಟ್ಟು ಕರಕಲು ಮಾಡಿ ಎಸೆದೇಬಿಟ್ಟಿದ್ದೇನೋ ಲೆಕ್ಕವಿಲ್ಲ. ಅಂದರೆ ನಾನಿಲ್ಲಿ ಹೇಳಬಯಸುತ್ತಿರುವುದು ಇಷ್ಟೇ , ಓದಿಗೆ ಬೇಕಾದದ್ದು ಕಣ್ಣು, ತಲೆ, ಮನಸ್ಸುಗಳು.ಅವು ಮೂರು ತಲ್ಲೀನವಾಗಿದ್ದರೆ ಸಾಕಲ್ಲವೇ? ಆದರೆ ಇವರ ಕಾದಂಬರಿಗಳನ್ನು ಓದುತ್ತಿರುವಾಗ ಎಲ್ಲ ಜ್ಞಾನೇಂದ್ರಿಯಗಳೂ ಓದಿನ ಮೋಡಿಗೆ ಸಿಲುಕಿ ಬಿಡುತ್ತವೆ. ಮನೆಯಲ್ಲಿ ಯಾರೋ ಕೂಗಿದ್ದು, ಬೆಲ್ ಆಗಿದ್ದು,ಮಗು ಅತ್ತದ್ದು ಕಿವಿಗೆ ಕೇಳದು. ಸುಟ್ಟ ವಾಸನೆ ಮೂಗಿಗೆ ಅಡರದು. ಒಂಥರಾ ಧ್ಯಾನಸ್ಥ ಸ್ಥಿತಿ. ಧ್ಯಾನದಲ್ಲಿ ಹೊರ ಜಗತ್ತಿನ ಆಗುಹೋಗುಗಳ ಅರಿವಾಗುತ್ತಿದ್ದರೂ ಅಲ್ಲಿ ನಮ್ಮದು ಕೇವಲ ಸಾಕ್ಷಿ ಭಾವ. ಯಾವ ಕ್ರಿಯೆ-  ಪ್ರತಿಕ್ರಿಯೆಗಳೂ ಇಲ್ಲದಂತಹ ಸ್ಥಿತಿಯಲ್ಲಿರುತ್ತದೆ. ಅಂಥದೇ ಒಂದು ಸ್ಥಿತಿಯನ್ನು ಅವರ ಕಾದಂಬರಿಗಳು ಒದಗಿಸಲು ಸಶಕ್ತವಾದವುಗಳು. ಎರಡನೆಯದು ಅವರು ಬಳಸುವ ಭಾಷೆ. ಟಿಪಿಕಲ್ ಆದ ‘ಭೈರಪ್ಪ ಭಾಷೆ’ ಅಂತಲೇ ಅದನ್ನು ನಾವು ಕರೆಯಬಹುದು. ಅವರ ಕಾದಂಬರಿಗಳನ್ನು ಓದುವಾಗ ಮನೆ ಕೆಲಸ ಇತ್ಯಾದಿಗಳನ್ನು ಮಾಡುತ್ತಿರುವಾಗಲೂ ಅದೇ ಭಾಷೆ ನನ್ನ ತಲೆಯಲ್ಲಿ ಓಡುತ್ತಿರುತ್ತದೆ. ಉದಾಹರಣೆಗೆ.. ಅವಸರದಲ್ಲಿ ಹಾಲನ್ನು ಜೋರು ಉರಿಯಲ್ಲಿಟ್ಟು ಉಕ್ಕಿಸಿದರೆ “ಹಾಲನ್ನು ಅವಸರಿಸದೇ ಸಣ್ಣ ಉರಿಯಲ್ಲಿಟ್ಟು ಕಾಸಿದ್ದರೆ ಹದವಾದ ಕೆನೆಯೂ ದಕ್ಕುತ್ತಿತ್ತು.. ಗ್ಯಾಸನ್ನು ಸ್ವಚ್ಛಗೊಳಿಸುವ ಪ್ರಮೇಯವೂ ತಪ್ಪುತ್ತಿತ್ತು”ಎನ್ನುವ ವಿಚಾರ ಹೊಳೆಯಿತು, ಭಾವಸ್ಪರಿಸಿತು” ಇತ್ಯಾದಿಯಾಗಿ.ಈ ತೆರನಾಗಿ ನನಗೆ ಅರಿವಿಲ್ಲದೇ ಆ ಭಾಷಾ ಪ್ರಯೋಗ ನನ್ನಲ್ಲಿ ನಡೆದಿರುತ್ತದೆ. ಹೀಗೆ ವೈಚಾರಿಕ ನೆಲೆಯಿರಲಿ, ಭಾಷಾ ಪ್ರಯೋಗವಿರಲಿ, ಕಥಾಹಂದರವಿರಲಿ, ಪಾತ್ರ ಪ್ರಪಂಚವಿರಲಿ ಅವರ ಸಮ್ಮೋಹನಕ್ಕೆ ಒಳಗಾಗಿ ಬಿಟ್ಟಿರುತ್ತೇವೆ. ‘ಬೌದ್ಧಿಕ ಸಾಹಚರ್ಯ’ ಎನ್ನುವ ಪದವನ್ನು ನಾನು ಕಾಲೇಜಿನಲ್ಲಿದ್ದಾಗ ಮೊದಲ ಸಲ ಅವರ ಕಾದಂಬರಿಯಲ್ಲೋದಿ ರೋಮಾಂಚಿತಳಾಗಿದ್ದು ಈಗಲೂ ನೆನಪಿದೆ. ಹೀಗೆ ಸಂಪೂರ್ಣ ಭಿನ್ನವಾದ ಆಯಾಮಗಳನ್ನು ಒದಗಿಸುವುದೇ ಅವರ ಕಾದಂಬರಿಗಳ ವೈಶಿಷ್ಟ್ಯ. ಇನ್ನು  ಅವರು ಸೃಷ್ಟಿಸಿದ ಪಾತ್ರ ಪ್ರಪಂಚ.. ಗೃಹ ಭಂಗದ ಪಾತ್ರ ವೈವಿಧ್ಯಗಳಂತೂ ಅನುಪಮ. ಸೌಮ್ಯತೆಯ ಸಂಕೇತವಾದ ನಂಜಮ್ಮ, ಬಾಯ್ ತೆರೆದರೆ ಸಾಕು ಬೈಗುಳಗಳನ್ನು ಉದುರಿಸುವ ಗಂಗಮ್ಮ, ಬೇಜವಾಬ್ದಾರಿಯ ಚೆನ್ನಿಗರಾಯ, ಉಡಾಫೆಯ ಅಪ್ಪಣ್ಣ, ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಅಯ್ಯನವರು.. ಹೀಗೆ ಮಾನವ ಪ್ರಪಂಚದ ಎಲ್ಲ ಮುಖಗಳು, ಎಲ್ಲ ಭಾವ ರಸಗಳು ಇಡಿ ಇಡಿಯಾಗಿ ದೊರಕುವಂತಹ ಅಪರೂಪದ ಕಾದಂಬರಿ. ಅವರು ಸೃಷ್ಟಿಸಿದ ಸ್ತ್ರೀ ಪಾತ್ರಗಳೂ ಅಷ್ಟೇ.. ಸಮಕಾಲೀನ ಸಾಮಾಜಿಕ ವ್ಯವಸ್ಥೆ ಮೌಲ್ಯಗಳ ವಿರುದ್ಧ ಸಿಡಿದೆದ್ದ ‘ದಾಟು’ವಿನ ಸತ್ಯ ಇರಲಿ, ‘ಸಾರ್ಥ’ದ ಚಂದ್ರಿಕೆ ಇರಲಿ , ಉತ್ತರ ಕಾಂಡದ ಸೀತೆ ಇರಲಿ ಅಥವಾ ಆವರಣದ ರಜಿಯಾ ಆಗಿರಲಿ ಇವರೆಲ್ಲ ವಿಭಿನ್ನವಾಗಿ ಚಿಂತಿಸಿ, ವಿಭಿನ್ನವಾಗಿ ಬಾಳಿ, ಕೊನೆಯಲ್ಲಿ ಸೋತಂತೆ ಕಂಡರೂ ಸೋಲಲ್ಲೂ ಗೆಲುವನ್ನು ಕಂಡಂತಹವರು. ಸ್ವಲ್ಪ ಕಣ್ತೆರೆದರೆ ಸಾಕು ನಮ್ಮಲ್ಲೇ ನಮ್ಮ ಸುತ್ತಮುತ್ತಲಲ್ಲೇ ಅಂಥ ಹತ್ತು ಹಲವಾರು ಪಾತ್ರಗಳ ಅನಾವರಣವಾಗುತ್ತದೆ. ನಾನು ಮನೆಯಲ್ಲಿ ಎಷ್ಟೋ ಸಲ ಯಾವುದೋ ಕೆಲಸದ ಬಗ್ಗೆ ಬೇಜವಾಬ್ದಾರಿ ತೋರುವ ನಮ್ಮ ಯಜಮಾನರಿಗೆ ‘ಚೆನ್ನಿಗರಾಯನಂಗ ಮಾಡಬ್ಯಾಡ’ ಅಂತಲೂ,  ಮಕ್ಕಳ ಬಗ್ಗೆ ಗಮನಕೊಡದಿದ್ದಾಗ ‘ನೀ ಏನು ನಿರಾಕರಣದ ನರಹರಿನಾ?’ ಅಂತಲೂ  ಮೂದಲಿಸುವಷ್ಟು ಜೀವಂತ ಆ ಪಾತ್ರಗಳು. ಯಾವುದೇ ವಿಷಯದ ಬಗ್ಗೆ ಕಾದಂಬರಿ ಬರೆಯಲಿ ಬರೆಯುವುದಕ್ಕಿಂತ ಮುಂಚಿನ ಅವರ ಅಧ್ಯಯನದ ಶಿಸ್ತು, ಅಚ್ಚುಕಟ್ಟು ತನಗಳು, ಆ ವಿಷಯದ ಬಗೆಗಿನ ನಿಷ್ಠೆ ಅವುಗಳ ರೀತಿಯೇ ಬೇರೆ. ಭೀಮ ಕಾಯದ ಕುಸ್ತಿ ಇರಲಿ, ಮಂದ್ರದ ಸಂಗೀತ ನಾಟ್ಯಗಳಿರಲಿ, ಸಾರ್ಥದ ಇತಿಹಾಸ -ಪುರಾಣ -ಮೂರ್ತಿ ಶಿಲ್ಪ- ವೇದಾಂತ- ನಾಟಕಗಳಿರಲಿ, ಯಾನದ ಸ್ಪೇಸ್ ಟೆಕ್ನಾಲಜಿ ಇರಲಿ ಎಲ್ಲವೂ ಪೂರ್ಣ.. ಪರಿಪೂರ್ಣ. ಹೀಗಾಗಿ ಅವರ ಕಾದಂಬರಿಗಳನ್ನು ಓದುವಲ್ಲಿ ಓದುಗರಾದ ನಾವೂ ಸ್ವಲ್ಪ ಮಟ್ಟಿಗಿನ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯವೇನೋ ? ಉದಾಹರಣೆಗೆ ಮಂದ್ರವನ್ನೇ ತೆಗೆದುಕೊಳ್ಳಿ. ಕೇವಲ ಸಾಹಿತ್ಯಸಕ್ತನಿಗಾಗಲಿ ಅಥವಾ ಕೇವಲ ಸಂಗೀತಗಾರನಿಗಾಗಲಿ ಸಂಪೂರ್ಣವಾಗಿ ದೊರಕದದು. ಸ್ವಲ್ಪ ಮಟ್ಟಿಗೆ ಎರಡರ ಜ್ಞಾನವಿದ್ದವನಿಗೆ ಅಷ್ಟೇ ದಕ್ಕಬಲ್ಲದು. ಇಲ್ಲದಿದ್ದರೆ ಹೆಣ್ಣಿನ ವ್ಯಾಮೋಹದ, ವಿಷಯ ಲಂಪಟ ಮೋಹನ ಲಾಲನನ್ನಲ್ಲದೇ ಬೇರೇನನ್ನೂ ನಾವು ಅದರಲ್ಲಿ ದಕ್ಕಿಸಿಕೊಳ್ಳಲಾರೆವು.

