ಯು.ಕೆ*ಯ ಅಡ್ಡಹೆಸರುಗಳನ್ನು ಅಡ್ರೆಸಿಸುತ್ತ – ಡಾ. ಉಮೇಶ್ ನಾಗಲೂತಿಮಠ ಅವರ ಬರಹ

ಸಾಮಾನ್ಯವಾಗಿ ಜಗತ್ತಿನ ಅನೇಕ ಭಾಗಗಳಲ್ಲಿ ಅಡ್ಡಹೆಸರುಗಳು ಉಪಯೋಗಿಸಲ್ಪಡುತ್ತದೆ. ಇದು ಆ ವಂಶಾವಳಿ ಕಂಡುಹಿಡಿಯಲು ಸಹಾಯವಾಗುತ್ತದೆ. ಈ ಅಡ್ಡ ಹೆಸರು (surname/family name) ಅನೇಕ ಕಾರಣಗಳಿಂದ ಬರುತ್ತದೆ. ಅದು ಊರಿನ ಹೆಸರು ಅಥವಾ ಕುಲಕಸುಬಿನ ಹೆಸರಿನಿಂದ ಬಂದಿರಬಹುದು.

ಉದಾಹರಣೆಗೆ:
ಬಡಿಗೇರ (ಕಟ್ಟಿಗೆ ಕೆಲಸ)
ಕಮ್ಮಾರ (ಕಬ್ಬಿಣದ ಕೆಲಸ)
ಕುಂಬಾರ (ಮಣ್ಣಿನ ಪಾತ್ರೆ ಮಾಡುವ ಕೆಲಸ)
ಹೂಗಾರ (ಹೂವಿನ ಕೆಲಸ) ಇತ್ಯಾದಿ.

ಹಲವು ಅಡ್ಡಹೆಸರುಗಳು ಕುಲಕಸುಬಿನಿಂದ ಬಂದರೂ, ನಮಗೆ ಅವು ತಕ್ಷಣವೇ ತಿಳಿಯುವುದಿಲ್ಲ.

ಉದಾಹರಣೆಗೆ: ಪಾಟೀಲ. ನೂರಾರು ವರ್ಷಗಳ ಹಿಂದೆ ತೆರಿಗೆ ಸಂಗ್ರಹಕ್ಕೆ ಭೂಭಾಗಗಳನ್ನು “ಪಟ್ಟಿ”ಯಾಗಿ ವಿಭಜಿಸಿ, ಪ್ರತಿಯೊಂದು ಪಟ್ಟಿಯನ್ನು ಒಬ್ಬರಿಗೆ ಕೊಡಲಾಗುತ್ತಿತ್ತು. ಇದರಿಂದ ಅದು ಕುಲಕಸುಬು ಆಗಿ ‘ಪಟೆಲ’ ಅಥವಾ ‘ಪಾಟೀಲ’ ಎಂದು ರೂಪುಗೊಂಡಿತು.

ಗಾಂಧಿ ಅಡ್ಡಹೆಸರು ಗಂಧ ಅಂದರೆ ಸುಗಂಧದ್ರವ್ಯ ವ್ಯಾಪಾರಿಯಿಂದ ಬಂದಿದೆ.

ಪೂಜಾರಿ, ಪುರೋಹಿತ, ಸ್ವಾಮಿ, ಶಾಸ್ತ್ರೀ – ಅವರ ಧಾರ್ಮಿಕ ಕಸುಬಿನಿಂದ ಬಂದವು.

ಕರಣಿಕರು ಎಂದರೆ accountants. ಕುಲದಿಂದಲೇ ಕರಣಿಕರಾಗಿದ್ದರೆ ಅವರು ಕುಲಕರ್ಣಿ, ನಾಡಿನ ಕರಣಿಕರಿಗೆ ನಾಡಕರ್ಣಿ, ಬರಿಕರಣಿಕರಿಗೆ ಕರಣೆ/ಕರಣಿಕರ ಎಂಬ ಹೆಸರು ಬಂದವು ಎಂದು ಇತಿಹಾಸದ ಹೇಳಿಕೆ.

