ಮಾಯಾಲೋಕಗಳು

ಅಜ್ಜಿ ಕಥೆ

ನನ್ನ ಮೊಮ್ಮಕ್ಕಳು ರಜಾ ಬಂದಾಗ ನಮ್ಮ ಮನೆಗೆ ಬರುತ್ತಾರೆ. ಬಂದಾಗ ಅಜ್ಜಿ ಕತೆ ಹೇಳು ಅಂತ ಕೇಳುತ್ತಾರೆ. ಆಯಿತು. ಕೇಳಿ. ಇದು ನಡೆದ ಸಮಾಚಾರ. ಸುಮಾರು 100 ವರ್ಷ ಕಿಂತ ಮುಂಚೆ ನಡೆದ ಕಥೆ. ನನಗೆ ನನ್ನ ಅಮ್ಮ ಹೇಳಿದ್ದು. ಏನಪ್ಪಾ ಅಂದರೆ ನಾವು ಮೂಲತ: ಮಹಾರಾಷ್ಟ್ರದವರು. ಮಾದ್ವ ಬ್ರಾಹ್ಮಣರು. ವಿಪರೀತ ಮಡಿ, ಮೈಲಿಗೆ ಗಲಾಟೆ. ಮನೆಯ ಹೆಂಗಸರು ತುಂಬಾ ಜೋರು. ಆ ಕಾಲದಲ್ಲಿ ಕಚ್ಚೆ ಹಾಕಿಕೊಂಡು ಕುದರೆ ಸವಾರಿ ಮಾಡುತ್ತಿದ್ದರಂತೆ  ಅವರು ಪೂನಾ ಹತ್ತಿರ ಒಂದು ಊರಲ್ಲಿ ಇದ್ದರಂತೆ. ಪೇಶ್ವೆಗಳ ಹತ್ತಿರ ಸಿಪಾಯಿ ಗಳಾಗಿ ಇದ್ದರಂತೆ. ಇವರಿಗೆ ಮೈಸೂರಿನಲ್ಲಿ ನೆಂಟರು ಮದುವೆಗೆ ಬರಬೇಕೆಂದು ಕರೆದರಂತೆ. ಆ ಕಾಲದಲ್ಲಿ ಸಂಚಾರ ಮಾಡುವುದು ಬಹಳ ಕಷ್ಟ. ಕುದರೆಮೇಲೆ ಕಾಡಿನ ದಾರಿಯಲ್ಲಿ ಹೋಗಬೇಕು. ಚಿಕ್ಕ ಚಿಕ್ಕ ಹಳ್ಳಿಗಳಲ್ಲಿ ರಾತ್ರಿ ಇರಬೇಕು. ಸಾಮಾನ್ಯವಾಗಿ ಮರಾಟಿಗ ಹೆಂಗಸರು ಗಟ್ಟಿಗರು, ಸರಿ ಅಂತ ಪ್ರಯಾಣಕ್ಕೆ ಎಲ್ಲ ಸಿದ್ದಮಾಡಿಕೊಂಡು ಗಂಡ ಮತ್ತು ಹೆಂಡತಿ ಎರಡು ಕುದರೆ ಮೇಲೆ ಹೊರಟರಂತೆ. ಸುಮಾರು ದಿನಗಳು ಕಳೆದವು. ಎಷ್ಟೂ ಕಾಡು, ಮೆಡು ಗಲ್ಲಿ ಸುತ್ತಿ, ನಾನಾ ತರಹದ, ಕಷ್ಟ ಅನುಭವಿಸಿದರು. ಹುಲಿ, ಸಿಂಹ, ಹಾವು, ಜಿಂಕೆ ನಾನಾ ತರಹದ ಪ್ರಾಣಿಗಳನ್ನು ನೋಡಿದರಂತೆ. ಅವರ ಹತ್ತಿರ ಬಂದೂಕು ಇತ್ತು. ಒಂದು ಸಲ ಅವರ ಹತ್ತಿರ ಇದ್ದ ತಿಂಡಿ ಸಾಮಾನು ಮುಗಿದುಹೋಯ್ಯಂತೆ. ಕಾಡಿನಲ್ಲಿ ಏನು ಮಾಡುವುದು ಅಂತ, ಜೇನು, ಹಣ್ಣು ಸಿಗುತ್ತಾ ಅಂತ ನೋಡುತ್ತಾ ಇದ್ದರಂತೆ. ಒಂದು ಬಂಡೆ ಮೇಲೆ ದೊಡ್ಡ ಮುದ್ದೆ ಕಾಣಿಸಿತು. ಹೋಗಿ ನೋಡಿದರೆ ಬೇಲದ ಹಣ್ಣು, ಜೇನುತುಪ್ಪ ಕಲಿಸಿ,ಇತ್ತಂತ್ತೆ. ಇವರು ಹಸಿವೆಯನ್ನು ತಡಯಲಾರದೆ ತಿಂದರಂತೆ. ಅಷ್ಟರಲ್ಲಿ ಒಂದು ಕರಡಿ, ತನ್ನ ಮಕ್ಕಳಲಂದಿಗೆ ಬರುತ್ತಾ ಇದ್ದಿದ್ದನ್ನು ನೋಡಿ, ಇಬ್ಬರು, ಕುದರೆಮೇಲೆ ಹತ್ತಿ ಓಡಿಹೋಗಿ ಜೀವ ಉಳಿಸಿಕೊಂಡರು.  ಕರಡಿ ಪಾಪ!ತನ್ನ ಮಕ್ಕಳಿಗೆ  ತಯಾರಿಸಿದ ಬೆಲದ ಹಣ್ಣು ಜೇನು ತುಪ್ಪದ ಫಲಾಹಾರ,ನಮ್ಮ ನೆಂಟರು ತಿಂದುಬಿಟ್ಟರು. ಕರಡಿ ಅಟ್ಟಿಸಿಕೊಂಡು, ಬರುವವಷ್ಟ್ರಲ್ಲಿ, ಇವರು ಕುದರೆಮೇಲೆ ದೌಡಾಯಿಸಿದರು.
ಹೀಗೆ ನಮ್ಮ ಅಮ್ಮ ನಮಗೆಲ್ಲ ಬೆಳದಿಂಗಳ ಊಟ ಕೈ ತುತ್ತು ಹಾಕುತ್ತ ಹೇಳುತ್ತಿದರು.

'ಅಜ್ಜಿ ಇದು ನಿಜವಾದ ಘಟನೆನಾ ಅಥವಾ ಬರಿ ಕಥೆನಾ?' ' ನನ್ನ ತಾಯಿಯ ಮುತ್ತಜ್ಜಿ,ಮುತ್ತಜ್ಜ ಪೂನಾದಿಂದ ಮೈಸೂರಿಗೆ ವಲಸೆಬಂದದ್ಫು ನಿಜ. ಕುದುರೆ ಮೇಲೆ ಕಾಡಿನಲ್ಲಿ ಬಂದಿದ್ಫು ನಿಜ. ಮಿಕ್ಕಿದೆಲ್ಲ ನನಗೆ ಗೊತ್ತಿಲ್ಲ' ಅಂತ ಜಾರಿಕೊಂಡೆ. ಇಲ್ಲದಿದ್ದರೆ Where is the proof? ಅಂದರೆ ಏನು ಮಾಡಲಿ? ನಾವೆಲ್ಲ ನಮ್ಮ ಅಮ್ಮ ಹೇಳಿದ ಕಥೆ 200% ನಂಬುತ್ತೀವಿ. ಒಂದು ಜನರೇಶನ್ ಗೆ ಮುಂದಿನ ಜನರೇಶನ್ ಕತೆ ಇನ್ನು ಜೀವಂತ ವಾಗಿದೆ.

~ ವತ್ಸಲಾ ರಾಮಮೂರ್ತಿ

ಜಾಹೀರಾತುಗಳ ಮಾಯಾಲೋಕ

ಇದೀಗ ಇಲ್ಲಿ  ಸಂಜೆಗಳೇ ಇಲ್ಲದ  ಬರೀ ಬೆಳಗು – ರಾತ್ರಿಗಳ ನವೆಂಬರ್. ಚಳಿರಾಯ ನಿಧಾನವಾಗಿ ತನ್ನ ಪಾದವೂರುವ  ಸನ್ನಾಹದಲ್ಲಿದ್ದಾನೆ.  ಚಕ್ಕುಲಿ- ಕರಚಿಕಾಯಿ, ದೇಸಿ ಘೀ ಯ ಬೇಸನ್ ಉಂಡಿಗಳ ದೀಷಾವಳಿ ಫರಾಳದ  ಪ್ರಭಾವವೋ ಅಥವಾ ಚಳಿರಾಯನ ಕರಾಮತ್ತೋ ಅಂತೂ ಸಣ್ಣನೆಯ ಕೆಮ್ಮು, ಗಂಟಲ ಕೆರೆತ,  ಮೈಕೈ ನೋವು...ಹೀಂಗ  ಒಂದೊಂದೇ ಕಿರಿಕರಿಗಳು ,ಕಾಡಲಿಕ್ಕೆ ಶುರುವಾಗೂ ದಿನಗಳಿವು. 