ಬರೀ ಪಾಣಿಪತ್ ಕದನ ರಕ್ಕಸತಂಗಡಗಿ ಕದನಗಳ ಇಸ್ವಿಗಳಿಗಷ್ಟೇ ಸೀಮಿತವಾಗಿದ್ದ ನಮ್ಮ ಇತಿಹಾಸದ ಜ್ಞಾನಕ್ಕೆ ಐತಿಹಾಸಿಕ ಪ್ರಜ್ಞೆಗಳನ್ನು ಅನಾವರಣಗೊಳಿಸಿದ್ದು,ಅವುಗಳಿಗೆ ಒಂದು ಹೊಸದಾದ ಆಯಾಮ ದೊರಕಿಸಿದ್ದೇ ಸಾರ್ಥ, ಆವರಣದಂತಹ ಐತಿಹಾಸಿಕ ನೆಲೆಯಲ್ಲಿರುವ ಅವರ ಕಾದಂಬರಿಗಳು. ಮೊದಲ ಸಲ ಸಾರ್ಥ ಓದಿದಾಗ ದಂಗಾಗಿ ಬಿಟ್ಟಿದ್ದೆ. ‘ಸಾರ್ಥ’ ಎಂದರೆ ಅಲ್ಲಿಂದಿಲ್ಲಿಗೆ ಸಂಚರಿಸುವ ವ್ಯಾಪಾರಿಗಳ ಗುಂಪು ಎಂದಷ್ಟೇ ಗೊತ್ತಿದ್ದ ನನಗೆ ಸಾರ್ಥದಲ್ಲಿ ಏನೆಲ್ಲಾ ಉಂಟು? ಬಡಗಿ,ಅಡುಗೆ ಮಾಡುವವನು, ಡೇರೆ ಹಾಕುವವನು, ವೈದ್ಯ, ಪಶುವೈದ್ಯ, ಕಮ್ಮಾರರು, ಜನ ಹಾಗೂ ಪದಾರ್ಥಗಳನ್ನು ಹೊರಲು ಆನೆ, ಕುದುರೆ, ಕತ್ತೆ ಗಳು, ಕುದುರೆ ಗಾಡಿಗಳು, ವಿದ್ಯಾರ್ಥಿಗಳು, ಪ್ರವಾಸಿಗಳು, ಸನ್ಯಾಸಿಗಳು, ಧರ್ಮ ಪ್ರಚಾರಕರು.. ಇಡಿಯ ಪ್ರಪಂಚದ ಒಂದು ಸಣ್ಣ ತುಂಡು - ಮಿನಿ ಪ್ರಪಂಚವೇ ಸಾರ್ಥದಲ್ಲಿರುತ್ತದೆ ಎಂದು ಓದಿದಾಗ ಅರೆ ಹೌದಲ್ಲ ಎನ್ನಿಸಿದ್ದುಂಟು. ಸಾರ್ಥ ನನ್ನ ಮೆಚ್ಚಿನ ಕಾದಂಬರಿ. ಅದರಲ್ಲೂ ಶಂಕರ, ಮಂಡನ ಮಿಶ್ರ, ಭಾರತಿ, ಕುಮಾರಿಲ ಭಟ್ಟ ಇತ್ಯಾದಿ ವೃತ್ತಾಂತಗಳು ಬಹಳವೇ ಇಷ್ಟ. 98 ರಲ್ಲಿ ಆ ಕಾದಂಬರಿ ಬಂದಾಗ ಕಸ್ತೂರಿಯಲ್ಲಿ ಕುಮಾರಿಲ ಭಟ್ಟರು ಪ್ರಾಯಶ್ಚಿತ್ತ ರೂಪವಾಗಿ ಹೊಟ್ಟಿನ ಬೆಂಕಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗದ ವಿವರಣೆ ಇತ್ತು ಪುಸ್ತಕ ಪರಿಚಯ ಕಾಲಮ್‌ನಲ್ಲಿ. ಸುಮಾರು ದಿನಗಳವರೆಗೆ ಸಂಕಟಪಟ್ಟಿದ್ದೆ ನಾನೇ ಆ ಹೊಟ್ಟಿನ ಶಾಖದಲ್ಲಿ ಬೆಂದಂತೆ. ನಾನಾಗ ಅಮ್ಮನ ಮನೆಯೆಂದು ಇಲ್ಕಲ್ ಬಳಿ ಹಳ್ಳಿಗೆ ಹೋಗಿದ್ದೆ. ಅಲ್ಲಿ ಇಲಕಲ್ಲಿನಲ್ಲಿ ಇದ್ದದ್ದೇ ಒಂದು ಬುಕ್ ಸ್ಟಾಲ್. ಬಸವರಾಜ್ ಬುಕ್ ಡಿಪೋ ಅಂತ. ಅವನ ಅಂಗಡಿಗೆ ಹೋಗಿ ಸಾರ್ಥ ಕೇಳಿದೆ . “ಅಕ್ಕೋರ, ಇಲ್ಲಿ ಯಾರು ಓದ್ತಾರ್ರಿ ಅವನ್ನೆಲ್ಲ? ಮತ್ತ ಭಾಳ ಬಿರಿ ಪುಸ್ತಕರೀ..ಮಾರಾಟ ಆಗಂಗಿಲ್ರಿ. ಅದಕ್ಕೇ ತರಸಂಗಿಲ್ರೀ” ಅಂದುಬಿಟ್ಟ. ಬಿಜಾಪುರಕ್ಕೆ ವಾಪಸ್ ಹೋಗಲು ಇನ್ನೂ ವಾರವಿತ್ತು. ವಾರಗಟ್ಟಲೆ ಅದನ್ನು ಓದದೇ ಇರುವುದು ಹೇಗೆ? ಅಂಗಡಿಯವನಿಗೆ ದುಂಬಾಲು ಬಿದ್ದು ಸ್ಪೀಡ್ ಪೋಸ್ಟ್ ನ ಎಕ್ಸ್ಟ್ರಾ ದುಡ್ಡು ಕೊಟ್ಟು ಆ ಪುಸ್ತಕವನ್ನು ತರಿಸಿಯಾಯಿತು. ಅಂಥ ಹಳ್ಳಿಯಲ್ಲಿ ರಾತ್ರಿಯೆಲ್ಲ ಕರೆಂಟ್ ಇರುತ್ತಿರಲಿಲ್ಲ. ಚಿಮಣಿ, ಕಂದೀಲುಗಳ ಬೆಳಕಲ್ಲಿ ಎರಡು