ಇಂಗ್ಲೆಂಡಿನ ಪುರಾತನ ಪಬ್-ಗಳು  – ಬೇಸಿಗ್-ಸ್ಟೋಕ್ ರಾಮಮೂರ್ತಿ

ಇಂಗ್ಲೆಂಡಿನ ಪಬ್-ಗಳು ಪ್ರಪoಚದಾದ್ಯಂತ ಪ್ರಸಿದ್ದ. ಪಬ್-ಗಳು ಕೇವಲ ಬಿಯರ್ ಅಥವಾ ವೈನ್ ಕುಡಿಯುವ ಸ್ಥಳಗಳಲ್ಲ, ಇವು ಸಮುದಾಯವು ಸಾಮಾಜಿಕವಾಗಿ ಭೇಟಿಯಾಗುವ ಸ್ಥಳಗಳು. ಉದಾಹರಣೆಗೆ, ಅನೇಕ ಧರ್ಮಾರ್ಥಿಕ (Charity ) ಸಂಸ್ಥೆಗಳು ಇಲ್ಲಿ ಹಣ ಸಂಗ್ರಹಿಸುವದಾಗಲಿ, Quiz Team ಆಗಲಿ ಪಬ್-ಗಳಲ್ಲಿ ಸೇರುತ್ತಾರೆ. ಈ ಪಬ್-ಗಳ ಇತಿಹಾಸವನ್ನು ನೋಡೋಣ. ಇಂಗ್ಲೆಂಡಿನಲ್ಲಿ ಪಬ್-ಗಳಿಗೆ ಸುಮಾರು ಎರಡು ಸಾವಿರ ವರ್ಷಗಳ ಆಕರ್ಷಕ ಮತ್ತು ಆಸಕ್ತಿದಾಯಕವಾದ ಇತಿಹಾಸವಿದೆ.

ಇದರ ಮೂಲ ರೋಮನ್ ಕಾಲದಿಂದ ಬಂದಿದ್ದು. ರೋಮನ್ನರು ಬಂದು ಇಂಗ್ಲೆಂಡ್ ದೇಶವನ್ನು ಆಕ್ರಮಿಸಿಕೊಂಡಾಗ ಅವರು ತಯಾರಿಸುತ್ತಿದ್ದ ವೈನ್ (wine ), ಅವರ ಜನಕ್ಕೆ ಮತ್ತು ಸೈನ್ಯದವರಿಗೆ  ಮಾರಾಟಕ್ಕಿತ್ತು. ಇಂದಿನ ಪಬ್ (Public  House), ಆಗ ಅವರ ಭಾಷೆಯಲ್ಲಿ ಟೆಬರ್ನೆ (Tebernae), ಇದು ಕಡೆಯಲ್ಲಿ ಟ್ಯಾವರ್ನ್ಸ್ (Taverns) ಆಯಿತು. ಇವು ಪ್ರಯಾಣಿಕರ ಅನುಕೂಲಕ್ಕೆ ಪ್ರಾರಂಭಿಸಿದ ವ್ಯಾಪಾರ ಸಂಸ್ಥೆಗಳು.  ಸ್ಥಳೀಯ ಜನರಿಗೆ  ವೈನ್  ಮಾಡುವ ವಿಧಾನ ಅಥವಾ ದ್ರಾಕ್ಷಿ ಬೆಳೆಯುವ ತಿಳುವಳಿಕೆ ಇರಲಿಲ್ಲ. ಇಲ್ಲಿ ಏಲ್ (Ale), ಬಾರ್ಲಿ ಇಂದ ಭಟ್ಟಿ ಇಳಿಸಿ ತಯಾರಿಸಿದ ಮಾದಕದ ಅರಿವಿತ್ತು. ಇವುಗಳನ್ನು ನಡೆಸಿಕೊಂಡು ಬಂದಿದ್ದವರು ಮಹಿಳೆಯರು, ಮನೆಯಲ್ಲಿ ಭಟ್ಟಿ ಇಳಿಸಿ ಮದ್ಯದ  ಮಾರಾಟ ಮಾಡುತಿದ್ದರು. ಇವು ಹಳ್ಳಿಗಳಲ್ಲಿ ಅನೌಪಚಾರಿಕ ಮತ್ತು ಸಮುದಾಯ ಆಧಾರಿತವಾಗಿದ್ದರಿಂದ  ಜನಗಳ ಹೊಂದಾಣಿಕೆ ಮತ್ತು ಪರಸ್ಪರ ಪರಿಚಯಕ್ಕೆ ಅನುಕೂಲವಾಗುತ್ತಿತ್ತು. ಕ್ರಮೇಣ ಈ ಟೆಬರ್ನೆಗಳಲ್ಲಿ ವೈನ್ ಮಾರಾಟ ಕಡಿಮೆ ಆಗಿ, ಸ್ಥಳೀಯ ಏಲ್ ಹೆಚ್ಚಾಗಿ ಮಾರಾಟವಾಗುತಿತ್ತು. ಈ ಮದ್ಯದ ಅಂಗಡಿಗಳೂ ಮಿತಿ ಇಲ್ಲದೆ ಬೆಳೆಯುತ್ತಿದ್ದವು. ಈ ಕಾರಣಗಳಿಂದ, ಹತ್ತನೇ ಶತಮಾನದಲ್ಲಿ ಆಳಿದ ಎಡ್ಗರ್ ದೊರೆ ಇವುಗಳ ಸಂಖ್ಯೆಯನ್ನು ಮಿತಿಗೊಳಿಸಿದ. ಇವನ ಕಾಲದಲ್ಲೇ ಪೆಗ್ (Peg) ಅನ್ನುವ ಪದ ಮದ್ಯದ ಅಳತೆಗೆ ಜಾರಿಗೆ ಬಂದಿದ್ದು. ಮದ್ಯದ ಮಾರಾಟಕ್ಕೆ ಸಹ ಅನುಮತಿಬೇಕಾಗಿತ್ತು.  ಆದ್ದರಿಂದ ಮನೆಯಲ್ಲಿ ತಯಾರಿಸಿದ ಮದ್ಯದ ಮಾರಾಟಕ್ಕೆ ಅನುಮತಿ ಸಿಗುತ್ತಿರಲಿಲ್ಲ. 
 
ಟ್ಯಾವರ್ನ್-ಗಳು ಹೆಚ್ಚಾಗಿ ಮುಖ್ಯರಸ್ತೆ ಮತ್ತು ಹೆದ್ದಾರಿಗಳಲ್ಲಿ ಇದ್ದು ಪ್ರಯಾಣಿಕರಿಗೆ ಪಾನೀಯ ಮತ್ತು ಆಹಾರ ಸಿಗುತ್ತಿತ್ತು. ನಂತರ ಊರಿಂದ ಊರಿಗೆ ಕುದರೆಗಾಡಿಗಳ ಸಂಚಾರ ಶುರುವಾದಾಗ, ರಾತ್ರಿ ತಂಗುವುದಕ್ಕೆ ಇನ್ (Inn), ಅಂದರೆ ತಂಗುವ ಜಾಗ ಸಹ ಪ್ರಾರಂಭವಾಯಿತು. ಇಲ್ಲಿ ಕುದರೆಗಳ ವಿಶ್ರಾಂತಿಗೆ ಮತ್ತು ಆಹಾರಕ್ಕೆ ಸಾಕಷ್ಟು ವ್ಯೆವಸ್ಥೆಗಳಿದ್ದವು. 