ಪಾಶ್ಚಿಮಾತ್ಯ ಉದಾಹರಣೆಗಳು:

ಪಶ್ಚಿಮ ದೇಶಗಳಲ್ಲೂ ಇಂತಹ ಕಸುಬಿನಿಂದ ಬಂದ ಹೆಸರುಗಳಿವೆ. ಉದಾಹರಣೆಗಳಿಗೆ:

Taylor (ದರ್ಜಿ/ಶಿಂಪಿಗೇರ)
Blacksmith (ಕಬ್ಬಿಣದ ಕೆಲಸಗಾರ)
Goldsmith (ಅಕ್ಕಸಾಲಿಗ)
Smith (ಲೋಹದ ಕೆಲಸಗಾರ)
Fisher (ಮೀನುಗಾರ)
Hunter (ಬೇಡರ, ಉದಾ: ಬೇಡರ ಕಣ್ಣಪ್ಪ)
Carter (ಚಕ್ಕಡಿ ಹೊಳೆಯುವವ, ಸಾರಥಿ) ಇತ್ಯಾದಿ.

ಅಡ್ಡಹೆಸರು ಮತ್ತು ವ್ಯಾಪಾರಗಳು:

ಉತ್ತರ ಕರ್ನಾಟಕದ ಹಲವಾರು ಅಡ್ಡಹೆಸರುಗಳು ಹಿಂದಿನ ತಲೆಮಾರಿನ ವ್ಯಾಪಾರಗಳ ಮೇಲೆ ಆಧಾರಿತವಾಗಿವೆ.

ಉದಾಹರಣೆಗೆ: ಉಪ್ಪಿನ, ಬೆಲ್ಲದ, ಜೀರಿಗೆ, ಉಳ್ಳಾಗಡ್ಡಿ, ಮೆಣಸಿನಕಾಯಿ, ಗೋಧಿ, ಅಕ್ಕಿ, ಬಳ್ಳೊಳ್ಳಿ.

ಪಾಶ್ಚಿಮ ದೇಶಗಳಲ್ಲೂ ಇದಕ್ಕೊಂದು ಸಮಾನತೆ:
Rice (ಅಕ್ಕಿ)
Salt (ಉಪ್ಪಿನ)
Beans (ಅವರೆಕಾಯಿ)
Oliver (ಆಲಿವ್)
Pepper (ಮೆಣಸಿನಕಾಯಿ)
Kale (ಕೆಲ್ ಸೊಪ್ಪು)

ವೈಚಿತ್ರ್ಯಗಳು ಮತ್ತು ನುಡಿಸುಳುಗಳು:

ಮೊನ್ನೆ ರುಮೇನಿಯಾದ ನರ್ಸ್ ಒಬ್ಬರು ಹೇಳಿದರು, ಅವರ ಅಡ್ಡಹೆಸರು Cabbage. ಶಾಲಾ ಕಾಲೇಜಿನಲ್ಲಿ ಅವರಿಗೆ ಈ ಹೆಸರುದಿಂದ ಮಜುಗರವಾಗುತ್ತಿತ್ತು. ದುವೆ ನಿಶ್ಚಯವಾದಾಗ ಅಡ್ಡಹೆಸರು ಬದಲಾಗುವುದು ಎಂಬ ವಿಚಾರವೇ ಅವರಿಗೊಂದು ಸಂತೋಷ. ಅವರು ಹೇಳಿದರು: ರುಮೇನಿಯಾದಲ್ಲಿ ಅನೇಕ ಅಡ್ಡಹೆಸರುಗಳು ಕಾಯಿಪಲ್ಲೆ, ಧಾನ್ಯ, ತಿನಿಸುಗಳ ಹೆಸರುಗಳಿಂದ ಬಂದಿವೆ.