‘ ಗಲೇಂ ಮೆ ಖರಾಶ್ ಮಜೇದಾರ್ ಸ್ಟೆಪ್ಸಿಲ್ಸ’ , ‘ ವಿಕ್ಸ್ ಕೀ ಗೋಲಿ ಲೋ ಖಿಚ್ ಖಿಚ್ ದೂರ್ ಕರೋಂ ‘
ಇದೇನಿದು ಜಾಹೀರಾತು ಶುರು ಮಾಡಿದ್ರೆಲಾ ಅಂತೀರೇನು? ಹೌದ ನೋಡ್ರಿ ಈ ಜಾಹೀರಾತುಗಳ ಮಹಿಮಾ ಮತ್ತ ಮಾಯಾ ( ಮುನ್ನಾಭಾಯಿಗತೆ ಯೆ ಮಹಿಮಾ ಔರ್ ಮಾಯಾ ಕೌನ್ ಹೈ ಅಂತ ಮಾತ್ರ ಕೇಳಬ್ಯಾಡ್ರಿ ಮತ್ತ) ಭಾಳ ದೊಡ್ಡದು ಬಿಡ್ರಿ. ಖರೇ ಹೇಳಬೇಕಂದ್ರ ಈ ಇಂಟರ್ ನೆಟ್ , ಗೂಗಲ್ ಮಹಾಶಯ ಸಹಾಯಕ್ಕಿಲ್ಲ ದ ನಮ್ಮ ಆಗಿನ ದಿನಗಳಲ್ಲಿ ನಮಗೇನರೇ ಅಲ್ಪ-ಸ್ವಲ್ಪ ಲೋಕಜ್ಞಾನ, ಸಾಮಾನ್ಯ ಜ್ಞಾನ ಇತ್ತು ಅಂದ್ರ ಅದರಾಗ ಈ ಜಾಹೀರಾತುಗಳದೇ ದೊಡ್ಡ ಪಾತ್ರ ಅಂತ ನಿಸ್ಸಂಶ ಯವಾಗಿ ಹೇಳಬಲ್ಲೆ.
ಡಮಡಮು ಅಂತ ಬಾರಸಕೋತ ಮಂಗ್ಯಾ ಆಡಸಂವಾ ಬಂದ್ರ, ‘ಮನ ಡೋಲೆ ಮೋರಾ ತನ್ ಡೋಲೆ’ ಅಂತ ಪುಂಗಿ ಊದೋ ಹಾವಾಡಿಗನ ಆ ಬಿದಿರನ ಬುಟ್ಟಿ ಕಂಡ್ರ, ಬಾರಕೋಲಿನ ಚಾಟಿ ಮೈಮೇಲೆ ಬೀಸಕೋತ ‘ ನೀರ ಹಾಕ್ರಿ, ನೀರ ಹಾಕ್ರಿ’ ಅಂತ ದುರಗಮುರಗ್ಯಾ ಬಂದ್ರ , ಆನೆಯೋ- ಒಂಟೆಯೋ ಸವಾರಿಗಾಗಿ ಬಂದ್ರ, ಯಾರೋ ಕೌಲೆತ್ತು ತಂದ್ರ, ಆಕಾಶದಾಗೊಂದು ವಿಮಾನ ಹಾರಿದ್ರ ಮನೆಯೊಳಗಿಂದ ಹೊರಗೆ ಓಡೋಡಿ ಬಂದು ಜಗತ್ತಿನ ಅದ್ಭುತಗಳೆಲ್ಲ ಅಲ್ಲೇ ಮೇಳೈಸಿಬಿಟ್ಟಾವೇನೋ ಅನ್ನೂಹಂಗ ಬೆರಗುಗಣ್ಣಿಂದ ನೋಡುತ್ತ ಅವನ್ನೆಲ್ಲ ಆಸ್ವಾದಿಸುವ ಮುಗ್ಧ ಬಾಲ್ಯ – ಹದಿಹರೆಯಗಳವು. ಹೊಸತಾಗಿ ಆಗಷ್ಟೇ ಅವರಿವರ ಮನೆಯಲ್ಲಿ ಸಣ್ಣದಾಗಿ ಒಂದೊಂದೇ Black & white, portable T.V.ಗಳು ಬರಲು ಶುರುವಾಗಿದ್ದ ದಿನಗಳು. ಖರೇ ಹೇಳಬೇಕಂದ್ರ ಆಗ ಈ ಟಿ ವಿ ವೈಯಕ್ತಿಕ ಸ್ವತ್ತಾಗಿರಲಿಲ್ಲ. ಮನೆಯವರು ದುಡ್ಡನ್ನು ಪಾವತಿಸಿ T.V ತಂದರೂ ಅದರ ಮೇಲೆ ಇಡಿಯ ಓಣಿಯ ಜನರ ಅಧಿಕಾರವಿರುತ್ತಿತ್ತು. ಈಗಿನವರಿಗೆ ಇದು ನಂಬಲಸಾಧ್ಯವಾದರೂ ನಮ್ಮ ಕಾಲದ ಸೋಳಾಣೆ ಸತ್ಯ,ಶಂಬರ್ ಟಕ್ಕೆ ಖರೇ ಮಾತಾಗಿತ್ತು ಇದು.

ನಮ್ಮ ಓಣ್ಯಾಗ ಮೊದಲ ಉಕ್ಕಲಿ ಮಾಮಾ ಅವರ ಮನಿಗೆ ಟಿ.ವಿ. ಬಂದಿತ್ತು. ಅವರ ಮನೆಯ ಮೂರುಜನ ನಮ್ಮ ಮನೆಯ ಆರು ಜನ ಅದನ್ನು ನೋಡಲು ಕೂಡುವುದಿತ್ತು. ಆ ಟಿ.ವಿ. ಕಾರ್ಯಕ್ರಮಗಳಿಗೆ ತಕ್ಕಹಂಗ ಅವರು ತಮ್ಮ ಊಟ, ತಿನಸು ,ಛಾ ಮುಗಸಕೊಂಡು ಎಷ್ಟೋ ಸಲ ನಮಗೂ ಕೊಟ್ಟು ನಮ್ಮನ್ನೆಲ್ಲ ಕುರ್ಚಿ, ದಿವಾನದ ಮೇಲೆ ಕೂಡಿಸಿ ಪಾಪ ಅವರೇ ಕೆಳಗೆ ಚಾಪೆ ಮ್ಯಾಲೆ ಕೂಡೋ ಪಾಳಿ ಬರತಿತ್ತು. ಆದ್ರ ಮಜಾ ಅಂದ್ರ ಇವುಗಳ ಬಗ್ಗೆ ಅವರಿಗೂ ಬೇಸರವಿರಲಿಲ್ಲ. ಉಲ್ಟಾ ಎಂದರೇs ಒಮ್ಮೆ ನಾವು ಹೋಗದಿದ್ರ ಅವರ ಮಗಳು ರೇಖಾ ಕಟ್ಟಿ ಮ್ಯಾಲೆ ನಿಂತು ‘ ಚಿತ್ರಹಾರ್ ಶುರು ಆತು ಲಗೂನೇ ಬರ್ರಿ’ ಅಂತ ಕೂಗಿ ಕರೆಯುತ್ತಿದ್ದಳು. ರಾತ್ರಿ ಹೊತ್ತು ಪ್ರಸಾರವಾಗುತ್ತಿದ್ದ ‘ ಕಿಲ್ಲೆ ಕಾ ರಹಸ್ಯ’ ನೋಡಲು ಅವರು ನಿದ್ದೆ ಬಂದಿದ್ದರೂ ತೂಕಡಿಸುತ್ತ ನಮಗಾಗಿ ಕಾಯುತ್ತಿದ್ದದು ನನಗೀಗಲೂ ನೆನಪಿದೆ.