ರಾತ್ರಿ ಹಗಲುಗಳಲ್ಲಿ ಅದನ್ನ ಗಬಾ ಗಬ ಓದಿಯಾಯಿತು. ಹೀಗೆ ಬೆಂಬಿಡದೆ ಕಾಡಿ ಓದಿಸಿಕೊಳ್ಳುವ ತಾಕತ್ತು ಬರೀ ಭೈರಪ್ಪನವರ ಪುಸ್ತಕಗಳಿಗೆ ಮಾತ್ರ. ಸಾರ್ಥ ಹಿಂದು - ಬೌದ್ಧ ಧರ್ಮಗಳ ಸಂಘರ್ಷದ ಕಾಲಘಟ್ಟದ ಕಥೆ ಹೇಳಿದರೆ ಆವರಣ ಹಿಂದೂ - ಮುಸ್ಲಿಂ ಕಾಲಘಟ್ಟದ ಕಥೆ ಹೇಳುತ್ತದೆ ಹಂಪಿಯ , ಕಾಶಿಯ ವಿಶ್ವನಾಥನನ್ನು ಜೊತೆ ಜೊತೆಯಾಗಿ ಕಣ್ಣೆದುರಿಗೆ ತಂದುಬಿಡುತ್ತಾರೆ ಭೈರಪ್ಪ ಇದರಲ್ಲಿ. ಭೀಭತ್ಸರಸವನ್ನು ಓದಿಯೂ ಅನುಭವಿಸಬಹುದು ಎನ್ನುವುದು ಅರ್ಥವಾದದ್ದೇ ಆವರಣದ ಕೆಲವೊಂದು ವಿವರಗಳನ್ನು ಓದುವಾಗ. ಅದರ ಮುನ್ನುಡಿಯಲ್ಲಿ ಅವರು “ಸತ್ಯಶೋಧನೆಯಲ್ಲಿ ಓದುಗನು ಲೇಖಕನಷ್ಟೇ ಪಾಲುದಾರ ಪಾತ್ರಗಳನ್ನಾಗಲಿ ಸನ್ನಿವೇಶಗಳನ್ನಾಗಲಿ ಸತ್ಯದ, ಕಲಾ ಸತ್ಯದ ವಸ್ತು ನಿಷ್ಠೆಯಿಂದ ಗ್ರಹಿಸಿ ಅವುಗಳ ಭಾವವನ್ನು ಆಸ್ವಾದಿಸಬೇಕೇ ಹೊರತು ವೈಯಕ್ತಿಕ ರಾಗ ದ್ವೇಷಗಳಿಂದ ಉದ್ರೇಕಗೊಳ್ಳಬಾರದು ಎಂದು ಹೇಳಿರುವುದು ಅಕ್ಷರ ಸತ್ಯ. ಅದರಲ್ಲಿ ಶಕ್ತಿಯೇ ಧರ್ಮ,ಶಕ್ತ ವಲ್ಲದ್ದು ಧರ್ಮ ಹೇಗಾದೀತು ಎಂಬ ತರ್ಕ ಸ್ಫುಟವಾಯಿತು ಅನ್ನುವ ಮಾತೊಂದು ಬರುತ್ತದೆ ಯಾವಾಗಲೂ ಇದುವೇ ಐತಿಹಾಸಿಕ ಸತ್ಯವೇನೋ ಅನಿಸುತ್ತದೆ ಶಕ್ತವಾದದ್ದು ದುರ್ಬಲವಾದದನ್ನು ತನ್ನೊಳಗೆ ಎಳೆದುಕೊಂಡು ಬಿಟ್ಟಿದೆ ಅಂತ. ಡಾರ್ವಿನ್ ನ ವಿಕಾಸವಾದ ನೆನಪಾಗುತ್ತದೆ.
“ ಒಳಗಿನದನ್ನೆಲ್ಲ ಸುರಿದುಕೊಂಡರೂ ನಮ್ಮನ್ನು ತಕ್ಕಡಿಗೆ ಹಾಕುವುದಿಲ್ಲವೆಂಬಂಥ ಒಬ್ಬ ಆತ್ಮೀಯ ಸ್ನೇಹಿತನಿದ್ದರೆ….ಎಲ್ಲ ಜೀವಿಗಳ ಹಂಬಲದ ಪ್ರತೀಕವೆನಿಸುತ್ತದೆ ಈ ಮಾತು. ನಾವೆಷ್ಟೇ ಹೋರಾಡಿದರೂ ನಾವು ನಮ್ಮ ಸಂಸ್ಕಾರದ ಅಡಿಯಾಳುಗಳು, ವ್ಯವಸ್ಥೆ ಯ ಒಂದು ಅಂಗಗಳಷ್ಟೇ ಎಂಬುದು ಲಕ್ಷ್ಮಿ ಮತ್ತು ಪ್ರೊಫೆಸರ್ ಪಾತ್ರಗಳು ಮಾಡುತ್ತವೆ. ಒಟ್ಟಿನಲ್ಲಿ ಭೈರಪ್ಪನವರ ಕೃತಿಗಳ ಬಗ್ಗೆ ಎಷ್ಟು ಮಾತಾಡಿದರೂ ಕಡಿಮೆ. ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗೆ ಹೋಲಿಕೆಯೇ ಇಲ್ಲ ನಿಜವಾದ ಲೇಖಕನಿಗೆ ಪ್ರಶಸ್ತಿ ಸನ್ಮಾನಗಳೆಲ್ಲ ಬರೀ ನಿಮಿತ್ತ. ಅವನ ಶ್ರಮ ಸಾರ್ಥಕವಾಗುವುದು ಅವನ ಕೃತಿಗಳನ್ನು ಓದುವ, ಅರ್ಥೈಸಿಕೊಳ್ಳುವ ಓದುಗರು ದೊರೆತಾಗ ಮಾತ್ರ. ಅಂತಹ ಅಗಣಿತ ಓದುಗರು ಭೈರಪ್ಪನವರಿಗಿದ್ದಾರೆಂಬುದು ನಿರ್ವಿವಾದ. ಕನ್ನಡ ಸಾಹಿತ್ಯ ಲೋಕದಲ್ಲಿ ಅವರು ಪಡೆದ ವಿಶಿಷ್ಟವಾದ ಸ್ಥಾನಮಾನಕ್ಕೆ ಪರ್ಯಾಯ ಎನ್ನುವುದಿಲ್ಲ.


