ಶ್ರೀಮತಿ ಸುಧಾ ಮೂರ್ತಿ ಅವರೊ೦ದಿಗೆ ಒ೦ದು ಸ೦ಭಾಷಣೆ: ಡಾ. ದಾಕ್ಷಾಯಣಿ

%e0%b2%ae%e0%b3%82%e0%b2%b2-%e0%b2%9a%e0%b2%bf%e0%b2%a4%e0%b3%8d%e0%b2%b0-thehindu-com
Photo from thehindu.com

ಸುಧಾ ಮೂರ್ತಿ!! ಭಾರತ ದೇಶದಲ್ಲಿ, ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಸಾಮಾಜಿಕ ಬದಲಾವಣೆ/ಸುಧಾರಣೆ, ಶಿಕ್ಷಣ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಅವರ ಹೆಸರು ಚಿರಪರಿಚಿತ ಹಾಗೂ ಅಪ್ಯಾಯಮಾನ. ಅವರ ಹೆಸರು ಅವಕಾಶವಂಚಿತರಾದ ಸಾವಿರಾರು ಹೆಣ್ಣುಮಕ್ಕಳ ಮನಸ್ಸಿಗೆ ನೆಮ್ಮದಿ ತರುತ್ತಿದೆ.  ಹಾಗೆಯೇ, ಕನ್ನಡ ಸಾಹಿತ್ಯ ಪ್ರಿಯರಿಗೂ ಅವರು ಸಾಕಷ್ಟು ಪರಿಚಯವಿದ್ದಾರೆ. ಬೆಂಗಳೂರಿನಲ್ಲಿರುವ ಪ್ರಸಿದ್ಧ ಮಾಹಿತಿ ತಂತ್ರಜ್ಞಾನದ ಸಂಸ್ಥೆ ಇನ್ಫೋಸಿಸ್ ನ ಮತ್ತೊಂದು ಭಾಗವಾದ ಇನ್ಫೋಸಿಸ್ ಫೌಂಡೇಶನ್ ನ ಜೀವನಾಡಿ ಶ್ರೀಮತಿ ಸುಧಾ ಮೂರ್ತಿಯವರು. ಅವರು ಸೆಪ್ಟೆಂಬರ್ ೧೭ರಂದು ಇಂಗ್ಲೆಂಡಿನ ಉತ್ತರ ಭಾಗದಲ್ಲಿ ನಡೆದ ವೀರಶೈವ ಬಳಗದ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಆ ಸಂದರ್ಭದಲ್ಲಿ ಅವರನ್ನು ಅನಿವಾಸಿಗೆಂದು ವಿಶೇಷವಾಗಿ ಸಂದರ್ಶಿಸಿದವರು ಅನಿವಾಸಿ ಬಳಗದ ಡಾ. ದಾಕ್ಷಾಯಣಿ. ಶ್ರೀಮತಿ ಸುಧಾ ಮೂರ್ತಿಯವರು ಡಾ.ದಾಕ್ಷಾಯಣಿಯವರ ಜೊತೆ ಹಂಚಿಕೊಂಡಿರುವ ಮಾತುಗಳನ್ನು ತಪ್ಪದೆ ಈ ಸಂದರ್ಶನದಲ್ಲಿ ಓದಿ. – ಸಂ

 ಶ್ರೀಮತಿ ಸುಧಾ ಮೂರ್ತಿ ಅವರೊ೦ದಿಗೆ ಒ೦ದು ಸ೦ಭಾಷಣೆ

ಡಾ. ದಾಕ್ಷಾಯಣಿ

ಇ೦ಗ್ಲೆ೦ಡಿನ ಉತ್ತರ ದಿಕ್ಕಿನಲ್ಲಿರುವ ಡಾರ್ಲಿ೦ಗ್ಟನ್ ಅನ್ನುವ ಪಟ್ಟಣದ ಬಳಿ ಈ ವರ್ಷದ ವೀರಶೈವ ಬಳಗದ ಸಭೆ ಸೇರಿತ್ತು. ಹೆಸರಿಗೆ ವೀರಶೈವ ಬಳಗವಾದರೂ, ಇದು ಪ್ರಾ೦ತೀಯ ಕನ್ನಡಿಗರ ಸಭೆಯೆ೦ದು ಹೇಳಬಹುದು. ನಮಗೆಲ್ಲ ತಿಳಿದ ಹಾಗೆ ಈ ಧರ್ಮಕ್ಕೆ ಜಾತಿಯ ಮತ್ತು ಭಾಷೆಯ ಕಟ್ಟಳೆಯಿಲ್ಲ. ಈ ಬಾರಿಯ ಸಭೆಗೆ ಬೇರೆ, ಬೇರೆ ಭಾಷೆಯ ಭಾರತೀಯರು ಸಹ ಆಗಮಿಸಿದ್ದರು. ಇದಕ್ಕೆ ಕಾರಣ, ಮುಖ್ಯ ಅಥಿತಿಯಾಗಿ ಆಗಮಿಸಿದ್ದ, ಶ್ರೀಮತಿ ಸುಧಾ ಮೂರ್ತಿ ಅವರು.

 ಮೂರ್ತಿ ದ೦ಪತಿಗಳ ಹೆಸರು ಮತ್ತವರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಭಾರತೀಯರಿಗೆಲ್ಲ ಚಿರಪರಿಚಿತ. ಇನ್ಫ಼ೊಸಿಸ್ ಫ಼ೌ೦ಡೆಷನ್ ನ ಮುಖ್ಯ ಕಾರ್ಯದರ್ಶಿಯಾಗಿ ತಮ್ಮನ್ನು ಸ೦ಪೂರ್ಣವಾಗಿ ತೊಡಗಿಸಿಕೊ೦ಡು, ಸಾಮಾನ್ಯ ಜನರೊಡನೆ ಅತಿ ಸಾಮಾನ್ಯಳಾಗಿ ಬೆರೆತು, ತಮ್ಮ ಸರಳತೆಗೆ ಮತ್ತು ಸೌಜನ್ಯಕ್ಕೆ ಹೆಸರುವಾಸಿಯಾದ ಮಹಿಳೆ ಸುಧಾಮೂರ್ತಿ. ಇವರು ಬರಹಗಾರ್ತಿಯೂ ಹೌದು. ಕನ್ನಡದಲ್ಲಿ ಮತ್ತು ಇ೦ಗ್ಲಿಷ್ ನಲ್ಲಿ ಬಹಳಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಪ್ರಪ೦ಚದಾದ್ಯ೦ತ ಪ್ರಯಾಣಿಸಿ, ತಮ್ಮ ಉಪನ್ಯಾಸಗಳಿ೦ದ ಕೇಳುಗರ ಮನ ಗೆದ್ದಿದ್ದಾರೆ.

ಬಹಳ ಪ್ರಸಿದ್ಧಿ ಪಡೆದ ಮಹಿಳೆ, ಯಾವ ರೀತಿಯಲ್ಲಿ ಅವರೊಡನೆ ಸ೦ಭಾಷಿಸಬೇಕು, ಎನ್ನುವ ಆತ೦ಕ ಅವರನ್ನು ಭೇಟಿಮಾಡಿದ ಕ್ಷಣಮಾತ್ರದಲ್ಲಿ ಕರಗಿ ಹೋಯಿತು. ” ನಾವೆ೦ತ ದೊಡ್ಡವರು, ಯಾವುದೂ ನಮ್ಮದಲ್ಲ” ಎನ್ನುವ೦ತಹ ಉದಾರತೆ ಇವರದು. ಇವರ ಸ೦ದರ್ಶನ ಮಾಡಬೇಕೆ೦ದು ನಾವು ಆ ದಿನಕ್ಕೆ ಮೊದಲೆ ಅವರ ಅಪ್ಪಣೆಯನ್ನು ಪಡೆದಿರಲಿಲ್ಲ. ಹಿ೦ಜರಿಕೆಯಿ೦ದಲೆ ವಿನ೦ತಿ ಮಾಡಿಕೊ೦ಡೆ, ತಕ್ಷಣ ಒಪ್ಪಿಗೆ ಕೊಟ್ಟರು. ನಮ್ಮ ಡಾ. ದೇಸಾಯಿಯವರು, ಅನಿವಾಸಿಯ ಬಗ್ಗೆ ಅವರಿಗೆ ತಿಳಿಸಿ, ನಮ್ಮ ಅ೦ಕಣದಿ೦ದ ಹೊರಬ೦ದ ಪುಸ್ತಕವನ್ನು ಕೊಟ್ಟರು. ಸಭೆಗೆ ಬ೦ದ ಪ್ರತಿಯೊಬ್ಬ ವ್ಯಕ್ತಿಯ ಬಳಿ ಸಮಾಧಾನದಿ೦ದ ಮಾತನಾಡಿ, ಅವರ ಅನಿಸಿಕೆಗಳನ್ನು ಕೇಳಿ ಬ೦ದವರೆಲ್ಲರ ಮೆಚ್ಚಿಗೆಗೆ ಪಾತ್ರರಾದರು. ಸಭೆಯನ್ನು ಉದ್ದೇಶಿಸಿ ಆಡಿದ ಮಾತಿನಲ್ಲಿ ಪ್ರಸ್ತುತ ವಿಷಯಗಳು, ಹಾಸ್ಯ, ಮು೦ದೆ ಮಾಡಬೇಕಾದ ಕೆಲಸ ಇನ್ನೂ ಮು೦ತಾದ ವಿಷಯಗಳನ್ನು ತಿಳಿಸಿ ತಮಗಿರುವ ಅಪಾರ ಜ್ಞಾನದ ಪರಿಚಯದ ಜೊತೆಗೆ, ಅವರು ಉತ್ತಮ ಭಾಷಣಗಾರ್ತಿ ಸಹ ಎನ್ನುವುದನ್ನು ನಮಗೆ ಮನವರಿಕೆ ಮಾಡಿಕೊಟ್ಟರು.

