ಕಥೆ ಕಥೆ ಕಬ್ಬಿಣ..

‘ಕನೆಕ್ಟ್ ಆದರೆ ಕಥೆ ..ಬಾಕಿ ಎಲ್ಲ ವ್ಯಥೆ’.

ನಮಸ್ಕಾರ ಅನಿವಾಸಿ ಬಂಧುಗಳೇ,ಇವತ್ತಿನ ಓದಿಗೆ ಸ್ವಾಗತ 

ಕಥೆ ತನ್ನ ಪಾಡಿಗೆ ತಾನೆಲ್ಲೋ ಇರುತ್ತದೆ. ಪ್ರಾಯಶ: ಯಾವ ಕಥೆಗಾರರಿಗೂ ಅವರವರ ಕಥೆಗಳ ಬಗ್ಗೆ ಕರಾರುವಕ್ಕಾದ ಅಭಿಪ್ರಾಯವಿರುವುದಿಲ್ಲವಾದ್ದರಿಂದ ಅವರೆಲ್ಲ ಒಂದಕ್ಕೆ ನಿಲ್ಲಿಸದೇ ಹಲವಾರು ಕಾದಂಬರಿಗಳನ್ನು ರಚಿಸುತ್ತಾರೋ ಏನೋ? ನಾವೂ ಹಾಗೇ. ಸಿನೆಮಾಗಳ ಮೇಲೆ ಸಿನೆಮಾ. ‘ ಇಂಥದ್ದೊಂದನ್ನು ನೋಡೇ ಇಲ್ಲ’ ಎಂದು ಬೊಂಬಡಿ ಬಜಾಯಿಸುತ್ತಾ ಮಾಡುತ್ತಲೇ ಹೋಗುತ್ತೇವೆ. ಕಥೆ ತನ್ನ ಪಾಡಿಗೆ ತಾನೆಲ್ಲೋ ಇರುತ್ತದೆ.
‐--ಯೋಗರಾಜ ಭಟ್.

ಹೌದಲ್ಲವೇ ಕಥೆ ಯಾರ ಹಂಗಿಗೂ ಒಳಗಾಗದೇ, ಯರೊಬ್ಬರನ್ನೂ ಲೆಕ್ಕಿಸದೇ ತನ್ನ ಪಾಡಿಗೆ ತಾನು ಹಾಯಾಗಿ ಎಲ್ಲೋ ಇರುತ್ತದೆ. ಅದನ್ನು ಹೆಕ್ಕುತ್ತ ನಾವು ಹೈರಾಣಾಗುತ್ತೇವೆ. ಬನ್ನಿ.. ಇವತ್ತು 'ಕಥೆಯ ಕಥೆ' ಕೇಳೋಣ..ಅಲ್ಲಲ್ಲ ಓದೋಣ.

~ಸಂಪಾದಕಿ

ಕಥೆಯ ಕಥೆ


‘ಹೀಂಗs ಒಂದ ಊರಾಗ ಒಬ್ಬ ರಾಜಾ ಇದ್ದನಂತ’.. ‘ ಹೀಂಗs ಒಂದ ಅಡವ್ಯಾಗ ಒಂದು ಹುಲಿ ಇತ್ತಂತ’.. ಹೀಗೆ ಈ ‘ಹೀಂಗ ಒಂದ’ ಅಂತ ಕಥಿ ಶುರುವಾದ್ರ ಸಾಕು ಕಣ್ಣ ಅಗಲಿಸಿ, ಮೈಯೆಲ್ಲ ಕಿವಿಯಾಗಿ, ಆ ಅಂತ ಬಾಯಿ ತಕ್ಕೊಂಡು ಅಜ್ಜಿಯ ಮುಂದೆ ಕಾಲದ ಪರಿವೆಯಿಲ್ಲದೇ ಕೂತು ಬಿಡುವುದಿತ್ತು. ನಾವೂ ಆ ಕಥೆಯೊಡನೆ ಆ ಹೀಂಗ ಒಂದ ಊರೋ, ಅಡವಿಯೋ ಏನಿತ್ತೋ ಅಲ್ಲಿಗೇ ಹೋಗಿ ಆ ಗೇಣುದ್ದ ಮನಷಾ ಚೋಟುದ್ದ ಗಡ್ಡದವನೊಡನೆಯೋ, ಬೆಂಡು ಬತ್ತಾಸಿನ ಮಳೆಯಲ್ಲಿ ಎದ್ದ ಹುಡುಗನೊಡನೆಯೋ ಅಡ್ಡಾಡಿ ಬಂದುಬಿಡುತ್ತಿದ್ದೆವು.ಚಿನ್ನದ ಕೂದಲಿನ ರಾಜಕುಮಾರಿ,ಆಸೆಬುರುಕ ನರಿಯಣ್ಣ,ಜಾಣ ಮೊಲದ ಮರಿ, ಮೂರ್ಖ ಕಾಗಕ್ಕ, ಸಪ್ತ ಸಮುದ್ರದಾಚೆಯ ಗಿಣಿಮರಿಯಲ್ಲಿ ಜೀವವಿಟ್ಟುಕೊಂಡಿದ್ಧ ರಾಕ್ಷಸ..ಇವರೆಲ್ಲ ನಮ್ಮ ಭಾವಕೋಶದ ಜೊತೆಗೇ ಬೆರೆತು ಉಸಿರಾಡುತ್ತಿದ್ದರು.ಕಾಗಕ್ಕ- ಗುಬ್ಬಕ್ಕನ ಕಥೆಯಂತೂ ನಮ್ಮ ಫೇವರಿಟ್.
ಅಜ್ಜಿಯ ಕಥೆ ಹೇಳುವ ಚೆಂದವೇ ಬೇರೆ.ಅವಳ ಕಥೆಗಳು ಬಹಳ ರೋಚಕವಾಗಿದ್ದಂಥವು.ಅಕಿ ತನ್ನ ಹಳ್ಳಿಯ ತನ್ನ ಸಣ್ಣಂದಿನ ಅನುಭವದ,ನೆನಪಿನ ಕಥೆಗಳನ್ನೂ ಹೇಳಾಕಿ. ‘ ನಮ್ಮೂರಿಗೆ ಉದ್ದನೆಯ ಬಿಳಿಗಡ್ಡದ ಬಾಬಾ ಬಂದಿದ್ದ..ಕೇಸರಿ ಶಾಟಿ ಉಟಗೊಂಡು. ಅವಾ ಹಿಮಾಲಯಕ್ಕ ಹೋಗಿದ್ನಂತ.’ ಆಕೆ ಹೇಳುತ್ತಿದ್ದರೆ ‘ಹಿಮಾಲಯ ಅಂದ್ರ?!’..ಹಿಂದೆಯೇ ನಮ್ಮ ಪ್ರಶ್ನೆ. ‘ ಅದು ದೂರ ದೇಶದಾಗ( ಇಲ್ಲಿ ದೇಶ ಅಂದ್ರ ಪ್ರದೇಶ.ಬೇರೆ ದೇಶವಲ್ಲ.) ಇರೋ ಬರ್ಫಿನ ಬೆಟ್ಟ’ ಅಲ್ಲೆ ಯಾರಾದರೂ ಹೋದ್ರ ಥಂಡಿಗೆ ಕೈಕಾಲು ಶಟದ ಹೋಗತಾವ.ಬರೇ ಸಾಧುಗಳು ಮತ್ತು ದೇವರು ಅಷ್ಟೇ ಅಲ್ಲಿರತಾರ ಅಂತ ಅಕಿ ಹೇಳತಿದ್ರ ಬಿಜಾಪೂರದ ಬಿಸಿಲ ಝಳದ ನೆಲದ ನನಗೆ ಆ ಶೆಟೆದು ಹೋಗುವ ಥಂಡಿಯ ಕಿಂಚಿತ್ತೂ ಕಲ್ಪನೆಯಾಗದಿದ್ದರೂ ಬರ್ಫಿನ ಬೆಟ್ಟವಷ್ಟೇ ತಲೆಯಲ್ಲುಳಿದು ‘ ಓಹ್! ಹಂಗಾದ್ರ ಆ ಲಾಲ್ ವಾಲಾ ( ಐಸ್ ಕ್ಯಾಂಡಿ ಮಾರುವವ) ನ್ನ ಅಲ್ಲೆ ಕರಕೊಂಡ ಹೋಗಿ ಆ ಸಿಹಿಸಿಹಿ ಕೆಂಪು ದ್ರವವನ್ನೆಲ್ಲ ಅದರ ಮೇಲೆ ಸುರುವಿದ್ರ ಅದೆಷ್ಟು ದೊಡ್ಡ ಐಸ್ಕ್ರೀಂ ಕುಲ್ಫೀ ಆದೀತು ಅಂತ ನಾನು ಮನದಲ್ಲೇ ಲಾಲಾರಸ ಸುರಿಸಾಕಿ. ‘ ಆ ಸಾಧೂಂದು ಹೀಂಗೇ ಒಂದ ಬಟ್ಟ ( ಬೆರಳು) ಹೆಪ್ಪುಗಟ್ಟಿ ಕಪ್ಪ ಆಗಿಹೋಗಿತ್ತ.ಅದರ ಮ್ಯಾಲೆ ಸುತಗಿ ತಗೊಂಡು ಹೊಡದ್ರೂ ಅವಂಗ ನೋವು ಆಗೂದಿಲ್ಲಂತ.’. ಅಕಿ ಕಥಿ ಮುಂದುವರೆಸಿದ್ರ ‘ ಓಹ್! ಒಮ್ಮೆ ಹಂಗಾರ ನಾನೂ ಹೋಗಿ ಪೂರಾ ಮೈನೇ ಹಂಗ ಮಾಡಕೊಂಡು ಬರಬೇಕು. ಅಂದ್ರ ಒಟ್ಟಾಪ್ಪೆ(ಕುಂಟಾಬಿಲ್ಲೆ ) ಆಡಬೇಕಾದ್ರ ಬಿದ್ರೂ ಮೊಣಕಾಲು – ಮೊಣಕೈ ತರಚಂಗಿಲ್ಲ’ ಅಂತೆಲ್ಲ ಹುಚ್ಚುಚ್ಚಾಗಿ ಯೋಚಿಸುತ್ತಿದ್ದುದು ಈಗಲೂ ನೆನಪಿನಲ್ಲಿದೆ.
ಇನ್ನು ಸ್ವಲ್ಪ ಬುದ್ಧಿ ಬಂದಮೇಲೆ ಅವಳು ಹಾಡಿನ ಮೂಲಕ ಹೇಳಿದ ಕಥೆಗಳಂತೂ ಇಡಿಯ ಪುರಾಣ ಪ್ರಪಂಚವನ್ನೇ ನಮ್ಮೆದಿರು ತೆರೆದಿಡುವಂಥವು.
