ಸಾಮಾಜಿಕ ಜಾಲತಾಣಗಳು ಮತ್ತು ಕನ್ನಡಪ್ರಜ್ಞೆ – ವೈಶಾಲಿ ದಾಮ್ಲೆ

(ಇತ್ತೀಚೆ ನಡೆದ ಕನ್ನಡ ಬಳಗದಲ್ಲಿ `ಅನಿವಾಸಿ`ತಂಡವು ಮೈ ಶ್ರೀ ನಟರಾಜರ ಆತಿಥ್ಯದಲ್ಲಿ ಕನ್ನಡ ಪ್ರಜ್ಞೆತ ಬಗ್ಗೆ ವಿಚಾರ ಸಂಕಿರಣ ನಡೆಸಿತು. ಅಲ್ಲಿ ವೈಶಾಲಿ ದಾಮ್ಲೆ ಸಾಮಾಜಿಕ ತಾಣಗಳ ಕುರಿತು ಮಾತಾಡಿದರು. ಅದರ ಬರಹ ರೂಪ ಇಲ್ಲಿದೆ – ಸಂ)

ಇಂದಿನ ಆಧುನಿಕ ಜಗತ್ತಿನಲ್ಲಿ, ಮಾಹಿತಿ ತಂತ್ರಜ್ಞಾನವು ಮನುಷ್ಯನಿಗೆ ಅಶನ, ವಸನ, ವಸತಿಗಳಷ್ಟೇ ಮೂಲಭೂತವಾದ ಅವಶ್ಯಕತೆಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ ಅನಿಸುತ್ತದೆ. ಕಳೆದ ಸುಮಾರು ಹತ್ತು ವರ್ಷಗಳ ಹಿಂದೆ ಸೃಷ್ಟಿಯಾದ ಸಾಮಾಜಿಕ ಜಾಲತಾಣಗಳು ಎಂಬ ಹೊಸ ಪ್ರಪಂಚವು ನಮ್ಮಂಥ ಅನಿವಾಸಿಗಳ ಜೀವನಕ್ಕೆ ಹೊಸ ಆಯಾಮವನ್ನು ನೀಡಿದೆ. ತಾಯ್ನಾಡಿನಿಂದ ನಾವು ಭೌತಿಕವಾಗಿ ಸಾವಿರಾರು ಮೈಲಿ ದೂರದಲ್ಲಿದ್ದರೂ, ಭಾವನಾತ್ಮಕವಾಗಿ ಹಾಗೂ ವೈಚಾರಿಕವಾಗಿ ಮಾತೃಭೂಮಿ ಹಾಗೂ ಮಾತೃಭಾಷೆಯೊಂದಿಗಿನ ನಮ್ಮ ಅನುಬಂಧವನ್ನು ಬಲಿಷ್ಠಗೊಳಿಸುವಲ್ಲಿ ಸಾಮಾಜಿಕ ಜಾಲತಾಣಗಳು ಮಹತ್ತರ ಪಾತ್ರ ವಹಿಸಿವೆ.

ಕರ್ನಾಟಕದ ಬಹುತೇಕ ವಿದ್ಯಮಾನಗಳ ಚರ್ಚೆಗಳು ಫೇಸ್ ಬುಕ್ ವಾಟ್ಸ್ ಆಪ್ಗಳಲ್ಲಿ ನಡೆಯುತ್ತವೆ. ಹೀಗಾಗಿ, ದಿನಪತ್ರಿಕೆಗಳನ್ನು ಓದದೆಯೂ, ಟಿವಿ ವಾಹಿನಿಗಳನ್ನು ನೋಡದೆಯೂ ಕರ್ನಾಟಕದ ಆಗುಹೋಗುಗಳನ್ನು ತಿಳಿದುಕೊಳ್ಳಲು ನಮಗೆ ಇನ್ನೊಂದು ಮಾಧ್ಯಮ ಸಿಕ್ಕಂತಾಗಿದೆ. ಅಷ್ಟು ಮಾತ್ರವಲ್ಲ, ಈ ಸಾಮಾಜಿಕ ಜಾಲತಾಣಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇನ್ನೊಂದು ಹೆಸರಾಗಿವೆ. ಸಾಮಾನ್ಯವಾಗಿ ಯಾವುದೋ ಒಂದು ರಾಜಕೀಯ ಪಕ್ಷದ ಅಥವಾ ಜಾತಿ-ಪಂಗಡದ ಕೈಗೊಂಬೆಯಾಗಿರುವ ಸಾಂಪ್ರದಾಯಿಕ ಸುದ್ದಿ ಮಾಧ್ಯಮಗಳ ಏಕಸ್ವಾಮ್ಯಕ್ಕೆ ದೊಡ್ಡ ಸವಾಲೆಸೆದಿವೆ. ಒಂದೇ ವಿಷಯಕ್ಕೆ ಸಂಬಂಧಿಸಿದ ಹಲವು ರೀತಿಯ ಚರ್ಚೆಗಳು ಇಲ್ಲಿ ನಡೆಯುವುದರಿಂದ, ಓದುಗರು ಒಂದೇ ವಿಷಯವನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ಪರಾಮರ್ಶಿಸಬಹುದಾಗಿದೆ.

ತಮ್ಮ ಪ್ರತಿಭೆಯನ್ನು ತೋರ್ಪಡಿಸಿಕೊಳ್ಳಲು, ಪ್ರೋತ್ಸಾಹಿಸಲು ಸೂಕ್ತ ಮಾಧ್ಯಮಗಳಿಲ್ಲದೆ ತೆರೆಮರೆಯಲ್ಲೇ ಉಳಿದ ಒಬ್ಬಿಬ್ಬರು ಪ್ರತಿಭಾನ್ವಿತರ ಪರಿಚಯವಾದರೂ ನಮ್ಮ ನಿಮ್ಮೆಲ್ಲರಿಗೂ ಇದೆ. ಈಗಿರುವ ಫೇಸ್ ಬುಕ್, ಬ್ಲಾಗ್ ನಂತಹ ಮಾಧ್ಯಮಗಳು ಇಂತಹ ಪ್ರತಿಭೆಗಳಿಗೊಂದು ಯೋಗ್ಯ ವೇದಿಕೆಯಾಗಿವೆ. ಇದರಿಂದಾಗಿ ಬಹಳಷ್ಟು ಯುವಕ-ಯುವತಿಯರು ಮಾತ್ರವಲ್ಲ ಗೃಹಿಣಿಯರೂ ಕೂಡ ಕಲೆ-ಸಾಹಿತ್ಯಗಳಲ್ಲಿ ತಮಗಿರುವ ಒಲವನ್ನು ಹಂಚಿಕೊಳ್ಳಲು, ಉಳಿಸಿ -ಬೆಳೆಸಲು ಸಾಧ್ಯವಾಗಿದೆ.

ಕನ್ನಡ ಪುಸ್ತಕಗಳ ಹಾಗೂ ಚಲನಚಿತ್ರಗಳ ಜನಪ್ರಿಯತೆಯನ್ನು ಹೆಚ್ಚಿಸುವಲ್ಲಿ ಕೂಡಾ ಈ ತಾಣಗಳು ಪ್ರಮುಖ ಪಾತ್ರ ವಹಿಸಿವೆ. ಕನ್ನಡದ ಯುವಪ್ರತಿಭೆಗಳಿರುವ ಹಲವಾರು ಕನ್ನಡ ಚಿತ್ರಗಳು ಸೋಷಿಯಲ್ ಮಿಡಿಯಾದಿಂದ ಪ್ರಚಾರ ಪಡೆದು ಭಾರತ ಮಾತ್ರವಲ್ಲ ಹೊರದೇಶಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನಗಳನ್ನು ಕಂಡ ನಿದರ್ಶನಗಳು ಬಹಳಷ್ಟಿವೆ.

