ಇಷ್ಟಪಟ್ಟ ಕನ್ನಡ ಸಿನೆಮಾಗಳು

`ಉಳಿದವ(ರು)(ನಾ) ಕಂಡಂತೆ` – ಗಿರಿಧರ ಹಂಪಾಪುರ

ulidavaru-kandanthe‘ಉಳಿದವರು ಕಂಡಂತೆ’ ನಾನು ಇತ್ತೀಚಿಗೆ ನೋಡಿದ ಉತ್ತಮ ಕನ್ನಡ ಚಿತ್ರಗಳಲ್ಲಿ ಒಂದು. ಒಂದು ಸಿನಿಮಾ ಅಥವಾ ನಾಟಕವು ಯಶಸ್ವಿಯಾಗಬೇಕೆಂದರೆ ಅದರ ಕಥೆ ಚೆನ್ನಾದ್ದಿರಷ್ಟೇ ಸಾಲದು, ಅದರ ನಿರೂಪಣೆಯೂ ಅಚ್ಚುಕಟ್ಟಾಗಿ ಇರಬೇಕು. ಕನ್ನಡದಲ್ಲಿ ಕಥಾ ನಿರೂಪಣೆಯ ಕೆಲವೇ ತಂತ್ರಗಳನ್ನು ಪದೇ ಪದೇ ಉಪಯೋಗಿಸಿ ನೋಡುಗನನ್ನು ನಿರ್ದೇಶಕರು ಬೋರ್ ಹೊಡೆಸಿದ್ದರು. ಉಳಿದವರು ಕಂಡಂತೆ ಕನ್ನಡ ಚಿತ್ರಗಳಲ್ಲಿ ಈ ದಿಕ್ಕಿನಲ್ಲಿ ಬಹಳ ಹಿಂದೆ, ನಾನು ಮತ್ತು ಸಿನೆಮಾಟೋಗ್ರಫಿ ಅಧ್ಯಯನ ಮಾಡಿದ್ದ ನಮ್ಮ ತಂದೆಯವರು ‘ಸೂರಜ್ ಕಾ ಸಾತ್ವಾ ಘೋಡಾ’ ಅನ್ನೋ ಚಿತ್ರವನ್ನು ನೋಡಿದ್ದೆವು. ನಮ್ಮ ತಂದೆಯವರು ಆ ಕಥಾ ನಿರೂಪಣಾ ತಂತ್ರದ ಬಗ್ಗೆ ಬಹಳ ವಿವರವಾಗಿ ಹೇಳಿದ್ದರು. ಆ ಕಥಾ ನಿರೂಪಣೆ ತಂತ್ರ ನನ್ನ ತಲೆಯಲ್ಲಿ ನಿಂತು ಬಿಟ್ಟಿತ್ತು. ಹಿಂದಿಯ ‘ಉತ್ತ ಪತಾಂಗ್’ ಅನ್ನೋ ಚಿತ್ರವೂ ಅದೇ ನಿರೂಪಣಾ ತಂತ್ರ ಉಪಯೋಗಿತ್ತು. ಜಪಾನಿನ ‘ರಶೋಮೊನ್’ ಎಂಬ ಚಿತ್ರ ಈ ತಂತ್ರವನ್ನು ಮೊದಲ ಬಾರಿಗೆ ಉಪಯೋಗಿಸಿತ್ತಂತೆ.

ಕಥೆಯನ್ನು ನಾನು ಹೇಳುವುದಿಲ್ಲ – ನಿಮ್ಮ ಆಸಕ್ತಿ ಮತ್ತು ಕುತೂಹಲ ಕೆಡಿಸುವುದಿಲ್ಲ. ‘ಉಳಿದವರು ಕಂಡಂತೆ’ ಒಂದೇ ಕತೆಯಾದರು ಬೇರೆ ಬೇರೆಯವರ ದೃಷ್ಟಿಯಿಂದ ಹೇಳಿದ ಕಥೆ. ಕಥೆ ಕುತೂಹಲಕಾರಿಯಗಿದೆ. ಕಡೆಯ ತನಕ ಒಂದು ರೀತಿಯ ಸಸ್ಪೆನ್ಸ್ ಇದೆ. ಸಿನೆಮಾದ ಕೆಲವು ದೃಶ್ಯಗಳನ್ನು ಬೇರೆ ಬೇರೆ ಕೋನದಿಂದ, ಸಿನೆಮಾದ ಮಧ್ಯೆ ಮಧ್ಯೆ ವಿವಿದ ಪಾತ್ರಗಳ ದೃಷ್ಟಿಕೋನದಿಂದ ತೋರಿಸುತ್ತಾನೆ. ಕಳ್ಳತನ ಮಾಡಿಯೂ ಮಾಡದೇ ಇರುವ ಮಗ, ವರ್ಷಗಳಿಂದ ಮಗನಿಗಾಗಿ ಕಾಯುತ್ತಿರುವ ತಾಯಿ, ರಿಮ್ಯಾಂಡ್ ಹೋಮಿನಿಂದ ವಾಪಸಾಗಿರುವ ಯುವಕ, ದೋಣಿ ವೋನರೊಬ್ಬ ಹಾಗು ಹುಲಿ-ಕುಣಿತದ practitioner ಒಬ್ಬ, ಇವರ ದೃಷ್ಟಿಗಳಿಂದ ಹೇಳಿದ ಒಂದೇ ಕತೆಯು – ಕಮರ್ಷಿಯಲ್ ಸಿನೆಮಾದಲ್ಲಿನ ಭಾಷೆಯ ಹಾಗು ಮಂಗಳೂರು ಆಸುಪಾಸಿನ pictursque locationಗಳು ಬಹಳ ಚೆನ್ನಾಗಿವೆ. ಕಥೆಯ ನಿರ್ದೇಶನ ಚೆನ್ನಾಗಿದೆ. ಎಡಿಟಿಂಗ್ ಸ್ವಲ್ಪ ಶಕ್ತಿಶಾಲಿಯಾಗಿದ್ದರೆ ಸಿನೆಮಾ ಇನ್ನೂ ಚೆನ್ನಾಗಿ ಇರುತ್ತಿತ್ತು. ಹೊಸ ನಿರ್ದೇಶಕ ರಕ್ಷಿತ ಶೆಟ್ಟಿ ನಿರ್ದೇಶನ ಮಾಡಿ ನಟಿಸಿದ್ದಾರೆ.ಮಿಕ್ಕ ಎಲ್ಲ ಪಾತ್ರಗಳನ್ನು able actors ವಹಿಸಿರುವುದರಿಂದ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ, ವಿಶೇಷವಾಗಿ democracy ಎಂಬ ಪಾತ್ರ.