‘ಚೈತ್ರ ಶುದ್ಧ ಹಗಲು ನವಮಿ ರಾಮ ಜನಿಸಿದ
ಬಿದ್ದ ಶಿಲೆಯ ಪಾದದಿಂದುದ್ಧಾರ ಮಾಡಿದ
ಜನಕರಾಯನಲ್ಲಿ ಚಾಪು ತುಣುಕು ಮಾಡಿದ
ಗುಣಕ ಶೀಲ ಸೀತಾದೇವಿ ಮನಕ ಮೆಚ್ಚಿದ’
ಇಡಿಯ ರಾಮಾಯಣದ ಕಥೆ 3-4 ನುಡಿಗಳಲ್ಲಿ ಮುಗಿದುಹೋಗುತ್ತಿತ್ತು.ಮತ್ತೊಂದು ಆಸಕ್ತಿದಾಯಕ ಹಾಡೆಂದರೆ ‘ಕಮಲಮುಖಿ ಸತ್ಯಭಾಮೆ’. ಶ್ರೀಕೃಷ್ಣ- ಸತ್ಯಭಾಮೆಯರ ಸಂವಾದದ ಹಾಡು. ಇಡಿಯ ದಶಾವತಾರದ ಕಥೆಗಳೆಲ್ಲ ರೋಚಕವಾಗಿ ಅದರಲ್ಲಿ ಬಂದುಬಿಡುತ್ತವೆ. ಅದೂ ಒಂಥರಾ ನಿಂದಾ ಸ್ತುತಿಯ ರೂಪದಲ್ಲಿ. ಸತ್ಯಭಾಮೆಯ ಮನೆಗೆ ಬಂದ ಕೃಷ್ಣ
‘ ಕಮಲಮುಖಿ ಸತ್ಯಭಾಮೆ ಬೇಗದಿಂದ ಬಾಗಿಲು ತಗಿ ಅಂತೀನಿ ರಮಣಿ’ ಎಂದರೆ ಅವಳು ,
‘ಯಾರೂ ಅರಿಯೆ ನಿಮ್ಮ ಖೂನು-ಗುರುತು ಇಲ್ಲ, ಹೆಂಗ ತೆಗಿಯಲಿ ರಾತ್ರೀಲಿ ರಮಣ’ ಎಂದು ಪ್ರಶ್ನಿಸುತ್ತಾಳೆ. ಅವನು ತನ್ನ ಪರಿಚಯ ಹೇಳುತ್ತ,
‘ ವೇದ ತುಡುಗು ಮಾಡಿ ಒಯ್ದು ನೀರೊಳು
ಶಂಖದೊಳಗ ಇದ್ದನು ವೈರಿ|
ಮತ್ಸ್ಯವತಾರ ತಾಳಿ ಶಂಖಾಸುರನ ಕೊಂದು ವೇದವ ತಂದೀನಿ ನಾರಿ|
ಕೂರ್ಮವತಾರ ತೊಟ್ಟು ಸಮುದ್ರ ಮಥನ ಮಾಡೀನೆ ಹೊತ್ತು ಗಿರಿ|
ರತ್ನ ತೆಗೆದು ಅಮೃತ ಹಂಚುವಾಗ ರಾಹು-ಕೇತುವಿನ ಮಾಡೀನಿ ಸೂರಿ|
ರಸಾತಳಕೆಳೀತಿದ್ದ ಭೂಮಿ ಕೇಳ್
ದೇವರಾದರೆಲ್ಲ ಗಾಬರಿ|
ಸತ್ಯವರಾಹನಾಗಿ ಭೂಮಿ ಹೊತ್ತು ಮ್ಯಾಲಕ ಎತ್ತೀನಿ ಕ್ವಾರಿ|
ಹಿರಣ್ಯಕಶಿಪು ಶಂಭುವಿನ ವರದಾ
ವಿಷ್ಣುಭಕ್ತ ಮಗ ಪ್ರಹ್ಲಾದ|
ತಂದೆ- ಮಗಗ ಬಿದ್ದೀತೋ ವಾದ
ಸಿಟ್ಟಿನಿಂದ ಕಶ್ಯಪ ಕಂಭಕೊದ್ದ
ನಾ ಬಂದೆನಾರ್ಭಾಟದಿಂದ
ಹೊಸ್ತಿಲದೊಳಗ ಹೊಟ್ಟಿ ಸೀಳಿದರ ಕೇಳ ಭಾಮಿನಿ ಆತನ ಮರಣ’
ಎಂದು ಪರಾಕ್ರಮ ಕೊಚ್ಚಿಕೊಂಡ ಅವನ ಕಾಲನ್ನೆಳೆವ ಭಾಮೆಯ ಕುಚೋದ್ಯದ ಉತ್ತರ ಕೇಳಿ..
‘ ಮತ್ಸ್ಯನೆಂದು ಬಲು ಬಡಾಯಿ ಹೇಳತಿ
ಹೆಂಗ ಬಂದ್ಯೋ ನೀ ಊರಾಗ|
ಕೂರ್ಮನಾದರ ಇಲ್ಲಿಗ್ಯಾಕ ಬಂದಿ
ಬೀಳಹೋಗೋ ನೀ ಭಾವ್ಯಾಗ|
ಸತ್ಯ ವರಾಹನೆಂದು ಸಾಕ್ಷಿ ಹೇಳತಿ ಭೂಮಿ ಹೊತ್ತ ಕಸರತ್ತ ಎನಗ ತಲೆ ಎತ್ತದೇ ತಿರುಗುತ ಹೋಗಿರಿ ಹಸಿಮಣ್ಣು ತಿಂದಡವ್ಯಾಗ|
ಭಾಳ ಭಾಳ ಹೇಳತಿದ್ದಿ ಕಸರತ್ತ
ನರಸಿಂಹನವತಾರದ ಮಾತ |♧
ಸಿಂಹನಾದರ ಗುಡ್ಡದಾಗ ಇರಹೋಗು ಇಲ್ಲಿಗ್ಯಾಕ ಬಂದಿರಿ ಕಾರಣ’
ಹೀಗೆಯೇ ಎಲ್ಲ ಅವತಾರಗಳ ಬಗ್ಗೆ ಅವನ ಬಡಾಯಿ, ಅವಳ ಹೀಯಾಳಿಸುವಿಕೆ ನಡೆದು ಕೊನೆಗೆ
‘ನಿನ್ನ ಪ್ರಾಣವಲ್ಲಭ ಮನದನ್ನ’ ಬಂದಿದ್ದೇನೆಂದ ಮೇಲೆಯೇ ಅವಳು ಬಾಗಿಲು ತೆಗಯುವುದು. ಹೇಳಿ ಕೇಳಿ ‘ಸರಸಕೆ ಕರೆದರೆ ವಿರಸವ ತೋರುವ’ ಸತ್ಯಭಾಮೆ ಅವಳು.ಸುಮ್ಮನೆ ಇಷ್ಟು ಸುಲಭಕ್ಕೆ ಬಿಟ್ಟಾಳೆಯೇ?
ನಮ್ಮ ಓಣ್ಯಾಯಿ(ಅಜ್ಜಿ) ರಾಗವಾಗಿ ಈ ಹಾಡು ಹಾಡುತ್ತಿದ್ದರೆ ದಶಾವತಾರದ ಎಲ್ಲ ಕಥೆಗಳೂ ಕಣ್ಣಮುಂದೆ ಸಿನೆಮಾ ರೀಲಿನಂತೆ ಉರುಳುತ್ತಿದ್ದವು.
ಸ್ವಲ್ಪ ದೊಡ್ಡವರಾದ ಮೇಲೆ ಅಂದರೆ ಸುಮಾರು 4-5 ನೇಯತ್ತೆ ಹೊತ್ತಿಗೆ ಓದುವ ಹುಚ್ಚು ಅಂಟಿಕೊಂಡಾದ ಮೇಲೆ ಆಹಾ! ಆ ಚಂದಮಾಮ, ಬೊಂಬೆಮನೆ, ಬಾಲಮಿತ್ರದ ಆ ರೋಚಕಕಥೆಗಳು..ಆರು ಬೆರಳಿನ ಉದ್ದ ಗಡ್ಡದ ಮಾಂತ್ರಿಕ, ಛಕ್ಕಂತ ವೇಷ ಬದಲಿಸಿ ಬರುವ ಮಾಟಗಾತಿ,ಕೂದಲೆಳೆ- ಉಗುರುಗಳಿಂದ ಮಾಟ ಮಾಡುವ ತಾಂತ್ರಿಕ , ವಿಕ್ರಮಾದಿತ್ಯನ ಹೆಗಲಿನಿಂದ ಹಾಹ್ಹಾಹಾ ಎಂದು ನಗುತ್ತ ಹಾರಿಹೋಗಿ ಗಿಡದ ಟೊಂಗೆಗೆ ನೇತಾಡುವ ಬೇತಾಳ..ನಮ್ಮಕಲ್ಪನೆಗೊಂದು ಎಲ್ಲೆಯೇ ಇಲ್ಲದಂತೆ ಮಾಡಿದವಷ್ಟೇ ಅಲ್ಲ ಜೊತೆಗೇ ಇಲ್ಲದ ಭಯವನ್ನೂ ಅಲ್ಪಸ್ವಲ್ಪ ಹುಟ್ಟು ಹಾಕಿದವೆನ್ನಿ. ನಾನಾಗ 4 ನೇಯತ್ತೆ ಹುಡುಗಿ. ಒಂದು ಕಥೆ ಓದಿದ್ದೆ. ಅದರಲ್ಲಿ ಸುಳ್ಳು ಮಾತಾಡಿದರೆ ತಲೆಯ ಮೇಲೆ ಕೊಂಬು ಮೂಡುತ್ತವೆ. ಪ್ರತಿಸಲ ಸುಳ್ಳು ಹೇಳಿದಾಗೆಲ್ಲ ಒಂದೊಂದು ಇಂಚು ಬೆಳೆಯುತ್ತ ಹೋಗಿ , ಹೀಗೆಯೇ ಬಹಳ ಸಲ ಸುಳ್ಳು ಹೇಳಿದ ಹುಡುಗನ ತಲೆಯ ಕೊಂಬುಗಳು ಬೆಳೆದು ಬೆಳೆದು ಮೇಲೆ ಜಂತಿಗೆ ಸಿಕ್ಕಿಹಾಕಿಕೊಂಡು ಬಿಡುತ್ತವೆ. ಆದನ್ನೋದಿದ ಮೇಲೆ ವರುಷಗಟ್ಟಲೆ ಸಣ್ಣ ಸುಳ್ಳು ಹೇಳಿದರೂ ಹತ್ತುಸಲ ತಲೆಮುಟ್ಟಿ ನೋಡಿಕೊಳ್ಳುತ್ತಿದ್ದೆ. ಒಮ್ಮೆ ಯಾಕೋ ಪಕ್ಕದ ಶಿವಮೊಗ್ಗಿ ಅವರ ಮನೆಗೆ ಹೋಗಿದ್ದೆ. ಊಟಕ್ಕೆ ಕುಳಿತಿದ್ದ ಅವರು, ‘ಬಾರs ಊಟ ಮಾಡು ಬಾ’ ಎಂದು ಕರೆದರು. ಹಾಗೆಲ್ಲ ಊಟ-ತಿನಿಸಿಗೆ ಯಾರಾದರೂ ಕರೆದರೆ ಹೂಂ ಅಂತ ಹೊರಟುಬಿಡಬಾರದು.ನಮ್ಮ ಊಟ ಆಗಿದೆ ಅಂತ ಹೇಳಬೇಕು ಎನ್ನುವುದು ಮನೆಯಲ್ಲಿ ಹಿರಿಯರು ವಿಧಿಸಿದ್ದ ನಿಯಮವಾಗಿದ್ದರಿಂರ ಹಾಗೇ ಹೇಳಿದೆ. ‘ಇರಲಿ ಬಾ. ಚೂರೇ ಪಾಯಸ ತಿನ್ನು’ ಎಂದರು. ‘ ನಮ್ಮನೆಯಲ್ಲೂ ಅದೇ’ ಎಂದೆ. ಹೀಗೇ ಅವರು ಒತ್ತಾಯಿಸಿ ಕರೆಯುವುದು, ನಾನು ಸುಳ್ಳು ಹೇಳುತ್ತ ಹೋಗಿ ನೋಡುತ್ತಿದ್ದಂತೇ 8-10 ಸುಳ್ಳುಗಳಾಗಿ ಇನ್ನೇನು ಕೊಂಬು ಬೆಳೆದು ನಾನಿಲ್ಲೇ ಇವರ ನಡುಮನೆಯಲ್ಲೇ ಸಿಕ್ಕಿಹಾಕಿಕೊಂಡು ಬಿಡುತ್ತೇನೆಂದು ತುಂಬ ಭಯವಾಗಿ ಅಳಲು ಶುರು ಮಾಡಿದ್ದೆ. ನನ್ನ ಅವಸ್ಥೆ ನೋಡಿ ಪಾಪ ಅವರಿಗೂ ಗಾಬರಿ .
