ಸಿ ಅಶ್ವಥ್ ಎಂಬ ಭಾವಸಂಗೀತಗಾರ – ಕೇಶವ ಕುಲಕರ್ಣಿ

(೨೯ ಡಿಸೆಂಬರ್ ಸಿ ಅಶ್ವಥ್ ಜನ್ಮದಿನ, ಹಾಗೆಯೇ ಪುಣ್ಯತಿಥಿ ಕೂಡ. ಅವರು ನಮ್ಮನ್ನಗಲಿ ಈಗ ಐದು ವರ್ಷ. ಆಧುನಿಕ ಕನ್ನಡ ಕಾವ್ಯವನ್ನು, ಅದರಲ್ಲೂ ನವೋದಯ ಕಾವ್ಯವನ್ನು, ಕನ್ನಡದ ಮನೆ ಮನೆಗೆ ತಲುಪಿಸಿದವರು ಸಿ ಅಶ್ವಥ್. ಅವರ ನೆನಪಿನಲ್ಲಿ ಒಂದು ಶೃದ್ಧಾಂಜಲಿ.)

CC-Wiki

ಶಿಶುನಾಳ ಶರೀಫ, ನನ್ನ ಮುತ್ತಾತ ಗೋವಿಂದ ಭಟ್ಟನ ಶಿಷ್ಯ. ಹೀಗಾಗಿ ನನ್ನ ಅಜ್ಜಿಗೆ (ತಾಯಿಯ ತಾಯಿ) ಶಿಶುನಾಳ ಶರೀಫನೆಂದರೆ ಪ್ರಾಣ. ನಾನು ಚಿಕ್ಕವನಾಗಿದ್ದಾಗ ಆತನ ಜೀವನಚರಿತ್ರೆಯನ್ನು ನನ್ನಜ್ಜಿಗೆ ಓದಿ ಹೇಳಿದ್ದು ನೆನೆಪಿದೆ. ಸರಿ ಸುಮಾರು ಅದೇ ಕಾಲದಲ್ಲಿ, ಸಿ ಅಶ್ವಥ್ ರ ಮೊದಲ ಶಿಶಿನಾಳ ಶರೀಫರ ಕ್ಯಾಸೆಟ್ ಹೊರಬಂತು. ಆ ಹಾಡುಗಳಲ್ಲಿರುವ ಕವನ, ಭಾಷೆ, ಧಾಟಿ ಮತ್ತು ಆ ಧ್ವನಿ, ಬರೀ ಸಿನಿಮಾ ಹಾಡುಗಳನ್ನು ಕೇಳಿ ಬೆಳೆಯುತ್ತಿದ್ದ ನಮಗೆ ಹೊಸಲೋಕವನ್ನೇ ತೆರೆದಂತಾಯಿತು. ಮತ್ತು ಅದೇ ಕಾಲಕ್ಕೆ ನಾವು ಲಂಕೇಶ್ ಪತ್ರಿಕೆ ಓದಲು ಶುರುಮಾಡಿದ್ದೆವು. ಕನ್ನಡ-ಕರ್ನಾಟಕದ ಸಾಹಿತ್ಯ-ಕವನ-ಜನಪದ-ಸಂಗೀತಗಳಿಗೆ ಒಮ್ಮೆಲೇ ನಾವು ತೆರೆದುಕೊಂಡಿದ್ದು ಹೀಗೆ. ಹೀಗೆ ಆ ನನ್ನ ಎಳೆಯ ವಯಸ್ಸಿನಲ್ಲೇ, ಕೆ ಎಸ್ ನರಸಿಂಹಸ್ವಾಮಿ, ಬೇಂದ್ರೆ, ಅಡಿಗರಿಂದ ಹಿಡಿದು ಜಿ ಎಸ್ ಎಸ್, ಹೆಚ್ ಎಸ್ ವೆಂಕಟೇಶ್ ಮೂರ್ತಿ, ಬಿ ಆರ್ ಲಕ್ಷ್ಮಣರಾವ್ ವರೆಗೆ ಕವಿಗಳ ಪರಿಚಯ ಮಾಡಿಸಿದವರು ಸಿ ಅಶ್ವಥ್.

ಸಿ ಅಶ್ವಥ್ ಮತ್ತು ರಾಜ್ ಕುಮಾರ್ ಕನ್ನಡದ unique ಹಾಡುಗಾರರು ಮತ್ತು ಅವರದು ಯಾವ ಹಿಂದಿನ ಹಾಡುಗಾರರ ಅನುಕರಣೆಯಿರದ ಗಾಯನ. ಬರೀ ಸಂಗೀತವನ್ನೇ ತೆಗೆದುಕೊಂಡು ಅವರಿಬ್ಬರನ್ನೂ ಇಷ್ಟಪಡದ ಬಹಳ ಜನರನ್ನು ನೋಡಿದ್ದೇನೆ, ಕೆಲವು ಬರಹಗಳನ್ನೂ ಓದಿದ್ದೇನೆ. ಆದರೆ ಅವರೇನೂ ಕರ್ನಾಟಕೀ ಅಥವಾ ಹಿಂದುಸ್ಥಾನೀ ಶಾಸ್ತ್ರೀಯ ಹಾಡುಗಾರರಲ್ಲ, ಸಿ ಅಶ್ವಥ್ ಭಾವಗೀತಗಾಯಕ, ರಾಜ್ ಭಾವತುಂಬಿ ಹಾಡುವ ಸಿನಿಮಾ ಗಾಯಕ. ಕನ್ನಡ ಸುಗಮಸಂಗೀತ ಪಿ. ಕಾಳಿಂಗರಾವ್ ರಿಂದ ಶುರುವಾಗಿ, ಮೈಸೂರು ಅನಂತಸ್ವಾಮಿಯಲ್ಲಿ ಕೊನೆಯಾಗುತ್ತೇನೋ ಎಂದುಕೊಳ್ಳುವಾಗ, ಹೊಸ ಧ್ವನಿ, ಹೊಸ ರಾಗ, ಹೊಸ ಭಾವ ತುಂಬಿ ನಮ್ಮನ್ನು ಕನ್ನಡ ಕಾವ್ಯಲೋಕಕ್ಕೆ ತೆರೆದಿದ್ದು ಸಿ ಅಶ್ವಥ್.

ಹಾಗೆಂದು ನಾನು ಸಿ ಅಶ್ವಥ್ ರ ಎಲ್ಲ ಕ್ಯಾಸೆಟ್ ಗಳನ್ನು ಕೇಳಿದ್ದೇನೆ ಎಂದಾಗಲೀ, ಕೇಳಿದ ಎಲ್ಲ ಹಾಡುಗಳನ್ನು ಮೆಚ್ಚುತ್ತೇನೆ ಎಂದಾಗಲಿ, ಎಲ್ಲ ಶೈಲಿಗಳನ್ನೂ ಒಪ್ಪಿಕೊಳ್ಳುತ್ತೇನೆ ಎಂದಾಗಲೀ ಅಲ್ಲ. ನನ್ನದೂ ಸುಮಾರು ತಕರಾರುಗಳಿವೆ. ತಕರಾರಿಗಿಂತ ಮೊದಲು ನನಗೆ ಇಷ್ಟವಾದವುಗಳನ್ನು ಹೇಳುತ್ತೇನೆ.