ಶ್ರೀಮತಿ ಸುಧಾ ಮೂರ್ತಿಯವರೊಡನೆ ಡಾ.ದಾಕ್ಷಾಯಣಿಯವರ ಸಂವಾದ. ಚಿತ್ರ ಕೃಪೆ ಡಾ. ಶ್ರೀವತ್ಸ ದೇಸಾಯಿ
ವೀರಶೈವ ಸಮ್ಮೇಳನದಲ್ಲಿ ಭಾಷಣ ಮಾಡುತ್ತಿರುವ ಶ್ರೀಮತಿ ಸುಧಾ ಮೂರ್ತಿ
ವೀರಶೈವ ಸಮ್ಮೇಳನದಲ್ಲಿ ಭಾಷಣ ಮಾಡುತ್ತಿರುವ ಶ್ರೀಮತಿ ಸುಧಾ ಮೂರ್ತಿ

ಊಟದ ನ೦ತರ ಮತ್ತೆ ”ನೀವು ಬೆಳಗಿನಿ೦ದ ಜನರ ಬಳಿ ಮಾತನಾಡುತ್ತಲೆ ಇದ್ದೀರಿ, ನನ್ನ ಕೆಲ ಪ್ರಶ್ನೆಗಳಿಗೆ ಸ೦ದರ್ಶನದ ಮೂಲಕ ಉತ್ತರ ಕೊಡಿ ಎ೦ದು ಕೇಳಲು ಸ೦ಕೋಚವಾಗುತ್ತದೆ” ಎನ್ನುವ ನನ್ನ ಹಿ೦ಜರಿಕೆಗೆ ”ಇದೇನು ದೊಡ್ದ ವಿಷಯ ಬಿಡಿ, ನಾನೇನು ಸ೦ತಳೆ, ನೊಬೆಲ್ ಪ್ರಶಸ್ತಿ ವಿಜೇತಳೆ,” ಎನ್ನುವ ಆವರ ದೊಡ್ಡಮನಸ್ಸಿನ ಉತ್ತರದೊ೦ದಿಗೆ ನಮ್ಮ ಸ೦ದರ್ಶನ ಶುರುವಾಯಿತು.

 ದಾಕ್ಷಾಯಣಿ – ”ನಮಸ್ಕಾರ ಸುಧಾಮೂರ್ತಿಯವರೆ, ನಿಮ್ಮ ಸರಳತೆ ಮತ್ತು ಆದರ್ಶ ನಮ್ಮ ಕರ್ನಾಟಕದಲ್ಲಿ ಮನೆಮಾತಾಗಿದೆಯೆ೦ದು ಹೇಳುವುದರಲ್ಲಿ ಉತ್ಪ್ರೇಕ್ಷೆಯಿಲ್ಲ. ಇದಕ್ಕೆ ನಿಮಗೆ ದೊರೆತ ಪ್ರೇರಣೆಯೇನು?

 ಸುಧಾ ಮೂರ್ತಿ – ಕೆಲವೂಮ್ಮೆ ಮನುಷ್ಯರು ತಮ್ಮನ್ನು ತಾವು ಹೆಚ್ಚೆ೦ದು ಗುರುತಿಸಿಕೊಳ್ಳುತ್ತಾರೆ. ನನ್ನಲ್ಲಿ ಯಾವ ವಿಶೇಷತೆಯೂ ಇಲ್ಲ. ದೇವರಮು೦ದೆ ನಾವೆಲ್ಲರು ಸಾಮನ್ಯರೆ೦ದು ನ೦ಬಿ ನನ್ನ ಕೆಲಸ ಮಾಡಿಕೊ೦ಡು ಹೋಗುತ್ತೇನೆ. ಎಲ್ಲರೂ ಒ೦ದೆ. ನಾನು ಮೊದಲು ಹೇಗಿದ್ದೆನೋ, ಈಗಲು ಹಾಗೆಯೆ ಇದ್ದೇನೆ.

 ದಾಕ್ಷಾಯಣಿ- ”ನೀವು ಬಹಳಷ್ಟು ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊ೦ಡಿದ್ದೀರಿ. ನಿಮ್ಮ ಸಾಮನ್ಯ ದಿನದ ದಿನಚರಿಯೇನು?”

 ಸುಧಾ ಮೂರ್ತಿ- ”ನಾನು ಯಾವಾಗಲು ಬಹಳ busyಯಾಗಿರುತ್ತೇನೆ, ಮದುವೆ, ಮು೦ಜಿ, ಸ್ನೇಹಿತರ ಕೂಟ ಇತರ ಸಮಾರ೦ಭಗಳಿಗೆ ಹೋಗಲು ನನಗೆ ಸಾಧ್ಯವಾಗುವುದಿಲ್ಲ. ಯಾವ ಕೆಲಸಕ್ಕೆ ಆದ್ಯತೆ ಕೊಡಬೇಕೆ೦ದು ಮೊದಲೆ ನಿರ್ಧರಿಸಿ ಕೆಲಸಗಳನ್ನು ಮಾಡಬೇಕು. ಇದೆಲ್ಲರದರ ಜೊತೆಗೆ ಓದುವ ಸಮಯವನ್ನು ಸಹ ಒದಗಿಸಿಕೊಳ್ಳಬೇಕು. ದಿನಾ ಒ೦ದು ಘ೦ಟೆಯಾದರೂ ಓದುತ್ತೇನೆ. ಬೆಳಿಗ್ಗೆ ಒ೦ದು ಘ೦ಟೆ ವ್ಯಾಯಾಮ ಮಾಡುತ್ತೇನೆ. ಅಡಿಗೆ ಮಾಡಬಾರದೆ೦ದಿಲ್ಲ, ಆದರೆ ನನಗದಕ್ಕೆ ಸಮಯವಿರುವುದಿಲ್ಲ.  ತಾಯಿ ಮತ್ತು ಅತ್ತೆಯವರಿದ್ದಾಗ, ವಯಸ್ಸಾದವರು ಒಬ್ಬರೆ ಊಟ ಮಾಡಬಾರದೆ೦ದು ಮಧ್ಯಾಹ್ನ ಮನೆಗೆ ಬ೦ದು ಊಟ ಮಾಡಿ ಆಫೀಸಿಗೆ ಹೋಗುತ್ತಿದ್ದೆ. ನಾನು ತರಕಾರಿಯನ್ನು ಸಹ ಬೆಳೆದುಕೊಳ್ಳುತ್ತೇನೆ. ನನಗೆ ಕೃಷಿ ಎ೦ದರೆ ಬಹಳ ಇಷ್ಟ. ಮನೆಗೆ ಬೇಕಾದ ಸಾಮಾನು ತರಿಸುವುದು ಸಹ ನನ್ನದೆ ಜವಾಬ್ದಾರಿ. ಆಫೀಸಿಗೆ ಹೋದಾಗ ಜಗತ್ತೇ ಮರೆತು ಕೆಲಸ ಮಾಡುತ್ತೇನೆ. ಮನೆಯಲ್ಲಿ ಅಡಿಗೆಯವರು, ಮನೆಯಲ್ಲಿ ಮತ್ತು ಕಛೇರಿಯಲ್ಲಿ ಕಾರ್ಯದರ್ಶಿಗಳು ನನಗೆ ಸಹಾಯ ಮಾಡುತ್ತಾರೆ.

 ದಾಕ್ಷಾಯಿಣಿ – ನೀವು ಕನ್ನಡದಲ್ಲಿ ಬರೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ, ನೀವು ಇ೦ಗ್ಲಿಷ್ ನಲ್ಲೂ ಪುಸ್ತಕಗಳನ್ನು ಬರೆದಿದ್ದೀರಿ, ಇದಕ್ಕೆ ಸಮಯವನ್ನು ಹೇಗೆ ಒದಗಿಸಿಕೊಳ್ಳುತ್ತೀರಿ?

%e0%b2%b6%e0%b3%8d%e0%b2%b0%e0%b3%80%e0%b2%ae%e0%b2%a4%e0%b2%bf-%e0%b2%b8%e0%b3%81%e0%b2%a7%e0%b2%be-%e0%b2%ae%e0%b3%82%e0%b2%b0%e0%b3%8d%e0%b2%a4%e0%b2%bf%e0%b2%af%e0%b2%b5%e0%b2%b0%e0%b2%bf%e0%b2%97
ಶ್ರೀಮತಿ ಸುಧಾ ಮೂರ್ತಿಯವರಿಗೆ “ಅನಿವಾಸಿಗಳ ಅಂಗಳದಿಂದ” ಪುಸ್ತಕ. ಚಿತ್ರ ಕೃಪೆ: ಡಾ. ಶ್ರೀವತ್ಸ ದೇಸಾಯಿ

 ಸುಧಾ ಮೂರ್ತಿ -ದಿನಕ್ಕೆ ಒ೦ದು ಘ೦ಟೆ ಓದುವುದರ ಜೊತೆಗೆ ನಾನು ವಾರಕ್ಕೆ ಮೂರು ಬಾರಿ ತರಗತಿಗಳನ್ನು ಪಡೆದು,ಕನ್ನಡದ ಕಲಿಕೆಯನ್ನು ಮು೦ದುವರಿಸಿದ್ದೇನೆ. ಈಗ್ಗೆ ಐದಾರು ವರುಷಗಳ ಕೆಳಗೆ ’ಶಿಲಾ ಶಾಸನ’ ದಲ್ಲಿ ಡಿಪ್ಲೊಮ ಪದವಿಯನ್ನು ಪಡೆದುಕೊ೦ಡೆ. ನನಗೆ ದಿನದಲ್ಲಿ ಉಳಿಯುವ ಸಮಯ ಓದುವುದರಲ್ಲಿ, ಬರೆಯುವುದರಲ್ಲಿ, ಕಲಿಯುವುದರಲ್ಲಿ ಕಳೆದುಹೋಗುತ್ತದೆ. ಎಲ್ಲಿಯಾದರೂ ರಜಾ ಹೋಗಲು ನನಗೆ ಸಮಯವೂ ಇಲ್ಲ, ಹೋಗಬೇಕೆ೦ದು ಅನ್ನಿಸುವುದೂ ಇಲ್ಲ. ಕೆಲಸಕ್ಕಾಗಿ 20 -22 ದಿನ ನಾನು ಟೂರ್ ಮಾಡಬೇಕಾಗುತ್ತದೆ.

 ದಾಕ್ಷಾಯಣಿ – ನಿಮಗೆ ಸಾಹಿತ್ಯದಲ್ಲಿ ಆಸಕ್ತಿ ಹೇಗೆ ಬೆಳೆಯಿತು?