‘ಭೂತಯ್ಯನ ಮಗ ಅಯ್ಯು’ – ಒಂದು ಕಿಂಡಿ – ವಿನತೆ ಶರ್ಮ

bhootayyaನಾನು ಸಿದ್ದಲಿಂಗಯ್ಯನವರ ‘ಭೂತಯ್ಯನ ಮಗ ಅಯ್ಯು’ ಕನ್ನಡ ಚಲನಚಿತ್ರವನ್ನು ನೋಡಿದ್ದು ಅದು ಬಿಡುಗಡೆಯಾದ ಕೆಲವರ್ಷಗಳ ನಂತರ. ಶಾಲಾ ಬಾಲಕಿಯಾಗಿದ್ದಾಗ ಆಗಾಗ ಗೌರಿಬಿದನೂರು ಹೋಬಳಿಗೆ ಸೇರಿದ ಹಳ್ಳಿಯ ಅಜ್ಜಿಯ ಮನೆಗೆ ನಾವೆಲ್ಲಾ ಹೋಗುತ್ತಿದ್ದೆವು. ಕಣ್ಣು ಬಾಯಿ ಬಿಟ್ಟುಕೊಂಡು ಆ ಹಳ್ಳಿ ಟೆಂಟ್ ಸಿನಿಮಾ ನೋಡಿದ್ದು ಧಮನಿಗಳಲ್ಲಿ ಇಳಿದುಬಿಟ್ಟಿತು. ಅಜ್ಜಿಯ ಹೊಲ, ಊರಿನ ವಿಶಾಲವಾದ ಸ್ವಚ್ಚ ನೀರಿನ ಕೆರೆ, ಕೆರೆಯ ದಡದಲ್ಲಿದ್ದ ಕುಡಿಯುವ ನೀರಿನ ಬಾವಿ, ಬಾವಿಯಲ್ಲಿದ್ದ ಆಮೆ ಕುಟುಂಬ, ಕೆರೆಯ ಪಕ್ಕದಲ್ಲಿದ್ದ ಕಬ್ಬು, ರಾಗಿ ಹೊಲಗಳು. ವಿಪರೀತ ಭಯ ಹುಟ್ಟಿಸುತ್ತಿದ್ದ ನೆಲಬಾವಿಗಳು, ಅಪರೂಪದ ಭತ್ತ, ಹೇರಳ ರಾಗಿ, ನಾನು ಹೊಲದಲ್ಲೇ ಕೂತು ಭೂಮಿಯಿಂದಲೇ ನೇರವಾಗಿ ಕಿತ್ತು ತಿನ್ನುತ್ತಿದ್ದ ರಸಭರಿತ ಕಡ್ಲೇಕಾಯಿ ತೆನೆ, ತೊಗರಿ ತೆನೆ, ಅಜ್ಜಿ ಮನೆಯಲ್ಲಿನ ವಿಶೇಷ ತಾಜಾ ರುಚಿಯಿರುತ್ತಿದ್ದ ಸರಳ ಅಡುಗೆ, ಚೇಷ್ಟೆ ಮಾಡಿದಾಗ ಅಜ್ಜಿ ಬೈಯುತ್ತಿದ್ದ ‘ನಾಟಿ’ ಬೈಗಳು, ಆಕೆ ರೈತರೊಡನೆ ತೆಲುಗು ಮಿಶ್ರಿತ ಕನ್ನಡವನ್ನ ಮತ್ತು ಕೋಲಾರದ ಗಡಿ ತೆಲುಗನ್ನ ಮಾತನಾಡುತ್ತಿದ್ದ ಭಂಗಿ. ಎಲ್ಲವೂ ಸರಿಸಮಾನಾಗಿ ತೆಕ್ಕೆಹಾಕಿಕೊಂಡು ನನ್ನನ್ನು ‘ಭೂತಯ್ಯನ ಮಗ ಅಯ್ಯು’ ಎಂಬ ನೆಲ-ಹೊಲ-ಸ್ವಾಭಿಮಾನ- ಕೆರೆ-ರೈತಾಪಿ-ಬೈಗಳ ಲೋಕಕ್ಕೆ ಕರೆದೊಯ್ದು ಆ ಚಲನಚಿತ್ರವನ್ನ ನನ್ನದಾಗಿ ಮಾಡಿಬಿಟ್ಟವು. ಭೂತಯ್ಯನ ಪಾತ್ರ ಮಾಡಿದ ಎಂ ಪಿ ಶಂಕರ್ ಮತ್ತು ಅಯ್ಯು ಪಾತ್ರಧಾರಿ ಲೋಕೇಶ್ – ತಂದೆಮಗ ಪಾತ್ರಗಳು ಮತ್ತು ಈ ಇಬ್ಬರ ನಟನೆ, ಆಹಾ! ರೈತರ, ಬಡವರ ನೆತ್ತರು ಹೀರಿ ತಾನು ಚೆನ್ನಾಗಿರುವ ತಂದೆಯ ಕುಯುಕ್ತಿ, ಮಗ ತಾನು ತಂದೆಯಿಂದ ಬಳುವಳಿ ಪಡೆದ ಆಸ್ತಿ ಜೊತೆ ಆತನ ಕ್ರೂರತೆ – ಎಷ್ಟು ನೈಜ ನಟನೆ. ಅದೇ ಮಗ ಮುಂದೆ ತಪ್ಪರಿತು ಹೆಂಡತಿಯ, ಮಕ್ಕಳ ಮಾತಿಗೆ ಬೆಲೆಕೊಟ್ಟು ಬದಲಾಗುವ ಪರಿ – ಲೋಕೇಶ್ ಗೆ ಅವರೇ ಸಾಟಿ ಆ ನಟನೆಯಲ್ಲಿ. ಇನ್ನು ಗುಳ್ಳನ ಪಾತ್ರಧಾರಿ ಯುವಕ ವಿಷ್ಣುವರ್ಧನ್ – ಅದೇನು ಕಣ್ಣಿನ ಹರಿತ, ಮೂಗಿನ ತುದಿಯ ಕೋಪ, ಸಿಡುಕು, ‘ಮಲೆನಾಡ ಹೆಣ್ಣ ಮೈ ಬಣ್ಣ, ಆ ನಡು ಸಣ್ಣ’ ಹಾಡ ಅಭಿನಯದ ತುಟಿಯ ಮಿಂಚು! ಸಾಲ ತೀರಿಸುವ ಸಲುವಾಗಿ ತನ್ನ ಶತ್ರು ಅಯ್ಯುವಿನ ಮನೆಯಲ್ಲಿ ಕೆಲಸಗಾರನಾಗುವ ಗುಳ್ಳನ ಸ್ವಾಭಿಮಾನ, ತಂದೆಯ ಶವವನ್ನು ಹೊತ್ತ ಗಾಡಿಯನ್ನು ತಾನೇ ನಡೆಸುವ ಅಯ್ಯುವಿನ ಅಭಿಮಾನ, ಇಬ್ಬರ ಮನೆ ಹೆಂಗಸರ ನಿಟ್ಟುಸಿರು, ತಮ್ಮ ಗಂಡಂದಿರ ನಡುವೆ ಶಾಂತಿಗಾಗಿ ಅವರ ಪಟ್ಟುಬಿಡದ ಪ್ರಯತ್ನ – ಎಲ್ಲವೂ ಸೂಚ್ಯ, ಸಾಂಕೇತಿಕ, ಅಬ್ಬರವಿಲ್ಲದ ನೇರ ಮನಮುಟ್ಟುವ ಸಂದೇಶಗಳು. ಆಸ್ತಿ, ಸ್ವಾರ್ಥ, ವೈಷಮ್ಯ ಬೇಡ – ಪರಸ್ಪರ ಆದರ, ಸ್ವೀಕರಿಕೆ, ಒಪ್ಪಿಕೊಳ್ಳುವುದು, ಗೌರವ, ಪ್ರೀತಿ ಈ ಮನುಷ್ಯ ಸಂಬಂಧಗಳು ಮುಖ್ಯ ಎಂದು ಹೇಳುವ ದೃಶ್ಯಕಾವ್ಯ. ಕಿವಿಗಳು ಮತ್ತೆ ಮತ್ತೆ ಕೇಳಬಯಸುವ ‘ಮಾರಿಯೇ ಗತಿಯೆಂದು’, ‘ವಿರಸವೆಂಬ ವಿಷಕೆ ಬಲಿಯಾದೆ ಏತಕೆ’ ಹಾಡುಗಳು. ಚಿತ್ರದ ಕೊನೆಯ ಕ್ಲೈಮಾಕ್ಸ್ – ನದಿ ಕಟ್ಟೆ ಒಡೆದಾಗ ಗುಳ್ಳ ಅತೀವ ಸಾಹಸದಿಂದ ಆ ಚಿಕ್ಕ ಹರಿಗೋಲಲ್ಲಿ ಅಯ್ಯುವಿನ ಹೆಂಡತಿ ಮಕ್ಕಳನ್ನು ರಕ್ಷಿಸುವುದು -ಇವು ನನ್ನನ್ನು ಮತ್ತೆ ಮತ್ತೆ ಅಜ್ಜಿ ಊರಿನ ಕೆರೆಗೆ ಸೆಳೆದೊಯ್ದು ನನ್ನದೇ ಕಲ್ಪನಾ ಸಾಮ್ರಾಜ್ಯವನ್ನ ಕಟ್ಟಿಕೊಟ್ಟಿತು.