ಕನ್ನಡ ಪುಸ್ತಕಗಳ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣಗಳ ಕೊಡುಗೆಗೆ ಇತ್ತೀಚೆಗಿನ ಉದಾಹರಣೆ, ಭೈರಪ್ಪನವರ ಹೊಸ ಕಾದಂಬರಿ ‘ಉತ್ತರಕಾಂಡ’. ಕಾದಂಬರಿಯ ಬಿಡುಗಡೆಗೆ ಮುನ್ನವೇ ಅದರ ಅದರ ಬಗ್ಗೆ ಹಲವು ರೀತಿಯ ವಿಚಾರ-ವಿನಿಮಯಗಳು ನಡೆದದ್ದು , ಕಾದಂಬರಿಯ ಪ್ರತಿಗಳು ಬಿಸಿದೋಸೆಯಂತೆ ಖರ್ಚಾಗಿ ಮರುಮುದ್ರಣ ಕಂಡದ್ದು, ಮತ್ತೊಮ್ಮೆ ಭೈರಪ್ಪನವರ ಜನಪ್ರಿಯತೆ ಕಂಡು ‘ಬುದ್ಧಿಜೀವಿ’ಗಳ ನಿದ್ದೆ ಕೆಟ್ಟದ್ದು, ಇತ್ಯಾದಿ ಸುದ್ದಿಗಳು ಹಲವು ದಿನಗಳ ಕಾಲ ನನ್ನ ಭೈರಪ್ಪಾಭಿಮಾನಿ ಸ್ನೇಹಿತರ ಫೇಸ್ ಬುಕ್ ಗೋಡೆಯ ಮೇಲೆ ರಾರಾಜಿಸುತ್ತಿದ್ದವು. ಒಂದು ಕಾಲದಲ್ಲಿ, ಕನ್ನಡದ ಆಳವಾದ ಜ್ಞಾನವಿದ್ದ ಓದುಗರಿಗಷ್ಟೇ ಮೀಸಲಾಗಿದ್ದ ಭೈರಪ್ಪರಂಥ ಪ್ರಬುಧ್ಧ ಸಾಹಿತಿಗಳ ಸಾಹಿತ್ಯದತ್ತ ಈಗ ಹೆಚ್ಚು ಹೆಚ್ಚು ಯುವಜನರು ಆಕರ್ಷಿತರಾಗುತ್ತಿರುವುದಕ್ಕೆ, ಇಂತಹ ಮೇರುಸಾಹಿತ್ಯ ಸಮಾಜದ ಎಲ್ಲಾ ಸ್ತರದ ಜನರನ್ನೂ ತಲುಪುವುದಕ್ಕೆ ಸಾಮಾಜಿಕ ಜಾಲತಾಣಗಳು ಪ್ರಮುಖ ಕಾರಣ ಎಂದು ನನ್ನ ಅನಿಸಿಕೆ.

ಇನ್ನು ನಮ್ಮ ನೆರೆರಾಜ್ಯಗಳ ಜನರಲ್ಲಿರುವಂತೆ, ಕರ್ನಾಟಕದ ಜನತೆಯನ್ನು ನೋಡಿದರೆ ನಾವೆಲ್ಲರೂ ಒಂದು, ನಾವು ಕನ್ನಡಿಗರು ಎಂಬ ಏಕತೆ ನಮ್ಮಲ್ಲಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಎತ್ತಿನಹೊಳೆ ಪ್ರಾಜೆಕ್ಟ್ ದಕ್ಷಿಣ ಕನ್ನಡದ ಸಮಸ್ಯೆ, ಮಹದಾಯಿ ವಿವಾದ ಉತ್ತರ ಕರ್ನಾಟಕದ ಸಮಸ್ಯೆ ಎನ್ನುವಂಥಾ ಪ್ರತ್ಯೇಕತೆ ನಮ್ಮ-ನಮ್ಮಲ್ಲೇ ಬಹಳಷ್ಟಿದೆ. ಆದರೆ ಇದಕ್ಕೆ ಅಪವಾದವೆಂಬಂತಹ ಒಂದು ಪ್ರಸಂಗ ಇತ್ತೀಚೆಗೆ ನಡೆಯಿತು. ತಮಿಳುನಾಡಿನಲ್ಲಿ ಜಲ್ಲಿಕಟ್ಟು ವಿವಾದದ ಕಾವೇರಿದ್ದಾಗ, ದಕ್ಷಿಣ ಕನ್ನಡದಲ್ಲಿ ಶತಮಾನಗಳಿಂದ ನೆಡೆದುಕೊಂಡು ಬರುತ್ತಿರುವ, ಕಂಬಳ ಎಂಬ ಕ್ರೀಡೆಯ ಬಗ್ಗೆಯೂ ಬಹಳ ವಾದ-ವಿವಾದಗಳು ನಡೆದುವು. ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಕ್ರೀಡೆ ನಮ್ಮ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ, ಇದನ್ನು ಸಂರಕ್ಷಿಸಬೇಕು ಎಂದು ಕಂಬಳ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಇದರ ಪ್ರಚಾರದಲ್ಲಿ, ಕಂಬಳದ ಬಗ್ಗೆ ಅರಿವು ಮೂಡಿಸುವಲ್ಲಿ, ಸಾಮಾಜಿಕ ಜಾಲತಾಣಗಳು ಬಹುದೊಡ್ಡ ಪಾತ್ರ ವಹಿಸಿದ್ದವು. ಈ ಹೋರಾಟದಲ್ಲಿ ದಕ್ಷಿಣ ಕನ್ನಡ ಮಾತ್ರವಲ್ಲದೆ, ಕರ್ನಾಟಕದ ಎಲ್ಲಾ ಪ್ರಾಂತ್ಯಗಳ ಕನ್ನಡಿಗರೂ ಕೈ ಜೋಡಿಸಿದರು. ಇದು, ಕನ್ನಡಿಗರು ತಮ್ಮಲ್ಲಿರುವ ಭೇದ-ಭಾವಗಳನ್ನು ಮರೆತು ಒಂದಾಗುವಲ್ಲಿ, ಕನ್ನಡ ಪ್ರಜ್ಞೆಯನ್ನು ಉಳಿಸಿ- ಬೆಳೆಸುವಲ್ಲಿ ಸಾಮಾಜಿಕ ಜಾಲತಾಣಗಳು ಹೇಗೆ ಸಹಕಾರಿಯಾಗಿವೆ ಎಂಬುದಕ್ಕೆ ಜೀವಂತ ಸಾಕ್ಷಿ.