ಇನ್ನೊಮ್ಮೆ ನಮ್ಮ ಸ್ನೇಹಿತರಂತೆ, ಮನೆಯವರಂತೆ ವೇಷ ಬದಲಿಸಿ ಬರುವ ದೆವ್ವದ ಕಥೆ ಓದಿದಾಗಲಂತೂ ನನ್ನ ಪಾಡು ನಾಯಿಪಾಡಾಗಿತ್ತು. ಜೊತೆಗಿದ್ದವರೆಲ್ಲ ಇವರು ನಿಜದವರೋ, ವೇಷಧಾರಿ ದೆವ್ವಗಳೋ ಎಂದು ಹೆದರಿಕೆಯಾಗಿಬಿಡುತ್ತಿತ್ತು. ಅದೂ ಬಿಜಾಪೂರದ ನಮ್ಮ ಮುದ್ದಣ್ಣ ಮಾಮಾನ ಆ ದೊಡ್ಡ ಮನೆಯಲ್ಲಿ ರಾತ್ರಿವೇಳೆ ಬಚ್ಚಲಿಗೆ ಹೋಗಬೇಕಾಗಿ ಬಂದರಂತೂ ಮುಗಿದೇಹೋಯ್ತು. ಪಡಸಾಲೆಯಲ್ಲಿ ಮಲಗಿದ ನಾವು ನಡುಮನೆ, ದೊಡ್ಡ ಅಡುಗೆಮನೆ ದಾಟಿ ಬಚ್ಚಲಿಗೆ ಅದೂ ಎಂಥಾ ಬಚ್ಚಲು ಅಂತೀರಿ 3-4 ಮೆಟ್ಟಿಲುಗಳ , 3-4 ಕಂಬಗಳುಳ್ಳ ದೆವ್ವನಂಥಾ ಬಚ್ಚಲು. ಅಲ್ಲಿ ಒಂದೆಡೆ ಕುಳ್ಳಿನ ಚೀಲ, ಎತ್ತರಕ್ಕೆ ಒಟ್ಟಿದ ಕಟ್ಪಿಗೆಗಳು, ಅವುಗಳ ಸಂದಿಯಲ್ಲೆಲ್ಲೋ ಕಣ್ಣಿಗೆ ಕಾಣದೇ ದಡಬಡ ಮಾಡುವ ಇಲಿಯ ಸಂಸಾರಗಳು, ಉದ್ದ ಮೀಸೆ ಝಳಪಿಸುವ ಜೊಂಡಿಂಗಗಳು..ಸಾಲದ್ದಕ್ಕೆ ಎದುರಿಗೊಂದು ಎರಡು ಸರಳುಗಳ ಸಣ್ಣ ಕಿಡಕಿ. ನಮ್ಮ ಪಪ್ಪೂಮಾಮ( ನನ್ನ ಸಣ್ಣ ಸೋದರ ಮಾವ) ‘ ರಾತ್ರಿ ಬಚ್ಚಲಿಗೆ ಹೋದ್ರ ಆ ಕಿಡಕಿ ಕಡೆ ನೋಡಬ್ಯಾಡ್ರಿ ಎರಡು ಕೆಂಪುಕಣ್ಣು ನಿಮ್ಮನ್ನೇ ನೋಡತಿರತಾವ. ನೀವೇನರ ಅಪ್ಪಿತಪ್ಪಿ ನೋಡಿದ್ರ ತನ್ನ ಉದ್ದನ್ನ ಕೆಂಪು ನಾಲಿಗೆ ಚಾಚಿ ಎಳಕೊಂಡು ಬಿಡತಾವ’ ಅಂತೆಲ್ಲ ಏನೇನೋ ಹೇಳಿ ನಮ್ಮನ್ನು ಕಾಡಿ ಹೆದರಿಸಿರುತ್ತಿದ್ದ. ಹೀಗಾಗಿ ಯಾವಾಗಲೂ ಅಜ್ಜಿಯನ್ನೆಬ್ಬಿಸಿ ಅವಳ ಬೆಂಗಾವಲಿನಲ್ಲೇ ರಾತ್ರಿ ಬಚ್ಚಲಿಗೆ ಹೋಗುವುದು. ಆದರೆ ಈ ವೇಷ ಬದಲಿಸುವ ದೆವ್ವದ ಕಥೆ ಓದಿದ ಮೇಲೆ ಹಿಂದೆ ಬರುತ್ತಿರುವುದು ಓಣ್ಯಾಯಿನೋ ಅಥವಾ ದೆವ್ವವಿರಬಹುದೋ ಎಂದು ಶುರುವಾದ ಸಂಶಯ ಕೆಲವೇ ಸೆಕೆಂಡುಗಳಲ್ಲಿ ಪೆಡಂಭೂತವಾಗಿ ಬೆಳೆದು ನನ್ನನ್ನು ನಡುಗಿಸಿಬಿಡುತ್ತಿತ್ತು. ಅಮ್ಮ ಹೇಳಿಕೊಟ್ಟ ‘ ನಿರ್ಭಯತ್ವಂ ಅರೋಗತಾಂ’ ದ ಹನುಮಪ್ಪನೋ, ಅಜ್ಜ ಕಲಿಸಿದ ‘ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ’ ದ ರಾಯರೋ ಹೇಗೋ ನನ್ನನ್ನು ಕಾಯುತ್ತಿದ್ದರೆನ್ನಿ.
ರಾಯರು(ರಾಘವೇಂದ್ರ ಸ್ವಾಮಿಗಳು) ಅಂದಕೂಡಲೇ ಮತ್ತೊಂದು ಘಟನೆ ನೆನಪಾಯ್ತು. ಒಮ್ಮೆ ರಜೆಗೆಂದು ನಿಪ್ಪಾಣಿಗೆ ನಮ್ಮ ಇನ್ನೊಬ್ಬ ಸೋದರಮಾವನ ಮನೆಗೆ ಹೋಗಿದ್ದೆ. ಬಹಳ ಹೊತ್ತು ರಾತ್ರಿ ಹರಟೆ, ಮಾತುಕತೆಯ ಜೊತೆಗೇ ನನ್ನ ಕಸಿನ್ಸ್ ತಮ್ಮ home-work ನ್ನೂ ಮುಗಿಸಿ, ಪಾಟಿ- ಪುಸ್ತಕ ಎಲ್ಲ ಎತ್ತಿಟ್ಟು ಇನ್ನೇನು ಮಲಗಲು ಅಣಿಯಾದೆವು.
ಪೆನ್ಸಿಲ್ ಬಾಕ್ಸ್ ಒಂದು ತಂಗಿ ಭೂದೇವಿಯ ತಲೆದಿಂಬಿನ ಪಕ್ಕಕ್ಕೆ ಉಳಿದುಹೋಗಿತ್ತು. ನಾನು ಮರೆತು ಉಳಿದಿದೆಯೇನೋ ಎಂದು ಎತ್ತಿಡಲು ಹೋದರೆ ‘ ಅವ್ವಾ, ಗೌರಕ್ಕಾ ಅದನ್ನ ತಗೀಬ್ಯಾಡವಾ. ಅದರಾಗ ರಾಯರು, ಹನುಮಪ್ಪ ಎಲ್ಲ ಇದ್ದಾರ. ಕೆಟ್ಟ ಕನಸು ಬೀಳಬಾರದು, ರಾತ್ರಿ ಅಂಜಿಕಿ ಬರಬಾರದು ಅಂತ ಇಟಗೊಂಡೀನಿ’ ಅಂದಳು. ನಾನು ಅರೇ! ತ್ರಿಜ್ಯ, ಕೋನಮಾಪಕ, ಸೀಸಕಡ್ಡಿಗಳ ಬದಲು ಇದರಲ್ಲಿ ದೇವರು ಹೆಂಗ ಬಂದ್ರು ಅಂತ ತೆಗೆದು ನೋಡಿದರೆ ಅದರಲ್ಲಿ ರಾಯರ-ಹನುಮಪ್ಪನ ಸಣ್ಣ ಸಣ್ಣ ಫೋಟೋಗಳು. ಆಮೇಲೆ ಗೊತ್ತಾಯಿತು ಇದು ಅನಂತನಾಗ್ ನ ‘ ನಾ ನಿನ್ನ ಬಿಡಲಾರೆ’ ಸಿನೆಮಾದ ಕಥೆ ಕೇಳಿದ್ದರ ಪ್ರಭಾವ ಅಂತ. (ಇನ್ನು ಸಿನೆಮಾ ನೋಡಿದ್ದರೆ ಏನಾಗುತ್ತಿತ್ತು ಆ ‘ ಕಾಮಿನಿ’ ಗೇ ಗೊತ್ತು ) ಅಂತೂ ಈಗಲೂ ಅವಳ ಭೇಟಿಯಾದಾಗ ಈ ಕಥೆ ನೆನೆಸಿಕೊಂಡು ನಗುತ್ತೇವೆನ್ನಿ.

ಈಗ ಅಜ್ಜಿಯ ಕಥೆಗಳನ್ನು ಚೆಂದ ಚೆಂದದ ಕಾರ್ಟೂನ್ ಗಳು ಹೇಳುತ್ತವೆ.ತನ್ನ ಚಿಕ್ಕಂದಿನಲ್ಲಿ ‘snow-white ‘ ನೋಡುತ್ತ ಕಣ್ಣೀರು ಸುರಿಸುತ್ತಿದ್ದ, Tom & Jerry ಯಲ್ಲಿ ಕನಸು ನೋಡುತ್ತಿರುವ Tom ನನ್ನು ನೋಡಿ ಸೋಫಾದ ಮೇಲೆ ಉರುಳಾಡಿ ನಗುತ್ತಿದ್ದ ನನ್ನ ಮಗನ ಚಿತ್ರ ಈಗಲೂ ನನ್ನ ಕಣ್ಣ ಮುಂದಿದೆ.ದೃಶ್ಯಮಾಧ್ಯಮ ಯಾವಾಗಲೂ ಹೆಚ್ಚು ರಮಣೀಯ ಹಾಗೂ ಆಕರ್ಷಕವಲ್ಲವೇ?
ಕಥೆಗಳೂ ದೇವರಂತೆ ಅನಾದಿ-ಅನಂತ- ವಿಶ್ವವ್ಯಾಪಿ.ಅವುಗಳ ರೀತಿ, ಮಾಧ್ಯಮಗಳು ಬದಲಾದರೇನಂತೆ? ಜಗವಿರುವತನಕ ಕಥೆಗಳಿರುತ್ತವೆ. ನಮ್ಮ ಕಥೆ, ನಿಮ್ಮ ಕಥೆ, ಅವರ ಕಥೆ, ಇವರ ಕಥೆ, ಕಂಸನ ಕ್ರೌರ್ಯ ದ ಕಥೆ, ಬುದ್ಧನ ಕರುಣೆಯ ಕಥೆ, ಶಕುನಿಯ ಕುತಂತ್ರದ ಕಥೆ,ವಿದುರನ ನೀತಿಕಥೆ, ರಾಮನ ಶೌರ್ಯ ದ ಕಥೆ, ಭೀಮನ ಬಲದ ಕಥೆ, ಸಿರಿವಂತರ ಸೊಕ್ಕಿನ ಕಥೆ, ಬಡವರ ಹಸಿವಿನ ಕಥೆ, ಸೋತ ಕಥೆ, ಗೆದ್ದ ಕಥೆ, ನಗುವ ಕಥೆ, ಅಳುವ ಕಥೆ, ಸನ್ಯಾಸದ ಕಥೆ, ಗಾರ್ಹಸ್ಥ್ಯದ ಕಥೆ, ಸಾಮಾನ್ಯರ ಸಾಮಾನ್ಯ ಕಥೆ , ಸಂತೆಯ ಸೌತೆ-ಬದನೆಗಳ ಕಥೆ, ಹೋರಾಟದ ಕಥೆ, ಯಶಸ್ಸಿನ ಕಥೆ,ಅಪ್ಪುವ ಕಥೆ, ದಬ್ಬುವ ಕಥೆ, ಮಿನಿ ಕಥೆ,ಹನಿಗಥೆ, ಸಣ್ಣ ಕಥೆ,ನೀಳ್ಗಥೆ, ಕಾವ್ಯ-ಕಾದಂಬರಿಗಳ ಕಥೆ...ಮುಗಿಯದ,ನಿಲ್ಲದ ಕಥೆ .