ಲಂಡನ್-ನಿಂದ ವಿಂಚೆಸ್ಟರ್-ಗೆ (Winchester) ಹೋಗುವ ಎ೩೦ ಎನ್ನುವ ರಸ್ತೆ ಸುಮಾರು ೬೦ ಮೈಲಿ ಉದ್ದ. ಇಲ್ಲಿ ಈಗಲೂ ಈ ದಾರಿಯಲ್ಲಿ ಅನೇಕ ಪುರಾತನ ಪಬ್ ಅಥವಾ ಇನ್-ಗಳನ್ನೂ ನೋಡಬಹುದು. ಹಳೆಯ ಪಬ್-ಗಳಲ್ಲಿ ಸಲೂನ್ ಬಾರ್ (Saloon Bar) ಮತ್ತು ಪಬ್ಲಿಕ್ ಬಾರ್ (Public Bar) ಎನ್ನುವ ಫಲಕಗಳು (sign board) ಇರುತ್ತವೆ. ಇದರ ಹಿನ್ನಲೆ, ಈ ದೇಶದಲ್ಲಿದ್ದ ವರ್ಗವ್ಯತ್ಯಾಸ (Class distinction). ಕುದುರೆಗಾಡಿ ಪ್ರಯಾಣದಲ್ಲಿ ಎರಡು ತರ ಪ್ರಯಾಣಿಕರು, ಗಾಡಿ ಒಳಗೆ ಕೂರುವರು ಮತ್ತು ಗಾಡಿ ಹೊರಗೆ (ಬಹಳ ಕಡಿಮೆ ದರ ಕೊಟ್ಟು) ಕೂರುವರು. ಒಳಗಿದ್ದವರು ಶ್ರೀಮಂತರು, ಇವರಿಗೆ ಮರ್ಯಾದೆಯಿಂದ ಸಲೂನ್ ಬಾರ್-ನಲ್ಲಿ ಉಪಚಾರ. ಹೊರಗೆ ಕೂತವರಿಗೆ ಕೊಟ್ಟಿಗೆ ಹತ್ತಿರ ಜಾಗ, ಇಲ್ಲಿಇವರು ಪಬ್ಲಿಕ್ ಬಾರ್-ನಲ್ಲಿ ಕುಡಿಯುವುದು ಮತ್ತು ಊಟ ಮಾಡುವುದು. 

ಸುಮಾರು ಹದಿನಾರನೇ ಶತಮಾನದಲ್ಲಿ, ಟ್ಯಾವರ್ನ್ಸ್ ಮತ್ತು ಇನ್-ಗಳು ಒಂದಾಗಿ ಪಬ್ಲಿಕ್ ಹೌಸ್ (Public House) ಅಥವಾ ಪಬ್ (Pub) ಗಳಾದವು. ೧೫೫೨ರಲ್ಲಿ  ಬಂದ ಕಾಯಿದೆಯಿಂದ ಇದನ್ನು ನಡೆಸುವುದಕ್ಕೆ ಲೈಸನ್ಸ್ (License) ಬೇಕಾಗಿತ್ತು. ೧೬೦೦ ನಂತರ ಈ ದೇಶದಲ್ಲಿ ಹೊರದೇಶದಿಂದ ತರಿಸಿದ ಕಾಫಿ ಮತ್ತು ಟೀ ಕುಡಿಯುವುದು ಪ್ರಾರಂಭವಾಯಿತು. ಆದರೆ ಕೆಲವು ಪಬ್-ಗಳಲ್ಲಿ ಮಾತ್ರ ಇದು ಮಾರಾಟಕ್ಕಿತ್ತು; ಕಾರಣ, ಅತಿ ಹೆಚ್ಚಿನ ಬೆಲೆ. 

ಹದಿನೆಂಟನೇ ಶತಮಾನದ ಪ್ರಾರಂಭದಲ್ಲಿ ಫ್ರಾನ್ಸ್ ದೇಶದಿಂದ ಬ್ರಾಂಡಿ (Brandy) ಮತ್ತು ಹಾಲೆಂಡ್-ನಿಂದ ಜಿನ್ (Gin) ಮಾದಕಗಳು ಬಂದು ಈ ದೇಶದಲ್ಲಿ ಅನೇಕ ಸಾಮಾಜಿಕ ಸಮಸ್ಯೆಗಳು ಉಂಟಾದವು. ಇದನ್ನು ಪ್ರಸಿದ್ಧ ಚಿತ್ರಗಾರ ಹೊಗಾರ್ತ್ (Hogarth) ಜಿನ್ ಲೇನ್ (Gin lane) ಅನ್ನುವುದರಲ್ಲಿ ಚಿತ್ರೀಕರಣ ಮಾಡಿದ್ದಾನೆ.  ಅನೇಕ ಬಡ ಮತ್ತು ಶ್ರೀಮಂತರ ಜೀವನ ಈ ಕುಡಿತದಲ್ಲಿ ಹಾಳಾಗಿತ್ತು. ನಂತರ ಬಂದ ಜಿನ್ ಆಕ್ಟ್ (Gin Act) ಕಾಯಿದೆಯಿಂದ  (೧೭೩೬ ಮತ್ತು ೧೭೫೧ ) ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಿತು. 

ಹೆದ್ದಾರಿಯಲ್ಲಿ ಇರುವ ಇನ್-ಗಳು ಸುಮಾರು ೧೮೪೦-೫೦ರವರೆಗೆ ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಈ ಸಮಯದಲ್ಲಿ ರೈಲ್ವೇ  ಸಂಪರ್ಕ ಉಂಟಾದ ಮೇಲೆ ಕುದುರೆಗಾಡಿಯಲ್ಲಿ ಸಂಚರಿಸುವುದು ಕ್ರಮೇಣ ಕಡಿಮೆಯಾಗಿ ಇವುಗಳ ವ್ಯಾಪಾರ ಕುಗ್ಗಿತು. 

ಪ್ರತಿಯೊಂದು ಪಬ್-ಗೆ ಒಂದು ಹೆಸರು ಇರತ್ತದೆ. ಹದಿನಾಲ್ಕನೇ ಶತಮಾದಲ್ಲಿ ಆಳಿದ ಎರಡೆನೆಯ ರಿಚರ್ಡ್ ಹೊರಡಿಸಿದ  ಆಜ್ಞೆಯಲ್ಲಿ ಪ್ರತಿಯೊಂದು ಇನ್-ಗೂ ಹೆಸರು ಇಡಬೇಕಾಗಿತ್ತು ಮತ್ತು ಈ ಹೆಸರು ಕಾಣಿಸುವಂತಲೂ ಇರಬೇಕಾಗಿತ್ತು. ಬಹುಷಃ, ರೆಡ್ ಲಯನ್ (Red Lion) ಹೆಸರಿನ ಪಬ್ ತುಂಬಾ ಸಾಮಾನ್ಯ. ಆದರೆ ವಿಚಿತ್ರ ಹೆಸರಿನ ಪಬ್-ಗಳನ್ನೂ ನೋಡಬಹುದು. ಉದಾಹರಣೆಗೆ, ದ ಬಕೆಟ್ ಆಫ್ ಬ್ಲಡ್ (The Bucket of Blood) ಅಥವಾ ದ ಕ್ಯಾಮಲ್ ಆಂಡ್ ದ ಆರ್ಟಿಚೋಕ್ ( The camel and The Artichoke). ಇವು ಅರ್ಥಹೀನವಾದ ಹೆಸರುಗಳು ಅನ್ನಿಸಿದರೂ, ನೂರಾರು ವರ್ಷದಗಳಿಂದ ಈ ಹೆಸರುಗಳು ಉಳಿದಿವೆ. 