ಹೊರರಾಜ್ಯಗಳಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಜನ ಹಿಂದಿ ಅಥವಾ ಇಂಗ್ಲಿಷ್ ನಲ್ಲಷ್ಟೇ ವ್ಯವಹರಿಸುವುದನ್ನು ನಾವೆಲ್ಲಾ ಕಂಡಿದ್ದೇವೆ, ಕಂಡು ದುಃಖ ಪಟ್ಟಿದ್ದೇವೆ. ಆದರೆ ನಮ್ಮ ಹತೋಟಿಯಲ್ಲಿರದಿರುವ ವಿಷಯದ ಬಗ್ಗೆ ಕೊರಗುವ ಬದಲು, ಅವರಿಗೆ ಕನ್ನಡ ಬರುವುದಿಲ್ಲವೆಂದು ಇಂಗ್ಲಿಷ್ ನಲ್ಲೇ ವ್ಯವಹರಿಸುವುದನ್ನು ಬಿಟ್ಟು ಅವರಿಗೆ ಒಂದಷ್ಟಾದರೂ ಕನ್ನಡ ಕಲಿಸುವ ಜವಾಬ್ದಾರಿ ನಮ್ಮ ಮೇಲೆಯೂ ಇದೆ ಎಂದು ನಾವು ತಿಳಿದುಕೊಳ್ಳಬೇಕು, ಬೆಂಗಳೂರಿಗರು ಹೇಗೆ ಹೊರರಾಜ್ಯದವರಿಗೆ ಕನ್ನಡದ ಅರಿವು ಮೂಡಿಸುವಲ್ಲಿ ಸಹಕರಿಸಬೇಕು ಎಂಬಂತಹ ಆರೋಗ್ಯಕರ ಚರ್ಚೆಗಳು ಈಗಿನ ಯುವಜನತೆಯ ಮಧ್ಯೆ ಸೋಷಿಯಲ್ ಮೀಡಿಯಾದ ಮೂಲಕ ನಡೆಯುತ್ತಿವೆ. ಬೆಂಗಳೂರಿಗರ ಈ ಪ್ರಯತ್ನದಿಂದ ಕೆಲವಷ್ಟು ಜನ ಅಲ್ಪಸ್ವಲ್ಪವಾದರೂ ಕನ್ನಡ ಮಾತಾಡುವುದನ್ನು ಕಲಿತಿದ್ದಾರೆಂದೂ ಓದಿದ್ದೇನೆ.

ಕನ್ನಡದ, ಕರ್ನಾಟಕದ ವಿಷಯ ಬಂದಾಗ ಹಬ್ಬಗಳ ಉಲ್ಲೇಖವಾಗದಿದ್ದರೆ ಹೇಗೆ? ಹೊರದೇಶದ ಇತಿಮಿತಿಗಳಲ್ಲೇ ಹಬ್ಬಗಳನ್ನು ಆಚರಿಸುವ ಅನಿವಾಸಿಗಳಿಗೆ ಈಗ ದೂರದೇಶದಲ್ಲಿದ್ದೂ ತಮ್ಮ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುವ, ಸ್ನೇಹಿತರ ಬಂಧು ಬಾಂಧವರ ಆಚರಣೆಗಳನ್ನು ನೋಡಿ ಖುಷಿಪಡುವ ಭಾಗ್ಯ ಸಾಮಾಜಿಕ ಜಾಲತಾಣಗಳಿಂದ ದೊರಕಿದೆ. ಒಂದು ವೈಯಕ್ತಿಕ ಉದಾಹರಣೆಯನ್ನು ಕೊಡುವುದಾದರೆ, ನಮ್ಮ ಮನೆಯಲ್ಲಿ ಕೆಲವು ವರ್ಷಗಳಿಂದ ದೀಪಾವಳಿಯನ್ನು ಸಡಗರದಿಂದ ಆಚರಿಸುತ್ತೇವೆ. ನಮ್ಮ ಬ್ರಿಟಿಷ್ ಸ್ನೇಹಿತರು ಸೀರೆ, ಚೂಡಿದಾರಗಳನ್ನು ಧರಿಸಿ, ‘ದೀಪಾವಳಿಯ ಶುಭಾಶಯಗಳು’ ಎಂದು ಅಚ್ಚಗನ್ನಡದಲ್ಲಿ ನಮಗೆ ಶುಭಾಶಯ ಕೋರಿದರೆ, ಅವರ ಮಕ್ಕಳು ದೀಪಾವಳಿಯ ಬಗ್ಗೆ ಕಥೆ, ಪ್ರಬಂಧಗಳನ್ನು ಬರೆದು ತಮ್ಮ ಶಾಲೆಗಳಲ್ಲಿಯೂ ದೀಪಾವಳಿಯ ಸಂದೇಶವನ್ನು ಸಾರುತ್ತಾರೆ. ಆಚರಣೆಯ ಸಮಯದಲ್ಲಿ ತೆಗೆದ ದೀಪಾಲಂಕಾರ, ರಂಗೋಲಿ, ಹೂವಿನ ಅಲಂಕಾರಗಳ ಫೋಟೋಗಳನ್ನು ನಾನು ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಹಂಚಿಕೊಳ್ಳುತ್ತೇನೆ. ನನ್ನ ಇಬ್ಬರು ಬ್ರಿಟಿಷ್ ಸ್ನೇಹಿತೆಯರು ಕೂಡ ಹಬ್ಬದ ಫೋಟೋಗಳನ್ನು ಶೇರ್ ಮಾಡಿ, ಇಂತಹ ಒಂದು ಸುಂದರ ಹಾಗೂ ಅರ್ಥಪೂರ್ಣ ಆಚರಣೆಯಲ್ಲಿ ಭಾಗಿಯಾಗುವ ಅವಕಾಶ ಕೊಟ್ಟ ನನಗೆ ಕೃತಜ್ಞತೆ ಹೇಳಿದ್ದರು. ಇದರಿಂದ ಪ್ರೇರೇಪಿತಳಾದ ಅಮೆರಿಕಾದಲ್ಲಿರುವ ನನ್ನ ಚಿಕ್ಕಪ್ಪನ ಮಗಳು, ಕಳೆದ ದೀಪಾವಳಿಯ ಸಮಯದಲ್ಲಿ, ಅವಳ ಯುನಿವರ್ಸಿಟಿಯ ಕೆಲವು ಗೆಳೆಯ-ಗೆಳತಿಯರನ್ನು ತನ್ನ ಫ್ಲ್ಯಾಟ್ ಗೆ ಆಮಂತ್ರಿಸಿ, ಹಬ್ಬವನ್ನಾಚರಿಸಿದಳು. ಫೇಸ್ ಬುಕ್ ನಲ್ಲಿ ತನ್ನ ಹಬ್ಬದಾಚರಣೆಯ ಸಂಭ್ರಮವನ್ನು ಹಂಚಿಕೊಂಡು, ‘inspired by my cousin’ ಎಂದು ನನ್ನನ್ನು ಟ್ಯಾಗ್ ಮಾಡಿದ್ದಳು. ಹೀಗೆ ನನ್ನ ದೀಪಾವಳಿಯ ಆಚರಣೆ ಸಾಗರದಾಚೆ ಅಮೆರಿಕೆಯಲ್ಲಿಯೂ ಮಿಂಚಿದ್ದು, ಇನ್ನೊಬ್ಬರಿಗೆ ಸ್ಪೂರ್ತಿಯಾಗಿದ್ದು ಒಂದು ಸಿಹಿ ನೆನಪು. ಒಟ್ಟಿನಲ್ಲಿ, ‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ಕುವೆಂಪುರವರು ಹೇಳಿರುವಂತೆ ನಮ್ಮ ಕರ್ಮಭೂಮಿಯಲ್ಲಿದ್ದುಕೊಂಡೂ, ಜನ್ಮಭೂಮಿಯೊಂದಿಗಿನ ನಮ್ಮ ಬಾಂಧವ್ಯವನ್ನು ಬಲಿಷ್ಠಗೊಳಿಸುವಲ್ಲಿ, ನಮ್ಮ ಸಂಸ್ಕೃತಿ, ಆಚರಣೆಗಳ ಮಹತ್ವವನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವಲ್ಲಿ, ನಾವು ವಲಸೆ ಬಂದಿರುವ ದೇಶದ ಜನರಲ್ಲಿ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವಲ್ಲಿ, ಸಾಮಾಜಿಕ ಜಾಲತಾಣಗಳ ಪಾತ್ರ ದೊಡ್ಡದು