ಬಾಬ್ ಎಂಬ  ಡೊಂಕು ಬಾಲದ ನಾಯಕರ ಕಥಾನಕ.

-ಅಮಿತ ರವಿಕಿರಣ್  

 

ಶಾಲೆಯಿಂದ ಮಗಳನ್ನು ಕರೆದುಕೊಂಡು ವಾಪಸ್ ಮನೆಗೆ ಬರುವಾಗ ದೂರದಿಂದಲೇ ಪ್ಯಾಟ್ರಿಕ್ ಮತ್ತು ಬಾಬ್ (BOB) ಕಾಣಿಸಿದರು. ಪ್ರತಿಸಲದಂತೆ ಮಗಳು ನನ್ನ ಕೈ ಬಿಡಿಸಿಕೊಂಡು ಅವರತ್ತ ಓಡಿ ಹೋದಳು. ಪ್ಯಾಟ್ರಿಕ್ ನನ್ನೆಡೆಗೆ ನೋಡುತ್ತಾ ನಿಮ್ಮನ್ನೇ ಕಾಯುತ್ತಿದ್ದೆ, ನೋಡಿ ನಿನ್ನೆ ರಾತ್ರಿಯಿಂದ ಇವ ಊಟವೇ ಮಾಡಿಲ್ಲ ಅನ್ನುತ್ತಾ ಕಿಸೆಯಿಂದ ತಿಂಡಿ ಪೊಟ್ಟಣ ತೆಗೆದು ನನ್ನ ಮಗಳ ಹತ್ತಿರ ಕೊಟ್ಟು "ನೀ ತಿನ್ನಿಸಿ ನೋಡ್ತೀಯ, ಆಡುವ ಗುಂಗಿನಲ್ಲಿ ಸ್ವಲ್ಪ ತಿಂದರೂ ತಿನ್ನಬಹುದು" ಅಂದ. ನನ್ನ ಮಗಳು ನಿಯತಿ ಮತ್ತು ಬಾಬ್ ಒಂದು ಒಣ ಕಟ್ಟಿಗೆಯ ತುಂಡನ್ನು ಹಿಡಿದು ಆಟ ಆಡುತ್ತ ಮಧ್ಯ ಮಧ್ಯ ನಿಯತಿ ಅವನಿಗೆ ತಿಂಡಿ ತಿನ್ನಿಸುತ್ತ ಹದಿನೈದು ನಿಮಿಷದಲ್ಲಿ ಬಾಬ್ ಪೂರ್ತಿ ಪೊಟ್ಟಣ ತಿಂದು ಮುಗಿಸಿದ್ದನ್ನ ನೋಡಿ ಪ್ಯಾಟ್ರಿಕ್ ಮುಖದಲ್ಲಿ ಸಮಾಧಾನದ ನಗು ಹರಡಿತ್ತು. 

ಬಾಬ್ ಮತ್ತು ಪ್ಯಾಟ್ರಿಕ್ ಪರಿಚಯವಾದದ್ದು ೨ ವರುಷಗಳ ಹಿಂದೆ. ಆಗ ನನ್ನ ಮಗಳು ನರ್ಸರಿಯಲ್ಲಿದ್ದಳು, ''ಅಮ್ಮ ನನಗೊಂದು pet ಬೇಕು" ಎಂದು ಗಂಟು ಬಿದ್ದಿದ್ದಳು. ಓಹ್ ಪೆಟ್ಟು ಬೇಕಾ, ಬಾ ನಾನಾ ಹತ್ತಿರ ಡಿಸೈನ್ ಡಿಸೈನ್ ಪೆಟ್ಟುಗಳ ಸಂಗ್ರಹ ಇದೆ, ನನ್ನ ಅಮ್ಮ ನನಗೆ ಕೊಟ್ಟಿದ್ದು, ನಾನು ಈ ವರೆಗೆ ಯಾರಿಗೂ ಕೊಡದೆ ನನ್ನಲ್ಲೇ ಎಲ್ಲಾ ಉಳಿದು ಹೋಗಿವೆ. ಬಾ ಪೆಟ್ಟು ಕೊಡುವೆ ಎಂದು ತಮಾಷೆ ಮಾಡಿ ಆ ಗಳಿಗೆ ನೂಕಿ ಬಿಡುತ್ತಿದ್ದೆ. ಊರಿನಲ್ಲಿ ಆಗಿದ್ದರೆ ಬೆಕ್ಕೋ, ಕೋಳಿಮರಿ, ನಾಯಿಮರಿ ತಂದು ಸಾಕಬಹುದಿತ್ತು. ಆದರೆ ಇಲ್ಲಿ? ನಾಯಿ ಸಾಕುತ್ತಿರುವವರ ಅನುಭವಗಳನ್ನ ಕೇಳಿಯೇ, ಅಯ್ಯೋ! ಇಷ್ಟೊಂದು ಕಷ್ಟವೇ? ಎಂದು ಎನ್ನಿಸಿ ಯಾವತ್ತೂ ಗೋಲ್ಡ್ ಫಿಶ್ ಗಿಂತ ಮೇಲಿನದನ್ನು ಯೋಚಿಸಲಾಗಿರಲಿಲ್ಲ. ಆದರೆ ಆಗಾಗ ಈ ವಿಷಯವಾಗಿ ನನಗೆ ಬೇಸರವೂ ಆಗ್ತಿತ್ತು. ಮಲೆನಾಡ ಸೆರಿಗಿನಲ್ಲಿರುವ ನನ್ನ ತವರಿನಲ್ಲಿ ಸಾಕು ಪ್ರಾಣಿಗಳು ನಮ್ಮ ಜೀವನದ ಒಂದು ಭಾಗವೇ ಆಗಿಬಿಟ್ಟಿದ್ದವು, ನಾವು ಸಾಕಿದ ಪ್ರತೀ ನಾಯಿ, ಬೆಕ್ಕುಗಳ ಸುತ್ತ, ಆಕಳು, ಕರುಗಳ ಜೊತೆ ನಮ್ಮ ನೂರಾರು ನೆನಪುಗಳಿವೆ. ಅಂಥ ಅನುಭವಗಳನ್ನ ನನ್ನ ಮಕ್ಕಳಿಗೆ ಅವರು ಬಯಸಿದ್ದಾಗ್ಯೂ ಕೊಡಲಾಗುತ್ತಿಲ್ಲವಲ್ಲ ಎಂಬ ಸಣ್ಣ ನಿರಾಸೆ ನನಗೆ ಇದ್ದೇ ಇತ್ತು. 