ಒಂದೊಂದು ಸಲ, ವ್ಯಕ್ತಿಯ ಹೆಸರು ಮತ್ತು ಅವರ ವೃತ್ತಿ/ಅಭಿರುಚಿ ಸೇರಿ ಹೋಗದ ಅವಸ್ಥೆ ಬರುವುದೂಂಟು:

ಬ್ರಿಟನ್‌ನ Clarks ಕಂಪನಿ ಬೂಟು ತಯಾರಿಸುತ್ತದೆ, ಆದರೆ Boots ಕಂಪನಿ ಔಷಧ ಮಾರುತ್ತೆ! Ted Baker ಬಟ್ಟೆ ತಯಾರಿಸುತ್ತಾನೆ, ಆದರೆ Taylor ಎಂಬ ಬೇಕರಿಗಳಿವೆ!

ಭಾರತದಲ್ಲೂ ವೈದ್ಯ ಎಂಬ ಸೈನಿಕರು ಇದ್ದರೆ, ಸುಬೇದಾರ್ ಎಂಬ ವೈದ್ಯರು ಸಿಗುತ್ತಾರೆ! “ಮಂತ್ರಿ” ಎಂಬ ಕಟ್ಟಡ ನಿರ್ಮಾಣ ಕಂಪನಿಯೂ ಇದೆ. ಉಪ್ಪಾರ (ಮನೆ ಕಟ್ಟುವವರ ಹೆಸರು) ಎಂಬವರು ರಾಜಕೀಯ ಮಂತ್ರಿಯಾಗುತ್ತಾರೆ!

ಬ್ರಿಟನ್ನಿನಲ್ಲಿ: White ಎಂದರೆ ಕರಿ ಕೋಟಿನಲ್ಲಿ ಕಾಣಸಿಗಬಹುದು. Black ಎಂದರೆ ಬಿಳಿ ಬಟ್ಟೆ ಹಾಕಿ ನಡೆಯುತ್ತಿರಬಹುದು! Green ಕೆಂಪು ಕಾರು ಇಷ್ಟಪಡಬಹುದು, Red ಕಪ್ಪು ಕಾರು ಓಡಿಸಬಹುದು!

ಊರಿನ ಆಧಾರದ ಮೇಲೆ ಹೆಸರುಗಳು: ಅನೇಕ ಅಡ್ಡಹೆಸರುಗಳು ಊರಿನ ಹೆಸರುಗಳಿಂದ ಬಂದಿವೆ: ಕಿತ್ತೂರು, ಧಾರವಾಡಕರ, ಬೆಳಗಾಂವ್ಕರ್, ಹುಕ್ಕೇರಿ, ಹಾವೇರಿ, ಪುಣೇಕರ್. ನನ್ನ ಸ್ನೇಹಿತರಾದ ಪುಣೇಕರ್ ಅವರು ಬೆಳಗಾವಿಯಲ್ಲಿ ನೆಲೆಸಿದ್ದಾರೆ, ಬೆಳಗಾಂವ್ಕರ್ ಪುಣೆಯಲ್ಲಿ ನೆಲೆಸಿದ್ದಾರೆ!

ವಿದೇಶಿಗಳ ಹೆಸರಿನ ಅಪಾರ್ಥಗಳು:

ವಿದೇಶಿಯರಿಗೆ ನಮ್ಮ ಹೆಸರು ಹೇಳುವುದು ಕಷ್ಟ. ಡಾ. ಶ್ರೀವತ್ಸ ದೇಸಾಯಿಗೆ “This eye, not that eye – Des ai!” ಎಂದು ನರ್ಸ್ ಕರೆದರು ಎನ್ನುವುದು ಪ್ರಸಿದ್ಧ ಕತೆಯಂತೆ. ಆಫ್ರಿಕಾ, ಪೋಲಂಡ್, ರಷ್ಯಾ ದೇಶಗಳ ಅಡ್ಡಹೆಸರುಗಳ ಓದುವಂತಷ್ಟೇ ಕಷ್ಟ! ಆದರ ಛಾಯೆ ಇಂಗ್ಲೆಂಡಿನಲ್ಲೂ! ಇಂಗ್ಲೆಂಡಿನ ಹೆಸರುಗಳಲ್ಲೂ ಊರಿನ ಪ್ರಭಾವ: Holland, Garton, Harlow, London. Jameson, Harrison, Davidson – ಇವುಗಳಲ್ಲಿ “son” ಅಂದರೆ “ಮಗ”. ನಮ್ಮಲ್ಲಿ ಹರಿಯಪ್ಪ, ದೇವಪ್ಪ, ಭೀಮಪ್ಪ – “ಅಪ್ಪ” ಇದ್ದಂತೆ. ಐರ್ಲೆಂಡ್ ಮತ್ತು ಸ್ಕಾಟ್‌ಲ್ಯಾಂಡ್: MacDonald, MacMillan (Mac/Mc = Son of…) ಐರ್ಲೆಂಡ್: O’Sullivan, O’Brien, O’Callaghan – ಇಲ್ಲಿ “O” ಅಂದರೆ “ವಂಶದವ”.