ಹಾಗಂತ ಈ ಜಾಲತಾಣಗಳಿಂದ ಯಾವ ದುಷ್ಪರಿಣಾಮ ಅಥವಾ ತೊಂದರೆಗಳೂ ಇಲ್ಲವೆಂದಲ್ಲ. ಈ ತಾಣಗಳ ಮೂಲಕ ಮಕ್ಕಳ, ಹದಿಹರೆಯದ ಹುಡುಗಿಯರ ದುರ್ಬಲತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಕಾಮುಕರಿದ್ದಾರೆ, ಯುವಜನತೆಯನ್ನು ಭಯೋತ್ಪಾದನೆಯಂಥ ಭೀಕರ ಕೃತ್ಯಗಳತ್ತ ಆಕರ್ಷಿಸುವ ಗುಂಪುಗಳಿದ್ದಾವೆ. ಇಂತಹುದ್ದನ್ನು ತಡೆಗಟ್ಟುವ ಕಾನೂನನ್ನು ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲಿದ್ದರೆ, ಈ ಜಾಲತಾಣಗಳ ಇನ್ನೊಂದು ಮುಖದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಹೆತ್ತವರ ಮೇಲಿದೆ. ಸಂವಹನ ಕ್ರಾಂತಿಗೆ ಕಾರಣವಾಗಿರುವ ಈ ಮಾಧ್ಯಮಗಳು ಈಗ ಜೀವನದ ಅವಶ್ಯಕ ಅಂಶಗಳಾಗಿವೆಯಾದರೂ, ಇವು ನಮ್ಮ ಬದುಕನ್ನೇ ಆಕ್ರಮಿಸದಂತೆ ನೋಡಿಕೊಳ್ಳುವುದೂ ನಮ್ಮೆಲ್ಲರ ಕರ್ತವ್ಯ. ಕುಟುಂಬದ ಜನರೊಂದಿಗಿರಬೇಕಾದ ಆತ್ಮೀಯತೆ, ದೊಡ್ಡವರಿಗೆ ತೋರಿಸಬೇಕಾದ ಗೌರವ ಮುಂತಾದ ಮೂಲಭೂತ ಮೌಲ್ಯಗಳನ್ನು ನಮ್ಮ ಮಕ್ಕಳು ಮರೆಯದಂತೆ ಅವರನ್ನು ಬೆಳೆಸಬೇಕಾಗಿರುವುದು ಈಗ ಹೆತ್ತವರಿಗಿರುವ ದೊಡ್ಡ ಸವಾಲು. ಇನ್ನು, ಒಳ್ಳೆಯದರೊಂದಿಗೆ ಕೆಟ್ಟದ್ದೂ ಇರುವುದು ಜಗದ ನಿಯಮ ಎನ್ನುವಂತೆ, ಈ ಡಿಜಿಟಲ್ ಜಗತ್ತಿನಲ್ಲಿ ಇರುವ ಪೊಳ್ಳು ವಿಚಾರಗಳೂ ಹಲವಾರು. ಹಾಗಾಗಿ ಹಂಸಕ್ಷೀರ ನ್ಯಾಯದಲ್ಲಿ ಉಲ್ಲೇಖವಾಗಿರುವ ಹಂಸದಂತೆ ಈ ಡಿಜಿಟಲ್ ಪ್ರಪಂಚದಲ್ಲಿರುವ ಹಾಲು ಹಾಗೂ ನೀರನ್ನು ಬೇರ್ಪಡಿಸಿ ತೆಗೆದುಕೊಳ್ಳಬೇಕಾದದ್ದು ಇಂದಿನ ಅಗತ್ಯ.

ಒಟ್ಟಿನಲ್ಲಿ, ಜಗತ್ತಿನ ಮಟ್ಟಿಗೆ ಸಾಮಾಜಿಕ ಜಾಲತಾಣಗಳು ಫೋಟೋ ಗಳನ್ನು ಅಪ್ ಲೋಡ್ ಮಾಡುವ, ಸ್ಟೇಟಸ್ ಅಪ್ ಡೇಟ್ ಗಳನ್ನು ಹಂಚಿಕೊಳ್ಳುವ ಒಂದು ಮಾಧ್ಯಮವಾಗಿರಬಹುದು. ಆದರೆ ಅನಿವಾಸಿಗಳ ಮಟ್ಟಿಗೆ ಇವು, ನಮ್ಮ ಹಾಗೂ ನಮ್ಮ ಜನ್ಮಭೂಮಿಯ ನಡುವಿನ ಜೀವನಾಡಿಯಾಗಿವೆ. ”ಕನ್ನಡವೆಂದರೆ ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ” ಎಂದು ಕವಿ ಕೆ ಎಸ್ ನಿಸಾರ್ ಅಹ್ಮದ್ ಅವರು ಹೇಳಿರುವಂತೆ, ನಮ್ಮನ್ನು ಕನ್ನಡದ ನೆಲ-ಜಲದೊಂದಿಗೆ, ಕನ್ನಡವೆಂಬ ಭಾವನೆಯೊಂದಿಗೆ, ಜೀವನಶೈಲಿಯೊಂದಿಗೆ ಬೆಸೆಯುವ ಸೇತುವೆಗಳಾಗಿವೆ. ಕನ್ನಡದ ಕಸ್ತೂರಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಸಾಧನಗಳಾಗಿವೆ.

ಇವನಾರವ??? ದಾಕ್ಷಾಯಿನಿ ಗೌಡ ಅವರ ವೈಚಾರಿಕ ಲೇಖನ

(ಕೆಲವು ವಾರಗಳ ಹಿಂದೆ ಅಮೇರಿಕಾದ ಕ್ಯಾನ್ಸಾಸ್ ನಗರದಲ್ಲಿ  ಒಬ್ಬ ಭಾರತೀಯ ಮೂಲದ ಸಾಫ್ಟ್ ವೇರ್ ಉದ್ಯಮಿ ತನ್ನ ಗೆಳೆಯನ ಜೊತೆ ಒಂದು ರೆಸ್ಟುರಾಂಟ್ ನಲ್ಲಿ ಕುಳಿತು ಹರಟುತ್ತಿದ್ದಾಗ ಒಬ್ಬ ಸ್ಥಳೀಯ ಬಿಳಿ ಅಮೇರಿಕನ್ ಸಾಮಾನ್ಯ ತನ್ನ ರೇಸಿಸಂ ಭಾವನೆಗಳಿಂದ ಕೆರಳಿ ಈ ಯುವಕರನ್ನು ತನ್ನ ದೇಶದಿಂದ ತೊಲಗುವಂತೆ ಕೂಗಾಡಿ ಕೊನೆಗೆ ಗುಂಡಿಕ್ಕಿ ಕೊಂದಿರುವುದರ ಬಗ್ಗೆ ನಾವೆಲ್ಲಾ ಕೇಳಿದ್ದೇವೆ. ಈ ಘಟನೆ ಒಂದು ಹೇಟ್ ಕ್ರೈಮ್ ಎಂದು ದಾಖಲಾಯಿತು. ಇದು ಒಂದು ರೇಸಿಸಂ ಘಟನೆಯ ಉದಾಹರಣೆಯಾದರೆ ನಮ್ಮ ಅನಿವಾಸಿ ಸದಸ್ಯೆ ದಾಕ್ಷಾಯಿಣಿ ಅವರು ತಮ್ಮ ಕಾರು ಕೆಟ್ಟು ಕಂಗಾಲಾಗಿದ್ದ ಸಮಯದಲ್ಲಿ ಒಬ್ಬ ಸ್ಥಳೀಯ  ಸ್ನೇಹಪರ ಸಜ್ಜನ ಬ್ರಿಟಿಷ್ ಸಾಮಾನ್ಯ ಅವರ ನೆರವಿಗೆ ಬಂದಿರುವುದರ ಬಗ್ಗೆ ತಮ್ಮ ಈ ಲೇಖನದಲ್ಲಿ ಪ್ರಸ್ಥಾಪ ಮಾಡಿದ್ದಾರೆ.

