ನನ್ನ ನೆನಪಿನಲ್ಲಿ ತಂದೆ ಜಿ.ಎಸ್.ಎಸ್ – ಶಿವಪ್ರಸಾದ್

ಕನ್ನಡದ ಅನನ್ಯ ಕವಿ

(ನಮ್ಮೆಲ್ಲರ ಪ್ರೀತಿಯ ಜಿ ಎಸ್ ಎಸ್ ನಮ್ಮನಗಲಿ ಇಂದಿಗೆ ಒಂದು ವರ್ಷ. ಕನ್ನಡವನ್ನು ಮತ್ತು ಕನ್ನಡಿಗರನ್ನು ಬೆಳೆಸಿದ ಕವಿವರ್ಯರಿಗೆ ‘ಕಸಾಸವಿವೇ’ ಬಳಗದ ನಮನ).

Nothing is so precious as the memory that lives on…….೨೩ನೆ ಡಿಸೆಂಬರ್ ಸೋಮವಾರ ಬೆಳಗ್ಗೆ ಸುಮಾರು ಏಳು ಗಂಟೆಯ ಸಮಯ ನಾನು ಹಾಸಿಗೆಯಿಂದ ಎದ್ದು ಕೆಲಸಕ್ಕೆ ಹೊರಡುವ ಸಿದ್ಧತೆಯಲ್ಲಿ ತೊಡಗಿರುವಾಗ ನಮ್ಮ ಪರಿವಾರದ ಹಿತೈಷಿಗಳೊಬ್ಬರು ದೂರವಾಣಿಯ ಮೂಲಕ ಬಹಳ ಗಂಭೀರವಾದ ಹಾಗು ಮೃದುವಾದ ದನಿಯಲ್ಲಿ “Prasad your father is no more I am sorry to convey this message” ಎಂದು ತಿಳಿಪಡಿಸಿದಾಗ ನನ್ನ ತಂದೆಯವರು ಹಲವಾರು ತಿಂಗಳಿಂದ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ನಾನು ನಿರೀಕ್ಷಿಸಿದ್ದ ಅನಿವಾರ್ಯ ಸುದ್ದಿಯಾಗಿದ್ದು ನನ್ನಲ್ಲಿ ಆಘಾತವನ್ನಾಗಲಿ ಅಥವ ತೀವ್ರ ಭಾವನೆಗಳನ್ನಾಗಲಿ ಉಂಟುಮಾಡಲಿಲ್ಲ. ವೈದ್ಯನಾಗಿ ದಿನನಿತ್ಯ ಸಾವು-ನೋವುಗಳನ್ನು ಕಾಣುವ ಒಂದು ಮನೋಸ್ಥೈರ್ಯ ನನ್ನ ಭಾವನೆಗಳನ್ನು ಹಿಡಿದಿಟ್ಟಿದ್ದವು.