84 ರಲ್ಲಿ ನಮ್ಭ ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆಯಾದಾಗಲಂತೂ ನಮ್ಮ ಹಿಂದಿನ ಓಣಿಯ ಗುನ್ನಾಳಕರ ಅವರು ತಮ್ಮ ಟಿ.ವಿ.ಯನ್ನು ಮನೆ ಯ ಅಂಗಳದಲ್ಲಿಟ್ಟು ನೂರಾರು ಮಂದಿಗೆ ಪ್ರಧಾನಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರು. ಕ್ರಿಕೆಟ್ ಮ್ಯಾಚ್ ಗಳು ಇದ್ದರೂ ಅಷ್ಟೇ. ಪಡಸಾಲೆಯ ಟಿ.ವಿ. ಅಂಗಳಕ್ಕೇ ಬರುತ್ತಿತ್ತು.

ನಂತರ ಗೌಡರ್ ಅವರ ಮನಿಗೆ ಕಲರ್ ಟಿ.ವಿ. ಬಂದು ನಾವು ಐದು ಜನ ಮಕ್ಕಳು, ಅವರ ಮನೆಯ ಆರು ಜನ ಮಕ್ಕಳು ತಮ್ಮ ತಮ್ಮ ಸ್ನೇಹಿತರಾದಿಯಾಗಿ ಬಂಧುಬಳಗ ಸಮೇತವಾಗಿ ಸತ್ಯನಾರಾಯಣ ಪೂಜೆಯಷ್ಟೇ ಶ್ರದ್ಧೆಯಿಂದ ರಮಾನಂದ ಸಾಗರರ ರಾಮಾಯಣ, ಬಿ.ಆರ್. ಛೋಪ್ರಾರ ಮಹಾಭಾರತ ನೋಡುತ್ತಿದ್ದೆವೆನ್ನುವುದು ಬಹಳ ಸುಂದರ ನೆನಪು. ಗೌಡರ್ ಮಾಲಾಕಾಕು ಅಂತೂ ಸ್ನಾನ ಮಾಡಿ ಒಗೆದ ಬಟ್ಟೆ ತೊಡದೇ ಹೋದ್ರ ರಾಮಾಯಣ – ಮಹಾಭಾರತ ನೋಡಲಿಕ್ಕೆ ಎಂಟ್ರಿ ಪಾಸ್ ನೇ ಕೊಡತಿದ್ದಿಲ್ಲ. ಹಿಂಗಾಗಿ ನಾವು ರಾಮ- ಸೀತಾನ ಬಗ್ಗೆ ಭಯಭಕ್ತಿ ಇರದಿದ್ರ ಅಷ್ಟೇ ಹೋತು ಮಾಲಾಕಾಕುಗ ಅಂಜಿ ರವಿವಾರ ಇದ್ರೂ ಲಗೂಲಗೂ ಸ್ನಾನ – ಹೆರಳು,ಎಲ್ಲಾ ಮುಗಿಸಿಕೊಂಡು ಲಕಾಲಕಾ ತಯಾರಾಗಿ ಬಿಡತಿದ್ವಿ ಅನ್ರಿ.

ಈಗ ಮನ್ಯಾಗ 65, 75 ಇಂಚಿನ ಟಿ.ವಿ., ಹೋಮ್ ಥೇಟರ್ ಅಂತ ಸುಟ್ಟುಸುಡುಗಾಡು ನೂರಾ ಎಂಟು ಇದ್ರೂ ಆಗಿನ ಮಜಾ ಇಲ್ಲ ಅನ್ನೂದು ನನ್ನೊಬ್ಬಳ ಅನಿಸಿಕೆನೋ ಅಥವಾ ನಿಮ್ಮದೂ ಹೌದೋ ನನಗೆ ‘ ಗೊತ್ತಿಲ್ಲ.

ಹೀಂಗ ಈ ಟಿ.ವಿ. ಬಂದಮ್ಯಾಲೆ ಜಾಹೀರಾತುಗಳ ಒಂದು ಸುಂದರ ಪ್ರಪಂಚ ನಮ್ಮ ಕಣ್ಣೆದುರು ತೆರೆದುಕೊಂಡುಬಿಟ್ಟಿತು. 5-10 ಪೈಸೆಯ ಪೆಪ್ಪರ್ ಮಿಂಟೋ, ಕಿಸ್ ಮಿ ಚಾಕಲೇಟುಗಳಿಗಷ್ಟೇ ಪರಿಚಿತರಾಗಿದ್ದ ನಮಗೆ ‘ ಕಿತನಾ ಮಜಾ ಆಯೇರೆ ದುನಿಯಾ ಡೇರಿ ಮಿಲ್ಕ್ ಕಿ ಬನ್ ಜಾಯೇರೆ’ ಅಂತ ಚಾಕಲೇಟಿನಂಥ ಹೊಸ ಜಗತ್ತನ್ನು ತೋರಿಸಿದ್ದೇ ಈ ಜಾಹೀರಾತುಗಳು. ‘ಕುಛ್ ಬಾತ್ ಹೈಂ ಹಮ್ ಸಭೀಮೆಂ..ಖಾಸ್ ಹೈಂ..ಕುಛ್ ಸ್ವಾದ್ ಹೈಂ..ಕ್ಯಾ ಸ್ವಾದ್ ಹೈಂ ಜಿಂದಗಿ ಮೆಂ’ ಅಂತ ಶುರುವಾಗೋ ಡೇರಿ ಮಿಲ್ಕ್ ನ ಜಾಹೀರಾತು ನಮ್ಮ ಬದುಕಿನಾಗೂ ಸ್ವಾದ ತುಂಬಿ ಖಾಸ್ ಆದ್ವು ಇದರ ಎಲ್ಲಾ ಜಾಹೀರಾತುಗಳೂ ಒಂದೊಂದೂ ಸುಂದರ..ಒಂದೊಂದೂ ಹೃದಯಸ್ಪರ್ಶಿ. ಅವುಗಳನ್ನು ತಯಾರಿಸಿದವರ ಸೃಜನಶೀಲತೆಗೆ ನನ್ನ ಶರಣು.