~ ಗೌರಿಪ್ರಸನ್ನ

ಮೂರು ದಿನಗಳು – ಶಿವ ಮೇಟಿ ಬರೆದ ಪತ್ತೇದಾರಿ ಕಥೆ

ಪ್ರಿಯ ಓದುಗರೇ,
ಮತ್ತೊಂದು ಪತ್ತೇದಾರಿ ಕಥೆ, ಇದು. ನನ್ನ ಪತ್ತೇದಾರಿ ಕಥೆಯ ನಾಯಕನಾದ ಸಿ ಐ ಡಿ ವಿಕ್ರಮನ ಎರಡನೆಯ ಸಾಹಸವನ್ನು ನಿಮ್ಮ ಮುಂದೆ ಕಥೆಯ ರೂಪದಲ್ಲಿ ಇಟ್ಟಿರುವೆ. ಓದಿ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವಿರೆಂದು ಭಾವಿಸಿರುವೆ. ನಿಮ್ಮ ಅನಿಸಿಕೆ ನನಗೆ ಅಮೃತ, ಕುಡಿದು ತಿದ್ದಿಕೊಳ್ಳಲು ಸಹಾಯ!
ಇಂತಿ ಸಂಪಾದಕ



ಹೆಂಡತಿಯೊಂದಿಗೆ ವಿಶ್ರಾಂತಿಗೆಂದು, ಕೇರಳದಲ್ಲಿರುವ ವೈಥ್ರಿ ರೆಸಾರ್ಟಿಗೆ ಹೋಗುವ ತಯ್ಯಾರಿಯಲ್ಲಿದ್ದನು ವಿಕ್ರಂ. ಅಷ್ಟರಲ್ಲಿಯೇ ಅವನ ಮೊಬೈಲ್ ರಿಂಗ್ ಆಗತೊಡಗಿತು, ಹೆಡ್ ಕ್ವಾರ್ಟರ್ಸ್ನಿಂದ ಕರೆ,”ವಿಕ್ರಂ, ತಕ್ಷಣವೇ ಕಚೇರಿಗೆ ಬಾ, ತುರ್ತು ಕೆಲಸವಿದೆ”ಎಂದು ಬಾಸ್ ಫೋನಿನಲ್ಲಿ ಆದೇಶ ಕೊಟ್ಟಿದ್ದರು.
“ಸಾರ್! ನಾನು ರಜಾದ ಮೇಲಿರುವೆ, ವಿಶ್ರಾಂತಿಗೆಂದು ಕೇರಳಕ್ಕೆ ಹೊರಟಿರುವೆ”
“ವಿಶ್ರಾಂತಿ ಆ ಮೇಲೆ, ಮಹತ್ವದ ಕೆಲಸ, ಈಗಲೇ ಬರಲೇ ಬೇಕು” ಎಂದು ಹೇಳಿ ಫೋನು ಇಟ್ಟು ಬಿಟ್ಟರು. ವಿಕ್ರಂ,ಸಿಡಿಮಿಡಿಗೊಂಡ ಹೆಂಡತಿಯನ್ನು ಸಮಾಧಾನಪಡಿಸಿ, ಪ್ಯಾಲೇಸ್ ರಸ್ತೆಯ, ಕಾರ್ಲ್ಟನ್ ಹೌಸಿನಲ್ಲಿರುವ ಸಿ ಐ ಡಿ ಮುಖ್ಯ ಕಚೇರಿಯನ್ನು ತಲುಪಿದಾಗ ಬೆಳಗಿನ ಹನ್ನೊಂದು ಗಂಟೆಯಾಗಿತ್ತು. ಬಾಸ್ ಯಾಕೋ ಉದ್ವೇಗದಲ್ಲಿರುವಂತೆ ಕಂಡುಬಂದರು
“ವಿಕ್ರಂ, ನೀನು ಟಿವಿಯಲ್ಲಿ ಆಗಲೇ ಕೇಳಿರಬಹುದು, ಪಟ್ಟಣದ ಪ್ರತಿಷ್ಠಿತ ವ್ಯಕ್ತಿಯೊಬ್ಬನು ನಿನ್ನೆ ಸಂಜೆಯಿಂದ ಕಾಣೆಯಾಗಿದ್ದಾನೆ. ಬಿಡದಿಯ ಪೊಲೀಸ್ ಪಡೆಗೆ ಈ ಕೇಸಿನ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಹತ್ವದ ಸುಳಿವು ದೊರೆತಿಲ್ಲ. ವಿರೋಧ ಪಕ್ಷಗಳ ಒತ್ತಡದಿಂದ ಈ ಕೇಸು ಈಗ ನಮಗೆ ವರ್ಗಾವಣೆಯಾಗಿದೆ. ನಮಗೆ ಇರುವುದು ಕೇವಲ ಮೂರು ದಿನಗಳು ಮಾತ್ರ, ಇಲ್ಲವಾದರೆ ಕೇಸು ಸಿ ಬಿ ಐ ಗೆ ಹೋಗುವ ಸಾಧ್ಯತೆ ಇದೆ. ನನ್ನಿಂದ ನಿನಗೆ ಎಲ್ಲ ಸಹಾಯವಿದೆ. ನೀನು ಇದರಲ್ಲಿ ಯಶಸ್ವಿಯಾಗುತ್ತಿ ಎಂಬ ಭರವಸೆ ನನಗೆ ಇದೆ. ಗುಡ್ ಲಕ್.” ಎಂದು ಹೇಳಿ ಅವನನ್ನು ಬೀಳ್ಕೊಟ್ಟರು.
ಎರಡು ಗಂಟೆಗಳಲ್ಲಿ ವಿಕ್ರಮನ ಕಾರು ಬಿಡದಿಯ ಪೊಲೀಸ್ ಠಾಣೆಯನ್ನು ತಲುಪಿತ್ತು. ಮುಖ್ಯ ತನಿಖಾಧಿಕಾರಿ ಇನ್ಸ್ಪೆಕ್ಟರ್
ಪಾಟೀಲ್ ಕೈ ಕುಲುಕಿ ಸ್ವಾಗತಿಸಿಕೊಂಡರು.
“ಪಾಟೀಲರೇ ಈ ವ್ಯಕ್ತಿಯ ಬಗ್ಗೆ ವಿವರಗಳನ್ನು ಕೇಳಬಹುದೇ?”
“ಸಾರ್ ! ಕಾಣೆಯಾದ ವ್ಯಕ್ತಿಯ ಹೆಸರು ಖೇತನ್ ರೆಡ್ಡಿ. ವಯಸು ನಲವತ್ತು. ಹತ್ತು ವರುಷಗಳ ಹಿಂದೆ ಬಿ ಬಿ ಎಂ ಪಿ ಯಲ್ಲಿ ಒಬ್ಬ ಸಾಮಾನ್ಯ ನೌಕರ, ಈಗ ಪ್ರತಿಷ್ಠಿತ ರೆಡ್ಡಿ ಡೆವೆಲಪರ್ಸ್ ಕಾರ್ಪೊರೇಷನ್ನಿನ ಮಾಲೀಕ. ರಿಯಲ್ ಎಸ್ಟೇಟ್ ದಂಧೆಯಲ್ಲಿ ಎತ್ತಿದ ಕೈ. ಎಷ್ಟೋ ರಾಜಕಾರಣಿಗಳೊಂದಿಗೆ ನಿಕಟ ಸಂಬಂಧ. ಬರುವ ಮೇಯರ್ ಚುನಾವಣೆಯ್ಲಲಿ ಬಹುಶಃ ವಿರೋಧ ಪಕ್ಷದ ಅಭ್ಯರ್ಥಿ”
“ಅವನ ವೈಯಕ್ತಿಕ ಜೀವನದ ಬಗ್ಗೆ ಏನಾದರು ಮಾಹಿತಿ ಇದೆಯೇ?”
“ಇಲ್ಲಿಯವರೆಗೆ ನಮಗೆ ದೊರೆತ ಮಾಹಿತಿಯ ಪ್ರಕಾರ,
ಮಿಸ್ಟರ್ ರೆಡ್ಡಿ ಐಷಾರಾಮಿ ಜೀವಿ. ಫ್ಯಾನ್ಸಿ ಕಾರು, ಹೈಫೈ ಕ್ಲಬ್ಬ್ಸ್ ಮತ್ತು ವಿದೇಶಿ ಬ್ರಾಂಡಿನ ಮದ್ಯಗಳ ಬಗ್ಗೆ ತುಂಬಾ ಒಲವು. ಮೊದಲನೆಯ ಹೆಂಡತಿಯೊಡನೆ ಐದು ವರ್ಷಗಳ ಹಿಂದೆ ಡೈವೋರ್ಸ್ ಆಗಿದೆ, ಅವಳಿಗೆ ಮೂರು ವರ್ಷದ ಮಗು ಇದೆ. ಎರಡು ವರ್ಷಗಳ ಮುಂಚೆ ಎರಡನೆಯ ಮದುವೆ ಆಗಿದೆ. ಗಂಡ ಹೆಂಡರ ನಡುವೆ ಹನ್ನೆರಡು ವರ್ಷಗಳ ಅಂತರವಿದೆ. ಯಾವುದೊ ಕ್ಲಬ್ಬಿನಲ್ಲಿ ಪರಿಚಯವಾಗಿ ಮದುವೆಯಾಗಿದ್ದಾರಂತೆ . ಎರಡನೆಯ ಹೆಂಡತಿ ಮುಂಬೈಯಿನ ಮೂಲದವಳು, ಅವಳ ಅಣ್ಣ ಡಾಕ್ಟರ್ ಗುಪ್ತಾ, ರೆಡ್ಡಿಯ ಸ್ನೇಹಿತನಂತೆ, ಬಿಡದಿಯ ಹೊರವಲಯದಲ್ಲೊಂದು ಸಣ್ಣ ಆಸ್ಪತ್ರೆಯನ್ನು ನಡೆಸುತ್ತಿದ್ದಾನೆ.
“ಹಾಗಾದರೆ, ಕಾಣೆಯಾಗಿರುವ ಕಂಪ್ಲೇಂಟ್ ರಿಜಿಸ್ಟರ್ ಆಗಿದ್ದು ಹೇಗೆ?”
“ನಿನ್ನೆ ರಾತ್ರಿ ಸುಮಾರು ಒಂಭತ್ತು ಗಂಟೆಗೆ ಅಣ್ಣನೊಂದಿಗೆ ಅವನ ಹೆಂಡತಿ ಸ್ಟೇಷನ್ಗೆ ಬಂದಿದ್ದಳು. ‘ಜೀವನದಲ್ಲಿ ಜಿಗುಪ್ಸೆ ಆಗಿದೆ, ನನ್ನನ್ನು ಹುಡುಕುವ ಪ್ರಯತ್ನ ಬೇಡಾ’ ಎಂದು ಗಂಡನಿಂದ ಅವಳ ಮೊಬೈಲ್ಗೆ ಬಂದ ಮೆಸೇಜ್ ತೋರಿಸಿದಳು. ಮೆಸೇಜ್
ಪರಿಶೀಲಿಸಿದ ಮೇಲೇನೆ ಕಂಪ್ಲೇಂಟ್ ದಾಖಲಿಸಿಕೊಂಡಿದ್ದೀವಿ ಸಾರ್.”