ನಾವು ಬನಶಂಕರಿಯಲ್ಲಿರುವ ನಮ್ಮ ಮನೆ ತಲುಪುವ ವೇಳೆಗೆ, ಹಲವಾರು ದೂರದರ್ಶನದ ವಾರ್ತಾ-ಮಾಧ್ಯಮದವರು live ಕ್ಯಾಮರ ಹಿಡಿದು ಮುನ್ನುಗ್ಗಿ ನಾನು ಕಾರಿನಿಂದ ಇಳಿಯುತ್ತಿದಂತೆ ಚಿತ್ರೀಕರಿಸಲು ಮುಂದಾದರು. ಇದಾವುದನ್ನು ನಿರೀಕ್ಷಿಸದ ನನಗೆ ಸ್ವಲ್ಪ ಕಕ್ಕಾಬಿಕ್ಕಿಯಾಗಿ ಮುಜುಗುರವಾಯಿತು. ಇದುವರೆವಿಗೂ ಅನಾಮಧೇಯ ಜನ-ಸಾಮಾನ್ಯನಾಗಿದ್ದ ನನಗೆ ಧಿಡೀರನೆ ರಾಷ್ಟ್ರಕವಿಗಳ ಒಂದು celebrity status ನಲ್ಲಿ ಹಾಗು ಕೀರ್ತಿಯಲ್ಲಿ ಅನಿವಾರ್ಯವಾಗಿ ಪಾಲುದಾರನಾಗುವ ಅವಕಾಶ ಒದಗಿ ಬಂದು ಆ ದುಃಖ-ತಪ್ತ ಸಂಧರ್ಭದಲ್ಲಿಯೂ ಒಂದು ಹೆಮ್ಮೆ ಮಿಶ್ರಿತ ಭಾವನೆಗಳು ಮೂಡಿ ಬಂದು ನಾನು ಇದನ್ನುನಿಭಾಯಿಸುವುದು ಸ್ವಲ್ಪಕಷ್ಟವಾಯಿತು. ಈ ವಿಚಿತ್ರ ಅನುಭವದಿಂದ ಚೇತರಿಸಿಕೊಂಡು ನನ್ನ ತಂದಯವರ ಕೋಣೆಗೆ ಹೊಕ್ಕು ಅಲ್ಲಿ ಅವರ ಭಾವ ಚಿತ್ರಕ್ಕೆ ನಮಸ್ಕರಿಸುವಾಗ, ಉಕ್ಕಿಬಂದ ತೀವ್ರ ಭಾವನೆಗಳನ್ನು TV ವೀಕ್ಷಕರೊಂದಿಗೆ ಹಂಚಿಕೊಳ್ಳದೆ ಸಂಯಮದಿಂದ ಹಿಡಿದಿಟ್ಟುಕೊಂಡು ಒಳಕೋಣೆಯಲ್ಲಿ ಸೇರಿ ಅಮ್ಮನ್ನನ್ನು ಅಪ್ಪಿಕೊಂಡ ಕೂಡಲೆ ನನ್ನ ಸಂಯಮಗಳು ಮುರಿದುಬಿದ್ದು ಹರಿದ ಕಂಬನಿಗಳ ಪ್ರವಾಹ, ಶ್ರದ್ಧಾಂಜಲಿಯ ಮೊದಲನೆ ಕಂತನ್ನು ಅರ್ಪಿಸಿದವು.

ಲಂಡನ್ನಿನಲ್ಲಿ ಜಿ ಎಸ್ ಎಸ್

ಡಿಸಂಬರ್ ೨೬ನೆ ತಾರೀಖು ೭.೩೦ರ ವೇಳೆಗೆ ನೂರಾರು ಜನ ಮನೆಯಲ್ಲಿ ನೆರೆದಿದ್ದರು. ಚನ್ನವೀರ ಕಣವಿ,ನಿಸ್ಸಾರ್ ಅಹಮದ್, ಜೆ.ಎಸ್.ಎಸ್ ಸ್ವಾಮಿಗಳು ಹೀಗೆ ಅನೇಕ ಗಣ್ಯವ್ಯಕ್ತಿಗಳು ಅಲ್ಲಿ ನೆರೆದಿದ್ದು ತಂದೆಯವರ ಪಾರ್ಥಿವ ಶರೀರವನ್ನು ಹೂಗಳ ಹಾಗು ಗಂಧದ ಹಾರದೊಂದಿಗೆ ಅಲಂಕರಿಸಿ ತಂದಿದ್ದರು. ನಾನು ಬಹಳ ಆತಂಕದಿಂದ ಶರೀರವನ್ನು ಅಡಿಯಿಂದ ಮುಡಿಯವರೆಗೂ ಗಮನಿಸಿದೆ. ಆದೇ ಪ್ರಶಾಂತವಾದ ಗಂಭೀರ ಚಹರೆ, GSS trade mark ಆಗಿರುವ ಅವರ ಹಿತ್ತಾಳೆ ಅಂಚಿನ ದುಂಡನೆಯ ಕನ್ನಡಕ, ಹಣೆಗೆ ವಿಭೂತಿ ಕುಂಕುಮಗಳಿಲ್ಲ. ಆವರ ಇಚ್ಛೆಯಂತೆ ಯಾವ ಧಾರ್ಮಿಕ ಕ್ರಿಯೆಗಳು ಮನೆಯಲ್ಲಿ ಜರುಗಲಿಲ್ಲ. ಜೆ.ಎಸ್.ಎಸ್ ಸ್ವಾಮಿಗಳು ಅಂದು ಮಠಾಧಿಪತಿಗಳಾಗಿ, ಧಾರ್ಮಿಕ ಕಾರ್ಯವನ್ನು ಆಚರಿಸಲು ಬಂದಿರಲಿಲ್ಲ. ಬದಲಿಗೆ, ಅವರು ಜಿ ಎಸ್ ಎಸ್ ಸಾಹಿತ್ಯಾಭಿಮಾನಿಗಳಾಗಿ ಬಂದಿದ್ದು, ಸುಗಮ-ಸಂಗೀತ ಕಲಾವಿದರು ನೀಡಿದ ಕಾವ್ಯನಮನದಲ್ಲಿ ಪಾಲ್ಗೊಂಡು ತೆರಳಿದರು.