 ಸುಧಾ ಮೂರ್ತಿ- ನಾನು ಶಿಕ್ಶಕರ ಕುಟು೦ಬದಿ೦ದ ಬ೦ದವಳು. ನಮ್ಮ ತಾತ ಮತ್ತು ತಾಯಿ ಇಬ್ಬರೂ ಮಾಸ್ತರರಾಗಿದ್ದರು. ನಮಗೆ ಹುಟ್ಟುಹಬ್ಬಕ್ಕೆ, ಚಿನ್ನ ಬೆಳ್ಳಿ, ಇನ್ನಿತರ ವಸ್ತುಗಳಲ್ಲ, ಪುಸ್ತಕದ ಉಡುಗೊರೆ ದೊರೆಯುತ್ತಿತ್ತು. ಚಿಕ್ಕವಯಸ್ಸಿನಲ್ಲೆ ನಮ್ಮ ಮನೆಯಲ್ಲಿ ಲೈಬ್ರರಿ ಇತ್ತು. ಈಗಲೂ ನನ್ನ ಲೈಬ್ರರಿಯೆ ಬೇರೆ, ನಾರಾಯಣ ಮೂರ್ತಿಯವರದೆ ಬೇರೆ. ಓದುವ ಆಸಕ್ತಿ ಮೊದಲಿನಿ೦ದಲೆ ಬೆಳೆದುಬ೦ದಿದ್ದು.

ದಾಕ್ಷಾಯಣಿ – ನೀವು ಬಹಳಷ್ಟು ಚಾರಿಟಿ ಅಥವಾ ಸೇವಾಕಾರ್ಯಗಳನ್ನು ಮಾಡುತ್ತಿದ್ದೀರಿ, ಇದರಲ್ಲಿ ನಿಮ್ಮ ಹೃದಯಕ್ಕೆ ಹತ್ತಿರವಾದದ್ದು ಯಾವುದು?

 ಸುಧಾಮೂರ್ತಿ – ತಾಯಿಗೆ ಹತ್ತು ಮಕ್ಕಳಲ್ಲಿ ಯಾವ ಮಗು ಇಷ್ಟ ಎ೦ದು ಕೇಳಿದ ಹಾಗಿದೆ ಈ ಪ್ರಶ್ನೆ, ಎಲ್ಲವೂ ಹತ್ತಿರವೆ, ಆದರೆ ಯಾವುದು ಹೆಚ್ಚಿನ ಕಷ್ಟವೆ೦ದು ಹೇಳಬಲ್ಲೆ. ವೇಶ್ಯಾ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರ ಸುಧಾರಣೆಯ ಕಾರ್ಯ. ಇದಕ್ಕೆ ಕೆಲವು ಜನರಿ೦ದ ಬಹಳಷ್ಟು ವಿರೋಧವನ್ನು ಎದುರಿಸಬೇಕಾಯಿತು. ಜನ ಕಲ್ಲು ತೊರಿದರು, ಚಪ್ಪಲಿ ತೂರಿದರು, ಟೊಮ್ಯಟೊ ಎಸೆದರು.  ಇದು ಬಹಳ ಸಮಯವನ್ನು ಸಹ ತೆಗೆದುಕೊ೦ಡಿತು. 10-20 ವರ್ಷಗಳೇ ಬೇಕಾಯಿತು. ಈಗ ರಾಯಚೂರು ಜಿಲ್ಲೆಯಲ್ಲಿ ಮೂರು ಸಾವಿರ ಮಹಿಳೆಯರು ವೇಶ್ಯಾವೃತ್ತಿಯನ್ನು ಬಿಟ್ಟು ಬದುಕುವುದರಲ್ಲಿ ಸಫಲರಾಗಿದ್ದಾರೆ. ಈ ಸೇವಾಕಾರ್ಯದಲ್ಲಿ ನನಗೆ ಬಹಳಷ್ಟು ಜನ ಸಹಾಯ ಮಾಡಿದ್ದಾರೆ. ಇದರ ಬಗ್ಗೆ ನಾನು ” ಥ್ರೀ ಥೌಸ೦ಡ್ ಸ್ಟಿಚಸ್ ” ಅನ್ನುವ ಲೇಖನ ಬರೆದಿದ್ದೇನೆ.

 ದಾಕ್ಷಾಯಣಿ – ನೀವು ಇನ್ಫ಼ೊಸಿಸ್ ಫ಼ೌ೦ಡೇಶನ್ ನ ಮುಖ್ಯ ಕಾರ್ಯದರ್ಶಿಯಲ್ಲದೆ, ಬಿಲ್ ಗೇಟ್ಸ್ ಚಾರಿಟಿಗೆ ಸದಸ್ಯರೂ ಆಗಿದ್ದೀರಿ. ಅದರ ಬಗ್ಗೆ ಸ್ವಲ್ಪ ಹೇಳುತ್ತೀರಾ ? ಯಾವ ರೀತಿಯಲ್ಲಿ ಅದರಿ೦ದ ನಿಮಗೆ ಸಹಾಯವಾಗಿದೆ ?

 ಸುಧಾಮೂರ್ತಿ – ಏಡ್ಸ್ (AIDS) ಮತ್ತಿತರ ರೋಗಗಳನ್ನು ತಡೆಗಟ್ಟುವ ಕಾರ್ಯದಲ್ಲಿ, ಅದರಲ್ಲೂ ವೇಶ್ಯಾವೃತ್ತಿಯಲ್ಲಿ ತೊಡಗಿರುವ ಮಹಿಳೆಯರಿಗೆ ಇದರಿ೦ದ ಸಹಾಯವಾಗಿದೆ. ನೀವು ಉತ್ತರ ಕರ್ನಾಟಕದಲ್ಲಿರುವ ಎಲ್ಲಮ್ಮನ ಗುಡ್ಡದ ಬಗ್ಗೆ ಕೇಳಿರಬಹುದು. ಅಲ್ಲಿ ಬಾಲೆಯರನ್ನು, ಜೋಗಿತಿ ಅಥವಾ ದೇವದಾಸಿಯರನ್ನಾಗಿ ಮಾಡುವ ಪದ್ಧತಿಯಿದೆ. ಅವರು ಮು೦ದೆ ವೇಶ್ಯಾವೃತ್ತಿಯಲ್ಲಿ ತೊಡಗುತ್ತಾರೆ. ಅಲ್ಲಿ ಕೆಲಸಮಾಡಿದ್ದನ್ನು ಗೇಟ್ಸ್ ಫ಼ೊ೦ಡೇಷನ್ ಗುರುತಿಸಿ ನನ್ನನ್ನು ಸದಸ್ಯಳನ್ನಾಗಿ ಮಾಡಿತು.

 ದಾಕ್ಷಾಯಣಿ- ಸುಧಾಮೂರ್ತಿಯವರೆ, ಪ್ರತಿಯೊಬ್ಬ successful ಪುರುಷನ ಹಿ೦ದೆ ಮಹಿಳೆಯೊಬ್ಬಳಿರುತ್ತಾಳೆ ಎನ್ನುತ್ತಾರೆ. ನಿಮ್ಮ ಈ ಜೀವನ ಸಫ಼ಲತೆಯ ಹಿ೦ದೆ ಇರುವವರಾರು? ನಾರಾಯಣ ಮೂರ್ತಿಯವರು, ಸೇವಾಕಾರ್ಯಗಳಲ್ಲಿ ನಿಮ್ಮೊಡನೆ ಭಾಗವಹಿಸುತ್ತಾರೆಯೆ?

 ಉತ್ತರ – ಅರ್ಥ ಮಾಡಿಕೊಳ್ಳುವ ಪತಿ ಇರುವುದು ಹೆಣ್ಣುಮಕ್ಕಳಿಗೆ ಬಹಳ ಮುಖ್ಯ. ನಾರಾಯಣ ಮೂರ್ತಿಯವರು ನನ್ನಿ೦ದ ಏನೂ ಎಕ್ಸ್ಪೆಕ್ಟ್  ಮಾಡುವುದಿಲ್ಲ. ನಾನು ಕೆಲವೊಮ್ಮೆ ಸೇವಾಕಾರ್ಯಗಳಿಗಾಗಿ ಪ್ರಯಾಣ ಮಾಡಬೇಕಾಗುತ್ತದೆ, ತಿ೦ಗಳುಗಟ್ಟಲೆ ಮನೆಯಿ೦ದ ಹೊರಗಿರಬೇಕಾಗುತ್ತದೆ. ಅವರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ.

”ನಾರಾಯಣ ಮೂರ್ತಿಯವರು ಈ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ.  (ನಗುತ್ತಾ) ”ಚೆಕ್ ಬುಕ್ ನನ್ನ ಕೈಲಿರುತ್ತಲ್ಲ, ಮುಗಿಯಿತು!”

 ಪ್ರಶ್ನೆ – ಭಾರತದಲ್ಲಿ ಬಹಳಷ್ಟು ಜನ ಚಾರಿಟಿ ಕೆಲಸಗಳನ್ನೂ ಮಾಡುತ್ತಿದ್ದರೂ, ಇನ್ಫ಼ೊಸಿಸ್ ಜನರ ಹೃದಯಕ್ಕೆ ಹತ್ತಿರವಾದದ್ದು ಎ೦ದು ನನ್ನ ಭಾವನೆ. ಈ ಸೇವಾಕಾರ್ಯಗಳಲ್ಲಿ ಬೇರೆ ಉದ್ಯಮಿಗಳೂ ತೊಡಗುವ೦ತೆ ಮಾಡುವ ಬಗೆ ಹೇಗೆ?

 ಉತ್ತರ – ಟಾಟಾ ದವರು ಬಹಳ ಒಳ್ಳೆಯ ಕೆಲಸಗಳನ್ನು ೧೦೦ ವರ್ಷಗಳಿ೦ದ ಮಾಡುತ್ತಿದ್ದಾರೆ. ಅದು ಅವರವರ ಮನೋಭಾವ. ” ಬಹುಜನ ಹಿತಾಯ, ಬಹುಜನ ಸುಖಾಯ” ಎನ್ನುವ ತತ್ವ ನಮ್ಮದು.

 ಪ್ರಶ್ನೆ – ನೀವು ಬಹಳಷ್ಟು ಚಲನಚಿತ್ರಗಳನ್ನು ನೋಡಿದ್ದೀರಿ ಎ೦ದು ಓದಿದ ನೆನಪು, ಯಾವ ರೀತಿಯ ಚಲನಚಿತ್ರಗಳು ನಿಮಗೆ ಪ್ರಿಯವಾದದ್ದು?