ಪುರಾತನ ಪಬ್-ಗಳ ಬಗ್ಗೆ ಎರಡು ಮಾತು, ಇದರ ಬಗ್ಗೆ ಬಹಳ ಚರ್ಚೆ ನಡೆದಿದೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ (Guinness Book of Records) ಪ್ರಕಾರ, ಇದು ಕ್ರಿ.ಶ ೯೪೭ ನ ಸ್ಟವ್-ಆನ್-ವೋಲ್ಡ್ (Stow -on -Wold)ನ ದ ಪಾರ್ಚ್ ಹೌಸ್ (The Porch House). ಎರಡನೆಯದು ಕ್ರಿ.ಶ ೧೧೮೯ರ ನಾಟಿಂಗ್-ಹ್ಯಾಮ್-ನಲ್ಲಿರುವ ಯೆ ಓಲ್ಡ್ ಟ್ರಿಪ್ ಟು ಜೆರುಸಲೆಮ್ (Ye Olde Trip To Jerusalem). ಪವಿತ್ರಸ್ಥಳವಾದ ಜೆರೂಸಲಂಗೆ ಹೋಗುವ ಪ್ರಯಾಣಿಕರು ಇಲ್ಲಿ ಕೆಲವು ರಾತ್ರಿ ತಂಗುತ್ತಿದ್ದರಂತೆ.  ಇದೆ ರೀತಿ  ನೂರಾರು ವರ್ಷದಿಂದ  ನಡೆದುಕೊಂಡು ಬಂದ  ಪಬ್-ಗಳು  ಅನೇಕ.

ಲಂಡನ್-ನಲ್ಲಿ ಹಲವಾರು ಪುರಾತನ ಪಬ್-ಗಳಿವೆ.  ಈಗ ಮೇ-ಫೇರ್ (Mayfair) ಲಂಡನ್ನಲ್ಲಿ ಅತಿ ಹೆಚ್ಚಿನ ದುಬಾರಿ ಪ್ರದೇಶ. ಆದರೆ ೧೪೨೩ರಲ್ಲಿ ಇಲ್ಲಿ ವಾಸವಾಗಿದ್ದವರು ಕಾರ್ಮಿಕ ವರ್ಗದವರು ಮಾತ್ರ. ಇವರು ಸೇರುತ್ತಿದ್ದು ದ ಗಿನಿ (The Guinea) ಅನ್ನುವ ಏಲ್ ಹೌಸ್-ನಲ್ಲಿ. 

ಕ್ರಿ.ಶ ೧೫೮೫ರ ದ ಸ್ಪೀನಿಯಾರ್ಡ್ಸ್ ಇನ್ (The Spaniards Inn) ಕತೆ ಆಸಕ್ತಿದಾಯಕದದ್ದು. ದಂತಕಥೆಯ ಪ್ರಕಾರ, ಒಮ್ಮೆ ಇದರ ಮಾಲೀಕ 
ಪ್ರಸಿದ್ಧ ದರೋಡೆಕಾರ ಡಿಕ್ ಟರ್ಪಿನ್ (Dick Turpin) ನ ತಂದೆ.  ಕವಿ ಜಾನ್ ಕೀಟ್ಸ್ ಇಲ್ಲಿ ಕೆಲವು ಕವಿತೆಗಳನ್ನು ಬರೆದನಂತೆ. ಚಾರ್ಲ್ಸ್ ಡಿಕ್ಕಿನ್ಸ್ (Charles Dickens) ಬರೆದ ದ ಪಿಕ್-ವಿಕ್ ಪೇಪರ್ಸ್ (The  Pickwick Papers) ನಲ್ಲಿ ಈ ಪಬ್-ನ ವಿಚಾರವಿದೆ. 
   
೧೬೬೬ರಲ್ಲಿ ಲಂಡನ್-ನಲ್ಲಿ ಅತಿ ದೊಡ್ಡ ಬೆಂಕಿ ಅನಾಹುತವಾಯಿತು,  ಪುಡ್ಡಿಂಗ್ ಲೇನ್ (Pudding Lane) ನಲ್ಲಿದ್ದ ಬೇಕರಿಯಲ್ಲಿ ಶುರುವಾಗಿದ್ದ ಬೆಂಕಿಯಿಂದ  ಸಾವಿರಾರು ಮನೆಗಳು ನಾಶವಾಗಿದ್ದವು. ನಂತರ ಈ ಪ್ರದೇಶದ ಪುನನಿರ್ಮಾಣ  ಪ್ರಾರಂಭ ವಾಯಿತು, ಈಗಿನ ಫ್ಲೀಟ್ ಸ್ಟ್ರೀಟ್ (Fleet Street) ನಲ್ಲಿರುವ ದ ಓಲ್ಡ್ ಬೆಲ್ (The Old  Bell) ೧೬೭೦ರಲ್ಲಿ ಪ್ರಸಿದ್ಧ ಆರ್ಕಿಟೆಕ್ಟ್  ಸರ್ ಕ್ರಿಸ್ಟೋಫರ್ ರೆನ್ (Christopher Wren) ರಚಿಸಿದ್ದ ಕಟ್ಟಡ. ಇದು ನಿರ್ಮಾಣದ ಕೆಲಸಗಾರರಿಗೆ ಕಟ್ಟಿದ ಏಲ್ ಹೌಸ್. ಕೆಲವು ವರ್ಷದ ಹಿಂದೆ ಫ್ಲೀಟ್ ಸ್ಟ್ರೀಟ್-ನಲ್ಲಿ ದಿನಪತ್ರಿಕೆಗಳನ್ನು ಇಲ್ಲಿಯೇ ಮುದ್ರಿಸುತ್ತಿದ್ದರು. ಈಗ ಇದು ಹಣಕಾಸಿನ ಕೇಂದ್ರವಾಗಿದೆ. 

ಮೇಲೆ ಉಲ್ಲೇಖಿಸಿದ ಸಂಗತಿಗಳಿಗೆ ಆಧಾರಗಳಿವೆ, ಆದರೆ ಕೆಲವು ಪಬ್-ನ ಕಥೆಗಳು ಬಿಯರ್ ಮಾರುವುದಕ್ಕೆ ಅನುಕೂಲವಾಗಲಿ ಎಂದು ಮಾಡಿದ ಸಂಶಯ ಬರುತ್ತದೆ. ಒಂದು ಉದಾಹರಣೆ ಕೊಡಬಲ್ಲೆ. ನನಗೆ ಹತ್ತಿರದಲ್ಲಿರುವ ಎ೩೪ ರಸ್ತೆಯಲ್ಲಿ ದ ಬ್ಲೀಡಿಂಗ್ ವೂಲ್ಫ್ (The Bleeding Wolf) ಎನ್ನುವ ಪಬ್ ಇದೆ. ಇಲ್ಲಿ ಈ ಪಬ್-ನ ಚರಿತ್ರೆ(?)ಯನ್ನು ಬರೆದಿದ್ದಾರೆ.