ಶರೀಫರ ಮೊದಲೆರೆಡು ಕ್ಯಾಸೆಟ್ ಗಳಲ್ಲಿ ಜನಪದದೊಂದಿಗೆ ರಾಗಗಳ ಮಿಶ್ರಣ, ಅದರ ಜೊತೆ ಸಿ ಅಶ್ವಥ್ ಮತ್ತು ಶಿವಮೊಗ್ಗ ಸುಬ್ಬಣ್ಣರ ಹಾಡುಗಾರಿಕೆ ಆಗಿನ ಕಾಲದಲ್ಲಿ ನಿಂತನೀರಾಗಿದ್ದ ಭಾವಗೀತ ಪ್ರಪಂಚದಲ್ಲಿ ಹೊಸ ಅಲೆಗಳನ್ನೆಬ್ಬಿಸಿದವು. ಮುಂದೆ ‘ಸಂತ ಶಿಶುನಾಳ ಶರೀಫ’ ಚಲನಚಿತ್ರ ಬಂದಾಗ ಪುನಃ ಹೊಸ ಸಂಯೋಜನೆ ಮಾಡಿ ಮತ್ತೆ ಹಾಡಿದ ಕ್ಯಾಸೆಟ್ ಸಿ ಅಶ್ವಥ್ ಶರೀಫ ಸಾಹೇಬರಿಗೆ ಕೊಟ್ಟ ಶ್ರೇಷ್ಟ ಕಾಣಿಕೆ ಎನ್ನಬಹುದು. ‘ಅಳಬೇಡ ತಂಗಿ ಅಳಬೇಡ’, ಶಿವಮೊಗ್ಗ ಸುಬ್ಬಣ್ಣನವರ ಬಾಯಲ್ಲೇ ಕೇಳಬೇಕು. ‘ತರವಲ್ಲ ತಗೀ ನಿನ್ನ ತಂಬೂರಿ’, ‘ಸೋರುತಿಹುದು ಮನೆಯ ಮಾಳಿಗಿ’, ಸಿ ಅಶ್ವಥ್ ರ ಹಾಡುಗಾರಿಕೆಯಲ್ಲಿ ಪ್ರತಿ ಶಬ್ದದ ಅರ್ಥ ತುಂಬಿ ತುಳುಕುತ್ತದೆ. ಸಿನಿಮಾಗೆ ಹಾಡಿದ ‘हम तो देखा महम्मद..’, ಸಿ ಅಶ್ವಥ್ ಮಾತ್ರ ಹಾಡಲು ಸಾಧ್ಯ (ಬಹುಷಃ ಸುಖಬಿಂದರ್ ಸಿಂಗ್ ಹಾಡಬಹುದೇನೋ?). ಉತ್ತರ ಕರ್ನಾಟಕದ ಶರೀಫ ಸಾಹೇಬ ಸಮಗ್ರ ಕರ್ನಾಟಕದ ಸಂತ ಶಿಶುನಾಳ ಶರೀಫರನಾಗಿಸಿದ್ದು ನಮ್ಮ unique ಸಿ ಅಶ್ವಥ್.

ಕೆ ಎಸ್ ನರಸಿಂಹಸ್ವಾಮಿ, ‘ಕ್ಯಾಸೆಟ್ ಕವಿ’ಗಳು ಹುಟ್ಟುವ ಮೊದಲು, ಭಾವಗೀತಹಾಡುಗಾರರ ಅಚ್ಚುಮೆಚ್ಚಿನ ಕವಿ; ಅದಕ್ಕೆ ಸಿ ಅಶ್ವಥ್ ಏನೂ ಹೊರತಲ್ಲ. ಮೈಸೂರು ಅನಂತಸ್ವಾಮಿ ಹಾಡಿದ ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ…’ ಹಾಡು ಕೇಳದ ಭಾವಗೀತಪ್ರೀಯನಿಲ್ಲ, ಆದರೆ ಮೈಸೂರು ಅನಂತಸ್ವಾಮಿ ಹೆಂಡತಿಯನ್ನು ಬಿಟ್ಟು ಮುಂದೆ ಹೋಗಲೇಯಿಲ್ಲ. ಸಿ ಅಶ್ವಥ್, ಕೆ ಎಸ್ ನ ರ ಕವನಸಂಕಲನಗಳಿಂದ ಭಾವಗೀತೆಗಳನ್ನು ಹೆಕ್ಕಿ ಹೆಕ್ಕಿ ಹಾಡಿದರು, ಹಾಡಿಸಿದರು. ಮುಂದೆ ‘ ಮೈಸೂರು ಮಲ್ಲಿಗೆ’ ಚಿತ್ರವಾದಾಗ ಮರುಸಂಯೋಜನೆ ಮಾಡಿ, ಎಸ್ ಪಿ ಬಾಲಸುಬ್ರಮಣ್ಯಂ ಧ್ವನಿಗೂಡಿಸಿದಾಗ, ಪ್ರತಿ ಕವನವೂ ಭಾವದುಂಬಿ ಹರಿಯಿತು. ‘ಬಳಿಗಾರ ಚನ್ನಯ್ಯ’, ‘ಒಂದಿರುಳು ಕನಸಿನಲಿ’, ‘ಕತ್ತಲೆ ತುಂಬಿದ’, ‘ ನಿನ್ನ ಪ್ರೇಮದ ಪರಿಯ’ ಚಿತ್ರದ ಪ್ರತೀ ಹಾಡೂ ಭಾವವಾಗಿ ಹಾರಿತು.

ಬೇಂದ್ರೆಯನ್ನು ಮೆಚ್ಚದ ಕಾವ್ಯರಸಿಕರುಂಟೇ? ಬೇಂದ್ರೆ ತಮ್ಮ ಹಾಡುಗಳಿಗೆ ತಾವೇ ರಾಗ ಹಾಕುತ್ತಿದ್ದರು ಅಥವಾ ಸಿದ್ಧ ಧಾಟಿಯಲ್ಲಿ ಬರೆಯುತ್ತಿದ್ದರು ಎಂದು ಕೇಳಿದ್ದೇನೆ, ಆದರೆ ಆ ರಾಗಗಳನ್ನು ನಾನು ಕೇಳಿಲ್ಲ. ಧಾರವಾಡದ ಆಕಾಶವಾಣಿಯಲ್ಲಿ, ಕ್ಯಾಸೆಟ್ ಯುಗ ಶುರುವಾಗುವ ಮೊದಲು, ಬೇಂದ್ರೆ ಹಾಡುಗಳಿಗೇನೂ ಕಡಿಮೆಯಿರಲಿಲ್ಲ. ಸಿ ಅಶ್ವಥ್ ರ ‘ ಶ್ರಾವಣ’ದಲ್ಲಿ ‘ಬದುಕು ಮಾಯೆಯ ಮಾಟ’, ‘ಕುರುಡು ಕಾಂಚಾಣ’, ‘ ಘಮ ಘಮಡಸತಾವ ಮಲ್ಲಿಗೆ’ ನನಗೆ ಇಷ್ಟವಾದ compositions.

ಮೈಸೂರು ಅನಂತಸ್ವಾಮಿ, ಅಡಿಗರ ನವೋದಯಕಾಲದ ‘ಯಾವ ಮೋಹನ ಮುರಲಿ ಕರೆಯಿತು’ ಶ್ರುತಿಮಾಡಿದ್ದಾರೆ; ಆದರೆ ಆ ಕವನದ ‘ಓಲಿದ ಮಿದುವೆದೆ..’ ಯ ಎರಡು ಸಾಲುಗಳನ್ನು ಸೆನ್ಸಾರ್ ಮಾಡಿ, ಕವನಕ್ಕೇ ಮೋಸ ಮಾಡಿದ್ದಾರೆ. ಮತ್ತು ಅಡಿಗರ ನವ್ಯ ಕಾವ್ಯವನ್ನು ಹಾಡುವ ಗೋಜಿಗೆ ಹೋಗಲಿಲ್ಲ (ಕವನವನ್ನು ಹಾಡಿ ಅರ್ಥೈಸಬಹುದೇ? – ಚರ್ಚೆಯ ವಿಷಯ). ಸಿ ಅಶ್ಚಥ್ ಅಡಿಗರ ಅರೆನವ್ಯ ಕಾವ್ಯವನ್ನೂ ಹಾಡಿಸಿದರು. ಅಡಿಗರ ‘ಅಮೃತವಾಹಿನಿ’ ರಾಜ್ ಧ್ವನಿಯಲ್ಲಿ ಕೇಳುತ್ತಿದ್ದರೆ ಮೈ ಝುಂಯೆನ್ನಬೇಕು. ‘ ತಳದೊಳೆಲ್ಲೊ ತಳುವಿ’ ಎಂಬ ಸಾಲನ್ನು ರಾಜ್ ಬಾಯಲ್ಲೇ ಕೇಳಬೇಕು. ಈ ಕವನದ composition ಸಿ ಅಶ್ವಥ್ ರ ಸೃಜನಶೀಲತೆಗೆ ಸಾಕ್ಷಿ.