ಆ ದಿನ ಎಂದಿನಂತೆ ನರ್ಸರಿಯಿಂದ ವಾಪಸ್ ಬರುವ ಹೊತ್ತು. ಮೇಪಲ್ ಮರಗಳ ಕೆಳಗೆ ಕುಳಿತು ಅರಳುಗಣ್ಣುಗಳಿಂದ ಆಚೀಚೆ ಬರುವವರನ್ನು ನೋಡುತ್ತಾ ಅವರು ರಸ್ತೆಯ ತುದಿಯಲ್ಲಿ ತಿರುಗಿ ಮರೆಯಾಗುವ ತನಕ ಅವರತ್ತ ಕಣ್ಣು ನೆಟ್ಟು ಮತ್ತೆ ಇನ್ನ್ಯಾರೋ ಬಂದರೆನಿಸಿದರೆ ಪಟ್ಟನೆ ಕತ್ತು ಹೊರಳಿಸಿ ನೋಡುತ್ತಿದ್ದ ಕಪ್ಪು ಬಿಳುಪಿನ ಬಾಬ್ ಯಾಕೋ ನಮ್ಮ ಮನೆಯಲ್ಲಿದ್ದ 'ಬುಧ' ಎಂಬ ನಾಯಿಯನ್ನು ನೆನಪಿಸಿ ಬಿಟ್ಟಿದ್ದ.

 ಮೊದಲ ಭೇಟಿಯಲ್ಲೇ ಬಾಬ್ ನನ್ನ ಮಗಳಿಗೂ ತನ್ನ ಗುಂಗು ಹಿಡಿಸಿದ್ದ. ಮಾತೆತ್ತಿದರೆ ಬಾಬ್ ಅನ್ನುವಷ್ಟು ಸಲಿಗೆ. ಆಗ ಬಾಬ್ ನ ಬಲಗಾಲು ಮುರಿದಿತ್ತು. “ಗುಡ್ಡದಲ್ಲಿ ನಡೆದಾಡಲು ಕರೆದುಕೊಂಡು ಹೋಗಿದ್ದೆ, ಇವ ತನಗೆ ರೆಕ್ಕೆಯೂ ಇದೆ ಅಂದುಕೊಂಡು ಹಾರಾಡಲು ಹೋಗಿ ಬಿದ್ದು ಕಾಲು ಮುರಿದುಕೊಂಡ. ಈಗ ಪ್ಲಾಸ್ಟರ್ ಬಿಚ್ಚಿದ್ದಾರೆ ಆದರೆ ಇನ್ನು ಓಡಾಡಲು ಆಗುತ್ತಿಲ್ಲ. ಅದಕ್ಕೆ ತನ್ನ ಬಳಿ ಯಾರಾದರೂ ಆಡಲಿ, ಮಾತಾಡಲಿ ಅನ್ನುವ ಅತಿಯಾಸೆ ಇವನಿಗೆ, ಶಾಲೆ ಮಕ್ಕಳು ಬರುವ ಹೊತ್ತು ಹೇಗೆ ಗೊತ್ತಾಗುತ್ತದೋ ಗೊತ್ತಿಲ್ಲ, ಒದರಲು ಶುರು ಮಾಡುತ್ತಾನೆ, ಇನ್ನೆರಡು ಘಂಟೆ ಹೊರಗೆ ಇರಬೇಕು ನಾನು,” ಎಂದು ಪಾಟ್ರಿಕ್ ಒಂದೇ ಸಮನೆ ಮಾತಾಡಿದ. ನಾವು ಆ ನೆರಳಲ್ಲೇ ಬಾಬ್ ಪಕ್ಕದಲ್ಲೇ ಕುಳಿತು ಅವನ ಕತ್ತು ಸವರಿ ಮುದ್ದು ಮಾಡಿ ಬಂದಿದ್ದೆವು. ಹೀಗೆ ಆಗಿತ್ತು ನಮ್ಮ ಮೊದಲ ಭೇಟಿ.

ಆ ದಿನದಿಂದ, ಶಾಲೆಯಿಂದ ಬರುವಾಗ ಬಾಬ್ ನೊಂದಿಗೆ ೧೦ ನಿಮಿಷವಾದರೂ ಆಟ ಆಡಿ ಬರುವ ರೂಡಿ ಆಯಿತು. ಬಾಬ್ ಒಬ್ಬ ತುಂಟ ಪೋರನಂತೆ. ಆಟ ಆಡುತ್ತಲೇ ಇರಬೇಕು. ಕಣ್ಣುಗಳು ಸದಾ ನೂರು ವಾಲ್ಟಿನ ಬಲ್ಬಿನಂತೆ ಕುತೂಹಲದಿಂದ ಮಿನುಗುತ್ತಲೇ ಇರುತ್ತವೆ. ಅವನ ಹತ್ತಿರ ಒಂದು ರಬ್ಬರ್ ಚಂಡು, ದಪ್ಪ ಹಗ್ಗದ ತುಂಡು ಇದೆ ಅದವನ ಆಟಿಕೆಗಳು, ಆದರೆ ಅವನಿಗೆ ಈ ಮಕ್ಕಳು ಎಸೆಯುವ ಕಟ್ಟಿಗೆ ತುಂಡು, ಪೇಪರ್ ಚೂರುಗಳೆಂದರೆ ವೀಪರೀತ ಪ್ರೀತಿ. ಹಾಗೆ ದೂರ ಎಸೆದ ಕಟ್ಟಿಗೆಯನ್ನು ಆರಿಸಿ ತಂದು ಹಲ್ಲಿನಿಂದ ಕಚ್ಚಿ ಚೂರು ಚೂರು ಮಾಡಿ ಎಸೆದು ವಿಜಯದ ನಗೆ ಬೀರಿ ಮತ್ತೆ ಮಾಡು ಅಂತ ಪುಟ್ಟ ಮಕ್ಕಳಂತೆ ಗೋಗರೆಯುತ್ತ ನಿಲ್ಲುವ ಹೊತ್ತಿಗೆ ಇತ್ತ ಪ್ಯಾಟ್ರಿಕ್ ಹೆಮ್ಮೆಯಿಂದ ಬಾಬ್ ಬಗ್ಗೆ ಹೇಳಿಕೊಳ್ಳಲು ಶುರು ಮಾಡುತ್ತಾನೆ. ಈ ಜಾಣ ಮಕ್ಕಳ ಅಪ್ಪ ಅಮ್ಮಂದಿರು ಸ್ನೇಹಿತರು ಸಂಭಂದಿಕರೆದುರು ತಮ್ಮ ಮಕ್ಕಳನ್ನು ಹೊಗಳುತ್ತಾರಲ್ಲ ಹಾಗೆ. ಮಧ್ಯ ಮಧ್ಯ ತನ್ನ ಒಂಟಿತನ, ತನ್ನ ಆರೋಗ್ಯದ ಬಗ್ಗೆ ಹೇಳುತ್ತಾನೆ. ಕೆಲವೊಮ್ಮೆ ವಿಷಾದ ಆವರಿಸಿಕೊಳ್ಳುವುದು ನನ್ನ ಅರಿವಿಗೆ ಬರುತ್ತದೆ ಕೂಡ. ಮರು ನಿಮಿಷದಲ್ಲೇ ಬಾಬ್ ನ ಸುದ್ದಿ ಅವನ ಹೊಗಳಿಕೆ ಶುರುವಾಗುತ್ತದೆ. 