ಈ ವಿಚಾರಗಳನ್ನು ಗಮನಿಸಿದಾಗ ಪ್ರಪಂಚದಲ್ಲಿ ಒಳ್ಳೆ ಮತ್ತು ಕೆಟ್ಟ ಜನ ಎಲ್ಲ ದೇಶಗಳಲ್ಲಿ ಎಲ್ಲ ಕಾಲಕ್ಕೂ ಇರುತ್ತಾರೆ ಎಂದು ಊಹಿಸಿ ಕೊಳ್ಳಬಹುದು. ನಮ್ಮಲ್ಲಿ  ಸುಪ್ತವಾಗಿರುವು ಕೆಲವು ಪೂರ್ವ ಕಲ್ಪಿತ  ಅಭಿಪ್ರಾಯಗಳು, ನಮ್ಮ ಸುತ್ತಣ ಪ್ರಭಾವಗಳು, ನಮ್ಮ ಶಿಕ್ಷಣ  ಹಾಗೂ ನಮ್ಮ ಕೆಲವು ಅನುಭವಗಳು ನಮ್ಮ ಚಿಂತನೆಗಳನ್ನು ಅಚ್ಚು ಹಾಕುತ್ತವೆ. “ಇವನಾರವ ಇವನಾರವ”ಎಂಬ ಪ್ರಶ್ನೆಗಳು ಒಂದು ಸಮಾಜದಲ್ಲಿ ವ್ಯಕ್ತಿ ಸಂಬಂಧಗಳ ನಡುವೆ ಮೂಡುವುದುಂಟು. ‘ಇವ ನಮ್ಮವ ಇವ ನಮ್ಮವ’ ಎನ್ನುವ ಭಾವನೆ ಮೂಡಿಬರಬೇಕಾದರೆ ಹೃದಯ ಹಿಗ್ಗಬೇಕು, ನಂಬುಗೆ ವಿಶ್ವಾಸಗಳು ಚಿಗುರಬೇಕು ಆತ್ಮ ವಿಶ್ವಾಸ ಹೆಚ್ಚಳಿಸಬೇಕು ಹಾಗೆ ಅನುಕಂಪೆ ಕಾಳಜಿಗಳು ವೃದ್ಧಿಯಾಗಬೇಕು ಆಗ ಅಲ್ಪ ಮಾನವ ವಿಶ್ವ ಮಾನವನಾಗಲು ಸಾಧ್ಯ.

ದಾಕ್ಷಾಯಿಣಿ ಅವರ ಲೇಖನದಲ್ಲಿ ಎರಡು ಅಂಶಗಳು ಎದ್ದು ತೋರುತ್ತದೆ. ಒಂದು ಇತರರ ಬಗ್ಗೆ ಕಾಳಜಿ ಮತ್ತೊಂದು ನಂಬುಗೆ.  ದಾಕ್ಷಾಯಿಣಿ ಅವರ ಬಗ್ಗೆ ಸ್ಥಳೀಯ ಬ್ರಿಟಿಷ್ ಯುವಕನ ಕಾಳಜಿ ಅವನ ಹಿರಿತನವನ್ನು ಎತ್ತಿ ತೋರಿದೆ. ಹಾಗೆ ದಾಕ್ಷಾಯಿಣಿ ರಸ್ತೆ ಬದಿಯಲ್ಲಿ ಕಾರು ಕೈಕೊಟ್ಟ ಸಮಯದಲ್ಲಿ ಸಹಾಯ ಹಸ್ತ ನೀಡಲು ಬಂದ ಒಬ್ಬ ಅಪರಿಚಿತ ಯುವಕನನ್ನು ನಂಬಿ ಕಾರಿನಿಂದ ಕೆಳಗಿಳಿದು ಅವನೊಡನೆ ಸಂಭಾಷಿಸಿ ಹಾಗೆ ಅವನಿಗೆ ತಮ್ಮ ಕಾರನ್ನು ರಿಪೇರಿ ಮಾಡಲು ಸಮ್ಮತಿಸಿದ್ದು ಆ ನಂಬುಗೆಯ ಆಧಾರದ ಮೇಲೆ!

ಸ್ವಾಮಿ ವಿವೇಕಾನಂದರು ಹೇಳಿದ ಮಾತೊಂದು ಹೀಗಿದೆ;

They alone live, who live for others!

ಸಂ)