ಇನ್ನು ಚೆನ್ನವೀರ ಕಣವಿ, ಜಿ ಎಸ್ ಶಿವರುದ್ರಪ್ಪ ಮೊದಲಾದ ಹಿರಿಯರ ಕವನಗಳೂ ತುಂಬ ಚೆನ್ನಾಗಿ ಮೂಡಿಬಂದಿವೆ. ‘ಕಾಣದಾ ಕಡಲಿಗೆ ಹಂಬಲಿಸಿದೇ ಮನ’ ಮತ್ತು ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಯ ಸ್ವರಸಂಯೋಜನೆ ಆ ಕವಿತೆಗಳ ಅರ್ಥವನ್ನು ಪದರು ಪದರಾಗಿ ಬಿಡಿಸುತ್ತದೆ.

ಮಂಕುತಿಮ್ಮನ ಕಗ್ಗ ಇತ್ತೀಚಿಗೆ ಪುರಾಣ-ಪ್ರವಚನವಾಗಿದೆ. ಸಿ ಅಶ್ವಥ್ ಅದಕ್ಕೆ ಹಾಡಿನ ಅಲಂಕಾರವನ್ನೊ ಮಾಡುವ ಪ್ರಯತ್ನ ಮಾಡಿದ್ದಾರೆ ಮಾತ್ತು ರಾಜ್ ಭಾವತುಂಬಿದ್ದಾರೆ. ‘ಶ್ರೀವಿಷ್ಣುವಿಶ್ವಾದಿ ಮೂಲ’ದಿಂದ ಆರಂಭಿಸಿ ‘ಶರಣುವೊಗು ಜೀವನ್ ರಹಸ್ಯದಲಿ’ ವರೆಗು, ಸಿ ಅಶ್ವಥ್ ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಬಿ ಆರ್ ಲಕ್ಷ್ಮಣರಾವ್, ನಾವು ಪಡ್ಡೆಹುಡುಗರ ವಯಸ್ಸಿರುವಾಗ, ಮೂಡಿಬಂದ ಯುವಕವಿ. ‘ಜಾಲಿ ಬಾರಿನಲ್ಲಿ’, ‘ನಾ ಚಿಕ್ಕವನಾಗಿದ್ದಾಗ’, ‘ಬಿಡಲಾರೆ ನಾ ಸಿಗರೇಟು’, ‘ಬಣ್ಣಿಸಲೇ ಹೆಣ್ಣೇ’ ಸಿ ಅಶ್ವಥ್ ರ ಇನ್ನೊಂದು ಮಗ್ಗುಲನ್ನು ಪರಿಚಯಿಸುತ್ತವೆ. ಕವನಗಳ ಬಾವಗಳಿಗೆ, ಬಾಷೆಗೆ ತಕ್ಕಂತೆ ಸ್ವರಸಂಯೋಜನೆ ಅಶ್ವಥ್ ರಷ್ಟು ಇನ್ನಾವ ಭಾವಗೀತ ಸಂಯೋಜಕನೂ ಮಾಡಿಲ್ಲ.

ಸಿ ಅಶ್ವಥ್ ಕನ್ನಡಭಾವಲೋಕದಲ್ಲಿ ಹೊಸ ಅಲೆಯೆಬ್ಬಿಸಲು ಕಾರಣವಾಗಿದ್ದು ಅವರ ರಂಗಭೂಮಿ ಸಂಗೀತ. ನಾನು ಅವರ ಸಂಗೀತ ನಿರ್ದೇಶನದ ಒಂದೇ ಒಂದು ನಾಟಕವನ್ನೂ ನೋಡಿಲ್ಲ. ಆದರೆ ‘ನಾಗಮಂಡಲ’ ದಲ್ಲಿ ಗೋಪಾಲ ವಾಜಪೇಯಿಯ ಹುಚ್ಚು ಹಿಡಿಸುವ ಸಾಹಿತ್ಯ ಮತ್ತು ಅಶ್ವಥ್ ರ ಜನಪದದಿಂದ ಸ್ಫೂರ್ತಿ ಪಡೆದ ಮತ್ತು ಹಿಡಿಸುವ ಸಂಗೀತವಿದೆ.

ಇಷ್ಟೆಲ್ಲವಾದರೂ ಸಿ ಅಶ್ವಥ್, ಕನ್ನಡ ಚಿತ್ರರಂದ untapped ಸಂಗೀತ ನಿರ್ದೇಶಕರಾಗಿ ಉಳಿದುಹೋಗಿದ್ದು ಕನ್ನಡ ಚಿತ್ರರಂಗದ ವಿಪರ್ಯಾಸಗಳಲ್ಲಿ ಒಂದು. ಬರೀ art ಚಿತ್ರಗಳಿಗೆ ಮಾತ್ರ ಸೀಮಿತಗೊಳಿಸಿದ ನಮ್ಮ ಚಿತ್ರ ನಿರ್ಮಾಪಕರು ‘ನಮ್ಮೂರ ಮಂದಾರ ಹೂವೇ’ ಹಾಡನ್ನು ಕೇಳಿದ್ದಾರೆಯೇ ಎಂದು ಸಂಶಯ ಬರುತ್ತದೆ. ‘ ನೇಸರ ನೋಡು’, ಕಾಕನಕೋಟೆಯ ಹಾಡು, ಸಲೀಲ್ ಚೌಧರಿ ಸಂಗೀತವನ್ನು ನೆನಪಿಸುತ್ತದೆ.

ನನ್ನ ಪ್ರಕಾರ ಸಿ ಅಶ್ವಥ್ ಸ್ವರಸಂಯೋಜಿತ ಹಾಡುಗಳನ್ನು ಸಿ ಅಶ್ವಥ್ ಬಾಯಿಂದ ಕೇಳಿದರೇ ಇನ್ನೂ ಹೆಚ್ಚು ಸೊಗಸು. ರಾಜ್ ಮತ್ತು ಎಸ್ಪಿ ಬಾಲಸುಬ್ರಮಣ್ಯಂ ಅದಕ್ಕೆ ಅಪವಾದವೇನೋ? ‘ನಮ್ಮೂರ ಮಂದಾರ ಹೂವೇ’ ಎಸ್ ಪಿ ಬಿ ಯನ್ನಲ್ಲದೇ ಬೇರೆಯವರನ್ನು ಊಹಿಸಿ ನೋಡಿ; ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ’ ರಾಜ್ ಹೊರತು ಇನ್ನೊಬ್ಬರು ಆ ಭಾವತುಂಬಿ ಹಾಡಿಯಾರೇ? ಶಿವಮೊಗ್ಗ ಸುಬ್ಬಣ್ಣ, ಯಶವಂತ್ ಹಳಬಂಡಿ, ರತ್ನಮಾಲಾ ಪ್ರಕಾಶ್, ಸಂಗೀತಾ ಕಟ್ಟಿ ಕೂಡ ನ್ಯಾಯ ಒದಗಿಸಿದ್ದಾರೆ. ಉಳಿದ ಹಾಡುಗಾರರು ಸಿ ಅಶ್ವಥ್ ಸಂಗೀತಕ್ಕೆ ಭಾವತುಂಬಿ ಹಾಡನ್ನು ಯಶಸ್ವಿಯಾಗಿಸುವಲ್ಲಿ ವಿಫಲರಾಗಿದ್ದಾರೆ.