“ನನಗೆ ಹೋದವಾರ ಜ್ವರವಿತ್ತು, ಬಾಬ್ ನನ್ನ ಪಕ್ಕವೇ ಮಲಗಿದ್ದ, ನಾ ಕೆಮ್ಮಿದರೂ ಏಳುತ್ತಿದ್ದ ನನಗೆನನ್ನ ಮಕ್ಕಳು ಹತ್ತಿರವಿಲ್ಲದಿದ್ದರೆ ಏನಾಯಿತು ಇವನಿದ್ದಾನಲ್ಲ ನನ್ನ ಕಾಳಜಿ ಮಾಡಲು.” ಹಾಗೆಲ್ಲ ಹೇಳುವಾಗ ನನಗೆ ಪಿಚ್ಚೆನಿಸುತ್ತದೆ. ಮತ್ತೆ ಅವನು ಹೇಳುವುದು ಸುಳ್ಳಲ್ಲ ಎಂಬುದೂ ನನಗೇನು? ಆ ಏರಿಯಾದಲ್ಲಿರುವ ಎಲ್ಲರಿಗು ಗೊತ್ತು.

ನನ್ನ ಮನೆ ಹತ್ತಿರ ಒಂದು old age home ಇದೆ ಅಲ್ಲಿರುವ ಸುಮಾರು ಅಜ್ಜಿಯರಿಗೆ ಬಾಬ್ ಎಂದರೆ ಪ್ರಾಣ, ಅವನಿಗೆ ಒಳ್ಳೊಳ್ಳೆ ಬಿಸ್ಕೆಟ್,  ಕೇಕ್ ತಂದು ಕೊಡುತ್ತಾರೆ ಅದನ್ನು ನಾನೂ ನೋಡಿದ್ದೇನೆ. ಪಾಟ್ರಿಕ್ ಹೇಳುವಂತೆ, ಅಲ್ಲಿ ಒಂದು ಅಜ್ಜಿ ಗಟ್ಟಿಮುಟ್ಟಾಗಿದ್ದಾಳೆ ಬಾಬ್ ಸೀದಾ ಅವಳ ಮೇಲೆ ಮುದ್ದಿನಿಂದ ಜಿಗಿದು ಆಕೆಯ ಹೊಟ್ಟೆ ಮೇಲೆ ಕಾಲಿಟ್ಟು ನಿಂತು ಅವಳ ಹತ್ತಿರ ತಲೆ ನೇವರಿಸಿಕೊಳ್ಳುತ್ತಾನೆ, ವೀಲ್ಚೇರ್ ಮೇಲೆ ಇರುವ ಅಜ್ಜಿಯಾ ಹತ್ತಿರ ಸುಮ್ಮನೆ ನಡೆದು ಹೆಚ್ಚಿನ ಆರ್ಭಟ ವಿಲ್ಲದೆ ವಿಧೇಯ ಮಗುವಿನಂತೆ ಅಕ್ಕ ಪಕ್ಕ ಸುತ್ತುತ್ತಾನೆ. ಇನ್ನೊಬ್ಬರು ಅಜ್ಜಿ ಹಾಸಿಗೆ ಹಿಡಿದಿದ್ದಾರೆ ಅವರ ಹತ್ತಿರ ಹೋಗುವಾಗ ಸೀದಾ ಮಂಚದ ಮೇಲೆ ಕಾಲಿಟ್ಟು ನಿಂತು ಮುದ್ದು ಮಾಡಿಸಿಕೊಂಡು ಬರುತ್ತಾನೆ. ಅದಕ್ಕೆ ಅವರು ಅವನಿಗೆ ತಿಂಡಿ ತರುವುದು. ಇವನಿಗೂ ಇದು ಅಭ್ಯಾಸ ಆಗಿ ಹೋಗಿದೆ. ಯಾರು ಹೇಳಿದ್ದು ಪ್ರಾಣಿಗಳಿಗೆ ಸಭ್ಯತೆ ಇಲ್ಲ ಅಂತ! ನೋಡು ನನ್ನ ಹುಡುಗ ಎಷ್ಟು ಜಾಣ. ಎಂದು ಹೆಮ್ಮೆಯಿಂದ ಬಾಬ್ ಕಡೆಗೆ ನೋಡುತ್ತಾನೆ ಬಾಬ್ ಎಲ್ಲ ಅರ್ಥವಾದವರಂತೆ ಬಾಲ ಅಲ್ಲಾಡಿಸಿ ಕಣ್ಣರಳಿಸುತ್ತಾನೆ. 

ಪ್ರತಿದಿನ ಭೇಟಿ ಬಾಬ್ ನನ್ನು ಭೇಟಿ ಮಾಡುವುದು ಅಭ್ಯಾಸ ಆಗಿಬಿಟ್ಟಿತ್ತು, ಆ ದಿನ ನಿತ್ಯದ ೧೦ ಆಟ ಮುಗಿಸಿ ಇನ್ನೇನು ಹೋರಡಬೇಕು ಅನ್ನುವಷ್ಟರಲ್ಲಿ ಬಾಬ್ ಒಂಥರಾ ವಿಚಿತ್ರ ಧ್ವನಿ ತೆಗೆದು ಕುಸು ಕುಸು ಮಾಡತೊಡಗಿದ, “Oh he is crying…ಒಹ್ god!” ಅವನಿಗೆ ನೀವು ಹೋಗ್ತೇನೆ ಅಂದಿದ್ದು ಇಷ್ಟ ಆಗ್ತಿಲ್ಲ ಅಂದು ನಗಲು ಶುರು ಮಾಡಿದ. ನನಗು ಬಾಬ್ನ ನ ಈ ವಿಚಿತ್ರ ನಡುವಳಿಕೆ ನೋಡಿ ನಗು ಬಂದಿತ್ತು. ಮತ್ತೆ ಆ ದಿನ ಶುರುವಾದ ಈ ಅಳುವ ಕ್ರಮ ಈಗಲೂ ಜಾರಿಯಲ್ಲಿದೆ. 

  ಬಾಬ್ ಸ್ವಲ್ಪ ಚಟುವಟಿಕೆ ಕಡಿಮೆ ಮಾಡಿದರೂ ಸಾಕು, ಪ್ಯಾಟ್ರಿಕ್ ಅವನನ್ನು ಕರೆದುಕೊಂಡು ಟ್ರಿಪ್ ಹೊರಡುತ್ತಾನೆ. ಸಮುದ್ರ ತೀರದಲ್ಲಿ ಕ್ಯಾರಾವ್ಯಾನ್ ನಲ್ಲಿ ತಿಂಗಳುಗಟ್ಟಲೆ ಉಳಿದು ಬರುತ್ತಾರೆ. ಬಂದ ನಂತರ ಬಾಬ್ ನ ವೀರಗಾಥೆಗಳನ್ನು ಕಣ್ಣೆದುರೇ ನಡೆದಂತೆ ಬಣ್ಣಿಸುತ್ತಾನೆ. ಈ ಒಂದು ವರುಷದ lockdown ಸಮಯದಲ್ಲಿ ಇಬ್ಬರು ಅದೆಷ್ಟು ಹಳಹಳಿಸಿದ್ದಾರೋ. ಪ್ಯಾಟ್ರಿಕ್ ನ ಕಡುಹಸಿರು ಬಣ್ಣದ ಕಾರಿನ ಮುಂದಿನ ಸೀಟಿನಲ್ಲಿ ಬಾಬ್ ಗತ್ತು ಗಾಂಭೀರ್ಯದಿಂದ ಕುಳಿತುಕೊಳ್ಳುವುದನ್ನು ನೋಡಿದ್ರೆ ಅವನ ಮೇಲೆ ಮುದ್ದು ಉಕ್ಕುತ್ತದೆ. 