“ಸರಿ! ಇಲ್ಲಿಯವರೆಗೆ ಏನೇನು ತನಿಖೆ ಆಗಿದೆ?” ಎಂದು ಕೇಳಿದ ವಿಕ್ರಂ.
“ಅವನ ಜೊತೆಗೇನೆ ಕಾಣೆಯಾಗಿರುವ ಕಾರಿನ ನಂಬರನ್ನು, ಅವನ ಫೋಟೋವನ್ನು ಎಲ್ಲ ಸ್ಟೇಷನ್ಗಳಿಗೆ ರವಾನೆ ಮಾಡಿದ್ದೇವೆ, ಅವನ ಮನೆಯಲ್ಲಿದ್ದವರಿಂದ ಕೆಲವು ಸ್ಟೇಟ್ಮೆಂಟ್ ಸಂಗ್ರಹಿಸಿದ್ದೇವೆ. ಅವನಿಗೆ, ಆಸ್ತಿಯ ಮೇಲೆ ತೆರಿಗೆ ಅಧಿಕಾರಿಗಳ ದಾಳಿಯ ಭಯವಿತ್ತೆಂದೂ, ಪರ್ಸನಲ್ ಸೆಕ್ರೆಟರಿ ರಾಣಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿರುವನೆಂದು ಮತ್ತು ಅವಳೇ ಈ ಕೃತ್ಯದಲ್ಲಿ ಭಾಗಿಯಾಗಿರಬಹುದೆಂದು ಹೆಂಡತಿ ಮೋನಿಕಾಳ ಅನಿಸಿಕೆ. ಗಂಡ ಹೆಂಡರ ನಡುವಿನ ಸಂಬಂಧ ಹದಗೆಟ್ಟು ಅವರಿಬ್ಬರ ನಡುವೆ ದಿನಾಲೂ ಜಗಳವಾಗುತ್ತಿತ್ತೆಂದು ಮತ್ತು ಮೋನಿಕಾ ನಿನ್ನೆ ಮನೆಯಲ್ಲಿ ಇರಲಿಲ್ಲವೆಂದು, ಆಗಾಗ್ಯೆ ಡಾ. ಗುಪ್ತಾ ಮನೆಗೆ ಬರುತ್ತಿದ್ದನೆಂದು, ಅಡಿಗೆಯ ಕೆಲಸದ ಲಕ್ಶ್ಮಿಯ ಹೇಳಿಕೆ. ನಿನ್ನೆ ಸಂಜೆ ಏಳು ಗಂಟೆಗೆ ರೆಡ್ಡಿ ಮನೆ ಬಿಟ್ಟನೆಂದೂ ಮತ್ತು ಬರುವುದು ಲೇಟ್
ಆಗಬಹುದೆಂದು ಹೇಳಿ ಹೋದನೆಂಬುವುದು ಮನೆಗೆಲಸದ ಹುಡುಗ ರಾಜುವಿನ ಸ್ಟೇಟ್ಮೆಂಟ್. ನಿನ್ನೆ ಸಾಯಂಕಾಲ ಸುಮಾರು ಏಳು ಗಂಟೆಗೆ ರೆಡ್ಡಿಯ ಮನೆಯಲ್ಲಿ ತಾನು ಅವನನ್ನು ಭೇಟಿಯಾಗಿರುವದಾಗಿಯು, ರೆಡ್ಡಿಯ ಹಳೆಯ ಬ್ಯುಸಿನೆಸ್ ಪಾರ್ಟ್ನರ್
ಅನಿಲ್, ದೊಡ್ಡ ಮೊತ್ತದ ಹಣ ಕೊಡಬೇಕಾಗಿತ್ತೆಂದು ಮತ್ತು ಇತ್ತಿತ್ತಲಾಗಿ ಅವರಿಬ್ಬರ ನಡುವೆ ಜಗಳ ನಡೆಯುವುದು ಸಾಮಾನ್ಯವಾಗಿತ್ತೆಂದು, ಮೋನಿಕಾ ಹೇಳಿದಂತೆ ರಾಣಿಯ ಜೊತೆಗೆ ಸಂಬಂಧವಿರುವುದು ಸತ್ಯವೆಂದೂ, ರಾಣಿ ಅಥವಾ ಅನಿಲನೇ ಇದಕ್ಕೆಲ್ಲ ಕಾರಣ ಎಂಬುವುದು ಮೋನಿಕಾಳ ಅಣ್ಣ ಡಾ.ಗುಪ್ತಾನ ವಾದ. ರೆಡ್ಡಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ, ಇಲ್ಲಿಯವರೆಗೂ ಏನೂ ಸುಳಿವು ಸಿಕ್ಕಿಲ್ಲ. ರಾಣಿಯನ್ನು ಸಂಪರ್ಕಿಸಿ ಸ್ಟೇಷನ್ಗೆ ವಿಚಾರಣೆಗೆ ಬರಲು ಹೇಳಿದ್ದೇವೆ, ಇಷ್ಟರಲ್ಲಿಯೇ ಬರಬಹುದು. ಆದರೆ, ಅನಿಲನನ್ನು ಟ್ರೇಸ್ ಮಾಡಲು ಆಗುತ್ತಿಲ್ಲಾ. ಕಾಂಪ್ಲಿಕೇಟೆಡ್ ಕೇಸ್ ಇದ್ದಂಗೆ ಇದೆ ಸಾರ್”ಎಂದು ವರದಿ ಒಪ್ಪಿಸಿದನು ಇನ್ಸ್ಪೆಕ್ಟರ್ ಪಾಟೀಲ್.
“ಎಸ್! ಇಟ್ ಇಸ್ ಕಾಂಪ್ಲಿಕೇಟೆಡ್. ಐಷಾರಾಮಿ ಜೀವನ ನಡೆಸುತ್ತಿದ್ದ ಮನುಷ್ಯ, ಜಿಗುಪ್ಸೆಯಿಂದ ಕಾಣೆಯಾಗುವ ಚಾನ್ಸ್ ತೀರಾ ಕಡಿಮೆ. ನನಗೆ ಅನಿಸಿದಂತೆ ಎರಡು ಸಾಧ್ಯತೆಗಳು, ಕಿಡ್ನಾಪ್ ಇಲ್ಲಾ ಕೊಲೆ.
ಕಾನ್ಸ್ಟೇಬಲ್ ತಂದಿಟ್ಟಿದ್ದ ಬಿಸಿ ಚಹಾ ಹೀರುತ್ತಾ ವಿಕ್ರಂ ಏನನ್ನೋ ಯೋಚಿಸುತ್ತಿರುವಾಗಲೇ ಹರೆಯ ವಯಸ್ಸಿನ ಆಕರ್ಷಿತ ಹೆಣ್ಣೊಬ್ಬಳು ಪೇದೆಯ ಜೊತೆಗೆ ಇವರಿದ್ದ ಕೋಣೆಗೆ ಬಂದಳು.
“ಸಾರ್! ನನ್ನ ಹೆಸರು ರಾಣಿ. ಮಿ. ರೆಡ್ಡಿಯವರ ಪಿ.ಎ. ವಿಷಯ ಕೇಳಿ ನನಗೂ ತುಂಬಾ ಬೇಜಾರಾಗಿದೆ. ನೀವು ಕರೆಸಿದಂತೆ, ನಿಮಗೆ ಈ ಕೇಸಿನಲ್ಲಿ ಸಹಾಯ ಮಾಡಲು ಬಂದಿರುವೆ”
ವಿಕ್ರಂ ಅವಳ ಬಾಡಿದ ಮುಖವನ್ನೇ ನೋಡುತ್ತಾ,
“ಮೇಡಂ, ವಿಚಾರಣೆಗೆ ಬಂದಿದ್ದಕ್ಕೆ ಧನ್ಯವಾದಗಳು. ಏನನ್ನೂ ಮರೆಮಾಚದೆ ಸತ್ಯವನ್ನು ಹೇಳಿದರೆ ನಮಗೂ ಅನುಕೂಲ, ನಿಮಗೂ ಒಳ್ಳೆಯದು. ರೆಡ್ಡಿಯವರ ಜೊತೆಗೆ ನೀವು ಎಷ್ಟು ವರ್ಷಗಳಿಂದ ಕೆಲಸಾ ಮಾಡುತ್ತಿರುವಿರಿ? ಅವನ ಜೊತೆಗೆ ನಿಮ್ಮ ಆಕ್ರಮ ಸಂಬಂಧವಿದೆಯೆಂಬ ಅವನ ಹೆಂಡತಿಯ ಹೇಳಿಕೆಗೆ ನಿಮ್ಮ ಉತ್ತರವೇನು ? ನಿಮ್ಮ ಅನಿಸಿಕೆಯಲ್ಲಿ ಯಾರಾದರು ಶಂಕಿತರಿದ್ದಾರೆಯೇ? ಐ ಜಸ್ಟ್ ವಾಂಟ್ ಆನ್ ಹಾನೆಸ್ಟ್ ಆನ್ಸರ್”. ‘ಸಾರ್, ನಾನು ರೆಡ್ಡಿಯವರ ಪಿ. ಎ. ಆಗಿ ಕೆಲಸಾ ಮಾಡ್ತಿರುವುದು ಕಳೆದ ಮೂರು ವರ್ಷಗಳಿಂದ. ಕಳೆದ ಎರಡು ದಿನಗಳಿಂದ ರಜೆ ಮೇಲಿದ್ದಿದ್ದರಿಂದ ಆಫೀಸಿಗೆ ಹೋಗಿಲ್ಲ. ಅವರ ಜೊತೆಗೆ ಅಕ್ರಮ ಅಲ್ಲಾ ಅನ್ಯೋನ್ಯ ಸಂಬಂಧವಿದೆ. ಎಷ್ಟೋ ಸಲ ಜೊತೆಗೂಡಿ ಹೊರಗಡೆಗೆ ಊಟಕ್ಕೆ ಹೋಗಿದ್ದೇನೆ, ತಾಸುಗಂಟಲೇ ಅವರ ಜೊತೆಗೆ ಹರಟೆ ಹೊಡಿದಿದ್ದೇನೆ. ನಾನು ಕೊಳ್ಳುತ್ತಿರುವ ಹೊಸ ಫ್ಲಾಟ್ಗೆ ಆರ್ಥಿಕ ಸಹಾಯ ಕೇಳಿದ್ದೇನೆ. ಯಾಕೋ ಅವರು ಇತ್ತೀಚಿಗೆ ಬಹಳೇ ಚಿಂತಿತರಾಗಿದ್ದರು. ಕುಡಿತ, ಕ್ಲಬ್ಬಿನ ಭೇಟಿ ಹೆಚ್ಚಾಗಿತ್ತು. ಡಾ.ಗುಪ್ತಾ ಒಳ್ಳೆಯ ಮನುಷ್ಯನಲ್ಲ, ಇಬ್ಬರ ನಡುವೆ ಒಳ್ಳೆಯ ಸಂಬಂಧ ಉಳಿದಿಲ್ಲಾ, ಇವರಿಂದ ಆಗಾಗ್ಯೆ ಎಷ್ಟೋ ಸಾಲ ತೆಗೆದುಕೊಂಡು ಇನ್ನೂ ಹಿಂದಿರುಗಿಸಿಲ್ಲ. ಇದರಲ್ಲಿ ಅವನದೇ ಕೈವಾಡವಿರಬಹುದು ಎಂಬುವುದು ನನ್ನ ಸಂಶಯ.‘

ಇಂತಾ ಕೇಸುಗಳಲ್ಲಿ ಒಬ್ಬರಮೇಲೊಬ್ಬರು ಅಪವಾದ ಮಂಡಿಸುವುದು ಸಹಜ ಎಂಬ ಅರಿವಿದ್ದ ವಿಕ್ರಂ , “ನಿಮ್ಮ ಹೇಳಿಕೆಗೆ ಧನ್ಯವಾದಗಳು, ರೆಡ್ಡಿ ಮತ್ತು ನಿಮ್ಮ ನಡುವೆ ನಡೆದ ಮಾತುಕತೆಯನ್ನು ಶೋಧಿಸಲು ನಿಮ್ಮ ಮೊಬೈಲ್
ಫೋನು ನಮಗೆ ಬೇಕು”
“ಸಾರ್ ! ನನ್ನ ಹಳೆಯ ಮೊಬೈಲ್ ಕಳೆದು ಮೂರು ದಿನವಾಗಿದೆ. ಕಂಪ್ಲೇಂಟ್ ಕೂಡಾ ಕೊಟ್ಟಾಗಿದೆ, ಈಗಿರುವುದು ಹೊಸ ಮೊಬೈಲ್, ನೀವು ತೆಗೆದುಕೊಳ್ಳಬಹುದು”
“ವಾಟ್ ಎ ಕೋ ಇನ್ಸಿಡೆಂಟ್”
“ಈ ಕೇಸು ಮುಗಿಯುವವರೆಗೂ ಸಂಶಯದ ದೃಷ್ಟಿಯಿಂದ ನಿಮ್ಮನ್ನು ಅರೆಸ್ಟ್ ಮಾಡಲಾಗುವುದು”.