‘ ಆಡು ಮುಟ್ಟದ ಸೊಪ್ಪಿಲ್ಲ’ ಅನ್ನೂಹಂಗ ಈ ಜಾಹೀರಾತುಗಳು ಕೈಯಾಡಿಸದ ಕ್ಷೇತ್ರಗಳೇ ಇಲ್ ಅನ್ನಬಹುದು. ಆಗಷ್ಟೇ ಹುಟ್ಟಿದ ಮಗುವಿನ ಪಿಂಕೂ ಗ್ರೈಪ್ ವಾಟರ್ ನಿಂದ ಹಿಡಿದು ನಿಮ್ಮ ಮಕ್ಕಳ ಎತ್ತರ, ತೂಕಗಳಿಗಾಗಿ ಕೋಂಪ್ಲಾನ್ – ಹಾರ್ಲಿಕ್ಸ್ ಗಳವರೆಗೆ, ಸ್ವಾದ್ ಭರೆ ಶಕ್ತಿಭರೆ ಪಾರ್ಲೆ ಜಿ ಯ ಜೊತೆಗೆ ನಾವು ಯಾವ ಚಹಾ ಕುಡಿಯಬೇಕು, ಯಾವ ಹಪ್ಪಳ ತಿನ್ನಬೇಕು, ನಲ್ಲನ ಮನ ಗೆಲ್ಲಲು ಅಡುಗೆಗೆ ಯಾವ ಮಸಾಲೆ ಉಪಯೋಗಿಸಬೇಕು, ಬಿರಿಯಾನಿ ರುಚಿಯಾಗಲು ಯಾವ ಅಕ್ಕಿ ಹಾಕಬೇಕು ? ಬೆನ್ನು – ಸೊಂಟ- ಹಲ್ಲು ನೋವುಗಳಿಗೆ ಏನು ಮಾಡಬೇಕು? ಯಾವ ಸೋಪ್, ಕ್ರೀಂ, ಪೌಡರ್ ನಿಂದ ನಾವು ಚಿರ ಯೌವನಿಗರಾಗಬಹುದು? ಯಾವ ಶಾಂಪೂ, ಹೇರ್ ಆಯಿಲ್ ಗಳಿಂದ ನಾವು ನಾಗವೇಣಿಯರಾಗಬಹುದು? ಯಾವ ಶೇವಿಂಗ್ ಕ್ರೀಂ, ಡಿಯೊಡ್ರಂಟ್ ಗಳನ್ನು ಬಳಸಿದ್ರ ಹುಡುಗಿಯರು ಮೈಮೇಲೆ ಬಂದು ಬೀಳಬಹುದು? ಏನು ಮಾಡಿದರೆ ಮನೆಯ ಪೀಠೋಪಕರಣಗಳನ್ನು ಆಜೀವಪರ್ಯಂತ ಮುರಿಯದಂತೆ ಇಟ್ಟುಕೊಳ್ಳಬಹುದು? ಯಾವ ಗಾಡಿ, ಬೈಕು ತಗೊಂಡ್ರ ಎಷ್ಟೆಷ್ಟು ಮೈಲೇಜು, ಏನೇನು ಲಾಭ? ಯಾವ ಚಪ್ಪಲಿ, ಶೂಸ್ ಬಳಸಬೇಕು? ಯಾವ ಒಳ ಉಡುಪುಗಳನ್ನು ಧರಿಸಬೇಕು? ಯಾವ ಪೆನ್ನು- ಪೆನ್ಸಿಲ್ – ನೋಟ್ ಬುಕ್ ಗಳನ್ನು ಉಪಯೋಗಿಸಿದ್ರ ಛಂದನೆಯ – ದುಂಡನೆಯ ಅಕ್ಷರ ಬರೆದು ವಿದ್ಯಾವಂತರಾಗಬಹುದು? ಕೊಳೆಯಾದ ಬಟ್ಟೆಗಳನ್ನು ಹೆಂಗ ಕೊಕ್ಕರೆಯಂತೆ ಬಿಳಿ ಶುಭ್ರ ಮಾಡಬಹುದು .ಇತ್ಯಾದಿ ಅಮೂಲ್ಯ – ಅತ್ಯಮೂಲ್ಯ ವಿಚಾರಗಳನ್ನೆಲ್ಲ ನಮ್ಮ ತಿಳಿವಿಗೆ ತುರುಕಿದ್ದೇ ಈ ಜಾಹೀರಾತುಗಳಂದ್ಲ ತಪ್ಪಿಲ್ಲ.
ಇನ್ನು ಕೆಲವೊಂದು ಜಾಹೀರಾತುಗಳಂತೂ ನಮ್ಮ ನೆಚ್ಚಿನ ನಟ- ನಟಿಯರ ಸಲುವಾಗಿ ಫೇವರಿಟ್. ‘ಲಿಮ್ಕಾ..ಲಿಮ್ಕಾ’ ಎಂದು ಹಾಡುವ , ಲಖಾನಿ ಹವಾಯಿ ಚಪ್ಪಲ್ ಹಾಕಿಕೊಂಡು ಕುಣಿಯುವ ಸಲ್ಮಾನ್ ಖಾನ್ ಇರಲಿ, ‘ ಡಾಬರ್ ಆಮ್ಲಾ ಕೇಶ್ ತೈಲ್’ ಅಂತ ಕಪ್ಪನೆಯ ಕೇಶರಾಶಿಯನ್ನು ಹಾರಿಸುತ್ತ ತಿರುಗುವ ಜಯಪ್ರದಾ ಇರಲಿ, ಬಾರಾತಿಯೋಂ ಕಾ ಸ್ವಾಗತವನ್ನು ಪಾನ್ ಪರಾಗ್ ಪಾನ್ ಮಸಾಲಾದಿಂದ ಮಾಡುವ ಶಮ್ಮಿಕಪೂರ್, ಅಶೋಕ ಕುಮಾರ್ ಇರಲಿ, ‘ what an Idea sir ji’ ಎನ್ನುವ ಅಭಿಷೇಕ್ ಬಚ್ಚನ್ ಇರಲಿ, Dr.fixit ನ ಅಮಿತಾಭ್ ಬಚ್ಚನ್ ಇರಲಿ, ತೀರ ಇತ್ತೀಚಿನ cleethorpes max fresh ನ ರಣವೀರ ಸಿಂಗ್ ಇರಲಿ, ಮಧುಬಾಲಾನಿಂದ ಹಿಡಿದು ಮಾಧುರಿ ದೀಕ್ಷಿತವರೆಗಿನ Lux ಸೋಪಿನ ರೂಪದರ್ಶಿಯರಿರಲಿ ಎಲ್ಲರೂ..ಎಲ್ಲವೂ ನಮ್ಮ ಫೇವರಿಟ್. ಯಾಕಂದ್ರ ನಮಗ ಬಾಲಿವುಡ್ ತಾರಾಮಣಿಗಳಂದ್ರ ಅದೇನೋ ಹುಚ್ಚು ಸೆಳೆತ – ಪ್ರೀತಿ – ಅಪನಾಪನ್. ಇನ್ನ ಅವರು ಮಾಡಿದ ads ಅಂದ್ರ ಮುಗದೇ ಹೋತ. ಅಲ್ಲೇನ್ರಿ?

ಅಲ್ರೀ ಎಲ್ಲಾಬಿಟ್ಟು ಯಕ:ಶ್ಚಿತ್ ಉಪ್ಪಿನ ಬಗ್ಗೆನೂ ಎಷ್ಟೆಲ್ಲ ಜಾಹೀರಾತುಗಳ್ರಿ..ಅದ್ಯಾಕ ಯಕ:ಶ್ಚಿತ್ ಬಿಡ್ರಿ ಇದರ ಮಹತ್ವ ಏನು ಕಡಿಮೆದ? ಇದರ ಸಲುವಾಗಿ ದಂಡಿ ಸತ್ಯಾಗ್ರಹನೇ ನಡದು ಇತಿಹಾಸದಾಗೂ ಅದಕ್ಕೊಂದು ಸ್ಥಾನ ಸಿಕ್ಕೇಬಿಟ್ಟದ. ಟಾಟಾ ನಮಕ್ ದೇಶ್ ಕಾ ನಮಕ್- ಅದರಾಗ ಶುದ್ಧತೆ, ಅಯೋಡಿನ್ ಗಳಂತೂ ಅವನೇ ಅವ ಜೋಡಿಗೆ ಚುಟಕಿ ಭರ್ ಇಮಾನದಾರಿನೂ ಅದರಾಗಿರತದ ಅನ್ನೂದು ad ನೋಡೇ ಗೊತ್ತಾಗಿದ್ದು. ‘ ಡರ್ ಕೆ ಆಗೇ ಜೀತ್ ಹೈ’ ಎಂಬ ಅಮೂಲ್ಯ ವಿಚಾರ ತಿಳಿದದ್ದೂ ಈ ಜಾಹೀರಾತಿನಿಂದಲೇ.

ಇನ್ನ ನಾವು ನಮ್ಮ ರೆಡ್ ಲೇಬಲ್ ಟೀ ಯಿಂದ Taj ಗೆ ಪಕ್ಷಾಂತರ ಮಾಡಿದ್ದಕ್ಕೂ ಈ ಜಾಹೀರಾತೇ ಕಾರಣ. ಉದ್ದನೆಯ ಗುಂಗುರು ಕೂದಲು ಹಾರಿಸುತ್ತ, ಬೆರಳುಗಳಿಂದ ತಬಲಾದ ಮೇಲೆ ನಾದದ ನರ್ತನ ಮಾಡುತ್ತ ಉಸ್ತಾದ್ ಝಾಕೀರ್ ಹುಸೇನ್ ‘ ವಾಹ್ ತಾಜ್ ಬೋಲಿಯೆ’ ಅಂತ ಸೇಳಿದ ಮ್ಯಾಲೆ ನಮಗೆ ಬ್ಯಾರೆ ಹಾದೀನೇ ಇದ್ದಿದ್ದಿಲ್ಲ ಬಿಡ್ರಿ.