ಮೊನ್ನೆ ಒಂದು ದಿನ ಹೀಗೆ ಮಾತಾಡುತ್ತ “ನನ್ನ ಮಗಳು ನಿಯತಿ ಕೂಡ ಒಂದು ನಾಯಿ ಮರಿ ಬೇಕು ಅಂತಾಳೆ, ಆದ್ರೆ ನಮಗೆ ಧೈರ್ಯ ಇಲ್ಲ, ಅದನ್ನು ನೋಡಿಕೊಳ್ಳಬಲ್ಲೆವೇ? ಅಂತ ಅನಿಸುತ್ತೆ,” ಎಂದೆ. ಅದಕ್ಕೆ ಪಾಟ್ರಿಕ್ ಗಂಭೀರವಾಗಿ “ನಾವು ಮಕ್ಕಳನ್ನು ಬೆಳೆಸುತ್ತೇವೆ, ಕೇಳಿದ್ದೆಲ್ಲ ಕೊಡಿಸುತ್ತೇವೆ , ನಮಗಾದ ನೋವು ಅವರಿಗಾಗಬಾರದು ಅಂತ ದಿನ ರಾತ್ರಿ ಕಷ್ಟಪಟ್ಟು ಕೆಲಸ ಮಾಡ್ತೇವೆ ಒತ್ತಡದಲ್ಲಿ ಬದುಕುತ್ತೇವೆ , ಆದರೆ ಮಕ್ಕಳು ಏನು ಮಾಡ್ತಾರೆ ಹೇಳು ? ಒಂದೇ ನಮ್ಮನ್ನು ಒಂಟಿ ಯಾಗಿ ಬಿಟ್ಟು ತಮ್ಮ ಕನಸುಗಳನ್ನ ಅರಸಿ ಹೊರಡುತ್ತಾರೆ, ಅಥವಾ ಚಟಗಳಿಗೆ ಬಿದ್ದು ದಾರಿ ಹೆಣವಾಗಿ ಹೋಗ್ತಾರೆ.” 

ಬಾಬ್ ನೋಡು ನಾನು ಬರುವುದನ್ನ ಎದುರು ನೋಡ್ತಾನೆ. ಸದಾ ಹಿಂದೆ ಮುಂದೆ ಓಡಾಡ್ತಾನೆ. ಆದರೆ ಎಲ್ಲಿದ್ದಾರೆ ನಾ ಬೆಳೆಸಿದ ನನ್ನ ಮಕ್ಕಳು? ಎಂದು ಬೇಸರಿಸಿದ . 'Dog shelter home' ಗೆ ಹೋಗಿ ಒಂದು ಸಣ್ಣ ಮರಿಯನ್ನು ತಂದುಕೊಡಿ, ಅವಳ ಬಾಲ್ಯ ಇನ್ನು ಸುಂದರವಾಗುತ್ತದೆ ಎಂದು ಹೇಳಿ ಅವನೇನೋ ಸುಮ್ಮನಾದ. 

ಆದರೆ ನನ್ನ ತಲೆಯಲ್ಲಿ ಮಹಾಪೂರ ಹರಿಬಿಟ್ಟ ನಾನು ಬಿಟ್ಟು ಬಂದಿರುವ ನನ್ನ ಅಪ್ಪ ಅಮ್ಮ, ನನ್ನ ಮನೆ, ಮಗಳಾಗಿ ನನಗಿರುವ ಕರ್ತವ್ಯ. ಏನೇನೋ ತಲೆಯಲ್ಲಿ ಸುಳಿದಾಡಿತು. ನಮ್ಮ ತಂದೆ ತಾಯಿ ನಮ್ಮ ಬಗ್ಗೆ ಹೀಗೆ ಅಂದುಕೊಂಡರೆ? ನಾ ಅವರನ್ನು ಪ್ರೀತಿಸುವುದು ಸುಳ್ಳಲ್ಲ ಆದ್ರೆ ಜೊತೆಗಿರಲು ಆಗುವುದಿಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳಲು ಸ್ವಲ್ಪ ಹೊತ್ತು ಹಿಡಿಯಿತು.  

ಬಾಬ್ ಗೆ ಈಗ ಒಬ್ಬ girlfriend ಆಗಿದ್ದಾಳೆ ಆಕೆಯ ಹೆಸರು violet ಎಂದು. Weekend ಗಳಲ್ಲಿ ಪ್ಯಾಟ್ರಿಕ್ ಅವನನ್ನು ಹೊರಗೆ ಕರೆದುಕೊಂಡು ಹೋಗಿ ವೈಲೆಟ್ ಜೊತೆ ಪಾರ್ಕಿನಲ್ಲಿ ಆಟ ಆಡಲು ಬಿಡುತ್ತಾನೆ. 

ಪ್ಯಾಟ್ರಿಕ್ ಗೆ ಬಾಬ್ ಸಿಕ್ಕ ಘಟನೆಯು ತುಂಬಾ ಮಜವಾಗಿದೆ. ಇಲ್ಲಿ ಕುರಿ ಕಾಯುವ shephard ಗಳು ನಾಯಿಯನ್ನು ಸಾಕುತ್ತಾರೆ. ಆ ನಾಯಿಗಳ ಕೆಲಸ ಕುರಿಗಳನ್ನ ನರಿಗಳಿಂದ ರಕ್ಷಿಸುವುದು ಅವುಗಳು ಹಳ್ಳ ಕೊಳ್ಳಗಳಿಗೆ ಬೀಳದಂತೆ ಎಚ್ಚರಿಸಿ ಅವುಗಳನ್ನ ಒಂದೇ ಕಡೆ ಇರುವಂತೆ ನೋಡಿಕೊಳ್ಳುವುದು. ಈ ನಾಯಿಗಳು ಮರಿ ಹಾಕಿದಾಗ ಒಂದಿಷ್ಟು ವಾರಗಳ ನಂತರ ಅವುಗಳ ಪರೀಕ್ಷೆ ನಡೆಸಲಾಗುತ್ತದಂತೆ, ಮತ್ತು ಆ ದಿನದ ಫಲಿತಾಂಶವೇ ಆ ನಾಯಿಮರಿಯ ಮುಂದಿನ ಭವಿಷ್ಯ ನಿರ್ಧರಿಸುತ್ತದೆ.

ಓಡುವ ಕುರಿ ಮಂದೆಯ ಹಿಂದೆ ಈ ಪುಟ್ಟ ನಾಯಿ ಮರಿಗಳನ್ನು ಓಡಿಸಲಾಗುತ್ತದೆ. ಕೆಲವು ನಾಯಿ ಮರಿಗಳು ಗುಂಪಿನಲ್ಲಿರುವ ದೊಡ್ಡ ನಾಯಿಗಳನ್ನು ಅನುಕರಿಸಿ ಕುರಿಮಂದೆಯ ಹಿಂದೆಯೇ ಜೋರಾಗಿ ಓಡಿ ಬೊಗಳುತ್ತಾ ಸಾಗುತ್ತವೆ ಆದರೆ ಕೆಲವೊಂದು ನಾಯಿಮರಿಗಳು ಮನೆ ಕಡೆಗೆ ಓಡಿ ಬರುತ್ತವಂತೆ. ಹಾಗೆ ಮನೆ ಕಡೆಗೆ ಓಡಿ ಬಂದ ನಾಯಿ ಮರಿಗಳನ್ನು ಶಫರ್ಡ್ ಗಳು ತಮ್ಮ ಜೊತೆಗೆ ಇಟ್ಟುಕೊಳ್ಳುವುದಿಲ್ಲ. ಅವುಗಳನ್ನ ಬೇಗ ಆದಷ್ಟು ಬೇಗ ಸಾಗಿ ಹಾಕಿಬಿಡುತ್ತಾರೆ. ಹಾಗೆ ಕುರಿಗಳ ಹಿಂದೆ ಹೋಗದೆ ಕೂಗುತ್ತಾ ಹೆದರಿ ಮನೆಗೆ ಬಂದು ಮುದುಡಿ ಮಲಗಿದ ಮುದ್ದು ನಾಯಿ ಮರಿ ನಮ್ಮ ಈ ಬಾಬ್ ಅಂದು ಕುರಿಗಳನ್ನು ನೋಡಿಕೊಳ್ಳಕಾಗ್ದಿದ್ರು ಇವತ್ತು ಕ್ಯಾನ್ಸರ್ ಸರ್ವೈವರ್ ಪ್ಯಾಟ್ರಿಕ್ ನ  ಸಂಪೂರ್ಣ ಜವಾಬ್ದಾರಿ ಹೊತ್ತು ಅವನೊಂದಿಗೆ ಸರಿಸಮವಾಗಿ ನಡೆಯುತ್ತಿದ್ದಾನೆ. ಅದಕ್ಕೆ 10 ಪಟ್ಟು ಹೆಚ್ಚು ಪ್ರೀತಿಯೂ ಗಳಿಸುತ್ತಿದ್ದಾನೆ.