ಸಿ ಅಶ್ವಥ್ ಹಾಡುಗಾರನಾಗಿ ಬಹಳ ಜನರಿಗೆ ಇಷ್ಟವಾಗದೇ ಇರಬಹುದು, ಅದರಲ್ಲೂ ಹಾಡುಗಳಲ್ಲಿರುವ ಸಾಹಿತ್ಯ ಅರ್ಥವಾಗದವರಿಗೆ ಸಿ ಅಶ್ವಥ್ ಕೂಗಿದಂತೆ ಕೇಳಿದರೂ ಅಚ್ಚರಿಪಡಬೇಕಿಲ್ಲ. ಸಾಹಿತ್ಯದ ರುಚಿಯಿರುವವರಿಗೆ ಮಾತ್ರ ಸಿ ಅಶ್ವಥ್ ಹಾಗೇಕೆ ಹಾಡುತ್ತಾರೆಯೆಂದು ಅರ್ಥವಾಗುತ್ತದೆ ಮತ್ತು ಪ್ರತಿ ಶಬ್ದಗಳ, ಸಾಲುಗಳ ಹೊಸ ಅರ್ಥಗಳನ್ನು ಹುಡುಕಲು ಅವರ ಹಾಡುಗಾರಿಕೆ ನೆರವಾಗುತ್ತದೆ.

ಆದರೂ ಅವರು ಅಷ್ಟು ವರ್ಷದಿಂದ ಹಾಡುತ್ತಿದ್ದರೂ ಉತ್ತರಕರ್ನಾಟಕದ ‘ಅ’ ಅನ್ನು ‘ಆ’ ಎಂದು ಹೇಳುವುದನ್ನು ಬಿಡಲಿಲ್ಲ ಎನ್ನುವುದು ಆಶ್ಚರ್ಯ (ಉದಾ: ಬೇಂದ್ರೆಯವರ ‘ಹೊಸದ್ವೀಪಗಳಿಗೆ ಹೊರಟಾನs ಬನ್ನಿ’, ಅಶ್ವಥ್ ರ ಬಾಯಲ್ಲಿ ‘ಹೊಸದ್ವೀಪಗಳಿಗೆ ಹೊರಟಾನಾs ಬನ್ನಿ’ ಆಗಿತ್ತದೆ). ಇದನ್ನು ಯಾಕೆ ಯಾರೂ ಅವರಿಗೆ ಹೇಳಲಿಲ್ಲವೋ ನಾ ಕಾಣೆ.

ಅಶ್ವಥ್ ಸುಗಮಸಂಗೀತದ ಬಗ್ಗೆ ಪುಸ್ತಕವನ್ನೂ ಬರೆದಿದ್ದಾರೆ. ಪುಸ್ತಕ ಅವರ ಸಂಗೀತದಷ್ಟು ಇಷ್ಟವಾಗುವಿದಿಲ್ಲವಾದರೂ ಕನ್ನಡ ಸುಗಮಸಂಗೀತದ ಬಗ್ಗೆ ಅವರ ನಿಲುವನ್ನು ತೋರಿಸುತ್ತದೆ. ಆ ಪುಸ್ತಕದಲ್ಲಿ ಸುಗಮಸಂಗೀತದಲ್ಲಿ interlude ಬಗ್ಗೆ ಸಿ ಅಶ್ವಥ್ ನಿಲುವು ಏನೇ ಇರಬಹುದು, ಆದರೆ ಚಲನಚಿತ್ರ ಸಂಗೀತದಂತೆ ಸುಗಮಸಂಗೀತದಲ್ಲಾಗಲೀ, ಭಕ್ತಿಗೀತೆಗಳಲ್ಲಾಗಲೀ ಈ interlude ಅದೇಕೆ ಬರುತ್ತದೋ ನನಗೆ ಅರ್ಥವಾಗುವುದಿಲ್ಲ. ಸಿ ಅಶ್ವಥ್ ಪ್ರಕಾರ interlude ಹಾಡಿನ ಅರ್ಥವನ್ನು ಹೆಚ್ಚಿಸುತ್ತದೆ, ಆದರೆ ನನ್ನ ಪ್ರಕಾರ ಅದು ಹಾಡನ್ನು ಕೊಲ್ಲುತ್ತದೆ. Interlude ಹಾಡುಗಾರನಿಗೆ ಉಸಿರುತೆಗೆದುಕೊಳ್ಳಲು ಅವಕಾಶ ಮಾಡಿಕೊಡಬೇಕೇ ಹೊರತು, ಕೇಳುಗಾರನಿಗೆ ಹಾಡಿನ continuity ನೇ ಬಿಟ್ಟು ಹೋಗುವಂತಿರಬಾರದು. ಏಷ್ಟೊಂದು ಸಲ interludeನ ಸಮಯ ಹಾಡುಗಾರನ ಸಮಯಕ್ಕಿಂತ ಹೆಚ್ಚಾಗಿರುತ್ತದೆ. ಚಿತ್ರಗೀತೆಯಲ್ಲಾದರೆ interlude ಅನ್ನು ಕುಣಿತಕ್ಕೋ ಏನಕ್ಕೋ ಉಪಯೋಗಿಸಿಕೊಳ್ಳುತ್ತಾರೆ. ಕೆಲವು ಸಂಗೀತ ನಿರ್ದೇಶಕರು interludeಅನ್ನು ತಮ್ಮ ಪ್ರತಿಭೆ ಎಂದುಕೊಳ್ಳುತ್ತಾರೆ. ಸುಗಮಸಂಗೀತದ ಇನ್ನೊಂದು ಸಮಸ್ಯೆ ಹಾಡನ್ನು ೪-೬ ನಿಮಿಷ ಇರಲೇಬೇಕೆಂಬ ಅಲಿಖಿತ ನಿಮಯ; ಅದಕ್ಕಾಗಿ interludeಅನ್ನು ಹಿಗ್ಗಿಸುತ್ತಾರೆ ಅಥವಾ ಕವನದ ಕೆಲ ಸಾಲುಗಳನ್ನು ತಿನ್ನುತ್ತಾರೆ. ನನಗೆ ಇದೇಕೆ ಎಂದೇ ಅರ್ಥವಾಗಿಲ್ಲ.

ದೇವಗಿರಿ ಶಂಕರರಾವ್ ಜೋಷಿಯವರಲ್ಲಿ ಹಿಂದುಸ್ತಾನಿ ಸಂಗೀತ ಕಲಿತು, ರಂಗಭೂಮಿ ಸಂಗೀತದಲ್ಲಿ ಪಳಗಿ, ಜನಪದ ಸಂಗೀತ ಬೆರೆಸಿ ಕನ್ನಡ ಕಾವ್ಯಲೋಕವನ್ನು ಜನಸಾಮಾನ್ಯರಿಗೆ ತೋರಿಸಿದ ಸಿ ಅಶ್ವಥ್ ಕನ್ನಡ ಕಾವ್ಯ-ಸಂಗೀತ ಲೋಕದ ರಾಯಭಾರಿ. ಅಶ್ವಥ್ ಸ್ವರಸಂಯೋಜಕ, ಹಾಡುಗಾರರಷ್ಟೇ ಅಲ್ಲ, he was a great entertainer. ಬೆಂಗಳೂರು ಅರಮನೆ ಆವರಣದಲ್ಲಿ ನಡೆದ ‘ಕನ್ನಡವೇ ಸತ್ಯ’ ಕಾರ್ಯಕ್ರಮಕ್ಕೆ ನೆರೆದ ಒಂದು ಲಕ್ಷ ಜನರೇ ನಿದರ್ಶನ.