‘ ದೋ ಮಿನಿಟ್’ ನ ಮ್ಯಾಗಿ ನನ್ನ ಮಕ್ಕಳ ಪ್ರೀತಿಯ ಭೋಜನ. ನನಗೂ ಅವಸರದ ಆಪ್ತಬಂಧು. ಪುಳಿಯೋಗರೆ, ಪಾವ್ ಭಾಜಿ ಮಸಾಲೆಗಳು , ಖರ್ರಂ ಖುರ್ರಂನ ಲಿಜ್ಜತ್ ಪಾಪಡ್ ಗಳು ನಮ್ಮ ಅಡುಗೆ ಮನೆಗೆ ಆಪ್ತವಾದದ್ದು ಜಾಹೀರಾತುಗಳ ಕಮಾಯಿನೇ.ಹಾಲು ಬೇಡವೆಂದ ಮಕ್ಕಳಿಗೆ compla, horlicks ಗಳ ಆಮಿಷವೊಡ್ಡಿ ಕುಡಿಸಿ ‘ಮೈ ಬಢ ರಹಾ ಹೂಂ ಮಮ್ಮಿ’ ಅಂತ ಅವರ ಪರವಾಗೆ ನಾನೇ ಅಂದುಕೊಂಡು ಖುಷಿಪಟ್ಟದ್ದು, ಬ್ಯಾಸಗ್ಯಾಗ ರಸನಾ, ಆಟ ಆಡಿ ಬಂದಕೂಡಲೇ glucon-D, ಥಂಡ್ಯಾಗ ಚ್ಯವನ್ ಪ್ರಾಶ್ ಹೀಂಗ ಮಕ್ಕಳ ಆರೋಗ್ಯದ ದೇಖರೇಕಿ ಬಗ್ಗೆ ಅತ್ಯಪರೂಪದ ಮಾರ್ಗದರ್ಶಿಗಳಾಗಿದ್ದವು.
ಈ ಮೈ ತೊಳೆವ ಸಾಬಾಣಿನ (soap) ಜಾಹೀರಾತುಗಳಂತೂ ನನ್ನ ಚಿತ್ತದಾಗ ಪಟ್ಟಾಗಿ ಕೂತಬಿಟ್ಟಾವ ಲಾ..ಲಲಾ..ಲ..ಲಾ ಅಂತ ಹಾಡಕೋತ ಸ್ವಚ್ಛ ಶುಭ್ರವಾದ ನದಿ- ಜಲಪಾತದಾಗ Liril soap ಹಿಡಿದು ಸ್ನಾನ ಮಾಡೋ ಆ ರೂಪದರ್ಶಿನ್ಶ ನೋಡಿದ್ರ ಬಚ್ಚಲಿನಾಗೇ ಹತ್ತು ಸಲ ನಮ್ಮ ಕೈಯಿಂದ ಜಾರಿ ಜಾರಿ ಬೀಳುತ್ತಿದ್ದ ಸೋಪ್ ನೆನೆಸಿಕೊಂಡು , ಇಂಥ,ಹರಿವ ನೀರಿನ ರಭಸದಾಗೊ,ಅದ್ಹೆಂಗಿನ್ನೂ ಜಾರದs ಅಕಿನ ಕೈಯಾಗೇ ಉಳದದ ಅನ್ಶೂದೇ ಸೋಜಿಗ ಅನಸತಿತ್ಯು ನನಗೆ. ಇನ್ನ ಹೊಸಬಟ್ಟಿ, ಬಿಳಿಬಟ್ಟಿ ಕೆಸರು ಮಾಡಿಕೊಂಡು ಬಂದ್ರ ಮಕ್ಕಳಿಗೆ ಬಯ್ಯದ s ‘ ದಾಗ್ ಅಚ್ಛಾ ಹೈ...surf excell hai na? ಅನ್ನುವ ನಗುಮೊಗದ ಅಮ್ಮಂದಿರೂ ನನಗ ಬ್ಯಾರೆ ಲೋಕದವರ ಹಂಗೇ ಕಾಣಸತಾರ. ಯಾಕಂದ್ರ ಸಣ್ಣವರಿದ್ದಾಗ ಹೊಸ ಬಟ್ಟೆ, ಬಿಳಿ ಬಟ್ಟೆ ಕಲೆ ಮಾಡಿಕೊಂಡ್ರ ಮಸ್ತ್ ಮಂಗಳಾರತಿ ಮಾಡಿಸಕೋತಿದ್ವಿ ಮನ್ಯಾಗ. ಈಗ ನಾನೂ ಮಕ್ಕಳಿಗೆ ಮಂಗಳಾರತಿ ಮಾಡದಿದ್ರೂ ‘ ಸ್ವಲ್ಪ ನೋಡಕೊಂಡು ಸಾವಕಾಶ ಮಾಡಲಿಕ್ಕೆ ಬರಂಗಿಲ್ಲ s?’ ಅಂತ ಅನ್ನಬಹುದೇ ಹೊರತು ‘ ದಾಗ್ ಅಚ್ಛಾ ಹೈ’ ಅನ್ನುವ ಸಹನಶೀಲತಾ ನನ್ನ ಹತ್ರ ಇಲ್ಲ.

ಒಟ್ಟಿನಾಗ ನನಗ ಈ ಜಾಹೀರಾತುಗಳ ತಯಾರಿಕೆ, ಹಣಹೂಡಿಕೆ, ಗಳಿಕೆ, ತಂತ್ರಜ್ಞಾನ ಇತ್ಯಾದಿಗಳ ಬಗ್ಗೆ ಅಷ್ಟೆಲ್ಲ ಜ್ಞಾನ ಇರದಿದ್ರೂ ಅವು ಕೊಡುವ ಮುದದ ಬಗ್ಗೆ ಬಹಳ ಖುಷಿ ಅನಸತದ. ಇವುಗಳ ಸತ್ಯಾಸತ್ಯತೆಗಳೇನೇ ಇರಲಿ ಸೆಕೆಂಡುಗಳ, ನಿಮಿಷಗಳ ಅತ್ಯಲ್ಪ ಅವಧಿಯಲ್ಲೇ ಅವುಗಳನ್ನು ಹೃದ್ಯವಾಗಿ ಪ್ರಸ್ತುತ ಪಡಿಸುವ ರೀತಿ ಇದೆಯಲ್ಲ ಅದು ನನ್ನನ್ನು ತಟ್ಟುತ್ತದೆ. ಕಿವಿ ಗುಳು ಗಳು ಅನ್ನುವಾಗ ಇಯರ್ ಬಡ್ ಹಾಕಿಕೊಂಡು ಗಲಗಲ ಮಾಡಿ ಪ್ರಪಂಚವನ್ನೇ ಒಂದು ಕ್ಷಣ ಮರೆತಂತೆ, ಕೈಗೆ ತಾಗದ ಬೆನ್ನಿಗೆ ತುರಿಕೆಯಿದಾಗ ಹಣಿಗೆಯೊಂದರಿಂದ ಅದನ್ನು ಕೆರೆದುಕೊಂಡಾಗ ಸಿಗುವ ಸುಖದಂತೆ, ಗಂಟಲಲ್ಲೇ ಅಡಗಿ ಕಾಡಿಸಿದ ಶೀನೊಂದು ‘ಆಕ್ಶೀ’ ಎಂದು ಪಟ್ಟನೇ ಹೊರಬಂದಾಗ ಸಿಗುವ ಸಮಾಧಾನದಂತೆ, ಒತ್ತಿ ಬರುತ್ತಿರುವ ತೂಕಡಿಕೆಗೊಂದು ಹೆಗಲು ದೊರೆತಾಗಿನ ನೆಮ್ಮದಿಯಂತೆ ಈ ಜಾಹೀರಾತುಗಳೂ ಕೂಡ ನಂಗ ಏನೋ ಒಂಥರಾ ಅನಿರ್ವಚನೀಯ ಅಂತಾರಲ್ಲ ಅಂಥ ಖುಷಿ, ಭರವಸೆ, ನೆಮ್ಮದಿ, ಉತ್ಸಾಹಗಳನ್ನು ಕೊಡತಾವ.

ಇದನ್ನೋದಿ ಒಂದೆರಡು ನಿಮ್ಮ ಫೇವರಿಟ್ ಜಾಹೀರಾತು ನಿಮಗ ನೆನಪಾದ್ರ, ಮನಸ್ಸು ಜರ್ ಅಂತ ಹಿಂಬರಿಕಿ ಜಾರಿಹೋದ್ರ ಅದನ್ನ ನಂಗೂ ಹೇಳೂದ ಮರೀಬ್ಯಾಡ್ರಿ.

~ ಗೌರಿಪ್ರಸನ್ನ

ಗೋಕುಲಾಷ್ಟಮಿ ನನ್ನ ನೆನಪುಗಳು , ಅನುಭವಗಳು

 