ಬಾಬ್ ಈಗಲೂ ನಮಗಾಗಿ ಕಾಯುತ್ತಾನೆ , ನಾವು ಅವನಿಗೆ ಕೊಡುವ ಬರೀ ಕೆಲ ನಿಮಿಷದ ಬದಲು, ಬದುಕಿನ ಅತಿ ಸುಂದರ ಪಾಠ ಹೇಳಿಕೊಟ್ಟ ಜೀವಿ ಬಾಬ್. ಈಗ ಒಂದೈದಾರು ತಿಂಗಳ ಹಿಂದೆ ಮನೆ ಮುಂದೆ ಸಿಕ್ಕ ಬಾಬ್ ಕಣ್ಣುಗಳು ಗಾಜಿನ ಗೋಲಿಯಂತೆ ಹೊಳೆಯುತ್ತಿದ್ದ ಕಣ್ಣುಗಳು, ಖಾಲಿ  ಖಾಲಿ ಅನ್ನಿಸಿದವು. ಹುಷಾರಿಲ್ವಾ? ಬಾಬ್ ಸಪ್ಪಗಿದ್ದಾನೆ ಅಲ್ಲ? ಎಂದು ಕೇಳಿದ್ದೆ ತಡ 'ಬಾಬ್ ಗೆ ಕುರುಡು ಆವರಿಸುತ್ತಿದೆ. ಸ್ವಲ್ಪ ದಿನಗಳಲ್ಲಿ ಅವನಿಗೆ ಏನೇನೂ ಕಾಣುವುದಿಲ್ಲ’  ಎಂದು ಹೇಳಿದ ಮರುಗಳಿಗೆಯೇ, ನಾನಿದ್ದೇನಲ್ಲ ಅವನ ಕಣ್ಣಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ ಪ್ಯಾಟ್ರಿಕ್ ದನಿಯಲ್ಲಿ ಮಮಕಾರ ಉಕ್ಕುತ್ತಿತ್ತು. 

ಈಗ ಬಾಬ್ ಪೂರ್ತಿ ದೃಷ್ಟಿ ಕಳೆದುಕೊಂಡಿದ್ದಾನೆ. ಆದರೆ ಪ್ಯಾಟ್ರಿಕ್ ಮಾತ್ರ ಅವನನ್ನು ನಿತ್ಯದಂತೆ ವಾಕಿಂಗ್ ಕರೆದುಕೊಂಡು ಹೋಗುತ್ತಾನೆ. ಆದರೆ ಕಣ್ಣು ಕಾಣದ ಅವನಿಗೆ ಮೂಗು, ಕಿವಿಗಳೇ ದಾರಿದೀಪ. ಎಲ್ಲವನ್ನು ಮೂಸುತ್ತ ಮೂಸುತ್ತ, ಏನಾದರೂ ಸದ್ದು ಕೇಳಿದ ಕೂಡಲೇ ಅವ ಪ್ರತಿಕ್ರಿಯಿಸುತ್ತಾನೆ ಈ ಕಾರಣದಿಂದಲೇ ಅವರ    ವಾಕುಗಳು ಬೇಗನೆ ಮುಗಿಯುವುದೇ ಇಲ್ಲ.

ಎಷ್ಟೋ ಸಲ ಅವನನ್ನು ಮನೆಗೆ ಕರೆದುಕೊಂಡು ಹೋಗುವುದೇ ಪ್ಯಾಟ್ರಿಕ್ ಗೆ ದೊಡ್ಡ ಸವಾಲು.
ತುಂಬ ಕಷ್ಟವೆನಿಸಿದರೆ ಪ್ಯಾಟ್ರಿಕ್ ತನ್ನ ಕ್ಯಾರವಾನ್ ಗೆ ಮರಳಿ ಬಿಡುತ್ತಾನೆ. ವಾಹನಗಳು ಇರದ, ಜನ ಸಂಚಾರವೇ ಇಲ್ಲದ  ಹೊಲಗಳಲ್ಲಿ ಬಾಬ್ ಸ್ವಚ್ಛಂದವಾಗಿ ವಿಹರಿಸಲು ಕಣ್ಣುಗಳು ಬೇಕೆಂದೇನೂ ಇಲ್ಲವಂತೆ. ಇದೆಲ್ಲ ಕೇಳುವಾಗ ನನ್ನ ಕಣ್ಣು ಒದ್ದೆಯಾಗುತ್ತವೆ. ಬಾಬ್ ಮಾತ್ರ ಆ ಕುತೂಹಲದ ನಗು ಇನ್ನೂ ಉಳಿಸಿಕೊಂಡಿದ್ದಾನೆ. ಬಾಬ್ ನನ್ನ ಮತ್ತು ಮಗಳ best friend.

ಆ ನಾಯಿಗೆ ನನ್ನ ದೇಶ, ಭಾಷೆ, ಚರ್ಮದ ಬಣ್ಣ, ನಮ್ಮ ಧಿರಿಸು ಯಾವುದೂ ಮುಖ್ಯವಲ್ಲ. ನಾವು ಅದಕ್ಕೆ ಕೊಡುವ ಪ್ರೀತಿಯಷ್ಟೇ ಬೇಕು. ಅಷ್ಟೇ! ಇನ್ನ್ಯಾವ ನಿರೀಕ್ಷೆಯೂ ಇಲ್ಲ. ಒಮ್ಮೆಯೂ ಅವನಿಗೆ ನಾ ತಿಂಡಿಯನ್ನ ಹಾಕಿಲ್ಲ, ಆಟಿಕೆಯ ಉಡುಗೊರೆಯನ್ನೂ ಕೊಟ್ಟಿಲ್ಲ. ಆದರೂ ಅವ ನಮಗಾಗಿ ಕಾಯುತ್ತಾನೆ, ಆ ಹತ್ತು ನಿಮಿಷ ನಮ್ಮೊಂದಿಗೆ ಕಳೆಯಲು. ಅವನ ಇಚ್ಛೆಯಂತೆ ಪ್ಯಾಟ್ರಿಕ್ ಚಳಿ ಗಾಳಿ ಮಳೆ ಎನ್ನದೆ ಶಾಲೆ ಬಿಡುವ ಹೊತ್ತಿನಲ್ಲಿ ಹೊರಗೆ ಬಂದು ನಿಲ್ಲುತ್ತಾನೆ. ಬಾಬ್ ಪರಿಚಯವಾಗಿ ಈಗ 6 ವರ್ಷಗಳಾದವು.

ಬಾಬ್ ನ ಅಭಿಮಾನಿ ಬಳಗ ತುಂಬಾ ದೊಡ್ಡದು. ದೇಶ ಬಿಟ್ಟು ದೇಶ ಕ್ಕೆ ಬಂದಿರುವ ನನಗೆ ಬರೀ ಮನುಷ್ಯ ಬಾಂಧವ್ಯಗಳಷ್ಟೇ ಅಲ್ಲ. ಕಾಲ ಕಾಲಕ್ಕೆ ಅರಳುವ ಹೂ, ಚಿಗುರಿ ಬರಿದಾಗಿ ಮತ್ತೆ ಹಸಿರಾಗುವ ಮರಗಿಡಗಳು, ಹಕ್ಕಿ ಚಿಟ್ಟೆ ಮಾತು ಬಾರದ ಈ ಪ್ರಾಣಿಗಳೂ, ನನ್ನ ಮನಸ್ಸನ್ನು, ಬದುಕನ್ನೂ ಬೆಚ್ಚಗಿಟ್ಟಿವೆ.