ಸಿ ಅಶ್ವಥ್ ಇಲ್ಲದ ಕನ್ನಡ ಸುಗಮಸಂಗೀತ ಇನ್ನೂ ಮುಂದುವರೆದೀತೇ? ಹೇಳುವುದು ಕಷ್ಟ.

ನನ್ನ ನೆನಪಿನಲ್ಲಿ ತಂದೆ ಜಿ.ಎಸ್.ಎಸ್ – ಶಿವಪ್ರಸಾದ್

ಕನ್ನಡದ ಅನನ್ಯ ಕವಿ

(ನಮ್ಮೆಲ್ಲರ ಪ್ರೀತಿಯ ಜಿ ಎಸ್ ಎಸ್ ನಮ್ಮನಗಲಿ ಇಂದಿಗೆ ಒಂದು ವರ್ಷ. ಕನ್ನಡವನ್ನು ಮತ್ತು ಕನ್ನಡಿಗರನ್ನು ಬೆಳೆಸಿದ ಕವಿವರ್ಯರಿಗೆ ‘ಕಸಾಸವಿವೇ’ ಬಳಗದ ನಮನ).

Nothing is so precious as the memory that lives on…….೨೩ನೆ ಡಿಸೆಂಬರ್ ಸೋಮವಾರ ಬೆಳಗ್ಗೆ ಸುಮಾರು ಏಳು ಗಂಟೆಯ ಸಮಯ ನಾನು ಹಾಸಿಗೆಯಿಂದ ಎದ್ದು ಕೆಲಸಕ್ಕೆ ಹೊರಡುವ ಸಿದ್ಧತೆಯಲ್ಲಿ ತೊಡಗಿರುವಾಗ ನಮ್ಮ ಪರಿವಾರದ ಹಿತೈಷಿಗಳೊಬ್ಬರು ದೂರವಾಣಿಯ ಮೂಲಕ ಬಹಳ ಗಂಭೀರವಾದ ಹಾಗು ಮೃದುವಾದ ದನಿಯಲ್ಲಿ “Prasad your father is no more I am sorry to convey this message” ಎಂದು ತಿಳಿಪಡಿಸಿದಾಗ ನನ್ನ ತಂದೆಯವರು ಹಲವಾರು ತಿಂಗಳಿಂದ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ನಾನು ನಿರೀಕ್ಷಿಸಿದ್ದ ಅನಿವಾರ್ಯ ಸುದ್ದಿಯಾಗಿದ್ದು ನನ್ನಲ್ಲಿ ಆಘಾತವನ್ನಾಗಲಿ ಅಥವ ತೀವ್ರ ಭಾವನೆಗಳನ್ನಾಗಲಿ ಉಂಟುಮಾಡಲಿಲ್ಲ. ವೈದ್ಯನಾಗಿ ದಿನನಿತ್ಯ ಸಾವು-ನೋವುಗಳನ್ನು ಕಾಣುವ ಒಂದು ಮನೋಸ್ಥೈರ್ಯ ನನ್ನ ಭಾವನೆಗಳನ್ನು ಹಿಡಿದಿಟ್ಟಿದ್ದವು.

ನಾವು ಬನಶಂಕರಿಯಲ್ಲಿರುವ ನಮ್ಮ ಮನೆ ತಲುಪುವ ವೇಳೆಗೆ, ಹಲವಾರು ದೂರದರ್ಶನದ ವಾರ್ತಾ-ಮಾಧ್ಯಮದವರು live ಕ್ಯಾಮರ ಹಿಡಿದು ಮುನ್ನುಗ್ಗಿ ನಾನು ಕಾರಿನಿಂದ ಇಳಿಯುತ್ತಿದಂತೆ ಚಿತ್ರೀಕರಿಸಲು ಮುಂದಾದರು. ಇದಾವುದನ್ನು ನಿರೀಕ್ಷಿಸದ ನನಗೆ ಸ್ವಲ್ಪ ಕಕ್ಕಾಬಿಕ್ಕಿಯಾಗಿ ಮುಜುಗುರವಾಯಿತು. ಇದುವರೆವಿಗೂ ಅನಾಮಧೇಯ ಜನ-ಸಾಮಾನ್ಯನಾಗಿದ್ದ ನನಗೆ ಧಿಡೀರನೆ ರಾಷ್ಟ್ರಕವಿಗಳ ಒಂದು celebrity status ನಲ್ಲಿ ಹಾಗು ಕೀರ್ತಿಯಲ್ಲಿ ಅನಿವಾರ್ಯವಾಗಿ ಪಾಲುದಾರನಾಗುವ ಅವಕಾಶ ಒದಗಿ ಬಂದು ಆ ದುಃಖ-ತಪ್ತ ಸಂಧರ್ಭದಲ್ಲಿಯೂ ಒಂದು ಹೆಮ್ಮೆ ಮಿಶ್ರಿತ ಭಾವನೆಗಳು ಮೂಡಿ ಬಂದು ನಾನು ಇದನ್ನುನಿಭಾಯಿಸುವುದು ಸ್ವಲ್ಪಕಷ್ಟವಾಯಿತು. ಈ ವಿಚಿತ್ರ ಅನುಭವದಿಂದ ಚೇತರಿಸಿಕೊಂಡು ನನ್ನ ತಂದಯವರ ಕೋಣೆಗೆ ಹೊಕ್ಕು ಅಲ್ಲಿ ಅವರ ಭಾವ ಚಿತ್ರಕ್ಕೆ ನಮಸ್ಕರಿಸುವಾಗ, ಉಕ್ಕಿಬಂದ ತೀವ್ರ ಭಾವನೆಗಳನ್ನು TV ವೀಕ್ಷಕರೊಂದಿಗೆ ಹಂಚಿಕೊಳ್ಳದೆ ಸಂಯಮದಿಂದ ಹಿಡಿದಿಟ್ಟುಕೊಂಡು ಒಳಕೋಣೆಯಲ್ಲಿ ಸೇರಿ ಅಮ್ಮನ್ನನ್ನು ಅಪ್ಪಿಕೊಂಡ ಕೂಡಲೆ ನನ್ನ ಸಂಯಮಗಳು ಮುರಿದುಬಿದ್ದು ಹರಿದ ಕಂಬನಿಗಳ ಪ್ರವಾಹ, ಶ್ರದ್ಧಾಂಜಲಿಯ ಮೊದಲನೆ ಕಂತನ್ನು ಅರ್ಪಿಸಿದವು.