ಕಡೆಯ ಹೈ ಲೈಟ್ – ಒಬ್ಬರಿಗೆ ಮಾತ್ರ ದುಡ್ಡು ಕೊಟ್ಟು, ತಲೆ ಮೇಲೆ ಟವಲ್ ಹಾಕಿಕೊಂಡು, ಪಕ್ಕ ಸರಿದು ಸರಿದು ನಾಲ್ವರು ಒಂದೇ ಎಲೆಯಲ್ಲಿ ಊಟ ಮಾಡುವುದು, ಮತ್ತು ಅಯ್ಯುವಿನ ಮನೆಯನ್ನು ಕೊಳ್ಳೆ ಹೊಡೆಯುವಾಗ ಆ ಉಪ್ಪಿನಕಾಯಿಯ ಜಾಡಿಯನ್ನು ಮಾತ್ರ ಕದ್ದು ತಬ್ಬಿಕೊಳ್ಳುವ ಪಾತ್ರ. ಲೋಕನಾಥ್, ನಿಮಗೆ ಹಾಯ್ ಫೈವ್.

`ಲೂಸಿಯಾ` ನೀ ಮಾಯಯೊಳಗೋ ನಿನ್ನೊಳು ಮಾಯೆಯೋ – ರಾಮಶರಣ

lucia“ಲೂಸಿಯಾ” ಹೆಸರು ಕೇಳಿದಾಗ ಯಾವ ಲೂಸ್ ಈ ಪಿಕ್ಚರ್ ಮಾಡಿದಾನಪ್ಪಾ ಎಂದೆನಿಸಿತ್ತು ನನಗೆ. ಇತ್ತೀಚಿನ ಕನ್ನಡ ಚಿತ್ರಗಳ ಹೆಸರು ಕೇಳಿದಾಗ, ಹಾಡುಗಳನ್ನು ಕೇಳಿದಾಗ ಇಂತಹ ವಿಚಾರ ಬಂದರೇನೂ ಆಶ್ಚರ್ಯವಿಲ್ಲ, ಬಿಡಿ. ಗೆಳೆಯರಿಬ್ಬರು ,”ಡಿಫರೆಂಟಾಗಿದೆ, ನೋಡು”, ಎಂದಿದ್ದಲ್ಲದೇ, ಚಿತ್ರದ ಸೀಡಿ ಕೂಡ ಕೈಯಲ್ಲಿ ತುರುಕಿ ಹೋದ್ರು. ಅಂತೂ ಇಂತೂ ಹೆಂಡತಿ-ಮಕ್ಕಳು ಇಲ್ಲದ ಸಮಯ ನೋಡ್ಕೊಂಡು, ಧೈರ್ಯ ಮಾಡಿ ಸೀಡಿಯನ್ನು ನಾಲಿಗೆ ಚಾಚಿದ ಡೀವಿಡಿ ತಟ್ಟೆಯ ಮೇಲಿಟ್ಟೆ. ಮೆಲ್ಲನೆ ಅದರ ಬಾಯೊಳಗೆ ಸೀಡಿ ಮಾಯವಾಗುತ್ತಿದಂತೇ, “ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ” ಎಂದು ಕನಕ ದಾಸರ ಕೀರ್ತನೆ ಷುರುವಾಯ್ತು; “ಇಂಟರೆಸ್ಟ್” ಕುದುರಿತು.

ನಿಕ್ಕಿ ಕೆಲಸ ಹುಡುಕಿ ಕೊಂಡು ಹಳ್ಳಿಯಿಂದ ದಿಳ್ಳಿಗೆ ಬರುವ ಮಾಮೂಲಿ ಯುವಕ. ಕಣ್ಣಲ್ಲಿರುವ ಕನಸಷ್ಟೇ ಅವನ ಬಂಡವಾಳ. ಬೆಂಗಳೂರಿನ ಸ್ಲಮ್ ಒಂದ್ರಲ್ಲಿ ಇವನಂಥವರೊಂದಿಗೆ ಒಂದು ಕೋಣೆಯಲ್ಲಿ ಇವನ ವಾಸ. ಚಿಕ್ಕ ಸಿನೆಮಾ ಥೇಟರ್ ನಲ್ಲಿ ಬ್ಯಾಟ್ರಿ ಬಿಡೋದು ಅವನ ಕೆಲಸ. ಥೇಟರ್ ಮಾಲಕ ಶಂಕ್ರಣ್ಣ ಅವನ ಆಪ್ತ ಮಿತ್ರ. ಕೆಲಸ ಮುಗಿಸಿ ಬಂದ ಮೇಲೆ ನಿಕ್ಕಿಗೆ ಕಣ್ಣಿಗೆ ನಿದ್ದೆ ಹತ್ತದ ರೋಗ, ಸುತ್ತೆಲ್ಲ ಗೊರಕೆ ನಾದ. ಒಂದು ರಾತ್ರಿ ಇವನಿಗೆ ಹೇಗೋ ಹೊಸ ಬಗೆಯ ನಿದ್ದೆ ಗುಳಿಗೆ “ಲೂಸಿಯಾ” ಮಾರುವವನ ಪರಿಚಯವಾಗುತ್ತೆ. ಈ ಮದ್ದಿನ ವಿಶೇಷ ಏನಂದ್ರೆ, ನಿದ್ದೆ ಬಂದಾಗ ಕನಸು ಬೀಳುತ್ತೆ, ಆ ಕನಸಲ್ಲಿ ನಿನಗೆ ಏನಾಗ್ಬೇಕೋ ಅದಾಗ್ಬೋದು. ನಿಕ್ಕಿ ಕನಸಲ್ಲಿ ಹೆಸರಾಂತ ಕನ್ನಡ ಚಲನಚಿತ್ರ ನಟ ನಿಖಿಲ್ ಆಗ್ತಾನೆ. ಆಪ್ತ ಶಂಕ್ರಣ್ಣ ಇವನ ಪಿಏ. ಬಣ್ಣದ ಚಲನಚಿತ್ರದಲ್ಲಿ ಕನಸಿನ ಲೋಕದ ರಂಗಿನ ಚಲನಚಿತ್ರ ರಂಗ ಕಪ್ಪು-ಬಿಳುಪು; ನಿಖಿಲ್ ಯಾವಾಗ್ಲೂ ಹಾಕೋದು ಕಪ್ಪು ಕನ್ನಡಕ.