ವಿನೋದಭರಿತ ಅನುಭವಗಳು:
ಚೆಸ್ಟರ್ ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿ ತನ್ನ ಹೊಸ ಬೂಟುಗಳು ಕಳೆದುಹೋದವೆಂದು ಹೇಳಿದ. ನರ್ಸ್ ಕೇಳಿದಳು: “ಎಲ್ಲಿ?” ಅವರು ಉತ್ತರಿಸಿದರು: Shoebury! ಆ ವ್ಯಕ್ತಿ ಹೆಸರೇನಪ್ಪಾ ಎಂದರೆ: Mr. Shoeman! ನರ್ಸ್ ನಗುತ್ತ ಹೇಳಿದರು: “Mr. Shoeman lost his shoes in Shoebury!”

ಮತ್ತೊಂದು:
Mr. Drinkwater ಎಂಬ ವ್ಯಕ್ತಿಗೆ ಪಿತ್ತದ ಸಮಸ್ಯೆ. ಅವರು ದಿನಪೂರ್ತಿ ಕಾಫಿ ಕುಡಿಯುತ್ತಿದ್ದರು.ನಾನು ಹೇಳಿದೆ: “Drinkwater, please reduce coffee and drink water.” ಆತ ನಕ್ಕು: “ನನ್ನ ಆಫೀಸಿನಲ್ಲಿ ನೀರು ಕುಡಿದರೆ ಎಲ್ಲರೂ Mr. Drinkwater drink water! ಎನ್ನುತ್ತಾರೆ. ಆದ್ದರಿಂದ ಕಾಫಿಯತ್ತ ತಿರುಗಿದ್ದೇನೆ!”

  • * ಯು.ಕೆ = ಉತ್ತರ ಕರ್ನಾಟಕ / United Kingdom

ರುಕ್ಮಾದಿಂದ ಆರಂಭವಾದ ವಿಚಾರಗಳು

ಕೆಲವು ದಿನಗಳ ಹಿಂದೆ ವೆಬ್ ಸೀರೀಸ್ “ಫ್ಯಾಮಿಲಿ ಮ್ಯಾನ್ – ೩” ನೋಡುತ್ತಿದ್ದೆ, ಅದರಲ್ಲಿ ಬರುವ ಒಂದು ಪಾತ್ರ “ರುಕ್ಮಾ”… ಅದರ ಕೊನೆಯ ಸಂಚಿಕೆ ಬಂದಾಗ ರುಕ್ಮಾ ಪೂರ್ತಿ ಹೆಸರು ರುಕುಮಾಂಗದ ಎಂದು ತಿಳಿಯಿತು. ಅವನ ಪೂರ್ಣ ಹೆಸರು ಕೇಳಿದ ಮೇಲೆ ತಲೆಯಲ್ಲಿ ಇದು ಎಲ್ಲೋ ಕೇಳಿದ ಹಾಗಿದೆ ಅನಿಸ್ತಾ ಇತ್ತು. ಕೂತಲ್ಲಿ, ನಿಂತಲ್ಲಿ ಅದೇ ವಿಚಾರ…