ಅದು ಹೀಗಿದೆ: ಬಹಳ ಹಿಂದೆ, ಕಿಂಗ್ ಜಾನ್, ಬೇಟೆಗಾಗಿ ತನ್ನ ಜೊತೆಗಾರರೊಂದಿಗೆ ಬಂದಾಗ, ದಾರಿ ತಪ್ಪಿ ಒಬ್ಬನೇ ದಟ್ಟ ಕಾಡಿಗೆ ಬಂದ, ಒಂದು ತೋಳ ಇವನ ಕುದುರೆಯ ಮೇಲೆ ಹಾರಿದಾಗ ಇವನು ಕೆಳಗೆ ಬಿದ್ದ. ಆದರೆ ಹತ್ತಿರದಲ್ಲೇ ಇದ್ದ ಒಬ್ಬ ಬೇಟೆಗಾರ ಇದನ್ನು ನೋಡಿ ತನ್ನ ಚಾಕುವನ್ನು ತೋಳದ ಕಡೆ ಎಸದಾಗ ತೋಳಕ್ಕೆ ಗಾಯವಾಗಿ ಓಡಿ ಹೋಯಿತು. ಬೇಟೆಗಾರ ಹತ್ತಿರ ಬಂದು ನೋಡಿದಾಗ ಇನ್ನಾರು ಅಲ್ಲ,ಸಾಕ್ಷಾತ್  ಕಿಂಗ್ ಜಾನ್. ಅಯ್ಯಾ, ನನ್ನ ಪ್ರಾಣ ಉಳಿಸಿದ್ದಿಯ, ನಿನಗೆ ಏನು ಬೇಕು ಕೇಳು, ಅಂದ ಕಿಂಗ್. ಇದೇ  ಸಮಯ ಅಂತ ಬೇಟೆಗಾರ, ನನಗೆ ಸಾಕಷ್ಟು  ಜಾಮೀನು ದಯಪಾಲಿಸಿ, ಅಂತ ಬೇಡಿದ. ಕಿಂಗ್ ಜಾನ್, ಸರಿ ಆಗಲಿ, ನಿನಗೆ ಇಲ್ಲಿಯ ಜಾಮೀನು ಇನಾಮು ಕೊಡುತ್ತೇನೆ, ಅಂದ.  ಈ  ಪಬ್ ಇರುವ ಜಾಗದಲ್ಲೇ ಈ ಘಟನೆ ನಡೆದದ್ದು!  ಇದನ್ನು ನಂಬುತ್ತಿರೋ ಇಲ್ಲವೋ ನಿಮಗೆ ಬಿಟ್ಟಿದ್ದು. ಕಿಂಗ್ ಜಾನ್ ಇಷ್ಟು ದೂರ ಬೇಟೆಗೆ ಏಕೆ ಬಂದ ಅಂತ ಕೇಳಬೇಡಿ.  ಈ ರೀತಿಯ ಕಥೆಗಳು ಅನೇಕ, ಕೆಲವು ನಿಜವಿರಬಹುದು, ಆದರೆ ಹೆಚ್ಚಾಗಿ ಕಾಲ್ಪನಿಕ.

ಇಲ್ಲಿಯ ಪಬ್-ಗಳ ಅನನ್ಯತೆ ಪ್ರಪಂಚದಲ್ಲಿ ಇನ್ನೆಲ್ಲೂ ಇಲ್ಲ.  ಪುರಾತನ ಪಬ್-ಗಳು ಈಗಲೂ ಆ ವಾತಾವರಣವನ್ನು ಕಾಪಾಡಿಕೊಂಡು ಬಂದಿದೆ. ನನ್ನ ವೈಯಕ್ತಿಕ ಇಷ್ಟವಾದ ಪಬ್, ಬೆಸಿಂಗ್-ಸ್ಟೋಕ್-ನ ಹತ್ತಿರ ಇರುವ ಡಮ್ಮರ್ (Dummer) ಅನ್ನುವ ಸಣ್ಣ ಹಳ್ಳಿಯಲ್ಲಿ ಇರುವ ಕ್ವೀನ್ ಇನ್ (Queen inn),
೪೦೦ ವರ್ಷಗಳ ಹಳೆಯ ಪಬ್.  ಶತಮಾನಗಳಿಂದ  ಏನು ಬದಲಾಯಿಸಿಲ್ಲವೇನೋ ಅನ್ನುವ ಭಾವನೆ ಬರುತ್ತದೆ.  

ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಪಬ್-ಗಳ ಭವಿಷ್ಯ ಶೋಚಿನೀಯವಾಗಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ, ಸಮೀಕ್ಷೆಯ ಪ್ರಕಾರ ಪಬ್-ಗಳ ಸಂಖ್ಯೆ ಕಾಲು ಭಾಗ ಕಡಿಮೆ ಆಗಿದೆ . ಅನೇಕ ಕಾರಣಗಳನ್ನು ಇಲ್ಲಿ ಕೊಡಬಹುದು. ಪ್ರತಿವರ್ಷ, ಬಜೆಟ್-ನಲ್ಲಿ ಮದ್ಯಗಳಮೇಲೆ ತೆರಿಗೆ ಹೆಚ್ಚಾಗುವುದು, ಸೂಪರ್ ಮಾರ್ಕೆಟ್ಟಿನಲ್ಲಿ ಸಿಗುವ ಅಗ್ಗವಾದ ಪಾನೀಯಗಳು, ಆದರೆ ಒಂದು ಮುಖ್ಯವಾದ ಕಾರಣ, ತರುಣ ಜನಾಂಗದವರು, ಅಂದರೆ ೧೮-೩೦ ವರ್ಷದವರು, ಮದ್ಯ ಕುಡಿಯುವುದನ್ನು ಕಡಿಮೆ ಮಾಡಿರುವುದು ಅಥವಾ ತ್ಯಜಿಸಿರುವ ಸಂಖ್ಯೆ  ಹೆಚ್ಚಾಗಿರುವದಕ್ಕೆ ಪುರಾವೆ ಇದೆ. ಕಳೆದ ಕೋವಿಡ್ ಸಾಂಕ್ರಾಮಿಕ ನಂತರ ಜನರು ಅತ್ಯಂತ ಜಾಗರೂಕರಾಗಿದ್ದಾರೆ. ಇದು ಇಂಗ್ಲೆಂಡ್ ದೇಶದಲ್ಲಿ ಇರುವ ಪರಿಸ್ಥಿತಿ. 

ಪತ್ರಿಕೆಯ ವರದಿ ಪ್ರಕಾರ, ಭಾರತದಲ್ಲಿ ಮದ್ಯಪಾನದಿಂದ ಸತ್ತವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಗ್ರಾಮಗಳಲ್ಲಿ ಅಕ್ರಮವಾಗಿ ತಯಾರಿಸಿದ ಮದ್ಯಗಳಿಂದಲೂ ಈ ಸಾವು ಹೆಚ್ಚಾಗಿದೆ. ಸಾಲದ್ದಕ್ಕೆ ಕುಡಿದು ಓಡಿಸು (Drink Drive) ವುದರಿಂದ ಉಂಟಾಗುವ ಸಾವು ಸ್ವೀಕಾರಾರ್ಹವಲ್ಲ.