ನಾನು ತಂದೆಯವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ಕೊಂಡೊಯ್ಯುವ ವಾಹನದಲ್ಲಿ ಕುಳಿತೆ. ಪ್ರಯಾಣದ ಸಮಯದಲ್ಲಿ ಇತ್ತೀಚಿನ ದಿನಗಳ ನೆನಪುಗಳು ನನ್ನನ್ನು ಕಾಡತೊಡಗಿದವು. ಅವರ ಮಕ್ಕಳಾದ ನಾವು ಬಾಲ್ಯದಿಂದ ತಂದೆಯವರನ್ನು ’ಅಣ್ಣ’ ಎಂದು ಕರೆಯುತ್ತಿದ್ದೆವು. ನಾನು ಹಲವು ತಿಂಗಳ ಹಿಂದೆ ಗಣೇಶ ಹಬ್ಬಕ್ಕೆ ಬಂದಾಗ ಹಿಂದಿರುಗುವ ಸಮಯದಲ್ಲಿ ಎಂದಿನಂತೆ ಕಾಲಿಗೆ ನಮಸ್ಕರಿಸಿ “ಅಣ್ಣ ಹೋಗಿಬರುತ್ತೇನೆ ನಿಮ್ಮ ಮಂದಿನ ಬರ್ತ್ ಡೇಗೆ ಬರುತ್ತೇನೆ” ಎಂದಾಗ ಅವರು ಕಿರುನಕ್ಕು “ನಾನು ಅಲ್ಲಿಯತನಕ ಇದ್ದರೆ ನೋಡೊಣ, ನಾನು ಹೊರಡಲು ರೆಡಿಯಾಗಿದ್ದೇನೆ” ಎಂದರು. ತಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ practical ಆಗಿ ಯೋಚನೆ ಮಾಡುವ ತಂದೆಯವರಿಂದ ಆ ಮಾತುಗಳು ಬಂದದ್ದು ಆಶ್ಚರ್ಯವೇನಲ್ಲ. ಅವರು ನರರೋಗ ಮತ್ತು ಹೃದ್ರೋಗದಿಂದ ಬಳಲುತ್ತಿದ್ದು ಇತ್ತೀಚಿನ ಕೆಲವು ವರ್ಷಗಳಲ್ಲಿ ದಿನನಿತ್ಯ ಕಾರ್ಯಾಕಲಾಪಗಳಿಗೆ ಇತರರ ನೆರವು ಪಡೆಯುವುದು ಅನಿವಾರ್ಯವಾಗಿತ್ತು. ನಾ ಕಂಡಂತೆ ತಂದೆಯವರು ಬಹಳ ಸ್ವಾವಲಂಬಿ ಹಾಗು ಸ್ವಾಭಿಮಾನಿಗಳಾಗಿದ್ದು ಅವರಿಗೆ ಬೇರೆಯವರನ್ನು ಅವಲಂಬಿಸುವುದು ಮುಜುಗರ ಹಾಗು ಅಸಮಾಧಾನಗಳನ್ನು ತಂದಿತ್ತು. ಒಮ್ಮೆ ನನ್ನ ಹಾಗು ಪೂರ್ಣಿಮಾಳ ಬಳಿ ಮಾತನಾಡುತ್ತ ” ನನಗೆ ಮುಪ್ಪುಬರುವ ಬಗ್ಗೆ ಕಲ್ಪನೆಗಳಿದ್ದವು ಆದರೆ ಅದು ಹೀಗಿರುತ್ತದೆ ಎಂಬುದನ್ನು ನಾನು ನಿರೀಕ್ಷಿಸಿರಲ್ಲಿಲ್ಲ” ಎಂದರು. ತಂದೆಯವರ ಸ್ವಾಭಿಮಾನ ಎಷ್ಟರಮಟ್ಟಿಗೆ ಎಂದರೆ ಅವರು ಪ್ರತಿಸಾರಿ ಇಂಗ್ಲೇಡಿಗೆ ಬಂದಾಗ ನಾನು ಅವರ ವಿಮಾನ ಪ್ರಯಾಣದ ಖರ್ಚನ್ನು ವಹಿಸಿಕೊಳ್ಳಲು ಪ್ರಯತ್ನಿಸಿದರೂ ಅವರು ಒಪ್ಪುತ್ತಿರಲಿಲ್ಲ.