ನಿತ್ಯ ಜೀವನದಲ್ಲಿ ನಾವು ಹತ್ತು ಹಲವು ವಿಷಯಗಳನ್ನು ನೋಡುತ್ತೇವೆ, ಕೇಳುತ್ತೇವೆ… ನಮ್ಮ ಮೆದಳು ಅದನ್ನು ತನ್ನ ಸಂಗ್ರಹದಲ್ಲಿ ಇಟ್ಟಿಕೊಳ್ಳುತ್ತದೆ ಮತ್ತು ನಮಗೆ ಅವಶ್ಯಕತೆ ಇದ್ದಾಗ ಅದನ್ನು ಒದಗಿಸುತ್ತದೆ, ಇದು ಸಾಮಾನ್ಯ ಕ್ರಿಯೆ. ನಮ್ಮ ಮೆದಳು ಪ್ರಜ್ಞೆ ಮತ್ತು ಸುಪ್ತಾವಸ್ಥೆ ಈ ಎರಡು ಸ್ಥಿತಿಯಲ್ಲೂ ವಿಷಯ ಸಂಗ್ರಹಣೆ ಮಾಡುತ್ತದೆ, ಅದನ್ನು ಸೋಸಿ, ಹೊಂದಿಸಿ ಇಡುತ್ತದೆ.

Memories, pressed between the pages of my mind
Memories, sweetened through the ages just like wine
(ಎಲ್ವಿಸ್ ಪ್ರೆಸ್ಲೇಯ್)

ನಮ್ಮ ಸಿಹಿ ನೆನಪುಗಳು ಮೇಲಿನ ಸಾಲುಗಳಂತೆ ಆಚೊತ್ತಿ ಕೂತಿರುತ್ತವೆ, ಯಾಕೆಂದರೆ ಅದನ್ನು ಮತ್ತೆ ಮತ್ತೆ ತೆಗೆದು ನೋಡುತ್ತಿರುತ್ತೇವೆ. ಮತ್ತೆ ಕೆಲವು ವಿಷಯಗಳು ಮನಸ್ಸಿನಲ್ಲಿ ಸೇರಿಕೊಂಡು, ಬೇಕಾದಾಗ ನೆನಪಾಗುವದಿಲ್ಲ… ಬೇರೆ ಏನೂ ವಿಚಾರ ಮಾಡುವಾಗ ಚಕ್ಕಂತ ಮನದ ಪರದೆಯ ಮೇಲೆ ಮೂಡುತ್ತವೆ. ನಾನು ಹೆಚ್ಚಿನ ವ್ಯಾಸಂಗ ಓದಿದ್ದು ಬೆಲ್ಫಾಸ್ಟ್ ನಲ್ಲಿ, ಒಂದು ದಿನ ನಮ್ಮ ಉಪನ್ಯಾಸಕರು ನಾವು ಯೂನಿವರ್ಸಿಟಿಗೆ ಬರುವ ರಸ್ತೆಯಲ್ಲಿನ ಅಂಗಡಿಗಳ ಹೆಸರು ಹೇಳಿರೆಂದು ಕೇಳಿದರು. ಪ್ರತಿದಿನ ಅದೇ ರಸ್ತೆಯಲ್ಲಿ ಓಡಾಡಿದ್ದರೂ, ಅಂಗಡಿಗಳನ್ನು ನೋಡಿದ್ದರೂ ನಮಗೆ ಎಲ್ಲಾ ಅಂಗಡಿಗಳ ವಿವರ ಆ ಸಮಯಕ್ಕೆ ನೆನಪು ಬರಲಿಲ್ಲ. ನಮ್ಮ ಸಂಕೀರ್ಣ ವ್ಯವಸ್ಥೆ ನಮಗೆ ಯಾವುದು ಅವಶ್ಯ, ಯಾವುದು ಅಲ್ಲ ಎಂದು ನಿರ್ಧರಿಸಿ ಉಳಿದಿದ್ದನ್ನು ಪಕ್ಕಕ್ಕಿರಿಸುತ್ತದೆ. ರುಕುಮಾಂಗದ ಹೆಸರು ಕೂಡ ಸ್ವಲ್ಪ ಕ್ಷಣ ನನ್ನ ನೆನಪಿನಲ್ಲಿ ಇದ್ದರೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ.