ಕನ್ನಡ ನಾಡು, ಭಾಷೆ, ಉತ್ಸವ, ಮತ್ತು ಹೊಸವರ್ಷ …..

ಅನಿವಾಸಿಯ ಬಳಗಕ್ಕೆ ನಮಸ್ಕಾರ. 2025ರ ಹೊಸವರ್ಷದಲ್ಲಿಯ ನನ್ನ ಮೊದಲ ಸಂಚಿಕೆಗೆ ನಿಮ್ಮೆಲ್ಲರ ಸ್ವಾಗತ.  ಅನಿವಾಸಿ ಬಳಗದ ಉತ್ಸಾಹ ಹೆಚ್ಚುತ್ತಿರುವುದಕ್ಕೆ ಇತ್ತೀಚೆಗೆ ನಡೆದ ದಶಮಾನೋತ್ಸವ, ಹೊಸ ಸದಸ್ಯರುಗಳ ಆಗಮನ, ಬರವಣಿಗೆ ಇತ್ತ್ಯಾದಿಗಳೇ ಸಾಕ್ಷಿ.  ಇದರ ಜೊತೆಯಲ್ಲೇ, ಕೆಲವೇ ವಾರಗಳ ಹಿಂದೆ (ಕಳೆದ ವರ್ಷ ಅನ್ನಬಹುದಿತ್ತೇನೋ, ಆದರೆ ಎಷ್ಟೋ ದಿನ ಆದಂತೆ ಅನ್ನಿಸುವುದರಿಂದ ಬೇಡ ಅಂದುಕೊಂಡೆ) ಸಕ್ಕರೆಯ ನಾಡು, ಮಂಡ್ಯದಲ್ಲಿ ಹಿರಿಯ ಸಾಹಿತಿ ಶ್ರೀ ಗೋ ರು ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ನಡೆದ 87ನೆಯ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲೆಂದೇ ನಮ್ಮ ಅನಿವಾಸಿ ಬಳಗದ ಪ್ರತಿನಿಧಿಯಾಗಿ ತೆರಳಿದ್ದರು ನಮ್ಮ ನವೀನ್.  ಅವರು ಬರೆದ ವರದಿ ಇಲ್ಲಿ ಕೆಳಗಿದೆ.  ಅವರೇ ತೆಗೆದ ಹಲವು ಚಿತ್ರಗಳೂ ಜೊತೆಯಲ್ಲಿವೆ - ಅದರಲ್ಲಿ ಪರಿಚಿತ ಮುಖಗಳಿವೆ, ನೋಡಿ.

ಜೊತೆಯಲ್ಲಿ ನಮ್ಮ ಗೋಪಾಲಕೃಷ್ಣ ಹೆಗಡೆಯವರ ಒಂದು ಕವನವಿದೆ, ಹೊಸವರ್ಷದ ಆಶಯಗಳೊಂದಿಗೆ. ಅವರದ್ದೇ ಮಾತಿನಲ್ಲಿ ಕವನದ ಹುಟ್ಟಿನ ಪರಿಚಯವೂ ಇದೆ.

ಕೊನೆಯ ಕೊಸರಿನಂತೆ, ಹೆಗ್ಡೆಯವರದೊಂದು ಚಿತ್ರಕ್ಕೆ ನನ್ನದೊಂದು ಕಿರು ಕವನವನ್ನೂ ಹಾಕಿಬಿಟ್ಟಿದ್ದೇನೆ, ತಡೆಯಲಾರದೆ. ಕ್ಷಮೆಯಿರಲಿ.

ಎಂದಿನಂತೆ ಓದಿ, ತಮ್ಮೆಲ್ಲರ ಮನೋಭಿಪ್ರಾಯವನ್ನು ತಿಳಿಸುವುದನ್ನು ಮುಂದುವರೆಸಿ. ಹೊಸವರ್ಷದ ಶುಭಾಶಯಗಳು.
- ಲಕ್ಷ್ಮೀನಾರಾಯಣ ಗುಡೂರ
*******************************************
೮೭ ನೇ ಕನ್ನಡ ಸಾಹಿತ್ಯ ಸಮ್ಮೇಳನ ೨೦೨೪, ಮಂಡ್ಯ

