“ಅವನ ನಿಯಮ ಮೀರಿ ಇಲ್ಲೀ ಏನು ಸಾಗದು… ನಾವು ನೆನೆಸಿದ೦ತೆ ಬಾಳಲೇನು ನಡೆಯದು….”

“ಬಾನಿಗೊ೦ದು ಎಲ್ಲೆ ಎಲ್ಲಿದೇ? ನಿನ್ನಾಸೆಗೆಲ್ಲಿ ಕೊನೆಯಿದೇ?
ಏಕೆ ಕನಸು ಕಾಣುವೇ? ನಿಧಾನಿಸು.. ನಿಧಾನಿಸು..”

ಪ್ರೇಮದ ಕಾಣಿಕೆ ಚಿತ್ರದ ಹಾಡು ಎಲ್ಲರಿಗೂ ನೆನಪಿರಬಹುದು, ಚಿ. ಉದಯಶಂಕರ್ ಅವರ ಅದ್ಭುತ ರಚನೆಗೆ ಡಾ. ರಾಜಕುಮಾರ್ ಅವರು ಸುಂದರವಾಗಿ ಹಾಡಿದ್ದಾರೆ. ಪ್ರಸ್ತುತದಲ್ಲಿಯೂ ಈ ಹಾಡು ನಿಜಕ್ಕೂ ಅರ್ಥಪೂರ್ಣವಾಗಿದೆ, ಇಂದಿನ ಮನುಷ್ಯನ ಆಸೆ, ಆವಿಷ್ಕಾರಗಳಿಗೆ ಕೊನೆ ಎಲ್ಲಿದೆ ಎಂದು ಕೇಳುವ ಪರಿಸ್ಥಿತಿ ಬಂದಿದೆ. ಹೊಸ ಆವಿಷ್ಕಾರಗಳು ತಪ್ಪಲ್ಲ, ವೈಜ್ಞಾನಿಕ ಆವಿಷ್ಕಾರಗಳು ಜೀವನ ಮತ್ತು ಪ್ರಗತಿಯನ್ನು ನಡೆಸುತ್ತವೆ. ಆದಾಗಿಯೂ, ಅದರಲ್ಲಿ ಕೆಲವು ದುಷ್ಪರಿಣಾಮಗಳು ಇವೆ.

ವೈಜ್ಞಾನಿಕ ಆವಿಷ್ಕಾರಗಳ ಮತ್ತು ದುಷ್ಪರಿಣಾಮಗಳ ಬಗ್ಗೆ ವಿಚಾರ ಬಂದಾಗ, ಐನ್ಸ್ಟೀನ್ ಅವರ ದ್ರವ್ಯ – ಶಕ್ತಿ ಸಮೀಕರಣ (E =mc2) ಉದಾಹರಣೆ ನೋಡಣ. ಐನ್ಸ್ಟೀನ್ ಅವರು ಈ ಸಮೀಕರಣ ಜಗತ್ತಿಗೆ ತಂದಾಗ ಅವರು ಪರಮಾಣು ಶಕ್ತಿ ಮತ್ತು ಔಷಧ ಕ್ಷೇತ್ರದಲ್ಲಿ ತರಬಹುದಾದ ಪ್ರಗತಿಗಳ ಬಗ್ಗೆ ಒತ್ತು ಕೊಟ್ಟರು. ಇದರ ದುಷ್ಪರಿಣಾಮ ಜಗತ್ತು ಜಪಾನಿನ ಹಿರೋಷಿಮಾ ಮತ್ತು ನಾಗಾಸಾಕಿಯಲ್ಲಿ ಕಂಡಿತು. ಇನ್ನೊಂದು ಉದಾಹರಣೆ ಈಗ ನಮ್ಮ ಮುಂದಿದೆ, ಸಾಮಾಜಿಕ ಮಾಧ್ಯಮ (ಸೋಶಿಯಲ್ ಮೀಡಿಯಾ) ಪ್ರಭಲತೆ ಜಗತ್ತಿಗೆ ಬಹು ಉಪಯುಕ್ತ ವ್ಯವಸ್ಥೆ ಕಲ್ಪಿಸಿತು. ದೇಶ ವಿದೇಶದ ವಿಷಯಗಳು ನಿಮ್ಮ ಬೆರಳು ತುದಿಯಲ್ಲಿ ಲಭ್ಯ. ಹತ್ತಿರದ ಆಸ್ಪತ್ರೆ, ಶಾಲೆ, ಮತ್ತಿತರ ಸೇವೆಗಳು ಮತ್ತು ಜನರ ಅಭಿಪ್ರಾಯ ಸರಳವಾಗಿ ಲಭ್ಯವಾಯಿತು. ಆದರೆ ಇದೆ ಸಾಮಾಜಿಕ ಮಾಧ್ಯಮ ಇರದ, ಕಂಡಿರದ ಮಾನಸಿಕ ರೋಗಗಳನ್ನು ಪರಿಚಯಿಸಿತು. ಪ್ರತಿ ಕ್ಷಣಕ್ಕೂ ಕಣ್ಣ ಮುಂದೆ ಬರುವ ಸುದ್ದಿ ಸತ್ಯವೋ, ಅಸತ್ಯವೋ ತಿಳಿಯದೆ ಜನರು ಅತಂತ್ರ ಪರಿಸ್ಥಿತಿ ಮುಟ್ಟುತ್ತಾರೆ, ರಾಷ್ಟ್ರದ ರಾಜಕೀಯ ಸಾಮಾಜಿಕ ತಾಣದಿಂದ ನಡೆಯುತ್ತೆ. ನೆಟ್ಫ್ಲಿಸ್ (Netflix) ನಲ್ಲಿ ಸಾಕ್ಷ್ಯಚಿತ್ರ “The Social Dilemma” ಸಾಮಾಜಿಕ ಮಾಧ್ಯಮದಿಂದ ಆಗುವ ದುಷ್ಪರಿಣಾಮಗಳು ಮನಮುಟ್ಟುವಂತೆ ಚಿತ್ರೀಕರಿಣಿಸಿದ್ದಾರೆ.

ಡಿಸೆಂಬರ್ ಮುಗಿದು ಹೊಸ ವರ್ಷ ಬಂತೆಂದರೆ ಎಲ್ಲರೊ ಒಂದೆಡೆ ಕಲೆತು ಸಂತೋಷ ಪಡುತ್ತಾರೆ, ಹೊಸವರ್ಷದ ನಿರ್ಣಯ (Resolution) ಮಾಡುತ್ತಾರೆ. ನಮ್ಮ ಸಂಶೋಧಕರೂ ಹೊಸ ವರ್ಷದ ಜೊತೆ, ತಮ್ಮ ಸಂಶೋಧನಾ ವಿವರಗಳನ್ನು ಸಿದ್ದ ಪಡಿಸಿಕೊಳ್ಳತ್ತಿರಬಹುದು, ಇತ್ತೀಚಿನ ಪ್ರತಿ ದಶಕ, ವರ್ಷ ಹೊಸ ಹೊಸ ಸಂಶೋಧನೆಗಳ ಅಗರ ಆಗಿದೆ. ಇಂತಹುದೇ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುವ ಉದ್ದೇಶದಿಂದ ಈ ಲೇಖನ ಬರೆಯುವ ವಿಚಾರ ಮಾಡಿದೆ. ಇದನ್ನು ನಾವು ಕೇಳಿದ ಪೌರಾಣಿಕ ಸಾಹಿತ್ಯದೊಂದಿಗೆ ಹೊಂದಿಸಿ ಹಂಚಿಕೊಳ್ಳುವ ಒಂದು ಪ್ರಯತ್ನ ಮಾಡುತ್ತಿದ್ದೇನೆ. ಈ ಒಂದು ಪ್ರಯತ್ನಕ್ಕೆ ಸ್ಫೂರ್ತಿ ಸದ್ಯೋಜಾತ ಭಟ್ಟ ಅವರು ಬರೆದ “ಕಾಲಯಾನ” ಪುಸ್ತಕ.

೧: ಸತ್ಯವ್ರತ ರಾಜ ಸಶರೀರದಿಂದ ದೇವಲೋಕ ಅಂದರೆ ಸ್ವರ್ಗಕ್ಕೆ ಹೋಗುವ ತನ್ನ ಇಚ್ಛೆ ವಸಿಷ್ಠ ಋಷಿಗಳೊಂದಿಗೆ ಹಂಚಿಕೊಳ್ಳುತ್ತಾನೆ. ಅವರು ಅದು ಸಾಧ್ಯವಾಗದ ವಿಚಾರ ಎಂದು ಸಹಾಯ ಮಾಡಲು ನಿರಾಕರಿಸುತ್ತಾರೆ. ಆಗ ಸತ್ಯವ್ರತ (ಶಾಪದಿಂದ ಚಾಂಡಾಲನಾಗಿ), ಮಹಾಋಷಿ ವಿಶ್ವಾಮಿತ್ರರಲ್ಲಿ ಈ ವಿಚಾರ ತಿಳಿಸಿ ಸಹಾಯ ಯಾಚಿಸುತ್ತಾನೆ. ವಿಶ್ವಾಮಿತ್ರರು ತಮ್ಮ ತಪೋಬಲದಿಂದ ಅವನನ್ನು ಸ್ವರ್ಗಕ್ಕೆ ಕಳುಹಿಸುತ್ತಾರೆ, ಆದರೆ ಇಂದ್ರ ಅವನನ್ನು ಒಳಗೆ ಸೇರಿಸದೆ ಕೆಳಕ್ಕೆ ನೂಕುತ್ತಾನೆ. ಕೆಳಗೆ ಬೀಳುವ ಸತ್ಯವ್ರತನನ್ನು ತಡೆದು ನಿಲ್ಲಿಸಿ ಅಲ್ಲಿ ಪ್ರತಿಸ್ವರ್ಗ ನಿರ್ಮಿಸುತ್ತಾರೆ. ಇದನ್ನೇ ತ್ರಿಶಂಕು ಸ್ವರ್ಗ ಎನ್ನುತ್ತಾರೆ.