ನಿಕ್ಕಿಯ ಬದುಕಿನಲ್ಲಿ ಅಕಸ್ಮಾತ್ತಾಗಿ ಪಿಝ್ಝಾ ಅಂಗಡಿಯಲ್ಲಿ ಕೆಲಸ ಮಾಡುವ ಶ್ವೇತಾಳ ಆಗಮನ ಅಗುತ್ತಿದಂತೆ, ನಿಖಿಲ್ ಸೀರೆ ಮಾಡೆಲ್ ಶ್ವೇತಾಳ ಸೌಂದರ್ಯದ ಬಲೆಗೆ ಬೀಳ್ತಾನೆ. ನಿಕ್ಕಿ-ಶ್ವೇತಾರ ಸ್ನೇಹ-ಪ್ರೇಮ ಏಳು-ಬೀಳು ಕಂಡಂತೆ, ನಿಖಿಲ್-ಶ್ವೇತಾರ ಪ್ರಣಯವೂ ಜೀವನ ಸುಳಿಯಲ್ಲಿ ಸಿಲುಕಿ ನಲುಗುತ್ತದೆ. ನಿಕ್ಕಿ- ನಿಖಿಲ್ ಇಬ್ಬರ ಬದುಕಿನಿಂದ ಶ್ವೇತಾ ದೂರ ಹೋಗುತ್ತಿದ್ದಂತೇ, ಎಂದೋ ನಡೆದ ಕರ್ಮದ ಫಲವಾಗಿ ಶಂಕ್ರಣ್ಣನೂ ಅಸ್ತಂಗತನಾಗ್ತಾನೆ. ನಿಖಿಲ್ ನ ಬದುಕು ನುಚ್ಚು ನೂರಾಗುತ್ತೆ; ನಿಕ್ಕಿ ಶಂಕ್ರಣ್ಣನ ಥೇಟರ್ ಜೀರ್ಣೋದ್ಧಾರದ ಕೈಂಕರ್ಯ ಮಾಡ್ತಾನೆ. ಅವನತಿಯ ಹಾದಿಯಲ್ಲಿರುವ ನಿಖಿಲ್ ತನ್ನ ಬದುಕಿನ ಹಿನ್ನಲೆ ವಿವರಿಸುತ್ತ ನೀಡಿದ ಸಂದರ್ಶನದಲ್ಲಿ ತನಗಿರುವ ವರ್ಣಾಂಧತೆಯ ವಿಚಾರ ಹೊರಬಿಡುವಾಗ; ನಾಯಕನ ಕಪ್ಪು ಕನ್ನಡಕ, ನಿರ್ದೇಶಕ ಪವನ್ ಕುಮಾರ್ ಬಳಸಿದ ಕಪ್ಪು-ಬಿಳುಪಿನ ಚಿತ್ರೀಕರಣದ ಮರ್ಮ ಥಟ್ಟನೆ ಮೈ ತಟ್ಟುತ್ತದೆ. ನಿಕ್ಕಿಯ ಮುಗ್ಧ ಪ್ರೇಮದ ಅರಿವಾಗಿ ಹೊಸ ರೂಪದ ಥೇಟರ್ ಉದ್ಘಾಟನೆಗೆ ಬರುವ ಶ್ವೇತಾಳ ಕೈಗೆ ಸಿಗದೇ ನಿಕ್ಕಿ ಮೆಲಿಂದ ಹಾರುತ್ತಾನೆ; ಕನಸಿನ ಲೋಕದಲ್ಲಿ ನಿಖಿಲ್ ಮನೆಗೆ ಶ್ವೇತಾ ಬರುವಾಗ, ನಿದ್ದೆ ಮಾತ್ರೆಗಳನ್ನು ತಿಂದು ನಿಖಿಲ್ ಬೈ-ಬೈ ಹೇಳುತ್ತಾನೆ. ಇಬ್ಬರೂ ಐಸಿಯುನಲ್ಲಿ ತ್ರಿಶಂಕುವಾಗಿ ಒಂದಾಗುತ್ತಾರೆ.

ಈ ಅತಂತ್ರನಿಗೆ ದಯಾ ಮರಣ ನೀಡಬೇಕೆ ಎಂದು ಸುದ್ದಿ ಮಾಧ್ಯಮಗಳಲ್ಲಿ ತೀವ್ರ ಚರ್ಚೆ ನಡೆಯುವಾಗ, ನಿಕ್ಕಿಯ ಹಿಂದಿನ ಘಟನೆಗಳ ವಾಸನೆ ಹಿಡಿದು ಮುಂಬೈನಿಂದ ಬರುವ ತನಿಖಾಧಿಕಾರಿ ಸಂಜಯ್ ಲೂಸಿಯಾ ಮಾತ್ರೆಯ ಅಕ್ರಮ ವ್ಯಾಪಾರಿಯ ಪತ್ತೆ ಹಚ್ಚುತ್ತಾನೆ. ಇಬ್ಬರ ಬದುಕಿನ ಘೂಢತೆಗಳ ಈರುಳ್ಳಿಯ ಪದರಗಳನ್ನು ಸುಲಿಯುತ್ತ ಹೋಗುವ ಸಂಜಯ್, ನಿಕ್ಕಿ-ನಿಖಿಲ್ ಇವರ ಅತಂತ್ರ ಸ್ಥಿತಿಯನ್ನು ಸುತಂತ್ರಗೊಳಿಸಲು ಹಾಕಿದ ತಂತ್ರದೊಂದಿಗೆ ಚಿತ್ರ ಮುಕ್ತಾಯವಾಗುತ್ತೆ.

ಚಿತ್ರದುದ್ದಕ್ಕೂ ನಿಕ್ಕಿ-ನಿಖಿಲ್ ರ ಜೀವನ ಬಿಂಬ-ಪ್ರತಿಬಿಂಬಗಳನ್ನಾಗಿಸಿ ನಮ್ಮನ್ನು ಭ್ರಮಾ ಲೋಕಕ್ಕೆ ಪವನ್ ಕುಮಾರ್ ಸಾಗಿಸುತ್ತಾರೆ. ಕಥೆಯಲ್ಲಿನ ಬಿಗಿತ ಸಡಿಲವಾಗಲು ಬಿಡುವುದೇ ಇಲ್ಲ. ಪ್ರಾರಂಭದಲ್ಲಿ ಬರುವ ಕೀರ್ತನೆ ತುಂಬ ಸಮಂಜಸವಾಗಿ ಬಿಡುತ್ತದೆ. “ಲೂಸಿಯಾ” ಒಂದು ಚಿತ್ರ-ಕಾವ್ಯವನ್ನಾಗಿಸುವಲ್ಲಿ, ಚಿತ್ರದುದ್ದಕ್ಕೂ ಬರುವ ಪ್ರತಿಮೆಗಳು ಯಶಸ್ವಿಯಾಗಿವೆ. ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ಪೂರಕವಾಗಿದೆ, ಬೇಕಾದಲ್ಲಿ ಇಂಪಾಗಿದೆ.