ಲಂಡನ್ನಿನಲ್ಲಿ ಜಿ ಎಸ್ ಎಸ್

ಡಿಸಂಬರ್ ೨೬ನೆ ತಾರೀಖು ೭.೩೦ರ ವೇಳೆಗೆ ನೂರಾರು ಜನ ಮನೆಯಲ್ಲಿ ನೆರೆದಿದ್ದರು. ಚನ್ನವೀರ ಕಣವಿ,ನಿಸ್ಸಾರ್ ಅಹಮದ್, ಜೆ.ಎಸ್.ಎಸ್ ಸ್ವಾಮಿಗಳು ಹೀಗೆ ಅನೇಕ ಗಣ್ಯವ್ಯಕ್ತಿಗಳು ಅಲ್ಲಿ ನೆರೆದಿದ್ದು ತಂದೆಯವರ ಪಾರ್ಥಿವ ಶರೀರವನ್ನು ಹೂಗಳ ಹಾಗು ಗಂಧದ ಹಾರದೊಂದಿಗೆ ಅಲಂಕರಿಸಿ ತಂದಿದ್ದರು. ನಾನು ಬಹಳ ಆತಂಕದಿಂದ ಶರೀರವನ್ನು ಅಡಿಯಿಂದ ಮುಡಿಯವರೆಗೂ ಗಮನಿಸಿದೆ. ಆದೇ ಪ್ರಶಾಂತವಾದ ಗಂಭೀರ ಚಹರೆ, GSS trade mark ಆಗಿರುವ ಅವರ ಹಿತ್ತಾಳೆ ಅಂಚಿನ ದುಂಡನೆಯ ಕನ್ನಡಕ, ಹಣೆಗೆ ವಿಭೂತಿ ಕುಂಕುಮಗಳಿಲ್ಲ. ಆವರ ಇಚ್ಛೆಯಂತೆ ಯಾವ ಧಾರ್ಮಿಕ ಕ್ರಿಯೆಗಳು ಮನೆಯಲ್ಲಿ ಜರುಗಲಿಲ್ಲ. ಜೆ.ಎಸ್.ಎಸ್ ಸ್ವಾಮಿಗಳು ಅಂದು ಮಠಾಧಿಪತಿಗಳಾಗಿ, ಧಾರ್ಮಿಕ ಕಾರ್ಯವನ್ನು ಆಚರಿಸಲು ಬಂದಿರಲಿಲ್ಲ. ಬದಲಿಗೆ, ಅವರು ಜಿ ಎಸ್ ಎಸ್ ಸಾಹಿತ್ಯಾಭಿಮಾನಿಗಳಾಗಿ ಬಂದಿದ್ದು, ಸುಗಮ-ಸಂಗೀತ ಕಲಾವಿದರು ನೀಡಿದ ಕಾವ್ಯನಮನದಲ್ಲಿ ಪಾಲ್ಗೊಂಡು ತೆರಳಿದರು.

ನಾನು ತಂದೆಯವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ಕೊಂಡೊಯ್ಯುವ ವಾಹನದಲ್ಲಿ ಕುಳಿತೆ. ಪ್ರಯಾಣದ ಸಮಯದಲ್ಲಿ ಇತ್ತೀಚಿನ ದಿನಗಳ ನೆನಪುಗಳು ನನ್ನನ್ನು ಕಾಡತೊಡಗಿದವು. ಅವರ ಮಕ್ಕಳಾದ ನಾವು ಬಾಲ್ಯದಿಂದ ತಂದೆಯವರನ್ನು ’ಅಣ್ಣ’ ಎಂದು ಕರೆಯುತ್ತಿದ್ದೆವು. ನಾನು ಹಲವು ತಿಂಗಳ ಹಿಂದೆ ಗಣೇಶ ಹಬ್ಬಕ್ಕೆ ಬಂದಾಗ ಹಿಂದಿರುಗುವ ಸಮಯದಲ್ಲಿ ಎಂದಿನಂತೆ ಕಾಲಿಗೆ ನಮಸ್ಕರಿಸಿ “ಅಣ್ಣ ಹೋಗಿಬರುತ್ತೇನೆ ನಿಮ್ಮ ಮಂದಿನ ಬರ್ತ್ ಡೇಗೆ ಬರುತ್ತೇನೆ” ಎಂದಾಗ ಅವರು ಕಿರುನಕ್ಕು “ನಾನು ಅಲ್ಲಿಯತನಕ ಇದ್ದರೆ ನೋಡೊಣ, ನಾನು ಹೊರಡಲು ರೆಡಿಯಾಗಿದ್ದೇನೆ” ಎಂದರು. ತಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ practical ಆಗಿ ಯೋಚನೆ ಮಾಡುವ ತಂದೆಯವರಿಂದ ಆ ಮಾತುಗಳು ಬಂದದ್ದು ಆಶ್ಚರ್ಯವೇನಲ್ಲ. ಅವರು ನರರೋಗ ಮತ್ತು ಹೃದ್ರೋಗದಿಂದ ಬಳಲುತ್ತಿದ್ದು ಇತ್ತೀಚಿನ ಕೆಲವು ವರ್ಷಗಳಲ್ಲಿ ದಿನನಿತ್ಯ ಕಾರ್ಯಾಕಲಾಪಗಳಿಗೆ ಇತರರ ನೆರವು ಪಡೆಯುವುದು ಅನಿವಾರ್ಯವಾಗಿತ್ತು. ನಾ ಕಂಡಂತೆ ತಂದೆಯವರು ಬಹಳ ಸ್ವಾವಲಂಬಿ ಹಾಗು ಸ್ವಾಭಿಮಾನಿಗಳಾಗಿದ್ದು ಅವರಿಗೆ ಬೇರೆಯವರನ್ನು ಅವಲಂಬಿಸುವುದು ಮುಜುಗರ ಹಾಗು ಅಸಮಾಧಾನಗಳನ್ನು ತಂದಿತ್ತು. ಒಮ್ಮೆ ನನ್ನ ಹಾಗು ಪೂರ್ಣಿಮಾಳ ಬಳಿ ಮಾತನಾಡುತ್ತ ” ನನಗೆ ಮುಪ್ಪುಬರುವ ಬಗ್ಗೆ ಕಲ್ಪನೆಗಳಿದ್ದವು ಆದರೆ ಅದು ಹೀಗಿರುತ್ತದೆ ಎಂಬುದನ್ನು ನಾನು ನಿರೀಕ್ಷಿಸಿರಲ್ಲಿಲ್ಲ” ಎಂದರು. ತಂದೆಯವರ ಸ್ವಾಭಿಮಾನ ಎಷ್ಟರಮಟ್ಟಿಗೆ ಎಂದರೆ ಅವರು ಪ್ರತಿಸಾರಿ ಇಂಗ್ಲೇಡಿಗೆ ಬಂದಾಗ ನಾನು ಅವರ ವಿಮಾನ ಪ್ರಯಾಣದ ಖರ್ಚನ್ನು ವಹಿಸಿಕೊಳ್ಳಲು ಪ್ರಯತ್ನಿಸಿದರೂ ಅವರು ಒಪ್ಪುತ್ತಿರಲಿಲ್ಲ.