ವೈಜ್ಞಾನಿಕ ಪ್ರಯೋಗಗಳಿಂದ ಈಗಾಗಲೇ ವಿಶ್ವಾಮಿತ್ರರು ನಿರ್ಮಿಸಿದಂತಹ ತಂಗುದಾಣ ಬಾಹ್ಯಾಕಾಶದಲ್ಲಿ ಬಂದಿವೆ. ೨೦೨೪ ಡಿಸೆಂಬರ್ ೩೦ಕ್ಕೆ ಭಾರತದ ಬಾಹ್ಯಾಕಾಶ ಸಂಸ್ಥೆ (ISRO) ಸ್ಪೇಸ್ ಡಾಕಿಂಗ್ (ಬಾಹ್ಯಾಕಾಶ ಬಂದರು ಅನ್ನಬಹುದೇ?) ಸಲುವಾಗಿ ಪ್ರಯೋಗ ಮಾಡಿದರು. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ – ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ (ISS) ಪ್ರಸ್ತುತ ಅಂತರಿಕ್ಷದಲ್ಲಿ ಕಾರ್ಯ ನಿರತವಾಗಿದೆ. ಇದರಿಂದ ಬಾಹ್ಯಾಕಾಶ ಪ್ರಯೋಗಗಳಿಗೆ ಅಲ್ಲದೆ ಔಷಧಿ ತಯಾರಿಕೆ, ಸೂರ್ಯನ ಕಿರಣದ ಸಹಾಯದಿಂದ ಸುಸ್ಥಿರತೆ (ಸಸ್ಟೇನ್ಬಿಲಿಟಿ) ಪ್ರಯೋಗ ಮುಂತಾದವುಗಳು ಸಾಧ್ಯವಾಗಿವೆ. ಇದು ಇನ್ನೂ ಆರಂಭಿಕ ಹಂತದಲ್ಲಿರುವ ಕಾರಣ ಇದರ ಉಪಯೋಗ, ದುಷ್ಪರಿಣಾಮ ಪೂರ್ಣ ಪ್ರಮಾಣದಲ್ಲಿ ಕಾಣುತ್ತಿಲ್ಲ. ಸದ್ಯದ ದುಷ್ಪರಿಣಾಮ ವಿಕಿರಣ, ಬಾಹ್ಯಾಕಾಶ ಕಸ, ಮಾನಸಿಕ ರೋಗಗಳು ಇತ್ಯಾದಿ.

೨: ಕಕುದ್ಮಿಗೆ ಮಹರಾಜನಿಗೆ ರೇವತಿ ಎಂಬ ಸುಂದರ ಮಗಳಿದ್ದಳು. ಅವಳಿಗೆ ಸರಿಯಾದ ವರನನ್ನು ಹುಡುಕಲು ಸ್ವಯಂವರ ಏರ್ಪಡಿಸಿದ, ಯಾವ ವರನು ಸರಿಯಾದ ಜೋಡಿ ಎನಿಸಲಿಲ್ಲ. ಕೊನೆಗೆ ಕಕುದ್ಮಿ ಮಗಳೊಂದಿಗೆ ಬ್ರಹ್ಮನನ್ನು ಕಾಣಲು ಬ್ರಹ್ಮಲೋಕಕ್ಕೆ ಪಯಣಿಸಿದನು. ಅಲ್ಲಿ ಬ್ರಹ್ಮ ದೇವರ ಸಭೆಯಲ್ಲಿ ಸಂಗೀತ ಕಾರ್ಯಕ್ರಮ ನಡೆದಿತ್ತು. ಸ್ವಲ್ಪ ಹೊತ್ತಿನನಂತರ ಬ್ರಹ್ಮ ದೇವರು ಕಕುದ್ಮಿ ಬಂದ ಕಾರಣ ಕೇಳಿದರು. ಆಗ ಕಕುದ್ಮಿ ತನ್ನ ಕಷ್ಟ ತಿಳಿಸಿ, ಮಗಳಿಗೆ ಸರಿಯಾದ ವರನನ್ನು ಆಯ್ಕೆ ಮಾಡಿಕೊಡಲು ಸಹಾಯ ಕೇಳುತ್ತಾನೆ. ಆಗ ಬ್ರಹ್ಮ ನಗುತ್ತ ಹೇಳುತ್ತಾನೆ, “ನೀನು ಇಲ್ಲಿಗೆ ಬಂದು ಕಳೆದ ಕ್ಷಣಗಳಲ್ಲಿ ಭೂಲೋಕದಲ್ಲಿ ೨-೩ ಯುಗಗಳು ಮುಗಿದು ಹೋಗಿವೆ, ಈಗ ನಿನ್ನ ಸಮಯದ ಯಾವ ರಾಜಕುಮಾರ ಬದುಕಿಲ್ಲ, ಅವರ ನಂತರದ ಸಂತತಿ ಅಲ್ಲಿ ಇರುವುದು…ಅವರ ಮರಿ ಮಕ್ಕಳು ಹುಟ್ಟಿದ್ದಾರೆ.”

ಸಮಯ ವಿಸ್ತರಣೆ, ಇದು ಐನ್ಸ್ಟೀನ್ ಅವರ ಸಾಪೇಕ್ಷತಾ ಸಿದ್ಧಾಂತ ಇಂದ ಬಂದ ಪರಿಣಾಮ.
ಸಮಯ ವಿಸ್ತರಣೆ ಬಗ್ಗೆ ನಾನು ಕೆಲವು ಲೇಖನಗಳನ್ನು ಓದುತ್ತಿದ್ದೆ, ಆಗ ದೊರಕಿದ ಒಂದು ಲೇಖನ “ಡುಂಡಿರಾಮ್ಸ್ ಲಿಮರಿಕ್ಸ್” (ಕವಿಗಳಾದ ಡುಂಡಿರಾಜ್ ಮತ್ತು ಅಣಕವಾಡುಗಳ ಸರದಾರ ಎನ್. ರಾಮನಾಥ್ ಜಂಟಿಯಾಗಿ ರಚಿಸಿದ ಚುಟುಕುಗಳ ಸಂಕಲನ) ಪುಸ್ತಕ ಪರಿಚಯ, ಡಾ. ಬಿ ಜನಾರ್ಧನ್ ಭಟ್ ಅವರಿಂದ. ಈ ಲೇಖನದ ಒಂದು ಭಾಗ ನನ್ನ ಲೇಖನಕ್ಕೆ ಉಪಯುಕ್ತ, ಆದುದರಿಂದ ಅದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
(vishvadhwani.com/2021/10/03/dumi-rams-limericks/)

“ಸಾಪೇಕ್ಷತಾ ಸಿದ್ಧಾಂತದ ಒಂದು ಪ್ರಮೇಯ, ಬೆಳಕಿನ ವೇಗಕ್ಕಿಂತ ವೇಗವಾಗಿ ಹೋದರೆ ಕಾಲವೂ ಸಾಪೇಕ್ಷವಾಗಿರುತ್ತದೆ ಎನ್ನುವುದು. ಉದಾಹರಣೆಗೆ ಯಾರಾದರೂ ಬೆಳಕಿನ ವೇಗಕ್ಕಿಂತ ವೇಗವಾಗಿ ಹೋಗುವ ರಾಕೆಟಿನಲ್ಲಿ ಬಾಹ್ಯಾಕಾಶಕ್ಕೆ ಹೋಗಿ ಹಲವು ವರ್ಷಗಳ ನಂತರ ಭೂಮಿಗೆ ಹಿಂದಿರುಗಿದರೆ ಅವರ ವಯಸ್ಸು ಹೆಚ್ಚೇನೂ ಬದಲಾಗಿರುವುದಿಲ್ಲ; ಆದರೆ ಇಲ್ಲಿನ ಅವರ ಓರಗೆಯವರು ಮುದುಕರಾಗಿರುತ್ತಾರೆ! ಇಂತಹ ಸಿದ್ಧಾಂತ ಬಂದಾಗ ಹುಟ್ಟಿಕೊಂಡ ಲಿಮರಿಕ್ ಒಂದು ಇನ್ನೂ ಜಗತ್ತಿನಾದ್ಯಂತ ಪ್ರಸಿದ್ಧವಾಗಿ ಚಲಾವಣೆಯಲ್ಲಿದೆ!

1923 ರಲ್ಲಿ ಲಂಡನಿನ ಪ್ರಸಿದ್ಧ ಹಾಸ್ಯ ಪತ್ರಿಕೆ – ವ್ಯಂಗ್ಯ ಚಿತ್ರಗಳಿಗೂ ಅದು ಪ್ರಸಿದ್ಧ – ‘ಪಂಚ್’ನಲ್ಲಿ ಅದು ಮೊದಲು ಅನಾಮಧೇಯ ಕವಿಯ ಹೆಸರಿನಲ್ಲಿ ಪ್ರಕಟವಾಯಿತು. ಅದು ಹೀಗಿದೆ:

There was a young lady named Bright
Whose speed was much faster than light.
She set out one day
In a relative way
And returned (on) the previous night.

ಸುಮಾರಾಗಿ ಇದರ ಭಾವಾರ್ಥ ಹೀಗೆ (ಅನುವಾದ ಡಾ. ಬಿ ಜನಾರ್ಧನ್ ಭಟ್ ):

ಬ್ರೈಟ್ ಎಂಬ ಹೆಸರಿನವಳು ಇದ್ದಳೊಬ್ಬಳು
ಬೆಳಕಿಗಿಂತ ವೇಗವಾಗಿ ಚಲಿಸುವವಳು
ಒಂದುದಿನ ಹಗಲು ಸಾ-
ಪೇಕ್ಷ ರೀತಿಯಲ್ಲಿ ಹೊರಟು
ಹಿಂದಿನ ದಿನ ರಾತ್ರಿಯೇ ಹಿಂದಿರುಗಿದಳು.

ಸಮಯ ವಿಸ್ತರಣೆ ಸಿದ್ದಾಂತದ ಆಧಾರದ ಮೇಲೆ ಅಮರತ್ವ ಅಥವಾ ಸಾವನ್ನು ಮುಂದೂಡುವ ಪ್ರಯತ್ನ ನಡೆಯುತ್ತಿದೆ. ಇದರ ಬಗ್ಗೆ ವಿಚಾರ ಮಾಡುವ ಮುನ್ನ ನಚಿಕೇತನ ಬಗ್ಗೆ ತಿಳಿಯೋಣ.