ನಾವು ರವೀಂದ್ರ ಕಲಾಕ್ಷೇತ್ರದ ಆವರಣವನ್ನು ತಲುಪಿದಾಗ ತಂದೆಯವರ ಪಾರ್ಥಿವ ಶರೀರವನ್ನು ವಿಶೇಷವಾಗಿ ಅಲಂಕೃತವಾದ ಸ್ಥಳದಲ್ಲಿ ಇರಿಸಿ ಜನಸಾಮಾನ್ಯರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು. ಅಲಂಕೃತವಾದ ಸಜ್ಜಿಗೆ, ಹೂವಿನ ರಾಶಿ ಹಾಗು ಹಾರಗಳ ನಡುವಿನಲ್ಲಿ ಜಿ ಎಸ್ ಎಸ್ ಪಾರ್ಥಿವ ಶರೀರ, ಹಿನ್ನೆಲೆಯಲ್ಲಿ ಸುಗಮ-ಸಂಗೀತದವರಿಂದ ಸುಶ್ರಾವ್ಯವಾದ ಸಂಗೀತ, ಗೌರವ ಸಲ್ಲಿಸಲು ಕ್ಯೂನಲ್ಲಿ ನಿಂತಿದ್ದ ಸಾಹಿತಿಗಳು, ಮಂತ್ರಿಗಳು, ಎಡೆಬಿಡದೆ ಕ್ಲಿಕ್ಕಿಸುತ್ತಿರುವ ಕ್ಯಾಮರಗಳು, ಮಾಧ್ಯಮದವರ ವೀಡಿಯೊ ಮಾಡುವ ಮುತುವರ್ಜಿ ಇವನ್ನೆಲ್ಲ ಗಮನಿಸಿದಾಗ ನೆರೆದವರಿಗೆ ಈ ಸಂಧರ್ಭ ಶೋಕಕ್ಕಿಂತ ಹೆಚ್ಚಾಗಿ ಒಂದು ಹಬ್ಬದ ಅಥವಾ ಸಂಭ್ರಮದ ಕಾರ್ಯವೆಂಬಂತೆ ತೋರುತ್ತಿತ್ತು. ಪರಿಪೂರ್ಣವಾದ ಬದುಕನ್ನು ಮುಗಿಸಿದ ಒಬ್ಬ ರಾಷ್ಟ್ರಕವಿಗೆ ವಿದಾಯ ಹೇಳುವ ಪರಿ ಸೂಕ್ತವಾಗಿದ್ದು ಈ ಹಬ್ಬದ ಸಂಭ್ರಮ ವಾತಾವರಣ ಅನುಚಿತವೆಂಬಂತೆ ತೋರಲಿಲ್ಲ.