***

ಇವನಾರವ???   ದಾಕ್ಷಾಯಿನಿ ಗೌಡ ಅವರ ವೈಚಾರಿಕ ಲೇಖನ. ಚಿತ್ರಗಳು – ಗೂಗಲ್ ಕೃಪೆ

ಓದುಗರೆ, ಈ ಘಟನೆ ನಿನ್ನೆಯಷ್ಟೆ ನೆಡೆದ ಕಾರಣ, ನನ್ನ ಮನಸ್ಸಿನಲ್ಲಿ ಹಸಿಯಾಗಿದ್ದಾಗಲೆ ನಿಮ್ಮಲ್ಲಿ ಹೇಳಿಕೊ೦ಡರೆ ಉತ್ತಮ ಅನ್ನಿಸಿತು. ನಿನ್ನೆ ಬೆಳ್ಳಿಗ್ಗೆ ಎ೦ದಿನ೦ತೆ, ಹತ್ತು ನಿಮಿಷ ತಡವಾಗಿ ಮನೆಯಿ೦ದ ಹೊರಟು ರೋಡಿನಲ್ಲಿ ವಾಹನಗಳು ಕಡಿಮೆ ಇರಲೆ೦ದು ಆಶಿಸುತ್ತಾ ಗಾಡಿ ಚಲಾಯಿಸುತ್ತಿದ್ದೆ.  ಹೊರಗೆ ಮೆಲ್ಲಗೆ ಜಿಟಿ, ಜಿಟಿ ಸುರಿಯುತ್ತಿರುವ ಮಳೆ, ಛಳಿಯ ವಾತವರಣ, ಕಾರಿನಲ್ಲಿ ಬೆಚ್ಚಗೆ ಕುಳಿತು ಹಳೆಯ ಕನ್ನಡ ಚಿತ್ರಗೀತೆಗಳ ಸವಿಯುತ್ತಿರುವ ನನ್ನ ಗಮನಕ್ಕೂ ಬ೦ದಿರಲಿಲ್ಲ. ನಿತ್ಯವು ಪಯಣಿಸುವ ಹಾದಿಯಾದುದ್ದರಿ೦ದ ಕೈಗಳು ಯಾ೦ತ್ರಿಕವಾಗಿ ವಾಹನ ಚಲಾಯಿಸುತ್ತಿದ್ದವು. ನನ್ನ ಕ್ಲಿನಿಕ್ ಗೆ ಎರಡು ಮೈಲಿ ಇರುವಾಗ ನನ್ನ ಕಾರು ಕರ್ಕಶ ಶಬ್ದ ಮಾಡುತ್ತಿರುವುದು ನನ್ನ ಅರಿವಿಗೆ ಬ೦ತು. ಹಾಗೆ ಇನ್ನೆರಡು ಮೈಲಿ ಹೋಗಿಯೆ ಬಿಡುವುದೆನ್ನುವ ನನ್ನ ನಿರ್ಧಾರವನ್ನು, ಸುಟ್ಟ ವಾಸನೆಯೂ ಬರಲು ಶುರುವಾದ ಕಾರಣ ಬದಲಿಸಿ, ಕಾರನ್ನು ಹಾದಿಯ ಪಕ್ಕದಲ್ಲಿ ನಿಲ್ಲಿಸಿದೆ. ಪತಿರಾಯರಿಗೆ ಅನುಮಾನದಿ೦ದಲೆ ಫೊನ್ ಮಾಡಿದೆ, ಯಾಕೆ೦ದರೆ ನನ್ನ ಕರೆಗೆ ಅವರು ಆಸ್ಪತ್ರೆಯಲ್ಲಿದ್ದಾಗ ಅಪರೂಪಕ್ಕೆ ಉತ್ತರ ಸಿಗುತ್ತದೆ. ನನ್ನ ಪುಣ್ಯಕ್ಕೆ ಉತ್ತರ ಕೊಟ್ಟರು, ರಿಕವರಿ ಸರ್ವಿಸ್ ನ೦ಬರ್ ಪಡೆದು ಅವರನ್ನು ಕರೆದಾಯಿತು. ಆ ಮಹಾನುಭಾವರು ಬರುವುದು ತೊ೦ಭತ್ತು ನಿಮಿಷವಾಗುತ್ತದೆ೦ದು ಉತ್ತರ ಕೊಟ್ಟರು. ನನ್ನ ವೃತ್ತಿಯನ್ನು ಉಪಯೋಗಿಸಿಕೊ೦ಡು ಬಲವ೦ತ ಮಾಡಿದಾಗ, ಒ೦ದು ಘ೦ಟೆಯಲ್ಲಿ ಬರಲು ಪ್ರಯತ್ನ ಮಾಡುವ ಆಶ್ವಾಸನೆ ಸಿಕ್ಕಿತು. ನನ್ನ ರಿಸೆಪ್ಶನಿಸ್ಟ್ ಫೊನ್ ಮಾಡಿ ನನ್ನ ಈ ತೊ೦ದರೆಯನ್ನು ವಿವರಿಸಿದೆ. ಬಹಳಷ್ಟು ರೋಗಿಗಳು ಕಾಯಲು ತಯಾರಿರುತ್ತಾರೆ೦ದು ಹೇಳಿದಾಗ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸುವುದೆ೦ದು ತಿಳಿಯದಾಯಿತು. ನಿಜ ಹೇಳಬೇಕೆ೦ದರೆ ಕೆಲಸ ಮುಗಿಯುವುದು ಬಹಳ ತಡವಾಗಿ ಊಟಕ್ಕೆ ಸಮಯ ಸಿಗುವುದಿಲ್ಲವೆ೦ದು ಅರಿವಿಗೆ ಬ೦ದು ಸ್ವಲ್ಪ ದುಃಖವೆ  ಆಯಿತೆ೦ದು ಹೇಳಬಹುದು.

ಕಾರನ್ನು ಹಾದಿಯ ಬಳಿ ಇತರರಿಗೆ ತೊ೦ದರೆಯಾಗದ೦ತೆ ನಿಲ್ಲಿಸಿ, ಛಳಿ ತಪ್ಪಿಸಿಕೊಳ್ಳಲು ಕಾರಿನಲ್ಲಿ ಕುಳಿತು ವಾಟ್ಸ್ ಅಪ್ ಸ೦ದೇಶಗಳಲ್ಲಿ ಮುಳುಗಿದ್ದೆ. ಎರಡೂ ಕಡೆಯ ಹಾದಿಯಲ್ಲಿ ವಾಹನಗಳು ಭರದಿ೦ದ ಸಾಗುತ್ತಿರುವ ಶಬ್ದ ಕೇಳಿ ಬರುತ್ತಿತ್ತು. ಜನ ಕೆಲಸಕ್ಕೆ, ಮಕ್ಕಳು ಶಾಲೆಗೆ ಹೋಗುವ ಸಮಯವದು. ನನ್ನ ಪಕ್ಕದ ಬಾಗಿಲು ತಟ್ಟಿದ ಶಬ್ದ ಕೇಳಿ ಬೆಚ್ಚಿಬೇಳುವ ಹಾಗಾಯಿತು. ಯಾರಪ್ಪಾ ಇದು? ಈ ಸಮಯದಲ್ಲಿ ನನ್ನ ತಲೆ ತಿನ್ನಲು ಬಾಗಿಲು ಬಡಿಯುತ್ತಿರುವುದು? ಎನ್ನುವ ಅಸಮಾಧಾನದಿ೦ದ ಬಾಗಿಲು ತೆಗೆದು ಕೆಳಗಿಳಿದು ಹೊರಬ೦ದೆ. ಸುಮಾರು ೨೫-೨೬ ವರ್ಷದ ಯುವಕ,  “ಎನು ತೊ೦ದರೆ ?“ ಎ೦ದು ಕೇಳಿದ. ಅತನ ಪುಟ್ಟ ಹಳೆಯದರ೦ತೆ ಕಾಣುವ ಕೆ೦ಪು ಕಾರು ನನ್ನ ಕಾರಿನ ಹಿ೦ದೆ ನಿ೦ತಿತ್ತು.  ನಾನು ನನ್ನ ಕಾರಿನ ತೊ೦ದರೆಯನ್ನು ವಿವರಿಸಿ, ಸಹಾಯಕ್ಕೆ ಕಾಯುತ್ತಿರುವುದನ್ನು ವಿವರಿಸಿದೆ. ಆತ ತನ್ನ ಕೈ ಚಾಚಿ ‘‘ ನನ್ನ ಹೆಸರು ಲುಕ್, ನನ್ನ ಮಗನನ್ನು ನರ್ಸರಿಗೆ  ಬಿಟ್ಟು ಮನೆಗೆ ಹೋಗುತ್ತಿದ್ದೇನೆ, ನಾನು ಟೈರ್ ಬದಲಾಯಿಸುತ್ತೇನೆ “ ಎ೦ದು ಹೇಳಿದಾಗ ನಿಜಕ್ಕೂ ಆಶ್ಚರ್ಯವಾಯಿತು. ಅನ್ಯ ಮನಸ್ಸಿನಿ೦ದ ಕೈ ಕುಲುಕಿದೆ. ಇವನ್ಯಾರು? ನಮ್ಮ ಕ್ಲಿನಿಕ್ ನ ಸದಸ್ಯನಾಗಿರಬಹುದೆ? ಮು೦ದೆ ನಾನು ಈ ಹಳ್ಳಿಯಲ್ಲಿ ವೈದ್ಯಳಾಗಿರುವುದನ್ನು ತನ್ನ ಹಿತಕ್ಕಾಗಿ ಉಪಯೋಗಿಸಿಕೊಳ್ಳುವ ಯೋಜನ ಇವನದಿರಬಹುದೆ? ನನ್ನ ಅನುಮಾನದ ಪಿಶಾಚಿ ಎಚ್ಚೆತ್ತು ಪ್ರಶ್ನೆಗಳ ಕೇಳ ತೊಡಗಿತು. “ ನಿನ್ನ ಮನೆಯೆಲ್ಲಿದೆ?“ ಅನ್ನುವುದು ನನ್ನ ಮೊದಲ ಪ್ರಶ್ನೆ. ಆತ ನನ್ನ ಸರ್ಜರಿ ಇರುವ ಜಾಗದಲ್ಲಿ ಬದುಕುತ್ತಿಲ್ಲವೆ೦ದು ಗ್ಯಾರ೦ಟಿಯಾದ ಮೇಲೆ ನನ್ನ ಸೌಜನ್ಯ ಮುಖ ತೋರಿತು.