೩. ಉದ್ಧಾಲಕ ಗೌತಮ ಗೋತ್ರದ ಋಷಿ, ಅವನು ಲೋಕದ ಕಲ್ಯಾಣಕ್ಕೆ “ವಿಶ್ವಜಿತ್” ಎನ್ನುವ ಯಾಗ ಮಾಡುತ್ತಾನೆ. ಈ ಯಾಗಕ್ಕೆ ದಾನ ಪ್ರಧಾನ ಆದುದರಿಂದ ಅವನು ತನ್ನೆಲ್ಲ ಸಂಪತ್ತನ್ನು ದಾನ ಮಾಡುತ್ತಾನೆ. ಅವನ ಮಗ ನಚಿಕೇತ, ಸಣ್ಣ ಹುಡುಗ ಅವನು. ಉದ್ಧಾಲಕ ದಾನ ಮಾಡುತ್ತ ಕೊನೆಗೆ ತನ್ನಲ್ಲಿ ಇರುವ ಗೋವುಗಳನ್ನು ದಾನ ಮಾಡುತ್ತಾನೆ. ಗೋವುಗಳು ಬಡಕಲು ಇದ್ದು ದಾನಕ್ಕೆ ಯೋಗ್ಯ ಅಲ್ಲ ಎಂದು ಅವನ ಮಗ ನಚಿಕೇತ ಅಪ್ಪನಿಗೆ ತಿಳಿಸುತ್ತಾನೆ. ಆಗ ಅಪ್ಪ ಹೇಳುತ್ತಾನೆ, “ನನ್ನಲ್ಲಿ ಇರುವದು ಇದೆ ಗೋವುಗಳು, ಇದನ್ನು ಬಿಟ್ಟರೆ ನೀನು ಉಳಿದಿದ್ದೀಯ”… ಆಗ ನಚಿಕೇತ ತನ್ನನ್ನು ದಾನ ಮಾಡಲು ಕೇಳುತ್ತಾನೆ, ಅದನ್ನು ಕೇಳಿ ಅಪ್ಪ ಕೋಪದಲ್ಲಿ ನಿನ್ನನ್ನು ಯಮನಿಗೆ ದಾನ ಮಾಡುತ್ತೇನೆ ಎನ್ನುತ್ತಾನೆ.
ನಚಿಕೇತನಿಗೆ ಒಂದು ಅಶರೀರವಾಣಿ ಕೇಳಿಸುತ್ತದೆ, ಅದು ಅವನಿಗೆ ಯಮ ಲೋಕಕ್ಕೆ ಹೋಗಲು ತಿಳಿಸುತ್ತದೆ. ನಚಿಕೇತ ಅಲ್ಲಿಗೆ ಹೋದಾಗ ಯಮನು ಇರುವದಿಲ್ಲ, ಆದುದರಿಂದ ಅವನು ಅಲ್ಲಿಯೇ ಯಮನಿಗಾಗಿ ಕಾಯುತ್ತ ಕುಳಿತುಕೊಳ್ಳುತ್ತಾನೆ. ಮೂರು ದಿನದ ನಂತರ ಯಮ ಬಂದು ಅಲ್ಲಿ ಕಾಯುತ್ತ ಕುಳಿತ ಬಾಲಕನನ್ನು ನೋಡಿ ಅವನಿಗೆ ಮೂರು ವರಗಳನ್ನು ಕೊಡುತ್ತಾನೆ. ನಚಿಕೇತ ತನ್ನ ಮೂರನೇ ವರದಲ್ಲಿ “ಮನುಷ್ಯ ಮೃತ್ಯುವನ್ನು ಜಯಿಸುವ ಉಪಾಯ ತಿಳಿಸಿಕೊಡು” ಎನುತ್ತಾನೆ. ಎರಡು ವರಗಳಿಗೆ ಅಸ್ತು ಅಂದಿದ್ದ ಯಮ, ಮೂರನೇ ವರ ನೀನು ಕೇಳಿದಂತೆ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸುತ್ತಾನೆ.

ಯಮನು ನಿರಾಕರಿಸಿದ ವರ “ಸಾವನ್ನು ಗೆಲ್ಲುವುದು” ಈಗ ಮನುಷ್ಯನ ಮಹತ್ತರ ಗುರಿ ಆಗಿದೆ. ವೈಜ್ಞಾನಿಕವಾಗಿ ದೀರ್ಘಾಯುಷ್ಯ ಪಡೆಯುವುದು, ಚಿರಂಜೀವಿ ಆಗುವ ಕನಸನ್ನು ಕಾಣುತ್ತಿದ್ದಾನೆ.

ಖ್ಯಾತ ಗಾಯಕ, ನೃತ್ಯಪಟು ಮೈಕಲ್ ಜ್ಯಾಕ್ಸನ್ ಹೇಳಿದ್ದು, “”I don’t want to die. I want to live forever”, ಅದಕ್ಕಾಗಿ ಅವನು ಬಹಳ ಪ್ರಯತ್ನಪಟ್ಟನು.

“ಹುಟ್ಟು ಸಾವು ಬದುಕಿನಲ್ಲಿ ಎರಡು ಕೊನೆಗಳು… ಬಯಸಿದಾಗ ಕಾಣದಿರುವ ಎರಡು ಮುಖಗಳು…”
ಹುಟ್ಟಿದ್ದು ಸಾಯಬೇಕು, there is nothing forever ಎಂಬುದು ಜಗದ ನಿಯಮ, ಇದನ್ನು ಅಳಿಸಲು ನೋಡಿದರೆ ನಿಸರ್ಗದ ತತ್ವ ಬದಲಿಸಿದಂತೆ. ಬಂದ ಕೆಲಸ ಮುಗಿದ ಮೇಲೆ ಸಂತೋಷದಿಂದ ಹೋಗಬೇಕು, ರಾಮ… ಕೃಷ್ಣರೇ ಇದಕ್ಕೆ ಹೊರತಲ್ಲ, ಭೀಷ್ಮ ಪೀತಾಮಹ ಇಚ್ಚಾ ಮರಣ ಇದಾಗ್ಯೂ ಅವರು ಸಿಕ್ಕ ವರದಿಂದ ಚಿರಂಜೀವಿ ಆಗಲು ಬಯಸದೆ ಸಂತೋಷದಿಂದ ಈ ಬದುಕಿನಿಂದ ನಿರ್ಗಮಿಸಿದರು. ಅಶ್ವಥಾಮ ಶಾಪದಿಂದ ಚಿರಂಜೀವಿ ಆಗಿರಬಹುದು ಆದರೆ ಪರಿಣಾಮ ಅತಿ ಭೀಕರ.

ಚೀನಾ ದಲ್ಲಿ ೨೧% ಕ್ಕೋ ಹೆಚ್ಚಿನ ಜನ ೬೦ ವರುಷ ಮೇಲ್ಪಟ್ಟವರು. ಇನ್ನು ಜಪಾನ್ ದೇಶದ ೩೦% ಕ್ಕೋ ಹೆಚ್ಚು ಜನ ವಯಸ್ಸಾದವರು. ಸಾವು ಗೆಲ್ಲುವ ಔಷದಿ ಸಿಕ್ಕರೆ (ಅಮೃತ) ಎಲ್ಲೆಲ್ಲಿಯೂ ಜನರೇ… ಅವರ ಅರೋಗ್ಯ, ಜೀವನ ಮುಂತಾದ ನೆರವು ಸರಕಾರದ ಜವಾಬ್ದಾರಿ… ಈ ಪರಿಸ್ಥಿತಿ ಬಂದರೆ ಸರಕಾರ ಇರಬಹುದೇ? ಅವರಿಗೆ ಜೀವಿಸಲು ನೈಸರ್ಗಿಕ ಸಂಪನ್ಮೂಲಗಳು ಉಳಿಯುವದೇ? ಭೂಮಿ ಬಿಟ್ಟು, ಮಂಗಳ… ನಂತರ ಚಂದ್ರ… ನಂತರ ಇನ್ನೊಂದು ಗ್ರಹ ಹುಡುಕುತ್ತ ಮನೆ ಖರೀದಿಸುವ ಪ್ರಮೇಯ ಬರಬಹುದು. ಈಗ ಸಾಮಾನ್ಯವಾಗಿ ಕೇಳಿಬರುವದು “ಸತ್ತ ಮೇಲೆ ಹಣ ತೆಗೆದುಕೊಂಡು ಹೋಗುತ್ತಾರೇನು?”… ಇನ್ನು ಅಮರತ್ವ ಸಿಕ್ಕರೆ ನಮಗೆ ಕೇಳಿ ಬರಬಹುದಾದ ವಾಕ್ಯ “ಹಣ ಇದ್ದರೆ ಸಾಕು, ಸಾವನ್ನು ದಾಟಿಕೊಂಡು ಹೋಗುತ್ತಾರೆ”.

“Don’t Die: The Man Who Wants to Live Forever” ಇತ್ತೀಚಿಗೆ ನೆಟ್ಫ್ಲಿಸ್ ನಲ್ಲಿ ಬಂದ ಸಾಕ್ಷ್ಯಚಿತ್ರ. ಕಟ್ಟುನಿಟ್ಟಾದ ಆಹಾರ, ಜೀವನಶೈಲಿ ಮತ್ತು ವೈದ್ಯಕೀಯ ಪ್ರಯೋಗಗಳ ಸಹಾಯದಿಂದ ಬ್ರಯಾನ್ ಜಾನ್ಸನ್ ತನ್ನ ವಯಸ್ಸನ್ನು ಕಡಿಮೆ ಮಾಡಿಕೊಂಡು, ಹೆಚ್ಚು ವರ್ಷ… ಅಥವಾ ಸಾವಿಲ್ಲದ ಸರದಾರ ಆಗುವ ಪ್ರಯತ್ನದಲ್ಲಿ ಇದ್ದಾನೆ.

“ನಮ್ಮ ಸಂಸಾರ, ಆನಂದ ಸಾಗರ… ಪ್ರೀತಿ ಎಂಬ ದೈವವೇ ನಮಗಾಧಾರ” ಎನ್ನುವ ಹಾಡು, “ನಮ್ಮ ಸಂಸಾರ, ಬೃಹತ್ ಸಾಗರ… ಸಾವಿಲ್ಲದ ಔಷಧಿಯೇ ನಮಗಾಧಾರ” ಎಂದು ಬದಲಾಗುತ್ತದೆ.