ನಾನು ಪ್ರತಿಬಾರಿ ರಜಕ್ಕೆ ಬೆಂಗಳೂರಿಗೆ ಬರುವ ಮುನ್ನ ತಂದೆಯವರಿಗೆ ಫೋನ್ ಮಾಡಿ ಅವರಿಗೆ ಇಂಗ್ಲೇಂಡಿನಿಂದ ಎನಾದರು ಬೇಕೆ ಎಂದು ವಿಚಾರಿಸಿವುದು ನನ್ನ ವಾಡಿಕೆ. ಅದಕ್ಕೆ ಅವರು “ನನಗೆ ಏನೂ ಬೇಡ ನೀನು ಸುಮ್ಮನೆ ಬಾ” ಎಂಬ ನೀರೀಕ್ಷಿತ ಉತ್ತರವನ್ನೆ ಕೊಡುತ್ತಿದ್ದರು. ತೀರ ಬಲವಂತ ಮಾಡಿದಾಗ “ಸರಿ ಒಂದಿಷ್ಟು salted ಗೋಡಂಬಿಯನ್ನು ತೆಗೆದುಕೊಂಡು ಬಾ” ಎಂದು ಹೇಳುತ್ತಿದ್ದರು. ಪ್ರತಿಸಾರಿ ಅವರು ಕೇಳದಿದ್ದರು ನಾನು ಏರ್-ಪೋರ್ಟಿನ duty free shop ನಲ್ಲಿ ಗೋಡಂಬಿಯ ಜೊತೆಯಲ್ಲಿ ಒಂದು Scotch whisky ಯನ್ನು ಅಣ್ಣನಿಗೆ ಅಂತ ತೆಗೆದು ಕೊಂಡಿರುತ್ತಿದ್ದೆ. ಬೆಂಗಳೂರು ತಲುಪಿದ ಒಂದೆರಡು ದಿನದಲ್ಲಿ ಮನೆಯಲ್ಲಿ ಒಂದು ಪಾರ್ಟಿ ನಡೆಯುತ್ತಿದ್ದು ಜಿ ಎಸ್ ಎಸ್ ಅವರ ಆಪ್ತಮಿತ್ರರು, ನಾನು, ನನ್ನ ಭಾವನವರಾದ ಡಾ. ಮರುಳಸಿದ್ದಪ್ಪನವರು ಸೇರಿಕೊಂಡು ಅಣ್ಣನ ನೆಪದಲ್ಲಿ ವಿಸ್ಕಿ ಶೀಶೆಯ ತಳಕಾಣಿಸುತ್ತಿದ್ದೆವು! ಅಣ್ಣನಿಗೋ ವಿಸ್ಕಿಗಿಂತ ಅಲ್ಲಿರುವ ಗೋಡಂಬಿ ಮತ್ತು ಚಿಪ್ಸ್ ಮೆಲ್ಲುವಲ್ಲಿ ಆಸಕ್ತಿ! ಅಣ್ಣ ಪಾರ್ಟಿ ವಾತಾವರಣದಲ್ಲಿ ಬಹಳ ಮಿತಭಾಷಿಗಳು. ಸಾಹಿತ್ಯ ವಿಚಾರ ಬಂದಾಗ ಮಾತ್ರ ಹರಟೆಗೆ ಸೇರುತ್ತಿದರು. ಒಂದೆರಡು ಪೆಗ್ ಒಳಗೆ ಹೋದ ಮೇಲಾದರೂ ಅವರು ಹರಟುತ್ತಾರೆಂದು ಎಲ್ಲರು ನಿರೀಕ್ಷಿಸಿದರೆ ಮೊದಲೇ ಅಂತರ್ಮುಖಿಗಳಾದ ಅಣ್ಣ, ವಿಸ್ಕಿ ಒಳ ಸೇರಿದ ಬಳಿಕ ಇನ್ನೂ ಅಂತರ್ಮುಖಿಯಾಗಿ ಮೌನ-ವ್ರತವನ್ನಾಚರಿಸುವ ಸನ್ಯಾಸಿಯಂತಾಗಿ ಬಿಡುತ್ತಿದ್ದರು! ನಮ್ಮ ವಿಸ್ಕಿ ಪಾರ್ಟಿಗಳಿಗೆ ನನ್ನ ಅಮ್ಮನ ಸಂಪೂರ್ಣ ಸಮ್ಮತಿ ಇಲ್ಲದ್ದಿದ್ದರೂ, ನನ್ನ ಅಕ್ಕ ಜಯಂತಿಯ ಸಹಕಾರದಿಂದ ಪಕೋಡ ಮತ್ತು ಬಜ್ಜಿಗಳ ಸರಬರಾಜಿಗೆ ಎನೂ ತೊಂದರೆ ಇರಲಿಲ್ಲ.

ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಅಂತಿಮಕಾರ್ಯವು ಬಹಳ ಸುವ್ಯವಸ್ಥಿತವಾಗಿ ನಿಗದಿಯಾದ ಸಮಯಕ್ಕೆ ರಾಜ್ಯ-ಗೌರವಗಳೊಂದಿಗೆ ಜರುಗಿತು. ರಾಷ್ಟ್ರ ಹಾಗು ನಾಡ ಗೀತೆಯನಂತರ ಸಂಜೆ ಐದರ ಸಮಯದಲ್ಲಿ ಮಾಗಿಯ ಸೂರ್ಯನ ಹಿತವಾದ ಕೆಂಪಿನಲ್ಲಿ ನನ್ನ ಅಣ್ಣ ಜಯದೇವನಿಂದ ಚಿತೆಗೆ ಅಗ್ನಿಸ್ಪರ್ಶವಾಗುವುದರಲ್ಲಿದ್ದಾಗ, ಸುಗಮ ಸಂಗೀತದವರು ಒಕ್ಕೊರಳಿನಲ್ಲಿ ”ಕಾಣದ ಕಡಲಿಗೆ ಹಂಬಲಿಸಿದೆ ಮನ’’ ಕವನವನ್ನು ಹಾಡಿದ್ದು ಬಹಳ ಅರ್ಥಪೂರ್ಣವೆನಿಸಿತು. ಅಲ್ಲಿ ನೆರೆದಿದ್ದ ಸಹಸ್ರಾರು ಜನರ ಮೌನ, ಸಂಯಮ ಹಾಗು ಗಂಭೀರ ನಡತೆ ಆ ಕಾರ್ಯಕ್ಕೆ ಒಂದು ಘನತೆಯನ್ನು ತಂದುಕೊಟ್ಟಿತ್ತು. ಆಲ್ಲಿ ಕೆಲವು ಯುವಕರು “ಜಾತೀಯತೆ ತೊಲಗಿಸಿ ಮಾನವೀಯತೆ ಉಳಿಸಿ” ಎಂಬ ಘೊಷಣೆಗಳನ್ನು ಕೂಗಿದ್ದು ಜಿ ಎಸ್ ಎಸ್ ಅವರ ಜಾತ್ಯಾತೀತ ನಿಲುವಿಗೆ ಸಾಕ್ಷಿಯಾಗಿತ್ತು. ಈ ಒಂದು ಸಂಧರ್ಭ ನನಗೂ ನನ್ನ ಪರಿವಾರದವರಿಗೂ ಅತ್ಯಂತ ದುಃಖ ತಪ್ತವಾದ ಘಳಿಗೆಯಾದರೂ ಸಹಾ, ಒಂದು ಸ್ಮರಣೀಯ ಅನುಭವವಾಗಿ ನನ್ನ ನೆನಪಿನಲ್ಲಿ ದಾಖಲೆಯಾಗಿರುವುದು ಒಂದು ವಿಚಿತ್ರ ಸಂಗತಿ.