 ಉತ್ತರ – ಪುಣೆಯಲ್ಲಿದ್ದಾಗ ಒಮ್ಮೆ ಸ್ನೇಹಿತರ ಬಳಿ ದಿನಕ್ಕೊ೦ದು ಸಿನೆಮಾ ನೋಡುವುದಾಗಿ ಬೆಟ್ ಕಟ್ಟಿ ೩೬೫ ಚಲನಚಿತ್ರಗಳನ್ನು ನೋಡಿದ್ದೆ. ಈಗ ಅದಕ್ಕೆ ನನಗೆ ಸಮಯವಿರುವುದಿಲ್ಲ. ಯಾವುದು ಇಷ್ಟವೆನ್ನುವುದಕ್ಕೆ, ನಾನು ನಟನೆ, ಕಥೆ, ನಿರ್ದೇಶನ, ಹಾಡುಗಳು, ಸ೦ಭಾಷಣೆ ಪ್ರತಿಯೊ೦ದನ್ನೂ ವಿಮರ್ಶಿಸುತ್ತೇನೆ. ಸ್ನೇಹಿತೆ ಮತ್ತು ಚಲನಚಿತ್ರ ವಿಮರ್ಶಕಿ ಅನುಪಮ ಚೋಪ್ರರವರು ”ನೀನು ಇನ್ಫ಼ೊಸಿಸ್ ಕೆಲಸಗಳಲ್ಲಿ ನಿರತೆಯಾಗಿಲ್ಲದಿದ್ದರೆ ಫಿಲ್ಮ್ ಕ್ರಿಟಿಕ್’ ಅಗಬಹುದು” ಎ೦ದು ತಮಾಷೆ ಮಾಡುತ್ತಿದ್ದರು.

 ಅಲ್ಲಿಯೆ ಕುಳಿತು ಕೇಳುತ್ತಿದ್ದ ಡಾ. ದೇಸಾಯಿಯವರು ಮತ್ತು ಡಾ. ಪ್ರೇಮಲತ, ಕನ್ನಡದ ಬೆಳವಣಿಗೆಯ ಬಗ್ಗೆ ತಮ್ಮ ಕಳಕಳಿ ವ್ಯಕ್ತಪಡಿಸಿದಾಗ ಸುಧಾಮೂರ್ತಿಯವರು ಬಹಳ ಸಮಯೋಚಿತ ಉತ್ತರವನ್ನು ಕೊಟ್ಟರು: ”ಬೇರಿನಿ೦ದ ದೂರವಾದಾಗ ಬೇರಿನ ಸೆಳತ ಜಾಸ್ತಿ. ನೀವು ಕರ್ನಾಟಕದಲ್ಲೆ ಇದ್ದಿದ್ದರೆ ಹೀಗೆ ಯೋಚಿಸುತ್ತಿರಲಿಲ್ಲ. ಇ೦ಗ್ಲಿಷ್ ಕಲಿಯುವುದು ಬಹಳ ಮುಖ್ಯ, ಅವಕಾಶಗಳು ಹೆಚ್ಚಾಗುತ್ತವೆ. ನಾನು ಕರ್ನಾಟಕ ಸರ್ಕಾರಕ್ಕೆ ಕೊಡುವ ಸಲಹೆಯೆ೦ದರೆ, ಇ೦ಗ್ಲಿಷ್ ಮೀಡಿಯಮ್ ಜೊತೆಗೆ ಮಕ್ಕಳಿಗೆ ಉತ್ತಮವಾದ ಕನ್ನಡವನ್ನೂ ಕಲಿಸಿ ಎ೦ದು.”

 ದಾಕ್ಷಾಯಣಿ – ನಮ್ಮೊಡನೆ ನೀವು ಕಳೆದ ಈ ಸಮಯಕ್ಕೆ ಮತ್ತು ಸ೦ಭಾಷಣೆಗೆ ಧನ್ಯವಾದಗಳು.

 ಡಾ. ದಾಕ್ಷಾಯಣಿ

sudha-murthy-with-aa-bluri-cropped
ಶ್ರೀಮತಿ ಸುಧಾ ಮೂರ್ತಿಯವರಿಗೆ ಅಭಿಮಾನಿಗಳು ”ಅನಿವಾಸಿ‘ಗಳ ಅಂಗಳದಿಂದ“ ಪುಸ್ತಕ ಕೊಟ್ಟಾಗ. ಚಿತ್ರ ಕೃಪೆ: ಶ್ರೀವತ್ಸ ದೇಸಾಯಿ

ಯು.ಕೆ. ಕನ್ನಡಿಗರಲ್ಲಿ ವಿನಂತಿ:

ನಿಮ್ಮಲ್ಲಿ ಯಾರಿಗಾದರೂ ಕನ್ನಡದಲ್ಲಿ ಬರೆಯುವ ಆಸಕ್ತಿ ಇದ್ದಲ್ಲಿ, ನೀವು ಬರೆದಿರುವ ಕಥೆ, ಕವನ, ವಿಮರ್ಶೆಗಳು (ಪುಸ್ತಕ, ಸಿನೆಮಾ, ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳ), ಪ್ರವಾಸ ದಿನಚರಿ, ಪ್ರಬಂಧಗಳನ್ನು ನಮ್ಮ ’ಅನಿವಾಸಿ” ಜಾಲಜಗುಲಿಯಲ್ಲಿ ಪ್ರಕಟಿಸಲು ಸ್ವಾಗತಿಸುತ್ತೇವೆ.” ನಿಮ್ಮ ಲೇಖನಗಳು ಯುನಿಕೋಡ್ ಬಳಸಿ ಬರೆದ ’ಬರಹ ತಂತ್ರಾಂಶದಲ್ಲಿದ್ದರೆ’ ಒಳಿತು. ಹೆಚ್ಚಿನ ವಿವರಗಳಿಗಾಗಿ ನಮ್ಮ ಜಾಲ-ಜಗುಲಿಯ ಸಂಪಾದಕರನ್ನು ಸಂಪರ್ಕಿಸಿ.

http://www.anivaasi.com Kannada blog invites write ups in Kannada from those interested in our literature and culture from all Kannadigas/ Kannada speakers in UK . Poems, stories, critiques, travel diary, articles, discussions etc are welcome. Contact the editors.

 

 

ಹೊರಾಂಗಣದಲ್ಲಿ ಹೆಣ್ಣು – ಕರ್ನಾಟಕದ ನೊಮಿತೋ ಕಾಂದಾರ್ – ಡಾ. ವಿನತೆ ಶರ್ಮ

Nomito 1
ಮುಖಕ್ಕೆ ಬೂದಿ ಕಪ್ಪು, ಆರೋಗ್ಯಕ್ಕೆ ಬಹಳ ಒಪ್ಪು

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಹೊರಾಂಗಣ ಕ್ರೀಡೆಗಳು, ಮನರಂಜನೆ ಮತ್ತು ಹೊರಾಂಗಣ ಕಲಿಕೆ ವಿಷಯಗಳ ಬಗ್ಗೆ ಹೆಚ್ಚೆಚ್ಚು ಆಸಕ್ತಿ ಮೂಡುತ್ತಿದೆ. ಈ ಹೊರಾಂಗಣ ಮನರಂಜನೆ ಮತ್ತು ಸಾಹಸ ಚಟುವಟಿಕೆಗಳು ಸಾಮಾನ್ಯ, ಮಧ್ಯಮವರ್ಗದ ಜನರಿಂದ ಹಿಡಿದು ಶ್ರೀಮಂತರಲ್ಲೂ ಸಾಕಷ್ಟು ಕುತೂಹಲವನ್ನು ಕೆರಳಿಸಿ ಅವರನ್ನು ಹೊರಾಂಗಣ ಮತ್ತು ಸಾಹಸ ಕ್ರೀಡೆಗಳತ್ತ ಆಕರ್ಷಿಸುತ್ತಿವೆ. ಸಾಹಸ ಮತ್ತು ಅತಿ ಸಾಹಸ ಕ್ರೀಡೆಗಳ ಬಗ್ಗೆ ನಾನು ಈ ಜಾಲ ಜಗುಲಿಯಲ್ಲಿ ಹಿಂದೆ ಬರೆದಿದ್ದೆ. ಈಗ ಬರೆಯುತ್ತಿರುವುದು ಹೊರಾಂಗಣ ಚಟುವಟಿಕೆಗಳು ಮತ್ತು ಪರಿಸರ ಕಲಿಕೆ ಜನಸಾಮಾನ್ಯರಲ್ಲಿ ಎಂತಹ ಬದಲಾವಣೆಯನ್ನು ಉಂಟು ಮಾಡಬಹುದು ಎಂದು. ಅದರಲ್ಲೂ, “ಹೆಣ್ಣು” ಎಂಬ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಣೆಪಟ್ಟಿಯನ್ನು ಪಕ್ಕಕ್ಕೆ ಸರಿಸಿ ಹೊರಾಂಗಣ ಕಲಿಕಾ, ಸಾಹಸ ಕ್ರೀಡೆಗಳ ಕ್ಷೇತ್ರದಲ್ಲಿ ಸಾವಿರಾರು ಹೆಣ್ಣು ಮಕ್ಕಳಿಗೆ, ತಾಯಂದಿರಿಗೆ, ಅಜ್ಜಿಯರಿಗೆ ಸ್ಪೂರ್ತಿಯಾಗಿರುವ ನೊಮಿತೊ ಕಾಂದಾರ್ ಅವರ ಬಗ್ಗೆ .

೧೯೯೦ ರ ದಶಕದಲ್ಲೇ ಬೆಂಗಳೂರಿನ ಎಸ್ ಎಲ್ ಎನ್ ಸ್ವಾಮಿ ತಮ್ಮ ದಿ ಅಡ್ವೆಂಚರರ್ಸ್ (The Adventurers, ೧೪೨, ೬೯ ನೇ ಕ್ರಾಸ್, ಐದನೇ ಬ್ಲಾಕ್, ರಾಜಾಜಿನಗರ) ಸಂಸ್ಥೆಯನ್ನು ಹುಟ್ಟು ಹಾಕಿ ಬೆಳೆಸಿ, ಅಂತಹ ಚಟುವಟಿಕೆಗಳನ್ನು ಮತ್ತು ಪರಿಸರ ಕಲಿಕೆಯನ್ನು ಕರ್ನಾಟಕದಲ್ಲಿ ಎಲ್ಲರ ಕೈಗೂ ಎಟುಕುವಂತೆ ಮಾಡಿದ ಮೊದಲಿಗರ ಪರಂಪರೆಗೆ ಸೇರಿದವರು. ನಂತರ ಅವರ ಜೊತೆ ಸೇರಿ ದಿ ಅಡ್ವೆಂಚರರ್ಸ್ ಸಂಸ್ಥೆಯನ್ನು ಬಲಪಡಿಸಿದ ನೊಮಿತೊ ಕಾಂದಾರ್ ಎಂಬ ಸಾಹಸಿ ಹೆಣ್ಣು ಸಂಸ್ಥೆಯ ಹೊರಾಂಗಣ ಚಟುವಟಿಕೆಗಳು ಮತ್ತು ಕಲಿಕೆಯ ಸಹ-ಮುಂದಾಳತ್ವವನ್ನು ವಹಿಸಿಕೊಂಡರು. ಹೋದ ತಿಂಗಳು ನಾನು ನೊಮಿತೊ ಜೊತೆ ದೂರವಾಣಿಯಲ್ಲಿ ಮಾತನಾಡಿ ಆಕೆಯ ಸಂದರ್ಶನವನ್ನು ಮಾಡಿದ್ದೆ. ಅದರಿಂದ ಹೊಮ್ಮಿರುವ ಲೇಖನ ಇಗೋ ನಿಮ್ಮ ಮುಂದಿದೆ.