“ಜಗವೇ ಒಂದು ರಣರಂಗ, ಧೈರ್ಯ ಇರಲಿ ನಿನ್ನ ಸಂಗ” ಹಾಡು, “”ಜಗವೇ ಒಂದು ರಣರಂಗ, ಸಾವೇ ಇರಲಿ ನಿನ್ನ ಸಂಗ” ಎನ್ನಬೇಕಾಗಬಹುದು…ಸಾವಿಲ್ಲದೆ ಜನ ಸಣ್ಣ ಸಣ್ಣ ಅವಶ್ಯಕತೆಗೂ ಹೋರಾಡಿ, ನೋವಿಗಿಂತ ಸಾವೇ ಖುಷಿ ಎನ್ನುವ ಪರಿಸ್ಥಿತಿ ತಲುಪುತ್ತಾರೆ.

ಆವಿಷ್ಕಾರದ ಅವಶ್ಯಕತೆ ಇದೆ, ಆದರೆ ಫಲಿತಾಂಶ/ ಪರಿಣಾಮ ವಿಚಾರ ಇರದೇ ಮಾಡಿದ ಆವಿಷ್ಕಾರ ತಿರುಗುಬಾಣ ಆಗಬಹುದು.

ಪ್ರೇಮಲತಾಅವರ ‘ನಂಬಿಕೆಯೆಂಬ ಗಾಳಿಕೊಡೆ’ ಕಥಾಸಂಕಲನ – ಕೆಲವುಅನಿಸಿಕೆಗಳು

ಡಾ.ಜಿ.ಎಸ್.ಶಿವಪ್ರಸಾದ್

ಪ್ರೇಮಲತಾ ಅವರ 'ನಂಬಿಕೆಯೆಂಬ ಗಾಳಿಕೊಡೆ'  ಕಥಾ ಸಂಕಲನವನ್ನು ಇತ್ತೀಚಿಗೆ ಓದಿ ಮುಗಿಸಿ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಈ ಕೃತಿಯನ್ನು ಈಗಾಗಲೇ ಓದಿರುವವರಿಗೆ ಈ ನನ್ನ ಬರಹ ಹೊಸ ದೃಷ್ಟಿ ಕೋನಗಳನ್ನು ನೀಡಬಹುದು. ಇನ್ನು ಓದಬೇಕು ಎಂಬ ಆಕಾಂಕ್ಷೆ ಉಳ್ಳವರಿಗೆ ಈ ಲೇಖನ ಪ್ರವೇಶ ಪರಿಚಯವನ್ನು ಒದಗಿಸಬಹುದು. ಲೇಖಕ/ಲೇಖಕಿಯರಿಗೆ ತಾವು ಬರೆದ ಕೃತಿಯನ್ನು ಇತರರು ಓದಿದರೆ ಅದರಿಂದ ಉಂಟಾಗುವ ಸಂತಸ ತೃಪ್ತಿ ಒಂದು ಕಡೆಯಾದರೆ, ಆ ಕೃತಿಯನ್ನು ಓದಿ ಅದರ ಬಗ್ಗೆ ಚರ್ಚೆ ನಡೆದಲ್ಲಿ ಅವರಿಗೆ ಸಾರ್ಥಕತೆಯ ಭಾವ ಉಂಟಾಗಬಹುದು. ಒಂದು ಕೃತಿಯ ವಿಷಯ ವಸ್ತು, ಆಳ ಮತ್ತು ವಿಸ್ತಾರಗಳು ಈ ಅಂಶಗಳನ್ನು ನಿರ್ಧರಿಸಬಹುದು.  ಬರಹಗಾರರಿಗೆ ಅದಕ್ಕಿಂತ ಹೆಚ್ಚಿನ ನಿರೀಕ್ಷೆ ಇರಲಾರದು. ಇನ್ನು ಕೆಲವು ಕರ್ತೃಗಳು "ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ" ಎಂಬ ನಿರ್ಲಿಪ್ತ ನಿಲುವಿನಲ್ಲಿ ತಮ್ಮ ಒಂದು ಆತ್ಮ ತೃಪ್ತಿಗೆ ಬರವಣಿಗೆಯನ್ನು ಮುಂದುವರಿಸಬಹುದು. ಅನಿವಾಸಿ ನೆಲದಲ್ಲಿ ಮೂಡಿ ಬರುವ ಕನ್ನಡ ಕೃತಿಗಳನ್ನು ಇಲ್ಲಿಯ ಓದುಗರು ಓದಿ ಉತ್ತೇಜಿಸುವುದು, ಸಾಧ್ಯವಾದಲ್ಲಿ ಚರ್ಚೆಗೆ ಒಳಪಡಿಸುವುದು ಅಗತ್ಯವಷ್ಟೇ ಅಲ್ಲ, ಅದು ಅನಿವಾಸಿ  ಕನ್ನಡಿಗರ ಜವಾಬ್ದಾರಿಯೂ ಹೌದು. ಇದನ್ನು ನಮ್ಮ ಅನಿವಾಸಿ ದಶಮಾನೋತ್ಸವ ಸಂದರ್ಭದಲ್ಲಿ ಅನುಷ್ಠಾನಕ್ಕೆ ತರಲಾಯಿತು. ಸಮಯೋಚಿತವಾಗಿ ವಾಟ್ಸ್ ಆಪಿನಲ್ಲೂ ಚರ್ಚೆ ಮಾಡುಕೊಳ್ಳುತ್ತ ಬಂದಿದ್ದೇವೆ. ನನ್ನ ಒಂದು ಸಣ್ಣ ಕಾಣಿಕೆ ಈ ಬರಹದ ರೂಪದಲ್ಲಿ ಅಭಿವ್ಯಕ್ತಗೊಂಡಿದೆ. ಇಲ್ಲಿ ಸಣ್ಣಕಥೆಗಳ ಬಗ್ಗೆ ನನ್ನ ಕೆಲವು ಸಾರ್ವತ್ರಿಕ ಅನಿಸಿಕೆಗಳನ್ನು ಬೆಸೆಯಲಾಗಿದೆ. 

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, ಹೊಸ ವರ್ಷದಲ್ಲಿ ಇನ್ನೂ ಹೆಚ್ಚಿನ ಹೊಸ ಕೃತಿಗಳು ಹೊರಬಂದು ಸೃಜನಶೀಲತೆ ವಿಜೃಂಭಿಸಲಿ

-ಸಂ
ಪ್ರೇಮಲತಾ ಅವರು ದಶಕಗಳಿಂದ ಸಣ್ಣ ಕಥೆಗಳನ್ನು ಬರೆದು ಸುಧಾ, ಮಯೂರ ಮುಂತಾದ ಸಂಚಿಕೆಗಳಲ್ಲಿ ಪ್ರಕಟಿಸಿದ್ದಾರೆ. ಹಾಗೆ ಮೂರು ಕಥಾಸಂಕಲನಗಳನ್ನು ಈಗಾಗಲೇ ಪ್ರಕಟಿಸಿ ಖ್ಯಾತರಾಗಿದ್ದಾರೆ. ಅವರ ‘ನಂಬಿಕೆಯೆಂಬ ಗಾಳಿಕೊಡೆ’ ಕಥಾ ಸಂಕಲನವು ವೀರಲೋಕ ಪ್ರಕಾಶನದಿಂದ ೨೦೨೩ರಲ್ಲಿ ಲೋಕಾರ್ಪಣೆಗೊಂಡಿದೆ. ಇಲ್ಲಿ ೧೦ ಸಣ್ಣ ಕಥೆಗಳಿವೆ. ಪುಸ್ತಕ ತರಿಸಿಕೊಂಡು ಹಲವಾರು ದಿನಗಳು ಕಳೆದಿದ್ದರೂ ಈಗ ಸಮಯ ಒದಗಿಬಂದು ಇತ್ತೀಚಿಗಷ್ಟೇ ಓದಿ ಮುಗಿಸಿ, ನನ್ನ ಕೆಲವು ಪ್ರಾಮಾಣಿಕ ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. ಇದೊಂದು ವಿಮರ್ಶೆಯಾಗಿ ಮೂಡಿ ಬಂದಿದ್ದರೆ ಹಾಗೂ ಇರಲಿ. 

ಈ ಸಂಕಲನದ ಶೀರ್ಷಿಕೆ ಮತ್ತು ಮುಖಪುಟ ಇಲ್ಲಿಯ ಕಥೆಗಳ ರೂಪಕದಂತೆ ನಿಂತಿದೆ. ಸ್ವತಃ ಲೇಖಕಿ ತಮ್ಮ ಅರಿಕೆಯಲ್ಲಿ ಪ್ರಸ್ತಾಪಿಸಿರುವಂತೆ "ನಂಬಿಕೆಗಳೇ ಜೀವನಕ್ಕೆ ಆಧಾರ, ಬದುಕೇ ಒಂದು ನಂಬಿಕೆ" ಬದುಕಿನ ಹಲವಾರು ಸನ್ನಿವೇಶಗಳಲ್ಲಿ ಈ ನಂಬಿಕೆ ಎನ್ನುವುದು ಚುಕ್ಕಾಣಿಯಾಗಿ ನಮ್ಮ ದಿಕ್ಕು ದೆಸೆಗಳನ್ನು ಬದಲಾಯಿಸುತ್ತದೆ ಎಂಬ ವಿಚಾರ ಸೋಜಿಗವಾದದ್ದು. ಕ್ರಿಸ್ತ್ಮಸ್ ಸಮಯದಲ್ಲಿ ಒಬ್ಬ ಎಳೆ ಬಾಲಕ ರಾತ್ರಿ ತಾನು ಮಲಗಿದ್ದ ಸಮಯದಲ್ಲಿ ಸ್ಯಾಂಟಕ್ಲೌಸ್ ಬಂದು ತನಗೆ ಉಡುಗೊರೆಯನ್ನು ಕೊಡುತ್ತಾನೆ ಎನ್ನುವ ನಿರೀಕ್ಷೆ ಒಂದು ನಂಬಿಕೆಯಾದರೆ, ಬೆನ್ನಿಗೆ ಬಾಂಬು ಕಟ್ಟಿಕೊಂಡಿರುವ ತರುಣ ಭಯೋತ್ಪಾದಕ ತಾನು ಜಿಹಾದಿನಲ್ಲಿ ಮಡಿದರೆ ಪರಲೋಕದಲ್ಲಿ ಅಪ್ಸರೆಯನ್ನು ಕೂಡಬಹುದು ಎಂಬ ಅವನ ನಿರೀಕ್ಷೆಯೂ ನಂಬಿಕೆಯೇ. ಆದರೆ ಈ ರೀತಿಯ ನಂಬಿಕೆಗಳ ಪರಿಣಾಮಗಳೇನು ಎಂಬುದು ಮುಖ್ಯವಾದ ಪ್ರಶ್ನೆ. ನಂಬಿಕೆ ಮತ್ತು ತರ್ಕ, ವೈಚಾರಿಕತೆ, ವಿಜ್ಞಾನ ಇವುಗಳ ಮುಖ ಮುಖಿಯನ್ನು ಈಗಾಗಲೇ ಹಲವಾರು ಕಥೆ, ಕಾದಂಬರಿ ಮತ್ತು ಸಿನಿಮಾಗಳು ಶೋಧಿಸಿವೆ. ಪ್ರೇಮಲತಾ ಅವರೂ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ. ಸಂಬಂಧಗಳನ್ನು ಬೆಸೆಯುವುದು ಈ ನಂಬಿಕೆಗಳೇ. ಒಬ್ಬ ಬರಹಗಾರನಿಗೂ ತನ್ನ ಬರಹ ಓದುಗರ ಗ್ರಹಿಕೆಗೆ, ನಿರೀಕ್ಷೆಗೆ ನಿಲುಕಬಹುದು ಎನ್ನುವ ಹಂಬಲವೂ ಈ ನಂಬಿಕೆಯನ್ನು ಆಧರಿಸಿರುತ್ತದೆ. ಈ ಸಂಕಲನದ ಹಲವಾರು ಕಥೆಗಳ ಭೂಮಿಕೆ ಒಂದಲ್ಲ ಒಂದು ರೀತಿ ಆ ನಂಬಿಕೆಗೆ ಸಂಬಂಧಿಸಿದ್ದು.