ತಾವು ಯಾವ ಧರ್ಮಕ್ಕೂ ಅಥವಾ ಮತಕ್ಕೂ ಸೇರಿದವರಲ್ಲ, ತಮ್ಮನ್ನು ಕೇವಲ ಒಬ್ಬ ಕನ್ನಡಿಗನೆಂದು ಪರಿಗಣಿಸಬೇಕು ಹಾಗು ಅವರ ಅಂತಿಮ ಕಾರ್ಯದಲ್ಲಿ ಯಾವುದೇ ಧಾರ್ಮಿಕ ಸೋಂಕು ಇರಬಾರದೆಂದು ನನ್ನ ಅಣ್ಣ ಜಯದೇವನಿಗೆ ಕೆಲವು ತಿಂಗಳ ಹಿಂದೆ ತಿಳಿಸಿದ್ದರು. ಬದುಕಿನಲ್ಲಿ ಮೂಢನಂಬಿಕೆ, ಧರ್ಮ ಮತ್ತು ಜಾತಿ ಹೆಸರಿನಲ್ಲಿ ನಡೆಯುವ ಶೋಷಣೆ ಇವುಗಳ ಬಗ್ಗೆ ತಿರಸ್ಕಾರ ಭಾವನೆಗಳಿದ್ದು, ಬದುಕಿನಲ್ಲಷ್ಟೆ ಅಲ್ಲದೆ ಸಾವಿನಲ್ಲೂ ಅವರು ತಮ್ಮ ವೈಚಾರಿಕ ಪ್ರಜ್ಞೆಗಳನ್ನು ಉಳಿಸಿಕೊಂಡರು. ಜಿ ಎಸ್ ಎಸ್ ಅವರು ಬದುಕಿನಲ್ಲಿ ಮಾಡುವ ಯಾವುದೇ ಕಾರ್ಯಗಳಲ್ಲಿ ಒಂದು ಮುಂದಾಲೋಚನೆ, ಶಿಸ್ತು ಹಾಗು ಪೂರ್ವನಿಯೋಜಿತ ಸಿದ್ಧತೆ ಕಂಡುಬರುತ್ತಿತ್ತು. ಅವರ ಅಂತ್ಯಕ್ರಿಯೆಯು ಇದೇ ಮೌಲ್ಯಗಳನ್ನಾಧರಿಸಿ ವ್ಯವಸ್ಥಿತವಾಗಿ ಜರುಗಿತು, ಇದಕ್ಕಿಂತ ಹೆಚ್ಚಿನ ಪ್ರೀತಿ, ವಿಶ್ವಾಸ ಮತ್ತು ಗೌರವಗಳನ್ನು ಕನ್ನಡ ಜನತೆಯಿಂದ ಹಾಗು ಸರ್ಕಾರದಿಂದ ಜಿ ಎಸ್ ಎಸ್ ಪರಿವಾರದವರು ನಿರೀಕ್ಷಿಸಿರಲ್ಲಿಲ್ಲ.