ಒಂದು ಕ್ಷಣ, ಈ ಹೆಸರು ಕೇಳಿದ್ದರೂ ನೆನಪಾಗುತ್ತಿಲ್ಲ ಎಂದು ಸಂಧ್ಯಾ ಜೊತೆ (ಏನಾದರೂ ಸಿಗದಿದ್ದರೆ ಅಥವಾ ಹೊಳೆಯದಿದ್ದರೆ ವಿಚಾರಿಸುವದು ಪತ್ನಿಯೊಂದಿಗೆ) ಮಾತನಾಡುತ್ತಿದಾಗ ಯುರೇಕಾ ಕ್ಷಣ ಅಥವಾ ಆಹಾ!! ಕ್ಷಣ ಬಂತು….

ಕರುಣಿಸೋ ರಂಗ ಕರುಣಿಸೋ ಕೃಷ್ಣ
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ
ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ….

ರುಕುಮಾಂಗದನಂತೆ ವ್ರತವ ನಾನರಿಯೆ
ಶುಕಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿಯಂತೆ ಧ್ಯಾನವ ಮಾಡಲರಿಯೇ
ದೇವಕಿಯಂತೆ ಮುದ್ದಿಸಲೂ ಅರಿಯೆನೋ ಕೃಷ್ಣ

ರುಕುಮಾಂಗದನಂತೆ ವ್ರತವ ನಾನರಿಯೆ … ಈ ಒಂದು ಸಾಲು ನೆನಪಿನ ಆಳದಿಂದ ಹೊರಬಂದು, ಮನಸ್ಸನ್ನು ನಿರಾಳಗೊಳಿಸಿತು.

ರುಕುಮಾಂಗದ ಯಾರು? ನಾರದ ಪುರಾಣದ ಒಂದು ಉಲ್ಲೇಖದಲ್ಲಿ ಬರುವ ರಾಜ ರುಕುಮಾಂಗದ ಸೂರ್ಯವಂಶಿಯ ರಾಜ, ಏಕಾದಶಿಯ ದಿನದ ಉಪವಾಸ ವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದವನು. ಅವನ ವ್ರತ ಭಂಗ ಮಾಡಿಸಲು ಅಪ್ಸರೆ ಮೋಹಿನಿ ಬಂದು ಪ್ರಯತ್ನಿಸಿ ಸೋತಾಗ, ಕೊನೆಗೆ ಅವನ ವ್ರತ ನಿಷ್ಠೆಗೆ ವಿಷ್ಣು ಪ್ರತ್ಯಕ್ಷನಾಗಿ ವೈಕುಂಠಕ್ಕೆ ಕರೆದುಕೊಂಡು ಹೋಗುತ್ತಾನೆ.