ಕಥೆ ಹುಟ್ಟುವುದೇ ಜೀವನದ ಅನುಭವಗಳ ಮೇಲೆ. ಅದು ಬರಹಗಾರನ ವೈಯುಕ್ತಿಕ ಜೀವನ ಅನುಭವವಾಗಿರಬಹುದು, ಇಲ್ಲವೇ ಬರಹಗಾರ ಕಂಡು ಕೇಳಿದ ಅನುಭವವಾಗಿರಬಹುದು. ಈ ಅನುಭವ ಸಾಮಾನ್ಯನಿಗೆ ಒಂದು ಸಾಧಾರಣ ಘಟನೆ, ಸನ್ನಿವೇಶದಂತೆ ಕಂಡರೂ ಸೃಜನಶೀಲ ಲೇಖಕ, ಲೇಖಕಿಯರು ತಮ್ಮ ಅಪ್ರತಿಮ ಕಲ್ಪನಾ ಶಕ್ತಿಯಿಂದ ಆ ಘಟನೆಯನ್ನು ಗ್ರಹಿಸಿ ಅದಕ್ಕೆ ರೆಕ್ಕೆ, ಪುಕ್ಕ, ಮಾಂಸ, ಎಲಬುಗಳನ್ನು ಜೋಡಿಸಿ ಒಂದು ಸುಂದರ ಕಲಾಕೃತಿಯನ್ನು ಕಡೆದು ನಿಲ್ಲಿಸುತ್ತಾರೆ. ಆ ಪ್ರತಿಭೆ ಪ್ರೇಮಲತಾ ಅವರಿಗೆ ನಿಜವಾಗಿಯೂ ಪ್ರಾಪ್ತವಾಗಿದೆ.

ಬದುಕಿನ ಪ್ರಸಂಗಗಳ ಚಿತ್ರವೇ ಸಣ್ಣ ಕಥೆಯ ಬುನಾದಿ, ಹೀಗಾಗಿ ಸಣ್ಣ ಕಥೆಗಳಲ್ಲಿ, ಕೆಲವೇ ಪುಟಗಳಲ್ಲಿ ಕಥೆಯನ್ನು ಹೇಳಿ ಮುಗಿಸಬೇಕಾದ ಒತ್ತಡ ಇರುವುದರಿಂದ ಇಲ್ಲಿ ಹೆಚ್ಚು ಪಾತ್ರಗಳನ್ನು ತರಲು ಅವಕಾಶವಿಲ್ಲ ಮತ್ತು ಇಲ್ಲಿ ಪಾತ್ರಗಳನ್ನು ಆಳವಾಗಿ ಪೋಷಿಸಲು ಸಾಧ್ಯವಿಲ್ಲ. ಕಾದಂಬರಿಯಲ್ಲಿ ಈ ನಿರ್ಬಂಧೆನೆಗಳು ಇರುವುದಿಲ್ಲ. ಕಾದಂಬರಿಗಳಲ್ಲಿ ಕಾಣುವ ಆಳ, ವಿಸ್ತಾರಗಳನ್ನು ಸಣ್ಣ ಕಥೆಗಳಲ್ಲಿ ತರಲು ಸಾಧ್ಯವಿಲ್ಲವಾದರೂ ಸಣ್ಣ ಕಥೆಗಳ ಅನುಕೂಲವೆಂದರೆ ಇಲ್ಲಿ ವಿವಿಧ ಸಾಮಾಜಿಕ ವಿಷಯಗಳನ್ನು ಕಥಾವಸ್ತುವಾಗಿ ಬಳಸ ಬಹುದು, ಹೆಚ್ಚು ವಿಚಾರಗಳನ್ನು ಚಿಂತನೆಗೆ ಒಳಪಡಿಸಬಹುದು. ಕಾದಂಬರಿ ಹರಿಯುವ ನದಿಯಾದರೆ, ಸಣ್ಣ ಕಥೆಗಳು ಕೆರೆಗಳಂತೆ.

ಸಣ್ಣ ಕಥೆಗಳು ಒಡ್ಡುವ ಎಲ್ಲ ಮಿತಿಯೊಳಗೂ ಕೂಡ ಪ್ರೇಮಲತಾ ಅವರು ಸನ್ನಿವೇಶಗಳ ಜೊತೆ ಜೊತೆಗೆ ತಮ್ಮ ಕಥಾ ನಾಯಕ ನಾಯಕಿಯರನ್ನು ಪೋಷಿಸಿದ್ದಾರೆ. ಈ ಸಂಕಲನದ "ತೆರವು' ಎಂಬ ಕಥೆಯಲ್ಲಿ ಕರ್ನಾಟಕದ ರಿಯಲ್ ಎಸ್ಟೇಟ್ ಅವ್ಯವಹಾರದಲ್ಲಿ ಸಿಕ್ಕಿಕೊಂಡಿರುವ ದಂಪತಿಗಳ ಸನ್ನಿವೇಶದಲ್ಲಿ ಏನನ್ನೂ ಸಾಧಿಸಲಾರದ ನಾಮರ್ದ ಗಂಡ ಮತ್ತು ಮನೆ-ಮಡದಿಯಾದರೂ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡು ದಿಟ್ಟತನದಿಂದ ಲ್ಯಾನ್ಡ್ ಮಾಫಿಯಾ ಗೂಂಡಾಗಳನ್ನು ನಿಭಾಯಿಸುವ ಗೀತಾಳ ಪಾತ್ರ ಇದಕ್ಕೆ ಸಾಕ್ಷಿಯಾಗಿದೆ. ತೇಜೇಸ್ವಿಯವರ 'ಕಿರಿಗೂರಿನ ಗೈಯಾಳಿಗಳು' ಕಥೆಯನ್ನು ನೆನಪಿಗೆ ತಂದಿದೆ.

ಅನಿವಾಸಿ ಲೇಖಕರು ತಮ್ಮ ಪರಿಸರದ ನೆಲೆಯಲ್ಲಿ ಘಟಿಸುವ ಕಥೆಗಳನ್ನು ದೂರದ ಕನ್ನಡ ನಾಡಿಗೆ ತಿಳಿಸ ಬೇಕೇ ಅಥವಾ ಅವರು ಎಲ್ಲಿದ್ದರೂ, ಎಂತಿದ್ದರೂ ಕನ್ನಡ ನೆಲೆದ ಕಥೆಗಳನ್ನಷ್ಟೇ ಬರೆಯ ಬೇಕೇ ಎಂಬ ಪ್ರಶ್ನೆ ಮೂಡುವುದು ಸಹಜವೇ. ಇಂಗ್ಲೆಂಡಿನಲ್ಲಿ ನಡೆದ ಕಥೆ ಕನ್ನಡ ಜನಕ್ಕೆ ಸಲ್ಲಬಹುದೇ ಎಂತೆಂಬ ಪ್ರಶ್ನೆ ಅನಿವಾಸಿ ಬರಹಗಾರರನ್ನು ಕಾಡುವುದು ಸಹಜ. ಒಬ್ಬ ಲೇಖಕ ಯಾವ ದೇಶ ಕಾಲಮಾನಗಳಲ್ಲಿದ್ದರೂ ಅದು ಮನುಷ್ಯ ಸಂಬಂಧ, ಸಹಜ ಸ್ವಭಾವಗಳ ವೈರುಧ್ಯ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡಿದ್ದಲ್ಲಿ ಅದು ಎಲ್ಲಾ ದೇಶಕ್ಕೂ ಮತ್ತು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುತ್ತವೆ. ಈ ಕಾರಣಗಳಿಂದ ನಮಗೆ ರಷ್ಯಾದ ಟಾಲ್ಸ್ಟಾಯ್ ಮತ್ತು ಬಂಗಾಳದ ಟ್ಯಾಗೋರ್ ಬರೆದ ಕಥೆಗಳು ಹತ್ತಿರವಾಗುತ್ತವೆ. ಪ್ರೇಮಲತಾ ಅವರು ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡತಿ. ಅವರ ಪರಿಸರ ಇಂಗ್ಲೆಂಡಿನ ಆಂಗ್ಲ ಸಂಸ್ಕೃತಿಗೆ ಸಂಬಂಧಿಸಿದ್ದಾದರೂ ಅವರು ಬರೆಯುವ ಕಥೆಗಳು ನಮ್ಮ ಕನ್ನಡ ನೆಲದ ಕಥೆಗಳಾಗಿವೆ. ಇಲ್ಲಿ ಕರ್ನಾಟಕ ನಗರಗಳ, ಮಲೆನಾಡಿನ ದಟ್ಟ ಕಾಡುಗಳ, ಕಾರ್ಪೊರೇಟ್ ಕಂಪನಿಗಳ ಕಥೆ ಇವೆ. ಇದಕ್ಕೆ ಹೊರತಾಗಿ 'ದ್ರೋಹ' ಎಂಬ ಕಥೆ ಲಂಡನ್ ಮತ್ತು ಸಿರಿಯಾದಲ್ಲಿ ಸಂಭವಿಸುತ್ತದೆ.