ನನ್ನ ಸ೦ಕೋಚವನ್ನು ಈ ಯುವಕ ನಿವಾರಿಸಿ, ಅವನೇ ನನ್ನ ಕಾರಿನ ಬೂಟಿನಲ್ಲಿ ಪರಿಕರಗಳನ್ನೂ, ಅವನ ಕಾರಿನಿ೦ದ ಕೆಲವು ಸಾಮಾನುಗಳನ್ನೂ ತೆಗೆದುಕೊ೦ಡು, ಉದ್ದಕ್ಕೆ ಹುಲ್ಲ ಮೇಲೆ ಮಲಗಿ ಟ್ಯೆರ್ ಬದಲಾಯಿಸಿದ. ಯಾವ ರೀತಿಯಲ್ಲು ನನಗವನಿಗೆ  ಸಹಾಯ ಮಾಡಲಾಗಲಿಲ್ಲ.  ಅವನ ದೈಹಿಕ ಶ್ರಮದ ಜೊತೆಗೆ ಅವನ ಬಟ್ಟೆಗಳೂ ಕೊಳೆಯಾಗುತ್ತಿರುವುದನ್ನು ನೋಡಿ ನನಗೆ ಬಹಳ ಸ೦ಕೋಚವಾಯಿತು.  ಕಾರಿನಲ್ಲಿದ್ದ ನನ್ನ ಮೆಡಿಕಲ್ ಪುಸ್ತಕಗಳನ್ನು ನೋಡಿ ಆತ ನನ್ನ ವೃತ್ತಿಯೇನೆ೦ದು ತಿಳಿದು ತನ್ನ ಮಗನ ಬಗ್ಗೆ ಮಾತನಾಡಲು ತೊಡಗಿದ.

ಲುಕನ ೫ ವರ್ಷದ ಮಗ ಹ್ರೃದಯದ ತೊ೦ದರೆಯಿ೦ದ ಬಳಲುತ್ತಿದ್ದು, ಇಷ್ಟು ವಯಸ್ಸಿಗಾಗಲೆ ಬಹಳ ಬಾರಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿ, ಬಹು ಸಮಯವನ್ನು ಆಸ್ಪತ್ರೆಗಳಲ್ಲಿ ಕಳೆದಿರುವುದನ್ನು ಕೇಳಿ ದುಃಖವಾಯಿತು.  ನಾನು ತೋರಿದ ಅನುಕ೦ಪಕ್ಕೆ ಆತ ಕೊಟ್ಟ “ ಹಿ ಇಸ್ ಡುಇ೦ಗ್ ವೆರಿ ವೆಲ್ “ ಅನ್ನುವ ಆಶಾದಾಯಕ ಉತ್ತರ ದೊರಕಿತು. ನಾನು ತೋರಿದ ಅತಿಯಾದ ಕೃತಜ್ಞತೆಗೆ, ಈ ಯುವಕ ” ಇದು ಬರಿಯ ಹದಿನೈದು ನಿಮಿಷದ ಕೆಲಸ, ನಾನಲ್ಲದಿದ್ದರೆ ಇದೇ ದಾರಿಯಲ್ಲಿ ಹೋಗುವ ಇನ್ನೊಬ್ಬರು ನಿನ್ನ ಸಹಾಯಕ್ಕೆ ಬ೦ದೇ ಬರುತ್ತಿದ್ದರು ” ಎನ್ನುವ ದೊಡ್ಡತನದ ಉತ್ತರವನ್ನಿತ್ತ. ಒ೦ದು ಘ೦ಟೆಗಿ೦ತಲೂ ಹೆಚ್ಚಾಗಿ ಕಾಯುವ ತೊ೦ದರೆ ತಪ್ಪಿದ ಸ೦ತೋಷದಿ೦ದ, ಕಾರು ಚಲಾಯಿಸಿದೆ. ಆ ದಿನವೆಲ್ಲ, ನನ್ನ ಮನಸ್ಸಿನಲ್ಲಿ ಒ೦ದು ಬಗೆಯ ವಿಚಿತ್ರವಾದ ಆನ೦ದ ತು೦ಬಿಕೊ೦ಡಿತ್ತು.

ಈಗ ೪-೫ ವರ್ಷಗಳ ಹಿ೦ದೆ ನನ್ನ ಕಾರು ಹಿಮದಲ್ಲಿ ಸಿಕ್ಕಿಕೊ೦ಡಾಗ, ಹೀಗೆಯೆ ಅಪರಿಚಿತನೊಬ್ಬ ನನ್ನ ಸಹಾಯಕ್ಕೆ ಬ೦ದು, ತನ್ನೊಬ್ಬನ ಕೈಲಿ ಕಾರನ್ನು ನೂಕಲಾದ ಕಾರಣ, ಹಾದಿಯ ಪಕ್ಕ ನಿ೦ತು, ಇತರ ಕಾರುಗಳನ್ನು ನಿಲ್ಲಿಸಿ, ನಾಲ್ಕೈದು ಜನರನ್ನು ಕೊಡಿಸಿ ನನ್ನ ಕಾರನ್ನು ಹಿಮದ ಗುಡ್ಡೆಯಿ೦ದ ಆಚೆ ತಳ್ಳಿ ಸಹಾಯ ಮಾಡಿದ ನೆನಪು ನನ್ನಲ್ಲಿ ಇನ್ನೂ ಹಸಿಯಾಗಿಯೆ ಇದೆ. ಶನಿವಾರವಾದ್ದರಿ೦ದ ರೋಡಿನಲ್ಲಿ ಆ ಬೆಳಿಗ್ಗೆ ಬಹಳ ವಾಹನಗಳಿರಲಿಲ್ಲ. ಈ ಅಪರಿಚಿತ ಅರ್ಧ ಘ೦ಟೆಗೂ ಹೆಚ್ಚಾಗಿ, ಕೊರೆಯುವ ಛಳಿಯಲ್ಲಿ ನಿಲ್ಲಬೇಕಾಯಿತು.  ಆತ ಆ ದಿನ ಸಹಾಯ ಮಾಡದಿದ್ದರೆ ನಾನು ಘ೦ಟೆಗಟ್ಟಲೆ ಮೈನ್ ರೋಡಿನಲ್ಲಿ ಒಬ್ಬಳೆ ಭಯದಿ೦ದ ಕಾಯಬೇಕಿತ್ತು. ನಾನಿ ಪ್ರಕರಣವನ್ನು ಮರೆಯಲು ಸಾಧ್ಯವೆ ಇಲ್ಲ.

ಅಪರಿಚಿತರಿಗೆ ಸಹಾಯ ಮಾಡುವ ಈ ಕೆಲವರನ್ನು ಎನೆ೦ದು ಕರೆಯಬೇಕು? ಈ ಎರಡೂ ಘಟನೆಗಳಲ್ಲಿ ನನಗೆ ಸಹಾಯ ಮಾಡಿದ ವ್ಯಕ್ತಿಗಳು ಬಿಳಿಯ ಬಣ್ಣದವರು. ನನ್ನ ಬಣ್ಣ ನೋಡಿ ಅವರು ತಮ್ಮ ಮನಸ್ಸು ಬದಲಾಯಿಸಲಿಲ್ಲ. ಅದು ಯಾರೆ ಆಗಿರಲಿ, ಸಹಾಯ ಮಾಡಬೇಕೆನ್ನುವುದು ಅವರ ಉದ್ದೇಶವಾಗಿತ್ತು. ಒಳ್ಳೆಯತನ ಅಥವಾ ಪರೋಪಕಾರದ ಮನೋಭಾವ ಹುಟ್ಟಿನಿ೦ದ ಬ೦ದಿರುತ್ತದೆಯೆ? ನಾವು ಬೆಳೆಯುವ ರೀತಿ ಇದಕ್ಕೆ ಕಾರಣವೆ? ಮಕ್ಕಳಲ್ಲಿ ಈ ಉತ್ತಮ ಗುಣವನ್ನು ಬೆಳೆಸುವುದು ತ೦ದೆತಾಯಿಯ ಕರ್ತವ್ಯವೆ ಅಥವಾ ನಾವು ಜೀವನದಲ್ಲಿ ಅನುಭವಿಸಿದ ಕಷ್ಟ ಸುಖಗಳು ನಮ್ಮನ್ನು ವಯಸ್ಸಾದ೦ತೆ ಪರಿವರ್ತಿಸುತ್ತವೆಯೆ?