ಕೃಷ್ಣ ಭಾರತೀಯರಿಗೆ ಅಪ್ಯಾಯಮಾನವಾದ ಭಗವಂತ. ಆತನ ತುಂಟತನ, ಶೌರ್ಯ, ಅಸಹಾಯಕರ ಸಹಾಯಕ್ಕೆ ಮುನ್ನುಗ್ಗುವ ಛಾತಿ, ಸಂಗೀತೋಪಾಸನೆ, ಭ್ರಾತೃ- ಮಿತ್ರ ಪ್ರೇಮ, ಹೆಂಗಳೆಯರ ಮನ ಸೆಳೆಯುವ – ಮನದಲ್ಲಿಳಿಯುವ ಚಾಕಚಕ್ಯತೆ, ಒಲಿದು ಬಂದವರಿಗೆ ತೋರುವ ಅಮಿತ ಪ್ರೇಮ, ಸಾಮ -ದಾನ-ದಂಡ-ಭೇದಗಳನ್ನು ಸಮಯಕ್ಕೊಪ್ಪುವಂತೆ ಉಪಯೋಗಿಸಬಲ್ಲ ಚಾಣಾಕ್ಷತೆ ಚುಂಬಕದಂತೆ ನಮ್ಮನ್ನು ಆಕರ್ಷಿಸುತ್ತವೆ. ಕೃಷ್ಣ ಕಥೆಗಳನ್ನು ಓದಿ ಬೆಳೆದ ನಮಗೆ ಇಂದಿಗೂ ಅವು ಮನದಲ್ಲಿ ಅಚ್ಚೊತ್ತಿವೆಯಲ್ಲದೇ ಅವನ ಎಷ್ಟೋ ಗುಣಗಳು ಅರಿವಿಲ್ಲದೇ ಸಂಕಷ್ಟದಲ್ಲಿ ನಮಗೆ ದಾರಿದೀಪವೂ ಆಗಿವೆ. ಈ ಸೋಮವಾರ ಈ ಭೂಮಿಯ ಮೇಲೆ ಸಾವಿರಾರು ವರ್ಷಗಳ ಹಿಂದೆ ನಡೆದಿದ್ದ ಶ್ರೀ ಕೃಷ್ಣನ ಜನ್ಮದಿನವಾಗಿತ್ತು (ಕೃಷ್ಣನ ಅಸ್ತಿತ್ವದ ಬಗ್ಗೆ ಪುರಾತತ್ವ ಇಲಾಖೆ ಪುರಾವೆಗಳನ್ನೊದಗಿಸಿದೆ, ಅದರ ಸತ್ಯಾಸತ್ಯತೆ ಈ ಲೇಖನದ ವ್ಯಾಪ್ತಿಗೆ ಮೀರಿದ್ದು). ಕೃಷ್ಣನ ಅರವತ್ನಾಲ್ಕು ಗುಣಗಳನ್ನು ಪ್ರತಿಫಲಿಸುವಂತೆ ಅವನ ಜನ್ಮದಿನವನ್ನು ಹಲವು ಬಗೆಗಳಲ್ಲಿ ಭಾರತದಲ್ಲಿ ಆಚರಿಸಲಾಗುತ್ತದೆ. ಹಳೆಯ ನೆನಪುಗಳನ್ನು ಮೆಲಕು ಹಾಕುತ್ತ ನಾನು ಅನುಭವಿಸಿದ ಈ ವಿಶಿಷ್ಟ ದಿನದ ಆಚರಣೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. 

ನಮ್ಮ ಮನೆಯಲ್ಲಿ ಗೋಕುಲಾಷ್ಟಮಿ ಹಿಂದಿನಿಂದಲೂ ಬಲು ಸಂಭ್ರಮದಿಂದ ಆಚರಿಸುತ್ತಿದ್ದೆವು. ನನ್ನ ತಂದೆ-ತಾಯಿಯರಿಬ್ಬರೂ ಶಿಕ್ಷಗರಾಗಿ, ಅಂಕೋಲೆಯಲ್ಲಿದ್ದರು. ನಮ್ಮಪ್ಪನಿಗೆ ತುಂಬ ಗೆಳೆಯರು. ಅವರಲ್ಲಿ ಅತಿ ಹತ್ತಿರದವದೆಂದರೆ ಹೊನ್ನೆಗುಂಡಿ ಮಾಷ್ಟ್ರು. ಹಾಡುವುದರಲ್ಲಿ, ನೃತ್ಯದಲ್ಲಿ, ಕೊಳಲು-ತಬಲಾ ನುಡಿಸುವುದರಲ್ಲಿ ನಿಪುಣರು. ಅವರು ನನಗೆ ಸಂಜೆ ಕೊಳಲು ನುಡಿಸಲು ಕಲಿಸಿದರೆ, ಶಾಲೆಯಲ್ಲಿ ಹಿಂದಿ ಕಲಿಸುತ್ತಿದ್ದರು. ನಮಗಾಗ ಗೋಕುಲಾಷ್ಟಮಿಗೆ ರಜೆ ಇರುತ್ತಿರಲಿಲ್ಲ. ಹಾಗಾಗಿ ನಮ್ಮ ಮನೆಯಲ್ಲಿ ಅನುಕೂಲ ಸಿಂಧುವಾಗಿ ಕೃಷ್ಣನ ಜನ್ಮ ೮-೯ ಘಂಟೆಗೇ ಆಗುತ್ತಿತ್ತು. ಮಾಷ್ಟ್ರಿಲ್ಲದೇ ನಮ್ಮ ಮನೆಯಲ್ಲಿ ಕೃಷ್ಣನ ಪೂಜೆ ಆಗುತ್ತಿರಲಿಲ್ಲ. ಅವರು ದಾಸರ ಪದಗಳನ್ನು ಹಾಡಿ, ನನ್ನ ಕೈಯ್ಯಲ್ಲೂ ಒಂದೆರಡು ಹಾಡುಗಳನ್ನ ಹಾಡಿಸಿ, ಕೊಳಲಿನಲ್ಲಿ ನುಡಿಸುತ್ತಿದ್ದರು. ಈ ಸಂಗೀತ ಸಮಾರಾಧನೆಯಿಲ್ಲದೆ ದೇವಕಿಯ ಪ್ರಸವ ವೇದನೆಯೇ ಆರಂಭವಾಗುತ್ತಿರಲಿಲ್ಲ.  ನಮ್ಮಮ್ಮ, ಶಾಲೆಯಲ್ಲಿ ಗೇಯ್ದು ಬಂದ ಮೇಲೆ ತರಹೇವಾರಿ ತಿಂಡಿಗಳನ್ನು (ಇಡ್ಲಿ, ಪಾಯಸ, ಚಕ್ಕುಲಿ, ಯರಿಯಪ್ಪ, ಉಂಡೆ, ಅವಲಕ್ಕಿ, ಇತರೆ) ಪೂಜೆಗೆ ಸರಿಯಾದ ಸಮಯಕ್ಕೆ ತಯ್ಯಾರಿ ಮಾಡಿಡುತ್ತಿದ್ದರು. ಆಗೆಲ್ಲ, ಹಿಂದೆ ದ್ರೌಪದಿಯನ್ನು ಪರಮಾತ್ಮ ಕಾಪಾಡಿದಂತೆ, ಅಮ್ಮನ ಹಿಂದೆ ನಿಂತು ಆತ ಎಲ್ಲವನ್ನೂ ಸುಸೂತ್ರವಾಗಿ ಮಾಡಿಸಿಕೊಟ್ಟನೇ ಎಂದೆನಿಸಿದ್ದೂ ಉಂಟು. ನನ್ನಕ್ಕನೂ ಸಾಕಷ್ಟು ಸಹಾಯ ಮಾಡುತ್ತಿದ್ದಳು. ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ಚಕ್ಕುಲಿ ಸುತ್ತು ಬರದೇ ಒದ್ದಾಡಿಸಿದಾಗ ಅಮ್ಮ ಸಹನೆ ಕಳೆದುಕೊಂಡದ್ದೂ ಇದೆ. ನನಗನಿಸುತ್ತೆ ಆ ದಿನ ಕೃಷ್ಣ ಇನ್ನ್ಯಾವುದೋ ಮನೆಯಲ್ಲಿ ಬ್ಯುಸಿ ಆಗಿದ್ದಿರಬಹುದು. ನಾವು ನಂತರ ದಾಂಡೇಲಿಗೆ ವರ್ಗವಾಗಿ ಹೋದಾಗ, ಸುದೈವದಿಂದ ಮಾಷ್ಟ್ರನ್ನೂ ಅಲ್ಲಿಗೆ ವರ್ಗ ಮಾಡಿದ್ದರು. ದಾಂಡೇಲಿಯಲ್ಲಿ ಮಾಷ್ಟ್ರು ತಮ್ಮೊಂದಿಗಿದ್ದ ಬಾಡಿಗೆ ಕೋಣೆಗಳ ಸಂಕೀರ್ಣದ ಗೆಳೆಯರನ್ನು ಸೇರಿಸಿ ಒಂದು ಸಂಗೀತ ಗುಂಪನ್ನು (ಇಲ್ಲಿಯ ಬ್ಯಾಂಡ್ ನಂತೆ) ಕಟ್ಟಿದರು. ಮಾಷ್ಟ್ರು ಪ್ರಮುಖ ಹಾಡುಗಾರ ಹಾಗೂ ಸವ್ಯಸಾಚಿ , ಚೇತನ್ ಮಾಮ್ ತಬಲಾ ವಾದಕ, ದತ್ ಮಾಮ್ ಹಾರ್ಮೋನಿಯಂ ಹಾಗೂ ನನ್ನದು ಕೊಳಲು. ಚೇತನ್ ಮಾಮ್ ಹಾಗೂ ದತ್ ಮಾಮ್ ಕೂಡ ಮಧುರವಾಗಿ ಹಾಡುತ್ತಿದ್ದರು. ನಮ್ಮ ಗೋಕುಲಾಷ್ಟಮಿಗೆ ಈಗ ಹೊಸ ಕಳೆ ಬಂದಿತ್ತು. ಒಮ್ಮೆ ಅವರ ಬಿಲ್ಡಿಂಗನಲ್ಲೇ ಇದ್ದ ಉತ್ತರ ಕರ್ನಾಟಕದವರೊಬ್ಬರು (ಅವರ ಹೆಸರು ಈಗ ಮರೆತು ಹೋಗಿದೆ) ಪೂಜೆಗೆ ಬಂದಿದ್ದರು. ಅವರು ಕಟ್ಟರ್ ಕೃಷ್ಣನ ಭಕ್ತ. ಅವರು ಶುರು ಮಾಡಿದ  ಭಜನೆ ಅಂದು ಮುಗಿಯಲೇ ಇಲ್ಲ. ಮಾರನೇ ದಿನ ಕೆಲಸಕ್ಕೆ ಹೋಗಬೇಕಾದವರೆಲ್ಲ ಕಂಗಾಲಾಗಿ ಹೋದರು. ಎಲ್ಲರ ಹೊಟ್ಟೆ ಚುರುಗುಟ್ಟುತ್ತಿತ್ತು. ಅಂದು ನಮ್ಮ ಗಮನವೆಲ್ಲ ಗಡಿಯಾರದತ್ತ ಇತ್ತೇ ಹೊರತು ಅವರ ನಾನ್-ಸ್ಟಾಪ್ ಭಜನೆಗಳತ್ತಲ್ಲ! ಅಂದು ಮಾತ್ರ ಕೃಷ್ಣ ನಮ್ಮ ಮನೆಯಲ್ಲಿ ಮಧ್ಯ ರಾತ್ರಿಗೆ ಹುಟ್ಟಿದ್ದ. ಎಂದಿಗೂ ಲಘು ಪ್ರಸವದಿಂದ ಹೊರಬರುತ್ತಿದ್ದ ದೇವಕಿ, ಅಂದು ತುಂಬಾ ನೋವು ಉಂಡಿರಬೇಕು. ಕೃಷ್ಣ ಪರಮಾತ್ಮನೂ ತಣ್ಣಗಿನ ಅನ್ನ ಉಣ್ಣ ಬೇಕಾಯ್ತು. ಗೋಕುಲಾಷ್ಟಮಿ ಎಂದರೆ ನನ್ನ ಕಣ್ಣ ಮುಂದೆ ಬರುವುದು ಈ ಚಿತ್ರಗಳು. 