ಇನ್ನೊಂದು ವಿಚಾರ; ಕಥೆ ಯಾವುದೇ ನೆಲದಲ್ಲಿ ಹುಟ್ಟಿಕೊಂಡರೂ ಆ ಕಥನ ಪ್ರಪಂಚದ ಬೇರೆಡೆ ಇನ್ನೊಬ್ಬರ ಕಥೆಯಾಗಿರಬಹುದು. ಮನುಷ್ಯನ ಮೂಲಭೂತ ಸ್ವಭಾವಗಳಿಗೆ ಬಣ್ಣ, ಸಂಸ್ಕೃತಿ, ಗಡಿ ರೇಖೆಗಳ ಹಂಗುಂಟೆ? ಈ ಸಂಕಲನದ ಶೀರ್ಷಿಕೆ ಕಥೆಯಾಗಿರುವ ‘ನಂಬಿಕೆಯೆಂಬ ಗಾಳಿಕೊಡೆ’ಯಲ್ಲಿ ಬೆಂಗಳೂರಿನ ಒಂದು ಖಾಸಗಿ ಆಫೀಸಿನ ಉದ್ಯೋಗಿಯ ಬೀಳ್ಕೊಡುಗೆ ಪಾರ್ಟಿಯಲ್ಲಿ ಲಕ್ಷ್ಮಿ ಎಂಬ ವಿವಾಹಿತ ಮಹಿಳೆಗೆ ಅವಳ ಪಾನೀಯದಲ್ಲಿ ಒಬ್ಬ ಕುಹಕಿ ಕದ್ದು ಮುಚ್ಚಿ ಮಾದಕವಸ್ತುವನ್ನು ಸೇರ್ಪಡಿಸಿ (ಸ್ಪೈಕ್ ಮಾಡಿ) ಅದರ ಪರಿಣಾಮವಾಗಿ ಲಕ್ಷ್ಮಿ ನಶೆಯಲ್ಲಿದ್ದಾಗ ಅವಳನ್ನು ಅತ್ಯಾಚಾರಕ್ಕೆ ಒಳಪಡಿಸುತ್ತಾನೆ. ಲಕ್ಷ್ಮಿಯ ಅತ್ಯಾಚಾರವನ್ನು ನಮ್ಮ ಸಮಾಜ ಹೇಗೆ ಗ್ರಹಿಸುತ್ತದೆ, ನಮ್ಮ ವ್ಯವಸ್ಥೆ ಹೇಗೆ ತನಿಖೆ ನಡೆಸುತ್ತವೆ ಮತ್ತು ನಂಬಿಕೆ ಆಧಾರದ ಮೇಲೆ ಜನರ ನಿರೀಕ್ಷೆ ಯಾವ ಯಾವ ರೂಪಗಳನ್ನು ತಳೆಯುತ್ತದೆ, ತನಗೆ ಅತ್ಯಾಚಾರವಾಗಿದೆ ಎಂದು ಲಕ್ಷ್ಮಿ ಬಹಿರಂಗವಾಗಿ ಒಪ್ಪಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಆ ವಿಚಾರವನ್ನು ಹಂಚಿಕೊಂಡದ್ದು ಸರಿಯೇ, ತಪ್ಪೇ? ಎಂಬ ವಿಚಾರಗಳ ಹಿನ್ನೆಲೆಯಲ್ಲಿ ಕಥೆಯನ್ನು ಹೆಣೆಯಲಾಗಿದೆ. ಆಶ್ಚರ್ಯವೆಂದರೆ ಪ್ರೇಮಲತಾ ಈ ಕಥೆಯನ್ನು ಬರೆದು ನಾಲ್ಕು ವರುಷಗಳಾಗಿವೆ, ಬಹುಶಃ ಅದೇ ಸಮಯದಲ್ಲಿ, ಫ್ರಾನ್ಸ್ ದೇಶದಲ್ಲಿ, ಗೆಜೆಲ್ ಪೆಲಿಕೋ ಎಂಬ ಹಿರಿಯ ಮಹಿಳೆಯ ಸ್ವಂತ ಗಂಡನೇ ಅವಳಿಗೆ ಗೊತ್ತಾಗದಂತೆ ಡ್ರಗ್ಸ್ ಕೊಟ್ಟು ನಶೆಯಲ್ಲಿರುವಾಗ ಅವನು ತನ್ನ ಸ್ನೇಹಿತರನ್ನು ಕರೆದು ಅವಳೊಡನೆ ಸಂಭೋಗಿಸಲು ಉತ್ತೇಜಿಸಿದ. ಅದು ಗೆಜೆಲ್ ಮೇಲೆ ನಡೆದ ಅತ್ಯಾಚಾರವೆನ್ನಬಹುದು. ಅಷ್ಟೇ ಅಲ್ಲ ಈ ಅತ್ಯಾಚಾರವನ್ನು ಅವನು ವಿಡಿಯೋ ಮಾಡಿದ್ದು ಈ ವಿಚಾರ ಇತ್ತೀಚಿಗೆ ಬಹಿರಂಗಗೊಂಡು ಅದರ ತನಿಖೆ ನಡೆಯಿತು, ಈ ಸುದ್ದಿ ಬಿಬಿಸಿ ವಾರ್ತೆಯಲ್ಲಿ ಪ್ರಸಾರಗೊಂಡಿತು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಯಿತು. ನಂಬಿಕೆಯೆಂಬ ಗಾಳಿಕೋಡೆ ಕಥೆಯಲ್ಲೂ ಆಪಾದಿತ, ಲಕ್ಷ್ಮಿ ಮೇಲೆ ನಡೆಸಿದ ಅತ್ಯಾಚಾರವನ್ನು ವಿಡಿಯೋ ಮಾಡಿರುತ್ತಾನೆ. ಇದು ಎಷ್ಟು ಕಾಕತಾಳೀಯವಾಗಿದೆ! ಪ್ರಪಂಚದ ಯಾವುದೋ ಮೂಲೆಯಲ್ಲಿ ಒಬ್ಬ ಕನ್ನಡ ಲೇಖಕಿಯ ಕಲ್ಪನೆಗೆ ದೊರಕಿದ ಕಥೆ, ಇನ್ಯಾವುದೋ ಸಂಸ್ಕೃತಿಯಲ್ಲಿ, ದೇಶದಲ್ಲಿ ಸಂಭವಿಸಿದ ನೈಜ ಘಟನೆಯಾಗಿರುವುದು ಅಚ್ಚರಿಯನ್ನು ಉಂಟುಮಾಡುವಂಥದ್ದು.

ಪ್ರೇಮಲತಾ ಅವರು ಕೈಗೆತ್ತಿಕೊಳ್ಳುವ ಕಥಾವಸ್ತುಗಳು ನಮ್ಮ ನಿಮ್ಮ ಬದುಕಿಗೆ ಬಹಳ ಹತ್ತಿರವಾದದ್ದು. ಅವರ ಕಥೆಗಳಲ್ಲಿ ಪ್ರಾಮಾಣಿಕತೆ ಇದೆ, ಇಲ್ಲಿ ಅಥೆಂಟಿಸಿಟಿ ಇದೆ. ಅವರು ಸಾಮಾಜಿಕ ಸಮಸ್ಯೆಗಳನ್ನು ಅನೇಕ ಸೂಕ್ಷ್ಮ ದೃಷ್ಟಿ ಕೋನಗಳಿಂದ ವಿಶ್ಲೇಷಿಸಿದ್ದಾರೆ, ಇಲ್ಲಿಯ ಕಥೆಗಳು ಹಲವಾರು ಚಿಂತನೆಗಳಿಗೆ ಅನುವು ಮಾಡಿಕೊಡುತ್ತದೆ. ಇಲ್ಲಿ ಅತಿಯಾದ ಭಾವುಕತೆ ಇಲ್ಲ, ಎಲ್ಲ ಸನ್ನಿವೇಶಗಳನ್ನು ಹದವಾಗಿ ನಿರೂಪಿಸಲಾಗಿದೆ. ಇಲ್ಲಿ ಸ್ತ್ರೀ ಭಾವನೆಗಳಷ್ಟೇ ಅಲ್ಲದೆ ಪುರುಷರ ಭಾವನೆಗಳನ್ನು ನಿಭಾಯಿಸಲಾಗಿದೆ. ಇದರ ಉತ್ತಮ ಉದಾಹರಣೆಯನ್ನು 'ಗೊಡ್ಡು' ಎಂಬ ಕಥೆಯಲ್ಲಿ ಕಾಣಬಹುದು. ಸಾಮಾನ್ಯವಾಗಿ ಬಂಜೆತನವೆಂದರೆ ಅದು ಸ್ತ್ರೀಯರಿಗಷ್ಟೇ ಸಂಬಂಧಿಸಿರುವ ವಿಚಾರ ಎಂದು ಸಮಾಜ ನಂಬಿರುತ್ತದೆ. ಮಕ್ಕಳಾಗದ ದಾಂಪತ್ಯದಲ್ಲಿ ಬಹುಪಾಲು ಹೆಂಗಸೇ ಆಪಾದನೆಗೆ ಒಳಗಾಗುವುದನ್ನು ಕಾಣುತ್ತವೆ. ‘ಎಕ್ಸ್ ಎಕ್ಸ್ ವೈ’ (XXY) ಎಂಬ ಗಂಡಸಿನ ಬಂಜೆತನವನ್ನು ಕಥೆಯಲ್ಲಿ ತಂದು ಲೇಖಕಿ ಈ ನಂಬಿಕೆಯನ್ನು ಒಡೆಯುತ್ತಾರೆ. ಕಥಾ ನಾಯಕನಿಗೆ ತನ್ನ ಬಂಜೆ ತನದ ಅರಿವಾದಾಗ ಅವನಿಗೆ ಉಂಟಾಗುವ ಭಾವನೆಗಳ ಏರು ಪೆರುಗಳನ್ನು ಮತ್ತು ತಾನು ನಿಷ್ಪ್ರಯೋಜಕ ಎಂಬ ಮಾನಸಿಕ ತೊಳಲಾಟವನ್ನು ಅತ್ಯಂತ ಮನೋಜ್ಞವಾಗಿ ಸೆರೆ ಹಿಡಿದಿದ್ದಾರೆ. ಸಮಾಜ ತಾನು ನಂಬಿರುವ ಸಾಮಾಜಿಕ "ಸತ್ಯಗಳನ್ನು" ನಂಬಿಕೆಗಳನ್ನು ಒಡೆದು ತೋರಿಸಿದಾಗ ಉಂಟಾಗುವ ಆಘಾತ ಬಹಳ ಆಳವಾದದ್ದು. ಅದು ಸಮಾಜವನ್ನು ತಿದ್ದುವ ಪ್ರಯತ್ನವೂ ಹೌದು. ಈ ಕಾರಣಕ್ಕಾಗಿ ನಮಗೆ ಪ್ರೇಮಲತಾ ಅವರ ಕಥೆಗಳು ಪ್ರಸ್ತುತವಾಗುತ್ತವೆ.