“ಸತ್ಯ ಹೇಳಿದವರಿಗೆ ಉಳಿವಿಲ್ಲ ಎಂಬುವುದಕ್ಕೆ ಇದೊಂದು ಉದಾಹರಣೆ. ಮೀಡಿಯಾದ ಮುಂದೆ ನಿಮ್ಮ ಕೆಲಸವನ್ನು ತೋರಿಸಿಸಲು ಇದೊಂದು ಉಪಾಯ ಎಂದು ನನಗೆ ಚನ್ನಾಗಿ ಗೊತ್ತು. ಯು ವಿಲ್ ರಿಪೆಂಟ್ ಫಾರ್ ಇಟ್”
“ಪಾಟೀಲರೇ ಇವಳನ್ನು ಬಂಧನದಲ್ಲಿರಿಸಿ, ಹೆಸರು ಮಾತ್ರ ಗುಪ್ತವಾಗಿರಲಿ, ಅವಳ ಮೊಬೈಲನ್ನು ಮಿ. ಜೋಸ್ ಗೆ ಪರಿಶೀಲನೆಗೆ ರವಾನೆ ಮಾಡಿ, ಅನಿಲನ ಮೇಲೆ ವಾರೆಂಟ್ ಕಳಿಸಿ. ಈಗ ನಾನು ತಕ್ಷಣವೇ ಅವನ ಆಫೀಸಿಗೆ ಹೋಗಬೇಕು” ಎಂದು ಆದೇಶ ಕೊಟ್ಟನು ವಿಕ್ರಂ. ಕೆಲವೇ ನಿಮಿಷಗಳಲ್ಲಿ ಪೊಲೀಸ್ ಜೀಪು, ಬಿಡದಿಯ ಇಂಡಸ್ಟ್ರಿಯಲ್ ಎಸ್ಟೇಟ್ ಹತ್ತಿರವಿದ್ದ ಅವನ ಆಫೀಸನ್ನು ಸೇರಿತ್ತು. ಗೇಟಿನಲ್ಲಿದ್ದ ಗಾರ್ಡಿನಿಂದ ಆಫೀಸಿನ ಕೀಲಿಯನ್ನು ತೆರೆಸಿ, ನೇರವಾಗಿ ರೆಡ್ಡಿಯ ಚೇಂಬರ್ನೊಳಗೆ ಹೋಗಿ, ಸೂಕ್ಷ್ಮವಾಗಿ ಕಣ್ಣಾಡಿಸಿದನು. ಶೆಲ್ಫಿನಲ್ಲಿ ಅಚ್ಚು ಕಟ್ಟಾಗಿ ಫೈಲುಗಳನ್ನು ಜೋಡಿಸಲಾಗಿತ್ತು, ಟೇಬಲ್ ಮೇಲಿನ ಕುಂಡೆಯಲ್ಲಿದ ಹೂವುಗಳು ಇನ್ನೂ ತಾಜಾ
ಅನಿಸುತ್ತಿದ್ದವು. ಟೇಬಲಿನ ಮೇಲಿನ ಡ್ರಾವರನ್ನು ತೆಗೆದಾಗ ಕಂಡಿದ್ದು ಆಧುನಿಕ ಶೈಲಿಯ ಪಿಸ್ತೂಲು, ಕೆಳಗಡೆ ಡ್ರಾವರಿನಲ್ಲಿ ಸಿಕ್ಕಿದ್ದು ರಾಣಿಯ ಹೆಸರಿನಲ್ಲಿ ಬರೆದಿದ್ದ ಹತ್ತು ಲಕ್ಷ ರೂಪಾಯಿಗಳ ಚೆಕ್ಕು. ರಾಣಿಯ ಕುರಿತು ಕೊಟ್ಟ ಮೋನಿಕಾಳ ಹೇಳಿಕೆ ಬಹುತೇಕ ನಿಜವೆನಿಸಿತು ವಿಕ್ರಮಿನಿಗೆ. ‘ಹಾಗಾದರೆ ಈ ಪಿಸ್ತೂಲ್ ಏಕೆ? ಅವನಿಗೆ ಯಾರಿಂದಲಾದರೂ ಪ್ರಾಣ ಭೀತಿಯಿತ್ತೇ?’ ಅಥವಾ ‘ಸ್ವಯಂ ರಕ್ಷಣೆಗೆ ಇಟ್ಟುಕೊಂಡಿರಬಹುದೇ?’ ಎಂದು ಯೋಚಿಸತೊಡಗಿದನು.
ಕ್ರೈಂ ಬ್ರಾಂಚಿನ ಟೆಕ್ನಿಕಲ್ ಟೀಮಿನ ಅವಶ್ಯಕತೆ ಇದೆ ಎನಿಸಿ, ಮುಖ್ಯಸ್ಥ ಜೋಸ್ ಗೆ ಕರೆ ಮಾಡಿದನು. “ಮಿ. ಜೋಸ್, ನನಗೆ ಸಹಾಯ ಬೇಕಾಗಿದೆ. ಈಗ ನಾನು ಕಳಿಸುವ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ, ನನಗೆ ಈ ಮೊಬೈಲಿನಿಂದ ಬಂದ ಕೊನೆಯ ಟೆಕ್ಸ್ಟ್ ಮೆಸೇಜಿನ ವೇಳೆ ಮತ್ತು ಸ್ಥಳದ ಅವಶ್ಯಕತೆ ಇದೆ. ಪ್ಲೀಸ್ ಡು ಇಟ್ ಆಸ್ ಕ್ವಿಕ್ಲಿ ಆಸ್ ಪಾಸಿಬಲ್, ಹಾಗೆಯೇ ಪಾಟೀಲ್ ಕಳಿಸಿ ಕೊಡುವ ಮೊಬೈಲಿನಲ್ಲಿನ ಸಂದೇಶಗಳನ್ನು ಮತ್ತು ಕರೆಗಳನ್ನು ರಿಟ್ರೀವ್ ಮಾಡಲು ಪ್ರಯತ್ನ ಮಾಡಿ ಅರ್ಜೆಂಟ್ ಪ್ಲೀಸ್” ಎಂದು ಹೇಳಿ, ರೆಡ್ಡಿಯ ಮೊಬೈಲ್ ನಂಬರನ್ನು ಕಳುಹಿಸಿ, ಮುಂದಿನ ಯೋಜನೆಯ ಬಗ್ಗೆ ಚಿಂತಿಸತೊಡಗಿದನು. ವಿಕ್ರಂನಿಗೆ, ಡಾ. ಗುಪ್ತಾ ಮತ್ತು ಮೋನಿಕಾಳ ಮೇಲೆಯೂ ನಿಗಾ ಇಡುವುದು ಒಳ್ಳೆಯದೆನಿಸಿತು. ಅಷ್ಟರಲ್ಲಿಯೇ ಜೋಸ್ ನಿಂದ ಕರೆ ಬಂತು,
“ಮಿ. ವಿಕ್ರಂ ಅವನ ಮೊಬೈಲ್ನಿಂದ ಕೊನೆಯ ಮೆಸೇಜ್ ಹೋಗಿದ್ದು
ಸಾಯಂಕಾಲ ೭. ೩೦ ಗಂಟೆಯಲ್ಲಿ, ಬಿಡದಿಯ ಹತ್ತಿರದ ನೆಲ್ಲಿಗುಡ್ಡೆ ಕೆರೆಯ ಪ್ರದೇಶದಿಂದ, ಅನೇಬಲ್ ಟು ಟ್ರೇಸ್ ದಿ ಫೋನ್
ಫರ್ದರ್, ಸಾರೀ” ಎಂದು ಫೋನಿಟ್ಟನು. ಆಗಲೇ ಸಾಯಂಕಾಲ ಆರು ಗಂಟೆಯಾಗಿತ್ತು.” ಒಹ್! ನೋ,
ಪಾಟೀಲರೇ ಜೀಪ್ ರೆಡಿ ಮಾಡಿ ತಕ್ಷಣವೇ ನೆಲ್ಲಿಗುಡ್ಡೆ ಕೆರೆಗೆ ಹೋಗಬೇಕು”.
“ಸಾರ್, ಹೊರಗೆ ವಿಪರೀತ ಮಳೆ ಸುರಿಯುತ್ತಿದೆ, ಈ ಪರಿಸ್ಥಿತಿಯಲ್ಲಿ ಅಲ್ಲೇನು ಸಿಗುತ್ತದೆ?”
“ಪ್ರಮುಖವಾದ ಸುಳಿವು, ಶೀಘ್ರದಲ್ಲಿಯೇ ನಿಮಗೆ ಗೊತ್ತಾಗುತ್ತದೆ.”
ವಿಕ್ರಮನ ಆದೇಶದಂತೆ ಜೀಪು ಹದಿನೈದು ಕಿಲೋಮೀಟರ್ ದೂರದಲ್ಲಿದ್ದ ನೆಲ್ಲಿಗುಡ್ಡೆ ಕೆರೆಯನ್ನು ತಲುಪಿತ್ತು. ಯಾವಾಗೂ ಜನ ಜಂಗುಳಿಯಿಂದ ತುಂಬಿರುತ್ತಿದ್ದ ಕೆರೆಯ ಪ್ರದೇಶ, ಸುರಿಯುತ್ತಿದ್ದ ಧಾರಾಕಾರವಾದ ಮಳೆಯಿಂದಾಗಿ ನಿರ್ಜನವಾಗಿತ್ತು. ಸುರಿಯುತ್ತಿದ್ದ ಮಳೆಯಲ್ಲಿಯೂ ಜೀಪಿನಿಂದ್ ಕೆಳಗಿಳಿದು, ಏನನ್ನೋ ಹುಡುಕುತ್ತಲಿದ್ದ ವಿಕ್ರಮನನ್ನು ಪಾಟೀಲ್ ಹಿಂಬಾಲಿಸುತ್ತಿದ್ದನು. ಅನತಿ ದೂರದಲ್ಲಿ ಅವರಿಗೆ ಕಂಡಿದ್ದು ಮಿ. ರೆಡ್ಡಿಯ ಕಾರು.