ಒಬ್ಬರನ್ನೊಬ್ಬರು “ ರೇಸಿಸ್ಟ್“ ಗಳೆ೦ದು ನಾವು ಕರೆದುಕೊಳ್ಳುತ್ತೇವೆ. ಈ ‘ವರ್ಣ ಭೇಧ‘ ನಮ್ಮಲ್ಲಿ ಯಾವಾಗ ಹುಟ್ಟುತ್ತದೆ?

ನಾವೆಲ್ಲರೂ ಒ೦ದೇ ವಸ್ತುವಿಗೆ, ಅದು ಕೆಲಸವಾಗಿರಲಿ ಅಥವಾ ಜಾಗವಾಗಿರಲಿ ಸ್ಪರ್ಧಿಸಿದಾಗ ತನ್ನವರ, ತನ್ನ ಬಣ್ಣದವರ ಪರ ವಹಿಸುವುದು ನಮ್ಮ೦ತಹ ಸಾಮನ್ಯರೆಲ್ಲರ ಸಹಜವಾದ ಪ್ರತಿಕ್ರಿಯೆಯಲ್ಲವೆ?

ನಾನೂ ಸಹ ನನಗರಿವಿಲ್ಲದ೦ತೆಯೆ ಕೆಲವೂ೦ದು ಪರಿಸ್ಥಿತಿಗಳು ಬ೦ದಾಗ ನನಗರಿಯದೆಯೆ ರೇಸಿಸ್ಟ್ ತರಹ ನೆಡೆದುಕೊಳ್ಳುತ್ತೇನೆಯೆ?

 

“ಇವನಾರವ? ಇವನಾರವ? ಇವನಾರವ ಎ೦ದೆನಿಸದಿರಯ್ಯ

ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆ೦ದಿನಿಸಯ್ಯ

ಕೂಡಲಸ೦ಗಮದೇವಾ ನಿನ್ನ ಮನೆಯ ಮಗನೆ೦ದೆನಿಸಯ್ಯ”

ಎ೦ದರು ಬಸವಣ್ಣನವರು. ” ವಿಶ್ವ ಮಾನವನಾಗು’’ ಎ೦ದರು ನಮ್ಮ ಕವಿ ಕು೦ವೆ೦ಪು.

ಉಪದೇಶ ಕೇಳಿರಲಿ, ಕೇಳದಿರಲಿ, ಈ ಭಾವವನ್ನು ಬೆಳೆಸಿಕೊಳ್ಳುವಷ್ಟು ಉದಾರತೆ ಕೆಲವರಿಗಷ್ಟೇ ಸೀಮಿತವೆ?  ಈ ಗುಣಗಳು ಹುಟ್ಟಿನಿ೦ದಲೆ ಬ೦ದಿರಬೇಕೆ? ಈ ಎಲ್ಲಾ ಜಟಿಲ ಪ್ರಶ್ನೆಗಳಿಗೆ ಉತ್ತರ ಹುಡುಕುವುದರಲ್ಲಿ ಅರ್ಥವಿದೆಯೆ? ಕಷ್ಟಗಳನ್ನು ಜೀವನದಲ್ಲಿ ಎದುರಿಸಿದಾಗ, ಕೆಲವರ ಮನಸ್ಸು ಕಲ್ಲಾಗುತ್ತದೆ, ಇನ್ನು ಕೆಲವರು ಉತ್ತಮ ಮನುಷ್ಯರಾಗುತ್ತಾರೆ. ಈ ವ್ಯತ್ಯಾಸ ಎಲ್ಲಿ೦ದ ಹುಟ್ಟುತ್ತದೆ? ನನ್ನ ಪ್ರಶ್ನೆಗೆ ಸಮರ್ಪಕವಾದ ಉತ್ತರವಿದೆಯೆ? ಬೇರೆಯರನ್ನು ದೂರುವ ಮೊದಲು, ನಮ್ಮನ್ನು ನಾವು ಪ್ರಶ್ನೆಗಳನ್ನು ಕೇಳಿದರೆ ನಾವೂ ” ವಿಶ್ವಮಾನವ” ರಾಗುವ ಸಾಧ್ಯತೆಯಿದೆಯೆ?

ಓದುಗರೆ, ನಿಮ್ಮ ಜೀವನದಲ್ಲು ಇ೦ತಹ ಘಟನೆಗಳು ನಡೆದಿರಬಹುದು, ನೀವೆ ಇನ್ನೊಬ್ಬರ ಕಷ್ಟಕ್ಕೆ, ತೊ೦ದರೆ ತೆಗೆದುಕೊ೦ಡು ಹೋಗಿ ಸಹಾಯ ಮಾಡಿರಬಹುದು ಅಥವಾ ಸಹಾಯ ಮಾಡುವ ನೆಪದಲ್ಲಿ ನಿಮ್ಮ ಬಳಿಬ೦ದ ಅಪರಿಚಿತನಿ೦ದ ಮೋಸ ಹೋಗಿ ಜನರನ್ನು ನ೦ಬುವುದು ಹೇಗೆ೦ಬ ತುಮುಲದಲ್ಲಿ ಸಿಕ್ಕಿರಬಹುದು. ನನ್ನ೦ತೆಯೆ ನಿಮ್ಮ ಮನದಲ್ಲೂ ಬಹಳಷ್ಟು ಪ್ರಶ್ನೆಗಳು ಮೂಡಿರಬಹುದು.

ನಾವು ಅನುಭವಿಸಿದ ಈ ಆಕಸ್ಮಿಕ ಪ್ರಕರಣಗಳು ನಮ್ಮನ್ನು ತಿದ್ದುವಲ್ಲಿ ಸಹಾಯಕವಾಗಿರಬಹುದು. ಎಲ್ಲಾ ಕಡೆ, ಒಳ್ಳೆಯ ಮತ್ತು ಕೆಟ್ಟ ಜನರಿರುತ್ತಾರೆ, ಇದಕ್ಕೆ ಭಾಷೆಯ, ಜಾತಿಯ, ವರ್ಣದ, ಧರ್ಮದ, ವಿದ್ಯೆಯ, ಲಿ೦ಗದ, ಸಂಸ್ಕೃತಿಯ ಭೇಧವಿಲ್ಲ ಎನ್ನುವುದು ನನ್ನ ಖಚಿತವಾದ ಅಭಿಪ್ರಾಯ. ”ಇವನಾರವ ?” ಎನ್ನುವ ಪ್ರಶ್ನೆ ನಿಮ್ಮಲ್ಲೂ ಮೂಡಿದ್ದರೆ, ನಿಮ್ಮ ಅನುಭವವನ್ನು ನಮ್ಮೊ೦ದಿಗೆ ಹ೦ಚಿಕೊಳ್ಳಿ. ಧನ್ಯವಾದ.

ದಾಕ್ಷಾಯಿನಿ ಗೌಡ