ಸಣ್ಣ ಕಥೆಗಳು ಎಷ್ಟು ಉದ್ದವಾಗಿರಬೇಕು ಎಂಬುದಕ್ಕೆ ಯಾವುದೇ ಅಳತೆಗೋಲುಗಳಿಲ್ಲ. ಹೇಳಿದಷ್ಟೂ ಕಥೆಯೇ. ಪ್ರೇಮಲತಾ ಅವರ ಕಥೆಗಳು ಕೊಂಚ ದೀರ್ಘವೆನಿಸುತ್ತದೆ. ಇವುಗಳ ನಡುವೆ ‘ನಿರ್ವಾತ’ ಎಂಬ ಕಥೆ ನಿಜವಾಗಿಯೂ ಸಣ್ಣ ಕಥೆ ಎನ್ನಬಹುದು. ಕೆಲವೇ ಪುಟಗಳ ಈ ಕಥೆ 'ಇನ್ಸೆಸ್ಟ್' ಕುರಿತಾಗಿದೆ. ಕಥಾನಾಯಕಿಯ ತಂದೆಯೇ ತನ್ನ ಚಿಕ್ಕ ತಾತನಾಗಿರುವ ಕಥೆ ಪರಿಣಾಮಕಾರಿಯಾಗಿದೆ. ಕನ್ನಡದ ಹಿಂದಿನ ಲೇಖಕರು ಸಲಿಂಗಕಾಮ, ವಿಕೃತ ಕಾಮ, ಅತ್ಯಾಚಾರ ಈ ವಿಚಾರಗಳನ್ನು ಮಡಿವಂತಿಕೆಯಿಂದ ಆಯ್ಕೆ ಮಾಡುತ್ತಿರಲಿಲ್ಲ. ಇದು ಸಾಮಾಜಿಕವಾಗಿ ನಿಷಿದ್ಧವಾದ ವಿಷಯವಾಗಿತ್ತು. ಪ್ರೇಮಲತಾ ಅವರು ಈ ರೀತಿಯ ಬಾಹಿರವಾದ ವಿಚಾರಗಳನ್ನು ಮುನ್ನೆಲೆಗೆ ತಂದಿರುವುದು ಶ್ಲಾಘನೀಯ. ಈ ಪ್ರಯತ್ನವನ್ನು ಇತ್ತೀಚಿನ ಇತರ ಲೇಖಕರೂ ಮಾಡುತ್ತಿದ್ದಾರೆ. ಕಥೆ, ಕಾದಂಬರಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಈ ರೀತಿ ವಿಷಯಗಳನ್ನು ತರುವುದರಿಂದ ಅದು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಸಹಾಯವಾಗುತ್ತದೆ. ಇದರಿಂದ ಸಮಾಜದಲ್ಲಿ ಪರಿವರ್ತನೆ ಆಗಬಹುದು, ಆಗದಿರಬಹುದು, ಆದರೆ ಅರಿವನ್ನು ಹೆಚ್ಚಿಸುವುದು ಲೇಖಕರ ಮತ್ತು ಸಿನಿಮಾ ನಿರ್ದೇಶಕರ ಜವಾಬ್ದಾರಿ.

ಪ್ರೇಮಲತಾ, ತಮ್ಮ ಕಥೆಯಲ್ಲಿ ತಂದಿರುವ ಅನೇಕ ಸ್ತ್ರೀ ಪಾತ್ರಗಳನ್ನು ಸಹಜವಾಗಿ ನಿರೂಪಿಸಿದ್ದಾರೆ. ಇಲ್ಲಿಯ ಬಹುತೇಕ ಕಥೆಗಳಲ್ಲಿ ಸ್ತ್ರೀ ಪಾತ್ರ ಪ್ರಧಾನವಾಗಿರುವಂತೆ ತೋರುತ್ತದೆ. ಇಲ್ಲಿ ಅವಳು ಸತ್ಯಕ್ಕಾಗಿ, ನ್ಯಾಯಕ್ಕಾಗಿ, ಪ್ರೀತಿಗಾಗಿ ಎದ್ದು ನಿಲ್ಲುತ್ತಾಳೆ. ಅತ್ಯಾಚಾರಕ್ಕೆ ಒಳಗಾಗಿ ಹಿಂಸೆಯನ್ನು ಅನುಭವಿಸಿ ತನ್ನ ಹೆಸರಿಗೆ ಒದಗಿದ ಕಳಂಕವನ್ನು ಮುಚ್ಚಿಡದೆ, ಇತರ ಸ್ತ್ರೀಯರ ರಕ್ಷಣೆಗಾಗಿ ತನ್ನ ಅತ್ಯಾಚಾರವನ್ನು ಬಹಿರಂಗಗೊಳಿಸುವ ಧೀಮಂತ ಹೆಣ್ಣಾಗಿ ನಿಲ್ಲುತ್ತಾಳೆ. ಗಂಡು ಮತ್ತು ಹೆಣ್ಣು ಉದ್ಯೋಗಿಗಳಿಗೆ ನೀಡುವ ವೇತನದಲ್ಲಿ ಉಂಟಾಗಿರುವ ತರತಮಗಳಿಗಾಗಿ ಹೋರಾಡಲು ನಿಲ್ಲುತ್ತಾಳೆ. ವಿಚ್ಛೇದನ ಪಡೆದ ಹೆಂಗಸಾದರೂ ತನ್ನ ಭಾವಿ ಪತಿಗೆ ಕ್ಯಾನ್ಸರ್ ರೋಗ ತಟ್ಟಿದ್ದಾಗ ಅವನನ್ನು ಬೆಂಬಲಿಸಿ ನಿಂತು ಸಾಂತ್ವನ ನೀಡುವಷ್ಟು ಉದಾರಿಯಾಗಿರುತ್ತಾಳೆ. ಸಾಂಪ್ರದಾಯ ದೃಷ್ಟಿಕೋನಗಳಲ್ಲಿ ಸ್ತ್ರೀ ಪುರುಷನ ಅಧೀನಳು, ಅಬಲೆ, ಗಂಡನ ನೆರಳಲ್ಲಿ ಜೀವಿಸುವವಳು ಎಂತೆಲ್ಲಾ ನಮ್ಮ ಹಿಂದಿನ ಕಥೆ, ಪುರಾಣ, ಕಾದಂಬರಿ ಮತ್ತು ಸಿನಿಮಾಗಳಲ್ಲಿ ಚಿತ್ರಿಸಲಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಸ್ತ್ರೀಗೆ ತನ್ನದೇ ಅಸ್ತಿತ್ವವಿದೆ, ಅವಳು ತನ್ನ ಸಮಾನ ಹಕ್ಕುಗಳಿಗೆ ನಿಲ್ಲಬಲ್ಲಳು ಎಂಬ ವಿಚಾರವನ್ನು ಇಲ್ಲಿಯ ಕಥೆಗಳಲ್ಲಿ ಕಾಣಬಹುದು. ಜೊತೆಗೆ ಸ್ತ್ರೀ ಒಂದು ಶಕ್ತಿ ಅಷ್ಟೇ ಅಲ್ಲ, ಸ್ನೇಹ, ಪ್ರೀತಿ, ಕರುಣೆ, ಸಹನೆ ಮತ್ತು ಅನುಕಂಪೆಯ ಪ್ರತಿಮೆಯಾಗಿಯೂ ನಿಲ್ಲುತ್ತಾಳೆ.