“ಗಾಟ್ ಇಟ್” ಎಂದು ಉದ್ಘಾರವೆತ್ತಿದನು ವಿಕ್ರಂ.
ವಿಕ್ರಮನ ಚುರುಕು ಬುದ್ದಿಗೆ ಮನದಲ್ಲಿಯೇ ಅಭಿನಂದನೆ ವ್ಯಕ್ತಪಡಿಸಿ ಅವನ ಜೊತೆಗೆ ಕಾರಿನತ್ತ ಧಾವಿಸಿದನು ಪಾಟೀಲ. ಕಾರು ಹೊರಗಡೆಯಿಂದ ಲಾಕ್ ಆಗಿತ್ತು, ಒಳಗಡೆ ಯಾರೂ ಇರಲಿಲ್ಲ, ಮೊಬೈಲ್ ಫೋನಿನ ಸುಳಿವೂ ಇರಲಿಲ್ಲ.
“ಅಂದರೆ , ರೆಡ್ಡಿ ಇಲ್ಲಿಯವರೆಗೂ ಬಂದು ಮಾಯವಾಗಿದ್ದಾನೆ. ಕೆರೆಯನ್ನು ಶೋಧ ಮಾಡಲು ಬೋಟಿಂಗ್ ಟೀಮಿನ ಅವಶ್ಯಕತೆ ಇದೆ”
“ಸಾರ್, ಈ ರಾತ್ರಿಯಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಈಗ ಇದು ಸಾಧ್ಯವಿಲ್ಲ . ಪೊಲೀಸರಿಗೆ ಕಾರನ್ನು ಗಾರ್ಡ್ ಮಾಡಲು ಹೇಳಿ ನಾಳೆ ಬೆಳಿಗ್ಗೆ ಬರೋಣ” ಎಂದು ಸಲಹೆ ಕೊಟ್ಟನು ಪಾಟೀಲ. ಅವನ ಯೋಚನೆ ಸರಿ ಎನಿಸಿ ಮನೆಗೆ ಹಿಂದುರಿಗಿದನು ವಿಕ್ರಂ.
ಸುರಿಯುತ್ತಿದ್ದ ಮಳೆಯು ಬೆಳಗಿನ ವೇಳೆಗೆ ತಣ್ಣಗಾಗಿತ್ತು. ಪೊಲೀಸ್ ಪಡೆಯೊಂದಿಗೆ ವಿಕ್ರಮನು ಕೆರೆಯನ್ನು ತಲುಪಿದಾಗ ಹತ್ತು ಗಂಟೆಯಾಗಿತ್ತು. ಅಷ್ಟರಲ್ಲಿಯೇ ರಾತ್ರಿ ಕಾರು ಕಾವಲಿಗೆಂದು ಇದ್ದ ಪೇದೆಗಳು ಕೆರೆಯಲ್ಲೊಂದು ಹೆಣ ತೇಲಾಡುತ್ತಿದೆಯೆಂದು ಹೇಳಿದರು. ಬೋಟಿಂಗ್ ಟೀಮಿನವರು ಹೆಣವನ್ನು ಹೊರ ತರುವದರಲ್ಲಿ ಯಶಸ್ವಿಯಾಗಿದ್ದರು. ಅಷ್ಟೇನು ಬದಲಾವಣೆಯಾಗದಿದ್ದ ದೇಹ , ದೇಹದ ಮೇಲಿದ್ದ ಬಟ್ಟೆ, ಬಟ್ಟೆಯ ಜೇಬಿನಲ್ಲಿದ್ದ ಕಾರ್ ಕೀ ಮತ್ತು ಮೊಬೈಲ್ನಿಂದ ಅದು ರೆಡ್ಡಿಯ ದೇಹವೆಂದೇ ಖಚಿತವಾಯ್ತು. ವಿಕ್ರಂ ದೇಹವನ್ನು ಅರ್ಜೆಂಟ್ ಪೋಸ್ಟ್ ಮಾರ್ಟಮ್ ಗೆ ರವಾನೆ ಮಾಡಲು ತಿಳಿಸಿ, ಮೋನಿಕಾ ಮತ್ತು ಡಾ. ಗುಪ್ತಾಗೆ ಸ್ಟೇಷನಗೆ ಬರ ಹೇಳಿ, ಪಾಟೀಲ್ ನೊಂದಿಗೆ ಕಾರಿನ ಬಾಗಿಲನ್ನು ತೆರೆದು ಸೂಕ್ಷ್ಮ ವೀಕ್ಷಣೆಯನ್ನು ಮಾಡಿದನು. ಕಾರಿನ ಒಳಗಾಗಲಿ ಅಥವಾ ಹೊರಗಾಗಲಿ ಏನೂ ಪುರಾವೆ ಸಿಗಲಿಲ್ಲ. ಸುರಿದ ಮಳೆಯಿಂದ ಕಾರಿನ ಹೊರಗಡೆ ಯಾವುದೇ ಹೆಜ್ಜೆ
ಗುರುತುಗಳೂ ಕಾಣಿಸಲಿಲ್ಲ. ಸ್ಟೀಯರಿಂಗಿನ ಮೇಲಿನ ಫಿಂಗರ್ ಪ್ರಿಂಟ್ ತೆಗೆದುಕೊಂಡ ಮೇಲೆ ಕಾರನ್ನು ಠಾಣೆಗೆ ತರಲು ಹೇಳಿ ಪಾಟೀಲನೊಂದಿಗೆ ಸ್ಟೇಷನಗೆ ಮರಳಿದನು ವಿಕ್ರಂ.
ಕೊನೆಗೂ ಅನಿಲನನ್ನು ಹುಡುಕಿ, ಅರೆಸ್ಟ್ ಮಾಡಿ, ಠಾಣೆಗೆ ತರುವಲ್ಲಿ ಪೊಲೀಸ್ ಪಡೆಯವರು ಯಶಸ್ವಿಯಾಗಿದ್ದರು. ರೆಡ್ಡಿಗೆ ಇಪ್ಪತ್ತು ಲಕ್ಷ ಹಣ ಕೊಡುವದಿತ್ತೆಂದು , ಅವರಿಬ್ಬರ ನಡುವೆ ಜಗಳವಾಗುತ್ತಿದ್ದಿದ್ದು ನಿಜವೆಂದು ಹಾಗು ಅವನು ಕಾಣೆಯಾದ ವಿಷಯದಲ್ಲಿ ತನಗೇನೂ ಸಂಬಂಧವಿಲ್ಲವೆಂದು ಹೇಳಿಕೆ ಕೊಟ್ಟಿದ್ದನು ಅನಿಲ್. ಮೋನಿಕಾ ಮತ್ತು ಡಾ. ಗುಪ್ತ ವಿಕ್ರಮನ ಆದೇಶದಂತೆ ಸ್ಟೇಷನಗೆ ಬಂದಿದ್ದರು.
ಅವರೆಲ್ಲರಿಂದ ಮತ್ತೊಮ್ಮೆ ಮರು ಹೇಳಿಕೆ ಪಡೆದು, ಎಲ್ಲರ ಮೊಬೈಲುಗಳನ್ನು ಪಡೆದು, ಮಿ. ಜೋಸ್ ಗೆ ರವಾನಿಸಿ ಮೆಸೇಜ್ ಅನಲೈಸಿಂಗ್ ಮತ್ತು ರಿಟ್ರೀವಿಂಗ್ ಮಾಡಲು ಹೇಳಿ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತ ಕುಳಿತನು ವಿಕ್ರಂ.
ಮರಣೋತ್ತರ ಪರೀಕ್ಷೆಯ ಪ್ರಕಾರ … ದೇಹದ ಮೇಲೆ ಯಾವುದೇ ಗಾಯಗಳಿಲ್ಲವೆಂದೂ, ಪುಪ್ಪುಸದಲ್ಲಿ ನೀರು ಮತ್ತು ಪಾಚಿ ಇರುವುದರಿಂದ ಕೆರೆಯಲ್ಲಿ ಬಿದ್ದಾಗ ಅವನು ಜೀವಂತನಿದ್ದನೆಂದೂ, ಶರೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆರಾಯಿನ್ ಪತ್ತೆಯಾಗಿದ್ದರಿಂದ ಸಾಯುವ ಮುನ್ನ ಅವನು ಡ್ರಗ್ಗಿನ ಪ್ರಭಾವದಲ್ಲಿ ಇದ್ದ ಎಂಬುವುದು ಖಚಿತವೆಂದೂ, ಒಟ್ಟಿನಲ್ಲಿ ಇದೊಂದು ಬಹುಶಃ ಆತ್ಮಹತ್ಯೆ ಎಂದು ರಿಪೋರ್ಟ್ ಸೂಚಿಸಿತ್ತು. ಯಾಕೋ ವಿಕ್ರಮನ ಮನಸು ಇನ್ನೂ ಬೇರೆ ಏನನ್ನೋ ಯೋಚಿಸತೊಡಗಿತ್ತು. ಅವನಿಗೆ ಕಾರನ್ನು ಇನ್ನೊಮ್ಮೆ ಪರೀಕ್ಷಿಸಬೇಕೆನಿಸಿ ಕಾರಿನತ್ತ ಹೋದನು. ಸ್ಟೀಯರಿಂಗ್ ಮೇಲೆ ಸ್ಪಷ್ಟವಾದ ಫಿಂಗರ್ ಪ್ರಿಂಟ್ ಮೂಡಿಲ್ಲ ಎಂಬ ವರದಿಯನ್ನು ನೋಡಿ ಅವನಿಗೆ ಇನ್ನೂ ಕುತೂಹಲ ಮೂಡಿತ್ತು. ಹಾಗಾದರೆ ಸ್ಟೀಯರಿಂಗನ್ನು ಯಾರಾದರೂ ತೊಳೆದಿರಬಹುದೇ ? ಅವನ ಜೊತೆಗೆ ಕಾರಿನಲ್ಲಿ ಬೇರೆ ಯಾರಾದರೂ ಇದ್ದಿರಬಹುದೇ? ಎಂದು ಯೋಚಿಸತೊಡಗಿದನು.
ಒಂದು ಕ್ಷಣ ಸ್ಟೀಯರಿಂಗಿಗೆ ಲ್ಯೂಮಿನಾಲ್ ಲೇಪಿಸಿ ನೋಡಬೇಕೆನಿಸಿತು. ತನ್ನ ಕಾರಿನ ಬಾಟಲಿನಲ್ಲಿದ್ದ ಲ್ಯೂಮಿನಾಲನ್ನು ತಂದು ಸ್ಟೀಯರಿಂಗಿಗೆ ಲೇಪಿಸಿದ ತಕ್ಷಣವೇ ಗುಪ್ತವಾಗಿದ್ದ ಒಂದು ರಕ್ತದ ಕಲೆಯು ಹೊಳೆಯತೊಡಗಿತು. ಉಳಿದ ದ್ರವ್ಯವನ್ನು ಅವನು ಸೀಟುಗಳ ಮೇಲೆಯೂ ಮತ್ತು ಡಿಕ್ಕಿಯಲ್ಲಿಯೂ ಲೇಪಿಸಿದನು. ಡಿಕ್ಕಿಯ ಮೂಲೆಯಲ್ಲೂ ಒಂದು ಸಣ್ಣ ರಕ್ತದ ಕಲೆಯು ಹೊಳೆಯತೊಡಗಿತು.