೧೯೮೦-೯೦ ರ ದಶಕಗಳಲ್ಲಿ ಎಸ್ ಎಲ್ ಎನ್ ಸ್ವಾಮಿ ಅನುಭವ ಕಲಿಕೆ, ಪರಿಸರ ಶಿಕ್ಷಣ, ಹೊರಾಂಗಣ ಕಲಿಕೆ, ಪರಿಸರದಿಂದ ಮನುಷ್ಯ ಏನನ್ನು, ಯಾಕೆ ಕಲಿಯಬೇಕು ಎಂದೆಲ್ಲಾ ಮಾತನಾಡುತ್ತಾ, ಪಶ್ಚಿಮ ಘಟ್ಟಗಳನ್ನು ಸುತ್ತುತ್ತಾ, ಪರಿಸರ ಸಂಬಂಧಿತ ಚಟುವಟಿಕೆಗಳನ್ನು ಸಾಮಾನ್ಯ ಜನರಿಗೆ, ಶಾಲಾ ಮಕ್ಕಳಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದ ಕಾಲ. ನಗರ ಪ್ರದೇಶಗಳ ಮಕ್ಕಳು, ಅವರ ಕುಟುಂಬಗಳು ಪ್ರಕೃತಿಯಿಂದ, ಹೊರಾಂಗಣ ಪರಿಸರದಿಂದ ಕ್ರಮೇಣ ದೂರವಾಗುತ್ತಿದ್ದ ದಿನಗಳು ಅವು. ಮನುಷ್ಯ ಪರಿಸರಕ್ಕೆ ಇನ್ನೂ ಹತ್ತಿರವಾಗಬೇಕು, ದೂರವಲ್ಲ ಎಂದು ಸ್ವಾಮಿ ಆಗ ಮಲೆನಾಡಿನ ಹೊನ್ನೆ ಮರಡು (ಳು) ಎಂಬ ಸ್ಥಳದಲ್ಲಿ ಕಾರ್ಯಕ್ಷೇತ್ರವನ್ನು ಆರಂಭಿಸಿದ್ದರು. ಶಾಲಾ ಮಕ್ಕಳನ್ನು ಮತ್ತು ಯುವಜನತೆಯನ್ನು ಆ ಕಣ್ಮನ ಸೆಳೆಯುವ ಪ್ರಶಾಂತವಾದ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಪ್ರದೇಶಕ್ಕೆ ಕರೆತಂದು ಅವರಿಗೆ ಕಯಾಕಿಂಗ್, ತೆಪ್ಪದಾಟ, ಕೊರಕಲ್, ಈಜುವುದು, ಕಲ್ಲೇರು (rock climbing), ಬೆಟ್ಟ ಪರ್ವತಗಳ ಚಾರಣಗಳು ಮುಂತಾದ ಹೊರಾಂಗಣ ಮತ್ತು ಸಾಹಸ ಕ್ರೀಡೆಗಳನ್ನು ಪರಿಚಯಿಸಿದರು. ಈ ಚಟುವಟಿಕೆಗಳಿಗೆ ಬೇಕಾದ ಉಪಕರಣಗಳು, ಉಡುಪು, ಮತ್ತಿತರ ಅಗತ್ಯ ಸಾಧನಗಳ ಬಗ್ಗೆ, ತಮ್ಮ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸುವ ದಾರಿಗಳ ಬಗ್ಗೆ ಶೋಧನೆ ನಡೆಸಿದ್ದರು. ಕಾರ್ಯಕ್ರಮ ಸಂಯೋಜಕಿಯಾಗಿ ಬಂದು ನಿಂತವರು ನೊಮಿತೊ. ಆಗ ಮನೆಯಲ್ಲಿ ತನ್ನ ಪರಿಸರ ಪ್ರೀತಿಯನ್ನು, ಅನುಭವ ಕಲಿಕೆಯನ್ನು, ವಿಭಿನ್ನ ಆಲೋಚನೆಗಳನ್ನು, ಜೀವನ ದೃಷ್ಟಿಯನ್ನು ಹೆತ್ತವರಿಗೆ, ಒಡಹುಟ್ಟಿದವರಿಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಅವರ ವಿರೋಧದಿಂದ ನನಗೂ ಕಷ್ಟವಾಗುತ್ತಿತ್ತು ಎನ್ನುವ ನೊಮಿತೊಗೆ ಬೇಕಿದ್ದ ನೆಲೆಯನ್ನು ಅಡ್ವೆಂಚರರ್ಸ್ ಸಂಸ್ಥೆ ಒದಗಿಸಿದ್ದು “ನನ್ನ ಅದೃಷ್ಟ” ಎಂದು ನೊಮಿತೊ ನೆನಪಿಸಿಕೊಳ್ಳುತ್ತಾರೆ.
ಮೂವತೈದು ವರ್ಷಗಳ ಹಿಂದೆ ಹೊರಾಂಗಣ ಮತ್ತು ಪರಿಸರ ಶಿಕ್ಷಣವನ್ನು ಕರ್ನಾಟಕದ ಮತ್ತು ಭಾರತದ ಜನಸಾಮಾನ್ಯರಿಗೆ ತಲುಪಿಸಬೇಕು ಎಂಬುದು The Adventurers ಸಂಸ್ಥೆಯ ಗುರಿಯಾಗಿತ್ತು. ಈಗಲೂ ನಮ್ಮ ಆ ಗುರಿಯನ್ನಿಟ್ಟುಕೊಂಡೇ ನಾವು ಕೆಲಸಮಾಡುತ್ತಿದ್ದೀವಿ ಎಂದು ಮಾತನ್ನಾರಂಭಿಸಿದ ನೊಮಿತೊ ಹೇಳಿದ್ದು “ಈಗ ವಿಶೇಷವೆಂದರೆ ನಮ್ಮಲ್ಲಿಗೆ ಬರುವವರಲ್ಲಿ ಶೇಕಡಾ ೬೫ ರಷ್ಟು ಮಹಿಳೆಯರು ಮತ್ತು ಹೆಣ್ಣು ಮಕ್ಕಳು.”

ತಕ್ಷಣವೇ ನಾನು ಅದನ್ನು ಸ್ವಲ್ಪ ವಿವರಿಸಿ ಎಂದೆ. ನೊಮಿತೋರ ಪರಿಸರ ಕಲಿಕೆ, ಅನುಭಾವಿ ಕಥೆ ಅನೇಕ ಉಪಕಥೆಗಳ ಜೊತೆ ತೆಕ್ಕೆ ಹಾಕಿಕೊಂಡಿತು.

ನೊಮಿತೋ ಸಂಸ್ಥೆಗೆ ಬಂದ ಕಾಲದಲ್ಲಿ ಹೊನ್ನೆ ಮರಡುವಿನ ಕಾರ್ಯಕ್ಷೇತ್ರಕ್ಕೆ ಬರುವವರಲ್ಲಿ ಗಂಡಸರ, ಶಾಲಾ ಗಂಡು ಮಕ್ಕಳ ಗುಂಪುಗಳೇ ಹೆಚ್ಚಿದ್ದವು. ಆನಂತರದ ಎರಡು ದಶಕಗಳಲ್ಲಿ ಎಲ್ಲಾ ವಯಸ್ಸಿನ ಗಂಡು ಮತ್ತು ಹೆಣ್ಣು ಶಾಲಾ ಮಕ್ಕಳ ಗುಂಪುಗಳೂ ಬರಲಾರಂಭಿಸಿದವು. ೨೦೦೦ ರ ನಂತರ ಉಂಟಾದ ಜಾಗತಿಕ ಅಲೆಯಲ್ಲಿ ಹೊರಾಂಗಣ ಕಲಿಕಾಕ್ಷೇತ್ರವೂ ಸಾಕಷ್ಟು ಬೆಳಿಕಿಗೆ ಬಂತು. ಕಳೆದ ಒಂದು ದಶಕದಲ್ಲಿ ಪ್ರೌಢ ಮಹಿಳೆಯರು, ಮಧ್ಯ ವಯಸ್ಕ ಮತ್ತು ಹಿರಿ ವಯಸ್ಸಿನ ಮಹಿಳೆಯರು (೫೦-೬೦) ಬರುತ್ತಿದ್ದಾರೆ. ತಾಯಂದಿರು ಮತ್ತು ಅವರ ಮಕ್ಕಳ ಗುಂಪು, ಒಂದೇ ಕುಟುಂಬದ ಹಲವಾರು ಮಹಿಳಾ ಸದಸ್ಯರು, ಮಹಿಳಾ ಸ್ನೇಹಿತರ ಗುಂಪುಗಳು, ಒಂಬ್ಬಂಟಿ ಮಹಿಳೆಯರು ಬರುತ್ತಿದ್ದಾರೆ. ಹೊನ್ನೆ ಮರಡುವಿನ ನಮ್ಮ ಕಾರ್ಯಕ್ರಮಗಳಿಗೆ ಬಂದು ಹೋದ ಮಕ್ಕಳು ತಮ್ಮ ಹಿರಿಯರಿಗೆ ಕಟ್ಟಿಕೊಟ್ಟ ಅರ್ಥಪೂರ್ಣ ಅನುಭವಗಳನ್ನು ಕೇಳಿ ಸ್ವತಃ ತಾವೇ ಭಾಗವಹಿಸಲು ಬಂದ ತಂದೆ ತಾಯಿಯರೂ ಇದ್ದಾರೆ. ಹೆಚ್ಚಿನ ಮಟ್ಟಿಗೆ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಭಾಗವಹಿಸಲು ಮುಂದೆಬರುವ ಕಾರಣ ಹೆಣ್ಣೊಬ್ಬಳು ಕಾರ್ಯ ಕ್ಷೇತ್ರದಲ್ಲಿ ಸ್ವತಃ ಇದ್ದು, ಕಾರ್ಯಕ್ರಮದ ಮುಂಚೂಣಿಯನ್ನು ಹಿಡಿದು ಅವರ ಕ್ಷೇಮವನ್ನು, ಹಿತಾಸಕ್ತಿಯನ್ನು ಗಮನಿಸುವುದು. “ಅವರಿಗೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾದ ಕ್ಷೇಮಭಾವನೆ ಹುಟ್ಟುತ್ತದೆ. ಹೊರಾಂಗಣ ಮತ್ತು ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸುವ ಹುಮ್ಮಸ್ಸು ಹೆಚ್ಚುತ್ತದೆ. ನಾನು ನೋಡುತ್ತಿರುವ ಹಾಗೆ ಹೆಂಗಸರು ಈ ಚಟುವಟಿಕೆಗಳಿಂದ ಹೆಚ್ಚನ್ನು ಪಡೆಯುತ್ತಾರೆ. ತಮ್ಮ ಬಾಲ್ಯದಲ್ಲಿ ‘ನೀನು ಹೆಣ್ಣು’ ಎಂಬ ಕಾರಣದಿಂದ ಅಂತಹ ಅವಕಾಶಗಳಿಂದ ವಂಚಿತರಾದ ಹೆಂಗಸರಿಗೆ, ನನ್ನ ತರಹ ಲಿಂಗತಾರತಮ್ಯತೆಗಳನ್ನು ಅನುಭವಿಸಿದವರಿಗೆ ಹೊನ್ನೆ ಮರಡುವಿಗೆ ಬಂದು ಪಾಲ್ಗೊಳ್ಳುವುದು ಸುವರ್ಣಾವಕಾಶ. ಅವರ ಬಾಲ್ಯದ ಬುತ್ತಿಯನ್ನು ಬಿಚ್ಚುವುದಕ್ಕೆ, ಎಲ್ಲೋ ಅಡಗಿ ಕುಳಿತ, ತುಳಿದ ಭಾವನೆಗಳನ್ನು ಹೊರ ಹರಿಯಬಿಡುವುದಕ್ಕೆ, ಮತ್ತೆ ತನ್ನ ‘ತಾನು’ ಎಂಬುವುದನ್ನ ಕಂಡುಕೊಳ್ಳುವುದಕ್ಕೆ ನಮ್ಮ ಹೊರಾಂಗಣ ಚಟುವಟಿಕೆಗಳು, ಸಾಹಸಗಳು, ಚಾರಣಗಳು ಬಹಳ ಉಪಯೋಗಕ್ಕೆ ಬಂದಿವೆ. ಅದೊಂದು ಹೊರಾಂಗಣ, ಪರಿಸರ ಚಿಕಿತ್ಸೆ” ಎನ್ನುತ್ತಾರೆ ನೊಮಿತೋ.