ಹಲವಾರು ಮಜಲುಗಳಲ್ಲಿ “ಲೂಸಿಯಾ” ಹಿತವೆನಿಸುತ್ತದೆ. ವಿಭಿನ್ನ ಪರಿಕಲ್ಪನೆ, ಕ್ರೌಡ್ ಫಂಡಿಂಗ್ ಬಳಸಿ ಬಂಡವಾಳ ಒಟ್ಟು ಹಾಕಿದ ಸಾಹಸ, ಕನ್ನಡದಲ್ಲಿ ಹೊಸ ಶತಮಾನಕ್ಕೆ ತಂದ ಹೊಸ ಅಲೆ ಈ ಚಿತ್ರ. ಮುಗಿದ ಮೇಲೂ ಮತ್ತೆ ಮತ್ತೆ ಚಿತ್ರದಲ್ಲಿ ಬರುವ ವಿಚಾರಗಳತ್ತ ಚಿಂತಿಸುವಂತೆ ಪ್ರೇರೇಪಿಸುವಲ್ಲಿ ನಿರ್ದೇಶಕ ಗೆಲ್ಲುತ್ತಾರೆ. ನನ್ನ ಗೆಳೆಯರು ಹೇಳಿದಂತೆ, “ಲೂಸಿಯಾ” ಡಿಫರೆಂಟ್, ನೋಡಲೇ ಬೇಕಾದ ಚಿತ್ರ ನನ್ನನಸಿಕೆಯಂತೆ.

ಗಾಂಧಿಯೆಂಬ`ಕೂರ್ಮಾವತಾರ` – ಕೇಶವ ಕುಲಕರ್ಣಿ

koormavataraಯಾವುದೇ ಸಣ್ಣ ಪಟ್ಟಣದಲ್ಲಿ, ಯಾರಿಗೂ ಅಷ್ಟೇನೂ ಪರಿಚಯವಿಲ್ಲದ (ತನ್ನ ಮನೆಯಲ್ಲೇ ಅಪರಿಚಿತನಂತೆ ಬದುಕುವ), ಯಾವುದೇ ಸರಕಾರಿ ಕಛೇರಿಯಲ್ಲಿ ಕಾರಕೂನಿಕೆ ಮಾಡಿಕೊಂಡು, ಯಾವುದೇ ಆದರ್ಶಕ್ಕಾಗಲೀ ಆಮಿಷಕ್ಕಾಗಲೀ ಒಳಗಾಗದೇ, ದಶಕಗಳಗಟ್ಟಲೇ ಅದೇ ಬದುಕನ್ನು ಬದುಕುತ್ತ, ನಿವೃತ್ತಿಯ ಹಾದಿಯಲ್ಲಿರುವ ಕೆಳಮಧ್ಯಮವರ್ಗದ  ವಿಧುರ ಗುಮಾಸ್ತ, ತಲೆ-ಕೈ-ಕಾಲುಗಳನ್ನು ಒಳಗೆ ಎಳೆದುಕೊಂಡು ಚಿಪ್ಪಿನಂತೆ ಬಿದ್ದುಕೊಂಡಿರುವ ಕೂರ್ಮದಂತೆ ಬದುಕಿರುತ್ತಾನೆ. ನೋಡಲು ಗಾಂಧಿಯಂತೆ ಇರುವುದೇ ಮಹಾಪರಾಧವಾಯಿತೇನೋ ಎನ್ನುವಂತೆ, ಮೊದಲಿನ ಗಾಂಧಿ ಪಾತ್ರಧಾರಿ ಕೈಕೊಟ್ಟದ್ದರಿಂದ, ಟಿವಿ ಸಿರಿಯಲ್ಲಿನ ಗಾಂಧಿಯ ಪಾತ್ರ ಈತನನ್ನು ಹುಡುಕಿಕೊಂಡು ಬರುತ್ತದೆ. ಮೊಮ್ಮಗ ಇಂಜಿನಿಯರ್ ಆಗುವ ಕನಸಿದ್ದರೆ ಹಣ ಬೇಕು ಎಂದು ಮೊಮ್ಮಗನ ಪ್ರೀತಿಯ ದಾಳ ಎಸೆದು, ಮಗ (ಬಡ್ಡಿ-ಶೇರ್ ಮಾರುಕಟ್ಟೆ ವ್ಯವಹಾರ ಮಾಡಿ ಜೀವನ ಮಾಡುತ್ತಾನೆ) ಈ ಕೂರ್ಮನನ್ನು ಗಾಂಧಿ ಪಾತ್ರಮಾಡಲು ಒಪ್ಪಿಸುತ್ತಾನೆ. ಗಾಂಧಿ ಪಾತ್ರ ಮಾಡುತ್ತ ಮಾಡುತ್ತ ಈ ಕೂರ್ಮನ ತಲೆ, ಕೈ, ಕಾಲುಗಳು ಚಿಪ್ಪಿನಿಂದ ಹೊರಬರಲು ಆರಂಭಿಸುತ್ತವೆ. ಗಾಂಧಿಯ ಆದರ್ಶಗಳು ಒಳಗಿಳಿಯಲು ಹತ್ತುತ್ತವೆ. ಮಗ, ಮಿತ್ರರು, ನೆರೆಹೊರೆಯವರು, ಜಾಹೀರಾತುದಾರರು ಈ ಹೊಸ ಗಾಂಧಿಯ ಪ್ರಸಿಧ್ಧಿಯನ್ನು ಎನ್-ಕ್ಯಾಷ್ ಮಾಡಿಕೊಳ್ಳಲು ತೊಡಗುತ್ತಾರೆ. ಅದರಿಂದ ಸಿಡಿದೆದ್ದು ಹೊರಬರಲು ಸಾಕಷ್ಟು ಪ್ರಯತ್ನ ಮಾಡಿ, ಸಾಧ್ಯವಾಗದೇ ಸೋಲುತ್ತಾನೆ. ಗೋಡ್ಸೆಯಿಂದ ಹತ್ಯೆಯಾಗುವ ದೃಶ್ಯದಲ್ಲಿ ನಟಿಸಿ ಸಾಯುತ್ತಾನೆ. ನೆಹರು, ಪಟೇಲ, ಗೋಡ್ಸೆ ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ.

ಅಟೆನ್-ಬರೋ ಅವರ `ಗಾಂಧಿ` ಸಿನೆಮಾದಂತಯೇ, ಗಾಂಧಿಯ ಹತ್ಯೆಯೊಂದಿಗೇ ಸಿನೆಮಾ ಶುರುವಾಗಿ, ಫ್ಲ್ಯಾಷ್-ಬ್ಯಾಕಿನಲ್ಲಿ ಕತೆ ಶುರು ಅಗುತ್ತದೆ, ಕಾಸರವಌಯವರ `ಕೂರ್ಮಾವತಾರ`. ಆದರೆ `ಗಾಂಧಿ` ಸಿನೆಮಾದಲ್ಲಿ, ನಿಜಜೀವನದಲ್ಲಿ ಗಾಂಧಿಯ ಹತ್ಯೆ ಆಗಿದ್ದು ಒಂದೇ ಗುಂಡಿನಿಂದ. ಇಲ್ಲಿ ದೃಶ್ಯ ಸರಿಯಾಗಿ ಮೂಡಿಬಂದಿಲ್ಲವೆಂದು, ಗಾಂಧಿಯನ್ನು ಪದೇ ಪದೇ ಕೊಲ್ಲಲಾಗುತ್ತದೆ.