ವ್ರತ ಅಥವಾ ಉಪವಾಸ ಮಾಡುವುದು ಎಲ್ಲ ಸಂಸ್ಕೃತಿಯಲ್ಲೂ ಒಂದಲ್ಲ ಒಂದು ರೀತಿ ಸಾಮಾನ್ಯವಾಗಿ ನಡೆದುಕೊಂಡ ಬಂದ ರೂಢಿ. ಒಬ್ಬ ವ್ಯಕ್ತಿ ೧೬-೧೮ ಗಂಟೆ ಉಪವಾಸವಿದ್ದಾಗ ಅವನ ದೇಹದ ಕೋಶಗಳು ತಮ್ಮೊಳಗಿನ ಹಳೆಯದು, ಹಾನಿಗೊಂಡ ಭಾಗಗಳನ್ನು ತಾವೇ ಜೀರ್ಣಿಸಿಕೊಂಡು ಪುನರ್‌ಬಳಕೆ ಮಾಡಿಕೊಳ್ಳುತ್ತವೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಆಟೋಫ್ಯಾಜಿ (Autophagy) ಎನ್ನುತ್ತಾರೆ. ಅಂದರೆ ಕಟ್ಟುನಿಟ್ಟಾಗಿ ವ್ರತ (ಉಪವಾಸ) ಮಾಡುವದರಿಂದ ನಮ್ಮ ದೇಹದ ಕೋಶ ಶುದ್ಧೀಕರಣಕ್ಕೆ ದಾರಿ ಮಾಡಿದಂತಾಗುತ್ತದೆ, ಒಳ್ಳೆಯ ಆರೋಗ್ಯದ ಬುನಾದಿ ಆಗುತ್ತದೆ. ನಾರದ ಪುರಾಣದ ಉಲ್ಲೇಖವನ್ನು ಸದ್ಯದ ಪರಿಸ್ಥಿತಿಯಲ್ಲಿ ನೋಡಿದಾಗ, ನಮ್ಮ ಜೀವನದಲ್ಲಿ ವ್ರತ (ಉಪವಾಸ) ಕಟ್ಟುನಿಟ್ಟಾಗಿ ಪಾಲಿಸಲು ಪ್ರಯತ್ನಿಸಿದಾಗ ಬರುವ ಅದೇ ತಡೆಗಳನ್ನು ಅಪ್ಸರೆ “ಮೋಹಿನಿ” ಅಂದುಕೊಂಡು, ಅದನ್ನು ಲೆಕ್ಕಿಸದೆ (ಅಥವಾ ಮಾರು ಹೋಗದೆ) ವ್ರತ ಮಾಡಿದಾಗ ಒಳ್ಳೆಯ ಆರೋಗ್ಯದಿಂದ ಜೀವಿಸಿ, ಕೊನೆಗೆ ಸುಖಕರ ಸಾವನ್ನು (ಅನಾರೋಗ್ಯ ಇರದ) ಪಡೆದುಕೊಳ್ಳುವದೇ ವೈಕುಂಠ ಸೇರಿಕೊಂಡ ಹಾಗೆ ಇರಬೇಕು.

ಆಟೋಫ್ಯಾಜಿಯ ಕಾರ್ಯವಿಧಾನಗಳ ಆವಿಷ್ಕಾರಗಳಿಗಾಗಿ ಜಪಾನಿನ ಜೀವಕೋಶ ಜೀವಶಾಸ್ತ್ರಜ್ಞ ಯೋಶಿನೋರಿ ಒಹ್ಸುಮಿ ಅವರಿಗೆ 2016 ರ ಶರೀರಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಏಕಾದಶಿ ಅಥವಾ ಈ ತರಹದ ಉಪವಾಸದ ರೂಢಿ ಬಹಳ ಹಳೆಯ ಆಚರಣೆ, ಅದನ್ನು ಕಡೆಗಣಿಸಿದ ನಾವು ಮತ್ತೆ ಅದನ್ನೇ ಅವಿಷ್ಕಾರವೆಂದು ಪರಿಗಣಿಸಿ ಆಚರಣೆಗೆ ತರಲು ಪ್ರಯತ್ನಿಸುತ್ತಿದ್ದೇವೆ… ಇದನ್ನೇ “ರಿಇನ್ವೆಂಟಿಂಗ್ ದಿ ವೀಲ್” ಅನ್ನುವದು.