ನಾವು ರವೀಂದ್ರ ಕಲಾಕ್ಷೇತ್ರದ ಆವರಣವನ್ನು ತಲುಪಿದಾಗ ತಂದೆಯವರ ಪಾರ್ಥಿವ ಶರೀರವನ್ನು ವಿಶೇಷವಾಗಿ ಅಲಂಕೃತವಾದ ಸ್ಥಳದಲ್ಲಿ ಇರಿಸಿ ಜನಸಾಮಾನ್ಯರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು. ಅಲಂಕೃತವಾದ ಸಜ್ಜಿಗೆ, ಹೂವಿನ ರಾಶಿ ಹಾಗು ಹಾರಗಳ ನಡುವಿನಲ್ಲಿ ಜಿ ಎಸ್ ಎಸ್ ಪಾರ್ಥಿವ ಶರೀರ, ಹಿನ್ನೆಲೆಯಲ್ಲಿ ಸುಗಮ-ಸಂಗೀತದವರಿಂದ ಸುಶ್ರಾವ್ಯವಾದ ಸಂಗೀತ, ಗೌರವ ಸಲ್ಲಿಸಲು ಕ್ಯೂನಲ್ಲಿ ನಿಂತಿದ್ದ ಸಾಹಿತಿಗಳು, ಮಂತ್ರಿಗಳು, ಎಡೆಬಿಡದೆ ಕ್ಲಿಕ್ಕಿಸುತ್ತಿರುವ ಕ್ಯಾಮರಗಳು, ಮಾಧ್ಯಮದವರ ವೀಡಿಯೊ ಮಾಡುವ ಮುತುವರ್ಜಿ ಇವನ್ನೆಲ್ಲ ಗಮನಿಸಿದಾಗ ನೆರೆದವರಿಗೆ ಈ ಸಂಧರ್ಭ ಶೋಕಕ್ಕಿಂತ ಹೆಚ್ಚಾಗಿ ಒಂದು ಹಬ್ಬದ ಅಥವಾ ಸಂಭ್ರಮದ ಕಾರ್ಯವೆಂಬಂತೆ ತೋರುತ್ತಿತ್ತು. ಪರಿಪೂರ್ಣವಾದ ಬದುಕನ್ನು ಮುಗಿಸಿದ ಒಬ್ಬ ರಾಷ್ಟ್ರಕವಿಗೆ ವಿದಾಯ ಹೇಳುವ ಪರಿ ಸೂಕ್ತವಾಗಿದ್ದು ಈ ಹಬ್ಬದ ಸಂಭ್ರಮ ವಾತಾವರಣ ಅನುಚಿತವೆಂಬಂತೆ ತೋರಲಿಲ್ಲ.

ನಾನು ಪ್ರತಿಬಾರಿ ರಜಕ್ಕೆ ಬೆಂಗಳೂರಿಗೆ ಬರುವ ಮುನ್ನ ತಂದೆಯವರಿಗೆ ಫೋನ್ ಮಾಡಿ ಅವರಿಗೆ ಇಂಗ್ಲೇಂಡಿನಿಂದ ಎನಾದರು ಬೇಕೆ ಎಂದು ವಿಚಾರಿಸಿವುದು ನನ್ನ ವಾಡಿಕೆ. ಅದಕ್ಕೆ ಅವರು “ನನಗೆ ಏನೂ ಬೇಡ ನೀನು ಸುಮ್ಮನೆ ಬಾ” ಎಂಬ ನೀರೀಕ್ಷಿತ ಉತ್ತರವನ್ನೆ ಕೊಡುತ್ತಿದ್ದರು. ತೀರ ಬಲವಂತ ಮಾಡಿದಾಗ “ಸರಿ ಒಂದಿಷ್ಟು salted ಗೋಡಂಬಿಯನ್ನು ತೆಗೆದುಕೊಂಡು ಬಾ” ಎಂದು ಹೇಳುತ್ತಿದ್ದರು. ಪ್ರತಿಸಾರಿ ಅವರು ಕೇಳದಿದ್ದರು ನಾನು ಏರ್-ಪೋರ್ಟಿನ duty free shop ನಲ್ಲಿ ಗೋಡಂಬಿಯ ಜೊತೆಯಲ್ಲಿ ಒಂದು Scotch whisky ಯನ್ನು ಅಣ್ಣನಿಗೆ ಅಂತ ತೆಗೆದು ಕೊಂಡಿರುತ್ತಿದ್ದೆ. ಬೆಂಗಳೂರು ತಲುಪಿದ ಒಂದೆರಡು ದಿನದಲ್ಲಿ ಮನೆಯಲ್ಲಿ ಒಂದು ಪಾರ್ಟಿ ನಡೆಯುತ್ತಿದ್ದು ಜಿ ಎಸ್ ಎಸ್ ಅವರ ಆಪ್ತಮಿತ್ರರು, ನಾನು, ನನ್ನ ಭಾವನವರಾದ ಡಾ. ಮರುಳಸಿದ್ದಪ್ಪನವರು ಸೇರಿಕೊಂಡು ಅಣ್ಣನ ನೆಪದಲ್ಲಿ ವಿಸ್ಕಿ ಶೀಶೆಯ ತಳಕಾಣಿಸುತ್ತಿದ್ದೆವು! ಅಣ್ಣನಿಗೋ ವಿಸ್ಕಿಗಿಂತ ಅಲ್ಲಿರುವ ಗೋಡಂಬಿ ಮತ್ತು ಚಿಪ್ಸ್ ಮೆಲ್ಲುವಲ್ಲಿ ಆಸಕ್ತಿ! ಅಣ್ಣ ಪಾರ್ಟಿ ವಾತಾವರಣದಲ್ಲಿ ಬಹಳ ಮಿತಭಾಷಿಗಳು. ಸಾಹಿತ್ಯ ವಿಚಾರ ಬಂದಾಗ ಮಾತ್ರ ಹರಟೆಗೆ ಸೇರುತ್ತಿದರು. ಒಂದೆರಡು ಪೆಗ್ ಒಳಗೆ ಹೋದ ಮೇಲಾದರೂ ಅವರು ಹರಟುತ್ತಾರೆಂದು ಎಲ್ಲರು ನಿರೀಕ್ಷಿಸಿದರೆ ಮೊದಲೇ ಅಂತರ್ಮುಖಿಗಳಾದ ಅಣ್ಣ, ವಿಸ್ಕಿ ಒಳ ಸೇರಿದ ಬಳಿಕ ಇನ್ನೂ ಅಂತರ್ಮುಖಿಯಾಗಿ ಮೌನ-ವ್ರತವನ್ನಾಚರಿಸುವ ಸನ್ಯಾಸಿಯಂತಾಗಿ ಬಿಡುತ್ತಿದ್ದರು! ನಮ್ಮ ವಿಸ್ಕಿ ಪಾರ್ಟಿಗಳಿಗೆ ನನ್ನ ಅಮ್ಮನ ಸಂಪೂರ್ಣ ಸಮ್ಮತಿ ಇಲ್ಲದ್ದಿದ್ದರೂ, ನನ್ನ ಅಕ್ಕ ಜಯಂತಿಯ ಸಹಕಾರದಿಂದ ಪಕೋಡ ಮತ್ತು ಬಜ್ಜಿಗಳ ಸರಬರಾಜಿಗೆ ಎನೂ ತೊಂದರೆ ಇರಲಿಲ್ಲ.

ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಅಂತಿಮಕಾರ್ಯವು ಬಹಳ ಸುವ್ಯವಸ್ಥಿತವಾಗಿ ನಿಗದಿಯಾದ ಸಮಯಕ್ಕೆ ರಾಜ್ಯ-ಗೌರವಗಳೊಂದಿಗೆ ಜರುಗಿತು. ರಾಷ್ಟ್ರ ಹಾಗು ನಾಡ ಗೀತೆಯನಂತರ ಸಂಜೆ ಐದರ ಸಮಯದಲ್ಲಿ ಮಾಗಿಯ ಸೂರ್ಯನ ಹಿತವಾದ ಕೆಂಪಿನಲ್ಲಿ ನನ್ನ ಅಣ್ಣ ಜಯದೇವನಿಂದ ಚಿತೆಗೆ ಅಗ್ನಿಸ್ಪರ್ಶವಾಗುವುದರಲ್ಲಿದ್ದಾಗ, ಸುಗಮ ಸಂಗೀತದವರು ಒಕ್ಕೊರಳಿನಲ್ಲಿ ”ಕಾಣದ ಕಡಲಿಗೆ ಹಂಬಲಿಸಿದೆ ಮನ’’ ಕವನವನ್ನು ಹಾಡಿದ್ದು ಬಹಳ ಅರ್ಥಪೂರ್ಣವೆನಿಸಿತು. ಅಲ್ಲಿ ನೆರೆದಿದ್ದ ಸಹಸ್ರಾರು ಜನರ ಮೌನ, ಸಂಯಮ ಹಾಗು ಗಂಭೀರ ನಡತೆ ಆ ಕಾರ್ಯಕ್ಕೆ ಒಂದು ಘನತೆಯನ್ನು ತಂದುಕೊಟ್ಟಿತ್ತು. ಆಲ್ಲಿ ಕೆಲವು ಯುವಕರು “ಜಾತೀಯತೆ ತೊಲಗಿಸಿ ಮಾನವೀಯತೆ ಉಳಿಸಿ” ಎಂಬ ಘೊಷಣೆಗಳನ್ನು ಕೂಗಿದ್ದು ಜಿ ಎಸ್ ಎಸ್ ಅವರ ಜಾತ್ಯಾತೀತ ನಿಲುವಿಗೆ ಸಾಕ್ಷಿಯಾಗಿತ್ತು. ಈ ಒಂದು ಸಂಧರ್ಭ ನನಗೂ ನನ್ನ ಪರಿವಾರದವರಿಗೂ ಅತ್ಯಂತ ದುಃಖ ತಪ್ತವಾದ ಘಳಿಗೆಯಾದರೂ ಸಹಾ, ಒಂದು ಸ್ಮರಣೀಯ ಅನುಭವವಾಗಿ ನನ್ನ ನೆನಪಿನಲ್ಲಿ ದಾಖಲೆಯಾಗಿರುವುದು ಒಂದು ವಿಚಿತ್ರ ಸಂಗತಿ.