ತಾನು ಯೋಚಿಸಿದ್ದು ಸರಿ ಎನಿಸಿ ತಕ್ಷಣವೇ ಫಾರೆನ್ಸಿಕ್ ಸ್ಕ್ರೀನಿಂಗ್ ಟೀಮನ್ನು ಕರೆಯಿಸಿ, ರಕ್ತದ ಕಲೆಯಿಂದ ಸ್ಯಾಂಪಲ್
ಸಂಗ್ರಹಿಸಿ, ಅರ್ಜೆಂಟ್ ಡಿ ಏನ್ ಎ ಅನಲೈಸಿಂಗಿಗೆ ಕಳುಹಿಸಿದನು. ಡಿಕ್ಕಿಯಲ್ಲಿದ್ದ ರಕ್ತದ ಕಲೆಯು ರೆಡ್ಡಿಯದೆಂದು ಆದರೆ ಸ್ಟೀಯರಿಂಗ್ ಮೇಲೆ ಇದ್ದ ರಕ್ತವು ಬೇರೆಯವರದೆಂದು ರಿಪೋರ್ಟ್ ಬಂದಿತು. ತಕ್ಷಣವೇ ವಿಕ್ರಂ ಅಂದುಕೊಂಡನು ಅಂದರೆ ,
ರೆಡ್ಡಿಯನ್ನು ಡಿಕ್ಕಿಯಲ್ಲಿ ಹಾಕಿ ಬೇರೆ ಯಾರೋ ಕಾರನ್ನು ಡ್ರೈವ್ ಮಾಡಿರುವರು. ಹಾಗಾದರೆ ಆ ಬೇರೆಯವನು ಯಾರು ? ಎಂದು ಯೋಚಿಸತೊಡಗಿದನು.
ತಕ್ಷಣವಾಗಿ ಅವನಿಗೆ ಶಂಕೆ ಬಂದಿದ್ದು ರಾಣಿ, ಅನಿಲ್, ಮೋನಿಕಾ ಮತ್ತು ಡಾ. ಗುಪ್ತಾರ ಮೇಲೆ. ವೈದ್ಯರ ಸಹಾಯದಿಂದ ಅವರೆಲ್ಲರ ರಕ್ತವನ್ನು ಸಂಗ್ರಹಿಸಿ ಫಾರೆನ್ಸಿಕ್ ಲ್ಯಾಬ್ ಗೆ ಕಳುಹಿಸಿದನು. ಆಶ್ಚರ್ಯವೆಂಬುವಂತೆ ಸ್ಟೀಯರಿಂಗ್ ಮೇಲೆ ಇದ್ದ ರಕ್ತವು ಡಾ. ಗುಪ್ತಾನದೆಂದು ಪರೀಕ್ಷೆಯಿಂದ ಖಚಿತವಾಗಿತ್ತು. ಡಾ. ಗುಪ್ತಾನನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆತಂದಾಗಿತ್ತು. ವಿಕ್ರಂ ಅವನಿಗೆ ಜೋರಾಗಿ ಹೇಳುತ್ತಿದ್ದನು,
ಡಾ. ಗುಪ್ತಾ ನೀವಾಗಿಯೇ ತಪ್ಪನ್ನು ಒಪ್ಪಿಕೊಂಡರೆ ಒಳ್ಳೆಯದು ಇಲ್ಲವಾದರೆ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಗುಪ್ತಾನಿಗೆ ಬೇರೆ ಹಾದಿ ಇಲ್ಲವೆನಿಸಿತು.
“ಹೌದು ಸಾರ್! ನಾನು ಮಾಡಿದ ಪ್ಲಾನ್ ಪರ್ಫೆಕ್ಟ್ ಅಂತಾ ಅಂದುಕೊಂಡಿದ್ದೆ ಆದರೆ ಅದು ಸುಳ್ಳಾಯಿತು. ಆಸ್ಪತ್ರೆಯಲ್ಲಾದ ನಷ್ಟದಿಂದ, ಐಷಾರಾಮದ ಜೀವನ ಶೈಲಿಯಿಂದ ಹಣದ ಉಬ್ಬರವಾಗಿತ್ತು. ರೆಡ್ಡಿಯಿಂದ ಆಗಾಗ್ಯೆ ತೆಗೆದುಕೊಂಡ ಸಾಲದ ಮೊತ್ತ ಐವತ್ತು ಲಕ್ಷವನ್ನು ದಾಟಿತ್ತು. ಅವನು ಇತ್ತಿತ್ತಲಾಗಿ ಹಣ ಮರಳಿಸಲು ಭಯಂಕರ ಕಿರುಕುಳ ಕೊಡತೊಡಗಿದ್ದನು, ಅದನ್ನು ತಡೆದುಕೊಳ್ಳಲಾಗದೇ ಅವನನ್ನೇ ಮುಗಿಸಿ ಬಿಡುವ ಯೋಚನೆಯನ್ನು ಹಾಕಿದೆ. ಡೀಪ್ ಫೇಕ್ ಟೆಕ್ನಾಲಜಿ ಉಪಯೋಗಿಸಿ ರಾಣಿ ಮತ್ತು ರೆಡ್ಡಿ ಜೊತೆಗೂಡಿದ ಸುಳ್ಳು ಫೋಟೋಗಳನ್ನು ಮೋನಿಕಾಗೆ ಕಳುಹಿಸಿ, ಅವಳಲ್ಲಿ ಅವನ ಬಗ್ಗೆ ಸಂಶಯ ಹುಟ್ಟಿಸಿದೆ. ಎರಡು ದಿನಗಳ ಹಿಂದೆ ಮೋನಿಕಾಳನ್ನು ನನ್ನ ಮನೆಗೆ ಕರೆತಂದೆ. ರೆಡ್ಡಿಗೆ ಹೆರಾಯಿನ್ ಬಗ್ಗೆ ಒಲವಿದ್ದದ್ದು ನನಗೆ ಮೊದಲಿನಿಂದಲೂ ಗೊತ್ತಿತ್ತು. ಕೆಲವು ಸಲ ಇಬ್ಬರೂ ಸೇರಿ ಸವಿದಿದ್ದೆವು. ಮೊನ್ನೆ ಅವನಿಗೆ ಫೋನು ಮಾಡಿ, ಅವನ ಮನೆಯಲ್ಲಿ ಇಪ್ಪತ್ತು ಲಕ್ಷ ಹಣ
ಹಿಂತಿರುಗಿಸುವದಾಗಿಯೂ ಮತ್ತು ಕೂಡಿ ಹೆರಾಯಿನ್ ಸೇವಿಸುವದಾಗಿಯೂ ತಿಳಿಸಿದ್ದೆ. ಈ ಪ್ಲಾನಿನನಲ್ಲಿ ಹಣದಾಸೆ ಹಚ್ಚಿ ಮನೆಗೆಲಸದ ಹುಡುಗ ರಾಜುನನ್ನು ಉಪಯೋಗಿಸಿದೆ. ಮನೆಯಲ್ಲಿಯ ಎಲ್ಲ ಸಿ ಸಿ ಟಿವಿಗಳನ್ನು
ಅವನ ಕೈಯಿಂದ ಆಫ್ ಮಾಡಿಸಿದ್ದೆ. ನನ್ನನ್ನು ನಂಬಿ ಆರೂವರೆ ಗಂಟೆಗೆ ರೆಡ್ಡಿ ಮನೆಗೆ ಬಂದಿದ್ದ. ಅವನ ರಕ್ತನಾಳದಲ್ಲಿ ಅಪಾಯಕರ ಪ್ರಮಾಣದ ಹೆರಾಯಿನ್ ನನ್ನು ಇಂಜೆಕ್ಟ್ ಮಾಡಿದ್ದೆ. ಕೆಲವೇ ನಿಮಿಷಗಳಲ್ಲಿ ಅವನು ಮೂರ್ಛೆ ಹೋಗಿದ್ದ. ರಾಜುವಿನ ಸಹಾಯದಿಂದ ಅವನನ್ನು ಅವನ ಕಾರಿನ ಡಿಕ್ಕಿಯಲ್ಲಿ ಹಾಕಿದ್ದೆ. ಕುಳಿತ ಸ್ಥಳವನ್ನು ಸ್ವಚ್ಛಗೊಳಿಸುವ ಅವಸರದಲ್ಲಿ ನನಗೆ ದುರದೃಷ್ಟವಶಾತ್ ನೀಡಲ್ ಸ್ಟಿಕ್ ಇಂಜುರಿ ಆಗಿತ್ತು.
ರಾಜುನ ಜೊತೆಗೆ ಕಾರನ್ನು ಓಡಿಸಿ ಹತ್ತಿರದ ನೆಲ್ಲಿಗುಡ್ಡೆ ಕೆರೆಗೆ ಬಂದು ರಾಜುನ ಸಹಾಯದಿಂದ ಮೂರ್ಛೆಗೊಂಡಿದ್ದ ರೆಡ್ಡಿಯನ್ನು ಕೆರೆಯಲ್ಲಿ ತಳ್ಳಿದೆ. ತಳ್ಳುವ ಮುಂಚೆ ಅವನದೇ ಮೊಬೈಲ್ನಿಂದ ಮೋನಿಕಾಗೆ ಮೆಸೇಜ್ ಕಳುಹಿಸಿದ್ದೆ ಹಾಗೂ ಫಿಂಗರ್ ಪ್ರಿಂಟ್ ಅಳಿಸಲು ಸ್ಟೀಯರಿಂಗನ್ನು ಬಟ್ಟೆಯಿಂದ ತಿಕ್ಕಿ, ಕಾರನ್ನು ಲಾಕ್ ಮಾಡಿ, ಕಾರ ಕೀ ಮತ್ತು ಮೊಬೈಲ್ ಅನ್ನು ಅವನ ಜೇಬಿನಲ್ಲಿ ಹಾಕಿದ್ದೆ. ಮಳೆ ಸುರಿಯುತ್ತಿದ್ದರಿಂದ ಜನರು ಯಾರೂ ಇರಲಿಲ್ಲ. ಟ್ಯಾಕ್ಸಿ ಹಿಡಿದುಕೊಂಡು ಮನೆ ಸೇರಿ, ಮೋನಿಕಾಳನ್ನು ಕರೆದುಕೊಂಡು ಸ್ಟೇಷನ್ ಗೆ ಬಂದಿದ್ದೆ. ಇದು ಕೊಲೆಯಲ್ಲ ಆತ್ಮಹತ್ಯೆ ಅಂತ ತೋರಿಸುವುದೇ ನನ್ನ ಉದ್ದೇಶವಾಗಿತ್ತು. ಮುಂದೆ
ಏನಾಯಿತಂತ ನಿಮಗೇ ಗೊತ್ತಲ್ಲ” ಎಂದು ಎಲ್ಲವನ್ನೂ ವಿವರಿಸಿ ತಲೆ ತಗ್ಗಿಸಿ ನಿಂತುಕೊಂಡನು.
“ದುರದೃಷ್ಟವಶಾತ್ ನಿಮ್ಮ ಬೆರಳಲ್ಲಾದ ನೀಡಲ್ ಸ್ಟಿಕ್ ಇಂಜುರಿಯಿಂದ ಸ್ಟೀಯರಿಂಗ್ ಮೇಲೆ ಹಾಗು ಹೆರಾಯಿನ ಸೇವಿಸಿದ ರೆಡ್ಡಿಯ ರಕ್ತನಾಳದಿಂದ ಡಿಕ್ಕಿಯಲ್ಲಿ ಅಂಟಿದ ಸಣ್ಣ ರಕ್ತದ ಕಲೆ ನಿಮ್ಮ ಕಣ್ಣಿಗೆ ಕಾಣದೇ ಹೋಯಿತಲ್ಲವೇ?”
ವಿಕ್ರಂ ವೇಳೆಯನ್ನು ನೋಡಿಕೊಂಡನು, ಮೂರು ದಿನಗಳಿಗೆ ಇನ್ನೂ ಮೂರು ತಾಸು ಬಾಕಿ ಇತ್ತು!

ಡಾ. ಶಿವಶಂಕರ ಮೇಟಿ