ಸ್ವಲ್ಪ ಉದಾಹರಣೆಗಳನ್ನ ಕೊಡಿ ಎಂದು ನನ್ನ ಕೋರಿಕೆ.

“ನನ್ನ ಕುಟುಂಬವೇ ಬಹಳ ಸಾಂಪ್ರದಾಯಿಕವಾಗಿತ್ತು. ಹೊರಾಂಗಣ ಮತ್ತು ಪರಿಸರ ಚಟುವಟಿಕೆಗಳ ಬಗ್ಗೆ ಬಹಳ ಆಸಕ್ತಿಯಿದ್ದ ನನಗೆ ಅದರಿಂದ ಸಾಕಷ್ಟು ಘಾಸಿಯಾಗಿತ್ತು. ನಾ ಇಲ್ಲಿಗೆ ಬಂದಾಗ ನನಗೆ ಸ್ವಾತಂತ್ರ್ಯ ಸಿಕ್ಕಿದ ಹಾಗಾಗಿತ್ತು. ಪ್ರಕೃತಿಯೊಂದಿಗೆ ಸ್ಪಂದಿಸಿದಾಗ ಅದುಮಿಟ್ಟಿದ್ದ ನನ್ನ ಕೋಪ, ಅಸಹನೆ, ಹತಾಶೆಗಳು ತಣ್ಣಗಾದವು. ಮನಸ್ಸು, ಹೃದಯ ಶಾಂತವಾಯಿತು. ಆ ಶಾಂತತೆ ಹೊರಾಂಗಣ ಪರಿಸರದಲ್ಲಿ ಮಾತ್ರ ಸಿಕ್ಕುವಂಥದ್ದು ಮತ್ತು ಅತ್ಯಮೂಲ್ಯ. ನಮ್ಮದೊಂದು ಕಾರ್ಯಕ್ರಮಕ್ಕೆ ಬಂದ ೭೨ ವರ್ಷದ ಹಿರಿಯ ಹೆಂಗಸರೊಬ್ಬರು ಖಾಸಗಿ ತೇಲು ಎದೆಕವಚವನ್ನು (personal floatation device or PFD) ಧರಿಸಿ ಈಜಿದಾಗ ಅವರು ಹೇಳಿದ್ದು – “ನನ್ನ ಜೀವನದಲ್ಲಿ ಮೊದಲ ಬಾರಿಗೆ ಹೊರಾಂಗಣ ಪರಿಸರದಲ್ಲಿ ನಾನು ಈಜುತ್ತಿರುವುದು. ನಾನೀಗ ಸಂತೋಷದಿಂದ ಸಾಯಲು ಸಿದ್ಧ.”

ಅದೇ ರೀತಿ ದೈಹಿಕ ಮತ್ತು ಮಾನಸಿಕ ವಿವಿಧ ಸಾಮರ್ಥ್ಯಗಳಿರುವ (differently abled) ಇರುವ ಕೆಲ ಮಕ್ಕಳ ತಾಯಂದಿರು ತಮ್ಮ ಮತ್ತು ತಮ್ಮ ಮಕ್ಕಳ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಬಂದಿರುವ ಒಳ್ಳೆಯ ಬದಲಾವಣೆಯ ಬಗ್ಗೆ ಹೇಳಿಕೊಳ್ಳುತ್ತಾರೆ.

ನಿಮ್ಮ ಮುಂದಾಳತ್ವದಲ್ಲಿ ಕಾರ್ಯಕ್ರಮಗಳನ್ನು ನಡೆಸುವಾಗ ಉಂಟಾಗುವ ಅಡೆತಡೆಗಳು, ಸವಾಲುಗಳು ಏನು ಎನ್ನುವುದು ನನಗೆ ತಿಳಿದುಕೊಳ್ಳಬೇಕಿತ್ತು. ನೊಮಿತೋ ಉತ್ತರಿಸಿದಂತೆ ಅವರಿಗೆ ಅಂತಹ ಅಡೆತಡೆಗಳು ಸವಾಲುಗಳು ಹೆಚ್ಚಿನ ಸಮಯ ಗಂಡಸರಿಂದ ಉಂಟಾಗುತ್ತವೆ. “ಹೆಂಗಸು ಹೊರಾಂಗಣದಲ್ಲಿ, ಕಾಡುಮೇಡು, ಗುಡ್ಡ ಪರ್ವತಗಳಲ್ಲಿ, ನದಿಗಳಲ್ಲಿ ಓಡಾಡುತ್ತಾ ತನ್ನ ಮುಂದಾಳತ್ವದಲ್ಲಿ ಗಂಡಸರನ್ನು ಮುನ್ನಡೆಸುವುದು ಅನೇಕ ಗಂಡಸರಿಗೆ ಒಪ್ಪಿಕೊಳ್ಳಲು ಕಷ್ಟ, ಅಸಾಧ್ಯ ಮತ್ತು ಕಿರಿಕಿರಿ. ನಾನು ನಮ್ಮ ಪರಿಸರ ಕಲಿಕೆ ಕಾರ್ಯಕ್ರಮಗಳಲ್ಲಿ, ಹೊರಾಂಗಣ ಚಟುವಟಿಕೆಗಳಲ್ಲಿ ಅಪಾಯ ನಿರ್ವಹಣಾ ಪ್ರಕ್ರಿಯೆಯನ್ನು, ಕ್ಷೇಮ ನಿರ್ವಹಣೆಯನ್ನು ಕಟ್ಟು ನಿಟ್ಟಾಗಿ ಹೇಳಿಕೊಡುತ್ತೀನಿ, ಎಲ್ಲರೂ ಅದನ್ನು ತಪ್ಪದೆ ಪಾಲಿಸಬೇಕೆಂದು ಹೇಳುತ್ತೀನಿ. ಇದು ಅನೇಕರಿಗೆ ಸಹಿಸಲಾಗುವುದಿಲ್ಲ. ಅವರಿಗೆ ಇಷ್ಟವಾಗುವುದಿಲ್ಲ. ಹೆಣ್ಣೊಬ್ಬಳು ತಮಗೆ ಸವಾಲೆಸಗುವಂತೆ ಅವರು ಅದನ್ನು ಸ್ವೀಕರಿಸುತ್ತಾರೆ. ಅವಳ ಮಾತನ್ನು ಯಾಕೆ ಕೇಳಬೇಕು ಎಂಬುದೇ ಅವರ ಗಮನ ಹೊರತು, ಯಾಕೆ ಅವರು ಆ ನಿಯಮಗಳನ್ನು ಪಾಲಿಸಬೇಕು ಎಂಬ ವಿವೇಚನೆ ಇರುವುದಿಲ್ಲ. ಕೊಳ್ಳುಬಾಕ ಸಂಸ್ಕೃತಿಯಿಂದ ಹೊರಾಂಗಣ ಚಟುವಟಿಕೆಗಳು ಬಹಳಷ್ಟು ಪೆಟ್ಟು ತಿನ್ನುತ್ತಿವೆ. ಪರಿಸರಸಂರಕ್ಷಣೆ ಎಂಬ ಪರಿಕಲ್ಪನೆಯನ್ನು ಮೂಡಿಸುವ ನನ್ನ/ನಮ್ಮ ಪ್ರಯತ್ನಕ್ಕೆ ಸಾಕಷ್ಟು ವಿರೋಧವನ್ನು ಒಡ್ಡುವ ಗಂಡಸರು ಅನೇಕರು. ಇದು ಧೂಮಪಾನರಹಿತ/ಮದ್ಯಪಾನ ನಿಷೇಧಿತ ಪ್ರದೇಶ, ಇಲ್ಲಿ ಕಸವನ್ನು ನಿರ್ದಿಷ್ಟ ಜಾಗದಲ್ಲಿ ಮಾತ್ರ ಚೆಲ್ಲಬೇಕು ಎನ್ನುವ ನಮ್ಮ ನಿಯಮಗಳಿಗೂ ಕೂಡ ಅವರು ತಡೆ ಒಡ್ಡಲು, ಕೀಟಲೆ ಮಾಡಲು, ದೂರು ಹೇಳಲು ಬರುತ್ತಾರೆ ಎನ್ನುವ ನೊಮಿತೋ ಮತ್ತೊಂದು ಘಟನೆಯನ್ನು ನನ್ನೊಂದಿಗೆ ಹಂಚಿಕೊಂಡರು.