ತಾವು ಯಾವ ಧರ್ಮಕ್ಕೂ ಅಥವಾ ಮತಕ್ಕೂ ಸೇರಿದವರಲ್ಲ, ತಮ್ಮನ್ನು ಕೇವಲ ಒಬ್ಬ ಕನ್ನಡಿಗನೆಂದು ಪರಿಗಣಿಸಬೇಕು ಹಾಗು ಅವರ ಅಂತಿಮ ಕಾರ್ಯದಲ್ಲಿ ಯಾವುದೇ ಧಾರ್ಮಿಕ ಸೋಂಕು ಇರಬಾರದೆಂದು ನನ್ನ ಅಣ್ಣ ಜಯದೇವನಿಗೆ ಕೆಲವು ತಿಂಗಳ ಹಿಂದೆ ತಿಳಿಸಿದ್ದರು. ಬದುಕಿನಲ್ಲಿ ಮೂಢನಂಬಿಕೆ, ಧರ್ಮ ಮತ್ತು ಜಾತಿ ಹೆಸರಿನಲ್ಲಿ ನಡೆಯುವ ಶೋಷಣೆ ಇವುಗಳ ಬಗ್ಗೆ ತಿರಸ್ಕಾರ ಭಾವನೆಗಳಿದ್ದು, ಬದುಕಿನಲ್ಲಷ್ಟೆ ಅಲ್ಲದೆ ಸಾವಿನಲ್ಲೂ ಅವರು ತಮ್ಮ ವೈಚಾರಿಕ ಪ್ರಜ್ಞೆಗಳನ್ನು ಉಳಿಸಿಕೊಂಡರು. ಜಿ ಎಸ್ ಎಸ್ ಅವರು ಬದುಕಿನಲ್ಲಿ ಮಾಡುವ ಯಾವುದೇ ಕಾರ್ಯಗಳಲ್ಲಿ ಒಂದು ಮುಂದಾಲೋಚನೆ, ಶಿಸ್ತು ಹಾಗು ಪೂರ್ವನಿಯೋಜಿತ ಸಿದ್ಧತೆ ಕಂಡುಬರುತ್ತಿತ್ತು. ಅವರ ಅಂತ್ಯಕ್ರಿಯೆಯು ಇದೇ ಮೌಲ್ಯಗಳನ್ನಾಧರಿಸಿ ವ್ಯವಸ್ಥಿತವಾಗಿ ಜರುಗಿತು, ಇದಕ್ಕಿಂತ ಹೆಚ್ಚಿನ ಪ್ರೀತಿ, ವಿಶ್ವಾಸ ಮತ್ತು ಗೌರವಗಳನ್ನು ಕನ್ನಡ ಜನತೆಯಿಂದ ಹಾಗು ಸರ್ಕಾರದಿಂದ ಜಿ ಎಸ್ ಎಸ್ ಪರಿವಾರದವರು ನಿರೀಕ್ಷಿಸಿರಲ್ಲಿಲ್ಲ.

’’ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ” ವೆಂಬ ನಿರ್ಲಿಪ್ತ ನಿಲುವನ್ನು ತಳೆದಿದ್ದ ತಂದೆಯವರಿಗೆ ಗೌರವ, ಸನ್ಮಾನ, ಪುರಸ್ಕಾರ ಕೊನೆಗೆ ರಾಷ್ಟ್ರಕವಿ ಪಟ್ಟ ತಾನೆ ಅರಸಿ ಬಂದಿದ್ದು, ಅವರು ಈ ಪುರಸ್ಕಾರಗಳನ್ನು ಧನ್ಯತೆಯ ಭಾವನೆಯಿಂದ ಸ್ವೀಕರಿಸಿದ್ದರು. ’’To love life is to live life” ಎಂಬ ತತ್ವವನ್ನು ನಂಬಿ ಬದುಕನ್ನು ಪ್ರೀತಿಸಿದ್ದವರು ಜಿ ಎಸ್ ಎಸ್. ’’ಪ್ರೀತಿ ಇಲ್ಲದಮೇಲೆ ಹೂವು ಅರಳಿತು ಹೇಗೆ” ಎಂದು ಪ್ರಶ್ನಿಸುತ್ತ ಪ್ರೀತಿಯನ್ನು ಇತರರೊಂದಿಗೆ ಹಂಚಿಕೊಂಡು ’’ಸ್ನೇಹ ಪ್ರೀತಿ ಕರುಣೆ ಮರುಕ ಇವೇ ನಮ್ಮ ದೇವರು’’ ಎಂದು ಬರೆಯುತ್ತಾ ತುಂಬು ಬಾಳ್ವೆಯನ್ನು ನಡೆಸಿದ ಕವಿ ಡಾ. ಜಿ ಎಸ್ ಎಸ್.

ಇಂತಹ ಕವಿಗೆ ಹಲವಾರು ಸಂಘ-ಸಂಸ್ಥೆಗಳು ಈಗಾಗಲೆ ತಮ್ಮ ಶ್ರದ್ಧಾಂಜಲಿಗಳನ್ನು ಅರ್ಪಿಸಿವೆ. ಒಬ್ಬ ಹಿರಿಯ ಕವಿ, ವಿಮರ್ಶಕ, ಪ್ರಾಧ್ಯಾಪಕ ಹಾಗು ಚಿಂತಕರಾದ ಜಿ ಎಸ್ ಎಸ್ ಅವರಿಗೆ ಅವರ ಶಿಷ್ಯರು ಹಾಗು ಸಾಹಿತಿಗಳು ವಿಚಾರ ಗೋಷ್ಟಿಗಳ ಮೂಲಕ, ಸುಗಮ ಸಂಗೀತದವರು ಗೀತ ನಮನದ ಮೂಲಕ, ಸರ್ಕಾರದವರು ಸ್ಮಾರಕವನ್ನು ಕಟ್ಟುವುದರ ಮೂಲಕ ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸಬಹುದು. ಆದರೆ ಎಲ್ಲ ಕನ್ನಡಿಗರು ಜಿ ಎಸ್ ಎಸ್ ಅವರ ಕವಿತೆಗಳನ್ನು, ಸಾಹಿತ್ಯವನ್ನು ಓದಿ ಅವರ ಬದುಕಿನ ಸಂದೇಶವನ್ನು ಅರ್ಥಮಾಡಿಕೊಳ್ಳುವುದೇ, ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.