ವೈಯಕ್ತಿಕ ಆದರ್ಶಗಳ, ಕುಟುಂಬದ, ಮಾಧ್ಯಮಗಳ, ಜಾತಿ-ಧರ್ಮಗಳ, ಸಮಾಜದ ಪದರು ಪದರುಗಳನ್ನು ಅದೇ ಸಂಕೀರ್ಣತೆಯಲ್ಲಿ ಉಣಬಡಿಸುತ್ತಾರೆ. ನಾನು ಇತ್ತೀಚೆ ನೋಡಿದ ಕನ್ನಡ ಚಿತ್ರಗಳಲ್ಲಿ `ಕೂರ್ಮಾವತಾರ` – ಅ ಮಸ್ಟ್ ವಾಚ್.

ಶರಪಂಜರ -`ನಾ ಬಂದೆ, ನಾ ನೋಡ್ದೆ, ನಾ ಗೆದ್ದೆ` – ಸರೋಜಿನಿ ಪಡಸಲಗಿ

sharapanjara-1971ಪುಟ್ಟಣ್ಣ ಕಣಗಾಲ ಅವರ,”ಶರಪಂಜರ” ತ್ರಿವೇಣಿಯವರ ಅದೇ ಹೆಸರಿನ ಕಾದಂಬರಿಯಾಧಾರಿತ ಚಲನಚಿತ್ರ.ಅದರ ನಾಯಕಿ ಕಾವೇರಿಗೆ “ಮಿನುಗು ತಾರೆ” ಕಲ್ಪನಾ ಜೀವ ತುಂಬಿದರೋ, ಕಾವೇರಿಯೇ ಅವರಿಗೆ ಸ್ಫೂರ್ತಿಯಾದಳೋ ಹೇಳುವುದು ಕಷ್ಟ.ಅಷ್ಟೊಂದು ತಾದಾತ್ಮಭಾವದ ನಟನೆ. ಮದುವೆಗೆ ಮೊದಲು ಶೀಲ ಕಳೆದುಕೊಂಡ ಕಾವೇರಿ ಮದುವೆಯಾಗಿ ಎರಡನೇ ಹೆರಿಗೆಯ ನಂತರ ಉನ್ಮಾದರೋಗಕ್ಕೆ ಬಲಿಯಾಗಿ, ಅದುಮಿಟ್ಟ ಭಾವನೆಗಳ ಸಾಗರ ಉಬ್ಬರಿಸಿ, ಮನದ ಭಿತ್ತಿಯನ್ನು ಸೀಳಿಕೊಂಡು, ಹಾರಿ ಈಚೆಬರುತ್ತವೆ. ಅರೆ ಪ್ರಜ್ಞಾವಸ್ಥೆಯಲ್ಲಿ ಕಾವೇರಿ ತಾನು ಕಳೆದು ಕೊಂಡದ್ದನ್ನು ಆ ನದಿತೀರದಲ್ಲಿಯೇ ಮರಳನ್ನು ಬಗೆ ಬಗೆದು” ಇಲ್ಲಿಯೇ ಕಳೆದುಕೊಂಡೆ”ಅಂತ ಹುಡುಕಾಡುವ ಕಲ್ಪನಾಳ ಅಭಿನಯ ಮನೋಜ್ಞ, ಅನೂಹ್ಯ.

“ಮಾನಸಿಕ ರೋಗಿ”ಯಾಗಿ, ಹುಚ್ಚಾಸ್ಪತ್ರೆ ಸೇರಿ, ಗುಣವಾಗಿ ತಿರುಗಿ ಬರುವ ಕಾವೇರಿ ಎದುರಿಸುವ ಸವಾಲುಗಳು ಹಲವು. ಇಲ್ಲಿ ಕಲ್ಪನಾ ಅವರ ಅಭಿನಯ ಉತ್ತುಂಗಕ್ಕೇರಿದೆ ಎಂದರೆ ತಪ್ಪಲ್ಲ. ಮಾನಸಿಕ ರೋಗಿ ಅಂತ ಹಣೆ ಪಟ್ಟಿ ಹಚ್ಚಿಕೊಂಡರೆ ಸಮಾಜ ಅವರನ್ನ ನೋಡುವ ರೀತಿಯೇ ಬೇರೆ. ಒಂದೇ, ಎರಡೇ ನೂರೆಂಟು ಇರಿತಗಳು, ಕೂರಂಬುಗಳು. ಎಲ್ಲ ಸಹಿಸಿ ನಗಲು ಯತ್ನಿಸಿ ಸೋತಳು ಕಾವೇರಿ. ಹೆಜ್ಜೆ, ಹೆಜ್ಜೆಗೂ ಅವಳು ಮರೆಯಬೇಕೆಂದಿರುವುದನ್ನು ನೆನಪಿಸುವ ಸಮಾಜ, ತನ್ನವರು, ಕೊನೆಗೆ ಗಂಡ ಎಲ್ಲರನ್ನೂ ಕಾವೇರಿ ಕೇಳುವುದೊಂದೆ-“ನನಗೆ ಕರುಣೆ ಬೇಡ.ಪ್ರೀತಿ,ಸಹಜ ಪ್ರೀತಿ ಬೇಕು”. ಮನ ಕಲಕುವಂತೆ ಕೇಳುವ ಕಾವೇರಿ ಚಿತ್ತದಿಂದ ಸರಿದೇ ಇಲ್ಲ. ಸಿನಿಮಾಗಳ ಸನ್ನಿವೇಶಗಳನ್ನ ನೋಡಿ ಅಳುವವರ ಗೇಲಿ ಮಾಡುವ ನಾನು, ಕಾವೇರಿಯ ಮಗು ಶಾಲೆಯಿಂದ ಬಂದು,”ಅಮ್ಮಾ ಹುಚ್ಚಿ ಎಂದರೆ ಯಾರು”ಅಂತ ಕೇಳಿದಾಗ ಅವಳು ಅಳು ನುಂಗಿ,”ನಿನ್ನ ಮುದ್ದು ಮಾಡಿ,ಆಟ ಆಡಿಸ್ತಾಳಲ್ಲ ಅವಳೇ ಹುಚ್ಚಿ’ ಎಂದು ಹೇಳುವಾಗ ನನಗರಿಯದಂತೆ ಕಣ್ಣೀರು ಧಾರೆಯಾಗಿತ್ತು.

ಸಮಾಜದ ಅಪಹಾಸ್ಯ, ಅಪನಿಂದೆಗಳ “ಶರಪಂಜರ”ದಲ್ಲಿ ಬಂದಿಯಾದ ಕಾವೇರಿಯ ಮನೋವಿಕಲತೆ ಉಮ್ಮಳಿಸಿದ್ದು, ಗಂಡ ಸತೀಶ್ ಮೊದಲು ತಾನೇ ನಿರಾಕರಿಸಿದ ಹೆಣ್ಣಿನ ಸಂಗ ಬೆಳೆಸಿದಾಗ. ಅಲ್ಲಿಗೆ ಕಾವೇರಿಯ ಮನದ ಧೃಡತೆ ಕುಸಿದೇ ಹೋಯ್ತು.”ನೀವು ಒಂದೇ ಒಂದು ಅವಕಾಶ ಕೊಡಬೇಕಿತ್ತು” ಅಂತ ಹಲುಬಿ ಉನ್ಮಾದದ ತಾರಕಾವಸ್ಥೆಯಲ್ಲಿ ಕೂಗುವ ಕಾವೇರಿ, ಇಂದಿಗೂ ಕಣ್ಮುಂದೆ ಕುಣಿಯುತ್ತಾಳೆ. “ನಾ ಬಂದೆ,ನಾ ನೋಡ್ದೆ,ನಾ ಗೆದ್ದೆ” ಅಂತ ಚೀರುವ “ಶರಪಂಜರ”ದ ನಾಯಕಿ ಚಿತ್ತ ಕಲಕುತ್ತಾಳೆ. ಇಲ್ಲಿ ಗೆದ್ದವಳು ಕಾವೇರಿಯಲ್ಲ, ಆದರೆ ಮನ ತಟ್ಟುವ ಅಭಿನಯದಿಂದ ಪ್ರೇಕ್ಷಕರನ್ನ ಗೆದ್ದ “ಕಲ್ಪನಾ” ಬೆಳ್ಳಿ ತೆರೆಯ ಮಿನುಗು ತಾರೆಯಾದರು. ಆಶೆಗಳನ್ನು ಹೊತ್ತ ಕಾವೇರಿಯನ್ನು ಬಾಳಗೊಡದ ಸಮಾಜದ ಒಂದು ಭಾಗವಾದ ನಾನು ಮೂಕ ಪ್ರೇಕ್ಷಕಿಯಾದೆ.