ಇತ್ತೀಚಿಗಷ್ಟೆ ೮೭ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಿತು. ಅದಕ್ಕಂತಲೇ ನಾನು ಭಾರತಕ್ಕೆ ಹೋಗಿದ್ದೆ. ಬಹಳ ವರ್ಷಗಳಿಂದಲೂ ಸಮ್ಮೇಳನದಲ್ಲಿ ಭಾಗಿಯಾಗುವ ತವಕವಿತ್ತು. ಆದರೆ ಆ ಸುಸಂದರ್ಭ ಈಗ ದೊರಕಿತು. ಬಹಳ ನಿರೀಕ್ಷಣೆಯಿಂದ ಸಿದ್ಧತೆ ಮಾಡಿಕೊಂಡಿದ್ದೆ. ಸಾಹಿತ್ಯ ಸಮಾರೋಪದಲ್ಲಿ ಸಾಕಷ್ಟು ಸಾಹಿತ್ಯದಬಗ್ಗೆ, ಕನ್ನಡ ಭಾಷೆ ಬಗ್ಗೆ ಕೇಳಿಬರುತ್ತದೆ, ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವಸಾಹಿತಿ, ಕವಿ, ಬರಹಗಾರರ ನಡುವೆ ನಡೆದಾಡಿ, ಅವರನ್ನು ಆಲಿಸಿ ಅವರಿಂದ ಪ್ರೇರಣೆ ಪಡೆಯುವುದಲ್ಲದೆ, ಕನ್ನಡ ಭಾಷಾಕ್ಷೇತ್ರದಲ್ಲಿ ಎಂಥಹ ಬೆಳವಣಿಗೆ ರೂಪಗೊಂಡಿದೆ ಎಂದು ಕಾಣುವ ಹಂಬಲ ಬೆಳಸಿಕೊಂಡಿದ್ದೆ. ಇದಕ್ಕನುಗುಣವಾಗಿ ಲೀಡ್ಸ್ನಲ್ಲಿ ಮಾಡುತಿದ್ದ ಕೆಲಸವನ್ನು ಮೊಟಕುಗೊಳಿಸಿ ಹತ್ತಿದೆ, ಯುನೈಟೆಡ್ ಕಿಂಗ್ಡಮ್ನ ರಾಯಭಾರಿಯಂತೆ ಭಾವಿಸಿ. ಯಾಕಂದರೆ ನನಗೆ ತಿಳಿದಿರಲಿಲ್ಲ ಬೆರ್ಯಾರಾದರು ಇಲ್ಲಿಂದ ಹೋಗುವರೇನೋ ಅಂತ. ಆದರೆ ಅಲ್ಲಿಗೆ ಹೋದಮೇಲೆ ಲಂಡನಿನಿಂದ ಬಂದಿದ್ದ ಇನ್ನಿಬ್ಬರನ್ನು ಭೇಟಿಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿಯವರು ಕೆಲವೇ ದಿನಗಳ ಹಿಂದೆ ಬಂದು ನಮ್ಮೆಲ್ಲರಿಗೂ ಆಮಂತ್ರಣ ಕೊಟ್ಟಿದ್ದರು. ನಮ್ಮ ದೇಶವಲ್ಲದೆ ಕನ್ನಡಿಗರಿರುವ ಹತ್ತಾರು ರಾಷ್ಟ್ರಗಳಿಗೂ ಹೋಗಿ ವೈಯಕ್ತಿಕವಾಗಿ ಅಭಿಮಾನಿಗಳು ಭಾಗವಹಿಸಬೇಕೆಂದು ವಿನಂತಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಹಾಗು ಸಾಹಿತ್ಯ ಸಮ್ಮೇಳನ ಬರೇ ಕರ್ನಾಟಕದ ಕನ್ನಡ ಜನರ ತಾಣವಲ್ಲ, ಅವು ಪ್ರಪಂಚದ ಎಲ್ಲೆಡೆ ನೆಲಸಿ ತಮ್ಮ ತಾಯ್ನಾಡನ್ನ ಮರೆಯದ ಜನಸಮುದಾಯದ ಸಂಸ್ಥೆಗಳು ಎಂದು ಸಾರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನಾನು ಗುರುವಾರ ೧೯ನೆ ತಾರೀಖಿನಂದೇ ಮಂಡ್ಯಕ್ಕೆ ಹೊರಟೆ. ವಿದೇಶದಿಂದ ಬರುವ ಎಲ್ಲ ಪ್ರತಿನಿಧಿಗಳಿಗೆಂದೇ ವಿಶೇಷ ವ್ಯವಸ್ಥೆ ಬಹಳ ದಿನಗಳಿಂದಲೇ ರೂಪಗೊಂಡಿತ್ತು. ಮೈಸೂರಿನ ಸಂದೇಶ್ ಪ್ರಿನ್ಸ್ನಲ್ಲಿ ನಮಗೆ ಉಳಿದುಕೊಳ್ಳುವ, ಅಲ್ಲಿಂದ ಪ್ರತಿದಿನ ಸಮ್ಮೇಳನ ನಡೆಯುವ ಮಂಡ್ಯಕ್ಕೆ ಹೋಗಿಬರುವ ಸಾರಿಗೆ ಏರ್ಪಾಟು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ನಿವೇದಿತಾ ಹೊನ್ನತ್ತಿಯವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ಯೋಜಿಸಿ ಕಾರ್ಯಗತ ಮಾಡಲಾಗಿತ್ತು. ನನ್ನ ಭಾಷೆಯ ಸಮ್ಮೇಳನಕ್ಕೆ ನಾನೇ ಎಲ್ಲ ಖರ್ಚುಗಳನ್ನ ವಹಿಸಿಕೊಂಡು ಸರ್ಕಾರಕ್ಕಾಗಲಿ ಪರಿಷತ್ತಿಗಾಗಲಿ, ಸಮ್ಮೇಳನ ಸಂಚಾಲಕ ಇಲಾಖೆಗಾಗಲಿ ಋಣಿಯಾಗಬಾರದೆಂದಿದ್ದೆ. ಆದರೆ ನಮಗ್ಯಾವ ಕುಂದುಕೊರತೆಯಾಗದೆ, ಶುಲ್ಕವೂಯಿಲ್ಲದೆ ವಸತಿ, ಊಟ, ಜೊತೆಗೆ ಮನರಂಜನೆ, ಸಾಹಿತ್ಯ ರಸದೌತಣ ಉಣಿಸಿದ ಎಲ್ಲರಿಗೂ ನಾವು ಚಿರಋಣಿಯಾಗಿರಬೇಕು.

ಮಂಡ್ಯದಲ್ಲಿ ಅದೊಂದು ದೊಡ್ಡ ‘ಕುಂಭಮೇಳ’ ಅನ್ನಬೇಕು. ವಿಶಾಲ ಜಾಗ, ಲಕ್ಷಾಂತರ ಜನರು ಕೂರುವಂಥ ಸಭಾಂಗಣ, ಅದಕ್ಕೆ ತಕ್ಕಂಥ ಅದ್ದೂರಿ ಪ್ರವೇಶದ್ವಾರ, ದೃಷ್ಟಿಯಗಲಕ್ಕೂ ಮೀರಿದ ವೇದಿಕೆ, ಮಹಾಮಂಟಪ, ಅಲ್ಲಲ್ಲೇ ನೋಡಲನುಕೂಲವಾಗುವಂಥ ಕ್ಲೋಸ್ಡ್-ಸರ್ಕ್ಯೂಟ್ ಟಿವಿ, ಹೊರಗಿದ್ದರೂ ಕೇಳಿಸಿಕೊಳ್ಳುವಂಥ ಧ್ವನಿ ವ್ಯವಸ್ಥೆ, ಇವೆಲ್ಲ ದೊಡ್ಡ ಪ್ರಮಾಣದ ವಿನ್ಯಾಸವೆಂತಲೇ ಭಾವಿಸಬೇಕು.

ಸಮ್ಮೇಳನದ ವಿಶೇಷತೆ ಅದರ ಸಭಾಧ್ಯಕ್ಷರಾದ ನಾಡೋಜ ಗೊ ರು ಚನ್ನಬಸಪ್ಪನವರು. ೯೪ ವರ್ಷಗಳಾಗಿದ್ದರೂ ಅವರ ಮಾತಿನಲ್ಲಿದ್ದ ಸ್ಪಷ್ಟತೆ, ಶಬ್ದಭಂಡಾರ, ನಿರರ್ಗಳತೆ ಎಂತಹವರನ್ನೂ ಮೋಡಿ ಮಾಡುವಂಥದು. ನೇರವಾಗಿ ಸರ್ಕಾರಕ್ಕೆ ಮತ್ತು ವಾಣಿಜ್ಯ ಉದ್ಯಮಿಗಳಿಗೆ ಕರೆ ಕೊಟ್ಟರು. ಕನ್ನಡ ಭಾಷೆ ಉಳಿಯಲು ಬೆಳೆಸಲು ಅವರಿಂದ ಯಾವ ತರಹದ ಉತ್ತೇಜನ ದೊರಕಬೇಕು, ಅದರಲ್ಲೂ ಆರ್ಥಿಕ ಹೊಣೆ ವಹಿಸಿಕೊಳ್ಳಬೇಕೆಂದು. ಕನ್ನಡ ವಿಶ್ವವಿದ್ಯಾನಿಲಯ, ಕನ್ನಡ ಶಾಲೆಗಳು ಮುಚ್ಚುವಂಥ ಸ್ಥಿತಿಯನ್ನು ತಡೆಗಟ್ಟಲು ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಮೇಲಿದ್ದ ರಾಜಕೀಯ ಮುಖಂಡರಿಗೆ ಮನದಟ್ಟು ಮಾಡಿದರು. ಕನ್ನಡ ಪ್ರಾಚೀನ ಭಾಷೆಯಾಗಿದ್ದರೂ ಇಂದಿನ ತಂತ್ರಜ್ಞಾನ ಅಳವಡಿಸಿಕೊಂಡು, ಎಲ್ಲರಿಗೂ, ಅದರಲ್ಲೂ ಪ್ರಚಲಿತ ಯುವಪೀಳಿಗೆಗೆ ತಟ್ಟುವಂಥ ಮಾರ್ಪಾಟು ಮಾಡಿಕೊಳ್ಳಬೇಕು ಎಂದು ಕರೆಯಿತ್ತರು. ಇದರ ಜೊತೆಗೆ ಅವರು ಮತ್ತಿತರ ಮಹತ್ತರ ವಿಷಯಗಳನ್ನೂ ಚರ್ಚಿಸಿದರು. ಶಿಕ್ಷಣ ಮಾಧ್ಯಮ, ಅಂತರ-ರಾಜ್ಯ ಭಾಷಾವಿನಿಮಯ, ಕನ್ನಡ ಕಲಿಕಾ ಕೇಂದ್ರಗಳು, ಪರಿಸರ ಸಂರಕ್ಷಣೆ, ಧರ್ಮದ ದುರುಪಯೋಗ, ಮಹಿಳಾ ಸಮಾನತೆ ಹಾಗು ಸ್ವಾಯತ್ತತೆ, ಕನ್ನಡಿಗರ ಉದ್ಯೋಗ ಬದುಕು, ಪ್ರವಾಸೋದ್ಯಮ, ಮುಂತಾದ ವಿಚಾರಗಳನ್ನು ಎತ್ತಿ ತೋರಿಸಿ ಆ ದಿಕ್ಕಿನಲ್ಲಿ ಏನೆಲ್ಲಾ ಕೆಲಸಕಾರ್ಯಗಳು ನಡೆಯಬೇಕಾಗಿದೆ ಎಂದು ವಿವರಿಸಿದರು.