'ವರ್ತುಲ' ಎಂಬ ಕಥೆ ಬೇರೆ ಕಥೆಗಳಿಗಿಂತ ಭಿನ್ನವಾಗಿ ಎದ್ದು ನಿಲ್ಲುತ್ತದೆ. ಬದುಕೆಂಬ ಸ್ಪರ್ಧೆಯಲ್ಲಿ ನಾವು ಯಶಸ್ಸಿನ ಸಾಧನೆಯಲ್ಲಿ ಸಿಕ್ಕಿಕೊಂಡಿ "ಇರುವುದೆಲ್ಲವ ಬಿಟ್ಟು ಇರದುದರ ಕಡೆ ತುಡಿಯುವ" ನಾಗರೀಕತೆ ಎಂಬ ಖಾಯಿಲೆಯಲ್ಲಿ ನರಳುವವವರ ಚಿತ್ರ ಈ ಕಥೆಯಲ್ಲಿದೆ. ಇಲ್ಲಿ ಪರಿಸರ ನಾಶದ ಬಗ್ಗೆ ಕಾಳಜಿ ಇದೆ. ತೀವ್ರ ಗತಿಯಲ್ಲಿ ಬದಲಾಗಿ ನಿಬಿಡವಾಗಿರುವ ನಗರಗಳ ನಡುವೆ ನಿಡುಸುಯ್ಯುವ ಸ್ವರಗಳ ದನಿಯಿದೆ. "ಹೊಸತಿಗೆ -ಹಳತಿಗೂ, ಒಳ್ಳೆಯದಕ್ಕೂ-ಕೆಟ್ಟದಕ್ಕೂ, ವಿವೇಕಕ್ಕೂ-ಅವಿವೆಕ್ಕಕ್ಕೂ, ಭೂತ-ಭವಿಷ್ಯತ್ತಿಗೂ ಇರುವ ಪರದೆ ಅತಿ ತೆಳುವಾದದ್ದು" ಎಂಬ ಮಾತನ್ನು ಲೇಖಕಿ ಇಲ್ಲಿ ಪ್ರಸ್ತಾಪಿಸುತ್ತಾರೆ. ಈ ಮಾತುಗಳು ಎಲ್ಲರನ್ನು ಕಾಡುವ ವಿಚಾರ. ಹಿಂದೊಮ್ಮೆ ಹಳೆಯದೆಂದು ನಾವೇ ತಿರಸ್ಕರಿಸಿದ ಬದುಕಿನ ರೀತಿಗಳು, ದಿನ ನಿತ್ಯ ಬಳಕೆಯ ವಸ್ತುಗಳು, ಮಣ್ಣಿನ ವಾಸನೆ, ನಿಸರ್ಗದ ತಾಜಾತನ ಕಾಲದ ವರ್ತುಲದಲ್ಲಿ ಕಳೆದು ಹೋಗಿ ಮತ್ತೆ ನಮಗೆ ಅದೇ ಹಳೆತಿನ ಬಗ್ಗೆ ಹೊಸ ವ್ಯಾಮೋಹ ಹುಟ್ಟಿಕೊಳ್ಳುವ ಪರಿ ಸೋಜಿಗವಾದದ್ದು. ಈ ವರ್ತುಲದಲ್ಲಿ ಮೊದಲಾವುದು, ಕೊನೆಯಾವುದು ಎಂಬ ಪ್ರಶ್ನೆ ಕಾಡುತ್ತದೆ. ಪ್ರಗತಿಯ ನೆಪದಲ್ಲಿ ಎಲ್ಲವನ್ನೂ ಕಬಳಿಸುವ ನಮ್ಮ ದುರಾಸೆಯನ್ನು ಪ್ರೇಮಲತಾ ಅವರು "ಹಾವೊಂದು ತನ್ನ ಬಾಲದಿಂದ ಶುರು ಮಾಡಿ ತನ್ನನ್ನು ತಾನೇ ಕಬಳಿಸುವ" ದುರಂತ ಪ್ರಯತ್ನದ ರೂಪಕವನ್ನು ಇಲ್ಲಿ ಇಟ್ಟಿದ್ದು ಅದು ಬಹಳ ಅರ್ಥಪೂರ್ಣವಾಗಿದೆ.

ಈ ಕಥಾ ಸಂಕಲನದ ಕಥಾ ನಿರೂಪಣೆ ಕೆಲವೆಡೆ ಸರಳವಾಗಿರಬಹುದಿತ್ತು. ಹಿಂದು-ಮುಂದಿಲ್ಲದೆ ಏಕಾಏಕಿ ಇಬ್ಬರ ನಡುವಿನ ಸಂಭಾಷಣೆಯೊಂದಿಗೆ ಶುರುವಾಗುವ ಕಥೆ ಓದುಗನಲ್ಲಿ ಗೊಂದಲ ಉಂಟುಮಾಡಬಹುದು. ಸಾರ್ವತ್ರಿಕವಾಗಿ ಹೇಳುವುದಾದರೆ ಓದುಗನನ್ನು ಕಥೆಯ ಆವರಣದೊಳಗೆ ಬರಮಾಡಿಕೊಳ್ಳುವ ಬಗ್ಗೆ ಲೇಖಕರು ಎಚ್ಚರಿಕೆ ವಹಿಸಬೇಕು. ಹೀಗಾಗಿ ಕಥೆಯ ಪ್ರವೇಶ ಸರಾಗವಾಗಿದ್ದಾರೆ ಒಳಿತು. ಕಥೆಯ ನಿರೂಪಕರೇ ಕಥೆಗೆ ಒಂದಿಷ್ಟು ಹಿನ್ನೆಲೆಯನ್ನು ಕೊಟ್ಟು ಪಾತ್ರಗಳನ್ನು ಸಾವಧಾನವಾಗಿ ಪರಿಚಯಿಸಿದರೆ ನಂತರ ಸಂಭಾಷಣೆಯನ್ನು ಗ್ರಹಿಸುವುದಕ್ಕೆ ಸರಾಗವಾಗುತ್ತದೆ ಎಂಬುದು ನನ್ನ ಅನಿಸಿಕೆ. ನಾವೆಲ್ಲಾ ಹಿಂದೆ ಓದಿರುವ ಜನಪ್ರಿಯ ಕಥೆ ಕಾದಂಬರಿಯಲ್ಲಿ ಕಥಾ ವಸ್ತುವನ್ನು ಫ್ಲಾಶ್ ಬ್ಯಾಕ್ ಮಾದರಿಯಲ್ಲಿ ಹಿಂದು ಮುಂದೆ ಮಾಡುವ ತಂತ್ರವನ್ನು ನೋಡಿದ್ದೇವೆ. ಇದು ದೃಶ್ಯ ಮಾಧ್ಯಮಗಳಲ್ಲಿ ಗ್ರಹಿಸುವುದು ಸುಲಭ ಆದರೆ ಬರಹದಲ್ಲಿ ಬಳಸಿದಾಗ ಕಥೆಯನ್ನು ಗ್ರಹಿಸುವುದು ಕಷ್ಟದ ಕೆಲಸ. ಈ ತಂತ್ರ ಸಣ್ಣ ಕಥೆಗಳಲ್ಲಿ ಅಷ್ಟು ಪ್ರಯೋಜನಕ್ಕೆ ಬರದಿದ್ದರೂ ಅದನ್ನು ಕಾದಂಬರಿಗಳಲ್ಲಿ ಅಗತ್ಯವಿದ್ದಾಗ ತರಬಹುದು. ಅಂದಹಾಗೆ ಈ ಕೃತಿಯಲ್ಲಿ ಆ ಫ್ಲಾಶ್ ಬ್ಯಾಕ್ ಗಳಿಲ್ಲ.

ಪ್ರೇಮಲತಾ ಬಳೆಸಿರುವ ಭಾಷೆ ಬಹಳ ಉತ್ಕೃಷ್ಟವಾಗಿದೆ. ಅವರಿಗೆ ಕನ್ನಡ ಭಾಷೆಯ ಮೇಲಿರುವ ಹತೋಟಿ ಇಲ್ಲಿ ಎದ್ದು ತೋರುತ್ತದೆ. ಸಂಕೀರ್ಣವಾಗಿರುವ ವೈದ್ಯಕೀಯ ವಿಷಯಗಳನ್ನು ಸರಳಗೊಳಿಸಿ ಕಥೆ ಹೇಳುವ ಸಾಮರ್ಥ್ಯ ಅವರಿಗಿದೆ. ಸಂಬಂಧಗಳು ಎಂಬ ಕೊನೆ ಕಥೆಯಲ್ಲಿ ಮನುಷ್ಯ-ಮನುಷ್ಯ ಸಂಬಂಧಗಳನ್ನು ಕುರಿತಾದ ಕಥಾವಸ್ತು ಇದೆ. ಯಾರು ಯಾರಿಗೆ? ಹೇಗೆ? ಎಲ್ಲಿಯವರೆಗೆ? ಯಾವ ರೀತಿ? ಸಂಬಂಧಿ ಎನ್ನುವ ವಿಚಾರವನ್ನು ಆಳವಾಗಿ ಚಿಂತಿಸಲಾಗಿದೆ. ಸಾವು ಎಂಬ ವಿಷಯವನ್ನು ಅಂತ್ಯಂತ ಸೂಕ್ಷ್ಮವಾಗಿ ನಿಭಾಯಿಸಲಾಗಿದೆ. ಕ್ಯಾನ್ಸರ್ ಪೀಡಿತ ಕಥಾನಾಯಕ ಸಾವನ್ನು ಬರಮಾಡಿಕೊಳ್ಳುವ ಸನ್ನಿವೇಶವನ್ನು ನವುರಾದ ರೂಪಕದೊಂದಿಗೆ ಬಿತ್ತರಿಸಲಾಗಿದ್ದು ಈ ಹಂತದಲ್ಲಿ ಕಥೆ ಮತ್ತು ಕಥಾ ಸಂಕಲನ ಕೊನೆಗೊಳ್ಳುತ್ತದೆ. ಈ ರೀತಿಯ ಉಪಮೆಗಳ ಬಳಕೆ ಇಲ್ಲಿಯ ಕಥೆಗಳಿಗೆ ವಿಶೇಷ ಆಯಾಮಗಳನ್ನು ದೊರಕಿಸಿಕೊಟ್ಟಿದೆ.

ಕಥೆ, ಕಾದಂಬರಿಯನ್ನು ಓದುತ್ತಿರುವಾಗ ಕಥೆಯ ಓಘ, ದಿಕ್ಕು, ಬೆಳವಣಿಗೆ, ಕುತೂಹಲ ಇವುಗಳಲ್ಲಿ ಮಗ್ನರಾಗಿ ಮುಳುಗಿ ಮೇಲೇಳುತ್ತೇವೆ. ಓದು ಮುಗಿದ ನಂತರ ಕೆಲವು ಕಥೆಗಳು ಸರಳ ಕಥೆಗಳಾಗಿ ನೆನಪಿನಿಂದ ಉದುರುತ್ತವೆ. ಇನ್ನು ಕೆಲವು ಕಥೆಗಳು ಹಿನ್ನೋಟದಲ್ಲಿ ಹಲವಾರು ಚಿಂತನೆಗಳಿಗೆ ಅನುವುಮಾಡಿಕೊಡುತ್ತವೆ, ಹೊಸ ಹೊಳಹುಗಳನ್ನು ನೀಡುತ್ತವೆ ಮತ್ತು ನಮ್ಮ ಸ್ಮೃತಿಯಲ್ಲಿ ಧೀರ್ಘ ಕಾಲ ಉಳಿಯುತ್ತವೆ, ಅದರಲ್ಲಿ ಪ್ರೇಮಲತಾ ಅವರ ಈ ಕೃತಿಯೂ ಸೇರಿದೆ.