ನಮ್ಮ ಅತೀ ಜಾಣತನದಿಂದ ಎಷ್ಟೋ ಈ ತರಹದ ಹಳೆಯ (ಹಿರಿಯರ) ಆಚರಣೆಗಳನ್ನು ಕಡೆಗಣಿಸಿ, ಮತ್ತಾರೂ ಅದನ್ನು ಸರಿ ಎಂದಾಗ ಅನುಸರಿಸಲು ಆರಂಭಿಸುತ್ತೇವೆ. ನನ್ನ ಮನಸಿನ್ನಲ್ಲಿ ಓಡಿದ ಕೆಲವು ಇದೆ ತರಹದ ವಿಷಗಳನ್ನು ಹಂಚಿಕೊಳ್ಳಣ ಅನಿಸಿತು. ಇತ್ತೀಚಿಗೆ ಬಂದ ಕರ್ನಾಟಕ ಸರ್ಕಾರದ ಒಂದು ಕಾರ್ಯ ನೀತಿ… ಪ್ರತಿ ತಿಂಗಳು ಒಂದು ದಿನ ಮುಟ್ಟಿನ ರಜೆ ಘೋಷಿಸಿದ್ದು, ಹಿಂದಿನ ಜನರು ಇದೇ ರಜೆ ಮನೆಯ ಹೆಣ್ಣು ಮಕ್ಕಳಿಗೆ ಕೊಡಲು ಮಡಿಯಲ್ಲಿ ಕೂಡಿಸಿದಾಗ ಅದನ್ನು ಪ್ರಶ್ನೆ ಮಾಡಿದವರೇನು ಕಡಿಮೆಯಿಲ್ಲ. ಅರೋಗ್ಯ ಈಗಿನ ಜನರ ಆದ್ಯತೆ ಆಗಿದೆ, ಇಡ್ಲಿ ಅಂತಹ ತಿಂಡಿ ಮಹತ್ವ ಜನರಿಗೆ ಈಗ ಆಗಿ ಪ್ರೋಬೈಯೋಟಿಕ್ ಎಂದು ಸೇವಿಸುವ ಅಭಿಮಾನಿಗಳು ಬೆಳೆಯುತ್ತಿದ್ದಾರೆ.

ಎಲ್ಲ ಆಚರಣೆ ಕಣ್ಣು ಮುಚ್ಚಿ ಪಾಲಿಸಬೇಕಿಲ್ಲ, ಅಂತಹ ಒಂದು ಸಣ್ಣ ಕಥೆ ನೋಡೋಣ. ಒಂದು ಆಶ್ರಮ, ಹಿರಿಯ ಸನ್ಯಾಸಿ ತೀರಿದ ನಂತರ ಯುವ ಸನ್ಯಾಸಿಗೆ ದೀಕ್ಷೆ ಕೊಟ್ಟರು. ಹಿರಿಯ ಸನ್ಯಾಸಿ ಪ್ರತಿದಿನ ಪ್ರವಚನದಲ್ಲಿ ಇಲಿಗಳನ್ನು ಹೆದರಿಸಲು ಬೆಕ್ಕು ತರುತ್ತಿದ್ದರು, ಕೆಲವು ಕಾಲದ ನಂತರ ಬೆಕ್ಕು ತಾನಾಗಿ ಬರಲು ಆರಂಭಿಸಿತು. ಹಿರಿಯ ಸನ್ಯಾಸಿ ತೀರಿದ ನಂತರ ಬೆಕ್ಕು ಪ್ರವಚನಕ್ಕೆ ಬರಲಿಲ್ಲ. ಯುವ ಸನ್ಯಾಸಿಯ ಬೆಕ್ಕು ಬಾರದ ಕಾರಣ ಪ್ರವಚನ ಆರಂಭಿಸಲು ತಯಾರಾಗಲಿಲ್ಲ, ಬೆಕ್ಕು ಬರುವುದು ಒಂದು ಆಚರಣೆಯ ಭಾಗ ಎಂದು ಕುಳಿತರು. ಆಚರಣೆ ವಿವೇಚಿಸಿ, ಅರಿತುಕೊಂಡು, ಪರಸ್ಥಿತಿಗೆ ಅನುಗುಣವಾಗಿ ಮಾಡಬೇಕು… ಅದು ಅಂಧಶ್ರದ್ಧೆ ಆಗಬಾರದು.

ನನ್ನ ಈ ವಿಚಾರಧಾರೆ ಒಂದು ಹೆಸರಿನೊಂದಿಗೆ ಆರಂಭವಾಯಿತು, ಅದರ ಹರಿವಿಗೆ ಸಿಕ್ಕ ಎಲ್ಲ ವಿಷಯಗಳನ್ನು ಬರೆಯುತ್ತ ಹೋದೆ… ಅದನ್ನೇ ಇಲ್ಲಿ ಲೇಖನ ಮಾದರಿಯಲ್ಲಿ ಬರೆಯಲು ಪ್ರಯತ್ನಿಸಿದೆ, ಇಷ್ಟ ಆಗಬಹುದು ಎಂದು ಭಾವಿಸುವೆ.