ಕೆಲವರ ಭಾಷಣಗಳು ತೀರ್ವವಾಗಿದ್ದವು. ಮುಖ್ಯಮಂತ್ರಿ ಚಂದ್ರುರವರು ಸಭಾಧ್ಯಕ್ಷರು ಉಲ್ಲೇಖಿಸಿದ ವಿಷಯಗಳಲ್ಲಿ ಸರ್ಕಾರ ವರ್ಷದಿಂದ ವರ್ಷಕ್ಕೆ ಅನುಸರಿಸುತ್ತಿರುವ ನಿರ್ಲಕ್ಷರೀತ್ಯಕ್ರಮವನ್ನು ಕಟುವಾಗಿ ರಾಜಕೀಯ ಮುಖಂಡರ ಮುಂದೆಯೇ ಟೀಕಿಸಿದರು. ಪ್ರತಿ ಸಮ್ಮೇಳನದಲ್ಲೂ ದೊಡ್ಡ ದೊಡ್ಡ ಭಾಷಣಗಳು ಆಗುತ್ತವೆ, ಮುಂದೆ ಮಾಡಬೇಕಾದ ಅಭಿವೃದ್ಧಿ ಕೆಲಸಗಳ ನಿರ್ಣಯವೂ ಆಗುತ್ತೆ, ಆದರೆ ಸಮ್ಮೇಳನ ತದನಂತರ ಅವೆಲ್ಲ ಒಣಆಶ್ವಾಸನೆಗಳಾಗೆ ಉಳಿಯುತ್ತವೆ ಎಂದು ಆಕ್ಷೇಪಿಸಿದರು.

ಅನೇಕ ಕವಿಗೋಷ್ಠಿಗಳು, ಉಪನ್ಯಾಸಗಳು, ಸಮಾಲೋಚನೆಗಳು ಮೂರು ದಿನಗಳಲ್ಲೂ ಹಬ್ಬಿಕೊಂಡು ಕಿಕ್ಕಿರಿದು ತುಂಬಿದ ಮಂಡ್ಯ ಜನಸಮೂಹಕ್ಕೆ ಒಂದು ರೀತಿಯ ಜ್ಞಾನೋದಯ ಉಂಟುಮಾಡಿತು. ಬೆಳಿಗ್ಗೆಯಿಂದ ಸಂಜೆವರೆಗೂ ಈ ಕಾರ್ಯಕ್ರಮಗಳಾದ ಮೇಲೆ ಮನರಂಜನೆ ಸಾಗುತಿತ್ತು. ಒಂದು ದಿನ ಸಾಧು ಕೋಕಿಲ, ಮತ್ತೊಂದು ಸಂಜೆ ಅರ್ಜುನ ಜನ್ಯ ನೆರೆದಿದ್ದ ಯುವಕ ಯುವತಿಯರನ್ನು ಕುರ್ಚಿ ಮೇಲೆಯೇ ನಿಂತು ಕುಣಿದಾಡುವಂತೆ ಮಾಡಿದರು.

ಪುಸ್ತಕ ಮಳಿಗೆಗಳು ಮತ್ತೊಂದು ವೈಶಿಷ್ಟತೆ. ಕೊಂಡುಕೊಳ್ಳುವರಿಗಂತೂ ಅದೊಂದುಹಬ್ಬವೇ. ಬಹುಷಃ ಇಲ್ಲಿವರೆಗೆ ಪ್ರಕಟವಾಗಿರುವ ಎಲ್ಲ ಕಾದಂಬರಿಗಳು ನಾಟಕಗಳುಕಾವ್ಯಗಳು, ಇತರೆ ಅನೇಕ ಬರವಣಿಗಗಳು ಮಳಿಗೆಗಳಲ್ಲಿ ರಾರಾಜಿಸುತ್ತಿದ್ದವು. ಪ್ರಕಾಶಕರುಅಲ್ಲಿ ತಮ್ಮ ತಮ್ಮ ಪ್ರಕಟಣೆಗಳನ್ನು ಸಾಲು ಸಾಲು ಅಂಗಡಿಗಳಲ್ಲಿ ಬಿತ್ತರಿಸಿ ೫೦%ಗೂ ಮಿಗಿಲಾಗಿ ರಿಯಾಯಿತಿ ಕೊಟ್ಟು ಓದುಗರನ್ನು ಪ್ರೇರೇಪಿಸುತ್ತಿದ್ದರು. ಅಷ್ಟೊಂದು ಪುಸ್ತಕಗಳು ಒಂದೇ ಜಾಗದಲ್ಲಿ ಪ್ರದರ್ಶನವಾದದನ್ನು ಬಹುಷಃ ನಾನು ನೋಡಿರಲಿಲ್ಲ.

ವಿದೇಶಿ ಕನ್ನಡಿಗರ ಸಂಘಟನೆ ಈ ಸಮ್ಮೇಳನದ ಮತ್ತೊಂದು ವೈಶಿಷ್ಟ್ಯಪೂರ್ಣಕಾರ್ಯಕ್ರಮ. ಯುರೋಪ್, ಅಮೇರಿಕಾ, ಆಸ್ಟ್ರೇಲಿಯಾ ದೇಶಗಳ ಜೊತೆಗೆ ಅನೇಕ ಏಷ್ಯಾರಾಷ್ಟ್ರಗಳ ಕನ್ನಡಿಗರು ನೆರೆದಿದ್ದರು. ಅವರೊಡನಾದ ಸ್ನೇಹ-ಪರಿಚಯ ಪರಸ್ಪರಕ್ರಿಯೆ ಬಹಳ ಕಾಲ ಉಳಿಯುವಂಥದು. ನಾನು ಬಹಳಷ್ಟು ವಿದೇಶಿ ಕನ್ನಡಿಗರನ್ನು ಪರಿಚಯಿಸಿಕೊಂಡು ಅವರ ದೇಶಗಳಲ್ಲಿ ಜರುಗುತ್ತಿರುವ ಕನ್ನಡ ಕಲಿಸುವಂಥ ಶಾಲೆಗಳ ಬಗ್ಗೆ, ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡೆ. ನಾವು ರಾಜ್ಯ ದೇಶ ಬಿಟ್ಟುಹೋಗಿದ್ದರೂ, ನಮ್ಮ ಕನ್ನಡ ನಮ್ಮೆಲ್ಲರನ್ನೂ ಒಂದುಗೂಡಿಸುತ್ತಿರುವ ಪರಿ ಎಲ್ಲರಿಗೂ ಅಗಾಧ ಸಂತಸ ತಂದಿರುವುದನ್ನ ಎಲ್ಲರಲ್ಲೂ ಕಂಡೆ. ಮುಂದೆ ನಾವೆಲ್ಲ ಸೇರಿ ಯಾವ ರೀತಿಯ ಕೊಡುಗೆ ಕೊಡಲು ಸಾಧ್ಯ ಅನ್ನುವುದನ್ನು ಕೂಲಂಕಶವಾಗಿ ಚರ್ಚಿಸಿ ಕಾರ್ಯಗತ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದೆ ಕನ್ನಡ ಸಾಹಿತ್ಯ ಸಮ್ಮೇಳನ.