ದಹಿ ಹಂಡಿ ಒಡೆಯಲು ಸಾಗುತ್ತಿರುವ ಗೋವಿಂದಗಳು

ಮುಂದೆ ನನ್ನ ಕರ್ಮ ಭೂಮಿ ಮುಂಬಯಿಗೆ ವರ್ಗಾಂತರವಾಯಿತು. ಇದೊಂದು ಬಹು ಸಂಸ್ಕೃತಿಗಳು ಒಂದಾಗುವ ಸಂಗಮ ಭೂಮಿ. ಇಲ್ಲಿಯ ದಹಿ ಹಂಡಿ (ಮೊಸರು ಕುಡಿಕೆ) ಸಂಪ್ರದಾಯ ಚಿರಪರಿಚಿತ. ಸ್ವತಃ ನೋಡದವರಿಗೂ ಇದರ ದರ್ಶನ ಹಿಂದಿ ಸಿನೆಮಾಗಳ ಮೂಲಕ ಆಗಿರುತ್ತದೆ. ಜಯಂತ್ ಕಾಯ್ಕಿಣಿಯವರು ತಮ್ಮ ಕಥೆಯಲ್ಲೂ ದಹಿ ಹಂಡಿ ಸಂಪ್ರದಾಯದ ಪ್ರಸ್ತಾವ ಮಾಡಿದ್ದಾರೆ. ದಹಿ ಹಂಡಿಯನ್ನು ಭಾರತದ ಇತರೆಡೆಗೂ ಆಚರಿಸುತ್ತಾರೆ, ಆದರೆ ಅವನ್ನು ನಾನು ನೋಡಿಲ್ಲ. ಹಾಗೆ ನೋಡಿದರೆ, ನನ್ನ ಈ ಸಲದ ಮುಂಬೈ ಪ್ರವಾಸದವರೆಗೂ ನಾನು ದಹಿ ಹಂಡಿ ನೋಡಿರಲಿಲ್ಲ. ತೀವ್ರ ಕೆಲಸದ ಒತ್ತಡದ ನಡುವೆ ಹೆಚ್ಚಿನ ಯಾವುದೇ ಹಬ್ಬ ಹರಿದಿನಗಳ ಆಚರಣೆಯಲ್ಲಿ ನಾವು ಪಾಲ್ಗೊಳ್ಳುತ್ತಿರಲಿಲ್ಲ; ಇದೊಂದು ನೆವವಾಗಿರಬಹುದು. ದಹಿ ಹಂಡಿ ಗೋಕುಲಾಷ್ಟಮಿಯ ಮಾರನೇ ದಿನ ಆಚರಿಸಲ್ಪಡುತ್ತದೆ. ಎತ್ತರದಲ್ಲಿ ಕಟ್ಟಿದ ಮೊಸರು ಕುಡಿಕೆಯನ್ನು ಮಾನವ ಶಿಖರವನ್ನು ಕಟ್ಟಿ ಗಡಿಗೆ ಒಡೆದವರಿಗೆ ಅದರೊಳಗಿನ ಇನಾಮು. ಈ ಸಾಹಸವನ್ನು ಮಾಡುವವರನ್ನು ಗೋವಿಂದ ಎಂದು ಕರೆಯುತ್ತಾರೆ. ನಗರದ ಮೂಲೆಮೂಲೆಗಳಿಂದ ಈ ಗೋವಿಂದ ಗುಂಪುಗಳು ತಾಲೀಮು ಮಾಡಿ ಸಿದ್ಧವಾಗಿ ಟ್ರಕ್ಕುಗಳಲ್ಲಿ, ಬೈಕುಗಳಲ್ಲಿ ತಂಡದ ಸಮವಸ್ತ್ರ ಧರಿಸಿ, ವಿವಿಧೆಡೆ ಕಟ್ಟಿದ ಮೊಸರು ಕುಡಿಕೆಗಳನ್ನು ಒಡೆಯುವ ಸವಾಲನ್ನು ಸ್ವೀಕರಿಸುತ್ತವೆ. ಕಟ್ಟುಮಸ್ತಾದ ಗಂಡಸರು ಶಿಖರದ ಅಡಿಪಾಯವಾಗಿದ್ದು, ಚುರುಕಾದ ತೆಳ್ಳಗಿನವನು ಶಿಖರದ ತುದಿ ಹತ್ತುವುದು ವಾಡಿಕೆ. ಈ ಕಾರ್ಯಕ್ರಮದ ವಾತಾವರಣಕ್ಕೆ ಬಣ್ಣ ಕಟ್ಟುವುದು ತಂಡದ ತಮಟೆ ಬಡಿತ (ಈಗ ಹೆಚ್ಚಾಗಿ ಸ್ನೇರ್ ಡ್ರಮ್), ಧ್ವನಿ ವರ್ಧಕದಲ್ಲಿ ಹರಿದು ಬರುವ ಸಂದರ್ಭೋಚಿತ ಹಾಡುಗಳು, ಕಿಕ್ಕಿರಿದು ನೆರೆಯುವ ಜನ ಸಮೂಹದ ಪ್ರೋತ್ಸಾಹದಾಯಕ ಉದ್ಗಾರಗಳು, ಶಿಳ್ಳೆಗಳು. ಮೊದಲು ಮುಂಬೈನ ಚಾಳುಗಳಲ್ಲಿ ನಡೆಯುತ್ತಿದ್ದ ಸ್ಪರ್ಧೆಗೆ ಈಗ ಹೊಸ ಆಯಾಮ ದೊರಕಿದೆ. ರಾಜಕಾರಣಿಗಳು ತಮ್ಮ ವಿಭಾಗದಲ್ಲಿ ಭಾರಿ ಮೊತ್ತದ ಬಹುಮಾನವನ್ನು ಕೊಡುತ್ತಾರೆ. ಮಡಿಕೆ ಮುಟ್ಟಲಾಗದಿದ್ದವರಿಗೂ ಬಹುಮಾನವಿದೆ. ಅಂಥವರು ಎಷ್ಟು ಮಜಲುಗಳನ್ನು ನಿರ್ಮಿಸಿದ್ದರು ಎಂಬುವುದರ ಮೇಲೆ ಬಹುಮಾನದ ಮೊತ್ತ ನಿರ್ಧರಿತವಾಗಿರುತ್ತದಂತೆ. ಸಿನೆಮಾಗಳಲ್ಲಿ ಚಾಳ್ ನಲ್ಲಿ ಎದುರು ಬದುರಿನ ಕಟ್ಟಡಗಳಿಗೆ ಮಡಿಕೆ ಕಟ್ಟಿದ್ದನ್ನು ಕಂಡು ಗೊತ್ತಿದ್ದ ನನಗೆ, ಈ ಸಲ ಕ್ರೇನಿಗೆ ಕಟ್ಟಿದ್ದ ಮಡಕೆ ನೋಡಿ ಆಶ್ಚರ್ಯವಾಯಿತು. ಇದು ದಹಿ ಹಂಡಿಗೆ ಆಗಿರುವ ಆಧುನಿಕತೆಯ ಒಂದು ಲೇಪ.  ಸುಮಾರು  ೩ ತಾಸುಗಳ ನಂತರವೂ ಯಾವ ತಂಡವೂ ಮಡಕೆ ಮುಟ್ಟಿದ್ದನ್ನು ಕಾಣದೆ ನಿರಾಸೆಯೂ ಆಯಿತು. ಮೋಜು, ಮಸ್ತಿ, ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸುತ್ತಿದ್ದ ದಹಿ ಹಂಡಿ ನವ್ಯತೆಯ ಮೆರುಗಿನಲ್ಲಿ ತನ್ನ ವಿಶಿಷ್ಟತೆಯನ್ನು ಕಳೆದುಕೊಳ್ಳುತ್ತಿದೆಯೇ ಎಂದು ಖೇದವೆನಿಸಿತು. ೧೫-೨೦ ಮಜಲುಗಳನ್ನು ಕಟ್ಟುವ ಭರದಲ್ಲಿ, ಗೋವಿಂದರು ಬಿದ್ದು ಗುರುತರ ಗಾಯಕ್ಕೀಡಾಗುವುದು ಇಂದು ಅಪರೂಪವಲ್ಲ. ಕಳೆದ ವರ್ಷ ಸುಮಾರು ೨೦೦ ಜನ ದಹಿ ಹಂಡಿ ಕಾರ್ಯಕ್ರಮದಲ್ಲಿ ಅಪಘಾತಕ್ಕೀಡಾಗಿದ್ದರಂತೆ. ತುದಿಯೇರಲು ಚಿಕ್ಕವರಿಗೆ ಜಾಸ್ತಿ ಬೇಡಿಕೆ ಇರುವುದರಿಂದ ಮಕ್ಕಳೂ  ಅಪಘಾತಕ್ಕೆ ತುತ್ತಾಗುತ್ತಿದ್ದರು. ಅದರಿಂದಲೇ ಈಗ ಹೈಕೋರ್ಟ್ ೧೮ಕ್ಕ್ಕಿಂತ ಚಿಕ್ಕವರು ದಹಿ ಹಂಡಿಯಲ್ಲಿ ಪಾಲ್ಗೊಳ್ಳಬಾರದು ಎಂದು ನಿರ್ಬಂಧಿಸಿದೆ. 