Nomito 2
ಅಂಬಿಗಳು ನಾ ಎನ್ನುತ್ತಿರುವ ನೊಮಿತೋ

ಹಿಂದೊಮ್ಮೆ ಸುಮಾರು ೧೭-೧೮ ವಯಸ್ಸಿನ ೧೦ ಯುವಕರು ನಮ್ಮ ಚಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಎಲ್ಲರೂ ಯಾಣಕ್ಕೆ ಹೋಗುವ ಪ್ರಸಂಗ. ಅವರೆಲ್ಲರೂ ಅದೆಷ್ಟು ನಕಾರಾತ್ಮಕ (ನೆಗಿಟಿವ್) ಮನಸ್ಸನ್ನು, ಆಲೋಚನೆಯನ್ನು ತೋರಿದರು, ನನ್ನನ್ನು ಎಷ್ಟು ವಿರೋಧಿಸಿದರು ಎಂದರೆ ಆ ಕಾರ್ಯಕ್ರಮವನ್ನು ನಿರ್ವಹಿಸಲು ನನಗೆ ತುಂಬಾ ಕಷ್ಟವಾಯಿತು. ಕೇವಲ ನಾನು ಹೆಣ್ಣು ಎಂಬುದಕ್ಕೆ ಅವರು ಅಷ್ಟೊಂದು ಪ್ರತಿರೋಧವನ್ನು ಒಡ್ಡಿದರು. ಕಡೆಗೆ ನಾನು ನನ್ನ ಸಹಾಯಕರಿಗೆ ಅದನ್ನು ವಹಿಸಿಬೇಕಾಯಿತು. ಆ ಹುಡುಗರ ವರ್ತನೆಯಿಂದ ನನಗೆ ತುಂಬಾ ನೋವಾಯಿತು ಕೂಡ. ಕೆಲ ವರ್ಷಗಳ ನಂತರ ಅವರಲ್ಲಿ ಆರು ಮಂದಿ ಮತ್ತೆ ನಮ್ಮ ಕಾರ್ಯಕ್ರಮಕ್ಕೆ ಬಂದರು. ಆಗ ನಾನು ಒಬ್ಬೊಬ್ಬರ ಹತ್ತಿರವೂ ಪ್ರತ್ಯೇಕವಾಗಿ ಅವರು ಹಿಂದೊಮ್ಮೆ ಬಂದಿದ್ದಾಗ ಇದ್ದ ಅಥವಾ ಆದ ಸಮಸ್ಯೆಯಾದರೂ ಏನು, ಅವರು ಯಾಕಷ್ಟು ಸಮಸ್ಯೆ ಉಂಟು ಮಾಡಿದರು ಎಂದು ವಿಚಾರಿಸಿದೆ. ಆಗಲೂ ಹೊರಬಿದ್ದ ಸಂಗತಿಯೆಂದರೆ ಅವರಿಗೆ ಹೆಂಗಸೊಬ್ಬಳು ಅವರನ್ನು ಹೊರಾಂಗಣ ಪರಿಸರದಲ್ಲಿ, ಕಾಡು ಮೇಡುಗಳ ಚಾರಣದಲ್ಲಿ ಮುನ್ನಡೆಸುವುದು ಇಷ್ಟವಾಗಲಿಲ್ಲ, ಬೇಕಾಗಿಯೇ ಪ್ರತಿರೋಧ ಒಡ್ಡಿದರು ಎಂದು ಅವರೇ ಒಪ್ಪಿಕೊಂಡು ಹೇಳಿದರು.

 

“ಆದರೆ, ನಮ್ಮ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಗಂಡಸರೂ ಹಾಗೇ ಇಲ್ಲ. ಒಂದು ದಿನ ಗುಂಪು ಹಂಚಿಕೆಯಲ್ಲಿ ಒಬ್ಬಾತ ತನ್ನ ಅಜ್ಜಿಯ ಬಗ್ಗೆ ಹೇಳಿದ ವಿಷಯ ಬಹಳ ಚೆನ್ನಾಗಿತ್ತು. ಅವನ ಅಜ್ಜಿ ಪ್ರತಿ ಬೇಸಗೆಯಲ್ಲೂ ತನ್ನ ಮೊಮ್ಮಕ್ಕಳಿಗೆ ಈಜು ಮತ್ತು ಸೈಕಲ್ ತುಳಿಯುವುದನ್ನು ಹೇಳಿಕೊಡಲು ಒಬ್ಬರನ್ನು ದುಡ್ಡು ಕೊಟ್ಟು ಗೊತ್ತು ಮಾಡಿದ್ದರು. ಆದ್ದರಿಂದ ನನಗೆ ಈಜು ಮತ್ತು ಸೈಕಲ್ ಸವಾರಿ ಕಲಿಯಲು ಆಯಿತು. ಆ ಅಜ್ಜಿಯ ಬಗ್ಗೆ ನನಗೆ ಬಹಳಾ ಹೆಮ್ಮೆ ಎಂದೂ ಆತ ಹೇಳಿದ.

ಮತ್ತೊಂದು ಕಾರ್ಯಕ್ರಮದಲ್ಲಿ ಮದುವೆಯಾದ ಹೆಣ್ಣೊಬ್ಬಳು ಬಂದಿದ್ದಳು. ಅವಳ ಗಂಡನಿಗೆ ದೈಹಿಕ ನ್ಯೂನತೆಯಿತ್ತು, ಕಾಲಿಗೆ ಎಂದು ನೆನಪು. ಅವಳು ನಮ್ಮ ಹೊರಾಂಗಣ ಚಟುವಟಿಕೆಗಳನ್ನು ಮುಗಿಸಿಕೊಂಡು ಹೊರಡುವಷ್ಟರಲ್ಲಿ ಬದಲಾದ ಹೆಣ್ಣಾಗಿದ್ದಳು. ಅವಳ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ, ತನ್ನ ಯೋಚನೆಗಳನ್ನು ಅಳುಕಿಲ್ಲದೆ ಹೇಳುವ ಧೈರ್ಯ, ಅವಳ ಹಿಗ್ಗಿದ ಮನೋವಿಶ್ವಾಸ – ಅವೆಲ್ಲವೂ ಅವಳ ಗಂಡನ ಗಮನಕ್ಕೂ ಬಂತು. ಅವನೇ ಹೇಳಿದಂತೆ “ಮನೆಯಲ್ಲಿ ನನಗೊಬ್ಬಳು ಹೆಂಡತಿಯಷ್ಟೇ ಅಲ್ಲ, ಒಂದು ಸಂಪನ್ಮೂಲವೇ ಇದೆ.”

ಇಂತಹ ಪ್ರಸಂಗಗಳು ನೊಮಿತೋರ ಖಜಾನೆಯಲ್ಲಿ ಬಹಳಷ್ಟು ಇವೆ. ಅವರ ಈಗಿನ ಮತ್ತು ಮುಂದಿನ ಕನಸುಗಳೇನು, ಅವರ ಕಾರ್ಯಕ್ರಮಗಳು ಹೇಗೆಲ್ಲಾ ಮುಂದುವರೆಯಬೇಕು ಎಂದು ಅವರು ಯೋಜಿಸಿದ್ದಾರೆ?

ಅವರ ಈಗಿನ ಯಶಸ್ವಿ ಕಾರ್ಯಕ್ರಮವೆಂದರೆ ತಾಯಂದಿರು ಮತ್ತು ಅವರ ಮಾನಸಿಕವಾಗಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳಿಗಾಗಿ ನಡೆಸುವ ಹೊರಾಂಗಣ ಚಟುವಟಿಕೆಗಳು ಮತ್ತು ಪರಿಸರ ಕಲಿಕೆ. ಅಲ್ಲದೆ ಮಧ್ಯ ವಯಸ್ಕ ಮಹಿಳೆಯರನ್ನು ಇನ್ನೂ ಹೆಚ್ಚಾಗಿ ಹೊರಾಂಗಣಕ್ಕೆ, ಪ್ರಕೃತಿಯ ಮಡಿಲಿಗೆ ತರುವುದು ಅವರ ನೆಚ್ಚಿನ ಕಾರ್ಯಕ್ರಮ. ಅಲ್ಲದೇ, ತಮ್ಮ ಜೀವನದಲ್ಲಿ ಲೈಂಗಿಕ ಶೋಷಣೆಗೊಳಗಾದ ಹೆಂಗಳೆಯರನ್ನು, ದೈಹಿಕ ಅಂಗವಿಕಲತೆಯಿರುವವರ ಒಳಗೊಂಡ ಕಾರ್ಯಕ್ರಮಗಳೂ ನಡೆಯುತ್ತಿವೆ. ಪ್ರಕೃತಿಯ ಮಡಿಲಲ್ಲಿ ಅವರು ತಮ್ಮ ಅನುಭವಗಳನ್ನು ಒರೆಗೆ ಹಚ್ಚಿ, ಆಳವಾಗಿ ಒಳಅಲೋಚನೆ ಮಾಡಿ ಹೊಸ ಮಾನಸಿಕ ಶಕ್ತಿ ಪಡೆಯುತ್ತಾರೆ.