ಒಟ್ಟಿನಲ್ಲಿ ಈ ಸಮ್ಮೇಳನ ನನಗೊಂದು ಅಪೂರ್ವ ಅನುಭವ!

- ನವೀನ
*******************************************
ಆಕಾಶದ  ಆಶೆ -ಹೊಸ ವರುಷಕೆ!

(ಮುನ್ನುಡಿ: ಹೊಸವರ್ಷವೆಂದರೆ ನನಗೆ ಅದರಲ್ಲಿ ಕಂಡಿದ್ದು ಬರೇ ಅಂದಿನ ಮೈಮರೆತಂತ ಗಳಿಗೆಗಳಲ್ಲ; ಆದರೆ ಹಿಂದಿನ ದಿನಗಳ ನೋವು, ಮುಂದಿರುವ ಅನಿರ್ದಿಷ್ಟದ ಚಿಂತೆ. ಹಾಗೆಯೇ ಸಮತೋಲನದಲ್ಲಿ ಅವಲೋಕಿಸಿದಾಗ, ನನ್ನ ಮನಸ್ಸಿನಲ್ಲಿ ಆನಂದದಕ್ಕಾಗಿ ಆಕಾಶ ಬಯಸಿದ್ದೇನಿರಬಹುದೆಂಬ ಆ ಅವಲೋಕನದ ಚಿತ್ರಣ ಇಲ್ಲಿರಬಹುದು, ನೋಡಿ ತಿಳಿಸಿ; ಆದಿ-ಅಂತ್ಯಗಳ ನಡುವೆ ತುಂಬಿ ಸಂಬಂಧ ಕಲ್ಪಿಸಿದ್ದು ಅಂತರಂಗದ ಗಂಗೆ ಹರಿದು ಮಂದಹಾಸದಲ್ಲಿ ಮನೆಮಾಡಿದಂತಿತ್ತು, ಎನ್ನುವ ಭಾವವನ್ನು ಹಿಡಿಯಲು ಮಾಡಿದ ನನ್ನ ಕಿರು ಪ್ರಯತ್ನ, ನಿಮಗೆ ಹೇಗನ್ನಿಸಿತೋ ಕೇಳುವ ಕುತೂಹಲ! ಸಹನೆಯಿಂದ ಓದಿ ಪ್ರತಿಕ್ರಿಯಿಸುವಿರೆಂದು ನಂಬಿದ್ದೇನೆ – ಗೋಪಾಲಕೃಷ್ಣ ಹೆಗ್ಡೆ)

*****************************

ನೋವಿನಲ್ಲಿ ಕೂಡಿತ್ತೆ ೨೪ರ ಇತಿಹಾಸ?
ಮತ್ತೆ
ನಾಡೆಲ್ಲ ನೋಡಲಿಕ್ಕಿದೆ ೨೫ರ ಪರದೆ-
೨೬ಕ್ಕೆ ಮೊದಲು ಪರದಾಟ,
ನಂಬಲಾರದ ಸತ್ಯ
ಗೊತ್ತಿದ್ದರೂ
ಮೊದಲ ದಿವಸವೇ ಹೊಸವರುಷವನ್ನೆಲ್ಲ
ಬೊಗಸೆಯಲ್ಲಿ ಬಿಗಿದಿಟ್ಟ- ಒಂದನೇ ( ಒಂದೇ)
ದಿನದ ಇದು ಎಂಥಾ ವಿಪರ್ಯಾಸ-ಆಭಾಸ
ಸುಗ್ಗಿ ಕೋಲಾಟ !

ಯಾಕೋ ಈ ಮೌನದಲಿ
ಮೂಡಿದೆ ಮಂದಹಾಸ
- ಹಾರಿರುವೆ ಗರಿಬಿಚ್ಚಿ ಅರಳಿದ
ನೀ,
ನನ್ನ ನೀಲಿ ಆಕಾಶದ ಆಶೆ
ತೋರಿಸಿದೆ ದಿಗಂತ- ಅವಕಾಶ
ಮತ್ತೆ- ಮತ್ತೆ
ಹೀಗೆ
ಆಶಿಸಿಸಿದೆ ನೀಲಿತುಂಬಿರಲಿ - ಶುಭ್ರ
ಅಂತರಂಗ ಅದು
ನಿತ್ಯಾನಂದ, ಕಾವ್ಯಾನಂದದಂತಿರಲಿ
ಸದಾ ಈ ಬ್ರಹ್ಮಾಂಡ ಗುಂಡಿ
ಬಂಡಿ -
ಉಕ್ಕುತ್ತಿರಲಿ
ಸದಾ ಚೆಂದ ತಂದ ಅದು
ಬ್ರಹ್ಮಾನಂದ ಆಗಲಿ,
ಆದಿ - ಅಂತ್ಯಗಳ
ನಡುವೆ
ತುಂಬಿ ಈ,
ಅಂತರಂಗ - ಗಂಗೆ
ಹರಿಯಲಿ ಹರಿದ್ವಾರ
ವರ್ಷತುಂಬ 🙏💐🎊

- ಗೋಪಾಲಕೃಷ್ಣ ಹೆಗ್ಡೆ
*******************************************
ದೇವ - ದಾನವರಿಲ್ಲ, ಸಮುದ್ರಮಥನವೂ ಇಲ್ಲ;
ಹಾಲಾಹಲವಂತೂ ಮೊದಲೇ ಇಲ್ಲ.
ಲಕ್ಷ್ಮೀ ಚಂದ್ರರು ಇಲ್ಲ,
ಧನ್ವಂತರಿಯ ಸುಳಿವಿಲ್ಲ;
ಅಮೃತ ಕಲಶವದೊಂದೇ ಇರುವುದಲ್ಲ!
ಕೇಳು ಜನಮೇಜಯ, ಒಳ್ಳೆಯದ ಹೊರತರಲು ಉಳಿದೆಲ್ಲ ಬೇಕಿಲ್ಲ,
ಮನವದೊಂದಿದ್ದರೆ ಸಾಕಲ್ಲ!

- ಲಕ್ಷ್ಮೀನಾರಾಯಣ ಗುಡೂರ.
*******************************************