ತಬ್ಬಲಿಯು ನೀನಾದೆ ಮಗನೆ: ಹೀಗೊಂದು ಮೆಲುಕು

TABBALIYU-NEENAADE-MAGANE (1)‘ತಬ್ಬಲಿಯು ನೀನಾದೆ ಮಗನೆ’, ಈ ಸಲ ಬೆಂಗಳೂರಿಗೆ ಹೋದಾಗ ತಂದ ಡಿವಿಡಿಗಳಲ್ಲಿ ಅದೂ ಒಂದು. ನಸೀರುದ್ದೀನ್ ಷಹಾ(ಶಾಸ್ತ್ರಿ)ನ ಪ್ರಬುದ್ಧ ನಟನೆ, ದಟ್ಟವಾದ ಚಿತ್ರಕತೆ, ಸಿನಿಮೀಯತೆಯಿಲ್ಲದ controlled ನಿರ್ದೇಶನ ಮತ್ತು ಸಂಕೀರ್ಣ ಕತೆ – ಮತ್ತೆ ನಮ್ಮನ್ನು ಅಂದಿನ ಕನ್ನಡದ ಸುಂದರ ಚಿತ್ರಗಳ ಕಾಲಕ್ಕೆ ಕರೆದುಕೊಂಡು ಹೋಗುತ್ತವೆ.

ಶಿಕ್ಶ್ಷಿತ-ಪಾಶ್ಚ್ಯಾತ್ಯ-ಆಧುನಿಕ-ಬಂಡವಾಳಶಾಹಿತನ ಮತ್ತು ಅಶಿಕ್ಷಿತ-ಭಾರತೀಯ-ಸನಾತನ-ಸಮಾಜವಾದಗಳ ನಡುವಿನ ಸಂಕೀರ್ಣ ತಿಕ್ಕಾಟವೇ ಕತೆಯ ವಸ್ತು. ಚಿತ್ರ ಗೋವಿನ ಹಾಡಿನಿಂದ ಶುರುವಾಗುತ್ತದೆ ಮತ್ತು ಚಿತ್ರದ undercurrent ಸಂಕೇತವೂ ಆಗುತ್ತದೆ.

ಅಮೇರಿಕದಲ್ಲಿ ಓದಿ, ಅಲ್ಲಿಯವಳನ್ನೇ ಮದುವೆಯಾಗಿ, ತನ್ನ ಹಳ್ಳಿಯಲ್ಲಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಧೃಡನಿಶ್ಚಯದಿಂದ ಭಾರತಕ್ಕೆ ನಾಯಕ ಮರಳುತ್ತಾನೆ. ತಂದೆ ಸತ್ತಾಗ ತಲೆ ಬೋಳಿಸಿಕೊಳ್ಳುವುದರಿಂದ ಶುರುವಾಗುವ ಈ ಘರ್ಷಣೆ, ನಾಯಕನ ಹೆಂಡತಿ ಹಳ್ಳಿಗೆ ಬರುವುದು, ನಾಯಕನ ತಾಯಿಯ ಮರಣ, ನಾಯಕನ ಹೆಂಡತಿ ಗೋಮಾಂಸ ತಿನ್ನುವುದು – ಈ ದೃಶ್ಯಗಳಲ್ಲಿ ಬಿಚ್ಹಿಕೊಳ್ಳುತ್ತ, ನಾಯಕನ ಮಗುವಿಗೆ ಹಾಲು ಬೇಕಾಗುವ ದೃಶ್ಯದಲ್ಲಿ ಪರಾಕಾಷ್ಟೆ ತಲುಪುತ್ತದೆ.

ಇದೆಲ್ಲದರಿಂದ ಬೇಸತ್ತು, ಹಳ್ಳಿಯನ್ನು ಬಿಟ್ಟು ಮರಳಿ ಅಮೇರಿಕಕ್ಕೆ ಹೋಗುವ ನಿರ್ಧಾರ ಮಾಡುತ್ತಾನೆ ನಾಯಕ. ಅಂತ್ಯದಲ್ಲಿ, ಮರಳಿ ಮಣ್ಣಿಗೆ ಮರಳುವ ನಿಶ್ಚಯದಿಂದ ತನ್ನ ಮಾರಿದ ಗೋವುಗಳನ್ನು ಗುರುತಿಸಲಾಗದೇ ಗೋವಿಗಳ ಹೆಸರುಗಳನ್ನು ಕೂಗುವ ವ್ಯರ್ಥ ಪ್ರಯತ್ನದಲ್ಲಿ ಚಿತ್ರ ಮುಗಿಯುತ್ತದೆ. ಗೋವಿನ ಹಾಡಿನಲ್ಲಿ ಗೊಲ್ಲ ಕೂಗಿದರೆ ಎಲ್ಲ ಹಸುಗಳೂ ಬಂದು ನಿಲ್ಲುತ್ತವೆ, ಇಲ್ಲಿ ನಾಯಕನಿಗೆ ತನ್ನ ಹಸುಗಳು ಯಾವುವು, ಅವುಗಳ ಹಿಸರು ಗೊತ್ತಿಲ್ಲ, ಸುಮ್ಮನೇ ‘ಗಂಗೇ, ತುಂಗೇ…’ ಎಂದು ಕೂಗುತ್ತಾನೆ; ಚಿತ್ರದ ಆರಂಭದ ಗೋವಿನ ಹಾಡು, ಚಿತ್ರದ ಅಂತ್ಯದಲ್ಲಿ ಸಫಲಗೊಳ್ಳುತ್ತದೆ.

ನಾನಿಲ್ಲಿ ಈ ಚಿತ್ರವನ್ನು ಕಾದಂಬರಿಯ ಜೊತೆ ಹೋಲಿಸಿ ನೋಡುವುದಿಲ್ಲ. ಬಹುಷಃ ಚಿತ್ರ ಕಾದಂಬರಿಗಿಂತ ಹೆಚ್ಚು ದಟ್ಟವಾಗಿದೆ, ಸಂಕೀರ್ಣವಾಗಿದೆ. ಚಿತ್ರದ ನಿರ್ದೇಶನ ತುಂಬ ಸಂಯಮದಿಂದ ಪ್ರಬುದ್ಧವಾಗುತ್ತ ಸಾಗುತ್ತದೆ. ಸಂಕಲನ, ಸಂಗೀತ ಅಷ್ಟಕ್ಕಷ್ಟೇ. ಚಿತ್ರದ ನಾಯಕನ ಹೊಸ ಮನೆ ಕೃತಕವಾಗಿ ಕಂಡರೂ, ಭಾರತದ ಹಳ್ಳಿಯಲ್ಲಿ ಪಶ್ಚಿಮದ ಆಧುನಿಕತೆಯನ್ನು ತರಲು ಹೆಣಗುವ ನಾಯಕನ ಮನಸ್ಥಿತಿಯ ಕನ್ನಡಿಯಂತಿದೆ.