’’ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ” ವೆಂಬ ನಿರ್ಲಿಪ್ತ ನಿಲುವನ್ನು ತಳೆದಿದ್ದ ತಂದೆಯವರಿಗೆ ಗೌರವ, ಸನ್ಮಾನ, ಪುರಸ್ಕಾರ ಕೊನೆಗೆ ರಾಷ್ಟ್ರಕವಿ ಪಟ್ಟ ತಾನೆ ಅರಸಿ ಬಂದಿದ್ದು, ಅವರು ಈ ಪುರಸ್ಕಾರಗಳನ್ನು ಧನ್ಯತೆಯ ಭಾವನೆಯಿಂದ ಸ್ವೀಕರಿಸಿದ್ದರು. ’’To love life is to live life” ಎಂಬ ತತ್ವವನ್ನು ನಂಬಿ ಬದುಕನ್ನು ಪ್ರೀತಿಸಿದ್ದವರು ಜಿ ಎಸ್ ಎಸ್. ’’ಪ್ರೀತಿ ಇಲ್ಲದಮೇಲೆ ಹೂವು ಅರಳಿತು ಹೇಗೆ” ಎಂದು ಪ್ರಶ್ನಿಸುತ್ತ ಪ್ರೀತಿಯನ್ನು ಇತರರೊಂದಿಗೆ ಹಂಚಿಕೊಂಡು ’’ಸ್ನೇಹ ಪ್ರೀತಿ ಕರುಣೆ ಮರುಕ ಇವೇ ನಮ್ಮ ದೇವರು’’ ಎಂದು ಬರೆಯುತ್ತಾ ತುಂಬು ಬಾಳ್ವೆಯನ್ನು ನಡೆಸಿದ ಕವಿ ಡಾ. ಜಿ ಎಸ್ ಎಸ್.

ಇಂತಹ ಕವಿಗೆ ಹಲವಾರು ಸಂಘ-ಸಂಸ್ಥೆಗಳು ಈಗಾಗಲೆ ತಮ್ಮ ಶ್ರದ್ಧಾಂಜಲಿಗಳನ್ನು ಅರ್ಪಿಸಿವೆ. ಒಬ್ಬ ಹಿರಿಯ ಕವಿ, ವಿಮರ್ಶಕ, ಪ್ರಾಧ್ಯಾಪಕ ಹಾಗು ಚಿಂತಕರಾದ ಜಿ ಎಸ್ ಎಸ್ ಅವರಿಗೆ ಅವರ ಶಿಷ್ಯರು ಹಾಗು ಸಾಹಿತಿಗಳು ವಿಚಾರ ಗೋಷ್ಟಿಗಳ ಮೂಲಕ, ಸುಗಮ ಸಂಗೀತದವರು ಗೀತ ನಮನದ ಮೂಲಕ, ಸರ್ಕಾರದವರು ಸ್ಮಾರಕವನ್ನು ಕಟ್ಟುವುದರ ಮೂಲಕ ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸಬಹುದು. ಆದರೆ ಎಲ್ಲ ಕನ್ನಡಿಗರು ಜಿ ಎಸ್ ಎಸ್ ಅವರ ಕವಿತೆಗಳನ್ನು, ಸಾಹಿತ್ಯವನ್ನು ಓದಿ ಅವರ ಬದುಕಿನ ಸಂದೇಶವನ್ನು ಅರ್ಥಮಾಡಿಕೊಳ್ಳುವುದೇ, ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.

One thought on “ನನ್ನ ನೆನಪಿನಲ್ಲಿ ತಂದೆ ಜಿ.ಎಸ್.ಎಸ್ – ಶಿವಪ್ರಸಾದ್

  1. ಜಿ ಎಸ ಎಸ ಅವರು ಕನ್ನಡ ಕಂಡ ಅನನ್ಯ ಕವಿ. ಸಾಹಿತ್ಯ, ಸಂಗೀತ,ಗಾಯಕರ ಅದ್ಭುತ ಸಮ್ಮಿಲನ ಎಂಭತ್ತರ ದಶಕದಿಂದ ಆರಂಭವಾಗಿ ಭಾವಗೀತೆಗಳ ಗಂಗೆಯನ್ನೇ ಹರಿಸಿದ್ದು ನಮ್ಮೆಲ್ಲರ ಪಾಲಿನ ಅದೃಷ್ಟ . ನಮ್ಮ ಮುಂದಿನ ಪೀಳಿಗೆಗೆ ಈ ಭಾಗ್ಯ ಇದ್ದರೂ ಇಲ್ಲದಂತಾಗಿರುವುದು ದುರಾದೃಷ್ಟ .
    ಹಿರಿಯ ಕವಿಗೆ ಕಿರಿಯನ ನಮನ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.