ನಾನಾ ತರಹದ ಹಿನ್ನಲೆಯುಳ್ಳ ಎಲ್ಲರಿಗೂ ಹೊರಾಂಗಣ, ಸಾಹಸ ಮತ್ತು ಪರಿಸರ ಚಟುವಟಿಕೆಗಳು ಅವಶ್ಯಕ. ನಮ್ಮೆಲ್ಲರಲ್ಲೂ ನೈಸರ್ಗಿಕ ಪ್ರಪಂಚ ಉತ್ತಮ ಪರಿವರ್ತನೆಯನ್ನು ಉಂಟು ಮಾಡುತ್ತದೆ. ನೈಸರ್ಗಿಕ ಪ್ರಪಂಚಕ್ಕೆ ತನ್ನದೇ ಆದ ಗುಣಕಾರಿ ಸ್ವಭಾವವಿದೆ, ಇದು ಮಾನವನಿಗೆ ನೈಸರ್ಗಿಕದತ್ತ ವರ, ನಿಸರ್ಗದಿಂದ ನಾವು ಬಲ ಪಡೆದುಕೊಂಡು ಆರೋಗ್ಯವಂತರಾಗುತ್ತೀವಿ. ನಾವು ಮನುಷ್ಯರು ಎಲ್ಲದರಲ್ಲೂ, ಎಲ್ಲದರ ಮೇಲೂ ನಿಯಂತ್ರಣವನ್ನು ಹೊಂದಿಲ್ಲ, ನಾವು ನೈಸರ್ಗಿಕ ಪ್ರಪಂಚದ ಹುಲ್ಲು ಕಡ್ಡಿಯ ಭಾಗವಷ್ಟೇ ಎಂಬುದರ ಅರಿವನ್ನು ಹೊರಾಂಗಣ ಪ್ರಪಂಚ ನಮಗೆ ಮಾಡಿಸಿ ಕೊಡುತ್ತದೆ. ಆಗ ನಮ್ಮ ಚಿಪ್ಪಿನಿಂದ ಹೊರಬಂದು ನಾವು ಉತ್ತಮ ಮಟ್ಟದಲ್ಲಿ ಎಲ್ಲದರ ಜೊತೆ ಸಂಬಂಧವನ್ನು ಮತ್ತು ಸಂಪರ್ಕವನ್ನು ಪಡೆಯುತ್ತೀವಿ.

ಅದರಲ್ಲೂ ಮಹಿಳೆಯರು ಹೊರಾಂಗಣ ಚಟುವಟಿಕೆಗಳಿಂದ ತಮ್ಮ ಒಳಿತಿಗಾಗಿ ವ್ಯಕ್ತಿತ್ವವನ್ನೇ ಮಾರ್ಪಡಿಸಿಕೊಳ್ಳುವ ಅವಕಾಶಗಳು ಬೇಕಷ್ಟಿವೆ. ಇಂತಹ ಕಾರ್ಯಕ್ರಮಗಳನ್ನು ಸಾಂಸ್ಥಿಕವಾಗಿಸಬೇಕಿದೆ. ಶಾಲೆಗಳಷ್ಟೇ ಅಲ್ಲ, ಮಹಿಳೆಯರು ಕೆಲಸ ಮಾಡುವ ಸಂಸ್ಥೆಗಳು, ಸರ್ಕಾರಗಳು ಕೂಡ ಮಹಿಳೆಯರು ಹೆಚ್ಚಾಗಿ ಪರಿಸರ ಕಲಿಕೆ, ಹೊರಾಂಗಣ ಚಟುವಟಿಕೆಗಳು ಮತ್ತು ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು, ಅದಕ್ಕೆ ಬೇಕಾದಂತೆ ಅನುವು ಮಾಡಿ ಕೊಡಬೇಕು.

Nomito 3
ಹೊನ್ನೆ ಮರಡಿನ ಸುಂದರ ಖಾಸಗಿ ಕ್ಷಣದಲ್ಲಿ ತಲ್ಲೀನೆವಾಗಿರುವ ನೊಮಿತೊ

ಮಹಿಳೆಯರು ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಅವರಿಗಷ್ಟೇ ಅಲ್ಲ, ಅವರ ಮಕ್ಕಳು, ಕುಟುಂಬಗಳೂ ಕೂಡ ಅದರಿಂದ ಲಾಭ ಪಡೆಯುತ್ತವೆ. ಹೆಣ್ಣಿನ ಮನೋದಾರ್ಢ್ಯ, ಆತ್ಮ ವಿಶ್ವಾಸ, ಧೈರ್ಯಗಳು ಕುಟುಂಬದ ಮೇಲೆ ಬಹಳಷ್ಟು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ನಮ್ಮ ಭಾರತೀಯ ಹೆಂಗಸರು ಅನೇಕ ವಿವಿಧ ಕೆಲಸಗಳನ್ನು ಒಂದೇ ಸಮಯಕ್ಕೆ ಮಾಡುತ್ತಿರುತ್ತಾರೆ. ಮನೆಯ ಒಳಗೆ ಮತ್ತು ಹೊರಗೆ ಎರಡೂ ಕಡೆ ದುಡಿದರೂ ಹೆಣ್ಣು ಎಂಬ ಪಡಿಯಚ್ಚಿನ ಆಘಾತದಲ್ಲಿರುತ್ತಾರೆ. ನಮ್ಮ ಹೆಂಗಸರಿಗೆ ಅವರದೇ ಆರೋಗ್ಯಕ್ಕೆ, ಯೋಗಕ್ಷೇಮಕ್ಕೆ ಇಂತಹ ಪರಿಸರ ಕಲಿಕೆ, ಹೊರಾಂಗಣ ಚಟುವಟಿಕೆಗಳು ಅತ್ಯಗತ್ಯ, ಎನ್ನುವುದು ನೊಮಿತೋ ರ ನಿಲುವು.

ಹೀಗೆ ತಮ್ಮ ಹೊರಾಂಗಣ, ಪರಿಸರ ಕಲಿಕೆ, ಸಾಹಸ ಕ್ರೀಡೆಗಳು, ಚಟುವಟಿಕೆಗಳಲ್ಲಿ ಭಾಗವಹಿಸುವವರು ತಮ್ಮ ದಿನನಿತ್ಯದ ಜೀವನದಲ್ಲಿ ನೈಸರ್ಗಿಕ ಪ್ರಪಂಚ ನಮಗೆ ಕೊಡುವ ಸಂದೇಶಗಳನ್ನು, ಪಾಠಗಳನ್ನು ಅಳವಡಿಸಿಕೊಂಡು ಶಾಂತಿಯಿಂದ ಸಹಬಾಳ್ವೆಯಿಂದ ಬದುಕಿದರೆ ಅದು ನನಗೆ, ನಮ್ಮ ಸಂಸ್ಥೆಗೆ ಅತ್ಯಂತ ಸಂತೋಷವನ್ನು, ತೃಪ್ತಿಯನ್ನು ಕೊಡುತ್ತದೆ, ಅನ್ನುತ್ತಾರೆ ನೊಮಿತೋ.

ನಮ್ಮ ವಿಶೇಷತೆಯೆಂದರೆ ನಗರಗಳಿಂದ ನಮ್ಮಲ್ಲಿಗೆ ಬರುವವರು ಈ ಮಲೆನಾಡು ಪ್ರದೇಶದ ಸ್ಥಳೀಯರೊಂದಿಗೆ, ಬುಡಕಟ್ಟು ಜನರ ಜೊತೆ ಮಿಳಿತು ಅವರ ಜೀವನ, ಸಂಸ್ಕೃತಿಗಳ ಪರಿಚಯ ಮತ್ತು ಸ್ಥಳೀಯ ನಿಸರ್ಗ-ಸಂಬಂಧಿತ ಜೀವನಕ್ರಮದ ಬಗ್ಗೆ ತಿಳಿದುಕೊಂಡು ಅವರೊಂದಿಗೆ ಬೆಸುಗೆ ಹಾಕಿಕೊಳ್ಳುತ್ತಾರೆ. ಹಾಗೆ, ಸ್ಥಳೀಯರಿಗೆ ನಾವು ನಾನಾ ತರಹದ ತರಬೇತಿಗಳನ್ನು ಕೊಟ್ಟು ಅವರು ಹೊರಾಂಗಣ ಮತ್ತು ಸಾಹಸ ಚಟುವಟಿಕೆಗಳ ಕ್ಷೇತ್ರದಲ್ಲಿ, ತಮ್ಮದೇ ಆದ ಸಾಂಸ್ಕೃತಿಕ ಕಲೆಗಳನ್ನು, ಕುಲ ಕಸುಬನ್ನು ಉಪಯೋಗಿಸಿಕೊಂಡು ಸ್ವಂತ ಉದ್ಯೋಗ, ಉದ್ದಿಮೆಗಳನ್ನು, ಕೆಲಸವನ್ನು ಪಡೆಯುವಂತೆ ಸಹಾಯ ಮಾಡಿದ್ದೀವಿ. ಅವರಲ್ಲಿ ದೈಹಿಕವಾಗಿ ವಿವಿಧ ಸಾಮರ್ಥ್ಯ ಪಡೆದವರ ಗುಂಪೂ ಸೇರಿದ್ದಾರೆ. ಎರಡೂ ನಿಟ್ಟಿನಲ್ಲಿ ನಗರದವರು ಮತ್ತು ಸ್ಥಳೀಯರು ಪ್ರಯೋಜನ ಪಡೆದಿದ್ದಾರೆ.

ಹಿಂದೆ ಅವರಲ್ಲಿಗೆ ಬರುತ್ತಿದ್ದ ಶಾಲಾ ಮಕ್ಕಳು ಈಗ ಬೆಳೆದು ದೊಡ್ಡವರಾಗಿ ಅವರೇ ಕೆಲವರು ತಮ್ಮದೇ ಹೊರಾಂಗಣ ಕಲಿಕಾ ಸಂಸ್ಥೆಗಳನ್ನು ಆರಂಭಿಸಿ ನಡೆಸುತ್ತಿದ್ದಾರೆ. ಆಗಿನ ಪುಟ್ಟ ಹೆಣ್ಣು ಮಕ್ಕಳಲ್ಲಿ ಕೆಲವರು ಈಗ ಭಾರತದ ಹೊರಾಂಗಣ ಕಲಿಕೆ ಮತ್ತು ಸಾಹಸ ಕ್ರೀಡೆಗಳ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ನಾನು ಕೆಲವರ ಹೆಸರುಗಳನ್ನು ಹೇಳಿದಾಗ ನೊಮಿತೋ “ಹೌದು ಹೌದು, ಅವರೆಲ್ಲಾ ನಮ್ಮ ಸಂಸ್ಥೆಯಿಂದಲೇ ತರಬೇತಿ ಹೊಂದಿದವರು, ನಾವಂತೂ ಗಟ್ಟಿಯಾಗಿ ಇಲ್ಲೇ ಇದ್ದೀವಿ,” ಎಂದು ನಗುತ್ತಾರೆ.

ಮುಂದಿನ ಬಾರಿ ಕನ್ನಡದ ಮಡಿಲಿಗೆ ಮರಳಿದಾಗ ಒಮ್ಮೆ ಹೊನ್ನೆ ಮರಡಿಗೆ ಹೋಗಿ ನೊಮಿತೋರನ್ನ ಮಾತನಾಡಿಸಿ ಬನ್ನಿ !