ಕ್ರೇನಿಗೆ ಕಟ್ಟಿರುವ ಮೊಸರು ಕುಡಿಕೆ

ನಾನು ನನ್ನ ಮಾವನ ಮನೆಯಲ್ಲಿ ವಾಸ್ತವ್ಯ ಹೂಡಿದ್ದೆ. ಅವರ ಸೊಸೈಟಿಯಲ್ಲಿ ಸಾಕಷ್ಟು ಜನ ಗುಜರಾತಿಗಳು ನೆಲೆಸಿದ್ದಾರೆ. ಅವರಿಗೆ ಗೋಕುಲಾಷ್ಟಮಿ ದೊಡ್ಡ ಹಬ್ಬ. ಅವರ ಸಾಮೂಹಿಕ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುವ ವಿಶೇಷ ಅನುಭವ ನನಗಾಯಿತು. ಸುಮಾರು ೧೦:೩೦ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ ಎಂದು ನನ್ನ ನಾದಿನಿ, ಅವಳ ಮಗಳೊಡನೆ ಕೆಳಗಿಳಿದೆ. ಕೆಲವು ಮಕ್ಕಳು ಕೃಷ್ಣ, ರಾಧೆಯ ದಿರಿಸಿನಲ್ಲಿ ಆಟವಾಡುತ್ತಿದ್ದು, ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಮಹಿಳೆಯರು ಮ್ಯೂಸಿಕ್ ಪ್ಲೇಯರ್ನಲ್ಲಿ ಹರಿಯುತ್ತಿದ್ದ ಭಕ್ತಿಗೀತೆಗಳಿಗೆ ವರ್ತುಲಾಕಾರವಾಗಿ ತಿರುಗುತ್ತ ಗರಭಾ ನೃತ್ಯ ಮಾಡಿದರು. ಪಕ್ಕದಲ್ಲೇ ಮಕ್ಕಳಿಗಾಗಿ ದಹಿ ಹಂಡಿಯನ್ನೂ ಕಟ್ಟಿದ್ದರು. ಹನ್ನೆರಡಾಗುತ್ತಿದ್ದಂತೆ, ಮೇಲಿನ ಮನೆಯಿಂದ ಕೃಷ್ಣನಂತೆ ಅಲಂಕರಿಸಿದ ಮುದ್ದಾದ ಮಗುವನ್ನು ಬುಟ್ಟಿಯಲ್ಲಿ ಮಲಗಿಸಿ ತಲೆಯ ಮೇಲೆ ‘ಅಂದು’ ವಸುದೇವ ಹೊತ್ತುಕೊಂಡು ಬಂದಂತೆ ತಂದರು. ಹೊರಗಡೆ ಮಳೆ ಸುರಿಯುತ್ತಿತ್ತು. ಒಂದರ್ಥದಲ್ಲಿ ಕೃಷ್ಣನ ಜನ್ಮವನ್ನು  ಹೂಬೇಹೂಬು ನಿರ್ಮಿಸಿದಂತಿತ್ತು. ಆದರೆ ಇಲ್ಲಿ ದೇವಕಿಯೇ ಮಗನನ್ನು ಹೊತ್ತಿದ್ದಳು. ಕೃಷ್ಣನನ್ನು ತೊಟ್ಟಿಲಿಗೆ ಹಾಕಿ ತೂಗಿ, ಪೂಜೆ ಮಾಡಿದಮೇಲೆ ದಹಿ ಹಂಡಿ ಕಾರ್ಯಕ್ರಮ ಶುರುವಾಯಿತು. ಒಂದಾಳು ಎತ್ತರದಲ್ಲಿದ್ದ ಮಡಕೆಯನ್ನು ಹೆಚ್ಚು ಶ್ರಮ ಪಡದೇ ಮಕ್ಕಳು ಒಡೆದರು. ಅವರ ಉತ್ಸಾಹ, ಒಡೆದಾಗ ಪಟ್ಟ ಸಂಭ್ರಮ ಯಾವುದೇ ಆಧುನಿಕ ದಹಿಹಂಡಿಗಿಂತ ಅರ್ಥಪೂರ್ಣವೂ, ಮನೋಹರವೂ ಆಗಿತ್ತೆನ್ನುವುದರಲ್ಲಿ ಸಂದೇಹವಿಲ್ಲ. ಮಡಕೆಯಲ್ಲಿದ್ದ ಚಾಕಲೇಟುಗಳನ್ನು ನಾದಿನಿ ಮಗಳು ಹೆಕ್ಕಿ ತಂದಿದ್ದಳು. ಅವನ್ನು ಮೆಲ್ಲುತ್ತ ಮೇಲೆ ಫ್ಲ್ಯಾಟಿಗೆ ಬಂದಾಗ ಗಂಟೆ ಒಂದಾಗಿತ್ತು. ಸಾಕಷ್ಟು ವರ್ಷಗಳ ಮೇಲೆ ಗೋಕುಲಾಷ್ಟಮಿಯನ್ನು ಭಾರತದಲ್ಲಿ ಆಚರಿಸಿ ಆನಂದಿಸಿದ ತೃಪ್ತಿ ಮನದಲ್ಲಿತ್ತು. ಇದು ಎರಡನೇ ಬಾರಿ ಮಧ್ಯರಾತ್ರಿಯಲ್ಲಿ ಜನ್ಮಾಷ್ಟಮಿಯನ್ನು ಆಚರಿಸಿದ್ದು ಎನ್ನುವುದೂ ನೆನಪಾಯಿತು. 

-ರಾಂ