ಹಳ್ಳಿಯ ಹೊರಾಂಗಣ ಚಿತ್ರಣದಲ್ಲಿ ಎಲ್ಲೂ ಹಳ್ಳಿಯ ಅಥವಾ ನಿಸರ್ಗದ romantisism ಇಲ್ಲ; ಬದಲಿಗೆ ಹಳ್ಳಿಯ ದಾರಿದ್ರ್ಯ, ಬಿಸಿಲಿನ ಬೇಗೆ ಕಣ್ಣಿಗೆ ರಾಚುತ್ತದೆ. ಚಿತ್ರದ ಮಾತುಗಳು ಚಿತ್ರದ ಶಕ್ತಿ: ಶಾಸ್ತ್ರಿ ಮತ್ತು ನಾಯಕನ ಮಾತುಗಳಲ್ಲೇ ಭಾರತೀಯತೆ-ಪಾಶ್ಚ್ಯಾತತೆ, ಸಂಪ್ರದಾಯ-ನವ್ಯತೆ, ಸಮಾಜವಾದ-ಬಂಡವಾಳಶಾಹಿ, ಸನಾತನತೆ-ಆಧುನಿಕತೆಗಳ ಗೊಂದಲ, ಘರ್ಷಣೆಗಳ ಜೊತೆಜೊತೆಗೆ ಮನುಷ್ಯ ಸಹಜವಾದ ಈರ್ಷೆ, ದ್ವೇಷ, ಸ್ನೇಹ, ಮಾನವೀಯತೆಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ.

ನಸೀರುದ್ದೀನ್ ಷಹಾ ಶಾಸ್ತ್ರಿಯ ಎಲ್ಲ ಗುಣಗಳನ್ನೂ, ಒಂಚೂರೂ ಸಿನಿಮೀಯತೆಯಿಲ್ಲದೇ ನಟಿಸುತ್ತಾನೆ, ಅಷ್ಟೇ ಚೆನ್ನಾಗಿ ಸುಂದರಕೃಷ್ಣ ಅರಸ್ ಧ್ವನಿ ಕೊಟ್ಟಿದಾನೆ. ಮಾನು ಕೆಲವೊಮ್ಮೆ ಎಡವಿದ್ದಾನೆ; ಸುಂದರರಾಜ್ ಪಾತ್ರ ಸ್ವಲ್ಪ loud ಆಯಿತು; ನಾಯಕನ ತಾಯಿಯ ಪಾತ್ರ ಮೂಕತನದಲ್ಲಿ ಮೂಲ ಕಾದಂಬರಿಯಂತೆ ಇದ್ದರೂ, ಕೃತಕವೆನಿಸುತ್ತದೆ; ನಾಯಕನ ಹೆಂಡತಿಯ ಪಾತ್ರ overall OK, ಆದರೆ ಇನ್ನೂ ಜೀವವಿರಬೇಕಿತ್ತು.ಛಾಯಗ್ರಹಣ ಚಿತ್ರಕ್ಕೆ ತುಂಬ ಪೂರಕವಾಗಿದೆ.

ಚಿತ್ರ ನಾಯಕ ಹಳ್ಳಿಯನ್ನು ಬಿಡುವ ನಿರ್ಧಾರ ಮಾಡುವವರೆಗೂ ವಾಸ್ತವಿಕವಾಗಿದೆ, ಅಲ್ಲಿಂದ ಮುಂದೆ ಕತೆ ಇದ್ದಕ್ಕಿದ್ದಂತೆ ಕೃತಕವಾಗಿತ್ತದೆ; ಆದರ್ಶೀಕರಣದತ್ತ, ಭಾರತೀಯತೆಯ ‘ವಿಜಯ (?)’ದತ್ತ ಸಾಗುತ್ತದೆ. ನನ್ನ ದೃಷ್ಟಿಯಲ್ಲಿ ನಾಯಕ ತಬ್ಬಲಿಯಾಗುವುದು ನಿಜ, ಆದರೆ ಚಿತ್ರದಲ್ಲಿರುವ ಹಾಗಲ್ಲ. ವಾಸ್ತವಿಕವಾಗಿ ನೋಡಿದರೆ ನಾಯಕನ ಸ್ಥಿತಿಯಲ್ಲಿ ಯಾರೂ ಹಳ್ಳಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ, ನಾಯಕನ ಹೆಂಡತಿಗಂತೂ ಅಸಾಧ್ಯ.

ನನ್ನ ಪ್ರಕಾರ ಚಿತ್ರದ ಅಂತ್ಯ: ಚಿತ್ರ/ ಕಾದಂಬರಿಯಲ್ಲಿ ನಡೆಯುವಂತೆ ನಾಯಕ-ನಾಯಕನ ಹೆಂಡತಿ (ಆಧುನಿಕತೆ-ಪಾಶ್ಚ್ಯಾತ್ಯ-ಶಿಕ್ಷಿತ) ತಮ್ಮ ಮಗುವಿಗಾಗಿ ಗೋವಿನ ಕೆಚ್ಚಲನ್ನು ಹುಡುಕಿಕೊಂಡು ಹೋಗುವುದಿಲ್ಲ (this scene is extremely unnatural unscientific) ಮತ್ತು ಹಳ್ಳಿ (ಸನಾತನ-ಭಾರತೀಯತೆ-ಮೌಢ್ಯ)ಗರ ಮುಂದೆ ಸೋಲನ್ನೂ ಒಪ್ಪಿಕೊಳ್ಳುವುದಿಲ್ಲ. ಆದರೆ ತನ್ನ ಆಸ್ಠಿಯನ್ನೆಲ್ಲ ಮಾರುವ ನಿರ್ಧಾರ ಮಾಡುತ್ತಾನೆ. ನಾಯಕಿಗೆ ದಿನ ಕಳೆದಂತೆ ಇದೆಲ್ಲ ಅಸಹನೀಯವಾಗುತ್ತದೆ. ಆಕೆ ನಾಯಕನನ್ನು ತೊರೆದು (divorce) ಮರಳಿ ಅಮೇರಿಕಕ್ಕೆ ಹೋಗುತ್ತಾಳೆ; ಹಳ್ಳಿಯ ಜನ ಇದು ತಮ್ಮ ವಿಜಯವೆಂದುಕೊಂಡು ನಾಯಕನಿಗೆ ಹಳ್ಳಿಯಲ್ಲಿ ಉಳಿಯಲು ಅಂಗಲಾಚುತ್ತಿರುವಾಗ ನಾಯಕ ಹಳ್ಳಿಯನ್ನು ತೊರೆದು ಹೋಗುವ ದೃಶ್ಯದಲ್ಲಿ ಚಿತ್ರ ಮುಗಿಯುತ್ತದೆ. ನಾಯಕ, ನಾಯಕನ ಹೆಂಡತಿ-ಮಗು ಮತ್ತು ಹಳ್ಳಿ, ಮೂವರೂ ತಬ್ಬಲಿಗಳಾಗುತ್ತಾರೆ. ನೀವೇನೆನ್ನುತೀರಿ?